Tuesday, January 3, 2012

ಬೇಂದ್ರೆಯವರ ‘ಅರಳು ಮರಳು’

ಮರುಳಲ್ಲ ನಾನು, ಮರುಳಾದೆನಯ್ಯ
ನನ್ನೆದೆಯ ಮರುಳಸಿದ್ಧ
ನಿಮ್ಮರುಳಿನಿಂದ ಮರ ಮರಳಿ ಅರಳಿ
ಸ್ಫುಟವಾಗಿ ಭಾವಶುದ್ಧ—
ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
ಸಂತತದ ಏಕನಾದ
ಈ ಕೊರಳು-ಬೆರಳು, ಆ ಕರುಳು-ಅರಳು
ಮರುಳೂನು ತಂಪ್ರಸಾದ

ಬೇಂದ್ರೆಯವರ ಮೊದಲ ಕಾವ್ಯರಚನೆಯಾದ ‘ಕೃಷ್ಣಾಕುಮಾರಿ’ಯು ೧೯೨೨ರಲ್ಲಿ ಪ್ರಕಟವಾಯಿತು. ಅವರ ‘ಗಂಗಾವತರಣ’ ಕವನಸಂಕಲನವು ೧೯೫೧ರಲ್ಲಿ ಪ್ರಕಟವಾಯಿತು. ಈ ನಡುವಿನ ೨೯ ವರ್ಷಗಳಲ್ಲಿ ಗರಿ,ಮೂರ್ತಿ, ಕಾಮಕಸ್ತೂರಿ, ಸಖೀಗೀತ, ನಾದಲೀಲೆ, ಉಯ್ಯಾಲೆ, ಮೇಘದೂತ (ಅನುವಾದ), ಹಾಗು ಹಾಡು-ಪಾಡು ಎನ್ನುವ ಕವನಸಂಕಲನಗಳು ಮತ್ತು ‘ನಿರಾಭರಣ ಸುಂದರಿ’ (ಕಥಾಸಂಕಲನ) ಹಾಗು ‘ಸಾಹಿತ್ಯ ಮತ್ತು ಸಂಶೋಧನೆ’ ಎನ್ನುವ ಕೃತಿಗಳು ಪ್ರಕಟವಾದವು. ಆನಂತರದ ಐದು ವರ್ಷಗಳಲ್ಲಿ ಸೂರ್ಯಪಾನ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ ಹಾಗು ಜೀವಲಹರಿ ಎನ್ನುವ ಐದು ಕವನಸಂಕಲನಗಳು ಹೊರಬಂದವು. ೧೯೫೬ರಲ್ಲಿ ಬೇಂದ್ರೆಯವರು ೬೦ ವರ್ಷಗಳನ್ನು ಪೂರೈಸಿದ ನೆನಪಿಗಾಗಿ, ಕೊನೆಯ ಐದು ಸಂಕಲನಗಳನ್ನು ಸಂಗ್ರಹಿಸಿ ‘ಅರಳು ಮರಳು’ ಸಂಕಲನವನ್ನು ಪ್ರಕಟಿಸಲಾಯಿತು. ಈ ಸಂಗ್ರಹಕ್ಕಾಗಿ ಬೇಂದ್ರೆಯವರು ಬರೆದ ಆತ್ಮನಿವೇದನೆಯ ಕೊನೆಯಲ್ಲಿ ಮೇಲಿನ ಕವನವಿದೆ.

