Thursday, March 31, 2011

ಕರ್ಣಪಿಶಾಚಿಯ ಸಂದರ್ಶನಗಳು.....೪

ಕನ್ನಡ ತಾಯಿಯ ಆಶೀರ್ವಾದವನ್ನು ಪಡೆದ ಕರ್ಣಪಿಶಾಚಿಯು ಕಾಲ್ನಡಿಗೆಯಿಂದ ನೈಸ್ ಕಾ‍^ರಿಡಾ^ರ್‍ ತಲುಪಿತು. ಅನೇಕ ರಾಜಕಾರಣಿಗಳು ಧರಣಿ ಹಾಗು ಪಾದಯಾತ್ರೆಗಳ ಮೂಲಕ ಪವಿತ್ರಗೊಳಿಸಿದ ಆ ಮಾರ್ಗವನ್ನು ಕಂಡ ಕರ್ಣಪಿಶಾಚಿಗೆ ಮನಸ್ಸು ತುಂಬಿ ಬಂದಿತು.

ಅಹೋ! ಇದು ವೇದೇಗೌಡರು ಧರಣಿ ಕುಳಿತ ಜಾಗವಲ್ಲವೆ? ಅಹೋ! ಇದು ಜೋಕುಮಾರಸ್ವಾಮಿ ಹಾಗು ವೇರಣ್ಣನವರ ಕಾಲಿನ ಧೂಳಿ ಬಿದ್ದ ಜಾಗವಲ್ಲವೆ? ಅಹೋ! ಇಲ್ಲಿಯೇ ಅಲ್ಲವೆ ಸಿದ್ದಮಾರಯ್ಯ ಹಾಗು ಪೇಶದಾಂಡೆಯವರು ಕುಣಿಯುತ್ತ, ತಮಟೆ ಬಾರಿಸುತ್ತ ವಾದಯಾತ್ರೆ ಮಾಡಿದ್ದು! ಅಹೋ! ಚಡ್ಯೂರಪ್ಪನವರು ಇಲ್ಲಿಯೇ ಅಲ್ಲವೆ ಡಿನೋಟಿಫಾಯ್ ಮಾಡಿದ್ದು!

ಕರ್ಣಪಿಶಾಚಿಯ ಕಣ್ಣೀರು ಕೃಷ್ಣೆಯ ಪ್ರವಾಹದಂತೆ ಹರಿಯಿತು. ಭಾವಾವಿಷ್ಟವಾದ ಕರ್ಣಪಿಶಾಚಿ ನೈಸ್ ಕಾ‍^ರಿಡಾ^ರ್‍‍ದ ಮಣ್ಣನ್ನು ನೆತ್ತಿಯ ಮೇಲಿಟ್ಟುಕೊಳ್ಳಲು ಬಾಗಿತು. ಥೂ! ಇದೇನು ಹೊಲಸು ವಾಸನೆ ಬರ್ತಾ ಇದೆಯಲ್ಲ ಈ ಮಣ್ಣಿಗೆ ಎಂದು ಮೂಗು ಮುಚ್ಚಿಕೊಂಡಿತು. ಮತ್ತೊಮ್ಮೆ ಬಾಗಿ ಮಣ್ಣು ಎತ್ತಿಕೊಳ್ಳಲು ಹೋಯಿತು. ಮತ್ತೇ ಅದೇ ಹೊಲಸು ವಾಸನೆ. ಇದು ರಾಜಕಾರಣಿಗಳ ವಾಸನೆ ಎಂದು ಕರ್ಣಪಿಶಾಚಿಗೆ ಅರ್ಥವಾಯಿತು.


ಎಷ್ಟು ತೊಳೆದರೂ ಇದು ಹೋಗದ ವಾಸನೆ ಎಂದುಕೊಂಡ ಕರ್ಣಪಿಶಾಚಿಯು ವಾಯುಮಾರ್ಗಕ್ಕೇ ಹಾರಿ, ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು!

ಸ್ವಲ್ಪ ದೂರದ ಪ್ರಯಾಣದ ನಂತರ, ಕರ್ಣಪಿಶಾಚಿಗೆ ಕಿಷ್ಕಿಂಧೆಯಂತಹ ಸಣ್ಣ ತೋಪೊಂದು ಗೋಚರಿಸಿತು. ಆ ತೋಪಿಗೊಂದು ಆವರಣ.ಅದರ ನಟ್ಟನಡುವಿನಲ್ಲಿರುವ ಆಲದ ಮರದ ಮೇಲೆ ಒಂದು ಮಂಚಿಕೆ.  ಆ ಮಂಚಿಕೆಯ ಮೇಲೆ ಗಟ್ಟಿಮುಟ್ಟಾದ ಶರೀರದ ವೃದ್ಧರೊಬ್ಬರು ಕೂತುಕೊಂಡಿದ್ದಾರೆ. ನಡುವಿಗೆ ತೊಪ್ಪಲಿನ ಅಲಂಕಾರ ಬಿಟ್ಟರೆ ಮೈಮೇಲೆ ಬೇರೆ ಅರಿವೆ ಇಲ್ಲ. ತಮ್ಮ ಎದುರಿಗೆ ಪೀಠವೊಂದನ್ನು ಇಟ್ಟುಕೊಂಡು ಗಲಗಿನಿಂದ ಏನೋ ಬರೆಯುತ್ತಿದ್ದಾರೆ. ಕರ್ಣಪಿಶಾಚಿಗೆ Tarzan ಸಿನೆಮಾ ಹಾಗು ಕಾರ್ಟೂನುಗಳ ನೆನಪಾಯಿತು. ಬಹುಶ: ಇವರೇ ವಯಸ್ಸಾದ Tarzan ಇರಬೇಕು ಎಂದುಕೊಂಡ ಕರ್ಣಪಿಶಾಚಿಯು ಕಿಷ್ಕಿಂಧೆಯ ಆವರಣದ ಹೊರಗೆ ಇಳಿಯಿತು.
ಆವರಣದ ಬಾಗಿಲಿಗೆ ಫಲಕವೊಂದನ್ನು ಹಾಕಲಾಗಿತ್ತು.



ಕೀಚಕ
೧೧೧೧ ೦೦ ೧೧೧ ೦೦


ಆವರಣದ ಒಳಭಾಗದಲ್ಲಿ ಸಣ್ಣದೊಂದು ಗಿಡ. ಅದರ ಸುತ್ತಲೂ ಕಟ್ಟೆ. ಕಟ್ಟೆಯ ಮೇಲೆ ಓರ್ವ ತರುಣ. ಆತ ಮಾತ್ರ ಆಧುನಿಕ ನಾಗರಿಕನಂತೆ ಸೂಟು ಬೂಟು ಹಾಕಿಕೊಂಡಿದ್ದಾನೆ. ಕರ್ಣಪಿಶಾಚಿಯನ್ನು ಕಂಡೊಡನೆ ಆತ ಎದ್ದು ಬಂದು, “Welcome, most welcome! ಎಂದು ಇಂಗ್ಲೀಶಿನಲ್ಲಿ ಸ್ವಾಗತಿಸಿದ. ಕರ್ಣಪಿಶಾಚಿಗೆ ಭಯಂಕರ ಆಶ್ಚರ್ಯ.
ನೀವಾರು? ಮಹಾಭಾರತದ ಕೀಚಕ ಮಹಾಶಯರು ಇಲ್ಯಾಕೆ ಇದ್ದಾರೆ? ಎಂದು ತೊದಲಿತು.

ಆಧುನಿಕ ವೇಷದ ತರುಣನು ಮುಗಳ್ನಕ್ಕು ಹೇಳಿದ : ನಾನು ಇಲ್ಲಿಯ ಕಾವಲುಗಾರ cum ಭಾಷಾಂತರಕಾರ. ಇಲ್ಲಿ ವಾಸ ಮಾಡುತ್ತಿರುವವರು ಮಹಾಭಾರತದ ಕೀಚಕರಲ್ಲ. ಕೀಚಕ ಎನ್ನುವದು ಅವರ ಸಂಕೇತ ನಾಮ. ಕೆಳಗೆ ಬರೆದಿರುವ ಅಂಕಿಗಳು ಕಪಿಲಿಪಿಯಲ್ಲಿವೆ. ಅದು ಅತ್ಯಾಧುನಿಕ ಕನ್ನಡ ಲಿಪಿ. ಅದರರ್ಥ: ‘ಪರವಾನಿಗೆ ಇಲ್ಲದೆ ಪ್ರವೇಶ ಇಲ್ಲ.’ ಇರಲಿ, ಒಳಗೆ ಬನ್ನಿ. ನಿಮ್ಮನ್ನು ಕೀಚಕರಿಗೆ ಭೆಟ್ಟಿ ಮಾಡಿಸುವೆ.

