Wednesday, August 13, 2008

ನಾವು ಬರತೇವಿನ್ನ.......ದ.ರಾ.ಬೇಂದ್ರೆ

ನಾನು ಎನ್ನುವ ತಮ್ಮ ಕವನದಲ್ಲಿ ಬೇಂದ್ರೆ ಈ ರೀತಿ ಹೇಳುತ್ತಾರೆ:

ವಿಶ್ವಮಾತೆಯ ಗರ್ಭಕಮಲಜಾತ-ಪರಾಗ-
ಪರಮಾಣು ಕೀರ್ತಿ ನಾನು|
ಭೂಮಿತಾಯಿಯ ಮೈಯ ಹಿಡಿಮಣ್ಣು ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು|
ಕನ್ನಡದ ತಾಯಿ-ತಾವರೆಯ ಪರಿಮಳವುಂಡು
ಬೀರುತಿಹ ಗಾಳಿ ನಾನು|
ನನ್ನ ತಾಯಿಯ ಹಾಲು ನೆತ್ತರವ ಕುಡಿದಂಥ
ಜೀವಂತ ಮಮತೆ ನಾನು|
ಈ ಐದು ಐದೆಯರೆ ಪಂಚಪ್ರಾಣಗಳಾಗಿ
ಈ ಜೀವ ದೇಹನಿಹನು|
ಹೃದಯಾರವಿಂದದಲಿ ನಾರಾಯಣನೆ
ತಾನಾಗಿ ದತ್ತನರನು|
ವಿಶ್ವದೊಳನುಡಿಯಾಗಿ ಕನ್ನಡಿಸುತಿಹನಿಲ್ಲಿ
ಅಂಬಿಕಾತನಯನಿವನು|”

ನಾನು ಎನ್ನುವ ಕವನವೇನೊ ಚಿಕ್ಕದು ; ಆದರೆ ಇದರ ಹರಹು ವಿಸ್ತಾರವಾದದ್ದು. ವಿಶ್ವಮಾತೆ, ಭಾರತಮಾತೆ, ಕನ್ನಡ ಮಾತೆ ಅಲ್ಲದೆ ತಮ್ಮನ್ನು ಹಡೆದ ತಾಯಿ ಇವರೆಲ್ಲರಿಗೂ ತಾವು ಮಗು ಎಂದು ಬೇಂದ್ರೆ ಈ ಕವನದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ.

ಬೇಂದ್ರೆಯವರ ಹೃದಯದಲ್ಲಿ ತಾಯಿಗೆ ಇರುವ ಮಮತೆಯ ಹಾಗು ಮಹತ್ವದ ಸ್ಥಾನವನ್ನು ಈ ಕವಿತೆ ನಿಚ್ಚಳವಾಗಿ ಪ್ರತಿಬಿಂಬಿಸುತ್ತಿದೆ. ಅಂಬಿಕಾತನಯದತ್ತನನ್ನು ರೂಪಿಸಿದವಳು ತಾಯಿ; ಅವರಿಗೆ ಶಕ್ತಿಸ್ರೋತಳಾದವಳು ತಾಯಿ.

ಬೇಂದ್ರೆ ಈ ಕವನದಲ್ಲಿ ಧಾರವಾಡದ ಮಾತೆಯನ್ನು ಪ್ರತ್ಯೇಕವಾಗಿ ಗುರುತಿಸಿಲ್ಲ. ಬಹುಶ: ಧಾರವಾಡದ ಮಾತೆ ಈ ಎಲ್ಲ ಮಾತೆಯರಲ್ಲಿ ಅಂತರ್ಗತವಾಗಿರಬೇಕು ! ಬೇಂದ್ರೆಯವರಿಗೆ ಧಾರವಾಡ ಬೇರೆ ಅಲ್ಲ, ತಮ್ಮ ಹಡೆದಮ್ಮ ಬೇರೆ ಅಲ್ಲ.

‘ಗೆಳೆಯರ ಗುಂಪು’ ಒಡೆದು ಹೋಗುತ್ತದೆ. ಬೇಂದ್ರೆಯವರಿಗೆ ಗದಗಿನಲ್ಲಿ ಶಿಕ್ಷಕ ನೌಕರಿ ಲಭಿಸುತ್ತದೆ. ಹೊಟ್ಟೆಪಾಡಿಗಾಗಿ ಧಾರವಾಡವನ್ನು ಬಿಡಲೇ ಬೇಕಾಗುತ್ತದೆ. ಈ ಕಾರಣಗಳಿಂದಾಗಿ ಧಾರವಾಡವನ್ನು ಅಗಲಿ ಹೋಗುವುದು ಬೇಂದ್ರೆಯವರಿಗೆ ಅನಿವಾರ್ಯ ವಾಗುತ್ತದೆ. ಈ ಕವಿ, ತಾಯಿಯನ್ನು ಅಗಲುತ್ತಿರುವ ಮಗುವಿನಂತೆ ಪರಿತಪಿಸಿದ್ದಾರೆ.
(“ನಾವು ಬರತೇವಿನ್ನ ನೆನಪಿರಲಿ ತಾಯಿ,
ನಂ ನಮಸ್ಕಾರ ನಿಮಗ .”)

ಧಾರವಾಡಕ್ಕೆ ಮರಳಿ ಬಂದಾಗ, ತಾಯಿಯನ್ನು ಕಳೆದುಕೊಂಡ ಮಗು ಮರಳಿ ತಾಯ ಮಡಿಲಿಗೆ ಬಂದಂತೆ ಸಂಭ್ರಮಿಸಿದ್ದಾರೆ.
(“ಬಂದಿರುವೆನಿದೊ ತಾಯಿ, ಧಾರವಾಡದ ಮಾಯಿ,  
ಸರ್ವಮಂಗಳೆ ನಿನ್ನ ಭಾಗ್ಯದುಡಿಗೆ.)

ಧಾರವಾಡದ ನಿಸರ್ಗವೈಭವನ್ನು ಮನಸ್ಸು ತುಂಬಿ ಹಾಡಿದ್ದಾರೆ.
(“ಬಾರೊ ಸಾಧನಕೇರಿಗೆ,
ಮರಳಿ ನಿನ್ನೀ ಊರಿಗೆ!)

ಬೇಂದ್ರೆಯವರು ಧಾರವಾಡದ ಬಗೆಗೆ ಬರೆದ ಕವನಗಳಲ್ಲಿ ಮನಸ್ಸನ್ನು ತೀವ್ರವಾಗಿ ಕಲಕುವ ಕವನವೆಂದರೆ:
ನಾವು ಬರತೇವಿನ್ನ ಎನ್ನುವ ಕವನ.
……………………………………………………………..

ಕವನದ ಪೂರ್ತಿಪಾಠ ಹೀಗಿದೆ:

===೧===

ನಾವು ಬರತೇವಿನ್ನ ನೆನಪಿರಲಿ ತಾಯಿ
ನಂ ನಮಸ್ಕಾರ ನಿಮಗ,
ಕಾಯ್ದಿರಿಕೂಸಿನ್ಹಾಂಗ ನಮಗ
ನಾವು ಬರತೇವಿನ್ನ (ಪಲ್ಲ)

ಜಗದ ಕೂಡ ಬಂದೆವು ಜಗಳಾಡಿ
ಕೊಟ್ಟಿರಿ ನಿಮ್ಮ ತೊಡಿ
ಅಲ್ಲಿ ನಿದ್ದಿ ಮಾಡಿಎದ್ದೆವೀಗ
ಯಾವುದೋ ಹೊಸಾ ನಸುಕಿನ್ಯಾಗs |

ನೀವು ತಾಯಿತನ ನಡಿಸಿದರಿ
ಹಾಲ ಕುಡಿಸಿದರಿ
ಮರಳು ಆಡಿಸಿದರಿ ಕನಸಿನ್ಯಾಗ
ಬೆಳಗುಆತು ಭಾಳ ಬ್ಯಾಗ

ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ
ಚಿವುಗುಡತಾವ ಹಕ್ಕಿ
ಕತ್ತಲಿ ತಲಿಕುಕ್ಕಿಬಾನಮ್ಯಾಗ
ಬೆಳಕುಹಾರ್ಯಾವ ಮೂಡಲದಾಗ

ನಿಮ್ಮ ಸೆರಗ ಮರೀ ಮಾಡಿದಿರಿ
ಲಾಲಿ ಹಾಡಿದಿರಿ
ಆಟ ಆಡಿದಿರಿಏನೋ ಹಾಂಗs
ಮರೆತೆವುಕಳೆದ ಜನ್ಮಧಾಂಗ

ಜೋಲಿಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲುಲೋಕದಾಗ ?
ನಾವು -- ಮರತೇವದನ ಹ್ಯಾಂಗ ?

ಅಕ್ಕತಂಗಿಮಗಳು ಹಡೆದ ತಾಯಿ
ಕನ್ನಿಗೆಳತಿಮಡದಿದಾಯಿಸಾಕುದಾಯಿ
ಜೋಡೆಸೂಳೆ ಮತ್ತೆ ಮಾಯಿವಿಧೀಮಾಯಿ

ನೂರಾರು ವೇಷ ಕಳಿಸಿದಿರಿ
ಮಡ್ಡ ಇಳಿಸಿದಿರಿ
ಮಾನ ಬೆಳಿಸಿದಿರಿ

ಯಾಕೋ ಕರುಣ ಬಂತು ತಮಗs
ನಾವುಶರಣ ಬರಲಿಲ್ಲ ಸುಮಗs

ನಾವು ಬರತೇವಿನ್ನ......

