Thursday, March 31, 2011

ಕರ್ಣಪಿಶಾಚಿಯ ಸಂದರ್ಶನಗಳು.....೪

ಕನ್ನಡ ತಾಯಿಯ ಆಶೀರ್ವಾದವನ್ನು ಪಡೆದ ಕರ್ಣಪಿಶಾಚಿಯು ಕಾಲ್ನಡಿಗೆಯಿಂದ ನೈಸ್ ಕಾ‍^ರಿಡಾ^ರ್‍ ತಲುಪಿತು. ಅನೇಕ ರಾಜಕಾರಣಿಗಳು ಧರಣಿ ಹಾಗು ಪಾದಯಾತ್ರೆಗಳ ಮೂಲಕ ಪವಿತ್ರಗೊಳಿಸಿದ ಆ ಮಾರ್ಗವನ್ನು ಕಂಡ ಕರ್ಣಪಿಶಾಚಿಗೆ ಮನಸ್ಸು ತುಂಬಿ ಬಂದಿತು.

ಅಹೋ! ಇದು ವೇದೇಗೌಡರು ಧರಣಿ ಕುಳಿತ ಜಾಗವಲ್ಲವೆ? ಅಹೋ! ಇದು ಜೋಕುಮಾರಸ್ವಾಮಿ ಹಾಗು ವೇರಣ್ಣನವರ ಕಾಲಿನ ಧೂಳಿ ಬಿದ್ದ ಜಾಗವಲ್ಲವೆ? ಅಹೋ! ಇಲ್ಲಿಯೇ ಅಲ್ಲವೆ ಸಿದ್ದಮಾರಯ್ಯ ಹಾಗು ಪೇಶದಾಂಡೆಯವರು ಕುಣಿಯುತ್ತ, ತಮಟೆ ಬಾರಿಸುತ್ತ ವಾದಯಾತ್ರೆ ಮಾಡಿದ್ದು! ಅಹೋ! ಚಡ್ಯೂರಪ್ಪನವರು ಇಲ್ಲಿಯೇ ಅಲ್ಲವೆ ಡಿನೋಟಿಫಾಯ್ ಮಾಡಿದ್ದು!

ಕರ್ಣಪಿಶಾಚಿಯ ಕಣ್ಣೀರು ಕೃಷ್ಣೆಯ ಪ್ರವಾಹದಂತೆ ಹರಿಯಿತು. ಭಾವಾವಿಷ್ಟವಾದ ಕರ್ಣಪಿಶಾಚಿ ನೈಸ್ ಕಾ‍^ರಿಡಾ^ರ್‍‍ದ ಮಣ್ಣನ್ನು ನೆತ್ತಿಯ ಮೇಲಿಟ್ಟುಕೊಳ್ಳಲು ಬಾಗಿತು. ಥೂ! ಇದೇನು ಹೊಲಸು ವಾಸನೆ ಬರ್ತಾ ಇದೆಯಲ್ಲ ಈ ಮಣ್ಣಿಗೆ ಎಂದು ಮೂಗು ಮುಚ್ಚಿಕೊಂಡಿತು. ಮತ್ತೊಮ್ಮೆ ಬಾಗಿ ಮಣ್ಣು ಎತ್ತಿಕೊಳ್ಳಲು ಹೋಯಿತು. ಮತ್ತೇ ಅದೇ ಹೊಲಸು ವಾಸನೆ. ಇದು ರಾಜಕಾರಣಿಗಳ ವಾಸನೆ ಎಂದು ಕರ್ಣಪಿಶಾಚಿಗೆ ಅರ್ಥವಾಯಿತು.


ಎಷ್ಟು ತೊಳೆದರೂ ಇದು ಹೋಗದ ವಾಸನೆ ಎಂದುಕೊಂಡ ಕರ್ಣಪಿಶಾಚಿಯು ವಾಯುಮಾರ್ಗಕ್ಕೇ ಹಾರಿ, ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು!

ಸ್ವಲ್ಪ ದೂರದ ಪ್ರಯಾಣದ ನಂತರ, ಕರ್ಣಪಿಶಾಚಿಗೆ ಕಿಷ್ಕಿಂಧೆಯಂತಹ ಸಣ್ಣ ತೋಪೊಂದು ಗೋಚರಿಸಿತು. ಆ ತೋಪಿಗೊಂದು ಆವರಣ.ಅದರ ನಟ್ಟನಡುವಿನಲ್ಲಿರುವ ಆಲದ ಮರದ ಮೇಲೆ ಒಂದು ಮಂಚಿಕೆ.  ಆ ಮಂಚಿಕೆಯ ಮೇಲೆ ಗಟ್ಟಿಮುಟ್ಟಾದ ಶರೀರದ ವೃದ್ಧರೊಬ್ಬರು ಕೂತುಕೊಂಡಿದ್ದಾರೆ. ನಡುವಿಗೆ ತೊಪ್ಪಲಿನ ಅಲಂಕಾರ ಬಿಟ್ಟರೆ ಮೈಮೇಲೆ ಬೇರೆ ಅರಿವೆ ಇಲ್ಲ. ತಮ್ಮ ಎದುರಿಗೆ ಪೀಠವೊಂದನ್ನು ಇಟ್ಟುಕೊಂಡು ಗಲಗಿನಿಂದ ಏನೋ ಬರೆಯುತ್ತಿದ್ದಾರೆ. ಕರ್ಣಪಿಶಾಚಿಗೆ Tarzan ಸಿನೆಮಾ ಹಾಗು ಕಾರ್ಟೂನುಗಳ ನೆನಪಾಯಿತು. ಬಹುಶ: ಇವರೇ ವಯಸ್ಸಾದ Tarzan ಇರಬೇಕು ಎಂದುಕೊಂಡ ಕರ್ಣಪಿಶಾಚಿಯು ಕಿಷ್ಕಿಂಧೆಯ ಆವರಣದ ಹೊರಗೆ ಇಳಿಯಿತು.
ಆವರಣದ ಬಾಗಿಲಿಗೆ ಫಲಕವೊಂದನ್ನು ಹಾಕಲಾಗಿತ್ತು.



ಕೀಚಕ
೧೧೧೧ ೦೦ ೧೧೧ ೦೦


ಆವರಣದ ಒಳಭಾಗದಲ್ಲಿ ಸಣ್ಣದೊಂದು ಗಿಡ. ಅದರ ಸುತ್ತಲೂ ಕಟ್ಟೆ. ಕಟ್ಟೆಯ ಮೇಲೆ ಓರ್ವ ತರುಣ. ಆತ ಮಾತ್ರ ಆಧುನಿಕ ನಾಗರಿಕನಂತೆ ಸೂಟು ಬೂಟು ಹಾಕಿಕೊಂಡಿದ್ದಾನೆ. ಕರ್ಣಪಿಶಾಚಿಯನ್ನು ಕಂಡೊಡನೆ ಆತ ಎದ್ದು ಬಂದು, “Welcome, most welcome! ಎಂದು ಇಂಗ್ಲೀಶಿನಲ್ಲಿ ಸ್ವಾಗತಿಸಿದ. ಕರ್ಣಪಿಶಾಚಿಗೆ ಭಯಂಕರ ಆಶ್ಚರ್ಯ.
ನೀವಾರು? ಮಹಾಭಾರತದ ಕೀಚಕ ಮಹಾಶಯರು ಇಲ್ಯಾಕೆ ಇದ್ದಾರೆ? ಎಂದು ತೊದಲಿತು.

ಆಧುನಿಕ ವೇಷದ ತರುಣನು ಮುಗಳ್ನಕ್ಕು ಹೇಳಿದ : ನಾನು ಇಲ್ಲಿಯ ಕಾವಲುಗಾರ cum ಭಾಷಾಂತರಕಾರ. ಇಲ್ಲಿ ವಾಸ ಮಾಡುತ್ತಿರುವವರು ಮಹಾಭಾರತದ ಕೀಚಕರಲ್ಲ. ಕೀಚಕ ಎನ್ನುವದು ಅವರ ಸಂಕೇತ ನಾಮ. ಕೆಳಗೆ ಬರೆದಿರುವ ಅಂಕಿಗಳು ಕಪಿಲಿಪಿಯಲ್ಲಿವೆ. ಅದು ಅತ್ಯಾಧುನಿಕ ಕನ್ನಡ ಲಿಪಿ. ಅದರರ್ಥ: ‘ಪರವಾನಿಗೆ ಇಲ್ಲದೆ ಪ್ರವೇಶ ಇಲ್ಲ.’ ಇರಲಿ, ಒಳಗೆ ಬನ್ನಿ. ನಿಮ್ಮನ್ನು ಕೀಚಕರಿಗೆ ಭೆಟ್ಟಿ ಮಾಡಿಸುವೆ.