ಕ.ಪಿ.      : ನೀವು ವಿದೇಶಿ ಪ್ರವಾಸಿಗಳಿಗಾಗಿ ಕನ್ನಡದಿಂದ ಇಂಗ್ಲೀಶಿಗೆ ಭಾಷಾಂತರ ಮಾಡುತ್ತೀರಾ?
ತರುಣ   : ಇಲ್ಲ. ಕೀಚಕರು ಬಳಸುವ ಶುದ್ಧ ಕಪಿಕನ್ನಡವನ್ನು ನಿಮ್ಮ ವರ್ತಮಾನದ ಕನ್ನಡಕ್ಕೆ
ಅನುವಾದಿಸುತ್ತೇನೆ.
ಕ.ಪಿ.      : ಕೀಚಕರು ಏನನ್ನು ಬರೆಯುತ್ತಿದ್ದಾರೆ?
ತರುಣ   : ಅವರು ’ಲಿಪಿಸಂಹಾರ’ ಎನ್ನುವ ಶಾಸ್ತ್ರೀಯ ಗ್ರಂಥವನ್ನು ಬರೆಯುತ್ತಿದ್ದಾರೆ.
ಕ.ಪಿ.      : ಓಹೋ! ಕನ್ನಡಮ್ಮನು ಉಟ್ಟುಕೊಂಡಿರುವಂತಹ ಲಿಪಿ ಎನ್ನುವ ಪೀತಾಂಬರವನ್ನು
ಚಿಂದಿ ಚಿಂದಿ ಮಾಡುತ್ತಿರುವ ಕಾರಣದಿಂದಾಗಿ ಇವರು ‘ಕೀಚಕ’ ಎನ್ನುವ ಸಂಕೇತನಾಮವನ್ನು 
ಇಟ್ಟುಕೊಂಡಿದ್ದಾರೆಯೆ?
ತರುಣ   : ತಪ್ಪು ತಿಳಿದುಕೊಂಡಿದ್ದೀರಿ! ಕೀಚಕ ಎನ್ನುವ ಸಂಕೇತನಾಮಕ್ಕೂ ಮಹಾಭಾರತದ
ಕೀಚಕನಿಗೂ ಏನೂ ಸಂಬಂಧವಿಲ್ಲ. ನಮ್ಮ ಕುರುವನ್ನು ಭೆಟ್ಟಿಯಾದರೆ ನಿಮ್ಮ ಎಲ್ಲಾ
ಸಂದೇಹಗಳಿಗೆ ಪರಿಹಾರ ಸಿಗುವದು.
ಕ.ಪಿ.      : ಕುರು? You mean ಗುರು?
ತರುಣ   : ಹೌದು, ಗುರು! ಕನ್ನಡದ ಸರಳೀಕರಣದ ಮೇರೆಗೆ ‘ಗುರು’ ಇದು ‘ಕುರು’ ಆಗುತ್ತದೆ.
ಅತ್ಯಾಧುನಿಕ ಕನ್ನಡ ಲಿಪಿಯಲ್ಲಿ ಅಂದರೆ ಕಪಿಲಿಪಿಯಲ್ಲಿ ಅದನ್ನು ೧೧೧೧೧೧೧ ಎಂದು
ಬರೆಯುತ್ತಾರೆ.

ಅಷ್ಟರಲ್ಲಿ ಕರ್ಣಪಿಶಾಚಿ ಹಾಗು ತರುಣರು ಬೋಧಿವೃಕ್ಷವನ್ನು ತಲುಪಿದ್ದರು. ಮಂಚಿಕೆಯ ಮೇಲಿಂದಲೇ ಇವರನ್ನು ಗಮನಿಸಿದ ಕುರುಗಳು ’ಕೀಚ್, ಕೀಚ್, ಕೀಚ್’ ಎಂದು ಉಲಿದರು.

ತರುಣ   : ಕುರುಗಳು ನಿಮಗೆ ಸ್ವಾಗತ ಕೋರುತ್ತಿದ್ದಾರೆ. ಅವರಿಗೆ ‘ಕಿಚಕ್’ ಎಂದು
ವಂದನೆಗಳನ್ನು ಹೇಳಿರಿ.
ಕ.ಪಿ.      : ಕಿಚಕ್, ಕುರು, ಕಿಚಕ್!
ಕುರು     : ಕಿಚಕ್! ಕಿಚಕ್!! ಕಿಚಿ? ಕಿಚಿ?
ತರುಣ   : ನೀವು ಯಾರು? ಎಂದು ಕೇಳುತ್ತಿದ್ದಾರೆ.
ಕ.ಪಿ.      : ನಾನು ಕರ್ಣಪಿಶಾಚಿ. ನೀವು ಕೀಚಕ ಎನ್ನುವ ಸಂಕೇತನಾಮವನ್ನು ಇಟ್ಟುಕೊಂಡಿದ್ದು
ಯಾಕೆ?

ಕುರುಗಳು ಐವತ್ತು ಸಲ ‘ಕೀ’ ಎಂದು ನೂರು ಸಲ ‘ಚ’ ಎಂದು ಮತ್ತೆ ಅರುವತ್ತು ಸಲ ‘ಕೂ’ ಎಂದು ಉಲಿದರು!
ತರುಣನು ಅದನ್ನು ವರ್ತಮಾನದ ಕನ್ನಡದಲ್ಲಿ ಹೀಗೆ ಅನುವಾದಿಸಿದನು:

ಕನ್ನಡ ಭಾಷೆಯು ಬಹಳ ಸರಳವಾದ ಭಾಷೆ. ಶ್ರೀರಾಮಚಂದ್ರನು ಕಿಷ್ಕಿಂಧೆಗೆ ಬರುವ ಮೊದಲು ಇಲ್ಲಿದ್ದ ಕಪಿಗಳು ಅಂದರೆ ಕನ್ನಡಿಗರ ಪೂರ್ವಜರು ಕಪಿಕನ್ನಡ ಭಾಷೆಯನ್ನು ಬಳಸುತ್ತಿದ್ದರು. ‘ಕ’ ಹಾಗು ‘ಚ’ ಎನ್ನುವ ಎರಡೇ ಮೂಲ ಧ್ವನಿಗಳು ಕನ್ನಡದಲ್ಲಿ ಇದ್ದವು. ಇದೇ ಕನ್ನಡದ ಜಾಯಮಾನ. ಕನ್ನಡಿಗರು ತಮ್ಮ ಜಾಯಮಾನವನ್ನು ಬಿಡಬಾರದು. ಜಗತ್ತು ಎಷ್ಟೇ ಮುಂದುವರೆಯಲಿ, ಕನ್ನಡಿಗರು ಮಾತ್ರ, ತೊಪ್ಪಲನ್ನೇ ಸುತ್ತಿಕೊಂಡು, ಗಡ್ಡೆ ಗೆಣಸುಗಳನ್ನೇ ತಿನ್ನುತ್ತ, ಕೇವಲ ಎರಡೇ ಧ್ವನಿಗಳಲ್ಲಿ ತಮ್ಮ ಸಕಲ ಅಭಿವ್ಯಕ್ತಿಯನ್ನು ಮಾಡಬೇಕು. ಯಾಕೆಂದರೆ ಕಾಲಮಾನಕ್ಕಿಂತ ಜಾಯಮಾನ ಮುಖ್ಯ. ಈ ಮೂಲಧ್ವನಿಗಳನ್ನು ಸಂಕೇತಿಸುವ ಉದ್ದೇಶದಿಂದ ನಾನು ನನ್ನ ಹೆಸರನ್ನು ‘ಕೀಚಕ’ ಎಂದು ಇಟ್ಟುಕೊಂಡಿದ್ದೇನೆ. ಸಂಸ್ಕೃತದ ಸೋಂಕಿಲ್ಲದ ಕಪಿಕನ್ನಡವನ್ನು ಬಳಸುವದೇ ನನ್ನ ಧ್ಯೇಯ!

ಎಂಥಾ ಉದಾತ್ತ ವ್ಯಕ್ತಿ! ಎಂಥಾ ಕಪಿಕನ್ನಡಾಭಿಮಾನ!!
ಕರ್ಣಪಿಶಾಚಿಯು ಥಟ್ಟನೆ ನೆಗೆದು ಕುರುಗಳ ಕಾಲುಗಳನ್ನು ಪಿಡಿಯಿತು.

ಕ.ಪಿ.      : ಕುರುವೆ! ಕುರುವೆ!
(ಕರ್ಣಪಿಶಾಚಿಯ ಕಣ್ಣಿನಿಂದ ಗಳಗಳ ಕಣ್ಣೀರು.)
ಕ.ಪಿ.      : ಕುರುವೆ, ಈ ನಿಮ್ಮ ಧ್ಯೇಯಕ್ಕೆ ಪ್ರೇರಣೆ ಏನು ಎಂದು ಹೇಳುವಿರಾ?

