Wednesday, August 20, 2008

ನೀ ಹೀಂಗ ನೋಡಬ್ಯಾಡ ನನ್ನ

ಪುತ್ರಶೋಕ ನಿರಂತರ ಎಂದು ಹೇಳುತ್ತಾರೆ. ಬೇಂದ್ರೆ ದಂಪತಿಗಳು ತಮಗೆ ಜನಿಸಿದ ೯ ಮಕ್ಕಳಲ್ಲಿ ೬ ಮಕ್ಕಳನ್ನು ಕಳೆದುಕೊಂಡ ದುರ್ದೈವಿಗಳು. ಮೇಲಿಂದ ಮೇಲೆ ಎರಗಿದ ಈ ಆಘಾತಗಳನ್ನು ಸಹಿಸಿದ ಬೇಂದ್ರೆಯವರು ತಮ್ಮ ಸಹೃದಯ ಓದುಗರಿಗೆ ಹೇಳುವದು ಹೀಗೆ:

ಎನ್ನ ಪಾಡೆನೆಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ !
ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ !
………………………………………………………………………
ನೀ ಹೀಂಗ ನೋಡಬ್ಯಾಡ ನನ್ನ ಕವನದಲ್ಲಿಯೂ ಸಹ ಶಿಶುವಿನ ಮರಣದ ಸಂದರ್ಭ ವರ್ಣಿತವಾಗಿದೆ. ಅದನ್ನು ಕವಿ ಹೀಗೆ ಸೂಚಿಸಿದ್ದಾರೆ: ಆಪತ್ಯಗಳನ್ನು ಕಳೆದುಕೊಂಡ ಸತಿಯೊಬ್ಬಳು ಆಸನ್ನಮರಣ ಶಿಶುವನ್ನು ನೋಡಲು ಬಂದ ಪತಿಯನ್ನು ಕುರಿತು ಅನಿರ್ವಚನೀಯ ದುಃಖದಿಂದ ಅರ್ಥಪೂರ್ಣವಾಗಿ ನೋಡಿದಾಗ, ಅವನ ಎದೆಯಲ್ಲಿ ಹುಟ್ಟಿದ ಹಾಡು ಇದು…”

ಬೇಂದ್ರೆಯವರು ಈ ಕಾಲ್ಪನಿಕ ಕವನವನ್ನು ಬರೆದ ಬಳಿಕ, ಅವರು ನಿಜಜೀವನದಲ್ಲಿಯೂ ಇಂತಹದೇ ಆಘಾತವನ್ನು ಎದುರಿಸಿದರು. ಅವರ ಒಂದೂವರೆ ತಿಂಗಳ ಹೆಣ್ಣುಕೂಸು ಲಲಿತಾಮರಣವನ್ನಪ್ಪಿದಳು. ಆ ಸಂದರ್ಭದಲ್ಲಿ ಅವರು ಬರೆದ ಶೋಕಗೀತೆ ಲಲಿತಾ’.
………………………………………………………………

ನೀ ಹೀಂಗ ನೋಡಬ್ಯಾಡ ನನ್ನ ಕವನದ ಪೂರ್ತಿಪಾಠ ಹೀಗಿದೆ :

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ? ||ಪಲ್ಲ||

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರು ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.
………………………………………………………………..

ಕಣ್ಣೆದುರಿನಲ್ಲಿಯೇ ಕೊನೆಯುಸಿರನ್ನು ಎಳೆಯುತ್ತಿರುವ ಕೂಸನ್ನು ತನ್ನ ತೊಡೆಯ ಮೇಲಿರಿಸಿಕೊಂಡಿರುವ ತಾಯಿ ತನ್ನ ಪತಿಯ ಕಡೆಗೆ ನೋಡುತ್ತಾಳೆ. ಆ ನೋಟದಲ್ಲಿ ಏನೆಲ್ಲ ಭಾವನೆಗಳು ಅಡಗಿವೆ? ಸಾಯುತ್ತಿರುವ ಕೂಸಿನ ಬಗೆಗಿನ ದುಃಖ, ತನ್ನ ಪತಿ ಏನಾದರೂ ಮಾಡಿ ಆ ದುರಂತವನ್ನು ತಪ್ಪಿಸಬಹುದೇನೊ ಎನ್ನುವ ಆಸೆ, ತನ್ನ ಹಾಗೂ ತನ್ನ ಪತಿಯ ಅಸಹಾಯಕತೆ ಹಾಗು ಅವನ ದುಃಖದ ಅರಿವು ಇವೆಲ್ಲ ಅವಳ ನೋಟದಲ್ಲಿವೆ.

ಕೂಸು ಜೀವ ಬಿಡುತ್ತಿರುವ ಈ ಗಳಿಗೆಯಲ್ಲಿ, ಅವಳ ಪತಿಯೂ ಅಸಹಾಯಕ. ಅವಳ ಶೋಕದ ಉಪಶಮನಕ್ಕಾಗಿ, ಅವಳ ಕೂಸನ್ನು ಬದುಕಿಸುವ ಭರವಸೆ ಕೊಡಲು ಗಂಡನಾದ ಆತ ಏನೂ ಮಾಡಲಾರ. ಅವಳ ನೋಟವನ್ನು ಎದುರಿಸಲಾರ. ಇದು ಪತಿಯಾದವನ ಸಂಕಟದ ಪರಾಕಾಷ್ಠೆ.

ನೀನು ಈ ರೀತಿಯಾಗಿ ನನ್ನನ್ನು ನೋಡಿದರೆ, ನಾನು ನಿನ್ನ ನೋಟವನ್ನು ಎದುರಿಸಲಾರೆ, ನಿನ್ನ ಕಣ್ಣಲ್ಲಿ ಕಣ್ಣಿಡಲಾರೆ, ನಿನಗೆ ಸಾಂತ್ವನ ಹೇಳಲಿಕ್ಕಾದರೂ ನಿನ್ನ ಮುಖ ಹೇಗೆ ನೋಡಲಿ ?” ಎನ್ನುವ ಭಾವನೆ ಕವನದ ಪಲ್ಲದಲ್ಲಿ ಮೂಡಿದೆ :

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ,
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ ?”

ಗಂಡನ ಅಸಹಾಯಕತೆ ಏನೇ ಇದ್ದರೂ, ಹೆಂಡತಿಗೆ ಅವನೇ ಆಸರೆ ಅಲ್ಲವೆ? ಇವನು ತನ್ನ ನೋಟವನ್ನು ಹೊರಳಿಸಿದರೂ ಸಹ ಅವಳು ಮತ್ತೆ ಮತ್ತೆ ಇವನ ಕಡೆಗೆ ನೋಡುತ್ತಾಳೆ. ಅದಕ್ಕವನು ತನ್ನ ಅಸಹಾಯಕತೆಯನ್ನು ಅವಳೆದುರಿಗೆ ವ್ಯಕ್ತಪಡಿಸಲೇ ಬೇಕು, ಅವಳಿಗೆ ಸಮಾಧಾನ ಹೇಳಲೇ ಬೇಕು.

