Sunday, June 19, 2016

ಮೃಚ್ಛಕಟಿಕಮ್, ಶಾಕುಂತಲಮ್ ಹಾಗು ಸ್ವಪ್ನವಾಸವದತ್ತಾ



ಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಒಂದು ಅದ್ಭುತವಾದ ಸಂಸ್ಕೃತ ನಾಟಕ. ಈ ನಾಟಕಕ್ಕೆ ಸಂಸ್ಕೃತ ನಾಟಕ ಎಂದು ಕರೆಯಬಹುದೆ, ಎನ್ನುವ ಪ್ರಶ್ನೆ ಉದ್ಭವಿಸದೆ ಇರಲಾರದು. ಏಕೆಂದರೆ ಈ ನಾಟಕದಲ್ಲಿ ವಿವಿಧ ಪ್ರಾಕೃತಗಳನ್ನಾಡುವ ಅನೇಕ ಪಾತ್ರಗಳು ಬರುತ್ತವೆ. ಒಟ್ಟು ಹದಿನೆಂಟು ಬಗೆಯ ಪ್ರಾಕೃತಗಳನ್ನು ಇಲ್ಲಿ ಆಡಲಾಗಿದೆ ಎಂದು ಹೇಳಲಾಗುತ್ತದೆ. ನಾಟಕದ ಒಂದು ಪಾತ್ರವು ಕರ್ನಾಟಕದ ಪಶ್ಚಿಮಘಟ್ಟದಿಂದ ಬಂದಂತಹ ವ್ಯಕ್ತಿಯದೂ ಆಗಿದೆ. ಬಹುಶಃ ಉಜ್ಜಯಿನಿ ನಗರವು ಆ ಕಾಲದಲ್ಲಿ ಒಂದು ಅತಿ ದೊಡ್ಡ ಸಾಂಸ್ಕೃತಿಕ ಹಾಗು ವ್ಯಾಪಾರೀ ಕೇಂದ್ರವಾಗಿರಬಹುದು. ಭಾರತದ ವಿವಿಧ ಭಾಗಗಳಿಂದ ಉಜ್ಜಯಿನಿಗೆ ಜನರು ವಿದ್ಯಾಭ್ಯಾಸಕ್ಕಾಗಿ, ವ್ಯಾಪಾರಕ್ಕಾಗಿ, ಉದ್ಯೋಗವನ್ನು ಅರಸಿಕೊಂಡು ಅಥವಾ ಸುಖಭೋಗಕ್ಕಾಗಿ ಬರುತ್ತಿರಬಹುದು! ಇಂತಹ ಜನಸಮೂಹವನ್ನು ಬಳಸಿಕೊಂಡೇ ಶೂದ್ರಕನು ಒಂದು ಸಂಕೀರ್ಣವಾದ ನಾಟಕವನ್ನು ರಚಿಸಿದ್ದಾನೆ. ಹಾಗಿದ್ದರೂ ಸಹ ಈ ಮಹಾನಾಟಕದಲ್ಲಿ ಬರುವ ಎಲ್ಲ ಪಾತ್ರಗಳು, ಎಲ್ಲ ಘಟನೆಗಳು ,ಎಲ್ಲ ಸಂಭಾಷಣೆಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ, ಯಾವುದೂ ಇದರಲ್ಲಿ ಅನವಶ್ಯಕವೆನ್ನುವಂತಹದು ಇಲ್ಲ. ರಚನಾವಿಧಾನ, ಕಥಾನಕದ ಸಂಕೀರ್ಣತೆ, ರಂಗಕ್ರಿಯೆ ಹಾಗು ಪುಟ್ಟ ಪಾತ್ರಗಳಿಗೂ ಸಹ ಈ ನಾಟಕದಲ್ಲಿ ಬರುವ ಮಹತ್ವ ಇವೆಲ್ಲವನ್ನೂ ಗಮನಿಸಿದರೆ, ವಿಶ್ವನಾಟಕಗಳಲ್ಲಿಯೇ ಇಂತಹ ನಾಟಕವು ಬೇರಾವುದೂ ಇಲ್ಲವೆಂದು ಹೇಳಬಹುದು.

ಮೇಲ್ನೋಟಕ್ಕೆ ಈ ನಾಟಕದ ನಾಯಕನು ಚಾರುದತ್ತ ಎನ್ನುವ ಬ್ರಾಹ್ಮಣನು. ಮೊದಲು ಸಿರಿವಂತನಾಗಿದ್ದವನು ತನ್ನ ಉದಾರಬುದ್ಧಿಯಿಂದಾಗಿ ಸಂಪತ್ತನ್ನೆಲ್ಲ ಕಳೆದುಕೊಂಡು ಇದೀಗ ಬಡವನಾಗಿದ್ದಾನೆ. ಇವನ ಸದ್ಗುಣಗಳಿಗಾಗಿ ಉಜ್ಜಯಿನಿಯ  ಸಮಸ್ತ ಜನತೆ ಇವನನ್ನು ಆದರಿಸುತ್ತದೆ. ವಸಂತಸೇನೆ ಉಜ್ಜಯಿನಿಯ ಪ್ರಮುಖ ಗಣಿಕೆ. ಇವಳ ರೂಪಕ್ಕೆ ಲೋಭಗೊಂಡ, ಉಜ್ಜಯಿನಿಯ ರಾಜನ ಭಾವನಾದ ಭಂಡ ಶಕಾರನು ಇವಳ ಬೆನ್ನು ಹತ್ತಿದ್ದಾನೆ. ಆದರೆ ವಸಂತಸೇನೆಯು ಚಾರುದತ್ತನಿಗೆ ಮನಸೋತಿದ್ದಾಳೆ. ಶಕಾರನು ಈ ನಾಟಕದ ಖಳನಾಯಕ. ವಸಂತಸೇನೆಯ ಮೇಲೆ ಹಲ್ಲೆ ಮಾಡಿ, ಚಾರುದತ್ತನ ಮೇಲೆ ಕೊಲೆಯ ಆರೋಪವನ್ನು ಹೊರಿಸುತ್ತಾನೆ. ಆದರೆ ಕೊನೆಯಲ್ಲಿ ಶಕಾರನ ಆಟವು ಬಯಲಿಗೆ ಬಂದು ಚಾರುದತ್ತ ಹಾಗು ವಸಂತಸೇನೆ ಒಂದಾಗುತ್ತಾರೆ. ಇದಿಷ್ಟೇ ಮೃಚ್ಛಕಟಿಕಮ್ ನಾಟಕದ ಸರಳ ಕಥೆ.

ಈ ಸರಳ ಕಥೆಯ ಮೂಲಕ, ನಾಟಕಕಾರನು ತನ್ನ ಕಾಲದ ಉಜ್ಜಯಿನಿಯ ಜನಜೀವನವನ್ನೇ ಬಿಚ್ಚಿಟ್ಟಿದ್ದಾನೆ. ಉಜ್ಜಯಿನಿಯ ಸಮಾಜವ್ಯವಸ್ಥೆ ಹೇಗಿತ್ತು, ಆಡಳಿತವ್ಯವಸ್ಥೆ  ಹಾಗು ನ್ಯಾಯವ್ಯವಸ್ಥೆಗಳು ಹೇಗಿದ್ದವು ಎನ್ನುವುದೇ ಈ ನಾಟಕದ ಮುಖ್ಯ ವಿಷಯಗಳಾಗಿವೆ. ತನ್ನ ಕಾಲದ ಕೊಳೆತುಹೋದ ಗಣ್ಯರ ಸಮಾಜಕ್ಕೆ, ಭ್ರಷ್ಟ ನ್ಯಾಯವ್ಯವಸ್ಥೆಗೆ ಹಾಗು ಅನೈತಿಕ  ರಾಜಕಾರಣಕ್ಕೆ ಶೂದ್ರಕನು ಈ ನಾಟಕದ ಮೂಲಕ ಕನ್ನಡಿ ಹಿಡಿದಿದ್ದಾನೆ. ಆದುದರಿಂದ, ಗರತಿಯಾಗುವ ಬದಲು ‘ಘರವಾಲಿ’ಯಾದ ಉಜ್ಜಯಿನಿ ನಗರವೇ ಈ ನಾಟಕದ ನಿಜವಾದ ನಾಯಕ ಹಾಗು ಖಳನಾಯಕ! ‘ಇವಳ ಹೊಟ್ಟೆ ಚರಂಡಿಗಾರು ಕುಕ್ಕಿದರಯ್ಯ ಕಳ್ಳಬಸುರಿನ ಯಾವ ಜಾಣ ರಂಭೆ’ ಎನ್ನುವ ಗೋಪಾಲಕೃಷ್ಣ ಅಡಿಗರ ‘ಭೂಮಿಗೀತೆ’ಯ ಸಾಲು ಇಲ್ಲಿ ಅನ್ವಯಿಸುತ್ತದೆ ಎನ್ನಬಹುದು.

