Wednesday, April 25, 2012

‘ಆನಂದಕಂದ‘ರ ‘ನೋಡು ಬರುವ ಸುಗ್ಗಿಯಾಟ!’


 ‘ಆನಂದಕಂದ’ ಕಾವ್ಯನಾಮದಿಂದ ಸಾಹಿತ್ಯ ರಚಿಸಿದ ಬೆಟಗೇರಿ ಕೃಷ್ಣಶರ್ಮರನ್ನು ಸಂಪೂರ್ಣ ದೇಸೀಯ ಪ್ರತಿಭೆ ಎಂದು ಕರೆಯಬಹುದು. ತೀವ್ರ ಬಡತನದಿಂದಾಗಿ ಇವರ ವಿದ್ಯಾಭ್ಯಾಸವು ಮುಲ್ಕಿ (೭ನೆಯ ತರಗತಿಯ) ಪರೀಕ್ಷೆಗೆ ಕೊನೆಗೊಂಡಿತು. ಆದರೆ ತೀಕ್ಷ್ಣ ಬುದ್ಧಿಮತ್ತೆಯ ಕೃಷ್ಣಶರ್ಮರ ಅಧ್ಯಯನಕ್ಕೆ ಹಾಗು ಸಾಹಿತ್ಯರಚನೆಗೆ ಇದು ತೊಡಕಾಗಲಿಲ್ಲ.

ನವೋದಯ ಕಾಲದ ಇತರ ಸಾಹಿತಿಗಳಾದ ಬೇಂದ್ರೆ, ರಾಜರತ್ನಂ ಮೊದಲಾದವರು ಗ್ರಾಮೀಣ ಆಡುನುಡಿಯಲ್ಲಿ ಕಾವ್ಯರಚನೆಯನ್ನು ಮಾಡಿದ್ದಾರೆ. ಹೀಗಿದ್ದರೂ ಆ ಕವನಗಳಲ್ಲಿ ಸಂಕೀರ್ಣವಾದ ಸಾಂಸ್ಕೃತಿಕ ಪ್ರಜ್ಞೆಯಿದೆ. ಕೃಷ್ಣಶರ್ಮರ ‘ನಲ್ವಾಡುಗಳು’ ನೂರಕ್ಕೆ ನೂರರಷ್ಟು ‘ಹಳ್ಳಿಯ ಹಾಡುಗಳು’. ಕೃಷ್ಣಶರ್ಮರ ಕೆಲವು ನಲ್ವಾಡುಗಳನ್ನು ತ್ರಿವೇಣಿಯವರ blogತುಳಸೀವನ’ದಲ್ಲಿ ನೋಡಬಹುದು. ಈ ಹಾಡುಗಳನ್ನು ಓದಿದಾಗ, ವಿಶೇಷತಃ ಕೇಳಿದಾಗ, ಹಳ್ಳಿಯ  ಕವಿ ಅಥವಾ ಗರತಿಯರು ಕಟ್ಟಿ ಹಾಡಿರಬಹುದಾದ ಹಾಡುಗಳಿವು ಎಂದು ಭಾಸವಾಗುತ್ತದೆ. ಇವು ಜಾನಪದ ಹಾಡುಗಳೆಂದೇ ಅನೇಕರ ಭಾವನೆಯಾಗಿದೆ. ಅಚ್ಚರಿಯ ಮಾತೆಂದರೆ, ಈ ಹಾಡುಗಳನ್ನು ಬರೆದ ಕೃಷ್ಣಶರ್ಮರೇ, ಮಾರ್ಗ ಶೈಲಿಯ ಕಾವ್ಯರಚನೆಯನ್ನೂ ಮಾಡಿದ್ದಾರೆ. ನಾನು ಕನ್ನಡ ಶಾಲೆಯಲ್ಲಿ ಕಲಿಯುತ್ತಿದ್ದಾಗ, ಕೃಷ್ಣಶರ್ಮರ ‘ನೋಡು ಬರುವ ಸುಗ್ಗಿಯಾಟ!’ ಕವನವು ನಮ್ಮ ಪಠ್ಯದಲ್ಲಿತ್ತು. ಆ ಕವನವನ್ನು ಓದುತ್ತಿದ್ದಂತೆಯೇ ನಾನು ಕೃಷ್ಣಶರ್ಮರ ಅಭಿಮಾನಿಯಾದೆ. ಇದು ‘ಮಾರ್ಗ’ ಶೈಲಿಯ ಕವನವಾಗಿದ್ದು, ಕೃಷ್ಣಶರ್ಮರು ‘ಹಳ್ಳಿಯ ಧಾಟಿ’ಯಲ್ಲಿ ಹಳ್ಳಿಗರನ್ನೂ ಮೀರಿಸಿ ಬರೆಯುತ್ತಾರೆ ಎಂದು ನನಗೆ ಆಗ ಗೊತ್ತಿರಲಿಲ್ಲ! ಇತ್ತೀಚೆಗೆ ಇವರ ಸಮಗ್ರ ಕವನಸಂಕಲನವು ‘ಬೆಳುವಲದ ಸುಗ್ಗಿ’ ಎನ್ನುವ ಹೆಸರಿನಲ್ಲಿ ಬಿಡುಗಡೆಯಾಯಿತು. ಆ ಸಂಕಲನದಲ್ಲಿ ನನ್ನ ನೆಚ್ಚಿನ ಕವನ ನನಗೆ ಮತ್ತೆ ಲಭಿಸಿತು.

ಕವನದ ಪೂರ್ಣಪಾಠ ಹೀಗಿದೆ:

            ೧
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸತೋಟ!
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ;
ಚೆನ್ನೇ ಚೆನ್ನೆನಿತು ಈ ಕೂಟ....?

            ೨
ಮಾಗಿಯ ಕೊರೆತಕ್ಕೆ ಮೈ ಬರಲಾಗಿರೆ
ಮರ-ಬಳ್ಳಿ ಮರುಗಿ ಸಾಯುವವೆ?
ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
ಕಾಲವ ತುಳಿದು ಬಾಳುವವೆ!

            ೩
ಹದ್ದು-ಹಾಲಕ್ಕಿಯು ಹಾರಾಡುತಿಹವೇನೆ?
ಕೂಗುತಿಹವೆ ಕಾಗೆ-ಗೂಗೆ?
ಹೆದರಿಕೆ ಬಿಡುಬಿಡು, ಅವುಗಳಾಟವ ನೋಡು,
ಹುದುಗಿಹುದಲ್ಲಿಯು ಸೊಬಗೆ!

            ೪
ಬಾಳಿನ ತೋಟಕೆ ಬರಲಿದೆ ಹೊಸ ಸುಗ್ಗಿ
ನಳನಳಿಸುವದಂದು ತಳಿತು;
ಹಣ್ಣು ಬಿಡುವೆ ನಾನು, ಹೂವ ಹೊರುವೆ ನೀನು,
ದಿಟ ದಿಟ ನಂಬು ಈ ಮಾತು!

            ೫
ಹಣ್ಣಗೊನೆಯ ಹೊತ್ತು ಜೀವಜಂಗುಳಿಗಿತ್ತು
ಹಸಿವಿನುರಿಯ ನಾ ಹಿಂಗಿಸುವೆ;
ಹೂವಿನ ಹುರುಳಿಂದೆ ಹೃದಯವನರಳಿಸಿ,
ರಸಿಕಕುಲವ ನೀ ರಂಗಿಸುವೆ!

            ೬
ಕಳಿವಣ್ಣಗಳನುಂಡು ಕೋಗಿಲೆ-ಗಿಳಿವಿಂಡು
ಕಲಕಲ ನುಡಿಯನಾಡುವವೆ!
ಹೂವಿನೈಸಿರಿ ಕಂಡು ಮರಿದುಂಬಿಗಳ ದಂಡು
ಇನಿದನಿವೆರಸಿ ಹಾಡುವುವೆ!

            ೭
ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ
ನೋಡು ಬರುವ ಸುಗ್ಗಿಯಾಟ!
................................................................................................

ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸತೋಟ!
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ;
ಚೆನ್ನೇ ಚೆನ್ನೆನಿತು ಈ ಕೂಟ....?

ಕರಗಿ ಹೋದ ಸುಖದ ದಿನಗಳನ್ನು ನೆನೆಸಿಕೊಂಡಾಗ, ಬಾಳು ಒಂದು ಕನಸಿನಂತೆ ಭಾಸವಾಗುವುದು ಸಹಜ. ಕಣ್ಣೆದುರಿಗಿರುವ ದುಃಖವನ್ನು ಅನುಭವಿಸುತ್ತಿರುವಾಗ, ಬಾಳು ‘ಗೋಳಿನ ತಿನಿಸು’ ಎನಿಸುವುದೂ ಸಹಜ. ‘ಆನಂದಕಂದ’ ಎನ್ನುವ ಕಾವ್ಯನಾಮವನ್ನು ಧರಿಸಿದ ಕೃಷ್ಣಶರ್ಮರು ಎದುರಿಸಿದ ಸಂಕಟಗಳು ಅನೇಕ. ಆದರೂ ಸಹ ಈ ಬಾಳು ಸುಖದ ಕನಸೂ ಅಲ್ಲ, ದುಃಖದ ತಿನಿಸೂ ಅಲ್ಲ ಎಂದು ಕೃಷ್ಣಶರ್ಮರು ತಮ್ಮ ಪತ್ನಿಗೆ ಹೇಳುತ್ತಿದ್ದಾರೆ. ಹಾಗಿದ್ದರೆ, ಈ ಬಾಳು ಏನು? ಕೃಷ್ಣಶರ್ಮರ ಅನುಭವದಲ್ಲಿ, ಅವರಿಗೆ ಹೊಳೆದ ದರ್ಶನದಲ್ಲಿ, ಇದು ಹಿಗ್ಗಿನ ಹೊಸ ತೋಟ! ಕೃಷ್ಣಶರ್ಮರು ‘ಹಿಗ್ಗು’ ಎನ್ನುವ ಪದವನ್ನು ಬಳಸಿರುವುದನ್ನು ಗಮನಿಸಿರಿ. ಆತ್ಮಸಂತುಷ್ಟನಾದ, ಸಮಾಧಾನಚಿತ್ತನಾದ ಮನುಷ್ಯನು ಈ ‘ಹಿಗ್ಗಿ’ನಲ್ಲಿಯೇ ಯಾವಾಗಲೂ ಇರುವನು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ‘ಸುಖದುಃಖೇ ಸಮೇ ಕೃತ್ವಾ, ಲಾಭಾಲಾಭೌ, ಜಯಾಜಯೌ’ ಎಂದು ಹೇಳಿದ್ದರೆ, ನಮ್ಮ ಕೃಷ್ಣಶರ್ಮರು ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಅವರಿಗೆ ಈ ಬಾಳು ಹಿಗ್ಗು ತುಂಬಿದ ಹೊಸ ತೋಟದಂತೆ ಕಾಣುತ್ತದೆ! ಇದು ಲಡ್ಡು ಹಿಡಿದ ಹಳೆಯ ಮರಗಳು ತುಂಬಿದ ತೋಟವಲ್ಲ, ಇದು ಹೊಸ ಹೊಸ ಸಸ್ಯಗಳ ತೋಟ. ಅರ್ಥಾತ್, ಭವಿಷ್ಯದ ಕಡೆಗೆ ಮುಖ ಮಾಡಿದ ಪ್ರಕೃತಿ, looking forward to the future! ಇಂತಹ ನಳನಳಿಸುವ ನಂದನವನದಲ್ಲಿ, ಕೃಷ್ಣಶರ್ಮರು ತಮ್ಮನ್ನು ಒಂದು ಮಾವಿನ ಮರಕ್ಕೆ ಹಾಗು ತಮ್ಮ ಪತ್ನಿಯನ್ನು ಮಲ್ಲಿಗೆಯ ಬಳ್ಳಿಗೆ ಹೋಲಿಸುತ್ತಿದ್ದಾರೆ. ಇದೀಗ ‘ಮಾರ್ಗ’ ಶೈಲಿ. ಅಭಿಜಾತ ಸಾಹಿತ್ಯದಲ್ಲಿ ಮಲ್ಲಿಗೆಯ ಬಳ್ಳಿಯು ಮಾಮರವನ್ನು ಆಶ್ರಯಿಸಿರುತ್ತದೆ. ಗಂಡಹೆಂಡಿರ ಅನ್ಯೋನ್ಯ ದಾಂಪತ್ಯದ ಪರಿ ಇದು.  ‘ಇಂತಹ ಕೆಳೆತನ ಹಿತಕರವಲ್ಲವೇನೆ?’ ಎಂದು ಕವಿ ತನ್ನ ಪತ್ನಿಗೆ ಸಮಾಧಾನಿಸುತ್ತಿದ್ದಾನೆ. ‘ನನ್ನಿ’ ಪದವನ್ನು ಗಮನಿಸಿರಿ. ಈ ಪದಕ್ಕೆ ‘Indeed, Pleasant’ ಎನ್ನುವ ಅರ್ಥಗಳು ಇರುವಂತೆಯೇ, ‘ನನ್ನ+ಈ’ ಎನ್ನುವ ಅರ್ಥವನ್ನೂ ಹೊಂದಿಸಬಹುದು.

ಮಾಗಿಯ ಕೊರೆತಕ್ಕೆ ಮೈ ಬರಲಾಗಿರೆ
ಮರ-ಬಳ್ಳಿ ಮರುಗಿ ಸಾಯುವವೆ?
ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
ಕಾಲವ ತುಳಿದು ಬಾಳುವವೆ!

ಕೃಷ್ಣಶರ್ಮ ದಂಪತಿಗಳ ಬಾಳಿನಲ್ಲಿ ಈಗ ಮಾಗಿಯ ಕಾಲ ಪ್ರವೇಶಿಸಿದೆ. (ಅವರ ಬಾಳು ಆರ್ಥಿಕವಾಗಿ ಯಾವಾಗಲೂ ಮಾಗಿಯ ಕಾಲವೇ ಆಗಿತ್ತು!) ಚಳಿಗಾಲದಲ್ಲಿ ಸಸ್ಯಗಳು ಎಲೆಗಳನ್ನು ಕಳಚಿಕೊಂಡು ಬರಲಾಗುವುವು. ಹಾಗೆಂದು ಅದನ್ನೇ ದುಃಖದ ಕಾರಣವಾಗಿ ಮಾಡಿಕೊಂಡು ಮರಗುತ್ತ ಸಾಯಬಹುದೆ? ಮಾಗಿಯ ನಂತರ, ಸುಗ್ಗಿ ಬಂದೇ ಬರುವುದು. ಆ ಒಂದು ನಿರೀಕ್ಷೆಯೇ ಸದಾಕಾಲದ ನಲವಿಗೆ ಕಾರಣವಾಗಬೇಕು ಎನ್ನುತ್ತಾರೆ ಕೃಷ್ಣಶರ್ಮರು.

ಇಂಗ್ಲಿಶ್ ಕವಿ ಶೆಲ್ಲಿಯೂ ಸಹ `If winter comes can spring be far behind? ಎಂದು ಹಾಡಿದ್ದಾನೆ. ಕೃಷ್ಣಶರ್ಮರು ಶೆಲ್ಲಿಗಿಂತ ಅನೇಕ ಹೆಜ್ಜೆ ಮುಂದೆ ಹೋಗಿದ್ದಾರೆ. ಶೆಲ್ಲಿಯಲ್ಲಿ ಕಾಣಿಸುವುದು ವಸಂತದ ಭರವಸೆ ಮಾತ್ರ. ‘ಕಾಲವ ತುಳಿದು ಬಾಳುವವೆ!’ ಎಂದು ಹೇಳುವಾಗ ಕೃಷ್ಣಶರ್ಮರಲ್ಲಿ ಕಾಣಿಸುವುದು ಬದುಕನ್ನು ಎದುರಿಸುವ ಕೆಚ್ಚು!    

ಹದ್ದು-ಹಾಲಕ್ಕಿಯು ಹಾರಾಡುತಿಹವೇನೆ?
ಕೂಗುತಿಹವೆ ಕಾಗೆ-ಗೂಗೆ?
ಹೆದರಿಕೆ ಬಿಡುಬಿಡು, ಅವುಗಳಾಟವ ನೋಡು,
ಹುದುಗಿಹುದಲ್ಲಿಯು ಸೊಬಗೆ!

ಕಾಗೆ, ಗೂಗೆ ಹಾಗು ಹಾಲಕ್ಕಿಗಳು ಅಪಶಕುನದ ಹಕ್ಕಿಗಳು. ಹದ್ದಂತೂ ಸತ್ತ ಪ್ರಾಣಿಗಳನ್ನು ಭಕ್ಷಿಸಲು ಬರುವ ಪಕ್ಷಿ. ಇವೆಲ್ಲ ತಮ್ಮ ತಲೆಯ ಮೇಲೆಯೆ ಚೀರುತ್ತ ಹಾರುತ್ತಿರುವಾಗ, ಬಾಳಿನಲ್ಲಿ ಭರವಸೆ ಹುಟ್ಟಲು ಸಾಧ್ಯವೆ ಎನ್ನುವುದು ಕೃಷ್ಣಶರ್ಮರ ಪತ್ನಿಯಲ್ಲಿ ಮೂಡುವ ಸಂದೇಹ. ಈ ಪಕ್ಷಿಗಳೂ ಸಹ ನಿಸರ್ಗದ ಸೃಷ್ಟಿ. ಇವುಗಳಲ್ಲಿಯೂ ಸಹ ಸೊಬಗಿದೆ. ನಮ್ಮ ಕಾರ್ಪಣ್ಯವನ್ನು ಮರೆಯೋಣ. ಸೃಷ್ಟಿಯ ಆಟದಲ್ಲಿ ನಾವೆಲ್ಲರೂ ಭಾಗಿಗಳು ಎನ್ನುವುದನ್ನು ಅರಿತು, ಅಲ್ಲಿ ಅಡಗಿರುವ ಚೆಲುವನ್ನಷ್ಟೇ ಕಾಣೋಣ ಎನ್ನುವುದು ಕೃಷ್ಣಶರ್ಮರು ತಮ್ಮ ಹೆಂಡತಿಗೆ ನೀಡುತ್ತಿರುವ ಸಮಾಧಾನ!

ಬಾಳಿನ ತೋಟಕೆ ಬರಲಿದೆ ಹೊಸ ಸುಗ್ಗಿ
ನಳನಳಿಸುವದಂದು ತಳಿತು;
ಹಣ್ಣು ಬಿಡುವೆ ನಾನು, ಹೂವ ಹೊರುವೆ ನೀನು,
ದಿಟ ದಿಟ ನಂಬು ಈ ಮಾತು!

