Wednesday, March 27, 2013

ತರವಲ್ಲ ತಗಿ ನಿನ್ನ ತಂಬೂರಿ................ಶಿಶುನಾಳ ಶರೀಫರು



ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ    ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರಿದೆ ಬಾರಿಸದಿರು ತಂಬೂರಿ     ||ಅನುಪಲ್ಲ||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ                ||೧||

ಬಾಳ ಬಲ್ಲವಗೆ ತಂಬೂರಿ ದೇವ
ಭಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ                 ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕ ತಂಬೂರಿ                      ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಧೀಶನ ಓದು ಪುರಾಣದಿ
ಹಸನಾಗಿ ಬಾರಿಸು ತಂಬೂರಿ                  ||೪||

ಶಿಶುನಾಳ ಶರೀಫರನ್ನು ನಾವು ಲೋಕಶಿಕ್ಷಕರು ಎಂದು ಕರೆಯಬಹುದು. ತಮ್ಮ ಗೀತೆಗಳ ಮೂಲಕ ಶರೀಫರು ಲೌಕಿಕರಿಗೆ ಸಾಮಾಜಿಕ ನೀತಿಯನ್ನು ಹಾಗು ಸಾಧಕರಿಗೆ ಆಧ್ಯಾತ್ಮಿಕ ನೀತಿಯನ್ನು ಬೋಧಿಸಿದ್ದಾರೆ. ಶರೀಫರ ಅನೇಕ ಕವನಗಳು ಒಂದು ಲೌಕಿಕ ವಸ್ತುವಿನ ವರ್ಣನೆಯಿಂದ ಪ್ರಾರಂಭವಾಗಿ, ಅಲೌಕಿಕ ವಸ್ತುವಿನ ವರ್ಣನೆಯತ್ತ ಹೊರಳುತ್ತವೆ. ‘ತರವಲ್ಲ ತಗಿ ನಿನ್ನ ತಂಬೂರಿ’ ಗೀತೆಯಲ್ಲಿಯೂ ಇದೇ ಪದ್ಧತಿಯನ್ನು ಕಾಣಬಹುದು.

ತಂಬೂರಿ ಇಲ್ಲಿ ಲೌಕಿಕ ಜೀವನದ ಸಂಕೇತವಾಗಿರುವಂತೆಯೇ, ಆಧ್ಯಾತ್ಮಿಕ ಸಾಧನೆಯ ಸಂಕೇತವೂ ಆಗಿದೆ. ಈ ಎರಡೂ ಸಂಕೇತಗಳನ್ನು ಶರೀಫರು ಅಕ್ಕಪಕ್ಕದಲ್ಲಿ ಇಟ್ಟುಕೊಂಡೇ ಈ ಗೀತೆಯನ್ನು ರಚಿಸಿದ್ದಾರೆ.  ಸಮಾಜದಲ್ಲಿ ಶಾಂತಿ ನೆಲೆಸಿರಬೇಕು ಎನ್ನುವದಾದರೆ, ಸಮಾಜದ ವಿವಿಧ, ವಿಭಿನ್ನ ಜನರಲ್ಲಿ ಸಾಮರಸ್ಯ ಹಾಗು ಪ್ರೀತಿ ಇರಬೇಕು. ಆವಾಗಲೇ ಸಮಾಜ ಎನ್ನುವ ತಂಬೂರಿಯಿಂದ ಸುಸ್ವರ ಹೊರಡುತ್ತದೆ. ಇಂತಹ ಸರಸ ಸಂಗೀತದ ಕುರುಹುಗಳನ್ನು ಅರಿಯದ, ಸಮಾಜಘಾತಕ ವ್ಯಕ್ತಿಗಳು ಸಮಾಜದಲ್ಲಿ ಅಶಾಂತಿ ಹಬ್ಬುವಂತಹ ಅಪಸ್ವರಗಳನ್ನು ಹೊರಡಿಸುತ್ತಾರೆ. ಇಂತಹವರಿಗೆ ಶರೀಫರು ಎಚ್ಚರಿಕೆ ನೀಡುತ್ತಾರೆ:
ಸ್ವರ ಬರದೆ ಬಾರಿಸದಿರು ತಂಬೂರಿ !
ಇಂತಹ ಅವಿವೇಕಿ ವ್ಯಕ್ತಿಗಳು ‘ಬಾಳಲು ಬಲ್ಲವರಲ್ಲ; ಇವರು ತಾಳಗೇಡಿಗಳು’!

ಇನ್ನು ಈ ಗೀತೆಯು ಅಧ್ಯಾತ್ಮಸಾಧಕರಿಗೂ ಸಹ ಎಚ್ಚರಿಕೆಯ ದನಿಯಾಗಿದೆ. ಸ್ಥೂಲಶರೀರ, ಸೂಕ್ಷ್ಮಶರೀರ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳೊಂದಿಗೆ ಮನಸ್ಸನ್ನು ಬೆಸೆದಿರುವ ವ್ಯಕ್ತಿತ್ವವು ಒಂದು ತಂಬೂರಿಯಿದ್ದಂತೆ. ಸ್ಥೂಲದೇಹದ ಬೇಡಿಕೆಗಳಿಗೆ ದಾಸನಾಗಿರುವ ವ್ಯಕ್ತಿತ್ವವು ಪಶುಸಮಾನವಾದ ವ್ಯಕ್ತಿತ್ವವು. ಮಾನವನಾಗಿ ಹುಟ್ಟಿದ ಮೇಲೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುವುದೇ ವಿವೇಕಿಗಳ ಲಕ್ಷಣ. ಅಂತೆಯೇ, ‘ಮಾನವಜನ್ಮ ಬಲು ದೊಡ್ಡದು, ಇದ ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ’ ಎಂದು ದಾಸರು ಹಾಡಿದ್ದಾರೆ! ಭಕ್ತಿಯ ಮೂಲಕ ಸಾಧನೆ ಮಾಡುವುದು ಒಂದು ಮಾರ್ಗ. ಯೋಗಸಾಧನೆಯು ಮತ್ತೊಂದು ಮಾರ್ಗ.

ಶರೀಫರ ಅನೇಕ ಗೀತೆಗಳನ್ನು ಗಮನಿಸಿದಾಗ, ಅವರು ಯೋಗಮಾರ್ಗವನ್ನು ಅರಿತವರಾಗಿದ್ದರು ಎಂದು ಭಾಸವಾಗುವುದು. ಯೋಗಸಾಧಕರಿಗೆ ಸಹಜವಾಗಿಯೇ ಸಿದ್ಧಿಗಳು ಲಭಿಸುವವು. ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಇಂತಹ ಸಿದ್ಧಿಗಳು ದೊರೆತಿದ್ದವು. ಆದರೆ ಶರೀಫರಿಗೆ ಮಾತ್ರ ಯಾವ ಸಿದ್ಧಿಯೂ ಲಭ್ಯವಾಗಿರಲಿಲ್ಲ. ಆದುದರಿಂದಲೇ ಅವರು ‘ಎಲ್ಲರಂಥವನಲ್ಲ ನನ ಗಂಡ, ಎಲ್ಲಿಗೋಗಧಾಂಗ ಮಾಡಿಟ್ಟಾ, ಕಾಲ್ಮುರಿದು ಬಿಟ್ಟಾ’ ಎಂದು ಹಾಡಿದ್ದಾರೆ. ಯೋಗಸಾಧಕರು ಸಿದ್ಧಿಯ ಜಾಲದಲ್ಲಿ ಬೀಳಬಾರದು. ಈ ಸಿದ್ಧಿಗಳು ಅವರನ್ನು ಅಪಮಾರ್ಗಕ್ಕೆ ಎಳೆಯಬಹುದು. ಆದರೆ ಮನೋನಿಗ್ರಹದ ಮೂಲಕ ತಮ್ಮ ಮೂರೂ ಶರೀರಗಳ ಮೇಲೆ ನಿಯಂತ್ರಣ ಸಾಧಿಸಿ, ಯೋಗಾನಂದವನ್ನು ಪಡೆಯುವುದೆಂದರೆ ತಂಬೂರಿಯನ್ನು ಸರಸವಾಗಿ ಬಾರಿಸಿದಂತೆ. ಆದುದರಿಂದಲೇ ಶರೀಫರು ‘ಸರಸ ಸಂಗೀತದ ಕುರುಹುಗಳನರಿಯದೆ ಬರಿದೆ ಬಾರಿಸದಿರು ತಂಬೂರಿ’ ಎಂದು ಎಚ್ಚರಿಕೆ ನೀಡುತ್ತಾರೆ.    

ರಾಗವನ್ನು ಅರಿತವನು ಸುಸ್ವರವನ್ನು ಹೊರಡಿಸುತ್ತಾರೆ. ಅದರಂತೆ ತಾಳವನ್ನು ಅರಿತವರು ಲಯವನ್ನು ಸಾಧಿಸುತ್ತಾರೆ. ಸಮಾಜವು ಕಾಲದ ಜೊತೆಗೆ ಬದಲಾಗುತ್ತದೆ. ಬದಲಾದ ವ್ಯವಸ್ಥೆಯ ತಾಳಕ್ಕೆ ಹೊಂದಿಕೊಂಡಂತೆಯೇ, ಸಮಾಜದ ಸಾಮರಸ್ಯವು ಕೆಡದಂತೆ ತಂಬೂರಿಯಿಂದ ನಾದವನ್ನು ಹೊರಡಿಸಬೇಕು. ಇದು ಲೌಕಿಕರಿಗೆ ಕೊಡುವ ಸೂಚನೆಯಾದರೆ, ಶರೀಫರು ಸಾಧಕರಿಗೆ ಕೊಡುವ ಉಪದೇಶವೇನು?

ಯೋಗಸಾಧನೆಯ ಮೊದಲ ಹಂತದಲ್ಲಿ ಸಾಧಕನಿಗೆ ಅನಾಹತ ಚಕ್ರದಲ್ಲಿ ನಾದ ಕೇಳುವುದು. ಶರೀಫರು ಇದನ್ನು ಮದ್ದಲಿಯ ದನಿ ಎಂದು ಕರೆಯುತ್ತಾರೆ. ಈ ನಾದವನ್ನು ಅನುಸರಿಸಿ, ಸಾಧಕನು ತನ್ನ ‘ತಂಬೂರಿ’ಯನ್ನು ಅಂದರೆ ಯೋಗಶರೀರವನ್ನು ಸಿದ್ಧಿಯ ಕಡೆಗೆ ಒಯ್ಯಬೇಕು. ಅಂತಹ ಯೋಗಿಯು ಸಿದ್ಧ ಸಾಧಕನಾಗುವುನು. ‘ಸುವಿದ್ಯೆ’ ಎಂದರೆ ಯೋಗಿಯನ್ನು ಉನ್ನತಿಗೆ ಕರೆದೊಯ್ಯುವ ವಿದ್ಯೆ. ಅಲ್ಲದೇ ‘ಷೋಡಷೀ ವಿದ್ಯಾ’ ಎನ್ನುವ ಮಂತ್ರವಿದೆ. ಇದು ತಂತ್ರಮಾರ್ಗದ ಸಾಧಕರಿಗೆ ಗುರುಮುಖೇನ ಲಭ್ಯವಾಗುವ ಮಂತ್ರ. ಬಹುಶಃ ಗುರು ಗೋವಿಂದಭಟ್ಟರಿಂದ ಶರೀಫರಿಗೆ ಈ ಮಂತ್ರದ ಉಪದೇಶವಾಗಿರಬಹುದು.

‘ಬಾಳ ಬಲ್ಲವರಿಗೆ ತಂಬೂರಿ’ ಎನ್ನುವಾಗ ಶರೀಫರು ಮತ್ತೆ ಸಮಾಜಕಲ್ಯಾಣಿ ವ್ಯಕ್ತಿಯನ್ನು ಸೂಚಿಸುವಂತೆಯೇ, ಯೋಗಸಾಧಕನನ್ನೂ ಸೂಚಿಸುತ್ತಾರೆ. ಸ್ಥೂಲ, ಸೂಕ್ಷ್ಮ ಹಾಗು ಕಾರಣಶರೀರ ಎನ್ನುವ ಮೂರು ಶರೀರಗಳನ್ನು ಸೃಷ್ಟಿಸಿದವನೇ ಭಾಳಾಕ್ಷ. ಈ ಮೂರೂ ಶರೀರಗಳನ್ನು ನಿಯಂತ್ರಿಸುವ ಮನಸ್ಸನ್ನು ಸೃಷ್ಟಿಸಿದವನೂ ಅವನೇ. ಆದುದರಿಂದ ಈ ಸಂಕೀರ್ಣವು ಭಾಳಾಕ್ಷ ರಚಿಸಿದ ತಂಬೂರಿ. ಭಾಳಾಕ್ಷ ಎಂದರೆ ಹಣೆಗಣ್ಣ. ಯೋಗಸಾಧನೆಯ ಶಿಖರದಲ್ಲಿ ಇರುವವನಿಗೆ ಮಾತ್ರ ಈ ಹಣೆಗಣ್ಣು ಅಂದರೆ ಜ್ಞಾನಚಕ್ಷು ಲಭ್ಯವಾಗುತ್ತದೆ! ಇಂತಹ ‘ತಂಬೂರಿ’ಯ ಹಂಚಿಕೆ ಅಂದರೆ ವಿನ್ಯಾಸವು ‘ಬಾಳಬಲ್ಲವನಿಗೆ’ ಅಂದರೆ ಬದುಕಿನ ತಿಳಿವಳಿಕೆ ಇದ್ದವನಿಗೆ ಮಾತ್ರ ಅರ್ಥವಾಗುತ್ತದೆ. ‘ಬಾಳಬಲ್ಲವನಿಗೆ’ ಪದವನ್ನು ‘ಬಾಳ ಬಲ್ಲವನಿಗೆ’ ಎಂದು ಬಿಡಿಸಿ ಬರೆದಾಗ ಬಾಳ=ಭಾಳ=ಬಹಳ ಎನ್ನುವ ಅರ್ಥವು ಹೊರಡುವುದನ್ನು ಗಮನಿಸಿರಿ. ಇಂತಹ ತಂಬೂರಿಯು ತಾಳಗೇಡಿಗೆ, ಅವನು ಲೌಕಿಕನೇ ಇರಲಿ ಅಥವಾ ಸಾಧಕನೇ ಇರಲಿ ನಿಷ್ಪ್ರಯೋಜಕವಾಗುವುದು!


ಈ ‘ಸಾಧನಾ ತಂಬೂರಿ’ಯ ಬಗೆಗೆ ಶರಿಫರು ಇಷ್ಟೆಲ್ಲ ಹೇಳಿದರು. ಇದರಿಂದ ಸ್ವರ ಹೊರಡಿಸುವವರಿಗೆ ಇರಬೇಕಾದ ಗುಣಗಳನ್ನು ತಿಳಿಸಿದರು. ಇನ್ನೂ ಒಂದು ಎಚ್ಚರಿಕೆಯನ್ನು ಅವರು ಕೊಡುತ್ತಾರೆ. ಈ ತಂಬೂರಿಯು ‘ಸತ್ಯಶರಧಿ’ಯಲ್ಲಿ ಉತ್ತಮರು ಆಡುವ ತಂಬೂರಿ. ಉದಾಹರಣೆಗೆ ಲಂಕಾಧೀಶನಾದ ರಾವಣನನ್ನೇ ತೆಗೆದುಕೊಳ್ಳಿ. ಅವನು ತನ್ನ ನರಗಳನ್ನೇ ಕಿತ್ತು, ತಂಬೂರಿಯ ತಂತಿಗಳನ್ನಾಗಿ ಮಾಡಿ, ಹಾಡಿ ಶಿವನನ್ನು ಒಲಿಸಿಕೊಂಡ ಎಂದು ಹೇಳುತ್ತಾರೆ. ಆದರೆ ಅಸತ್ಯದ ಮಾರ್ಗದಲ್ಲಿ ಅವನು ಕಾಲಿಟ್ಟಾಗ, ಅವನ ‘ತಂಬೂರಿ’ಯು ಭ್ರಷ್ಟವಾಗಿ ಹೋಯಿತು. ಅವನ ರಾಜ್ಯವೂ ಹಾಳಾಗಿ ಹೋಯಿತು! ಆದುದರಿಂದ ಈ ತಂಬೂರಿಯನ್ನು ಬಳಸಿ, ಸುನಾದವನ್ನು ಹೊರಡಿಸುವವನು ಸತ್ಯಮಾರ್ಗಿಯಾಗಿರಬೇಕು.

ಕರ್ನಾಟಕ ಸಂಗೀತದಲ್ಲಿ ಇರುವ ಮೂಲರಾಗಗಳು ೩೨. ಈ ಬತ್ತೀಸ ರಾಗಗಳನ್ನು ಸುಸ್ವರದಲ್ಲಿ ಬಾರಿಸಲು ಅರಿಯದ ಸಾಧಕನು ಕತ್ತೆ ಇದ್ದಂತೆ. ಸಂಗೀತದ ರಾಗಗಳಂತೆ, ಜೀವನದ ರಾಗಗಳೂ ಭಿನ್ನವಾಗಿರುತ್ತವೆ. ‘ರಾಗ’ ಈ ಪದಕ್ಕೆ ಇಲ್ಲಿರುವ ಶ್ಲೇಷಾರ್ಥವನ್ನು ಗಮನಿಸಿರಿ. ಜೀವನದ ಸುಖಗಳು ಸೌಮ್ಯ ರಾಗಗಳಾದರೆ, ಕಷ್ಟಗಳು ರುದ್ರರಾಗಗಳಾಗಿರಬಹುದು. ಈ ವಿಭಿನ್ನ ರಾಗಗಳನ್ನು ಬಾರಿಸುವಾಗ, ಸಾಧಕನು ಸಮತೋಲನದ ಮನಃಸ್ಥಿತಿಯನ್ನು ಕಾಯ್ದುಕೊಳ್ಳಬೇಕು. ಗೀತೆಯಲ್ಲಿ ಶ್ರೀಕೃಷ್ಣನು ಹೇಳಿದಂತೆ, ‘ಸುಖದುಃಖೇ ಸಮಾಕೃತ್ವಾ, ಲಾಭಾಲಾಭೌ ಜಯಾಜಯೌ’ ಎನ್ನುವ ಸ್ಥಿತಪ್ರಜ್ಞತೆ ಬಂದಾಗಲೇ, ಭಾಳಾಕ್ಷ ನೀಡಿದ ತಂಬೂರಿಯನ್ನು ಬಾರಿಸಲು ಅರಿತುಕೊಂಡಂತೆ!
 
