Wednesday, June 26, 2013

ಭಾರತದ ನಾರೀಪಾಡು---ನಾಯೀಪಾಡು

ನಮ್ಮ ಭಾರತ ದೇಶವನ್ನು ನಾವು ‘ಪುಣ್ಯಭೂಮಿ’ ಎಂದು ಕರೆಯುತ್ತೇವೆ. ಇದರಂತಹ ಮಿಥ್ಯೆ ಇನ್ನೊಂದಿಲ್ಲ. ಇದು ಪಾಪಭೂಮಿ,ಇದು ಪಾಪಿಷ್ಠರ ಭೂಮಿ. ಯಾಕೆಂದರೆ ಇಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯವು ತಡೆಯಿಲ್ಲದೆ ನಡೆದಿದೆ. ಸರಕಾರ ಹಾಗು ಸಮಾಜ ಇವೆರಡೂ ಈ ಅಪರಾಧದಲ್ಲಿ ಸಮಪಾಲು ಹೊಂದಿವೆ. ೨೦೧೩ರಲ್ಲಿ ಕೇಂದ್ರ ಸರಕಾರವು ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಉದ್ದೇಶದಿಂದ ೨೦೦೫ರ ಅಪರಾಧೀ ಶಾಸನಕ್ಕೆ ಬದಲಾವಣೆಗಳನ್ನು ತಂದಿತು. ಆದರೆ ಅದರಿಂದ ಏನೇನೂ ಪ್ರಯೋಜನವಾಗಿಲ್ಲ. ಇದಕ್ಕೆ ಕಾರಣ ಸ್ಪಷ್ಟವಿದೆ. ಇದೊಂದು ನಿರರ್ಥಕ ಶಾಸನವಾಗಿದೆ ಹಾಗು ಸ್ತ್ರೀದೌರ್ಜನ್ಯವನ್ನು ತಡೆಗಟ್ಟಲು ಅಸಮರ್ಥವಾದ ಶಾಸನವಾಗಿದೆ. ಈ ಶಾಸನವನ್ನು ಮಾಡಿದ ನಮ್ಮ ಜನಪ್ರತಿನಿಧಿಗಳು ಸಂಕುಚಿತ ಮನಸ್ಕರಾಗಿದ್ದಾರೆ. ಅವರಿನ್ನೂ ಸಾಂಪ್ರದಾಯಕ ಮನೋಧರ್ಮದಿಂದ ಹೊರಬಂದಿಲ್ಲ. ಇವರಲ್ಲಿ ಯಾರೊಬ್ಬರೂ ಸ್ತ್ರೀಪರವಾದ ಆಧುನಿಕ ಹಾಗು ವಿಶಾಲ ಮನೋಭಾವನೆಯನ್ನು ಹೊಂದಿಲ್ಲ!

ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಇದು ಬಹುಸ್ಪಷ್ಟವಾಗಿ ವ್ಯಕ್ತವಾಯಿತು. ಹೆಣ್ಣುಮಕ್ಕಳನ್ನು ಹಿಂಬಾಲಿಸದ ಗಂಡಸರು ಇದ್ದಾರೆಯೇ ಎಂದು ಕೇಳಿದ ಶಾಸಕರೊಬ್ಬರು ತಮ್ಮ ನೈತಿಕ ಮಟ್ಟವನ್ನು ಮೆರೆದರು ಹಾಗು ಚರ್ಚೆಯ ಗಂಭೀರತೆಯನ್ನೇ ಹಾಳು ಮಾಡಿದರು. ಹೆಣ್ಣುಮಕ್ಕಳು ಉದ್ರೇಕಕಾರಿ ಉಡುಪನ್ನು ಧರಿಸಬಾರದೆಂದು ಕೆಲವು ಜನಪ್ರತಿನಿಧಿಗಳು ಸಾರಿದರು. ಮೂರು ವರ್ಷದ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುವಾಗ, ಶಿಶುವೇಶ್ಯೆಯರ ಹಿಂಡೇ ಈ ದೇಶದಲ್ಲಿ ಇರುವಾಗ ಈ ಹೇಳಿಕೆಗೆ ಅರ್ಥವಿದೆಯೆ? ಇನ್ನು ಖಾಪ ಪಂಚಾಯತಗಳ ಬಗೆಗೆ ಹಾಗು ಕೆಲವೊಂದು ಧಾರ್ಮಿಕ ಸಮುದಾಯಗಳ ಪಂಚಾಯತಿಗಳ ಬಗೆಗೆ ಹೇಳುವುದೇ ಬೇಡ. ಇವಿನ್ನೂ ಹದಿನೇಳನೆಯ ಶತಮಾನದಲ್ಲಿಯೇ ಬದುಕುತ್ತಿವೆ!

ಇಷ್ಟೆಲ್ಲ ಚರ್ಚೆಯ ಬಳಿಕ ಅಂಗೀಕೃತಗೊಂಡ ವಿಧೇಯಕವಾದರೂ ಎಂತಹದು? ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದಂತಾಯಿತೇ ಹೊರತು, ಹೆಣ್ಣುಮಕ್ಕಳಿಗೆ ರಕ್ಷಣೆ ಮಾತ್ರ ದೊರೆಯಲಿಲ್ಲ.

‘ನಮ್ಮಲ್ಲಿ ಸಾಕಷ್ಟು ಶಾಸನಗಳಿವೆ, ಆದರೆ ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ’ ಎನ್ನುವುದು ಕೆಲವರ ಅನುರಣಿಸುವ ಅಭಿಪ್ರಾಯವಾಗಿದೆ. ಆದರೆ ಈ ಎಲ್ಲ ಶಾಸನಗಳು ‘ಸರಿಯಾದ ಶಾಸನಗಳೇ?’ ಎನ್ನುವುದಕ್ಕೆ ಅವರಲ್ಲಿ ಉತ್ತರವಿಲ್ಲ. ಇತ್ತೀಚಿನ ಶಾಸನವೂ ಅದೇ ರೀತಿಯದಾಗಿದೆ. ಹೆಣ್ಣು ಮಕ್ಕಳಿಗೆ ದೌರ್ಜನ್ಯದ ವಿರುದ್ಧ ಸರಿಯಾದ ರಕ್ಷಣೆಯನ್ನು ನೀಡುವುದು ನಮ್ಮ ಶಾಸಕರ ಹಾಗು ನಮ್ಮ ಸಮಾಜದ ಗಂಭೀರ ಉದ್ದೇಶವಾಗಿದ್ದರೆ, ಈ ಕೆಳಗಿನ ಅಂಶಗಳನ್ನು ಶಾಸನದಲ್ಲಿ ಅಳವಡಿಸಬೇಕಾಗಿತ್ತು  ಎನ್ನುವುದು ನನ್ನ ಅನಿಸಿಕೆ.

(೧) ‘ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳು ಪೋಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಲು ಹಿಂಜರಿಯುತ್ತಾಳೆ. ಅಥವಾ ಅವಳು ನೀಡಿದ ದೂರನ್ನು ಪೋಲೀಸರು ದಾಖಲಿಸಿಕೊಳ್ಳುವುದಿಲ್ಲ’ ಎನ್ನುವುದು ಒಂದು ಸಾಮಾನ್ಯವಾದ ತಕರಾರು ಆಗಿದೆ. ಆದುದರಿಂದ ದೂರು ದಾಖಲಿಸಲು ಪ್ರತಿಯೊಂದು ತಾಲೂಕಾ ಕೇಂದ್ರದಲ್ಲಿ ಒಂದು ಮಹಿಳಾ ಕೇಂದ್ರವಿರಬೇಕು. ಈ ಕೇಂದ್ರದ ಮುಖ್ಯಸ್ಥಳಿಗೆ ಅರೆ-ನ್ಯಾಯಾಧೀಶರ ಸವಲತ್ತುಗಳು ಇರಬೇಕು. ದೂರನ್ನು ದಾಖಲಿಸಿಕೊಂಡ ತಕ್ಷಣ, ಈ ಮುಖ್ಯಸ್ಥಳು ಸಂಬಂಧಿಸಿದ ಪೋಲೀಸ್ ಠಾಣೆಗೆ ದೂರನ್ನು ವರ್ಗಾಯಿಸಬೇಕು ಹಾಗು ಸಂಬಂಧಿಸಿದ ಆರೋಗ್ಯಾಧಿಕಾರಿಗೆ ದೂರು ನೀಡಿದವಳ ತಕ್ಷಣದ ವೈದ್ಯಕೀಯ ಪರೀಕ್ಷೆಗಾಗಿ ಆದೇಶ ನೀಡಬೇಕು.

(೨) ಸಂಬಂಧಿಸಿದ ಪೋಲೀಸ್ ಠಾಣೆಯು ೧೫ ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಹಾಗು ಮಹಿಳಾಕೇಂದ್ರಕ್ಕೆ ಪ್ರತಿ ವಾರವೂ ಪ್ರಗತಿಯ ವರದಿಯನ್ನು ನೀಡಬೇಕು. ಇದಕ್ಕೆ ತಪ್ಪಿದ ಪೋಲೀಸ್ ಸಿಬ್ಬಂದಿಯನ್ನು ಕೆಲಸದಿಂದ ವಿಲಂಬಿತಗೊಳಿಸಬೇಕು.

