Wednesday, January 20, 2010

ಪದಶೋಧ

ಅಡುಗೆಯ ಸ್ಟೋ, ಸೈಕಲ್ ಅಥವಾ ಮತ್ಯಾವುದೇ ಚಿಕ್ಕಪುಟ್ಟ ಯಂತ್ರೋಪಕರಣಗಳನ್ನು  ರಿಪೇರಿ ಮಾಡಿಸಲು ಒಯ್ದಾಗ, ರಿಪೇರಿ ಮಾಡುವವನು , “ಇದರ ‘ವ್ಹಾಯ್ಸರ್’ ಹೋಗೇದರಿ; ಬ್ಯಾರೆ ವ್ಹಾಯ್ಸರ್ ಹಾಕಿಕೊಡ್ತೇನಿ”, ಎಂದು ಹೇಳುವದನ್ನು ನೀವು ಕೇಳಿರಬಹುದು. ಈ ‘ವ್ಹಾಯ್ಸರ್’ ಅನ್ನೋದು ನಿಜವಾಗಿಯೂ washer ಅನ್ನುವ ಆಂಗ್ಲ ಪದದ ಅಪಭ್ರಂಶ. ರಿಪೇರಿ ಮಾಡುವವನಿಗೆ ‘ವಾಶರ್’ ಅನ್ನೋದು ಸಾಕಷ್ಟು ಇಂಗ್ಲಿಶ್ ಅನ್ನಿಸುತ್ತಿರಲಿಕ್ಕಿಲ್ಲ. ಆಂಗ್ಲ ಪದವನ್ನು ಮತ್ತಷ್ಟು ಆಂಗ್ಲೀಕರಣ ಮಾಡುವ ಉದ್ದೇಶದಿಂದ ಆತ ‘ವಾಶರ್’ಅನ್ನು ‘ವ್ಹಾಯ್ಸರ್’ ಮಾಡಿದ್ದಾನೆ.

ಆಂಗ್ಲ ಪದಗಳನ್ನು  ಇನ್ನಷ್ಟು ಆಂಗ್ಲೀಕರಿಸುವಂತೆಯೇ ಸಂಸ್ಕೃತ ಪದಗಳನ್ನು ಇನ್ನಷ್ಟು ಸಂಸ್ಕೃತೀಕರಿಸುವದರಲ್ಲಿಯೂ ನಮ್ಮವರಿಗೆ ಅಂದರೆ ಕನ್ನಡಿಗರಿಗೆ ತುಂಬಾ ಪ್ರೀತಿ ಹಾಗು ಅಪರಿಮಿತ ಕೌಶಲ್ಯ.
ಅದರಲ್ಲಿಯೂ ನಮ್ಮ ಕನ್ನಡ ಚಿತ್ರನಿರ್ಮಾಪಕರ ಕೈಯಲ್ಲಿ ಸಿಕ್ಕ ಪದಗಳ ಗೋಳನ್ನಂತೂ ಕೇಳುವದೇ ಬೇಡ.
ದ್ವಾರಕೀಶರು ‘ಗಿರಿಜಾ’ ಎನ್ನುವ ಯುವತಿಯನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವಾಗ ಅವಳ ಹೆಸರನ್ನು ಬದಲಾಯಿಸಿ ‘ಶೃತಿ’ ಎಂದು ಕರೆದರು. ‘ಶೃತಿ’ ಪದಕ್ಕೆ cooked, boiled, dressed ಎನ್ನುವ ಅರ್ಥವಿದೆ. ‘ಶ್ರುತಿ’ ಪದಕ್ಕೆ ವೇದ, ಉಪನಿಷತ್ತು ಹಾಗು ಸಂಗೀತದ tuning ಎನ್ನುವ ಅರ್ಥವಿದೆ. ದ್ವಾರಕೀಶರ ಮನಸ್ಸಿನಲ್ಲಿ ಇರುವ ಅರ್ಥ ಯಾವುದೋ ಅವರಿಗೇ ಗೊತ್ತು. (ಹೌದೆ?)  ಬಹುಶ: ಅವರಿಗೆ ‘ಶ್ರುತಿ’ ಇದು ‘ಶೃತಿ’ಯಷ್ಟು ಸಂಸ್ಕೃತ ಎನ್ನಿಸಿರಲಿಕ್ಕಿಲ್ಲ. ಒಟ್ಟಿನಲ್ಲಿ ದ್ವಾರಕೀಶರ ಕೈಯಲ್ಲಿ ಸಿಕ್ಕ ಗಿರಿಜಾ ಸಂಗೀತದ ಶ್ರುತಿಯಾಗುವ ಬದಲು ಬೇಯಿಸಿದ ಕೋಳಿಯಾಗಿ ಬಿಟ್ಟಳು!
ಇದರಂತೆಯೇ ‘ಧ್ರುವ’ ಪದವನ್ನು ‘ಧೃವ’ ಎಂದು, ‘ಶ್ರದ್ಧಾ’ ಪದವನ್ನು ‘ಶೃದ್ಧಾ’ ಎಂದು ಬರೆದು ಮತ್ತಷ್ಟು ಸಂಸ್ಕೃತೀಕರಿಸುವ ಒಲವು ಹಲವು ಕನ್ನಡಿಗರಲ್ಲಿದೆ.

ಚಿತ್ರನಿರ್ಮಾಪಕರೇನೋ ಭಾಷಾ-ಅಜ್ಞಾನಿಗಳಿರಬಹುದು. ಆದರೆ ನಮ್ಮ ಪತ್ರಿಕೋದ್ಯಮಿಗಳ ಕತೆ ಏನು? ಅವರೂ ಅಜ್ಞಾನಿಗಳೇ?  ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಈ ಪತ್ರಿಕೆ ತನ್ನ ಸೋಮವಾರದ ಪುರವಣಿಯ ಶೀರ್ಷಿಕೆಯನ್ನು ‘ಸಿಂಧೂರ’ ಎಂದು ಢಾಳಾದ ಅಕ್ಷರಗಳಲ್ಲಿ  ಮುದ್ರಿಸುತ್ತದೆ. ಸಿಂಧೂರ ಪದದ ಅರ್ಥ ‘ಆನೆ’. ಈ ಪುರವಣಿಯು ಮಹಿಳಾಪುರವಣಿ. ಮಹಿಳಾಪುರವಣಿಗೆ ‘ಸಿಂಧೂರ (=ಆನೆ)’ ಎಂದು ಕರೆಯುವ ಮೂಲಕ ಪತ್ರಿಕೆಯ ಸಂಪಾದಕರು ‘ಮಹಿಳೆಯರು ಆನೆಗಳಂತೆ’ ಎನ್ನುವ ಸಾಂಕೇತಿಕ ಅರ್ಥವನ್ನು ಸೂಚಿಸುತ್ತಿದ್ದಾರೆಯೆ?  ‘ಸಿಂದೂರ’ ಎಂದರೆ ಕುಂಕುಮ. ಕುಂಕುಮಕ್ಕೂ ಭಾರತೀಯ ಮಹಿಳೆಯರಿಗೂ ಪುರಾತನ ಸಂಬಂಧವಿದೆ. ಹಾಗಿದ್ದರೆ ಮಹಿಳಾಪುರವಣಿಯನ್ನು ‘ಸಿಂದೂರ’ ಎಂದು ಕರೆಯಬೇಕಾಗಿತ್ತಲ್ಲವೆ?   ಬಹುಶ: ಮಹಿಳಾ ಪುರವಣಿಯ ಅಲ್ಪಪ್ರಾಣೀಕರಣವು ಅವರಿಗೆ ‘ಅಸಂಸ್ಕೃತ’ ಎನ್ನಿಸಿರಬಹುದು! ಸಂಯುಕ್ತ ಕರ್ನಾಟಕ ಪತ್ರಿಕೆಯು ಇಂತಹ ಅನೇಕ ಮಹಾಪ್ರಾಣೀಕೃತ ಪದಗಳನ್ನು ಸೃಷ್ಟಿಸಿ ಸಂಸ್ಕೃತ ಶಬ್ದಕೋಶಕ್ಕೆ ಕಾಣಿಕೆಯಾಗಿ ನೀಡಿದೆ. ಉದಾಹರಣೆಗೆ: ಸರ್ವೋಚ್ಛ, ಉಚ್ಛಾರ ಇತ್ಯಾದಿ. ದುರದೃಷ್ಟವೆಂದರೆ, ಅಮಾಯಕ ಓದುಗರು, ವಿಶೇಷತಃ ಚಿಕ್ಕ ಹುಡುಗರು ಹಾಗು ವಿದ್ಯಾರ್ಥಿಗಳು ಈ ತಪ್ಪು ಪದಗಳನ್ನೇ ಸರಿಯಾದ ಪದಗಳೆಂದು ತಿಳಿದುಬಿಡುವದು.