ಈ ಸಂಸಾರದಲ್ಲಿ ಎಣಿಸಲಾರದಷ್ಟು ದುಃಖವಿದೆ. ಇದನ್ನು ಸಹಿಸುವದು ಅನಿವಾರ್ಯ. ಈ ಸಂಸಾರವೆನ್ನುವ ದುಃಖಸಾಗರದ ಆಚೆಯ ದಂಡೆ ಎಲ್ಲಿದೆಯೊ ತನಗೂ ತಿಳಿಯದು. ತಮ್ಮೆಲ್ಲಾ ಭಾರವನ್ನು ದೇವರ ಮೇಲೆ ಹೊರಿಸಿ ಬಿಡೋಣ. ಈ ಕೂಸು ಸಾಯುವದೇ ದೈವೇಚ್ಛೆಯಾಗಿದ್ದರೆ, ಅದನ್ನು ತಡೆಯುವದು ತನ್ನಿಂದ ಸಾಧ್ಯವೆ? ಸುಮ್ಮನೆ ಯಾಕೆ ನನ್ನ ಕಡೆಗೆ ಆಸೆಯಿಂದ, ಸಂಕಟದಿಂದ ನೋಡುತ್ತೀ?” ಎನ್ನುವ ಭಾವವು ಮೊದಲನೆಯ ನುಡಿಯಲ್ಲಿ ವ್ಯಕ್ತವಾಗಿದೆ.

ಸಂಸಾರಸಾಗರದಾಗ, ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ನೀ ಇತ್ತ ?”

ತಾನೇನೊ ಅವಳಿಗೆ ಸಾಂತ್ವನವನ್ನು ಹೇಳಿದೆ. ಆದರೆ ಶೋಕತಪ್ತಳಾದ ಅವಳನ್ನು ಇಂತಹ ಮಾತುಗಳಿಂದ ಸಂತೈಸಬಹುದೆ? ಅವಳ ಪರಿಸ್ಥಿತಿ ಹೇಗಿದೆ?  ಮನಸ್ಸು ವ್ಯಸ್ತವಾದಾಗ ದೇಹದ ಚೆಲುವೂ ಅಸ್ತವಾಗುತ್ತದೆ.
ಕೆಂಪು ಚುಂಚು ಇರುವ ಗಿಳಿ, ಕೆಂಪು ಹಣ್ಣನ್ನು ಅರ್ಧ ತಿಂದಾಗ ಕಾಣುವ ಕೆಂಬಣ್ಣದ ಓಕುಳಿಯಂತೆ ಇವಳ ತುಟಿಗಳು ಕೆಂಪಾಗಿ ಇರುತ್ತಿದ್ದವು. ತುಟಿಗಳನ್ನು ಕೆಂಪಾಗಿಸಲು ಅವಳಿಗೆ ತಾಂಬೂಲ ಬೇಕಾಗಿರಲಿಲ್ಲ.
ಇಂತಹ ತುಟಿಗಳು ಈಗ ಬಣ್ಣಗೆಟ್ಟಿವೆ. ಮುಖದ ಕಳೆಯೇ ಬದಲಾಗಿದೆ. ಇವಳಿಗೆ ಯಾವುದೊ ಗಾಳಿ (=evil spirit) ತಾಕಿರಬಹುದೆ? ಇವಳ ಮೋರೆಯ ಮೇಲೆ ಮಾರಿಯ (=ಭಯಾನಕ ದೇವಿಯ) ಕಳೆ ಕಾಣುತ್ತಿದೆ. ಸಾವಿನ ಕೈ ಇವಳ ಮುಖದ ಮೇಲೆ ಆಡಿತೊ ಎನ್ನುವಂತೆ ಮುಖ ರಾವು ಹೊಡೆದಿದೆ. ಅವಳ ಈ ಭಯಾನಕ ಚೆಹರೆಯನ್ನು ಕಂಡು ಗಂಡನಿಗೆ ಮುಂದೇನು ಪರಿಸ್ಥಿತಿ ಕಾದಿದೆಯೊ?” ಎನ್ನುವ ಭಯ ಆವರಿಸುತ್ತದೆ. ಈ ಭಾವನೆಯು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ :

ತಂಬಲs ಹಾಕದs ತುಂಬ ಕೆಂಪು ಗಿಣಿಗಡಕ ಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು ? ಯಾವ ಗಾಳಿಗೆ ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣು, ಕಂಡು ಮಾರೀಗೆ ಮಾರಿsಯಾ ರೀತಿ
ಸಾವನs ತನ್ನ ಕೈ ಸವರಿತಿಲ್ಲಿ, ಬಂತೆನಗ ಇಲ್ಲದ ಭೀತಿ.

ಈ ಆಘಾತಕ್ಕಿಂತ ಮೊದಲಲ್ಲಿ ಅವರ ಸಂಸಾರವು ಸರಸಮಯವಾಗಿತ್ತು ಎನ್ನುವ ಸೂಚನೆಯನ್ನು ತಾಂಬೂಲ ಹಾಗೂ ಗಿಣಿ ಕಚ್ಚಿದ ಹಣ್ಣಿನ ಮೂಲಕ ಬೇಂದ್ರೆ ನೀಡುತ್ತಾರೆ. ಆದರೆ ಆ ಸರಸಮಯ ಸಂಸಾರದಲ್ಲಿ ಶಿಶುಮರಣದ ವಿಷದ ಹನಿ ಬಿದ್ದಿದೆ.

ಅವನಿಗೆ ಈಗ ಆತ್ಮತಾತ್ಸಾರ ಆವರಿಸುತ್ತದೆ. ತನ್ನ ಹೆಂಡತಿಯ ಈ ಸ್ಥಿತಿಗೆ ತಾನೇ ಕಾರಣ. ತನ್ನ ಕೈ ಹಿಡಿದದ್ದರಿಂದಲೇ ಅವಳಿಗೆ ಇಂತಹ ಸ್ಥಿತಿ ಬಂದಿದೆ. ಮದುವೆಯಾಗುವಾಗ ಅವಳಿಗೆ ಏನೆಲ್ಲ ಆಕಾಂಕ್ಷೆಗಳಿದ್ದವೊ ಏನೊ? ಮದುವೆಯಲ್ಲಿ ಧಾರೆ ಎರೆದು ಕೊಡುವಾಗ ತಾನು ಹಿಡಿದ ಕೈ ತನಗೆ ತಂಪು ನೀಡುವದು ಎಂದವಳು ಭಾವಿಸಿದ್ದಳು. ಆದರೆ ಈ ಕೈ ಬೂದಿ ಮುಚ್ಚಿದ ಕೆಂಡವಾಗಿದೆ ! ಅದು ತಿಳಿದ ಮೇಲೂ ಅವನ ಕೈಯನ್ನು ಆಕೆ ಬಿಡುತ್ತಿಲ್ಲವಲ್ಲ !

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತನ ತಿಳಿದು
ಬಿಡಲೊಲ್ಲಿ ಇನ್ನುನೂ, ಬೂದಿ ಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ ?”

ಆತ ಆಕಾಶ ,ಇವಳು ಭೂಮಿ. ಭೂಮಿಯೇ ಎಲ್ಲ ಜೀವರಿಗೂ ನೆಲೆ ಕೊಡುವದು. ಆಕಾಶವೇ ಕಪ್ಪರಿಸಿದಾಗ, ಆತನೇ ಧೃತಿಗೆಟ್ಟಾಗ, ನೆಲವೇ ಕುಸಿದು ಹೋಗುತ್ತದೆ. ಆಕಾಶ ಕುಸಿಯಲಾರದು ಎನ್ನುವ ನೀತಿಯಲ್ಲಿ ನಂಬಿಕೆ ಇಟ್ಟ ಈ ಹುಚ್ಚು ಹೆಣ್ಣು ಆತನೇ ತನ್ನ ಬಾಳಿನ ಭರವಸೆ ಎಂದು ತಿಳಿದಿದ್ದಾಳೆಯೆ? ಅವಳಿಗೆ ಭರವಸೆ ಕೊಡಲಾದರೂ ಏನು ಉಳಿದಿದೆ ಅವಳಲ್ಲಿ ?

