Saturday, July 5, 2008

ಭಾಷೆ ಎನ್ನುವ ಉಪಕರಣ

ಮಾನವಶಾಸ್ತ್ರಜ್ಞರು ಮಾನವನನ್ನು Tool using Primate ಎಂದು ಬಣ್ಣಿಸುತ್ತಾರೆ. Primateಗಳ ಗುಂಪಿನಲ್ಲಿ ಒರಾಂಗ ಉಟುಂಗ, ಚಿಂಪಾಂಝಿ, ಗೋರಿಲ್ಲಾ, ಕಪಿ ಹಾಗು ಮಾನವ ಮೊದಲಾದ ಜೀವಿಗಳ ಸೇರ್ಪಡೆಯಾಗುತ್ತದೆ.
ಉಳಿದ primateಗಳಿಗೂ ಮಾನವನಿಗೂ ಇರುವ ವ್ಯತ್ಯಾಸವೆಂದರೆ, ಮನುಷ್ಯನು ಉಪಕರಣಗಳನ್ನು ಸೃಷ್ಟಿಸಿಕೊಳ್ಳಬಲ್ಲ ಹಾಗೂ ಉಪಯೋಗಿಸಬಲ್ಲ.

ಮಾನವನ ಬಳಿಯಿರುವ ಶ್ರೇಷ್ಠ ಉಪಕರಣ ಯಾವುದು?
ನಿಸ್ಸಂದೇಹವಾಗಿಯೂ ಭಾಷೆಯೇ ಮನುಷ್ಯನ ಶ್ರೇಷ್ಠ ಉಪಕರಣ. ಕಾಡುಮಾನವನನ್ನು ನಾಡಮಾನವನನ್ನಾಗಿ ಸುಸಂಸ್ಕೃತಗೊಳಿಸಲು ಬೇಕಾಗುವ ಸಂವಹನ ಮಾಧ್ಯಮವೇ ಭಾಷೆ.
ಉಪಕರಣದ ಸಾಮರ್ಥ್ಯ ಹೆಚ್ಚಿದಷ್ಟೂ ಉಪಭೋಕ್ತಾನ ಸಾಮರ್ಥ್ಯ ಹೆಚ್ಚುತ್ತದೆ. ಶಿಲಾಯುಗದಲ್ಲಿ ಕಲ್ಲುಗಳನ್ನು ಆಯುಧಗಳನ್ನಾಗಿ ಬಳಸುತ್ತಿದ್ದ ಮಾನವ, ಆ ಬಳಿಕ ಕಬ್ಬಿಣ, ತಾಮ್ರಗಳ ಆಯುಧಗಳನ್ನು ಬಳಸತೊಡಗಿದ. ಇದೇ ರೀತಿಯಾಗಿ ಅವನ ಸಂವಹನ ಸಾಮರ್ಥ್ಯವೂ ಬೆಳೆಯಲಾರಂಭಿಸಿತು. ಭಿನ್ನ ಭಿನ್ನ ಸಮುದಾಯಗಳಲ್ಲಿ ಸಂಪರ್ಕ ಬಂದಂತೆಲ್ಲ, ಈ ಸಮುದಾಯಗಳಲ್ಲಿ ಪದಾರ್ಥ ವಿನಿಮಯ, ಆಯುಧ ವಿನಿಮಯ ಹಾಗು ಅತಿ ಮುಖ್ಯವಾಗಿ ಭಾಷಾ ವಿನಿಮಯ ಪ್ರಾರಂಭವಾಯಿತು. ಇದು ನಾಗರಿಕತೆ ಬೆಳೆಯುವ ರೀತಿ. ಭಾಷೆ ಬೆಳೆಯುವ ರೀತಿ.

ಸಂಸ್ಕೃತ ಭಾಷಿಕ ಸಮುದಾಯಗಳಿಗೆ ಹಾಗು ಕನ್ನಡ ಭಾಷಿಕ ಸಮುದಾಯಗಳಿಗೆ ಬಂದ ಸಂಪರ್ಕದಿಂದ ಎರಡೂ ಸಮುದಾಯಗಳಿಗೆ ಲಾಭವಾಗಿದೆ. ಹೆಚ್ಚೇನು, ಈ ಎರಡೂ ಸಮುದಾಯಗಳು ಒಂದರಲ್ಲೊಂದು ಕರಗಿ ಹೋಗಿವೆ. ಆ ಕಾರಣದಿಂದಲೇ, ಮರಾಠಿ ಭಾಷೆಯು ಕನ್ನಡದಿಂದ ಹುಟ್ಟಿದೆ ಎಂದು ಹೇಳುವದು; ಗುಜರಾತ ಭಾಷೆಗೆ ದ್ರಾವಿಡ (=ಕನ್ನಡ) ತಳಪಾಯವಿದೆ ಎಂದು ಹೇಳುವದು. ಸಂಸ್ಕೃತದಲ್ಲಿ ಕನ್ನಡದ ಹಾಗು ಕನ್ನಡದಲ್ಲಿ ಸಂಸ್ಕೃತದ ಅನೇಕ ಪದಗಳ ವಿನಿಮಯವಾಗಿರುವದು.

ದುರ್ದೈವದಿಂದ, ಸಂಸ್ಕೃತ ಭಾಷಿಕರ ಜೊತೆಗೆ ಅತಿ ಕಡಿಮೆ ಸಂಪರ್ಕ ಹೊಂದಿದ ತಮಿಳರು (-ಇದಕ್ಕೆ ಕಾರಣ ದುರಭಿಮಾನವೆ? ಅಥವಾ physical distanceಏ?-) ವಿನಿಮಯದ ಲಾಭವನ್ನು ಕಳೆದುಕೊಂಡರು. ಇದನ್ನೆಲ್ಲ ತಿಳಿಯದೆ, ಕನ್ನಡದ ಮೂಲಪದಗಳಲ್ಲಿ ಮಹಾಪ್ರಾಣವಿಲ್ಲವೆಂದು ಬೊಬ್ಬೆ ಹಾಕುವ ಅಲ್ಪಪ್ರಾಣಿಗಳಿಗೆ ಕನ್ನಡದ ಮೂಲಪದಗಳು ಎಷ್ಟಿವೆ ಎನ್ನುವದು ಗೊತ್ತೆ? ಆಧುನಿಕ ಜಗತ್ತಿನಲ್ಲಿ ಅಷ್ಟೇ ಪದಗಳು ಸಾಕೆ? ಯಾವುದೇ ಭಾಷೆಯಿರಲಿ, ಬೇರೆ ಭಾಷೆಗಳಿಂದ ಪದಗಳನ್ನು, ಧ್ವನಿಸಂಕೇತಗಳನ್ನು ಎರವಲಾಗಿ ತೆಗೆದುಕೊಳ್ಳದಿದ್ದರೆ, ಅದು ದರಿದ್ರ ಭಾಷೆಯಾಗಿಯೇ ಉಳಿಯುವದು.

ಕನ್ನಡಕ್ಕೆ ವಿದೇಶಿ ಪದಗಳು ಬೇಡ ಎನ್ನುವ ಪಂಡಿತರಿಗೆ, ಕನ್ನಡದಲ್ಲಿರುವ ವಿದೇಶಿ ಪದಗಳ ಸಂಖ್ಯೆ ಗೊತ್ತೆ? ಈಗ ಕುದುರೆ ಎನ್ನುವ ಪದವನ್ನೆ ತೆಗೆದುಕೊಳ್ಳಿ. ‘ಕುದುರೆ ಅನ್ನಲು ನಾವು ಅಶ್ವ ಅಥವಾ ಘೋಡಾ ಅನ್ನಕೂಡದು, ಇವು ಕನ್ನಡೇತರ ಪದಗಳು’ ಎಂದು ಕೆಲವರು ಹೇಳಬಹುದು. ಮಹನೀಯರೆ, ‘ಕುದುರೆ’ ಎನ್ನುವದೇ ಕನ್ನಡ ಪದವಲ್ಲ. ಕರುನಾಡಿನಲ್ಲಿ ಮೊದಲು ಕತ್ತೆಗಳೇ ತುಂಬಿದ್ದವು. (ಈಗಲೂ ಸಹ ಸಾಕಷ್ಟಿವೆ.) ತುಂಬಾ ಹಿಂದಿನ ಕಾಲದಲ್ಲಿ ಕನ್ನಡ ಕರಾವಳಿಗೆ ಈಜಿಪ್ತ ಜೊತೆಗೆ ವ್ಯಾಪಾರ ಸಂಪರ್ಕವಿತ್ತು. ಈಜಿಪ್ತಿನಿಂದ ಕುದುರೆಗಳು ಕರಾವಳಿಗೆ ಹಡಗಿನಲ್ಲಿ ಬರುತ್ತಿದ್ದವು. ಕುದುರೆಗೆ ಈಜಿಪ್ತ ಭಾಷೆಯಲ್ಲಿ ‘hytr’ ಎನ್ನುತ್ತಾರೆ. ಅದೇ ಕನ್ನಡಿಗರ ಕುದುರೆ! ಕೇವಲ ಕನ್ನಡ ಪದಗಳನ್ನು ಮಾತ್ರ ಉಪಯೋಗಿಸುತ್ತೇನೆ ಎನ್ನುವವರು ಕುದುರೆಯನ್ನು ಬಿಟ್ಟು ಕತ್ತೆಯನ್ನಷ್ಟೇ ಓಡಿಸಬೇಕಾದೀತು! ಇಂತಹದೇ ಬಡಾಯಿ ಕೊಚ್ಚಿದ ಆಂಡಯ್ಯ ಬರೆದದ್ದು “ಕಬ್ಬಿಗರ ಕಾವ”! ಹಾಗಂದರೇನು? ಸಂಸ್ಕೃತವನ್ನು ವಿರೂಪಗೊಳಿಸು……ಅದು ಕನ್ನಡವಾಗುತ್ತದೆ, ಎಂದೆ?



The Language Barrier
ಚೀನಾ ಗೋಡೆಯನ್ನು ಹೇಗೊ ದಾಟಿ ಒಳಗೆ ನುಸಳಿದ ವಿದೇಶಿ ಪ್ರವಾಸಿಯೊಬ್ಬನು ಚೀನೀಯನೊಬ್ಬನಿಗೆ ಕೇಳಿದನಂತೆ: “ವಿದೇಶಿ ಆಕ್ರಮಣಕಾರರ ಹಾವಳಿ ತಪ್ಪಿಸಲು ಇಂತಹ ದೊಡ್ಡ ಗೋಡೆಯನ್ನು ಕಟ್ಟಿದಿರಾ?”
ಈ ಪ್ರಶ್ನೆಗೆ ಆ ಚೀನೀಯನು ಕೊಟ್ಟ ಉತ್ತರ:
“ಹಾಗಲ್ಲ. ವಿದೇಶೀಯರ ಸಂಸ್ಕೃತಿ ಚೀನಾದಲ್ಲಿ ಬರಬಾರದೆಂದು ಈ ಗೋಡೆ ಕಟ್ಟಿದ್ದೇವೆ.”

ನಮ್ಮಲ್ಲಿ ತಮಿಳರನ್ನು ನಾವು ಈ ಚೀನೀಯರಿಗೆ ಹೋಲಿಸಬಹುದು. ಆದರೆ ಇವರು ಕಟ್ಟಿಕೊಂಡ ಗೋಡೆ ಕಲ್ಲು ಮಣ್ಣಿನದಲ್ಲ; ಇದು language barrier.

“ಬೇರೆ ಭಾಷೆಗಳ ಪದಗಳು ನಮಗೆ ಬೇಡ, ಅವರ ಉಚ್ಚಾರ ನಮಗೆ ಬೇಡ; ಅವರ ಸಂಸ್ಕೃತಿ ನಮಗೆ ಬೇಡ. ನಾವು ಶಿಲಾಯುಗದ ನಾಗರಿಕರಾಗಿಯೇ ಉಳಿಯುತ್ತೇವೆ.”—ಇದು ತಮಿಳು ಧೋರಣೆ. ಹಾಗಂತ ಬೇರೆಯವರ ನಾಡುಗಳನ್ನು ಅತಿಕ್ರಮಿಸಿ, ಅಲ್ಲಿಯೂ ಸಹ “ ಕನ್ನಡ ತಿರಿಯಾದು” ಎಂದು ಹೇಳಲು ಇವರು ಹೇಸುವದಿಲ್ಲ. ನಾವು ಪರದೇಶಿ ಪದಗಳನ್ನು ಸ್ವೀಕರಿಸುವದಿಲ್ಲ ಎಂದು ಹೇಳುವ ತಮಿಳರು, ಸಂಸ್ಕೃತದ ಪದಗಳನ್ನೇ ವಿಕಾರಗೊಳಿಸಿ, ತಮಿಳೀಕರಿಸಿರುವದನ್ನು ನೋಡಬೇಕಾದರೆ, ಶಂಕರ ಭಟ್ಟರು ಬರೆದಿರುವ “ಕನ್ನಡ ಬರಹ ಸರಿಪಡಿಸೋಣ” ಪುಸ್ತಕದ (ಮೊದಲ ಮುದ್ರಣ) ೭೧ನೆಯ ಹಾಗು ೭೨ನೆಯ ಪುಟಗಳಲ್ಲಿ ಲೇಖಕರು ಕೊಟ್ಟ ಪಟ್ಟಿಗಳನ್ನು ನೋಡಬೇಕು.

ಇಂತಹ ತಮಿಳು ಸಂಸ್ಕೃತಿ ನಮ್ಮ ಶಂಕರ ಭಟ್ಟರಿಗೆ ಆದರ್ಶವಾಗಿದೆ. ತಮಿಳಿನಲ್ಲಿ ಕೇವಲ ೧೦ ವರ್ಗಾಕ್ಷರಗಳು ಮಾತ್ರ ಇವೆ. ಒಂದೂ ಮಹಾಪ್ರಾಣಾಕ್ಷರ ಇಲ್ಲ. (ಪುಟ ೬೯). ಅಂದ ಮೇಲೆ ಕನ್ನಡ ಲಿಪಿಯಲ್ಲೇಕೆ ೨೯ ವರ್ಗಾಕ್ಷರಗಳು ಬೇಕು?
ಕನ್ನಡದಲ್ಲಿ ೨೯ ವರ್ಗಾಕ್ಷರಗಳಿರುವದರಿಂದ ಹಾಗು ತಮಿಳಿನಲ್ಲಿ ಕೇವಲ ೧೦ ಇರುವದರಿಂದ ಕನ್ನಡದಲ್ಲಿ ತಾತ್ವಿಕವಾಗಿ ಸಾಧಿಸಬಹುದಾದ ಹೆಚ್ಚಿನ ಪದಗಳು (೨೯ factorial-೧೦ factorial=೧೯ factorial) ಎನ್ನುವ ಗಣಿತ ಮೇಲ್ನೋಟಕ್ಕೆ ಗೊತ್ತಾಗುವಂತಹದು.

ಈಗಂತೂ globalization ಯುಗ. ಕನ್ನಡದ ಧ್ವನಿಸಂಪತ್ತು ಹಾಗು ಧ್ವನಿಸಂಕೇತಗಳು ಹೆಚ್ಚಬೇಕೆ ಹೊರತು ಕಡಿಮೆಯಾಗಬಾರದು. ತಮಿಳರನ್ನು ಅನುಕರಿಸಿ ನಾವೂ ಸಹ ಮಹಾಪ್ರಾಣಗಳನ್ನು ಬಿಟ್ಟು ಬಿಟ್ಟೆವು ಅಂತ ಇಟ್ಕೊಳ್ಳಿ. ಆಗ ನಮ್ಮ ಹುಡುಗರು ಅಂತರ್ರಾಷ್ಟ್ರೀಯ ಭಾಷೆಗಳನ್ನು ಮಾತನಾಡುವಾಗಲೂ ಸಹ, ತಮಗೆ ರೂಢಿಯಾಗಿ ಬಿಟ್ಟಿರುವ ಅಲ್ಪಪ್ರಾಣೀಯ ಉಚ್ಚಾರವನ್ನೇ ಮಾಡುತ್ತಾರೆ. ನಮ್ಮಲ್ಲಿರುವ call centresಗಳನ್ನೆಲ್ಲ ಆಗ ಮುಚ್ಚಬೇಕಾದೀತು.

ಹಾಗಿದ್ದರೆ, ಶಂಕರ ಭಟ್ಟರು ಕನ್ನಡದ ವರ್ಣಮಾಲೆಗೆ ಕತ್ತರಿ ಹಾಕಲು ಏಕಿಷ್ಟು ಹಪಾಪಿಸುತ್ತಿದ್ದಾರೆ?
ತಮ್ಮ ಪುಸ್ತಕದ opening paraದಲ್ಲಿ ಅವರು ಈ ರೀತಿ ಹೇಳಿಕೊಂಡಿದ್ದಾರೆ:

“ ಕನ್ನಡ ಬರಹ ಮೇಲ್ವರ್ಗದವರ ಸೊತ್ತಾಗಿ ಮಾತ್ರವೇ ಉಳಿಯದೆ ಎಲ್ಲರ ಸೊತ್ತಾಗಬೇಕು ಮತ್ತು ಕನ್ನಡ ಬರಹದ ಬಳಕೆಯ ಮೂಲಕ ಇವತ್ತು ಮೇಲ್ವರ್ಗದವರು ಮಾತ್ರವೇ ಪಡೆಯುತ್ತಿರುವ ಹಲವು ರೀತಿಯ ಪ್ರಯೋಜನಗಳನ್ನು ಎಲ್ಲಾ ವರ್ಗದ ಕನ್ನಡಿಗರೂ ಸಮಾನವಾಗಿ ಪಡೆಯುವ ಹಾಗಾಗಬೇಕು ಎಂಬ ಕಳಕಳಿಯಿಂದ ಈ ಪುಸ್ತಕವನ್ನು ಬರೆಯಲು ಹೊರಟಿದ್ದೇನೆ.”

ಯಾರನ್ನೇ ಆಗಲಿ, ‘ಕೆಳವರ್ಗ’ದವರು ಎಂದು ಕರೆಯಲು ನನ್ನ ಮನಸ್ಸು ಒಪ್ಪುವದಿಲ್ಲ. ಇರಲಿ, ಶಂಕರ ಭಟ್ಟರು ಸೂಚಿಸುವ ಈ ಕೆಳವರ್ಗದವರಿಗೆ ಭಾಷೆಯನ್ನು (ಅವರು ಹೇಳುವಂತೆ) ಸರಳೀಕರಿಸಿ ಕಲಿಸಿದರೆ, ಭಾಷೆ ಆಗ ಎಲ್ಲರ ಸೊತ್ತಾಗುವದು. ಇದೇ ತರ್ಕವನ್ನು ಅನುಸರಿಸಿ ಗಣಿತವನ್ನು ಕಲಿಸಿದರೆ, ಇನ್ನೂ ಹೆಚ್ಚು ಜನರಿಗೆ ಸರಳ ಗಣಿತದ ಪ್ರಯೋಜನವಾಗಬಹುದಲ್ಲವೆ? ಅಂದರೆ, ೦ದಿಂದ ೯ರವರೆಗಿನ ೧೦ ಅಂಕಿಗಳ ಬದಲಾಗಿ, ೦ದಿಂದ ೫ರವರೆಗಿನ ೫ ಅಂಕಿಗಳನ್ನು ಮಾತ್ರ ಕಲಿಸೋಣ! ಗಣಿತ ಈಗ ಬರೀ ಪಂಡಿತರ ಸೊತ್ತಲ್ಲ!!


ಕೇವಲ ತಮಿಳು ಭಾಷೆಯನ್ನೇ ಉದಾಹರಣೆಯಾಗಿ ನೀಡುವ ಶಂಕರ ಭಟ್ಟರು ತೆಲಗು ಭಾಷೆಯ ಉದಾಹರಣೆ ಏಕೆ ಕೊಡುವದಿಲ್ಲ? ಏಕೆಂದರೆ, ತೆಲಗು ಭಾಷೆಯಲ್ಲಿ ಕನ್ನಡಕ್ಕಿಂತ ಹೆಚ್ಚು ಸಂಸ್ಕೃತ ಪದಗಳಿವೆ! ಹಾಗಾದರೆ, ತೆಲಗು ಭಾಷೆಯೂ ಸಹ ಅಲ್ಲಿಯ ‘ಮೇಲ್ವರ್ಗ’ದವರ ಸೊತ್ತಾಗಿದೆಯೆ? ಯಾವ ತೆಲಗು ಭಾಷಿಕನೂ ಹಾಗೇ ಹೇಳಿಲ್ಲವಲ್ಲ! ತೆಲಗು ಭಾಷಿಕರೂ ಸಹ ಮಹಾಪ್ರಾಣ ಪದಗಳನ್ನು ಅನಾಯಾಸವಾಗಿ ಉಚ್ಚರಿಸುತ್ತಾರಲ್ಲ! ಇದಕ್ಕೆ ಕಾರಣವೆಂದರೆ, ಅವರೂ ಸಹ ಕನ್ನಡಿಗರಂತೆ ಸಂಸ್ಕೃತ ಭಾಷಿಕರ ಜೊತೆಗೆ ಸಂಪರ್ಕ ಪಡೆದದ್ದು.

ಕನ್ನಡ ವರ್ಣಮಾಲೆಗೆ ಕತ್ತರಿ ಹಾಕಲು ಶಂಕರ ಭಟ್ಟರು ತಾಂತ್ರಿಕ ಕಾರಣ ನೀಡುತ್ತಿಲ್ಲ. ವರ್ಗಭೇದ ನೀತಿಯನ್ನು ಅನುಸರಿಸುತ್ತಾರೆ. ಹೋಲಿಕೆಗಾಗಿ ಕೇವಲ ತಮಿಳು ಭಾಷೆಯನ್ನು ತೋರಿಸುತ್ತಿದ್ದಾರೆಯೆ ಹೊರತು, ತೆಲಗು ಭಾಷೆಯನ್ನು ತೋರಿಸುತ್ತಿಲ್ಲ. ಇದು hypocrisy ಅಲ್ಲವೆ?

ವಂಚನೆಯ ಜಾಲ:
ಶಂಕರ ಭಟ್ಟರು ಮುಂದುವರೆದು ಹೀಗೆ ಬರೆದಿದ್ದಾರೆ:
“ ಸಂಸ್ಕೃತ ಭಾಷೆಯ ಗ್ರಂಥಗಳನ್ನು ಬರೆಯುವದಕ್ಕಾಗಿ ತಮಿಳು ನಾಡಿನ ಸಂಸ್ಕೃತ ವಿದ್ವಾಂಸರು ಬೇರೆಯೇ ಒಂದು ಲಿಪಿಯನ್ನು ಬಳಕೆಗೆ ತಂದಿದ್ದರು. ಈ ಲಿಪಿಗೆ ‘ಗ್ರಂಥ ಲಿಪಿ’ (ಎಂದರೆ ಸಂಸ್ಕೃತ ‘ಗ್ರಂಥ’ಗಳನ್ನು ಬರೆಯಲು ಬಳಸುವ ಲಿಪಿ) ಎಂಬ ಹೆಸರಿದೆ. (ಪುಟ ೭೩).

