Tuesday, December 13, 2011

ಠಕ್ಕರ ಬಾಳಪ್ಪ

ಬಾಳ ಠಾಕರೆಯವರಿಗೆ ಇತಿಹಾಸ ಗೊತ್ತಿಲ್ಲ. ಮಹಾರಾಷ್ಟ್ರದಲ್ಲಿರುವ ಕನ್ನಡಿಗರನ್ನು ಓಡಿಸುವ ಮಾತುಗಳನ್ನು ಆಡುತ್ತಿರುವ ಅವರು ಭಾರತದ ಪ್ರಾಚೀನ ಇತಿಹಾಸವನ್ನು ಅರಿತುಕೊಳ್ಳುವದು ಒಳ್ಳೆಯದು. ಪ್ರಾಚೀನ ಕಾಲದಲ್ಲಿ ಅನೇಕ ಬುಡಕಟ್ಟುಗಳು ಭಾರತದಲ್ಲೆಲ್ಲ ಹರಡಿಕೊಂಡಿದ್ದವು. ಕನ್ನಡ ಬುಡಕಟ್ಟುಗಳು ಹಿಮಾಲಯದ ತಪ್ಪಲಿನಲ್ಲಿಯೂ ವಾಸಿಸುತ್ತಿದ್ದವು. ಇಂದಿನ ಗುಜರಾತ, ಮಹಾರಾಷ್ಟ್ರಗಳಲ್ಲಿಯೂ ಸಹ ಈ ಬುಡಕಟ್ಟುಗಳು ವಾಸಿಸುತ್ತಿದ್ದವು. ಬಹುಶಃ ಸಿಂಧು ಸಂಸ್ಕೃತಿಯ ನಾಗರಿಕರು ಕನ್ನಡಿಗರೇ ಆಗಿರಬಹುದು. ಈ ಎಲ್ಲ ಊಹೆಗಳಿಗೆ ಕನಿಷ್ಠ ಮೇಲ್ನೋಟದ ಸಾಕ್ಷಿಗಳಾದರೂ ಬೇಕಲ್ಲವೆ? ಅದೃಷ್ಟವಶಾತ್ ಕೀರ್ತಿಶೇಷ ಶಂ.ಬಾ. ಜೋಶಿಯವರ ಸಂಶೋಧನೆ ಈ ವಿಷಯದಲ್ಲಿ ದಿಕ್ಸೂಚಿಯಾಗಿದೆ. ಭಾಷೆ ಹಾಗು ಸ್ಥಳನಾಮಗಳು ಇತಿಹಾಸವನ್ನು ಶೋಧಿಸುವದರಲ್ಲಿ ಹೇಗೆ ಸಹಾಯಕವಾಗಬಲ್ಲವು ಎನ್ನುವದನ್ನು ಅವರು ತೋರಿಸಿಕೊಟ್ಟಿದ್ದಾರೆ. ಆ ಆಧಾರದ ಮೇಲೆ ಕನ್ನಡಿಗರ ಕುರುಹುಗಳು ಭಾರತದ ಉತ್ತರದಲ್ಲಿಯೂ ಲಭಿಸುವದನ್ನು ಪರಿಶೀಲಿಸಿ ಪ್ರಮಾಣಿಸಬಹುದು.

ಮೊದಲಿಗೆ ಮಹಾರಾಷ್ಟ್ರದ ಮೂಲವನ್ನು ಪರೀಕ್ಷಿಸೋಣ. ಮಹಾರಾಷ್ಟ್ರ ಎನ್ನುವ ಪದವು ಮರಹಟ್ಟ ಎನ್ನುವ ಕನ್ನಡ ಪದದ ಸಂಸ್ಕೃತೀಕರಣವಾಗಿದೆ.  ಪ್ರಾಚೀನ ಕಾಲದಲ್ಲಿ ಮಹಾರಾಷ್ಟ್ರವೆಲ್ಲ ಅರಣ್ಯಪ್ರದೇಶವಾಗಿತ್ತು. ಹಾಗೆ ನೋಡಿದರೆ ಭಾರತದ ಬಹುಭಾಗವೆಲ್ಲ ಅರಣ್ಯಪ್ರದೇಶವೇ ಆಗಿತ್ತು. ವಾಲ್ಮೀಕಿ ರಾಮಾಯಣದಲ್ಲಿ ಈ ಅರಣ್ಯಭಾಗದ ಸುಂದರ ವರ್ಣನೆಗಳು ಬರುತ್ತವೆ. ಅಟವಿ ಅಥವಾ ಅಡವಿಯಲ್ಲಿ ಇರುವವರು ಆಟವಿಕರು. ನಗರಿಗಳಲ್ಲಿ ಇರುವವರು ನಾಗರಿಕರು. ಅಡವಿ ಅಥವಾ ಮರಗಳ ಮಧ್ಯೆ ವಾಸಿಸುವವರು ಮರಹಾಡಿಗಳು ಅಥವಾ ಮರಹಟ್ಟರು. (ಕನ್ನಡಿಗರು ತಮ್ಮ ಬೀಡುಗಳನ್ನು ‘ಹಾಡಿ’, ‘ಹಟ್ಟಿ’ ಎಂದು ಕರೆಯುತ್ತಾರೆ.) ಆರ್ಯ ಅಥವಾ ಆರಿಯ ಜನಾಂಗಗಳು ಭಾರತವನ್ನು ಆಕ್ರಮಿಸತೊಡಗಿದಾಗ ಹಾಗು ಪ್ರಭಾವಶಾಲಿಗಳಾದಾಗ ಇಲ್ಲಿಯ ಪ್ರದೇಶನಾಮಗಳನ್ನು ತಮ್ಮ ನಾಲಗೆಗೆ ತಕ್ಕಂತೆ ಬದಲಾಯಿಸಿಕೊಂಡರು. ಮರಹಟ್ಟವು ಮರಹಾಟವಾಗಿ ಬಳಿಕ ಮಹಾರಾಷ್ಟ್ರವಾಯಿತು. ಇಲ್ಲಿಯ ನಿವಾಸಿಗಳು ಮರಾಠಾ ಆದರು. ‘ಮ’ಕಾರಕ್ಕೆ ವಕಾರ ಬಂದಲ್ಲಿ ಅದು ವರ್ಹಾಡ ಎನ್ನುವ ಸ್ಥಳವೂ ಆಯಿತು. ಅದರಂತೆ ಕರಹಾಡಿ ಗ್ರಾಮವು ಕರ್ಹಾಡ ಎಂದಾಯಿತು. ಇಂದು ಮಹಾರಾಷ್ಟ್ರದಲ್ಲಿರುವ ಅಥವಾ ಕರ್ನಾಟಕದಲ್ಲಿ ಮರಾಠಿ ಪ್ರಭಾವವಿರುವಂತಹ ಬಹಳಷ್ಟು ಊರುಗಳು ಕನ್ನಡ ಹೆಸರಿನ ಆರಯೀಕರಣವೇ ಆಗಿವೆ.
ಕೆಲವು ಉದಾಹರಣೆಗಳು ಇಂತಿವೆ:
ಕರ್ನಾಟಕದಲ್ಲಿ:
ಕಾಳೀನದಿಯ ದಂಡೆಯ ಮೇಲಿರುವ ‘ದಂಡೀಹಳ್ಳಿ’ಯು ‘ದಾಂಡೇಲಿ’ ಆಗಿದೆ.
ಚಾಪಿಹಳ್ಳಿಯು ಚಾಪೋಲಿ ಆಗಿದೆ.
ಮಹಾರಾಷ್ಟ್ರದಲ್ಲಿ:
ಸಂಗೊಳ್ಳಿಯು ಸಾಂಗ್ಲಿ ಆಗಿದೆ.
ಮಿರಜಿ ಇದು ಮಿರಜ ಆಗಿದೆ.
ಕಂದವಳ್ಳಿಯು ಕಾಂದೀವ್ಲಿ ಆಗಿದೆ.
ಕಂದಹಾಳವು ಖಂಡಾಲಾ ಆಗಿದೆ.
ಮುಂಬರಗಿಯು ಮುಂಬಯಿ ಆಗಿದೆ.
ಗುಜರಾತದಲ್ಲಿ:
ಕಂದಹಾಳವು ಕಾಂಡ್ಲಾ ಆಗಿದೆ.
ಬರ್ದಳ್ಳಿಯು ಬಾರ್ಡೋಲಿಯಾಗಿದೆ.
ಉತ್ತರ ಭಾರತದಲ್ಲಿ:
ದೇಹಳ್ಳಿಯು ದೆಹಲಿ ಆಗಿದೆ.