ಜೀವನದ ‘ಸುಮ್ಯಾಳಕ್ಕೆ’ ಅಂದರೆ ಸಮರಸದ ಹಿಮ್ಮೇಳಕ್ಕೆ, ಇಂತಹ ತಂಬೂರಿ ‘ಅಸಮ’ ಎಂದರೆ unequalled ಎಂದು ಶರೀಫರು ಹೇಳುತ್ತಾರೆ.  ಅದುದರಿಂದ ಇದು ‘ಕುಶಲ’ರ ಕೈಗಳಲ್ಲಿ ಮಾತ್ರ ಶೋಭಿಸುತ್ತದೆ. ಇಂತಹ ಕೌಶಲ್ಯ ಪಡೆಯಲು ಏನು ಮಾಡಬೇಕು ಎನ್ನುವ ಪ್ರಶ್ನೆಗೆ, ಶರೀಫರು ‘ಶಿಶುನಾಳಧೀಶನ ಓದು ಪುರಾಣದಿ’ ಎಂದು ಉತ್ತರಿಸುತ್ತಾರೆ. ಅರ್ಥಾತ್, ಯಾವಾಗಲೂ ದೇವರಲ್ಲಿ ಮನಸ್ಸನ್ನು ಇಡಬೇಕು. ‘ನಯನದಲ್ಲಿ ನಿಮ್ಮ ಮೂರುತಿ ತುಂಬಿ, ಶ್ರವಣದಲ್ಲಿ ನಿಮ್ಮ ಕೀರುತಿ ತುಂಬಿ’ ಎಂದು ಬಸವಣ್ಣನವರು ಹೇಳುವ ಮಾರ್ಗವಿದು. ಈ ಸಾಧನೆಯನ್ನು ಮಾಡಿದ ಬಳಿಕ, ತಂಬೂರಿಯನ್ನು ‘ಹಸನಾಗಿ ಬಾರಿಸಬೇಕು’ . ಅದರ ಸುಸ್ವರವು ಆಗ ಸಮಾಜಕ್ಕೇ ಆಗಲಿ, ಸಾಧಕನಿಗೇ ಆಗಲಿ ಶ್ರೇಯಸ್ಕರವಾಗುವುದು.

Wednesday, March 6, 2013

ಭಿನ್ನಭೇದವ ಮಾಡಬ್ಯಾಡಿರಿ................ಶಿಶುನಾಳ ಶರೀಫರು


ಮಾರ್ಚ ೭ ಇದು ಶಿಶುನಾಳ ಶರೀಫರ ಭಕ್ತರಿಗೆ ಹಾಗು ಕನ್ನಡ ಸಾಹಿತ್ಯಪ್ರೇಮಿಗಳಿಗೆ ಮಹತ್ವದ ದಿನಾಂಕ. ೧೮೧೯ ಮಾರ್ಚ ೭ರಂದು ಜನಿಸಿದ ಶಿಶುನಾಳ ಶರೀಫರು ಸರಿಯಾಗಿ ೭೦ ವರ್ಷಗಳಿಗೆ, ಅಂದರೆ ೧೮೮೯ ಮಾರ್ಚ ೭ರಂದು ದೇಹವಿಟ್ಟರು. ಶರೀಫರು ಅನೇಕ ಅನುಭಾವಗೀತೆಗಳನ್ನು ಹಾಗು ತತ್ವಪದಗಳನ್ನು ರಚಿಸಿದ್ದಾರೆ. ಅವರ ಒಂದು ಅಪರೂಪದ ಗೀತೆ, ಅಂದರೆ ಸಮಾಜವ್ಯವಸ್ಥೆಯನ್ನು ಟೀಕಿಸಿ ಅವರು ರಚಿಸಿದ ಒಂದು ಅಪೂರ್ವ ಗೀತೆ ನನಗೆ ಇತ್ತೀಚೆಗೆ ಲಭ್ಯವಾಯಿತು. ಶ್ರೀಮತಿ ಯಮುನಾ ಗಾಂವಕರ ಅವರು ಸಂಪಾದಿಸಿದ ‘ನಿಜದನಿ’ ಕವನಸಂಕಲನದಲ್ಲಿ ಶರೀಫರ ಈ ಪದವು ಅಡಕವಾಗಿದೆ. ಕವನದ ಪೂರ್ಣಪಾಠ ಹೀಗಿದೆ:

ಭಿನ್ನ ಭೇದವ ಮಾಡಬ್ಯಾಡಿರಿ

ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ.

ಅಯ್ಯಾ ಮನೆಮನೆ ತಿರುಗೋದು ಬೆಕ್ಕು
ಲಿಂಗಾಯತರ ಮನೆಯಲ್ಲಿ, ಹಾರುವರ ಮನೆಯಲ್ಲಿ,
ಕೊಮಟಿಗರ ಮನೆಯಲ್ಲಿ
ಹಾಲು ನೆಕ್ಕೋದು ಬೆಕ್ಕು ||

ಹೊಲೆಯರ ಮನೆಯಲ್ಲಿ, ಮಾದಿಗರ ಮನೆಯಲ್ಲಿ,
ಒಕ್ಕಲಿಗರ ಮನೆಯಲ್ಲಿ ಬಾಡು ತಿನ್ನೋದು ನೋಡು ಬೆಕ್ಕು;
ಇಂಥ ಸರ್ವಜಾತಿಯೊಳಗೆ ಸೇರಿಕೊಂಡಿರೋ ನಮ್ಮ ಆಚಾರವೆಲ್ಲ
ಮೈಲಾರಲಿಂಗ ಮೈಲಾರಲಿಂಗ ||

ಅಯ್ಯಾ ಉತ್ತರಿ ಮಳೆ ಬಂದು ಸುತ್ತಿ ಸುತ್ತಿ ಹೊಡೆವಾಗ
ನೆತ್ತಿ ಮ್ಯಾಗಳ ನೀರು ಗಂಟಲಿಗಿಳಿಯಿತಲ್ಲೊ;
ಅಯ್ಯಾ ಚರವೆಲ್ಲ ಸ್ಥಿತವಲ್ಲ, ನರಜನ್ಮ ಸ್ಥಿರವಲ್ಲ,
ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ ||

ಅಯ್ಯಾ ಹಸಿದವನು ಹೊಲೆಯ, ಸುಸ್ತಾದವನು ಚಾಂಡಾಲ,
ಅಯ್ಯಾ ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ;
ಇಂಥ ಜಾತಿಗಳ ಸಹವಾಸ ಮಾಡಲು ಬ್ಯಾಡಿ ಮೈಲಾರಲಿಂಗ ||

ಇದೊಂದು ಅದ್ಭುತವಾದ ಪದ. ಶರೀಫರ ಇತರ ಪದಗಳಿಗೆ ಹೋಲಿಸಿದಾಗ ಇದರ ರಚನೆ ಭಿನ್ನವಾಗಿ ತೋರುತ್ತದೆ. ಶರೀಫರ ಅನುಭಾವ ಹಾಗು ತತ್ವಗೀತೆಗಳಿಗಿಂತ ಭಿನ್ನವಾಗಿ ಇರುವ ಈ ಗೀತೆಯಲ್ಲಿ ಸಮಾಜವ್ಯವಸ್ಥೆಯ ಬಗೆಗಿನ ವ್ಯಥೆ ಎದ್ದು ಕಾಣುತ್ತದೆ. ಆದರೆ ಶರೀಫರ ಅನೇಕ ಪದಗಳಂತೆ ಇಲ್ಲಿಯೂ ಸಹ ಅವರು ಒಂದು ಭೌತಿಕ ವಸ್ತುವಿನ ಹೋಲಿಕೆಯಿಂದ ಗೀತೆಯನ್ನು ಪ್ರಾರಂಭಿಸುತ್ತ ಅರ್ಥವಿಸ್ತಾರವನ್ನು ಮಾಡುತ್ತ ಹೋಗುತ್ತಾರೆ.

ಬೆಕ್ಕಿಗೆ ಜಾತಿಯಿಲ್ಲ! ಸಸ್ಯಾಹಾರಿಗಳ ಮನೆಯಲ್ಲಿ ಹಾಲು ನೆಕ್ಕುವ ಬೆಕ್ಕು, ಮಾಂಸಾಹಾರಿಗಳ ಮನೆಯಲ್ಲಿ ಬಾಡನ್ನು ತಿನ್ನುತ್ತದೆ. ವಿವಿಧ ಜಾತಿಗಳಲ್ಲಿರುವ ಈ ಆಚಾರಗಳಿಗೆ ಮೂಲಕಾರಣನು ಆ ಮೈಲಾರಲಿಂಗ ದೇವನೇ ಅಲ್ಲವೆ?! ಮರಣದ ಸಮಯ ಬಂದಾಗ ಜಾತಿ ಎನ್ನುವುದು ಉಳಿಯುತ್ತದೆಯೆ? ಹೀಗಿರುವಾಗ ನಮ್ಮ ಆಚಾರ ದೊಡ್ಡದು, ನಮ್ಮ ವಿಚಾರ ದೊಡ್ಡದು(!), ನಾವು ದೊಡ್ಡ ಜಾತಿಯವರು ಎನ್ನುವುದರಲ್ಲಿ ಏನಾದರೂ ಅರ್ಥವಿದೆಯೆ? ಮರಣದ ಸಂಕೇತವಾಗಿರಬಹುದಾದ ಬೆಕ್ಕಿಗೆ ಸಣ್ಣವರು, ದೊಡ್ಡವರು ಎನ್ನುವ ಭೇದವೇ ಇಲ್ಲವಲ್ಲ!

ಉತ್ತರಾ ನಕ್ಷತ್ರದಲ್ಲಿ ಬರುವ ಮಳೆಯು ಅಗಸ್ಟ ಕೊನೆಗೆ ಬರುವ ಸಂಭವವಿರುತ್ತದೆ. ಹೀಗಾಗಿ ಇದು ಜಡಿಮಳೆಯು. ಈ ಮಳೆಯಲ್ಲಿ ಸಿಕ್ಕಿಬಿದ್ದ ಮನುಷ್ಯನ ತಲೆಯೆಲ್ಲ ತೊಯ್ದು, ನೀರು ಗಂಟಲಿಗಿಳಿಯುತ್ತದೆ. ಇದೇ ರೀತಿಯಲ್ಲಿ ಮನುಷ್ಯನ ಬದುಕಿನ ಕೊನೆಯು ಯಾವಾಗಲೂ ಅನಿಶ್ಚಿತವೇ! ನಿಸರ್ಗದ ಈ ಪ್ರಹಾರಕ್ಕೆ ಜಾತಿ, ವರ್ಗ ಎನ್ನುವುದಿದೆಯೆ? ಹೀಗಿರುವಾಗ ಬಡವರ ಬದುಕನ್ನು  ಹೀಯಾಳಿಸುವದು ಅನರ್ಥಕಾರಿಯಲ್ಲವೆ? ‘ಆಡಿಕೊಳ್ಳಬ್ಯಾಡಿ ಬಡವರ ಬದುಕ ಕತ್ತಲ ಬೆಳದಿಂಗಳೊಳಗ’ ಎನ್ನುವಾಗ, ಶರೀಫರು ಅನುಭವಿಸುವ ವ್ಯಥೆಯು ಪರಿಣಾಮಕಾರಿಯಾಗಿ ಇಲ್ಲಿ ವ್ಯಕ್ತವಾಗುತ್ತಿದೆ.  ‘ಬಡವರು’ ಎನ್ನುವಾಗ ಶರೀಫರು ಮತ್ತೊಂದು ಅರ್ಥವನ್ನು ಇಲ್ಲಿ ಹುದುಗಿಸಿದ್ದಾರೆ. ಭಾರತದಲ್ಲಿ ಜಾತಿ ಮತ್ತು ವರ್ಗ ಇವು ಒಂದನ್ನೊಂದು ಹೆಣೆದುಕೊಂಡಿವೆ. ಬಡವರೆಂದರೆ ಆರ್ಥಿಕವಾಗಿ ಕೆಳವರ್ಗದವರಷ್ಟೇ ಅಲ್ಲ, ಸಾಮಾಜಿಕವಾಗಿಯೂ ಕೆಳವರ್ಗದವರು.

ಈ ಗೀತೆಯ ಮೊದಲನೆಯ ನುಡಿಯಲ್ಲಿ ಬರುವ ಜಾತಿಗಳು ಸಹಸಾ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಮೇಲ್ವರ್ಗಕ್ಕೆ ಸೇರಿಕೊಂಡಿರುವಂತಹವು. ಎರಡನೆಯ ನುಡಿಯಲ್ಲಿರುವ ಜಾತಿಗಳು ಸಹಸಾ ಕೆಳವರ್ಗಕ್ಕೆ ಸೇರಿದಂತಹವು. ಆದುದರಿಂದ ಬಡವರನ್ನು ಹೀಯಾಳಿಸಬೇಡಿರಿ ಎಂದು ಹೇಳುವಾಗ, ಶರೀಫರು ಜಾತಿ ಹಾಗು ವರ್ಗ ಎರಡನ್ನೂ ಸೂಚಿಸುತ್ತಾರೆ. ಜಾತಿ ಹಾಗು ವರ್ಗ ಇವುಗಳ ಅನ್ಯೋನ್ಯತೆಯನ್ನು ಆಧುನಿಕ ಭಾರತದಲ್ಲಿ ಪ್ರತಿಪಾದಿಸಿದವರಲ್ಲಿ ರಾಮಮನೋಹರ ಲೋಹಿಯಾ ಮುಖ್ಯರು. ಅವರಿಗಿಂತ ಒಂದು ಶತಮಾನದಷ್ಟು ಮೊದಲೇ, ಶರೀಫರು ಈ ಮಾತನ್ನು ತಮ್ಮ ಗೀತೆಯಲ್ಲಿ ಸೂಚಿಸಿದ್ದಾರೆ!

ಆಧುನಿಕ ಸಮತಾವಾದಿಗಳಂತೆ ಶರೀಫರು ಸಾಮಾಜಿಕ ಕ್ರಾಂತಿಯನ್ನು ಉಪದೇಶಿಸುತ್ತಿಲ್ಲ. ಆದರೆ ಮಾನವೀಯತೆಯನ್ನು ಬೋಧಿಸುತ್ತಿದ್ದಾರೆ. ಸಮಾಜವ್ಯವಸ್ಥೆಯು ಉಳ್ಳವರಿಗೆ ಬೆಳದಿಂಗಳಾದಾಗ, ಇಲ್ಲದವರಿಗೆ ಕತ್ತಲೆಯ ಕೂಪವಾಗಿದೆ. ಆದುದರಿಂದ ಆ ವರ್ಗದವರನ್ನು ಹಳಿಯುವುದು ಸಣ್ಣತನ ಎನ್ನುವುದು ಶರೀಫರ ಅಭಿಪ್ರಾಯವಾಗಿದೆ.

ಜಾತಿ ಹಾಗು ವರ್ಗದ ಏಕತೆಯನ್ನು ಮತ್ತೆ ಮುಂದುವರಿಸುತ್ತ, ಶರೀಫರು ‘ಹಸಿದವನೆ ಹೊಲೆಯ, ಸುಸ್ತಾದವನೆ ಚಾಂಡಾಲ’ ಎನ್ನುತ್ತಾರೆ. ‘ಹೊಲಸು ತಿನ್ನುವವನೆ ಹೊಲೆಯ’ ಎನ್ನುವ ಬಸವಣ್ಣನವರ ವಚನಕ್ಕಿಂತ ಇದು ಭಿನ್ನವಾಗಿರುವುದನ್ನು ಗಮನಿಸಬೇಕು. ಬಸವಣ್ಣನವರು ನೀತಿಯ ನೆಲೆಗಟ್ಟಿನಲ್ಲಿ ಈ ಮಾತನ್ನು ಹೇಳಿದ್ದರೆ, ಶರೀಫರು ಸಮಾಜವ್ಯವಸ್ಥೆಯ ಆಧಾರದ ಮೇಲೆ, ತಮ್ಮ ಅನುಭವಸಾರವನ್ನು ಉಸರುತ್ತಿದ್ದಾರೆ. ಈ ಪ್ರಸಂಗದಲ್ಲಿ ಯುರೋಪಿನ ಆಧುನಿಕ ಸಮತಾವಾದಿ ಮಾರ್ಕ್ಸನ ವಿಚಾರಗಳು ಶರೀಫರ ವಿಚಾರಗಳಿಗೆ ಹೋಲುತ್ತಿವೆ ಎನ್ನಬಹುದು. 

ಕೆಳವರ್ಗದವರ ಇಂತಹ ಸ್ಥಿತಿಗೆ ಕಾರಣರಾದ ಮೇಲ್ವರ್ಗದ ತತ್ವವಾದಗಳನ್ನು ಶರೀಫರು ‘ಬಾಯಲ್ಲಿ ಬೆಲ್ಲ, ಎದೆಯಲ್ಲಿ ಕತ್ತರಿ’ ಎಂದು ಗುರುತಿಸುತ್ತಾರೆ! ಇಂತಹ ಜಾತಿಗಳ ಸಹವಾಸವನ್ನು ಬಿಟ್ಟುಬಿಡುವುದೇ ಹಿತಕರ ಎಂದು ಶರೀಫರು ಉದ್ಗರಿಸುವುದು ಅವರ ವ್ಯಥೆಯ ಆಳವನ್ನು ತೋರಿಸುತ್ತದೆ.

ಗೀತೆಯ ಮೊದಲಲ್ಲಿ ಬರುವ,
ಭಿನ್ನಭೇದವ ಮಾಡಬ್ಯಾಡಿರಿ,
ಇದರುನ್ನತತನವನು ಚೆನ್ನಾಗಿ ತಿಳಿಯಿರಿ. ಎನ್ನುವ ಪಲ್ಲವು ಮನುಷ್ಯರಲ್ಲಿರುವ ಭೇದಬುದ್ಧಿಯು ಹೀನಕರವಾಗಿದೆ, ಹಾಗು ‘ಎಲ್ಲರೂ ಒಂದೇ’ ಎನ್ನುವ ವಿಚಾರವೇ ಉನ್ನತವಿಚಾರವು ಎಂದು ತಿಳಿಹೇಳುತ್ತದೆ.

ಶರೀಫರ ಈ ಗೀತೆಯಲ್ಲಿಯ ನುಡಿಗಟ್ಟುಗಳು ಆಧುನಿಕ ಕವನಗಳ ನುಡಿಗಟ್ಟುಗಳನ್ನು ಹೋಲುತ್ತವೆ. ಗೀತೆಯ ದೇಹವು ಆಧುನಿಕ ಕವನಗಳ ದೇಹವಾಗಿದೆ. ಆದರೆ ಒಳಗಿನ ಆತ್ಮ ಮಾತ್ರ ಶರೀಫರದೇ.

