Saturday, November 15, 2014

‘ಅಪ್ಪು ಆತ್ಮನನು ಆತ್ಮನೆ ಅಪ್ಪೆ’...............ದ.ರಾ.ಬೇಂದ್ರೆ



ಅಪ್ಪು ಆತ್ಮನನು, ಆತ್ಮನೆ ಅಪ್ಪೆ
ನಿನ್ನನು ಒಪ್ಪದೆ ನನ್ನನು ಒಪ್ಪೆ

ತಿಳಿವಳಿಕೆಯ ತುದಿ ನಾವೂ ನೀವೂ
ತಿಳಿಯೆನು ಎನ್ನುವ ಹಠವೇ ಸಾವು

ತಿಳಿಸಿರಿ ಎನುವಲಿ ತಿಳಿವಿರಬೇಕು
ನೀರಿನ ಕದಡೂ ಇಳಿದಿರಬೇಕು

ಬಲ್ಲೆನು ಎನುವುದು ಗರ್ವವು ನೋಡಾ
ತಿಳಿಯಲು ಬಲ್ಲೆನು ನೀನೆನಬೇಡಾ

ಬಲಗಡೆಯಿಂದ ಎಡಗಡೆ ಓದು
ಜಾಜಾ ಮಂತ್ರಾ ಮಾತಿನ ಜಾಡು

ಹೊರಮೈ ಒಳಮೈ ಒಂದೇ ದೇಹ
ಇರುವಿನ ಅರಿವಿನ ಹರಿವೇ ಸ್ನೇಹ

ಸುತ್ತೂ ಕಡೆಗೆ ಎಲ್ಲೂ ಇಲ್ಲಾ
ಬೆಳಕೇ ಬೆಲ್ಲಾ ಕತ್ತಲೆ ಅಲ್ಲಾ

ಲ್ಲಾಅಲೆತ್ತಕ ಲ್ಲಾಬೆ ಕೆಳಬೆ
ಲ್ಲಾಇ ಲ್ಲೂಎ ಗೆಡಕ ತ್ತೂಸು


ಕವಿ ಬದಲಾಗುತ್ತ ಹೋದಂತೆ, ಅವನ ಕಾವ್ಯವೂ ಬದಲಾಗುತ್ತ ಹೋಗುತ್ತದೆ. ಬೇಂದ್ರೆಯವರು ಈ ಮಾತಿಗೆ ಉತ್ತಮ ಉದಾಹರಣೆಯಾಗಿದ್ದಾರೆ. ‘ಅರಳು ಮರಳು’ ನಂತರದ ಬೇಂದ್ರೆ-ಕಾವ್ಯವು ಕಾವ್ಯವೇ ಅಲ್ಲ ಎಂದು ಕೆಲವರು ವಿಮರ್ಶಕರು ಹೇಳಿದ್ದುಂಟು. ‘ಅರಳು ಮರಳು’ವಿನ ಮೊದಲಿನ ಬೇಂದ್ರೆಯವರು ನವೋದಯದ ಆದರ್ಶಗಳ ಕನಸು ಕಂಡ ಕವಿ. ಅವರ ದೃಷ್ಟಿ ಅಧ್ಯಾತ್ಮಿಕವಾಗುತ್ತ ಹೋದಂತೆ ಅವರ ಕಾವ್ಯ ಬದಲಾಗುತ್ತ ಹೋಯಿತು. ಅವರು ಶ್ರೇಷ್ಠ ಕವಿಯಾಗಿದ್ದರೂ ಸಹ ಆಧ್ಯಾತ್ಮಿಕ ಸಾಧನೆಯ ಪಥದಲ್ಲಿ ಇನ್ನೂ ದೂರ ಕ್ರಮಿಸಿರಲಿಲ್ಲ. ಹೀಗಾಗಿ ಆಧ್ಯಾತ್ಮಿಕ ಅನುಭವದ ಅವರ ಕವನಗಳು ಈ ಅವಧಿಯಲ್ಲಿ ಉತ್ಕಟ ಕಾವ್ಯವಾಗಲಿಲ್ಲ. ಅವರ ಸಾಧನೆ ಹೆಚ್ಚಾದಂತೆ, ಕವನಗಳು, ತೋರಿಕೆಗೆ ಸರಳವಾದರೂ ಸಹ, ಹೆಚ್ಚು ಗೂಢವಾದವು. ಇಲ್ಲಿರುವ ಕವನವು ಅಂತಹ ಒಂದು ಕವನ. ಇನ್ನು ಈ ಕವನವನ್ನು ಹೇಗೆ ಅನುಭವಿಸಬೇಕು? ಕನ್ನಡವನ್ನು ಓದಲಿಕ್ಕೆ ಕನ್ನಡ ಲಿಪಿಯನ್ನು ಕಲಿಯಬೇಕು. ಇಂಗ್ಲಿಶ್‍ಅನ್ನು ಓದಲು ಇಂಗ್ಲಿಶ್ ಲಿಪಿ ಬರಬೇಕು. ಅದರಂತೆ ವಿಭಿನ್ನ ಕವಿಗಳನ್ನು (--ಅವರು ಒಳ್ಳೆಯ ಕವಿಗಳೇ ಇರಲಿ, ಕೆಟ್ಟ ಕವಿಗಳೇ ಇರಲಿ—) ಅರ್ಥೈಸಿಕೊಳ್ಳಲು ಅವರ ಕಾವ್ಯಭಾಷೆಯನ್ನು ನಾವು ತಿಳಿಯಬೇಕು.

ಬೇಂದ್ರೆಯವರ ‘ನಾಕು ತಂತಿ’ ಕವನವನ್ನು ನೋಡಿರಿ: ನಾನು, ನೀನು, ಅವನು, ತಾನು ಎನ್ನುವುದೇ ಈ ವಿಶ್ವಸಂಸಾರದ ನಾಲ್ಕು ತಂತಿಗಳು. ಆದರೆ, ವಿಶ್ವವು ಭಿನ್ನವಾಗಿ ಒಡೆಯುವ ಮೊದಲು, ಈ ಎಲ್ಲ ತಂತಿಗಳು ಒಂದೇ, ಅಭಿನ್ನ ರೂಪ. ಬೇಂದ್ರೆಯವರು ಈ ತತ್ವವನ್ನು ಈ ಕವನದಲ್ಲಿ ಅನುಭವಿಸುತ್ತಿದ್ದಾರೆ. ಮೊದಲು ವಿಘಟಿತ ವಿಶ್ವವನ್ನು ನಾಲ್ಕು ತಂತಿಗಳ ಮೂಲಕ ನೋಡಿದ ಬೇಂದ್ರೆಯವರು, ಈಗ ಅದೇ ವಿಶ್ವವನ್ನು ಒಂದೇ ರೂಪದಲ್ಲಿ ನೋಡುತ್ತಿದ್ದಾರೆ.

ಆತ್ಮ ಎಂದರೆ self. ತನ್ನನ್ನು ತಿಳಿದುಕೊಳ್ಳಬಯಸುವ ವ್ಯಕ್ತಿಯು ತನ್ನನ್ನು ಅಪ್ಪಿಕೊಳ್ಳಬೇಕು. ಈ ಮಾತಿಗೆ ಏನರ್ಥ? ತನ್ನನ್ನು ತಾನು ಧ್ಯಾನಿಸಿಕೊಳ್ಳಬೇಕು ಎಂದಲ್ಲವೆ? ತನ್ನನ್ನು ತಾನು ಧ್ಯಾನಿಸಿಕೊಂಡಾಗ, ‘ತಾನು’ ಎಂದು ತಿಳಿದುಕೊಂಡಿರುವ ಮನಸ್ಸು ಅಥವಾ ಪ್ರಜ್ಞೆಯು ತನ್ನನ್ನೇ ಅಪ್ಪಿಕೊಳ್ಳುತ್ತದೆ ಅಂದರೆ ತನ್ನಲ್ಲೇ ಸಮರಸವಾಗುತ್ತದೆ. ಇದೇ ಮಾತನ್ನು ಅಲ್ಲಮಪ್ರಭುಗಳು ತಮ್ಮ ಒಂದು ವಚನದಲ್ಲಿ, ‘ಗುಹೇಶ್ವರ ಸತ್ತ, ನಾನು ಉಳಿದೆ’ ಎಂದು ಹೇಳಿದ್ದಾರೆ.

ಆದರೆ ವಿಘಟಿತ ವಿಶ್ವದಲ್ಲಿ ‘ನಾನು’ ಮಾತ್ರ ಇರುವುದಿಲ್ಲ. ನಾಲ್ಕು ತಂತಿಯ ಎರಡನೆಯ ತಂತಿಯಾದ ‘ನೀನು’ ಅಲ್ಲಿ ಇರಲೇಬೇಕು. ಅದರ ಇರುವನ್ನು ‘ನಾನು’ ಅನುಭವಿಸಬೇಕು. ‘ನಿನ್ನನ್ನು’ ನಾನು ‘ನಾನು’ ಎಂದು ತಿಳಿದಾಗಲೇ, ನನ್ನನ್ನು ನಾನು ತಿಳಿದುಕೊಂಡಂತೆ. ಆದುದರಿಂದಲೆ, ಬೇಂದ್ರೆಯವರು ‘ನಿನ್ನನು ಒಪ್ಪದೆ, ನನ್ನನು ಒಪ್ಪೆ’ ಎಂದು ಹೇಳುತ್ತಿದ್ದಾರೆ. ಅರ್ಥಾತ್ ನಾನು ಹಾಗು ನೀನು ಎರಡೂ ಒಂದೇ. ಈ ಮಾತು ಆಧ್ಯಾತ್ಮಿಕವಾಗಿ ಮಾತ್ರವಲ್ಲ, ವ್ಯಾವಹಾರಿಕವಾಗಿಯೂ ಸತ್ಯವಾಗಿದೆ. ಲೌಕಿಕ ಜಗತ್ತಿನಲ್ಲಿ ನಾನು ನನಗೆ ಕೊಡುವ ಸ್ಥಾನವನ್ನು ನನಗೆ ಎದುರಾದ ‘ನಿನ’ಗೂ ಕೊಡಲೇ ಬೇಕು. ಈ ತಿಳಿವೇ ಅಂತಿಮ ಸತ್ಯ. ಪರಮಾತ್ಮನು  ಸತ್ಯದ ಮೂಲವಾದರೆ, ನಾನು ಹಾಗು ನೀನು ಈ ಸತ್ಯದ ವ್ಯಕ್ತ ಕೊನೆಗಳು; ವೃಕ್ಷದ ಕಾಂಡ ಹಾಗು ರೆಂಬೆಗಳು ಇದ್ದಂತೆ. ನಾವೆಲ್ಲರೂ ಆ ಅವ್ಯಕ್ತ ಪರಮಾತ್ಮನ ವ್ಯಕ್ತರೂಪಗಳು ಎನ್ನುವುದನ್ನು ತಿಳಿಯಲು ನಿರಾಕರಿಸಿದರೆ, ನಮ್ಮ ಅಸ್ತಿತ್ವಕ್ಕೆ ಅರ್ಥವಿಲ್ಲ ಅರ್ಥಾತ್ ನಾವು ಇದ್ದರೂ ಸಹ ಸತ್ತಂತೆಯೇ.

