Sunday, March 25, 2018

ಸಿಂಧು ರಾವ್ ಅವರ ಕಥಾಸಂಕಲನ, ‘ಸರ್ವಋತು ಬಂದರು’ ಹಾಗು ಸ್ತ್ರೀಯ sociological model



ಇತ್ತೀಚೆಗೆ ಬಿಡುಗಡೆಯಾದ, ಸಿಂಧು ರಾವ್ ಅವರ ‘ಸರ್ವಋತು ಬಂದರು’ ಕಥಾಸಂಕಲನದಲ್ಲಿ ೧೮ ಕವನಗಳಿವೆ. ಅರೇ ಇದೇನು, ಕಥಾಸಂಕಲನದಲ್ಲಿ ಕವನಗಳೇ ಎಂದು ಬೆಚ್ಚದಿರಿ! ಸಿಂಧು ಅವರ ಶೈಲಿಯೇ ಹಾಗೆ. ಕಥೆಗಳು ನಿಮಗೆ ಭಾವಪೂರ್ಣವಾದ ಕಾವ್ಯದ ಅನುಭವವನ್ನು ಕೊಡುತ್ತವೆ. ಇಲ್ಲಿರುವ ಕಥೆಗಳು, ಪಾತ್ರಗಳ ಭಾವಲೋಕವನ್ನು ಅನ್ವೇಷಿಸುವ, ಭಾವನೆಗಳನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸುವ ಸ್ತ್ರೀಲೋಕದ ಕಥೆಗಳಾಗಿವೆ. ಹಾಗೆಂದುಕೊಂಡು ಇಲ್ಲಿಯ ಕಥೆಗಳು ಸ್ತ್ರೀಪ್ರಾಧಾನ್ಯ ಕಥೆಗಳು  ಎನ್ನುವ ಪೂರ್ವಗ್ರಹಣೆಗೆ ಒಳಗಾಗದಿರಿ. ಇಲ್ಲಿ ಸ್ತ್ರೀಪಾತ್ರಗಳಿಗಿರುವಷ್ಟೇ ಪ್ರಾಧಾನ್ಯವು ಪುರುಷ ಪಾತ್ರಗಳಿಗೂ ಇದೆ, ಆದರೆ ಇಲ್ಲಿಯ ಸ್ತ್ರೀಪುರುಷರ ನಡುವಿನ ಸಂಬಂಧವು ಕೇವಲ ಪ್ರೇಮಸಂಬಂಧವಲ್ಲ; ಇದು ಅಜ್ಜ, ಮೊಮ್ಮಗಳ ಪ್ರೀತಿಯ ಸಂಬಂಧವಾಗಿರಬಹುದು, ಗೆಳೆಯ-ಗೆಳತಿಯರ ಸ್ನೇಹಬಂಧವಾಗಿರಲೂಬಹುದು. ಮುಖ್ಯವಾಗಿ ಇಲ್ಲಿರುವ ಪಾತ್ರಗಳ ಚಿತ್ರಣವು ಸ್ತ್ರೀಯ ಕಣ್ಣಿನ ಮೂಲಕ, ಸ್ತ್ರೀಯ ಹೃದಯದ ಮೂಲಕ ಮೂಡಿದ್ದಾಗಿದೆ.

ಕನ್ನಡದಲ್ಲಿ ರಮ್ಯ ಸಾಹಿತ್ಯದ ಕ್ಷಿತಿಜದ ಮೇಲೆ, ಲೇಖಕಿಯರು ಉದಯಿಸಿದಾಗ, ಹುಟ್ಟಿದ ಸಾಹಿತ್ಯವು ಎಂತಹದು? ಇಲ್ಲಿಯ ನಾಯಕನು ಧೀರೋದಾತ್ತ ಪುರುಷಸಿಂಹನು; ನಾಯಕಿಯು ಅವನ ಗುಣಗಳಿಗೆ ನಿಬ್ಬೆರಗಾಗಿ ಅವನಿಗೆ ತನ್ನ ಮನಸ್ಸನ್ನು ಅರ್ಪಿಸಿಕೊಳ್ಳುವವಳು. (ಪಾಶ್ಚಾತ್ಯ ಸಾಹಿತ್ಯವೂ ಇಂತಹದೇ. ಉದಾಹರಣೆಗೆ ಹೆಸರಾಂತ ಲೇಖಕಿ Daphne du Maurier ಅವರ The Frenchman’s Creek ಮೊದಲಾದ ಕಾದಂಬರಿಗಳನ್ನು ನೋಡಬಹುದು.) ತನ್ನಂತರದ ಬೆಳವಣಿಗೆಯಲ್ಲಿ ಕನ್ನಡ ಲೇಖಕಿಯರು (ಉದಾಹರಣೆ: ತ್ರಿವೇಣಿ) ಸ್ತ್ರೀಗೂ ಒಂದು ಮನಸ್ಸಿದೆ, ಆಸೆ, ಆಕಾಂಕ್ಷೆಗಳಿವೆ ಎನ್ನುವುದನ್ನು ಗುರುತಿಸಿದರು. ಆದರೂ ಸಹ ಈ ಸಾಹಿತ್ಯವು ಆ ಕಾಲದ ವಾಸ್ತವತೆಗೆ ಅನುಗುಣವಾಗಿ, ನಾಯಕಿಯನ್ನು ಪುರುಷಾನುಚರಿಯ ರೂಪದಲ್ಲೇ ಚಿತ್ರಿಸುತ್ತಿತ್ತು. ಈಗಲಾದರೋ ನಾವು ಇಪ್ಪತ್ತೆರಡನೆಯ ಶತಮಾನದಲ್ಲಿದ್ದೇವೆ. ಹೆಣ್ಣುಮಕ್ಕಳ ಸ್ಥಿತಿಗತಿಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈ ಶತಮಾನದ ವಾಸ್ತವತೆಯನ್ನು ಹಾಗು ಆಧುನಿಕ ಮನೋಧರ್ಮವನ್ನು ಸಿಂಧು ಅವರ ಸಾಹಿತ್ಯವು ಪ್ರತಿಬಿಂಬಿಸುತ್ತದೆ. ಇಲ್ಲಿ ಸ್ತ್ರೀ ಹಾಗು ಪುರುಷರಲ್ಲಿ sub ordinate ಹಾಗು super ordinate ಎನ್ನುವ ಭೇದವಿಲ್ಲ. ವಿಶೇಷತಃ, ದಂಪತಿಗಳು ಎಂದರೆ co ordinates ಮಾತ್ರ. ಈ ಒಂದು ಭಾವನೆಯನ್ನು ಅಂತರಂಗೀಕರಿಸಿಕೊಂಡ ಕಥೆಯೆಂದರೆ: ‘ಜಗ್ಗಿ—ರಮ್ಮೀ’. ಜಗ್ಗಿ ಹಾಗು ರಮ್ಮೀ ಇವರ ಬಗೆಗೆ ನಾನು ಇಲ್ಲಿ ಹೆಚ್ಚಿಗೆ ಹೇಳಬಯಸುವುದಿಲ್ಲ. ಹಾಗೆ ಮಾಡಿದರೆ, ರಸಗುಲ್ಲಾದಂತಹ ಈ ಸವಿಯಾದ ಕಥೆಯನ್ನು  ನಾನು ಹೇಳಿದಂತೆಯೇ ಆದೀತು. ಅದು ಗುಟ್ಟಾಗಿಯೇ ಇರಲಿ. ಆದರೂ ಕಥೆಯಲ್ಲಿಯೇ ಬಳಸಿದ, ಬೇಂದ್ರೆಯವರ ‘ನಾನು ಬಡವಿ’ ಕವನದ ಒಂದು ಅರ್ಥಪೂರ್ಣ ಸಾಲನ್ನು ಇಲ್ಲಿ ಉದ್ಧರಿಸುವ ಆಸೆಯನ್ನು ತಡೆಯಲಾರೆ: ‘ತೋಳುಗಳಿಗೆ ತೋಳುಬಂದಿ, ಕೆನ್ನೆ ತುಂಬ ಮುತ್ತು’. 
‘ಜಗ್ಗಿ—ರಮ್ಮೀ’ ಇದು ಒಂದು ಸ್ವಾರಸ್ಯಕರವಾದ ಸರಸ ಕಥೆ. ಇದು ಒಲವಿನ ಸಹಜ ಬೆಳವಣಿಗೆಯ ಕಥೆ. ಹಾಗೆಂದು ಇದು ಕೇವಲ ಪ್ರೇಮಕಥೆ ಎಂದು ಭಾವಿಸದಿರಿ. ಕಥೆಯ ಕೊನೆಯ ಪರಿಚ್ಛೇದವನ್ನು ಓದಿದಾಗ, ಇದು ಜಾಣದಂಪತಿಗಳ ಕಥೆಯೂ ಹೌದು ಎನ್ನುವುದು ಅರಿವಾಗುತ್ತದೆ. ಇಲ್ಲಿಯ ಕಥೆಗಳಲ್ಲಿ ಸಹಸಾ ಹುಡುಗಿಯೇ ಜಾಣೆಯಾಗಿರುವುದು, ಈ ಕಥಾಸಂಕಲನದ ವೈಶಿಷ್ಟ್ಯ ಎನ್ನಬಹುದು!  ‘ಮಿಂಚು’ ಈ ಧೋರಣೆಯ ಉತ್ತಮ ಉದಾಹರಣೆಯಾಗಿದೆ. ಈ ಕಥೆಯಲ್ಲಿ, ಕಥೆಯ ಭಾಗವಾಗಿ ಬರುವ ಒಂದು ಕವನವು, ಸಿಂಧು ಅವರ ಕಾವ್ಯಪ್ರತಿಭೆಯ ಉದಾಹರಣೆಯಾಗಿದೆ. 

ಪ್ರೀತಿ ಹಾಗು ಪ್ರಣಯ ಇವು ತರುಣರಿಗೆ ಮಾತ್ರ ಮೀಸಲಾದ ವಿಷಯವಲ್ಲ.  ವೃದ್ಧ ದಂಪತಿಗಳ ಮಾಗಿದ ದಾಂಪತ್ಯದ ಕಥೆಯನ್ನು ಓದಬೇಕಾದರೆ, ‘ನಗೆ ಹೂವಿನ ಬಳ್ಳಿ’ ಯನ್ನು ಓದಬೇಕು. ಈ ಕಥೆಯು ಮುದ್ದಾಗಿರಲು ಈ ದಂಪತಿಗಳಿಗಿಂತ ಹೆಚ್ಚಾಗಿ, ಓರ್ವ ಹದಿಹರೆಯದ ಹುಡುಗಿಯು ಕಾರಣಳಾಗಿದ್ದಾಳೆ. ಓದಿ ನೋಡಿ; ನಿಮ್ಮ ಮುಖದ ಮೇಲೆ, ಮೊದಲಿನಿಂದ ಕೊನೆಯವರೆಗೂ ‘ನಗೆ ಹೂವಿನ ಬಳ್ಳಿ’ ಅರಳದೇ ಇರದು!

ಗಂಡುಹೆಣ್ಣಿನ ನಡುವಿನ ಪ್ರೇಮವೆಂದರೆ ಕೇವಲ ದಾಂಪತ್ಯ ಪ್ರೇಮ ಮಾತ್ರವೆ? ಇವರು ಗೆಳೆಯ ಗೆಳತಿಯರೂ ಆಗಿ ಇರಬಹುದಷ್ಟೆ? ‘ಕಥೆಯೊಂದು ಪೂರ್ತಿಯಾಗಿದ್ದು’, ‘ಚೈ—ವೈ’ ಕಥೆಗಳು ಇಂತಹ ಗೆಳೆತನದ ಚಿತ್ರಗಳಾಗಿವೆ. ನಮ್ಮ ಭಾರತೀಯ ಸಮಾಜವನ್ನು ನಾವು ಆಧುನಿಕ ಸಮಾಜ ಎಂದು ಭಾವಿಸಿಕೊಂಡರೂ ಸಹ, ಗಂಡು ಹೆಣ್ಣಿನ ಸಮಾನತೆ ನಮ್ಮ ಸಮಾಜದಲ್ಲಿ ಇನ್ನೂ ಬಂದಿಲ್ಲ. ಅವಳು ಕೆಲಸ ಮಾಡುತ್ತಿರುವ ಹೆಂಡತಿಯಾಗಿರಲಿ (ಸರ್ವಋತು ಬಂದರು), ಅಥವಾ ಮನೆಯಲ್ಲಿರುವ ಗೃಹಿಣಿಯಾಗಿರಲಿ( ಸಂ ಸಾರ), ಅವಳ ಮೇಲೆ ಗಂಡನ ಯಜಮಾನಿಕೆ ಇನ್ನೂ ನಿಂತಿಲ್ಲ. ಹಾಗೆಂದು ನಮ್ಮ ಸಮಾಜದಲ್ಲಿ ಒಳ್ಳೆಯ ಗಂಡಸರು ಇಲ್ಲವೆಂದಲ್ಲ! ‘ಸುಲೋಚನೆ’ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಇದರಂತೆಯೇ ‘ಮರು-ಕೊಳ್ಳಿ’ಯ ನಾಯಕಿಯು ನಿರ್ಲಜ್ಜ ತಂದೆಯ ಮಗಳಾದರೂ ಸಹ, ಜೀವಕರುಣಿಯಾದ ಗಂಡನನ್ನು ಪಡೆದವಳು.

