Monday, March 7, 2011

`ಗೃಹಿಣಿ'.........................ಬೇಂದ್ರೆ


ಮಾರ್ಚ ೮, ೨೦೧೧-- ಇದು ಅಂತರರಾಷ್ಟ್ರೀಯ ಮಹಿಳಾದಿನದ ಶತಮಾನೋತ್ಸವದ ದಿನ.
ಈ ಸಂದರ್ಭದಲ್ಲಿ ಬೇಂದ್ರೆಯವರು  ಸ್ತ್ರೀಯ ಜೊತೆಗೆ ಯಾವ ರೀತಿಯ ಭಾವಸಂಬಂಧವನ್ನು ಹೊಂದಿದ್ದರು ಎನ್ನುವದನ್ನು ಅರಿಯಲು, ಈ ಮೂರು ಕವನಗಳನ್ನು  ಪರಿಶೀಲಿಸಬಹುದು:
(೧) ನಾನು
(೨) ಗಂಡಸು ಹೆಂಗಸಿಗೆ
(೩) ಗೃಹಿಣಿ

ನಾನು’ ಕವನದಲ್ಲಿ ಬೇಂದ್ರೆಯವರು ತಾನು ಐದು ತಾಯಂದಿರ ಕೂಸು ಎಂದು ಹೇಳಿಕೊಳ್ಳುತ್ತಾರೆ. ಕವನದಲ್ಲಿಯ ಕ್ರಮದ ಮೇರೆಗೆ, ಈ ತಾಯಂದಿರು ಹೀಗಿದ್ದಾರೆ: ವಿಶ್ವಮಾತೆ, ಭೂಮಿತಾಯಿ, ಭಾರತಮಾತೆ, ಕನ್ನಡ ಮಾತೆ ಹಾಗು ತನ್ನ ಹೆತ್ತ ತಾಯಿ.
‘ಈ ಐದು ಐದೆಯರೆ ಪಂಚಪ್ರಾಣಗಳಾಗಿ, ಈ ಜೀವ ದೇಹನಿಹನು.’

ಬೇಂದ್ರೆಯವರಿಗೆ ಹೆಣ್ಣು ಅಂದರೆ ಪೋಷಣೆಯ ಮೂರ್ತಿ. ಈ ಐದೂ ಮುತ್ತೈದೆಯರು ಬೇಂದ್ರೆಯವರಿಗೆ ವಿಭಿನ್ನ ರೀತಿಯಲ್ಲಿ ಪೋಷಣೆ ಇತ್ತಿದ್ದಾರೆ. ಅವರಿಂದಲೇ ಬೇಂದ್ರೆಯವರು ‘ಕವಿ ಅಂಬಿಕಾತನಯದತ್ತ’ರಾಗಿದ್ದಾರೆ. ತಮ್ಮ ಮಾತೆಯರನ್ನು ಕೃತಜ್ಞತೆಯಿಂದ ನೆನೆದು, ಅವರ ಋಣ ತೀರಿಸುವ ಕೈಂಕರ್ಯವನ್ನು ಬೇಂದ್ರೆಯವರು ಹೊತ್ತಿದ್ದಾರೆ.

ಎರಡನೆಯದಾದ  ‘ಗಂಡಸು ಹೆಂಗಸಿಗೆ  ’ ಕವನದಲ್ಲಿ, ಬೇಂದ್ರೆಯವರು ಹೆಂಗಸು ಗಂಡಸಿಗೆ ಕೊಡುವ ಪ್ರೀತಿಯ ವಿವಿಧ ಮುಖಗಳನ್ನು ವರ್ಣಿಸುತ್ತಾರೆ:
ತಾಯಿ ಕನಿಮನೆಯೇ, ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
ಮಗಳೊ ನನ್ನೆದೆಯ ಮುಗುಳೊ?

ಯಾವುದೇ ಗಂಡಸಿಗೆ, ಹೆಣ್ಣಿನ ಜೊತೆಗೆ ಬರುವ ಮೊದಲ ಸಂಬಂಧವು ತಾಯಿ-ಮಗುವಿನದು;
ಕಾಲಾನುಕ್ರಮದಲ್ಲಿ ಬಳಿಕ ಬರುವದು ಅಕ್ಕ-ತಮ್ಮ;
ನಂತರ ಅಣ್ಣ-ತಂಗಿ;
ಹರೆಯದಲ್ಲಿ ಗಂಡ-ಹೆಂಡತಿ.
ಕೊನೆಗೆ ಬರುವದು ಅಪ್ಪ-ಮಗಳು.

ಈ ಎಲ್ಲ ಸಂಬಂಧಗಳಲ್ಲಿ ಪ್ರೀತಿಯ ಸ್ವರೂಪವೂ ಸಹ ಭಿನ್ನವಾಗಿರುತ್ತದೆ.
ತಾಯಿಗೆ ಮಗುವಿನ ಮೇಲಿರುವದು ಅನುಕಂಪ ತುಂಬಿದ ವಾತ್ಸಲ್ಯ. ಅವಳು ‘ಕನಿಮನೆ’ ಅಂದರೆ ಮರುಕದ ಉಗ್ರಾಣ.
ಅಕ್ಕನಿಗೆ ತಮ್ಮನ ಮೇಲಿರುವದು ಅಕ್ಕರತೆ.
ತಂಗಿಯು ಅಣ್ಣನಿಗೆ ಮುದ್ದು ಬಂಗಾರ.
ಹೆಂಡತಿಯು ಇವನ ಪುರುಷಾರ್ಥಗಳ ಸಹಧರ್ಮಿಣಿ. ಆದುದರಿಂದ ಅವಳು ಮೈಗೊಂಡ ನನ್ನಿ.
ಮಗಳಂತೂ ಇವನ ಹಂಬಲದಿಂದ ರೂಪು ತಳೆದ ಮುಗುಳು ಅಂದರೆ ಹೂಮೊಗ್ಗು!

ಇವೆಲ್ಲ ವೈಯಕ್ತಿಕ ಸಂಬಂಧಗಳು.
ಸಾಂಸ್ಕೃತಿಕ ನೆಲೆಯಲ್ಲಿ ಗಂಡು ಹಾಗು ಹೆಣ್ಣಿನ ಪಾತ್ರಗಳೇನು ಎನ್ನುವದನ್ನು ಬೇಂದ್ರೆಯವರು ತಮ್ಮ ‘ಗೃಹಿಣಿ’ ಕವನದಲ್ಲಿ ಈ ರೀತಿಯಾಗಿ ಹಿಡಿದಿಟ್ಟಿದ್ದಾರೆ:

ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.
ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.
ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.
. . . . . . . . . . . . . . . . . . . . . . . . . . . . . . . . . . . . . . . . . .. . . . . . ..

ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.

