Friday, January 30, 2009

Slumdog millionaire

Slumdog millionaire ಚಲನಚಿತ್ರವು ಕೊಳಚೆ ಪ್ರದೇಶದ ಹುಡುಗನೊಬ್ಬನು ಕೋಟ್ಯಾಧಿಪತಿಯಾಗುವ ಕತೆಯನ್ನು ಹೊಂದಿದೆ.
ಚಲನಚಿತ್ರಗಳಲ್ಲಿ ಕೊಳಚೆನಿವಾಸಿಯು ಕೋಟ್ಯಾಧಿಪತಿಯಾಗಬೇಕಾದರೆ ಅದಕ್ಕೆ ಎರಡು ಮಾರ್ಗಗಳಿವೆ.
ಒಂದು ಮಾರ್ಗವೆಂದರೆ, the hard criminal way.
ಈ ತರಹದ ಅನೇಕ crime movieಗಳು Hollywoodನಲ್ಲಿ ಹಾಗೂ Bollywoodನಲ್ಲಿ ನಿರ್ಮಾಣಗೊಂಡಿವೆ ; ಜನಪ್ರಿಯತೆಯನ್ನೂ ಪಡೆದಿವೆ.
ಉದಾಹರಣೆಗೆ ಹಿಂದೀ ಚಲನಚಿತ್ರ: ‘ದೀವಾರ’.
ಅಮಿತಾಭ ಬಚ್ಚನ್ ಈ ಚಿತ್ರದಲ್ಲಿ ಮಾಫಿಯಾ ಹೀರೊ.
ಈ ಚಲನಚಿತ್ರವು ಬಚ್ಚನ್ನನಿಗೆ ತುಂಬಾ ಜನಪ್ರಿಯತೆಯನ್ನು ತಂದು ಕೊಟ್ಟಿತು.

ಕೋಟ್ಯಾಧಿಪತಿಯಾಗಲು ಎರಡನೆಯ ಮಾರ್ಗವೆಂದರೆ, ಅದೃಷ್ಟದ ನೆರವು.
ಮೊದಲನೆಯ ವರ್ಗದ ಚಿತ್ರಗಳಲ್ಲಿ ಅಪರಾಧಿ ಜಗತ್ತಿನ ಕಟು ವಾಸ್ತವತೆಯನ್ನು ತೋರಿಸಬೇಕಾಗುತ್ತದೆ. ಕ್ರೌರ್ಯವನ್ನು ತೋರಿಸಬೇಕಾಗುತ್ತದೆ.
ಅನೇಕ ನಿರ್ದೇಶಕರು ತುಂಬಾ ಖುಶಿಯಿಂದ ಇಂತಹ ನಿರ್ದೇಶನ ಮಾಡಿದ್ದಾರೆ.
ಆದರೆ ಎರಡನೆಯ ವರ್ಗದ ಚಲನಚಿತ್ರಗಳ ನಿರ್ದೇಶನ ತುಂಬಾ ಕಷ್ಟದ್ದು.
ಇಂತಹ ಚಲನಚಿತ್ರಗಳಲ್ಲಿ ಹಗಲುಗನಸಿನ, ತೇಲುಗಣ್ಣಿನ ನಿರ್ದೇಶನ ಬೇಕು. ದೃಶ್ಯಗಳು soft ಆಗಿರಬೇಕು.
ಇಂತಹ ಚಲನಚಿತ್ರಗಳೂ ಸಹ ನಿರ್ಮಾಣವಾಗಿವೆ.
ಅತ್ಯುತ್ತಮ ಉದಾಹರಣೆ ಎಂದರೆ ನಮ್ಮ ಕನ್ನಡದ್ದೇ ಆದ ಚಲನಚಿತ್ರ : ‘ಮೇಯರ ಮುತ್ತಣ್ಣ’.
ಸಾಮಾನ್ಯ ರೈತನೊಬ್ಬ ಹಳ್ಳಿಯಿಂದ ಪಟ್ಟಣಕ್ಕೆ ಬಂದು, ಪ್ರಾಮಾಣಿಕ ಪರಿಶ್ರಮದಿಂದ ಮೇಲೆರುತ್ತ ಕೊನೆಗೆ ಮೇಯರ ಆದ ಕತೆ ಇಲ್ಲಿದೆ.

Slumdog millionaire ಎರಡನೆಯ ವರ್ಗಕ್ಕೆ ಸೇರಬೇಕಾದ ಚಲನಚಿತ್ರ.
ಕೊಳಚೆಪ್ರದೇಶದ ಹುಡುಗನೊಬ್ಬ, ಅಪರಾಧಿ ಜಗತ್ತಿನಿಂದ ತಪ್ಪಿಸಿಕೊಂಡು, ಚಾಯವಾಲಾ ಕೆಲಸ ಮಾಡುತ್ತಲೇ “ ಕೌನ ಬನೇಗಾ ಕರೋಡಪತಿ ” ಸ್ಪರ್ಧೆಯಲ್ಲಿ ಭಾಗವಹಿಸುತ್ತಾನೆ.
ಅಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ, ಕರೋಡಪತಿ ಸ್ಪರ್ಧೆಯಲ್ಲಿ ಗೆಲ್ಲುತ್ತಾನೆ.
ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುವ ಸಂದರ್ಭದಲ್ಲಿ ಈತನ ಹಳೆಯ ಇತಿಹಾಸದ ಯಾತನಾಮಯ ಘಟನೆಗಳು ಈತನಿಗೆ ಉತ್ತರವನ್ನು ಹೇಳಲು ಸಹಾಯಕವಾಗುತ್ತವೆ.
ಇಂತಹ ಘಟನೆಗಳನ್ನು ಚಿತ್ರಿಸುವಾಗ, ಈ ಚಿತ್ರದ ನಿರ್ದೇಶಕರು ಹಗಲುಗನಸಿನ ಶೈಲಿಯಲ್ಲಿ ನಿರ್ದೇಶಿಸುವ ಬದಲು, ವಾಸ್ತವವಾದಿ ಶೈಲಿಯಲ್ಲಿ ನಿರ್ದೇಶಿಸಿದ್ದಾರೆ.
ಆದರೆ criminal ಆಗಬೇಕಾದ ಹುಡುಗನು ಪ್ರಾಮಾಣಿಕನಾಗಿದ್ದಕ್ಕೆ ಇಲ್ಲಿ ಯಾವುದೇ ಸಮರ್ಥನೆ ಸಿಗುವದಿಲ್ಲ.
ಇಲ್ಲಿ ಕತೆಯೇ ಅವಾಸ್ತವವಾಗಿರುವದರಿಂದ ವಾಸ್ತವಾದಿ ನಿರ್ದೇಶನವು ನಿರರ್ಥಕವಾಗಿದೆ.
ಇದೇ ಕತೆಯನ್ನೇ ಹಗಲುಗನಸಿನ ಶೈಲಿಯಲ್ಲಿ ನಿರ್ದೇಶಿಸಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ.

ಚಿತ್ರಜಗತ್ತಿನಲ್ಲಿ ಇಲ್ಲಿಯವರೆಗೆ ಅನೇಕ crime movies ಬಂದಿವೆ.
Alfred Hitchcock ನಿರ್ದೇಶಿಸಿದ ‘psycho’ ಒಂದು ಅತ್ಯುತ್ತಮ crime film. ಈ ಚಿತ್ರದಲ್ಲಿ ಅಪರಾಧಕ್ಕಿಂತ ಹೆಚ್ಚಾಗಿ ಆಪರಾಧಿಯ ಮನೋವಿಶ್ಲೇಷಣೆ ಮಹತ್ವದ್ದಾಗಿದೆ.
ನಿಜ ಹೇಳಬೇಕೆಂದರೆ, ಕುರೊಸಾವೊ ನಿರ್ದೇಶಿಸಿದ ‘ರಾಶೊಮನ್’ ಕೂಡ ಒಂದು ರೀತಿಯಲ್ಲಿ crime film ಎಂದೇ ಹೇಳಬೇಕು.
ಏಕೆಂದರೆ ಇಲ್ಲಿಯೂ ಸಹ ಒಂದು ಅಪರಾಧದ ಸುತ್ತಲೂ ಕತೆ ಹೆಣೆಯಲಾಗಿದೆ.
ಆದರೆ ಈ ಚಿತ್ರದಲ್ಲಿ ಮಹತ್ವವಿರುವದು ಸತ್ಯದರ್ಶನಕ್ಕೆ ಹಾಗೂ ಮಾನವೀಯ ಅನುಕಂಪಕ್ಕೆ.
ಹೀಗಾಗಿ ಈ ಚಿತ್ರವು ಚಿತ್ರಜಗತ್ತಿನ ಶ್ರೇಷ್ಠ ಚಿತ್ರಗಳಲ್ಲಿಯೇ ಅಗ್ರಗಣ್ಯವಾಗಿದೆ.

Slumdog millionaire ಚಿತ್ರದಲ್ಲಿ ಯಾವುದೇ ಸಮಸ್ಯೆಯ ಅಧ್ಯಯನವಿಲ್ಲ,
ಯಾವುದೇ ಮಾನವೀಯ ಅನುಕಂಪವಿಲ್ಲ ಹಾಗೂ ಭಾರತವನ್ನೇ ಪ್ರತಿನಿಧಿಸುವ ಯಥಾರ್ಥತೆ (documentary character) ಇಲ್ಲ.

ಮುಂಬಯಿಯಲ್ಲಿ ಜರುಗಿದಂತೆ ಈ ಚಿತ್ರದ ಕತೆಯನ್ನು ತೋರಿಸಲಾಗಿದೆ.
ಆದರೆ ಇದು ಯಾವ ದೇಶದಲ್ಲಾದರೂ ನಡೆಯಬಹುದಾದಂತಹ ಘಟನಾವಳಿ.
(ಮುಂಬಯಿ ನಗರಕ್ಕೆ ವಿಶಿಷ್ಟವಾದ crime racket ನೋಡಬೇಕೆಂದರೆ, ಭಂಡಾರಕರರು ನಿರ್ದೇಶಿಸಿದ Traffic Signal ಚಲನಚಿತ್ರವನ್ನು ನೋಡಬೇಕು.)
ಈ ಚಿತ್ರದ ಕತೆಯ ದೇಹ ಮಾತ್ರ ಭಾರತೀಯ , ಪ್ರಾಣ ಭಾರತೀಯವಲ್ಲ , ಬಹುಶ: ಯಾವ ದೇಶದ್ದೂ ಅಲ್ಲ.
ಹೀಗಾಗಿ ಈ ಚಿತ್ರವು ಒಂದು stuffed toy ತರಹ ಕಾಣುತ್ತದೆ, ನಿರ್ಜೀವ ಬೊಂಬೆಯಂತೆ ಕಾಣುತ್ತದೆ.

Slumdog millionaire ಚಿತ್ರವು ಭಾರತದಲ್ಲಿಯ ದಾರಿದ್ರ್ಯ ಹಾಗು ಅಪರಾಧವನ್ನಷ್ಟೇ ತೋರಿಸುತ್ತದೆ. ಆದುದರಿಂದ ಇದು ಒಳ್ಳೆಯ ಚಿತ್ರವಲ್ಲ ಎಂದು ಕೆಲವರು ಪ್ರೇಕ್ಷಕರು ಅಭಿಪ್ರಾಯಪಡುತ್ತಿದ್ದಾರೆ.
ದಾರಿದ್ರ್ಯ ಹಾಗೂ ಅಪರಾಧವನ್ನು ತೋರಿಸುವ ಒಂದೇ ಕಾರಣದಿಂದಲೇ ಯಾವ ಚಿತ್ರವೂ ಕೆಟ್ಟ ಚಿತ್ರವಾಗುವದಿಲ್ಲ.
ಸತ್ಯಜಿತ ರಾಯರ ಮೊದಲ ಚಿತ್ರ ‘ಪಥೇರ ಪಾಂಚಾಲಿ’ಗೆ Cannes Film Festivalದಲ್ಲಿ ಅತ್ಯುತ್ತಮ ಮಾನವೀಯ ದಾಖಲೆ ಪ್ರಶಸ್ತಿ ಲಭಿಸಿತು.
ಈ ಚಿತ್ರದಲ್ಲಿ ಬಂಗಾಲದ ಹಳ್ಳಿ ಹಾಗು ಪಟ್ಟಣಗಳಲ್ಲಿಯ ಬಡತನದ ಚಿತ್ರಣವಿದೆ.
ಆದರೆ, ಈ ಚಿತ್ರದ ಉದ್ದೇಶವು ಭಾರತದ ಬದುಕನ್ನು ಹಾಗು ಸಂಸ್ಕೃತಿಯನ್ನು ಚಿತ್ರಿಸುವದಾಗಿದೆಯೇ ಹೊರತು ಬಡತನವನ್ನು ಚಿತ್ರಿಸುವದಲ್ಲ.
ಭಾರತದಲ್ಲಿ ಆರ್ಥಿಕ ಬಡತನವು ಮೊದಲೂ ಇತ್ತು, ಈಗಲೂ ಇದೆ.
ಆದರೆ ಭಾರತವು ಸಂಸ್ಕೃತಿಯಲ್ಲಿ ಎಂದೂ ಬಡವಾಗಿಲ್ಲ.
ಕಾಡುಮೇಡುಗಳಿಂದ ತುಂಬಿದ ಬಡ ಹಳ್ಳಿಯೊಂದರಲ್ಲಿ ಪರಿಸರದೊಡನೆ ಒಂದಾದ ಬಂಗಾಲಿ ಕುಟುಂಬವು ಹೇಗೆ ಜೀವಿಸುತ್ತದೆ ಎನ್ನುವದನ್ನು ಸತ್ಯಜಿತ ರಾಯ ತುಂಬ ತಾಳ್ಮೆಯಿಂದ ಚಿತ್ರಿಸಿದ್ದಾರೆ.