‘ಅರವತ್ತು ವರ್ಷಕ್ಕೆ ಅರಳು ಮರಳು’ ಎನ್ನುವ ಮಾತು ಕನ್ನಡದಲ್ಲಿದೆ. ಬೇಂದ್ರೆಯವರ ಪ್ರತಿಭೆಗೆ ಅರಳುಮರಳು ಎಂದೂ ಮುಸುಕಲಿಲ್ಲ. ಈ ಪ್ರತಿಭೆ ಇದೀಗ ಹೆಚ್ಚು ಅಂತರ್ಮುಖವಾಯಿತಷ್ಟೆ. ಇದೇ ಮಾತನ್ನು ಬೇಂದ್ರೆಯವರು ‘ಮರುಳಲ್ಲ ನಾನು, ಮರುಳಾದೆನಯ್ಯ’ ಎನ್ನುವದರ ಮೂಲಕ ಹೇಳುತ್ತಾರೆ. ‘ನಾನು ಹುಚ್ಚನಲ್ಲ, ಆದರೆ ನನಗೆ ನೀನು ಹುಚ್ಚು ಹಿಡಿಸಿರುವೆ’ ಎನ್ನುವ ಅವರ ಮಾತನ್ನು ಮೀರಾದೇವಿಯ ‘ಹರಿ ಕೀ ಮೈ ತೊ ಪ್ರೇಮದಿವಾನಿ’ ಎನ್ನುವ ಗೀತೆಗೆ ಹೋಲಿಸಬಹುದು. ಕನ್ನಡದ ಅಕ್ಕಮಹಾದೇವಿಯೂ ಸಹ ಚೆನ್ನಮಲ್ಲಿಕಾರ್ಜುನಗೆ ಮರುಳಾದವಳೇ!

ಬೇಂದ್ರೆಯವರು ತಮ್ಮ ಹೃದಯದಲ್ಲಿರುವ ಗುರುವನ್ನು ‘ಮರುಳಸಿದ್ಧ’ ಎಂದು ಕರೆಯುತ್ತಾರೆ. ಸಾಧನೆಯ ಕೊನೆಯ ಹಂತವನ್ನು ಮುಟ್ಟಿದ ಯೋಗಿಗಳು ಲೋಕದ ಕಣ್ಣಿಗೆ ‘ಮರುಳ’ರಂತೆಯೇ ಕಾಣುತ್ತಿರುತ್ತಾರೆ. (ಉದಾಹರಣೆಗೆ ರಾಮಕೃಷ್ಣ ಪರಮಹಂಸರು.) ಕೆಲವು ಯೋಗಿಗಳು ಉದ್ದೇಶಪೂರ್ವಕವಾಗಿ ಮರುಳರಂತೆ ನಟಿಸುತ್ತಿರುತ್ತಾರೆ. ಉದಾಹರಣೆಗೆ ಬ್ರಹ್ಮಚೈತನ್ಯ ಮಹಾರಾಜರ ಗುರುಗಳಾದ ತುಕಾಮಾಯಿಯವರು. ಏನೆ ಇರಲಿ, ಇವರೆಲ್ಲ ದೇವರಿಗೆ ಮರುಳಾದಂತಹ ಸಿದ್ಧಪುರುಷರು ಎನ್ನುವದಂತೂ ನಿಜ. ಈ ಗುರುಗಳು ತಮ್ಮ ಶಿಷ್ಯರಿಗೂ ಅಲೌಕಿಕದ ಮರುಳು ಹಿಡಿಸಿದಂಥವರು.

ಮರುಳಸಿದ್ಧನು ಅರಳಿದವನು ಅಂದರೆ ಪೂರ್ಣತೆಯನ್ನು ಮುಟ್ಟಿದವನು. ಅರುವು ಅಂದರೆ ಜ್ಞಾನ. (‘ಓ ಗುರುವೆ, ಅರುವೆ, ಶರಣಾಗಿ ಬರುವೆ..’ ಎನ್ನುವ ಬೇಂದ್ರೆಯವರ ಕವನವನ್ನು ಗಮನಿಸಿರಿ.) ಮರುಳಸಿದ್ಧನ ಅರಳುವಿಕೆ ಆತನ ಸಾಧಕರನ್ನೂ ಸಹ ಅರಳಿಸುತ್ತದೆ ಅಂದರೆ ಉತ್ಕ್ರಾಂತಿಯ ