Thursday, November 24, 2011

ಚಿತ್ತಿಯ ಮಳೆಯ ಸಂಜೆ..........ದ.ರಾ.ಬೇಂದ್ರೆ


ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||

ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ ||೨||

ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ ||೩||

ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ ||೪||

ಗಿಡಬಳ್ಳಿ ಎಲಿ ಎಲಿ
ತೊಯ್ದ ತೆಂಗಿನ ಗರಿ
ಬೆಳ್ಳಿಸುಳಿ ಬರೆಧಾಂಗ
ಮಿತಿಮೀsರಿ ಮಿಂಚ್ಯಾವ ||೫||

ಪಡುವಲಕ ಮುಗಿದ ಕಿರಣ
ಮೂಡಲಕ ಚಿಮ್ಮಿಕೊಂಡು
ಅರಿಷಿಣ ಕುಂಕುಮ ತಂದು
ಮರದ್ಹಣಿಗೆ ಹಂಚ್ಯಾವ ||೬||

ಸಂಜಿಸೂರ್ಯಾನ ಹೆಗಲ
ಜರದ ಸೆಲ್ಲೇದ ಸೋಗಿ
ನವಿಲಗೊರಳಿನ ಮುಗಿಲ
ಸೆರಿಗ್ಗೆ ಬೀಸ್ಯಾವ ||೭||

ಹೊಲದಂಚಿನ ಹಸಿರ ಬಯಲು
ಮುತ್ತಿನ ಸೇಸೆ ತಳೆದು
ದುಡಿದವರ ಪಾದಕ್ಕಂತ
ಹಡದಿ ಹಾಸ್ಯಾವ ||೮||

ದಿನಗೂಲಿಗೆ ದುಡಿದು ದಣಿದು
ತಣಿದು ಹೊರಟವರ ಮಾರಿ
ಎದಿಯೆತ್ತರ ಬೆಳೆಗೆ ಕಳಸ
ಇಟ್ಟಾಂsಗ ಮೆರೆದಾವ ||೯||

ಹದಕ್ಕ ಹವಣಾಗಿ ಬಂದ
ಮಳೆಗೆ ನೆನೆನೆನೆದು ನೆನಿಸಿ
ಬರುವ ಸುಗ್ಗಿಯ ಚಿತ್ರ
ಅವರ ಚಿತ್ತ ಬರೆದಾವ ||೧೦||

ಗದ್ದ ಗಲ್ಲದ ಹಂಚಿ
ಕಣ್ಜೋಗಿ ಹಸಿರ ಹಣಿ
ಇಳಿದ ಬೆವರಿನ ನಡುವೆ
ತೊಳೆದು ಎದ್ದಾವ ||೧೧||

ಸಿಂಗಾರಿಲ್ಲದೀ ಸೊಬಗು
ಸೊಗಸಿ-ಜೀವಕೆ ಮುದ್ದು;
ಸೋತ ದಾರಿಗರ ಕಣ್ಣು
ಮನಸು ಕದ್ದಾವ ||೧೨||

ಚವರಿ-ಜೋಳದ ತೆನೆಯೆ
ಎರಡು ಬದಿಗೆ ಸರಿದು
ಅವರ ಮುಖರೇದ ಮುಖಕೆ
ಚವರ ಹಿಡಿದಾವ ||೧೩||

ಹಗಲು ಮಲ್ಲಾಡಕೆ ಕಳೆದು
ಇರುಳು ವಸತಿಗಂತ
ಬೆಳ್ಳಕ್ಕಿ ತೋರಣಗಟ್ಟಿ
ಬೆಳವಲಕ್ಕೆ ನಡೆದಾವ ||೧೪||

ಬಯಲು ಗುಡಿಸಲದ ಜೀವ
ಕಾಡು-ಗೂಡಿನ ಹಕ್ಕಿ
ತಮ್ಮ ಸರಿಜೋಡಿ ಮಾಡಿ
ಸೋಬಾನೆ ಹೇಳ್ಯಾವ ||೧೫||

ಮುಚ್ಚಂಜೆ ಮುಗಿದಾಗ
ಸೀಗಿಗೌರಿಯ ದನಿಯೆ
ತೇಲಿ ಬರುವಂತೆ ನಾಡು
ಕಿವಿಯಾಗಿ ಕೇಳ್ಯಾವ ||೧೬||
……………………………………………………………………………………..
ಬೇಂದ್ರೆಯವರಿಗೆ ಶ್ರಾವಣ ಮಾಸ ಸಂಭ್ರಮದ ಮಾಸ.  
ರಭಸದಿಂದ ಹುಯ್ಯುವ ಶ್ರಾವಣದ ಮಳೆಯನ್ನು ಅವರು ರಾವಣನ ಕುಣಿತಕ್ಕೆ ಹೋಲಿಸುತ್ತಾರೆ:

‘ಶ್ರಾವಣಾ ಬಂತು ಕಾಡಿಗೆ | ಬಂತು ನಾಡಿಗೆ
ಬಂತು ಬೀಡಿಗೆ | ಶ್ರಾವಣಾ ಬಂತು ||
ಕಡಲಿಗೆ ಬಂತು ಶ್ರಾವಣಾ | ಕುಣಿದ್ಹಾಂಗ ರಾವಣಾ
ಕುಣಿದಾವ ಗಾಳಿ | ಭೈರವನೆ ರೂಪ ತಾಳಿ ||’

ಕಣ್ಣೆದುರಿಗೆ ಕುಣಿಯುವಂತಹ ಚಿತ್ರಗಳಿವು. ಇಷ್ಟೇ ಅಲ್ಲ, ಮಳೆಯ ಹುಯ್ಯಲಿನ ನಾದವನ್ನು ಈ ಕವನದಲ್ಲಿ ಆಲಿಸಬಹುದು. ಇದು ಬೇಂದ್ರೆಯವರ ಶ್ರಾವಣಪ್ರತಿಭೆ, ವರಕವಿಗೆ ಮಾತ್ರ ಸಾಧ್ಯವಾದ ವರಸಿದ್ಧಿ!

ಮಳೆಗಾಲ ಮುಂದುವರೆದಂತೆ, ಇಳೆಯಲ್ಲ ಹಸಿರಿನಿಂದ ತುಂಬುತ್ತದೆ.
ಆಗ ಭೂಮಿತಾಯಿಯು ಅವರಿಗೆ ಕಾಣಿಸುವದು ಹೀಗೆ:

‘ಹೂವ ಹಡಲಿಗೆಯನು ಹೊತ್ತ
ಭೂಮಿತಾಯಿ ಜೋಗಿತಿ,
ಮೈsತುಂಬಿ ಕುಣಿಯುತಿಹಳ-
ನಂತ ಕಾಲವೀ ಗತಿ.’

ಸಾಂಗತ್ಯಜೀವಿಯಾದ ಬೇಂದ್ರೆಯವರು ಇಂತಹ ನೋಟವನ್ನು ಸವಿಯಲು ತಮ್ಮ ನಲ್ಲೆಯನ್ನು ಆಹ್ವಾನಿಸುತ್ತಾರೆ.
‘ಏನು ಹಸಿರು, ಏನು ಹಳದಿ
ಸುತ್ತು ಮುತ್ತು ನೋಡು ಕೆಳದಿ!’

‘ಚಿತ್ತಿಯ ಮಳೆಯ ಸಂಜೆ’ ಕವನವು ಈ ಎಲ್ಲ ಕವನಗಳಿಗಿಂತ ತುಂಬ ಭಿನ್ನವಾದದ್ದು. ಇಲ್ಲಿರುವ ಕವಿ ಧ್ಯಾನಸ್ಥ ಕವಿ. ಆತ ಪ್ರಕೃತಿಯಲ್ಲಿ ಲೀನನಾಗಿ, ಪ್ರಶಾಂತ ಸ್ಥಿತಿಯಲ್ಲಿ ತನ್ನ ಸುತ್ತಲಿನ ಚರಾಚರ ಬದುಕನ್ನು ಅವಲೋಕಿಸುತ್ತಿದ್ದಾನೆ. ಈ ಸೃಷ್ಟಿಯು ಭಗವಂತನ ಲೀಲೆ ಎನ್ನುವ ಕಾಣ್ಕೆ ಅವನಿಗಾಗುತ್ತದೆ. ಈ ಕಾಣ್ಕೆಯ ನಿರೂಪಣೆಯನ್ನು ಈ ಕವನದಲ್ಲಿ ಕ್ರಮಶಃ ಮಾಡಲಾಗಿದೆ. ಅಂದರೆ ಕವನದ ಮೊದಲ ನುಡಿಯಿಂದ ಕೊನೆಯ ನುಡಿಯವರೆಗೆ ಈ ಕಾಣ್ಕೆಯ ಸಾವಯವ ಬೆಳವಣಿಗೆ ಇದೆ.


ಕವನದ ಮೊದಲರ್ಧವು (೧ನೆಯ ನುಡಿಯಿಂದ ೭ನೆಯ ನುಡಿಯವರೆಗೆ) ಮಳೆಯ ನಂತರದ ಪ್ರಕೃತಿಯ ಅವಲೋಕನೆಗೆ ಮೀಸಲಾಗಿದೆ. ಪ್ರಕೃತಿಯ ಅಂಶಗಳಾದ ಪಂಚಮಹಾಭೂತಗಳನ್ನು (ಅಂದರೆ ಗಾಳಿ,ನೀರು,ಸೂರ್ಯ,ಭೂಮಿ ಹಾಗು ಆಕಾಶಗಳನ್ನು) ಇಲ್ಲಿ ಮಾನುಷೀಕರಣಗೊಳಿಸಲಾಗಿದೆ. ಕವನದ ಉತ್ತರಾರ್ಧದಲ್ಲಿ (೮ನೆಯ ನುಡಿಯಿಂದ ೧೫ನೆಯ ನುಡಿಯವರೆಗೆ) ಪ್ರಕೃತಿಯೊಡನೆ ಸಮರಸವಾದ ಜೀವಸಂಕುಲದ ಬದುಕಿನ ವರ್ಣನೆ ಇದೆ. ಕೊನೆಯ ಅಂದರೆ ೧೬ನೆಯ ನುಡಿಯಲ್ಲಿ ಪ್ರಕೃತಿಯ ದೈವೀಕರಣವಿದೆ. ಆ ಮೂಲಕ ಸೃಷ್ಟಿ ಹಾಗು ಸೃಷ್ಟಿಮಾತೆಯ ಅಭಿನ್ನತೆಯ ದರ್ಶನವಿದೆ.   
............................................................................................................
ಮೊದಲನೆಯ ನುಡಿ:
ಕುರುಡು ಪ್ರೀತಿಯ ಹಾಂಗ
ಕುರುಡು ಚಿತ್ತಿಯ ಮಳೆಯೆ
ಮುಗುಳು ನಗಿ ಸುತ್ತುರುಳಿಸಿ
ಸುರದsತ್ತ ಸುರದಾವ ||೧||

ಮುಂಗಾರು ಮಳೆಯ ಕೊನೆಯ ಪಾದದಲ್ಲಿ ಬರುವದು ಚಿತ್ತಿ ಮಳೆ. ಭೂಮಿಯನ್ನು ಹಸಿಯಾಗಿಡಲು ಈ ಮಳೆ ಬೇಕು. ಆದರೆ ಅದು ಆದೀತು ಎನ್ನುವ ಭರವಸೆ ಇಲ್ಲ. ಆದುದರಿಂದಲೇ ಒಕ್ಕಲಿಗರು ಈ ಮಳೆಗೆ ‘ಕುರುಡು ಚಿತ್ತಿ’ ಎಂದೇ ಕರೆಯುತ್ತಾರೆ. ಬೇಂದ್ರೆಯವರು ಈ ಮಳೆಯ ಧಾಟಿಯನ್ನು ಕುರುಡು ಪ್ರೀತಿಗೆ ಹೋಲಿಸುತ್ತಾರೆ. ಕುರುಡು ಪ್ರೀತಿಗೆ ಸಮಚಿತ್ತ  ಎನ್ನುವದು ಇರುವದಿಲ್ಲ. ಕುರುಡು ಚಿತ್ತಿಯ ಮಳೆಯೂ ಸಹ ಎಲ್ಲೆಲ್ಲೋ ಸುರಿಯುತ್ತದೆ, ಅಷ್ಟೋ ಇಷ್ಟೋ ಸುರಿಯುತ್ತದೆ! ಈ ಚಿತ್ತಿಯ ಮಳೆರಾಯನ ಬಿಂಕವನ್ನು ನೋಡಿರಿ. ಭೂಮಿತಾಯಿಯ ಮಕ್ಕಳಿಗೆ ತಾನು ಅಗತ್ಯ ಎನ್ನುವದನ್ನು ಈ ಮಳೆರಾಯ ಅರಿತಿದ್ದಾನೆ. ಅಂತೆಯೇ ತಾನು ಬರುವಾಗ ಬಿಂಕದ ಮುಗುಳುನಗೆಯನ್ನು  ಸುತ್ತಲೂ ಉರುಳಿಸುತ್ತ ಬರುತ್ತಾನೆ! ಒಕ್ಕಲಿಗರಿಗೆ ಆಸೆಯನ್ನು ಹುಟ್ಟಿಸುತ್ತಾನೆ. ಅವರ ಮುಖದಲ್ಲೂ ಮುಗುಳುನಗೆಯನ್ನು ಅರಳಿಸುತ್ತಾನೆ. ಆದರೆ ಕೊನೆಗೆ ಎಲ್ಲೊ ಕೃಪೆ ತೋರಿಸಿ ಮಾಯವಾಗುತ್ತಾನೆ!
ಚಿತ್ತಿಯ ಮಳೆಯ ಚಿತ್ತವು ಕುರುಡಾಗಿರಬಹುದು, ಅದು ಸುರಿಯದೇ ಇರಬಹುದು. ಆದರೂ ಬೇಂದ್ರೆಯವರು ಈ ಮಳೆಯನ್ನು ಪ್ರೀತಿಯಿಂದ ‘ಕುರುಡು ಪ್ರೀತಿಯ ಹಾಗೆ’ ಎಂದು ಕರೆಯುತ್ತಾರೆ.

ಎರಡನೆಯ ನುಡಿ:
ಎತ್ತೇನೋ ಬಿತ್ತೇನೊ
ಮಿಂಚಿನ ಮುತ್ತೇನೊ
ಕಣ್ಮುಚ್ಚಿ ತೆರೆವುದರಾಗ
ಹರದಾsರಿಗೆ ಹರದಾವ ||೨||

ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಈ ಮಳೆರಾಯನ ಅನಿಶ್ಚಿತ ನಡತೆಯನ್ನು ವರ್ಣಿಸಿದ್ದಾರೆ.
ಈ ನುಡಿಯನ್ನು ಎರಡು ರೀತಿಗಳಲ್ಲಿ ಅರ್ಥೈಸಬಹುದು
ಮೊದಲನೆಯ ಅರ್ಥ ಹೀಗಿದೆ:
‘ಎತ್ತೇನೋ’ ಅಂದರೆ ಎದ್ದಿತೇನೊ ಎನ್ನುವ ಅರ್ಥ ಹಾಗು ‘ಬಿತ್ತೇನೊ’ ಎಂದರೆ ಬಿದ್ದಿತೇನೊ ಎನ್ನುವ ಅರ್ಥ ಆಗುತ್ತದೆ. ಮಳೆಯು ಎದ್ದಿತೋ ಅಂದರೆ ಮೋಡ ಕಟ್ಟುತ್ತಿದೆ ಎನ್ನುವ ಅರ್ಥ. ಹಾಗು ಬಿದ್ದಿತೋ ಅಂದರೆ ಮಳೆ ನೆಲಕ್ಕೆ ಇಳಿದಿತೊ ಎನ್ನುವ ಅರ್ಥ.
ಅದಲ್ಲದೆ ಒಂದು ಜೀವಿಯು ದಿಕ್ಕೆಟ್ಟು ಓಡುವಾಗ, ‘ಎದ್ದಿತೋ, ಬಿದ್ದಿತೋ ಎನ್ನುವಂತೆ ಓಡುತ್ತಿದೆ’, ಎಂದು ಹೇಳುತ್ತಾರೆ. ಅದರಂತೆ ಚಿತ್ತಿಯ ಮಳೆಯ ಮೋಡಗಳು ನೋಡುನೋಡುತ್ತಿರುವಂತೆ ಕಟ್ಟಿಕೊಂಡು, ದಿಕ್ಕು ತಿಳಿಯದಂತೆ ಧಾವಿಸುತ್ತವೆ. ಈಗ ಇಲ್ಲಿ ಆಗುತ್ತಿದೆ ಎನ್ನುವಾಗಲೇ, ಮತ್ತೊಂದೆಡೆ ಮಳೆಯ ಹನಿಗಳು ಮಿಂಚಿನಿಂದ ಉದುರಿದ ಮುತ್ತುಗಳಂತೆ ಉದುರಿ ಹೋಗಿರುತ್ತವೆ. ಕಣ್ಮುಚ್ಚಿ ತೆರೆಯುವದರಲ್ಲಿಯೇ, ಕಣ್ಣಿಗೆ ಕಾಣಿಸದಷ್ಟು ದೂರ ಹೋಗಿರುತ್ತವೆ. ಬೇಂದ್ರೆಯವರು ಇದನ್ನು ಹರದಾರಿಗೆ (=ಸುಮಾರು ೫ ಕಿಲೋಮೀಟರುಗಳು) ಹರದು ಹೋದವು ಎಂದು ಹೇಳುತ್ತಾರೆ.