ಈ ಕೊಳೆಯನ್ನು ತೋರಿಸುವದಕ್ಕಷ್ಟೇ ಶೂದ್ರಕನು ಸಂತೃಪ್ತನಾಗಿಲ್ಲ. ತಳಮಟ್ಟದ ಜನತೆಯು ಒಂದುಗೂಡಿ, ಬಂಡೆದ್ದು ಪ್ರಭುತ್ವವನ್ನು ಕಿತ್ತೊಗೆಯುವಲ್ಲಿ ನಾಟಕವು ಕೊನೆಗಾಣುತ್ತದೆ. ಇಷ್ಟೆಲ್ಲ ಕಠೋರ ಒಳತಿರುಳನ್ನು ಹೊಂದಿದ ಈ ನಾಟಕಕ್ಕೆ, ಶೂದ್ರಕನು ಕೋಮಲ ಪ್ರೇಮದ ನಯವಾದ ಹೊದಿಕೆಯನ್ನು ಹೊಚ್ಚಿದ್ದಾನೆ.                  (ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು.’-ಗೋಪಾಲಕೃಷ್ಣ ಅಡಿಗ)

 ಮೃಚ್ಛಕಟಿಕಮ್ದಲ್ಲಿ ಲೋಪದ ಭಾಸ ಇಲ್ಲ ಅಂತಲ್ಲ. ಕೊನೆಯಲ್ಲಿ ಸಾತ್ವಿಕತೆಗೆ ಸಿಗುವ ಜಯವು ಸಪ್ಪೆಯಾಗಿದೆ ಎಂದು ಭಾಸವಾಗುತ್ತದೆ. ಶಕಾರನಿಗೆ ಹಾಗು ಆತನ ಭಾವನಾದ ರಾಜನಿಗೆ ತಕ್ಕ ಶಿಕ್ಷೆ ದೊರೆಯಿತು ಎಂದು ಪರದೆಯ ಹಿಂದೆಯಾದರೂ ತೋರಿಸಿದ್ದರೆ, ಪ್ರೇಕ್ಷಕರಲ್ಲಿ ಮೂಡಿದ್ದ ಉದ್ವಿಗ್ನತೆಗೆ  ಒಂದಷ್ಟು ಸಮಾಧಾನವಾಗುತ್ತಿತ್ತು. (ಫ್ರೆಂಚ್ ಕ್ರಾಂತಿಯಲ್ಲಿ ಗಣ್ಯರನ್ನು ಗಲ್ಲುಕತ್ತಿಗೆ ಬಲಿಕೊಟ್ಟ ಮೇಲೆಯೇ,  ರೊಚ್ಚಿಗೆದ್ದ ಜನತೆಗೆ ಸಮಾಧಾನವಾಗಲಿಲ್ಲವೆ?) ಆದರೆ ಭಾರತೀಯ ಪರಂಪರೆಯಲ್ಲಿ ನಾಟಕವು ದುಃಖಾಂತವಾಗಲು ಅವಕಾಶವಿಲ್ಲ. ಅಲ್ಲದೆ ತಿತಿಕ್ಷೆಯು ಭಾರತೀಯರ ಆದರ್ಶವಾಗಿದೆ. ಆದುದರಿಂದ ಚಾರುದತ್ತನ ಕ್ಷಮಾಗುಣವನ್ನು ತೋರಿಸಿದಾಗಲೇ, ಸಾತ್ವಿಕತೆಗೆ ಜಯ ದೊರಕಿತು ಎನ್ನುವ ತರ್ಕ ಮೆರೆಯುತ್ತದೆ. ಆದುದರಿಂದ ಮೇಲ್ನೋಟದ ಈ ಆಭಾಸವು  ನಿಜವಾದ ಲೋಪವಲ್ಲ.

ಶೂದ್ರಕನಿಗಿಂತ ಮೊದಲಿನ ನಾಟಕಕಾರರಾದ ಭಾಸ ಹಾಗು ಕಾಲೀದಾಸರು ಸಂಸ್ಕೃತದ ಶ್ರೇಷ್ಠ ನಾಟಕಕಾರರು ಎನ್ನುವುದು ನಿಜ. ಆದರೆ ಅವರ ನಾಟಕಗಳು ಪುರಾಣ ಮತ್ತು ಇತಿಹಾಸಗಳನ್ನು ಆಧರಿಸಿದ ರಾಜಮಹಾರಾಜರ ರಮ್ಯ ಕಥೆಗಳಾಗಿವೆ. ನಿತ್ಯಜೀವನದ ಕಟು ವಾಸ್ತವತೆಯ ಬಗೆಗೆ ಬರೆದ ಶ್ರೇಯಸ್ಸು ಶೂದ್ರಕನಿಗೆ ಮಾತ್ರ ಸಲ್ಲುತ್ತದೆ.

ಹಾಗೆಂದ ಮಾತ್ರಕ್ಕೆ ಕಾಲೀದಾಸ ಹಾಗು ಭಾಸರ ನಾಟಕಗಳನ್ನು ಕಡೆಗಾಣಿಸಿದಂತಲ್ಲ. ಕಾಲೀದಾಸನ ಅಭಿಜ್ಞಾನಶಾಕುಂತಲಮ್ಹಾಗು ಭಾಸನ ಸ್ವಪ್ನವಾಸವದತ್ತಾಇವು ವಿಶ್ವದ ಶ್ರೇಷ್ಠ ನಾಟಕಗಳೇ ಆಗಿವೆ. ಮೃಚ್ಛಕಟಿಕಮ್ ಒಂದು ಸಂಕೀರ್ಣವಾದ ಹಾಗು ವಾಸ್ತವ ಜನಜೀವನದ ನಾಟಕವಾಗಿದ್ದರೆ, ‘ಅಭಿಜ್ಞಾನಶಾಕುಂತಲಮ್ಒಂದು ಸರಳವಾದ, ರಮ್ಯವಾದ ನಾಟಕವಾಗಿದೆ. ಆದರೆ ಇಲ್ಲಿಯೂ ಸಹ ನಗರಜೀವನದ ಡಾಂಭಿಕತೆಯನ್ನು ಹಾಗು ಆಶ್ರಮಜೀವನದ ಮುಗ್ಧತೆಯನ್ನು ಅಕ್ಕಪಕ್ಕದಲ್ಲಿಟ್ಟು ತೋರಿಸಲಾಗಿದೆ. ಶಾಕುಂತಲಮ್ ಪ್ರಾರಂಭವಾಗುವುದು ಕಣ್ವಾಶ್ರಮದ ಪರಿಸರದಲ್ಲಿ, ಕೊನೆಯಾಗುವುದು ಮಾರೀಚಾಶ್ರಮದಲ್ಲಿ.  ನಡುವೆ ಅಲ್ಪಕಾಲದವರೆಗೆ ಕಾಣುವುದು ನಾಗರೀಕ ಜೀವನದ ಬೆರಗು-ಬುರುಗು.