ಅಫಘಾನಿಸ್ತಾನದಲ್ಲಿರುವ ಕಂದಹಾರವು ಬದಲಾಗದೇ ಉಳಿದುಕೊಂಡಿದೆ. ಇದು ಕನ್ನಡದ ಊರು.
(ನೋಡಿರಿ:ಕಂದರು)
ಹಾಗಿದ್ದರೆ, ಆರಿಯ ಜನಾಂಗಗಳು ಮರಹಾಡಿಯನ್ನು ಆಕ್ರಮಿಸಿಕೊಂಡು ‘ಮಹಾರಾಷ್ಟ್ರ’ವನ್ನಾಗಿ ಮಾಡಿದವೆ? ಈ ಮಾತು ಪೂರ್ಣ ಸತ್ಯವಲ್ಲ. ಇಲ್ಲಿರುವ ಕನ್ನಡ ಬುಡಕಟ್ಟುಗಳೇ ಆಕ್ರಮಿಕ ಆರಿಯ ಜನಾಂಗದಲ್ಲಿ ಒಂದಾಗಿ ಹೋಗಿ,ಮರಹಟ್ಟರಿದ್ದವರು ಮರಾಠಾ ಆದರು. ತಮ್ಮ ಕನ್ನಡ ಭಾಷೆಯನ್ನು ಆರಯೀಕರಣಗೊಳಿಸಿದರು. ಇಂದು ಮಹಾರಾಷ್ಟ್ರದಲ್ಲಿರುವ ಮರಾಠಾ ಜನರಲ್ಲಿ ಶೇಕಡಾ ೯೦ರಷ್ಟು ಜನ ಮೂಲತಃ ಕನ್ನಡಿಗರೇ. ಇದು ಹೇಗೆನ್ನುತ್ತೀರಾ? ಇದರ ರುಜುವಾತು ಇಲ್ಲಿದೆ:

ಒಂದು ಜನಾಂಗವು ಯಾವುದೋ ಕಾರಣಕ್ಕಾಗಿ ತನ್ನ ಭಾಷೆಯನ್ನು ಬದಲಾಯಿಸಿಕೊಂಡಿರಬಹುದು. ಉದಾಹರಣೆಗೆ ಅಮೆರಿಕಾಕ್ಕೆ ವಲಸೆ ಹೋದ ಕನ್ನಡಿಗರ ಸಂತತಿ ಕಾಲಕ್ರಮೇಣ ತಮ್ಮ ಕುಟುಂಬದಲ್ಲಿ ಇಂಗ್ಲಿಶ್ ಭಾಷೆಯನ್ನೇ ಬಳಸಬಹುದು. ಆದರೆ ಇಂತಹ ಕುಟುಂಬದ ಮೊದಲ ತಲೆಮಾರಿನ ಸದಸ್ಯರು ತಮ್ಮ ಸಂಬಂಧಸೂಚಕ ಪದಗಳನ್ನು ಹಳೆಯ ಭಾಷೆಯಲ್ಲಿಯೇ ಹೇಳುತ್ತಿರುತ್ತಾರೆ. ಮರಾಠಿ ಭಾಷೆಯನ್ನು ಆಡುವ ಕುಟುಂಬಗಳು ಇವತ್ತಿಗೂ ‘ಅಪ್ಪಾ, ಅಣ್ಣಾ, ಆಯಿ’ ಎನ್ನುವ ಕನ್ನಡ ಭಾಷೆಯ ಸಂಬಂಧಸೂಚಕ ಪದಗಳನ್ನು ಬಳಸುತ್ತಾರೆಯೇ ಹೊರತು, ‘ಪಿತಾಜಿ, ಭಾಯಿ, ಮಾ’ ಎನ್ನುವ ಸಂಸ್ಕೃತಮೂಲ ಪದಗಳನ್ನು ಬಳಸುವದಿಲ್ಲ. ‘ಅಣ್ಣಾ ಹಜಾರೆ’ ಎಂದು ಪ್ರಸಿದ್ಧರಾದ ಕಿಸನ ಹಜಾರೆಯವರನ್ನು ‘ಅಣ್ಣಾ’ ಎಂದು ಕರೆದವರು ಅವರ ಹಳ್ಳಿಯ ಜನ. ಅವರನ್ನು ‘ಭಾಯೀ’ ಎಂದೇಕೆ ಅವರು ಕರೆಯುತ್ತಿಲ್ಲ?

ಮರಾಠಿ ಭಾಷೆಗೆ ಸಂಬಂಧಿಸಿದಂತೆ, ಪುಣೆಯ ನಾಗರಿಕರು ಕೊಲ್ಲಾಪುರದ ನಾಗರಿಕರನ್ನು ಮೂದಲಿಸುತ್ತಾರೆ. ಕೊಲ್ಲಾಪುರದ ಮರಾಠಿಯು ಪುಣೆಯ ಮರಾಠಿಗಿಂತ ಕೆಳಗಿನ ಮಟ್ಟದ್ದು ಎಂದು ಅವರ ಭಾವನೆ. ಉದಾಹರಣೆಗೆ ‘ಈ ಬದಿಯಲ್ಲಿ’ ಎಂದು ಹೇಳಲು ಕೊಲ್ಲಾಪುರದವರು `ಇಕಡೆ’ ಎನ್ನುತ್ತಾರಂತೆ. ಆದರೆ ಪುಣೆಯ ನಾಗರಿಕರು ಮಾತ್ರ ‘ಇಥs’ ಎಂದು ಉಲಿಯುತ್ತಾರಂತೆ.

ಪಾಪ! ಈ ಮರಾಠಿಗರಿಗೆ ‘ಇಕಡೆ’ ಪದವು ಕನ್ನಡದ ‘ಈ ಕಡೆಗೆ’ ಎನ್ನುವ ಪದದ ಹಾಗು ‘ಇಥs’ ಪದವು ಕನ್ನಡದ ‘ಇತ್ತ’ ಎನ್ನುವ ಪದದ ಮಾರ್ಪಾಡು, ಅರ್ಥಾತ್ ಎರಡೂ ಪದಗಳು ಕನ್ನಡ ಪದಗಳು ಎನ್ನುವದೇ ಗೊತ್ತಿಲ್ಲ! ಅನೇಕ ಪದಾರ್ಥವಾಚಕ ಮರಾಠೀ ಪದಗಳೂ ಸಹ ಕನ್ನಡಮೂಲದವೇ ಆಗಿವೆ. ಉದಾಹರಣೆಗೆ ಕನ್ನಡದ ‘ತುಪ್ಪ’ವು ಮರಾಠಿಯಲ್ಲಿ ‘ತೂsಪ’ ಆಗಿದೆ. ಅಷ್ಟೇ ಏಕೆ, ‘ಚಾಂಗು (=ಒಳ್ಳೆಯ)’ ಎನ್ನುವ ಕನ್ನಡ ವಿಶೇಷಣವನ್ನೇ ಮರಾಠಿಗರು ‘ಚಾಂಗಲಾ’ ಎಂದು ಬಳಸುತ್ತಾರೆ. ಒಟ್ಟಿನಲ್ಲಿ ಕನ್ನಡ ಪದಗಳನ್ನು ಎಳೆದು ಹಿಗ್ಗಿಸಿದಾಗ ಮರಾಠಿ ಪದಗಳು ಆಗುತ್ತವೆ ಎನ್ನಬಹುದೇನೊ!

ಹೀಗಿರಲು, ಬಾಳ ಠಾಕರೆಯವರಿಗೆ ತಮ್ಮ ಪೂರ್ವಜರು ಕನ್ನಡಿಗರು ಎನ್ನುವದೇ ಗೊತ್ತಿಲ್ಲ! ಅವರ ಹೆಸರನ್ನೇ ತೆಗೆದುಕೊಳ್ಳಿರಿ. ಆರಿಯ ಜನಾಂಗಗಳು ‘ಳ’ಕಾರವನ್ನು ಬಳಸುವದಿಲ್ಲ; ಕನ್ನಡಿಗರು ಬಳಸುತ್ತಾರೆ. ಆರಿಯರ ‘ಕಾಲೀ’ ದೇವಿ ನಮಗೆ ‘ಕಾಳಿ’ದೇವಿ. ಅವರ ‘ಬಾಲ(=ಬಾಲಕ=ಮಗು)’ ನಮಗೆ ‘ಬಾಳ’. ಠಾಕರೆಯವರು ‘ಬಾಳ’ರು, ‘ಬಾಲ’ರಲ್ಲ. ಆದರೆ ಅವರ ಬಾಲ ಮಾತ್ರ ಉದ್ದವಾಗಿದೆ!

