Saturday, April 3, 2010

‘ಬಂಡಾಯ’---ವ್ಯಾಸರಾಯ ಬಲ್ಲಾಳ

ವ್ಯಾಸರಾಯ ಬಲ್ಲಾಳರು ಬರೆದ ಕಾದಂಬರಿ ‘ಬಂಡಾಯ’ವು ೧೯೮೬ರಲ್ಲಿ ಪ್ರಕಟವಾಯಿತು. ಮಹಾನಗರಿ ಮುಂಬಯಿಯಲ್ಲಿಯ ಶ್ರಮಜೀವಿಗಳ ಬದುಕು, ಬವಣೆ ಹಾಗು ಮುಷ್ಕರಗಳೇ ಈ ಕಾದಂಬರಿಯ ವಸ್ತುಗಳಾಗಿವೆ. ಮುಷ್ಕರಗಳಿಂದ ಕಾರ್ಮಿಕರ ಸಮಸ್ಯೆಗಳನ್ನು ನಿವಾರಿಸಬಹುದೇ ಅಥವಾ ಅದಕ್ಕೂ ಸಹ ನಕ್ಸಲ ಮಾದರಿಯ ಹಿಂಸಾತ್ಮಕ ಹೋರಾಟವೇ ಅನಿವಾರ್ಯವೆ ಎನ್ನುವದು ಈ ಕಾದಂಬರಿಯ ಕೊನೆಯಲ್ಲಿ ಕೇಳಲಾದ ಪ್ರಶ್ನೆ. ಇಂತಹ ಒಂದು ತಾತ್ವಿಕ ವಸ್ತುವನ್ನು ಆಸಕ್ತಿಪೂರ್ಣ ಕಾದಂಬರಿಯನ್ನಾಗಿ ಮಾರ್ಪಡಿಸುವಲ್ಲಿ ಬಲ್ಲಾಳರು ತಮ್ಮ  ಕಥನಕೌಶಲವನ್ನು ತೋರಿಸಿದ್ದಾರೆ.

ಪ್ರತಿಯೊಂದು ದೊಡ್ಡ ಉದ್ದಿಮೆಯಲ್ಲಿ ನಾಲ್ಕು ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಲ್ಕು ಮಾನವಕೂಟಗಳನ್ನು ನಾವು ಗುರುತಿಸಬಹುದು. ಮೊದಲನೆಯ ಹಿತಾಸಕ್ತಿ ಅಥವಾ ಮಾನವಕೂಟವೆಂದರೆ ಉದ್ದಿಮೆಪತಿಯದು. ಏನಕೇನ ಪ್ರಕಾರೇಣ ತನ್ನ ಉದ್ದಿಮೆಯ ನಿತಾಂತ ಪ್ರಗತಿಯಾಗಬೇಕು; ತಾನು ಹಾಗು ತನ್ನ ಕುಟುಂಬವು ಆಧುನಿಕ ಸುಖಸೌಲಭ್ಯಗಳಲ್ಲಿ ಮುಳುಗಿರಬೇಕು ಎನ್ನುವದು ಉದ್ದಿಮೆಪತಿಯ ತವಕ.

ಎರಡನೆಯ ಹಿತಾಸಕ್ತಿ ಅಥವಾ ಮಾನವಕೂಟ ಕಾರ್ಮಿಕರದು. ಕೊಳೆಗೇರಿಗಳಲ್ಲಿ ಪಶುತುಲ್ಯ ಜೀವನ ನಡೆಯಿಸುತ್ತಿರುವ ಇವರು ಉದ್ದಿಮೆಪತಿ ಹಾಗು ವಿಭಿನ್ನ ಕಾರ್ಮಿಕ ಮುಖಂಡರ ಕೈಯಲ್ಲಿ ಸಿಲುಕಿದ ದಾಳಗಳಾಗಿದ್ದಾರೆ.

ಮೂರನೆಯ ಹಿತಾಸಕ್ತಿ ಅಥವಾ ಮಾನವಕೂಟವೆಂದರೆ ಕಾರ್ಮಿಕ ಸಂಘಗಳ ಮುಖಂಡರದು. ಈ ಮುಖಂಡರಲ್ಲಿ ಎರಡು ಬಗೆಯವರಿದ್ದಾರೆ. ಕಾರ್ಮಿಕರನ್ನು ಚದುರಂಗದ ದಾಳಗಳಂತೆ ಉಪಯೋಗಿಸಿಕೊಳ್ಳುತ್ತ, ತಮ್ಮ ಸ್ವಂತದ ಪ್ರತಿಷ್ಠೆ ಹಾಗು ಸಂಪತ್ತನ್ನು ಅಧಿಕಗೊಳಿಸಲು ಪ್ರಯತ್ನಿಸುವ ಮುಖಂಡರು ಒಂದು ವರ್ಗದವರು. ಉದ್ದಿಮೆಗಳು ಹಾಳಾಗಲಿ ಅಥವಾ ಕಾರ್ಮಿಕರು ಸತ್ತು ಹೋಗಲಿ, ಆದರೆ ತಮ್ಮ ಸ್ವಾರ್ಥಸಾಧನೆಯಾಗಬೇಕು ಎನ್ನುವದು ಇಂತಹ ಮುಖಂಡರ ಅಂತರಂಗದ ಬಯಕೆ. ಎರಡನೆಯ ವರ್ಗದವರೆಂದರೆ, ಕಾರ್ಮಿಕರಿಗಾಗಿ ನಿಜವಾಗಿ  ಹೋರಾಡುವವರು. ತಮ್ಮ ವೈಯಕ್ತಿಕ ಬದುಕನ್ನು ಬಲಿಕೊಟ್ಟು ಕಾರ್ಮಿಕರ ಹಿತಕ್ಕಾಗಿ ಶ್ರಮಿಸುವವರು.

ನಾಲ್ಕನೆಯ ಮಾನವಕೂಟವು ಉದ್ದಿಮೆಗಳಿಗೆ ಸಂಬಂಧಪಟ್ಟ ಸರಕಾರಿ ಅಧಿಕಾರಿಗಳದು ಉದಾಹರಣೆಗೆ ಕಾರ್ಮಿಕ ಇಲಾಖೆಯ ಹಾಗು ಪೋಲೀಸ ಇಲಾಖೆಯ ಅಧಿಕಾರಿಗಳದು. ತಮ್ಮ ಸ್ವಂತ ಹಿತಾಸಕ್ತಿಗಳ ರಕ್ಷಣೆ ಮಾತ್ರ ಇವರ ಅನುಗಾಲದ ಚಿಂತೆ.

ಕಾದಂಬರಿಯಲ್ಲಿ ಮೊದಲಿಗೆ ಬರುವದು ರಾಜೀವನ ಪಾತ್ರ.  ರಾಜೀವನು ಕಾರ್ಮಿಕರ ಹಿತವನ್ನು ಬಯಸುವ ಕಾರ್ಮಿಕ ಮುಖಂಡ. ತನ್ನೆಲ್ಲ ಸಮಯವನ್ನು ಕಾರ್ಮಿಕ ಸಂಘಟನೆಗಾಗಿ ಹಾಗು ಹೋರಾಟಕ್ಕಾಗಿ ಈತ ಮೀಸಲಿಟ್ಟಿದ್ದಾನೆ. ತನ್ನ ಸುತ್ತಲೂ ಹರಡಿದ ಮಾನವ ಕಾರ್ಪಣ್ಯದ ಬಗೆಗೆ ಈತನ ಮನಸ್ಸಿನಲ್ಲಿ ಏಳುತ್ತಿದ್ದ ಆಕ್ರೋಶದ ಭಾವನೆಗಳನ್ನು ವ್ಯಕ್ತಪಡಿಸುವದರ ಮೂಲಕ ಕಾದಂಬರಿಯ ಮೊದಲ ಪುಟ ಪ್ರಾರಂಭವಾಗುತ್ತದೆ. ಜೊತೆಜೊತೆಗೇ ಇವನಿಗೆ ಯಾಮಿನಿ ನೆನಪಾಗುತ್ತಾಳೆ. ಅವಳ ಬಗೆಗಿನ ನೆನಪಿನ ತುಣುಕುಗಳು ಪುಟಿದಂತೆಲ್ಲ, ಆ ಮೂಲಕ ಅವಳ ಸುಸಂಸ್ಕೃತ ವ್ಯಕ್ತಿತ್ವವನ್ನು ಬಲ್ಲಾಳರು ಓದುಗರಿಗೆ ಪರಿಚಯಿಸುತ್ತಾರೆ. ಯಾಮಿನಿ ಹಾಗು ರಾಜೀವರ ಸಾಂಗತ್ಯವನ್ನು good lightನಲ್ಲಿ ತೋರಿಸುವದು ಬಲ್ಲಾಳರ ಉದ್ದೇಶ. ಯಾಕೆಂದರೆ ಭಾರತೀಯ ಕಾದಂಬರಿಗಳಲ್ಲಿ (ಸಿನಿಮಾಗಳಲ್ಲಿ ಕೂಡ) ನಾಯಕ ಹಾಗು ನಾಯಕಿಯರು ಸುಶೀಲರೆಂದು ತೋರಿಸುವದು ಒಂದು ಅನಿವಾರ್ಯತೆಯಾಗಿದೆ.  ಯಾಮಿನಿಯನ್ನು ಸುಸಂಸ್ಕೃತಳು ಹಾಗು ವಿದ್ಯಾವಂತಳು ಎಂದು ತೋರಿಸುವ ಉದ್ದೇಶದಿಂದ ಲೇಖಕರು ಅವಳ ಸಂಸ್ಕೃತ ಭಾಷೆಯ ತಿಳಿವನ್ನು ಹಾಗು ಅವಳು ನಾಟಕಗಳಲ್ಲಿ ಭಾಗವಹಿಸುತ್ತಿದ್ದಳೆಂದು ಬರೆದಿದ್ದಾರೆ. ಇದನ್ನೂ ಕೂಡ ರಾಜೀವನ ಚುಟುಕು ನೆನಪುಗಳ ಮುಖಾಂತರವೇ ತೋರಿಸಿದ್ದರಿಂದ, ನೇರ ನಿರೂಪಣೆಯನ್ನು ತಪ್ಪಿಸಿದಂತಾಗಿದೆ ಹಾಗು ಕಾದಂಬರಿಯನ್ನು compact ಮಾಡಿದಂತಾಗಿದೆ.

ಕಾದಂಬರಿ ಬೆಳೆದಂತೆ, ಅವಳ ಪೂರ್ವೇತಿಹಾಸವು ಅನೇಕ ಝಲಕುಗಳ ಮೂಲಕ ತೆರೆದುಕೊಳ್ಳುತ್ತ ಹೋಗುತ್ತದೆ. ಇದು ಒಂದು ಕುಶಲ ಕಥನ ತಂತ್ರ.  ಯಾಮಿನಿಯ ಅಸಹಾಯಕ ಕೌಟಂಬಿಕ ಪರಿಸ್ಥಿತಿಯನ್ನು ತೋರಿಸುವಲ್ಲಿ ಮತ್ತು ಅವಳ ಹಾಗು ರಾಜೀವನ ನಡುವೆ ಬೆಳೆದ ಆಕರ್ಷಣೆಗೆ ತರ್ಕಬದ್ಧ ಗತಿಯನ್ನು ಕೊಡುವಲ್ಲಿ ಈ ತಂತ್ರವು ಉತ್ತಮ ಸಾಧನವಾಗಿದೆ.

