Monday, February 21, 2011

ಕಾಮಕಸ್ತೂರಿ....................ದ.ರಾ.ಬೇಂದ್ರೆ


ಕಾಮಕಸ್ತೂರಿ
(ಹೊಲದ ಹತ್ತರ)

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~

ಬೇಂದ್ರೆಯವರು ರಚಿಸಿದ ‘ಕಾಮಕಸ್ತೂರಿ’ ಕವನವು ಅದೇಹೆಸರಿನ ಸಂಕಲನದಲ್ಲಿ ಅಡಕವಾದ ಮೊದಲನೆಯ ಕವನ. ಕಾಮಕಸ್ತೂರಿ ಇದು ವಿಶಿಷ್ಟ ಸುವಾಸನೆಯ ಒಂದು ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು Ocimum basilicum. ತುಳಸಿಯ ದಳವನ್ನು ದೇವರ ಪೂಜೆಗೆ ಬಳಸುವಂತೆಯೇ, ಈ ಸಸ್ಯದ ಹೂವನ್ನು ಸಹ ದೇವರ ಪೂಜೆಗೆ ಬಳಸುತ್ತಾರೆ. 
ಗಂಡು ಹೆಣ್ಣಿನ ನಡುವಿನ ಆಕರ್ಷಣೆಯು  ಕಾಮಮೂಲವಾಗಿರಬಹುದು; ಆದರೆ ಇದು ಕಾಮಕ್ಕೆ ಸೀಮಿತವಾಗಬಾರದು. ಕಸ್ತೂರಿಯಂತೆ ಇದು ಮೃಗಮಲವಾಗಬಾರದು; ಆದರೆ ಕಾಮಕಸ್ತೂರಿಯಂತೆ ಸುಗಂಧದ ಸಸ್ಯವಾಗಬೇಕು ಎನ್ನುವದು ಬೇಂದ್ರೆಯವರ ಆಶಯವಾಗಿದೆ.

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

‘ಕಾಮಕಸ್ತೂರಿ’ ಕವನದ ಮೊದಲ ನುಡಿಯಲ್ಲಿ ಹಳ್ಳಿಯ ತರುಣನೊಬ್ಬ ತನ್ನ ನಲ್ಲೆಯನ್ನು ಕಂಡಾಗ ಅವನ ಮನದಲ್ಲಿ ಮೂಡಿದ ಭಾವನೆಗಳ ವರ್ಣನೆ ಇದೆ. ಈ ತರುಣನಿಗೆ ತನ್ನ ನಲ್ಲೆಯ ಬಗೆಗೆ ಆಕರ್ಷಣೆ ಇದೆ. ಅವಳ ಚೆಲುವನ್ನು ಆತ ಗಮನಿಸುತ್ತಾನೆ. ‘ತುಂಬಿತುರುಬಿನವಳೆ’ ಎಂದು ಅವಳನ್ನು ಬಣ್ಣಿಸುತ್ತಾನೆ. ಅವಳಿಗೆ ತನ್ನ ಪ್ರಣಯದ ಸಂಕೇತವಾಗಿ ಕಾಮಕಸ್ತೂರಿಯ ತೆನೆಯೊಂದನ್ನು ತುರುಬಿನಲ್ಲಿ ಮುಡಿಯಲು ನೀಡುತ್ತಾನೆ. ದೈಹಿಕ ಆಕರ್ಷಣೆಯ ನಿರೂಪಣೆ ಇಲ್ಲಿಗೇ ಮುಗಿಯುತ್ತದೆ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಎರಡನೆಯ ನುಡಿಯಲ್ಲಿ ಆತನ ಅಪೇಕ್ಷೆಯನ್ನು ನಿರೂಪಿಸಲಾಗಿದೆ. ಕಾಮಕಸ್ತೂರಿಯನ್ನು ಮುಡಿದ ತನ್ನ ನಲ್ಲೆಯಿಂದ ಆತ ಬಯಸುವದು ಏನನ್ನು? ಅವಳ ದೈಹಿಕ ಸಾಮೀಪ್ಯವನ್ನು ಆತ ಬೇಡುತ್ತಿಲ್ಲ. ಅವಳ ಮುಡಿಯ ಮೇಲೆ ನವಿರಾಗಿ ಬೀಸಿದ ಗಾಳಿಯ ಸುಳಿಯೊಂದು, ಆ ಕಾಮಕಸ್ತೂರಿಯ ಪರಿಮಳವನ್ನು ಹೊತ್ತು ತಂದು ತನ್ನನ್ನು ತಗಲಿದರೆ ಸಾಕು ಎನ್ನುವದು ಅವನ ಹಂಬಲ. ಅಷ್ಟರಿಂದಲೇ ಅವನ ಮನಸ್ಸು ತಣಿದು ತೃಪ್ತವಾಗುವದು. ಗಂಡು ಹೆಣ್ಣುಗಳ ನಡುವೆ ದೈಹಿಕ ಆಕರ್ಷಣೆಯನ್ನು ಮೀರಿದ ಪ್ರೀತಿಯನ್ನು ಬೇಂದ್ರೆಯವರು ಈ ರೀತಿಯಲ್ಲಿ ತೋರಿಸುತ್ತಿದ್ದಾರೆ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.

