Friday, March 18, 2011

ಕರ್ಣಪಿಶಾಚಿಯ ಸಂದರ್ಶನಗಳು...೨


ಆ ಆಲದ ಮರದ ಬೇರೆ ಬೇರೆ ಟೊಂಗೆಗಳಿಗೆ ಬೇರೆ ಬೇರೆ ಜಿಲ್ಲೆಯ ಹೆಸರುಗಳನ್ನು ಬರೆದು, ನೂರಾರು ನೇಣುಗಳನ್ನು ಜೋತು ಬಿಟ್ಟಿದ್ದರು. ಪಕ್ಕದಲ್ಲಿ ಒಂದು ಫಲಕವಿತ್ತು.

WORLD TRADE ORGANIZATION
ಭಾರತೀಯ ರೈತರಿಗಾಗಿ ಜಾಗತಿಕ ವ್ಯವಹಾರ ಸಂಸ್ಥೆಯ ಕೊಡುಗೆ
ಪ್ರಧಾನಿ ಮಮೋ ಸಿಂಗರ ಹೆಮ್ಮೆಯ ಯೋಜನೆ

ನಶೀಬು ಎಂದರೆ ಇದು! ಕರ್ಣಪಿಶಾಚಿಗೆ ಖುಶಿಯೋ ಖುಶಿ! ಅರಸುತಿಹ ಉರುಳ್ ಕೊರಳ್ಗೆ ತೊಡರಿತು! ಆಯಿತು, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು, ಆತ್ಮಹತ್ಯೆ ಮಾಡಿಕೊಳ್ಳೋಣ ಎಂದುಕೊಂಡು ಕರ್ಣಪಿಶಾಚಿಯು, ಆಲದ ಮರದ ಕಟ್ಟೆಯ ಮೇಲೆ ಒರಗಿಕೊಂಡಿತು.

ಕರ್ಣಪಿಶಾಚಿಯ ಕಣ್ಣುಗಳು ಮುಚ್ಚಲಾರಂಭಿಸಿದವು. ಅಷ್ಟರಲ್ಲಿ ದೂರದಿಂದ ಒಂದು ರೋದನದ ದನಿ ಕೇಳಲಾರಂಭಿಸಿತು. ಕ್ರಮೇಣ ಆ ದನಿ ಹತ್ತರಕ್ಕೆ ಬಂದಿತು. ಒಬ್ಬಳು ಅಂಗವಿಕಲೆಯಾದ ಮುದುಕಿ. ಮೈಯಲ್ಲಿ ಅಲ್ಲಲ್ಲಿ ಸೋರಿದ ರಕ್ತ ಹೆಪ್ಪುಗಟ್ಟಿದೆ. ಕರ್ಣಪಿಶಾಚಿಯಲ್ಲಿ ಕನಿಕರ ಹಾಗು ಕುತೂಹಲ ಮೂಡಿದವು. ಇವರೀರ್ವರ ನಡುವಿನ ಸಂಭಾಷಣೆ ಹೀಗಿದೆ:

ಕ.ಪಿ:                  ಯಾರು ಬಂದವರಿಲ್ಲಿ? ತಾಯಿ, ಎಂದೆ.
ಮುದುಕಿ:            ಯಾರು ಕೇಳುವರೆನಗೆ ಯಾಕೆ, ತಂದೆ?
ಕ.ಪಿ:                  ಬೇಸರದ ದನಿ ಏಕೆ, ಹೆಸರ ಹೇಳಲ್ಲ.
ಮುದುಕಿ:            ಕನ್ನಡಾಂಬೆಯು ಎನಲು ನಂಬುವವರಿಲ್ಲ!

ಕರ್ಣಪಿಶಾಚಿಗೆ ಆಶ್ಚರ್ಯ ಹಾಗು ಖುಶಿ ಒಟ್ಟಿಗೆ ಆದವು. ಕೊನೆಗೂ ಒಬ್ಬಳು ಮಹಾಸುಳ್ಳಿ ಸಿಕ್ಕಳು.
ಎತ್ತಣ ಕನ್ನಡ ಭುವನೇಶ್ವರಿ, ಎತ್ತಣ ಈ ವಿಕಲಾಂಗ ಮುದುಕಿ?

ಕ.ಪಿ: ಹಹ್ಹಹ್ಹಾ ಮುದುಕಿ! ನನಗೂ ನಿನ್ನಂಥ ಸುಳ್ಳಿಯೇ ಬೇಕಾಗಿದ್ದಳು. ಛಲೋ ಆತು ನೀ ಸಿಕ್ಕದ್ದು.
ಮುದುಕಿ: ನಾ ಖರೇ ಹೇಳ್ತಾ ಇದ್ದೇನೊ, ಬಾಳಾ. ಸಾವಿರ ವರ್ಷ ನಾ ಛಂದಾಗಿ ಬಾಳಿದಾಕಿ. ಐಲಿ ಕಡೆ ನನ್ನ ಸ್ಥಿತಿ ಹಿಂಗಾಗೇದ, ನೋಡು.
ಕ.ಪಿ: ವಾಹ್ ರೆ, ಹೀರೊಯಿನ್! ಚಡ್ಯೂರಪ್ಪನವರು ‘Statue of Liberty’ ತರಹ ಕನ್ನಡ ಭುವನೇಶ್ವರಿಯ  ಮೂರ್ತಿಯನ್ನು ನಿಲ್ಲಸ್ತಾರಂತ. ನೀನs ಅಲ್ಲಿ model ಆಗಿ ಹೋಗು.
ಮುದುಕಿ: ಹಾ! ವಿಧಿಯೇ!
ಮಕ್ಕಳಿವರೇನಮ್ಮ, ಮಕ್ಕಳಿವರು?
ಪಕ್ಕೆಲವುಗಳನೆಲ್ಲ ಕತ್ತರಿಸುತಿಹರು!
ರೆಕ್ಕೆಗಳನೆಲ್ಲ ತರಿದು ಹಾಕಿಹರು!
ಬಿಕ್ಕೆ ಬೇಡುವ ಸ್ಥಿತಿಯು ನನ್ನದಾಗಿಹದು!
ಕ.ಪಿ: ಗುಬ್ಬಿ ವೀರಣ್ಣಾರ ನಾಟಕ ಕಂಪನಿ ಒಳಗ ಇದ್ದೇನಬೆ, ಮುದುಕಿ? ಬೆಷ್ಟ ಯಾಕ್ಟ್ರೆಸ್ ಇದ್ದೀ ನೋಡು.
ಮುದುಕಿ: ಆರು ಕೋಟಿ ಕನ್ನಡಿಗರ ಮೇಲಾಣೆ! ಘೋಟಾಳ್ ನಾಗರಾಜರ ಬೋಳುತಲೆಯ ಮೇಲಾಣೆ! ಸತ್ಯವನ್ನೇ ಹೇಳ್ತಾ ಇದ್ದೀನಿ: ನಾನೇ ಕನ್ನಡ ಭುವನೇಶ್ವರಿ!
ಕ.ಪಿ: ನೀ ಖರೇ ಹೇಳ್ತಿ ಅಂತ ನಂಬೋದು ಹ್ಯಾಂಗ? ನಿನ್ನ ಮೊಂಡು ಕೈ, ಮೊಂಡು ಕಾಲು ಇವೆಲ್ಲಾ ಖರೇನ ಮೊಂಡಾಗಿದ್ದೊ? ಅಥವಾ ಇದು ನಿನ್ನ ಧಂಧೇನೊ?
ಮುದುಕಿ: ಬಾಳಾ, ನಾ ಖರೇ ಹೇಳಿದರೂ ನೀ ನಂಬೂದುಲ್ಲಾ, ನಾ ಸುಳ್ಳು ಹೇಳಿದರೂ ನಂಬೂದುಲ್ಲಾ! ಹೇಳಿ ಯಾನ ಮಾಡೂದದ?
ಕ.ಪಿ: ನೋಡು ಮುದುಕಿ. ಒಬ್ಬನರ ಸುಳ್ಳ ಅಥವಾ ಸುಳ್ಳಿ ನನಗ ಸೂರ್ಯೋದಯ ಆಗೋದರ ಒಳಗ ಸಿಗಲಿಲ್ಲಾ ಅಂದರ, ನಾ ಉರಲು ಹಾಕ್ಕೋ ಬೇಕಾಗ್ತೈತಿ. ನಿನ್ನ ಜಾತಕಾ ನೀ ತೋರಸು. ಯಾಂಬಲ್ಲಾ, ಫಾಯದೇ ಆದರೂ ಅದೀತು!
ಮುದುಕಿ: ಹಾಂಗಾದರ ಕೇಳು. ಕತೆ ಹೇಳುವೆ, ನನ್ನ ಕತೆ ಹೇಳುವೆ!

(ಮುದುಕಿಯ ಕತೆ, ಮುಂದಿನ ಸಂಚಿಕೆಯಲ್ಲಿ!)

Monday, March 14, 2011

ಕರ್ಣಪಿಶಾಚಿಯ ಸಂದರ್ಶನಗಳು...೧

ಅನೇಕ ದಿನಗಳಿಂದ ನಮ್ಮ ಪ್ರಿಯ ಮಿತ್ರರಾದ ಅಸತ್ಯಾನ್ವೇಷಿಗಳ ಮುಖವನ್ನೇ ನಾವು ಕಂಡಿಲ್ಲ ; ಅವರ ‘ಬೊಗಳೆ ರಗಳೆ’ಯನ್ನು  ಓದಿಲ್ಲ.  ಅಸತ್ಯಾನ್ವೇಷಿಗಳ ಕಟ್ಟಾ ಅಭಿಮಾನಿ ಹಾಗು ‘ಬೊಗಳೆ ರಗಳೆ’ ಪತ್ರಿಕೆಯ ನಿಯತ ಓದುಗನಾದ ನಮ್ಮ ಕರ್ಣಪಿಶಾಚಿಗೆ ಭಯಂಕರ ಚಡಪಡಿಕೆಯಾಗತೊಡಗಿತು. ‘ಎಲ್ಲಿ ಹೋದರು ನಮ್ಮ ಭೋ-ಜನಪ್ರಿಯ ಸೊಂಪಾದಕರು?’ ಎಂದು ಚಡಪಡಿಸುತ್ತ  ಕರ್ಣಪಿಶಾಚಿ ಎಲ್ಲಾ ಕಡೆಗೂ ಹುಡುಕಾಡಲಾರಂಭಿಸಿತು. ಕೊನೆಗೊಮ್ಮೆ ಅವರು ಸಿಕ್ಕೇ ಬಿಟ್ಟರು..........ಹರಿಶ್ಚಂದ್ರ ಘಾಟಿನಲ್ಲಿ ಗುದ್ದಲಿ ಹಿಡಿದುಕೊಂಡು ಗೋರಿಗಳನ್ನು ಅಗೆಯುತ್ತಿದ್ದರು. ಅವರ ನಡುವೆ ನಡೆದ ಸಂಭಾಷಣೆ ಹೀಗಿದೆ:

ಕ.ಪಿ: ಅಲೋ ಸೊಂಪಾದಕರೆ, ಏನು ಹುಡುಕುತ್ತಿದ್ದೀರಿ?
ಅಸತ್ಯಾನ್ವೇಷಿ: ನನಗೆ ತುಂಬ ಪ್ರಿಯವಾದ ಅಸತ್ಯವನ್ನು. ಅದನ್ನ ಇಲ್ಲೆಲ್ಲೊ ಹೂತು ಹಾಕಿದ್ದಾರೆ.
ಕ.ಪಿ: ಅದು ಹೇಗೆ?
ಅನ್ವೇಷಿ: ಈಗ ಎಲ್ಲೆಲ್ಲೂ ಸತ್ಯದ ತಾಂಡವ ನೃತ್ಯ ನಡೆದಿದೆ. ಹಸ್ತಿನಾಪುರವನ್ನು ಮಮೋ ಸಿಂಗ ಎಂಬ ಧರ್ಮರಾಜರು ಆಳುತ್ತಿದ್ದಾರೆ. ಭಾರತದೇಶದಿಂದ ಲಂಚವನ್ನು ನಿರ್ಮೂಲ ಮಾಡಿ, ಸ್ವಿಸ್ ಬ್ಯಾಂಕುಗಳಿಗೆ ಕಳಿಸಲು ಪಣ ತೊಟ್ಟಿದ್ದಾರೆ!
ಕ.ಪಿ: ಹೋಗಲಿ ಬಿಡಿ? ಕರ್ನಾಟಕದಲ್ಲಾದರೂ ನಿಮಗೆ ಅಸತ್ಯ ಸಿಗಬಹುದಲ್ಲ?
ಅ..ಷಿ: ಹೋಗೋ ದಡ್ಡ ನನ ಮಗನೆ! ಇದು ಕೊಡುಗೈ ದೊರೆ ಚಡ್ಯೂರಪ್ಪನವರ ರಾಜ್ಯ. ಕರ್ನಾಟಕದಲ್ಲಿರುವ ಹತ್ತುಸಾವಿರ ಮಠಗಳಿಗೆ, ಪ್ರತಿ ಮಠಕ್ಕೆ ನೂರು ಕೋಟಿ ರೂಪಾಯಿಗಳಂತೆ ದಾನ ಕೊಟ್ಟಿದ್ದಾರೆ! ಇಂಥಾ ದೊರೆ ಇರೋ ನಾಡಿನಲ್ಲಿ ಅಸತ್ಯ ಎಲ್ಲಿ ಸಿಕ್ಕೀತು? ಭಾರತವರ್ಷದಲ್ಲಿ ಇದೀಗ ಸತ್ಯಯುಗ ಪ್ರಾರಂಭವಾಗಿದೆ.

ಭಯಂಕರ ನಿರಾಶೆಯಲ್ಲಿ ಮುಳುಗಿದ ಕರ್ಣಪಿಶಾಚಿಯು ಅಸತ್ಯಾನ್ವೇಷಿಗಳ ಕಾಯಕಕ್ಕೆ ಶುಭ ಕೋರಿ, ಬೆಂಗಳೂರಿನತ್ತ ಹಾರತೊಡಗಿತು. ಆಗ ಅದು ಕಂಡದ್ದೇನು? ನೈಸ್ ರಸ್ತೆಯ ನಟ್ಟನಡುವೆ ಧಡೂತಿ ಆಸಾಮಿಯೊಂದು ಹಸಿರು ಶಲ್ಲೆ ಹೊತ್ತುಕೊಂಡು ಮಲಗಿದೆ. ಹತ್ತಿರ ಹೋಗಿ ನೋಡಿದಾಗ,....... ಅಹೋ ಇವರು ನಮ್ಮ ವೇದೇಗೌಡರು!

ಕ.ಪಿ: ನಮಸ್ಕಾರ ಗೌಡರೆ! ಖೇಣಿ ವಿರುದ್ಧ ಧರಣಿ ಮಾಡುತ್ತಿದ್ದೀರಾ?
ಗೌಡರು: ಇಲ್ಲಪ್ಪಾ, ಸುಮ್ನೆ ನಿದ್ದೆ ಮಾಡ್ತಾ ಇದ್ದೆ! ವಿಧಾನಸಭೆಯಲ್ಲಿ, ಲೋಕಸಭೆಯಲ್ಲಿ ನಿದ್ದೆ ಮಾಡಿ ಅಭ್ಯಾಸ ಆಗಿಬಿಟ್ಟಿದೆ, ಕಣಪ್ಪಾ!
ಗೌಡರು ನಿಜವನ್ನೇ ನುಡಿಯುತ್ತಿದ್ದಾರೆ! ಕರ್ಣಪಿಶಾಚಿಗೆ ಸಿಡಿಲು ಬಡಿದ ಅನುಭವವಾಯ್ತು. ಆದರೂ ಚೇತರಿಸಿಕೊಂಡ ಕರ್ಣಪಿಶಾಚಿ ಮತ್ತೊಂದು ಪ್ರಶ್ನೆ ಎಸೆಯಿತು.

ಕ.ಪಿ: ಗೌಡರೆ, ನೀವು ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟುತ್ತೇನೆ ಎಂದು ಘೋಷಿಸಿದ್ದು ಯಾಕೆ? ಇದು ಮತ ರಾಜಕಾರಣದ ಸುಳ್ಳು ಘೋಷಣೆಯೆ?
ಗೌಡರು: ಖಂಡಿತವಾಗಿಯೂ ಅಲ್ಲ. ‘ಇಬ್ಬರು ಹೆಂಡಿರ ಮುದ್ದಿನ ಗೌಡನಾಗಿ’ ಮೆರೆಯೋ ಆಸೆ ನನಗೆ. ಆದರೆ ನಮ್ಮ ಗೊಡ್ಡು ಹಿಂದೂ ಕಾನೂನಿನಲ್ಲಿ ಅದಕ್ಕೆ ಅವಕಾಶವಿಲ್ಲ. ಮುಂದಿನ ಜನ್ಮದಲ್ಲಾದರೂ ಆ ಆಸೇನ ಪೂರೈಸಿಕೊಳ್ಳೋಣ ಅಂತ!