Monday, February 25, 2013

‘ಆಲಯವು ಬಯಲೊಳಗೊ’...ವ್ಯಾಸ ದೇಶಪಾಂಡೆಯವರ ಹೊಸ ನಾಟಕ


ಕನ್ನಡ ನಾಟಕಸಾಹಿತ್ಯದಲ್ಲಿ ಹೆಸರು ಮಾಡಿದ ಶ್ರೀ ವ್ಯಾಸ ದೇಶಪಾಂಡೆಯವರು ಈವರೆಗೆ ಐದು ನಾಟಕಗಳನ್ನು ರಚಿಸಿದ್ದಾರೆ. ಅವರ ಮೊದಲನೆಯ ನಾಟಕವಾದ ‘ಮುಂದೇನ ಸಖಿ ಮುಂದೇನ’ ಇದು ೧೯೭೪ರಲ್ಲಿ ‘ಸಾಕ್ಷಿ’ ಪತ್ರಿಕೆಯಲ್ಲಿ ಪ್ರಕಟವಾಯಿತು. ಖ್ಯಾತ ರಂಗನಿರ್ದೇಶಕ ಶ್ರೀ ಬಿ.ವ್ಹಿ.ಕಾರಂತರು ಈ ನಾಟಕವನ್ನು ಮುಂಬಯಿಯ ರಂಗಭೂಮಿಯ ಮೇಲೆ ಪ್ರದರ್ಶಿಸಿದರು. ಕನ್ನಡದ ಪ್ರಾತಿನಿಧಿಕ ನಾಟಕಗಳ ಸಂಕಲನದಲ್ಲಿ ಅಡಕವಾದ ಈ ನಾಟಕವನ್ನು ಕನ್ನಡದ ಮೊದಲ ಫ್ಯಾಂಟಸಿ ನಾಟಕವೆಂದು ಭಾವಿಸಬಹುದು. ಅನಂತರ ಸಾಮಾಜಿಕ, ಐತಿಹಾಸಿಕ ಹಾಗು ಪೌರಾಣಿಕ ವಸ್ತುಗಳ ಮೂಲಕ ಮಾನವ ಸಮಸ್ಯೆಗಳನ್ನು ಚರ್ಚಿಸಿದ ಶ್ರೀ ವ್ಯಾಸ ದೇಶಪಾಂಡೆಯವರು ಇದೀಗ ‘ಆಲಯವು ಬಯಲೊಳಗೊ’ ನಾಟಕದ ಮೂಲಕ ಕನಕದಾಸರ ವ್ಯಕ್ತಿತ್ವವನ್ನು ಹಾಗು ಸಾಮಾಜಿಕ ಆಂದೋಲನದಲ್ಲಿ ಅವರ ಪಾತ್ರವನ್ನು ಶೋಧಿಸಲು ಪ್ರಯತ್ನಿಸಿದ್ದಾರೆ.ಜೊತೆಗೇ ಪ್ರಾಚೀನ ಕಾಲದಿಂದಲೂ ನಮ್ಮ ಸಮಾಜವನ್ನು ಕಾಡುತ್ತಿರುವ ಒಂದು ಮೂಲಭೂತ ಸಮಸ್ಯೆಯಾದ ವರ್ಣಭೇದ ನೀತಿಯನ್ನು ಗುರುತಿಸಲು ಹಾಗು ಅದರ ಪರಿಹಾರವನ್ನು ಹುಡುಕಲೂ ಸಹ ಇಲ್ಲಿ ಪ್ರಯತ್ನಿಸಿದ್ದಾರೆ.

ನಾಟಕದ ಆಶಯ:
ಸನಾತನ ಸಂಪ್ರದಾಯದಲ್ಲಿ ರೂಡವಾದ ಜಾತಿಪದ್ಧತಿ ಹಾಗು ಮೇಲು, ಕೀಳುಗಳ ವಿರುದ್ಧ ಅನೇಕ ಜನಾಂದೋಲನಗಳು ಕರ್ನಾಟಕದಲ್ಲಿ ನಡೆದಿವೆ. ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳುವಳಿಯು ಕರ್ನಾಟಕದಲ್ಲಿ ನಡೆದ ಮಹತ್ವದ ಆಂದೋಲನವಾಗಿದೆ. ಹನ್ನೊಂದನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ರಾಮಾನುಜಾರ್ಯರ ನೇತೃತ್ವದಲ್ಲಿ ಪ್ರಾರಂಭವಾಗಿದ್ದ ಇಂತಹ ಸಂಚಲನೆ ಕರ್ನಾಟಕಕ್ಕೂ ಹರಡಿತ್ತು. ಹದಿಮೂರನೆಯ ಶತಮಾನದಲ್ಲಿ ವಿಜಯನಗರದ ಹರಿದಾಸಕೂಟದ ಪ್ರಮುಖ ಹರಿದಾಸರಲ್ಲಿ ಒಬ್ಬರಾದ ಕನಕದಾಸರು ಈ ಆಂದೋಲನವನ್ನು ಪುನಃ ಸಂಚಾಲಿಸಿದರು. ಆದರೆ ಕನಕದಾಸರು ತಮ್ಮ ಹರಿಭಕ್ತಿ ಹಾಗು ಮುಮುಕ್ಷತೆಗೆ ಹೆಸರಾದರೇ ವಿನಃ, ಅವರು ಸಂಚಾಲಿಸಿದ ಈ ಆಂದೋಲನವು ಜನಮಾನಸದ ವಿಸ್ಮರಣೆಗೆ ಹಾಗು ಇತಿಹಾಸದ ಅವಜ್ಞೆಗೆ ಒಳಗಾಯಿತು! ಈ ಜನಪರ ಆಂದೋಲನದಲ್ಲಿ ಕನಕದಾಸರ ಪಾತ್ರವೇನು, ಈ ಆಂದೋಲನದ ಯಶಸ್ಸು ಅಥವಾ ಅಪಯಶಸ್ಸಿನ ಪ್ರಮಾಣವೇನು, ಇದರ ಕಾರಣಗಳೇನು ಎನ್ನುವ ಸಂಗತಿಗಳು ಇತಿಹಾಸದ ಕಪ್ಪು ಕುಳಿಯಲ್ಲಿ ಹುದುಗಿ ಹೋಗಿವೆ. ಈ ಸಂಗತಿಗಳನ್ನು ಶೋಧಿಸಿ ಅರಿತುಕೊಳ್ಳುವುದೆಂದರೆ, ಕನಕದಾಸರ ವೈಯಕ್ತಿಕ, ಧಾರ್ಮಿಕ ಹಾಗು ಸಾಮಾಜಿಕ ಜೀವನವನ್ನು ಶೋಧಿಸಿ ಅರಿತುಕೊಂಡಂತೆ. ಆ ಶೋಧನೆಯನ್ನು ಎತ್ತಿಕೊಳ್ಳಲು ಐತಿಹಾಸಿಕ ಜ್ಞಾನ ಬೇಕು. ಅದರ ಜೊತೆಗೆ ತರ್ಕಶಕ್ತಿಯೊಡನೆಯೇ, ಕಲ್ಪನಾಶಕ್ತಿಯೂ ಬೇಕಾಗುತ್ತದೆ. ಪುಣ್ಯವಶಾತ್ ಶ್ರೀ ವ್ಯಾಸ ದೇಶಪಾಂಡೆಯವರು ಕನಕದಾಸರ ಬದುಕಿನ ವಿಸ್ತೃತವಾದ ಅಧ್ಯಯನವನ್ನು ಮಾಡಿದ್ದಾರೆ. ಕನಕದಾಸರ ಪದಗಳನ್ನು ಹಾಗು ಬದುಕಿನ ಘಟನೆಗಳನ್ನು ಆಧರಿಸಿ, ಕನಕದಾಸರ  ಬಹುಮುಖಿ, ಸಮಾಜಮುಖಿ ವ್ಯಕ್ತಿತ್ವವನ್ನು ಸಂಗ್ರಹಿಸಿದ್ದಾರೆ. ಸತ್ಯಕ್ಕೆ ಅಪಚಾರವಾಗದಂತೆ ಹಾಗು ವಾಸ್ತವ ಘಟನೆಗಳಿಗೆ ಹೊಂದಿಕೊಂಡಿರುವಂತೆ, ಆ ಕಾಲದಲ್ಲಿ ಜರುಗಿರಬಹುದಾದ ‘ನಾಟಕ’ವನ್ನು ನಮ್ಮ ಎದುರಿಗೆ ನಿಲ್ಲಿಸಿದ್ದಾರೆ. ಇಷ್ಟೇ ಆದರೆ, ಈ ನಾಟಕಕ್ಕೆ ಮಹತ್ವವಿರುತ್ತಿರಲಿಲ್ಲ. ಈ ನಾಟಕವು ಜನಸಾಮಾನ್ಯರ ಹಾಗು ಶಿಷ್ಟವರ್ಗದವರ ಬದುಕಿನ ವಿರೋಧಾಭಾಸಗಳನ್ನು, ಅವರ ನಂಬುಗೆ ಹಾಗು ಅಪನಂಬಿಕೆಗಳನ್ನು, ಅಲ್ಲದೆ ಧರ್ಮ ಹಾಗು ರಾಜಕಾರಣದ ವಿಚಿತ್ರ ಅವಲಂಬನೆಗಳನ್ನು ಪುನರ್ನಿರ್ಮಿಸುವುದರಲ್ಲಿ ಸಫಲವಾಗಿದೆ. ಎಲ್ಲಕ್ಕೂ ಮುಖ್ಯವಾಗಿ ಬದುಕನ್ನು ಸಾರ್ಥಕಗೊಳಿಸುವ ಧರ್ಮ ಯಾವುದು ಎನ್ನುವುದನ್ನು ಹಾಗು ಸಾಮಾನ್ಯ ಮಾನವರ  ಆಶೋತ್ತರಗಳು ಏನು ಎನ್ನುವುದನ್ನು ಈ ನಾಟಕವು ಬಿಂಬಿಸುತ್ತದೆ. ಇದೇ ಕನಕದಾಸರ ಆಶಯವಾಗಿದೆ. ಇದೇ ಈ ನಾಟಕದ ಆಶಯವೂ ಆಗಿದೆ.    

ಸಾಹಿತ್ಯ ವಿವೇಚನೆ:
ನಾಟಕವು ಮೂಲತಃ ರಂಗಮಾಧ್ಯಮ. ಆದರೆ ಇದು ಸಾಹಿತ್ಯಪ್ರಕಾರವೂ ಹೌದು. ರಂಗತಂತ್ರದಲ್ಲಿ ಪರಿಪೂರ್ಣವಾದ ನಾಟಕವು ಸಾಹಿತ್ಯಕವಾಗಿ ಸೊರಗಿದರೆ, ಆತ್ಮವಿಲ್ಲದ ಪ್ರಮಾಣಬದ್ಧವಾದ ಶರೀರದಂತಾಗುತ್ತದೆ. ಒಳ್ಳೆಯ ಸಾಹಿತ್ಯವಿದ್ದು ರಂಗತಂತ್ರವು ಸಮಂಜಸವಾಗಿರದಿದ್ದರೆ, ನಾಟಕವು ಶರೀರವಿಲ್ಲದ ಆತ್ಮವಾಗುತ್ತದೆ. ಆದುದರಿಂದ ಯಾವುದೇ ನಾಟಕಕ್ಕೂ ಸಮುಚಿತ ಸಾಹಿತ್ಯ ಹಾಗು ಸಮರ್ಪಕ ರಂಗತಂತ್ರಗಳು ಅವಶ್ಯಕವಾಗಿವೆ. ಆ ದೃಷ್ಟಿಯಿಂದ ಈ ನಾಟಕದ ಸಾಹಿತ್ಯವನ್ನು ಮೊದಲು ಸಮೀಕ್ಷಿಸೋಣ.

ಸನಾತನ ಸಂಪ್ರದಾಯದ ವಿರುದ್ಧ ಕರ್ನಾಟಕದಲ್ಲಿ ನಡೆದ ಆಂದೋಲನಗಳು ಅನೇಕ ಏಳುಬೀಳುಗಳನ್ನು ಕಂಡವು. ಕನಕದಾಸರ ಕಾಲದಲ್ಲಿ ಸನಾತನ ಧರ್ಮವು ಭದ್ರವಾಗಿ ತಳವೂರಿತ್ತು. ಆದರೂ ಸಹ ಪರಧರ್ಮದ ಆಕ್ರಮಣದ ಹೆದರಿಕೆಯಲ್ಲಿಯೇ ಇದು ಬದುಕಿತ್ತು. ಇಂತಹ ಸಂದರ್ಭದಲ್ಲಿ ಕನಕದಾಸರು ತಮ್ಮ ವ್ಯಕ್ತಿತ್ವದ ಬಲದಿಂದಲೇ ವ್ಯಾಸರಾಯರ ಶಿಷ್ಯತ್ವವನ್ನು ಪಡೆದರು. ಹರಿಭಕ್ತಿಯನ್ನು ಸಾರುವುದರ ಜೊತೆಗೇ, ಜನಸಾಮಾನ್ಯರಲ್ಲಿ ನೆಲೆಯೂರಿದ್ದ ಮೂಢರೂಢಿಗಳನ್ನು ನಿರ್ಮೂಲಗೊಳಿಸಲು ಪ್ರಯತ್ನಪಟ್ಟರು. ಜೊತೆಜೊತೆಗೇ ವರ್ಣಭೇದನೀತಿಯ ವಿರುದ್ಧ ಹೋರಾಡಿದರು. ಈ ಹೋರಾಟಕ್ಕೆ ಜನಸಾಮಾನ್ಯರಿಂದ ದೊರೆತ ಬೆಂಬಲವೇನು, ಸನಾತನಿಗಳ ವಿರೋಧವೇನು, ಈ ಇಬ್ಬಂದಿಯಲ್ಲಿ ನಾಡಪ್ರಭುತ್ವವು ಯಾರ ಪಕ್ಷವನ್ನು ವಹಿಸಿತು, ಸನಾತನವಿರೋಧಿ ಹೋರಾಟದ ಯಶಸ್ಸು ಯಾವ ಪ್ರಮಾಣದ್ದು ಎನ್ನುವ ಎಲ್ಲ ಸಂಗತಿಗಳನ್ನು ಒಂದು ಸಮಯಸೀಮಿತ ಚೌಕಟ್ಟಿನಲ್ಲಿ ಕೂಡಿಸಲು ಸಂಕೀರ್ಣವಾದ ನಾಟಕರಚನೆಯ ಅವಶ್ಯಕತೆ ಇದೆ.

ಈ ಸಮಸ್ಯೆಗಳನ್ನು ಪರಿಹರಿಸಲು ಲೇಖಕರು ಎತ್ತಿಕೊಂಡ ಸಾಹಿತ್ಯಕ ವಿಧಾನ ಹೀಗಿದೆ:
ನಾಟಕ ಪ್ರಾರಂಭವಾಗುವುದೇ ವರ್ತಮಾನ ಕಾಲದಲ್ಲಿ ಜರಗುವ ಒಂದು ತಿಕ್ಕಾಟದೊಂದಿಗೆ. ಕನಕದಾಸರು ವಿರಚಿಸಿದ ‘ರಾಮಧಾನ್ಯ’ ಕಾವ್ಯದ ಪಾತ್ರಗಳ ಅಂದರೆ ಅಕ್ಕಿ ಹಾಗು ರಾಗಿಗಳ ಮೇಲಾಟವನ್ನೇ ಇಲ್ಲಿ ಬಳಸಿಕೊಳ್ಳಲಾಗಿದೆ. ಈ ಪೈರುಗಳು ಪ್ರಸಕ್ತ ಕಾಲದಲ್ಲಿ ಪ್ರೇಕ್ಷಕರ ಎದುರಿನಲ್ಲಿ ರಂಗಭೂಮಿಯ ಮೇಲೆ ಪ್ರತ್ಯಕ್ಷರಾಗಿ, ತಮ್ಮ ಆಟವನ್ನು ಪ್ರದರ್ಶಿಸುತ್ತವೆ. ಅಲ್ಲಿಂದ ಕಾಲವು ಐದುನೂರು ವರ್ಷಗಳಷ್ಟು ಹಿಂದಕ್ಕೆ ಜಾರುತ್ತದೆ. ಕನಕದಾಸರು ಈ ಬಯಲಾಟವನ್ನು ಸಾರ್ವಜನಿಕರ ಎದುರಿಗೆ ಆಡಿಸುತ್ತಿದ್ದಾರೆ. ಆಟದ ಸಮಯದಲ್ಲಿ ನೋಡಲು ಬಂದ ಗೊಲ್ಲರು ಉಡುಪಿಯ ಪರಿಶೆಯಲ್ಲಿ ತಮಗೆ ನಿರಾಕರಿಸಲಾಗುತ್ತಿರುವ ಕೃಷ್ಣದರ್ಶನದ ಬಗೆಗೆ ತಮ್ಮ ವ್ಯಥೆಯನ್ನು ವ್ಯಕ್ತಪಡಿಸುತ್ತಾರೆ. ಇಲ್ಲಿಂದ ಪ್ರಾರಂಭವಾಗುತ್ತದೆ ಒಂದು ಶಕ್ತಿಯುತವಾದ ಜನಾಂದೋಲನ. ಕನಕದಾಸರೇ ಈ ಆಂದೋಲನಕ್ಕೆ ಪಥದರ್ಶಕರು. ದಾಸೂರಿನಿಂದ ಉಡುಪಿಯ ಕಡೆಗೆ ಕನಕದಾಸರು ಹಾಗು ಅವರ ಶಿಷ್ಯರು ಕಾಲ್ನಡಿಗೆಯಲ್ಲಿ ಸಾಗುತ್ತಾರೆ. ದಾರಿಯಲ್ಲಿರುವ ಹಳ್ಳಿಗಳಲ್ಲಿ ಇವರ ಮೇಳದಿಂದ ಆಟಗಳು ಜರಗುತ್ತಿರುತ್ತವೆ. ಈ ಆಟಗಳ ಮೂಲಕ ಕನಕದಾಸರು ತಮ್ಮ ಹೋರಾಟದ ಬಗೆಗೆ ಹೇಳುವುದಲ್ಲದೆ, ಮೂಢರೂಢಿಗಳ ವಿರುದ್ಧವೂ ಸಹ ಜಾಗೃತಿಯನ್ನು ಉಂಟು ಮಾಡುತ್ತಿರುತ್ತಾರೆ.

ಸನಾತನ ಸಂಪ್ರದಾಯವನ್ನು ಅನೂಚಾನವಾಗಿ ಮುಂದುವರಿಸಬೇಕೆನ್ನುವ ಮಠಾಧಿಪತಿಗಳು ಈ ಆಂದೋಲನದ ಕಡು ವಿರೋಧಿಗಳು. ಅವರ ಸಭೆಯನ್ನು ಎರಡನೆಯ ದೃಶ್ಯದಲ್ಲಿ ತೋರಿಸಲಾಗಿದೆ. ಮೊದಲ ದೃಶ್ಯದ ಜನಸಾಮಾನ್ಯರ ಉಡುಪು-ತೊಡಪು ಹಾಗು ಆಡುಮಾತಿನ ಧಾಟಿಗೆ ವಿರುದ್ಧವಾಗಿ, ಇಲ್ಲಿಯ ಶಿಷ್ಟರ ಆಡಂಬರದ ವೇಷಭೂಷಣಗಳು ಹಾಗು ಸಂಸ್ಕೃತಮಯ ಭಾಷಾಶೈಲಿ ಎದ್ದು ಕಾಣುತ್ತವೆ. ‘ಕನಕನ ಕಿಡಿಗೇಡಿತನ’ವನ್ನು ಹೇಗೆ ತೊಡೆದು ಹಾಕಬೇಕು ಎನ್ನುವುದೇ ಇವರ ಚರ್ಚೆಯ ವಿಷಯ. ಪ್ರಭುತ್ವವು ಸನಾತನ ಸಂಪ್ರದಾಯದ ಪರವಾಗಿಯೇ ಇರುತ್ತದೆ ಎನ್ನುವುದು ಇವರ ಅಚಲ ನಂಬುಗೆ. ಆದುದರಿಂದ ಆ ಸಮಯದಲ್ಲಿ ಅಲ್ಲಿಗೆ ಆಗಮಿಸಿದ, ರಾಜಗುರುಗಳಾದ ವ್ಯಾಸರಾಯರ ಮೂಲಕ ವಿಜಯನಗರದ ಪ್ರಭುಗಳಿಗೆ ಬಿನ್ನಹ ಸಲ್ಲಿಸಲು ಇವರು ಯೋಚಿಸುತ್ತಾರೆ. ಆದರೆ ವ್ಯಾಸರಾಯರದು ಹೆಚ್ಚು ಉದಾರವಾದಿ ಭೂಮಿಕೆ. ಅವರು ಮಠಾಧಿಪತಿಗಳ ಮನಸ್ಸನ್ನೇ ಬದಲಿಸಲು ಪ್ರಯತ್ನಿಸುತ್ತಾರೆ. ಕೊನೆಗೆ ಈ ಮಠಾಧಿಪತಿಗಳ ವಕ್ತಾರರೊಬ್ಬರು ಬನವಾಸಿಯ ಹತ್ತಿರದಲ್ಲಿದ್ದ ವಿಜಯನಗರದ ಪ್ರಭು ಕೃಷ್ಣದೇವರಾಯರನ್ನು ಕಾಣಲು ತೆರಳುತ್ತಾರೆ. ಪ್ರಭುಗಳನ್ನು ಕಂಡು ತಿರುಗಿ ಬರುವಾಗ ಕಾಡಾನೆಯ ಕೈಯಲ್ಲಿ ಸಿಲುಕಿ ಬವಣೆಗೊಳಗಾದ ಇವರನ್ನು ರಕ್ಷಿಸಿದವರು ಕನಕದಾಸರೇ! ಕನಕದಾಸರ ಮಾನವೀಯತೆಯು ಈ ಕೇಶವತೀರ್ಥರ ಮನಃಪರಿವರ್ತನೆಯನ್ನು ಮಾಡುವುದು ನಾಟಕದ ಒಂದು ಅರ್ಥಪೂರ್ಣ ಅಂಗವಾಗಿದೆ.