ಮೂರನೆಯ ನುಡಿಯಲ್ಲಿ ಈ ಪ್ರೀತಿಯ ಗಾಢತೆಯನ್ನು, ಉದಾತ್ತತೆಯನ್ನು ಬೇಂದ್ರೆ ಹೇಳುತ್ತಿದ್ದಾರೆ.  ಇವರ ಪ್ರಣಯಭಾವವನ್ನು ಕಂಡಂತಹ ಜನ ಏನೇ ಟೀಕೆಯನ್ನು ಮಾಡಲಿ, ಅದನ್ನು ಉಪೇಕ್ಷಿಸು ಎಂದು ನಾಯಕನು ತನ್ನ ನಲ್ಲೆಗೆ ಸೂಚಿಸುತ್ತಾನೆ. ತಮ್ಮ ನಡುವಿನ ಪ್ರೇಮವು ಅಸಾಮಾನ್ಯವಾಗಿದೆ. ತನ್ನ ನಲ್ಲೆಯೂ ಸಹ ಅಸಾಮಾನ್ಯಳೇ. ಅವಳು ಹಾಗು ಅವಳ ಪ್ರೀತಿ ಸಾಮಾನ್ಯ ಮಟ್ಟದ ಜನರಿಗೆ ಹೊರತಾಗಿದೆ ಎನ್ನುವದು ನಾಯಕನ ಭಾವನೆ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~
ಟಿಪ್ಪಣಿ:
(೧) ಬೇಂದ್ರೆಯವರು ರಚಿಸಿದ ಪ್ರಣಯಕವನಗಳು ಹೆಚ್ಚಾಗಿ ಗ್ರಾಮೀಣ ಪರಿಸರದ ಕವನಗಳಾಗಿರುವದು ಕುತೂಹಲದ ಸಂಗತಿಯಾಗಿದೆ. ಈ ಕವನಗಳಲ್ಲಿ ಅವರು ಬಳಸುವ ಭಾಷೆಯೂ ಸಹ ಹಳ್ಳಿಯ ಮಾತಿನ ಭಾಷೆಯೇ ಆಗಿದೆ. ಇದರ ಕಾರಣವೇನಿರಬಹುದು? ಬೇಂದ್ರೆಯವರ ವೈಚಾರಿಕತೆ ಹಾಗು ಆದರ್ಶ ಇವು ನಗರ ಪರಿಸರದಿಂದ ಪ್ರಭಾವಿತವಾಗಿವೆ. ಆದರೆ ಅವರ ಎದೆಯಾಳದ ಭಾವನೆಗಳ ಪ್ರೇರಣೆ ಜಾನಪದದಲ್ಲಿದೆ. ‘ಟೊಂಕದ ಮೇಲೆ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ’ ಎನ್ನುವ ಅವರ ಕವನವು ಪ್ರಣಯಕವನವೇನಲ್ಲ.  ಹೆಣ್ಣಿನ ಚೆಲುವನ್ನು, ಅವಳ ಒಟ್ಟು ವ್ಯಕ್ತಿತ್ವವನ್ನು ಗಮನಿಸುತ್ತ, ಆಸ್ವಾದಿಸುತ್ತ ಬೆರಗು ಪಡುತ್ತಿರುವ ವ್ಯಕ್ತಿಯೋರ್ವನ ಹಾಡು ಇದು. ಈ ಕವನವೂ ಸಹ ಗ್ರಾಮೀಣ ಧಾಟಿಯಲ್ಲಿಯೇ ಇದೆ ಎನ್ನುವದನ್ನು ಗಮನಿಸಿಬೇಕು. ಅದರಂತೆಯೆ ‘ಬೆಳದಿಂಗಳs ನೋಡ’ ಅಥವಾ ‘ಶೀಗಿ ಹುಣ್ಣಿವೆ ಮುಂದೆ ಸೋಗಿನ ಚಂದ್ರಮ’ ಕವನಗಳ ಜಾನಪದ ಧಾಟಿ ಹಾಗು ಭಾಷೆಗಳನ್ನು ಗಮನಿಸಿದಾಗ ಅವರ ಭಾವನೆಗಳ ಮೂಲದ ಕುರುಹು ಹೊಳೆದಂತಾಗುತ್ತದೆ. ಒಟ್ಟಿನಲ್ಲಿ ಶಿಷ್ಟ ಭಾಷೆ ಬೇಂದ್ರೆಯವರ ವೈಚಾರಿಕ ಭಾಷೆ ಹಾಗು ದೇಸಿ ಅಥವಾ ಜಾನಪದ ಭಾಷೆ ಅವರ ಭಾವನೆಗಳ ಭಾಷೆ ಎನ್ನಬಹುದು.

(೨) ನವೋದಯದ ಹಿರಿಯ ಸಾಹಿತಿಗಳಿಗೂ, ನವ್ಯ ಸಾಹಿತಿಗಳಿಗೂ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ ‘ಕಾಮ’ದ ಬಗೆಗೆ ಅವರಿಗಿರುವ ದೃಷ್ಟಿಕೋನ. ಗಂಡು ಹೆಣ್ಣಿನ ನಡುವೆ ಇರಬೇಕಾದ ದೈಹಿಕ ಕಾಮವು ಸೃಷ್ಟಿಗೆ ಅವಶ್ಯವಾದಂತಹ ಒಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇದ್ದಂತೆಯೆ ಒಪ್ಪಿಕೊಳ್ಳಲು ನವೋದಯ ಸಾಹಿತಿಗಳಿಗೆ ಇರಸು ಮುರಸು ಆಗುತ್ತಿತ್ತೇನೊ. ಆದುದರಿಂದ ಅವರು ‘ಕಾಮ’ಕ್ಕಿಂತ ‘ಪ್ರೇಮ’ ಉಚ್ಚವಾದದ್ದು ಎಂದು ಸಾರಿದರು. ಬೇಂದ್ರೆಯವರನ್ನು ಈ ಧೋರಣೆಯ ಲಕ್ಷಣಕವಿಗಳು ಎನ್ನಬಹುದು.

ನವೋದಯದ ಉತ್ತರಭಾಗದ ಲೇಖಕರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರು ಗಂಡು, ಹೆಣ್ಣಿನ ನಡುವಿನ ಕಾಮ ಹಾಗು ಪ್ರೇಮವನ್ನು ಅಭೇದವಾಗಿ ನೋಡಿದರು. ದಾಂಪತ್ಯಗೀತೆಗಳ ಗುಚ್ಛವಾದ ‘ಮೈಸೂರು ಮಲ್ಲಿಗೆ’ ಕವನಸಂಕಲನವು ಈ ಧೋರಣೆಯ ಲಕ್ಷಣಕಾವ್ಯ ಎನ್ನಬಹುದು.