ಗೌಡರ ಬಾಯಿಂದ ಮತ್ತೊಂದು ಸತ್ಯವಾಕ್ಯ! ಕರ್ಣಪಿಶಾಚಿಯ ಜಂಘಾಬಲವೇ ಉಡುಗಿ ಹೋಯಿತು. ಆದರೂ ಹಠ ಬಿಡದ ಬೇತಾಳನಂತೆ ಮತ್ತೊಂದು ಪ್ರಶ್ನೆ ಎಸೆಯಿತು.
ಕ.ಪಿ: ಮುಂದಿನ ಜನ್ಮದಲ್ಲಿ ಕರ್ನಾಟಕದಲ್ಲಿ  ಹುಟ್ಟೋದಿಲ್ಲ ಅಂತ ನೀವು ಹೇಳಿದ್ದೀರಂತೆ?
ಗೌಡರು: ಇಲ್ಲೇನು ಉಳಿದಿದೆ ಮಣ್ಣು? ಡಿನೋಟಿಫಿಕೇಶನ್ನು ಮಾಡಿ ಎಲ್ಲಾ ಮಣ್ಣನ್ನೂ ತಾನೇ ತಿಂದಿದ್ದಾನಲ್ಲ ಚಡ್ಯೂರಿ! ಅದಕ್ಕೆ ಗುಜರಾತ ರಾಜ್ಯದಲ್ಲಿ ಹುಟ್ಟಿ ಅಲ್ಲಿಯ ಮಣ್ಣನ್ನು ಮುಕ್ಕುವ ಆಸೆ ಇದೆ ನನಗೆ! ಇನ್ನು ನೀನು ಹೋಗಪ್ಪ. ನಾನೀಗ ನಿದ್ದೆ ಮಾಡಬೇಕು. ಸತ್ಯಮೇವ ಜಯತೇ! ಜೈಹಿಂದ!

ಕರ್ಣಪಿಶಾಚಿಗೆ ಆಘಾತದ ಮೇಲೆ ಆಘಾತ! ಭಾರತದ ರಾಜಕಾರಣಿಗಳು ಸತ್ಯ ಹರಿಶ್ಚಂದ್ರರಾಗಿ ಬಿಟ್ಟಿದ್ದಾರಲ್ಲ. ಇನ್ನು ಸುಳ್ಳಿಗೆಲ್ಲಿಯ ನೆಲೆ? ಕರ್ಣಪಿಶಾಚಿಯ ಮನದಲ್ಲಿ ಮಿಂಚು ಹೊಡೆದಂತಾಯಿತು. ನಮ್ಮ ಸಾಹಿತಿಗಳು! ಸುಳ್ಳಿಗೂ ಸಾಹಿತಿಗಳಿಗೂ ಬಿಡದ ನಂಟು. ಅವರನ್ನೇ ಹಿಡಿಯೋಣ ಎಂದುಕೊಂಡ ಕರ್ಣಪಿಶಾಚಿ ಸೀದಾ ವಿಶ್ವಕನ್ನಡ ಸಮ್ಮೇಳನದತ್ತ ಹಾರಿತು. ಮೊದಲು ಕಾಣಿಸಿದ್ದು ಧಾರವಾಡ.

ಧಾರವಾಡದಲ್ಲಿ ಕರ್ಣಪಿಶಾಚಿಗೆ ಮೊದಲು ಸಿಕ್ಕವರೇ ಗುರಡ್ಡಿ ಗೋವಿಂದರಾಜರು.
ಕ.ಪಿ: ನಮಸ್ಕಾರ ಗುರಡ್ಡಿಯವರೆ! ಕನ್ನಡಕ್ಕೆ ಇಂಗ್ಲೀಶಿನಿಂದ ಅಪಾಯವಿದೆಯೆ, ಹೇಳಿ.
ಗುರಡ್ಡಿ: ಕನ್ನಡಕ್ಕೆ ಇಂಗ್ಲೀಶಿನಿಂದ ಏನೇನೂ ಅಪಾಯವಿಲ್ಲ. ಆದರೆ ಇಂಗ್ಲೀಶಿಗೆ ಮಾತ್ರ ಕನ್ನಡದಿಂದ, ಕನ್ನಡಿಗರಿಂದ ಸಾಕಷ್ಟು ಅಪಾಯವಿದೆ.
ಕ.ಪಿ: ಅದು ಹೇಗೆ?
ಗುರಡ್ಡಿ: ಕನ್ನಡ ಬಾಲಕರೆಲ್ಲ ನರ್ಸರಿಯಿಂದಲೇ ಇಂಗ್ಲೀಶಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅರ್ಥಾತ್ ಇಂಗ್ಲೀಶೇ ಇದೀಗ ಕನ್ನಡಿಗರ ಮಾತೃಭಾಷೆಯಾಗಿದೆ. ಕನ್ನಡಿಗರು ತಮ್ಮ ಮಾತೃಭಾಷೆಯನ್ನು ಬಜ್ಜಿ ಮಾಡುವದರಲ್ಲಿ ನಿಪುಣರು. ಅಂದ ಮೇಲೆ ಇಂಗ್ಲೀಶಿನ ಗತಿ ಏನಾಗಬೇಡ?
ಕ.ಪಿ: ಉದಾಹರಣೆ ಕೊಡುತ್ತೀರಾ?
ಗುರಡ್ಡಿ: ಇಂಗ್ಲೀಶ ಮಂದಿ ‘ಬಿಜಿ’ ಅನ್ನೋದನ್ನ ಕನ್ನಡಿಗರು ‘ಬ್ಯುಜಿ’ ಎನ್ನುತ್ತಾರೆ. ಅವರು ‘ಸsರ್’ ಅನ್ನೋದನ್ನ ಇವರು ‘ಸಾsರ್’ ಅಂತಾರೆ. ಉದಾಹರಣೆ ಸಾಕೊ, ಇನ್ನೂ ಬೇಕೊ?

ಕರ್ಣಪಿಶಾಚಿಗೆ ಅಚ್ಚರಿಯೋ ಅಚ್ಚರಿ! ಗುರಡ್ಡಿಯವರು ಖ್ಯಾತ ವಿಮರ್ಶಕರಾದರೂ ಸಹ ಸತ್ಯವನ್ನೇ ಮಾತನಾಡುತ್ತಿದ್ದಾರಲ್ಲ! ತಟ್ಟನೆ ಕರ್ಣಪಿಶಾಚಿಗೆ ಗುರಡ್ಡಿಯವರ ‘ಹಿಡಿಯದ ಹಾದಿ’ ಪ್ರಬಂಧಸಂಕಲನದ ನೆನಪಾಯಿತು.
ಕ.ಪಿ: ಗುರಡ್ಡಿಯವರೆ, ‘ಧಾರವಾಡದಲ್ಲಿ ಎಲ್ಲಿ ನಿಂತು ಕಲ್ಲು ಬೀಸಿದರೂ, ಅದು ಒಬ್ಬ ಕವಿಯ ಮನೆಯ ಮೇಲೆ ಬೀಳುತ್ತದೆ’ ಎಂದು ನಿಮ್ಮ ಸಂಕಲನದಲ್ಲಿ ಬರೆದಿದ್ದೀರಿ. ಇದು ಸುಳ್ಳಲ್ಲವೆ?
ಗುರಡ್ಡಿ; ಇದು ಅಪ್ಪಟ ಸತ್ಯ! ಧಾರವಾಡದ ಮಂದಿಗೆ ಕಲ್ಲು ಒಗೆಯೋ ಚಟವಿದೆ. ಕಾಶ್ಮೀರದ ಉಗ್ರವಾದಿಗಳಿಗೆ ಕಲ್ಲು ಒಗೆಯಲು ಕಲಿಸಿದವರೇ ಧಾರವಾಡದವರು. ಧಾರವಾಡಿಗಳ ಈ ಹುಚ್ಚನ್ನು ನೋಡಿಯೇ ಇಲ್ಲಿ ಹುಚ್ಚಾಸ್ಪತ್ರೆ ಕಟ್ಟಿಸಿದ್ದಾರೆ.
ಕ.ಪಿ: ಈ ಕಲ್ಲೆಸೆಯುವ ಕಾಯಕದ  ಗುರು ಯಾರೆಂದು ಹೇಳುತ್ತೀರಾ?
ಗುರಡ್ಡಿ: ಮತ್ಯಾರು? ಹುಚ್ಚಾಸ್ಪತ್ರೆಯ ಪಕ್ಕದಲ್ಲೇ ಮನೆ ಮಾಡಿಕೊಂಡು ಇದ್ದರಲ್ಲ ಚಂಪಾ! ಕನ್ನಡಕ್ಕೆ ಅವರಿಂದಲೇ ಅಪಾಯವಿದೆ. ಅವರನ್ನು ಕರ್ನಾಟಕದಿಂದ ಗಡೀಪಾರು ಮಾಡಿದರೆ ಮಾತ್ರ ಪಾಟೀಲ ಪುಟ್ಟಪ್ಪ, ಪಟ್ಟಣಶೆಟ್ಟಿ  ಹಾಗು ನಾನು ಇಲ್ಲಿ ನೆಮ್ಮದಿಯಿಂದ ಬದುಕಬಹುದು!

ಕರ್ಣಪಿಶಾಚಿಗೆ ಭಯಂಕರ ನಿರಾಸೆಯಾಯಿತು. ವಿಮರ್ಶಕರೂ ಸಹ ಸತ್ಯವನ್ನೇ ಹೇಳುತ್ತಿದ್ದಾರಲ್ಲ! ಇನ್ನು ಸುಳ್ಳಿಗೆ ಎಲ್ಲಿಯ ನೆಲೆ, ಎಲ್ಲಿಯ ಬೆಲೆ ಎನ್ನುತ್ತಿರುವಾಗ ಅದಕ್ಕೆ ಕರ್ನಾಟಕ ವಿಶ್ವವಿದ್ಯಾಲಯದ ಗೋಪುರ ಕಣ್ಣಿಗೆ ಬಿದ್ದಿತು. ವಿಶ್ವವಿದ್ಯಾಲಯಗಳು ಸುಳ್ಳಿನ ಭಂಡಾರಗಳು ಎಂದು ಗೆಲುವಾದ ಕರ್ಣಪಿಶಾಚಿಯು ಆ ದಿಕ್ಕಿನತ್ತ ಮುನ್ನಡೆಯಿತು. ಅಲ್ಲಿ ಮೊದಲು ಕಂಡವರೇ ಖ್ಯಾತ ಪ್ರಾಚ್ಯಸಂಶೋಧಕ ಕಲಬುರ್ಗಿಯವರು.

ಕರ್ಣಪಿಶಾಚಿ: ನಮಸ್ಕಾರ, ಕಲಬುರ್ಗಿಯವರೆ! ನೀವು ಇತಿಹಾಸ ಸಂಶೋಧಕರು. ಅಂದ ಮೇಲೆ ನೀವು ಸಾಕಷ್ಟು ಸುಳ್ಳನ್ನು ಹುಡುಕಿ ತೆಗೆದಿರಬಹುದು, ಅಲ್ಲವೆ?
ಕಲಬುರ್ಗಿ: ಛೇ! ಛೇ! ನಾನು ಯಾವಾಗಲೂ ಸತ್ಯವನ್ನು ಮಾತ್ರ ಹುಡುಕುತ್ತೇನೆ. ಉದಾಹರಣೆಗೆ ಇತ್ತೀಚೆಗೆ ಅಣ್ಣೀಗೇರಿಯಲ್ಲಿ ಹಡ್ಡಿ ತೆಗೆದ ತಲೆಬುರುಡೆಗಳನ್ನೇ ತೆಗೆದುಕೊಳ್ಳಿರಿ. ಅವೆಲ್ಲ ತಲೆಬುರುಡೆಗಳು  ಸಾಹಿತಿಗಳ ಬುರುಡೆಗಳು ಎನ್ನುವದನ್ನು ನಾನು ಸಂಶೋಧನೆ ಮಾಡಿ ಹೇಳಿದ್ದೇನೆ. ಆದರೆ, ಆ ಚಿದಾನಂದ ಮೂರ್ತಿ ಇದ್ದಾರಲ್ಲ, ಅವರು ಬರಿ ಸುಳ್ಳು ಸಂಶೋಧನೆ ಮಾಡುತ್ತಾರೆ.
ಕ.ಪಿ: ಹೌದಾ? ಅವರೇನು ಹೇಳುತ್ತಿದ್ದಾರೆ?
ಕಲಬುರ್ಗಿ: ಅವು ರಾಜ್ಯಪಾಲರ ಹಾಗು ಅವರ ಸಿಬ್ಬಂದಿಯವರ ಬುರುಡೆಗಳಂತೆ!
ಕ.ಪಿ: ಏನು? ಹಂಸರಾಜ ಭಾರದ್ವಾಜರ ಬುರುಡೆಯೇ?
ಕಲಬುರ್ಗಿ: ಅಲ್ಲಯ್ಯ, ಮೂರ್ಖ ಶಿಖಾಮಣಿ! ಪಂಪನ ಕಾಲದಲ್ಲಿ ಅಣ್ಣೀಗೇರಿಯಲ್ಲಿ ರಾಜ್ಯಪಾಲರಾಗಿದ್ದ ಕಂಸರಾಜರ ಬುರುಡೆ!

ಬುರುಡೆಗಳ DNA ಪರೀಕ್ಷೆ ಆಗದ ಹೊರತು ಕಲಬುರ್ಗಿ ಸುಳ್ಳರೊ, ಚಿ.ಮೂ. ಸುಳ್ಳರೊ ಅಥವಾ ಇಬ್ಬರೂ ಸುಳ್ಳರೊ ಎಂದು ಗೊತ್ತಾಗುವದಿಲ್ಲ. ಇರಲಿ, ಇಲ್ಲಿ ಸ್ವಲ್ಪ ಭರವಸೆಯ ಬೆಳಕಿದೆ ಎಂದುಕೊಂಡ ಕರ್ಣಪಿಶಾಚಿಯು ಬೆಳಗಾವಿಯತ್ತ ಮುಖ ಮಾಡಿ ಹಾರಿತು.

ಬೆಳಗಾವಿಯಲ್ಲಿ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ. ಅಲ್ಲಿ ನಾರಾಯಣ ಮೂರ್ತಿಗಳು ಉದ್ಘಾಟನೆ ಮಾಡುತ್ತಿದ್ದಾರೆ. ಮೂರ್ತಿಗಳು ಉದ್ದಿಮೆದಾರರು. ಸುಳ್ಳು ಹೇಳುವದು ಅವರಿಗೆ ಅವಶ್ಯವಾದ ಒಂದು ಬಿಜಿನೆಸ್ ಕಲೆ. ಇವರನ್ನೇ ಹಿಡಿಯುವೆ ಎಂದುಕೊಂಡ ಕರ್ಣಪಿಶಾಚಿಯು ಮೂರ್ತಿಯವರ ಸಂದರ್ಶನ ಪ್ರಾರಂಭಿಸಿತು.

ಕ.ಪಿ: ಹಲೋ ಮೂರ್ತಿಯವರೆ, ನೀವು ಕನ್ನಡಕ್ಕಿಂತ ಇಂಗ್ಲೀಶಿಗೆ ಹೆಚ್ಚು ಮಹತ್ವ ಕೊಡುತ್ತೀರಿ ಎನ್ನುವ ಆಪಾದನೆ ಇದೆಯಲ್ಲ. ಇದಕ್ಕೆ ಏನು ಹೇಳುತ್ತೀರಿ?
ಮೂರ್ತಿ: ಅದು ಹಾಗಲ್ಲ. ಬೆಂಗಳೂರಿನ ಕನ್ನಡಿಗರು ಕನ್ನಡವನ್ನು ಮಾತನಾಡುವದೇ ಇಂಗ್ಲೀಶಿನಲ್ಲಿ. ಕೆಲವರ ಸ್ಪೀಚಿನಲ್ಲಿ ಕನ್ನಡ ten percent ಇರಬಹುದು, ಕೆಲವರ ಸ್ಪೀಚಿನಲ್ಲಿ five percent  ಇರಬಹುದು. ನಮ್ಮ infosysದ ಕನ್ನಡದಲ್ಲಿ ಕನ್ನಡವು zero percent ಇರ್ತದೆ.
ಕ.ಪಿ: ಎಂತಹ ಕನ್ನಡ ಕಟ್ಟಾಳು ಇದ್ದೀರಿ, ಮೂರ್ತಿಯವರೆ! ನಿಮಗೆ ನನ್ನ Hats off!