ಕುರುಗಳು ೧೦೦ ಸಲ ಕಾ ಎಂದು ೨೦೦ ಸಲ ಕೇ ಎಂದು ೩೦೦ ಸಲ ಚಾ ಎಂದು ಧ್ವನಿ ಹೊರಡಿಸುತ್ತಾರೆ. ಕೊನೆಗೊಮ್ಮೆ
ಅನುವಾದಕನು ಕುರುಚರಿತ್ರೆಯನ್ನು ಕರ್ಣಪಿಶಾಚಿಯ ಎದುರಿಗೆ ಬಿಚ್ಚಿಡುತ್ತಾನೆ.

ಇದು ಬಹಳ ಹಳೆಯ ಕತೆ. ನಾನಿನ್ನೂ ಚಿಕ್ಕ ಬ್ರಾಹ್ಮಣ ವಟು. ನಮ್ಮ ಮನೆಯಲ್ಲಿಯೇ ನಮ್ಮ ತಂದೆ ಸಂಸ್ಕೃತವನ್ನೂ ಕಲಿಸುತ್ತಿದ್ದರು. ನಮ್ಮ ಸಂಸ್ಕೃತ ಗ್ರಂಥದಲ್ಲಿ ‘ಕಚದೇವಯಾನಿ’ ಎನ್ನುವ ಪಾಠ ಒಂದಿತ್ತು. ಅದನ್ನು ನಾನು ತಪ್ಪಾಗಿ ‘ಕುಚದೇವಯಾನಿ’ ಎಂದು ಓದಿದೆ. ನಮ್ಮ ತಂದೆ ಕೆಂಡಾಮಂಡಲವಾದರು. ‘ಕಚದೇವಯಾನಿ ಎಂದರೆ ಏನು ಗೊತ್ತೇನಯ್ಯಾ?’ ಎಂದು ಕೇಳಿದರು. ‘ಕಚ ಎಂದರೆ ಕೂದಲು, ಕಚದೇವಯಾನಿ ಎಂದರೆ ದೇವಯಾನಿಯ ಕೂದಲು’ ಎಂದೆ. ತಂದೆಯವರ ಕೋಪ ನೆತ್ತಿಗೇರಿತು. ಆದರೂ ಸಹ ತಮ್ಮನ್ನು ನಿಯಂತ್ರಿಸಿಕೊಂಡು, ‘ಹೌದಾ! ಕುಚದೇವಯಾನಿ ಎಂದರೆ ಏನು?’ ಎಂದು ಕೇಳಿದರು. ‘ಗೊತ್ತಿಲ್ಲ’ ಎಂದೆ. ತಂದೆಯವರು ನನ್ನನ್ನು ನಂಬಲಿಲ್ಲ. ಒಂದು ಕುಚಕ್ಕೆ ಒಂದುನೂರರಂತೆ ನನಗೆ ಎರಡುನೂರು ಛಡಿ ಏಟುಗಳನ್ನು ಕೊಟ್ಟರು. ಆ ದಿನದಿಂದಲೇ ನಾನು ಸಂಸ್ಕೃತದ್ವೇಷಿಯಾದೆ. ಸಂಸ್ಕೃತ ವ್ಯಾಕರಣದ ಸಂಕಲನಕಾರನಾದ ಪಾಣಿನಿಗೆ ಪರ್ಯಾಯವಾಗಿ ನಾನು ‘ಕಪಿಕನ್ನಡ ವ್ಯಾಕರಣ’ವನ್ನು ರಚಿಸಿ, ಅವನಷ್ಟೇ ಪ್ರಸಿದ್ಧನಾಗಬೇಕೆನ್ನುವ ರೊಚ್ಚು ಮನದಲ್ಲಿ ಮೂಡಿತು. ಅದಕ್ಕಾಗಿ ಒಂದು ಯೋಜನೆಯನ್ನೂ ರೂಪಿಸಿಕೊಂಡೆ.

ಕ.ಪಿ.      : ಅದು ಎಂತಹ ಯೋಜನೆ?

ಕುರು     : ಕಾಚ, ಕಾಚ, ಕಚಕ್, ಕಚಕ್!

ತರುಣ   : ನೋಡಿದಿರಾ? ವರ್ತಮಾನ ಕನ್ನಡದ ನೂರು ಪದಗಳಲ್ಲಿ ಹೇಳಬಹುದಾದದ್ದನ್ನು
ನಮ್ಮ ಕುರುಗಳು ನಾಲ್ಕೇ ನಾಲ್ಕು ಕಪಿಕನ್ನಡ ಪದಗಳಲ್ಲಿ ಹೇಳಿದರು. ಅವರ ಹೇಳಿಕೆ
ಹೀಗಿದೆ: ‘ನೀವು ಕಪಿಗಳು. ನಿಮ್ಮ ಮೇಲೆ ಸಂಸ್ಕೃತವನ್ನು ಅನ್ಯಾಯದಿಂದ
ಹೇರಲಾಗುತ್ತದೆ. ಈ ಕಾರಣದಿಂದಲೇ ನೀವು ಹಿಂದುಳಿದಿದ್ದೀರಿ’ ಎಂದು ಕನ್ನಡಿಗರಿಗೆ
ಮನದಟ್ಟು ಮಾಡಿದರೆ ಸಾಕು, ಕನ್ನಡಿಗರು ರೊಚ್ಚಿಗೇಳುತ್ತಾರೆ.
ಇದೇ ರೀತಿಯಲ್ಲಿ ಕನ್ನಡ ಲಿಪಿಯು ಸಂಸ್ಕೃತ ಲಿಪಿಯ ಅನುಕರಣ, ಕನ್ನಡ
ವ್ಯಾಕರಣವು ಸಂಸ್ಕೃತ ವ್ಯಾಕರಣದ ಅನುಕರಣ ಎನ್ನುವದನ್ನೂ ಸಹ ಕಪಿಗಳಿಗೆ
ತಿಳಿಸಿ ಹೇಳಬಹುದು.

ಕ.ಪಿ.      : ಇದೆಲ್ಲ ಸರಿ. ಆದರೆ ಕುರುಗಳು ಕಚ, ಕುಚ ಬಿಟ್ಟು ಬೇರೆ ಧ್ವನಿಗಳಿಗೆ ಏಕೆ
ಹೋಗುವದಿಲ್ಲ?

ಕುರು     :(ಕಾಚ ಎಂದು ಹನ್ನೆರಡು ಸಲ, ಕೋಚ ಎಂದು ಇಪ್ಪತ್ತೊಂದು ಸಲ ಹೇಳುತ್ತಾರೆ.)

ತರುಣ   : ಸಾವಿರಾರು ವರ್ಷಗಳಷ್ಟು ಹಿಂದಿನ ಕಾಲದಲ್ಲಿ ಅಂದರೆ ಕನ್ನಡಿಗರು ಕಪಿಗಳಾಗಿದ್ದ
ಕಾಲದಲ್ಲಿ,ಅವರಿಗೆ ‘ಕ’ ಮತ್ತು ‘ಚ’ ಇವೆರಡೆನ್ನು ಬಿಟ್ಟು ಬೇರೆ ಧ್ವನಿಗಳ ಪರಿಚಯ
ಇರಲಿಲ್ಲ. ಆರ್ಯರ ಆಗಮನದ ನಂತರವೇ ಕಪಿಗಳು ಅಂದರೆ ಕನ್ನಡಿಗರು ಇತರ
ಧ್ವನಿಗಳನ್ನು ಕಲಿತರು. ಕನ್ನಡದ ಮೂಲಪದಗಳೆಲ್ಲ ‘ಕ’ದಿಂದಲೇ ಪ್ರಾರಂಭವಾಗುತ್ತವೆ.
ಉದಾಹರಣೆಗೆ, ಕತ್ತೆ! ಆದುದರಿಂದ ಕನ್ನಡಿಗರ ಜಾಯಮಾನವನ್ನು ಉಳಿಸಿಕೊಳ್ಳುವ
ಸಲುವಾಗಿ ಕುರುಗಳು ಕನ್ನಡ ಭಾಷೆಯನ್ನು ಪೂರ್ತಾ ಕ ಹಾಗು ಚ ಪದಗಳಲ್ಲಿ ಮಾತ್ರ
ಉಲಿಯುತ್ತಾರೆ.

