Saturday, May 28, 2011

ರಾಗರತಿ.............................ದ.ರಾ.ಬೇಂದ್ರೆ

ಬೇಂದ್ರೆಯವರನ್ನು ಪ್ರಕೃತಿಕವಿ ಎಂದು ಕರೆಯಬಹುದೆ?
ಪ್ರಕೃತಿವೈಭವದ ಬಗೆಗೆ ಬೇಂದ್ರೆಯವರು ಅನೇಕ ಕವನಗಳನ್ನು ಬರೆದಿದ್ದಾರೆ.  ನಿಸರ್ಗದ ವಿವಿಧ ಮುಖಗಳನ್ನು ಅವರಷ್ಟು ವಿಸ್ತಾರವಾಗಿ ಹಾಗು ಆಳವಾಗಿ ಸೆರೆ ಹಿಡಿದವರು ಮತ್ತೊಬ್ಬರಿಲ್ಲ.  ಬೆಳಗು ಹಾಗು ಶ್ರಾವಣ ಇವು ಅವರ ಕಾವ್ಯದ ಪ್ರೀತಿಯ ವಿಷಯಗಳು.

 ಬೆಳಗು ಅವರ ತುಂಬ ಪ್ರಸಿದ್ಧಿ ಪಡೆದ ಕವನ. ಈ ಕವನದಲ್ಲಿ ಅವರು ಉದಯಕಾಲದಲ್ಲಿ ಮೈಮರೆತ ಕವಿಯ ಭಾವಸಮಾಧಿಯನ್ನು ಚಿತ್ರಿಸಿದ್ದಾರೆ:
 (ಶಾಂತಿರಸವೆ ಪ್ರೀತಿಯಿಂದ ಮೈದೋರಿತಣ್ಣಾ,ಇದು ಬರಿ ಬೆಳಗಲ್ಲೊ ಅಣ್ಣಾ).

`ಬೆಳಗು’ ಕವನದಲ್ಲಿ ಏಕಾಂತ ಭಾವನೆ ಇದ್ದರೆ, ಅವರ ‘ಸೂರ್ಯನ ಹೊಳಿ’ ಎನ್ನುವ ಕವನದಲ್ಲಿ ಇದಕ್ಕೆ ವ್ಯತಿರಿಕ್ತವಾದ ಒಡನಾಟದ, ಉಲ್ಲಾಸದ ಕರೆ ಇದೆ:
(ಬಂದsದ ಸೂರ್ಯನs ಹೊಳೀ
ನಡೀ ಮೈತೊಳಿ, ನೀರಿನ್ಯಾಗಿಳಿ
ಬಾ ಗೆಣೆಯಾ, ಯಾಕ ಮೈಛಳೀ)

ಅವರ ‘ಉಷಾಸೂಕ್ತ’ವು ಸೂರ್ಯೋದಯದ ಮೊದಲಲ್ಲಿ ಆಗಮಿಸುವ ಉಷೆಯನ್ನು ಸ್ತುತಿಸುತ್ತದೆ:
(ಅಂದೆ ಕಂಡು ನಿನ್ನ ಛವಿ
ಹಾಡಿ ಕರೆದ ವೇದದ ಕವಿ
ಎಂದು ಬರುವನವ್ವ ರವಿ?
ಛಂದ ಕುಣಿದು ಬಾರೆ
ಮುಂದೆ ರವಿಯ ತಾರೆ.)

ಉದಯಕಾಲದ ಅವರ ಮತ್ತೊಂದು ಕವನವು ಬೆಳಕನ್ನು ಬಲೆಯಂತೆ ಚಿತ್ರಿಸುವ ಅಪೂರ್ವ ಉಪಮೆಯನ್ನು ಹೊಂದಿದೆ.
(ಏಳು ಚಿಣ್ಣ, ಬೆಳಗಾಯ್ತು ಅಣ್ಣ, ಮೂಡಲವು ತೆರೆಯೆ ಕಣ್ಣ
ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನ ಬಣ್ಣ
ಜೇನ್ನೊಣದ ಹೆದೆಗೆ ಹೂಬಾಣ ಹೂಡಿ ಝುಮ್ ಎಂದು ಬಿಟ್ಟ ಮಾರ
ಗುಡಿಗೋಪುರಕ್ಕು ಬಲೆ ಬೀಸಿ ಬಂದ,ಅಗೊ ಬೆಳಕು ಬೇಟೆಗಾರ.)

‘ನಸುಕು ಬಂತು ನಸುಕು’ ಎನ್ನುವ ಕವನದಲ್ಲಿ ಬೇಂದ್ರೆಯವರು ರಾತ್ರಿ ಹಾಗು ಬೆಳಗಿನ ನಡುವೆ ಇರುವ ಸಂಬಂಧದ ಅಪೂರ್ವ ಕಲ್ಪನೆಯನ್ನು ತೋರಿಸಿದ್ದಾರೆ:
(ಬೆಳಗು ಗಾಳಿ ತಾಕಿ ಚಳಿತು
ಇರುಳ ಮರವು ಒಡೆದು ತಳಿತು
ಅರುಣ ಗಂಧ ಹರುಹಿ ಒಳಿತು
                  ನಸುಕು ಬಂತು.)

ಬೇಂದ್ರೆಯವರ ‘ವಸಂತಮುಖ  ಕವನವಂತೂ ಸೂರ್ಯೋದಯದ ಮೂಲಕ ಪ್ರಕೃತಿಯ ಚೈತನ್ಯವನ್ನೇ ತೆರೆದು ತೋರಿಸುವ ದರ್ಶನವನ್ನು ಹೊಂದಿದೆ:
(ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ.)

ಇವೆಲ್ಲ ನಿಸರ್ಗವರ್ಣನೆಗಳಾದವು. ಆದರೆ ಪ್ರಕೃತಿ ಹಾಗು ಬೇಂದ್ರೆಯವರ ನಡುವೆ, ವರ್ಣನೆಗಳಿಗೆ ಮೀರಿದ ಸಂಬಂಧವೊಂದು ಜೀವಂತವಿದೆ. ಪ್ರಕೃತಿಯ ಭಾವಸಂಚಾರಕ್ಕೂ ಮಾನವ ಭಾವಸಂಚಾರಕ್ಕೂ ಅವರು ಮಾಡುವ ಸಮೀಕರಣವು ಅವರನ್ನು ನಿಜವಾದ ಅರ್ಥದಲ್ಲಿ ಪ್ರಕೃತಿಕವಿಯನ್ನಾಗಿ ಮಾಡಿದೆ. ಅವರ ಅನೇಕ ಕವನಗಳಲ್ಲಿ ಪ್ರಕೃತಿಯ ಮಾನುಷೀಕರಣವಿದೆ, ಹಲವೆಡೆಗಳಲ್ಲಿ ಪ್ರಕೃತಿಯ ದೈವೀಕರಣವೂ ಇದೆ. ಉದಾಹರಣೆಗೆ, ಅವರ ‘ಶ್ರಾವಣಾ’ ಎನ್ನುವ ಕವನದ ಈ ನುಡಿಯನ್ನು ನೋಡಿರಿ:
(ಗುಡ್ಡ ಗುಡ್ಡ ಸ್ಥಾವರ ಲಿಂಗ
ಅವಕ ಅಭ್ಯಂಗ
ಎರಿತಾವನ್ನೊ ಹಾಂಗ
ಕೂಡ್ಯಾವ ಮೋಡ | ಸುತ್ತೆಲ್ಲ ನೋಡ ನೋಡ)

ಬೇಂದ್ರೆಯವರ ‘ನನ್ನವಳು ಕವನವು ದಾಂಪತ್ಯಪ್ರೇಮದ ಶ್ರೇಷ್ಠ ಅಭಿವ್ಯಕ್ತಿಯಾಗಿದೆ. ಈ ಕವನದಲ್ಲಿ ಪ್ರಕೃತಿಯ ಮೂರು ಮುಖಗಳನ್ನು (ಸಂಜೆ, ಇರುಳು ಹಾಗು ನಸುಕು) ಕವಿಯು ತನ್ನ ಕೆಳದಿಯೊಡನೆ ಸಮೀಕರಿಸಿ, ತನ್ನವಳು ತನಗೆ ಹೇಗೆ ಸದಾಕಾಲವೂ ಅನ್ಯೋನ್ಯಳಾಗಿದ್ದಾಳೆ ಎಂದು ಚಿತ್ರಿಸಿದ್ದಾನೆ.

ಈ ರೀತಿಯಾಗಿ ಬೇಂದ್ರೆಯವರು ಪ್ರಕೃತಿಯೊಡನೆ ಸಾಮರಸ್ಯ ಸಾಧಿಸಿದ್ದರಿಂದ, ಅವರನ್ನು ಪ್ರಕೃತಿಕವಿ ಎಂದು ಕರೆಯುವದು ಸಮುಚಿತವಾಗಿದೆ.
.............................................................................................

ಬೇಂದ್ರೆಯವರ ಜನಪ್ರಿಯ ಕವನವಾದ ‘ರಾಗರತಿ’ಯಲ್ಲಿ, ಸಂಧ್ಯಾಕಾಲದ ಪ್ರಕೃತಿಶೃಂಗಾರವನ್ನು ಹೆಣ್ಣೊಬ್ಬಳ ಭಾವವಿಕಾರದೊಡನೆ ಸಮೀಕರಿಸಲಾಗಿದೆ. ಹೆಣ್ಣೊಬ್ಬಳ ಮನದಲ್ಲಿ ಮಲಗಿರುವ ಬಯಕೆಯು ಎಚ್ಚೆತ್ತು, ಹೆಡೆಯಾಡಿಸುತ್ತಿರುವ ವರ್ಣನೆಯು ‘ರಾಗರತಿ’ ಕವನದ ತಿರುಳಾಗಿದೆ. ಕವನದ ಮೊದಲ ಎರಡು ನುಡಿಗಳಲ್ಲಿ ಸಂಧ್ಯಾಕಾಲದ ಪ್ರಕೃತಿವರ್ಣನೆ ಇದ್ದರೆ, ಕೊನೆಯ ಎರಡು ನುಡಿಗಳಲ್ಲಿ ಹೆಣ್ಣೊಬ್ಬಳ ಅಂತರಂಗದ ಚಿತ್ರಣವಿದೆ.
ಕವನ ಹೀಗಿದೆ:

ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
——ಆಗಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
ಗಾಳಿಗೆ ಮೇಲಕ್ಕೆದ್ದಿತ್ತs.

ಬಿದಿಗಿ ಚಂದ್ರನಾ ಚೊಗಚೀನಗಿಹೂ ಮೆಲ್ಲಗ ಮೂಡಿತ್ತs
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs
ಎರಗಿ ಹಿಂದಕ್ಕುಳಿತಿತ್ತ.

ಮಳ್ಳಗಾಳಿಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
ತನ್ನ ಮೈಮರ ಮರೆತಿತ್ತ.
…………………………………………………………………..



ಕವನದ ಮೊದಲ ನುಡಿ ಹೀಗಿದೆ:
ಮುಗಿಲ ಮಾರಿಗೆs ರಾಗರತಿಯ ನಂಜ ಏರಿತ್ತs
 ——ಆಗಸಂಜೆಯಾಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
         ಗಾಳಿಗೆ ಮೇಲಕ್ಕೆದ್ದಿತ್ತs.

ಮುಳುಗುತ್ತಿರುವ ಸೂರ್ಯನ ಕಿರಣಗಳಿಂದಾಗಿ ಮುಗಿಲೆಲ್ಲ ಗಾಢವಾದ ಕೆಂಪುವರ್ಣವನ್ನು ತಳೆದಿದೆ. ಇದನ್ನು ಬೇಂದ್ರೆಯವರು ‘ರಾಗರತಿ’ ಎಂದು ಬಣ್ಣಿಸುತ್ತಾರೆ. ರಾಗರತಿ ಎಂದರೆ ತೀವ್ರವಾದ ಕಾಮನೆಯೂ ಹೌದು.
‘ಮುಗಿಲ ಮಾರಿಗೆ’ ಎಂದು ಹೇಳುವ ಮೂಲಕ ಈ ಕೆಂಪು ವರ್ಣವು ಬಾನಲ್ಲಿ ಹರಡಿದ ಭೌತಿಕ ವರ್ಣವಷ್ಟೇ ಅಲ್ಲ, ಪ್ರಕೃತಿ ಎನ್ನುವ ಹೆಣ್ಣಿನ ಮನದ ಬಯಕೆಯ ಬಣ್ಣವೆನ್ನುವದನ್ನು ಬೇಂದ್ರೆಯವರು ಸೂಚ್ಯವಾಗಿ ಹೇಳುತ್ತಾರೆ. ಈ ರೀತಿಯಾಗಿ ಪ್ರಕೃತಿಯ ಮಾನುಷೀಕರಣವು ಇಲ್ಲಿದೆ.

ಬೇಂದ್ರೆಯವರು ‘ರಾಗರತಿಯ ನಂಜ ಏರಿತ್ತ’ ಎಂದು ಏಕೆ ಹೇಳುತ್ತಿದ್ದಾರೆ? ನಂಜು ಎಂದರೆ ವಿಷ ಅಲ್ಲವೆ? ಬಹುಶಃ ಅದರ ಕಾರಣ ಹೀಗಿರಬಹುದು:
ಪ್ರಕೃತಿಯ ಸಂಧ್ಯಾಕಾಲದ ಕಾಮನೆಯನ್ನು ಬೇಂದ್ರೆಯವರು ಉದಾರವಾಗಿ ಅಥವಾ ತಟಸ್ಥವಾಗಿ ನೋಡುವದಿಲ್ಲ. ಈ ಪ್ರಕೃತಿಸ್ತ್ರೀಯ ಮುಖಕ್ಕೆ ಹರಡಿದ ರತಿರಾಗವನ್ನು ‘ನಂಜು’ ಎಂದು ಕರೆಯುವ ಮೂಲಕ, ಅವರು ತಮ್ಮ ಆಕ್ಷೇಪಣೆಯನ್ನು ಸ್ಪಷ್ಟಪಡಿಸುತ್ತಾರೆ. ಕಾಮನೆಯು ಪ್ರಕೃತಿಧರ್ಮವೇನೋ ಹೌದು, ಆದರೆ ಅದು ಸಕಾಲಿಕವಿರಬೇಕು ಹಾಗು ಸಪಾತ್ರವಾಗಿರಬೇಕು. ಅಕಾಲಿಕವಾದಾಗ ಅಥವಾ ಅಪಾತ್ರವಾದಾಗ ಅದು ನಂಜು ಅಂದರೆ ವಿಷದಂತೆ ಏರುತ್ತದೆ. ಅದರ ಪರಿಣಾಮವೂ ವಿಷದಂತೆಯೇ ಆಗಬಹುದು!

ಇಂತಹ ಅಕಾಲಿಕ ಅಥವಾ ಅಪಾತ್ರ ಕಾಮನೆಗೆ ಕಾರಣವೇನಿರಬಹುದು? ಮುಂದಿನ ಸಾಲುಗಳಲ್ಲಿ ಅದು ಸ್ಪಷ್ಟವಾಗುತ್ತದೆ: 
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತs
         ಗಾಳಿಗೆ ಮೇಲಕ್ಕೆದ್ದಿತ್ತs.
ಮಂಜಿನ ಮುಸುಕು ಎಂದರೆ ತಿಳಿವನ್ನು ಹದಗೆಡಿಸುವಂತಹ ಭಾವವಿಕಾರ. ಈ ವಿಕಾರವು ನೆಲದ ಅಂಚಿನಲ್ಲಿ ಅಂದರೆ ಮನಸ್ಸಿನ ತಳಭಾಗದಲ್ಲಿ ಮುದುಡಿಕೊಂಡು ಮಲಗಿತ್ತು. ಆದರೆ ಇದನ್ನು ಅಲುಗಾಡಿಸುವಂತಹ ‘ಗಾಳಿ’ ಬೀಸಿದ್ದರಿಂದ, ಮಂಜಿನ ಮುಸುಕು, ಮನಸ್ಸಿನ ಮುಂಭಾಗಕ್ಕೂ ಸಹ ಸರಿದು ಬಂದಿತು. ಪ್ರಕೃತಿಯಲ್ಲಿ ಹೇಗೋ, ನಾಯಕಿಯ ಅಂತರಂಗದಲ್ಲಿಯೂ ಸಹ ಈ ಗಾಳಿಯು ಭಾವವಿಕಾರವನ್ನು ನಂಜಿನಂತೆ ಹಬ್ಬಿಸಿದೆ.

ಗಾಳಿ ಎನ್ನುವದಕ್ಕೆ ವಿವಿಧ ಅರ್ಥಗಳನ್ನು ಹೇಳಬಹುದು.
ಈ ವರೆಗೆ ತಿಳಿದಿರದ ಹೊಸ ವಿಚಾರವೂ ಗಾಳಿಯೇ, ಅರಿವಿಗೆ ಬಾರದ ಭಾವವೂ ಗಾಳಿಯೇ. ದೆವ್ವಕ್ಕೂ ಸಹ ಗಾಳಿ ಎನ್ನುತ್ತಾರೆ. ಒಟ್ಟಿನಲ್ಲಿ, ಇಲ್ಲಿಯವರೆಗೆ, ನಿರಾಳವಾಗಿದ್ದ ಮನಸ್ಸು ಈಗ ಕಂಪಿಸಿದೆ. (ಈ ಕವನದ ಕೊನೆಯ ನುಡಿಯಲ್ಲಿ ಈ ಗಾಳಿಯ ಕುರುಹನ್ನು ನೀಡಲಾಗಿದೆ!)

ಮೊದಲನೆಯ ಸಾಲಿನಲ್ಲಿ ಮುಗಿಲು ಕೆಂಬಣ್ಣ ತಾಳಿರುವದನ್ನು ಹೇಳುವಾಗ,  ಬೇಂದ್ರೆಯವರು ಕಾಲವನ್ನು ಸೂಚಿಸಿಲ್ಲ. ಇದು ಮುಂಜಾವಿನ ಸಮಯವಾದರೆ, ಮನದಲ್ಲಿ ಭಾವವಿಕಾರವಾಗುವದು ಅಸಂಭವ. ಈ ಸಂದಿಗ್ಧತೆಯನ್ನು ತಪ್ಪಿಸಲೆಂದೇ, ಬೇಂದ್ರೆಯವರು ಎರಡನೆಯ ಸಾಲಿನಲ್ಲಿ, ‘ಆಗ ಸಂಜೆಯಾಗಿತ್ತs’ ಎಂದು explicit ಆಗಿ ಹೇಳಿಬಿಡುತ್ತಾರೆ.

ರತಿರಾಗಕ್ಕೆ ನಂಜು ಎನ್ನುವ ವಿಶೇಷಣವನ್ನು ಬಳಸಲು ಬೇಂದ್ರೆಯವರಿಗೆ ಮತ್ತೊಂದು ಕಾರಣವೂ ಇದೆ.
ನಂಜಿನ ಬಣ್ಣವು ಕಡುಕಪ್ಪಾಗಿದ್ದು, ಮಂಜಿನೊಡನೆ ಬೆರೆತಾಗ, ಅದು ಬೂದಿ ಬಣ್ಣದವರೆಗಿನ ವರ್ಣಶ್ರೇಣಿಯನ್ನು ನಿರ್ಮಿಸುತ್ತದೆ. ಅದೇ ರೀತಿಯಲ್ಲಿ ಬೇಂದ್ರೆಯವರು, ‘ರಾಗರತಿ’ ಕವನದಲ್ಲಿಯೂ ಸಹ ನಂಜಿನಂತಹ  ಕಡುಗೆಂಪುಬಣ್ಣವು, ಮಂಜಿನಿಂದಾಗಿ ಬೂದುಗೆಂಪಾಗಿ ಮಾರ್ಪಟ್ಟಿದೆ ಎಂದು ಹೇಳುತ್ತಿರಬಹುದು.

ದೈಹಿಕ ಆಕರ್ಷಣೆ ಹಾಗು ಕಾಮನೆ ಇವು ಗಂಡು,ಹೆಣ್ಣಿನ ನಡುವಿನ ಸಂಬಂಧದ ಮೊದಲ ಮೆಟ್ಟಿಲಾದರೂ ಸಹ, ರತಿರಾಗವನ್ನು ಮೀರಿದ ಪ್ರೇಮ ಮುಂದಿನ ಮೆಟ್ಟಲಾಗಿದೆ. ಅದು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ನಿರ್ಮಲವಾಗಿ ವರ್ಧಿಸುತ್ತಿದೆ. ಈ ಭಾವವು ಎರಡನೆಯ ನುಡಿಯಲ್ಲಿ ವ್ಯಕ್ತವಾಗಿದೆ:

ಬಿದಿಗಿ ಚಂದ್ರನಾ ಚೊಗಚೀನಗಿಹೂ ಮೆಲ್ಲಗ ಮೂಡಿತ್ತs
         ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗಿತ್ತ
         ಸೂಸ್ಯಾವ ಚಿಕ್ಕಿ ಅತ್ತಿತ್ತ.

ಸೂರ್ಯಾಸ್ತದ ನಂತರ ಈಗ ಚಂದ್ರೋದಯವಾಗುತ್ತಿದೆ. ಬಿದಿಗೆಯ ಚಂದ್ರ ಮೂಡುತ್ತಿದ್ದಾನೆ. ಸೂರ್ಯನ ಜೊತೆಜೊತೆಗೇ ಚಲಿಸುವ ಬೆಳ್ಳಿಚಿಕ್ಕಿಯನ್ನು(=ಶುಕ್ರ ಗ್ರಹವನ್ನು) ಚಂದ್ರ ಕೂಡುತ್ತಿದ್ದಾನೆ ಎಂದರೆ ಸೂರ್ಯ, ಚಂದ್ರರಿಬ್ಬರೂ ಪಶ್ಚಿಮ ದಿಕ್ಕಿನಲ್ಲಿಯೇ ಇದ್ದಾರೆ. ಆದುದರಿಂದ ಇದು ಅಮವಾಸ್ಯೆಯ ನಂತರದ ಶುಕ್ಲಪಕ್ಷದ ಬಿದಿಗೆ.
ಈ ಅವಧಿಯಲ್ಲಿ ಚಂದ್ರ ಇನ್ನೂ ಕ್ಷೀಣವಾಗಿಯೇ ಇರುತ್ತಾನೆ. ಆತನ ಬೆಳದಿಂಗಳು ಮಂದವಾಗಿರುತ್ತದೆ. ಹಾಗಾಗಿ ಆಗಸದಲ್ಲಿ ಅಲ್ಲಲ್ಲಿ ಚಿಕ್ಕೆಗಳು ಸೂಸಿವೆ. ಬೇಂದ್ರೆಯವರ ಕಣ್ಣಿಗೆ ಈ ಚಿಕ್ಕೆಗಳು ಇರುಳೆಂಬ ನಾರಿ ತನ್ನ ಹೆರಳಿನಲ್ಲಿ ಧರಿಸಿದ ಅರಳು ಮಲ್ಲಿಗೆ ಹೂವುಗಳ ಜಾಳಿಗೆಯಂತೆ ಕಾಣುತ್ತವೆ. ಅತ್ಯಂತ ಸುಂದರವಾದ ಪ್ರಕೃತಿಚಿತ್ರಣವಿದು. ಪ್ರಕೃತಿಶೃಂಗಾರದ ಈ ಚಿತ್ರಣವು  ಕವನದಲ್ಲಿಯ ಅಭಿಸಾರ ಭಾವನೆಗೆ ಬಲ ನೀಡುತ್ತದೆ.
[ ಟಿಪ್ಪಣಿ: ಚೊಗಚಿ ಹೂವು=Cassia occidentalis ]

ಮೊದಲನೆಯ ನುಡಿಯಲ್ಲಿ ಬೇಂದ್ರೆಯವರು ಪ್ರಕೃತಿಯಲ್ಲಿ ಮೂಡಿದ ಭಾವವಿಕಾರವನ್ನು ವರ್ಣಿಸಿದರೆ, ಎರಡನೆಯ ನುಡಿಯಲ್ಲಿ ಅಭಿಸಾರ-ಆಸಕ್ತ ನಿಸರ್ಗದ ಶೃಂಗಾರಭರಿತ ಚಿತ್ರವನ್ನು ಹಾಗು ಶುಕ್ಲಪಕ್ಷದ ಬಿದಿಗೆಯ ಚಂದ್ರನಂತೆ ವರ್ಧಿಸುತ್ತಿರುವ ನಿರ್ಮಲಪ್ರೇಮವನ್ನು ವರ್ಣಿಸಿದ್ದಾರೆ.
ಇದು ಪ್ರಕೃತಿವರ್ಣನೆಯಾಯಿತು. ಈ ಸನ್ನಿವೇಶದಲ್ಲಿ, ನಾಯಕಿಯ ಮನಃಸ್ಥಿತಿಯು ಹೇಗಿದೆ ಎನ್ನುವದರ ಚಿತ್ರಣವು ಮುಂದಿನ ಎರಡು ನುಡಿಗಳಲ್ಲಿದೆ.

ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತs
        ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs
        ಎರಗಿ ಹಿಂದಕ್ಕುಳಿತಿತ್ತ.

ಬೇಂದ್ರೆಯವರು ಈ ಕವನವನ್ನು ಬರೆದ ಕಾಲದಲ್ಲಿ, ನೀರಿಗಾಗಿ ಕೆರೆ ಅಥವಾ ಬಾವಿಗಳನ್ನೇ ಆಶ್ರಯಿಸಬೇಕಾಗಿತ್ತು. ಹೆಣ್ಣುಮಕ್ಕಳು ಮುಂಜಾನೆ ಹಾಗು ಸಂಜೆಗೆ ನೀರು ತರಲು ಹೋಗುತ್ತಿದ್ದರು. ಅಂತಹ ಹೆಣ್ಣುಮಗಳೊಬ್ಬಳು ಸಂಜೆಯ ಸಮಯದಲ್ಲಿ ಬಾವಿಯಿಂದ ನೀರು ಸೇದಿಕೊಂಡು ತನ್ನ ಮನೆಗೆ ಹಿಂತಿರುಗುತ್ತಿದ್ದಾಳೆ.
ಈ ಹೆಣ್ಣು ಮಗಳು ಎಂಥವಳು?

‘ಬಟ್ಟಲುಗಣ್ಣು’ ಎನ್ನುವದು ಚೆಲುವಿನ ಲಕ್ಷಣವಾಗಿದೆ. ಇವಳು ಕೇವಲ ಬಟ್ಟಲುಗಣ್ಣುಗಳ ಹೆಣ್ಣಲ್ಲ, ‘ಬೊಗಸೆಗಣ್ಣವಳು’! ಕಣ್ಣುಗಳೇ ಬೊಗಸೆಯಾದವಳು! ಬೊಗಸೆಯು ‘ಕೊಡು-ಕೊಳ್ಳು’ವಿಕೆಯನ್ನು ಸೂಚಿಸುತ್ತದೆ. ಮನದ ಬಯಕೆಯ ಈ ಕೊಡು-ಕೊಳ್ಳುವಿಕೆಯು ಇಲ್ಲಿ ಕಣ್ಣುಗಳ ಮೂಲಕವೇ ಆಗುತ್ತಿದೆ. ಆದರೆ ಕೇವಲ ನೇತ್ರವ್ಯವಹಾರವು ಬಯಕೆಯನ್ನು ಹಿಂಗಿಸಬಲ್ಲದೆ? ಆದುದರಿಂದ ನೀರು ತುಂಬಿಕೊಂಡ ಬಳಿಕ ಅವಳು ತನ್ನ ಮನೆಗೆ ಮರಳುತ್ತಿದ್ದರೂ ಸಹ, ಅವಳ ಮನಸ್ಸು ಹಿಂದೆ ಬಿಟ್ಟ ಬಾವಿಯ ಕಡೆಯಲ್ಲಿಯೇ ಇದೆ. ಬಾವಿಯ ಹಾದಿ ಅವಳನ್ನು ಮತ್ತೆ ಕರೆಯುತ್ತಿದೆ. ‘ಕಾಮಿ ಬೆಕ್ಕಿನ್ಹಾಂಗ ಭಾಂವೀ ಹಾದಿ ಕಾಲಾಗ ಸುಳಿತಿತ್ತs’ ಎನ್ನುವ ಮೂಲಕ ಬೇಂದ್ರೆ ಇದನ್ನು ಸ್ಪಷ್ಟಗೊಳಿಸುತ್ತಾರೆ. ಸಾಕಿದ ಬೆಕ್ಕು ನಿಮ್ಮ ಜೊತೆಗೇ ಸಾಗುತ್ತದೆ, ನಿಮ್ಮ ಕಾಲಿಗೆ ತೊಡರುತ್ತದೆ. ಇವಳು ಮರಳುತ್ತಿರುವ ಹಾದಿಯು, ಇವಳನ್ನು ಮರಳಿ ಕರೆಯುತ್ತಿದೆ. (ಅಂಥಾದ್ದು ಅಲ್ಲೇನಿದೆ?) ಮನೆಗೆ ಮರಳುವಾಗ, ನಾಯಕಿಯು ತನ್ನೆಲ್ಲ ಬಯಕೆಗಳನ್ನು ಬಾವಿಯ ಬಳಿಯಲ್ಲಿಯೇ ಬಿಟ್ಟು ಬರಬೇಕಲ್ಲವೆ? ಆದುದರಿಂದಲೇ ಆ ಹಾದಿಯು ಅವಳನ್ನು ಬಿಡುತ್ತಿಲ್ಲ. ಅರ್ಥಾತ್ ಅವಳೇ ಆ ಹಾದಿಯನ್ನು ಬಿಡಲು ಒಲ್ಲಳು!

ಒಂದು ಕಾಲದಲ್ಲಿ ‘ಕಾಮಿ’ ಎನ್ನುವದು ಸಾಕು ಬೆಕ್ಕುಗಳ ಪ್ರೀತಿಯ ಹೆಸರಾಗಿತ್ತು. ಈ ಕಾಮಿನಿಯು ತನ್ನ ಮನದಲ್ಲಿಯೆ ಸಾಕಿ, ಪೋಷಿಸುತ್ತಿರುವ ಕಾಮಭಾವನೆಯೂ ಸಹ, ಕಾಮಿ ಬೆಕ್ಕಿನಂತೆ ಅವಳನ್ನು ಕಾಡುತ್ತ, ಅವಳ ಜೊತೆಗೇ ಬರುತ್ತ, ಮತ್ತೆ ಮತ್ತೆ ಹಿನ್ನೋಟ ಬೀರುತ್ತ ಸಾಗಿದೆ. ಬೆಕ್ಕು ಮೈಯನ್ನು ಅಡರಿದರೆ ಕಾಮಭಾವನೆಯು ಮನಸ್ಸನ್ನು ಆಡರುತ್ತದೆ. ಆದುದರಿಂದ ಕಾಮಭಾವನೆಗೆ ಬೆಕ್ಕಿನ ಪ್ರತೀಕವನ್ನು ಬಳಸಿದ್ದು ಇಲ್ಲಿ ಅತ್ಯಂತ ಸಮರ್ಪಕವಾಗಿದೆ.

ಕೊನೆಯ ನುಡಿಯಲ್ಲಿ ಈ ನಾಯಕಿಯ ಮನೋವಿಕಾರದ ಭ್ರಮಾಲೋಕದ ವರ್ಣನೆ ಇದೆ:
ಮಳ್ಳಗಾಳಿಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತs
              ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬೆನ್ನಿಲೆ ಬರತಿತ್ತs
         ತನ್ನ ಮೈಮರ ಮರೆತಿತ್ತ.

ಈ ಕಾಮಿನಿಯ ಮನಸ್ಸಿನಲ್ಲಿ ಅವಳ ಗೆಣೆಕಾರನ ಆಕರ್ಷಣೆ ತುಂಬಿಕೊಂಡಿದೆ. ಅವಳ ಸೆರಗು ಗಾಳಿಗೆ ಸೆಳೆದಂತಾದಾಗ, ಅವಳಿಗೆ ಅದು ತನ್ನ ಗೆಣೆಯನ ಚೇಷ್ಟೆ ಎನ್ನುವ ಭ್ರಮೆ ಥಟ್ಟನೆ ಹುಟ್ಟುತ್ತದೆ. ಅದು ಅವಳ ಒಳಬಯಕೆಯೂ ಆಗಿದೆ. ಆದರೆ ಮತ್ತೆ ಅವಳಿಗೆ ಭ್ರಮನಿರಸನವಾಗುತ್ತೆದೆ. ಇದೆಕ್ಕೆಲ್ಲ ಕಾರಣವಾದ ಈ ಅಮಾಯಕ ಗಾಳಿಗೆ ನಾಯಕಿಯ ಬಗೆಗೆ ಪ್ರಣಯಭಾವನೆಯೇನೂ ಇಲ್ಲವಲ್ಲ! ಆದುದರಿಂದ ಅದು ಕೇವಲ ‘ಮಳ್ಳಗಾಳಿ’. ಆದರೆ ನಾಯಕಿಯು ತನ್ನ ಗೆಣೆಯನೇ ಸುಳಿವು ಕೊಡದೇ ‘ಕಳ್ಳಾಟ’ ಆಡುತ್ತಿದ್ದಾನೆ  ಎಂದು ಭಾವಿಸುತ್ತಿದ್ದಾಳೆ. ಅವಳ ಈ ಹುಚ್ಚು ಅವಸ್ಥೆಯನ್ನು ಹತ್ತಿರದಿಂದ ಗಮನಿಸುತ್ತಿರುವ ಗಾಳಿಯೂ ಸಹ ಬೆರಗುಗೊಳ್ಳುತ್ತದೆ. (ಬೇಂದ್ರೆಯವರು ಗಾಳಿಯನ್ನು ಮಾನುಷೀಕರಣಗೊಳಿಸುವ ಪರಿಯನ್ನು ಗಮನಿಸಬೇಕು.) ಇನ್ನು ಅವಳ ಗೆಣೆಕಾರ ಅಲ್ಲಿ ಇಲ್ಲದಿದ್ದರೂ ಸಹ ಅವನ ಮನಸ್ಸು ಅಲ್ಲಿಯೇ ಸುತ್ತುತ್ತಿದೆ, ಅವಳ ಬೆನ್ನ ಹಿಂದೆಯೇ ಗಿಳಿಯಂತೆ ಹಾರಾಡುತ್ತ ಬರುತ್ತಿದೆ. (ಮೊದಲನೆಯ ನುಡಿಯಲ್ಲಿ ಬರುವ ‘ಗಾಳಿ’ ಯಾವುದು ಎನ್ನುವದು ಇಲ್ಲಿ ಬಯಲಾಗುತ್ತದೆ!)

ಕೊನೆಯ ನುಡಿಗೆ ಮತ್ತೊಂದು ಸಂಭಾವ್ಯತೆಯೂ ಇದೆ.
ನೀರು ತುಂಬಿಕೊಂಡ ಹೆಣ್ಣು ಮುಂದೆ ಮುಂದೆ ಸಾಗಿದ್ದರೆ, ಸರಸ ವರ್ತನೆಯ ಈ ರಸಿಕ ಗೆಣೆಕಾರ ಅವಳ ಬೆನ್ನ ಹಿಂದೆ, ಅವಳ ನೆರಳಿನಂತೆ ಒಂದೇ ಮನಸ್ಸಿನಿಂದ ಅವಳನ್ನು ಹಿಂಬಾಲಿಸಿದ್ದಾನೆ, ತನ್ನನ್ನೇ ಮರೆತಿದ್ದಾನೆ. ಸಾಕುಗಿಳಿಯು ಸಾಕಿದವರ ಸುತ್ತಲೂ ಹಾರುವಂತೆ, ಇವನ ಮನವು ಅವಳ ಸುತ್ತಲೂ ಸುತ್ತುತ್ತಿದೆ ಹಾಗು ಅವಳ ಧ್ಯಾನದಲ್ಲಿ ತನ್ನನ್ನೇ ಮರೆತಿದೆ!

ಬೇಂದ್ರೆಯವರು ತಮ್ಮ ಕವನದ ನಾಯಕಿಯ ಭಾವವಿಕಾರವನ್ನು ಬಣ್ಣಿಸುವದರಲ್ಲಿ ಹಾಗು ಈ ಭಾವವಿಕಾರವನ್ನು ಪ್ರಕೃತಿಯ ರಂಗಿನೊಡನೆ ಸಮೀಕರಿಸುವದರಲ್ಲಿ ಆಸ್ಥೆ ಹೊಂದಿರುವರೇ ಹೊರತು, ವಾಸ್ತವದ ಅಭಿಸಾರದಲ್ಲಿ ಅಲ್ಲ. ಆದುದರಿಂದ ಎರಡನೆಯ ಸಂಭಾವ್ಯತೆ ಸಾಧುವಾಗಿರಲಾರದು. ಏನೇ ಇರಲಿ, ಕಣ್ಣುಮುಚ್ಚಾಲೆಯಾಟದಂತಿರುವ ಈ ಅಭಿಸಾರವು ಅಕಾಲಿಕ ಪ್ರೀತಿಯಂತೂ ಹೌದು, ಜೊತೆಗೇ ಅಪಾತ್ರ ಪ್ರೀತಿಯೂ ಆಗಿರಬಹುದು; ನೀತಿಬಾಹ್ಯ ಪ್ರೀತಿಯೂ ಆಗಿರಬಹುದು. ಮುಖ್ಯವಾಗಿ ಇವರ ಪ್ರೀತಿಯಲ್ಲಿ ಕಾಮಭಾವ ತುಂಬಿದೆ. ಆದುದರಿಂದ ಬೇಂದ್ರೆಯವರು ‘ರಾಗರತಿಯಲ್ಲಿ ನಂಜು ಏರಿತ್ತು’ ಎಂದು ಹೇಳುತ್ತಾರೆ. ಪ್ರೇಮಭಾವನೆಯ ಬೆಳದಿಂಗಳು ಇವರಲ್ಲಿ ಇನ್ನೂ ಮೂಡಿಲ್ಲ.

‘ರಾಗರತಿ’ ಕವನವು ‘ಗರಿ’ ಸಂಕಲನದಲ್ಲಿ ಅಡಕವಾಗಿದೆ.

Wednesday, May 11, 2011

ನನ್ನ ಹಾಡು……………….ದ.ರಾ.ಬೇಂದ್ರೆ


ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.
..............................................................................................................
ಬೇಂದ್ರೆಯವರ ‘ನನ್ನ ಹಾಡು’ ಕವನವು, ಭಗವಂತನಲ್ಲಿ ಅನನ್ಯ ಶರಣಾಗತಿಯನ್ನು ಸೂಚಿಸುವ ಕವನವಾಗಿದೆ. ಈ ಕವನವು ನಾಲ್ಕು ನುಡಿಗಳಲ್ಲಿದೆ. ಮೊದಲನೆಯ ನುಡಿಯಲ್ಲಿ ಕವಿಯು ತನ್ನ ಸಕಲಚೈತನ್ಯವು ಭಗವಂತನಿಗೆ ಶರಣಾಗತವಾಗಿದೆ ಎಂದು ಹೇಳುತ್ತಾನೆ. ಎರಡನೆಯ ನುಡಿಯಲ್ಲಿ ಶರಣಾಗತನಾದ ಭಕ್ತನ ಲಕ್ಷಣವನ್ನು ವರ್ಣಿಸುತ್ತಾನೆ ಮೂರನೆಯ ನುಡಿಯಲ್ಲಿ ಶರಣು ನೀಡುತ್ತಿರುವ ಭಗವಂತನ ಲಕ್ಷಣವನ್ನು ಸೂಚಿಸುತ್ತಾನೆ. ನಾಲ್ಕನೆಯ ನುಡಿಯಲ್ಲಿ ಕವಿಯು ತನ್ನ ಜೀವನದರ್ಶನವನ್ನು ವಿವರಿಸುತ್ತಾನೆ.

ನುಡಿ ೧:
ನನ್ನ ಹರಣ
ನಿನಗೆ ಶರಣ
ಸಕಲ ಕಾರ್ಯ ಕಾರಣಾ
ನಿನ್ನ ಮನನ-
ದಿಂದ ತನನ-
ವೆನುತಿದೆ ತನು ಪಾವನಾ.

ಬಾಳಿನಲ್ಲಿ ಬೆಂದ ವ್ಯಕ್ತಿಯು ಭಗವಂತನೆಂಬ ದಿವ್ಯ ಚೈತನ್ಯಕ್ಕೆ ಶರಣು ಹೋಗುವದು ಒಂದು ಸಹಜ ಕ್ರಿಯೆ. ‘ವಿಶ್ವದ ಎಲ್ಲ ಘಟನೆಗಳಿಗೂ ಭಗವಂತನೇ ಕಾರಣಪುರುಷ ; ಲೋಕಮುಖಿಯಾದ ತನ್ನನ್ನು ಭಗವನ್ಮುಖಿಯಾಗಿ ಮಾಡುವ ಉದ್ದೇಶದಿಂದಲೇ ಭಗವಂತನು ತನ್ನನ್ನು ಇಷ್ಟೆಲ್ಲ ಸಂಕಷ್ಟಗಳಿಗೆ ಒಡ್ಡುತ್ತಿದ್ದಾನೆ’ ಎನ್ನುವ ತಿಳಿವಳಿಕೆ ಭಕ್ತನಿಗೆ ಬರಬೇಕು. ಆವಾಗ ಆತನು  ‘ನನ್ನ ಹರಣ, ನಿನಗೆ ಶರಣ’ ಎನ್ನುವ ಮೂಲಕ ತನ್ನ ಪ್ರಾಣವನ್ನು ಅಂದರೆ ಜೀವಚೈತನ್ಯವನ್ನು  ಭಗವಂತನಿಗೆ ಅಂದರೆ ವಿಶ್ವಚೈತನ್ಯನಿಗೆ  ಒಪ್ಪಿಸಿಕೊಳ್ಳುತ್ತಾನೆ. ಈ ಭಾವನೆಯನ್ನು ಬೇಂದ್ರೆಯವರು ‘ಸಕಲ ಕಾರ್ಯ ಕಾರಣಾ’ ಎನ್ನುವ ಸಂಬೋಧನೆಯ ಮೂಲಕ ಸ್ಪಷ್ಟ ಪಡಿಸುತ್ತಿದ್ದಾರೆ.

ವ್ಯಕ್ತಿಯ ಜೀವಾತ್ಮವು ಪರಿಮಿತ ಚೈತನ್ಯ ; ಪರಮಾತ್ಮನು ಅಪರಿಮಿತ ಚೈತನ್ಯ. ಈ ತಿಳಿವು ಭಕ್ತನ ಮನಸ್ಸಿನಲ್ಲಿ ಹುಟ್ಟಿ, ಅವನು ಆ ತಿಳಿವನ್ನು ಮತ್ತೆ ಮತ್ತೆ ಮನನ ಮಾಡುತ್ತಿದ್ದಂತೆಯೆ, ಆತನ ಮನಸ್ಸು ಪುಳಕಗೊಳ್ಳುತ್ತದೆ ಹಾಗೂ ನಿರ್ಮಲವಾಗುತ್ತದೆ. ಮನಸ್ಸಿನ ನಿರ್ಮಲತೆಯು, ಮನದ ಆವರಣವಾದ ಶರೀರಕ್ಕೂ ಸಹ ಹಬ್ಬಲೇಬೇಕಲ್ಲವೆ? ಹೀಗಾಗಿ ಆತನ ತನುವೂ ಸಹ ಪವಿತ್ರವಾಗುತ್ತದೆ. ‘ತನುವು ಪವಿತ್ರಗೊಳ್ಳುವದು’ ಅಂದರೇನು? ಪವಿತ್ರ ದೇಹದ ಮೂಲಕ ನಡೆಯಿಸುವ ಕಾರ್ಯಗಳು ನೀಚ ಕಾರ್ಯಗಳಾಗದೆ, ಒಳ್ಳೆಯ ಕಾರ್ಯಗಳಾಗುವವು ಎನ್ನುವದು ‘ತನು ಪಾವನಾ’ ಎನ್ನುವದರ ಅರ್ಥ. ಇಂತಹ ಮನಸ್ಸು ಹಾಗು ಇಂತಹ ದೇಹವು ಭಗವಚ್ಚಿಂತನೆಯಲ್ಲಿ ಮುಳುಗಿರುವದರಿಂದ ಸದಾಕಾಲವೂ ಉಲ್ಲಸಿತ ಭಾವದಲ್ಲಿ ಇರುತ್ತದೆ.

ನುಡಿ ೨:
ಸುಖದ ಮಿಷವು
ದುಃಖ ವಿಷವು
ಹಿಗ್ಗಿ ಪ್ರಾಣಪೂರಣಾ
ಪಂಚಕರಣ-
ಗಳೀ ಗಡಣ
ಕಟ್ಟಿತು ಗುಡಿ ತೋರಣಾ.

ಭಗವಂತನ ಅರಿವನ್ನು ಪಡೆದ ಭಕ್ತನು ಲೌಕಿಕವನ್ನು ಹೇಗೆ ನೋಡುತ್ತಾನೆ?
ಆತನ ಈವರೆಗಿನ ಜೀವನದಲ್ಲಿ ಲೌಕಿಕ ಸುಖದ ಮಿಷವು ಅಂದರೆ ಬಯಕೆಯು ಪ್ರಬಲವಾಗಿತ್ತು. ಈ ಬಯಕೆಯೇ ದುಃಖವೆಂಬ ವಿಷದ ಮೂಲವೂ ಹೌದು. ಇದು ಅವನಿಗೆ ಅರಿವಾದಾಗ, ಆತನು ಈ ಲೌಕಿಕ ಬಯಕೆಯನ್ನು ತ್ಯಜಿಸುತ್ತಾನೆ. ಭಗವಂತನ ಸಂಗದಿಂದ ಆತನ ಪರಿಮಿತ ವ್ಯಾಪ್ತಿಯ ಚೈತನ್ಯವು ಅಪರಿಮಿತವಾಗಿ, ಅನಂತವಾಗಿ ಹಿಗ್ಗುತ್ತದೆ. ಇದು ಒಂದು ಅರ್ಥ.
ಹಿಗ್ಗು ಅಂದರೆ ತೃಪ್ತನಾಗು ಎನ್ನುವ ಅರ್ಥವೂ ಇದೆ. ಭಗವಂತನ ಸಂಗವನ್ನು ಪಡೆದ ಜೀವವು ಸದಾಕಾಲವೂ ಸಂತೃಪ್ತವಾಗಿರುತ್ತದೆ ಎನ್ನುವದು ಎರಡನೆಯ ಅರ್ಥ.

ಈ ರೀತಿಯಾಗಿ ಹಿಗ್ಗಿದ ಹಾಗು ಹಿಗ್ಗುಗೊಂಡ ಭಕ್ತನ ಪ್ರಜ್ಞೆಯಲ್ಲಿ ಭಕ್ತ ಹಾಗು ಭಗವಂತ ಲಯವಾಗುತ್ತಾರೆ. ಇದು ಸತ್-ಚಿತ್-ಆನಂದದ ಸ್ಥಿತಿ. ಇಂತಹ ಮನಸ್ಸು ದೇವಾಲಯವಿದ್ದಂತೆ. ಈ ಮನಸ್ಸಿನ ಸಾಧನಗಳಾದ ಪಂಚಕರಣಗಳ ಸಮೂಹವು ( ಐದು ಜ್ಞಾನೇಂದ್ರಿಯಗಳು ಹಾಗು ಐದು ಕರ್ಮೇಂದ್ರಿಯಗಳು) ಈ ದೇವಾಲಯಕ್ಕೆ ಕಟ್ಟಿದ ಬಾವುಟ ಹಾಗು ತೋರಣಗಳಾಗುತ್ತವೆ. ಈ ಸ್ಥಿತಿಯಲ್ಲಿ ಆತನ ಕ್ರಿಯೆಗಳೆಲ್ಲ ಭಗವಂತನಿಗಾಗಿ ಇರುತ್ತವೆ.

