Friday, February 22, 2008

ಬೇಂದ್ರೆ ಶೈಲಿ

“ವಾಗರ್ಥಾವಿವ ಸಂಪೃಕ್ತೌ ವಾಗರ್ಥಪ್ರತಿಪತ್ತಯೇ
ಜಗತ: ಪಿತರೌ ವಂದೇ ಪಾರ್ವತೀಪರಮೇಶ್ವರೌ.”
ಕಾಲಿದಾಸನ ಕಾವ್ಯದ ನಾಂದೀವಾಕ್ಯವಿದು.ಇದು ಕಾವ್ಯಲಕ್ಷಣಸೂತ್ರವೂ ಅಹುದು. ಈ ಕಾವ್ಯಲಕ್ಷಣ ಬೇಂದ್ರೆಯವರ ಕವನಗಳ ಲಕ್ಷಣವೂ ಆಗಿದೆ. ಬೇಂದ್ರೆಯವರ ಕಾವ್ಯ ತೋರಿಕೆಗೆ ಅತಿ ಸರಳ. ಅದರಲ್ಲಿ ಅಡಗಿರುವ ಅರ್ಥ ಹಾಗೂ ಭಾವ ಮಾತ್ರ ಸಂಕೀರ್ಣವಾದದ್ದು. ಬಾಲ ಕೃಷ್ಣ ತಾಯಿ ಯಶೋದೆಗೆ ತನ್ನ ಬಾಯಲ್ಲಿಯೇ ಬ್ರಹ್ಮಾಂಡವನ್ನು ತೋರಿಸಿದಂತೆ, ಬೇಂದ್ರೆ ಓದುಗರಿಗೆ ತಮ್ಮ ಬಿಡಿಕವನಗಳಲ್ಲಿ ಬ್ರಹ್ಮಾಂಡವನ್ನೇ ತೋರಿಸುತ್ತಾರೆ.
“ಕರಡಿ ಕುಣಿತ” ಇದು ಬೇಂದ್ರೆಯವರ ಒಂದು ಸರಳ ಕವಿತೆ. ಆ ಕವಿತೆಯ ಈ ಸಾಲುಗಳನ್ನು ಗಮನಿಸಿ:
“ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬುವಂತನ ಹಿಡಿದು ತಂದಾನೊ;
’ಧಣಿಯರ ಮನೆ ಮುಂದೆ ಕಾವಲು ಮಾಡಣ್ಣ,
ಧಣಿ ದಾನ ಕೊಡುವನು’ ಎಂದಾನೊ.”

ಆದಿಮಾನವರ ಸರಳ ಗುಂಪುಗಳು ಯಾವರೀತಿಯಲ್ಲಿ ಸಂಕೀರ್ಣ ಸಮಾಜವ್ಯವಸ್ಥೆಯಾಗಿ ರೂಪುಗೊಂಡುವು ಹಾಗು fuedal ಸಮಾಜ ವ್ಯವಸ್ಥೆ ಯಾವ ರೀತಿಯಲ್ಲಿ ಅಕೃತ್ರಿಮ ಮಾನವರ ಶೋಷಣೆ ಮಾಡುತ್ತದೆ ಎನ್ನುವದನ್ನು ಈ ನಾಲ್ಕು simple ಸಾಲುಗಳು ಹೇಳುವಷ್ಟು ಚೆನ್ನಾಗಿ ಯಾವ ಸಮಾಜವಿಜ್ಞಾನಿಯೂ ವರ್ಣಿಸಲಾರ. ಈ ಶೋಷಣೆಯ ಮತ್ತೊಂದು ಮುಖ ಅವರ “ಕರಿಮರಿ ನಾಯಿ” ಕವನದಲ್ಲಿದೆ.
“ಕರಿಮರಿ ನಾಯಿ ಕುಂಯಿಗುಡತಿತ್ತು,
ಭಟ್ಟರ ಬಾಯಿ ಒಟಗುಡತಿತ್ತು.”
ದಲಿತರ ಹಾಗು ಮೇಲ್ವರ್ಗದವರ ನಡುವಿನ ಸಂಕೀರ್ಣ ಶೋಷಣಾ ವ್ಯವಸ್ಥೆಯನ್ನು ಇಷ್ಟು ಚೆನ್ನಾಗಿ ಯಾವ ಕನ್ನಡ ಲೇಖಕನೂ ಹೇಳಿರಲಾರ.