===೨===

ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ
ನಿಮ್ಮ ಕೃಪಾ ಛತ್ರ
ಕಾರ್ಯ ಸುಸೂತ್ರನಡೀತಿರಲಿ
ನಿಮ್ಮಹೆಜ್ಜೆ ಜೋಡಿಗಿರಲಿ

ಹಗಲಾಗಲಿ ಧುರಂಧುರಿ ಜಾತ್ರಿ
ನಿದ್ದಿಗಿರಲಿ ರಾತ್ರಿ
ಜೀವಕ್ಕs ಖಾತ್ರಿನಿಮ್ಮದಿರಲಿ
ಜನ್ಮ ಮರಣ, ಏನs ಬರಲಿ

ಮಾಡೀತೇನು ಮಣ್ಣಿನs ಗೊಂಬಿ ?
ನಿಮ್ಮ ಹೆಸರ ನಂಬಿ
ಹೊತ್ತುಕೊಂಡು ಕಂಬಿಕುಣಿಯುತಿರಲಿ
ಸ್ವರ್ಗನರಕ ಯಾವುದೂ ಇರಲಿ ?

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ
ಹೊತ್ತುತಿರಲಿ ಗ್ಯಾನ
ಸುಡಲಿ ಅಜ್ಞಾನ-ಪ್ರೇಮ ಮುರಲಿ
ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು
ಅದs ನಮಗ ಬೇಕು
ಸುಡೋ ಸೂರ್ಯ ಸಾಕುಯಾಕ ತರಲಿ ?
ಹೊತ್ತಾರ ಯಾರು ಒಣಾ ಹರಲಿ !

ಕತ್ತಲೀ ಕೆಚ್ಚ ಕೆದರೀಕೆಚ್ಚಿ ಕೆದರಿ !
ಬಣ್ಣ ಬಣ್ಣ ಬಂತು ಚೆದರಿಸುತ್ತ ಚೆದರಿ
ಮಕ್ಕಳಾಟ ತೋರಿಸಿದಿರಿಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು
ಅಂತನs ಚುಣುಕು
ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ
ಚಿಕ್ಕೀ ಮಳೀ ಸುರಿಸಿದ್ಹಾಂಗ |

ನಾವು ಬರತೇವಿನ್ನ....
-----------------------------------

ಬೇಂದ್ರೆ ಈ ಕವನವನ್ನು ಎರಡು ಭಾಗಗಳಲ್ಲಿ ಹಾಡಿದ್ದಾರೆ. ಮೊದಲ ಭಾಗದಲ್ಲಿ ಧಾರವಾಡ ತಮ್ಮನ್ನು ರೂಪಿಸಿದ ಬಗೆಯನ್ನು, ಧಾರವಾಡದ ಜೊತೆಗಿರುವ ತಮ್ಮ ಸಂಬಂಧವನ್ನು ಬೇಂದ್ರೆ ನೆನಸಿಕೊಳ್ಳುತ್ತಾರೆ.
ಕವನದ ಮೊದಲ ನುಡಿಯಲ್ಲಿ ತಮ್ಮನ್ನು ಕೂಸಿಗೆ ಹೋಲಿಸಿಕೊಂಡ ಬೇಂದ್ರೆ ಕಾಯ್ದಿರಿಕೂಸಿನ್ಹಾಂಗ ನಮಗಎಂದು ಧಾರವಾಡದ ತಾಯಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಾರೆ.
ಮುಂದಿನ ನುಡಿಯಲ್ಲಿ ಪುಟ್ಟ ಬಾಲಕನೊಬ್ಬ ಸರೀಕರೊಡನೆ ಜಗಳಾಡಿ ಬಂದು, ತನ್ನ ತಾಯಿಯಿಂದ ಸಮಾಧಾನ ಪಡೆಯುತ್ತಿರುವ ಕಲ್ಪನೆ ವ್ಯಕ್ತವಾಗಿದೆ:

ಜಗದ ಕೂಡ ಬಂದೆವು ಜಗಳಾಡಿ
ಕೊಟ್ಟಿರಿ ನಿಮ್ಮ ತೊಡಿ
ಅಲ್ಲಿ ನಿದ್ದಿ ಮಾಡಿಎದ್ದೆವೀಗ
ಯಾವುದೋ ಹೊಸಾ ನಸುಕಿನ್ಯಾಗs |

ಧಾರವಾಡ ಬೇಂದ್ರೆಯವರ ಕಾವ್ಯಕ್ಷೇತ್ರ. ಗೆಳೆಯರ ಗುಂಪು ಕಟ್ಟಿಕೊಂಡು ಬೇಂದ್ರೆ ನಲಿದಾಡಿದ್ದು ಇಲ್ಲಿಯೆ. ಧಾರವಾಡದ ವಾತಾವರಣ, ಸಾಹಿತ್ಯಕೃಷಿಯ ಮೊದಲ ದಿನಗಳ ಸಂಭ್ರಮ, ಇಲ್ಲಿಯ ನಲ್ಮೆಯ ಗೆಳೆಯರ ಒಡನಾಟಗಳು ಬೇಂದ್ರೆಯವರಿಗೆ ಧಾರವಾಡದ ತಾಯಿಯ ಲಾಲನೆಯಂತೆ ಭಾಸವಾಗುತ್ತದೆ. ಗೆಳೆಯರ ಜೊತೆಗಿನ ಮನಸ್ತಾಪ, ‘ಗುಂಪಿನ ವಿಘಟನೆ ಅವರಿಗೆ ಹುಡುಗರ ಜಗಳಾಟದಂತೆ ಭಾಸವಾಗುತ್ತದೆ.

ಈ ಎಲ್ಲ ಆಟ, ಹುಡುಗಾಟ, ಜಗಳಾಟಗಳನ್ನು ಆಡಿ ಬಂದ ಮಗುವನ್ನು ತಾಯಿ ತನ್ನ ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿಸುವಂತೆ, ಧಾರವಾಡದ ತಾಯಿ ಇವರನ್ನು ರಂಬಿಸಿದ್ದಾಳೆ. ಇವೆಲ್ಲ ಈಗ ಬೇಂದ್ರೆಯವರಿಗೆ ಕನಸಿನಂತೆ ಭಾಸವಾಗುತ್ತಿವೆ. ಆದರೆ, ಈಗ ನಿದ್ದೆಯನ್ನು ಬಿಟ್ಟು ಏಳುವದು ಅನಿವಾರ್ಯ. ಯಾವುದೋ ಹೊಸ ನಸುಕು ಮೂಡಿದೆ. ಬದುಕಿನ ಸತ್ಯ ಕಾಡಿದೆ. ಹೊಸ ದಿನದಲ್ಲಿ ಏನು ಕಾದಿದೆಯೋ ತಿಳಿಯದು. ಈ ನಸುಕು ಎಂತಹದೊ ಎನ್ನುವ ದುಗುಡ ಬೇಂದ್ರೆಯವರಿಗೆ !

ಧಾರವಾಡದ ತಾಯಿ ಬೇಂದ್ರೆಯವರಿಗೆ ಹಡೆದ ತಾಯಿಯಷ್ಟೇ ಪೋಷಣೆಯನ್ನು ನೀಡಿದವಳು. ಅದಕ್ಕಂತೆಯೇ ಮುಂದಿನ ನುಡಿಯಲ್ಲಿ ಬೇಂದ್ರೆಯವರು ಆಕೆಗೆ
ನೀವು ತಾಯಿತನ ನಡೆಸಿದರಿ ,ಹಾಲು ಕುಡಿಸಿದಿರಿ ಎಂದು ಗೌರವ ಸೂಚಿಸುತ್ತಾರೆ. ಮತ್ತೆ ಮತ್ತೆ ಎತ್ತಿಕೊಂಡು ಆಡಿಸಿದಿರಿ ಎಂದು ಆತ್ಮೀಯವಾಗಿ ನೆನಸಿಕೊಳ್ಳುತ್ತಾರೆ.

ನೀವು-ತಾಯಿತನ ನಡಿಸಿದರಿ
ಹಾಲ ಕುಡಿಸಿದರಿ
ಮರಳು ಆಡಿಸಿದರಿ ಕನಸಿನ್ಯಾಗ
ಬೆಳಗುಆತು ಭಾಳ ಬ್ಯಾಗ

ಆದರೆ ಇದೆಲ್ಲ ಮೂರು ಗಳಿಗೆಯ ಕನಸಿನ ಆಟ. ಕನಸು ಕರಗಿತು ; ಬಹಳ ಬೇಗನೆ ಬೆಳಗು ಆಗಿ ಹೋಯಿತು. ಪ್ರಖರ ವಾಸ್ತವತೆಗೆ ಬೇಂದ್ರೆಯವರು ಕಣ್ಣು ಬಿಡಲೇ ಬೇಕಾದ ಸಂದರ್ಭ ಬಂದಿದೆ.

