Sunday, August 7, 2016

ದೊಂಗಲುನ್ನಾರೂsರೇ-ಜಾಗ್ರತs.....ದ.ರಾ. ಬೇಂದ್ರೆ


ದೊಂಗಲುನ್ನಾರೂsರೇ-ಜಾಗ್ರತs
ಎಚ್ಚರಿರು ಇದೊಂದೇ ಆಗಲಿ ವ್ರತಾ    ||ಪಲ್ಲ||

ಇನ್ನಾರು ನಿಮ್ಗss / ಎಚ್ಚರಾ ಕೊಡಾವ್ರಣ್ಣಾ
ಹಾದಿ ಐತಿ ಬಲೂ ಬಲೂ ದೂರಾ
ಗಂಟs ಬೀಳ್ತಾನ ಅಲ್ಲಿನೆ ಚೋರಾ
ನಿದ್ದೀ ಬ್ಯಾಡ್ರೆಪ್ಪಾ ಬಂದೀತು ಘೋರಾ || ದೊಂಗಲು…

ಕಳ್ಳಾ ಅಂಬಾವ / ಬ್ಯಾರೆ ಯಾರೂ ಇಲ್ಲಾ
ಅಂವಾ ನಮ್ಹಾಂಗ ನಿಮ್ಹಾಂಗs ಎಲ್ಲಾ
ಆದ್ರ ಧಂದೇನ ಮಾಡಿಕೊಂಡಾನ ಖುಲ್ಲಾ || ದೊಂಗಲು…

ಅಂದಾನು ಹೆದರ್ಬ್ಯಾಡೋ, ಹೆದರ್ಬ್ಯಾಡೋ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು ?  ಮಕ್ಕೋ ಸುಮ್ಮಾ || ದೊಂಗಲು…

ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮನಸ್ಯಾರ s ಹೂಲಿ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರs ತೆರೀಬೇಕೊ ಕಣ್ಣಾ
ಮುಚ್ಚಿಕೊಂಡೈತಿ | ಅಂತಃಕರ್ಣಾ

ಕರ್ಣನ ಕಿಸೇಕsನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದವ್ನs  ಖರೇ ಶೂರಾ || ದೊಂಗಲು…

ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪಾ ಇಲ್ಲಿ
ಪೂಜಾರೀನs ಕೂತು | ದೇವರ್ನ ಕದ್ದರ
ಇನ್ನ ಫಜೀತಿ, ಬ್ಯಾರೆ ಯಾವ್ದೈತಿ?
ಸೋದsರ ಭಾವ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀsಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ ಹೈದೋಸ ನಡಿಸ್ಯಾರ
ಮನಸ್ಯಾರ್ಕಿ ಒಳಗs ಕಸರೈತಿ
ಸಾಲಾs ಸಾಲೀ ಅಂತ| ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡವs ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು…

ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರs ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಶಾರ್, ಹುಶಾರ್ | ಗೆಣೆಯಾ, ತಮ್ಮಾ, ಅಣ್ಣಾ
ಜಂಪು ಹತ್ತೀತು ತಪ್ಪಿಸಿ ಕಣ್ಣಾ || ದೊಂಗಲು…

………………………………………………………………..
ಬೇಂದ್ರೆಯವರ ಒಂದು ಅಪರೂಪ ಕವನವಿದು. ಬಹುಶಃ ಅವರ ಒಂದು ರೇಲವೇ ಪ್ರಯಾಣದಲ್ಲಿ ಈ ಕವನ ಅವರಿಗೆ ಸ್ಫುರಿಸಿರಬಹುದು. ಆ ಕಾಲದಲ್ಲಿ ಕರ್ನಾಟಕವು ಮಹಾರಾಷ್ಟ್ರ, ಆಂಧ್ರ ಹಾಗು ತಮಿಳುನಾಡಿನ ರೇಲವೇ ವಿಭಾಗಗಳಲ್ಲಿ ತ್ರಿಭಾಗವಾಗಿ ಹೋಗಿತ್ತಲ್ಲ, ಬೇಂದ್ರೆಯವರು ಆಂಧ್ರವಿಭಾಗದಲ್ಲಿ ಹಾಯ್ದು ಹೋಗುತ್ತಿರುವ ರೇಲವೇದಲ್ಲಿ ಕುಳಿತಿದ್ದಾರೆ. ‘ದೊಂಗಲುನ್ನಾರು ಜಾಗ್ರತ’ ಎನ್ನುವ ತೆಲುಗು ಬರಹದಲ್ಲಿರುವ ಎಚ್ಚರಿಕೆ ಅವರ ಕಣ್ಣಿಗೆ ಬಿದ್ದಿದೆ.

ಬೇಂದ್ರೆಯವರು ಮಾತುಗಾರರು. ಅವರ ಎದುರಿಗಿರುವಾತ ನಿರಕ್ಷರ ಕುಕ್ಷಿಯೇ ಆಗಿರಲಿ, ಪ್ರಕಾಂಡ ಪಂಡಿತನೇ ಆಗಿರಲಿ, ಇವರ ಮಾತನ್ನು ಬಾಯಿ ಬಿಟ್ಟುಕೊಂಡು ಕೇಳುತ್ತ ಕುಳಿತಿರಬೇಕು, ಅಂತಹ ವಾಗ್ಝರಿ ಅವರದು. ಈ ಕವನವೂ ಸಹ ಸಹಪ್ರಯಾಣಿಕರನ್ನು ಎಚ್ಚರಿಸುವ ಧಾಟಿಯಲ್ಲಿಯೇ ಇದೆ. (ಇವರು ಮಾತಾಡುತ್ತಿರುವಾಗ ಯಾರಿಗೆ ತಾನೇ ನಿದ್ದೆ ಹತ್ತೀತು?... ಆ ಮಾತೇ ಬೇರೆ!)