ಇಲ್ಲಿಯ ಕಥೆಗಳು ಕೇವಲ ಪ್ರೇಮದ ಕಥೆಗಳಲ್ಲ. ‘ಸ್ನಾನ’, ‘ಎಲ್ಲ ನೋಟಗಳಾಚೆ’, ‘ಮೊದಲ ದಿನ ಮೌನ’ ಇವು ಮನಃಪರಿವರ್ತನೆಯ ಕಥೆಗಳಾದರೆ, ‘ಸಖೀಗೀತ’, ‘ಹಾಡುಹಕ್ಕಿ’, ‘ಕಾಗದದ ದೋಣಿ’ ಕಥೆಗಳು ಬದುಕಿನ ದರ್ಶನವನ್ನು ಮಾಡಿಸುತ್ತವೆ. ‘ಚಿಲ್ಲರೆ ವಿಷಯ’ವಂತೂ ಆಧುನಿಕ ಔದ್ಯಮಿಕ ಬಕಾಸುರನ ಕಥೆಯಾಗಿದೆ. ಅನಿವಾರ್ಯವಾಗಿ ಈ ಬಕಾಸುರನಿಗೆ ಶರಣು ಹೋಗುವವರ, ಬಲಿಯಾಗುವವರ ಕಥೆ ಇದಾಗಿದೆ. ಇಲ್ಲಿಯೂ ಸಹ ಕಥೆಯು ಸ್ತ್ರೀಯ ಸುತ್ತಲೇ ಹೆಣೆದ ಕಥೆಯಾಗಿದೆ.
ಹೀಗೆ, ವಿವಿಧ ಪರಿಸರಗಳ ಕಥೆಗಳನ್ನು ಹೇಳುತ್ತಿರುವಂತೆಯೇ, ಸಿಂಧು ಅವರು ವಿವಿಧ ಮನೋಧರ್ಮದ ಪಾತ್ರಗಳನ್ನು ಇಲ್ಲಿ ಚಿತ್ರಿಸಿದ್ದಾರೆ. ಸಾಧಾರಣವಾಗಿ ಇಲ್ಲಿಯ ಸ್ತ್ರೀಯರು ಆಧುನಿಕ ಮನೋಧರ್ಮದವರು. ಹಾಗಿದ್ದರೂ ಸಹ ಇವರಲ್ಲಿ ಅನೇಕರು ಗಂಡಿನ ದೌರ್ಜನ್ಯಕ್ಕೆ ಒಳಗಾದವರೇ ಮತ್ತು ಈ ದೌರ್ಜನ್ಯವನ್ನು ದಿಟ್ಟತನದಿಂದ ಎದುರಿಸಿ, ಬದುಕು ಕಟ್ಟಿಕೊಂಡವರೇ! ಆದರೆ ಸದ್ಯದ ವಾಸ್ತವವಂತೂ ಹೆಣ್ಣಿಗೆ ವಿರೋಧವಾಗಿಯೇ ಇದೆ. ಉದಾಹರಣೆಗೆಂದು, ಈ ಕೆಲವು ಉದ್ಧರಣೆಗಳನ್ನು ನೋಡಿರಿ:

(೧) ಸಂ ಸಾರ:
‘ತಿಂಗಳ ಖರ್ಚಿಗೆ ಕೇಳಿದ ತನ್ನ ದೈನೇಸಿತನ, ಅದನ್ನು ಕೊಡದೆ ನಿನ್ನ ಹಿಡಿದಿಟ್ಟುಕೊಳ್ಳಬಲ್ಲೆ ಎಂಬ ಅವನ ಹೀನತನ, ಇಷ್ಟು ವರ್ಷ ಬದುಕಿದ ಘಳಿಗೆಗಳೆಲ್ಲ ಏನೂ ಅಲ್ಲ ಅನಿಸಿದ ಕ್ಷಣದ ಅಸಹಾಯಕತೆ,…….’

‘ಈ ಅಪನಂಬಿಕೆ ಕುಯ್ದ ಹಾಗೆ ಇನ್ನೇನೂ ಕುಯ್ಯುವುದಿಲ್ಲ…….ಗಂಡಸರೆಲ್ಲ ಹೀಗೆಯೇ? ಅವರ ಅಹಂ ಚುಚ್ಚುವ ಕ್ಷಣದಲ್ಲಿ ಮನುಷ್ಯತ್ವ ಮರೆತಾರೆಯೇ?.....’

ಆದರೆ ಈ ಹೆಣ್ಣು ದಿಟ್ಟೆ. ಅವಳು ಹೇಳುವ ಮಾತುಗಳು ಹೀಗಿವೆ:
‘ಇನ್ನೂ ಹೆಚ್ಚು ಎಳೆದರೆ ಹಗ್ಗ ತುಂಡಾಗಬಹುದು. ಯಾರಿಗೆ ಯಾರೂ ಅನಿವಾರ್ಯವಲ್ಲ ಅನಿಸುವಂತಹ ಕಾಲದಲ್ಲಿ ನಾವಿದ್ದೇವೆ. ಸುಮ್ಮನೆ ಒಬ್ಬರಿನ್ನೊಬ್ಬರು ಕುಯ್ದು ರಂಪ ಮಾಡುವದೇಕೆ?

(೨) ಸುಲೋಚನೆ:
“ಹೆಣ್ಣು ಜೀವ ದೊಡ್ಡದು ಸುಲೋಚನ. ಯಾವ ಹೊಟ್ಟೆಯಲ್ಲಿ ಏನು ನೋವಿರುತ್ತೆ ಅಂತ ಗಂಡು ಜಾತಿಗೆ ಗೊತ್ತಾಗೋದು ಕಷ್ಟ. ಇದೇ, ಇಷ್ಟೇ ಎಂದು ಗೆರೆ ಹಾಕಿ ಬಂಧಿಸಿಡುವುದು ಲೋಕಾರೂಢಿ. ಅದನ್ನು ಮೀರುವ ಚೇತನಗಳು ಎಷ್ಟೋ ಬಾರಿ ಆ ಮೀರುವಿಕೆಯನ್ನು ತಡಕೊಳ್ಳಲಾಗದೇ ಮತ್ತೆ ಬಂಧಕ್ಕೇ ವಾಪಸಾಗಿಬಿಡುತ್ತವೆ. ಎಲ್ಲೋ ಕೆಲವು ಮೀರುವಿಕೆಯನ್ನು ಲಂಬಿಸಿ ಮೇಲ್ ಚಿಮ್ಮುತ್ತಿರುತ್ತವೆ. ನಿನ್ನ ಹಾಗೇ?’

(೩) ಸರ್ವಋತು ಬಂದರು:
‘ಯಾಕೆ ಎಲ್ಲ ಆಲೋಚನೆಗಳ ಕೊನೆಯೂ ಮೊನೆಯೂ ಹೆಣ್ಣು ಜನ್ಮಕ್ಕೆ ಬಂದು ಅಟ್ಟುತ್ತದೆ ಎಂಬ ಅರ್ಥವಾಗದ ಅಯೋಮಯದಲ್ಲಿ ನಿದ್ದೆ ಯಾವಾಗಲೋ ಬಂದಿತ್ತು.’

ಹೀಗೇ ಉದ್ಧರಿಸುತ್ತ ಹೋದರೆ, ಇಡೀ ಸಂಕಲನವನ್ನೇ ಉದ್ಧರಿಸಬೇಕಾದೀತು. …ಅಲಮ್, ವಿಸ್ತರಣೇನ!