ಅವರ ಅಡ್ಡಹೆಸರಾದ ‘ಠಾಕರೆ’ಯೂ ಸಹ ಮಾರ್ಪಾಡಾದ ಪದವೇ. ಭಾರತದ ವಾಯವ್ಯ ಭಾಗದಲ್ಲಿರುವ ಠಕ್ಕರ ಜನಾಂಗವು ಮುಸ್ಲಿಮ್ ಆಕ್ರಮಣಕ್ಕೊಳಗಾಗಿ ಗುಜರಾತಿಗೆ ಓಡಿ ಬಂದಿತು. ಅಲ್ಲಿಂದ ಮಹಾರಾಷ್ಟ್ರಕ್ಕೆ ಬಂದವರೇ ‘ಠಾಕರೇ’ ಆಗಿರಬಹುದು. ಇನ್ನೊಂದು ಸಾಧ್ಯತೆ ಎಂದರೆ ಕನ್ನಡದ ‘ಠಕ್ಕ’ರೇ ಮರಾಠಿಯಲ್ಲಿ ‘ಠಾಕರೇ’ ಆಗಿರಬಹುದು. ಈ ಸಾಧ್ಯತೆಯನ್ನು ನಗೆಚಾಟಿಕೆ ಎಂದು ತಳ್ಳಿ ಹಾಕುವಂತಿಲ್ಲ. ಇದರ ಕಾರಣ ಹೀಗಿದೆ:

ಬ್ರಿಟಿಶರು ತಮ್ಮ ಆಳ್ವಿಕೆಯಲ್ಲಿ ನಿಶ್ಶಸ್ತ್ರೀಕರಣಗೊಳಿಸಿದ ಅನೇಕ ಯೋಧ ಜನಾಂಗಗಳು ಉಪಜೀವನಕ್ಕಾಗಿ ಕುಟಿಲವೃತ್ತಿಗಳನ್ನು ಹಾಗು ದರೋಡೆಗಾರಿಕೆಯನ್ನು ಅವಲಂಬಿಸಿದವು. ‘ಠಕ್ಕ’ರೂ ಸಹ ಅಂತಹ ಒಂದು ಬುಡಕಟ್ಟು ಜನಾಂಗದವರು. ಇವರೇ ಮಹಾರಾಷ್ಟ್ರದ ‘ಠಾಕರೇ’ ಆಗಿದ್ದಾರು.

ಮಹಾರಾಷ್ಟ್ರದ ಅನೇಕ ಅಡ್ಡಹೆಸರುಗಳು ‘ಏ’ಕಾರಾಂತವಾಗುತ್ತವೆ:
ಕರ್ನಾಟಕದಲ್ಲಿಯ ‘ಸಕ್ಕರಿ’ ಎನ್ನುವ ಅಡ್ಡಹೆಸರು ಮರಾಠಿಯಲ್ಲಿ ‘ಸಾಖರೇ’ ಆಗುತ್ತದೆ.
(‘ಶಾಂತಕವಿ’ ಎನ್ನುವ ಕಾವ್ಯನಾಮದಿಂದ ಪ್ರಸಿದ್ಧರಾದ ಸಕ್ಕರಿ ಬಾಳಾಚಾರ್ಯರನ್ನು ನೆನಪಿಸಿಕೊಳ್ಳಿರಿ.)
ಕನ್ನಡ ಮಾತನಾಡುವ ಕುಟುಂಬಗಳಿಗೆ ಮರಾಠಿಗರು ‘ಕಾನಡೆ’ ಎನ್ನುವ ಅಡ್ಡಹೆಸರನ್ನು ಕೊಟ್ಟಿದ್ದಾರೆ. ಅದರಂತೆ ‘ಮರಾಠೆ’ ಎನ್ನುವ ಅಡ್ಡಹೆಸರಿನ ಶ್ರೇಷ್ಠ ಕನ್ನಡ ಸಂಶೋಧಕರೊಬ್ಬರು ಬೆಳಗಾವಿಯಲ್ಲಿದ್ದಾರೆ. ಅದರಂತೆ ದಾಬಡೇ, ಹಜಾರೇ, ಜಾಯದೇ ಮೊದಲಾದ ಅಡ್ಡಹೆಸರುಗಳು. ಆದರೆ ಕನ್ನಡಿಗರ ದೃಷ್ಟಿಯಿಂದ ಅತ್ಯಂತ ಮೋಜಿನ ಹೆಸರೆಂದರೆ: ‘ಲೇಲೇ’. ಕನ್ನಡಿಗರು ಆ ವ್ಯಕ್ತಿಯನ್ನು ‘ಲೇ, ಲೇ, ಲೇಲೇ’ ಎಂದು ಕರೆಯಬಹುದೇನೊ! ಈ ರೀತಿಯಲ್ಲಿ ‘ಠಕ್ಕರ ಬಾಳಪ್ಪ’ನೇ ಮರಾಠಿಯಲ್ಲಿ ‘ಬಾಳ ಠಾಕರೇ’ ಆಗಿದ್ದಾರೆ ಹಾಗು ತಮ್ಮ ಮೂಲಿಗರ ಸಂತತಿಯ ವಿರುದ್ಧವೇ ಗರ್ಜಿಸುತ್ತಿದ್ದಾರೆ! ಇದು ಇತಿಹಾಸದ ವೈಪರೀತ್ಯ!

ಬಾಳ ಠಾಕರೆಯವರು ಮರಾಠೇತರರನ್ನು ಮುಂಬಯಿ ಬಿಟ್ಟು ತೊಲಗಿ ಎಂದು ಗರ್ಜಿಸಿದರು. ಮರಾಠಿಗರಿಗೆ
ಮಹಾರಾಷ್ಟ್ರದಲ್ಲಿ  ಕಟ್ಟಿಗೆ ಕಡಿಯುವ ಹಾಗು ನೀರು ಹೊರುವ ಕೆಲಸಗಳು ಮಾತ್ರ ಸಿಗುತ್ತವೆ ಎಂದು ಸಾರ್ವಜನಿಕವಾಗಿ ವ್ಯಥೆ ಪಟ್ಟರು. ಈ ವ್ಯಥೆಯು ಅವರ ನೈಜ ವ್ಯಥೆಯೇ ಅಥವಾ ರಾಜಕೀಯ ಲಾಭಕ್ಕಾಗಿ ಮಾಡಿದ ವ್ಯಥೆಯೆ?
ಇದು ರಾಜಕೀಯ ವ್ಯಥೆಯಾಗಿದ್ದರೆ ಹಾಗು ಇದರಿಂದಾಗಿ ಅವರಿಗೆ ರಾಜಕೀಯ ಮತ್ತು ಆರ್ಥಿಕವಾಗಿ ಲಾಭವಾಗಿದ್ದರೆ, ಆ ವಿಷಯದಲ್ಲಿ ನಾನು ಏನೂ ಹೇಳಬಯಸುವದಿಲ್ಲ. ಯಾಕೆಂದರೆ ಕರ್ನಾಟಕದ ಕೆಲವು ರಾಜಕಾರಣಿಗಳೂ ಸಹ ಇಂತಹದೇ ಮಾತುಗಳನ್ನಾಡುತ್ತಾರೆ. ಭಾವನೆಗಳನ್ನು ಕೆರಳಿಸುವ ಇಂತಹ ಘೋಷಣೆಗಳಿಂದ ಎಲ್ಲಾ ಬಣ್ಣದ ರಾಜಕಾರಣಿಗಳು ಲಾಭವನ್ನೇ ಮಾಡಿಕೊಂಡಿದ್ದಾರೆ.