ಈ ಕವನದ ವೈಶಿಷ್ಟ್ಯವೆಂದರೆ, ಬೇಂದ್ರೆಯವರ ಅಕ್ಕಪಕ್ಕದಲ್ಲಿ ಇರುವ ಸಹಪ್ರಯಾಣಿಕರು ಅತಿ ಸಾಮಾನ್ಯ ವ್ಯಕ್ತಿಗಳು. ತಮ್ಮ ಜೊತೆಗೆ ಸಲುಗೆಯಿಂದ ಮಾತನ್ನಾಡುವ ಯಾರನ್ನಾದರೂ ಪಕ್ಕನೇ ನಂಬಿ ಬಿಡುವಂಥ ಅಮಾಯಕರು. ಆದರೆ ಬೇಂದ್ರೆಯವರು ಸ್ವಲ್ಪ ಹೆಚ್ಚಿಗೆ ತಿಳಿವಳಿಕೆ ಇದ್ದವರಲ್ಲವೆ? ಅಲ್ಲದೇ, ದೊಂಗಲುನ್ನಾರು ಜಾಗ್ರತ ಎನ್ನುವ ರೇಲವೇಬರಹವನ್ನು ಸಹ ನೋಡಿದ್ದಾರೆ. ತಮ್ಮ ಸಹಪ್ರಯಾಣಿಕರಿಗೆ, ಅವರ ಆಡುನುಡಿಯ ಶೈಲಿಯಲ್ಲಿಯೇ ಎಚ್ಚರಿಕೆ ಕೊಡಬೇಕೆನ್ನುವ ಕರ್ತವ್ಯಪ್ರಜ್ಞೆ ಹಾಗು ಹುಕಿ ಬೇಂದ್ರೆಯವರಲ್ಲಿ ಸ್ಫುರಿಸಿದೆ. ತಗೋ, ಸುರುವಾಯಿತು ಕವನಗಂಗಾವತರಣ: ದೊಂಗಲುನ್ನಾರೂsರೇ- ಜಾಗ್ರತs!

ಕವನದ ಮೊದಲ ಸಾಲಿನ ಭಾಗವಾದ ‘ದೊಂಗಲುನ್ನಾರೂsರೇs’  ಎನ್ನುವ ವಾಕ್ಯವನ್ನು ಗಮನಿಸಿರಿ. ಇದು ‘ದೊಂಗಲುನ್ನಾರೂs+ ರೇ’ ಎನ್ನುವ ಎರಡು ಪದಗಳ ಕೂಡಿಕೆಯಿಂದಾಗಿದೆ. ಕೇವಲ ‘ದೊಂಗಲುನ್ನಾರು ಜಾಗ್ರತ’ ಎಂದು ಹೇಳಿದ್ದರೆ ಇದು ಕೇವಲ ಒಂದು statement ಆಗುತ್ತಿತ್ತು. `ರೇ’ ಎನ್ನುವ ಪದದ ಮೂಲಕ ಬೇಂದ್ರೆಯವರು ತಮ್ಮ ಸಹಪ್ರಯಾಣಿಕರನ್ನು ಸಂಬೋಧಿಸುತ್ತಿದ್ದಾರೆ, ಅವರಿಗೆ ತೀವ್ರವಾದ ಎಚ್ಚರಿಕೆಯನ್ನು ನೀಡುತ್ತಿದ್ದಾರೆ. ಅದರಂತೆಯೇ `ದೊಂಗಲುನ್ನಾರೂs’ ಹಾಗು ‘ಜಾಗ್ರತs’ ಎಂದು ಎಳೆದು ಹೇಳುವ ಮೂಲಕ ನಿದ್ರಿಸುತ್ತಿರುವ ಪ್ರಯಾಣಿಕರ ಕಿವಿಗಳಲ್ಲಿ ತಮಟೆ ಬಾರಿಸುತ್ತಿದ್ದಾರೆ.

ಇಷ್ಟಾದರೆ ಸಾಕೆ? ಉಂಹೂಂ! ಇದು ಆಂಧ್ರಕ್ಕೆ ಸೇರಿದ ರೇಲವೇ ವಿಭಾಗವಾಗಿರುವದರಿಂದ, ರೇಲವೇ ಅಧಿಕಾರಿಗಳು ಎಚ್ಚರಿಕೆಯನ್ನು ತೆಲುಗಿನಲ್ಲಿ ಬರೆದಿದ್ದಾರೆ. ಆದರೆ ನಮ್ಮ ಕನ್ನಡದ ದೊಂಬರಿಗೆ, ತೆಲುಗಿನ ‘ದೊಂಗ’ದ ಅರ್ಥವಾದೀತೆ? ಆದುದರಿಂದಲೇ, ಬೇಂದ್ರೆಯವರು ತಮ್ಮ ಎಚ್ಚರಿಕೆಯನ್ನು ಮತ್ತೊಮ್ಮೆ ಕನ್ನಡದಲ್ಲಿ ಪುನರುಚ್ಚರಿಸುತ್ತಾರೆ: ‘ಎಚ್ಚರಿರು,  ಇದೊಂದೇ ಆಗಲಿ ವ್ರತಾ’.  ಸತತ ಎಚ್ಚರಿಕೆಯೇ ಸುರಕ್ಷಿತ ಪ್ರಯಾಣದ ಕವಚ! ಈ ಕಠಿಣ ನಿದ್ರಾಬಹಿಷ್ಕಾರವನ್ನು ಒಂದು ವ್ರತದಂತೆ ಸಾಧಿಸಬೇಕು!