ಈ ಕವನದ ಮೊದಲ ನುಡಿಯ ಮೊದಲ ಸಾಲು ಮಾನವ ಸಂಸ್ಕೃತಿಯ ಮೊದಲ ಮೆಟ್ಟಲನ್ನು ಚಿತ್ರಿಸುತ್ತದೆ. ಇದಿನ್ನೂ ಬೇಟೆಯಾಡುವ ಹಂತ. ಈ ಹಂತದಲ್ಲಿ ಗಂಡಿಗಿರುವ ಶೌರ್ಯದ, ಕ್ರೌರ್ಯದ ಹಮ್ಮನ್ನು ಬೇಂದ್ರೆಯವರು ‘ಏಳು ಮೆಟ್ಟಿನ ಹುಲಿ’ ಹಾಗು ‘ಬೀರಬೇಂಟೆ’ ಪದಗಳಿಂದ ವ್ಯಕ್ತಪಡಿಸಿದ್ದಾರೆ. ಗಂಡಸಿನಲ್ಲಿರುವ ಈ ಜೀವ-ವಿರೋಧಿ,  ಭಾವೋನ್ಮಾದವನ್ನು ಜೀವನ್ಮುಖಿ ಭಾವವನ್ನಾಗಿ ತಿದ್ದಿದವಳೇ ಹೆಣ್ಣು. ಜೀವವಿನಾಶಕ್ಕಾಗಿ ಹೊರಟು ನಿಂತ ಗಂಡಸನ್ನು ಅಲ್ಲಿಯೇ ತಡೆದು ನಿಲ್ಲಿಸಿ, ಸೃಷ್ಟಿಸಂಕೇತವಾದ ಮಗುವನ್ನು ಮುದ್ದಿಸುವಂತೆ ಮಾಡಿದವಳೇ ಹೆಣ್ಣು. ಇದನ್ನು ಸಾಧಿಸುವ ಅವಳ ಶಾಂತ ರೀತಿಯನ್ನು ಬೇಂದ್ರೆ ಹೀಗೆ ಬಣ್ಣಿಸುತ್ತಾರೆ:
‘ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ,ತಾನೆ ತನ್ನಷ್ಟಕ್ಕೆ ಹಾಡಿದಾಕೆ.’
ಬೇಟೆಯ ಹುಮ್ಮಸ್ಸಿನಲ್ಲಿಯೇ ಏಕಲಕ್ಷ್ಯನಾದ ಗಂಡಿನ ಕಿವಿಯಲ್ಲಿ ಇವಳು ಮೃದುವಾಗಿ ಪಿಸು ನುಡಿಯುತ್ತಾಳೆ. ಗರ್ವದ ಗಂಡಸನ್ನು ‘ಕಾಂತಾಸಮ್ಮಿತಿಯ’ ಮೂಲಕ ಅವಳು ಬದಲಾಯಿಸುತ್ತಾಳೆ. ಹಿಂಸಾತ್ಮಕ ಸಂಸ್ಕೃತಿಯನ್ನು ಅಹಿಂಸಾತ್ಮಕ ಸಂಸ್ಕೃತಿಗೆ ಪರಿವರ್ತಿಸುವ ಮೊದಲ ಹೆಜ್ಜೆ ಇದು. ಇದನ್ನು ಸಾಧಿಸುವಲ್ಲಿ ಅವಳು ಯಾವುದೇ ಅಬ್ಬರವನ್ನು ತೋರುವದಿಲ್ಲ.
ತನ್ನಷ್ಟಕ್ಕೆ ಹಾಡುತ್ತ, ಮುಂದುವರೆಯುವ ಮಾದರಿ ಅವಳದು. ಹಾಡುವದು ನಾಗರಿಕ ಜೀವನದ ಮೊದಲ ಕಲೆ ಎನ್ನುವದನ್ನೂ ಬೇಂದ್ರೆ ಸೂಚಿಸುತ್ತಾರೆ. ಈ ಕಲೆಗೆ ಮೂಲಳಾದವಳು ತಾಯಿ ಸರಸ್ವತಿ ಅಂದರೆ ಹೆಣ್ಣು.

ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.

ಎರಡನೆಯ ನುಡಿಯು ನಾಗರಿಕತೆಯ ವಿಕಾಸವನ್ನು ಸೂಚಿಸುತ್ತದೆ. ಅಡವಿಯಲ್ಲಿರುವ ಪ್ರಾಣಿಗಳಂತೆಯೇ ಜೀವಿಸುತ್ತಿದ್ದ ಮನುಷ್ಯನ ಸಾಂಸ್ಕೃತಿಕ ಪ್ರಜ್ಞೆ ಬದಲಾಗಿರುವದನ್ನು ಈ ನುಡಿ ವರ್ಣಿಸುತ್ತದೆ. ಕಲೆ ಹಾಗು ಸೌಂದರ್ಯಸೃಷ್ಟಿಯಲ್ಲಿ ಮಾನವನಿಗೆ ಅಭಿರುಚಿ ಬೆಳೆದದ್ದನ್ನು, ಹಾಗು ಹೆಣ್ಣಿನ ಮೂಲಕವೇ ಇದು ಸಾಧ್ಯವಾಗಿದ್ದನ್ನು ‘ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ.’ ಎನ್ನುವ ವರ್ಣನೆಯ ಮೂಲಕ ಬೇಂದ್ರೆ ಸೂಚಿಸುತ್ತಾರೆ. ಏನೇ ಆದರೂ ತನ್ನ ಹಾಗು ತನ್ನವರ ಶೃಂಗಾರಕ್ಕೆ ಈ ನಾಗರಿಕತೆ ಸೀಮಿತವಾಗಿ ಉಳಿಯಲಿಲ್ಲ. ತಿಂದುಂಡು ಸಾಯುವ ಭೌತಿಕ ಲೋಕದಾಚೆಗೆ ಇರುವ ಪಾರಮಾರ್ಥಿಕ ಲೋಕದ ಅರಿವು ಹೆಣ್ಣಿನಲ್ಲಿ ಮೂಡತೊಡಗಿದೆ. ಅವಳು ತನ್ನ ಗೂಡಿನ ಪಕ್ಕದ ಗಿಡಗಳಿಗೆ ಬಾವುಟವನ್ನು ಕಟ್ಟುತ್ತಾಳೆ. ಇದು ಮಾನವನ ಸೌಂದರ್ಯಾಭಿರುಚಿಯ ಹಾಗು ಉನ್ನತಿಯ ಅಭೀಪ್ಸೆಯನ್ನು ತೋರುತ್ತದೆ. ತಾವಿರುವ ಲೋಕವು ಪ್ರಾಣಿಲೋಕವಾಗದೆ, ಅಂತರಂಗವನ್ನು ಬೆಳಗುವ ಲೋಕವಾಗಲಿ ಎಂದು ಅವಳು ಬೇಡಿಕೊಳ್ಳುತ್ತಾಳೆ. ಮಾನವಶಕ್ತಿಯನ್ನು ಮೀರಿದ ಚೈತನ್ಯವೊಂದಿದೆ ಎಂದು ಅವಳಿಗೆ ಅರಿವಾಗತೊಡಗಿದ್ದು ಈ ‘ಬೇಡಿಕೊಳ್ಳುವ ’ ಪದದಿಂದ ವ್ಯಕ್ತವಾಗುತ್ತದೆ. ಈ ಬೇಡಿಕೆಯಲ್ಲಿ ಅಬ್ಬರವಿಲ್ಲ. ಅವಳದು ಮೂಕ ಮಾತುಗಳು, ವಿನಯಪೂರ್ಣ ಸುಸಂಸ್ಕೃತಿ.

