Wednesday, December 1, 2010

ಜೋಡಿ-ಕೊಲೆಗಳ ಸರಣಿ ಹಂತಕ : ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ ದಿನಪತ್ರಿಕೆಯು ಕನ್ನಡದ ಕಗ್ಗೊಲೆಯನ್ನು ಮಾಡುತ್ತಿರುವ ಬಗೆಯನ್ನು ಇಲ್ಲಿ ಹಾಗು ಇಲ್ಲಿ  ಈಗಾಗಲೇ ಗಮನಿಸಿದ್ದೇವೆ. ‘ನಾಯಿಯ ಬಾಲ ಡೊಂಕು’ ಎನ್ನುವಂತೆ ಈ ಪತ್ರಿಕೆಯು ತನ್ನ ಮನೋವಿಕೃತ ಕೊಲೆಗಳ ಸರಣಿಯನ್ನು ಮುಂದುವರಿಸಿದೆ. ಇತ್ತೀಚೆಗೆ ಈ ಭಾಷಾಹನನದ ಹೊಸದೊಂದು ಮಾದರಿಯನ್ನು  ಈ ದಿನಪತ್ರಿಕೆ ಹೊರತಂದಿದೆ. ಈ ಮಾದರಿಯನ್ನು ಜೋಡಿ-ಕೊಲೆ ಎಂದು ಕರೆಯಬಹುದು. ಯಾಕೆಂದರೆ ಈ ಮಾದರಿಯಲ್ಲಿ ಒಂದೇ ಏಟಿಗೆ—ಇಂಗ್ಲಿಶ್ ಹಾಗು ಕನ್ನಡ— ಎರಡೂ ಭಾಷೆಗಳ ಕೊಲೆಗಳನ್ನು ಮಾಡಬಹುದು.
ಈ ಜೋಡಿ-ಕೊಲೆಗಿಂತಲೂ ಮೊದಲು, ಪ್ರತ್ಯೇಕ ಕೊಲೆಗಳ ಉದಾಹರಣೆಗಳನ್ನಷ್ಟು ನೋಡೋಣ:

(೧) ಇಂಗ್ಲಿಶ್ ಭಾಷೆಯ ಕೊಲೆ:
ಆಂಗ್ಲ ಬರಹವು ಕನ್ನಡದಂತೆ ‘ಧ್ವನಿ-ಅನುಕರಣ’ ಬರಹವಲ್ಲ. ಆಂಗ್ಲ ಭಾಷೆಯಲ್ಲಿ ಬರೆಯುವದೇ ಒಂದು, ಉಚ್ಚರಿಸುವದೇ ಒಂದು. ಆದರೆ ಕನ್ನಡ ಬರಹವು ‘ಧ್ವನಿ-ಅನುಕರಣ’ ಅಕ್ಷರಮಾಲೆಯನ್ನು ವಿಕಾಸಗೊಳಿಸಿಕೊಂಡಿದೆ. ಆದುದರಿಂದ ಆಂಗ್ಲ ಪದಗಳನ್ನು ಕನ್ನಡದಲ್ಲಿ ಬರೆಯುವಾಗ ಆಂಗ್ಲ ಪದದ ಧ್ವನಿಯನ್ನು ಅನುಸರಿಸಿ ಬರೆಯಬೇಕೆ ಹೊರತು ಅಕ್ಷರಗಳನ್ನು ಅನುಸರಿಸಿ ಅಲ್ಲ. ಉದಾಹರಣೆಗೆ psychology ಪದವನ್ನು ಕನ್ನಡದಲ್ಲಿ ‘ಸೈಕಾ‍^ಲೊಜಿ’ ಎಂದು ಬರೆಯಬೇಕೆ ವಿನಃ ‘ಪ್ಸೈಚಾಲೊಗಿ’ ಎಂದಲ್ಲ. ಈಗ ಸಂಯುಕ್ತ ಕರ್ನಾಟಕವು ಮಾಡಿದ ಕೊಲೆಗಳನ್ನಷ್ಟು ಗಮನಿಸೋಣ:

ಭಾರತದಲ್ಲಿ ನಡೆದ ಕಾ‌^ಮನ್ ವೆಲ್ಥ ಸ್ಪರ್ಧೆಗಳಲ್ಲಿ Isle of man ಎನ್ನುವ ಪುಟ್ಟ ದೇಶವೂ ಸಹ ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. Isle ಪದವನ್ನು ಆಂಗ್ಲರು ‘ಆಯ್ಲ್’ ಎಂದು ಉಚ್ಚರಿಸುತ್ತಾರೆ, ‘ಇಸ್ಲೆ’ ಎಂದು ಉಚ್ಚರಿಸುವದಿಲ್ಲ. [Isle (=island) ಪದದ ಅರ್ಥವು ‘ದ್ವೀಪ’ ಎಂದಾಗುತ್ತದೆ.] ಆ ದ್ವೀಪವಾಸಿಗಳು ತಮ್ಮ ದ್ವೀಪಕ್ಕೆ ‘ಲ’ಮನ್’ ಎಂದು ಕರೆಯುತ್ತಾರೆ.

ಹೊರಗಿನ ಜಗತ್ತಿನ ಕಡೆಗೆ ಕಣ್ಣು ಹಾಯಿಸದ ಕೂಪಮಂಡೂಕದಂತಹ ಪತ್ರಿಕೆಗೆ ಸರಿಯಾದ ಪದಪ್ರಯೋಗ ಹೇಗೆ ತಿಳಿದೀತು?  ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಈ ಪದವನ್ನು ‘ಇಸ್ಲೆ ಆಫ್ ಮ್ಯಾನ್’ ಎಂದು ಮುದ್ರಿಸಿದ್ದಾರೆ. ಬಹುಶಃ ಆಂಗ್ಲ ದೂರಮುದ್ರಣದ ವರದಿಯನ್ನು  ‘ಸಂ.ಕ.’ ಪತ್ರಿಕೆಯ ಪಂಡಿತರು ಯಥಾವತ್ತಾಗಿ ಕನ್ನಡ ವರ್ಣಮಾಲೆಗೆ ಅಕ್ಷರಾಂತರಿಸಿದ್ದಾರೆ. ಇದನ್ನು ಓದಿದಾಗ ‘ಭಾಷಾಂತರ ಪಾಠಮಾಲೆ’ಯನ್ನು ಓದಿ ಇಂಗ್ಲಿಶ್ ಕಲಿತ ಭಾಷಾಜ್ಞಾನಿಗಳು ಈ ಪತ್ರಿಕೆಯ ಸಂಪಾದಕ ವರ್ಗದಲ್ಲಿ ಇರಬಹುದು ಎನ್ನುವ  ಅನುಮಾನ ನನಗೆ  ಬರುತ್ತಿದೆ. ಕೇವಲ ಒಂದು ಸಲವಲ್ಲ ; ಈ ಸ್ಪರ್ಧೆಗಳು ಮುಗಿಯುವವರೆಗೂ ಈ ಆಂಗ್ಲಭಾಷಾಹನನ ನಿರಂತರವಾಗಿ ನಡೆಯಿತು.