(೩)  ದೂರುದಾರಳು ಓರ್ವ ವ್ಯಕ್ತಿಯನ್ನು ಅತ್ಯಾಚಾರದ ಅಪರಾಧಿ ಎಂದು ಬೊಟ್ಟು ಮಾಡಿದ ಬಳಿಕ,  ತಾನು ಅಪರಾಧಿ ಅಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು ಆರೋಪಿತನ ಮೇಲೆ ಹೊರಿಸಬೇಕು. ಅಪರಾಧ ಸಾಬೀತುಗೊಳಿಸಲು ಯಾವುದೇ ಸಾಕ್ಷಿಯ ಅವಶ್ಯಕತೆ ಇರಕೂಡದು. DNA ಪರೀಕ್ಷೆಯಲ್ಲಿ ಆತ ನಿರಪರಾಧಿ ಎಂದು ಸಾಬೀತಾದರೆ ಮಾತ್ರ, ಆತನನ್ನು ಮುಕ್ತಗೊಳಿಸಬಹುದು. ದೌರ್ಜನ್ಯದ ಕ್ರಿಯೆಯಲ್ಲಿ ಸಹಾಯ ನೀಡಿದವನನ್ನೂ ಸಹ ಅದೇ ಪ್ರಮಾಣದ ಅಪರಾಧಿ ಎಂದು ಪರಿಗಣಿಸಬೇಕು.

(೪) ಪೋಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಒಂದು ತಿಂಗಳಿನೊಳಗಾಗಿ ನ್ಯಾಯದಾನದ ಪ್ರಕ್ರಿಯೆ ಮುಗಿಯಬೇಕು. ಇಲ್ಲವಾದರೆ, ಆರೋಪಿಯ ಬೆಂಬಲಿಗರು ನ್ಯಾಯವನ್ನು ತಿರುಚುವ ಪ್ರಯತ್ನ ಮಾಡಬಹುದು. ಇದಕ್ಕಾಗಿ ಕ್ಷಿಪ್ರ-ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

(೫) ಅತ್ಯಾಚಾರಿಗೆ bobbit ಶಿಕ್ಷೆಯನ್ನು ವಿಧಿಸಬೇಕು.

(೬) ದೌರ್ಜನ್ಯಕ್ಕೊಳಗಾದವಳ ಹೆಸರು, ದೆಸೆಗಳನ್ನು ಗುಪ್ತವಾಗಿ ಇರಿಸಬೇಕು. ಇದಕ್ಕೆ ಭಂಗ ತಂದಂತಹ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಬೇಕು.

ಅತ್ಯಾಚಾರದ ಪ್ರಕರಣಗಳಲ್ಲದೆ, ಸ್ತ್ರೀಯರನ್ನು ಅವಮಾನಿಸುವ, ಹಿಂಸಿಸುವ ಪ್ರಕರಣಗಳೂ ಅನೇಕವಿವೆ. ಕೆಲವೊಂದು ಸಲ ಪೋಲೀಸರೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವದನ್ನು ದೂರದರ್ಶನದಲ್ಲಿ ನಾವೆಲ್ಲರೂ ನೋಡಿದ್ದೇವೆ. ಇಂತಹ ಪ್ರಕರಣಗಳ ಬಗೆಗೆ ಮಹಿಳಾಕೇಂದ್ರಗಳಲ್ಲಿ ದೂರು ನೀಡುವ ಅವಕಾಶವಿರಬೇಕು. ಈ ಮಹಿಳಾಕೇಂದ್ರಗಳ ಮುಖ್ಯಸ್ಥರಿಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವ ಅಧಿಕಾರವೂ ಇರಬೇಕು.

ಇದೆಲ್ಲ ಶಾಸನದ ಮಾತಾಯಿತು. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಸಾಮಾಜಿಕ ಕಾರಣಗಳೂ ಇವೆ. ಅವುಗಳನ್ನು ಈ ರೀತಿಯಲ್ಲಿ ಪಟ್ಟಿ ಮಾಡಬಹುದು:

(೧) ಭಾರತೀಯ ಸಮಾಜವು ಸ್ತ್ರೀವಿರೋಧಿ ಸಮಾಜವಾಗಿದೆ. ಹೆಣ್ಣುಮಗಳು ಗಂಡನ property, ಅವಳು  ಮನೆಯಲ್ಲಿ ದುಡಿಯುವ ಕೆಲಸಗಿತ್ತಿ ಹಾಗು ನಿರಾಕರಣೆಯ ಅಧಿಕಾರವಿಲ್ಲದ, ಪುಕ್ಕಟೆ ದೊರೆಯುವ ಭೋಗವಸ್ತು ಎಂದೇ ಈವರೆಗೂ ಪರಿಗಣಿತಳಾಗಿದ್ದಾಳೆ. ಹೊರಗೆ ದುಡಿದು ಹಣ ಸಂಪಾದಿಸುವ ಸ್ತ್ರೀಯರೂ ಸಹ ಈ ಮಾತಿಗೆ ಹೊರತಾಗಿಲ್ಲ! ಇದು ದೀರ್ಘಕಾಲದಿಂದಲೂ ನಡೆದು ಬರುತ್ತಿರುವ ಭಾರತೀಯ ಪರಂಪರೆ. ಇದಕ್ಕೆ ನಮ್ಮ ಪುರಾಣ, ‘ಪುಣ್ಯಕಥೆ’ಗಳಲ್ಲಿಯೇ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಗಮನಿಸೋಣ:

ಸತ್ಯವಂತನೆಂದು ಖ್ಯಾತನಾದ ಹರಿಶ್ಚಂದ್ರ ಮಹಾರಾಜನು ‘ತನ್ನ ಸತ್ಯ’ವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಹೆಂಡತಿ ತಾರಾಮತಿಯನ್ನು ಬಿಕರಿ ಮಾಡಿದ! ‘ಧರ್ಮರಾಯ’ನೆಂದು ಖ್ಯಾತಿವೆತ್ತ ಮಹಾರಾಜನು ಜೂಜಾಟದಲ್ಲಿ ತನ್ನ ಹೆಂಡತಿಯನ್ನೇ ಪಣಕ್ಕಿಟ್ಟು ಸೋತ! ಇದಕ್ಕಿಂತಲೂ ದಾರುಣವಾದ ಕತೆಯು ‘ಮಾಧವಿ’ ಎನ್ನುವ ಕನ್ಯೆಯದು. ಈ ಕತೆ ಹೀಗಿದೆ:

ಗಾಲವ ಎನ್ನುವ ಋಷಿಕುಮಾರನು ವಿಶ್ವಾಮಿತ್ರನ ಆಶ್ರಮದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ತಾನು ಸಲ್ಲಿಸಬೇಕಾದ ಗುರುದಕ್ಷಿಣೆ ಏನೆಂದು ಕೇಳಿದ. ಇದು ಸಂಪೂರ್ಣವಾಗಿ ಪುಕ್ಕಟೆಯಾದ ಶಿಕ್ಷಣವೆಂದು ಗುರು ವಿಶ್ವಾಮಿತ್ರನು ಸಾರಿದರೂ ಸಹ ಗಾಲವನು ಗುರುದಕ್ಷಿಣೆಯನ್ನು ಕೊಡುವ ತನ್ನ ಹಟವನ್ನು ಬಿಡಲಿಲ್ಲ. ಬೇಸತ್ತ ವಿಶ್ವಾಮಿತ್ರನು ತನಗೆ ಎಂಟುನೂರು ಕುದುರೆಗಳನ್ನು ಕೊಡಬೇಕೆಂದು ಹೇಳಿದ. ಆದರೆ ಒಂದು ಶರ್ಯತ್ತು. ಈ ಕುದುರೆಗಳ ಮೈಯೆಲ್ಲ ಬಿಳಿದಾಗಿದ್ದು, ಒಂದು ಕಿವಿ ಮಾತ್ರ ಕಪ್ಪಾಗಿರಬೇಕು! ಸರಿ, ಗಾಲವ ಮೊದಲಿಗೆ ಯಯಾತಿ ಎನ್ನುವ ಮಹಾರಾಜನಲ್ಲಿ ತೆರಳಿ ಇಂತಹ ಕುದುರೆಗಳಿಗಾಗಿ ಪ್ರಾರ್ಥನೆ ಮಾಡಿದ. ಯಯಾತಿಯ ಹತ್ತಿರ ಇಂತಹ ಒಂದೂ ಕುದುರೆ ಇರಲಿಲ್ಲ. ಛೇ! ಈ ಬ್ರಹ್ಮಚಾರಿಯನ್ನು ಬರಿಗೈಯಿಂದ ಮರಳಿ ಕಳಿಸುವುದೇ? ಧರ್ಮಿಷ್ಠ ಯಯಾತಿಯ ‘ಧರ್ಮನಿಷ್ಠೆ’ ಅದನ್ನೊಪ್ಪಲಿಲ್ಲ. ಆದುದರಿಂದ ಯಯಾತಿ ಮಹಾರಾಜನು ಕುದುರೆಗಳ ಬದಲಾಗಿ ತನ್ನ ಮಗಳು ಮಾಧವಿಯನ್ನು ಗಾಲವನಿಗೆ ಧಾರೆ ಎರೆದು ಕೊಟ್ಟುಬಿಟ್ಟ. ‘ಬೇರೆ ಯಾರಾದರೂ ರಾಜನ ಬಳಿಗೆ ಹೋಗು. ಅವನಲ್ಲಿ ಇಂತಹ ಕುದುರೆಗಳಿದ್ದರೆ, ನಿನ್ನ ಹೆಂಡತಿಗೆ ಬದಲಾಗಿ ಆ ಕುದುರೆಗಳನ್ನು ಪಡೆದುಕೊ’ ಎನ್ನುವ ಅದ್ಭುತ ಉಪಾಯ cum ಉಪದೇಶವನ್ನು ನೀಡಿದ. ಸರಿ, ಗಾಲವನು ಮಾಧವಿಗೆ ಮೂಗುದಾಣ ಹಾಕಿಕೊಂಡು ಮತ್ತೊಬ್ಬ ರಾಜನ ಬಳಿಗೆ ಎಳೆದುಕೊಂಡು ಹೋದ. ಅವನಲ್ಲಿ ಇಂತಹ ಕುದುರೆಗಳು ಎರಡುನೂರು ಮಾತ್ರ ಇದ್ದವು. ಅವನಿಗೆ ಮಾಧವಿಯನ್ನು ಒಂದು ವರ್ಷದ ಮಟ್ಟಿಗೆ ಭೋಗ್ಯಕ್ಕೆ ಹಾಕಿದ ಗಾಲವನು, ಎರಡುನೂರು ಕುದುರೆಗಳನ್ನು ಸಂಪಾದಿಸಿಕೊಂಡೊಯ್ದು, ವಿಶ್ವಾಮಿತ್ರನಿಗೆ ಅರ್ಪಿಸಿದ. ಒಂದು ವರ್ಷದ ಅವಧಿಯಲ್ಲಿ ಮಾಧವಿಯು ಒಂದು ಮಗುವನ್ನು ಹೆತ್ತಿದ್ದಳು. ಮರಳಿ ಬಂದ ಗಾಲವನು ಆ ಮಗುವನ್ನು ಅದೇ ರಾಜನಿಗೆ ಕೊಟ್ಟು, ತನ್ನ ಹೆಂಡತಿ ಮಾಧವಿಯನ್ನು ಕರೆದೊಯ್ದ. ಈ ಕಥೆ ಮತ್ತೆ ಇಬ್ಬರು ರಾಜರಲ್ಲಿ ಪುನರಾವರ್ತಿಸಿತು. ಮಾಧವಿ ಒಟ್ಟು ಮೂವರು ರಾಜರಿಂದ ಬಳಕೆಯಾಗಿ, ಮೂರು ಕಂದಮ್ಮಗಳನ್ನು ಅವರಿಗೆ ನೀಡಿದಳು. ಆದರೆ ಇನ್ನೂ ಎರಡುನೂರು ಕುದುರೆಗಳು ಬಾಕಿ ಉಳಿದವಲ್ಲ! ಯಾವ ರಾಜನಲ್ಲೂ ಇಂತಹ ಒಂದು ಕುದುರೆಯೂ ಸಿಗಲೇ ಇಲ್ಲ. ಆದುದರಿಂದ ಗಾಲವನು ಮಾಧವಿಯನ್ನೇ ಒಂದು ವರ್ಷದವರೆಗೆ ವಿಶ್ವಾಮಿತ್ರನಿಗೆ ಕೊಟ್ಟು, ತನ್ನ ಗುರುದಕ್ಷಿಣೆಯನ್ನು ಚುಕ್ತಾ ಮಾಡಿದ. ವಾಹ್‍ವಾ, ಗಾಲವ! ಇದು ಪುರಾಣಕಾಲದಲ್ಲಿ ಭಾರತೀಯ ಹೆಣ್ಣಿಗಿದ್ದ ಸ್ಥಾನಮಾನವನ್ನು ಹಾಗು ಹೆಣ್ಣಿನ ‘ಬೆಲೆ’ಯನ್ನು ಸೂಚಿಸುವ ಕತೆಯಾಗಿದೆ!

ಭಾರತದ ಮೇಲೆ ತುರುಕರ ಹಾಗು ಮಂಗೋಲರ ದಾಳಿ ಪ್ರಾರಂಭವಾದ ಮೇಲಂತೂ ಹೆಣ್ಣಿನ ಪರಿಸ್ಥಿತಿ ಇನ್ನಿಷ್ಟು ಶೋಚನೀಯವಾಯಿತು. ದಾಳಿಗೆ ತುತ್ತಾದ ಹೆಣ್ಣುಗಳು ದಾಳಿಕೋರರ ಉಪಭೋಗದ ತೊತ್ತುಗಳಾದವು. ಅವಳ ಸಾಮಾಜಿಕ ಸ್ಥಾನಮಾನಗಳು ಶೂನ್ಯಮಟ್ಟಕ್ಕಿಳಿದವು.

ಬ್ರಿಟಿಶ್ ಆಡಳಿತವೇ ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸಲು ಕಾರಣೀಭೂತವಾಯಿತು ಎನ್ನಬಹುದು. ‘ಸತಿ ಪದ್ಧತಿ’ಯನ್ನು ನಿಷೇಧಿಸಿದ ಬ್ರಿಟಿಶ್ ಗವರ್ನರ ವಿಲಿಯಮ್ ಬೆಂಟಿಂಕನೇ ಬಾಲ್ಯವಿವಾಹ ನಿರೋಧ ಕಾಯದೆಯನ್ನೂ ೧೮೭೨ರಲ್ಲಿ ಜಾರಿಗೆ ತಂದನು. ಈ ಕಾಯದೆಯ ಪ್ರಕಾರ ೧೪ ವರ್ಷದ ಒಳಗಿನ ಹುಡುಗ ಹುಡುಗಿಯರ ವಿವಾಹವು ಕಾನೂನುಬಾಹಿರವಾಯಿತು.

(೨) ಜನಸಂಖ್ಯಾಸ್ಫೋಟದ ಪರಿಣಾಮವಾಗಿ, ಹಳ್ಳಿಗಳಲ್ಲಿರುವ  ರೈತಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅವರೆಲ್ಲ ಕೆಲಸ ಹುಡುಕುತ್ತ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯ ಜನರು ತಮ್ಮ ಹೆಂಡತಿ ಹಾಗು ಮಕ್ಕಳನ್ನು ಹಳ್ಳಿಗಳಲ್ಲಿಯೇ ಬಿಟ್ಟು ಹೋಗುವಂತಹವರು. ಪಟ್ಟಣದಲ್ಲಿರುವ ಸ್ಥಿತಿವಂತರ ಲಂಗುಲಗಾಮಿಲ್ಲದ ಜೀವನವನ್ನು ನೋಡುವ ಇವರಲ್ಲಿಯೂ ಸಹ ನೈತಿಕ ಮೌಲ್ಯಗಳು ಮಾಯವಾಗುತ್ತಿವೆ. ಕಾಮತೃಷೆಯನ್ನು ಹಿಂಗಿಸಲು ಅನೇಕರು ಸೂಳೆಯರನ್ನು ಹುಡುಕಿಕೊಂಡು ಹೋಗುತ್ತಾರೆ. ಅಸಹಾಯಕ ಹೆಣ್ಣೊಂದು ಸಿಕ್ಕರೆ, ಅವಳ ಮೇಲೆ ಅತ್ಯಾಚಾರ ಎಸಗಲು ಥಟ್ಟನೆ ಮುನ್ನುಗ್ಗುತ್ತಾರೆ ಹಾಗು ಸಾಕ್ಷಿಯನ್ನು ಅಳಿಸಲು ಅವಳ ಕೊಲೆ ಮಾಡುತ್ತಾರೆ.