[ ಇಂತಹ ಸ್ಥಿತಿಯನ್ನು ಶ್ರೀ ಶಂಕರಾಚಾರ್ಯರು ‘ಸೌಂದರ್ಯಲಹರಿ’ಯಲ್ಲಿ ಹೀಗೆ ವರ್ಣಿಸಿದ್ದಾರೆ:
ಜಪೋ ಜಲ್ಪ: ಶಿಲ್ಪಂ ಸಕಲಮಪಿ ಮುದ್ರಾವಿರಚನಾ
ಗತಿಃ ಪ್ರಾದಕ್ಷಿಣ್ಯಕ್ರಮಮಶನಾದ್ಯಾಹುತಿ ವಿಧಿ:
ಪ್ರಣಾಮಃ ಸಂವೇಶಃ ಸುಖಮಖಿಲಮಾತ್ಮಾರ್ಪಣ ದೃಶಾ
ಸಪರ್ಯಾಪರ್ಯಾಯಸ್ತವ ಭವತು ಯನ್ಮೇ ವಿಲಸಿತಮ್|
ಭಾವಾನುವಾದ:
ನುಡಿದದ್ದು ಎಲ್ಲ ಜಪವು, ಕೈಯಾಟವೆಲ್ಲ ಮುದ್ರೆ,
ನಡೆದದ್ದೇ ಪ್ರದಕ್ಷಿಣೆ, ನನ್ನೂಟ ನಿನಗೆ ಬಲಿಯು,
ಒರಗಿರಲು ಅದುವೆ ನಮನ, ಆತ್ಮಾರ್ಪಣೆಯೆ ಸುಖವು
ಈ ರೀತಿ ಬೆಳೆಯಲಮ್ಮ ನನ್ನ ಪೂಜೆಯಾ ವಿಧಿಯು!]


ನುಡಿ ೩:
ನಿನ್ನ ಚರಣ
ಸುಸಂತರಣ
ಜಗದ್ಭರಿತ ಭಾವನಾ
ಹಾಸ್ಯಕಿರಣ
ತದನುಸರಣ
ತದಿತರ ಪಥ ಕಾಣೆ ನಾ.

ಭಕ್ತನ ಮನಸ್ಸು ಎನ್ನುವ ದೇವಾಲಯದಲ್ಲಿ ಸ್ಥಿತನಾಗಿರುವ ಈ ಭಗವಂತನ ಲಕ್ಷಣವೇನು? ಶರಣಾಗತಿಯು ಭಕ್ತನ ಲಕ್ಷಣವಾದರೆ, ಅನುಗ್ರಹವು ಭಗವಂತನ ಲಕ್ಷಣವಾಗಿದೆ. ತನ್ನ ಭಕ್ತನನ್ನು ಸಂಸಾರಸಾಗರದ ತೆರೆನೊರೆಗಳಿಂದ ರಕ್ಷಿಸುತ್ತ, ಪಾರು ಮಾಡುವದೇ, ‘ಶರಣಾಗತವತ್ಸಲ’ ಎನ್ನುವ ಬಿರುದುಳ್ಳ ಭಗವಂತನ ಪ್ರಮುಖ ಲಕ್ಷಣವಾಗಿದೆ. ಇದನ್ನು ಕವಿಯು ‘ನಿನ್ನ ಚರಣ, ಸುಸಂತರಣ’ ಎನ್ನುವ ಪದಪುಂಜದಿಂದ ಸೂಚಿಸುತ್ತಾನೆ. ಸುಸಂತರಣ ಎಂದರೆ ಸುಲಭವಾಗಿ ದಾಟಿಸಬಲ್ಲಂತಹದು ಎನ್ನುವ ಅರ್ಥ. ಭಗವಂತನ ಈ ಶಕ್ತಿಯು ವಿಶ್ವವ್ಯಾಪಿಯಾಗಿದೆ ಹಾಗು ಆತನ ಭಕ್ತವತ್ಸಲತೆಯೂ ಸಹ ಸರ್ವವ್ಯಾಪಿಯಾಗಿದೆ ಹಾಗು ಇದನ್ನು ಆತನ ಭಕ್ತರೆಲ್ಲರೂ ಪೂರ್ಣವಾಗಿ ಅರಿತಿದ್ದಾರೆ ಎನ್ನುವ ಅರ್ಥದಲ್ಲಿ ಬೇಂದ್ರೆಯವರು ‘ಜಗದ್ಭರಿತ ಭಾವನಾ’ ಎಂದು ಹೇಳುತ್ತಾರೆ.

 ‘ಹಾಸ್ಯಕಿರಣ’ವು ಭಗವಂತನ ಅನುಗ್ರಹದ ಪ್ರತೀಕವಾಗಿದೆ. ಭಗವಂತನದು ಯಾವಾಗಲೂ ಮಂದಹಾಸ. ಆ ಮಂದಹಾಸವು ರವಿಕಿರಣದಂತೆ ಮನಸ್ಸಿಗೆ ಬೆಳಕನ್ನು ನೀಡಿದರೆ, ಚಂದ್ರಕಿರಣದಂತೆ ಮನಸ್ಸನ್ನು ತಂಪುಗೊಳಿಸುತ್ತದೆ. ಭಕ್ತನ ಮನಸ್ಸು ಇಂತಹ ಭಗವಂತನ ಸ್ಮರಣೆಯಲ್ಲಿಯೇ ಸದಾ ನಿರತವಾಗಿರುತ್ತದೆ. ಲೌಕಿಕವನ್ನು ದಾಟುವ ಇತರ ಮಾರ್ಗಗಳು ಇಲ್ಲ. ಇದ್ದರೂ ಸಹ ಅವು ಅವನ ಮನಸ್ಸನ್ನು ಸೆಳೆಯಲಾರವು.

ನುಡಿ ೪:
ಹರುಷ ರಸವೆ
ಕರುಣದಸುವೆ
ಜೀವಧರ್ಮಧಾರಣಾ.
ರಸವೆ ಜನನ
ವಿರಸ ಮರಣ
ಸಮರಸವೆ ಜೀವನ.

ಭಗವಂತನಲ್ಲಿ ಈ ರೀತಿಯಾಗಿ ಶರಣಾಗತನಾಗಿ, ಭಗವಂತ ತೋರಿದ ದಾರಿಯಲ್ಲಿ ಮುನ್ನಡೆಯುತ್ತಿರುವ ಭಕ್ತನಿಗೆ ಕಂಡ ಕಾಣ್ಕೆ ಯಾವುದು? ಸೃಷ್ಟಿ ಇಲ್ಲದೆ ಭಗವಂತ ಇರಲಾರ. ಸೃಷ್ಟಿಯ ಸಕಲ ಜೀವಿಗಳಿಗೆ ಭಗವಂತನ ಕರುಣೆ ಇದೆ. ಆ ಅನುಗ್ರಹದಲ್ಲಿ ಎಲ್ಲ ಜೀವಿಗಳು ಹರುಷದಿಂದ ಬಾಳುತ್ತವೆ ಎನ್ನುವದೇ ಈ ಅರಿವು. ಸೃಷ್ಟಿ, ಸ್ಥಿತಿ, ಲಯ, ತಿರೋಧಾನ ಹಾಗು ಅನುಗ್ರಹ ಇವು ಭಗವಂತನ ಐದು ನಿರಂತರ ಕ್ರಿಯೆಗಳು. ಇದು ಅವನ ಧರ್ಮವೂ ಹೌದು. ಬಸವಣ್ಣನವರು ಇದನ್ನೇ ‘ಸಕಲ ಜೀವಿಗಳಿಗೆ ಲೇಸನೆ ಬಯಸುವನು ನಮ್ಮ ಕೂಡಲ ಸಂಗಮ ದೇವ’ ಎಂದಿದ್ದಾರೆ. ಈ ದರ್ಶನಕ್ಕೆ ಬೇಂದ್ರೆಯವರು ‘ಜೀವಧರ್ಮಧಾರಣಾ’ ಎನ್ನುತ್ತಾರೆ.

ಭಗವಂತನ ಹರುಷರಸವೇ ಅವನ ಸೃಷ್ಟಿಗೆ ಕಾರಣ, ಇದುವೇ ಜೀವನ. ಈ ಹರುಷರಸ ಇಲ್ಲದಲ್ಲಿ ಅದು ‘ವಿ-ರಸ’ ಆಗುತ್ತದೆ. ಅದುವೇ ಮರಣ. ಈ ರಸ ಹಾಗೂ ವಿರಸಗಳ ನಡುವೆ ಇರುವದೇ ಜೀವನ. ಆದುದರಿಂದಲೇ ಈ ಜೀವನವು ಸುಖ ಹಾಗು ದುಃಖಗಳ ಸಮರಸವಾಗಿದೆ. ಇದು ಬೇಂದ್ರೆಯವರು ಕಂಡ ಕಾಣ್ಕೆ!

‘ನನ್ನ ಹಾಡು’ ಮೇಲ್ ನೋಟದಲ್ಲಿ ಅತಿ ಸರಳವಾದ ಕವನ. ಕವನದಲ್ಲಿ ಬಳಸಲಾದ ಪದಗಳು ಸರಳವಾಗಿವೆ ಹಾಗು ಮೃದುವಾಗಿವೆ. ಕವನದ ಛಂದಸ್ಸು ಸರಳವಾಗಿದೆ. (ಇದು ಕನ್ನಡದಲ್ಲಿ ಇರುವ ಆರು ಬಗೆಯ ಷಟ್ಪದಿಗಳಿಗಿಂತ ಭಿನ್ನವಾದ ಷಟ್ಪದಿಯಾಗಿದೆ.) ಕವನದ ಭಾವವೂ ಸಹ ಸರಳವಾಗಿಯೇ ಇದೆ. ಆದರೆ ಕವನದ ಪ್ರತಿ ಪದವೂ ಸಂಕೀರ್ಣ ಅರ್ಥವನ್ನು ಹೊಂದಿದೆ. ಹೀಗಾಗಿ ಬೇಂದ್ರೆಯವರ ಅನೇಕ ಸರಳ ಕವನಗಳಂತೆ, ‘ನನ್ನ ಹಾಡು’ ಸಹ ಸಂಕೀರ್ಣ-ಅರ್ಥ-ಗರ್ಭಿತ ಕವನವಾಗಿದೆ.

ಪ್ರತಿಯೋರ್ವ ವ್ಯಕ್ತಿಗೂ ಹುಟ್ಟಿದ ಕ್ಷಣದಿಂದಲೇ ಒಂದು identity ಪ್ರಾರಂಭವಾಗುತ್ತದೆ. ದೈಹಿಕ identity, ಕೌಟಂಬಿಕ identity,ಸಾಮಾಜಿಕ identity ಹೀಗೆಲ್ಲ ಇವು ಸಂಗ್ರಹಗೊಳ್ಳುತ್ತಲೇ ಹೋಗುತ್ತವೆ. ಸಂಕಷ್ಟಗಳ ಹೊಡೆತಕ್ಕೆ ಸಿಲುಕಿ, ಹಣ್ಣಾದ ಭಕ್ತನು ಈ ಎಲ್ಲ identityಗಳನ್ನು ಕಳೆದುಕೊಳ್ಳುತ್ತಾನೆ. ಅವನ ಲೌಕಿಕ identityಗಳೆಲ್ಲ ನಾಶವಾಗಿ ಹೋಗುತ್ತವೆ. ಆತನು ಭಕ್ತ ಎನ್ನುವ identity ಒಂದೇ ಉಳಿದುಕೊಳ್ಳುತ್ತದೆ. ಅದೇ ಅವನ ಕೊನೆಯ ಭಾವ. ಆದುದರಿಂದಲೇ ಬೇಂದ್ರೆಯವರು ಈ ಕೊನೆಯ ಭಾವದ ಸೂಚನೆಯಾಗಿ ಈ ಕವನವನ್ನು ‘ನನ್ನ ಹಾಡು’ ಎಂದು ಕರೆದಿದ್ದಾರೆ.

[ಟಿಪ್ಪಣಿ:
ವಿನಾಯಕ ಕೃಷ್ಣ ಗೋಕಾಕರು ತಮ್ಮ ಬೃಹತ್ ಕಾದಂಬರಿಯ ಶೀರ್ಷಿಕೆಯನ್ನು ( ‘ಸಮರಸವೇ ಜೀವನ’ ) ಈ ಕವನದಿಂದಲೇ ಎತ್ತಿಕೊಂಡಿದ್ದಾರೆ.]

Thursday, March 31, 2011

ಕರ್ಣಪಿಶಾಚಿಯ ಸಂದರ್ಶನಗಳು.....೪

ಕನ್ನಡ ತಾಯಿಯ ಆಶೀರ್ವಾದವನ್ನು ಪಡೆದ ಕರ್ಣಪಿಶಾಚಿಯು ಕಾಲ್ನಡಿಗೆಯಿಂದ ನೈಸ್ ಕಾ‍^ರಿಡಾ^ರ್‍ ತಲುಪಿತು. ಅನೇಕ ರಾಜಕಾರಣಿಗಳು ಧರಣಿ ಹಾಗು ಪಾದಯಾತ್ರೆಗಳ ಮೂಲಕ ಪವಿತ್ರಗೊಳಿಸಿದ ಆ ಮಾರ್ಗವನ್ನು ಕಂಡ ಕರ್ಣಪಿಶಾಚಿಗೆ ಮನಸ್ಸು ತುಂಬಿ ಬಂದಿತು.

ಅಹೋ! ಇದು ವೇದೇಗೌಡರು ಧರಣಿ ಕುಳಿತ ಜಾಗವಲ್ಲವೆ? ಅಹೋ! ಇದು ಜೋಕುಮಾರಸ್ವಾಮಿ ಹಾಗು ವೇರಣ್ಣನವರ ಕಾಲಿನ ಧೂಳಿ ಬಿದ್ದ ಜಾಗವಲ್ಲವೆ? ಅಹೋ! ಇಲ್ಲಿಯೇ ಅಲ್ಲವೆ ಸಿದ್ದಮಾರಯ್ಯ ಹಾಗು ಪೇಶದಾಂಡೆಯವರು ಕುಣಿಯುತ್ತ, ತಮಟೆ ಬಾರಿಸುತ್ತ ವಾದಯಾತ್ರೆ ಮಾಡಿದ್ದು! ಅಹೋ! ಚಡ್ಯೂರಪ್ಪನವರು ಇಲ್ಲಿಯೇ ಅಲ್ಲವೆ ಡಿನೋಟಿಫಾಯ್ ಮಾಡಿದ್ದು!

ಕರ್ಣಪಿಶಾಚಿಯ ಕಣ್ಣೀರು ಕೃಷ್ಣೆಯ ಪ್ರವಾಹದಂತೆ ಹರಿಯಿತು. ಭಾವಾವಿಷ್ಟವಾದ ಕರ್ಣಪಿಶಾಚಿ ನೈಸ್ ಕಾ‍^ರಿಡಾ^ರ್‍‍ದ ಮಣ್ಣನ್ನು ನೆತ್ತಿಯ ಮೇಲಿಟ್ಟುಕೊಳ್ಳಲು ಬಾಗಿತು. ಥೂ! ಇದೇನು ಹೊಲಸು ವಾಸನೆ ಬರ್ತಾ ಇದೆಯಲ್ಲ ಈ ಮಣ್ಣಿಗೆ ಎಂದು ಮೂಗು ಮುಚ್ಚಿಕೊಂಡಿತು. ಮತ್ತೊಮ್ಮೆ ಬಾಗಿ ಮಣ್ಣು ಎತ್ತಿಕೊಳ್ಳಲು ಹೋಯಿತು. ಮತ್ತೇ ಅದೇ ಹೊಲಸು ವಾಸನೆ. ಇದು ರಾಜಕಾರಣಿಗಳ ವಾಸನೆ ಎಂದು ಕರ್ಣಪಿಶಾಚಿಗೆ ಅರ್ಥವಾಯಿತು.


ಎಷ್ಟು ತೊಳೆದರೂ ಇದು ಹೋಗದ ವಾಸನೆ ಎಂದುಕೊಂಡ ಕರ್ಣಪಿಶಾಚಿಯು ವಾಯುಮಾರ್ಗಕ್ಕೇ ಹಾರಿ, ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು!