ಎರಡನೆಯ ಅರ್ಥ ಹೀಗಿದೆ:
ಬೀಜ ಬಿತ್ತಲು ಎತ್ತು ಬೇಕು. ಮಳೆಯ ಮೋಡಗಳು ಎತ್ತಿನಂತೆ ಮುಸುಗುಟ್ಟುತ್ತಿವೆ. ಅವು ಮಳೆಯ ಹನಿಗಳ ಬೀಜವನ್ನು ಬಿತ್ತಲು ಅಂದರೆ ಮಳೆಯೊಡೆಯಲು ಸಿದ್ಧವಾಗಿವೆ. ಮಿಂಚಿನ ಮೂಲಕ ಮುತ್ತಿನಂತಹ ಬೀಜಗಳನ್ನು ಅವು ಚೆಲ್ಲುತ್ತಿವೆ. ಈ ಎತ್ತುಗಳು ಎಷ್ಟು ಶೀಘ್ರವಾಗಿವೆ ಎಂದರೆ, ಕಣ್ಮುಚ್ಚಿ ತೆರೆಯುವದರಲ್ಲಿ ಹರದಾರಿಯಷ್ಟು ಧರೆಯನ್ನು ಹರದವು (=ಹರಗಿದವು=ಬೀಜ ಬಿತ್ತಿದವು). ಚಿತ್ತಿಯ ಮಳೆಯ ಸಮಯದಲ್ಲಿ ಕೆಲವು ರೈತರು ಗಳೆ ಹೊಡೆದು, ಹಿಂಗಾರು ಬಿತ್ತಿಗೆಯ ಮೊದಲ ಕ್ರಮಗಳನ್ನು ಆರಂಭಿಸುತ್ತಾರೆ ಎನ್ನುವದನ್ನು ಗಮನಿಸಬೇಕು.

ಈ ಮಳೆಯು ಬಿದ್ದರೆ, ತೆನೆಗಳಲ್ಲಿ ಮುತ್ತಿನಂತಹ ಕಾಳುಗಳು ತುಂಬಿಕೊಳ್ಳುವವು. ಆದುದರಿಂದ ಈ ಮಳೆಯ ಹನಿಗಳನ್ನು ಬೇಂದ್ರೆಯವರು ‘ಮುತ್ತು’ ಎಂದು ವರ್ಣಿಸುತ್ತಾರೆ.

ಮೂರನೆಯ ನುಡಿ:
ಇದಿರು ಗುಡ್ಡದ ತಲೆಗೆ
ಮೋಡ ಮುಸುಕೆಳೆವಾಗ
ಬದಿಯ ಗುಡ್ಡದ ಮ್ಯಾಲೆ
ಬಿಸಿಲು ಮೈಚಾಚ್ಯಾವ ||೩||

ಇದು ಮುಂಗಾರು ಮಳೆಗಾಲದ ಕೊನೆಯ ಹಂತ. ಈ ಕಾಲದಲ್ಲಿ ಮುಗಿಲಿನಲ್ಲಿ ದಟ್ಟವಾದ ಮೋಡಗಳು ಇರುವದಿಲ್ಲ. ಆದುದರಿಂದ ಪಶ್ಚಿಮದ ಸೂರ್ಯನ ಎದುರಿಗಿರುವ ಗುಡ್ಡದ ನೆತ್ತಿಯ ಮೇಲೆ ಅಳಿದುಳಿದ ಮೋಡಗಳು ಮುಸುಕು ಹಾಕಿದಂತೆ ಕಾಣುತ್ತದೆ.  ಈ ಗುಡ್ಡದ ಪಕ್ಕದಲ್ಲಿಯೇ ಇರುವ ಮತ್ತೊಂದು ಗುಡ್ಡದ ಮೇಲೆ ಮಾತ್ರ ಸೂರ್ಯಕಿರಣಗಳ ನಿಚ್ಚಳ ಬೆಳಕು ಬಿದ್ದಿರುತ್ತದೆ.
ಒಂದು ಗುಡ್ಡವು ತಲೆಯ ಮೇಲೆ ಮುಸುಕೆಳೆದುಕೊಂಡು ಅಪರಾಹ್ನದ ನಿದ್ರೆಗೆ ಇಳಿದರೆ, ಪಕ್ಕದ ಗುಡ್ಡದ ಮೇಲಿ ಬಿದ್ದ ಬಿಸಿಲೂ ಸಹ ಮೈಚಾಚಿಕೊಂಡು ನಿದ್ರೆಗೆ ಎಳಸುತ್ತಿದೆ!

‘ಬಿಸಿಲು ಮೈಚಾಚ್ಯಾವ’ ಎಂದು ಹೇಳುವದರ ಮೂಲಕ ಬೇಂದ್ರೆಯವರು ಇದು ಅಪರಾಹ್ನದ ಹೊತ್ತು ಎಂದು ಸೂಚಿಸುತ್ತಾರೆ. ಈ ಹೊತ್ತಿನಲ್ಲಿ ಸೂರ್ಯಕಿರಣಗಳು ದೀರ್ಘವಾಗಿ ಬೀಳುವದರಿಂದ ಬಿಸಿಲು ಮೈಚಾಚಿರುತ್ತದೆ. ಅಲ್ಲದೆ, ಮಧ್ಯಾಹ್ನದಲ್ಲಿ ಊಟ ಹೊಡೆದು ಮಲಗಿರುವವರೂ ಸಹ, ಅಪರಾಹ್ನದವರೆಗೆ ‘ಮೈಚಾಚಿರುತ್ತಾರೆ’ ಅಂದರೆ ವಾಮಕುಕ್ಷಿಯಾಗಿರುತ್ತಾರೆ. ‘ಬಿಸಿಲು’ ಕೂಡ ಭೋಜನ ಮುಗಿಸಿ ಮೈಚಾಚಿದೆ!  ಸೂರ್ಯನು ಕನ್ಯಾ ರಾಶಿಯಲ್ಲಿ ಸಂಚರಿಸುತ್ತಿರುವದರಿಂದ ಅವನಿಗೆ ಈ ಸಮಯದಲ್ಲಿ ಪ್ರಖರತೆ ಇರುವದಿಲ್ಲ. ಆ ಕಾರಣಕ್ಕಾಗಿ ಸಹ ‘ಬಿಸಿಲು ಮೈಚಾಚ್ಯಾವ’ ಎಂದು ಹೇಳಬಹುದು. ಬೇಂದ್ರೆಯವರು ಇಲ್ಲಿ ಬಿಸಿಲಿನ ಮಾನುಷೀಕರಣವನ್ನು ಮಾಡುತ್ತಿದ್ದಾರೆ. ಜೊತೆಗೇ ಪ್ರಕೃತಿಯೊಡನೆ ಆಪ್ತತ್ವವನ್ನು ಸಾಧಿಸುತ್ತಿದ್ದಾರೆ.

ನಾಲ್ಕನೆಯ ನುಡಿ:
ತೋಪು ತೋಟದ ಗಾಳಿ
ನುಗ್ಗಿ ನುಸುಳಿ ಬಂದು
ಹುಲ್ಲುಗಾವಲಾ ಸವರಿ
ಬೈತಲಾ ಬಾಚ್ಯಾವ ||೪||

ಈ ಕಾಲದಲ್ಲಿ ಮೋಡಗಳು ಕಡಿಮೆ, ಆದರೆ ಗಾಳಿಯ ಅರ್ಭಟಕ್ಕೇನೂ ಕೊರತೆ ಇಲ್ಲ. ಈ ಗಾಳಿಯು ಮಾವಿನ ತೋಪುಗಳಲ್ಲಿ ಹಾಗು ಪೇರಲ ಹಣ್ಣಿನ ತೋಟಗಳಲ್ಲಿ ನುಗ್ಗುತ್ತದೆ. (ಆ ಕಾಲದಲ್ಲಿ ಬೇಂದ್ರೆಯವರು ವಾಸಿಸುತ್ತಿದ್ದ ಸಾಧನಕೇರಿಯಲ್ಲಿ ಮಾವಿನ ತೋಪುಗಳು ಹಾಗು ಪೇರಲ ತೋಟಗಳು ವಿಪುಲವಾಗಿದ್ದವು.) ಅಲ್ಲಿ ಧಾವಿಸಿ ಬಂದು, ಸಿಕ್ಕಿಹಾಕಿಕೊಂಡ ಗಾಳಿಯು ನುಸುಳಿ ಹೊರಬಂದಾಗ ಅದರ ವೇಗ ಕಡಿಮೆಯಾಗಿರುತ್ತದೆ. ಅಲ್ಲದೆ ಗುಡ್ಡಕ್ಕೆ ಢಿಕ್ಕಿ ಹೊಡೆದ ಗಾಳಿಯ ವೇಗವು ಕಡಿಮೆಯಾಗುತ್ತದೆ. ಹೀಗಾಗಿ ಗುಡ್ಡದ ಮೇಲೆ ಹಾಸಿರುವ ಹುಲ್ಲುಗಾವಲನ್ನು ಗಾಳಿಯು ಸವರಿ ಹೋಗುವಾಗ, ಹುಲ್ಲು ಇಬ್ಭಾಗವಾಗಿ, ತಲೆಗೂದಲಿನ ಬೈತಲೆಯನ್ನು ಬಾಚಿದಂತೆ ಕಾಣುತ್ತದೆ.
ಬೀಸುಗಾಳಿಯ ವೇಗವು ಕ್ರಮವಾಗಿ ಕಡಿಮೆಯಾಗುವದನ್ನು ಬೇಂದ್ರೆಯವರು ನುಗ್ಗಿ, ನುಸುಳಿ ಹಾಗು ಸವರಿ ಎನ್ನುವ ಕ್ರಿಯಾಪದಗಳ ಮೂಲಕ ಸೂಚಿಸಿದ್ದಾರೆ.

ಐದನೆಯ ನುಡಿ:
ಗಿಡಬಳ್ಳಿ ಎಲಿ ಎಲಿ
ತೊಯ್ದ ತೆಂಗಿನ ಗರಿ
ಬೆಳ್ಳಿಸುಳಿ ಬರೆಧಾಂಗ
ಮಿತಿಮೀsರಿ ಮಿಂಚ್ಯಾವ ||೫||

ಇನ್ನು ತೋಟದಲ್ಲಿರುವ ಎಲೆಗಳು ಹೇಗೆ ಕಾಣಿಸುತ್ತಿವೆ?
ಮಳೆಯ ಒಂದು ಝಳಕು ಬಂದು ಹೋದ ಬಳಿಕ, ವಾತಾವರಣದಲ್ಲಿರುವ ಧೂಳೆಲ್ಲ ಕರಗಿ, ಹರಿದು ಹೋಗುತ್ತದೆ. ಆದುದರಿಂದ ಸೂರ್ಯನ ಕಿರಣಗಳ ಹರಡುವಿಕೆ (=diffraction) ಆಗುವದಿಲ್ಲ. ಹೀಗಾಗಿ ತೋಟದಲ್ಲಿರುವ ತೆಂಗು, ಅಡಕೆ, ಮಾವು ಈ ಮರಗಳ ಎಲೆಗಳ ಮೇಲೆ ಸೂರ್ಯನ ನೇರವಾದ ಕಿರಣಸ್ಪರ್ಶವಾಗುತ್ತದೆ. ಆಗ ಈ ಎಲೆಗಳ ಮೇಲಿರುವ ಮಳೆಯ ಹನಿಗಳು ಸೂರ್ಯಕಿರಣಗಳನ್ನು ಪ್ರತಿಫಲಿಸುತ್ತ ಹೊಳೆಯುತ್ತವೆ. ತೆಂಗಿನ ಗರಿಗಳ ಅಂಚಿನಲ್ಲಿ ಪೋಣಿಸಿದ ಹನಿಗಳ ಮೇಲೆ ಬಿದ್ದ ಕಿರಣಗಳು ಬೆಳ್ಳಿಗೋಲವನ್ನು ಬರೆದಂತೆ ಕಾಣಿಸುತ್ತವೆ. ನೋಡಿದವರ ಕಣ್ಣು ಕೋರೈಸುವಂತೆ ಇವು ಮಿತಿಮೀರಿ ಮಿಂಚುತ್ತವೆ.

ಆರನೆಯ ನುಡಿ:
ಪಡುವಲಕ ಮುಗಿದ ಕಿರಣ
ಮೂಡಲಕ ಚಿಮ್ಮಿಕೊಂಡು
ಅರಿಷಿಣ ಕುಂಕುಮ ತಂದು
ಮರದ್ಹಣಿಗೆ ಹಂಚ್ಯಾವ ||೬||

ಇಲ್ಲಿಯವರೆಗೆ ಬೇಂದ್ರೆಯವರು ನೋಟವು ಮೇಲಿನಿಂದ ಕೆಳಗಿಳಿಯುತ್ತ,  ಆಕಾಶದಲ್ಲಿ ಕಟ್ಟಿಕೊಂಡ ಮೋಡಗಳನ್ನು,, ಗುಡ್ಡ ಹಾಗು ತೋಪುಗಳನ್ನು ಬಳಿಕ ಮಳೆಯಿಂದ ತೊಯ್ದ ಗಿಡಮರಗಳನ್ನು ತನ್ನ ಹರವಿನಲ್ಲಿ ತೆಗೆದುಕೊಂಡಿತು. ಈಗ ಅವರ ದೃಷ್ಟಿ ಇನ್ನೂ ಕೆಳಗೆ ಇಳಿದು ಕ್ಷಿತಿಜವನ್ನು ನೋಡಿದೆ.

 ತನ್ನ ಕರ್ತವ್ಯವನ್ನು ಪೂರೈಸಿದ ಬಳಿಕ ಪಶ್ಚಿಮ ದಿಕ್ಕಿನಲ್ಲಿ ಇಳಿದ ಸೂರ್ಯನು ಕಿರಣಗಳೆಂಬ ತನ್ನ ಕರಗಳ ಮೂಲಕ ವಿಶ್ವಚೈತನ್ಯಕ್ಕೆ ನಮಸ್ಕರಿಸುತ್ತಿದ್ದಾನೆ. ಇದನ್ನು ಬೇಂದ್ರೆಯವರು ‘ಪಡುವಲಕ ಮುಗಿದ ಕಿರಣ’ ಎಂದು ಹೇಳಿದರು. ‘ಮುಗಿದ ಕಿರಣ’ ಎನ್ನುವದು ಸೂರ್ಯನು ‘ಕೈಮುಗಿದನು’ ಎಂದು ಸೂಚಿಸುವದರ ಜೊತೆಗೇ, ಸೂರ್ಯನ ಕರ್ತವ್ಯವು ಮುಗಿಯಿತು ಎಂದೂ ಸೂಚಿಸುತ್ತದೆ.

ಈ ಕಿರಣಗಳ ಬೆಳಕು ಪೂರ್ವದಿಕ್ಕಿಗೂ ಸಹ ಚಿಮ್ಮುತ್ತದೆ. ಬಾನೆಲ್ಲ ಆಗ ಹಳದಿ ಹಾಗು ಕೆಂಪು ಬಣ್ಣಗಳಿಂದ ತುಂಬುತ್ತದೆ. ಈ ಬಣ್ಣಗಳು ಗಿಡಮರಗಳ ಮೇಲೂ ಪ್ರತಿಫಲಿಸುತ್ತವೆ. ಬೇಂದ್ರೆಯವರು ಈ ಬೆಡಗನ್ನು ‘ಅರಿಶಿಣ ಕುಂಕುಮ ತಂದು ಮರದ್ಹಣಿಗೆ ಹಂಚ್ಯಾವ’ ಎಂದು ಹೇಳುತ್ತಾರೆ. ನಿಸರ್ಗದೇವಿಗೆ ಅರಿಶಿಣ ಕುಂಕುಮ ಹಚ್ಚುವದರ ಮೂಲಕ ಸೂರ್ಯಕಿರಣಗಳು ಅವಳಿಗೆ ಮಂಗಳವನ್ನು  ಕೋರುತ್ತಿವೆ.

ಇಲ್ಲಿ ಪ್ರಕೃತಿಯ ಮಾನುಷೀಕರಣವಷ್ಟೇ ಅಲ್ಲ, ದೈವೀಕರಣವೂ ಆಗಿದೆ. ಬೇಂದ್ರೆಯವರಿಗೆ ಚೈತನ್ಯದ ಎಲ್ಲ ರೂಪಗಳು ದೈವದ ರೂಪಗಳೇ ಆಗಿವೆ.