ಬೇಂದ್ರೆಯವರ ಈ ಎಚ್ಚರಿಕೆಯ ಗಂಟೆಯನ್ನು ಎಲ್ಲರೂ ಸ್ವಾಗತಿಸುತ್ತಾರೆ ಅಂತೇನಿಲ್ಲ. ‘ಈ ಮುದುಕ ತಾನೂ ಮಲಗೂದಿಲ್ಲಾ, ನಮಗೂ ಬಿಡೂದಿಲ್ಲಾ’ ಅನ್ನೋ ಅಂಥಾ ಖಬರಗೇಡಿ, ಮುಗ್ಗಲಗೇಡಿ ಪ್ರಯಾಣಿಕರೂ ಇರ್ತಾರಲ್ಲ. ತಾವು ಏಕೆ ಸಹಪ್ರಯಾಣಿಕರಿಗೆ ಕಿಟಿಕಿಟಿ ಕೊಡ್ತಾ ಇದ್ದೇನಿ ಅನ್ನೋದನ್ನ ಇಂಥವರಿಗೆ ಬೇಂದ್ರೆಯವರು ವಿವರಿಸಲೇ ಬೇಕಲ್ಲ! ಅದಕ್ಕಾಗಿ ಸ್ವಪ್ರೇರಿತ, ಸ್ವಯಂಸೇವಕರಾಗಿ ಬಿಟ್ಟಿರುವ ಬೇಂದ್ರೆ ಮತ್ತೇ ಹೇಳುತ್ತಾರೆ:
‘ಇನ್ನಾರು ನಿಮ್ಗss ಎಚ್ರಾ ಕೊಡಾವ್ರಣ್ಣಾ, ಹಾದಿ ಐತಿ ಬಲೂ ಬಲೂ ದೂರಾ’.
ಬೇಂದ್ರೆ ಒಬ್ಬರನ್ನ ಬಿಟ್ಟರ, ಈ ಡಬ್ಬಿ ಒಳಗಿರೋ ಎಲ್ಲಾರೂ ನಿದ್ದೀಬಡಕರs. ಎಚ್ಚರಿಸೋ ಹೊರಿ ಬೇಂದ್ರೆಯವರ ತಲೀ ಮ್ಯಾಲs ಬಿದ್ದsದ!

‘ಬಲೂ ಬಲೂ’ ಎನ್ನುವ ಪದಗಳನ್ನು ಗಮನಿಸಿರಿ. ಮಾತನಾಡುವಾಗ, ಒಂದು ಪದವನ್ನು emphasise ಮಾಡಬೇಕೆನಿಸಿದರೆ, ಆ ಪದದ ಸ್ವರಾಂತವನ್ನು ಎಳೆಯುವ ರೂಢಿ ಕನ್ನಡದಲ್ಲಿದೆ. (ಉದಾಹರಣೆಗೆ: ನಿಮ್ಮ ಕೈಅಡಗಿ ಭಾಳಾss ಭಾಳಾss ರುಚೀs ಆಗ್ತೈತ್ರಿ!’)

ಬೇಂದ್ರೆ ತಮ್ಮ ಸಹಪ್ರಯಾಣಿಕರೊಡನೆ (ಅವರಿಗೆ ನಿದ್ರೆ ಹತ್ತಿದ್ದರೂ ಸಹ) ಮಾತನಾಡುತ್ತಿದ್ದಾರೆ. ಆದುದರಿಂದಲೇ ಅವರಿಗೆ ‘ಬಲು ಬಲೂ’ ಎಂದು ಎಳೆದೆಳೆದು ಹೇಳುತ್ತಿದ್ದಾರೆ! ಈ ಪ್ರಯಾಣಿಕರನ್ನು ಸುಲಿಯಲು ಬರುವ ಚೋರನು ದರೋಡೆಖೋರರಲ್ಲ, ನಯವಂಚಕನು. ಆದುದರಿಂದಲೇ ಇವನನ್ನು ಬೇಂದ್ರೆ ‘ಗಂಟs ಬೀಳ್ತಾನ ಅಲ್ಲಿನ ಚೋರಾ ; ನಿದ್ದೀ ಬ್ಯಾಡ್ರೆಪ್ಪಾ ಬಂದೀತು ಘೋರಾ’ ಎಂದು ವರ್ಣಿಸುತ್ತಾರೆ.

ಈ ಕಳ್ಳನೂ ಸಹ ಸಾಮಾನ್ಯ ಪ್ರಯಾಣಿಕನಂತೆಯೇ ಒಳಗೆ ನುಸುಳುತ್ತಾನೆ. ಇವನನ್ನು ಪ್ರತ್ಯೇಕಿಸಿ ಗುರುತಿಸುವುದು ಅಸಾಧ್ಯ. ಆದರೆ ಒಮ್ಮೆ ಇವನ ಕೈಚಳಕ ಸುರುವಾಯಿತೊ, ಆಗ ನೋಡಿರಿ ‘ಎಲ್ಲಾ ಖುಲ್ಲಮ್ ಖುಲ್ಲಾ!’ ಈ ಸಾಮಾನ್ಯನು ಆಗ ಅಸಾಮಾನ್ಯನಾಗುತ್ತಾನೆ. ಅದಕ್ಕೆಂದೇ ಬೇಂದ್ರೆಯವರು ಸಹಪ್ರಯಾಣಿಕರಿಗೆ ಸಾರಿ ಸಾರಿ ಹೇಳುತ್ತಿದ್ದಾರೆ: ‘ದೊಂಗಲುನ್ನಾರೂsರೇ-ಜಾಗ್ರತs’!