ತಿಳಿವಳಿಕೆ ಇಲ್ಲದ ವ್ಯಕ್ತಿ ತಿಳಿವಳಿಕೆ ಇದ್ದ ಗುರುವನ್ನು ಆಶ್ರಯಿಸಿ, ‘ತಿಳಿಸಿರಿ’ ಎಂದು ಪ್ರಾರ್ಥಿಸಬೇಕು. ಆ ಯಾಚಕನ ಮನಸ್ಸು ತಿಳಿಯಾಗಿರಬೇಕು ಅಂದರೆ ಅವನ ಮನಸ್ಸಿನಲ್ಲಿ ಅಹಂಕಾರ ಇರಕೂಡದು, ಯಾವುದೇ ಕಲ್ಮಶಗಳು ಇರಬಾರದು.  ಕದಡಿದ ನೀರಿನಲ್ಲಿ ರಾಡಿ ಇರುತ್ತದೆ. ಆದರೆ ನೀರು ನಿಶ್ಚಲವಾದಾಗ ರಾಡಿ ಇಳಿದು ಹೋಗುತ್ತದೆ. ಅದರಂತೆ ಚಂಚಲತೆ ಹಾಗು ಉದ್ವಿಗ್ನತೆಯಿಂದ ಕದಡಿದ ಮನಸ್ಸಿಗೆ ಗುರುವಾಕ್ಯವನ್ನು ಗ್ರಹಿಸಲು ಅಸಾಧ್ಯವಾಗುತ್ತದೆ. ಆದುದರಿಂದ ಮನಸ್ಸನ್ನು ಸ್ವಚ್ಛಗೊಳಿಸಿ, ನಿಗ್ರಹದಲ್ಲಿ ತಂದು ಗುರುವಾಕ್ಯವನ್ನು ಆಲಿಸಬೇಕು. ತನಗೆ ತಿಳಿದೇ ಬಿಟ್ಟಿದೆ ಎಂದು ತಿಳಿದುಕೊಂಡವನು ಗುರುವಿನಿಂದ ಏನನ್ನು ಪಡೆಯಲು ಸಾಧ್ಯ? ಅದರಂತೆ, ತಿಳಿಯುವ ಸಾಮರ್ಥ್ಯವು ತನ್ನಲ್ಲಿ ಇದೆ ಎಂದುಕೊಳ್ಳುವುದೂ ಸಹ ಅಹಂಕಾರವೇ. ಅದುದರಿಂದ ಪಾರಮಾರ್ಥಿಕ ಸತ್ಯವು ತನಗೆ ತಿಳಿದಿಲ್ಲ; ಗುರುಕೃಪೆಯಿಂದ ಮಾತ್ರ ಆ ಸತ್ಯವನ್ನು ತಿಳಿದುಕೊಳ್ಳಬಹುದು ಎನ್ನುವ ಅರಿವು ಯಾಚಕನಿಗೆ ಬೇಕು.

ಗುರುಕೃಪೆಯಿಂದ ದೊರೆಯುವ ಈ ಪರಮ ಸತ್ಯವನ್ನು ಯಾವ ಕಡೆಯಿಂದ ನೋಡಿದರೂ ಒಂದೇ ಆಗಿರುತ್ತದೆ. ಈ ಪರಮ ಸತ್ಯವನ್ನು ಅನೇಕರು ಅನೇಕ ಬಗೆಗಳಲ್ಲಿ ಹೇಳುತ್ತಾರೆ:  ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’. ಸತ್ಯಾರ್ಥಿಯು ಈ ಸತ್ಯವನ್ನು ಎಡದಿಂದ ಬಲಕ್ಕೆ ಓದಲಿ ಅಥವಾ ಬಲದಿಂದ ಎಡಕ್ಕೆ ಓದಲಿ, ಅದರ ಅರ್ಥ ಬದಲಾಗುವದಿಲ್ಲ.  ಈ ಮಾತಿಗೆ ಒಂದು ಉದಾಹರಣೆಯನ್ನು ಕೊಡಬಹುದು. ಕನಕ ಎನ್ನುವ ಪದವನ್ನು ಎಡಗಡೆಯಿಂದಲೇ ಓದಲಿ ಅಥವಾ ಬಲಗಡೆಯಿಂದಲೇ ಓದಲಿ, ಅದು ಕನಕವಾಗಿಯೇ ಅಂದರೆ ಬಂಗಾರವಾಗಿಯೇ ಉಳಿಯುವುದು.ಇದನ್ನು ಬೇಂದ್ರೆಯವರು ‘ಜಾಜಾ ಮಂತ್ರ’ ಎನ್ನುತ್ತಾರೆ. ‘ಜಾಜಾ ಮಂತ್ರ’ ಇದು ಹುಡುಗರು ಆಡುವಾಗ ಬಳಸುವ ಮಾತು. ತಮ್ಮ ಬಲಗೈಯಲ್ಲಿದ್ದ ಬಳಪವನ್ನು ‘ಜಾಜಾ’ ಎನ್ನುತ್ತ ಹುಡುಗರು ಎಡಗೈಗೆ ಬದಲಾಯಿಸುತ್ತಾರೆ. ಅಂದರೆ ಬಾಲಕರಂತೆ ಸರಳವಾದ ಮನಸ್ಸನ್ನು ಹೊಂದಿದವರಿಗೆ, ಈ ಸತ್ಯಶೋಧನೆ ಜಾಜಾ ಮಂತ್ರದಷ್ಟೇ ಸುಲಭವಾದ ಕಾರ್ಯ.

ಮೊದಲು ಎಡ ಹಾಗು ಬಲಗಳು ಒಂದೇ ಎಂದು ಹೇಳಿದ ಬೇಂದ್ರೆಯವರು, ಈಗ ಹೊರಮೈ ಹಾಗು ಒಳಮೈ ಒಂದೇ ಎಂದು ಹೇಳುತ್ತಾರೆ. ಪಾರಮಾರ್ಥಿಕ ಸತ್ಯಕ್ಕೆ ಒಳ ಹಾಗು ಹೊರ ಎನ್ನುವ ಭೇದವೇ ಇರುವುದಿಲ್ಲ. ಈ ಸತ್ಯಕ್ಕೆ ಇರುವುದು, ಇರುವು, ಅರಿವು ಹಾಗು ಸ್ನೇಹ. ಇರುವು ಎಂದರೆ ‘ಸತ್’, ಅರಿವು ಅಂದರೆ ‘ಚಿತ್’ ಅಥವಾ ಜ್ಞಾನ, ಸ್ನೇಹ ಎಂದರೆ ಪ್ರೀತಿ ಅಥವಾ ಆನಂದ. ಹರಿವು ಎಂದರೆ ವಿಸ್ತಾರ; ಹರಿವು ಎಂದರೆ ಚಲನೆಯೂ ಹೌದು. ಈ ವಿಶ್ವವೆಂದರೆ ಸಚ್ಚಿದಾನಂದದ ಸದಾ ಚಲನ. ಬೇಂದ್ರೆಯವರು ಈ ಮಾತನ್ನು ಕೇವಲ ಹೇಳುತ್ತಿಲ್ಲ, ಆದರೆ ಅನುಭವಿಸುತ್ತಿದ್ದಾರೆ.  ಆದುದರಿಂದಲೇ ಅವರು ಇದು ನಮ್ಮ ಹೊರಗೆ, ನಮ್ಮ ಸುತ್ತಮುತ್ತಲೂ ಇಲ್ಲ, ಆದರೆ ನಮ್ಮಲ್ಲೇ, ನಮ್ಮ ಒಳಗೇ ಇದೆ ಎಂದು ಹೇಳುತ್ತಿದ್ದಾರೆ. ಈ ಅರಿವೇ ಬೆಲ್ಲದಂತೆ ಸಿಹಿಯಾದದ್ದು ಹಾಗು ಪೋಷಕವಾದದ್ದು. ಅಜ್ಞಾನ ಅಂದರೆ ಈ ಅರಿವಿನ ಅಭಾವ. ಅದು ಎಂದಿಗೂ ಪರಮಾರ್ಥ ಸಾಧಕನಿಗೆ ಸಿಹಿಯಾಗಲಾರದು.

ಕೊನೆಯ ಎರಡು ಸಾಲುಗಳಲ್ಲಿ ಬೇಂದ್ರೆಯವರು ಈ ಸತ್ಯವನ್ನು ತಿರುವು ಮುರುವು ಮಾಡಿ, ಮೇಲ್‍ಕೆಳಗೆ ಮಾಡಿ ಬರೆದಿದ್ದಾರೆ. ನಾವು ಹೇಗೇ ಓದಿದರೂ ಸಹ ಪರಮ ಸತ್ಯವು ಅದೇ ಆಗಿದೆ ಎನ್ನುವುದನ್ನು ಬೇಂದ್ರೆ ತಮ್ಮದೇ ಆದ ವಿಚಿತ್ರ ರೀತಿಯಲ್ಲಿ ತೋರಿಸುತ್ತಿದ್ದಾರೆ. ಕವಿಯ ಈ ವೈಚಿತ್ರ್ಯವನ್ನು ನಾವು ಒಪ್ಪಿಕೊಂಡಾಗಲೇ ಅವನ ಕವನವನ್ನು ಅಪ್ಪಿಕೊಳ್ಳಲು ಸಾಧ್ಯವಾದೀತು.

Wednesday, November 5, 2014

‘ಕುರುಬರೋ ನಾವು ಕುರುಬರೋ’-----ಶಿಶುನಾಳ ಶರೀಫರು



ಕುರುಬರೋ ನಾವು ಕುರುಬರೋ
ಏನು ಬಲ್ಲೇವರಿ ಆತ್ಮದ ಅನುಭವವೋ                ||ಪಲ್ಲ||

ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ                                   ||ಅನುಪಲ್ಲ||

ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ
ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚಿ
ಈಡೆಂಬ ಬಾಗಿಲ ಹಾಕೇವ್ರಿ ಗಟ್ಟಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ                   ||೧||

ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬು ಚೆಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ವಾಕ್ಯವು ಹಾಲಿನ ಗಡಗಿ
ನಮ್ಮ ಕೈಯಲ್ಲಿ ಇರುವುದೋ ಮುಕ್ತಿ ಎಂಬೋ ಬಡಗಿ  ||೨||

ಸ್ಮಶಾನಭೂಮಿ ಇದು ಖರೆ
ನಾವು ಮೇಸಾಕ ಬಂದೇವರಿ ಕುರಿಯೇ
ತೋಳ ಮುರಿದು ಹತ್ತು ಕುರಿಯೇ
ನಾಗಲಿಂಗ ಅಜ್ಜ ಹೇಳಿದ ಪರಿಯೇ                       ||೩||


ಶರೀಫರು ಈ ಗೀತೆಯಲ್ಲಿ ಪ್ರಾಪಂಚಿಕರ ಬದುಕಿನ ಪರಿಯನ್ನು ಹಾಗು ಅಂತಹ ಬದುಕನ್ನು ಬದಲಾಯಿಸುವ ಬಗೆಯನ್ನು ವರ್ಣಿಸುತ್ತಿದ್ದಾರೆ. ಈ ವರ್ಣನೆಯು ಸಮಸ್ತ ಲೌಕಿಕರಿಗೆ ಅನ್ವಯಿಸುವದರಿಂದ, ಅವರು ‘ನಾನು’ ಎನ್ನುವ ಬದಲಾಗಿ ‘ನಾವು’ ಎನ್ನುವ ಸಮಸ್ತ ಪದವನ್ನು ಗೀತೆಯ ಪಲ್ಲದಲ್ಲಿಯೇ ಬಳಸಿದ್ದಾರೆ.
ಕುರುಬರೋ ನಾವು ಕುರುಬರೋ
ಏನು ಬಲ್ಲೇವರಿ ಆತ್ಮದ ಅನುಭವವೋ

ಕುರುಬರು ಎಂದರೆ ಯಾರು? ಕುರಿಗಳನ್ನು ಸಾಕುವವರು ಕುರುಬರು. ಈ ಕುರಿಗಳ ವಿವರಣೆ ಮುಂದಿನ ನುಡಿಯಲ್ಲಿ ಬರುತ್ತದೆ. ಶರೀಫರ ಕಾಲದಲ್ಲಿ ಶಿಕ್ಷಣ ಹಾಗು ವಿದ್ಯೆ ಸಾರ್ವತ್ರಿಕವಾಗಿರಲಿಲ್ಲ. ಆದುದರಿಂದ ಕುರುಬರು ಎನ್ನುವ ಪದವನ್ನು ಸಾಮಾನ್ಯರು ಅಥವಾ ಪಾಮರರು ಎನ್ನುವ ಅರ್ಥದಲ್ಲಿ ಶರೀಫರು ಬಳಸಿದ್ದಾರೆ. ಆದರೆ ಶರೀಫರು ಇಲ್ಲಿ ಹೇಳುತ್ತಿರುವ ವಿದ್ಯೆ ಪ್ರಾಪಂಚಿಕ ವಿದ್ಯೆ ಅಲ್ಲ; ಅದು ಆತ್ಮಜ್ಞಾನ. ಆದುದರಿಂದ ‘ನಾವು’ ಅಂದರೆ ಪ್ರಾಪಂಚಿಕರು, ಆತ್ಮಜ್ಞಾನವಿಲ್ಲದ ಪಾಮರರು ಎಂದು ಶರೀಫರು ಹೇಳುತ್ತಾರೆ. ಇದಿಷ್ಟು ಪಲ್ಲದಲ್ಲಿಯ ಎರಡು ಸಾಲುಗಳ ಅರ್ಥ.

ಅನುಪಲ್ಲದಲ್ಲಿ ಶರೀಫರು ತಮ್ಮ ಕುರಿಗಳ ವರ್ಣನೆಯನ್ನು ಮಾಡುತ್ತಾರೆ.
ಮುನ್ನೂರು ಅರುವತ್ತು ಕುರಿ ಮೇಸಿಕೊಂಡು
ಸುಮ್ಮನೇ ಬರುವಂಥಾ
ಒಂದು ವರ್ಷದಲ್ಲಿ (ಸಾಂಪ್ರದಾಯಕ ಪಂಚಾಂಗದ ಮೇರೆಗೆ) ಮುನ್ನೂರು ಅರುವತ್ತು ದಿನಗಳಿರುವುದು ನಮಗೆಲ್ಲರಿಗೂ ತಿಳಿದಿದೆ. ಸಾಮಾನ್ಯ ವ್ಯಕ್ತಿಗೆ ಪ್ರತಿ ದಿನವೂ ಒಂದಿಲ್ಲೊಂದು ಪ್ರಾಪಂಚಿಕ ಚಿಂತೆ ಇರುವಂತಹದೇ. ಆದುದರಿಂದಲೇ, ಪುರಂದರದಾಸರು ‘ಅನುಗಾಲವೂ ಚಿಂತೆ ಮನಕೆ ’ಎಂದು ಹಾಡಿದ್ದಾರೆ. ಬದುಕಿಗೆ ದುಡ್ಡು ಬೇಕು, ಈ ದುಡ್ಡನ್ನು ಹೇಗೆ ಗಳಿಸಬೇಕು ಎನ್ನುವುದು ಒಂದು ಚಿಂತೆ; ಮಕ್ಕಳ ಉದ್ಧಾರ ಹೇಗೆ ಎನ್ನುವುದು ನಿರಂತರ ಚಿಂತೆ. ವರ್ಷಪೂರ್ತಿಯಾಗಿ ಈ ಲೌಕಿಕ ಚಿಂತೆಗಳು ಇರುವುದರಿಂದ ಶರೀಫರು ಈ ಚಿಂತೆಗಳಿಗೆ ಮುನ್ನೂರು ಅರುವತ್ತು ಕುರಿಗಳ ಸಾಮತಿಯನ್ನು ಕೊಟ್ಟಿದ್ದಾರೆ. ಈ ಚಿಂತೆಗಳನ್ನು ನಾವು ಪೋಷಿಸುತ್ತಲೇ ಹೋಗುತ್ತೇವೆ; ಅವುಗಳನ್ನು ಬಿಟ್ಟು ಬಿಡುವ ಪ್ರಯತ್ನವನ್ನು ಮಾಡುವುದಿಲ್ಲ ಎನ್ನುವುದನ್ನು ಶರೀಫರು ಅನುಪಲ್ಲದಲ್ಲಿ ಹೇಳುತ್ತಿದ್ದಾರೆ.                                                

ಏಳುಸುತ್ತಿನ ಬೇಲಿ ಗಟ್ಯಾಗಿ ಹಚ್ಚಿ
ನಮ್ಮ ಕುರಿಗಳಿಟ್ಟೇವ್ರಿ ಚೆನ್ನಾಗಿ ಬಚ್ಚಿ
ಈಡೆಂಬ ಬಾಗಿಲ ಹಾಕೇವ್ರಿ ಗಟ್ಟಿ
ಸಿಟ್ಟೆಂಬ ನಾಯಿಯ ಬಿಟ್ಟೇವ್ರಿ ಬಿಚ್ಚಿ             

ಕುರುಬರು ತಮ್ಮ ಕುರಿಗಳನ್ನು ಕಾಯ್ದುಕೊಳ್ಳಲು ಮಾಡುವ ಪ್ರಯತ್ನಗಳನ್ನು ಶರೀಫರು ಹೇಳುತ್ತಾರೆ. ಏಳುಸುತ್ತಿನ ಬೇಲಿ ಅಂದರೆ ಗಟ್ಟಿಯಾದ ಬೇಲಿ. ಈ ಕುರಿಗಳಿಗೆ ಯಾವುದೇ ಅಪಾಯ ಬರಬಾರದೆಂದು ಅಲ್ಲಿ ಅವುಗಳನ್ನು ಅಡಗಿಸಿ ಇಡಲಾಗಿದೆ. ಅಲ್ಲದೆ, ಒಳಗಿರುವ ಕುರಿಗಳು ಹೊರಗೆ ಹೋಗಬಾರದು. ಈ ಕಾರಣಗಳಿಂದಾಗಿ ದೊಡ್ಡಿಯ ಬಾಗಿಲನ್ನು ಈಡಾಗಿ ಎಂದರೆ ಗಟ್ಟಿಯಾಗಿ ಹಾಕಲಾಗಿದೆ ಹಾಗು ಈ ಕುರಿಗಳನ್ನು ಕಾಯಲು ನಾಯಿಯನ್ನು ಸಾಕಲಾಗಿದೆ. ಈ ಪ್ರಯತ್ನಗಳು ಪ್ರಾಪಂಚಿಕರಿಗೂ ಸಹ ಹೇಗೆ ಅನ್ವಯಿಸುತ್ತವೆ ಎನ್ನುವುದನ್ನು ನೋಡೋಣ. ಬದುಕಲು ಬೇಕಾದ ಗುಣಗಳನ್ನು ಹಾಗು ಸಂಸಾರದ ಚಿಂತೆಗಳನ್ನು ಪ್ರಾಪಂಚಿಕರು ಭದ್ರವಾಗಿ ಕಾಯ್ದುಕೊಳ್ಳುತ್ತಾರೆ. ಅಲ್ಲದೆ ತಮ್ಮ ವಿಚಾರಗಳು ಬದಲಾಗಬಾರದು ಎನ್ನುವ ಉದ್ದೇಶದಿಂದ, ಬೇರೆ ಬೇರೆ ಸೋಗು ಹಾಕುತ್ತ, ತಮ್ಮ ವಿಚಾರಗಳನ್ನು ಮುಚ್ಚಿಡುತ್ತಾರೆ. ಒಳ್ಳೆಯ ವ್ಯಕ್ತಿಗಳ ಸತ್ಸಂಗದಿಂದ ಈ ಪ್ರಾಪಂಚಿಕ ವಿಚಾರಗಳು ಬದಲಾಗಬಹುದೆನ್ನುವ ಹೆದರಿಕೆಯಿಂದ, ತಮ್ಮ ಮನಸ್ಸಿನ ಬಾಗಿಲನ್ನು ಗಟ್ಟಿಯಾಗಿ ಹಾಕಿಕೊಳ್ಳುತ್ತಾರೆ. ಯಾರಾದರೂ ಇವರಿಗೆ ಬುದ್ಧಿ ಹೇಳಲು ಬಂದರೆ, ಇವರ ಸಿಟ್ಟು ಎನ್ನುವ ನಾಯಿಯು ಅವರ ಮೇಲೆ ತಟ್ಟನೆ ಹಾರುತ್ತದೆ! ಇನ್ನು ಏಳು ಸುತ್ತಿನ ಕೋಟೆ ಎಂದರೆ ಈ ದೇಹ ಎನ್ನುವ ಮತ್ತೊಂದು ಅರ್ಥವಿದೆ. ತ್ವಚೆ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ವೀರ್ಯ ಎನ್ನುವ ಸಪ್ತಧಾತುಗಳಿಂದ ಈ ಶರೀರದ ನಿರ್ಮಾಣವಾಗಿದೆ. ಆದುದರಿಂದ ಈ ದೇಹವೇ ಏಳು ಸುತ್ತಿನ ಕೋಟೆಯಾಗಿದೆ. ಈ ಕೋಟೆಯಲ್ಲಿರುವ ಜೀವಾತ್ಮನೇ ಕುರುಬನು. ಈ ಜೀವಾತ್ಮನನ್ನು ಬಂಧಿಸಿರುವ ಪ್ರಾಪಂಚಿಕ ವಿಚಾರಗಳೇ ಆತನ ಕುರಿಗಳು. ಆ ಕುರಿಗಳನ್ನು ಹೊರಹೋಗದಂತೆ ಹಾಗು ಒಳ್ಳೆಯ ವಿಚಾರಗಳು ಒಳಬರದಂತೆ ಆತನು ಕೋಟೆಯನ್ನು ಭದ್ರಗೊಳಿಸಿದ್ದಾನೆ.

ಎರಡನೆಯ ನುಡಿಯಲ್ಲಿ ಶರೀಫರು ಈ ಸಂಸಾರದಿಂದ ಬಿಡುಗಡೆಯಾಗುವ ಬಗೆಯನ್ನು ವಿವರಿಸುತ್ತಿದ್ದಾರೆ:
ತನುಯೆಂಬುವ ದಡ್ಡಿಯ ಹಸನಾಗಿ ಉಡುಗಿ
ತುಂಬು ಚೆಲ್ಲೇವರಿ ಹಿಕ್ಕಿಯ ಹೆಡಗಿ
ಗುರು ಹೇಳಿದ ವಾಕ್ಯವು ಹಾಲಿನ ಗಡಗಿ
ನಮ್ಮ ಕೈಯಲ್ಲಿ ಇರುವುದೋ ಮುಕ್ತಿ ಎಂಬೋ ಬಡಗಿ

ಕುರಿಗಳು ವಿಸರ್ಜಿಸಿದ ಹಿಕ್ಕಿಯನ್ನು ಉಡುಗಿ ಹಾಕಿ, ಅವನ್ನೆಲ್ಲ ಬುಟ್ಟಿಯಲ್ಲಿ ತುಂಬಿ ಚೆಲ್ಲುವುದು ಮೊದಲನೆಯ ಕೆಲಸ. ಅಂದರೆ ನಮ್ಮ ದೇಹವನ್ನು ನಿಯಂತ್ರಿಸುತ್ತಿರುವ ನಮ್ಮ ಕೊಳಕು ಭಾವನೆಗಳನ್ನು ಸ್ವಚ್ಛಗೊಳಿಸುವುದು ನಮ್ಮ ಆದ್ಯ ಕರ್ತವ್ಯ. ಇಷ್ಟಾದ ಮೇಲೆ  ಗುರುವಿನ ಕೃಪೆಯಾಗುವುದು.  ಗುರುವಿನ ಉಪದೇಶವು ಹಾಲು ಇದ್ದಂತ. ಆ ಹಾಲನ್ನು ಸೇವಿಸುವದರಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯಾಗುವುದು.

ಕೊನೆಯ ನುಡಿಯಲ್ಲಿ ಶರೀಫರು ಒಂದು ತತ್ವವನ್ನು ಹೇಳುತ್ತಾರೆ:
ಸ್ಮಶಾನಭೂಮಿ ಇದು ಖರೆ
ನಾವು ಮೇಸಾಕ ಬಂದೇವರಿ ಕುರಿಯೇ
ತೋಳ ಮುರಿದು ಹತ್ತು ಕುರಿಯೇ
ನಾಗಲಿಂಗ ಅಜ್ಜ ಹೇಳಿದ ಪರಿಯೇ

ಈ ಪ್ರಪಂಚವು ಒಂದು ಸ್ಮಶಾನಭೂಮಿ. ಏಕೆಂದರೆ ಇಲ್ಲಿ ಇರುವ ಜೀವಿಗಳೆಲ್ಲವೂ ತಮ್ಮ ದೇಹವನ್ನು ಒಂದಿಲ್ಲೊಂದು ದಿನ ಬಿಟ್ಟು ಹೋಗಲೇ ಬೇಕು. ನಾವು ಇಲ್ಲಿಗೆ ಬರುವುದು ನಮ್ಮ ಕುರಿಗಳನ್ನು ಪಾಲಿಸಲು ಅಂದರೆ ಸಂಸಾರವನ್ನು ಮಾಡಲು. ಈ ರೀತಿಯಾಗಿ ನಮ್ಮ ಕುರಿಗಳನ್ನು ಪಾಲಿಸುತ್ತಿರುವಾಗ, ಒಂದು ತೋಳವು ಬಂದು ಹತ್ತು ಕುರಿಗಳನ್ನು ಮುರಿದು ಹಾಕಿತು ಎಂದು ಶರೀಫರು ಹೇಳುತ್ತಾರೆ. ತೋಳವೆಂದರೆ ಗುರು. ಗುರೂಪದೇಶದ ಫಲವಾಗಿಯೇ ನಮ್ಮ ಪ್ರಾಪಂಚಿಕ ವಿಚಾರಗಳು ಅಂದರೆ ಕುರಿಗಳು ಸಾಯುತ್ತವೆ ಎನ್ನುವುದು ಶರೀಫರ ಅನುಭವದ ಮಾತು. ಶರೀಫರು ಇದು ನಾಗಲಿಂಗ ಅಜ್ಜನವರ ಮಾತು ಎಂದು ಹೇಳುತ್ತಿದ್ದಾರೆ. ನವಲಗುಂದದ ನಾಗಲಿಂಗ ಅಜ್ಜ, ಗರಗದ ಮಡಿವಾಳಪ್ಪ ಹಾಗು ಶಿಶುನಾಳದ ಶರೀಫರು ಸಮಕಾಲೀನರು. ಹುಬ್ಬಳ್ಳಿಯ ಸಿದ್ಧಾರೂಢರು ಶರೀಫರಿಗಿಂತ ಚಿಕ್ಕವರು. ನಾಗಲಿಂಗ ಅಜ್ಜನವರು ವಿಕ್ಷಿಪ್ತ ವ್ಯಕ್ತಿಗಳು. ಶರೀಫರು ಪ್ರಾಪಂಚಿಕ ವಿಚಾರಗಳನ್ನು ದೂರ ಮಾಡಲು ನಾಗಲಿಂಗ ಅಜ್ಜನವರ ಉಪದೇಶವನ್ನು ಅನುಸರಿಸಬೇಕು ಎಂದು ಹೇಳುತ್ತಿದ್ದಾರೆ.

ಟಿಪ್ಪಣಿ:
(೧) ನಾಗಲಿಂಗ ಅಜ್ಜನವರು ವಿಕ್ಷಿಪ್ತ ಯೋಗಿಗಳು. ಕೆಲವೊಮ್ಮೆ ಅವರು ಶಿಷ್ಯರು ಅವರನ್ನು ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಸಾಗುತ್ತಿದ್ದರು. ಈ ನೋಟವನ್ನು ನೋಡಿದ ಶರೀಫರು ನಾಗಲಿಂಗ ಅಜ್ಜನವರನ್ನು ಲೇವಡಿ ಮಾಡಿ, ಹಾಡಿದ ಗೀತೆ ಹೀಗಿದೆ:
ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ   ||ಪಲ್ಲ||
ದುರಿತಭವದ ಯೋಗದಿಂದ ವಾದವ್ಯಾತಕೆ
ವಾದದಿಂದ ಸಿದ್ಧಯೋಗ ಮಾಡುವುದ್ಯಾತಕೆ  ||೧||
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ
ಬಗಳಾಮುಖಿಯ ಮಗನ  ಕೂಡ ರಗಳಿಯಾತಕೆ  ||೨||
ಹಸಿವು ತೃಷಿಯಗಳನು ಬಯಸುವದ್ಯಾತಕೆ
ಶಿಶುನಾಳಾಧೀಶನ ಮರಿತು ಕುಸಿಯುವದ್ಯಾತಕೆ  ||೩||
ಈ ಗೀತೆಯನ್ನು ಕೇಳಿ ನಾಗಲಿಂಗ ಅಜ್ಜನ ಶಿಷ್ಯರು ಕೆರಳಿ, ಶರೀಫರನ್ನು ಚೆನ್ನಾಗಿ ತದುಕಿದರು! ಹೀಗಿದ್ದರೂ ಸಹ ಶರೀಫರು ನಾಗಲಿಂಗ ಅಜ್ಜನವರನ್ನು ಗೌರವಿಸುವ ರೀತಿಯು ‘ನಾಗಲಿಂಗ ಅಜ್ಜ ಹೇಳಿದ ಪರಿಯೇ ಎನ್ನುವ ಸಾಲಿನಲ್ಲಿ ವ್ಯಕ್ತವಾಗಿದೆ.