ಈ ಮಧ್ಯದಲ್ಲಿ ಬೇಟೆಯಾಡಲು ಬಂದಂತಹ ವಿಜಯನಗರದ ಅರಸು ಕೃಷ್ಣದೇವರಾಯನನ್ನು ಕನಕದಾಸರು ಕಾಡಿನಲ್ಲಿ ನೋಡುತ್ತಾರೆ. ಆದರೆ, ಅವನೇ ಅರಸನೆಂಬುದು ಕನಕದಾಸರಿಗೆ ತಿಳಿಯದು. ಕನಕದಾಸರ ಆಹ್ವಾನದ ಮೇರೆಗೆ ಕೃಷ್ಣದೇವರಾಯನು ಬೇಟೆಗಾರನ ವೇಷದಲ್ಲಿಯೇ ಹೋಗಿ, ಅವರು ಆಡುತ್ತಿರುವ ಆಟವನ್ನು ನೋಡುತ್ತಾನೆ. ಕನಕದಾಸರ ಆಂದೋಲನದ ನೈಜತೆಯು ಹಾಗು ಅವರಿಗಿರುವ ಸಾಮಾನ್ಯ ಜನರ ಬೆಂಬಲವು ಅವನಿಗೆ ಅಲ್ಲಿಯೇ ಅರಿವಾಗುತ್ತದೆ. ಆದರೆ ನಾಡಪ್ರಭುವಾಗಿ ಆತನು ಸಮಸ್ಯೆಯನ್ನು ಪರಿಹರಿಸುವುದು ಹೇಗೆ? ರಾಜಗುರುಗಳಾಗಿ ಹಾಗು ಕನಕದಾಸರ ಗುರುಗಳೂ ಆಗಿ ವ್ಯಾಸರಾಯರು ಇಲ್ಲಿ ಯಾವ ಪಾತ್ರವನ್ನು ವಹಿಸಿರಬಹುದು?

ಇದು ಬಹುಮಟ್ಟಿಗೆ ಕಾಲ್ಪನಿಕ ನಾಟಕ. ಕನಕದಾಸರು ವರ್ಣಭೇದದ ವಿರುದ್ಧ ಹೋರಾಡಿದ್ದು ನಿಜ. ಸಮಾಜದಲ್ಲಿಯ ಕೆಳವರ್ಗಗಳನ್ನು ಒಂದುಗೂಡಿಸಿ, ಅವರಿಗೆ ಸ್ವಾಭಿಮಾನವನ್ನು ಕಲಿಸಲು ಯತ್ನಿಸಿದ್ದು ನಿಜ. ಸಮಾಜದಲ್ಲಿ ನೆಲೆಯೂರಿದ್ದ ಮೂಢರೂಢಿಗಳನ್ನು ತೊಳೆಯಲು ಯತ್ನಿಸಿದ್ದು ನಿಜ. ಉಡುಪಿಗೆ ಹೋಗಿ ಕೃಷ್ಣದರ್ಶನ ಪಡೆಯಲು ಯತ್ನಿಸಿದ್ದು ನಿಜ. ಕನಕದಾಸರು ಒಂಟಿಯಾಗಿ ಅಥವಾ ತಮ್ಮ ಶಿಷ್ಯರ ಜೊತೆಗೆ ಗುಡಿಯಲ್ಲಿ ಪ್ರವೇಶ ಪಡೆದರೆ? ಅಥವಾ ಗೋಡೆಯಲ್ಲಿ ಕಿಂಡಿಯಾಗುವ ಮೂಲಕ ಕೃಷ್ಣವಿಗ್ರಹವೇ ಕನಕದಾಸರಿಗೆ ದರ್ಶನ ಕೊಟ್ಟಿತೆ? ಈ ಪ್ರಶ್ನೆಗಳಿಗೆ ಸಾಧಾರ ಉತ್ತರವಿಲ್ಲ. ಆದುದರಿಂದ ಈ ನಾಟಕವು ವಾಸ್ತವತೆಗಿಂತ ಹೆಚ್ಚಾಗಿ, ಸಾಮಾಜಿಕ ಆಶೋತ್ತರಗಳ ಪ್ರತೀಕವಾಗಿ ಮೂಡಿ ಬಂದಿದೆ. ಇದನ್ನು ನಾವು ಸಾಹಿತ್ಯಕ ಸತ್ಯ ಎಂದು ಕರೆಯಬಹುದು!

ಈ ಎಲ್ಲ ಕಲ್ಪನಾರಚನೆಯಲ್ಲಿ ವಾಸ್ತವಕ್ಕೆ ಅತಿ ಹತ್ತಿರವಾಗಿ ನಿಲ್ಲುವುದು ಕನಕದಾಸರ ವ್ಯಕ್ತಿತ್ವ. ದಾಸೂರಿನಿಂದ ಉಡುಪಿಯವರೆಗಿನ ವಿವಿಧ ಘಟನಾವಳಿಗಳಲ್ಲಿ ಕನಕದಾಸರ ವ್ಯಕ್ತಿತ್ವವನ್ನು ಹಂತಾನುಹಂತವಾಗಿ ಕಟ್ಟಿಕೊಡಲಾಗಿದೆ. ಸಾಮಾಜಿಕ ಉದ್ದೇಶಕ್ಕಾಗಿ ಅವರು ತೊಡುವ ಸಾತ್ವಿಕ ಹಟವನ್ನು ಮೊದಲ ದೃಶ್ಯದಲ್ಲಿಯೇ ತೋರಿಸಲಾಗಿದೆ. ತಮ್ಮ ಜೊತೆಗಾರರಿಗೆ ಅವರು ಹೇಳುವುದು ಹೀಗೆ:

.....ತುಂಗಭದ್ರಾ ತಟದಿಂದ ಪಶ್ಚಿಮ ಸಮುದ್ರದವರೆಗೆ ನಮ್ಮ ಕಾಲುಗಳ ಮೇಲೆ ನಾವು ನಡಿಯೋಣ. ಉಡುಪಿಯ
ಕೃಷ್ಣಮಂದಿರದೊಳಗೆ ಪ್ರವೇಶಿಸಿ ಶ್ರೀಕೃಷ್ಣಮೂರ್ತಿಯ ದರ್ಶನ ಪಡೆಯೋಣ. ದರ್ಶನ ಕೊಡುವವರೆಗೂ ಮಂದಿರದ ಬಾಗಿಲಿನಲ್ಲಿ ನಾನು ಅನ್ನ, ನೀರು ಬಿಟ್ಟು ಕೃಷ್ಣ-ಕೃಷ್ಣ ಜಪಿಸುತ್ತ ನಿಂತುಕೊಳ್ಳುತ್ತೇನೆ.

ಈ ಸಾತ್ವಿಕ ಹಟವನ್ನು ಕೃಷ್ಣದೇವರಾಯರ ಗುರುಗಳಾದ ವ್ಯಾಸರಾಯರೂ ಅರಿತಿದ್ದಾರೆ. ಹಟಮಾರಿ ಎಂದರೆ ಹಟಮಾರಿ ನನ್ನ ಶಿಷ್ಯ. ಈ ಗುಣದಿಂದಲೇ ನನ್ನ ಹೃದಯ ಗೆದ್ದು ಬಿಟ್ಟಿದ್ದಾನೆ. ಎಂದು ತಮ್ಮಲ್ಲಿಯೇ ಅಂದುಕೊಳ್ಳುವ ವ್ಯಾಸರಾಯರು, ಈ ಮಾತಿನ ಮೂಲಕ ಕನಕದಾಸರ ಗುಣವನ್ನು ತೋರಿಸುವದಲ್ಲದೇ, ತಮ್ಮ ಗುಣಗ್ರಾಹೀ ಸ್ವಭಾವವನ್ನೂ ತೋರಿಸುತ್ತಾರೆ.

ಕನಕದಾಸರು ತಮ್ಮ ಯಾತ್ರಾಸಂದರ್ಭದಲ್ಲಿ ಕಾಡಿನಲ್ಲಿ ಸಂಚರಿಸುವ ದೃಶ್ಯವಂತೂ ಒಂದು ಮಹತ್ವದ ದೃಶ್ಯವಾಗಿದೆ. ತಮ್ಮ ಸರ್ವಸ್ನೇಹಿ ಭಾವದಿಂದ ಕನಕದಾಸರು ಕೇಶವತೀರ್ಥರ ಮನಸ್ಸನ್ನು ಗೆಲ್ಲುವ ದೃಶ್ಯವಿದು. ಇದೇ ದೃಶ್ಯದಲ್ಲಿಯೇ, ಕನಕದಾಸರು ಮೂಢನಂಬಿಕೆಗಳ ವಿರುದ್ಧ ಹಾಗು ಕ್ಷುದ್ರ ಆರಾಧನೆಗಳ ವಿರುದ್ಧ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಘಟನೆಗಳಿವೆ.

ಕನಕಯಾತ್ರೆಯ ಮಧ್ಯದಲ್ಲಿ ಬರುವ ಆರನೆಯ ದೃಶ್ಯವು ಒಂದು ಅತ್ಯಂತ ಮಹತ್ವದ ದೃಶ್ಯ. ಸೋಂದಾ ಮಠಾಧೀಶರಾದ ವಾದಿರಾಜರು ರಚಿಸಿದ ಒಂದು ಕವನವನ್ನು ಬಳಸಿಕೊಂಡು, ಈ ದೃಶ್ಯವನ್ನು ಕಲ್ಪಿಸಲಾಗಿದೆ. ತಮ್ಮ ಯಾತ್ರಾಸಂದರ್ಭದಲ್ಲಿ ಕನಕದಾಸರು ವಿವಿಧ ಹಳ್ಳಿಗಳಲ್ಲಿ ಆಡುತ್ತಿರುವ ಆಟಗಳಲ್ಲಿ ಈ ದೃಶ್ಯದಲ್ಲಿರುವ ಆಟವೂ ಒಂದಾಗಿದೆ. ಬ್ರಾಹ್ಮಣವರ್ಗದ ಜಟಿಲ, ಕಪಟ ಆಚಾರಕ್ಕಿಂತ ಸರಳವಾದ ಪ್ರೇಮಭಾವನೆಯೇ ಭಗವಂತನಿಗೆ ಪ್ರಿಯವಾದದ್ದು ಎನ್ನುವುದನ್ನು ರೂಪಿಸುವ ವಾದಿರಾಜರ ಪದ್ಯವೇ ಇಲ್ಲಿ ಕನಕದಾಸರ ‘ಆಟ’ವಾಗಿ ಮೂಡಿದೆ. ಆದರೆ ಈ ಪ್ರಸಂಗವನ್ನು ಇಲ್ಲಿಗೇ ಮುಗಿಸದೆ, ಪುರೋಹಿತಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ಭಗವಂತನಿಗೇ ಹೇಗೆ ‘ಟೋಪಿ’ ಹಾಕಬಹುದು ಎನ್ನುವುದು ಈ ಪ್ರಸಂಗದ ಮುಂದುವರಿದ ಭಾಗವಾಗಿದೆ.

ಕೊನೆಯ ದೃಶ್ಯವನ್ನು ಲೇಖಕರು ಅದ್ಭುತವಾದ ಕಲ್ಪನಾಕುಶಲತೆಯಿಂದ ನಿರ್ವಹಿಸಿದ್ದಾರೆ. ಕೃಷ್ಣಮಂದಿರದ ಒಳಗೆ ಯುದ್ಧಸನ್ನದ್ಧ(!)ರಾಗಿ ನಿಂತ ಪುರೋಹಿತವರ್ಗ, ಹೊರಗೆ ಅಸಂಖ್ಯ ಜನಸಾಗರ. ‘ಸಂಪ್ರದಾಯ ಸೋಲಲೊಪ್ಪುವದಿಲ್ಲ, ಬಂಡಾಯ ಬಾಗಲೊಪ್ಪುವದಿಲ್ಲ’ ಎನ್ನುವಂತಹ ಪರಿಸ್ಥಿತಿ. ಕನಕದಾಸರಿಗೆ ಹಾಗು ಅವರ ಸಹವರ್ತಿಯಾದ ಅಪಾರ ಜನಸ್ತೋಮಕ್ಕೆ ಆಲಯದ ಹೊರಗಿನ ಬಯಲೇ ಮಹಾಆಲಯವಾಗಿ ಪರಿವರ್ತಿತವಾಗಿದೆ. ಈ ಸಂದರ್ಭದಲ್ಲಿ ಕೃಷ್ಣದೇವರಾಯರ ರಾಜಕೀಯ ಮುತ್ಸದ್ದಿತನ, ಗುರು ವ್ಯಾಸರಾಯರ ವಿವೇಕಮಾರ್ಗ ಹಾಗು ಕನಕದಾಸರ ಸಹನೆ ಇವೇ ಸರ್ವೋಚಿತ ಪರಿಹಾರವನ್ನು ಕಂಡುಕೊಳ್ಳಲು ಸಹಾಯಕವಾಗುತ್ತವೆ. ಆದರೆ ಇದು ಒಂದು ಕಲ್ಪಿತ ನಾಟಕದ ಒಂದು ಕಲ್ಪಿತ ಅಂತ. ಸಮಸ್ಯೆಯು ಸುಖಾಂತ ಪರಿಹಾರವನ್ನು ಕಾಣಲಿ ಎನ್ನುವ ಆಶಯ ಅಷ್ಟೇ!

ಸಾಹಿತ್ಯಕವಾಗಿ ಇನ್ನೆರಡು ಅಂಶಗಳನ್ನು ಗಮನಿಸಬೇಕು. ಮೊದಲನೆಯದಾಗಿ ಕನಕದಾಸರ ‘ರಾಮಧಾನ್ಯ’ ಕಾವ್ಯದ ಪಾತ್ರಗಳೇ ಇಲ್ಲಿಯೂ ಸಹ ವೇಷಧಾರಿಗಳಾಗಿ ರಂಗದ ಮೇಲೆ ನಿಂತಿರುವುದು. ಕನಕದಾಸರ ಅಂತರಂಗದ ಆಶಯವನ್ನು ಪ್ರೇಕ್ಷಕರ ಎದುರಿಗೆ ಇಡಲು ಇದೊಂದು ಉತ್ತಮ ಸಾಧನವಾಗಿದೆ. ಎರಡನೆಯದಾಗಿ ನಾಟಕದ ಶೀರ್ಷಿಕೆ. ‘ಆಲಯವು ಬಯಲೊಳಗೊ’ ಎನ್ನುವ ನಾಟಕಶೀರ್ಷಿಕೆಯನ್ನು ಲೇಖಕರು ಕನಕದಾಸರ ಕೀರ್ತನೆಯೊಂದರಿಂದಲೇ ಎತ್ತಿಕೊಂಡಿದ್ದಾರೆ. ಕನಕದಾಸರು ಒಂದು ತಾತ್ವಿಕ ಹಿನ್ನೆಲೆಯಲ್ಲಿ ಈ ಮುಂಡಿಗೆಯನ್ನು ರಚಿಸಿದ್ದಾರೆ. ಆದರೆ ನಾಟಕದಲ್ಲಿ ಈ ಶೀರ್ಷಿಕೆಯನ್ನು ಒಂದು ಸಾಮಾಜಿಕ ಪ್ರಶ್ನೆಯ ಸಂಕೇತವನ್ನಾಗಿ ಬಳಸಲಾಗಿದೆ. ಆಲಯವು ಧಾರ್ಮಿಕ ವ್ಯವಸ್ಥೆಯ ಸಂಕೇತವಾಗಿ ಹಾಗು ಬಯಲು ಇದು ಜನಸಾಮಾನ್ಯರ ಪ್ರತೀಕವಾಗಿ ಇಲ್ಲಿ ನಿಂದಿವೆ.

ರಂಗಸಮೀಕ್ಷೆ:
ಸಾಧಾರಣವಾಗಿ ಕಥೆ, ಕಾದಂಬರಿ ಹಾಗು ನಾಟಕಗಳನ್ನು ಕಾಲಾನುಸಾರಿ ಸರಳರೇಖೆಯಲ್ಲಿ ರಚಿಸಲಾಗುತ್ತದೆ. ಕೆಲವೊಂದು ಕಾದಂಬರಿಗಳಲ್ಲಿ ಹಾಗು ಚಲನಚಿತ್ರಗಳಲ್ಲಿ ಫ್ಲ್ಯಾಶ್‍ಬ್ಯಾಕ್ ತಂತ್ರದ ಬಳಕೆಯನ್ನು ನೋಡಬಹುದು. ಈ ನಾಟಕದಲ್ಲಿ ಮೊದಲ ದೃಶ್ಯದಲ್ಲಿ ಬರುವ ‘ಪೈರುಗಳು’ ವರ್ತಮಾನ ಕಾಲದ ಪಾತ್ರಗಳು. ಐದು ಶತಮಾನಗಳ ಹಿಂದಿನ ಕತೆಯೊಂದನ್ನು ಹೇಳಲು ರಂಗದ ಮೇಲೆ ನಿಂತಂತಹ ಪಾತ್ರಗಳು. ಇವೇ ಪಾತ್ರಗಳು ನಾಟಕ ಮುಂದುವರಿದಂತೆ ನಾಟಕದ ಪಾತ್ರಗಳೂ ಆಗುವುದು ಇಲ್ಲಿಯ ವೈಶಿಷ್ಟ್ಯವಾಗಿದೆ. ಪ್ರತಿ ದೃಶ್ಯದ ಮೊದಲಲ್ಲಿ, ಮಧ್ಯದಲ್ಲಿ ಅಥವಾ ಕೊನೆಯಲ್ಲಿ ಈ ಪೈರುಗಳು ದೃಶ್ಯದ ಆಶಯವನ್ನು ತಮ್ಮ ಕೋರಸ್ ಮೂಲಕ ವ್ಯಕ್ತಪಡಿಸುವುದು ಮತ್ತು ಅಲ್ಲಲ್ಲಿ ವಿವರಣೆ ನೀಡುವುದು ಪ್ರೇಕ್ಷಕನ ಮೇಲೆ ವಿಶೇಷ ಪರಿಣಾಮವನ್ನು ಬೀರುತ್ತದೆ. ಈ ಕೋರಸ್ ಹಾಡುಗಳು ಸಹಸಾ ಕನಕದಾಸರ ಭಜನೆಗಳೇ ಆಗಿವೆ. ಆದುದರಿಂದ ಆ ಭಜನೆಗಳು ಕನಕದಾಸರ ವೈಯಕ್ತಿಕ ಪ್ರಾರ್ಥನೆಯಂತೆ ತೋರದೆ, ಜನತೆಯ ಒಡಲ ಒರಲಿನಂತೆ ಭಾಸವಾಗುತ್ತವೆ. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎನ್ನುವ ಕನಕದಾಸರ ಗೀತೆಯನ್ನು ಮೂರು ಭಾಗಗಳನ್ನಾಗಿ ವಿಭಜಿಸಿ ಮೂರು ಭಿನ್ನ ದೃಶ್ಯಗಳಲ್ಲಿ ಬಳಸಿದ್ದನ್ನು ಇದರ ನಿದರ್ಶನವನ್ನಾಗಿ ನೋಡಬಹುದು. ನಾಟಕದ ಆಶಯವನ್ನು ಪುನಃ ಪುನಃ ಆವರ್ತಿಸುವ ಕಾರ್ಯಕ್ಕಾಗಿ (motif) ಪ್ರತಿ ದೃಶ್ಯದಲ್ಲಿಯೂ ಈ ಪೈರುಗಳನ್ನು ಬಳಸಲಾಗಿದೆ. ಈ ನಾಟಕದಲ್ಲಿ ಇದೊಂದು ಅತ್ಯಂತ ಉಪಯುಕ್ತ ಹಾಗು ಯಶಸ್ವಿ ರಂಗತಂತ್ರವಾಗಿದೆ.  ಪೈರುಗಳ ಪಾತ್ರಗಳನ್ನು ಚಿಕ್ಕ ಮಕ್ಕಳೇ ಆಡುವುದರಿಂದ ಹಾಗು ವರ್ತಮಾನ ಮತ್ತು ಐತಿಹಾಸಿಕ ಕಾಲಗಳೆರಡರಲ್ಲೂ ಪೈರುಗಳು ಕಾಣಿಸಿಕೊಳ್ಳುವುದರಿಂದ, ಈ ಪಾತ್ರಗಳು ನಾಟಕದಲ್ಲಿಯ ಚಾರಿತ್ರಿಕ ಪಾತ್ರಗಳಿಗಿಂತ ಭಿನ್ನವಾಗಿ ಕಾಣುತ್ತ, ನಾಟಕದ ಕಾಲವನ್ನು ಮೀರಿದ ಸಾರ್ವಕಾಲಿಕತೆಯನ್ನು ಮೈಗೂಡಿಸಿಕೊಳ್ಳುತ್ತವೆ.

ಕನಕದಾಸರ ಆಂದೋಲನದ ಐದು ಶತಮಾನಗಳ ನಂತರ ಮಹಾತ್ಮಾ ಗಾಂಧಿಯವರ ಸಾಮಾಜಿಕ ಹಾಗು ರಾಜಕೀಯ ಚಳುವಳಿಗಳು ನಡೆದವು. ಎರಡೂ ಆಂದೋಲನಗಳ ನಡುವೆ ಅನೇಕ ಸಾಮ್ಯಗಳಿವೆ. ಪ್ರಾಥಮಿಕ ಹೋಲಿಕೆ ಎಂದರೆ ಇವೆರಡೂ ಹೋರಾಟಗಳು ಸಾಮಾನ್ಯ ಜನರ ಮೂಲಭೂತ ಹಕ್ಕಿಗಾಗಿ ನಡೆದಂತಹ ಹೋರಾಟಗಳು.
(ನಮ್ಮ ಸಂಕಟ ಅರ್ಥ ಮಾಡಿಕೊಳ್ಳಿ ಗುರುಗಳೇ. ನಮಗೆ ವಿದ್ಯೆಯ ಅಧಿಕಾರವಿಲ್ಲ, ಶಾಸ್ತ್ರಜ್ಞಾನದ ಅಧಿಕಾರವಿಲ್ಲ, ವಿಗ್ರಹದರ್ಶನದ ಅಧಿಕಾರವೂ ಇಲ್ಲವಲ್ಲ.)

ಈ ಎರಡೂ ಆಂದೋಲನಗಳ ಮುಂದಾಳುಗಳು ಸತ್ಯ, ಅಹಿಂಸೆ ಹಾಗು ಸರ್ವಪ್ರೇಮದಲ್ಲಿ ನಂಬಿಕೆ ಇಟ್ಟವರಾದರೆ, ಎರಡೂ ಆಂದೋಲನಗಳ ಸಹವರ್ತಿಗಳು ದುರ್ಬಲ ಜನವರ್ಗ. ಈ ಸಾಮ್ಯವನ್ನು ಬಿಂಬಿಸಲೆಂದೇ ನಾಟಕದಲ್ಲಿ ಗಾಂಧೀಜಿಯವರ ಆಂದೋಲನವನ್ನು ಹಾಗು ಅವರ ಸಹವರ್ತಿಗಳನ್ನು ನೆನಪಿಗೆ ತರುವ ಕೆಲವು ಕ್ರಮಗಳನ್ನು ಬಳಸಲಾಗಿದೆ. ದಾಸೂರಿನಿಂದ ಉಡುಪಿಯವರೆಗಿನ ಕನಕದಾಸರ ಕಾಲ್ನಡಿಗೆಯು ಗಾಂಧೀಜಿಯವರ ದಂಡೀಯಾತ್ರೆಯನ್ನು ನೆನಪಿಸಿದರೆ, ಹಳ್ಳಿಹಳ್ಳಿಗಳಲ್ಲಿ ಅವರು ಜರುಗಿಸುತ್ತಿದ್ದ ‘ಆಟ’ಗಳು ಗಾಂಧೀಜಿಯವರ ಪ್ರಾರ್ಥನಾಸಭೆಗಳನ್ನು , ನೆನಪಿಸುತ್ತವೆ. ಅದರಂತೆಯೇ ಕೃಷ್ಣದರ್ಶನಕ್ಕೆ ಬಂದಂತಹ ಜನತೆಯ ಮೇಲೆ ಆಕ್ರಮಣ ಮಾಡಲು ಬ್ರಾಹ್ಮಣ ವಟುಗಳು ಸಿದ್ಧರಾದಾಗ ‘ಪೈರು’ಗಳು ಹಾಡುವ, ವೈಷ್ಣವನೆಂಥವ, ಎಂಥವ ವೈಷ್ಣವ, ಕರಗುವನನ್ಯರ ನೋವಿನಲಿ ಎನ್ನುವ ಭಜನೆಯು ಗಾಂಧೀಜಿಯವರಿಗೆ ಅತ್ಯಂತ ಪ್ರಿಯವಾದ ವೈಷ್ಣವ ಜನತೋ ತೇನೆ ಕಹಿಯೆ ಎನ್ನುವ ಪ್ರಾರ್ಥನೆಯ ಶಬ್ದಾನುವಾದವೇ ಆಗಿದೆ. ಈ ಸಮಯದಲ್ಲಿ ಕನಕದಾಸರು ತಮ್ಮ ಅನುವರ್ತಿಗಳಿಗೆ ಹೇಳುವ ಮಾತುಗಳೇನು?
ಯಾರ ಮೇಲೂ ಕೈಯೆತ್ತಬೇಡಿ. ನಿಮಗೆ ಶ್ರೀಕೃಷ್ಣನ ಮೇಲೆ ಆಣೆ. ಸಿಟ್ಟು, ಕೋಪಗಳೇ ಯಾವ ತೀರ್ಥಗಳೂ ತೊಳೆಯಲಾರದ ಮೈಲಿಗೆಗಳು..............ಬರ್ರಿ, ದಶಾವತಾರ ಕುಣಿಯೋಣ, ನಾವು ನಿಂತಿರುವ ಬಯಲನ್ನೇ ಭಗವಂತನ ಆಲಯ ಮಾಡೋಣ. ಈ ಮಾತುಗಳೂ ಸಹ ಗಾಂಧೀಜಿಯವರು ತಮ್ಮ ಅಹಿಂಸಾತ್ಮಕ ಚಳುವಳಿಯಲ್ಲಿ ಭಾಗವಹಿಸುತ್ತಿದ್ದವರಿಗೆ ಕೊಡುವ ಕರೆಯನ್ನೇ ಹೋಲುತ್ತವೆ.

ಹೋರಾಟದಿಂದ ಪ್ರಾರಂಭವಾಗಿ ಹೋರಾಟದಲ್ಲಿಯೇ ಕೊನೆಯಾಗುವ ಈ ನಾಟಕದ ಮಧ್ಯದಲ್ಲಿ ಬರುವ ಆರನೆಯ ವಿನೋದಪೂರ್ಣ ದೃಶ್ಯವು ಅತ್ಯಂತ ಮಹತ್ವದ ದೃಶ್ಯವಾಗಿದೆ. ಸೋಂದೆಯ ಮಠಾಧೀಶರಾದ ವಾದಿರಾಜ ಸ್ವಾಮಿಗಳು ರಚಿಸಿದ ಹಾಡನ್ನು ಕನಕದಾಸರು ಆಡಿಸುವ ‘ಆಟ’ದಲ್ಲಿ ಇಲ್ಲಿ ಬಳಸಿಕೊಳ್ಳಲಾಗಿದೆ. ಗೋಕುಲದಲ್ಲಿ ಬಾಲಕೃಷ್ಣನ ಲೀಲೆಯನ್ನು ತೋರಿಸುತ್ತಲೇ, ‘ಮಡಿ, ಮೈಲಿಗೆ’ ಎನ್ನುವ ಸಾಂಪ್ರದಾಯಕ ರೂಢಿಗಳನ್ನು ಲೇವಡಿ ಮಾಡುತ್ತಲೇ, ಭಗವಂತನು ಅವ್ಯಾಜ ಪ್ರೀತಿಗೆ ಒಲಿಯುತ್ತಾನೆ ಎನ್ನುವ ವಾದಿರಾಜರ ಸಂದೇಶವನ್ನು ಇಲ್ಲಿ ನೀಡಲಾಗಿದೆ. ಈ ವಿನೋದದ ಜೊತೆಗೇ, ಬಾಲಕೃಷ್ಣನ ವಿಗ್ರಹಲಕ್ಷಣಗಳನ್ನು ಗುರುತಿಸುತ್ತ ಸುತ್ತಲೂ ಮಂದಿರವನ್ನು ಕಟ್ಟುವ ಪುರೋಹಿತವರ್ಗದ ಸ್ವಾರ್ಥಮೂಲ ಪ್ರಯತ್ನವನ್ನು ಲೇಖಕರು ಕಟುವ್ಯಂಗ್ಯದಲ್ಲಿ ನಿರೂಪಿಸಿದ್ದಾರೆ. ಈ ದೃಶ್ಯದಲ್ಲಿ ನಂದಗೋಕುಲದಿಂದ ಕೆಳದಿಗೆ ಬದಲಾಗುವ ಕಾಲದ ಜಿಗಿತವು ಅಪೂರ್ವವಾದ ರಂಗತಂತ್ರವಾಗಿದೆ.

ಈ ದೃಶ್ಯದ ಮಹತ್ವದ ಗುಣವೆಂದರೆ ಇದು ನೀಡುವ ‘ವಿನೋದದ ಮಧ್ಯಾಂತರ’ವಾಗಿದೆ. ಪ್ರೇಕ್ಷಕರು ಒಂದು ಗಂಭೀರ ನಾಟಕವನ್ನು ಅರಗಿಸಿಕೊಳ್ಳುತ್ತಿರುವ ಸಮಯದಲ್ಲಿ ಇಂತಹ ಒಂದು ‘ರಿಲೀಫ್’ ಅವಶ್ಯಕ ಎನ್ನಬಹುದು. ಹಾಗೆಂದು ಈ ದೃಶ್ಯದ ಉಪಯೋಗ ವಿನೋದಕ್ಕೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಆಟವಾಡಿದ ಬಾಲಕೃಷ್ಣನು ನಾಟಕದ ಕೊನೆಯ ದೃಶ್ಯದವರೆಗೂ ಆಟವಾಡಿದ್ದಾನೆ. ಕೃಷ್ಣವಿಗ್ರಹದ ಬದಲು ಈ ಬಾಲನನ್ನೇ ಕನಕದಾಸರು ಕೊನೆಯಲ್ಲಿ ಅಪ್ಪಿ ಮುದ್ದಾಡುತ್ತಾರೆ. ಬಾಲಕೃಷ್ಣನ ಪ್ರವೇಶವೇ ಈ ದೃಶ್ಯದ ಮುಖ್ಯ ಅಗತ್ಯವಾಗಿದೆ!

ಇನ್ನು ಸಂಪ್ರದಾಯಕ್ಕೂ ಬಂಡಾಯಕ್ಕೂ ತಿಕ್ಕಾಟ ನಡೆದಾಗ, ಪ್ರಭುತ್ವದ ನಡೆ ಏನು? ಈ ಸಮಸ್ಯೆಗೆ ವಿಜಯನಗರದ
ಸಿಂಹಾಸನಾಧೀಶ್ವರನಾದ ಕೃಷ್ಣದೇವರಾಯನು ನೀಡುವ ಉತ್ತರ ಹೀಗಿದೆ:
ಧಾರ್ಮಿಕ ಪ್ರಶ್ನೆಯಲ್ಲಿ ರಾಜಾಜ್ಞೆ ಹೊರಡಿಸುವುದು ನೀವು ಹೇಳುವಷ್ಟು ಸರಳವಲ್ಲ, ಕೇಶವತೀರ್ಥರೇ. ರಾಜ ಸರ್ವಶಕ್ತನಲ್ಲ. ಸಂಪ್ರದಾಯವೇ ಬಲಶಾಲಿ. ಸಂಪ್ರದಾಯ ರಾಜನಿಗೆ ಆಧೀನವಾಗಿಲ್ಲ. ಯುಗಯುಗಗಳಿಂದ ಬಲಿತು ನಿಂತಿರುವ ಸಂಪ್ರದಾಯವನ್ನು ಒಂದು ರಾಜಾಜ್ಞೆ ಮಣಿಸಬಲ್ಲದೆ? ಈಗ ಅಗತ್ಯವಿರುವದು ರಾಜಾಜ್ಞೆಯಲ್ಲ, ರಾಜನೀತಿ.....

ಸಮಾಜದ ವಿವಿಧ ಮೂಲಶಕ್ತಿಗಳ ಎದುರಿಗೆ ತಾನು ನಿಜವಾಗಿಯೂ ದುರ್ಬಲನು ಎನ್ನುವುದನ್ನು ಸಾರ್ವಭೌಮನು ಅರಿತಿರುತ್ತಾನೆ. ಆದರೂ ಸಹ ತಾನೇ ಸರ್ವಶಕ್ತನು ಎನ್ನುವ ಭ್ರಮೆಯನ್ನು ಆತನು ಪ್ರಜೆಗಳಲ್ಲಿ ನೆಲೆಯೂರಿಸಬೇಕಾಗುತ್ತದೆ. ಇದೇ ರಾಜನೀತಿ! ಈ ನಾಟಕದಲ್ಲಿಯೂ ಸಹ ಈ ಕೃಷ್ಣತಂತ್ರವನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲಾಗಿದೆ. ಬೇಟೆಗಾರನ ವೇಷದಲ್ಲಿದ್ದ ಕೃಷ್ಣದೇವರಾಯನು ತನ್ನ ಗುಟ್ಟನ್ನು ಕನಕದಾಸರಿಗೆ ಬಿಟ್ಟುಕೊಡುವುದಿಲ್ಲ. ಆದರೆ ಕನಕದಾಸರು ಹೋದ ಬಳಿಕ ಪರದೆಯ ಹಿಂದಿನಿಂದ ಸಿಂಹನಾಧೀಶ್ವರನ ನೆರಳು ಎತ್ತರವಾಗಿ ಬೆಳೆಯುತ್ತ ನಿಲ್ಲುವುದು, ಹಾಗು ರಾಯನ ಪರಾಕುಗಳು ಮೊಳಗುವವು. ಕೊನೆಯ ದೃಶ್ಯದಲ್ಲಿ ಇದೇ ಎತ್ತರದ ನೆರಳು ಕನಕದಾಸರಿಗೆ ತಲೆವಾಗುತ್ತದೆ. ಒಂದೇ ಒಂದು ದೃಶ್ಯದಲ್ಲಿ ಬರುವ ಹಾಗು ಮಾರುವೇಷದಲ್ಲಿ ಕಾಣಿಸಿಕೊಳ್ಳುವ ವಿಜಯನಗರದ ರಾಯನು ನಾಟಕದಲ್ಲಿ ಪ್ರಭಾವಿ ಪಾತ್ರವಾಗಿ ಹೊರಹೊಮ್ಮಿದ್ದಾನೆ. ರಾಜನೀತಿ ಹಾಗು ಸಮಾಜನೀತಿಗಳ ತಿಳಿವು ನೀಡುವ ರಾಯನ ವ್ಯಕ್ತಿಚಿತ್ರವು ನಾಟಕಕ್ಕೆ ಮಹತ್ವದ ಕೊಡುಗೆಯಾಗಿದೆ.

ಕನಕದಾಸರ ಅನುವರ್ತಿಗಳಾಗಿ ಬರುವ ಶಿವಪ್ಪ, ಭರಮಪ್ಪ, ಹನುಮಪ್ಪ, ಕೋಡಂಗಿ ಇವರೆಲ್ಲರೂ ನಾಟಕದಲ್ಲಿ ಮೊದಲಿನಿಂದ ಕೊನೆಯವರೆಗೂ ಇದ್ದು, ಕನಕದಾಸರ ವ್ಯಕ್ತಿತ್ವವನ್ನು ಪ್ರೇಕ್ಷಕರ ಎದುರಿಗೆ ಬಿಚ್ಚಿಡುವದರಲ್ಲಿ ಸಹಾಯಕರಾಗಿದ್ದಾರೆ. ಕೇಶವತೀರ್ಥರು ಪ್ರತಿಷ್ಠಿತ ಸಂಪ್ರದಾಯದ ಪ್ರತಿನಿಧಿಗಳಾಗಿ ರಂಗಪ್ರವೇಶ ಮಾಡಿದವರು, ಕನಕದಾಸರ ಮಾನವಪ್ರೇಮದಲ್ಲಿ ಮಿಂದು ಕೊನೆಗೆ ಬದಲಾದ ಮನುಷ್ಯರಾಗಿ ನಾಟಕಕ್ಕೆ ಕಳೆ ಕಟ್ಟಿದ್ದಾರೆ.

ವ್ಯಾಸರಾಯರ ಪಾತ್ರವು ರಂಗದಲ್ಲಿ ಚಿಕ್ಕದು. ಆದರೆ ನಿರ್ಣಾಯಕ ಸಮಯದಲ್ಲಿ ಬಲು ದೊಡ್ಡದು. ಕೃಷ್ಣದೇವರಾಯನದು ರಾಜಪ್ರಭುತ್ವವಾದರೆ, ವ್ಯಾಸರಾಯರದು ಧರ್ಮಪ್ರಭುತ್ವ. ಆದರೆ ಈ ಇಬ್ಬರೂ ಪ್ರಭುಗಳು ಪಟ್ಟಭದ್ರ ಸಮಾಜದ ಎದುರಿಗೆ ನಿಸ್ಸಹಾಯಕರು; ವ್ಯವಸ್ಥೆಯ ವಿರೋಧಿಯಾದ ಕ್ರಾಂತಿಯು ಎಷ್ಟೇ ನ್ಯಾಯಯುತವಾಗಿದ್ದರೂ ಸಹ ಸಮಾಜವನ್ನು, ಆಮೂಲಕ ರಾಜ್ಯವನ್ನು ವಿಚ್ಛಿದ್ರ ಮಾಡಬಲ್ಲದು ಎನ್ನುವ ಅರಿವಿನಿಂದ ಹಿಂಜರಿಯುವವರು.