ಈ ಕಳ್ಳನ ಕ್ರಿಯಾವಿಧಾನ ಎಂಥಾದ್ದು? ಎಚ್ಚರಿರುವವರನ್ನು ಮಲಗಿಸುವುದು, ಅವರಲ್ಲಿ ಭದ್ರತೆಯ ಭಾವವನ್ನು ಹುಟ್ಟಿಸುವುದು, ಅವರು ಮಲಗಿಕೊಂಡ ಮೇಲೆ ಅವರನ್ನು ದೋಚುವುದು…..!
‘ಅಂದಾನು ಹೆದರ್ಬ್ಯಾಡೋ, ಹೆದರ್ಬ್ಯಾಡೋ ತಮ್ಮಾ
ಐತಿ, ರಾಜ್ಯಾನ ಇದು ನಮ್ಮ ನಿಮ್ಮಾ
ಬ್ಯಾರೆ ಬರ್ತಾರು ಯಾರು ?  ಮಕ್ಕೋ ಸುಮ್ಮಾ || ದೊಂಗಲು…’

ಪಾಪ, ಬೇಂದ್ರೆಯವರ ಎಚ್ಚರಿಕೆಗೆ ಯಾರೂ ಕಿವಿ ಕೊಟ್ಟಂತೆ ಕಾಣುವುದಿಲ್ಲ. ಇವರ ಕಂಠಶೋಷಣೆ ವ್ಯರ್ಥವಾಯಿತು.  ಕಳ್ಳನ ಕೈ ಮೇಲಾಯ್ತು. ಆಗ ಬೇಂದ್ರೆಯವರು ಕೈಚೆಲ್ಲಿದರು. ಅವರಲ್ಲಿ philosophic mood ಜಾಗೃತವಾಯಿತು. ನಮ್ಮ ಸಮಾಜದಲ್ಲಿ ನಡೆಯುವ ಈ ಕಳ್ಳಾಟದ ಮೂಲವನ್ನು ಬೇಂದ್ರೆಯವರು ಹುಡುಕಲು ಪ್ರಾರಂಭಿಸಿದರು. ಆಗ ಅವರಿಗೆ ಹೊಳೆದದ್ದನ್ನು ಅರೆಸ್ವಗತದಲ್ಲಿ ಬೇಂದ್ರೆಯವರು ಗುನುಗುಟ್ಟುತ್ತಾರೆ:
‘ಇದ್ದವ್ರ ಹರಕೊಳ್ಳಾಕ ಇಲ್ದವ್ರು ಬರ್ತಾರ
ಇದ್ದದ್ದು ಇಲ್ಲದ್ಯಾವ್ದೊ ಯಣ್ಣಾ
ಮನಸ್ಯಾರ s ಹೂಲಿ ಎಬಿಸಿ
ಮನಸ್ಯಾರ್ನ ತಿಂತಾರ
ದೇವ್ರs ತೆರೀಬೇಕೊ ಕಣ್ಣಾ
ಮುಚ್ಚಿಕೊಂಡೈತಿ | ಅಂತಃಕರ್ಣಾ’

ಸಮಾಜವ್ಯವಸ್ಥೆಯಲ್ಲಿ ಅಸಮಾನತೆ ಇರುವವರೆಗೂ ಈ ಕಳ್ಳಾಟ ನಡೆಯುವದೇ. ಇಲ್ಲದವರು ಇದ್ದವರಿಂದ ಕಸಿದುಕೊಳ್ಳುವರೇ. ಆದರೆ, ‘ಇದ್ದದ್ದು ಯಾವುದು? ಇಲ್ಲದ್ದು ಯಾವುದು? ನನ್ನದು ಯಾವದು? ಅವನದು ಯಾವದು?’ ಈ ತತ್ವವನ್ನು ನಮ್ಮ ಅನೇಕ ಸಂತರು ಪದೇ ಪದೇ ಹಾಡಿದ್ದನ್ನು ಕೇಳಿದ್ದೇವೆ. ಕನ್ನಡ ನಾಡಿನ ಹಳ್ಳಿಗರಲ್ಲಿ, ಸಾಮಾನ್ಯರಲ್ಲಿ ಈ ತತ್ವ ಮೈಗೂಡಿಕೊಂಡಿದೆ. ಆದರೆ, ದೋಚುವದೇ ವೃತ್ತಿಯಾದವರಿಗೆ ಈ ತತ್ವ ಬೇಡ. ಅವರಿಗೆ ಬೇಕು: ‘ಹೂಲಿ ಎಬ್ಬಿಸುವುದು’ ಅಂದರೆ ಗಲಾಟೆ ಎಬ್ಬಿಸುವುದು. ಇತ್ತೀಚಿನ ದಿನಗಳಲ್ಲಿ ಈ ‘ಹೂಲಿ ಎಬ್ಬಿಸುವ’ ಕೆಲಸ ಭಾರತದಲ್ಲಿ ಸಾರ್ವತ್ರಿಕವಾಗಿರುವದನ್ನು ನೋಡುತ್ತೇವೆ. ಎಲ್ಲಿ ನೋಡಿದಲ್ಲಿ ಗಲಾಟೆಗಳು, ಪ್ರತಿಭಟನೆಗಳು, ಬಂಧ್‍ಗಳು. ಅದಕ್ಕೆ ಬಲಿಯಾಗುವವರೂ ಮನುಷ್ಯರೇ, ಅದರ ಫಲಾನುಭವಿಗಳೂ (!) ಮನುಷ್ಯರೇ!
ಇದನ್ನೆಲ್ಲ ನೆನೆದ ಬೇಂದ್ರೆಯವರು ಕಣ್ಣುಗಳನ್ನು ನಿಮೀಲಿಸಿ ಹೇಳುತ್ತಾರೆ: ‘ದೇವ್ರs ತೆರೀಬೇಕೊ ಕಣ್ಣಾ’ ಈ ಮಾತೂ ಸಹ ಮುಗ್ಧ ಹಳ್ಳಿಗನ ಮಾತೇ, ಅವನಲ್ಲಿ ಹರಿಯುವ ದೈವನಂಬಿಗೆಯ ಮಾತೇ. ಆದರೆ ಇಲ್ಲಿ ಏಳುವ ಪ್ರಶ್ನೆ: ದೇವರು ತನ್ನ ಕಣ್ಣುಗಳನ್ನು ತೆಗೆಯಬೇಕೊ, ಅಥವಾ ಕಣ್ಣು ಮುಚ್ಚಿಕೊಂಡಂತಹ ಮನುಷ್ಯರ ಕಣ್ಣುಗಳನ್ನು ತೆಗೆಯಬೇಕೊ ಎನ್ನುವುದು. ಅದು ತಿಳಿಯುವುದು ಮುಂದಿನ ಸಾಲಿನಿಂದ: ‘ಮುಚ್ಚಿಕೊಂಡೈತಿ | ಅಂತಃಕರ್ಣಾ’
ದೇವರ ಅಂತಃಕರಣ ಮುಚ್ಚುವುದು ಅಸಾಧ್ಯ. ಆದುದರಿಂದ ಮನುಷ್ಯನ ಅಂತಃಕರಣ ಮುಚ್ಚಿದೆ. ಅವನ ಒಳಗಣ್ಣು ಮುಚ್ಚಿವೆ. ಆ ಕಣ್ಣುಗಳನ್ನು ದೇವರೇ ತೆಗೆಯಿಸಬೇಕು!