ಇದೊಂದೇ ಉದಾಹರಣೆಯಾಗಿದ್ದರೆ ಇದನ್ನು ಕಣ್ತಪ್ಪಿನ ದೋಷವೆಂದು ‘ಕ್ಷಮಿಸಿ’’ ಬಿಡಬಹುದಾಗಿತ್ತು. ಆದರೆ ಈ ಉದಾಹರಣೆಯು ‘ಸರಣಿ ಕೊಲೆ’ಯ ಒಂದು ತುಣುಕು ಮಾತ್ರ. ಈಗ ಇಂತಹ ಇನ್ನೂ ಎರಡು ಕೊಲೆಗಳನ್ನು ಗಮನಿಸೋಣ :

(೧) Dengue : ಈ ಪದವನ್ನು ‘ಡೆಂಗೆ’ ಅಥವಾ ‘ಡೆಂಗೀ’ ಎಂದು ಉಚ್ಚರಿಸುತ್ತಾರೆ. ಆದುದರಿಂದ ಕನ್ನಡದಲ್ಲಿ ಈ ಪದವನ್ನು ಡೆಂಗೆ ಅಥವಾ ಡೆಂಗೀ ಎಂದು ಬರೆಯಬೇಕೆ ಹೊರತು ‘ಡೆಂಗ್ಯೂ’ ಎಂದಲ್ಲ.
(೨) Michelle : ಅಮೇರಿಕದ ಅಧ್ಯಕ್ಷ ಓಬಾಮಾರ  ಹೆಂಡತಿಯನ್ನು, ಅಲ್ಲಿ (ಓಬಾಮಾ ಸೇರಿದಂತೆ) ಎಲ್ಲರೂ ಕರೆಯುವದು ‘ಮಿಶೆಲ್’ ಎಂದು. ‘ಸಂ.ಕ.’ದ ಪಂಡಿತರು ‘ಮಕ್ಕೀ ಕಾ ಮಕ್ಕೀ’ ಅಕ್ಷರಾಂತರ ಮಾಡಿ ‘ಮಿಚೆಲ್ಲೆ’ ಎಂದು ಮುದ್ರಿಸಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ದೇಶಾಭಿಮಾನದಿಂದ ಪ್ರೇರಿತವಾಗಿ, ನಮ್ಮನ್ನಾಳಿದ ಆಂಗ್ಲರ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿಯಾಗಿ ಆಂಗ್ಲ ಭಾಷೆಯ ಕೊಲೆಯನ್ನು ಮಾಡುತ್ತಿದೆ ಎಂದು ಕಲ್ಪಿಸಿಕೊಂಡು ನಾವು ಈ ಸರಣಿ ಕೊಲೆಗಳನ್ನು ಮನ್ನಿಸಿ ಬಿಡಬಹುದೇನೊ! ಆದರೆ, ಇಂಗ್ಲಿಶ್-ಕನ್ನಡ ಭಾಷೆಗಳ ಜೊತೆಜೊತೆಗೆ ಬಂಗಾಲೀ ಭಾಷೆಯನ್ನೂ ಸಹ ಚಿತ್ರಹಿಂಸೆಯ ಮೂಲಕ ಛೇದಿಸುವ ಈ ವಿಧಾನವನ್ನು ನೋಡಿರಿ :

ಮಮತಾ ಬ್ಯಾನರ್ಜಿಯವರು ಕೇಂದ್ರ ಸರಕಾರದ ರೇಲ್ವೇ ಮಂತ್ರಿಗಳು. ಈ ವರ್ಷದ (೨೦೧೦-೧೧ರ) ರೇಲ್ವೇ ಮುಂಗಡಪತ್ರವನ್ನು ಮಂಡಿಸುವಾಗ, ‘ದುರಂತೊ ಎಕ್ಸ್‍ಪ್ರೆಸ್’ ಎನ್ನುವ ಹೊಸ ಪ್ರಸ್ತಾವನೆಯೊಂದನ್ನು ಅವರು ಮಂಡಿಸಿದರು. ಸಂಸ್ಕೃತದ ‘ತುರಂತ’ವು(=urgent, immediate) ಬಂಗಾಲೀ ಬಾಯಿಯಲ್ಲಿ ‘ದುರಂತೊ’ ಆಗುತ್ತದೆ. ಕರ್ನಾಟಕದ ಲೋಕಸಭಾ ಸದಸ್ಯರಾದ ಅನಂತಕುಮಾರರು ‘ದುರಂತ’ ಎಂದರೆ tragedy ಅಲ್ಲವೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು. ಇರಲಿ, ಕನ್ನಡಿಗರ ಹೆಮ್ಮೆಯ(!) ದಿನಪತ್ರಿಕೆ ‘ಸಂಯುಕ್ತ ಕರ್ನಾಟಕ’ವು ರೇಲ್ವೇ ವೇಳಾಪತ್ರಿಕೆಯನ್ನು ತನ್ನ ಪುಟದಲ್ಲಿ ಪ್ರಕಟಿಸುವಾಗ, ಮಮತಾ ಬ್ಯಾನರ್ಜಿ ಉಚ್ಚರಿಸುವಂತೆ ‘ದುರಂತೊ ಎಕ್ಸ್ ಪ್ರೆಸ್’ ಎಂದು ಮುದ್ರಿಸಬೇಕಲ್ಲವೆ? ಇಂಗ್ಲೀಶ್ ವೇಳಾಪತ್ರಿಕೆಯಲ್ಲಿ Duranto Express ಎಂದು ಓದಿದ ‘ಸಂ.ಕ.’ ಪಂಡಿತರು ಇದನ್ನೇ ಕನ್ನಡಕ್ಕೆ ‘ಡುರಾಂಟೊ ಎಕ್ಸ್ ಪ್ರೆಸ್’ ಎಂದು ಅಕ್ಷರಾಂತರಿಸಿದ್ದಾರೆ.

ಇಂಗ್ಲಿಶ್, ಬಂಗಾಲಿ ಹಾಗು ಕನ್ನಡ ಈ ಮೂರೂ ಭಾಷೆಗಳ ಶಿರಚ್ಛೇದನ ಮಾಡುವ ಈ ಪ್ರಯೋಗವನ್ನು ನಾವು ತ್ರಿವಳಿ ಕೊಲೆ ಎಂದು ಕರೆಯಬಹುದು. ಇದು ಸಂಪಾದಕವರ್ಗದ ಅಜ್ಞಾನದಿಂದ ಆದ ಅಪರಾಧ ಎನ್ನುವದು ಮೇಲ್ನೋಟಕ್ಕೇ ಕಾಣುತ್ತದೆ. ಏನಾದರೇನು, ಕೊಲೆಯು ಕೊಲೆಯೇ ಅಲ್ಲವೆ?

ಇದಕ್ಕಿಂತಲೂ ಹೆಚ್ಚಿನದಾದ, ಅಕ್ಷಮ್ಯ ಅಪರಾಧವೊಂದನ್ನು ‘ಸಂ.ಕ.’ ಮಾಡಿದೆ.
ರಬೀಂದ್ರನಾಥ ಠಾಕೂರರ ಬಗೆಗೆ ಅರಿಯದ ಭಾರತೀಯರು ಯಾರಾದರೂ ಇರುವರೆ? ‘ಠಾಕೂರ’ ಎನ್ನಲು ಬಾರದ ಆಂಗ್ಲರು ಅವರನ್ನು ‘ಟ್ಯಾಗೋರ್’ ಎಂದು ಕರೆದರು. ಅವರಂತೆಯೇ ಆಂಗ್ಲವ್ಯಾಮೋಹಿಗಳಾದ ಭಾರತೀಯರೂ ಸಹ ಠಾಕೂರರನ್ನು ಟ್ಯಾಗೋರ್ ಎಂದು ಕರೆಯುತ್ತಾರೆ, ಬರೆಯುತ್ತಾರೆ. ಇದನ್ನೂ ಸಹಿಸೋಣ. ಆದರೆ ಠ್ಯಾಗೂರ್ ಎಂದು ಬರೆದರೆ ಇದು ಎಲ್ಲಿಯ ಹೆಸರು? ಈ ರೀತಿ ಹೆಸರು ಬದಲಾಯಿಸಲು ಇವರಿಗೆ ಅಧಿಕಾರ ಕೊಟ್ಟವರಾರು? ನೋಬೆಲ್ ಬಹುಮಾನ ಪಡೆದ ಮೊದಲ ಭಾರತೀಯನಿಗೆ ಹಾಗು ಏಕೈಕ ಸಾಹಿತಿಗೆ ಇದು ಅವಮಾನವಲ್ಲವೆ? ಸರ್ವಜ್ಞಾನಿಗಳು ಎಂದು ತಮ್ಮ ಡುಬ್ಬವನ್ನು ತಾವೇ ಚಪ್ಪರಿಸಿಕೊಳ್ಳುವ ಇಂತಹ ಪತ್ರಕರ್ತರಿಗೆ ಯಾವ ಸನ್ಮಾನ ಮಾಡಬೇಕು?