ನವ್ಯ ಲೇಖಕರು ತಮ್ಮನ್ನು ಮಡಿವಂತರೆಂದು ಹೀಯಾಳಿಸುತ್ತಿದ್ದದ್ದರಿಂದ ಮನನೊಂದಂತಹ ನವೋದಯದ ಕೆಲವು ಶ್ರೇಷ್ಠ ಲೇಖಕರು ತಾವು ‘ಸಂಭಾವಿತ’ರಲ್ಲ ಎಂದು ತೋರಿಸಲೆಂದೇ ಸಣ್ಣ ಪುಟ್ಟ  ಕಸರತ್ತು ಮಾಡಿದರು. ರಾಜರತ್ನಂ ಅವರ ಉದಾಹರಣೆಯನ್ನು ಇಲ್ಲಿ ಕೊಡಬಹುದು. ಬೀchiಯವರಿಗೆ ಉತ್ತರರೂಪದಲ್ಲಿ ರಚಿಸಿದ ತಮ್ಮ ಕೃತಿ `ನಿರ್ಭಯಾಗ್ರಾಫಿ’ಯಲ್ಲಿ ಅವರು ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:
ಅ.ನ. ಕೃಷ್ಣರಾಯರೊಡನೆ ನಡೆದ ಒಂದು ಸಂಭಾಷಣೆಯಲ್ಲಿ ‘ಜಗನ್ನಾಥ ಪಂಡಿತ’ನ ‘ಮನೋರಮಾ ಕುಚಮರ್ದಿನೀ’ ಎನ್ನುವ ಕೃತಿಯ ಹೆಸರು ಬಂದಾಗ, ತಾವಿಬ್ಬರು ಪರಸ್ಪರ ನೋಟ ವಿನಿಮಯ ಮಾಡಿಕೊಂಡು ನಕ್ಕಿದ್ದಾಗಿ ರಾಜರತ್ನಂ ಬರೆದಿದ್ದಾರೆ. ಈ ಮೂಲಕ ತಾವು ‘ಸಂಭಾವಿತ’ರಲ್ಲವೆಂದು ರಾಜರತ್ನಂ ಸಾರ್ವಜನಿಕವಾಗಿ ತಿಳಿಸಿ ಹೇಳಿ ಸಮಾಧಾನಪಟ್ಟುಕೊಂಡರು!

ಬನ್ನಂಜೆ ಗೋವಿಂದಾಚಾರ್ಯರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ತಾವು ತಮ್ಮ ಎಳವೆಯಲ್ಲಿ ‘ಪೋಲಿ’ಯಾಗಿದ್ದೆ ಎಂದು ಸಾಬೀತುಪಡಿಸಲು, ತಾವು ತಮ್ಮ ತರಗತಿಯ ಓರ್ವ ಹುಡುಗಿಗೆ ಬರೆದ ದ್ವಂದ್ವಾರ್ಥದ ಪತ್ರವೊಂದನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕನಕದಾಸರ ಕೀರ್ತನೆಗಳ ಬಗೆಗೆ ಅವರು ರಚಿಸಿದ ‘ಕನಕೋಪನಿಷತ್’ದಂತಹ ಗ್ರಂಥದಲ್ಲಿ  ಈ ಅಸಭ್ಯ ಉಲ್ಲೇಖವಿರುವದು ಬೇಸರದ ಸಂಗತಿಯಾಗಿದೆ.

ಆಡಿಗರನ್ನು ಹೊರತುಪಡಿಸಿ ಇತರ ನವ್ಯ ಲೇಖಕರ ಮನೋವ್ಯಾಪಾರ ಇನ್ನೂ ವಿಚಿತ್ರವಾದದ್ದು. ತಮ್ಮ ಪೂರ್ವಜರ ಸಭ್ಯತೆಯ ವಿರುದ್ಧ ಬಂಡಾಯವೇಳುವದೇ ಮಹತ್ವದ ಸಾಹಿತ್ಯಕಾರ್ಯವೆಂದು ಭಾವಿಸಿದ ಇವರ ಸಾಹಿತ್ಯವು ಕಾಮದಿಂದ ಹೊರಬರಲಾರದೆ ತೊಳಲಾಡುವ ಸಾಹಿತ್ಯವಾಯಿತು. ಅನಂತಮೂರ್ತಿ, ಲಂಕೇಶ ಹಾಗು ರಾಮಚಂದ್ರ ಶರ್ಮರನ್ನು ಇಂತಹ ಸಾಹಿತ್ಯಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದು ಅವರ ಸಾಹಿತ್ಯಗುಣದ ಟೀಕೆಯಲ್ಲ. ಅವರ ಮನೋಧರ್ಮವನ್ನು ಗುರುತಿಸುವ ಪ್ರಯತ್ನವಷ್ಟೇ.

ಸುದೈವದಿಂದ ನವ್ಯೋತ್ತರ ಸಾಹಿತಿಗಳಿಗೆ  ನವ್ಯಸಾಹಿತಿಗಳ ಇಂತಹ complex ಇಲ್ಲ.  ಅವರು ಆರೋಗ್ಯಕರವಾದ ಸಾಮಾಜಿಕ ಹಾಗು ವೈಯಕ್ತಿಕ ನೆಲೆಯ ವಿವಿಧ ಮುಖಗಳನ್ನು ತೋರಿಸುವ ಸಾಹಿತ್ಯವನ್ನು ರಚಿಸುತ್ತಿರುವದು ಕನ್ನಡ ಸಾಹಿತ್ಯಕ್ಕೆ ಶುಭಸೂಚನೆಯಾಗಿದೆ. ಹಿರಿಯರಾದ ದೇವನೂರು ಮಹಾದೇವ ಹಾಗು ನಂತರದ ಲೇಖಕರಲ್ಲಿ ಅಮರೇಶ ನುಗಡೋಣಿಯವರನ್ನು  ಇಂತಹ ಸಾಹಿತ್ಯದ ಪ್ರಮುಖರೆಂದು ನೆನೆಸಿಕೊಳ್ಳಬಹುದು.

47 comments:

  1. ಸುನಾಥ್ ಸರ್,

    ನಿಮ್ಮ ಈ ಬರಹವನ್ನು ಯಾವ ರೀತಿಯಲ್ಲಿ ವರ್ಣಿಸಬೇಕೋ ಗೊತ್ತಾಗ್ತಾ ಇಲ್ಲಾ, ಕಾಮ ಕಸ್ತೂರಿಯ ಬಗ್ಗೆ ನಾನೆಲ್ಲೂ ಓದಿರದ ವಿವರವನ್ನು ನೀವು ಇಲ್ಲಿ ತಿಳಿಸಿದ್ದಿರಿ. ಅನಂತ ಧನ್ಯವಾದಗಳು....