ನಮ್ಮ ಕಳ್ಳರಿಗೆ ಕಳ್ಳತನ ಸಹಜ ಸ್ವಭಾವವಾಗಿದೆ. ಸ್ವತಃ ದಾನಶೂರ ಕರ್ಣನೇ ಇವರಿಗೆ ಯಥೇಚ್ಛ ದಾನ ಕೊಡಲು ಕೈ ಎತ್ತಿ ನಿಂತಾಗಲೂ, ಅವನ ಕಿಸೆಗೆ ಕನ್ನ ಹಾಕಿದಾಗಲೇ ಇವರಿಗೆ ತೃಪ್ತಿ! ಸ್ವಾಹಾಕಾರವೇ ಇವರಿಗೆ ಸಿದ್ಧಿಸಿದ ಮಂತ್ರ! ಹಾಗಾಗಿ ಈ ಕಳ್ಳರ ಹಾವಳಿ ನಡೆದಲ್ಲೆಲ್ಲ ಹಾಹಾಕಾರ ಏಳುವುದು ಸಹಜವಾಗಿದೆ.
ಕರ್ಣನ ಕಿಸೇಕsನ ಹಾಕಾವ್ರು ಕನ್ನಾ
ಬಂದು ಎದ್ದೈತಿ ಅಲ್ಲಲ್ಲಿ ಹಾಹಾಕಾರ
ಸ್ವಾಹಾಕಾರಾನ ಬಲು | ದೊಡ್ಡ ಮಂತ್ರ ಆಗೈತಿ

ಬೇಂದ್ರೆಯವರ ಒಳಗಣ್ಣಿನ ಎದುರಿಗೆ ಈ ಚಿತ್ರಗಳು ಸರಿದಂತೆಲ್ಲ, ಅವರಿಗೆ ಅನಿಸುತ್ತದೆ:
ಬಂದೈತ್ಯೋ ಗೆಣೆಯಾ ಭಾಳ ಘೋರಾ
ಇಲ್ಲಿ ಪಾರಾದವ್ನs  ಖರೇ ಶೂರಾ || ದೊಂಗಲು…

ನಮ್ಮ ಹಳೆಯ ಪುರಾಣಕಥೆಗಳನ್ನು ಓದಿದವರು ಒಂದು ಮರುಕಳಿಸುವ ವಾಕ್ಯವನ್ನು ಅಲ್ಲಿ ಗಮನಿಸಿರಬಹುದು: ಕಲಿಯುಗವು ಘೋರವಾದದ್ದು. ಇನ್ನು ಮುಂದೆ ಇನ್ನೂ ಘೋರವಾದ ಕಾಲ ಬರುವುದು, ಇತ್ಯಾದಿ. ಬೇಂದ್ರೆಯವರೂ ಸಹ ಪುರಾಣದ ಭವಿಷ್ಯಕಾರನಂತೆ ಹೇಳುತ್ತಿದ್ದಾರೆ: ಇನ್ನು ಮುಂದೆ ಇನ್ನೂ ಘೋರವಾದ ಕಾಲ ಬರುತ್ತದೆ. ಆ ಹೊಡೆತದಲ್ಲಿ ಪಾರಾಗಿ ಹೋಗುವವನೇ ಖರೇ ಶೂರ! ಪುರಾಣಕಾರರಾದರೋ ಸರಳವಾದ ಉಪಾಯವನ್ನು ಹೇಳಿ ಬಿಡುತ್ತಾರೆ: ‘ದೇವರಲ್ಲಿ ನಂಬಿಕೆ ಇಟ್ಟು ಭಜನೆ ಮಾಡುತ್ತ ಇರಿ. ಅಂದರೆ ಸಂಸಾರಸಾಗರದಿಂದ ಪಾರಾಗಿ ಹೋಗುತ್ತೀರಿ.’
ಆದರೆ ಸ್ವತಃ ಬೇಂದ್ರೆಯವರಿಗೆ ಸಂಶಯಗಳು ಕಾಡುತ್ತಿವೆ. ದೇವರನ್ನ ನಂಬಬೇಕೊ ಬ್ಯಾಡೊ, ಬಾಜೂದವನ್ನ ನಂಬಬೇಕೊ ಬ್ಯಾಡೊ? ತಮ್ಮ ಎಚ್ಚರಿಕೆಯ ಬೋಧನಾ ಎಷ್ಟರ ಮಟ್ಟಿಗೆ ಉಪಯುಕ್ತ?
ಆದುದರಿಂದಲೇ ಅವರು ತಮ್ಮ ಸಹಪ್ರಯಾಣಿಕರೆದುರಿಗೆ ಹೇಳುತ್ತಾರೆ:
ಅಂಬಿಕಾತನಯನಿಗು ಇತಿಮಿತಿ ಬಿದ್ದೈತಿ
ನೆಂಬಿಕ್ಯಾರೆ ಯಾರ್ದಪಾ ಇಲ್ಲಿ
ಪೂಜಾರೀನs ಕೂತು | ದೇವರ್ನ ಕದ್ದರ
ಇನ್ನ ಫಜೀತಿ ಬ್ಯಾರೆ ಯಾವ್ದೈತಿ?