ಈ ತಪ್ಪುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕವರ್ಗದ ಭಾಷಾ ಅಜ್ಞಾನವನ್ನು ತೋರಿಸುತ್ತಿದೆಯೋ ಅಥವಾ/ಮತ್ತು ಸಾಮಾನ್ಯ ಜ್ಞಾನದ ಅಭಾವವನ್ನು ತೋರಿಸುತ್ತಿದೆಯೋ ತಿಳಿಯದು. ಉದಾಹರಣೆಗೆ, ‘ಫ್ರೆಂಚ’ ಅನ್ನುವ ಪದವು ಭಾಷೆಯನ್ನು  ಹಾಗು ‘ಫ್ರಾನ್ಸ’ ಪದವು ಒಂದು ದೇಶವನ್ನು ಸೂಚಿಸುತ್ತದೆ ಎನ್ನುವದು ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೂ ಸಹ ತಿಳಿದಿರುವ ವಿಷಯ. ಬಹುಶಃ ಇದು ‘ಸಂ.ಕ.’ದವರಿಗೆ ಗೊತ್ತಿಲ್ಲ. ‘ಫ್ರಾನ್ಸಿನಲ್ಲಿ ಅತ್ಯಾಚಾರ’ ಎನ್ನುವದಕ್ಕೆ ಬದಲಾಗಿ ‘ಫ್ರೆಂಚಲ್ಲಿ ಅತ್ಯಾಚಾರ’ ಎಂದಿದ್ದಾರೆ. ನನಗನಿಸುವ ಮಟ್ಟಿಗೆ ಇದು ‘ಸಂ.ಕ.’ದವರು ಕನ್ನಡದಲ್ಲಿ ಮಾಡುತ್ತಿರುವ ಅತ್ಯಾಚಾರ!


ಪತ್ರಕರ್ತರಿಗೆ ಸಂಸ್ಕೃತ ಬರಬೇಕೆಂದಿಲ್ಲ. ಆದರೆ ಗೊತ್ತಿರದಿದ್ದಾಗ, ಸರಿಯಾದ ಪದಗಳನ್ನು ತಿಳಿದುಕೊಂಡ ಬಳಿಕ ಉಪಯೋಗಿಸಬೇಕು. ‘ಷಷ್ಠಿ’ ಎಂದರೆ ‘ಆರನೆಯದು’ . ‘ಷಷ್ಟಿ’ ಎಂದರೆ ಅರವತ್ತನೆಯದು. ಅರವತ್ತು ತುಂಬಿದ ಸ್ವಾಮಿಗಳು ಈ ಪತ್ರಿಕೆಯ ಕೈಯಲ್ಲಿ ಆರು ತುಂಬಿದ ಬಾಲಕರಾಗಿದ್ದಾರೆ!

ಪುರಂದರ ದಾಸರಂತೂ ಎಲ್ಲರಿಗೂ ಗೊತ್ತು. ಇಲ್ಲಿ ಅವರು ಪುರಂಧರ ದಾಸರಾಗಿದ್ದಾರೆ. ‘ರಾಸ್ತಾ ರೋಕೋ’ ವನ್ನು ‘ರೋಖೋ’ ಮಾಡಿದರೆ ಹೆಚ್ಚಿನ ಜೋರು ಬರುವದೆಂದು ಇವರು ಭಾವಿಸಿದ್ದಾರೆಯೆ?

 ಅಲ್ಪಪ್ರಾಣವಿದ್ದಲ್ಲಿ ಮಹಾಪ್ರಾಣ ಪ್ರಯೋಗ ಮಾಡುವಂತೆಯೇ, ಮಹಾಪ್ರಾಣವನ್ನು ಅಲ್ಪಪ್ರಾಣವನ್ನಾಗಿ ಸಹ ಇವರು ಬದಲಿಸಬಲ್ಲರು. ಉದಾಹರಣೆಗೆ ‘ಅದ್ಧೂರಿ’ ಯಾಕೆ?-- ‘ಅದ್ದೂರಿ’ ಓಕೆ! ಅನ್ನುವದು ಈ ಪತ್ರಿಕೆಯ ಅಭಿಪ್ರಾಯವಾಗಿರಬಹುದು!

ಕೆಲವು ಸಂಸ್ಕೃತ ಪದಗಳು ಕನ್ನಡದಲ್ಲಿ ಚಾಲ್ತಿಯಲ್ಲಿವೆ. ಈ ಪದಗಳ ಅರ್ಥ ಎಲ್ಲರಿಗೂ ಗೊತ್ತು. ಉದಾಹರಣೆಗೆ, ‘ಛದ್ಮವೇಷ’.  ಇದು ಗುರುತು ತಿಳಿಯದಿರಲು ಹಾಕಿಕೊಳ್ಳುವ ವೇಷ (incognito). ಸಾಮಾನ್ಯವಾಗಿ ಪೋಲೀಸ ಪತ್ತೇದಾರರು ಅಪರಾಧಿಗಳ ಪತ್ತೆ ಮಾಡುವಾಗ ಬಳಸುವ ಗುಪ್ತವೇಷ. ಈ ಪದವನ್ನು ಈ ಪತ್ರಿಕೆಯು fancy dress ಅಂದರೆ ‘ವಿನೋದ ವೇಷ’ ಪದಕ್ಕೆ ಪರ್ಯಾಯವಾಗಿ ಬಳಸಿದೆ. ಎಂತಹ ದಡ್ಡತನ!

ನಿರ್ಧಾರ ಎನ್ನುವ ಪದವು ಸಂಸ್ಕೃತದಲ್ಲಿ ಇದೆ. ‘ನಿರ್ಧಾರಣಾ’ ಎನ್ನುವ ಪದವು ಸಂಸ್ಕೃತದಲ್ಲಿ ಇಲ್ಲ. ಒಂದು ವೇಳೆ ಬಳಸಿದರೂ ಸಹ ಅದರ ಅರ್ಥವು decisiveness ಎಂದು ಆಗುವದಿಲ್ಲ, ಧಾರಣಾಶಕ್ತಿಯ ಅಭಾವ ಎಂದಾಗುತ್ತದೆ. ಅರ್ಥಾತ್ ಗಣಪತಿಯ ಮೂರ್ತಿಯನ್ನು ಮಾಡಲು ಹೊರಟವನು ಹನುಮಂತನ ಮೂರ್ತಿಯನ್ನು ಮಾಡಿದಂತಾಗಿದೆ ಈ ಪದಪ್ರಯೋಗ!

