Saturday, July 12, 2008

ಬೇಂದ್ರೆ ಕಾವ್ಯ : “ನನ್ನವಳು ”

ಬೇಂದ್ರೆಯವರು ರಚಿಸಿದ ಪ್ರೇಮ ಕವನಗಳಲ್ಲಿ ಅಥವಾ ದಾಂಪತ್ಯಕವನಗಳಲ್ಲಿ (--ಬೇಂದ್ರೆಯವರ ಎಲ್ಲ ಪ್ರೇಮಕವನಗಳು ದಾಂಪತ್ಯಕವನಗಳೇ ಆಗಿವೆ.--) ನನಗೆ ಅತಿ ಮೆಚ್ಚುಗೆಯಾದ ಕವನವೆಂದರೆ : ನನ್ನವಳು ”.

ಬೇಂದ್ರೆಯವರ ಈ ಕವನದ ನಾಯಕಿ ನಿಸರ್ಗವೂ ಹೌದು, ಕವಿಯ ನಲ್ಲೆಯೂ ಹೌದು.
ಬೇಂದ್ರೆಯವರ ಈ ಕವನದಲ್ಲಿ ನಲ್ಲೆಯ ವರ್ಣನೆ ಹಾಗು ದಿನಮಾನದ ವರ್ಣನೆ ಒಂದರೊಳಗೊಂದು ಚಮತ್ಕಾರಪೂರ್ಣವಾಗಿ ಬೆಸೆದುಕೊಂಡಿವೆ.
ಕವನ ಹೀಗಿದೆ:

ನನ್ನವಳು
(ನಸುಕಿನ ಝುಳುಕು)


ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ಈ ಕವನದ ಮೊದಲನೆಯ ನುಡಿಯು ಪ್ರಾರಂಭವಾಗುವದು ಪ್ರೇಮಿಯು ಮಾಡುವ ನಲ್ಲೆಯ ವರ್ಣನೆಯಿಂದ :

ತಂಬುಲದ ತುಟಿಯ ತೋರಿ
ಮಲ್ಲಿಗೆಯ ಮುಡಿದುಕೊಂಡು
ಮೆಲ್ಲಗಾಗಿ ಬರುವವಳ್ಯಾರs?
ಸಂಜಿ ಏನs?

ಕವಿಯ ನಲ್ಲೆ ತಾಂಬೂಲ ಚರ್ವಣದಿಂದ ತುಟಿಗಳನ್ನು ಕೆಂಪಾಗಿಸಿಕೊಂಡು, ಮಲ್ಲಿಗೆ ಹೂವುಗಳನ್ನು ಮುಡಿದುಕೊಂಡು, ಮೆಲ್ಲಮೆಲ್ಲಗೆ ಆತನನ್ನು ಸಂಧಿಸಲು ಬರುತ್ತಿದ್ದಾಳೆ ಎನ್ನುವದು ಮೊದಲ ಮೂರು ಸಾಲುಗಳಲ್ಲಿ ತೋರುವ ಅಭಿಪ್ರಾಯ. ಆದರೆ, ಕೊನೆಯ ಸಾಲಿನಲ್ಲಿ ಬರುವ ಸಂಜಿ ಏನs? ” ಎನ್ನುವ ಪ್ರಶ್ನೆಯಿಂದಾಗಿ, ಈ ಕವನದ ನಾಯಕಿ ದಿನಮಾನದ ಸಂಧ್ಯಾಸಮಯವೆನ್ನುವ ಹೊಸ ಹೊಳಹು ವ್ಯಕ್ತವಾಗುತ್ತದೆ.

ತಾಂಬೂಲಚರ್ವಣದ ಕೆಂಪುವರ್ಣವು ಸಂಜೆಗೆಂಪಿನ ಬಣ್ಣ ; ಮಲ್ಲಿಗೆಯ ಹೂವುಗಳು ಒಂದೊಂದಾಗಿ ಕಾಣುತ್ತಿರುವ ತಾರೆಗಳು ; ಬೆಳಗು ಜಾರಿ ಕತ್ತಲೆ ಸಾವಕಾಶವಾಗಿ ಬರುತ್ತಿದೆ ಎನ್ನುವ ಹೊಸ ಅರ್ಥ ಇಲ್ಲಿ ಮೂಡುತ್ತದೆ.