ಇದರರ್ಥವೇನು? ತಮಿಳು ವಿದ್ವಾಂಸರು ಜನಸಾಮಾನ್ಯರನ್ನು ಸಂಸ್ಕೃತ ಜ್ಞಾನದಿಂದ ಶಾಶ್ವತವಾಗಿ ದೂರವಿಡುವದಕ್ಕಾಗಿಯೇ ಒಂದು ‘ಗ್ರಂಥಲಿಪಿ’ಯನ್ನು ರೂಪಿಸಿದ್ದರು ಎಂದಲ್ಲವೆ? ಆದರೆ, ಕನ್ನಡದಲ್ಲಿ ಇಂತಹ ವಂಚನೆ ಜರುಗಲಿಲ್ಲ. ಒಂದೇ ಸಾಮಾನ್ಯ ಲಿಪಿ ಇಲ್ಲಿ ಬಳಕೆಯಲ್ಲಿತ್ತು- -ಇದೆ. ಈ ಸಾಮಾನ್ಯ ಕನ್ನಡ ಲಿಪಿಯ ಸಾಮರ್ಥ್ಯ ಅದ್ಭುತವಾದದ್ದು. ಭಾರತದ ಎಲ್ಲ ಧ್ವನಿಗಳನ್ನೂ ಅದು ಲಿಪಿಸುವ ಸಾಮರ್ಥ್ಯ ಪಡೆದಿದೆ. ಅದಕ್ಕಾಗಿ ಕನ್ನಡಿಗರು ಹೆಮ್ಮೆ ಪಡಬೇಕು.

ಅಂತಹ ಕನ್ನಡ ಲಿಪಿಯನ್ನು incapacitate ಮಾಡುವ ಹುಮ್ಮಸ್ಸು ಏತಕ್ಕೆ ಎನ್ನುವದನ್ನು ಅರ್ಥ ಮಾಡಿಕೊಳ್ಳಬೇಕು. ‘ಕೆಳವರ್ಗ’ದವರೆಂದು ಯಾರನ್ನು ಶಂಕರಭಟ್ಟರು ಕರೆಯುತ್ತಿದ್ದಾರೊ ಅವರನ್ನು ಶಾಶ್ವತವಾಗಿ ಲಿಪಿಹೀನರನ್ನಾಗಿ ಮಾಡುವ ಹುನ್ನಾರವೆ ಇದು?

62 comments:

Shriniwas M Katti said...

ಶಂಕರಭಟ್ಟರಿಗೂ ಅವರ ಅನಿಸಿಕೆಗಳನ್ನು ಹೇಳುವ "ಪ್ರೀಡಂ" ಇದೆಯಲ್ಲ. ಹೇಳಲಿ ಬಿಡಿ. ಅಷ್ಟೊಂದು ತಲೆ ಕೆಡಿಸಿಕೊಳ್ಳುವ ಕಾರಣವಿಲ್ಲ. 5 ಕೋಟಿ ಕನ್ನಡಿಗರಲ್ಲಿ ಶಂಕರಭಟ್ಟರ ಪುಸ್ತಕವನ್ನು ಎಷ್ಟು ಜನ ಕನ್ನಡಿಗರು ಓದಿರುವರು? ಓದಿದವರಲ್ಲಿ ಎಷ್ಟು ಜನ ಅ(ನ)ರ್ಥ ಮಾಡಿಕೊಂಡು ತಲೆ ಕೆಡಿಸಿಕೊಂಡಿರುವರು ? ಅವರನ್ನು ಅವರ ಪಾಡಿಗೆ ಬಿಟ್ಟುಬಿಡಿ. ಅವರ ಪುಸ್ತಕದಿಂದ ಕನ್ನಡಕ್ಕೆ ಯಾವ ಹಾನಿಯೂ ಆಗುವದಿಲ್ಲ.

Anonymous said...

It is waste of time and energy to write on the book of Shri Shankar Bhat.

sunaath said...

ಕಟ್ಟಿಯವರೆ ಹಾಗು ಸತ್ಯಪ್ಪನವರೆ,
ನನ್ನ ಸಮಯ ಹಾಳಾದರೆ ತೊಂದರೆ ಇಲ್ಲ, ಕನ್ನಡ ಹಾಳಾಗಬಾರದೆನ್ನುವದೇ ನನ್ನ ಮನದಾಸೆ.ಇದು ಎಲ್ಲ ಕನ್ನಡಪ್ರಿಯರ , ಕನ್ನಡದ ಬಗೆಗೆ ಕಳಕಳಿ ಇದ್ದವರ ಒಕ್ಕೊರಲ ಕರೆಯಾಗಲಿ ಎಂದು ಹಾರೈಸುತ್ತೇನೆ.

Unknown said...

ಕನ್ನಡಕ್ಕೆ ಹೆಚ್ಚು ಹೆಚ್ಚು ಅಕ್ಕರ ಗುರುತುಗಳನ್ನು ಬೇಕು ಅನ್ನುವ ತಾವು ನಮ್ಮದೇ ಆದ "ೞ್, ಱ್" ಯಾಕೆ ಬಿಟ್ಟಿರಿ. ಇದರಿಂದ ನಿಮ್ಮ 'ಪದ ಸಾದ್ಯತೆ'ಗಳು (factorial) ಇನ್ನು ಹೆಚ್ಚಾಗುತ್ತಿತ್ತು ಅಲ್ಲವೆ?

ಬೇರೆ ಪದಗಳನ್ನು ತೆಕ್ಕೊಬೇಡಿ ಅಂತ ಯಾರು (ಶಂಕರಬಟ್ಟರೂ ಕೂಡ) ಹೇಳಿಲ್ಲ. ಮತ್ತು ಹೀಗಿರುವ ೫೨ ಅಕ್ಕರಗಳನ್ನು ಬೇಕಾದರೆ ಬಳಸಿ, ಆದರೆ ಅವರು ತೋರಿಸಿಕೊಟ್ಟಿರುವ 'ಹೊಸ ಬರಹ'(ಋ,ಮಾಪ್ರಾಣ,ಷ,ಅಃ,ಙ್,ಞ್ ಇಲ್ಲದಿರುವ)ದಲ್ಲಿ ಬರೆದರೆ ಅದನ್ನು 'ಕೀಳಾಗಿ' ನೋಡಬೇಡಿ. ಮತ್ತು ಸಕ್ಕದದ ಅಕ್ಕರಗಳನ್ನು,ಪದಗಳನ್ನು ಹಾಗೆ ಬರೆಯುವ,ಉಲಿಯುವ ಒತ್ತಾಯ ಬೇಡ ಅಶ್ಟೆ ಶಂಕರಬಟ್ಟರು ಹೇಳಿರುವುದು.

ನಾವು ಸಕ್ಕದದಿಂದ ಮಾಪ್ರಾಣ ಅಕ್ಕರಗಳನ್ನು,ಪದಗಳನ್ನು ತೆಗೆದುಕೊಂಡ ಹಾಗೆ ಸಕ್ಕದವು ನಮ್ಮ 'ಱ್,ೞ್' ಈ ಅಕ್ಕರಗಳನ್ನು ಮತ್ತು ಈ ಅಕ್ಕರಗಳಿಂದ ಕೂಡಿದ ಪದಗಳನ್ನು ಯಾಕೆ ತೆಗೆದುಕೊಳ್ಳಲಿಲ್ಲ. ತೆಗೆದುಕೊಂಡರೂ ಅವು ಸಕ್ಕದದ ಸೊಗಡಿಗೆ ಹೊಂದಿಕೆಯಾಗುವಂತೆ ಮಾಡ್ಕೊಂಡರು

ಮಾದರಿ: ಬಳ್ಳಿ(ಕನ್ನಡ) -> ವಲ್ಲಿ(ಸಕ್ಕದ)
ಬಲ್ಲವ(ಕನ್ನಡ) -> ವಲ್ಲಭ(ಸಕ್ಕದ)

ನಮ್ಮ ಉಲಿಕೆಗೆ,ನಮ್ಮ ಸೊಗಡಿಗೆ ಹೆಮ್ಮೆ ಪಡೋಣ. ಸಕ್ಕದದ ಕುರುಡು ಒಲವನ್ನು ಬಿಟ್ಟು objective ಮಾತಾಡೋಣ.

'ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ' ಅಂತ ಅರಿವನ್ನು ಕುಲಗೆಡಿಸಿ ತಪ್ಪಾಗಿ ಎಲ್ಲ ಕಡೆ ಬರೆದರೂ ತಾವು ಸುಮ್ಮನಿರುವಿರಲ್ಲಾ? ಇದರ ಬಗ್ಗೆ ನಿಮ್ಮ ನಿಲುವೇನು?

ಬಾೞ್ = ಬದುಕು
ಬಾಳ್ = ಕತ್ತಿ

Unknown said...

"..ಈ ಎರಡೂ ಸಮುದಾಯಗಳು ಒಂದರಲ್ಲೊಂದು ಕರಗಿ ಹೋಗಿವೆ.""

ಒಂದರಲ್ಲೊಂದು ಅಲ್ಲ ಒಂದಱಲ್ಲೊಂದು.

"..ಬೇರೆ ಭಾಷೆಗಳಿಂದ ಪದಗಳನ್ನು, ಧ್ವನಿಸಂಕೇತಗಳನ್ನು ಎರವಲಾಗಿ ತೆಗೆದುಕೊಳ್ಳದಿದ್ದರೆ.."

'ಬೇರೆ' ಅಲ್ಲ 'ಬೇಱೆ'

"..ಶಿಲಾಯುಗದಲ್ಲಿ ಕಲ್ಲುಗಳನ್ನು ಆಯುಧಗಳನ್ನಾಗಿ ಬಳಸುತ್ತಿದ್ದ ಮಾನವ, ಆ ಬಳಿಕ .."

'ಬಳಸು' ಅಲ್ಲ 'ಬೞಸು'

"..ಕನ್ನಡದ ಮೂಲಪದಗಳಲ್ಲಿ ಮಹಾಪ್ರಾಣವಿಲ್ಲವೆಂದು ಬೊಬ್ಬೆ .."

ಕನ್ನಡ ಬೇರಿರುವ ಪದಗಳಲ್ಲಿ ಮಾಪ್ರಾಣವಿರುವ ೧೦ ಪದಗಳನ್ನು ಪಟ್ಟಿ ಮಾಡಿ. ಯಾಕೆ ಮುಂದೆ ಮಾತು?

"..ನಮ್ಮಲ್ಲಿ ತಮಿಳರನ್ನು ನಾವು ಈ ಚೀನೀಯರಿಗೆ ..."
ಅದು ತಮಿೞ್ , ತಮಿಳ್ ಅಲ್ಲ

ಏನ್ರೀ ಈಟೋಂದು ಅಕ್ಕರತಪ್ಪುಗಳು (spelling mistakes) ಆದರೆ ಮಾಪ್ರಾಣ ಬಿಟ್ಟು ನಾವು ಬರೆದರೆ ಅದು ತಪ್ಪು ಅಲ್ಲವ? ಇದು ಯಾವ ಊರಿನ ಸಯ್ಪು?

ನಿಮಗೆ ಕನ್ನಡ ಗೊತ್ತಾ? ಸರಿಯಾಗಿ ಕನ್ನಡ ಬರಹ ಬರೆಯಲು ಕಲಿಯಿರಿ

ಗುರು [Guru] said...

ಈ ಶಂಕರ ಭಟ್ಟ ಕನ್ನಡ ವಿರೋಧಿಯೇ? ಅಥವಾ ಕನ್ನಡ ಪ್ರೇಮಿಯೇ ಎಂಬುದು ಗೊತ್ತಾಗಲಿಲ್ಲ. ಸಂಸ್ಕೃತದ ನಂತರದ ಪ್ರಾಚೀನ ಭಾಷೆಯಾದ ಕನ್ನಡದ ಬಗ್ಗೆ ಕೀಳಾಗಿ ಮಾತಾಡುವ ಇವರೆಲ್ಲ ತಮ್ಮ ತಾಯಿಗೆ ಯಾವ ರೀತಿಯ ಗೌರವ ಕೊಡುತ್ತಾರೆಂಬುದು ಇದರಿಂದ ಅರ್ಥವಾಗುತ್ತದೆ. ಇಂತಹ ಕನ್ನಡ ದ್ರೋಹಿಗಳನ್ನು ಗಡೀಪಾರು ಮಾಡಬೇಕು.

sunaath said...

ಗುರು,
ಶಂಕರ ಭಟ್ಟರು ಕನ್ನಡದ ದೊಡ್ಡ ವಿದ್ವಾಂಸರೆಂದು ಹೇಳಲಾಗುತ್ತಿದೆ. ಆದರೆ ಕನ್ನಡ ತಾಯಿಯ ಅಂಗಗಳನ್ನು (ಅಕ್ಷರಗಳನ್ನು) ಕತ್ತರಿಸಬೇಕೆನ್ನುವ ಇವರಿಗೆ ಏನೆಂದು ಕರೆಯಬೇಕು?--ಮಾತೃದ್ರೋಹಿ ಎಂದರೆ ಅದು ಸರಿಯಾದೀತೆ?

Anonymous said...

Dear Shri Sunath ji ,

Do'nt worry. One book of Mr Shankar Bhat will not damage the Kannada Lanuage at all. "ನಾಯಿ ಬೊಗಳಿದರೆ ದೇವ ಲೋಕ ಹಾಳೆ ?" ಎಂಬ ಕನ್ನಡದ ಜಾಣ್ಣುಡಿ ನಿಮಗೆ ಗೊತ್ತಲ್ಲ !

Anonymous said...

ಈಗ ಯಾಕೆ ಪಜೀತಿ.

ಅವರ ಪಾಡಿಗೆ ಅವರಿಗೆ ಹೇಗೆ ಸರಿ ಅನ್ನಿಸುವುದೋ ಅವರು ಹಾಗೆ ಬರೆದುಕೊಳ್ಳಲಿ.

ನಿಮಗೆ ಹೇಗೆ ಬೇಕೋ ಹಾಗೆ ನೀವು ಬರೆದುಕೊಳ್ಳಿರಿ.

ಒಟ್ಟನಲ್ಲಿ ಸುಮ್ಮನೆ ಯಾಕೆ ಜಗಳ...

Harisha - ಹರೀಶ said...

ಭರತ್ ಅವರೇ, ಸಂಸ್ಕೃತ (ತತ್ಸಮ) ಪದಗಳಿಂದ ಕನ್ನಡ (ತದ್ಭವ) ಪದಗಳು ಹುಟ್ಟಿವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಹೀಗಿರುವಾಗ ಕನ್ನಡದ ಬಳ್ಳಿಯಿಂದ ಸಂಸ್ಕೃತದ ವಲ್ಲೀ ಹಾಗೂ ಕನ್ನಡದ ಬಲ್ಲವನಿಂದ ಸಂಸ್ಕೃತದ ವಲ್ಲಭ ಪದಗಳು ಬಂದವು ಎಂಬ ತಪ್ಪು ಗ್ರಹಿಕೆಯನ್ನು ನಿಮಗೆ ಯಾರು ಕೊಟ್ಟರು ಎಂದು ನಾವು ತಿಳಿಯಬಹುದೇ?

Unknown said...

ಇದು ದ್ರಾವಿಡಿಯನ್ ಎಟಿಮಲಾಜಿಕಲ್ ಡಿಕ್ಸನರಿ.(ಎಮನೊ, ಬರೊ)
http://dsal.uchicago.edu/dictionaries/burrow/index.html

ಇಲ್ಲಿರುವುದು ಎಲ್ಲಾ ಅಣ್ಣೆಕನ್ನಡದ/ಅಚ್ಚಗನ್ನಡದ ಒರೆಗಳೆ.
ನಿಮಗೆ ಯಾವುದು ಬೇಕೊ ಅದನ್ನ ಹುಡಿಕಳಿ.

ಇವು ಕನ್ನಡದಿಂದ/ತೆನ್ನುಡಿಗಳಿಂದ/ದ್ರಾವಿಡ ನುಡಿಗಳಿಂದ ಸಕ್ಕದಕ್ಕೆ ಹೋದ ಒರೆಗಳು
http://dsal.uchicago.edu/cgi-bin/philologic/search3advanced?dbname=burrow&query=skt&matchtype=exact&display=utf8

Unknown said...

ಮೊದಲು 'ಎಟಿಮಾಲಜಿ' ಅಂದರೇನು ಅಂತ ತಿಳ್ಕೊಳಿ ಆಮೇಲೆ ನೋಡೋಣ, ನನ್ನದ ತಪ್ಪು 'ಗ್ರಹಿಕೆ'ಯೊ ಇಲ್ಲವೊ ಅಂತ

Harisha - ಹರೀಶ said...

ಭರತ್ ಅವರೇ, ಉಪನಿಷತ್ತುಗಳ ವಿಭಾಗಗಳನ್ನು ವಲ್ಲೀ ಎಂದು ಕರೆಯಲಾಗಿದೆ. ಉದಾಹರಣೆಗೆ ತೈತ್ತಿರೀಯೋಪನಿಶತ್ತಿನ ಭೃಗುವಲ್ಲೀ, ಬ್ರಹ್ಮಾನಂದವಲ್ಲೀ ಮೊದಲಾದವುಗಳು.
ಹಾಗೆಯೇ ಮಾರ್ಕಂಡೇಯ ಪುರಾಣದಲ್ಲಿ ಸಾವಿತ್ರೀವಲ್ಲಭ ಎಂಬ ಪದ ಬರುತ್ತದೆ.

ಉಪನಿಷತ್ತು, ಪುರಾಣಗಳು ಸಾವಿರಾರು ವರ್ಷಗಳಿಂದ ಇವೆ. ಕನ್ನಡವು ಅವುಗಳಿಗಿಂತ ಹಳೆಯದು ಎಂಬುದು ನಿಮ್ಮ ಅಭಿಪ್ರಾಯವೇ?

etymology ಬಗ್ಗೆ ಹೇಳುತ್ತಿದ್ದೀರಲ್ಲ, ಕರ್ನಾಟಕ ಎಂಬ ಪದ ಹೇಗೆ ಬಂತು ಎಂದು ತಿಳಿದಿದೆಯೇ?

ಕರ್ಣ-ಅಟಕ (ಕಿವಿಯಿಂದ ಕಿವಿಗೆ ಹರಡಿದ್ದು) ಎಂಬ ಸಂಸ್ಕೃತ ಪದಗಳಿಂದ ಕೂಡಿ ಬಂದಿದ್ದಲ್ಲವೇ ಕರ್ನಾಟಕ?

ನೀವು ಕಳುಹಿಸಿದ ಪುಟದಲ್ಲಿನ ಸಂಜ್ಞೆಗಳು ವಿಚಿತ್ರವಾಗಿವೆ. ಸಮಯವಿದ್ದಾಗ ನೋಡಿ ಪ್ರತಿಕ್ರಿಯಿಸುತ್ತೇನೆ.

ಆದರೆ ಕನ್ನಡ-ಸಂಸ್ಕೃತಗಳ ವಾದಕ್ಕಾಗಿ ನಾವು ಶಿಕಾಗೋದ ಯಾವುದೋ ವಿಶ್ವವಿದ್ಯಾನಿಲಯದ ಮೊರೆ ಹೋಗಬೇಕಾಗಿರುವುದು ಎಂಥ ವಿಪರ್ಯಾಸ!

sunaath said...

ಸಂಸ್ಕೃತದ ವಲ್ಲಿ ಹಾಗು ವಲ್ಲಭ ಪದಗಳು ಕನ್ನಡದಲ್ಲಿ ಬಳ್ಳಿ ಹಾಗು ಬಲ್ಲವ ಆಗಿ ರೂಪಾಂತರ ಪಡೆದಿವೆ. ವಕಾರದಿಂದ ಬಕಾರಕ್ಕೆ ರೂಪಾಂತರಗೊಳ್ಳುವದು ಸಹಜವಾಗಿದೆ. ಉದಾ:ವಣಿಜಿಗ > ಬಣಜಿಗ ; ವಾಣಸಿಗ > ಬಾಣಸಿಗ ಇತ್ಯಾದಿ.

Unknown said...

ಸುನಾತ್,ಹರೀಶ್,

ನೀವ್ ಹೇಳುದ್ರೆ ಯಾರು ಕೇಳಲ್ಲ. ಎಲ್ಲರೂ ಎಮನೊ,ಬರೊ ಒರೆಗಂಟನ್ನೆ ನೋಡುವುದು.

65 Ta. aṭampu, aṭappaṅ-koṭi, aṭumpu hare-leaf, Ipomoea biloba. Ma. aṭampu, aṭumpu Convolvulus pes caprae. Ka. aḍumbu-baḷḷi a creeping plant, I. biloba Forsk. Tu. aḍumbu the creeper I. maritima. [I. biloba/maritima = C. pes caprae Linn.]. DED 59.

baḷḷi= ಬಳ್ಳಿ. = creeping plant

ಈ ಒರೆಗಂಟಿನಲ್ಲಿ ಇದ್ಮೇಲೆ ಅಗೋಯಿತು. ಅದು ಅಣ್ಣೆಗನ್ನಡದ ಪದ. ಬಳ್ಳಿ ಎಂದೆಂದಿಗೂ ಕನ್ನಡ ಬೇರಿನ ಒರೆ.

ನೀವು ಏಸ್ ಕಾಮೆಂಟ್ ಬೇಕಾದ್ರೂ ಹಾಕೊಳಿ.

Ka. baṭā, baṭṭa, baṭṭu bareness,
voidness.
ಬಟ್ಟ =baṭṭa ==> ವಟ್ಟ ==> ವೃತ್ತ(ಸಕ್ಕದ)

ಬಟ್ಟಲು,ಬಟ್ಟು(ಕನ್ನಡ) = ಬಟ್ಟ => ವಟ್ಟ ==> ವೃತ್ತ(ಸಕ್ಕದ)

ಹೀಗೆ ಹಲವು ಒರೆಗಳು ಕನ್ನಡದಿಂದ ಸಕ್ಕದಕ್ಕೆ ಹೋಗಿವೆ
ಮಾದರಿ: ಮೀನು, ಮಲ್ಲ, ಪಟ್ಟ

ಈ ಸಕ್ಕದದವರು ಹೀಗೆ ಎಲ್ಲಾ ಕಡೆಯಿಂದ ಎಗ್ಗ ಮೊಗ್ಗಾ ಒರೆಗಳನ್ನು ಪಡೆದಿದ್ದಾರೆ.

Unknown said...

ಕರ್‍ ನಾಡು = ಕಪ್ಪು ಮಣ್ಣಿನ ನಾಡು, ಎತ್ತರದ ನಾಡು
ಕರ್ = ಕಪ್ಪು , ಎತ್ತರ

ಕರ್ನಾಡು(ಕನ್ನಡ) ==> ಕರ್ನಾಟ ==> ಕರ್ಣಾಟ ==>ಕರ್ಣಾಟಕ(ಸಕ್ಕದ)

'ಕರ್ನಾಡ'ನ್ನ ಸಕ್ಕದಿಸಿ 'ಕರ್ಣಾಟ' ಆಗಿದೆ.