ಕ.ಪಿ.      : ಆದರೆ ನಮಗೆ ತಿಳಿಯದಂತೆಯೇ ಅನೇಕ ಸಂಸ್ಕೃತ ಪದಗಳ ತದ್ಭವಗಳನ್ನು ನಾವು
ಕನ್ನಡದಲ್ಲಿ ಬಳಸುತ್ತೇವಲ್ಲ. ಅವನ್ನು ಬಿಡಲು ಸಾಧ್ಯವಿಲ್ಲದಂತಾಗಿದೆ.
ಉದಾಹರಣೆಗೆ      ‘ಬೇಗನೆ ಬಾ’ ಎಂದು ಹೇಳಿದರೆ, ಅದು ‘ವೇಗ’ವಾಗಿ ಎನ್ನುವದರ
ತದ್ಭವ. ‘ಲಗೂನೆ ಬಾ’ ಎಂದರೆ ಅದು ‘ಲಘು’ವಾಗಿ ಎನ್ನುವದರ ತದ್ಭವ. 
ಜಲ್ದಿ’ ಅಥವಾ ‘ಜೋರ್’ ಇವು ಹಿಂದಿ ಪದಗಳು. ಕನ್ನಡದಲ್ಲಿ ಇದಕ್ಕೆ ಕನ್ನಡ ಪದವೇ
ಇಲ್ಲವೆ?

ತರುಣ   : ನಮ್ಮ ಕುರುಗಳು ಅದರದೇ ಸಂಶೋಧನೆಯನ್ನು ನಡೆಸಿದ್ದಾರೆ. ಈ ಎಲ್ಲಾ
ಪದಗಳೂ ‘ಕ’ ಧ್ವನಿಯಿಂದಲೇ ಪ್ರಾರಂಭವಾಗುವದು ನಮ್ಮ ಕುರುಗಳ 
‘ಕಪಿಕನ್ನಡ’ದ ವೈಶಿಷ್ಟ್ಯ!

ಕ.ಪಿ.      : ವಾರೆವ್ವಾ! ಕ್ಯಾ ಬಾತ್ ಹೈ!

ತರುಣ   : ಆ ಉದ್ದೇಶದಿಂದಲೇ ನಮ್ಮ ಕುರುಗಳು ‘ಲಿಪಿಸಂಹಾರ’ ಎನ್ನುವ ಗ್ರಂಥರಚನೆಯಲ್ಲಿ
ತೊಡಗಿದ್ದಾರೆ. ನೀವು ಹೊರಗಿನ ಫಲಕದಲ್ಲಿ ನೋಡಿದಿರಲ್ಲ? ಕೇವಲ ‘೦’ ಹಾಗು
‘೧’ ಅಂಕಿಗಳನ್ನು ಬಳಸಿ ‘ಪರವಾನಗಿ ಇಲ್ಲದೆ ಪ್ರವೇಶ ಇಲ್ಲ’ ಎಂದು ಬರೆದದ್ದನ್ನು?

ಕ.ಪಿ.      : ಇದರ ಉದ್ದೇಶವೇನು?

ಕುರು     : (ದುಃಖದ ಧ್ವನಿಯಲ್ಲಿ) ಕಚಕಚಾ(ಹತ್ತು ಸಲ)! ಕುಚಕುಚಾ(ಹದಿನೈದು ಸಲ)!
ಕೂಕೂಕೂ(ಎಂಟು ಸಲ)!

ತರುಣ   : ಇದರ ಹಿಂದೆ ನಮ್ಮ ಕುರುಗಳ ಮತ್ತೊಂದು ಕರುಣಾಜನಕ ಕತೆ ಇದೆ. ಅವರು ಕನ್ನಡ
ಸಾಲೆಯಲ್ಲಿ ಕಲಿಯುತ್ತಿದ್ದಾಗ, ಅಂಕಗಣಿತದಲ್ಲಿ ಯಾವಾಗಲೂ ನಪಾಸಾಗುತ್ತಿದ್ದರು.
ಒಂದರಿಂದ ಹತ್ತರವರೆಗಿನ ಅಂಕಿಗಳನ್ನು ಎಣಿಸಲೂ ಸಹ ಅವರಿಗೆ
ಸಾಧ್ಯವಾಗುತ್ತಿರಲಿಲ್ಲ! ಇನ್ನು ಕೋಟಿ, ಅಬ್ಜ, ಪರಾರ್ಧ ಇವುಗಳನ್ನು
ತಿಳಿದುಕೊಳ್ಳುವದೂ ಸಹ ಅಸಾಧ್ಯ!

ಇವೆಲ್ಲ ಆರ್ಯರ ಕುತಂತ್ರ. ಕಪಿಗಳನ್ನು ಹಿಂದುಳಿದವರನ್ನಾಗಿ ಇಡಲೆಂದೇ ಇವರು
ಗಣಿತವನ್ನು ಇಷ್ಟೆಲ್ಲ ಸಂಕೀರ್ಣ ಮಾಡಿದ್ದಾರೆ ಎನ್ನುವದು ನಮ್ಮ ಕುರುಗಳಿಗೆ
ಮನದಟ್ಟಾಯಿತು. ಕಂಪ್ಯೂಟರಿನಲ್ಲಿಯೂ ಸಹ ‘೦’ ಮತ್ತು ‘೧’ ಅಂಕಿಗಳನ್ನು ಮಾತ್ರ
ಬಳಸುತ್ತಾರಲ್ಲವೆ? ಆದುದರಿಂದ ಕೇವಲ ಸೊನ್ನೆ ಮತ್ತು ಒಂದು ಅಂಕಿಗಳು ಇರುವ,
‘ಕಪಿಲಿಪಿ’ ಎನ್ನುವ ಹೊಸ ಲಿಪಿಯೊಂದನ್ನು ನಮ್ಮ ಕುರುಗಳು ಸಂಶೋಧಿಸಿದರು.
ಇದರಿಂದಾಗಿ ಗಣಿತದ ಸರಳೀಕರಣವೂ ಆಯಿತು. ಜೊತೆಗೆ ಬ್ರಾಹ್ಮೀಜನ್ಯ ಲಿಪಿಗಳ
ಸಂಹಾರವೂ ಆಯಿತು! ಇದೇ ‘ಲಿಪಿಸಂಹಾರ ಅರ್ಥಾತ್ ಕಪಿಗಳಿಗೊಂದು ಹೊಸಲಿಪಿ!’

ಕ.ಪಿ.      : ನನಗೊಂದು ಸಂಶಯವಿದೆ. ಜಗತ್ತು ಮುಂದುವರೆಯುತ್ತಿರುವಾಗ ಕನ್ನಡಿಗರು
ಹಿಂದುಳಿಯಬೇಕೆ? ಭಾಷೆ, ಲಿಪಿ, ತಂತ್ರಜ್ಞಾನ ಇವು ಎಷ್ಟೆಲ್ಲ ಸಂಕೀರ್ಣವಾಗುತ್ತಿರುವಾಗ,
ನಾವು ಕನ್ನಡದ ಜಾಯಮಾನ ಎನ್ನುವ ಮೋಸದ ಪದವನ್ನು ಬಳಸಿ ಕನ್ನಡಿಗರ ಕಣ್ಣಿಗೆ
ಮಣ್ಣೆರಚುವದು ಸರಿಯೆ? ನೀವು ಹಿಂದುಳಿದವರು ಎಂದು ಕರೆಯುತ್ತಿರುವ ಜನರು,
ಜ್ಞಾನಸಂಪಾದನೆಯ ಮೂಲಕ ದೇಶ, ವಿದೇಶಗಳಲ್ಲಿ ಎಷ್ಟೆಲ್ಲ ಪ್ರಸಿದ್ಧರಾಗಿದ್ದಾರೆ!
ಅವರಿಗೆ ವರ್ತಮಾನ ಕನ್ನಡ ಅರ್ಥವಾಗಲಾರದೆ? ಅದನ್ನು ಕಪಿಕನ್ನಡ ಮಾಡುವ
ಅವಶ್ಯಕತೆ ಇದೆಯೆ? ಇದೆಲ್ಲ ನಿಮ್ಮ ಕೀರ್ತಿಕಾಮನೆಯ ಸ್ವಾರ್ಥವಲ್ಲವೆ?

ಕುರು     : (ಸಿಟ್ಟಿನಿಂದ) ಕ್ಕೆಕ್ಕೆಕ್ಕೆ! ಕ್ಕೊಕ್ಕೊಕ್ಕೊ! ಕ್ಕುಕ್ಕುಕ್ಕೂ!

ಕ.ಪಿ.      : (ತರುಣನಿಗೆ) ಕುರುಗಳು ಏನು ಹೇಳಿದರು?
ತರುಣ   : Get out ಎಂದು ಹೇಳಿದರು!

ಕ.ಪಿ.      : ಧನ್ಯವಾದಗಳು, Good bye!