ಅವಳಲ್ಲಿರುವ ಬಾಳು ಬತ್ತಿ ಹೋಗಿದೆ. ಅವಳ ಕಣ್ಣುಗಳ ಹೊಳಪು ಮಾಸಿ ಹೋಗಿದೆ.
ಅವಳನ್ನು ನೋಡಿದರೆ ಅಲ್ಲಿ ಕಾಣುವದು ಒಂದು ನಿರ್ಜೀವ ದೇಹ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡ ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !

ಕನ್ನಡ ಕಾವ್ಯದಲ್ಲಿಯೇ ಅತ್ಯಂತ ಸಂವೇದನಾಪೂರ್ಣವಾದ ಎರಡು ಉಪಮೆಗಳನ್ನು ಈ ನುಡಿಯಲ್ಲಿ ನೋಡುತ್ತೇವೆ. ಕವಳಿ ಹಣ್ಣುಗಳನ್ನು ನೋಡಿದವರು (--ಈಗ ಕವಳಿ ಹಣ್ಣುಗಳೇ ಅಪರೂಪವಾಗಿವೆ--) ಅವು ಎಷ್ಟು ನೀಲಿಕಪ್ಪಾಗಿರುತ್ತವೆ ಎನ್ನುವದನ್ನು ಬಲ್ಲರು. ಕವಳಿಕಂಟಿಯ ದಪ್ಪವಾದ ಬಿಳಿ ಹಾಲು ಈ ಹಣ್ಣುಗಳಿಗೆ ಅಂಟಿಕೊಂಡಿರುತ್ತದೆ. ಚಳಿಗಾಲದಲ್ಲಿ ಈ ಕವಳಿ ಹಣ್ಣುಗಳ ಮೇಲೆ ಇಬ್ಬನಿ ಸಂಗ್ರಹವಾಗುವದರಿಂದ, ಹಣ್ಣುಗಳು ತೊಳೆದಂತಾಗಿರುತ್ತವೆ. ಇವಳ ಕಣ್ಣುಗಳ ಬಿಳಿಭಾಗ ಆ ಹಾಲಿನಂತೆ ; ಇವಳ ಕಣ್ಣ ಪಾಪೆಗಳು ಅಷ್ಟು ನೀಲಿಕಪ್ಪು ; ಕಣ್ಣುಗಳ ತೇಜ ಇಬ್ಬನಿಯ ಹೊಳಪಿನಂತೆ ಎಂದು ಆತನಿಗೆ ತೋರುತ್ತಿತ್ತು. ಆದರೆ ಈಗ ಆ ಕಣ್ಣುಗಳಲ್ಲಿಯ ಜೀವವೇ ಹೋಗಿ ಬಿಟ್ಟಿದೆ. ಈ ನಿಸ್ತೇಜ ಕಣ್ಣುಗಳು ಅವಳ ಕಣ್ಣುಗಳೆ ಎಂದು ಆತ ಕೇಳುತ್ತಾನೆ.
ಮೊದಲಲ್ಲಿ ಅವಳ ಮುಖವು ಹುಣ್ಣಿವೆಯ ಚಂದಿರನ ಹಾಗೆ ಪ್ರಕಾಶಮಾನವಾಗಿತ್ತು. ಈಗ ನೋಡಿದರೆ ಅವನಿಗೆ ಅಲ್ಲಿ ಕಾಣುವದು ಪ್ರೇತಕಳೆ: ಹುಣ್ಣವೀ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲತs ಹಗಲ !

ಓದುಗನಲ್ಲಿ ದಿಗ್ಭ್ರಮೆ ಹುಟ್ಟಿಸುವ ಉಪಮೆ ಇದು. ಹುಣ್ಣಿಮೆಯ ಚಂದ್ರ ಹಗಲಿನಲ್ಲಿ ಕಾಣುವದಿಲ್ಲ. ಕಂಡರೆ ಅದು ಅನೈಸರ್ಗಿಕ ; ಅದು ಚಂದ್ರನ ಹೆಣ. ಅವನ ಹೆಂಡತಿಯೂ ಸಹ ಮಾನಸಿಕವಾಗಿ ಹೆಣವೇ ಆಗಿದ್ದಾಳೆ. ರಾತ್ರಿಯಲ್ಲಿ ಬೆಳದಿಂಗಳನ್ನು ನೀಡುವ ಪ್ರಕಾಶಮಾನನಾದ, ಸುಖಮಯನಾದ ಚಂದ್ರನು, ಹಗಲಿನಲ್ಲಿ ಕಾಣಿಸಿದರೆ, ಯಾರಿಗೂ ಬೇಕಾಗದ ನಿಸ್ತೇಜ ಹೆಣದಂತೆಯೇ ಕಾಣಿಸುತ್ತಾನೆ. ಅವಳ ಮುಖವು ಈಗ ಹಗಲಿನಲ್ಲಿ ತೇಲಿದ ಚಂದ್ರನ ಹೆಣದಂತೆ ಕಾಣುತ್ತಿದೆ.

ಸಾವಿನ ಎದುರಿಗೆ ಇಬ್ಬರೂ ಅಸಹಾಯಕರು. ಇಬ್ಬರಿಗೂ ಇದರ ಅರಿವಾಗುತ್ತಿದೆ. ಒಬ್ಬರನ್ನೊಬ್ಬರು ಸಮಾಧಾನಿಸಲು ಏನೇನೊ ಪ್ರಯತ್ನಿಸುತ್ತಿದ್ದಾರೆ. ಅವಳು ತನ್ನ ದುಃಖವನ್ನು ಹತ್ತಿಕ್ಕಿ ಇವನಿಗೆ ಸಾಂತ್ವನ ನೀಡಲು ಬಯಸುತ್ತಾಳೆ. ಇವನನ್ನು ನೋಡಿ, ನಕ್ಕಂತೆ ಮಾಡಿ, ತನ್ನ ದುಃಖವನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾಳೆ. ಆದರೆ ಅದು ಹುಚ್ಚು ಪ್ರಯತ್ನ , ಹುಚ್ಚರ ಪ್ರಯತ್ನ. ಅವಳ ಒಳಗೆ ತುಂಬಿಕೊಂಡ ಶೋಕ ಹೊರಗೆ ಬರಬೇಕು. ಶುಷ್ಕ ಸಾಂತ್ವನ ನೀಡಿದ ಆತ ಈಗ ಸಮಾಧಾನದ ಈ ಸುಳ್ಳು ರೂಪ ಸಾಕು; ಅತ್ತು ಬಿಡು, ದುಃಖವನ್ನು ಹೊರಹಾಕುಎಂದು ಹೇಳುತ್ತಾನೆ :

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರೆ ಅತ್ತು ಬಿಡು, ಹೊನಲು ಬರಲಿ, ನಕ್ಕ್ಯಾಕ ಮರಸತೀ ದುಕ್ಕ ?
ಎವೆ ಬಡಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ.