ಇಂತಹ population migration ಅನ್ನು ನಾನು ಧಾರವಾಡದಂತಹ ಸಣ್ಣ ಊರಿನಲ್ಲಿಯೇ ನೋಡುತ್ತಿದ್ದೇನೆ. ಇಲ್ಲಿಯ ರೈತಕಾರ್ಮಿಕರೆಲ್ಲ ಕಟ್ಟಡ ಮೊದಲಾದ ಕೆಲಸಗಳಲ್ಲಿ ದುಡಿಯಲು ಗೋವಾಕ್ಕೆ ಹೋಗುತ್ತಿದ್ದಾರೆ. ಅದರಂತೆ ಉತ್ತರಪ್ರದೇಶದ ಮತ್ತುಬಿಹಾರದ ಚಿಕ್ಕಪುಟ್ಟ ಕೆಲಸಗಾರರು ಹಾಗು ಅರೆತಾಂತ್ರಿಕರು ಧಾರವಾಡಕ್ಕೆ ಬರುತ್ತಿದ್ದಾರೆ. ಇವರೆಲ್ಲರೂ ರಜಾಸಮಯದಲ್ಲಿ ತಮ್ಮ ಮನೆಮಂದಿಯ ಭೆಟ್ಟಿಗಾಗಿ ತಮ್ಮ ಊರುಗಳಿಗೆ ಮರಳುವಂತಹವರು. ಅಲ್ಲಿಯವರೆಗೂ ಇವರಿಗೆ ಸ್ಥಳೀಯ ಸೂಳೆಯರೇ ಗತಿ. ಇವರಿಂದಾಗಿಯೇ ಸೂಳೆಗಾರಿಕೆ ಎಲ್ಲೆಲ್ಲೂ ದೊಡ್ಡ ಉದ್ದಿಮೆಯಾಗಿ ಬೆಳೆಯಲಾರಂಭಿಸಿದೆ!

ಇದು ಪೋಲೀಸರಿಗೂ ಇಷ್ಟವಾದ ಸಂಗತಿಯೇ ಆಗಿರಬಹುದು. ಹೆಚ್ಚೆಚ್ಚು ಅಪರಾಧ ನಡೆಯುವ ಠಾಣೆಗಳು ಹೆಚ್ಚಿನ ಕಿಮ್ಮತ್ತಿಗೆ ಹರಾಜು ಆಗುತ್ತವೆ ಅನ್ನುವ ವದಂತಿಯೊಂದಿದೆ. ಆ ಲೆಕ್ಕದಲ್ಲಿ ನೋಡಿದರೆ, ಮುಂಬಯಿ, ಕೋಲಕತ್ತಾ ಹಾಗು ದಿಲ್ಲಿಯಂತಹ ನಗರಗಳ ಮುಖ್ಯ ಪೋಲೀಸ ಸ್ಥಾನಗಳ ಹರಾಜು ಕೋಟಿಯಲ್ಲಿಯೇ ಇರಬಹುದೇನೋ! ಇಂತಹ ಪೋಲೀಸರಿಗೆ ಹೆಣ್ಣುಮಕ್ಕಳು ಕಾಲುಕಸದ ಸಮಾನ. ಅವರ ಜೊತೆಗೆ ಉದ್ಧಟತನದಿಂದ ವರ್ತಿಸುವುದು ಪೋಲೀಸರಿಗೆ ಸಹಜಸ್ವಭಾವವೇ ಆಗಿಬಿಡುತ್ತದೆ.

(೩) ನಮ್ಮ ತರುಣರಲ್ಲಿ ಮಾಯವಾಗುತ್ತಿರುವ ನೈತಿಕ ಮೌಲ್ಯಗಳಿಗೆ ಕಾರಣವೇನು? ಟೀವಿ, ಸಿನೆಮಾ ಮೊದಲಾದ ಮನೋರಂಜನೆಯ ಸಾಧನಗಳು ಆಧುನಿಕತೆಯ ನೆವದಲ್ಲಿ, ಕೀಳು ಕಾಮನೆಗಳನ್ನು ಉತ್ತೇಜಿಸುತ್ತಿರುವದು ಒಂದು ಕಾರಣವಾದರೆ, ಯುವ ಪೀಳಿಗೆಗೆ ಸರಿಯಾದ role modelಗಳು ಇಲ್ಲದೇ ಇರುವುದು ಮತ್ತೊಂದು ಕಾರಣವಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಾ ಗಾಂಧೀ, ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಗಳು ನಮ್ಮ ಆದರ್ಶ ಪುರುಷರಾಗಿದ್ದರು. ಈಗಿನ ಆದರ್ಶ ಪುರುಷರು ಎಂಥವರು? ಕಾಮುಕ, ಲಂಚಬಡಕ, ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳು ಇಂದಿನ role model ಆಗಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಮೋಬೈಲುಗಳಲ್ಲಿ ನೀಲಿ ಚಿತ್ರಗಳನ್ನು ನೋಡುವ ಶಾಸಕರು ಹಾಗು ವೃದ್ಧಾಪ್ಯದಲ್ಲಿಯೂ ಸಹ ಅನೈತಿಕ ಕಾಮಕೇಳಿಗಳಲ್ಲಿ ತೊಡುಗುವ ರಾಜ್ಯಪಾಲರು, ಕುಡಿದು ಧಾಂಧಲೆ ಹಾಕುವ ಸಿರಿವಂತರ ಹಾಗು ಅಧಿಕಾರಸ್ಥರ ಮಕ್ಕಳು ನಮ್ಮ ಯುವಕರ ಕಣ್ಣೆದುರಿಗೆ ಇರುವ ಆದರ್ಶಪುರುಷರಾಗಿದ್ದಾರೆ. ಹೀಗಿದ್ದಾಗ ನಮ್ಮ ಯುವಕರು ಇವರನ್ನೇ ಅನುಕರಿಸುವುದು ಸಹಜವೇ ಆಗಿದೆ.

(೪) ಇಲಿಗಳನ್ನು ಹಾಗು ಕೋತಿಗಳನ್ನು ಬಳಸಿಕೊಂಡು ಪ್ರಾಣಿವರ್ತನಾ ವಿಜ್ಞಾನಿಗಳು ಮಾಡಿದ ಕೆಲವು ಪ್ರಯೋಗಗಳು ಅರ್ಥಪೂರ್ಣವಾಗಿವೆ: ದಟ್ಟ ಅರಣ್ಯ, ಸಾಧಾರಣ ಅರಣ್ಯ ಹಾಗು ವಿರಳ ಅರಣ್ಯಗಳಲ್ಲಿ ವಾಸಿಸುತ್ತಿರುವ ಮಂಗಗಳ ಮೇಲೆ ಈ ಪ್ರಯೋಗಗಳನ್ನು ಮಾಡಲಾಯಿತು. (ಧಾರವಾಡವೂ ಸಹ ಈ ಪ್ರಯೋಗದ ಒಂದು ಪ್ರದೇಶವಾಗಿತ್ತು ಎಂದು ಇಲ್ಲಿಯ ಮಂಗಗಳು ಅಭಿಮಾನ ಪಡಬಹುದು!) ಅದರಂತೆ ಅಷ್ಟೇ ಇಲಿಗಳನ್ನು ಸಣ್ಣ ಜಾಗದಲ್ಲಿ, ಮಧ್ಯಮ ವಿಸ್ತಾರದ ಜಾಗದಲ್ಲಿ ಹಾಗು ದೊಡ್ಡ ಜಾಗದಲ್ಲಿ ಬಂಧಿಸಿ ಪ್ರಯೋಗಗಳಿಗೆ ಒಳಪಡಿಸಲಾಯಿತು. ಪ್ರಯೋಗಗಳ ಫಲಿತಾಂಶಗಳನ್ನು ಈ ರೀತಿಯಾಗಿ ಅರ್ಥೈಸಲಾಗುತ್ತಿದೆ:
(೧) ಜನಸಂಖ್ಯೆ ವಿರಳವಾಗಿರುವ ಹಾಗು ಬಲಿಷ್ಠ ನಾಯಕನಿರುವ ಪ್ರದೇಶದಲ್ಲಿ ಶಿಸ್ತು ಕಂಡು ಬರುತ್ತದೆ.
(೨) ಜನಸಂಖ್ಯೆ ಹೆಚ್ಚಿದ್ದಲ್ಲಿ ಹಾಗು ನಿರ್ಬಲ ನಾಯಕನಿರುವ ಪ್ರದೇಶದಲ್ಲಿ ಆಂತರಿಕ ದೌರ್ಜನ್ಯ ಕಂಡು ಬರುತ್ತದೆ.

ನಮ್ಮ ಈಗಿನ ಜನಸಂಖ್ಯೆ ಹಾಗು ನಮ್ಮ ಈಗಿನ ರಾಜಕೀಯ ನಾಯಕತ್ವ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹತ್ತು ಜನ ಕೂಡಬಹುದಾದ ದೋಣಿಯಲ್ಲಿ ನೂರು ಜನ ಕೂತರೆ ಏನಾಗಬಹುದು? ಇದು ಸದ್ಯದ ನಮ್ಮ ಭಾರತದ ಪರಿಸ್ಥಿತಿ. ಇನ್ನು ಈ ದೋಣಿಯನ್ನು ನಡೆಯಿಸುವ ನಾವಿಕನು ಎಂತಹ ದುರ್ಬಲ ವ್ಯಕ್ತಿಯಾಗಿದ್ದಾನೆ ಎನ್ನುವುದನ್ನು ಎಲ್ಲರೂ ಬಲ್ಲರು.  ಇಷ್ಟಾದರೂ ಸಹ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವ ಮಾತನ್ನೇ ಯಾರೂ ಆಡುವುದಿಲ್ಲ ಹಾಗು ತಮ್ಮ ಸ್ವಾರ್ಥಕ್ಕಾಗಿ ದುರ್ಬಲ ನಾಯಕನನ್ನೇ ಸಿಂಹಾಸನದ ಮೇಲೆ ಸ್ಥಾಪಿಸುತ್ತಿದ್ದಾರೆ.!