'ಕರ್ನಾಡ'ನ್ನ ಸಕ್ಕದ ಅಂತಿರಲ್ಲ. ನೀವು ಕನ್ನಡಿಗರೋ, ಸಕ್ಕದಿಗರೊ?

ನೀವು ದಿಟವಾಗಲೂ ಕನ್ನಡಿಗರಲ್ಲ.

Harisha - ಹರೀಶ said...

>> ನೀವ್ ಹೇಳುದ್ರೆ ಯಾರು ಕೇಳಲ್ಲ. ಎಲ್ಲರೂ ಎಮನೊ,ಬರೊ ಒರೆಗಂಟನ್ನೆ ನೋಡುವುದು.
>> ಈ ಒರೆಗಂಟಿನಲ್ಲಿ ಇದ್ಮೇಲೆ ಅಗೋಯಿತು. ಅದು ಅಣ್ಣೆಗನ್ನಡದ ಪದ. ಬಳ್ಳಿ ಎಂದೆಂದಿಗೂ ಕನ್ನಡ ಬೇರಿನ ಒರೆ.

ಕತ್ತೆ ಮುಂದೆ ಕಿಂದರಿ ಬಾರಿಸಿದರೆ..

Unknown said...

>> ಕತ್ತೆ ಮುಂದೆ ಕಿಂದರಿ ಬಾರಿಸಿದರೆ..

ಪುರಾವೆ ತೋರ್ಸಿದ್ದಿಕ್ಕೆ ಏನೂ ಹೇಳಕ್ಕಾಗ್ಲಿಲ್ಲ. ಅದಕ್ಕೆ ಈ personal attack ಮಾತು.

ಕಯಲ್ಲಾಗದವನು ಮಯ್ ಪರಚಿಕೊಂಡನಂತೆ. ಹಾಗಾಗಿದೆ ನಿಮ್ಮ ಪಾಡು.

sunaath said...

ಕರ್ನಾಟಕದ ಎಲ್ಲ ಭಾಗಗಳೂ ಎತ್ತರದಲ್ಲಿಯೇ ಇಲ್ಲ;ಎಲ್ಲ ಭಾಗಗಳಲ್ಲಿಯೂ ಕರಿ ಮಣ್ಣು ಇಲ್ಲ. ಹೀಗಾಗಿ 'ಕರ್+ನಾಡು'
ಪದದಿಂದ ಕರ್ನಾಡ ಪದ ಹುಟ್ಟಿ ಅದೇ ಕರ್ನಾಟವಾಯಿತು ಎಂದು ಹೇಳುವದು ಸರಿಯಾಗಲಾರದು.

Unknown said...

ಎಲ್ಲಾ ಕಡೆಗಳಲ್ಲೂ ಕಪ್ಪು ಮಣ್ಣು ಇರದೇ ಇರಬಹುದು. ಆದರೆ ಕನ್ನಡ ನಾಡಿನ ಹೆಚ್ಚು ಕಡೆ ಇದೆ. ಇದು mathematical approximation ಮಾಡಿ ಕರ್ನಾಡು ಅಂತ ಹೇಳಲಾಯಿತು.

ಈಗ ನಮ್ಮ ನಾಡನ್ನು 'ಗಂದದ ಗುಡಿ'/ಗಂದದ ನಾಡು ಅಂತ ಕರೀತಿವಿ ಹಾಗಂತ ಕರ್ನಾಡಿನ ಎಲ್ಲಾ ಕಡೆ ಅಡಿಗಡಿಗೂ ಗಂದದ ಮರವಿದೆ ಅಂತ ಅರ್ತನಾ? ಇಲ್ಲ. ನಮ್ಮ ನಾಡಿನಲ್ಲಿ ಹೆಚ್ಚು ಗಂದದ ಮರ ಬೆಳೆಯಲಾಗುತ್ತಿತ್ತು. ನಮ್ಮ ನಾಡಿನ ಗಾಳಿ,ಮಣ್ಣು ಗಂದದ ಮರ ಬೆಳೆಯುವುದಕ್ಕೆ ನೆರವಾಗಿದೆ. ಇದು ನಮ್ಮ ನಾಡಿನ ಹಿರಿಮೆ. ಹಾಗೆ ನಮ್ಮ ನಾಡಿನ ಹೆಚ್ಚು ಬಾಗ ಕಪ್ಪು ಮಣ್ಣಿನಿಂದ ಕೂಡಿದೆ. ಹೆಚ್ಚು ಬಾಗ ಎತ್ತರವಾಗಿದೆ ಆದ್ದರಿಂದ ನಮ್ಮ ನಾಡಿಗೆ 'ಕರ್ +ನಾಡು' ಒರೆಯಿಂದಲೇ ನಮ್ಮ 'ಕರ್ನಾಡ'(ಕರ್ನಾಟಕ) ವಾಯಿತು ಅಂತ ಹೇಳಬಹುದು( ಮಯ್ಸೂರು ಸರ್ಕಾರದಲ್ಲಿ archeologist ಆಗಿದ್ದ ಡಾ|ಎಮ್.ಎಚ್.ಕ್ರುಶ್ಣರವರು ಕೂಡ 'ಕರ್ನಾಟಕ' ಒರೆಗೆ ಮೇಲಿನದೆ ಸರಿಯಾದ ವಿವರಣೆ ಅಂತ ಹೇಳಿದ್ದಾರೆ. ಅವರ ಹೊತ್ತಿಗೆಯನ್ನು http://dli.iiit.ac.in ಇಲ್ಲಿಂದ ಓದಿ ತಿಳಿದುಕೊಳ್ಳಬಹುದು.

Harisha - ಹರೀಶ said...

ಭರತ್, ಕುಮಾರವ್ಯಾಸ "ಕರ್ಣಾಟ ಭಾರತ ಕಥಾ ಮಂಜರಿ" ಬರೆದನೇ ಹೊರತು "ಕರುನಾಡ ಭಾರತ ಕಥಾ ಮಂಜರಿ" ಬರೆಯಲಿಲ್ಲ. ಏಕೆ? ಆಗಿನ್ನೂ ಬಹುಶಃ "ಕರುನಾಡು" ಎಂಬ ಪದ ಇರಲಿಲ್ಲ, ಅಥವಾ ಮೂಲ ರೂಪವಾದ "ಕರ್ಣಾಟ" ಎಂಬ ಪದ ಇನ್ನೂ ಜನಪ್ರಿಯವಾಗಿ ಬಳಕೆಯಲ್ಲಿತ್ತು.

ಮೀನ - ಮೇಷ, ವೃಷಭ... ಎಂಬ ಹನ್ನೆರಡು ರಾಶಿಗಳು ಅನಾದಿ ಕಾಲದಿಂದಲೂ ಪಂಚಾಂಗದಲ್ಲಿ ಬಳಸಲ್ಪಟ್ಟಿವೆ. ಅದರಲ್ಲಿ ಕೊನೆಯದು ಮೀನ ರಾಶಿ. ಹೌದೋ ಅಲ್ಲವೋ ಎಂದು ನಿಮ್ಮ ಮನೆಯಲ್ಲಿ ಹಿರಿಯರಿದ್ದರೆ ಅವರನ್ನು ಕೇಳಿ..

ಮಲ್ಲ - ಇದೂ ಕೂಡ ಸಂಸ್ಕೃತ ಪದ. ಮಹಾಭಾರತದಲ್ಲಿಯೇ ಮಲ್ಲಯುದ್ಧದ ಪ್ರಕರಣಗಳಿವೆ.

ಪಟ್ಟ - ಪಟ್ಟಾಭಿಷೇಕ ಎಂಬುದು ಎಲ್ಲೆಡೆ ಉಪಯೋಗಿಸಲ್ಪಡುವ ಪದವಾದರೂ, ಪಟ್ಟದ ಬಗ್ಗೆ ಈಗ ಏನೂ ಹೇಳಲಾರೆ. ನಿಘಂಟು ನೋಡಿ ಹೇಳುತ್ತೇನೆ.

ನೀವು ಯಾವ ಪುರಾವೆ ಬಗ್ಗೆ ಹೇಳುತ್ತಿದ್ದೀರೋ ತಿಳಿಯುತ್ತಿಲ್ಲ. ಉಪನಿಷತ್ತುಗಳು ಹಾಗೂ ಪುರಾಣದಲ್ಲಿ ವಲ್ಲೀ ಮತ್ತು ವಲ್ಲಭ ಎಂಬ ಪದಗಳು ಇವೆ ಎಂದು ಪುರಾವೆ ಸಹಿತ ಹೇಳಿದ ಮೇಲೂ ಆ ಎಮನೊ, ಬರೊ ನಿಘಂಟೇ ಸರಿ ಎಂದು ಮೊಂಡು ವಾದ ಮಾಡುತ್ತಿರುವ ನಿಮಗೆ ಇನ್ನೇನು ಹೇಳಬೇಕು? ಅಷ್ಟಕ್ಕೂ ಅಲ್ಲಿ ವಲ್ಲೀ ಎಂಬ ಪದಕ್ಕೆ ಸಂಸ್ಕೃತ ಎಂದು ಹೇಳಲಾಗಿದೆಯೇ ಹೊರತು, ಅದು ಕನ್ನಡದ ಪದದಿಂದ ಹೋಗಿದೆ ಎಂದು ಎಲ್ಲಿ ಹೇಳಲಾಗಿದೆ?

ಸಂಸ್ಕೃತದಲ್ಲಿ ಪ್ರತಿ ಪದವೂ ಕ್ರಿಯಾಪದದಿಂದ ಹುಟ್ಟುತ್ತದೆ.

ಉದಾ: ರಮತೇ ಇತಿ ರಾಮಃ, ಕರ್ಷತಿ ಇತಿ ಕೃಷ್ಣಃ, ಪ್ರಥನಾತ್ ಪೃಥ್ವೀ ...

ಹೀಗೆ ಪ್ರತಿ ಪದದ ನಿಷ್ಪತ್ತಿ (etymology) ಕೂಡ ಕ್ರಮಬದ್ಧವಾಗಿದ್ದು. ಬೇರೆ ಭಾಷೆಯಿಂದ ಅನಾಮತ್ತಾಗಿ ಪದ ಎತ್ತಿ ಹಾಕಿಕೊಳ್ಳುವ ಅಗತ್ಯ ಸಂಸ್ಕೃತಕ್ಕಿಲ್ಲ.

hamsanandi said...

ಹರೀಶರೇ,

ಭರತ್ ಅವರಿಗೆ ಬರೆದ ಟಿಪ್ಪಣಿಯಲ್ಲಿ ನೀವು ಹೀಗಂದಿರಿ:

>>ಕರ್ಣಾಟ ಭಾರತ ಕಥಾ ಮಂಜರಿ" ಬರೆದನೇ ಹೊರತು >>"ಕರುನಾಡ ಭಾರತ ಕಥಾ ಮಂಜರಿ" ಬರೆಯಲಿಲ್ಲ. >>ಏಕೆ?ಆಗಿನ್ನೂ ಬಹುಶಃ "ಕರುನಾಡು" ಎಂಬ ಪದ >>ಇರಲಿಲ್ಲ, ಅಥವಾ ಮೂಲ ರೂಪವಾದ "ಕರ್ಣಾಟ" >>ಎಂಬ ಪದ ಇನ್ನೂ ಜನಪ್ರಿಯವಾಗಿ ಬಳಕೆಯಲ್ಲಿತ್ತು.

ನಿಮ್ಮ ಮಾತಿನ ಎರಡನೇ ಭಾಗ ಸರಿಯೇ ಹೊರತು, ಮೊದಲ ಭಾಗ ಸರಿಯಿಲ್ಲ. ಕರ್ಣಾಟ/ಕರ್ನಾಟ/ಕರುನಾಡ/ ಈ ಮೂರೂ ಒಂದೇ ಅರ್ಥದಲ್ಲಿ, ಅಂದರೆ "ಕನ್ನಡ" ಎಂಬರ್ಥದಲ್ಲಿ ಬೇರೆಬೇರೆ ಭಾಷೆಗಳಲ್ಲಿ ಬಳಕೆಯಾಗಿದೆ.

ಕರುನಾಡು/ಕನ್ನಡ ಇವೆರಡೂ ಕರ್ಣಾಟ/ಕರ್ನಾಟಕ ಕ್ಕಿಂತ ಮೊದಲೇ ಇದ್ದಿರಬೇಕೇ ಹೊರತು, ಕರ್ಣಾಟ ದಿಂದ ಕನ್ನಡವಾಗಿಲ್ಲ ಎಂದು ನನ್ನ ತಿಳಿವು.

ಮತ್ತೆ ಇನ್ನೊಂದು ವಿಷಯ:

>>ಮೀನ - ಮೇಷ, ವೃಷಭ... ಎಂಬ ಹನ್ನೆರಡು >>ರಾಶಿಗಳು ಅನಾದಿ ಕಾಲದಿಂದಲೂ ಪಂಚಾಂಗದಲ್ಲಿ
>> ಬಳಸಲ್ಪಟ್ಟಿವೆ. ಅದರಲ್ಲಿ ಕೊನೆಯದು ಮೀನ ರಾಶಿ.


ರಾಶಿ ಚಕ್ರ ಅಂತಹ ಅನಾದಿ ಕಾಲದಿಂದ ಬಂದದ್ದಲ್ಲ - ನಮ್ಮ ದೇಶಕ್ಕೆ ಬಂದದ್ದಂತೂ ಕ್ರಿಸ್ತನ ಆಸುಪಾಸಿನಲ್ಲಿ (ನೂರಿನ್ನೂರು ವರ್ಷ ಮೊದಲೂ ಇರಬಹುದು). ಅಂದರೆ,ಮೀನ-ರಾಶಿ ಎಂಬ ಹೆಸರು ಕನ್ನಡ ಭಾಷೆಗಿಂತ ಹಳತೇನೂ ಅಲ್ಲ.

ಸಂಸ್ಕೃತದಲ್ಲಿ ಮೀನಿಗೆ ಮೂಲ ಪದ ಮತ್ಸ್ಯ - ಅದರಿಂದ ಹುಟ್ಟುದ ಇತರೆ ಭಾಷೆಗಳಲ್ಲೂ ಅದರಿಂದಲೇ ಬಂದ ಪದಗಳೇ (ಮಾಚೀ, ಮಚ್ಚೀ, ಮಚಲೀ) ಇವೆ. ಇನ್ನು ದಕ್ಷಿಣದ ಭಾಷೆಗಳಲ್ಲೆಲ್ಲ ಇರುವ ಮೀನ್/ಮೀನು ಎಂಬ ಪದವೇ ಸಂಸ್ಕೃತಕ್ಕೆ ಹೋಗಿದೆ ಅಷ್ಟೆ.

>> ಬೇರೆ ಭಾಷೆಯಿಂದ ಅನಾಮತ್ತಾಗಿ ಪದ ಎತ್ತಿ
>> ಹಾಕಿಕೊಳ್ಳುವ ಅಗತ್ಯ ಸಂಸ್ಕೃತಕ್ಕಿಲ್ಲ.
>> ಸಂಸ್ಕೃತ ಬೇರೆ ಭಾಷೆಗಳಿಂದ ಪದಗಳನ್ನು

ನೀವು ಹೇಳುವ ರೀತಿ ಎಷ್ಟೋ ಪದಗಳಿಗೆ ಕ್ರಿಯಾ ಪದಗಳಿಂದ ನಿಷ್ಪತ್ತಿ ಇದೆ ಎನ್ನುವುದು ನಿಜವಾದರೂ, ಸಂಸ್ಕೃತಕ್ಕೆ ಬೇರೆ ಭಾಷೆಯಿಂದ ಪದಗಳನ್ನು ತೆಗೆದುಕೊಳ್ಳುವ ಅಗತ್ಯವಿರಲಿಲ್ಲ/ಅಥವಾ ಹಾಗೆ ಎಂದೂ ಮಾಡಲೇ ಇಲ್ಲ ಎನ್ನುವುದು ಸರಿಯಾದ ಮಾತಲ್ಲ.ಕೊಡು ಕೊಳ್ಳುವಿಕೆಯ ಶೇಕಡಾ ಹೆಚ್ಚುಕಡಿಮೆಯಿರಬಹುದೇ ಹೊರತು ಇಲ್ಲವೇ ಇಲ್ಲ ಎಂದು ಹೇಳಲಾಗುವುದಿಲ್ಲ! ಅಲ್ಲವೆ?

-ಹಂಸಾನಂದಿ

hamsanandi said...

ಇನ್ನೊಂದು ಸೇರಿಸುವುದನ್ನು ಮರೆತೆ.

ನಿಷ್ಪತ್ತಿಯಲ್ಲಿ ಕೆಲವೊಮ್ಮೆಯಂತೂ ಅದು ಕೊಂಕಣ ಸುತ್ತಿ ಮೈಲಾರಕ್ಕೆ ಹೋಗುವಂತಿರುವುದು ದಿಟ :)

ಕನ್ನಡದಲ್ಲೇ ಒಬ್ಬ ವೈಯಾಕರಣಿ ( ಭಟ್ಟಾಕಳಂಕನಿರಬಹುದೇ, ನೆನಪಾಗುತ್ತಿಲ್ಲ) ಹಾವು ಎಂಬ ಕನ್ನಡ ಪದವು ಸಂಸ್ಕೃತದಿಂದ ಬಂದಿದೆ ಎಂಬ ತಪ್ಪು ಗ್ರಹಿಕೆಯಿಂದ ಅದರ ನಿಷ್ಪತ್ತಿಯನ್ನು "ಪಾಪವೇ ಇದು ಆಗಿದೆಯಾದ್ದರಿಂದ ಇದು ಪಾವು (ಈಗಿನ ಕನ್ನಡದಲ್ಲಿ ಪಕಾರಗಳು ಹಕಾರವಾಗಿರುವುದ್ರಿಂದ ಹಾವು)" ಎಂಬ ನಂಬಲು ಅಸಾಧ್ಯವಾದ ರೀತಿ ಕೊಡುತ್ತಾನೆ!

ಸಂಸ್ಕೃತದಲ್ಲೂ ಹಲವು ನಿಷ್ಪತ್ತಿಗಳು ಹೀಗೇ "ದ್ರಾವಿಡಪ್ರಾಣಾಯಾಮ" ದ ರೀತಿಯಲ್ಲೇ ಇರುವುದು ಸುಳ್ಳಲ್ಲ!

Harisha - ಹರೀಶ said...

ಹಂಸಾನಂದಿ ಅವರೇ, ಕನ್ನಡ ಎಂಬುದು ಕರ್ಣಾಟ ಎಂಬುದರಿಂದಾಗಿದೆ ಎಂದು ನಾನು ಹೇಳಿಲ್ಲ. ಕರ್ನಾಟಕ ಎಂಬ ಪದದ ಬಗ್ಗೆ ಹೇಳಿದ್ದೇನೆ.

ಹಲವಾರು ವಿಷಯಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಆದರೆ ನನಗೊಂದು ಸಂದೇಹವಿದೆ.

"ಮೀನ" ಎಂಬ ಪದ ಯಾವುದಾದರೂ ಸಂಸ್ಕೃತ ಸಾಹಿತ್ಯದಲ್ಲಿ (ತೀರಾ ಇತ್ತೀಚಿನವುಗಳನ್ನು ಬಿಟ್ಟು) ಬಳಕೆಯಾಗಿದೆಯೇ?

Unknown said...

>ಹಂಸಾನಂದಿ ಅವರೇ, ಕನ್ನಡ ಎಂಬುದು ಕರ್ಣಾಟ >ಎಂಬುದರಿಂದಾಗಿದೆ ಎಂದು ನಾನು ಹೇಳಿಲ್ಲ. ಕರ್ನಾಟಕ >ಎಂಬ ಪದದ ಬಗ್ಗೆ ಹೇಳಿದ್ದೇನೆ.

ಅಣ್ಣಾ ಹರೀಶರೆ, ಇದನ್ನೆ ತಪ್ಪು ಅಂತ ಹಂಸಾನಂದಿಯವರು ಹೇಳಿರುವುದು. ತಾವು ಕವಿರಾಜಮರ್ಗ ಓದಿದ್ದರೆ ತಿಳಿಯುತ್ತದೆ
"ಕಾವೇರಿಯಿಂದಂ ಗೋದಾವರಿವರಂ ಇರ್ಪ ನಾಡಾದ ಕನ್ನಡದೊಳ್ ಬಾವಿಸಿದ ಜನಪದಂ..."

ಕರ್ನಾಡ = > ಕನ್ನಡ => ಕರ್ಣಾಟಕ

ನೋಡುದ್ರಾ. ೯ ನೂರೇಡಿನ ಕವಿರಾಜಮಾರ್ಗದಲ್ಲೇ 'ಕನ್ನಡ 'ನಾಡು ಅಂತ ಇದೆ. ಇನ್ನು ಕರ್ಣಾಟಕ ಸಕ್ಕದಿಸುವಿಕೆಯಿಂದ ಆಗಿರುವುದು.

ನಮ್ಮ ನಾಡು, ನುಡಿ, ಜನಪದ - ಇವು ಮೂರಕ್ಕೆ 'ಕನ್ನಡ' ಅಂತಲೇ ಹೆಸರು

ಇನ್ನು 'ಮೀನು' ಸಕ್ಕದ ಅಂತ ಹೇಳಿದ್ದನ್ನ ಹಂಸಾನಂದಿಯವರೆ ತಪ್ಪು ಅಂತ ತೋರಿದ್ದಾರೆ.

ತಿಳಿಗಣ್ಣ said...

ಮೀನು ಎಂಬುದು ಬಳ್ಳಿಯಂತೆ ಅಪ್ಪಟ ಕನ್ನಡ/ದ್ರಾವಿಡ ಪದ...

ಮೀನ ಗೊತ್ತಿಲ್ಲ.....

ಸಂಸ್ಕೃತದ ಮೂಲದ್ದು ಮತ್ಸ್ಯ...

ಕರ್ಣಾಟ ತಪ್ಪು ಕರ್ನಾಟ ಸರಿ.. ನಾಟ = ನಾಡು, ದ್ರಾವಿಡಪದ. ಕರ್‍=ಕಪ್ಪು/ ಎತ್ತರ


ಸಂಸ್ಕೃತಕ್ಕೆ ಹೋದ ಕನ್ನಡದ/ದ್ರಾವಿಡ ಪದಗಳಲ್ಲಿ ಗಾರ್ದಭ(ಕಱ್ತೆಯಿಂದ), ಕಿಷ್ಕಿಂದೆ, ಕುಕ್ಕುರ, ಸಹಸ್ರ, ಪುರಮ, ನೀರ್‍ ಮುಂತಾದವೂ ಕೂಡ ಎಂದ ದೊಡ್ಡ ದ್ರಾವಿಡಭಾಷಾವಿಜ್ನಾನಿಗಳಾದ ಬರ್ರೊ‍ ಮತ್ತು ಎನಿಮಿನೋ ತೋರಿಸಿದ್ದಾರೆ.

