Sunday, August 25, 2013

ಹಿಂದs ನೋಡದs (ಒಂದು ಹಳೆಯ ಚಿತ್ರವನ್ನು ಕುರಿತು).......ಬೇಂದ್ರೆ



ಹಿಂದs ನೋಡದs
(ಒಂದು ಹಳೆಯ ಚಿತ್ರವನ್ನು ಕುರಿತು)

ಹಿಂದs ನೋಡದs | ಗೆಳತಿ
               ಹಿಂದs ನೋಡದs

ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…

ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…

ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
…………………………………………………………..

ಹದಿಹರೆಯವು ಪ್ರೇಮಾಕರ್ಷಣೆಯ ಕಾಲವಾಗಿದೆ. ಈ ಅನುಭವವು ಎಲ್ಲರಿಗೂ ಆಗಿರುವಂತಹದೆ. ಬೇಂದ್ರೆಯವರು ಸ್ವತಃ ಈ ಆಕರ್ಷಣೆಯ ಜಾಲದಲ್ಲಿ ಸಿಲುಕಿರಲಿಕ್ಕಿಲ್ಲ. ಅದರೆ ಅಂತಹ ಪ್ರಸಂಗಗಳನ್ನು ಅವರು ಕಂಡಿರಬಹುದು. ಅವರು ರಚಿಸಿದ ಇಂತಹ ಪ್ರೇಮಕವನಗಳು ಬಹುತೇಕವಾಗಿ ನಾಯಿಕಾ-ಪ್ರಧಾನವಾಗಿವೆಯೇ ಹೊರತು ನಾಯಕ-ಪ್ರಧಾನವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ. ಇದಕ್ಕೆ ಕಾರಣವೇನಿರಬಹುದು? ಹುಡುಗಿಯರು ಹುಡುಗರಿಗಿಂತ ಹೆಚ್ಚು ಭಾವಜೀವಿಗಳು ಎನ್ನುವುದು ಅವರ ಅಭಿಪ್ರಾಯವಾಗಿರಬಹುದೆ? ‘ಹುಡುಗರ ಭಾವನೆಗಳಲ್ಲಿ ವರ್ಣಿಸಲಿಕ್ಕೆ ಏನಿದೆ ಮಣ್ಣು?’ ಎನ್ನುವುದು ಅವರ ಅನಿಸಿಕೆಯಾಗಿರಬಹುದೆ!?



‘ಹಿಂದs ನೋಡದs’ ಎನ್ನುವ ಕವನವು ಹದಿಹರೆಯದಲ್ಲಿ ಆಕರ್ಷಣೆಯ ಜಾಲಕ್ಕೆ ಮೊದಲ ಸಲ ಸಿಲುಕಿದ ಬಾಲೆಯೊಬ್ಬಳ ಭಾವಗೀತೆಯಾಗಿದೆ. ಆದರೆ ಈ ಅನುಭವದ ಅನೇಕ ವರ್ಷಗಳ ನಂತರ ಅವಳು ತನ್ನ ಸಖಿಯಲ್ಲಿ ಈ ಹಳೆಯ ಕತೆಯನ್ನು ಬಿಚ್ಚಿಡುತ್ತಿದ್ದಾಳೆ. ಆ ಕಾರಣದಿಂದಾಗಿಯೇ, ಕವನದ ಶೀರ್ಷಕದ ಕೆಳಗೆ `ಒಂದು ಹಳೆಯ ಚಿತ್ರವನ್ನು ಕುರಿತು’ ಎನ್ನುವ ಸೂಚನೆಯನ್ನು ವರಕವಿಗಳು ನೀಡಿದ್ದಾಳೆ. ಕಾಲವು ನೀರಿನಂತೆ ಹರಿದು ಹೋಗಿದೆ. ಆದರೆ  ಚಿಕ್ಕ ಮಕ್ಕಳು  ತಮ್ಮ ಪುಸ್ತಕದಲ್ಲಿ ನವಿಲುಗರಿಯನ್ನು ಪ್ರೀತಿಯಿಂದ ಇಟ್ಟುಕೊಳ್ಳುವಂತೆ ಈ ಹೆಣ್ಣುಮಗಳು ತನ್ನ ಮೊದಲ ಪ್ರೇಮಾನುಭವವನ್ನು ತನ್ನ ಹೃದಯದಲ್ಲಿ ಕಾಪಿಟ್ಟಿದ್ದಾಳೆ. ಆ ಅನುಭವವನ್ನು ವಾಸ್ತವ ದೃಷ್ಟಿಕೋನದಿಂದ ವಿಶ್ಲೇಷಿಸಿ ಹೇಳುವ ಪ್ರೌಢತೆ ಅವಳಿಗೆ ಈಗ ಬಂದಿದೆ.
……………………………………………………………
`ಹಿಂದs ನೋಡದs | ಗೆಳತಿ
               ಹಿಂದs ನೋಡದs’ ಎನ್ನುವ ಪದಪುಂಜವು ಈ ಕವನದಲ್ಲಿ ೫ ಸಲ ಉಕ್ತವಾಗಿದೆ. ಪ್ರತಿ ಸಲವೂ ಈ ಪದಪುಂಜಕ್ಕೆ ಬೇಂದ್ರೆಯವರು ವಿಭಿನ್ನ ಅರ್ಥವನ್ನೇ ನೀಡಿದ್ದಾರೆ. ‘ಹಿಂದೆ ನೋಡುವುದು’ ಎಂದರೆ ಹಳೆಯದನ್ನು ನೆನಪಿಸಿಕೊಳ್ಳುವುದು. ಸಖಿಯ ಜೊತೆಗೆ ತನ್ನ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಿರುವ ನಮ್ಮ ನಾಯಕಿಯು ‘ಹಿಂದs ನೋಡದs’ ಎಂದು ಹೇಳುವುದೇ ಒಂದು ವಿರೋಧಾಲಂಕಾರವಾಗಿದೆ.

ನಮ್ಮ ನಾಯಕಿಯನ್ನು ಈ ಪರಿ ಆಕರ್ಷಿಸಿದ ತರುಣನು ಅವಳಿಗೆ ಅಪರಿಚಿತ. ಅಕಸ್ಮಾತ್ತಾಗಿ ಅವಳಿಗೆ ಜಾತ್ರೆಯಲ್ಲಿ ಅಥವಾ ಒಂದು ಸಾರ್ವಜನಿಕ ಜಾಗದಲ್ಲಿ ಕಂಡವನು. ಅವನನ್ನು ನೋಡಿದ ತಕ್ಷಣ ನಮ್ಮ ನಾಯಕಿಯು ಅವನಿಗೆ ತನ್ನ ಹೃದಯವನ್ನು ಅರ್ಪಿಸಿದಳು. ಆತ ಯಾರು, ಆತನ ಕುಲಗೋತ್ರವೇನು ಇದಾವದನ್ನೂ ಅರಿಯದೆ ಅವನಿಗೆ ಮಾರು ಹೋದ ಹುಡುಗಿ ಇವಳು. ಆದುದರಿಂದಲೇ ತನ್ನ ಸಖಿಗೆ ಇವಳು  ‘ಹಿಂದೆ ಮುಂದೆ ನೋಡದೆ’ ಅವನಿಗೆ ಮರುಳಾದೆ ಎಂದು ಹೇಳುತ್ತಿದ್ದಾಳೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಮೊದಲನೆಯ ಅರ್ಥವಿದು.

ಇವಳ ನೋಟಕ್ಕೆ ಆ ತರುಣನ ಪ್ರತಿಕ್ರಿಯೆ ಏನು?
ಒಂದೇ ಬಾರಿ ನನ್ನ ನೋಡಿ
ಮಂದ ನಗೀ ಹಾಂಗs ಬೀರಿ
ಮುಂದs  ಮುಂದs ಮುಂದs ಹೋದ || ಹಿಂದs…
ಆತ ಇವಳ ಪ್ರೇಮಕಟಾಕ್ಷವನ್ನು ಒಪ್ಪಿಕೊಳ್ಳುತ್ತಾನೆ, ಆದರೆ ಉತ್ತೇಜಿಸುವದಿಲ್ಲ. ಒಂದೇ ಸಲ ಇವಳನ್ನು ನೋಡುತ್ತಾನೆ. ಸಭ್ಯತೆಯ ಸಂಕೇತವೆಂಬಂತೆ ಒಂದು ಮುಗುಳುನಗೆಯನ್ನು ಬೀರಿ ಆತ ಮುನ್ನಡೆಯುತ್ತಾನೆ.  `ಹಾಂಗs ಬೀರಿ’ ಎನ್ನುವಾಗ ‘ತನಗೆ ಈ ಹುಡುಗಿಯೇನೂ ವಿಶೇಷವಲ್ಲ’ ಎನ್ನುವ ಭಾವನೆ ಇದೆ. ಆತ ಅಲ್ಲಿಯೇ ನಿಂತು ಇವಳೊಡನೆ ‘ಕಣ್ಣಾಟ’ವಾಡಬಹುದಾಗಿತ್ತು. ಆದರೆ ಅವನು ಅಂಥವನಲ್ಲ! ಹಾಗಾಗಿ ಆತನು ಹಿಂದೆ ತಿರುಗಿ ಸಹ ನೋಡುವದಿಲ್ಲ. ತನ್ನ ವಿಚಾರಗಳಲ್ಲಿಯೇ ಮಗ್ನನಾದ ಆತನು ಹಾಗೇ ಮುಂದೆ ಹೋಗಿ ಬಿಡುತ್ತಾನೆ. ‘ಹಿಂದs ನೋಡದs’ ಎನ್ನುವ ಪದಪುಂಜದ ಎರಡನೆಯ ಅರ್ಥವಿದು.

ಆ ತರುಣನ ಇಂತಹ ಪ್ರತಿಕ್ರಿಯೆಯು ಅವನಲ್ಲಿ ಅವಳಿಗಿರುವ ಸೆಳೆತವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆತ ಕಾಣದಿದ್ದರೇನಾಯಿತು? ಅವಳ ಮನಸ್ಸು ಇಂದ್ರಿಯಾತೀತವಾಗಿ ಅವನ ಹಿಂದೆ ಹೋಗಿದೆಯಲ್ಲವೆ? ಅದನ್ನು ಅವಳು ಹೀಗೆ ಹೇಳುತ್ತಾಳೆ:
ಗಾಳಿ ಹೆಜ್ಜೆ ಹಿಡದ ಸುಗಂಧ
ಅತ್ತs ಅತ್ತs ಹೋಗುವಂದ
ಹೋತ ಮನಸು ಅವನ ಹಿಂದs || ಹಿಂದs…
ಹೂವಿನ ಸುಗಂಧವು ಗಾಳಿಯ ಜೊತೆಗೆ ಬೆರೆತು, ಗಾಳಿ ಹೋದಲ್ಲೆಲ್ಲ ಹೋಗುತ್ತದೆ. ಗಾಳಿ ಬೀಸಿದಾಗ ಮೊದಲು ಅದರ ಸ್ಪರ್ಶದ ಅನುಭವ ಆಗುತ್ತದೆ. ಆಬಳಿಕ ಅದರ ಜೊತೆಗಿರುವ ಕಂಪಿನ ಅನುಭವ ಆಗುತ್ತದೆ. ಆದುದರಿಂದ ಸುಗಂಧವು ಗಾಳಿಯನ್ನು ಹಿಂಬಾಲಿಸುತ್ತದೆ.

‘ಹೆಜ್ಜೆ ಹಿಡಿದು ಹೋಗುವುದು’ ಎನ್ನುವುದಕ್ಕೆ ಇರುವ ಒಂದು ವಿಶೇಷ ಅರ್ಥವನ್ನೂ ಸಹ ಇಲ್ಲಿ ಗಮನಿಸಬೇಕು. ಬೇಟೆಗಾರನು ತನ್ನ ಬೇಟೆಯನ್ನು ಹಿಂಬಾಲಿಸುವದಕ್ಕೆ ‘ಹೆಜ್ಜೆ ಹಿಡಿಯುವುದು’ ಎನ್ನುತ್ತಾರೆ. ಅದರಂತೆ ನಮ್ಮ ನಾಯಕಿಯ ಪ್ರೇಮಿಯು ಎಲ್ಲಿಯೇ ಚಲಿಸುತ್ತಿರಲಿ, ಅವಳ ಮನಸ್ಸು ಆತನ ಹೆಜ್ಜೆಯನ್ನು ಕಂಡು ಹಿಡಿದು, ಅವನನ್ನು ಹಿಂಬಾಲಿಸುತ್ತಿದೆ. ಹಾಗೆಂದು ಅವಳ ಆಕರ್ಷಣೆಯ ಬಗೆಗೆ ತಪ್ಪು ತಿಳಿಯಬಾರದು. ಅದು ಸುಗಂಧಮಯ, ಅದು ಸುಮನಸ್ಸು. ಗಾಳಿಯ ವಿರುದ್ಧ ದಿಕ್ಕಿನಲ್ಲಿ ಈ ಸುಗಂಧ ಚಲಿಸಲಾರದು. ಅದರ ದಾರಿಯು ನಿಶ್ಚಿತವಾಗಿದೆ. ಇದು ‘ಹಿಂದs ನೋಡದs’  ಎನ್ನುವ ಪದಪುಂಜದ ಮೂರನೆಯ ಅರ್ಥ.