(೨) ಪ್ರತಿಯೊಬ್ಬ ಸಾಧಕನು ಪರಮಾತ್ಮನೊಡನೆ ಅಥವಾ ತನ್ನ ಗುರುವಿನೊಡನೆ ವಿಶಿಷ್ಟವಾದ ಸಂಬಂಧವನ್ನು ಹೊಂದಿರುತ್ತಾನೆ. ಅಕ್ಕ ಮಹಾದೇವಿಯು ಶಿವನೇ ತನ್ನ ಗಂಡ ಎಂದಳು; ಅರ್ಜುನನು ಕೃಷ್ಣನನ್ನು ಸಖ್ಯಭಾವದಿಂದ ಪೂಜಿಸಿದನು. ಶರೀಫರು ಪರಮಾತ್ಮನನ್ನು demanding ಗಂಡ ಎಂದು ನೋಡುತ್ತಾರೆ. (---‘ಎಲ್ಲರಂಥವನಲ್ಲ ನನ ಗಂಡ, ಬಲ್ಲಿದನು ಪುಂಡ’---)
ಅದರಂತೆ ಗುರೂಪದೇಶವನ್ನು ತೋಳ, ಹಾವು, ಚೇಳು ಮೊದಲಾದ ನೋವು ಕೊಡುವ ವಿಷಯವನ್ನಾಗಿ ಭಾವಿಸುತ್ತಾರೆ.
ನೂರು ಸಾಧಕರು, ನೂರು ಬಗೆ! ಶ್ರೀಕೃಷ್ಣನಿಗೆ ಹದಿನಾರುಸಾವಿರ ಹೆಂಡಂದಿರು ಇದ್ದರು ಎಂದು ಹೇಳುವುದು ಬಹುಶಃ ಈ ಕಾರಣಕ್ಕಾಗಿಯೇ ಇರಬಹುದೇನೊ?

Wednesday, October 29, 2014

ಸಾಹಿತ್ಯಸುಖ -೧


ಚಾಮರಸ ಕವಿ ರಚಿಸಿದ ‘ಪ್ರಭುಲಿಂಗಲೀಲೆ’ಯ ನಾಯಕಿ ಮಾಯಾದೇವಿ.  ಚಾಮರಸನು ಮಾಯಾದೇವಿಯ ಬಾಲ್ಯವನ್ನು ವರ್ಣಿಸುವ ಒಂದು ನುಡಿ ಹೀಗಿದೆ:
ಹಿಡಿಹಿಡಿದುಕೊಂಡರ್ತಿಯಲಿ
ಬೆಂಬಿಡದೆ ಶಿಕ್ಷಾಚಾರ್ಯತನದಲಿ
ಜಡಿದು ಜಂಕಿಸಿ ಮುದ್ದುತನ ಮಿಗೆ ಮಾಯೆ ತನ್ನಂತೆ
ನಡೆಯ ಕಲಿಸಿದಳಂಚೆವಿಂಡಿಗೆ
ನುಡಿಯಕಲಿಸಿದರಗಿಳಿಗೆ
ಸರವಿಡಲು ಕಲಿಸಿದಳಾಕೆ ತನ್ನರಮನೆಯ ಕೋಗಿಲೆಗೆ

ಮಾಯಾದೇವಿಯು ತನ್ನ ಅರಮನೆಯ ಪಕ್ಷಿಗಳಿಗೆ ಮುದ್ದು ಮಾಡುತ್ತ, ಹಂಸಗಳಿಗೆ ನಡೆಯುವದನ್ನು, ಗಿಳಿಗೆ ನುಡಿಯುವದನ್ನು ಹಾಗು ನವಿಲುಗಳಿಗೆ ಹಾಡುವದನ್ನು ಕಲಿಸುತ್ತಾಳೆ. ಇದಿಷ್ಟು ಈ ನುಡಿಯ ಮೇಲುಮೇಲಿನ ಅರ್ಥ. ಆದರೆ ಈ ಸಾಲುಗಳ ಒಳಗೆ ಅಡಗಿರುವ ಭಾವ ಏನೆಂದು ಹೇಳುತ್ತದೆ? ನಾನು ಹನ್ನೊಂದನೆಯ ಇಯತ್ತೆಯಲ್ಲಿ ಕಲಿಯುತ್ತಿರುವಾಗ (ಆ ಕಾಲದಲ್ಲಿ ಅದು ಎಸ್.ಎಸ್.ಸಿ.) ನಮ್ಮ ಕನ್ನಡ ಗುರುಗಳಾದ ಶ್ರೀ ಹೋಳಿಕಟ್ಟಿಯವರು ಮೆಲುದನಿಯಲ್ಲಿ ಉಸುರಿದ ಭಾವಾರ್ಥ ನನ್ನ ಕಿವಿಯಲ್ಲಿ ಇನ್ನೂ ಗುನುಗುತ್ತಿದೆ: ‘ಚಾಮರಸನು ಮಾಯಾದೇವಿಯ onset of teenageಅನ್ನು ಸೂಚಿಸುತ್ತಿದ್ದಾನೆ.’

ಈ ಅಪ್ರತ್ಯಕ್ಷ ಭಾವವನ್ನು, ಈ ಸೂಚ್ಯಾರ್ಥವನ್ನು ನಾವು ಒಳ್ಳೆಯ ಸಾಹಿತ್ಯದ ಲಕ್ಷಣ ಎಂದು ಕರೆಯಬಹುದು. ಇದನ್ನೆ ಕೆಲವು ಪಂಡಿತರು reading between the lines ಎಂದೂ ಹೇಳುತ್ತಾರೆ. ಈ ಸಾಹಿತ್ಯಕ ಗುಣವನ್ನು ನಾವು ನಮ್ಮ ಜಾನಪದ ಸಾಹಿತ್ಯದಲ್ಲಿಯೂ ಹೇರಳವಾಗಿ ನೋಡಬಹುದು. ಒಂದು ಉದಾಹರಣೆ ಎಂದರೆ ‘ಗೋವಿನ ಹಾಡು’.

ಪುಣ್ಯಕೋಟಿ ಗೋವು ಹುಲಿಗೆ ‘ಮರಳಿ ಬರುವೆ’ ಎಂದು ಮಾತು ಕೊಟ್ಟಿದೆ. ಆ ಮೇರೆಗೆ ತನ್ನ ಕರುವಿಗೆ ಕೊನೆಯ ಸಲ ಹಾಲು ಕುಡಿಸಿ, ತಾನು ಹೆಬ್ಬುಲಿ ಇದ್ದಲ್ಲಿಗೆ ಹಿಂದಿರುಗಬೇಕು. ತನ್ನ ಕಂದ ತಬ್ಬಲಿಯಾಗುತ್ತದೆ ಎನ್ನುವ ದುಃಖದ ಜೊತೆಗೆ, ತನ್ನ ಸೋದರಿ ಗೋವುಗಳು ತನ್ನ ಕಂದನಿಗೆ ಮಮತೆಯನ್ನು ತೋರಿಸುವದಿಲ್ಲ ಎನ್ನುವ ಒಳದೋಟಿ ಅದಕ್ಕಿದೆ. ಆದರೂ ಸಹ ತನ್ನ ಸೋದರಿಯರಿಗೆ ಅದು ಪ್ರಾರ್ಥಿಸುತ್ತದೆ:
ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಈ ನುಡಿಯ ಮೊದಲೆರಡು ಸಾಲುಗಳ ಕ್ರಮಬದ್ಧತೆಯನ್ನು ಗುರುತಿಸಿರಿ. ತನ್ನ ತಾಯಿಯನ್ನು ಕಳೆದುಕೊಂಡ ಕರುವು, ಇತರ ತಾಯಂದಿರಿಂದ ಅಕ್ಕರೆಯನ್ನು ಪಡೆಯಲು, ಮೊದಲು ಹೋಗುವುದು ಅವುಗಳ ಮುಖಭಾಗದ ಕಡೆಗೆ ತಾನೆ? ಆ ಆವುಗಳು ಈ ಕರುವನ್ನು ಕೋಡುಗಳಿಂದ ದೂರ ಸರಿಸುತ್ತವೆ. ಮುಖಭಂಗದಿಂದ ತ್ರಸ್ತವಾದ ಕರುವು, ‘ಹೋಗಲಿ, ನಾನು ಹಿಂಭಾಗದಲ್ಲಿ ನಿಲ್ಲುವೆ‘ ಎಂದುಕೊಂಡು ಹಿಂದೆ ಹೋದರೆ, ಆ ಆವುಗಳು, ‘ಛೇ! ದೂರ ಸರಿ; ನಿನಗೆ ನಮ್ಮ ಹತ್ತಿರ ಸ್ಥಳವಿಲ್ಲ’ ಎನ್ನುತ್ತ ಒದೆಯುತ್ತವೆ. ಈ ಕಠೋರ ಸತ್ಯದ ಅರಿವು ಪುಣ್ಯಕೋಟಿಗೆ ಇದೆ. ಆದುದರಿಂದಲೇ ಅದು ಆ ಕ್ರಮದಲ್ಲಿಯೇ ತನ್ನ ಪ್ರಾರ್ಥನೆಯನ್ನು ಮಾಡುತ್ತದೆ.