ಎರಡನೆಯ ನುಡಿಯನ್ನು ನೋಡಿರಿ:

ಮೇಲಸೆರಗು ಮೆಲ್ಲಗ ಸರಿಸಿ
ವಾರಿನೋಟ ಮೇಲಕ್ಕೆತ್ತಿ
ಮಳ್ಳಿಯಂತೆ ಮುರುಕುವಳ್ಯಾರs?
ಇರುಳು ಏನs?

ಎರಡನೆಯ ನುಡಿಯ ಮೊದಲ ಮೂರು ಸಾಲುಗಳೂ ಸಹ ನಲ್ಲೆಯ ವರ್ಣನೆಯಂತೆಯೇ ಭಾಸವಾಗುವವು.
ನಲ್ಲನನ್ನು ಸಂಧಿಸಿದ ನಲ್ಲೆ ತನ್ನ ಸೆರಗನ್ನು ಮೆಲ್ಲಗೆ ಸರಿಸಿ, ಓರೆನೋಟವನ್ನು ತುಸುವೇ ಮೇಲಕ್ಕೆತ್ತಿ, ತೋರಿಕೆಗೆ ಮಳ್ಳಿಯಂತೆ ನಟಿಸುತ್ತ, ಬಿನ್ನಾಣ ಮಾಡುತ್ತ, ನಲ್ಲನನ್ನು ರಂಬಿಸುವ ಪರಿಯನ್ನು ವರ್ಣಿಸಿದಂತೆ ಭಾಸವಾಗುವದು.
ಆದರೆ ಕೊನೆಯಲ್ಲಿರುವ ಇರುಳು ಏನs? ” ಎನ್ನುವ ಸಾಲಿನಿಂದ ಕವನಕ್ಕೆ ಮತ್ತೊಂದು ದ್ವಂದ್ವಾರ್ಥ ಪ್ರಾಪ್ತವಾಗುವದು.

ಮೇಲಸೆರಗು ಅಂದರೆ ಮೋಡಗಳ ಸೆರಗು. ವಾರಿನೋಟವೆಂದರೆ ಮೋಡಗಳ ಮರೆಯಿಂದ ಆಗಾಗ ಹೊರಗಾಣುವ ಚಂದ್ರಾಮ. ಇಂತಹ ಬೆಳದಿಂಗಳ ರಾತ್ರಿಯ ಚೆಲುವನ್ನು ಅನುಭವಿಸುತ್ತ ಕೂತಿರುವ ರಸಿಕನಿಗೆ, ಇದು ಒಯ್ಯಾರ ಮಾಡುತ್ತಿರುವ ನಾರಿಯಂತೆ ಭಾಸವಾಗುವದು ಸಹಜವಾಗಿದೆ.

ಮೂರನೆಯ ನುಡಿಯನ್ನು ಗಮನಿಸಿರಿ :

ಅಲೆದುಗಿಲಿದು ಉಲಿದೂ ಉಲಿದೂ
ನೆಟ್ಟ ನೋಟಾ ಕೀಳಲಾರ್ದs
ತಣ್ಣಗಾಗಿ ನಿಂತವಳ್ಯಾರs?
ನಸುಕು ಏನs?

ಈ ಮೂರನೆಯ ನುಡಿಯ ಸಾಲುಗಳನ್ನೂ ಸಹ ನಲ್ಲೆಯ ಪ್ರೇಮದಾಟಗಳಿಗೆ ಹೋಲಿಸುವಂತೆಯೇ, ಇರುಳಿನಿಂದ ನಸುಕಿನವರೆಗಿನ ನಿಸರ್ಗದ ಕ್ರಿಯೆಗಳಿಗೂ ಹೋಲಿಸಬಹುದು.