ಸಮಾಜವ್ಯವಸ್ಥೆಯಲ್ಲಿಯೇ ಮೋಸ ಅಡಗಿದೆ. ‘ನಾವೆಲ್ಲರೂ ಅಣ್ಣ ತಮ್ಮಂದಿರು’ ಎಂದು ಸೋದರಭಾವ ಹೇಳುವವರದೇ ಒಂದು ಗ್ಯಾಂಗು. ಇವರು ಚೋದ್ಯರು ಎಂದರೆ ವಿಚಿತ್ರವಾಗಿ ಇರುವವರು. ‘ಚೋದರು ಮಾದರು’ ಎನ್ನುವ ಪದಗಳನ್ನು ಬೇಂದ್ರೆ ಬಳಸಿದ್ದಾರೆ. ಕೀಳುಮಟ್ಟದ ಜನರು ಬೈದಾಡುವಾಗ ‘ಮಾದರಚೋತ್’ ಎಂದು ಬೈಯುವದನ್ನು ನೀವು ಕೇಳಿರಬಹುದು. ಇದರ ಕನ್ನಡ ಅನುವಾದವನ್ನು ‘ತಾಯಿಗ್ಗಂಡ’ ಎಂದು ಸುಧಾರಿಸಿ ಹೇಳಬಹುದು. ಇಂತಹ ಅನೇಕ ಗ್ಯಾಂಗುಗಳು ಇಲ್ಲಿವೆ. ಇವರು ಮೇಲ್ನೋಟಕ್ಕೆ ಸತ್ಯನಿಷ್ಠ ಹೋರಾಟಗಾರರು.

ಬೇಂದ್ರೆಯವರು ಬಹುಶಃ ಇದೀಗ ರಾಯಚೂರಿನ ಹತ್ತಿರ ಬಂದಿರಬಹುದು.  ಇಲ್ಲಿ ಮುಸಲ್ಮಾನ ಧರ್ಮೀಯರು ಬಹುಸಂಖ್ಯೆಯಲ್ಲಿ ಇರುವದರಿಂದ  ಮುಸ್ಲಿಮ್ ಧರ್ಮದ ಕೆಲವು ಸಂಕೇತಗಳನ್ನು ಬೇಂದ್ರೆ ಬಳಸಿಕೊಂಡಿದ್ದಾರೆ. ಕರ್ಬಲಾ ಕಾಳಗದ ಸಂದರ್ಭದಲ್ಲಿ ‘ಯಾ ಅಲೀ ಧೂಲಾ’ ಎನ್ನುವ ಘೋಷಣೆ ಕೇಳಿ ಬರುತ್ತದೆ. ಇದು ಪ್ರಾಮಾಣಿಕ ಹೋರಾಟಗಾರರ ಕೂಗು. ಆದರೆ ಇಲ್ಲಿ ಆ ಕೂಗು ಅಪ್ರಾಮಾಣಿಕರ ಕೈಯಲ್ಲಿ ಸಿಕ್ಕಿದೆ.  
ಸೋದsರ ಭಾವ ಹೇಳೂವ
ಚೋದ್ಯರು ಚೋದರು ಮಾದರು ಕೂಡ್ಯಾರು
ಗ್ಯಾಂಗ, ಗ್ಯಾಂಗೀsಗೆ ಬ್ಯಾರೆ ಹೆಸರೈತಿ
ಯಾಲೀ ಧೂಲಾ ಅಂತ ಹೈದೋಸ ನಡಿಸ್ಯಾರ

ಇದಕ್ಕೆ ಕಾರಣ ಎಂದರೆ ಮನುಷ್ಯತ್ವದಲ್ಲಿಯೇ ದೋಷವಿದೆ, ಹೊರಗೆ ಮನುಷ್ಯರೂಪ, ಒಳಗೆ ನರಿ, ತೋಳ ಇತ್ಯಾದಿ.
ಮನಸ್ಯಾರ್ಕಿ ಒಳಗs ಕಸರೈತಿ
ಸಾಲಾs ಸಾಲೀ ಅಂತ| ನೆಂಟಸ್ತ್ಕಿ ಬೆಳಸ್ತಾರು
ಸೋದೇರು ಭಾನಚೋದ ಮಂದಿ | ಭಾಳ ಬೆರ್ಕಿ
ಅಲ್ಲಿ ತುರ್ಕಿ, ಇಲ್ಲಿ ತುರ್ಕಿ, ಹೊಡದಾರು ನಡವs ಗಿರ್ಕಿ
ತೂಕಡಿಸಬ್ಯಾಡೋ ಜೋಲಿ ತಪ್ಪಿ || ದೊಂಗಲು…