ಕಣ್ಣೀರ-ಮಳೆ ಹೊಡೆಯಲು ಸಿದ್ಧವಾಗಿ ನಿಂತಿದೆ. ಈಗೋ ಇನ್ನೊಂದು ಕ್ಷಣಕ್ಕೊ ಅದು ಸುರಿಯಬೇಕು. ಅವನಿಗೆ ತನ್ನ ಶೋಕ ತಿಳಿಯದಿರಲು ಅವಳು ಅದನ್ನು ತಡೆ ಹಿಡಿದಿದ್ದಾಳೆ, ನಡುನಡುವೆ ಹುಚ್ಚುನಗೆ ನಗುತ್ತಾಳೆ. ಆದರೆ ಅದು ತಿಳಿಯದಿರಲು ಆತ ಹುಚ್ಚನೆ?

ನಿನ್ನ ದುಃಖ ಹೊರ ಬರಲಿ, ಪ್ರವಾಹ ಬಂದಂತೆ ಬರಲಿ ; ರೆಪ್ಪೆ ಬಡಿದರೆ ಕಣ್ಣೀರು ಹೊರಗೆ ಬಂದೀತೆಂದು ರೆಪ್ಪೆ ಬಡಿಯದೆ ಇದ್ದೀಯಾ. ಆದರೆ ನಿನ್ನ ಈ ಬಿರಿಗಣ್ಣು ನನ್ನನ್ನು ಹೆದರಿಸುತ್ತದೆ. ನಿನ್ನ ಅಳುವನ್ನು ಹೊರಗೆ ಹಾಕು, ತುಟಿಕಚ್ಚಿ ಹಿಡಿದು ಅದನ್ನು ಒಳಗೇ ಇಟ್ಟುಕೊಳ್ಳಬೇಡಎಂದು ಆತ ಹೇಳುತ್ತಾನೆ.
ತನ್ನ ಕೈಹಿಡಿದಾಕೆಗೆ ಆತ ಬೇರೇನು ಸಮಾಧಾನ ಹೇಳಬಲ್ಲ?
........................................

ವಾಲ್ಮೀಕಿಯ ಶೋಕದಲ್ಲಿ ರಾಮಾಯಣಮಹಾಕಾವ್ಯ ಹುಟ್ಟಿತು. ಭರ್ತೃಹರಿಯು ತನ್ನ ಉತ್ತರ ರಾಮಾಯಣ ನಾಟಕದಲ್ಲಿ ದುಃಖವನ್ನು ಸಹಿಸಲೆಂದೇ ರಾಮನಲ್ಲಿ ಚೈತನ್ಯವನ್ನು ತುಂಬಲಾಯಿತುಎಂದು ಹೇಳಿದ್ದಾನೆ. ಬೇಂದ್ರೆಯವರು ಸಹ ತಮ್ಮೆಲ್ಲ ದುಃಖಗಳಲ್ಲಿ ಬೆಂದು, ತಮ್ಮ ಪಾಡನ್ನು ಹಾಡಾಗಿಸಿ ನಮಗೆ ನೀಡಿದ್ದಾರೆ, “ಸಖೀಗೀತದಲ್ಲಿ ಅವರು ಹೇಳುವಂತೆ:

ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.

49 comments:

  1. ಸುನಾಥಕಾಕಾ...
    ಯಾವತ್ತಿನಂತೆಯೇ ಸುಂದರ ವಿವರಣೆ. ಹೆಚ್ಚಿಗೆ ಹೇಳೋಕೆ ಗೊತ್ತಾಗ್ತಿಲ್ಲ.
    ನಾನೂ ಓದ್ತಿದೀನಿ ಅಂತ ನಿಮಗೆ ತಿಳಿಸ್ಬೇಕಲ್ಲ ಅಂತ ಆಗಾಗ ಹೀಗೆ ಕಾಮೆಂಟಿನ ರೂಪದಲ್ಲಿ ನಿಮ್ಮ ಮುಂದೆ ನಿಲ್ತೀನಿ ಅಷ್ಟೇ. :-)
    ಪ್ರೀತಿಯಿಂದ,
    -ಶಾಂತಲಾ.

    ReplyDelete
  2. ಶಾಂತಲಾ,
    ಧನ್ಯವಾದಗಳು.
    -ಸುನಾಥ ಕಾಕಾ

    ReplyDelete
  3. ಕಾಕಾ,

    ಈ ಪದ್ಯಾನ ಬಿಡಿಸಿ ಹೇಳಿದ್ದಕ್ಕೆ ತುಂಬಾ ಥ್ಯಾಂಕ್ಸ್.

    ಜೋಗಿ ಹಿಂದೊಮ್ಮೆ ಬೇಂದ್ರೆ ಬಗ್ಗೆ ಬರೀತಾ ಈ ಪದ್ಯದಲ್ಲಿ ಬರೋ 'ಎವೆ ಬಡಿಸಿ ಕೆಡವು..' ಸಾಲಿನ ಬಗ್ಗೆ ಪ್ರಸ್ತಾಪಿಸಿದ್ದರು ಲಿಂಕು.
    ನೀವೇನಂತೀರಾ ಇದರ ಬಗ್ಗೆ?

    ReplyDelete
  4. ಸುಶ್ರುತ,
    ನೀವು ಕೊಟ್ಟ ಲಿಂಕಿಗೆ ಹೋಗಿ, ಜೋಗಿಯವರ ಲೇಖನವನ್ನ enjoy ಮಾಡಿದೆ.
    ಜೋಗಿಯವರು "ಕೆಡವು ಅಂದರೆ ಕೆಡಹು ಏನು?" ಅಂತ ಕೇಳಿದ ಹಾಗಿದೆ. ಅವರ ಪ್ರಶ್ನೆಯೇ ಸ್ವಲ್ಪ confusing ಆಯಿತು.
    Anyway, taking the query in its simple meaning,"ಎವೆ ಬಡಿಸಿ ಕೆಡವು" ಇದರ ಅರ್ಥ "flicker your eyelids (to let out the flood of tears)" ಅಂತ ಆಗುತ್ತೆ.
    ಅವಳು ತನ್ನ ಕಣ್ಣೀರು ಹೊರಬರೋದನ್ನ avoid ಮಾಡುವ ಉದ್ದೇಶದಿಂದ ರೆಪ್ಪೆ ಬಡೀತಾ ಇಲ್ಲ. ಹೀಗಾಗಿ ಅವನಿಗೆ ಇದು ಬಿರುನೋಟದಂತೆ ಕಾಣ್ತಾ ಇದೆ.So,ಅವಳಿಗೆ 'ರೆಪ್ಪೆ ಬಡಿ' ಅಂತ ಹೇಳೋವಾಗ ೨ purposes ಇವೆ:
    (೧)ಅವಳ ಕಣ್ಣೀರು ಹೊರಬಿದ್ದು ಅವಳ ದುಃಖ ಕಡಿಮೆಯಾಗಲಿ
    (೨)ತಾನು ಅವಳ ಬಿರುಗಣ್ಣ ನೋಟದ ಹೆದೆರಿಕೆಯಿಂದ ಬಚಾವಾಗಲಿ.
    ಜೋಗಿಯವರು ಇಷ್ಟು simple ಆಗಿದ್ದನ್ನು ಕೇಳಿರಲಿಕ್ಕಿಲ್ಲ.
    ನಾನು ತಪ್ಪು ಹೇಳಿದೆನೆ?