ಸಂಯುಕ್ತ ಕರ್ನಾಟಕ ಹಾಗು ವಿಜಯ ಕರ್ನಾಟಕ ಈ ಎರಡೂ ಪತ್ರಿಕೆಗಳು ‘ಅಲ್-ಕೈದಾ’ ವನ್ನು ‘ಅಲ್-ಖೈದಾ’ ಎಂದು ಮುದ್ರಿಸುತ್ತಾರೆ. ಯಾಕೆ? ಉಗ್ರಗಾಮಿಗಳು ಅಲ್ಪಪ್ರಾಣಿಗಳಾಗಿರಲು ಸಾಧ್ಯವಿಲ್ಲವೆಂದೆ? ಹಾಗಿದ್ದರೆ ‘ಕುರ್ಬಾನಿ’ಯಂತಹ(=ತ್ಯಾಗ) ಒಳ್ಳೆಯ ಪದವನ್ನು ‘ಖುರ್ಬಾನಿ’ ಎಂದು ಯಾಕೆ ಬರೆಯುತ್ತಾರೊ ತಿಳಿಯದು!
ಹಾಗೆಂದು ಎಲ್ಲಾ ಹಿಂದಿ/ಉರ್ದು ಪದಗಳನ್ನು ಮಹಾಪ್ರಾಣೀಕರಿಸುತ್ತಾರೆ ಎನ್ನುವಂತಿಲ್ಲ. ‘ಧಾಬಾ’ ಎನ್ನುವ ಹಿಂದಿ ಪದದ ಅರ್ಥ ಹುಲ್ಲಿನ ಗುಡಿಸಲು. ಇದನ್ನು ಕನ್ನಡದಲ್ಲಿ ‘ಡಾಬಾ’ ಮಾಡಲಾಗಿದೆ! ಒಟ್ಟಿನಲ್ಲಿ, ನಮ್ಮ ಪತ್ರಿಕೆಗಳು ಒಂದು ಭಾಷೆಯ ಪದವನ್ನು ಕನ್ನಡ ಭಾಷೆಗೆ ತೆಗೆದುಕೊಳ್ಳುವಾಗ ಅಪಭ್ರಂಶ ಮಾಡಲೇಬೇಕೆನ್ನುವದನ್ನು ವ್ಯಾಕರಣದ ನಿಯಮದಂತೆ ಪರಿಪಾಲಿಸುತ್ತಿದ್ದಾರೆ.

ಸಂಯುಕ್ತ ಕರ್ನಾಟಕ ಪತ್ರಿಕೆಯು ಮಾಡುತ್ತಿರುವ ಭಾಷಾದೋಷಗಳನ್ನು ಈ ಮೊದಲೇ ನಾನು ಇಲ್ಲಿ, ಹಾಗು ಇಲ್ಲಿ  ತೋರಿಸಿದ್ದೇನೆ. ವಿಜಯ ಕರ್ನಾಟಕ ಪತ್ರಿಕೆಯೂ ಸಹ ಈ ವಿಷಯದಲ್ಲಿ ಹಿಂದೆ ಬೀಳಲು ಸುತರಾಮ್ ತಯಾರಿಲ್ಲ! ವಿಜಯ ಕರ್ನಾಟಕ ಪತ್ರಿಕೆಯ ‘ಪದೋನ್ನತಿ’ ಎನ್ನುವ ಸ್ಥಿರ ಶೀರ್ಷಿಕೆಯ ಅಡಿಯಲ್ಲಿ ಪ್ರಕಟವಾಗುವ ಮಾಹಿತಿಯು ಸಹ ತಪ್ಪಿನಿಂದ ಕೂಡಿರುತ್ತದೆ. ದಿ:೧೯ ಜನೆವರಿಯಂದು ಪ್ರಕಟವಾದ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ:

‘ಶೀತ್ನಿ’ ಪದದ ಅರ್ಥ ‘ಸೀ ತೆನೆ’. ‘ಸೀ ತೆನೆ’ಗೆ ‘ಬೆಳಸಿ’ ಎಂದೂ ಕರೆಯುತ್ತಾರೆ, ‘ಹಾಲು ತೆನೆ’ ಎಂದೂ ಕರೆಯುತ್ತಾರೆ. ಜೋಳದ ಬೆಳೆಗೆ ತೆನೆ ಬಿಟ್ಟಾಗ, ಈ ತೆನೆಯು ಇನ್ನೂ ಬಲಿಯದೆ ಇದ್ದಾಗ, ಇದನ್ನು ಹಾಗೇ ತಿನ್ನಬಹುದು. ಆ ಕಾರಣಕ್ಕಾಗಿಯೇ ಇದಕ್ಕೆ ‘ಸೀ ತೆನೆ’, sweet corn ಎಂದು ಕರೆಯುವದು. ವಿಜಯ ಕರ್ನಾಟಕದ ‘ಪದೋನ್ನತಿ’ಯ ಪಂಡಿತರಿಗೆ ಇದು ಚಾದಂಗಡಿಯಲ್ಲಿ ದೊರೆಯುವ ‘ಸಿಹಿ ತಿನಿಸು’ ತರಹ ಕಂಡಿದ್ದು ಆಶ್ಚರ್ಯಕರವಾಗಿದೆ!
………………………………………………………………..
ಕನ್ನಡಿಗರು ವ್ಯಾಕರಣದ ನಿಯಮಗಳನ್ನು ನಾಲಿಗೆಗೆ ಅನುಕೂಲವಾಗುವಂತೆ ಹೊಂದಿಸಿಕೊಳ್ಳುವದರಲ್ಲಿ ನಿಸ್ಸೀಮರು. ‘ಹೆಣ್ಣು ಕೂಸು’ ಎನ್ನುವ ಜೋಡು ಪದವು ಮೊದಲು ‘ಹೆಂಗೂಸು’ ಆಗಿ, ಬಳಿಕ ‘ಹೆಂಗಸು’ ಆಯಿತು.
ಅದರತೆಯೇ, ‘ಗಂಡು ಕೂಸು’ ಪದವು ‘ಗಂಡಸು’ ಆಯಿತು. ಇದರಿಂದ ಉಚ್ಚಾರ ಸುಲಭವಾಯಿತು. ಆದರೆ ವ್ಯಾಕರಣಕ್ಕೇನೂ ಭಂಗ ಬರಲಿಲ್ಲ. ಇದೇ ಮಾತನ್ನು ‘ಆಕಳು’ ಪದಕ್ಕೆ ಹೇಳುವಂತಿಲ್ಲ. ‘ಆವು’ ಪದದ ಬಹುವಚನ ‘ಆವುಗಳು’. ಇದೇ ಕಾಲಾಂತರದಲ್ಲಿ ‘ಆಕಳು’ ಆಗಿದೆ. ಆದುದರಿಂದ ‘ಆಕಳು ಬಂದಿದೆ’ ಎಂದು ಹೇಳುವದು ಸರಿಯಲ್ಲ. ಇದು ‘ಆವು ಬಂದಿದೆ’ , ಅಥವಾ ‘ಆಕಳು ಬಂದಿವೆ’ ಎಂದು ಇರಬೇಕು!