ಮೃಗಯಾವಿನೋದಕ್ಕಾಗಿ ಕಾಡನ್ನು ಹೊಕ್ಕ ದುಷ್ಯಂತ ಮಹಾರಾಜನು ಕಣ್ವಾಶ್ರಮದ ಸನಿಹಕ್ಕೆ ಬಂದಿದ್ದಾನೆ. ಹಿಂಸ್ರ ಮೃಗಗಳನ್ನು ಬೇಟೆಯಾಡುವ ಬದಲು ಆತನು ಆಶ್ರಮದ ಚಿಗರಿಗಳ ಮೇಲೆ ಬಾಣದ ಗುರಿಯನ್ನಿಟ್ಟಿದ್ದಾನೆ. ಇದು ವಿವೇಚನಾಶೂನ್ಯವಾದ ರಾಜಧರ್ಮವನ್ನು ತೋರಿಸುತ್ತದೆ. ಅತಿಕ್ರಮಿಸು, ಕೊಲ್ಲು, ಅಪಹರಿಸುಇದು ಎಲ್ಲಕಾಲದ ರಾಜಧರ್ಮವಾಗಿದೆ. ಇದರ ವಿರುದ್ಧವಾಗಿರುವುದು ಆಶ್ರಮಧರ್ಮ. ದುಷ್ಯಂತನು ಮೃಗಯಾವಿನೋದಕ್ಕಾಗಿ ಕಾಡಿನಲ್ಲಿಯ ಪ್ರಾಣಿಗಳನ್ನು ಬೇಟೆಯಾಡುತ್ತ ಹೊರಟಿರುವುದು ನಾಟಕದ ಮೊದಲ ಅಂಕದಲ್ಲಿದ್ದರೆ, ಆತನ ಮಗನಾದ ಪುಟ್ಟ ಬಾಲಕ ಭರತನು ಸಿಂಹದ ಮರಿಯನ್ನು ಪಳಗಿಸಿ, ಅದರ ಜೊತೆಗೆ ಆಟವಾಡುತ್ತಿರುವುದು ಕೊನೆಯ ಅಂಕದಲ್ಲಿದೆ. ಇದೇ ನಿಜವಾದ ರಾಜಧರ್ಮ ಎನ್ನುವುದು ಕಾಲೀದಾಸನ ಸಂದೇಶವಾಗಿದೆ. ಇದಲ್ಲದೆ, ಶಕುಂತಲೆಯೂ ಸಹ ನಿಸರ್ಗಧರ್ಮದ ಸಾಕಾರಮೂರ್ತಿಯೇ ಆಗಿದ್ದಾಳೆ. ಕಣ್ವಾಶ್ರಮದಲ್ಲಿ ಅವಳು ಸಾಕುಪ್ರಾಣಿಗಳನ್ನಷ್ಟೇ ಅಲ್ಲ, ತಾನು ಬೆಳೆಸಿದ ಹೂಬಳ್ಳಿಗಳನ್ನೂ ಸಹ ಪ್ರೀತಿಸುತ್ತಿದ್ದಳು. ಕಣ್ವಾಶ್ರಮವನ್ನು ಬಿಟ್ಟು, ದುಷ್ಯಂತನ ಅರಮನೆಗೆ ಹೋಗುವ ಸಂದರ್ಭದಲ್ಲಿ, ತಾನು ಬೆಳೆಸಿದ ಹೂಬಳ್ಳಿಗಳನ್ನು ಜೋಪಾನ ಮಾಡಲು ಅವಳು ತನ್ನ ಸಖಿಯರಿಗೆ ಹೇಳಿ ಹೋಗುತ್ತಾಳೆ. ಮಾರೀಚಾಶ್ರಮದಲ್ಲಿ ದುಷ್ಯಂತನ ಭೆಟ್ಟಿಯಾದಾಗ, ಪಶ್ಚಾತ್ತಾಪದಗ್ಧನಾದ ಅವನನ್ನು, ಶಕುಂತಲೆ ಉದಾರವಾಗಿ ಕ್ಷಮಿಸಿ ಸ್ವೀಕರಿಸುತ್ತಾಳೆ. ಇದು ಮಾನವಧರ್ಮ. ‘ಅಭಿಜ್ಞಾನಶಾಕುಂತಲಮ್’ ಎನ್ನುವ ಸರಳ ನಾಟಕದ ಮೂಲಕ ಕಾಲೀದಾಸನು ಬದುಕಿಗೆ ಯಾವುದು ಹಿತವಾದದ್ದು ಎನ್ನುವ ಸತ್ಯವನ್ನು ತೋರಿಸುತ್ತಿದ್ದಾನೆ.

ಶಾಕುಂತಲಮ್ ನಾಟಕದ ಪ್ರಾರಂಭ, ಮಧ್ಯಭಾಗ ಹಾಗು ಕೊನೆ ಈ ಮೂರು ಭಾಗಗಳಲ್ಲಿ ನಾವು ವಾಸ್ತವತೆಯನ್ನು ಮೀರಿದ, ರಮ್ಯ fantasyಯ ಸಂದರ್ಭಗಳನ್ನು ಕಾಣಬಹುದು. ಶಕುಂತಲೆಯ ಸುತ್ತಲೂ ಸುತ್ತುತ್ತಿದ್ದ ಭ್ರಮರವನ್ನು ಓಡಿಸುವ ಮೂಲಕ, ದುಷ್ಯಂತನು ತಾನೇ ಭ್ರಮರವಾಗಿ ಅವಳನ್ನು ಪ್ರೇಮಜಾಲದಲ್ಲಿ ಸಿಲುಕಿಸುತ್ತಾನೆ. ಶಕುಂತಲೆ ಕಮಲದ ಎಲೆಯ ಮೇಲೆ ತನ್ನ ಕಣ್ಣಿನ ಕಾಡಿಗೆಯಿಂದ ಪ್ರೇಮಪತ್ರವನ್ನು ಬರೆದು ತೊರೆಯಲ್ಲಿ ತೇಲಿಬಿಡುತ್ತಾಳೆ.  ಕೊನೆಯ ಅಂಕದಲ್ಲಿ ಭರತನು ಸಿಂಹದ ಮರಿಯ ಜೊತೆಗೆ ಆಟವಾಡುತ್ತಿದ್ದಾನೆ(ಬಾಯಿ ತೆರೆ ಸಿಂಹವೆ, ನಿನ್ನ ಹಲ್ಲುಗಳನ್ನು ಎಣಿಸುತ್ತೇನೆ’). ಆತನನ್ನು ಕಂಡ ದುಷ್ಯಂತನಲ್ಲಿ ಆಪತ್ಯಪ್ರೇಮ ಸ್ಫುರಣವಾಗುತ್ತದೆ. ಈ ಎರಡು ರಮ್ಯ fantasyಗಳ ನಡುವೆ ಶಕುಂತಲೆಗೆ ದುಷ್ಯಂತನು ಕೊಟ್ಟ ಮುದ್ರಿಕೆ ಕಳೆದು ಹೋಗುವುದು ಹಾಗು ದೂರ್ವಾಸ ಶಾಪದಿಂದಾಗಿ ದುಷ್ಯಂತನಿಗೆ ಶಕುಂತಲೆಯ ನೆನಪು ಹೋಗುವುದು ಎನ್ನುವಂತಹ ವಿಧಿನಿಯಮಿತ ವಿಪರ್ಯಾಸ ಘಟನೆಗಳು ನಡೆಯುತ್ತವೆ. ಹೀಗಾಗಿ ದುಷ್ಯಂತನಿಂದ ಪರಿತ್ಯಕ್ತಳಾದ ಶಕುಂತಲೆಯು ಭೂಗರ್ಭವನ್ನು ಸೇರಿಕೊಳ್ಳುತ್ತಾಳೆ. ಇವೆಲ್ಲವೂ ವಾಸ್ತವತೆಯನ್ನು ಮೀರಿದ ಘಟನೆಗಳು. ಹಾಗೆ ನೋಡಿದರೆ, ಶಕುಂತಲೆಯು ಸಹ ಭೂಲೋಕದ ತಂದೆ ಹಾಗು ದೇವಲೋಕದ ತಾಯಿಗೆ ಹುಟ್ಟಿದವಳಾಗಿ, ಶಕುಂತ ಪಕ್ಷಿಗಳಿಂದ ಪಾಲಿತಳಾದ ಶಿಶುವಾಗಿ ರಮ್ಯ fantasyಯನ್ನು ಮೈಗೂಡಿಸಿಕೊಂಡವಳೇ! ಈ ರಮ್ಯತೆ ಹಾಗು ಈ fantasyಗಳ ಮೂಲಕ, ಹಾಗು ಕೆಲವು ಅವಾಸ್ತವ ಘಟನೆಗಳ ಮೂಲಕ ಕಾಲೀದಾಸನು ವಾಸ್ತವದ  ಬದುಕು ಸುಮುಖವಾಗಿರಲು ಹೇಗಿರಬೇಕು ಎನ್ನುವುದನ್ನು ಬಿಂಬಿಸುತ್ತಿದ್ದಾನೆ.