ಕ್ರೌರ್ಯ ಹಾಗು ಅಪರಾಧವನ್ನು ತೋರಿಸುವ ಉತ್ತಮ ಹಿಂದೀ ಚಿತ್ರವೆಂದರೆ ‘ಸಲಾಮ್ ಬಾಂಬೇ’.
ಈ ಚಿತ್ರಕ್ಕೂ ಸಹ Cannes film festivalನಲ್ಲಿ Golden Camera ಪ್ರಶಸ್ತಿ ದೊರಕಿದೆ.
ಮುಂಬಯಿ ನಗರದಲ್ಲಿಯ crime racketಅನ್ನು ಈ ಚಿತ್ರದಲ್ಲಿ ವಿಸ್ತಾರವಾಗಿ ತೋರಿಸಲಾಗಿದೆ.
ಈ ಚಿತ್ರದಲ್ಲಿ ನಾನಾ ಪಾಟೇಕರನ ಮೂಲಕ ಬಿಂಬಿಸಲಾದ ಕ್ರೂರ ಮನೋಸ್ಥಿತಿಯು ಭಯಾನಕವಾಗಿದೆ.
ಬಡತನವನ್ನು ಚಿತ್ರಿಸುವ ‘ಪಥೇರ ಪಾಂಚಾಲಿ’ ಹಾಗೂ ಅಪರಾಧವನ್ನು ಚಿತ್ರಿಸುವ ‘ಸಲಾಮ್ ಬಾಂಬೇ’ ಚಿತ್ರಗಳಲ್ಲಿ ಜೀವನದ ವಾಸ್ತವತೆಯ ಚಿತ್ರಣವಿದೆ.
ಆದರೆ Slumdog millionaire ಚಿತ್ರದಲ್ಲಿ ವಾಸ್ತವತೆಯ ಬದಲು Sensationalism ಬಂದಿದೆ.
ಅಂತಹ ಘಟನೆಗಳಲ್ಲಿಯೆ ಅತ್ಯಂತ ಕೊಳಕು ಘಟನೆ ಎಂದರೆ ಸಾರ್ವಜನಿಕ ಸಂಡಾಸಕ್ಕೆ ಹೋದ ಹುಡುಗನು, ಅಮಿತಾಭ ಬಚ್ಚನ್ನನನ್ನು ನೋಡಲು ಹೊಲಸಿನಲ್ಲಿ ಜಿಗಿಯುವ ಘಟನೆ.
ಪ್ರೇಕ್ಷಕರನ್ನು ವಿನೋದಿಸಲೆಂದು ನಿರ್ದೇಶಕರು ಇಂತಹ ದೃಶ್ಯವನ್ನು ಸೃಷ್ಟಿಸಿದರಲ್ಲ ಎಂದು ದುಃಖವಾಗುತ್ತದೆ.

Slumdog millionaire ಚಿತ್ರದ ಒಂದೇ ಒಳ್ಳೆಯ ಗುಣವೆಂದರೆ ಅಚ್ಚುಕಟ್ಟಾದ ನಿರೂಪಣೆ.
ಅಚ್ಚುಕಟ್ಟಾದ ನಿರೂಪಣೆ,Sensationalism ಹಾಗೂ ವಿದೇಶಿ ನಿರ್ದೇಶಕ ಎನ್ನುವ ಮೂರು ಕಾರಣಗಳಿಂದ ಈ ordinary ಚಲನಚಿತ್ರವು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆಲ್ಲುತ್ತ ನಡೆದಿದೆ.

Friday, January 23, 2009

‍ಹಂಪಿ ಎಕ್ಸ್ ಪ್ರೆಸ್

'ಹಂಪಿ ಎಕ್ಸ್ ಪ್ರೆಸ್' ಇದು ವಸುಧೇಂದ್ರರ ಹೊಚ್ಚಹೊಸ ಕಥಾಸಂಕಲನ.
ಬೆಂಗಳೂರಿನಲ್ಲಿ ನೆಲೆಸಿದ್ದರೂ ಸಹ ವಸುಧೇಂದ್ರರು ತಮ್ಮ ತವರನ್ನು ಮರೆಯಲಾರರು.
ಸಂಡೂರಿನಲ್ಲಿಯ ತಮ್ಮ ಬಾಲ್ಯದ ಗೆಳೆಯರ, ಅಲ್ಲಿಯ ಸಾಂಪ್ರದಾಯಕ ಸಮಾಜದ ನೆನಪುಗಳು ಅವರನ್ನು ಯಾವಾಗಲೂ ಕಾಡುತ್ತಲೇ ಇರುತ್ತವೆಯೇನೊ?
ಅಂತೆಯೇ ಬೆಂಗಳೂರನ್ನು ಸಂಡೂರಿಗೆ connect ಮಾಡುವ ಹಂಪಿ ಎಕ್ಸ್ ಪ್ರೆಸ್ ಹೆಸರನ್ನೇ ವಸುಧೇಂದ್ರರು ತಮ್ಮ ಕಥಾಸಂಕಲನಕ್ಕೆ ಕೊಟ್ಟಿದ್ದಾರೆ.

ಈ ಸಂಕಲನದಲ್ಲಿ ಸಂಡೂರಿನ ಕತೆಗಳಲ್ಲದೇ ಬೆಂಗಳೂರಿನ ಕತೆಗಳೂ ಇವೆ. ಸಂಡೂರು ಸಣ್ಣ ಊರಾದರೆ, ಬೆಂಗಳೂರು metro. ಸಂಡೂರು ಅವರ ಬಾಲ್ಯಕಾಲ; ಬೆಂಗಳೂರು ಅವರ ವರ್ತಮಾನ. ಈ ಎರಡೂ ಕಾಲಗಳನ್ನು connect ಮಾಡುವ ನೆನಪಿನ ಬಂಡಿ ಎಂದರೆ ಹಂಪಿ ಎಕ್ಸ್ ಪ್ರೆಸ್.

Small town ಹಾಗು metro ಈ ಎರಡೂ ಸಮಾಜಗಳ ಅಂತರಂಗವನ್ನು, ಸುಖ-ದುಃಖಗಳನ್ನು ವಸುಧೇಂದ್ರರು ಸಾಕ್ಷೀಪ್ರಜ್ಞೆಯಿಂದ ನೋಡುತ್ತ ಈ ಸಮಾಜಗಳ ಕತೆಗಳನ್ನು ಅತ್ಯಂತ ಕಲಾತ್ಮಕವಾಗಿ ಓದುಗರಿಗೆ ತಲುಪಿಸುತ್ತಿದ್ದಾರೆ.

ವಸುಧೇಂದ್ರರದು ಮೂಲಭೂತವಾಗಿ ಅನುಕಂಪದ ಮನಸ್ಸು.
ಇವರನ್ನು ‘ಹೆಂಗರುಳಿನ ಲೇಖಕ’ ಎಂದು ಬಣ್ಣಿಸಿದರೆ ತಪ್ಪಾಗಲಿಕ್ಕಿಲ್ಲ.
ವಸುಧೇಂದ್ರರ ಕೃತಿಗಳನ್ನು ಓದಿದವರಿಗೆ ಥಟ್ಟನೆ ಕಾಣುವ ಮಾತೆಂದರೆ ಅಸಹಾಯಕರಿಗಾಗಿ ಮಿಡಿಯುವ ಇವರ ಮನಸ್ಸು.
ಸಂಡೂರೇ ಆಗಲಿ, ಬೆಂಗಳೂರೇ ಆಗಲಿ, ಗಂಡೇ ಆಗಲಿ, ಹೆಣ್ಣೇ ಆಗಲಿ ಅಥವಾ ಅರೆಗಂಡೇ ಆಗಲಿ, ವಸುಧೇಂದ್ರರು ಎಲ್ಲರನ್ನೂ ಸಹಾನುಭೂತಿಯಿಂದಲೇ ನೋಡುತ್ತಾರೆ.
ಮನುಷ್ಯರಷ್ಟೇ ಅಲ್ಲ, ಕೋತಿಗಳೂ ಸಹ ಇವರ ಸಹಾನುಭೂತಿಗೆ ಪಾತ್ರವಾಗುತ್ತವೆ.
……………………………………………………………………..
‘ಹಂಪಿ ಎಕ್ಸ್ ಪ್ರೆಸ್’ ಸಂಕಲನದಲ್ಲಿ ೮ ಕತೆಗಳಿವೆ.
‘ಕ್ಷಮೆಯಿಲ್ಲದೂರಿನಲಿ’ ಹಾಗೂ ‘ಹೊಸ ಹರಯ’ ಈ ಎರಡು ಕತೆಗಳು metro ನಾಗರಿಕತೆಯ ಕತೆಗಳು.
‘ಸೀಳುಲೋಟ’, ‘ಎರಡು ರೂಪಾಯಿ’ ಹಾಗೂ ‘ಪೆದ್ದಿ ಪದ್ಮಾವತಿ’ ಇವು ಸಾಂಪ್ರದಾಯಕ ಸಮಾಜದಲ್ಲಿ ಬದಕುತ್ತಿರುವವರ ಕತೆಗಳು.
‘ಕೆಂಪು ಗಿಣಿ’, ಕತೆಯು ಬದಲಾಗುತ್ತಿರುವ ಪರಿಸ್ಥಿತಿಯ ಕತೆಯಾಗಿದೆ.
‘ಕೆಂಧೂಳಿ’, ಹಾಗೂ ‘ನವಿರುಗರಿ’ ಇವು ವೈಯಕ್ತಿಕ ಭಾವನಾಪ್ರಪಂಚಕ್ಕೆ ಸಂಬಂಧಿಸಿದ ಕತೆಗಳಾಗಿವೆ.

ವಸುಧೇಂದ್ರರ ‘ಸೀಳುಲೋಟ’ವು ಕನ್ನಡದ ಶ್ರೇಷ್ಠ ಕತೆಗಳಲ್ಲೊಂದಾಗಿದೆ ಎನ್ನುವದು ನಿಸ್ಸಂದೇಹ.
‘ಸೀಳುಲೋಟ’ದ ಕತೆಯಲ್ಲಿ ಕಾರ್ಪಣ್ಯದಲ್ಲಿಯೇ ಬದಕುತ್ತಿರುವ ಒಂದು ಸಾಂಪ್ರದಾಯಕ ಕುಟುಂಬದ ಚಿತ್ರಣವಿದೆ.
ಈ ಕತೆಯಲ್ಲಿ ಬರುವ ಹೆಣ್ಣುಮಗಳು, ರಮಾಬಾಯಿ ತನ್ನ ಸಂಸಾರವನ್ನು ತೂಗಿಸಲು ಅನೇಕ ಪ್ರಯತ್ನಗಳನ್ನು ಮಾಡುತ್ತಿರುತ್ತಾಳೆ.
ಅವಳ ಗಂಡನೋ ಅಲ್ಪಸಂಬಳಕ್ಕಾಗಿ ದಿನವೆಲ್ಲ ದುಡಿಯುವ ನಿರುಪದ್ರವಿ, ನಿರುಪಯೋಗಿ ವ್ಯಕ್ತಿ.
ಇವಳ ಅಣ್ಣನಿಗೆ ಇವಳ ಮೇಲೆ ನೈಜ ಪ್ರೀತಿಯಿದ್ದರೂ ಸಹ, ತನ್ನ ಹೆಂಡತಿಯ ಕೈಯಲ್ಲಿ ಸಿಕ್ಕಿಕೊಂಡಿದ್ದಾನೆ. ಹೀಗಾಗಿ ಇವಳು ಕೆಲವರ ಎದುರಿಗೆ ಗಯ್ಯಾಳಿಯಂತೆ, ಇನ್ನು ಕೆಲವರ ಎದುರಿಗೆ ಅವನತ ಭಾವದಿಂದ ವರ್ತಿಸುತ್ತ ಸಂಸಾರವನ್ನು ನಡೆಯಿಸುತ್ತಿದ್ದಾಳೆ.
ಇವಳ ಸಾಂಪ್ರದಾಯಕ ವರ್ತನೆಯನ್ನು ಹಾಗೂ ಗಯ್ಯಾಳಿತನವನ್ನು ತೋರಿಸಲು, ವಸುಧೇಂದ್ರರು ಬಳಸುವ ವಿನೋದಮಯ ಶೈಲಿ ಹೀಗಿದೆ:
“ರಪರಪನೆ ಕಸ ಬಳಿದು, ಅಂಗಳಕ್ಕೆ ನಿರನ್ನು ಜಡಿದು, ಆಕಾಶಕ್ಕೆ ಒಂದು ತಂಬಿಗೆ ನೀರು ಉಗ್ಗಿ “ಏಬ್ರಾಸಿ ಮುಂಡೇದೆ, ಎದ್ದೇಳು” ಎಂದು ಸೂರ್ಯನಿಗೆ ಉಗಿಯುತ್ತಾಳೆ.”

