Friday, May 30, 2008

ಕನ್ನರು, ಕರರು, ಶಿರರು, ಬಂಕರು, ಅಂಕರು

ಕನ್ನ ಜನಾಂಗದಿಂದಲೇ, ಈ ನಾಡಿಗೆ ಕಂನಾಡು (=ಕರ್ನಾಟಕ) ಎನ್ನುವ ಹೆಸರು ಬಂದಿತು; ಇವರ ನುಡಿಯೇ ಕಂನುಡಿ ಎಂದು ಕೀರ್ತಿಶೇಷ ಶಂ. ಬಾ. ಜೋಶಿಯವರು ಸಿದ್ಧ ಮಾಡಿದ್ದಾರೆ. ‘ಕನ್ನ’ ಪದದಿಂದ ಪ್ರಾರಂಭವಾಗುವ ೧೬೯ ಸ್ಥಳನಾಮಗಳು ಕರ್ನಾಟಕದಲ್ಲಿವೆ. ಥಟ್ಟನೆ ನೆನಪಾಗುವದು ‘ಕನ್ನಂಬಾಡಿ’. ಇತರ ಕೆಲವು ಉದಾಹರಣೆಗಳೆಂದರೆ: ಕಣಕುಂಬಿ, ಕಣಗಲಿ, ಕಣಸೋಗಿ, ಕಣ್ಣಾಟ, ಕನ್ನೂರು, ಕನವಳ್ಳಿ, ಕನಮಡಿ, ಕನ್ನಡಗಿ, ಕನ್ನಸಂದ್ರ, ಖನಗಾವಿ, ಖನ್ನೂರು, ಖನಟ್ಟಿ, ಖನಪೇಠ ಇತ್ಯಾದಿ. ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿಯೂ ಸಹ ಕನ್ನಡ, ಕಾನ್ಹೇರಿ ಮೊದಲಾದ ಊರುಗಳಿವೆ.

ಶ್ರೀ ಶ್ರೀನಿವಾಸ ಕಟ್ಟಿಯವರು ಒಂದು ಸ್ವಾರಸ್ಯಕರ ಸಂಗತಿಯನ್ನು ತಿಳಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕನ್ನಡ ಎನ್ನುವ ಊರಿದೆ. ಇಲ್ಲಿಯ ಮೂಲನಿವಾಸಿಗಳು ಕನ್ನಡವನ್ನು ಮಾತನಾಡುತ್ತಾರೆ. ಆದರೆ, ಅತ್ಯಂತ ಹಿಂದುಳಿದ ಸ್ಥಿತಿಯಲ್ಲಿ ಇರುವ ಈ ಸಮುದಾಯಕ್ಕೆ, ತಾವಾಡುವ ಕನ್ನಡ ಭಾಷೆಯು ಒಂದು ರಾಜ್ಯಭಾಷೆ ಎನ್ನುವದೇ ತಿಳಿಯದು!

ವರಕವಿ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ
“ ಕನ್ನಡ ನುಡಿದಿತು ಕನ್ನಡಹಕ್ಕಿ, ಕನ್ನಡವೆಂದಿತು ಆ ಗೋದೆ,
ಕಾವೇರಿಯು ತಂಪಾಯಿತು, ಕನ್ನಡ ಗಾಳಿಯು ಉಸಿರಿತು ಈ ಬೋಧೆ ”
ಎಂದು ಹೇಳುವಾಗ, ಅವರು ಗೋದಾವರಿಯ ದಂಡೆಯ ಮೇಲಿರುವ ಈ ‘ಕನ್ನಡ’ ಗ್ರಾಮವನ್ನು refer ಮಾಡಿದ್ದಾರೆ.

ಉತ್ತರ ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನವನ್ನು ಒಳಗೊಂಡ ಒಂದು ಪ್ರದೇಶಕ್ಕೆ ಒಂದು ಕಾಲದಲ್ಲಿ
“ ಖಾನದೇಶ “ ಎಂದು ಕರೆಯಲಾಗುತ್ತಿತ್ತು. ಈ ಹೆಸರು ಯಾವದೇ “ಖಾನ್” ನಿಂದಾಗಿ ಬಂದಿದ್ದಲ್ಲ.
‘ಕನ್ನದೇಶ’ ವೇ, ‘ಆರೇ’ರ ಬಾಯಿಯಲ್ಲಿ ‘ಖಾನದೇಶ’ವಾಯಿತು. “ಕನ್ನ”ರು “ಖನ್ನಾ” ಆದರು. ಆದುದರಿಂದ, ಕೆಲವು ವರ್ಷಗಳ ಹಿಂದಿನ superstar ‘ರಾಜೇಶ ಖನ್ನಾ’ ನಿಜವಾಗಿಯೂ ‘ರಾಜೇಶ ಕನ್ನ’, ಅಂದರೆ ಕನ್ನಡಿಗ! ಕನ್ನಡಿಗರೆಲ್ಲರೂ ಇದಕ್ಕಾಗಿ ಹೆಮ್ಮೆಪಟ್ಟುಕೊಳ್ಳಬೇಕೊ ಅಥವಾ ಕನ್ನಡಿಗರ metamorphosisಗಾಗಿ ಮರಗಬೇಕೊ?—ಕನ್ನೇಶ್ವರನೇ ಹೇಳಬೇಕು!

ಅಷ್ಟೇಕೆ, ಯಾವ ದೇವನಿಗೆ ಭಾರತೀಯರೆಲ್ಲರೂ “ತಮ್ ವಂದೇ ಜಗದ್ಗುರುಮ್ ” ಎಂದು ಪೂಜಿಸುತ್ತಾರೊ, ಆ ಕೃಷ್ಣನೇ ‘ಕನ್ಹೈಯಾ(=ಕನ್ನಯ್ಯಾ)’ ಅಂದರೆ ಕನ್ನಡಿಗನಲ್ಲವೇ!
(ಮಲೆನಾಡಿನಲ್ಲಿ ಹಿಂದುಳಿದ ಸಮುದಾಯದ ವ್ಯಕ್ತಿಗಳ ಹೆಸರು ‘ಕನ್ನೇಗೌಡ’ ಇತ್ಯಾದಿಯಾಗಿ ಇರುವದನ್ನು ಗಮನಿಸಿ.)
ಅನೇಕ ಆರ್ಯಭಾಷೆಗಳಲ್ಲಿ ಕನ್ನಡ ಪದಗಳು ಸಿಗುತ್ತವೆ. ಉದಾಹರಣೆಗೆ ಮರಾಠಿಯಲ್ಲಿ ಇರುವ ‘ಚಾಂಗಲಾ(=ಒಳ್ಳೆಯವನು)’ ಈ ಪದದ ಮೂಲವಾದ ಚಾಂಗು ಪದವು ಕನ್ನಡ ಪದ. ಇಂದಿಗೂ ಚಾಂಗದೇವನು ಮಹಾರಾಷ್ಟ್ರದಲ್ಲಿ ಆರಾಧಿಸಲ್ಪಡುತ್ತಿರುವ ಒಬ್ಬ ಯೋಗಿಯಾಗಿದ್ದಾನೆ. ಆದರೆ ಸದ್ಯಕ್ಕೆ ಕನ್ನಡದಿಂದಲೇ ಈ ಶಬ್ದ ಮರೆಯಾಗಿದ್ದರಿಂದ, ಚಾಂಗು ಇದು ಮರಾಠಿ ಪದವೆನ್ನುವ ಭ್ರಮೆಯಲ್ಲಿ ಕನ್ನಡಿಗರಿದ್ದಾರೆ.

ಕನ್ನ ಸಮುದಾಯದಂತೆ, ಐತಿಹಾಸಿಕವಾದ ಮತ್ತೊಂದು ಸಮುದಾಯವೆಂದರೆ ‘ಕರ’ ಎನ್ನುವ ಸಮುದಾಯ. ರಾಮಾಯಣದಲ್ಲಿ ಶ್ರೀರಾಮಚಂದ್ರನಿಂದ ಹತರಾದ ರಾಕ್ಷಸರು ಖರ ಹಾಗು ದೂಷಣರು. ಇಲ್ಲಿ ಖರ ಎಂದರೆ ‘ಕರ’ ಸಮುದಾಯಕ್ಕೆ ಸೇರಿದ ವ್ಯಕ್ತಿ. ಪಶ್ಚಿಮ ಬಂಗಾಲದಲ್ಲಿರುವ ಪ್ರಸಿದ್ಧ ಪಟ್ಟಣ ಖರಗಪುರವು ಈ ಕರ ಸಮುದಾಯದ ಒಂದು ಕಾಲದ ವಾಸಸ್ಥಾನ.

ಕರ ಪದದಿಂದ ಪ್ರಾರಂಭವಾಗುವ ೭೭ ಗ್ರಾಮಗಳು ಹಾಗು ಗರ ಪದದಿಂದ ಪ್ರಾರಂಭವಾಗುವ ೨೮ ಗ್ರಾಮಗಳು, ಒಟ್ಟಿನಲ್ಲಿ ೧೦೫ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕರಗುಪ್ಪಿ, ಕರಜಗಿ, ಕರಮಡಿ, ಕರಹರಿ, ಕರಬೈಲು, ಕರಗೂರು, ಕರಗೋಡು, ಕರಸುಳ್ಳಿ, ಕರಚಖೇಡ, ಕರಂಬಾಳ, ಕರಗಾವಿ, ಗರಗ,ಗರಗದಕಟ್ಟೆ, ಗರಗದಪಲ್ಲಿ ಇತ್ಯಾದಿ.

ಕರ್ನಾಟಕದ ಹೊರಗೆ, ಮಹಾರಾಷ್ಟ್ರದಲ್ಲಿ ಕರ್ಹಾಡ(=ಕರಹಾಡ), ಕರ್ಜತ್ತ(=ಕರಜತ್ತ) ಮೊದಲಾದ ಪಟ್ಟಣಗಳಿವೆ.
ಅಷ್ಟೇಕೆ, ಕೊಲ್ಲಾಪುರದ(=ಕೋಲಾಪುರದ), ದೇವಿ ಮಹಾಲಕ್ಷ್ಮಿಗೆ “ ಕರವೀರ ನಿವಾಸಿನಿ” ಎಂದೇ ಕರೆಯಲಾಗುತ್ತಿದೆ.

ಕರ್ನಾಟಕದಲ್ಲಿಯೂ ಸಹ ಕರ ಹಾಗೂ ಕರಕ ಈ ಪದಗಳ ಸಂಬಂಧಿಪದಗಳು ಸಿಗುತ್ತವೆ. ಉದಾಹರಣೆಗೆ: ಕರಕರೆಡ್ಡಿ, ಕರಕಗೋಳ ಇತ್ಯಾದಿ. ಕರಕ ಪದವೇ ಮಾರ್ಪಟ್ಟು ಖರಗವಾಗಿ, ತನ್ನಂತರ “ ಖರ್ಗೆ ” ಆಗಿದೆ. ಕರ್ನಾಟಕದ ಮಾಜಿ ಮಂತ್ರಿ ಖರ್ಗೆಯವರು ಮೂಲತಃ “ಕರಕ”ರು. ಆರೇರ ಬಾಯಿಯಲ್ಲಿ ಅವರು ಖರ್ಗೆ ಆದರು. ಅದರಂತೆ ಈ ಕರಕರು “ಗರಗ” ಸಹ ಆಗಿ ಮಾರ್ಪಟ್ಟಿದ್ದಾರೆ. ಧಾರವಾಡದ ಹತ್ತಿರ ಗರಗ ಎನ್ನುವ ಹಳ್ಳಿಯಿದ್ದು ಅದು ಮೂಲತಃ ಕರಕವೇ ಆಗಿದೆ. ತನ್ನಂತರ ಈ ಗರಗ ಪದದಿಂದ ಘಾರಗಿ ಎನ್ನುವ ಪದ ಉತ್ಪನ್ನವಾಯಿತು. ಘಾರಗಿ ಎನ್ನುವ ಅಡ್ಡ ಹೆಸರಿನ ಅನೇಕರು ಕರ್ನಾಟಕದಲ್ಲಿದ್ದಾರೆ.

ಕರ್ನಾಟಕದ ಹೊರಗೂ ಸಹ ಇಂತಹ ಅನೇಕ ಸ್ಥಳಗಳಿದ್ದು, ಆ ಸ್ಥಳಗಳು ಈ ಆದಿವಾಸಿಗಳ ಒಂದು ಕಾಲದ ನಿವಾಸಗಳೇ ಆಗಿದ್ದವು. ಆರೇರ(=ಆರ್ಯರ) ವಿರುದ್ಧ ನಡೆದ ಹೋರಾಟದಲ್ಲಿ ಸೋತು ಹೋದ ಈ ಸಮುದಾಯಗಳು, ಆರ್ಯಭಾಷೆಯನ್ನು , ಆರ್ಯಸಂಸ್ಕೃತಿಯನ್ನು ಅನುಸರಿಸುವದು, ನಕಲು ಮಾಡುವದು ಅನಿವಾರ್ಯವಾಗಿತ್ತು. ಆದರೆ, ಆರ್ಯರೂ ಸಹ ಅನಾರ್ಯ ಸಂಸ್ಕೃತಿಯ philosophyಯನ್ನು, ಅನೇಕ ರೂಢಿಗಳನ್ನು assimilate ಮಾಡಿಕೊಂಡರು. (ಇದನ್ನೇ ಶಂ.ಬಾ. ಜೋಶಿಯವರು ತಮ್ಮ ಗ್ರಂಥಗಳಲ್ಲಿ ತೋರಿಸಿದ್ದಾರೆ). ಅನೇಕ ಕನ್ನಡ ಪದಗಳನ್ನು ಸಂಸ್ಕೃತವು ಸ್ವೀಕರಿಸಿದೆ. (ಶಂ. ಬಾ. ಜೋಶಿಯವರು ಇಂತಹ ಅನೇಕ ಪದಗಳನ್ನು ತೋರಿಸಿದ್ದಾರೆ. ಉದಾಹರಣೆಗೆ ಕರ ಎನ್ನುವ ಸಂಸ್ಕೃತ ಪದ ಹಾಗು ಪಟ ಎನ್ನುವ ಕನ್ನಡ ಪದಗಳ ಜೋಡಣೆಯಿಂದ ಕರ್ಪಟ(=ಹತ್ತಿ) ಎನ್ನುವ ಪದ ರೂಪಿತವಾಗಿದೆ. ಕರ್ಪಟ=ಕಪಡಾ=ಅರಿವೆ).

ಅರ್ಯ ಸಮುದಾಯಗಳ ಒತ್ತಡ ಹೆಚ್ಚಿದಂತೆ, ಕನ್ನ, ಕರ ಮೊದಲಾದ ಅನೇಕ ಮೂಲ ಸಮುದಾಯಗಳು ದಕ್ಷಿಣಕ್ಕೆ ಗುಳೇ ಹೋದವು. ಭಾಷೆಯಲ್ಲಿ , ಹೆಸರಿನಲ್ಲಿ ತಮ್ಮ ಮೂಲಸ್ವರೂಪವನ್ನು ಉಳಿಸಿಕೊಂಡವು. ಚಲಿಸದೇ ಅಲ್ಲಿಯೇ ಉಳಿದಂತಹ ಜನಭಾಗಗಳು, ಶರಣಾಗತರಾದ ಸಮುದಾಯಗಳು ಆರ್ಯೀಕರಣವನ್ನು ಒಪ್ಪಿಕೊಂಡವು.