ಕೆಲವೊಂದು ರೂಪಾಂತರಗಳಂತೂ ವಿನೋದವನ್ನು ಹುಟ್ಟಿಸುವಂತಿವೆ.  ಬೀದರ ಜಿಲ್ಲೆಯಲ್ಲಿ ‘ಹುಡುಗಿ’ ಎನ್ನುವ ಊರಿದೆ. ಈ ಊರಿಗೆ ಹೋಗಬಯಸುವ ಬಸ್ ಪ್ರಯಾಣಿಕರು ನಿರ್ವಾಹಕನಿಗೆ “ಒಂದು ಹುಡುಗಿ ಕೊಡಪ್ಪಾ” ಎಂದು ಚೇಷ್ಟೆ ಮಾಡುವದು ಸಾಮಾನ್ಯವಾಗಿದೆ. ಹುಡುಗಿ ಪದದ ಮೂಲರೂಪ ‘ಪುದುಗಿ’.   ‘ಪುದು’ ಇದರ ಅರ್ಥ ಹೊಸದಾದದ್ದು. 
‘ಪುದು’=new ;`ಗಿ’=habitat. 
ಹುಡುಗಿ=ಪುದುಗಿ= new habitat=ಹೊಸೂರು.
ತಮಿಳಿನಲ್ಲಿ ಹುಡುಗಿ ಅಥವಾ ಪುದುಗಿ ಎನ್ನುವ ಪದಕ್ಕೆ ಸಮಾನವಾದ ಪದ=ಪುದುಚೆರಿ. 
ಇಲ್ಲಿಯೂ ಸಹ ಪುದು=ಹೊಸ ಹಾಗೂ ಚೆರಿ=ಊರು.

ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು.  ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.
ಪುದು ಪದಕ್ಕೆ ವಿರುದ್ಧವಾದದ್ದು ಮುದು ಎನ್ನುವ ಪದ. ಮುದು=old. ಈ ಪದದಿಂದಲೇ ಮುದುಕ, ಮುದುಕಿ ಎನ್ನುವ ಪದಗಳು ಬಂದಿವೆ. ಮುದಗಲ್ಲು ಎನ್ನುವ ಊರಿನ ಅರ್ಥ ಹಳೆಯ ಊರು. ಇದಕ್ಕೆ ಸಮಾನವಾದ ಮತ್ತೊಂದು ಕನ್ನಡ ಪದ ಹಳೇಬೀಡು.

ಕನ್ನಡ ನುಡಿಯಲ್ಲಿ ‘ಪ’ಕಾರವು ‘ಹ’ಕಾರವಾಗಿ ಮಾರ್ಪಟ್ಟಿದ್ದರಿಂದ  ಅನೇಕ ಪದಗಳ ಉಚ್ಚಾರಗಳು ಬದಲಾದವು. ಉದಾಹರಣೆಗೆ ‘ಪಾವು’ ಪದವು ‘ಹಾವು’ ಎಂದು ಬದಲಾಯಿತು ; ‘ಪಣ್ಣು’ ಪದವು ‘ಹಣ್ಣಾ’ಯಿತು; ‘ಪೆಣ್ಣು’ ‘ಹೆಣ್ಣಾ’ದಳು. ಸಂಸ್ಕೃತದ ‘ಪರ್ವ’ವು ಕನ್ನಡದಲ್ಲಿ ‘ಹಬ್ಬ’ವಾಯಿತು. ಆದರೆ ‘ಪೆಂಟಿ’ ಎನ್ನುವ ಪದವು ‘ಹೆಂಟಿ’ಯಾಗಿ ಬದಲಾದಾಗ, ರೂಪಾಂತರದೊಡನೆ ಅರ್ಥಾಂತರವೂ ಆಯಿತು. ಬೆಲ್ಲದ ಗಟ್ಟಿಗೆ ಬೆಲ್ಲದ ಪೆಂಟಿ ಎಂದು ಕರೆಯುತ್ತೇವೆ, ಬೆಲ್ಲದ ಹೆಂಟಿ ಎಂದು ಕರೆಯುವದಿಲ್ಲ. ಹೆಂಟಿ ಪದವು ಮಣ್ಣಿನ ಗಟ್ಟಿಗೆ reserve ಆಗಿದೆ. ಇದೇ ರೀತಿಯಲ್ಲಿ ಗೆಳತಿ ಪದವು ಕೆಳದಿ ಪದದಿಂದಲೇ ಬಂದಿದ್ದರೂ ಸಹ ಅರ್ಥಗಳಲ್ಲಿ ಅಜಗಜಾಂತರವಿದೆ.
ಅದರಂತೆ, ತ ಮತ್ತು ದ ಧ್ವನಿಗಳು ಬದಲಾಗಬಲ್ಲ ಧ್ವನಿಗಳಾದರೂ ಸಹ (ಉದಾಹರಣೆ: ಹುಲಿಯ ತೊಗಲು=ಹುಲಿದೊಗಲು), ತಣಿವು ಮತ್ತು ದಣಿವು ಈ ಪದಗಳು ಅರ್ಥದಲ್ಲಿ ಪೂರ್ಣ ವಿಭಿನ್ನವಾಗಿವೆ.

ಒಂದು ಕಾಲದಲ್ಲಿ ದ್ರಾವಿಡ ಭಾಷೆಗಳಿಗೆಲ್ಲ common ಆದ ಕೆಲವು ಪದಗಳು ಕಾಲಾಂತರದಲ್ಲಿ ಒಂದೆರಡು ಭಾಷೆಗಳಿಂದ ವಜಾ ಆಗಿಬಿಟ್ಟಿವು. ಉದಾಹರಣೆಗೆ ತುಳು ಭಾಷೆಯಲ್ಲಿಯ ‘ವಣಸ’ ಪದವನ್ನೇ ತೆಗೆದುಕೊಳ್ಳಿರಿ. ತುಳು ಭಾಷೆಯಲ್ಲಿ ‘ಊಟ ಆಯಿತೆ?’ ಎಂದು ಕೇಳಲು ‘ವಣಸ ಆಂಡಾ?’ ಎಂದು ಕೇಳುತ್ತಾರೆ. ಈ ಪದವು ಕನ್ನಡದಲ್ಲಿಯೂ ಒಮ್ಮೆ ಬಳಕೆಯಲ್ಲಿ ಇದ್ದಿರಬಹುದು.  ವಣಸ ಪದದಿಂದ ವಾಣಸಿಗ ಪದ ಉತ್ಪನ್ನವಾಗಿದ್ದು, ಕನ್ನಡದಲ್ಲಿ ಅದು ‘ಬಾಣಸಿಗ’ ಎಂದು ಮಾರ್ಪಟ್ಟಿದೆ. 

ಇದರಂತೆಯೇ ‘ಬಾಗಿಲು’ ಎನ್ನುವ ಪದ.
ತುಳುವಿನಲ್ಲಿ ಮನೆ ಪದಕ್ಕೆ ಇಲ್ ಎನ್ನುವ ಪದವನ್ನೇ ಇನ್ನೂ ಬಳಸುತ್ತಾರೆ. ಇಲ್  (=ಮನೆ) ಹಾಗೂ ವಾಯಿ(=ಬಾಯಿ) ಪದಗಳು ಕೂಡಿ ‘ವಾಯಿಲ್’ (=ಮನೆಯ ಬಾಯಿ) ಪದವು ಉತ್ಪನ್ನವಾಯಿತು. ವಾಯಿಲ್ ಪದವು ವಾಕಿಲ್ ಆಯಿತು. ಕಾಲಾಂತರದಲ್ಲಿ  ಇದೇ ಪದವು ಬಾಗಿಲು  ಎಂದು ರೂಪಾಂತರಗೊಂಡಿತು. ಅದರಂತೆ ಇಲ್ (ಮನೆ) ಹಾಗೂ ಹಿಂತು ಪದಗಳು ಕೂಡಿ ‘ಹಿಂತಿಲ್’ (=ಹಿತ್ತಲು) ಪದ ರೂಪಗೊಂಡಿದೆ. ‘ಹಿಂತಿಲು’ ಈಗ ಹಿತ್ತಲಾಗಿದೆ. ಕನ್ನಡಿಗರು ‘ಇಲ್’ ಪದದ ಬದಲಾಗಿ ‘ಮನೆ’ಗೆ ಅಂಟಿಕೊಂಡಿದ್ದರಿಂದ, ಬಾಗಿಲು, ಹಿತ್ತಲು ಇವುಗಳ ಮೂಲರೂಪಗಳು ಮಸುಕಾಗಿ ಬಿಟ್ಟಿವೆ.