ಅವರ ನಿಘಂಟು ಇಲ್ಲೇ ಇಂಟರ್‍ನೆಟಲ್ಲಿ ಇದೆ..

ಋಷಿ ಪದಕ್ಕೆ ನಿಷ್ಪುತ್ತಿ/ಎಟಿಮಾಲಜಿ ಇಲ್ಲವೆಂದು ಕೇಳಿದ್ದೀನಿ....


ಮೂಲವಿಷಯಕ್ಕೆ
ಭಾಷೆಯನ್ನು ಉಪಕರಣವಾಗಿ ಬಳಸೋದಕ್ಕೂ ಶಂಕರಬಟ್ಟರ ವಾದಕ್ಕೂ ಸಂಬಂದ ಇದೆ. ಉಪಕರಣ ಮಾಡೋದು ಯಾವಾಗಲೂ ಹೆಚ್ಚು ಜನರ ಅನುಕೂಲಕ್ಕಾಗಿ.. ಅದಕ್ಕೆ ಹೆಚ್ಚು ಉಪಕರಣಗಳನ್ನು ಬಲಗೈ ಮಂದಿಯ ಅನುಕೂಲಕ್ಕೆ ಮಾಡಿರುತ್ತಾರೆ. ಇಟ್ಟಿರುತ್ತಾರೆ..

ಹಾಗೆ ಶಂಕರಬಟ್ಟರೂ ಕೂಡ ಹೆಚ್ಚು ಕನ್ನಡಿಗರು ಹೇಗೆ ಕನ್ನಡವನ್ನು ಉಲಿಯುವರೋ ಹಾಗೆ ಕನ್ನಡ ಇರಬೇಕು ಎಂದು ಭಾಷೆಯನ್ನು ಕೇವಲ ಉಪಕರಣ ಮಾತ್ರ ದೃಷ್ಟಿಕೋನದಿಂದ ಹೇಳಿದ್ದಲ್ಲದೇ, ಭಾಷೆ ಅನ್ನುವುದು ಒಂದು ಜನಾಂಗದ ಗುರುತು ಎಂದು ವಾದ ಮಂಡಿಸಿದ್ದಾರೆ....

ಅದರ ಸರಿತಪ್ಪು ಅದನ್ನು ಓದಿದವರಿಗೆ ಅರಿವಾಗುವುದು...

ನಿಮ್ಮ ಅನಿಸಿಕೆಯಲ್ಲಿ ಭಾಷೆಯನ್ನುವ ಉಪಕರಣ ಕಡಮೆ ಇರುವ ಎಡಗೈ ಮಂದಿಯ ಅನುಕೂಲಕ್ಕೇ ಇರಲಿ ಎನ್ನುವಂತಿದೆ...

ನನ್ನಿ.

Unknown said...

ಮಲ್ಲ - ಇದೂ ಕೂಡ ಸಂಸ್ಕೃತ ಪದ. ಮಹಾಭಾರತದಲ್ಲಿಯೇ ಮಲ್ಲಯುದ್ಧದ ಪ್ರಕರಣಗಳಿವೆ.

ಪಟ್ಟ - ಪಟ್ಟಾಭಿಷೇಕ ಎಂಬುದು ಎಲ್ಲೆಡೆ ಉಪಯೋಗಿಸಲ್ಪಡುವ ಪದವಾದರೂ, ಪಟ್ಟದ ಬಗ್ಗೆ ಈಗ ಏನೂ ಹೇಳಲಾರೆ. ನಿಘಂಟು ನೋಡಿ ಹೇಳುತ್ತೇನೆ.

ನೀವು ಹೇಳಿರುವುದೆಲ್ಲ ತಪ್ಪು ಅಂತ ಕೇಶಿರಾಜನ 'ಶಬ್ದಮಣಿದರ್ಪಣ' ಹೇಳುತ್ತೆ. ಅದರಲ್ಲಿ ಈ ಮಲ್ಲ,ಪಟ್ಟ ಅನ್ನೊ ಪದಗಳನ್ನು ಅವನು 'ತತ್ಸಮ' ಅಂತ ಹೇಳಿಲ್ಲ. ಬದಲಾಗಿ 'ಸಮಸಕ್ಕದ' ಪದಗಳು ಅಂತ ಹೇಳಿದ್ದಾನೆ. ಈ ತೆಱ ಸುಮಾರು ೨೫ ಪದಗಳನ್ನ ಕೇಶಿರಾಜನೇ ಗುರುತಿಸಿದ್ದಾನೆ. ಇದರಲ್ಲಿ 'ಮೀನು' ಇದು ಕೂಡ ಇದೆ. ಕೇಶಿರಾಜನು ಗುರುತಿಸುರುವ ಈ 'ಸಮಸಕ್ಕದ' ಪದಗಳು ಕನ್ನಡದಿಂದ ಸಕ್ಕದಕ್ಕೆ ಹೋಗಿದೆ ಅನ್ನುವುದನ್ನು ನಾವು ದ್ರಾವಿಡ್ ನುಡಿಗಂಟು(ಎಮನೊ,ಬರೊ) ನೋಡಿ ತಿಳಿಯಬಹುದು.

ಸಿರಿವಿಜಯ ೯ ನೂರೇಡು - ಇವನು 'ಕನ್ನಡ ನಾಡು' ಅಂತ ಹೇಳಿದ್ದಾನೆ.ಕುಮಾರ್ವ್ಯಾಸ ೧೪-೧೫ ನೂರೇಡು. ಅಂದರೆ ತೀರ ಇತ್ತೀಚನವನು .. ಈಗ ಹೇಳಿ. ಕನ್ನಡವೇ --> ಕರ್ನಾಟಕ ಅಗ್ಗಿರೋದು.

ಬರೀ ಪುರಾಣ ಓದ್ಕೊಂಡಿದ್ರೆ ಆಗಲ್ಲ. ಹೊತ್ತಿಗೆಗಳನ್ನು ಪುರಾವೆಗನ್ನ ಓದಿ ತಿಳ್ಕೊಬೇಕು ಹರೀಶರೆ

ತಿಳಿಗಣ್ಣ said...

ಮಲ್ಲ ಮತ್ತು ಪಟ್ಟ ದ್ರಾವಿಡ ಪದಗಳು

ಎಟಿಮೋಲಜಿ ನಿಘಂಟು ನೋಡಿರಿ

malla

http://dsal.uchicago.edu/cgi-bin/philologic/getobject.pl?c.1:1:2148.burrow

patta
http://dsal.uchicago.edu/cgi-bin/philologic/getobject.pl?c.1:1:1293.burrow

ಪಟ್ಟ ಅನ್ನೋವು ಪಟ್ಟಯ್(ಪಟ್ಟಿ) ಇಂದ ಬಂದಿದೆ.. ಹಿಂದೆ ಅಧಿಕಾರಕ್ಕೆ ಬಂದವರಿಗೆ ಪಟ್ಟಯ್/ಪಟ್ಟೆ ವಸ್ತ್ರವನ್ನು ಅಧಿಕಾರಸೂಚಕವಾಗಿ ತೊಡಿಸುತ್ತಿದ್ದರು...

ಪಟ್ಟ = ಸಿಂಗರಿಸಿದ ಬಟ್ಟೆ

sunaath said...

ಭಾಷೆಗೆ ಸಂಬಂಧಿಸಿದ ಎಷ್ಟೋ ವಿಷಯಗಳು ಚರ್ಚೆಯಲ್ಲಿ ಬಂದು
ಹೆಚ್ಚಿನ ಮಾಹಿತಿಗೆ ಕಾರಣವಾಗುತ್ತಿರುವದು ಸಂತೋಷದ ಸಂಗತಿ.
ಕನ್ನಡದಿಂದಲೇ ಸಂಸ್ಕೃತಕ್ಕೆ ಅನೇಕ ಪದಗಳು ಹೋಗಿವೆ ಎನ್ನುವದು ದಿಟ. ಅಂದ ಮೇಲೆ ಸಂಸ್ಕೃತದಿಂದ ಪದಗಳನ್ನು ತೆಗೆದುಕೊಳ್ಳಲು ಕನ್ನಡಿಗರೇಕೆ ಹಿಂಜರಿಯಬೇಕು? ಈ pointನಲ್ಲಿ ಶಂಕರ ಭಟ್ಟರು ಹೇಳುವದೇನೆಂದರೆ, ಕನ್ನಡದ
ಮೂಲ ಧ್ವನಿಗಳಿಗೆ ಅನುಸಾರವಾಗಿ ಮಾತ್ರ (--like in Tamil--)ನಾವು ಪದಗಳನ್ನು ಬದಲಾಯಿಸಿ ತೆಗೆದುಕೊಳ್ಳೋಣ. ಇದಕ್ಕೆ ನನ್ನ challenge ಏನೆಂದರೆ:- ಕನ್ನಡದಲ್ಲಿ ಮಹಾಪ್ರಾಣಗಳು ಇಲ್ಲ; ಇರುವವೆಲ್ಲ ಆಮದಾಗಿ ಬಂದಿರುವವು ಎನ್ನುವದಾದರೆ, ಕನ್ನಡದಲ್ಲಿ ಗ,ಟ,ಬ ಮೊದಲಾದ ಧ್ವನಿಗಳೂ ಸಹ ಒಂದು ಕಾಲದಲ್ಲಿ ಇರಲಿಲ್ಲ. ಆ ಲೆಕ್ಕದಿಂದ ಕನ್ನಡವು ಮರಳಿ ತಮಿಳು ಭಾಷೆಯಾಗಬೇಕಾದೀತು.
ಉದಾಹರಣೆಗೆ, ಒಂದು ಕಾಲದಲ್ಲಿ ಕನ್ನಡಿಗರೂ ಸಹ ಗೆಳೆಯ, ಹಾವು, ಬಾ ಎನ್ನುವ ಪದಗಳ ಬದಲಾಗಿ ಕೆಳೆಯ, ಪಾವು , ವಾ ಎನ್ನುವ ಪದಗಳನ್ನೇ ಬಳಸುತ್ತಿದ್ದರು.
ಮೂಲಧ್ವನಿಯ ಪದಗಳನ್ನೇ ಬಳಸಬೇಕೆಂದರೆ ಇಂಗ್ಲಿಶ್‌ದಲ್ಲಿಯ
ಘೋಸ್ಟ್ ಎನ್ನುವ ಪದಕ್ಕೆ ನಾವು ಕೋಸ್ತ್ ಎಂದು ಬರೆಯಬೇಕಾದಿತು.
ಯಾವುದೋ ಒಂದು ಹುಚ್ಚಿಗೆ ಒಳಗಾಗಿ, ಯಾರದೋ ಒಬ್ಬರ
ಮೂಲಭಾತವಾದಕ್ಕೆ ಮರುಳಾಗಿ, ನಾವು ಕಾಲಚಕ್ರದಲ್ಲಿ reverse ಹೋಗಬೇಕೆ? ಈಗ ಕನ್ನಡ ಭಾಷೆಗೆ ದೊರಕಿರುವ
ಎಲ್ಲಾ advantagesಗಳನ್ನು ಕಳೆದುಕೊಳ್ಳಬೇಕೆ?
ಇನ್ನು, ತಮಿಳಿನಲ್ಲಿಯೂ ಸಹ ಒಂದು ವಿಶೇಷ ಗ್ರಂಥಲಿಪಿ ಇದೆ ಶಂಕರ ಭಟ್ಟರು ಹೇಳುತ್ತಿದ್ದಾರೆ. ಹೀಗೆ ಮಾಡುವದರಿಂದಲೇ,
ಕೆಳವರ್ಗದವರೆನ್ನಿಸಿಕೊಳ್ಳುವವರು ಶಾಶ್ವತವಾಗಿ ಲಿಪಿಹೀನರಾಗುತ್ತಾರೆ. ಕನ್ನಡದಲ್ಲಿಯೂ ಹೀಗೇ ಆಗಬೇಕೆ?

ತಿಳಿಗಣ್ಣ said...

ಸುನಾಥರೇ

ನಿಮ್ಮ ಗ್ರಹಿಕೆ ತಮಿಳಿನ ಬಗ್ಗೆ ತಪ್ಪಾಗಿದೆ...

ತಮಿಳಲ್ಲಿ ಗ, ದ,ಡ,ಬ,ಹ,ಸ ಗಳಿಗೆ ಅಕ್ಕರಗಳಿಲ್ಲ ಹೊರತು, ಆ ಧ್ವನಿಗಳು/ಉಲಿಗಳು ತಮಿಳಲ್ಲಿ ಇದ್ದೇ ಇದೆ... ಇದು ಕನ್ನಡ ಮತ್ತು ತಮಿಳಿನ ಬೇರುನುಡಿಯಲ್ಲೂ ಇತ್ತು ಎಂದು ಹೇಳಬಹುದು..

ಅೞಗ ಇದನ್ನು ಅೞಹ ಎಂದು ತಮಿಳರು ಉಲಿಯುವುದು..
ಹಾಗೆ
ಕತವು => ಕದವು (ಬಾಗಿಲು) ಎಂದೇ ಉಲಿಯುವುದು.
ಚೆಲ್ವಿ => ಸಲ್ವಿ ಎಂದೇ ಉಲಿಯುವುದು...

ತಮಿಳಲ್ಲಿ ಬರಹದ ವಿಧಾನ ಬೇರೆ...

ಕತವು ಎಂದೂ ಕದವು ಎಂದೇ ಉಲಿಯಲಾಗುವುದು

ಆದರೆ ಪತ್ತ್ ಅನ್ನು ಪತ್ತ್ ಎಂದೇ ಉಲಿಯುವರು. ಅವರಲ್ಲಿ ಒತ್ತಕ್ಕರ ಇದ್ದರೆ ಕೊರಳಿಸಿದ ಮತ್ತು ಒತ್ತಕ್ಕರ ಇರದಿರೆ ಕೊರಳಿಸದ ಎಂಬ ಒಂದು ಕ್ರಮವಿದೆ..

ಅವರ ಬರವಣಿಗೆ ಕನ್ನಡ ಮತ್ತು ಸಕ್ಕದಕ್ಕಿಂತ ಬೇರೆಯದಾಗಿದೆ..

ಶಂಕರಬಟ್ಟರ ದ್ವನಿಮೇಲಿನ ಬರಹದ ವಾದ ಹೀಗಲ್ಲ.. ನಿಮ್ಮ ತಪ್ಪುಗ್ರಹಿಕೆ.

ಕನ್ನಡದಲ್ಲಿ ಮಹಾಪ್ರಾಣಗಳಿಲ್ಲ ಎನ್ನುವುದಕ್ಕೆ ತದ್ಬವಗಳೇ ಪುರಾವೆ...

ಅವರ ವಾದವು ಹಿಂದಿನ ಹಲವಾರು ನುಡಿತಜ್ನರು ಹಾಲಕ್ಕಿ, ಜೀನುಕುರುವರು, ಒಕ್ಕಲಿಗರು, ಸೋಲಿಗರು, ಬಡಗ, ಕೊಡವ ಮುಂತಾದ ಕನ್ನಡ ಬುಡಕಟ್ಟಿನ ಜನಾಂಗದ ಉಲಿಕೆಯ ಬಗ್ಗೆ ನಡೆದಿರುವ ಆರಯ್ಯು/ಸಂಶೋದನೆಗಳ ಮೇಲೆ ಇದೆ.

ಶಂಕರಬಟ್ಟರ "ಕನ್ನಡ ನುಡಿ ನಡೆದು ಬಂದ ದಾರಿ" ಓದಿರಿ.

ಅವರ ವಾದ ಏನೆಂದರೆ ಕನ್ನಡದ ಮೂಲಬಾಶಿಕರಲ್ಲಿ ಅಂದರೆ ಕನ್ನಡವೇ ತಾಯ್ನುಡಿಯಾಗಿ, ಬೇರೆ ನುಡಿ ಸಂಪರ್ಕ ಇರದ, ಕನ್ನಡದ ಹೆಚ್ಚು ಜನರ ಉಲಿಕೆಯ ಕ್ರಮದಲ್ಲಿ(phonology) ಅಲ್ಲಿ ಮಹಾಪ್ರಾಣಗಳಿಲ್ಲ,ಶ, ಷ , ಋ, ಃ ಇಲ್ಲ. ಇದು ಅವರೊಬ್ಬರೇ ಹೇಳಿದುದಲ್ಲ.. Cadwell, Emenau, Burrow ಕಾಲದಿಂದ ಬಂದ ದ್ರಾವಿಡಬಾಶಾತಜ್ನರ ಆರಯ್ಯುವಿನಿಂದ ಕಂಡುಕೊಂಡದ್ದು.. ಅವರ ವಾದ ’ಬಾಶಾವಿಜ್ನಾನ’ ಎಂಬ ವಿಶಯಾಧಾರಿತವಾಗಿದೆ....

ನೀವು Cadwell, Emenau, Burrow, Krishnamurthi ಮುಂತಾದವರ ಆರಯ್ಯುಬರಹ/ಸಂಶೋಧನಾಲೇಖಗಳನ್ನು ಓದಿದರೆ ತಿಳಿಯುವುದು..

ಹೇಗೆ ಱ ಮತ್ತು ೞ ಕಾರಗಳನ್ನು ಕನ್ನಡ, ತೆಲುಗಿಂದ ಬಿಡಲಾಯಿತೋ, ಅದೇ ಕಾರಣದಿಂದ ಮಹಾಪ್ರಾಣ, ಶ,ಷ,ಋ,ಃಗಳನ್ನು ಬಿಡಬಹುದು...

ಸಂಸ್ಕೃತಪದಗಳ ಅನವಶ್ಯಕ ಎರವಲು ತೊಂದರೆ ಎಂದು ಕವಿರಾಜಮಾರ್ಗದ ಕಾಲದಿಂದಲೂ ಕನ್ನಡದ ಕಬ್ಬಿಗರು ನುಡಿವಲ್ಲರು ಹೇಳಿದ್ದಾರೆ.. ಇಲ್ಲಿ ಸಂಸ್ಕೃತ ಇಲ್ಲವೇ ಯಾವುದೇ ಬಾಶೆಯ ಅನಗತ್ಯ ಪ್ರಯೋಗ ಸಲ್ಲದು ಎಂದು ಮಾತ್ರ ಹೇಳಿದ್ದಾರೆ ಹೊರತು.. ಎರವಲು ಬೇಡವೇ ಬೇಡ ಎಂದು ಅವರು ಹೇಳಿಲ್ಲ..

ಅದೂ ಅಲ್ಲದೇ ಅವರು ಒಂದೆಡೆ ಮಹಾಪ್ರಾಣಗಳಿಗೆ ಹೆಚ್ಚುವರಿ ಅಕ್ಕರಗಳ ಬದಲು ಒಂದು ಗುಣಿತ-ಗುರುತನ್ನು ಮಾಡಿಕೊಳ್ಳಬಹುದು ಎಂದೂ ಹೇಳಿದ್ದಾರೆ...

ಅಂದರೆ ಕ ಮತ್ತು ಖ ಗಳಿಗೆ ಬೇರೆ ಬೇರೆ ಗುರುತು/ಅಕ್ಕರ ಬೇಡ.. ಬದಲಿಗೆ ದ/ಧ ತರಹ ಕ ಕೆಳಗೆ ಒಂದು ಗೀಟು ಎಳೆದು ಅದನ್ನೇ ಖ ಎಂದು ತಿಳಿಯಬಹುದು.. ಆಗ.. ವರ್ಣಮಾಲೆಯಲ್ಲಿ ೧೦ ಅಕ್ಕರಗಳು ಕಡಮೆಯಾದರೂ ಮಹಾಪ್ರಾಣಗಳನ್ನು ಬರೆಯಬಹುದು.

ಹಾಗೆ ಅವರು ಎ,ಇ,ಉ,ಒ,ಅ ಅಯ್ದು ಸ್ವರಗಳು ಸಾಕು. ಉದ್ದ ಸ್ವರಗಳ ಬದಲು ಅ ಪಕ್ಕ ಇಳಿ/ದೀರ್ಘ ಕೊಟ್ಟು ಆ ಎಂದು ಓದಬಹುದು.. ಇದರಿಂದ ಅಯ್ದು ಅಕ್ಕರಗಳ ಕಡಮೆಯಾಗುವುವು..

ಐ = ಅಯ್, ಔ=ಅವ್ ಎಂದು ಬರೆದರೆ.. ಎರಡು ಅಕ್ಕರ ಕಡಮೆ.

ಶ/ಷ ಬದಲು ಶಕ್ಕೆ ಕೆಳಗೆ ಒಂದು ಗೀಟು ಎಳೆದು ಷ ಎಂದು ಓದಿಕೊಳಬೋದು..

ಹೀಗೆ ಅವರು ಲಿಪಿ ಬದಲಾವಣೆಯನ್ನು ಹೇಳಿದ್ದಾರೆ..

ಮಹಾಪ್ರಾಣಗಳನ್ನು ಬಿಟ್ಟರೆ ಅಡ್ಡಿಯಿಲ್ಲ ಎಂಬ ಅವರ ವಾದಕ್ಕೆ ಆಧಾರ ಲಿಪಿಯಲ್ಲ ಕನ್ನಡಿಗರ Ethnic phonology. Dravidian phonology.. ಇದರ ಬಗ್ಗೆ ಬರೆ ಶಂಕರಬಟ್ಟರು ಒಬ್ಬರೇ ಆರಯ್ಯಬರಹ/ಸಂಶೋಧನಲೇಖ ಹೊರತಂದಿಲ್ಲ...!

ದಯವಿಟ್ಟು ತಮಿಳು ಬರವಣಿಗೆ ಮತ್ತು ಉಲಿಕೆಗಳ ಬಗ್ಗೆ ಆ ನುಡಿಯಲ್ಲಿ ಇರುವ ಬೇರೆ ಬೇರೆ ಕ್ರಮವನ್ನು ತುಸು ಗ್ರಹಿಸಿರಿ.

Harisha - ಹರೀಶ said...

ಸಂಸ್ಕೃತಕ್ಕೆ ಹೋದ ಕನ್ನಡದ/ದ್ರಾವಿಡ ಪದಗಳಲ್ಲಿ ಗಾರ್ದಭ(ಕಱ್ತೆಯಿಂದ), ಕಿಷ್ಕಿಂದೆ, ಕುಕ್ಕುರ, ಸಹಸ್ರ, ಪುರಮ, ನೀರ್‍ ಮುಂತಾದವೂ ಕೂಡ ಎಂದ ದೊಡ್ಡ ದ್ರಾವಿಡಭಾಷಾವಿಜ್ನಾನಿಗಳಾದ ಬರ್ರೊ‍ ಮತ್ತು ಎನಿಮಿನೋ ತೋರಿಸಿದ್ದಾರೆ.