ಭಾರತದ ತುಂಬೆಲ್ಲ ದೊರೆಯುವ ಇಂತಹ ಮತ್ತೊಂದು ಜನಾಂಗ ಸೂಚಕ ಸ್ಥಳನಾಮವೆಂದರೆ “ ಶಿರ ”. ಕರ್ನಾಟಕದಲ್ಲಿ ಇಂತಹ ೯೯ ಊರುಗಳಿವೆ. ಉದಾಹರಣೆಗಳು: ಶಿರಸಿ, ಶಿರಾಳ, ಶಿರೋಳ, ಶಿರಹಟ್ಟಿ, ಶಿರಸಂಗಿ, ಶಿರಗುಪ್ಪಿ, ಶಿರಕೋಳ, ಶಿರಗುಂಜಿ, ಶಿರಗೋಡ, ಶಿರಡಾ, ಶಿರಡಿ, ಶಿರಡೋಣ, ಶಿರನಾಳ, ಶಿರಪಟ್ಣ, ಶಿರಬಡಗಿ, ಶಿರಡನಹಳ್ಳಿ, ಶಿರಗೂರ, ಶಿರಾ ಇತ್ಯಾದಿ.

ಉತ್ತರ ಪ್ರದೇಶದಲ್ಲಿ ಚಂಡೌಲ ಜಿಲ್ಲೆಯಲ್ಲಿ ಸಹ ಸಿರಸಿ ಎನ್ನುವ ಒಂದು ಊರಿದೆ. ಆಂಧ್ರಪ್ರದೇಶದಲ್ಲಿ ಸಿರಸಿಲ್ಲ ಎನ್ನುವ ಗ್ರಾಮವಿದೆ. ಮಹಾರಾಷ್ಟ್ರದಲ್ಲಿ ಇರುವ ಶಿರಡಿ ಗ್ರಾಮವಂತೂ ಅಲ್ಲಿ ಆಗಿ ಹೋದ ಸಾಯಿಬಾಬಾರಿಂದಾಗಿ ತುಂಬಾ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದಲ್ಲಿ ಶಿರಪುಂಜಿ ಎನ್ನುವ ಊರಿದೆ. ಆಸಾಮಿನಲ್ಲಿರುವ ಚಿರಾಪುಂಜಿಯು ಮೂಲತಃ ಶಿರಾಪುಂಜಿಯೆ?—ಎನ್ನುವ ಅನುಮಾನ ಹುಟ್ಟುತ್ತದೆ. ಆದರೆ ಚಿರಾಪುಂಜಿಯ ಮೂಲ ಹೆಸರು ಬೇರೆಯೇ ಆಗಿದ್ದು, ಬ್ರಿಟಿಶ್ ಆಡಳಿತದ ಕಾಲದಲ್ಲಿ ಆ ಗ್ರಾಮಕ್ಕೆ ಚಿರಾಪುಂಜಿ ಎನ್ನುವ ಹೆಸರು ಬಂದಿರುವದರಿಂದ, ಈ ವಿಷಯದಲ್ಲಿ, ಹೆಚ್ಚಿನ ಮಾಹಿತಿ ದೊರೆಯದೆ ಏನನ್ನೂ ಹೇಳಲಾಗುವದಿಲ್ಲ.

ಕರ್ನಾಟಕದಲ್ಲಿ ಇರುವ ೯೯ ಗ್ರಾಮಗಳಲ್ಲಿ ಅತಿ ಹೆಚ್ಚಿನ ಶಿರಸೂಚಕ ಗ್ರಾಮಗಳು ಉತ್ತರ ಕನ್ನಡ ಜಿಲ್ಲೆಯಲ್ಲಿವೆ. (೧೬). ಅನಂತರದ ಸ್ಥಾನ ದೊರೆಯುವದು ಬೆಳಗಾವಿ ಜಿಲ್ಲೆಗೆ. (೧೫).

ಬಂಕ ಸೂಚಕ ೧೭ ಸ್ಥಳನಾಮಗಳು ಮಾತ್ರ ಕರ್ನಾಟಕದಲ್ಲಿವೆ. ಉದಾಹರಣೆಗಳು: ಬಂಕನಕಟ್ಟೆ, ಬಂಕನಹಳ್ಳಿ, ಬಂಕನಾಳ, ಬಂಕನೇರಿ, ಬಂಕಸಾನ, ಬಂಕಾಪುರ, ಬಂಗಣೆ, ಬಂಗವಾಡಿ ಇತ್ಯಾದಿ. ಅದಾಗ್ಯೂ ಈ ಜನಾಂಗಕ್ಕೆ ಬಹಳ ಮಹತ್ವವಿದೆ. ಪಶ್ಚಿಮ ಬಂಗಾಲದಲ್ಲಿ ಮಲ್ಲರ ರಾಜಧಾನಿಯಾದ ಬಿಷ್ಣುಪುರ ಇರುವದು ಬಂಕೂರು ಎನ್ನುವ ಜಿಲ್ಲೆಯಲ್ಲಿ. ಬಂಕೂರು ಎಂದರೆ ಬಂಕರ ಊರು. ಅಂದ ಮೇಲೆ ಬಂಗಾಲ ಎನ್ನುವದು ಬಂಕಾಲ ಅರ್ಥಾತ್ ಬಂಕರ ಹಾಳ ಎನ್ನುವ ಪದದಿಂದ ಬಂದಿರುವದು ಸಹಜವಾಗಿದೆ. ಪೌರಾಣಿಕ ಕಾಲದಲ್ಲಿ ಇಡೀ ಬಂಗಾಲವೇ(=ಪಶ್ಚಿಮ ಬಂಗಾಲ+ಬಂಗ್ಲಾ ದೇಶ) ಈ ಬಂಕರ ಪ್ರದೇಶವಾಗಿದ್ದು, ಆರ್ಯರ ಆಕ್ರಮಣದ ನಂತರ ಅರ್ಯೀಕರಣಗೊಂಡಿತು. ಹೀಗಾಗಿ ಬಂಗ ದೇಶವು ವಂಗ ದೇಶವಾಗಿ ಮಾರ್ಪಾಡುಗೊಂಡಿತು.

ಬಂಕ ಪದದಿಂದ ವಂಗ ಪದ ಬಂದಂತೆಯೇ, ಅಂಕ ಪದದಿಂದ ಅಂಗ ಪದ ಹುಟ್ಟಿಕೊಂಡಿತು. ಮಹಾಭಾರತದಲ್ಲಿ ಬರುವ ಅಂಗದೇಶಕ್ಕೆ ಕರ್ಣನು ರಾಜನಾಗಿದ್ದನು. ಅಂಕ ಪದದಿಂದ ಪ್ರಾರಂಭವಾಗುವ ೬೯ ಊರುಗಳು ಕರ್ನಾಟಕದಲ್ಲಿವೆ. ಉದಾಹರಣೆಗೆ: ಅಂಕೋಲಾ, ಅಂಕಲಗಿ, ಅಂಕನಳ್ಳಿ, ಅಂಕನಾಥಪುರ, ಅಂಕಲಿ, ಅಂಕಾಪುರ, ಅಂಕತಟ್ಟಿ ಇತ್ಯಾದಿ. ಓಡಿಸಾ ರಾಜ್ಯದಲ್ಲಿ ಅಂಗುಲ ಎನ್ನುವ ಪಟ್ಟಣವಿದೆ. ಅಂಗಜನ ಹೆಸರಿನ ಮೂರು ಹಳ್ಳಿಗಳು ಕರ್ನಾಟಕದಲ್ಲಿವೆ. ಅಂಗಜನೆಂದರೆ ವಾನರ ರಾಜನಾದ ವಾಲಿಯ ಮಗನು ಎನ್ನುವದನ್ನು ಗಮನಿಸಬೇಕು.

ಈ ರೀತಿಯಾಗಿ ಭಾರತದ ತುಂಬೆಲ್ಲ ಹರಡಿದ ಅಥವಾ ಚಲಿಸಿದ ಮೂಲಜನಾಂಗಗಳ ಮಾಹಿತಿಯು ಈ ಸ್ಥಳನಾಮಗಳ ಮೂಲಕ ಲಭ್ಯವಾಗುತ್ತದೆ.

Tuesday, May 27, 2008

ಗೊಂಡರು, ಮಂಡರು

ನಾಲ್ಕು ಲಕ್ಷ ಜನಸಂಖ್ಯೆಯುಳ್ಳ ಗೊಂಡ ಜನಾಂಗವು ಭಾರತದಲ್ಲಿ ಅತ್ಯಂತ ದೊಡ್ಡ ಆದಿವಾಸಿ ಜನಾಂಗವಾಗಿದೆ. ಕೇರಳ, ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ಓಡಿಸಾ, ಛತ್ತೀಸಗಡ, ಬಿಹಾರ, ಝಾರಖಂಡ, ಬಂಗಾಲ, ಗುಜರಾತ ಈ ಎಲ್ಲ ರಾಜ್ಯಗಳಲ್ಲಿ ಗೊಂಡ ಜನಾಂಗವು ಹರಡಿಕೊಂಡಿದೆ.

ಗೊಂಡ ಅಥವಾ ಕೊಂಡ ಪದದಿಂದ ಪ್ರಾರಂಭವಾಗುವ ೨೬೮ ಗ್ರಾಮಗಳು ಕರ್ನಾಟಕದಲ್ಲಿವೆ. ಉದಾಹರಣೆಗಳು: ಕೊಂಡಗುಲಾ, ಕೊಂಡಜ್ಜಿ, ಕೊಂಡರಹಳ್ಳಿ, ಕೊಂಡಲಗಿ, ಕೊಂಡವಾಡಿ, ಕೊಂಡಸಕೊಪ್ಪ, ಕೊಂಡಸಂದ್ರ, ಗೊಂಡನಹಳ್ಳಿ, ಗೊಂಡಗಾವಿ, ಗೊಂಡೇನೂರು ಇತ್ಯಾದಿ.

ಮಹಾರಾಷ್ಟ್ರದಲ್ಲಿ ಆಗಿ ಹೋದ ಪ್ರಸಿದ್ಧ ಸಂತ ಬ್ರಹ್ಮಚೈತನ್ಯ ಮಹಾರಾಜರ ಊರ ಹೆಸರು ‘ಗೋಂದಾವಲಿ’. ಇದು ‘ಗೊಂಡಾವಳಿ’ಯ ರೂಪಾಂತರ. ಯಾವ ರೀತಿಯಲ್ಲಿ ‘ಮಲ್ಲಪ್ರಭೆ’ಯು ‘ಮಲಪ್ರಭೆ’ಯಾಯಿತೊ, ಅದೇ ರೀತಿಯಲ್ಲಿ ‘ಗೊಂಡಾವರಿ’ ನದಿ ಸಹ ‘ಗೋದಾವರಿ’ ನದಿಯಾಗಿದೆ. ಅತ್ಯಂತ ದಟ್ಟವಾದ ಅಡವಿಯಲ್ಲಿ ಈ ಗೊಂಡರು ವಾಸಿಸುತ್ತಿದ್ದರಿಂದಲೇ, ದಟ್ಟಡವಿಗೆ ‘ಗೊಂಡಾರಣ್ಯ’ವೆಂದು ಕರೆಯುವ ಪರಿಪಾಠವಾಯಿತು. ಇವರು ಯಾವ ನದಿಯ ಎಡಬಲದಲ್ಲಿ ತಮ್ಮ ನೆಲೆಯನ್ನು ರೂಪಿಸಿಕೊಂಡಿದ್ದರೊ, ಆ ನದಿ ಗೊಂಡಾವರಿ ನದಿಯಾಗಿ, ಬಳಿಕ ಗೋದಾವರಿ ಎಂದು ಆರ್ಯೀಕರಣಗೊಂಡಿತು. ಈ ವಿಶಾಲ ದೇಶಭಾಗವು ‘ಗೊಂಡವನ’ವೆಂದೇ ನಿರ್ದೇಶಿಸಲ್ಪಟ್ಟಿದೆ. ಒಂದು ಕಾಲದಲ್ಲಿ, ಎಲ್ಲ ಖಂಡಗಳೂ ಒಂದೇ ಭೂಪ್ರದೇಶವಾಗಿದ್ದು, ಬಳಿಕ ಒಡೆದು ಹೋಗಿ ಬೇರೆ ಬೇರೆ ಖಂಡಗಳಾದವಷ್ಟೆ. ಈ ಮೂಲಭೂಪ್ರದೇಶಕ್ಕೆ ವಿಜ್ಞಾನಿಗಳು ಕೊಟ್ಟ ಹೆಸರು ‘ಗೊಂಡವನಖಂಡ’.

ನಾಗರು, ಮಲ್ಲರು ಹಾಗು ಕಂದರು ಆರ್ಯರೊಡನೆ ಹೋರಾಡಿ ಸೋತು ಹೋದ ಸಮುದಾಯಗಳಾಗಿವೆ. ಆದರೆ, ಗೊಂಡರು ಮಾತ್ರ ಇಂತಹ ಹೋರಾಟಗಳಿಗೆ ಒಳಗಾಗಿಲ್ಲ. ಇದರ ಕಾರಣ ಹೀಗಿರಬಹುದು. ಆರ್ಯರು ಭಾರತ-ಪ್ರವೇಶವನ್ನು ಮಾಡಿದಾಗ ನಾಗರು, ಮಲ್ಲರು ಹಾಗು ಕಂದರು ಹಿಮಾಲಯದ ಅಡಿಭಾಗದಲ್ಲಿ ಹಾಗು ಗಂಗಾ ನದಿಯ ದಂಡೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಘರ್ಷಣೆ ನಡೆದದ್ದು ಸಹಜ. ನಾಗರು, ಮಲ್ಲರು ಹಾಗು ಕಂದರು ಇವರೆಲ್ಲ ಕೇವಲ ಶಸ್ತ್ರಧಾರಿಗಳು. (ಕೈಯಲ್ಲಿ ಹಿಡಿದು ಹೋರಾಡುವ ಉಪಕರಣಕ್ಕೆ ಶಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಖಡ್ಗ, ಬರ್ಚಿ, ಗದೆ; ಕೈಯಿಂದ ಬಿಡಬಹುದಾದ ಉಪಕರಣಗಳಿಗೆ ಅಸ್ತ್ರ ಎನ್ನುತ್ತಾರೆ. ಉದಾಹರಣೆಗೆ: ಬಿಲ್ಲು-ಬಾಣ, ಚಕ್ರ.) ಆರ್ಯರು ಅಸ್ತ್ರಧಾರಿಗಳು ಹಾಗು ಅಶ್ವಾರೋಹಿಗಳು. ಹೀಗಾಗಿ ಭಾರತದ ಮೂಲಜನಾಂಗಗಳು ಈ ಘರ್ಷಣೆಯಲ್ಲಿ ಸೋತುಹೋದವು.
(ಭಾರತೀಯರು ಯಾವಾಗಲೂ ಸೋಲುತ್ತಿರುವದಕ್ಕೆ ಇದೊಂದು ಮಹತ್ವದ ಕಾರಣ. ಇವರಲ್ಲಿ ಶೌರ್ಯದ ಕೊರತೆ ಇಲ್ಲ; ಅತ್ಯಾಧುನಿಕ ಆಯುಧಗಳ ಕೊರತೆಯೆ ಇವರ ದೌರ್ಬಲ್ಯ. ಇದನ್ನು ಅರಿತೇ, ಭಾರತದ ಪ್ರಥಮ ಪ್ರಧಾನಿ ನೆಹರೂರವರು ಅಣುಶಕ್ತಿಯ ಉತ್ಪಾದನೆಗೆ—ತನ್ಮೂಲಕ ಅತ್ಯಂತ ರಹಸ್ಯಮಯ ವಾತಾವರಣದಲ್ಲಿ ಅಣ್ವಸ್ತ್ರಗಳ ಉತ್ಪಾದನೆಗೆ—ಚಾಲನೆ ಕೊಟ್ಟರು.)