ಇದಕ್ಕೆ ವ್ಯತಿರಿಕ್ತವಾಗಿ ಎರಡನೆಯ ಪ್ರಕರಣದಲ್ಲಿ ಉದ್ದಿಮೆಪತಿ ಸತೀಶನ ಹಾಗು ಅವನ ಕುಟುಂಬದ ಪರಿಚಯವನ್ನು ಲೇಖಕರು ಒಂದೇ ಧಾರೆಯಲ್ಲಿ ಮಾಡಿಬಿಡುತ್ತಾರೆ. ಯಾಕೆಂದರೆ, ಕಾದಂಬರಿಯ ಬೆಳವಣಿಗೆಯಲ್ಲಿ ಸತೀಶನ ಕುಟುಂಬದ ಪಾತ್ರವು ನಗಣ್ಯವಾಗಿದೆ. ಶ್ರೀಮಂತ ಉದ್ಯೋಗಪತಿಯ ಕುಟುಂಬದ ಜೀವನಶೈಲಿಯನ್ನು ತೋರಿಸುವ ಉದ್ದೇಶಕ್ಕೆ ಮಾತ್ರ ಈ ಕುಟುಂಬದ ವರ್ಣನೆ ಅವಶ್ಯವಾಗಿದೆ. ಸತೀಶನ ತಂದೆ ನಾಗೇಶರು ಒಂದು ಔಷಧ ಅಂಗಡಿಯಲ್ಲಿ ಮಾರಾಟದ ಹುಡುಗ ಆಗಿದ್ದವರು.  ಭಾರತವು ಇಬ್ಭಾಗವಾದ ಸಮಯದಲ್ಲಿ ಅಂಗಡಿಯ ಮುಸ್ಲಿಮ್ ಮಾಲಕನು ಈ ಹುಡುಗನಿಗೇ ತನ್ನ ಅಂಗಡಿಯನ್ನು ಕೊಟ್ಟು ಹೋಗಿ ಬಿಡುತ್ತಾನೆ. ನಾಗೇಶರು ತುಂಬ ಶ್ರದ್ಧೆಯಿಂದ ಅಂಗಡಿಯನ್ನು ಬೆಳೆಯಿಸಿ ಶ್ರೀಮಂತರಾಗುತ್ತಾರೆ. ವಯಸ್ಸಾದ ನಂತರ, ದೇವರ ಸ್ಮರಣೆಯಲ್ಲಿ ಮಗ್ನರಾಗಿ ಜೀವನ ಸಾಗಿಸುತ್ತಾರೆ. ಆದರೂ ಸಹ ಕಾಲಕಾಲಕ್ಕೆ ಮಗನಿಗೆ ಸಲಹೆ ಸೂಚನೆ ಕೊಡುವದರಲ್ಲಿ ಹಿಂದೆ ಬೀಳುವದಿಲ್ಲ. ಅವರ ಮಗ ಸತೀಶನಾದರೋ MBA ಪದವೀಧರ. ಈತ ತನ್ನ ತಂದೆಯಂತಲ್ಲ. ಈತನಿಗೆ ವ್ಯಾವಹಾರಿಕ ಜಾಣ್ಮೆಯೇ ಮುಖ್ಯವಾದದ್ದು. ಆಧುನಿಕ ಮಾರ್ಗದಲ್ಲಿ ಮುನ್ನಡೆದ ಈತ ತನ್ನ ಉದ್ದಿಮೆಯನ್ನು ಬೆಳೆಸುತ್ತ, ಅಂತರರಾಷ್ಟ್ರೀಯ ವ್ಯವಹಾರದ ಉದ್ಯೋಗಪತಿಯಾಗಿದ್ದಾನೆ.  ಈತನ ರೂಪವತಿ ಹೆಂಡತಿ ಲಕ್ಷ್ಮಿ ಆಧುನಿಕ ನಾರಿಯಾದರೂ ಸಹ ವಾತ್ಸಲ್ಯಮಯಿ ಗೃಹಿಣಿ. ತನ್ನ ಗಂಡ, ಮಾವ ಹಾಗು ನಾದಿನಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವವಳು. ಇಂತಹ ಹೆಂಡತಿಯಿದ್ದರೂ ಸಹ ಸತೀಶನು, ವಿದೇಶಕ್ಕೆ ಹೋದಂತಹ ಸಮಯದಲ್ಲಿ  ಓರ್ವ ಬಿಳಿ ಹೆಣ್ಣಿನೊಡನೆ ಒಂದು ರಾತ್ರಿಯ ತಾತ್ಕಾಲಿಕ ಸಂಬಂಧವನ್ನು ಬೆಳೆಸುತ್ತಾನೆ. ಕೇವಲ ಒಂದು ಪುಟ್ಟ ಪರಿಚ್ಛೇದಕ್ಕೆ ಸೀಮಿತವಾದ ಈ ತಾತ್ಕಾಲಿಕ ಸಂಬಂಧವನ್ನು ಹೇಳುವ ಮೂಲಕ ಲೇಖಕರು, ಆರ್ಥಿಕವಾಗಿ ಉಚ್ಚ ತರಗತಿಯಲ್ಲಿರುವ ನಮ್ಮ ಆಧುನಿಕ ಉದ್ಯೋಗಪತಿಗಳು ಹಾಗು high society ವ್ಯಕ್ತಿಗಳು ಸದಸದ್ವಿವೇಚನಾ ಪ್ರಜ್ಞೆಯನ್ನು (conscience) ಕಳೆದುಕೊಂಡಿರುವ ಸ್ಥಿತಿಯನ್ನು ಸೂಕ್ಷ್ಮವಾಗಿ ವರ್ಣಿಸಿದ್ದಾರೆ. ಈ ಕುಟುಂಬದ ಕೊನೆಯ ಹಾಗು ಕಿರಿಯ ಸದಸ್ಯೆ ಎಂದರೆ ಸತೀಶನ ತಂಗಿ. ಇವಳು ಕಾ^ಲೇಜಿನಲ್ಲಿ ತತ್ವಜ್ಞಾನವನ್ನು ಓದುತ್ತಿರುವಳು. ತನ್ನ ಕುಟುಂಬದ ಸಂಪತ್ತಿನ ಬಗೆಗೆ ತಿರಸ್ಕಾರ ಉಳ್ಳವಳು. ಇದೆಲ್ಲವನ್ನು ಬಿಟ್ಟು, ಆಶ್ರಮವಾಸಿಯಾಗಲು ಬಯಸುವವಳು. ಆದರೆ ಆಧುನಿಕ ಹುಡುಗಿಯಾದ ಇವಳು ತನ್ನ ಕುಟುಂಬದ ಇತರ ಸದಸ್ಯರ ಎದುರಿಗೇ ಧೂಮಪಾನ ಮಾಡುವಂತಹ ‘ಬಿನ್ ದಾಸ್’ ಧೋರಣೆಯುಳ್ಳವಳು.              
      
ಮುಂಬಯಿಯಲ್ಲಿ ಅನೇಕ ಉದ್ದಿಮೆಗಳಿವೆ. ಈ ಉದ್ದಿಮೆಗಳ ಕಾರ್ಮಿಕ ಸಂಘಗಳೂ ಪ್ರತ್ಯೇಕವಾಗಿವೆ. ಆದರೆ ಇವು ಕೆಲವೊಂದು ಮಹಾಮಂಡಲಗಳಿಗೆ affiliate ಆಗಿರುತ್ತವೆ. ಒಂದು ಉದ್ದಿಮೆಯಲ್ಲಿ ಯಾವ ಯಾವ ಕಾರಣಕ್ಕೆ ಮುಷ್ಕರಗಳು ಪ್ರಾರಂಭವಾಗುತ್ತವೆ, ಈ ಮುಷ್ಕರಗಳನ್ನು ಯಶಸ್ವಿಗೊಳಿಸಲು ಅದರ ಮುಖಂಡರು ಹೇಗೆ ಪ್ರಯತ್ನಿಸುತ್ತಾರೆ, ಅವುಗಳ ಅಪಯಶಸ್ಸಿಗೆ ಉದ್ದಿಮದಾರರು ಹೇಗೆ ಪ್ರಯತ್ನಿಸುತ್ತಾರೆ, ಬೇರೆ ಬೇರೆ ಮಹಾಮಂಡಲಗಳ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಗಳನ್ನು ಮತ್ತು ಅವರ ಮುಷ್ಕರಗಳನ್ನು ಹೇಗೆ ಮುರಿಯುತ್ತಾರೆ; ಲಂಚ, ಹಾದರ, ಕೊಲೆ ಇವುಗಳನ್ನು ಹೇಗೆ ಬಳಸಲಾಗುತ್ತದೆ ಎನ್ನುವದೆಲ್ಲವನ್ನೂ ಬಲ್ಲಾಳರು ತಮ್ಮ ಪಾತ್ರಗಳ ಕತೆಗಳ ಹಿನ್ನೆಲೆಯಲ್ಲಿಯೇ ನಿರೂಪಿಸಿದ್ದಾರೆ. ಈ ರೀತಿಯಾಗಿ ಕಾರ್ಮಿಕ ಸಂಘಟನೆಗಳ ಒಳಹೊರಗನ್ನೆಲ್ಲ ಬಣ್ಣಿಸುವಾಗ ಸಹ ನೇರ ನಿರೂಪಣೆಯನ್ನು ಬಲ್ಲಾಳರು ಬಳಸುವದಿಲ್ಲ. ಕೆಲವೊಂದು ಕಾರ್ಮಿಕರ ಸಂಸಾರ ಚಿತ್ರಗಳನ್ನು brief ಆಗಿ ಕೊಡುತ್ತಲೇ  ಬಲ್ಲಾಳರು ಮುಷ್ಕರದ ಪ್ರಗತಿ ಹಾಗು ದುರ್ಗತಿಗಳನ್ನು ಚಿತ್ರಿಸುತ್ತಾರೆ. ಈ ರೀತಿಯಾಗಿ ಸಮಾಜದ ವಿವಿಧ ಸ್ತರಗಳಲ್ಲಿರುವ ಕುಟುಂಬಗಳ ಚಿತ್ರಗಳನ್ನು ಕೊಡುವ ಬಲ್ಲಾಳರ ಕೌಶಲ್ಯವು ಮೆಚ್ಚುವಂತಹದು.

ಮುಂಬಯಿ ಮಹಾನಗರಿಯಲ್ಲಿ ನಡೆಯುವ ಮುಷ್ಕರಗಳ ಜಾತಕವನ್ನು ತದ್ರೂಪವಾಗಿ ಬಣ್ಣಿಸುತ್ತ ಹೋದರೆ, ‘ಬಂಡಾಯ’ವೆನ್ನುವ ಈ ಕಾದಂಬರಿಯು ಶುಷ್ಕ ಪ್ರಬಂಧವಾಗಿ ಬಿಡುತ್ತಿತ್ತು. ಅದನ್ನು ತಪ್ಪಿಸಲೆಂದೇ, ಬಲ್ಲಾಳರು ಈ ಕಾದಂಬರಿಯಲ್ಲಿ ರಾಜೀವ ಹಾಗು ಯಾಮಿನಿಯರ ಆಕರ್ಷಣೆ ಹಾಗು ಪ್ರೇಮ ಸಂಬಂಧವನ್ನು ಯೋಜಿಸಿದ್ದಾರೆ. ಅದರಂತೆ ಕಾದಂಬರಿಯಲ್ಲಿಯ ಇನ್ನಿತರ ಪಾತ್ರಗಳ ಕೌಟಂಬಿಕ ಸಮಸ್ಯೆಯ ಸುತ್ತಲೂ ಕತೆ ಹೆಣೆಯುತ್ತ ಸಾಗಿದ್ದಾರೆ. ಈ ವಿಧಾನವು ಕನ್ನಡದಲ್ಲಿ ಹೊಸದೇನೂ ಅಲ್ಲ. ಉದಾಹರಣೆಗೆ ಕನ್ನಡದ ಮತ್ತೊಬ್ಬ ಶ್ರೇಷ್ಠ ಕಾದಂಬರಿಕಾರ ನಿರಂಜನರೂ ಸಹ ಇದೇ  ವಿಧಾನವನ್ನು ತಮ್ಮ ಕಾದಂಬರಿಗಳಲ್ಲಿ ಬಳಸಿದ್ದಾರೆ.