ಈ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಧೈರ್ಯ ಹಾಗು ಹಟ ಇರುವುದು ಕನಕದಾಸರಿಗೆ ಮಾತ್ರ. ನಾಟಕದ ತುಂಬೆಲ್ಲ ಅರ್ಥಪೂರ್ಣವಾಗಿ ವ್ಯಾಪಿಸುವ ಪಾತ್ರವೆಂದರೆ ಇವರದೇ. ಭಾರತೀಯ ದರ್ಶನಗಳಲ್ಲಿ ‘ತಿತಿಕ್ಷೆ’ ಎನ್ನುವ ಪದ ಬರುತ್ತದೆ. ನಿಮಗೆ ಕೇಡು ಮಾಡಿದವರನ್ನೂ ಸಹ ಪ್ರೀತಿಸು ಹಾಗು ಅವರಿಗೆ ಹೃತ್ಪೂರ್ವಕವಾಗಿ ಒಳಿತನ್ನೇ ಆಶಿಸು ಎನ್ನುವುದು ಈ ಪದದ ತಿರುಳು. ಕನಕದಾಸರು ಈ ಪದದ ಸಾರ್ಥಕ ಮೂರ್ತಿಯಾಗಿ ಈ ನಾಟಕದಲ್ಲಿ ಹೊಮ್ಮಿದ್ದಾರೆ. ತಮ್ಮನ್ನು ಹತ್ತಿಕ್ಕಲು ರಾಜನಿಗೆ ದೂರು ಕೊಟ್ಟು ಬಂದಂತಹ ಕೇಶವತೀರ್ಥರ ಪ್ರಾಣವನ್ನು ಉಳಿಸಿ, ಅವರನ್ನು ಕಾವಡಿಯಲ್ಲಿ ಹೊತ್ತುಕೊಂಡು ಹೋಗುವ ಸಂದರ್ಭವು ಈ ಮಾತಿಗೆ ಸಮುಚಿತ ನಿದರ್ಶನವಾಗಿದೆ. ಅಲ್ಲಿಯೂ ಸಹ ಅವರ ಸಹಚರರು ಬಳಲಿದಾಗ, ಅವರು ಹೇಳುವ ಮಾತು ಎಂತಹದು!

ಕಾಲುಗಳು ಸೋತಾಗ
ಕಣ್ಣುಗಳು ಎಳೆವಾಗ
.......................
......................
ಕೃಷ್ಣಾ ಎನಬಾರದೇ!

ಸಮಾರೋಪ:
ಕನಕದಾಸರ ಯಾತ್ರೆಯ ಅಂತ್ಯವು ವಾಸ್ತವಿಕವಾಗಿ ಏನಾಯಿತು ಎನ್ನುವುದಕ್ಕೆ ಐತಿಹಾಸಿಕ ದಾಖಲೆಗಳಿಲ್ಲ. ಗೋಡೆಯಲ್ಲಿ ಕಿಂಡಿ ಬಿಟ್ಟು ಕೃಷ್ಣದರ್ಶನವಾಗಿದ್ದು ಪವಾಡವೇ ಅಥವಾ ಕನಕದಾಸರ ಪರಮಾನಸ ಶಕ್ತಿಯ ಪರಿಣಾಮವೆ? ಇದನ್ನು ನಂಬುವುದಾದರೂ ಹೇಗೆ? ಇದಕ್ಕೆ ಪರ್ಯಾಯವಾಗಿ, ವಾದಿರಾಜರ ಸಲಹೆಯ ಮೇರೆಗೆ, ದೇವಸ್ಥಾನದ ಅರ್ಚಕಗಣವೇ ಗೋಡೆಯಲ್ಲಿ ಕಿಂಡಿ ಮಾಡಿ, ಕನಕದಾಸರಿಗೆ ಉತ್ಸವಮೂರ್ತಿಯ ದರ್ಶನ ಮಾಡಿಸಿದರು ಎನ್ನುವ ಪ್ರತಿಪಾದನೆಯೂ ಇದೆ. ಲೇಖಕರು ಮಾತ್ರ ಇಲ್ಲಿ ಜಾಣ್ಮೆ ಹಾಗು ಮಾನವೀಯತೆ ತುಂಬಿದ ಪರಿಹಾರವನ್ನು ಕಾಣಿಸಿದ್ದಾರೆ. ತಮ್ಮ ಹಟವು ತಮಗೇ ತಿರುಗುಬಾಣವಾಗುವುದನ್ನು ಅರ್ಥ ಮಾಡಿಕೊಂಡ ದೇವಾಲಯದ ವ್ಯವಸ್ಥಾಪಕವರ್ಗವು, ವ್ಯಾಸರಾಯರ ಸಲಹೆಯ ಮೇರೆಗೆ ಕನಕದಾಸರಿಗೆ ಕೃಷ್ಣದರ್ಶನಕ್ಕೆ ಅನುಮತಿ ನೀಡುತ್ತದೆ. ಕೃಷ್ಣಮೂರ್ತಿಗೆ ಅಡ್ಡವಾಗಿದ್ದ ಪಡದೆ ತಟ್ಟನೆ ಕೆಳಗೆ ಬೀಳುತ್ತದೆ. ಆದರೆ ಗುಡಿಯ ಒಳಗೆ ಕಾಲಿಡದ ಕನಕದಾಸರು ‘ಮಾನವರೂಪೀ ಬಾಲಕೃಷ್ಣ’ನನ್ನೇ ಕರೆದು ಮುದ್ದಾಡುತ್ತಾರೆ. ಇಲ್ಲಿಗೆ ನಾಟಕವು ಕೊನೆಯಾಗುತ್ತದೆ.

ನಾಟಕದ ಅಂತ್ಯದಲ್ಲಿ ಬರುವ ಕನಕದಾಸರ ಹಾಡು ಅತ್ಯಂತ ಮಹತ್ವದ ಹಾಗು ಅರ್ಥಪೂರ್ಣ ಹಾಡಾಗಿದೆ. ಯಾಕೆಂದರೆ ಇದು ಕನಕದಾಸರ ಅನೇಕ ಕೀರ್ತನೆಗಳಂತೆ ಶಿಷ್ಟ ಭಾಷೆಯಲ್ಲಿರದೆ, ಹಳ್ಳಿಗರ ಆಡುನುಡಿಯಲ್ಲಿಯೇ ಇದೆ:
ದ್ಯಾವಿ ನಮ್ಮ ದ್ಯಾವರು ಬಂದಾರು ಬನ್ನಿರೇ.

ಕನಕದಾಸರನ್ನು ಹಿಂಬಾಲಿಸಿದ ನಿರ್ಬಲ ಜನವರ್ಗಕ್ಕೆ ಕೊನೆಗೂ ದೇವರು ಸಿಗುತ್ತಾನೆ. ಆದರೆ ಈ ದೇವರು ಕಲ್ಲಿನ ಮೂರ್ತಿಯಲ್ಲ. ಇವನು ಬಾಲರೂಪದ ಪ್ರೇಮಪುತ್ಥಳಿ! ಇದು ಶಿಷ್ಟವರ್ಗಕ್ಕೆ ಕನಕದಾಸರು ಕೊಡುವ ಆಹ್ವಾನವೂ ಹೌದು, ಪ್ರೇಮದ ಸಂದೇಶವೂ ಹೌದು.

ಪ್ರತಿಷ್ಠಿತ ಜನವರ್ಗ ಹಾಗು ಶೋಷಿತ ಜನವರ್ಗಗಳ ನಡುವೆ ಪ್ರಾಚೀನ ಕಾಲದಿಂದಲೂ ಸಂಘರ್ಷವು ನಡೆಯುತ್ತಲೇ ಇದೆ. ಕನಕದಾಸರ ಆಂದೋಲನವೂ ಸಹ ಅಂತಹ ಒಂದು ಹೋರಾಟ. ಈ ಹೋರಾಟವನ್ನು ಐತಿಹಾಸಿಕ ಹಿನ್ನೆಲೆಯಲ್ಲಿ ಚಿತ್ರಿಸುವಲ್ಲಿ, ಅದರಂತೆಯೇ ಇಪ್ಪತ್ತನೆಯ ಶತಮಾನದಲ್ಲಿ ನಡೆದ ಗಾಂಧೀಜಿಯವರ ಹೋರಾಟಕ್ಕೂ, ಈ ಐತಿಹಾಸಿಕ ಹೋರಾಟಕ್ಕೂ ಇರುವ ಸಾಮ್ಯವನ್ನು ಗ್ರಹಿಸುವಲ್ಲಿ ಮತ್ತು ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಾಟಕವು ಸಂಪೂರ್ಣವಾಗಿ ಸಫಲವಾಗಿದೆ. ಆಮೂಲಕ ಮಾನವೀಯ ಹೋರಾಟಗಳ ಕೆಚ್ಚನ್ನು ಹಾಗು ಅದರ ಸಾರ್ವಕಾಲಿಕತೆಯನ್ನು ಇಲ್ಲಿ ಗುರುತಿಸಲಾಗಿದೆ. ಇಂತಹ ಒಂದು ಕಲಾಪೂರ್ಣ, ಶಕ್ತಿಯುತ ನಾಟಕವನ್ನು ನೀಡಿದ್ದಕ್ಕಾಗಿ ಲೇಖಕರಿಗೆ ಅಭಿನಂದನೆಗಳು.

Thursday, December 27, 2012

ಅತ್ಯಾಚಾರೀ ಸಮಾಜ ಹಾಗು ಪರಿಹಾರದ ಹಕ್ಕು


ಈಗಿನ ಭಾರತೀಯ ಸಮಾಜವು ಅತ್ಯಾಚಾರೀ ಸಮಾಜವಾಗಿದೆ. ಸ್ತ್ರೀಯರ ಮೇಲಿನ ದೌರ್ಜನ್ಯದ ಹಾಗು ಸಾರ್ವಜನಿಕ ಅಪಮಾನದ ಸಮಾಚಾರಗಳು ಪ್ರತಿದಿನವೂ ಪತ್ರಿಕೆಯಲ್ಲಿ ಬರುತ್ತಲೇ ಇವೆ. ಈ ದುಷ್ಕೃತ್ಯಗಳನ್ನು ಮಾಡುವ ನೀಚರನ್ನು ಗಲ್ಲಿಗೇರಿಸಬೇಕು ಎನ್ನುವ ಬೇಡಿಕೆಯು ಸರಿಯಾದದ್ದೇ. ಕೊಲೆಯಾದವನ ಯಾತನೆಯು ಒಂದೇ ಸಲಕ್ಕೆ ಮುಗಿಯುತ್ತದೆ. ಆದರೆ ಅತ್ಯಾಚಾರಕ್ಕೊಳಗಾದ ಸ್ತ್ರೀಯು ಪ್ರತಿದಿನವೂ ಮಾನಸಿಕ ಹಾಗು ಸಾಮಾಜಿಕ ಯಾತನೆಯನ್ನು ಅನುಭವಿಸುತ್ತಾಳೆ. ಆದುದರಿಂದ ಅತ್ಯಾಚಾರಿಗಳನ್ನು ಗಲ್ಲಿಗೇರಿಸುವ ಶಿಕ್ಷೆ ಸಮರ್ಪಕ ಶಿಕ್ಷೆಯಾಗಿದೆ. ಇಷ್ಟೇ ಸಾಲದು. ಅತ್ಯಾಚಾರಕ್ಕೊಳಗಾದ ಸ್ತ್ರೀಗೆ ಅಪರಾಧಿಯು ಭಾರೀ ಪರಿಹಾರವನ್ನು ನೀಡಬೇಕು. ಈ ಪರಿಹಾರವನ್ನು ನೀಡುವ ಆರ್ಥಿಕ ಸಾಮರ್ಥ್ಯ ಅವನಲ್ಲಿ ಇಲ್ಲದಿದ್ದರೆ, ಸರಕಾರವೇ ಆ ಮೊತ್ತವನ್ನು ಭರಿಸಬೇಕು.

ಒಂದು ಕೂಸು ಹುಟ್ಟಿದ ಗಳಿಗೆಯಲ್ಲಿ, ಅದು ಸರ್ವತಂತ್ರ ಸ್ವತಂತ್ರ ಜೀವಿಯಾಗಿರುತ್ತದೆ. ಆದರೆ ಸಾಮಾಜಿಕ ಕಟ್ಟುಪಾಡುಗಳಿಗೆ ಒಳಪಟ್ಟ ಕ್ಷಣದಿಂದ, ಆ ಜೀವಿಯ ಸ್ವಾತಂತ್ರ್ಯ ನಷ್ಟವಾಗುತ್ತದೆ. ಉದಾಹರಣೆಗೆ, ಸ್ವತಂತ್ರ ಜೀವಿಯು ಕಾಡಿಗೆ ಹೋಗಿ, ಬೇಟೆಯಾಡಿ ಹೊಟ್ಟೆ ತುಂಬಿಸಿಕೊಳ್ಳಬಹುದು. ತನ್ನನ್ನು ಕಾಡುವ ವೈರಿಗಳನ್ನು ಕೊಂದು ಹಾಕಬಹುದು. ಆದರೆ, ಸಾಮಾಜಿಕ ಕಟ್ಟುಪಾಡುಗಳಿಗೆ ಒಳಗಾಗುವ ಅನಿವಾರ್ಯತೆಯಿಂದಾಗಿ ಇಂತಹ ಸ್ವಾತಂತ್ರ್ಯ ಹೊರಟುಹೋಗುತ್ತದೆ. ಅದರ ಬದಲಾಗಿ ಆ ಜೀವಿಗೆ ಕೆಲವೊಂದು ಹಕ್ಕುಗಳು ಲಭಿಸುತ್ತವೆ. ದುರಾಚಾರದಿಂದ ರಕ್ಷಣೆ ಪಡೆಯುವುದು ಪ್ರತಿಯೋರ್ವ ಜೀವಿಯ ಹಕ್ಕು ಹಾಗು ರಕ್ಷಣೆ ಕೊಡುವುದು ಸರಕಾರದ ಹೊಣೆಗಾರಿಕೆ. ರಕ್ಷಣೆ ಸಾಧ್ಯವಾಗದಿದ್ದರೆ, ಸಮುಚಿತ ಪರಿಹಾರವನ್ನು ಕೊಡಲೇಬೇಕು. ಅದು ಸರಕಾರದ ಕರ್ತವ್ಯ.

ಅತ್ಯಾಚಾರಿಗಳಿಗೆ ಶಿಕ್ಷೆ ಹಾಗು ದೌರ್ಜನ್ಯಪೀಡಿತರಿಗೆ ಪರಿಹಾರ ನೀಡುವದಷ್ಟೇ ಸಾಲದು. ಭಾರತೀಯ ಸಮಾಜದಲ್ಲಿ ಅತ್ಯಾಚಾರಗಳು ಏಕೆ ಹೆಚ್ಚಾಗುತ್ತಿವೆ ಎನ್ನುವುದನ್ನು ಅರಿತು, ಆ ಸಮಸ್ಯೆಯನ್ನು ಬಗೆಹರಿಸುವುದು ಅವಶ್ಯಕವಾಗಿದೆ. ಸಮಸ್ಯೆಯ ಕಾರಣವಂತೂ ಸ್ಪಷ್ಟವಾಗಿದೆ. ನಮ್ಮ ಸಮಾಜವು ತನ್ನ ತರುಣರಿಗೆ ತಪ್ಪು ಹಾದಿಯನ್ನು ತೋರಿಸುತ್ತಿದೆ. ನೈತಿಕ ಹಾಗು ಸಾಮಾಜಿಕ ಆದರ್ಶಗಳು ಮಾಯವಾಗಿವೆ. ಟೀವಿ ಹಾಗು ಸಿನೆಮಾಗಳಲ್ಲಿ ಆಶ್ಲೀಲತೆ ಹಾಗು ಮಿತಿಮೀರಿದ ಕ್ರೌರ್ಯದ ಪ್ರದರ್ಶನವಾಗುತ್ತಿದೆ.  ನಮ್ಮ ಶಾಸಕರಲ್ಲಿ ಶೇಕಡಾ ೩೦ರಷ್ಟು ಶಾಸಕರು ಒಂದಿಲ್ಲ ಒಂದು ನಮೂನೆಯ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಮ್ಮ ರಾಜಕೀಯ ಬಲದಿಂದಾಗಿ ಅನೇಕ ರಾಜಕಾರಣಿಗಳ ಅಪರಾಧಗಳು ಮುಚ್ಚಿ ಹೋಗುತ್ತಿವೆ. ಈ ನಾಯಕರೇ ನಮ್ಮ ತರುಣರಿಗೆ ಮಾದರಿಯಾಗಿದ್ದಾರೆ! ಹೀಗಿದ್ದಾಗ ನಮ್ಮ ಸಮಾಜವು ಅತ್ಯಾಚಾರೀ ಸಮಾಜವಾಗಿ ಬದಲಾದದ್ದರಲ್ಲಿ ಆಶ್ಚರ್ಯವೇನಿದೆ? ಯಥಾ ರಾಜಾ ತಥಾ ಪ್ರಜಾ!

ಗ್ಯಾಂಗ್‍ರೇಪ್‍ನಂತಹ ಅತ್ಯಾಚಾರಗಳು ಕಣ್ಣಿಗೆ ಎದ್ದು ಕಾಣುವಂತಹ ದೌರ್ಜನ್ಯಗಳಾಗಿವೆ. ಆದರೆ ಸಾರ್ವಜನಿಕರ ನಜರಿಗೆ ಬಾರದಿರುವ ದೌರ್ಜನ್ಯಗಳು ಇದರ ಸಾವಿರ ಪಟ್ಟಿನಷ್ಟಿವೆ. ಭಾರತದ ಮೆಟ್ರೋಗಳಲ್ಲಿ ದಿನವೂ ಅನೇಕ ಅಪಹೃತ ಬಾಲಿಕೆಯರ ಮಾರಾಟವಾಗುತ್ತಿದೆ. ಎರಡು ವರ್ಷಗಳ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುತ್ತಿರುವುದು ಪತ್ರಿಕೆಗಳಲ್ಲಿ ಬೆಳಕಿಗೆ ಬರುತ್ತಿದೆ. ಹೆಣ್ಣಾಗಿ ಹುಟ್ಟಿದ್ದೇ ಈ ಬಾಲಿಕೆಯರ ಹಾಗು ಶಿಶುಗಳ ಅಪರಾಧವೇ?

ಸರಕಾರಕ್ಕೆ ಇದು ಗೊತ್ತಿರದೆ ಏನು? ಆದರೆ ಅಪರಾಧ ಮಾಫಿಯಾ ದೊಡ್ಡ ಸಂಘಟನೆಯಾಗಿದೆ. ಇವರು ಗಳಿಸುವ ಕೊಳಕು ಹಣದಲ್ಲಿ ಸಮಾಜರಕ್ಷಕರಿಗೂ ಪಾಲಿರುತ್ತದೆ. ಸರಕಾರದ ಕನಿಷ್ಠ ಕರ್ಮಚಾರಿಯಿಂದ ಪ್ರಾರಂಭವಾಗಿ, ಸರಕಾರದ ವರಿಷ್ಠರವರೆಗೆ ಎಲ್ಲರಿಗೂ ಈ ಅರಿಷ್ಟ ಹಣದಲ್ಲಿ ಪಾಲಿರುವದು ಒಂದು ಬಹಿರಂಗ ರಹಸ್ಯ!

ಆದುದರಿಂದ ಅಪರಾಧಿಗಳಲ್ಲಿ ಹೆದರಿಕೆ ಹುಟ್ಟಿಸುವಂತಹ ಶಿಕ್ಷೆಯ ಜೊತೆಗೆ, ಭಾರತೀಯ ಸಮಾಜದಲ್ಲಿರುವ ಅನೈತಿಕ ಕೊಳಕನ್ನು ಗುಡಿಸುವ ಕೆಲಸವೂ ಆಗಬೇಕು. ಶಾಲೆಗಳಲ್ಲಿ ನೈತಿಕ ಶಿಕ್ಷಣ ದೊರೆಯಬೇಕು. ಟೀವಿ ಹಾಗು ಸಿನೆಮಾಗಳಲ್ಲಿ ಅಶ್ಲೀಲತೆ ಹಾಗು ಕ್ರೌರ್ಯದ ಪ್ರದರ್ಶನಗಳನ್ನು ಪ್ರತಿಬಂಧಿಸಬೇಕು. ಲಂಚಗುಳಿ ಹಾಗು ಲಂಪಟ ರಾಜಕಾರಣಿಗಳನ್ನು ಸಮಾಜವು ತಿರಸ್ಕರಿಸಬೇಕು. ಅಲ್ಲಿಯವರೆಗೂ ಸ್ತ್ರೀಯರ ಹಾಗು ಬಾಲಿಕೆಯರ ಮೇಲಿನ ದೌರ್ಜನ್ಯವು ನಿಲ್ಲುವದಿಲ್ಲ.

ಸಾಮಾಜಿಕ ಅಪರಾಧಗಳಿಗೆ ಇನ್ನೂ ಒಂದು ಕಾರಣವಿದೆ. ಅನೇಕ ವರ್ಷಗಳ ಹಿಂದೆ, ಪ್ರಾಣಿವಿಜ್ಞಾನಿಗಳು ವಿಭಿನ್ನ ಪ್ರದೇಶಗಳ ಮಂಗಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ಈ ಪ್ರಾಣಿಗಳಲ್ಲಿ ಅವರು ಮೂರು ಗುಂಪುಗಳನ್ನು ಮಾಡಿದ್ದರು: ಅತಿ ದಟ್ಟವಾದ ಸಂಖ್ಯೆಯುಳ್ಳ ಗುಂಪು, ವಿರಳ ಸಂಖ್ಯೆಯ ಗುಂಪು ಹಾಗು ಮಧ್ಯಮ ಪ್ರಮಾಣದ ಸಂಖ್ಯೆಯ ಗುಂಪು. ಯಾವ ಗುಂಪಿನಲ್ಲಿ ಅತಿ ದಟ್ಟವಾದ ಪ್ರಾಣಿಸಂಖ್ಯೆ ಇದ್ದು, ನಾಯಕತ್ವವು ಬಲಹೀನವಾಗಿರುವಿದೋ, ಆ ಗುಂಪಿನ ಪ್ರಾಣಿಗಳಲ್ಲಿ ಪರಸ್ಪರ ಕಚ್ಚಾಟ ಹಾಗು ಅಪರಾಧಗಳು ವಿಶೇಷ ಪ್ರಮಾಣದಲ್ಲಿ ಕಂಡು ಬಂದವು. ಪ್ರಾಣಿಗಳಲ್ಲಿ ಸಾಧಾರಣವಾಗಿ ಕಂಡು ಬರದಂತಹ, ರೇಪ್ ಸಹ ಈ ಗುಂಪಿನಲ್ಲಿ ಕಂಡು ಬಂದಿತು. ಭಾರತದ ಸದ್ಯದ ಪರಿಸ್ಥಿತಿಯು ಇದೇ ರೀತಿಯಾಗಿರುವುದು ಸ್ಪಷ್ಟವಿದೆ. ನಮ್ಮಲ್ಲಿ ಮಿತಿ ಮೀರಿದ ಜನಸಂಖ್ಯೆ ಇದ್ದು, ಬಲಶಾಲಿ ನಾಯಕತ್ವದ ಅಭಾವವಿದೆ. 


ನಮ್ಮ ನಾಯಕರು ಮಧ್ಯರಾತ್ರಿಯ ಸಮಯದಲ್ಲಿ ನಿದ್ರಿಸುವ ಅಮಾಯಕ ಜನತೆಯ ಮೇಲೆ (--ಅವರಲ್ಲಿ ಅನೇಕರು ಮಹಿಳೆಯರು--) ಲಾಠೀಚಾರ್ಜ ಮಾಡಿಸುವ ಮೂಲಕ ತಮ್ಮ ಬಲಪ್ರದರ್ಶನ ಮಾಡುತ್ತಿದ್ದಾರೆ. ರಾಮಲೀಲಾ ಬಯಲಿನಲ್ಲಿ ರಾಮದೇವರ ಶಿಷ್ಯರ ಮೇಲೆ ನಡಿಸಿದ ಈ ದೌರ್ಜನ್ಯವು ಜಾಲಿಯಾನವಾಲಾ ಬಾಗಿನಲ್ಲಿ ಬ್ರಿಟಿಶರು ನಡೆಸಿದ ದೌರ್ಜನ್ಯಕ್ಕಿಂತ ಯಾವುದರಲ್ಲಿ ಕಡಿಮೆ ಇದೆ? ಅದರಂತೆ ಜಂತರಮಂತರ ಹಾಗು ಇಂಡಿಯಾ ಗೇಟಿನ ಬಳಿ ವಿದ್ಯಾರ್ಥಿಗಳ ಮೇಲೆ ಪೋಲೀಸರು ನಡೆಸಿದ ದೌರ್ಜನ್ಯವು ಚೀನಾದಲ್ಲಿಯ ಟಿಯಾನಾನ್ಮನ್ ಚೌಕದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯನ್ನು ನೆನಪಿಸುತ್ತದೆ. ನಮ್ಮ ಸರಕಾರದ ನೀತಿಯೆಂದರೆ, ಚಳುವಳಿಗಾರರನ್ನು ಇದೇ ರೀತಿಯಲ್ಲಿ ಸತಾಯಿಸುತ್ತ ಇರಬೇಕು. ಕೊನೆಗೊಮ್ಮೆ ಅವರೇ ದಣಿದು ತಮ್ಮ ಚಳುವಳಿಯನ್ನು ಸ್ಥಗಿತಗೊಳಿಸುತ್ತಾರೆ! ಇದಕ್ಕೆ ಬಲಶಾಲಿ ನಾಯಕತ್ವ ಎನ್ನುವುದಿಲ್ಲ. ಇದು ಮಹಾಭಾರತದ ದುರ್ಯೋಧನನ ನೀತಿ. ನಮಗೆ ಬೇಕಾಗಿರುವುದು ಸುಭಾಷಚಂದ್ರ ಭೋಸ ಹಾಗು ವಲ್ಲಭಬಾಯಿ ಪಟೇಲರಂಥವರ ಸ್ಥೈರ್ಯದ ಗುಣ!


ಇನ್ನು  ಮತಬ್ಯಾಂಕನ್ನು ಓಲೈಸುವ ರಾಜಕಾರಣಿಗಳು ಜನಸಂಖ್ಯಾನಿಯಂತ್ರಣದ ಬಗೆಗೆ ಕ್ರಮ ತೆಗೆದುಕೊಳ್ಳುವದಂತೂ ಕನಸಿನ ಮಾತು. ಜನಸಂಖ್ಯೆ ಹೆಚ್ಚಿದಂತೆಲ್ಲ ಸಮಸ್ಯೆಗಳು ಹೆಚ್ಚುತ್ತಲೇ ಹೋಗುತ್ತವೆ. ಸಮಸ್ಯೆಗಳ ದುರ್ಲಾಭ ಪಡೆಯುವದೇ ರಾಜಕಾರಣಿಗಳ ನೀತಿಯಾಗಿದೆ.  ಪರಿಸ್ಥಿತಿಯು ಇದೇ ರೀತಿಯಲ್ಲಿ ಮುಂದುವರೆದರೆ, ನಮ್ಮ ಭಾರತವು ಕೊಳಚೆಯ ಗೂಡಾಗುವದರಲ್ಲಿ ಸಂದೇಹವಿಲ್ಲ.

Friday, December 21, 2012

"ಬರುವದೇನೆ ನೆಪ್ಪಿಗೆ".........................ಬೇಂದ್ರೆ



ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.

                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.                                                           
ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು

                        ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

                        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
                        ಇಬ್ಬರನ್ನು ನೂಗಿಕೊಂಡು
                                    ಒಬ್ಬನಾಗಿ ಎದ್ದಿದೆ.
                        ಚಿತ್ತವೆಲ್ಲಿ ಎನುವಾಗಲೆ
                                ಕೊಡುವ ಮೊದಲೆ ಕದ್ದಿದೆ.

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.
……………………………………………………………..
‘ಬರುವದೇನೆ ನೆಪ್ಪಿಗೆ’ ಕವನದಲ್ಲಿ ಬೇಂದ್ರೆಯವರು ತಮ್ಮ ಕೆಳದಿಯೊಡನೆ ಹಳೆಯ ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.  ಈ ನೆನಪುಗಳು ಮೂರು ಕಾಲಘಟ್ಟಗಳಲ್ಲಿ ಹಂಚಿಹೋಗಿವೆ. ಪ್ರತಿಯೊಂದು ಘಟ್ಟದ ಪ್ರಾರಂಭದಲ್ಲಿಯೂ ಬೇಂದ್ರೆಯವರು ತಮ್ಮ ಮಡದಿಗೆ ‘ಬಂದಿತೇನೆ ನೆನಪಿಗೆ?’ ಎಂದು ಕೇಳುತ್ತಿದ್ದಾರೆ.

ಗಂಡ-ಹೆಂಡತಿಯ ಮೊದಲ ನೆನಪು ತಮ್ಮ ಮದುವೆಯ ಸಮಯದ್ದೇ ಆಗಿರುತ್ತದೆಯಲ್ಲವೆ? ಬೇಂದ್ರೆಯವರು ತಮ್ಮ ಮಡದಿಗೆ ನೆನಪು ಮಾಡಿಕೊಡುವುದೂ ಅದನ್ನೇ!

“ಬರುವದೇನೆ ನೆಪ್ಪಿಗೆ
ನಮ್ಮ ನಿಮ್ಮ ಒಪ್ಪಿಗೆ
         ಎಲ್ಲೊ ಏನೊ ನೋಡಿದೆ
          ಹಾಗೆ ಬಂದು ಕೂಡಿದೆ.”

ಬೇಂದ್ರೆಯವರು ಮದುವೆಯಾದಾಗ ಅವರ ವಯಸ್ಸು ೨೩. ಅವರ ಹೆಂಡತಿಯ ವಯಸ್ಸು ೧೩ ! ಹಿರಿಯರೇ ಮದುವೆಯನ್ನು ನಿಶ್ಚಯಿಸುವ ಆ ಕಾಲದಲ್ಲಿ, ಮದುವೆಯಾಗುವ ಹುಡುಗನ ಹಾಗು ಹುಡುಗಿಯ ಒಪ್ಪಿಗೆಯನ್ನು ಕೇಳುವವರು ಯಾರು? ಅಂತೆಲೇ ಬೇಂದ್ರೆಯವರು ‘ನಮ್ಮ ನಿಮ್ಮ ಒಪ್ಪಿಗೆ’ ಎಂದು ವಿನೋದಿಸುತ್ತಾರೆ. ಅಂತಃಪಟವನ್ನು ಸರಿಸುವವರೆಗೂ ವಧುವರರು ಪರಸ್ಪರ ಮುಖವನ್ನು ಸಹ ನೋಡಿರುತ್ತಿರಲಿಲ್ಲ. ಆದುದರಿಂದಲೇ ಬೇಂದ್ರೆಯವರು ‘ಎಲ್ಲೊ ಏನೊ ನೋಡಿದೆ, ಹಾಗೆ ಬಂದು ಕೂಡಿದೆ’ ಎಂದು ಹೇಳುತ್ತಾರೆ. ತಮ್ಮ ಸಖೀಗೀತದಲ್ಲೂ ಸಹ, ಬೇಂದ್ರೆಯವರು ಈ ಪ್ರಸಂಗವನ್ನು “ಅಂತಃಪಟದಾಚೆ ವಿಧಿ ತಂದ ವಧು ನೀನು”  ಎಂದು ವರ್ಣಿಸಿದ್ದಾರೆ!

ಬೇಂದ್ರೆಯವರ ದಾಂಪತ್ಯಜೀವನ ಪ್ರಾರಂಭವಾಗುತ್ತದೆ. ದಾಂಪತ್ಯಧರ್ಮವನ್ನು ಅರಿತುಕೊಳ್ಳುವುದು ಬೆಳಕು. ದಂಪತಿಗಳಲ್ಲಿ ನೈಸರ್ಗಿಕವಾಗಿ ಜ್ವಲಿಸುತ್ತಿರುವುದು ಕಾಮದ ಬೆಂಕಿ. ಈ ಎರಡೂ ಸಮರಸವಾಗಿ ಬೆರೆತಿರಲು ದಂಪತಿಗಳ ಬದುಕು ಒಂದು ಹಬ್ಬ. ಇಂತಹ ಸಾಮರಸ್ಯದ ಬದುಕಿನಿಂದ ಮನದೊಳಗೆ ಭಾವೋದ್ದೀಪನವಾಗುತ್ತದೆ.
ತಮ್ಮ ‘ಸಖೀಗೀತ’ದಲ್ಲಿ ಬೇಂದ್ರೆಯವರು ಈ ತಾರುಣ್ಯದ ಹಬ್ಬವನ್ನು ಹೀಗೆ ವರ್ಣಿಸಿದ್ದಾರೆ:

“ಹಗಲೆಲ್ಲೊ ಹಾರಿದವು ಇರುಳೆಲ್ಲ ಜಾರಿದವು
ಋತು ನಿದ್ದೆಯಾಡಿದವು ಬುಗುರೆಯೊಲೆ”

ದಂಪತಿಗಳಲ್ಲಿ ಸಾಮರಸ್ಯ ಮೂಡಿದಾಗ ಬಾಳಿನಲ್ಲಿ ಉಲ್ಲಾಸ ಹಾಗು ಉತ್ಸಾಹ ಮೂಡುತ್ತವೆ.ಈ ಸಾಧನೆಯಾದಾಗ ಬಾಳು ಮೊಳೆಯುತ್ತದೆ. ಬಾಳಿನಲ್ಲಿ ಸುಗ್ಗಿ ಪ್ರವೇಶಿಸುತ್ತದೆ ಹಾಗು ಸುಖದ ಹೂವು ಅರಳುತ್ತದೆ. ಈ ಭಾಗವನ್ನು ಬೇಂದ್ರೆಯವರು ಹಾಡುವುದು ಹೀಗೆ:
                    ಬೆಳಕು ಬೆಂಕಿ ಬೆರೆತುಕೊಂಡು
                           ಭಾವವು ಹೊರದೂಡಿರೆ
                        ಬಾಳು ಮೊಳೆತು ಸುಗ್ಗಿ ನನೆತು
                               ಹೂವಿನಂತೆ ಮಾಡಿರೆ
                        ಆಹಾ ಚೆಲುವೆ ! ಎಂದು ಕುಣಿದೆ
                                ಮಿಕ್ಕ ಸಂಜೆ ಮಬ್ಬಿಗೆ
                        ಓಹೊ ಒಲವೆ ! ಎಂದು ಕರೆದೆ
                                 ಪಲ್ಲವಿಸಿದ ಹುಬ್ಬಿಗೆ.

ಈ ಕಾಲದಲ್ಲಿ ಗಂಡನ ಕಣ್ಣಿಗೆ ಹೆಂಡತಿ ಅಪ್ಸರೆಯೇ ಸೈ. ಅವಳ ಬೆಡಗು, ಬಿನ್ನಾಣ, ಅವಳ ಹುಬ್ಬಿನ ಕುಣಿತ ಅವನನ್ನು ಮರಳುಗೊಳಿಸುತ್ತವೆ. ಬೇಂದ್ರೆಯವರೂ ಇದಕ್ಕೆ ಹೊರತಾಗಿರಲಿಲ್ಲ.

(ಬೇಂದ್ರೆಯವರ ‘ಅಪರೂಪರಾಗ’ ಎನ್ನುವ ಕವನವು ಪ್ರಾರಂಭವಾಗುವುದೇ ‘ಆಹಾs ಚೆಲುವೆ’ ಎಂದು:
“ಆಹಾs ಚೆಲುವೆ, ಓಹೋs ಚೆಲುವೆ, ಏನುs ಚೆಲುವೆಯೋ
ನಿನ್ನ ನೀನೊ ಏನೊ ಏನೊ ನೋಡಿs ನಲಿವೆಯೋ”)

ತಾರುಣ್ಯದ ಈ ಮಬ್ಬು ಇಳಿದ ಬಳಿಕ, ದಂಪತಿಗಳು ತಾವು ಬಯಸಿದ್ದೇನು, ದೊರೆತದ್ದೇನು ಎಂದು ಯೋಚಿಸುತ್ತಾರೆ. ಬಯಸಿದ್ದೆಲ್ಲ ದೊರೆಯಲಿಕ್ಕಿಲ್ಲ. ಆದರೆ ಮೈಕಾವೇ ಅವರ ಮನಸ್ಸನ್ನೂ ಬೆಚ್ಚಗೆ ಮಾಡುತ್ತದೆ. ಅದೇ ಪರಸ್ಪರ ಪ್ರೀತಿಗೂ ಕಾರಣವಾಗುತ್ತದೆ. ಅದನ್ನು ಬೇಂದ್ರೆಯವರು ಹೇಳುವುದು ಹೀಗೆ:

ಅಂದು ಏನ ಬೇಡಿದೆ
ಏನ ನೆನಸಿ ಹಾಡಿದೆ
      ಬರುವದೇನೆ ನೆಪ್ಪಿಗೆ
       ಎದೆಗೆ ಎದೆಯ ಅಪ್ಪಿಗೆ.