    ReplyDelete
  5. ಅದು ಹಾಗಲ್ಲ; ಆ 'ಎವೆ ಬಡಿಸಿ ಕೆಡವು' ಅನ್ನೋ ಲೈನಿನ ಬಗ್ಗೇನೇ, ಅದು ಒರಿಜಿನಲ್ಲಾಗಿ ಏನಿತ್ತು ಅನ್ನೋದ್ರ ಬಗ್ಗೇನೇ ಸಾಹಿತ್ಯ ವಲಯದಲ್ಲಿ ಕನ್‍ಫ್ಯೂಶನ್ನಿದ್ದಂತಿದೆ. ಹಿಂದೆಲ್ಲೋ ಓದಿದ್ದರ ನೆನಪು: ಬೇಂದ್ರೆ ಸಾಮಾನ್ಯವಾಗಿ ಒಮ್ಮೆ ಹೇಳಿದ್ದನ್ನ ಒಂದು ಪದ್ಯದಲ್ಲಿ ಮತ್ತೆ ಹೇಳಲ್ಲ (ಅದೇ ಅರ್ಥ ಬರುವ ವಾಕ್ಯವನ್ನ). ಈಗ 'ಎವೆ ಬಡಿಸಿ ಕೆಡವು' ಅಂತ ಒಮ್ಮೆ ಹೇಳಿದ ಮೇಲೆ 'ತುಟಿ ಕಚ್ಚಿ ಹಿಡಿಯದಿರು ಬಿಕ್ಕ' ಅಂತ ಹೇಳೋ ಅವಶ್ಯಕತೆ ಇಲ್ಲ.. ಆದ್ರಿಂದ, ಅದು 'ಎವೆ ಬಡಿಸಿ' ಅಲ್ಲ; 'ಎಲೆ ಬರೆಸಿ' ಅಂತಾನೋ ಏನೋ ಆಗ್ಬೇಕು (ಧಾರವಾಡದ ಕಡೆ ಸಾವು ಸಂಭವಿಸಿದಾಗ ಎಲೆಯ ಚಿತ್ರ ಬರೆಸಿ ಅದರ ಮೇಲೆ ಕಣ್ಣೀರು ಬೀಳಿಸುವ ಸಂಪ್ರದಾಯದಂಥದೇನೋ ಇದೆಯಂತಲ್ಲ?) ಅಂತ ಕೆಲವರು ವಾದ ಮಾಡ್ತಾರೆ (-ಅಂತ ನಾನು ಎಲ್ಲೋ ಓದಿದ್ದೆ!)..

    ನಂಗೇನೂ ಗೊತ್ತಿಲ್ಲ.. ಈಗ ನೀವು ಬರ್ದಿದ್ದನ್ನ ಓದ್ತಾ ಅದು ನೆನಪಾಯ್ತು ಅಷ್ಟೇ.. :-)

    ReplyDelete
    Replies
    1. ವಿವರಣೆ ತುಂಬಾ ಚೆನ್ನಾಗಿದೆ, ಧನ್ಯವಾದಗಳು

      Delete
  6. ಓ ಹೀಗೊ! ಕವನದ ಸಾಲು ಸರಿಯಾಗಿಯೇ ಇದೆ.
    'ಎವೆಬಡಿಸಿ ಕೆಡವು' ಕಣ್ಣೀರನ್ನು ತಡೆಹಿಡಿಯಬೇಡ ಅನ್ನುವ ಅರ್ಥ ಕೊಡುತ್ತದೆ. ಹಾಗು ಅದರ continuation ಆಗಿ 'ತುಟಿಕಚ್ಚಿ ಹಿಡಿಯದಿರು ಬಿಕ್ಕ'ಎನ್ನುವ ಸಾಲು ಬರುತ್ತದೆ.
    ಹೀಗಾಗಿ ಇದರಲ್ಲಿ repetition ಬಂದಿಲ್ಲ.
    ಎಲೆಯ ಚಿತ್ರ ಬರೆದು ಕಣ್ಣೀರು ಬೀಳಿಸುವ ಪದ್ಧತಿಯನ್ನು ನಾನು ಇಲ್ಲೆಲ್ಲೂ ಕಂಡಿಲ್ಲ.

    ReplyDelete
    Replies
    1. ಹೌದು.. ನೀವು ಹೇಳಿದ್ದು ಸರಿ. ಅತೀವ ದುಃಖ ಆದಾಗ ಕೇವಲ ಕಣ್ಣೀರು ಮಾತ್ರ ಬರಲ್ಲ. ಬಿಕ್ಕಿ ಬಿಕ್ಕಿ ಅಳ್ತಾರೆ. ಕವಿ ಅದನ್ನೆ ಹೇಳಿರೋದು. ತುಟಿಕಚ್ಚಿ ಹಿಡಿಬ್ಯಾಡ ಆ ಬಿಕ್ಕ ವನ್ನ ಹೊರಗೆ ಹಾಕು ಅಂತಾ.

      Delete
  7. ಕಾಕಾ, ಕವನದ ವಿವರಣೆಗೆ ಧನ್ಯವಾದ. ಶೋಕರಸದಲ್ಲಿ ಅದ್ದಿ ತೆಗೆದ ಕವಿತೆ.

    ನಿಮ್ಮ ಬ್ಲಾಗಿನಲ್ಲಿ ನಾನು ಓದದ ತುಂಬಾ ಹೊಸ ಪೋಸ್ಟುಗಳಿವೆ! ಫೇಡಾ ತಿಂದು ಮುಗಿಸಿದ ಮೇಲೆ ನನಗೆ ಮತ್ತೊಂದು ರಸಕವಳ :)

    ReplyDelete
  8. ಸುನಾಥರೆ,
    ಬೇಂದ್ರೆಯವರ ಕವಿತೆಯ ಬಗ್ಗೆ ನಿಮ್ಮ ವಿವರಣೆ ತುಂಬಾ ಚೆನ್ನಾದಿದೆ.

    ReplyDelete
  9. ತ್ರಿವೇಣಿ,
    ಬೆಂಗಳೂರಿನಲ್ಲಿಯ ರಸಗವಳದ ನಂತರ, ತುಳಸಿವನದಲ್ಲಿಯ ರಸಗವಳಕ್ಕಾಗಿ ನಾನು ಎದುರು ನೋಡುತ್ತಿರುವೆ.
    -ಕಾಕಾ

    ReplyDelete
  10. ವನಮಾಲಾ,
    ಅನೇಕ ಧನ್ಯವಾದಗಳು.

    ReplyDelete
  11. ನೀವಿದನ್ನು ಬರೆಯಲೇಬಾರದಿತ್ತು.
    ಬೇಂದ್ರೆಯವರು ಇದನ್ನು ಕಾಲ್ಪನಿಕವಾಗಿ ಬರೆದಿದ್ದರೂ
    ಕೂಡ ಅದು ಅವರ ನಿಜಜೀವನದಲ್ಲೇ ಘಟಿಸಿದ್ದು ದುರಂತ.
    ಶೋಕಗೀತೆಗಳನ್ನು ಓದುವದು ಎಷ್ಟೊಂದು ವೇದನಾಭರಿತವಲ್ಲವೇ..?
    :-(

    -ರಾಘವೇಂದ್ರ ಜೋಶಿ.