ಇಲ್ಲಿಯವರೆಗೆ ಆಕಾಶದಲ್ಲಿ ಮಿಣಕುತ್ತಿರುವ ಚಿಕ್ಕಿಗಳು , ಈ ಹುಡುಗನನ್ನು ಮಾಯಾಲೋಕಕ್ಕೆ ಕರೆದೊಯ್ದ ಪರಿಕರಗಳು (ಬೇಂದ್ರೆಯವರ ಕಲ್ಪನಾಸ್ರೋತಗಳು). ಇವನ ಸಂಗಾತಿಗಳೇ ಆಗಿದ್ದ ಈ ಚಿಕ್ಕಿಗಳು ಈಗ ಕಣ್ಣು ಮುಚ್ಚಿಕೊಳ್ಳುತ್ತಿವೆ. ಬೆಳಗಾಯಿತಲ್ಲ ಎನ್ನುವ ಅನಿವಾರ್ಯತೆಯಿಂದ ಹಕ್ಕಿಗಳು ಚಿವಗುಟ್ಟುತ್ತ ಏಳುತ್ತಿವೆ.

ಕಣ್ಣು ಮುಚ್ಚಿಕೊಳ್ಳತಾವ ಚಿಕ್ಕಿ
ಚಿವುಗುಡತಾವ ಹಕ್ಕಿ
ಕತ್ತಲಿ ತಲಿಕುಕ್ಕಿಬಾನಮ್ಯಾಗ
ಬೆಳಕುಹಾರ್ಯಾವ ಮೂಡಲದಾಗ.

ಮೂಡಲದಲ್ಲಿ ಮೂಡಿದ ಬಾನು ಕತ್ತಲೆಯ ತಲೆಯನ್ನು ಕುಕ್ಕಿ ಮೂಡುತ್ತಿದೆ. ಈ ಬೆಳಕು ಕಣ್ಣು ಕುಕ್ಕುವ ಬೆಳಕು, ದುಗುಡದ ಬೆಳಕು, ನೆಮ್ಮದಿಯ ಬೆಳಕಲ್ಲ.

ನಿಮ್ಮ ಸೆರಗ ಮರೀ ಮಾಡಿದಿರಿ
ಲಾಲಿ ಹಾಡಿದಿರಿ
ಆಟ ಆಡಿದಿರಿಏನೋ ಹಾಂಗs
ಮರೆತೆವುಕಳೆದ ಜನ್ಮಧಾಂಗ

ಇಂತಹ ಪ್ರಖರ ಬೆಳಕು ಮೂಡಿದಾಗಲೆಲ್ಲ, ದುಗುಡು, ದುಮ್ಮಾನಗಳು ಮುತ್ತಿದಾಗಲೆಲ್ಲ, ಧಾರವಾಡದ ತಾಯಿ ಬೇಂದ್ರೆಯವರಿಗೆ ತನ್ನ ಸೆರಗನ್ನು ಹೊಚ್ಚಿ ಮರೆ ಮಾಡಿದ್ದಾಳೆ ; ತನ್ನ ಕಂದನಿಗೆ ಬಿಸಿಲು ತಗಲದಂತೆ ಕಾಳಜಿ ಮಾಡಿದ್ದಾಳೆ. ಬೆಳಕನ್ನು ಮರೆಸಲು, ಇರುಳಿನ ಭ್ರಮೆಯನ್ನು ಹುಟ್ಟಿಸಲು ಲಾಲಿ ಹಾಡಿದ್ದಾಳೆ ; ತನ್ನ ಈ ಕೂಸನ್ನು ಬಗೆಬಗೆಯಾಗಿ ಆಡಿಸಿದ್ದಾಳೆ.

ಇದೆಲ್ಲ ಈಗ ಕಳೆದ ಜನ್ಮದಲ್ಲಿ ನಡೆದು ಹೋದ ಘಟನೆಗಳೇನೋ ಎಂದು ಭಾಸವಾಗುತ್ತಿದೆ. ಆ ಬದುಕು ಈಗ ವಿಸ್ಮರಣೆಯಾಗುತ್ತಿದೆ. ಆದರೆ, ಆ ಬದುಕಿನಲ್ಲಿ ತನ್ನ ತಾಯಿ ತನ್ನನ್ನು ಜಪ್ಪಿಸಿಕೊಂಡು ಹೋದದ್ದನ್ನು ಮರೆಯಲಾದೀತೆ? ಹೆಜ್ಜೆ ಹೆಜ್ಜೆಗೆ ಅವಳು ಕೊಟ್ಟ ಆಸರೆಯನ್ನು ಮರೆಯಲಾದೀತೆ? ಬೇಂದ್ರೆಯವರು ಜೋಲಿ ತಪ್ಪಿದಾಗ ಧಾರವಾಡದ ತಾಯಿ ಇವರಿಗೆ ಕೈಕೋಲು ಆಗಿ, ಇವರ ಸಮತೋಲನವನ್ನು ಕಾಯ್ದಿದ್ದನ್ನು ಮರೆಯಲಾದೀತೆ?

ಜೋಲಿಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲುಲೋಕದಾಗ ?
ನಾವು - ಮರತೇವದನ ಹ್ಯಾಂಗ ?

ತನ್ನನ್ನು ಈ ಪರಿ ಸಂಬಾಳಿಸಿದ ತಾಯಿ ಈ ಲೋಕದಲ್ಲಿಯೇ ಅಮೂಲ್ಯಳು ಎಂದು ಬೇಂದ್ರೆ ಭಾವಿಸುತ್ತಾರೆ. ಅಂತಹ ತಾಯಿಯನ್ನು ಮರೆಯಲಾದೀತೆ?

ಹೆಣ್ಣು ಏನೆಲ್ಲ ರೂಪದಲ್ಲಿ ಗಂಡಿಗೆ ಸುಖ, ಸಖ್ಯ, ಸಮಾಧಾನ ನೀಡಬಲ್ಲಳೋ ಅದೆಲ್ಲವನ್ನು ಬೇಂದ್ರೆಯವರು ಧಾರವಾಡದಿಂದ ಪಡೆದಿದ್ದಾರೆ:

ಅಕ್ಕತಂಗಿಮಗಳು ಹಡೆದ ತಾಯಿ….
ಕನ್ನಿಗೆಳತಿಮಡದಿದಾಯಿಸಾಕುದಾಯಿ
ಜೋಡೆಸೂಳೆ ಮತ್ತೆ ಮಾಯಿವಿಧೀಮಾಯಿ…”

ಈ ನುಡಿಯ ಮೊದಲ ಸಾಲಿನಲ್ಲಿ ಬರುವ ಹೆಣ್ಣುರೂಪಗಳು ರಕ್ತಸಂಬಂಧದ ರೂಪಗಳು.
ಅಕ್ಕ, ತಂಗಿ, ಮಗಳು, ಹಡೆದ ತಾಯಿ ಇವರೆಲ್ಲ ರಕ್ತಸಂಬಂಧದಿಂದ ಅತಿ ಹತ್ತಿರವಾದವರು.
ಎರಡನೆಯ ಸಾಲಿನಲ್ಲಿ ಬರುವ ಕನ್ನಿಅಂದರೆ ಕನ್ಯೆ ಅರ್ಥಾತ್ ಕಾಮವಾಸನೆ ಇಲ್ಲದ ಎಳೆಯ ವಯಸ್ಸಿನ ಗೆಳತಿ. ಆನಂತರ ಬರುವವಳು ಗೆಳತಿ , ಇವಳು ಕನ್ಯೆಗಿಂತ ದೊಡ್ಡವಳು; ಚೆಲ್ಲಾಟವಾಡುವ ವಯಸ್ಸಿನವಳಿರಬಹುದು; ಬಹುಶಃ ಪ್ರಬುದ್ಧಳೂ ಇರಬಹುದು. ಇವಳ ಸ್ನೇಹದಲ್ಲಿ ಕಾಮವಾಸನೆಯು ಪ್ರಾರಂಭವಾಗುತ್ತಿರಬಹುದು.
ಬಳಿಕ ಬರುವವಳು ಮಡದಿ ;ಇವಳಂತೂ ಧರ್ಮ, ಅರ್ಥ ಹಾಗೂ ಕಾಮವೆನ್ನುವ ಮೂರು ಪುರುಷಾರ್ಥಗಳಲ್ಲಿ ಅಧಿಕಾರಯುತ ಜೊತೆಗಾತಿ. ಈ ಸಂಬಂಧಕ್ಕಿಂತ ಕೊಂಚ ಕಡಿಮೆಯಾದ ಸಂಬಂಧ ಅಂದರೆ ದಾಯಿಯದು ; ಇವರು ಹಣಕ್ಕಾಗಿ ಶುಶ್ರೂಷೆ ಮಾಡುತ್ತಿರುವ ದಾಯಿ ಹಾಗು ಸಾಕುದಾಯಿಯರು .