ಕರ್ಣಪಿಶಾಚಿಗೆ ಭಯಂಕರ ನಿರಾಶೆ ಆಯಿತು. ಜೋಲು ಮುಖ ಹಾಕಿಕೊಂಡು ಹೊರಬೀಳುತ್ತಿರುವ ಕರ್ಣಪಿಶಾಚಿಯ ಕಣ್ಣಿಗೆ ಬಿದ್ದದ್ದು  ಬಿಳಿ ಬಣ್ಣದ ಹೋತದ ಗಡ್ಡವನ್ನು ಹಚ್ಚಿಕೊಂಡ ಮುಖ. ಓ! ಇವರು ನಮ್ಮ ಅಜ್ಞಾನಮೂರ್ತಿಗಳು! ಕರ್ಣಪಿಶಾಚಿಗೆ ಖುಶಿಯೋ ಖುಶಿ!
‘ಸುಳ್ಳು ನಮ್ಮಲ್ಲಿಲ್ಲವಯ್ಯಾ, ಸುಳ್ಳೇ ನಮ್ಮನಿ ದೇವರು’ ಎಂದು ಹಾಡಿದ ದಾಸರ ಪರಂಪರೆಯವರಲ್ಲವೇ ಇವರು ಎಂದು ಉಬ್ಬಿ ಉಬ್ಬಿ ಬಲೂನಿನಂತಾಯ್ತು ನಮ್ಮ ಕ.ಪಿ.

ಕ.ಪಿ: ನಮಸ್ಕಾರ ಅಜ್ಞಾನಮೂರ್ತಿಗಳೆ! ನೀವು ಗಡ್ಡಬಿಟ್ಟದ್ದು ಯಾಕೆ ಹೇಳ್ತೀರಾ?
ಅ.ಮೂ: ದುಡ್ಡು ಉಳಿಸಲಿಕ್ಕೆ.
ಕ.ಪಿ: ಆದರೆ ಹೋತದ ಗಡ್ಡವು ಬುದ್ಧಿಜೀವಿಗಳ brand mark ಎಂದು ಹೇಳುತ್ತಾರಲ್ಲ.
ಅ.ಮೂ: ಹಾಗೆ ಹೇಳುವವರು ಬುದ್ಧಿ ಇಲ್ಲದ ಜನ. ‘ಜನ ಮರುಳೊ, ಜಾತ್ರೆ ಮರುಳೊ, ಗಡ್ಡಕೆ ಮರುಳೊ ಶಂಕರಲಿಂಗಾ!’ ಎನ್ನುವ ಗಾದೆ ಮಾತು ನೀವು ಕೇಳಿಲ್ಲವೆ?
ಕ.ಪಿ: ಕನ್ನಡಕ್ಕೆ ಯಾವುದರಿಂದ ಅಪಾಯ ಇದೆ ಎನ್ನುವದನ್ನು ಸ್ವಲ್ಪ ವಿವರಿಸ್ತೀರಾ?
ಅ.ಮೂ: ಕನ್ನಡಕ್ಕೆ ಇಂಗ್ಲೀಶಿನಿಂದ ಅಪಾಯವಿದೆ. ಕನ್ನಡದ ಎಲ್ಲಾ ಪದಗಳನ್ನು ಇಂಗ್ಲೀಶಿನವರು ತಮ್ಮ ಡಿಕ್ಶನರಿಯಲ್ಲಿ ಸೇರಿಸಿಕೊಳ್ಳುತ್ತಿದ್ದಾರೆ. ಈಗ ನೋಡಿ, ‘ಬೆಂಗಳೂರು’ ನಮ್ಮ ಕನ್ನಡದ ಪದ ತಾನೆ? ಅದನ್ನು ಈಗ bangalored ಎನ್ನುವ ಇಂಗ್ಲಿಶ್ ಪದವನ್ನಾಗಿ ಬದಲಾಯಿಸಿಕೊಂಡಿದ್ದಾರೆ. ಹೀಗಾದರೆ, ಕನ್ನಡದ ಪದಗಳೆಲ್ಲಾ ಇಂಗ್ಲೀಶಿನಲ್ಲಿ ಸೇರಿ ಹೋಗುವವು.
ಕ.ಪಿ: ಸಂಸ್ಕೃತದಿಂದ ಕನ್ನಡಕ್ಕೆ ಅಪಾಯವಿಲ್ಲವೆ?
ಅ.ಮೂ: ತುಂಬಾ ಅಪಾಯವಿದೆ. ಕನ್ನಡ ಉಳಿದದ್ದೇ ನಮ್ಮ ಹಳ್ಳಿಗಳಲ್ಲಿ. ಆದುದರಿಂದಲೇ ನನ್ನ ಕತೆಗಳನ್ನು ನಾನು ಹಳ್ಳಿಗರಿಗೆ ತಿಳಿಯದಂತಹ ಸಂಕೀರ್ಣ ಸಂಸ್ಕೃತದಲ್ಲಿ ಬರೆಯುತ್ತೇನೆ.
ಕ.ಪಿ: ಅದರಿಂದ ಏನು ಪ್ರಯೋಜನ?
ಅ.ಮೂ: ಬಹಳಷ್ಟು ಪ್ರಯೋಜನವಿದೆ. ಹಳ್ಳಿಗರು ಉಳಿಯುತ್ತಾರೆ, ಹಳ್ಳಿಗಳಲ್ಲಿ ಕನ್ನಡ ಉಳಿಯುತ್ತದೆ. ಹಾಗು ನನ್ನ ಅಜ್ಞಾನಪೀಠ ಪ್ರಶಸ್ತಿ ಉಳಿಯುತ್ತದೆ.
ಕ.ಪಿ: ಅಜ್ಞಾನಮೂರ್ತಿಗಳೇ, ನೀವು ಸತ್ಯವನ್ನೇ ನುಡಿದಿದ್ದರಿಂದ ನನಗೆ ತುಂಬಾ ಬೇಜಾರಾಗಿದೆ. ಸುಳ್ಳು ಹೇಳುವಂಥವರು ನಿಮ್ಮ ಲಿಸ್ಟಿನಲ್ಲಿ ಯಾರಾದರೂ ಇರುವರೆ?
ಅ.ಮೂ: ಸುಳ್ಳು ಹೇಳುವವರು ಈಗ ಸಿಗುವದೇ ಕಷ್ಟ. ಗಿರೀಶ ಕಾರ್ನಾಡ ಹೇಳಿದರೆ ಹೇಳಬಹುದು. ಪ್ರಯತ್ನಿಸಿ ನೋಡಿ. ಸಂಧ್ಯಾಕಾಲದ ಈ ವೇಳೆಯಲ್ಲಿ ಅವರು ನಿಮಗೆ ಸಾರ್ವಜನಿಕ ಮದ್ಯಶಾಲೆಯಲ್ಲಿ ದರ್ಶನ ಕೊಡುವ ಸಾಧ್ಯತೆಗಳಿವೆ. ‘ನಿಶೇದವರ ಮಾತು ಕಿಶೇದಾಗ’ ಎನ್ನುವ ಗಾದೆ ಇದೆ, ನೋಡಿ! ಕುಡಿದಾಗ ಅವರು ಸುಳ್ಳನ್ನೇ ಹೇಳುವ ಚಾನ್ಸ್ ಇದೆ!
ಕರ್ಣಪಿಶಾಚಿಗೆ ಹೋದ ಉಸಿರು ಬಂದಂತಾಯಿತು.

ಕರ್ಣಪಿಶಾಚಿಯು ಕುಣಿಯುತ್ತ ಮದ್ಯಶಾಲೆಯ ಕಡೆಗೆ ಹಾರಿತು. ಅಲ್ಲಿ ಗಲಾಟೆಯೋ ಗಲಾಟೆ.
ಕುಡಿಯುವದು ನಮ್ಮ ಹಕ್ಕು.
ಕುಡಿಯೋಣ ಬಾರಾ, ಕುಡಿಯೋಣ ಬಾ!
ಇತ್ಯಾದಿ ಫಲಕಗಳನ್ನು ಹೊತ್ತಂತಹ, ಜೀನುಧಾರಿ ಗಂಡು,ಹೆಣ್ಣುಗಳ ಮುಂಭಾಗದಲ್ಲಿ ರಾರಾಜಿಸುತ್ತಿದ್ದಾರೆ ಗಿರೀಶ ಕಾರ್ನಾಡರು.

ಕ.ಪಿ: ನಮಸ್ಕಾರ ಕಾರ್ನಾಡರೆ!
ಕಾರ್ನಾಡ: ನಮಸ್ಕಾರ..(ಹಿಕ್!)...ಪಿಶಾಚೀ!
ಕ.ಪಿ: ಕಾರ್ನಾಡರೇ, ಕನ್ನಡ ಯಾರಿಂದ ಉಳಿಯುತ್ತದೆ ಎಂದು ಹೇಳಬಲ್ಲಿರಾ?
ಕಾರ್ನಾಡ: ಬಜರಂಗ ದಳದವರಿಂದ!
ಕ.ಪಿ: ವಿಚಿತ್ರ ಆದರೂ ಸತ್ಯ?
ಕಾರ್ನಾಡ: ಬಜರಂಗ ದಳದವರು ಗಲಾಟೆ ಮಾಡೋದರಿಂದಲೇ..(ಹಿಕ್).. ನನಗೆ ಸ್ಫೂರ್ತಿ ಸಿಗುತ್ತದೆ. ನನ್ನ ನಾಟಕಗಳನ್ನು..(ಹಿಕ್..) ಹಿಂದೀ ಹಾಗು ಇಂಗ್ಲೀಶಿನಲ್ಲಿ ಎಲ್ಲೆಲ್ಲೂ ಆಡಬಹುದು. ಇದರಿಂದಾಗಿ ಕನ್ನಡವು (..ಹಿಕ್..) ಉಳಿಯುತ್ತದೆ!

ಎಂತಹ ಅದ್ಭುತ ತರ್ಕ! ಎಂತಹ ಕಟು ಸತ್ಯ!!
ಕರ್ಣಪಿಶಾಚಿಗೆ ಘೋರ ನಿರಾಶೆಯಾಯಿತು. ತಾನು ಬದುಕಿ ಫಲವಿಲ್ಲ ಎಂದುಕೊಂಡ ಕರ್ಣಪಿಶಾಚಿಯು ಆತ್ಮಹತ್ಯೆಯನ್ನೇ ಮಾಡಿಕೊಳ್ಳೋಣ ಎಂದುಕೊಂಡಿತು. ಊರ ಹೊರಗಿದ್ದ ಆಲದ ಮರವೊಂದನ್ನು ಹುಡುಕಿ ಅಲ್ಲಿಗೆ ಹೋದಾಗ, ಅದಕ್ಕೆ ಕಂಡಿದ್ದೇನು?

(ಮುಂದಿನ ಸಂಚಿಕೆಯಲ್ಲಿ ನೋಡಿರಿ.)

Monday, March 7, 2011

`ಗೃಹಿಣಿ'.........................ಬೇಂದ್ರೆ


ಮಾರ್ಚ ೮, ೨೦೧೧-- ಇದು ಅಂತರರಾಷ್ಟ್ರೀಯ ಮಹಿಳಾದಿನದ ಶತಮಾನೋತ್ಸವದ ದಿನ.
ಈ ಸಂದರ್ಭದಲ್ಲಿ ಬೇಂದ್ರೆಯವರು  ಸ್ತ್ರೀಯ ಜೊತೆಗೆ ಯಾವ ರೀತಿಯ ಭಾವಸಂಬಂಧವನ್ನು ಹೊಂದಿದ್ದರು ಎನ್ನುವದನ್ನು ಅರಿಯಲು, ಈ ಮೂರು ಕವನಗಳನ್ನು  ಪರಿಶೀಲಿಸಬಹುದು:
(೧) ನಾನು
(೨) ಗಂಡಸು ಹೆಂಗಸಿಗೆ
(೩) ಗೃಹಿಣಿ

ನಾನು’ ಕವನದಲ್ಲಿ ಬೇಂದ್ರೆಯವರು ತಾನು ಐದು ತಾಯಂದಿರ ಕೂಸು ಎಂದು ಹೇಳಿಕೊಳ್ಳುತ್ತಾರೆ. ಕವನದಲ್ಲಿಯ ಕ್ರಮದ ಮೇರೆಗೆ, ಈ ತಾಯಂದಿರು ಹೀಗಿದ್ದಾರೆ: ವಿಶ್ವಮಾತೆ, ಭೂಮಿತಾಯಿ, ಭಾರತಮಾತೆ, ಕನ್ನಡ ಮಾತೆ ಹಾಗು ತನ್ನ ಹೆತ್ತ ತಾಯಿ.
‘ಈ ಐದು ಐದೆಯರೆ ಪಂಚಪ್ರಾಣಗಳಾಗಿ, ಈ ಜೀವ ದೇಹನಿಹನು.’

ಬೇಂದ್ರೆಯವರಿಗೆ ಹೆಣ್ಣು ಅಂದರೆ ಪೋಷಣೆಯ ಮೂರ್ತಿ. ಈ ಐದೂ ಮುತ್ತೈದೆಯರು ಬೇಂದ್ರೆಯವರಿಗೆ ವಿಭಿನ್ನ ರೀತಿಯಲ್ಲಿ ಪೋಷಣೆ ಇತ್ತಿದ್ದಾರೆ. ಅವರಿಂದಲೇ ಬೇಂದ್ರೆಯವರು ‘ಕವಿ ಅಂಬಿಕಾತನಯದತ್ತ’ರಾಗಿದ್ದಾರೆ. ತಮ್ಮ ಮಾತೆಯರನ್ನು ಕೃತಜ್ಞತೆಯಿಂದ ನೆನೆದು, ಅವರ ಋಣ ತೀರಿಸುವ ಕೈಂಕರ್ಯವನ್ನು ಬೇಂದ್ರೆಯವರು ಹೊತ್ತಿದ್ದಾರೆ.

ಎರಡನೆಯದಾದ  ‘ಗಂಡಸು ಹೆಂಗಸಿಗೆ  ’ ಕವನದಲ್ಲಿ, ಬೇಂದ್ರೆಯವರು ಹೆಂಗಸು ಗಂಡಸಿಗೆ ಕೊಡುವ ಪ್ರೀತಿಯ ವಿವಿಧ ಮುಖಗಳನ್ನು ವರ್ಣಿಸುತ್ತಾರೆ:
ತಾಯಿ ಕನಿಮನೆಯೇ, ನೀ ಅಕ್ಕ ಅಕ್ಕರತೆಯೇ
ಬಾಯೆನ್ನ ತಂಗಿ ಬಾ ಮುದ್ದು ಬಂಗಾರವೇ
ನೀಯೆನ್ನ ಹೆಂಡತಿಯೊ ಮೈಗೊಂಡ ನನ್ನಿಯೋ
ಮಗಳೊ ನನ್ನೆದೆಯ ಮುಗುಳೊ?

ಯಾವುದೇ ಗಂಡಸಿಗೆ, ಹೆಣ್ಣಿನ ಜೊತೆಗೆ ಬರುವ ಮೊದಲ ಸಂಬಂಧವು ತಾಯಿ-ಮಗುವಿನದು;
ಕಾಲಾನುಕ್ರಮದಲ್ಲಿ ಬಳಿಕ ಬರುವದು ಅಕ್ಕ-ತಮ್ಮ;
ನಂತರ ಅಣ್ಣ-ತಂಗಿ;
ಹರೆಯದಲ್ಲಿ ಗಂಡ-ಹೆಂಡತಿ.
ಕೊನೆಗೆ ಬರುವದು ಅಪ್ಪ-ಮಗಳು.