ಪರಿಸ್ಥಿತಿಯ ಜೊತೆಗೆ compromise ಮಾಡಿಕೊಳ್ಳುವದು ರಮಾಬಾಯಿಯ ಜೀವನದ ಒಂದು ಅನಿವಾರ್ಯ ಭಾಗ.
ತನ್ನನ್ನು ಮದುವೆಯಾಗಲು ಒಪ್ಪಿದ ಗಂಡು ಇವಳಿಗಿಂತ ಕಡಿಮೆ ರೂಪ ಹಾಗೂ ತರಗತಿಯವನೇ ಆಗಿದ್ದರೂ ಸಹ, ರಮಾಬಾಯಿ ತನ್ನ ಅಣ್ಣನಿಗೆ ತನ್ನ ಒಪ್ಪಿಗೆಯನ್ನು ತಿಳಿಸುವ ಪರಿ ಹೀಗಿದೆ:
“ ಕೊಡದ ನೀರನ್ನು ಪೂರ್ತಿಯಾಗಿ ಬಳ್ಳಿಗೆ ಸುರಿದ ರಮಾಬಾಯಿ ‘ಗಂಡಂತೂ ಹೌದಲ್ಲಣ್ಣ…ಅಷ್ಟು ಸಾಕು…ವಾಮನ ರೂಪದಾಗೆ ಬಂದಿರೋ ದೇವರು ಅಂದುಕೊಳ್ತೀನಿ’ ಎಂದು ನಿರ್ಭಾವುಕವಾಗಿ ಹೇಳಿಬಿಟ್ಟಳು. ವರದಣ್ಣ ಪೆಚ್ಚಾಗಿ ನಿಂತ. ನನ್ನ ಹಂಗೆ ಹಲ್ಲು ಉಬ್ಬು ಇಲ್ಲ ಬಿಡು ವರದಣ್ಣ” ಎಂದು ನಕ್ಕಳು.ವರದಣ್ಣನೂ ನಕ್ಕ.”

ತನ್ನ ಬಗೆಗೆ ಸ್ವಲ್ಪ ಅನುಕಂಪವನ್ನು, ಸ್ವಲ್ಪ ಉದಾರತನವನ್ನು ತೋರಿಸುತ್ತಿರುವ ವ್ಯಕ್ತಿಗಳ ಬಗೆಗೆ ರಮಾಬಾಯಿಯು ಅವನತಭಾವದಿಂದ ವರ್ತಿಸುವದು ಅನಿವಾರ್ಯವೇ ಆಗಿದೆ.
ಇದನ್ನು ವಸುಧೇಂದ್ರರು ತೋರಿಸುವ ಬಗೆ ಹೀಗಿದೆ:
“ಕೆಲಸದ ನರಸಕ್ಕ ಕೈಕೊಟ್ಟಿದ್ದರಿಂದ ಪದ್ದಕ್ಕ ಎಲ್ಲಾ ಮುಸುರೆ ಪಾತ್ರೆಗಳನ್ನು ಹರಡಿಕೊಂಡು ಕುಳಿತಿದ್ದಳು.
‘ಎದ್ದೇಳ್ರಿ ಪದ್ದಕ್ಕ, ನೀವೇನು ತೊಳಿತೀರಿ ಬಿಡ್ರಿ….ಏಳ್ರಿ, ಏಳ್ರಿ…’ ಎಂದು ಪದ್ದಕ್ಕನನ್ನು ಎಬ್ಬಿಸಿದಳು.”

‘ಸೀಳುಲೋಟ’ ಕತೆಯ ಪ್ರತಿಯೊಂದು ವಾಕ್ಯವನ್ನು ಈ ರೀತಿಯಾಗಿ ವಿಶ್ಲೇಷಿಸುತ್ತ ಹೋಗಬಹುದು. ಕತೆಯನ್ನು ಓದದೇ ಇರುವ ಓದುಗರು ಕತೆಯ ಸ್ವಾರಸ್ಯವನ್ನು first hand ಆಗಿ ಆಸ್ವಾದಿಸಲಿ ಎನ್ನುವ ಉದ್ದೇಶದಿಂದ ಈ ವಿಶ್ಲೇಷಣೆಯನ್ನು ಕೊನೆಗೊಳಿಸುತ್ತಿದ್ದೇನೆ.

ಪರಿಸ್ಥಿತಿ ನೀಡಿದ ಕಾರ್ಪಣ್ಯ ಏನೇ ಇದ್ದರೂ, ರಮಾಬಾಯಿ ಬೆಳೆದು ಬಂದ ಸಂಪ್ರದಾಯವು ಅವಳಿಗೆ ಒಂದು ಜೀವನಮೌಲ್ಯವನ್ನು ನೀಡಿದೆ.
ಬದುಕಿನ ಹೋರಾಟದಲ್ಲಿ ಅವಳ ವ್ಯಕ್ತಿತ್ವವು ಬೆಲೆ ಕಳೆದುಕೊಂಡಿರಬಹುದು, ಆದರೆ ಅವಳು ಎದೆಗೊತ್ತಿಕೊಂಡಿರುವ ಜೀವನಮೌಲ್ಯವು ಬೆಲೆ ಕಳೆದುಕೊಂಡಿಲ್ಲ.
ವಸುಧೇಂದ್ರರ ‘ಸೀಳುಲೋಟ’ದಲ್ಲಿ ಹಾಗೂ ಅವರ ಇನ್ನೂ ಕೆಲವು ಕತೆಗಳಲ್ಲಿ ಈ ಮಹತ್ತರ ಆಶಯ ವ್ಯಕ್ತವಾಗಿದೆ. (ಈ ಕಥಾಸಂಕಲನದಲ್ಲಿಯ ಕತೆ ‘ಎರಡು ರೂಪಾಯಿ’ ಹಾಗೂ ಬೇರೊಂದು ಕಥಾಸಂಕಲನದ ಕತೆ
‘ಹೊಟ್ಟೆಯಲ್ಲಿಯ ಗುಟ್ಟು’ ಇವುಗಳನ್ನು ಉದಾಹರಣೆ ಎಂದು ಹೇಳಬಹುದು.)

‘ಸೀಳುಲೋಟ’ ದ climax ಅಂತೂ ಅದ್ಭುತ. ಆದರೆ ಆ climax ಬಗೆಗೆ ಬರೆದು ಮೊದಲ ಓದುಗರ ಆಸಕ್ತಿಯನ್ನು ಕಳೆಯುವದು ಅನ್ಯಾಯದ ಕೆಲಸವಾಗುತ್ತದೆ.
‘ಎರಡು ರೂಪಾಯಿ’ ಸಹ ಸಾಂಪ್ರದಾಯಕ ಜೀವನದ ಕಷ್ಟ ಕಾರ್ಪಣ್ಯಗಳ ನಡುವೆಯೇ, ಅದು ಕಲಿಸುವ ಜೀವನನೀತಿಯನ್ನು ಮೈಗೂಡಿಸಿಕೊಂಡ ಮುದುಕಿಯೊಬ್ಬಳ ಚಿತ್ರಣವಾಗಿದೆ.

ಆಧುನಿಕ metro ಸಮಾಜದ ಬೆಡಗನ್ನು ವರ್ಣಿಸುತ್ತಲೇ, ಇಂತಹ ಸಮಾಜವು ನೈಜ ಸಂಬಂಧಗಳ ಬದಲು, virtual relationಅನ್ನು ಹೇಗೆ ಬೆಳೆಸುತ್ತದೆ, ಹೇಗೆ ಇದು ಮನುಷ್ಯರನ್ನು dehumanize ಮಾಡುತ್ತದೆ ಎನ್ನುವದರ ವರ್ಣನೆಯು ‘ಕ್ಷಮೆಯಿಲ್ಲದೂರಿನಲಿ’ ಕತೆಯಲ್ಲಿ ವರ್ಣಿತವಾಗಿದೆ.
ವಿನೋದದಲ್ಲಿಯೇ ಪ್ರಾರಂಭವಾಗಿ, ವಿನೋದದಲ್ಲಿಯೇ ಸಾಗುವ ಈ ಕತೆ ದುರಂತದಲ್ಲಿ ಕೊನೆಯಾಗಿದೆ.
‘ಹೊಸ ಹರಯ’ ಇದು ಆಧುನಿಕ metro ಸಮಾಜದ ಮತ್ತೊಂದು ಕತೆ.
ಈ ಕತೆಯಲ್ಲಿ ಆಧುನಿಕ ಹಾಗೂ ಅತ್ಯಾಧುನಿಕ ತಲೆಮಾರುಗಳೆರಡರ ತಿಕ್ಕಾಟದ ವರ್ಣನೆಯಿದೆ.

‘ಕೆಂಪು ಗಿಣಿ’ ಈ ಸಂಕಲನದ ಮತ್ತೊಂದು ಮಹತ್ವದ ಕತೆ.
ಆಧುನಿಕ ಅರ್ಥವ್ಯವಸ್ಥೆ , ಅದರೊಳಗಿನ ದುರಾಸೆ ಇವೆಲ್ಲ ಹೇಗೆ ಒಂದು ಹಳ್ಳಿಯ ಹಣೆಬರಹವನ್ನೇ ಬದಲಾಯಿಸಿಬಿಡುಬಹುದೆನ್ನುವ ಚಿತ್ರಣ ಈ ಕತೆಯಲ್ಲಿದೆ.
ಹಳ್ಳಿಯ ಸಾಂಪ್ರದಾಯಕ ಸಮಾಜದಲ್ಲಿರುವ ಮುಗ್ಧ ಬಾಲಕನೊಬ್ಬ ಕಾಣುವ ಅದ್ಭುತರಮ್ಯ fantasyಯು, ಅವನು ಬೆಳೆದು, ಪಟ್ಟಣಕ್ಕೆ ಹೋಗಿ, ಮರಳಿದಾಗ nightmarish reality ಆಗಿ ಬದಲಾಗಿರುವದು ಈ ಕತೆಯ ಹಂದರ.

‘ಕೆಂಧೂಳಿ’ ಹಾಗೂ ‘ನವಿರುಗರಿ’ ಇವು ವ್ಯಕ್ತಿಗಳ ಭಾವನಾಪ್ರಪಂಚಕ್ಕೆ ಸಂಬಂಧಿಸಿದ ಕತೆಗಳು.
‘ನವಿರುಗರಿ’ಯ ಶೀರ್ಷಿಕೆಯೇ ಸೂಚಿಸುವಂತೆ ಇದು ನವಿರಾದ ನವಿಲುಗರಿ. ಈ ಕತೆಯ ಪಾತ್ರಗಳ ಭಾವನಾಲೋಕವನ್ನು, nostalgiaವನ್ನು ಇಲ್ಲಿ ನವಿರಾಗಿ ಬಿಚ್ಚಿ ತೋರಿಸಲಾಗಿದೆ.