ನಂದ ನನಗ ಎಚ್ಚರಿಲ್ಲ
ಮಂದಿಗೊಡವಿ ಏನs ನನಗs
ಒಂದೇ ಅಳತಿ ನಡದದ ಚಿತ್ತ || ಹಿಂದs…
ಹೀಗೆ ಪರವಶಳಾಗಿ ಕುಳಿತಿರುವ ಹದಿಹರೆಯದ ಹುಡುಗಿಯನ್ನು ನೋಡಿದವರು ಏನಂದಾರು?
ಆದರೆ ತನ್ನ ಖಬರೇ ತನಗೆ ಇಲ್ಲದವಳು ಮಂದಿಯ ಮಾತಿಗೆ ಗಮನ ಕೊಡುವಳೆ?
ಅವಳ ಚಿತ್ತವು ಬಾಹ್ಯ ಪರಿಸರದತ್ತ ಗಮನ ಹರಿಸದೇ ತನ್ನ ಅಂತರಂಗದ ಭಾವದಲ್ಲಿಯೇ ತಲ್ಲೀನವಾಗಿ, ಸಮವೇಗದಲ್ಲಿ ನಡೆದಿದೆ. ಅವಳ ಮನಸ್ಸು ಪ್ರೇಮದ ದಾರಿಯಲ್ಲೇ ಮುನ್ನಡೆಯುವುದು. ಇದು ಈ ಪದಪುಂಜದ ನಾಲ್ಕನೆಯ ಅರ್ಥ.

ತನ್ನ ಪ್ರೇಮವು ತಾತ್ಪೂರ್ತಿಕ ಆಕರ್ಷಣೆಯಲ್ಲ. ತನ್ನ ಮನಸ್ಸು ಆ ತರುಣನಲ್ಲಿ ಶಾಶ್ವತವಾಗಿ ನೆಟ್ಟಿದೆ ಎಂದು ಅವಳು ಹೇಳುತ್ತಾಳೆ:
ಸೂಜಿ ಹಿಂದ ಧಾರದಾಂಗ
ಕೊಳ್ಳದೊಳಗ ಜಾರಿಧಾಂಗ
ಹೋತs ಹಿಂದ ಬಾರಧಾಂಗ || ಹಿಂದs…
ಸೂಜಿಯಲ್ಲಿ ಸಿಲುಕಿಸಿದ ದಾರವು ಸೂಜಿಯನ್ನೇ ಹಿಂಬಾಲಿಸುವುದು ಅನಿವಾರ್ಯ. ಕೊಳ್ಳದಲ್ಲಿ ಜಾರುವುದು ಒಂದು ಆಕಸ್ಮಿಕ. ಹಾಗೆ ಜಾರಿದ ವ್ಯಕ್ತಿ ಮತ್ತಿಷ್ಟು ಜಾರುತ್ತ ಹೋಗುವುದೇ ಸಹಜವಾದದ್ದು. ನಮ್ಮ ನಾಯಕಿಯ ಮನಸ್ಸು ಸಹ ಹಿಂದೆ ಬಾರದಂತೆ, ಅಂದರೆ ಬದಲಾಯಿಸಲು ಅಶಕ್ಯವಾದಂತೆ ಆ ತರುಣನಲ್ಲಿ ಸಿಲುಕಿದೆ. ನಮ್ಮ ನಾಯಕಿಯು ತನ್ನ ನಿರ್ಧಾರದಲ್ಲಿ ಹಾಗು ನಿಷ್ಠೆಯಲ್ಲಿ ಅಚಲಳಾಗಿದ್ದಾಳೆ. ಆದುದರಿಂದಲೇ ಅವಳು ‘ಹಿಂದs ನೋಡದs’ ಎಂದು ಹೇಳುತ್ತಿದ್ದಾಳೆ. ಇದು ಈ ಪದಪುಂಜದ ಐದನೆಯ ಅರ್ಥ.

ಮೊದಲ ಪ್ರೇಮದ ವಿವಿಧ ಸ್ಥಿತಿಗಳನ್ನು ಬೇಂದ್ರೆಯವರು ಸುಸಂಬದ್ಧವಾಗಿ ಇಲ್ಲಿ ವರ್ಣಿಸಿದ್ದಾರೆ. ಈ ಸುಸಂಬದ್ಧತೆ ಅವರ ಕವನಗಳ ವೈಶಿಷ್ಟ್ಯವೇ ಆಗಿದೆ. ಇನ್ನು ‘ಹಿಂದs ನೋಡದs’ ಎನ್ನುವ ಪದಪುಂಜವನ್ನು ವಿಭಿನ್ನಾರ್ಥಗಳಲ್ಲಿ ಬಳಸಿರುವುದು ಬೇಂದ್ರೆ-ಪ್ರತಿಭೆಯ ದ್ಯೋತಕವಾಗಿದೆ!

‘ಹಿಂದs ನೋಡದs’ ಕವನವು ‘ಗಂಗಾವತರಣ’ ಕವನಸಂಕಲನದಲ್ಲಿ ಅಡಕವಾಗಿದೆ.

Friday, August 16, 2013

ಯೇಟ್ಸ ಕವಿಯ ಕವನವೊಂದರ ಮೂರು ಅನುವಾದಗಳು



ಇಂಗ್ಲಿಶ್ ಸಾಹಿತ್ಯದ ಮಹಾನ್ ಕವಿಯಾದ ಯೇಟ್ಸ್ ಅವರು ಬರೆದ ಕವನವೊಂದು ಇಲ್ಲಿದೆ. ಮೂಲಕವನದ ಜೊತೆಗೆ ಆ ಕವನದ ಮೂರು ಅನುವಾದಗಳನ್ನೂ ಸಹ ಇಲ್ಲಿ ಕೊಡುತ್ತಿದ್ದೇನೆ. ಮೊದಲಿನ ಎರಡು ಅನುವಾದಗಳು ಕನ್ನಡದ ಉದ್ದಾಮ ಸಾಹಿತಿಗಳು ಮಾಡಿದ ಭಾಷಾಂತರಗಳಾಗಿವೆ. ಮೂರನೆಯ ಅನುವಾದವು ಬ್ಲಾ*ಗ್ ಲೋಕದಲ್ಲಿ ಸುಪರಿಚಿತರಾದ ಶ್ರೀ ಮಂಜುನಾಥ ಕೊಳ್ಳೇಗಾಲರದು.

Crazy Jane talks with the Bishop
I met the Bishop on the road
And much said he and I.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’

`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.

`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ಕವನವನ್ನು ಅನಂತಮೂರ್ತಿಯವರು ಅನುವಾದಿಸಿದ ಬಗೆ ಹೀಗಿದೆ:
ಮರಳಿ ಜೇನ್ ಗೌರವಾನ್ವಿತ ಬಿಶಪ್‍ಗೆ

ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.

ಅರಿತದ್ದೋ ಅದು—
ಪಾಪದ ತನು ವಿನಯದಲ್ಲಿ
ಹೃದಯ ಹೆಮ್ಮೆಯಲ್ಲಿ.
ರತ್ಯಾತುರ ಹೆಣ್ಣಿಗು ಇದೆ
ಲಜ್ಜೆಯ ಬಿಗುಮಾನ;
ಪ್ರೇಮವೆಬ್ಬಿಸಿದ ಸಿರಿಸೌಧದ ಠಾವೊ
ಮಲಮೂತ್ರದ ಜಘನ;

ಬಿಡಿ ನಿಂತಿದ್ದೂ ಇಡಿ ತುಂಬಿದ್ದೂ
ಬಗೆದದ್ದೇ ಎಲ್ಲ—ಹರಿಯದೆ
ಬಗೆದದ್ದೂ ಇಲ್ಲ.’

ಇದೇ ಕವನವನ್ನು ಲಂಕೇಶರು ಹೀಗೆ ಅನುವಾದಿಸಿದ್ದಾರೆ:
ಮಳ್ಳಿ ಜೇನ್ ಮತ್ತು ಬಿಶಪ್ ಮಾತಾಡಿದ್ದು
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ
ಉಬ್ಬಿ ಹೋಗುವುಳು ಸೆಡೆದು

ಕಾಮ ಮಾಡಿದ್ದೇನು, ಹಾಕಿದೆ ಡೇರೆ
ಮಲಮೂತ್ರ ಸ್ಥಾನ ಹಿಡಿದು,
ಇಲ್ಲಿ ಚಿಂದಿಯಾಗದೆ ಕಷ್ಟ, ಮತ್ತೆ
ಒಂದಾಗಿಸುವುದು ಹೊಲೆದು.’


ಈಗೊಂದು ಪ್ರಶ್ನೆ. ಮೂಲಕವನವು ಅರ್ಥವಾಗುವಷ್ಟು ಸರಳವಾಗಿ, ಮೂಲಕವನದ ಭಾವವು ಮನಸ್ಸಿಗೆ ತಟ್ಟುವಷ್ಟು ಸಮರ್ಥವಾಗಿ ಈ ಭಾಷಾಂತರಗಳು ಅರ್ಥವಾಗುತ್ತಿವೆಯೆ? ಈ ಎರಡೂ ಅನುವಾದಗಳು ಮೂಲಕವನದ ಛಂದಸ್ಸನ್ನು ನಿಖರವಾಗಿ ಹಿಂಬಾಲಿಸಿವೆ. ಎರಡೂ ಕವನಗಳಲ್ಲಿ ಪದಲೋಪವಾಗಿಲ್ಲ. ಆದರೆ ಕವನದ ಭಾವ(Spirit of the poem) ಹಾಗು ಸ್ವಭಾವ(Tone of the poem)ಗಳ ನಿರ್ಮಾಣದಲ್ಲಿ ಅನಂತಮೂರ್ತಿಯವರ ಅನುವಾದವು ಸಂಪೂರ್ಣವಾಗಿ ಸೋತು ಹೋಗಿದೆ. ಲಂಕೇಶರ ಅನುವಾದವು ಸ್ವಲ್ಪ ಮಟ್ಟಿಗೆ ಉತ್ತಮ.

ಈ ಮಾತನ್ನು ಚರ್ಚಿಸಲು ಕವನದ ಹಿನ್ನೆಲೆಯನ್ನು ಗಮನಿಸೋಣ. ಈ ಕವನದ ನಾಯಕಿ ಮೈಮಾರಿಕೊಂಡು ಜೀವಿಸುತ್ತಿರುವ,  ಹರೆಯವನ್ನು ದಾಟಿದ ಓರ್ವ ಸೂಳೆ. ಸಮಾಜದ ಚರಂಡಿಯಲ್ಲಿ ಬಿದ್ದುಕೊಂಡು ಬದುಕು ಕಟ್ಟಬೇಕಾದ ಪರಿಸ್ಥಿತಿ ಅವಳದು. ಅವಳು ದಾರಿಯಲ್ಲಿ ಹೋಗುತ್ತಿರುವಾಗ  ಅಕಸ್ಮಾತ್ತಾಗಿ ಆ ಭಾಗದ ಧರ್ಮಬೋಧಕನು ಅವಳನ್ನು ನೋಡುತ್ತಾನೆ. ‘ಪಾಪಿ’ಗಳನ್ನು ಉದ್ಧರಿಸುವುದೇ ಅವನ ಕರ್ತವ್ಯವಲ್ಲವೆ! ಈ ಸೂಳೆಯನ್ನು ಉದ್ಧರಿಸುವ ದಿವ್ಯ ಅಪೇಕ್ಷೆಯನ್ನು ಹೊಂದಿದ ಧರ್ಮಬೋಧಕನೇ ಅವಳೊಡನೆ ಮಾತನ್ನು ಪ್ರಾರಂಭಿಸುತ್ತಾನೆ ಹಾಗು ಇವಳು ಎಗ್ಗಿಲ್ಲದೆ ಅವನಿಗೆ ಪ್ರತಿಯಾಡುತ್ತಾಳೆ. ಇಷ್ಟೆಲ್ಲವನ್ನೂ ಏಟ್ಸ್ ಒಂದೇ ವಾಕ್ಯದಲ್ಲಿ ಹೇಳಿದ್ದಾನೆ:
I met the Bishop on the road
And much said he and I.
ಈ ಮಾತನ್ನು ಅನಂತಮೂರ್ತಿಯವರು ಅನುವಾದಿಸಿದ್ದು ಹೀಗೆ:
ಬೀದಿಯಲ್ಲಿ ಬಿಶಪ್ ಸಿಕ್ಕ
ಅವನು ಅಂದ, ನಾನೂ ಅಂದೆ;
ಬಿಶಪ್ಪನ ನೀತಿಬೋಧೆಯ ಆತುರವು ಈ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಆ ನೀತಿಬೋಧೆಯಿಂದಾಗಿಯೇ ನಮ್ಮ ನಾಯಕಿಯು ಕೆರಳುತ್ತಾಳೆ ಎನ್ನುವುದೂ ಇಲ್ಲಿ ತಿಳಿಯುವುದಿಲ್ಲ!
ಇನ್ನು ಲಂಕೇಶರ ಅನುವಾದವನ್ನು ನೋಡೋಣ:
ಬೀದಿಯಲ್ಲೊಬ್ಬ ಪಾದ್ರಿ ಸಿಕ್ಕಿದ್ದ,
ಆಡಿದೆವು ಅದೂ ಇದೂ ಮಾತು.
‘ಬೀದಿಯಲ್ಲೊಬ್ಬ’ ಎಂದಾಗ ಅವನು ಯಾವುದೋ ಒಬ್ಬ ಪಾದ್ರಿ ಎನ್ನುವ ಗ್ರಹಿಕೆಯಾಗುವುದೇ ಹೊರತು, ಆ ಭಾಗದ ಧರ್ಮೋಪದೇಶಕ ಎನ್ನುವ ವಿಷಯ ತಿಳಿಯುವುದಿಲ್ಲ. ಇದು ತಪ್ಪು ಭಾಷಾಂತರ. ‘ಅದೂ ಇದೂ ಮಾತಾಡಿದೆವು’ ಎನ್ನುವಾಗ, ಆ ಪಾದ್ರಿ ಮತ್ತು ಸೂಳೆ ಲೋಕಾಭಿರಾಮವಾಗಿ ಮಾತನಾಡಿದರು ಎನ್ನುವ ಅರ್ಥವನ್ನು ಈ ಅನುವಾದವು ಕೊಡುತ್ತದೆ! ಇಲ್ಲಿ ಲಂಕೇಶರು ಅನಂತಮೂರ್ತಿಗಿಂತ ಕೆಟ್ಟದಾಗಿ ಅನುವಾದಿಸಿದ್ದಾರೆ.