ಒಂದು ವೇಳೆ, ಇದು ನೈಜ ವ್ಯಥೆಯಾಗಿದ್ದರೆ? ಹಾಗಿದ್ದರೆ, ಇದರಂತಹ ಮೂರ್ಖತನ ಬೇರೊಂದಿಲ್ಲ. ಭಾರತದ ಒಂದು ಮೂಲೆಯಿಂದ ಮತ್ತೊಂದು ಮೂಲೆಗೆ ವಿಭಿನ್ನ ಭಾಷಿಕರು ವಲಸೆ ಹೋಗುವದು ಸಾಮಾನ್ಯವಾಗಿದೆ. ಹೊಟ್ಟೆಪಾಡಿಗಾಗಿ ಎಲ್ಲಾದರೂ ಹೋಗಲೇ ಬೇಕಲ್ಲ. ಆದರೆ ಒಂದು ರಾಜ್ಯಕ್ಕೆ ಹೋದವರು ಅಲ್ಲಿಯ ನಾಡಭಾಷೆಯನ್ನು ಬಳಸಲು ಕಲಿಯಬೇಕು. ಈ ವಿಷಯದಲ್ಲಿ ಮಾತ್ರ ಕನ್ನಡಿಗರನ್ನು ಅಭಿಮಾನ್ಯಶೂನ್ಯರೆಂದು ಹೇಳಲೇ ಬೇಕು. ಕರ್ನಾಟಕದಲ್ಲಿ ಕನ್ನಡದಲ್ಲಿಯೇ ಮಾತನಾಡಬೇಕು ಎನ್ನುವ ಪರಿಸ್ಥಿತಿ ಇಲ್ಲವೇ ಇಲ್ಲ. ತಮಿಳುನಾಡಿನಲ್ಲಿ ಅಥವಾ ಮಹಾರಾಷ್ಟ್ರದಲ್ಲಿ ಇದು ಸಾಧ್ಯವೆ? ಈ ಸಂದರ್ಭದಲ್ಲಿ ನನಗೆ ದಿವಂಗತ ರಾ.ಶಿ.ಯವರ ನಗೆಹನಿಯೊಂದು ನೆನಪಾಗುತ್ತದೆ. ಬೆಂಗಳೂರಿನಲ್ಲಿದ್ದ ಅವರ ದವಾಖಾನೆಗೆ ಬರುತ್ತಿದ್ದ ರೋಗಿಗಳು ತಮಿಳು, ತೆಲಗು, ಉರ್ದು ಮೊದಲಾದ ತಮ್ಮ ಭಾಷೆಗಳಲ್ಲಿಯೇ ಇವರ ಜೊತೆಗೆ ಮಾತನಾಡುತ್ತಿದ್ದರು. ಹೀಗಾಗಿ ಕನ್ನಡದಲ್ಲಿ ಮಾತನಾಡುವ ಅವಶ್ಯಕತೆ ಇವರಿಗೆ ಬರುತ್ತಿರಲಿಲ್ಲ. ಮನೆಗೆ ಹೋದ ಬಳಿಕ ಹೆಂಡತಿಯೊಡನೆ ಮಾತಂತೂ ಬೇಕಾಗಿಲ್ಲವಲ್ಲ. ಅಲ್ಲಿ ಏನಿದ್ದರೂ TARZAN! ರಾ.ಶಿ.ಯವರಿಗೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಅಗತ್ಯವೇ ಬರುತ್ತಿರಲಿಲ್ಲವಂತೆ!

ಬಾಳ ಠಾಕರೆಯವರಿಂದ ನಾವು ಕಲಿಯಬೇಕಾದದ್ದು ಸಾಕಷ್ಟಿದೆ, ಕಲಿಯಬಾರದ್ದೂ ಸಾಕಷ್ಟಿದೆ!

[ಟಿಪ್ಪಣಿ: ಕನ್ನಡದ ಪ್ರಸಿದ್ಧ ವ್ಯಕ್ತಿಯೊಬ್ಬರು ಮುಂಬಯಿಗೆ ಸರಬರಾಜು ಆಗುವ ಹುಡುಗಿಯರು ವಿಜಾಪುರ ಭಾಗದ ಕನ್ನಡ ಹುಡುಗಿಯರು ಎಂದು ದುಃಖಿಸಿದ್ದರು. ಇದು ಮತ್ತೊಂದು ಮೂರ್ಖತನ. ಒಬ್ಬಳು ಹೆಣ್ಣುಕೂಸು ಸೂಳೆಯಾಗುವ ಪರಿಸ್ಥಿತಿ ಬಂದರೆ, ಆ ಹೆಣ್ಣುಮಗುವಿಗಾಗಿ ನಾವು ದುಃಖಿಸಬೇಕೆ ಹೊರತು, ಅವಳು ಕನ್ನಡಿಗಳು ಎನ್ನುವ ಕಾರಣಕ್ಕಾಗಿ ಅಲ್ಲ. ದೌರ್ಭಾಗ್ಯದಲ್ಲಿಯೂ ಸಹ ನಾವು ಭಾಷಾವಾದಿಗಳು ಆಗಬೇಕೆ? ಮಾನವೀಯತೆ ಎನ್ನುವದು ಇಲ್ಲವೆ?]

47 comments:

  1. ಸುನಾತ್ ಸರ್;ಮಾಹಿತಿಪೂರ್ಣ ಲೇಖನಕ್ಕೆ ಧನ್ಯವಾದಗಳು.

    ReplyDelete
  2. ಕಾಕಾ ನೀವು ಹೇಳಿದಹಾಗೆ ಠಾಕರೆ ಕಡೆಯಿಂದ ಕಲಿಯುವುದೂ ಭಾಳ ಅದ. ಇವನ ಗರಡಿಯಲ್ಲಿಯೇ ಪಳಗಿ ಈಗ ಬ್ಯಾರೆಆಗಿರುವ ರಾಜ್ ಠಾಕರೆ
    ಮೊನ್ನೆ ಮುಂಬೈ, ಪುಣೆ ಇತ್ಯಾದಿ ನಗರಪಾಲಿಕೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡಲು ಮರಾಠಿಯಲ್ಲಿ ಲಿಖಿತ ಪರೀಕ್ಶೆ ಇಟ್ಟಿದ್ದ. ಇಂಥಾದ್ದು ನಮ್ಮ
    ಬೆಂಗಳೂರಾಗ ಆಗೂದು ಕನಸ ಸರಿ..ಒಂದು ವ್ಯಾಳ್ಯೆ ಆದ್ರೂ ಶುದ್ಧ ಕನ್ನಡ ಬರುವ ಅಭ್ಯರ್ಥಿಗಳು ಸಿಗುವುದು ಖಾತ್ರಿ ಇಲ್ಲ.
    ದುರಭಿಮಾನ ಬಿಟ್ರ ಠಾಕರೆ ಆಪ್ತ ಆಗತಾರ

    ReplyDelete
  3. ಕೃಷ್ಣಮೂರ್ತಿಯವರೆ,
    ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಬೇಕು. ಭಾಷಾದುರಭಿಮಾನಿಗಳ ದುರಭಿಮಾನವು ತೊಲಗಬೇಕು. ಎಲ್ಲ ರಾಜ್ಯಗಳಲ್ಲಿ ಭ್ರಾತೃತ್ವ ಬರಬೇಕು. ಮಾನವೀಯತೆ ಮುಖ್ಯವಾಗಬೇಕು. ಆದರೆ ಇದೆಲ್ಲ ಯಾವಾಗ ಆದೀತು?
    ಸ್ಪಂದನೆಗಾಗಿ ಧನ್ಯವಾದಗಳು.

    ReplyDelete
  4. ದೇಸಾಯರ,
    ನಗರಸೇವಕರಿಗೆ ನಾಡಭಾಷೆ ಬರಬೇಕೆನ್ನುವ ರಾಜ ಠಾಕರೆಯವರ ವಿಚಾರ ಖರೋಖರ ಬರೋಬ್ಬರಿ ಅದ. ನಮ್ಮಲ್ಲಿ ಅದು ಕನಸೇ ಅನಸ್ತದ!
    ಬಾಳ ಠಾಕರೆಯವರ ದುರಭಿಮಾನವೂ ಸಹ ಒಂದು ಮುಖವಾಡ ಇದ್ದೀತು!