ಸಂಬಂಧದ ಇನ್ನೂ ಕೆಳಗಿನ ಸ್ತರಗಳಿಗೆ ಹೋಗುತ್ತ ಬೇಂದ್ರೆ ಧಾರವಾಡವನ್ನು ಜೋಡೆ ಎಂದೂ ಕರೆಯುತ್ತಾರೆ. ಜೋಡೆ ಎಂದರೆ ದುಡ್ಡಿಗಾಗಿ ನಿಮಗೆ ಜೋಡಾದವಳು, ದೈಹಿಕ ಸೇವೆ ನೀಡುವವಳು , ರಖಾವು ! ಇಷ್ಟಕ್ಕೇ ಬೇಂದ್ರೆ ನಿಲ್ಲುವದಿಲ್ಲ. ಕೊನೆಯದಾಗಿ ಸೂಳೆಯೂ ಸಹ ಇಲ್ಲಿ ಬರುತ್ತಾಳೆ.

ಆದರೆ, ಈ ನುಡಿಯ ಕೊನೆಯ ಸಾಲಿನ ಕೊನೆಯ ಭಾಗದಲ್ಲಿ ಚಿತ್ರ ಹಠಾತ್ ಬದಲಾಗುತ್ತದೆ. ಇಷ್ಟೆಲ್ಲ ರೂಪಗಳಿಂದ ಬೇಂದ್ರೆಯವರನ್ನು ರಮಿಸಿದ ಧಾರವಾಡವು ದೈವೀಕವೂ ಹೌದು .ಇವರ ಮೇಲೆ ಮೋಡಿ ಮಾಡುತ್ತಿರುವ, ಇವರಿಗೆ ಇಂದ್ರಜಾಲ ತೋರಿಸುತ್ತಿರುವ ಮಾಯಕಾತಿ ಅವಳು. ಅಷ್ಟೇ ಅಲ್ಲ, ಇವರ ಹಣೆಬರಹವನ್ನು ಬರೆಯುತ್ತಿರುವ ವಿಧಿಮಾಯಿಯೇ ಅವಳು !

ಧಾರವಾಡವು ಬೇಂದ್ರೆಯವರ ಮನೋರಂಗದಲ್ಲಿ ಇಷ್ಟೆಲ್ಲ ರೂಪಗಳನ್ನು ತಾಳಲು ಕಾರಣವೇನಿರಬಹುದು?

ಬೇಂದ್ರೆ ಸಾಹಿತ್ಯರಂಗದಲ್ಲಿ ಇನ್ನೂ ಚಿಕ್ಕವರಿದ್ದಾಗ ಇವರಿಗಿಂತ ಹಿರಿಯರಾದ ಸಾಹಿತಿಗಳು (ಉದಾಹರಣೆಗೆ ಆಲೂರು ವೆಂಕಟರಾಯರು) ಇವರ ಬೆನ್ನು ಚಪ್ಪರಿಸಿ, ಅಕ್ಕನಂತಹ ಅಕ್ಕರತೆಯನ್ನು ತೋರಿಸಿದ್ದಾರೆ. ಇವರಿಗಿಂತ ಚಿಕ್ಕ ಗೆಳೆಯರಾದ ವಿನಾಯಕ, ರಸಿಕ ರಂಗ ಇವರೆಲ್ಲ ಬೇಂದ್ರೆಯವರಿಂದ ಮಾರ್ಗದರ್ಶನ ಬಯಸುವ ತಂಗಿಯರು. ಇವರಿಗಿಂತ ಕಿರಿಯರು, ಇವರಿಂದ ಸ್ಫೂರ್ತಿ ಪಡೆದವರು, ಇವರ ಮಾರ್ಗದರ್ಶನ ಪಡೆದವರು, ಇವರ ಮಗಳ ಸಮಾನರು. ಇಂತಹ ಹಿರಿಯರಿಗೆ, ಕಿರಿಯರಿಗೆ ಎಲ್ಲರಿಗೂ ಆಶ್ರಯ ಕೊಟ್ಟವಳು ಧಾರವಾಡದ ತಾಯಿ.

ಬೇಂದ್ರೆಯವರು ತಮ್ಮ ಸಾಹಿತ್ಯರಚನೆಯನ್ನು ಪ್ರಾರಂಭಿಸಿದ ಕಾಲದಲ್ಲಿ ಇವರ ಹೆಸರು ಕನ್ನಡ ನಾಡಿನಲ್ಲಿ ಸಾವಕಾಶವಾಗಿ ಹರಡಹತ್ತಿತು. ಈ ಪ್ರಸಿದ್ಧಿಯನ್ನು ವಿಮಲ ಕೀರ್ತಿ ಎನ್ನಬಹುದು. ಇದನ್ನು ಯಾವುದೇ ಕಾಮನೆಯಿಲ್ಲದ ಕನ್ಯೆಯ ಸ್ನೇಹಕ್ಕೆ ಹೋಲಿಸಬಹುದು. ಆಬಳಿಕ ಗಳಿಸುವ ಕೀರ್ತಿಯಲ್ಲಿ ಕಾಮನೆಯ ಛಾಯೆ ಇರುವದರಿಂದ ಅವಳು ಗೆಳತಿ. ಬಳಿಕ ದೊರೆತ ಪ್ರಸಿದ್ಧಿಯು ಸಕಾರಣವಾದದ್ದು, ಕವಿಯನ್ನು ಹಿಂಬಾಲಿಸಿ ಬಂದದ್ದು ; ಆದುದರಿಂದ ಅದು ಮಡದಿಯಂತೆ. ಆನಂತರದ ಪ್ರಸಿದ್ಧಿಯು ಕವಿಯನ್ನು ಪೋಷಿಸುತ್ತದೆ. ಅಂತೆಲೇ ಅದು ದಾಯಿ, ಸಾಕುದಾಯಿ. ಕೀರ್ತಿಕಾಮನೆ ಪ್ರಬಲವಾದಾಗ ಅದು ಉಪಪತ್ನಿ ಇದ್ದ ಹಾಗೆ. ಕೊನೆಕೊನೆಗೆ ಅದು ಬೀದಿಸೂಳೆಯ ಮಟ್ಟಕ್ಕೂ ಇಳಿಯಬಹುದು.

ಬೇಂದ್ರೆ ಇವೆಲ್ಲಾ ಅವಸ್ಥೆಗಳಲ್ಲಿ ಹಾಯ್ದು ಹೋಗಿದ್ದಾರೆ. ಧಾರವಾಡದ ತಾಯಿ ಇವರ ಅವಸ್ಥೆಗಳನ್ನು ನೋಡಿ ನಕ್ಕಿದ್ದಾಳೆ ,--ಕೆಲವೊಮ್ಮೆ ಪ್ರೀತಿಯಿಂದ ಹಾಗು ಕೆಲವೊಮ್ಮೆ ಕರುಣೆಯಿಂದ. ಈ ಎಲ್ಲ ಅವಸ್ಥೆಗಳು ಈ ವಿಧಿಮಾಯೆಯೇ ತೊಡಿಸಿದ ವೇಷಗಳಲ್ಲವೆ?

ಇಷ್ಟೆಲ್ಲ ವೇಷ ಧರಿಸಿ, ಇಷ್ಟೆಲ್ಲ ಸೋಗು ಹಾಕಿ, ಸೋಗು ಬಿಡಿಸಿ, ಈ ಧಾರವಾಡದ ಮಾಯಿ ಸಾಧಿಸಿದ್ದೇನು ?

ನೂರಾರು ವೇಷ ಕಳಿಸಿದಿರಿ
ಮಡ್ಡ ಇಳಿಸಿದಿರಿ
ಮಾನ ಬೆಳಿಸಿದಿರಿ

ಧಾರವಾಡವೆಂಬ ಈ ಮಾಯಕಾತಿ ಬೇಂದ್ರೆಯವರಿಗೆ ನೂರಾರು ವೇಷ ತೊಡಿಸಿದಳು, ಕಳಿಚಿಸಿದಳು.
ಗೆಳೆಯನಾಗಿ, ಕವಿಯಾಗಿ, ಗಂಡನಾಗಿ, ತಂದೆಯಾಗಿ ಬೇಂದ್ರೆ ಕುಣಿದರು, ಕನಲಿದರು, ಬೆಂದರು !
ಬೆಂದು ಬೇಂದ್ರೆ ಆದರು.
ಈ ಪ್ರಕ್ರಿಯೆಯಲ್ಲಿ ಅವರ ತಲೆಯಲ್ಲಿದ್ದ ಮಡ್ಡು ಇಳಿಯಿತು. ಮಡ್ಡು ಅಂದರೆ ಬುದ್ಧಿಗೇಡಿತನ. ಯಾರಿಗೇ ಆದರೂ ಇರುವ ಬುದ್ಧಿಗೇಡಿತನವೆಂದರೆ ಅಹಂ ಕರ್ತಾಎನ್ನುವ ಅಹಂಕಾರ. ಆ ಅಹಂಭಾವ ಕಳೆದ ಬಳಿಕ ಮಾನ ಬೆಳೆಯುತ್ತದೆ. ಮಾನ ಅಂದರೆ ಅಳತೆ, ನಿಜವಾದ ಯೋಗ್ಯತೆ.