ಈ ಎಲ್ಲ ಸಂಬಂಧಗಳಲ್ಲಿ ಪ್ರೀತಿಯ ಸ್ವರೂಪವೂ ಸಹ ಭಿನ್ನವಾಗಿರುತ್ತದೆ.
ತಾಯಿಗೆ ಮಗುವಿನ ಮೇಲಿರುವದು ಅನುಕಂಪ ತುಂಬಿದ ವಾತ್ಸಲ್ಯ. ಅವಳು ‘ಕನಿಮನೆ’ ಅಂದರೆ ಮರುಕದ ಉಗ್ರಾಣ.
ಅಕ್ಕನಿಗೆ ತಮ್ಮನ ಮೇಲಿರುವದು ಅಕ್ಕರತೆ.
ತಂಗಿಯು ಅಣ್ಣನಿಗೆ ಮುದ್ದು ಬಂಗಾರ.
ಹೆಂಡತಿಯು ಇವನ ಪುರುಷಾರ್ಥಗಳ ಸಹಧರ್ಮಿಣಿ. ಆದುದರಿಂದ ಅವಳು ಮೈಗೊಂಡ ನನ್ನಿ.
ಮಗಳಂತೂ ಇವನ ಹಂಬಲದಿಂದ ರೂಪು ತಳೆದ ಮುಗುಳು ಅಂದರೆ ಹೂಮೊಗ್ಗು!

ಇವೆಲ್ಲ ವೈಯಕ್ತಿಕ ಸಂಬಂಧಗಳು.
ಸಾಂಸ್ಕೃತಿಕ ನೆಲೆಯಲ್ಲಿ ಗಂಡು ಹಾಗು ಹೆಣ್ಣಿನ ಪಾತ್ರಗಳೇನು ಎನ್ನುವದನ್ನು ಬೇಂದ್ರೆಯವರು ತಮ್ಮ ‘ಗೃಹಿಣಿ’ ಕವನದಲ್ಲಿ ಈ ರೀತಿಯಾಗಿ ಹಿಡಿದಿಟ್ಟಿದ್ದಾರೆ:

ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.
ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.
ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.
. . . . . . . . . . . . . . . . . . . . . . . . . . . . . . . . . . . . . . . . . .. . . . . . ..

ಏಳು ಮೆಟ್ಟಿನ ಹುಲಿಯ ಬೀರಬೇಂಟೆಯ ಬಿಡಿಸಿ
ಮಗುವ ಮುದ್ದಾಡುವೊಲು ಮಾಡಿದಾಕೆ.
ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ
ತಾನೆ ತನ್ನಷ್ಟಕ್ಕೆ ಹಾಡಿದಾಕೆ.

ಈ ಕವನದ ಮೊದಲ ನುಡಿಯ ಮೊದಲ ಸಾಲು ಮಾನವ ಸಂಸ್ಕೃತಿಯ ಮೊದಲ ಮೆಟ್ಟಲನ್ನು ಚಿತ್ರಿಸುತ್ತದೆ. ಇದಿನ್ನೂ ಬೇಟೆಯಾಡುವ ಹಂತ. ಈ ಹಂತದಲ್ಲಿ ಗಂಡಿಗಿರುವ ಶೌರ್ಯದ, ಕ್ರೌರ್ಯದ ಹಮ್ಮನ್ನು ಬೇಂದ್ರೆಯವರು ‘ಏಳು ಮೆಟ್ಟಿನ ಹುಲಿ’ ಹಾಗು ‘ಬೀರಬೇಂಟೆ’ ಪದಗಳಿಂದ ವ್ಯಕ್ತಪಡಿಸಿದ್ದಾರೆ. ಗಂಡಸಿನಲ್ಲಿರುವ ಈ ಜೀವ-ವಿರೋಧಿ,  ಭಾವೋನ್ಮಾದವನ್ನು ಜೀವನ್ಮುಖಿ ಭಾವವನ್ನಾಗಿ ತಿದ್ದಿದವಳೇ ಹೆಣ್ಣು. ಜೀವವಿನಾಶಕ್ಕಾಗಿ ಹೊರಟು ನಿಂತ ಗಂಡಸನ್ನು ಅಲ್ಲಿಯೇ ತಡೆದು ನಿಲ್ಲಿಸಿ, ಸೃಷ್ಟಿಸಂಕೇತವಾದ ಮಗುವನ್ನು ಮುದ್ದಿಸುವಂತೆ ಮಾಡಿದವಳೇ ಹೆಣ್ಣು. ಇದನ್ನು ಸಾಧಿಸುವ ಅವಳ ಶಾಂತ ರೀತಿಯನ್ನು ಬೇಂದ್ರೆ ಹೀಗೆ ಬಣ್ಣಿಸುತ್ತಾರೆ:
‘ಗುರಿಯಿಟ್ಟ ಕಣ್ಣುಗಳ, ಕಿವಿಯೂದಿ, ಹೊರಳಿಸುತ,ತಾನೆ ತನ್ನಷ್ಟಕ್ಕೆ ಹಾಡಿದಾಕೆ.’
ಬೇಟೆಯ ಹುಮ್ಮಸ್ಸಿನಲ್ಲಿಯೇ ಏಕಲಕ್ಷ್ಯನಾದ ಗಂಡಿನ ಕಿವಿಯಲ್ಲಿ ಇವಳು ಮೃದುವಾಗಿ ಪಿಸು ನುಡಿಯುತ್ತಾಳೆ. ಗರ್ವದ ಗಂಡಸನ್ನು ‘ಕಾಂತಾಸಮ್ಮಿತಿಯ’ ಮೂಲಕ ಅವಳು ಬದಲಾಯಿಸುತ್ತಾಳೆ. ಹಿಂಸಾತ್ಮಕ ಸಂಸ್ಕೃತಿಯನ್ನು ಅಹಿಂಸಾತ್ಮಕ ಸಂಸ್ಕೃತಿಗೆ ಪರಿವರ್ತಿಸುವ ಮೊದಲ ಹೆಜ್ಜೆ ಇದು. ಇದನ್ನು ಸಾಧಿಸುವಲ್ಲಿ ಅವಳು ಯಾವುದೇ ಅಬ್ಬರವನ್ನು ತೋರುವದಿಲ್ಲ.
ತನ್ನಷ್ಟಕ್ಕೆ ಹಾಡುತ್ತ, ಮುಂದುವರೆಯುವ ಮಾದರಿ ಅವಳದು. ಹಾಡುವದು ನಾಗರಿಕ ಜೀವನದ ಮೊದಲ ಕಲೆ ಎನ್ನುವದನ್ನೂ ಬೇಂದ್ರೆ ಸೂಚಿಸುತ್ತಾರೆ. ಈ ಕಲೆಗೆ ಮೂಲಳಾದವಳು ತಾಯಿ ಸರಸ್ವತಿ ಅಂದರೆ ಹೆಣ್ಣು.

ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು
ಅಡವಿಯಲಿ ಹೂದೋಟ ಹೂಡಿದಾಕೆ.
ಗಿಡಕೆ ಗುಡಿಯನು ಕಟ್ಟಿ, ಬೇರೊಂದು ಲೋಕವನು
ಮೂಕಮಾತುಗಳಿಂದ ಬೇಡಿದಾಕೆ.

ಎರಡನೆಯ ನುಡಿಯು ನಾಗರಿಕತೆಯ ವಿಕಾಸವನ್ನು ಸೂಚಿಸುತ್ತದೆ. ಅಡವಿಯಲ್ಲಿರುವ ಪ್ರಾಣಿಗಳಂತೆಯೇ ಜೀವಿಸುತ್ತಿದ್ದ ಮನುಷ್ಯನ ಸಾಂಸ್ಕೃತಿಕ ಪ್ರಜ್ಞೆ ಬದಲಾಗಿರುವದನ್ನು ಈ ನುಡಿ ವರ್ಣಿಸುತ್ತದೆ. ಕಲೆ ಹಾಗು ಸೌಂದರ್ಯಸೃಷ್ಟಿಯಲ್ಲಿ ಮಾನವನಿಗೆ ಅಭಿರುಚಿ ಬೆಳೆದದ್ದನ್ನು, ಹಾಗು ಹೆಣ್ಣಿನ ಮೂಲಕವೇ ಇದು ಸಾಧ್ಯವಾಗಿದ್ದನ್ನು ‘ತಳಿರಿನುಡುಗೆಯನುಟ್ಟು ಗರಿತೊಡವುಗಳ ತೊಟ್ಟು ಅಡವಿಯಲಿ ಹೂದೋಟ ಹೂಡಿದಾಕೆ.’ ಎನ್ನುವ ವರ್ಣನೆಯ ಮೂಲಕ ಬೇಂದ್ರೆ ಸೂಚಿಸುತ್ತಾರೆ. ಏನೇ ಆದರೂ ತನ್ನ ಹಾಗು ತನ್ನವರ ಶೃಂಗಾರಕ್ಕೆ ಈ ನಾಗರಿಕತೆ ಸೀಮಿತವಾಗಿ ಉಳಿಯಲಿಲ್ಲ. ತಿಂದುಂಡು ಸಾಯುವ ಭೌತಿಕ ಲೋಕದಾಚೆಗೆ ಇರುವ ಪಾರಮಾರ್ಥಿಕ ಲೋಕದ ಅರಿವು ಹೆಣ್ಣಿನಲ್ಲಿ ಮೂಡತೊಡಗಿದೆ. ಅವಳು ತನ್ನ ಗೂಡಿನ ಪಕ್ಕದ ಗಿಡಗಳಿಗೆ ಬಾವುಟವನ್ನು ಕಟ್ಟುತ್ತಾಳೆ. ಇದು ಮಾನವನ ಸೌಂದರ್ಯಾಭಿರುಚಿಯ ಹಾಗು ಉನ್ನತಿಯ ಅಭೀಪ್ಸೆಯನ್ನು ತೋರುತ್ತದೆ. ತಾವಿರುವ ಲೋಕವು ಪ್ರಾಣಿಲೋಕವಾಗದೆ, ಅಂತರಂಗವನ್ನು ಬೆಳಗುವ ಲೋಕವಾಗಲಿ ಎಂದು ಅವಳು ಬೇಡಿಕೊಳ್ಳುತ್ತಾಳೆ. ಮಾನವಶಕ್ತಿಯನ್ನು ಮೀರಿದ ಚೈತನ್ಯವೊಂದಿದೆ ಎಂದು ಅವಳಿಗೆ ಅರಿವಾಗತೊಡಗಿದ್ದು ಈ ‘ಬೇಡಿಕೊಳ್ಳುವ ’ ಪದದಿಂದ ವ್ಯಕ್ತವಾಗುತ್ತದೆ. ಈ ಬೇಡಿಕೆಯಲ್ಲಿ ಅಬ್ಬರವಿಲ್ಲ. ಅವಳದು ಮೂಕ ಮಾತುಗಳು, ವಿನಯಪೂರ್ಣ ಸುಸಂಸ್ಕೃತಿ.

ದೇವರ ಕಲ್ಪನೆ ಮೂಡುತ್ತಿರುವ ಈ ಕಾಲಾವಧಿಯು ನಾಗರಿಕತೆಯ ಪ್ರಾಥಮಿಕ ಸಂಶೋಧನೆಗಳ ಕಾಲಾವಧಿಯೂ ಆಗಿದೆ. ಬತ್ತಲೆ ಮಾನವಿಯು ಇದೀಗ ಗಿಡಮರಗಳ ತೊಪ್ಪಲನ್ನು ಕಟ್ಟಿಕೊಳ್ಳಲು ಕಲಿತಳು. ತನ್ನ ಚೆಲುವಿಗೆ ಮೆರಗು ಕೊಡಲೆಂದು ಹಕ್ಕಿಯ ಗರಿಯನ್ನು ತಲೆಗೆ ಆಭರಣವಾಗಿ ಬಳಸತೊಡಗಿದಳು. ಇದೆಲ್ಲವೂ ನಾಗರಿಕತೆಯ ಬೆಳವಣಿಗೆಗೆ ಹೆಣ್ಣು ಕೊಟ್ಟ ಕಾಣಿಕೆ. ನಮ್ಮ ದೇವತೆಗಳ ಉಡುಗೆ, ತೊಡುಗೆಗಳಲ್ಲಿಯೂ ಈ ಕಾಲಾವಧಿಯು ಬಿಂಬಿತವಾಗಿದೆ. ಸವದತ್ತಿಯ ಎಲ್ಲಮ್ಮನು ತನ್ನ ಭಕ್ತರಿಗೆ ಬೇವಿನ ತೊಪ್ಪಲನ್ನು ತೊಡಿಸುತ್ತಾಳೆ; ಬನಶಂಕರಿ ದೇವಿಯು ‘ಶಾಕಾಂಬರಿ’, ಅಂದರೆ ಗಿಡದ ತೊಪ್ಪಲನ್ನು ಉಟ್ಟವಳು. ಶ್ರೀಕೃಷ್ಣನು ತನ್ನ ತಲೆಗೊಂದು ನವಿಲಗರಿಯನ್ನು ಸಿಕ್ಕಿಸಿಕೊಂಡವನು. ನಮ್ಮಂತೆ ನಮ್ಮ ದೇವರುಗಳೂ ಸಹ ‘ಬತ್ತಲೆ ಕಾಳಿದೇವಿ’ಯಿಂದ, ಸಕಲಾಭರಣಶೋಭಿತೆಯಾದ ಲಕ್ಷ್ಮೀದೇವಿಯವರೆಗೂ ವಿವಿಧ ನಾಗರಿಕ ಸ್ತರಗಳಲ್ಲಿ ಹಾಯ್ದು ಬಂದವರೇ.

ಮನೆಯ ಹೊಸ್ತಿಲಕೆ ಶುಭ ಬರೆಯುವಾಕೆ.
ಮಂಗಲವೆ ಬಾರೆಂದು ಕರೆಯುವಾಕೆ.
ಬಾಳ ಸುಳಿಯಲಿ ಬೆಳೆದು ತೋರುವಾಕೆ.
ದಿನದಿನವು ನವಜಯವ ಕೋರುವಾಕೆ.

ಬಯಲಲ್ಲಿ ಬಿದ್ದ ಪ್ರಾಣಿಯನ್ನು ಮನೆಯಲ್ಲಿ ಬೆಳೆಯುವ ಮಾನವನನ್ನಾಗಿ ಮಾಡಿದವಳೇ ಹೆಣ್ಣು. ಆದುದರಿಂದಲೇ ಅವಳು ಗೃಹಿಣಿ.ನಾಗರಿಕತೆಯ ಬೆಳವಣಿಗೆ ಹಾಗು ಸಂಸ್ಕೃತಿಯ ಉನ್ನತೀಕರಣ ಇವು ಹೆಣ್ಣಿನ ಕೊಡುಗೆ. ಇದನ್ನೆಲ್ಲ ಅವಳು ಮೌನವಾಗಿಯೇ ಸಾಧಿಸುತ್ತ ಬಂದಿದ್ದಾಳೆ. ಈ ಸಾಧನೆಯ ಹಿಂದಿನ ಅಪೇಕ್ಷೆ ಏನು? ಲೋಕಕ್ಕೆಲ್ಲ ಶುಭವಾಗಲಿ ಎನ್ನುವದೇ ಅವಳ ಹಿರಿಹಂಬಲ. ಅದನ್ನು ಅವಳು ಸಾಧಿಸುವದು ಮುಂಜಾವಿನಲ್ಲೆದ್ದು ಮನೆಯ ಹೊಸ್ತಿಲಕೆ ರಂಗೋಲಿ ಎಳೆಯುವ ಕ್ರಿಯೆಯೊಂದಿಗೆ. ಇದನ್ನು ಬೇಂದ್ರೆಯವರು ’ಶುಭವನ್ನು ಬರೆಯುವ ಕ್ರಿಯೆ’ ಎಂದು ಬಣ್ಣಿಸುತ್ತಾರೆ. ಕುಟುಂಬವೇ ಸಮಾಜದ ಪ್ರಾಥಮಿಕ ಘಟಕ. ಈ ಕುಟುಂಬಕ್ಕೆ ಅವಳು ಆಡಂಬರದ ಸಂಪತ್ತನ್ನು ಬಯಸುವದಿಲ್ಲ, ಕೇವಲ ಶುಭಮಂಗಲವನ್ನು ಬಯಸುತ್ತಾಳೆ.  ತಾನು ಬೆಳೆಯುವದೇ ಸಮಾಜದ ಬೆಳವಣಿಗೆ, ಸಂಸ್ಕೃತಿಯ ಬೆಳವಣಿಗೆ ಎನ್ನುವದನ್ನು ಅರಿತ ಅವಳು ‘ಬಾಳ ಸುಳಿಯಲಿ ಬೆಳೆದು ತೋರಿಸುತ್ತಾಳೆ ’. 
ರಂಗೋಲಿಯನ್ನು ಬರೆಯುವದು ಒಂದು ಚಿತ್ರಕಲೆ. ನಾಗರಿಕ ಕಲೆಗಳ ಮತ್ತೊಂದು ಸಂಶೋಧನೆಯ ಪ್ರವರ್ತಕಿ ಹೆಣ್ಣೇ ಆಗಿದ್ದಾಳೆ!