    ReplyDelete
  12. rj,
    ದೈವ ಸಂಕಲ್ಪಿಸಿದ ದುರಂತವಿದು.

    ReplyDelete
  13. ತುಂಬಾ ಸೊಗಸಾಗಿದ. ಮತ್ತಷ್ಟು ಪ್ಪೋಸ್ಟ್ ಗಳಿಗೆ ಕಾಯುತ್ತಿರುವೆ

    ReplyDelete
  14. ಧನ್ಯವಾದಗಳು, ಜಯಶಂಕರ.

    ReplyDelete
  15. ಸುನಾಥ್,

    ನೀವು ಮತ್ತು ಜೋಗಿ (ಗಿರೀಶ್) ಸೇರಿ ಮತ್ತೆ ಕನ್ನಡ ಅಧುನಿಕ ಕಾವ್ಯವನ್ನು ಬಿಡಿಬಿಡಿಸಿ ತೋರಿಸುತ್ತೀರಿ.

    ಕಾವ್ಯವೇ ಅರ್ಥವಾಗುವುದಿಲ್ಲ, ಬೇಂದ್ರೆ ಕಾವ್ಯವಂತೂ ಅರ್ಥವಾಗುವುದಿಲ್ಲ ಎನ್ನುವ ಕಾಲದಲ್ಲಿ, ನಿಮ್ಮ ಬ್ಲಾಗು ಮರುಭೂಮಿಯ ಓಯಾಸಿಸ್ (ಕ್ಲೀಷೆಯಾದರೂ ಸಹ)ನಂತೆ.

    ನಿಮಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಸಾಲದು.

    ಬರೆಯುತ್ತಿರಿ.

    ಕೇಶವ

    ReplyDelete
  16. sunatha ravarige namaskaaragaLu.

    eega tane nimma atyadhbhutavaada blog annu odide.

    sundara vivaraNe nodi khushiyaayitu.

    tumbaa oLLeya kelasa.

    dhanyavaadagaLondige,
    Archana

    ReplyDelete
  17. ಶ್ರೀದೇವಿ,
    ತುಂಬಾ ಧನ್ಯವಾದಗಳು.
    -ಕಾಕಾ

    ReplyDelete
  18. ಕೇಶವ,
    ಬೇಂದ್ರೆ ಹಾಗೂ ಅಡಿಗ, ಈ ಇಬ್ಬರು ಕನ್ನಡದ ಜನಕ ಕವಿಗಳು.
    ಪಂಪ, ರನ್ನ ಮೊದಲಾದ ಮಹಾಕವಿಗಳ ಸಾಲಿನಲ್ಲಿ ಸೇರುವವರು.
    -ಸುನಾಥ

    ReplyDelete
  19. ಅರ್ಚನಾ,
    ನಿಮಗೆ ಇಷ್ಟವಾದದ್ದಕ್ಕೆ ನನಗೂ ಖುಶಿ. ಬರುತ್ತಾ ಇರಿ.

    ReplyDelete
  20. ಅತ್ಯದ್ಭುತ ! ನಿಮ್ಮ ಜೊತೆ ಕುಳಿತು ನೀವು ಬೇಂದ್ರೆಯವರ ಕಾವ್ಯಕ್ಕೆ ವ್ಯಾಖ್ಯೆ ಬರೆಯುವ ಪೂರ್ವದಲ್ಲಿ ನಿಮ್ಮ ಚಿಂತನೆಯನ್ನು ನೋಡುವಾಸೆ !!

    ReplyDelete
  21. ಕಟ್ಟಿಯವರೆ,
    ಬನ್ನಿ. ಜೊತೆಗೆ ಕುಳಿತು ಮಾತನಾಡುವಾ.

    ReplyDelete
  22. ಸುನಾಥ ಕಾಕಾ,

    ವಿವರಣೆ ಓದಿ ಕಣ್ತುಂಬಿ ಬಂತು. ಅದೆಷ್ಟು ನೋವು, ವೇದನೆ ತುಂಬಿದೆ ಈ ಕವನದಲ್ಲಿ!

    ಹಳೆಯ ಕನ್ನಡ ಸಿನಿಮಾ ಒಂದರಲ್ಲಿ ಈ ಹಾಡನ್ನು ಸೇರಿಸಿಕೊಂಡುದ್ದರು. ಮೊದಲ ಬಾರಿ ಕೇಳಿದ್ದು ಆ ಚಿತ್ರದಲ್ಲೇ.

    ಬೇಂದ್ರೆಯವರ ಈ ಕವನವನ್ನು ಕೆಲವರು ಪ್ರೇಮಗೀತೆಯೆಂದೂ ಕರೆದದ್ದಿದೆ!!! ಅದು ಹೇಗೆ ಇದನ್ನು ಆ ರೀತಿ ಅರ್ಥೈಸಿದರೋ ಕಾಣೆ.

    ಹೃದಯಸ್ಪರ್ಶಿ ವಿವರಣೆ ನೀಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
  23. ಸುನಾಥರೇ,
    ಗಿರಕಿ ಗಿರಕಿ ಹಾಡು.
    ಧಾರವಾಡ ಆಕಾಶವಾಣಿ ರೇಡಿಯೋ ಕಾರ್ಯಕ್ರಮದಲ್ಲಿ ಈ ಹಾಡನ್ನು ನಾನು ತುಂಬಾ ಚಿಕ್ಕವನಾಗಿದ್ದಾಗಿನಿಂದಲೇ ಕೇಳುತ್ತಿದ್ದೇನೆ.
    'ಈಗ ಕೇಳುವಿರಿ ರಾಜ್ಕುಮಾರ್ ಭಾರತಿ ಹಾಡಿರುವ ಪ್ರೇಮತರಂಗ ಚಿತ್ರದ ಗೀತೆ' ಎಂದ ಕೂಡಲೇ ರೇಡಿಯೋ ಅಕ್ಕಪಕ್ಕದಲ್ಲಿರುವವರೆಲ್ಲರೂ ಗಪ್-ಚುಪ್ ಆಗಬೇಕು ಇಲಾಂದ್ರೆ..

    ಚಿಕ್ಕವನಾಗಿ ಕೇಳಿದಾಗ ಅದ್ಯಾವ ಅರ್ಥ ಕೊಡುತ್ತಿತ್ತೋ ನೆನಪಿಲ್ಲ ಆದರೂ ಬಲುಪ್ರೀತಿಯಿಂದ ಕೇಳುತ್ತಿದ್ದೆ. ನಂತರ ಕಾಲೇಜಿನ ದಿನಗಳಲ್ಲಿ ಅರ್ಧ-ಮರ್ಧ ಆರ್ಥ ಆಯ್ತು. ಕಣ್ಣುಗಳು ಹಸಿಯಾದವೂ ಕೂಡ. ನಂತರ ಗೊತ್ತಾಯ್ತು ಈ ಪದ್ಯ ನನಗೆ ಅರ್ಥವಾದ ರೀತಿಯಲ್ಲಿಲ್ಲ.