ದೇವರ ಕಲ್ಪನೆ ಮೂಡುತ್ತಿರುವ ಈ ಕಾಲಾವಧಿಯು ನಾಗರಿಕತೆಯ ಪ್ರಾಥಮಿಕ ಸಂಶೋಧನೆಗಳ ಕಾಲಾವಧಿಯೂ ಆಗಿದೆ. ಬತ್ತಲೆ ಮಾನವಿಯು ಇದೀಗ ಗಿಡಮರಗಳ ತೊಪ್ಪಲನ್ನು ಕಟ್ಟಿಕೊಳ್ಳಲು ಕಲಿತಳು. ತನ್ನ ಚೆಲುವಿಗೆ ಮೆರಗು ಕೊಡಲೆಂದು ಹಕ್ಕಿಯ ಗರಿಯನ್ನು ತಲೆಗೆ ಆಭರಣವಾಗಿ ಬಳಸತೊಡಗಿದಳು. ಇದೆಲ್ಲವೂ ನಾಗರಿಕತೆಯ ಬೆಳವಣಿಗೆಗೆ ಹೆಣ್ಣು ಕೊಟ್ಟ ಕಾಣಿಕೆ. ನಮ್ಮ ದೇವತೆಗಳ ಉಡುಗೆ, ತೊಡುಗೆಗಳಲ್ಲಿಯೂ ಈ ಕಾಲಾವಧಿಯು ಬಿಂಬಿತವಾಗಿದೆ. ಸವದತ್ತಿಯ ಎಲ್ಲಮ್ಮನು ತನ್ನ ಭಕ್ತರಿಗೆ ಬೇವಿನ ತೊಪ್ಪಲನ್ನು ತೊಡಿಸುತ್ತಾಳೆ; ಬನಶಂಕರಿ ದೇವಿಯು ‘ಶಾಕಾಂಬರಿ’, ಅಂದರೆ ಗಿಡದ ತೊಪ್ಪಲನ್ನು ಉಟ್ಟವಳು. ಶ್ರೀಕೃಷ್ಣನು ತನ್ನ ತಲೆಗೊಂದು ನವಿಲಗರಿಯನ್ನು ಸಿಕ್ಕಿಸಿಕೊಂಡವನು. ನಮ್ಮಂತೆ ನಮ್ಮ ದೇವರುಗಳೂ ಸಹ ‘ಬತ್ತಲೆ ಕಾಳಿದೇವಿ’ಯಿಂದ, ಸಕಲಾಭರಣಶೋಭಿತೆಯಾದ ಲಕ್ಷ್ಮೀದೇವಿಯವರೆಗೂ ವಿವಿಧ ನಾಗರಿಕ ಸ್ತರಗಳಲ್ಲಿ ಹಾಯ್ದು ಬಂದವರೇ.

ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.

ಬಯಲಲ್ಲಿ ಬಿದ್ದ ಪ್ರಾಣಿಯನ್ನು ಮನೆಯಲ್ಲಿ ಬೆಳೆಯುವ ಮಾನವನನ್ನಾಗಿ ಮಾಡಿದವಳೇ ಹೆಣ್ಣು. ಆದುದರಿಂದಲೇ ಅವಳು ಗೃಹಿಣಿ.ನಾಗರಿಕತೆಯ ಬೆಳವಣಿಗೆ ಹಾಗು ಸಂಸ್ಕೃತಿಯ ಉನ್ನತೀಕರಣ ಇವು ಹೆಣ್ಣಿನ ಕೊಡುಗೆ. ಇದನ್ನೆಲ್ಲ ಅವಳು ಮೌನವಾಗಿಯೇ ಸಾಧಿಸುತ್ತ ಬಂದಿದ್ದಾಳೆ. ಈ ಸಾಧನೆಯ ಹಿಂದಿನ ಅಪೇಕ್ಷೆ ಏನು? ಲೋಕಕ್ಕೆಲ್ಲ ಶುಭವಾಗಲಿ ಎನ್ನುವದೇ ಅವಳ ಹಿರಿಹಂಬಲ. ಅದನ್ನು ಅವಳು ಸಾಧಿಸುವದು ಮುಂಜಾವಿನಲ್ಲೆದ್ದು ಮನೆಯ ಹೊಸ್ತಿಲಕೆ ರಂಗೋಲಿ ಎಳೆಯುವ ಕ್ರಿಯೆಯೊಂದಿಗೆ. ಇದನ್ನು ಬೇಂದ್ರೆಯವರು ’ಶುಭವನ್ನು ಬರೆಯುವ ಕ್ರಿಯೆ’ ಎಂದು ಬಣ್ಣಿಸುತ್ತಾರೆ. ಕುಟುಂಬವೇ ಸಮಾಜದ ಪ್ರಾಥಮಿಕ ಘಟಕ. ಈ ಕುಟುಂಬಕ್ಕೆ ಅವಳು ಆಡಂಬರದ ಸಂಪತ್ತನ್ನು ಬಯಸುವದಿಲ್ಲ, ಕೇವಲ ಶುಭಮಂಗಲವನ್ನು ಬಯಸುತ್ತಾಳೆ.  ತಾನು ಬೆಳೆಯುವದೇ ಸಮಾಜದ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆ ಎನ್ನುವದನ್ನು ಅರಿತ ಅವಳು ‘ಬಾಳ ಸುಳಿಯಲಿ ಬೆಳೆದು ತೋರಿಸುತ್ತಾಳೆ ’. 
ರಂಗೋಲಿಯನ್ನು ಬರೆಯುವದು ಒಂದು ಚಿತ್ರಕಲೆ. ನಾಗರಿಕ ಕಲೆಗಳ ಮತ್ತೊಂದು ಸಂಶೋಧನೆಯ ಪ್ರವರ್ತಕಿ ಹೆಣ್ಣೇ ಆಗಿದ್ದಾಳೆ!

ಗಂಡಸಿನ ಜಯವು ಪ್ರಕೃತಿಯ ಮೇಲಿನ ಬಾಹ್ಯಜಯವಾಗಿದ್ದರೆ, ಹೆಣ್ಣಿನ ಜಯವು ಸಾಂಸ್ಕೃತಿಕ ಜಯ. ಇಂತಹ ಜಯವು ಮಾನವಲೋಕಕ್ಕೆ ಪ್ರತಿದಿನವೂ ಲಭಿಸಲಿ ಎಂದು ಅವಳು ತಾನು ನಂಬುತ್ತಿರುವ ಆ ದೈವೀಚೈತನ್ಯಕ್ಕೆ ಪ್ರಾರ್ಥಿಸುತ್ತಾಳೆ. ಈ ಕೊನೆಯ ಸಾಲಿನ ಮೂಲಕ, ಬೇಂದ್ರೆಯವರು ಹೆಣ್ಣಿನ ಮನೋಧರ್ಮವನ್ನು ತೋರುತ್ತಿದ್ದಾರೆ. 