ಗಂಡಸಿನ ಜಯವು ಪ್ರಕೃತಿಯ ಮೇಲಿನ ಬಾಹ್ಯಜಯವಾಗಿದ್ದರೆ, ಹೆಣ್ಣಿನ ಜಯವು ಸಾಂಸ್ಕೃತಿಕ ಜಯ. ಇಂತಹ ಜಯವು ಮಾನವಲೋಕಕ್ಕೆ ಪ್ರತಿದಿನವೂ ಲಭಿಸಲಿ ಎಂದು ಅವಳು ತಾನು ನಂಬುತ್ತಿರುವ ಆ ದೈವೀಚೈತನ್ಯಕ್ಕೆ ಪ್ರಾರ್ಥಿಸುತ್ತಾಳೆ. ಈ ಕೊನೆಯ ಸಾಲಿನ ಮೂಲಕ, ಬೇಂದ್ರೆಯವರು ಹೆಣ್ಣಿನ ಮನೋಧರ್ಮವನ್ನು ತೋರುತ್ತಿದ್ದಾರೆ. 

ಮೂರು ನುಡಿಗಳ ಈ ಪುಟ್ಟ ಕವನದಲ್ಲಿ ನಾಗರಿಕತೆಯ ಬೆಳವಣಿಗೆಯ ವಿವಿಧ ಹಂತಗಳನ್ನು ಹಾಗು ಗೃಹಿಣಿಯೇ ಮಾನವಸಂಸ್ಕೃತಿಯ ಸ್ರೋತ ಎನ್ನುವ ಸತ್ಯವನ್ನು ಬೇಂದ್ರೆಯವರು ತೆರೆದು ತೋರಿಸುತ್ತಿದ್ದಾರೆ. ತನ್ನ ಕುಟುಂಬವನ್ನು ಮುನ್ನಡೆಸುವ ಮೂಲಕ ಹೆಣ್ಣು ಸಮಾಜವನ್ನು ಮುನ್ನಡೆಸುತ್ತಾಳೆ. ಆದುದರಿಂದ ಅವಳು ವಿಶ್ವಕುಟುಂಬಿನಿಯಾದ ಗೃಹಿಣಿ. ಲೋಕಕಲ್ಯಾಣವೇ ಅವಳ ಪರಮಾರ್ಥ.ಮಾನವನ ಸಾಂಸ್ಕೃತಿಕ ವಿಕಾಸದಲ್ಲಿ ಪಥನಿರ್ದೇಶನವನ್ನು ಮಾಡುವವಳೇ ಹೆಣ್ಣು. ‘ಗೃಹಿಣಿ’ಯಾಗುವ ಮೂಲಕ, ಗೃಹವನ್ನು ಹಾಗು ಸಮಾಜವನ್ನು ಅವಳು ಮುನ್ನಡೆಯಿಸುತ್ತಾಳೆ. ಆದುದರಿಂದಲೇ ಬೇಂದ್ರೆಯವರು ಈ ಕವನಕ್ಕೆ ‘ಗೃಹಿಣಿ’ ಎನ್ನುವ ಶೀರ್ಷಿಕೆಯನ್ನು ನೀಡಿದ್ದಾರೆ.

Thursday, March 3, 2011

ಭೋಜಪಾಲ

ಒಂದು ಊರಿನ ಹೆಸರು ಏಕೆ ಬದಲಾಗುತ್ತದೆ? ಇದಕ್ಕೆ ಎರಡು ಕಾರಣಗಳನ್ನು ಊಹಿಸಬಹುದು. ಮೊದಲನೆಯದು ಅಲ್ಲಿಯ ನಿವಾಸಿಗಳು ಉಚ್ಚಾರದ ಭರಾಟೆಯಲ್ಲಿ ಮಾಡಿಕೊಂಡಂತಹ ಬದಲಾವಣೆ. ಎರಡನೆಯದು ಪರಕೀಯರ ಆಕ್ರಮಣದಿಂದಾದ ಬದಲಾವಣೆ. ಉದಾಹರಣೆಗಾಗಿ ‘ಬೆಂಗಳೂರು’ ಎನ್ನುವ ಹೆಸರನ್ನೇ ತೆಗೆದುಕೊಳ್ಳೋಣ. ವೆಂಕಟೇಶ್ವರನ ಹೆಸರನ್ನು ಹೊತ್ತು, ‘ವೆಂಕಳೂರು’ ಎಂದು ಕರೆಯಲಾಗುತ್ತಿದ್ದ ಈ ಊರು ಕಾಲ ಸರಿದಂತೆ ‘ಬೆಂಗಳೂರು’ ಆಗಿ, ಆಂಗ್ಲರ ಉಚ್ಚಾರದಲ್ಲಿ ‘ಬ್ಯಾಂಗಲೋರ್’ ಆಯಿತು.  ಇದನ್ನೀಗ ಕನ್ನಡಿಗರು ಬೆಂಗಳೂರು ಎಂದು ಬದಲಾಯಿಸಿಕೊಂಡರು. ಇದಕ್ಕೂ ಮೊದಲೇ ಮಹಾರಾಷ್ಟ್ರೀಯರು ಬಾಂಬೇಯನ್ನು ಮೊದಲಿನ ಮುಂಬಯಿಗೆ ಬದಲಾಯಿಸಿಕೊಂಡಿದ್ದರು. ಈ ರೀತಿಯಾಗಿ ಮೂಲ ಹೆಸರಿಗೆ ಮರುಬದಲಾವಣೆ ಮಾಡುವದು ಜನತೆಯ ಸಾಂಸ್ಕೃತಿಕ ಹಾಗು ಐತಿಹಾಸಿಕ ಪ್ರಜ್ಞೆಯ ದ್ಯೋತಕವೇ ಆಗಿದೆ.

ಹೀಗಿರಲು, ಮಧ್ಯಪ್ರದೇಶದ ರಾಜಧಾನಿಯಾದ ‘ಭೋಪಾಲ’ ಎನ್ನುವ ಹೆಸರನ್ನು ಅದರ ಮೂಲ ಹೆಸರಾದ ‘ಭೋಜಪಾಲ’ ಎಂದು ಮರುಬದಲಾಯಿಸಲು ಅಲ್ಲಿಯ ನಾಗರಿಕರು ಬಯಸಿದಾಗ, ಕೆಲವು ತರಲೆ ಜನ ಅದಕ್ಕೆ ತಕರಾರು ಮಾಡುತ್ತಿದ್ದಾರೆ. ಈ ಬದಲಾವಣೆಯು ಭಾರತದ ಜಾತ್ಯತೀತ ಧೋರಣೆಗೆ ವಿರುದ್ಧವಾಗಿದೆ ಎನ್ನುವದು ಅವರು ಕೊಡುವ ಕಾರಣವಾಗಿದೆ! ಇದರ ಅರ್ಥವೇನೆಂದರೆ ಭಾರತೀಯ ಸಂವಿಧಾನವು ಜಾತ್ಯತೀತತೆಯನ್ನು ಘೋಷಿಸಿದ ಕಾರಣದಿಂದಾಗಿ ಭಾರತೀಯರು ತಮ್ಮ ಪ್ರಾಚೀನ ಸಂಸ್ಕೃತಿಯನ್ನು ಅರಬ್ಬಿ ಸಮುದ್ರದಲ್ಲಿ ಬಿಸಾಕಿಬಿಡಬೇಕು. ಯಾಕೆಂದರೆ ಭಾರತವನ್ನು ತುರ್ಕರು ಹಾಗು ಪರ್ಶಿಯನ್ನರು ಆಕ್ರಮಿಸಿ, ಹಾಳುಗೆಡುವದಕ್ಕಿಂತ ಮೊದಲಿನ ಸಂಸ್ಕೃತಿಯನ್ನು ನೆನಪಿಸಿಕೊಳ್ಳುವದು ನಮ್ಮ ಸಂವಿಧಾನದ ಜಾತ್ಯತೀತ ಧೋರಣೆಗೆ ವಿರುದ್ಧವಾಗುತ್ತದೆ!

‘ಭೋಪಾಲ’ ನಗರದ ಮರುನಾಮಕರಣಕ್ಕೆ ಸಂಬಂಧಿಸಿದಂತೆ, ಫೆಬ್ರುವರಿ ೨೮ರಂದು ‘ಸಂಯುಕ್ತ ಕರ್ನಾಟಕ’ದಲ್ಲಿ ಪ್ರಕಟವಾದ ಸಮಾಚಾರವನ್ನು ಇಲ್ಲಿ ನೋಡಿರಿ:


ಮಧ್ಯಪ್ರದೇಶದ ಕಾಂಗ್ರೆಸ್ ವಕ್ತಾರ ಅರೀಫ ಮಸೂದರ ಹೇಳಿಕೆಯನ್ನು ನೋಡಿದಿರಾ?: ‘ಮುನ್ನೂರು ವರ್ಷಗಳಿಂದಲೂ ಭೋಪಾಲ ಹಿಂದೂ-ಮುಸ್ಲಿಮ್ ಐಕ್ಯತೆಗೆ ಸಾಕ್ಷಿಯಾಗಿದೆ.

ಮುನ್ನೂರು ವರುಷಗಳ ಮೊದಲು ಭೋಪಾಲದಲ್ಲಿ ಹಿಂದು-ಮುಸ್ಲಿಮ್ ಐಕ್ಯತೆ ಇರಲಿಲ್ಲವೆಂದು ಇದರರ್ಥವೆ? ಏನೆ ಇರಲಿ, ನಾವೆಲ್ಲರೂ ಭಾರತೀಯರೇ ಆಗಿರುವಾಗ, ನಮ್ಮಲ್ಲಿಯೇ ಹಿಂದು ಮತ್ತು ಮುಸ್ಲಿಮ್ ಎಂದು ವಿಭಾಗಿಸಿ ಹೇಳುವ ಕಾರಣವೇನು? ‘ಒಡೆದು ಆಳುವ’ ಉದ್ದೇಶದಿಂದಲೇ ಈ ರಾಜಕಾರಣಿಗಳು ‘ಒಡೆದು ಹೇಳು’ತ್ತಿದ್ದಾರೆ. ಓರ್ವ ಹಿಂದು ಗೃಹಸ್ಥನ ನೆರೆಮನೆಯವನೂ ಸಹ ಹಿಂದುವೇ ಆಗಿದ್ದಾಗ ಅವರು ಐಕ್ಯದಿಂದ ಇದ್ದಾರೆ ಅಥವಾ ಜಗಳಾಡುತ್ತಾರೆ ಎಂದು ಯಾರೂ ಹೇಳುವದಿಲ್ಲ. ಆದರೆ ಈ ಹಿಂದೂ ಗೃಹಸ್ಥನ ನೆರೆಯವನು ಮುಸ್ಲಿಮ ಗೃಹಸ್ಥನಾಗಿದ್ದರೆ, ಅವರ ಬಾಂಧವ್ಯವನ್ನು ಹಿಂದು-ಮುಸ್ಲಿಮ್ ಐಕ್ಯವೆಂದು ಬಣ್ಣಿಸುವದರ ಮತ್ತು ಅವರು ಜಗಳವಾಡುತ್ತಿದ್ದರೆ ಅದನ್ನು ಹಿಂದು-ಮುಸ್ಲಿಮ್ ಸಮರವೆಂದು ಬಣ್ಣಿಸುವದರ ಹಿಂದಿನ ಉದ್ದೇಶವೇನು? ಅಥವಾ ಇದು ಮತ-ರಾಜಕೀಯದ ಜಾಣತನವೆ?  ಸ್ವತಂತ್ರ ಭಾರತದ ರಾಜಕಾರಣಿಗಳ ಇಂತಹ ರಾಷ್ಟ್ರಘಾತಕ ವೃತ್ತಿಯು ನಮಗೆಲ್ಲರಿಗೂ ತಿಳಿದದ್ದೇ ಆಗಿದೆ. ಆನೆಗಳ ದಂತಗಳ ಸಲುವಾಗಿ ವೀರಪ್ಪನ್ನನು, ಆನೆಗಳ ಕೊಲೆ ಮಾಡಲು ಹೇಸುತ್ತಿರಲಿಲ್ಲ. ಅದೇ ರೀತಿಯಲ್ಲಿ ತಮ್ಮ ದುರಾಸೆಗಾಗಿ ಈ ರಾಜಕಾರಣಿಗಳು  ಭಾರತವನ್ನು ತುಂಡು ತುಂಡು ಮಾಡಲು ಹೇಸಲಾರರು.

ಯಾರೀ ಭೋಜರಾಜ?:
ಭಾರತ ದೇಶದ ಮಹಾನ್ ರಾಜನಾದ ಭೋಜರಾಜನನ್ನು ‘ಯಾರೀ ಭೋಜರಾಜ?’ ಎಂದು ಕೇಳುವ ಮೂಲಕ ಮಸೂದರು ತಮ್ಮ ಅಜ್ಞಾನವನ್ನು ತೋರಿಸುತ್ತಿದ್ದಾರೆಯೊ ಅಥವಾ ತಮ್ಮ ಅಹಂಕಾರವನ್ನು ತೋರಿಸುತ್ತಿದ್ದಾರೆಯೊ ಅರ್ಥವಾಗುತ್ತಿಲ್ಲ. ಸಮಗ್ರ ವಿಶ್ವದ ಸಾರಸ್ವತ ಲೋಕವು ಪೂಜಿಸುತ್ತಿರುವ ಕವಿಕುಲಗುರು ಕಾಲಿದಾಸನ ಆಶ್ರಯದಾತನಾದ ಭೋಜರಾಜನು ಈ ರಾಜಕಾರಣಿಗೆ, ‘ಯಾರೀ ಭೋಜರಾಜ?’ ಆದನೆ? ಇವರ ಈ ಸೊಕ್ಕಿನ ಮಾತನ್ನು ಕೇಳಿದಾಗ, ’ಕಹಾಂ ರಾಜಾ ಭೋಜ, ಕಹಾಂ ಗಂಗೂ ತೇಲಿ?’ ಎನ್ನುವ ಗಾದೆಯನ್ನು  ’ಕಹಾಂ ರಾಜಾ ಭೋಜ, ಕಹಾಂ ಅರೀಫ ಮಸೂದ?’ ಎಂದು ಬದಲಾಯಿಸುವದೇ ಸಮಂಜಸವೆನಿಸುತ್ತದೆ.

‘ಪಾಲ ಅಥವಾ ಪಳ್ಳಿ’ ಪದವು ಸ್ಥಳನಿರ್ದೇಶಕವಾದದ್ದು. ‘ಭೋಜಪಾಲ’ ಅಂದರೆ ‘ಭೋಜ’ನ ‘ಪಾಲ’ ಅರ್ಥಾತ್ ಸ್ಥಳ. ಭೋಜಪಾಲದ ಬದಲಾಗಿ ಸೋನಿಯಾನಗರ ಎನ್ನುವ ಹೆಸರನ್ನು ಸೂಚಿಸಿದ್ದರೆ, ಮಸೂದರು ಕುಣಿಕುಣಿದು ಒಪ್ಪುತ್ತಿದ್ದರೇನೊ?

ನನಗೆ ದುಃಖವಾಗುವದು ಮಸೂದರು ತಮ್ಮ ಪರಂಪರೆಯನ್ನು ಅರಿತಿಲ್ಲವಲ್ಲ ಎನ್ನುವ ಕಾರಣಕ್ಕಾಗಿ. ಭೋಜರಾಜ ಹಾಗು ಕಾಲಿದಾಸರು ಕೇವಲ ಹಿಂದು ಧರ್ಮೀಯರ ಪೂರ್ವಜರಲ್ಲ. ಭಾರತದಲ್ಲಿ ಇದ್ದವರೆಲ್ಲರಿಗೂ ಅವರು ಪೂರ್ವಜರು. ಸ್ವಇಚ್ಛೆಯಿಂದಲೊ ಅಥವಾ ಬಲಾತ್ಕಾರದಿಂದಲೊ ನನ್ನ ಧರ್ಮ ಬದಲಾಗಿರಬಹುದು. ಹಾಗೆಂದು ನನ್ನ ಅಪ್ಪ, ಅಮ್ಮ ಬದಲಾಗುತ್ತಾರೆಯೆ? ನನ್ನ ಪರಂಪರೆ ಬದಲಾಗುತ್ತದೆಯೆ?