    ReplyDelete
  5. ಪ್ರೀತಿಯ ಕಾಕಾ,

    ವಿಷಯ ನಿರೂಪಣೆ ಉತ್ತಮವಾಗಿದೆ. ವಿಚಾರವಂತೂ ಅಲ್ಟಿಮೇಟ್. ನಮಗೆ ಅಭಿಮಾನ ಮತ್ತು ದುರಭಿಮಾನದ ನಡುವಿನ ಗೆರೆಯೇ ಗೊತ್ತಿಲ್ಲ. ಮಾನವೀಯ ವಿಷಯಗಳು ಬಂದಾಗ ನಮ್ಮ ಸ್ವಕೀಯ ಆಂಟೆನಾಗಳು ಎಚ್ಚೆತ್ತುಕೊಳ್ಲುತ್ತವೆ. ಎಲ್ಲಿ ಮಾನವತೆಗೆ ತಲೆತಗ್ಗಿಸಬೇಕೋ ಅಲ್ಲಿ ಧುರಭಿಮಾನದ ಧ್ವಜ ಹಾರಿಸುತ್ತೇವೆ. ಕನ್ನಡವನ್ನ ಅಮ್ಮನಂತೆ ಪ್ರೀತಿಸಲು ನಮಗೆ ಗುಂಪು-ಗೋಜಲುಗಳು ಬೇಕು, ಚಳವಳೀ ಬೇಕು ಅನ್ನುವ ಸ್ಥಿತಿಯಲ್ಲಿರುವವರಿಂದ ಏನು ನಿರೀಕ್ಷಿಸಬಹುದು. ಭಾಷಾಭಿಮಾನ ನಮ್ಮ ನಮ್ಮ ಹರಟೆ ಕಟ್ಟೆಯನ್ನು ದಾಟಿದ್ದರೆ ಈ ದುಸ್ಥಿತಿ ಇರುತ್ತಿರಲಿಲ್ಲ.

    ಏನೆ ಇರಲಿ. ಠಕ್ಕರ ಬಾಳಪ್ಪ ಅನ್ನೋ ಟೈಟ್ಲ್ಲೇ ಮಜಾ ಇದೆ. ಲೇ ಲೇ ಲೇಲೆ ಹಾಗೆ.

    ಮಾಹಿತಿಪೂರ್ಣ ಲೇಖನ.

    ಪ್ರೀತಿಯಿಂದ,
    ಸಿಂಧು

    ReplyDelete
  6. ಸಿಂಧು,
    ಭಾಷೆ ಸಂವಹನದ ಉಪಕರಣವಾಗದೇ ಕಾಳಗದ ಕಹಳೆಯಾಗುತ್ತಿದೆ! ನಮ್ಮ ತಾಯಿಯನ್ನು ನಾವು ಪ್ರೀತಿಸೋಣ, ಬೇರೊಬ್ಬರ ತಾಯಿಗೂ ಗೌರವ ಕೊಡೋಣ!

    ReplyDelete
  7. ರಾಜಕಾರಣಿಗಳು ಇಲ್ಲಿರುವಷ್ಟಲ್ಲದಿದ್ದರೂ, ಸ್ವಲ್ಪ ಅರಿತು ಮಾತಾಡಿದರೆ
    ಚೆನ್ನಾಗಿರುತ್ತೇನೋ ಸರ್?
    ಆದರೆ ಆ ತಿಳಿಯುವ ಹಂತ ದಾಟಿದವರೇ ರಾಜಕಾರಣದಲ್ಲಿ ಹೆಚ್ಚುತ್ತಿದ್ದಾರೆ .
    ಎಂದಿನಂತೆ ವಿಚಾರಪೂರ್ಣ ಲೇಖನ
    ಮಜವಾದ ಶೀರ್ಷಿಕೆ :)
    ಸ್ವರ್ಣ
    ny

    ReplyDelete
  8. ಠಕ್ಕರೇ ಠಾಕ್ರೆಗಳಾಗಿರಬಹುದು ಎಂಬುದನ್ನು ಸವಿವರವಾಗಿ ಹೇಳಿರುವಿರಿ.ಉತ್ತಮ ಮಾಹಿತಿ ಮತ್ತು ಅತ್ಯುತ್ತಮ ನಿರೂಪಣೆ.ಅಭಿನಂದನೆಗಳು.

    ReplyDelete
  9. ಕೆಲ ಮೈಲುಗಳ ಸರಹದ್ಧಿನ ಉದ್ದಗಲಕೂ ಹಬ್ಬಿದ ಭಾಷಾ ವೈಶಮ್ಯ, ನಿಮ್ಮ ಪ್ರತಿಪಾದನೆಯಾತೆ ಖಂಡಿತವಾಗಿ ರಾಜಕೀಯ ಪ್ರೇರಿತ.

    ಸ್ಥಳ ನಾಮಗಳು ಮತ್ತು ಅಡ್ಡ ಹೆಸರುಗಳ ಮೂಲ ಅನ್ವೇಷಣೆಯಿಂದ ಕನ್ನಡಿಗರು ಹೇಗೆ ನಾಡಿನಾದ್ಯಂತ ವ್ಯಾಪಿಸಿದ್ದರು ಎನ್ನುವುದನ್ನು ಆಧಾರ ಸಮೇತ ನಿರೂಪಿಸಿದ್ದೀರಿ.

    ಕನ್ನಡ ಸಾಹಿತ್ಯದಷ್ಟೇ ಪ್ರಖರ ಮರಾಠಿಯೂ, ಇದನ್ನು ನಾವು ಮೆಚ್ಚಿದಂತೆ ಇತರರಿಗೆ ಎಲ್ಲಿದೆ ಹೃದಯ ವೈಶಾಲ್ಯ?

    ಉಪ ಸಂಹಾರ ವ್ಯಥೆಕಾರಕ.

    ReplyDelete
  10. Migration can be used for our advantage.It is great oppurtunity for kannadigas to teach kannada to all migrating population in banglore so that the kannada will spread all over the country,just like english.

    ReplyDelete
  11. ಲೇಖನದ ಆಶಯ ಚೆನ್ನಾಗಿದೆ.ದೇಶದ ಯಾವುದೇ ನಾಗರಿಕ ದೇಶದ ಯಾವುದೇ ಸ್ಥಳದಲ್ಲಾದರೂ ನೆಲೆನಿಲ್ಲಬಹುದು.ಆದರೆ ಹಾಗೆ ನೆಲೆನಿಲ್ಲುವ ಸ್ಥಳದಲ್ಲಿ "ಸ್ಥಳೀಯ ಪ್ರಜ್ಞೆ" ಗಳನ್ನು ಅಳವಡಿಸಿಕೊಳ್ಳಬೇಕಾಗುತ್ತದೆ.ಮತ್ತು ಅಲ್ಲಿನ ಭಾಷೆಗೆ ಗೌರವ ಸೂಚಿಸುವದು ಅಥವಾ ಅದನ್ನು ಕಲಿಯಲೆತ್ನಿಸುವದು ಕೂಡ ಆ ಪ್ರಜ್ಞೆಯ ಒಂದು ಭಾಗವೇ ಸರಿ.ಈ ವಿಚಾರದಲ್ಲಿ ಬಾಳಾ ಠಾಕ್ರೆ ಮಾಡುತ್ತಿರುವದು ಅಲ್ಲಿನವರ ಮಟ್ಟಿಗೆ ಒಳ್ಳೆಯದೇ.ಆದರೆ ಆತ ಇದನ್ನೆಲ್ಲ ತನ್ನ ರಾಜಕೀಯ ತುರ್ತುಗಳಿಗೆ ಬಳಸಿಕೊಳ್ಳುತ್ತಿರುವದು ಖಂಡನೀಯ.ಬರಹದ ಕೊನೆ (ಟಿಪ್ಪಣಿ)ಯಲ್ಲಿ ನೀವು ಹೇಳಿದಂತೆ,ಇವತ್ತಿನ ಮಟ್ಟಿಗೆ ಕೆಲವೊಂದು ಸೂಕ್ಷ್ಮ ವಿಷಯಗಳೆಲ್ಲ ಯಾವ್ಯಾವುದೋ ರಾಜಕೀಯ ಕಾರಣಗಳಿಗಾಗಿ,ಪ್ರಾದೇಶಿಕತೆಯ ಆಧಾರದ ಮೇಲೆ ಚರ್ಚಿತವಾಗುತ್ತಿರುವದು ನೈತಿಕ ಅಧಿಪತನದ ಸಂಗತಿಯಾಗಿದೆ.

    ReplyDelete
  12. This article helped to know so many facts ok Kannada history...

    ReplyDelete
  13. and Bhaal Thackre's aggressive action on kannadigas is very bad thing and as you said theer are lot things to learn from him...

    ReplyDelete
  14. ಸ್ವರ್ಣಾ,
    ಕ್ರಿಮಿನಲ್‍ಗಳೇ ರಾಜಕಾರಣಿಗಳಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಅವರಿಂದ ಎಂತಹ ಸಂವೇದನೆಯನ್ನು ಅಪೇಕ್ಷಿಸಲು ಸಾಧ್ಯವಾದೀತು?!

    ReplyDelete
  15. ಮಂಜುಳಾದೇವಿಯವರೆ,
    ಭಾರತದ ಪ್ರಾಚೀನ ಇತಿಹಾಸವು ನಮ್ಮ ಅನೇಕ ಬುಡಕಟ್ಟುಗಳ ಸ್ಥಿತಿ ಗತಿಗಳ ಬಗೆಗೆ ಬೆಳಕು ಚೆಲ್ಲಿ ನಮ್ಮನ್ನು ಬೆರಗುಗೊಳಿಸುವದು. ಕನ್ನಡ ಬುಡಕಟ್ಟುಗಳ ಇತಿಹಾಸ ಈ ಬೆರಗಿನ ಒಂದು ಭಾಗ ಮಾತ್ರ!

    ReplyDelete
  16. ಬದರಿನಾಥರೆ
    ಆಧುನಿಕ ಮರಾಠಿ ಸಾಹಿತ್ಯವೂ ಸಹ ತುಂಬ ವೈವಿಧ್ಯಪೂರ್ಣ ಹಾಗು ಶ್ರೀಮಂತ ಸಾಹಿತ್ಯವಾಗಿದೆ. (ನಾನು ಕೇವಲ ಅನುವಾದಗಳನ್ನು ಮಾತ್ರ ಓದಿದ್ದೇನೆ.) ನಮ್ಮ ನೆರೆಹೊರೆಯ ಸಾಹಿತ್ಯಕೃತಿಗಳನ್ನು ಓದಿದರೆ, ಅದರಿಂದ ತುಂಬ ಲಾಭವಿದೆ.

    ReplyDelete
  17. ಸುರಗಂಗೆಯವರೆ,
    ಕನ್ನಡಿಗರು ಬೆಂಗಳೂರಿನಲ್ಲಿರುವ ಕನ್ನಡೇತರರಿಗೆ ಕನ್ನಡ ಕಲಿಸುವ ಹಠವನ್ನು ತೋರಬೇಕು. ಇಲ್ಲದಿದ್ದರೆ, ಅವರು ಎಂದೂ ಕನ್ನಡವನ್ನು ಕಲಿಯಲಾರರು!

    ReplyDelete
  18. RJ,
    ತಾಯಿನುಡಿಯ ಮೇಲಿನ ಪ್ರೀತಿಗಿಂತ ರಾಜಕೀಯ ಸ್ವಾರ್ಥವೇ ಮೇಲಾಗಿರುವ ರಾಜಕಾರಣದಿಂದ, ನಮ್ಮ ದೇಶ ಹಾಳಾಗುತ್ತಿದೆ.
    ಕೇರಳ ಹಾಗು ತಮಿಳುನಾಡುಗಳ ಕಾಳಗವನ್ನು ನೋಡುತ್ತಿರುವಿರಷ್ಟೆ!

    ReplyDelete
  19. ಗಿರೀಶ,
    ಜನರನ್ನು ಉದ್ರೇಕಿಸುವದು ಸುಲಭ. ಅವರನ್ನು ವಿಧಾಯಕ ಕಾರ್ಯಕ್ರಮಳಿಗೆ ತೊಡಗಿಸುವದು ಕಠಿಣ! ರಾಜಕಾರಣಿಗಳು ಮೊದಲನೆಯದನ್ನಷ್ಟೆ ಮಾಡುತ್ತಾರೆ.

    ReplyDelete
  20. ಸುನಾಥ್ ಸರ್,

    ಠಕ್ಕರ್ ಬಾಳಪ್ಪ...ಹಹಹ......ಟೈಟಲ್ ಸೂಪರ್....

    ಸರ್ ..ಮುಂಬೈ ನಲ್ಲಿ ಕಳೆದ ೧೫ ವರ್ಷಗಳಿಂದ ಇದ್ದೀನಿ...ಮರಾಠಿ ನೂ ಬರುತ್ತೆ...ಇಷ್ಟೆಲ್ಲಾ ವಿಷಯಗಳು ಗೊತ್ತಿರಲಿಲ್ಲ.......ನನ್ನ ಪ್ರಕಾರ ಕರ್ನಾಟಕ ಮತ್ತು ಮಹರಾಷ್ಟ್ರ ದ ಮಧ್ಯೆ ಟೆನ್ಶನ್ ಜಾಸ್ತಿ ಆಗಲು ಈ ರಾಜಕಾರಣಿಗಳೇ ಕಾರಣರೇ ಹೊರತು ಎರಡು ರಾಜ್ಯಗಳ ನಾಗರಿಕರಂತೂ ಅಲ್ಲ.....ಇಂತಹ ಕೆಟ್ಟ ರಾಜಕಾರಣಿಗಳ ಕಾರಣದಿಂದ ಮುಂಬೈನಲ್ಲಿರುವ ಕನ್ನಡಿಗರು ತೊಂದರೆಗೀಡಾಗಿದ್ದಂತು ನಿಜ.....ಆದರೂ ನೀವು ಹೇಳಿದಂತೆ ಬಾಳ ಠಾಕ್ರೆ ಯಂತವರಿಂದ ನಮ್ಮವರು ಕಲಿಯಬೇಕಾದ್ದದು ಇದೇ ಅನ್ನುವುದು ಸಹ ಸತ್ಯ.... ಧನ್ಯವಾದಗಳು....ಉಪಯುಕ್ತ ಲೇಖನ....

    ReplyDelete
  21. ಅಶೋಕರೆ,
    ಬಾಳ ಠಾಕರೆಯವರಿಂದ ಕನ್ನಡಿಗರು ಸ್ವಾಭಿಮಾನವನ್ನು ಕಲಿಯಬೇಕು. ಕನ್ನಡಿಗರಿಂದ ಅವರು ಪರಭಾಷಾ ಸಹಿಷ್ಣುತೆಯನ್ನು ಕಲಿಯುವದಿದೆ!

    ReplyDelete
  22. ಕಾಕ ನಮಗೆ ಇಷ್ಟು ಕೂಲಂಕುಶವಾಗಿ ಕನ್ನಡದ ಬಗ್ಗೆ ತಿಳಿದಿರಲಿಲ್ಲ. ಧನ್ಯವಾದಗಳು

    ಠಕ್ಕರ ಬಾಳಪ್ಪಗೆ ಸ್ವಲ್ಪ ನಿಮ್ಮ ಲೇಖನ ಓದ್ಲಿಕ್ಕೆ ಹೇಳಿ.. ಟೈಟಲ್ ಸೂಪರ್

    ReplyDelete
  23. ಮನಸು,
    ಪ್ರಾಚೀನ ಭಾರತದ ಇತಿಹಾಸ ನಿಗೂಢವಾಗಿದೆ. ಕನ್ನಡದ ಇತಿಹಾಸ ಇದರ ಒಂದು ಭಾಗ ಮಾತ್ರ!