ಮುಂದಿನ ನುಡಿಯಲ್ಲಿ, ನಮ್ಮ ಸೂಳೆಯ ಈಗಿನ ಅನಾಕರ್ಷಕ ರೂಪವನ್ನು ಆ ಧರ್ಮಬೋಧಕನು ನೇರವಾಗಿ ಹೀಗಳೆಯಲು ಪ್ರಾರಂಭಿಸುತ್ತಾನೆ. ಇದು ಅವನಿಗಿರುವ ಸಾಮಾಜಿಕ ಪ್ರತಿಷ್ಠೆಯ ಅಹಮ್ ಅನ್ನು ತೋರಿಸುತ್ತದೆ.
Those breasts are flat and fallen now,
Those veins must soon be dry;
Live in a heavenly mansion,
Not in some foul sty.’
ಈ ಮಾತನ್ನು ಬೋಧಿಸುವಾಗ ಒಬ್ಬ ಹೆಣ್ಣುಮಗಳಿಗೆ (--ಅವಳು ಸೂಳೆಯೇ ಯಾಕಾಗಿರಲಿ--) ಗೌರವ ಕೊಡುವ ಅವಶ್ಯಕತೆ ಅವನಿಗೆ ಕಾಣುವದಿಲ್ಲ.

ಧರ್ಮಬೋಧಕನ ಇಂತಹ ಪ್ರತಿಷ್ಠಿಕೆಯ ಮನೋಭಾವ ಅನಂತಮೂರ್ತಿಯವರ ಅನುವಾದದಲ್ಲಿ ಕಾಣುವುದಿಲ್ಲ. ಬದಲಾಗಿ ಓರ್ವ ನಿರಪೇಕ್ಷ ವ್ಯಕ್ತಿಯ ನೈಜ ಉಪದೇಶದಂತೆ ಭಾಸವಾಗುತ್ತದೆ. ಯಾಕೆಂದರೆ ಅನಂತಮೂರ್ತಿಯವರು ಈ ಬೋಧನೆಯನ್ನು ಶಿಷ್ಟ, ಸುಸಂಸ್ಕೃತ ಭಾಷೆಯಲ್ಲಿ ಅನುವಾದಿಸಿದ್ದಾರೆ:
‘ಎಂಥ ಮೊಲೆಗಳೂ ಸೊರಗಿವೆ, ಜೋತಿವೆ,
ಅನಾಳಗಳೂ ಬತ್ತಲಿವೆ.
ನಿರ್ಮಲ ಸೌಧದಿ ಬಾಳೇ ಹೆಣ್ಣೆ,
ಮಲದ ಕೂಪ ತೊರೆಯೆ.
ನಿಜದ ಠಾವು ಅರಿಯೆ.’

ಈ ಮಾತನ್ನು ಲಂಕೇಶರು ಅನುವಾದಿಸಿದ್ದು ಹೀಗೆ:
ಅವನೆಂದ, ‘ಎಂಥ ಮೊಲೆ ಬತ್ತಿವೆ, ನರ
ಒಣಗಿ ಬೀಳಲಿವೆ ಜೋತು;
ಹೊಲಸು ಹಕ್ಕೆಯ ತೊರೆ, ಕಳೆ
ದಿನಗಳ ದೇವಾಲಯದಿ ಕೂತು.’

ಲಂಕೇಶರ ಅನುವಾದದಲ್ಲಿ ಧರ್ಮಬೋಧಕನು ಬಳಸುವ ಅಶಿಷ್ಟ ಭಾಷೆಯು ಮೂಲಕವನದಲ್ಲಿ ಕಾಣಬರುವ ವ್ಯಂಗ್ಯಕ್ಕೆ ಸಮಾಂತರವಾಗಿದೆ. ಮೂಲಕವನದಲ್ಲಿ ಧರ್ಮಾಧಿಕಾರಿಯು ಬಳಸುವ ಚುಚ್ಚುಮಾತು ಹಾಗು ಅವಳ ಬಗೆಗೆ ಅವನಿಗೆ ಇರುವ ತಾತ್ಸಾರವು ಲಂಕೇಶರ ಅನುವಾದದಲ್ಲಿ ವ್ಯಕ್ತವಾದಂತೆ, ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗಿಲ್ಲ.

ಧರ್ಮಬೋಧಕನು ಮಾಡುವ ನಾಯಕಿಯ ತುಚ್ಛೀಕರಣಕ್ಕೆ ಅವಳ ಪ್ರತಿಕ್ರಿಯೆ ಏನು? ‘I cried’ ಎಂದರೆ ಆ ಸೂಳೆಯು ಚೀರುತ್ತಾಳೆ.
`Fair and foul are near of kin,
And fair needs foul,’ I cried.
‘My friends are gone, but that’s a truth
Nor grave nor bed denied,
Learned in bodily lowliness
And in the heart’s pride.
ಧರ್ಮಬೋಧಕನ ನೀತಿಪಾಠವು ಅವಳನ್ನು ಕೆಣಕಿದೆ ಹಾಗು ಕೆರಳಿಸಿದೆ. ಕೊಳಚೆಯಲ್ಲಿ ಒತ್ತಲ್ಪಟ್ಟ ಆ ನಾಗಿಣಿಯ ಹೆಡೆಯನ್ನು ಅವನು ತುಳಿದಿದ್ದಾನೆ. ಈ ‘ಪ್ರತಿಷ್ಠಿತ, ಸಭ್ಯ ಪುರುಷನ’ ಪ್ರತಿಯಾಗಿ ಇರುವ ಅಸಹಾಯಕತೆ ಹಾಗು ರೋಷ ಅವಳನ್ನು ಭುಸುಗುಟ್ಟುವಂತೆ ಮಾಡಿದೆ

ಇದು ಅವಳ ಸಹಜ ಸ್ವಭಾವ ಇರಬಹುದು ಅಥವಾ ಧರ್ಮಾಧಿಕಾರಿಯ ಚುಚ್ಚು ಮಾತಿಗೆ ಪ್ರತಿಕ್ರಿಯೆಯಾಗಿರಬಹುದು. ಅಲ್ಲದೆ ತನ್ನ ಬದುಕು ಎಂತಹದೇ ಇದ್ದರೂ ಸಹ, ಇದು ಸಮಾಜದ್ದೇ ಸೃಷ್ಟಿ ಎನ್ನುವ ಅರಿವಿನಿಂದ ಅವಳು ಕುದಿಯುತ್ತಾಳೆ. ಆದುದರಿಂದಲೇ, ಸೊಗಸು ಹಾಗು ಕೊಳಕು ಎರಡೂ ಸಂಬಂಧಿಗಳು ಎಂದು ಕುಟುಕುತ್ತಾಳೆ. ಅರ್ಥಾತ್ ಉದಾತ್ತ ಪ್ರೇಮ ಹಾಗು ಕೊಳಕು ಕಾಮ ಇವೆರಡೂ ಬಿಡಿಸಲಾರದ ಜೋಡಿ ಎಂದು ಅವನ ಮುಖಕ್ಕೆ ರಾಚಿದಂತೆ ಹೇಳುತ್ತಾಳೆ. ತನ್ನ ಕಸುಬಿನ ದೈಹಿಕ ಅವಮಾನ ಏನೇ ಇದ್ದರೂ ಸಹ, ತನ್ನ ಆತ್ಮಗೌರವಕ್ಕೆ ಅದರಿಂದ ಚ್ಯುತಿ ಇಲ್ಲ ಎಂದು ಗಂಭೀರವಾಗಿ ಉಸುರುತ್ತಾಳೆ.

ನಾನದ ಕೊಡೆ: ಕೇಳೋ ತಂದೆ
ಮಲ ನಿರ್ಮಲ ನೆಂಟರಂತೆ
ಮಲವಿದ್ದೇ ಅಮಲ;
ಸಖರೆಷ್ಟೋ ಸತ್ತರು—ನಿಜ
ಗೋರಿಯಷ್ಟೇ ಸುಖದ ಶಯ್ಯೆ
ಮರೆಮಾಚದ ನಿಜವದು.
ಆ ಧರ್ಮಬೋಧಕನ ಮೇಲೆ ಇಷ್ಟೆಲ್ಲ ತಿರಸ್ಕಾರವಿರುವ ಆ ಹೆಣ್ಣು, ಅವನನ್ನು ‘ತಂದೆ’ ಎಂದು ಸಂಬೋಧಿಸಲು ಸಾಧ್ಯವೆ? ಕವನದ meter ಉಳಿಸಿಕೊಳ್ಳಲು ಅನಂತಮೂರ್ತಿಯವರು ಹಾಕಿರುವ ತಿಪ್ಪರಲಾಗ ಇದು! ಅಲ್ಲದೆ ಧರ್ಮಬೋಧಕನ ವಿರುದ್ಧ ಫೂತ್ಕರಿಸುತ್ತಿರುವ, ಕೊಳಚೆಯಲ್ಲಿ ಬದುಕುತ್ತಿರುವ ನಮ್ಮ ಸೂಳೆಯ ಬಾಯಿಯಿಂದ ಎಂತಹ ಅಭಿಜಾತ ಭಾಷೆ ಬರುತ್ತಿದೆ, ನೋಡಿರಿ!

ಮೂಲ ಇಂಗ್ಲಿಶ್ ಕವನವನ್ನು ಓದದೆ, ಈ ನುಡಿಯ ಅನುವಾದವನ್ನು ಮಾತ್ರ ಓದಿದರೆ, ಏನಾದರೂ ಅರ್ಥವಾದೀತೆ?  ಅಲ್ಲದೆ, ಧರ್ಮಬೋಧಕನ ಮಾತಿನಿಂದ ಆ ಹೆಣ್ಣಿಗೆ(--ಸೂಳೆಯಲ್ಲ, ಹೆಣ್ಣು--) ಆದ hurt ಕನ್ನಡ ಅನುವಾದದಲ್ಲಿ ಪ್ರತಿಫಲಿಸಿದೆಯೆ?

ಇನ್ನು ಈ ನುಡಿಯನ್ನು ಲಂಕೇಶರು ಹೇಗೆ ಅನುವಾದಿಸಿದ್ದಾರೆ?
ಚೀರಿದೆ ನಾನು, ‘ಹೊಲಸಿಗೂ ಸೊಗಸಿಗೂ
ಬಿಡಿಸಲಾರದ ಮಿಲಾಖತ್ತು;
ಸಖರು ಹೊರಟುಹೋದರು—ಈ ವಾಸ್ತವ
ಹಾಸಿಗೆ, ಗೋರಿಗೂ ಗೊತ್ತು;
ದೇಹದ ಪತನಕೆ ಹಿಗ್ಗಿದೆ ಹೃದಯ,
ಪಡಕೊಂಡಿದೆ ಸುಖಸಂಪತ್ತು.’
ಲಂಕೇಶರ ಅನುವಾದದ ಮೊದಲ ಎರಡು ಸಾಲುಗಳು ಮೂಲಕವನದ ಭಾವಕ್ಕೆ ಹೆಚ್ಚು ಹತ್ತಿರವಾಗಿದೆ ಎನ್ನಬಹುದು. ಆದರೆ ಕೊನೆಯ ಎರಡು ಸಾಲುಗಳ ಅನುವಾದದಲ್ಲಿ ಅವರು ಎಡವಿದ್ದಾರೆ. ‘Learned in bodily lowliness,
And in the heart’s pride’ ಎನ್ನುವಾಗ ಆ ಸೂಳೆಯು ‘ಹೊಲಸಿಗೂ ಸೊಗಸಿಗೂ ಬಿಡಿಸಲಾರದ ಮಿಲಾಖತ್ತು’ ಎನ್ನುವುದನ್ನು justify ಮಾಡುತ್ತಿರುವಳೇ ಹೊರತು, ‘ದೇಹದ ಪತನಕೆ ಹಿಗ್ಗಿದ ಹೃದಯ’ ಎಂದು ಭಾವಿಸುತ್ತಿಲ್ಲ.

ಕೊನೆಯ ನುಡಿಯಲ್ಲಿ ಯೇಟ್ಸ ಕವಿಯು ಪ್ರೇಮ-ಕಾಮಗಳ ವಾಸ್ತವತೆಯನ್ನು ಬಯಲು ಪಡಿಸುತ್ತಾನೆ.
`A woman can be proud and stiff
When on love intent;
But love has pitched his mansion in
The place of excrement;
For nothing can be sole or whole
That has not been rent.’

ಈ ನುಡಿಯಲ್ಲಿಯ ಈ ಸಾಲುಗಳನ್ನು ಗಮನಿಸಿ:
`A woman can be proud and stiff
When on love intent;’

ಯೇಟ್ಸರ ನಾಯಕಿ ಸೂಳೆಯೇ ಆದರೂ ಸಹ ಅವಳಿಗೂ ಪ್ರೇಮಿಸಬಲ್ಲ ಹೃದಯ ಹಾಗು ಆತ್ಮಗೌರವ ಇವೆ. ತನ್ನ ನೈಜಪ್ರೇಮಿಯ ಜೊತೆಗೆ ಕೂಡುವಾಗ ಅವಳಿಗೆ ಪ್ರೇಮ ಹಾಗು ಕಾಮದ ಉತ್ಕಟತೆಯ ಅನುಭವ ಆಗಬಹುದು. ಅಂತಹ ಸ್ಥಿತಿಯನ್ನು ಅನಂತಮೂರ್ತಿಯವರು ‘ರತ್ಯಾತುರ ಹೆಣ್ಣು’ ಎಂದು ವರ್ಣಿಸುತ್ತಿದ್ದಾರೆ. ಅಂದರೆ ಮೂಲಕವನದಲ್ಲಿ ಇಲ್ಲದ ಅರ್ಥವನ್ನು ಅನಂತಮೂರ್ತಿಯವರು ತಮ್ಮ ಕವನದಲ್ಲಿ ಅನವಶ್ಯಕವಾಗಿ ಸೇರಿಸಿದ್ದಾರೆ. ಆದರೆ ‘ಹೆಣ್ಣು ಪ್ರೇಮಕ್ಕೆ ಮನದ ನೆಟ್ಟರೆ ಉಬ್ಬಿ ಹೋಗುವುಳು ಸೆಡೆದು’ ಎಂದು ಲಂಕೇಶರು ಅನುವಾದಿಸಿದ್ದು ಮೂಲಕ್ಕೆ ಹೆಚ್ಚು ಹತ್ತಿರವಾಗಿದೆ!

ಯೇಟ್ಸನ ಕವನದ ಕೊನೆಯ ನಾಲ್ಕು ಸಾಲುಗಳು ಹೀಗಿವೆ:
But love has pitched his mansion in
The place of excrement;
For nothing can be sole or whole
That has not been rent.’

ಕೊನೆಯ ಸಾಲುಗಳು ತುಂಬ ಅರ್ಥಗರ್ಭಿತವಾಗಿವೆ. ಯಾವುದನ್ನು ನಾವು ‘ಪ್ರೇಮ’ ಎಂದು ಕರೆಯುತ್ತೇವೆಯೋ, ಅದಕ್ಕೆ ಕಾಮದ drive ಬೇಕು.  ದಿವ್ಯಪ್ರೇಮವೆಂದು ಕರೆಯುವ ಭಾವವು ಮಲದ ಗುಂಡಿಯಲ್ಲಿಯೇ ತನ್ನ ಡೇರೆಯನ್ನು ಹೊಡೆದಿದೆ. ಇಲ್ಲಿ ಮತ್ತೊಂದು ಶ್ಲೇಷೆಯನ್ನು ಗಮನಿಸಬೇಕು:

ಇಂಗ್ಲೀಶಿನಲ್ಲಿ ನಪುಂಸಕಲಿಂಗದ ವಸ್ತುಗಳನ್ನು ಪುಲ್ಲಿಂಗ ಅಥವಾ ಸ್ತ್ರೀಲಿಂಗದಲ್ಲಿ ಯೋಜಿಸುವುದು ವಾಡಿಕೆಯ ಮಾತಾಗಿದೆ. ಉದಾಹರಣೆಗೆ ship ಇದನ್ನು ಸ್ತ್ರೀಲಿಂಗದಲ್ಲಿ she ಎಂದು ಅವರು ಕರೆಯುತ್ತಾರೆ. ಇಲ್ಲಿ loveಅನ್ನು ಪುಲ್ಲಿಂಗದಲ್ಲಿ ಬಳಸುತ್ತ, `ಅವನು’ ತನ್ನ ಭವ್ಯಸೌಧವನ್ನು …..’ ಎಂದು ಹೇಳಲಾಗಿದೆ. ಅರ್ಥಾತ್ ಈ ಪ್ರೇಮ-ಕಾಮದ ವಿಪರ್ಯಾಸವು ಗಂಡಸರ ಕರಾಮತ್ತು ಎನ್ನುವ ಭಾವನೆ ಇಲ್ಲಿ ವ್ಯಕ್ತವಾಗುತ್ತಿದೆ.  ಎರಡನೆಯದಾಗಿ ಮೊದಲನೆಯ ನುಡಿಯಲ್ಲಿ ಧರ್ಮಬೋಧಕನು ಹೇಳುವ ‘Live in a heavenly mansion..’ ಎನ್ನುವಲ್ಲಿಯ mansionಗೆ ವ್ಯಂಗ್ಯವಾಗಿ, ನಮ್ಮ ನಾಯಕಿಯು  ‘But love has pitched his mansion..’ ಎಂದು ಹೇಳುತ್ತಿದ್ದಾಳೆ. ಈ ಎರಡು mansionಗಳ ನಡುವಿನ ಅಂತರವನ್ನು ಗಮನಿಸಬೇಕು! ಈ ವ್ಯಂಗ್ಯ ಅನಂತಮೂರ್ತಿಯವರ ಅನುವಾದದಲ್ಲಾಗಲೀ, ಲಂಕೇಶರ ಅನುವಾದದಲ್ಲಾಗಲೀ ಕಾಣುವದಿಲ್ಲ.


ಒಟ್ಟಿನಲ್ಲಿ, ಈ ಸಾಲುಗಳಲ್ಲಿರುವ ಅಡಗಿರುವ ಅರ್ಥವನ್ನು ಅನುವಾದದಲ್ಲಿ ತರಲು ಅನಂತಮೂರ್ತಿ ಹಾಗು ಲಂಕೇಶರು ಸೋತು ಹೋಗಿದ್ದಾರೆ. ಆದರೆ ಈ ಸಾಲುಗಳಲ್ಲಿರುವ ಭಾವವನ್ನು ಸೂಚಿಸುವಂತಹ ತ್ರಿಪದಿಯೊಂದು ಕನ್ನಡದಲ್ಲಿ ಇದೆ! ಆ ತ್ರಿಪದಿಯನ್ನು ಓದುವ ಮೊದಲು ಅದರ ಹಿಂದಿನ ಕತೆಯನ್ನಷ್ಟು ಕೇಳೋಣ:

ಹದಿನೇಳನೆಯ ಶತಮಾನದ ಮಹಾನ್ ಕವಿ ಹಾಗು ಲೋಕಶಿಕ್ಷಕನಾದ ಸರ್ವಜ್ಞನು ವೇಶ್ಯೆಯರ ಬಗೆಗೆ ಅನುದಾರವಾಗಿ ವಚನಿಸುವುದನ್ನು ಕಂಡ ಹೆಣ್ಣುಮಗಳೊಬ್ಬಳು ಅವನಿಗೆ ವಚನರೂಪದಲ್ಲಿಯೇ ಈ ರೀತಿಯಾಗಿ ತಿವಿಯುತ್ತಾಳಂತೆ:

ಉಚ್ಚೆಯಾ ಬಚ್ಚಲವು ತುಚ್ಛವೆನ್ನಲು ಬೇಡ    
ಅಚ್ಯುತನು ಬಿದ್ದ, ಅಜ  ಬಿದ್ದ, ನಿಮ್ಮಪ್ಪ
ಎಚ್ಚತ್ತೆ ಬಿದ್ದ, ಸರ್ವಜ್ಞ!

ಈ ತ್ರಿಪದಿಯನ್ನು ಹೇಳಿದ ಹೆಣ್ಣಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ, ಯೇಟ್ಸನ ನಾಯಕಿಗೆ ಇರುವ ಆತ್ಮಗೌರವ ಹಾಗು ಅವಳು ಬಳಸುವ ಭಾಷೆಗೂ ಸಾಮ್ಯತೆ ಇದೆಯಲ್ಲವೆ? ಯೇಟ್ಸನ ಕವನದಂತೆ ಈ ತ್ರಿಪದಿಯೂ ಸಹ ಭಾಷೆಯಲ್ಲಿ ಸರಳವಾಗಿ ಹಾಗು ಭಾವದಲ್ಲಿ ಸಂಕೀರ್ಣವಾಗಿ ಇರುವುದಲ್ಲವೆ! ಮೂಲಕವನದಲ್ಲಿ ಇರುವ ಸರಳತೆಯು ಅನಂತಮೂರ್ತಿಯವರ ಅನುವಾದದಲ್ಲಿ ಮಾಯವಾಗಿದೆ; ಅನುವಾದವು ಅರ್ಥವಾಗದಂತೆ ಜಟಿಲವಾಗಿದೆ. ಒಟ್ಟಿನಲ್ಲಿ ಅನಂತಮೂರ್ತಿ ಹಾಗು ಲಂಕೇಶರ ಅನುವಾದಗಳು ತಿಣುಕಾಟದ ಭಾಷಾಂತರಗಳಾಗಿವೆ.

ಹಾಗಿದ್ದರೆ ಸಮರ್ಪಕ ಅನುವಾದ ಅಥವಾ ‘ಸಾರ್ಥಕ ಅನುವಾದ’ವೆಂದು ಯಾವುದಕ್ಕೆ ಹೇಳಬೇಕು? ಪದಶಃ ಅನುವಾದವು ಕೇವಲ ಭಾಷಾಂತರವಾಗುತ್ತದೆಯೇ ಹೊರತು ‘ಸಾರ್ಥಕ ಅನುವಾದ’ವಾಗುವುದಿಲ್ಲ. ಮೂಲಕವನದ ಭಾವ(Spirit) ಹಾಗು ಸ್ವಭಾವ(Tone) ಇವು ಅನುವಾದದಲ್ಲಿ ಮೂಡಬೇಕು. ಯೇಟ್ಸನ ಕವನವು ಸರಳವಾಗಿದೆ. ಅದರ ಭಾವವು ಸ್ಪಷ್ಟವಾಗಿದೆ. ಆದರೆ ಅನಂತಮೂರ್ತಿಯವರ ಕವನದಲ್ಲಿ ಮೂಲಕವನದ ಭಾವವು ಕಾಣದಾಗಿದೆ. ಸಮಾಜದ ದೃಷ್ಟಿಯಲ್ಲಿ ಪತಿತಳಾದ ಈ ಹೆಣ್ಣಿನ Self, ಭದ್ರಸಮಾಜದವರಿಗಿಂತ ಕಡಿಮೆಯದಲ್ಲ ಎನ್ನುವ ಭಾವವು ಅನಂತಮೂರ್ತಿಯವರ ಅನುವಾದದಲ್ಲಿ ವ್ಯಕ್ತವಾಗುವುದಿಲ್ಲ. ಲಂಕೇಶರ ಅನುವಾದದ ಹಣೆಬರಹವೂ ಅಷ್ಟೇ. ಅನಂತಮೂರ್ತಿ ಹಾಗು ಲಂಕೇಶ ಇವರೀರ್ವರೂ ಈ ಕವನದಲ್ಲಿ ಕಾಮಕ್ಕೆ ನೀಡಲಾದ ಸ್ಥಾನದ ಬಗೆಗೆ ಹೆಚ್ಚು ಉತ್ಸುಕರಾಗಿದ್ದಾರೆಯೇ ಹೊರತು, ಆ ಸೂಳೆಯು ಸಮಾಜದ ದ್ವಂದ್ವ ಮುಖದಿಂದ ತ್ರಸ್ತಳಾಗಿದ್ದಾಳೆ ಎನ್ನುವ ಮಹತ್ವದ ಅಂಶವನ್ನು ನಿರ್ಲಕ್ಷಿಸಿದ್ದಾರೆ.

ಇನ್ನು ಕವನದ ಸ್ವಭಾವವನ್ನು (Tone) ನಿಶ್ಚಿತಗೊಳಿಸುವದು ಅಲ್ಲಿ ಬಳಸಲಾದ ಭಾಷೆಯ ಕೆಲಸ. ಈ ಉದ್ದೇಶದಿಂದ ಯೇಟ್ಸ ಕವಿಯು ಸೂಳೆಯಾಡುವ ಭಾಷೆಯಲ್ಲಿ ಗಾವಿಲತನವನ್ನು ಬಳಸಿದ್ದಾನೆ. ಆದರೆ, ಅನಂತಮೂರ್ತಿಯವರದಾದರೋ ಸುಸಂಸ್ಕೃತ ಪಾಂಡಿತ್ಯಭರಿತ ಭಾಷೆ! ಎಂತಹ ಆಭಾಸ! ಲಂಕೇಶರ ಭಾಷೆಯು ಅನಂತಮೂರ್ತಿಯವರ ಭಾಷೆಗಿಂತ ಮೂಲಕವನಕ್ಕೆ ಹತ್ತಿರವಾಗಿದೆ ಎಂದಷ್ಟೇ ಹೇಳಬಹುದು.

ಸಮರ್ಪಕ ಅನುವಾದವನ್ನು ಹೇಗೆ ಮಾಡಬೇಕೆಂದು ಅರಿಯಬೇಕಾದರೆ, ಬೇಂದ್ರೆಯವರ ಅನುವಾದಗಳ ಅಧ್ಯಯನವನ್ನು ಮಾಡಬೇಕು. ವಿವೇಕಾನಂದರು ರಚಿಸಿದ ಕವನವೊಂದರ ಅನುವಾದವನ್ನು ಇಲ್ಲಿ ನೋಡಬಹುದು. ಅದರಂತೆ ಫಿಲಿಪೀನಾದ ಸ್ವಾತಂತ್ರ್ಯಯೋಧನಾದ ಜೋಸೆ ರಿಝಾಲನು ಗಲ್ಲಿಗೇರುವ ಮೊದಲು ರಚಿಸಿದ ಕವನದ ಅನುವಾದವನ್ನು ಬೇಂದ್ರೆ ಮಾಡಿದ್ದಾರೆ. ವಿಶ್ವಸಾಹಿತ್ಯದ ಶ್ರೇಷ್ಠ ಅನುವಾದಗಳಲ್ಲಿ ಈ ಅನುವಾದವನ್ನು ಸೇರಿಸಬಹುದು.