ಆದರೆ ಎಲ್ಲ ಭಾರತೀಯ ಲೇಖಕರಂತೆ, ಬಲ್ಲಾಳರೂ ಸಹ ಗಂಡು ಹೆಣ್ಣಿನ ನಡುವಿನ ಆಕರ್ಷಣೆಯನ್ನು ಚಿತ್ರಿಸುವಾಗ conservative ಆಗಿ ಬಿಡುತ್ತಾರೆ. ಅದಾಗ್ಯೂ ಅದ್ಭುತವಾದ ಕಥನ ಕೌಶಲವನ್ನು ಹೊಂದಿದ ಬಲ್ಲಾಳರು ತಮ್ಮ ಉದ್ದೇಶವನ್ನು ಅತ್ಯಂತ ಸಹಜವೆನ್ನುವಂತೆ ಕಥಿಸಿದ್ದಾರೆ. ಅದು ಹೀಗಿದೆ:

ಯಾಮಿನಿ ಹಾಗು ಶ್ರೀಕಾಂತರದು ಮಧ್ಯಮವರ್ಗದ ಸುಖೀ ಕುಟುಂಬ. ಶ್ರೀಕಾಂತನೊಡನೆ ಸುಖಸಂಸಾರವನ್ನು ನಡೆಸುತ್ತಿರುವ ಯಾಮಿನಿಯನ್ನು ರಾಜೀವನ ಸಂಗಾತಿಯನ್ನಾಗಿ ಮಾಡುವ ಬಗೆ ಹೇಗೆ? ಲೇಖಕರ ಈ ಉದ್ದೇಶಪೂರ್ತಿಗಾಗಿಯೇ, ಯಾಮಿನಿಯ ಗಂಡ ಶ್ರೀಕಾಂತನು ಪೋಲಿಯೊ ರೋಗದಿಂದಾಗಿ ನೌಕರಿಯನ್ನು ಕಳೆದುಕೊಂಡು, ಮನೆ ಹಿಡಿದು ಕೂಡಬೇಕಾಗುತ್ತದೆ. ಈಗ ಯಾಮಿನಿಗೆ ನೌಕರಿ ಮಾಡುವದು ಅನಿವಾರ್ಯ. ರೋಗಿಯಾದ ಶ್ರೀಕಾಂತನಿಗೆ ಯಾಮಿನಿಯ ಮೇಲೆ ಸಂಶಯ, ಸೆಡವು ಹಾಗು ಅಸಹಿಷ್ಣುತೆ ಹುಟ್ಟುವದು ಸಹಜ. ಈ ಸಂದರ್ಭವನ್ನು ಸುಶೀಲಳಾದ ಆದರೆ ಸ್ವಾಭಿಮಾನಿಯಾದ ಯಾಮಿನಿಯು ನಿರ್ವಹಿಸುವ ರೀತಿಯನ್ನು ಲೇಖಕರು ಕಾದಂಬರಿಯ ಬೆಳವಣಿಗೆಗಾಗಿ ಉತ್ತಮ ರೀತಿಯಲ್ಲಿ ಬಳಸಿಕೊಂಡಿದ್ದಾರೆ.

ಯಾಮಿನಿಯು ಕೆಲಸ ಮಾಡುತ್ತಿರುವ ಫ್ಯಾಕ್ಟರಿಯಲ್ಲಿ ಮುಷ್ಕರ ನಡೆದಾಗ, ಅವಳೂ ಸಹ ಮುಷ್ಕರದಲ್ಲಿ ಭಾಗವಹಿಸಿರುತ್ತಾಳೆ. ರಾಜೀವನು ಅಲ್ಲಿಯ ನೌಕರರ ಕೋರಿಕೆಯ ಮೇರೆಗೆ ಆ ಮುಷ್ಕರದ ನೇತೃತ್ವವನ್ನು ವಹಿಸಿಕೊಳ್ಳುತ್ತಾನೆ. ರಾಜೀವ ಹಾಗು ಯಾಮಿನಿಯರಿಗೆ ಆ ಕಾರಣದಿಂದ ಪರಿಚಯವಾಗುತ್ತದೆ. ಮುಷ್ಕರದ ಕಾರಣದಿಂದಾಗಿ ಇವರ ಒಡನಾಟ ಹೆಚ್ಚುತ್ತದೆ. ಯಾಮಿನಿ ರಾಜೀವನ ಇತರ ಕಾರ್ಯಕ್ರಮಗಳಲ್ಲೂ ಸಹಭಾಗಿಯಾಗುತ್ತಾಳೆ. ಈ ರೀತಿಯಾಗಿ ಯಾಮಿನಿಯು ರಾಜೀವನ ಮುಂದಾಳುತನದಲ್ಲಿದ್ದ ಕಾರ್ಮಿಕ ಸಂಘಟನೆಯಲ್ಲಿ ಪ್ರಮುಖ ಪಾತ್ರವಾಗುತ್ತಾಳೆ. ಇದರಿಂದಾಗಿ ಅವಳಿಗೆ ತನ್ನ ಗಂಡ, ಪೋಲಿಯೊ ಪೀಡಿತನಾಗಿ ಮನೆ ಹಿಡಿದು ಕೂತಿದ್ದ ಶ್ರೀಕಾಂತನೊಡನೆ ಸಾಕಷ್ಟು ಇರಸು ಮುರಸಾಗುತ್ತದೆ. ಅದೆಲ್ಲವನ್ನೂ ಅವಳು ತಾಳ್ಮೆ ಹಾಗು ಧೈರ್ಯದಿಂದ ಎದುರಿಸುತ್ತಾಳೆ.

ಜಡಿಮಳೆಯ ಒಂದು ರಾತ್ರಿಯಂದು, ಯಾಮಿನಿಗೆ ರಾಜೀವನ ಮನೆಯಲ್ಲಿ ಇರುವದು ಅನಿವಾರ್ಯವಾಗುತ್ತದೆ. ಅವರ ಮಾನಸಿಕ ಮಿಲನವು ಆವೊತ್ತು ಅವರ ದೈಹಿಕ ಮಿಲನದಲ್ಲಿ ಪರಿಣಮಿಸುತ್ತದೆ. ಇಂತಹ compelling circumstances ಇರದೇ ದೈಹಿಕ ಮಿಲನವಾದರೆ, ನಾಯಕ ಹಾಗು ನಾಯಕಿಯರು  ಪಶುತುಲ್ಯ ಕಾಮಜೀವಿಗಳೆಂದು ಓದುಗರು ಭಾವಿಸಿಯಾರು ಎನ್ನುವ ಹೆದರಿಕೆ ಲೇಖಕರಲ್ಲಿದೆ. ಆದರೆ, ಅವರ ದೈಹಿಕ ಮಿಲನವು ಆಗಲೇಬೇಕೆನ್ನುವ ಹಟ ಯಾಕೆ ಲೇಖಕರಿಗೆ? ನಾಯಕ, ನಾಯಕಿಯರಲ್ಲಿ platonic love ಇದ್ದರೆ ಸಾಲದೆ? ಊಂಹೂಂ. ಓದುಗರು ನಾಯಕ ಹಾಗು ನಾಯಕಿಯ ಮಿಲನಕ್ಕಾಗಿ ಕಾತರದಿಂದ ಕಾಯುತ್ತಿರುತ್ತಾರೆ, under acceptable, decent conditions! ಅದಕ್ಕಾಗಿ ಇಷ್ಟೆಲ್ಲಾ ಕಸರತ್ತು. ಬಲ್ಲಾಳರು ಅತ್ಯಂತ ಚಾಣಾಕ್ಷತೆಯಿಂದ ಇದನ್ನು ಸಂಬಾಳಿಸುತ್ತಾರೆ ಎನ್ನುವದು ಅವರಿಗೆ ಸಲ್ಲಬೇಕಾದ credit ಅಗಿದೆ.

ಇತ್ತ ಸತೀಶನ ಉದ್ದಿಮೆಗಳಲ್ಲಿಯೇ ಮುಷ್ಕರ ಪ್ರಾರಂಭವಾಗುತ್ತದೆ. ಈ ಮುಷ್ಕರವನ್ನು ಎಬ್ಬಿಸಿದವನು ದೇಶಪಾಂಡೆ ಎನ್ನುವ ಕಾರ್ಮಿಕ ಮುಂದಾಳು. ಮುಂಬಯಿಯಲ್ಲಿಯ ಎಲ್ಲ ಕಾರ್ಮಿಕ ಸಂಘಟನೆಗಳಿಗೂ ತಾನೇ ನೇತಾರನಾಗಬೇಕು, ಎಲ್ಲೆಲ್ಲಿಯೂ ತನ್ನದೇ ಪ್ರತಿಷ್ಠೆ ಮೆರೆಯಬೇಕು ಎನ್ನುವ ದುರ್ಬುದ್ಧಿ ಈತನದು. ಕಾದಂಬರಿಯಲ್ಲಿ ದೇಶಪಾಂಡೆಯ ಹೆಸರು ಮಾತ್ರ ಬರುತ್ತಲೇ ಇರುತ್ತದೆಯೇ ಹೊರತು, ಆತ ಪ್ರತ್ಯಕ್ಷವಾಗಿ ಎಲ್ಲಿಯೂ ಕಾಣಿಸಿಕೊಳ್ಳುವದಿಲ್ಲ.

ಈ ಪಾತ್ರಗಳಲ್ಲದೆ, ಅನೇಕ ಕಾರ್ಮಿಕ ಪಾತ್ರಗಳು ಈ ಕಾದಂಬರಿಯಲ್ಲಿ ಬಂದು ಹೋಗುತ್ತವೆ. ಮುಂಬಯಿಯ ಕೊಳೆಗೇರಿಗಳಲ್ಲಿ ಕನಿಷ್ಠ ಸೌಲಭ್ಯಗಳೂ ಇಲ್ಲದೆ ಈ ಕಾರ್ಮಿಕರು ಪಶುಗಳಂತೆ ಬದುಕುವ ಪರಿಯನ್ನು ಬಲ್ಲಾಳರು ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಕೇವಲ ಒಂದೇ ಪುಟದ ಪಾತ್ರಗಳಾದರೂ ಸಹ ಬಲ್ಲಾಳರು ಆ ಪಾತ್ರಗಳಲ್ಲಿ ಓದುಗನಿಗೆ ಮಾನವೀಯ ಆಸಕ್ತಿ ಹುಟ್ಟುವಂತಹ ಚಿತ್ರಣ ನೀಡಿದ್ದಾರೆ. ಉದಾಹರಣೆಗೆ ರಘು ಪಾಟಸ್ಕರನ ಪಾತ್ರವನ್ನು ತೆಗೆದುಕೊಳ್ಳಬಹುದು. ಈತ ಸತೀಶನ ತಂದೆ ನಾಗೇಶರ ಬಲಗೈ ಬಂಟ. ಸತೀಶನ ಉದ್ದಿಮೆಗಳಲ್ಲಿಯ ಕಾರ್ಮಿಕರ ಮೇಲೆ ನಿಗಾ ಇಡುವದು ಇವನ ಕೆಲಸ. ಇಂತಹ ಸಣ್ಣ ಪಾತ್ರದ ಕುಟುಂಬಕ್ಕೂ  ಬಲ್ಲಾಳರು ಇಲ್ಲಿ ಔಚಿತ್ಯಪೂರ್ಣ ಸ್ಥಳಾವಕಾಶ ನೀಡಿದ್ದಾರೆ. ಯಾವಾಗಲೂ ಕುಟುಂಬದವರ ದೇಖರೇಖಿಯಲ್ಲಿ ಮಗ್ನಳಾದ ಆತನ ಹೆಂಡತಿ, ಸಂಗೀತ ಕಲಿಯುತ್ತಿರುವ ಆತನ ಮಗಳು, ತುಂಟಾಟದ ಆತನ ಮಗ, ಪಾಟಸ್ಕರನೊಟ್ಟಿಗೆ ಇರುವ ಆತನ ಮುದಿ ತಂದೆ, ತಾಯಿ ಇವರೆಲ್ಲರ ಚಿತ್ರವನ್ನು ಬಲ್ಲಾಳರು ಸಾಂದರ್ಭಿಕವಾಗಿ ಕೇವಲ ಎರಡೇ ಪುಟಗಳಲ್ಲಿ ನೀಡುತ್ತಾರೆ. ಆದರೆ, ಇಷ್ಟೇ ಸಾಕು ಕಾದಂಬರಿಯಲ್ಲಿ ಮಾನವೀಯ ಆಸಕ್ತಿಯನ್ನು ಹುಟ್ಟಿಸಲು. ಇದರಂತೆಯೇ ಕೊಲೆಯಾದ ಕಾರ್ಮಿಕ ತಿವಾರಿಯ ಹೆಂಡತಿಯು ಉದ್ದಿಮೆಯ ಕಚೇರಿಗೆ ಬಂದಾಗ, ಅವಳ ಬತ್ತಲೆ ಬೆನ್ನಿನ ಕಡೆಗೆ ಹರಿಯುವ ಸತೀಶನ ಲಕ್ಷವನ್ನು ವರ್ಣಿಸುವ ಮೂಲಕ, ಮಾನವಸಂವೇದನೆ ಇಲ್ಲದ ವ್ಯಕ್ತಿಗಳ ಮನಸ್ಸನ್ನು ಬಲ್ಲಾಳರು ಅನಾವರಣಗೊಳಿಸುತ್ತಾರೆ. 

            ಮುಂಬಯಿ ನಗರದ ಪೋಲೀಸ ಮುಖ್ಯಸ್ಥನ ಜೊತೆಗೆ ಸತೀಶನದು ಏಕವಚನದ ಗೆಳೆತನ. ಆಗಾಗ ಗುಂಡು ಪಾರ್ಟಿಗಳ ಮೂಲಕ ಇವರ ಸಖ್ಯವೃದ್ಧಿ. ಇವರೀರ್ವರಿಗೆ ಪರಸ್ಪರ ಹೆಂಡಿರನ್ನೂ ಸಹ ಏಕವಚನದಲ್ಲಿಯೇ ಕರೆಯುವ ಸಲುಗೆ. High Societyಯ ಬೆಡಗು, ಬಿನ್ನಾಣಗಳನ್ನೆಲ್ಲ ಇಲ್ಲಿ ಕಾಣಬಹುದು. ಇಷ್ಟಿದ್ದರೂ ಸಹ ಸತೀಶನ ಉದ್ದಿಮೆಯ ಕಾರ್ಮಿಕನೊಬ್ಬನ ಕೊಲೆಯ ಶೋಧನೆಗಾಗಲೀ, ಮುಷ್ಕರ ನಡೆದಾಗ ಕೆಲಸ ಮಾಡಬಯಸುವ ನಿಷ್ಠ ಕಾರ್ಮಿಕರಿಗೆ ರಕ್ಷಣೆ ಕೊಡುವದಕ್ಕಾಗಲೀ ಈ ಪೋಲೀಸ ಅಧಿಕಾರಿ ತನ್ನ ಮಿತಿ ಬಿಟ್ಟು ಹೊರ ಬರಲಾರ. ಇದು ಅಲ್ಲಿಯ ಕಠೋರ ಸತ್ಯ!

ಈ ಎಲ್ಲ ಕುಟುಂಬಗಳ ಸುಖ ದುಃಖಗಳನ್ನು ವರ್ಣಿಸುತ್ತಲೇ, ಬಲ್ಲಾಳರು ಮುಂಬಯಿಯಲ್ಲಿ ಮುಷ್ಕರ ಹುಟ್ಟುವ ಅಥವಾ ಮುಷ್ಕರವನ್ನು ಹುಟ್ಟಿಸುವ ಬಗೆ,  ಕಾರ್ಮಿಕರ ಗೋಳು, ಕಾರ್ಮಿಕ ಸಂಘಗಳ ಮುಂದಾಳುಗಳ ಅಟ್ಟಹಾಸ, ಉದ್ಯಮಪತಿಗಳ ಸಂವೇದನಾರಾಹಿತ್ಯ ಇವೆಲ್ಲವನ್ನೂ  ತೆರೆಯುತ್ತಲೇ ಹೋಗುತ್ತಾರೆ. ಸತೀಶನ ಕುಟುಂಬದ ಕತೆಯಂತೆ ಕಾಣುವ ಈ ಕಾದಂಬರಿ, ರಾಜೀವ, ಯಾಮಿನಿಯರ ಆಕರ್ಷಣೆಯ ಕತೆಯಂತೆ ಕಾಣುವ ಈ ಕಾದಂಬರಿ ನಿಜಕ್ಕೂ  ಮುಷ್ಕರಗಳ ಒಳಹೊರಗನ್ನು ಚಿತ್ರಿಸುವ ಕಾದಂಬರಿಯಾಗಿದೆ.

ಕಾದಂಬರಿಯ ಕೊನೆಯಲ್ಲಿ, ರಾಜೀವನಿಗೆ ಈ ರೀತಿಯ ಮುಷ್ಕರಗಳಿಂದ ಕಾರ್ಮಿಕರ ಹಿತ ಸಾಧಿಸಲು ಶಕ್ಯವಿಲ್ಲ ಎನ್ನುವ ಅರಿವು ಹುಟ್ಟುತ್ತದೆ. ಈ ಮಾರ್ಗವನ್ನು ಬಿಟ್ಟು, ತನ್ನ ಮೊದಲಿನ ಮಾರ್ಗಕ್ಕೆ ಮರಳಲು ಆತ ಒಮ್ಮೆಲೆ ಕಣ್ಮರೆಯಾಗುತ್ತಾನೆ. ರಾಜೀವನ ಮೊದಲಿನ ಮಾರ್ಗವು ಯಾವುದು ಎನ್ನುವದಕ್ಕೆ ಕಾದಂಬರಿಯಲ್ಲಿ ಸಾಕಷ್ತು ಸುಳಿವುಗಳಿವೆ.  ರಾಜೀವನ ಬದಲಾಗಿ ಯಾಮಿನಿಯು ಕಾರ್ಮಿಕ ಸಂಘದ ಮುಂದಾಳಾಗಿ ಮುಂದುವರೆಯುತ್ತಾಳೆ.

ಭಾರತದಲ್ಲಿಯ ಶೋಷಕ ಹಾಗು ಶೋಷಿತರ ಸಮಸ್ಯೆಯು ಉದ್ಯೋಗಪತಿಗಳಿಗೆ ಹಾಗು ನಗರಕಾರ್ಮಿಕರಿಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಗಾಡಿನಲ್ಲಿ ಇದು ಜಮೀನುದಾರರ ಹಾಗು ರೈತಶ್ರಮಿಕರ ಸಮಸ್ಯೆಯಾಗಿದೆ. In fact ಭಾರತೀಯ ಬದುಕಿನ ವ್ಯವಸ್ಥೆಯೇ ಒಂದು ಶ್ರೇಣೀಕೃತ ಶೋಷಣಾವ್ಯವಸ್ಥೆಯಾಗಿದೆ. ಇದಕ್ಕೆ ಪರಿಹಾರವೆಲ್ಲಿದೆ? ನಕ್ಸಲರು ನಂಬುವಂತೆ, ಬಂದೂಕಿನ ನಳಿಕೆಯ ಮುಖಾಂತರವೇ ಬದಲಾವಣೆ ಸಾಧ್ಯವೆ? ಕಾದಂಬರಿಯ ಕೊನೆಯಲ್ಲಿ ರಾಜೀವನಲ್ಲಿಯ ಮರುಚಿಂತನೆ ಈ ವಿಚಾರವನ್ನು ಓದುಗರ ಎದುರಿಗೆ ಇಡುತ್ತದೆ. ಇದರರ್ಥ ಬಲ್ಲಾಳರು ಈ ಅಭಿಪ್ರಾಯವನ್ನು endorse ಮಾಡುತ್ತಾರಂತಲ್ಲ.  ಆದರೆ ನಮ್ಮಲ್ಲಿಯ ನಕ್ಸಲೀಯ ಚಿಂತನೆಯ ಉಗಮವನ್ನು ತೋರಿಸುತ್ತಾರೆ, ಅಷ್ಟೆ.

ಬಲ್ಲಾಳರು ಮುಂಬಯಿಯ ಕನ್ನಡ ಭಾಷೆಯನ್ನು ಹಾಗು ಅಲ್ಲಲ್ಲಿ ಮರಾಠಿಯನ್ನು ಬಳಸುವ ಮೂಲಕ ಕಾದಂಬರಿಗೆ ಒಂದು ಪ್ರಾದೇಶಿಕತೆಯನ್ನು ಕೊಡಲು ಸಮರ್ಥರಾಗಿದ್ದಾರೆ. ಕತೆಯ ಬೆಳವಣಿಗೆಯನ್ನು ಅತ್ಯಂತ ಕ್ಷಿಪ್ರವಾಗಿ ಮಾಡುತ್ತ, ಓದುಗನಲ್ಲಿ ಕುತೂಹಲವನ್ನು ಮೂಡಿಸವಲ್ಲಿ ಬಲ್ಲಾಳರು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ, ಕಾದಂಬರಿಯು ಔದ್ಯೋಗಿಕ ಜಗತ್ತಿನ ಶೋಷಣೆಯ ಅನಾವರಣವೆನಿಸದೆ, ಕಾದಂಬರಿಯಲ್ಲಿ ಬರುವ ಪಾತ್ರಗಳ ವೈಯಕ್ತಿಕ ಕತೆ ಎನಿಸುವಂತೆ ಬಲ್ಲಾಳರು ಬರೆದಿದ್ದಾರೆ. ಹೀಗಾಗಿ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಕಾದಂಬರಿಯು ಆಸಕ್ತಿಪೂರ್ಣವಾಗಿದೆ. ಇಷ್ಟೆಲ್ಲ ಧನಾತ್ಮಕ ಅಂಶಗಳಿದ್ದ ಈ ಕಾದಂಬರಿಯಲ್ಲಿ ಒಂದು ಚಿಕ್ಕ ದೋಷವೂ ಇದೆ.

ಕಾದಂಬರಿಯಲ್ಲಿ ಬರುವ ಪಾತ್ರಗಳು ನೈಜವೆನ್ನಿಸಬೇಕೇ ಹೊರತು, ಕಾದಂಬರಿಕಾರನ ಉದ್ದೇಶಪೂರ್ತಿಗಾಗಿ
ನಿರ್ಮಿತವಾದ robotಗಳಾಗಬಾರದು. ‘ಬಂಡಾಯ’ ಕಾದಂಬರಿಯಲ್ಲಿ ಎಲ್ಲ ಪಾತ್ರಗಳೂ ಲೇಖಕರ ಉದ್ದೇಶದ ಮಿತಿಗೆ ಕಟ್ಟುಬಿದ್ದಂತೆ ಓದುಗನಿಗೆ ಭಾಸವಾಗುವದು ಈ ಕಾದಂಬರಿಯ ಒಂದು ಚಿಕ್ಕ ದೋಷವೆನ್ನಬಹುದು. ಆದರೆ ಚಂದ್ರನ ಚೆಲುವಿನಲ್ಲಿ, ಅವನ ಕಪ್ಪು ಕಲೆಯು ಮುಚ್ಚಿ ಹೋಗುವಂತೆ, ಕಾದಂಬರಿಯ ಧನಾತ್ಮಕ ಅಂಶಗಳ ಎದುರಿಗೆ, ಈ ದೋಷವು ಮುಚ್ಚಿ ಹೋಗುತ್ತದೆ.

57 comments:

  1. ನಮಸ್ಕಾರ ಕಾಕಾರಿಗೆ...
    ನಾನಿದೇ ಮೊದಲು ನಿಮ್ಮ ’ಸಲ್ಲಾಪ’ಕ್ಕೆ ಬಂದೆ. ಅತ್ಯಂತ ಪ್ರಭಾವಿತಳಾದೆ..... ವ್ಯಾಸರಾಯ ಬಲ್ಲಾಳರ ಕಾದಂಬರಿಯನ್ನು ವಿಶ್ಲೇಷಿಸಿರುವ ರೀತಿ ಅದ್ಭುತವಾಗಿದೆ.., ಒಮ್ಮೆ ಬಂದೆನಲ್ಲಾ... ಇನ್ನು ಮತ್ತೆ ಮತ್ತೆ ನನ್ನ ಭೇಟಿ ಇಲ್ಲಿಗೆ ಕಾಯಂ...

    ReplyDelete
  2. ಕಾಕಾ,
    ವ್ಯಾಸರಾಯ ಬಲ್ಲಾಳರ ಬ೦ಡಾಯ ಕಾದ೦ಬರಿಯ ಪೂರ್ಣ ಪಾತ್ರ ಪರಿಚಯದೊಡನೆ ಒಳ್ಳೆಯ ವಿಮರ್ಶೆ ಮಾಡಿ ಕಾದ೦ಬರಿಯ ತಿರುಳನ್ನು ತಿಳಿಸಿದ್ದೀರಿ.ನನಗೆ ಸಾಹಿತ್ಯದ ಬಗ್ಗೆ ಅಷ್ಟೇನು ತಿಳುವಳಿಕೆ ಇಲ್ಲ.ಕೆಲವಾರು ಪುಸ್ತಕಗಳನ್ನು ಓದಿದ್ದೆ ಅಷ್ಟೆ. ನಿಮ್ಮ ಬರಹಗಳನ್ನು ಓದಲು ಪ್ರಾರ೦ಭಿಸಿದ ಮೇಲೆ ಸಾಹಿತ್ಯದ ಮೇಲೆ ಹೆಚ್ಚಿನ ಆಸಕ್ತಿ ಬ೦ದಿದೆ.
    ತು೦ಬಾ ಧನ್ಯವಾದಗಳು..ಕಾಕಾ.

    ReplyDelete
  3. ನನಗಾಗ ೧೮, ಮೂರು ದಿನಗಳಲ್ಲಿ ಚಿತ್ತಾಲರ ‘ಶಿಕಾರಿ‘, ಮತ್ತ್ತು ಬಲ್ಲಾಳರ ‘ಬಂಡಾಯ‘ ಓದಿ ಮುಗಿಸಿದ್ದೆ. ಅವೆರಡು ಕಾದಂಬರಿಗಳನ್ನು ಒಟ್ಟಿಗೆ ಒಂದಾದ ಮೇಲೊಂದರಂತೆ ಓದಿದ್ದು, ಎರಡೂ ಕಾದಂಬರಿಗಳು ಮುಂಬೈನಲ್ಲಿ ಜರುಗುವುದು..ಇತ್ಯಾದಿ ಸೇರಿ ನನ್ನನ್ನು ಒಂದೆರೆಡು ತಿಂಗಳು ತಲೆ ಕೆಡಿಸಿದ್ದವು. ಬಂಡಾಯವನ್ನು ಮತ್ತೆ ನೆನಪಿಸಿದ್ದಕ್ಕೆ ತುಂಬ ಧನ್ಯವಾದಗಳು.