             ಕರ್ಣಪಿಶಾಚಿಯು ಆಕಾಶಕ್ಕೆ ನೆಗೆಯಿತು. 
             ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟದೇಶವು ಅದರ ಕೆಳಗೆ ಮೈ ಚಾಚಿಕೊಂಡು ಬಿದ್ದಿತ್ತು. 
             ಬೋಳು ಬೋಳಾದ ಗಣಿಗುಡ್ಡಗಳು, ನೇಣು ಹಾಕಿಕೊಳ್ಳುತ್ತಿರುವ ರೈತರು, ಬಕಾಸುರರಂತಹ ರಾಜಕಾರಣಿಗಳು, ಸ್ವಾರ್ಥಸಾಧನೆಯ ಸಂಶೋಧಕರು, ಇವರೆಲ್ಲರ ಸುತ್ತಲೂ ಕುಣಿಯುವ ಹುಚ್ಚು ಕಪಿಗಳು!

             ಕರ್ಣಪಿಶಾಚಿಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ಇದ್ದರೂ, ತನಗೆ ಸುಳ್ಳು ಹೇಳುವ ಒಬ್ಬನೂ ಸಿಗಲಿಲ್ಲವಲ್ಲ! ಥಟ್ಟನೆ ಅದಕ್ಕೆ ಕಟು ಸತ್ಯವು ಮಿಂಚಿನಂತೆ ಹೊಳೆಯಿತು. ಸುಳ್ಳು ಯಾರು ಹೇಳುತ್ತಾರೆ? ಸತ್ಯ ಹೇಳಿದರೆ ಮರ್ಯಾದೆ ಹೋಗುವದೆಂದು ಹೆದರಿಕೊಳ್ಳುವವರು ಸುಳ್ಳು ಹೇಳುತ್ತಾರೆ! ನಾಚಿಕೆ ಇಲ್ಲದವರು ಸತ್ಯ ಹೇಳಲು ಯಾಕೆ ಹಿಂಜರಿಯಬೇಕು?!

            ಸ್ಮಶಾನದ ಪಕ್ಕದ ಮರದ ಕೆಳಗೆ ಮೊಂಡುಗೈ, ಮೊಂಡುಗಾಲುಗಳ ಮುದುಕಿಯೊಬ್ಬಳು ಕರ್ಣಪಿಶಾಚಿಯ ಕಣ್ಣಿಗೆ ಬಿದ್ದಳು.

ದೂರದಿಂದ ಹಾಡೊಂದು ತೇಲಿ ಬರುತ್ತಿತ್ತು:
 “ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
   ನೀಡುವೆನು ರಸಿಕ ನಿನಗೆ.
   ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
   ಆ ಸವಿಯ ಹಣಿಸು ನನಗೆ!

ಕರ್ಣಪಿಶಾಚಿಯ ಕಣ್ಣುಗಳಿಂದ ಬಿದ್ದ ಎರಡು ಹನಿಗಳು ಆ ಮುದುಕಿಯ ಮೊಂಡುಗಾಲುಗಳನ್ನು ತೊಳೆದವು.
ಕರ್ಣಪಿಶಾಚಿಯು ಮೋಡಗಳ ಆಚೆ ಮರೆಯಾಯಿತು.

Sunday, March 27, 2011

ಕರ್ಣಪಿಶಾಚಿಯ ಸಂದರ್ಶನಗಳು...೩


ಕನ್ನಡಮ್ಮ : ಬಾಳಾ, ನೀ ಈಗೇನು ನನ್ನ ರೂಪಾ ನೋಡತಿದ್ದೀಯಲ್ಲಾ, ಇದು ನಿನ್ನ
               ಸಲುವಾಗಿ ನಾ ತಾಳಿದ ಮಾನವ ರೂಪ. ನನ್ನ ಪರಮದಿವ್ಯರೂಪವನ್ನ
               ನಿನಗ ಮೊದಲ ತೋರಸ್ತೇನಿ. ಅದು ಸೂಕ್ಷ್ಮರೂಪ. ಆ ಸೂಕ್ಷ್ಮರೂಪದೊಳಗ
               ನನ್ನ ಎರಡು ಶರೀರ ಅವ. ಒಂದು ನಾದಮಯ ಶರೀರ. ಮತ್ತೊಂದು ಲಿಪಿಶರೀರ.
                 
ಕ.ಪಿ.        :   ಅಮ್ಮಾ, ಅಮ್ಮಾ! ನೀರಿಳಿಯದ ಗಂಟಲೊಳ್ ಕಡಬನ್ನು  ತುರುಕದಿರು!

ಕನ್ನಡಮ್ಮ : ಕರ್ಣಪಿಶಾಚಿ, ನನಗ ಖಾತ್ರಿ ಆತು ನೋಡು: ‘ನೀ ಖರೇನ ಕನ್ನಡಿಗ  ಇದ್ದೀ!’
                  ಇರಲಿ, ಇಗೊ ನನ್ನ ನಾದಶರೀರವನ್ನು ಕೇಳು.
                 
                  (ಕನ್ನಡಮ್ಮನ ದಿವ್ಯ ನಾದಶರೀರವನ್ನು ಕರ್ಣಪಿಶಾಚಿಯು ಕೇಳುವದು.)

ಕ.ಪಿ.         :  ಅಹಾ! ಎಂತಹ ಸುಮಧುರ ನಾದ! ವರಕವಿ ಅಂಬಿಕಾತನಯದತ್ತರು ಅನುಭವಿಸಿದ
                   ‘ಸಹಸ್ರತಂತ್ರೀ ನಿಃಸ್ವನ’ದಂತೆ ಈ ನಾದ ಕೇಳಸ್ತದಲ್ಲ! ಆನಂದಕಂದರೂ ಅದನ್ನs
                  ಹೇಳ್ಯಾರಲ್ಲಾ:
                                      ಎನಿತು ಇನಿದು ಈ ಕನ್ನಡ ನುಡಿಯು
                                       ಮನವನು ತಣಿಸುವ ಮೋಹನ ಸುಧೆಯು.

ಕನ್ನಡಮ್ಮ : ಹಾಂ, ಈಗ ಕೇಳು ನನ್ನ ಸದ್ಯದ ನಾದಶರೀರವನ್ನು.

ಕ.ಪಿ:        :   (ಆಘಾತವಾದವನಂತೆ ಕಿವಿ ಮುಚ್ಚಿಕೊಳ್ಳುತ್ತ), ಸಾಕು ಮಾಡಮ್ಮ! ಈ ಕರ್ಕಶ
                  ಅಪಲಾಪವನ್ನು ನಾ ಕೇಳಲಾರೆ. ಇದು ಕಾಗೆ ಹಾಗು ಗೂಗೆಗಳ ಜಗಳದಂತೆ
                  ಕೇಳುತ್ತಿದೆಯಲ್ಲಮ್ಮ!

ಕನ್ನಡಮ್ಮ : ಮಗೂ, ಕರ್ಣಪಿಶಾಚಿ, ಇದು ಕಾಗೆ,ಗೂಗೆಗಳ ಕಿರುಚಾಟವಲ್ಲ!
                  ಕನ್ನಡ ಎಫ್. ಎಮ್. ರೇಡಿಯೋದ ‘ಮಿರ್ಚಮಸಾಲಾ’ ಕಾರ್ಯಕ್ರಮ ಹಾಗು
                  ಕೆಲವೊಂದು ಕನ್ನಡ ಟೀವಿ ವಾಹಿನಿಗಳ `ಲಂಗರು’ಗಳ ವಾಗ್ಝರಿ! ಇವರೆಲ್ಲಾ ಕೂಡಿ
                  ನನ್ನ ಕಂಠದೊಳಗೆ ಗೂಟಗಳನ್ನು ಬಡಿಯುತ್ತಿದ್ದಾರಪ್ಪಾ! ಆಕಾಶವಾಣಿಯಲ್ಲಿ
                  ಬಿತ್ತರಿಸುತ್ತಿರುವ ಈ ಸುದ್ದಿಯನ್ನಷ್ಟು ಕೇಳು, ಮಗು!
                 
                  (ಆಕಾಶವಾಣಿಯಲ್ಲಿ: ಖನ್ನಡ ಖಂಟೀರವರಿಗೆ ಆಸನದಲ್ಲಿ ಹಾದರದ ಸ್ವಾಗತ!)

ಕ.ಪಿ:        :   ಇದೇನಮ್ಮಾ, ತಾಯಿ! ನನಗೆ ಸ್ವಲ್ಪವೂ ಅರ್ಥವಾಗದಲ್ಲ!

ಕನ್ನಡಮ್ಮ : ಪೆದ್ದ ನೀನು. ನೀನು ಕೇಳಿದ ಸುದ್ದಿ ಹೀಗಿದೆ: ಕನ್ನಡ ಕಂಠೀರವರಿಗೆ ಹಾಸನದಲ್ಲಿ
                  ಆದರದ ಸ್ವಾಗತ.