ಗೊಂಡರು ಗೊಂಡಾರಣ್ಯದಲ್ಲಿ ವಾಸಿಸುತ್ತಿದ್ದರಿಂದ ಆರ್ಯರೊಡನೆ ಇವರಿಗೆ ಹೋರಾಡುವ ಸಂದರ್ಭ ಬರಲಿಲ್ಲ. ರಾಮಚಂದ್ರನ ವನವಾಸದಲ್ಲಿ ಹಾಗು ತನ್ನಂತರ ಸೀತೆಯನ್ನು ಹುಡುಕುತ್ತ ಅಲೆಯುವಾಗ, ಗೊಂಡರ ಜೊತೆಗೆ ರಾಮಚಂದ್ರನ ಗೆಳೆತನವಾಯಿತು. ಶಬರ(=ಭಿಲ್ಲ) ಜನಾಂಗದವರಂತೂ ರಾಮಚಂದ್ರನನ್ನು ಆರಾಧಿಸತೊಡಗಿದರು.

ಗೊಂಡಾರಣ್ಯವನ್ನು ದಾಟಿದ ರಾಮಚಂದ್ರನಿಗೆ ಸಿಕ್ಕವರು ಕಿಷ್ಕಿಂಧೆಯ ವಾನರರು. ಇವರು ಬಹುಶಃ ಕೃತಕ ಬಾಲವನ್ನು ತಮ್ಮ ಅನುಕೂಲಕ್ಕಾಗಿ ಉಪಯೋಗಿಸುತ್ತಿದ್ದರೆ? ವಾಲಿ ಎನ್ನುವ ಹೆಸರಿನ ಅರ್ಥ ವಾಲ (= ಬಾಲ) ಉಳ್ಳವನು ಎಂದು. ಈ ವಾನರರೂ ಸಹ ಕೇವಲ (ಕಟ್ಟಿಗೆಯ) ಗದಾಧಾರಿಗಳು. ಇವರಲ್ಲಿ (ಕಬ್ಬಿಣದ) ಖಡ್ಗ ಸಹ ಇರಲಿಲ್ಲ. ಹೀಗಾಗಿ ಬಿಲ್ಲು-ಬಾಣ ಉಳ್ಳ ರಾಮಚಂದ್ರನ ಜೊತೆಗೆ ಸುಗ್ರೀವನು ಸಖ್ಯ ಸಾಧಿಸಿ, ದಾಯಾದಿ ವಾಲಿಯನ್ನು ಕೊಲ್ಲಿಸಿದನು.

ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಇತರ ಆದಿವಾಸಿಗಳೆಂದರೆ ಜಾಂಬವರು. ಕರಡಿಯನ್ನು ಪ್ರಾಣಿ-ಲಾಂಛನ (=totem)ವಾಗುಳ್ಳ ಸಮುದಾಯದವರು. ಕರ್ನಾಟಕದಲ್ಲಿ ಆದಿಜಾಂಬವ ಸಮುದಾಯವು ಇನ್ನೂ ಇದೆ.

ರಾವಣನ ಹೆಂಡತಿ ಮಂಡೋದರಿ ‘ಮಂಡ’ ಕುಲದವಳು. ಕರ್ನಾಟಕದಲ್ಲಿ ‘ಮಂಡ’ ಹಾಗು ‘ಮಂಟ’ ಪದದಿಂದ ಪ್ರಾರಂಭವಾಗುವ ೫೮ ಗ್ರಾಮಗಳಿವೆ. ಉದಾಹರಣೆಗಳು: ಮಂಟೂರು, ಮಂಟ್ಯ, ಮಂಡರವಳ್ಳಿ, ಮಂಡ್ಯ, ಮಂಡ್ಯಾಲ ಇತ್ಯಾದಿ. ಕರ್ನಾಟಕದ ಹೊರಗೆ ಮಹಾರಾಷ್ಟ್ರದಲ್ಲಿ ಮಾಂಡವಿ ಎನ್ನುವ ಊರಿದೆ. ಗೋವಾದಲ್ಲಿ ಹರಿಯುವ ಮಾಂಡವಿ ನದಿಯು ಮಂಡ ಮುನಿಯ ಮಗಳೆಂದು ಹೇಳಲಾಗುತ್ತದೆ. ದಮನದಲ್ಲಿಯೂ ಸಹ ಮಾಂಡವಿ ಎನ್ನುವ ನದಿಯಿದೆ. ಭಾರತದ ಹೊರಗಿದ್ದ ಪ್ರಸಿದ್ಧ ಸ್ಥಳವೆಂದರೆ, ಮೈನ್ಮಾರದಲ್ಲಿದ್ದ ‘ಮಂಡಾಲೆ.’ ಬ್ರಿಟಿಶ್ ಸರಕಾರವು ಮಂಡಾಲೆಯ ಸೆರೆಮನೆಯಲ್ಲಿ ಲೋಕಮಾನ್ಯ ತಿಲಕರನ್ನು ೬ವರ್ಷಗಳ ಕಾಲ ಇಟ್ಟಿದ್ದಿತು. ಮಂಡಾಲೆ ಎಂದರೆ ಮಂಡಹಾಳ , ಅರ್ಥಾತ್ ಮಂಡ ಸಮುದಾಯ ವಾಸಿಸುವ ಗ್ರಾಮ. ಭಾರತೀಯರು ಬ್ರಹ್ಮದೇಶವೆಂದು ಕರೆಯುತ್ತಿದ್ದ ಮೈನ್ಮಾರದ ಪಶ್ಚಿಮ ಭಾಗದಲ್ಲಿ ಮಂಡ ಸಮುದಾಯವು ಇದ್ದಿರಬೇಕು. ಆರ್ಯರ ಆಕ್ರಮಣದ ಕಾಲದಲ್ಲಿ, ಅಲ್ಲಿಂದ ದಕ್ಷಿಣಕ್ಕೆ ಓಡಿರಬಹುದು.

‘ಲಕ್’ ಈ ದ್ರಾವಿಡ ಪದದ ಅರ್ಥವೇ ದ್ವೀಪ. (ಉದಾಹರಣೆಗೆ ಲಖದೀವ ಎನ್ನುವದು ಲಕ್ ಎನ್ನುವ ದ್ರಾವಿಡ ಪದ ಹಾಗು ದ್ವೀಪ ಎನ್ನುವ ಸಂಸ್ಕೃತ ಪದದ ಕೂಡುಪದ. ಅದೀಗ ಲಕ್ಷದ್ವೀಪ ಎಂದು ನಾಮಕರಣಗೊಂಡಿದೆ.) ಕೆಲವೊಂದು ಸಂಶೋಧಕರು ರಾವಣನು ಇದ್ದದ್ದು ಲಂಕಾದಲ್ಲಿ ಅಲ್ಲ--(ಲಂಕಾ=ಲಕ್=ದ್ವೀಪ); ಆದರೆ ಗೋದಾವರಿ ನದಿಯಲ್ಲಿರುವ ದ್ವೀಪವೊಂದರಲ್ಲಿ ಎಂದು ಹೇಳುತ್ತಾರೆ. ಆದರೆ ರಾಮನು ಕಿಷ್ಕಿಂಧೆಯನ್ನು ಪ್ರವೇಶಿಸಿದ್ದು ಹಾಗು ರಾಮಸೇತುವಿನ ಮೂಲಕ ಸಮುದ್ರವನ್ನು ದಾಟಿದ್ದು, ಇವುಗಳನ್ನು ಪರಿಗಣಿಸಿದರೆ ರಾವಣನ ಲಂಕೆ ಈಗಿನ ಶ್ರೀಲಂಕೆಯೇ ಎಂದು ಭಾಸವಾಗುತ್ತದೆ.

Sunday, May 25, 2008

ಕೋಲರು, ಮುಂಡರು, ನಾಗರು, ಮಹಿಷರು

ದೇವಿಪುರಾಣದಲ್ಲಿ ಕಾಣಸಿಗುವ ಎರಡು ಮಹತ್ವದ ಸಮುದಾಯಗಳೆಂದರೆ ಕೋಲರು ಹಾಗು ಮುಂಡರು. ಕೋಲರು ಈಗ ತಮಿಳುನಾಡಿನಲ್ಲಿರುವ ನೀಲಗಿರಿ ಪ್ರದೇಶದಲ್ಲಿ ವಾಸವಾಗಿದ್ದಾರೆ. ಇವರಾಡುವ ಭಾಷೆ ತಮಿಳು ಹಾಗು ಕನ್ನಡ ಕೂಡಿದ ಭಾಷೆ. ಓಡಿಸಾದಲ್ಲಿರುವ ಒಂದು ಸಮುದಾಯಕ್ಕೂ ಕೋಲ ಎನ್ನುವ ಹೆಸರಿದೆ. ಈ ಸಮುದಾಯದ ಇತರ ಹೆಸರುಗಳು: ಕುಂಟಮ್, ಕುಡ, ಕೋರ, ಮಿರ್ಧ, ಮೊರ್ಭ, ಬಿರ್ಹೋರ ಮತ್ತು ನಾಗೇಸಿಯ. ಇವರ ಭಾಷೆ ದ್ರಾವಿಡ. ಕರ್ನಾಟಕದಲ್ಲಿಯ ಒಂದು ಸಮುದಾಯಕ್ಕೆ ಕುಡಒಕ್ಕಲಿಗರು ಎಂದು ಕರೆಯಲಾಗುತ್ತಿದೆ. ಇದರಂತೆ ಕೋಲರ ಮತ್ತೊಂದು ಹೆಸರಾದ ನಾಗೇಸಿಯ ಎನ್ನುವದು ದ್ರಾವಿಡ ಸಮುದಾಯಗಳಿಗೂ ನಾಗ ಸಮುದಾಯಕ್ಕೂ ಇರುವ ಸಂಬಂಧವನ್ನು ತೋರಿಸುತ್ತದೆ.

ವೈದಿಕ ದೇವತೆಯಾದ ಇಂದ್ರನು ರಚಿಸಿದ ದೇವಿಸ್ತುತಿಯಲ್ಲಿ ಈ ರೀತಿಯ ವರ್ಣನೆ ಇದೆ:
“ ನಮಸ್ತೇ ಗರುಡಾರೂಢೆ, ಕೋಲಾಸುರ ಭಯಂಕರೀ|
ಸರ್ವದುಃಖಹರೇ ದೇವಿ, ಮಹಾಲಕ್ಷ್ಮಿ ನಮೋಸ್ತುತೇ||

ವೈದಿಕ ದೇವತೆಯಾದ ಇಂದ್ರನು ಪಿತೃಪ್ರಧಾನ ಜನಾಂಗದ ದೇವತೆ. ದೇವಿಯು ಮಾತೃಪ್ರಧಾನ ಜನಾಂಗದ ದೇವತೆಯಾಗಿದ್ದಾಳೆ. ಯಾವ ಕಾರಣಕ್ಕಾಗಿ ವೈದಿಕ ಧರ್ಮಾನುಯಾಯಿಗಳಾದ, ಪಿತೃಪ್ರಧಾನ ಆರ್ಯರು, ಅವೈದಿಕ ಸಂಪ್ರದಾಯದ, ಮಾತೃಪ್ರಧಾನ, ಆರ್ಯೇತರ ಜನಾಂಗದ ನೆರವನ್ನು ಪಡೆದರು ಎನ್ನುವದು ನಿಗೂಢವಾಗಿದೆ. ಈ ದೇವಿಯು ಕೋಲ ಸಮುದಾಯವನ್ನಲ್ಲದೆ, ಮುಂಡ ಸಮುದಾಯವನ್ನೂ ಸಹ ಸಂಹರಿಸಿದಳು.

“ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|”
…………………(ಲಲಿತಾ ಸಹಸ್ರನಾಮ)

ಕರ್ನಾಟಕದಲ್ಲಿ ಕೋಲ ಪದದಿಂದ ಪ್ರಾರಂಭವಾಗುವ ೪೫ ಹಾಗು ಕೋರ ಪದದಿಂದ ಪ್ರಾರಂಭವಾಗುವ ೨೨, ಅಂದರೆ ಒಟ್ಟಿನಲ್ಲಿ ೬೭ ಗ್ರಾಮಗಳಿವೆ. ಕೆಲವು ಉದಾಹರಣೆಗಳು: ಕೋಲಾರ, ಕೋರಮಂಗಲ. ಕರ್ನಾಟಕದ ಹೊರಗೂ ಸಹ ಕೋಲ/ಕೋರ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಇವುಗಳಲ್ಲಿ ಪ್ರಸಿದ್ಧ ಹೆಸರೆಂದರೆ ಮಹಾರಾಷ್ಟ್ರ ರಾಜ್ಯದಲ್ಲಿಯ ಕೊಲ್ಲಾಪುರ ಹಾಗೂ ಕೋರೆಗಾವ.