ಇನ್ನು ಕಾಳಿದಾಸನ ‘ಮೇಘದೂತ’ ಕಾವ್ಯದ ಬೇಂದ್ರೆಯವರ ಅನುವಾದವನ್ನು ಸ್ವಲ್ಪ ಪರಿಶೀಲಿಸೋಣ. ಆ ಕಾವ್ಯದ ನುಡಿಯೊಂದು ‘ಆಷಾಢಸ್ಯ ಪ್ರಥಮೇ ದಿವಸೇ’ (=ಆಷಾಢಮಾಸದ ಮೊದಲ ದಿನದಂದು) ಎಂದು ಪ್ರಾರಂಭವಾಗುತ್ತದೆ. ಬೇಂದ್ರೆಯವರು ಈ ಸಾಲನ್ನು ಪದಶಃ ಅನುವಾದಿಸದೆ, ‘ಕಾರಹುಣ್ಣಿವೆಯ ಮಾರನೆಯ ದಿನ’ ಎಂದು ಅನುವಾದಿಸಿದ್ದಾರೆ. ಇದರ ಕಾರಣವೆಂದರೆ, ಉತ್ತರ ಭಾರತದಲ್ಲಿ ಪ್ರತಿ ಮಾಸವು ಹುಣ್ಣಿವೆಯ ಮಾರನೆಯ ದಿನದಿಂದ ಪ್ರಾರಂಭವಾದರೆ, ದಕ್ಷಿಣ ಭಾರತದಲ್ಲಿ ಅಮವಾಸ್ಯೆಯ ಮಾರನೆಯ ದಿನದಿಂದ ಪ್ರಾರಂಭವಾಗುತ್ತದೆ. ಅನುವಾದಕರಿಗೆ ಇಂತಹ ಔಚಿತ್ಯಪ್ರಜ್ಞೆ ಅವಶ್ಯವಾಗಿದೆ. ಈ ಸಾಲನ್ನು ಪದಶಃ ಭಾಷಾಂತರಿಸಿದ್ದರೆ, ಅರ್ಥವು ಅನರ್ಥವಾಗುತ್ತಿತ್ತು!

ಯೇಟ್ಸ ಕವಿಯ ಕವನವನ್ನು ಅನುವಾದಿಸಿದವರು ವಿಶ್ವವಿದ್ಯಾಲಯದ ಬೋಧಕವರ್ಗದಲ್ಲಿದ್ದಂತಹ ಪಂಡಿತರು. ಆವರ ಅನುವಾದಗಳನ್ನಲ್ಲದೆ, ಶ್ರೀ ಮಂಜುನಾಥ ಕೊಳ್ಳೇಗಾಲರು ತಮ್ಮ ಬ್ಲಾ॑ಗಿನಲ್ಲಿ ಪ್ರಕಟಿಸಿದ ಅನುವಾದವೊಂದನ್ನು ಇಲ್ಲಿ ಕೊಡುತ್ತಿದ್ದೇನೆ. ಇವರ ಅನುವಾದವು  ಅನಂತಮೂರ್ತಿ ಹಾಗು ಲಂಕೇಶ ಇವರ ಭಾಷಾಂತರಗಳಿಗಿಂತ ಉತ್ತಮವಾಗಿರುವದನ್ನು ಗಮನಿಸಬಹುದು. ಇದರ ತಾತ್ಪರ್ಯವೇನೆಂದರೆ, ಒಂದು ಕವನದ ‘ಸಾರ್ಥಕ ಅನುವಾದ’ಕ್ಕೆ ಬೇಕಾದದ್ದು ಸರಿಯಾದ ಮನೋಧರ್ಮವೇ ಹೊರತು ವಿಶ್ವವಿದ್ಯಾಲಯದ ಪಾಂಡಿತ್ಯವಲ್ಲ!

ದಾರಿಯಲ್ಲಿ ಆ ಪಾದ್ರಿ ಸಿಕ್ಕಿದ್ದ
ಅದೂ ಇದೂ ಮಾತಾಡಿದೆವು.
"ಎಂಥ ಮೊಲೆ, ಹೇಗೆ ಬತ್ತಿಹೋಗಿವೆ ನೋಡು,
ನರಗಳಿನ್ನೇನು ಸೊರಗುವುವು;
ನಡೆಯಿನ್ನಾದರು ಸ್ವರ್ಗದಲಿ ಬದುಕು
ಸಾಕೀ ನರಕದ ಕೊಳೆ ಬದುಕು"

"ಕೊಳಕಿಗು ಥಳುಕಿಗು ಬಿಡದಿಹ ನಂಟು
ಅಗಲಿ ಇರವು ಅವು" - ಚೀರಿದೆ ನಾನು,
"ಸಖರು ಹೋದರೂ ಗೋರಿಯೂ ತಿಳಿದಿದೆ
ಸುಖದ ಶಯ್ಯೆಯೂ ನಿಜವಿದನು.
ಈ ಪತಿತ ದೇಹದಲೆ, ವಿನಯದಿ ಹೆಮ್ಮೆಯ
ಮನದಿ ಅರಿತೆನೀ ಸತ್ಯವನು"

"ಹೆಣ್ಣು ಉಬ್ಬುವಳು ಸೆಡೆತು ಬೀಗುವಳು
ಪ್ರೇಮದುನ್ನತಾವಸ್ಥೆಯಲಿ;
ಆದರಾ ಪ್ರೇಮ ಸೌಧದ ನೆಲೆಯೋ
ಹೊಲಸೇ ತುಂಬಿದ ಠಾವಿನಲಿ!
ಹರಿಯದ ಬಿರಿಯದ ಒಂದಿದ್ದರೆ ಅದ
ಹೊಲೆವುದು ತಾನೇ ಎಲ್ಲಿ?"

ಮೂಲಕವನದ ಭಾವಕ್ಕೆ ಮಂಜುನಾಥರ ಅನುವಾದವು ಹತ್ತಿರದಲ್ಲಿದೆ ಎನ್ನಬಹುದು.

ಯೇಟ್ಸ ಕವಿಯ ಈ ಕವನದಲ್ಲಿ ಸಾಮಾಜಿಕ ವೈಷಮ್ಯದ ಜೊತೆಗೆ, ಪುರುಷಪ್ರಧಾನ ಸಮಾಜವ್ಯವಸ್ಥೆಯ ಭಂಡತನವೂ ಸಹ ವ್ಯಕ್ತವಾಗುತ್ತಿದೆ ಎನ್ನುವುದನ್ನು ಗಮನಿಸಬೇಕು.

Wednesday, June 26, 2013

ಭಾರತದ ನಾರೀಪಾಡು---ನಾಯೀಪಾಡು

ನಮ್ಮ ಭಾರತ ದೇಶವನ್ನು ನಾವು ‘ಪುಣ್ಯಭೂಮಿ’ ಎಂದು ಕರೆಯುತ್ತೇವೆ. ಇದರಂತಹ ಮಿಥ್ಯೆ ಇನ್ನೊಂದಿಲ್ಲ. ಇದು ಪಾಪಭೂಮಿ,ಇದು ಪಾಪಿಷ್ಠರ ಭೂಮಿ. ಯಾಕೆಂದರೆ ಇಲ್ಲಿ ಸ್ತ್ರೀಯರ ಮೇಲಿನ ದೌರ್ಜನ್ಯವು ತಡೆಯಿಲ್ಲದೆ ನಡೆದಿದೆ. ಸರಕಾರ ಹಾಗು ಸಮಾಜ ಇವೆರಡೂ ಈ ಅಪರಾಧದಲ್ಲಿ ಸಮಪಾಲು ಹೊಂದಿವೆ. ೨೦೧೩ರಲ್ಲಿ ಕೇಂದ್ರ ಸರಕಾರವು ಸ್ತ್ರೀಯರ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಉದ್ದೇಶದಿಂದ ೨೦೦೫ರ ಅಪರಾಧೀ ಶಾಸನಕ್ಕೆ ಬದಲಾವಣೆಗಳನ್ನು ತಂದಿತು. ಆದರೆ ಅದರಿಂದ ಏನೇನೂ ಪ್ರಯೋಜನವಾಗಿಲ್ಲ. ಇದಕ್ಕೆ ಕಾರಣ ಸ್ಪಷ್ಟವಿದೆ. ಇದೊಂದು ನಿರರ್ಥಕ ಶಾಸನವಾಗಿದೆ ಹಾಗು ಸ್ತ್ರೀದೌರ್ಜನ್ಯವನ್ನು ತಡೆಗಟ್ಟಲು ಅಸಮರ್ಥವಾದ ಶಾಸನವಾಗಿದೆ. ಈ ಶಾಸನವನ್ನು ಮಾಡಿದ ನಮ್ಮ ಜನಪ್ರತಿನಿಧಿಗಳು ಸಂಕುಚಿತ ಮನಸ್ಕರಾಗಿದ್ದಾರೆ. ಅವರಿನ್ನೂ ಸಾಂಪ್ರದಾಯಕ ಮನೋಧರ್ಮದಿಂದ ಹೊರಬಂದಿಲ್ಲ. ಇವರಲ್ಲಿ ಯಾರೊಬ್ಬರೂ ಸ್ತ್ರೀಪರವಾದ ಆಧುನಿಕ ಹಾಗು ವಿಶಾಲ ಮನೋಭಾವನೆಯನ್ನು ಹೊಂದಿಲ್ಲ!

ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಇದು ಬಹುಸ್ಪಷ್ಟವಾಗಿ ವ್ಯಕ್ತವಾಯಿತು. ಹೆಣ್ಣುಮಕ್ಕಳನ್ನು ಹಿಂಬಾಲಿಸದ ಗಂಡಸರು ಇದ್ದಾರೆಯೇ ಎಂದು ಕೇಳಿದ ಶಾಸಕರೊಬ್ಬರು ತಮ್ಮ ನೈತಿಕ ಮಟ್ಟವನ್ನು ಮೆರೆದರು ಹಾಗು ಚರ್ಚೆಯ ಗಂಭೀರತೆಯನ್ನೇ ಹಾಳು ಮಾಡಿದರು. ಹೆಣ್ಣುಮಕ್ಕಳು ಉದ್ರೇಕಕಾರಿ ಉಡುಪನ್ನು ಧರಿಸಬಾರದೆಂದು ಕೆಲವು ಜನಪ್ರತಿನಿಧಿಗಳು ಸಾರಿದರು. ಮೂರು ವರ್ಷದ ಶಿಶುಗಳೂ ಸಹ ಅತ್ಯಾಚಾರಕ್ಕೆ ಬಲಿಯಾಗುವಾಗ, ಶಿಶುವೇಶ್ಯೆಯರ ಹಿಂಡೇ ಈ ದೇಶದಲ್ಲಿ ಇರುವಾಗ ಈ ಹೇಳಿಕೆಗೆ ಅರ್ಥವಿದೆಯೆ? ಇನ್ನು ಖಾಪ ಪಂಚಾಯತಗಳ ಬಗೆಗೆ ಹಾಗು ಕೆಲವೊಂದು ಧಾರ್ಮಿಕ ಸಮುದಾಯಗಳ ಪಂಚಾಯತಿಗಳ ಬಗೆಗೆ ಹೇಳುವುದೇ ಬೇಡ. ಇವಿನ್ನೂ ಹದಿನೇಳನೆಯ ಶತಮಾನದಲ್ಲಿಯೇ ಬದುಕುತ್ತಿವೆ!

ಇಷ್ಟೆಲ್ಲ ಚರ್ಚೆಯ ಬಳಿಕ ಅಂಗೀಕೃತಗೊಂಡ ವಿಧೇಯಕವಾದರೂ ಎಂತಹದು? ಶಿಕ್ಷೆಯ ಪ್ರಮಾಣವನ್ನು ಹೆಚ್ಚಿಸಿದಂತಾಯಿತೇ ಹೊರತು, ಹೆಣ್ಣುಮಕ್ಕಳಿಗೆ ರಕ್ಷಣೆ ಮಾತ್ರ ದೊರೆಯಲಿಲ್ಲ.

‘ನಮ್ಮಲ್ಲಿ ಸಾಕಷ್ಟು ಶಾಸನಗಳಿವೆ, ಆದರೆ ಅವುಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ’ ಎನ್ನುವುದು ಕೆಲವರ ಅನುರಣಿಸುವ ಅಭಿಪ್ರಾಯವಾಗಿದೆ. ಆದರೆ ಈ ಎಲ್ಲ ಶಾಸನಗಳು ‘ಸರಿಯಾದ ಶಾಸನಗಳೇ?’ ಎನ್ನುವುದಕ್ಕೆ ಅವರಲ್ಲಿ ಉತ್ತರವಿಲ್ಲ. ಇತ್ತೀಚಿನ ಶಾಸನವೂ ಅದೇ ರೀತಿಯದಾಗಿದೆ. ಹೆಣ್ಣು ಮಕ್ಕಳಿಗೆ ದೌರ್ಜನ್ಯದ ವಿರುದ್ಧ ಸರಿಯಾದ ರಕ್ಷಣೆಯನ್ನು ನೀಡುವುದು ನಮ್ಮ ಶಾಸಕರ ಹಾಗು ನಮ್ಮ ಸಮಾಜದ ಗಂಭೀರ ಉದ್ದೇಶವಾಗಿದ್ದರೆ, ಈ ಕೆಳಗಿನ ಅಂಶಗಳನ್ನು ಶಾಸನದಲ್ಲಿ ಅಳವಡಿಸಬೇಕಾಗಿತ್ತು  ಎನ್ನುವುದು ನನ್ನ ಅನಿಸಿಕೆ.