ಈ ಕಥೆಗಳಲ್ಲಿ ಎದ್ದು ಕಾಣುವ ವೈಶಿಷ್ಟ್ಯವೆಂದರೆ, ಸಿಂಧು ಅವರ ಭಾಷೆ. ಸಿಂಧು ಕಥೆಯನ್ನು ಬರೆಯುತ್ತಿದ್ದಾರೆಯೊ, ಕಾವ್ಯವನ್ನು ರಚಿಸುತ್ತಿದ್ದಾರೊ ಎಂದು ಓದುಗನಿಗೆ ಅನಿಸಿದರೆ, ಅದು ಸಹಜ. ಇಂತಹ ವಾಕ್ಯಗಳಲ್ಲಿ ಕೆಲವನ್ನು ಮಾತ್ರ ಇಲ್ಲಿ ಉದ್ಧರಿಸುವ ಸಾಹಸವನ್ನು ಮಾಡುತ್ತೇನೆ. ಈ ಸಾಹಸಕ್ಕೆ ಕಾವ್ಯಶೈಲಿಯಷ್ಟೇ ಕಾರಣವಲ್ಲ. ಒಂದೇ ವಾಕ್ಯದಲ್ಲಿ ಹಲವಷ್ಟು ಭಾವನೆಗಳನ್ನು, ಹಲವಷ್ಟು ಅರ್ಥಗಳನ್ನು ಹೇಳಬಲ್ಲ ಭಾಷೆ ಇದು:
(೧) ಬಿಸಿಲು ಬಣ್ಣಗೆಡುತ್ತಿತ್ತು.
(೨) ಅಂಗಳದಲ್ಲಿ ಅಡಿಕೆ ಚಪ್ಪರದಡಿಗೆ ಬಿಸಿಲು ರಂಗೋಲಿ ಹರಡಿತ್ತು.
(೩) ಕಾಡಿಗೆ ತೀಡಿದ್ದ ಕಣ್ಣ ಕೊಳದೊಳಗೆ ಕೆಂಪು ರಂಗು.
(೪) ಗೆಳತಿಯರ ಜೊತೆಗೆ ಬಾಗುತ್ತ, ಬಳಕುತ್ತ ಅರಳು ಕಂಗಳನ್ನ ಇನ್ನೂ ಅರಳಿಸಿ ಬರುತ್ತಿರುವ ಪ್ರತಿಬಿಂಬವನ್ನೇ ನೋಡಿದಳು. (ಟೀನ ಟಪೋರಿ)
(೫) ‘ಲೋಕಾಂತರಗಳ ಪಯಣದಲ್ಲಿ ನಾನೊಬ್ಬ ನಿತ್ಯ ಪಯಣಿಗ’.
(೬) ಹಾವು ಹರಿದಂಗೆ ಹರಿದ ಬದುಕಿನ ದಾರಿ ಸವೆಸಿದವಳು ಅವಳು.
(೭) ‘ಹಳತರ ಕಣಿವೆಗೆ ಬಗ್ಗಿ ನೋಡುತ್ತಿರುವ ಶಿಖರದ ನೆರಳಿತ್ತು’.
(೮) ಒಂದರೆ ಕ್ಷಣದ ಮೌನ ಮತ್ತೆ ಬಿರಿದು ಮಾತಿನ ಹೂವು ಪೋಣಿಸತೊಡಗಿತು.
(೯) ಈ ಪುಟ್ಟ ಹೂಬದುಕು ಮಣ್ಣಿಗುದುರಿ ಹೋಯಿತು.
(೧೦) ಸುಮ್ಮನಿರುವ ಕ್ಷಣಗಳು ಅತ್ತುಕೊಂಡು ಸಾಗಿದವು.
(೧೧) ಆ ಎಲ್ಲ ಸ್ವೀಟ್ ನಥಿಂಗ್ಸ್ ನಥಿಂಗ್ಸ್ ಆಗಿ ಬದಲಾದ ದಿನದ……
(೧೨) ..ಹೊರಗಡೆ ಸೊಳ್ಳೆ ಇರಬಹುದು….ಹೇಗೂ ಮಾಯಾಚಾಪೆಯ ಮೇಲಿರುತ್ತೇವಲ್ಲ…
(೧೩) ಬಯಲಿಗಿಟ್ಟ ಹಣತೆಯಂತಹ ಬದುಕನ್ನ ಕಾಲ ಎಷ್ಟು ಉಪಾಯವಾಗಿ ಕಾದು ಎತ್ತಿ ಮನಸ್ಸಿನೊಳಗಿಟ್ಟು ನೆನಪಿನ ಪ್ರಿಸರ್ವೆಂಟಲ್ಲಿ ಅದ್ದಿ ಜೋಪಾನ ಮಾಡುತ್ತದೆ…
(೧೪) ಹೆಣ್ಣು ಜೀವಕ್ಕೆ ಮಾತಾಡಿ ಗೊತ್ತಿರಲಿಲ್ಲ, ಕಣ್ಣೀರಿಡುವದಷ್ಟು ಗೊತ್ತಿತ್ತು.
(೧೫) --ನೋವಿನ ರಾಗವೊಂದರ ಚರಣದಂತೆ ನಕ್ಕರು.
(೧೬) ನಾವು ಏನೇ ಮಾಡಿದರೂ ಬದುಕು ತಾನೇ ತಾನಾಗಿ ಮುಂದೆ ಸಾಗುವ ಹಾಡು. ಅದಕ್ಕೆ ಬೇಕಾದ ರಾಗವನ್ನು ನಾವು ಸೇರಿಸಿ ಹಾಡಿಕೊಳ್ಳಬೇಕಷ್ಟೇ…
(೧೭) ಈಚೆ ಕೈಬೆರಳು ಹಿಡಿದು ಕುಣಿಯುತ್ತ ಬರುತ್ತಿರುವ ಜೀವನೋತ್ಸಾಹದ ಹಕ್ಕಿ.

ಇಂತಹ ವಾಕ್ಯಗಳು ನಿಮ್ಮನ್ನು ಪ್ರತಿ ಪರಿಚ್ಛೇದದಲ್ಲಿಯೂ ಧಾರಾಳವಾಗಿ ಎದುರುಗೊಳ್ಳುತ್ತವೆ.  ಸಿಂಧುರವರ ಒಂದು ಮಹತ್ವದ ಗುಣವೆಂದರೆ, ತಮ್ಮ ಕಥೆಗಳಲ್ಲಿ ಅವರು ಪೂರ್ವಸೂರಿಗಳನ್ನು ನೆನೆಸಿಕೊಳ್ಳುವ ಪರಿ. ಸಿಂಧುರವರ aesthetic ಬದುಕು ಅನೇಕ ಸಾಹಿತ್ಯ ಸಾಮ್ರಾಟರಿಂದ ಹಾಗು ಸಂಗೀತ ದಿಗ್ಗಜರಿಂದ ಪ್ರಭಾವಿತವಾಗಿದೆ, ಖುಶಿಯನ್ನು ಪಡೆದಿದೆ. ಅವರೆಲ್ಲರೂ ಇಲ್ಲಿಯ ಕಥೆಗಳಲ್ಲಿ ನೆನಪಿನ ಸ್ಥಾನವನ್ನು ಪಡೆದಿದ್ದಾರೆ. ಆ ಒಂದು ಯಾದಿಯನ್ನು ನಿಮ್ಮೆದುರಿಗೆ ಇಟ್ಟರೆ, ನಿಮಗೆ ದಿಗ್ಭ್ರಮೆಯಾದೀತು. ಆದರೆ ಅದು ಅತ್ಯಂತ ಅವಶ್ಯಕವಾದ ಕಾರ್ಯವಾಗಿದೆ. (ಇಲ್ಲಿರುವ ಯಾದಿಯು, ಕಥೆಗಳನ್ನು ಹಾಗು ಅಲ್ಲಿಯ ಅನುಕ್ರಮಣಿಕೆಯನ್ನು ಅನುಸರಿಸಿದೆ.)