    ReplyDelete
  24. ಬಾಳಾ ಠಾಕ್ರದು ಬಾಳಾ ಜಾಸ್ತಿ ಆಯ್ತು ಉಪಟಳ. ಹಿಂದಕ್ಕೆ ಮಹಾರಾಷ್ಟ್ರದ ಅರ್ಧಭಾಗ ಕನ್ನಡದ್ದೇ ಆಗಿತ್ತು ಎಂಬುದು ಹಲವು ದಾಖಲೆಗಳ ಮೂಲಗಳಿಂದ ತಿಳಿದು ಬರುತ್ತದೆ. ’ಅಲಿಬಾಬಾ ಮತ್ತು ನಲ್ವತ್ತು ಕಳ್ಳರು’ ಇದ್ದಹಾಗೇ ಈ ಠಕ್ಕ ಮತ್ತಷ್ಟು ಕಳ್ಳರು ಸುಳ್ಳರು ಸೇರಿಕೊಂಡು ಕನ್ನಡನಾಡಿನ ಬೆಳಗಾವಿ ತಮ್ಮದೆಂದು ವಿತಂಡವಾದ ಮಂಡಿಸುತ್ತಿದ್ದಾರೆ; ಮಂದ ಬುದ್ಧಿಯ ಮಂದಾ ಬಾಳೇಕುಂದ್ರಿ ಬಾಳೇಕಾಯಿ ಪಡುವಲಕಾಯಿ ಹಾಗಲಕಾಯಿ ಇಂಥವರನ್ನೆಲ್ಲಾ ಬಿಟ್ಟು ಕನ್ನಡಕ್ಕೆ ಅವಮಾನ ಎಸಗುತ್ತಿರುವುದು ನಾಡಿಗೆ ಬಗೆದ ಅಪಚಾರ. ಒಮ್ಮೆ ಬೆಳಗಾವಿಗೆ ಬರಲಿ, ಕನ್ನಡ ನೆಲಕ್ಕೆ ಕಾಲಿಡಲಿ ಆಗ ಕನ್ನಡದ ಜನ ಠಾಕ್ರೆಯನ್ನು ರಿಮಾಂಡ್ ಹೋಮ್ ಗೆ ಸೇರಿಸುತ್ತಾರೆ! [ಜೀವ ಸಹಿತ ಉಳಿದರೆ!] ಲೇಖನ ಆ ದಿಸೆಯಲ್ಲಿ ಬೆಳಕು ಚೆಲ್ಲಿದೆ, ಪೂರಕ ’ಕಂದರು’ ಕೂಡ ಹಿಡಿಸಿತು. ಧನ್ಯವಾದಗಳು.

    ReplyDelete
  25. ಸರ್, ನಿಮ್ಮ ಫೋನ್ ನಂ ಬೇಕು. ಅರ್ಜೆಂಟ್ ಪ್ಲೀಸ್.
    -ರಾಘವೇಂದ್ರ ಮಹಾಬಲೇಶ್ವರ (kanaja.in ದಿಂದ)
    writer.raghavendra@gmail.com

    ReplyDelete
  26. ಭಟ್ಟರೆ,
    ಅಲಿಬಾಬಾ ಮತ್ತು ನಲವತ್ತು ಕಳ್ಳರು! ಒಳ್ಳೆ ಹೆಸರು ಕೊಟ್ಟಿದ್ದೀರಿ ಬಾಳ ಠಾಕರೆಗೆ!

    ReplyDelete
  27. ರಾಘವೇಂದ್ರರೆ,
    ತಥಾಸ್ತು!

    ReplyDelete
  28. ದೌರ್ಭಾಗ್ಯದಲ್ಲೂ ಭಾಷಾವಾದ ನಮ್ಮ ಅಲ್ಪ ಮತಿಯ ರಾಜಕಾರ್ಣೀ ಬುದ್ಧಿಯನ್ನು ಬಿಡಿ ಸುನಾಥಣ್ಣ... ನಿಮ್ಮ ಮರ ಹಟ್ಟಿ .. ಠಕ್ಕರು ಠಾಕರೆ ಇವಂತೂ ಸೂಪರ್... ನಿಜ ಭಾಷೆಯ ಪ್ರಾಚೀನತೆ ನೋಡಿದರೆ ನಮ್ಮ ಪ್ರಭಾವ ಅಥವಾ ನಮ್ಮವರೇ ಅಲ್ಲಿ ಹೋಗಿ ಮರಾಠರಾಗಿರುವುದನ್ನು ವಿವರಿಸಿರೋ ಲೇಖನವನ್ನು ಎಮ್ ಎನ್ ಎಸ್ ನೋಡಿರಬೇಕು ಅದಕ್ಕೇ ಬೆಳ್ಗಾವಿ ಕರ್ನಾಟಕದಲ್ಲೇ ಇರಲಿ ಪರವಾಗಿಲ್ಲ ಎಂದಿದ್ದಾರೆ...ಹಹಹಹ... ಎಲ್ಲರಿಗೂ ಮಣೆ ಹಾಕೋ ವಿಶಾಲ ಬುದ್ಧಿ ಕನ್ನಡಿಗರಿಗಿದೆ ಅನ್ನೋದು ಅರ್ಥ ಆಗಿದೆ ಅವರಿಗೆ

    ReplyDelete
  29. ತುಂಬಾ ಚೆನ್ನಾಗಿದೆ ಸುನಾತರೇ. ನೀವು ಬರೆದ ಲೇಖನವನ್ನು ಓದಲು ಸ್ವಲ್ಪ ಕಷ್ಟವಾಯಿತು . ಅಕ್ಷರಗಳ ಒತ್ತು ,ಇಳಿ , ದೀರ್ಘಗಳು ಅಕ್ಷರದ ನಂತರ ಪ್ರತ್ಯೇಕವಾಗಿ ಎದ್ದು ನಿಲ್ಲುತ್ತಿದೆ !! Unicode ನಲ್ಲಿ ಉಳಿಸದ ಕಾರಣಕ್ಕೋ ಏನೋ ಗೊತ್ತಿಲ್ಲ. ಆದರೆ ನಿಮ್ಮ ವಾಕ್ಯಗಳನ್ನು ಬರಹ ಪ್ಯಾಡಲ್ಲಿ ಅಥವಾ Text Document ಗೆ Copy ಮಾಡಿದಾಗ ಓದಲು ಸುಲಭವಾಗುತ್ತಿದೆ. ಇಂದೇ ನಾನು ಭೇಟಿ ಕೊಟ್ಟ ಹಲವು ಬ್ಲಾಗುಗಳಲ್ಲಿ ಅಥವಾ ನಿಮ್ಮದೇ ಇನ್ನೊಂದು ಬ್ಲಾಗು "ಕರ್ಣಾಟ ಭಾರತ ಕಥಾಮಂಜರಿ" ಯಲ್ಲೂ ಈ ಸಮಸ್ಯೆ ಆಗಿಲ್ಲ. ದಯವಿಟ್ಟು ಇದರ ಬಗ್ಗೆ ಗಮನ ಹರಿಸಿ

    ReplyDelete
  30. ಈ ಬಾಳಾ ನಮ್ಮ ಠಕ್ಕನೆಂದು ತಿಳಿದು ಗೆಲುವಾಯಿತು. ರಾಜಕೀಯವನ್ನು ಮಾತ್ರ ಮಾಡಾಬೇಕೆಂದು ಬದುಕಿರುವ ಮಂದಿಗೆ ವಿಷಯಕ್ಕೇನು ಕೊರತೆ ?!. ಅಲ್ಲಿ ಯಾರ ಮಾನ-ಪ್ರಾಣ ಹೋದರೂ ಸರಿಯೆ, ಅವರ ಬಾಯಿ ಮಾತ್ರ ಬಡಿದುಕೊಳ್ಳುತ್ತಿರುತ್ತದೆ. ಒಳ್ಳೆಯ ಎಚ್ಚರಿಕೆಯ ಬರಹವನ್ನು ಕೊಟ್ಟಿದ್ದೀರಿ. ಕನ್ನಡದ original ಕಂದಗಳ ಬಗೆಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದ. ಕೊನೆಯ ಮಾತು ಅರಿತುಕೊಳ್ಳಬೇಕಾದುದು.

    ReplyDelete
  31. ಜಲನಯನ,
    ಬೆಂಗಳೂರು ಕರ್ನಾಟಕದಲ್ಲೇ ಇರಲಿ ಬಿಡಿ ಅನ್ನೋ ಪರಿಸ್ಥಿತಿ ಬಂದಿದೆ ಈಗ!

    ReplyDelete
  32. ಪ್ರಶಸ್ತಿಯವರೆ,
    ಕಾಗುಣಿತದ ಸಮಸ್ಯೆ ಏಕೆಂದು ಅರ್ಥವಾಗುತ್ತಿಲ್ಲ. ಬೇರೊಂದು ಗಣಕಯಂತ್ರದಲ್ಲಿ ಪರಿಶೀಲಿಸಿ ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ. ಧನ್ಯವಾದಗಳು.

    ReplyDelete
  33. ಸುಬ್ರಹ್ಮಣ್ಯರೆ,
    ‘ಠಕ್ಕ (ಕರ್ನಾಟಕದ)ಹೊರಗಿಹನೆ? ಒಳಗಿಲ್ಲವೆ? ಠಕ್ಕರೆಲ್ಲರೂ ನಮ್ಮವರೇ, ಕೂಡಲಸಂಗಮದೇವಾ!’