ಸ್ವಲ್ಪ ದೂರದ ಪ್ರಯಾಣದ ನಂತರ, ಕರ್ಣಪಿಶಾಚಿಗೆ ಕಿಷ್ಕಿಂಧೆಯಂತಹ ಸಣ್ಣ ತೋಪೊಂದು ಗೋಚರಿಸಿತು. ಆ ತೋಪಿಗೊಂದು ಆವರಣ.ಅದರ ನಟ್ಟನಡುವಿನಲ್ಲಿರುವ ಆಲದ ಮರದ ಮೇಲೆ ಒಂದು ಮಂಚಿಕೆ.  ಆ ಮಂಚಿಕೆಯ ಮೇಲೆ ಗಟ್ಟಿಮುಟ್ಟಾದ ಶರೀರದ ವೃದ್ಧರೊಬ್ಬರು ಕೂತುಕೊಂಡಿದ್ದಾರೆ. ನಡುವಿಗೆ ತೊಪ್ಪಲಿನ ಅಲಂಕಾರ ಬಿಟ್ಟರೆ ಮೈಮೇಲೆ ಬೇರೆ ಅರಿವೆ ಇಲ್ಲ. ತಮ್ಮ ಎದುರಿಗೆ ಪೀಠವೊಂದನ್ನು ಇಟ್ಟುಕೊಂಡು ಗಲಗಿನಿಂದ ಏನೋ ಬರೆಯುತ್ತಿದ್ದಾರೆ. ಕರ್ಣಪಿಶಾಚಿಗೆ Tarzan ಸಿನೆಮಾ ಹಾಗು ಕಾರ್ಟೂನುಗಳ ನೆನಪಾಯಿತು. ಬಹುಶ: ಇವರೇ ವಯಸ್ಸಾದ Tarzan ಇರಬೇಕು ಎಂದುಕೊಂಡ ಕರ್ಣಪಿಶಾಚಿಯು ಕಿಷ್ಕಿಂಧೆಯ ಆವರಣದ ಹೊರಗೆ ಇಳಿಯಿತು.
ಆವರಣದ ಬಾಗಿಲಿಗೆ ಫಲಕವೊಂದನ್ನು ಹಾಕಲಾಗಿತ್ತು.



ಕೀಚಕ
೧೧೧೧ ೦೦ ೧೧೧ ೦೦


ಆವರಣದ ಒಳಭಾಗದಲ್ಲಿ ಸಣ್ಣದೊಂದು ಗಿಡ. ಅದರ ಸುತ್ತಲೂ ಕಟ್ಟೆ. ಕಟ್ಟೆಯ ಮೇಲೆ ಓರ್ವ ತರುಣ. ಆತ ಮಾತ್ರ ಆಧುನಿಕ ನಾಗರಿಕನಂತೆ ಸೂಟು ಬೂಟು ಹಾಕಿಕೊಂಡಿದ್ದಾನೆ. ಕರ್ಣಪಿಶಾಚಿಯನ್ನು ಕಂಡೊಡನೆ ಆತ ಎದ್ದು ಬಂದು, “Welcome, most welcome! ಎಂದು ಇಂಗ್ಲೀಶಿನಲ್ಲಿ ಸ್ವಾಗತಿಸಿದ. ಕರ್ಣಪಿಶಾಚಿಗೆ ಭಯಂಕರ ಆಶ್ಚರ್ಯ.
ನೀವಾರು? ಮಹಾಭಾರತದ ಕೀಚಕ ಮಹಾಶಯರು ಇಲ್ಯಾಕೆ ಇದ್ದಾರೆ? ಎಂದು ತೊದಲಿತು.

ಆಧುನಿಕ ವೇಷದ ತರುಣನು ಮುಗಳ್ನಕ್ಕು ಹೇಳಿದ : ನಾನು ಇಲ್ಲಿಯ ಕಾವಲುಗಾರ cum ಭಾಷಾಂತರಕಾರ. ಇಲ್ಲಿ ವಾಸ ಮಾಡುತ್ತಿರುವವರು ಮಹಾಭಾರತದ ಕೀಚಕರಲ್ಲ. ಕೀಚಕ ಎನ್ನುವದು ಅವರ ಸಂಕೇತ ನಾಮ. ಕೆಳಗೆ ಬರೆದಿರುವ ಅಂಕಿಗಳು ಕಪಿಲಿಪಿಯಲ್ಲಿವೆ. ಅದು ಅತ್ಯಾಧುನಿಕ ಕನ್ನಡ ಲಿಪಿ. ಅದರರ್ಥ: ‘ಪರವಾನಿಗೆ ಇಲ್ಲದೆ ಪ್ರವೇಶ ಇಲ್ಲ.’ ಇರಲಿ, ಒಳಗೆ ಬನ್ನಿ. ನಿಮ್ಮನ್ನು ಕೀಚಕರಿಗೆ ಭೆಟ್ಟಿ ಮಾಡಿಸುವೆ.

ಕ.ಪಿ.      : ನೀವು ವಿದೇಶಿ ಪ್ರವಾಸಿಗಳಿಗಾಗಿ ಕನ್ನಡದಿಂದ ಇಂಗ್ಲೀಶಿಗೆ ಭಾಷಾಂತರ ಮಾಡುತ್ತೀರಾ?
ತರುಣ   : ಇಲ್ಲ. ಕೀಚಕರು ಬಳಸುವ ಶುದ್ಧ ಕಪಿಕನ್ನಡವನ್ನು ನಿಮ್ಮ ವರ್ತಮಾನದ ಕನ್ನಡಕ್ಕೆ
ಅನುವಾದಿಸುತ್ತೇನೆ.
ಕ.ಪಿ.      : ಕೀಚಕರು ಏನನ್ನು ಬರೆಯುತ್ತಿದ್ದಾರೆ?
ತರುಣ   : ಅವರು ’ಲಿಪಿಸಂಹಾರ’ ಎನ್ನುವ ಶಾಸ್ತ್ರೀಯ ಗ್ರಂಥವನ್ನು ಬರೆಯುತ್ತಿದ್ದಾರೆ.
ಕ.ಪಿ.      : ಓಹೋ! ಕನ್ನಡಮ್ಮನು ಉಟ್ಟುಕೊಂಡಿರುವಂತಹ ಲಿಪಿ ಎನ್ನುವ ಪೀತಾಂಬರವನ್ನು
ಚಿಂದಿ ಚಿಂದಿ ಮಾಡುತ್ತಿರುವ ಕಾರಣದಿಂದಾಗಿ ಇವರು ‘ಕೀಚಕ’ ಎನ್ನುವ ಸಂಕೇತನಾಮವನ್ನು 
ಇಟ್ಟುಕೊಂಡಿದ್ದಾರೆಯೆ?
ತರುಣ   : ತಪ್ಪು ತಿಳಿದುಕೊಂಡಿದ್ದೀರಿ! ಕೀಚಕ ಎನ್ನುವ ಸಂಕೇತನಾಮಕ್ಕೂ ಮಹಾಭಾರತದ
ಕೀಚಕನಿಗೂ ಏನೂ ಸಂಬಂಧವಿಲ್ಲ. ನಮ್ಮ ಕುರುವನ್ನು ಭೆಟ್ಟಿಯಾದರೆ ನಿಮ್ಮ ಎಲ್ಲಾ
ಸಂದೇಹಗಳಿಗೆ ಪರಿಹಾರ ಸಿಗುವದು.
ಕ.ಪಿ.      : ಕುರು? You mean ಗುರು?
ತರುಣ   : ಹೌದು, ಗುರು! ಕನ್ನಡದ ಸರಳೀಕರಣದ ಮೇರೆಗೆ ‘ಗುರು’ ಇದು ‘ಕುರು’ ಆಗುತ್ತದೆ.
ಅತ್ಯಾಧುನಿಕ ಕನ್ನಡ ಲಿಪಿಯಲ್ಲಿ ಅಂದರೆ ಕಪಿಲಿಪಿಯಲ್ಲಿ ಅದನ್ನು ೧೧೧೧೧೧೧ ಎಂದು
ಬರೆಯುತ್ತಾರೆ.

ಅಷ್ಟರಲ್ಲಿ ಕರ್ಣಪಿಶಾಚಿ ಹಾಗು ತರುಣರು ಬೋಧಿವೃಕ್ಷವನ್ನು ತಲುಪಿದ್ದರು. ಮಂಚಿಕೆಯ ಮೇಲಿಂದಲೇ ಇವರನ್ನು ಗಮನಿಸಿದ ಕುರುಗಳು ’ಕೀಚ್, ಕೀಚ್, ಕೀಚ್’ ಎಂದು ಉಲಿದರು.

ತರುಣ   : ಕುರುಗಳು ನಿಮಗೆ ಸ್ವಾಗತ ಕೋರುತ್ತಿದ್ದಾರೆ. ಅವರಿಗೆ ‘ಕಿಚಕ್’ ಎಂದು
ವಂದನೆಗಳನ್ನು ಹೇಳಿರಿ.
ಕ.ಪಿ.      : ಕಿಚಕ್, ಕುರು, ಕಿಚಕ್!
ಕುರು     : ಕಿಚಕ್! ಕಿಚಕ್!! ಕಿಚಿ? ಕಿಚಿ?
ತರುಣ   : ನೀವು ಯಾರು? ಎಂದು ಕೇಳುತ್ತಿದ್ದಾರೆ.
ಕ.ಪಿ.      : ನಾನು ಕರ್ಣಪಿಶಾಚಿ. ನೀವು ಕೀಚಕ ಎನ್ನುವ ಸಂಕೇತನಾಮವನ್ನು ಇಟ್ಟುಕೊಂಡಿದ್ದು
ಯಾಕೆ?

ಕುರುಗಳು ಐವತ್ತು ಸಲ ‘ಕೀ’ ಎಂದು ನೂರು ಸಲ ‘ಚ’ ಎಂದು ಮತ್ತೆ ಅರುವತ್ತು ಸಲ ‘ಕೂ’ ಎಂದು ಉಲಿದರು!
ತರುಣನು ಅದನ್ನು ವರ್ತಮಾನದ ಕನ್ನಡದಲ್ಲಿ ಹೀಗೆ ಅನುವಾದಿಸಿದನು:

ಕನ್ನಡ ಭಾಷೆಯು ಬಹಳ ಸರಳವಾದ ಭಾಷೆ. ಶ್ರೀರಾಮಚಂದ್ರನು ಕಿಷ್ಕಿಂಧೆಗೆ ಬರುವ ಮೊದಲು ಇಲ್ಲಿದ್ದ ಕಪಿಗಳು ಅಂದರೆ ಕನ್ನಡಿಗರ ಪೂರ್ವಜರು ಕಪಿಕನ್ನಡ ಭಾಷೆಯನ್ನು ಬಳಸುತ್ತಿದ್ದರು. ‘ಕ’ ಹಾಗು ‘ಚ’ ಎನ್ನುವ ಎರಡೇ ಮೂಲ ಧ್ವನಿಗಳು ಕನ್ನಡದಲ್ಲಿ ಇದ್ದವು. ಇದೇ ಕನ್ನಡದ ಜಾಯಮಾನ. ಕನ್ನಡಿಗರು ತಮ್ಮ ಜಾಯಮಾನವನ್ನು ಬಿಡಬಾರದು. ಜಗತ್ತು ಎಷ್ಟೇ ಮುಂದುವರೆಯಲಿ, ಕನ್ನಡಿಗರು ಮಾತ್ರ, ತೊಪ್ಪಲನ್ನೇ ಸುತ್ತಿಕೊಂಡು, ಗಡ್ಡೆ ಗೆಣಸುಗಳನ್ನೇ ತಿನ್ನುತ್ತ, ಕೇವಲ ಎರಡೇ ಧ್ವನಿಗಳಲ್ಲಿ ತಮ್ಮ ಸಕಲ ಅಭಿವ್ಯಕ್ತಿಯನ್ನು ಮಾಡಬೇಕು. ಯಾಕೆಂದರೆ ಕಾಲಮಾನಕ್ಕಿಂತ ಜಾಯಮಾನ ಮುಖ್ಯ. ಈ ಮೂಲಧ್ವನಿಗಳನ್ನು ಸಂಕೇತಿಸುವ ಉದ್ದೇಶದಿಂದ ನಾನು ನನ್ನ ಹೆಸರನ್ನು ‘ಕೀಚಕ’ ಎಂದು ಇಟ್ಟುಕೊಂಡಿದ್ದೇನೆ. ಸಂಸ್ಕೃತದ ಸೋಂಕಿಲ್ಲದ ಕಪಿಕನ್ನಡವನ್ನು ಬಳಸುವದೇ ನನ್ನ ಧ್ಯೇಯ!

ಎಂಥಾ ಉದಾತ್ತ ವ್ಯಕ್ತಿ! ಎಂಥಾ ಕಪಿಕನ್ನಡಾಭಿಮಾನ!!
ಕರ್ಣಪಿಶಾಚಿಯು ಥಟ್ಟನೆ ನೆಗೆದು ಕುರುಗಳ ಕಾಲುಗಳನ್ನು ಪಿಡಿಯಿತು.

ಕ.ಪಿ.      : ಕುರುವೆ! ಕುರುವೆ!
(ಕರ್ಣಪಿಶಾಚಿಯ ಕಣ್ಣಿನಿಂದ ಗಳಗಳ ಕಣ್ಣೀರು.)
ಕ.ಪಿ.      : ಕುರುವೆ, ಈ ನಿಮ್ಮ ಧ್ಯೇಯಕ್ಕೆ ಪ್ರೇರಣೆ ಏನು ಎಂದು ಹೇಳುವಿರಾ?

ಕುರುಗಳು ೧೦೦ ಸಲ ಕಾ ಎಂದು ೨೦೦ ಸಲ ಕೇ ಎಂದು ೩೦೦ ಸಲ ಚಾ ಎಂದು ಧ್ವನಿ ಹೊರಡಿಸುತ್ತಾರೆ. ಕೊನೆಗೊಮ್ಮೆ
ಅನುವಾದಕನು ಕುರುಚರಿತ್ರೆಯನ್ನು ಕರ್ಣಪಿಶಾಚಿಯ ಎದುರಿಗೆ ಬಿಚ್ಚಿಡುತ್ತಾನೆ.

ಇದು ಬಹಳ ಹಳೆಯ ಕತೆ. ನಾನಿನ್ನೂ ಚಿಕ್ಕ ಬ್ರಾಹ್ಮಣ ವಟು. ನಮ್ಮ ಮನೆಯಲ್ಲಿಯೇ ನಮ್ಮ ತಂದೆ ಸಂಸ್ಕೃತವನ್ನೂ ಕಲಿಸುತ್ತಿದ್ದರು. ನಮ್ಮ ಸಂಸ್ಕೃತ ಗ್ರಂಥದಲ್ಲಿ ‘ಕಚದೇವಯಾನಿ’ ಎನ್ನುವ ಪಾಠ ಒಂದಿತ್ತು. ಅದನ್ನು ನಾನು ತಪ್ಪಾಗಿ ‘ಕುಚದೇವಯಾನಿ’ ಎಂದು ಓದಿದೆ. ನಮ್ಮ ತಂದೆ ಕೆಂಡಾಮಂಡಲವಾದರು. ‘ಕಚದೇವಯಾನಿ ಎಂದರೆ ಏನು ಗೊತ್ತೇನಯ್ಯಾ?’ ಎಂದು ಕೇಳಿದರು. ‘ಕಚ ಎಂದರೆ ಕೂದಲು, ಕಚದೇವಯಾನಿ ಎಂದರೆ ದೇವಯಾನಿಯ ಕೂದಲು’ ಎಂದೆ. ತಂದೆಯವರ ಕೋಪ ನೆತ್ತಿಗೇರಿತು. ಆದರೂ ಸಹ ತಮ್ಮನ್ನು ನಿಯಂತ್ರಿಸಿಕೊಂಡು, ‘ಹೌದಾ! ಕುಚದೇವಯಾನಿ ಎಂದರೆ ಏನು?’ ಎಂದು ಕೇಳಿದರು. ‘ಗೊತ್ತಿಲ್ಲ’ ಎಂದೆ. ತಂದೆಯವರು ನನ್ನನ್ನು ನಂಬಲಿಲ್ಲ. ಒಂದು ಕುಚಕ್ಕೆ ಒಂದುನೂರರಂತೆ ನನಗೆ ಎರಡುನೂರು ಛಡಿ ಏಟುಗಳನ್ನು ಕೊಟ್ಟರು. ಆ ದಿನದಿಂದಲೇ ನಾನು ಸಂಸ್ಕೃತದ್ವೇಷಿಯಾದೆ. ಸಂಸ್ಕೃತ ವ್ಯಾಕರಣದ ಸಂಕಲನಕಾರನಾದ ಪಾಣಿನಿಗೆ ಪರ್ಯಾಯವಾಗಿ ನಾನು ‘ಕಪಿಕನ್ನಡ ವ್ಯಾಕರಣ’ವನ್ನು ರಚಿಸಿ, ಅವನಷ್ಟೇ ಪ್ರಸಿದ್ಧನಾಗಬೇಕೆನ್ನುವ ರೊಚ್ಚು ಮನದಲ್ಲಿ ಮೂಡಿತು. ಅದಕ್ಕಾಗಿ ಒಂದು ಯೋಜನೆಯನ್ನೂ ರೂಪಿಸಿಕೊಂಡೆ.