    ReplyDelete
  4. ಸುನಾಥ್ ಸರ್,

    ವ್ಯಾಸರಾಯ ಬಲ್ಲಾಳರ "ಬಂಡಾಯ"ದ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದನ್ನು ಓದಿರಲಿಲ್ಲ. ನೀವು ಅದನ್ನು ತುಂಬಾ ಚೆನ್ನಾಗಿ ವಿಶ್ಲೇಷಿಸಿರುವುದನ್ನು ನೋಡಿದರೆ ಒಮ್ಮೆ ಓದಬೇಕೆನಿಸುತ್ತದೆ. ಹಾಗೆ ಕುಲಕರ್ಣಿ ಸರ್ ಹೇಳಿದಂತೆ ಯಶವಂತ ಚಿತ್ತಾಳರ ಶಿಕಾರಿಯನ್ನು ಓದಬೇಕಾಗಿದೆ...ಬಿಡುವು ಮಾಡಿಕೊಂಡು ಓದುತ್ತೇನೆ. ಹೀಗೆ ನಿಮ್ಮದೇ ಶೈಲಿಯಲ್ಲಿ ವಿಶ್ಲೇಷಣೆಯ ಮೂಲಕ ಉತ್ತಮ ಕಾದಂಬರಿ, ಕತೆಗಳನ್ನು ಪರಿಚಯಿಸುತ್ತಿರಿ...

    ಧನ್ಯವಾದಗಳು.

    ReplyDelete
  5. ಕಾಕಾ,

    ತುಂಬಾ ಚೆನ್ನಾಗಿ ವಿಮರ್ಶಿಸಿದ್ದೀರ. ಇನ್ನೂ ಈ ಕಾದಂಬರಿ ಓದಿಲ್ಲ ನಾನು. ನಿಮ್ಮ ವಿಮರ್ಶೆಯನ್ನು ಓದಿದಮೇಲೆ ಓದಲೇಬೇಕೆನಿಸಿದೆ. ಖಂಡಿತ ಓದುವೆ. ಅಂತೆಯೇ ಚಿತ್ತಾಲರ ಶಿಕಾರಿಯನ್ನೂ ಓದಬೇಕಾಗಿದೆ. ಚಿತ್ತಾಲರ "ಸಿದ್ಧಾರ್ಥ" ಕಾದಂಬರಿಯೂ ಬಹು ಚೆನ್ನಾಗಿದೆ. ಓದಿರುವಿರಾ?

    ReplyDelete
  6. ಶ್ಯಾಮಲಾ ಅವರೆ,
    ನಿಮಗೆ ಸುಸ್ವಾಗತ. ಸಲ್ಲಾಪಕ್ಕೆ ಯಾವಾಗಲೂ ಬರುತ್ತಲೇ ಇರಿ. ‘ಸಮಾನಶೀಲೇಷು ವ್ಯಸನೇಷು ಸಖ್ಯಮ್’, ಅಲ್ಲವೆ?

    ReplyDelete
  7. ಮನಮುಕ್ತಾ,
    ಸಾಹಿತ್ಯದ ಪೂರ್ಣ ತಿಳಿವಳಿಕೆ ಇದೆ ಎಂದು ಹೇಳುವ ಧೈರ್ಯ ನಮ್ಮಲ್ಲಿ ಯಾರಿಗಾದರೂ ಇರಲು ಸಾಧ್ಯವೆ? ಈ ರೀತಿ ಪರಸ್ಪರ
    ಮಾಹಿತಿ ಹಂಚಿಕೊಳ್ಳುತ್ತ ಸಾಗಲು ಮಾತ್ರ ಆದೀತು.

    ReplyDelete
  8. ಕೇಶವ,
    ‘ಶಿಕಾರಿ’ಯು ಯಶವಂತ ಚಿತ್ತಾಳರ ಸುಪರ್ ಕಾದಂಬರಿ.
    ಶಿಕಾರಿ ಹಾಗು ಬಂಡಾಯ ಕಾದಂಬರಿಗಳನ್ನು ನೀವು ಒಟ್ಟಾಗಿ ಓದಿದಾಗ, ವಸ್ತುಸಾಮ್ಯ ನಿಮ್ಮ ಮೇಲೆ ಪ್ರಭಾವ ಬೀರದೆ ಇರಲಾರದು! ನಿಮ್ಮ ಸಾಹಿತ್ಯಕ ನೆನಪನ್ನು ಮರುಕಳಿಸಿದ ಕೃತಾರ್ಥತೆ ನನಗೆ ಸಂದಿದಂತಾಯ್ತು.

    ReplyDelete
  9. ಶಿವು,
    ವ್ಯಾಸರಾಯ ಬಲ್ಲಾಳರು ಅನೇಕ ಒಳ್ಳೆಯ ಕಾದಂಬರಿಗಳನ್ನು ಬರೆದಿದ್ದಾರೆ. ಉದಾ: ವಾತ್ಸಲ್ಯಪಥ, ಹೆಜ್ಜೆ, ಬಂಡಾಯ ಇ.
    ಅವರ ಕಾದಂಬರಿಗಳು ಓದುಗನಿಗೆ ಖುಶಿ ನೀಡುತ್ತವೆ. ದಯವಿಟ್ಟು ಓದಿರಿ.

    ReplyDelete
  10. ತೇಜಸ್ವಿನಿ,
    ಚಿತ್ತಾಳರ ‘ಶಿಕಾರಿ’ ಸಹ ಉತ್ತಮ ಕಾದಂಬರಿ. ಈ ಎರಡೂ ಕಾದಂಬರಿಗಳನ್ನು ನೀವು ಓದಿರಿ. ಚಿತ್ತಾಳರ ‘ಸಿದ್ಧಾರ್ಥ’ ಕಾದಂಬರಿಯನ್ನು ನಾನು ಓದಿಲ್ಲ. ಓದುವೆ.

    ReplyDelete
  11. ಸ್ವಾಮೀ ಸುನಾಥರೇ, ವ್ಯಾಸರಾಯ ಬಲ್ಲಾಳರು ಕನ್ನಡದ ಕಟ್ಟಾಳುಗಳಲ್ಲಿ ಒಬ್ಬರು, ಹೆಚ್ಚಿನ ಕಾದಂಬರಿಗಳನ್ನು ಓದಲು ಸಮಯದಿಂದ ಅವಕಾಶ ವಂಚಿತನಾದ ನನಗೆ ಅವರ ಕೆಲವು ಕೃತಿಗಳ ನನಪು ಸದಾ ಜೊತೆಗಿದೆ, ನಿಮ್ಮ ವಿಮರ್ಶೆಯನ್ನೂ ಸೇರಿಸಿದಾಗ ಒಳ್ಳೆಯ ರಸಪಾಕ-ಹೋಳಿಗೆಗೆ ಸಕ್ಕರೆಪಾಕದಂತೆ ಅನ್ನಿಸಿತು, ಬೇರೆ ಶಬ್ಧಗಳು ಬೇಕೇ? ತಮ್ಮ ಭಂಡಾರದಿಂದ ಹಲವು ವಿಮರ್ಶೆಗಳು ಹೊರಡಲಿ ಎಂದು ಹಾರೈಸುತ್ತೇನೆ,ಧನ್ಯವಾದಗಳು

    ReplyDelete
  12. ಶ್ರೀ ಭಟ್ಟರೆ,
    ತಮಗೆ ಧನ್ಯವಾದಗಳು. ಚಿತ್ತಾಳ ಮತ್ತು ಬಲ್ಲಾಳ ಇಂತಹ ಕಟ್ಟಾಳುಗಳಿಂದಲೇ ಮುಂಬಯಿಯಲ್ಲಿ ಕನ್ನಡ ನೆಲೆಗೊಂಡಿತು ಎನ್ನಬಹುದು.

    ReplyDelete
  13. ಸುನಾಥ್ ಸರ್,
    ಬಂಡಾಯ ಕಾದಂಬರಿ ತುಂಬಾ ಹಿಂದೆ ಓದಿದ್ದೆ........ ಆದರೆ ಅಷ್ಟು ಸರಿಯಾಗಿ ನೆನಪಿರಲಿಲ್ಲ..... ನಿಮ್ಮ ಬರಹ ಓದಿ ಮತ್ತೆಲ್ಲಾ ನೆನಪಾದವು......... ತುಂಬಾ ಧನ್ಯವಾದ, ನಿಮ್ಮ ಬ್ಲಾಗ್ ಓದುತ್ತಿದ್ದರೆ ಅರ್ಧ ಕನ್ನಡ ಲೋಕ ಓದಿದ ಹಾಗೆ.....
    ಹೊಸ ಕಥೆ ಬರೆದಿದ್ದೇನೆ... ಯಾಕೋ ನಿಮಗ್ಯಾರಿಗೂ ಅಪ್ಡೇಟ್ ಆಗ್ತಾ ಇಲ್ಲ.... ಬಂದು ಓದಿ ಸರ್.....

    ReplyDelete
  14. ದಿನಕರ,
    ‘ಬಂಡಾಯ’ವು ಒಂದು ಸ್ವಾರಸ್ಯಪೂರ್ಣ ಕಾದಂಬರಿ.
    ನಿಮ್ಮ ಲೇಖನ reader-googleದಲ್ಲಿ update ಆಗಿರಲಿಲ್ಲ. ನಿಮ್ಮ ಸೂಚನೆಯಂತೆ ನಿಮ್ಮ ತಾಣಕ್ಕೆ ತೆರಳಿ ನೋಡಿದೆ. ತುಂಬ ಕುತೂಹಲಕರ ಕತೆಯನ್ನು ಬರೆದಿರುವಿರಿ.

    ReplyDelete
  15. ವ್ಯಾಸರಾಯ ಬಲ್ಲಾಳರ " ಬಡಾಯ"ದ ಅಮೂಲಾಗ್ರ ವಿಶ್ಲೇಷಣೆ ಸ್ತುಲ ಕಥಾಪರಿಚಯದೊ೦ದಿಗೆ ಉತ್ತಮವಾಗಿ ಮೂಡಿ ಬ೦ದಿದೆ. ಮಿತ್ರನ ಗ್ರ೦ಥಾಲಯದಿ೦ದ ತ೦ದು ಓದುವಾಗ, ಪುಸ್ತಕದ ಗಾತ್ರ ನೋಡಿ ಓದದೇ ಬಿಟ್ಟಿದ್ದೆ ಅಮೇಲೆ ಅದರ ಬಗ್ಗೆ ತಿಳಿದು ಓದಬೇಕು ಎ೦ದುಕೊ೦ಡದ್ದು ಹಾಗೇ ಮಾಸಿಹೋಗಿತ್ತು. ಈಗ ನಿಮ್ಮ ಲೇಖನ ಓದಿದ ಮೇಲೆ ಸ೦ಕಲ್ಪಿಸಬೇಕಾಗಿದೆ. ಚೆ೦ದದ ಲೇಖನ ಬರೆದ ತಮಗೆ ವ೦ದನೆಗಳು. ಕೇಶವರೂ ಪ್ರಸ್ತಾವಿಸಿದ ಯಶವ೦ತ ಚಿತ್ತಾಲರ "ಶಿಕಾರಿ" ಯ ನಾಗಪ್ಪನ ಪಾತ್ರ ನಮ್ಮ ಮನದಲ್ಲಿ ಆಚ್ಚಳಿಯದೇ ನಿ೦ತಿದೆ. ಇ೦ದಿನ ಕಾರ್ಪೊರೇಟ್ ಸ೦ಸ್ಥೆಗಳ ಒಳ ರಾಜಕೀಯಗಳ ಸ್ವಾರ್ಥಗಳ ಸೂಕ್ತ ಚಿತ್ರಣದ ದಾಖಲೆ. ಚಿತ್ತಾಲರ "ಛೇಧ" ಮತ್ತು "ಮೂರು ದಾರಿಗಳು" ಅಪೂರ್ವ ಕೃತಿಗಳು.

    ReplyDelete
  16. ಸೀತಾರಾಮರೆ,
    ವ್ಯಾಸರಾಯ ಬಲ್ಲಾಳರ ಮತ್ತು ಯಶವಂತ ಚಿತ್ತಾಳರ ಕಾದಂಬರಿಗಳು ಓದುಗನನ್ನು ಸೆರೆ ಹಿಡಿಯುವ ಗುಣ ಹೊಂದಿವೆ. ಇವರ ಸಾಹಿತ್ಯವನ್ನು ಯಾವುದೇ ಸಮಯದಲ್ಲಾದರೂ ಓದಿ ಸಂತೋಷಿಸಬಹುದು.