ಇನ್ನು ಸಂಸ್ಕೃತ ವ್ಯಾಕರಣ ಗೊತ್ತಿರದಿದ್ದಾಗ , ಸಂಸ್ಕೃತ ವಾಕ್ಯವನ್ನು ತಪ್ಪಾಗಿ ಪ್ರಯೋಗಿಸಬಾರದು ಎನ್ನುವದು ಸಾಮಾನ್ಯ ತಿಳಿವಳಿಕೆಯ ಮಾತು. ‘ಗುರು’ ಎನ್ನುವ ಪ್ರಥಮಾ ವಿಭಕ್ತಿಯ ಪದವು ‘ಗುರುವಿಗೆ’ ಎನ್ನುವ ಚತುರ್ಥಿ ವಿಭಕ್ತಿಯಲ್ಲಿ ಪ್ರಯೋಗಗೊಳ್ಳುವಾಗ ‘ಗುರವೇ’ ಆಗುತ್ತದೆ. ‘ಸಂ.ಕ.’ದ ಸಂಸ್ಕೃತ ಪಂಡಿತರು ಒಂದು ಅಗ್ರಲೇಖನದ ಶೀರ್ಷಿಕೆಗೆ ‘ಗುರುವೆ ನಮಃ’ ಎನ್ನುವ ಪ್ರಯೋಗ ಮಾಡಿದ್ದಾರೆ. ಬಹುಶಃ ಇವರು ಸಂಸ್ಕೃತ ವ್ಯಾಕರಣವನ್ನೇ ತಿದ್ದಲು ಹೊರಟಿದ್ದಾರೆಯೋ?(--ಶಂಕರ ಭಟ್ಟರು ಕನ್ನಡ ಬರಹವನ್ನು ತಿದ್ದಲು ಹೊರಟಂತೆ!--) ಇಂಗ್ಲಿಶ್ ಹಾಗು ಸಂಸ್ಕೃತ ಪದಗಳಿಗಷ್ಟೇ ಈ ಅತ್ಯಾಚಾರ ಸೀಮಿತವಾಗಿಲ್ಲ. ‘ಛೋಟೇ ಮಿಯಾ (छॊटॆ मिया)’ ಎನ್ನುವ ಹಿಂದೀ ಪದವನ್ನು ‘ಛೋಟೆಮೀಯ’ ಎಂದು ಬರೆದು ಕನ್ನಡ, ಹಿಂದೀ ವ್ಯಾಕರಣಗಳ ಮೇಲೆ ಸಹ ಅತ್ಯಾಚಾರ ಮಾಡಿದ್ದಾರೆ!

‘ಸಂ.ಕ.’ದ ಪತ್ರಕರ್ತರು ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸುವ ಶಿಕ್ಷಕರಿಂದ ಶಿಕ್ಷೆ ಪಡೆದಿರಬಹುದೆ? ಈ ಅವಮಾನದ ಸೇಡನ್ನು ಕನ್ನಡ ವ್ಯಾಕರಣದ ಮೇಲೆ ತೀರಿಸಿಕೊಳ್ಳುತ್ತಿರಬಹುದೆ? ಉದಾಹರಣೆಗೆ ಈ ಪ್ರಯೋಗ ನೋಡಿರಿ: ‘ಸೋನಿ +ಇಂದ’ = ‘ಸೋನಿಯಿಂದ’ ಆಗಬೇಕಲ್ಲವೆ? ‘ಸೋನಿದಿಂದ’ ಎಂದರೆ ಏನು? ‘ಥ್ರೀ-ಡಿ’ ಎಂದು ಬರೆಯಬೇಕಾದಲ್ಲಿ ‘ತ್ರೀಡಿ’ ಎನ್ನುವ ಪದವು ಅರ್ಥವನ್ನು ಕೊಡುತ್ತದೆಯೆ?

(೨) ಕನ್ನಡದ ನಿರಂತರ ಕೊಲೆ:
‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಪುಟಗಳಲ್ಲಿ ಕಣ್ಣೋಡಿಸಿದಷ್ಟೂ, ತಪ್ಪುಗಳು ಕಣ್ಣಿಗೆ ಬೀಳುತ್ತವೆ. ಅಲ್ಪಪ್ರಾಣ, ಮಹಾಪ್ರಾಣ ಹಾಗು ವ್ಯಾಕರಣದ ತಪ್ಪುಗಳಂತೂ ಸೈ. ದೀರ್ಘವೂ ಸಹ ಈ ಪತ್ರಿಕೆಗೆ ತ್ಯಾಜ್ಯವಸ್ತುವಾಗಿದೆ. ಇಲ್ಲಿ ನೀಡಿರುವ ಎರಡು ಉದಾಹರಣೆಗಳು  ಸಾಕಲ್ಲವೆ?

ಮನೋವೈಕಲ್ಯದಿಂದ ಸರಣಿ-ಕೊಲೆ ಮಾಡುವ ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತಿದೆ. ಭಾಷಾ ಹಂತಕನಿಗೆ ಯಾವ ಶಿಕ್ಷೆ ವಿಧಿಸಬೇಕು?

36 comments:

V.R.BHAT said...

ಮೊನ್ನೆ ತಾವು ಹೇಳಿದ್ದಿರಿ : ’ಸಂಯುಕ್ತ ಕರ್ನಾಟಕ’ ದಲ್ಲಿ ಎಲ್ಲಾ ಎಮ್ಮೆಗಳೇ ಸೇರಿಕೊಂಡಿವೆ- ಎಂದು, ಹೌದು ಅನ್ನಿಸುತ್ತದೆ. ಇಲ್ಲಿ ಈ ರೀತಿಯಾದರೆ ಇನ್ನು ’ವಿಜಯ ಕರ್ನಾಟಕ’ದಲ್ಲಿ ಅಪದ್ಧ ಪದಗಳ ಬಳಕೆ ಮತ್ತು ಕಂಗ್ಲೀಷ್ ಬಳಕೆ ತಾರಕಕ್ಕೇರಿದೆ, ಪದಗಳನ್ನೇ ತಿರುಚಿ, ಒಡೆದು ಏನೇನೋ ಮಾಡಲು ಹೊರಡುವ ಅತಿಬುದ್ಧಿವಂತ ಕಿರಾತಕರು ಅಲ್ಲಿ ಕೂತಿದ್ದಾರೆ. ತಮ್ಮ ಲೇಖನ ಓದಿ ನಗು ಬಂದರೂ ಭಾಷೆಯ ತನ್ನತನ ಮಾಯವಾಗುತ್ತಿರುವುದನ್ನು ನೆನೆದು ಅಳುಬರುವಂತಾಗುತ್ತದೆ. ಲೇಖನ ಇಂದಿನ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಿದೆ, ತಮ್ಮ ಪ್ರಯತ್ನಕ್ಕೆ ನನ್ನದೊಂದು ಜೈಕಾರ ಮತ್ತು ನಮನ

Anonymous said...

ಒಳ್ಳೇ ಕೆಲ್ಸ ಮಾಡಿದ್ದೀರಾ

sunaath said...

ಭಟ್ಟರೆ,
ಪತ್ರಿಕೆಗಳು ಅನಕ್ಷರಸ್ಥರಿಂದ, ವಿಚಿತ್ರ ಬುದ್ಧಿವಂತರಿಂದ ಹಾಗೂ ಅಪ್ರಾಮಾಣಿಕ ಲಂಚಗುಳಿಗಳಿಂದ ತುಂಬಿ ಹೋಗಿವೆ. ದೇಶದ ನಾಲ್ಕನೆಯ ಆಧಾರಸ್ಥಂಬವೇ ಈ ರೀತಿ ಗೆದ್ದಲು ಹಿಡಿದು ಹೋದರೆ, ದೇಶಕ್ಕೆ ಯಾವ ಗತಿ ಬಂದೀತು?

sunaath said...