ಈ ಗಂಟುಕಳ್ಳರು ಸಹಪ್ರಯಾಣಿಕರನ್ನು ‘ಸಾಲಾ, ಸಾಲೀ’ (=ಹೆಂಡತಿಯ ತಮ್ಮ/ತಂಗಿ) ಎಂದು ಪ್ರೀತಿಯಿಂದೆನ್ನುವಂತೆ ಮಾತನಾಡಿಸುತ್ತಾರೆ. ‘ಯಾ ಕಡೇರಿ, ಪೌಣ್ಯಾರ?’ ಎಂದು ನೆಂಟಸ್ತ್ಕಿಯನ್ನು ಬೆಳಸುತ್ತಾರೆ. ‘ಸೋದೇರು’ ಅನ್ನುವಲ್ಲಿ ಬೇಂದ್ರೆ ಶ್ಲೇಷೆಯನ್ನು ಬಳಸಿದ್ದಾರೆ. ಈ ಜನ ಸೋದರಭಾವನೆಯನ್ನು ಪ್ರದರ್ಶಿಸುತ್ತ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುವುದರಿಂದ ಇವರು ಸೋದೇರು. ಎರಡನೆಯದಾಗಿ ಇವರು ‘ಸೌದಾ’ ಎಂದರೆ ತಮ್ಮ ಧಂಧೆ ನಡೆಯಿಸುವ ಪಕ್ಕಾ ವ್ಯಾಪಾರಿಗಳು. ಇವರನ್ನು ಬೇಂದ್ರೆ ಇವರು ಬಳಸುವ ಭಾಷೆಯಲ್ಲಿಯೇ ವರ್ಣಿಸುತ್ತಾರೆ: ‘ಭಾನಚೋದ ಮಂದಿ’ (=ಸೋದರಿಯ ಜೊತೆಗೆ ಹಾದರ ಮಾಡುವವ.) ಇವರು ಭಾಳಾ ಬೆರಕಿ. ಉತ್ತರ ಕರ್ನಾಟಕದಲ್ಲಿ ಬೆರಕಿ ಮನಷ್ಯಾ ಎಂದರೆ ಜಾಬಾಲ, street smart ಮನುಷ್ಯ. ದಕ್ಷಿಣ ಕರ್ನಾಟಕದಲ್ಲಿ ಇದರರ್ಥ hybrid. ರೇಲವೇ ಡಬ್ಬಿಯಲ್ಲಿ ಬೇಕೆಂತಲೇ ಗದ್ದಲ ಮಾಡಿ, ಜಾಗಾ ಸಿಕ್ಕಲ್ಲೆಲ್ಲ ಸೇರಿಕೊಳ್ಳುತ್ತ ಹೋಗುವವರು. ತುರ್ಕಿ ಎನ್ನುವ ಪದಕ್ಕೂ ವಿಭಿನ್ನ ಅರ್ಥಗಳನ್ನು ಮಾಡಬಹುದು. ಮುಸ್ಲಿಮ್ ಆಳಿಕೆ ಇದ್ದಾಗ, ಧರ್ಮೋಪದೇಶಕ್ಕಾಗಿ ಹಾಗು ಸೈನ್ಯದ ಉದ್ಯೋಗಕ್ಕಾಗಿ ಅನೇಕ ತುರ್ಕೀಯರು ಹಾಗು ಪಠಾಣರು ಇಲ್ಲಿಗೆ ಬರುತ್ತಿದ್ದರು. ಹೀಗಾಗಿ ಮುಸ್ಲಿಮ್ ವ್ಯಕ್ತಿಯನ್ನು ‘ತುರಕ’ ಎಂದು ಕರೆಯುವದೇ ಇಲ್ಲಿಯ ರೂಢಿಯಾಗಿದೆ.
ಈ ಗಂಟುಕಳ್ಳರು ಅಲ್ಲಲ್ಲಿ ತುರಕಿಕೊಂಡು, ತಮ್ಮ ಕೆಲಸವಾದ ತಕ್ಷಣ ‘ಗಿರ್ಕಿ’ ಹೊಡೆಯುತ್ತಾರೆ ಅಂದರೆ ಗರ್ರನೆ ತಿರುಗಿ ಕಾಣದಾಗುತ್ತಾರೆ.
ಆದುದರಿಂದ ಬೇಂದ್ರೆ ಹೇಳುತ್ತಾರೆ: ತಮ್ಮಾ, ಎಚ್ಚರಿರು ತೂಕಡಿಸಬ್ಯಾಡಾ; ನಿನ್ನ ಜೋಲಿ ತಪ್ಪಿದಾಗ, ನಿನ್ನ ಕಿಸೇಕ್ಕ ಕನ್ನ ಬಿದ್ದೀತು!