ಮೂರು ನುಡಿಗಳ ಈ ಪುಟ್ಟ ಕವನದಲ್ಲಿ ನಾಗರಿಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಹಾಗು ಗೃಹಿಣಿಯೇ ಮಾನವಸಂಸ್ಕೃತಿಯ ಸ್ರೋತ ಎನ್ನುವ ಸತ್ಯವನ್ನು ಬೇಂದ್ರೆಯವರು ತೆರೆದು ತೋರಿಸುತ್ತಿದ್ದಾರೆ. ತನ್ನ ಕುಟುಂಬವನ್ನು ಮುನ್ನಡೆಸುವ ಮೂಲಕ ಹೆಣ್ಣು ಸಮಾಜವನ್ನು ಮುನ್ನಡೆಸುತ್ತಾಳೆ. ಆದುದರಿಂದ ಅವಳು ವಿಶ್ವಕುಟುಂಬಿನಿಯಾದ ಗೃಹಿಣಿ. ಲೋಕಕಲ್ಯಾಣವೇ ಅವಳ ಪರಮಾರ್ಥ.ಮಾನವನ ಸಾಂಸ್ಕೃತಿಕ ವಿಕಾಸದಲ್ಲಿ ಪಥನಿರ್ದೇಶನವನ್ನು ಮಾಡುವವಳೇ ಹೆಣ್ಣು. ‘ಗೃಹಿಣಿ’ಯಾಗುವ ಮೂಲಕ, ಗೃಹವನ್ನು ಹಾಗು ಸಮಾಜವನ್ನು ಅವಳು ಮುನ್ನಡೆಯಿಸುತ್ತಾಳೆ. ಆದುದರಿಂದಲೇ ಬೇಂದ್ರೆಯವರು ಈ ಕವನಕ್ಕೆ ‘ಗೃಹಿಣಿ’ ಎನ್ನುವ ಶೀರ್ಷಿಕೆಯನ್ನು ನೀಡಿದ್ದಾರೆ.

51 comments:

  1. ಸುನಾಥ್ ಕಾಕಾ,

    ಎಂದಿನಂತೆ ಸುಂದರ ಕವನಗಳಿಗೆ ತಕ್ಕುದಾದ ವಿಶ್ಲೇಷಣೆ.
    ಮೂರು ಅದ್ಭುತ ಕವನಗಳನ್ನು ಉಣಬಡಿಸಿದ್ದಕ್ಕೆ ಧನ್ಯವಾದಗಳು.

    ಹಾಗೇ,ವರಕವಿ ಮುಟ್ಟದೆ ಇರೋ ಯಾವುದಾದರೂ ವಿಷಯವಿದೆಯೇ ಎನ್ನುವುದರ ಬಗ್ಗೆ ಯೋಚನೆ ಬಂತು. ಹುಣಸಿ, ಪಾತರಗಿತ್ತಿಯಿಂದ ಹಿಡಿದು ಸ್ವಾತಂತ್ರಹೋರಾಟದವರೆಗೆ ಎಲ್ಲಕ್ಕೂ ಇವೆ ಕವನ.

    ನಿಮ್ಮ ಹಿಂದಿನ ಲೇಖನದಲ್ಲಿ ವ್ಯಕ್ತವಾದ pseudo-secularism ಬಗ್ಗೆ ಏನಾದರೂ ಬೇಂದ್ರೆಜ್ಜ ಎಲ್ಲಾದರೂ ಹೇಳಿದ್ದು ಉಂಟೇ ?

    ReplyDelete
  2. ಸುನಾಥ್ ಕಾಕ,
    ಧನ್ಯವಾದಗಳು ಇಂತಹ ಸಾಲುಗಳಲ್ಲಿ ಎಷ್ಟೆಲ್ಲಾ ಅರ್ಥವಿದೆ, ಬೇಂದ್ರೆಯಜ್ಜನ ಭಾವನೆ, ಗೌರವ ಎಲ್ಲ ಅಡಗಿರುವುದನ್ನ ವಿವರವಾಗಿ ನಮಗೆ ತಿಳಿಸಿದ್ದೀರಿ.... ಎಲ್ಲಾ ಸಾಲುಗಳು ವಿಭಿನ್ನವಾಗಿವೆ ಅವರ ಭಾವಕ್ಕೆ ನಮ್ಮ ಸಲಾಮ್... ನಿಮ್ಮ ತಾಳ್ಮೆಯ ಬರಹಕ್ಕೆ ನಾವು ಶರಣು..

    ReplyDelete
  3. ಸುನಾಥ್ ಕಾಕಾ,
    ಬೇ೦ದ್ರೆಯವರ ಈ ಕವನಗಳನ್ನೂ ಅದರ ಅರ್ಥವನ್ನೂ ಮತ್ತು ಅವರ ಮನದಲ್ಲಿ ಸ್ತ್ರೀಯರ ಬಗ್ಗೆ ಇದ್ದ ನಿರ್ಮಲವಾದ ಹಾಗೂ ಉನ್ನತವಾದ ಭಾವನೆ, ಆಕೆ ಮಾನವ ಸ೦ಸ್ಕೃತಿಯ ಸ್ತ್ರೊತಎ೦ಬ ಭಾವನೆಯನ್ನು ಅವರು ಹೊ೦ದಿದ್ದರೆ೦ದು ತಿಳಿದು ಅವರ ಬಗೆಗೆ ನನಗಿರುವ ಗೌರವ ಇಮ್ಮಡಿಸಿತು.
    ಬೇ೦ದ್ರೆಯವರಿಗೆ ನನ್ನ ಧನ್ಯವಾದಗಳೊ೦ದಿಗೆ ನಮನಗಳು.

    ಮಹಿಳಾದಿನದ ಶತಮಾನೋತ್ಸವದ ಸ೦ದರ್ಭವನ್ನು ಹೇಳುತ್ತಾ ಇ೦ತಹ ಒ೦ದು ಉತ್ತಮಕವಿ ಬರೆದ೦ತಹ, ಸ್ತ್ರೀಯರನ್ನು ಕುರಿತು ಸದ್ಭಾಭಾವ ಹುಟ್ಟುವ೦ತಹ ಉತ್ತಮ ಕವಿತೆಗಳ ಅರ್ಥವನ್ನು ನಮಗೆಲ್ಲಾ ತಿಳಿಸಿರುವುದು ಮಹಿಳೆಯರ ಬಗೆಗೆ ನಿಮಗಿರುವ ಸದ್ಭಾವನೆ, ಗೌರವಾದರಾಭಿಮಾನ ಗಳನ್ನು ತಿಳಿಸುತ್ತದೆ.
    ನಿಮಗೆ ನನ್ನ ಧನ್ಯವಾದಗಳೊ೦ದಿಗೆ ನಮಸ್ಕಾರಗಳು.

    ReplyDelete
  4. bendre muttada vastu mattu nimma visleshaka baraha eradu sada hosa kavige dweppa stamba. Thanks.

    Pl. Visit my blogs:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ReplyDelete
  5. ಅಪ್ಪ-ಅಮ್ಮ,
    ಧನ್ಯವಾದಗಳು. ಆಡು ಮುಟ್ಟದ ತೊಪ್ಪಲಿಲ್ಲ;ಬೇಂದ್ರೆಯವರು ಕವನಿಸದ ವಿಷಯವಿಲ್ಲ ಎನ್ನಬಹುದೇನೊ? ಬೇಂದ್ರೆಯವರ ಕಾಲದಲ್ಲಿ ನಿಜವಾದ secularism ಇತ್ತು; pseudo-secularism ಇರಲಿಲ್ಲ! ಹೀಗಾಗಿ ಅವರು ಆ ವಿಷಯವನ್ನು ಮುಟ್ಟಿಲ್ಲ ಎಂದು ಕಾಣುತ್ತದೆ. ಆದರೆ, ಅವರು ಕೆಲವೊಂದು ಸಂಶೋಧಕರನ್ನು ಹೀಯಾಳಿಸಿ ಕವನ ಬರೆದದ್ದು ಇದೆ.

    ReplyDelete
  6. ಸ್ವರ್ಣಾ,
    ಧನ್ಯವಾದಗಳು.

    ReplyDelete
  7. ಮನಸು,
    ಧನ್ಯವಾದಗಳು.
    ಬೇಂದ್ರೆಯವರ ಅನೇಕ ಕವನಗಳಲ್ಲಿ ಸ್ತ್ರೀಯರ ಬಗೆಗಿರುವ ಅವರ ಉನ್ನತ ಭಾವನೆ ವ್ಯಕ್ತವಾಗುತ್ತದೆ. ಆದರೆ, ಕನ್ನಡ ಲೇಖಕರಲ್ಲಿ ಅತ್ಯಂತ ಸ್ತ್ರೀಪರ ಮನೋಭಾವವನ್ನು ನಾವು ಮಾಸ್ತಿ ವೆಂಕಟೇಶ ಅಯ್ಯಂಗಾರರಲ್ಲಿ ಕಾಣಬಹುದು.

    ReplyDelete
  8. ಮನಮುಕ್ತಾ,
    ಸ್ತ್ರೀಯೇ ನಾಗರಿಕತೆಯ ಹರಿಕಾರಿಣಿ ಎನ್ನುವದು ಸಿದ್ಧವಾದ ಸಂಗತಿಯೇ ಆಗಿದೆ. ಇದನ್ನು ತಿಳಿಯದ ಗಂಡಸರು, ಸಂಚಿ ಹೊನ್ನಮ್ಮ ಹೇಳುವಂತೆ, ’ಕಣ್ಣು ಕಾಣದ ಗಾವಿಲರು!’

    ReplyDelete
  9. ಪಳವಳ್ಳಿಯವರೆ,
    ಬೇಂದ್ರೆ ಮಹಾಸಾಗರದಂತಿದ್ದಾರೆ. ನನ್ನ ಪುಟ್ಟ ನೌಕೆ ಅದರಲ್ಲಿ ಎಷ್ಟು ದೂರ ಚಲಿಸೀತು?

    ReplyDelete
  10. ನನಗಂತೂ ಬೇಂದ್ರೆ ಅಜ್ಜನ "ಸಖಿಗೀತ" ಸಂಸಾರದ ಭಗವದ್ಗೀತೆ ತರಹಾ... ಕಾಣಿಸುತ್ತದೆ. ಎಷ್ಟು ಸಲ ಓದಿದರೂ ಆ ರಸಾಸ್ವಾದ ಇನ್ನು ಹೆಚ್ಚಾಗಬಹುದೇ ವಿನಾ ಕಡಿಮೆಯಾಗಿದ್ದೆ ಇಲ್ಲ. ಸಖೀಗೀತದಲ್ಲೂ ಹೆಣ್ಣಿನ ಬಗ್ಗೆ ತುಂಬಾ ಚೆನ್ನಾಗಿ ಹೇಳುತ್ತಾರೆ ಅಲ್ವಾ?... ಕಟುಮಧುರ ಭಾವನೆಯನ್ನು ಹೇಳುವ ಅಂಟಿನ ನಂಟಿನ.... ಪದ್ಯಗಳು! ವಾಹ್... ನಿಜಕ್ಕೂ...! ಸಾರ್ ... ಬೇಂದ್ರೆ ಅಜ್ಜನ ಗೀತೆಗಳ ... ಬಗ್ಗೆ ಇನ್ನಷ್ಟು ಬರಲಿ ಇಲ್ಲಿ... ಬೇಡಿಕೆ... ನನ್ನದು... ಪೂರೈಕೆ ನಿಮ್ಮದು.

    ReplyDelete
  11. ಕಾಕ..

    ಬೇ೦ದ್ರೆ ತಾತ ಗೃಹಿಣಿಯ ವೈಶಿಷ್ಟ್ಯತೆಯನ್ನು ಸೂಕ್ಶ್ಮವಾಗಿ ಕವಿತೆಯಲ್ಲಿ ಪೋಣಿಸಿಸಿದ್ದನ್ನು ನೀವು ನವಿರಾಗಿ ಹರವಿ ತಿಳಿಸಿಕೊಟ್ಟಿದ್ದಕ್ಕೆ ವ೦ದನೆಗಳು.

    ReplyDelete
  12. ಚಂದ್ರಿಕಾ,
    ಸಖೀಗೀತ ಎನ್ನುವ ಹೆಸರೇ ಎಷ್ಟು ಸೊಗಸಾಗಿದೆ, ಅಲ್ಲವೆ?
    ದಾಂಪತ್ಯದ ಕಟು ಮಧುರ ಸಂಬಂಧ ಅಲ್ಲಿ ಸೊಗಸಾಗಿ ವರ್ಣಿತವಾಗಿದೆ. ನೀವು ಹೇಳುವಂತೆ ಇದು ಸಂಸಾರದ ಭಗವದ್ಗೀತೆಯೇ ಸರಿ.

    ReplyDelete
  13. ವಿಜಯಶ್ರೀ,
    ಗೃಹಿಣಿಯೆ ನಾಗರಿಕತೆಯ ಹಾಗು ಸಂಸ್ಕೃತಿಯ ಮೂಲ ಎನ್ನುವದನ್ನು ಬೇಂದ್ರೆಯವರು ಈ ಕವನದಲ್ಲಿ ತುಂಬ ಸೊಗಸಾಗಿ ವರ್ಣಿಸಿದ್ದಾರೆ. ಗೃಹಿಣಿಯ ಈ ಹೆಚ್ಚುಗಾರಿಕೆಯನ್ನು ಎಲ್ಲರೂ ಅರಿತುಕೊಳ್ಳಬೇಕು.

    ReplyDelete
  14. ಸ್ತ್ರೀ ಬಗೆಗಿನ ಬೇಂದ್ರೆಯವರ ದೃಷ್ಠಿಯ ಪ್ರಸ್ತುತಿಯೊಂದಿಗೆ, ಮಹಿಳಾ ಪರವಾದ ತಮ್ಮ ಸಹೃದಯತೆಗೂ ನಮೋ ನಮಃ

    ReplyDelete
  15. ಸುನಾಥ್ ಸರ್,

    ಮಧುರವಾದ ಕವನಗಳ ಜೊತೆಗೆ ಅವುಗಳ ವಿಶ್ಲೇಷಣೆ ನೀಡಿದ್ದಕ್ಕೆ ಧನ್ಯವಾದಗಳು..ಬೇಂದ್ರೆ ಯವರ ಕೆಲವು ಕವನಗಳನ್ನು ಓದಿದ್ದೇನೆ, ಈಗ ಓದುವುದನ್ನು ನಿಲ್ಲಿಸಿದ್ದೇನೆ, ಏಕೆಂದರೆ ನಿಮ್ಮ ಬ್ಲಾಗ್ ನಲ್ಲಿ ಅವರ ಕವನಗಳ ಜೊತೆಗೆ ಭಾವನುವಾದವು ಫ್ರೀ ಆಗಿ ಸಿಗುತ್ತಲ್ಲ ಅದಕ್ಕೆ....ಧನ್ಯವಾದಗಳು.

    ReplyDelete
  16. ಹೆಣ್ಣಿನ ಆದರ್ಶಗಳೊಂದಿಗೆ ಜೀವವಿಕಾಸದ ಹಂತಗಳನ್ನು ಹಿಡಿದಿಟ್ಟಿರುವ ಬೇಂದ್ರೆಯವರ ಕವನದ ಸಾರವನ್ನು ನಮಗೆ ಮನಮುಟ್ಟುವಂತೆ ತಿಳಿಸಿದ್ದೀರಿ, ನಮನಗಳು ನಿಮಗೆ.

    ಅಂದಿನ ಮತ್ತು ಇಂದಿನ (ಅವರ ಮತ್ತು ನಮ್ಮ) ನಾಗರೀಕ ನಂಬಿಕೆಗಳೇನೆ ಇರಲಿ, ಜೀವವಿಕಾಸವಾದವನ್ನು ಬೇಂದ್ರೆಯವರೂ ಒಪ್ಪಿದ್ದರೂ ಎಂಬುದಂತೂ ಈ ಕವನದಲ್ಲಿ ಗೋಚರಿಸುತ್ತದೆ, ಅಲ್ಲವೆ ?


    "ಗಂಡಸಿನ ಜಯವು ಪ್ರಕೃತಿಯ ಮೇಲಿನ ಬಾಹ್ಯಜಯವಾಗಿದ್ದರೆ, ಹೆಣ್ಣಿನ ಜಯವು ಸಾಂಸ್ಕೃತಿಕ ಜಯ. " ....Quotable quote.

    ReplyDelete
  17. ಶಾನಿಯವರೆ,
    ಮಹಿಳೆಗೆ ಪುರುಷಸಮಾನ ಹಕ್ಕುಗಳಲ್ಲದೆ, ವಿಶೇಷ ಹಕ್ಕುಗಳೂ ಸಹ ಸಲ್ಲಬೇಕು. ಇದು ಕೇವಲ ಮಹಿಳಾಪರ ಧೋರಣೆ ಅಲ್ಲ.
    ಮಹಿಳೆಯ ವಸ್ತುಸ್ಥಿತಿಯನ್ನು ಅರಿತು ಒಪ್ಪಿಕೊಳ್ಳಬೇಕಾದ ಮಾತು.

    ReplyDelete
  18. ಅಶೋಕರೆ,
    ಬೇಂದ್ರೆ ಕವನಗಳನ್ನು ಓದುವದನ್ನು ನಿಲ್ಲಿಸಬೇಡಿ. ಅವರ ಎಲ್ಲ ಕವನಗಳಂತೂ ಇಲ್ಲಿ ಬರಲಾರವು!

    ReplyDelete
  19. ಪುತ್ತರ್,
    ಬೇಂದ್ರೆಯವರ ಕಾವ್ಯದಲ್ಲಿ ಭಾವನೆಯ ಜೊತೆಗೆ ವೈಚಾರಿಕತೆಯೂ ಇರುತ್ತದೆ ಎನ್ನುವದಕ್ಕೆ ಈ ಕವನವು ಒಂದು ನಿದರ್ಶನ.

    ReplyDelete
  20. ಸುನಾಥಣ್ಣ ಮಹಿಳಾದಿನಾಚರಣೆಯ ಸಂದರ್ಭದಲ್ಲಿ ಸಮ್ಯೋಚಿತ ಲೇಖನ...ಅದರಲ್ಲೂ ಬೇಂದ್ರೆಯವರ ಕವನಗಳ ರಸದೌತಣ..ನಿಮ್ಮ ವಿವರಣೆ ..ಎಲ್ಲಾ ಸೋನೆ ಪೆ ಸುಹಾಗ....ಧನ್ಯವಾದ

    ReplyDelete
  21. ಕಾಕಾ

    ನಿಜಕ್ಕೂ ಮಹಿಳಾ ದಿನಾಚರಣೆಗೆ ಒಳ್ಳೆಯ ಲೇಖನ. ನಿಮ್ಮ ವಿಶ್ಲೇಷಣೆ ಎಂದಿನಂತೇ...ಅತ್ಯುತ್ತಮವಾಗಿದೆ. ಧನ್ಯವಾದಗಳು...

    ಶ್ಯಾಮಲ

    ReplyDelete
  22. ಜಲನಯನ,
    ಧನ್ಯವಾದಗಳು.

    ReplyDelete
  23. ಶ್ಯಾಮಲಾ,
    ಧನ್ಯವಾದಗಳು ಹಾಗು ನಿಮಗೆ ಮಹಿಳಾದಿನಾಚರಣೆಯ ಶುಭಾಶಯಗಳು.

    ReplyDelete
  24. Hi Sunaath,

    I think you should monetize your blogs. You are doing a great work and so many people visit and read your blogs. (I just said this because I did not see any adds, so assumed you have not check with google monetize)

    thanks.

    ReplyDelete
  25. Kavita,
    Thank you for the appreciation and the advice too. I am not sure that placing Google ads results in monetary benefit as some conditions should be fulfilled for the benefit.

    I feel very elated to see your goodness and non-assuming nature in rendering help.
    Thank you.

    ReplyDelete
  26. ಪ್ರೀತಿಯ ಸುನಾಥ,

    ಈ ಮಹಿಳಾದಿನಕ್ಕೆ ನಿಮ್ಮ ವಿಶೇಷ ಕೊಡುಗೆ.
    ಶರಣು. ಎಷ್ಟ್ ಚೆನಾಗಿದೆ.

    "ಮಗಳೋ ನನ್ನೆದೆಯ ಮುಗುಳೋ" ಅಂತೂ ನನ್ನದೇ ಮಾತು.

    ಪ್ರೀತಿಯಿಂದ,
    ಸಿಂಧು

    ReplyDelete
  27. ಕನ್ನಡದ ವರಕವಿ ಬೇಂದ್ರೆ ನಾಜೂಕಿನ ವಿಷಯಗಳಿಗೂ ಅಷ್ಟೇ ಮಹತ್ವ ಕೊಟ್ಟವರು, ಬೇಂದ್ರೆ ಎಳವೆಯಲ್ಲಿ ಧಾರವಾಡದಲ್ಲಿ [ಅವರ ಅಮ್ಮ ಬಟ್ಟೆ ತೊಳೆಯುವಾಗ]ಕೆರೆಯಲ್ಲಿ ಬಿದ್ದಿದ್ದರಂತೆ, ಆಮೇಲೆ ತನ್ನ ಮಕ್ಕಳು ಸತ್ತಾಗ ಬೇಂದ್ರೆ ’ನೀ ಹೀಂಗ ನೋಡಬ್ಯಾಡ ನನ್ನ’ ಅಂದರಲ್ಲ ಆ ಬಗ್ಗೆ ಸ್ವಲ್ಪ ಹೇಳುತ್ತೀರಾ? ಧನ್ಯವಾದಗಳು

    ReplyDelete
  28. ವಿದ್ಯಾ,
    ಧನ್ಯವಾದಗಳು ಹಾಗು ಮಹಿಳಾ ದಿನಾಚರಣೆಯ ಶುಭಾಶಯಗಳು.