ಮುಂಡ ಸಮುದಾಯವು ಸದ್ಯಕ್ಕೆ ಝಾರಖಂಡ, ಛತ್ತೀಸಘಡ ಮೊದಲಾದ ಪ್ರದೇಶಗಳಲ್ಲಿ ವಾಸಿಸುತ್ತಿದ್ದು ಇವರ ಜನಸಂಖ್ಯೆ ಸುಮಾರು ೨೦ ಲಕ್ಷದಷ್ಟಿದೆ. ಇವರ ಭಾಷೆ ಮುಂಡಾರಿ. ಇದು ಆಸ್ಟ್ರೋ-ಏಶಿಯಾಟಿಕ್ ಭಾಷೆ. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಹೋರಾಟ ಪ್ರಾರಂಭಿಸಿದ ಭಾರತೀಯರಲ್ಲಿ ಮುಂಡ ಜನಾಂಗದ ‘ ಕರಿಯ ಮುಂಡ ’ ಎನ್ನುವವನೇ ಮೊದಲಿಗನು. ಈತ ಮಧ್ಯಪ್ರದೇಶದವನು. ಕರಿಯ ಎನ್ನುವ ಈತನ ಹೆಸರನ್ನು ಗಮನಿಸಿರಿ. ಇದು ದ್ರಾವಿಡ ಹೆಸರು. ಕರ್ನಾಟಕದಲ್ಲಿ ಮುಂಡ ಪದದಿಂದ ಪ್ರಾರಂಭವಾಗುವ ೨೫ ಗ್ರಾಮಗಳಿವೆ. ಉದಾಹರಣೆಗಳು: ಮುಂಡರಗಿ, ಮುಂಡಗೋಡ, ಮುಂಡರಟ್ಟಿ ಇತ್ಯಾದಿ. ಆದರೆ ಸದ್ಯದಲ್ಲಿ ಮುಂಡ ಜನಾಂಗವು ಕರ್ನಾಟಕದಲ್ಲಿ ಉಳಿದಿಲ್ಲ.

ಜನಾಂಗಸೂಚಕ ಸ್ಥಳನಾಮಗಳಲ್ಲಿ ಮಲ್ಲರ ನಂತರದ ಸ್ಥಾನ ಸಿಗುವದು ನಾಗ ಪದಕ್ಕೆ. ಕರ್ನಾಟಕದಲ್ಲಿ ನಾಗ ಪದದಿಂದ ಪ್ರಾರಂಭವಾಗುವ ೩೧೩ ಗ್ರಾಮಗಳಿವೆ. ಪುರಾಣಗಳ ಪ್ರಕಾರ ನಾಗರೂ ಸಹ ಹಿಮಾಲಯದ ಅಡಿಯಲ್ಲಿದ್ದವರು. ಇಂದ್ರನು ದೇವಿಸ್ತುತಿಯಲ್ಲಿ ದೇವಿಯನ್ನು ‘ಗರುಡಾರೂಢೇ’ ಎಂದು ಬಣ್ಣಿಸುತ್ತಾನೆ. ಗರುಡಪಕ್ಷಿಯು ನಾಗರ ವೈರಿ ಎನ್ನುವದು ಸರ್ವವಿದಿತವಿದೆ. ಈಗಲೂ ಸಹ ಭಾರತದ ಈಶಾನ್ಯ ಭಾಗದಲ್ಲಿ ನಾಗ ಜನಾಂಗದವರಿದ್ದಾರೆ. ಶಂ. ಬಾ. ಜೋಶಿಯವರು ಋಗ್ವೇದಲ್ಲಿ ದೊರೆಯುವ ನಾಗಪ್ರತಿಮೆಗಳ ಬಗೆಗೆ ಆಳವಾದ ಅಧ್ಯಯನವನ್ನೇ ಮಾಡಿದ್ದಾರೆ. ಆದರೆ ನಾಗರಿಗೂ ಕರ್ನಾಟಕಕ್ಕೂ ಏನಾದರೂ ಸಂಬಂಧವಿದೆಯೆ? ಕರ್ನಾಟಕದ ಎಲ್ಲ ಭಾಗದಲ್ಲಿಯೂ ನಾಗ ಪದದಿಂದ ಪ್ರಾರಂಭವಾಗುವ ಸ್ಥಳಗಳಿವೆ. ಕೆಲವು ಉದಾಹರಣೆಗಳು: ನಾಗನೂರು, ನಾಗರಭಾವಿ, ನಾಗರಾಳ, ನಾಗಮಂಗಲ ಇತ್ಯಾದಿ.

ಅರ್ಜುನನು ಖಾಂಡವವನದಿಂದ ಉತ್ಪಾಟಿಸಿದ್ದು ನಾಗಕುಲವನ್ನು. ಈ ನಾಗರು ಕರ್ನಾಟಕಕ್ಕೆ ಬಂದು ನೆಲಸಿದರೆ?
ಕರ್ನಾಟಕದಲ್ಲಿ ನಾಗರಖಂಡವೆನ್ನುವ ಪ್ರದೇಶವಿದೆ. ಕರ್ನಾಟಕದ ಕರಾವಳಿ ಹಾಗು ಘಟ್ಟ ಪ್ರದೇಶದಲ್ಲಿ ನಾಗಪೂಜೆಯ ಬಲವಾದ ಸಂಪ್ರದಾಯವಿದೆ. ಇದು ನಾಗ ಜನಾಂಗದ ಕೊಡುಗೆಯೆ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೆ ನಾಗಪೂಜೆಯನ್ನು ಪುತ್ರಲಾಭಕ್ಕಾಗಿ ಮಾಡುವದನ್ನು ಗಮನಿಸಿರಿ. ಕೆಲವು ಪಂಡಿತರ ಅಭಿಪ್ರಾಯದ ಪ್ರಕಾರ ಕಂದ ಶಬ್ದದಿಂದ ಸ್ಕಂದ ಶಬ್ದ ಬಂದಿರುವ ಶಕ್ಯತೆ ಇದೆ. ಕಂದ ಜನಾಂಗದ ನಿವಾಸವೇ ಖಾಂಡವವನವಾಗಿರುವದರಿಂದ, ಕಂದರು ಹಾಗು ನಾಗರು ಪರ್ಯಾಯ ಪದಗಳಾಗಿರುವ ಸಂಭಾವ್ಯತೆ ಕಂಡು ಬರುತ್ತದೆ. ಅಥವಾ ಸೋದರ ಸಮುದಾಯದವರಾಗಿರಬಹುದು. ಆದುದರಿಂದ ನಾಗರು ಕರ್ನಾಟಕಕ್ಕೆ ಬಂದು ನೆಲಸಿದ್ದರಲ್ಲಿ ಏನೂ ಆಶ್ಚರ್ಯವಿಲ್ಲ.

ಮಾತೃಸೈನ್ಯದಿಂದ ಸೋಲಿಸಲ್ಪಟ್ಟ ಮತ್ತೊಂದು ಅಸುರಕುಲದವರೆಂದರೆ ಮಹಿಷಕುಲ. ಇವರು ಎಮ್ಮೆಗಳ ಹೈನುಗಾರಿಕೆಯಲ್ಲಿ ತೊಡಗಿಕೊಂಡವರು. ಕರ್ನಾಟಕದಲ್ಲಿ ಮಹಿಷಿ, ಮಹಿಷವಾಡಗಿ, ಮೈಸಾವಿ(=ಮ್ಹೈಸಾವಿ), ಮೈಸಾಳಗಾ(=ಮ್ಹೈಸಾಳಗಾ), ಮೈಸವಳ್ಳಿ(=ಮ್ಹೈಸವಳ್ಳಿ), ಮೈಸೂರು(=ಮ್ಹೈಸೂರು) ಮೊದಲಾದ ಸ್ಥಳನಾಮಗಳು, ಈ ಪ್ರದೇಶದಲ್ಲಿ ವ್ಯಾಪಕವಾಗಿ ನೆಲೆಸಿದ್ದ ಮಹಿಷ ಸಮುದಾಯವನ್ನು ತೋರಿಸುತ್ತವೆ. ಇದರಂತೆ ಎಮ್ಮೆ ಅಥವಾ ಕೋಣ ಪದದಿಂದ ಪ್ರಾರಂಭವಾಗುವ ೫೮ ಸ್ಥಳಗಳು (ಉದಾಹರಣೆಗೆ ಎಮ್ಮಿಗನೂರು, ಕೋಣಾಜೆ, ಕೋಣಂದೂರು ಇತ್ಯಾದಿ) ಕರ್ನಾಟಕದಲ್ಲಿವೆ.

ಈ ಮಹಿಷ ಕುಲದವರು ಹಾಗು ಆಕಳ ಹೈನುಗಾರಿಕೆಯಲ್ಲಿ ತೊಡಗಿದ ಗೊಲ್ಲರು ಬೇರೆ ಬೇರೆ ಸಮುದಾಯದವರು. ಆಕಳ ಹೈನುಗಾರಿಕೆಯನ್ನು ಸೂಚಿಸುವ ೧೭೧ ಗ್ರಾಮಗಳು ಕರ್ನಾಟಕದಲ್ಲಿವೆ.
(ಉದಾ: ಗೋನಾಳ, ಗೋಹಟ್ಟಿ, ಗೋಕಾವಿ ಇತ್ಯಾದಿ.
ಟಿಪ್ಪಣಿ: ಗೋಗಾವ ಇದು ಗೋಕಾವಿಯಾಗಿ ಮಾರ್ಪಟ್ಟು, ತನ್ನಂತರ ಬ್ರಿಟಿಶ್ ಕಾಲದಲ್ಲಿ ಗೋಕಾಕ ಎಂದು ಬದಲಾವಣೆಯಾಗಿದೆ).

ಕರ್ನಾಟಕದ ಹೊರಗೂ ಸಹ, ಈ ಸ್ಥಳನಾಮಗಳು ದೊರೆಯುತ್ತಿದ್ದು, ‘ಗೋವಾ’ ಇದಕ್ಕೆ ಉತ್ತಮ ಉದಾಹರಣೆ.
ಮಹಿಷ ಕುಲದ ಗ್ರಾಮಗಳು ಮಹಾರಾಷ್ಟ್ರ, ಕರ್ನಾಟಕ ಹಾಗು ಆಂಧ್ರಪ್ರದೇಶದ ದೊಡ್ಡ ಭಾಗವನ್ನು ವ್ಯಾಪಿಸಿಕೊಂಡಿವೆ. ಆಂಧ್ರಪ್ರದೇಶದಲ್ಲಿಯ ‘ಎಮ್ಮಿಗನೂರು’ ಪ್ರಸಿದ್ಧ ಸ್ಥಳ. ಅದರಂತೆ, ಮಹಾರಾಷ್ಟ್ರದಲ್ಲಿಯೂ ಸಹ ‘ಮ್ಹೈಸಾಳ’ ಮೊದಲಾದ ಹೆಸರಿನ ಗ್ರಾಮಗಳಿವೆ. ಕರ್ನಾಟಕದ ಪಶ್ಚಿಮೋತ್ತರ ಭಾಗವನ್ನು ಹಾಗು ಮಹಾರಾಷ್ಟ್ರದ ದಕ್ಷಿಣ ಭಾಗವನ್ನು ಮಹಿಷಮಂಡಲ ಎಂದು ಕರೆಯಲಾಗುತ್ತದೆ.

ಮಾತೃಸೈನ್ಯವು ಆಕಳ ಹೈನುಗಾರಿಕೆಯ ಗೊಲ್ಲ ಕುಲದವರಿಗೆ ಹಾನಿ ಮಾಡದೆ, ಎಮ್ಮೆಯ ಹೈನುಗಾರಿಕೆಯಲ್ಲಿ ತೊಡಗಿಕೊಂಡ ಮಹಿಷ ಕುಲದವರನ್ನು ಸಂಹರಿಸಲು ಕಾರಣವೇನು? ಬಹುಶಃ, ಆರ್ಯ ಜನಾಂಗದವರಿಗೂ, ಮಾತೃಪ್ರಧಾನ ಆರ್ಯೇತರ ಜನಾಂಗದವರಿಗೂ ಒಪ್ಪಂದವಾಗಿರುವ ಸಾಧ್ಯತೆಗಳಿವೆ!

Tuesday, May 20, 2008

ಮಲ್ಲರು ಹಾಗು ಕಂದರು

ಕರ್ನಾಟಕದಲ್ಲಿ ಮಲ್ಲ ಹೆಸರನ್ನು ಸೂಚಿಸುವ ೩೮೦ ಗ್ರಾಮಗಳಿವೆ.
ಕೆಲವು ಉದಾಹರಣೆಗಳು:
ಮಲಂದೂರು, ಮಲಂಬಾ, ಮಲಗಾಳಿ, ಮಲಗೆರೆ, ಮಲಗೋಣ, ಮಲಘಾಣ, ಮಲ್ಲಸಂದ್ರ, ಮಲ್ಲೇಶ್ವರಮ್, ಮಲ್ಲಹಳ್ಳಿ, ಮಲ್ಲಾಪುರ, ಮಲ್ಲೂರು ಇತ್ಯಾದಿ. ‘ಮಲಪ್ರಭಾ’ ಎಂದು ಕರೆಯಲಾಗುವ ನದಿಯು ವಾಸ್ತವಿಕವಾಗಿ ‘ಮಲ್ಲಪ್ರಭಾ’ ನದಿಯೇ ಸೈ. ಮಲ್ಲ ಜನಾಂಗವು ಈ ನದಿಯ ಆಸುಪಾಸಿನಲ್ಲಿ ನೆಲೆಸಿದ್ದರಿಂದಲೇ ಈ ನದಿಗೆ ಮಲ್ಲಪ್ರಭಾ ಎನ್ನುವ ಹೆಸರು ಬಂದಿರಬೇಕು.

ಕರ್ನಾಟಕದಲ್ಲಿ ಮಲ್ಲ ಈ ಪದದ ಅರ್ಥ ಶೂರ, ಜಟ್ಟಿ ಎಂದಾಗುತ್ತದೆ. ಮಲ್ಲಪ್ಪ, ಮಲ್ಲವ್ವ ಇವು ಕರ್ನಾಟಕದಲ್ಲಿ ಜನಪ್ರಿಯ ಹೆಸರುಗಳು. ಮಲ್ಲಯ್ಯನೆನ್ನುವದು ಶಿವನ ಹೆಸರೂ ಹೌದು. ಅಡಗೂಲಜ್ಜಿಯ ಕತೆಗಳಲ್ಲಿ ‘ಮಲಪೂರಿ’ ಎನ್ನುವ ಯಕ್ಷಿಣಿ ಬರುತ್ತಾಳೆ. ಸ್ಕಂದಪುರಾಣದಲ್ಲಿ, ಮಾರ್ಕಂಡೇಯ ಮುನಿಯು ಮಾರ್ತಾಂಡಭೈರವನಿಗೆ, “ಸ್ವಾಮಿನ್, ಮಲ್ಲನಿಷೂದನ!” ಎಂದೇ ಸಂಬೋಧಿಸುತ್ತಾನೆ. ಈ ಮಾರ್ತಾಂಡಭೈರವ ಪದವಿಯನ್ನು ಮಲ್ಲರ ವೈರಿಯಾದ ‘ಖಂಡೋಬಾ’ನಿಗೆ ಕೊಡಲಾಗಿದೆ. ಈತನೇ ‘ಮಲ್ಲಾರಿ ಮಾರ್ತಾಂಡ’. ಈ ಖಂಡೋಬಾ ಅಥವಾ ಖಂಡೇರಾಯನ ಭಕ್ತರು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ವ್ಯಾಪಿಸಿದ್ದಾರೆ.