ಕ.ಪಿ.      : ನೀವು ವಿದೇಶಿ ಪ್ರವಾಸಿಗಳಿಗಾಗಿ ಕನ್ನಡದಿಂದ ಇಂಗ್ಲೀಶಿಗೆ ಭಾಷಾಂತರ ಮಾಡುತ್ತೀರಾ?
ತರುಣ   : ಇಲ್ಲ. ಕೀಚಕರು ಬಳಸುವ ಶುದ್ಧ ಕಪಿಕನ್ನಡವನ್ನು ನಿಮ್ಮ ವರ್ತಮಾನದ ಕನ್ನಡಕ್ಕೆ
ಅನುವಾದಿಸುತ್ತೇನೆ.
ಕ.ಪಿ.      : ಕೀಚಕರು ಏನನ್ನು ಬರೆಯುತ್ತಿದ್ದಾರೆ?
ತರುಣ   : ಅವರು ’ಲಿಪಿಸಂಹಾರ’ ಎನ್ನುವ ಶಾಸ್ತ್ರೀಯ ಗ್ರಂಥವನ್ನು ಬರೆಯುತ್ತಿದ್ದಾರೆ.
ಕ.ಪಿ.      : ಓಹೋ! ಕನ್ನಡಮ್ಮನು ಉಟ್ಟುಕೊಂಡಿರುವಂತಹ ಲಿಪಿ ಎನ್ನುವ ಪೀತಾಂಬರವನ್ನು
ಚಿಂದಿ ಚಿಂದಿ ಮಾಡುತ್ತಿರುವ ಕಾರಣದಿಂದಾಗಿ ಇವರು ‘ಕೀಚಕ’ ಎನ್ನುವ ಸಂಕೇತನಾಮವನ್ನು 
ಇಟ್ಟುಕೊಂಡಿದ್ದಾರೆಯೆ?
ತರುಣ   : ತಪ್ಪು ತಿಳಿದುಕೊಂಡಿದ್ದೀರಿ! ಕೀಚಕ ಎನ್ನುವ ಸಂಕೇತನಾಮಕ್ಕೂ ಮಹಾಭಾರತದ
ಕೀಚಕನಿಗೂ ಏನೂ ಸಂಬಂಧವಿಲ್ಲ. ನಮ್ಮ ಕುರುವನ್ನು ಭೆಟ್ಟಿಯಾದರೆ ನಿಮ್ಮ ಎಲ್ಲಾ
ಸಂದೇಹಗಳಿಗೆ ಪರಿಹಾರ ಸಿಗುವದು.
ಕ.ಪಿ.      : ಕುರು? You mean ಗುರು?
ತರುಣ   : ಹೌದು, ಗುರು! ಕನ್ನಡದ ಸರಳೀಕರಣದ ಮೇರೆಗೆ ‘ಗುರು’ ಇದು ‘ಕುರು’ ಆಗುತ್ತದೆ.
ಅತ್ಯಾಧುನಿಕ ಕನ್ನಡ ಲಿಪಿಯಲ್ಲಿ ಅಂದರೆ ಕಪಿಲಿಪಿಯಲ್ಲಿ ಅದನ್ನು ೧೧೧೧೧೧೧ ಎಂದು
ಬರೆಯುತ್ತಾರೆ.

ಅಷ್ಟರಲ್ಲಿ ಕರ್ಣಪಿಶಾಚಿ ಹಾಗು ತರುಣರು ಬೋಧಿವೃಕ್ಷವನ್ನು ತಲುಪಿದ್ದರು. ಮಂಚಿಕೆಯ ಮೇಲಿಂದಲೇ ಇವರನ್ನು ಗಮನಿಸಿದ ಕುರುಗಳು ’ಕೀಚ್, ಕೀಚ್, ಕೀಚ್’ ಎಂದು ಉಲಿದರು.

ತರುಣ   : ಕುರುಗಳು ನಿಮಗೆ ಸ್ವಾಗತ ಕೋರುತ್ತಿದ್ದಾರೆ. ಅವರಿಗೆ ‘ಕಿಚಕ್’ ಎಂದು
ವಂದನೆಗಳನ್ನು ಹೇಳಿರಿ.
ಕ.ಪಿ.      : ಕಿಚಕ್, ಕುರು, ಕಿಚಕ್!
ಕುರು     : ಕಿಚಕ್! ಕಿಚಕ್!! ಕಿಚಿ? ಕಿಚಿ?
ತರುಣ   : ನೀವು ಯಾರು? ಎಂದು ಕೇಳುತ್ತಿದ್ದಾರೆ.
ಕ.ಪಿ.      : ನಾನು ಕರ್ಣಪಿಶಾಚಿ. ನೀವು ಕೀಚಕ ಎನ್ನುವ ಸಂಕೇತನಾಮವನ್ನು ಇಟ್ಟುಕೊಂಡಿದ್ದು
ಯಾಕೆ?

ಕುರುಗಳು ಐವತ್ತು ಸಲ ‘ಕೀ’ ಎಂದು ನೂರು ಸಲ ‘ಚ’ ಎಂದು ಮತ್ತೆ ಅರುವತ್ತು ಸಲ ‘ಕೂ’ ಎಂದು ಉಲಿದರು!
ತರುಣನು ಅದನ್ನು ವರ್ತಮಾನದ ಕನ್ನಡದಲ್ಲಿ ಹೀಗೆ ಅನುವಾದಿಸಿದನು:

ಕನ್ನಡ ಭಾಷೆಯು ಬಹಳ ಸರಳವಾದ ಭಾಷೆ. ಶ್ರೀರಾಮಚಂದ್ರನು ಕಿಷ್ಕಿಂಧೆಗೆ ಬರುವ ಮೊದಲು ಇಲ್ಲಿದ್ದ ಕಪಿಗಳು ಅಂದರೆ ಕನ್ನಡಿಗರ ಪೂರ್ವಜರು ಕಪಿಕನ್ನಡ ಭಾಷೆಯನ್ನು ಬಳಸುತ್ತಿದ್ದರು. ‘ಕ’ ಹಾಗು ‘ಚ’ ಎನ್ನುವ ಎರಡೇ ಮೂಲ ಧ್ವನಿಗಳು ಕನ್ನಡದಲ್ಲಿ ಇದ್ದವು. ಇದೇ ಕನ್ನಡದ ಜಾಯಮಾನ. ಕನ್ನಡಿಗರು ತಮ್ಮ ಜಾಯಮಾನವನ್ನು ಬಿಡಬಾರದು. ಜಗತ್ತು ಎಷ್ಟೇ ಮುಂದುವರೆಯಲಿ, ಕನ್ನಡಿಗರು ಮಾತ್ರ, ತೊಪ್ಪಲನ್ನೇ ಸುತ್ತಿಕೊಂಡು, ಗಡ್ಡೆ ಗೆಣಸುಗಳನ್ನೇ ತಿನ್ನುತ್ತ, ಕೇವಲ ಎರಡೇ ಧ್ವನಿಗಳಲ್ಲಿ ತಮ್ಮ ಸಕಲ ಅಭಿವ್ಯಕ್ತಿಯನ್ನು ಮಾಡಬೇಕು. ಯಾಕೆಂದರೆ ಕಾಲಮಾನಕ್ಕಿಂತ ಜಾಯಮಾನ ಮುಖ್ಯ. ಈ ಮೂಲಧ್ವನಿಗಳನ್ನು ಸಂಕೇತಿಸುವ ಉದ್ದೇಶದಿಂದ ನಾನು ನನ್ನ ಹೆಸರನ್ನು ‘ಕೀಚಕ’ ಎಂದು ಇಟ್ಟುಕೊಂಡಿದ್ದೇನೆ. ಸಂಸ್ಕೃತದ ಸೋಂಕಿಲ್ಲದ ಕಪಿಕನ್ನಡವನ್ನು ಬಳಸುವದೇ ನನ್ನ ಧ್ಯೇಯ!

ಎಂಥಾ ಉದಾತ್ತ ವ್ಯಕ್ತಿ! ಎಂಥಾ ಕಪಿಕನ್ನಡಾಭಿಮಾನ!!
ಕರ್ಣಪಿಶಾಚಿಯು ಥಟ್ಟನೆ ನೆಗೆದು ಕುರುಗಳ ಕಾಲುಗಳನ್ನು ಪಿಡಿಯಿತು.

ಕ.ಪಿ.      : ಕುರುವೆ! ಕುರುವೆ!
(ಕರ್ಣಪಿಶಾಚಿಯ ಕಣ್ಣಿನಿಂದ ಗಳಗಳ ಕಣ್ಣೀರು.)
ಕ.ಪಿ.      : ಕುರುವೆ, ಈ ನಿಮ್ಮ ಧ್ಯೇಯಕ್ಕೆ ಪ್ರೇರಣೆ ಏನು ಎಂದು ಹೇಳುವಿರಾ?

ಕುರುಗಳು ೧೦೦ ಸಲ ಕಾ ಎಂದು ೨೦೦ ಸಲ ಕೇ ಎಂದು ೩೦೦ ಸಲ ಚಾ ಎಂದು ಧ್ವನಿ ಹೊರಡಿಸುತ್ತಾರೆ. ಕೊನೆಗೊಮ್ಮೆ
ಅನುವಾದಕನು ಕುರುಚರಿತ್ರೆಯನ್ನು ಕರ್ಣಪಿಶಾಚಿಯ ಎದುರಿಗೆ ಬಿಚ್ಚಿಡುತ್ತಾನೆ.