ಪರಿಹಾರ:
ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಬಹುದು:  
ಗಂಡಸರಿಗೆ ಸರಿಸಮಾನವಾದ ಹಕ್ಕುಗಳನ್ನು ಹೆಣ್ಣುಮಕ್ಕಳಿಗೆ ಕೊಟ್ಟರೆ ಸಾಲದು. ಅವರಿಗೆ ವಿಶೇಷವಾದ ಸವಲತ್ತುಗಳನ್ನು ಕೊಡುವುದು ಅವಶ್ಯವಾಗಿದೆ. ಇದಕ್ಕೆ ಕಾರಣ ಹೀಗಿದೆ:
ಸಂತಾನದ ವಿಪುಲತೆಯು ನಿಸರ್ಗದ ಆಶಯವಾಗಿದೆ. ಆದುದರಿಂದಲೇ ಮಕ್ಕಳನ್ನು ಹೊರಬೇಕಾದ ಹಾಗು ಹೆರಬೇಕಾದ ಹೆಣ್ಣುಮಗಳು ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗಿ ಬಿಡುತ್ತಾಳೆ; ಆದರೆ ಗಂಡುಮಗುವು ‘ವೀರ್ಯವಂತ’ನಾಗುವುದಕ್ಕೆ ಹೆಚ್ಚಿಗೆ ಕಾಲ ಬೇಕಾಗುತ್ತದೆ. ಹೆಣ್ಣುಮಗುವು ತನ್ನ ದೈಹಿಕ ಚೈತನ್ಯದ ಬಹುಭಾಗವನ್ನು ಗರ್ಭಾಶಯದ ಬೆಳವಣಿಗೆಯಲ್ಲಿ ವ್ಯಯಿಸಬೇಕಾಗುವದರಿಂದ, ಅವಳ ಇತರ ದೈಹಿಕ ಬೆಳವಣಿಗೆಯು ಗಂಡಸಿನ ಬೆಳವಣಿಗೆಯಷ್ಟು ಆಗಲಾರದು. ಗರ್ಭವತಿ ಹೆಣ್ಣನ್ನು ಗಂಡು ರಕ್ಷಿಸುವುದು ಅನಿವಾರ್ಯವಾಗುವುದರಿಂದ, ಗಂಡಿನ ದೈಹಿಕ ಬೆಳವಣಿಗೆಯು ಅಧಿಕವಾಗಿರುವುದು ಸಹಜವೇ ಆಗಿದೆ. ಈ ರೀತಿಯಾಗಿ ದೈಹಿಕವಾಗಿ ಹೆಚ್ಚಿಗೆ ಸಶಕ್ತನಾದ ಗಂಡಸು ಹೆಣ್ಣಿನ ರಕ್ಷಣೆ ಮಾಡುವುದರ ಬದಲಾಗಿ ಅವಳ ಶೋಷಣೆ ಮಾಡತೊಡಗಿರುವುದು ನಿಸರ್ಗವಿರೋಧಿಯಾಗಿದೆ, ಪರಮ ನೀಚತನವಾಗಿದೆ. ಹೆಣ್ಣಿಗೆ ಗರ್ಭಧಾರಣೆಯ ಅವಧಿಯಲ್ಲಿ ಹಾಗು ಶಿಶುಪಾಲನೆಯ ಅವಧಿಯಲ್ಲಿ ವಿಶೇಷ ಸವಲತ್ತುಗಳನ್ನು ಕೊಡುವುದು ನಿಸರ್ಗಸಹಜವಾದ ಅವಶ್ಯಕತೆಯಾಗಿದೆ.

ಬಹುಶಃ ಈ ಕಾರಣದಿಂದಲೇ ಮನು ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಹೇಳಿದನು. ಅವನ ಆಶಯವೆಂದರೆ, ಹೆಣ್ಣನ್ನು ಬಾಲ್ಯಾವಸ್ಥೆಯಲ್ಲಿ ತಂದೆ, ಯೌವನದಲ್ಲಿ ಗಂಡ ಹಾಗು ವೃದ್ಧಾಪ್ಯದಲ್ಲಿ ಮಕ್ಕಳು ನೋಡಿಕೊಳ್ಳಬೇಕು. ಅವಳು ಒಂಟಿಯಾಗಿ ಜೀವಿಸುವಂತೆ ಆಗಬಾರದು. ಇದು ಸ್ತ್ರೀಯ ವಿಶೇಷ ಹಕ್ಕಾಗಿದೆ.

ಸ್ತ್ರೀದೌರ್ಜನ್ಯವನ್ನು ತಡೆಯಲು ಕೆಳಗಿನ ಶಾಸನಾತ್ಮಕ ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು:
(೧) ಸ್ತ್ರೀದೌರ್ಜನ್ಯದ ದೂರುಗಳನ್ನು ಸ್ವೀಕರಿಸಲು quasi judicial ಅಧಿಕಾರವಿರುವ ಮಹಿಳಾಕೇಂದ್ರಗಳನ್ನು ಸ್ಥಾಪಿಸಬೇಕು. ಸದ್ಯಕ್ಕೆ domestic violence ತಡೆಗಟ್ಟಲು ಮಾತ್ರ ಇಂತಹ ಕೇಂದ್ರಗಳಿದ್ದು, ಇವುಗಳ ಅಧಿಕಾರ ವಿಸ್ತರಣೆಯಾಗಬೇಕು. ಪೋಲೀಸ್ ಠಾಣೆಗಳಿಗೆ ಈ ಕೇಂದ್ರಗಳಿಂದ ದೂರು ಹೋಗುವಂತಿರಬೇಕು. ಈ ಕೇಂದ್ರಗಳಿಗೆ ಪೋಲೀಸರಿಂದ ಪ್ರಗತಿವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕು. ವಿಳಂಬವಾದಲ್ಲಿ ಪೋಲೀಸರನ್ನು ವಿಲಂಬಿತಗೊಳಿಸಬೇಕು. ತಾನು ಅಪರಾಧಿಯಲ್ಲ ಎಂದು ಸಾಬೀತು ಪಡಿಸುವ ಹೊಣೆಯನ್ನು ಆರೋಪಿಯ ಮೇಲೆ ಹೇರಬೇಕು. ಅತ್ಯಾಚಾರದ ಪ್ರಕರಣಗಳಲ್ಲಿ DNA ವರದಿಯನ್ನು ಅವಲಂಬಿಸಿ ಆರೋಪಿಯನ್ನು ಮುಕ್ತಗೊಳಿಸಬಹುದು.
(೨) ತಕ್ಷಣವೇ ಎಲ್ಲೆಡೆಗಳಲ್ಲಿ ಇರುವ ವೇಶ್ಯಾಗೃಹಗಳನ್ನು ಮುಚ್ಚಿ ಹಾಕಬೇಕು. ಇಲ್ಲಿ ಬಂಧಿಗಳಾಗಿ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕು.
(೩) ಟೀವಿ, ಸಿನೆಮಾ ಮೊದಲಾದ ಮನೋರಂಜನೆಗಳಲ್ಲಿ ಹೆಣ್ಣುಮಕ್ಕಳ ದೇಹಪ್ರದರ್ಶನವನ್ನು ಪ್ರತಿಬಂಧಿಸಬೇಕು. ಕುಡಿಯುವ ತಾಣಗಳಲ್ಲಿ ನೃತ್ಯವನ್ನು ನಿಷೇಧಿಸಬೇಕು.
(೪) ಸಾರ್ವಜನಿಕ ವಾಹನಗಳಲ್ಲಿ ಹಾಗು ಸಾರ್ವಜನಿಕ ಸ್ಥಾನಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ಕೊಡಬೇಕು.


ಇಂತಹ ಶಾಸನವನ್ನು ತರಲು ಪ್ರಜ್ಞಾವಂತರು ನಮ್ಮ ಶಾಸಕರನ್ನು ಒತ್ತಾಯಿಸಬೇಕು.

33 comments:

ಸತೀಶ್ ನಾಯ್ಕ್ said...