    ReplyDelete
  2. ಬೆ೦ದ್ರೆಯವರ ಕಾಮ ಕಸ್ತೂರಿಯನ್ನು ವಿವರಿಸುತ್ತಾ ನವೋದಯ ಮತ್ತು ನವ್ಯೋತ್ತರ ಕಾಲದ ಬರಹಗಾರ ಬಗ್ಗೆ ಕೂಡ ಮಾಹಿತಿ ಪೋಣಿಸಿ ಕೊಟ್ಟಿದ್ದೀರಿ. ತು೦ಬಾ ಚೆನ್ನಾಗಿದೆ. ಅ೦ದ ಹಾಗೆ ಸರ್ ಜೀ ಕಾಮಕಸ್ತೂರಿಯ ಸಸ್ಯ ಶಾಸ್ತ್ರೀಯ ಹೆಸರಿನಲ್ಲಿ ಬರುವುದು ocium ಅಲ್ಲ ocimum .

    ReplyDelete
  3. ಇಂಪು ಕವಿತೆಯ ತಂಪಾದ ವರ್ಣನೆಯೇ ಬರಹದ ಕಂಪು! ವಂದನೆಗಳು.

    ReplyDelete
  4. ಕಾಕಾ,

    ಅದೇನೋ ಎಂತೋ ನಿಮ್ಮ ಪೋಸ್ಟ್‌ಗಳಲ್ಲಿ ಬೇಂದ್ರೆ ಹೆಸರು ಕಂಡೊಡನೆ ಸಂತೋಷವಾಗುತ್ತದೆ. ನನ್ನ ಅತ್ಯಂತ ಮೆಚ್ಚಿನ ಕವಿಗಳಲ್ಲಿ ಇವರಿಗೆ ಪ್ರಮುಖ ಸ್ಥಾನ.

    ತುಂಬಾ ಸುಂದರ ಕವನ... ಅಷ್ಟೇ ಸರಳ ವಿವರಣೆ. ನಂತರದ ನಿಮ್ಮ ಟಿಪ್ಪಣಿ ಕೂಡ ಆಸಕ್ತಿಕರವಾಗಿದೆ. ತುಂಬಾ ಧನ್ಯವಾದಗಳು.

    ReplyDelete
  5. ಈ ಸಾಲುಗಳು ಅರ್ಥಪೂರ್ಣವಾಗಿ ಮೂಡಿಬಂದಿವೆ..: ಗಂಡು ಹೆಣ್ಣಿನ ನಡುವಿನ ಆಕರ್ಷಣೆಯು ಕಾಮಮೂಲವಾಗಿರಬಹುದು; ಆದರೆ ಇದು ಕಾಮಕ್ಕೆ ಸೀಮಿತವಾಗಬಾರದು. ಕಸ್ತೂರಿಯಂತೆ ಇದು ಮೃಗಮಲವಾಗಬಾರದು;

    ReplyDelete
  6. ಚೆ೦ದದ ಕವನದ ಸು೦ದರ ವರ್ಣನೆ, ವಿವರಣೆ ಹಾಗೂ ಅನೇಕ ವಿಮರ್ಶಾತ್ಮಕ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.. ಕಾಕಾ.

    ReplyDelete
  7. ಕಾಕಾ, ಬಹಳ ಬಹಳ ದಿನಗಳ ನಂತರ ಪ್ರತಿಕ್ರಿಯಿಸುತ್ತಿರುವೆ. ಇದಕ್ಕೆ ಕಾರಣ ಇಲ್ಲಿರುವ ಕವನ-ವಿವರಣೆಗಿಂತಲೂ ತದನಂತರದ ಟಿಪ್ಪಣಿ.

    ಬೇಂದ್ರೆಯವರು ಸಂಕೀರ್ಣ ವ್ಯಕ್ತಿತ್ವದ ಮೇಧಾವಿ ಕವಿ. ವೈಚಾರಿಕತೆ ಮತ್ತು ಭಾವುಕತೆ ನಮ್ಮ ಮೆದುಳಿನ ಎಡ ಮತ್ತು ಬಲ ಭಾಗಗಳ ಕೆಲಸಗಳು. ಅವನ್ನು ಸಮರ್ಥವಾಗಿ ಸಮ್ಮಿಳಿತಗೊಳಿಸಿ ಸುಂದರ ಕವನಗಳನ್ನು ನೀಡಿದ್ದು ಬೇಂದ್ರೆಯವರ ಬಲವೆಂದೇ ನನ್ನೆಣಿಕೆ. ನಗರ ಜೀವನದ ವೈಚಾರಿಕತೆ ಮತ್ತು ಗ್ರಾಮೀಣ ಬದುಕಿನ ಭಾವುಕತೆ ಅವರ ಜೀವನಧರ್ಮವಾಗಿತ್ತು, ಅಲ್ಲವೆ?

    ಇನ್ನು ನವೋದಯ, ನವ್ಯ, ನವ್ಯೋತ್ತರ- ಇವುಗಳ ಬಗ್ಗೆ ತುಲನೆ ಮಾಡುವುದೇ ಕ್ಲಿಷ್ಟಕರ (ವೈಚಾರಿಕವಾಗಿ, ಸಾಮಾಜಿಕವಾಗಿ, ಮತ್ತು ಗುಂಪುಗಾರಿಕೆಯಿಂದಾಗಿ) ಸಂಗತಿ. ಅಂಥದನ್ನೂ ನಾಜೂಕಾಗಿ ಹೇಳಿದ್ದೀರಿ. ಜಾಣರು ನೀವು.