ಇದು ಬಹಳ ಹಳೆಯ ಕತೆ. ನಾನಿನ್ನೂ ಚಿಕ್ಕ ಬ್ರಾಹ್ಮಣ ವಟು. ನಮ್ಮ ಮನೆಯಲ್ಲಿಯೇ ನಮ್ಮ ತಂದೆ ಸಂಸ್ಕೃತವನ್ನೂ ಕಲಿಸುತ್ತಿದ್ದರು. ನಮ್ಮ ಸಂಸ್ಕೃತ ಗ್ರಂಥದಲ್ಲಿ ‘ಕಚದೇವಯಾನಿ’ ಎನ್ನುವ ಪಾಠ ಒಂದಿತ್ತು. ಅದನ್ನು ನಾನು ತಪ್ಪಾಗಿ ‘ಕುಚದೇವಯಾನಿ’ ಎಂದು ಓದಿದೆ. ನಮ್ಮ ತಂದೆ ಕೆಂಡಾಮಂಡಲವಾದರು. ‘ಕಚದೇವಯಾನಿ ಎಂದರೆ ಏನು ಗೊತ್ತೇನಯ್ಯಾ?’ ಎಂದು ಕೇಳಿದರು. ‘ಕಚ ಎಂದರೆ ಕೂದಲು, ಕಚದೇವಯಾನಿ ಎಂದರೆ ದೇವಯಾನಿಯ ಕೂದಲು’ ಎಂದೆ. ತಂದೆಯವರ ಕೋಪ ನೆತ್ತಿಗೇರಿತು. ಆದರೂ ಸಹ ತಮ್ಮನ್ನು ನಿಯಂತ್ರಿಸಿಕೊಂಡು, ‘ಹೌದಾ! ಕುಚದೇವಯಾನಿ ಎಂದರೆ ಏನು?’ ಎಂದು ಕೇಳಿದರು. ‘ಗೊತ್ತಿಲ್ಲ’ ಎಂದೆ. ತಂದೆಯವರು ನನ್ನನ್ನು ನಂಬಲಿಲ್ಲ. ಒಂದು ಕುಚಕ್ಕೆ ಒಂದುನೂರರಂತೆ ನನಗೆ ಎರಡುನೂರು ಛಡಿ ಏಟುಗಳನ್ನು ಕೊಟ್ಟರು. ಆ ದಿನದಿಂದಲೇ ನಾನು ಸಂಸ್ಕೃತದ್ವೇಷಿಯಾದೆ. ಸಂಸ್ಕೃತ ವ್ಯಾಕರಣದ ಸಂಕಲನಕಾರನಾದ ಪಾಣಿನಿಗೆ ಪರ್ಯಾಯವಾಗಿ ನಾನು ‘ಕಪಿಕನ್ನಡ ವ್ಯಾಕರಣ’ವನ್ನು ರಚಿಸಿ, ಅವನಷ್ಟೇ ಪ್ರಸಿದ್ಧನಾಗಬೇಕೆನ್ನುವ ರೊಚ್ಚು ಮನದಲ್ಲಿ ಮೂಡಿತು. ಅದಕ್ಕಾಗಿ ಒಂದು ಯೋಜನೆಯನ್ನೂ ರೂಪಿಸಿಕೊಂಡೆ.

ಕ.ಪಿ.      : ಅದು ಎಂತಹ ಯೋಜನೆ?

ಕುರು     : ಕಾಚ, ಕಾಚ, ಕಚಕ್, ಕಚಕ್!

ತರುಣ   : ನೋಡಿದಿರಾ? ವರ್ತಮಾನ ಕನ್ನಡದ ನೂರು ಪದಗಳಲ್ಲಿ ಹೇಳಬಹುದಾದದ್ದನ್ನು
ನಮ್ಮ ಕುರುಗಳು ನಾಲ್ಕೇ ನಾಲ್ಕು ಕಪಿಕನ್ನಡ ಪದಗಳಲ್ಲಿ ಹೇಳಿದರು. ಅವರ ಹೇಳಿಕೆ
ಹೀಗಿದೆ: ‘ನೀವು ಕಪಿಗಳು. ನಿಮ್ಮ ಮೇಲೆ ಸಂಸ್ಕೃತವನ್ನು ಅನ್ಯಾಯದಿಂದ
ಹೇರಲಾಗುತ್ತದೆ. ಈ ಕಾರಣದಿಂದಲೇ ನೀವು ಹಿಂದುಳಿದಿದ್ದೀರಿ’ ಎಂದು ಕನ್ನಡಿಗರಿಗೆ
ಮನದಟ್ಟು ಮಾಡಿದರೆ ಸಾಕು, ಕನ್ನಡಿಗರು ರೊಚ್ಚಿಗೇಳುತ್ತಾರೆ.
ಇದೇ ರೀತಿಯಲ್ಲಿ ಕನ್ನಡ ಲಿಪಿಯು ಸಂಸ್ಕೃತ ಲಿಪಿಯ ಅನುಕರಣ, ಕನ್ನಡ
ವ್ಯಾಕರಣವು ಸಂಸ್ಕೃತ ವ್ಯಾಕರಣದ ಅನುಕರಣ ಎನ್ನುವದನ್ನೂ ಸಹ ಕಪಿಗಳಿಗೆ
ತಿಳಿಸಿ ಹೇಳಬಹುದು.

ಕ.ಪಿ.      : ಇದೆಲ್ಲ ಸರಿ. ಆದರೆ ಕುರುಗಳು ಕಚ, ಕುಚ ಬಿಟ್ಟು ಬೇರೆ ಧ್ವನಿಗಳಿಗೆ ಏಕೆ
ಹೋಗುವದಿಲ್ಲ?

ಕುರು     :(ಕಾಚ ಎಂದು ಹನ್ನೆರಡು ಸಲ, ಕೋಚ ಎಂದು ಇಪ್ಪತ್ತೊಂದು ಸಲ ಹೇಳುತ್ತಾರೆ.)

ತರುಣ   : ಸಾವಿರಾರು ವರ್ಷಗಳಷ್ಟು ಹಿಂದಿನ ಕಾಲದಲ್ಲಿ ಅಂದರೆ ಕನ್ನಡಿಗರು ಕಪಿಗಳಾಗಿದ್ದ
ಕಾಲದಲ್ಲಿ,ಅವರಿಗೆ ‘ಕ’ ಮತ್ತು ‘ಚ’ ಇವೆರಡೆನ್ನು ಬಿಟ್ಟು ಬೇರೆ ಧ್ವನಿಗಳ ಪರಿಚಯ
ಇರಲಿಲ್ಲ. ಆರ್ಯರ ಆಗಮನದ ನಂತರವೇ ಕಪಿಗಳು ಅಂದರೆ ಕನ್ನಡಿಗರು ಇತರ
ಧ್ವನಿಗಳನ್ನು ಕಲಿತರು. ಕನ್ನಡದ ಮೂಲಪದಗಳೆಲ್ಲ ‘ಕ’ದಿಂದಲೇ ಪ್ರಾರಂಭವಾಗುತ್ತವೆ.
ಉದಾಹರಣೆಗೆ, ಕತ್ತೆ! ಆದುದರಿಂದ ಕನ್ನಡಿಗರ ಜಾಯಮಾನವನ್ನು ಉಳಿಸಿಕೊಳ್ಳುವ
ಸಲುವಾಗಿ ಕುರುಗಳು ಕನ್ನಡ ಭಾಷೆಯನ್ನು ಪೂರ್ತಾ ಕ ಹಾಗು ಚ ಪದಗಳಲ್ಲಿ ಮಾತ್ರ
ಉಲಿಯುತ್ತಾರೆ.

ಕ.ಪಿ.      : ಆದರೆ ನಮಗೆ ತಿಳಿಯದಂತೆಯೇ ಅನೇಕ ಸಂಸ್ಕೃತ ಪದಗಳ ತದ್ಭವಗಳನ್ನು ನಾವು
ಕನ್ನಡದಲ್ಲಿ ಬಳಸುತ್ತೇವಲ್ಲ. ಅವನ್ನು ಬಿಡಲು ಸಾಧ್ಯವಿಲ್ಲದಂತಾಗಿದೆ.
ಉದಾಹರಣೆಗೆ      ‘ಬೇಗನೆ ಬಾ’ ಎಂದು ಹೇಳಿದರೆ, ಅದು ‘ವೇಗ’ವಾಗಿ ಎನ್ನುವದರ
ತದ್ಭವ. ‘ಲಗೂನೆ ಬಾ’ ಎಂದರೆ ಅದು ‘ಲಘು’ವಾಗಿ ಎನ್ನುವದರ ತದ್ಭವ. 
ಜಲ್ದಿ’ ಅಥವಾ ‘ಜೋರ್’ ಇವು ಹಿಂದಿ ಪದಗಳು. ಕನ್ನಡದಲ್ಲಿ ಇದಕ್ಕೆ ಕನ್ನಡ ಪದವೇ
ಇಲ್ಲವೆ?

ತರುಣ   : ನಮ್ಮ ಕುರುಗಳು ಅದರದೇ ಸಂಶೋಧನೆಯನ್ನು ನಡೆಸಿದ್ದಾರೆ. ಈ ಎಲ್ಲಾ
ಪದಗಳೂ ‘ಕ’ ಧ್ವನಿಯಿಂದಲೇ ಪ್ರಾರಂಭವಾಗುವದು ನಮ್ಮ ಕುರುಗಳ 
‘ಕಪಿಕನ್ನಡ’ದ ವೈಶಿಷ್ಟ್ಯ!

ಕ.ಪಿ.      : ವಾರೆವ್ವಾ! ಕ್ಯಾ ಬಾತ್ ಹೈ!

ತರುಣ   : ಆ ಉದ್ದೇಶದಿಂದಲೇ ನಮ್ಮ ಕುರುಗಳು ‘ಲಿಪಿಸಂಹಾರ’ ಎನ್ನುವ ಗ್ರಂಥರಚನೆಯಲ್ಲಿ
ತೊಡಗಿದ್ದಾರೆ. ನೀವು ಹೊರಗಿನ ಫಲಕದಲ್ಲಿ ನೋಡಿದಿರಲ್ಲ? ಕೇವಲ ‘೦’ ಹಾಗು
‘೧’ ಅಂಕಿಗಳನ್ನು ಬಳಸಿ ‘ಪರವಾನಗಿ ಇಲ್ಲದೆ ಪ್ರವೇಶ ಇಲ್ಲ’ ಎಂದು ಬರೆದದ್ದನ್ನು?

ಕ.ಪಿ.      : ಇದರ ಉದ್ದೇಶವೇನು?

ಕುರು     : (ದುಃಖದ ಧ್ವನಿಯಲ್ಲಿ) ಕಚಕಚಾ(ಹತ್ತು ಸಲ)! ಕುಚಕುಚಾ(ಹದಿನೈದು ಸಲ)!
ಕೂಕೂಕೂ(ಎಂಟು ಸಲ)!

ತರುಣ   : ಇದರ ಹಿಂದೆ ನಮ್ಮ ಕುರುಗಳ ಮತ್ತೊಂದು ಕರುಣಾಜನಕ ಕತೆ ಇದೆ. ಅವರು ಕನ್ನಡ
ಸಾಲೆಯಲ್ಲಿ ಕಲಿಯುತ್ತಿದ್ದಾಗ, ಅಂಕಗಣಿತದಲ್ಲಿ ಯಾವಾಗಲೂ ನಪಾಸಾಗುತ್ತಿದ್ದರು.
ಒಂದರಿಂದ ಹತ್ತರವರೆಗಿನ ಅಂಕಿಗಳನ್ನು ಎಣಿಸಲೂ ಸಹ ಅವರಿಗೆ
ಸಾಧ್ಯವಾಗುತ್ತಿರಲಿಲ್ಲ! ಇನ್ನು ಕೋಟಿ, ಅಬ್ಜ, ಪರಾರ್ಧ ಇವುಗಳನ್ನು
ತಿಳಿದುಕೊಳ್ಳುವದೂ ಸಹ ಅಸಾಧ್ಯ!

ಇವೆಲ್ಲ ಆರ್ಯರ ಕುತಂತ್ರ. ಕಪಿಗಳನ್ನು ಹಿಂದುಳಿದವರನ್ನಾಗಿ ಇಡಲೆಂದೇ ಇವರು
ಗಣಿತವನ್ನು ಇಷ್ಟೆಲ್ಲ ಸಂಕೀರ್ಣ ಮಾಡಿದ್ದಾರೆ ಎನ್ನುವದು ನಮ್ಮ ಕುರುಗಳಿಗೆ
ಮನದಟ್ಟಾಯಿತು. ಕಂಪ್ಯೂಟರಿನಲ್ಲಿಯೂ ಸಹ ‘೦’ ಮತ್ತು ‘೧’ ಅಂಕಿಗಳನ್ನು ಮಾತ್ರ
ಬಳಸುತ್ತಾರಲ್ಲವೆ? ಆದುದರಿಂದ ಕೇವಲ ಸೊನ್ನೆ ಮತ್ತು ಒಂದು ಅಂಕಿಗಳು ಇರುವ,
‘ಕಪಿಲಿಪಿ’ ಎನ್ನುವ ಹೊಸ ಲಿಪಿಯೊಂದನ್ನು ನಮ್ಮ ಕುರುಗಳು ಸಂಶೋಧಿಸಿದರು.
ಇದರಿಂದಾಗಿ ಗಣಿತದ ಸರಳೀಕರಣವೂ ಆಯಿತು. ಜೊತೆಗೆ ಬ್ರಾಹ್ಮೀಜನ್ಯ ಲಿಪಿಗಳ
ಸಂಹಾರವೂ ಆಯಿತು! ಇದೇ ‘ಲಿಪಿಸಂಹಾರ ಅರ್ಥಾತ್ ಕಪಿಗಳಿಗೊಂದು ಹೊಸಲಿಪಿ!’

ಕ.ಪಿ.      : ನನಗೊಂದು ಸಂಶಯವಿದೆ. ಜಗತ್ತು ಮುಂದುವರೆಯುತ್ತಿರುವಾಗ ಕನ್ನಡಿಗರು
ಹಿಂದುಳಿಯಬೇಕೆ? ಭಾಷೆ, ಲಿಪಿ, ತಂತ್ರಜ್ಞಾನ ಇವು ಎಷ್ಟೆಲ್ಲ ಸಂಕೀರ್ಣವಾಗುತ್ತಿರುವಾಗ,
ನಾವು ಕನ್ನಡದ ಜಾಯಮಾನ ಎನ್ನುವ ಮೋಸದ ಪದವನ್ನು ಬಳಸಿ ಕನ್ನಡಿಗರ ಕಣ್ಣಿಗೆ
ಮಣ್ಣೆರಚುವದು ಸರಿಯೆ? ನೀವು ಹಿಂದುಳಿದವರು ಎಂದು ಕರೆಯುತ್ತಿರುವ ಜನರು,
ಜ್ಞಾನಸಂಪಾದನೆಯ ಮೂಲಕ ದೇಶ, ವಿದೇಶಗಳಲ್ಲಿ ಎಷ್ಟೆಲ್ಲ ಪ್ರಸಿದ್ಧರಾಗಿದ್ದಾರೆ!
ಅವರಿಗೆ ವರ್ತಮಾನ ಕನ್ನಡ ಅರ್ಥವಾಗಲಾರದೆ? ಅದನ್ನು ಕಪಿಕನ್ನಡ ಮಾಡುವ
ಅವಶ್ಯಕತೆ ಇದೆಯೆ? ಇದೆಲ್ಲ ನಿಮ್ಮ ಕೀರ್ತಿಕಾಮನೆಯ ಸ್ವಾರ್ಥವಲ್ಲವೆ?

ಕುರು     : (ಸಿಟ್ಟಿನಿಂದ) ಕ್ಕೆಕ್ಕೆಕ್ಕೆ! ಕ್ಕೊಕ್ಕೊಕ್ಕೊ! ಕ್ಕುಕ್ಕುಕ್ಕೂ!

ಕ.ಪಿ.      : (ತರುಣನಿಗೆ) ಕುರುಗಳು ಏನು ಹೇಳಿದರು?
ತರುಣ   : Get out ಎಂದು ಹೇಳಿದರು!

ಕ.ಪಿ.      : ಧನ್ಯವಾದಗಳು, Good bye!


             ಕರ್ಣಪಿಶಾಚಿಯು ಆಕಾಶಕ್ಕೆ ನೆಗೆಯಿತು. 
             ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟದೇಶವು ಅದರ ಕೆಳಗೆ ಮೈ ಚಾಚಿಕೊಂಡು ಬಿದ್ದಿತ್ತು. 
             ಬೋಳು ಬೋಳಾದ ಗಣಿಗುಡ್ಡಗಳು, ನೇಣು ಹಾಕಿಕೊಳ್ಳುತ್ತಿರುವ ರೈತರು, ಬಕಾಸುರರಂತಹ ರಾಜಕಾರಣಿಗಳು, ಸ್ವಾರ್ಥಸಾಧನೆಯ ಸಂಶೋಧಕರು, ಇವರೆಲ್ಲರ ಸುತ್ತಲೂ ಕುಣಿಯುವ ಹುಚ್ಚು ಕಪಿಗಳು!

             ಕರ್ಣಪಿಶಾಚಿಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ಇದ್ದರೂ, ತನಗೆ ಸುಳ್ಳು ಹೇಳುವ ಒಬ್ಬನೂ ಸಿಗಲಿಲ್ಲವಲ್ಲ! ಥಟ್ಟನೆ ಅದಕ್ಕೆ ಕಟು ಸತ್ಯವು ಮಿಂಚಿನಂತೆ ಹೊಳೆಯಿತು. ಸುಳ್ಳು ಯಾರು ಹೇಳುತ್ತಾರೆ? ಸತ್ಯ ಹೇಳಿದರೆ ಮರ್ಯಾದೆ ಹೋಗುವದೆಂದು ಹೆದರಿಕೊಳ್ಳುವವರು ಸುಳ್ಳು ಹೇಳುತ್ತಾರೆ! ನಾಚಿಕೆ ಇಲ್ಲದವರು ಸತ್ಯ ಹೇಳಲು ಯಾಕೆ ಹಿಂಜರಿಯಬೇಕು?!

            ಸ್ಮಶಾನದ ಪಕ್ಕದ ಮರದ ಕೆಳಗೆ ಮೊಂಡುಗೈ, ಮೊಂಡುಗಾಲುಗಳ ಮುದುಕಿಯೊಬ್ಬಳು ಕರ್ಣಪಿಶಾಚಿಯ ಕಣ್ಣಿಗೆ ಬಿದ್ದಳು.

ದೂರದಿಂದ ಹಾಡೊಂದು ತೇಲಿ ಬರುತ್ತಿತ್ತು:
 “ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
   ನೀಡುವೆನು ರಸಿಕ ನಿನಗೆ.
   ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
   ಆ ಸವಿಯ ಹಣಿಸು ನನಗೆ!