ಪದಮೂಲವನ್ನು ಶೋಧಿಸುವದು ನದೀಮೂಲವನ್ನು ಶೋಧಿಸುವಷ್ಟೇ ಸಾಹಸಕರವಾಗಿದೆ!


67 comments:

  1. ಸುನಾಥ್ ಜಿ
    ಮಾಹಿತಿಯುಕ್ತವಾಗಿದೆ ನಿಮ್ಮ ಪದಶೋಧ ಪುರಾಣ. ತು೦ಬಾ ವಿಷಯಗಳನ್ನು ತಿಳಿದ೦ತಾಯಿತು.

    ReplyDelete
  2. ಸುನಾಥ್ ಸರ್,
    ಪದಗಳ ಅಸಂಬದ್ದತೆ ಬಗ್ಗೆ ಸರಳವಾಗಿ ಹೇಳಿದ್ದೀರಾ ಸರ್...... ಕೆಲವು ಪದಗಳ ಅರ್ಥ ನನಗೆ ಗೊತ್ತೇ ಇರಲಿಲ್ಲ...... ಧನ್ಯವಾದ... ಎಸ್ಟೋ ವಿಷಯಗಳ ಖುಲಾಸೆ ಮಾಡಿದ್ದೀರಿ.....

    ReplyDelete
  3. ಸುನಾಥ್ ಸರ್
    ಶಬ್ದಗಳ ಅಪಭ್ರಂಶದ ಬಗೆಗೆ ಸುಂದರವಾಗಿ ಹೇಳಿದ್ದಿರಿ
    ಅದೇ ರೀತಿ ಕೆಲವು ಶಬ್ದಗಳ ಬಗೆಗೆ ವಿಶೇಷ ಮಾಹಿತಿಯೂ ಲಭಿಸಿತು
    ಒಳ್ಳೆಯ ಲೇಖನ

    ReplyDelete
  4. ಹುಂ ಏನ ಕಾಕಾ ಅವ್ರು "ಪದಾ ಬರಕೋ" ಅಂದ್ರು ನೀವು ಪದಾ ತಿಳಕೋ ಅಂತೀರಿ ನಿಮ್ಮ ವಿವರಣೆ ಸರಿಯಾಗಿದೆ

    ReplyDelete
  5. ಗುರುಗಳೇ.....
    ನನ್ನ ತಾಣದಲ್ಲಿ ನಾನು ಒಂದೆರೆಡು ಪದಾಭಾಸಗಳ ಬಗ್ಗೆ ಬರೆದಿದ್ದೆ....’ಶ್ರುತಿ’ ಯ ಪ್ರಯೋಗವನ್ನು ಚೆನ್ನಾಗಿ ತಿಳಿಸಿದ್ದೀರಿ. ನನ್ನ ತಾಣದಲ್ಲಿ ಈ ಪದ ಬಳಸಿದ್ದ ನನಗೆ ಬೇಯಿಸಿದ ಕೋಳಿಮೊಟ್ಟೆಯೇ ಸರಿ ಎಂದು ಒಬ್ಬರು ಇ-ಮೇಲ್ ನಲ್ಲಿ ವಾದಿಸಿದ್ದರು ..! ನಂತರ ಅವರಿಗೆ ವಿವರಿಸಿದ್ದೆ. ತಾವು ಮತ್ತಷ್ಟು ಪದಗಳ ಬಗ್ಗೆ ತಿಳಿಸಿಕೊಟ್ಟು ಉಪಕರಿಸಿದ್ದೀರಿ. ನನ್ನ ಬ್ಲಾಗ್ ನಲ್ಲಿ ನಿಮಗೊಂದು ಕೋರಿಕೆ ಸಲ್ಲಿಸಿದ್ದೇನೆ ....ದಯಮಾಡಿ ಬಂದು ಹರಸಿ... ಧನ್ಯವಾದಗಳು.

    ReplyDelete
  6. ಹೆಚ್ಚಾಗಿ ಮಂಡ್ಯ-ಹಾಸನದ ಕಡೆ ಹಸು - ಕರು ಸಾಕಣೆಗೆ ’ಕರಾವು’ ಎಂದು ಹೇಳುತ್ತಾರೆ...ಕರು ಮತ್ತು ಆವು ಸೇರಿ ಕರಾವು ಆಗಿದೆಯಲ್ಲವೇ ...?

    ReplyDelete
  7. ಮಂಗಳೂರಿನಲ್ಲಿದ್ದಷ್ಟು ದಿನ ನನ್ನ ಕನ್ನಡ ಸುಮಾರಾಗಿತ್ತು.ಆದ್ರೆ ಬೆಂಗಳೂರಿಗೆ ಬಂದ ಮೇಲೆ ಇಲ್ಲಿನ ಅಂಗಡಿಗಳ ಫಲಕ,ಬ್ಯಾನರ್ ಗಳನ್ನೆಲ್ಲ ನೋಡಿ ಯಾವುದು ಸರಿ ಯಾವುದು ತಪ್ಪು ಅನ್ನೋದೆ ತಿಳಿಯದಾಗಿದೆ!

    ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರ.ಧನ್ಯವಾದಗಳು.

    ReplyDelete
  8. ಸುನಾಥ್ ಅವರೆ,
    ನಿಮ್ಮ ಲೇಖನ ಭಾಳ್ ಚಂದ ಬಂದssದ. ಇದಕ್ಕ "ಲೇಖನ ಭಯಂಕರ ಚಂದ ಬಂದssದ' ಅಂತ ಹೇಳ್ಬೋದೇನು?

    ReplyDelete
  9. ಕಾಕಾ,
    ನೀವು ಅದೆಷ್ಟು ಕಷ್ಟಪಟ್ಟು, ತಾಳ್ಮೆಯಿಂದ ನನ್ನಂಥವರಿಗೆ ಭಾಷೆ ಕಲಿಸ್ತೀರಾ... ಧನ್ಯವಾದಗಳು.

    ReplyDelete
  10. ಕಾಕಾ...
    ಚ೦ದದ ಲೇಖನ...
    ಕೆಲವೊಮ್ಮೆ ಈ ಬರಹ ಡೈರೆಕ್ಟ್ ನಲ್ಲಿ ಬರೆಯುವಾಗ ಕೆಲವು ಶಬ್ಧಗಳು ಬಯಸಿದ೦ತೆ ಮೂಡದೆ..ವ್ಯತ್ಯಾಸವಾಗಿ ಬಿಡುತ್ತದೆ...
    ಕ೦ಪ್ಯೂಟರ್ ಕೂಡಾ ಈಗೀಗ ಕನ್ನಡ ಕಲಿಯುತ್ತಿದೆಯೆ೦ದು ಸುಮ್ಮನಾಗಿದ್ದೇನೆ....!

    ReplyDelete
  11. ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ

    ಆತ್ಮೀಯರೆ,

    ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.

    ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.

    ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.

    http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

    ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.

    ಧನ್ಯವಾದಗಳೊಂದಿಗೆ

    ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

    ————————————————————-

    Hi

    This is an academic survey to understand the characteristics of Kannada bloggers, their blogging activity, and factors affecting their motivations for blogging.

    In this context, I request you to kindly fill up the attached questionnaire. Your participation is extremely important for success of this survey. Your responses shall be kept completely confidential and results will be used purely for academic purpose only. If you have any problems or concerns, please send e-mail to: shettaru@gmail.com

    Link to Survey Form: http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..

    Thanking you in anticipation for your time and kind help in carrying out
    this study.

    Yours Sincerely

    Iranna Shettar & Librarian Friends

    ReplyDelete
  12. ತಮ್ಮ ಮಾಹಿತಿ ಉಪಯುಕ್ತವಾಗಿದೆ.