ಕ.ಪಿ.      : ಅದು ಎಂತಹ ಯೋಜನೆ?

ಕುರು     : ಕಾಚ, ಕಾಚ, ಕಚಕ್, ಕಚಕ್!

ತರುಣ   : ನೋಡಿದಿರಾ? ವರ್ತಮಾನ ಕನ್ನಡದ ನೂರು ಪದಗಳಲ್ಲಿ ಹೇಳಬಹುದಾದದ್ದನ್ನು
ನಮ್ಮ ಕುರುಗಳು ನಾಲ್ಕೇ ನಾಲ್ಕು ಕಪಿಕನ್ನಡ ಪದಗಳಲ್ಲಿ ಹೇಳಿದರು. ಅವರ ಹೇಳಿಕೆ
ಹೀಗಿದೆ: ‘ನೀವು ಕಪಿಗಳು. ನಿಮ್ಮ ಮೇಲೆ ಸಂಸ್ಕೃತವನ್ನು ಅನ್ಯಾಯದಿಂದ
ಹೇರಲಾಗುತ್ತದೆ. ಈ ಕಾರಣದಿಂದಲೇ ನೀವು ಹಿಂದುಳಿದಿದ್ದೀರಿ’ ಎಂದು ಕನ್ನಡಿಗರಿಗೆ
ಮನದಟ್ಟು ಮಾಡಿದರೆ ಸಾಕು, ಕನ್ನಡಿಗರು ರೊಚ್ಚಿಗೇಳುತ್ತಾರೆ.
ಇದೇ ರೀತಿಯಲ್ಲಿ ಕನ್ನಡ ಲಿಪಿಯು ಸಂಸ್ಕೃತ ಲಿಪಿಯ ಅನುಕರಣ, ಕನ್ನಡ
ವ್ಯಾಕರಣವು ಸಂಸ್ಕೃತ ವ್ಯಾಕರಣದ ಅನುಕರಣ ಎನ್ನುವದನ್ನೂ ಸಹ ಕಪಿಗಳಿಗೆ
ತಿಳಿಸಿ ಹೇಳಬಹುದು.

ಕ.ಪಿ.      : ಇದೆಲ್ಲ ಸರಿ. ಆದರೆ ಕುರುಗಳು ಕಚ, ಕುಚ ಬಿಟ್ಟು ಬೇರೆ ಧ್ವನಿಗಳಿಗೆ ಏಕೆ
ಹೋಗುವದಿಲ್ಲ?

ಕುರು     :(ಕಾಚ ಎಂದು ಹನ್ನೆರಡು ಸಲ, ಕೋಚ ಎಂದು ಇಪ್ಪತ್ತೊಂದು ಸಲ ಹೇಳುತ್ತಾರೆ.)

ತರುಣ   : ಸಾವಿರಾರು ವರ್ಷಗಳಷ್ಟು ಹಿಂದಿನ ಕಾಲದಲ್ಲಿ ಅಂದರೆ ಕನ್ನಡಿಗರು ಕಪಿಗಳಾಗಿದ್ದ
ಕಾಲದಲ್ಲಿ,ಅವರಿಗೆ ‘ಕ’ ಮತ್ತು ‘ಚ’ ಇವೆರಡೆನ್ನು ಬಿಟ್ಟು ಬೇರೆ ಧ್ವನಿಗಳ ಪರಿಚಯ
ಇರಲಿಲ್ಲ. ಆರ್ಯರ ಆಗಮನದ ನಂತರವೇ ಕಪಿಗಳು ಅಂದರೆ ಕನ್ನಡಿಗರು ಇತರ
ಧ್ವನಿಗಳನ್ನು ಕಲಿತರು. ಕನ್ನಡದ ಮೂಲಪದಗಳೆಲ್ಲ ‘ಕ’ದಿಂದಲೇ ಪ್ರಾರಂಭವಾಗುತ್ತವೆ.
ಉದಾಹರಣೆಗೆ, ಕತ್ತೆ! ಆದುದರಿಂದ ಕನ್ನಡಿಗರ ಜಾಯಮಾನವನ್ನು ಉಳಿಸಿಕೊಳ್ಳುವ
ಸಲುವಾಗಿ ಕುರುಗಳು ಕನ್ನಡ ಭಾಷೆಯನ್ನು ಪೂರ್ತಾ ಕ ಹಾಗು ಚ ಪದಗಳಲ್ಲಿ ಮಾತ್ರ
ಉಲಿಯುತ್ತಾರೆ.

ಕ.ಪಿ.      : ಆದರೆ ನಮಗೆ ತಿಳಿಯದಂತೆಯೇ ಅನೇಕ ಸಂಸ್ಕೃತ ಪದಗಳ ತದ್ಭವಗಳನ್ನು ನಾವು
ಕನ್ನಡದಲ್ಲಿ ಬಳಸುತ್ತೇವಲ್ಲ. ಅವನ್ನು ಬಿಡಲು ಸಾಧ್ಯವಿಲ್ಲದಂತಾಗಿದೆ.
ಉದಾಹರಣೆಗೆ      ‘ಬೇಗನೆ ಬಾ’ ಎಂದು ಹೇಳಿದರೆ, ಅದು ‘ವೇಗ’ವಾಗಿ ಎನ್ನುವದರ
ತದ್ಭವ. ‘ಲಗೂನೆ ಬಾ’ ಎಂದರೆ ಅದು ‘ಲಘು’ವಾಗಿ ಎನ್ನುವದರ ತದ್ಭವ. 
ಜಲ್ದಿ’ ಅಥವಾ ‘ಜೋರ್’ ಇವು ಹಿಂದಿ ಪದಗಳು. ಕನ್ನಡದಲ್ಲಿ ಇದಕ್ಕೆ ಕನ್ನಡ ಪದವೇ
ಇಲ್ಲವೆ?

ತರುಣ   : ನಮ್ಮ ಕುರುಗಳು ಅದರದೇ ಸಂಶೋಧನೆಯನ್ನು ನಡೆಸಿದ್ದಾರೆ. ಈ ಎಲ್ಲಾ
ಪದಗಳೂ ‘ಕ’ ಧ್ವನಿಯಿಂದಲೇ ಪ್ರಾರಂಭವಾಗುವದು ನಮ್ಮ ಕುರುಗಳ 
‘ಕಪಿಕನ್ನಡ’ದ ವೈಶಿಷ್ಟ್ಯ!

ಕ.ಪಿ.      : ವಾರೆವ್ವಾ! ಕ್ಯಾ ಬಾತ್ ಹೈ!

ತರುಣ   : ಆ ಉದ್ದೇಶದಿಂದಲೇ ನಮ್ಮ ಕುರುಗಳು ‘ಲಿಪಿಸಂಹಾರ’ ಎನ್ನುವ ಗ್ರಂಥರಚನೆಯಲ್ಲಿ
ತೊಡಗಿದ್ದಾರೆ. ನೀವು ಹೊರಗಿನ ಫಲಕದಲ್ಲಿ ನೋಡಿದಿರಲ್ಲ? ಕೇವಲ ‘೦’ ಹಾಗು
‘೧’ ಅಂಕಿಗಳನ್ನು ಬಳಸಿ ‘ಪರವಾನಗಿ ಇಲ್ಲದೆ ಪ್ರವೇಶ ಇಲ್ಲ’ ಎಂದು ಬರೆದದ್ದನ್ನು?

ಕ.ಪಿ.      : ಇದರ ಉದ್ದೇಶವೇನು?

ಕುರು     : (ದುಃಖದ ಧ್ವನಿಯಲ್ಲಿ) ಕಚಕಚಾ(ಹತ್ತು ಸಲ)! ಕುಚಕುಚಾ(ಹದಿನೈದು ಸಲ)!
ಕೂಕೂಕೂ(ಎಂಟು ಸಲ)!

ತರುಣ   : ಇದರ ಹಿಂದೆ ನಮ್ಮ ಕುರುಗಳ ಮತ್ತೊಂದು ಕರುಣಾಜನಕ ಕತೆ ಇದೆ. ಅವರು ಕನ್ನಡ
ಸಾಲೆಯಲ್ಲಿ ಕಲಿಯುತ್ತಿದ್ದಾಗ, ಅಂಕಗಣಿತದಲ್ಲಿ ಯಾವಾಗಲೂ ನಪಾಸಾಗುತ್ತಿದ್ದರು.
ಒಂದರಿಂದ ಹತ್ತರವರೆಗಿನ ಅಂಕಿಗಳನ್ನು ಎಣಿಸಲೂ ಸಹ ಅವರಿಗೆ
ಸಾಧ್ಯವಾಗುತ್ತಿರಲಿಲ್ಲ! ಇನ್ನು ಕೋಟಿ, ಅಬ್ಜ, ಪರಾರ್ಧ ಇವುಗಳನ್ನು
ತಿಳಿದುಕೊಳ್ಳುವದೂ ಸಹ ಅಸಾಧ್ಯ!

ಇವೆಲ್ಲ ಆರ್ಯರ ಕುತಂತ್ರ. ಕಪಿಗಳನ್ನು ಹಿಂದುಳಿದವರನ್ನಾಗಿ ಇಡಲೆಂದೇ ಇವರು
ಗಣಿತವನ್ನು ಇಷ್ಟೆಲ್ಲ ಸಂಕೀರ್ಣ ಮಾಡಿದ್ದಾರೆ ಎನ್ನುವದು ನಮ್ಮ ಕುರುಗಳಿಗೆ
ಮನದಟ್ಟಾಯಿತು. ಕಂಪ್ಯೂಟರಿನಲ್ಲಿಯೂ ಸಹ ‘೦’ ಮತ್ತು ‘೧’ ಅಂಕಿಗಳನ್ನು ಮಾತ್ರ
ಬಳಸುತ್ತಾರಲ್ಲವೆ? ಆದುದರಿಂದ ಕೇವಲ ಸೊನ್ನೆ ಮತ್ತು ಒಂದು ಅಂಕಿಗಳು ಇರುವ,
‘ಕಪಿಲಿಪಿ’ ಎನ್ನುವ ಹೊಸ ಲಿಪಿಯೊಂದನ್ನು ನಮ್ಮ ಕುರುಗಳು ಸಂಶೋಧಿಸಿದರು.
ಇದರಿಂದಾಗಿ ಗಣಿತದ ಸರಳೀಕರಣವೂ ಆಯಿತು. ಜೊತೆಗೆ ಬ್ರಾಹ್ಮೀಜನ್ಯ ಲಿಪಿಗಳ
ಸಂಹಾರವೂ ಆಯಿತು! ಇದೇ ‘ಲಿಪಿಸಂಹಾರ ಅರ್ಥಾತ್ ಕಪಿಗಳಿಗೊಂದು ಹೊಸಲಿಪಿ!’

ಕ.ಪಿ.      : ನನಗೊಂದು ಸಂಶಯವಿದೆ. ಜಗತ್ತು ಮುಂದುವರೆಯುತ್ತಿರುವಾಗ ಕನ್ನಡಿಗರು
ಹಿಂದುಳಿಯಬೇಕೆ? ಭಾಷೆ, ಲಿಪಿ, ತಂತ್ರಜ್ಞಾನ ಇವು ಎಷ್ಟೆಲ್ಲ ಸಂಕೀರ್ಣವಾಗುತ್ತಿರುವಾಗ,
ನಾವು ಕನ್ನಡದ ಜಾಯಮಾನ ಎನ್ನುವ ಮೋಸದ ಪದವನ್ನು ಬಳಸಿ ಕನ್ನಡಿಗರ ಕಣ್ಣಿಗೆ
ಮಣ್ಣೆರಚುವದು ಸರಿಯೆ? ನೀವು ಹಿಂದುಳಿದವರು ಎಂದು ಕರೆಯುತ್ತಿರುವ ಜನರು,
ಜ್ಞಾನಸಂಪಾದನೆಯ ಮೂಲಕ ದೇಶ, ವಿದೇಶಗಳಲ್ಲಿ ಎಷ್ಟೆಲ್ಲ ಪ್ರಸಿದ್ಧರಾಗಿದ್ದಾರೆ!
ಅವರಿಗೆ ವರ್ತಮಾನ ಕನ್ನಡ ಅರ್ಥವಾಗಲಾರದೆ? ಅದನ್ನು ಕಪಿಕನ್ನಡ ಮಾಡುವ
ಅವಶ್ಯಕತೆ ಇದೆಯೆ? ಇದೆಲ್ಲ ನಿಮ್ಮ ಕೀರ್ತಿಕಾಮನೆಯ ಸ್ವಾರ್ಥವಲ್ಲವೆ?

ಕುರು     : (ಸಿಟ್ಟಿನಿಂದ) ಕ್ಕೆಕ್ಕೆಕ್ಕೆ! ಕ್ಕೊಕ್ಕೊಕ್ಕೊ! ಕ್ಕುಕ್ಕುಕ್ಕೂ!

ಕ.ಪಿ.      : (ತರುಣನಿಗೆ) ಕುರುಗಳು ಏನು ಹೇಳಿದರು?
ತರುಣ   : Get out ಎಂದು ಹೇಳಿದರು!

ಕ.ಪಿ.      : ಧನ್ಯವಾದಗಳು, Good bye!


             ಕರ್ಣಪಿಶಾಚಿಯು ಆಕಾಶಕ್ಕೆ ನೆಗೆಯಿತು. 
             ಧರಣಿಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ಣಾಟದೇಶವು ಅದರ ಕೆಳಗೆ ಮೈ ಚಾಚಿಕೊಂಡು ಬಿದ್ದಿತ್ತು. 
             ಬೋಳು ಬೋಳಾದ ಗಣಿಗುಡ್ಡಗಳು, ನೇಣು ಹಾಕಿಕೊಳ್ಳುತ್ತಿರುವ ರೈತರು, ಬಕಾಸುರರಂತಹ ರಾಜಕಾರಣಿಗಳು, ಸ್ವಾರ್ಥಸಾಧನೆಯ ಸಂಶೋಧಕರು, ಇವರೆಲ್ಲರ ಸುತ್ತಲೂ ಕುಣಿಯುವ ಹುಚ್ಚು ಕಪಿಗಳು!

             ಕರ್ಣಪಿಶಾಚಿಗೆ ಆಶ್ಚರ್ಯವಾಯಿತು. ಇಷ್ಟೆಲ್ಲಾ ಇದ್ದರೂ, ತನಗೆ ಸುಳ್ಳು ಹೇಳುವ ಒಬ್ಬನೂ ಸಿಗಲಿಲ್ಲವಲ್ಲ! ಥಟ್ಟನೆ ಅದಕ್ಕೆ ಕಟು ಸತ್ಯವು ಮಿಂಚಿನಂತೆ ಹೊಳೆಯಿತು. ಸುಳ್ಳು ಯಾರು ಹೇಳುತ್ತಾರೆ? ಸತ್ಯ ಹೇಳಿದರೆ ಮರ್ಯಾದೆ ಹೋಗುವದೆಂದು ಹೆದರಿಕೊಳ್ಳುವವರು ಸುಳ್ಳು ಹೇಳುತ್ತಾರೆ! ನಾಚಿಕೆ ಇಲ್ಲದವರು ಸತ್ಯ ಹೇಳಲು ಯಾಕೆ ಹಿಂಜರಿಯಬೇಕು?!

            ಸ್ಮಶಾನದ ಪಕ್ಕದ ಮರದ ಕೆಳಗೆ ಮೊಂಡುಗೈ, ಮೊಂಡುಗಾಲುಗಳ ಮುದುಕಿಯೊಬ್ಬಳು ಕರ್ಣಪಿಶಾಚಿಯ ಕಣ್ಣಿಗೆ ಬಿದ್ದಳು.