ಕರ್ಣಪಿಶಾಚಿಯ ಕಣ್ಣುಗಳಿಂದ ಬಿದ್ದ ಎರಡು ಹನಿಗಳು ಆ ಮುದುಕಿಯ ಮೊಂಡುಗಾಲುಗಳನ್ನು ತೊಳೆದವು.
ಕರ್ಣಪಿಶಾಚಿಯು ಮೋಡಗಳ ಆಚೆ ಮರೆಯಾಯಿತು.

72 comments:

shridhar said...

ಕರ್ಣಪಿಶಾಚಿಯ ಸರಣಿ ಪ್ರಹಸನ ಬಹಳ ಚೆನ್ನಾಗಿ ಮೂಡಿ ಬಂದಿದೆ .. ರಾಜಕೀಯ ವ್ಯವಸ್ಥೆ .. ಕರ್ನಾಟಕದ ಅವಸ್ಥೆ .. ಅಬ್ಬಬ್ಬಾ
ಎಷ್ಟೊಂದು ವಿಷಯಗಳ ವಿಡಂಬನೆ ಮಾಡಿದ್ದೀರಿ .. ಕೊನೆಯಲ್ಲಿ ಬಂದ ಕೀಚಕ ಯಾರು ಎಂಬುದು ತಿಳಿಯಲಿಲ್ಲವಲ್ಲಾ ....
ಕುರುವಿನ ತರ ಕ್ಕೆ ಕ್ಕೆ ಕ್ಕೆ ಕ್ಕೆ ಎಂದು ಮಾತ್ರ ಹೇಳಬೇಡಿ :)

ಮನಮುಕ್ತಾ said...

ಕಾಕಾ.

ಮನೋರ೦ಜಕ ಸ೦ವಾದ..
ಕರ್ನಾಟಕದ ರಾಜಕೀಯದ ಬಗ್ಗೆ ಕೆಲವಷ್ಟೆ ಗೊತ್ತು..ತೀರಾ ಕೂಲ೦ಕುಶವಾಗಿ ತಿಳಿಯದು..

ಮನಸಿನಮನೆಯವನು said...

Eshtondu tilisidiri dhanyavada

ಚುಕ್ಕಿಚಿತ್ತಾರ said...

ಕಾಕ..
ಲಿಪಿಸ೦ಹಾರ ಪ್ರಹಸನ ತು೦ಬಾ ವಿಡ೦ಬನೆಯಿ೦ದ ಕೂಡಿದ್ದು ತಿಳಿವಿನೊ೦ದಿಗೆ ತೆಳು ನಗೆಗೂ ಕಾರಣವಾಯಿತು..

Anonymous said...

Idiotic

Anonymous said...

ಆಮೇಲೆ ಆ ಕರ್ಣ ಪಿಶಾಚಿ ದಾರವಾಡದಲ್ಲಿರುವ ದುರ್ನಾಥ ಅನ್ನುವವರ ಹತ್ತಿರ ಹೋಗಿ ಹೀಗೆ ಹೇಳಿತು

ಕ.ಪಿ.: ನೀವೇನ್ ಬರಿತಿರೊ ಗೊತ್ತಾಗಲ್ಲ ಸ್ವಾಮಿ
ಗ.ನಾ: (ಗರ್ವದಿಂದ)ನಾನು ಬರೆಯುವುದರಲ್ಲಿ ತ್ರಿಶಂಕು ಪದಗಳೆ ಜಾಸ್ತಿ. ನನಗೆ ತ್ರಿಶಂಕು ಅಂದ್ರೆ ಅಗಾಧ ಆಶಾ !
ಕ.ಪಿ: ಯಾಕೆ?
ಗ.ನಾ: ತ್ರಿಶಂಕು ಪದಗಳಿದ್ದರೆ ಯಾರಿಗೂ ಸರಿಯಾಗಿ ಅರ್ಥ ಆಗಲ್ಲ. ಯಾರಿಗೂ ಅರ್ಥ ಆಗದಿದ್ದರೇನೆ ಅದು ಮಹಾನ್ ಲೇಖನ. ಇದೇ ನನ್ನ ಸಿದ್ಧಾಂಥ(ಸಿದ್ಧಾಂತ ಅಲ್ಲ)
ಕ.ಪಿ: ಆಡ್ ಬಿದ್ದೆ ಬುದ್ದಿ. ನಿಮ್ ಸವಾಸ ಬ್ಯಾಡ. ನಾ ಬತ್ತಿನಿ

sunaath said...

ಶ್ರೀಧರ,
ಕನ್ನಡ ಲಿಪಿಯನ್ನು ಮೊಟಕುಗೊಳಿಸಲು ಪ್ರಯತ್ನಿಸುತ್ತಿರುವ ಆ ಭಯಂಕರ ಭಟ್ಟರು ಸಾಕಷ್ಟು ಪ್ರಸಿದ್ಧರೇ ಇದ್ದಾರೆ!

sunaath said...

ಮನಮುಕ್ತಾ,
ಕರ್ನಾಟಕದ ರಾಜಕೀಯದ ಬಗೆಗೆ ತಿಳಿಯದಿರುವದೇ ಒಳ್ಳೆಯದು!

V.R.BHAT said...

ಸ್ವಾಮೀ, ಪ್ರತಿಕ್ರಿಯೆಗಳಿಗೆ ಕೆಲವೊಮ್ಮೆ ಸ್ಪಂದಿಸದಿರುವುದೇ ಒಳಿತು ಅನಿಸುತ್ತದೆ. ’ ಲಿಪಿಸಂಹಾರ’ ಎಂಬ ಪ್ರಹಸನವನ್ನು ಗೀತರೂಪಕ ಮಾಡಿ ದೃಶ್ಯಕಾವ್ಯವಾಗಿಸಿದರೆ ಆಗಲಾದರೂ ಕೆಲವು ಜನರಿಗೆ ಅದರ ಅರ್ಥ ಆದೀತು ಎನಿಸುತ್ತದೆ. ನಿಮ್ಮ ಕೆಲಸ ನೀವು ಮುಂದುವರಿಸಿ, ಕ.ಪಿ.ಯ ಸಂದರ್ಶನದಲ್ಲಿ ಭಂಗ ಬೇಡ. ಈ ಮೇಲಿರುವ ಇಂಥಾದ್ದೆಲ್ಲ ಭಂಗವನ್ನು ನಾನೂ ಕೆಲಕಾಲ ಅನುಭವಿಸಿದ್ದೇನೆ, ಈಗ ಆ ಪಿಶಾಚಿ ಬಿಟ್ಟುಹೋಗಿದೆ.

ದಿನಕರ ಮೊಗೇರ said...

hha hha tumbaa chennaagi taaguvaa haage barediddiri sir...

sunaath said...

ಗುರುಪ್ರಸಾದರೆ,
ನನಗೆ ಹೊಳೆದದ್ದರಲ್ಲಿ ಎಷ್ಟು ಸರಿಯಾಗಿದೆಯೊ ನನಗೇ ತಿಳಿಯದು. ಅದನ್ನಂತೂ ನಿಮಗೆ ತಿಳಿಸಿದ್ದೇನೆ. ಹಂಸಕ್ಷೀರ ನ್ಯಾಯದಂತೆ ಪರೀಕ್ಷಿಸಿ ಸ್ವೀಕರಿಸಿರಿ!

sunaath said...

ವಿಜಯಶ್ರೀ,
ವಿನೋದ ಹಾಗು ವಿಚಾರದ ಶ್ರೇಯಸ್ಸೆಲ್ಲ ಕರ್ಣಪಿಶಾಚಿಗೆ ಸೇರಿದ್ದು!

sunaath said...

Anonymous,
ಧನ್ಯವಾದಗಳು.

sunaath said...

Anonymous,
Most welcome!

sunaath said...

ಭಟ್ಟರೆ,
ಪಿಶಾಚಿಗಳೂ ನಮ್ಮವರೇ ಅಲ್ಲವೆ!

sunaath said...

ದಿನಕರ,
ದಪ್ಪ ಚರ್ಮದ ಕಪಿಗಳಿಗೆ ಎಲ್ಲಿ ತಾಗೀತು?

Subrahmanya said...

ಕಾಕಾಶ್ರೀ,

ಹೊಡೆಯೋದೇನೋ ಸಕತ್ತಾಗೇ ಹೊಡೆದಿದ್ದೀರಿ, ಆದರೆ ಎಮ್ಮೆ ಚರ್ಮದವರಿಗೆ ತಗುಲುವುದು ಕಷ್ಟವೆ !. ಅದಕ್ಕೆ ಉದಾಹರಣೆ ಇಲ್ಲಿನ ಅನಾಮಧೇಯರ ಪ್ರತಿಕ್ರಿಯೆಯೇ ಸಾಕು.

ಸತ್ಯ ಒಪ್ಪಿಕೊಳ್ಳೋದು ಕಷ್ಟವೇ ಸರಿ ’ಹೊಸಲಿಪಿಕಾರ’ರಿಗೆ.

ಎಂತಹ ಸುಪುತ್ರನ ದರ್ಶನ ಮಾಡಿಸಿದಿರಿ ತಾವು?! ಧನ್ಯೋಸ್ಮಿ.