‘ಗೋವಿನ ಹಾಡ’ನ್ನು ರಚಿಸಿದ ನಮ್ಮ ಜಾನಪದ ಕವಿಗೆ ಈ ಸೂಕ್ಷ್ಮತೆಯ ಅರಿವಿದೆ. ಆದುದರಿಂದಲೇ ಆತನು ಪುಣ್ಯಕೋಟಿಯ ತಳಮಳವನ್ನು  ಕ್ರಮಬದ್ಧ ಪ್ರಾರ್ಥನೆಯ ಮೂಲಕ ಚಿತ್ರಿಸಿದ್ದಾನೆ. ಈ ವಾಸ್ತವತೆಯನ್ನು ಪುಣ್ಯಕೋಟಿಯ ಕರುವೂ ಸಹ ಊಹಿಸಿರುತ್ತದೆ. ಆದುದರಿಂದಲೇ, ‘ಅಮ್ಮ, ನೀನು ಹೋಗಲೇಕೌ; ನನ್ನ ತಬ್ಬಲಿ ಮಾಡಲೇಕೌ?’ ಎಂದು ಕರುವು ತನ್ನ ಅಮ್ಮನನ್ನು ಆರ್ತವಾಗಿ ಕೇಳುತ್ತದೆ. ಆಗ ಪುಣ್ಯಕೋಟಿಯು ಭಾರತೀಯ ತತ್ವಜ್ಞಾನದ ಚಿರಂತನ ಆದರ್ಶವನ್ನು ತನ್ನ ಕರುವಿಗೆ ಹೇಳುತ್ತದೆ:
ಸತ್ಯವಾಕ್ಯಕೆ ತಪ್ಪಿ ನಡೆದರೆ ಮೆಚ್ಚನಾ ಪರಮಾತ್ಮನು’.
ಈ ರೀತಿಯಾಗಿ ಗಂಭೀರ ಘೋಷಣೆಯನ್ನು ಮಾಡಿದ ಪುಣ್ಯಕೋಟಿಯು, ‘ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನಾ.’
ಭಾರತೀಯ ತತ್ವಜ್ಞಾನವು ವೇದೋಪನಿಷತ್ತುಗಳಲ್ಲಿ ಮಾತ್ರ ಅಡಕವಾಗಿಲ್ಲ. ಅದು ಭಾರತದ ಸಾಧಾರಣ ಜನಪದರ ರಕ್ತದಲ್ಲಿ ಹರಿಯುತ್ತಿದೆ.

ನಮ್ಮ ಜಾನಪದ ಕವಿಗಳು ಸಾಹಿತ್ಯದ ಈ ಸೂಕ್ಷ್ಮತೆಯನ್ನು ಶ್ಲೇಷೆಯ ಮೂಲಕವೂ ಸಾಧಿಸಿದ್ದಾರೆ. ಈಗ ತಾನೆ ಮಗುವನ್ನು ಹೆತ್ತ ತಾಯಿಯು ತನ್ನ ಕಂದನಿಗೆ ಹೇಳುವ ತ್ರಿಪದಿಯ ಸಾಲೊಂದನ್ನು ಗಮನಿಸಿರಿ:
ಮಗ ನಿನ್ನ ಹಡೆವಾಗ ಮುಗಿಲಿಗೇರ್ಯಾವ ಜೀವ!

 ಜೀವ ಮುಗಿಲಿಗೇರಿವೆ ಎಂದರೆ ಹೆರಿಗೆಯ ಶೂಲೆ ಮಾರಣಾಂತಿಕವಾಗಿತ್ತು ಎನ್ನುವ ಅರ್ಥವನ್ನು ಕೊಡುವುದರ ಜೊತೆಗೇ, ಹೆತ್ತ ನಂತರದ ಆನಂದವು ಮುಗಿಲು ಮುಟ್ಟಿತ್ತು ಎಂದೂ ಸೂಚಿಸುತ್ತದೆ. ಈ ರೀತಿಯಾಗಿ agony and ecstacyಯನ್ನು ಒಂದೇ ಸಾಲಿನಲ್ಲಿ ತಂದ ನಮ್ಮ ಜಾನಪದ ಕವಯಿತ್ರಿ ಯಾವ ಕವಿರಾಜನಿಗೆ ಕಡಿಮೆ? ಈ ಕಾರಣಕ್ಕಾಗಿಯೇ ನೃಪತುಂಗ ಚಕ್ರವರ್ತಿಯು ಕನ್ನಡಿಗರನ್ನು ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತ ಮತಿಗಳ್’ ಎಂದು ಮನಸಾರೆ ಹೊಗಳಿದ್ದು!

ಎರಡೆರಡು ಭಾವಗಳನ್ನು ಸೂಚಿಸಲು ಶ್ಲೇಷೆಯ ಸಹಾಯವೇ ಬೇಕಂತಿಲ್ಲ. ರೂಪಕಗಳ ಮೂಲಕವೂ ಇದನ್ನು ಹೇಳಬಹುದು. ತನ್ನ ಮಗ ಸಂಗನಬಸವಣ್ಣ ಸತ್ತಾಗ, ಬಸವಣ್ಣನವರು ವಿಲಪಿಸಿದ ರೀತಿಯನ್ನು ನೋಡಿರಿ:
ಪಕ್ವವಾದ ಫಲವಿರಲು ಕಸುಕಾಯನೆತ್ತಿಕೊಂಡನು ಶಿವನು.

ಜೀವನದ ಸಂಧ್ಯೆಯಲ್ಲಿರುವ ತಾನು ಸಾಯಬಹುದಾಗಿತ್ತು; ಬದುಕಿನ ಮುಂಬೆಳಗಿನಲ್ಲಿರುವ ತನ್ನ ಮಗ ಉಳಿಯಬೇಕಾಗಿತ್ತು ಎನ್ನುವ ಶೋಕ ಒಂದು ಕಡೆ; ಇದು ದೈವೇಚ್ಛೆ ಎನ್ನುವ ತಿಳಿವಿನ ಶರಣಾಗತ ಭಾವ ಇನ್ನೊಂದು ಕಡೆ;  anguish and resignation to divine will ಈ ಎರಡೂ ಭಾವಗಳನ್ನು, ಈ ಒಂದೇ ಸಾಲು ಸಮರ್ಥವಾಗಿ ಸೂಚಿಸುತ್ತದೆ.

ಇಂತಹ ಒಂದೇ ಸಾಲಿನ ಮತ್ತೊಂದು ಉದಾಹರಣೆಗಾಗಿ, ಮಸಳಿ ಎನ್ನುವ ಕವಿಗಳು ಬರೆದ ಕವನದ ಈ ಸಾಲನ್ನು ನೋಡಬಹುದು:
ಶಿವ ಬರೆದ ಕಥೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು
ಸೂರ್ಯೋದಯದ ವರ್ಣನೆ ಇದು. ಆದರೆ ಈ ಸಾಲಿನಲ್ಲಿ ಅದಕ್ಕೂ ಹೆಚ್ಚಿನ ಭಾವವಿದೆ. ಈ ಬಾಳು ಎನ್ನುವುದು ದೈವ ಬರೆದ, ಪೂರ್ವರಚಿತ ಕತೆ ಎನ್ನುವ ನಂಬಿಕೆ, ಈ ಕತೆಯು ಯಾವಾಗಲೂ ಮಂಗಲಕರವಾಗಿ ಇರುತ್ತದೆ ಎನ್ನುವ ಶ್ರದ್ಧೆ, ಈ ದೈವನಿರ್ಣಯವನ್ನು ಸಂತೋಷದಿಂದ ಸ್ವೀಕರಿಸುವ ಮನೋಭಾವ ಇವೆಲ್ಲವೂ ಈ ಒಂದೇ ಸಾಲಿನಲ್ಲಿ ಅಡಕವಾಗಿವೆ.

ಇನ್ನಷ್ಟು ಉದಾಹರಣೆಗಳನ್ನು ನೊಡೋಣ:
ಕನ್ನಡ ಸಾಹಿತ್ಯದ ಮಹಾನ್ ಜೀವಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಒಮ್ಮೆ ಕಾಶಿಗೆ ಹೋಗಿದ್ದರು. ಗಂಗಾತೀರದಲ್ಲಿ ಒಬ್ಬ ಮುದುಕ ಗಂಡಸು ತನ್ನ ಮುದುಕಿ ಹೆಂಡತಿಯ ಕೆನ್ನೆಗೆ ಹೊಡೆದದ್ದನ್ನು ಅವರು ನೋಡುತ್ತಾರೆ. ಆ ಘಟನೆ ಒಂದು ಸುನೀತವನ್ನು ರಚಿಸಲು ಅವರಿಗೆ ಪ್ರೇರಣೆ ನೀಡುತ್ತದೆ. ಆ ಸುನೀತದ ಒಂದು ಸಾಲು ಹೀಗಿದೆ:
ಬಹುದೂರ ಕರೆ ತಂದೆ ಎಲೆ ಅಣ್ಣ ಹೊಡೆಯಲಿಕೆ.

ಮಾಸ್ತಿಯವರು ಆ ಮುದುಕ ದಂಪತಿಗಳು ತಮ್ಮ ದೂರದ ಊರಿನಿಂದ ಕಾಶಿಯವರೆಗೆ ಬಂದದ್ದನ್ನಷ್ಟೇ ಹೇಳುತ್ತಿಲ್ಲ. ದೀರ್ಘದಾಂಪತ್ಯಜೀವನದ ಬಹುದೂರವನ್ನು ಈ ದಂಪತಿಗಳು ಜೊತೆಯಾಗಿ ಕ್ರಮಿಸಿದ್ದಾರೆ. ಇದು ಕಾಲದಲ್ಲಿಯ ದೂರವೂ ಅಹುದು. ಇಷ್ಟು ದೀರ್ಘ ಕಾಲ ಜೊತೆಯಾಗಿದ್ದರೂ ಸಹ ಆ ಮುದುಕನು ದಾಂಪತ್ಯದ ಪಕ್ವತೆಯನ್ನು ಪಡೆದಿಲ್ಲ ಎನ್ನುವ ಬೇಸರ ಈ ಸಾಲಿನಲ್ಲಿದೆ. ಈ ರೀತಿಯಾಗಿ ಒಂದಕ್ಕಿಂತ ಹೆಚ್ಚು ಅರ್ಥವನ್ನು ಸೂಚಿಸುವುದು ಉತ್ತಮ ಸಾಹಿತ್ಯದ ಲಕ್ಷಣವಾಗಿದೆ.