ಸಾಹಿತಿಗಳು:
ತೋಳ್ಪಾಡಿಯವರು, ಬೇಂದ್ರೆಯವರು, ಶೆಲ್ಲಿ, ಕೆ.ಎಸ್. ಎನ್.,ವೈದೇಹಿಯವರು, ವ್ಹಿ.ಎಸ್. ಖಾಂಡೇಕರರು, ಶಾಂತಿನಾಥ ದೇಸಾಯಿಯವರು, ಗಳಗನಾಥರು, ಮಾಸ್ತಿಯವರು, ನಾಗ್ತಿಹಳ್ಳಿಯವರು, ಅಗಾಥಾ ಕ್ರಿಸ್ತೀ.

ಸಂಗೀತಕಾರರು:
ವೆಂಕಟೇಶಕುಮಾರರು, ವಿದ್ಯಾಭೂಷಣರು, ಆರ್.ಕೆ.ಯವರು, ಶ್ಯಾಮಲಾ ಭಾವೆಯವರು, ಹುಕ್ಕೇರಿ ಬಾಳಪ್ಪನವರು, ಗುಲಾಮ್ ಅಲಿಯವರು, ಅಬೀದಾ ಪರ್ವೀನ, ಕಿಶೋರಕುಮಾರ. ಲತಾ ಮಂಗೇಶಕರ, ಮಹಮ್ಮದ ರಫಿ, ಕಾಳಿಂಗರಾಯರು.

ಇದಲ್ಲದೆ, ಸಿಂಧುರವರು ಚಂದಮಾಮಾ, ತರಂಗ ಪತ್ರಿಕೆಗಳನ್ನು ಹಾಗು ಅಶ್ರು, ಮುಕ್ತಿ, ಮಾಧವ ಕರುಣಾವಿಲಾಸ, ಚುಕ್ಕಿಚಂದ್ರಮರ ನಾಡಿನಲ್ಲಿ, ವುದರಿಂಗ್ ಹೈಟ್ಸ್, ಸಖೀಗೀತ ಮೊದಲಾದ ಸಾಹಿತ್ಯಕೃತಿಗಳನ್ನೂ ಸಹ ತಮ್ಮ ಕಥೆಗಳಲ್ಲಿ ಉದ್ಧರಿಸಿದ್ದಾರೆ. ಇದಲ್ಲವೆ, ನಮ್ಮ ಮನಸ್ಸನ್ನು ಶ್ರೀಮಂತಗೊಳಿಸಿದ  ಪೂರ್ವಸೂರಿಗಳ ಬಗೆಗೆ ಇರುವ ಕೃತಜ್ಞತೆ? ಇದಲ್ಲವೆ ನಮಗೆ aesthetic ಸುಖ ಕೊಟ್ಟ ರಚನೆಗಳನ್ನು ಸ್ಮರಿಸುವ ಪರಿ?

ಇದೆಲ್ಲಕಿಂತ ಹೆಚ್ಚಾಗಿ, ಈ ಕಥೆಗಳಿಗೆ ಮತ್ತೊಂದು ವೈಶಿಷ್ಟ್ಯವಿದೆ: ಸ್ತ್ರೀಯ sociological model and role.
ಜೀವವಿಕಾಸದ ಕೆಳಹಂತದಲ್ಲಿರುವ ಎಂದು ನಾವು ಕರೆಯುವ ಪ್ರಾಣಿಗಳ ಗಂಡು ಹಾಗು ಹೆಣ್ಣುಗಳಲ್ಲಿ ಇರುವ ಭೇದವು ಕೇವಲ biological roleಗೆ ಸೀಮಿತವಾಗಿದೆ. ಮೊಟ್ಟೆಗಳನ್ನು ಇಡುವ ಪ್ರಾಣಿಗಳಲ್ಲಿ ಹೆಣ್ಣು ಅಧೀನ ಪ್ರಾಣಿಯಲ್ಲ. ಗರ್ಭ ಧರಿಸುವ ಪ್ರಾಣಿಗಳಲ್ಲಿ, ಬಸಿರಿನ ಅವಧಿಯಲ್ಲಿ ಹಾಗು ಶಿಶುಪಾಲನೆಯ ಅವಧಿಯಲ್ಲಿ ಹೆಣ್ಣುಜೀವಿಗೆ ಗಂಡನ್ನು ಅವಲಂಬಿಸುವ ಅವಶ್ಯಕತೆ ಆಯಿತೇನೊ? ಈ ಅವಲಂಬನೆಯು ಕೇವಲ ರಕ್ಷಣೆಗೆ ಮಾತ್ರ ಸೀಮಿತವಾಗಿತ್ತೇ ಹೊರತು, ಆಹಾರಸಂಪಾದನೆಗೆ ಅಲ್ಲ. ದುರ್ದೈವದಿಂದ, ಮಾನವ ಜೀವಿಯಲ್ಲಿ ಆಹಾರಸಂಪಾದನೆಗೂ ಸಹ ಹೆಣ್ಣುಜೀವಿಯು ಗಂಡಿನ ಮೇಲೆ ಅವಲಂಬಿಸುವ ಪರಿಸ್ಥಿತಿ ಉದ್ಭವಿಸಿತು. ಗಂಡಸು ಇದರ ದುರ್ಲಾಭ ಪಡೆದು ಹೆಣ್ಣನ್ನು ತನ್ನ ದಾಸಿಯನ್ನಾಗಿ ಮಾಡಿಕೊಂಡನು. ಆ ಬಳಿಕ, ಒಂದು ದೀರ್ಘ ಕಾಲಾವಧಿಯಲ್ಲಿ, ಹೆಣ್ಣಿನ sociological role ಹಾಗು ಅವಳ sociological model ಇವು ವಿಪರೀತ ಬದಲಾವಣೆಯನ್ನು ಹೊಂದಿದವು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ feminism, women’s lib ಮೊದಲಾದ ಚಳುವಳಿಗಳು ಅಲ್ಲಿಯ ಸ್ತ್ರೀಯರ sociological modelನಲ್ಲಿ ಸಾಕಷ್ಟು ಉತ್ತಮ ಬದಲಾವಣೆಗಳನ್ನು ತಂದಿವೆ. ಮೊದಲಿನಂತೆ ಹೆಣ್ಣು ‘ಕ್ಷಮಯಾ ಧರಿತ್ರೀ, ಭೋಗೇಷು ದಾಸೀ’ ಎನ್ನುವ ಪತಿವ್ರತಾ role ಅನ್ನು ಕಿತ್ತೆಸೆದಿದ್ದಾಳೆ. ಹೆಣ್ಣಿಗೆ ಒಂದು ಸ್ವತಂತ್ರ ವ್ಯಕ್ತಿತ್ವ ಇದೆ ಎನ್ನುವ ಆಧುನಿಕ ಮನೋಧರ್ಮವನ್ನು ಈ ಕಥಾಸಂಕಲನದ ಕಥೆಗಳು ನಿರೂಪಿಸುತ್ತಿವೆ. ಹೆಣ್ಣಿಗೆ ಗಂಡಿನ ಮೇಲೆ ಹಾಗು ಗಂಡಿಗೆ ಹೆಣ್ಣಿನ ಮೇಲೆ ಯಾವುದೇ ಅವಲಂಬನೆ ಇದ್ದರೆ ಅದು ದಾಂಪತ್ಯದ ಒಲವಿನ ಅವಲಂಬನೆ, ಸ್ನೇಹ ಅವಂಬೆ, ಜವಾಬುದಾರಿಯುತ ನಡವಳಿಕೆ ಎನ್ನುವುದು ಇಲ್ಲಿಯ ಕಥೆಗಳಲ್ಲಿ ಬಿಂಬಿತವಾಗಿದೆ.