ಕಿಷ್ಕಿಂಧೆ - ಇದು ರಾಮಾಯಣದಲ್ಲಿ ಬರುತ್ತದೆ. ವಾಲಿ/ಸುಗ್ರೀವರ ರಾಜ್ಯ. ರಾಮನಿಗೆ ಹನುಮಂತನ ಭೇಟಿಯಾಗಿದ್ದು ಇಲ್ಲಿಯೇ. ಅಲ್ಲದೆ ಕಿಷ್ಕಿಂಧಾಕಾಂಡ ಎಂಬ ಭಾಗವೂ ರಾಮಾಯಣದಲ್ಲಿದೆ.

ಸಹಸ್ರ - ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ | -- ಈ ವೇದಮಂತ್ರ ಯಾವ ಶತಮಾನದ್ದೆಂದು ಸ್ವಲ್ಪ ತಿಳಿದವರು ಹೇಳುತ್ತೀರಾ?

ಸುಮ್ಮನೆ ಬರ್ರೊ‍ ಮತ್ತು ಎನಿಮಿನೋ ನಿಘಂಟಿನಲ್ಲಿ ಇರುವುದೆಲ್ಲ ಸರಿ ಎಂದು ಹೇಗೆ ಹೇಳುತ್ತೀರಿ? ಅದಕ್ಕೆ ಆಧಾರ ಬೇಡವೇ?

ದ್ರಾವಿಡ/ಸಂಸ್ಕೃತ ಭಾಷೆಗಳನ್ನು ಅಭ್ಯಸಿಸಲು ನೂರು ಕೋಟಿ ಭಾರತೀಯರಲ್ಲಿ ಒಬ್ಬರೂ ಸಿಗಲಿಲ್ಲವೇ?

ತಿಳಿಗಣ್ಣ said...

ಹರೀಶರೇ,

ನೀವು ಹೇಗೆ ವೇದವನ್ನು ರಾಮಾಯಣವನ್ನು ನಂಬುತ್ತೀರಿ ಎಂದು ವಾದಕ್ಕೆ ವಾದ ಮಾಡುವುದು ಸರಿಯಲ್ಲ..

ಎಮಿನೋ ಮತ್ತು ಬರೋ ಇವರು ದೊಡ್ಡ ವಿದ್ವಾಂಸರು.. ಇವರ ಮಾತಿಗೆ ಬೆಲೆ ಇದ್ದೇ ಇದೆ..
http://dsal.uchicago.edu/dictionaries/burrow/

ವೇದಗಳು ಸಂಸ್ಕೃತದಲ್ಲಿ ಇಲ್ಲ.. ಅವು ಇರುವುದು ವೇದಬಾಶೆಯಲ್ಲಿ.. ವೇದಬಾಶೆಗೂ ಸಂಸ್ಕೃತಕ್ಕೂ ಕನ್ನಡ ತಮಿಳಿಗಿಂತ ಹೆಚ್ಚು ವ್ಯತ್ಯಾಸಗಳಿವೆ.. ತುಸು ನೀವೇ ಓದಿರಿ...

ವೇದ ಮತ್ತು ರಾಮಾಯಣಗಳು ಎಶ್ಟು ಪಾಠಗಳಿವೆ. ಅದರಲ್ಲಿ ಯಾವುದು ಸರಿ?

"ಬ್ರಹ್ಮಣ್ಯೋ ದೇವಕೀ ಪುತ್ರೋ ಬ್ರಹ್ಮಣ್ಯೋ ಮಧುಸೂದನೋಂ" ಇದು ವೇದ ವಾಕ್ಯ ಹೇಗೆ? ದೇವಕೀ ಪುತ್ರನಿಗಿಂತ ಮೊದಲಲ್ಲವೇ ವೇದಗಳು ರಚಿತವಾದುದು..

ಅದಿರಲಿ. ಕನ್ನಡಕ್ಕೂ ವೇದಕ್ಕೂ ಏನು ನಂಟು? ನಿಮಗೆ ವೇದ ಬರುವುದು ದಿಟವಾದರೂ, ಒಬ್ಬ ಸಾಮಾನ್ಯ ಕನ್ನಡಿಗನಿಗೆ ಬಾಶೆ ಉಪಕರಣವಾದಾಗ ಅವನಿಗೆ ವೇದ ಕಲಿಯುವ ಅಗತ್ಯವಾದರೂ ಏನಿದೆ..

ನಿಮ್ಮ ವಾದದ ಸರಣಿಯೇ ತಿಳಿಯಲ್ಲ.. "ಬಾಶೆ ಉಪಕರಣ" ಅಂದ ಮೇಲೆ ಅದು ಬಳಸಲು ಸಲೀಸಾಗಿರಬೇಕು ಹೊರತು ವೇದದ ತರ ಹೆಚ್ಚು ಮಂದಿಗೆ ಅರಿಯಲಾರದ ಕಗ್ಗಂಟಲ್ಲ...

ಇಲ್ಲಿ ರಾಮಾಯಣ ಮತ್ತು ವೇದಗಳ ಪ್ರಸ್ತಾಪ ಬಾಶೆ ಉಪಕರಣ ಎಂಬುದಕ್ಕೆ ಒತ್ತಲ್ಲ.. ರಾಮಾಯಣ ಓದುವವರು ವೇದ ಓದುವವರು ಸಂಸ್ಕೃತ ಕಲಿಯಬೇಕು ಹೊರತು ಕನ್ನಡವನ್ನಲ್ಲ...

ಕುಕ್ಕುರ, ನೀರ್‍ ಮುಂತಾದವುಗಳು ಹೇಗೆ ಹೋಗಿರಬಹುದು ಎಂಬ ವಾದವಿದೆ ಓದಿರಿ..

ನೀವು ನಂಬಿದವರು ಮಾತ್ರ ಸರಿ ಮಿಕ್ಕ ವಿದ್ವಾಂಸ ವಿದ್ವತ್ತೇ ಸುಳ್ಳು ಎಂಬುದು ನ್ಯಾಯವೇ?

ಮಿಕ್ಕಿದ್ದು ನಿಮಗೆ ಬಿಟ್ಟಿದ್ದು... ನನಗೆ ಇಲ್ಲಿಯ ತರ್ಕ ಹಾದಿತಪ್ಪಿದೆ ಎನ್ನಿಸಿದೆ..

ದ್ರಾವಿಡ/ಸಂಸ್ಕೃತ ಅದ್ಯಯನ ಮಾಡಿ ಬಾಶಾವಿಜ್ನಾನದಡಿ ಆರಯ್ಯಬರಹ ಬರೆದ ಶಂಕರಬಟ್ಟರು, ಕೃಶ್ಣಮೂರ್ತಿಗಳು ಇಂಡಿಯದವರೇ..

ಎಮಿನೋ ಬರ್ರೋ‍ ಹೊರನಾಡಿನವರಾದೇ ಅವರ ಮಾತಿಗೆ ಬೆಲೆ ಇಲ್ಲವೋ...?

ಹಾಗಾದರೆ ಹೊರದೇಶದವರಿಗೆ ಒಬ್ಬ ಇಂಡಿಯದವರ ಮಾತಿಗೆ ಬೆಲೆ ಇರಲ್ಲ..!

Harisha - ಹರೀಶ said...

>> ವೇದಗಳು ಸಂಸ್ಕೃತದಲ್ಲಿ ಇಲ್ಲ.. ಅವು ಇರುವುದು ವೇದಬಾಶೆಯಲ್ಲಿ..

ಲಡ್ವರ್ತಮಾನೇ ಲೇಡ್ವೇದೇ ಭೂತೇ ಲುಙ್ ಲಙ್ ಲಿಟಸ್ಥಥಾ |

ಸಂಸ್ಕೃತದಲ್ಲಿರುವ ೧೦ ಕಾಲಗಳಲ್ಲಿ (ವರ್ತಮಾನ, ಭೂತ, ಭವಿಷ್ಯತ್ ಇತ್ಯಾದಿ) ಒಂದಾದ ಲೇಟ್ ಎಂಬ ಲಕಾರವು ವೇದಗಳಲ್ಲಿ ಮಾತ್ರ ಬಳಸಲ್ಪಟ್ಟಿದೆ. ಅದು ಕೂಡ ಸಂಸ್ಕೃತವೇ.

ಹಿಂದೆ ಸಂಪದದಲ್ಲಿ ಹಂಸಾನಂದಿ ಅವರು ನಿಮ್ಮ ಪ್ರಶ್ನೆಗೆ ಉತ್ತರಿಸಿದ್ದಾರೆ:
http://sampada.net/blog/mahesha/11/04/2007/3669

ವೇದಗಳು "ಅಪೌರುಷೇಯ" ಅಂದರೆ "ಪುರುಷಪ್ರಯತ್ನದಿಂದ ಬಂದವುಗಳಲ್ಲ" ಎಂಬ ಅರ್ಥವಿದೆಯೇ ಹೊರತು ಮನುಷ್ಯರು ರಚಿಸಿರುವುದಲ್ಲ ಎಂಬರ್ಥವಿಲ್ಲ.

ಮಂತ್ರಪುಸ್ತಕದಲ್ಲಿರುವುದೆಲ್ಲವೂ ಮಂತ್ರವಲ್ಲ. ಮಂತ್ರಕ್ಕೆ ಪೂರಕವಾಗಿ ಅನೇಕ ವಿಷಯಗಳನ್ನು ಅಲ್ಲಿ ಹೇಳಲಾಗಿರುತ್ತದೆ. ಅವು ಮಂತ್ರಗಳಲ್ಲ. ಪ್ರಶ್ನಿಸುವವರು ಸಂಸ್ಕೃತ/ಶ್ಲೋಕ/ಮಂತ್ರ/ವೇದ/ಉಪನಿಷತ್ತು ಇವುಗಳಿಗಿರುವ ವ್ಯತ್ಯಾಸಗಳನ್ನು ಮೊದಲು ತಿಳಿದುಕೊಂಡರೆ ಒಳಿತು.

>> ವೇದ ಮತ್ತು ರಾಮಾಯಣಗಳು ಎಶ್ಟು ಪಾಠಗಳಿವೆ. ಅದರಲ್ಲಿ ಯಾವುದು ಸರಿ?

ವಾಲ್ಮೀಕಿ ಬರೆದ ರಾಮಾಯಣ ಒಂದೇ ಇದೆ ಎಂಬುದು ನನ್ನ ಅನಿಸಿಕೆ.

ತಿಳಿಗಣ್ಣ said...

ಹರೀಶರೇ..

ನಿಮಗೆ ಸಂಸ್ಕೃತ ಚನ್ನಾಗೇ ಬಂದರೆ ಒಳ್ಳೇದೇ.. ಆದರೂ ಬರೀ ಲಕಾರದ ವ್ಯತ್ಯಾಸ ಮಾತ್ರವಲ್ಲ...

ಇರಲಿ..

ಆದರೆ ವೇದಕ್ಕೂ ಕನ್ನಡ ನುಡಿಯನ್ನು ಉಪಕರಣವಾಗಿ ಬಳಸಕ್ಕೂ ಎನು ನಂಟು?

ವಾಲ್ಮೀಕಿ ರಾಮಾಯಣದ ಹಲವು ಪಾಠಗಳಿದೆ. ಮಹಾಭಾರತದ್ದೂ ಕೂಡ.. ’ಪಾಠ’ಗಳು..

ದಯವಿಟ್ಟು... "ಬಾಶೆ ಎನ್ನುವ ಉಪಕರಣ"ದ ಬಗ್ಗೆ ಹೇಳಿ.. ವೇದ, ರಾಮಾಯಣ ಇವೆಲ್ಲ ಸಂಸ್ಕೃತಬಾಶೆಯಲ್ಲಿದೆ.

Harisha - ಹರೀಶ said...

... ಹಾಗೂ ನನಗೆ ಗೊತ್ತಿರುವ ಆ ವಾಲ್ಮೀಕಿ ರಾಮಾಯಾಣ
मा निषाद प्रतिष्टां त्वं अगमः शाश्वतीः समाः ।
यत् क्रौञ्चमिथुनादेकं अवधीः काममोहितम् ।।

ಎಂದು ಪ್ರಾರಂಭವಾಗಿ
एवमेतत् पुरावृत्तमाख्यानं भद्रमस्तु वः ।
प्रव्याहरत विस्रब्धं बलं विष्णोः प्रवर्धताम् ||

ಎಂದು ಕೊನೆಗೊಳ್ಳುತ್ತದೆ.

ತಿಳಿಗಣ್ಣ said...

"ಪ್ರಶ್ನಿಸುವವರು ಸಂಸ್ಕೃತ/ಶ್ಲೋಕ/ಮಂತ್ರ/ವೇದ/ಉಪನಿಷತ್ತು ಇವುಗಳಿಗಿರುವ ವ್ಯತ್ಯಾಸಗಳನ್ನು ಮೊದಲು ತಿಳಿದುಕೊಂಡರೆ ಒಳಿತು"

ಹೌದು ಹರೀಶರೇ ತಿಳಿಯಬೇಕು..

ಅದರೆ ಇಲ್ಲಿರುವ ವಿಶಯ ಅದಲ್ಲ ಅಲ್ವ..!!

ಈಗ ಹೀಗೆ ವಿಶಯದಿಂದ ಎಲ್ಲೆಲ್ಲಿಗೂ ಹೋಗಿ ಮಾತಾಡುವುದು ಬೇಡ.

ನಾವು ಮಾತುಗಳಿಗೆ ನಾನು ಹೇಳುವಶ್ಟು ಸಮಾದಾನ ಹೇಳಿದ್ದೀನಿ..

ವೇದ ಉಪನಿಶತ್ತು ಇವೆಲ್ಲ ನಮಗೆ ಸಂಸ್ಕೃತದ ಅಧ್ಯಯನಕ್ಕೆ ಬೇಕು ಕನ್ನಡಕ್ಕೆ ಬೇಡ...

ಇಲ್ಲಿ ವೇದ ಉಪನಿಶತ್ತುಗಳ ಬಗ್ಗೆ ನನ್ನ ಕಮೆಂಟು ಹಾಕಲು ಬಂದಿಲ್ಲ..

ಸುನಾಥರೇ..

ನಮ್ಮ ಮಾತು ಏನೆಂದು ತಮಗೆ ತಿಳಿದರೆ ಸಾಕು. ಬಾಶೆಯ ಬಗ್ಗೆ ಶಂಕರಬಟ್ಟರ ಮಾತುಗಳು ನೀವು ಗ್ರಹಿಸಿದಂತೆ ಇಲ್ಲ..

ಅವರ ದೃಶ್ಟಿಕೋನ ಬೇರೆಯಿದೆ. ಇಲ್ಲಿ ಕಮೆಂಟು ಬರೆದ ಹಲವರು ಅವರು ಒಂದು ಹೊತ್ತಗೆಯನ್ನೂ ಓದಿಲ್ಲ... ಆದರೂ ಕಮೆಂಟು ಬರೆಯುವರು...


ನಿಮ್ಮ ಬ್ಲಾಗಲ್ಲಿ ಕೆಲವು ಅವಸರದ ತೀರ್ಮಾನಗಳು ಕಂಡವು.

sunaath said...

ಮಹೇಶರೆ,
ನಾನು ಹೇಳುತ್ತಿರುವದು ಎರಡೇ ಅಂಶಗಳು:
(೧)ಭಾಷೆ ಒಂದು ಉಪಕರಣವಾಗಿರುವ ಕಾರಣದಿಂದ, ಈ ಆಧುನಿಕ ಜಗತ್ತಿನಲ್ಲಿ, ನಾವು ಉಪಕರಣದ ಸಾಮರ್ಥ್ಯವನ್ನು ಹೆಚ್ಚಿಸಬೇಕು. ಅದರ ಬದಲಾಗಿ, "ಅಹಾ,ಈ ಉಪಕರಣವು ಮೂಲದಲ್ಲಿ ಹ್ಯಾಗಿತ್ತೊ ಹಾಗೇ ಇಟ್ಟುಕೊಳ್ಳೋಣ" ಎನ್ನುವದು ಸಮಂಜಸವಲ್ಲ. In fact, ಜಾಣರಾದ ಕನ್ನಡಿಗರು ಸಂಸ್ಕೃತ, ಪಾರಸಿ, ಇಂಗ್ಲಿಶ್ ಮೊದಲಾದ ಉಪಕರಣಗಳ ಸಹಾಯದಿಂದ ಕನ್ನಡದ ಸಾಮರ್ಥ್ಯವನ್ನು ಹೆಚ್ಚಿಸಿದ್ದಾರೆ.
(೨)ತಮಿಳಿನಲ್ಲಿ ಗ್ರಂಥಲಿಪಿ ಯಾಕೆ ಬಂತು? ಈ ಉಪಕರಣದ ಪ್ರಯೋಜನವನ್ನು ಪದೆದವರು ಕೇವಲ ಮೇಲ್ವರ್ಗದವರಲ್ಲವೆ?
ಹೀಗಾಗಿ, ತಮಿಳು ದೇಶದಲ್ಲಿ ಮೇಲ್ವರ್ಗ ಹಾಗು ಕೆಳವರ್ಗದವರ
ಭೇದ ಹೆಚ್ಚು ತೀಕ್ಷ್ಣವಾಗಿದೆ. ಕನ್ನಡ ದೇಶದಲ್ಲಿ ಈ ಲಿಪಿಭೇದ ಇಲ್ಲದಿರುವದು ಕನ್ನಡಿಗರ ಪುಣ್ಯ. ಈಗ ಈ ಲಿಪಿಭೇದವನ್ನು
ಕಲ್ಪಿಸುವದರಿಂದ, ಶಂಕರ ಭಟ್ಟರು ಇಲ್ಲಿಯೂ ಸಹ ವರ್ಣಭೇದವನ್ನು ಜಾರಿಗೊಳಿಸುತ್ತಾರೆ.

ತಿಳಿಗಣ್ಣ said...

ಸುನಾಥರೇ ಮತ್ತು ಶಂಕರಬಟ್ಟರ ಹೊತ್ತಗೆ ಓದಿದವರಿಗೆ.


ನೋಡಿ..

#ಲಿಪಿ ಬದಲಾವಣೆ ಮತ್ತು ಪದಗಳ ಎರವಲು ಬೇರೆ ಬೇರೆ ವಿಶಯಗಳು. ಅವನ್ನು ಬೇರೆ ಬೇರೆಯಾಗಿ ನೋಡಣ. ( ದಯವಿಟ್ಟು ವೇದ, ರಾಮಾಯಣ, ಉಪನಿಶತ್ತು ಈ ಚರ್ಚೆಗೆ ಬೇಡ )

ಲಿಪಿ ಬದಲಾವಣೆ.

ನನ್ನ ಮುಂಚಿನ ಕಮೆಂಟನ್ನು ಗಮನಿಸಿರಿ.. ಅಲ್ಲಿ ಶಂಕರಬಟ್ಟರು(ಬಿ.ಎಂ.ಶ್ರೀ ಅವರಂತೆ) ಕನ್ನಡದ ವರ್ಣಮಾಲೆಯನ್ನು ಕಡಮೆ ಗುರುತುಗಳಲ್ಲಿ ಮಾಡಲು ಒಂದು ಕ್ರಮವನ್ನು ಸೂಚಿಸಿದ್ದಾರೆ...

ಅವರ ಸೂಚನೆಯಲ್ಲಿ ಷ ಮತ್ತು ಮಹಾಪ್ರಾಣಗಳಿಗೂ ಜಾಗವಿದೆ(ಅದು ಬೇಕೇ ಎಂಬುದು ಬೇರೆಯ ಪ್ರಶ್ಣೆ). ದಯವಿಟ್ಟು ನೋಡಿರಿ.

ಅವರು ದೀರ್ಗ ಸ್ವರಗಳಿಗೆ ಗುರುತನ್ನೂ ಬೇಡ ಎಂದಿದ್ದಾರೆ ಹಾಗು ಒತ್ತಕ್ಷರ ಬದಲು ಅಕ್‌ಕ ಹೀಗೆ ಪಕ್ಕದ ಅರೆವ್ಯಂಜನ ಬರೆಯುವ ಮಾದರಿಯನ್ನೂ ಹೇಳಿದ್ದಾರೆ( ಇದು ಬಿ.ಎಂ.ಶ್ರೀ ಮಾದರಿ)

ಇದೊಂದು ವಿಶಯವಾದರೇ...(ಇದನ್ನೇ ಲಿಪಿಕ್ರಾಂತಿ ಎಂದಿರುವುದು)

ಆದರೆ ಕನ್ನಡನ ನೆಲದ ಉಲಿಕೆಯಲ್ಲಿ ಷ,ಶ ಮತ್ತು ಮಹಾಪ್ರಾಣಗಳಿಲ್ಲ.. ಅದಕ್ಕೆ ಕನ್ನಡದ ಉಲಿಕೆಗೆ ಹೊಂದಿಸಿ ಬರೆದರೆ ಅಂದ್ರೆ ತದ್ಬವ ಮಾಡಿ ಬರೆದರೆ ನಮಗೆ ಮಹಾಪ್ರಾಣ ಮುಂತಾದವು ಬೇಡ. ಇಲ್ಲಿ ಅವರು ಹೇಳುವ ಹೊಂದಿಸುವಿಕೆ ಮುಕ್ಯ.

ಇನ್ನೊಂದು ಸಂಗತಿ ಪದಕ್ರಾಂತಿ.. ಎರವಲು ಪದಗಳ ಬಗ್ಗೆ..

ಇಲ್ಲಿ ಅವರು ಹೇಳೋದು ಇಶ್ಟೇ. .ನಮ್ಮಲ್ಲೇ ಇರುವ ಅಂದರೆ ಕನ್ನಡದಲ್ಲೇ ಇರುವ ಪದಗಳಿಗೆ ಪರ್ಯಾಯವಾಗಿ ಹೊರಗಿಂದ ( ಅದು ಯಾವ ನುಡಿಯೇ ಆಗಿರಲಿ ) ಪದಗಳು ಬೇಡ.. ಅದು ಸುಮ್ನೆ ಗೋಜಲು..

ಅಂದರೆ ಕನ್ನಡ ನೀರುನ್ನು ಬಿಟ್ಟು.. ಅದರ ಜಾಗದಲ್ಲಿ ಜಲ, ಸಲಿಲ, ವಾಟರ್‍, ಪಾನಿ ಇವು ಬೇಡ.. ಸುಮ್ಮನೆ ನಮ್ಮ ಪದಕೋಶ ದೊಡ್ಡದಾಗಿ ಕಶ್ಟವಾಗುವುದು.

ಆದರೆ ನಮ್ಮಲ್ಲಿ ಇರದ ಸಂಗತಿಗಳಿ ಪದ ಬೇಕು ಮಾದರಿ ಬಸ್ಸು, ದರ್ಮ(ತದ್ಬವ ಮಾಡಿ), ರಾಮಾಯಣ, ಬಗವದ್ಗೀತೆ ಮುಂತಾದವು.....