ಮಲ್ಲ ಪದವು ಸಮುದಾಯಸೂಚಕವಾಗಿದ್ದಂತೆಯೆ, ‘ಖಂಡ’ ಪದವೂ ಸಹ ಸಮುದಾಯಸೂಚಕವಾಗಿದೆ. ಮಹಾಭಾರತದಲ್ಲಿ ಅರ್ಜುನನು ಕೃಷ್ಣನ ಸಹಾಯದಿಂದ ‘ಖಾಂಡವ ವನ’ದಲ್ಲಿ ಸರ್ಪದಹನ ಮಾಡಿದ್ದನ್ನು ಗಮನಿಸಿರಿ. ‘ಖಾಂಡವ’ ಪದವು ‘ಖಂಡು ’ ಪದದಿಂದ ಉತ್ಪತ್ತಿಯಾಗಿದೆ. (ಉದಾ: ಪಾಂಡುವಿನಿಂದ ಪಾಂಡವರು ಬಂದಂತೆ). ಕ್ಷತ್ರಿಯರನ್ನೆಲ್ಲ ನಿರ್ನಾಮ ಮಾಡಲು ಹೊರಟ ಪರಶುರಾಮನು ಹಿಡಿದ ಆಯುಧವು ‘ಖಂಡ ಪರಶು’. ಇಲ್ಲಿ ಖಂಡ ಇದಕ್ಕೆ ತುಂಡು ಎನ್ನುವ ಅರ್ಥ ಮಾಡಬಹುದಾದರೂ, ಖಂಡ ಸಮುದಾಯದ specific weapon ಎಂದೂ ಅರ್ಥೈಸಬಹುದು. ಪರಶುರಾಮನ ಜನ್ಮಸ್ಥಳವೂ ಈಗಿನ ಕರ್ನಾಟಕವೇ. ಈತನ ತಾಯಿ ರೇಣುಕೆಯ ದೇವಸ್ಥಾನವಿರುವದು ಮಲಪ್ರಭಾ (=ಮಲ್ಲಪ್ರಭಾ) ನದಿಯ ಬದಿಯಲ್ಲಿರುವ ಸವದತ್ತಿಯಲ್ಲಿ. ಈ ರೀತಿಯಾಗಿ ಈ ಎರಡು ಸಮುದಾಯಗಳು, (ಮಲ್ಲರು ಹಾಗು ಖಂಡರು) ‘ಬೃಹತ್ ಕಂನಾಡಿನ’ ನಿವಾಸಿಗಳು, ಹೋರಾಡುತ್ತಲೇ ಬದುಕಿದ ದಾಯಾದಿಗಳಾಗಿರಬಹುದು.

ಮಹಾಭಾರತದಲ್ಲಿ ಅಂಗ, ವಂಗ ಹಾಗು ಕಳಿಂಗರ ಜೊತೆಗೆ ಮಲ್ಲರ ಬಗೆಗೂ ಸಹ ದಾಖಲಿಸಲಾಗಿದೆ.. ಭೀಮಸೇನ ಹಾಗು ಅರ್ಜುನರು ಉತ್ತರಮಲ್ಲರನ್ನು ಹಾಗು ದಕ್ಷಿಣಮಲ್ಲರನ್ನು ಯುದ್ಧದಲ್ಲಿ ಸೋಲಿಸಿದ ವರ್ಣನೆಯಿದೆ. ಮನುಸ್ಮೃತಿಯಲ್ಲಿ ಮಲ್ಲರನ್ನು ವ್ರಾತ್ಯ (heterodox) ಕ್ಷತ್ರಿಯರೆಂದು ಕರೆಯಲಾಗಿದೆ.

ಕ್ರಿ.ಪೂ. ೬ನೆಯ ಶತಮಾನದಿಂದ ಕ್ರಿ.ಪೂ. ೪ನೆಯ ಶತಮಾನದವರೆಗೆ, ‘ಪಾವಾ’ ಮತ್ತು ‘ಕುಶೀನಗರ’ಗಳಲ್ಲಿ ಮಲ್ಲರ ಗಣರಾಜ್ಯಗಳು ಇದ್ದ ಬಗೆಗೆ ಉಲ್ಲೇಖಗಳಿವೆ. ೧೨ನೆಯ ಶತಮಾನದಲ್ಲಿ ಖಾಸಮಲ್ಲರು ನೇಪಾಳದಲ್ಲಿ ರಾಜರಾಗಿದ್ದರು. ಈ ಖಾಸ ಎನ್ನುವವರು ಕೃಷ್ಣನ ಅನುಯಾಯಿಗಳಾಗಿದ್ದರೆಂದು ಭಾಗವತದಲ್ಲಿ ಹೇಳಲಾಗಿದೆ. (ಕೃಷ್ಣನು ‘ಕನ್ಹೈಯಾ’ ಅಂದರೆ ‘ಕನ್ನಯ್ಯ’ (=ಕನ್ನ ಜನಾಂಗದವ) ಹಾಗು ಗೋಕುಲದಲ್ಲಿದ್ದ ‘ಹಟ್ಟಿಕಾರ’ ಸಮುದಾಯದಲ್ಲಿ ಬೆಳೆದವ ಎನ್ನುದನ್ನು ಗಮನಿಸಬೇಕು). ಮನುಸ್ಮೃತಿಯಲ್ಲಿ ಖಾಸರ ಉಲ್ಲೇಖವಿದೆ. ಇವರು ವ್ರಾತ್ಯ ಕ್ಷತ್ರಿಯರೆಂದು ಅಲ್ಲಿ ಹೇಳಲಾಗಿದೆ.

೧೭ನೆಯ ಹಾಗು ೧೮ನೆಯ ಶತಮಾನದಲ್ಲಿ ಬಂಗಾಲದ ಭಾಗವನ್ನು ಆಳಿದ ಮಲ್ಲರಾಜರ ರಾಜಧಾನಿಯಾದ ವಿಷ್ಣುಪುರವು ಬಂಕೂರು ಎನ್ನುವ ಜಿಲ್ಲೆಯಲ್ಲಿದೆ. (ಕೋಲಕತ್ತಾದಿಂದ ೧೩೨ ಕಿ.ಮಿ. ದೂರದಲ್ಲಿದೆ). ಅಲ್ಲಿ ಮಲ್ಲೇಶ್ವರವೆನ್ನುವ ಗುಡಿ ಸಹ ಇದೆ. (ಬಂಕೂರು ಇದು ಕನ್ನಡ ಪದ).

ಉತ್ತರ ಪ್ರದೇಶದಲ್ಲಿ ಇರುವ ಮಲ್ಲರು ಶೂದ್ರರ ಗುಂಪಿಗೆ ಸೇರಿದವರು. ಇವರನ್ನು ಅಲ್ಲಿ ಜಲಗಾರರು (=ಮೀನುಗಾರರು, ಅಂಬಿಗರು) ಎಂದೂ ಕರೆಯುತ್ತಾರೆ. ಡಕಾಯತರ ರಾಣಿ ಫೂಲನ್ ದೇವಿ ಮಲ್ಲ ಸಮುದಾಯಕ್ಕೆ ಸೇರಿದವಳು. ದಾರ್ಜೀಲಿಂಗದ ಹತ್ತಿರವಿರುವ ಗುಡ್ಡಗಾಡಿನಲ್ಲಿ ಖಾಸೀ ಜನಾಂಗವಿದೆ.

ಇವೆಲ್ಲ ದಾಖಲೆಗಳು ಮಲ್ಲ ಜನಾಂಗದ ಪ್ರಾಚೀನತೆಯನ್ನು ತೋರಿಸುತ್ತವೆ. ರಾಜಕೀಯ ಪ್ರಾಬಲ್ಯವಿದ್ದಾಗ ಕ್ಷತ್ರಿಯರಾಗುತ್ತಿದ್ದ ಈ ಸಮುದಾಯವು, ರಾಜಕೀಯವಾಗಿ ನಿರ್ಬಲರಾದಾಗ ಶೂದ್ರರ ಗುಂಪಿಗೆ ಜಮೆಯಾಗುತ್ತಿತ್ತು.
ಹಿಮಾಲಯದ ಅಡಿಭಾಗದಲ್ಲಿ ಹಾಗು ಬಂಗಾಲದಲ್ಲಿ ರಾಜ್ಯವಾಳಿದ ಈ ಸಮುದಾಯವು , ಅಲ್ಲಿ ರಾಜಕೀಯ ವೈರವನ್ನೆದುರಿಸಲಾಗದೆ, ದಕ್ಷಿಣಕ್ಕೆ ಬಂದಿತೆ? ಹಾಗು ಕರ್ನಾಟಕದಲ್ಲಿ ನೆಲೆ ನಿಂದಿತೆ?

ಉತ್ತರ ಭಾರತದಲ್ಲಿಯೇ ಉಳಿದುಕೊಂಡ ಕನ್ನಡ ಜನಾಂಗಗಳು ಕಾಲಕ್ರಮೇಣ ಕನ್ನಡವನ್ನು ಬಿಟ್ಟುಬಿಟ್ಟು , ಆರ್ಯಭಾಷೆಯನ್ನು ಅಂಗೀಕರಿಸಿದಂತೆಯೆ, ಅಲ್ಲಿಯ ಮಲ್ಲರೂ ಸಹ ಕನ್ನಡವನ್ನು ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ನೆಲೆಸಿದ ಮಲ್ಲರು ಮಾತ್ರ ಕನ್ನಡವನ್ನು ಇಟ್ಟುಕೊಂಡಿರಬೇಕು.

‘ಖಂಡ’ ಅಥವಾ ಕಂದ ಪದವನ್ನು ಸೂಚಿಸುವ ೫೪ ಗ್ರಾಮಗಳು ಕರ್ನಾಟಕದಲ್ಲಿವೆ.
ಕೆಲವು ಉದಾಹರಣೆಗಳು:
ಕಂದಕೂರು, ಕಂದಗಲ್, ಕಂದಗೋಳ, ಕಂದಾವರ, ಕಂದೂರು, ಕಂದ್ರಾಜಿ, ಖಂಡಾಲಾ, ಖಂದೋಡಿ, ಖಂಡೇರಾಯನಪಳ್ಳಿ ಇತ್ಯಾದಿ. ಇದಕ್ಕಿಂತ ಮುಖ್ಯವಾಗಿ, ಕರ್ನಾಟಕದ ಹೊರಗೂ ಇಂತಹ ಅನೇಕ ಸ್ಥಳಗಳಿವೆ. ಅಫಘಾನಿಸ್ತಾನದಲ್ಲಿರುವ ‘ಕಂದಹಾರ’ವಂತೂ ಜಗತ್ಪ್ರಸಿದ್ಧವಿದೆ. ಈ ಪದವು ಕಂದ ಹಾಗು ಹಾರ ಎನ್ನುವ ಎರಡು ಪದಗಳಿಂದ ಕೂಡಿದ ಸಂಯುಕ್ತ ಪದವಾಗಿದ್ದು, ಹಾರ (=ಹಳ್ಳಿ) ಇದು ಕನ್ನಡ ಪದ ಎನ್ನುವದನ್ನು ಲಕ್ಷಿಸಬೇಕು. ಕಂದಹಾರವೆನ್ನುವ ಒಂದು ಪಟ್ಟಣವೂ ಸಹ ಈಗಿನ ಮಹಾರಾಷ್ಟ್ರ ರಾಜ್ಯದಲ್ಲಿದೆ. ಮುಂಬಯಿ ನಗರದ ಭಾಗವಾದ ‘ಕಾಂದೀವ್ಲಿ’ ಇದು ‘ಕಂದವಳ್ಳಿ’ಯ ಹಾಗು ‘ಖಂಡಾಲಾ’ ಇದು ‘ಖಂಡಹಾಳ’ದ ಮರಾಠೀಕರಣವೆನ್ನುವದು ಸ್ಪಷ್ಟವಿದೆ. ಈ ರೀತಿಯಾಗಿ ಅಫಘಾನಿಸ್ತಾನ ಹಾಗು ಮಧ್ಯಭಾರತದಲ್ಲಿ ನೆಲೆಸಿದ್ದ ಈ ಸಮುದಾಯವು , ಆರ್ಯರ ಆಕ್ರಮಣದಿಂದಾಗಿ, ಗುಳೆ ಹೊರಟು ಮಹಾರಾಷ್ಟ್ರ ಹಾಗು ಕರ್ನಾಟಕಗಳಲ್ಲಿ ನೆಲೆಸಿದರು. ಅಲ್ಲಿಯೂ ಸಹ ಕಂದರಿಗೆ ಹಾಗು ಮಲ್ಲರಿಗೆ ಪರಸ್ಪರ ಹೊಡೆದಾಟಗಳು ನಡದೇ ಇದ್ದವು.

ಈ ಕಂದರ ದೇವತೆಯು ‘ಕಂದಸ್ವಾಮಿ’. ಈತನು ಕಾಲಾಂತರದಲ್ಲಿ ಸಂಸ್ಕೃತೀಕರಣದಿಂದ ‘ಸ್ಕಂದ’ನಾಗಿರಬಹುದು. ಈತನ ವಾಹನ ನವಿಲು, ಅಂದರೆ ಹಾವಿನ ವೈರಿ. ಖಾಂಡವ ವನವನ್ನು ಅರ್ಜುನನು ಸುಟ್ಟಾಗ ಸತ್ತವರೆಲ್ಲರೂ ನಾಗರು. (=ಸರ್ಪಗಳು). ಅಂದರೆ, ಕಂದರ ನೆಲೆಯಾದ ಖಾಂಡವವನವನ್ನು ಅತಿಕ್ರಮಿಸಿದ ನಾಗರನ್ನು ಹೊರದೂಡಲಿಕ್ಕಾಗಿ, ಖಂಡರು ಅರ್ಜುನನ ಸಹಾಯವನ್ನು ಕೋರಿರಬಹುದು.

ಕಂದ ಎನ್ನುವ ಹೆಸರನ್ನು ಹೊಂದಿದ ಆದಿವಾಸಿ ಸಮುದಾಯವು ಈಗ ಕೇವಲ ಆಂಧ್ರಪ್ರದೇಶ ಹಾಗು ಓಡಿಸಾ ರಾಜ್ಯಗಳಲ್ಲಿ ಮಾತ್ರ ಸಿಗುತ್ತದೆ. ಈ ಕಂದರ ಭಾಷೆ ತೆಲಗು ಹಾಗು ಗೊಂಡಿ ಭಾಷೆಯನ್ನು ಹೋಲುತ್ತದೆ.