ಈ ಸಂಕಲನದಲ್ಲಿ ಬರುವ ಎಂಟೂ ಕತೆಗಳು ಓದುಗನಿಗೆ ಸಾಹಿತ್ಯಕ ತೃಪ್ತಿಯನ್ನು ನೀಡುತ್ತವೆ.
ಕತೆಗಳನ್ನು ಇನ್ನೂ ಓದದ ಓದುಗನಿಗೆ ಅನ್ಯಾಯವಾಗಬಾರದೆನ್ನುವ ಉದ್ದೇಶದಿಂದ ಇಲ್ಲಿ ಪ್ರತ್ಯೇಕವಾಗಿ, ವಿಸ್ತಾರವಾಗಿ ವಿಶ್ಲೇಷಿಸಿಲ್ಲ.
ವಸುಧೇಂದ್ರರ ಕತೆಗಳಲ್ಲಿ ಕರುಣರಸವೇ ಪ್ರಧಾನವಾದರೂ ಸಹ ತೆಳುವಿನೋದದ ಲೇಪನದ ಶೈಲಿಯಿಂದಾಗಿ ಇವರ ಕತೆಗಳಲ್ಲಿಯ ಎಂತಹ ಕರುಣಾಮಯ ಪರಿಸ್ಥಿತಿಯೂ ಸಹ ಸಹ್ಯವಾಗುತ್ತದೆ.
ಓದುಗನ ಕಣ್ಣಿನಲ್ಲಿ ನೀರು ಹಾಗೂ ತುಟಿಯ ಮೇಲೆ ನಗು ಎರಡೂ ಒಟ್ಟಿಗೆ ಕಾಣುವಂತೆ ಮಾಡುವ ಸಾಮರ್ಥ್ಯ ಈ ಕತೆಗಳಿಗಿದೆ.

ವಸುಧೇಂದ್ರರು ತಮ್ಮ ಕತೆಗಳ ಪ್ರತಿಯೊಂದು ಪಾತ್ರವನ್ನೂ ಅನುಕಂಪದಿಂದ, ಪ್ರೀತಿಯಿಂದ, ಇಷ್ಟಪಟ್ಟು ರೂಪಿಸುತ್ತಾರೆ.
ಆ ಪಾತ್ರಗಳ ನೀತಿ, ನಿಲುವುಗಳ ಬಗೆಗೆ ಅವರು judgment ಕೊಡಲು ಬಯಸುವದಿಲ್ಲ.
ಹೀಗಾಗಿ ಈ ಕತೆಗಳ ಪಾತ್ರಗಳು ನೆರೆಮನೆಯ ವ್ಯಕ್ತಿಗಳಷ್ಟೇ ಜೀವಂತ ಪಾತ್ರಗಳಾಗುತ್ತವೆ.
ಈ ತರಹದ ಪಾತ್ರರಚನೆ ವಸುಧೇಂದ್ರರ ವೈಶಿಷ್ಟ್ಯವಾಗಿದೆ.
ಕನ್ನಡದ ಶ್ರೇಷ್ಠ ಕತೆಗಾರರಾದ ಮಾಸ್ತಿಯಾಗಲಿ, ಲಂಕೇಶ ಆಗಲಿ ಅಥವಾ ದೇವನೂರು ಮಹಾದೇವರೇ ಆಗಲಿ, ತಮ್ಮ ಪಾತ್ರಗಳ ಮೂಲಕ ಸಮಾಜದ ಒಂದು ರೂಪವನ್ನು ಓದುಗರಿಗೆ ತೋರಿಸಲು ಬಯಸುತ್ತಾರೆ.
ಆದರೆ ವಸುಧೇಂದ್ರರು ತಮ್ಮ ಪಾತ್ರಗಳ ಕತೆಯನ್ನು ಮಾತ್ರ ಓದುಗರ ಎದುರಿಗೆ ಇಡುತ್ತಾರೆ.
ಹೀಗಾಗಿ ವಸುಧೇಂದ್ರರ ಪಾತ್ರಗಳು ಓದುಗನ ಮನದಲ್ಲಿ ಚಿರಸ್ಥಾಯಿಯಾಗುತ್ತವೆ.

ವಸುಧೇಂದ್ರರಿಂದ ಇನ್ನೂ ಇಂತಹ ಅನೇಕ ಕತೆಗಳು ಬರಲಿ, ಕನ್ನಡ ಓದುಗರನ್ನು ಖುಶಿ ಪಡಿಸಲಿ ಎಂದು ಹಾರೈಸುತ್ತೇನೆ.

Saturday, January 17, 2009

ಮೈ ಕರಗದವರಲ್ಲಿ………….

ಬಸವಣ್ಣನು ಹುಟ್ಟು ಕನ್ನಡಿಗ,ಅವನಿಗೆ ಸಂಸ್ಕೃತದಿಂದ ಕಡ ತೆಗೆದುಕೊಳ್ಳುವ ಅವಶ್ಯಕತೆ ಏನಿತ್ತು ಎನ್ನುವದು ಕೆಲವರ ಅನುಮಾನ. ಅವರಿಗೆ ಇಲ್ಲಿದೆ ಸಮಾಧಾನ:

ಸಂಸ್ಕೃತ ಹಾಗೂ ಕನ್ನಡ ಇವೆರಡೂ ಪರಸ್ಪರ ಪೋಷಕ ಭಾಷೆಗಳಾಗಿವೆ.
ಕಲ್ಯಾಣದ ಶರಣರು ಕನ್ನಡದ ವೃಕ್ಷಕ್ಕೆ ಸಂಸ್ಕೃತದ ಕಸಿಯನ್ನು ಮಾಡಿ ಸುಮಧುರವಾದ ಫಲಗಳನ್ನು ಪಡೆದಿದ್ದಾರೆ.
ಬಲ್ಲವರೇ ಬಲ್ಲರು ಆ ಹಣ್ಣಿನ ಸವಿಯ!
ಆದರೆ, ವೈಯಕ್ತಿಕ ಕಾರಣಕ್ಕಾಗಿ ಕೆಲವರು ಸಂಸ್ಕೃತದ ವಿರುದ್ಧ ರಾಜಕೀಯ ಮಾಡುತ್ತಲೇ ಬಂದಿದ್ದಾರೆ.
ಹಳೆಗನ್ನಡ ಕವಿ ಆಂಡಯ್ಯನು ತನ್ನ ಕಾವ್ಯದಲ್ಲಿ ಸಂಸ್ಕೃತವನ್ನು ಬಳಸುವದಿಲ್ಲವೆಂದು ಪ್ರತಿಜ್ಞೆ ಮಾಡಿ, ತದ್ಭವಗಳನ್ನು ತುರುಕಿದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ.

ಆದರೆ, ಬಸವಾದಿ ಶರಣರು ಇಂತಹ ಹುಚ್ಚುತನ ಮಾಡಲಿಲ್ಲ.
ಸಾಮಾನ್ಯ ಜನತೆಗಾಗಿಯೇ ರಚಿಸಿದಂತಹ ಬಸವಣ್ಣ, ಅಕ್ಕಮಹಾದೇವಿ ಮೊದಲಾದ ಶರಣರ ವಚನಗಳಲ್ಲಿ ಸಂಸ್ಕೃತವನ್ನು ಧಾರಾಳವಾಗಿ ಬಳಸಲಾಗಿದೆ.
ಅಲ್ಲದೆ, ಸಂಸ್ಕೃತ ವಾಕ್ಯಗಳನ್ನು ಹಾಗು ಶ್ಲೋಕಗಳನ್ನು ಉದ್ಧರಿಸಲಾಗಿದೆ.
ಹದವರಿತು ಸಂಸ್ಕೃತವನ್ನು ಬಳಸಿದಾಗ ಆ ಪಾಕಕ್ಕೆ ಒಂದು ವಿಶಿಷ್ಟ ರುಚಿ ಬರುತ್ತದೆ.
ಈ ಕಾರಣದಿಂದಲೇ, ಶರಣರ ವಚನಗಳು ಕನ್ನಡ ನಾಡಿನಲ್ಲಿ ಶ್ರೇಷ್ಠ ತತ್ವಜ್ಞಾನ ಮಾತ್ರವಲ್ಲ, ಶ್ರೇಷ್ಠ ಸಾಹಿತ್ಯವಾಗಿ ಸಹ ಪ್ರಸಿದ್ಧವಾಗಿವೆ.

ಶರಣರು ಸಂಸ್ಕೃತ ಪದಗಳನ್ನು ಹಾಗೂ ಸಂಸ್ಕೃತಜನ್ಯ ಜ್ಞಾನವನ್ನು ಬಳಸಿದ ಕಾರಣಗಳು ಹೀಗಿವೆ:

(೧) ರೂಢ ಸಂಪ್ರದಾಯದ ಹಾಗು ತತ್ವಜ್ಞಾನದ ಪರಿಭಾಷೆಯನ್ನು ಬಳಸುವ ಅವಶ್ಯಕತೆ:-
ಶರಣರು ಭಾರತೀಯ ತತ್ವಜ್ಞಾನದ ಅನೇಕ ಅಂಶಗಳನ್ನು ಒಪ್ಪಿಕೊಳ್ಳುತ್ತಿದ್ದರು ;
ಎಲ್ಲವನ್ನೂ ಅವರು ತಿರಸ್ಕರಿಸಿರಲಿಲ್ಲ.
ಈ ಅಂಶಗಳಿಗೆ ಬಳಸಲಾದ ಪರಿಭಾಷೆ ಅಂದರೆ terminology ಸಹ ಎಲ್ಲರಿಗೂ ತಿಳಿದದ್ದೇ.
ಉದಾಹರಣೆಗೆ ಅರಿಷಡ್ವರ್ಗಗಳು ಹಾಗೂ ಅರಿಷಡ್ವರ್ಗಗಳನ್ನು ಗೆಲ್ಲುವದಕ್ಕೆ ಇರುವ ಮಹತ್ವ.
ಆದುದರಿಂದ ಬಸವಣ್ಣನವರು ಇಂತಹ ಸಂದರ್ಭದಲ್ಲಿ ಸಂಸ್ಕೃತಜನ್ಯ ಪರಿಭಾಷೆಯನ್ನೇ ಬಳಸಿದ್ದಾರೆ.
ಕನ್ನಡವನ್ನೇ ಮೂಲರೂಪದಲ್ಲಿ ಬಳಸಬೇಕೆನ್ನುವ ಹುಚ್ಚು ಅವರಿಗೆ ಇರಲಿಲ್ಲ.
ಉದಾಹರಣೆಗೆ ಬಸವಣ್ಣನವರ ಈ ವಚನ ನೋಡಿರಿ:

ಕಾಮವೇಕೊ ಲಿಂಗಪ್ರೇಮಿ ಎನಿಸುವಂಗೆ?
ಕ್ರೋಧವೇಕೊ ಶರಣವೇದ್ಯ ಎನಿಸುವಂಗೆ?
ಲೋಭವೇಕೊ ಭಕ್ತಿಯ ಲಾಭವ ಬಯಸುವಂಗೆ?
ಮೋಹವೇಕೊ ಪ್ರಸಾದವೇದ್ಯ ಎನಿಸುವಂಗೆ?
ಮದ, ಮತ್ಸರವುಳ್ಳವಂಗೆ ಹೃದಯಶುದ್ಧವೆಲ್ಲಿಯದೊ?
ಹದುಳಿಗರಾದಲ್ಲಿಪ್ಪ ನಮ್ಮ ಕೂಡಲ-ಸಂಗಮ-ದೇವ.

ಈ ಮೇಲಿನ ವಚನದ ೨೧ ಪದಗಳಲ್ಲಿ ೧೫ ಪದಗಳು ಸಂಸ್ಕೃತಪದಗಳು.
ಹುಟ್ಟುಕನ್ನಡಿಗರಾದ ಬಸವಣ್ಣನವರು ಹೀಗೇಕೆ ಮಾಡಿದರು?
ಸಂಸ್ಕೃತ ಪದಗಳನ್ನೇಕೆ ಧಾರಾಳವಾಗಿ ಬಳಸಿದರು?
ಇದಕ್ಕೆ ಉತ್ತರವನ್ನು ನೀಡುವಿರಾ?
(ಯಾಕೆಂದರೆ ಬಸವಣ್ಣನವರು ಹುಟ್ಟುಕನ್ನಡಿಗರೇ ಹೊರತು ಹುಚ್ಚುಭಟ್ಟರು ಕಚ್ಚಿದ ಕನ್ನಡಿಗರಲ್ಲ!?)