    ReplyDelete
  13. ಸುನಾಥ ಸರ್, ಒಂದು ಭಾಷೆಯ ಬೆಳವಣಿಗೆ, ಪದಗಳು ಹೇಗೆ ರೂಪಾಂತರ ಹೊಂದುತ್ತಾ ಈಗಿನ ರೂಪ ಪಡೆಯುತ್ತವೆ ಎನ್ನುವುದು ಕುತೂಹಲಕರ. ಬೇರೆ ಬೇರೆ ಭಾಷೆಗಳಿಂದ ಹರಿದು ಬಂದು ನಮ್ಮವೇ ಎನಿಸುವಷ್ಟು ಅನೇಕ ಪದಗಳೂ ಕನ್ನಡದಲ್ಲಿವೆ. ಉದಾಹರಣೆಗೆ "ಮೇಷ್ಟ್ರು". ಅನೇಕ ವರ್ಷಗಳಿಂದ ಕೇಳಿ ಕೇಳಿ ಇದು ಕನ್ನಡದ್ದೆ ಅನಿಸಿಬಿಡುತ್ತದೆ. ಇದು ಆಂಗ್ಲದ "master" ರೂಪಾಂತರ ಎಂದು ಯೋಚಿಸಿದಾಗ ಅಚ್ಚರಿಯಾಗುತ್ತದೆ.

    ಸರಿಯಾದ ಬಳಕೆ ತಿಳಿಯದೆ ಅಪಭ್ರಂಶ ಮಾಡುವುದರ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ

    ReplyDelete
  14. ಪರಾಂಜಪೆಯವರೆ,
    ‘ಪುರಾಣಮಿತ್ಯೇವ ನ ಸಾಧು ಸರ್ವಮ್’ ಅಂದೀರೆಪಾ!

    ReplyDelete
  15. ದಿನಕರ,
    ಪದಗಳ ರೂಪ ಬದಲಾದಂತೆ, ಅವುಗಳ ಮೂಲರೂಪ ಹಾಗು ಮೂಲ ಅರ್ಥ ಕಣ್ಮರೆಯಾಗುತ್ತ ಹೋಗುವದು ಸಹಜವೇ ಆಗಿದೆ!

    ReplyDelete
  16. ಗುರುಮೂರ್ತಿಯವರೆ,
    ಧನ್ಯವಾದಗಳು. ಕನ್ನಡದಲ್ಲಿ ಈ ತರಹದ ಅನೇಕ ಶಬ್ದಗಳು ತುಂಬಿಕೊಂಡಿವೆ. ಬಲೆ ಹಾಕಿ ಹಿಡಿಯಬೇಕಾಗಿದೆ!

    ReplyDelete
  17. ದೇಸಾಯರ,
    ಪದಾ ತಿಳಕೊಳ್ಳದs ಪದಾ ಬರಕೋತ ಹೋದರ.....!

    ReplyDelete
  18. ಸುಬ್ರಹ್ಮಣ್ಯರೆ,
    ನಿಮ್ಮ ಬ್ಲಾ^ಗಿನಲ್ಲಿ ಸಂಚರಿಸಿದೆ. ನಿಮ್ಮ ವಿನೋದಭಾವ ತುಂಬ
    ಚೆನ್ನಾಗಿದೆ. ನಾನೂ ಸಹ ವಿನೋದದ ಆರಾಧಕ.

    ಕನ್ನಡಿಗರು ಜಾನವಾರುಗಳನ್ನು ತಿಳಿಸುವಾಗ ಕರುಗಳನ್ನು ವಿಶೇಷವಾಗಿ
    ಪ್ರಸ್ತಾವಿಸುತ್ತಾರೆ. ಉದಾ: ದನಕರು.
    ಅದರಂತೆಯೇ ‘ಕರಾವು’. ನೀವು ವಿಶ್ಲೇಷಿಸಿದಂತೆ ಇದು ‘ಕರು’ ಮತ್ತು ‘ಆವು’ ಪದಗಳ ಜೋಡಣೆಯೇ ಸರಿ.

    ReplyDelete
  19. ಸಂದೀಪ,
    ಬೆಂಗಳೂರು ಅಂದರೆ ‘ಕನ್ನಡದ ಕಸಾಯಿಖಾನೆ’ ಎನ್ನಬಹುದೇನೊ?
    ಮಂಗಳೂರಿನ ಅಚ್ಚಕನ್ನಡ ಕರ್ನಾಟಕದ ಬೇರೆಲ್ಲೆಯೂ ಸಿಗದು.

    ReplyDelete
  20. ನಾರಾಯಣ ಭಟ್ಟರೆ,
    ನಿಮಗೆ ಸಿಕ್ಕಾಪಟ್ಟೆ ಧನ್ಯವಾದಗಳ್ರಿ!

    ReplyDelete
  21. ಆನಂದ,
    ‘ನಾನು ಕಲಸ್ತೀನಿ’ ಅಂತ ನನಗೇನೂ ಅನ್ನಿಸೋದಿಲ್ಲ. ಆದರೆ ಕಲಿತುಕೊಳ್ಳೋದು ದೊಡ್ಡ ಗುಣ.

    ReplyDelete
  22. ವಿಜಯಶ್ರೀ,
    BRH direct ಬಳಸಿ ಅಚ್ಚಿಸುವಾಗ, ಕನ್ನಡ ಹಾಗು ಇಂಗ್ಲಿಶ್
    ಸ್ಪೆಲ್ಲಿಂಗ್ confusion ಆಗಿ ಬಿಟ್ಟು, ಫಜೀತಿ ಕಣ್ರಿ.

    ReplyDelete
  23. ಸೀತಾರಾಮರೆ,
    ಧನ್ಯವಾದಗಳು. ಮಾಹಿತಿಯಲ್ಲಿ ಲೋಪದೋಷಗಳಾದರೆ, ದಯವಿಟ್ಟು ತಿಳಿಸಿ.

    ReplyDelete
  24. ದೀಪಸ್ಮಿತ,
    ಹೌದು. ಎಷ್ಟೋ ಪದಗಳು ಕನ್ನಡದ ಪದಗಳೇ ಅನ್ನಿಸುವಂತಿವೆ.
    ‘ಮೇಷ್ಟ್ರು’ ತರಹಾನೆ ‘ಆಸ್ಪತ್ರೆ,’ ‘ಕಂದೀಲು’ ಪದಗಳು ಸಹ
    (hospital, candle) ಇಂಗ್ಲಿಶ್ ಮೂಲಕ ಕನ್ನಡಕ್ಕೆ ಬಂದಿರುವದು ನಮ್ಮ ಅರಿವಿಗೇ ಬಾರದಂತಿವೆ!

    ReplyDelete
  25. ಕಾಕಾ,
    ತು೦ಬಾ ಚೆನ್ನಾಗಿ ವಿವರಿಸಿದ್ದೀರಿ. ನಿಮ್ಮ ಬರಹದಿ೦ದ ಅನೇಕ ಪದಗಳ ಬಗ್ಗೆ ಸರಿಯಾದ ಮಾಹಿತಿಗಳು ಸಿಕ್ಕಿದವು. ಧನ್ಯವಾದಗಳು.

    ReplyDelete
  26. ಸುನಾಥ,

    ಉಪಯುಕ್ತ ಮಾಹಿತಿಯನ್ನ ಆಸಕ್ತಿದಾಯಕವಾಗಿ ಹಂಚಿದ್ದೀರ.
    ಧನ್ಯವಾದಗಳು,

    ಪ್ರೀತಿಯಿಂದ
    ಸಿಂಧು

    ReplyDelete
  27. ಕಾಕ ಇನ್ನು ಬರೆಯುವಾಗ ಈ ಪದ ತಪ್ಪೊ ಸರಿಯೊ ಅಂತ ಯೋಚಿಸಿ ಬರೆಯುವಂತೆ ಮಾಡಿದ್ದೀರಿ.ನನಗಂತೂ ಕೆಲಬಾರಿ ಎಲ್ಲಿ ಅಲ್ಪಪ್ರಾಣ , ಎಲ್ಲಿ ಮಹಾಪ್ರಾಣ ಉಪಯೋಗಿಸಬೇಕೆಂದೇ ತಿಳಿಯದೆ ಗೊಂದಲವಾಗುತ್ತದೆ.