    ReplyDelete
  17. ಬಲ್ಲಾಳರ ಬ೦ಡಾಯ ಕಾದ೦ಬರಿ ಹಿ೦ದೆ ಓದಿದ್ದೆ, ಆದರೆ ನಿಮ್ಮ ಸಶಕ್ತ ವಿಮರ್ಶೆ ಓದಿದ ನ೦ತರ ಇನ್ನೊಮೆ ಓದಬೇಕೆನಿಸಿದೆ. ಅಷ್ಟು ಸಮರ್ಥವಾಗಿ ನೀವು ಕಾದ೦ಬರಿಯ ಗುಣಲಕ್ಷಣ ಗಳನ್ನು ಲೇಖನದಲ್ಲಿ ಹಿಡಿದಿಟ್ಟಿದ್ದೀರಿ.

    ReplyDelete
  18. ಕಾಕಾಶ್ರೀ,
    ಬಲ್ಲಾಳರ ಕಾದಂಬರಿಗಳ ವಿಶೇಷತೆಗಳನ್ನು ಕೇಳಿದ್ದೇನೆಷ್ಟೆ, ಯಾವುದೂ ಓದಿಲ್ಲ. ಇತ್ತೀಚೆಗೆ ಅವರ "ಹೆಜ್ಜೆ" ಕಾದಂಬರಿ ಸಿನಮಾ ಕೂಡಾ ಆಗಲಿದೆ ಎಂದು ಓದಿದ್ದೇನೆ. ಅವರ , ಒಂದು ಕಾದಂಬರಿಯ ಪರಿಚಯ , ಪಾತ್ರಗಳು ಮತ್ತು ಅದರಲ್ಲಿರುವ ಸಾಮಜಿಕ ನ್ಯಾಯಾನ್ಯಾಯಗಳ ವಸ್ತುಸ್ಥಿತಿಯನ್ನು ಬಹು ಸೊಗಸಾಗಿ ತಿಳಿಸಿಕೊಟ್ಟಿರುವಿರಿ. ಓದುವ ಮನಸು ಹುಟ್ಟಿದೆ.

    ReplyDelete
  19. sunaath,
    ಉತ್ತಮ ವಿಶ್ಲೇಷಣೆ..

    ನಿಮ್ಮ ನಿರೀಕ್ಷೆಯಲ್ಲಿ..: http://manasinamane.blogspot.com/

    ReplyDelete
  20. ಪರಾಂಜಪೆಯವರೆ,
    ಮತ್ತೊಮ್ಮೆ ಮತ್ತೊಮ್ಮೆ ಓದಬಹುದಾದ ಕಾದಂಬರಿ: ಬಂಡಾಯ.

    ReplyDelete
  21. ಪುತ್ತರ್,
    ಬಲ್ಲಾಳರ ಕಾದಂಬರಿಗಳಲ್ಲಿ ಆದರ್ಶ ಹಾಗು ವಾಸ್ತವತೆ ಎರಡೂ ಸೇರಿರುತ್ತವೆ. ಓದಬೇಕಾದ ಕೃತಿಗಳನ್ನು ಬಲ್ಲಾಳರು ಕೊಟ್ಟಿದ್ದಾರೆ.

    ReplyDelete
  22. ಗುರು-ದೆಸೆ,
    ನಿಮಗೆ ಸ್ವಾಗತ. ನಿಮ್ಮ ಬ್ಲಾ^ಗಿನಲ್ಲಿಯ ಇತ್ತೀಚಿನ ಕವನ ನೋಡಿದೆ. ತುಂಬ ಸೊಗಸಾಗಿದೆ.

    ReplyDelete
  23. ವ್ಯಾಸ ರಾಯ್ ಬಲ್ಲಾಳರ ಕಾದಂಬರಿಯನ್ನು ಅದ್ಭುತವಾಗಿ ತಿಳಿಸಿದ್ದಿರಿ ಸರ್
    ತುಂಬಾ ಇಷ್ಟವಾಯಿತು ನಿಮ್ಮ ಬರಹದ ಶೈಲಿ

    ReplyDelete
  24. ಗುರುಮೂರ್ತಿಯವರೆ,
    ಧನ್ಯವಾದಗಳು.

    ReplyDelete
  25. ಪ್ರಿಯ ಸುನಾಥ,

    ಓದಿ ತುಂಬ ಖುಶಿಯಾಯಿತು.
    ನನಗೆ ಬಹಳ ಇಷ್ಟವಾದ ಕಾದಂಬರಿಗಳಲ್ಲಿ ಇದೊಂದು.
    ನಾನೂ ಸಹ ಹೆಚ್ಚು ಕಮ್ಮಿ ೧೭-೧೮ ಇದ್ದಾಗ ಈ ಕಾದಂಬರಿಯನ್ನ, ಶಿಕಾರಿ ಓದಿದ ಕೂಡಲೆ ಓದಿಬಿಟ್ಟು ಒಂದಷ್ಟು ದಿನ ತಲೆಯಲ್ಲಿ ಮುಂಬೈ,ಶಹರು,ಆಫೀಸ್ ಪೊಲಿಟಿಕ್ಸ್ ಇವೇ ತುಂಬಿಕೊಂಡುಬಿಟ್ಟಿತ್ತು. ಇವಕ್ಕೆಲ್ಲ ನಾಂದೀಸ್ವರೂಪವಾಗಿ ಶಾಂತಿನಾಥ ದೇಸಾಯರ "ಮುಕ್ತಿ"! (ನನ್ನವನು ಈ ಕಾದಂಬರಿಯನ್ನ ಕರೆಯುವುದೇ 'ಎ ನೊವೆಲ್ ನಾವೆಲ್’ ಅಂತ)

    ನಿಮಗೆ ಸಮಯವಿದ್ದಾಗ "ಮುಕ್ತಿ"ಯ ಕುರಿತು ಬರೆಯಿರಿ. ನಿಮ್ಮ ನೋಟದಲ್ಲಿ ಮುಕ್ತಿಯನ್ನ ಸ್ಪರ್ಶಿಸುವ ಹಂಬಲ ನನಗೆ. ನಿಮ್ಮ ವಿಮರ್ಶೆಗಳು ನನಗೆ ಬಲು ಮೆಚ್ಚು. ಇನ್ನೆರಡು ಕಾದಂಬರಿ ಕೂಡ ನಿಮ್ ಲಿಸ್ಟಿನಲ್ಲಿರಲಿ - ಖಾಂಡೇಕರರ "ಅಶ್ರು" ಮತ್ತು ಇನಾಂದಾರರ "ಚಿತ್ರಲೇಖ"

    ಆಗೀಗ ಕೆಲಸಂಜೆಗಳನ್ನ ನಿಮ್ಮ ಜೊತೆ ಕೂತು ಮಾತಾಡುತ್ತಾ ಕಳೆದರೆ ಎಷ್ಟು ಚೆನ್ನಾಗಿತ್ತು ಎಂದೆನಿಸುತ್ತಾ ಇದೆ ನನಗೆ.

    ಒಂದು ತಮಾಶಿಯ ವಿಶ್ಯವೆಂದರೆ ವಿಕ್ಷಿಪ್ತ ತಲ್ಲಣಗಳ ಕಾದಂಬರಿಗಳಲ್ಲಿ ಬರುವ ಹೆಚ್ಚಿನ ನಾಯಕಿಯರ ಹೆಸರು ಯಾಮಿನಿ! ಲೇಖಕರಿಗೇಕೆ ಈ ಹೆಸರು ಬಲು ಮೆಚ್ಚು? ಯಾಮಿನಿ ಎಂದರೇನು?

    ಪ್ರೀತಿಯಿಂದ
    ಸಿಂಧು

    ReplyDelete
  26. ಕಾಕಾ ಬಂಡಾಯ ಓದಿದ್ದೆ ಈಗ ರಿಫ್ರೆಶ್ ಆದೆ. ಬಲ್ಲಾಳ, ಚಿತ್ತಾಲ,ಕೈಕಿಣಿ ಮುಮ್ಬೈ ನಗರಿಯ ನಗ್ನತೆತೆರೆದಿಟ್ಟ ಲೇಖಕರು,
    ಎಂದಿನಂತೆ ನಿಮ್ಮ ವಿಶ್ಲೇಷಣೆ ಸೊಗಸಾಗಿದೆ. ರಾಜೀವ ಅವನ ಸೋಲು ಬಹಳ ಕಾಡುತ್ತವೆ....

    ReplyDelete
  27. ಕಾಕಾ,
    ನಾನು ಬಲ್ಲಾಳರ ಬಂಡಾಯ ಓದಿದ್ದು ಬಹಳ ಹಿಂದೆ. ಬಂಡಾಯ ಓದಿದಾಗ ಹೊಳೆಯದ ಎಷ್ಟೋ ಹೊಳಹುಗಳು ನಿಮ್ಮ ಲೇಖನದಲ್ಲಿ ಕಂಡೆ. ಮತ್ತೊಮ್ಮೆ ಬಂಡಾಯ ಓದಿ ನಾ ಮರೆತ ಕೆಲವು ಸನ್ನಿವೇಶಗಳನ್ನು ತಾಜಾಗೊಳಿಸಿಕೊಳ್ಳುವೆ.

    ReplyDelete
  28. ಪ್ರಿಯ ಸಿಂಧು,
    ನಿಮ್ಮವರು ‘ಮುಕ್ತಿ’ ಕಾದಂಬರಿಯನ್ನು A novel novel
    ಎಂದು ಕರೆದದ್ದು ತುಂಬ ಔಚಿತ್ಯಪೂರ್ಣವಾಗಿದೆ.ಈ ಕಾದಂಬರಿಯು ಬಹುಶಃ ೧೯೬೧ರಲ್ಲಿ ಪ್ರಕಟವಾಯಿತೇನೊ? ಅಲ್ಲಿಯವರೆಗೆ ಕನ್ನಡ ಕಾದಂಬರಿಗಳಲ್ಲಿ ಕಾಣದಿದ್ದ content, style ಹಾಗು philosophy ಯನ್ನು ಶಾಂತಿನಾಥ ದೇಸಾಯರು ಕನ್ನಡಕ್ಕೆ ನೀಡಿದರಲ್ಲವೆ? ಈ ಕಾದಂಬರಿಗೇ ನಾವು ಕನ್ನಡದ ಪ್ರಥಮ ನವ್ಯ ಕಾದಂಬರಿ ಎಂದು ಕರೆಯಬಹುದು ಎನ್ನಿಸುತ್ತದೆ.

    ನೀವು ಹೇಳಿದಂತೆ ‘ಯಾಮಿನಿ’ ತಲ್ಲಣಗಳ ನಾಯಕಿಯೇ ಆಗಿದ್ದಾಳೆ. ಯಾಮಿನಿ ಎನ್ನುವ ಪದಕ್ಕೆ ತರುಣಿ ಎನ್ನುವ ಅರ್ಥ ಇರಬಹುದು. (ಉದಾಹರಣೆಗೆ ‘ಯವನ ಯಾಮಿನಿ’ ಎನ್ನುವ ಕಾದಂಬರಿ.)ಯಾಮಿನಿ ಪದದ ನಾವೀನ್ಯದಿಂದಾಗಿ, ಕತೆಗಾರರು ಪ್ರಜ್ಞಾವಂತ ಸ್ತ್ರೀಯನ್ನು ಸೂಚಿಸಲು ಈ ಹೆಸರನ್ನು ಬಳಸಿದರೆ?

    ‘ಯಾಮಿನಿ’ ಪದದ ನಿಷ್ಪತ್ತಿ ನನಗೆ ತಿಳಿಯದು. ಯಮ=control;
    ಯಮಿ=one who controls.
    ‘ಯಮಿ’ ಪದದ ಸ್ತ್ರೀಲಿಂಗ ರೂಪ=ಯಮಿನೀ. ಯಾಮಿನಿಯು ಯಮಿಯ ಮಗಳೆ?
    ಸಂಸ್ಕೃತ ಬಲ್ಲವರೆ ಹೇಳಬೇಕು.

    ReplyDelete
    Replies
    1. "ಯಾಮ" ಕಾಲದ ಸೂಚಕ ಯಾಮಿನಿ ಅದರ ಭಾವರೂಪವಾಗಿರುವ ಸಾಧ್ಯತೆ ಇದೆ.