ಪ್ರಮೋದ,
ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು.

ವಿ.ರಾ.ಹೆ. said...

ಬಹಳ ಬೇಸರವಾಗುತ್ತಿದೆ. ಪತ್ರಿಕೆಗಳೇ ಹೀಗಾದರೆ ಹೇಗೆ!
ಅತ್ತ ವಿ.ಕ. ಇಂಗ್ಲೀಷ್ ಮೂಲಕ ಕನ್ನಡ ಕಳೆಯುತ್ತಿದ್ದರೆ ಸಂ.ಕ. ಹೀಗೆ ಮಾಡುತ್ತಿದೆ. 'ಫ್ರೆಂಚಲ್ಲಿ ಅತ್ಯಾಚಾರ' ಅನ್ನುವ ಬಳಕೆಯಂತೂ ತೀರಾ ಹಾಸ್ಯಾಸ್ಪದ. ದಯವಿಟ್ಟು ಈ ಲೇಖನವನ್ನು ಅಥವಾ ಲೇಖನದ ಕೊಂಡಿಯನ್ನು samkarnataka@rediffmail.comಗೆ ಕಳಿಸಿ.

ಮನಸು said...

ಒಳ್ಳೆಯ ಲೇಖನ ಹಾಗೂ ತಿಳಿದುಕೊಳ್ಳಬೇಕಾದಂತಹುದು.... ಪತ್ರಿಕೆಯವರಲ್ಲಿ ಯಾರಾದರೂ ಈ ಲೇಖನ ಓದಿದರೆ ಸ್ವಲ್ಪವಾದರೂ ಬದಲಾವಣೆ ಕಾಣಬಹುದೇನೋ...
ನಮಗೂ ಕಿವಿಮಾತಿನಂತಿದೆ.
ಧನ್ಯವಾದಗಳು

Narayan Bhat said...

ನೀವು ವಿವರಿಸಿದಂತೆ, ಈ ರೀತಿಯ ಕಗ್ಗೊಲೆಗಳನ್ನು ಸಹಿಸುವದು ಅಸಾಧ್ಯ.

PARAANJAPE K.N. said...

ನಿಮ್ಮ ಬ್ಲಾಗಿನ ಲಿ೦ಕನ್ನು ಸ೦ಯುಕ್ತ ಕರ್ನಾಟಕದವರಿಗೆ ಈಮೇಲ್ ಮೂಲಕ ಕಳಿಸಿದ್ದೇನೆ. ಆ ಪತ್ರಿಕೆಯ ಪ್ರಭೃತಿಗಳಿಗೆ ಅದನ್ನು ಓದು ಅರ್ಥೈಸಿಕೊಳ್ಳುವ ಮತ್ತು ತಪ್ಪನ್ನು ತಿದ್ದಿಕೊಳ್ಳುವ ವ್ಯವಧಾನ ಇದೆಯೋ ಇಲ್ಲವೋ ಗೊತ್ತಿಲ್ಲ. ನೀವು ಸಾಕಷ್ಟು ತಾಳ್ಮೆಯಿ೦ದ ಓದಿ ಗುರುತಿಸಿದ ಅಷ್ಟೂ ತಪ್ಪುಗಳು ಅಕ್ಷಮ್ಯ. ಭಟ್ಟರು ಹೇಳಿದ೦ತೆ ನಮ್ಮ ವಿ.ಕ. ದವರು ಕ೦ಗ್ಲೀಶ್ ಬಳಸಿ ಕನ್ನಡದ ಸೊಗಡನ್ನು ಹಾಳು ಮಾಡುವಲ್ಲಿ ಸಾಕಷ್ಟು ಪರಿಶ್ರಮ ಹಾಕುತ್ತಿದ್ದಾರೆ. ಪದಗಳನ್ನು ಒಡೆದು ವಿಪರೀತಾರ್ಥ ಹೊಮ್ಮಿಸುವುದನ್ನು ಅವರು ತಮ್ಮ ಪತ್ರಿಕೆಯ ಹೆಚ್ಚುಗಾರಿಕೆ ಎ೦ದು ತಿಳಿದ೦ತಿದೆ. ಸಂ. ಕ. ನಾನು ಓದುತ್ತಿಲ್ಲ. ಆದರೆ ನೀವು ಎತ್ತಿ ತೋರಿಸಿದ ತಪ್ಪುಗಳನ್ನು ಗಮನಿಸಿದಾಗ ಅವರ ಭಾಷಾಜ್ಞಾನ ಎಷ್ಟು "ಪ್ರೌಢ" ವಾಗಿದೆ ಎ೦ದು ತಿಳೀತು. ನಿಮ್ಮ ಪ್ರಯತ್ನಕ್ಕೊ೦ದು ಸಲಾಮು. ಅವರು ತಿದ್ದಿಕೊ೦ಡರೆ ಅವರಿಗೇ ಕ್ಷೇಮ.

sunaath said...

ವಿಕಾಸ ಹೆಗಡೆಯವರೆ,
`ವಿ.ಕ.’ಕ್ಕೆ ‘ವಿಕಟ ಕರ್ನಾಟಕ’ ಎಂದೂ ‘ಸಂ.ಕ.’ಕ್ಕೆ ‘ಸಂಕಟ ಕರ್ನಾಟಕ’ ಎಂದೂ ಕರೆಯಬಹುದೇನೊ?

‘ಸಂ.ಕ.’ದ ಲಿಂಕ್ ಕೊಟ್ಟಿದ್ದಕ್ಕೆ ಧನ್ಯವಾದಗಳು. ಅವರಿಗೆ ಈ ಲೇಖನದ ಲಿಂಕ್ ಕಳುಹಿಸಿ ಕೊಡುವೆ.

sunaath said...

ಮನಸು,
‘ಸಂ.ಕ.’ದವರು ಹೊರಜಗತ್ತಿಗೆ ಹಣಿಕಿ ಹಾಕಿ ನೋಡಿದರೆ, ತಮ್ಮ ತಪ್ಪುಗಳನ್ನು ತಿಳಿದುಕೊಂಡಾರು! ಬಾವಿಯಲ್ಲಿಯ ಕಪ್ಪೆಯಂತೆ ಅವರಿದ್ದಾರೆ!

sunaath said...

ನಾರಾಯಣ ಭಟ್ಟರೆ,
ಈ ಸರಣಿ ಕೊಲೆಗಾರನನ್ನು ಹಿಡಿಯುವರು ಯಾರು?

sunaath said...

ಪರಾಂಜಪೆಯವರೆ,
ಸಂಯುಕ್ತ ಕರ್ನಾಟಕದಲ್ಲಿಯ ಅಕ್ಷರಗಳನ್ನು ತೋರಿಸುತ್ತ, ನನ್ನ ತಾಯಿ ನನಗೆ ಅಕ್ಷರಮಾಲೆ ಕಲಿಸಿದಳು. ಆ ಒಂದು ವಾಂಛಲ್ಯದಿಂದ ನಾನು ಈ ಪತ್ರಿಕೆಯನ್ನು ಈವೊತ್ತಿಗೂ ಓದುತ್ತಿದ್ದೇನೆ. ಇದು ನನ್ನ ಹಣೆಬರಹ!