    ReplyDelete
  8. ಕಾಕ,
    ಬಹಳ ಚೆನ್ನಾಗಿದೆ ನೀವು ಕವನಕ್ಕೆ ಕೊಟ್ಟ ವಿವರಣೆ... ಹಾಗೆ ಟಿಪ್ಪಣಿಯೂ ಸಹ ಹಲವು ಮಾಹಿತಿ ನೀಡುತ್ತದೆ.... ನಿಮಗೆ ಅನಂತ ಧನ್ಯವಾದಗಳು ಎಷ್ಟೋ ತಿಳಿಯದ ಸಾಲುಗಳನ್ನು ಸಾಮಾನ್ಯರಿಗೂ ಅರ್ಥವಾಗುವಂತೆ ಬರೆಯುತ್ತೀರಿ. ಧನ್ಯವಾದಗಳು

    ReplyDelete
  9. ಕಾಮಕಸ್ತೂರಿ ಗಿಡ ನಮ್ಮನೇಲೂ ಇತ್ತು. ಬೇಂದ್ರೆ ಕವನದ ಕಸ್ತೂರಿಯ ಪರಿಮಳ ಸೊಗಸಾಗಿತ್ತು.

    ಬೀchi ಮತ್ತು ರಾಜರತ್ನಂ ನಡುವಣ ಜಗಳವನ್ನು ಅಲ್ಲಲ್ಲಿ ಓದಿ ತಿಳಿದುಕೊಂಡಿದ್ದೇನೆ. :).

    ಇಲ್ಲಿ ನೀವು ಕೊಟ್ಟಿರುವ ಟಿಪ್ಪಣಿಯೇ ಹೆಚ್ಚು ವೈಚಾರಿಕವಾಗಿದೆ (ಸತ್ಯವೂ ಅಹುದು).

    ReplyDelete
  10. ಅಶೋಕ,
    ಬೇಂದ್ರೆಯವರ ಕವನವನ್ನು ನೀವು ಓದಿ ಸಂತೋಷಪಟ್ಟರೆ, ಅಷ್ಟೇ ಸಾಕು ನನಗೆ!

    ReplyDelete
  11. ಪರಾಂಜಪೆಯವರೆ,
    ತಪ್ಪನ್ನು ಗಮನಿಸಿ, ತಿಳಿಸಿದ್ದಕ್ಕಾಗಿ ಧನ್ಯವಾದಗಳು. ಈಗ ಸರಿಪಡಿಸಿದ್ದೇನೆ.

    ReplyDelete
  12. ಶಾನಿ,
    ನಿಮಗೆ ಧನ್ಯವಾದಗಳು.

    ReplyDelete
  13. ತೇಜಸ್ವಿನಿ,
    ಕವನವೇ ಕಾಮಕಸ್ತೂರಿಯಾಗಿದೆ.
    ನಿಮಗೆ ಧನ್ಯವಾದಗಳು.

    ReplyDelete
  14. ವಿಚಲಿತರೆ,
    ಕಾಮ-ಪ್ರೇಮಗಳ ಬಗೆಗಿನ ಈ ಭಾವನೆಯು ನಮ್ಮ ಅನೇಕ ಹಿರಿಯ ಜೀವಿಗಳ ಭಾವನೆಯಾಗಿದೆ. ಇದು ಆರೋಗ್ಯಕರ ಭಾವನೆಯೂ ಹೌದು.

    ReplyDelete
  15. ಮನಮುಕ್ತಾ,
    ಕವನವನ್ನು ಹಾಗು ಟಿಪ್ಪಣಿಯನ್ನು ನೀವು ಮೆಚ್ಚಿಕೊಂಡಿರಲ್ಲ. ನನಗೂ ಅದೇ ಖುಶಿ.

    ReplyDelete
  16. ಜ್ಯೋತಿ,
    ನವೋದಯ, ನವ್ಯ ಹಾಗು ನವ್ಯೋತ್ತರ ಸಾಹಿತ್ಯದ ಬಗೆಗೆ ನಾನು ಇಲ್ಲಿ ಬರೆದ ಟಿಪ್ಪಣಿಯನ್ನು gross ಎಂದು ಹೇಳುವದು ಸರಿಯಾದದ್ದು. ನೀವು ಹೇಳಿದಂತೆ ಇವುಗಳಲ್ಲಿ ಅನೇಕ ಗೋಜಲುಗಳಿವೆ. ಹೀಗಾಗಿ ಖಚಿತ ಬರವಣಿಗೆ ಕಷ್ಟಕರ.

    ReplyDelete
  17. ಮನಸು,
    ಮನಸ್ಸು ಕೊಟ್ಟು ಓದಿ, ಪ್ರತಿಕ್ರಿಯಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

    ReplyDelete
  18. ಪುತ್ತರ್,
    ಕಾಮಕಸ್ತೂರಿಯ ಸುಗಂಧವನ್ನು ನೀವು ಮೊದಲೇ ಸವಿದಿರುವಿರಿ ಎಂದಂತಾಯ್ತು!

    ReplyDelete
  19. ಕಾಕ ಬೇಂದ್ರೆಯವರು ಪಂಡಿತ ಪಾಮರ ಇಬ್ಬರಿಗೂ ಸಲ್ಲುವಂತಹ ಕವನಗಳನ್ನು ಕೊಟ್ಟಿದ್ದಾರೆಂದು ನನ್ನ ಅನಿಸಿಕೆ. ಏಕೆಂದರೆ ಅವರ ಕೆಲವು ಕವನಗಳು ಸುಲಭವಾಗಿ ಅರ್ಥವಾಗುತ್ತವೆ . ಇನ್ನು ಕೆಲವು ಸ್ವಲ್ಪವೂ ಅರ್ಥವಾಗುವುದಿಲ್ಲ . ನಿಮ್ಮ ವಿವರಣೆ ಅನೇಕ ಸಾಹಿತ್ಯಾತ್ಮಕ ಸಂಗತಿಗಳನ್ನು ಸುಲಭವಾಗಿ ತಿಳಿಸಿಕೊಡುತ್ತದೆ . ಧನ್ಯವಾದಗಳು.