    ReplyDelete
  29. ಸಿಂಧು,
    ಧನ್ಯವಾದಗಳು. ಪ್ರತಿ ದಿನವೂ ಮಹಿಳೆಯರ ದಿನವೇ ಆಗಿರಲಿ ಎನ್ನುವದು ನನ್ನ ಆಶಯ!

    ReplyDelete
  30. ಭಟ್ಟರೆ,
    ಬೇಂದ್ರೆಯವರು ಕೆರೆಯಲ್ಲಿ ಬಿದ್ದು ಬದುಕಿದವರು. ಅದು ಕನ್ನಡಿಗರ ಪುಣ್ಯ. ‘ನೀ ಹೀಂಗ ನೋಡಬ್ಯಾಡ ನನ್ನ’ ಕವನವು ಕಲ್ಪನೆಯೇ ವಾಸ್ತವವಾದ ಕಟುಸತ್ಯದ ಕವನ.

    ReplyDelete
  31. ಸುನಾಥ ಕಾಕಾ,

    ಬೇಂದ್ರೆಯವರ ಮೂರು ಕವನಗಳು ಸುಂದರವಾಗಿವೆ. ಹಾಗೆ ನಿಮ್ಮ ವಿಶ್ಲೇಷಣೆ ಕೂಡ.

    ReplyDelete
  32. ಸುನಾಥ ಅಂಕಲ್,

    ಬೇಂದ್ರ ಅಜ್ಜನ ಭಾವಗಳಿಗೆ ನಿಮ್ಮ ಭಾವಾರ್ಥ.
    ಮಹಿಳೆಯರಿಗಿಲ್ಲಿ ಬೀಗು.
    ಇಷ್ಟು ಚೆಂದದ ಉಡುಗೊರೆಗೆ ಧನ್ಯವಾದ ನಿಮಗೂ ಅವಗೂ.

    ಪ್ರೀತಿಯಿಂದ,
    -ಶಾಂತಲಾ ಭಂಡಿ

    ReplyDelete
  33. ಮಹಾಂತೇಶ,
    ಮಲ್ಲಿಗೆಯ ಕಂಪನ್ನು ಮೆಚ್ಚಬೇಕಾದದ್ದೇ. ಕಂಪಿನ ವ್ಯಾಖ್ಯಾನ ಮಹತ್ವದ್ದಲ್ಲ!

    ReplyDelete
  34. ಶಾಂತಲಾ,
    ಧನ್ಯವಾದಗಳು. ನಿಮ್ಮ ಮೆಚ್ಚುಗೆ ಬೇಂದ್ರೆಯವರಿಗೆ ಸಲ್ಲಬೇಕು. ನನ್ನದು ಕೇವಲ ಅಂಚೆಯವನ ಕೆಲಸ!

    ReplyDelete
  35. Sunaath Sir- Mahilaa dinaacharanege nimminda attyuttama udugore. Endinanteye bendre avara kaavyada bhaavarthavannu ele eleyaagi bidisi tilisuva nimma karyakke ughe ughe..!

    ananth

    ReplyDelete
  36. ಅನಂತರಾಜರೆ,
    ಧನ್ಯವಾದಗಳು.

    ReplyDelete
  37. ಸುನಾಥ್ ಸರ್,

    ಮಹಿಳೆಯರ ದಿನಕ್ಕಾಗಿ ನೀವು ಆರಿಸಿಕೊಂಡಿರುವ ವಸ್ತು ಚೆನ್ನಾಗಿದೆ. ಬೇಂದ್ರೆಯವರು ಬರೆಯದೆ ಇರುವ ವಿಚಾರ ಯಾವುದಾದರೂ ಇದೆಯೇ ಅಂತ ಹುಡುಕಬೇಕಿದೆ. ಗೃಹಿಣಿ...ಚೆನ್ನಾಗಿ ವಿವರಿಸಿದ್ದೀರಿ..

    ReplyDelete
  38. ಶಿವು,
    ಧನ್ಯವಾದಗಳು.

    ReplyDelete
  39. ನಮಸ್ತೆ ಸುನಾಥ್ ಸರ್ ,

    ನನ್ನ ಪ್ರೀತಿಯ ಬೇಂದ್ರೆ ಅಜ್ಜನ ಈ ಕವನಕ್ಕೆ ಹುಡುಕುತ್ತಿದ್ದೆ. ಪದ್ಯದ ಜತೆ ಅರ್ಥಾನೂ ಸಿಕ್ಕು ಬೋನಸ್ ಸಿಕ್ಕ ಹಾಗಾಯ್ತು. ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಓದಿ ತುಂಬಾ ಖುಷಿಯಾಯ್ತು. ಇಂಥಹ ಒಳ್ಳೆಯ ವಿಷ್ಯ, ಪದ್ಯ ಹಂಚಿಕೊಂಡಿದ್ದಕ್ಕೆ ವಂದನೆ. ಇಂಥಹ ಪದ್ಯಗಳನ್ನು ಓದಿದಾಗ ಮನಸ್ಸಿಗೆ ತುಂಬಾ ಸಂತಸ ಎನಿಸುತ್ತದೆ. ಬೇಂದ್ರೆ ಅವರ 'ನಾನು' ಪದ್ಯವನ್ನು ಅವರ ಬಗೆಗಿನ ಡಾಕ್ಯುಮೆಂಟರಿ ನಲ್ಲಿ ಬೇಂದ್ರೆಯವರೇ ಓದಿದ್ದು ನೋಡಿದ್ದೇನೆ. ತುಂಬಾ ಮನಮುಟ್ಟುವಂಥಹ ಸಾಲು ಹಾಗೂ ದೃಶ್ಯ ಅದು. ಈ ಕವನಗಳ ಮೂಲಕ ಬೇಂದ್ರೆ ಹಾಗೂ ಮಹಿಳೆಯರ ಬಗೆಗಿನ ಗೌರವ ಇಮ್ಮಡಿಸುವಂತೆ ಮಾಡಿದೀರಿ. ಥ್ಯಾಂಕ್ಸ್ .
    --ರಾಮಚಂದ್ರ ಹೆಗಡೆ

    ReplyDelete
  40. ರಾಮಚಂದ್ರ ಹೆಗಡೆಯವರೆ,
    ನಿಮ್ಮ ಇಷ್ಟಾರ್ಥ ಈಡೇರಿದ್ದರಿಂದ ಸಂತೋಷವಾಗಿದೆ.
    ವಂದನೆಗಳು.