ಇದಿಷ್ಟು ಮಲ್ಲ ಹಾಗು ಕಂದ ಸಮುದಾಯಗಳ ಕತೆ. ಪೂರ್ವ-ದ್ರವಿಡ ಭಾಷೆಯನ್ನಾಡುತ್ತಿದ್ದ ಈ ಸಮುದಾಯಗಳು, ಕಾಲಕ್ರಮದಲ್ಲಿ ಹಿಮಾಲಯದ ಅಡಿಭಾಗದಿಂದ ದಕ್ಷಿಣಕ್ಕೆ ಸರಿಯುತ್ತ, ಕರ್ನಾಟಕದಲ್ಲಿ ಅಂತಿಮವಾಗಿ ತಳವೂರಿದ ಕತೆ. ಭಾರತೀಯ ಪುರಾಣಗಳು ವಾಸ್ತವದಲ್ಲಿ ಇಲ್ಲಿಯ ಮೂಲ ಜನಾಂಗಗಳ ಇತಿಹಾಸವೇ ಆಗಿವೆ. ಪುರಾಣ ಈ ಪದದ ಅರ್ಥವೇ ಹಳೆಯ ಎಂದಾಗುತ್ತದೆ. ಈ ಪುರಾಣಗಳನ್ನು ಸೋಸಿದಾಗ ಐತಿಹಾಸಿಕ ಸತ್ಯದ ಹೊಳಹು ಗೋಚರಿಸುತ್ತದೆ.

Thursday, May 15, 2008

ಕರ್ನಾಟಕದ ಸ್ಥಳನಾಮಗಳು

‘ಕಂನಾಡು’ ಎನ್ನುವದು ‘ಕರ್ನಾಟಕ’ದ ಮೂಲರೂಪ. ಈ ಹೆಸರು ‘ಕನ್ನ’ ಜನಾಂಗದ ಮೂಲಕ ಬಂದಿದೆ ಎನ್ನುವದನ್ನು ಕೀರ್ತಿಶೇಷ ಶ್ರೀ ಶಂ.ಬಾ.ಜೋಶಿ ತೋರಿಸಿದರು. ಇದರಂತೆ ಕನ್ನರ ವಾಸಸ್ಥಾನಗಳನ್ನು ತೋರಿಸುವ ಅನೇಕ ಊರುಗಳು ಕರ್ನಾಟಕದಲ್ಲಿವೆ. ಈ ಸ್ಥಳನಾಮಗಳು ಕೇವಲ ವಾಸಸ್ಥಾನಗಳನ್ನಷ್ಟೇ ಅಲ್ಲ, ಆ ಜನಾಂಗದ ಸಾಂಸ್ಕೃತಿಕ ಅವಸ್ಥೆಯನ್ನೂ ಸಹ ತೋರಿಸುತ್ತವೆ ಎನ್ನುವದು ಶ್ರೀ ಶಂ.ಬಾ.ಜೋಶಿಯವರ ಮತ್ತೊಂದು ಪ್ರಮೇಯ. ಉದಾಹರಣೆಗೆ ‘ಕನ್ನಟ್ಟಿ’ (=ಕನ್ನ+ಹಟ್ಟಿ) ಎನ್ನುವದು ಕನ್ನ ಜನಾಂಗದ ಹಟ್ಟಿಕಾರ ಅವಸ್ಥೆಯನ್ನು ತೋರಿಸಿದರೆ ‘ಕನಕೂರು’ ಎನ್ನುವದು ಒಕ್ಕಲಿಗ ಅವಸ್ಥೆಯನ್ನು ತೋರಿಸುತ್ತದೆ ಎನ್ನುವದು ಅವರ ಸಿದ್ಧಾಂತ. ಇದಲ್ಲದೆ, ಸ್ಥಳನಾಮಗಳು ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಹ ಸೂಚಿಸಬಹುದು. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಭಟಕಳ ತಾಲೂಕಿನಲ್ಲಿಯ ‘ಕಗ್ಗುಂಡಿ’ ಎನ್ನುವ ಸ್ಥಳನಾಮದಲ್ಲಿಯ ‘ಗುಂಡಿ’ ಇದು ಕೆಳಮಟ್ಟದ ಪ್ರದೇಶವನ್ನು ಸೂಚಿಸುತ್ತಿದ್ದರೆ, ವಿಜಾಪುರ ತಾಲೂಕಿನಲ್ಲಿರುವ ‘ಕಗ್ಗೋಡು’ ಎನ್ನುವ ಊರು ಎತ್ತರದ ಪ್ರದೇಶವನ್ನು (=ಕೋಡು) ಸೂಚಿಸುತ್ತದೆ.

ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಸಮಗ್ರ ಭಾರತದಲ್ಲಿ ದೊರೆಯುತ್ತವೆ. ಇದರರ್ಥವೇನೆಂದರೆ, ಕನ್ನ ಜನಾಂಗವು ಅಂದರೆ ಕನ್ನಡಿಗರು ಒಂದು ಕಾಲದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಅನೇಕ ಐತಿಹಾಸಿಕ ಕಾರಣಗಳಿಂದಾಗಿ, ಸದ್ಯಕ್ಕೆ ಕರ್ನಾಟಕಕ್ಕೆ ಸೀಮಿತರಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿ ಯಾವ ಪ್ರಕಾರವಾಗಿ ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಇರುವವೋ, ಅದೇ ರೀತಿಯಾಗಿ ಬೇರೆ ಜನಾಂಗಗಳನ್ನು ಸೂಚಿಸುವ ಸ್ಥಳನಾಮಗಳೂ ಸಹ ಹೇರಳವಾಗಿ ಲಭ್ಯವಿವೆ. ಆ ಜನಾಂಗಗಳಲ್ಲಿ ಕೆಲವು ಜನಾಂಗಗಳು ಕನ್ನುಡಿಯನ್ನು(=ಕನ್ನಡವನ್ನು) ಅಥವಾ ಪೂರ್ವದ್ರಾವಿಡ ನುಡಿಯನ್ನು ಮಾತನಾಡುತ್ತಿದ್ದ ಜನಾಂಗಗಳಾಗಿರಬಹುದು.

ಇಂತಹ ಜನಾಂಗಸೂಚಕ ಸ್ಥಳನಾಮಗಳ ಅಧ್ಯಯನ ಮಾಡುವ ಉದ್ದೇಶವನ್ನು ನಾನು ವ್ಯಕ್ತಪಡಿಸಿದಾಗ, ನನ್ನ ತರುಣ ಮಿತ್ರ ಶ್ರೀ ವ್ಹಿ.ಆರ್.ಹೆಗಡೆಯವರು ಕರ್ನಾಟಕ ರಾಜ್ಯದಲ್ಲಿಯ ೨೯,೦೦೦ಕ್ಕೂ ಮಿಕ್ಕಿದ ಹಳ್ಳಿ ಹಾಗು ಪಟ್ಟಣಗಳ ಹೆಸರುಗಳನ್ನು ಸಂಗ್ರಹಿಸಿ ಕೊಟ್ಟರು. ಅವರ ಈ ಉಪಕಾರಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಆ ಎಲ್ಲ ಸ್ಥಳನಾಮಗಳನ್ನು ಸಂಶೋಧಿಸಿದಾಗ, ೨೩೮೧ ಸ್ಥಳನಾಮಗಳು ಸೂಚಿಸುವ ೨೮ ಜನಾಂಗಗಳನ್ನು ಗುರುತಿಸಲು ಸಾಧ್ಯವಾಯಿತು. ಇವೆಲ್ಲ ವಿಭಿನ್ನ Races ಎಂದೇನಲ್ಲ. ಇವುಗಳನ್ನು communities ಹಾಗೂ sub-communities ಎಂದೂ ಕರೆಯಬಹುದು. ಯಾವುದೋ ಕಾರಣಗಳಿಗಾಗಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದ ಅಥವಾ ಗುರುತಿಸಲ್ಪಡುತ್ತಿದ್ದ ಇಂತಹ ಜನಾಂಗಗಳನ್ನು ಹಾಗು ಆ ಗ್ರಾಮಗಳ ಸಂಖ್ಯೆಯನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಮಲ್ಲ (೩೮೦)
೨. ನಾಗ (೩೧೩)
೩. ಗೊಂಡ, ಕೊಂಡ (೨೫೬)
೪. ಕನ್ನ (೧೭೦)
೫. ಕಡ, ಕಡಬ (೧೨೫)
೬. ಗಂಗ (೧೦೯)
೭. ಹಲ (೧೦೩)
೮. ಸಿರ, ಶಿರ (೯೯)
೯. ಸಿಂಗ (೮೯)
೧೦. ಮನ್ನ (೮೪)
೧೧. ನಲ್ಲ (೮೦)
೧೨. ಬಳ್ಳ (೭೮)
೧೩. ಅಂಕ (೭೪)
೧೪. ಕೋಲ, ಕೋರ (೬೭)
೧೫. ಮಂಡ, ಮಂಟ (೫೮)
೧೬. ಕಂದ (೫೪)
೧೭. ಮುರ (೪೭)
೧೮. ಕಂಬ (೪೬)
೧೯. ಕುಪ (೪೪)
೨೦. ಕರ (೩೬)
೨೧. ಮೂಗ (೩೫)
೨೨. ಪಣ, ಹನ (೩೧)
೨೩. ಕಿರ, ಕಿರಗ (೨೭)
೨೪. ಕುರು (೨೭)
೨೫. ಹಂಗ (೨೬)
೨೬. ಮುಂಡ (೨೫)
೨೭. ಬಂಕ (೧೭)
೨೮. ಕಿನ್ನ (೬)

ನಮ್ಮ ಪುರಾಣಗಳಲ್ಲಿ ಹಾಗು ಧಾರ್ಮಿಕ ಗ್ರಂಥಗಳಲ್ಲಿ ಈ ಜನಾಂಗಳ ಸಂಘರ್ಷಗಳು ವರ್ಣಿಸಲ್ಪಟ್ಟಿವೆ. ಕೆಲವು ಉದಾಹರಣೆಗಳು:

೧. ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರೀ|
ಸರ್ವದುಃಖ ಹರೇ, ದೇವಿ, ಮಹಾಲಕ್ಷ್ಮಿ ನಮೋಸ್ತುತೇ||
--------------ಇಂದ್ರಕೃತ ಮಹಾಲಕ್ಷ್ಮೀ ಸ್ತೋತ್ರ

೨. ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|
ಜ್ಯೋತಿರೂಪಾ, ಜಗನ್ನಾಥಾ, ಜಯಿನೀ,ಜಯವರ್ಧಿನೀ||
…………………………ಲಲಿತಾ ಸಹಸ್ರನಾಮ

೩. ನ್ಯಗ್ರೋಧೋದುಂಬರೋsಶ್ವತ್ಥಶ್ಚಾಣೂರಾಂಧ್ರನಿಷೂದನ:|
…………………………….ವಿಷ್ಣು ಸಹಸ್ರನಾಮ

ತಮ್ಮ ವೈರಿಗಳನ್ನು ನಾಶಪಡಿಸಿದ್ದಕ್ಕಾಗಿ, ಈ ಸ್ತೋತ್ರಗಳಲ್ಲಿ ಆಯಾ ದೇವತೆಗಳನ್ನು ಸ್ತುತಿಸಲಾಗಿದೆ. ಈ ವೈರಿಗಳು , ಅಂದರೆ ಕೋಲಾಸುರ, ಮುಂಡಾಸುರ, ಮಹಿಷಾಸುರ ಇವರೆಲ್ಲ ಓರ್ವ ರಾಕ್ಷಸನಾಗಿರದೆ, ಜನಾಂಗಸೂಚಕ ಪದಗಳಾಗಿವೆ. ಕೋಲ, ಮುಂಡ ಹಾಗು ಮಹಿಷರನ್ನು ಸೋಲಿಸಿದವಳು ಮಾತೃದೇವತೆಯಾಗಿದ್ದರೆ, ಆಂಧ್ರರನ್ನು(---ಇಲ್ಲಿ ಅದರರ್ಥ ದ್ರಾವಿಡರನ್ನು----) ಸೋಲಿಸಿದವನು ಪಿತೃದೇವತೆಯಾಗಿದ್ದಾನೆ.

ಈ ಜನಾಂಗಗಳ ಹಾಗು ಸ್ಥಳನಾಮಗಳ ಅಧ್ಯಯನವನ್ನು ಮುಂದಿನ ಭಾಗದಲ್ಲಿ ಎತ್ತಿಕೊಳ್ಳೋಣ.

Tuesday, May 6, 2008

ಶಂ. ಬಾ. ಜೋಶಿ

ಶಂ. ಬಾ. ಜೋಶಿಯವರು ಕರ್ನಾಟಕದ ಅದ್ವಿತೀಯ ಸಂಶೋಧಕರು ಹಾಗು ಸಾಂಸ್ಕೃತಿಕ ಚಿಂತಕರು.

ಶಂಕರ ಬಾಳದೀಕ್ಷಿತ ಜೋಶಿಯವರು ಬೆಳಗಾವಿ ಜಿಲ್ಲೆಯಲ್ಲಿಯ ಸವದತ್ತಿ ತಾಲೂಕಿನ ಗುರ್ಲಹೊಸೂರು ಗ್ರಾಮದಲ್ಲಿ (-- ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಲಾದ ‘ರೇಣುಕಾಸಾಗರ’ ಆಣೆಕಟ್ಟಿನ ಹಿನ್ನೀರಿನಲ್ಲಿ ಈ ಗ್ರಾಮ ಈಗ ಮುಳುಗಿ ಹೋಗಿದೆ.--) ಜನಿಸಿದರು.

ಸಂಶೋಧನೆ ಹಾಗು ಸಾಂಸ್ಕೃತಿಕ ಚಿಂತನೆಯ ಕ್ಷೇತ್ರಗಳನ್ನು ತಮ್ಮ ಪ್ರತಿಭೆಯಿಂದ ಬೆಳಗಿದ ಶಂ.ಬಾ.ಜೋಶಿ ಹಾಗು ವರಕವಿ ದ.ರಾ. ಬೇಂದ್ರೆ ಇವರೀರ್ವರೂ ೧೮೯೬ರ ಜನೆವರಿ ತಿಂಗಳಿನಲ್ಲಿಯೇ ಜನಿಸಿದ್ದು ಒಂದು ಯೋಗಾಯೋಗ. ಶಂ.ಬಾ. ಜೋಶಿಯವರು ಜನೆವರಿ ೪ರಂದು ಜನಿಸಿದರೆ, ಜನೆವರಿ ೩೧ರಂದು ಜನಿಸಿದ ದ.ರಾ. ಬೇಂದ್ರೆ ೨೭ದಿನಗಳಿಂದ ಚಿಕ್ಕವರು. ರಾಷ್ಟ್ರೀಯ ಮನೋಭಾವದ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿಯೇ (--ಆನಂತರದ ‘ವಿದ್ಯಾರಣ್ಯ ಹಾಯ್ ಸ್ಕೂಲು’--) ಇಬ್ಬರೂ ಸೇವೆ ಸಲ್ಲಿಸಿದ್ದರು. ಇಬ್ಬರೂ ಬಡತನದಲ್ಲಿ ಬೆಂದವರು. ಇಲ್ಲಿಗೇ ಇವರೀರ್ವರ ಸಾಮ್ಯ ಮುಗಿದಂತೆ. ಉಳಿದದ್ದೆಲ್ಲ ವೈಷಮ್ಯದ ಕತೆ. ತಮ್ಮ ಕೊನೆಗಾಲದವರೆಗೂ ಈ ದಿಗ್ಗಜಗಳು ಧಾರವಾಡದ ನೆಲದಲ್ಲಿ ದೀರ್ಘ ಹೋರಾಟವನ್ನೇ ನಡೆಯಿಸಿದವು. ಬೇಂದ್ರೆಯವರ ಕೊನೆಯ ದಿನಗಳಲ್ಲಿ, ಶಂ.ಬಾ., ಬೇಂದ್ರೆಯವರನ್ನು ಭೆಟ್ಟಿಯಾದರು. ವೈಚಾರಿಕ ಕುರುಕ್ಷೇತ್ರದಲ್ಲಿ ಗದಾಯುದ್ಧವನ್ನು ನಡೆಸಿದ ಈ ಮಲ್ಲರು ಕೊನೆಗಾಲದಲ್ಲಿ ಶಾಂತಿಮಂತ್ರವನ್ನು ಪಠಿಸಿದರು.

ಶಂ. ಬಾ. ಜೋಶಿಯವರು ಗುರ್ಲಹೊಸೂರಿನಲ್ಲಿಯೇ ಕನ್ನಡ ಏಳನೆಯ ಇಯತ್ತೆಯವರೆಗೆ ಶಾಲೆ ಕಲಿತರು. ತಂದೆಯಿಂದ ಅವರಿಗೆ ವೇದಶಿಕ್ಷಣ ದೊರೆತಿತ್ತು. ತಾಯಿಯಿಂದ ಸಂಗೀತಜ್ಞಾನವನ್ನು ಪಡೆದಿದ್ದರು. ೧೯೧೪ರಲ್ಲಿ ಮಲಪ್ರಭಾ ನದಿಗೆ ಬಂದ ಮಹಾಪೂರದಿಂದಾಗಿ ಇಡೀ ಹಳ್ಳಿಯೇ ಜಲಮಯವಾಗಿ ನಾಶವಾಯಿತು. ಚಿಕ್ಕಂದಿನಲ್ಲಿಯೆ ತಂದೆಯನ್ನು ಕಳೆದುಕೊಂಡಿದ್ದ ಅವರ ಮನೆಯವರೆಲ್ಲ ಪುಣೆಗೆ ಹೋದರು. ಅಲ್ಲಿ ಇವರ ಅಣ್ಣ ಭಾನು ದೀಕ್ಷಿತ ಜೋಶಿಯವರು ಪೌರೋಹಿತ್ಯ ಮಾಡುತ್ತಿದ್ದರು. ಇವರೂ ಅಲ್ಲಿಯೇ ಪೌರೋಹಿತ್ಯದಲ್ಲಿ ಮುಂದುವರಿಯಬಹುದಾಗಿತ್ತು. ಆದರೆ ಧಾರವಾಡಕ್ಕೆ ಮರಳಿದ ಜೋಶಿಯವರು ಶಿಕ್ಷಕರ ಟ್ರೇನಿಂಗ ಕಾಲೇಜ ಸೇರಿದರು. ೧೯೨೦ರಲ್ಲಿ ಚಿಕ್ಕೋಡಿಯಲ್ಲಿ ಶಿಕ್ಷಕವೃತ್ತಿ ಪ್ರಾರಂಭಿಸಿದರು. ಮಹಾತ್ಮಾ ಗಾಂಧೀಜಿಯವರು ಆ ಸಮಯದಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಅವರೊಡನೆ ಶಂ.ಬಾ. ಮಾಡಿದ ಸಂಚಾರದ ಫಲವಾಗಿ ಉಗರಗೋಳವೆಂಬ ಕುಗ್ರಾಮಕ್ಕೆ ವರ್ಗಾವಣೆಯಾಯಿತು. ಅಲ್ಲಿ ಕೆಲ ಕಾಲ ಕಳೆದ ಶಂ.ಬಾ. ಕೆಲಸಕ್ಕೆ ರಾಜೀನಾಮೆ ಕೊಟ್ಟು, ಧಾರವಾಡಕ್ಕೆ ಮರಳಿದರು. ‘ಕರ್ನಾಟಕ ವೃತ್ತ’, ‘ಧನಂಜಯ’, ‘ಕರ್ಮವೀರ’ ಮೊದಲಾದ ರಾಷ್ಟ್ರೀಯ ಪತ್ರಿಕೆಗಳಲ್ಲಿ ಕೆಲಕಾಲ ಲೇಖನವ್ಯವಸಾಯ ಮಾಡಿದರು. ೧೯೨೬-೨೭ರ ಅವಧಿಯಲ್ಲಿ ಕರ್ನಾಟಕ ಹಾಯ್ ಸ್ಕೂಲಿನಲ್ಲಿ ಶಿಕ್ಷಕರಾಗಿ ದುಡಿದರು. ೧೯೨೮ರಿಂದ ೧೯೪೬ರವರೆಗೆ ವ್ಹಿಕ್ಟೋರಿಯಾ ಹಾಯ್ ಸ್ಕೂಲಿನಲ್ಲಿ
(--ಆಬಳಿಕ ಅದು ‘ವಿದ್ಯಾರಣ್ಯ ಹಾಯ್ ಸ್ಕೂಲ್ ಆಯಿತು.’--) ಸೇವೆ ಸಲ್ಲಿಸಿ ನಿವೃತ್ತರಾದರು.

ಶಂ.ಬಾ. ಅವರು ಶ್ರೇಷ್ಠ ಶಿಕ್ಷಕರೂ ಆಗಿದ್ದರು. ತಮ್ಮ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗಾಗಿ ಅವರು ಹೂಡಿಕೊಂಡ ಯೋಜನೆಗಳು ಅನೇಕ. ತಾವೇ ಬಡತನದಲ್ಲಿದ್ದಾಗಲೂ ಸಹ, ತಮ್ಮ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯವನ್ನು ಸಹ ಅವರು ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ವಿದ್ಯಾರ್ಥಿಗಳಲ್ಲಿ ಸ್ವತಂತ್ರ ವೈಚಾರಿಕತೆಯನ್ನು ಬೆಳೆಯಿಸುವದಕ್ಕೆ ಅವರು ಮಹತ್ವ ನೀಡುತ್ತಿದ್ದರು. ಅವರ ವಿದ್ಯಾರ್ಥಿಯಾಗಿದ್ದವರು (ಶ್ರೀ ವ್ಹಿ. ಬಿ. ಕುಲಕರ್ಣಿ) ಸಮಾರಂಭವೊಂದರಲ್ಲಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದರಂತೆ. ತಕ್ಷಣವೇ ಶಂ.ಬಾ. ಸಿಡಿನುಡಿದರು : “ಇನ್ನೂ ಎಷ್ಟು ದಿವಸ ಗುಲಾಮಗಿರಿಯೊಳಗ ಇರಾವಪಾ ನೀ?”

ಶಂ. ಬಾ. ಜೋಶಿಯವರ ಹೆಂಡತಿ ಪಾರ್ವತಿ. ಇವರಿಗೆ ಮೂವರು ಮಕ್ಕಳು; ಮೊದಲನೆಯ ಹಾಗು ಕೊನೆಯ ಮಕ್ಕಳು ಗಂಡುಮಕ್ಕಳು, ಹೆಣ್ಣುಮಗಳು ನಡುವಿನವಳು. ಗಂಡು ಮಕ್ಕಳಿಬ್ಬರು ವಿಜ್ಞಾನದಲ್ಲಿ ಡಾಕ್ಟರೇಟ್ ಪದವಿಧರರು. ಶಂ.ಬಾ. ಜೋಶಿ ಕೇವಲ ೭ನೆಯ ಇಯತ್ತೆಯವರೆಗೆ ಕಲಿತು, ಶಿಕ್ಷಕರ ತರಬೇತಿ ಪಡೆದವರು. ತಮ್ಮ ೨೪ನೆಯ ವಯಸ್ಸಿನಲ್ಲಿ ಸ್ವಂತ ಪ್ರಯತ್ನದಿಂದ ಇಂಗ್ಲಿಶ್ ಕಲಿತರು.

ಶಂ. ಬಾ. ಜೋಶಿಯವರು ೨೮ ಸಪ್ಟಂಬರ ೧೯೯೧ರಂದು ನಿಧನರಾದರು. ಮಾರನೆಯ ದಿನ ಅವರ ಹೆಂಡತಿ ಶಂ.ಬಾ.ರನ್ನು ಹಿಂಬಾಲಿಸಿ ನಡೆದರು.
**********************************************

ಶಂ. ಬಾ. ಜೋಶಿಯವರ ಸಾಹಿತ್ಯ ಹಾಗು ಸಂಶೋಧನೆ:

ರಾಷ್ಟ್ರೀಯ ಮನೋಭಾವದ ಶಂ.ಬಾ. ಮೊದಲಲ್ಲಿ ಲೋಕಮಾನ್ಯ ತಿಲಕ ಹಾಗೂ ಅರವಿಂದ ಮಹರ್ಷಿಗಳ ಪ್ರಭಾವಕ್ಕೆ ಒಳಗಾದವರು. ಅವರ ಮೊದಲ ಕೃತಿ, “ ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು”, ೧೯೨೧ರಲ್ಲಿ ಪ್ರಕಟವಾಯಿತು. ೧೯೩೨ರಲ್ಲಿ “ಟಿಳಕ ಕಥಾಮೃತಸಾರ ” ಹೊರಬಂದಿತು. (ತಮ್ಮ ವಿಚಾರಗಳ ಮಾರ್ಪಾಟಿನೊಂದಿಗೆ ಶಂ.ಬಾ.ರವರು ಅರವಿಂದರನ್ನು ಟೀಕಿಸಿದ್ದಾರೆ. ಶಂ.ಬಾ. ಅವರ ನಿಷ್ಠೆ ವ್ಯಕ್ತಿಗಲ್ಲ , ತಾವು ಕಂಡ ಸತ್ಯಕ್ಕೆ ಮಾತ್ರ.)

೧೯೧೭ರಲ್ಲಿ ಕರ್ನಾಟಕ ಕುಲಪುರೋಹಿತರೆಂದು ಹೆಸರಾಂತ ಆಲೂರು ವೆಂಕಟರಾಯರ ಕೃತಿ “ ಕರ್ನಾಟಕದ ಗತವೈಭವ ” ಶಂ.ಬಾ.ರನ್ನು ತೀವ್ರ ಚಿಂತನೆಗೆ ಈಡುಮಾಡಿತು. ‘ಕಾವೇರಿಯಿಂದಮಾ ಗೋದಾವರಿವರೆಗಿರ್ದ’ ಈ ನಾಡು ಈಗೇಕೆ ಕುಗ್ಗಿ ಹೋಗಿದೆ ಎನ್ನುವ ಪ್ರಶ್ನೆ ಅವರನ್ನು ಸಂಶೋಧನಾ ಕ್ಷೇತ್ರಕ್ಕೆ ಎಳೆಯಿತು. ಅಲ್ಲಿಯವರೆಗೂ ಪ್ರಾಚ್ಯ ಸಂಶೋಧನೆ ಎಂದರೆ ಶಾಸನಗಳ , ನಾಣ್ಯಗಳ ಹಾಗು ಪ್ರವಾಸಿಕರ ಗ್ರಂಥಗಳ ಪರಿಶೀಲನೆಗೆ ಪರಿಮಿತವಾಗಿತ್ತು. ಶಂ.ಬಾ.ಜೋಶಿ, ಭಾರತದಲ್ಲಿಯೇ ಮೊದಲ ಬಾರಿಗೆ (--ಹಾಗು simultaneously in Europe--), ಭಾಷೆಯಲ್ಲಿಯ ಅಂತಃಸ್ಥ ಕುರುಹಗಳ ಮೂಲಕ, ಭಾಷೆಯಲ್ಲಿಯ ಬದಲಾವಣೆಯ ಮೂಲಕ ಇತಿಹಾಸವನ್ನು ಅರಿಯುವ ಪ್ರಯತ್ನವನ್ನು ಮಾಡಿದರು. ಇದರ ಜೊತೆಜೊತೆಗೇ ಭಾಷಾವಿಜ್ಞಾನ, ಮಾನವಶಾಸ್ತ್ರ, ವಂಶವಿಜ್ಞಾನ, ಪುರಾಣಶಾಸ್ತ್ರ ಮೊದಲಾದ ಸಂಬಂಧಿತ ಶಾಸ್ತ್ರಗಳ ತಿಳುವಳಿಕೆಯ ಅವಶ್ಯಕತೆಯನ್ನು ಅವರು ಅರಿತುಕೊಂಡರು. ಕನ್ನಾಡಿಗರ (=ಕನ್ನಡಿಗರ=ಕನ್ನರ) ಮೂಲನೆಲೆಯನ್ನು ಹುಡುಕುತ್ತ, ಭಾರತದ ಈಶಾನ್ಯ ದಿಕ್ಕನ್ನು ತಲುಪಿ ಬಂದರು. (ಇವರ ಸಂಶೋಧನಾ ಕಾರ್ಯಕ್ಕೆ ಯಾವ ಸಂಸ್ಥೆಯ ಸಹಾಯವೂ ಇರಲಿಲ್ಲವೆನ್ನುವದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.) ಮಹಾರಾಷ್ಟ್ರ, ಗುಜರಾತ ಹಾಗು ರಾಜಸ್ಥಾನಗಳ ಭಾಗವಾದ ‘ಖಾನದೇಶ’ವು ಮೂಲತಃ ಕನ್ನಡಿಗರ(=ಕನ್ನರ) ದೇಶವೆನ್ನುವದನ್ನು ಸಿದ್ಧ ಮಾಡಿದರು. ಹಿಮಾಲಯದ ಅಡಿಯಲ್ಲಿದ್ದ ಕನ್ನಡಿಗರ ಎಡೆಗಳನ್ನು ಕನ್ನಡಿಗರ ಕಣ್ಣೆದುರಿಗೆ ಹಿಡಿದರು. ಕನ್ನರ ನಾಡು ಕಂನಾಡು, ಕನ್ನರ ನುಡಿ ಕಂನುಡಿ ಎನ್ನುವದನ್ನು ತೋರಿಸಿದರು. ಇದು ಶಂ.ಬಾ.ರ ಸಂಶೋಧನಾ ಕಾರ್ಯದ ಮೊದಲ ಮಜಲು. (“ಕಣ್ಮರೆಯಾದ ಕನ್ನಡ, ಎಡೆಗಳು ಹೇಳುವ ಕಂನಾಡ ಕತೆ, ಮಹಾರಾಷ್ಟ್ರದ ಮೂಲ”)

ಇಷ್ಟೆಲ್ಲ ವಿಸ್ತಾರವಾಗಿ ಹರಡಿದ್ದ ಕಂನಾಡು ಕುಗ್ಗಿ ಹೋಗಲು ಕಾರಣವನ್ನು ಹುಡುಕುತ್ತಿದ್ದಾಗ ಅವರು ವೇದ ಹಾಗು ಪುರಾಣಗಳನ್ನು ಸಂಶೋಧಕನ ದೃಷ್ಟಿಯಿಂದ ಅಧ್ಯಯನ ಮಾಡಿದರು. ವೇದಗಳಲ್ಲಿ ನಿರ್ದಿಷ್ಟರಾದ ಜನಾಂಗಗಳ ಅಭ್ಯಾಸವನ್ನು ಅವರು ಕೈಗೆತ್ತಿಕೊಂಡರು. ಇದು ಶಂ.ಬಾ. ಅವರನ್ನು ಸಂಸ್ಕೃತಿ-ಸಂಶೋಧನೆಯ ಹಾದಿಯಲ್ಲಿ ಒಯ್ದಿತು. ಇದು ಅವರ ಸಂಶೋಧನಾ ಕಾರ್ಯದ ಎರಡನೆಯ ಮಜಲು.