ಸಂಸ್ಕೃತದ ಎರಡು ಶ್ರೇಷ್ಠ ನಾಟಕಗಳಾದ ಅಭಿಜ್ಞಾನಶಾಕುಂತಲಮ್ಹಾಗು ಮೃಚ್ಛಕಟಿಕಮ್ನಾಟಕಗಳು ಎಷ್ಟು ವಿಭಿನ್ನವಾಗಿವೆ ಎನ್ನುವದನ್ನು ಈ ರೀತಿಯಲ್ಲಿ ನಾವು ನೋಡಬಹುದು: ಮೊದಲನೆಯದು ವಾಸ್ತವತೆಯನ್ನು ಮೀರಿದ ನಾಟಕವಾದರೆ, ಎರಡನೆಯದು, ಕಟುವಾಸ್ತವತೆಯ ನಾಟಕವಾಗಿದೆ.

(ಕಾಲೀದಾಸನ ಪ್ರಖ್ಯಾತ ಕಾವ್ಯವಾದ ಮೇಘದೂತವೂ ಸಹ ಯಕ್ಷಲೋಕದ ಕಾವ್ಯವಾಗಿದೆ. ಶಾಪಗ್ರಸ್ತನಾಗಿ ಭೂಲೋಕಕ್ಕೆ ಇಳಿದ ಯಕ್ಷನು ಆಷಾಢದ ಮೊದಲ ಮೋಡವನ್ನು ನೋಡಿ, ಅದರೊಡನೆ ತನ್ನ ಕೆಳದಿಗೆ ಕಳುಹಿಸುವ ಸಂದೇಶವೂ ಸಹ ಒಂದು ರಮ್ಯವಾದ fantasy ಅಲ್ಲವೆ?)

ಕಾಲೀದಾಸನು ಶೂದ್ರಕನಿಗಿಂತ ಮೊದಲಿನವನು. ಭಾಸನು ಕಾಲೀದಾಸನಿಗಿಂತ ಮೊದಲನೆಯವನು. ನಾಟಕೀಯತೆಯಲ್ಲಿ ಭಾಸನನ್ನು ಮೀರಿಸಿದವರು ಬಹುಶಃ ಯಾರೂ ಇಲ್ಲ. ಭಾಸನು ಬರೆದ ಪ್ರತಿಮಾಗೃಹ, ಮಧ್ಯಮವ್ಯಾಯೋಗ ಹಾಗು ಸ್ವಪ್ನವಾಸವದತ್ತಾ ಇವು ನಾಟಕೀಯತೆಯ ಅತ್ಯುತ್ತಮ ಉದಾಹರಣೆಗಳಾಗಿವೆ.

ಪ್ರತಿಮಾಗೃಹದ ಕಥಾನಕ ಹೀಗಿದೆ:
ರಾಮಚಂದ್ರನು ಅಯೋಧ್ಯೆಯನ್ನು ತೊರೆದು ವನವಾಸಕ್ಕೆ ಹೋಗಿದ್ದಾನೆ. ಭರತನಿಗೆ ತಕ್ಷಣವೇ ಅಯೋಧ್ಯೆಗೆ ಬರಲು ಕರೆ ಹೋಗುತ್ತದೆ. ಆದರೆ ಆತನಿಗೆ ತನ್ನ ತಂದೆ ದಶರಥನು ಮರಣ ಹೊಂದಿದ ವಿಷಯ ತಿಳಿದಿಲ್ಲ. ಅಯೋಧ್ಯೆಯ ಹೊರವಲಯದವರೆಗೆ ಭರತ ಬಂದಿದ್ದಾನೆ. ಅಲ್ಲಿ ಕ್ಷಣ ಕಾಲದವರೆಗೆ ವಿಶ್ರಮಿಸಿಕೊಳ್ಳುವ ವಿಚಾರದಿಂದ, ಅಲ್ಲಿಯೇ ಇದ್ದ ಪ್ರತಿಮಾಗೃಹಕ್ಕೆ ಭರತ ಹಾಗು ಆತನ ರಥದ  ಸಾರಥಿ ಬರುತ್ತಾರೆ. ಪ್ರತಿಮಾಗೃಹದಲ್ಲಿ ರಘುವಂಶದ ರಾಜರ ಪುತ್ಥಳಿಗಳನ್ನು ಇಡಲಾಗಿದೆ. ಎಲ್ಲವನ್ನೂ ನೋಡುತ್ತ ಬಂದ ಭರತನಿಗೆ, ಕೊನೆಯಲ್ಲಿ ತನ್ನ ತಂದೆಯಾದ  ದಶರಥನ ಪ್ರತಿಮೆ ಕಾಣುತ್ತದೆ. ಚಕಿತನಾದ ಭರತನು ಇಲ್ಲಿ ಜೀವಂತವಿರುವ ರಾಜರ ಪುತ್ಥಳಿಗಳನ್ನೂ ಇಡಲಾಗುತ್ತದೆಯೆ’, ಎಂದು ಅಲ್ಲಿಯ ಮೇಲ್ವಿಚಾರಕನಿಗೆ ಕೇಳುತ್ತಾನೆ. ಇಲ್ಲ, ಇಲ್ಲಿ ಕೇವಲ ನಿಧನರಾದ ರಾಜರ ಪುತ್ಥಳಿಗಳನ್ನು ಮಾತ್ರ ಇಡಲಾಗುತ್ತದೆಎನ್ನುವುದು ಮೇಲ್ವಿಚಾರಕನ ಉತ್ತರ. ಭರತನಿಗೆ ಇದರಿಂದ ಬರಸಿಡಿಲು ಬಡಿದಂತಾಗುತ್ತದೆ.

