Thursday, May 15, 2008

ಕರ್ನಾಟಕದ ಸ್ಥಳನಾಮಗಳು

‘ಕಂನಾಡು’ ಎನ್ನುವದು ‘ಕರ್ನಾಟಕ’ದ ಮೂಲರೂಪ. ಈ ಹೆಸರು ‘ಕನ್ನ’ ಜನಾಂಗದ ಮೂಲಕ ಬಂದಿದೆ ಎನ್ನುವದನ್ನು ಕೀರ್ತಿಶೇಷ ಶ್ರೀ ಶಂ.ಬಾ.ಜೋಶಿ ತೋರಿಸಿದರು. ಇದರಂತೆ ಕನ್ನರ ವಾಸಸ್ಥಾನಗಳನ್ನು ತೋರಿಸುವ ಅನೇಕ ಊರುಗಳು ಕರ್ನಾಟಕದಲ್ಲಿವೆ. ಈ ಸ್ಥಳನಾಮಗಳು ಕೇವಲ ವಾಸಸ್ಥಾನಗಳನ್ನಷ್ಟೇ ಅಲ್ಲ, ಆ ಜನಾಂಗದ ಸಾಂಸ್ಕೃತಿಕ ಅವಸ್ಥೆಯನ್ನೂ ಸಹ ತೋರಿಸುತ್ತವೆ ಎನ್ನುವದು ಶ್ರೀ ಶಂ.ಬಾ.ಜೋಶಿಯವರ ಮತ್ತೊಂದು ಪ್ರಮೇಯ. ಉದಾಹರಣೆಗೆ ‘ಕನ್ನಟ್ಟಿ’ (=ಕನ್ನ+ಹಟ್ಟಿ) ಎನ್ನುವದು ಕನ್ನ ಜನಾಂಗದ ಹಟ್ಟಿಕಾರ ಅವಸ್ಥೆಯನ್ನು ತೋರಿಸಿದರೆ ‘ಕನಕೂರು’ ಎನ್ನುವದು ಒಕ್ಕಲಿಗ ಅವಸ್ಥೆಯನ್ನು ತೋರಿಸುತ್ತದೆ ಎನ್ನುವದು ಅವರ ಸಿದ್ಧಾಂತ. ಇದಲ್ಲದೆ, ಸ್ಥಳನಾಮಗಳು ಪ್ರಾದೇಶಿಕ ವೈಶಿಷ್ಟ್ಯವನ್ನೂ ಸಹ ಸೂಚಿಸಬಹುದು. ಉದಾಹರಣೆಗೆ ಉತ್ತರ ಕನ್ನಡ ಜಿಲ್ಲೆಯ ಭಟಕಳ ತಾಲೂಕಿನಲ್ಲಿಯ ‘ಕಗ್ಗುಂಡಿ’ ಎನ್ನುವ ಸ್ಥಳನಾಮದಲ್ಲಿಯ ‘ಗುಂಡಿ’ ಇದು ಕೆಳಮಟ್ಟದ ಪ್ರದೇಶವನ್ನು ಸೂಚಿಸುತ್ತಿದ್ದರೆ, ವಿಜಾಪುರ ತಾಲೂಕಿನಲ್ಲಿರುವ ‘ಕಗ್ಗೋಡು’ ಎನ್ನುವ ಊರು ಎತ್ತರದ ಪ್ರದೇಶವನ್ನು (=ಕೋಡು) ಸೂಚಿಸುತ್ತದೆ.

ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಕರ್ನಾಟಕದಲ್ಲಿ ಮಾತ್ರವಲ್ಲ, ಸಮಗ್ರ ಭಾರತದಲ್ಲಿ ದೊರೆಯುತ್ತವೆ. ಇದರರ್ಥವೇನೆಂದರೆ, ಕನ್ನ ಜನಾಂಗವು ಅಂದರೆ ಕನ್ನಡಿಗರು ಒಂದು ಕಾಲದಲ್ಲಿ ಭಾರತದ ವಿವಿಧ ಭಾಗಗಳಲ್ಲಿ ವಾಸಿಸುತ್ತಿದ್ದು, ಅನೇಕ ಐತಿಹಾಸಿಕ ಕಾರಣಗಳಿಂದಾಗಿ, ಸದ್ಯಕ್ಕೆ ಕರ್ನಾಟಕಕ್ಕೆ ಸೀಮಿತರಾಗಿದ್ದಾರೆ. ಆದರೆ, ಕರ್ನಾಟಕದಲ್ಲಿ ಹಾಗೂ ಭಾರತದಲ್ಲಿ ಯಾವ ಪ್ರಕಾರವಾಗಿ ಕನ್ನ ಜನಾಂಗವನ್ನು ಸೂಚಿಸುವ ಸ್ಥಳನಾಮಗಳು ಇರುವವೋ, ಅದೇ ರೀತಿಯಾಗಿ ಬೇರೆ ಜನಾಂಗಗಳನ್ನು ಸೂಚಿಸುವ ಸ್ಥಳನಾಮಗಳೂ ಸಹ ಹೇರಳವಾಗಿ ಲಭ್ಯವಿವೆ. ಆ ಜನಾಂಗಗಳಲ್ಲಿ ಕೆಲವು ಜನಾಂಗಗಳು ಕನ್ನುಡಿಯನ್ನು(=ಕನ್ನಡವನ್ನು) ಅಥವಾ ಪೂರ್ವದ್ರಾವಿಡ ನುಡಿಯನ್ನು ಮಾತನಾಡುತ್ತಿದ್ದ ಜನಾಂಗಗಳಾಗಿರಬಹುದು.