ವೇದಗಳಲ್ಲಿ ನಿರ್ದಿಷ್ಟರಾದ ಅವೈದಿಕ ಜನಾಂಗಕ್ಕೆ(=ಪತ್ತಿ), ಶಂ.ಬಾರವರು ‘ಹಟ್ಟಿಕಾರ’ರೆನ್ನುವ ಹೆಸರನ್ನು ಕೊಟ್ಟರು. ಈ ಹಟ್ಟಿಕಾರರೇ ಹೇಗೆ ಕಂದಮಿಳರಾದರು , ಮತ್ತು ಪಂಚದ್ರಾವಿಡರಾದರು ಎನ್ನುವದನ್ನು ತೋರಿಸಿದರು. (“ಕರ್ಣಾಟಸಂಸ್ಕೃತಿಯ ಪೂರ್ವಪೀಠಿಕೆ”).

ವೇದಾಧ್ಯಯನ ಹಾಗೂ ಜನಾಂಗೀಯ ಅಧ್ಯಯನವು ಶಂ.ಬಾ. ಅವರನ್ನು ಸಾಂಸ್ಕೃತಿಕ ಚಿಂತನೆಗೆ ಹಚ್ಚಿತು. ಈ ಎಳೆಯನ್ನು ಹಿಡಿದುಕೊಂಡು ಹೊರಟ ಶಂ.ಬಾ. ವೇದಗಳಲ್ಲಿಯ ಚಿಂತನೆಯು ‘ಜೀವನ- ಪ್ರವೃತ್ತಿ’ಯಿಂದ ‘ಜೀವನ-ನಿವೃತ್ತಿ’ಗೆ ಬದಲಾದ ರೀತಿಯನ್ನು ಬಿಡಿಸಿ ತೋರಿಸಿದರು. ಸಮಷ್ಟಿ-ಪ್ರಜ್ಞೆಯ ಬದಲಾಗಿ ವ್ಯಷ್ಟಿ-ಮೇಲ್ಮೆಯ ತತ್ವವನ್ನು ಆಲಂಗಿಸಿಕೊಂಡ ಹಿಂದುಗಳ ಸಮಾಜವು ಹಾಳಾದ ರೀತಿಯನ್ನು ಶಂ.ಬಾ. ವಿವರಿಸಿದರು. (“ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ, ಬುಧನ ಜಾತಕ, ಬಿತ್ತಿದ್ದನ್ನು ಬೆಳಕೊ ”).

ಶಂ.ಬಾ. ಅವರು ಪುರಾಣ-ಸಂಕೇತ ಹಾಗು ಭಾಷಾ-ಸಂಕೇತಗಳನ್ನು ವಿಶ್ಲೇಷಿಸಿ ತಮ್ಮ ಪ್ರಮೇಯಗಳನ್ನು ಬರೆದಿದ್ದಾರೆ. ಅವರ ಲೇಖನಗಳೂ ಸಹ ಈ ಸಾಂಕೇತಿಕ ಭಾಷೆಯಲ್ಲಿಯೇ ಇರುವದರಿಂದ, ಅವುಗಳನ್ನು ಅನುಸರಿಸುವದು ಸುಲಭವಾಗುವದಿಲ್ಲ. ಅಷ್ಟೇ ಏನು, ಅವು ತಪ್ಪಾಗಿಯೂ ಅರ್ಥೈಸಲ್ಪಟ್ಟವೆ. “ಋಗ್ವೇದಸಾರ : ನಾಗಪ್ರತಿಮಾ ವಿಚಾರ ” ಇದು ಶಂ.ಬಾ.ರವರ ಪ್ರಖ್ಯಾತ ಸಂಶೋಧನಾ ಗ್ರಂಥ. ಋಗ್ವೇದದಲ್ಲಿಯ ಜೀವನ್ಮುಖಿ ತತ್ವಗಳು ಮೃತ್ಯುಮುಖಿ ತತ್ವವಾಗಿ ಬದಲಾಗಿದ್ದನ್ನು ಅವರು ಸಾಧಾರವಾಗಿ ತೋರಿಸಿದ್ದಾರೆ. ಭಗವದ್ಗೀತೆಯನ್ನು ಅವರು ‘ಕಣ್ಕಟ್ಟು’ ಎಂದು ಬಣ್ಣಿಸಿದ್ದಾರೆ. ವೈವಸ್ವತ ಮನುವಿನ ಧರ್ಮವು ಸ್ವಯಂಭೂ ಮನುವಿನ ಧರ್ಮವಾಗಿ ಬದಲಾಯಿತು ಎಂದು ಮರುಗಿದ್ದಾರೆ. ಈ ರೀತಿಯಾಗಿ ಅವರೂ ಸಹ ವೈದಿಕ ಸಂಕೇತಗಳನ್ನೇ ಬಳಸಿದ್ದು , ಓದುಗರಲ್ಲಿ ತಪ್ಪು ತಿಳುವಳಿಕೆಗೆ ಕಾರಣವಾಗಿದೆ. ಸತ್ಯಕ್ಕೆ ಅಂಟಿಕೊಂಡ ಈ ನಿಷ್ಠುರ ಸಂಶೋಧಕನನ್ನು ಅನೇಕರು ಪಾಷಂಡಿ ಎಂದು ತಪ್ಪಾಗಿ ತಿಳಿದಿದ್ದಾರೆ.

ಶಂ.ಬಾ. ಕೇವಲ ಶ್ರೇಷ್ಠ ಸಂಶೋಧಕರಷ್ಟೇ ಅಲ್ಲ , ನಮ್ಮ ಕಾಲದ ಶ್ರೇಷ್ಠ ಸಾಂಸ್ಕೃತಿಕ ಚಿಂತಕರೂ ಅಹುದು. ಅಂತೆಯೆ ಪಾ.ವೆಂ. ಆಚಾರ್ಯರು ಶಂ.ಬಾ. ಜೋಶಿಯವರನ್ನು ಬಣ್ಣಿಸಿದ ಬಗೆ ಅತ್ಯಂತ ಸಮಂಜಸವಾಗಿದೆ:
ಶಂ. ಬಾ. ಜೋಶಿಯವರು ಬೆಳಕಿನ ಬೆನ್ನುಹತ್ತಿದ ಸಂಶೋಧಕರು.”


ಶಂ.ಬಾ. ಕೃತಿಗಳು:
೧) ಮಹರ್ಷಿ ಅರವಿಂದ ಘೋಷ ಇವರ ಸಂಕ್ಷಿಪ್ತ ಚರಿತ್ರವು (೧೯೨೧)
೨) ಟಿಳಕ ಕಥಾಮೃತಸಾರ (೧೯೩೨)
೩) ಕಣ್ಮರೆಯಾದ ಕನ್ನಡ (೧೯೩೩)
೪) ಮಹಾರಾಷ್ಟ್ರದ ಮೂಲ (೧೯೩೪)
೫) ಕರ್ನಾಟಕದ ವೀರ ಕ್ಷತ್ರಿಯರು (೧೯೩೬)
೬) ಕಂನುಡಿಯ ಹುಟ್ಟು ಅಥವಾ ನಿರುಕ್ತ (೧೯೩೭)
೭) ಕನ್ನಡದ ನೆಲೆ (೧೯೩೯)
೮) ಶಿವರಹಸ್ಯ ಅಥವಾ ವೇದದಲ್ಲಿ ಕಾಣುವ ವೀರಶೈವ ಮತದ ಬೇರುಗಳು (೧೯೩೯)
೯) ರೂಢಿ ಹಾಗು ಭಾವಿಕ ಕಲ್ಪನೆಗಳು (೧೯೪೦)
೧೦) ದಾರಿಯ ಬುತ್ತಿ (೧೯೪೩)
೧೧) ಎದ್ದೇಳು ಕನ್ನಡಿಗಾ ಅಥವಾ ಅಸಂತೋಷವೇ ಏಳ್ಗೆಯ ಮೂಲ (೧೯೪೩)
೧೨) ಕನ್ನಡ ನುಡಿಯ ಜೀವಾಳ (೧೯೪೪)
೧೩) ಅಗ್ನಿವಿದ್ಯೆ (೧೯೪೬)
೧೪) ಎಡೆಗಳು ಹೇಳುವ ಕಂನಾಡ ಕತೆ (೧೯೪೭)
೧೫) ಕರ್ಣನ ಮೂರು ಚಿತ್ರಗಳು (೧೯೪೭)
೧೬) ಯಕ್ಷಪ್ರಶ್ನೆ ಅಥವಾ ಬರಲಿರುವ ಸಮಾಜ (೧೯೪೮)
೧೭) ಸಮಾಜ ದರ್ಶನ (೧೯೪೯)
೧೮) ಸೌಂದರ್ಯ ವಿಚಾರ (೧೯೪೯)
೧೯) ಮರಾಠೀ ಸಂಸ್ಕೃತಿ : ಕಾಹೀ ಸಮಸ್ಯಾ (೧೯೫೨)
೨೦) ಹಾಲುಮತ ದರ್ಶನ (೧೯೬೦)
೨೧) ವೈವಸ್ವತ ಮನು ಪ್ರಣೀತ ಮಾನವಧರ್ಮದ ಆಕೃತಿ (೧೯೬೭)
೨೨) ಕರ್ಣಾಟ ಸಂಸ್ಕೃತಿಯ ಪೂರ್ವಪೀಠಿಕೆ (೧೯೬೭)
೨೩) ಋಗ್ವೇದ ಸಾರ : ನಾಗಪ್ರತಿಮಾ ವಿಚಾರ (೧೯೭೧)
೨೪) ಸತ್-ತ್ಯ ಮತ್ತು ಸತ್ಯ (೧೯೭೫)
೨೫) ಭಾಷೆ ಮತ್ತು ಸಂಸ್ಕೃತಿ (೧೯೭೫)
೨೬) ಪ್ರವಾಹಪತಿತರ ಕರ್ಮ ಹಿಂದೂ ಎಂಬ ಧರ್ಮ (೧೯೭೬)
೨೭) ಶ್ರೀಮತ್ ಭಗವದ್ಗೀತೆಯಲ್ಲಿ ಹುದುಗಿರುವ ರಾಜಯೋಗದ ಸ್ವರೂಪ (೧೯೭೭)
೨೮) ಸಾಂಸ್ಕೃತಿಕ ಮೂಲದಲ್ಲಿನ ತಾತ್ವಿಕ ಚಿಂತನೆಗಳು (೧೯೭೮)
೨೯) ಬುಧನ ಜಾತಕ (೧೯೮೦)
೩೦) ಕಂನಾಡವರ ಸಂಸ್ಕೃತಿಯ ಗತಿ-ಸ್ಥಿತಿ (೧೯೮೧)
೩೧) ಬಿತ್ತಿದ್ದನ್ನು ಬೆಳಕೊ (೧೯೮೪)
೩೨) ಜೀವನ ಅರ್ಥಗ್ರಹಣ ಪದ್ಧತಿ (೧೯೮೬)
೩೩) ಸ್ಥಿತ್ಯಂತರ (೧೯೯೯)

Friday, May 2, 2008

ನನ್ನೊಳಗಿನ ‘ಅವನು’

“ ನನ್ನೊಳಗಿನ ‘ಅವನು’ ” ಇದು ನನ್ನ ಹಿರಿಯ ಸ್ನೇಹಿತ ಶ್ರೀ ನಾರಾಯಣ ಕುಲಕರ್ಣಿ ಇವರು ಬರೆದ ಕವಿತೆ. ಇದೊಂದು ಸರಳ, ಸುಂದರ ಹಾಗೂ ಲಲಿತವಾದ ಕವಿತೆಯಾಗಿದೆ. ಈ ಕವಿತೆ ದಿ: ೨೫-೮-೨೦೦೨ರಂದು ‘ಕರ್ಮವೀರ’ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ನನ್ನೊಳಗಿನ ‘ಅವನು’

ನನ್ನ ಒಳಗೆ ಇರುವ ಅವನು
ಮಿಡಿಯುತಿರುವನು ಮನವನು
ಭವದ ಕತ್ತಲೆಯೊಳಗೆ ಇರುತಿರೆ
ಸೂಸುತಿರುವನು ಬೆಳಕನು.

ಸತ್ಯಪಥದಲಿ ನಿತ್ಯ ನಡೆಯಲು
ಮತ್ತೆ ಪ್ರೇರಣೆಗೈವನು
ಸತ್ವ ತೇಜದ ಬೆಳಕಿನಡಿಯಲಿ
ಬಾಳ ತೇರನು ಎಳೆವನು.

ಸಕಲ ಇಂದ್ರಿಯ ವಾಜಿಗಳನು
ಮೂಗುದಾರದಿ ಬಿಗಿವನು
ಸಡಿಲು ತೋರಲು ಚಾಟಿಯಿಂದಲಿ
ಸರಿಯ ದಾರಿಗೆ ತರುವನು.

ನುಡಿವ ನುಡಿಯಲಿ ನಡೆವ ನಡೆಯಲಿ
ತಪ್ಪನೆಂದಿಗೂ ಸಹಿಸನು
ಮುತ್ತು ಮಾತಿಗೆ ದಿಟ್ಟ ನಡತೆಗೆ
ಹೆಸರು ಮುಂದಕೆ ತರುವನು.

ದೀನ ಜನಗಳ ಆರ್ತ ಮೊರೆಗೆ
ಹೃದಯ ಕದವನು ತೆರೆವನು
ತನ್ನಲಿರುವ ಅಸನ-ವಸನವ
ಉಣಿಸಿ ತಣಿಸುತ ನಲಿವನು.

ಸುಳ್ಳು-ಕಳುವು ಮೋಸಗಳಿಗೆ
ಬಾಗಿಲನ್ನು ತೆರೆಯನು
ವನಿತೆ ಮೋಹದ ಜಾಲಗಳಿಗೆ
ಸಿಲುಕದಂತೆ ತಡೆವನು.

ಇಂತು ಹೃದಯದ ಪದ್ಮದಲ್ಲಿ
ಪದ್ಮನಾಭನು ಇರುವನು
ಅವನ ಇರುವನು ನೆನಸಿಕೊಂಡು
ಚಣಕು ಚಣಕು ಮಣಿವೆನು.