ಆನಂದ said...

ಕಾಕಾ,
ಪಾಪ ಕರ್ಣಪಿಶಾಚಿ!
ಕನ್ನಡಾಂಬೆಯ ಬಗ್ಗೆ ಕನಿಕರಪಡುವ ಹೊತ್ತಿಗೇ ಕೀಚಕರ ಪರಿಚಯ ನಗೆಯುಕ್ಕಿಸುತ್ತದೆ.
ಕಪಿಲಿಪಿ, ಕಚ ಕಚ.. ಹ್ಹ ಹ್ಹ. ಕುರು ಕೀಚಕರಿಗೆ ಚೆನ್ನಾಗಿ ಬಿಸಿ ಮುಟ್ಟಿಸಿದ್ದೀರಿ.

ಸದ್ಯದ ಪರಿಸ್ಥಿತಿಯ ವಿಡಂಬನೆ ಸೊಗಸಾಗಿದೆ.

sunaath said...

ಪುತ್ತರ್,
ಕನ್ನಡ ತಾಯಿಯ ಸುಪುತ್ರರಿಗೆ ಅವಳನ್ನು ಹಾಳು ಮಾಡುವ ಅಧಿಕಾರ ಇದ್ದೇ ಇದೆ!

sunaath said...

ಆನಂದ,
ಈ ವಿಕಟ ಪರಿಸ್ಥಿತಿ ದೂರವಾಗಲಿ ಎಂದು ಹಾರೈಸೋಣ.

ಶಾನಿ said...

ಕಿಚಕ್! ಕಿಚಕ್! ಕಿಚಕ್!

sunaath said...

ಶಾನಿ,
ಕೀಚ್! ಕೀಚ್! ಕೀಚ್!

ಅನಂತ್ ರಾಜ್ said...

ಕೀಚಕನ ಪ್ರವೇಶವಾದ ನ೦ತರ ಸ೦ದರ್ಶನ ಮತ್ತಷ್ಟು ರೋಚಕ ತಿರುವನ್ನು ಪಡೆಯಿತು. ಕೀಚ್! ಕೀಚ್! ಹಹ್ಹ..
ಸೊಗಸಾದ ವಿಡ೦ಬನೆ!

ಅನ೦ತ್

ಮಂಜುಳಾದೇವಿ said...

ಸುನಾಥ್ ರವರೆ,
ಸೊಗಸಾದ ವಿಡಂಬನೆ. ತುಂಬಾ ಇಷ್ಟ ಆಯ್ತು.

KalavathiMadhusudan said...

sunaath sir ravare, raajakiyada paryaayanamadinda kuudida vidambanaatmaka lekhana bahala sogasaagide.dhanyavaadagalu.

sunaath said...

ಅನಂತರಾಜರೆ,
ಕಿಚಕ್! ಕಿಚಕ್!

sunaath said...

ಕಲಾವತಿಯವರೆ,
ರಾಜಕೀಯದ ಪ್ರವೇಶವಾದಾಗ ರೋಚಕತೆ ಬಂದೇ ಬರುತ್ತದೆ!
ಧನ್ಯವಾದಗಳು.

ಗಿರೀಶ್.ಎಸ್ said...

ಕರ್ಣ ಪಿಚಾಚಿ ಸಂದರ್ಶನ ತುಂಬ ಚೆನ್ನಾಗಿ ಬಂದಿದೆ,
ಆದರೆ ಕೆಲವರಿಗೆ ಯಾಕೋ ಇಷ್ಟ ಆಗ್ತಿಲ್ಲ,ಅಂತವರು ಬೇನಾಮಿ ಹೆಸರಿನಲ್ಲಿ ಕಾಮೆಂಟ್ ಹಾಕ್ತಿದ್ದಾರೆ.

sunaath said...

ಗಿರೀಶರೆ,
ಲೋಕೋ ಭಿನ್ನ ರುಚಿಃ. ಕೆಲವರಿಗೆ ಗುಲಾಬಜಾಮೂನು ಸಿಹಿಯಾಗಿರುತ್ತದೆ. ಕೆಲವರಿಗೆ ಅದು ಕಹಿಯಾಗಿರಬಹುದು. ನಿಮಗೆ ಇಷ್ಟವಾಯಿತಲ್ಲ; ಅಷ್ಟೇ ನನಗೆ ಸಾಕು!

shivu.k said...

ಸುನಾಥ್ ಸರ್,

ಕರ್ಣ ಪಿಶಾಚಿಯ ಸರಣಿ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಎಲ್ಲಾ ವಿಚಾರಗಳನ್ನು ತೆಗೆದುಕೊಂಡು ಹಾಸ್ಯ ಮತ್ತು ವ್ಯಂಗ್ಯವನ್ನೊಳಗೊಂಡ ವಿಡಂಬನೆ ನಿಮ್ಮ ಬರಹ ಚೆನ್ನಾಗಿ ಮೂಡಿಬರುತ್ತಿದೆ..

Ashok.V.Shetty, Kodlady said...

ಸುನಾಥ್ ಸರ್,

ಕರ್ಣ ಪಿಶಾಚಿಯ ಸಂದರ್ಶನದ ಮೂಲಕ ಕನ್ನಡದ, ರಾಜಕಾರಣಿಗಳ ಅವ್ಯವಸ್ಥೆ ಹಾಗೂ ಇನ್ನೂ ಅನೇಕ ವಿಷಯಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿದ್ದಿರಿ, ತುಂಬಾ ಅನೇಕ ವಿಷಯಗಳು ಅಪರೋಕ್ಷವಾಗಿ ಹೊರಗೆ ಬಂದಿವೆ...ಉತ್ತಮ ಬರಹ...ಧನ್ಯವಾದಗಳು...

AntharangadaMaathugalu said...

ಕಾಕಾ..
ಕೀಚ್ ಕೀಚ್...!!! ಹ್ಹ ಹ್ಹ ಹ್ಹ.... ತುಂಬಾ ಚೆನ್ನಾಗಿದೆ...

ಶ್ಯಾಮಲ

sunaath said...

ಶಿವು,
ಕರ್ಣಪಿಶಾಚಿ ಸದ್ಯಕ್ಕೆ ಮೋಡಗಳಾಚೆಗೆ ಹಾರಿದೆ. ಮತ್ತೊಮ್ಮೆ ಬರಲಿಕ್ಕಿಲ್ಲ!

sunaath said...

ಅಶೋಕ,
ಕರ್ಣಪಿಶಾಚಿಗೆ ಕಂಡ ವಿಷಯಗಳು ಇಲ್ಲಿ ಬಂದಿವೆ. ಕಾಣದ ವಿಷಯಗಳು ಎಷ್ಟಿವೆಯೊ?!

sunaath said...

ಶ್ಯಾಮಲಾ,
ಕಿಚಕ್, ಕಿಚಕ್!

Unknown said...

ಕಾಕಾ,
ಕಿಚಕ್ ಕಿಚಕ್... ಮುನ್ನೂರರವತ್ತೈದು ಸಲ ಕಿಚಕ್.
ಜೊತೆಗೆ ಯುಗಾದಿಯ ಶುಭಾಶಯಗಳೂ ಕೂಡಾ.

sunaath said...

ಜ್ಯೋತಿ,
ಯುಗಾದಿಯ ಶುಭಾಶಯಗಳೊಂದಿಗೆ ಮುನ್ನೂರು ಅರುವತ್ತೈದು ಸಲ ನಿಮಗೆ ಕೀಚ್!ಕೀಚ್!

sritri said...

ಕಿಕಿಕಿ....ಕಿಕಿಕಿ...ಕಿಕ್ಕಿಕ್ಕಿ.. (ಹುಷಾರ್!!ಇದು ಮಾತಲ್ಲ ನನ್ನ ನಗು)

ಶ್ರೀನಿವಾಸ ಮ. ಕಟ್ಟಿ said...

ವಿಕಟ ಹಾಸ್ಯದ ಕರ್ಣ ಪಿಶಾಚಿಯ ಸಂದರ್ಶನಗಳು ಚೆನ್ನಾಗಿವೆ. ಓದಿದಾಗ ತುಂಬ ವಿಷಾದವೂ ಆಗಿ ಮನಸ್ಸು ಖಿನ್ನವಾಗುತ್ತದೆ.

sunaath said...

ತ್ರಿವೇಣಿ,
ನಿಮ್ಮನ್ನು ನಗಿಸಿದ ಸಂತೋಷ ಕರ್ಣಪಿಶಾಚಿಗಿದೆ!

sunaath said...

ಕಟ್ಟಿಯವರೆ,
ಕಾಲಾಯ ತಸ್ಮೈ ನಮಃ!

ಜಲನಯನ said...

ಸುನಾಥಣ್ಣ ಹಾಸ್ಯದ ಹೊದಿಕೆಯ ವೈಚಾರಿಕತೆಯತ್ತ ನೂಕುವ ಅರ್ಥಪೂರ್ಣ ಲೇಖನ ಸಲ್ಯೂಟ್ ನಿಮಗೆ.,...

sunaath said...

ಜಲನಯನ,
ನಾವು ಸಹಪ್ರಯಾಣಿಕರು, ಅಲ್ಲವೆ!

Anonymous said...