ರಾಜಕಾರಣಿಗಳನ್ನು ಬಿಡಿ. ಅವರು ಸ್ವಾರ್ಥಕ್ಕಾಗಿ ದೇಶವನ್ನೇ ಮಾರುತ್ತಿದ್ದಾರೆ. ಆದರೆ ಬುದ್ಧಿಜೀವಿ ಎಂದು ಸ್ವಯಂಘೋಷಣೆ ಮಾಡಿಕೊಳ್ಳುತ್ತಿರುವ ನಮ್ಮ ಸಾಹಿತಿಗಳೂ ಹೀಗೆ ಆಡುತ್ತಿದ್ದಾರಲ್ಲ! ಜ್ಞಾನಪೀಠಸ್ಥ ಅನಂತಮೂರ್ತಿಯವರ ಅಭಿಪ್ರಾಯದಲ್ಲಿ ಭಾರತವು ಅನೇಕ-ಸಂಸ್ಕೃತಿಯ ರಾಷ್ಟ್ರವಾಗಿದೆ. ಭಾರತೀಯರ ಆಚಾರಗಳಲ್ಲಿ ವೈವಿಧ್ಯವಿರಬಹುದು; ಆದರೆ ಇದು ‘ಅನೇಕ-ಸಂಸ್ಕೃತಿ’ ಹೇಗಾಗುತ್ತದೆ ಎನ್ನುವದು ನನಗೆ ತಿಳಿಯಲಾರದಾಗಿದೆ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿರಿ. ಕರಾವಳಿಯ ಕನ್ನಡವೇ ಬೇರೆ, ಕಲಬುರ್ಗಿಯ ಕನ್ನಡವೇ ಬೇರೆ. ಮೈಸೂರಿನವರು ರಾಗಿಮುದ್ದೆ ತಿಂದರೆ, ವಿಜಾಪುರದವರು ಜೋಳದ ರೊಟ್ಟಿಯನ್ನು ತಿನ್ನುತ್ತಾರೆ. ಹಾಗಾದರೆ, ಇವರೆಲ್ಲರ ಸಂಸ್ಕೃತಿ ಬೇರೆ ಬೇರೆಯೆ? ಸಂಸ್ಕೃತಿ ಬೇರೆ ಬೇರೆಯಾಗಿದ್ದರೆ, ಕವಿಕುಲಗುರು ಕಾಳಿದಾಸನು ಭಾರತವನ್ನು ‘ಆಸೇತುಹಿಮಾಚಲ’ ಎಂದು ಬಣ್ಣಿಸುತ್ತಿದ್ದನೆ? ಇಂತಹ ಕವಿಗೆ ಆಶ್ರಯದಾತನಾದ ಭೋಜರಾಜನಿಗೆ ಇಂದು ತನ್ನ ಸಾಮ್ರಾಜ್ಯದ ರಾಜಧಾನಿಯಲ್ಲಿಯೇ ಅವಮಾನವಾಗುತ್ತಿದೆ, ಜಾತ್ಯತೀತತೆಯ ಹೆಸರಿನಲ್ಲಿ!

ನಮ್ಮ ಪರಂಪರೆಯನ್ನು ಕುರುಡು ರೀತಿಯಲ್ಲಿ ಅನುಸರಿಸಬೇಕೆಂದು ನಾನು ಹೇಳುತ್ತಿಲ್ಲ. ಪ್ರತಿಯೊಂದು ಧರ್ಮದಲ್ಲಿ, ಪ್ರತಿಯೊಂದು ಸಂಸ್ಕೃತಿಯಲ್ಲಿ ಒಳ್ಳೆಯ ಹಾಗು ಕೆಟ್ಟ ಅಂಶಗಳು ಇದ್ದೇ ಇರುತ್ತವೆ. ಈ ಕೆಟ್ಟ ಅಂಶಗಳನ್ನು, ಅವು ಯಾವ ಧರ್ಮ ಹಾಗು ಯಾವ ಪ್ರದೇಶದ್ದೇ ಆಗಿರಲಿ, ವಿರೋಧಿಸುವ ಧೈರ್ಯ ಪ್ರತಿಯೊಬ್ಬ ಭಾರತೀಯನಿಗೂ ಬರಬೇಕು. ಅದರಂತೆ ಭಾರತದ ಶ್ರೇಷ್ಠ ಪರಂಪರೆಯನ್ನು ತನ್ನದು ಎನ್ನುವ ಅಭಿಮಾನವೂ ಆತನಿಗಿರಬೇಕು. ಇಂತಹ ಧೈರ್ಯವನ್ನು ತೋರಿಸಲು ಯಾವ ‘ಜಾತ್ಯತೀತ’ ರಾಜಕಾರಣಿಯೂ ಸಿದ್ಧನಿಲ್ಲ; ಇಂತಹ ಅಭಿಮಾನವನ್ನು ತೋರಿಸಲು ಯಾವ ‘ಬುದ್ಧಿಜೀವಿ’ಯೂ ಸಿದ್ಧನಿಲ್ಲ!

Monday, February 21, 2011

ಕಾಮಕಸ್ತೂರಿ....................ದ.ರಾ.ಬೇಂದ್ರೆ


ಕಾಮಕಸ್ತೂರಿ
(ಹೊಲದ ಹತ್ತರ)

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~

ಬೇಂದ್ರೆಯವರು ರಚಿಸಿದ ‘ಕಾಮಕಸ್ತೂರಿ’ ಕವನವು ಅದೇಹೆಸರಿನ ಸಂಕಲನದಲ್ಲಿ ಅಡಕವಾದ ಮೊದಲನೆಯ ಕವನ. ಕಾಮಕಸ್ತೂರಿ ಇದು ವಿಶಿಷ್ಟ ಸುವಾಸನೆಯ ಒಂದು ಸಸ್ಯ. ಇದರ ಸಸ್ಯಶಾಸ್ತ್ರೀಯ ಹೆಸರು Ocimum basilicum. ತುಳಸಿಯ ದಳವನ್ನು ದೇವರ ಪೂಜೆಗೆ ಬಳಸುವಂತೆಯೇ, ಈ ಸಸ್ಯದ ಹೂವನ್ನು ಸಹ ದೇವರ ಪೂಜೆಗೆ ಬಳಸುತ್ತಾರೆ. 
ಗಂಡು ಹೆಣ್ಣಿನ ನಡುವಿನ ಆಕರ್ಷಣೆಯು  ಕಾಮಮೂಲವಾಗಿರಬಹುದು; ಆದರೆ ಇದು ಕಾಮಕ್ಕೆ ಸೀಮಿತವಾಗಬಾರದು. ಕಸ್ತೂರಿಯಂತೆ ಇದು ಮೃಗಮಲವಾಗಬಾರದು; ಆದರೆ ಕಾಮಕಸ್ತೂರಿಯಂತೆ ಸುಗಂಧದ ಸಸ್ಯವಾಗಬೇಕು ಎನ್ನುವದು ಬೇಂದ್ರೆಯವರ ಆಶಯವಾಗಿದೆ.

ತಂದೇನಿ ನಿನಗೆಂದ
ತುಂಬಿ ತುರುಬಿನವಳ,
ಕಾಮಕಸ್ತೂರಿಯಾ
ತೆನಿಯೊಂದ.

‘ಕಾಮಕಸ್ತೂರಿ’ ಕವನದ ಮೊದಲ ನುಡಿಯಲ್ಲಿ ಹಳ್ಳಿಯ ತರುಣನೊಬ್ಬ ತನ್ನ ನಲ್ಲೆಯನ್ನು ಕಂಡಾಗ ಅವನ ಮನದಲ್ಲಿ ಮೂಡಿದ ಭಾವನೆಗಳ ವರ್ಣನೆ ಇದೆ. ಈ ತರುಣನಿಗೆ ತನ್ನ ನಲ್ಲೆಯ ಬಗೆಗೆ ಆಕರ್ಷಣೆ ಇದೆ. ಅವಳ ಚೆಲುವನ್ನು ಆತ ಗಮನಿಸುತ್ತಾನೆ. ‘ತುಂಬಿತುರುಬಿನವಳೆ’ ಎಂದು ಅವಳನ್ನು ಬಣ್ಣಿಸುತ್ತಾನೆ. ಅವಳಿಗೆ ತನ್ನ ಪ್ರಣಯದ ಸಂಕೇತವಾಗಿ ಕಾಮಕಸ್ತೂರಿಯ ತೆನೆಯೊಂದನ್ನು ತುರುಬಿನಲ್ಲಿ ಮುಡಿಯಲು ನೀಡುತ್ತಾನೆ. ದೈಹಿಕ ಆಕರ್ಷಣೆಯ ನಿರೂಪಣೆ ಇಲ್ಲಿಗೇ ಮುಗಿಯುತ್ತದೆ.

ಅದನs ನೀ ಮುಡಿದಂದ
ಮುಡಿದಂಥ ಮುಡಿಯಿಂದ
ಗಾಳಿಯ ಸುಳಿಯೊಂದ
ಬಂದೆನಗ ತಗಲಿದಂದ
ತಣಿತಣಿತಣಿವಂದ
ಈ ಮನಕ.

ಎರಡನೆಯ ನುಡಿಯಲ್ಲಿ ಆತನ ಅಪೇಕ್ಷೆಯನ್ನು ನಿರೂಪಿಸಲಾಗಿದೆ. ಕಾಮಕಸ್ತೂರಿಯನ್ನು ಮುಡಿದ ತನ್ನ ನಲ್ಲೆಯಿಂದ ಆತ ಬಯಸುವದು ಏನನ್ನು? ಅವಳ ದೈಹಿಕ ಸಾಮೀಪ್ಯವನ್ನು ಆತ ಬೇಡುತ್ತಿಲ್ಲ. ಅವಳ ಮುಡಿಯ ಮೇಲೆ ನವಿರಾಗಿ ಬೀಸಿದ ಗಾಳಿಯ ಸುಳಿಯೊಂದು, ಆ ಕಾಮಕಸ್ತೂರಿಯ ಪರಿಮಳವನ್ನು ಹೊತ್ತು ತಂದು ತನ್ನನ್ನು ತಗಲಿದರೆ ಸಾಕು ಎನ್ನುವದು ಅವನ ಹಂಬಲ. ಅಷ್ಟರಿಂದಲೇ ಅವನ ಮನಸ್ಸು ತಣಿದು ತೃಪ್ತವಾಗುವದು. ಗಂಡು ಹೆಣ್ಣುಗಳ ನಡುವೆ ದೈಹಿಕ ಆಕರ್ಷಣೆಯನ್ನು ಮೀರಿದ ಪ್ರೀತಿಯನ್ನು ಬೇಂದ್ರೆಯವರು ಈ ರೀತಿಯಲ್ಲಿ ತೋರಿಸುತ್ತಿದ್ದಾರೆ.

ಅನ್ನೋ ಜನರು ಏನು
ಅಂತsನ ಇರತಾರ
ಹೊರತಾದೆ ನೀ ಜನಕ.

ಮೂರನೆಯ ನುಡಿಯಲ್ಲಿ ಈ ಪ್ರೀತಿಯ ಗಾಢತೆಯನ್ನು, ಉದಾತ್ತತೆಯನ್ನು ಬೇಂದ್ರೆ ಹೇಳುತ್ತಿದ್ದಾರೆ.  ಇವರ ಪ್ರಣಯಭಾವವನ್ನು ಕಂಡಂತಹ ಜನ ಏನೇ ಟೀಕೆಯನ್ನು ಮಾಡಲಿ, ಅದನ್ನು ಉಪೇಕ್ಷಿಸು ಎಂದು ನಾಯಕನು ತನ್ನ ನಲ್ಲೆಗೆ ಸೂಚಿಸುತ್ತಾನೆ. ತಮ್ಮ ನಡುವಿನ ಪ್ರೇಮವು ಅಸಾಮಾನ್ಯವಾಗಿದೆ. ತನ್ನ ನಲ್ಲೆಯೂ ಸಹ ಅಸಾಮಾನ್ಯಳೇ. ಅವಳು ಹಾಗು ಅವಳ ಪ್ರೀತಿ ಸಾಮಾನ್ಯ ಮಟ್ಟದ ಜನರಿಗೆ ಹೊರತಾಗಿದೆ ಎನ್ನುವದು ನಾಯಕನ ಭಾವನೆ.
~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~ ~
ಟಿಪ್ಪಣಿ:
(೧) ಬೇಂದ್ರೆಯವರು ರಚಿಸಿದ ಪ್ರಣಯಕವನಗಳು ಹೆಚ್ಚಾಗಿ ಗ್ರಾಮೀಣ ಪರಿಸರದ ಕವನಗಳಾಗಿರುವದು ಕುತೂಹಲದ ಸಂಗತಿಯಾಗಿದೆ. ಈ ಕವನಗಳಲ್ಲಿ ಅವರು ಬಳಸುವ ಭಾಷೆಯೂ ಸಹ ಹಳ್ಳಿಯ ಮಾತಿನ ಭಾಷೆಯೇ ಆಗಿದೆ. ಇದರ ಕಾರಣವೇನಿರಬಹುದು? ಬೇಂದ್ರೆಯವರ ವೈಚಾರಿಕತೆ ಹಾಗು ಆದರ್ಶ ಇವು ನಗರ ಪರಿಸರದಿಂದ ಪ್ರಭಾವಿತವಾಗಿವೆ. ಆದರೆ ಅವರ ಎದೆಯಾಳದ ಭಾವನೆಗಳ ಪ್ರೇರಣೆ ಜಾನಪದದಲ್ಲಿದೆ. ‘ಟೊಂಕದ ಮೇಲೆ ಕೈ ಇಟಗೊಂಡು ಬಿಂಕದಾಕಿ ಯಾರ ಈಕಿ’ ಎನ್ನುವ ಅವರ ಕವನವು ಪ್ರಣಯಕವನವೇನಲ್ಲ.  ಹೆಣ್ಣಿನ ಚೆಲುವನ್ನು, ಅವಳ ಒಟ್ಟು ವ್ಯಕ್ತಿತ್ವವನ್ನು ಗಮನಿಸುತ್ತ, ಆಸ್ವಾದಿಸುತ್ತ ಬೆರಗು ಪಡುತ್ತಿರುವ ವ್ಯಕ್ತಿಯೋರ್ವನ ಹಾಡು ಇದು. ಈ ಕವನವೂ ಸಹ ಗ್ರಾಮೀಣ ಧಾಟಿಯಲ್ಲಿಯೇ ಇದೆ ಎನ್ನುವದನ್ನು ಗಮನಿಸಿಬೇಕು. ಅದರಂತೆಯೆ ‘ಬೆಳದಿಂಗಳs ನೋಡ’ ಅಥವಾ ‘ಶೀಗಿ ಹುಣ್ಣಿವೆ ಮುಂದೆ ಸೋಗಿನ ಚಂದ್ರಮ’ ಕವನಗಳ ಜಾನಪದ ಧಾಟಿ ಹಾಗು ಭಾಷೆಗಳನ್ನು ಗಮನಿಸಿದಾಗ ಅವರ ಭಾವನೆಗಳ ಮೂಲದ ಕುರುಹು ಹೊಳೆದಂತಾಗುತ್ತದೆ. ಒಟ್ಟಿನಲ್ಲಿ ಶಿಷ್ಟ ಭಾಷೆ ಬೇಂದ್ರೆಯವರ ವೈಚಾರಿಕ ಭಾಷೆ ಹಾಗು ದೇಸಿ ಅಥವಾ ಜಾನಪದ ಭಾಷೆ ಅವರ ಭಾವನೆಗಳ ಭಾಷೆ ಎನ್ನಬಹುದು.