(೧) ‘ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳು ಪೋಲೀಸ್ ಠಾಣೆಗೆ ತೆರಳಿ, ದೂರು ದಾಖಲಿಸಲು ಹಿಂಜರಿಯುತ್ತಾಳೆ. ಅಥವಾ ಅವಳು ನೀಡಿದ ದೂರನ್ನು ಪೋಲೀಸರು ದಾಖಲಿಸಿಕೊಳ್ಳುವುದಿಲ್ಲ’ ಎನ್ನುವುದು ಒಂದು ಸಾಮಾನ್ಯವಾದ ತಕರಾರು ಆಗಿದೆ. ಆದುದರಿಂದ ದೂರು ದಾಖಲಿಸಲು ಪ್ರತಿಯೊಂದು ತಾಲೂಕಾ ಕೇಂದ್ರದಲ್ಲಿ ಒಂದು ಮಹಿಳಾ ಕೇಂದ್ರವಿರಬೇಕು. ಈ ಕೇಂದ್ರದ ಮುಖ್ಯಸ್ಥಳಿಗೆ ಅರೆ-ನ್ಯಾಯಾಧೀಶರ ಸವಲತ್ತುಗಳು ಇರಬೇಕು. ದೂರನ್ನು ದಾಖಲಿಸಿಕೊಂಡ ತಕ್ಷಣ, ಈ ಮುಖ್ಯಸ್ಥಳು ಸಂಬಂಧಿಸಿದ ಪೋಲೀಸ್ ಠಾಣೆಗೆ ದೂರನ್ನು ವರ್ಗಾಯಿಸಬೇಕು ಹಾಗು ಸಂಬಂಧಿಸಿದ ಆರೋಗ್ಯಾಧಿಕಾರಿಗೆ ದೂರು ನೀಡಿದವಳ ತಕ್ಷಣದ ವೈದ್ಯಕೀಯ ಪರೀಕ್ಷೆಗಾಗಿ ಆದೇಶ ನೀಡಬೇಕು.

(೨) ಸಂಬಂಧಿಸಿದ ಪೋಲೀಸ್ ಠಾಣೆಯು ೧೫ ದಿನಗಳ ಒಳಗಾಗಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು ಹಾಗು ಮಹಿಳಾಕೇಂದ್ರಕ್ಕೆ ಪ್ರತಿ ವಾರವೂ ಪ್ರಗತಿಯ ವರದಿಯನ್ನು ನೀಡಬೇಕು. ಇದಕ್ಕೆ ತಪ್ಪಿದ ಪೋಲೀಸ್ ಸಿಬ್ಬಂದಿಯನ್ನು ಕೆಲಸದಿಂದ ವಿಲಂಬಿತಗೊಳಿಸಬೇಕು.

(೩)  ದೂರುದಾರಳು ಓರ್ವ ವ್ಯಕ್ತಿಯನ್ನು ಅತ್ಯಾಚಾರದ ಅಪರಾಧಿ ಎಂದು ಬೊಟ್ಟು ಮಾಡಿದ ಬಳಿಕ,  ತಾನು ಅಪರಾಧಿ ಅಲ್ಲ ಎಂದು ಸಾಬೀತುಪಡಿಸುವ ಹೊಣೆಯನ್ನು ಆರೋಪಿತನ ಮೇಲೆ ಹೊರಿಸಬೇಕು. ಅಪರಾಧ ಸಾಬೀತುಗೊಳಿಸಲು ಯಾವುದೇ ಸಾಕ್ಷಿಯ ಅವಶ್ಯಕತೆ ಇರಕೂಡದು. DNA ಪರೀಕ್ಷೆಯಲ್ಲಿ ಆತ ನಿರಪರಾಧಿ ಎಂದು ಸಾಬೀತಾದರೆ ಮಾತ್ರ, ಆತನನ್ನು ಮುಕ್ತಗೊಳಿಸಬಹುದು. ದೌರ್ಜನ್ಯದ ಕ್ರಿಯೆಯಲ್ಲಿ ಸಹಾಯ ನೀಡಿದವನನ್ನೂ ಸಹ ಅದೇ ಪ್ರಮಾಣದ ಅಪರಾಧಿ ಎಂದು ಪರಿಗಣಿಸಬೇಕು.

(೪) ಪೋಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ ಬಳಿಕ ಒಂದು ತಿಂಗಳಿನೊಳಗಾಗಿ ನ್ಯಾಯದಾನದ ಪ್ರಕ್ರಿಯೆ ಮುಗಿಯಬೇಕು. ಇಲ್ಲವಾದರೆ, ಆರೋಪಿಯ ಬೆಂಬಲಿಗರು ನ್ಯಾಯವನ್ನು ತಿರುಚುವ ಪ್ರಯತ್ನ ಮಾಡಬಹುದು. ಇದಕ್ಕಾಗಿ ಕ್ಷಿಪ್ರ-ನ್ಯಾಯಾಲಯಗಳನ್ನು ಸ್ಥಾಪಿಸಬೇಕು.

(೫) ಅತ್ಯಾಚಾರಿಗೆ bobbit ಶಿಕ್ಷೆಯನ್ನು ವಿಧಿಸಬೇಕು.

(೬) ದೌರ್ಜನ್ಯಕ್ಕೊಳಗಾದವಳ ಹೆಸರು, ದೆಸೆಗಳನ್ನು ಗುಪ್ತವಾಗಿ ಇರಿಸಬೇಕು. ಇದಕ್ಕೆ ಭಂಗ ತಂದಂತಹ ವ್ಯಕ್ತಿಗಳಿಗೆ ಶಿಕ್ಷೆ ವಿಧಿಸಬೇಕು.

ಅತ್ಯಾಚಾರದ ಪ್ರಕರಣಗಳಲ್ಲದೆ, ಸ್ತ್ರೀಯರನ್ನು ಅವಮಾನಿಸುವ, ಹಿಂಸಿಸುವ ಪ್ರಕರಣಗಳೂ ಅನೇಕವಿವೆ. ಕೆಲವೊಂದು ಸಲ ಪೋಲೀಸರೆ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿರುವದನ್ನು ದೂರದರ್ಶನದಲ್ಲಿ ನಾವೆಲ್ಲರೂ ನೋಡಿದ್ದೇವೆ. ಇಂತಹ ಪ್ರಕರಣಗಳ ಬಗೆಗೆ ಮಹಿಳಾಕೇಂದ್ರಗಳಲ್ಲಿ ದೂರು ನೀಡುವ ಅವಕಾಶವಿರಬೇಕು. ಈ ಮಹಿಳಾಕೇಂದ್ರಗಳ ಮುಖ್ಯಸ್ಥರಿಗೆ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳುವ ಅಧಿಕಾರವೂ ಇರಬೇಕು.

ಇದೆಲ್ಲ ಶಾಸನದ ಮಾತಾಯಿತು. ಸ್ತ್ರೀಯರ ಮೇಲಿನ ದೌರ್ಜನ್ಯಕ್ಕೆ ಸಾಮಾಜಿಕ ಕಾರಣಗಳೂ ಇವೆ. ಅವುಗಳನ್ನು ಈ ರೀತಿಯಲ್ಲಿ ಪಟ್ಟಿ ಮಾಡಬಹುದು:

(೧) ಭಾರತೀಯ ಸಮಾಜವು ಸ್ತ್ರೀವಿರೋಧಿ ಸಮಾಜವಾಗಿದೆ. ಹೆಣ್ಣುಮಗಳು ಗಂಡನ property, ಅವಳು  ಮನೆಯಲ್ಲಿ ದುಡಿಯುವ ಕೆಲಸಗಿತ್ತಿ ಹಾಗು ನಿರಾಕರಣೆಯ ಅಧಿಕಾರವಿಲ್ಲದ, ಪುಕ್ಕಟೆ ದೊರೆಯುವ ಭೋಗವಸ್ತು ಎಂದೇ ಈವರೆಗೂ ಪರಿಗಣಿತಳಾಗಿದ್ದಾಳೆ. ಹೊರಗೆ ದುಡಿದು ಹಣ ಸಂಪಾದಿಸುವ ಸ್ತ್ರೀಯರೂ ಸಹ ಈ ಮಾತಿಗೆ ಹೊರತಾಗಿಲ್ಲ! ಇದು ದೀರ್ಘಕಾಲದಿಂದಲೂ ನಡೆದು ಬರುತ್ತಿರುವ ಭಾರತೀಯ ಪರಂಪರೆ. ಇದಕ್ಕೆ ನಮ್ಮ ಪುರಾಣ, ‘ಪುಣ್ಯಕಥೆ’ಗಳಲ್ಲಿಯೇ ಅನೇಕ ಉದಾಹರಣೆಗಳಿವೆ. ಅವುಗಳಲ್ಲಿ ಕೆಲವನ್ನು ಮಾತ್ರ ಗಮನಿಸೋಣ:

ಸತ್ಯವಂತನೆಂದು ಖ್ಯಾತನಾದ ಹರಿಶ್ಚಂದ್ರ ಮಹಾರಾಜನು ‘ತನ್ನ ಸತ್ಯ’ವನ್ನು ಉಳಿಸಿಕೊಳ್ಳುವ ಸಲುವಾಗಿ ತನ್ನ ಹೆಂಡತಿ ತಾರಾಮತಿಯನ್ನು ಬಿಕರಿ ಮಾಡಿದ! ‘ಧರ್ಮರಾಯ’ನೆಂದು ಖ್ಯಾತಿವೆತ್ತ ಮಹಾರಾಜನು ಜೂಜಾಟದಲ್ಲಿ ತನ್ನ ಹೆಂಡತಿಯನ್ನೇ ಪಣಕ್ಕಿಟ್ಟು ಸೋತ! ಇದಕ್ಕಿಂತಲೂ ದಾರುಣವಾದ ಕತೆಯು ‘ಮಾಧವಿ’ ಎನ್ನುವ ಕನ್ಯೆಯದು. ಈ ಕತೆ ಹೀಗಿದೆ:

ಗಾಲವ ಎನ್ನುವ ಋಷಿಕುಮಾರನು ವಿಶ್ವಾಮಿತ್ರನ ಆಶ್ರಮದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ತಾನು ಸಲ್ಲಿಸಬೇಕಾದ ಗುರುದಕ್ಷಿಣೆ ಏನೆಂದು ಕೇಳಿದ. ಇದು ಸಂಪೂರ್ಣವಾಗಿ ಪುಕ್ಕಟೆಯಾದ ಶಿಕ್ಷಣವೆಂದು ಗುರು ವಿಶ್ವಾಮಿತ್ರನು ಸಾರಿದರೂ ಸಹ ಗಾಲವನು ಗುರುದಕ್ಷಿಣೆಯನ್ನು ಕೊಡುವ ತನ್ನ ಹಟವನ್ನು ಬಿಡಲಿಲ್ಲ. ಬೇಸತ್ತ ವಿಶ್ವಾಮಿತ್ರನು ತನಗೆ ಎಂಟುನೂರು ಕುದುರೆಗಳನ್ನು ಕೊಡಬೇಕೆಂದು ಹೇಳಿದ. ಆದರೆ ಒಂದು ಶರ್ಯತ್ತು. ಈ ಕುದುರೆಗಳ ಮೈಯೆಲ್ಲ ಬಿಳಿದಾಗಿದ್ದು, ಒಂದು ಕಿವಿ ಮಾತ್ರ ಕಪ್ಪಾಗಿರಬೇಕು! ಸರಿ, ಗಾಲವ ಮೊದಲಿಗೆ ಯಯಾತಿ ಎನ್ನುವ ಮಹಾರಾಜನಲ್ಲಿ ತೆರಳಿ ಇಂತಹ ಕುದುರೆಗಳಿಗಾಗಿ ಪ್ರಾರ್ಥನೆ ಮಾಡಿದ. ಯಯಾತಿಯ ಹತ್ತಿರ ಇಂತಹ ಒಂದೂ ಕುದುರೆ ಇರಲಿಲ್ಲ. ಛೇ! ಈ ಬ್ರಹ್ಮಚಾರಿಯನ್ನು ಬರಿಗೈಯಿಂದ ಮರಳಿ ಕಳಿಸುವುದೇ? ಧರ್ಮಿಷ್ಠ ಯಯಾತಿಯ ‘ಧರ್ಮನಿಷ್ಠೆ’ ಅದನ್ನೊಪ್ಪಲಿಲ್ಲ. ಆದುದರಿಂದ ಯಯಾತಿ ಮಹಾರಾಜನು ಕುದುರೆಗಳ ಬದಲಾಗಿ ತನ್ನ ಮಗಳು ಮಾಧವಿಯನ್ನು ಗಾಲವನಿಗೆ ಧಾರೆ ಎರೆದು ಕೊಟ್ಟುಬಿಟ್ಟ. ‘ಬೇರೆ ಯಾರಾದರೂ ರಾಜನ ಬಳಿಗೆ ಹೋಗು. ಅವನಲ್ಲಿ ಇಂತಹ ಕುದುರೆಗಳಿದ್ದರೆ, ನಿನ್ನ ಹೆಂಡತಿಗೆ ಬದಲಾಗಿ ಆ ಕುದುರೆಗಳನ್ನು ಪಡೆದುಕೊ’ ಎನ್ನುವ ಅದ್ಭುತ ಉಪಾಯ cum ಉಪದೇಶವನ್ನು ನೀಡಿದ. ಸರಿ, ಗಾಲವನು ಮಾಧವಿಗೆ ಮೂಗುದಾಣ ಹಾಕಿಕೊಂಡು ಮತ್ತೊಬ್ಬ ರಾಜನ ಬಳಿಗೆ ಎಳೆದುಕೊಂಡು ಹೋದ. ಅವನಲ್ಲಿ ಇಂತಹ ಕುದುರೆಗಳು ಎರಡುನೂರು ಮಾತ್ರ ಇದ್ದವು. ಅವನಿಗೆ ಮಾಧವಿಯನ್ನು ಒಂದು ವರ್ಷದ ಮಟ್ಟಿಗೆ ಭೋಗ್ಯಕ್ಕೆ ಹಾಕಿದ ಗಾಲವನು, ಎರಡುನೂರು ಕುದುರೆಗಳನ್ನು ಸಂಪಾದಿಸಿಕೊಂಡೊಯ್ದು, ವಿಶ್ವಾಮಿತ್ರನಿಗೆ ಅರ್ಪಿಸಿದ. ಒಂದು ವರ್ಷದ ಅವಧಿಯಲ್ಲಿ ಮಾಧವಿಯು ಒಂದು ಮಗುವನ್ನು ಹೆತ್ತಿದ್ದಳು. ಮರಳಿ ಬಂದ ಗಾಲವನು ಆ ಮಗುವನ್ನು ಅದೇ ರಾಜನಿಗೆ ಕೊಟ್ಟು, ತನ್ನ ಹೆಂಡತಿ ಮಾಧವಿಯನ್ನು ಕರೆದೊಯ್ದ. ಈ ಕಥೆ ಮತ್ತೆ ಇಬ್ಬರು ರಾಜರಲ್ಲಿ ಪುನರಾವರ್ತಿಸಿತು. ಮಾಧವಿ ಒಟ್ಟು ಮೂವರು ರಾಜರಿಂದ ಬಳಕೆಯಾಗಿ, ಮೂರು ಕಂದಮ್ಮಗಳನ್ನು ಅವರಿಗೆ ನೀಡಿದಳು. ಆದರೆ ಇನ್ನೂ ಎರಡುನೂರು ಕುದುರೆಗಳು ಬಾಕಿ ಉಳಿದವಲ್ಲ! ಯಾವ ರಾಜನಲ್ಲೂ ಇಂತಹ ಒಂದು ಕುದುರೆಯೂ ಸಿಗಲೇ ಇಲ್ಲ. ಆದುದರಿಂದ ಗಾಲವನು ಮಾಧವಿಯನ್ನೇ ಒಂದು ವರ್ಷದವರೆಗೆ ವಿಶ್ವಾಮಿತ್ರನಿಗೆ ಕೊಟ್ಟು, ತನ್ನ ಗುರುದಕ್ಷಿಣೆಯನ್ನು ಚುಕ್ತಾ ಮಾಡಿದ. ವಾಹ್‍ವಾ, ಗಾಲವ! ಇದು ಪುರಾಣಕಾಲದಲ್ಲಿ ಭಾರತೀಯ ಹೆಣ್ಣಿಗಿದ್ದ ಸ್ಥಾನಮಾನವನ್ನು ಹಾಗು ಹೆಣ್ಣಿನ ‘ಬೆಲೆ’ಯನ್ನು ಸೂಚಿಸುವ ಕತೆಯಾಗಿದೆ!

ಭಾರತದ ಮೇಲೆ ತುರುಕರ ಹಾಗು ಮಂಗೋಲರ ದಾಳಿ ಪ್ರಾರಂಭವಾದ ಮೇಲಂತೂ ಹೆಣ್ಣಿನ ಪರಿಸ್ಥಿತಿ ಇನ್ನಿಷ್ಟು ಶೋಚನೀಯವಾಯಿತು. ದಾಳಿಗೆ ತುತ್ತಾದ ಹೆಣ್ಣುಗಳು ದಾಳಿಕೋರರ ಉಪಭೋಗದ ತೊತ್ತುಗಳಾದವು. ಅವಳ ಸಾಮಾಜಿಕ ಸ್ಥಾನಮಾನಗಳು ಶೂನ್ಯಮಟ್ಟಕ್ಕಿಳಿದವು.

ಬ್ರಿಟಿಶ್ ಆಡಳಿತವೇ ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸಲು ಕಾರಣೀಭೂತವಾಯಿತು ಎನ್ನಬಹುದು. ‘ಸತಿ ಪದ್ಧತಿ’ಯನ್ನು ನಿಷೇಧಿಸಿದ ಬ್ರಿಟಿಶ್ ಗವರ್ನರ ವಿಲಿಯಮ್ ಬೆಂಟಿಂಕನೇ ಬಾಲ್ಯವಿವಾಹ ನಿರೋಧ ಕಾಯದೆಯನ್ನೂ ೧೮೭೨ರಲ್ಲಿ ಜಾರಿಗೆ ತಂದನು. ಈ ಕಾಯದೆಯ ಪ್ರಕಾರ ೧೪ ವರ್ಷದ ಒಳಗಿನ ಹುಡುಗ ಹುಡುಗಿಯರ ವಿವಾಹವು ಕಾನೂನುಬಾಹಿರವಾಯಿತು.

(೨) ಜನಸಂಖ್ಯಾಸ್ಫೋಟದ ಪರಿಣಾಮವಾಗಿ, ಹಳ್ಳಿಗಳಲ್ಲಿರುವ  ರೈತಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ. ಅವರೆಲ್ಲ ಕೆಲಸ ಹುಡುಕುತ್ತ ಪಟ್ಟಣಗಳಿಗೆ ಹೋಗುತ್ತಿದ್ದಾರೆ. ಇವರಲ್ಲಿ ಬಹುಸಂಖ್ಯ ಜನರು ತಮ್ಮ ಹೆಂಡತಿ ಹಾಗು ಮಕ್ಕಳನ್ನು ಹಳ್ಳಿಗಳಲ್ಲಿಯೇ ಬಿಟ್ಟು ಹೋಗುವಂತಹವರು. ಪಟ್ಟಣದಲ್ಲಿರುವ ಸ್ಥಿತಿವಂತರ ಲಂಗುಲಗಾಮಿಲ್ಲದ ಜೀವನವನ್ನು ನೋಡುವ ಇವರಲ್ಲಿಯೂ ಸಹ ನೈತಿಕ ಮೌಲ್ಯಗಳು ಮಾಯವಾಗುತ್ತಿವೆ. ಕಾಮತೃಷೆಯನ್ನು ಹಿಂಗಿಸಲು ಅನೇಕರು ಸೂಳೆಯರನ್ನು ಹುಡುಕಿಕೊಂಡು ಹೋಗುತ್ತಾರೆ. ಅಸಹಾಯಕ ಹೆಣ್ಣೊಂದು ಸಿಕ್ಕರೆ, ಅವಳ ಮೇಲೆ ಅತ್ಯಾಚಾರ ಎಸಗಲು ಥಟ್ಟನೆ ಮುನ್ನುಗ್ಗುತ್ತಾರೆ ಹಾಗು ಸಾಕ್ಷಿಯನ್ನು ಅಳಿಸಲು ಅವಳ ಕೊಲೆ ಮಾಡುತ್ತಾರೆ.

ಇಂತಹ population migration ಅನ್ನು ನಾನು ಧಾರವಾಡದಂತಹ ಸಣ್ಣ ಊರಿನಲ್ಲಿಯೇ ನೋಡುತ್ತಿದ್ದೇನೆ. ಇಲ್ಲಿಯ ರೈತಕಾರ್ಮಿಕರೆಲ್ಲ ಕಟ್ಟಡ ಮೊದಲಾದ ಕೆಲಸಗಳಲ್ಲಿ ದುಡಿಯಲು ಗೋವಾಕ್ಕೆ ಹೋಗುತ್ತಿದ್ದಾರೆ. ಅದರಂತೆ ಉತ್ತರಪ್ರದೇಶದ ಮತ್ತುಬಿಹಾರದ ಚಿಕ್ಕಪುಟ್ಟ ಕೆಲಸಗಾರರು ಹಾಗು ಅರೆತಾಂತ್ರಿಕರು ಧಾರವಾಡಕ್ಕೆ ಬರುತ್ತಿದ್ದಾರೆ. ಇವರೆಲ್ಲರೂ ರಜಾಸಮಯದಲ್ಲಿ ತಮ್ಮ ಮನೆಮಂದಿಯ ಭೆಟ್ಟಿಗಾಗಿ ತಮ್ಮ ಊರುಗಳಿಗೆ ಮರಳುವಂತಹವರು. ಅಲ್ಲಿಯವರೆಗೂ ಇವರಿಗೆ ಸ್ಥಳೀಯ ಸೂಳೆಯರೇ ಗತಿ. ಇವರಿಂದಾಗಿಯೇ ಸೂಳೆಗಾರಿಕೆ ಎಲ್ಲೆಲ್ಲೂ ದೊಡ್ಡ ಉದ್ದಿಮೆಯಾಗಿ ಬೆಳೆಯಲಾರಂಭಿಸಿದೆ!

ಇದು ಪೋಲೀಸರಿಗೂ ಇಷ್ಟವಾದ ಸಂಗತಿಯೇ ಆಗಿರಬಹುದು. ಹೆಚ್ಚೆಚ್ಚು ಅಪರಾಧ ನಡೆಯುವ ಠಾಣೆಗಳು ಹೆಚ್ಚಿನ ಕಿಮ್ಮತ್ತಿಗೆ ಹರಾಜು ಆಗುತ್ತವೆ ಅನ್ನುವ ವದಂತಿಯೊಂದಿದೆ. ಆ ಲೆಕ್ಕದಲ್ಲಿ ನೋಡಿದರೆ, ಮುಂಬಯಿ, ಕೋಲಕತ್ತಾ ಹಾಗು ದಿಲ್ಲಿಯಂತಹ ನಗರಗಳ ಮುಖ್ಯ ಪೋಲೀಸ ಸ್ಥಾನಗಳ ಹರಾಜು ಕೋಟಿಯಲ್ಲಿಯೇ ಇರಬಹುದೇನೋ! ಇಂತಹ ಪೋಲೀಸರಿಗೆ ಹೆಣ್ಣುಮಕ್ಕಳು ಕಾಲುಕಸದ ಸಮಾನ. ಅವರ ಜೊತೆಗೆ ಉದ್ಧಟತನದಿಂದ ವರ್ತಿಸುವುದು ಪೋಲೀಸರಿಗೆ ಸಹಜಸ್ವಭಾವವೇ ಆಗಿಬಿಡುತ್ತದೆ.

(೩) ನಮ್ಮ ತರುಣರಲ್ಲಿ ಮಾಯವಾಗುತ್ತಿರುವ ನೈತಿಕ ಮೌಲ್ಯಗಳಿಗೆ ಕಾರಣವೇನು? ಟೀವಿ, ಸಿನೆಮಾ ಮೊದಲಾದ ಮನೋರಂಜನೆಯ ಸಾಧನಗಳು ಆಧುನಿಕತೆಯ ನೆವದಲ್ಲಿ, ಕೀಳು ಕಾಮನೆಗಳನ್ನು ಉತ್ತೇಜಿಸುತ್ತಿರುವದು ಒಂದು ಕಾರಣವಾದರೆ, ಯುವ ಪೀಳಿಗೆಗೆ ಸರಿಯಾದ role modelಗಳು ಇಲ್ಲದೇ ಇರುವುದು ಮತ್ತೊಂದು ಕಾರಣವಾಗಿದೆ.
ಸ್ವಾತಂತ್ರ್ಯಪೂರ್ವದಲ್ಲಿ ಮಹಾತ್ಮಾ ಗಾಂಧೀ, ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ವ್ಯಕ್ತಿಗಳು ನಮ್ಮ ಆದರ್ಶ ಪುರುಷರಾಗಿದ್ದರು. ಈಗಿನ ಆದರ್ಶ ಪುರುಷರು ಎಂಥವರು? ಕಾಮುಕ, ಲಂಚಬಡಕ, ಅಧಿಕಾರದ ದುರುಪಯೋಗ ಮಾಡಿಕೊಳ್ಳುವ ರಾಜಕಾರಣಿಗಳು ಇಂದಿನ role model ಆಗಿದ್ದಾರೆ. ವಿಧಾನಸೌಧದಲ್ಲಿ ಕುಳಿತು ಮೋಬೈಲುಗಳಲ್ಲಿ ನೀಲಿ ಚಿತ್ರಗಳನ್ನು ನೋಡುವ ಶಾಸಕರು ಹಾಗು ವೃದ್ಧಾಪ್ಯದಲ್ಲಿಯೂ ಸಹ ಅನೈತಿಕ ಕಾಮಕೇಳಿಗಳಲ್ಲಿ ತೊಡುಗುವ ರಾಜ್ಯಪಾಲರು, ಕುಡಿದು ಧಾಂಧಲೆ ಹಾಕುವ ಸಿರಿವಂತರ ಹಾಗು ಅಧಿಕಾರಸ್ಥರ ಮಕ್ಕಳು ನಮ್ಮ ಯುವಕರ ಕಣ್ಣೆದುರಿಗೆ ಇರುವ ಆದರ್ಶಪುರುಷರಾಗಿದ್ದಾರೆ. ಹೀಗಿದ್ದಾಗ ನಮ್ಮ ಯುವಕರು ಇವರನ್ನೇ ಅನುಕರಿಸುವುದು ಸಹಜವೇ ಆಗಿದೆ.