ಈ ಕಥಾಸಂಕಲನವು ಇಂತಹ ಅನೇಕ ಕಾರಣಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಒಂದು ವಿಶಿಷ್ಟ ಕೃತಿಯಾಗಿದೆ.

12 comments:

Srikanth Manjunath said...

ಗುರುಗಳೇ ಅಡಿಗೆಯ ಮಾಡಿದ ತಿನಿಸನ್ನು ಸವಿದದಲ್ಲದೆ ಅದರ ಗುಣ ವಿಶೇಷಣಗಳನ್ನು ಹೊಗಳಿದಾಗ / ವಿವರಿಸಿದಾಗ ಅಡಿಗೆಯವನ ಮೊಗದಲ್ಲಿ ಸಿಗುವ/ಕಾಣುವ ಸಂತಸಕ್ಕೆ ಅಳತೆ ಗೋಲಿಲ್ಲ..

ಇಡೀ ಪುಸ್ತಕದ ಹೂರಣವನ್ನು ಕೊಟ್ಟಾಗೂ ಮಾಡಿ ಕೊಡದಲೇ ಇದ್ದೆ ಎನ್ನುವಂತಹ ಭಾವದಲ್ಲಿ ವಿವರಿಸಿ ಹರಡಿರುವ ಪರಿ ಸೂಪರ್.. ನಿಮ್ಮ ಲೇಖನ ಓದಿದ ಮೇಲೆ.. ಅರೇ ಲೇಖಕಿಯ ಪುಸ್ತಕವನ್ನು ಕೊಂಡು ಓದಿಯೇ ಬಿಡೋಣ ಅನ್ನುವಷ್ಟು ಕಾತುರತೆ ಮೂಡುತ್ತದೆ

ಸುಂದರ ಪರಿಚಯ.. ಸುಂದರ ಲೇಖನ ಗುರುಗಳೇ

sunaath said...

ಧನ್ಯವಾದಗಳು, ಶ್ರೀಕಾಂತರೇ. ಸಿಂಧು ಅವರ ಕೃತಿಯನ್ನು ನೀವು ಮೆಚ್ಚದೆ ಇರಲಾರಿರಿ!

ತೇಜಸ್ವಿನಿ ಹೆಗಡೆ said...

ಪ್ರಿಯ ಕಾಕಾ,
ಸಿಂಧು ನನ್ನ ನಲ್ಮೆಯ ಗೆಳತಿ ಎಂಬ ಕಾರಣಕ್ಕೆ ಹೇಳುತ್ತಿಲ್ಲ. ನಿಜಕ್ಕೂ ಅವಳ ಕಥೆಗಳೆಂದರೆ ನನಗೆ ಬಲು ಇಷ್ಟ. ಸರ್ವಋತು ಬಂದರು ನಿಮ್ಮ ಈ ಅಮೋಘ ವಿಮರ್ಶೆಯಿಂದಾಗಿ ಪುಟಕ್ಕಿಟ್ಟ ಚಿನ್ನದಂತಾಗಿದೆ. ಕಥಾಸಂಕಲನದ ಆತ್ಮವನ್ನೇ ಹಿಂಡಿ ಉಣಬಡಿಸಿಬಿಟ್ಟಿದ್ದೀರಾ! :) ಹತ್ತು ಮಾತು ಹೇಳುವ ಜಾಗದಲ್ಲಿ ಅವಳ ಒಂದೇ ಒಂದು ಸಾಲು ನೂರು ಭಾವವನ್ನು ಪ್ರಕಟಿಸುತ್ತವೆ. ಚಿಕ್ಕ ಕಥೆಗಳೊಳಗೆ ಗಾಢ ಭಾವಗ ಭಾರ ಮೂಟೆಯಷ್ಟು! ನೀವು ಮೇಲೆ ಉದ್ಧರಿಸಿರುವ ಎಲ್ಲಾ ಸಾಲುಗಳನ್ನೂ ನಾನೂ ಮೆಚ್ಚಿದ್ದರೂ ಬಯಲಿಗಿಟ್ಟ ಹಣತೆಯಂತಹ ಬದುಕನ್ನ ಕಾಲ ಎಷ್ಟು ಉಪಾಯವಾಗಿ ಕಾದು ಎತ್ತಿ ಮನಸ್ಸಿನೊಳಗಿಟ್ಟು ನೆನಪಿನ ಪ್ರಿಸರ್ವೆಂಟಲ್ಲಿ ಅದ್ದಿ ಜೋಪಾನ ಮಾಡುತ್ತದೆ… ಈ ಸಾಲು ಮತ್ತೂ ಹೆಚ್ಚು ಇಷ್ಟವಾಗಿದ್ದು. ತುಂಬಾ ಧನ್ಯವಾದಗಳು ಕಾಕಾ ಈ ಸುಂದರ ಬರಹಕ್ಕಾಗಿ :)
@ಸಿಂಧು ರಾವ್,
ಅಭಿನಂದನೆಗಳು ಪ್ರಿಯ ಗೆಳತಿ :)

Unknown said...

ಕಾಕಾ... ಪದಗಳಿಲ್ಲ..
ಶರಣು... ♥♥

Praveen Koradi said...

ನಿಜ, ಪದಗಳಿಲ್ಲ. ಮ್ಯಾನುಫ್ಯಾಕ್ಚರಿಂಗ್ ಭಾಷೇಲಿ 'ಪ್ರಿಸಿಷನ್ 100' ಅಂತೀವಿ. ಯಾವುದೇ ಒಂದು ಪ್ರಾಡಕ್ಟ್ ನ ಎಲ್ಲಾ ಆಯಾಮಗಳನ್ನೂ, ಇಂಚಿಂಚನ್ನೂ ಸ್ಥೂಲವಾಗಿ ಅವಲೋಕನ ಮಾಡಿ ಅದರ ಸಂಪೂರ್ಣ ಒಳಹೊರಗನ್ನು ಒಟ್ಟೊಟ್ಟಿಗೆ ಕಟ್ಟಿಕೊಡುವ 'ಸಾರಾಂಶ' ಅದು. ಒಂದು ಪರಿಪೂರ್ಣ ಬುತ್ತಿಗಂಟಿದ್ದ ಹಾಗೆ. ಅದೇ ರೀತಿ ಈ ನಿಮ್ಮ ಲೇಖನ ಸರ್ವ ಋತು ಬಂದರಿನ ಪ್ರಿಸಿಷನ್ 100 ಅನ್ನಬಹುದು.

ಸಿಂಧು sindhu said...