೧೯೪೨ನೆಯ ಸಾಲಿನಲ್ಲಿ ಭಾರತ (-ಮುಖ್ಯವಾಗಿ ಬಂಗಾಲ-) ಅನುಭವಿಸಿದ ಬರಗಾಲಕ್ಕೆ “ಡೌಗಿ ಬರ” ಎಂದು ಕರೆಯಲಾಗುತ್ತದೆ. ಭಾರತದ ರೈತರು ಬೆಳೆದ ಅಕ್ಕಿಯನ್ನು ಜಾಗತಿಕ ಯುದ್ಧದಲ್ಲಿ ತೊಡಗಿದ ಮಿತ್ರರಾಷ್ಟ್ರದ ಸೈನಿಕರಿಗೆ ಕಳುಹಿಸಲಾಗುತ್ತಿತ್ತು. ಹೀಗಾಗಿ ಬಂಗಾಲದಲ್ಲಿ ಅನೇಕ ರೈತರು ಹೊಟ್ಟೆಗಿಲ್ಲದೆ ಸತ್ತರು. ಇವರ ಶವಗಳನ್ನು ಯುರೋಪಿನ ವೈದ್ಯಕೀಯ ವಿದ್ಯಾಲಯಗಳಿಗೆ smuggle ಮಾಡಲಾಗುತ್ತಿತ್ತು.[ಹೆಚ್ಚು ವಿವರಗಳು ಬೇಕಾದರೆ, “ಹುಲಿ ಸವಾರಿ” ಎನ್ನುವ ಕಾದಂಬರಿಯನ್ನು ಓದಬಹುದು. ಭವಾನಿ ಭಟ್ಟಾಚಾರ್ಯರ ಬಂಗಾಲಿ ಕಾದಂಬರಿಯನ್ನು ಗೀತಾ ಮೋಹನ ಮುರಲಿಯವರು ಕನ್ನಡಕ್ಕೆ ಅನುವಾದಿಸಿದ್ದಾರೆ.] ಸರಕಾರದ ಈ ಜನವಿರೋಧಿ ಧೋರಣೆಯನ್ನು ಹಾಗು ಅದರ ಪರಿಣಾಮದ artificial scarcityಯನ್ನು ಬೇಂದ್ರೆ ಐದೇ ಸಾಲುಗಳಲ್ಲಿ ಸರಳವಾಗಿ ತೋರಿಸಿದ್ದಾರೆ:
“ಕಿಕ್ಕಿರಿ ತುಂಬಿದೆ ಭೂಮಿಯ ಕಣಜ,
ಕಕ್ಕಸ ಬಡುತಿದೆ ಬೊಕ್ಕಸದೊಡಲು,
ಬಾಳಿಗಿಂತಲೂ ಕೂಳೇ ಮೇಲೊ?
ಬರಿದೊ ಬರಿದು, ತೆರವೊ ತೆರವು
ಬಡವರ ಬಗ್ಗರ ತುತ್ತಿನ ಚೀಲ.”

ಬೇಂದ್ರೆಯವರ ಕವನಗಳನ್ನು ಒಂದು ಕಾರಣಕ್ಕಾಗಿ ಪುರಂದರದಾಸರ ಹಾಡುಗಳಿಗೆ ಹೋಲಿಸಬಹುದು. ಅದು ತೋರಿಕೆಯ ಸರಳ ಶೈಲಿ. ಬೇಂದ್ರೆಯವರ ಕವನಗಳಲ್ಲಿ ಇರುವಂತೆಯೇ ಪುರಂದರದಾಸರ ಸರಳ ಕೀರ್ತನೆಗಳಲ್ಲಿ ಸಹ ಸಂಕೀರ್ಣ ಅರ್ಥ ಅಡಗಿದೆ. ಪುರಂದರದಾಸರ ಅತ್ಯಂತ ಸರಲವಾದ ಪದ್ಯ: “ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ?” ಮೇಲ್ನೋಟದಲ್ಲಿ ಈ ಪದ್ಯ ಮನುಜನ ಮನಸ್ಸು ನಾಯಿ ಬಾಲದಂತೆ ಡೊಂಕು ಎನ್ನುವ ಅರ್ಥವನ್ನಷ್ಟೇ ಹೇಳುತ್ತದೆ. ಪುರಂದರದಾಸರ ಪೂರ್ವಾಶ್ರಮದ ಹೆಸರು ’ಶ್ರೀನಿವಾಸ ನಾಯಕ’ ಎನ್ನುವದನ್ನು ಗಮನಿಸಿದಾಗ, ದಾಸರು ಈ ಪ್ರಶ್ನೆಯನ್ನು ತಮ್ಮ ಮನಸ್ಸಿಗೇ ಕೇಳಿಕೊಳ್ಳುತ್ತಿರುವ ಅರ್ಥ ಹೊಳೆಯುತ್ತದೆ.

ಸಂಕೀರ್ಣ ಅರ್ಥವನ್ನು ಹೊಳೆಯಿಸಲು ಬೇಂದ್ರೆಯವರು ವಿರೋಧಾಭಾಸವನ್ನು ಬಳಸುತ್ತಾರೆ. ಈ ಸಾಲನ್ನು ನೋಡಿರಿ:
“ಅಮೃತಂತ ಬಾಯಿ ಚಪ್ಪರಿಸತಾವ,
ಕೇಳಿ ಕಣ್ಣು ಮಿಟಕತದ ರಾತ್ರಿ.”
ನಲ್ಲ, ನಲ್ಲೆಯರು ಪರಸ್ಪರರ ಚುಂಬನ ಅಮೃತಸಮಾನವೆಂದು ಭಾವಿಸುತ್ತಿದ್ದಾರೆ; ಈ ಚಪ್ಪರಿಕೆಯನ್ನು ಕೇಳಿದ ರಾತ್ರಿ ಕಣ್ಣು ಮಿಟಕಿಸುತ್ತದೆ” ಎನ್ನುವದು ತೋರಿಕೆಯ ಅರ್ಥ. ಪ್ರೇಮಿಗಳಿಗೆ ಇದು ಅ-ಮೃತ, everlasting ಎಂದು ತೋರಬಹುದು. ಆದರೆ ಇದು ಕಣ್ಣು ಮಿಟುಕಿಸುವ ಅವಧಿ, slips into timeless oblivion ಎನ್ನುವದು ಬೇಂದ್ರೆಯವರು ತಮ್ಮ ಒದುಗರಿಗೆ ಕೊಡಮಾಡುವ ಎರಡನೆಯ ಅರ್ಥ.

2 comments:

Unknown said...

ಸುನಾಥರೆ,
ಬೇಂದ್ರೆ ಅವರ ಬಗ್ಗೆ ಬಹಳಷ್ಟು ಮಾಹಿತಿ ನೀಡುತ್ತಿದ್ದೀರಿ.ಓದಲು ಖುಶಿ ಆಗುತ್ತದೆ.

sunaath said...

ಧನ್ಯವಾದಗಳು, ವನಮಾಲಾ.