ಕಾಲನಿಯಮ ಎನ್ನುವುದು ಒಂದಿದೆಯಲ್ಲ. ಇಂದೇನೊ ನಮ್ಮ ಬಾಳತೋಟ ಬರಲಾಗಿರಬಹುದು. ನಮ್ಮಲ್ಲಿಗೂ ಸಹ ಹೊಸ ಸುಗ್ಗಿ ಬಂದೇ ಬರುವುದು. ಆ ದಿನದಂದು ಈ ತೋಟವು ಹೊಸ ತಳಿರುಗಳನ್ನು ತುಂಬಿಕೊಂಡು ಚೆಲುವಾಗುವುದು. (‘ಅಂದು’ ಎಂದು ಹೇಳುವಾಗ, ಭವಿಷ್ಯದ ಕಡೆಗಿರುವ ಕೃಷ್ಣಶರ್ಮರ ನೋಟವನ್ನು ಗಮನಿಸಬೇಕು.) ಆ ಕಾಲದಲ್ಲಿ  ನಾನು (=ಮಾಮರವು) ಹಣ್ಣುಗಳನ್ನು ಬಿಡುವೆನು; ಹಾಗು ನೀನು (=ಮಲ್ಲಿಕಾಲತೆಯು) ಹೂವುಗಳನ್ನು ಬಿಡುವೆ. ನಿಸರ್ಗಧರ್ಮವನ್ನು ಅನುಸರಿಸಿ ನಮ್ಮ ಬಾಳೂ ಸಾಫಲ್ಯ ಪಡೆಯುವುದು.ಇದು ಭ್ರಮೆ ಎಂದು ಭಾವಿಸಬೇಡ; ಇದು ಪ್ರಕೃತಿಯ ಸತ್ಯ.

ಹಣ್ಣಗೊನೆಯ ಹೊತ್ತು ಜೀವಜಂಗುಳಿಗಿತ್ತು
ಹಸಿವಿನುರಿಯ ನಾ ಹಿಂಗಿಸುವೆ;
ಹೂವಿನ ಹುರುಳಿಂದೆ ಹೃದಯವನರಳಿಸಿ,
ರಸಿಕಕುಲವ ನೀ ರಂಗಿಸುವೆ!

ಈ ಜೀವನಸಾಫಲ್ಯವು ಸ್ವಾರ್ಥಕ್ಕಾಗಿ ಅಲ್ಲ. ಮಾನವನು ಗಳಿಸುವದೆಲ್ಲವೂ ಸ್ವಂತಕ್ಕಾಗಿ. ಆದರೆ ಸಸ್ಯಸಂಕುಲವು ಪಡೆಯುವ ಹೂವು ಹಾಗು ಹಣ್ಣುಗಳು ಪ್ರಾಣಿಸಂಕುಲದ ಸುಖಕ್ಕಾಗಿ ಮೀಸಲಾಗಿವೆ. ಕೃಷ್ಣಶರ್ಮರು ತಮ್ಮ ಬದುಕಿನ ಬೇಗುದಿಯನ್ನು ಹೆಂಡತಿಯೊಡನೆ ಹಂಚಿಕೊಳ್ಳುತ್ತ ಬಂದಿದ್ದಾರೆ. ಇನ್ನು ಮುಂದೆ ಸುಖದ ದಿನಗಳು ಬರುವವು ಎನ್ನುವ ಅದಮ್ಯ ನಿರೀಕ್ಷೆಯನ್ನು ಇಟ್ಟುಕೊಳ್ಳುತ್ತಿದ್ದಾರೆ. ಆದರೆ ಈ ಸುಖವು ಕೇವಲ ಸ್ವಂತ ಭೋಗಕ್ಕಾಗಿ ಇರಬಾರದು ಎನ್ನುವ ಅರಿವು ಅವರಿಗಿದೆ. ಹಸಿದವರ ಒಡಲ ಉರಿಯನ್ನು ಹಿಂಗಿಸುವುದು ತಮ್ಮ ಕರ್ತವ್ಯವೆಂದೇ ಅವರು ಭಾವಿಸುತ್ತಾರೆ. ಅದಾದ ಬಳಿಕ ರಸಿಕಜನರ ಸಂತೋಷವು ಹೂಬಳ್ಳಿಯ ಧರ್ಮವಾಗಿದೆ. ಇದೇ ನಿಜವಾದ ಜೀವನಧರ್ಮ.

ಈ ಸಂದರ್ಭದಲ್ಲಿ ಸಂಸ್ಕೃತ ಸುಭಾಷಿತವೊಂದು ನೆನಪಿಗೆ ಬರುತ್ತಿದೆ:
ಪದ್ಮಾಕರಂ ದಿನಕರೋ ವಿಕಚೀಕರೋತಿ
ಚಂದ್ರೋ ವಿಕಾಸಯತಿ ಕೈರವ ಚಕ್ರವಾಲಮ್
ನಾಭ್ಯರ್ಥಿತೋsಪಿ ಜಲಧರೋ ಜಲಂ ದದಾತಿ
ಸಂತಃ ಸ್ವಯಂ ಪರಹಿತೇಷು ಕೃತಾಭಿಯೋಗಾ:

ಕಳಿವಣ್ಣಗಳನುಂಡು ಕೋಗಿಲೆ-ಗಿಳಿವಿಂಡು
ಕಲಕಲ ನುಡಿಯನಾಡುವವೆ!
ಹೂವಿನೈಸಿರಿ ಕಂಡು ಮರಿದುಂಬಿಗಳ ದಂಡು
ಇನಿದನಿವೆರಸಿ ಹಾಡುವುವೆ!

ಕೃಷ್ಣಶರ್ಮರ ಸಾತ್ವಿಕ ಅಪೇಕ್ಷೆಯನ್ನಷ್ಟು ನೋಡಿರಿ. ಇವರ ಬಾಳತೋಟದ ಸಿಹಿಫಲಗಳನ್ನು ಕೋಗಿಲೆ ಹಾಗು ಗಿಳಿಗಳ ಹಿಂಡು ಉಣ್ಣಬೇಕು, ಇವರ ತೋಟದ ಕಂಪಿನ ಹೂವುಗಳಿಗೆ ಆಕರ್ಷಿತವಾದ ದುಂಬಿಗಳು, ಅಲ್ಲಿ ನೆರೆದು, ಇಂಪಿನ ದನಿಯಲ್ಲಿ ಹಾಡಬೇಕು ಎನ್ನುವುದು ಕೃಷ್ಣಶರ್ಮರ ರಸಿಕ ಬಯಕೆ. ಈ ಸಾಲುಗಳನ್ನು ಓದುವಾಗ, ಕನ್ನಡದ ಆದಿಕವಿ ಪಂಪನು ಹಾಡಿದ ‘ ಕೋಗಿಲೆಯಾಗಿ ಮೇಣ್ ಮರಿದುಂಬಿಯಾಗಿ ಪುಟ್ಟುವುದು ನಂದನದೊಳ್, ಬನವಾಸಿ ದೇಶದೊಳ್’ ಎನ್ನುವ ರೋಮಾಂಚಕ ಕಾವ್ಯಭಾಗ ನೆನಪಾಗುವದಲ್ಲವೆ? ತಮ್ಮ ಬದುಕಿನಲ್ಲಿ ಪ್ರವೇಶಿಸುವ ಸುಖವು ಈ ರೀತಿಯಾಗಿ ಸಾಂಸ್ಕೃತಿಕವಾಗಿಯೂ ಸಫಲವಾಗಲಿ ಎನ್ನುವುದು ಕೃಷ್ಣಶರ್ಮರ ಸುಸಂಸ್ಕೃತ ಮನೋಧರ್ಮವನ್ನು ತೋರಿಸುತ್ತದೆ.

ಬಾಳಿದು ಕನಸಲ್ಲ, ಗೋಳಿನ ತಿನಿಸಲ್ಲ,
ನನ್ನಿ-ಹಿಗ್ಗಿನ ಹೊಸ ತೋಟ;
ನಾನೊಂದು ಮಾಮರ, ನೀ ಮಲ್ಲಿಗೆಯ ಬಳ್ಳಿ
ನೋಡು ಬರುವ ಸುಗ್ಗಿಯಾಟ!

ಮೊದಲ ನುಡಿಯಲ್ಲಿ ‘ಚೆನ್ನೇ ಚೆನ್ನೆನಿತು ಈ ಕೂಟ...?’ ಎನ್ನುವ ಸಂದೇಹದಿಂದ ಪ್ರಾರಂಭವಾಗುವ ಕವನವು ಅಂತ್ಯಗೊಳ್ಳುವುದು ಆತ್ಮವಿಶ್ವಾಸದ ಘೋಷಣೆಯೊಂದಿಗೆ: ‘ನೋಡು, ಬರುವ ಸುಗ್ಗಿಯಾಟ!’ 

Friday, April 6, 2012

ಕನಿಷ್ಠ ಜ್ಞಾನವಿಲ್ಲದ ಸಂಯುಕ್ತ ಕರ್ನಾಟಕ

ಫೆಬ್ರುವರಿ ೧೧ರಂದು ‘ಸಂಯುಕ್ತ ಕರ್ನಾಟಕ’ದ ಮೂರನೆಯ ಪುಟದಲ್ಲಿ ಪ್ರಕಟವಾದ ಸಮಾಚಾರದ ತುಣುಕು ಹೀಗಿದೆ:
‘ಹೊರ ಭಾಷಿಕರು ಕನ್ನಡದ ಕನಿಷ್ಟ ತಿಳಿವಳಿಕೆ ಹೊಂದಲಿ’.

ಹೊರಭಾಷಿಕರಿಗೆ ಬೇಡ, ಒಳಭಾಷಿಕರಿಗೂ ಬೇಡ, ಕನಿಷ್ಠಪಕ್ಷ ಪತ್ರಕರ್ತರಿಗಾದರೂ ಭಾಷೆಯ ಬಗೆಗೆ ಕನಿಷ್ಠ ತಿಳಿವಳಿಕೆ ಇರಬೇಕಲ್ಲವೆ? ಸಂಯುಕ್ತ ಕರ್ನಾಟಕದ ಪತ್ರಕರ್ತರಿಗೆ ಅದೇ ಇಲ್ಲ ಎನ್ನುವದನ್ನು ಅವರು ‘ಕನಿಷ್ಟ’ ಎನ್ನುವ ಪ್ರಯೋಗದ ಮೂಲಕ ರುಜುವಾತು ಮಾಡಿದ್ದಾರೆ! ಇಂತಹ ಅನೇಕ ತಪ್ಪುಗಳು ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರತಿ ದಿನವೂ ಘಟಿಸುತ್ತಿದ್ದು, ಈಗಾಗಲೇ ಅವುಗಳ ಬಗೆಗೆ ಇಲ್ಲಿ ಹಾಗು ಇಲ್ಲಿ ಬರೆಯಲಾಗಿದೆ.

ಇತ್ತೀಚೆಗೆ ಈ ಪತ್ರಿಕೆಯು ಮನೋರಂಜನೆಯ ಇನ್ನೂ ಅನೇಕ ಹೊಸ ವಿಧಾನಗಳ ಅನ್ವೇಷಣೆಯನ್ನು ಮಾಡಿದೆ. ಇಂತಹ ಒಂದು ವಿಧಾನಕ್ಕೆ ‘ಪದ ಕತ್ತರಿ ವಿಧಾನ’ ಎಂದು ಕರೆಯಬಹುದು. ಕಾಲಮ್ಮಿನ ಅಗಲಳತೆಯಲ್ಲಿ ಶೀರ್ಷಿಕೆಯನ್ನು ಕೂಡಿಸಲು ಆಗದಿದ್ದರೆ, ಯಾವುದಾದರೂ ಪದದ ಕೈಯನ್ನೋ, ಕಾಲನ್ನೋ ಕತ್ತರಿಸುವದು ಈ ವಿಧಾನದ ಲಕ್ಷಣ. ಕೆಲವೊಮ್ಮೆ ರುಂಡವನ್ನೇ ಹಾರಿಸಿದರೂ ನಡೆದೀತು. ಇದಂತೂ ಅತ್ಯುತ್ತಮ ಮಾರ್ಗ. ಕೆಳಗಿನ ಉದಾಹರಣೆಯನ್ನು ನೋಡಿರಿ:

ಅರ್ಥವಾಯಿತೆ? ‘ಭುವನೇಶ್ವರಿ’  ಎಂದು ಅಚ್ಚಿಸಲು ಜಾಗ ಸಾಲದು ಎಂದು ಮಧ್ಯಾಕ್ಷರವನ್ನು ಮಟಾಶ್ ಮಾಡಿ ‘ಭುವೇಶ್ವರಿ’ಯನ್ನಾಗಿ ಮಾಡಿದ್ದಾರೆ, ಅಷ್ಟೆ. ಇವಳು ನಮ್ಮ ಕನ್ನಡ ಭುವನೇಶ್ವರಿಯೇ ಹೌದು ಎಂದು ಸಂಪಾದಕರು ಅವಳ ತಲೆಯ ಮೇಲೆ ಆಣೆ ಇಟ್ಟು ಹೇಳಬೇಕಾಗಬಹುದು.

ಭುವನೇಶ್ವರಿಯಾದರೋ ಕನ್ನಡಿಗರ ಹೆತ್ತಮ್ಮ. ಆದುದರಿಂದ ಈ ಛೇದನವನ್ನು ಸಹಿಸಿಕೊಳ್ಳುವದು ಅವಳಿಗೆ ಅನಿವಾರ್ಯ. ಆದರೆ ಹುಬ್ಬಳ್ಳಿಯಂತಹ ಗಂಡುಮೆಟ್ಟಿನ ಶಹರದ ಮೆಣಸಿನಕಾಯಿಯವರು ಏಕೆ ಸುಮ್ಮನಿದ್ದಾರು?
ಕೆಳಗಿನ ಸುದ್ದಿಯನ್ನು ನೋಡಿರಿ.

 ಮೆಣಸಿನಕಾಯಿಯವರ ‘ನ’ ಮಂಗಮಾಯವಾಗಿ ‘ಮೆಣಸಿಕಾಯಿ’ಯಾಗಿದ್ದಾರೆ. ದಿವಂಗತರ ಬಳಗದ ಕಣ್ಣಿಗೆ ಈ ಮಂಗಾಟ ಬಿದ್ದಿರಲಿಕ್ಕಿಲ್ಲ. ಅಥವಾ ಬಿದ್ದರೂ ಸುಮ್ಮನಿದ್ದರೆ, ಅದು ಅವರ ಔದಾರ್ಯ!

ಸಂಯುಕ್ತ ಕರ್ನಾಟಕದಲ್ಲಿ ಕೇವಲ ಕತ್ತರಿ ಪ್ರಯೋಗವಷ್ಟೇ ಆಗುತ್ತದೆ ಎನ್ನುವ ತಪ್ಪು ಭಾವನೆ ಬೇಡ. ಕೆಲವೊಮ್ಮೆ ಕರ್ಮಣಿ ಪ್ರಯೋಗವೂ ಆಗುತ್ತದೆ ( ‘ಓದುಗರ ಕರ್ಮ’ ಎನ್ನುವ ಅರ್ಥದಲ್ಲಿ).
ಅಕ್ಷರಛೇದನದ ಪಾಪವನ್ನು ಕಳೆದುಕೊಳ್ಳುವ ಸಲುವಾಗಿ ಅಕ್ಷರವಿಸ್ತರಣೆಯನ್ನು ಮಾಡಿರುವ ಈ ಉದಾಹರಣೆಗಳನ್ನು ನೋಡಿರಿ:

ರೇವ್’ ಅನ್ನುವ ಆಂಗ್ಲ ಪದದ ‘ವ್’ಕಾರಕ್ಕೆ ಬಾಲ ಹಚ್ಚಿ ‘ರೇವು’ ಎಂದು ಕನ್ನಡೀಕರಿಸಿದ್ದಾರೆ. ಕನ್ನಡ ‘ಭುವೇಶ್ವರಿ’ಗೆ ಇದರಿಂದ ಖುಶಿ ಆದೀತು ಎಂದು ಭಾವಿಸೋಣ. 


ಆದರೆ  ‘ಬದುಕು’ ಪದದ ‘ಬ’ ಅಕ್ಷರಕ್ಕೆ ಬಾಲವನ್ನು ಜೋಡಿಸಿ ‘ಬುದುಕು’ ಮಾಡುವುದರ ಉದ್ದೇಶ ಮಾತ್ರ ಅರ್ಥವಾಗುವದಿಲ್ಲ!

ಕತ್ತರಿ ಹಾಗು ಕರ್ಮಣಿ ಪ್ರಯೋಗಗಳಲ್ಲದೆ, ಇನ್ನೊಂದು ಪ್ರಯೋಗವನ್ನೂ ಈ ಪತ್ರಿಕೆಯವರು ವಿಕಾಸಗೊಳಿಸಿದ್ದಾರೆ. ಅದಕ್ಕೆ ‘ಇಕ್ಕಳ ಪ್ರಯೋಗ’ ಎನ್ನುವ ಹೆಸರನ್ನು ಕೊಡಬಹುದು. ಒಂದು ಪದವನ್ನು ಸರಿಯಾಗಿ ಬರೆಯಲು ಸ್ಥಳಾಭಾವವಾದರೆ, ಆ ಪದವನ್ನು ಇಕ್ಕಳದಲ್ಲಿ ಹಾಕಿ ಹಿಚುಕುವುದು ಈ ಪ್ರಯೋಗದ ವಿಧಾನವಾಗಿದೆ. ಕೆಳಗಿನ ಉದಾಹರಣೆಯನ್ನು ನೋಡಿರಿ:

‘ಭಗವದ್ಗೀತೆ’ ಎನ್ನುವ ಪದವು ಇಕ್ಕಳದಲ್ಲಿ ಸಿಲುಕಿ ‘ಭಗ್ವದ್ಗೀತೆ’ಯಾಗಿದೆ. ಈ ಪ್ರಯೋಗದ ಕೆಲವೊಂದು ಸಂಭಾವ್ಯತೆಗಳನ್ನು ಊಹಿಸಿ ನಾನು ಗಾಬರಿಯಾದೆ. ‘ಬಸವೇಶ್ವರರ ವಚನಗಳು’ ಪದಪುಂಜವನ್ನು ಈ ಪ್ರಯೋಗದಲ್ಲಿ ‘ಬಸ್ವೇಶ್ವರ ವಚ್ನಗ್ಳು’ ಎಂದೂ, ‘ಮೂರು ಸಾವಿರ ಮಠದ ಅಪ್ಪನವರು’ ಪದಪುಂಜವನ್ನು ‘ಮೂರ್ಸಾವ್ರ ಮಠ್ದಪ್ನೋರ್’ ಎಂದೂ ಬರೆದರೆ ಅನಾಹುತವಾಗಲಿಕ್ಕಿಲ್ಲವೆ? ಅಥವಾ ಅದುವೇ ‘ಸಂಯುಕ್ತ ಕರ್ನಾಟಕ’ದ ‘ಸ್ಟೈಲ್ಶೀಟ್’ (=style sheet) ಎಂದು ಹೇಳಬಹುದೆ?