ಕ.ಪಿ.        : ಈ ತರಹ ಸರಿಯಾಗಿ ಉಚ್ಚರಿಸಲಿಕ್ಕೆ ಇವರ ಗಂಟೇನು ಹೋಗುತ್ತದಮ್ಮಾ?

ಕನ್ನಡಮ್ಮ : ಹೊಸದೊಂದು ಅಲೆ ಎದ್ದಿದೆಯಪ್ಪಾ. ಆಡುನುಡಿಗೆ ಸಂಸ್ಕರಣೆ ಬೇಡ. ನಮ್ಮ
                  ಬಾಯಿಗೆ ಬಂದಂತೆ ನಾವು ಉಚ್ಚರಿಸುವದು ಸಹಜ ಮಾರ್ಗ!  

ಕ.ಪಿ.        : (ಸಿಟ್ಟಿನಿಂದ) ಥತ್ತೇರಿ! ಸಹಜ ಮಾರ್ಗವನ್ನು ಅನುಸರಿಸುವ ಇವರು ಬಟ್ಟೆಗಳನ್ನು
                  ಏಕೆ ಹಾಕಿಕೊಳ್ಳುತ್ತಾರೆ? ಬತ್ತಲೆಯಾಗಿರುವದೇ ಸಹಜಮಾರ್ಗವಲ್ಲವೆ?
                  ಇವರಿಗೆ ಬೇಯಿಸಿದ ಆಹಾರ ಏಕೆ ಬೇಕು? ಹಸಿ ಮಾಂಸ ತಿನ್ನುವದೆ
                  ಸಹಜಮಾರ್ಗವಲ್ಲವೆ?

ಕನ್ನಡಮ್ಮ  : ಇದೆಲ್ಲದರ ಹಿಂದೆ ರಾಜಕಾರಣ ಇದೆ, ಕರ್ಣಪಿಶಾಚಿ!

ಕ.ಪಿ.         : ಸಾಕು,ಸಾಕು! ನಾ ಕೇಳಲಾರೆ ಇದನ್ನೆಲ್ಲ!

ಕನ್ನಡಮ್ಮ  : ಸರಿ, ಬಿಡು. ಇನ್ನು ನನ್ನ ಲಿಪಿ-ಶರೀರವನ್ನಷ್ಟು ನೋಡು.
              
                  (ಕರ್ಣಪಿಶಾಚಿಯು ಆ ದಿವ್ಯ ಲಿಪಿಶರೀರವನ್ನು ನೋಡಿ ಬೆರಗಾಗುತ್ತಾನೆ.
                  ಸಾವಕಾಶವಾಗಿ ದಿವ್ಯಶರೀರವು ಬದಲಾಗುತ್ತ ರಕ್ತಸಿಕ್ತ ವಿಕೃತ
                  ಶರೀರವಾಗುತ್ತದೆ.)
                 
ಕ.ಪಿ.          : ಅಮ್ಮಾ, ನೋಡಲಾರೆ. ನಿಲ್ಲಿಸು ಈ ಘೋರರೂಪವನ್ನು!
                   
                  (ಕನ್ನಡಮ್ಮನು ಮತ್ತೆ ಮಾನವರೂಪವನ್ನು ತಾಳುತ್ತಾಳೆ.)

ಕನ್ನಡಮ್ಮ  : ಮಗೂ, ನನ್ನ ದಿವ್ಯ ಲಿಪಿ ಶರೀರವನ್ನು ನೋಡಿದೆಯಲ್ಲ? ಅಂತಹ ಶರೀರವನ್ನು
                  ಪಡೆಯಲು ನಾನು ಸಾವಿರಾರು ವರ್ಷಗಳ ತಪಸ್ಸು ಮಾಡಿದ್ದೆನಪ್ಪಾ.

ಕ.ಪಿ.         : ಏನಮ್ಮಾ ನೀ ಹೇಳುವದು? ಚಿಕ್ಕ ಮಕ್ಕಳು ಒಂದು ತಿಂಗಳಿನಲ್ಲಿ ಕಲಿಯುವ
                  ಅಕ್ಷರಮಾಲೆಯನ್ನು ರೂಪಿಲು ನೀನು ಸಾವಿರಾರು ವರ್ಷಗಳ ತಪಸ್ಸು
                  ಮಾಡಿದೆಯಾ? ನಿನ್ನಂತಹ ದಡ್ಡಿಯನ್ನು ನಾನೆಲ್ಲೂ ಕಂಡಿಲ್ಲ, ಬಿಡು!
                 
ಕನ್ನಡಮ್ಮ  : ಹುಚ್ಚಪ್ಪ! ಅಕ್ಷರಗಳು ಅಂದರೆ ಏನು? ಅವು ಧ್ವನಿಸಂಕೇತಗಳು ಎನ್ನುವದನ್ನು
                  ಮೊದಲು ತಿಳಿದುಕೊ. ಈವತ್ತು ಕನ್ನಡಿಗರು ಉಚ್ಚರಿಸುವ ಎಲ್ಲಾ ಧ್ವನಿಗಳು
                  ಒಂದೇ ದಿನದಲ್ಲಿ ಮೂಡಲಿಲ್ಲ. ಕನ್ನಡಿಗರು ಕಾಡು ಸ್ಥಿತಿಯಲ್ಲಿದ್ದಾಗ
                  ಅವರಿಗೆ ಬೇಕಾದದ್ದು ಬಹುಶ: ಒಂದೇ ಧ್ವನಿ.......... ಪ್ರಣಯದ ಕರೆ!
                  ನಾಗರಿಕತೆ ಬೆಳೆದಂತೆ ನನ್ನ ಮಕ್ಕಳು ಅವಶ್ಯಕತೆಗಳಿಗೆ ಅನುಸಾರವಾಗಿ
                  ಹೆಚ್ಚೆಚ್ಚು ಧ್ವನಿಗಳನ್ನು ಕಲಿತರು.
                   
ಕ.ಪಿ.          : ಗೊತ್ತಾಯ್ತು ಬಿಡಮ್ಮ. ಕೋಪ ಬಂದಾಗ ‘ಗುರ್’ ಎನ್ನುತ್ತಿದ್ದರು.
                  ಹಸಿವಾದಾಗ  ‘ಹೋ’ ಎನ್ನುತ್ತಿದ್ದರು!
                 
ಕನ್ನಡಮ್ಮ    : ಗುಂಪಿನೊಳಗಿನ ಸಂಪರ್ಕ್ಕಾಗಿ ನನ್ನ ಮಕ್ಕಳಿಗೆ ಕೆಲವೇ ಧ್ವನಿಗಳು
                  ಸಾಕಾಗುತ್ತಿದ್ದವು. ಆದರೆ ಬೇರೆ ಬೇರೆ ಜನಾಂಗಗಳ ಸಂಪರ್ಕ ಬಂದಂತೆ,
                  ಕೊಡುಕೊಳ್ಳುವಿಕೆ ಪ್ರಾರಂಭವಾದಂತೆ, ಸಂಭಾಷಣೆಗಳು ಹುಟ್ಟಿದವು.
ಮುಖ್ಯವಾಗಿ ಹಿಮಾಲಯದ ತಪ್ಪಲಿನಲ್ಲಿದ್ದ ನನ್ನ ಮಕ್ಕಳಿಗೆ ಅಂದರೆ
                  ಕನ್ನಡಿಗರಿಗೆ, ಆರ್ಯ ಎನ್ನುವ ಹೊಸದೊಂದು ಜನಾಂಗದ ಸಂಪರ್ಕ ಬಂದಿತು.
                  ಅವರಾಡುವ ಮಾತು ಪ್ರಾಕೃತ. ನನ್ನ ಅಂದರೆ ಕನ್ನಡದ ಅನೇಕ ಪದಗಳನ್ನು
                  ಆರ್ಯರು ತೆಗೆದುಕೊಂಡರು. ಅವರ ಅನೇಕ ಪದಗಳನ್ನು ನನ್ನ ಮಕ್ಕಳು
                  ಪಡೆದರು.

ಕ.ಪಿ.          : ಆರ್ಯರ ಮಾತು ಸಂಸ್ಕೃತವಲ್ಲವೇನಮ್ಮ? ನೀನು ಪ್ರಾಕೃತ ಎಂದು
                  ಹೇಳುತ್ತಿದ್ದೀಯಲ್ಲ!