    ReplyDelete
  41. ಶ್ರೀನಿವಾಸ ಮ. ಕಟ್ಟಿMarch 14, 2011 at 5:05 AM

    ನನ್ನ ಅಭಿಪ್ರಾಯದಲ್ಲಿ ಗಂಡಸಿಗೆ ಹೆಣ್ಣಿನೊಡನೆ ಬರುವ ಕೊನೆಯ ಸಂಬಂಧ "ಅಜ್ಜ-ಮೊಮ್ಮಗಳು" ಎಂಬುದು ಅದರ ಮೊದಲು ಬರುವ ಇನ್ನೊಂದು ಸಂಬಂಧ ಎಂದರೆ "ಮಾವ-ಸೊಸೆ"ಯರದು. ಎಲ್ಲ ಸಂಬಂಧಗಳಲ್ಲಿಯೂ ಹೆಣ್ಣಿಗೆ ಗೌರವ, ಆದರ ತೋರಿದ್ದಾರೆ ಮಹಾಕವಿ. ಬೇಂದ್ರೆಯವರಿಗೆ ಯಾರ ಬಗ್ಗೆಯೂ ಅಗೌರವವಿಲ್ಲ. ತಮ್ಮ ಜೀವನದಲ್ಲಿ ತಮ್ಮ ಪ್ರತಿಸ್ಫರ್ದಿಗಳಿಗೂ ಗೌರವ ತೋರಿ ಅವರ ಶ್ರೇಷ್ಟ ಗುಣಗಳನ್ನು ಹೊಗಳಿದವರು.

    ReplyDelete
  42. ಬೇ೦ದ್ರೆಯವರ ಬಗ್ಗೆ ಅದೆಷ್ಟು ಬರೆದಿರಿ, ಅವರ ಕೃತಿಗಳೆಲ್ಲವೂ ಚಿಂತನೆಗೆ ಹೊಸ ಹೊಸ ಹೊಳಹುಗಳನ್ನು, ಜೀವನಕ್ಕೆ ಹೊಸ ನೋಟಗಳನ್ನು ಕೊಡುವ ಜೀವನದರ್ಶಿಕೆಗಳು. ಬೇ೦ದ್ರೆ ಅ೦ದ್ರೆ ಮೊಗೆದಷ್ಟೂ ಮುಗಿಯದ ಸಾಗರ

    ReplyDelete
  43. ಕಟ್ಟಿಯವರೆ,
    ‘ಅಜ್ಜ-ಮೊಮ್ಮಗಳು’ ಎಂದು ನೀವು ಹೇಳುವ ಸಂಬಂಧ ಅತ್ಯಂತ ಸುಖದ ಸಂಬಂಧ. ಅದನ್ನು ಇಲ್ಲಿ ಜೋಡಿಸಿ ಕೊಟ್ಟದ್ದಕ್ಕಾಗಿ ಧನ್ಯವಾದಗಳು. ಮಾವ ಸೊಸೆಯರ ನಡುವಿನ ಸಂಬಂಧವೂ ಆತ್ಮೀಯವಾಗಿಯೇ ಇರುತ್ತದೆ. ಕೊನೆಗಾಲದಲ್ಲಿ ಸೊಸೆ ಮಾವನಿಗೆ ಮಗಳೇ ಆಗಿ ಬಿಡುತ್ತಾಳೆ.

    ReplyDelete
  44. ಪರಾಂಜಪೆಯವರೆ,
    ಬೇಂದ್ರೆ ಜೀವನವೂ ಒಂದು ಸಾಗರದಂತೆ, ಅವರ ಕಾವ್ಯವೂ ಒಂದು ಸಾಗರದಂತೆ!

    ReplyDelete
  45. bendreyavara chitrana kalpane adbhuta. streeyara bagegina avara kalpane udattavaadudu mattu satya saha. chennaagi vivarisiddiraaa..

    ReplyDelete
  46. ಷ"ಗಿಡಕೆ ಗುಡಿಯನು ಕಟ್ಟಿ ಬೇರೊಂದು ಲೋಕವನ್ನು
    ಮೂಕ ಮಾತುಗಳಿಂದ ಬೇಡಿದಾಕೆ
    ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ"
    ಎಂಥ ಹೃದ್ಯ ಸಾಲುಗಳು ಸುನಾಥ್ ಸರ್.‌
    ಹೆಣ್ಣ ಮತ್ತು ಪುರುಷರ ನಡುವಿನ ಭಾತಿಕವಾದರೂ ಅಲೌಕಿಕ ನಂಟಿನ ಸಮಸ್ತ ಎಳೆಗಳ ಕುರಿತು ಮೂಡಿರುವ ವರಕವಿಯ ಭಾವಗಳು‌ ನಿಮ್ಮ ವಾಕ್ಯಗಳ ವಿಸ್ತಾರದಲ್ಲಿ‌ ಎಷ್ಟು ‌ಮನೋಜ್ಞವಾಗಿ ಮೂಡಿವೆ. ಹುಟ್ಟಿನಿಂದ ಮರಣದ ಗಳಿಗೆಯ ವರೆಗೂ ಹೆಣ್ಣು ಗಂಡಸಿಗೆ ಎಷ್ಟು ಬಗೆಯಲ್ಲಿ ನಂಟಾಗುತ್ತಾಳೆನ್ನುವುದರ ಬಗೆಗೆ ನಿಮ್ಮ ಈ ಬರಹ ಅನನ್ಯವಿದೆ.‌
    'ತಿಂದುಂಡು ಸಾಯುವ ಭೌತಿಕ ಲೋಕದಾಚೆಗೆ ಇರುವ ಪಾರಮಾರ್ಥಿಕ ಲೋಕದ ಅರಿವು ಹೆಣ್ಣಿನಲ್ಲಿ ಮೂಡತೊಡಗಿದೆ...'
    ಇಂಥ ಅಪೂರ್ವ ವಿಶ್ಲೇಷಣೆಗಳೊಂದಿಗೆ ಮಹಿಳಾ ದಿನದ ಆಚರಣೆಗೆ ಹೊಸ ಮೆರುಗಿತ್ತಿದ್ದೀರಿ.‌ ಮನ:ಪೂರ್ವಕ‌ ಧನ್ಯವಾದಗಳು. ‌🙏🙏
    ಜಯಶ್ರೀ ದೇಶಪಾಂಡೆ

    ReplyDelete
  47. ಎಂದಿನಂತೆ ಸೊಗಸಾದ ನಿರೂಪಣೆ ಸುನಾಥ ಕಾಕಾ. ಬೇಂದ್ರೆ ಕವಿತೆಗಳನ್ನು ಓದುವಾಗ ನೀವೇ ನೆನಪಾಗುತ್ತೀರಿ.
    ಪ್ರಜ್ಞಾ

    ReplyDelete
  48. ಧನ್ಯವಾದಗಳು, ಜಯಶ್ರೀ ಮೇಡಮ್!

    ReplyDelete
  49. ಅವ್ಯಕ್ತಲಕ್ಷಣಗಳನ್ನು ಹೊಂದಿರುವ ಪ್ರಜ್ಞಾ ಮೇಡಮ್‌, ಧನ್ಯವಾದಗಳು.

    ReplyDelete