ಇಂತಹ ಜನಾಂಗಸೂಚಕ ಸ್ಥಳನಾಮಗಳ ಅಧ್ಯಯನ ಮಾಡುವ ಉದ್ದೇಶವನ್ನು ನಾನು ವ್ಯಕ್ತಪಡಿಸಿದಾಗ, ನನ್ನ ತರುಣ ಮಿತ್ರ ಶ್ರೀ ವ್ಹಿ.ಆರ್.ಹೆಗಡೆಯವರು ಕರ್ನಾಟಕ ರಾಜ್ಯದಲ್ಲಿಯ ೨೯,೦೦೦ಕ್ಕೂ ಮಿಕ್ಕಿದ ಹಳ್ಳಿ ಹಾಗು ಪಟ್ಟಣಗಳ ಹೆಸರುಗಳನ್ನು ಸಂಗ್ರಹಿಸಿ ಕೊಟ್ಟರು. ಅವರ ಈ ಉಪಕಾರಕ್ಕೆ ನಾನು ಅತ್ಯಂತ ಕೃತಜ್ಞನಾಗಿದ್ದೇನೆ. ಆ ಎಲ್ಲ ಸ್ಥಳನಾಮಗಳನ್ನು ಸಂಶೋಧಿಸಿದಾಗ, ೨೩೮೧ ಸ್ಥಳನಾಮಗಳು ಸೂಚಿಸುವ ೨೮ ಜನಾಂಗಗಳನ್ನು ಗುರುತಿಸಲು ಸಾಧ್ಯವಾಯಿತು. ಇವೆಲ್ಲ ವಿಭಿನ್ನ Races ಎಂದೇನಲ್ಲ. ಇವುಗಳನ್ನು communities ಹಾಗೂ sub-communities ಎಂದೂ ಕರೆಯಬಹುದು. ಯಾವುದೋ ಕಾರಣಗಳಿಗಾಗಿ ತಮ್ಮನ್ನು ಪ್ರತ್ಯೇಕವಾಗಿ ಗುರುತಿಸಿಕೊಳ್ಳುತ್ತಿದ್ದ ಅಥವಾ ಗುರುತಿಸಲ್ಪಡುತ್ತಿದ್ದ ಇಂತಹ ಜನಾಂಗಗಳನ್ನು ಹಾಗು ಆ ಗ್ರಾಮಗಳ ಸಂಖ್ಯೆಯನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಮಲ್ಲ (೩೮೦)
೨. ನಾಗ (೩೧೩)
೩. ಗೊಂಡ, ಕೊಂಡ (೨೫೬)
೪. ಕನ್ನ (೧೭೦)
೫. ಕಡ, ಕಡಬ (೧೨೫)
೬. ಗಂಗ (೧೦೯)
೭. ಹಲ (೧೦೩)
೮. ಸಿರ, ಶಿರ (೯೯)
೯. ಸಿಂಗ (೮೯)
೧೦. ಮನ್ನ (೮೪)
೧೧. ನಲ್ಲ (೮೦)
೧೨. ಬಳ್ಳ (೭೮)
೧೩. ಅಂಕ (೭೪)
೧೪. ಕೋಲ, ಕೋರ (೬೭)
೧೫. ಮಂಡ, ಮಂಟ (೫೮)
೧೬. ಕಂದ (೫೪)
೧೭. ಮುರ (೪೭)
೧೮. ಕಂಬ (೪೬)
೧೯. ಕುಪ (೪೪)
೨೦. ಕರ (೩೬)
೨೧. ಮೂಗ (೩೫)
೨೨. ಪಣ, ಹನ (೩೧)
೨೩. ಕಿರ, ಕಿರಗ (೨೭)
೨೪. ಕುರು (೨೭)
೨೫. ಹಂಗ (೨೬)
೨೬. ಮುಂಡ (೨೫)
೨೭. ಬಂಕ (೧೭)
೨೮. ಕಿನ್ನ (೬)

ನಮ್ಮ ಪುರಾಣಗಳಲ್ಲಿ ಹಾಗು ಧಾರ್ಮಿಕ ಗ್ರಂಥಗಳಲ್ಲಿ ಈ ಜನಾಂಗಳ ಸಂಘರ್ಷಗಳು ವರ್ಣಿಸಲ್ಪಟ್ಟಿವೆ. ಕೆಲವು ಉದಾಹರಣೆಗಳು:

೧. ನಮಸ್ತೇ ಗರುಡಾರೂಢೇ ಕೋಲಾಸುರ ಭಯಂಕರೀ|
ಸರ್ವದುಃಖ ಹರೇ, ದೇವಿ, ಮಹಾಲಕ್ಷ್ಮಿ ನಮೋಸ್ತುತೇ||
--------------ಇಂದ್ರಕೃತ ಮಹಾಲಕ್ಷ್ಮೀ ಸ್ತೋತ್ರ

೨. ಚಾಮುಂಡಾ, ಮುಂಡಮಥನೀ, ಚಂಡಿಕಾ, ಚಕ್ರಧಾರಿಣೀ|
ಜ್ಯೋತಿರೂಪಾ, ಜಗನ್ನಾಥಾ, ಜಯಿನೀ,ಜಯವರ್ಧಿನೀ||
…………………………ಲಲಿತಾ ಸಹಸ್ರನಾಮ

೩. ನ್ಯಗ್ರೋಧೋದುಂಬರೋsಶ್ವತ್ಥಶ್ಚಾಣೂರಾಂಧ್ರನಿಷೂದನ:|
…………………………….ವಿಷ್ಣು ಸಹಸ್ರನಾಮ

ತಮ್ಮ ವೈರಿಗಳನ್ನು ನಾಶಪಡಿಸಿದ್ದಕ್ಕಾಗಿ, ಈ ಸ್ತೋತ್ರಗಳಲ್ಲಿ ಆಯಾ ದೇವತೆಗಳನ್ನು ಸ್ತುತಿಸಲಾಗಿದೆ. ಈ ವೈರಿಗಳು , ಅಂದರೆ ಕೋಲಾಸುರ, ಮುಂಡಾಸುರ, ಮಹಿಷಾಸುರ ಇವರೆಲ್ಲ ಓರ್ವ ರಾಕ್ಷಸನಾಗಿರದೆ, ಜನಾಂಗಸೂಚಕ ಪದಗಳಾಗಿವೆ. ಕೋಲ, ಮುಂಡ ಹಾಗು ಮಹಿಷರನ್ನು ಸೋಲಿಸಿದವಳು ಮಾತೃದೇವತೆಯಾಗಿದ್ದರೆ, ಆಂಧ್ರರನ್ನು(---ಇಲ್ಲಿ ಅದರರ್ಥ ದ್ರಾವಿಡರನ್ನು----) ಸೋಲಿಸಿದವನು ಪಿತೃದೇವತೆಯಾಗಿದ್ದಾನೆ.

ಈ ಜನಾಂಗಗಳ ಹಾಗು ಸ್ಥಳನಾಮಗಳ ಅಧ್ಯಯನವನ್ನು ಮುಂದಿನ ಭಾಗದಲ್ಲಿ ಎತ್ತಿಕೊಳ್ಳೋಣ.

4 comments:

Shriniwas M Katti said...

ಬೇಂದ್ರೆಯವರು "ಅಗಡಿಯ ಸಾಧುಗಳು" ಎಂಬ ಹೆಸರಿನಲ್ಲಿ ಪೂಜ್ಯ ಶೇಷಾಚಲ ಸದ್ಗುರುಗಳ ಬಗ್ಗೆ ಒಂದು "ಕಥನ-ಕವನ" ರಚಿಸಿದ್ದಾರೆಯೆ ? ನಿಮಗೆ ಗೊತ್ತಿದ್ದರೆ ತಿಳಿಸಿ.

Shriniwas M Katti said...

ಸುನಾಥರಿಗೆ ನಮಸ್ಕಾರಗಳು.
ಧಾರವಾಡದಲ್ಲಿಲ್ಲವೇ ? ನಾನು ಕೇಳಿದ್ದಕ್ಕೆ ಏನೂ ಬರೆಯಲಿಲ್ಲವಲ್ಲ ?

sunaath said...

ಕಟ್ಟಿಯವರೆ,
"ಅಗಡಿಯ ಸಾಧುಗಳು" ಈ ಕಥನ ಕವನವನ್ನು ರಚಿಸಿದವರು ಶ್ರೀ
ಮಾಸ್ತಿ ವೆಂಕಟೇಶ ಅಯ್ಯಂಗಾರರವರು; ಬೇಂದ್ರೆಯವರಲ್ಲ.
ಕೆಲ ದಿನಗಳವರೆಗೆ ಬೇರೆ ಕಾರ್ಯದಲ್ಲಿ pre-occupied ಆಗಿದ್ದರಿಂದ ನಿಮಗೆ ಥಟ್ಟನೆ ಉತ್ತರಿಸಲಾಗಲಿಲ್ಲ. ದಯವಿಟ್ಟು ಕ್ಷಮಿಸಿ.

Shriniwas M Katti said...

ಧನ್ಯವಾದಗಳು.