ಬೇಂದ್ರೆ ಇದೀಗ ಕೊನೆಯ ಎಚ್ಚರಿಕೆಯನ್ನು ಕೊಡುತ್ತಿದ್ದಾರೆ. ಈ ಕಳ್ಳರು ಸಾಮಾನ್ಯ ಮನುಷ್ಯರಂತೆಯೇ ಕಾಣುತ್ತಾರೆ. ಹಾಗಂತ ನೀನು ನಂಬಿ ಬಿಡಬ್ಯಾಡಾ. ಅವರ ಮಾತಿಗೆ ಮರುಳಾಗಿ ನಿದ್ದೀ ಮಾಡಲಿಕ್ಕೆ ಒಪ್ಪಬ್ಯಾಡಾ.  ತೂಕಡಿಕೆ ಬಂದೀತು, ಜಂಪು ಹತ್ತೀತು. ‘ತಪ್ಪೀಸಿ ಕಣ್ಣಾ’ ಎನ್ನುವ ಪದಗುಚ್ಛದಲ್ಲಿಯ ಇಬ್ಬಗೆಯ ಅರ್ಥಗಳನ್ನು ನೋಡಿರಿ. ಒಂದು ಅರ್ಥವೆಂದರೆ,  ಕಣ್ಣು ತೆಗೆದುಕೊಂಡಿದ್ದೇವೆ ಎಂದು ತಿಳಿದುಕೊಂಡಿರುವಂತೆಯೇ, ಕಣ್ಣು ಮುಚ್ಚಿಕೊಳ್ಳುವುದು. ಎರಡನೆಯದು ಎಚ್ಚರಿಕೆಯು ಮರವಾಗಿ, ಕಣ್ಣು ಮುಚ್ಚಿಕೊಳ್ಳುವುದು.
ಮನಸ್ಯಾರ್ಹಾಂಗ ಕಾಣ್ತಾರಂತ
ಮನಸ್ಯಾರs ಅಂತ ತಿಳ್ದು
ನಿದ್ದೀ ಮಾಡಾಕ ಒಪ್ಪಿಗಿಪ್ಪಿ
ಹುಶಾರ್, ಹುಶಾರ್ | ಗೆಣೆಯಾ, ತಮ್ಮಾ, ಅಣ್ಣಾ
ಜಂಪು ಹತ್ತೀತು ತಪ್ಪಿಸಿ ಕಣ್ಣಾ || ದೊಂಗಲು…

ಬೇಂದ್ರೆಯವರು ಇಷ್ಟು ಹೇಳುವವರೆಗೆ ಬಹುಶಃ ಅವರ ನಿಲ್ದಾಣ ಬಂದಿರಬಹುದು. ಹೀಗಾಗಿ ಅವರ ಕವನ ಇಲ್ಲಿಗೇ ಕೊನೆಗೊಂಡಿದೆ!

4 comments:

Manjunatha Kollegala said...

ಸರ್ವಸಾಧಾರಣವಾಗಿ ಕಾಣುವ ಕವನವನ್ನೂ ಕೈಗೆತ್ತಿಕೊಂಡು ಅದನ್ನು ಹಿಂಜಿ ಹಿಂಜಿ ರಸಗಾಣಿಸುವ ನಿಮ್ಮ ಪರಿ ಬಹುಚಂದ. "ಕರ್ಣನ ಕಿಸೇಕsನ ಹಾಕಾವ್ರು ಕನ್ನಾ" "ನೆಂಬಿಕ್ಯಾರೆ ಯಾರ್ದಪಾ ಇಲ್ಲಿ ಪೂಜಾರೀನs ಕೂತು | ದೇವರ್ನ ಕದ್ದರ ಇನ್ನ ಫಜೀತಿ" ... ಬುಡುಬುಡಿಕೆಯವನ ಶೈಲಿಯಲ್ಲಿ ಅರೆಹಾಸ್ಯಬೆರೆತ ದನಿಯಲ್ಲಿ ಕವಿ ಮಾತಾಡುವ ಶೈಲಿಯೇ ಸೊಗಸು :)

ಅಪರೂಪಕ್ಕೆ ಬ್ಲಾಗು-ಬಾಗಿಲುಗಳಿಗೆ ಎಡತಾಕುತ್ತಿರುವ ನನ್ನ ಈ ದಿನದ ಓದು ಸಂಪನ್ನವಾಯಿತು, ಧನ್ಯವಾದ.

sunaath said...

ಧನ್ಯವಾದಗಳು, ಮಂಜುನಾಥರೆ.
ಬೇಂದ್ರೆಯವರ ಘನತೆ ಹಾಗು ದೌರ್ಬಲ್ಯ ಇವೆರಡೂ ಇರುವುದೇ ಅವರ ‘ಸಾಮಾನ್ಯ’ ಕವನಗಳಲ್ಲಿ! ಅತಿ ಸಾಮಾನ್ಯವಾದ ಪದಗಳನ್ನು ಅವರು ಕಾವ್ಯವಾಗಿ ಮಾರ್ಪಡಿಸುವುದರಲ್ಲಿಯೇ ಅವರ ‘ಕವಿತ್ವ’ ಅಡಗಿದೆ.

SP said...

ಈ ಕವನ ಎಲ್ಲಿ ಯಾವ ಪುಸ್ತಕದಲ್ಲಿ ಪ್ರಕಟವಾಯಿತು ಹೇಳುತ್ತೀರಾ, ಕಾಕಾ? ಅಪರೂಪದ ಪದ್ಯ. ನಿಮ್ಮ ನಿರೂಪಣೆ ಎರಡೂ ಬಹಳ ಚೆನ್ನಾಗಿದೆ!

sunaath said...

ರಾ.ಯ. ಧಾರವಾಡಕರ ಅವರು ಬರೆದ ಲಲಿತಪ್ರಬಂಧದಲ್ಲಿ ಈ ಕವನವನ್ನು ಸೇರಿಸಲಾಗಿದೆ. ಪ್ರಬಂಧಸಂಕಲನವನ್ನು ನಾನು ಒಂದು ವಾಚನಾಲಯದಲ್ಲಿ ನೋಡಿದ್ದೆ. ಆ ಕೃತಿಯು ನನಗೆ ಮತ್ತೊಮ್ಮೆ ಸಿಕ್ಕರೆ, ನಿಮಗೆ ಇತರ ವಿವರಗಳನ್ನು ತಿಳಿಸುವೆ.