ಸ್ಥಳವನ್ನು ಉಳಿಸಲು ಸಂ.ಕ.ದವರು ಅಧ್ಯಾಹರಣ, ಸಂಕ್ಷಿಪ್ತೀಕರಣದಂತಹ ಇನ್ನೂ ಅನೇಕ ಉಪಾಯಗಳನ್ನು  ಯೋಜಿಸಿದ್ದಾರೆ.
‘ಖಾಲೀ ಗಾಡಾ ಸ್ಪರ್ಧೆ’ ಎನ್ನುವ ಈ ಶೀರ್ಷಿಕೆಯನ್ನು ನೋಡಿರಿ.

ಖಾಲೀ ಗಾಡಾದ ಎಂತಹ ಸ್ಪರ್ಧೆ ಎಂದು ನೀವು ಅಚ್ಚರಿಗೊಳ್ಳಬಹುದು. ಇಲ್ಲಿ ‘ಓಡಿಸುವ’ ಎನ್ನುವುದು ಅಧ್ಯಾಹೃತವಾಗಿದೆ. ಈ ಪ್ರಯೋಗವನ್ನು ಹೇಗಾದರೂ ಸಹಿಸಿಕೊಳ್ಳಬಹುದು. ಆದರೆ ಈ ಕೆಳಗಿನ ತಲೆಬರಹದ ಅರ್ಥವೇನು?

ರಾಹುಲನು ತಮ್ಮ ಮೇಲೆ ಮಾಡಿದ ಟೀಕೆಯಿಂದ ಖತಿಗೊಂಡ ಸೋನಿಯಾ ಗಾಂಧಿಯವರು ಅವನನ್ನೇ ‘ಹುಚ್ಚ’ನೆಂದು ಮರು ಟೀಕಿಸಿದ್ದಾರೆನ್ನುವ ಅರ್ಥ ಬರುವದಲ್ಲವೆ? ಹಾಗೆ ಅರ್ಥೈಸಿಕೊಂಡರೆ, ಅದು ಓದುಗರದೇ ತಪ್ಪು ಎಂದು ಸಂ.ಕ.ದವರು ಹೇಳುತ್ತಾರೆ. ಯಾಕೆಂದರೆ ಇದು ‘ಸಂಕ್ಷಿಪ್ತೀಕರಣ ಪ್ರಯೋಗ’ ಎನ್ನುವುದು ಅವರ ಸಮಜಾಯಿಷಿ. 
ಇನ್ನೊಂದು ಉದಾಹರಣೆಯನ್ನು ನೋಡಿರಿ:

ಈ ಸುದ್ದಿ ತುಣುಕಿನಲ್ಲಿ ಯಾರು ವಿಷಾದ ಪಟ್ಟಿದ್ದಾರೆ ಎನ್ನುವುದು ಅಪ್ರಸ್ತುತ! ಅದನ್ನು ಮುಂದಿನ ಸಾಲುಗಳಲ್ಲಿ ಹುಡುಕಿಕೊಳ್ಳಿರಿ.  

ಸಂಕ್ಷಿಪ್ತೀಕರಣವು ಕೇವಲ ತಲೆಬರಹಗಳಿಗೆ ಮಾತ್ರ ಸೀಮಿತವಾಗಿಲ್ಲ. ಸುದ್ದಿಯನ್ನೇ ಸಂಕ್ಷಿಪ್ತೀಕರಣಗೊಳಿಸುವದು ಸಂ.ಕ.ದವರ ಸ್ಪೆಶಾಲಿಟಿ ಎನ್ನಬಹುದು. ಅದಕ್ಕೊಂದು ಉದಾಹರಣೆ:
 ಸಮಾಚಾರದ ಈ ತುಣುಕಿನಲ್ಲಿ ಏನಾದರೂ ಅರ್ಥವಾಗುತ್ತಿದೆಯೆ? ನಾಯಕರು ಬೆಂಗಳೂರಿನಿಂದ ಪ್ರವಾಸ ಹೊರಟು ಧಾರವಾಡಕ್ಕೆ ಬರುವರು ಹಾಗು ಸರ್ಕೀಟ್ ಹೌಸಿನಲ್ಲಿ ವಾಸ್ಯವ್ಯ ಮಾಡುವರು ಎನ್ನುವುದು ಓದುಗರ ಊಹೆಗೆ ಬಿಟ್ಟ ವಿಷಯವಾಗಿದೆ! ಇದು ಓದುಗರನ್ನು ತರ್ಕಕುಶಲರನ್ನಾಗಿ ಮಾಡುವ ಪ್ರಯತ್ನವಾಗಿರಬಹುದೆ?

ಈಗ ಈ ಕೆಳಗಿನ ಉದಾಹರಣೆ ನೋಡಿರಿ:

ದುರಿಯಿಂದ’ ಎನ್ನುವ ಪದವು ತಪ್ಪು ಎನ್ನುವುದು ಎಂತಹ ದಡ್ಡನಿಗೂ ಗೊತ್ತಾಗುತ್ತದೆ. ಹಾಗಿದ್ದರೆ ಸಂಯುಕ್ತ ಕರ್ನಾಟಕದವರಿಗೆ ಏಕೆ ಗೊತ್ತಾಗಲಿಲ್ಲ ಎನ್ನುವ ಸಂದೇಹ ನಿಮಗೆ ಬರಬಹುದು. ಇದು  ‘ಸರಿಯಾದ ಅಕ್ಷರವನ್ನು ಊಹಿಸಿರಿ’ ಎನ್ನುವ ಸ್ಪರ್ಧೆಯಾಗಿದ್ದು, ಅದನ್ನು ಪತ್ರಿಕೆಯವರು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ. ಅದನ್ನೂ ಸಹ ಜಾಣರಾದ ಓದುಗರೇ ಊಹಿಸಿಕೊಳ್ಳಬೇಕು.

ಇರುವ ಪದಗಳನ್ನು ಬದಲಾಯಿಸಿ, ಹೊಸ ಪದಗಳನ್ನು ಸೃಷ್ಟಿಸುವದರಲ್ಲಿ ಸಂಯುಕ್ತ ಕರ್ನಾಟಕಕ್ಕೆ ಅತೀವ ಆಸಕ್ತಿ. ‘ಖಾಲಿ ಗಾಡಿ ಓಡಿಸಿ’ ಎನ್ನುವ ವಾಕ್ಯದಲ್ಲಿಯ ‘ಗಾಡಿ’ ಪದವು ಸಂ.ಕ.ದ ಪತ್ರಕರ್ತರಿಗೆ ಪಸಂದು ಬಿದ್ದಂತೆ ಕಾಣುವದಿಲ್ಲ. ‘ಗಾಡಿ’ಯನ್ನು ‘ಗಾಡಾ’ ಮಾಡಿದರೆ ಅದು ‘ಜಾಸ್ತಿ ಹಿಂದೀ’ ಪದದಂತೆ ಕಾಣಬಹುದು ಎನ್ನುವದು ಅವರ ಗ್ರಹಿಕೆಯಾಗಿರಬಹುದೆ? ಗಾಡಿ ಎನ್ನುವದೇ ಹಿಂದೀ ಪದವಾಗಿರುವಾಗ ಈ ಕಸರತ್ತು ಯಾಕೆ ಎಂದು ಕೇಳುವಿರಾ? ಅದು ಪತ್ರಕರ್ತರ ಪ್ರಿವಿಲೇಜ್ ಅಲ್ಲವೆ? ಗಾಡಿ ಎನ್ನುವದು ಒಂದು ನಿರ್ಜೀವ ವಸ್ತುವಿನ ಹೆಸರು. ಗಾಡಾ ಎನ್ನಿರಿ, ಘೋಡಾ ಎನ್ನಿರಿ, ಅದರಿಂದ ಗಾಡಿಗೆ ಏನೂ ಅನ್ನಿಸುವದಿಲ್ಲ. ಆದರೆ ಸಜೀವ ವ್ಯಕ್ತಿಗಳ ಹೆಸರನ್ನು ಬದಲಾಯಿಸಿದರೆ? ಖ್ಯಾತ ಹಿಂದೀ ಸಿನೆಮಾ ನಟ ಆಮೀರನು ಸಂ.ಕ.ದ ಕೈಯಲ್ಲಿ ಸಿಕ್ಕು ಅಮೀರನಾಗಿದ್ದಾನೆ, ಅಂದರೆ ಶ್ರೀಮಂತನಾಗಿದ್ದಾನೆ. ಭಲೆ ಆಮೀರನ ಅದೃಷ್ಟವೆ!

ಕನ್ನಡದ ಮೇರುನಟ ರಾಜಕುಮಾರರು ಈ ಗಳಿಗೆಯಲ್ಲಿ ನಮ್ಮ ಜೊತೆಗಿಲ್ಲ. ಅವರು 
ಬದುಕಿದ್ದರೆ ಸಂ.ಕ.ದವರು ಅವರನ್ನು ರಜಾಕುಮಾರರನ್ನಾಗಿ ಮಾರ್ಪಡಿಸುತ್ತಿದ್ದರೋ ಏನೋ! ವ್ಯಕ್ತಿಯ ಹೆಸರನ್ನೇ ಬದಲಾಯಿಸುವ ಸಾಮರ್ಥ್ಯ ಉಳ್ಳವರು ಲೇಖಕರ ಕೃತಿಯ ಹೆಸರನ್ನು ಬಿಡಬಹುದೆ? ಕನ್ನಡದ ವಿನಾಯಕ ಗೋಕಾಕರು ತಮ್ಮ ಮಹಾಕಾವ್ಯ ‘ಭಾರತ ಸಿಂಧುರಶ್ಮಿ’ಗಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದರು. ಕನ್ನಡ ಹಾಗು ಇಂಗ್ಲಿಶ್ ಭಾಷಾಪಾಂಡಿತ್ಯದಲ್ಲಿ ಇವರನ್ನು ಮೀರಿಸಿದವರಿಲ್ಲ. ಇಂಥವರು ತಮ್ಮ ಕೃತಿಯ ಹೆಸರಿನಲ್ಲಿ ಕಾಗುಣಿತದ ತಪ್ಪನ್ನು ಮಾಡಿರುವರು ಎನ್ನುವುದು ಸಂ.ಕ. ಪಂಡಿತರ ಅಭಿಪ್ರಾಯ. ಆದುದರಿಂದ ಆ ಹೆಸರನ್ನು ‘ಭಾರತ ಸಿಂಧುರಶ್ಮೀ’ ಎಂದು ಬದಲಾಯಿಸಿದ್ದಾರೆ.

ಕೃತಿಯ ಹೆಸರನ್ನು ತೆಗೆದುಕೊಂಡು ಏನು ಮಾಡುವಿರಿ, ಕವಿಯನ್ನೇ ಬದಲಾಯಿಸುವ ಶಕ್ತಿ ನಮಗಿದೆ ಎನ್ನುವುದು ಸಂ.ಕ.ದವರ ಬುಡುಬುಡಿಕೆ ಎಂದು ತಿಳಿಯಬೇಡಿ. ನಮ್ಮ ಮು.ಮಂ. ಸದಾನಂದ ಗೌಡರು ತಮ್ಮ ಬಜೆಟ್ ಭಾಷಣದಲ್ಲಿ ಓದಿದ ಕವನವನ್ನು ‘ಚನ್ನವೀರ ಕಣವಿ’ಯವರ ಕವನವೆಂದು ಸಂ.ಕ.ದವರು ಘೋಷಿಸಿದ್ದಾರೆ.

ಅದ್ಯಾವನೋ ಬೇಂದ್ರೆ ಎನ್ನುವವನು ಆ ಕವನವನ್ನು ‘ಬೈರಾಗಿಯ ಹಾಡು’ ಎನ್ನುವ ತಲೆಬರಹ ಕೊಟ್ಟು ‘ಸಖೀಗೀತ’ ಎನ್ನುವ ಕವನಸಂಕಲನದಲ್ಲಿ ಅಚ್ಚು ಹಾಕಿಸಿಕೊಂಡಿದ್ದಾನೆ. ಇಲ್ಲಿದೆ ನೋಡಿ ಆ ಕವನ. (ಇದರಲ್ಲಿಯೂ ಸಹ ಮಾಡಲಾದ ಕಾಗುಣಿತದ ತಪ್ಪುಗಳನ್ನು ಕೆಂಪು ಗೆರೆಯಿಂದ ಗುರುತಿಸಲಾಗಿದೆ.)

‘ಕನ್ನಡಪ್ರಭಾ’ದವರೂ ಸಹ ಚನ್ನವೀರ ಕಣವಿಯವರ ಹೆಸರನ್ನೇ ಹಾಕಿದ್ದಾರೆ. ಸಂಯುಕ್ತ ಕರ್ನಾಟಕದವರೇನು ಹೆಚ್ಚುಗಾರಿಕೆ ಎನ್ನುವಿರಾ? 
ಸ್ವಾಮಿ, ಒಂದು ಸಂಸ್ಥೆಯನ್ನೇ ಕಿತ್ತಿ ಮತ್ತೊಂದು ಜಾಗದಲ್ಲಿ ಸ್ಥಾಪಿಸಬಲ್ಲ ಶಕ್ತಿ ಯಾರಿಗಿದೆ? ಅಲ್ಲಾಉದ್ದೀನನ ‘ಶೀಶೆಯಲ್ಲಿಯ ಭೂತ’ಕ್ಕೆ ಮಾತ್ರ ಇಂಥ ಶಕ್ತಿ ಇದೆ ಎಂದು ನೀವು ತಿಳಿದಿರುವಿರಾ? ಸಂ.ಕ.ದ ಪತ್ರಕರ್ತರು ಈ ‘bottle ಭೂತ’ಕ್ಕಿಂತ ಏನೂ ಕಡಿಮೆ ಇಲ್ಲ.

ರಾ.ಹ.ದೇಶಪಾಂಡೆ ಮೊದಲಾದ ಧಾರವಾಡದ ಕನ್ನಡಪ್ರಿಯ ಗೃಹಸ್ಥರ ಪ್ರಯತ್ನದಿಂದಾಗಿ, ೧೮೯೦ನೆಯ ಇಸವಿಯಲ್ಲಿ ಧಾರವಾಡದಲ್ಲಿ ‘ಕರ್ನಾಟಕ ವಿದ್ಯಾವರ್ಧಕ’ ಸಂಸ್ಥೆಯ ಸ್ಥಾಪನೆಯಾಯಿತು. ಆ ಸಂಸ್ಥೆಯನ್ನು ಅದರ ಕಟ್ಟಡದ ಜೊತೆಗೆ ಅನಾಮತ್ತಾಗಿ ಎತ್ತಿ ಹುಬ್ಬಳ್ಳಿಯಲ್ಲಿ ಇರಿಸಿದ ಕೀರ್ತಿ ಸಂ.ಕ.ದ bottle ಭೂತ’ಕ್ಕೆ ಸಲ್ಲುತ್ತದೆ! ‘ಭಾರತ ಸಿಂಧು ರಶ್ಮೀ’ ಎಂದು ಮೇಲೆ ಬರೆಯಲಾದಂತಹ ವರದಿಯಲ್ಲಿಯೇ ಧಾರವಾಡದಲ್ಲಿರುವ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಹುಬ್ಬಳ್ಳಿಗೆ ಎತ್ತಿಡಲಾದ ರೋಚಕ ಮಾಹಿತಿ ಸಹ ನಿಮಗೆ ಲಭ್ಯವಾಗುತ್ತದೆ. After all ಧಾರವಾಡ ಹಾಗು ಹುಬ್ಬಳ್ಳಿ ಇವೆರಡೂ ಒಂದೇ ಮಹಾನಗರಪಾಲಿಕೆಗೆ ಸೇರಿವೆಯಲ್ಲ ಎಂದು ಸಮಾಧಾನ ಪಟ್ಟುಕೊಳ್ಳೋಣ.

ಸಂ.ಕ.ದವರು ಬಳಸುವ ಪದಗಳು ಕೆಲವೊಮ್ಮೆ ಓದುಗನನ್ನು ದೀರ್ಘ ಆಲೋಚನೆಯಲ್ಲಿ ಮುಳುಗಿಸುತ್ತವೆ. 
ಈ ತುಣಕನ್ನು ನೋಡಿರಿ:

‘ವಿದೇಶೀಯ ಬಂಡವಾಳ ಅನನ್ಯ’ ಎಂದು ಇಲ್ಲಿ ಸಾರಲಾಗಿದೆ. ಇದರ ಅರ್ಥ ಏನಿದ್ದೀತು? ಅನ್ಯ ಎಂದರೆ ಬೇರೆಯವನು. ಅನನ್ಯ ಎಂದರೆ ‘ಬೇರೆ ಅಲ್ಲ’ ಎಂದರ್ಥ. ಅವನ ಸಾಧನೆ ಅನನ್ಯವಾಗಿದೆ ಎಂದರೆ ಅವನಂತೆ ಬೇರಾರೂ ಆ ಸಾಧನೆಯನ್ನು ಮಾಡಿಲ್ಲ ಎನ್ನುವ ಅರ್ಥವಾಗುತ್ತದೆ. ಆದುದರಿಂದ ಈ ಸುದ್ದಿಯ ಅರ್ಥವು ವಿದೇಶೀ ಬಂಡವಾಳದಂತೆ ಬೇರೆ ಯಾವ ಬಂಡವಾಳವೂ ಇಲ್ಲ ಎಂದು ತಿಳಿಯಬೇಕಾಗುವದಲ್ಲವೆ? ಇದನ್ನು ‘ಬಂಡ್ವಾಳಿಲ್ಲದ ಬಡಾಯಿ’ ಎಂದು ಕರೆಯಬಹುದೆ!?

ಇನ್ನು  ವಿದೇಶೀ ಬಂಡವಾಳಕ್ಕಾಗಿ ಕರ್ನಾಟಕ ಸರಕಾರದವರು ಪರದೇಶಗಳಲ್ಲಿ ‘ರೋಡ್ ಶೋ’ ಮಾಡುವವರಿದ್ದಾರೆ ಎನ್ನುವ ಸಮಾಚಾರ ಓದಿ ನನಗೆ ಆಘಾತವಾಯಿತು.

ರೋಡ್ ಶೋ ಮಾಡುವದು ಚುನಾವಣೆ ಸಮಯದಲ್ಲಿ ಎನ್ನುವುದು ನನ್ನ ಕಲ್ಪನೆ.  ವಿದೇಶದಿಂದ ಬಂಡವಾಳ ಆಹ್ವಾನಿಸಲು ರೋಡ್ ಶೋ ಮಾಡುತ್ತಾರೆಯೆ? ಅಥವಾ ರಸ್ತೆಯ ಬದಿಗೆ ನಿಂತು ಎತ್ತುವ ಭಿಕ್ಷೆಗೆ ಸಂ.ಕ.ದವರು ‘ರೋಡ್ ಶೋ’ ಎನ್ನುವ ಪರ್ಯಾಯ ಪದ ಬಳಸಿದ್ದಾರೆಯೆ!?