ದುರ್ನಾಥ: ತ್ರಿಶಂಕು ಪದಗಳಿದ್ದರೆ ಯಾರಿಗೂ ಸರಿಯಾಗಿ ಅರ್ಥ ಆಗಲ್ಲ. ಯಾರಿಗೂ ಅರ್ಥ ಆಗದಿದ್ದರೇನೆ ಅದು ಮಹಾನ್ ಲೇಖನ. ಇದೇ ನನ್ನ ಸಿದ್ಧಾಂಥ(ಸಿದ್ಧಾಂತ ಅಲ್ಲ)

ಕ.ಪಿ: ಗುರುಗಳೆ, ಅದು ಸಿದ್ಧಾಂತ, ಸಿದ್ದಾಂಥ ಅಲ್ಲ

ದುರ್ನಾಥ: (ಸಿಟ್ಟಿನಿಂದ ಅಲ್ಲ..ಕೋಪದಿಂದ) ಏ! ಕ.ಪಿ. ಮಹಾಪ್ರಾಣ ಅಧಿಖ್ ಉಪಯೋಗಿಸುವುದರಿಂದ ಆಯಸ್ಸು ಅಧಿಖವಾಗುತ್ತದೆಯಲ್ಲದೆ ಅದು ನಮ್ಮ ಸಂಸ್ಕೃ'ಥಿ'ಯ ಸಂಕೇ'ಥ'.

ಕ.ಪಿ: ಅಲ್ರಿ, ನಮ್ ಅಳ್ಳಿನಾಗೆ ರಾಗಿ ಮುದ್ದೆ ಉಪ್ಪೇಸ್ರು ತಿನ್ಕ್ಂಡ್ ಜಲ್ಮದಲ್ಲಿ ಒಂದ್ ಮಾಪಿರಾಣ ಮಾತಾಡ್ದೆ ನೂರ್ ನೂರು ವರ್ಸ ಬದುಕವ್ರಲ್ಲಾ ಸಿವನೆ? ಇದಕ್ಕೆ ಏನಂತೀರ

ದುರ್ನಾಥ: ತಕ್ಷಣ ನಿರ್ಗಮಿಸು( ತೊಲಗಾಚೆ ಅನ್ನಕ್ಕೆ)
ಕ.ಪಿ.: ಯೋನ್ ಯೋಳುದ್ರೊ ಗೊತ್ತಾಗಕ್ಕಿಲ್ಲ ಸೊಮಿ. ಸರಿ ನಾ ಬತ್ತಿನಿ.

Manjunatha Kollegala said...

ಹಹ್ಹ...

"ಕಾಲಮಾನಕ್ಕಿಂತ ಜಾಯಮಾನ ಮುಖ್ಯ"
"ಒಂದು ಕುಚಕ್ಕೆ ಒಂದುನೂರರಂತೆ ಎರಡುನೂರು ಛಡಿ ಏಟುಗಳು"

ನೆನೆಸಿಕೊಂಡು ನೆನೆಸಿಕೊಂಡು ನಗುತ್ತಿದ್ದೇನೆ. ಹುಚ್ಚು ವಾದಗಳಿಗೆ ಹುಚ್ಚು ಹಾಸ್ಯವೇ ಉತ್ತರ. ಅನೇಕ ಮರಿಕೀಚಕರೊಡನೆ ಈ ವಿಷಯದಲ್ಲಿ ವಾದ ಮಾಡಿ ಮಾಡಿ ನನ್ನ ಗಂಟಲು ಹರಿದುಹೋಗಿದೆ.

ಸಕತ್ತಾಗಿದೆ ಸಂದರ್ಶನ. ನೀವು ಪಿಶಾಚಿಯನ್ನು ಮಾಯಮಾಡುವುದರ ಬದಲು ಅದು ಆ ಕೀಚಕನಮೇಲೇ ನೆಗೆದುಬಿದ್ದು ಸಾಯುವಂತೆ ಮಾಡಬೇಕಿತ್ತು ;) ;)

sunaath said...

Anonymusರೆ,
ಸಕತ್ತಾಗಿದೆ ನಿಮ್ಮ ಪ್ರತಿಕ್ರಿಯೆ. ತುಂಬಾ ನಗಿಸುತ್ತೀರಪ್ಪಾ! ಆದರೆ ಒಂದು ವಿಷಯದ ಬಗೆಗೆ ಗಂಭೀರವಾಗಿ ವಿಚಾರ ಮಾಡಿರಿ. ನಿಮ್ಮ ಅಳ್ಳೀ ಜನ ಮಹಾಪಿರಾಣದ ಉಚ್ಛಾರ ಮಾಡದೇ ಅಳ್ಳೀಲೆ ಕೊಳೀತಿರಬೇಕೊ,ಅಥ್ವಾ ದೇಶ ವಿದೇಶಗಳಲ್ಲಿ ನಾಗರಿಕ ಪ್ರತಿಷ್ಠೆ ಪಡೆಯಬೇಕೊ?
ಸುಸಂಸ್ಕೃತ ಭಾಷೆಯನ್ನು ಹಳ್ಳಿಗರಿಗೆ ಕಲಿಸುವದರ ಹಿಂದೆ ದುರುದ್ದೇಶ ಇದೆ ಅಂತ ನಿಮ್ಮ ‘ಕುರು’ಗಳು ತಮ್ಮ ಪುಸ್ತಕದ ಮೊದಲ ಸಾಲಿನಲ್ಲಿ ಸಾರಿದ್ದಾರಲ್ಲ, ಅದು ಭಾಷೆಗೆ ಅಷ್ಟೇ ಅನ್ವಯವಾಗುತ್ತದೆಯೊ ಅಥವಾ ಗಣಿತ ಹಾಗು ವಿಜ್ಞಾನ ಶಾಸ್ತ್ರಗಳಿಗೂ ಅನ್ವಯವಾಗುವುದೊ? ಹೀಗೆ ನಿಮ್ಮನ್ನು ನಂಬಿಸುತ್ತಿರುದರ ಹಿಂದೆ ನಿಮ್ಮ ‘ಕುರು’ಗಳಿಗೇ ಒಂದು ದುರುದ್ದೇಶ ಇರುವದನ್ನು ನೀವು ಅರಿಯದೇ ಹೋದಿರಲ್ಲಾ!ಕುರುಗಳ ಹಿಂದೆ ಕುರಿಗಳಂತೆ ಹೋಗುವದೇ ನಿಮ್ಮ ಜಾಯಮಾನವಾಯಿತಲ್ಲಾ!

sunaath said...

ಮಂಜುನಾಥ,
ಕೀಚಕರು ಇರುವವರೆಗೆ ಕರ್ಣಪಿಶಾಚಿಯೂ ಇರಲೇ ಬೇಕಲ್ಲವೆ!

ಬಾಲು said...

ಸುನಾಥರೆ.

ತಾವು ಕುರು ಗಳ ಸತ್ಯ ವನ್ನು ಬಹಿರಂಗ ಪಡಿಸಿರುವುದರಿಂದ "ಕುರು ಹಿಂಬಾಲಕರು" ತಮ್ಮ ಮೇಲೆ ಅದೆಷ್ಟೋ ಅಕ್ಷೋಹಿಣಿ ಸೈನ್ಯ ದೊಂದಿಗೆ (ಎಷ್ಟು ಅಂತ ಗೊತ್ತಾಗಿಲ್ಲ, ಅವರ ಸಂಖ್ಯಾ ಪದ್ಧತಿ ನಮ್ಮ ಭಾಷೆಯಲ್ಲಿ ಇರಲಿಲ್ಲ ನೋಡಿ) ನಿಮ್ಮ ಮೇಲೆ ಎರಗುವರೆಂದು ಗುಪ್ತ ದಳ ವರದಿ ಮಾಡಿದೆ. (ಕಿಷ್ಕಿಂದೆ ಇಂದ ಆಮದು ಆಗಿರಕಂತ ಕೆಲವು ವಾನರರು ಎಗಾಗರೇ ಪುಂಡು ದಾಳಿ ಶುರು ಮಾಡಿದ್ದಾರೆ).

ಕರ್ಣ ಪಿಚಾಚಿಯು ವೇದೆ ಗೌಡರು, ಚಡ್ಯುರಪ್ಪ ಮುಂತಾದ ಎಲ್ಲ ನಾಯಕರನ್ನು ಭೇಟಿ (ಅಥವಾ ಸಂದರ್ಶನ) ಮಾಡಿರುವುದರಿಂದ ಅದರ ಮಾನಸಿಕ ಶಕ್ತಿಯು ಅತ್ಯಂತ ಅಗಾದ ವಾದುದು ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಆದುದರಿಂದ ಕಪಿ ಗೆ ಮುಂದೆ ಸ್ವರ್ಗ ಸಿಗಲೆಬೇಕೆಂದು ಪ್ರಾರ್ಥಿಸುವೆ. (ಕನಿಷ್ಠ ತ್ರಿಶಂಕು ಸ್ವರ್ಗ ವಾದರೂ ಆದೀತು )

sunaath said...

ಬಾಲು,
ನಿಮ್ಮೆಲ್ಲರ ಶುಭಾಶಯಗಳಿದ್ದಾಗ, ಕರ್ಣಪಿಶಾಚಿಯ ಸ್ವರ್ಗಾರೋಹಣವು ಶೀಘ್ರದಲ್ಲಿಯೇ ಫಲಿಸುವದು!

kanasu said...

kaa kaa...
huttu habbada shubhashayagalu...