Pataragitti (ಪಾತರಗಿತ್ತಿ) said...

ಸುನಾಥ್ ಕಾಕಾ,

ಶ್ಯಾಮರಾಯರ ಕಾಲದಲ್ಲಿ ಸಂ.ಕಾ ಒಂದು ಹಿಡಿತದಲ್ಲಿ ಇದ್ದಂತೆ ಇತ್ತು. ಬಯಲು ಸೀಮೆಯಿಂದ ಹಿಡಿದು ಉತ್ತರ ಕರ್ನಾಟಕವನ್ನು ಆಳಿದ ಪತ್ರಿಕೆ ಅದು. ಅಂತಹ ಪತ್ರಿಕೆ ಇಂದು ಈ ತರ ಪಾತಳ ಮುಟ್ಟಿರುವುದು ದುಃಖದ ಸಂಗತಿ.

ಪತ್ರಿಕೆಗಳ ನೈತಿಕತೆಯನ್ನು ಕಳೆದುಕೊಳ್ಳುತ್ತಿವೆಯೆಂಬುದು ಗೊತ್ತಿರುವ ವಿಷಯವೇ..ಆದರೆ ಭಾಷೆಯನ್ನು ಹಾಳು ಮಾಡುವುದು ಅಕ್ಷಮ ಅಪರಾಧ.

ಸೀತಾರಾಮ. ಕೆ. / SITARAM.K said...

ondu kaaladalli namage baredudaralli tappina sandehaviddare patrike nodi khaatari padisikolluttiddevu. aaga namma maneya patrike samyukta karnaataka. aadare igina paristitiyalli adannu madiddare namma kannada paanditya adhogatigiliyuttittu antaa tamma lekhana odi gottaayitu. bhaashaa prajne patrikegalige avashya.

anda haage ii patrike nepatyakke seruttide ade samaadhaana kannada taayige.

Anonymous said...

ನಮ್ಮ ತಂಗಳೂರಿನ ಪತ್ರಿಕೆಗಳಿಂತ ಈ ಸಂಯುಕ್ತ ಕರ್ನಾಟಕ ಎಷ್ಟೋ ವಾಸಿ!

ಮನಮುಕ್ತಾ said...

ಸುನಾಥ್ ಕಾಕಾ,
ಒಳ್ಳೆಯ ಲೇಖನ..

PaLa said...

France French :D

ಚುಕ್ಕಿಚಿತ್ತಾರ said...

ಕಾಕ..
ಪತ್ರಿಕೆಗಳಲ್ಲಿ ಭಾಷೆ ಶುದ್ಧವಾಗಿರಬೇಕಾದ್ದು ನಿಜ.ಇಲ್ಲದಿದ್ದರೆ ಭಾಷೆ ಬೆಳೆಯುವುದು, ಉಳಿಯುವುದು ಹೇಗೆ..? ಅಲ್ಲಿ ಎಡಿಟ್ ಮಾಡಲಿಕ್ಕೆ ಅ೦ತಲೇ ಸಿಬ್ಬ೦ದಿಗಳಿರುತ್ತಾರಲ್ಲ...?

ಅ೦ತೂ ಕನ್ನಡಿಗರಿಗೆ ಕೊಲೆ ನೋಡುವುದ೦ತೂ ತಪ್ಪೋಲ್ಲ...

ಚ೦ದದ ಲೇಖನ

sunaath said...

ಶಿವ,
ಈಗಿನ ಪತ್ರಿಕೆಗಳಿಗೆ ಓದುಗರಿಂದ ಬರುವ ಹಣಕ್ಕಿಂತಲೂ ಜಾಸ್ತಿ ಹಣವು ಜಾಹೀರಾತಿನಿಂದ ಬರುತ್ತದೆ. ಹಾಗಿದ್ದಾಗ, ಭಾಷೆ, ವ್ಯಾಕರಣ, ಸಾಹಿತ್ಯ ಯಾತಕ್ಕೆ ಬೇಕು?

sunaath said...

ಸೀತಾರಾಮರೆ,
ಈ ಪತ್ರಿಕೆಯನ್ನು ಈಗ ಹುಡುಗರ ಕಣ್ಣಿಗೆ ಬೀಳದಂತೆ ಮುಚ್ಚಿ ಇಡಬೇಕಾಗಿದೆ,ತಪ್ಪು ಭಾಷೆಯನ್ನು ಕಲಿಯಬಾರದೆಂದು!

sunaath said...

ಅನಾಮಿಕರೆ,
ಹಾಗನ್ನುತ್ತೀರಾ?!

sunaath said...

ಪಾಲ,
ಸಂ.ಕ.ವನ್ನು ಫ್ರೆಂಚಿನಲ್ಲಿ ನೇಣು ಹಾಕಬೇಕು!

sunaath said...

ವಿಜಯಶ್ರೀ,
‘ಸಂ.ಕ.’ದಲ್ಲಿರುವ ಸಂಪಾದಕ ವರ್ಗವು ಏಳನೆಯ ಇಯತ್ತೆಗಿಂತ ಹೆಚ್ಚಿನ ಶಿಕ್ಷಣ ಪಡೆದಿರುವದೆ,ಎನ್ನುವ ಸಂದೇಹ ನನಗಿದೆ!

U G said...

javabdariyulla patrikegale higadare hege.? intaha chikka putta tappugalanna saripadisalu bhasha panditarenuu beda annisuttade.. avara nirlakshave kaarana... lekhana chennagide.

sunaath said...

ಉದಯ,
ಸಂ.ಕ.ವು ತನ್ನ ಜವಾಬುದಾರಿಯನ್ನು ಎಂದೋ ಕೈಬಿಟ್ಟಿದೆ. ಈ ಪತ್ರಿಕಾಲಯದಲ್ಲಿ ಈಗ ಬಿನ್ ದಾಸ್ ಸಿಬ್ಬಂದಿ ತುಂಬಿಕೊಂಡಿದೆ.

Subrahmanya said...

ನಾಡು-ನುಡಿ ಕಟ್ಟಲು ಹುಟ್ಟಿಕೊಂಡ ಅಪ್ಪಟ ಕನ್ನಡ ಪತ್ರಿಕೆಯೊಂದು ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದು ನೋಡಿದರೆ ಬೇಸರವಾಗುತ್ತದೆ. ನೀವೆಂದಂತೆ ’ಸಂ.ಕ.’ ದಲ್ಲಿ ಜವಾಬ್ದಾರಿಯುತ ಸಂಪಾದಕಕರು ಇಲ್ಲವೆಂದೇ ತೋರುತ್ತದೆ. ಉತ್ತಮ ಭಾಷಾ ತಿಳಿವಿರುವ ವರದಿಗಾರರೂ ಇಲ್ಲವೆಂದೇ ಹೇಳಬಹುದು. ಲೋಕಶಿಕ್ಷಣ ಟ್ರಸ್ಟಿನಿಂದ ಬರುವ fixed ಸಂಬಳವನ್ನು ಎಣಿಸುವುದಷ್ಟೇ ಎಲ್ಲರ ಕೆಲಸವಾಗಿದೆ ಎಂದೆನಿಸುತ್ತದೆ. ಪ್ರಜಾವಾಣಿ ಮತ್ತು ಇತರೆ ಕೆಲವು ಪತ್ರಿಕೆಗಳು ಉತ್ತಮ ಚಿತ್ರಗಳಿಗೆ ’ಇಷ್ಟು’ ಮತ್ತು ಉತ್ತಮ ವರದಿಗೆ (ಅದೂ ಕಾಗುಣಿತದ ತಪ್ಪಿಲ್ಲದಂತೆ) ’ಇಷ್ಟು’ (ಲೈನೇಜ್ ಪ್ರಕಾರ) ಎಂದು ನಿಗದಿ ಮಾಡಿ ವರದಿಗಾರರಿಂದ ಉತ್ತಮ ವರದಿಗಳನ್ನು ತರಿಸಿಕೊಂಡು edit ಮಾಡಿ ಪ್ರಕಟಿಸುತ್ತಾರೆಂದು ತಿಳಿದಿದ್ದೇನೆ. ಸಂ.ಕ. ದಲ್ಲಿ ಇದ್ಯಾವುದೂ ಇಲ್ಲದಿರುವುದು ಮತ್ತು ಪತ್ರಿಕೆ ಹೇಗೇ ಇದ್ದರೂ ಟ್ರಸ್ಟಿನಿಂದ ಹಣ ಬರುವುದು ಉದಾಸೀನಕ್ಕೆ ಕಾರಣವಾಗಿದೆಯೆನಿಸುತ್ತದೆ. ಅಂತೂ ಸಂ.ಕ. ಸಂಕಟದಲ್ಲಿರುವುದಂತೂ ಸತ್ಯ.