ಕನ್ನಡಮ್ಮ    : ನೋಡಪ್ಪಾ ಕರ್ಣಪಿಶಾಚಿ, ಸಾವಿರಾರು ವರ್ಷಗಳ ಹಿಂದೆ ಭಾಷೆಗೆ ಒಂದು
                  ಚೌಕಟ್ಟು ಇರದ ಕಾಲದಲ್ಲಿ ಜನರು ಚಿಕ್ಕ ಮಕ್ಕಳಂತೆ ತೊದಲು
                  ಮಾತನಾಡುತ್ತಿದ್ದರು. ವ್ಯವಹಾರದಲ್ಲಿ ಇದರಿಂದ ಅಪಾರ್ಥಗಳಾಗುತ್ತಿದ್ದವು.
                  ಇದನ್ನು ತಪ್ಪಿಸಲು ಆರ್ಯರು ತಮ್ಮ ನುಡಿಗೆ ಒಂದು ಚೌಕಟ್ಟನ್ನು ಹಾಕಿ ಅದಕ್ಕೆ
                  ಸಂಸ್ಕೃತ ಎಂದು ಕರೆದರು! ಸಂಸ್ಕೃತ ಇದರರ್ಥ ಸಂಸ್ಕರಿಸಲ್ಪಟ್ಟದ್ದು.
                  ನಿನಗೆ ತಿಳಿಯುವಂತೆ ಇಂಗ್ಲೀಶಿನಲ್ಲಿ ಹೇಳಬೇಕಾದರೆ, ಇದನ್ನು processed,
                  refined ಹೀಗೆಲ್ಲ ಕರೆಯಬಹುದು! ಈ ಚೌಕಟ್ಟಿಲ್ಲದ ನುಡಿಗೆ ಪ್ರಾಕೃತ
                  ಎಂದು ಕರೆದರು. ಈ ಚೌಕಟ್ಟಿಗೆ ಅವರು ವ್ಯಾಕರಣ ಎಂದು ಹೇಳುತ್ತಾರೆ.
                 
ಕ.ಪಿ.            : ನಾನು ಕೇಳುತ್ತಿರುವದೇನು, ನೀನು ಹೇಳುತ್ತಿರುವದೇನು?

ಕನ್ನಡಮ್ಮ    : ಭಾಷೆಗಳ ಹಿನ್ನೆಲೆಯನ್ನು ನೀನು ಅರಿಯದಿದ್ದರೆ, ನಾನು ನಿನಗೆ ಲಿಪಿಯ
                  ಹುಟ್ಟನ್ನು ತಿಳಿಸುವದಾದರೂ ಹೇಗೆ? ಈ ರೀತಿಯಾಗಿ ಕನ್ನಡ ಮತ್ತು
                  ಸಂಸ್ಕೃತಗಳು ಜೊತೆಯಾಗಿಯೇ ಬೆಳೆದವು. ಕೆಲಕಾಲಾನಂತರ ವ್ಯವಹಾರದ
                  ಕಾರಣಗಳಿಗಾಗಿ, ಲಿಪಿಯ ಅವಶ್ಯಕತೆ ಕಂಡು ಬಂದಿತು. ಆಗ ಚಿತ್ರಗಳನ್ನೇ
                  ಸಂಕೇತಗಳನ್ನಾಗಿ ಬಳಸಿದರು. ಅದೇ ಚಿತ್ರಲಿಪಿ.  ವ್ಯವಹಾರವನ್ನು
ಮೀರಿದ ಭಾವಾಭಿವ್ಯಕ್ತಿಗಾಗಿ ಧ್ವನಿಸಂಕೇತಗಳನ್ನು ರೂಪಿಸುವ ಕಾಲವೂ ಬಂದಿತು.
                  ಆಗ ಹುಟ್ಟಿದ್ದೇ ಬ್ರಾಹ್ಮೀ ಲಿಪಿ. ಈ ಬ್ರಾಹ್ಮೀ ಲಿಪಿಯೇ ಭಾರತದಲ್ಲಿರುವ ಎಲ್ಲ
                  ಲಿಪಿಗಳ ಮೂಲರೂಪ.
                   
ಕ.ಪಿ.            : ಕನ್ನಡದ ಅಕ್ಷರಮಾಲೆಯಲ್ಲಿರುವ ೫೨ ಅಕ್ಷರಗಳು ಆಗ ಹುಟ್ಟಿದವೇನು?

ಕನ್ನಡಮ್ಮ    : ಯಾವ ಲಿಪಿಯಲ್ಲಿಯೂ ಅದರ ಎಲ್ಲ ಅಕ್ಷರಗಳು ಒಂದೇ ದಿನದಲ್ಲಿ
                  ಹುಟ್ಟಲಿಲ್ಲ, ಮಗೂ. ಭಾಷೆಯನ್ನು ಪ್ರೀತಿಸುವ ಪಂಡಿತರು, ಒಂದೊಂದೇ
                  ಅಕ್ಷರವನ್ನು ರೂಪಿಸುತ್ತ ನಡೆದರು. ಸ್ವರ ಹಾಗು ವ್ಯಂಜನಗಳ ಭೇದವನ್ನು
                  ಗುರುತಿಸಿದರು, ಬಳ್ಳಿಗಳನ್ನು ರೂಪಿಸಿದರು. ಆದುದರಿಂದಲೇ
                  ನಾನು ಅಕ್ಷರಮಾಲೆ ಹುಟ್ಟಿದ್ದು ನನ್ನ ತಪಸ್ಸಿನಿಂದ ಎಂದು ಹೇಳಿದ್ದು!

ಕ.ಪಿ.            : ಆದರೆ ಬ್ರಾಹ್ಮೀ ಲಿಪಿಗೆ ನಿನ್ನ ಸಂಬಂಧವೇನಮ್ಮಾ?

ಕನ್ನಡಮ್ಮ    : ನಾನು ನಿನಗೆ ಮೊದಲೇ ಹೇಳಲಿಲ್ಲವೇನಪ್ಪಾ? ಕನ್ನಡಿಗರ ಹಾಗು ಆರ್ಯರ
                  ಸಂಪರ್ಕದಿಂದಲೇ ಎರಡೂ ಭಾಷೆಗಳು ಬೆಳೆದವು. ಎಲ್ಲ ಭಾಷೆಗಳಿಗೂ ತಾಯಿ
                  ಲಿಪಿಯಾದ ಬ್ರಾಹ್ಮೀ ಮೊದಲಿಗೆ ಬಂದಿತು. ಕಾಲಾಂತರದಲ್ಲಿ ಲಿಪಿಗಳು ಬೇರೆ
                  ಬೇರೆಯಾದವು.
                 
ಕ.ಪಿ.            : ಅಮ್ಮಾ, ಬ್ರಾಹ್ಮೀ ಲಿಪಿಯಿಂದಲೇ ಹುಟ್ಟಿದರೂ ಸಹ, ನಾಗರಿ ಲಿಪಿಯಲ್ಲಿ
                  ಇರುವದಕ್ಕಿಂತ ಕನ್ನಡದಲ್ಲಿ ಎರಡು ಸ್ವರಗಳು ಜಾಸ್ತಿ ಇವೆ.
                  ಇದಕ್ಕೆ ಕಾರಣವೇನು?

ಕನ್ನಡಮ್ಮ    : ಮಗು, ಭಾರತದಲ್ಲಿರುವ ಎಲ್ಲಾ ಭಾಷೆಗಳ ಧ್ವನಿಗಳನ್ನು ನನ್ನ ಮಕ್ಕಳು
                  ಅಂದರೆ ಕನ್ನಡಿಗರು ಉಚ್ಚರಿಸಬಲ್ಲರು. ಭಾರತದ ಯಾವುದೇ ಭಾಷೆಗಿಂತಲೂ
                  ಹೆಚ್ಚಿನ ಧ್ವನಿಸಂಕೇತಗಳು ನನ್ನ ಕನ್ನಡ ಲಿಪಿಯಲ್ಲಿ ಇವೆ. ಇದು ನನ್ನ ಹೆಮ್ಮೆ!
                 
ಕ.ಪಿ.            :ಹೌದಮ್ಮಾ. ನಾನು ಇದರ ಕಾರಣವನ್ನು ಕೇಳುತ್ತಾ ಇದ್ದೇನೆ.

ಕನ್ನಡಮ್ಮ    : ನನ್ನ ಮಕ್ಕಳು ಅಂದರೆ ಕನ್ನಡಿಗರು ಸ್ನೇಹಜೀವಿಗಳು. ಸಾವಿರಾರು ವರ್ಷಗಳಿಂದ
                   ಎಲ್ಲರೊಡನೆಯೂ ಸರಳವಾಗಿ ಬೆರೆಯುತ್ತಿದ್ದಾರೆ. ಹೀಗಾಗಿ ಇವರ
                  ಧ್ವನಿಸಂಪತ್ತು, ಸಂಕೇತಸಂಪತ್ತು ಹಾಗು ಪದಸಂಪತ್ತು ಹೆಚ್ಚಿತು.
                  ಆದರೆ ತಾವೇ ಹೆಚ್ಚಿನವರು ಎಂದುಕೊಳ್ಳುವ ಜನಗಳ ಧ್ವನಿ ಹಾಗು
                  ಧ್ವನಿಸಂಕೇತಗಳು ಕಡಿಮೆಯಾಗಿವೆ.
                 
ಕ.ಪಿ.            : ಹೌದಮ್ಮ! ನಾಗರಿ ಲಿಪಿಯಲ್ಲಿ ‘ಎ’ ಮತ್ತು ‘ಏ’ ಧ್ವನಿಗಳಿಗೆ ಒಂದೇ ಸಂಕೇತವಿದೆ.
                  ಆದುದರಿಂದ ಮರಾಠಿ ಭಾಷಿಕರು Red ಹಾಗು Raid ಈ ಎರಡೂ ಪದಗಳನ್ನು
                  ‘ರೇಡ’ ಎಂದೇ ಉಚ್ಚರಿಸುತ್ತಾರೆ.

ಕನ್ನಡಮ್ಮ    : ನಾಗರಿ ಲಿಪಿಯಲ್ಲಿ ‘ಒ’ ಮತ್ತು ‘ಓ’ ಸ್ವರಗಳಿಗೂ ಸಹ ಒಂದೇ ಸಂಕೇತವಿದೆ.
                  ಹೀಗಾಗಿ ನನ್ನ ಕನ್ನಡ ಭಾಷೆಯಲ್ಲಿ ‘ಕೊಡು’ ಮತ್ತು ‘ಕೋಡು’ ಎನ್ನುವ
                  ಪದಗಳು ಸೃಷ್ಟಿಯಾದಂತೆ ಆರ್ಯಭಾಷೆಗಳಲ್ಲಿ ಸೃಷ್ಟಿಯಾಗುವದು ಸಾಧ್ಯವಿಲ್ಲ!
                 
ಕ.ಪಿ.            : ಇದಕ್ಕೂ ಹೆಚ್ಚಿನ ಮೋಜಿನ ಪ್ರಸಂಗವೊಂದನ್ನು ನಿನಗೆ ಹೇಳುತ್ತೇನೆ, ತಾಯಿ.
                  ಈ ಬಂಗಾಲಿ ಜನರು ‘ವ’ಕಾರವನ್ನು ‘ಬ’ಕಾರವಾಗಿ ಹಾಗು ‘ಅ’ಕಾರವನ್ನು
                  ‘ಒ’ತರಹಾ ಉಚ್ಚರಿಸುತ್ತಾರೆ. ವ್ಯಾಟ್‍ಸನ್ ಎನ್ನುವ ಆಂಗ್ಲ ಮನುಷ್ಯನನ್ನು
                  ಬಂಗಾಲಿಯೊಬ್ಬನು ಬ್ಯಾಟ್‍ಸೋನ್ ಎಂದು ಕರೆದು ಬೈಸಿಕೊಂಡಿದ್ದಿದೆ!
                 
ಕನ್ನಡಮ್ಮ    : ನಾಗರಿ ಲಿಪಿಯ ಹಾಗು ಆರ್ಯ ಭಾಷೆಗಳ ಬಡತನಕ್ಕಿಂತ, ತಮಿಳು ಭಾಷೆಯ
                  ಬಡತನವು ಇನ್ನೂ ಹೆಚ್ಚಿನದು. ತಮಿಳು ಜನ ‘ಗಾಂಧಿ’ ಅನ್ನೋದನ್ನ ‘ಕಾಂದಿ’
                  ಅಂತ ಬರೀತಾರ; ‘ಕಾಂತಿ’ ಅನ್ನೋದನ್ನೂ  ‘ಕಾಂದಿ’ ಅಂತ ಬರೀತಾರ! ಮತ್ತು
                  ಹಾಗೆಯೇ ಉಚ್ಚರಿಸುತ್ತಾರೆ. ಕನ್ನಡದಲ್ಲಿ ಕೆಳದಿ ಹಾಗು ಗೆಳತಿ ಇವುಗಳಿಗೆ ಬೇರೆ
                  ಅರ್ಥವಿದೆ. ಇಂತಹ ಪದಸಂಪತ್ತು ತಮಿಳಿನಲ್ಲಿ ಸಾಧ್ಯವಿಲ್ಲ. ಯಾಕೆಂದರೆ
                  ಅವರು ಈ ಎರಡೂ ಪದಗಳನ್ನು ಒಂದೇ ರೀತಿಯಲ್ಲಿ ಬರೆಯುತ್ತಾರೆ!
                 
ಕ.ಪಿ.            : ಇದಕ್ಕೆ ಕಾರಣವೇನು?

ಕನ್ನಡಮ್ಮ    : ತಮಿಳರ ಕೂಪಮಂಡೂಕ ವೃತ್ತಿ. ತಮ್ಮದೇ ದೊಡ್ಡದೆನ್ನುವ ಹುಚ್ಚು ಕಲ್ಪನೆ.
                  ಅವರಿಗೆ ಕೊಡುಕೊಳ್ಳುವ ಬುದ್ಧಿ ಇಲ್ಲ. ಹೀಗಾಗಿ ತಮಿಳಿನಲ್ಲಿ ಕಡಿಮೆ
                  ಅಕ್ಷರಗಳಿವೆ. ಅವರೂ ಸಹ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು
                  ತೆಗೆದುಕೊಂಡಿದ್ದಾರೆ. ಆದರೆ ಅವರಿಗೆ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇಲ್ಲ!
                 
ಕ.ಪಿ.            : ಓಹೋ, ಅದಕ್ಕೇ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆಯ ಗೌರವ
                  ಕೊಟ್ಟಿದ್ದಾರೊ? ಯಾವ ಭಾಷೆಯಲ್ಲಿ ಪ್ರಗತಿ ಇಲ್ಲವೊ, ಅದು ಅನಾಗರಿಕ      
                  ಅರ್ಥಾತ್ ಶಾಸ್ತ್ರೀಯ ಭಾಷೆ! ಆದುದರಿಂದಲೇ ಗಿರೀಶ ಕಾರ್ನಾಡರು ‘ಕನ್ನಡ
                  ಭಾಷೆಯು ಶಾಸ್ತ್ರೀಯ ಭಾಷೆ ಅಲ್ಲ’ ಎಂದು ಹೇಳಿದ್ದು. ನಿಜವಾಗಲೂ ಅವರೇ
                  ಸತ್ಯವಂತರು!
                 
ಕನ್ನಡಮ್ಮ    : (ನಿಟ್ಟುಸಿರುಗರೆಯುವಳು.)

ಕ.ಪಿ.            : ಇಂತಹ ಅನುಪಮ ಚೆಲುವಿನ ಹಾಗು ಸರ್ವಾಭರಣಭೂಷಿತೆಯಾದ ನೀನು ಈಗ
                  ನಿಟ್ಟುಸಿರುಗರೆಯಲು ಕಾರಣವೇನು?

ಕನ್ನಡಮ್ಮ    : ನನ್ನ ನಾದಶರೀರವನ್ನು ವಿರೂಪಗೊಳಿಸುತ್ತಿರುವ ಆಕಾಶವಾಣಿ ಹಾಗು ಟೀವಿ
                  ಕಾರ್ಯಕ್ರಮಗಳನ್ನಂತೂ ನೀನು ಕೇಳಿದೆ. ಈಗ ನನ್ನ ಲಿಪಿಶರೀರವನ್ನು
                  ಚೂರಿಯಿಂದ ಚೂರುಚೂರಾಗಿ ಕತ್ತರಿಸುತ್ತಿರುವ ಕಾರ್ಯಕ್ರಮಗಳನ್ನಷ್ಟು
                  ನೋಡುವೆಯಾ?

ಕ.ಪಿ.            : ತಾಯಿ, ನಿನ್ನ ಅಂಗಚ್ಛೇದವನ್ನು ಮಾಡುತ್ತಿರುವ ಆ ಮಾತೃಹಂತಕರಾರು?

ಕನ್ನಡಮ್ಮ    : ಪಿಶಾಚಿ, ನೈಸ್ ಕಾರಿಡಾರ್ ಮೇಲೆ ಹಾರುತ್ತ ಮೈಸೂರಿನತ್ತ ತೆರಳು.
                  ಅಲ್ಲಿ ನಿನಗೆ ನನ್ನ ಸುಪುತ್ರನ ದರ್ಶನವಾಗುವದು!

ಕ.ಪಿ.            : ಜೈ ಕನ್ನಡಾಂಬೆ!

                  (ಮುಂದಿನ ಸಂಚಿಕೆಯಲ್ಲಿ ಸುಪುತ್ರದರ್ಶನ.)