ಇನ್ನು ವರಕವಿ ಬೇಂದ್ರೆಯವರ ಕವನಗಳಲ್ಲಿ ಸೂಚ್ಯಾರ್ಥಕ್ಕೆ ಎಲ್ಲಿಯ ಕೊರತೆ?
‘ಬಾರೊ ಸಾಧನಕೇರಿಗೆ’ ಎನ್ನುವ ಅವರ ಕವನದಲ್ಲಿ ‘ಬೇಲಿಗೂ ಹೂಬೆರಳಿದೆ’ ಎನ್ನುವ ಸಾಲೊಂದು ಬರುತ್ತದೆ. ಬೇಂದ್ರೆಯವರ ಕಾಲದಲ್ಲಿ ಬಹುತೇಕ ಮನೆಗಳ ಆವರಣಗಳಿಗೆ ಕಲ್ಲಿನ ಅಥವಾ ಇಟ್ಟಿಗೆಯ ಪ್ರಾಕಾರದ ಬದಲು ಬೇಲಿಯ ಪ್ರಾಕಾರವಿರುತ್ತಿತ್ತು. ಮೊದಲನೆಯದಾಗಿ ಆ ಕಾಲದ ವಾಸ್ತವತೆಯ documentation ಇಲ್ಲಿದೆ. ಆ ಬೇಲಿಗಳ ಹೂವುಗಳು ಸಹಸಾ tubular ಆಕಾರದಲ್ಲಿದ್ದು, ನೋಡಲು ಹೂವುಗಳ ಬೆರಳುಗಳಂತೆ ಕಾಣುತ್ತಿದ್ದವು ಎನ್ನುವ ಉಪಮಾಲಂಕಾರ ಇಲ್ಲಿದೆ. ಇದಲ್ಲದೆ ಮತ್ತೊಂದು ‘ವಿರೋಧಾಲಂಕಾರ’ವೂ ಇಲ್ಲಿದೆ. Job of fence is defense by keeping the intruders out. ಆದರೆ ಈ ಬೇಲಿಯು ಅವರನ್ನು ಹೂಬೆರಳುಗಳಿಂದ ಸ್ವಾಗತಕಾರಿಣಿಯ ಹಾಗೆ ಸ್ವಾಗತಿಸುತ್ತದೆ. ಇದೆಲ್ಲವನ್ನು ಬೇಂದ್ರೆ ಒಂದು ಸಾಲಿನಲ್ಲಿ ಸಾಧಿಸಿದ್ದಾರೆ. ವಿಶೇಷತಃ ‘ವಿರೋಧಾರ್ಥ ಸೂಚನೆ’ ಬೇಂದ್ರೆಯವರಿಗೆ ಪ್ರಿಯವಾದ ಅಲಂಕಾರವಿರಬಹುದು. ಅಂತಹ ಮೂರು ಉದಾಹರಣೆಗಳನ್ನು ನೋಡೋಣ:

(೧) ‘ಬೆಳಗು’ ಇದು ಬೇಂದ್ರೆಯವರ ಪ್ರಸಿದ್ಧ ಕವನವಾಗಿದೆ. ಅದರಲ್ಲಿಯ ಒಂದು ಸಾಲು ಹೀಗಿದೆ:
ಎಲೆಗಳ ಮೇಲೆ ಹೂಗಳ ಒಳಗೆ ಅಮೃತದಾ ಬಿಂದು
ಇಬ್ಬನಿಯ ಹನಿಗಳು ಅಮೃತದ ಬಿಂದುಗಳಂತೆ ದೈವಿಕ ಸುಖವನ್ನು ನೀಡುತ್ತಿದ್ದವು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಅಮೃತ ಎಂದರೆ ಶಾಶ್ವತವಾದದ್ದು. ಈ ಇಬ್ಬನಿಗಳಾದರೋ ಕ್ಷಣಿಕವಾದಂತಹವು. ಇದು ಬೇಂದ್ರೆಯವರ ವಿರೋಧಾಲಂಕಾರ!
(೨) ನಲ್ಲ, ನಲ್ಲೆಯರ ಪ್ರಣಯವನ್ನು ವರ್ಣಿಸುವ ಕವನದ ಸಾಲೊಂದು ಹೀಗಿದೆ:
ಅಮೃತಂತ ಬಾಯಿ ಚಪ್ಪರಿಸತಾವ, ಕೇಳಿ ಕಣ್ಣು ಮಿಟುಕತದ ರಾತ್ರಿ’.
ನಲ್ಲ, ನಲ್ಲೆಯರು ತಮ್ಮ ಮುತ್ತುಗಳನ್ನು ಅಮೃತದಷ್ಟು ಸಿಹಿ ಎಂದು ಭಾವಿಸುತ್ತಾರೆ ಹಾಗು ಈ ಪ್ರಣಯಕೇಲಿಯನ್ನು ಕಂಡ ರಾತ್ರಿಯು ಕಣ್ಣು ಮಿಟುಕಿಸುತ್ತದೆ ಎನ್ನುವುದು ಮೇಲ್ನೋಟದ ಅರ್ಥ. ಅಮೃತ ಎಂದರೆ ಶಾಶ್ವತವಾದದ್ದು; ಕಣ್ಣು ಮಿಟಿಕಿಸುವುದು ಎಂದರೆ ಕ್ಷಣಕ್ಕೆ ಸಮಾನ ಕಾಲ ಎನ್ನುವುದು ಇಲ್ಲಿಯ ವಿರೋಧಾರ್ಥ!
(೩) ಬೇಂದ್ರೆಯವರು ಬರೆಯದೆ ಬಿಟ್ಟ ನಾಟಕದಲ್ಲಿ  ತಿರಸ್ಕೃತಳಾದ ಸೂಳೆಯೊಬ್ಬಳು ತನ್ನ ಒಲವಿನ ಗಿರಾಕಿಗಾಗಿ ವಿಲಪಿಸುತ್ತಿರುವ ಹಾಡೇ  ‘ಹುಬ್ಬಳ್ಳಿಯಾಂವಾ’ ಎನ್ನುವ ಕವನ. ಈ ಕವನದಲ್ಲಿ ಬರುವ ಈ ಸಾಲನ್ನು ನೋಡಿರಿ:
ಜಲ್ಮಜಲ್ಮಕ ಗೆಣ್ಯಾ ಆಗಿ ಬರತೇನಂದಾಂವಾ
ಎದಿ ಮ್ಯಾಗಿನ ಗೆಣತಿನ ಮಾಡಿ ಇಟ್ಟುಕೊಂಡಾವಾ
ಎದೆಯ ಮೇಲಿನ ಕೆಂಪು ಅಥವಾ ಕಪ್ಪು ಚುಕ್ಕೆಗೆ ‘ಗೆಳತಿ’ ಎಂದು ಹೇಳುತ್ತಾರೆ.  ‘ಎದಿ ಮೇಲಿನ ಗೆಳತಿ’ ಎಂದರೆ ಅತ್ಯಂತ ಪ್ರೀತಿಯ ಗೆಳತಿ. ಆದರೆ ಇವಳು ಗೆಳತಿಯಲ್ಲ, ಗೆಣತಿ; ಅಂದರೆ ಇಟ್ಟುಕೊಂಡವಳು. ತನ್ನ ಗಿರಾಕಿಯು ತನ್ನನ್ನು ತುಂಬ ಪ್ರೀತಿಸುತ್ತಾನೆ ಎಂದು ಭಾವಿಸುತ್ತಲೆ, ತನಗೆ ಎಂದೂ ಹೆಂಡತಿಯ ಸ್ಥಾನಮಾನ ಸಿಗಲಾರದು ಎನ್ನುವುದು ಇವಳು ತಿಳಿದುಕೊಂಡ ವಾಸ್ತವತೆ. ಇದು ಇಲ್ಲಿಯ ದ್ವಂದ್ವಾರ್ಥ.

ಕನ್ನಡದ ಪ್ರೇಮಕವಿ ಕೆ. ಎಸ್. ನರಸಿಂಹಸ್ವಾಮಿಯವರು ಇಂತಹ ಸೂಚ್ಯಾರ್ಥವನ್ನು ತಮ್ಮ ‘ಬಳೆಗಾರ ಚೆನ್ನಯ್ಯ’ ಕವನದಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ.
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೆ?
ನವಿಲೂರಿನಿಂದ ಮಾತೊಂದ ತಂದಿಹೆನು
ಬಳೆಯ ತೊಡಿಸುವದಕ್ಕಲ್ಲ ನಿಮಗೆ.

 ಈ ನುಡಿಯ ಒಂದೊಂದೇ ಸಾಲನ್ನು ಪರಿಶೀಲಿಸಿರಿ:
ಮೊದಲ ಸಾಲಿನಲ್ಲಿ ಬಳೆಗಾರನು, ತಾನು ಬಾಗಿಲಿನಲ್ಲಿ ಬಂದು ನಿಂತಿರುವೆ ಎಂದು ಕವನದ ನಾಯಕನಿಗೆ ಹೇಳುತ್ತಾನೆ. ನಾಯಕನ ಹೆಂಡತಿ ಇಲ್ಲದಾಗ, ಈ ಮನೆಯಲ್ಲಿ ತನ್ನ ಸಲಿಗೆ ಬಾಗಿಲಿನವರೆಗೆ ಮಾತ್ರ ಎನ್ನುವುದನ್ನು ಈ ಸಾಲು ಸೂಚಿಸುತ್ತದೆ.ಎರಡನೆಯ ಸಾಲಿನಲ್ಲಿ ‘ಒಳಗೆ ಬರಲಪ್ಪಣೆಯೆ ದೊರೆಯೆ?’ ಎನ್ನುವ ಬಳೆಗಾರನ ವಿನಯ ತುಂಬಿದ ವಿನಂತಿಯು ನಾಯಕನ ಅಹಂಕಾರವನ್ನು ಸೂಚಿಸುತ್ತದೆ. ಮೂರನೆಯ ಸಾಲು ಬಳೆಗಾರನ ದೌತ್ಯದ ಸೂಚನೆಯನ್ನು ಕೊಡುತ್ತದೆ. ‘ಬಳೆಯ ತೊಡಿಸುವದಕ್ಕಲ್ಲ ನಿಮಗೆ’ ಎನ್ನುವ ನಾಲ್ಕನೆಯ ಸಾಲು ನಾಯಕನಿಗೆ ಮುಸುಕಿನಲ್ಲಿ ಮುಚ್ಚಿದ ಚಾಟಿಯ ಏಟನ್ನು ಕೊಡುತ್ತದೆ.
ಬಳೆಗಾರನ ವ್ಯಂಗ್ಯಭರಿತ tongue-in-cheek ಮಾತುಗಳು ನಾಯಕನ ಧೋರಣೆಯನ್ನು ಹಾಗು ಬಳೆಗಾರನ ಪ್ರತಿಧೋರಣೆಯನ್ನು ಅಪ್ರತ್ಯಕ್ಷವಾಗಿ ವರ್ಣಿಸುತ್ತವೆ. ಅಪ್ರತ್ಯಕ್ಷ ಸೂಚ್ಯಾರ್ಥಕ್ಕೆ ಈ ನುಡಿಯು ಒಂದು ಉತ್ತಮ ಉದಾಹರಣೆಯಾಗಿದೆ.

ದ. ಬಾ. ಕುಲಕರ್ಣಿಯವರು ಸಣ್ಣ ವಯಸ್ಸಿನಲ್ಲಿಯೇ ತೀರಿಕೊಂಡರು. ಆಧುನಿಕ  ಶೈಲಿಯ ಅವರ ಕತೆಗಳು ಸ್ವಾರಸ್ಯಪೂರ್ಣವಾಗಿವೆ. ಮೂರೇ ಸಾಲುಗಳ ಅವರ ಕವನವೊಂದನ್ನು ನೋಡಿರಿ. ಇದು ಉತ್ತಮ ಕವನದ ಶ್ರೇಷ್ಠ ಉದಾಹರಣೆಯಾಗಿದೆ:
ಸೋಮವಾರ ಚಿಂತಿ
ಮಂಗಳವಾರ ಸಂತಿ
ಬುಧವಾರ ನಿಶ್ಚಿಂತಿ

ದ. ಬಾ. ಕುಲಕರ್ಣಿಯವರು ಈ ಕವನದಲ್ಲಿ ಎಲ್ಲಿಯೂ ತಮ್ಮ ಬಡತನದ ಬಗೆಗೆ ಒಂದು ಪದವನ್ನೂ ಹೇಳಿಲ್ಲ. ಆದರೆ ಈ ಮೂರು ಸಾಲುಗಳು ಅವರ ಬದುಕಿನ ಕಟು ವಾಸ್ತವನ್ನು ಹಾಗು ಅವರು ಅದನ್ನು ಸ್ವೀಕರಿಸಿ, ನಿರ್ವಹಿಸುವ ರೀತಿಯನ್ನು  ಅನನ್ಯವಾಗಿ ಚಿತ್ರಿಸಿವೆ. ಈ ವಾಸ್ತವಕ್ಕೆ ವಿನೋದದ ತೆಳು ಪರದೆ ಬೇರೆ. ಏನನ್ನೂ ಹೇಳದೆ, ಏನೆಲ್ಲವನ್ನೂ ಹೇಳುವ ಈ ಮೂರು ಸಾಲುಗಳು ದಬಾಕು ಅವರ ಸಾಮರ್ಥ್ಯಕ್ಕೆ ಸಾಕ್ಷಿಯಾಗಿವೆ.

ಇಂತಹ ಸೂಕ್ಷ್ಮ ಸೂಚ್ಯತೆ ಲೌಕಿಕ ಸಾಹಿತ್ಯದಲ್ಲಿ ಮಾತ್ರ ದೊರೆಯುತ್ತದೆ ಎಂದೇನಲ್ಲ. ಪುರಂದರದಾಸರು ರಚಿಸಿದ ಅನೇಕ ಪಾರಮಾರ್ಥಿಕ ಗೀತೆಗಳಲ್ಲಿ ಈ ಸೂಕ್ಷ್ಮತೆ ಇದೆ. ಉದಾಹರಣೆಗೆ ‘ಡೊಂಕು ಬಾಲದ ನಾಯಕರೆ, ನೀವೇನೂಟವ ಮಾಡಿದಿರಿ’ ಎನ್ನುವ ಗೀತೆಯನ್ನು ನೋಡಿರಿ. ಡೊಂಕು ಬಾಲದ ನಾಯಕ ಎಂದರೆ ನಾಯಿ ಎನ್ನುವುದು ಸಹಜವಾದ ಅರ್ಥ; ವಿಷಯಸುಖಕ್ಕೆ ಜೋತು ಬಿದ್ದ ಮಾನವ ಎನ್ನುವುದು ಇಲ್ಲಿಯ ಸಾಂಕೇತಿಕ ಅರ್ಥ. ಇದಲ್ಲದೆ ಮತ್ತೊಂದು ವ್ಯಂಗ್ಯಾರ್ಥವೂ ಇಲ್ಲಿದೆ. ಪುರಂದರದಾಸರ ಪೂರ್ವದ ಹೆಸರು ಶ್ರೀನಿವಾಸ ನಾಯಕ. ಆದುದರಿಂದ ದಾಸರು ತಮ್ಮನ್ನು ತಾವೇ ಪ್ರಸ್ನಿಸಿಕೊಳ್ಳುತ್ತಿದ್ದಾರೆ, ‘ಎಲವೊ, ಡೊಂಕು ಮನಸ್ಸಿನ ಶ್ರೀನಿವಾಸ ನಾಯಕನೆ, ನೀನು ಏನೇನು ಭೋಗಗಳಿಗೆ ಆಸೆಪಟ್ಟೆಯಪ್ಪಾ, ಏನೇನು ಕರ್ಮಗಳನ್ನು ಕಟ್ಟಿಕೊಂಡೆಯಪ್ಪಾ?’ ಎಂದು!

ದೇವತಾಸ್ತೋತ್ರಗಳಲ್ಲಿಯೂ ಸಹ ಈ ಸೂಕ್ಷ್ಮಾರ್ಥವನ್ನು ಕಾಣಬಹುದು. ‘ಗಣಪತಿ ಸಹಸ್ರನಾಮ’ದಲ್ಲಿ ಗಣಪತಿಯ ಆಪಾದಮಸ್ತಕ ವರ್ಣನೆ ಇದೆ. ಅದನ್ನು ಭಾಗಶಃ ಇಲ್ಲಿ ಉದ್ಧರಿಸುತ್ತೇನೆ:
………………………..
ಭಗ್ನವಾಮರದಸ್ತುಂಗ, ಸವ್ಯದಂತೊ ಮಹಾಹನುಃ,
ಹೃಸ್ವನೇತ್ರತ್ರಯಃ, ಶೂರ್ಪಕರ್ಣೋ, ನಿಬಿಡಮಸ್ತಕಃ,
ಸ್ತಬಕಾಕಾರ ಕುಂಭಾಗ್ರೋ, ರತ್ನಮೌಲಿಃ, ನಿರಂಕುಶಃ

ಕೊನೆಯ ಸಾಲಿನಲ್ಲಿ ಗಣಪತಿಯ ಶಿರೋಭಾಗವನ್ನು ವರ್ಣಿಸಲಾಗಿದೆ. ಆನೆಯ ತಲೆಗೆ ಕುಂಭಸ್ಥಲ ಎನ್ನುತ್ತಾರೆ. ಗಣಪತಿಯ ತಲೆಯು ಆನೆಯ ತಲೆಯಂತೆ ಇರುವುದರಿಂದ, ಅದನ್ನು ಇಲ್ಲಿ ಕುಂಭ ಎಂದೇ ಕರೆಯಲಾಗಿದೆ. ಈ ಕುಂಭವು ಸ್ತಬಕದಂತೆ ವಿಶಾಲವಾಗಿದೆ. ಮದೋನ್ಮತ್ತ ಆನೆಯ ಕುಂಭದಲ್ಲಿ ರತ್ನಗಳು ಒಸರುವಂತೆ ಇಲ್ಲಿಯೂ ರತ್ನಗಳಿವೆ. ಆನೆಯ ಕುಂಭಕ್ಕೆ ಅಂಕುಶದ ನಿಯಂತ್ರಣವಿರುತ್ತದೆ. ಆದರೆ ಗಣಪತಿಯ ಕುಂಭಕ್ಕೆ ಅಂಕುಶವಿಲ್ಲ; ಅವನು ನಿರಂಕುಶನು! ಈ ರೀತಿಯಾಗಿ, ಗಣಪತಿಯ ಮೇಲೆ ಯಾರ ಅಧಿಕಾರವೂ ನಡೆಯಲಾರದು ಎನ್ನುವುದನ್ನು ಕವಿಯು ಸೂಕ್ಷ್ಮವಾಗಿ ವರ್ಣಿಸುತ್ತಿದ್ದಾನೆ.

ಕನ್ನಡದ ಹಾಸ್ಯಪಿತಾಮಹ ರಾ.ಶಿ.ಯವರು, ‘ಹಾಸ್ಯವು subtle ಪದದಲ್ಲಿಯ b ಹಾಗೆ ಇರಬೇಕು’ ಎಂದು ಹೇಳಿದ್ದರು. ಈ ಮಾತು ಸಾಹಿತ್ಯದ ಎಲ್ಲ ಪ್ರಕಾರಗಳಿಗೂ ಅನ್ವಯಿಸುತ್ತದೆ.