ನಾಲ್ಕನೆಯ ನುಡಿಯು ಅದ್ಭುತವಾದ ರೀತಿಯಲ್ಲಿ, ಕವಿಗೆ ತನ್ನ ನಲ್ಲೆಯ ಬಗೆಗಿರುವ ಪ್ರೀತಿಯನ್ನು, ಹಾಗು ದಾಂಪತ್ಯರಹಸ್ಯವನ್ನು ಹೇಳುತ್ತದೆ:

ಹೊತ್ತೊತ್ತಿಗೆ ಹೊಂದಿಕೆಯಾಗಿ
ಹಲವಾದಿ ಒಬ್ಬಾಕೆಯಾಗಿ
ಹೌದs ಚನ್ನಿ ಹೌದ ಚೆಲುವೀ
ನನ್ನವಳೇನs?

ನಿಸರ್ಗದ ದೈನಂದಿನ ವ್ಯಾಪಾರದಲ್ಲಿ, ನಿಸರ್ಗ ಹೇಗೆ ಹಲವು ಬಣ್ಣಗಳನ್ನು ತಳೆಯುತ್ತದೆ, ಇವೆಲ್ಲ ಪ್ರಕಾರಗಳು ಹೇಗೆ ನಿಸರ್ಗದ ಚೆಲುವೇ ಆಗಿವೆ, ಈ ಎಲ್ಲ ಬಗೆಗಳು ಮನುಷ್ಯನಿಗೆ ಹೇಗೆ ಸುಖವನ್ನೇ ಕೊಡುತ್ತವೆ ಎಂದು ಹೇಳುತ್ತಲೆ, ಸಮರಸ ದಾಂಪತ್ಯವೂ ಸಹ ಇದೇ ತೆರನಾಗಿರುತ್ತದೆ ಎನ್ನುವ ತನ್ನ ಭಾವನೆಯನ್ನು ಕವಿ ಹೊರಗೆಡುವುತ್ತಿದ್ದಾನೆ. ದೈನಂದಿನ ವ್ಯವಹಾರದಲ್ಲಿ ಬಳಲಿದ ಮನುಷ್ಯ ಸಂಜೆಯಾಗುತ್ತಿದ್ದಂತೆ ವಿಶ್ರಾಂತಿಯನ್ನು ಬಯಸುತ್ತಾನೆ. ಇರುಳು ಆತನ ದಣಿವನ್ನು ತೊಡೆಯುತ್ತದೆ. ಬೆಳಗಾಗುತ್ತಿದ್ದಂತೆ ಆತ ಮರುದಿನದ ವ್ಯವಹಾರಕ್ಕೆ ಹುರುಪಿನಿಂದ ಅಣಿಯಾಗುತ್ತಾನೆ. ಅವನ ನಲ್ಲೆಯೂ ಸಹ ಈ ಸಂಧ್ಯಾಕಾಲದಂತೆ, ನಿಶಾಕಾಲದಂತೆ ಹಾಗೂ ಉಷಾಕಾಲದಂತೆ ಅವನ ದಣಿವನ್ನು ಪರಿಹರಿಸುತ್ತಾಳೆ, ತಣಿಸುತ್ತಾಳೆ, ಹೊಸ ಹುರುಪನ್ನು ತುಂಬುತ್ತಾಳೆ.

ಅವಳನ್ನು ಕವಿ ಚನ್ನಿ ಎಂದು ಕರೆಯುತ್ತಾರೆ. ಚನ್ನಿ ಯಾದವಳೇ ಚೆಲುವಿ ಯಾಗಿರಬಲ್ಲಳು, ಬರಿ ನೋಟಕ್ಕೆ ಚೆಲುವಿಯಾದವಳು ಚನ್ನಿಯಾಗಿರದಿದ್ದರೆ ಅವಳು ಚೆಲುವೆಯಾಗಲಾರಳು. ನಲ್ಲನಿಗೆ ಅವಳು ಎಲ್ಲಾ ಸಂದರ್ಭಗಳಲ್ಲೂ ಹೊಂದಿಕೆಯಾಗಬೇಕು . ಈ ಒಬ್ಬಳೇ ನಲ್ಲೆ ವಿವಿಧ ಸಂದರ್ಭಗಳಲ್ಲಿ ವಿವಿಧ ರೀತಿಗಳಲ್ಲಿ ತೋರಿಬರುತ್ತಾಳೆ ಎನ್ನುವ ಅಭಿಪ್ರಾಯವನ್ನು ಬೇಂದ್ರೆ ವ್ಯಕ್ತ ಪಡಿಸುತ್ತಾರೆ.

ಬೇಂದ್ರೆಯವರ ಈ ಕವನ ಅವರ ಕಾಮಕಸ್ತೂರಿ ಕವನಸಂಗ್ರಹದಲ್ಲಿದೆ.
ಕಾಮಕಸ್ತೂರಿ ಸುಗಂಧವನ್ನು ಬೀರುವ ಒಂದು ಸಸ್ಯ. ಇದರ ಎಲೆಗಳನ್ನು ದೇವರ ಪೂಜೆಯಲ್ಲಿ ಬಳಸಲಾಗುತ್ತದೆ.
ಆದರೆ ಕಸ್ತೂರಿ ಮೃಗದಿಂದ ಪಡೆಯಲಾದ ಗಂಧವನ್ನು ಕಾಮೋದ್ದೀಪನಕ್ಕಾಗಿ ಬಳಸಲಾಗುತ್ತದೆ. ಗಂಡು ಹೆಣ್ಣಿನ ನಡುವಿರುವ ಕಾಮವೂ ಸಹ ಕಸ್ತೂರಿಯ ಗಂಧವಾಗದೆ, ಕಾಮಕಸ್ತೂರಿಯ ಸುಗಂಧವಾಗಬೇಕು ಎನ್ನುವದು ಬೇಂದ್ರೆಯವರ ಮನೀಷೆ.  
ಇದು ಸುಪ್ರಸಿದ್ಧ ವಿಮರ್ಶಕ ಸಾಕ್ಷಿ’ (ದಿವಂಗತ ಶ್ರೀ ಆರ್. ಜಿ. ಕುಲಕರ್ಣಿ) ಇವರ ಅಭಿಪ್ರಾಯವಾಗಿದೆ.

ಕೇವಲ ನಾಲ್ಕು ನುಡಿಗಳ ಈ ಕವನ, ಅತ್ಯಂತ ಸರಳ ಕನ್ನಡದಲ್ಲಿ ಬರೆದ ಈ ಕವನ, ಅತ್ಯಂತ ಚಮತ್ಕಾರಪೂರ್ಣವಾದ ಈ ಕವನ, ಅತಿ ಸುಂದರವಾದ ನಿಸರ್ಗ ಕವನವೂ ಹೌದು, ದಾಂಪತ್ಯಕವನವೂ ಹೌದು.

24 comments:

  1. ಸುನಾತರೆ,
    ಈ ಹಾಡನ್ನ ನೆನಪಿಸದಕ್ಕೆ ತಮ್ಗೆ ನನ್ನಿಗಳು.
    ಈ ಹಾಡಿನಲ್ಲ ನಮ್ಮ ಸರಳ/ಅಣ್ಣೆಗನ್ನಡದ ಬಲವೇನು ಅಂಬುದರ ಅಱಿವಾಗುತ್ತದೆ. ಈ ಹಾಡು ಕನ್ನಡದ ಆರ್ಪಿಗೆ ಕನ್ನಡಿ.

    ಈ ಹಾಡನ್ನ ನಮ್ಮ ಯಶವಂತ ಹಳಿಬಂಡಿಯವರು ಬಾಳ್ ಚಲೊ ಹಾಡ್ಯಾರ.

    ReplyDelete
  2. ಸುನಾಥಕಾಕಾ...

    ಒಳ್ಳೆಯ ಹಾಡನ್ನ ನೆನಪಿಸಿದ್ದಕ್ಕೆ ಧನ್ಯವಾದಗಳು.
    "ತಂಬುಲದ ತುಟಿಯ ತೋರಿ
    ಮಲ್ಲಿಗೆಯ ಮುಡಿದುಕೊಂಡು
    ಮೆಲ್ಲಗಾಗಿ ಬರುವವಳ್ಯಾರs?
    ಸಂಜಿ ಏನs?"
    ಬೇಂದ್ರೆಯವರ ಇಂತದೇ ದಾಂಪತ್ಯಸಾಲುಗಳು ಖುಷಿಕೊಡುತ್ತವೆ. ಎಲ್ಲದಂಪತಿಗಳನ್ನು ರಂಜಿಸಲಿಕ್ಕಾಗಿಯೇ ಬರೆದ ಹಾಗೆ...ಅಲ್ಲವೇ?
    ಮಿತಿಮೀರದ ತುಂಟತನದ ಇಂತದೇ ಸಾಲುಗಳು , ಆಡುಭಾಷೆಯ ಸೊಗಡನ್ನ ಬಿಟ್ಟುಕೊಡದ ಚೆಲುವು ಆಪ್ತ ಎನಿಸುತ್ತವೆ.
    ಒಳ್ಳೊಳ್ಳೆಯ ಲೇಖನ ಕೊಟ್ಟು ಓದುಗರೊಂದಿಗೆ ಸಂಪದ್ಭರಿತವಿಷಯಗಳನ್ನ ಹಂಚಿಕೊಳ್ಳುವ ನಿಮಗೆ ವಂದನೆಗಳು.

    ReplyDelete
  3. ಭರತರೆ,
    ಈ ಕವನದ ಸೌಂದರ್ಯವನ್ನು, ಅರ್ಥವನ್ನು ಅನುಭವಿಸಬೇಕಾದರೆ, ಯಶವಂತ ಹಳೆಬಂಡಿಯವರ ಹಾಡನ್ನು ಕೇಳಬೇಕು.
    ನೀವು ಹೇಳಿದಂತೆ, ಈ ಕವನದಲ್ಲಿ ಅಚ್ಚಕನ್ನಡ ಪದಗಳಿವೆ. ದೇಸಿ ಪದಗಳ ಬಳಕೆ ಬೇಂದ್ರೆಯವರ ಕವನಗಳ ಒಂದು ವೈಶಿಷ್ಟ್ಯವಾಗಿದೆ.

    ReplyDelete
  4. ಶಾಂತಲಾ,
    ಬಹಳ ಸೊಗಸಾಗಿ ಕವನದ ಚೆಲುವನ್ನು ವ್ಯಾಖ್ಯಾನಿಸಿರುವೆ:
    ಮಿತಿಯಲ್ಲಿರುವ ತುಂಟತನ....exactly.
    ಆಡುಭಾಷೆಯ ಸೊಗಡು...correct!
    ಬೇಂದ್ರೆಯವರ ಕವನಗಳು ಕನ್ನಡದ ದೇಸಿ ಪದಗಳಿಂದ ತುಂಬಿದ ಖಜಾನೆ ಎನ್ನೋಣವೆ?
    -ಸುನಾಥ ಕಾಕಾ

    ReplyDelete
  5. Aha !! I celebrate return of Dr DR Bendre !!!

    ReplyDelete
  6. ವರಕವಿಗಳನ್ನು ಬಿಟ್ಟು ಬಾಳಲಾದೀತೆ?

    ReplyDelete
  7. ಸುನಾಥರೆ,

    ಪ್ರಕೃತಿಯೇ ಹೆಣ್ಣು.. ಹೆಣ್ಣೇ ಪ್ರಕೃತಿ. ಬೇಂದ್ರೆಯವರು ಈ ಅವಿನಾಭಾವ ಸಂಬಂಧವನ್ನು ತುಂಬಾ ಚೆನ್ನಾಗಿ ಕಾಣಿಸಿದ್ದಾರೆ.

    ಮೇಲಸೆರಗು ಮೆಲ್ಲಗ ಸರಿಸಿ
    ವಾರಿನೋಟ ಮೇಲಕ್ಕೆತ್ತಿ
    ಮಳ್ಳಿಯಂತೆ ಮುರುಕುವಳ್ಯಾರs?
    ಇರುಳು ಏನs?