(ತಾನು ನವಕೋಟಿ ನಾರಾಯಣನೆನ್ನುವ ಮಡ್ಡು ಪುರಂದರದಾಸರಿಗಿತ್ತು ; ಶೂರ ನಾಯಕ ಎನ್ನುವ ಮಡ್ಡು ಕನಕದಾಸರಿಗೆ ಇತ್ತು. ಹರಿಯ ಕರುಣೆಯಿಂದ ಈ ಮಡ್ಡು ಇಳಿದ ಬಳಿಕ ಇವರ ಮಾನಬೆಳೆಯಿತು.)

ಮನುಷ್ಯನ ಮಡ್ಡು ಇಳಿಸುವದೇ, ದೈವವು ಅವನ ಮೇಲೆ ತೋರಬಹುದಾದ ಕರುಣೆ. ಆ ಕರುಣೆಯ ಭರವಸೆಯಿಂದಲೇ ಬೇಂದ್ರೆಯವರು ತಮ್ಮ ದೈವವಾದ ಧಾರವಾಡದ ಆಶ್ರಯ ಪಡೆದವರು.
ಅದಕ್ಕೇ ಬೇಂದ್ರೆ ಹೇಳುತ್ತಾರೆ:

ಯಾಕೋ ಕರುಣ ಬಂತು ತಮಗs
ನಾವುಶರಣ ಬರಲಿಲ್ಲ ಸುಮಗs.”

ಆದರೆ ಈ ಸಂಬಂಧಕ್ಕೆ ಈಗ ಕೊನೆ ಬರುತ್ತಿದೆ.
ಬೇಂದ್ರೆ ಧಾರವಾಡ ತಾಯಿಗೆ ವಿದಾಯ ಹೇಳುತ್ತಿದ್ದಾರೆ.

ನಾವು ಬರತೇವಿನ್ನ ನೆನಪಿರಲಿ ತಾಯಿ
ನಂ ನಮಸ್ಕಾರ ನಿಮಗ.
………………………………………………………….
ಎರಡನೆಯ ಭಾಗದಲ್ಲಿ ಬೇಂದ್ರೆ ತಮ್ಮ ಈ ಪರಿಸ್ಥಿತಿಗೆ ಶರಣಾಗಿದ್ದಾರೆ. ಆದುದರಿಂದಲೇ, ತಾವು ಎಲ್ಲಿಯೇ ಹೋದರೂ ಸಹ ಧಾರವಾಡದ ತಾಯಿಯ ಕೃಪೆ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತಾರೆ. ಅಂದರೆ ಧಾರವಾಡದ ತಾಯಿ ಇವರಿಗೆ ಮಾನಸಿಕ ತಾಯಿ ಎನ್ನುವ ಸತ್ಯ ಹೊಳೆಯುತ್ತದೆ.

ಎಲ್ಲಿ ಹೋದಲ್ಲಿರಲಿ ನಮ್ಮ ಹತ್ರ
ನಿಮ್ಮ ಕೃಪಾ ಛತ್ರ
ಕಾರ್ಯ ಸುಸೂತ್ರನಡೀತಿರಲಿ
ನಿಮ್ಮಹೆಜ್ಜೆ ಜೋಡಿಗಿರಲಿ

ತಾಯಿಯ ಕೃಪೆ ತಮ್ಮ ಮೇಲಿದ್ದರೆ, ತಮ್ಮ ಎಲ್ಲ ಕಾರ್ಯಗಳೂ ಸುಸೂತ್ರವಾಗಿ ಸಾಗುತ್ತವೆ ಎನ್ನುವ ನಂಬಿಕೆ ಬೇಂದ್ರೆಯವರದು. ತಾಯಿಯ ಕಾಣದ ಹೆಜ್ಜೆ ತಮ್ಮ ಜೊತೆಗಿರಲಿ ಎಂದು ಅವರು ತಾಯಿಯನ್ನು ಬೇಡಿಕೊಳ್ಳುತ್ತಾರೆ.

ಕನಸುಗಳಿಂದ ತುಂಬಿದ ರಾತ್ರಿಯನ್ನು ತಾಯ ಮಡಿಲಿನಲ್ಲಿ ಕಳೆದ ಬೇಂದ್ರೆಯವರು, ಹಗಲನ್ನು ಬರಮಾಡಿಕೊಳ್ಳಲು ಅಂದರೆ ಕಟು ವಾಸ್ತವತೆಯನ್ನು ಎದುರಿಸಲು ಮಾನಸಿಕವಾಗಿ ಈಗ ಸಿದ್ಧರಾಗಿದ್ದಾರೆ. ಇದೆಲ್ಲ ಭಗವದಿಚ್ಛೆಯೆಂದು ಅವರಿಗೆ ಅರಿವಾಗಿದೆ. ಆದುದರಿಂದ ಭಗವಂತ ಏನು ಜಾತ್ರೆ ನಡೆಯಿಸುತ್ತಾನೊ ನಡೆಯಿಸಲಿ , ಈ ಹಗಲಿನಲ್ಲಿ ಏನೆಲ್ಲ ಧುಮಡಿ ನಡೆಯಲಿದೆಯೊ ನಡೆಯಲಿ, ಆದರೆ ತಾಯ ಮಡಿಲಿನಲ್ಲಿ ನೆಮ್ಮದಿಯ ನಿದ್ರೆಗಾದರೂ ಅವಕಾಶವಿರಲಿ, ತಮ್ಮ ಕನಸುಗಾರಿಕೆಗೆ ಕೊನೆ ಬರದಿರಲಿ ಎಂದು ಅವರು ಹಂಬಲಿಸುತ್ತಾರೆ:

ಹಗಲಾಗಲಿ ಧುರಂಧುರಿ ಜಾತ್ರಿ
ನಿದ್ದಿಗಿರಲಿ ರಾತ್ರಿ
ಜೀವಕ್ಕs ಖಾತ್ರಿನಿಮ್ಮದಿರಲಿ
ಜನ್ಮ ಮರಣ, ಏನs ಬರಲಿ

ಈ ಬದುಕಿನಲ್ಲಿ ತಮ್ಮ ಸ್ಥಿತಿ ಏನೇ ಆಗಲಿ, ಮರಣವೇ ಬರಲಿ, ಹೊಸ ಜನ್ಮವೇ ಬರಲಿ, ಆದರೆ ಧಾರವಾಡದ ತಾಯಿಯ ಪ್ರೀತಿ ಮಾತ್ರ ತಮ್ಮ ಕೈಬಿಡದಿರಲಿ ಎಂದು ಬೇಂದ್ರೆ ಹಾರೈಸುತ್ತಾರೆ. ಯಾಕೆಂದರೆ, ತಮ್ಮದೇನಿದ್ದರೂ ಅದು ಈ ತಾಯಿಯ ಕೃಪೆ.

ಮಾಡೀತೇನು ಮಣ್ಣಿನs ಗೊಂಬಿ ?
ನಿಮ್ಮ ಹೆಸರ ನಂಬಿ
ಹೊತ್ತುಕೊಂಡು ಕಂಬಿಕುಣಿಯುತಿರಲಿ
ಸ್ವರ್ಗನರಕ ಯಾವುದೂ ಇರಲಿ ? ”

ಬೇಂದ್ರೆ ತಮ್ಮನ್ನು ಯಾವಾಗಲೂ ಮಣ್ಣಿನ ಗೊಂಬೆ ಎಂದೇ ಭಾವಿಸುತ್ತಾರೆ. ತಮ್ಮಲ್ಲಿರುವ ಮಾತೃಚೈತನ್ಯವೇ ತಮ್ಮನ್ನು ಆಡಿಸುತ್ತಿರುವದು ಎಂದು ಅವರ ನಂಬಿಕೆ. ಭಕ್ತರು ದೇವರ ಧ್ವಜವನ್ನು ಹೊತ್ತುಕೊಂಡು, ದೈವದ ಹೆಸರು ಹೇಳುತ್ತ ಕುಣಿಯುವ ಹಾಗೇ, ತಾವೂ ಸಹ ಧಾರವಾಡದ ತಾಯಿಯ ಹೆಸರು ಹೇಳುತ್ತ, ಅವಳ ಕಂಬಿಯನ್ನು (=ಧ್ವಜವನ್ನು) ಎತ್ತಿಕೊಂಡು ಕುಣಿಯುವೆ ; ಅವಳು ಬೇಕಾದರೆ ಸ್ವರ್ಗವನ್ನೇ ದಯಪಾಲಿಸಲಿ ಅಥವಾ ನರಕವನ್ನೇ ಪ್ರಸಾದಿಸಲಿ ಎನ್ನುವದು ಅವರ ಶ್ರದ್ಧೆ.

ಬೇಂದ್ರೆಯವರಿಗೆ ತಮ್ಮ ವನವಾಸದ ರಹಸ್ಯ ಈಗ ಅರಿವಾಗುತ್ತಿದೆ. ವನವಾಸದಲ್ಲಿ ಮನುಷ್ಯನು ತಪಿಸಿ, ಬೆಂದು ದೇವರನ್ನು ಅರಿತುಕೊಳ್ಳಲಿ ಎನ್ನುವದೇ ಈ ಎಲ್ಲ ಸಂಕಟದ ಹಿಂದಿನ ದೈವೇಚ್ಛೆ. ಆ ಕಾರಣಕ್ಕಾಗಿಯೇ ಬೇಂದ್ರೆಯವರಿಗೆ ಈ ವನವಾಸ,ಈ ತಪಸ್ಸು ವಿಧಿಲಿಖಿತವಾಗಿದೆ ಎನ್ನುವ ಅರಿವಾಗಿದೆ.