ದೂರದಿಂದ ಹಾಡೊಂದು ತೇಲಿ ಬರುತ್ತಿತ್ತು:
 “ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
   ನೀಡುವೆನು ರಸಿಕ ನಿನಗೆ.
   ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ
   ಆ ಸವಿಯ ಹಣಿಸು ನನಗೆ!

ಕರ್ಣಪಿಶಾಚಿಯ ಕಣ್ಣುಗಳಿಂದ ಬಿದ್ದ ಎರಡು ಹನಿಗಳು ಆ ಮುದುಕಿಯ ಮೊಂಡುಗಾಲುಗಳನ್ನು ತೊಳೆದವು.
ಕರ್ಣಪಿಶಾಚಿಯು ಮೋಡಗಳ ಆಚೆ ಮರೆಯಾಯಿತು.

Sunday, March 27, 2011

ಕರ್ಣಪಿಶಾಚಿಯ ಸಂದರ್ಶನಗಳು...೩


ಕನ್ನಡಮ್ಮ : ಬಾಳಾ, ನೀ ಈಗೇನು ನನ್ನ ರೂಪಾ ನೋಡತಿದ್ದೀಯಲ್ಲಾ, ಇದು ನಿನ್ನ
               ಸಲುವಾಗಿ ನಾ ತಾಳಿದ ಮಾನವ ರೂಪ. ನನ್ನ ಪರಮದಿವ್ಯರೂಪವನ್ನ
               ನಿನಗ ಮೊದಲ ತೋರಸ್ತೇನಿ. ಅದು ಸೂಕ್ಷ್ಮರೂಪ. ಆ ಸೂಕ್ಷ್ಮರೂಪದೊಳಗ
               ನನ್ನ ಎರಡು ಶರೀರ ಅವ. ಒಂದು ನಾದಮಯ ಶರೀರ. ಮತ್ತೊಂದು ಲಿಪಿಶರೀರ.
                 
ಕ.ಪಿ.        :   ಅಮ್ಮಾ, ಅಮ್ಮಾ! ನೀರಿಳಿಯದ ಗಂಟಲೊಳ್ ಕಡಬನ್ನು  ತುರುಕದಿರು!

ಕನ್ನಡಮ್ಮ : ಕರ್ಣಪಿಶಾಚಿ, ನನಗ ಖಾತ್ರಿ ಆತು ನೋಡು: ‘ನೀ ಖರೇನ ಕನ್ನಡಿಗ  ಇದ್ದೀ!’
                  ಇರಲಿ, ಇಗೊ ನನ್ನ ನಾದಶರೀರವನ್ನು ಕೇಳು.
                 
                  (ಕನ್ನಡಮ್ಮನ ದಿವ್ಯ ನಾದಶರೀರವನ್ನು ಕರ್ಣಪಿಶಾಚಿಯು ಕೇಳುವದು.)

ಕ.ಪಿ.         :  ಅಹಾ! ಎಂತಹ ಸುಮಧುರ ನಾದ! ವರಕವಿ ಅಂಬಿಕಾತನಯದತ್ತರು ಅನುಭವಿಸಿದ
                   ‘ಸಹಸ್ರತಂತ್ರೀ ನಿಃಸ್ವನ’ದಂತೆ ಈ ನಾದ ಕೇಳಸ್ತದಲ್ಲ! ಆನಂದಕಂದರೂ ಅದನ್ನs
                  ಹೇಳ್ಯಾರಲ್ಲಾ:
                                      ಎನಿತು ಇನಿದು ಈ ಕನ್ನಡ ನುಡಿಯು
                                       ಮನವನು ತಣಿಸುವ ಮೋಹನ ಸುಧೆಯು.

ಕನ್ನಡಮ್ಮ : ಹಾಂ, ಈಗ ಕೇಳು ನನ್ನ ಸದ್ಯದ ನಾದಶರೀರವನ್ನು.

ಕ.ಪಿ:        :   (ಆಘಾತವಾದವನಂತೆ ಕಿವಿ ಮುಚ್ಚಿಕೊಳ್ಳುತ್ತ), ಸಾಕು ಮಾಡಮ್ಮ! ಈ ಕರ್ಕಶ
                  ಅಪಲಾಪವನ್ನು ನಾ ಕೇಳಲಾರೆ. ಇದು ಕಾಗೆ ಹಾಗು ಗೂಗೆಗಳ ಜಗಳದಂತೆ
                  ಕೇಳುತ್ತಿದೆಯಲ್ಲಮ್ಮ!

ಕನ್ನಡಮ್ಮ : ಮಗೂ, ಕರ್ಣಪಿಶಾಚಿ, ಇದು ಕಾಗೆ,ಗೂಗೆಗಳ ಕಿರುಚಾಟವಲ್ಲ!
                  ಕನ್ನಡ ಎಫ್. ಎಮ್. ರೇಡಿಯೋದ ‘ಮಿರ್ಚಮಸಾಲಾ’ ಕಾರ್ಯಕ್ರಮ ಹಾಗು
                  ಕೆಲವೊಂದು ಕನ್ನಡ ಟೀವಿ ವಾಹಿನಿಗಳ `ಲಂಗರು’ಗಳ ವಾಗ್ಝರಿ! ಇವರೆಲ್ಲಾ ಕೂಡಿ
                  ನನ್ನ ಕಂಠದೊಳಗೆ ಗೂಟಗಳನ್ನು ಬಡಿಯುತ್ತಿದ್ದಾರಪ್ಪಾ! ಆಕಾಶವಾಣಿಯಲ್ಲಿ
                  ಬಿತ್ತರಿಸುತ್ತಿರುವ ಈ ಸುದ್ದಿಯನ್ನಷ್ಟು ಕೇಳು, ಮಗು!
                 
                  (ಆಕಾಶವಾಣಿಯಲ್ಲಿ: ಖನ್ನಡ ಖಂಟೀರವರಿಗೆ ಆಸನದಲ್ಲಿ ಹಾದರದ ಸ್ವಾಗತ!)

ಕ.ಪಿ:        :   ಇದೇನಮ್ಮಾ, ತಾಯಿ! ನನಗೆ ಸ್ವಲ್ಪವೂ ಅರ್ಥವಾಗದಲ್ಲ!

ಕನ್ನಡಮ್ಮ : ಪೆದ್ದ ನೀನು. ನೀನು ಕೇಳಿದ ಸುದ್ದಿ ಹೀಗಿದೆ: ಕನ್ನಡ ಕಂಠೀರವರಿಗೆ ಹಾಸನದಲ್ಲಿ
                  ಆದರದ ಸ್ವಾಗತ.

ಕ.ಪಿ.        : ಈ ತರಹ ಸರಿಯಾಗಿ ಉಚ್ಚರಿಸಲಿಕ್ಕೆ ಇವರ ಗಂಟೇನು ಹೋಗುತ್ತದಮ್ಮಾ?

ಕನ್ನಡಮ್ಮ : ಹೊಸದೊಂದು ಅಲೆ ಎದ್ದಿದೆಯಪ್ಪಾ. ಆಡುನುಡಿಗೆ ಸಂಸ್ಕರಣೆ ಬೇಡ. ನಮ್ಮ
                  ಬಾಯಿಗೆ ಬಂದಂತೆ ನಾವು ಉಚ್ಚರಿಸುವದು ಸಹಜ ಮಾರ್ಗ!  

ಕ.ಪಿ.        : (ಸಿಟ್ಟಿನಿಂದ) ಥತ್ತೇರಿ! ಸಹಜ ಮಾರ್ಗವನ್ನು ಅನುಸರಿಸುವ ಇವರು ಬಟ್ಟೆಗಳನ್ನು
                  ಏಕೆ ಹಾಕಿಕೊಳ್ಳುತ್ತಾರೆ? ಬತ್ತಲೆಯಾಗಿರುವದೇ ಸಹಜಮಾರ್ಗವಲ್ಲವೆ?
                  ಇವರಿಗೆ ಬೇಯಿಸಿದ ಆಹಾರ ಏಕೆ ಬೇಕು? ಹಸಿ ಮಾಂಸ ತಿನ್ನುವದೆ
                  ಸಹಜಮಾರ್ಗವಲ್ಲವೆ?

ಕನ್ನಡಮ್ಮ  : ಇದೆಲ್ಲದರ ಹಿಂದೆ ರಾಜಕಾರಣ ಇದೆ, ಕರ್ಣಪಿಶಾಚಿ!

ಕ.ಪಿ.         : ಸಾಕು,ಸಾಕು! ನಾ ಕೇಳಲಾರೆ ಇದನ್ನೆಲ್ಲ!

ಕನ್ನಡಮ್ಮ  : ಸರಿ, ಬಿಡು. ಇನ್ನು ನನ್ನ ಲಿಪಿ-ಶರೀರವನ್ನಷ್ಟು ನೋಡು.
              
                  (ಕರ್ಣಪಿಶಾಚಿಯು ಆ ದಿವ್ಯ ಲಿಪಿಶರೀರವನ್ನು ನೋಡಿ ಬೆರಗಾಗುತ್ತಾನೆ.
                  ಸಾವಕಾಶವಾಗಿ ದಿವ್ಯಶರೀರವು ಬದಲಾಗುತ್ತ ರಕ್ತಸಿಕ್ತ ವಿಕೃತ
                  ಶರೀರವಾಗುತ್ತದೆ.)
                 
ಕ.ಪಿ.          : ಅಮ್ಮಾ, ನೋಡಲಾರೆ. ನಿಲ್ಲಿಸು ಈ ಘೋರರೂಪವನ್ನು!
                   
                  (ಕನ್ನಡಮ್ಮನು ಮತ್ತೆ ಮಾನವರೂಪವನ್ನು ತಾಳುತ್ತಾಳೆ.)

ಕನ್ನಡಮ್ಮ  : ಮಗೂ, ನನ್ನ ದಿವ್ಯ ಲಿಪಿ ಶರೀರವನ್ನು ನೋಡಿದೆಯಲ್ಲ? ಅಂತಹ ಶರೀರವನ್ನು
                  ಪಡೆಯಲು ನಾನು ಸಾವಿರಾರು ವರ್ಷಗಳ ತಪಸ್ಸು ಮಾಡಿದ್ದೆನಪ್ಪಾ.

ಕ.ಪಿ.         : ಏನಮ್ಮಾ ನೀ ಹೇಳುವದು? ಚಿಕ್ಕ ಮಕ್ಕಳು ಒಂದು ತಿಂಗಳಿನಲ್ಲಿ ಕಲಿಯುವ
                  ಅಕ್ಷರಮಾಲೆಯನ್ನು ರೂಪಿಲು ನೀನು ಸಾವಿರಾರು ವರ್ಷಗಳ ತಪಸ್ಸು
                  ಮಾಡಿದೆಯಾ? ನಿನ್ನಂತಹ ದಡ್ಡಿಯನ್ನು ನಾನೆಲ್ಲೂ ಕಂಡಿಲ್ಲ, ಬಿಡು!
                 
ಕನ್ನಡಮ್ಮ  : ಹುಚ್ಚಪ್ಪ! ಅಕ್ಷರಗಳು ಅಂದರೆ ಏನು? ಅವು ಧ್ವನಿಸಂಕೇತಗಳು ಎನ್ನುವದನ್ನು
                  ಮೊದಲು ತಿಳಿದುಕೊ. ಈವತ್ತು ಕನ್ನಡಿಗರು ಉಚ್ಚರಿಸುವ ಎಲ್ಲಾ ಧ್ವನಿಗಳು
                  ಒಂದೇ ದಿನದಲ್ಲಿ ಮೂಡಲಿಲ್ಲ. ಕನ್ನಡಿಗರು ಕಾಡು ಸ್ಥಿತಿಯಲ್ಲಿದ್ದಾಗ
                  ಅವರಿಗೆ ಬೇಕಾದದ್ದು ಬಹುಶ: ಒಂದೇ ಧ್ವನಿ.......... ಪ್ರಣಯದ ಕರೆ!
                  ನಾಗರಿಕತೆ ಬೆಳೆದಂತೆ ನನ್ನ ಮಕ್ಕಳು ಅವಶ್ಯಕತೆಗಳಿಗೆ ಅನುಸಾರವಾಗಿ
                  ಹೆಚ್ಚೆಚ್ಚು ಧ್ವನಿಗಳನ್ನು ಕಲಿತರು.
                   
ಕ.ಪಿ.          : ಗೊತ್ತಾಯ್ತು ಬಿಡಮ್ಮ. ಕೋಪ ಬಂದಾಗ ‘ಗುರ್’ ಎನ್ನುತ್ತಿದ್ದರು.
                  ಹಸಿವಾದಾಗ  ‘ಹೋ’ ಎನ್ನುತ್ತಿದ್ದರು!
                 
ಕನ್ನಡಮ್ಮ    : ಗುಂಪಿನೊಳಗಿನ ಸಂಪರ್ಕ್ಕಾಗಿ ನನ್ನ ಮಕ್ಕಳಿಗೆ ಕೆಲವೇ ಧ್ವನಿಗಳು
                  ಸಾಕಾಗುತ್ತಿದ್ದವು. ಆದರೆ ಬೇರೆ ಬೇರೆ ಜನಾಂಗಗಳ ಸಂಪರ್ಕ ಬಂದಂತೆ,
                  ಕೊಡುಕೊಳ್ಳುವಿಕೆ ಪ್ರಾರಂಭವಾದಂತೆ, ಸಂಭಾಷಣೆಗಳು ಹುಟ್ಟಿದವು.
ಮುಖ್ಯವಾಗಿ ಹಿಮಾಲಯದ ತಪ್ಪಲಿನಲ್ಲಿದ್ದ ನನ್ನ ಮಕ್ಕಳಿಗೆ ಅಂದರೆ
                  ಕನ್ನಡಿಗರಿಗೆ, ಆರ್ಯ ಎನ್ನುವ ಹೊಸದೊಂದು ಜನಾಂಗದ ಸಂಪರ್ಕ ಬಂದಿತು.
                  ಅವರಾಡುವ ಮಾತು ಪ್ರಾಕೃತ. ನನ್ನ ಅಂದರೆ ಕನ್ನಡದ ಅನೇಕ ಪದಗಳನ್ನು
                  ಆರ್ಯರು ತೆಗೆದುಕೊಂಡರು. ಅವರ ಅನೇಕ ಪದಗಳನ್ನು ನನ್ನ ಮಕ್ಕಳು
                  ಪಡೆದರು.

ಕ.ಪಿ.          : ಆರ್ಯರ ಮಾತು ಸಂಸ್ಕೃತವಲ್ಲವೇನಮ್ಮ? ನೀನು ಪ್ರಾಕೃತ ಎಂದು
                  ಹೇಳುತ್ತಿದ್ದೀಯಲ್ಲ!

ಕನ್ನಡಮ್ಮ    : ನೋಡಪ್ಪಾ ಕರ್ಣಪಿಶಾಚಿ, ಸಾವಿರಾರು ವರ್ಷಗಳ ಹಿಂದೆ ಭಾಷೆಗೆ ಒಂದು
                  ಚೌಕಟ್ಟು ಇರದ ಕಾಲದಲ್ಲಿ ಜನರು ಚಿಕ್ಕ ಮಕ್ಕಳಂತೆ ತೊದಲು
                  ಮಾತನಾಡುತ್ತಿದ್ದರು. ವ್ಯವಹಾರದಲ್ಲಿ ಇದರಿಂದ ಅಪಾರ್ಥಗಳಾಗುತ್ತಿದ್ದವು.
                  ಇದನ್ನು ತಪ್ಪಿಸಲು ಆರ್ಯರು ತಮ್ಮ ನುಡಿಗೆ ಒಂದು ಚೌಕಟ್ಟನ್ನು ಹಾಕಿ ಅದಕ್ಕೆ
                  ಸಂಸ್ಕೃತ ಎಂದು ಕರೆದರು! ಸಂಸ್ಕೃತ ಇದರರ್ಥ ಸಂಸ್ಕರಿಸಲ್ಪಟ್ಟದ್ದು.
                  ನಿನಗೆ ತಿಳಿಯುವಂತೆ ಇಂಗ್ಲೀಶಿನಲ್ಲಿ ಹೇಳಬೇಕಾದರೆ, ಇದನ್ನು processed,
                  refined ಹೀಗೆಲ್ಲ ಕರೆಯಬಹುದು! ಈ ಚೌಕಟ್ಟಿಲ್ಲದ ನುಡಿಗೆ ಪ್ರಾಕೃತ
                  ಎಂದು ಕರೆದರು. ಈ ಚೌಕಟ್ಟಿಗೆ ಅವರು ವ್ಯಾಕರಣ ಎಂದು ಹೇಳುತ್ತಾರೆ.
                 