    ಇದನ್ನು ಹೀಗೂ ಅರ್ಥೈಸಬಹುದಲ್ಲವೇ?-

    ಇರುಳ ಕಡುಗಪ್ಪನ್ನು ದೂಡಿ ಮೂಡಿದ ಚಂದಿರನಂತೆ ಕಡುಗಪ್ಪು ಕೂದಲ ಚೆಲಿವಿ ಸೆರಗ ಸರಸಿ ತನ್ನ ಚೆಲುವಾದ ಮೊಗವನ್ನು ತೋರಿದಳು..

    ಬೇಂದ್ರೆಯವರ ಸುಂದರ ಕವನವೊಂದನ್ನು ಕಾಣಿಸಿದ್ದಕ್ಕೆ ಧನ್ಯವಾದಗಳು.

    ReplyDelete
  8. ತೇಜಸ್ವಿನಿ,
    ಸೊಗಸಾದ ಅರ್ಥವನ್ನು ತೋರಿಸಿದಿರಿ. ಧನ್ಯವಾದಗಳು.

    ReplyDelete
  9. Tejaswini's interpretation is beautiful !!!!

    ReplyDelete
  10. thank you ಸುನಾಥ್. ನನ್ನ ಕವನಕ್ಕೆ ನೀವು ನೀಡಿದ ಪ್ರತಿಕ್ರಿಯೆಗೆ

    ReplyDelete
  11. ಕಟ್ಟಿಯವರೆ,
    Tejaswini's interpretation is beautiful like herself.

    ReplyDelete
  12. ಕಟ್ಟಿಯವರೆ ಹಾಗೂ ಸುನಾಥರೆ,

    ಮೆಚ್ಚುಗೆಗಳಿಗೆ ತುಂಬಾ ಧನ್ಯವಾದಗಳು.

    ReplyDelete
  13. ತೇಜಸ್ವಿನಿಯವರು ಬೇಂದ್ರೆಯವರ ಇನ್ನೂ ಕೆಲವು
    ಪದ್ಯಗಳಿಗೆ ಹೊಸ-ಹೊಸ ಆಯಾಮಗಳಲ್ಲಿ
    ಹೊಸ-ಹೊಸ ಅರ್ಥಗಳನ್ನು ಬರೆದರೆ ತುಂಬ
    ಚೆನ್ನಾಗಿರುತ್ತದೆ.

    ReplyDelete
  14. ತೇಜಸ್ವಿನಿಯವರ ಬೇಂದ್ರೆ ಕವನದ ಅರ್ಥ ತುಂಬ ಚೆನ್ನಾಗಿದೆ.

    ಅರುಣಾ ಗಲಗಲಿ

    ReplyDelete
  15. ಅರುಣಾ,
    ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು. ದಯವಿಟ್ಟು ನಿಮ್ಮ ಪ್ರತಿಕ್ರಿಯೆಯನ್ನು ಮೂಡಿಸುತ್ತಾ ಇರಿ.

    ತೇಜಸ್ವಿನಿಯವರೆ,
    ನಿಮ್ಮ ವ್ಯಾಖ್ಯಾನವನ್ನು ಮೆಚ್ಚುವವರ ಸಂಖ್ಯೆ ಹೆಚ್ಚುತ್ತಾ ಇದೆ. ನಿಮಗೆ ಅಭಿನಂದನೆಗಳು.

    ReplyDelete
  16. ಅರುಣಾ ಗಲಗಲಿಯವರೇ, ಸುನಾಥರೇ ಹಾಗೂ ಕಟ್ಟಿಯವರೇ ತಮ್ಮೆಲ್ಲರ ಪ್ರೋತ್ಸಾಹ ಹಾಗೂ ಮಚ್ಚುಗೆಗಳಿಗೆ ಮತ್ತೊಮ್ಮೆ ಧನ್ಯವಾದಗಳು. ಪ್ರಯತ್ನಿಸುವೆ.. ಆದರೆ ಅಂತಹ ಮಹಾನ್ ವ್ಯಕ್ತಿಯ ಕವನಗಳನ್ನು ವಿಮರ್ಶಿಸುವಷ್ಟು ನಾನು ದೊಡ್ಡವಳಲ್ಲ.. ಆ ಕವನಗಳೊಳಗಿನ ಭಾವಾರ್ಥವನ್ನು ತುಸು ಅರಿಯುವ ಅಲ್ಪ ಪ್ರಯತ್ನವನ್ನಷ್ಟೇ ಮಾಡಬಹುದೇನೋ.