ಅವರ ವಾದ ಮತ್ತೊಂದು ಆಯಾಮ ಅಂದರೆ ಇಂದು ವಿಜ್ನಾನ ಬರಹಗಳಲ್ಲಿ ಹೊಸಪದಗಳಿಗಾಗಿ ಸಂಪೂರ್ಣ ಸಂಸ್ಕೃತದ ಕನ್ನಡದ ಉಲಿಕೆಗೆ ಹೊಂದದ ಪದಗಳ ಬಳಕೆ...

ಅದಕ್ಕೆ ಉದಾಹರಣೆಗಳನ್ನು ಕೊಟ್ಟಿದ್ದಾರೆ...

ಲಿಪಿಕ್ರಾಂತಿಯಲ್ಲಿ ಅಕ್ಕರಗುರುತುಗಳು ಕಡಮೆ ಮಾಡಿದರೂ ನಮಗೆ ಬೇಕಾದುದನ್ನು ಬರೆದುಕೊಳ್ಳವ ದಾರಿ ಹೇಳಿದ್ದಾರೆ( ಮಹಾಪ್ರಾಣ, ಷಕ್ಕೂ ಕೂಡ)
ಹಾಗೆ
ಪದಕ್ರಾಂತಿಯಲ್ಲಿ ಹೇಗೆ ಎರವಲು ಮತ್ತು ಹೊಸಪದಗಳನ್ನು ರಚಿಸಬೇಕು ಎಂದು ತಮ್ಮ ಅನಿಸಿಕೆಯನ್ನು ಹೇಳಿದ್ದಾರೆ..

ಎಲ್ಲಿಯೂ ಹೊರನುಡಿಯಿಂದ ಪದಗಳ ಬರಲೇ ಬಾರದು ಎಂದು ಹೇಳಿಲ್ಲ..
ನಮ್ಮ ಉಲಿಕೆಗೆ ಹೊರನುಡಿಪದಗಳನ್ನ ತದ್ಬವ ಮಾಡಿ ಬಳಸಿ ಎಂದು ಸಲಹೆ ಇತ್ತಿರುವುದು ದಿಟ.

ಅವರ ಕನ್ನಡಕ್ಕೇ ಬೇಕು ಕನ್ನಡದ ವ್ಯಾಕರಣ ಮತ್ತು ಕನ್ನಡ ಬರಹವನ್ನು ಸರಿಪಡಿಸೋಣ ಈ ಎರಡು ಹೊತ್ತಗೆಗಳಲ್ಲಿ ಲಿಪಿ ಮತ್ತು ಪದಕ್ರಾಂತಿಯ ಬಗ್ಗೆ ಅವರ ಮಾತು...

ದಯವಿಟ್ಟು ಎಲ್ಲರೂ ಆ ಹೊತ್ತಗೆಗಳನ್ನು ಓದಿರಿ.... ತರುವಾಯ ಅನಿಸಿಕೆಗಳನ್ನು ಹೇಳಿರಿ...

ತಮಿಳಿನ ಗ್ರಂಥಲಿಪಿ ಬಗ್ಗೆ ಬೇರೆಡೆ ಬರೆಯೋಣ.. !! ನೀವೇ ಹುಡುಕಿ ಒಳ್ಳೆಯ ವೆಬ್-ಸಯ್ಟುಗಳಿವೆ

ನನ್ನಿ

ತಿಳಿಗಣ್ಣ said...

ಸುನಾಥರೇ,

ನೀವು ಆತಂಕಗೊಂಡಿದ್ದೀರಿ ಎಂದು ನನಗೆ ಅನ್ನಿಸಿದೆ.

ನಿಮ್ಮ ಇಡೀ ಅತಂಕಶಮನಕ್ಕೇ ಮೂರೇ ಮೂರು ಸಾಲುಗಳ ಸಾಕು...

೧) ಶಂಕರಬಟ್ಟರ ಲಿಪಿಕ್ರಾಂತಿಯಲ್ಲಿ ಮಹಾಪ್ರಾಣಗಳಿಗೂ ಜಾಗವಿದೆ.. ಆದರೆ ಮಹಾಪ್ರಾಣಗಳನ್ನು ಬಿಟ್ಟರೂ ಅಡ್ಡಿಯಿಲ್ಲ ಎಂದಶ್ಟೇ ಅವರ ಮಾತು.
೨) ಕನ್ನಡಕ್ಕೆ ಸಂಸ್ಕ್ರುತ ಮತ್ತು ಬೇರೆ ಯಾವ ಬಾಶೆಯಿಂದ ಪದಗಳನ್ನು ತಂದರೂ ಅದನ್ನ ತದ್ಬವ ಮಾಡಿ ಎಂದು ಅವರ ಸಲಹೆ. ಆಗ ಮಹಾಪ್ರಾಣಗಳು ಬೇಕಾಗಿರುವುದಿಲ್ಲ ಸ್ವಾಬಾವಿಕವಾಗಿ.
೩)ವಿಜ್ನಾನ ಬರಹಗಳಲ್ಲಿ ಕ್ಲಿಶ್ಟವಾದ ಸಂಸ್ಕ್ರುತದ ಪದಗಳ ಬಳಕೆಯಿಂದ ಕನ್ನಡದಲ್ಲಿ ವಿಜ್ನಾನದ ಕಲಿಕೆಗೆ ತೊಡರು. ಅದಕ್ಕೆ ವಿಜ್ನಾನದಲ್ಲಿ ಹೆಚ್ಚು ಇಂಗ್ಲೀಶಿಂದಲೇ ಪದಗಳನ್ನು ತನ್ನಿರಿ ಇಲ್ಲವೇ ಆಡುಗನ್ನಡದಲ್ಲಿ ಪದಗಳನ್ನು ಹುಟ್ಟಿಸಿರಿ.

ಮಾದರಿ -
ಬಾಹ್ಯಾಕಾಶ = ಹೊರಬಾನು
ದ್ಯುತಿಸಂಸ್ಲೇಶಣಕ್ರಿಯೇ = ಪೋಟೋಸಿಂತಸಿಸ್ಸು/ಬೆಳಕುಹಸನಿಕೆ

ದ್ಯುತಿಸಂಸ್ಲೇಶಣಕ್ರಿಯೆ ಇಂತ ಕನ್ನಡ ಉಲಿಕೆಗೆ ಪೋಟೋಸಿಂತಸಿಸ್ಸು ಹತ್ತಿರವಾಗಿದೆ.

ದಯವಿಟ್ಟು ಆತಂಕ ಪಡಬೇಡಿ.. ನಿಮ್ಮ ಅಬಿಮಾನ ಸಂಸ್ಕ್ರುತದ ಬಗ್ಗೆ ಅವರು ಯಾವ ಕೀಳುಮಾತನ್ನು ಆಡಿಲ್ಲ.. ಬದಲಿಗೆ ಅವರ ಹೊತ್ತಗೆಗಳನ್ನು ಓದಿದರೆ ಸಂಸ್ಕ್ರುತದಲ್ಲಿರುವ ಸರ್ವನಾಮ, ಕ್ರಿಯಾಪದಗಳು ಇನ್ನೂ ಚನ್ನಾಗೇ ತಿಳಿಯುವುವು...

ನನ್ನ ಅಭ್ಯಂತರವಿರುವುದು ನೀವು ಅವರನ್ನು ಮಾತ್ರುದ್ರೋಹಿ, ವಂಚಕ, ವಂಚನೆಯ ಜಾಲ, ಹಿಪೊಕ್ರಾಟ್ ಅಂತೆಲ್ಲ ಅವಸರದ ತೀರ್ಮಾನದಿಂದ ಕೆರೆದುದಕ್ಕೆ.

ಅವರ ಎಲ್ಲಾ ವಾದಗಳು ಬಾಶಾವಿಜ್ನಾನದಡಿ ನಿಲ್ಲುವಂತಹದ್ದು ಮತ್ತು ಒಂದು ತಿಯರಿಟಿಕಲ್ ಬೇಸ್ ಇರುವಂತಹದ್ದು..

ನಿಮ್ಮ ಬಾಶಾಆಸಕ್ತಿ ನನಗೆ ಮೆಚ್ಚುಗೆ ಆಯಿತು..

ನನಗೆ ನಿಮಗೆ ರುಚಿಸು ಸಾಹಿತ್ಯದಲ್ಲಿ ಆಸಕ್ತಿ ಕಡಮೆ. ಅದಕ್ಕೆ ನಿಮ್ಮ ಬೇರೆ ಬರಹಗಳನ್ನು ಓದಿಲ್ಲ.. ಅದಕ್ಕೆ ಕಮೆಂಟು ಎಸಗಿಲ್ಲ..

ಇಲ್ಲಿಗೆ ಮುಗಿಸುವೆನು..

ನಿಮಗೆ ಇನ್ನೂ ನನ್ನ ಬಳಿ ಮಾತಾಡಲಿದ್ದರೆ.. ಇಲ್ಲೇ ವೆಬ್ಬಲ್ಲಿ ಇರ್ತೀನಿ.. ಬಂದು ಮಾತಾಡಿಸಿರಿ..

ನಿಮ್ಮ ಬಾಶಾವಿಜ್ನಾನದ ಮೇಲಿನ ಬರಹಗಳನ್ನು ಓದುವೆನು. ಅದರಲ್ಲಿ ಹಲವು ನನಗೆ ತಪ್ಪುಗಳು ಕಂಡಿದ್ದರೂ, ಕೆಲವನ್ನು ಹೇಳಿಹೆನು..

ನಿಮ್ಮನ್ನು ಕೆಳಗೆ ತೋರಿಸವ ಗುರಿ ಇಲ್ಲ... ಬದಲಿಗೆ ನನ್ನ ನೆಚ್ಚಿನ ಶಂಕರಬಟ್ಟರ ವಕೀಲನಾಗಬೇಕಾಯ್ತು ಅಶ್ಟೇ :)

sunaath said...

ಮಹೇಶರೆ,
ನನ್ನ ಆತಂಕವನ್ನು ಗುರುತಿಸಿದ್ದಕ್ಕಾಗಿ ವಂದನೆಗಳು.
ವೈಚಾರಿಕ ವಿಕಾಸಕ್ಕೆ ವಾಗ್ವಾದ, ಚರ್ಚೆ ಇವೆಲ್ಲ ಅವಶ್ಯಕ. ನೀವು ಚರ್ಚೆಯಲ್ಲಿ ಅರ್ಥಪೂರ್ಣವಾಗಿ ಭಾಗವಹಿಸುತ್ತಿದ್ದಕ್ಕಾಗಿ ಧನ್ಯವಾದಗಳು.
ಈಗ ನೀವು ನೀಡಿದ ಟಿಪ್ಪಣಿಗೆ ಸಂಬಂಧಿಸಿದಂತೆ, ನಾನು ಕೆಲವೊಂದು ಸಂದೇಹಗಳನ್ನು ಪ್ರಸ್ತಾವಿಸುತ್ತೇನೆ:

(೧)ಶಂಕರ ಭಟ್ಟರು ಮಹಾಪ್ರಾಣದ ಗುರುತಗಳನ್ನು ಸರಳೀಕರಿಸಿದ್ದಾರೆ.>>>
ಶಂಕರ ಭಟ್ಟರು ಹಾಗು ಬಹುಶಃ ಬಿ.ಎಮ್. ಶ್ರೀಕಂಠಯ್ಯನವರೂ
ಸಹ ಮಹಾಪ್ರಾಣದ ಅಕ್ಷರಗಳನ್ನು ಈಗಿರುವದಕ್ಕಿಂತ ಬೇರೆಯಾಗಿ
ಬರೆಯಲು ಪ್ರಸ್ತಾಪ ನೀಡಿರುವರು.
ಲಿಪಿ ವಿಕಾಸವಾಗುವ ಕಾಲದಲ್ಲಿ, ನಮ್ಮ ಪೂರ್ವಜರು ಈ ಸರಳವಾದ ಗುರುತುಗಳಿಂದಲೇ ಬರೆಯಬಹುದಾಗಿತ್ತಲ್ಲ. ಉದಾಹರಣೆಗೆ, 'ಖ' ಅಕ್ಷರದ ಬದಲಾಗಿ 'ಕ'ದ ಕೆಳಗೆ ಗೆರೆ ಎಳೆದೋ(--ಶಂಕರ ಭಟ್ಟರು ಹೆಳುವ ಹಾಗೆ--) ಅಥವಾ 'ಕ್ಹ' ಎಂದೋ (--ಬಿ.ಎಮ್.ಶ್ರೀಯವರು ಹೇಳುವಂತೆ--)ಬರೆಯಬಹುದಿತ್ತಲ್ಲ. ಅವರು ಮಹಾಪ್ರಾಣಗಳಿಗೆ ಬೇರೆಯದೇ ಗುರುತುಗಳನ್ನು ರೂಪಿಸಲು ಕಾರಣವಿರಬೇಕಲ್ಲವೆ?
ಈಗಿನ ಮಕ್ಕಳಂತೂ, ಕನ್ನಡವಷ್ಟೇ ಅಲ್ಲದೆ, ಹಿಂದಿ ಹಾಗು ಇಂಗ್ಲಿಶ್‌ಗಳನ್ನೂ ಸಹ ಸರಾಗವಾಗಿ ಬರೆಯುತ್ತಾರೆ ಮತ್ತು ಮಾತನಾಡುತ್ತಾರೆ. ಅಂದ ಮೇಲೆ ಕನ್ನಡ ಲಿಪಿಯನ್ನು ಬದಲಾಯಿಸುವ ಅವಶ್ಯಕತೆ ಇಲ್ಲ ತಾನೆ?

(೨)ಅವಶ್ಯವಿದ್ದಲ್ಲಿ ತದ್ಭವಗಳು ಬರಲಿ, ಆದರೆ ಅನವಶ್ಯಕವಾಗಿ ಹಾಗು compulsoryಯಾಗಿ ಬೇಡ. ಕನ್ನಡಿಗರು ಬೇರೆ ಭಾಷೆಯ ಪದಗಳನ್ನು ಸ್ಪಷ್ಟವಾಗಿ ಬರೆಯಲು, ಉಚ್ಚರಿಸಲು ಸಮರ್ಥರಿದ್ದೇವೆ.

(೩)ವೈಜ್ಞಾನಿಕ, ತಾಂತ್ರಿಕ ಇತ್ಯಾದಿ ಪದಗಳಿಗಾಗಿ ಕ್ಲಿಷ್ಟವಾದ ಸಂಸ್ಕೃತ ಪದಗಳನ್ನು ಬಳಸದೇ, ಕನ್ನಡದ ಅಥವಾ ಇಂಗ್ಲೀಶಿನ
ಪದಗಳನ್ನೇ ಬಳಸಬೇಕು ಎನ್ನುವದನ್ನು ಎಲ್ಲರೂ ಒಪ್ಪುತ್ತಾರೆ.
ಅದರಲ್ಲಿ ಯಾವುದೇ ಅಭಿಪ್ರಾಯ ಭೇದವಿಲ್ಲ. ಆದರೆ ಕೆಲವೊಂದು ಸರ್ವಭಾರತೀಯ ಪದಗಳ ಬಳಕೆಯಲ್ಲಿ ನಾವು ಅಚ್ಚಕನ್ನಡ ಪದಗಳನ್ನೇ ಬಳಸಬೇಕೆನ್ನುವ ಹಟ ಹಿಡಿಯುವದು ಸರಿಯಲ್ಲ. ಉದಾಹರಣೆಗೆ 'ಆಕಾಶವಾಣಿ'. ತಮಿಳರು 'ವಾನೊಲಿ'ಎನ್ನುವ ಪದವನ್ನು ಬಳಸುತ್ತಿರಬಹುದು. ಆದರೆ, ಭಾರತದಲ್ಲಿ ಉಳಿದಲ್ಲೆಲ್ಲ 'ಆಕಾಶವಾಣಿ'ಪದ ಬಳಕೆಯಲ್ಲಿದೆ. ಈ ಪದ ಕನ್ನಡಿಗರಿಗೆ ಅಪರಿಚಿತವಾದದ್ದೇನಲ್ಲ. ಅಲ್ಲದೆ ಜಾನಪದ ಹಾಗು ಪೌರಾಣಿಕ ಸಂಪ್ರದಾಯಗಳಿಂದಾಗಿ ಈ ಪದ ಕನ್ನಡಿಗರಿಗೆ ಅತ್ಯಂತ ಪರಿಚಿತವಾದ ಪದ. ಇಂತಹ ಸಂದರ್ಭಗಳಲ್ಲಿ ನಾವು 'ಬಾನುಲಿ'ಪದ ಬಳಸುವ ಅವಶ್ಯಕತೆ ಇಲ್ಲವೆಂದು ನನಗೆ
ತೋರುತ್ತದೆ.

ದಯವಿಟ್ಟು ನಿಮ್ಮ ಅಭಿಪ್ರಾಯ ತಿಳಿಸಿರಿ.

Harisha - ಹರೀಶ said...

ಮಾಯ್ಸ, ಸಂಸ್ಕೃತದ ಪ್ರದರ್ಶನ ನನ್ನ ಉದ್ದೇಶವಲ್ಲ. ಕೆಲವು ಪದಗಳು ಸಂಸ್ಕೃತದವೇ ಆಗಿದ್ದರೂ ಅಲ್ಲ ಎಂದು ವಾದಿಸಿದ್ದಕ್ಕೆ ನಿಮಗೆಲ್ಲ ಪುರಾವೆ ನೀಡಬೇಕಾಯಿತು.

ಶಂಕರ ಭಟ್ಟರು ಸುಮಾರು ಎಂಟು ಹತ್ತು ಶತಮಾನಗಳ ಹಿಂದೆ ತಮ್ಮ ಪದಕ್ರಾಂತಿ/ಲಿಪಿಕ್ರಾಂತಿಗಳನ್ನು ಹೇಳಿದ್ದರೆ ಅದನ್ನು ಅನುಸರಿಸಬಹುದಿತ್ತೇನೋ. ಆದರೆ ನಾವು ಈಗ ಲೆಕ್ಕಕ್ಕೆ ಸಿಗದಷ್ಟು ಸಂಸ್ಕೃತ/ಉರ್ದು/ಹಿಂದಿ ಪದಗಳನ್ನು ನಮ್ಮವೇ ಎಂಬಂತೆ ಉಪಯೋಗಿಸುತ್ತಿದ್ದೇವೆ. ಅವುಗಳನ್ನೆಲ್ಲ ಇದ್ದಕ್ಕಿದ್ದಂತೆ ಬಿಟ್ಟುಬಿಡುವುದು ಹೇಗೆ ಸಾಧ್ಯ? ಅವುಗಳನ್ನೆಲ್ಲವನ್ನೂ ಕನ್ನಡಕ್ಕೆ ತರುವುದು ಸುಲಭದ ಮಾತಲ್ಲ. ಅಸಾಧ್ಯ ಎಂದರೂ ತಪ್ಪಾಗಲಾರದು. ಹಾಗಾಗಿ ಅವು ಹೇಗೆ ಇವೆಯೋ ಅದೇ ರೀತಿ ಉಪಯೋಗಿಸುವುದು ಯೋಗ್ಯ.

ನನ್ನ ಈ ಪ್ರಶ್ನೆಗಳಿಗೆ ಉತ್ತರಿಸಿರಿ:
೧) ತೆಲುಗು-ಕನ್ನಡ ಲಿಪಿಗಳು ಹೋಲುತ್ತವೆ. ಶಂಕರ ಭಟ್ಟರ ಲಿಪಿಕ್ರಾಂತಿಯಂತಹ ವಾದವನ್ನು ಅಲ್ಲಿ ಏಕೆ ಯಾರೂ ಇನ್ನೂ ಮಂಡಿಸಿಲ್ಲ? ಕನ್ನಡಿಗರು ಮಹಾಪ್ರಾಣ ಉಚ್ಚರಿಸಲು ಬಾರದಷ್ಟು ದಡ್ದರೆ? ಅವರು ಹಿಂದಿ, ಮರಾಠಿ, ತೆಲುಗು ಮಾತನಾಡುವವರಿಗಿಂತ ಕೀಳೆ?
೨) ಅಕ್ಷರ ಕಡಿಮೆಯಾದಷ್ಟೂ ಅದರ ಬಳಕೆ ಹೆಚ್ಚುತ್ತದೆ ಎನ್ನುವುದಕ್ಕೆ ಏನು ಪುರಾವೆಯಿದೆ?
೩) ನಾವು ಕೇವಲ ಅಚ್ಚಕನ್ನಡ ಪದಗಳನ್ನು ಉಪಯೋಗಿಸಿದರೆ ಎಷ್ಟು ಜನಕ್ಕೆ ಅರ್ಥವಾಗುತ್ತದೆ? ಕನ್ನಡ ಮಾತನಾಡುವ ಜನರಲ್ಲಿ ಎಷ್ಟು ಜನಕ್ಕೆ ಒರೆ, ಆರಯ್ಯು ಎಂಬ ಪದಗಳು ತಿಳಿದಿವೆ? (ಪಂಡಿತರ ಬಗ್ಗೆ ನಾನು ಮಾತನಾಡುತ್ತಿಲ್ಲ, ಜನಸಾಮಾನ್ಯರ ಬಗ್ಗೆ ಹೇಳುತ್ತಿದ್ದೇನೆ)

ಇತರ ಭಾಷೆಗಳ ಪದಗಳು ಕನ್ನಡಕ್ಕೆ ಬಂದಿರುವುದು ಇಂದು ನಿನ್ನೆಯಿಂದಲ್ಲ. ಈಗ ನಾವು ಕೇವಲ ಕನ್ನಡ ಪದಗಳನ್ನಷ್ಟೇ ಉಪಯೋಗಿಸುತ್ತೇವೆ ಎಂದು ಪಣ ತೊಟ್ಟು ಅದಕ್ಕೆ ಕ್ರಮ ಕೈಗೊಂಡರೂ ಅದು ಎಲ್ಲೆಡೆ ಬಳಕಗೆ ಬರುವಷ್ಟರಲ್ಲಿ ಶತಮಾನಗಳು ಕಳೆದಿರುತ್ತವೆ.

ತಿಳಿಗಣ್ಣ said...

ಹರೀಶರೇ

ನನ್ನ ಹಿಂದಿನ ಕಮೆಂಟುಗಳಲ್ಲಿ ಎಲ್ಲ ಉತ್ತರಗಳಿವೆ..

ಆದರೂ ಮತ್ತೆ ಹೇಳ್ತೀನಿ.. ದಯವಿಟ್ಟು ನನ್ನ ಹಿಂದಿ ಕಮೆಂಟನ್ನೂ ಮತ್ತೆ ಓದಿರಿ..

"ಪದಗಳನ್ನೆಲ್ಲ ಇದ್ದಕ್ಕಿದ್ದಂತೆ ಬಿಟ್ಟುಬಿಡುವುದು ಹೇಗೆ ಸಾಧ್ಯ?"
ಬಿಡಬೇಕಾಗಿಲ್ಲ... ಬಿಡಿರೆಂದು ಹೇಳಿಲ್ಲ.. ತಪ್ಪುಗ್ರಹಿಕೆ

"೧) ತೆಲುಗು-ಕನ್ನಡ ಲಿಪಿಗಳು ಹೋಲುತ್ತವೆ. ಶಂಕರ ಭಟ್ಟರ ಲಿಪಿಕ್ರಾಂತಿಯಂತಹ ವಾದವನ್ನು ಅಲ್ಲಿ ಏಕೆ ಯಾರೂ ಇನ್ನೂ ಮಂಡಿಸಿಲ್ಲ? ಕನ್ನಡಿಗರು ಮಹಾಪ್ರಾಣ ಉಚ್ಚರಿಸಲು ಬಾರದಷ್ಟು ದಡ್ದರೆ? ಅವರು ಹಿಂದಿ, ಮರಾಠಿ, ತೆಲುಗು ಮಾತನಾಡುವವರಿಗಿಂತ ಕೀಳೆ?"

ಶಂಕರಬಟ್ಟರು ತೆಲುಗರಲ್ಲ.. ತೆಲುಗು ಪಂಡಿತರಲ್ಲ.. ಅದಕ್ಕೆ.

ಅಲ್ಲಿ ಯಾರೂ ಯಾಕೆ ಮಂಡಿಸಿಲ್ಲ ಈ ಪ್ರಶ್ನೆಯನ್ನ ತೆಲುಗು ಪಂಡಿತರು ಹೇಳಬೇಕು..

ಮಳಯಾಳಂ ಅಲ್ಲಿ ಮತ್ತು ಪಂಜಾಬಿಯಲ್ಲಿ ಲಿಪಿಬದಲಾವಣೆಗಳಾಗಿವೆ ( ಕೊರಿಯನ್ನಲ್ಲೂ ). ಅಲ್ಲಿ ಶಂಕರಬಟ್ಟರು ಮಂಡಿಸಿಲ್ಲ..

ಕನ್ನಡಿಗರು ಮಹಾಪ್ರಾಣಗಳನ್ನು ಉಚ್ಚರಿಸವಶ್ಟು ದಡ್ಡರು ಎಂಬುದು ಮಾತಲ್ಲ.. ಹೇಗೆ ಸಂಸ್ಕೃತದಲ್ಲಿ ಎ. ಒ ಗಳಿಲ್ಲವೋ ಹಾಗೆ ಕನ್ನಡದಲ್ಲಿ ಮಹಾಪ್ರಾಣಗಳಲ್ಲಿ ಇದು ಸಂಶೋದನೆ ಇಂದ ಸಾಬೀತಾದುದು.. ಇದಕ್ಕೆ ಕನಿಶ್ಟ ೨೫ ಮಹಾಪ್ರಾಣಗಳಿರುವ ಕನ್ನಡ ಪದಗಳ ಪಟ್ಟಿ ಮಾಡಿ ಎಂದು ಸವಾಲು ಹಾಕಬಹುದು..


ಸಂಸ್ಕೃತ ಪಂಡಿತರು ಏನು ಎ,ಒ,ಳ ಉಲಿಯದಶ್ಟು ದಡ್ಡರೇ? ಇದು ಮಾತಿಗೆ ಮಾತಶ್ಟೆ..

ಬಾಶಾವಿಜ್ನಾನದಡಿ.. ಒಂದು ಬಾಶೆಯ ಸ್ವರೂಪದಲ್ಲಿ ಈ ಈ ಉಲಿಕೆಗಳು/phones ಇವೆ ಎಂದು ಹೇಳುವುದು ಸಹಜ. ಅದನ್ನೇ ಶಂಕರಬಟ್ಟರು ಮಾಡಿರುವುದು..

ದಯವಿಟ್ಟು ಪೀನಿಶ್ ಬಾಶೆ phonology ಬಗ್ಗೆ ಓದಿ...


"೨) ಅಕ್ಷರ ಕಡಿಮೆಯಾದಷ್ಟೂ ಅದರ ಬಳಕೆ ಹೆಚ್ಚುತ್ತದೆ ಎನ್ನುವುದಕ್ಕೆ ಏನು ಪುರಾವೆಯಿದೆ?"
ಪುರಾವೆ ಇಲ್ಲ..
ಆದರೆ ಅಕ್ಶರ ಕಡಮೆ ಇದ್ದರೆ ಬರೆಯಲು ಸುಲಬ ಎಂದು ಸಾಮಾನ್ಯ ಜ್ನಾನ.... ಏಕೆಂದರೆ
೧) ಹೆಚ್ಚು ಗುರುತುಗಳನ್ನು ನೆನಪಿಟ್ಟುಬೇಕಿಲ್ಲ
೩) ಅದಕ್ಕೆ ಬರೋದು ಸುಲಬ


"೩) ನಾವು ಕೇವಲ ಅಚ್ಚಕನ್ನಡ ಪದಗಳನ್ನು ಉಪಯೋಗಿಸಿದರೆ ಎಷ್ಟು ಜನಕ್ಕೆ ಅರ್ಥವಾಗುತ್ತದೆ? ಕನ್ನಡ ಮಾತನಾಡುವ ಜನರಲ್ಲಿ ಎಷ್ಟು ಜನಕ್ಕೆ ಒರೆ, ಆರಯ್ಯು ಎಂಬ ಪದಗಳು ತಿಳಿದಿವೆ? (ಪಂಡಿತರ ಬಗ್ಗೆ ನಾನು ಮಾತನಾಡುತ್ತಿಲ್ಲ, ಜನಸಾಮಾನ್ಯರ ಬಗ್ಗೆ ಹೇಳುತ್ತಿದ್ದೇನೆ)"

ಶಂಕರಬಟ್ಟರ ಅಚ್ಚಗನ್ನಡ ಪ್ರಯೋಗದ ಬಗ್ಗೆ ಹೇಳಿಲ್ಲ. ಹಾಗೂ ಎರವಲು ಪದ ಬಳಕೆ ಬೇಡವೆಂದೂ ಹೇಳಿಲ್ಲ..

ಆರಯ್ಯ ಹೇಗೆ ಹೆಚ್ಚು ಮಂದಿಗೆ ತಿಳಿದಿಲ್ಲವೋ ಹಾಗೇ ಸಹಸ್ರ, ಅಪೌರುಷೇಯ ಮುಂತಾದವೂ ತಿಳಿದಿಲ್ಲ.. ಇದು ಮಾತಿಗೆ ಮಾತು.. ವಿಶಯವಲ್ಲ.. ಆರಯ್ಯು ಬಳಸಬೇಡಿ ಸಂಶೋದನೆಯನ್ನೇ ಬಳಸಿರಿ..!

ದಯವಿಟ್ಟ ನನ್ನ ಹಿಂದಿ ಕಮೆಂಟು ಓದಿರಿ.. ಮತ್ತೆ ಅದೇ ಬರೆಯಲಾರೆ...

ಹರೀಶರೇ.. ನಿಮಗೆ ವಾದದಲ್ಲಿ ಹೆಚ್ಚು ಲವಲವಕೆ ಇದೆ ವಿಶಯದಲ್ಲಿ ಇಲ್ಲ..

ದಯವಿಟ್ಟು ವಿಶಯವಸ್ತುವಿನ ಸುತ್ತ ಇರಿ. ಹಾಗು ಹಳೆಯ ಕಮೆಂಟುಗಳನ್ನು ಓದಿರಿ. ಮತ್ತೆ ಮತ್ತೆ ಹೇಳಿದ್ದನ್ನೇ ಕೇಳಿದ್ದನ್ನೇ ಕೇಳುತ್ತಿದ್ದೀರಿ..

ಶಂಕರಬಟ್ಟರು ಹೇಳದೇ ಇರೋದನ್ನೆಲ್ಲ ಹೇಳಿದ್ದಾರೆ ಅಂತೀರಿ..

ನೀವು ಶಂಕರಬಟ್ಟರ ಯಾವ ಹೊತ್ತಗೆ ಇಂದ ಹೇಳ್ತಾ ಇದ್ದೀರಿ ಹೇಳಿ ತುಸು ನಾನು ಮತ್ತೆ ತಿರುವು ಹಾಕ್ತೀನಿ...

ಆಸಕ್ತಿಗೆ ಮೆಚ್ಚುಗೆ ಇದೆ..

ನನ್ನಿ..!

ತಿಳಿಗಣ್ಣ said...

"ದಯವಿಟ್ಟು ನನ್ನ ಹಿಂದಿ ಕಮೆಂಟನ್ನೂ ಮತ್ತೆ ಓದಿರಿ.."

ಇಲ್ಲಿ ಹಿಂದಿನ ಎಂದು ಓದಿಕೊಳ್ಳಿರಿ..

ಅಚ್ಚದೋಶಗಳಿಗೆ ಮನ್ನಿಸರಿ..

Harisha - ಹರೀಶ said...

>> ಶಂಕರಬಟ್ಟರು ತೆಲುಗರಲ್ಲ.. ತೆಲುಗು ಪಂಡಿತರಲ್ಲ.. ಅದಕ್ಕೆ.

ಸರಿ.

>> ಅಲ್ಲಿ ಯಾರೂ ಯಾಕೆ ಮಂಡಿಸಿಲ್ಲ ಈ ಪ್ರಶ್ನೆಯನ್ನ ತೆಲುಗು ಪಂಡಿತರು ಹೇಳಬೇಕು..

ಅದನ್ನು ಹೇಳಲು ತೆಲುಗು ಪಂಡಿತರು ಬೇಕಾಗಿಲ್ಲ. ನಾವೇ ಊಹಿಸಬಹುದು. ಅವರಿಗೆ ಆ ಅಕ್ಷರಗಳನ್ನು ತೆಗೆದು ಹಾಕುವ ಅಗತ್ಯ ಕಂಡಿಲ್ಲ, ಅದಕ್ಕೆ. ಕನ್ನಡದಲ್ಲಿಯೂ ಆ ಅಗತ್ಯವಿಲ್ಲ. ಕೆಲವರು ಆ ಅಗತ್ಯವನ್ನು ಹುಟ್ಟು ಹಾಕುತ್ತಿದ್ದಾರೆ. ಇಷ್ಟು ದಿನ ನಾವು ಎಲ್ಲಾ ಅಕ್ಷರಗಳನ್ನು ಬಳಸಿಕೊಂಡು ಕನ್ನಡ ಕಲಿತಿಲ್ಲವೇ. ಅಕ್ಷರಗಳು ಹೆಚ್ಚಿವೆ ಎಂಬ ಯೋಚನೆ ಶಾಲೆಯಲ್ಲಿ ಓದುತ್ತಿರುವಾಗ ನನಗಂತೂ ಬಂದಿರಲಿಲ್ಲ.

>> ಕನ್ನಡಿಗರು ಮಹಾಪ್ರಾಣಗಳನ್ನು ಉಚ್ಚರಿಸವಶ್ಟು ದಡ್ಡರು ಎಂಬುದು ಮಾತಲ್ಲ.. ಹೇಗೆ ಸಂಸ್ಕೃತದಲ್ಲಿ ಎ. ಒ ಗಳಿಲ್ಲವೋ ಹಾಗೆ ಕನ್ನಡದಲ್ಲಿ ಮಹಾಪ್ರಾಣಗಳಲ್ಲಿ ಇದು ಸಂಶೋದನೆ ಇಂದ ಸಾಬೀತಾದುದು..

ನಿಜ. ಸಂಸ್ಕೃತದಲ್ಲಿ ಎ, ಒ ಮೊದಲಿನಿಂದಲೂ ಇಲ್ಲ. ಆ ಅಕ್ಷರಗಳಿರುವ ಪದಗಳನ್ನು ಅದು ಉಪಯೋಗಿಸುವುದಿಲ್ಲ. "ವೇಂಕಟೇಶ" ಎಂದು ಹೇಳುತ್ತಾರೆ ಹೊರತು "ವೆಂಕಟೇಶ" ಎಂದಲ್ಲ. ಆದರೆ ಕನ್ನಡದಲ್ಲಿ ಹಾಗಲ್ಲ. ಮೂಲ ಕನ್ನಡ ಪದಗಳಲ್ಲಿ ಮಹಾಪ್ರಾಣವಿರದಿದ್ದರೂ ಬೇರೆ ಭಾಷೆಗಳಿಂದ ಎರವಲು ಪಡೆದಿರುವ ಪದಗಳಲ್ಲಿ ಮಹಾಪ್ರಾಣಗಳಿವೆ. ಅವುಗಳ ಉಪಯೋಗವನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಂತೂ ಸಾಧ್ಯವಿಲ್ಲ. ಅಗತ್ಯಕ್ಕೆ ತಕ್ಕಂತೆ ಭಾಷೆಯನ್ನೂ ಬೆಳೆಯುವಂತೆ ಮಾಡಬೇಕೆ ಹೊರತು ಕುಂಠಿತಗೊಳಿಸಬಾರದು.

>> ಕನಿಶ್ಟ ೨೫ ಮಹಾಪ್ರಾಣಗಳಿರುವ ಕನ್ನಡ ಪದಗಳ ಪಟ್ಟಿ ಮಾಡಿ ಎಂದು ಸವಾಲು ಹಾಕಬಹುದು.

ಒಂದೂ ಬೇರೆ ಭಾಷೆಯ ಪದಗಳನ್ನು ಬಳಸದ ಕನಿಷ್ಠ ೨೫ ಜನ ಕನ್ನಡಿಗರನ್ನು ತೋರಿಸಿರಿ ಎಂದೂ ಸವಾಲು ಹಾಕಬಹುದು.

>> ೨) ಅಕ್ಷರ ಕಡಿಮೆಯಾದಷ್ಟೂ ಅದರ ಬಳಕೆ ಹೆಚ್ಚುತ್ತದೆ ಎನ್ನುವುದಕ್ಕೆ ಏನು ಪುರಾವೆಯಿದೆ?"
>> ಪುರಾವೆ ಇಲ್ಲ..

ಏನೂ ಲಾಭವಿಲ್ಲದ ಕೆಲಸ ಮಾಡಿ ಏಕೆ ಕೈ ಸುಟ್ಟುಕೊಳ್ಳಬೇಕು?

>> ಆರಯ್ಯು ಬಳಸಬೇಡಿ ಸಂಶೋದನೆಯನ್ನೇ ಬಳಸಿರಿ..!

ಅದನ್ನೇ ಹೇಳುತ್ತಿರುವುದು. ಕನ್ನಡ ಪದಗಳನ್ನು ಬಳಸುವಾಗ ಮಹಾಪ್ರಾಣಗಳ ಅಗತ್ಯ ಖಂಡಿತ ಇಲ್ಲ. ಆದರೆ ಇತರ ಭಾಷೆಗಳ ಪದ ಬಳಸುತ್ತೀರಿ ಎಂದಾದರೆ ಸರಿಯಾಗಿ ಬಳಸಿ. "ಸಂಶೋದನೆ" ಬಳಸಬೇಡಿ, "ಸಂಶೋಧನೆ" ಬಳಸಿ. ಉಚ್ಚಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಕೇವಲ "ಸಂಶೋದನೆ" ಎಂದು ಬರೆದ ಮಾತ್ರಕ್ಕೆ ಎಲ್ಲರೂ ಹಾಗೇ ಉಚ್ಚರಿಸುತ್ತಾರೆಯೇ? ಅಲ್ಲೆಲ್ಲೋ ಇನ್ನೊಬ್ಬ "ಸಂಸೋದನೆ" ಎನ್ನುತ್ತಾನೆ. ಅದನ್ನೂ ಸರಿ ಮಾಡಿದರೆ ಮತ್ತೊಬ್ಬ ಮತ್ತಿನ್ನೇನೋ ಹೇಳುತ್ತಾನೆ. ಎಲ್ಲರ ಉಚ್ಚಾರಣೆಯನ್ನೂ ಸರಿ ಮಾಡುವುದು ಸಾಧ್ಯವೇ? ಇಲ್ಲ. ಹಾಗಾಗಿ "ಸಂಶೋಧನೆ" ಎಂಬ ಸರಿಯಾದ ರೀತಿಯನ್ನು ಬಳಸಿ.

*******

ಇಷ್ಟಾಗಿಯೂ ನಾವು ಕನ್ನಡದಲ್ಲಿ ಮಹಾಪ್ರಾಣ ತೆಗೆದರೆ ಏನಾದೀತು?

ಈಗ ನಾವು ಕನ್ನಡಿಗರು ತಮಿಳರ ಉಚ್ಚಾರವನ್ನು ನೋಡಿ ಹೇಗೆ ಹೇಸಿಗೆ ಪಡುತ್ತಿದ್ದೇವೋ, ಹಾಗೆಯೇ ಹಿಂದಿ, ತೆಲುಗು ಮಾತನಾಡುವವರು ಕನ್ನಡ ನೋಡಿ ಹೇಸುವಂತಾಗುತ್ತದೆ. ಇದು ನಮಗೆ ಬೇಕೆ?

ಈಗ ಆಂಗ್ಲವನ್ನೇ ನೋಡಿ. ನಿಮ್ಮ ಅಚ್ಚುಮೆಚ್ಚಿನ ಎಮಿನಿನೋ ಬರ್ರೋ ನಿಘಂಟಿನಲ್ಲಿಯೇ ಬಳ್ಳಿ ಎಂಬುದನ್ನು balli ಎಂದು ಬರೆದರೆ ಸರಿಯಾಗದು ಎಂಬ ಕಾರಣಕ್ಕೆ baḷḷi ಎಂದು ಬರೆದಿದ್ದಾರೆ. ಮುಂದೊಂದು ದಿನ ಸಂಸ್ಕೃತ/ಉರ್ದು/ಅರೇಬಿಕ್ ಭಾಷೆಗಳ ಪದಗಳನ್ನು ಬರೆಯುವಾಗ ನಾವೂ ಹೀಗೇ ದ್ರಾವಿಡ ಪ್ರಾಣಾಯಾಮ ಮಾಡಬೇಕಾಗುವುದಿಲ್ಲವೇ? ಇದು ಬೇಕೆ?

ತಿಳಿಗಣ್ಣ said...

ಹರೀಶ

ನಿಮಗೆ ಇನ್ನು ಉತ್ತರ ಬರೆಯುವ ಮುನ್ನ ನೀವು ಶಂಕರಬಟ್ಟರ ಯಾವ ಹೊತ್ತಗೆಯ ಮೇಲೆ ಮಾತಾಡುತ್ತಿರುವಿರಿ ಹೇಳಿ..

ನಿಮ್ಮ ಕಮೆಂಟಿಗಳಿಗೆ ಸಮಾದಾನಗಳನ್ನು ನಾನು ಹಿಂದಿನ ಕಮೆಂಟುಗಳಲ್ಲೇ ಕೊಟ್ಟಿರುವೆನು..

ತೆಲುಗು ಬಾಶೆ ವಿಶಯ ಬಗ್ಗೆ ನಾನು ಹೇಳಲ್ಲ. ಅದರಲ್ಲಿ ಬದಲಾವಣೆ ಆಗಲಿ ಬಿಡಲಿ ಅದು ನಮಗೆ ಬೇಕಾಗಿಲ್ಲ..

ಮತ್ತೆ ನೀವು ಹೇಳಿದ್ದನ್ನೇ ಹೇಳುತ್ತಿದ್ದೀರಿ.. ಹಾಗು ಶಂಕರಬಟ್ಟರು ಹೇಳದೇ ಇರುವುದನ್ನು ಕಲ್ಪಿಸಿಕೊಂಡಿದ್ದೀರಿ..

ಓದಿರಿ..

ಸುನಾತರೇ..

ಗಮನಿಸಿ... ನಾನು ಮಹಾಪ್ರಾಣ, ಇಲ್ಲದೇ ಬರೆದರೂ ನಿಮಗೆಲ್ಲ. ಅದರಲ್ಲೂ ಹರೀಶರಿಗೆ ಅರ್ತವಾಗುತ್ತಾ ಇದೆ..

ಅಂದರೆ ಶಂಕರಬಟ್ಟರ ಮಂಡನೆ ಸಾಪಲ್ಯ ತೋರುವುದು.. ಅಶ್ಟು ಸಾಕು.. ಸಂಶೋದನೆ ಅಂದರೆ ಸಂಶೋಧನೆ ಎಂದು ಹರೀಶರಿಗೆ ಅರ್ತ ಆಯಿತು.. ಇದನ್ನೇ ಶಂಕರಬಟ್ಟರೂ ಹೇಳಿರೋದು..

ಸಂಶೋದನೆ ಎಂದು ಬರೆದು ಉಚ್ಚಾರದಲ್ಲಿ "ಸಂಶೋದನೆ/ಸಮ್ಸೋದನೆ"(ತದ್ಬವ) ಮತ್ತು ಸಂಶೋಧನೆ(ತತ್ಸಮ) ಎರಡೂ ಸರಿ....

ಅವರು ಹೇಳಿರುವ "ಹೊಂದಿಸುವಕೆ" ತಿಳಿಯುವುದು ಮುಕ್ಯ(ಇದನ್ನು ನೀವು ಮುಖ್ಯ ಎಂದು ಉಲಿಯಲ್ಲು ಅಡ್ಡಿಯಿಲ್ಲ.. ಆದರೆ ಅದರ ತದ್ಬವ ಮುಕ್ಯ ಎಂಬ ಉಲಿಕೆಯೂ ಸರಿಯಶ್ಟೇ )

ಸುನಾತರಿಗೆ ಒಳ್ಳೆಯದಾಗಲಿ..ಆತಂಕಬೇಡ... ಶಂಕರಬಟ್ಟರ ದ್ರುಶ್ಟಿಕೋನ ಸರಿ ಇದೆ.. ಅವರು ಸುನಾತ/ಹರೀಶರಂತಹ ಸಂಸ್ಕ್ರುತ ಪಂಡಿತರು ಮತ್ತು ತಿಳಿದವರ ಬಗ್ಗೆಯಲ್ಲ ಮಾತಾಡುತ್ತಿರುವುದು.

ಕೆಳವರ್ಗ ಅಂದರೆ ಅವರಂತೆ ಮನೆತನದಲ್ಲಿ ಓದುಬರಹಕ್ಕೆ ಹೊಸಬರಾಗಿ, ಮಹಾಪ್ರಾಣ ಮುಂತಾದವು ಅವರ ಉಲಿಕೆಯಲ್ಲೇ ಇರದವರು... ಜೇನುಕುರಬರು ಸೋಲಿಕರು, ಒಕ್ಕಲಿಗರು, ಹಾಲಕ್ಕಿ ಮುಂತಾದ ಕನ್ನಡ ಹೆಚ್ಚಿನ ಬುಡಕಟ್ಟಿನ ಮಂದಿಗೆ ಸಹಜವಾಗೇ ಮಹಾಪ್ರಾಣ ಶ/ಷಕಾರಗಳು ನಾಲಗೆಯಿಂದ ಹೊರಳಲ್ಲ.. ಅವರು ಪ್ರಯತ್ನದಿಂದ ಕಲಿಯು ಕಶ್ಟಪಟ್ಟು ಉಲಿಯಬೇಕು.. ಅದರಲ್ಲಿ ಎಲ್ಲರೂ ಸಪಲರಾಗರು..