(೨) ನವೋದಯದ ಹಿರಿಯ ಸಾಹಿತಿಗಳಿಗೂ, ನವ್ಯ ಸಾಹಿತಿಗಳಿಗೂ ಇರುವ ಒಂದು ಪ್ರಮುಖ ವ್ಯತ್ಯಾಸವೆಂದರೆ ‘ಕಾಮ’ದ ಬಗೆಗೆ ಅವರಿಗಿರುವ ದೃಷ್ಟಿಕೋನ. ಗಂಡು ಹೆಣ್ಣಿನ ನಡುವೆ ಇರಬೇಕಾದ ದೈಹಿಕ ಕಾಮವು ಸೃಷ್ಟಿಗೆ ಅವಶ್ಯವಾದಂತಹ ಒಂದು ನೈಸರ್ಗಿಕ ಪ್ರಕ್ರಿಯೆ. ಇದನ್ನು ಇದ್ದಂತೆಯೆ ಒಪ್ಪಿಕೊಳ್ಳಲು ನವೋದಯ ಸಾಹಿತಿಗಳಿಗೆ ಇರಸು ಮುರಸು ಆಗುತ್ತಿತ್ತೇನೊ. ಆದುದರಿಂದ ಅವರು ‘ಕಾಮ’ಕ್ಕಿಂತ ‘ಪ್ರೇಮ’ ಉಚ್ಚವಾದದ್ದು ಎಂದು ಸಾರಿದರು. ಬೇಂದ್ರೆಯವರನ್ನು ಈ ಧೋರಣೆಯ ಲಕ್ಷಣಕವಿಗಳು ಎನ್ನಬಹುದು.

ನವೋದಯದ ಉತ್ತರಭಾಗದ ಲೇಖಕರಲ್ಲಿ ಕೆ.ಎಸ್. ನರಸಿಂಹಸ್ವಾಮಿಯವರು ಗಂಡು, ಹೆಣ್ಣಿನ ನಡುವಿನ ಕಾಮ ಹಾಗು ಪ್ರೇಮವನ್ನು ಅಭೇದವಾಗಿ ನೋಡಿದರು. ದಾಂಪತ್ಯಗೀತೆಗಳ ಗುಚ್ಛವಾದ ‘ಮೈಸೂರು ಮಲ್ಲಿಗೆ’ ಕವನಸಂಕಲನವು ಈ ಧೋರಣೆಯ ಲಕ್ಷಣಕಾವ್ಯ ಎನ್ನಬಹುದು.

ನವ್ಯ ಲೇಖಕರು ತಮ್ಮನ್ನು ಮಡಿವಂತರೆಂದು ಹೀಯಾಳಿಸುತ್ತಿದ್ದದ್ದರಿಂದ ಮನನೊಂದಂತಹ ನವೋದಯದ ಕೆಲವು ಶ್ರೇಷ್ಠ ಲೇಖಕರು ತಾವು ‘ಸಂಭಾವಿತ’ರಲ್ಲ ಎಂದು ತೋರಿಸಲೆಂದೇ ಸಣ್ಣ ಪುಟ್ಟ  ಕಸರತ್ತು ಮಾಡಿದರು. ರಾಜರತ್ನಂ ಅವರ ಉದಾಹರಣೆಯನ್ನು ಇಲ್ಲಿ ಕೊಡಬಹುದು. ಬೀchiಯವರಿಗೆ ಉತ್ತರರೂಪದಲ್ಲಿ ರಚಿಸಿದ ತಮ್ಮ ಕೃತಿ `ನಿರ್ಭಯಾಗ್ರಾಫಿ’ಯಲ್ಲಿ ಅವರು ಒಂದು ಘಟನೆಯನ್ನು ಉಲ್ಲೇಖಿಸಿದ್ದಾರೆ. ಅದು ಹೀಗಿದೆ:
ಅ.ನ. ಕೃಷ್ಣರಾಯರೊಡನೆ ನಡೆದ ಒಂದು ಸಂಭಾಷಣೆಯಲ್ಲಿ ‘ಜಗನ್ನಾಥ ಪಂಡಿತ’ನ ‘ಮನೋರಮಾ ಕುಚಮರ್ದಿನೀ’ ಎನ್ನುವ ಕೃತಿಯ ಹೆಸರು ಬಂದಾಗ, ತಾವಿಬ್ಬರು ಪರಸ್ಪರ ನೋಟ ವಿನಿಮಯ ಮಾಡಿಕೊಂಡು ನಕ್ಕಿದ್ದಾಗಿ ರಾಜರತ್ನಂ ಬರೆದಿದ್ದಾರೆ. ಈ ಮೂಲಕ ತಾವು ‘ಸಂಭಾವಿತ’ರಲ್ಲವೆಂದು ರಾಜರತ್ನಂ ಸಾರ್ವಜನಿಕವಾಗಿ ತಿಳಿಸಿ ಹೇಳಿ ಸಮಾಧಾನಪಟ್ಟುಕೊಂಡರು!

ಬನ್ನಂಜೆ ಗೋವಿಂದಾಚಾರ್ಯರು ಇನ್ನೂ ಒಂದು ಹೆಜ್ಜೆ ಮುಂದು ಹೋಗಿ ತಾವು ತಮ್ಮ ಎಳವೆಯಲ್ಲಿ ‘ಪೋಲಿ’ಯಾಗಿದ್ದೆ ಎಂದು ಸಾಬೀತುಪಡಿಸಲು, ತಾವು ತಮ್ಮ ತರಗತಿಯ ಓರ್ವ ಹುಡುಗಿಗೆ ಬರೆದ ದ್ವಂದ್ವಾರ್ಥದ ಪತ್ರವೊಂದನ್ನು ತಮ್ಮ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಕನಕದಾಸರ ಕೀರ್ತನೆಗಳ ಬಗೆಗೆ ಅವರು ರಚಿಸಿದ ‘ಕನಕೋಪನಿಷತ್’ದಂತಹ ಗ್ರಂಥದಲ್ಲಿ  ಈ ಅಸಭ್ಯ ಉಲ್ಲೇಖವಿರುವದು ಬೇಸರದ ಸಂಗತಿಯಾಗಿದೆ.

ಆಡಿಗರನ್ನು ಹೊರತುಪಡಿಸಿ ಇತರ ನವ್ಯ ಲೇಖಕರ ಮನೋವ್ಯಾಪಾರ ಇನ್ನೂ ವಿಚಿತ್ರವಾದದ್ದು. ತಮ್ಮ ಪೂರ್ವಜರ ಸಭ್ಯತೆಯ ವಿರುದ್ಧ ಬಂಡಾಯವೇಳುವದೇ ಮಹತ್ವದ ಸಾಹಿತ್ಯಕಾರ್ಯವೆಂದು ಭಾವಿಸಿದ ಇವರ ಸಾಹಿತ್ಯವು ಕಾಮದಿಂದ ಹೊರಬರಲಾರದೆ ತೊಳಲಾಡುವ ಸಾಹಿತ್ಯವಾಯಿತು. ಅನಂತಮೂರ್ತಿ, ಲಂಕೇಶ ಹಾಗು ರಾಮಚಂದ್ರ ಶರ್ಮರನ್ನು ಇಂತಹ ಸಾಹಿತ್ಯಕ್ಕೆ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಇದು ಅವರ ಸಾಹಿತ್ಯಗುಣದ ಟೀಕೆಯಲ್ಲ. ಅವರ ಮನೋಧರ್ಮವನ್ನು ಗುರುತಿಸುವ ಪ್ರಯತ್ನವಷ್ಟೇ.

ಸುದೈವದಿಂದ ನವ್ಯೋತ್ತರ ಸಾಹಿತಿಗಳಿಗೆ  ನವ್ಯಸಾಹಿತಿಗಳ ಇಂತಹ complex ಇಲ್ಲ.  ಅವರು ಆರೋಗ್ಯಕರವಾದ ಸಾಮಾಜಿಕ ಹಾಗು ವೈಯಕ್ತಿಕ ನೆಲೆಯ ವಿವಿಧ ಮುಖಗಳನ್ನು ತೋರಿಸುವ ಸಾಹಿತ್ಯವನ್ನು ರಚಿಸುತ್ತಿರುವದು ಕನ್ನಡ ಸಾಹಿತ್ಯಕ್ಕೆ ಶುಭಸೂಚನೆಯಾಗಿದೆ. ಹಿರಿಯರಾದ ದೇವನೂರು ಮಹಾದೇವ ಹಾಗು ನಂತರದ ಲೇಖಕರಲ್ಲಿ ಅಮರೇಶ ನುಗಡೋಣಿಯವರನ್ನು  ಇಂತಹ ಸಾಹಿತ್ಯದ ಪ್ರಮುಖರೆಂದು ನೆನೆಸಿಕೊಳ್ಳಬಹುದು.

Thursday, February 17, 2011

ಕಾವುದಾನತ ಜನವ ಗದುಗಿನ ವೀರನಾರಯಣ

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯನ್ನು ಅಂತರಜಾಲದಲ್ಲಿ ತರಲು ಶ್ರೀ ಮಂಜುನಾಥರು ಪ್ರೇರಕರಾದ ಬಳಿಕ, ಅವರ ಪ್ರಯತ್ನದಲ್ಲಿ ಅಳಿಲುಸೇವೆಯನ್ನು ಸಲ್ಲಿಸುವ ಸುಯೋಗ ನನಗೂ ದೊರಕಿತು. `ಕುಮಾರವ್ಯಾಸ ಭಾರತ'ದ ಕೆಲ ಭಾಗಗಳನ್ನು ಮತ್ತೊಮ್ಮೆ ಓದಲು ಇದರಿಂದ ನನಗೆ ಅನುಕೂಲ ಒದಗಿ ಬಂದಿತು. ಹೀಗೆ ಓದುತ್ತಿರುವಾಗ ನನ್ನನ್ನು ಬಹುವಾಗಿ ಆಕರ್ಷಿಸಿದ ನುಡಿ ಎಂದರೆ ಈ ಮಹಾಕಾವ್ಯದ ಪ್ರಪ್ರಥಮ ನುಡಿ. ಆದಿಪರ್ವದ ಮೊದಲ ಸಂಧಿಯ ಆ ಮೊದಲ ನುಡಿ ಹೀಗಿದೆ:

ಶ್ರೀವನಿತೆಯರಸನೆ, ವಿಮಲ ರಾ
ಜೀವಪೀಠನ ಪಿತನೆ, ಜಗಕತಿ
ಪಾವನನೆ, ಸನಕಾದಿ ಸಜ್ಜನನಿಕರದಾತಾರ|
ರಾವಣಾಸುರಮಥನಶ್ರವಣಸು
ಧಾವಿನೂತನ ಕಥನಕಾರಣ
ಕಾವುದಾನತ ಜನವ ಗದುಗಿನ ವೀರನಾರಯಣ||

ಕುಮಾರವ್ಯಾಸನು ತನ್ನ ಮಹಾಕಾವ್ಯದ ಪ್ರಾರಂಭವನ್ನು ಸಂಪ್ರದಾಯಕ್ಕನುಸಾರವಾಗಿ ದೇವತಾಸ್ತುತಿಯೊಡನೆ ಮಾಡುತ್ತಾನೆ. ಕರ್ಣಾಟಭಾರತದ ಸೂತ್ರಧಾರನು ಶ್ರೀಕೃಷ್ಣನೇ ತಾನೆ. ಆದುದರಿಂದ ಶ್ರೀಕೃಷ್ಣನ ಅಂದರೆ ನಾರಾಯಣನ ಸ್ತುತಿಯಿಂದ ಭಾರತವು ಪ್ರಾರಂಭವಾಗುತ್ತದೆ. ಅಲ್ಲದೆ ನಾರಾಯಣನು ಆದಿಪುರುಷನು. ಆದುದರಿಂದ ಅವನಿಗೇ ಅಗ್ರಪೂಜೆ ಸಲ್ಲಬೇಕು. ಈ ನಾರಾಯಣನು ಲಕ್ಷ್ಮಿಯಿಂದ ಅಭೇದನಾದವನು. ಆದುದರಿಂದ ಲಕ್ಷ್ಮೀಸಹಿತನಾದ ನಾರಾಯಣನನ್ನೇ ಯಾವಾಗಲೂ ಸ್ಮರಿಸಬೇಕು. ಈ ಲಕ್ಷ್ಮಿಯಾದರೊ ಸಕಲ ಕಲಾಸಂಪನ್ನಳು, ಸಕಲವಿಭೂತಿರೂಪಳು. ಅರ್ಥಾತ್ ಅವಳು ನಾರಾಯಣನ ‘ಶ್ರೀ’. ಆದುದರಿಂದ ನಾರಾಯಣಸ್ತುತಿಯು ಶ್ರೀಲಕ್ಷ್ಮೀಸಹಿತನಾದ ನಾರಾಯಣನ ಅಂದರೆ ‘ಶ್ರೀವನಿತೆಯ ಅರಸ’ನ ಸ್ತುತಿಯೇ ಆಗಿದೆ.

ಆದಿಪುರುಷನಾದ ಈ ನಾರಾಯಣನು ಸಕಲ ಸೃಷ್ಟಿಗೆ ಮೊದಲು ಬ್ರಹ್ಮನಿಗೆ ಜನ್ಮ ನೀಡಿದನು. ಆದುದರಿಂದ ಕುಮಾರವ್ಯಾಸನು ಸೃಷ್ಟಿಮೂಲನಾದ ಬ್ರಹ್ಮನ ತಂದೆ ಎಂದು ನಾರಾಯಣನನ್ನು ಸಂಬೋಧಿಸುತ್ತಾನೆ. ಈ ಬ್ರಹ್ಮನ ಸೃಷ್ಟಿಯು ಸತ್ವ, ರಜಸ್ ಹಾಗು ತಮಸ್ ಎನ್ನುವ ತ್ರಿಗುಣಗಳಿಂದ ಕೂಡಿದೆ. ನಾರಾಯಣನು ತ್ರಿಗುಣಾತೀತನು. ಆದುದರಿಂದ ಈತನು ಜಗಕತಿ ಪಾವನನು.

ಸೃಷ್ಟಿ, ಸ್ಥಿತಿ ಹಾಗು ಸಂಹಾರ ಇವು ಭಗವಂತನು ಮಾಡುವ ಮೂರು ಕ್ರಿಯೆಗಳು. ಇವುಗಳಲ್ಲಿ ಮೊದಲನೆಯದಾದ ಸೃಷ್ಟಿಕ್ರಿಯೆಯ ಕಾರಣಪುರುಷನಾದ ನಾರಾಯಣನನ್ನು ಕುಮಾರವ್ಯಾಸನು ಮೇಲೆ ಬಣ್ಣಿಸಿದನು. ಎರಡನೆಯದು ಸ್ಥಿತಿ ಅಥವಾ ಸಂರಕ್ಷಣೆ. ತನ್ನ ಭಕ್ತರಾದ ಸನಕ ಮೊದಲಾದ ಸಜ್ಜನರಿಗೆ ಅನುಗ್ರಹಿಸುವ ಮೂಲಕ ಭಗವಂತನು ಸಂರಕ್ಷಣೆಯ ಕಾರ್ಯವನ್ನು ಮಾಡುತ್ತಾನೆ. ಈ ಭಕ್ತರಿಗೆ ಕುಮಾರವ್ಯಾಸನು ‘ಸಜ್ಜನ’ ಎನ್ನುವ ವಿಶೇಷಣವನ್ನು ಜೋಡಿಸುತ್ತಾನೆ. ಸದಾಕಾಲವೂ ಭಗವಚ್ಚಿಂತನೆಯಲ್ಲಿ ಮುಳುಗಿರುತ್ತ, ಸತ್ಸಂಗವಾಸಿಗಳಾದವರೇ ಸತ್+ಜನರು=ಸಜ್ಜನರು. ಇವರು ಭಗವಂತನ ಸ್ಮರಣೆಯ ಸುಖವನ್ನು ಬಿಟ್ಟು ಮತ್ತೇನನ್ನೂ ಅಪೇಕ್ಷಿಸುವದಿಲ್ಲ. ಭಗವಂತನು ಇವರಿಗೆ ಭಕ್ತಿಸುಖದ ಹೊರತಾಗಿ ಬೇರೆ ಏನನ್ನೂ ಕೊಡುವದೂ ಇಲ್ಲ! ಅವರ ನಿಕರಕ್ಕೆ ಅಂದರೆ ಬಳಗಕ್ಕೆ ಬೇಕಾದ್ದನ್ನು ಕೊಡುವ ‘ದಾತಾರ’ ಇವನು. ಇದೇ ಭಗವಂತನ ಸಂರಕ್ಷಣಾ ಕ್ರಿಯೆ.