      Delete
  29. ದೇಸಾಯರ,
    ಮುಂಬಯಿಯಲ್ಲಿರುವ ಈ ಕನ್ನಡ ಲೇಖಕರ ಕನ್ನಡ ಸೇವೆಯನ್ನು ನಾವು ನೆನಸಬೇಕು.

    ReplyDelete
  30. ಸಾಗರಿ,
    ‘ಬಂಡಾಯ’ ಮತ್ತೆ ಮತ್ತೆ ಓದಬಹುದಾದ ಕೃತಿ!

    ReplyDelete
  31. ಶ್ರೀನಿವಾಸ ಮ. ಕಟ್ಟಿApril 10, 2010 at 11:43 AM

    ‘ಬಂಡಾಯ’ವನ್ನು ಬಹಳ ದಿನಗಳ ಹಿಂದೆ ಓದಿದ ನೆನಪು.ಅದೊಂದು ‘outstanding' ಕಾದಂಬರಿ ಎಂದು ನನಗೆ ಅನಿಸಿರಲಿಲ್ಲ. ಕಥಾವಸ್ತು ಹೊಸದಲ್ಲ. ಮೊಂಬಯಿ, ಕಾರ್ಮಿಕರು, ಮುಷ್ಕರಗಳು ಮತ್ತು ಅವುಗಳ ರಾಜಕೀಯ, ಅವುಗಳೊಂದಿಗೆ ಪ್ರೇಮ ಕಥಾನಕ ಎಲ್ಲವೂ ಕೂಡಿ ಒಂದು box office successful ಹಿಂದಿ ಚಿತ್ರವಾಗುವಷ್ಟು ‘material' ಕಾದಂಬರಿಯಲ್ಲಿ ತುಂಬಿಕೊಂಡಿದೆ. ಕೆಲವು ಸನ್ನಿವೇಶಗಳು ಹಿಂದಿ ಚಿತ್ರದಿಂದ ನೇರವಾಗಿ ಕಾಪಿ ಮಾಡಿದಂತೆ ಇವೆ. ನಿಮಗೆ ರಾಜೇಶ್ ಖನ್ನಾನ ‘ಆರಾಧನಾ’ ನೆನಪಾಗಲಿಲ್ಲವೆ ? ಆರಾಧನಾ ಬಿಡುಗಡೆಯಾದದ್ದು ‘ಬಂಡಾಯ’ ಪ್ರಕಟವಾಗುವದಕ್ಕಿಂತ ಮೊದಲು !

    ನೀವು ಹೇಳುವ platonic love ಕೇವಲ ಅಕ್ಷರಗಳಲ್ಲಿ ಮಾತ್ರ ಸಾಧ್ಯ ಎಂದು ನನ್ನ ಅನಿಸಿಕೆ. ತಾಯಿ, ಅಕ್ಕ-ತಂಗಿ, ಅಜ್ಜಿಯರ ಪ್ರೀತಿಯ ಹೊರತು ಬೇರೆ ಸಂಬಂಧವಿಲ್ಲದ ಹೆಂಗಸಿನ ಪ್ರೀತಿ ದೇಹ ಸಂಬಂಧದಲ್ಲಿಯೇ ಅವಸಾನವಾಗುವದು. ಇದು ಎಲ್ಲ ಮಾನವರ ದೌರ್ಬಲ್ಯ ಅಥವಾ ಸ್ವಭಾವ. ಇದಕ್ಕೆ ಅತಿರಿಕ್ತರಾದವರು ಇಲ್ಲವೆಂದಿಲ್ಲ. ಅವರು ಮಹಾತ್ಮರು, ಇಂದ್ರಿಯ ನಿಗ್ರಹ ಸಾಧಿಸಿದವರು.

    ಇನ್ನೊಮ್ಮೆ ಕಾದಂಬರಿಯನ್ನು ಒದುವೆ. ( ನಮ್ಮ ವಾಚನಾಲಯದಲ್ಲಿ ದೊರೆತರೆ)

    ನಿಮ್ಮ ಬಂಡಾಯದ ಪಾತ್ರಗಳ ವಿವೇಚನೆ ತುಂಬ ಚೆನ್ನಾಗಿದೆ.

    ReplyDelete
  32. ಕಟ್ಟಿಯವರೆ,
    ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.

    ReplyDelete
  33. ಶ್ರೀನಿವಾಸ ಮ ಕಟ್ಟಿApril 10, 2010 at 10:26 PM

    ಸುನಾಥರೆ, ತಾವು ಕುಂವೀ ಅವರ ‘ಅರಮನೆ ’ಓದಿರಲೇಬೇಕು. ಆ ಕಾದಂಬರಿಯ ಕಾಲ, ಪಾತ್ರಗಳು, ಕಥಾವಸ್ತು, ಕತೆಯ ಬೆಳವಣಿಗೆ ಹೀಗೆ ಓಂದು ಸಮಷ್ಟಿಯಾದ ವಿಮರ್ಶೆ ಬರೆಯುವಿರಾ ?

    ReplyDelete
  34. ಕಟ್ಟಿಯವರೆ,
    ‘ಅರಮನೆ’ಯನ್ನು ಓದಿದ್ದೇನೆ. ವಿಮರ್ಶೆ ಬರೆಯಲು ಪ್ರಯತ್ನಿಸುವೆ.

    ReplyDelete
  35. ಸುನಾಥ ಸರ್...

    ನಾನು ಈ ಕಾದಂಬರಿಯನ್ನು ಓದ ಬೇಕೆಂದು ತಂದಿಟ್ಟು ಕೊಡು ಬಹಳ ದಿನಗಳಾಗಿದ್ದವು..
    ಕೆಲವು ದಿನಗಳ ಹಿಂದೆ ನಿಮ್ಮ ಬ್ಲಾಗಿಗೆ ಬಂದು ನೋಡಿದರೆ ಅದರ ವಿಮರ್ಶೆ ಇತ್ತು..
    ಆಗ ನಾನು ಈ ಲೇಖನ ಓದಲಿಲ್ಲ...
    ನಿನ್ನೆ ಕಾದಂಬರಿ ಓದಿ ಮುಗಿಸಿದೆ..
    ಬಹಳ ಕಾಡುತ್ತಿದೆ ಬಂಡಾಯದ ಪಾತ್ರಗಳು..
    ಸನ್ನಿವೇಶಗಳು..

    ಇಂದು ಬೆಳಿಗ್ಗೆ ನಿಮ್ಮ ಲೇಖನ ಓದಿದೆ...

    ಈಗ ನಿಮ್ಮ ಅಧ್ಯಯನದ, ನಿಮ್ಮ ವಿದ್ವತ್ತಿನ ಆಳದ ಪರಿಚಯ ಮತ್ತೊಮ್ಮೆ ಆಯಿತು..

    ಬಹಳ ಚೆನ್ನಾಗಿ ವಿಶ್ಲೇಶಿಸಿದ್ದೀರಿ...

    ಮೊದಲೆ ನಿಮ್ಮ ಲೇಖನ ಓದಿದರೆ..
    ಲೇಖನ ಪ್ರಭಾವದಿಂದ ಓದಿಬಿಡುತ್ತಿನೇನೊ ಎನ್ನುವ ಅನುಮಾನವಿತ್ತು ..

    ನೀವು ವಿವರಿಸಿದ ರೀತಿಗೂ ನಾನು ಓದಿದ ರೀತಿಗೂ ಅಜಗಜಾಂತರವಿದೆ...

    ನಿಮ್ಮ ಅನುಭವ, ಜ್ಞಾನಕ್ಕೆ ನನ್ನ ನಮನಗಳು...

    ರಾಜೀವ ಮತ್ತು ಯಾಮಿನಿಯರ ಮಿಲನ ಇಷ್ಟವಾಗಲಿಲ್ಲ..

    ಅದು ಲೇಖರ ಸ್ವಾತಂತ್ರ್ಯ.. ಅಲ್ಲವಾ ?

    ಒಂದು ಒಳ್ಳೆಯ ಕೃತಿ ಓದಿಸಿದ್ದಕ್ಕೆ ..
    ಚಂದದ ಲೇಖನಕ್ಕೆ ನಿಮಗೆ ವಂದನೆಗಳು...

    ಇನ್ನೊಮ್ಮೆ ಕಾದಂಬರಿ ಓದ ಬೇಕೆನಿಸುತ್ತಿದೆ...
    ನೀವು ನೋಡಿದ ರೀತಿಯಲ್ಲಿ...

    ReplyDelete
  36. ಪ್ರಕಾಶ,
    ನೀವು ಕಾದಂಬರಿಯನ್ನು ಹಾಗು ವಿಶ್ಲೇಷಣೆಯನ್ನು ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು.

    ReplyDelete
  37. ಸೊಗಸಾದ ವಿಮರ್ಶೆ. ದುರಂತವೆಂದರೆ, ನಾನು ವ್ಯಾಸರಾಯ ಬಲ್ಲಾಳರದು ಯಾವ ಕೃತಿಯನ್ನೂ ಓದೇ ಇಲ್ಲ. :-( ಇನ್ನು ಮುಂದೆ, at least, ವಿಮರ್ಶೆಯಾಗಿರುವ ಕೃತಿಗಳನ್ನಾದರೂ ಓದಬೇಕು ಅನ್ನಿಸುತ್ತಿದೆ. ಥ್ಯಾಂಕ್ಯೂ, ಸುನಾಥ್ ಅವರೇ.

    ReplyDelete
  38. ಶ್ರೀನಿವಾಸ ಮ. ಕಟ್ಟಿApril 13, 2010 at 2:57 PM

    ಧನ್ಯವಾದಗಳು. ‘ಅರಮನೆ’ಯ ವಿಮರ್ಶೆಗಾಗಿ ಕಾಯುವೆ.

    ReplyDelete
  39. Namaste Sir,
    Nanu pustaka adashtu sheegra oduttene ;-)
    Dhanyavadagalu.
    Sunil.

    ReplyDelete
  40. ಕಾಕಾ,

    ಉತ್ತಮ ವಿಮರ್ಶೆ, ಬಂಡಾಯ, ಶಿಕಾರಿ, ಮುಕ್ತಿ ಇವೆಲ್ಲ ಇನ್ನೂ ಓದಬೇಕಾಗಿದೆ. ಮೇಲಾಗಿ ಮುಂಬಯಿ ಬದಕು ಚಿತ್ತಾಲರಿಗೆ ಹಾಗೂ ಬಲ್ಲಾಳರಿಗೆ ಕಂಡಂತೆ ನನಗೆ ಹೇಗೆ ಕಾಣುತ್ತಿದೆ ಎಂದೂ ತಿಳಿಯಬೇಕಾಗಿದೆ. (ಬಲ್ಲಾಳರ ಮುಂಬಯಿ ದಿನಾಂಕ ಓದಿದ್ದೆನೆ)

    ಸಧ್ಯ ನಾನು ಭೈರಪ್ಪರ "ಬಿತ್ತಿ" ಮತ್ತು ಶಿವ ಖೆರಾರ "ಯು ಕ್ಯಾನ ಸೆಲ್ಲ್"ದಲ್ಲಿ ಮಗ್ನ.

    ಜೂನನಲ್ಲಿ ಧಾರವಾಡಕ್ಕೆ ಬರುವ ಕಾರ್ಯಕ್ರಮವಿದೆ ನಿಮ್ಮ ದರ್ಶನ ಭಾಗ್ಯವಾಗಲಿ

    -ಶೆಟ್ಟರು

    ReplyDelete
  41. ಆರುಣ,
    ಬಲ್ಲಾಳರ ‘ಬಂಡಾಯ’, ‘ಹೆಜ್ಜೆ’ ಕಾದಂವರಿಗಳು ಚೆನ್ನಾಗಿವೆ. ಇವುಗಳನ್ನು ಓದಲಡ್ಡಿಯಿಲ್ಲ.

    ReplyDelete
  42. ಸುನೀಲರೆ,
    ಬಲ್ಲಾಳರ ಯಾವ ಕೃತಿಗಳು ಲಭ್ಯವಿರಬಹುದು ಎನ್ನುವದು ನನಗೂ ತಿಳಿಯದು. ಬಹುಶಃ ಬಂಡಾಯ, ಹೆಜ್ಜೆ, ಹೆಜ್ಜೆ ಗುರುತು ಕಾದಂಬರಿಗಳು ನಿಮಗೆ ಓದಲು ಸಿಗಬಹುದು.

    ReplyDelete
  43. ಶೆಟ್ಟರೆ,
    ನನಗೆ ನೆನಪಿರುವಂತೆ ‘ಭಿತ್ತಿ’ಯು ಭೈರಪ್ಪನವರ ಆತ್ಮಕಥೆ ಅಲ್ಲವೆ? ಚಿಕ್ಕಂದಿನಲ್ಲಿ ಅವರು ಪಟ್ಟ ಬವಣೆಯನ್ನು ಓದಿದರೆ
    ಮೈ ಜುಮ್ಮೆನ್ನುತ್ತದೆ!