Jayalaxmi said...

ಹುಟ್ಟು ಹಬ್ಬದ ಶುಭಾಶಯಗಳು ಕಾಕಾ. :) :)

Anonymous said...

ಶುಭಾಶಯಗಳು ಸರ್..

sunaath said...

ಕನಸು,
ವಿಸ್ಮಯಚಕಿತನಾಗುವದು ನನ್ನ ಸರದಿ!
ನಿಮಗೆ ಅನೇಕ ಧನ್ಯವಾದಗಳು.

sunaath said...

ಜಯಲಕ್ಷ್ಮಿ ಮೇಡಮ್,
‘ಆಡಾಡ್ತಾ ಆಯುಷ್ಯ, ನೋಡ ನೋಡ್ತಾ ದಿನಮಾನಾ
ನಡದsದ ನಡದSದ ನಡದSದ
ಕಾಣsದ ಕಡಲ್ಹಾದಿ ಹಿಡದsದ’ (-ಬೇಂದ್ರೆ)

ಧನ್ಯವಾದಗಳು.

sunaath said...

ರಾಘವೇಂದ್ರರೆ,
ಪುನರಪಿ ರಜನೀ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತ:
ಕಾಲ: ಕ್ರೀಡತಿ ಗಚ್ಛತ್ಯಾಯು:
ಹುಟ್ಟು ಹಬ್ಬಗಳು ಬರತೇ ಇರುವವು!
ಧನ್ಯವಾದಗಳು.

ಮನಮುಕ್ತಾ said...

ಸುನಾಥ್ ಕಾಕಾ,
ಜನ್ಮದಿನದ ಶುಭಾಶಯಗಳು.

hamsanandi said...

ಕರ್ಣಪಿಶಾಚಿಯ ಮಾತುಗಳನ್ನು ಕೇಳಿ, ಕರ್ಣಾನಂದವಾಯ್ತು ;)

sunaath said...

ಮನಮುಕ್ತಾ,
ನಿಮಗೆ ಧನ್ಯವಾದಗಳು.

sunaath said...

ಹಂಸಾನಂದಿಯವರೆ,
ಕರ್ಣಪಿಶಾಚಿಯು ನಿಮಗೆ ಧನ್ಯವಾದಗಳನ್ನು ಹೇಳಿದೆ!

Anonymous said...

ಹಂಸಾನಂದಿ,
" ಕರ್ಣಪಿಶಾಚಿಯ ಮಾತುಗಳನ್ನು ಕೇಳಿ, ಕರ್ಣಾನಂದವಾಯ್ತು ;)"

ಯಾಕೆ ಕರ್ಣಗೋಚರವಾಗಲಿಲ್ಲವೆ?

-ಅಗೋಚರ

prabhamani nagaraja said...

ಕರ್ಣಪಿಶಾಚಿಯ ಕಲ್ಪನೆಯೇ ಬಹಳ ಚೆನ್ನಾಗಿದೆ. ಅದ್ಭುತ ವಿಡ೦ಬನೆ! ಅಭಿನಂದನೆಗಳು ಸರ್. ನಗುವಿನೊ೦ದಿಗೆ ಚಿ೦ತಿಸುವ೦ತೆ ಪ್ರೇರೇಪಿಸುವ ಲೇಖನ
ನೀಡಿದ್ದಕ್ಕಾಗಿ ಧನ್ಯವಾದಗಳು.

sunaath said...

ಪ್ರಭಾಮಣಿಯವರೆ,
ನಿಮಗೂ ಧನ್ಯವಾದಗಳು.

Anonymous said...

"ಅಳ್ಳೀಲೆ ಕೊಳೀತಿರಬೇಕೊ,ಅಥ್ವಾ ದೇಶ ವಿದೇಶಗಳಲ್ಲಿ ನಾಗರಿಕ ಪ್ರತಿಷ್ಠೆ ಪಡೆಯಬೇಕೊ"

ಹಾಗಾದರೆ ಅಳ್ಳಿಲೇ ಕೂತಿರೋದು ಕೀಳರಿಮೆಯೇ? ಅಣ್ಣಾವ್ರ ’ಬಂಗಾರದ ಮನುಸ್ಯ’ ಸಿನಿಮಾ ನೋಡಿಕೊಂಡು ಎಶ್ಟೊ ಪಟ್ಟಣದ ಮಂದಿ ಅಳ್ಳಿಗೆ ಹೋಗಿ ಉಳುಮೆ ಸುರು ಮಾಡಿದ್ದರು.ಗೊತ್ತಾ?

ಹು, ಆಯ ಅಳ್ಳಿಲೆ ಅವರು ಏಳಿಗೆ ಆಗಬೇಕು. ಅದಕ್ಕೆ ಬೇಕಾದ ಜಗತ್ತಿನ ಎಲ್ಲ ಅರಿಮೆ ಅವರ ನುಡಿಯಲ್ಲೇ ಅಲ್ಲೆ ಸಿಗುವಂತಾಗಬೇಕು.

ಅಳ್ಳಿ ಅಂದ್ರೆ ಎಶ್ಟು ಕೀಳರಿಮೆ ನಿಮ್ಮಲ್ಲಿ ತುಂಬ್ಕೊಂಡಿದೆ ಅಂಬೋದು ನಿಮ್ಮ ಈ ಕಮೆಂಟಿನಲ್ಲೇ ಗೊತ್ತಾಗುತ್ತೆ.

Anonymous said...

Dude,

First correct yourself. You are writing ಕೆೞಗೆ as ಕೆಳಗೆ.

First practice before you preach.

-kpb

ಶಿವಪ್ರಕಾಶ್ said...

ಕಚ ಕಚ.. ಕಿಚ ಕಿಚ... (ಒಳ್ಳೆಯ ಲಿಪಿಸಂಹಾರದ ಪಯಣ...)

sunaath said...

ಶಿವಪ್ರಕಾಶ,
ಕಿಚಕ್! ಕಿಚಕ್!!

SM Katti said...

Why have you not written any thing for such a long time ? There is some problem in my laptop to write in Kannada. It is not transliterating prperly. For example to write Sallapa in Kannada it writing ಸಲ್ಲಾಪ.I do'nt know how to correct it. If u know, pl guide me.

sunaath said...

ಕಟ್ಟಿಯವರೆ,
ಇಂಟರ‍್ನೆಟ್ ಸಮಸ್ಯೆ ಹಾಗು ಗಣಕಯಂತ್ರದ ಸಮಸ್ಯೆ ಕೆಲಕಾಲ ಕಾಡಿತು. ಇದೀಗ ಸಮಾರಂಭಗಳ ಕಾಲ ಪ್ರಾರಂಭವಾಗಿದೆ! ಹೀಗಾಗಿ ಬ್ಲಾ^ಗ್ ಹತ್ತಿರ ಹಾಯಲೇ ಪುರಸೊತ್ತು ಇಲ್ಲದಂತಾಗಿದೆ.
ಗೂಗಲ್ ಟ್ರಾನ್ಸಲಿಟರೇಶನ್^ವನ್ನು ನಾನು ಪ್ರಯತ್ನಿಸಿಲ್ಲ. ಅದರ ಬಗೆಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ.

ಸೀತಾರಾಮ. ಕೆ. / SITARAM.K said...

lipi badalaayisuttiruva maisuru bhattaru yaaru endu nanage innu gottaagalilla.

sunaath said...

ಸೀತಾರಾಮರೆ,
ಕನ್ನಡ ಲಿಪಿಯನ್ನು ಬದಲಾಯಿಸಬೇಕು ಎನ್ನುವ ಹುನ್ನಾರವನ್ನು ಇತ್ತೀಚಿನ ವರ್ಷಗಳಲ್ಲಿ ಶ್ರೀ ಶಂಕರ ಭಟ್ಟರು ನಡೆಸಿದ್ದಾರೆ. ಅವರ ಕೆಲವು ಪುಸ್ತಕಗಳು:
ಕನ್ನಡ ಬರಹ
ಕನ್ನಡ ಬರಹವನ್ನು ಬದಲಾಯಿಸೋಣ

Harisha - ಹರೀಶ said...

ಕಾಕಾ! ಕೀಚಕ ಕಚಕ್! ಕೆಕ್ಕೆಕ್ಕೆ :D

ನನಗೂ‌ ಮಂಜುನಾಥ ಕೊಳ್ಳೇಗಾಲ ಅವರು ಹೇಳಿದಂತೆ ಎರಡು ಮೂರು ಮರಿಕೀಚಕರು ಆಗಾಗ ಸಿಕ್ಕಿದ್ದಾರೆ. ಪಾಪ ಅವು ಇಲ್ಲೂ ಇರಬಹುದು.. ಆ ನಿಜಪಿಶಾಚಿಗಳಿಗೆ ಹೆಸರು ಹಾಕಲು ಹೆದರಿಕೆ ಅಷ್ಟೇ!

sunaath said...

ಹರೀಶ,
ಕರ್ನಾಟಕದಲ್ಲಿ ಕೀಚಕರಿಗೆಲ್ಲಿಯ ಕೊರತೆ? Thank God, ಇಲ್ಲಿ ಭೀಮಸೇನರಿಗೂ ಕೊರತೆ ಇಲ್ಲ! ಕೀಚ್! ಕೀಚ್!!