ಪ್ರೀತಿಯ ಸುನಾಥ ಕಾಕಾ,

ಕಥೆ ಬರೆವಾಗ ಬಿಡು ಬೀಸಾಗಿ ಬರೆದೆ. ಅವು ಒಲಿದಂತೆ ಬರೆದೆ. ನನ್ನ ನೆನಪುಗಳು, ನೋಡಿದ ವ್ಯಕ್ತಿಗಳು, ಸನ್ನಿವೇಶಗಳು, ಓದಿದ ಕಥನ ಕಾವ್ಯಗಳು ಎಲ್ಲವೂ ಜತೆಗಿದ್ದವು.
ಆದರೆ ಇದನ್ನು (ಕಥೆಗಳನ್ನು) ಓದಿ ಎಂದು ಹೇಳಲು ಸ್ವಲ್ಪ ಸಂಕೋಚವೇ ನನಗೆ ಈಗಲೂ. ಬ್ಲಾಗಲ್ಲಿ ಹಾಕುತ್ತಿದ್ದಾಗ ಓದಿದವರ ಕಮೆಂಟುಗಳು ನನ್ನ ವಿಶ್ವಾಸಕ್ಕೆ ಇಂಬಾದರೂ ಓದಿ ಎಂದು ಹೇಳಲು ಆಗಲೂ ಈಗಲೂ ನನಗೆ ಸಂಕೋಚವೇ.
ಹೀಗಿರಲು ಇವುಗಳನ್ನು ಪ್ರಕಟಿಸುತ್ತೇವೆ ಅಂತ ಅಂಕಿತದ ಪ್ರಕಾಶ್-ಪ್ರಭಾ ದಂಪತಿಗಳು ಮತ್ತು ಸಂಪಾದಕ ಜೋಗಿಯವರು ಹೇಳಿದಾಗ, ಅಯ್ಯೋ ನನ್ನ ಕಥೆಗಳಾ ಎಂದು ಹಿಂಜರಿದೆ.
ನಮಗೆ ಇಷ್ಟವಾಗಿದೆ, ಆರಿಸಿರೋದು ನಾವು, ಪ್ರಕಟಿಸಲು ಕೊಡುವುದು ಮಾತ್ರ ನಿಮ್ ಕೆಲಸ ಅಂತ ಅವರು ಹೇಳಿದಾಗ ಅದನ್ನು ಪಾಲಿಸಿಯೂ ಬಿಡುಗಡೆಯ ಹಿಂದಿನ ದಿನದವರೆಗೂ ಹಿಂಜರಿಕೆಯಲ್ಲೆ ಇದ್ದೆ.
ಅದೇಕೆ ಹಾಗೆ ಎಂದರೆ ನನಗೆ ಉತ್ತರಿಸಲೂ ಬರೋಲ್ಲ. ಬರೀಲೆ ಬೇಕು ಅಂತ ನಂಗನ್ನಿಸಿದ್ದು ನಿಜ. ಓದಿ ಅಂತ ಹೇಳಲು ಬಾಯಿ ಬರದೆ ಇದ್ದದ್ದೂ ನಿಜ.
ಇದಕ್ಕೆಲ್ಲ ನನ್ನ ಬಾಲ್ಯದ ಹಿಂಜರಿಕೆ, ಎಂದೋ ಬಾಯೆತ್ತಿದಾಗ ಎದುರಾದ ಅವಮಾನ ಕಾರಣ ಇರಬಹುದು. ನನಗೆ ಈಗ ಸ್ಪಷ್ಟವಿಲ್ಲ. ಅಥವಾ ಮಧ್ಯದಲ್ಲಿ ತಿರುವು ತೆಗೆದುಕೊಂಡ ನನ್ನ ಬದುಕಿನ ದಾರಿ ನನ್ನ ಅನಿಸಿಕೆಗಳ, ಆಶೆಗಳ ಅಥೆಂಟಿಸಿಟಿಯನ್ನೇ ಹೆದರಿಸಿದ್ದೂ ಇರಬಹುದು. ನನ್ನ ಮನೆ, ಕೆಲಸ, ಹವ್ಯಾಸ, ಗುಂಪು ಎಲ್ಲ ಕಡೆಯೂ ಒಂದು ಹೆಜ್ಜೆ ಹಿಂದೆಯೇ ನಾನು. ನನ್ನ ಅಭಿಪ್ರಾಯಗಳು ಖಡಕ್ಕಾಗಿರಬಹುದು. ಆದರೆ ಕೇಳಿ ನನ್ ಮಾತು, ಓದಿ ಇದು ಅಂತ ಹೇಳಲು ಹೊರಡುವ ಮೊದಲು ದಾಸರು ಮತ್ತು ಶರಣರು ತಲೆ ಮೇಲೆ ಕೈ ಎಳೆದು ಬಿಡ್ತಾರೆ ಅಂತ ಕಾಣತ್ತೆ. ಅದಕ್ಕೆ ಕವಿತೆ ಮತ್ತು ಕಥೆಗಳು ನನ್ನ ಮೊದಲ ಅಭಿವ್ಯಕ್ತಿ. ಮಾತು ಆಮೇಲೆ.

ಆದರೆ ಸುನಾಥ ಕಾಕಾ ನೀವು ನನ್ನ ಬ್ಲಾಗನ್ನು ಓದಿ ಕಮೆಂಟು ಮಾಡುವುದರಿಂದ ನನಗಾದ ದೊಡ್ಡ ಲಾಭವೆಂದರೆ ನಿಮ್ಮ ನಿರ್ವ್ಯಾಜ ಅಂತಃಕರಣದ ಎಂಡೋರ್ಸ್ ಮೆಂಟು. ನೀವು ಓದಿ "ಸರಿ ಸಿಂಧೂ" ಎಂದರೆ ನನಗೆ ದೊಡ್ಡ ಸಮಾಧಾನ. ಅಂತದ್ದರಲ್ಲಿ ನೀವು ನನ್ನ ಪುಸ್ತಕ ಓದಿ ಬರೆದಿದ್ದನ್ನು ಓದಿ ನಾನು ಮೂಕಳಾಗಿದ್ದೇನೆ. ಇದರ ಬಗ್ಗೆ ಯಾವ ಮಾತೂ ಹೆಚ್ಚು ಮತ್ತು ಕಡಿಮೆ.