    ಕಟ್ಟಿಯವರೇ ತಮ್ಮ yalgur ಶುರುವಾಗುವುದು ಯಾವಾಗಾ? ಕಾಯುತ್ತಿರುವೆ :)

    ReplyDelete
  17. ಪದಗಳ ಜೋಡಣೆಕ್ಕಿಂತಲೂ ಬೇಂದ್ರೆಯವರ ಅದ್ಭುತ ಕಲ್ಪನಾ ಶಕ್ತಿ ನಿಜಕ್ಕೂ ಶಕ್ತಿಶಾಲಿ..

    ನನ್ನವಳು ಅಂದಕೂಡಲೇ ಮಲ್ಲಿಗೆ ಕವಿ ನರಸಿಂಹಸ್ವಾಮಿಯವರ 'ನನ್ನವಳು ನನ್ನ....' ಕವಿತೆ ನೆನಪಾಯಿತು.

    ReplyDelete
  18. ಶಿವ,
    "ನನ್ನವಳು ನನ್ನ ಹೊನ್ನಾಡನಾಡುವಳು
    ಬೆಳಗುಗೆನ್ನೆಯ ಚೆನ್ನೆ ನನ್ನ ಮಡದಿ"
    ಸುಂದರವಾದ ಕವನ.

    ReplyDelete
  19. ಕವಿತಾ ನಾಗರಾಜ್
    ತುಂಬಾ ಸೊಗಸಾಗಿದೆ.

    ReplyDelete
  20. bendre kannadada adubhutha kavi.avara kavya chinthana nitya nava naveena

    ReplyDelete
  21. ಬೇಂದ್ರೆಯವರ ಈ ಸುಂದರ ಕಾವ್ಯಕ್ಕೊಂದು ನನ್ನ ಚಿತ್ರಕಾವ್ಯ .

    https://www.youtube.com/watch?v=Yj-JWiTY17U

    ReplyDelete
  22. ಪುನೀತರೆ,
    ಕವನವನ್ನು ಕೇಳಿಸಿದ ಹಾಗು ಅದಕ್ಕೆ ಸೊಗಸಾದ ದೃಶ್ಯಗಳನ್ನು ಜೋಡಿಸಿದ ನಿಮಗೆ ಶರಣು!

    ReplyDelete
  23. ಯಪ್ಪಾ... ಭಾವಜೀವಿಗಳೇ,ಒಂದ್ಸಲ ಹಿಂದೆ ತಿರುಗಿನೊಡ್ರಿ. ಎಷ್ಟು ಶ್ರೀಮಂತವಾಗಿದೆ ನಮ್ ಸಾಹಿತ್ಯ ಅಂತ. ಅದ್ಭುತ.
    ಸಾಹಿತ್ಯ ಓದುತ್ತಿದ್ರೆ ಸಮಯ ಓಡೋದು ಗೊತ್ತಾಗೋಲ್ಲ.
    ಈ ಕವಿಯ ಸಾಹಿತ್ಯವನ್ನ explain ಮಾಡ್ತ ಇರೋ ನಿಮಗೂ ಕೂಡ ಒಂದು ಶುಭಾಶಯಗಳು ಹಾಗೂ ನಮ್ಮಂತಹ ಇಂದಿನ ಯುವ ಪೀಳಿಗೆಗೆ ಇಂಥ explanations ತುಂಬಾ ಅಗತ್ಯವಿದೆ.

    ReplyDelete
  24. sandyಯವರೆ, ನಮ್ಮ ಸಾಹಿತ್ಯದ ಶ್ರೀಮಂತಿಕೆಯನ್ನು ಅರಿತುಕೊಳ್ಳುತ್ತಿರುವ ಹಾಗು ಮೆಚ್ಚುತ್ತಿರುವ ನಿಮಗೆ ಅಭಿನಂದನೆಗಳು ಹಾಗು ಶುಭಾಶಯಗಳು.

    ReplyDelete