ಯತ್ರ ನಾರ್ಯಂತು ಪೂಜ್ಯತಾ ರಮಂತೇ ತತ್ರ ದೇವತಾ ಅಂತ ಹೇಳಿರೋ ಪುರಾಣ ವೇದಗಳಲ್ಲಿಯೇ ನಾರಿಗೆ ಅಂತಹ ಅನ್ಯಾಯ ಆಗಿರೋದು ನಮ್ಮ ದೇಶದ ದುರಂತವೂ ಹೌದು. ಹೆಣ್ಣಿನ ಶೋಷಣೆಯಷ್ಟೇ ತಮ್ಮ ಹಕ್ಕು ಅಂದ್ಕೊಂಡ ಮೆಧಾವಿಗಳಿಗೆಲ್ಲ ಹೆಣ್ಣಿನ ಪೋಷಣೆಯೂ ಹಕ್ಕು ಎನ್ನುವುದು ಅರಿವಾಗಬೇಕು. ನಿಮ್ಮ ಲೇಖನ ಓದಿದ ಮೇಲೆ ಪುರುಷ ಪ್ರದಾನ ಸಮಾಜದ ಮೇಲೊಂದು ಖೇದ ಉಂಟಾಗುತ್ತದೆ ಸರ್.. ನಮ್ಮ ಪರಿಪಾಟ ಬದಲಾಗಬೇಕು.. ಸಮಾನತೆ ಕೇವಲ ಮಾತಾಗಬಾರದು ಮತವಾಗಬೇಕು.. ಹೆಣ್ಣು ಬಾಳಿನ ಕಣ್ಣು ಅನ್ನೋದು ಸಾರ್ವಾಕಾಲಿಕ ಸತ್ಯ. ಸಮಾಜದಲ್ಲಿ ಅವಶ್ಯಕವಾಗಿ ಬೇಕಿರುವ ಬದಲಾವಣೆಗಳತ್ತ ಬೆಳಕು ಚೆಲ್ಲೋ ಲೇಖನ..

Swarna said...

ಕಾಕಾ ,
ಈ ನೋವು ತಿಳಿಯುವುದು ಹೆಣ್ಣುಮಕ್ಕಳಿಗೆ ಅಥವಾ ಹೆಣ್ಣುಮಕ್ಕಳ ತಂದೆಯಂದಿರಿಗೆ ಮಾತ್ರ !
ಯಾರು ಕಾರಣ ಈ ಅಧಃಪತನಕ್ಕೆ ಎನ್ನುವುದನ್ನ ಚೆನ್ನಾಗಿ ವಿಶ್ಲೇಷಿಸಿದ್ದೀರಿ. ಹೆಣ್ಣನ್ನು ಗೌರವಿಸದ ಸಮಾಜ ಪತನದತ್ತ ತಾನೇ ತಾನಾಗಿ ಸಾಗುತ್ತದೆ ಅಂತ ಕೃಷ್ಣ ಹೇಳಿದ್ದನಂತೆ ಮೊನ್ನೆ ಗಂಗೆ ಮುನಿದು ಅದನ್ನು ಸಾಬೀತು ಪಡಿಸಿದಳೇ ?
ವಂದನೆಗಳು

sunaath said...

ಸತೀಶರೆ,
ಕಾಲ ಬದಲಾದೀತು ಎಂದು ಆಶಿಸುತ್ತೇನೆ!

sunaath said...

ಸ್ವರ್ಣಾ,
ಹೆಣ್ಣಿನ ಶೋಷಣೆಯಿಂದ ವ್ಯಥಿತರಾದ ಬೇಂದ್ರೆಯವರು ತಮ್ಮ ಒಂದು ಕವನದಲ್ಲಿ ಹೆಣ್ಣಿಗೆ ಹೀಗೆ ಹೇಳುತ್ತಾರೆ:
"ನಮ್ಮ ಕಾಲಹಾದಿ ನೀನು,
ನಿನ್ನ ತುಳಿವೆವೆಂದರೇನು?"
ಹೆಣ್ಣಿಗೆ ಆಗುತ್ತಿರುವ ಅನ್ಯಾಯ ಹೋದಾಗಲೇ, ಸಮಾಜದ ಸರ್ವತೋಮುಖ ಉದ್ಧಾರ ಆದೀತು.

Karthik Kamanna said...

"ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ|
ರಕ್ಷಂತಿಸ್ಥವಿರೇ ಪುತ್ರಾಃ ನ ಸ್ತ್ರೀ ಸ್ವಾತಂತ್ರ್ಯಮರ್ಹತಿ||"

ಯಾರು ಯಾರು ಯಾವ ಯಾವ ಕಾಲಘಟ್ಟಗಳಲ್ಲಿ ಮಹಿಳೆಯ ಹಿತ ಕಾಪಾಡಬೇಕೋ ಅವರುಗಳೆ ಹಲವಾರು ಕಡೆ ಅಂಕೆ ಮೀರುತ್ತಿರುವುದು ಇನ್ನೂ ಖೇದಕರ ವಿಷಯ.

ಸಾವಿರಾರು ವರ್ಷದ ಬಲವುಳ್ಳ ನಮ್ಮ ಸಂಸ್ಕೃತಿ ಇಂಥ ಕೃತ್ಯಗಳಿಂದ ಹಾಳಾಗುತ್ತದೆಂಬ ವಾದ ಒಪ್ಪಲಾಗುವುದಿಲ್ಲ. ಅವಿದ್ಯಾವಂತರು (ಅಶಿಕ್ಷಿತರಾಗಿರಬೇಕೆಂದಿಲ್ಲ) ಮಾಡುವ ಕೆಲಸಗಳಿಗೆ ಹೆಣ್ಣಿಗೆ ರಕ್ಷಣೆಯೇ ಇಲ್ಲವೆಂದು ಹೇಳುವುದು ಬೇಡ. ಸರ್ಕಾರ ಯಾವುದಕ್ಕೂ ಬೇಡದ ಹೇತಲಾಂಡಿ ಕೆಲಸಗಳಿಗಷ್ಟೇ ಸೀಮಿತವಾಗಿದೆ. ಎಷ್ಟೆ ಕಠಿಣ ಕಾನೂನು ಬಂದರೂ ದೌರ್ಜನ್ಯ ಅಲ್ಲಿ-ಇಲ್ಲಿ ನಡೆಯುತ್ತಲೇ ಇರುತ್ತದೆ. ಹಾಗಾಗಿ ಕಾನೂನಿನ ಜೊತೆ ಜೊತೆಗೆ ಪ್ರತಿಯೊಬ್ಬ ಭಾರತೀಯನಿಗೂ ನಮ್ಮ ನಿಜವಾದ ಸಂಸೃತಿಯ ಪರಿಚಯ ಉಂಟುಮಾಡಿಸಬೇಕು ಕೂಡ ಅನ್ನೋದು ನನ್ನ ಭಾವನೆ. ಬಹುಶಃ ಹೆಣ್ತನಕ್ಕೆ ಇಷ್ಟೊಂದು ಗೌರವಯುತ ಭಾವನೆ ಸಿಗುವುದು ಭಾರತದಲ್ಲಿ ಮಾತ್ರವೇ ಇರಬೇಕು. ಆದರೂ ಇಂಥ ಹೇಸಿಗೆಯುಂಟುಮಾಡುವ ಕೆಲಸಗಳಿಂದಾಗಿ ಅದಕ್ಕೆ ಕಪ್ಪು ಚುಕ್ಕಿ.

Badarinath Palavalli said...

ಚುನಾವಣಾ ಮುನ್ನ ಮತ್ತು ಅಧಿಕಾರ ಹಿಡಿದ ಮೇಲೆ ರಾಜಕೀಯ ಪಕ್ಷಗಳ ಉದ್ದೇಶಗಳೇ ಬೇರೆಯಾಗಿರುತ್ತವೆ. ಅಧಿಕಾರಸ್ತರಿಗೆ ತಳ ಮಟ್ಟದಲ್ಲಿ ನಡೆಯುವ ಅನಾಚಾರಗಳ ಅರಿವು ಇರುವುದಿಲ್ಲ ಎಂದಲ್ಲ, ಅವರಿಗೆ ತಮ್ಮ ಬೇಳೆ ಬೇಯಿಸಿಕೊಳ್ಳುವ ಉಮೇದಿ ಇರುತ್ತದೆಯೇ ಹೊರತು, ಸಮಸ್ಯೆಯ ಪರಿಹಾರವಲ್ಲ. ಯಾಕೆಂದರೆ ಅವರಿಗೂ ಗೊತ್ತು ಬಹುಶಃ ಭಾರತ ನಿಜವಾಗಲೂ ಬೆಳಗಿದರೆ ಆಮೇಲೆ ರಾಜಕಾರಣಿಗಳಿಗೆ ಬೆಲೆ ಇಲ್ಲ.

ದೆಹಲಿ ಮತ್ತು ಮಣಿಪಾಲದ ಅತ್ಯಾಚಾರ ಪ್ರಕರಣಗಳನ್ನು ಯಾರೇ ಮಾಡಿರಲಿ ಅವರಿಗೆ ಕಠಿಣವಾದ ಶಿಕ್ಷೆಯಾಗಲೇ ಬೇಕು. ಅದರ ಜೊತೆಗೆ ಗ್ರಾಮೀಣ ಭಾರತದಲ್ಲಿ ನಡೆಯುತ್ತಿರುವ ಅತ್ಯಾಚಾರ, ಮಹಿಳೆಯ ಮೇಲೆನ ದೌರ್ಜನ್ಯ, ನೌಕರಿಯಲ್ಲಿ ಲೈಂಗಿಕ ಕಿರುಕುಳ, ಹೆಣ್ಣೂ ಮಕ್ಕಳ ಸರಬರಾಜು ಮತ್ತು ಕೆಂಪು ದೀಪದ ಬದುಕನ್ನೂ ಗಂಭೀರವಾಗಿ ಪರಿಗಣಿಸಲೇಬೇಕು.