sunaath said...

ಪುತ್ತರ್,
ಕೆಲವೊಂದು ಕನ್ನಡ ಪತ್ರಿಕೆಗಳಲ್ಲಿ ಉತ್ತಮ ವರದಿ ಹಾಗು ಚಿತ್ರಗಳಿಗೆ ಪ್ರೋತ್ಸಾಹದಾಯಕ ಧನಸಂದಾಯ ಆಗುತ್ತಿರುವದನ್ನು ತಿಳಿದು ಖುಶಿಯಾಯಿತು.

shivu.k said...

ಸುನಾಥ್ ಸರ್,

ಈ ಮೊದಲು ಕೂಡ ನೀವು ಸಂಯುಕ್ತ ಕರ್ನಾಟಕದ ಕನ್ನಡ ಕೊಲೆಯ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಅವರಿಗೆ ಗೊತ್ತಾಗಲ್ಲಿಲ್ಲವೆನಿಸುತ್ತದೆ. ಈ ಬಾರಿಯೂ ಅವರ ತಪ್ಪುಗಳನ್ನು ಚೆನ್ನಾಗಿ ಗುರುತಿಸಿದ್ದೀರಿ. ಇದರಿಂದ ಅವರು ಈ ಬಾರಿಯಾದರೂ ಅವರು ತಿದ್ದಿಕೊಳ್ಳುವರೇ.....

sunaath said...

ಶಿವು,
ಸಂಕಟ ಕರ್ನಾಟಕ ಪತ್ರಿಕೆಯ ಸಂಪಾದಕ ವರ್ಗವು ಬೇಫಿಕೀರ್,ಬೇಶರಮ್,ಬಿನ್ ದಾಸ್ ಆಗಿದೆ. ಇವರು ತಿದ್ದಿಕೊಳ್ಳಬಹುದೆನ್ನುವ ಆಸೆ ನನ್ನಲ್ಲಿ ಬತ್ತಿಹೋಗಿದೆ.

Anonymous said...

ಪಾಪ! ಹೋಗ್ಲಿ ಬಿಡಿ ಸರ್..
'ಸಂಕ' ಇವತ್ತಿನ ಮಟ್ಟಿಗೆ 'ಪಾಪ'ದ ಕೂಸು..
ಈ ಲೇಖನ ಓದಿ ಸಂಪಾದಕರು ಎದೆ ಒಡೆದುಕೊಂಡಾರು!
ನಿಮ್ಮ ಬರಹದ ಗಂಭೀರತೆ ಅವರಿಗೆ ಅರ್ಥವಾಗಲಿಕ್ಕಿಲ್ಲ..
:-)

-RJ

sunaath said...

RJ,
‘ಸಂ.ಕ.’ ನಿಜವಾಗಿಯೂ ಪಾಪದ ಕೂಸೇ!
ಈ ಕೂಸಿನ ಹೊಸ ಆಟವೊಂದನ್ನು ಮತ್ತೆ ಬರೆಯುತ್ತಿದ್ದೇನೆ. ನೋಡಿ!

Padyana Ramachandra said...

ವ್ಯಾಕರಣ, ಸಂದಿ- ಸಮಾಸಗಳ ಗಂಧ ಗಾಳಿ ಇಲ್ಲದ MCJ ಸ್ನಾತಕೋತ್ತರ ಪದವಿಯ 'ಪುಸ್ತಕದ ಬದನೇಕಾಯಿ' ಜ್ಞಾನದ ಇಂದಿನ (ಸಂ.ಕ) ಪತ್ರಕರ್ತರು ಹಳೆ ತಲೆಮಾರಿನ 'ಡಿಗ್ರಿ' ಇಲ್ಲದ ಸುದ್ದಿ ಮಾಧ್ಯಮದ ಹಿರಿಯ ವರದಿಗಾರರ ಅನುಭವಗಳಿಂದ ಕಲಿಯಲು ಬಹಳಷ್ಟು ಇದೆ.

ಪ.ರಾಮಚಂದ್ರ,
ರಾಸ್ ಲಫ್ಫಾನ್- ಕತಾರ್

sunaath said...

ರಾಮಚಂದ್ರರೆ,
ನಿಜ ಹೇಳಿದಿರಿ.
‘ಸಂಯುಕ್ತ ಕರ್ನಾಟಕ’ದ ಮೊದಮೊದಲಿನ ಸಂಪಾದಕರಾದ ಮೊಹರೆ ಹಣಮಂತರಾಯ, ಕಸ್ತೂರಿಯ ಸಂಪಾದಕರಾಗಿದ್ದ ಪಾ.ವೆಂ.ಆಚಾರ್ಯ ಇವರೆಲ್ಲರ ಭಾಷಾಪಾಂಡಿತ್ಯ ಹಾಗು ಸಾಮಾನ್ಯ ಜ್ಞಾನ ಅದ್ಭುತವಾಗಿದ್ದವು. ಇದೆಲ್ಲಕ್ಕಿಂತ ಮೇಲಾಗಿ ಅವರಿಗೆ ಪತ್ರಿಕೆಯ ಬಗೆಗೆ ಕಳಕಳಿ ಇತ್ತು. ಈಗಿನ MCJಗಳಿಗೆ ಇದಾವದೂ ಇದ್ದಂತಿಲ್ಲ!

sritri said...

ಕಾಕಾ, Fancy dressಗೆ ಛದ್ಮವೇಷ ಎಂದು ಎಂದು ಕರೆಯುವುದನ್ನು ನಾನು ಬಹಳ ಪತ್ರಿಕೆಗಳಲ್ಲಿ ನೋಡಿ, ಅದೇ ಸರಿ ಇರಬಹುದೆಂದು ಭಾವಿಸಿದ್ದೆ. ಧನ್ಯವಾದಗಳು.

Anonymous said...