ಕ.ಪಿ.            : ನಾನು ಕೇಳುತ್ತಿರುವದೇನು, ನೀನು ಹೇಳುತ್ತಿರುವದೇನು?

ಕನ್ನಡಮ್ಮ    : ಭಾಷೆಗಳ ಹಿನ್ನೆಲೆಯನ್ನು ನೀನು ಅರಿಯದಿದ್ದರೆ, ನಾನು ನಿನಗೆ ಲಿಪಿಯ
                  ಹುಟ್ಟನ್ನು ತಿಳಿಸುವದಾದರೂ ಹೇಗೆ? ಈ ರೀತಿಯಾಗಿ ಕನ್ನಡ ಮತ್ತು
                  ಸಂಸ್ಕೃತಗಳು ಜೊತೆಯಾಗಿಯೇ ಬೆಳೆದವು. ಕೆಲಕಾಲಾನಂತರ ವ್ಯವಹಾರದ
                  ಕಾರಣಗಳಿಗಾಗಿ, ಲಿಪಿಯ ಅವಶ್ಯಕತೆ ಕಂಡು ಬಂದಿತು. ಆಗ ಚಿತ್ರಗಳನ್ನೇ
                  ಸಂಕೇತಗಳನ್ನಾಗಿ ಬಳಸಿದರು. ಅದೇ ಚಿತ್ರಲಿಪಿ.  ವ್ಯವಹಾರವನ್ನು
ಮೀರಿದ ಭಾವಾಭಿವ್ಯಕ್ತಿಗಾಗಿ ಧ್ವನಿಸಂಕೇತಗಳನ್ನು ರೂಪಿಸುವ ಕಾಲವೂ ಬಂದಿತು.
                  ಆಗ ಹುಟ್ಟಿದ್ದೇ ಬ್ರಾಹ್ಮೀ ಲಿಪಿ. ಈ ಬ್ರಾಹ್ಮೀ ಲಿಪಿಯೇ ಭಾರತದಲ್ಲಿರುವ ಎಲ್ಲ
                  ಲಿಪಿಗಳ ಮೂಲರೂಪ.
                   
ಕ.ಪಿ.            : ಕನ್ನಡದ ಅಕ್ಷರಮಾಲೆಯಲ್ಲಿರುವ ೫೨ ಅಕ್ಷರಗಳು ಆಗ ಹುಟ್ಟಿದವೇನು?

ಕನ್ನಡಮ್ಮ    : ಯಾವ ಲಿಪಿಯಲ್ಲಿಯೂ ಅದರ ಎಲ್ಲ ಅಕ್ಷರಗಳು ಒಂದೇ ದಿನದಲ್ಲಿ
                  ಹುಟ್ಟಲಿಲ್ಲ, ಮಗೂ. ಭಾಷೆಯನ್ನು ಪ್ರೀತಿಸುವ ಪಂಡಿತರು, ಒಂದೊಂದೇ
                  ಅಕ್ಷರವನ್ನು ರೂಪಿಸುತ್ತ ನಡೆದರು. ಸ್ವರ ಹಾಗು ವ್ಯಂಜನಗಳ ಭೇದವನ್ನು
                  ಗುರುತಿಸಿದರು, ಬಳ್ಳಿಗಳನ್ನು ರೂಪಿಸಿದರು. ಆದುದರಿಂದಲೇ
                  ನಾನು ಅಕ್ಷರಮಾಲೆ ಹುಟ್ಟಿದ್ದು ನನ್ನ ತಪಸ್ಸಿನಿಂದ ಎಂದು ಹೇಳಿದ್ದು!

ಕ.ಪಿ.            : ಆದರೆ ಬ್ರಾಹ್ಮೀ ಲಿಪಿಗೆ ನಿನ್ನ ಸಂಬಂಧವೇನಮ್ಮಾ?

ಕನ್ನಡಮ್ಮ    : ನಾನು ನಿನಗೆ ಮೊದಲೇ ಹೇಳಲಿಲ್ಲವೇನಪ್ಪಾ? ಕನ್ನಡಿಗರ ಹಾಗು ಆರ್ಯರ
                  ಸಂಪರ್ಕದಿಂದಲೇ ಎರಡೂ ಭಾಷೆಗಳು ಬೆಳೆದವು. ಎಲ್ಲ ಭಾಷೆಗಳಿಗೂ ತಾಯಿ
                  ಲಿಪಿಯಾದ ಬ್ರಾಹ್ಮೀ ಮೊದಲಿಗೆ ಬಂದಿತು. ಕಾಲಾಂತರದಲ್ಲಿ ಲಿಪಿಗಳು ಬೇರೆ
                  ಬೇರೆಯಾದವು.
                 
ಕ.ಪಿ.            : ಅಮ್ಮಾ, ಬ್ರಾಹ್ಮೀ ಲಿಪಿಯಿಂದಲೇ ಹುಟ್ಟಿದರೂ ಸಹ, ನಾಗರಿ ಲಿಪಿಯಲ್ಲಿ
                  ಇರುವದಕ್ಕಿಂತ ಕನ್ನಡದಲ್ಲಿ ಎರಡು ಸ್ವರಗಳು ಜಾಸ್ತಿ ಇವೆ.
                  ಇದಕ್ಕೆ ಕಾರಣವೇನು?

ಕನ್ನಡಮ್ಮ    : ಮಗು, ಭಾರತದಲ್ಲಿರುವ ಎಲ್ಲಾ ಭಾಷೆಗಳ ಧ್ವನಿಗಳನ್ನು ನನ್ನ ಮಕ್ಕಳು
                  ಅಂದರೆ ಕನ್ನಡಿಗರು ಉಚ್ಚರಿಸಬಲ್ಲರು. ಭಾರತದ ಯಾವುದೇ ಭಾಷೆಗಿಂತಲೂ
                  ಹೆಚ್ಚಿನ ಧ್ವನಿಸಂಕೇತಗಳು ನನ್ನ ಕನ್ನಡ ಲಿಪಿಯಲ್ಲಿ ಇವೆ. ಇದು ನನ್ನ ಹೆಮ್ಮೆ!
                 
ಕ.ಪಿ.            :ಹೌದಮ್ಮಾ. ನಾನು ಇದರ ಕಾರಣವನ್ನು ಕೇಳುತ್ತಾ ಇದ್ದೇನೆ.

ಕನ್ನಡಮ್ಮ    : ನನ್ನ ಮಕ್ಕಳು ಅಂದರೆ ಕನ್ನಡಿಗರು ಸ್ನೇಹಜೀವಿಗಳು. ಸಾವಿರಾರು ವರ್ಷಗಳಿಂದ
                   ಎಲ್ಲರೊಡನೆಯೂ ಸರಳವಾಗಿ ಬೆರೆಯುತ್ತಿದ್ದಾರೆ. ಹೀಗಾಗಿ ಇವರ
                  ಧ್ವನಿಸಂಪತ್ತು, ಸಂಕೇತಸಂಪತ್ತು ಹಾಗು ಪದಸಂಪತ್ತು ಹೆಚ್ಚಿತು.
                  ಆದರೆ ತಾವೇ ಹೆಚ್ಚಿನವರು ಎಂದುಕೊಳ್ಳುವ ಜನಗಳ ಧ್ವನಿ ಹಾಗು
                  ಧ್ವನಿಸಂಕೇತಗಳು ಕಡಿಮೆಯಾಗಿವೆ.
                 
ಕ.ಪಿ.            : ಹೌದಮ್ಮ! ನಾಗರಿ ಲಿಪಿಯಲ್ಲಿ ‘ಎ’ ಮತ್ತು ‘ಏ’ ಧ್ವನಿಗಳಿಗೆ ಒಂದೇ ಸಂಕೇತವಿದೆ.
                  ಆದುದರಿಂದ ಮರಾಠಿ ಭಾಷಿಕರು Red ಹಾಗು Raid ಈ ಎರಡೂ ಪದಗಳನ್ನು
                  ‘ರೇಡ’ ಎಂದೇ ಉಚ್ಚರಿಸುತ್ತಾರೆ.

ಕನ್ನಡಮ್ಮ    : ನಾಗರಿ ಲಿಪಿಯಲ್ಲಿ ‘ಒ’ ಮತ್ತು ‘ಓ’ ಸ್ವರಗಳಿಗೂ ಸಹ ಒಂದೇ ಸಂಕೇತವಿದೆ.
                  ಹೀಗಾಗಿ ನನ್ನ ಕನ್ನಡ ಭಾಷೆಯಲ್ಲಿ ‘ಕೊಡು’ ಮತ್ತು ‘ಕೋಡು’ ಎನ್ನುವ
                  ಪದಗಳು ಸೃಷ್ಟಿಯಾದಂತೆ ಆರ್ಯಭಾಷೆಗಳಲ್ಲಿ ಸೃಷ್ಟಿಯಾಗುವದು ಸಾಧ್ಯವಿಲ್ಲ!
                 
ಕ.ಪಿ.            : ಇದಕ್ಕೂ ಹೆಚ್ಚಿನ ಮೋಜಿನ ಪ್ರಸಂಗವೊಂದನ್ನು ನಿನಗೆ ಹೇಳುತ್ತೇನೆ, ತಾಯಿ.
                  ಈ ಬಂಗಾಲಿ ಜನರು ‘ವ’ಕಾರವನ್ನು ‘ಬ’ಕಾರವಾಗಿ ಹಾಗು ‘ಅ’ಕಾರವನ್ನು
                  ‘ಒ’ತರಹಾ ಉಚ್ಚರಿಸುತ್ತಾರೆ. ವ್ಯಾಟ್‍ಸನ್ ಎನ್ನುವ ಆಂಗ್ಲ ಮನುಷ್ಯನನ್ನು
                  ಬಂಗಾಲಿಯೊಬ್ಬನು ಬ್ಯಾಟ್‍ಸೋನ್ ಎಂದು ಕರೆದು ಬೈಸಿಕೊಂಡಿದ್ದಿದೆ!
                 
ಕನ್ನಡಮ್ಮ    : ನಾಗರಿ ಲಿಪಿಯ ಹಾಗು ಆರ್ಯ ಭಾಷೆಗಳ ಬಡತನಕ್ಕಿಂತ, ತಮಿಳು ಭಾಷೆಯ
                  ಬಡತನವು ಇನ್ನೂ ಹೆಚ್ಚಿನದು. ತಮಿಳು ಜನ ‘ಗಾಂಧಿ’ ಅನ್ನೋದನ್ನ ‘ಕಾಂದಿ’
                  ಅಂತ ಬರೀತಾರ; ‘ಕಾಂತಿ’ ಅನ್ನೋದನ್ನೂ  ‘ಕಾಂದಿ’ ಅಂತ ಬರೀತಾರ! ಮತ್ತು
                  ಹಾಗೆಯೇ ಉಚ್ಚರಿಸುತ್ತಾರೆ. ಕನ್ನಡದಲ್ಲಿ ಕೆಳದಿ ಹಾಗು ಗೆಳತಿ ಇವುಗಳಿಗೆ ಬೇರೆ
                  ಅರ್ಥವಿದೆ. ಇಂತಹ ಪದಸಂಪತ್ತು ತಮಿಳಿನಲ್ಲಿ ಸಾಧ್ಯವಿಲ್ಲ. ಯಾಕೆಂದರೆ
                  ಅವರು ಈ ಎರಡೂ ಪದಗಳನ್ನು ಒಂದೇ ರೀತಿಯಲ್ಲಿ ಬರೆಯುತ್ತಾರೆ!
                 
ಕ.ಪಿ.            : ಇದಕ್ಕೆ ಕಾರಣವೇನು?

ಕನ್ನಡಮ್ಮ    : ತಮಿಳರ ಕೂಪಮಂಡೂಕ ವೃತ್ತಿ. ತಮ್ಮದೇ ದೊಡ್ಡದೆನ್ನುವ ಹುಚ್ಚು ಕಲ್ಪನೆ.
                  ಅವರಿಗೆ ಕೊಡುಕೊಳ್ಳುವ ಬುದ್ಧಿ ಇಲ್ಲ. ಹೀಗಾಗಿ ತಮಿಳಿನಲ್ಲಿ ಕಡಿಮೆ
                  ಅಕ್ಷರಗಳಿವೆ. ಅವರೂ ಸಹ ಸಂಸ್ಕೃತದಿಂದ ಸಾಕಷ್ಟು ಪದಗಳನ್ನು
                  ತೆಗೆದುಕೊಂಡಿದ್ದಾರೆ. ಆದರೆ ಅವರಿಗೆ ಒಪ್ಪಿಕೊಳ್ಳುವ ಪ್ರಾಮಾಣಿಕತೆ ಇಲ್ಲ!
                 
ಕ.ಪಿ.            : ಓಹೋ, ಅದಕ್ಕೇ ತಮಿಳು ಭಾಷೆಗೆ ಶಾಸ್ತ್ರೀಯ ಭಾಷೆಯ ಗೌರವ
                  ಕೊಟ್ಟಿದ್ದಾರೊ? ಯಾವ ಭಾಷೆಯಲ್ಲಿ ಪ್ರಗತಿ ಇಲ್ಲವೊ, ಅದು ಅನಾಗರಿಕ      
                  ಅರ್ಥಾತ್ ಶಾಸ್ತ್ರೀಯ ಭಾಷೆ! ಆದುದರಿಂದಲೇ ಗಿರೀಶ ಕಾರ್ನಾಡರು ‘ಕನ್ನಡ
                  ಭಾಷೆಯು ಶಾಸ್ತ್ರೀಯ ಭಾಷೆ ಅಲ್ಲ’ ಎಂದು ಹೇಳಿದ್ದು. ನಿಜವಾಗಲೂ ಅವರೇ
                  ಸತ್ಯವಂತರು!
                 
ಕನ್ನಡಮ್ಮ    : (ನಿಟ್ಟುಸಿರುಗರೆಯುವಳು.)

ಕ.ಪಿ.            : ಇಂತಹ ಅನುಪಮ ಚೆಲುವಿನ ಹಾಗು ಸರ್ವಾಭರಣಭೂಷಿತೆಯಾದ ನೀನು ಈಗ
                  ನಿಟ್ಟುಸಿರುಗರೆಯಲು ಕಾರಣವೇನು?

ಕನ್ನಡಮ್ಮ    : ನನ್ನ ನಾದಶರೀರವನ್ನು ವಿರೂಪಗೊಳಿಸುತ್ತಿರುವ ಆಕಾಶವಾಣಿ ಹಾಗು ಟೀವಿ
                  ಕಾರ್ಯಕ್ರಮಗಳನ್ನಂತೂ ನೀನು ಕೇಳಿದೆ. ಈಗ ನನ್ನ ಲಿಪಿಶರೀರವನ್ನು
                  ಚೂರಿಯಿಂದ ಚೂರುಚೂರಾಗಿ ಕತ್ತರಿಸುತ್ತಿರುವ ಕಾರ್ಯಕ್ರಮಗಳನ್ನಷ್ಟು
                  ನೋಡುವೆಯಾ?

ಕ.ಪಿ.            : ತಾಯಿ, ನಿನ್ನ ಅಂಗಚ್ಛೇದವನ್ನು ಮಾಡುತ್ತಿರುವ ಆ ಮಾತೃಹಂತಕರಾರು?

ಕನ್ನಡಮ್ಮ    : ಪಿಶಾಚಿ, ನೈಸ್ ಕಾರಿಡಾರ್ ಮೇಲೆ ಹಾರುತ್ತ ಮೈಸೂರಿನತ್ತ ತೆರಳು.
                  ಅಲ್ಲಿ ನಿನಗೆ ನನ್ನ ಸುಪುತ್ರನ ದರ್ಶನವಾಗುವದು!

ಕ.ಪಿ.            : ಜೈ ಕನ್ನಡಾಂಬೆ!

                  (ಮುಂದಿನ ಸಂಚಿಕೆಯಲ್ಲಿ ಸುಪುತ್ರದರ್ಶನ.)