ತಾವು ಸೂಚಿಸಿರುವ ಅಂಶಗಳು ಮತ್ತು ವಿಶ್ಲೇಷಿಸಿರುವ ಸಾಮಾಜಿಕ ಕಾರಣಗಳು ಸಮಂಜಸವಾಗಿವೆ.

ಸಮಂಜಸವಾದ ಪರಿಹಾರವನ್ನು ಸೂಚಿಸಿದ್ದೀರ.

Srikanth Manjunath said...

ಇಂದಿನ ಪರಿಸ್ಥಿತಿಯ ಕನ್ನಡಿಯ ಪ್ರತಿಬಿಂಬದಂತೆ ಇದೆ ನಿಮ್ಮ ಬರಹ. ನೀವು ಹೇಳಿದ ಪ್ರತಿಯೊಂದು ವಾಕ್ಯ, ಪ್ರತಿಯೊಂದು ಸಲಹೆ ನಿಜಕ್ಕೂ ಅಳವಡಿಕೆಗೆ ಬಂದರೆ ಅಪರಾಧದ ಪ್ರಮಾಣ ಗಣನೀಯವಾಗಿ ಇಳಿಯುವುದರಲ್ಲಿ ಸಂದೇಹವಿಲ್ಲಾ. ಪ್ರತಿಯೊಂದು ಸಮಸ್ಯೆಯನ್ನು ಅರ್ಥಪೂರ್ಣವಾಗಿ ಹೇಳಿರುವ ರೀತಿ ಇಷ್ಟವಾಯಿತು. ನಮ್ಮ ಘನ ಸರ್ಕಾರದ ಚುನಾಯಿತ ಪ್ರತಿನಿಧಿಗಳು ಇಂತಹ ಸಮಸ್ಯೆಗೆ ತಮ್ಮ ಮನೆಯಲ್ಲಿನ ಹೆಣ್ಣು ಮಕ್ಕಳು ಬಲಿಯಾಗುತ್ತಾರೆ ಎಂದು ತಿಳಿದು ಕಟ್ಟು ನಿಟ್ಟಿನ ಶಾಸನ ಜಾರಿಗೆ ತಂದು ಅಳವಡಿಸಿಕೊಂಡರೆ ನಿಮ್ಮ ಬರಹದ ಸಾರ್ಥಕತೆ ಗೋಚರಿಸುತ್ತದೆ. ಈ ಎಲ್ಲ ಬದಲಾವಣೆಗಳು ಆಗಲಿ ಎನ್ನುವ ಸದಾಶಯ ನನ್ನದು

ದೀಪಸ್ಮಿತಾ said...

ಎಷ್ಟೋ ಶತಮಾನಗಳಿಂದ, ಎಲ್ಲಾ ದೇಶಗಳಲ್ಲೂ ಇದು ನಡೆದುಕೊಂಡು ಬಂದಿದೆ. ಮನಸ್ಸು ಬದಲಾಗಲು ಇನ್ನೂ ಎಷ್ಟು ಶತಮಾನ ಬೇಕೋ?

ಶಾನಿ said...

ಕಾಕಾ,
ಮಣಿಪಾಲದ ವೈದ್ಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಪ್ರಕರಣವನ್ನು ಓದುತ್ತಿರುವಂತೆ ಅಪರಾಧಿಗಳಿಗೆ ಬಾಬಿಟ್ ಶಿಕ್ಷೆ ಜಾರಿಯಾಗಬೇಕು ಎಂಬ ಯೋಚನೆ ನನ್ನ ಮನದಲ್ಲಿ ಮೂಡಿತ್ತು. ಮತ್ತು ಇದನ್ನು ಪ್ರಸ್ತಾಪಿಸಿದಲ್ಲಿ ಮಾನವಹಕ್ಕು ಹೋರಾಟಗಾರರ ಪ್ರತಿಕ್ರಿಯೆ ಹೇಗಿರಬಹುದೆಂಬ ಕುರಿತೂ ಯೋಚಿಸಿದೆ. ನಮ್ಮ ಕಾನೂನಿನ ಲೋಪದೋಷಗಳೇ ಅಪರಾಧಿಗಳು ಶಿಕ್ಷೆಯಿಂದ ಬಚಾವ್ ಆಗಲು ಮತ್ತು ಇತರರು ಇಂತಹ ಹೀನ ಕೃತ್ಯಗಳಿಗೆ ಮುಂದಾಗಲು ಮೂಲ ಕಾರಣ.

ಮನಸು said...

ಬದಲಾವಣೆ ಜಗದ ನಿಯಮ ಮುಂದೊಂದು ದಿನ ಒಳ್ಳೆಯ ಕಾಲ ಬರಬಹುದು ಆದರೆ ಅಲ್ಲಿಯವರೆಗೆ ಅನುಭವಿಸುವವರಿಗೆ ಗೊತ್ತು ಕಷ್ಟಗಳು.. ಹೆಣ್ಣು-ಗಂಡಿನ ನಡುವಿನ ಅಂತರ, ಭೇದಭಾವ ಕಡಿಮೆಯಾಗುವವರೆಗೂ ಇದೇ ಸ್ಥಿತಿ

sunaath said...

ಕಾರ್ತೀಕರೆ,
ಭಾರತೀಯ ಸಂಸ್ಕೃತಿಯಲ್ಲಿ ಅತ್ಯುಚ್ಚವಾದದ್ದೂ ಇದೆ, ಅತಿ ನೀಚವಾದದ್ದೂ ಇದೆ. ಹಂಸಕ್ಷೀರ ನ್ಯಾಯದಂತೆ ನಾವು ನಮ್ಮ ಮಕ್ಕಳಿಗೆ ಉಚ್ಚವಾದದ್ದನ್ನು ಕಲಿಸೋಣ. ಆದರೆ ನಮ್ಮಲ್ಲಿ ಕೆಡಕೂ ಇತ್ತು ಎನ್ನುವುದನ್ನು ನಮ್ಮ ಮಕ್ಕಳಿಗೆ ತಿಳಿಸುವುದು ಅವಶ್ಯವೇ ಆಗಿದೆ.

sunaath said...

ಬದರಿನಾಥರೆ,
ಧನ್ಯವಾದಗಳು.

sunaath said...

ಶ್ರೀಕಾಂತರೆ,
ಸ್ತ್ರೀಯರ ಮೇಲಿನ ದೌರ್ಜನ್ಯದೊಡನೆ ನಮ್ಮ ಇತರ ಸಾಮಾಜಿಕ ಸಮಸ್ಯೆಗಳು ತಳಕು ಹಾಕಿಕೊಂಡಿವೆ. ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಕ್ಕಾಗ, ಈ ಸಮಸ್ಯೆಯೂ ಬಗೆ ಹರಿದೀತು!

sunaath said...

ದೀಪಸ್ಮಿತರೆ,
ಹೆಣ್ಣು ಸಶಕ್ತಳಾದಾಗ ಈ ದೌರ್ಜನ್ಯಕ್ಕೆ ತಡೆ ಬೀಳಬಹುದು!

sunaath said...

ಶಾನಿಯವರೆ,
ನಮ್ಮ ಮಾನವಹಕ್ಕುಗಳ ಹೋರಾಟಗಾರರು ‘ಅತ್ಯಾಚಾರವೂ ಒಂದು ಹಕ್ಕು’ ಎಂದು ಹೇಳಿಯಾರು!

sunaath said...

ಮನಸು,
ಆ ಶುಭಕಾಲ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಮಂಜುಳಾದೇವಿ said...

ಸಾರ್, ಭಾರತದಂತಹ ಪುರುಷ ಪ್ರಧಾನ ಸಮಾಜದಲ್ಲಿ, ಸ್ತ್ರೀಯರಿಗೆ ಆಗುತ್ತಿರುವ ಅನ್ಯಾಯ,ಶೋಷಣೆಗಳನ್ನು, ಅದಕ್ಕೆ ಕಾರಣಗಳನ್ನು ವಸ್ತುನಿಷ್ಟವಾಗಿ ವಿಶ್ಲೇಷಿಸುವುದರೊಂದಿಗೆ ನೀವು ನೀಡಿರುವ ಪರಿಹಾರ ಸೂತ್ರಗಳು ಇಂದಿನ ಸಮಾಜಕ್ಕೆ ಅತಿ ಅವಶ್ಯಕವಾಗಿವೆ.ನಿಮ್ಮ ಸಾಮಾಜಿಕ ಕಳಕಳಿಗೆ ನನ್ನ ನಮನಗಳು.ನಮ್ಮ ದೇಶದ ಇಂದಿನ ಪೀಳಿಗೆಗೆ ನಿಮ್ಮಂತಹವರ ಮಾರ್ಗದರ್ಶನ ಅಗತ್ಯ ಮತ್ತು ಮಾದರಿ.ಧನ್ಯವಾದಗಳು.

Unknown said...