ನಾನು ಇಲ್ಲಿಗೆ ಮುಗಿಸುವೆನು..

"ಸರ್ವೇ ಬವಂತು ಸುಕಿನಹ" :) ( ಇದು ಅರ್ತ ಆಗಿದೆ ) 'ಸರ್ವರ/ಎಲ್ಲರ’ ಬಗ್ಗೆಯೂ ಯೋಚಿಸಬೇಕಲ್ಲ..

ತಿಳಿಗಣ್ಣ said...

http://sampada.net/blog/mahesha/12/04/2007/3686

ಇದನ್ನು ಆಸಕ್ತಿಯಿರುವವರು ಓದಿಕೊಳ್ಳಿ

Harisha - ಹರೀಶ said...

ಸಂಪದದಲ್ಲಿ ಮಹೇಶ ಅವರ ಕಮೆಂಟು:
>> ಈಗಿರುವ ಕನ್ನಡವೇ ಸಲೀಸು, ತಮಗೆ ಅದರಿಂದ ಯಾವ ತೊಂದರೆಯಿಲ್ಲ, ಎನ್ನುವವರು ಇದರ ಕುರಿತು ತಲೆಗೆಡಿಕೊಳ್ಳಬೇಕಿಲ್ಲ. ಈ ಬರಹ ಕನ್ನಡದವನ್ನು ಉಲಿಯಲು, ಅರಿಯಲು ಹೆಣಗಾಡುವವರ ಸುತ್ತ ಕೆತ್ತ ಹಂದರ!

!!!!

****

>> ಸಂಸ್ಕೃತದಲ್ಲಿ ಮೀನಿಗೆ ಮೂಲ ಪದ ಮತ್ಸ್ಯ - ಅದರಿಂದ ಹುಟ್ಟುದ ಇತರೆ ಭಾಷೆಗಳಲ್ಲೂ ಅದರಿಂದಲೇ ಬಂದ ಪದಗಳೇ (ಮಾಚೀ, ಮಚ್ಚೀ, ಮಚಲೀ) ಇವೆ. ಇನ್ನು ದಕ್ಷಿಣದ ಭಾಷೆಗಳಲ್ಲೆಲ್ಲ ಇರುವ ಮೀನ್/ಮೀನು ಎಂಬ ಪದವೇ ಸಂಸ್ಕೃತಕ್ಕೆ ಹೋಗಿದೆ ಅಷ್ಟೆ.
>> ಮೀನು ಎಂಬುದು ಬಳ್ಳಿಯಂತೆ ಅಪ್ಪಟ ಕನ್ನಡ/ದ್ರಾವಿಡ ಪದ...

मीन - मीयते - मीञ् (हिंसायाम्) नते ; मीञ् - ಹಿಂಸಿಸಲ್ಪಡು, ಬಂಧಿಸಲ್ಪಡು ; ಮೀನ - ಬಂಧಿಸಲ್ಪಡುವ ಪ್ರಾಣಿ.

>> ಋಷಿ ಪದಕ್ಕೆ ನಿಷ್ಪುತ್ತಿ/ಎಟಿಮಾಲಜಿ ಇಲ್ಲವೆಂದು ಕೇಳಿದ್ದೀನಿ....

ಋಷಿ ಮೂಲ ಹುಡುಕಬಾರದು ಎಂಬ ನಾಣ್ಣುಡಿಯನ್ನು ನೀವು ತಪ್ಪಾಗಿ ಅರ್ಥೈಸಿಕೊಂದಿರಬೇಕು.
ऋषि - ऋषते ज्ञानेन संसारपारं ; ಜ್ಞಾನದಿಂದ ಸಂಸಾರಸಾಗರವನ್ನು ದಾಟಿದವನು.

>> ನೀವು ಹೇಳಿರುವುದೆಲ್ಲ ತಪ್ಪು ಅಂತ ಕೇಶಿರಾಜನ 'ಶಬ್ದಮಣಿದರ್ಪಣ' ಹೇಳುತ್ತೆ. ಅದರಲ್ಲಿ ಈ ಮಲ್ಲ,ಪಟ್ಟ ಅನ್ನೊ ಪದಗಳನ್ನು ಅವನು 'ತತ್ಸಮ' ಅಂತ ಹೇಳಿಲ್ಲ. ಬದಲಾಗಿ 'ಸಮಸಕ್ಕದ' ಪದಗಳು ಅಂತ ಹೇಳಿದ್ದಾನೆ.

पट (ಬದಲಾಗು) ಎಂಬ ಧಾತುವಿನಿಂದ ಪಟ್ಟ ಎಂಬ ಪದ ಬಂದಿದೆ.

ಕೇಶಿರಾಜ "ಸಮಸಕ್ಕದ" ಎಂದು ಹೇಳಿದ್ದಾನೆ ಎಂದು ನೀವು ಉದಾಹರಿಸುತ್ತಿರುವ ಎಲ್ಲಾ ಪದಗಳಿಗೂ ಸಂಸ್ಕೃತದಲ್ಲಿ ನಿಷ್ಪತ್ತಿ ಇದೆ. ಹಾಗಾಗಿ ಆ ಪದಗಳು ಕನ್ನಡದಿಂದ/ದ್ರಾವಿಡ ಭಾಷೆಗಳಿಂದ ಸಂಸ್ಕೃತಕ್ಕೆ ಹೋದವುಗಳಲ್ಲ, ಬದಲಾಗಿ ಸಂಸ್ಕೃತದಿಂದ ಬಂದವುಗಳು.

ಸತ್ಯವನ್ನು ನಂಬಲು ಇಷ್ಟವಿದ್ದರೆ ನಂಬಬಹುದು. ಇಲ್ಲ, ತಾನು ತಿಳಿದಿದ್ದೆ ಸರಿ ಎನ್ನುವವರು ಹಾಗೇ ತಿಳಿದುಕೊಳ್ಳಬಹುದು.

****

ಕೊಚ್ಚೆಗೆ ಕಲ್ಲೆಸೆಯುತ್ತಿದ್ದೇನೆ ಎಂಬ ಅರಿವಾಗಿದೆ. ಆದರೂ ಕಡೆಯದಾಗಿ ಕೆಲವು clarifications ಕೊಡಬೇಕೆಂದೆನಿಸಿತು, ಕೊಟ್ಟಿದ್ದೇನೆ...
(ಊರಿಗೆ ಹೋದಾಗ ಸಂಸ್ಕೃತ ನಿಘಂಟು/ಅಮರಕೋಶ ಮುಂತಾದ ಗ್ರಂಥಗಳನ್ನು ನೋಡಿ ಈ ವಿವರಗಳನ್ನು ಸಂಗ್ರಹಿಸಿದ್ದೇನೆ.)

ಈ ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನನ್ನ ನಮಸ್ಕಾರಗಳು/ಧನ್ಯವಾದಗಳು.

ತಿಳಿಗಣ್ಣ said...

ಸುನಾತರೇ,

ಹರೀಶರು ಮೇಲ್ಮೆಯ ಮುಂದೆ ನಾನು ಕೊಚ್ಚೆ ಎಂದೇ ಅವರಿಗೆ ಪ್ರತಿಕ್ರಿಯಿಸಿಲ್ಲ.. :) ಎಶ್ಟೇ ಆದರು ಸಂಸ್ಕ್ರುತ ಓದಿದವರಲ್ಲವೇ... :)

ಹರೀಶರು ತಮ್ಮ ಸಂಸ್ಕ್ರುತಪಾಂಡಿತ್ರಪ್ರದರ್ಶನ ಹೇತು ಇಲ್ಲಿ ಬಾಯಿಹಾಕಿದ್ದಾರೆ. ಎಂದು ಅನ್ನಿಸಿತು..

ಹರೀಶರೇ ನಿಮ್ಮ ಸಂಸ್ಕ್ರುತಪಾಂಡಿತ್ಯಕ್ಕೆ ನಾನು ಸಮನಲ್ಲ ಬಿಡಿ.. ನಾನು ಕನ್ನಡ ತಾವರೆಯರಳುವ ಕೊಚ್ಚೆಯೇ.. ಅದೇ ಇರಲಿ ನಮ್ಮ ಪಾಡು.!

ಹರೀಶರೇ ದಯವಿಟ್ಟು ಸುನಾತರ ಜೊತ ಮಾತಾಡಲು ಅವಕಾಶ ನೀಡಿ.. ನೀವು ದೊಡ್ಡ ಸಂಸ್ಕ್ರುತಪಂಡಿತ ಅಂತ ನಾನು ಒಪ್ಪಿಕೊಂಡಿದ್ದೀನಿ..

ಸುನಾತರೇ,

ನಾನು ಶಂಕರಬಟ್ಟರ ಬಗ್ಗೆ ಹೇಳಿದ ಯಾವುದಾದರೂ ಮಾತು ಅವರ ಹೊತ್ತಗೆಯಲ್ಲಿ ಇಲ್ಲದಿದ್ದರೆ ತಿಳಿಸಿರಿ.

ನಿಮ್ಮ ಆತಂಕ ಅಕಾರಣವಾದುದು...!

ಒಳ್ಳೆಯದಾಗಲಿ.

sunaath said...

ಮಹೇಶರೆ,
ಕನ್ನಡದ ಬಗೆಗೆ ಕಳಕಳಿ ಇರುವ ಯಾರೂ ಕೊಚ್ಚೆ ಅಲ್ಲ. ಅದೇ ರೀತಿಯಲ್ಲಿ ಸಂಸ್ಕೃತ ಸಹ ನಮ್ಮ ಕನ್ನಡ ತಾಯಿಯ ಸೋದರಿಯೇ
ಆದುದರಿಂದ ಎರಡೂ ಭಾಷೆಗಳು ಪರಸ್ಪರ ಪೂರಕವಾಗಿಯೇ ಇವೆ ಎನ್ನುವದನ್ನು ನಾವು ಅರಿತುಕೊಂಡು ಸಂಸ್ಕೃತದ ಪ್ರಯೋಜನ ಪಡೆದುಕೊಳ್ಳಬೇಕು. We should exploit both
Sanskrit and English.
ಶಂಕರ ಭಟ್ಟರು ತಮ್ಮ ಹೊತ್ತಿಗೆಯಲ್ಲಿ ಕೆಲವು presumptive statements ಮಾಡಿದ್ದಾರೆ. ಅವು ಸರಿಯಲ್ಲ ಎಂದು ನಾನು ಹೇಳುತ್ತಲೇ ಇದ್ದೇನೆ.

ತಿಳಿಗಣ್ಣ said...

ಸುನಾತರೇ

presumptive statements ಯಾವುವು?

ಮತ್ತು ನೀವು ಹೇಗೆ ಈ ತೀರ್ಮಾನಕ್ಕೆ ಬಂದಿರಿ?

ಅವರೆಲ್ಲ ಸಾಲು ಬಾಶಾವಿಜ್ನಾನದಡಿ ಇದೆ....

ನೀವು ಬಾಶಾವಿಜ್ನಾನದಡಿ ನೋಡಿಲ್ಲ.!

Unknown said...

ವಸ ಇದನ್ನ ನೋಡಿ, ಶಂಕರಬಟ್ಟರ ಹೊಸ ಹೊತ್ತಿಗೆ ಬಗ್ಗೆ
http://enguru.blogspot.com/2008/07/blog-post_23.html

ಈಗಲಾದರೂ ಅರ್ತ ಆಗ್ಬೋದು.

ದಿಟವನ್ನ ಯಾರೂ ಮುಚ್ಚಾಕಕ್ಕಾಗಲ್ಲ.

sunaath said...

ಮಹೇಶರೆ,
'ಕನ್ನಡ ಬರಹ ಸರಿಪಡಿಸೋಣ' ಎನ್ನುವ ಪುಸ್ತಕದದ ೬೦ನೆಯ ಪುಟದಲ್ಲಿ ಶಂಕರ ಭಟ್ಟರು ಈ ರೀತಿಯಾಗಿ ಬರೆದಿದ್ದಾರೆ:
"..ಸಂಸ್ಕೃತ ಪದಗಳಲ್ಲಿ ಬರುವ ಅಲ್ಪಪ್ರಾಣ-ಮಹಾಪ್ರಾಣ ವ್ಯತ್ಯಾಸ ಶೇಕಡಾ ತೊಂಬತ್ತೊಂಬತ್ತು ಮಂದಿ ಕನ್ನಡಿಗರ ಉಚ್ಚಾರಣೆಯಲ್ಲೂ ಕಾಣಿಸುವದಿಲ್ಲ....".
ಮುಂದುವರೆದು ಪುಟ ೬೧ರಲ್ಲಿ ಹೀಗೆ ಬರೆದಿದ್ದಾರೆ:
"ಇನ್ನು ಕೆಲವರು ತಾವು ಮಹಾಪ್ರಾಣಾಕ್ಷರಗಳನ್ನು ಸರಿಯಾಗಿ ಉಚ್ಚರಿಸುತ್ತೇವೆ ಎಂದು ಭಾವಿಸುತ್ತಾರೆ; ಆದರೆ ಅವರು ನಿಜಕ್ಕೂ ಹಾಗೆ ಉಚ್ಚರಿಸುವದಿಲ್ಲ.ಅವರ ಉಚ್ಚಾರಣೆಯಲ್ಲಿ ಅವು ಅಲ್ಪಪ್ರಾಣಾಕ್ಷರಗಳಾಗಿಯೇಉಳಿಯುತ್ತವೆ."

ಶಂಕರ ಭಟ್ಟರು realistic survey ಮಾಡದೇ, ಕೇವಲ presumptive ಆಗಿ ಮಾಡಿದ statement ಇದು.

ಎರಡನೆಯದಾಗಿ, ಪುಟ ೮೩ರಲ್ಲಿ ಹೀಗೆ ಬರೆದಿದ್ದಾರೆ:
"ನಿಜಕ್ಕೂ ಮೊದಲಿಗೆ ಇಂಗ್ಲಿಶ್‌ನಲ್ಲಿ ಪದಗಳನ್ನು ಅವುಗಳ ಉಚ್ಚಾರಣೆ ಹೇಗಿದೆಯೋ ಹಾಗೆಯೇ ಬರೆಯಲಾಗುತ್ತಿತ್ತು....ಆದರೆ ಜಾನ್ಸನ್ ಎಂಬ ಆ ವಿದ್ವಾಂಸನಿಗೆ ನಿಜಕ್ಕೂ ಇಂಗ್ಲಿಶ್ ಪದಗಳ ಇತಿಹಾಸದಲ್ಲಿ ಹೆಚ್ಚಿನ
ಪಾಂಡಿತ್ಯವಿರಲಿಲ್ಲ.... ಅವುಗಳ ಬಳಕೆ ಈ ಕಾರಣಗಳಿಗಾಗಿ
ತೀರ ಅನಾವಶ್ಯಕವಾದ ಒಂದು ಗೊಂದಲದ ಗೂಡಾಗಿದೆ."
ಈ ಹೇಳಿಕೆ ಸರಿಯಲ್ಲ.

sunaath said...

ಭರತರೆ,
ನೀವು ಸೂಚಿಸಿದ site ನೋಡಿದೆ. ಅಲ್ಲಿ ಹೇಳಿದ ಒಂದು ವಿಷಯವನ್ನು ಒಪ್ಪುತ್ತೇನೆ. ಅಂದರೆ ಕನ್ನಡಿಗರು ಪದವನ್ನು ಹೇಗೆ ಉಚ್ಚರಿಸಿದರೂ ಅದು ಕನ್ನಡವೇ. ಅದಕ್ಕೆ ನನ್ನ ತಕರಾರಿಲ್ಲ. ಆದರೆ ಪಠ್ಯ ಪುಸ್ತಕಗಳಲ್ಲಿ ಹಾವು ಎಂದು ಬರೆಯುವ ಬದಲಾಗಿ ಆವು ಎಂದು ಬರೆಯುವದು ತಪ್ಪಾಗುತ್ತದೆ.
ಅದೇ ರೀತಿಯಲ್ಲಿ ರೇಲವೆ time-table ಪುಸ್ತಕಗಳಲ್ಲಿ
ಅರಸಿಕೆರೆ ನಿಲ್ದಾಣವನ್ನು ಹರಸಿಕೆರೆ ಎಂದು ಬರೆಯುವದು ತಪ್ಪಾಗುತ್ತದೆ.
ಇದು ನಾನು ಲಾಗಾಯ್ತಿನಿಂದಲೂ ಹೇಳುತ್ತಲಿರುವ ವಿಷಯ.

ತಿಳಿಗಣ್ಣ said...

"ಶಂಕರ ಭಟ್ಟರು realistic survey ಮಾಡದೇ, ಕೇವಲ presumptive ಆಗಿ ಮಾಡಿದ statement ಇದು."

ದಯವಿಟ್ಟು ನಿಮ್ಮ ಸರ್ವೆಯ ಪಲಿತಾಂಶ ಹಾಕಿ..

ಏಕೆಂದರೆ ಜೇನುಕುರುಬ, ಬಡಗ, ಗುಲ್ಬರ್ಗಕನ್ನಡ ಮುಂತಾದ ಕನ್ನಡ ಬಗೆಗಳ ಬಗ್ಗೆ ಬಂದಿರುವ ಹೊತ್ತಗೆಗಳನ್ನು ಅವರು ತಮ್ಮ ಹೊತ್ತಗೆಯಲ್ಲಿ ಉಲ್ಲೇಕಿಸಿದ್ದಾರೆ.. ಅದನ್ನೇ "ಕನ್ನಡ ನುಡಿ ನಡೆದು ಬಂದ ದಾರಿ" ಎಂಬ ಹೊತ್ತಗೆಯಲ್ಲಿ ಹೇಳಿದ್ದಾರೆ...

ದಯವಿಟ್ಟು ನೀವು ಕಯ್ಗೊಂಡ್ ರಿಯಲಿಸ್ಟಿಕ್ ಸರ್ವೆಯನ್ನು ವಿವರ ನೀಡಿ.

ಇಂಗ್ಲೀಶಿನ ಬಗ್ಗೆ ಅವರ ಯಾಕೆ ಸರಿಯಿಲ್ಲ?

ದಯವಿಟ್ಟು ಕಾರಣಕೊಟ್ಟು ಹೇಳಿ..

sunaath said...

ಮಹೇಶರೆ,
ಶಂಕರ ಭಟ್ಟರು ತಮ್ಮ ಯಾವುದೇ ಹೊತ್ತಿಗೆಯಲ್ಲಿಯೂ ತಮ್ಮ ಸರ್ವೇ ವಿಧಾನಗಳನ್ನು ಹಾಗು ವಿವರಗಳನ್ನು ಪ್ರಕಟಿಸಿಲ್ಲ. ಅವಿಲ್ಲದೆ ನೀಡುವ ವಿವರಗಳಿಗೆ subjective, presumptive ಹಾಗು unrealistic ಎಂದೇ ಕರೆಯಬೇಕಾಗುತ್ತದೆ.

ಕನ್ನಡ ವರ್ಣಮಾಲೆಯನ್ನು ತುಂಡು ಮಾಡಬೇಕೆನ್ನುವ ವಾದವನ್ನು ಮಂಡಿಸುತ್ತಿರುವವರು ಶಂಕರ ಭಟ್ಟರು. ಆದುದರಿಂದ ಸರ್ವೇ ಮಾಡಬೇಕಾದವರು ಅವರು ; ನಾನಲ್ಲ.

ತಿಳಿಗಣ್ಣ said...

ಅವರ ಸರ್ವೆಗೆ ಅವರು ಹೇಳಿರುವ ಹೊತ್ತಗೆಗಳು ಆದಾರ..

ಅವರು ಸರ್ವೆ ಮಾಡಬೇಕು ಯಾಕೆ?

ಬೇರೆಯವ ಅದ್ಯಯನದ ಹೊತ್ತಗೆಗಳಿವೆಯಲ್ಲ..

ನೀವು ಅವರಿಗೆ ಬಾಶಾವಿಜ್ನಾನ ಹೇಗೆ ತಿಳಿಯಬೇಕೆಂದು ಹೇಳಿಕೊಡುತ್ತಿದ್ದೀರ?

ನಿಮ್ಮ ಬಾಶಾವಿಜ್ನಾನದ ಅದ್ಯಯನ ಗ್ರಂದಗಳನ್ನು ಪಟ್ಟಿಮಾಡಿರಿ.. !

sunaath said...

ಬೇರೆಯವರು ಮಾಡಿದ ಸರ್ವೇ ಕಾರ್ಯದ referenc ಇದ್ದರೆ,
ಆ ಸರ್ವೇದ reference ಕೊಡಬೇಕು. ಸುಮ್ಮನೆ ಮೋಘಮ್ ಆಗಿ ಬರೆದರೆ ಆಗಲಿಲ್ಲ.

ತಿಳಿಗಣ್ಣ said...

ಕೊನೆ ಪುಟದಲ್ಲಿದೆ ಅಲ್ವೇ ಆಕಾರಗ್ರಂತಗಳೂ?

ನೋಡಿ...

Anonymous said...

Sir,
Take a look at this article in ThatsKannada.


http://thatskannada.oneindia.in/column/enguru/2008/0723-learn-kannada-language-shankarbhat.html#cmntTop

sunaath said...

md,
ಲಿಂಕ್ ತೋರಿಸಿದ್ದಕ್ಕಾಗಿ ಧನ್ಯವಾದಗಳು.

Anonymous said...

>ಬೇರೆಯವರು ಮಾಡಿದ ಸರ್ವೇ ಕಾರ್ಯದ referenc >ಇದ್ದರೆ,ಆ ಸರ್ವೇದ reference ಕೊಡಬೇಕು. >ಸುಮ್ಮನೆ ಮೋಘಮ್ ಆಗಿ ಬರೆದರೆ ಆಗಲಿಲ್ಲ.


ನೀವು ಹೀಗೆ ಹೇಳಿರುವುದನ್ನ ನೋಡಿದರೆ ನೀವು ಶಂಕರಬಟ್ಟರ 'ಕನ್ನಡ ನುಡಿ ನಡೆದು ಬಂದ ದಾರಿ' ಹೊತ್ತಿಗೆ ಓದಿಲ್ಲ ಅಂತ ನಿಕ್ಕುವ ಹೇಳಬೋದು. ಮೊದಲು ಆ ಹೊತ್ತಿಗೆ ದಯವಿಟ್ಟು ಓದಿ.
-ಬರತ್

ತಿಳಿಗಣ್ಣ said...

"ಕನ್ನಡ ನುಡಿ ನಡೆದು ಬಂದ ದಾರಿ" ಹೊತ್ತಗೆಯ ಹಿಂದೆ ಎಲ್ಲ referenceಗಳನ್ನು ಕೊಟ್ಟಿದ್ದಾರೆ. ನೋಡಿರಿ