ನನ್ನ ಕಥೆಗಳ ಅಂತರಂಗ ಒಂದು ಹೆಣ್ಣು. ನನ್ನದಲ್ಲದ, ಅಥವಾ ನನ್ನ ಒಳ ಹೋಗದ ಯಾವ ಅನುಭವವನ್ನೂ ನಾನು ಹೇಳಲು ಪ್ರಯತ್ನಿಸಿಲ್ಲ. ಹಾಗಂತ ಕಥೆಗಳ್ಯಾವುದೂ ನನ್ನವಲ್ಲ. ಆದರೆ ಅವರೆಲ್ಲ ನಾನು ಬಂದ ದಾರಿಯುದ್ದಕ್ಕೂ ಇದ್ದವರು. ಒಳಹೊಕ್ಕವರು. ಅವರ ಅಸಹಾಯಕತೆ, ದೈನ್ಯತೆ, ಸಿಟ್ಟು, ಹತಾಶೆ, ಪ್ರೀತಿ, ಅಕ್ಕರೆ, ತುಂಟತನ, ತಮಾಷೆ, ಗಾಢ ಪ್ರೇಮ, ತಾಯ್ತನ, ಕಳೆದುಕೊಳ್ಳುವಿಕೆ, ನಿರ್ವಾತ, ಭ್ರಮ ನಿರಸನ ನನ್ನವೂ ಹೌದು...ಅದೆಲ್ಲದರ ಮಧ್ಯೆ ಅವರವರೇ ತೋರಿಕೊಟ್ಟ ಭರವಸೆ ಶಕ್ತಿ ನನ್ನವೂ ಹೌದು. ನನ್ನ ಕಥೆಗಳ ಮೂಲ ಆಶಯ ಜತೆಪಯಣ - ಅದು ಹಂಬಲವಿರಬಹುದು, ನಿಜವಿರಬಹುದು, ಕನಸಿರಬಹುದು, ಕೈಗೂಡದ ಪ್ರಯತ್ನವಿರಬಹುದು ಎಲ್ಲದರ ಆಶೆ, ಆಶಯ ಜತೆಪಯಣ. ಎಲ್ಲರ ಜೊತೆಗೆ ಎಲ್ಲರೊಂದಿಗೆ.. ಅದರಲ್ಲಿ ಹೆಚ್ಚು ಕಮ್ಮಿ ಇಲ್ಲ. ಮೇಲು ಕೀಳು ಇಲ್ಲ. ಅದನ್ನ ಗುರುತಿಸಿದ್ದೀರಿ. ಇನ್ನು ಮಾತನಾಡಿದರೆ ನಿಮ್ಮ ಸೊಗಸಾದ ಲೇಖನವನ್ನು ಹದಗೆಡಿಸಿದ ಹಾಗಾಗುತ್ತೆ. ಯಾವುದಕ್ಕೆ ಕೃತಜ್ಞತೆ ಹೇಳಲಿ, ಹೇಗೆ ಹೇಳಲಿ. ಈ ಮಮತೆಗೆ ಕೃತಜ್ಞತೆಯೂ ಸಣ್ಣದೆ.

ಪ್ರೀತಿಯಿಂದ,
ಬಿಗಿದಪ್ಪುಗೆಗಳೊಡನೆ,
ಸಿಂಧು.

sunaath said...

ತೇಜಸ್ವಿನಿ, ಮಾಲಿನಿ, ಪ್ರವೀಣ ಹಾಗು ಸಿಂಧು,
ಒಂದು ಮುದ್ದಾದ ಕೂಸಿಗೆ, ಮುದ್ದಾಗಿದೆ ಎಂದು ಎಷ್ಟು ಹೇಳಿದರೂ, ಅದು ಕೂಸಿನ ಮುದ್ದುತನಕ್ಕೆ ಸರಿಯಾದೀತೆ? ಸಿಂಧು ಅವರ ಕಥೆಗಳು ನನ್ನ ಮನಸ್ಸಿಗೆ ಕೊಟ್ಟ ಸುಖವೇ, ನನ್ನ ಲೇಖನದಲ್ಲಿ ಮೈದಾಳಿದೆ.ಈ ಕಥೆಗಳನ್ನು ಓದಿ ನೀವೂ ಸಂತೋಷ ಪಟ್ಟಿದ್ದೀರಿ.ಆದುದರಿಂದ ನಾನು ಹೇಳಬಹುದಾದದ್ದು ಇಷ್ಟೇ:
‘ಸಹಮೋದಂ ಕರವಾವಹೈ’!

ತೇಜಸ್ವಿನಿ ಹೆಗಡೆ said...

ಕಾಕಾ ಕೂಸು ಮುದ್ದಾಗಿರೋದು ನಮಗೆ ಕಂಡರೂ, ಅದರ ಸ್ನಿಗ್ಧ ನಗು, ಚೆಲುವು ಎಲ್ಲವನ್ನು ಬಿಡಿ ಬಿಡಿಯಾಗಿ ಬಿಡಿಸಿ ತೋರಿ ಮತ್ತಷ್ಟು ಅದರ ಅಂದವನ್ನು ಕಣ್ಣಿಗೆ ಕಟ್ಟಿಕೊಟ್ಟಿದ್ದೀರಿ ಅಷ್ಟೇ :) ಆಹಾ.. ‘ಸಹಮೋದಂ ಕರವಾವಹೈ!’ <3

sunaath said...

ತೇಜಸ್ವಿನಿ, ನಿಮ್ಮೆದುರಿಗೆ ಮಾತಿನಲ್ಲಿ ಸೋಲುವುದೂ ಸಹ, ಈ ಕಾಕಾನಿಗೆ ಸುಖದಾಯಕವೇ ಆಗಿದೆ!

Badarinath Palavalli said...

ಕಥಾ ಸಂಕಲನ ಕೊಂಡು ಓದುವೆ ಸಾರ್, ಮತ್ತೆ ಹಿಂದಿರುಗಿವೆ...
ಪ್ರೇರೇಪಿಸಿದ್ದಕ್ಕಾಗಿ ಅನಂತ ವಂದನೆಗಳು.

sunaath said...

ಧನ್ಯವಾದಗಳು, ಬದರಿಯವರೆ. ನಿಮ್ಮ blogನಲ್ಲಿ ಇತ್ತೀಚೆಗೆ ಏನೂ ಬರುತ್ತಿಲ್ಲವಲ್ಲ?

ಮಹಿಮಾ said...

ನಾನು ಮುಂಚಿನಿಂದಲೂ ಸಿಂಧು ಬ್ಲಾಗಿನ ಅಭಿಮಾನಿ, ಕಥೆ ಅನ್ನೋದು ಒಳಮನಸಿಗೆ ತಟ್ಟಬೇಕು, ಕಾಡಬೇಕು, ಅದರಲ್ಲಿ ಯಾವುದೋ ಪಾತ್ರ ನಾನಾಗಿ ಇಡೀ ಕಥೆಯನ್ನು ಅನುಭವಿಸಬೇಕು ಅಂದರೆ ಸಿಂಧುವಿನ ಈ ಪುಸ್ತಕ ಓದಬೇಕು.
ನಾನೂ ಓದಿದೆ, ಮನ ತಣಿಯದೆ,ನನ್ನ ಬಳಗದ ಎಲ್ಲರಿಗೂ ಓದಿಸಿದೆ. ಆಗಾಗ ಮೆಲುಕು ಹಾಕುವೆ,ಕೆಲವೊಮ್ಮೆ ಪ್ರತಿಕ್ರಿಯೆ ನೀಡುವಾಗ ಅರರೆ ಸಿಂಧುವಿನ ಕಥೆಯ ಪಾತ್ರದ ಹಾಗೆ ಆಡುತ್ತಿದ್ದೇನೆ ಅಂತ ಅಂದುಕೊಳ್ಳುವುದು ಉಂಟು.
ಇವೆಲ್ಲ ಕಥೆಗಳು ಕವನಕ್ಕಿಂತ ಏನೇನೂ ಕಮ್ಮಿ ಅಲ್ಲ ಕಾಕಾ
ನಿಮ್ಮ ಈ ಬರಹ ಆ ಪುಸ್ತಕಕ್ಕೆ ಇಟ್ಟ ಕಿರೀಟ, ನಿಮಗೆ ತುಂಬು ಪ್ರೀತಿ..