ತಾವು ಮೂರೂ ಹೊತ್ತು ಈ ಮಾಯಿಯ ಧ್ಯಾನದಲ್ಲಿಯೇ ಇರುವೆ; ಆ ಧ್ಯಾನವು ತಮಗೆ ಜ್ಞಾನವನ್ನು ಪ್ರಸಾದಿಸುವದು, ಅಜ್ಞಾನವನ್ನು ಸುಡುವದು ಎನ್ನುವದು ಅವರ ನಂಬಿಕೆ. ಬೇಂದ್ರೆಯವರಿಗೆ ಜ್ಞಾನದ ಸಿದ್ಧಿ ಎಂದರೆ ದೈವೀ ಪ್ರೇಮವನ್ನು ಪಡೆಯುವದು ಮಾತ್ರ. ಆ ದೈವೀ ಪ್ರೇಮದ ಕೃಷ್ಣನ ಕೊಳಲು ತಮಗೆ ಕೇಳಿಸುತ್ತಿರಲಿ ಎಂದು ಅವರು ಬೇಡಿಕೊಳ್ಳುತ್ತಾರೆ.

ಮೂರು ಹೊತ್ತಿನ್ಯಾಗ ನಿಮ್ಮ ಧ್ಯಾನ
ಹೊತ್ತುತಿರಲಿ ಗ್ಯಾನ
ಸುಡಲಿ ಅಜ್ಞಾನ-ಪ್ರೇಮ ಮುರಲಿ
ಕಿವಿಗೆ ಅದೇ ಕೇಳಸತಿರಲಿ.

ನಿಮ್ಮ ಚಂದ್ರ ಜ್ಯೋತಿಯಾ ಬೆಳಕು
ಅದs ನಮಗ ಬೇಕು
ಸುಡೋ ಸೂರ್ಯ ಸಾಕುಯಾಕ ತರಲಿ ?
ಹೊತ್ತಾರ ಯಾರು ಒಣಾ ಹರಲಿ !

ತಮಗೆ ಕಟು ವಾಸ್ತವತೆಯ ಜ್ಞಾನ ಬೇಕಾಗಿಲ್ಲ, ಸುಡುವ ಸೂರ್ಯ ಬೇಕಾಗಿಲ್ಲ, ಚಂದ್ರನ ಬೆಳದಿಂಗಳಿನಂತಹ ತಾಯ ಮಮತೆ ಬೇಕು. ತನಗೆ ಗೊತ್ತಿರುವದೇ ಜ್ಞಾನವೆನ್ನುವ ಜಗಳಾಟಕ್ಕೆ ಕಾರಣವಾಗುವ ಜ್ಞಾನ ಯಾರಿಗೆ ಬೇಕು-- ಎನ್ನುವದು ಅವರ ನಿಲುವು.

ಕತ್ತಲೆಯ ಶಕ್ತಿ ಕಡಿಮೆಯೇ? (ಕತ್ತಲೆ ಅಂದರೆ ಜೀವಕ್ಕಿರುವ ಅಜ್ಞಾನ, ಮಾಯೆ.) ಕತ್ತಲೆಯ ಮಾಯಾಜಾಲದಲ್ಲಿಯೇ ಕಲ್ಪನೆಯ ಬಣ್ಣಗಳೆಲ್ಲ ಸಿಗುವವು. ಆ ಬಣ್ಣಗಳನ್ನೆಲ್ಲ ಹಾರಿಸಿ, ಮಕ್ಕಳಾಟ ತೋರಿಸಿದ್ದು ಧಾರವಾಡ ತಾಯಿಯ ಮಹಿಮೆ.(ಅಂತೆಯೇ, ಬೇಂದ್ರೆಯವರು ಧಾರವಾಡವನ್ನು ಮಾಯಿ’, ‘ವಿಧೀಮಾಯಿಎಂದು ಕರೆಯುತ್ತಾರೆ.) ತನ್ನ ಮಗುವಿನ ಮೇಲಿನ ಅಪಾರ ಮಮತೆಯಿಂದಲೇ, ಧಾರವಾಡದ ತಾಯಿ ಅವರಿಗೆ ಈ ಎಲ್ಲ ಮಕ್ಕಳಾಟಗಳನ್ನು ತೋರಿಸಿದ್ದಾಳೆ. ತನ್ನ ಹೊಟ್ಟೆಯ ತುಣುಕು ಎನ್ನುವ ಮಮತೆಯಿಂದಲೇ ಧಾರವಾಡದ ತಾಯಿಯು ಬೇಂದ್ರೆಯವರಿಗೆ ಈ ಮಿಣುಕು ಬೆಳಕನ್ನು ತೋರಿಸಿದ್ದಾಳೆ. (ಪ್ರಖರ ಪ್ರಕಾಶವೆನ್ನುವ ಆತ್ಮಜ್ಞಾನವನ್ನಲ್ಲ.)

ಕತ್ತಲೀ ಕೆಚ್ಚ ಕೆದರೀಕೆಚ್ಚಿ ಕೆದರಿ !
ಬಣ್ಣ ಬಣ್ಣ ಬಂತು ಚೆದರಿಸುತ್ತ ಚೆದರಿ
ಮಕ್ಕಳಾಟ ತೋರಿಸಿದಿರಿಹಾರಿಸಿದಿರಿ.

ನಿಮ್ಮ ಹೊಟ್ಟೀ ಕರುಳಿನಾ ತುಣುಕು
ಅಂತನs ಚುಣುಕು
ತೋರಿಸಿದಿರಿ ಮಿಣುಕು

ಮಿಣುಮಿಣುಕು ದೀಪದಾಗ
ಚಿಕ್ಕೀ ಮಳೀ ಸುರಿಸಿದ್ಹಾಂಗ |

ಕೊನೆಯ ಎರಡು ಸಾಲುಗಳಂತೂ ಅದ್ಭುತವಾಗಿವೆ. ಬೇಂದ್ರೆಯವರು ತನ್ನನ್ನು ಒಂದು ಮಿಣುಕು ದೀಪಕ್ಕೆ ಹೋಲಿಸಿಕೊಂಡು, ಧಾರವಾಡದ ತಾಯಿ ಈ ಮಿಣುಕು ದೀಪದಲ್ಲಿ ಆಕಾಶದಲ್ಲಿಯ ಚಿಕ್ಕಿಗಳ ಮಳೆಯನ್ನೇ ಸುರಿಸಿದ್ದಾಳೆ ಎಂದು ಹೇಳುತ್ತಾರೆ. ಹಾಗಾಗಿ ಈ ಮಿಣುಕು ದೀಪದಲ್ಲಿರುವ ಬೆಳಕು ಚಿಕ್ಕೆಗಳ ಬೆಳಕು, ಸಾಮಾನ್ಯ ಬೆಳಕಲ್ಲ. ಇದು ಬೇಂದ್ರೆಯವರ ತಪಸ್ಸಿನ ಸಿದ್ಧಿ.

ಧಾರವಾಡವನ್ನು ಮಾಯಿಎಂದು ಕರೆಯುವಾಗ ಬೇಂದ್ರೆಯವರು ಮಾಯಕಾತಿ(=ಮಾಟಗಾತಿ) ಎನ್ನುವ ಅರ್ಥವನ್ನು ಬಳಸುವದಲ್ಲದೇ, ದೈವಮಾಯೆ, ವಿಧೀಮಾಯಿ (=ಜೀವಗಳಿಗೆ ಅಜ್ಞಾನದ ಮುಸುಕು ಹಾಕಿ ಆಟ ಆಡಿಸುವವಳು) ಎನ್ನುವ ಅರ್ಥದಲ್ಲಿಯೂ ಬಳಸುತ್ತಾರೆ. ಈ ದೈವಮಾಯೆ ಹೇಗೆ ತನ್ನನ್ನು ಕುಣಿಸಿತು, ನಲಿಸಿತು ಎನ್ನುವದನ್ನು ಬಣ್ಣಿಸುವ ಬೇಂದ್ರೆಯವರು, ಧಾರವಾಡವನ್ನು ಬಿಟ್ಟುಹೋಗುವ ಸಂದರ್ಭದಲ್ಲಿ, ಆತ್ಮಜ್ಞಾನದ ಒಂದು ಸೆಳಕನ್ನು ಕಾಣುತ್ತಾರೆ. ಆದರೆ ಆ ಬೆಳಕು ತನಗೆ ಬೇಡ, ತನಗೆ ಮಾಯೆ ಮಮತೆಯಿಂದ ತೋರಿಸುವ ಬಣ್ಣಗಳೇ ಇರಲಿ ಎಂದು ಹೇಳುತ್ತಾರೆ. ಲೋಕಚೇಷ್ಟೆಗೆ ಕಾರಣವಾದ ಆ ಮಾಯಾಶಕ್ತಿಯನ್ನು, ಜಗನ್ಮಾತೆಯನ್ನು, ಆ ಧಾರವಾಡದ ತಾಯಿಯನ್ನು ನಂಬಿ, ತಾನವಳ ಕೋಲನ್ನು(=ಧ್ವಜವನ್ನು) ಹೊತ್ತುಕೊಂಡು ಕುಣಿಯುವ ಆಳಾಗುತ್ತೇನೆ ಎಂದು ಬೇಂದ್ರೆ ತಮ್ಮ ಹಂಬಲವನ್ನು ವ್ಯಕ್ತ ಪಡಿಸುತ್ತಾರೆ.