    ಪುಸ್ತಕಗಳ ಬಗ್ಗೆ ಒಲವು ಹೆಚ್ಚಿತು, ನಿಮಗೂ ಗೊತ್ತಿರುವಂತೆ ಗೀತೆಯ ಸಾಹಿತ್ಯವನ್ನು ಬಹಳಷ್ಟು ಜನರು ತಪ್ಪಾಗಿಯೇ ಹಾಡುತ್ತಾರೆ. ಅದನ್ನು ಸರಿಪಡಿಸಿಕೊಂಡೆ. ನಂತರ ಈ ಗೀತೆಯನ್ನು ಸಿ.ಡಿ ಅಂಗಡಿಗಳಲ್ಲಿ ತುಂಬಾ ಹುಡುಕಿದೆ. ಸಿಗಲೇ ಇಲ್ಲ. ಮ್ಯೂಸಿಕ್ ಆನ್ಲೈನ್ ಇಂಡಿಯಾ ವೆಬ್ ಸೈಟ್ ನಲ್ಲಿ ಮಾತ್ರ ಈ ಹಾಡು ಇದೆ. ಈಗಲೂ ಅಲ್ಲಿಯೇ ಕೇಳುತ್ತೇನೆ.

    ಒಂದು ಬೇಡಿಕೆ ನನ್ನದು. ನಿಮ್ಮಲ್ಲಿ ಈ ಹಾಡಿನ ಸಿ.ಡಿ ಇದ್ದರೆ ದಯವಿಟ್ಟು ಕಳುಹಿಸಿಕೊಡುವಿರಾ?

    ReplyDelete
  24. ತೇಜಸ್ವಿನಿ,
    ಬೇಂದ್ರೆಯವರ ಕವನಗಳಲ್ಲಿಯೆ ಹೆಚ್ಚು ನೋವು ತುಂಬಿದ ಕವನವಿದು, ಅಲ್ಲವೆ?

    ReplyDelete
  25. md,
    ನನ್ನಲ್ಲಿ ಈ ಗೀತೆಯ cd ಇಲ್ಲ.
    ಇಲ್ಲಿ ಸಿಗುವದೇನೊ ನೋಡುತ್ತೇನೆ. ಸಿಕ್ಕರೆ ನಿಮಗೆ ಕಳುಹಿಸಿಕೊಡುತ್ತೇನೆ.

    ReplyDelete
  26. ಪ್ರೀತಿಯ ಸುನಾಥ,

    ತುಂಬ ಮೌಲಿಕ ಬರಹ. ನಿಮ್ಮ ಬರಹಗಳನ್ನೆಲ್ಲ ಓದುವಾಗ ನನ್ನದು ಮಾತೇ ಹೊರಡದ ಮಗುವಿನ ಅಚ್ಚರಿ. ಏನೆಲ್ಲ ಹೊಸ ಕಾಣ್ಕೆ.. ಯಾವುದನ್ನ ಏನೆಂದು ಕರೆಯಲಿ, ನನಗೆ ಗೊತ್ತಿರದ ದಾರಿಯ ಸುದೂರ ಪಯಣವನ್ನು ನಲ್ಮೆಯಿಂದ ಕ್ರಮಿಸಿರುವ ನಿಮ್ಮ ಬಳಿಗೆ ಬರಲು ನನ್ನ ಹೆಜ್ಜೆಗಳನ್ನು ಹೇಗೆ ಇಡಬೇಕು.... ಹೀಗೇ ಕುತೂಹಲಭರಿತ ಮೆಚ್ಚುಗೆ ಮತ್ತು ಹಿಂದೇಟು.. :)

    ನೀವು ತುಂಬ ಚೆನ್ನಾಗಿ ಬರೀತೀರಾ. ಒಮ್ಮೊಮ್ಮೆ ಕುವೆಂಪು ಕಾವ್ಯಕವಿತೆಗಳ ಹೋಲಿಕೆಯ ಬಗ್ಗೆ ನನಗೆ ಪ್ರಶ್ನೆಗಳೆದ್ದರೂ ನಿಮ್ಮ ವಿವರಣೆ ಪ್ರಶ್ನಾತೀತವೇ..

    ಬರೆದವನದಲ್ಲ ಹಾಡು, ಹಾಡುವವನದು ಅಂತ ಸುಮ್ಮನೆ ಹೇಳುತ್ತಾರೆಯೇ.. ಕವಿತೆಯ ಸಾರ್ಥಕ್ಯವೇ ಅದು ಮರಮರಳಿ ಹೊರಹೊರಳಿ ನೋಡಿದಾಗ ಕಾಣುವ ಹೊಸ ಸಂಭಾವ್ಯತೆಗಳಿಗೆ ಅದನ್ನು ತೆರೆದಿಡುವ ಕವಿಹೃದಯದ ವಾಚನಕ್ಕೆ.

    ಪ್ರೀತಿಯಿಂದ
    ಸಿಂಧು

    ReplyDelete
  27. ಖಂಡಿತವಾಗಿಯೂ ಬರುವೆ. ಫೆಬ್ರುವರಿ 2009 ರ ನಂತರ.

    ಶ್ರೀನಿವಾಸ ಮ. ಕಟ್ಟಿ

    ReplyDelete
  28. ಸಿಂಧು,
    ಕನ್ನಡ ಸಾಹಿತ್ಯದಲ್ಲಿಯ ನಿಮ್ಮ ಆಸಕ್ತಿಯನ್ನು ನಿಮ್ಮ blogದಲ್ಲಿಯ ಲೇಖನಗಳನ್ನು ಓದಿದ ನನಗೆ ಅರಿವಿದೆ. ನೀವು ಇತ್ತೀಚಿನ ತಲೆಮಾರಿನವರಾದುದರಿಂದ, ನವೋದಯ ಕಾವ್ಯದ ಬಗೆಗೆ ನಾನು ಬರೆಯುವಾಗ, ನಿಮಗಿದು ಸುದೂರ ಕ್ರಮಿಸಿದ ದಾರಿಯಂತೆ ಕಾಣುತ್ತಿರಬೇಕಷ್ಟೆ!
    -ಸುನಾಥ ಕಾಕಾ

    ReplyDelete
  29. ಸರ್..
    ನಮಸ್ತೆ
    ನಿಮ್ಮ ಬ್ಲಾಗಿಗೆ ನಾನು ಹೊಸಬಳು..
    ನಿಮ್ಮ ಬರಹ ತುಂಬಾ ಚೆನ್ನಾಗಿದೆ..ಬೇಂದ್ರೆ ಅಜ್ಜನ ಪ್ರತಿ ಕವನಗಳು ನಂಗಿಷ್ಟ..
    ಸರ್..ಇಷ್ಟುದ್ದ ಬರೆದರೆ ಬೇಗನೆ ಓದಿ ಮುಗಿಯಲ್ಲ ಸರ್!
    -ಚಿತ್ರಾ

    ReplyDelete
  30. ಚಿತ್ರಾ,
    ವಂದನೆಗಳು.
    ಬೇಂದ್ರೆ ಕವನಗಳ ಬಗೆಗೆ ಬರೆದಷ್ಟೂ ಕಡಿಮೆಯೆ.
    ನಿಮಗೆ ಸುಸ್ವಾಗತ.