ಪತ್ರಕರ್ತರಿಗೆ ಅತ್ಯವಶ್ಯವಾದದ್ದು ಭಾಷಾಜ್ಞಾನ. ಕನ್ನಡ ಪತ್ರಕರ್ತರಿಗೆ ಕನ್ನಡ, ಸಂಸ್ಕೃತ ಹಾಗು ಇಂಗ್ಲಿಶ್ ಭಾಷೆಗಳ ಉತ್ತಮ ಜ್ಞಾನವು ಅವಶ್ಯವೆಂದು ಹೇಳಬೇಕಾಗಿಲ್ಲ. ಇದರ ಜೊತೆಗೆ ಕರ್ನಾಟಕದ ನೆರೆರಾಜ್ಯಗಳ ಭಾಷೆಗಳ ಜ್ಞಾನವೂ ಕೊಂಚ ಮಟ್ಟಿಗಾದರೂ ಇರುವದು ಒಳ್ಳೆಯದು. ಸಂ.ಕ.ದವರ ಕನ್ನಡ ಭಾಷೆಯ ಜ್ಞಾನವು ಪ್ರಾಥಮಿಕ ಶಾಲೆಯ ಬಾಲಕರ ಮಟ್ಟದ್ದು ಎಂದು ಹೇಳಬಹುದು. ಇಲ್ಲಿರುವ ಎರಡು ವರದಿಗಳನ್ನು ನೋಡಿದರೆ ಈ ಮಾತಿನ ಸತ್ಯ ಹೊಳೆದೀತು.



ಇನ್ನು ಈ ಕೆಳಗಿನ ಎರಡು ಮಾಹಿತಿಗಳು ಪತ್ರಕರ್ತರಿಗೆ ಸಂಬಂಧಿಸಿಲ್ಲ. ಆದರೆ ಬೇರೆ ಭಾಷೆಯನ್ನು ತಿಳಿಯದವರು ತಮ್ಮ ಭಾಷಾ ಅಜ್ಞಾನವನ್ನು ಹೇಗೆ ಹರಡುತ್ತಾರೆ ಎನ್ನುವದಕ್ಕೆ ಇವು ಅತ್ಯುತ್ತಮ ಉದಾಹರಣೆಗಳಾಗಿವೆ:

(೧) ಕೆಲ ವರ್ಷಗಳ ಹಿಂದೆ ರಂಗಕರ್ಮಿ ಪ್ರಸನ್ನರು ಸಂಯುಕ್ತ ಕರ್ನಾಟಕದಲ್ಲಿ ಪ್ರತಿ ವಾರವೂ ಒಂದು ಲೇಖನ ಬರೆಯುತ್ತಿದ್ದರು. ಒಂದು ಸಲ ಪ್ರವಾಸದ ಸಮಯದಲ್ಲಿ ಅವರ ಆತಿಥೇಯರು ಅವರಿಗೆ `ಥಾಲೀಪೆಟ್ಟು ಎನ್ನುವ ತಿನಿಸನ್ನು ಉಣಬಡಿಸಿದ್ದರು. ಸ್ಥಾಲೀ ಎನ್ನುವ ಸಂಸ್ಕೃತ ಪದದಿಂದ ಥಾಲೀ ಎನ್ನುವ ಮರಾಠೀ ಪದ ಹುಟ್ಟಿದೆ. ಇದರ ಅರ್ಥ ಬಟ್ಟಲು. ಪಿಷ್ಟ ಎನ್ನುವ ಸಂಸ್ಕೃತ ಪದದ ಅರ್ಥ ಹಿಟ್ಟು. ಮರಾಠಿಯಲಿ ಇದು ‘ಪೀಠ’ ಆಗಿದೆ. ಮರಾಠಿಯ ಈ ಥಾಲೀಪೀಠವು ಕನ್ನಡದಲ್ಲಿ ಥಾಲಿಪೆಟ್ಟು ಆಗಿದೆ. ಆದುದರಿಂದ ‘ಥಾಲೀಪೀಠ’ ಅಥವಾ ಥಾಲಿಪೆಟ್ಟು ಎಂದರೆ ಬಟ್ಟಲಿನಲ್ಲಿ ನಾದಿ ಎಣ್ಣೆಯಲ್ಲಿ ಬೇಯಿಸಿದ ಹಿಟ್ಟಿನ ಪದಾರ್ಥ. ನಮ್ಮ ಪ್ರಸನ್ನರಿಗೆ ಈ ಭಾಷಾಜ್ಞಾನವಿಲ್ಲ. ‘ತಾಲಿಯಲ್ಲಿ ಹಾಕಿ ಪೆಟ್ಟು ಕೊಟ್ಟು ಮಾಡುವದರಿಂದ ಈ ತಿನಿಸಿಗೆ ‘ತಾಲಿಪೆಟ್ಟು’ ಎಂದು ಕರೆಯುತ್ತಾರೆ’ ಎನ್ನುವ ತಮ್ಮ ವಿಶ್ಲೇಷಣೆಯನ್ನು ಅವರು ಸಂಯುಕ್ತ ಕರ್ನಾಟಕದ ಮೂಲಕ ಉದ್ಘೋಷಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಪತ್ರಿಕೆಯ ಸಂಪಾದಕರು ಲೇಖಕರನ್ನು ಸಂಪರ್ಕಿಸಿ, ಸರಿಯಾದ ತಿಳಿವಳಿಕೆಯನ್ನು ಕೊಡಬೇಕು. ಇದು ಸಂಪಾದಕರ ಜವಾಬ್ದಾರಿ.

(೨) ಪ್ರಸನ್ನರಿಗೆ ಮರಾಠೀ ಭಾಷೆಯ ಜ್ಞಾನವಿರಲಿಕ್ಕಿಲ್ಲ. ಅವರನ್ನು ಕ್ಷಮಿಸೋಣ. ಆದರೆ ಕನ್ನಡ ಹಾಗು ಸಂಸ್ಕೃತಗಳ ಉದ್ದಾಮ ಪಂಡಿತರಾದ ಬನ್ನಂಜೆ ಗೋವಿಂದಾಚಾರ್ಯರು ಮಾಡಿದ ಪ್ರಮಾದಕ್ಕೆ ಏನನ್ನೋಣ? ತಮ್ಮ ‘ಕನಕೋಪನಿಷತ್’ ಎನ್ನುವ ಉತ್ತಮ ಕೃತಿಯಲ್ಲಿ ಬನ್ನಂಜೆಯವರು ‘ಗೋಡಖಿಂಡಿ’ ಪದದ ಅರ್ಥವನ್ನು ಬಿಡಿಸಿದ್ದಾರೆ. ‘ಗೋಡೆ’ಯಲ್ಲಿ ‘ಖಿಂಡಿ’ ಇರುವದೇ ಗೋಡಖಿಂಡಿ. ಆದುದರಿಂದ ‘ಗೋಡಖಿಂಡಿ’ ಎನ್ನುವ ಅಡ್ಡಹೆಸರಿನವರು ಕನಕನ ಖಿಂಡಿಗೆ ಸಂಬಂಧಪಟ್ಟವರು ಎನ್ನುವುದು ಬನ್ನಂಜೆಯವರ ಅಭಿಪ್ರಾಯ.

ಬನ್ನಂಜೆಯವರೆ, ‘ಆನೆಖಿಂಡಿ’ ಎನ್ನುವ ಊರಿನ ಹೆಸರನ್ನು ನೀವು ಕೇಳಿರುವಿರಾ? ಆನೆಗಳು ವಾಸಿಸುವ ಜಾಗಕ್ಕೆ ಅಥವಾ ನೀರು ಕುಡಿಯಲು ಬರುವ ಜಾಗಕ್ಕೆ ಆನೆಖಿಂಡಿ ಎನ್ನುತ್ತಾರೆಯೆ ಹೊರತು ಆನೆಯಲ್ಲಿ ಇರುವ ಖಿಂಡಿಗೆ ಅಲ್ಲ! ಅದರಂತೆ ಘೋಡಾ ಅಂದರೆ ಕುದುರೆಗಳನ್ನು ನೀರು ಕುಡಿಸಲು ಒಯ್ಯುವ ಜಾಗಕ್ಕೆ ಘೋಡಖಿಂಡಿ ಎನ್ನುತ್ತಾರೆ. ಅದೇ ಗೋಡಖಿಂಡಿ ಆಗಿದೆ. ಇಲ್ಲಿ ಖಿಂಡಿ ಎನ್ನುವುದು water hole ಎನ್ನುವ ಅರ್ಥವನ್ನು ಕೊಡುತ್ತದೆ.

ಸಂಯುಕ್ತ ಕರ್ನಾಟಕದ ಪತ್ರಕರ್ತರಿಗೆ ಮತ್ತೊಂದು ದುರಭ್ಯಾಸವಿದೆ. ಎಲ್ಲ  ಸಂಸ್ಕೃತ ಪದಗಳು ಮಹಾಪ್ರಾಣ ಪದಗಳು ಎನ್ನುವ ತಪ್ಪು ತಿಳುವಳಿಕೆಯೇ ಅವರ ಈ ದಡ್ಡತನದ ಕಾರಣವಾಗಿರಬಹುದು. 
ಮೂರು ಉದಾಹರಣೆಗಳನ್ನು ನೋಡಿರಿ:






ಸಂ.ಕ.ದವರಿಗೆ ನನ್ನದೊಂದು ವಿನಮ್ರ ವಿನಂತಿ:
ನಿಮ್ಮ ಪತ್ರಿಕೆಯಲ್ಲಿ ಬರೆಯುವ ವರದಿಗಳನ್ನು ಸಂಕಲಿಸಿ, ಒಂದು ಕೈಪಿಡಿಯನ್ನು ತಯಾರಿಸಿರಿ. ‘ಪತ್ರಿಕಾವರದಿ’ಯನ್ನು ಹೇಗೆ ಬರೆಯಬಾರದು ಹಾಗು ಪತ್ರಿಕೆಯಲ್ಲಿಯ ಪದದೋಷಗಳು’ ಎನ್ನುವುದಕ್ಕೆ ಇದೊಂದು ಆದರ್ಶ ಮಾದರಿಯಾಗಬಹುದು!!

Sunday, February 12, 2012

ಬೇಂದ್ರೆಯವರ ‘ಫಜಾರಗಟ್ಟಿ ಮುಟ್ಟೋಣು ಬಾ’


ಫಜಾರಗಟ್ಟೀ ಮುಟ್ಟೋಣು ಬಾ
            ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ                       ||ಪಲ್ಲ||

ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
            ಅದs ನಿಜದ ನೆಲ ಮುಟ್ಟೋಣು ಬಾ          ||೧||

ಅಂಗಲಿಂಗದ ಜೋಡಿ ಕೂಡಿ ಹೊಸ
            ಗಿಣೀ-ಗೆಣೆತನs ನೋಡೋಣು ಬಾ  |
ಮನಾ ಎಂಬೋ ಹೊಸ ಬನಾ ತೆರೆದರs
            ಜನಾ ಕಂಡು ಅದ ಕೂಡೋಣು ಬಾ            ||೨||

ಪುಂಡರೀಕ ನಾ, ಮಹಾಶ್ವೇತೆ ನೀ
            ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
            ಹಚ್ಚೀದ ಬಳ್ಳಿಗೆ ಹಣಿಸೋಣ ಬಾ            ||೩||

ಗುರುವಿನಂಗಳದ ಗಿಡಾ ಬಳ್ಳಿಯಾಗಿ
            ಹೊಸಾ ಹೂವು ನಾವು ಸುರಿಸೋಣ ಬಾ |
  ತಾಯಿ ಪಾದದಾನಂದ ಗಂಧ ಉಂಡು
            ಬೆಂದವರ ಜೀವ ಬೆರಸೋಣ ಬಾ              ||೪||

..................................................................................
ಫಜಾರಗಟ್ಟೀ ಮುಟ್ಟೋಣು ಬಾ
          ಹಿಂದಿನ ಆಟಾ ಮುಗಿಸೋಣು ಬಾ
ಮುಂದಿನ ಆಟಾ ನಡೆಸೋಣು ಬಾ                  
ಬ್ರಹ್ಮಚರ್ಯ, ಗೃಹಸ್ಥಾಶ್ರಮ, ವಾನಪ್ರಸ್ಥ ಹಾಗು ಸನ್ಯಾಸ ಇವು ಸನಾತನ ಭಾರತೀಯ ಸಂಸ್ಕೃತಿಯು ವಿಧಿಸುವ ನಾಲ್ಕು ಆಶ್ರಮಗಳು. ಧರ್ಮ, ಅರ್ಥ, ಕಾಮ ಹಾಗು ಮೋಕ್ಷ ಇವು ಜೀವನದ ನಾಲ್ಕು ಪುರುಷಾರ್ಥಗಳು. ಇವುಗಳಲ್ಲಿ ಮೊದಲ ಮೂರು ಪುರುಷಾರ್ಥಗಳನ್ನು ಅಂದರೆ ಧರ್ಮ, ಅರ್ಥ ಹಾಗು ಕಾಮ ಇವುಗಳನ್ನು ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕು. ಈ ಪುರುಷಾರ್ಥಗಳು ವೈಯಕ್ತಿಕ ಸಿದ್ಧಿಗಷ್ಟೇ ಅಲ್ಲ, ಸಮಾಜದ ರಕ್ಷಣೆಗಾಗಿಯೂ ಅವಶ್ಯವಾಗಿವೆ. ಆದುದರಿಂದ  ಇವು ಪ್ರತಿಯೊಬ್ಬ ವ್ಯಕ್ತಿಯ ಸಾಮಾಜಿಕ ಹೊಣೆಗಾರಿಕೆಯೂ ಆಗಿವೆ. ಸನಾತನ ಧರ್ಮದ ಮೇರೆಗೆ ವಿವಾಹವು ಗಂಡು ಹಾಗು ಹೆಣ್ಣಿನ ನಡುವಿನ ಒಪ್ಪಂದವಾಗಿರದೆ, ಒಂದು ಧಾರ್ಮಿಕ ವಿಧಿಯಾಗಿದೆ. ನಾಲ್ಕನೆಯ ಪುರುಷಾರ್ಥವಾದ ಮೋಕ್ಷವನ್ನು ಸಾಧಿಸಲು ಸನ್ಯಾಸವನ್ನು ಸ್ವೀಕರಿಸುವದು ಪ್ರಶಸ್ತವಾದ ಕ್ರಮವಾಗಿದೆ.

ಬೇಂದ್ರೆಯವರು ಗೃಹಸ್ಥಾಶ್ರಮವನ್ನು ಸ್ವೀಕರಿಸಿದ ಬಳಿಕ, ಬದುಕಿನಲ್ಲಿ ಸುಖವನ್ನು, ದುಃಖವನ್ನು ಹಾಗು ಅನೇಕ ಸಂಕಟಗಳನ್ನು ಅನುಭಸಿದರು. ಅಂತಹದರಲ್ಲಿಯೇ ಈ ದಂಪತಿಗಳು ಧರ್ಮಸಾಧನೆಯನ್ನು  ಮಾಡಿದರು. ದೈವ ಕೊಟ್ಟಷ್ಟು ಅರ್ಥಸಾಧನೆಯನ್ನು ಮಾಡಿದರು. ಕಾಮ ಅಂದರೆ ಸಂತಾನಕಾಮ. ಜೀವನದ ಮುಂದುವರಿಕೆಗಾಗಿ ಸೃಷ್ಟಿನಿಯಮದಂತೆ ಸಂತಾನವನ್ನೂ ಪಡೆದರು. ಗೃಹಸ್ಥಾಶ್ರಮದಲ್ಲಿ ಸಾಧಿಸಬೇಕಾದ ಮೂರೂ ಪುರುಷಾರ್ಥಗಳನ್ನು ಈ ರೀತಿಯಾಗಿ ಸಾಧಿಸಿದರು. ಕೊನೆಯ ಪುರುಷಾರ್ಥವಾದ ಮೋಕ್ಷವನ್ನು ಗಂಡನಾಗಲೀ, ಹೆಂಡತಿಯಾಗಲೀ ವೈಯಕ್ತಿಕವಾಗಿ ಸಾಧಿಸಬೇಕಾಗುತ್ತದೆ. ಆದರೂ ಸಹ ಈ ಸಾಧನಾಮಾರ್ಗದಲ್ಲಿ ಅವರು ಪರಸ್ಪರ ನೆರವು ನೀಡುತ್ತ ಜತೆಯಾಗಿ ನಡೆಯಬಹುದು.

ಕಣ್ಣು ಮುಚ್ಚಾಟದಲ್ಲಿ ಫಜಾರಗಟ್ಟಿಯನ್ನು ಮುಟ್ಟಿದವರು ಪಾರಾದಂತೆ. ಅದರಂತೆ ಜೀವನದಲ್ಲಿ ಧರ್ಮ,ಅರ್ಥ ಹಾಗು ಕಾಮವೆನ್ನುವ ಪುರುಷಾರ್ಥಗಳನ್ನು ಸಾಧಿಸಿದವರು ಜೀವನದ ಫಜಾರಗಟ್ಟಿಯನ್ನು ಮುಟ್ಟಿದಂತೆ. ಬೇಂದ್ರೆಯವರು ತಮ್ಮ ಹೆಂಡತಿಗೆ ಫಜಾರಗಟ್ಟಿಯನ್ನು ಮುಟ್ಟಲು ಕರೆಯುತ್ತಿದ್ದಾರೆ. ಅಂದರೆ ಗೃಹಸ್ಥಾಶ್ರಮದ ಮೂರು ಪುರುಷಾರ್ಥಗಳನ್ನು ತಾವಿಬ್ಬರೂ ಜೊತೆಯಾಗಿ ಸಾಧಿಸಿದ್ದೇವೆ, ಇನ್ನು ಇದಕ್ಕೆ ಕೊನೆ ಹೇಳಿ ಮುಂದಿನ ಆಟವನ್ನು ಆಡೋಣ ಬಾ ಎಂದು ಸೂಚಿಸುತ್ತಿದ್ದಾರೆ. ‘ಮುಂದಿನ ಆಟ’ವೆಂದರೆ ಏನು? ಕಣ್ಣುಮುಚ್ಚಾಟದಲ್ಲಿ ತಾಯಿಯು ಮಕ್ಕಳ ಕಣ್ಣು ಕಟ್ಟಿ ಆಟಕ್ಕೆ ಬಿಡುವಂತೆ, ಮಾಯೆಯು ಜೀವಿಗಳ ಕಣ್ಣು ಕಟ್ಟಿ ಸಂಸಾರಕ್ಕೆ ಕಳಿಸುತ್ತಾಳೆ. ಒಂದು ಆಟವನ್ನು ಮುಗಿಸಿದ ಬಳಿಕ, ಮುಂದಿನ ಆಟವನ್ನು ಆಡಬೇಕು. ಇದು ಮುಂದಿನ ಜನ್ಮದ ಆಟವಾಗಬಹುದು ಅಥವಾ ಇದೇ ಜನ್ಮದಲ್ಲಿ, ನಾಲ್ಕನೆಯ ಪುರುಷಾರ್ಥವಾದ ಮೋಕ್ಷಕ್ಕೆ ಕರೆದೊಯ್ಯುವ ದೈವಸಾಧನೆಯ ಆಟವಾಗಬಹುದು.

ದೈವಸಾಧನೆಗಾಗಿ ತಾವು ತುಳಿಯುತ್ತಿರುವ ಪಥವು ಸರಿಯಾದದ್ದು ಎನ್ನುವದನ್ನು ತಿಳಿಯುವದು ಹೇಗೆ? ಹೃದಯಕ್ಕೆ ಇದರ ಅರಿವು ತಾನಾಗಿಯೇ ಆಗುವದು. ಅದಕ್ಕೆಂದೇ ಬೇಂದ್ರೆಯವರು ಹೇಳುತ್ತಾರೆ:
ಇದs ಇದs ಅಂತ ಎದೀ ಅನ್ನತದ
ಅದs ಅಲ್ಲಿ ಮನಿ ಕಟ್ಟೋಣು ಬಾ |
ನೆಲೀ ಮ್ಯಾಲ ನೆಲಿ ಅಲ್ಲ ಸಂಗಿ, ಅದು
          ಅದs ನಿಜದ ನೆಲ ಮುಟ್ಟೋಣು ಬಾ      ||
ಇದೇ ತಮ್ಮ ಸರಿಯಾದ ಪಥ, ಇದೇ ತಾವು ತಲುಪಬೇಕಾದ ತಾಣ ಎಂದು ಹೃದಯವು ಹೇಳುತ್ತಿದೆ. ಆದುದರಿಂದ ನಾವು ಈ ಸ್ಥಾನದಲ್ಲಿ ನಮ್ಮ ಮನೆಯನ್ನು ಕಟ್ಟೋಣ; ಇದೇ ತಮ್ಮ ನೆಲೆಯಾಗಿದೆ, ಹೊಸ ಬಾಳನ್ನು ಇಲ್ಲಿ ಪ್ರಾರಂಭಿಸೋಣ ಎಂದು ಬೇಂದ್ರೆಯವರು ತಮ್ಮ ಸಖಿಗೆ ಹೇಳುತ್ತಿದ್ದಾರೆ.

ನೆಲದ ಮೇಲಿನ ನೆಲೆ ಅಂದರೆ ಐಹಿಕ ಲೋಕದ ನೆಲೆ. ಇಲ್ಲಿ ಐಹಿಕ ಆಸೆಗಳು ಹಾಗು ವಿಕಾರಗಳು ಇರುತ್ತವೆ. ಹೊಸ ಸ್ಥಾನವು ವಿಕಾರಮುಕ್ತವಾದ ನೆಲೆಯಾಗಿದೆ. ಈ ಸೂಚನೆಯನ್ನು ‘ಸಂಗಿ’ ಎಂದು ಕರೆಯುವದರ ಮೂಲಕ ಬೇಂದ್ರೆಯವರು ಸೂಚಿಸುತ್ತಾರೆ. ಸಂಗಿ ಎಂದರೆ ಗೆಳತಿ. ಹೆಂಡತಿಯು ಗೆಳತಿಯೇ ಹೌದು. ಆದರೆ ಅವಳು ‘ನಿಸ್ಸಂಗ’ದ ಅಂದರೆ ವಿಕಾರಮುಕ್ತವಾದ ಸತ್ಸಂಗದ ಗೆಳತಿಯಾಗಿದ್ದಾಳೆ. ಇಂತಹ ಗೆಳತಿಗೆ ಬೇಂದ್ರೆಯವರು ‘ಅದು ಅದs’ ಎಂದು ತೋರಿಸುತ್ತಿದ್ದಾರೆ. ‘ಅದು ಅದs’ ಎಂದರೆ ‘ಭಗವಚ್ಚೈತನ್ಯವು ಇದೆ’ ಎನ್ನುವ ಶ್ರದ್ಧೆ. ಅದೇ ನಿಜದ ನೆಲ, ನೆಲೆ. ಇಲ್ಲಿಯವರೆಗಿನ ಆಟವೆಲ್ಲ ಮಿಥ್ಯೆಯ ನೆಲದ ಮೆಲಿನ ಆಟ. ಸತ್ ಎಂದರೆ ನಿಜ, ಅಸತ್ ಎಂದರೆ ಮಿಥ್ಯೆ. ಮಿಥ್ಯೆಯ ಲೋಕದ ಆಟವನ್ನು ಮುಗಿಸಿ, ಈಗ ಸತ್‍ಲೋಕವನ್ನು ಮುಟ್ಟೋಣ ಎಂದು ಬೇಂದ್ರೆಯವರು ತಮ್ಮ ಸಖಿಯನ್ನು ಕರೆಯುತ್ತಿದ್ದಾರೆ.

ಅಂಗಲಿಂಗದ ಜೋಡಿ ಕೂಡಿ ಹೊಸ
          ಗಿಣೀ-ಗೆಣೆತನs ನೋಡೋಣು ಬಾ  |
ಮನಾ ಎಂಬೋ ಹೊಸ ಬನಾ ತೆರೆದರs
          ಜನಾ ಕಂಡು ಅದ ಕೂಡೋಣು ಬಾ  ||   
ಬೇಂದ್ರೆಯವರು ವಿವಿಧ ಭಾರತೀಯ ದರ್ಶನಗಳನ್ನು ಅರಗಿಸಿಕೊಂಡಿದ್ದು, ಅದು ಅವರ ಕವನಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ‘ಅಂಗಲಿಂಗದ ಜೋಡಿ ಕೂಡಿ.....’ ಎಂದು ಹೇಳುವಾಗ ವೀರಶೈವ ದರ್ಶನದ ‘ಲಿಂಗಾಂಗ ಸಾಮರಸ್ಯ’ವನ್ನು ಅವರು ಸೂಚಿಸುತ್ತಿದ್ದಾರೆ.
     
ಇಲ್ಲಿಯವರೆಗಿನ ಬದುಕಿನಲ್ಲಿ ಈ ದಂಪತಿಗಳು ಧರ್ಮ, ಅರ್ಥ ಹಾಗು ಸಂತಾನಕಾಮದ ಸಾಧನೆಯನ್ನು ಗೈದರು. ಇದೀಗ ಮೋಕ್ಷಾರ್ಥಕ್ಕಾಗಿ ದೈವಸಾಧನೆಯನ್ನು ಮಾಡಬೇಕಾಗಿದೆ. ಇದರ ಸಿದ್ಧಿ ವೈಯಕ್ತಿಕವೇ ಆದರೂ ಸಹ, ಸಾಧನೆಯು ವೈಯಕ್ತಿಕವಾಗಿರಬೇಕಿಲ್ಲ. ವೀರಶೈವ ಕ್ರಮವಂತೂ ‘ಸತಿಪತಿಗಳಲಿ ಒಂದಾದ ಭಕ್ತಿ ಶಿವನಿಗೆ ಪ್ರಿಯ’ ಎಂದೇ ಹೇಳುತ್ತದೆ. ಆದುದರಿಂದ ಲಿಂಗಾಂಗ ಸಾಮರಸ್ಯದ ಭಕ್ತಿಪಥವನ್ನು ‘ಜೋಡಿ ಕೂಡಿ’ ಅಂದರೆ ಜೊತೆಯಾಗಿ ಕ್ರಮಿಸೋಣ ಎಂದು ಬೇಂದ್ರೆ ಹೇಳುತ್ತಿದ್ದಾರೆ.

ಬೇಂದ್ರೆಯವರ ಕಾವ್ಯದಲ್ಲಿ ‘ಗಿಣಿ’ ಎನ್ನುವ ಪ್ರತಿಮೆಯು ಸಖ್ಯದ ಹಾಗು ಆಪ್ತತೆಯ ಪ್ರತೀಕವಾಗಿದೆ. ಇಲ್ಲಿಯವರೆಗಿನ ತಮ್ಮ ದಾಂಪತ್ಯದಲ್ಲಿ ರೂಢಿಸಿಕೊಂಡಿದ್ದ ಪರಸ್ಪರ ಸಮೀಕರಣವನ್ನು  ತ್ಯಜಿಸಿ, ಹೊಸ ಸಮೀಕರಣವನ್ನು ರೂಪಿಸಿಕೊಳ್ಳೋಣ; ಇದು ಒಬ್ಬರು ಹೆಚ್ಚು, ಒಬ್ಬರು ಕಡಿಮೆ ಎನ್ನುವ ವಿಷಮ ಸಮೀಕರಣವಲ್ಲ; ಇದು ಸಮಾನತೆಯ ಸಮೀಕರಣ;  ಇದು  ಇಹಲೋಕದ  ಕೆಳೆತನವನ್ನು ಮೀರಿದ ಹೊಸ ಕೆಳೆತನ ಎಂದು ಹೇಳಲು ಬೇಂದ್ರೆಯವರು ‘ಹೊಸ ಗಿಣೀ-ಗೆಣೆತನ’ ಎನ್ನುವ ಪ್ರತೀಕವನ್ನು ಬಳಸಿದ್ದಾರೆ. ಈ ಹೊಸ ಸಾಂಗತ್ಯದ ವಿಹಾರಕ್ಕಾಗಿ ಲಭಿಸುವ ಉಪವನ ಯಾವುದು? ಮನವೆಂಬದೇ ಆ ಹೊಸ ಬನಾ! ಮನಸ್ಸಿನ ಸಾಧ್ಯತೆಗಳು ಅಗಾಧವಾಗಿವೆ. ಮನವನ್ನು ಸರಿಯಾಗಿ ರೂಢಿಸಬೇಕು. ಕಳೆ, ಕಲ್ಮಶಗಳನ್ನು ಕಿತ್ತು ಹಾಕಿ, ಸುಗಂಧ ಬೀರುವ ಹೂಬಳ್ಳಿಗಳನ್ನು ಬೆಳೆಸಬೇಕು. ಆವಾಗ ಅದು ಆಹ್ಲಾದಕರವಾದ ಉಪವನದಂತೆ ಶೋಭಿಸುವದು.

ಇದೆಲ್ಲವೂ ಒಂದೇ ಜನ್ಮದಲ್ಲಿ ಸಾಧ್ಯವಾಗಬಹುದಾದ ಸಿದ್ಧಿಯೆ? ಬೇಂದ್ರೆಯವರು ವಿವಾಹಜೀವನವನ್ನು ದಾಂಪತ್ಯಯೋಗ ಎಂದು ಕರೆಯುತ್ತಾರೆ. ಅನೇಕ ಜನ್ಮಗಳಿಂದಲೂ ದಂಪತಿಗಳು ಜೊತೆಯಾಗಿ ಸಾಧನಾಪಥವನ್ನು ಕ್ರಮಿಸುತ್ತಿರುತ್ತಾರೆ ಎನ್ನುವದು ಬೇಂದ್ರೆಯವರ ನಂಬುಗೆ.
ಪುಂಡರೀಕ ನಾ, ಮಹಾಶ್ವೇತೆ ನೀ
          ಆದ್ಹಾಂಗಿತ್ತು ಅದ ನೆನಸೋಣ ಬಾ |
ತುಂಬೂರ ನಾನಾಗಿ ರಂಭೆ ನೀನಾದಾಗ
          ಹಚ್ಚೀದ ಬಳ್ಳಿಗೆ ಹಣಿಸೋಣ ಬಾ  ||         
ಭಾರತೀಯ ಸಾಹಿತ್ಯದಲ್ಲಿ ಪುಂಡರೀಕ ಹಾಗು ಮಹಾಶ್ವೇತಾ ಇವರು ಚಿರಪ್ರಣಯಿಗಳು. ತಪಸ್ಸಿನಿಂದ ಒಬ್ಬರನ್ನೊಬ್ಬರು ಪಡೆದುಕೊಂಡವರು. ಜನ್ಮಜನ್ಮಾಂತರದ ಸಂಬಂಧ ಇವರದು. (ಕವಿ ಬಾಣನು ಏಳನೆಯ ಶತಮಾನದ ಸಂಸ್ಕೃತ ಕವಿ. ಇವನು ಬರೆದ ‘ಕಾದಂಬರಿ’ಯಲ್ಲಿ ಪುಂಡರೀಕ ಹಾಗು ಮಹಾಶ್ವೇತೆ ಇವರಿಗೆ ಸಮಾಂತರವಾಗಿ ಚಂದ್ರಾಪೀಡ ಹಾಗು ಕಾದಂಬರಿ ಇವರ ಜನ್ಮಾಂತರದ ಪ್ರಣಯಕಥೆಯೂ ಇದೆ.) ತಾವು ಆ ಕಲ್ಪನಾವಿಲಾಸದ, ಆ ಕಾಲಾಂತರದ ಪ್ರಣಯಿಗಳೇ ಇರಬಹುದೆ? ಈ ಮಾತು ಜಗದ ಎಲ್ಲ ದಂಪತಿಗಳಿಗೂ ಅನ್ವಯಿಸುತ್ತದೆ. ಯಾವ ದಾಂಪತ್ಯವೂ ಆಕಸ್ಮಿಕವಲ್ಲ. ಎಲ್ಲ ದಂಪತಿಗಳದೂ ಜನ್ಮಜನ್ಮಾಂತರದ ಸಖ್ಯ ಎಂದು ಬೇಂದ್ರೆ ನಂಬುತ್ತಾರೆ. ದಂಪತಿಗಳು ಈ ಚಿರಕಾಲದ ಸಖ್ಯವನ್ನು ನೆನಸಬೇಕು. ಆ ನೆನಕೆಯಿಂದ ಅರಿವು ಮೂಡುವುದು. ಆ ಅರಿವಿನಿಂದ ದೈವಯೋಗದ ಪಥದಲ್ಲಿ ನಡೆಯಲು ಸಾಧ್ಯವಾಗುವುದು. ಇಷ್ಟೆಲ್ಲ ಅರ್ಥವನ್ನು ಬೇಂದ್ರೆಯವರು ‘ಪುಂಡರೀಕ ನಾ, ಮಹಾಶ್ವೇತೆ ನೀ ಆಧ್ಹಾಂಗಿತ್ತು ಅದ ನೆನಸೋಣ ಬಾ’ ಎನ್ನುವ ಎರಡು ಸರಳ ಸಾಲುಗಳ ಮೂಲಕ ಸೂಚಿಸುತ್ತಾರೆ!

ತುಂಬುರನು ದೇವಲೋಕದ ಗಾಯಕ; ರಂಭೆ ಸ್ವರ್ಗದ ನರ್ತಕಿ. ತುಂಬುರನು ರಂಭೆಯ ಗುರು ಹಾಗು ಪ್ರಣಯಿ. ಈ ದೇವಪ್ರಣಯಿಗಳು ಹಚ್ಚಿದ ಬಳ್ಳಿ ಯಾವುದು? ಪ್ರೇಮ ಹಾಗು ಭಕ್ತಿಯೇ ಆ ಬಳ್ಳಿಯಾಗಿದೆ. ಅಮರಲೋಕದಲ್ಲಿ ಹಚ್ಚಿದ ಆ ಬಳ್ಳಿಯನ್ನು, ತಾವು ಇಹಲೋಕದಲ್ಲಿ, ಜನ್ಮಾಂತರಗಳಲ್ಲಿ ಪೋಷಿಸುತ್ತ ಬಂದಿರುವದಾಗಿ ಬೇಂದ್ರೆ ಹೇಳುತ್ತಾರೆ.

ಇಂತಹ ದಾಂಪತ್ಯಯೋಗದ ಕೊನೆಯ ಮೆಟ್ಟಿಲು ಯಾವುದು? ಯಾವ ಭಾವವನ್ನು ತಾವು ಪೋಷಿಸುತ್ತ ಬಂದಿರುವೆಯೋ, ತಾವೇ ಆ ಭಾವವಾಗಿ ಮಾರ್ಪಾಡಾಗುವ ಸ್ಥಿತಿ. ಪ್ರೇಮ ಹಾಗು ಭಕ್ತಿಯ ಬಳ್ಳಿಯನ್ನು ಪೋಷಿಸುತ್ತ ಬಂದಿರುವ ತಾವೇ ಆ ಬಳ್ಳಿಯಾಗಬೇಕು. ಇದು ಸ್ಥಿತ್ಯಂತರದ ಕೊನೆಯ ಹಂತ. ಈ ಹಂತದ ಸಿದ್ಧಿಗಾಗಿ ಬೇಂದ್ರೆ ತಮ್ಮ ಸಖಿಗೆ ಕರೆಯನ್ನು ನೀಡುತ್ತಿದ್ದಾರೆ:
ಗುರುವಿನಂಗಳದ ಗಿಡಾ ಬಳ್ಳಿಯಾಗಿ
          ಹೊಸಾ ಹೂವು ನಾವು ಸುರಿಸೋಣ ಬಾ |
  ತಾಯಿ ಪಾದದಾನಂದ ಗಂಧ ಉಂಡು
          ಬೆಂದವರ ಜೀವ ಬೆರಸೋಣ ಬಾ ||    
ಈ ಭಕ್ತಿಲತೆಯು ಗುರುವಿನಂಗಳದಲ್ಲಿ ಮಾತ್ರ ಬೆಳೆಯುವ ಬಳ್ಳಿ. ಈವರೆಗಿನ ಜನ್ಮಾಂತರಗಳಲ್ಲಿ ಇವರ ದಾಂಪತ್ಯದ ಬಳ್ಳಿಯು ಸುರಿಸಿದ ಹೂವುಗಳು ಸಂಸಾರದ ಹೂವುಗಳು. ಇನ್ನು ಮುಂದೆ ಈ ಬಳ್ಳಿಯು ಹೊಸ ಹೂವುಗಳನ್ನು ಅಂದರೆ ಭಕ್ತಿ ಮತ್ತು ಪ್ರೇಮದ ಹೂವುಗಳನ್ನು ಸುರಿಸಬೇಕು ಎನ್ನುವದು ಬೇಂದ್ರೆಯವರ ಅಭೀಪ್ಸೆ. ಈ ದಾಂಪತ್ಯಸಖ್ಯದಲ್ಲಿ ಇವರಿಗೆ ಉಳಿದಿರುವ ಕಾರ್ಯ ಏನು? ಭಕ್ತಿಯ ಹೂವನ್ನು ದೇವಮಾತೆಯ ಪಾದಕ್ಕೆ ಅರ್ಪಿಸಿ, ಆ ಚರಣಭಕ್ತಿಯಿಂದ ಸಿಗುವ ಆನಂದವನ್ನು, ಪರಿಮಳವನ್ನು ಪಡೆಯುವುದು ಹಾಗು ನೊಂದ ಜೀವಿಗಳ ಜೊತೆ ಒಂದಾಗಿ ಅವರಿಗೆ ಸಾಂತ್ವನ ನೀಡುವದು ಇನ್ನು ಉಳಿದಿರುವ ಕಾರ್ಯ. ಪುರುಷಾರ್ಥಗಳನ್ನೆಲ್ಲ ಸಾಧಿಸಿದ ಬಳಿಕ, ಬದುಕಿರುವವರೆಗೆ ‘ಪರೋಪಕಾರಾರ್ಥಮಿದಂ ಜೀವನಮ್’ ಎನ್ನುವದೊಂದೇ ಉಳಿದಿರುವ ಧ್ಯೇಯ.

ಸಂಸಾರಕಾಮವು ಪ್ರೇಮವಾಗಿ ಹಾಗು ಭಕ್ತಿಯಾಗಿ ಅರಳಬೇಕು ಎನ್ನುವದು ಬೇಂದ್ರೆಯವರ ಕಾಣ್ಕೆಯಾಗಿದೆ. ಇದು ಪರಮ ಪುರುಷಾರ್ಥವನ್ನು ತಲುಪಿಸುವ ಜನ್ಮಜನ್ಮಾಂತರದ ದಾಂಪತ್ಯಯೋಗವಾಗಿದೆ. ಗಾಢವಾದ ತತ್ವವನ್ನು ಸರಳಗನ್ನಡದ ಆಡುನುಡಿಯಲ್ಲಿ ಹೇಳುವ ಬೇಂದ್ರೆಯವರ ಪ್ರತಿಭೆಗೆ ಈ ಕವನವು ಉತ್ತಮ ನಿದರ್ಶನವಾಗಿದೆ. 

‘ಗಂಗಾವತರಣ’ ಕವನಸಂಕಲನದಲ್ಲಿ ಈ ಕವನವು ಅಡಕವಾಗಿದೆ. 

Tuesday, February 7, 2012

ಕನ್ನಡಮ್ಮನ ಖಟ್ಲೆ

ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಹಾಗು ಇತರ ಕೆಲವು ರಾಜಕಾರಣಿಗಳಿಗೆ ನಾನು ಋಣಿಯಾಗಿರಬೇಕು. ಇವರಿಂದಾಗಿ ನಾನು ಕರ್ನಾಟಕದ ಉಚ್ಚ ನ್ಯಾಯಾಲಯ  ಹಾಗು  ನ್ಯಾಯಾಲಯ ಸಮುಚ್ಚಯವನ್ನು (ಟೀವಿಯಲ್ಲಿ) ವೀಕ್ಷಿಸುವ ಅವಕಾಶವನ್ನು ಪಡೆದೆ. ಟೀವಿ ಚಾನೆಲ್ಲುಗಳು ವೀಕ್ಷಕರ ಅನುಕೂಲಕ್ಕಾಗಿ ಈ ನ್ಯಾಯಾಲಯಗಳ ಫಲಕಗಳ ಮೇಲಿನ ಬರಹವನ್ನು ಪ್ರದರ್ಶಿಸುತ್ತಿವೆ. ಈ ಬರಹಗಳನ್ನು ನೋಡಿದ ಬಳಿಕ, ಇವುಗಳನ್ನು ಬರೆಯಿಸಿದ ಜಾಣರು ಕನ್ನಡಮ್ಮನ ಆಗರ್ಭ ಶತ್ರುಗಳಾಗಿರಬಹುದೇನೊ ಎನ್ನುವ ಭಯಂಕರ ಸಂಶಯ ನನ್ನನ್ನು ಕಾಡತೊಡಗಿತು!

ಉಚ್ಚ ನ್ಯಾಯಾಲಯ’ವನ್ನು ‘ಉಚ್ಛ ನ್ಯಾಯಾಲಯ’ವೆಂದು ಹಾಗು ‘ನ್ಯಾಯಾಲಯ ಸಮುಚ್ಚಯ’ವನ್ನು ‘ನ್ಯಾಯಾಲಯ ಸಮುಚ್ಛಯ’ ವೆಂದು ಬರೆದದ್ದನ್ನು ಓದುವಾಗ, ನನ್ನ ಹೃದಯಕ್ಕೆ ಶೂಲದಿಂದ ಇರಿದಂತಾಗುತ್ತಿತ್ತು. ಕೊನೆಗೊಮ್ಮೆ ಗಟ್ಟಿ ನಿರ್ಧಾರ ಮಾಡಿ, ಉಚ್ಚ ನ್ಯಾಯಾಲಯದ ಆಗಿನ ಪ್ರಧಾನ ನ್ಯಾಯಾಧೀಶರಾದ ಶ್ರೀ ಖೇಹರ ಅವರಿಗೆ ಒಂದು ಪತ್ರ ಬರೆದೆ. ನನ್ನ ದುರ್ದೈವಕ್ಕೆ, ಅಲ್ಪ ಕಾಲದಲ್ಲಿಯೇ ಶ್ರೀ ಖೇಹರರಿಗೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ಬಡತಿಯೊಡನೆ ವರ್ಗಾವಣೆಯಾದ ಸಮಾಚಾರವನ್ನು ಪತ್ರಿಕೆಗಳಲ್ಲಿ ಓದಿದೆ. ನನ್ನ ಸಾಹಸವು ಈ ರೀತಿಯಲ್ಲಿ ದುಃಖಾಂತಗೊಂಡಿತಲ್ಲ ಎಂದು ವ್ಯಥೆಪಟ್ಟು ಸುಮ್ಮನಾಗಿದ್ದೆ. ಕೆಲ ತಿಂಗಳುಗಳ ನಂತರ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜನಿಯರ ಇವರಿಗೆ ಉಚ್ಚ ನ್ಯಾಯಾಲಯದ ರಜಿಸ್ಟ್ರಾರರು ಬರೆದ ಪತ್ರದ ಪ್ರತಿಯನ್ನು ನನಗೆ ಕಳುಹಿಸಿದ್ದು ತಲುಪಿತು. ಈ ಎಲ್ಲ ಪತ್ರಪ್ರಕರಣವನ್ನು ತಮ್ಮ ಎದುರಿಗೆ ಇಡುತ್ತಿದ್ದೇನೆ. ಪತ್ರಗಳ ದಿನಾಂಕಗಳನ್ನು ಗಮನಿಸಿದಾಗ, ಎಲ್ಲಿಯೋ ತಪ್ಪು ಇದ್ದಂತೆ ಭಾಸವಾಗುತ್ತದೆ. ದಯವಿಟ್ಟು ಅಲಕ್ಷಿಸಿ.

ಪತ್ರ (೧):
ಶ್ರೀ ಖೇಹರ, ಮುಖ್ಯ ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ, ಬೆಂಗಳೂರು ಇವರಿಗೆ ನಾನು ಬರೆದ ಪತ್ರ:
Chief Justice / Sir,

I submit herewith a grievance which is not legal but which has to do with the High Court, Bengaluru. We see the words " Karnataka High Court" written in English on the top of the Court building. Above that we also see the words written in Kannada. There is a grave error in the Kannada writing. When I saw that in the TV recently (thanks to the politicians' cases), I felt a stab in my Heart.

Now the error is this:
"High” is “uchch=उच्च=ಉಚ್ಚ”.
The High Court in Delhi also is written as उच्च न्यायालय only.

Unfortunately it is written on Bengaluru High Court as ಉಚ್ಛ ನ್ಯಾಯಾಲಯ which is like उच्छ न्यायालय written in Hindi. Similarly “Court Complex” is written as “ನ್ಯಾಯಾಲಯ ಸಮುಚ್ಛಯ (=न्यायालय समुच्छय). It should have been “ನ್ಯಾಯಾಲಯ ಸಮುಚ್ಚಯ”(=न्यायालय समुच्चय)

Every time I see this in TV, I feel pained at the linguistic murder.
Apart from my personal grievance at the murder of language committed here, it is inappropriate to see such error on a prestigious legal institute.

Chief Justice / Sir,

When you bring this error to the notice of the concerned people, they may suggest that what they have written is correct and try to justify the error. Please ask them to refer to the Kannada Dictionaries. One standard dictionary is Kittel’s Dictionary. Rev. Kittel who came to Karnataka from Germany as a Christian missionary in the last century did a monumental work to produce the first modern Kannada Dictionary.
The Kannada Sahitya Academy Dictionary may be referred too.

Chief Justice / Sir,
I am an aging man who wants to see the errors corrected in my life time.
I request you to give justice to Kannada language.

Thanking you,

                                                                                                                                  Yours truly
                                                                                                                                   (S.L.Deshpande)

ಪತ್ರ (೨):

ಪತ್ರ (೩):

ಪತ್ರ (೪):

To
The Registrar General
High Court of Karnataka
Bengaluru-1

Sir,

Sub: To carry out correction in the Kannada Name board
of the High Court of Karnataka—reg

Ref: Your letter No: HCA-II/139/87 (1) Dt: 6-1-2012

I am thankful to you for your instructions given to the appropriate authorities for correcting the Kannada Name board of the High Court, Bengaluru. I had pointed out two mistakes to the Hon’ble Chief Justice Shri J.S.Khehar through my letter, dt: 9-9-2011. One of the two is being corrected now. The other mistake is in the Kannada Name board of the `Court Complex.’ It is written there as `ನ್ಯಾಯಾಲಯ ಸಮುಚ್ಛಯ’. This should be: `ನ್ಯಾಯಾಲಯ ಸಮುಚ್ಚಯ.’

I shall be grateful to you if this error is also corrected suitably.

Thanking you,

                                                                                                                                              Yours truly,
                                                                                                                                      (S.L.Deshpande)
                                                                                                                                     
ಪ್ರತಿ, ಗೌರವಪೂರ್ವಕವಾಗಿ ಡಾ. ಮುಖ್ಯಮಂತ್ರಿ ಚಂದ್ರು, ಅಧ್ಯಕ್ಷರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕೊಠಡಿ ಸಂಖ್ಯೆ ೩೩೮, ಮೂರನೆಯ ಮಹಡಿ, ವಿಧಾನಸೌಧ, ಬೆಂಗಳೂರು-೫೬೦ ೦೦೧ ಇವರಿಗೆ. ತಮ್ಮ ಸತ್ಪ್ರಭಾವವನ್ನು ಬಳಸಿ, ದಯವಿಟ್ಟು ಈ ತಿದ್ದುಪಡಿಯನ್ನು ಮಾಡಿಸಲು ಕೋರಲಾಗುತ್ತಿದೆ.

ಡೆಪ್ಯುಟಿ ರಜಿಸ್ಟ್ರಾರ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರಿಗೆ ತಾವು ಬರೆದ ಪತ್ರ ಕ್ರಮಾಂಕ: ಕ‍ಅಪ್ರಾ:ಕ:೯೩:೨೦೧೧-೨೦೧೨, ದಿ:೧೫-೬-೨೦೧೧ ಕ್ಕೆ ಇದು ಸಂಬಂಧಿಸಿದೆ.

ಪತ್ರ (೫):
TO
Honourable Chief Justice
Shri J.S.Khehar,
Supreme Court of India,
New Delhi

Sir,
I am grateful to you for kindly considering my letter dt: 9-9-2011 and for the action taken for correcting the Kannada Name board of the High Court, Bengaluru.

Let me take this opportunity to congratulate you on your elevation as Chief Justice, Supreme Court of India.

I pray the Lord to bestow happiness and long life to you.

Thanking you,

                                                                                                                                             Yours truly
                                                                                                                                  (S.L.Deshpande)
........................................................................

ನ್ಯಾಯಾಲಯ ಕಟ್ಟಡಗಳ ಮೇಲಿನ ಬರಹವನ್ನು ಯಾರೇ ಬರೆಯಿಸಿರಲಿ, ಅವರನ್ನು ನಾವು ದೂಷಿಸುವಂತಿಲ್ಲ. ಯಾವುದೋ ಕನ್ನಡ ಬಾರದ ಮೇಸ್ತ್ರಿಯ ಕೆಲಸವಿದು ಎಂದು ಸಂಶಯದ ಲಾಭವನ್ನು ಕೊಡಬಹುದು. ಆದರೆ ಕನ್ನಡ ಸಾಹಿತಿಗಳು ಹಾಗು ಸಾಹಿತ್ಯದಲ್ಲಿ ಆಸಕ್ತಿ ಇದ್ದವರು ಮಾಡುತ್ತಿರುವ ತಪ್ಪುಗಳನ್ನು ಕಂಡಾಗ ಆಶ್ಚರ್ಯವಾಗುತ್ತದೆ. ಅಂತಹ ಕೆಲವು ಸಾಮಾನ್ಯ ದೋಷಗಳು ಹೀಗಿವೆ:

ಸರಿಯಾದ ಪದ..........ತಪ್ಪು ಪದ
ಕನಿಷ್ಠ...........................ಕನಿಷ್ಟ
ಅನಿಷ್ಟ..........................ಅನಿಷ್ಠ
ಮುಷ್ಟಿ.........................ಮುಷ್ಠಿ
ಪುಷ್ಟಿ............................ಪುಷ್ಠಿ
ಉಚ್ಛ್ವಾಸ....................ಉಚ್ವಾಸ
ಉಚ್ಚಾರ......................ಉಚ್ಛಾರ
ಶಾಪಗ್ರಸ್ತ.......................ಶಾಪಗ್ರಸ್ಥ
ಶ್ರುತಿ.............................ಶೃತಿ
ಶಾಕಾಹಾರ......................ಶಾಖಾಹಾರ
ನಾಗರಿಕ..........................ನಾಗರೀಕ
ಧಾಬಾ............................ಡಾಬಾ
ದಾಳಿ..............................ಧಾಳಿ

ವ್ಯಕ್ತಿಗಳ ಹೆಸರನ್ನು ತಪ್ಪಾಗಿ ಉಚ್ಚರಿಸುವದು ಅಥವಾ ತಪ್ಪಾಗಿ ಬರೆಯುವದು ಇನ್ನೂ ಕ್ರೂರವಾದ ಕರ್ಮ. ಗಡಿನಾಡ ಗಾಂಧಿ ಎಂದು ಹೆಸರಾದ ಖಾನ ಅಬ್ದುಲ್ ಗಫಾರ ಖಾನರ ಹೆಸರನ್ನು ಕಾನ್ ಅಬ್ದುಲ್ ಗಪಾರ ಕಾನ್ ಎಂದು ಬರೆದಿದ್ದನ್ನು ಓದಿ ವ್ಯಥೆಪಟ್ಟಿದ್ದೇನೆ. ಇದು ಹೋಗಲಿ ಬಿಡಿ, ನಮ್ಮ ಜ್ಞಾನಪೀಠಸ್ಥ ಅನಂತಮೂರ್ತಿಯವರು ‘ರಬೀಂದ್ರನಾಥ ಠಾಕೂರ’ ಹೆಸರನ್ನು ‘ರವೀಂದ್ರನಾಥ ಟ್ಯಾಗೋರ್’ ಎಂದು ಬರೆಯುತ್ತಾರೆ. ಅವರಿಗೆ ಇದು ಫ್ಯಾಶನೇಬಲ್ ಅನಿಸೀತು. ಆದರೆ ಇದು ಸರಿಯೆ? ಅವರ ಹೆಸರನ್ನು ಯಾರಾದರೂ ಅನಂತಮೂತ್ರಿ ಎಂದು ಬರೆದರೆ ಅವರಿಗೆ ಹೇಗೆನಿಸಬಹುದು? ಅದರಂತೆ ‘ಮೇಡಮ್ ಕಾಮಾ’ ಇವರ ಹೆಸರನ್ನು ‘ಮೇಡಮ್ ಕಾಮ’ ಎಂದು ಬರೆದಿದ್ದನ್ನು ಒದಿದ್ದೇನೆ. ಮೇಮ್‍ಸಾಹೇಬರು ಯಾವಾಗ ಲಿಂಗಪರಿವರ್ತನೆಗೊಂಡು ಕಾಮದೇವರಾದರೊ, ಬರೆದವರೇ ಬಲ್ಲರು.

Friday, January 27, 2012

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರಿಗೆ ಕೃತಜ್ಞತೆಗಳು

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ಎನ್ನುವ ಧೀರ, ಪ್ರಜ್ಞಾಶೀಲ ಮಹಿಳೆಗೆ ನನ್ನ ಕೃತಜ್ಞತೆಗಳು. ೨೦೧೨ರ ಲಂಡನ್ ಓಲಿಂಪಿಕ್ಸ್ ಸಸ್ಟೇನಿಬಿಲಿಟಿ ಕಮಿಟಿಗೆ ಇವರು ಇದೇ ಜನೇವರಿ ೨೬ರಂದು ರಾಜೀನಾಮೆ ಕೊಟ್ಟಿದ್ದಾರೆ.

ಡಿಶಂಬರ ೧೯೮೪ರಲ್ಲಿ ಭೋಪಾಲದಲ್ಲಿ ಜರುಗಿದ ಘೋರ ದುರಂತಕ್ಕೆ ಕಾರಣವಾದ, ಅಮೇರಿಕಾದ ಯೂನಿಯನ್ ಕಾರ್ಬೈಡ ಕಂಪನಿಯ ಕೀಟನಾಶಕ ಕಾರಖಾನೆಯು ೨೦೦೧ರಲ್ಲಿ ಡೋವ್ ಕೆಮಿಕಲ್ ಕಂಪನಿಗೆ ಹಸ್ತಾಂತರಿತವಾಯಿತು. ಭೋಪಾಲದ ನಿವಾಸಿಗಳಿಗೆ ಸಮುಚಿತವಾದ ಪರಿಹಾರ ಇನ್ನೂ ದೊರೆತಿಲ್ಲ, ಯೂನಿಯನ್ ಕಾರ್ಬೈಡ ಕಂಪನಿಯ ಉಚ್ಚಾಧಿಕಾರಿಗೆ ಶಿಕ್ಷೆಯಾಗಿಲ್ಲ.

೨೦೧೨ರ ಲಂಡನ್ ಓಲಿಂಪಿಕ್ಸಿನ ಪ್ರಾಯೋಜಕರಲ್ಲಿ ಡೋವ್ ಕೆಮಿಕಲ್ ಕಂಪನಿಯೂ ಒಂದು. ಇದನ್ನು ಪ್ರತಿಭಟಿಸಿ ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರು ಕೊಟ್ಟ ಹೇಳಿಕೆ ಹೀಗಿದೆ:
"I don't want to be party to a defence of Dow Chemicals, the company responsible for one of the worst corporate human rights violations in my generation. It is appalling that 27 years on, the site has still not been cleaned up and thousands upon thousands of people are still suffering. I believe people should be free to enjoy London 2012 without this toxic legacy on their conscience."

ನಮ್ಮ ರಾಜಕಾರಣಿಗಳಲ್ಲಿ ಕಾಣದಿರುವ ನೈತಿಕ ಪ್ರಜ್ಞೆಯನ್ನು ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ತೋರಿಸಿದ್ದಾರೆ.
May her tribe increase!

Friday, January 20, 2012

ಬೇಂದ್ರೆ-ಕಾವ್ಯ ಶೈಲಿ

ಭಾಷೆ, ಛಂದಸ್ಸು ಹಾಗು ಅಲಂಕಾರ ಇವು ಕಾವ್ಯಶೈಲಿಯ ಮೂರು ಅಂಗಗಳಾಗಿವೆ. ಬೇಂದ್ರೆಯವರ ಕಾವ್ಯಶೈಲಿಯನ್ನು ಅರಿತುಕೊಳ್ಳುವದು ಎಂದರೆ ಸಮುದ್ರವನ್ನು ಅಳೆದಂತೆ. ಅವರ ಕವನಗಳ ಭಾಷಾವೈವಿಧ್ಯವು ಬೆರಗುಗೊಳಿಸುವಂತಹದು. ಅಚ್ಚಗನ್ನಡ, ಸಂಸ್ಕೃತಭೂಯಿಷ್ಠ ಕನ್ನಡ, ಹಳ್ಳಿಯ ಆಡುನುಡಿ, ಮಿಶ್ರಕನ್ನಡ ಇವೆಲ್ಲವೂ ಅವರ ಕವನಗಳಲ್ಲಿ ಬಳಕೆಯಾಗಿವೆ. ಅವರು ಬಳಸಿದ ಭಾಷೆಯು ಯಾವುದೇ ಆಗಿರಲಿ, ಅದು ಕವನದ ಆಶಯಕ್ಕೆ ಸಮರ್ಪಕವಾದ ವಾಹನವಾಗಿರುವದು ಅವರ ಪ್ರತಿಭೆಯ ನಿದರ್ಶನವಾಗಿದೆ. ಅವರ ಕವನಗಳ ಭಾಷಾವೈವಿಧ್ಯದ ಅಂದಾಜು ಮಾಡಲು ಅವರ ಕೆಲವೊಂದು ಕವನಗಳನ್ನು ಇಲ್ಲಿ ಪರಿಶೀಲಿಸೋಣ:

ಮೊದಲನೆಯದಾಗಿ ಆಡುನುಡಿಯನ್ನು ಬಳಸಿರುವ, ಜಾನಪದ ಧಾಟಿಯ ಅವರ ಕವನವೊಂದನ್ನು ನೋಡೋಣ. ‘ಒಲುಮೆಯ ಕಿಚ್ಚು’ ಎನ್ನುವ ಕವನದ ಎರಡನೆಯ ನುಡಿ ಹೀಗಿದೆ:
“ಸುಗ್ಗಿ ನಗಿ ನಕ್ಕಾಗ ಮೊಗ್ಗು ಬಿಚ್ಚಿತ ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು ”

ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಜೀವದ ಗೆಳತಿಯೊಡನೆ ಹಂಚಿಕೊಳ್ಳುತ್ತಿರುವ ಆಪ್ತವಾದ ಮಾತಿದು. ಸುಗ್ಗಿಯ ಕಾಲವೆಂದರೆ ಹೊಲದಲ್ಲಿಯ ಪೈರು ಮಾಗುವ ಕಾಲ. ಈ ಹುಡುಗಿಯೂ ಈಗ ದೈಹಿಕವಾಗಿ ಹಾಗು ಮಾನಸಿಕವಾಗಿ ಮಾಗುತ್ತಿದ್ದಾಳೆ. ಇದನ್ನು ಸೂಚಿಸಲು ಅವಳು ಬಳಸುವ ರೂಪಕಗಳು ಜಾನಪದ ರೂಪಕಗಳಾಗಿವೆ; ಬಳಸುವ ಭಾಷೆ ಜಾನಪದ ಭಾಷೆಯಾಗಿದೆ. ಜಾನಪದ ಭಾಷೆ ಹಾಗು ಗ್ರಾಮೀಣ ಭಾಷೆ ಎರಡೂ ಒಂದೇ ಅಲ್ಲ. ಜಾನಪದ ಭಾಷೆ ಎಂದರೆ ಗ್ರಾಮೀಣ ಸಂಸ್ಕೃತಿಯು ತನ್ನದೇ ಆದ ಸಾಹಿತ್ಯಕ್ಕಾಗಿ ಸೃಷ್ಟಿಸಿಕೊಂಡ ಭಾಷೆ. ಗ್ರಾಮೀಣ ಭಾಷೆ ಎಂದರೆ ಹಳ್ಳಿಗರ ಸದ್ಯದ ಆಡುನುಡಿ. ಗ್ರಾಮೀಣ ಆಡುನುಡಿಯ ಉದಾಹರಣೆ ಎಂದು ಅವರ ‘ಕಗ್ಗ’ ಕವನವನ್ನು ನೋಡಬಹುದು. ಈ ಕವನದ ಎರಡನೆಯ ನುಡಿ ಹೀಗಿದೆ:
“ಹಸು ಕೂಡs ಕಟ್ಟಿದ್ದುಂಟು
ಬಸವಣ್ಣsನೂ ಹುಟ್ಟಿದ್ದುಟು
ಮುಟ್ಟಿದ್ದೆಲ್ಲಾ ‘ಬೂದಿ’ ಮಾಡಿದಾ ಭಸ್ಮಾಸುರಾss
ಅವನ ನೀಗಿಸಿ ಬಿಟ್ಟಿತಣ್ಣಾ ಮೋಹಿನಿ ಅವತಾರಾ.”

ಹಸುವು ಗರ್ಭ ಧರಿಸುವದಕ್ಕೆ ಹಳ್ಳಿಗರು ‘ಕಟ್ಟುವದು’ ಎನ್ನುತ್ತಾರೆ. ಹಸುವು ಕಟ್ಟಿದ ಮೇಲಷ್ಟೆ ಆದಕ್ಕೆ ಬಸವಣ್ಣ ಅಂದರೆ ಹೋರಿಗರು ಹುಟ್ಟಲು ಸಾಧ್ಯ. ಆದರೆ ಬಸವಣ್ಣನು ‘ಭವಿ’ ಅಲ್ಲ ಅರ್ಥಾತ್ ಅವನು ಭೂಲೋಕದಲ್ಲಿ ಹುಟ್ಟಿದರೂ ಸಹ ಅವನದು ಅವತರಣ ಮಾತ್ರ. ಈ ಕವನದ ಭಾಷೆ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಹಳ್ಳಿಗರು ಬಳಸುತ್ತಿದ್ದ ಆಡುನುಡಿಯಾಗಿದೆ. ನೋಡಲು ಸರಳವೆನಿಸುವ ಈ ನುಡಿಯನ್ನು ತಿಳಿದುಕೊಳ್ಳಲು ಗ್ರಾಮೀಣ ಹಾಗು ಪೌರಾಣಿಕ ಹಿನ್ನೆಲೆಗಳನ್ನು ಅರಿತಾಗ ಮಾತ್ರ ಸಾಧ್ಯ!

ಬೇಂದ್ರೆಯವರ ಸಂಸ್ಕೃತಭೂಯಿಷ್ಠ ಭಾಷೆಯ ಉದಾಹರಣೆಗಾಗಿ ‘ಏಲಾಗೀತೆ’ ಎನ್ನುವ ಕವನವನ್ನು ಗಮನಿಸಬಹುದು. ಈ ಕವನದ ಮೊದಲ ನುಡಿ ಹೀಗಿದೆ:
“ಏಲಾವನ ಲವಲೀವನ ಲವಂಗವನಗಳಲಿ
ನಾಗಲತಾ ಸಂಕುಲ ಬನವಾಸಿಯ ಜನಗಳಲಿ
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿ ”
ಈ ಕವನದಲ್ಲಿ ಲಲಿತ ಹಾಗು ಸಂಸ್ಕೃತಭೂಯಿಷ್ಠ ಭಾಷೆಯ ಬಳಕೆಯಾಗಿದೆ. ಇದು ಸಂಸ್ಕೃತವ್ಯಾಮೋಹದ ಪರಿಣಾಮವಲ್ಲ! ಅನುರಣಿಸುವ ಮೃದುಪದಗಳಿಂದ ಈ ಕವನದಲ್ಲಿ ಅಪೂರ್ವವಾದ ನಾದಬಂಧುರತೆಯನ್ನು ಸಾಧಿಸಲಾಗಿದೆ.

ಬೀದರ ಶಹರದಲ್ಲಿ ವಾರ್ತಾ ಇಲಾಖೆಯವರು ಹಮ್ಮಿಕೊಂಡ ಕವಿಗೋಷ್ಠಿಗಾಗಿ ಬೇಂದ್ರೆಯವರು ರಚಿಸಿದ ಕವನವು ಮಿಶ್ರಭಾಷೆಯ ಬಳಕೆಯ ಉತ್ಕೃಷ್ಟ ಉದಾಹರಣೆಯಾಗಿದೆ. ‘ಕವಿಗಳ ಕಾಣಿಕಿ’ ಎನ್ನುವ ಆ ಕವನದ ಒಂದು ನುಡಿ ಹೀಗಿದೆ:
“ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ
ಜಗ ಜಾಹೀರ ವಜ್ರದ ಖಾಣೀಗೆ
ಕಾಳಾಬಝಾರ ಹಜಾರ ಇದ್ರೂ
ಬಾಳೋ ಉಸಿರಿಗೆ ಒಂದೇ ಹೆಸರು:
ಅದು ಕವಿ ಕಾಣಿಕೀ
ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ”

ಬೇಂದ್ರೆಯವರು ತಮ್ಮ ಕವನಗಳಲ್ಲಿ ಕನ್ನಡ ಹಾಗು ಸಂಸ್ಕೃತದ ವಿವಿಧ ಛಂದಸ್ಸುಗಳನ್ನು ಬಳಸಿದ್ದಾರೆ. ಕವನದ ಭಾವವನ್ನು ಆತ್ಮವೆಂದು ಕರೆದರೆ, ಛಂದಸ್ಸನ್ನು ದೇಹವೆಂದು ಕರೆಯಬಹುದು. ಬೇಂದ್ರೆಯವರ ಪ್ರತಿ ಕವನದ ಛಂದಸ್ಸು ಆಯಾ ಕವನದ ಭಾವಕ್ಕೆ ಪೂರಕವಾದಂತಹದು. ಉದಾಹರಣೆಗೆಂದು ಅವರ ‘ಪಾತರಗಿತ್ತಿ ಪಕ್ಕಾ’ ಕವನವನ್ನು ನೋಡಬಹುದು. ಪಾತರಗಿತ್ತಿಯ ಅಂದರೆ ಚಿಟ್ಟೆಯ ಹಾರಾಟವು ಎಷ್ಟು ಲಘುಗತಿಯದಾಗಿರುವದೋ, ಈ ಕವನದ ಛಂದಸ್ಸು ಸಹ ಅಷ್ಟೇ ಕ್ಷಿಪ್ರಗತಿಯದಾಗಿದೆ.
‘ಪಾತರಗಿತ್ತಿ ಪಕ್ಕಾ
ನೋಡಿದೇನ ಅಕ್ಕಾ’ ಎಂದು ಹಾಡಿದಾಗ ಚಿಟ್ಟೆಯೇ ನಮ್ಮ ಕಣ್ಣೆದುರು ಚಲಿಸುತ್ತಿರುವಂತೆ ಭಾಸವಾಗುವದು. ಇನ್ನು ಕೆಲವು ಕವನಗಳನ್ನು ಬೇಂದ್ರೆಯವರು ದೀರ್ಘ ಛಂದಸ್ಸಿನಲ್ಲಿ ರಚಿಸಿದ್ದಾರೆ. ಉದಾಹರಣೆಗೆ ಅವರ ‘ಅಷ್ಟು ಪ್ರೀತಿ, ಇಷ್ಟು ಪ್ರೀತಿ’ ಎನ್ನುವ ಕವನವನ್ನು ನೋಡಿರಿ.
‘ಅಷ್ಟು ಪ್ರೀತಿ, ಇಷ್ಟು ಪ್ರೀತಿ ಎಣಿಸಿ ಕಷ್ಟಬಡೆದಿರು, ಒಲೆದು ಒಲಿಸಿ ಸುಖದಿರು;
ಎಷ್ಟೆ ಇರಲಿ ಅಷ್ಟೆ ಮಿಗಿಲು, ತಮ್ಮ ಕಿರಣ ತಮಗೆ ಹಗಲು, ಉಳಿದ ಬೆಳಕು ಕತ್ತಲು;
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು, ಉಳಿದ ಲೋಕ ಹಿತ್ತಲು;’
ದೀರ್ಘವಾದ ಕಲ್ಪನೆಗೆ ತಕ್ಕಂತೆ ದೀರ್ಘವಾದ ಛಂದಸ್ಸಿನಲ್ಲಿಯೇ ಈ ಕವನವನ್ನು ಹೆಣೆಯಲಾಗಿದೆ!

ಬೇಂದ್ರೆಯವರ ಅನುವಾದ ಕವನಗಳ ಛಂದಸ್ಸುಗಳ ಬಗೆಗೂ ಒಂದು ಮಾತನ್ನು ಇಲ್ಲಿ ಹೇಳುವದು ಅವಶ್ಯವಿದೆ. ಸಂಸ್ಕೃತ ಮಂದಾಕ್ರಾಂತ ವೃತ್ತದಲ್ಲಿದ್ದ ಕಾಳಿದಾಸನ ‘ಮೇಘದೂತ’ ಕಾವ್ಯದ ಅನುವಾದಕ್ಕಾಗಿ ಅವರು ಕನ್ನಡ ಮಂದಾಕ್ರಾಂತ ಛಂದಸ್ಸನ್ನು ಸೃಷ್ಟಿಸಿದರು.

ಫಿಲಿಪೀನ ದೇಶದ ಸ್ವಾತಂತ್ರ್ಯಯೋಧರಾದ ಜೋಸ ರಿಝಾಲರು ರಚಿಸಿದ My Last Farewell ಕವನವನ್ನು ಬೇಂದ್ರೆಯವರು ‘ನಮ್ಮ ಕೊನೆಯ ಶರಣು’ ಎನ್ನುವ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಇದರ ಛಂದಸ್ಸು ಲಾವಣಿಯ ಗತ್ತಿನಲ್ಲಿದ್ದು, ಈ ಕವನವು ಭಾರತೀಯ ಸ್ವಾತಂತ್ರ್ಯಯೋಧರ ಬಗೆಗಿನ ಗೀತೆ ಎನ್ನುವ ಭಾಸವನ್ನು ಹುಟ್ಟಿಸುತ್ತದೆ.

ಬೇಂದ್ರೆಯವರ ಕಲ್ಪನೆಗೆ ಎಲ್ಲೆ ಎನ್ನುವದಿಲ್ಲ. ‘ ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ’ ಎನ್ನುವಂತೆ ಅವರ ಕಲ್ಪನೆಯು ದಿಗಂತವ್ಯಾಪಿಯಾಗಿದೆ. ಆದರೆ ಬೇಂದ್ರೆಯವರ ಕಾವ್ಯದಲ್ಲಿ ಎಲ್ಲಿಯೂ ಕಲ್ಪನೆಯು ವಾಸ್ತವತೆಗೆ ವ್ಯತಿರಿಕ್ತವಾಗಿ ಬಳಕೆಯಾಗಿಲ್ಲ. ಕಾವ್ಯ ಎನ್ನುವ ಬಟ್ಟೆಯ ಹಾಸು ಮತ್ತು ಹೊಕ್ಕಿನಂತಿರುವ ಅವು ಸಮಪ್ರಮಾಣದಲ್ಲಿಯೇ ನೇಯ್ಗೆಯಾಗಿವೆ. ಉದಾಹರಣೆಗೆ ‘ಹಕ್ಕಿ ಹಾರುತಿದೆ ನೋಡಿದಿರಾ’ ಎನ್ನುವ ಬೇಂದ್ರೆಯವರ ಕವನವನ್ನು ಪರಿಶೀಲಿಸಬಹುದು. ಕಾಲಪಕ್ಷಿಯ ಅಮಿತ ವೇಗವನ್ನು ಸೂಚಿಸಲು ಬೇಂದ್ರೆಯವರು ‘ಗಾವುದ ಗಾವುದ ಗಾವುದ ದೂರಕೆ, ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎಂದು ಹೇಳಿದ್ದಾರೆ. ಭಾರತೀಯ ಕಾಲಗಣನೆಯ ಮೇರೆಗೆ ‘ಎವೆ ತೆರೆದಿಕ್ಕುವ ಹೊತ್ತು’ ಒಂದು ನಿಮಿಷದ ಅವಧಿಯಾಗಿದೆ. ಈ ರೀತಿಯಲ್ಲಿ ಬೇಂದ್ರೆಯವರು ಕಲ್ಪನೆಯನ್ನು ಭೌತಿಕ ವಾಸ್ತವತೆಯೊಡನೆ ತಳಕು ಹಾಕುತ್ತಿದ್ದಾರೆ.

ಬೇಂದ್ರೆಯವರ ಕವನಗಳಲ್ಲಿ ತರ್ಕಪೂರ್ಣ ಕ್ರಮಬದ್ಧತೆಗೆ ಎಂದೂ ಲೋಪವಾಗುವದಿಲ್ಲ. ಇದನ್ನು ಮನಗಾಣಲು ಕೆಳಗಿನ ಸಾಲುಗಳನ್ನು ನೋಡಬಹುದು:
“ಎಲೆಗಳ ಮೇಲೇ, ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-- ಅಮೃತsದ ಬಿಂದು ”

‘ಬೆಳಗು’ ಕವನದಲ್ಲಿ ಈ ವರ್ಣನೆ ಬರುತ್ತಿದೆ. ಎಲೆಗಳ ಮೇಲಿರುವ ಇಬ್ಬನಿಯ ಹನಿಗಳು ನೋಡುಗನ ಕಣ್ಣಿಗೆ ಮೊದಲು ಕಾಣುತ್ತವೆ. ಹೂಗಳ ಪಕಳೆಗಳಲ್ಲಿರುವ ಹನಿಗಳು ಹತ್ತಿರ ಹೋದ ಬಳಿಕ ಕಾಣುತ್ತವೆ. ಇದೇ ಕ್ರಮವನ್ನು ಕವನದಲ್ಲಿಯೂ ಅನುಸರಿಸಲಾಗಿದೆ.

ಇದೇ ಸಾಲಿನಲ್ಲಿರುವ ‘ಅಮೃತsದಾ ಬಿಂದು’ ಎನ್ನುವ ವಿಶೇಷವನ್ನು ಗಮನಿಸಿರಿ. ‘ಅಮೃತ’ವೆಂದರೆ ನಾಶವಿಲ್ಲದ್ದು. ಇಬ್ಬನಿಯು ಕ್ಷಣಮಾತ್ರದಲ್ಲಿ ಮಾಯವಾಗುವಂತಹದು. ಅಪೂರ್ವವಾದ ವೈರುಧ್ಯತೆಯೊಂದನ್ನು ಒಂದೇ ಪದಪುಂಜದಲ್ಲಿ ಅಡಕಗೊಳಿಸುವ ಬೇಂದ್ರೆಯವರ ಕೌಶಲ್ಯವನ್ನು ಇಲ್ಲಿ ಕಾಣಬಹುದು.

ಇಂತಹದೇ ವಿರುದ್ಧಶ್ಲೇಷೆಯ ಸಾಲು ‘ಸಂಸಾರ’ ಎನ್ನುವ ಕವನದಲ್ಲಿದೆ:
‘ಅಮೃತಂತ ಬಾಯಿ ಚಪ್ಪರಿಸತಾವ
ಕೇಳಿ ಕಣ್ಣು ಮಿಟಕತದ ರಾತ್ರಿ.’