ವೈಯಕ್ತಿಕ ಆಘಾತಗಳು ಬೇಂದ್ರೆಯವರನ್ನು ( ಅಥವಾ ಯಾವುದೇ ವ್ಯಕ್ತಿಯನ್ನು) ಆಧ್ಯಾತ್ಮದ ದಿಕ್ಕಿಗೆ ತಿರುಗಿಸುವ ಪರಿಯನ್ನು ಸಹ ಈ ಕವನದಲ್ಲಿ ನಾವು ಕಾಣಬಹುದು.

ಬೇಂದ್ರೆಯವರ ಕವನಗಳಲ್ಲಿ ಪ್ರಾಸಗಳು ಅರ್ಥದ ಆಳಾಗಿ ದುಡಿಯುವ ಉದಾಹರಣೆಯನ್ನು ಇಲ್ಲಿ ನೋಡಬಹುದು:

ಜೋಲಿಹೋದಾಗ ಆದಿರಿ ಕೋಲು
ಹಿಡಿದಿರಿ ನಮ್ಮ ತೋಲು
ಏನು ನಿಮ್ಮ ಮೋಲುಲೋಕದಾಗ ?
ನಾವು --ಮರತೇವದನ ಹ್ಯಾಂಗ ?

ತಮ್ಮ ಜೋಲಿ ಹೋದಾಗ, ತಾಯಿ ತನ್ನ ಕೈಯ ಕೋಲಾದಳು, ತನ್ನ ಸಮತೋಲನ ಕಾಯ್ದಳು ; ಅದು ಅವಳ ಘನತೆ.ಈ ಅರ್ಥವನ್ನು ಹೇಳುವ ಸಾಲುಗಳು, ಅಲ್ಲಿಯ ಪದಗಳು ಎಷ್ಟು ಸರಳವಾಗಿ, ಲೀಲಾಜಾಲವಾಗಿ ಪ್ರಾಸಬದ್ಧವಾಗಿವೆ ಎನ್ನುವದನ್ನು ಗಮನಿಸಿದಾಗ ಸ್ವತಃ ಸರಸ್ವತಿಯೇ ಈ ಕವಿಯ ನಾಲಿಗೆಯ ಮೇಲಿದ್ದಾಳೊ ಎನ್ನುವ ಭಾಸವಾಗುವದು.

ಇದು ಧಾರವಾಡದ ತಾಯಿಯ ಕರುಣೆ ಎಂದು ಬೇಂದ್ರೆ ಹೇಳುತ್ತಾರೆ !

21 comments:

Anonymous said...

ಸೊಲ್ಲಾಪೂರಕ್ಕೆ ಹೋಗುವಾಗ " ನಾವು ಬರತೇವಿನ್ನು ಧಾರವಾಡದ ತಾಯಿ ನಂ ನಮಸ್ಕಾರ ನಿನಗ" ಎಂದು ಹೇಳಿದ ಬೇಂದ್ರೆ ಬರುವಾಗ "ಮರಳಿ ಬಾರೊ ನೀನು ನಿನ್ನಯ ಊರಿಗೆ ಸಾಧನಕೇರಿಗೆ" ಎಂದೇ ಹೇಳಿದ್ದಾರೆ. ಅವರ ನಿರ್ವ್ಯಾಜ್ಯ ಪ್ರೇಮ ಸಾಧನಕೇರಿಗೇ ಹೊರತು ಧಾರವಾಡಕಲ್ಲ ಎಂದು ನನ್ನ ಅನಿಸಿಕೆ. ಇದು ನ್ಯಾಯವೂ ಹೌದು. ಸಾದನಕೇರಿಯಿಂದ ಬೇಂದ್ರೆ ಪಡೆದದ್ದು ಅಪಾರ. ಧಾರವಾಡ ಬೇಂದ್ರೆಗೆ ಕೊಟ್ಟದ್ದೇನು ? ಸಂಕಟ, ಅವಮಾನ, ಹಸಿವು. ಅವರು ಧಾರವಾಟವನ್ನು ತ್ಯಜಿಸಿ, ದೂರದ ಸೊಲ್ಲಾಪುರಕ್ಕೆ ಹೋದ ಕಾರಣಗಳು ಈಗ ಎಲ್ಲರಿಗೂ ಗೊತ್ತು. ಆದರೂ ಉದಾರ ಮನಸ್ಸಿನ ಮಹಾಕವಿ ಧಾರವಾಟದ ಬಗ್ಗೆ ತಮ್ಮಅಸಮಾಧಾನ ಎಂದೂ ವ್ಯಕ್ತಪಡಿಸಿದ ಹಾಗೆ ಇಲ್ಲ. ಇದು ಅವರ ದೊಡ್ಡ ಮನಸ್ಸಿನ ಪ್ರತೀಕ. ಅಲ್ಲವೇ ?

sunaath said...

ಧಾರವಾಡವು ಈಗಂತೂ ಬೇಂದ್ರೆಯವರ ತುಚ್ಛೀಕರಣವನ್ನು perfect ಆಗಿ ಮಾಡಿದೆ. ಕಡಪಾ ಮೈದಾನದಲ್ಲಿ ಇರಿಸಲಾದ
ಒಂದಡಿಗಿಂತಲೂ ಕಡಿಮೆ ಎತ್ತರದ ಬೇಂದ್ರೆ-ಮೂರ್ತಿ ಇದಕ್ಕೆ ಸಾಕ್ಷಿ.
ಬೇಂದ್ರೆ-ಭವನವನ್ನು Roman architecture style
ದಲ್ಲಿ ಕಟ್ಟಿರುವ ಮೂರ್ಖ ಕರ್ನಾಟಕ ಸರಕಾರವು ಮತ್ತೊಂದು ಅಪಚಾರ ಮಾಡಿದೆ.

ಕುಕೂಊ.. said...

ಸುನಾತ ಕಾಕ "ನಾವು ಬರತೇವಿನ್ನ" ಕವನದ ಪ್ರತಿಸಾಲುಗಳನ್ನ ವಿಮರ್ಶಿಸಿ ನಮಗೆ ಅರ್ಥಮಾಡಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು. ಬೇಂದ್ರೆ ಅಜ್ಜರವರ ಶೈಲಿ ಹಾಗು ನುಡಿ ಪ್ರಯೋಗ ತುಂಬಾ ಮನೋಹರವಾದದ್ದು. ಈ ಹಾಡಿನ ವಿವರಣೆಯಿಂದ ನನಗೆ ತುಂಬಾ ಖುಷಿ ಆಯಿತು.

ನನ್ನಿ
ಕುಮಾರಸ್ವಾಮಿ ಕಡಾಕೊಳ್ಳ
ಪುಣೆ

Anonymous said...

ಬೇಂದ್ರೆಯವರು ನಿಜಕ್ಕೂ ಇಷ್ಟೊಂದು ಆಳವಾಗಿ ಯೋಚಿಸಿ
ಈ ಹಾಡು ಬರೆದರಾ?ಆಚ್ಚರಿಯಾಗುತ್ತದೆ..
ಇದೊಂಥರಾ ಚಕ್ರವ್ಯೂಹ.ಅಥವಾ ಅಕ್ಷಯಪಾತ್ರೆ ಅಂದರೂ ಸರಿಯೇ!
-ರಾಘವೇಂದ್ರ ಜೋಶಿ.

ಆಲಾಪಿನಿ said...

ಸುನಾಥ್ ಅಂಕಲ್‌, ನೀವು ಬೇಂದ್ರೆಯವರ ಖಾಸಾ ದೋಸ್ತ್‌ರಾಗಿದ್ರೀ ಏನ? :)

sunaath said...

ಕುಮಾರಸ್ವಾಮಿಯವರೆ,
ನಿಮ್ಮ ಖುಶಿ ನನಗೂ ಖುಶಿ ಕೊಟ್ಟಿದೆ.

sunaath said...

ರಾಘವೇಂದ್ರರೆ,
ತಮ್ಮಲ್ಲಿ ಮೂಡಿದ ಭಾವನೆಗಳನ್ನು ಕಾವ್ಯವಾಗಿಸುವ ಪ್ರತಿಭೆ
ಇದ್ದುದಕ್ಕೇ ಅಲ್ಲವೆ, ಬೇಂದ್ರೆಯವರು ವರಕವಿ ಎನಿಸಿಕೊಂಡಿದ್ದು!
ಒಬ್ಬ ಆಂಗ್ಲ ವಿಮರ್ಶಕನ ಪ್ರಕಾರ "ಒಂದು ಪದವನ್ನು ನೋಡಿದ ತಕ್ಷಣವೇ ಆ ಪದದ ಪುರಾತನ, ಆಧುನಿಕ ಮೊದಲಾದ
ಎಲ್ಲ ಅರ್ಥಗಳೂ ನಿಜವಾದ ಕವಿಗೆ ಹೊಳೆಯುವವು."

sunaath said...