ಬಸವಣ್ಣನವರು ಕೇವಲ ಸಂಸ್ಕೃತ ಪದಗಳನ್ನು ಬಳಸುವದಷ್ಟೇ ಅಲ್ಲ, ಸಂಸ್ಕೃತಶ್ಲೋಕಗಳನ್ನೇ ತಮ್ಮ ವಚನಗಳಲ್ಲಿ ಉದ್ಧರಿಸುತ್ತಿದ್ದರು ಎನ್ನುವದಕ್ಕೆ ಇಲ್ಲೊಂದು ಸಣ್ಣ ಉದಾಹರಣೆ ಇದೆ:

ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯಾ
ಭೂಮಿಯಾಧಾರದಲ್ಲಿ ವೃಕ್ಷ ನೀರುಂಬುದಯ್ಯಾ
ಜಂಗಮವಾಪ್ಯಾಯನವಾದೊಡೆ ಲಿಂಗ ಸಂತುಷ್ಟಿಯಹುದಯ್ಯಾ
‘ವೃಕ್ಷಸ್ಯ ವದನಮ್ ಭೂಮಿ: ಸ್ಥಾವರಸ್ಯ ತು ಜಂಗಮಃ
ಅಹಮ್ ತುಷ್ಯೋಸ್ಮುಮಾದೇವಿ ಉಭಯೋರ್ಲಿಂಗಜಂಗಮಾತ್’
ಇದು ಕಾರಣ ಕೂಡಲಸಂಗಮದೇವರಲ್ಲಿ
ಜಂಗಮಾಪ್ಯಾಯನವಾದೆಡೆ ಲಿಂಗಸಂತುಷ್ಟಿ.

ಈ ವಚನದಲ್ಲಿ ಬಸವಣ್ಣನವರು
ವೃಕ್ಷಸ್ಯ ವದನಮ್ ಭೂಮಿ: ಸ್ಥಾವರಸ್ಯ ತು ಜಂಗಮಃ
ಅಹಮ್ ತುಷ್ಯೋಸ್ಮುಮಾದೇವಿ ಉಭಯೋರ್ಲಿಂಗಜಂಗಮಾತ್
”,
ಎನ್ನುವ ಸಂಸ್ಕೃತ ಶ್ಲೋಕವನ್ನು ಉದ್ಧರಿಸುವ ಅವಶ್ಯಕತೆ ಏನಿತ್ತು?

ಈ ಉದ್ಧರಣೆ ಇಲ್ಲದೆಯೇ ವಚನ ಅರ್ಥಪೂರ್ಣವಾಗುತ್ತಿರಲಿಲ್ಲವೆ?
ಅಥವಾ ಬಸವಣ್ಣನವರು ಅಮಾಯಕರನ್ನು ಮರಳುಗೊಳಿಸಲು
ಸಂಸ್ಕೃತ ಶ್ಲೋಕವನ್ನು ಉಪಯೋಗಿಸಿದರೆಂದು ಹೇಳುವಿರಾ?
ಕನ್ನಡವನ್ನು ಅಪ್ಪಿಕೊಂಡವರಿಗೆ ಸಂಸ್ಕೃತ ಶ್ಲೋಕದ ಹಂಗೇಕೆ?

It means ಬಸವಣ್ಣನವರು ಕನ್ನಡ ಹಾಗೂ ಸಂಸ್ಕೃತಗಳ ಪರಸ್ಪರ ಅವಲಂಬನವನ್ನು ಅರಿತವರಾಗಿದ್ದರು.
ಈ ಎರಡು ಭಾಷೆಗಳ ನಡುವೆ ಅನವಶ್ಯಕ ಭೇದಬುದ್ಧಿಯನ್ನು ಹುಟ್ಟಿಸುವ ರಾಜಕಾರಣಿ-ಕನ್ನಡಿಗರ ಗುಂಪಿಗೆ ಅವರು ಸೇರಿರಲಿಲ್ಲ.

(೨) ಕನ್ನಡ ಪದಗಳ ಬದಲಾಗಿ ಸಂಸ್ಕೃತ ಪದಗಳನ್ನು ಕೆಲವೊಂದು ಸಂದರ್ಭದಲ್ಲಿ ಬಳಸಲೇ ಬೇಕಾಗುತ್ತದೆ.
ಉದಾಹರಣೆಗೆ ಅಕ್ಕಮಹಾದೇವಿಯ ಒಂದು ಖ್ಯಾತ ವಚನದ ಒಂದು ಸಾಲನ್ನು ನೋಡಿರಿ:

ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು.”

ತನು ಮತ್ತು ಪುಷ್ಪ ಎನ್ನುವ ಸಂಸ್ಕೃತ ಪದಗಳನ್ನೇಕೆ ಅಕ್ಕ ಇಲ್ಲಿ ಬಳಸಿದಳು?
ಹುಟ್ಟುಕನ್ನಡತಿಯಾದ ಅವಳು ಕನ್ನಡ ಪದಗಳನ್ನೇ ಬಳಸಿದ್ದರೆ ಹೀಗಿರುತ್ತಿತ್ತು:
ಮೈ ಕರಗದವರಲ್ಲಿ ಹೂವನ್ನೊಲ್ಲೆಯ್ಯ ನೀನು!
ಈ ಸಾಲಿನ ಅರ್ಥ?
ಶಿವ ಶಿವಾ! ಬೊಜ್ಜು ಮೈಯವಳು ಹೂವು ಕೊಟ್ಟರೆ ನೀನು ಬೇಡವೆನ್ನುತ್ತಿದ್ದೆಯಾ, ಮಲ್ಲಿಕಾರ್ಜುನಾ?
ಕೇವಲ slim and trim ಇರುವವಳು ಹೂವು ಕೊಟ್ಟರೆ ಮಾತ್ರ ನೀನು ಒಪ್ಪಿಸಿಕೊಳ್ಳುತ್ತಿದ್ದೆಯಾ?
…………………………………………………
ಪ್ರಾಚೀನ ಭಾರತದಲ್ಲಿ ಭಾಷಾಭೇದಬುದ್ಧಿಯು ಯಾವಾಗಲೂ ಇರಲಿಲ್ಲ.
ಜನರು ಅವಶ್ಯಕತೆಗೆ ತಕ್ಕಂತಹ ಭಾಷೆಯನ್ನು ಉಪಯೋಗಿಸುತ್ತಿದ್ದರು.
ಉದಾಹರಣೆಗೆ, ಸನಾತನಧರ್ಮದ ಪುನರುತ್ಥಾನಕ್ಕಾಗಿ ಶಂಕರ ಎನ್ನುವ ಮಲೆಯಾಳಿ ತರುಣ ಸಂಸ್ಕೃತದಲ್ಲಿಯೇ ಏಕೆ ಜ್ಞಾನಪ್ರಸಾರ ಮಾಡಿದ, ಮಲೆಯಾಳಿಯಲ್ಲಿ ಏಕೆ ಮಾಡಲಿಲ್ಲ?
ಅಖಿಲ ಭಾರತವು ತಮ್ಮ ಧರ್ಮಭೂಮಿಯಾಗಿದ್ದರಿಂದ ಸಂಸ್ಕೃತವನ್ನೇ ಅವಲಂಬಿಸುವದು ಶಂಕರಾಚಾರ್ಯರಿಗೆ ಅನಿವಾರ್ಯವಾಗಿತ್ತು.
ಅದೇ ರೀತಿ ಕೇವಲ ಕನ್ನಡನಾಡನ್ನಷ್ಟೇ ಕರ್ಮಭೂಮಿಯಾಗಿ ಹೊಂದಿದ್ದ ಶರಣರು ಕನ್ನಡದಲ್ಲೇ ವಚನಗಳನ್ನು ರಚಿಸಿದರು.
ಭೂರಂಗವೇ ಈಗ ನಮ್ಮ ರಂಗಭೂಮಿಯಾಗಿರುವದರಿಂದ ನಮ್ಮ ತಾಂತ್ರಿಕ ಹಾಗೂ ವೈಜ್ಞಾನಿಕ ತಜ್ಞರು (ಅವರಲ್ಲಿ ಅನೇಕರು ಹುಟ್ಟುಕನ್ನಡಿಗರು) ಇಂಗ್ಲೀಶನ್ನು ಈಗ ಬಳಸುವದಿಲ್ಲವೆ?

Thursday, January 15, 2009

ಬಸವಣ್ಣನವರ ವಚನಗಳು

ವಿಚಾರಕ್ರಾಂತಿ, ಆಚಾರಕ್ರಾಂತಿ ಇವು ಕಲ್ಯಾಣದ ಶಿವಶರಣರ ಪ್ರಮುಖ ಧ್ಯೇಯಗಳಾಗಿದ್ದವು.
ಈ ಧ್ಯೇಯಗಳ ಸಾಧನೆಯ ಜೊತೆಜೊತೆಗೇ ಕನ್ನಡ ಭಾಷೆಯೂ ಸಹ ಶರಣರ ವಚನಗಳಿಂದಾಗಿ ಹೊಸ ಪ್ರಭೆಯನ್ನು ಪಡೆಯಿತು.
ಶರಣರ ಮುಖ್ಯ ಧ್ಯೇಯದ ಎದುರಿಗೆ ಇದು ಒಂದು ತರಹದ ‘ಉಪ ಉತ್ಪನ್ನ’.
ಹೀಗಾಗಿ, ಬಸವಣ್ಣನವರಿಗೆ, ಪ್ರಭುದೇವರಿಗೆ ಅಥವಾ ಅಕ್ಕಮಹಾದೇವಿಗೆ ‘ಶ್ರೇಷ್ಠ ಸಾಹಿತಿಗಳು’ ಎಂದು ಕರೆಯಲು ನಾವು ಹಿಂಜರಿಯುತ್ತೇವೆ.
ಆದರೆ ಅವರು ಶ್ರೇಷ್ಠ ಸಾಹಿತಿಗಳು ಎನ್ನುವದು ಒಂದು ವಾಸ್ತವಿಕತೆ, although secondary reality.
ಅವರು ಆಧ್ಯಾತ್ಮಿಕ ಮಹಾನುಭಾವರು ಎನ್ನುವದೇ ಮೂಲ ವಾಸ್ತವಿಕತೆ, primary reality.

“ನುಡಿದರೆ ಮುತ್ತಿನ ಹಾರದಂತಿರಬೇಕು..” ಎನ್ನುವ ಬಸವಣ್ಣನವರ ಮಾತು ಅವರ ವಚನಗಳಿಗೇ ಅನ್ವಯಿಸುತ್ತದೆ.
ಬಸವಣ್ಣನವರು ತಮ್ಮ ವಚನಗಳ ಮೂಲಕ ಸೃಷ್ಟಿಸಿದ ಸುಂದರ ಪದಪುಂಜಗಳಿಗೆ ಲೆಕ್ಕವಿಲ್ಲ.
‘ಹೊನ್ನಶೂಲ’, ‘ತಲೆದಂಡ’, ‘ಲೋಕದ ಡೊಂಕು’, ‘ಮಾನಿಸಗಳ್ಳೆ’, ‘ಚಿತ್ರದ ರೂಹು’, ‘ಕರ್ತಾರನ ಕಮ್ಮಟ’ ಇವುಗಳನ್ನು ಉದಾಹರಿಸಬಹುದು.

ಸಂಸ್ಕೃತದ ಅನೇಕ ಸುಂದರ ವಾಕ್ಯಗಳನ್ನು ಅವರು ಕನ್ನಡದಲ್ಲಿ ಇನ್ನೂ ಚೆನ್ನಾಗಿ ಹೇಳಿದ್ದಾರೆ ಅಥವಾ ಅನುವಾದಿಸಿದ್ದಾರೆ.
ಉದಾಹರಣೆಗೆ ಈ ಸಂಸ್ಕೃತ ವಾಕ್ಯವನ್ನು ನೋಡಿರಿ:
“ಮಧು ತಿಷ್ಠತಿ ಜಿಹ್ವಾಗ್ರೇ, ಹೃದಯೇತು ಹಾಲಾಹಲಮ್.”
ಬಸವಣ್ಣನವರು ಇದೇ ಮಾತನ್ನು ಕನ್ನಡದಲ್ಲಿ ಹೇಳಿದ ಬಗೆ ಹೀಗಿದೆ:
ಅವಳ ಮಾತು ಬೆಲ್ಲದಂತೆ, ಮನದಲ್ಲಿದ್ದದು ನಂಜು ಕಂಡಯ್ಯಾ.”

ಮಹಾಭಾರತದಲ್ಲಿ ಧರ್ಮರಾಯನು ಹೇಳುವ,
“ಮಾತೃವತ್ ಪರದಾರೇಷು,
ಪರದ್ರವ್ಯೇಷು ಲೋಷ್ಠವತ್”
ಎನ್ನುವ ನೀತಿಬೋಧೆಯನ್ನು ಬಸವಣ್ಣನವರು ಈ ರೀತಿಯಾಗಿ ಕನ್ನಡಿಸಿದ್ದಾರೆ:
ಛಲ ಬೇಕು ಶರಣಂಗೆ ಪರಧನವನೊಲೆನೆಂಬ,
ಛಲ ಬೇಕು ಶರಣಂಗೆ ಪರಸತಿಯನೊಲೆನೆಂಬ
”.