ಏಳನೆಯ ನುಡಿ:
ಸಂಜಿಸೂರ್ಯಾನ ಹೆಗಲ
ಜರದ ಸೆಲ್ಲೇದ ಸೋಗಿ
ನವಿಲಗೊರಳಿನ ಮುಗಿಲ
ಸೆರಿಗ್ಗೆ ಬೀಸ್ಯಾವ ||೭||

ಕಾಲ ಸರಿದಂತೆ, ಮೈಚಾಚಿದ ಬಿಸಿಲು ಇನ್ನೂ ಕೆಳಗೆ ಇಳಿದು ಸೂರ್ಯನು ಅಸ್ತಮಾನನಾಗುತ್ತಿದ್ದಾನೆ.
ಸೂರ್ಯನ ಸುತ್ತಲೂ ಅಲ್ಲಲ್ಲಿ ಹರಡಿರುವ ಮೋಡಗಳು ಬಣ್ಣಗಳಿಂದ ತುಂಬಿವೆ. ಇವು ಬೇಂದ್ರೆಯವರಿಗೆ ಸೂರ್ಯನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವ ಶಾಲಿನಂತೆ ಕಾಣುತ್ತದೆ. ಮೋಡಗಳ ಅಂಚು ಹೊಳೆಯುವದರಿಂದ, ಅದು ಶಾಲಿನ ಅಂಚಿನ ಜರದಂತೆ ಕಾಣುತ್ತದೆ. ಈ ಜರದ ಅಂಚನ್ನು ಬೇಂದ್ರೆಯವರು ಸೋಗಿಗೆ (=eyeliner) ಹೋಲಿಸುತ್ತಾರೆ.

ಆಕಾಶದ ಉಳಿದ ಭಾಗವೆಲ್ಲ ಕಡುನೀಲಿಯಾಗಿಯೇ ಉಳಿದಿರುವದರಿಂದ, ಬೇಂದ್ರೆಯವರು ಅದನ್ನು ‘ನವಿಲಗೊರಳಿನ ಮುಗಿಲ ಸೆರಗು’ ಎಂದು ಬಣ್ಣಿಸುತ್ತಾರೆ. ಮುಳುಗುತ್ತಿರುವ ಸೂರ್ಯನ ಜರದಂಚಿನ ಶಾಲು ಕ್ಷಣಕ್ಷಣಕ್ಕೂ ಬದಲಾಗುತ್ತಿರುವದರಿಂದ, ನೀಲ ಮುಗಿಲಿನ ಸೆರಗಿಗೆ ಬೀಸುತ್ತಿರುವಂತೆ ಭಾಸವಾಗುತ್ತಿದೆ.
ಈ ನುಡಿಯಲ್ಲಿರುವ ರೂಪಕಗಳು ಅಪೂರ್ವ ಎಂದು ಹೇಳಬೇಕು.

ಎಂಟನೆಯ ನುಡಿ:
ಹೊಲದಂಚಿನ ಹಸಿರ ಬಯಲು
ಮುತ್ತಿನ ಸೇಸೆ ತಳೆದು
ದುಡಿದವರ ಪಾದಕ್ಕಂತ
ಹಡದಿ ಹಾಸ್ಯಾವ ||೮||

ಇಲ್ಲಿಯವರೆಗೆ ಬೇಂದ್ರೆಯವರು ಸುತ್ತಲಿನ ಪ್ರಕೃತಿಯ ರಮ್ಯತೆಯನ್ನು ವರ್ಣಿಸಿದರು. ಇದೀಗ ಹೊತ್ತು ಮುಳುಗುತ್ತಿದೆ. ಹೊಲಗಳಲ್ಲಿ ದುಡಿಯುತ್ತಿರುವ ಒಕ್ಕಲು ಮಕ್ಕಳು ಇನ್ನು ಮನೆಗೆ ಮರಳಬೇಕು. ಭೂಮಿತಾಯಿ ಹಾಗು ಈ ಒಕ್ಕಲುಮಕ್ಕಳ ನಡುವೆ ಅನ್ಯೋನ್ಯ ಸಂಬಂಧವಿದೆ. ಚಿತ್ತಿಯ ಮಳೆ ಇವರಿಬ್ಬರನ್ನೂ ಪುಲಕಿತಗೊಳಿಸಿದೆ.

ಚಿತ್ತಿಯ ಮಳೆಯ ಕಾಲದಲ್ಲಿ ಮುಂಗಾರು ಫಸಲು ತೆನೆ ಹಿಡಿಯುವ ಹಂತಕ್ಕೆ ಬಂದಿರುತ್ತದೆ. ಕೆಲವಾರು ರೈತರು ಹಿಂಗಾರು ಬಿತ್ತಿಗೆಯನ್ನು ಪ್ರಾರಂಭಿಸಿರುತ್ತಾರೆ. ದುಡಿತ ಮುಗಿಸಿ ಬರುತ್ತಿರುವ ಈ ಕಾಯಕನಿಷ್ಠಜೀವಿಗಳಿಗೆ ಭೂಮಿತಾಯಿಯು ತನ್ನ ಮಮತೆ ಹಾಗು ಮನ್ನಣೆಯನ್ನು ತೋರಿಸುವ ಬಗೆಯನ್ನು ಬೇಂದ್ರೆಯವರು ವರ್ಣಿಸುವ ಪರಿ ಅಪೂರ್ವವಾಗಿದೆ:

ಹೊಲದ ಅಂಚಿನಲ್ಲಿರುವ ಹಸಿರು ಬಯಲಿನಲ್ಲಿ ಚಿತ್ತಿ ಮಳೆ ಉದುರಿಸಿದ ಮಳೆಯ ಹನಿಗಳು ಮುತ್ತಿನಂತೆ ಬಿದ್ದಿವೆ. ಭೂಮಿತಾಯಿಯು ಈ ನೀರಮುತ್ತುಗಳನ್ನೇ ಅಕ್ಷತೆಯನ್ನಾಗಿ (=ಸೇಸೆ) ಮಾಡಿಕೊಂಡು ದುಡಿದು ಬರುತ್ತಿರುವ ತನ್ನ ಮಕ್ಕಳ ಪಾದಗಳ ಕೆಳಗೆ ಅಕ್ಷತೆಯ ವಸ್ತ್ರವನ್ನೇ ಹಾಸುತ್ತಿದ್ದಾಳೆ!
(ಹಡದಿ ಎಂದರೆ ಅಗಸನು ಒಗೆದು ಕೊಟ್ಟ ಬಟ್ಟೆ.)
ಒಕ್ಕಲುಮಕ್ಕಳಿಗೆ ಇದಕ್ಕಿಂತ ಹೆಚ್ಚಿನ ಗೌರವವು ಯಾವ ಕವನದಲ್ಲೂ ವ್ಯಕ್ತವಾಗಿರಲಿಕ್ಕಿಲ್ಲ!

ಒಂಬತ್ತನೆಯ ನುಡಿ:
ದಿನಗೂಲಿಗೆ ದುಡಿದು ದಣಿದು
ತಣಿದು ಹೊರಟವರ ಮಾರಿ
ಎದಿಯೆತ್ತರ ಬೆಳೆಗೆ ಕಳಸ
ಇಟ್ಟಾಂsಗ ಮೆರೆದಾವ ||೯||

ಇನ್ನೀಗ ಬೇಂದ್ರೆಯವರು ಈ ಒಕ್ಕಲುಮಕ್ಕಳು ಯಾವ ರೀತಿಯಲ್ಲಿ ತಮ್ಮ ಕಾಯಕದಲ್ಲಿ ಹಾಗು ತಮ್ಮ ಸುತ್ತಲಿನ ಪ್ರಕೃತಿಯಲ್ಲಿ ಸಮರಸರಾಗಿದ್ದಾರೆ ಎನ್ನುವದರ ಅವಲೋಕನವನ್ನು ಮಾಡುತ್ತಾರೆ.

ಈಗ ಮನೆಗೆ ಮರಳುತ್ತಿರುವ ಶ್ರಮಜೀವಿಗಳೆಲ್ಲ ದಿನಗೂಲಿಗಾಗಿ ಜಮೀನುಗಳಲ್ಲಿ ದುಡಿದವರು. ಇಡೀ ದಿನವೆಲ್ಲ ಇವರು ದುಡಿದು ದಣಿದಿದ್ದಾರೆ. ಇಷ್ಟೇ ಅಲ್ಲ, ತಮ್ಮ ಕಾಯಕದಲ್ಲಿ ಶ್ರದ್ಧೆ ಇರುವ ಈ  ಶ್ರಮಿಕರು ‘ತಣಿದಿದ್ದಾರೆ’ , ಅಂದರೆ ಸಂತೃಪ್ತರಾಗಿದ್ದಾರೆ. ಯಾಕೆಂದರೆ ಇವರದು ನಿಷ್ಠಾವಂತ ದುಡಿಮೆ, ವಂಚನೆಯಿಲ್ಲದ ದುಡಿಮೆ.  ಆದುದರಿಂದ ಭೂಮಿತಾಯಿಯು ಅನುಗ್ರಹಿಸಿದ, ಎದೆಯೆತ್ತರ ಬೆಳೆದ ಫಸಲಿನ ಮೇಲೆ ಕಾಣುವ ಇವರ ಮುಖಗಳು ಆ ಫಸಲಿಗೆ ಕಳಸವಿಟ್ಟಂತೆ ಮೆರೆಯುತ್ತಿವೆ.

ಹತ್ತನೆಯ ನುಡಿ:
ಹದಕ್ಕ ಹವಣಾಗಿ ಬಂದ
ಮಳೆಗೆ ನೆನೆನೆನೆದು ನೆನಿಸಿ
ಬರುವ ಸುಗ್ಗಿಯ ಚಿತ್ರ
ಅವರ ಚಿತ್ತ ಬರೆದಾವ ||೧೦||

ಈ ಕಾಲದಲ್ಲಿ ಜಮೀನಿನಲ್ಲಿರುವ ಪೀಕು ಬೆಳವಣಿಗೆಯ ಒಂದು critical  ಹಂತದಲ್ಲಿದೆ. ಇದನ್ನು  ‘ಹದ’ ಎನ್ನುತ್ತಾರೆ. ಈ ಪೈರು ಉತ್ತಮವಾಗಿ ಫಲಿಸಲು ಹವಣಾದ ಮಳೆ (= optimum rainfall) ಬೇಕು. ಅಂತಹ ಮಳೆ ಇದೀಗ ಬಿದ್ದಿದೆ. ಅದರಿಂದ ಉಲ್ಲಸಿತರಾದ ಆಳುಮಕ್ಕಳು ಆ ಮಳೆಯಲ್ಲಿ ನೆನೆದು ಹೋಗಿದ್ದಾರೆ. ಅದನ್ನೇ ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಅವರ ಮನೋಪಟಲದಲ್ಲಿ ಇಂತಹ ಒಳ್ಳೆಯ ಮಳೆಯಿಂದ ಬರಬಹುದಾದ ಉತ್ತಮ ಸುಗ್ಗಿಯ ಚಿತ್ರ ಮೂಡುತ್ತಿದೆ. ಪ್ರಕೃತಿ ಫಲಿಸಬೇಕು, ನಿಸರ್ಗ ಸುಭಿಕ್ಷವಾಗಬೇಕು; ಪಶು, ಪಕ್ಷಿ ಹಾಗು ಎಲ್ಲ ಜೀವಿಗಳೂ ಸಮರಸರಾಗಿ ಸುಖದಿಂದ ಬದುಕಬೇಕು ಎನ್ನುವ ಭಾವನೆ ಇದ್ದವರಿಗೆ ಮಾತ್ರ ಇಂತಹ ಆಲೋಚನೆ ಬರಲು ಸಾಧ್ಯ.
ಇದನ್ನು emphasize ಮಾಡುವ ಉದ್ದೇಶದಿಂದ, ಬೇಂದ್ರೆಯವರು ‘ಚಿತ್ತ’ ಪದವನ್ನು ಬಳಸಿದ್ದಾರೆ. (ಚಿತ್ತ ಅಂದರೆ ಅರಿವಿನ ಮೂಲರೂಪ ಎಂದು ಹೇಳಬಹುದು.)

 ಹನ್ನೊಂದನೆಯ ನುಡಿ:
ಗದ್ದ ಗಲ್ಲದ ಹಂಚಿ
ಕಣ್ಜೋಗಿ ಹಸಿರ ಹಣಿ
ಇಳಿದ ಬೆವರಿನ ನಡುವೆ
ತೊಳೆದು ಎದ್ದಾವ ||೧೧||

ಈ ಆಳುಮಕ್ಕಳಲ್ಲಿ ಗಂಡಾಳು ಹಾಗು ಹೆಣ್ಣಾಳು ಇಬ್ಬರೂ ಇರುತ್ತಾರೆ. ಗಂಡಾಳು ಹಾಗು ಹೆಣ್ಣಾಳು ಜೋಡಿಯಾಗಿಯೇ ಕೆಲಸಕ್ಕೆ ಹೋಗುವದು ಸಾಮಾನ್ಯವಾಗಿದೆ. ದುಡಿದು ದಣಿದ ಇಂತಹ ಹೆಣ್ಣಾಳುಗಳು ಹೇಗೆ ಕಾಣುತ್ತಿದ್ದಾರೆ?

ಈಗೆಲ್ಲ tattooing ಒಂದು ಫ್ಯಾಶನ್ ಆಗಿದೆ. ಬೇಂದ್ರೆಯವರ ಕಾಲದಲ್ಲಿ ಇದಕ್ಕೆ ಹಚ್ಚಿ (=ಹಂಚಿ) ಚುಚ್ಚಿಕೊಳ್ಳುವದು ಎನ್ನುತ್ತಿದ್ದರು. ಗದ್ದ, ಗಲ್ಲ ಹಾಗು ಹಣೆಯ ಮೇಲೆ ಹಸಿರು ಹಚ್ಚಿಯನ್ನು ಚುಚ್ಚಿಸಿಕೊಂಡು, ಹೆಂಗಳೆಯರು ತಮ್ಮ ಚೆಲುವನ್ನು ಹೆಚ್ಚಿಸಿಕೊಳ್ಳುತ್ತಿದ್ದರು. ಕಣ್ಜೋಗಿ ಎಂದರೆ ಕಣ್ಣಿನ ಸೋಗಿ (=eyeliner). ಇದೂ ಕೂಡ ಹಸಿರು ಹಚ್ಚಿಯೇ. ದುಡಿದು ಬೆವರಿದ ಇವರ ಮುಖದಲ್ಲಿ ಈ ಹಚ್ಚಿಗಳೆಲ್ಲ ಬೆವರಿನಿಂದಲೇ ತೊಳೆದು ಇನ್ನಿಷ್ಟು ನಿಚ್ಚಳವಾಗಿ ಕಾಣುತ್ತಿವೆ. ಈ ಹೆಣ್ಣುಮಕ್ಕಳ ಚೆಲುವು ದುಡಿತದ ಚೆಲುವು.

ಹನ್ನೆರಡನೆಯ ನುಡಿ:
ಸಿಂಗಾರಿಲ್ಲದೀ ಸೊಬಗು
ಸೊಗಸಿ-ಜೀವಕೆ ಮುದ್ದು;
ಸೋತ ದಾರಿಗರ ಕಣ್ಣು
ಮನಸು ಕದ್ದಾವ ||೧೨||

ಈ ಹೆಣ್ಣುಮಕ್ಕಳು ಶ್ರಮಜೀವನದಿಂದ ಬದುಕುವಂಥವರು. ಇವರಿಗೆ ಶೃಂಗಾರ ಮಾಡಿಕೊಳ್ಳಲು ವೇಳೆ ಹಾಗು ಹಣ ಸಿಕ್ಕೀತೆ? ಮುಖದ ಮೇಲೆ ಮೂರು ಹಸಿರು ಹಚ್ಚಿಗಳಾದರೆ ಸಾಕು. ಅವರಿಗೆ ಅದೇ ದೊಡ್ಡ ಶೃಂಗಾರ.
ಸಿಂಗಾರವಿಲ್ಲದಿದ್ದರೇನಾಯಿತು; ಸೊಬಗು ಇರಲಾರದೆ? ಅಂತಹ ಸೊಬಗನ್ನು ಮೆಚ್ಚುವವರು ‘ಸೊಗಸಿ-ಜೀವ’ಗಳು, ನಿರಾಭರಣ ಚೆಲುವನ್ನು ಮೆಚ್ಚಿ, ಮುದ್ದು ಮಾಡುವ ಅವರ ಜೊತೆಗಾರರು! ದಾರಿಯನ್ನು ನಡೆನಡೆದು ಈ ದಾರಿಗರು ಸೋತಿದ್ದರೂ ಸಹ, ತಮ್ಮ ಜೊತೆಗಾತಿಯರ ಈ ನಿರಾಭರಣ, ಶ್ರಮಿಕ ಚೆಲುವಿಗೆ ಮನಸೋತಿದ್ದಾರೆ. ‘ದಾರಿಗರು’ ಎನ್ನುವ ಪದವನ್ನು ಗಮನಿಸಿರಿ. ಇವರು ಕ್ರಮಿಸುತ್ತಿರುವದು ಬದುಕಿನ ದಾರಿ. ಈ ದಾರಿಯನ್ನು ಹಗುರಾಗಿ ಕ್ರಮಿಸಲು ಬೇಕಾಗುವದು ಪರಸ್ಪರ ಪ್ರೀತಿಯೇ ಹೊರತು ಶೃಂಗಾರ ಸಾಧನವಲ್ಲ!