(೪) ಇಲಿಗಳನ್ನು ಹಾಗು ಕೋತಿಗಳನ್ನು ಬಳಸಿಕೊಂಡು ಪ್ರಾಣಿವರ್ತನಾ ವಿಜ್ಞಾನಿಗಳು ಮಾಡಿದ ಕೆಲವು ಪ್ರಯೋಗಗಳು ಅರ್ಥಪೂರ್ಣವಾಗಿವೆ: ದಟ್ಟ ಅರಣ್ಯ, ಸಾಧಾರಣ ಅರಣ್ಯ ಹಾಗು ವಿರಳ ಅರಣ್ಯಗಳಲ್ಲಿ ವಾಸಿಸುತ್ತಿರುವ ಮಂಗಗಳ ಮೇಲೆ ಈ ಪ್ರಯೋಗಗಳನ್ನು ಮಾಡಲಾಯಿತು. (ಧಾರವಾಡವೂ ಸಹ ಈ ಪ್ರಯೋಗದ ಒಂದು ಪ್ರದೇಶವಾಗಿತ್ತು ಎಂದು ಇಲ್ಲಿಯ ಮಂಗಗಳು ಅಭಿಮಾನ ಪಡಬಹುದು!) ಅದರಂತೆ ಅಷ್ಟೇ ಇಲಿಗಳನ್ನು ಸಣ್ಣ ಜಾಗದಲ್ಲಿ, ಮಧ್ಯಮ ವಿಸ್ತಾರದ ಜಾಗದಲ್ಲಿ ಹಾಗು ದೊಡ್ಡ ಜಾಗದಲ್ಲಿ ಬಂಧಿಸಿ ಪ್ರಯೋಗಗಳಿಗೆ ಒಳಪಡಿಸಲಾಯಿತು. ಪ್ರಯೋಗಗಳ ಫಲಿತಾಂಶಗಳನ್ನು ಈ ರೀತಿಯಾಗಿ ಅರ್ಥೈಸಲಾಗುತ್ತಿದೆ:
(೧) ಜನಸಂಖ್ಯೆ ವಿರಳವಾಗಿರುವ ಹಾಗು ಬಲಿಷ್ಠ ನಾಯಕನಿರುವ ಪ್ರದೇಶದಲ್ಲಿ ಶಿಸ್ತು ಕಂಡು ಬರುತ್ತದೆ.
(೨) ಜನಸಂಖ್ಯೆ ಹೆಚ್ಚಿದ್ದಲ್ಲಿ ಹಾಗು ನಿರ್ಬಲ ನಾಯಕನಿರುವ ಪ್ರದೇಶದಲ್ಲಿ ಆಂತರಿಕ ದೌರ್ಜನ್ಯ ಕಂಡು ಬರುತ್ತದೆ.

ನಮ್ಮ ಈಗಿನ ಜನಸಂಖ್ಯೆ ಹಾಗು ನಮ್ಮ ಈಗಿನ ರಾಜಕೀಯ ನಾಯಕತ್ವ ಹೇಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಹತ್ತು ಜನ ಕೂಡಬಹುದಾದ ದೋಣಿಯಲ್ಲಿ ನೂರು ಜನ ಕೂತರೆ ಏನಾಗಬಹುದು? ಇದು ಸದ್ಯದ ನಮ್ಮ ಭಾರತದ ಪರಿಸ್ಥಿತಿ. ಇನ್ನು ಈ ದೋಣಿಯನ್ನು ನಡೆಯಿಸುವ ನಾವಿಕನು ಎಂತಹ ದುರ್ಬಲ ವ್ಯಕ್ತಿಯಾಗಿದ್ದಾನೆ ಎನ್ನುವುದನ್ನು ಎಲ್ಲರೂ ಬಲ್ಲರು.  ಇಷ್ಟಾದರೂ ಸಹ ನಮ್ಮ ಜನಸಂಖ್ಯೆಯನ್ನು ನಿಯಂತ್ರಿಸುವ ಮಾತನ್ನೇ ಯಾರೂ ಆಡುವುದಿಲ್ಲ ಹಾಗು ತಮ್ಮ ಸ್ವಾರ್ಥಕ್ಕಾಗಿ ದುರ್ಬಲ ನಾಯಕನನ್ನೇ ಸಿಂಹಾಸನದ ಮೇಲೆ ಸ್ಥಾಪಿಸುತ್ತಿದ್ದಾರೆ.!

ಪರಿಹಾರ:
ಈ ಸಮಸ್ಯೆಯ ಪರಿಹಾರಕ್ಕಾಗಿ ಕೆಳಗಿನ ಅಂಶಗಳನ್ನು ಅಳವಡಿಸಿಕೊಳ್ಳಬಹುದು:  
ಗಂಡಸರಿಗೆ ಸರಿಸಮಾನವಾದ ಹಕ್ಕುಗಳನ್ನು ಹೆಣ್ಣುಮಕ್ಕಳಿಗೆ ಕೊಟ್ಟರೆ ಸಾಲದು. ಅವರಿಗೆ ವಿಶೇಷವಾದ ಸವಲತ್ತುಗಳನ್ನು ಕೊಡುವುದು ಅವಶ್ಯವಾಗಿದೆ. ಇದಕ್ಕೆ ಕಾರಣ ಹೀಗಿದೆ:
ಸಂತಾನದ ವಿಪುಲತೆಯು ನಿಸರ್ಗದ ಆಶಯವಾಗಿದೆ. ಆದುದರಿಂದಲೇ ಮಕ್ಕಳನ್ನು ಹೊರಬೇಕಾದ ಹಾಗು ಹೆರಬೇಕಾದ ಹೆಣ್ಣುಮಗಳು ಚಿಕ್ಕ ವಯಸ್ಸಿನಲ್ಲಿಯೇ ಋತುಮತಿಯಾಗಿ ಬಿಡುತ್ತಾಳೆ; ಆದರೆ ಗಂಡುಮಗುವು ‘ವೀರ್ಯವಂತ’ನಾಗುವುದಕ್ಕೆ ಹೆಚ್ಚಿಗೆ ಕಾಲ ಬೇಕಾಗುತ್ತದೆ. ಹೆಣ್ಣುಮಗುವು ತನ್ನ ದೈಹಿಕ ಚೈತನ್ಯದ ಬಹುಭಾಗವನ್ನು ಗರ್ಭಾಶಯದ ಬೆಳವಣಿಗೆಯಲ್ಲಿ ವ್ಯಯಿಸಬೇಕಾಗುವದರಿಂದ, ಅವಳ ಇತರ ದೈಹಿಕ ಬೆಳವಣಿಗೆಯು ಗಂಡಸಿನ ಬೆಳವಣಿಗೆಯಷ್ಟು ಆಗಲಾರದು. ಗರ್ಭವತಿ ಹೆಣ್ಣನ್ನು ಗಂಡು ರಕ್ಷಿಸುವುದು ಅನಿವಾರ್ಯವಾಗುವುದರಿಂದ, ಗಂಡಿನ ದೈಹಿಕ ಬೆಳವಣಿಗೆಯು ಅಧಿಕವಾಗಿರುವುದು ಸಹಜವೇ ಆಗಿದೆ. ಈ ರೀತಿಯಾಗಿ ದೈಹಿಕವಾಗಿ ಹೆಚ್ಚಿಗೆ ಸಶಕ್ತನಾದ ಗಂಡಸು ಹೆಣ್ಣಿನ ರಕ್ಷಣೆ ಮಾಡುವುದರ ಬದಲಾಗಿ ಅವಳ ಶೋಷಣೆ ಮಾಡತೊಡಗಿರುವುದು ನಿಸರ್ಗವಿರೋಧಿಯಾಗಿದೆ, ಪರಮ ನೀಚತನವಾಗಿದೆ. ಹೆಣ್ಣಿಗೆ ಗರ್ಭಧಾರಣೆಯ ಅವಧಿಯಲ್ಲಿ ಹಾಗು ಶಿಶುಪಾಲನೆಯ ಅವಧಿಯಲ್ಲಿ ವಿಶೇಷ ಸವಲತ್ತುಗಳನ್ನು ಕೊಡುವುದು ನಿಸರ್ಗಸಹಜವಾದ ಅವಶ್ಯಕತೆಯಾಗಿದೆ.

ಬಹುಶಃ ಈ ಕಾರಣದಿಂದಲೇ ಮನು ‘ನ ಸ್ತ್ರೀ ಸ್ವಾತಂತ್ರ್ಯಮರ್ಹತಿ’ ಎಂದು ಹೇಳಿದನು. ಅವನ ಆಶಯವೆಂದರೆ, ಹೆಣ್ಣನ್ನು ಬಾಲ್ಯಾವಸ್ಥೆಯಲ್ಲಿ ತಂದೆ, ಯೌವನದಲ್ಲಿ ಗಂಡ ಹಾಗು ವೃದ್ಧಾಪ್ಯದಲ್ಲಿ ಮಕ್ಕಳು ನೋಡಿಕೊಳ್ಳಬೇಕು. ಅವಳು ಒಂಟಿಯಾಗಿ ಜೀವಿಸುವಂತೆ ಆಗಬಾರದು. ಇದು ಸ್ತ್ರೀಯ ವಿಶೇಷ ಹಕ್ಕಾಗಿದೆ.

ಸ್ತ್ರೀದೌರ್ಜನ್ಯವನ್ನು ತಡೆಯಲು ಕೆಳಗಿನ ಶಾಸನಾತ್ಮಕ ಪರಿಹಾರಗಳನ್ನು ಅಳವಡಿಸಿಕೊಳ್ಳಬಹುದು:
(೧) ಸ್ತ್ರೀದೌರ್ಜನ್ಯದ ದೂರುಗಳನ್ನು ಸ್ವೀಕರಿಸಲು quasi judicial ಅಧಿಕಾರವಿರುವ ಮಹಿಳಾಕೇಂದ್ರಗಳನ್ನು ಸ್ಥಾಪಿಸಬೇಕು. ಸದ್ಯಕ್ಕೆ domestic violence ತಡೆಗಟ್ಟಲು ಮಾತ್ರ ಇಂತಹ ಕೇಂದ್ರಗಳಿದ್ದು, ಇವುಗಳ ಅಧಿಕಾರ ವಿಸ್ತರಣೆಯಾಗಬೇಕು. ಪೋಲೀಸ್ ಠಾಣೆಗಳಿಗೆ ಈ ಕೇಂದ್ರಗಳಿಂದ ದೂರು ಹೋಗುವಂತಿರಬೇಕು. ಈ ಕೇಂದ್ರಗಳಿಗೆ ಪೋಲೀಸರಿಂದ ಪ್ರಗತಿವರದಿಯನ್ನು ನಿಯಮಿತವಾಗಿ ಸಲ್ಲಿಸಬೇಕು. ವಿಳಂಬವಾದಲ್ಲಿ ಪೋಲೀಸರನ್ನು ವಿಲಂಬಿತಗೊಳಿಸಬೇಕು. ತಾನು ಅಪರಾಧಿಯಲ್ಲ ಎಂದು ಸಾಬೀತು ಪಡಿಸುವ ಹೊಣೆಯನ್ನು ಆರೋಪಿಯ ಮೇಲೆ ಹೇರಬೇಕು. ಅತ್ಯಾಚಾರದ ಪ್ರಕರಣಗಳಲ್ಲಿ DNA ವರದಿಯನ್ನು ಅವಲಂಬಿಸಿ ಆರೋಪಿಯನ್ನು ಮುಕ್ತಗೊಳಿಸಬಹುದು.
(೨) ತಕ್ಷಣವೇ ಎಲ್ಲೆಡೆಗಳಲ್ಲಿ ಇರುವ ವೇಶ್ಯಾಗೃಹಗಳನ್ನು ಮುಚ್ಚಿ ಹಾಕಬೇಕು. ಇಲ್ಲಿ ಬಂಧಿಗಳಾಗಿ ಬಳಲುತ್ತಿರುವ ಹೆಣ್ಣುಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕು.
(೩) ಟೀವಿ, ಸಿನೆಮಾ ಮೊದಲಾದ ಮನೋರಂಜನೆಗಳಲ್ಲಿ ಹೆಣ್ಣುಮಕ್ಕಳ ದೇಹಪ್ರದರ್ಶನವನ್ನು ಪ್ರತಿಬಂಧಿಸಬೇಕು. ಕುಡಿಯುವ ತಾಣಗಳಲ್ಲಿ ನೃತ್ಯವನ್ನು ನಿಷೇಧಿಸಬೇಕು.
(೪) ಸಾರ್ವಜನಿಕ ವಾಹನಗಳಲ್ಲಿ ಹಾಗು ಸಾರ್ವಜನಿಕ ಸ್ಥಾನಗಳಲ್ಲಿ ಹೆಣ್ಣುಮಕ್ಕಳಿಗೆ ವಿಶೇಷ ಸವಲತ್ತುಗಳನ್ನು ಕೊಡಬೇಕು.


ಇಂತಹ ಶಾಸನವನ್ನು ತರಲು ಪ್ರಜ್ಞಾವಂತರು ನಮ್ಮ ಶಾಸಕರನ್ನು ಒತ್ತಾಯಿಸಬೇಕು.