    ReplyDelete
  44. ಶ್ರೀನಿವಾಸ ಮ. ಕಟ್ಟಿApril 20, 2010 at 8:56 AM

    ಸುನಾಥರೆ, ೧.ಟಿ.ಪಿ.ಕೈಲಾಸಮ್ ಅವರ ‘ಹುತ್ತದಲ್ಲಿ ಹುತ್ತ’ ನಾಟಕಕ್ಕೆ ಮುನ್ನುಡಿಯನ್ನು ಯಾರು ಬರೆದಿರುವರು ?
    ೨.‘ವಿಜಯ ವೈಭವ’ ಚಾರಿತ್ರಿಕ ಕಾದಂಬರಿಯ ಲೇಖಕರು ಯಾರು ?
    ೩.‘ಸಗ್ಗಳೆ’ ಕನ್ನದ ಶಬ್ದ ಯಾವ ಭಾಷೆಯಿಂದ ಕನ್ನಡಕ್ಕೆ ಬಂದಿದೆ ?

    ನಿಮಗೆ ಗೊತ್ತಿದ್ದರೆ ತಿಳಿಸಿ.

    ReplyDelete
  45. ಸುನಾಥರವರಿಗೆ ವ೦ದನೆಗಳು.
    ನಾನು ನಿಮ್ಮ 'ಸಲ್ಲಾಪ'ದ ಓದುಗಳು ಮತ್ತು ಅಭಿಮಾನಿ. ನಿಮ್ಮ ನೇರ ಮತ್ತು ವೈಚಾರಿಕ ಬರಹಗಳು ನನ್ನ ತಿಳುವಳಿಕೆಯನ್ನು ಹೆಚ್ಚಿಸುವ೦ತಿವೆ. ಬಲ್ಲಾಳರ 'ಬ೦ಡಾಯ'ವನ್ನು ನಾನು ಈ ಮೊದಲೇ ಓದಿದ್ದೆ. ನಿಮ್ಮ ವಿಮರ್ಶಾತ್ಮಕ ಓದು ಅನುಸರಣ ಯೋಗ್ಯವಾಗಿದೆ. ಧನ್ಯವಾದಗಳು. ನನ್ನ ಬ್ಲಾಗಿಗೊಮ್ಮೆ ಭೇಟಿ ನೀಡಿ. pratheekshe.blogspot.com .
    ಪ್ರಭಾಮಣಿನಾಗರಾಜ, ಹಾಸನ

    ReplyDelete
  46. ಕಟ್ಟಿಯವರೆ,
    ಮೂರು ರಸಪ್ರಶ್ನೆಗಳನ್ನು ನೀವು ಕೇಳಿದ್ದೀರಿ.
    (೧) ಮೊದಲಿನ ಪ್ರಶ್ನೆಯ ಉತ್ತರ ನೆನೆಪಿಲ್ಲ. ಹುಡುಕಿ ನಿಮಗೆ ತಿಳಿಸಬಹುದು.
    (೨) ಎರಡನೆಯ ಪ್ರಶ್ನೆಯ ಉತ್ತರ ಗೊತ್ತಿಲ್ಲ.
    (೩) ಮೂರನೆಯ ಉತ್ತರ ಕೇವಲ ಸಂಭಾವ್ಯತೆ:
    ಸಗ್ಗಳೆ ಎನ್ನುವದು ಪ್ರಾಕೃತ ರೂಪವಿದ್ದು, ಕನ್ನಡದಲ್ಲಿ ಅದೇ ರೂಪ ಬಂದಿರಬಹುದು.

    ReplyDelete
  47. ಪ್ರಭಾಮಣಿಯವರೆ,
    ಧನ್ಯವಾದಗಳು.
    ನಿಮ್ಮ ಬ್ಲಾ^ಗಿನಲ್ಲಿ ನಿಮ್ಮ ಗುಟುಕುಗಳನ್ನು ಓದಿ ಖುಶಿಯಾಯಿತು.
    ನಿಮ್ಮ ಲೇಖನಗಳನ್ನು ನಿಯತಕಾಲಿಕಗಳಲ್ಲಿ ನೋಡುವೆ.

    ReplyDelete
  48. ಶ್ರೀನಿವಾಸ ಮ. ಕಟ್ಟಿApril 22, 2010 at 11:19 PM

    ‘ಸಗ್ಗಳೆ’ ಗೆ ನೀರು ತುಂಬುವ ಚರ್ಮದ ಚೀಲ/ನೀರು ತುಂಬುವ ಪಾತ್ರೆ ಎಂದು ಕ್.ಸಾ.ಪ ದ ನಿಘಂಟುವಿನಲ್ಲಿದೆ. ಇದಕ್ಕೆ ಹಿಂದಿಯಲ್ಲಿ ‘ಛಾಗಲ್’ ಎನ್ನುತ್ತಾರೆ. ಸಂಸ್ಕೃತದಲ್ಲಿ ‘ಛಾಗಲ’ಗೆ ಆಡಿನ ಚರ್ಮಕ್ಕೆ ಸಂಬಂದಿಸಿದ್ದು ಎಂಬರ್ಥವಿದೆ. ‘ಸಗ್ಗಳೆ’ ಸಂಸ್ಕೃತ ‘ಛಾಗಲ’ದ ತತ್ಸಮ ಅಥವಾ ತದ್ಭವ ಇರಬಹುದೆ ?

    ReplyDelete
  49. ಸುನಾಥ ಸರ್, ವ್ಯಾಸರಾಯರ... ಕಾದಂಬರಿಗಳನ್ನ ಓದಿರುವೆನೋ ಇಲ್ಲವೋ ನೆನೆಪಾಗುತ್ತಿಲ್ಲ ಆದರೆ ಅವರ ಶೈಲಿಯಲ್ಲಿ ಒಂದು ವಿಶಿಷ್ಟತೆಯಿರುತ್ತೆ ಅನ್ನೋದು ಅವರ ಇತರ ಕೃತಿಗಳನ್ನು ನೋಡಿ ತಿಳಿಯಬಹುದು....ಯಶವಂತರ ಸಿದ್ಧಾರ್ಥ ಕಾಲೇಜು ಸಮಯದಲ್ಲಿ ಓದಿದ್ದೇನೆ...ನಮ್ಮ ವ್ಯಸ್ಥತೆಯಲ್ಲಿ ಕಾದಂಬರಿ ಮತ್ತಿತರ ಸಾವಕಾಶವಾಗಿ ಓದುವಂತಹ ಕೃತಿಗಳಿಗೆ ಸಮಯ ಸಿಗುವುದಿಲ್ಲ ಆದ್ರೆ ನಿಮ್ಮ ಕೂಲಂಕುಶ ವಿಮರ್ಶೆ ನಮಗೆ ಕೃತಿಯ ಪಕ್ಷಿನೋಟ ನೀಡುವುದಲ್ಲದೇ ಆಸಕ್ತಿ ಇರುವವರು ಓದುವಂತೆ ಮಾಡುತ್ತವೆ...ಧನ್ಯವಾದ...

    ReplyDelete
  50. ಜಲನಯನ,
    ವ್ಯಾಸರಾಯ ಬಲ್ಲಾಳರ ವಿಶಿಷ್ಟ ಶೈಲಿಯಿಂದಾಗಿ ಅವರ ಕಾದಂಬರಿಗಳು ಓದುಗರನ್ನು ಸೆರೆ ಹಿಡಿಯುತ್ತವೆ. ಇದೇ ಮಾತನ್ನು ಚಿತ್ತಾಳರ ಕೃತಿಗಳಿಗೂ ಹೇಳಬಹುದು.

    ReplyDelete
  51. Nice, writing...

    Pl. visit my Kanada Poety Blog:
    www.badari-poems.blogspot.com

    - Badarinath Palavalli

    ReplyDelete
  52. ಬದರಿನಾಥರೆ,
    ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  53. ಬಲ್ಲಾಳರ 'ಶಿಕಾರಿ' ಓದಿದ್ದೆ. ಸ್ವಾರ್ಥ ಪ್ರಪಂಚ ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸುತ್ತದೆ. ಒಳ್ಳೆಯ ವಿಮರ್ಶೆ ಸರ್

    ReplyDelete
  54. ದೀಪಸ್ಮಿತ,
    ಬಲ್ಲಾಳರ ‘ಬಂಡಾಯ’ ಹಾಗು ಚಿತ್ತಾಳರ ‘ಶಿಕಾರಿ’ ಓದುಗರಿಗೆ ಇಷ್ಟವಾಗುವ ಕಾದಂಬರಿಗಳು.

    ReplyDelete
  55. ಸುನಾಥರೆ,
    ಮೊನ್ನೆ ವ್ಯಾಸರಾಯ ಬಲ್ಲಾಳರ 'ಉತ್ತರಾಯಣ' ಓದಿದೆ. ಕೊನೆಯವರೆಗೂ ಅತ್ಯಂತ ಕುತೂಹಲದಿಂದ ಓದಿಸಿಕೊಂಡು ಹೋದದ್ದು ಕೊನೆಗೇಕೋ ಅಷ್ಟು ಮಹೋನ್ನತವೆನಿಸಲಿಲ್ಲ. ಅದ್ಭುತ ಕಾದಂಬರಿ-ಸಂದೇಹವಿಲ್ಲ, ಯಾಕೊ ಏನೋ ನನಗೆ ಬಲ್ಲಾಳರ ಕಥನ ಶೈಲಿ, ಅವರು ಕಟ್ಟಿ ಕೊಡುವ ಮುಂಬೈನ ಪಾತ್ರಗಳು ಚಿತ್ತಾಲರ ಕೆಲವು ಪಾತ್ರಗಳಿಗಿಂತ ಹೆಚ್ಚು ಮೈ ತುಂಬಿಕೊಂಡು, ಶಕ್ತಿಶಾಲಿಯಾಗಿ, ಭಿನ್ನವಾಗಿ ಕಾಣಿಸುತ್ತವೆ(ನನ್ನದು ಅತ್ಯಂತ ಸೀಮಿತ ಓದು). ಉತ್ತರಾಯಣದ ಹೇಮಾ,ಮೋಹನರಾವ್,ರುಕ್ಮಿಣಿ, ಆ ಕಂಪನಿಯ ವಿಸ್ತೃತ ನಿರೂಪಣೆಗಳು ಕಣ್ಣಿಗೆ ಕಟ್ಟುವಂತೆ ಮೂಡಿ ಬಂದಿವೆ. ಮುಂಬೈನ ಇಂಥಹ ಪಾತ್ರಗಳು ಚಿತ್ತಾಲರ ದೃಷ್ಟಿಯಲ್ಲಿಯೂ, ಬಲ್ಲಾಳರ ದೃಷ್ಟಿಯಲ್ಲಿಯೂ ಹೇಗೆ ಮೂಡಿ ಬಂದಿರುವವು ಎನ್ನುವದರ ಬಗ್ಗೆ ಯಾರಾದರೂ ತುಲನಾತ್ಮಕವಾಗಿ ಬರೆದಿರುವರೆ? ದಯವಿಟ್ಟು ಇದರ ಬಗ್ಗೆ ನೀವು ಬರೆದರೆ ತುಂಬಾ ಚೆನ್ನಾಗಿರುತ್ತದೆ - ಇದಾಗಲೇ ಬರೆದಿದ್ದರೆ ದಯವಿಟ್ಟು ತಿಳಿಸಿ. ಧನ್ಯವಾದಗಳು
    ~ಅನಿಲ

    ReplyDelete
  56. ಅನಿಲರೆ,
    ಬಲ್ಲಾಳರ ಹಾಗು ಚಿತ್ತಾಲರ ಮನೋಧರ್ಮ ಹಾಗು ಬರಹದ format ವಿಭಿನ್ನವಾಗಿವೆ. ಇವರೀರ್ವರು ಮುಂಬಯಿ ನಗರದ ಕಥೆಗಳನ್ನು ಬರೆದಿರುವುದರಿಂದ ಇವರೀರ್ವರ ತುಲನಾತ್ಮಕ ವಿಮರ್ಶೆ ಬರಬೇಕಾಗಿತ್ತು. ನಾನೂ ಸಹ ಇಂತಹ ಯಾವುದೇ ಲೇಖನಗಳನ್ನು ನೋಡಿಲ್ಲ. ನನಗೆ ದೊರೆತರೆ, ನಿಮಗೆ ತಿಳಿಸುತ್ತೇನೆ.

    ReplyDelete