    ReplyDelete
  28. ಕಾಕಾ,

    ಮಾಹಿತಿಪೂರ್ಣ ಲೇಖನ. ತುಂಬಾ ಧನ್ಯವಾದಗಳು. ಕುಂಕುಮಕ್ಕೂ ಆನೆಗೂ ಅಂತರ ತಿಳಿಯದ ಕನ್ನಡ ಪತ್ರಿಕೆಯೊಂದು ಇಂದೂ ಚಲಾವಣೆಯಲ್ಲಿದೆ ಎಂದು ತಿಳಿದು ವಿಷಾದವಾಯಿತು!

    ReplyDelete
  29. Maahitiyukta lekhana...
    ಸಿಂದೂರ ತಿಲಕ ಅನ್ನೋ ಪದ ಸಿಂಧೂರ ತಿಲಕ ಅಂತ ಬರೆದರೆ? ಹುಹ್ ಎಂಥಾ ಅಪಾರ್ಥ?? (ಅಪಾರ + ಅರ್ಥ==ಅಪಾರ್ಥ ಹಹಹಹ )

    ReplyDelete
  30. ತುಳು ಪದಗಳ ಬಗ್ಗೆಯೂ ಬರೆದಿದ್ದೀರಿ,ಸಂತಸವಾಯಿತು.

    ReplyDelete
  31. ಮನಮುಕ್ತಾ,
    ನಾವು ಬಳಸುವ ಪದಗಳ ಮೂಲ, ರೂಪಾಂತರ ಹಾಗು ಅರ್ಥಾಂತರಗಳನ್ನು ಅರಿತಾಗ ಖುಶಿಯಾಗುತ್ತದೆ, ಅಲ್ಲವೆ?

    ReplyDelete
  32. ಸಿಂಧು,
    ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಾನು ಧನ್ಯ.
    -ಸುನಾಥ

    ReplyDelete
  33. ಸುಮಾ,
    ಭಾಷೆ ವಿಸ್ತಾರವಾಗಿದೆ. ನಮ್ಮ ಲೋಪ ದೋಷಗಳೂ ಸಹ ವಿಸ್ತಾರವಾಗಿಯೇ ಇವೆ!

    ReplyDelete
  34. ತೇಜಸ್ವಿನಿ,
    ಒಂದು ಕಾಲದಲ್ಲಿ ಕನ್ನಡದ ಪತ್ರಿಕಾ ಭಾಷೆಯನ್ನು ರೂಪಿಸಿದ ಪತ್ರಿಕೆಯು ಇಂದು ಕನ್ನಡ ಭಾಷೆಯನ್ನು ಕೊಲೆ ಮಾಡುತ್ತಿದೆ.
    ಕಾಲಾಯ ತಸ್ಮೈ ನಮಃ!

    ReplyDelete
  35. ರವಿಕಾಂತ,
    ತುಂಬ ಸೊಗಸಾದ ಉದಾಹರಣೆಯನ್ನು ನೀಡಿದಿರಿ!

    ReplyDelete
  36. ಅಶೋಕ,
    ನಾನು ಕಲಿಯುವಾಗ ಸುರತ್ಕಲ್ಲಿನಲ್ಲಿ ಇದ್ದೆ. ಹೀಗಾಗಿ ತುಳು ಭಾಷೆಯ ಪರಿಚಯ ಅತ್ಯಲ್ಪ ಮಟ್ಟಿಗೆ ಇದೆ. ತುಳು ಭಾಷೆಯನ್ನು ನಾನು ಪ್ರೀತಿಸುತ್ತೇನೆ.

    ReplyDelete
  37. ಒಂದು ಹುಡುಗಿ ಕೊಡಪ್ಪಾ” ಹ್ಹಾ ಹ್ಹಾ ಹ್ಹಾ.

    ಏನೋ ಹೋಗಿ ಏನೋ ಆಯ್ತಂತೆ....
    ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು.

    ReplyDelete
  38. ಶಿವಪ್ರಕಾಶ,
    ಹುಡುಗಿ ಕೇಳಿ ನೋಡಿರಿ. ಹುಡುಗೀನೆ ಸಿಕ್ಕರ, ಕಷ್ಟ ಆದೀತು!

    ReplyDelete
  39. "..ಅದರಂತೆಯೇ ಹೊಸದಾಗಿ ಜನ್ಮ ಪಡೆದ ಕೂಸು ಪುದುಕ ಅಥವಾ ಪುದುಕಿಯಾಯಿತು. ಈ ಪದಗಳೇ ಕಾಲಾಂತರದಲ್ಲಿ ‘ಹುಡುಗ’, ‘ಹುಡುಗಿ’ ಎಂದು ಮಾರ್ಪಾಡಾಗಿವೆ.."

    ಇದಕ್ಕೆ ಎತ್ತುಗೆಗಳನ್ನೊ ಮೇಣ್ ಮಾದರಿಗಳನ್ನ ಕೊಟ್ಟಿದ್ದರೆ ಚೆನ್ನಾಗಿತ್ತು. ಆದ್ದರಿಂದ ಈ ಮೇಲಿನ ಬಿಡಿಸುವಿಕೆ ನನಗೆ ಒಪ್ಪಿಗೆಯಾಗುತ್ತಿಲ್ಲ

    ನನ್ನ ಪ್ರಕಾರ ’ಹುಡುಗ’/’ಹುಡುಗಿ’ಯ ಹುಟ್ಟು ಹೀಗಿದೆ:=

    ಪುಟ್ಟುಗ->ಹುಟ್ಟುಗ -> ಹುಡುಗ
    ಪುಟ್ಟುಗಿತ್ತಿ -> ಹುಟ್ಟುಗಿತ್ತಿ -> ಹುಡುಗಿ

    ಗಮನಿಸಿ: ಟ- ಕೊರಲಿಸದ,ಡ-ಕೊರ‍ಲಿಸಿದ ಉಲಿಗಳು.
    ಈ ತೆಱದ ಹಲವು ಕೊರಲಿಸಿದ<->ಕೊರಲಿಸದ ಮಾರ್ಪಾಟುಗಳು ಹಲವು ನಮಗೆ ಸಿಗುತ್ತವೆ

    ೧. ಮಗು-ಮಕ್ಕಳು ( ಗ-ಕ)
    ೨. ಪುಟ್ಟಿ-ಬುಟ್ಟಿ (ಪು-ಬು)
    ೩. ಕಡೆ - ಗಡಿ (ಕ-ಗ)
    ೪. ಕುಡಿ- ಗುಡಿ(ಕ-ಗ)
    ೫. ಕೊನೆ- ಗೊನೆ(ಕ-ಗ)

    ಎಮನೊ ಮತ್ತು ಬರೊ ನುಡಿಗಂಟಿನಿಂದ:-
    Ka. puṭṭu(ಪುಟ್ಟು), huṭṭu(ಹುಟ್ಟು), uṭṭu(ಉಟ್ಟು) to arise, originate, come into existence, be born

    ಪುದು- ಇದು ಕನ್ನಡವಲ್ಲ ತಮಿಳು.
    ಕನ್ನಡದಲ್ಲಿ ’ಪೊಸ(ಹೊಸ)’ಮೊದಲಿನಿಂದಲೂ ಬಳಕೆಯಲ್ಲಿದೆ.

    ಅಲ್ಲದೆ ಕನ್ನಡದಲ್ಲಿ ’ಪುದು’ಗೆ ಬೇರೆ ತಿರುಳಿದೆ
    Ka. pudu, puduvu union, joint concern, holding in common, partnership

    - ಹದುಳವಿರಲಿ
    ಬರತ್

    ReplyDelete
  40. "ಬೆಂಗಳೂರು ಅಂದರೆ ‘ಕನ್ನಡದ ಕಸಾಯಿಖಾನೆ’ ಎನ್ನಬಹುದೇನೊ?ಮಂಗಳೂರಿನ ಅಚ್ಚಕನ್ನಡ ಕರ್ನಾಟಕದ ಬೇರೆಲ್ಲೆಯೂ ಸಿಗದು."