ಮಧ್ಯಮವ್ಯಾಯೋಗವಂತೂ ನಾಟಕೀಯತೆಯ ಶಿಖರಸ್ಥಾನದಲ್ಲಿದೆ. ಪಾಂಡವರು ಮೊದಲೊಮ್ಮೆ ಅರಗಿನ ಅರಮನೆಯಿಂದ ಪಾರಾಗಿ, ಅಡವಿಯಲ್ಲಿ ಹಾಯ್ದು ಹೋಗುವಾಗ, ಭೀಮಸೇನನು ಹಿಡಿಂಬನನ್ನು ಕೊಂದು, ಅವನ ತಂಗಿಯಾದ ಹಿಡಿಂಬಿಯನ್ನು ಮದುವೆಯಾಗಿದ್ದನಷ್ಟೇ. ಇದೀಗ ಪಾಂಡವರು ಮತ್ತೊಮ್ಮೆ ಅಡವಿಯಲ್ಲಿ ಹಾಯ್ದು ಹೊರಟಿದ್ದಾರೆ. ಭೀಮಸೇನ ಹಾಗು ಹಿಡಂಬಿಯ ಮಗನಾದ ಘಟೋತ್ಕಚನು ತರುಣನಾಗಿ ಬೆಳೆದಿದ್ದಾನೆ. ತನ್ನ ತಾಯಿಯ ಆಣತಿಯ ಮೇರೆಗೆ, ಅವಳ ಭಕ್ಷಣೆಗಾಗಿ ಓರ್ವ ಮನುಷ್ಯನನ್ನು ಹುಡುಕುತ್ತ ಘಟೋತ್ಕಚನು ಅಡವಿಯಲ್ಲಿ ಸಂಚರಿಸುತ್ತಿದ್ದಾನೆ. ಆ ಸಮಯದಲ್ಲಿ ಓರ್ವ ಬ್ರಾಹ್ಮಣ,ಅವನ ಹೆಂಡತಿ ಹಾಗು ಅವರ ಮೂವರು ಗಂಡುಮಕ್ಕಳು ಸಹ ಅಡವಿಯ ಮೂಲಕ ಸಾಗುತ್ತಿದ್ದಾರೆ. ತಂದೆ, ತಾಯಿಯರಿಗೆ ನೀರಡಿಕೆಯಾದಾಗ, ನಡುವಿನ ಮಗನು ನೀರನ್ನು ಹುಡುಕುತ್ತ ಹೋಗಿದ್ದಾನೆ. ಆ ಸಮಯದಲ್ಲಿ ಅಲ್ಲಿಗೆ ಬಂದ ಘಟೋತ್ಕಚನು, ಅಲ್ಲಿರುವ ಇಬ್ಬರು ಹುಡುಗರಲ್ಲಿ ಒಬ್ಬನು ತನ್ನ ತಾಯಿಯ ಭಕ್ಷಣೆಗಾಗಿ ಬೇಕಾಗಿದ್ದಾನೆ ಎಂದು ಗದರಿಸುತ್ತಾನೆ. ಮೊದಲಿನ ಮಗನನ್ನು ಕೊಡಲು ತಂದೆಗೆ ಮನಸ್ಸಿಲ್ಲ, ಕೊನೆಯ ಮಗನನ್ನು ಕೊಡಲು ತಾಯಿಗೆ ಮನಸ್ಸಿಲ್ಲ. ಆದುದರಿಂದ ನಡುವಿನ ಮಗನನ್ನು ಕೊಡಲು ಅವರು ಒಪ್ಪಲೇ ಬೇಕಾಗುತ್ತದೆ. ಆ ಮಗನನ್ನು ಕರೆಯಲು ಘಟೋತ್ಕಚನು ಆ ದಂಪತಿಗಳಿಗೆ ಸೂಚಿಸುತ್ತಾನೆ. ಮೃತ್ಯುಮುಖದಲ್ಲಿ ಹೋಗಲು ಬಾಎಂದು ಕರೆಯುವಾಗ, ತಮ್ಮ ಮಗನ ಹೆಸರು ಹಿಡಿದು ಕರೆಯಲು ಸಹ್ಯವಾಗದ ಬ್ರಾಹ್ಮಣನು, ‘ಮಧ್ಯಮಾ ಬಾಎಂದು ಕೂಗುತ್ತಾನೆ. ಅದೇ ಸಮಯದಲ್ಲಿ, ಅನತಿ ದೂರದಲ್ಲಿದ್ದ, ಮಧ್ಯಮಪಾಂಡವನಾದ ಭೀಮಸೇನನು ಮಧ್ಯಮಾಎಂದರೆ ತಾನೇ ಎಂದು ಅರ್ಥೈಸಿಕೊಂಡು ಅಲ್ಲಿಗೆ ಬರುತ್ತಾನೆ. ಆ ಕುಟುಂಬವನ್ನು ರಾಕ್ಷಸನಿಂದ ರಕ್ಷಿಸುವುದು ತನ್ನ ಕರ್ತವ್ಯವೆಂದು ಭಾವಿಸಿದ ಭೀಮಸೇನನು ಘಟೋತ್ಕಚನೊಡನೆ ಹೋರಾಡುತ್ತಾನೆ. ಘಟೋತ್ಕಚನಿಗೆ ಈತನು ತನ್ನ ತಂದೆ ಭೀಮಸೇನ ಎಂದು ಗೊತ್ತಿಲ್ಲ. ಆದರೆ ಘಟೋತ್ಕಚನ ಮಾತಿನಿಂದಾಗಿ ಭೀಮಸೇನನಿಗೆ ಈತನು ತನ್ನ ಮಗನು ಎನ್ನುವುದು ಗೊತ್ತಾಗುತ್ತದೆ. ಆತನ ಶೌರ್ಯವನ್ನು ನೋಡಿ ಸಂತೋಷವೂ ಆಗುತ್ತದೆ. ಕೊನೆಗೊಮ್ಮೆ ಭೀಮನು ಸೋತಂತೆ ನಟಿಸಿ, ಘಟೋತ್ಕಚನ ಬಂಧಿಯಾಗುತ್ತಾನೆ. ಘಟೋತ್ಕಚನು ಭೀಮಸೇನನನ್ನು ತನ್ನ ತಾಯಿಯ ಬಳಿಗೆ ಎಳೆದೊಯ್ಯುತ್ತಾನೆ. ಹಿಡಂಬಿಯು ಆಶ್ಚರ್ಯವನ್ನು ನಟಿಸಿ, ಬಳಿಕ ಇವನು ನಿನ್ನ ತಂದೆ, ಭೀಮಸೇನನುಎಂದು ಘಟೋತ್ಕಚನಿಗೆ ಹೇಳುತ್ತಾಳೆ. ಹಿಡಂಬಿಯು ಭೀಮಸೇನನ ಕಿವಿಯಲ್ಲಿ ಏನೋ ಉಸುರುತ್ತಾಳೆ. ಪ್ರೇಕ್ಷಕರಿಗೆ ಅದು ಕೇಳಲಾರದು. ಆದರೆ ಭೀಮಸೇನನು, ‘ಹಿಡಿಂಬೆ, ನೀನು ರಾಕ್ಷಸಕುಲದಲ್ಲಿ ಹುಟ್ಟಿದ್ದರೂ ಸಹ ಆರ್ಯಸ್ತ್ರೀಯಂತೆಯೇ ಇರುವಿಎನ್ನುತ್ತಾನೆ. ಈಗ ಬರುವ ಪ್ರಶ್ನೆ: ಹಿಡಿಂಬಿಯ ಭೀಮಸೇನನ ಕಿವಿಯಲ್ಲಿ ಏನನ್ನು ಪಿಸುಗುಟ್ಟಿದಳು? ಇದು ಪ್ರೇಕ್ಷಕರ ಊಹೆಗೆ ಬಿಟ್ಟಿದ್ದು. ಈ ರೀತಿಯಾಗಿ ಕೊನೆಗೊಳ್ಳುವ ನಾಟಕ ಬೇರೆಲ್ಲೆಯಾದರೂ ಸಿಕ್ಕೀತೆ?

ಈ ಕೊನೆಯ ಕ್ಷಣದಲ್ಲಿ ಪ್ರೇಕ್ಷಕನಿಗೆ ಹೊಳೆಯುವ ಸತ್ಯವೇನೆಂದರೆ: ಪಾಂಡವರು ಅರ್ಥಾತ್ ಭೀಮಸೇನನು ಅಡವಿಯಲ್ಲಿ ಬರುತ್ತಿರುವ ಸಂಗತಿಯು ಹಿಡಿಂಬಿಗೆ ಗೊತ್ತಾಗಿತ್ತು. ದೀರ್ಘವಿರಹದ ನಂತರ ಅವನನ್ನು ಸಂಧಿಸಲು ಅವಳು ಕಾತುರಳಾಗಿದ್ದಳು. ಆದರೆ ಆ ಪ್ರದೇಶದ ರಾಣಿಯಾದ ಅವಳು ತಾನೇ ಅವರಲ್ಲಿಗೆ ಹೋಗುವುದು ಶಿಷ್ಟಾಚಾರವಲ್ಲ ಎಂದು ಭಾವಿಸಿ, ತನ್ನ ಮಗ ಘಟೋತ್ಕಚನಿಗೆ ಒಂದು ನೆವ ಹೇಳಿ ಅಲ್ಲಿಗೆ ಕಳುಹಿಸಿದಳು. ಈ ರೀತಿಯಲ್ಲಿ ತಂದೆ ಮಕ್ಕಳ ಭೆಟ್ಟಿಯನ್ನು ಸಹ ಮಾಡಿಸಿದಳು. (ಭೀಮಸೇನ ಹಾಗು ಘಟೋತ್ಕಚರ ಹಣಾಹಣಿಯೂ ಸಹ ತುಂಬ ನಾಟಕೀಯವಾಗಿದೆ.) ಆ ಬಳಿಕ, ಹಿಡಿಂಬಿಯು ಭೀಮಸೇನನ ಜೊತೆಗೆ ಏಕಾಂತಮಿಲನದ ತನ್ನ ಕಾತುರತೆಯನ್ನು ಅವನ ಕಿವಿಯಲ್ಲಿ ಪಿಸುಗುಟ್ಟಿರಬಹುದು! 