ನಲ್ಲ, ನಲ್ಲೆಯರ ನಡುವೆ ಮುತ್ತುಗಳ ವಿನಿಮಯವಾಗುತ್ತಿರುವಾಗ, ‘ಅಹಾ! ಇದೇ ಅಮೃತ’ ಎಂದು ಅವರು ಖುಶಿ ಪಡುತ್ತಾರೆ.ಇದನ್ನು ಆಲಿಸಿದ ರಾತ್ರಿ ಚೇಷ್ಟೆಯಿಂದ ಕಣ್ಣು ಮಿಟುಕಿಸುತ್ತದೆ. ಇದು ತೋರಿಕೆಯ ಅರ್ಥ. ಕಣ್ಣು ಮಿಟುಕಿಸುವದು ಎಂದರೆ ಒಂದು ನಿಮಿಷದ ಕಾಲ. ಇದು ಅಮೃತದಂತೆ ಚಿರಕಾಲದ ಸುಖವಲ್ಲ, ಆದರೆ ಕ್ಷಣಿಕ ಎನ್ನುವದು ಒಳಗಿನ ಅರ್ಥ! ಒಂದೇ ಸಾಲಿನಲ್ಲಿ ವಿರುದ್ಧಾರ್ಥವನ್ನು ಸೂಚಿಸುವ ಬೇಂದ್ರೆ ಪ್ರತಿಭೆ ಇದು!

ಇಂತಹ ವೈರುಧ್ಯಭಾವವನ್ನು ಸೂಚಿಸುವ ಮತ್ತೊಂದು ಸಾಲು ‘ಬಾರೊ ಸಾಧನಕೇರಿಗೆ’ ಕವನದಲ್ಲಿದೆ;
‘ಮಲೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂಬೆರಳಿದೆ
ನೆಲಕೆ ಹರೆಯವು ಮರಳಿದೆ’

ಬೇಂದ್ರೆಯವರು ಈ ಕವನವನ್ನು ಬರೆಯುವ ಕಾಲಾವಧಿಯಲ್ಲಿ ಧಾರವಾಡದಲ್ಲಿದ್ದ ಮನೆಗಳಿಗೆ ಈಗಿನಂತೆ ಕಲ್ಲಿನ ಅಥವಾ ಸಿಮೆಂಟಿನ ಪ್ರಾಕಾರ ಇರುತ್ತಿರಲಿಲ್ಲ. ಸಾದಾ ಹೂವುಗಳ ಬೇಲಿ ಇರುತ್ತಿತ್ತು. ಈ ಬೇಲಿಯ ಹೂವುಗಳು ಸಹಸಾ ಕೊಳವೆಯಾಕಾರದಲ್ಲಿ ಇರುತ್ತಿದ್ದವು. ಬೇಂದ್ರೆಯವರು ಈ ಹೂವುಗಳನ್ನು ಬೇಲಿಯ ಬೆರಳುಗಳಿಗೆ ಹೋಲಿಸುತ್ತಿದ್ದಾರೆ. ಬೇಲಿಯ ಕೆಲಸವೆಂದರೆ ಅಪರಿಚಿತರನ್ನು ಹೊರಗಿಡುವದು. ಆದರೆ ಈ ಬೇಲಿಯು ತನ್ನ ಹೂಬೆರಳುಗಳಿಂದ ಎಲ್ಲರಿಗೂ ಸ್ವಾಗತ ನೀಡುವ ಸ್ವಾಗತಕಾರಿಣಿಯಾಗಿದೆ! ಈ ರೀತಿಯಾಗಿ ಬೇಂದ್ರೆಯವರು ವಿರುದ್ಧಾರ್ಥವನ್ನು ಸೂಚಿಸುತ್ತಲೇ, ಆ ಕಾಲದ ವಾಸ್ತವತೆಯ ದಾಖಲಾತಿಯನ್ನು ಸಹ ಮಾಡುತ್ತಿದ್ದಾರೆ.

ಕವನದಲ್ಲಿರುವ ಕ್ರಮಬದ್ಧತೆಯನ್ನು ಪರೀಕ್ಷಿಸುವಾಗ ‘ರಾಧೆಯ ಪಾಡು’ ಎನ್ನುವ ಕವನವನ್ನು ನಿರ್ಲಕ್ಷಿಸುವದು ಸಾಧ್ಯವಿಲ್ಲ. ಭಕ್ತಿಯ ಮೊದಲ ಹಂತವೆಂದರೆ ಆರ್ತ ಪ್ರಾರ್ಥನೆ. ಈ ಕವನದಲ್ಲಿ ರಾಧೆಯು ಕೃಷ್ಣನನ್ನು ‘ಒರೆದನಂಗಲಾಚಿ, ಕರೆದೆ ಜೀವವ ಚಾಚಿ’ ಎಂದು ತನ್ನ ಸಖಿಯೆದುರಿಗೆ ಹೇಳುತ್ತಿದ್ದಾಳೆ. ಆದರೆ ಕೃಷ್ಣ ಅವಳಿಗೆ ಒಲಿಯುತ್ತಿಲ್ಲ. ಮುಂದಿನ ಹಂತದಲ್ಲಿ ಅವಳ ದನಿಯೇ ಬಿದ್ದು ಹೋಗುತ್ತದೆ. ಅವಳ ಅಹಮಿಕೆ ಕರಗತೊಡಗುತ್ತದೆ. ಆ ಹಂತವನ್ನು ‘ಬರದು ಕೂತಿತು ದನಿ, ಕಣ್ಣೆಲ್ಲಾ ಕಂಬನಿ ತಂದೇನೆ, ಕರಗಿ ತಂದೇನೆ’ ಎಂದು ಬಣ್ಣಿಸಲಾಗಿದೆ. ಇದೂ ಸಹ ನಿಷ್ಫಲ. ತನ್ನ ಶೃಂಗಾರದಿಂದ ತಾನು ಕೃಷ್ಣನನ್ನು ಗೆಲ್ಲಲಾರೆ ಎಂದು ತಿಳಿದಾಗ, ‘ಒಗೆದು ಹೂದಂಡಿಗೆ ಯಮುನೆಯ ದಂಡಿಗೆ’ ಎಂದು ತನ್ನ ಅಲಂಕಾರವನ್ನೆಲ್ಲ ಕಿತ್ತೆಸೆಯುತ್ತಾಳೆ. ಅಹಮ್‍ದ ಈ ಎಲ್ಲ ಹಂತಗಳನ್ನು ದಾಟಿ ಕೊನೆಯಲ್ಲಿ ಬರುವ ಹಂತವೆಂದರೆ, ‘ನಾನು’ ಎನ್ನುವದರ ಸಂಪೂರ್ಣ ನಿರಾಕರಣೆ. ‘ಹೊಳೆಯೊಳು ಹೊತ್ತಾರೆ ಧುಮುಕಿ ನಾ ಸತ್ತಾರೆ ಹೊಂದೇನೆ ಅವನ ಹೊಂದೇನೆ’ ಎನ್ನುವ ಮೂಲಕ ಈ ಭಾವನೆಯನ್ನು ವ್ಯಕ್ತಪಡಿಸಲಾಗಿದೆ. ಈ ರೀತಿಯಾಗಿ ಸಾಧನಾಮಾರ್ಗದ ವಿವಿಧ ಹಂತಗಳನ್ನು ಇಲ್ಲಿ ಕ್ರಮಬದ್ಧವಾಗಿ ವರ್ಣಿಸಲಾಗಿದೆ.

ಶ್ಲೇಷಾಲಂಕಾರವಂತೂ ಬೇಂದ್ರೆಯವರ ಕವನಗಳ ವಿಶೇಷ ಲಕ್ಷಣವಾಗಿದೆ. `ಸಾವಿರದ ಮನೆಗಳಲ್ಲಿ ಒಂದು ಮನೆಯ ಮಾಡಿದೆ’ ಎನ್ನುವಾಗ, ‘ಒಂದು ಸಾವಿರ’ ಎನ್ನುವ ಅರ್ಥವಲ್ಲದೆ, ‘ಸಾವು ಇರದ’ ಎನ್ನುವ ಅರ್ಥವೂ ಧ್ವನಿಸುತ್ತದೆ. ‘ಮುತ್ತು, ರತುನ, ಹೊನ್ನು ಎಲ್ಲ ಕಲ್ಲುಮಣ್ಣ ವೈಭವಾ’ ಎನ್ನುವಾಗ, ಈ ಅಮೂಲ್ಯ ವಸ್ತುಗಳಿಗೆ ಬೆಲೆ ಇಲ್ಲ ಎನ್ನುವ ಅರ್ಥದೊಡನೆ, ಇವು ಖನಿಜ ಪದಾರ್ಥಗಳೆನ್ನುವ ಅರ್ಥವೂ ಇದೆ. ಬೇಂದ್ರೆಯವರ ಪ್ರಸಿದ್ಧ ಕವನ ‘ನಾನು ಬಡವಿ..’ಯಲ್ಲಿಯ ‘ತೋಳ ಬಳಸಿ ತೋಳಬಂದಿ, ಕೆನ್ನೆ ಮೇಲೆ ಮುತ್ತು’ ಎನ್ನುವ ಸಾಲಿನಲ್ಲಿ ತೋಳಬಂದಿ ಹಾಗು ಮುತ್ತು ಇವು ಒಡವೆಗಳಾಗಿರುವಂತೆಯೇ, ಪ್ರಣಯದ ಸಂಕೇತಗಳೂ ಆಗಿವೆ. ಈ ಕವನದ ಕೊನೆಯಲ್ಲಿ ಬರುವ ವ್ಯಂಗ್ಯಧ್ವನಿಯಂತೂ ಅಪೂರ್ವವಾದದ್ದು. ‘ಹೊಟ್ಟೆಗಿತ್ತ ಜೀವಫಲವ’ ಎಂದು ನಲ್ಲೆಯು ಹೇಳುವಾಗ, ತಾನು ಗರ್ಭಿಣಿಯಾಗಿರುವದನ್ನು ಸೂಚಿಸುತ್ತಲೇ, ತನ್ನ ನಲ್ಲ ತನಗೆ ಕೊಟ್ಟದ್ದು ಇದಷ್ಟೇ ಎನ್ನುವ ಛೇಡನೆಯೂ ಇದೆ!

‘ಹೃದಯಸಮುದ್ರ’ ಕವನದ ಈ ಸಾಲನ್ನು ಗಮನಿಸಿರಿ:
‘ಅದರೊಳಗೆ ನಾವು, ನಮ್ಮೊಳಗೆ ತಾವು
ಅದು ಇಲ್ಲವಣ್ಣ ದೂರಾ’

ಹೃದಯಸಮುದ್ರದಲ್ಲಿ ನಾವು ಇದ್ದೇವೆ ಹಾಗು ನಮ್ಮೊಳಗೆ ತಾವು ಅಂದರೆ ದೇವರು ಇದ್ದೀರಿ ಎನ್ನುವದು ಮೇಲಿನ ಅರ್ಥ. ‘ನಾವು’ ಎಂದರೆ ದೋಣಿ, ‘ತಾವು’ ಅಂದರೆ ಬಂದರು. ನಮ್ಮ ಹೃದಯಸಮುದ್ರದಲ್ಲಿಯೇ ದೋಣಿ ಇದೆ ಹಾಗು ಅಲ್ಲಿಯೇ ನಾವು ತಲುಪಬೇಕಾದ ಬಂದರು ಇದೆ ಎನ್ನುವದು ಎರಡನೆಯ ಅರ್ಥ.

ಒಂದು ಕವನದ ಒಂದು ಸಂಪೂರ್ಣ ನುಡಿಯೇ ಶ್ಲೇಷೆಯಾಗುವದು ಬೇಂದ್ರೆಯವರ ಕಾವ್ಯದಲ್ಲಿ ಮಾತ್ರ ಸಾಧ್ಯ!
“ಏನೈತಿ ಸುಗ್ಗಿಯಾ ಹುರುಡ—
ಯಾಕ ಉಳಿದೆಲ್ಲ ತಿಂಗಳಾ ಬರಡ
ಬೇಕ್ಯಾಕ ಮಾವಿನಾ ಕಾಡು
ಕೋಗಿಲದ ಹಾಡು
ಅಗಲಿಕೀ ಕೇಕು......
.............ನಿನ ತೆಕ್ಕಿಯೊಳಗ ಸಿಕ್ಕೈತಿ ಸುಗ್ಗಿ
ಸ್ವರ್ಗಕ್ಕ ಸಾಕು ತೋಳೆರಡs……”

ನಲ್ಲೆಯ ಸರಸ ಸಮಾಗಮಕ್ಕೆ ವಸಂತ ಋತು, ಮಾವು ಹಾಗು ಕೋಗಿಲೆಯ ನೆರವು ಬೇಕಾಗಿಲ್ಲ ಎಂದು ನಲ್ಲನೊಬ್ಬನು ಹೇಳುತ್ತಿರುವ ಮಾತಿದು. ವಸಂತ ಋತು, ಮಾವು ಹಾಗು ಕೋಗಿಲೆ ಈ ಮೂರು ವಿಶೇಷಗಳು ಮಾರ್ಗ ಕಾವ್ಯದ ಅವಶ್ಯಕ ಅಂಶಗಳು ಎನ್ನುವದನ್ನು ಗಮನಿಸಬೇಕು. ದೇಸಿ ಪದ್ಧತಿಯಲ್ಲಿ ರಚಿಸಲಾದ ಈ ಕಾವ್ಯವು ‘ ಹೊಸ ಕಾಲದಲ್ಲಿ ಮಾರ್ಗ ಕಾವ್ಯ ಬೇಕಾಗಿಲ್ಲ’ ಎನ್ನುವ ಶ್ಲೇಷೆಯನ್ನು ಹೊಂದಿದೆ!

ಬೇಂದ್ರೆಯವರ ಕವನಗಳಲ್ಲಿ ಉಪಮೆಗಳು ಹಾಗು ರೂಪಕಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ‘ಗಮ ಗಮಾ ಗಮಾಡಸ್ತಾವ ಮಲ್ಲಿಗಿ’ ಕವನದಲ್ಲಿ ನಲ್ಲೆಯೊಬ್ಬಳು ತನ್ನ ನಲ್ಲನಿಗೆ ಹೇಳುತ್ತಿರುವ ಸಾಲುಗಳು ಹೀಗಿವೆ:
‘ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮಾ ಕನ್ನಡಿ ಹರಳ’

ಚಿಕ್ಕೆಗಳ ಮಿನುಗುವಿಕೆ ಈ ಹುಡುಗಿಗೆ ಬೆರಳುಗಳಂತೆ ಕಾಣಿಸುತ್ತಿದೆ. ಚಿಕ್ಕೆಗಳು ಚಂದ್ರನನ್ನು ತೋರಿಸುತ್ತವೆ ಎಂದು ಹೇಳುವ ಮೂಲಕ ಈ ಹುಡುಗಿಯು ತನ್ನ ನಲ್ಲನಿಗೆ ಪ್ರಣಯದ ಕರೆಯನ್ನು ನೀಡುತ್ತಿದ್ದಾಳೆ. ಚಂದ್ರನು ಕನ್ನಡಿಯ ಹರಳು ಎನ್ನುವದು ಸುಂದರವಾದ ಉಪಮೆ. ಈ ಉಪಮೆಯು ಹಳ್ಳಿಗರಿಗೆ ವಿಶಿಷ್ಟವಾದ ಉಪಮೆ ಎನ್ನುವದನ್ನು ಗಮನಿಸಬೇಕು.

‘ನೀ ಹೀಂಗ ನೋಡಬ್ಯಾಡ ನನ್ನ’ ಕವನದ ‘ಹುಣ್ಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ’ ಎನ್ನುವದು ಒಂದು ಸಂಕೀರ್ಣ ಉಪಮೆಯಾಗಿದೆ. ನಾಯಕನ ಹೆಂಡತಿಯ ರೂಪವು ಹುಣ್ಣಿವೆಯ ಚಂದ್ರನಂತೆ ಶಾಂತ ಹಾಗು ಸುಂದರವಾಗಿರುವದನ್ನು ಹೇಳುತ್ತಲೇ, ಇದೀಗ ಆ ಮುಖದ ಮೇಲೆ ಪ್ರೇತಕಳೆ ಆವರಿಸಿರುವದನ್ನೂ ಸಹ ಇಲ್ಲಿ ಹೇಳಲಾಗಿದೆ.

ಉಪಮೆಗಳಂತೆ ಬೇಂದ್ರೆಯವರ ರೂಪಕಗಳೂ ಸಹ ವಿಶಿಷ್ಟವಾಗಿವೆ. ‘ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ’ ಎನ್ನುವ ರೂಪಕವನ್ನು ನೋಡಿರಿ. ಹರಿಯುತ್ತಿರುವ ಹಳ್ಳವು ಜೀವನವನ್ನು ಸೂಚಿಸುವ ರೂಪಕವಾದರೆ, ‘ಮೊದಲಿಗೆ’ ಎನ್ನುವದು ತಾರುಣ್ಯದ ಕಾಲದ ಸೂಚನೆಯಾಗಿದೆ.

ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧರಾದ ಮೂವರು ಕವಿಗಳ (ಕಾಲಿದಾಸ, ಭಾರವಿ ಹಾಗು ದಂಡಿನ) ವೈಶಿಷ್ಟ್ಯಗಳನ್ನು ವರ್ಣಿಸುತ್ತ, ಮಾಘ ಎನ್ನುವ ಕವಿಯಲ್ಲಿ ಈ ಮೂರೂ ಲಕ್ಷಣಗಳು ಸಮ್ಮಿಲಿತವಾಗಿವೆ ಎಂದು ಹೇಳುವ ಶ್ಲೋಕವೊಂದು ಹೀಗಿದೆ:
ಉಪಮಾ ಕಾಲಿದಾಸಸ್ಯ
ಭಾರವೇರರ್ಥಗೌರವಮ್
ದಂಡಿನ: ಪದಲಾಲಿತ್ಯಮ್
ಮಾಘೇ ಸಂತಿ ತ್ರಯೋ ಗುಣಾ:
ಕಾಲಿದಾಸನ ಉಪಮಾಸಾಮರ್ಥ್ಯ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ ಇವು ಬೇಂದ್ರೆಯವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿವೆ. ಇವರೆಲ್ಲರ ಸರಿಜೋಡಿಯಾದ ಪ್ರತಿಭೆಯೂ ಬೇಂದ್ರೆಕಾವ್ಯದಲ್ಲಿದೆ. ಬೇಂದ್ರೆ ಕಾವ್ಯದಲ್ಲಿಯ ಭಾಷೆ, ಛಂದಸ್ಸು ಹಾಗು ಅಲಂಕಾರಗಳು ಅವರ ಅನನ್ಯ ಪ್ರತಿಭೆಗೆ ಸಾಕ್ಷಿಯಾಗಿವೆ.