    ಮಂಗಳೂರಿನಲ್ಲಿ ಅಚ್ಚಕನ್ನಡ - :) ನಗು ಬಂತು

    ಒಂದು ಮಣ ಸಂಸ್ಕ್ರುತ ಹಾಕಿ ಮಾತಾಡಿದರೆ ಅಚ್ಚಗನ್ನಡವಾಗುತ್ತದೆಯೆ?

    ReplyDelete
  41. ಸ್ವಾಮಿ ಸುನಾತರೆ,

    ಶ್ರುತಿ-> ಶೃತಿ ,
    ಧ್ರುವ -> ಧೃವ,
    ಹಾರ್ದಿಕ-> ಹಾರ್ಧಿಕ,
    ಶುಭಾಶಯ-> ಶುಭಾಷಯ,

    ಇದಕ್ಕೆ ಕಾರಣ, ಹೆಚ್ಚು ಕನ್ನಡಿಗರಿಗೆ ಸಂಸ್ಕ್ರುತದ ನುಡಿಕಟ್ಟುಗಳು ಮತ್ತು ನುಡಿಯರಿಮೆ ಸರಿಯಾಗಿ ತಿಳಿಯದೇ ಇರುವುದು. ಇದು ನಿಮಗೂ ಗೊತ್ತು.
    ಜಪ್ಪಯ್ಯ ಅಂದ್ರು ಅಲ್ಪ-ಮಹಾ ಪ್ರಾಣಗಳ ಬೇರೆತನ ನಮಗೆ, ನಮ್ ಜನಕ್ಕೆ ಗೊತ್ತಾಗಲ್ಲ. ಕಲಿಯದವರನ್ನು ಬಿಡಿ ಕಲಿತವರಲ್ಲೂ ಕೂಡ ಇದನ್ನ ಗಮನಿಸಬಹುದು.

    ಇದಕ್ಕೆ ಒಂದೇ ಉಪಾಯ- ಹೆಚ್ಚು ಹೆಚ್ಚು ಸಂಸ್ಕ್ರುತವನ್ನು ಕನ್ನಡಿಗರಿಗೆ ಕಲಿಸಬೇಕು. ಕನ್ನಡಿಗರನ್ನು ಸಕ್ಕದಿಗರನ್ನಾಗಿ ಮಾರ್ಪಡಿಸಬೇಕು. ಆಗಲ್ಲ ಅಂದ್ರೆ ಕನ್ನಡದಲ್ಲಿ ’ಮಹಾಪ್ರಾಣ’ಗಳನ್ನು ಬ್ಯಾನ್ ಮಾಡಬೇಕು. ಆಗ ಈ ಎಡವಟ್ಟುಗಳು ಆಗುವುದಿಲ್ಲ.ಎಲ್ಲ ತಪ್ಪುಗಳನ್ನು ಒಪ್ಪುಗಳೆಂದು ತೀರ್ಮಾನಿಸಿ ಸುಮ್ಮನಿರಬೇಕು.

    ಹದುಳವಿರಲಿ,
    ಬರತ್

    ReplyDelete
  42. ಉಪಯುಕ್ತಕರ ಮಾಹಿತಿ.
    ಓದಿ ಖುಷಿಯಾಯಿತು.ಶ್ರುತಿ ಮತ್ತು ಶೃತಿಗಳ ವ್ಯತ್ಯಾಸ
    ನನಗಂತೂ ಮರತೇ ಹೋಗಿತ್ತು..
    ಗೊತ್ತಿಲ್ಲದೇ ಬಳಸಿದರೆ ಎಂಥ ಅಪಭ್ರಂಶ ನೋಡಿ..

    ReplyDelete
  43. RJ,
    ಧನ್ಯವಾದಗಳು.

    ReplyDelete
  44. ಸುನಾಥ್ ಸರ್ ಶೃತಿ-ಶ್ರುತಿ, ಧೃವ-ಧ್ರುವ....ನಿಜಕ್ಕೂ ಕಣ್ಣು ತೆರೆಸುವ ಪದ ವಿಶ್ಲೇಷಣೆ ನನಗಂತೂ ಇದು ಸತ್ಯ್...ವ್ಯತ್ಯಾಸ ಗೊತ್ತಿರಲಿಲ್ಲ...ನಿಮ್ಮ ಮುಂದಿನ ಲೇಖನಗಳಲ್ಲಿ...ಹ್ರಸ್ವ, ದೀರ್ಘ, ಅಲ್ಪ ಮತ್ತು ಮಹಾಪ್ರಾಣಗಳ ಸಾಮಾನ್ಯ್ ಪ್ರಯೋಗಗಳು ಅವುಗಳಲ್ಲಿನ ಲೋಪಗಳಬಗ್ಗೆ ಸ್ವಲ್ಪ ಬರೆದರೆ...ಉತ್ತಮ...ನನ್ನಂತಹ ಬ್ಲಾಗಿಗಳಿಗಂತೂ ಖಂಡಿತಾ ಉಪಯುಕ್ತವಾಗುತ್ತೆ...ಏನಂತೀರಿ..?

    ReplyDelete
  45. ಉಪಯುಕ್ತ ಮಾಹಿತಿಗೆ ನನ್ನಿ

    ReplyDelete
  46. ಜಲನಯನ,
    ಧನ್ಯವಾದಗಳು. ನಮ್ಮ ಲೇಖನಗಳಲ್ಲಿ ಸಾಮಾನ್ಯವಾಗಿ ಬರುವ ತಪ್ಪುಗಳ ಸರಿರೂಪಗಳನ್ನು ಮತ್ತೊಂದು postನಲ್ಲಿ ಕೊಡಲು ಪ್ರಯತ್ನಿಸುತ್ತೇನೆ.

    ReplyDelete
  47. ಲೋದ್ಯಾಶಿ,
    ಧನ್ಯವಾದಗಳು.

    ReplyDelete
  48. ಸಿಂದೂರ ಸಿಂಧೂರ... ಶೃತಿ ಶ್ರುತಿ... ಇದೆಲ್ಲ ಗೊತ್ತೇ ಇರಲಿಲ್ಲ ಹೀಗೇ ಗೊತ್ತಿಲ್ಲದೇ ಇವೇ ನಿಜವಾದ ಪದಗಳೂ ಅರ್ಥಗಳೂ ಆಗಿಬಿಡುತ್ತವೆ... ತಪ್ಪೇ ಸರಿಯಾಗಿಬಿಡುತ್ತದೆ...

    ReplyDelete
  49. ಹೌದು, ಪ್ರಭುರಾಜ.
    ಇದೇ ಭಾಷೆಯ ದುರಂತ.

    ReplyDelete
  50. ಕಲಿಕೆ ಎನ್ನುವುದು ಮುಗಿಯದ ಹಾದಿ.
    ಮಾಹಿತಿಗಾಗಿ ಧನ್ಯವಾದಗಳು.

    ReplyDelete
  51. ನೀವು ಹೇಳುವದು ನಿಜ,ಉಮಾ.
    ಭಾಷೆ ಎನ್ನುವದೊಂದು ಸಮುದ್ರ. ತಿಳಿದಿದ್ದೇನೆ ಎಂದು ಹೇಳುವದು
    ಸಾಧ್ಯವಿಲ್ಲ, ಅಲ್ಲವೆ?

    ReplyDelete
  52. ಕಡೆ ಸಾಲು ಬಹಳ ಸೊಗಸಾಗಿದೆ :)

    ReplyDelete
  53. ಮುತ್ತುಮಣಿ,
    ನಿಜವಾಗಿಯೂ ಇದು ರೋಮಾಂಚಕರ ಸಾಹಸ. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete
  54. habba istella padhakOshavannu namma munde ittideeri, namage esto tiLidilla.

    ReplyDelete
  55. ಕಾಕಾ, ’ಸಿಂಧೂರ ’ ಎಂಬ ಪದ ಇಲ್ಲ ಎಂದೂ ಅದು ’ಸಿಂಧುರ ’(ಆನೆ) ಎಂದು ನಿಘಂಟು ಹೇಳುತ್ತಿದೆ. ಏನಂತೀರಿ?