ಇಡೀ ‘ಮಧ್ಯಮ ವ್ಯಾಯೋಗ’  ನಾಟಕವು ಒಂದೇ ಪರಿಸರದಲ್ಲಿ ಹಾಗು ಒಂದೇ ಕಾಲದಲ್ಲಿ ಜರಗುತ್ತದೆ. ನಾಟಕದಲ್ಲಿಯ ಮುಖ್ಯ ಕ್ರಿಯೆಯೂ ಒಂದೇ ಆಗಿದೆ. ಆದುದರಿಂದ ಗ್ರೀಕ್ ನಾಟಕಶಾಸ್ತ್ರದಲ್ಲಿ ಹೇಳಲಾದ, ‘ಸ್ಥಳೈಕ್ಯ’ ‘ಕಾಲೈಕ್ಯ’ ಹಾಗು ‘ಕ್ರಿಯೈಕ್ಯ’ಗಳು ಈ ನಾಟಕದಲ್ಲಿ ಕಂಡುಬರುವ ವಿಶೇಷತೆಗಳಾಗಿವೆ.

ಸ್ವಪ್ನವಾಸವದತ್ತಾಅಂತೂ ಭ್ರಮಾವಿಲಾಸದ ರಮ್ಯ ನಾಟಕವಾಗಿದೆ. ಒಂದು ಸಣ್ಣ ರಾಜ್ಯದ ರಾಜನಾದ ಉದಯನನಿಗೆ ತನ್ನ ಹೆಂಡತಿ ವಾಸವದತ್ತೆಯಲ್ಲಿ ಅತೀವ ಪ್ರೀತಿ ಇದೆ. ಉದಯನನ ಮುಖ್ಯ ಮಂತ್ರಿಯಾದ ಯೌಗಂಧರಾಯಣನಿಗೆ, ರಾಜಕೀಯ ಕಾರಣಗಳಿಗಾಗಿ ಉದಯನನಿಗೆ ನೆರೆಯ ರಾಜ್ಯದ ರಾಜಕುಮಾರಿಯ ಜೊತೆಗೆ ಎರಡನೆಯ ಮದುವೆ ಮಾಡಿಸುವ ವಿಚಾರವಿದೆ. ಆದರೆ ವಾಸವದತ್ತೆ ಇರುವವರೆಗೆ ಉದಯನನು ಎರಡನೆಯ ಮದುವೆಗೆ ಒಪ್ಪಲು ಸಾಧ್ಯವಿರಲಿಲ್ಲ. ಆ ಕಾರಣಕ್ಕಾಗಿ ಆತನು ವಾಸವದತ್ತೆಯು ಅಗ್ನಿಅವಘಡದಲ್ಲಿ ಮೃತಳಾದಳು ಎನ್ನುವ ಸುಳ್ಳನ್ನು ಹಬ್ಬಿಸಿ, ಅವಳನ್ನು ನೆರೆರಾಜ್ಯದ ರಾಜಕುಮಾರಿಯ ಆಶ್ರಯದಲ್ಲಿ ಅನಾಮಿಕಳನ್ನಾಗಿ ಇಡುತ್ತಾನೆ. ಉದಯನನು ಆನೆಯನ್ನು ಹಿಡಿಯಲು ಕಾಡಿಗೆ ಹೋದಾಗ, ಕೃತಕ ಆನೆಯನ್ನು ನಿಲ್ಲಿಸಿದ್ದ ಪಕ್ಕದ ರಾಜ್ಯದ ಸೈನಿಕರು ಈತನನ್ನು ಬಂಧಿಸಿ, ತಮ್ಮ ರಾಜ್ಯಕ್ಕೆ ಒಯ್ಯುತ್ತಾರೆ. ಅಲ್ಲಿಯ ರಾಜಕುಮಾರಿಯು ಇವನಲ್ಲಿ ಅನುರಕ್ತಳಾಗುತ್ತಾಳೆ. ಆದರೆ ಉದಯನನಿಗೆ ಹಗಲಿರುಳೂ ವಾಸವದತ್ತೆಯದೇ ಕನವರಿಕೆ. ಒಮ್ಮೆ ಉದಯನನು ಉಪವನದ ವಿಶ್ರಾಂತಿಗೃಹದಲ್ಲಿ ಮಲಗಿಕೊಂಡಿರುವಾಗ, ವಾಸವದತ್ತೆ ಅಲ್ಲಿಗೆ ಬರುತ್ತಾಳೆ. ಉದಯನನನ್ನು ನೋಡುತ್ತಾಳೆ. ಪ್ರೀತಿಯಿಂದ ಅವನನ್ನು ನೇವರಿಸಿ, ಥಟ್ಟನೆ ಮಾಯವಾಗುತ್ತಾಳೆ. ಎಚ್ಚತ್ತ ಉದಯನನು ಇದು ನನ್ನ ಭ್ರಮೆಯಲ್ಲ, ಸ್ವತಃ ವಾಸವದತ್ತೆಯೇ ನನ್ನನ್ನು ಮುಟ್ಟಿದ್ದಳುಎಂದುಕೊಳ್ಳುತ್ತಾನೆ. ಈ ಸನ್ನಿವೇಶವನ್ನು ಭಾಸನು ಅತ್ಯಂತ ನಾಟಕೀಯವಾಗಿ, ರಮ್ಯವಾಗಿ ನಿರೂಪಿಸಿದ್ದಾನೆ.

ಭಾಸ, ಕಾಲೀದಾಸ ಹಾಗು ಶೂದ್ರಕ ಈ ತ್ರಿಮೂರ್ತಿಗಳು ಸಂಸ್ಕೃತದ ಶ್ರೇಷ್ಠ ನಾಟಕಕಾರರು. ಭಾರತೀಯ ಸಾಹಿತ್ಯದ ಕೋಡುಗಳಾದ ಇವರಿಗೆ ನನ್ನ ವಿನೀತ ಪ್ರಣಾಮಗಳು.

15 comments:

Badarinath Palavalli said...

ಉತ್ತಮ ಸರಣಿಯನ್ನು ಓದಿದ ಅನುಭವ ನಮಗೆ ಸಿಕ್ಕಿತು.
ಸರಳ ನಿರೂಪಣೆಯಲ್ಲಿ ಓಳಿಕೆಯಲ್ಲಿ ಮಗುವಿಗೆ ಹಾಲುಣಿಸಿದ ಪರಿಯಲ್ಲಿ ಸಂಸ್ಕೃತವನ್ನು ಕನ್ನಡಿಗರಿಗಾಗಿ ಕಟ್ಟಿಕೊಟ್ಟ ತಮಗೆ ಅನನ್ಯ ಶರಣು.

ತಮ್ಮಿಂದ ನಮಗೆ ಮಹದುಪಕಾರವಾಗಿ ಮಾಘನ ಶಿಶುಪಾಲ ವಧವು ಬರಹವಾಗಿ ಬಂದರೆ ನಾವು ಕೃತಾರ್ಥರು.

ಈ ಇಡೀ ಮಾಲಿಕೆಯನ್ನು ಮುದ್ರಿಸಿಕೊಂಡು ಇದೀಗ ಜತನ ಮಾಡಿಟ್ಟಿದ್ದೇನೆ.

sunaath said...

ಧನ್ಯವಾದಗಳು, ಬದರೀನಾಥರೆ. ಬನ್ನಂಜೆ ಗೋವಿಂದಾಚಾರ್ಯರ ಅನುವಾದವನ್ನು ಆಧರಿಸಿ ನಾನು ಈ ಬರಹವನ್ನು ಬರೆದಿದ್ದೇನೆ. ಸಂಸ್ಕೃತ ನನಗೆ ಬಾರದು. ಅದೇ ಕಾರಣಕ್ಕಾಗಿ,‘ಶಿಶುಪಾಲವಧಾ’ ನನಗೆ ಕನ್ನಡದಲ್ಲಿ ಓದಲು ದೊರೆತರೆ ಮಾತ್ರ ನನಗೆ ತಿಳಿದದ್ದನ್ನು ನಾನು ಬರೆಯಬಹುದು. ಸಲಹೆಗಾಗಿ ಋಣಿಯಾಗಿದ್ದೇನೆ.