ಹದಿಮೂರನೆಯ ನುಡಿ:
ಚವರಿ-ಜೋಳದ ತೆನೆಯೆ
ಎರಡು ಬದಿಗೆ ಸರಿದು
ಅವರ ಮುಖರೇದ ಮುಖಕೆ
ಚವರ ಹಿಡಿದಾವ ||೧೩||

ಈ ಶ್ರಮಿಕರಲ್ಲಿ ಶೃಂಗಾರಪ್ರಸಾದನವಿರಲಿಕ್ಕಿಲ್ಲ. ಆದರೆ ಪ್ರಕೃತಿಯೇ ಇವರಿಗೆ ಶೃಂಗಾರವನ್ನು ತೊಡಿಸುತ್ತದೆ. ಅದು ಹೇಗೆ? ನಿಸರ್ಗದ ಪ್ರತಿಯೊಂದು ವಸ್ತುವಿನಲ್ಲೂ ಜೀವವಿದೆ. ಅದು ಪ್ರೇಮ ಹಾಗು ಕರುಣೆಗೆ ಸ್ಪಂದಿಸುತ್ತದೆ. ಆದುದರಿಂದ ಅಲ್ಲಿ ಬೆಳೆದು ನಿಂತ ಜೋಳದ ಪೀಕು ಸಹ ಈ ಆಳುಮಕ್ಕಳೊಡನೆ ಒಂದಾಗಿ ಆಡಬಯಸುತ್ತದೆ. ಅವರೊಡನೆ ಅದು ಸ್ಪಂದಿಸುವ ರೀತಿಯನ್ನು ನೋಡಿರಿ:

ಈ ಆಳುಮಕ್ಕಳು ಹೊಲದಲ್ಲಿ ಹಾದು ಹೋಗುವಾಗ, ತೆನೆ ಹೊತ್ತ ಚವರಿ-ಜೋಳವು ಎರಡು ಭಾಗವಾಗಿ, ಅವರಿಗೆ ದಾರಿ ಮಾಡುತ್ತದೆ. (ಚವರಿ ಎಂದರೆ ಜೋಳದ ಒಂದು ಪ್ರಕಾರ. ಚವರಿ ಪದಕ್ಕೆ ಹೆಣ್ಣುಮಕ್ಕಳು ಹೆರಳಿನ ಕೊನೆಗೆ ಜೋಡಿಸಿಕೊಳ್ಳುವ ಗೊಂಡೆ ಎನ್ನುವ ಅರ್ಥವೂ ಇದೆ.) ಈ ತೆನೆಗಳು ಆಗ ದೇವರಿಗೆ ಬೀಸುವ ಚಾಮರದಂತೆ ಕಾಣುತ್ತವೆ. ಈ ಆಳುಮಕ್ಕಳು ಮೌನಿಯಾಗಿ ನಡೆದಿಲ್ಲ. ಮಾತನಾಡುತ್ತ ಹಾಗು ನಗುತ್ತ ಹೊರಟಿದ್ದಾರೆ. (ಮುಖರೇದ ಅಂದರೆ ಮಾತುಗುಳಿ ಎನ್ನುವ ಅರ್ಥ.) ಉಲ್ಲಾಸದಿಂದ ಸಂಭಾಷಿಸುತ್ತಿರುವ ಅವರ ಮಾತುಗಾರ ಮುಖಕ್ಕೆ ಈ ತೆನೆಗಳು ಚಾಮರ ಹಿಡಿದಂತೆ ಕಾಣುತ್ತಿವೆ.


ಹದಿನಾಲ್ಕನೆಯ ನುಡಿ:
ಹಗಲು ಮಲ್ಲಾಡಕೆ ಕಳೆದು
ಇರುಳು ವಸತಿಗಂತ
ಬೆಳ್ಳಕ್ಕಿ ತೋರಣಗಟ್ಟಿ
ಬೆಳವಲಕ್ಕೆ ನಡೆದಾವ ||೧೪||


ಮಾನವಜೀವಿಗಳ ಚಟುವಟಿಕೆಯನ್ನು ಬಣ್ಣಿಸಿದ್ದಾಯ್ತು. ಇನ್ನು ಇತರ ಜೀವಿಗಳೂ ಸಹ ಈ ಪರಿಸರದ ವಾಸಿಗಳೇ ಅಲ್ಲವೆ? ಬೇಂದ್ರೆಯವರು ಆಗಸದಲ್ಲಿ ಹಾರುತ್ತ, ತಮ್ಮ ಗೂಡಿನತ್ತ ಮರಳುತ್ತಿರುವ ಹಕ್ಕಿಗಳನ್ನು ನೋಡುತ್ತಾರೆ.

ಬೆಳ್ಳಕ್ಕಿಗಳ ಹಿಂಡು ಹಗಲು ಹೊತ್ತಿನಲ್ಲಿ ಮಲೆನಾಡಿಗೆ ತೆರಳಿ, ಅಲ್ಲಿ ತನ್ನ ಭೋಜನವನ್ನು ಮುಗಿಸಿಕೊಂಡು, ಈಗ ಇರುಳಿನಲ್ಲಿ ತಮ್ಮ ವಸತಿಗೆ ಅಂದರೆ ಗೂಡಿಗೆಂದು ಬೆಳವಲಕ್ಕೆ ತೆರಳುತ್ತಿವೆ. ಒಂದು ಶಿಸ್ತಿನಲ್ಲಿ ಹಾರುವ ಬೆಳ್ಳಕ್ಕಿಯ ಸಾಲು ತೋರಣದಂತೆ ಕಾಣುವದು ಸಹಜವೆ!

ಧಾರವಾಡವು ಮಲೆನಾಡು ಹಾಗು ಬೆಳವಲದ ಸಂಧಿಸ್ಥಾನದಲ್ಲಿದೆ. ಈ ಹಕ್ಕಿಗಳು ಹಗಲಿನಲ್ಲಿ ಧಾರವಾಡದ ಪಶ್ಚಿಮಕ್ಕೆ ಚಲಿಸಿ ಹೇರಳವಾಗಿ ಸಿಗುವ ಕಾಳುಕಡಿ ಹಾಗು ಕೀಟಗಳನ್ನು ಭಕ್ಷಿಸುವವು. ಸಂಜೆಯಾದೊಡನೆ ಧಾರವಾಡದ ಪೂರ್ವಕ್ಕೆ, ಹೆಚ್ಚು ಸುರಕ್ಷಿತವಾದ ವಾಸಸ್ಥಾನಕ್ಕೆ ತೆರಳುವವು.

ಹದಿನೈದನೆಯ ನುಡಿ:
ಬಯಲು ಗುಡಿಸಲದ ಜೀವ
ಕಾಡು-ಗೂಡಿನ ಹಕ್ಕಿ
ತಮ್ಮ ಸರಿಜೋಡಿ ಮಾಡಿ
ಸೋಬಾನೆ ಹೇಳ್ಯಾವ ||೧೫||

ಬೇಂದ್ರೆಯವರು ಈಗ ಪ್ರಕೃತಿಯ ಜೀವಿಗಳಲ್ಲಿಯ ಸಾಮ್ಯತೆಯನ್ನು ಗಮನಿಸುತ್ತಾರೆ.
ಹೊಲದಲ್ಲಿ ದುಡಿದು ವಿಶ್ರಾಂತಿಗೆಂದು ಗುಡಿಸಲಿಗೆ ಮರಳುತ್ತಿರುವ ಮಾನವ ಜೀವಿಗಳಿಗೆ ಹಾಗು ಆಹಾರಕ್ಕಾಗಿ ಹಾರಾಡಿ, ಈಗ ಗೂಡಿಗೆ ಮರಳುತ್ತಿರುವ ಹಕ್ಕಿಗಳಿಗೆ ಇರುವ ಸಾಮ್ಯತೆ ಏನು?

ಒಕ್ಕಲುಮಕ್ಕಳು ಬಯಲಲ್ಲಿ ಗುಡಿಸಲು ಹಾಕಿಕೊಂಡು ಬದುಕುವ ಬಡಜೀವಿಗಳು; ಹಕ್ಕಿಗಳು ಕಾಡಿನಲ್ಲಿ ಗೂಡು ಕಟ್ಟಿಕೊಂಡು ಇರುವ ಜೀವಿಗಳು. ಈ ಎರಡೂ ಜೀವಿಗಳು ಅವತ್ತಿನ ಅನ್ನವನ್ನು ಅವತ್ತಿನ ದುಡಿತದಿಂದ ಪಡೆಯುವ, ಲೋಭವಿಲ್ಲದ ಸರಳ ಜೀವಿಗಳು ಹಾಗು ಪ್ರಕೃತಿಯೊಡನೆ ಸಮರಸವಾಗಿ ಬಾಳುವ ಜೀವಿಗಳು.

ಇರುಳು ಸರಿದು ಬಂದಂತೆ, ಈ ಮುಗ್ಧಜೀವಿಗಳು ತಮ್ಮ ತಮ್ಮ ಜೊತೆಗಾರ/ಜೊತೆಗಾತಿಯನ್ನು ಜೋಡಿ ಮಾಡಿಕೊಂಡು ಸೋಬಾನೆ ಹಾಡುತ್ತ ಆನಂದಿಸುತ್ತಾರೆ. ಸೋಬಾನೆ ಹಾಡುವದು ಎನ್ನುವ ಪದಪುಂಜ ತುಂಬ ಅರ್ಥಪೂರ್ಣ ಬಳಕೆಯಾಗಿದೆ. ಇದು ಈ ಮುಗ್ಧ ಜೀವಿಗಳ  ಸಾಮುದಾಯಿಕ ಬದುಕನ್ನು ತೋರಿಸುವದಲ್ಲದೆ, ಸೋಬಾನೆ(=ಶೋಭನ) ಅಂದರೆ ಪ್ರೇಮಮಗ್ನವಾಗುವ ನೈಸರ್ಗಿಕ ಕ್ರಿಯೆಯನ್ನು ಸೂಚಿಸುತ್ತದೆ.

ಹದಿನಾರನೆಯ ನುಡಿ:
ಮುಚ್ಚಂಜೆ ಮುಗಿದಾಗ
ಸೀಗಿಗೌರಿಯ ದನಿಯೆ
ತೇಲಿ ಬರುವಂತೆ ನಾಡು
ಕಿವಿಯಾಗಿ ಕೇಳ್ಯಾವ ||೧೬||

ಸಂಜೆ ಮುಗಿದು ಇರುಳು ಮುಸುಕುತ್ತಿದೆ. ಈ ಹಕ್ಕಿಗಳು ಹಾಗು ಈ ಕಾಯಕಜೀವಿಗಳು ಹಾಡುವ ‘ಸೋಬಾನೆ’ ಹಾಡು ಪರಿಸರವನ್ನು ತುಂಬಿಕೊಳ್ಳುತ್ತಿದೆ. ಇದು ಸೀಗಿಹುಣ್ಣಿವೆ ಬರುವ ಚೆಲುವಿನ ಕಾಲ. ಸೀಗಿಹುಣ್ಣಿವೆಯಂದು ಒಕ್ಕಲಿಗರು ಹೊಲದಲ್ಲಿ ಚರಗ ಚೆಲ್ಲಿ ಪ್ರಕೃತಿದೇವಿಗೆ ನಮಿಸುತ್ತಾರೆ. ಆದುದರಿಂದ ಈ ಸೋಬಾನೆ ಹಾಡು ಸೀಗಿಗೌರಿಯ ದನಿಯಂತೆಯೇ ಭಾಸವಾಗುತ್ತಿದೆ. ಗಾಳಿಯಲ್ಲಿ ತೇಲಿ ಬರುವ ಈ ಹಾಡನ್ನು ಇಡೀ ನಾಡೇ ಕಿವಿಯಾಗಿ ಕೇಳುತ್ತಿದೆ. ನಾಡು ಎನ್ನುವ ಪದವು ಚರಾಚರ ಜಗತ್ತನ್ನೆಲ್ಲ ಸೂಚಿಸುತ್ತದೆ. ಭಗವಂತನ ಸೃಷ್ಟಿಯೆಲ್ಲ ಈ ನಾದದಲ್ಲಿ ಲೀನವಾಗಿದೆ.

ಈ ಕವನದ ಪ್ರತಿ ನುಡಿಯ ಕೊನೆಯಲ್ಲಿ ಬರುವ ಕ್ರಿಯಾಪದವು ಬಹುವಚನದಲ್ಲಿ ಇದ್ದುದನ್ನು ಗಮನಿಸಬೇಕು. ಉದಾಹರಣೆಗೆ ‘ ಬಿಸಿಲು ಮೈಚಾಚ್ಯಾವ, ಬೈತಲಾ ಬಾಚ್ಯಾವ’ ಇತ್ಯಾದಿ. ಆಡುನುಡಿಯಲ್ಲಿ ಸಹ ಇಂತಹದೇ ಪ್ರಯೋಗವು ಸಾಮಾನ್ಯವಾಗಿದೆ.

 ಈ ರೀತಿಯ ಪ್ರಯೋಗದಿಂದ ಬೇಂದ್ರೆಯವರು ಬಹು ವಸ್ತುಗಳು ಏಕರೂಪವಾಗಿ ಕ್ರಿಯೆಯಲ್ಲಿ ತೊಡಗುವದನ್ನು ಅರ್ಥಾತ್ ಸಮರಸದ ಕ್ರಿಯೆಯನ್ನು ತೋರಿಸುತ್ತಿದ್ದಾರೆ. ಇಂತಹ ಪ್ರಯೋಗದ ಮತ್ತೊಂದು ಪ್ರಯೋಜನವೆಂದರೆ, ಬಿಸಿಲು, ಗಾಳಿ ಈ ಮೊದಲಾದ ವಸ್ತುಗಳ ಕ್ರಿಯಾಪ್ರದೇಶಗಳು ವೈಶಾಲ್ಯವನ್ನು ಪಡೆಯುತ್ತವೆ.

 ಕೊನೆಯ ನುಡಿಯಲ್ಲಿ ‘ನಾಡು ಕೇಳ್ಯಾವ’ ಎನ್ನುವಾಗ ‘ನಾಡು’ ಏಕವಚನದಲ್ಲಿದ್ದರೂ ಸಹ ಕ್ರಿಯಾಪದವು ಬಹುವಚನದಲ್ಲಿದೆ. ಏಕೆಂದರೆ ನಾಡಿನಲ್ಲಿಯ ಎಲ್ಲ ಚರಾಚರ ವಸ್ತುಗಳು ಈ ಹಾಡನ್ನು ಕೇಳುತ್ತಿವೆ.
ಉದ್ದೇಶಕ್ಕೆ ತಕ್ಕಂತೆ ‘ವ್ಯಾಕರಣವನ್ನು ಬಗ್ಗಿಸಿಕೊಳ್ಳುವ’ ಈ ಕಲೆ ಚಮತ್ಕಾರಿಕವಾದದ್ದು!

ಪ್ರಕೃತಿಯು ಪಂಚಭೂತಾತ್ಮಕವಾಗಿದೆ. ಪೃಥ್ವಿ, ಅಪ್, ತೇಜ, ಆಕಾಶ, ವಾಯು ಇವು ಈ ಪಂಚಮಹಾಭೂತಗಳು. ‘ಚಿತ್ತಿ ಮಳೆಯ ಸಂಜೆ’ ಕವನದಲ್ಲಿ ಪ್ರಕೃತಿಯ ಪೂಜೆಯಿದೆ. ಮೊದಲೆರಡ ನುಡಿಗಳಲ್ಲಿ ಅಪ್ ಅಂದರೆ ಮಳೆಯ ವರ್ಣನೆಯಿದ್ದರೆ, ಮೂರನೆಯ, ಐದನೆಯ ಹಾಗು ಆರನೆಯ ನುಡಿಗಳಲ್ಲಿ ತೇಜ ಅಂದರೆ ಸೂರ್ಯನ ವರ್ಣನೆ ಇದೆ. ನಾಲ್ಕನೆಯ ನುಡಿಯಲ್ಲಿ ವಾಯುವಿನ ವರ್ಣನೆ ಇದ್ದರೆ ಕೊನೆಯಲ್ಲಿ ಪೃಥ್ವಿ ಅಂದರೆ ಭೂತಾಯಿಯ ವರ್ಣನೆ ಇದೆ. ಜೀವಸಂಕುಲವೂ ಸಹ ಪಂಚಭೂತಗಳಿಂದಲೇ ಸೃಷ್ಟಿಯಾದದ್ದು. ಮಾನವ ಹಾಗು ಪಕ್ಷಿಗಳನ್ನು ಒಳಗೊಂಡ ಈ ಜೀವಸಂಕುಲವು ಪ್ರಕೃತಿಯೊಡನೆ ಸಮರಸವಾಗಿ ಬಾಳುವ ಸ್ಥಿತಿಯನ್ನು ೮ರಿಂದ ೧೫ನೆಯ ವರೆಗಿನ ನುಡಿಗಳು ವರ್ಣಿಸುತ್ತವೆ. ೧೬ನೆಯ ನುಡಿಯು ಈ ಪ್ರಕೃತಿಯು ದೈವೀ ಚೈತನ್ಯ ಎಂದು ಸಾರುತ್ತದೆ.