¥ÀwæPÉAiÀÄ°è vÀ¥ÁàUÀ¨ÁgÀzÀÄ ¤d. CzÀÄ C¥ÀgÁzsÀªÀÇ ºËzÀÄ. `¸ÀAAiÀÄÄPÀÛ PÀ£ÁðlPÀ' ºÀ¼ÉAiÀÄ ¥ÀwæPÉ, C°è vÀ¥ÁàUÀ¨ÁgÀzÀÄ JA§ ¤jÃPÉëAiÀÄÆ vÀ¥Àà®è. DzÀgÉ ¸ÀAAiÀÄÄPÀÛ PÀ£ÁðlPÀzÀ°è PÉ®¸À ªÀiÁqÀÄwÛgÀĪÀŪÀgÀÄ ¨ÉgÀ¼ÀtÂPÉAiÀĵÀÄÖ d£À. ¸ÀAAiÀÄÄPÀÛ PÀ£ÁðlPÀzÀ°è M¨ÉÆâ§âgÉà MAzÉÆAzÀÄ ¥ÀÄgÀªÀt G¸ÀÄÛªÁj ºÉÆA¢zÁÝgÉ. CzÉà «dAiÀÄ PÀ£ÁðlPÀ, ¥ÀæeÁªÁtÂAiÀÄ°è MAzÉÆAzÀÄ ¥ÀÄgÀªÀtÂUÀÆ DgÀÄ d£ÀgÀ G¥À¸ÀA¥ÁzÀPÀgÀ vÀAqÀ«zÉ. PÀ£ÀßqÀ¥Àæ¨sÀ, GzÀAiÀĪÁtÂAiÀÄ®Æè ¥ÀævÉåÃPÀ vÀAqÀ«zÉ. ¥Àæw ¥ÀÄgÀªÀtÂAiÀÄ®Æè PÀ¤µÀ× ªÀÄÆgÀÄ d£À PÁAiÀÄð¤ªÀð»¸ÀÄwÛzÁÝgÉ. C°è£À PÁAiÀÄðªÉÊRjUÀÆ E°èUÀÆ ºÉÆðPÉ CdUÀeÁAvÀgÀ.
EgÀ° vÀ¥Éàà vÀ¥ÉàÃ.
DzÀgÉ, EµÉÖ¯Áè vÀ¥ÀÄà M¥ÀàUÀ¼ÀÄ £ÀqÀĪÉAiÀÄÆ ¸ÀAAiÀÄÄPÀÛ PÀ£ÁðlPÀ NzÀÄUÀgÀ£ÀÄß ºÉaѹPÉƼÀÄîªÀ°è £ÀA2 £É ¸ÁÜ£ÀzÀ°èzÉ PÀ£ÀßqÀ ¥Àæ¨sÀ ªÉÆzÀ® ¸ÁÜ£ÀzÀ°èzÉ. «dAiÀÄ PÀ£ÁðlPÀ PÉÆ£ÉAiÀÄ ¸ÁÜ£ÀzÀ°èzÉ.
EgÀ°. zÀÆgÀzÀ°è ¤AvÀÄ ¨ÉlÖzÀ ¯ÉÆÃ¥À-zÉÆõÀUÀ¼À£ÀÄß UÀÄgÀÄw¸ÀĪÀÅzÀÄ ¸ÀÄ®¨sÀ. UÀÄgÀÄw¹¢ÝÃj. DzÀgÉ, `¸ÀAAiÀÄÄPÀÛ PÀ£ÁðlPÀ'zÀ°è §jà JªÉÄäUÀ¼Éà ¸ÉÃjPÉÆArªÉ JAzÀÄ ºÉý¢ÝÃj. §ºÀıÀB ¥ÀwæPÁ®AiÀÄzÀ°è PÉ®¸À ªÀiÁqÀĪÀªÀgÀ §UÉÎ F jÃwAiÀiÁV AiÀiÁªÀ ºÀÄZÀÄäAqÉ ªÀÄUÀ£ÀÆ ªÀiÁvÀ£ÁqÀĪÀÅ¢®è.

samyukta karnataka said...

¥ÀwæPÉAiÀÄ°è vÀ¥ÁàUÀ¨ÁgÀzÀÄ ¤d. CzÀÄ C¥ÀgÁzsÀªÀÇ ºËzÀÄ. `¸ÀAAiÀÄÄPÀÛ PÀ£ÁðlPÀ' ºÀ¼ÉAiÀÄ ¥ÀwæPÉ, C°è vÀ¥ÁàUÀ¨ÁgÀzÀÄ JA§ ¤jÃPÉëAiÀÄÆ vÀ¥Àà®è. DzÀgÉ ¸ÀAAiÀÄÄPÀÛ PÀ£ÁðlPÀzÀ°è PÉ®¸À ªÀiÁqÀÄwÛgÀĪÀŪÀgÀÄ ¨ÉgÀ¼ÀtÂPÉAiÀĵÀÄÖ d£À. ¸ÀAAiÀÄÄPÀÛ PÀ£ÁðlPÀzÀ°è M¨ÉÆâ§âgÉà MAzÉÆAzÀÄ ¥ÀÄgÀªÀt G¸ÀÄÛªÁj ºÉÆA¢zÁÝgÉ. CzÉà «dAiÀÄ PÀ£ÁðlPÀ, ¥ÀæeÁªÁtÂAiÀÄ°è MAzÉÆAzÀÄ ¥ÀÄgÀªÀtÂUÀÆ DgÀÄ d£ÀgÀ G¥À¸ÀA¥ÁzÀPÀgÀ vÀAqÀ«zÉ. PÀ£ÀßqÀ¥Àæ¨sÀ, GzÀAiÀĪÁtÂAiÀÄ®Æè ¥ÀævÉåÃPÀ vÀAqÀ«zÉ. ¥Àæw ¥ÀÄgÀªÀtÂAiÀÄ®Æè PÀ¤µÀ× ªÀÄÆgÀÄ d£À PÁAiÀÄð¤ªÀð»¸ÀÄwÛzÁÝgÉ. C°è£À PÁAiÀÄðªÉÊRjUÀÆ E°èUÀÆ ºÉÆðPÉ CdUÀeÁAvÀgÀ.
EgÀ° vÀ¥Éàà vÀ¥ÉàÃ.
DzÀgÉ, EµÉÖ¯Áè vÀ¥ÀÄà M¥ÀàUÀ¼ÀÄ £ÀqÀĪÉAiÀÄÆ ¸ÀAAiÀÄÄPÀÛ PÀ£ÁðlPÀ NzÀÄUÀgÀ£ÀÄß ºÉaѹPÉƼÀÄîªÀ°è £ÀA2 £É ¸ÁÜ£ÀzÀ°èzÉ PÀ£ÀßqÀ ¥Àæ¨sÀ ªÉÆzÀ® ¸ÁÜ£ÀzÀ°èzÉ. «dAiÀÄ PÀ£ÁðlPÀ PÉÆ£ÉAiÀÄ ¸ÁÜ£ÀzÀ°èzÉ.
EgÀ°. zÀÆgÀzÀ°è ¤AvÀÄ ¨ÉlÖzÀ ¯ÉÆÃ¥À-zÉÆõÀUÀ¼À£ÀÄß UÀÄgÀÄw¸ÀĪÀÅzÀÄ ¸ÀÄ®¨sÀ. UÀÄgÀÄw¹¢ÝÃj. DzÀgÉ, `¸ÀAAiÀÄÄPÀÛ PÀ£ÁðlPÀ'zÀ°è §jà JªÉÄäUÀ¼Éà ¸ÉÃjPÉÆArªÉ JAzÀÄ ºÉý¢ÝÃj. §ºÀıÀB ¥ÀwæPÁ®AiÀÄzÀ°è PÉ®¸À ªÀiÁqÀĪÀªÀgÀ §UÉÎ F jÃwAiÀiÁV AiÀiÁªÀ ºÀÄZÀÄäAqÉ ªÀÄUÀ£ÀÆ ªÀiÁvÀ£ÁqÀĪÀÅ¢®è.