ಮೂರನೆಯದು ಸಂಹಾರಕ್ರಿಯೆ. ಅನವರತವೂ ನಡೆಯುತ್ತಿರುವ ಮೃತ್ಯುವೇ ಸಂಹಾರಕಾರ್ಯ ಎನಿಸಬಹುದು. ಆದರೆ ಭಗವಂತನು ತಮೋಗುಣದ ಸಂಹಾರವನ್ನು ಪ್ರಕಟವಾಗಿ ಮಾಡುವದನ್ನು ಕುಮಾರವ್ಯಾಸನಿಗೆ ತೋರಿಸಬೇಕಾಗಿದೆ. ಇದರಿಂದ ‘ಶಿಷ್ಟರಕ್ಷಕ ಹಾಗು ದುಷ್ಟಸಂಹಾರಕ’ ಎನ್ನುವ ಭಗವಂತನ ಬಿರುದೂ ಸಾರ್ಥಕವಾಗುವದು. ಈ ಎರಡು ಕಾರ್ಯಗಳನ್ನು ಮಾಡಿದವನು ಕೃಷ್ಣನಿಗೂ ಮೊದಲಿನ ಅವತಾರವಾದ ಶ್ರೀರಾಮಚಂದ್ರನು. ಅಲ್ಲದೆ ಮಹಾಭಾರತಕ್ಕಿಂತ ಮೊದಲೇ ರಾಮಾಯಣವು ಆದಿಕವಿ ವಾಲ್ಮೀಕಿಯಿಂದ ರಚಿಸಲ್ಪಟ್ಟಿತು. ಆ ಆದಿಕವಿಯನ್ನು ಪರೋಕ್ಷವಾಗಿ ನೆನಸುತ್ತ, ರಾಮಾಯಣದ ಕಾರಣಪುರುಷನಾದ ಶ್ರೀರಾಮಚಂದ್ರನನ್ನು ಕುಮಾರವ್ಯಾಸನು ಸ್ತುತಿಸುತ್ತಾನೆ.

ಈ ರೀತಿಯಾಗಿ ಸೃಷ್ಟಿ, ಸ್ಥಿತಿ ಹಾಗು ಸಂಹಾರಕಾರ್ಯಗಳಲ್ಲಿ ತೊಡಗಿಕೊಂಡ, ಶ್ರೀಸಹಿತನಾದ ಆದಿಪುರುಷ ನಾರಾಯಣನಿಗೆ ಪ್ರಾರ್ಥನೆ ಸಲ್ಲಿಸುವದರೊಂದಿಗೆ ಕರ್ಣಾಟಭಾರತ ಕಥಾಮಂಜರಿಯು ಪ್ರಾರಂಭವಾಗುತ್ತದೆ.  ಸ್ತುತಿಪದ್ಯದ ಮುಕ್ತಾಯವು ‘ಗದುಗಿನ ವೀರನಾರಾಯಣನು ಆನತಜನರನ್ನು ಅಂದರೆ ಭಕ್ತರನ್ನು ಕಾಯಲಿ’ ಎಂದು ಮುಕ್ತಾಯವಾಗುತ್ತದೆ. ಇಲ್ಲಿ ‘ಗದುಗಿನ ವೀರನಾರಾಯಣ’ ಎನ್ನುವ ನಿರ್ದಿಷ್ಟ ದೇವತೆ ಏಕೆ ಬೇಕಾಯಿತು? ಇದಕ್ಕೆ ಅನೇಕ ಕಾರಣಗಳಿವೆ. ಗದುಗಿನ ವೀರನಾರಾಯಣನು ಕುಮಾರವ್ಯಾಸನ ಕುಲದೇವತೆಯೊ ಅಥವಾ ಇಷ್ಟದೇವತೆಯೊ ಆಗಿರಬಹುದು. ಅದಕ್ಕಿಂತ ಮುಖ್ಯವಾಗಿ ಅನಾದಿಪುರುಷನ ಅನಂತಸೃಷ್ಟಿಯಿಂದ ಪ್ರಾರಂಭವಾದ ಈ ಸ್ತುತಿಯು ಒಂದು ನಿರ್ದಿಷ್ಟ ಗ್ರಾಮದಲ್ಲಿ, ನಿರ್ದಿಷ್ಟ ದೇವತೆಯಲ್ಲಿ ಕೇಂದ್ರೀಕೃತಗೊಳ್ಳುವದರೊಂದಿಗೆ ಮುಕ್ತಾಯವಾಗುತ್ತದೆ. ಇದು ಸನಾತನ ಧರ್ಮದ ವೈಶಿಷ್ಟ್ಯವೇ ಆಗಿದೆ. ಆಧುನಿಕ ಧರ್ಮಗಳಲ್ಲಿ ದೇವರು ಅಮೂರ್ತನು ಹಾಗು ಅಜ್ಞೇಯನು. ಆದರೆ ಸನಾತನ ಧರ್ಮದ(ಗಳ)ಲ್ಲಿ ದೇವರ ತೀವ್ರ ವೈಯಕ್ತೀಕರಣವಿದೆ.

ಕುಮಾರವ್ಯಾಸನ ಕರ್ಣಾಟಭಾರತ ಕಥಾಮಂಜರಿಯ ಮೊದಲ ಸಂಧಿಯ ಸ್ತುತಿಪದ್ಯವೇ ಇಷ್ಟೆಲ್ಲ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಪೂರ್ಣ ಕಾವ್ಯವನ್ನು ಸವಿದ ಓದುಗನಿಗಂತೂ ಕಾವ್ಯಸೌಂದರ್ಯದ ಮಹಾಪ್ರವಾಹದಲ್ಲಿ ತೇಲುತ್ತಿರುವ ಅನುಭವವಾಗುತ್ತದೆ. ಇಂತಹ ಮಹಾಕವಿ ತನ್ನನ್ನು ‘ಹಲಗೆ ಬಳಪವ ಪಿಡಿಯದವ’ ಎಂದು ಕರೆದುಕೊಳ್ಳುತ್ತಾನೆ! ಆ ಕವಿಗೆ ನನ್ನ ಅನಂತ ನಮನಗಳು. ಆ ಮಹಾಕಾವ್ಯದ ಓದುಗರನ್ನು ಗದುಗಿನ ವೀರನಾರಾಯಣನು ಅನವರತವೂ ರಕ್ಷಿಸಲಿ ಎಂದು ಪ್ರಾರ್ಥಿಸುತ್ತೇನೆ.
‘ಕಾವುದಾನತ ಜನವ ಗದುಗಿನ ವೀರನಾರಯಣ’.

Friday, February 11, 2011

‘ಹೊಸ ವರುಷ’…..........................ರೂಪಾ ಕೆ.


ಗೋಡೆಯಂಚಿನಲ್ಲಿ ಬಂದಿತು ಹೊಸದೊಂದು,
ಹೊಸ ವರುಷದ ಕ್ಯಾಲೆಂಡರ.
ಅದೇ ಜನೇವರಿ, ಅದೇ ಡಿಸೆಂಬರ,
ಆದರೆ ಇತ್ತು ದಿನ, ದಿನಾಂಕಗಳ ಬದಲಾವಣೆ.
ಅದೇಕೊ ಮನಸ್ಸಿಗೆ ಅನ್ನಿಸಿತ್ತು
ಸುಖ, ದುಃಖಗಳ ಬದಲಾವಣೆ ಎಂದು,
ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.

ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು,
ಬಾಳಿನ ಬುತ್ತಿಯನ್ನು ಹಂಚಿಕೊಂಡ ಆ ದಿನಗಳು;
ಮುಸ್ಸಂಜೆ ಹೊತ್ತಿನಲ್ಲಿ ಮೂಡಲಿ
ಮತ್ತೊಂದು ದಿನದ ಆಶಾಕಿರಣ.

ಆಶಿಸೋಣ ಹೊಸ ವರುಷಕೆ, ಹೊಸ ಬದುಕಿನ
ಹೊಸತನ ಮೂಡಲಿ ಎಂದು.
                                   --ರೂಪಾ ಕೆ.
                                    ಜನೆವರಿ ೨೦೧೧
. . . . . . . . . . . . . . . . . . . . . . . . . . . . . . . . . . . . . . . . . . . .

ಹುಬ್ಬಳ್ಳಿಯ ನಿವಾಸಿಯಾದ ರೂಪಾ ಕೆ. ಭಾಷಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ವಿವಾಹಜೀವನವನ್ನು ಪ್ರವೇಶಿಸಿದರು. ಅನವರತವೂ ಗೃಹಕೃತ್ಯಗಳಲ್ಲಿ ಮುಳುಗಿರುವ ಈ ಗೃಹಿಣಿಯ ಪ್ರತಿಭೆ ಮನೆಗೆಲಸದಲ್ಲಿಯೇ ಮುಚ್ಚಿಕೊಂಡಂತಿದೆ. ಆದರೆ, ಮೋಡ ಸರಿದಾಗ ಮಾತ್ರ ಕಣ್ಣಿಗೆ ಬೀಳುವ ಚಂದ್ರನಂತಿರುವ ಅವರ ಪ್ರತಿಭೆಯನ್ನು ಕಾಣುವ ಅವಕಾಶವೊಂದು ಇತ್ತೀಚೆಗೆ ನನಗೆ ಸುದೈವದಿಂದ ದೊರಕಿತು. ೨೦೧೧ನೆಯ ಕ್ರಿಸ್ತವರ್ಷ ಪ್ರಾರಂಭವಾದಾಗ, ಮಾಮೂಲಿಯಂತೆ ಹೊಸ ವರ್ಷದ ಕ್ಯಾಲೆಂಡರ ಒಂದನ್ನು ಅವರು ಗೋಡೆಗೆ ತೂಗು ಹಾಕುತ್ತಿದ್ದರು. ಆ ಸಮಯದಲ್ಲಿ ತಮ್ಮ ಅಂತಃಕರಣದಲ್ಲಿ ಹೊಳೆದ ಕವನವೊಂದನ್ನು ಅದೇಕೊ ಅವರು ಗೀಚಿ ಒಗೆದಿದ್ದರು. ಅಲ್ಲಿ ಇಲ್ಲಿ ಬಿದ್ದಾಡಿದ ಈ ಕವನ ಕೆಲವು ದಿನಗಳ ಹಿಂದೆ ನನ್ನ ಕೈಸೇರಿತು. ಅದನ್ನು ಓದಿದಾಗ, ಈ ಗೃಹಿಣಿಯಲ್ಲಿ ಅಡಗಿರುವ ಕವಯಿತ್ರಿಯನ್ನು ಕಂಡು ನಾನು ಚಕಿತನಾದೆ.
ಅವರ ಕವನವನ್ನು ಇಲ್ಲಿ ಸಾದರಪಡಿಸುವ ಸ್ವಾತಂತ್ರ್ಯವನ್ನು ನಾನು ಸಲಿಗೆಯ ಅಧಿಕಾರದಿಂದ ಗ್ರಹಿಸಿಕೊಂಡಿದ್ದೇನೆ.
. . . . . . . . . . . . . . . . . . . . . . . . . . . . . . . . . . . . . . . . . .

ಹಳೆಯ ವರುಷದ ಮಧ್ಯರಾತ್ರಿ ಕಳೆದು, ಹೊಸ ವರುಷ ಪ್ರಾರಂಭವಾಗುತ್ತಿದ್ದಂತೆಯೇ, ಹೊಸ ವರ್ಷದ ಶುಭಾಶಯಗಳು, Happy New Year” ಎನ್ನುವ ಘೋಷಣೆಗಳು ಎಲ್ಲೆಡೆಯೂ ಮೊಳಗುವುವು. ಹೊಸ ವರ್ಷದ ಕ್ಯಾಲೆಂಡರನ್ನು ಗೋಡೆಗೆ ತೂಗುಹಾಕುವಾಗ ಏನೋ ಒಂದು ಸಂಭ್ರಮದ ಭಾವನೆ ಮನಸ್ಸಿನಲ್ಲಿ ಕುಣಿಯುವುದು. ಆದರೆ ಬಾಳಿನಲ್ಲಿ ಬೇವು, ಬೆಲ್ಲಗಳನ್ನು ಉಂಡ ವ್ಯಕ್ತಿಗೆ ವಾಸ್ತವತೆಯ ಅರಿವಿರುವದು. ಹೊಸ ವರ್ಷದ ಕ್ಯಾಲೆಂಡರಿನಲ್ಲಿ ಬದಲಾದದ್ದು ಕೇವಲ ದಿನ ಹಾಗು ದಿನಾಂಕಗಳು. ಅದರಂತೆಯೆ ನಮ್ಮ ಬದುಕಿನಲ್ಲಿಯೂ ಸಹ ಸುಖ ಹಾಗು ದುಃಖಗಳ ಬದಲಾವಣೆಯಾಗುವದೇ ಹೊರತು, ಸುಖದ ಸುಗ್ಗಿ ನಿರಂತರವಾಗಿರುವದಿಲ್ಲ.

ಆದರೆ ರೂಪಾ ಅವರು ಸಿನಿಕರೂ ಅಲ್ಲ, ಭ್ರಮಿಕರೂ ಅಲ್ಲ. ಅವರು ವಾಸ್ತವಪ್ರಜ್ಞೆಯುಳ್ಳ ಆಶಾವಾದಿಗಳು.
‘ಕಭೀ ತೊ ಮಿಲೇಗಿ ಬಹಾರೋಂಕೆ ಮಂಜಿಲ್, ರಾಹೀ!’ ಎನ್ನುವ ವಿಶ್ವಾಸ ಅವರಿಗಿದೆ. ಆದುದರಿಂದಲೇ ಅವರ ಹೊಸ ವರ್ಷದ ಪ್ರತೀಕ್ಷೆಯಲ್ಲಿ, ಹರುಷದ ಎಚ್ಚರದ ನಿರೀಕ್ಷೆಯೂ ಇದೆ:
ಆದರೂ ಆದೀತು ಈ ವರುಷ
ಹರುಷದ ವರುಷ ಎಂದು.

ಬಾಳಪಥದಲ್ಲಿ ಕೆಚ್ಚಿನಿಂದ ಮುನ್ನಡೆಯಲು ಬೇಕಾಗುವದೇನು ಎನ್ನುವ ಅರಿವು ಅವರಿಗಿದೆ.ಅದನ್ನು ಅವರು ಹೇಳುವ ರೀತಿ ಹೀಗಿದೆ:
ನೆನಪಾಗದಿರಲಿ ಕಳೆದ ಕಹಿ ದಿನಗಳು,
ಮಾಸದಿರಲಿ ಕನಸಿನ ಸಿಹಿ ದಿನಗಳು.

ಬೇಂದ್ರೆಯವರು, ಇರುಳ ತಾರೆಗಳಂತೆ ಬೆಳಕೊಂದು ಮಿನಗುವದು, ಕಳೆದ ದುಃಖಗಳಲ್ಲಿ ನೆನೆದಂತೆಯೆ, ಎಂದು ತಮ್ಮ ಸಖೀಗೀತದಲ್ಲಿ ಹಾಡಿದರು.
ಆದರೆ ಈ ತಂಗಿ ಆಲೋಚಿಸುವ ಬಗೆಯೇ ಬೇರೆ. ಕಹಿದಿನಗಳ ನೆನಪೇ ಬೇಡ, ಸಿಹಿ ಸಿಹಿ ಕನಸುಗಳನ್ನು ಕಂಡಂತಹ ಎಳೆತನದ, ಕೆಳೆತನದ ದಿನಗಳ ನೆನಪೇ ಸ್ಥಿರವಾಗಿರಲಿ; ಕಾಲನ ಹೊಡೆತಕ್ಕೆ ಆ ಕನಸುಗಳ ನೆನಪು ಮರೆಯಾಗದಿರಲಿ ಎಂದು ರೂಪಾ ಆಶಿಸುತ್ತಾರೆ. ತನ್ನ ಸಹಪಯಣಿಗರೊಡನೆ ಹಂಚಿಕೊಂಡ ಕನಸುಗಳೇ ಬಾಳಿನ ಮುಂದಿನ ಪಯಣದ ಬುತ್ತಿ ಎನ್ನುವದು ರೂಪಾ ಅವರ ಭಾವನೆ. ಮುಸ್ಸಂಜೆ ಕವಿಯುತ್ತಿರುವಾಗಲೂ ಸಹ, ಮರುದಿನದ ಬೆಳಗು ಆಶಾಕಿರಣವನ್ನು ಹೊತ್ತು ತರಲಿ ಎಂದು ಅವರು ಹಾರೈಸುತ್ತಾರೆ.

ಅದಮ್ಯ ಆಶಾವಾದಿಗಳೂ, ವಾಸ್ತವಪ್ರಜ್ಞೆಯುಳ್ಳವರೂ ಆದ ರೂಪಾ ಅವರಿಂದ ಚೆಲುವಾದ ಇನ್ನಿಷ್ಟು ಕವನಗಳನ್ನು ಆಶಿಸೋಣ.