Badarinath Palavalli said...

ಸಲಹೆ ಅಲ್ಲ ಸಾರ್, ಇದು ಬಿನ್ನಹ..

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ,
ನಿಮ್ಮಳನಿಮ್ಮ ಪೋಸ್ಟುಗಳನ್ನೋದಿದರೆ ಆಹಾ ಎಂಬ ಉದ್ಘಾರದ ಹೊರತಾಗಿ ಬೇರೆ ಮಾತೆ ಬರುವುದಿಲ್ಲ.
ನಾನು ಚಿಕ್ಕವಳಿದ್ದಾಗ ಅಜ್ಜ ಹೇಳಿದ ಯಾವ ಕತೆಯೂ ನನ್ನನ್ನು ಕೂಡಲೆ ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗಿ ಆ ಕತೆಯ ಪಾತ್ರಗಳ ಸಮೀದಲ್ಲೇ ನನ್ನನ್ನು ಓಡಾಡಿಸುತ್ತಿತ್ತು.
ನಿಮ್ಮ ಬರಹಗಳನ್ನೋದಿದಾದ ಅದೇ ಅನುಭವ ಆಗುತ್ತದೆ ನನಗೆ.
ಉತ್ಕೃಷ್ಟ ಕೃತಿಗಳನ್ನ ನಮ್ಮಂತ ಕಿರಿಯರಿಗೆ ಪರಿಚಯಿಸಲು ಇದಕ್ಕಿಂತ ಉತ್ತಮವಾದ ಮಾರ್ಗವೇ ಇಲ್ಲ ಅನ್ನಿಸುತ್ತೆ ನನಗೆ.

ವಂದನೆಗಳು ಕಾಕಾ
ಪ್ರೀತಿಯಿಂದ
ಸಿಂಧು

sunaath said...

ಸಿಂಧು,
ನನಗೆ ಚಂದ ಕಂಡಿದ್ದನ್ನು ನಿಮಗೆ ಹೇಳುತ್ತೇನೆ. ನಿಮ್ಮ ಚಂದದ ಕವನಗಳನ್ನು ಓದಿ ಆನಂದಿಸುತ್ತೇನೆ. ಇದು ಹೀಗೆಯೇ ಮುಂದೆ ಸಾಗಬೇಕಲ್ಲವೆ?

Subrahmanya said...

ಮೃಚ್ಛಕಟಿಕಮ್ ನ ಹನ್ನೊಂದು ಭಾಗಗಳನ್ನೂ ಪ್ರಿಂಟ್ ತೆಗೆದುಕೊಂಡು ನನ್ನ ತಾಯಿಯವರಿಗೆ ಓದಲು ಕೊಟ್ಟಿದ್ದೇನೆ. ನಿಮ್ಮ ಸರಳವಾದ ನಿರೂಪಣಾ ಶೈಲಿಯು ನಾಟಕವನ್ನು ಅರಿಯಲು ಸಹಾಯ ಮಾಡಿತು. ಕಡೆಯ ಕಂತು (ಮೂರು ನಾಟಕಗಳ ವಿಮರ್ಷೆ ) ಉಪಸಂಹಾರವಾಗಿ ಮೂಡಿಬಂದಿದೆ. ಇದರಿಂದ ಒಂದಷ್ಟು ಸಂದೇಹಗಳು ನಿವಾರಣೆಯಾಯಿತು.

sunaath said...

ಸುಬ್ರಹ್ಮಣ್ಯರೆ, ಧನ್ಯವಾದಗಳು.
ಸಂಸ್ಕೃತ ನನಗೆ ಬಾರದು. ಹೀಗಾಗಿ ನಾಟಕವನ್ನು ಮೂಲದಲ್ಲಿಯೇ ಓದಲು ಆಗಿಲ್ಲ. ಪ್ರತಿಬಿಂಬವೇ (ಅನುವಾದವೇ) ಇಷ್ಟು ಸುಂದರವಾಗಿರುವಾಗ, ಬಿಂಬ (ಮೂಲನಾಟಕ) ಎಷ್ಟು ಚೆನ್ನಾಗಿರಬಹುದು ಎಂದು ಅನಿಸುತ್ತದೆ.

Anil Talikoti said...

ಸುನಾಥರೆ
ಪ್ರಪಂಚದ ಎಲ್ಲಾ ಮೂಲ ತತ್ವಗಳು ಸರಳವಾಗಿರುವದರಿಂದಲೇ ಸುಂದರವಾಗಿರುತ್ತವೆ ಎನ್ನುವಂತೆ ನಿಮ್ಮ ಬರಹದ ಸರಳತೆ ನನ್ನನ್ನು ಸೆಳೆದುಕೊಳ್ಳುತ್ತದೆ. ಹೀಗೆ ಊಣ ಬಡಿಸುತ್ತೀರಿ.
~ಅನಿಲ

sunaath said...

ಧನ್ಯವಾದಗಳು, ಅನಿಲರೆ.
‘ಸತ್ಯಮ್ ಸರಳಮ್ ಸುಂದರಮ್’ ಎನ್ನಬಹುದಲ್ಲವೆ?

Sachin Bhat said...

ಬನ್ನಂಜೆ ಗೋವಿಂದಾಚಾರ್ಯರ ಮೃಚ್ಛಕಟಿಕದ ಅನುವಾದ ತುಂಬ ಸುಂದರವಾಗಿದೆ. ಪ್ರಾಯಶಃ ಪ್ರಾಕೃತ, ಪಾಲಿ, ಮಾಗಧಿ, ಪೈಶಾಚಿ, ಶೌರಸೇನಿ, ಮಹಾರಾಷ್ಟ್ರೀ ಸೇರಿ ದಶಸಂಸ್ಕೃತಗಳನ್ನು ಮೃಚ್ಛಕಟಿಕದಷ್ಟು ಗಟ್ಟಿಯಾಗಿ ಕಟ್ಟಿಕೊಟ್ಟ ಇನ್ನೊಂದು ಸಂಸ್ಕೃತ ನಾಟಕವಿಲ್ಲ. ಕಾಳಿದಾಸನ ಶಾಕುಂತಲದಲ್ಲಿಯೂ ವಿವಿಧ ಪ್ರಾಕೃತಗಳ ಬಳಕೆಯಿದೆ. ಸುಂದರವಾದ ಬರಹ. ಧನ್ಯವಾದಗಳು.
ಇನ್ನೊಂದು ವಿಷಯವೆಂದರೆ ಮಾಘನ ಶಿಶುಪಾಲವಧೆಯನ್ನು ಕನ್ನಡದಲ್ಲಿ ಓದಿದರೆ ಪ್ರಯೋಜನವಿಲ್ಲ. ಶಬ್ದಸೌಶ್ಠವ, ಅಲ೦ಕಾರ ಪ್ರಯೊಗ, ವ್ರತ್ತಪ್ರಯೊಗ, ಶಾಸ್ತ್ರವೈದೂಷ್ಯ, ಕ್ಲಿಷ್ಟಸಮಾಸ, ಶ್ಲೇಷಯಮಕಾದ್ಯಲ೦ಕಾರಗಳು, ನೂತನ ಪದಪ್ರಯೋಗಗಳಲ್ಲಿ ಮಾಘನನ್ನು ಮೀರಿಸಿದವರಿಲ್ಲ. भूरिभिर्भारिभिर्भीराभूभारैरभिरेभिरे ।
भेरीरेभिभिरभ्राभैरभीरुभिरिभैरिभाः ॥ ಅಥವಾ
दाददो दुद्ददुद्दादी दाददो दूददीददोः ।
दुद्दादं दददे दुद्दे दादाददददोऽददः ॥ ನಂಥ ಮಾಘನ ಶ್ಲೋಕಗಳನ್ನು ಕನ್ನಡದಲ್ಲಿ ಅನುವಾದ ಮಾಡುವುದೆಂತು?

sunaath said...