ಭಗವದ್ಗೀತೆಯು ಸ್ಥಿತಪ್ರಜ್ಞನ ಲಕ್ಷಣಗಳನ್ನು ನಾಲ್ಕು ಶ್ಲೋಕಗಳಲ್ಲಿ ಹೇಳಿದೆ.
ಬಸವಣ್ಣನವರು ಕನ್ನಡದ ಒಂದೇ ವಾಕ್ಯದಲ್ಲಿ ಅದರ ಸಾರವನ್ನು ತಿಳಿಯಾಗಿ ತಿಳಿಸಿದ್ದಾರೆ:
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟೀತಲ್ಲದೆ, ನೆರೆಮನೆಯ ಸುಟ್ಟೀತೆ ಅಯ್ಯಾ?

ಈ ವಾಕ್ಯದಲ್ಲಿ ಕೇವಲ ಸಂದೇಶವಷ್ಟೇ ಅಲ್ಲ, ಅದಕ್ಕಿರುವ ಮನೋವೈಜ್ಞಾನಿಕ ಆಧಾರವೂ ಸಹ ವ್ಯಕ್ತವಾಗಿದೆ.
ಇದೀಗ ನಮ್ಮ ಮನೋವಿಜ್ಞಾನಿಗಳು, corporate ಗುರುಗಳು ಇದೇ ಸಂದೇಶವನ್ನು corporate executiveಗಳಿಗೆ ***** ಹೊಟೇಲುಗಳಲ್ಲಿ ವಿವರಿಸುತ್ತಾರೆ.
ಬೇರೆಯವರ ವಿಚಾರವಾಗಿ ನಮ್ಮ ಮನದಲ್ಲಿ ಸಿಟ್ಟು, ಸೆಡವು, ಹತಾಶೆ ಉಳಿದುಕೊಂಡರೆ, acidity, BP, ಇವೆಲ್ಲ ಅಗುವದು ನಮಗೇ ಹೊರತು ಅವರಿಗಲ್ಲ ಎನ್ನುವ ಸಂದೇಶವನ್ನು ಬಸವಣ್ಣನವರು ಒಂದೇ ವಾಕ್ಯದಲ್ಲಿ ಮನಗಾಣಿಸಿದ್ದಾರೆ.

ಯಾವುದೇ ಒಂದು ಸಂದೇಶವನ್ನು ಬಸವಣ್ಣನವರಂತೆ compact ಆಗಿ ಹೇಳಿದವರು ಬಹುಶಃ ಯಾರೂ ಇರಲಿಕ್ಕಿಲ್ಲ.
ಉದಾಹರಣೆಗೆ ಈ ವಚನ ನೋಡಿರಿ:
“ಕರಿ ಘನ, ಅಂಕುಶ ಕಿರಿದೆನ್ನಬಹುದೆ? ಬಾರದಯ್ಯಾ
ಗಿರಿ ಘನ, ವಜ್ರ ಕಿರಿದೆನ್ನಬಹುದೆ? ಬಾರದಯ್ಯಾ
ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಬಾರದಯ್ಯಾ
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ?
ಬಾರದಯ್ಯಾ ಕೂಡಲಸಂಗಮ ದೇವಾ”

ಈ ವಚನವನ್ನು ನೋಡಿದಾಗ ನನಗೆ ಅಲೆಗ್ಝಾಂಡರ
ಸೋಲ್ಝೆನಿತ್ಸನ್ನನ ನಾಟಕದ ಶೀರ್ಷಿಕೆ ನೆನಪಾಗುತ್ತದೆ: “Candle in the wind”.
Candle in the wind ಅಂದರೆ ಸಂಕಷ್ಟವನ್ನು ಎದುರಿಸುತ್ತಿರುವ human spirit ಎಂದು ಸೋಲ್ಝೆನಿತ್ಸನ್ನನ ಮತ.
'ಜ್ಯೋತಿ' ಎಂದು ಬಸವಣ್ಣನವರು ಹೇಳುತ್ತಿರುವದು ದೇವರಲ್ಲಿಯ ನಂಬುಗೆ.
ಈ ಎರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ. ನಂಬುಗೆ ಅಥವಾ spirit ಇವು ಅನೇಕ ಅಡಚಣಿಗಳನ್ನು ಎದುರಿಸುತ್ತಿರಬಹುದು. ಆದರೆ ಅವುಗಳನ್ನು ರಕ್ಷಿಸಿಕೊಳ್ಳುವದು ನಮ್ಮ ಅವಶ್ಯಕತೆ.

ತನ್ನ ಕೊನೆಯ ದಿನಗಳಲ್ಲಿ ಬುದ್ಧನು ತನ್ನ ಶಿಷ್ಯರಿಗೆ ಕೆಲವೊಂದು rules of conduct ಹೇಳಿದ್ದ.
“ನೀವು ಭಿಕ್ಷೆ ಬೇಡಲು ಹೋದಾಗ ಯಾರನ್ನೂ ಬಯ್ಯಬೇಡಿ, ಸುಳ್ಳು ಹೇಳಬೇಡಿ” ಇತ್ಯಾದಿ.
ಇದೇ ಸಂದೇಶವು ಬಸವಣ್ಣನವರ ವಚನದಲ್ಲಿ ಎಷ್ಟು ಸುಂದರವಾಗಿ ಮೂಡಿದೆ ಎನ್ನುವದನ್ನು ನೋಡಬಹುದು.

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಅನ್ಯರಿಗೆ ಅಸಹ್ಯಪಡಬೇಡ, ಮುನಿಯಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ”

ಅನೇಕ ಮೂಲಗಳಿಂದ ಜ್ಞಾನಸಂಪಾದನೆ ಮಾಡಿದ ಬಸವಣ್ಣನವರು ಬುದ್ಧನ ಸಂದೇಶವನ್ನೇ ಕನ್ನಡದಲ್ಲಿ ಹೇಳಿದ್ದರೆ ಆಶ್ಚರ್ಯವಿಲ್ಲ.

ಇಂತಹ ವಚನಗಳಿಂದ ಬಸವಣ್ಣನವರು ಕೇವಲ ಸಮಾಜಸುಧಾರಣೆಯನ್ನಷ್ಟೇ ಮಾಡಲಿಲ್ಲ, ಕನ್ನಡ ನುಡಿಯ ಸೊಬಗನ್ನೂ ಸಹ ಹೆಚ್ಚಿಸಿದರು.
ಕನ್ನಡ ಸಾಹಿತ್ಯದ ಹಿರಿಯ ಪಟ್ಟ ಅವರದು.
ಆದರೆ ಅವರ ಶರಣಪಟ್ಟವು ಇದಕ್ಕಿಂತಲೂ ಎಷ್ಟೋ ದೊಡ್ಡದು.
.......................................................
ಪ್ರಿಯ ಸಹಭಾಗಿಗಳೆ,
ಒಂದು ಅತ್ಯಂತ ಕಳವಳದ ವಿಷಯವನ್ನು ನಮ್ಮ ಸಹಬ್ಲಾಗಿಗರಾದ ಸುಷ್ಮಾಸಿಂಧು ನನ್ನ ನಜರಿಗೆ ತಂದಿದ್ದಾರೆ.
ಅವರು ತಮ್ಮ ಬ್ಲಾಗಿನಲ್ಲಿ ಬರೆದ ಲೇಖನವನ್ನು
(http://mydreamwritings.blogspot.com/2008/10/great-aspirations.html)
ಯದ್ವತ್ ನಕಲು ಮಾಡಿ Panky ಎನ್ನುವ ಕಳ್ಳನೊಬ್ಬ ತನ್ನದೇ ಲೇಖನ ಎನ್ನುವಂತೆ ತನ್ನ ಬ್ಲಾಗಿನಲ್ಲಿ ಹಾಕಿಕೊಂಡಿದ್ದಾನೆ.
(http://panki-wellstream.blogspot.com/2008/11/great-aspirations.html)
This is a clear case of plagiarism.
ನಾನು ಅವನಿಗೆ ಇದೇ ರೀತಿಯಾಗಿ comment ಬರೆದಿದ್ದೇನೆ.
ನೀವು ದಯವಿಟ್ಟು ಎರಡೂ blogsಗಳಿಗೆ ಹೋಗಿ ನೋಡಿ, ನಿಮ್ಮ commentಆ blogಗಳಲ್ಲಿ ಉಲ್ಲೇಖಿಸಿದರೆ ಇಂತಹ ಕಳ್ಳತನಗಳು ಇಲ್ಲವಾಗಬಹುದು.
ಅಲ್ಲದೆ, ಈ ವಿಷಯವನ್ನು ನಮ್ಮ blogger.comದ ಒಡೆಯರಿಗೆ ತಿಳಿಸುವ ಬಗೆ ನಿಮಗೆ ಗೊತ್ತಿದ್ದರೆ ದಯವಿಟ್ಟು ಹೇಳಿ ಹಾಗೂ ನೀವು ತಿಳಿಸಿ.
Let us fight against plagiarism.
-ಸುನಾಥ

Wednesday, January 7, 2009

ವಿಚಾರಸ್ವಾತಂತ್ರ್ಯ ಹಾಗು ವಿಚಾರಕ್ರಾಂತಿ

೧೨ನೆಯ ಶತಮಾನದಲ್ಲಿ ಜರುಗಿದ ಶರಣರ ಕ್ರಾಂತಿಯು ಕರ್ನಾಟಕದಲ್ಲಿ ನಡೆದ ಅದ್ಭುತ ವೈಚಾರಿಕ ಕ್ರಾಂತಿ ಎನ್ನಬಹುದು.
ಬಸವಣ್ಣನವರನ್ನು ಈ ಕ್ರಾಂತಿಯ ನೇತಾರ ಎನ್ನಲಾಗುತ್ತದೆ.
ಆದರೆ ಈ ಕ್ರಾಂತಿ ಬಸವಣ್ಣನವರಿಗಿಂತಲೂ ಸಾಕಷ್ಟು ಪೂರ್ವದಲ್ಲಿಯೇ ಪ್ರಾರಂಭವಾಗಿತ್ತು.
ಈ ಪೂರ್ವಿಕರನ್ನು ಬಸವಣ್ಣನವರು ಆದ್ಯರು ಎಂದು ಕರೆದಿದ್ದಾರೆ.
ಅವರ ವಚನಗಳನ್ನು “ಆದ್ಯರ ವಚನ ಪರುಷದಂತೆ ಕಾಣಯ್ಯ” ಎಂದು ಬಣ್ಣಿಸಿದ್ದಾರೆ.

ಈ ವೈಚಾರಿಕ ಕ್ರಾಂತಿಯಲ್ಲಿ ಶರಣರು ಆರು ಅಂಶಗಳನ್ನು ಪ್ರತಿಪಾದಿಸಿದ್ದಾರೆ:
(೧) ಸಾಂಪ್ರದಾಯಕ ಅಂಧಶ್ರದ್ಧೆಗಳನ್ನು ತಿರಸ್ಕರಿಸುವದು,
(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು,
(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು,
(೪) ಧಾರ್ಮಿಕ ಆಚರಣೆಗಳ ಸರಳೀಕರಣ,
(೫) ವೈಯಕ್ತಿಕ ಉತ್ತಮಿಕೆಗೆ ಒತ್ತು,
(೬) ಸಾಮಾಜಿಕ ಸುಧಾರಣೆ.

ಈ ಅಂಶಗಳು ಬಸವಣ್ಣನವರ ಅನೇಕ ವಚನಗಳಲ್ಲಿ ವ್ಯಕ್ತವಾಗುತ್ತವೆ.
ಅಂತಹ ಕೆಲವು ವಚನಗಳು ಹಿಗಿವೆ:

(೧) ಸಾಂಪ್ರದಾಯಕ ಶ್ರದ್ಧೆಗಳನ್ನು ತಿರಸ್ಕರಿಸುವದು (Rational thinking):
ಶುಭಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವದು ಒಂದು ಸಾಂಪ್ರದಾಯಕ ಶ್ರದ್ಧೆ.
ಆದರೆ, ಶರಣರು ‘ಶುಭಮುಹೂರ್ತ’ ಎನ್ನುವ conceptಅನ್ನೇ ತಿರಸ್ಕರಿಸಿದರು.
ಇದರ ಬಗೆಗೆ ಬಸವಣ್ಣನವರ ವಚನವೊಂದು ಹೀಗಿದೆ:

“ ಎಮ್ಮವರು ಬೆಸಗೊಂಡರೆ ಶುಭಲಗ್ನವೆನ್ನಿರಯ್ಯಾ,
ರಾಶಿಕೂಟ, ಋಣಸಂಬಂಧವುಂಟೆಂದು ಹೇಳಿರಯ್ಯಾ,
ಚಂದ್ರಬಲ ತಾರಾಬಲವುಂಟೆಂದು ಹೇಳಿರಯ್ಯಾ,
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯಾ,
ಕೂಡಲಸಂಗಮ ದೇವನ ಪೂಜಿಸಿದ ಫಲ ನಿಮ್ಮದಯ್ಯಾ.”