    ReplyDelete
  34. ಶ್ರೀನಿವಾಸ ಮ. ಕಟ್ಟಿDecember 24, 2011 at 8:13 PM

    ಬಾಳಾಸಾಹೆಬ ಠಾಕ್ರೆ ಒಬ್ಬ"ಜಾಣ" ರಾಜಕಾರಣಿ. ತನ್ನ ಬೇಳೆ ಬೇಯಿಸುವ ಕೆಲಸ ಮಾಡುತ್ತಾನೆ. ಅದನ್ನು ಗಂಭೀರವಾಗಿ ತೆಗೆದುಕೊಳ್ಳುವ ಕಾರಣವಿಲ್ಲ. ನಾಯಿ ಬೊಗಳಿದರೆ ದೇವಲೋಕ ಹಾಳೆ ? ಅವನು ಇನ್ನು ರಾಜ್ ಠಾಕ್ರೆ ಇಂದ ಬುದ್ಧಿ ಕಲಿಯಬೇಕು.

    ReplyDelete
  35. ಕಟ್ಟಿಯವರೆ,
    ಬಾಳ ಠಾಕರೆ ಧೂರ್ತ ರಾಜಕಾರಣಿ ಎನ್ನುವದು ಹೆಚ್ಚು ಸರಿ ಎನ್ನಿಸುತ್ತದೆ.

    ReplyDelete
  36. ಕನ್ನಡ ಭಾಷೆಯ ಸಮಗ್ರ ಪರಿಚಯ ಮಾಡಿಸಿದ್ದಿರಾ... ಜೊತೆಗೆ ಅದರ ಇತಿಹಾಸ. ಧನ್ಯವಾದಗಳು

    ReplyDelete
  37. ಸ್ವರ್ಣಾ ಮೇಡಮ್,
    ಸ್ವಲ್ಪ ಕಾಲಾವಕಾಶ ಕೊಡಿ. ವಿವರಣೆಗೆ ಪ್ರಯತ್ನಿಸುತ್ತೇನೆ.

    ReplyDelete
  38. ಸೀತಾರಾಮರೆ,
    ಕನ್ನಡದ ಇತಿಹಾಸವನ್ನು ಅರಿಯಲು ಪ್ರಾಚೀನ ಭಾರತದ ಇತಿಹಾಸವನ್ನು ಅಧ್ಯಯನ ಮಾಡಬೇಕಾಗುತ್ತದೆ. ಇದು ತುಂಬ ಸ್ವಾರಸ್ಯಕರವಾದ ವಿಷಯ.

    ReplyDelete
  39. ನಮಸ್ತೆ ಸರ್,
    ಈ ಕಾಮೆಂಟನ್ನ ಪಬ್ಲಿಶ್ ಮಾಡಬೇಡಿ :)
    "ಸ್ವಾಂತಃಸುಖಾಯ!" ಅಂದ್ರೆ ಏನು ಸರ್?
    ಹಾಗೆ ಗೂಗಲಿಸಿದಾಗ, ತುಳಸಿದಾಸರು ತಮ್ಮ ರಾಮಚರಿತ ಮಾನಸ
    ಬರೆಯೋ ಸಂಧರ್ಬಕ್ಕೆ ಇದನ್ನ ಬಳಕೆ ಮಾಡಿದ್ರು. ಗೀತೆಯಲ್ಲಿನ ಒಂದು ಸಾಲು
    ಅಂತ ತಿಳೀತು ಸರ್. ( "ಹಾಡುವುದು ಅನಿವಾರ್ಯ ಕರ್ಮ ನನಗೆ....ಹಾಡು ಹಕ್ಕಿಗೆ
    ಬೇಕೇ ಬಿರುದು ಸನ್ಮಾನ" )
    ಯಾವಗ್ಲಾದ್ರೂ ನಿಮ್ಮ ಬ್ಲಾಗಲ್ಲೇ ವಿವರಿಸಿ. ಬಹಳ ಪ್ರಶ್ನೆ ಕೇಳುತ್ತಿದ್ದೇನೆ, ಕ್ಷಮಿಸಿ.
    ಈ ತರಹದ ಸಂದೇಹಗಳನ್ನ ಚೆನ್ನಾಗಿ ಪರಿಹರಿಸುತ್ತಿರಿ ಅಂತ ಕೇಳ್ತಿದ್ದೇನೆ
    ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು ಸರ್ .
    ಸ್ವರ್ಣಾ

    ReplyDelete
  40. ಸುನಾತ್,

    ಒಂದು ಸುಂದರ ಅರ್ಥಪೂರ್ಣ ಮಾಹಿತಿಪೂರ್ಣ ಲೇಖನ..

    ಏನೋ ಹೇಳ್ತಾರಲ್ಲ ಹಾಗೆ ಈ ಅದ್ರ-ಬರ್ದ ತಿಳಿದು ತಮ್ಮ ಬಾಲಾನೆ ದೊಡ್ಡದು ಅನ್ನೋರಿಗೆ ಎನ್ ಮಾಡೋಕೆ ಆಗುತ್ತೆ ಸರ್.. ಬೊಗಳುವವರು ಬೊಗಳಲಿ ಅಂತ ಜನ ತಿಳಿದು ಕೊಳ್ಳಬೇಕು ಅಷ್ಟೇ....
    ಕನ್ನಡ ಮತ್ತು ಕನ್ನಡಿಗರ ಇತಿಹಾಸದ ಬಗೆ ಮತ್ತಷ್ಟು ಲೇಖನ ನಿಮ್ಮಿಂದ ಬರಲಿ...... ಇತಿಹಾಸವನ್ನು ತಿಳಿಸಿದಕ್ಕೆ ಧನ್ಯವಾದಗಳು

    ReplyDelete
  41. ಸ್ವರ್ಣಾ ಮೇಡಮ್,
    ಈ comment ಅಂತೂ ಪಬ್ಲಿಶ್ ಅಗಿ ಬಿಟ್ಟಿದೆ. ಇನ್ನು ಮುಂದಿನ commentಗಳನ್ನು ಬಿಡೋಣವೆ! ನಿಮ್ಮ ಕೋರಿಕೆಗಳ ಅನುಸರಣೆಗಾಗಿ ಪ್ರಯತ್ನಿಸುವೆ.

    ReplyDelete
  42. ಹಳ್ಳಿಯ ತರುಣ ಹುಡುಗರೆ,
    ಧನ್ಯವಾದಗಳು. ಭಾರತದ ಪ್ರಾಚೀನ ಇತಿಹಾಸ ಬರೆಯುವ ಆಸೆ ಇದೆ. ಆ ಸಮಯದಲ್ಲಿ ಕನ್ನಡಿಗರ ಇತಿಹಾಸ ಅಲ್ಲಿ ಅಡಕವಾಗಿರುತ್ತದೆ.

    ReplyDelete
  43. ಸಂತಾಪ ಕಥೆ link :
    http://avadhimag.com/?p=39346

    Swarna

    ReplyDelete
  44. ಲೇಖನ ನಿಜಕ್ಕೂ ಅದ್ಭುತವಾಗಿದೆ.

    ವಿಷಯವನ್ನು ಹರವುತ್ತಲೇ ಕನ್ನಡಿಗರ ಅಭಿಮಾನಶೂನ್ಯತೆಗೆ ಚಾಟಿ ಬೀಸಿದ ಬಗೆ ಪ್ರಶಂಶಾರ್ಹ.

    ಇಬ್ಬರ ಜಗಳ ಮೂರನೆಯವರಿಗೆ ಲಾಭ ಅನ್ನುವ ಮಾರ್ಜಾಲ ಸನ್ಯಾಸಿಯ ಕಥೆ ಅರಿಯದ ಜನ ಅದನ್ನ ಅಂಗನವಾಡಿ ಪಾಠ ಮಾಡಿ ಮರೆತಿದ್ದರೆ.

    ಎಚ್ಚೆತ್ತುಕೊಳ್ಳಲು ಇದು ಖಂಡಿತಾ ಸಕಾಲ.

    ReplyDelete
  45. ಸ್ವರ್ಣಾ ,ಮೇಡಮ್,
    ಧನ್ಯವಾದಗಳು.

    ReplyDelete
  46. ವಸಂತ,
    ನಿಮಗೂ ಹೊಸ ವರ್ಷದ ಶುಭಾಶಯಗಳು.

    ReplyDelete
  47. ಅವೀನರೆ,
    ಧನ್ಯವಾದಗಳು ಹಾಗು ಹೊಸ ವರ್ಷದ ಶುಭಾಶಯಗಳು.

    ReplyDelete