ಸಚಿನರೆ,
ನನ್ನ ಸಂಸ್ಕೃತ ಜ್ಞಾನ ತೀರ ಅಲ್ಪವಾದದ್ದು. ಹೀಗಾಗಿ ನಾನು ಅನುವಾದಗಳನ್ನೇ ಅವಲಂಬಿಸಬೇಕಾಗಿದೆ. ಶಾಕುಂತಲಮ್‍ದಲ್ಲಿಯೂ ಸಹ ವಿವಿಧ ಪ್ರಾಕೃತ ಭಾಷೆಗಳ ಬಳಕೆಯಾಗಿರುವುದು ನೀವು ಹೇಳಿದ ಮೇಲಷ್ಟೇ ತಿಳಿಯಿತು. ನೀವು ಉದಾಹರಿಸಿದ ಮಾಘನ ಎರಡು ರಚನೆಗಳನ್ನು ನೋಡಿದ ಮೇಲೆ, ಅನುವಾದ ಅಸಾಧ್ಯ ಎನ್ನುವುದು ಅರಿವಾಯಿತು! ಮಾಘನ ಬಗೆಗಿನ ಒಂದು ಶ್ಲೋಕವನ್ನು ನಾನು ಚಿಕ್ಕವನಿದ್ದಾಗ ಕೇಳಿದ್ದು, ಅದು ಹೀಗಿದೆ:
ಉಪಮಾ ಕಾಳಿದಾಸಸ್ಯ
ಭಾರವೇರರ್ಥಗೌರವಮ್
ದಂಡಿನಃ ಪದಲಾಲಿತ್ಯಮ್
ಮಾಘೇ ಸಂತಿ ತ್ರಯೋ ಗುಣಾಃ
ನಿಮ್ಮ ಸ್ಪಂದನೆಗಾಗಿ ಧನ್ಯವಾದಗಳು,

hamsanandi said...

ಹೋಲಿಕೆ ಚೆನ್ನಾಗಿ ಮೂಡಿಬಂದಿದೆ. ಹಲವು ಪ್ರಾಕೃತಗಳನ್ನು ಒಳಗೊಂಡು ನಾಟಕದಲ್ಲಿ ಬಳಸುವುದು ಎಲ್ಲ ಸಂಸ್ಕೃತ ನಾಟಕಗಳಲ್ಲೂ ಇರುವಂತಹ ಸಂಗತಿಯೇ. ಯಾಕೆಂದರೆ ಅವೆಲ್ಲ ಬೇರೆ ಬೇರೆ ಭಾಷೆಗಳೆಂಬ ಕಲ್ಪನೆ ಯಾವತ್ತೂ ಇದ್ದಿಲ್ಲ. ಹಾಸನದ ಭಾಷೆಗೂ ಧಾರವಾಡದ ಭಾಷೆಗೂ ವ್ಯತ್ಯಾಸವಿದ್ದರೂ ಒಂದು ಕಡೆಯವರು ಮಾತನಾಡಿದ್ದು ಇನ್ನೊಂದು ಕಡೆಯವರಿಗೆ ಸ್ವಲ್ಪ ತೊಡಕಾದರೂ ಅರ್ಥವಾಗುವುದಲ್ಲವೆ? ಅದೇ ರೀತಿ, ಪಾತ್ರಕ್ಕೆ ತಕ್ಕ ಭಾಷೆಯನ್ನು ಬಳಸುತ್ತಿದ್ದರು ಅಷ್ಟೇ. ಅಂದಹಾಗೆ ನಿಮಗೆ ಸಂಸ್ಕೃತ ನಾಟಕದ ಬಗ್ಗೆಯ ಪಿಡಿಎಫ್ ಪುಸ್ತಕವನ್ನು ಕಳಿಸುವೆನೆಂದು ಹೇಳಿ ತಿಂಗಳುಗಳೇ ಕಳೆದರೂ ಕಳಿಸದೇ ಇದ್ದುದಕ್ಕೆ ಕ್ಷಮಿಸಿ! ಇವತ್ತು ನೆನಪಾಯಿತು. ಖಂಡಿತ ಒಂದೆರಡು ದಿನದಲ್ಲಿ ಇಮೆಯಲ್ ಮಾಡುವೆ.

sunaath said...

ರಾಮಪ್ರಸಾದರೆ,
ಸಂಸ್ಕೃತದ ನನ್ನ ಜ್ಞಾನ ಎಳ್ಳುಕಾಳಿನಷ್ಟು. ಇನ್ನು ಪ್ರಾಕೃತವಂತೂ ಶೂನ್ಯ! ಆದುದರಿಂದ ಇಂಗ್ಲೀಶ್ ಹಾಗು ಕನ್ನಡ ಅನುವಾದಗಳನ್ನು ಅವಲಂಬಿಸಿದ ನಾನು ಮೂಲನಾಟಕಗಳಲ್ಲಿಯ ಚೆಲುವಿನ ಬಗೆಗೆ, ಭಾಷೆಗಳ ಬಳಕೆಯ ಬಗೆಗೆ ಅಜ್ಞಾನಿಯಾಗಿದ್ದೇನೆ. ಇದೀಗ ನಿಮ್ಮ ಸ್ಪಂದನೆಯ ಬಳಿಕವಷ್ಟೇ, ಈ ಭಾಷಾಬಳಕೆಯ ಬಗೆಗೆ ಮಾಹಿತಿ ದೊರಕಿದಂತಾಯಿತು.

ಸಂಸ್ಕೃತ ನಾಟಕಗಳ ಬಗೆಗಿನ ಪಿಡಿ‍ಎಫ್ ಪುಸ್ತಕವನ್ನು ನಿಮ್ಮ ಬಿಡುವಿನಲ್ಲಿ ಕಳುಹಿಸಿರಿ. ಅವಸರಪಟ್ಟುಕೊಳ್ಳಬೇಡಿ.
ಧನ್ಯವಾದಗಳು ಹಾಗು ಶುಭಾಶಯಗಳು.

Unknown said...

ನಮಸ್ತೆ ಸರ್...
ನಿಮ್ಮ ವಿಶ್ಲೇಷಣೆ ಉಲ್ಲಾಸದಾಯಕ. ಹಾಗಾಗಿ ಇದನ್ನು ಓದುಗರಿಗೂ ಉಣಬಡಿಸುವ ಮೂಲಕ ನಿಮ್ಮ ಬ್ಲಾಗನ್ನೂ ಪರಿಚಯಿಸುವ ಅಂದುಕೊಂಡು ನಿಮ್ಮೀ ಬರಹದ ಮೊದಲ ಒಂದಷ್ಟು ಭಾಗವನ್ನು ನಮ್ಮ ಪತ್ರಿಕೆಯ ’ನನ್ನ ಪೋಸ್ಟ್’ನಲ್ಲಿ ಪ್ರಕಟಿಸುವ ಅಂದುಕೊಂಡಿದ್ದೇನೆ ಸರ್. ನಿಮ್ಮ ಕಾಂಟ್ಯಾಕ್ಟ್ ನಂಬರ್, ಇಮೇಲ್ ವಿಳಾಸ ಎಂಥದ್ದೂ ಸಿಗಲಿಲ್ಲ ನನಗೆ. ಹಾಗಾಗಿ ನಿಮ್ಮ ಅನುಮತಿ ಇದೆ ಎಂದು ಭಾವಿಸಿ ನಿಮ್ಮ ಬರಹವನ್ನು ನಮ್ಮ ಓದುಗರಿಗೆ ಪರಿಚಯಿಸುವ ಅಂದುಕೊಂಡಿದ್ದೇನೆ. ನಾಳೆಯ [ಆ.30] ಕನ್ನಡಪ್ರಭದ ಸಂಪಾದಕೀಯ ಪುಟದಲ್ಲಿ ನಿಮ್ಮ ಬರಹ ಪ್ರಕಟವಾಗಲಿದೆ.

ವಿಶ್ವಾಸದಿಂದ,
-ಸಹ್ಯಾದ್ರಿ ನಾಗರಾಜ್
ಕನ್ನಡಪ್ರಭ [8722631300]

sunaath said...

ನಾಗರಾಜರೆ,
ಏನೂ ತೊಂದರೆ ಇಲ್ಲ. ಖಂಡಿತವಾಗಿ ಪ್ರಕಟಿಸಿರಿ.