ವಾಸ್ತವದ ಅನಾವರಣ ಚೆನ್ನಾಗಿದೆ ..
ಸಮಸ್ಯೆಗಳನ್ನ ನೀವು ತೋರಿಸಿದ ಬಗೆ ಇಷ್ಟವಾಯ್ತು ...
ಈ ದೌರ್ಜನ್ಯ ನಿಲ್ಲಲಿ ಅನ್ನೋ ಆಶಯ ಎಲ್ಲರದೂ ಸಹ .

sunaath said...

ಭಾಗ್ಯಾ,
ಧನ್ಯವಾದಗಳು.

ಮನಸು said...

ಶೋಷಣೆ ಎಲ್ಲಾ ದೇಶಗಳಲ್ಲೂ ನಡೆದುಕೊಂಡು ಬಂದಿವೆ. ಕಾಕ, ಇತ್ತೀಚೆಗೆ ಕುವೈತ್ ನಲ್ಲಿ ಈಜಿಪ್ಟ್ ಪ್ರಜೆ ಒಬ್ಬ ಸುಮಾರು ೧೦ ಮಕ್ಕಳನ್ನು ಅತ್ಯಾಚಾರ ಮಾಡಿ ಶಿಕ್ಷೆಗೆ ಗುರಿಯಾಗಿದ್ದ. ಇವನನ್ನು ಜನ ಸಾಮಾನ್ಯರ ಎದುರೇ ನೇಣಿಗೇರಿಸಿದರು. ಇಂತಹ ಶಿಕ್ಷೆ ಕಂಡು ಮತ್ತೊಬ್ಬರು ಎಚ್ಚೆತ್ತುಕೊಳ್ಳಬೇಕಾಗಿದೆ. ಒಳ್ಳೆಯ ಬದಲಾವಣೆಗಳು ನಿಜಕ್ಕೂ ಬೇಕಾಗಿದೆ. ಹೆಣ್ಣು ಮಕ್ಕಳು ಸ್ವತಂತ್ರವಾಗಿ ಓಡಾಡಬೇಕಿದೆ.

sunaath said...

ಮನಸು,
ಅಪರಾಧಿಗಳಿಗೆ ರಾಜಕೀಯ ಬೆಂಬಲ ಇರುವವರೆಗೆ, ದೌರ್ಜನ್ಯ ತಪ್ಪಿದ್ದಲ್ಲ!

ಮನಮುಕ್ತಾ said...

ಕಾಕಾ, ಸಮಸ್ಯೆಯ ಪ್ರಕೋಪ ಹಾಗೂ ಪರಿಹಾರೋಪಾಯಗಳ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.. ಪರಿಹಾರೋಪಾಯಗಳ ನ೦ತರ, ಬರಹದ ಕೊಟ್ಟ ಕೊನೆಯ ಸಾಲು,"ಇಂತಹ ಶಾಸನವನ್ನು ತರಲು ಪ್ರಜ್ಞಾವಂತರು ನಮ್ಮ ಶಾಸಕರನ್ನು ಒತ್ತಾಯಿಸಬೇಕು" ಇದು ತು೦ಬಾ ಪರಿಣಾಮಕಾರಿಯೆನ್ನಿಸಿತು. ಅದರಿ೦ದ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು.

sunaath said...

ಮನಮುಕ್ತಾ,
ಮೊದಲು ನಮ್ಮ ಶಾಸಕರು ಸುಧಾರಿಸಬೇಕು! ಇದು ಮತದಾರರ ಕೆಲಸವಾಗಿದೆ!

ಜಲನಯನ said...

ಸುನಾಥಣ್ಣ ಹೆಣ್ಣಿನ ಗೋಳು ಮತ್ತು ಅಳಲಿನ ವಿವಿಧ ಆಯಾಮಗಳು ಬಹಳ ಚನ್ನಾಗಿ ಮೂಡಿಸಿದ್ದೀರಿ. ಪೌರಾಣಿಕ ಉದಾಹರ್ಣೆಗಳಲ್ಲೂ ಇವು ಯತೇಚ್ಛ ಎಂದರೆ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ. ಅರಬ್ ನಾಡಿನಲ್ಲಿ ಕಠಿಣ ಕಾನೂನು ಎನ್ನಲಾಗುತ್ತೆ ಆದರೆ ಇತ್ತೀಚಿನ ದುಬೈ ಪ್ರಸಂಗ ಈ ನಂಬಿಕೆಗೆ ಅಪವಾದ ಎನಿಸತೊಡಗಿದೆ. ಮಾನವನ ಮೂಲ ಚಿಂತನೆಯಲ್ಲಿ ನಿಜಕ್ಕೂ ಆದರಣೀಯ ಸ್ಥಾನ ಸಿಗದೇ ಹೆಣ್ಣಿನ ಅಳಲಿಗೆ ಸಾಂತ್ವನ ಸಿಗುವುದು ಕಷ್ಟಸಾಧ್ಯವೇ ಸರಿ.

sunaath said...

ಜಲನಯನ,
ದುಬೈ ಆಗಲಿ ಅಥವಾ ದಿಲ್ಲಿ ಆಗಲಿ, ನಮ್ಮ ಸಮಾಜರಚನೆಯಲ್ಲಿಯೇ ಹೆಣ್ಣಿಗೆ ಅನ್ಯಾಯವಾಗಿದೆ. ಕಠಿಣವಾದ ಕಾನೂನುಗಳೂ ಸಹ ಅತ್ಯಾಚಾರಿಗಳನ್ನು ಹೆದರಿಸಲಾರವು ಎಂದರೆ, ಆ ಸಾಮಾಜಿಕ ಕಾರಣಗಳನ್ನು ನಾವು ಶೋಧಿಸಿ, ಪರಿಹಾರವನ್ನು ಹುಡುಕಬೇಕಷ್ಟೆ!

prabhamani nagaraja said...

ಇತ್ತೀಚೆಗೆ ಪ್ರತಿದಿನವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಈ ಜ್ವಲಂತ ಸಮಸ್ಯೆಯನ್ನು ವಿವಿಧ ಕೋನಗಳಲ್ಲಿ ಚಿ೦ತಿಸಿ ಸೂಕ್ತ ಪರಿಹಾರದ ಬಗ್ಗೆಯೂ ಪ್ರಸ್ತಾಪಿಸಿದ್ದೀರಿ ಸರ್, ನಿಜಕ್ಕೂ ಮನುಷ್ಯರೆನಿಸಿಕೊ೦ಡಿರುವ ಇ೦ಥಾ ಕ್ರೂರ ಪ್ರಾಣಿಗಳಿಗೆ ಯಾವಾಗ ತಕ್ಕ ಶಿಕ್ಷೆ ನೀಡುವರೋ, ಎ೦ದಿಗೆ ಈ ಸಮಸ್ಯೆಗೆ ಮುಕ್ತಿ ದೊರೆಯುತ್ತದೋ ಕಾಣೆ.

sunaath said...

ಪ್ರತಿದಿನವೂ ಅತ್ಯಾಚಾರದ ಸಮಾಚಾರಗಳನ್ನು ಓದಿ ಓದಿ, ಮನಸ್ಸಿಗೆ ವ್ಯಥೆಯಾಗುತ್ತಿದೆ. ಇದು ನಿವಾರಣೆಯಾಗುವ ರೀತಿ ತಿಳಿಯದಾಗಿದೆ.

ಈಶ್ವರ said...

ಕಾಕಾ, ತುಂಬಾ ಒಳ್ಳೆಯ ಲೇಖನ. ಅವಶ್ಯಕವಾದ ಗೌರವದ ಕೊರತೆಯು ಕಡಿಮೆಯಾಗುತ್ತಾ ಬಂದಿರುವುದೇ ಸಮಸ್ಯೆ. ಕಾಲ ಬದಲಾಗಲೇ ಬೇಕು ಅಲ್ವೇ? ತಾವು ಸೂಚಿಸಿರುವ ಅಂಶಗಳು ತುಂಬಾ ಮುಖ್ಯವಾದವು ಕಾಕಾ.

sunaath said...

ಈಶ್ವರ ಭಟ್ಟರೆ,
ಕಾಲ ಬದಲಾದೀತು ಎನ್ನುವ ಕನಸು ನನಸಾದೀತೊ?

Anonymous said...

People talk as though they are saints. Harassment of women does not happen only in real life, it also happens in cyber space. You start a blog for a cause, and soon there are several people waiting to defame the blogger. And if the blogger happens to be a woman, you have men trying all sorts to harass her. Soon you will forget the cause and turn everybody into a psycho.

sunaath said...

Dear Anonymous,
I admit that women are harassed in all walks of life. This means that ours is a sick society. Preventive and curative treatments are necessary.

KalavathiMadhusudan said...

sir, hennumakkala bhavishyada baggeye aatankavaaguttiruva
prastuta sandarbhakke sooktavada lekhanakkaagi dhanyavaadagalu.

sunaath said...

ಕಲರವ,
ಈ ಆತಂಕವು ಮಾಯವಾಗಲಿ ಎಂದು ಪ್ರಾಥಿಸುತ್ತೇನೆ.