    ReplyDelete
  56. ಸುನಾಥ ಅವರಿಗೆ,

    ನಿಮ್ಮ ಈ ಬ್ಲಾಗ್‌ಪೋಸ್ಟ್‌ನ ಕೆಲಭಾಗಗಳನ್ನು ಅವತ್ತು ’ಅವಧಿ’ ಬ್ಲಾಗ್‌ನಲ್ಲೂ ಹಾಕಿದ್ದರು. ಅಲ್ಲಿ ನನ್ನ ಪ್ರತಿಕ್ರಿಯೆ ನಮೂದಿಸಿದ್ದೆ. ಈ ಕೆಳಗಿನಂತೆ-
    ----------
    “ಸಿಂಧೂರ” ಪದದ ಅರ್ಥ ಆನೆ ಅಂತಲ್ಲ. “ಸಿಂಧುರ” ಎಂದರೆ ಆನೆ. ಸಂಸ್ಕೃತದಲ್ಲಿ “ಸಿಂಧೂರ” ಎಂಬ ಪದವೇ ಇಲ್ಲ! ‘ಸಿಂದೂರತಿಲಕ’ ಎಂಬ ಪದ ಇದೆ, ಅದರ ಅರ್ಥವೂ ’ಆನೆ’ ಎಂದೇ. (“ಸಂಸ್ಕೃತ ಕನ್ನಡ ನಿಘಂಟು – ಪ್ರೊ. ಜಿ.ಎನ್.ಚಕ್ರವರ್ತಿ; ಗೀತಾ ಬುಕ್ ಹೌಸ್, 2006; ಪುಟ ಸಂಖ್ಯೆ 971)
    -----------

    ನೀವು ಅವಧಿ ಬ್ಲಾಗ್ ನೋಡುವುದಿಲ್ಲವಿರಬಹುದು, ಹಾಗಾಗಿ ಅಲ್ಲಿ ಇದಕ್ಕೆ ನಿಮ್ಮ ಉತ್ತರ ಸಿಗಲಿಲ್ಲ. ಈಗ ಇಲ್ಲಿ ನಿಮ್ಮ ಮೂಲ ಬ್ಲಾಗ್‌ನಲ್ಲೇ ನನ್ನ ಪ್ರತಿಕ್ರಿಯೆ ದಾಖಲಿಸುತ್ತಿದ್ದೇನೆ. ನಿಮ್ಮಿಂದ ಉತ್ತರವನ್ನೂ ನಿರೀಕ್ಷಿಸುತ್ತೇನೆ.

    ReplyDelete
  57. ಪದಶೋಧ ಉಪಯುಕ್ತವಾಗಿದೆ.. :) ತಮ್ಮಿಂದ ಕಲಿಯುವುದು ತುಂಬಾ ಇದೆ.. ನಾನು ಬ್ಲಾಗ್ ಲೋಕಕ್ಕೆ ಮರಳಿದ್ದೇನೆ. ಮತ್ತೊಮ್ಮೆ ಭೇಟಿ ನೀಡಿ ಭಾವ-ದರ್ಪಣಕ್ಕೆ.

    ReplyDelete
  58. ಮನಸು,
    ನಿಮಗೆ ಉತ್ತರಿಸುವದು ತಡವಾಯಿತು. ದಯವಿಟ್ಟು ಕ್ಷಮಿಸಿರಿ.
    ನಿಮ್ಮ ಪ್ರತಿಕ್ರಿಯೆಗೆ ನನ್ನ ಧನ್ಯವಾದಗಳು.

    ReplyDelete
  59. ವಿ.ರಾ.ಹೆ,
    ಸಂಸ್ಕೃತದಲ್ಲಿ ‘ಸಿಂಧೂರ’ ಪದವಿಲ್ಲ. ಆದರೆ, ಕಿಟ್ಟೆಲ್ ಬರೆದ ಇಂಗ್ಲಿಶ್-ಕನ್ನಡ ಅರ್ಥಕೋಶದಲ್ಲಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನವರು ಸಂಪಾದಿಸಿದ ಕನ್ನಡ-ಕನ್ನಡ ಅರ್ಥಕೋಶದಲ್ಲಿ ‘ಸಿಂಧೂರ’ ಪದಕ್ಕೆ ಸ್ಥಳ ನೀಡಲಾಗಿದ್ದು ‘ಆನೆ’ ಎನ್ನುವ ಅರ್ಥ ನೀಡಲಾಗಿದೆ!

    ReplyDelete
  60. ‘ಸಿಂದೂರ’ ಪದಕ್ಕೆ ಕುಂಕುಮ ಎನ್ನುವ ಅರ್ಥವನ್ನು ಸಂಸ್ಕೃತ ಹಾಗು ಕನ್ನಡ ಅರ್ಥಕೋಶಗಳಲ್ಲಿ ಕೊಟ್ಟಿದ್ದಾರೆ. ‘ಸಿಂಧೂರ’ ಪದಕ್ಕೆ ಸಂಸ್ಕೃತ ಅರ್ಥಕೋದಲ್ಲಿ ಸ್ಥಳವಿಲ್ಲ. ಆದರೆ ಕಿಟ್ಟೆಲ್ ಅವರ ಕನ್ನಡ-ಇಂಗ್ಲಿಶ್ ಅರ್ಥಕೋಶದಲ್ಲಿ ‘ಸಿಂಧೂರ’ ಪದಕ್ಕೆ ‘ನಾಗ, ಆನೆ’ ಎನ್ನುವ ಅರ್ಥವನ್ನು ತೋರಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಸಂಪಾದಿಸಿದ ಅರ್ಥಕೋಶದಲ್ಲಿ ಸಿಂದುರ, ಸಿಂಧುರ ಹಾಗೂ ಸಿಂಧೂರ ಈ ಮೂರು ಪದಗಳ ಅರ್ಥವನ್ನು ಆನೆ ಎಂದೇ ಕೊಟ್ಟಿದ್ದಾರೆ. ಅದೇ ಪುಟದಲ್ಲಿ ಸಿಂದೂರ ಎನ್ನುವ ಪದಕ್ಕೆ ಕುಂಕುಮ ಎನ್ನುವ ಅರ್ಥ ಕೊಡಲಾಗಿದೆ.
    ಸಂಸ್ಕೃತದಲ್ಲಿ ‘ಸಿಂಧೂರ’ ಎನ್ನುವ ಪದವೇ ಇಲ್ಲದಿದ್ದರೂ ಸಹ ಸಂಯುಕ್ತ ಕರ್ನಾಟಕ ಪತ್ರಿಕೆಯು ಎಷ್ಟು ನಿರ್ಭೀತಿ ಹಾಗು ನಿರ್ಭಿಡೆಯಿಂದ ಆ ಪದವನ್ನು ಬಳಸುತ್ತಿದೆ ಎನ್ನುವದನ್ನು ನೀವೇ ನೋಡಿದಿರಲ್ಲ.

    ReplyDelete
  61. ಮಂಜುಳಾ,
    ವಿಳಂಬಕ್ಕೆ ಕ್ಷಮೆ ಇರಲಿ.
    ನಿಮ್ಮ blog ಮತ್ತೇ ಪ್ರಾರಂಭಿಸಿದ್ದೀರಿ. ಸಂತೋಷದ ವಿಷಯ. ಅಭಿನಂದನೆಗಳು.

    ReplyDelete
  62. ವಣಸ ಆಂಡಾ? = ಉಣಿಸು ಆಯಿತಾ?

    ReplyDelete
  63. ಇಜ್ಜಿ. ಈರ ವಣಸ ಆಂಡಾ?

    ReplyDelete
  64. ಆಸ್ಪತ್ರೇ ಯಾವ ಭಾಷೇ

    ReplyDelete
  65. ಈ ದೀರ್ಘೀಕೃತ ಆಸ್ಪತ್ರೆ ಯಾವ ಭಾಷೇಯದು ಎನ್ನುವುದು ನನಗಂತೂ ಗೊತ್ತಿಲ್ಲ!

    ReplyDelete
  66. ತುಂಬ ಉಪಯುಕ್ತ ಮಾಹಿತಿ ಸುನಾಥರೇ

    ReplyDelete
  67. ನಾಗರಾಜರೆ, ತುಂಬ ಧನ್ಯವಾದಗಳು.

    ReplyDelete