ಬೇಂದ್ರೆಯವರ ಕವನಗಳು ತೋರಿಕೆಗೆ ತುಂಬ ಸರಳವಾದ ಕವನಗಳು. ದೇಸಿ ನುಡಿಯಲ್ಲಿರುವದರಿಂದ  ಸಂಸ್ಕೃತ ಪದಗಳ ಸಮಾಸಜೋಡಣೆಯ ಲಾಭ ಇಲ್ಲಿ ಸಿಗುವದಿಲ್ಲ. ಬೇಂದ್ರೆಯವರಿಗೆ ಅದು ಬೇಕಾಗಿಯೇ ಇಲ್ಲ. ದೇಸಿ ಪದಗಳನ್ನೇ ಬಳಸಿ ಅವರು ಅಪೂರ್ವ ಅರ್ಥಸಾಧನೆಯನ್ನು ಮಾಡಬಲ್ಲರು. ‘ಸಿಂಗಾರಿಲ್ಲದೀ ಸೊಬಗು’ ಹಾಗು ‘ಸೊಗಸಿ-ಜೀವ’ ಎನ್ನುವ ಪದಗಳ ಅರ್ಥಗರ್ಭಿತೆಯನ್ನು ಉದಾಹರಣೆಗೆಂದು ನೋಡಬಹುದು. 

ಬೇಂದ್ರೆಯವರು ನಿಸರ್ಗದ ಸಾಧಾರಣ ಎನ್ನಿಸಬಹುದಾದ ನೋಟಗಳನ್ನು ಸರಳವಾಗಿ ವಿವರಿಸುತ್ತಲೇ, ಸಂಕೀರ್ಣವಾದ ಕವನವನ್ನು ರಚಿಸಬಲ್ಲರು. ಚಿತ್ತಿಯ ಮಳೆಯ ಸಂಜೆಯು ತರುವ ಆಹ್ಲಾದದಿಂದ ಪ್ರಾರಂಭವಾಗುವ ಕವನವು, ಸುತ್ತಲಿನ ಪ್ರಕೃತಿಯ ಲಾಸ್ಯವನ್ನು ಕ್ರಮಬದ್ಧವಾಗಿ ವರ್ಣಿಸುತ್ತಲೇ, state of blissಗೆ ಹೋಗಿ ತಲುಪತ್ತದೆ.

‘ಚಿತ್ತಿಯ ಮಳೆಯ ಸಂಜೆ’ ಕವನವು ಕೇವಲ ಪ್ರಕೃತಿವರ್ಣನೆಯ ಕವನವಲ್ಲ. ಇದು ಋಷಿಹೃದಯದ ಕವಿಯೊಬ್ಬನ ದಾರ್ಶನಿಕ ಕವನ.

‘ನಾನೃಷಿಃ ಕುರುತೇ ಕಾವ್ಯಮ್!’

[ಟಿಪ್ಪಣಿ: ಬೇಂದ್ರೆಯವರು ಈ ಕವನದಲ್ಲಿ ತಲುಪಿದ ರಸಸಿದ್ಧಿಯ ಸಮರ್ಪಕ ವ್ಯಾಖ್ಯಾನವು ನನಗೆ ಸಾಧ್ಯವಾಗಿಲ್ಲ ಎನ್ನುವ ಅರಿವು ನನಗಿದೆ.]

Friday, November 4, 2011

“ಮಾ ನಿಷಾದ...."

“ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್!”

“ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು!”

ಇದು ವಾಲ್ಮೀಕಿ ಋಷಿಗಳಿಂದ ಹೊರಟ ಉದ್ಗಾರ.
ಈ ಉದ್ಗಾರ ಯಾರಿಗೆ ಸಂಬೋಧಿತವಾಗಿದೆ?

ಬೇಡನಾಗಿದ್ದ ವಾಲ್ಮೀಕಿ ಋಷಿಗಳು ನಾರದ ಮಹರ್ಷಿಗಳ ಪ್ರಭಾವದಿಂದ ತಮ್ಮ ತಮೋವೃತ್ತಿಯನ್ನು ತ್ಯಜಿಸಿದರು. ನಾರದರು ನೀಡಿದ ರಾಮನಾಮದ ಧ್ಯಾನದಲ್ಲಿ ಶಾಂತಿ ಹಾಗು ಪ್ರೇಮ ತುಂಬಿದ ಹೊಸ ಬದುಕನ್ನು ಅರಸಿದರು, ಮಹರ್ಷಿಗಳಾದರು. ಆದರೆ ತಮ್ಮ ಮೊದಲಿನ ಹಿಂಸಾಜೀವನದ ನೆನಪು ಅವರ ಮನಸ್ಸಿನಲ್ಲಿ ಕುದಿಯುತ್ತಲೇ ಇತ್ತು. ಎಷ್ಟೇ ಪರಿತಪಿಸಿದರೂ ಅವರಿಗೆ ಸ್ಥಿರವಾದ ಶಾಂತಿ ಸಿಗಲಿಲ್ಲ.

ಒಂದು ದಿನ ಮುಂಜಾವಿನಲ್ಲಿ ವಾಲ್ಮೀಕಿ ಋಷಿಗಳು ತಮ್ಮ ದೈನಂದಿನ ಆಚರಣೆಗಳಿಗಾಗಿ ನಡೆದಾಗ, ಬೇಡನೊಬ್ಬನು ಪ್ರೇಮಮಗ್ನವಾದ ಕ್ರೌಂಚಪಕ್ಷಿಗಳ ಜೋಡಿಯ ಮೇಲೆ ಬಾಣ ಬಿಡುವದನ್ನು ನೋಡುತ್ತಾರೆ. ಆ ಜೋಡಿಯಲ್ಲಿ ಗಂಡುಪಕ್ಷಿಯು ಬಾಣದ ಹೊಡೆತಕ್ಕೆ ಕೆಳಗುರುಳುತ್ತದೆ. ಹೆಣ್ಣು ಪಕ್ಷಿಯು ಶೋಕವಿಹ್ವಲವಾಗಿ ಗಂಡುಪಕ್ಷಿಯ ಸುತ್ತಲೂ ಹಾರಾಡತೊಡಗುತ್ತದೆ. ಆ ಸಮಯದಲ್ಲಿ ಅವರ ಬಾಯಿಯಿಂದ ಈ ಉದ್ಗಾರ ಹೊರಡುತ್ತದೆ:

“ಮಾ ನಿಷಾದ, ಪ್ರತಿಷ್ಠಾಂ ತ್ವಮಗಮ: ಶಾಶ್ವತೀಸ್ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್!”

“ಬೇಡನೇ, ಕಾಮಮೋಹಿತವಾದ ಈ ಕ್ರೌಂಚಪಕ್ಷಿಗಳ ಜೋಡಿಯಲ್ಲಿ ಒಂದನ್ನು ಕೊಂದ ನಿನಗೆ ಎಂದಿಗೂ ಶಾಂತಿ ಲಭಿಸಲಾರದು!”

ಬೇಟೆಯಾಡಿ ಹೊಟ್ಟೆ ತುಂಬಿಕೊಳ್ಳುವದು ಬೇಡನ ವೃತ್ತಿ. ಮೊದಲೊಮ್ಮೆ ತಾವೂ ಸಹ ಅದನ್ನೇ ಮಾಡಿದವರು. ಹಾಗಿರಲು ವಾಲ್ಮೀಕಿ ಮಹರ್ಷಿಗಳಿಗೆ ಈ ಬೇಡನ ಮೇಲೆ ಇಷ್ಟೊಂದು ಕೋಪ ಬರಬೇಕೆ? ವಾಲ್ಮೀಕಿ ಮಹರ್ಷಿಗಳು ಬೇಡನನ್ನು ಶಪಿಸಿದರೆ? ಅಥವಾ ತಮ್ಮ ಪೂರ್ವಜೀವನದ ನೆನಪಿನಿಂದ ಪರಿತಪ್ತರಾದ ಮಹರ್ಷಿಗಳು, ಆ ತಾಪದಿಂದ ಹೊರಬರಲಾರದೇ ತಮ್ಮನ್ನೇ ಶಪಿಸಿಕೊಂಡರೆ?

ಇಲ್ಲಿ ಮತ್ತೊಂದು ಸೂಕ್ಷ್ಮ ವಿಷಯವಿದೆ. ಈ ಕ್ರೌಂಚಪಕ್ಷಿಗಳು ಸೃಷ್ಟಿಕ್ರಿಯೆಯಲ್ಲಿ ನಿರತವಾಗಿದ್ದವು. ಆ ಜೋಡಿಯಲ್ಲಿ ಒಂದನ್ನು ಸಂಹರಿಸುವದೆಂದರೆ, ಸೃಷ್ಟಿಕ್ರಮಕ್ಕೆ ಭಂಗ ತಂದಂತೆ. ಇದು ಜೀವವಿರೋಧಿ ಮನೋಧರ್ಮ. ಇದೂ ಸಹ ವಾಲ್ಮೀಕಿ ಮಹರ್ಷಿಯವರನ್ನು ಉದ್ವಿಗ್ನಗೊಳಿಸಿದೆ. ತಾವೂ ಇದೇ ತರಹ, ಜೀವವಿರೋಧಿ ಹಿಂಸಾಕರ್ಮದಲ್ಲಿ ನಿರತರಾಗಿದ್ದವರು. ಕಾಡುತ್ತಿರುವ ಆ ಕ್ರೂರ ನೆನಪುಗಳಿಂದ ಬಿಡುಗಡೆ ಪಡೆಯುವದು ಹೇಗೆ? ಪಶ್ಚಾತ್ತಾಪದಲ್ಲಿ, ಆತ್ಮನಿಂದನೆಯಲ್ಲಿ ಎಷ್ಟು ಬಳಲಿದರೇನು, ಮನಶ್ಶಾಂತಿ ದೊರೆಯುವದು ಸಾಧ್ಯವೆ?

ಈ ತೊಳಲಾಟದಲ್ಲಿ ಸಿಲುಕಿದಾಗ, ಅವತಾರಪುರುಷನಾದ ಶ್ರೀರಾಮಚಂದ್ರನ ಚರಿತ್ರೆಯನ್ನು ರಚಿಸುವದರಿಂದ ತಮ್ಮ ಮನಸ್ಸನ್ನು ಶಾಂತಗೊಳಿಸಬಹುದೆನ್ನುವ ದೈವೀ ಪ್ರೇರಣೆ ಅವರಿಗೆ ದೊರೆಯುತ್ತದೆ. ಅದರ ಫಲವೇ ‘ರಾಮಾಯಣ’.

ಇದನ್ನೇ ಶ್ರೀ ಗೋಪಾಲಕೃಷ್ಣ ಅಡಿಗರು ‘ಕ್ರೌಂಚವಧದುದ್ವೇಗದಳಲ ಬತ್ತಲ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು’ ಎಂದು ಬಣ್ಣಿಸಿದ್ದಾರೆ. ಬುಧಕೌಶಿಕ ಋಷಿಗಳು ತಮ್ಮ ರಾಮರಕ್ಷಾ ಸ್ತೋತ್ರದ ಪ್ರಾರಂಭದಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ವಂದಿಸುತ್ತ,
‘ಕೂಜಂತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿಕೋಕಿಲಮ್’, ಎಂದು ಹೇಳುತ್ತಾರೆ.

ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾವ್ಯವೆನ್ನುವ ಮರದ ಶಾಖೆಗಳ ಮೇಲೆ ‘ರಾಮ, ರಾಮ’ ಎಂದು ಕೂಜಿಸುವ ಕೋಗಿಲೆಯಾದಾಗ, ಅವರ ಮನದ ತಾಪವೆಲ್ಲ ಹರಿದು ಹೋಗಿ, ಮನಸ್ಸು ಶಾಂತಗೊಳ್ಳುತ್ತದೆ. ರಾಮಾಯಣದ ರಚನೆಯಿಂದ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತವಾಗಲು ಕಾರಣವೇನು? ರಾಮಾಯಣವು ಧರ್ಮಮಾರ್ಗದ ಹಾಗು ತ್ಯಾಗಜೀವನದ ಬೋಧೆಯಾಗಿದೆ. ಇಂತಹ ಜೀವನದಿಂದಲೇ ಮನಸ್ಸಿನ ಶಾಂತಿ ಸಾಧ್ಯ. ತಂದೆಯ ವಚನಪಾಲನೆಗಾಗಿ ಶ್ರೀರಾಮಚಂದ್ರನು ರಾಜಪಟ್ಟವನ್ನು ತ್ಯಜಿಸಿದನು. ರಾಜಪಟ್ಟವು ಭೋಗದ ಸಂಕೇತ, ವನವಾಸವು ತ್ಯಾಗದ ಪ್ರತೀಕ. ಉಚ್ಛೃಂಖಲ ಭೋಗದ ಶಿಖರಸ್ಥಾನವಾದ ಲಂಕೆಯ ಅವನತಿಯೂ ತ್ಯಾಗಜೀವನದ ಹಿರಿಮೆಯನ್ನೇ ಸೂಚಿಸುತ್ತದೆ. ಮರ್ಯಾದಾಪುರುಷೋತ್ತಮನೆಂದು ನಾವು ಗೌರವಿಸುವ ಶ್ರೀರಾಮಚಂದ್ರನ ಪವಿತ್ರ ವ್ಯಕ್ತಿತ್ವವನ್ನು ಧ್ಯಾನಿಸುತ್ತ, ಲೇಖಿಸುತ್ತ ವಾಲ್ಮೀಕಿ ಮಹರ್ಷಿಗಳ ಮನಸ್ಸು ಶಾಂತಿಯನ್ನು ಪಡೆಯಲು ಸಾಧ್ಯವಾಯಿತು. ಗೋಪಾಲಕೃಷ್ಣ ಅಡಿಗರು ಹೇಳುವಂತೆ, ‘ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತೀತೇನು ಪುರುಷೋತ್ತಮನ ಆ ಅಂಥ ರೂಪರೇಷೆ’?

ಕಾಳಿದಾಸನ ‘ಮೇಘದೂತ’ದ ಪ್ರಾರಂಭದ ನುಡಿಯನ್ನು ನೋಡಿರಿ:
“ಕಶ್ಚಿತ್ ಕಾಂತಾವಿರಹಗುರುಣಾ ಸ್ವಾಧಿಕಾರಾತ್ ಪ್ರಮತ್ತ:
ಶಾಪೇನಾಸ್ತಂಗಮಿತಮಹಿಮಾ ವರ್ಷಭೋಗ್ಯೇಣ ಭರ್ತ್ರುಃ
ಯಕ್ಷಶ್ಚಕ್ರೇ ಜನಕತನಯಾಸ್ನಾನಪುಣ್ಯೋದಕೇಷು
ಸ್ನಿಗ್ಧಶ್ಛಾಯಾ ತರುಷು ವಸತೀನ್ ರಾಮಗಿರ್ಯಾಶ್ರಮೇಷು”

ಗಂಧರ್ವರ ನಾಡಿನ ಯಕ್ಷನೊಬ್ಬ ತನ್ನ ಅಧಿಕಾರಬಲದಿಂದ ಸೊಕ್ಕಿದ್ದಾನೆ. ಅದರಿಂದಾಗಿ ಆತನು ಒಂದು ವರ್ಷ ಭೂಲೋಕವಾಸಿಯಾಗುವ ಶಾಪಕ್ಕೆ ಸಿಲುಕುತ್ತಾನೆ. ಈ ಅವಧಿಯಲ್ಲಿ ಆತನು ಆರಿಸಿಕೊಳ್ಳುವ ವಾಸಸ್ಥಾನ ಯಾವುದು?

ಸೀತಾದೇವಿಯ ಸ್ನಾನದಿಂದ ಪವಿತ್ರವಾದಂತಹ ಸರೋವರವಿರುವ ರಾಮಗಿರಿ ಆಶ್ರಮ! ಸೀತಾದೇವಿಯು ತನ್ನ ಪತಿಯ ಜೊತೆಗೆ ವನವಾಸವನ್ನು ಆರಿಸಿಕೊಂಡಳು. ಆ ಆಟವಿಕ ಜೀವನದಲ್ಲಿಯೇ ಅವಳಿಗೆ ಸಂತೋಷವಿತ್ತು. ಅಯೋಧ್ಯೆಗೆ ಮರಳಿದ ನಂತರವೂ ರಾಮ,ಸೀತೆಯರು ತಮ್ಮ ವನವಾಸದ ದಿನಗಳನ್ನು ನೆನೆಸಿಕೊಂಡು ಪುಲಕಿತರಾಗುತ್ತಾರೆ. ಭವಭೂತಿಯು ರಚಿಸಿದ ‘ಉತ್ತರರಾಮಚರಿತಮ್’ ನಾಟಕದಲ್ಲಿ ‘ತೇಹಿ ನೋ ದಿವಸಾ ಗತಾ:’ (ಆ ನಮ್ಮ ದಿನಗಳು ಕಳೆದು ಹೋದವಲ್ಲ) ಎಂದು ಗತಕಾಲದ ಸ್ಮರಣೆಯಲ್ಲಿ ಮುಳುಗುತ್ತಾರೆ.

ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಭಾರತದಲ್ಲಿ ಹಾಗು ವಿದೇಶಗಳಲ್ಲಿ ಅನೇಕ ಕಾವ್ಯಗಳು ಹಾಗು ನಾಟಕಗಳು ರಚಿತವಾದವು. ವಾಲ್ಮೀಕಿ ಮಹರ್ಷಿಗಳು ಭಾರತದ ವಿಶ್ವಮಾನ್ಯ ಆದಿಕವಿಯಾದರು. ಭಾರತಕ್ಕೆ ತನ್ನ ಮೊದಲ ಮಹಾಕಾವ್ಯ ದೊರೆಯಿತು. ನಿಷಾದನೊಬ್ಬನ ಮನಸ್ಸು ಶಾಂತಿ ಪಡೆಯಿತು.

Thursday, October 20, 2011

‘ನಾನು ಹೋದರೆ ಹೋಗಬಹುದು’----ಕನಕದಾಸರು


ಶ್ರೀ ವ್ಯಾಸರಾಯರು (೧೪೪೭-೧೫೩೯) ವಿಜಯನಗರದ ರಾಜರಿಗೆ ಗುರುಸ್ಥಾನದಲ್ಲಿ ಇದ್ದವರು. ಭಕ್ತಿಪಂಥದ ದಾಸಕೂಟಕ್ಕೆ ಇವರು ಅಧ್ವರ್ಯರು. ಇಂತಹ ಉಚ್ಚ ತರಗತಿಯ ದಾಸಕೂಟದಲ್ಲಿ ಮೋಕ್ಷ ಪಡೆಯುವ ಯೋಗ್ಯತೆ ಇದ್ದವರು ಕೆಲವರಾದರೂ ಇದ್ದಿರಬಹುದಲ್ಲವೆ? ವ್ಯಾಸರಾಯರು ತಮ್ಮ ಶಿಷ್ಯರೆದುರಿಗೆ ಈ ಪ್ರಶ್ನೆಯನ್ನು ಇರಿಸುತ್ತಾರೆ: ‘ನಮ್ಮಲ್ಲಿ ವೈಕುಂಠಕ್ಕೆ ಯಾರು ಹೋಗಬಹುದು?’ ಉತ್ತರ ಹೇಳುವ ಧೈರ್ಯ ಕನಕದಾಸರನ್ನು ಬಿಟ್ಟರೆ ಯಾರಿಗೂ ಇರುವದಿಲ್ಲ.
ಕನಕದಾಸರು ಉತ್ತರಿಸುತ್ತಾರೆ: ‘ನಾನು ಹೋದರೆ ಹೋಗಬಹುದು!’

ಕನಕದಾಸರ ಉತ್ತರದ ಒಳಾರ್ಥವನ್ನು ತಿಳಿದವರು ಅದನ್ನು ನಮಗೂ ತಿಳಿಸಿದ್ದಾರೆ. ‘ನಾನು’ ಎಂದರೆ ಮನುಷ್ಯನ ಅಹಂಭಾವ. ಅಹಂಭಾವ ನಾಶವಾಗುವದೇ ಮೋಕ್ಷ ಇತ್ಯಾದಿ. ಅಹಂಭಾವಕ್ಕೆ  arrogance ಎನ್ನುವ ಅರ್ಥ ಇದ್ದಂತೆಯೇ self identity ಅಥವಾ ego ಎನ್ನುವ ಅರ್ಥವೂ ಇದೆ. ಕನಕದಾಸರು ‘ನಾನು’ ಎನ್ನುವ ಪದವನ್ನು arrogance ಎನ್ನುವ ಅರ್ಥದಲ್ಲಿ ಬಳಸಿಲ್ಲ. ಅವರು ಅದನ್ನು   self identity ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ಈ self identity ಎನ್ನುವ ಆಂಗ್ಲ ಪದಕ್ಕೆ ಕನ್ನಡದಲ್ಲಿ  ‘ಅಹಂಸಂಜ್ಞೆ’, ‘ಅಹಂಪ್ರಜ್ಞೆ’ ಅಥವಾ ‘ಅಹಮಿಕೆ’ ಎನ್ನುವ ಪದವನ್ನು ಬಳಸಬಹುದು. ಅಲ್ಲಮಪ್ರಭುಗಳು self identityಗೆ ‘ಕುರುಹು’ ಎನ್ನುವ ಪದವನ್ನು ಬಳಸಿದ್ದಾರೆ. ‘ಅಸ್ಮಿತೆ’ ಎನ್ನುವ ಪದವೂ ಬಳಕೆಯಲ್ಲಿದೆ. ನವೋದಯ ಕಾಲದ ಮಹಾನ್ ಚಿಂತಕರಾದ ಕುವೆಂಪು ಅವರು ಓ ನನ್ನ ಚೇತನಾ, ಆಗು ನೀ ಅನಿಕೇತನಾ!’ ಎನ್ನುವಾಗ ತಮ್ಮ ಅಪರಿಮಿತ ಚೈತನ್ಯಕ್ಕೆ ಯಾವುದೇ ಪರಿಮಿತ ಅಹಂಸಂಜ್ಞೆ ಬೇಡ ಎಂದೇ ಹೇಳುತ್ತಾರೆ.

`ನಾನು’ ಅಥವಾ ಅಹಂಪ್ರಜ್ಞೆಯು ವಿಕಸಿಸುವ ಬಗೆ ಹೇಗೆ? ಗರ್ಭಸ್ಥ ಭ್ರೂಣ ಹಾಗು  ನವಜಾತ ಶಿಶುವಿನಲ್ಲಿ ಇರುವ ಅಹಂಪ್ರಜ್ಞೆಯು ಜೈವಿಕ ಅಹಂಪ್ರಜ್ಞೆ ಅಥವಾ biological identity. ಹುಟ್ಟಿದ ಶಿಶುವು ಮಾಡುವ ಮೊದಲನೆಯ ಕೆಲಸವೆಂದರೆ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ. ಇದು ಅದರ ಜೈವಿಕ ಅವಶ್ಯಕತೆ. ಈ ಜೈವಿಕ ಅಹಂಪ್ರಜ್ಞೆಯು ಎಲ್ಲ ಜೀವಿಗಳಿಗೆ ಒಂದೇ ತೆರನಾಗಿರುತ್ತದೆ. ಕೆಲವೇ ತಿಂಗಳುಗಳಲ್ಲಿ ಆ ಶಿಶುವು ದೈಹಿಕ ಅಹಂಪ್ರಜ್ಞೆ ಅಥವಾ physiological identityಯನ್ನು ಬೆಳೆಯಿಸಿಕೊಳ್ಳುತ್ತದೆ. ತಾನು ದೈಹಿಕವಾಗಿ ಯಾವ ತರಹದ ಪ್ರಾಣಿ ಎನ್ನುವದನ್ನು ಆ ಜೀವಿ ಅರಿಯಲಾರಂಭಿಸುತ್ತದೆ. ಮೂರು ವರ್ಷದ ಬಾಲರಿಗೆ ಲಿಂಗ-ಕುರುಹು ಅಥವಾ gender identity ತಿಳಿದಿರುತ್ತದೆ ಎಂದು ಹೇಳುತ್ತಾರೆ. ತನ್ನ ತಾಯಿಯ ಜೊತೆಗಿರುವ ತನ್ನ ಸಂಬಂಧವನ್ನು ಗುರುತಿಸುವದು ಅದರ ಮೊದಲ ಸಾಮಾಜಿಕ ಅಹಂಸಂಜ್ಞೆ ಅಥವಾ social identity. ಇದೇ ರೀತಿಯಾಗಿ ಮನುಷ್ಯನ(ಳ) ‘ಕುರುಹು’ಗಳು ಬೆಳೆಯುತ್ತ ಹೋಗುತ್ತವೆ.

‘ನಾನು ಹೋದರೆ ಹೋಗಬಹುದು’ ಎಂದು ಹೇಳುವಾಗ ಕನಕದಾಸರಿಗೆ ಇದ್ದಂತಹ ಅಹಂಸಂಜ್ಞೆಗಳು ಯಾವವು?
ಕನಕದಾಸರು ಶಿಗ್ಗಾವಿ ತಾಲೂಕಿನಲ್ಲಿರುವ ಬಂಕಾಪುರದ ಹತ್ತಿರ ಇರುವ ‘ಬಾಡ’ ಹಳ್ಳಿಯಲ್ಲಿ ಹುಟ್ಟಿದವರು. ಬೀರನಾಯಕ ಎನ್ನುವದು ಇವರ ಮೊದಲಿನ ಹೆಸರು. ಇವರು ಪಾಳೆಯಗಾರಿಕೆಯ ವಂಶದವರು. ದಾಯಾದಿಕಲಹದಲ್ಲಿ ಇವರಿಗೆ ಪಾಳೆಯಗಾರಿಕೆ ದಕ್ಕುವದಿಲ್ಲ. ಆಗ ಇವರು ವಿಜಯನಗರದ ಫೌಜಿನಲ್ಲಿ ದಣಾಯಕರಾಗಿ ಸೇರ್ಪಡೆಯಾಗುತ್ತಾರೆ. ಸೇನೆಯಲ್ಲಿ ಇವರಿಗೆ ಒಳ್ಳೆಯ ಹೆಸರು ಹಾಗು ಅಧಿಕಾರ ದೊರೆತಿದ್ದವು. ಆ ಸಮಯದಲ್ಲಿ ಸಾಕಷ್ಟು ಸಂಪತ್ತನ್ನೂ ಸಂಪಾದಿಸಿದ ಇವರಿಗೆ ‘ಕನಕನಾಯಕ’ ಎನ್ನುವ ಹೆಸರು ಬಂದಿತು. ಈ ರೀತಿಯಾಗಿ ಸಂಪತ್ತಿನ ಹಾಗು ಅಧಿಕಾರದ ದರ್ಪ ಇವರಲ್ಲಿ ಒಂದುಗೂಡಿದವು. ಇದು ಅವರಲ್ಲಿದ್ದ ದೊಡ್ಡ ಅಹಂಸಂಜ್ಞೆ. ತಮ್ಮ ಕೀರ್ತನೆಯೊಂದರಲ್ಲಿ ತಮ್ಮ ಪೂರ್ವಜೀವನದ ಶೌರ್ಯದ ವರ್ಣನೆಯನ್ನು ಹಾಗು ತಮ್ಮ ಬಿಲ್ಲುಗಾರಿಕೆಯ ಪ್ರಶಂಶೆಯನ್ನು ಅವರು ಈ ರೀತಿಯಾಗಿ ಮಾಡಿದ್ದಾರೆ:

(೧) ಕನಕ ದಳದಲಿ ಬಂದು, ಕಲೆತನೆಂದರೆ ಫೌಜು
ಕನಕುಮನಕಾಗುವದು ಹರಿಯೆ.

(೨)ಮೊನೆಗಾರತನವೆಂಬ ಶನಿ ಬಿಡಿಸಿ ತವ ಪಾದ
ವನಜವನು ಸೇರಿಸಿದೆ ಹರಿಯೆ.

ತಮ್ಮ ಅಧಿಕಾರದರ್ಪದ ವರ್ಣನೆಯನ್ನು ಅವರು ಈ ರೀತಿಯಾಗಿ ಹಾಡಿದ್ದಾರೆ:

ಸ್ವಾರಿ ಹೊರಡಲು ಛತ್ರ, ಭೇರಿ, ನಿಸ್ಸಾಳಗಳು
ಭೋರೆಂಬ ಭೋಂಕಾಳೆ ಹರಿಯೆ
ಧೀರ ರಾಹುತರಾಣ್ಮ ಭಾರಿ ಪರಿವಾರದಹಂ-
ಕಾರಭಾರವ ತೊರೆದೆ ಹರಿಯೆ

ಸಂಪತ್ತು ಹಾಗು ಅಧಿಕಾರದ ಜೊತೆಗೆ ಕನಕದಾಸರಿಗೆ ಚೆಲುವಾದ ರೂಪವೂ ಇದ್ದಿರಬಹುದು. ಅವರ ಎರಡು ಕೀರ್ತನೆಗಳಲ್ಲಿ ಇದು ವ್ಯಕ್ತವಾಗುತ್ತದೆ:

(೧) ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ ಮ್ಯಾ.

(೨) ಮದರೂಪು ಬಿಡಿಸಿ ಸನ್ಮುದರೂಪು ಧರಿಸೆಂದು
ಹೃದಯದೊಳು ನೀ ನಿಂತೆ ಹರಿಯೆ.

ಇನ್ನು  ಕನಕದಾಸರ ಕೀರ್ತನೆಗಳ ಶೈಲಿಯನ್ನು ಗಮನಿಸೋಣ. ಅವರ ಅನೇಕ ಕೀರ್ತನೆಗಳಲ್ಲಿ ಪಾಂಡಿತ್ಯ ಎದ್ದು ಕಾಣುತ್ತದೆ. ಪುರಂದರದಾಸರ ಕೀರ್ತನೆಗಳಲ್ಲಿ ಕಾಣುವ ಸರಳತೆ ಕನಕದಾಸರ ಕೀರ್ತನೆಗಳಲ್ಲಿ ಇಲ್ಲ. ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಇವುಗಳಂತೂ ಪಂಡಿತರಿಗಾಗಿಯೇ ರಚಿತವಾದ ಕೃತಿಗಳಂತಿವೆ. ಅರ್ಥಾತ್ ಕನಕದಾಸರಲ್ಲಿ ಪಾಂಡಿತ್ಯವಿತ್ತು. ಈ ಪಾಂಡಿತ್ಯದ ಅಹಮಿಕೆಯೂ ಅವರಲ್ಲಿ ಮನೆ ಮಾಡಿರಬಹುದು.  

ಸಂಪತ್ತು,ಅಧಿಕಾರ, ರೂಪ, ಪಾಂಡಿತ್ಯ ಹಾಗು ಯೌವನ ಇವೆಲ್ಲ ಒಂದುಗೂಡಿದ ವ್ಯಕ್ತಿಗೆ ಅಹಂಕಾರ ಬಾರದಿದ್ದೀತೆ? ಅಲ್ಲದೆ ಆ ಕಾಲದ ಸರ್ವಾಧಿಕಾರಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ, ಗಂಡಸಾಗಿರುವದೇ ಒಂದು ದೊಡ್ಡ ಅಹಮಿಕೆ.  ಅಹಂಕಾರಕ್ಕೆ ಕಾರಣವಾಗಬಹುದಾದ ಈ ಎಲ್ಲ ಅಂಶಗಳು ಇದ್ದರೂ ಸಹ, ಕನಕನಾಯಕರ ಮನಸ್ಸು ಸಮಾಜದ ಉದ್ಧಾರಕ್ಕಾಗಿ ಮಿಡಿಯುತ್ತಿರಬಹುದು. ಅವರು ದಾಸರಾದ ಬಳಿಕ ರಚಿಸಿದ ಕೀರ್ತನೆಗಳಲ್ಲಿ ಕಾಣುವ ಸಾಮಾಜಿಕ ಕಳಕಳಿಯು ಅವರ ಪೂರ್ವಜೀವನದಲ್ಲಿಯೂ ಇದ್ದಿರಲೇಬೇಕು. ಇವೆಲ್ಲ ಅಂಶಗಳು ಅವರ ಒಟ್ಟು ಅಹಂಸಂಜ್ಞೆಯ ಭಾಗಗಳಾಗಿವೆ. ಇಷ್ಟೆಲ್ಲ ಸಂಕೀರ್ಣ ವ್ಯಕ್ತಿತ್ವವಿದ್ದ ಹಾಗು ಸಮಾಜದಲ್ಲಿ ಸಾಕಷ್ಟು ಬೆಲೆ ಇದ್ದ ಕನಕನಾಯಕರಿಗೆ ಅಹಂಸಂಜ್ಞೆಯ ಜೊತೆಗೆ ಕಿಂಚಿತ್ತಾದರೂ ಅಹಂಕಾರವಿದ್ದರೆ ಆಶ್ಚರ್ಯವಿಲ್ಲ.  