    ReplyDelete
  31. ನನಗೆ ತಿಳುವಳಿಕೆ ಬಂದಾಗಿನಿಂದ ಈ ಪದ್ಯದ ಹಿಂದೆ ನಾನು ಬಿದ್ದಿದ್ದೆ. ಕೊನೆಗೆ ಪೂರ್ತಿ ಕವನ ಸಿಕ್ಕು ಹಾಡಲು( ಕೆಟ್ಟದಾಗಿ ಅಂತ ಹೇಳಬೇಕಿಲ್ಲ ಅಂತ ಅನ್ಕೋತಿನಿ) ಸಹ ಶುರು ಮಾಡಿದೆ. ಸಿ ಅಶ್ವಥ್ ಗಿಂತ ರಾಜ್ಕುಮಾರ್ ಭಾರತಿ ಹಾಡಿದ್ದೆ ತುಂಬಾ ಇಷ್ಟವಾಗುತ್ತೆ.
    ಬೆಂದ್ರೆಯವರನ್ನೂ ಅರ್ಥ ಮಾಡಿಸಿದ್ದು ಕೀರ್ತಿನಾಥ ಕುರ್ತಕೋಟಿ ಅನ್ನೊ ಮಾತಿದೆ.ನಾನಂತೂ ಅವರನ್ನು ಓದಿಕೊಂಡಿಲ್ಲಾ. ಗಂಭೀರ ಓದುಗನೂ ನಾನಲ್ಲವಾದುದರಿಂದ ಎಲ್ಲೊ ಕೆಲ ಜನಪ್ರಿಯ ಭಾವಗೀತೆಗಳನ್ನು ಹೊರತುಪಡಿಸಿ ಬೇಂದ್ರೆಯವರ ಗೊಡವೆಗೆ ಹೋದವನಲ್ಲಾ.. ನಿಮ್ಮ ಬ್ಲಾಗಿನ ಮೂಲಕ ಚೂರಾದರೂ ’ಬೆಂದ್ರೆ ದರ್ಶನ’ ವಾಗುತ್ತಿದೆ.

    ಧನ್ಯವಾದಗಳು..

    ReplyDelete
  32. ಸಂತೋಷಕುಮಾರ,
    ಅಶ್ವತ್ಥರು ಸ್ವಲ್ಪ ಜೋರಾಗಿ, ಒದರಿ ಹಾಡ್ತಾರ.
    ನೀವು ಅವರಿಗಿಂತಾ ಛಲೋsನ ಹಾಡಿರಬೇಕು ಅಂತ ಅನಸ್ತದ.
    ಹಾಡೋದನ್ನ ಬಿಡಬ್ಯಾಡರಿ!

    ReplyDelete
  33. ಸರ್ ಅಕಸ್ಮಾತಾಗಿ ನಿಮ್ಮ ಸಲ್ಲಾಪ ಓದುತ್ತಿರುವೆ. ಬೇಂದ್ರೆಯವರ ಈ ಕವನ ನನಗೆ ಯಾವಾಗಲೂ ಕಾಡ್ತದ. ಅದೆಃಗ ತನ್ನ ಕೂಸು ಸಾಯುವಾಗ ಕವಿತಾ ಹುಟ್ತದ ಅದು ಬೇಂದ್ರೆ ಅವರಿಗೆ ಮಾತ್ರ ಸಾಧ್ಯ...ಎಷ್ಟಿದ್ದರೊ "ಬೆಂದ್ರ" ಮಾತ್ರ "ಬೇಂದ್ರೆ" ಆಗ್ತಾರ ಅನ್ನೂದು ಸುಳ್ಳಲ್ಲ...!

    ReplyDelete
  34. ಪ್ರೀತಿಯ ಸುನಾಥ್ ಅವರೇ ,
    ನಿಮ್ಮ "ನೀ ಹಿಂಗ ನೋಡಬೇಡ ನನ್ನ "ವಿವರಣೆ ತುಂಬಾ ಖುಷಿ ಆಯಿತು
    ಬೇಂದ್ರೆ ಅವರ "ಗಿಳಿಯು ಪಂಜರದೊಳಿಲ್ಲ "........ಮತ್ತು.. "ಬಾಳ ಪ್ರೇಮ "..ಇದರ ವಿವರಣೆ ನಿರಿಕ್ಷಿಸುತಿದ್ದೇನೆ
    ಈ ಎರಡೂ ಕವನಗಳು ಅವರ ಮಕ್ಕಳು ತೀರಿಕೊಂಡಾಗ ಬರೆದದ್ದು
    ಹದಿಹರೆಯದ ರಾಮಚಂದ್ರ ತೀರಿಕೊಂಡಾಗ....
    ."ಇದ್ದ ರಾಮನಿಗೆ ದಶರಥ ಅತ್ತೂ ಅತ್ತ ಅಂದಿಗೆ ...ಇಲ್ಲದ ರಾಮನಿಗೆ ಅತ್ತೂ ಅಳುತಿಹನು ದತ್ತನು ಇಂದಿಗೆ "
    ಇದರ ಬಗ್ಗೆ ವಿವರಿಸಿ

    ReplyDelete
  35. Dr.ಆದರ್ಶರೆ,
    ಧನ್ಯವಾದಗಳು. ಈ ಕವನಗಳ ಬಗೆಗೆ ಪ್ರಯತ್ನಿಸುತ್ತೇನೆ.

    ReplyDelete
  36. ನೀ ಹೀಂಗ ನೋಡಬ್ಯಾಡ ನನ್ನ
    ನೀ ಹೀಂಗ ನೋಡಿದರ ನನ್ನ,
    ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
    ಬೇಂದ್ರೆಯವರು ಇದನ್ನು ಕಾಲ್ಪನಿಕವಾಗಿ ಬರೆದಿದ್ದರೂ
    ಕೂಡ ಅದು ಅವರ ನಿಜಜೀವನದಲ್ಲೇ ಘಟಿಸಿದ್ದು ದುರಂತ.

    ReplyDelete
  37. ಜಲಜಾಕ್ಷಿಯವರೆ,
    ಬೇಂದ್ರೆಯವರಿಗೆ ಏನಾದರೂ premonition ಆಗಿತ್ತೇ ಎನ್ನುವ ಸಂಶಯವಿದೆ ನನಗೆ!

    ReplyDelete
  38. Great comment and writing, may i suggest small change in the fonts? If you can use the same kannada fonts used by comment givers, it will be more pleasant. I may be picking on small thing but I assure you it will be good reading for those with eyesight problems.

    ReplyDelete
  39. Dear Sir,
    I shall try to increase the font size in the main text. I believe that the text font has to be Unicode.
    I do not have much technical understanding in the matter. However I shall try my best.
    Thank you for the suggestions.

    ReplyDelete
  40. I confused that this was written by K S Narashimaswamy and now I confirmed that was written by ದ ರಾ ಬೇಂದ್ರೆ

    ReplyDelete
  41. Dear Unknown, Thank you for the response!

    ReplyDelete
  42. Sunitha Madam,
    Yes, It is written by Bendre only.

    ReplyDelete
  43. ಬಹಳ ಇಷ್ಟವಾಯ್ತು ನಿಮ್ಮ ಈ ವಿವರಣೆಯ ಬರಹ . . . ಧನ್ಯವಾದಗಳು
    -Srinath Bhalle

    ReplyDelete
  44. ತ್ರಿಲೋಕಸಂಚಾರಿಗಳಾದ ಶ್ರೀನಾಥ ಭಲ್ಲೆಯವರೆ,
    ನಿಮಗೆ ಅನೇಕ ಧನ್ಯವಾದಗಳು.

    ReplyDelete
  45. ಧನ್ಯವಾದಗಳು, Unknownರೆ.

    ReplyDelete