    ReplyDelete
  20. kaama kastooriyannu nodidde adara smell asadisidde.. ee kavana odiralilla.. kamada horatada bhava.. very nice poem.. mattu nimma vivarane kooda

    dhanyavaadagalu

    pravi

    ReplyDelete
  21. ಬೇ೦ದ್ರೆಯವರು ತಮ್ಮ ಕೃತಿಗಳಲ್ಲಿ ’ಕಾಮ’ಕ್ಕಿಂತ ‘ಪ್ರೇಮ’ ಉಚ್ಚವಾದದ್ದು ಎ೦ದು ಸ್ಪಷ್ಟವಾದ ಅಭಿಪ್ರಾಯ ಕೊಟ್ಟಿರುವುದನ್ನು ವಿಶ್ಲೇಷಣೆ ಮಾಡಿರುವ ಸುನಾತ್ ಸರ್ - ನವಿರಾಗಿ ಉಳಿದ ’ನವೋದಯ, ನವ್ಯ, ನವ್ಯೋತ್ತರ” ಶ್ರೇಷ್ಟ ಕವಿಗಳಿಗಳ ಭಾವಗಳನ್ನೂ ವಿಮರ್ಶಿಸಿದ್ದೀರಿ..! ಬಹುಶಹ ಈಗಿನ ಪೀಳಿಗೆಯ ಓದುಗರಿಗೆ ಸಾಕಷ್ಟು hints ಕೊಡುತ್ತಿದ್ದೀರಿ.. ಧನ್ಯವಾದಗಳು ಸರ್.

    ಅನ೦ತ್

    ReplyDelete
  22. ಎಂದಿನಂತೆ, ಉತ್ತಮ ಬರಹ; ಜೊತೆಗೇ ಪ್ರಾಸಂಗಿಕವಾಗಿ ಬಂದ ನವೋದಯ-ನವ್ಯ-ನವ್ಯೋತ್ತರ (ಇಂಥ ವಿಂಗಡಣೆಯೇ ತುಸು ಕಷ್ಟಕರ, ಕೆಲವೊಮ್ಮೆ) ಸಾಹಿತ್ಯದ ಒಲವು ನಿಲುವುಗಳನ್ನು ಸೊಗಸಾಗಿ ನಿರೂಪಿಸಿದ್ದೀರಿ

    ReplyDelete
  23. ಸುಮಾ,
    ನೀವು ಹೇಳುವದು ನಿಜ. ಬೇಂದ್ರೆಯವರ ಕೆಲವು ಕವನಗಳು ಸುಲಿದ ಬಾಳೆಯ ಹಣ್ಣಿನಂತಿದ್ದರೆ, ಇನ್ನು ಕೆಲವು ಕವನಗಳು ಹಲಸಿನ ಹಣ್ಣಿನಂತೆ ಕಷ್ಟದಿಂದಲೆ ಬಿಚ್ಚಿ ಆಸ್ವಾದಿಸುವಂತಾಹವು ಆಗಿವೆ.

    ReplyDelete
  24. ಪ್ರವೀಣ,
    ಕಾಮಕಸ್ತೂರಿಯನ್ನು ನೋಡಿ, ಅದರ ಸುಗಂಧವನ್ನು ಸವಿದವರಿಗೆ ಕವನದ ಸವಿಯೂ ಸುಲಭವಾಗಿಯೇ ಸಿಗುತ್ತದೆ. ಕವನಕ್ಕೂ,ಕಾಮಕಸ್ತೂರಿಗೂ ಎಷ್ಟೊಂದು ಸಾಮ್ಯವಿದೆ, ಅಲ್ಲವೆ?

    ReplyDelete
  25. ಅನಂತರಾಜರೆ,
    ಧನ್ಯವಾದಗಳು. ಹೊಸ ಪೀಳಿಗೆಯ ಓದುಗರಲ್ಲಿ ಅನೇಕರಿಗೆ ಹಳೆಯ ಕಾಲದ ಸಾಹಿತ್ಯದ ಸ್ಪರ್ಶವಿರುವದಿಲ್ಲ. ಆದುದರಿಂದ ಅಂತಹ ಎಳೆಯರಿಗೆ ಆ ತಿಳಿವನ್ನು ಕೊಡುವದು ನಮ್ಮ ಕರ್ತವ್ಯವೇ ಆಗಿದೆ!

    ReplyDelete
  26. ಸುನಾಥ್ ಕಾಕಾ,

    ಕಾಮಕಸ್ತೂರಿ ಪರಿಮಳ ಬೀರಿದ ಲೇಖನಕ್ಕೆ ವಂದನೆಗಳು.

    ಹಾಗೆಯೇ ಸಾಕಷ್ಟು ಗೋಜಲಿರುವ ನವ್ಯ-ನವ್ಯೋದಯದ ತಿಕ್ಕಾಟದ ಸುಳಿಗೆ ಸಿಗದೆ, ವಿಮರ್ಶಿಸಿದ ರೀತಿ ಚೆನ್ನಾಗಿತ್ತು.

    ReplyDelete
  27. ಮಂಜುನಾಥರೆ,
    ನವೋದಯ, ನವ್ಯ ಹಾಗು ನವ್ಯೋತ್ತರ ಸಾಹಿತ್ಯದ ಒಂದು ಮುಖವನ್ನು ಮಾತ್ರ (ಕಾಮಕ್ಕೆ ಸಂಬಂಧಿಸಿದಂತೆ) ಇಲ್ಲಿ ಗುರುತಿಸಲು ಪ್ರಯತ್ನಿಸಿದ್ದೇನೆ. ಸಮಗ್ರ ಪರಾಮರ್ಶೆಯು ಸಾಹಿತ್ಯತಜ್ಞರಿಗೇ ಬಿಟ್ಟ ವಿಷಯ!

    ReplyDelete
  28. ಅಪ್ಪ-ಅಮ್ಮ,
    ಧನ್ಯವಾದಗಳು. ನವೋದಯ-ನವ್ಯ-ನವ್ಯೋತ್ತರ ಸಾಹಿತ್ಯದಲ್ಲಿ ಸಾಕಷ್ಟು ಕುರುಕ್ಷೇತ್ರವಿದೆ. ಆ ರಣಭೂಮಿಯಲ್ಲಿ ಕಾಲಿಕ್ಕಿ, ಗಾಯ ಮಾಡಿಕೊಳ್ಳದೆ ಮರಳುವದು ಕಷ್ಟವೇ ಆಗಿದೆ!