ಬೇಂದ್ರೆ-ಬದುಕಿನ ಎರಡನೆಯ ಕಾಲಘಟ್ಟವು ೧೯೩೨ನೆಯ ಇಸವಿಯಿಂದ ಪ್ರಾರಂಭವಾಗುತ್ತದೆ ಎನ್ನಬಹುದು. ಬೇಂದ್ರೆಯವರು ಈಗಾಗಲೇ ಎರಡು ಗಂಡುಮಕ್ಕಳನ್ನು ಕಳೆದುಕೊಂಡಿದ್ದರು. ‘ನರಬಲಿ’ ಕವನವು ಅವರನ್ನು ಸೆರೆಮನೆಗೆ ಕಳಿಸಿತು. ೯ವರ್ಷಗಳವರೆಗೆ ಅಂದರೆ ೧೯೪೧ನೆಯ ಇಸವಿಯವರೆಗೆ ಅವರು ರಾಜಾಜ್ಞೆಯಿಂದಾಗಿ ಕೆಲಸವಿಲ್ಲದೆ ಅಲೆದಾಡಬೇಕಾಯಿತು. ಮದುವೆಯಾದದ್ದೇ ತಪ್ಪಾಯಿತೇನೊ ಎಂದು ಅವರಿಗೆ ಎನಿಸುವುದು ಸಹಜ. ಮಕ್ಕಳಾದದ್ದಂತೂ  ಮತ್ತೂ ದೊಡ್ಡ ತಪ್ಪು. ಇದೀಗ ಆ ತಪ್ಪಿನೊಡನೆ ಹೊಂದಿಕೊಂಡು ಹೋಗಲು ಏನೆಲ್ಲ ಕಸರತ್ತು ಮಾಡಬೇಕಲ್ಲವೆ? ಆದುದರಿಂದಲೇ ಬೇಂದ್ರೆಯವರು ತಮ್ಮ ಮಡದಿಗೆ ವಿಷಾದದಿಂದ ಹೇಳುತ್ತಾರೆ:

“ಬರುವದೇನೆ ನೆಪ್ಪಿಗೆ
ಕೂಡಿದೊಂದು ತಪ್ಪಿಗೆ
        ಏನೊ ಏನೊ ನೂತೆವು
         ಬದುಕಿನೆಳೆಗೆ ಜೋತೆವು”

‘ಏನೊ ಏನೊ ನೂತೆವು’ ಎಂದು ಹೇಳುವಾಗ ಬೇಂದ್ರೆಯವರು ಜೇಡರಹುಳದ ರೂಪಕವನ್ನು ಬಳಸುತ್ತಿದ್ದಾರೆ. ಬೇಂದ್ರೆ ದಂಪತಿಗಳು ತಾವೇ ಹೆಣೆದಂತಹ ಸಂಸಾರವೆನ್ನುವ ಬಲೆಯಲ್ಲಿ ಸಿಲುಕಿದ್ದಾರೆ!

ಮಕ್ಕಳ ಸಲುವಾಗಿಯಾದರೂ ಈ ದಂಪತಿಗಳು ಬದುಕಿನ ತೆಳು ಎಳೆಗೆ ಜೋತು ಬೀಳುವುದು ಅನಿವಾರ್ಯವಾಗಿತ್ತು.
ಧಾರವಾಡ ಬೇಂದ್ರೆಯವರನ್ನು ಹೊರಗೆ ಹಾಕಿತು. ಬೇಂದ್ರೆಯವರ ವಾಸ ಪುಣೆಯಲ್ಲಿ.
ಕಕ್ಕನ ಆಸರೆ ಹಾಗು ಹಿರಿಯಣ್ಣನಂತಹ ಮಾಸ್ತಿಯವರ ನೆರವಿನಿಂದ ಬದುಕನ್ನು ಸಾಗಿಸಿದರು. ಆಗ ಬೇಂದ್ರೆಯವರ ಪಾಲಿಗೆ ನಾಡೆಲ್ಲ ಮೋಡ ಕವಿದ ವಾತಾವರಣ, ಕಣ್ಣು ಹೊರಳಿಸಿದಲ್ಲೆಲ್ಲ ಕಾರುಕತ್ತಲೆ.

ಈ ಮಾತನ್ನು ಅವರು ವೈಯಕ್ತಿಕವಾಗಿ ಹಾಗೂ ರಾಜಕೀಯವಾಗಿ ಹೇಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೈಯಕ್ತಿಕವಾಗಿ ದೊರೆತ ನೆರವು ಅವರ ಪಾಲಿನ ಮಳೆಯ ಮಿಂಚು. ಏಕೆಂದರೆ ಈ ನೆರವು ಮಿಂಚಿನಂತೆ ಕ್ಷಣಿಕ ಹಾಗು ಅಲ್ಪ ಬೆಳಕನ್ನು ನೀಡುವಂತಹದು. ರಾಜಕೀಯವಾಗಿ ಹಾಗು ಸಾಮಾಜಿಕವಾಗಿ ಹೇಳುವದಾದರೆ, ಮಹಾತ್ಮಾ ಗಾಂಧಿ ಹಾಗು ಇತರ ದೇಶಭಕ್ತರು, ಮೋಡ ಕವಿದ ಭಾರತದಲ್ಲಿ ಮಿಂಚಿನಂತೆ ಬೆಳಕು ನೀಡುತ್ತಿದ್ದರು.

ಈ ಮಳೆ, ಈ ಮಿಂಚು ಬೇಂದ್ರೆ ಕುಟುಂಬಕ್ಕೆ ನೀಡಿದ ಫಲವೇನು? ‘ಮಣ್ಣಿನಲ್ಲಿ ಮಣ್ಣಾದ ಬೀಜ’ ಎಂದು ಬೇಂದ್ರೆ ಅದನ್ನು ವರ್ಣಿಸುತ್ತಾರೆ. ಅಂದರೆ ಅವರ ಹರಪ್ರಯತ್ನಗಳಿಗೆ ಯಾವ ಫಲವೂ ಸಿಗಲಿಲ್ಲ!
         ಮೋಡದೊಂದು ನಾಡಿನಲ್ಲಿ
                                ಮಳೆಯ ಮಿಂಚು ಕಂಡೆವು
                        ಯಾವ ಫಲಕೆ ಇಳಿಯುತಿತ್ತೊ
                                 ಮಣ್ಣ ಬೀಜ ಉಂಡೆವು
                        ದುಃಖದೊಂದು ಶೂಲೆಯಲ್ಲಿ
                                  ನೋವಗೊಂಡು ತಿಣುಕಿದೆ
                        ಸುಖದ ತೊಟ್ಟು ತೊಟ್ಟಿಗಾಗಿ
                                   ಹತ್ತು ಕಡೆಗೆ ಹಣಿಕಿದೆ.

ಕಕ್ಕನ ನೆರವಿನಿಂದ ಪುಣೆಯಲ್ಲಿ ಕನ್ನಡ ಎಮ್.ಏ. ಪದವಿಯನ್ನು ಪೂರೈಸಿದ ಬೇಂದ್ರೆಯವರು ಒಂದು ಒಳಸಂಚಿನಿಂದಾಗಿ ಮೂರನೆಯ ದರ್ಜೆಯಲ್ಲಿ ಪಾಸಾದರು. ಆದುದರಿಂದ ಕಾಲೇಜು ಉಪನ್ಯಾಸಕ ಪದವಿಯನ್ನು ಪಡೆಯಲು ಅನರ್ಹರಾದರು! ಹೀಗಾಗಿ ೧೯೪೧ರಲ್ಲಿ ಗದುಗಿನ ವಿದ್ಯಾದಾನ ಸಮಿತಿ ಹೈಸ್ಕೂಲಿಗೆ ಹೆಡ್ ಮಾಸ್ತರ ಎಂದು ಹೋದರು. ೧೯೪೨ರಲ್ಲಿ ಹುಬ್ಬಳ್ಳಿಯ ನ್ಯೂ ಇಂಗ್ಲಿಶ್ ಸ್ಕೂಲಿಗೆ ಶಿಕ್ಷಕರಾಗಿ ಬಂದರು. ಇದನ್ನೇ ಅವರು ‘ಸುಖದ ತೊಟ್ಟು ತೊಟ್ಟಿಗಾಗಿ ಹತ್ತು ಕಡೆಗೆ ಹಣಿಕಿದೆ’ ಎಂದು ಬಣ್ಣಿಸುತ್ತಾರೆ!

ಈ ರೀತಿಯಲ್ಲಿ ಬೇಂದ್ರೆ ದಂಪತಿಗಳು ಗೃಹಸ್ಥಜೀವನದ ಮೊದಲೆರಡು ಪುರುಷಾರ್ಥಗಳಾದ ಧರ್ಮ ಹಾಗು ಅರ್ಥ ಇವುಗಳನ್ನು ಸಂಚಯಿಸುವುದರಲ್ಲಿ ವಿಫಲರಾದರು. ಈ ವೈಫಲ್ಯದಲ್ಲಿ ಗಂಡಹೆಂಡಿರೇ ಒಬ್ಬರೊಬ್ಬರಿಗೆ ಆಸರೆಯನ್ನು ಕೊಡಬೇಕಲ್ಲವೆ? ವರಕವಿಗಳು ಈ ವೈಪಲ್ಯವನ್ನು, ಈ ಪರಸ್ಪರ ಆಲಂಬನವನ್ನು ವರ್ಣಿಸುವುದು ಹೀಗೆ:

ಇಬ್ಬಗೆಗೂ ಸೋತೆವು
ಆಸರಾಗಿ ಆತೆವು
         ಬರುವದೇನೆ ನೆಪ್ಪಿಗೆ
          ಹೊರತಾದೆವು ಉಪ್ಪಿಗೆ.
ಉಪ್ಪೂ ಸಹ ಸಿಗಲಾರದಂತಹ ಸಂಕಟಕಾಲದ ವರ್ಣನೆ ಇದು.

ಬೇಂದ್ರೆಯವರ ನೆನಪುಗಳ ಮೂರನೆಯ ಕಾಲಘಟ್ಟ ಈಗ ಪ್ರಾರಂಭವಾಗುತ್ತದೆ:
೧೯೪೩ರಲ್ಲಿ ಬೇಂದ್ರೆಯವರು ಪುದುಚೆರಿಯಲ್ಲಿ ಶ್ರೀಮಾತಾ ಹಾಗು ಅರವಿಂದರ ದರ್ಶನವನ್ನು ಪಡೆದರು. ೧೯೪೪ರಲ್ಲಿ ಮಹಾರಾಷ್ಟ್ರವು (ಸೊಲ್ಲಾಪುರದ ಡಿ.ಏ.ವ್ಹಿ. ಕಾಲೇಜು) ಇವರಿಗೆ ಕನ್ನಡ ಪ್ರಾಧ್ಯಾಪಕ ಹುದ್ದೆ ಕೊಟ್ಟು ಆದರಿಸಿತು.

ಇದು ಸ್ವಾತಂತ್ರ್ಯ ಚಳುವಳಿಯ ಮಹಾಕಾಲವೂ ಅಹುದು.ದೇಶಪ್ರೇಮಿಗಳೆಲ್ಲರೂ ‘ಗಾಂಧೀ ಟೊಪ್ಪಿಗೆ’ಯನ್ನು ತೊಡುತ್ತಿದ್ದ ಕಾಲ. ಬೇಂದ್ರೆಯವರು ಅದನ್ನು ಬಣ್ಣಿಸುವುದು ಹೀಗೆ:

ಬರುವದೇನೆ ನೆಪ್ಪಿಗೆ
ನಾವು ಬಿದ್ದ ಟೊಪ್ಪಿಗೆ
        ತಲೆಯ ತೆರೆದು ಬಂದಿತು
         ಎಚ್ಚರೆಚ್ಚರೆಂದಿತು.

ಟೊಪ್ಪಿಗೆ ಹಾಕಿಸಿಕೊಳ್ಳುವುದು ಅಂದರೆ ಮೋಸಹೋಗುವುದು ಎಂದರ್ಥ. ಬದುಕು ಬೇಂದ್ರೆ ದಂಪತಿಗಳನ್ನು ಮೋಸಗೊಳಿಸಿತು. ಆದರೆ, ಬೇಂದ್ರೆಯವರು ಮತ್ತೊಂದು ಟೊಪ್ಪಿಗೆಯನ್ನೂ ನೆನೆಸಿಕೊಳ್ಳುತ್ತಿದ್ದಾರೆ. ಅದು ಗಾಂಧೀ ಟೊಪ್ಪಿಗೆ. ಗಾಂಧೀ ಟೊಪ್ಪಿಗೆಯು ನಾಡಿನ ಜನರನ್ನು ಜಾಗೃತಗೊಳಿಸಿದ ಟೊಪ್ಪಿಗೆ. ಸಾಮಾನ್ಯ ಜನರಲ್ಲಿಯೂ ದೇಶಪ್ರೇಮವನ್ನು ಬಿತ್ತಿದ ಟೊಪ್ಪಿಗೆ. ಅನೇಕ ಜನ ಯುವಕರು ರಣೋತ್ಸಾಹದಿಂದ ಸ್ವಾತಂತ್ರ್ಯಯುದ್ಧದಲ್ಲಿ ಪಾಲ್ಗೊಳ್ಳಲು ಪ್ರೇರಣೆ ಕೊಟ್ಟ ಟೊಪ್ಪಿಗೆ. ಇದನ್ನು ಬೇಂದ್ರೆಯವರು ಹೇಳುವುದು ಹೀಗೆ:
        ಯಾವ ಲೋಕದಿಂದಲಿಳಿದೊ
                                 ಹೊಸ ಸುಗಂಧ ಬೀರಿದೆ
                        ರಣೋತ್ಸಾಹ ಕಹಳೆಯಂತೆ
                                    ನವಚೇತನ ಊರಿದೆ
ಇದರ ಪರಿಣಾಮವು ಬೇಂದ್ರೆ ದಂಪತಿಗಳ ಮೇಲೆಯೂ ಆಯಿತು. ದಂಪತಿಗಳ ಸಂಬಂಧವು ಇನ್ನಷ್ಟು ಬಲವಾಯಿತು.         

 ಇಬ್ಬರನ್ನು ನೂಗಿಕೊಂಡು
  ಒಬ್ಬನಾಗಿ ಎದ್ದಿದೆ.
              ಚಿತ್ತವೆಲ್ಲಿ ಎನುವಾಗಲೆ
              ಕೊಡುವ ಮೊದಲೆ ಕದ್ದಿದೆ.

ಬೇಂದ್ರೆಯವರು ತಮ್ಮ ಮತ್ತೊಂದು ಕವನದಲ್ಲಿ ‘ಕೊಡುವುದೇನು, ಕೊಂಬುವುದೇನು? ಒಲವು, ಸ್ನೇಹ, ಪ್ರೇಮ!’ ಎಂದಿದ್ದಾರೆ. ಈ ಅನುರಾಗ ಭಾವನೆಯನ್ನು ನಮಗರಿವಾಗದಂತೆಯೇ ಪರಸ್ಪರ ಕೊಟ್ಟುಕೊಂಡಿರುತ್ತೇವೆ.

ತಮ್ಮ ಬದುಕಿನಲ್ಲಿ ಬೇಂದ್ರೆ ದಂಪತಿಗಳು ಅನೇಕ ಸುಖ, ದುಃಖಗಳನ್ನು ಅನುಭವಿಸಿದರು. ಈ ಅನುಭವಗಳಿಂದ ಅವರಿಗೆ ದಕ್ಕಿದ ಕಾಣ್ಕೆ ಏನು?

ಸಲ್ಲುವಲ್ಲಿ ಸಂದಿದೆ
ನಿಲ್ಲುವಲ್ಲಿ ನಿಂದಿದೆ
           ಬರುವದೇನೆ ನೆಪ್ಪಿಗೆ
             ಜೀವಜೀವದಪ್ಪಿಗೆ.

‘ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ’ ಎಂದಿದ್ದಾರೆ ಬಸವಣ್ಣನವರು. ನಮ್ಮ ಮನಸ್ಸನ್ನು ಮಾಗಿಸುವುದೇ ಭಗವಂತನ ಇಚ್ಛೆ. ಈ ನೋವು, ನಲಿವಿನ ಅನುಭವಗಳಿಂದ ಬೇಂದ್ರೆ ದಂಪತಿಗಳ ಮನಸ್ಸು ಮಾಗಿದೆ. ಕಳೆದು ಹೋದ ದಿನಗಳ ಬಗೆಗೆ ಅವರಿಗೆ ಯಾವುದೇ ಸಂತಾಪವಿಲ್ಲ, ಅವರ ‘ತಾಪ’ವೆಲ್ಲ ‘ತಪಸ್ಸಾ’ಗಿ ಪರಿವರ್ತಿತವಾಗಿದೆ. ಅಂತೆಯೇ ಅವರು ‘ಸಲ್ಲುವಲ್ಲಿ ಸಂದಿದೆ, ನಿಲ್ಲುವಲ್ಲಿ ನಿಂದಿದೆ’ ಎಂದು ಅರಿತಿದ್ದಾರೆ.

ದಾಂಪತ್ಯಜೀವನದ ಮೊದಲಲ್ಲಿ,‘ಎದೆಗೆ ಎದೆಯ ಅಪ್ಪುಗೆ’ ಎಂದು ಹಾಡಿದ ಬೇಂದ್ರೆಯವರು, ತಮ್ಮ ಹಾಡಿನ ಕೊನೆಯಲ್ಲಿ ‘ಜೀವಜೀವದಪ್ಪಿಗೆ’ ಎನ್ನುತ್ತಾರೆ. ಇದು ದಂಪತಿಗಳ ಕಾಮವು ಪ್ರೇಮವಾಗಿ ಪರಿವರ್ತಿತವಾಗಿದ್ದನ್ನು ಹಾಗು ಅವರ ದಾಂಪತ್ಯದ ಸಫಲತೆಯನ್ನು ಸೂಚಿಸುತ್ತದೆ.

ಏಕಾಂತದಲ್ಲಿ ಜರಗುವ ನೆನಪುಗಳ ಇಂತಹ ಸಿಂಹಾವಲೋಕನದ ಉದ್ದೇಶವೇನು? ಹಳೆಯದನ್ನು ನೆನೆಸಿಕೊಂಡಾಗಲೇ ಬದುಕಿನ ಅರ್ಥವು ಹೊಳೆಯುತ್ತದೆ.ಇದನ್ನೇ ಬೇಂದ್ರೆಯವರು ತಮ್ಮ ‘ಸಖೀಗೀತ’ದಲ್ಲಿ ಹೀಗೆ ಹೇಳಿದ್ದಾರೆ:

“ಇರುಳು-ತಾರೆಗಳಂತೆ ಬೆಳಕೊಂದು ಮಿನುಗುವದು
ಕಳೆದ ದುಃಖಗಳಲ್ಲಿ ನೆನೆದಂತೆಯೆ
ಪಟ್ಟ ಪಾಡೆಲ್ಲವು ಹುಟ್ಟು-ಹಾಡಾಗುತ
ಹೊಸವಾಗಿ ರಸವಾಗಿ ಹರಿಯುತಿವೆ.”

ಬೇಂದ್ರೆಯವರು ಇರುಳತಾರೆಗಳ ಈ ಬೆಳಕನ್ನು, ಈ ಸರಸವಾದ ರಸವನ್ನು, ತಮಗೆ ಕಂಡ ಕಾಣ್ಕೆಯನ್ನು ಸಹೃದಯರೊಡನೆ ಹಂಚಿಕೊಳ್ಳಲು ಬಯಸುತ್ತಾರೆ. ಅವರು ಸಹೃದಯರನ್ನು ಆಹ್ವಾನಿಸುವುದು ಹೀಗೆ:

“ಎನ್ನ ಪಾಡೆನಗಿರಲಿ, ಅದರ ಹಾಡನ್ನಷ್ಟೆ
ನೀಡುವೆನು ರಸಿಕ ನಿನಗೆ
ಕಲ್ಲು ಸಕ್ಕರೆಯಂಥ  ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ.”

ವರಕವಿಯ ಈ ಕರೆಗೆ ಕನ್ನಡಿಗರ ಹೃದಯ ಕರಗಬಹುದೆ?