“ಇಪ್ಪತ್ತುನಾಲ್ಕು ತಿಥಿಯಿಂದ ವೆಗ್ಗಳ,
ಗ್ರಹಣ, ಸಂಕ್ರಾಂತಿಯಿಂದ ವೆಗ್ಗಳ,
ಏಕಾದಶಿ, ವ್ಯತಿಪಾತದಿಂದ ವೆಗ್ಗಳ,
ಸೂಕ್ಷ್ಮ ಶಿವಪಥನರಿದವಂಗೆ
ಹೋಮ, ನೇಮ, ಜಪ, ತಪದಿಂದ ವೆಗ್ಗಳ,
ಕೂಡಲಸಂಗಮ ದೇವಾ ನಿಮ್ಮ ಮಾಣದೆ ನೆನೆವವಂಗೆ”

ಪಾರಮಾರ್ಥಿಕ ಸಾಧನೆಗೆ ದೇಹದಂಡನೆಯು ಅವಶ್ಯವೆನ್ನುವದು ಮತ್ತೊಂದು ಸಾಂಪ್ರದಾಯಕ ಶ್ರದ್ಧೆ.
ಬಸವಣ್ಣನವರ ಒಂದು ವಚನವು ಈ ಪರಿಕಲ್ಪನೆಯನ್ನು ವಿರೋಧಿಸುವ ಪರಿ ಹೀಗಿದೆ:

“ಹುತ್ತವ ಬಡಿದೊಡೆ ಹಾವು ಸಾಯಬಲ್ಲುದೆ ಅಯ್ಯಾ
ಅಘೋರ ತಪವ ಮಾಡಿದೊಡೇನು?
ಅಂತರಂಗ ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯಾ
ಕೂಡಲಸಂಗಮ ದೇವಾ?”

ಈ ವಚನದಲ್ಲಿ ಬಸವಣ್ಣನವರು ಸಾಂಪ್ರದಾಯಕ ಶ್ರದ್ಧೆಯನ್ನು ಟೀಕಿಸಿದ್ದಷ್ಟೇ ಅಲ್ಲ,
ತಮ್ಮ ವೈಚಾರಿಕ ಧಾರ್ಷ್ಟ್ಯವನ್ನೂ ನಿಚ್ಚಳವಾಗಿ ತೋರಿಸಿದ್ದಾರೆ.

ಭಾರತೀಯ ಸಾಂಪ್ರದಾಯಕ ವಿಚಾರಧಾರೆಯ ಮೇರೆಗೆ ಹಾವು ಅಥವಾ ಸರ್ಪವೆಂದರೆ ಕುಂಡಲಿನಿ ಶಕ್ತಿ.
ಈ ಶಕ್ತಿಯನ್ನು ಜಾಗೃತಗೊಳಿಸುವದು ಯೋಗಿಯ ಗುರಿಯಾಗಿದೆ.
ಕನಸಿನಲ್ಲಿ ಹಾವು ಕಂಡರೆ ಅದು ಕುಂಡಲಿನಿ ವ್ಯಕ್ತವಾಗುವ ಬಗೆ ಎಂದು ಸಾಂಪ್ರದಾಯಕವಾಗಿ ಭಾವಿಸಲಾಗುತ್ತದೆ.
ಆದರೆ ಬಸವಣ್ಣನವರು ಕನ್ನಡ ನಾಡಿನಲ್ಲಿ (ಬಹುಶಃ ಭಾರತದಲ್ಲಿಯೇ) ಮೊದಲ ಬಾರಿಗೆ ಹಾವನ್ನು ಕಾಮಪೂರಿತ ಮನಸ್ಸಿಗೆ ಹೋಲಿಸಿದ್ದಾರೆ.
ಜರ್ಮನಿಯ ಮನೋವಿಜ್ಞಾನಿ ಫ್ರಾ:ಯ್ಡನು ಕನಸುಗಳಲ್ಲಿ ಕಂಡುಬರುವ ಹಾವು ಲೈಂಗಿಕ ಪ್ರತೀಕ ಎಂದು ಹೇಳುವದಕ್ಕಿಂತ ಏಳುನೂರು ವರ್ಷ ಮೊದಲಿಗೇ, ಬಸವಣ್ಣನವರು ಹಾವನ್ನು ‘lust’ ಪ್ರತೀಕವಾಗಿ ಬಳಸಿದ್ದಾರೆ.
ಇದು ಅವರ ವೈಚಾರಿಕ ಧಾರ್ಷ್ಟ್ಯವನ್ನು ಎತ್ತಿ ತೋರಿಸುತ್ತದೆ.

ವಿಚಿತ್ರವೆಂದರೆ, ಎರಡು ಶತಮಾನಗಳ ನಂತರದ ಕವಿಯಾದ ಸರ್ವಜ್ಞನು ಇದಕ್ಕೆ ವಿರುದ್ಧವಾದ ತನ್ನ ಅಭಿಪ್ರಾಯವನ್ನು ಹೀಗೆ ಹೇಳಿದ್ದಾನೆ:

“ದಂಡಿಸದೆ ದೇಹವನು, ಖಂಡಿಸದೆ ಕಾಯವನು
ಉಂಡುಂಡು ಸ್ವರ್ಗಕ್ಕೆ ಹೋಗಲಿಕೆ ಅದನೇನು,
ರಂಡೆಯಾಳುವಳೆ ಸರ್ವಜ್ಞ?”

(೨) ಮತೀಯ ಶ್ರೇಣೀಕರಣವನ್ನು ಹಾಗೂ ಮತೀಯ ಭಿನ್ನತೆಯನ್ನು ತಿರಸ್ಕರಿಸುವದು:

ಮತೀಯ ಶ್ರೇಣೀಕರಣವು ವೈದಿಕ ಧರ್ಮದ ಒಂದು ವಿರೂಪ ಸ್ವರೂಪವಾಗಿದೆ.
ಬಸವಣ್ಣನವರ ಅನೇಕ ವಚನಗಳಲ್ಲಿ ಇದರ ವಿರುದ್ಧದ ಹೋರಾಟವನ್ನು ನೋಡಬಹುದು.
ಒಂದು ಉದಾಹರಣೆ ಹೀಗಿದೆ:

“ಸೆಟ್ಟಿಯೆಂಬೆನೆ ಸಿರಿಯಾಳನ?
ಮಡಿವಾಳನೆಂಬೆನೆ ಮಾಚಯ್ಯನ?
ಡೋಹಾರನೆಂಬೆನೆ ಕಕ್ಕಯ್ಯನ?
ಮಾದಾರನೆಂಬೆನೆ ಚೆನ್ನಯ್ಯನ?
ಆನು ಹಾರುವನೆಂದೆಡೆ ಕೂಡಲಸಂಗಮ ನಗುವನಯ್ಯಾ!”

“ ಶ್ವಪಚನಾದಡೇನು? ಲಿಂಗಭಕ್ತನೇ ಕುಲಜನು.
ನಂಬಿ, ನಂಬದಿದ್ದಡೆ ಸಂದೇಹಿ, ನೋಡಾ.
ಕಟ್ಟಿದಡೇನು, ಮುಟ್ಟಿದಡೇನು, ಹೂಸಿದಡೇನು
ಮನ ಮುಟ್ಟದನ್ನಕ್ಕ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು,
ಕೂಡಲಸಂಗಯ್ಯನೊಲಿದಂಗಲ್ಲದೆ.”

“ಜಾತಿವಿಡಿದು ಸೂತಕವನರೆಸುವೆ,
ಜ್ಯೋತಿವಿಡಿದು ಕತ್ತಲೆಯನರೆಸುವೆ!
ಇದೇಕೊ ಮರುಳುಮಾನವಾ?
ಜಾತಿಯಲ್ಲಿ ಅಧಿಕನೆಂಬೆ!
ವಿಪ್ರಶತಕೋಟಿಗಳಿದ್ದಲ್ಲಿ ಫಲವೇನು?
ಭಕ್ತಶಿಖಾಮಣಿ ಎಂಬುದು ವಚನ.
ನಮ್ಮ ಕೂಡಲಸಂಗನ ಶರಣರ ಪಾದಪರುಶವ ನಂಬು,
ಕೆಡಬೇಡ ಮಾನವಾ.”

ಶರಣರೆಲ್ಲರೂ ಒಂದೇ. ಯಾರಲ್ಲೂ ಮೇಲು, ಕೀಳಿಲ್ಲ ಎನ್ನುವ ತತ್ವವು
ಬಸವಣ್ಣನವರ ಈ ಮುಂದಿನ ವಚನದಲ್ಲಿ ವ್ಯಕ್ತವಾಗುತ್ತದೆ:

“ಇವನಾರವ, ಇವನಾರವ ಇವನಾರವನೆಂದೆನಿಸದಿರಯ್ಯಾ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ!”

(೩) ಧಾರ್ಮಿಕ ಆಚರಣೆಗಳಲ್ಲಿಯ ಅನಾಚಾರವನ್ನು/ಡಾಂಭಿಕತೆಯನ್ನು ತಿರಸ್ಕರಿಸುವದು:

ವೈದಿಕ ಧರ್ಮದಲ್ಲಿ ಬೇರೂರಿದ ಅನಾಚಾರ ಹಾಗೂ ಡಾಂಭಿಕತೆಯನ್ನು ತೊಳೆಯಲು, ಶರಣರು ಪ್ರಯತ್ನ ಪಟ್ಟಿದ್ದಾರೆ. ಇದರ ಉದಾಹರಣೆಯಾಗಿ ಅಕ್ಕಮಹಾದೇವಿಯ ವಚನವೊಂದನ್ನು ನೋಡಬಹುದು:

“ತನು ಕರಗದವರಲ್ಲಿ ಪುಷ್ಪವನೊಲ್ಲೆಯ್ಯ ನೀನು,
ಮನ ಕರಗದವರಲ್ಲಿ ಗಂಧಾಕ್ಷತೆಯನೊಲ್ಲೆಯ್ಯ ನೀನು,
ಹದುಳಿಗರಲ್ಲದವರಲ್ಲಿ ಮಜ್ಜನವನೊಲ್ಲೆಯ್ಯ ನೀನು,
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯ್ಯ ನೀನು,
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯ್ಯ ನೀನು,
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯ್ಯ ನೀನು,
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯ್ಯ ನೀನು,
ಹೃದಯಕಮಲವರಳದವರಲ್ಲಿ ಇರಲೊಲ್ಲೆಯ್ಯ ನೀನು,
ಎನ್ನಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯಾ!”

ಗಂಧ, ಪುಷ್ಪ, ಧೂಪ, ದೀಪ, ನೈವೇದ್ಯ ಈ ಐದು ಉಪಕರಣಗಳನ್ನು ಬಳಸಿ ಮಾಡುವ ಪೂಜೆಗೆ ‘ಪಂಚೋಪಚಾರ ಪೂಜೆ’ ಎಂದು ಕರೆಯಲಾಗುತ್ತದೆ.
ಇದರಂತೆ ಶೋಡಷೋಪಚಾರ ಪೂಜೆಯೂ ಇದೆ.
ಪರಮಾತ್ಮನ ಪೂಜೆಯ ಅಂತಿಮ ಉದ್ದೇಶವೇ ‘ತನ್ನತನ’ ಕರಗುವದು.
ಇದನ್ನೇ ಕನಕದಾಸರು “ ‘ನಾನು’ ಹೋದರೆ ಹೋಗಬಹುದು” ಎಂದು ಹೇಳಿದ್ದು.
‘ನಾನು’ ನಾಶವಾಗದೆ, ಈ ಪಂಚೋಪಚಾರ ಅಥವಾ ಶೋಡಷೋಪಚಾರ ಪೂಜೆಯ ಸಾರ್ಥಕತೆ ಏನು?
ಅಕ್ಕಮಹಾದೇವಿ ತನ್ನ ವಚನದ ಮೂಲಕ ಇಂತಹ ವ್ಯರ್ಥ ಪೂಜೆಯನ್ನು ಟೀಕಿಸಿದ್ದಾರೆ.
ತನು ಹಾಗು ಮನಸ್ಸನ್ನು ಅಪರೋಕ್ಷವಾಗಿ ಪುಷ್ಪ ಹಾಗೂ ಅದರ ಗಂಧಕ್ಕೆ ಹೋಲಿಸಿರುವದು ಈ ವಚನದ ವೈಶಿಷ್ಟ್ಯವಾಗಿದೆ.