ಶ್ರೀದೇವಿಯವರೆ,
ಬೇಂದ್ರೆಯವರ ದೋಸ್ತ?
ಎಲ್ಲೀದ್ರಿ, कहां राजा भॊज, कहां गंगू तॆली ?

Unknown said...

ಸುನಾಥ,
ನೀವು ಬೇಂದ್ರೆಯವರ ಬಗೆಗೆ ಬರೆಯುವ ವಿವರಣೆ ಚೆನ್ನಾಗಿರುತ್ತದೆ.
ಓದಲು ಖುಶಿಯಾಗುತ್ತದೆ.

sunaath said...

ಧನ್ಯವಾದಗಳು, ವನಮಾಲಾ.

ತೇಜಸ್ವಿನಿ ಹೆಗಡೆ said...

ಕಾಕಾ,

ಒಂದೊಂದು ಸಾಲನ್ನು ಎಷ್ಟು ಚೆನ್ನಾಗಿ ವರ್ಣಿಸಿದ್ದೀರಿ!! ಎರಡೆರಡು ಸಲ ಓದಿದೆ. ಹಣದಾಸೆಗೋ ಇಲ್ಲಾ ಕೀರ್ತಿಗೋ ಪರದೇಶಗಳಿಗೆ ವಲಸೆಹೋದವರು ನಮ್ಮ ದೇಶ ನಮಗೇನು ಕೊಟ್ಟಿದೆ ಎಂದು ತಿರಸ್ಕಾರದಿಂದ ನೋಡುವಾಗ, ಬೇಂದ್ರೆಯಂತಹ ಋಷಿಕವಿಗಳು ತನ್ನ ಹುಟ್ಟೂರನ್ನು ಇಷ್ಟು ಹಚ್ಚಿಕೊಂಡು ಕೊಂಡಾದಿರುವುದ ಓದಿ ಮನದುಂಬಿ ಬಂತು.

ಎಷ್ಟೇ ನೋವುಂಡರೂ ಅವಮಾನ ತಿಂದರೂ ಧಾರವಾಡದ ಗಾಢತೆಯನ್ನು ಅವರು ಮರೆಯಲಿಲ್ಲ. ಒಂದೊಂದು ಸೊಲ್ಲಿನಲ್ಲೂ ಭಾವತೀವ್ರತೆಯ ಪರಾಕಷ್ಠೆಯನ್ನು ಕಾಣಬಹುದು!
ಧನ್ಯವಾದಗಳು.

sunaath said...

ತೇಜಸ್ವಿನಿ,
ಕಟ್ಟಿಯವರು ಹೇಳಿದಂತೆ,ಬೇಂದ್ರೆಯವರು ಧಾರವಾಡದಲ್ಲಿ ಅವಮಾನ ಹಾಗು ಸಂಕಟಗಳನ್ನು ಎದುರಿಸಿದ್ದಾರೆ. ಆದರೇನು, ಇದು ಅವರ ತಾಯಿನೆಲ!
'ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ'ಎನ್ನುವ ಭಾವನೆ ಬೇಂದ್ರೆಯವರಲ್ಲಿ ನೈಜವಾಗಿ ಬೇರೂರಿತ್ತು.

ಮಧುರಚೆನ್ನರನ್ನು ಕುರಿತಾದ ಅವರ 'ಹರಕೆ'ಎನ್ನುವ ಕವನದಲ್ಲಿ ಅವರು ಕನ್ನಡನಾಡನ್ನು ಭಕ್ತಿಯಿಂದ ವರ್ಣಿಸಿದ ಪರಿಯನ್ನು ನೋಡಬೇಕು!

ಇನ್ನು ದೇಶವನ್ನು ತಿರಸ್ಕರಿಸುವ ಪರದೇಶಿಗಳ ಬಗೆಗೆ ಹೇಳುವದೇನು!

Anonymous said...

ನಮಸ್ತೇ,
ಬರುವ ಸೋಮವಾರ ಹದಿನೆಂಟನೆ ತಾರೀಖು ಸಂಜೆ ಆರು ಗಂಟೆಗೆ, ಸೆಂಟ್ರಲ್ ಕಾಲೇಜಿನ ಸೆನೆಟ್ ಹಾಲ್ ನಲ್ಲಿ ನನ್ನ ಪುಸ್ತಕ ‘ಭಾಮಿನಿ ಷಟ್ಪದಿ’ ಬಿಡುಗಡೆಯಾಗಲಿದೆ.
ಅವತ್ತು ಪ್ರೊ. ವಿವೇಕ್ ರೈ, ಜಿ.ಪಿ.ಬಸವ ರಾಜು ಅವರು ವೇದಿಕೆಯಲ್ಲಿರುತ್ತಾರೆ. ಗೆಳತಿ, ಬರಹಗಾರ್ತಿ ಟೀನಾ ಪುಸ್ತಕದ ಬಗ್ಗೆ ಮಾತನಾಡುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿ ಅವತ್ತು ನೀವು ಇರುತ್ತೀರಿ.
‘ಸೋಮವಾರ’ ಇತ್ಯಾದಿ ಯಾವ ನೆವವನ್ನೂ ಹೇಳದೆ ಅಂದಿನ ಕಾರ್ಯಕ್ರಮಕ್ಕೆ ನೀವು ಬಂದರೆ ನನಗೆ ಬಹಳ ಬಹಳ ಖುಷಿಯಾಗುತ್ತದೆ.
ಖಂಡಿತ ಬರಲೇಬೇಕು.

ನಿಮಗಾಗಿ ಕಾದಿರುತ್ತೇನೆ.

ಪ್ರೀತಿಯಿಂದ,
ಚೇತನಾ ತೀರ್ಥಹಳ್ಳಿ

Anonymous said...

ಅನಾಮಧೇಯರಾದ ಶ್ರೀಮತಿ ಚೇತನಾ ಅವರೆ,

ನಿಮ್ದ "ಭಾಮಿನಿ ಷಟ್ಪದಿ" ಲಕ್ಷಣಗ್ರಂಥವೆ ಅಥವಾ ಕಾದಂಬರಿಯೆ ಅಥವಾ ಕಾವ್ಯವೆ ? ತಿಳಿಸಿರಿ.

ಶ್ರೀನಿವಾಸ ಮ. ಕಟ್ಟಿ

sunaath said...

ಕಟ್ಟಿಯವರೆ,
"ಭಾಮಿನಿ ಷಟ್ಪದಿ"ಯ ಬಗೆಗೆ ವಿವರಗಳನ್ನು
ಇಲ್ಲಿ ನೋಡಿರಿ

Anonymous said...

Excellent poem. Excellent analysis.

Anonymous said...

"ಭಾಮಿನಿ ಷಟ್ಪದಿ" ಕುರಿತು ನೀವು ಕಳಿಸಿದ ಎಲ್ಲವನ್ನೂ ಓದಿದೆ. ಈಗ "ಭಾಮಿನಿ ಷಟ್ಪದಿ"ಯನ್ನೇ ಓದುವಾಸೆ. ಆದರೆ ಅದು ಮರಳಿ ನಮ್ಮೂರಿಗೆ ಬಂದಮೇಲೆಯೇ ಸಾಧ್ಯ. ಒಂದು ಪ್ರತಿಯನ್ನು ನನಗಾಗಿ ಖರೀದಿಸಿ ಇಡಿ. ಅಥವಾ ಪುಸ್ತಕವು ಅಂತರ್ಜಾಲದಲ್ಲಿ ಲಭ್ಯವೆ ?

ಶ್ರೀನಿವಾಸ ಮ. ಕಟ್ಟಿ

sunaath said...

ಚಕೋರ,
ಸ್ಪಂದನಕ್ಕಾಗಿ ಧನ್ಯವಾದಗಳು.

sunaath said...

ಕಟ್ಟಿಯವರೆ,
ನೀವು ಪ್ರತಿಗಾಗಿ ಲೇಖಕಿಯನ್ನೇ ಸಂಪರ್ಕಿಸಬೇಕು.

kanasu said...

ಬೇಂದ್ರೆಯವರ ಈ ಯಾವ ಕವನಗಳನ್ನೂ ನಾನು ಓದಿರಲಿಲ್ಲ...ಪದ್ಯ ಮತ್ತದರ ಭಾವಾರ್ಥ ಓದಿ ತುಂಬ ಖುಷಿಯಾಯಿತು...

sunaath said...

ಕನಸುಗಾತಿಯವರೆ,
ಬೇಂದ್ರೆಯವರ ಕಾವ್ಯವು ೫೦ ವರ್ಷಕ್ಕೂ ಹೆಚ್ಚು ಹಳೆಯದು. ಆದರೆ ಇಂದಿಗೂ ಸಹ ಅದು ಓದುಗರಿಗೆ ರುಚಿಯಾಗಿದೆ. ಏಕೆಂದರೆ
ಬೇಂದ್ರೆಯವರೇ ಹೇಳಿದಂತೆ:
"ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ.
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ!"