    ReplyDelete
  29. ಆನೆ ನಡೆದದ್ದೇ ದಾರಿ ಅಂತಾರಲ್ಲ ಅದೇರೀತಿ ಬೇಂದ್ರೆ ಬರೆದರೆ ಕಾವ್ಯ ಸಹಜ ಸುಂದರ, ಕಾಮಕಸ್ತೂರಿಯ ಗಿಡವನ್ನು ಪ್ರಾಯಶಃ ಅನೇಕರು ನೋಡಿರುತ್ತಾರೆ, ಅದರ ಬೀಜದ ಪಾನಕವನ್ನು ಸವಿದಿರುತ್ತಾರೆ, ಕಾಮಕಸ್ತೂರಿಯ ಘಮ ಘಮ ಕವನದಲ್ಲೂ ಮಘ ಮಘಿಸಿದೆ! ನಿಮ್ಮ ಭಾಷ್ಯದಲ್ಲೂ ಅದರ ಲಾಸ್ಯ ಕಾಣುತ್ತದೆ, ಕಾಡುತ್ತದೆ, ಸಾಹಿತಿಗಳ ಜಗಳ ಕಾವ್ಯಮಯವಾಗೇ ಇರುತ್ತಿತ್ತು. ಅದು ಅಂದಿಗೆ ಹೀಗಾದರೆ ಇಂದು ನಿಮ್ಮ ಲೇಖನವೊಂದರ ಬಗ್ಗೆ ಗೂಗಲ್ ಬಜ್ ನಲ್ಲಿ ಹಲವರು ಕುತರ್ಕಮಾಡಿದ್ದೂ ಕಾಣಿಸಿತು! ಅಂದಹಾಗೆ ಸಾಹಿತ್ಯ ಪ್ರಪಂಚವೂ ಕುತರ್ಕಗಳಿಂದ/ವಗ್ವಾದಗಳಿಂದ ಮುಕ್ತವಾಗಿಲ್ಲ. ಭೈರಪ್ಪನವರ 'ಕವಲಿ'ನ ಕವಲೊಡೆದ ಅಭಿಪ್ರಾಯಗಳು ಹರಿದಾಡುತ್ತಲೇ ಇವೆ. ಸಾಹಿತಿಯೋಬ್ಬನಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ ಎನ್ನುವುದನ್ನು ಮರೆತೂ ಕೆಲವರು ಆಡುತ್ತಾರೆ. ರಸಮಯ ಗ್ರಾಸ, ಮಧುರ ಸುಗ್ರಾಸ, ಧನ್ಯವಾದಗಳು

    ReplyDelete
  30. ಪ್ರಿಯ ಸುನಾಥ,

    ಆಹ್! ಎಂಥ ಆಹ್ಲಾದದ ಪರಿಮಳ. ಕಸ್ತೂರಿಯ ಪರಿಮಳ ಹರಡುತಿರುವ ನಿಮ್ಮ ಕಾವ್ಯಪ್ರೀತಿಯೇ ಅನುಪಮ. ಚೆನ್ನವೆನ್ನುವುದಕ್ಕಿಂತ ಮಿಗಿಲು ಪದ ಇದಕಿಲ್ಲ.
    you are always a great pleasure to read.
    ನಿಮ್ಮಂತಹ ಕವಿ-ಕಾವ್ಯ ಪ್ರೀತಿಯವರು ನಮ್ಮ ನಡುವಿರುವುದೇ ಒಂದು ಭಾಗ್ಯ.
    -ಪ್ರೀತಿಯಿಂದ,
    ಸಿಂಧು

    ReplyDelete
  31. ಸುನಾಥ್ ಸರ್,

    ತಡವಾಗಿ ಕಾಮಕಸ್ತೂರಿಯನ್ನು ಓದುತ್ತಿದ್ದೇನೆ. ನಿಮ್ಮನ್ನು ಬಿಟ್ಟರೆ ಬೇಂದ್ರೆಯನ್ನು ಹೀಗೆ ಸಂಪೂರ್ಣವಾಗಿ ವಿವರಿಸಲು ಯಾರಿಗೂ ಸಾಧ್ಯವಿಲ್ಲವೇನೋ ಎನ್ನುವ ಮಟ್ಟಿಗೆ ವಿವರ ಕೊಡುತ್ತೀರಿ..ಟಿಪ್ಪಣಿಗಳು ನಿಜಕ್ಕೂ ಮಾಹಿತಿಯ ಪೂರವನ್ನೇ ಹರಿಸುತ್ತವೆ..ನಿಮ್ಮ ಈ ರೀತಿಯ ಸಾಹಿತ್ಯ ಸಾಧನೆಗೆ ನನ್ನ ಕಡೆಯಿಂದ ಧನ್ಯವಾದಗಳು.

    ReplyDelete
  32. ಭಟ್ಟರೆ,
    ನನ್ನ ತಾಂತ್ರಿಕ ಜ್ಞಾನ ಕಡಿಮೆ. ಬಝ್ ಎನ್ನುವದನ್ನು ಕೇಳಿದ್ದೇನೆಯೇ ಹೊರತು ಕಂಡಿಲ್ಲ. ಆದುದರಿಂದ ಈ ಗೂಗಲ್ ಬಝ್ಝಿಗೆ ಹೇಗೆ ಹೋಗಬೇಕು ತಿಳಿಸಿ. ನನ್ನ ಲೇಖನಗಳಿಗೆ ಅಲ್ಲಿ ಹಾಕಿದ ಬೇವಿನ ಒಗ್ಗರಣೆಯ ಸವಿಯನ್ನು ಆನಂದಿಸುವೆ.

    ReplyDelete
  33. ಸಿಂಧು,
    ನಿಮ್ಮ ಪ್ರೀತಿಯ ಪ್ರಶಂಸೆಗೆ ಧನ್ಯವಾದಗಳು. ಕವಿ ದೊಡ್ಡವನು. ಅವನ ಕಾವ್ಯಸುಧೆ ಯಾರಿಗೆ ಮೆಚ್ಚಿಗೆಯಾಗಲಿಕ್ಕಿಲ್ಲ?

    ReplyDelete
  34. ಶಿವು,
    ಕಾಮಕಸ್ತೂರಿಯ ಪರಿಮಳವನ್ನು ನೀವು ಮೆಚ್ಚಿದರೆ, ಅದೇ ಸಾಕು ನನಗೆ!