ಇದರಂತೆಯೇ, ಯಜ್ಞ ಯಾಗಾದಿಗಳಲ್ಲಿ ಜರಗುತ್ತಿದ್ದ ಪ್ರಾಣಿಬಲಿಯನ್ನು ಖಂಡಿಸಿ ಬಸವಣ್ಣನವರು ಹೇಳಿದ ವಚನವೊಂದು ಹೀಗಿದೆ:

“ ವಿಷ್ಣು ವರಾಹಾವತಾರದಲ್ಲಿ ಹಂದಿಯಂ ತಿಂಬುದಾವಾಚಾರವೊ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೊ ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೊ?
ವಿಷ್ಣು ಹರಿಣಾವತಾರದಲ್ಲಿ ಎರಳೆಯ ತಿಂಬುದಾವಾಚಾರವೊ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ,
ಹದಿನೆಂಟು ಪುರಾಣ, ಇಮ್ಮತ್ತೆಂಟಾಗಮ
ಇಂತಿವೆಲ್ಲನೋದಿ, ಕೇಳಿ, ಹೋಮವನಿಕ್ಕಿ, ಹೋತನ ಕೊಂದು
ತಿಂಬುದಾವಾಚಾರದೊಳಗೋ?
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ.
ನಮ್ಮ ಕೂಡಲಸಂಗಮ ದೇವಂಗೆ ಅಧಿದೇವತೆಗಳು ಸರಿಯೆಂಬುವರ
ಬಾಯಲ್ಲಿ ಸುರಿಯವೆ ಬಾಲಹುಳಗಳು? ”

(೪) ಧಾರ್ಮಿಕ ಆಚರಣೆಗಳ ಸರಳೀಕರಣ:

ಧಾರ್ಮಿಕ ಡಂಭಾಚಾರವನ್ನು ತಿರಸ್ಕರಿಸಿದ ಶರಣರು, ಅದಕ್ಕೆ ಲಿಂಗಧಾರಣೆಯ ಪರ್ಯಾಯವನ್ನು ನೀಡಿದರು.
ಇಷ್ಟಲಿಂಗವನ್ನು ಸದಾಕಾಲ ಎದೆಯ ಮೇಲೆ ಧರಿಸುವದರಿಂದ ಶರಣನು ಸದಾಕಾಲ ಎಚ್ಚರದಿಂದ ನಡೆಯುತ್ತಾನೆ.
ಈ ಇಷ್ಟಲಿಂಗವನ್ನು ಕರಸ್ಥಳದಲ್ಲಿ ಇಟ್ಟುಕೊಂಡು ಮಾನಸಿಕ ಪೂಜೆಯನ್ನು ಮಾಡುವದರಿಂದ,
ಆತ ಸಾಧನಾಪಥದಲ್ಲಿ ಶೀಘ್ರವಾಗಿ ಮುಂದುವರೆಯಬಹುದು ಎನ್ನುವ ಹಾರೈಕೆ ಇಲ್ಲಿದೆ.
ಇದಕ್ಕೆ ಸಂಬಂಧಿಸಿದ ಬಸವಣ್ಣನವರ ವಚನವೊಂದು ಈ ರೀತಿಯಾಗಿದೆ:

“ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದತ್ತ ನಿಮ್ಮ ಶ್ರೀಮುಕುಟ!
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ,
ಕೂಡಲಸಂಗಮ ದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ!”

(೫) ವೈಯಕ್ತಿಕ ಉತ್ತಮಿಕೆಗೆ ಒತ್ತು:

ಕೇವಲ ಲಿಂಗಧಾರಣೆಯಿಂದ ಅಥವಾ ಕರಸ್ಥಲಪೂಜೆಯಿಂದ ವ್ಯಕ್ತಿಯ ಉನ್ನತಿ ಆಗದು ಎದು ತಿಳಿದ ಶರಣರು ವೈಯಕ್ತಿಕ ಉತ್ತಮಿಕೆಗೆ ತಮ್ಮ ವಚನಗಳಲ್ಲಿ ಒತ್ತು ನೀಡಿದ್ದಾರೆ.
ಈ ವಿಷಯದಲ್ಲಿ ಬಸವಣ್ಣನವರು ಅನೇಕ ವಚನಗಳನ್ನು ರಚಿಸಿದ್ದಾರೆ.
ಉದಾಹರಣೆ:

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.”

“ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲಾ, ಕೂಡಲಸಂಗಮ ದೇವಾ!”

“ಲೋಕದ ಡೊಂಕ ನೀವೇಕೆ ತಿದ್ದುವಿರಿ?
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
ನಮ್ಮ ಕೂಡಲಸಂಗಮ ದೇವ.”

(೬) ಸಾಮಾಜಿಕ ಸುಧಾರಣೆ:
ಧಾರ್ಮಿಕ ಸುಧಾರಣೆ, ವೈಯಕ್ತಿಕ ಸುಧಾರಣೆ ಇವುಗಳ ಜೊತೆಗೇ ಸಾಮಾಜಿಕ ಸುಧಾರಣೆಯೂ ಸಹ ಮಹತ್ವದ ವಿಷಯವಾಗಿದೆ.
ಸಮಾಜದಲ್ಲಿ ಈವರೆಗೆ ಬೇರೂರಿದ ತಪ್ಪು ಧೋರಣೆಗಳನ್ನು ಬದಲಾಯಿಸುವ ಉದ್ದೇಶದಿಂದ ವಚನಕಾರರರು ಅನೇಕ ವಚನಗಳನ್ನು ಹಾಡಿದ್ದಾರೆ.
“ಕಾಯಕವೇ ಕೈಲಾಸ” ಎನ್ನುವ ವಚನವು dignity of labourಅನ್ನು ವ್ಯಕ್ತಪಡಿಸುವದಲ್ಲದೆ, ಪರಿಶ್ರಮ ಪಡದೆ ಉಣ್ಣುವದು ತಪ್ಪು ಎನ್ನುವ ಭಾವವನ್ನು ಸಹ ವ್ಯಕ್ತ ಮಾಡುತ್ತದೆ.
ಸಮಾಜಸುಧಾರಣೆಯ ಉದ್ದೇಶವನ್ನು ಸ್ಪಷ್ಟ ಪಡಿಸುವ ಬಸವಣ್ಣನವರ ಎರಡು ವಚನಗಳು ಹೀಗಿವೆ:

“ ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯಾ,
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯಾ,,
ಕೂಡಲಸಂಗಮ ದೇವಾ.”

“ಏನಿ ಬಂದಿರಿ, ಹದುಳವಿದ್ದಿರೆ ಎಂದರೆ
ನಿಮ್ಮ ಮೈಸಿರಿ ಹಾರಿ ಹೋಹುದೆ?
ಕುಳ್ಳಿರೆಂದರೆ ನೆಲ ಕುಳಿ ಹೋಹುದೆ?
ಒಡನೆ ನುಡಿದರೆ ಸಿರ ಹೊಟ್ಟೆಯೊಡೆವುದೆ?
ಕೊಡಲಿಲ್ಲದಿದ್ದರೊಂದು ಗುಣವಿಲ್ಲದ್ದೆಡೆ
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗಮ ದೇವನು?”

ಬಸವಣ್ಣನವರ ವಚನಗಳು ಹಾಗೂ ಶರಣರ ವಚನಗಳು ಈ ರೀತಿಯಾಗಿ ವೈಚಾರಿಕ ಕ್ರಾಂತಿಯ ಸಂದೇಶವನ್ನು ಬೀರುತ್ತವೆ.
ಆದರೆ ಈ ವೈಚಾರಿಕ ಕ್ರಾಂತಿ ಈಗ ಉಳಿದಿಲ್ಲ ಎನ್ನುವದು ಕನ್ನಡ ನಾಡಿನ ದುರ್ದೈವ.
ಕರ್ನಾಟಕದ ಖ್ಯಾತ ಸಂಶೋಧಕರಾದ ಶ್ರೀ ಎಮ್. ಎಮ್. ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ “ಮಾರ್ಗ”ದಲ್ಲಿ ಚೆನ್ನಬಸವಣ್ಣನ ಬಗೆಗೆ ಬರೆದ ವಿಷಯಗಳು ಕರ್ನಾಟಕದ ಕೆಲವೆಡೆ ತೀವ್ರ ಕ್ಷೋಭೆಯನ್ನು ಉಂಟು ಮಾಡಿದವು.
ಶ್ರೀ ಕಲಬುರ್ಗಿಯವರು ಮಠಾಧೀಶರ ಕ್ಷಮೆ ಕೋರಿದ ಬಳಿಕ ಈ ಪ್ರಕರಣ ಮುಕ್ತಾಯವಾಯಿತು.

ಇತ್ತಿಚೆಗೆ ಶ್ರೀ ಜಯಪ್ರಕಾಶ ಬಂಜಗೆರೆಯವರು ಬಸವಣ್ಣನು ಹುಟ್ಟಿನಿಂದ ಬ್ರಾಹ್ಮಣನಿರಲಿಕ್ಕಿಲ್ಲ ಎನ್ನುವ ಅನುಮಾನವನ್ನು “ ಆನು ಹೊರಗಣವನಯ್ಯಾ ” ಎನ್ನುವ ತಮ್ಮ ಕೃತಿಯೊಂದರಲ್ಲಿ ವ್ಯಕ್ತ ಪಡಿಸಿದರು.
ಅದರ ವಿರುದ್ಧ ಸಾರ್ವಜನಿಕ ಆಕ್ರೋಶ ವ್ಯಕ್ತವಾಗಿ, ಕರ್ನಾಟಕ ಸರಕಾರವು ಕೊನೆಗೊಮ್ಮೆ ಆ ಕೃತಿಯನ್ನು ಮುಟ್ಟುಗೋಲು ಹಾಕುವದರಲ್ಲಿ ಮುಕ್ತಾಯವಾಯಿತು.

ಆದರೆ, ಡಾಃನ್ ಬ್ರೌನ್ ಬರೆದ “ಡಾ ವಿಂಚಿ ಕೋಡ್” ಕೃತಿಯು ಯೇಸು ಕ್ರಿಸ್ತನ ಬಗೆಗೆ ಅನೇಕ ಸಂಶಯಗಳನ್ನು ವ್ಯಕ್ತ ಪಡಿಸಿದರೂ ಸಹ ಪಾಶ್ಚಾತ್ಯ ದೇಶಗಳಲ್ಲಿ ಅದರ ವಿರುದ್ಧ ಯಾವುದೇ ಚಳುವಳಿಯಾಗಲಿಲ್ಲ.
ಅಷ್ಟೇ ಏಕೆ, ಯೇಸುವು ಓರ್ವ ಸೂಳೆಯಲ್ಲಿ ರೋಮನ್ ಸೈನಿಕನಿಗೆ ಹುಟ್ಟಿದ ಮಗನು ಎನ್ನುವ ಸಂಶೋಧನಾತ್ಮಕ ಲೇಖನಗಳೂ ಸಹ ಪ್ರಕಟವಾಗಿವೆ.
ಆದರೆ ಇದರ ವಿರುದ್ಧ ಸಹ ಪಾಶ್ಚಾತ್ಯ ಲೋಕದಲ್ಲಿ ಯಾವುದೇ ಆಕ್ರೋಶ ವ್ಯಕ್ತವಾಗಿಲ್ಲ.

ಶರಣರು ತೋರಿಸಿದ ವೈಚಾರಿಕ ಸ್ವಾತಂತ್ರ್ಯ , ಆ ಸ್ವಾತಂತ್ರ್ಯಕ್ಕೆ ಬೇಕಾಗುವ ಸಹನೆ ನಮ್ಮಲ್ಲಿ ಮಾಯವಾಗಿದೆಯೆ?
ಹದಿನೇಳನೆಯ ಶತಮಾನದಲ್ಲಿ ಬಾಳಿದ, ಫ್ರೆಂಚ್ ಕ್ರಾಂತಿಗೆ ಪ್ರೇರಣೆ ನೀಡಿದ ಚಿಂತಕರಲ್ಲಿ ಒಬ್ಬನಾದ ವೋಲ್ಟೇರ್ ಎನ್ನುವ ಲೇಖಕ ಈ ರೀತಿ ಹೇಳಿದ್ದಾನೆ:
I do not agree with what you have to say, but I will defend to the death your right to say it.
ಭಾರತದಲ್ಲಿ ಈಗಿರುವ ಪರಿಸ್ಥಿತಿ ಹೇಗಿದೆಯೆಂದರೆ:
If you do not agree with me, I will do you to death!