ಪರಮಾತ್ಮನೆಂದರೆ ಒಂದು ಅನಂತಸಮುದ್ರವಿದ್ದಂತೆ. ಒಂದು ನೀರಗುಳ್ಳೆಯು ಎಷ್ಟು ಉಬ್ಬಿದರೇನು, ಅನಂತಸಮುದ್ರವಾಗಲು ಸಾಧ್ಯವಾದೀತೆ? ಸಮುದ್ರವಾಗಲು ಅರ್ಥಾತ್ ಮೋಕ್ಷ ಪಡೆಯಲು ಈ ನೀರಹನಿಗೆ ಒಂದೇ ಮಾರ್ಗವಿದೆ. ಸೀಮಿತವಾದ ತನ್ನತನವನ್ನು ತ್ಯಜಿಸಿ ಸೀಮೆಯಿಲ್ಲದ ಸಮುದ್ರದಲ್ಲಿ ಕರಗಿ ಹೋಗುವದೇ ಆ ಮಾರ್ಗ. ಅದಕ್ಕೆ ಭಗವಂತನ ಅನುಗ್ರಹವೂ ಅವಶ್ಯ. ಭಗವಂತನ ಅನುಗ್ರಹಕ್ಕೆ ಸ್ವಂತ ಸಾಧನೆಯೂ ಅತ್ಯವಶ್ಯ.ಆದರೆ ಭಗವಂತನ ಅನುಗ್ರಹವೆಂದರೆ ಲೌಕಿಕ ಸುಖದ ಹರಣವೆಂದೇ ಅರ್ಥ. ‘ನನ್ನ ಭಕ್ತರಿಂದ ನಾನು ಎಲ್ಲವನ್ನೂ ಅಪಹರಿಸುವೆ!’ ಎಂದು ಶ್ರೀಕೃಷ್ಣನೇ ಹೇಳಿಲ್ಲವೆ? ಕನಕನಾಯಕರನ್ನೂ ಸಹ ಶ್ರೀಕೃಷ್ಣನು ಅವಮಾನಕ್ಕೆ ಒಳಪಡಿಸಿದನು. ಅವರ ದರ್ಪ ಹಾಗು ಅಹಂಕಾರ ಚೂರು ಚೂರಾಗುವಂತಹ ಸನ್ನಿವೇಶವನ್ನು ತಂದನು. ರಣಶೂರರಾದ ಕನಕನಾಯಕರು ಕಾಳಗವೊಂದರಲ್ಲಿ ಪರಾಜಿತರಾದರು. ಅದರ ವರ್ಣನೆಯನ್ನು ಅವರು ಹೀಗೆ ಮಾಡಿದ್ದಾರೆ:

ಅರಿಗಳೂ ದಂಡೆತ್ತಿ ಬರಲು ನಾನವರೊಡನೆ
ಪರಿಪರೀ ಹೋರಾಡುತಿರೆ ಹರಿಯೆ
ದುರುಳರೆನ್ನ ಜಯಿಸಿ, ಹರಿದಟ್ಟಿ ಬಂದೆನ್ನ
ಧರೆಗುರುಳಿಸಿದರೊ ಹರಿಯೆ.

ಇಷ್ಟೇ ಅಲ್ಲ, ಕನಕನಾಯಕರು ಮೃತ್ಯುಮುಖವನ್ನೇ ಕಂಡರು:

ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ-
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ

 ಈ ಆಘಾತದಿಂದ ಕನಕನಾಯಕರಲ್ಲಿ ಇದ್ದ ಅಹಂಕಾರ, ಅಹಂಸಂಜ್ಞೆ ಎಲ್ಲವೂ ಕರಗಿ ಹೋದವು.
‘ತನು ನಿನ್ನದು, ಜೀವನ ನಿನ್ನದು, ರಂಗಾ’ ಎನ್ನುವದು ಅವರಿಗೆ ಹೊಳೆಯಿತು. ಆ ಅರಿವಿನಿಂದ ಕನಕನಾಯಕರು ಕನಕದಾಸರಾದರು; ಲೌಕಿಕದ ಪ್ರತಿಷ್ಠೆಯನ್ನು ಬಿಟ್ಟು ಅಲೌಕಿಕದ ಸಾಧನೆಗೆ ಹೊರಳಿದರು. (ರಶಿಯನ್ ವರ್ತನಾವಿಜ್ಞಾನಿ ಪಾವ್ಲೋವನ ಸಂಶೋಧನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು.)

ನವ್ಯಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂಮಿಗೀತೆ’ ಕವನದಲ್ಲಿ ಹೀಗೆ ಹೇಳಿದ್ದಾರೆ:
‘ತೆಗೆದುಕೋ ನೀ ಕೊಟ್ಟ ವಸ್ತ್ರವಿಲಾಸ,
ಈ ಶರಟು, ಈ ಶರಾಯಿ,
ಈ ಭಗ್ನ ಜೋಪಡಿಯೂ ನಿನ್ನದೇ,
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!’

ಕನಕನಾಯಕರು ತಮ್ಮ ರೂಪ, ಶೌರ್ಯ, ಸಂಪತ್ತು ಹಾಗು ಅಧಿಕಾರದ ವಸ್ತ್ರವಿಲಾಸವನ್ನು ಅಂದರೆ ಅಹಂಸಂಜ್ಞೆಗಳನ್ನು ಕಳೆದುಕೊಂಡು ದಾಸರಾದರು. ಬತ್ತಲಾದ ಅವರು ಬಯಲಿನಲ್ಲಿ ಅಡಗಿದ ಚೈತನ್ಯರೂಪನ ಹುಡುಕುವಿಕೆಯಲ್ಲಿ ನಿರತರಾದರು. ಆದರೆ ಅವರ ಎಲ್ಲ ಅಹಂಸಂಜ್ಞೆಗಳು ಕರಗಿ ಹೋದವೆ? ಕೆಲವು ಅಹಮಿಕೆಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವುಗಳಲ್ಲಿ ಒಂದು ಪಾಂಡಿತ್ಯದ ಅಹಮಿಕೆ.
‘‘ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು’ ಎನ್ನುವ ಅವರ ರಚನೆಯನ್ನು ಗಮನಿಸಿರಿ. ಇಲ್ಲಿ ‘ವರಕವಿ’ ಎಂದು ಅವರು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದಾರೆ.

ಎರಡನೆಯದಾಗಿ ಅವರಿಗೆ ಸಮಾಜಸುಧಾರಕ ಎನ್ನುವ ಅಹಂಪ್ರಜ್ಞೆ  ಉಳಿದುಕೊಂಡಿರಬಹುದು.
ಕನಕದಾಸರು ತಮ್ಮ ಸುತ್ತಲಿನ ಜನರಿಗೆ, ವಿಶೇಷತಃ ಸಾಮಾಜಿಕವಾಗಿ ಕೆಳಸ್ತರದಲ್ಲಿ ಬದುಕುತ್ತಿರುವ ಜನರಿಗೆ ಹತ್ತಿರವಾಗಿ, ಅವರನ್ನು ಮೇಲೆತ್ತಲು, ಅವರಲ್ಲಿ ಘನತೆಯನ್ನು ತುಂಬಲು ಪ್ರಯತ್ನಿಸಿದವರು, ಆ ಜನರ ಆಡುಮಾತಿನಲ್ಲಿಯೇ ಹಾಡಿದವರು. ಇದರ ಉದಾಹರಣೆ ಎಂದು ಒಂದು ಗೀತೆಯನ್ನು ಭಾಗಶಃ (ಅಂದರೆ ಒಂದು ನುಡಿಯನ್ನು ಮಾತ್ರ) ಗಮನಿಸೋಣ:

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನಿರೆ ||ಪಲ್ಲ||

ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನನ್ನ ಕೊಂದಾನ್ ಮ್ಯಾ
ಗುಂಗಾಡಿ ಸೋಮನ ಕೊಂದು ವೇದವನು
ಬಂಗಾರದೊಡಲನಿಗಿತ್ತಾನ್ ಮ್ಯಾ

ಅಕ್ಕಿಯನ್ನು ಸವರ್ಣೀಯರಿಗೆ ಹಾಗು ರಾಗಿಯನ್ನು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರಿಗೆ ಹೋಲಿಸಿ ಅವರು ಬರೆದ ಗೀತೆಯೂ ಸಹ ತುಂಬ ಪ್ರಸಿದ್ಧವಿದೆ. ‘ರಾಮಧಾನ್ಯ ಚರಿತೆ’ ಎನ್ನುವ ಈ ದೀರ್ಘ ಗೀತೆಯಲ್ಲಿ ಕಪ್ಪು ವರ್ಣದ ರಾಗಿಗೆ ಹಾಗು ಬಿಳಿಯ ವರ್ಣದ ಅಕ್ಕಿಗೆ ಶ್ರೇಷ್ಠತೆಯ ವಿಷಯವಾಗಿ ವಾಗ್ವಾದ ಜರಗುತ್ತದೆ. ಈ ವಾದವನ್ನು ಬಗೆಹರಿಸಲೆಂದು ಭಗವಂತನು ಅಕ್ಕಿ ಹಾಗು ರಾಗಿ ಇವೆರಡನ್ನು ಕೆಲ ಅವಧಿಗೆ ಮುಚ್ಚಿ ಇಟ್ಟಾಗ ಅಕ್ಕಿ ಹಾಳಾಗಿರುತ್ತದೆ, ರಾಗಿ ಸರಿಯಾಗಿಯೇ ಇರುತ್ತದೆ. ಇದು ರಾಗಿಯ ಅಂದರೆ ಕಪ್ಪು ವರ್ಣದ ವಿಜಯದ ಸಂಕೇತ. ಅಲ್ಲದೆ ‘ರಾಗಿ’ ಎನ್ನುವದು ‘ರಾಘವ’ನ (--ಅವನೂ ಶ್ಯಾಮಲಕಾಯನೇ!--) ಮೊಟಕು ಹೆಸರೂ ಹೌದು.

ಸಮಾಜಸುಧಾರಕರಷ್ಟೇ ಅಲ್ಲ, ಕನಕದಾಸರು ಸಾಮಾಜಿಕ ಆಂದೋಲನಕಾರರೂ ಆಗಿದ್ದರು. ೧೨ನೆಯ ಶತಮಾನದಲ್ಲಿ ಜರುಗಿದ ಶರಣಚಳುವಳಿಯು ಆಢ್ಯವ್ಯವಸ್ಥೆಯ ವಿರುದ್ಧ ಹೋರಾಡಿತು. ವಿಜಯನಗರದ ಕಾಲದಲ್ಲಿ ಇದೇ ಶರಣರು ತಾವೇ ಆಢ್ಯತೆಯ ಪೋಷಕರಾದರು. ಈ ಸಮಯದಲ್ಲಿ ಧಾರ್ಮಿಕ ಹಾಗು ಸಾಮಾಜಿಕ ಆಢ್ಯತೆಯ ವಿರುದ್ಧ ಕನಕದಾಸರು ಹೋರಾಟ ನಡೆಸಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ? ಎನ್ನುವ ಅವರ ಗೀತೆ ಅವರ ಹೋರಾಟಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಇದಕ್ಕೂ ಪೂರ್ವದಲ್ಲಿ ತಮಿಳುನಾಡಿನಲ್ಲಿ ಶ್ರೀ ರಾಮಾನುಜಾಚಾರ್ಯರೂ ಸಹ ಜಾತಿವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಇದರಿಂದಾಗಿ ಅವರು ತಮಿಳುನಾಡಿನಿಂದ ಕರ್ನಾಟಕಕ್ಕೆ ಓಡಿ ಬರಬೇಕಾಯಿತು. ರಾಮಾನುಜಾರ್ಯರ ಪ್ರಭಾವವೂ ಕನಕದಾಸರ ಮೇಲೆ ಆಗಿದೆ.

ಸೋದೆಮಠದ ವಾದಿರಾಜರು ಕನಕದಾಸರ ಗಾಢ ಸ್ನೇಹಿತರಾಗಿದ್ದು, ಕನಕದಾಸರಿಗಾಗಿ ಉಡುಪಿಯ ಶ್ರೀಕೃಷ್ಣಮಂದಿರದ ಹಿಂಭಾಗದಲ್ಲಿ ಒಂದು ಕುಟೀರವನ್ನು ಕಟ್ಟಿಸಿಕೊಟ್ಟಿದ್ದಾಗಿ ಹೇಳಲಾಗುತ್ತದೆ.  ಕನಕದಾಸರು ಅಲ್ಲಿ ಕೃಷ್ಣದರ್ಶನಕ್ಕಾಗಿ ಮಾಡಿದ ಯತ್ನದ ಬಗೆಗೆ ಒಂದು ಮಾತನ್ನು ಹೇಳಬೇಕು. ಖ್ಯಾತ ನಾಟಕಕಾರ ಶ್ರೀ ವ್ಯಾಸ ದೇಶಪಾಂಡೆಯವರ ಅಭಿಮತದ ಮೇರೆಗೆ ಇದು ಕನಕದಾಸರ ವೈಯಕ್ತಿಕ ಯತ್ನ ಮಾತ್ರವಲ್ಲ ;  ಇದು ಅವರ ‘ಮಂದಿರ ಪ್ರವೇಶ’ದ ಸಾಮಾಜಿಕ ಆಂದೋಲನದ ಒಂದು ಭಾಗವಾಗಿತ್ತು. ಶ್ರೀ ವ್ಯಾಸ ದೇಶಪಾಂಡೆಯವರು ಕನಕದಾಸರನ್ನು ಭಕ್ತ ಹಾಗು ಸಮಾಜಸುಧಾರಕ ಎನ್ನುವ ಎರಡೂ ನೋಟಗಳಿಂದ ಪರಿಗಣಿಸಿ ಬಯಲು ಆಲಯ ಎನ್ನುವ ನಾಟಕವನ್ನು ಬರೆದಿದ್ದಾರೆ. [ ಬಯಲು ಎಂದರೆ ಸಾಮಾನ್ಯ ಜನತೆ ಹಾಗು ಆಲಯ ಎಂದರೆ ವ್ಯವಸ್ಥೆ ಎನ್ನುವ ಶ್ಲೇಷೆ ಇಲ್ಲಿದೆ.]

ಕನಕದಾಸರದು ತುಂಬ ಸಂಕೀರ್ಣ ವ್ಯಕ್ತಿತ್ವ. ಅವರ ಬಾಹ್ಯಪ್ರಜ್ಞೆಯಲ್ಲಿ, ಅಂತಃಪ್ರಜ್ಞೆಯಲ್ಲಿ ಹಾಗು ಸುಪ್ತಪ್ರಜ್ಞೆಯಲ್ಲಿ ಅನೇಕ ಸೂಕ್ಷ್ಮ ಅಹಂಸಂಜ್ಞೆಗಳು  ಕೂಡಿಕೊಂಡಿದ್ದವು. ಅವರಲ್ಲಿ ಪಾಂಡಿತ್ಯ ಹಾಗು ಸಮಾಜಸುಧಾರಣೆಯ ಸೂಕ್ಷ್ಮ ಅಹಮಿಕೆ ಉಳಿದುಕೊಂಡಿರಬಹುದು ಭಗವಂತನ ದರ್ಶನ ಲಭಿಸಬೇಕಾದರೆ ಅವರು ಇವುಗಳನ್ನು ದಾಟಿ ಹೋಗುವದು ಅವಶ್ಯವಾಗಿತ್ತು. ಅದನ್ನು ಅವರು ಸಾಧಿಸಿದರು. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎಂದು ಕನಕದಾಸರು ಮೊರೆಯಿಟ್ಟಾಗ, ಭಗವಂತನ ಅನುಗ್ರಹವಾಗದೆ ‘ಅಂತರಂಗದ ಬಾಗಿಲು ತೆರೆಯುವದಿಲ್ಲ’, ಅದಕ್ಕಾಗಿ ತಾನು ತನ್ನೆಲ್ಲ ಅಹಂಸಂಜ್ಞೆಗಳನ್ನು ತೊರೆಯಬೇಕು ಎನ್ನುವದು ಕನಕದಾಸರಿಗೆ ಹೊಳೆದಿರಬೇಕು.
ಉಳಿದೆಲ್ಲ ಅಹಂಪ್ರಜ್ಞೆಗಳು ಕರಗಿ ಹೋಗಿ ಕೊನೆಗೊಮ್ಮೆ ಅವರಲ್ಲಿ ದಾಸಪ್ರಜ್ಞೆ ಮಾತ್ರ ಉಳಿದುಕೊಂಡಿತು. ಇಲ್ಲಿಗೆ ಕನಕದಾಸರ ‘ನಾನು’ ಹೋಯಿತು. ಕನಕದಾಸರು ಕೃತಾರ್ಥರಾದರು.

[ಟಿಪ್ಪಣಿ:
(I) ಅಲ್ಲಮಪ್ರಭುಗಳ ವಚನವೊಂದರಲ್ಲಿ ‘ಗುಹೇಶ್ವರ ಸತ್ತು ನಾನು ಉಳಿದೆ’ ಎನ್ನುವ ಸಾಲು ಬರುತ್ತದೆ.
ತುಂಬ ಸ್ವಾರಸ್ಯಕರ ಮಾತಿದು. ದೇವರು ಹಾಗು ಭಕ್ತ ಎನ್ನುವ ಭೇದವು ಇರುವ ತನಕ ಇದು ದ್ವೈತ. ಈ ದ್ವೈತ ಅಳಿಸಿ ಹೋದಾಗ ‘ದೇವರು ಸಾಯುತ್ತಾನೆ’! ಭಕ್ತನಷ್ಟೇ ‘ನಾನು’ ಆಗಿ ಉಳಿದು ಕೊಳ್ಳುತ್ತಾನೆ.
ಇದು ‘ಸತ್-ಚಿತ್-ಆನಂದರೂಪ’ವಾದ ನಾನು!