    ReplyDelete
  35. ಗೂಗಲ್ ಬಝ್ ಗೆ ಹೋಗಲು ದಾರಿ: ಜೀಮೇಲ್ ಇರದಿದ್ದರೆ ಹೊಸದಾಗಿ ಆರಂಭಿಸಿ, ಅದರಲ್ಲಿ ಇನ್ ಬಾಕ್ಸ್ ಜೊತೆಗೆ ಬಝ್ ಕಾಣಸಿಗುತ್ತದೆ, ಆಮೇಲೆ ಹಲವು ಸ್ನೇಹಿತರುಗಳ ಪಟ್ಟಿ ಕೂಡ ಸಿಗುತ್ತಲೇ ಹೋಗುತ್ತದೆ, ಕೆಲವನ್ನು ನೀವು ಫಾಲೋ ಮಾಡಿದರೆ ಇನ್ನು ಹಲವರು ನಿಮ್ಮನ್ನು ಹಿಂಬಾಲಿಸುತ್ತಾ ಬರುತ್ತಾರೆ. ಧನ್ಯವಾದಗಳು.

    ReplyDelete
  36. ಭಟ್ಟರೆ,
    ಧನ್ಯವಾದಗಳು.

    ReplyDelete
  37. ಕಾಕಾ ಅದೆಂಥಾ ಕವಿತಾ ದೇಸಿ ಸೊಗಡದ.
    ನಿಮ್ಮ ವಿಶ್ಲೇಷಣೆನೂ ಛಂದ ಎರಡೂ ಕೂಡಿ ಒಂಥರಾ ಮಾಯಾವಲಯ ಮಾಡ್ಯಾವ

    ReplyDelete
  38. ದೇಸಾಯರ,
    ಬೇಂದ್ರೆಯವರ ಕವನಗಳ ದೇಸಿ ನುಡಿ ತುಂಬ ಸುಖ ಕೊಡುವಂತಹದು, ಅಲ್ಲವೆ?

    ReplyDelete
  39. ಬೇಂದ್ರೆಯವರ ಕವನದ ಸೊಗಸಾದ ವಿವರಣೆಯೊಂದಿಗೆ ಉಪಯುಕ್ತ ಟಿಪ್ಪಣಿಗಳನ್ನೂ ನೀಡಿ ಉಪಕರಿಸಿದ್ದೀರಿ- ಕೃತಜ್ಞತೆಗಳು.

    ReplyDelete
  40. ನಾರಾಯಣ ಭಟ್ಟರೆ,
    ತಮಗೆ ಧನ್ಯವಾದಗಳು.

    ReplyDelete
  41. ಸುನಾಥ್ ಸರ್, ಬೇಂದ್ರೆಯವರ ಕಾಮಕಸ್ತೂರಿಯ ಕುರಿತಾದ ಕವನ ,ಅದರ ವರ್ಣನೆ , ಮುಟ್ಟಿದರೆ ತಲೆದೂಗಿ ತನ್ನ ಪರಿಮಳವನ್ನು ಎಲ್ಲೆಡೆ ಪಸರಿಸಿ ಆಹ್ಲಾದವನೀವಂತೆ ಸೊಗಸಾದ ವರ್ಣನೆಗಾಗಿ ಧನ್ಯವಾದಗಳು.
    ಕಾಮಕಸ್ತೂರಿ,ಪಚ್ಚೆತೇನೆ,
    ಮರುಗ ,ದವನಮಲ್ಲಿಗೆ ಪೂಜೆಗೆ ಶ್ರೇಷ್ಠ. ಹಾಗೆ ನವ್ಯ ನವೋದಯ ಕವಿಗಳ ಬಗ್ಗೆ ತಿಳಿಸಿರುವುದಕ್ಕಾಗಿ ಧನ್ಯವಾದಗಳು.

    ReplyDelete
  42. ಕಲಾವತಿಯವರೆ,
    ಕಾಮಕಸ್ತೂರಿಯನ್ನು ಮೆಚ್ಚಿಕೊಂಡದ್ದಕ್ಕಾಗಿ ನಿಮಗೆ ಧನ್ಯವಾದಗಳು.

    ReplyDelete
  43. ಸುನಾಥಣ್ಣ...ವಿಷಯಗಳ ಹಲ ಪರಿ ಪರಿಚಯ ಮನಸಿನ ಅಥವಾ ಸಂದರ್ಭದ ಹಿನ್ನೆಲೆಯಲ್ಲಿ ಅರ್ಥಿಅಸಿಕೊಂಡುದನ್ನು ಆಧರಿಸುತ್ತದೆ ಅಲ್ಲವೇ..ಅಂತಹ ಹಲವಾರು ಮನೋಭಾವಗಳ ಮತ್ತು ಸಂದರ್ಭಗಳ ಹಿನ್ನೆಲೆಯಲ್ಲಿ ಒಮ್ದು ವಿಷಯದ ವಿಶ್ಲೇಷಣೆ..ನಿಮ್ಮಲ್ಲಿ ನಾನು ಕಂಡ ಮಹಾನ್ ಗುಣ...ನನಗೆ ನನ್ನ ಪ್ರೌಢ ಶಾಲೆಯ ಕನ್ನಡ ಪಂಡಿತರ ನೆನಪಾಗುತ್ತೆ...
    ನಿಮ್ಮ ಲೇಖನಗಳನ್ನು ಓದುವುದೇ ಒಂದು ಜ್ಞಾನಾರ್ಜಕ ಕ್ರಿಯೆ...ಹ್ಯಾಟ್ಸ್ ಆಫ್..

    ReplyDelete
  44. ಜಲನಯನ,
    ನಮ್ಮ ಶಾಲೆಗಳ ಕನ್ನಡ ಪಂಡಿತರು ತಿಳಿದುಕೊಂಡವರು. ಅವರ ಯೋಗ್ಯತೆ ನನಗೆ ಖಂಡಿತವಾಗಿಯೂ ಇಲ್ಲ. ನಿಮ್ಮ ಪ್ರೀತಿಯ ಕಣ್ಣಿಗೆ ನಾನು ಹಾಗೆ ಕಾಣುತ್ತಿರಬಹುದು!

    ReplyDelete
  45. After reading your article ,i feel we did not give enough recognition to bendre during his life time.He deserve more.

    ReplyDelete