(II) ಕನಕದಾಸರ ಪ್ರಾರ್ಥನೆಯನ್ನು ಮನ್ನಿಸಿದ ಶ್ರೀಕೃಷ್ಣನು ಗೋಡೆಯಲ್ಲಿ ಬಿರಿದ ಕಿಂಡಿಯೊಂದರ ಮೂಲಕ ಅವರಿಗೆ ದರ್ಶನವಿತ್ತನು ಎಂದು ಹೇಳಲಾಗುತ್ತದೆ. ಈ ಘಟನೆಯ ಬಗೆಗೆ ನಾಲ್ಕು ಸಂಭಾವ್ಯತೆಗಳಿವೆ:
(೧) ಈ ಘಟನೆ ನಡದೇ ಇಲ್ಲ. ಇದು ಕೇವಲ ದಂತಕಥೆ.
(೨) ಈ ಪವಾಡ ನಿಜವಾಗಿಯೂ ನಡೆಯಿತು.
(೩) ಕನಕದಾಸರ ಪರಾಮನೋಶಕ್ತಿಯ ಬಲದಿಂದ ಗೋಡೆಯಲ್ಲಿ ಕಿಂಡಿಯಾಯಿತು ಹಾಗು ಕೃಷ್ಣವಿಗ್ರಹವು ಆ ದಿಕ್ಕಿಗೆ ತಿರುಗಿತು.
(೪) ಕನಕದಾಸರು ಆ ಸಮಯದಲ್ಲಿ, ವ್ಯಾಸರಾಯರಿಂದ ಹಾಗು ವಾದಿರಾಜರಿಂದ ಮನ್ನಣೆ ಪಡೆದ ಗಣ್ಯ ಹರಿದಾಸರಾಗಿದ್ದರು. ಅವರಿಗೆ ಮಂದಿರದಲ್ಲಿ ಪ್ರವೇಶ ಕೊಡಲೂ ಆಗದೆ, ಬಿಡಲೂ ಆಗದೆ, ಮಠದ ಅಧಿಕಾರಿಗಳು ಮಧ್ಯದ ಮಾರ್ಗವೊಂದನ್ನು ಹುಡುಕಿದರು. ಅರ್ಥಾತ್, ಕನಕದಾಸರಿಗೆ ಕಿಂಡಿಯ ಮೂಲಕ ವಿಗ್ರಹದರ್ಶನ ಮಾಡಿಸಿದರು!

(III) ಕನಕದಾಸರ ಬಗೆಗೆ ಉಪಯುಕ್ತ ಮಾಹಿತಿ ನೀಡಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.]

Monday, September 26, 2011

ಡೊಂಕು ಬಾಲದ ನಾಯಕರೆ...


ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.

ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ  ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:

ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.

ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು  ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.

ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.  

ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು

ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.

ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ?  ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:

(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.

ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong  conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.

ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.

ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
Abou Ben Adhem
(may his tribe increase)
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು  ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?

ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.

ಪುರಂದರದಾಸರ ಒಂದು ಕೀರ್ತನೆ  ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.

ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:

ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

Sunday, August 28, 2011

ಸಂಭವಾಮಿ ಯುಗೇ ಯುಗೇ


ಅಣ್ಣಾ ಹಜಾರೆಯವರು ಭ್ರಷ್ಟಾಚಾರದ ವಿರುದ್ಧ ನಡೆಯಿಸುತ್ತಿರುವ ನಾಗರಿಕ ಆಂದೋಲನಕ್ಕೆ ಮೊದಲ ಹಂತದ ಜಯ ಲಭಿಸಿದೆ. ಇದು ಅರ್ಧ ಜಯ ಮಾತ್ರ ಎಂದು ಅಣ್ಣಾ ಎಚ್ಚರಿಕೆ ನೀಡಿದ್ದಾರೆ. ಯಾಕೆಂದರೆ ನಮ್ಮ ದುಃಶಾಸಕರು ಯಾವ ಧೂರ್ತ ರೀತಿಯಿಂದ ನಾಗರಿಕ ಆಂದೋಲನವನ್ನು ಭಗ್ನಗೊಳಿಸಬಹುದು ಎನ್ನುವದನ್ನು ಯಾರೂ ಹೇಳಲಾರರು.

ಭಾರತದಲ್ಲಿ ಪುರಾಣಕಾಲದಿಂದಲೂ ನಾಗರಿಕ ಆಂದೋಲನಗಳು ನಡೆದಿವೆ. ಬಹುಶ: ಶ್ರೀಕೃಷ್ಣನೇ ಭಾರತದ ನಾಗರಿಕ ಆಂದೋಲನಗಳ ಹರಿಕಾರ ಎನ್ನಬಹುದು. ತನ್ನ ಎಳೆಯ ವಯಸ್ಸಿನಲ್ಲಿಯೇ ಕೃಷ್ಣನು ಗೋಕುಲದ ನಿವಾಸಿಗಳಿಗೆ ಇಂದ್ರ ಮೊದಲಾದ ವೈದಿಕ ದೇವತೆಗಳ ಪೂಜೆಯ ಬದಲಾಗಿ ವೃಕ್ಷಪೂಜೆ ಹಾಗು ಗಿರಿಪೂಜೆಗಳಂತಹ ಅವೈದಿಕ ಪೂಜೆಗೆ ಮರಳಲು ಬೋಧಿಸಿದನು. ಇದರಿಂದ ಮುನಿದ ಇಂದ್ರನು ಗೋಕುಲವಾಸಿಗಳ ವಿರುದ್ಧ ಯುದ್ಧ ಸಾರಿದಾಗ, ತನ್ನೆಲ್ಲ ಬೆಂಬಲಿಗರೊಡನೆ ಕೃಷ್ಣನು ಗೋವರ್ಧನ ಗಿರಿಯ ಗುಹೆಗಳ ಆಶ್ರಯ ಪಡೆದು, ಇಂದ್ರನ ಮೇಲೆ ವಿಜಯ ಸಾಧಿಸಿದನು. ಇದು ಸ್ಥಾಪಿತ ವ್ಯವಸ್ಥೆಯ ವಿರುದ್ಧ ನಡೆದ ಪ್ರಥಮ ನಾಗರಿಕ ಆಂದೋಲನ. ಪ್ರಥಮ ಆಂದೋಲನದಲ್ಲಿ ಸಫಲನಾದ ಕೃಷ್ಣನು ತನ್ನ ವೈರಿಗಳ ವಿರುದ್ಧ ಹೋರಾಡಲಾರದೆ ಸೋತು ಹೋಗುತ್ತಾನೆ. ಹೀಗೆ ಸೋತು ಹೋದ ಕೃಷ್ಣನು ಮಥುರಾಪಟ್ಟಣದಿಂದ ತನ್ನ ಸಹಚರರೊಡನೆ ಪಲಾಯನಗೈದು, ಸುಮಾರು ಸಾವಿರ ಕಿಲೋಮೀಟರಗಳಷ್ಟು ದೂರದಲ್ಲಿರುವ ಪಶ್ಚಿಮತೀರದಲ್ಲಿ ದ್ವಾರಕಾಪಟ್ಟಣವನ್ನು ನಿರ್ಮಿಸುವದು ಈ ನಾಗರಿಕ ಆಂದೋಲನದ ಎರಡನೆಯ ಭಾಗವಾಗಿದೆ.

ಈ ರೀತಿಯಾಗಿ ಕೃಷ್ಣನೇ ಭಾರತದ ಪ್ರಪ್ರಥಮ ನಾಗರಿಕ ಆಂದೋಲನಕಾರ ಎನ್ನಬಹುದು. ತನ್ನ ನಂತರವೂ ಸಹ ಅನಿಷ್ಟ ವ್ಯವಸ್ಥೆಯ ವಿರುದ್ಧ ನಾಗರಿಕ ಆಂದೋಲನಗಳು ನಡೆಯುತ್ತಲೇ ಇರುತ್ತವೆ ಎನ್ನುವದನ್ನು ಕೃಷ್ಣನು ಗ್ರಹಿಸಿರಬಹುದು. ಆದುದರಿಂದಲೇ ಆತನು ತನ್ನ ಸಹಚರನಾದ ಅರ್ಜುನನಿಗೆ ಈ ರೀತಿ ಆಶ್ವಾಸನೆ ನೀಡಿದ್ದಾನೆ:

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್||
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||


ಕೃಷ್ಣನ ನಂತರವೂ ಭಾರತದಲ್ಲಿ ನಾಗರಿಕ ಆಂದೋಲನಗಳು ಜರುಗಿವೆ. ಶೂದ್ರಕನು ರಚಿಸಿದ ಮೃಚ್ಛಕಟಿಕಮ್ ಸಂಸ್ಕೃತ ನಾಟಕದ ಕೊನೆಯಲ್ಲಿ ಸಾಮಾನ್ಯ ಪ್ರಜೆಗಳು ( -ಹಿಂದುಳಿದವರು ಎಂದು ಯಾರಿಗೆ ಕರೆಯಲಾಗುತ್ತಿದೆಯೊ ಅಂಥವರು-) ರಾಜನ ವಿರುದ್ಧ ಬಂಡಾಯವೆದ್ದು, ಆತನನ್ನು ಪಟ್ಟದಿಂದ ಕೆಳಗಿಳಿಸಿದ ಪ್ರಸಂಗವಿದೆ. ಈ ನಾಗರಿಕ ಆಂದೋಲನವು ವಾಸ್ತವವಾದದ್ದೊ ಅಥವಾ ನಾಟಕಕಾರನ ಬಯಕೆಯ ಕಲ್ಪನೆಯೊ ತಿಳಿಯದು!

ಕನ್ನಡ ನಾಡಿನಲ್ಲಿಯೇ ನಡೆದ ಶರಣಚಳುವಳಿಯಂತೂ ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾದ ನಾಗರಿಕ ಆಂದೋಲನ. ಆ ಕಾಲದಲ್ಲಿ ಹುಟ್ಟಿ, ಶರಣಚಳುವಳಿಯಲ್ಲಿ ಭಾಗವಹಿಸಿದವರೇ ಭಾಗ್ಯವಂತರು. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಇವರನ್ನು ಕಣ್ಣಾರೆ ಕಂಡವರು, ಇವರ ಉಪದೇಶವನ್ನು ಮನನ ಮಾಡಿಕೊಂಡು ಶರಣರಾಗಿ ಬಾಳಿದವರೇ ನಿಜವಾದ ಪುಣ್ಯವಂತರು. ದುರ್ದೈವದಿಂದ ಈ ನಾಗರಿಕ ಆಂದೋಲನವು ಹಿಂಸಾತ್ಮಕವಾಗಿ ಕೊನೆಯಾಯಿತು. ಆದರೆ ಬಸವಣ್ಣನವರು ಹೊತ್ತಿಸಿದ ಜ್ಯೋತಿ ಶರಣರ ಹೃದಯದಿಂದ ಆರಿಹೋಗಲಿಲ್ಲ. ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ? ಎಂದು ಬಸವಣ್ಣನವರು ಉದ್ಘೋಷಿಸಿದಂತೆ ಆ ಜ್ಯೋತಿ ನಮ್ಮ ಕತ್ತಲನ್ನು ಇನ್ನೂ ದೂರಮಾಡುತ್ತಲೇ ಇದೆ.

ವಿಶ್ವದಲ್ಲಿಯ ಎಲ್ಲ ಆಧುನಿಕ ನಾಗರಿಕ ಆಂದೋಲನಗಳಿಗೆ ಮೂಲರೂಪವಾಗಿದ್ದು ಗಾಂಧೀಜಿವರು ದಕ್ಷಿಣ ಆಫ್ರಿಕಾದಲ್ಲಿ ನಡೆಯಿಸಿದ ನಾಗರಿಕ ಆಂದೋಲನ. ಸವಿನಯ ಕಾಯದೆಭಂಗ, ಧರಣಿ, ಉಪವಾಸ ಸತ್ಯಾಗ್ರಹ ಇವೆಲ್ಲ ದಕ್ಷಿಣ ಆಫ್ರಿಕಾದಲ್ಲಿ  ಗಾಂಧೀಜಿಯವರಿಂದಲೇ ರೂಪಗೊಂಡವು.  ಈ ಅಹಿಂಸಾತ್ಮಕ ಅಸ್ತ್ರಗಳನ್ನೇ ನಂತರ ಭಾರತದಲ್ಲಿ ಹಾಗು ವಿಶ್ವದ ಇತರ ಕಡೆಗಳಲ್ಲೂ ಬಳಸಲಾಯಿತು. ಅಮೇರಿಕಾದಲ್ಲಿಯ ಮಾರ್ಟಿನ್ ಲೂಥರ ಕಿಂಗ ಅವರ ನಾಗರಿಕ ಆಂದೋಲನಗಳು ಸಹ (೧೯೫೯-೬೮) ಗಾಂಧೀಜಿಯವರ ಅಹಿಂಸೆ ಹಾಗು ಭ್ರಾತೃತ್ವದ ನೀತಿಯನ್ನೇ ಅವಲಂಬಿಸಿದೆ.

ಅದರಂತೆಯೇ ಪೋಲ್ಯಾಂಡಿನಲ್ಲಿ ಲೆಕ್ ವ್ಯಾಲೇಸಾ ಅವರ `Solidarity' ಆಂದೋಲನವೂ ಸಹ (೧೯೮೦) ಗಾಂಧೀಜಿಯವರ ನಾಗರಿಕ ಆಂದೋಲನದ ಅಸ್ತ್ರಗಳನ್ನು ಬಳಸಿ ಯಶಸ್ವಿಯಾಯಿತು. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಸಹ ಸಶಸ್ತ್ರ ಆಂದೋಲನವನ್ನು ತ್ಯಜಿಸಿ, ಅಹಿಂಸಾತ್ಮಕ ನಾಗರಿಕ ಆಂದೋಲನವನ್ನೇ ಅಪ್ಪಿಕೊಂಡರು.

ಸ್ವತಂತ್ರ ಭಾರತದಲ್ಲಿ ನಡೆದ ನಾಗರಿಕ ಆಂದೋಲನಗಳಲ್ಲಿ ಜಯಪ್ರಕಾಶ ನಾರಾಯಣರ ನಾಗರಿಕ ಆಂದೋಲನವು (೧೯೭೪-೭೭) ಅತ್ಯಂತ ಪ್ರಮುಖವಾದದ್ದು. ಸರ್ವಾಧಿಕಾರದತ್ತ ಸಾಗಿದ್ದ ಇಂದಿರಾ ಗಾಂಧಿಯವರನ್ನು ಸಿಂಹಾಸನದಿಂದ ಕೆಳಗಿಸಿದ ಆಂದೋಲನವಿದು!

೧೯೮೫ರಲ್ಲಿ ಮೇಧಾ ಪಾಟಕರ ಅವರು ಪ್ರಾರಂಭಿಸಿದ ‘ನರ್ಮದಾ ಬಚಾವೋ’ ಆಂದೋಲನವು ಇನ್ನೂ ಮುಕ್ತಾಯವಾಗಿಲ್ಲ. ಅಲ್ಲಿಯ  ಹೋರಾಟವು ಇನ್ನೂ ನಡೆದಿದೆ.

ಇದೀಗ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ನಾಗರಿಕ ಆಂದೋಲನ ನಡೆದಿದೆ. ಈ ಆಂದೋಲನಕ್ಕೆ ಇಡೀ ದೇಶವೇ ಬೆಂಬಲವನ್ನು ಸೂಚಿಸುತ್ತಿದೆ. ಆದರೆ ಅಗಸ್ಟ ೨೭ರಂದು ಜರುಗಿದ ಚರ್ಚೆಯಲ್ಲಿ ಲೋಕಸಭೆಯ ಅನೇಕ ಸದಸ್ಯರು ಅಣ್ಣಾ ಹಜಾರೆಯವರನ್ನು ವೈಯಕ್ತಿಕವಾಗಿ ದೂಷಿಸಿ ತಮ್ಮ ಸಂಸ್ಕೃತಿಯ ಮಟ್ಟವನ್ನು ಪ್ರದರ್ಶಿಸಿದರು. ಶಾಸಕರೂ ಸಹ ಲೋಕಪಾಲರ ಪರಿಶೀಲನೆಗೆ ಒಳಪಡಬೇಕು ಎನ್ನುವ ಅಂಶವನ್ನು ಯಾವ ಶಾಸಕರೂ ಒಪ್ಪಲಿಲ್ಲ. ಯಾವ ಕಳ್ಳನು ತಾನೆ ಪೋಲೀಸರ ಪರಿಶೀಲನೆಗೆ ಒಳಪಡಲು ಒಪ್ಪಿಕೊಳ್ಳುತ್ತಾನೆ?! ರಾಹುಲ ಗಾಂಧಿ ಹಾಗು ಇತರ ಕೆಲವು ಶಾಸಕರಂತೂ ಲೋಕಪಾಲ ಶಾಸನದಿಂದ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಾಗುವದಿಲ್ಲ ಎಂದು ಸಾರುತ್ತಿದ್ದಾರೆ. ಇದು ಅವರ ಅಪೇಕ್ಷೆ ಎಂದಷ್ಟೇ ಹೇಳಬಹುದು!

ಭಾರತದ ಲೋಕಸಭೆಯಲ್ಲಿ ತುಂಬಿದ ಭ್ರಷ್ಟಾಚಾರದ ಕತ್ತಲನ್ನು ದೂರ ಮಾಡಲು ಅಣ್ಣಾ ಹಜಾರೆ ಶ್ರಮಿಸುತ್ತಿದ್ದಾರೆ. ಅವರ ಕನಸು ಇಂದಲ್ಲ ನಾಳೆ ನನಸಾದೀತು.
‘ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ?’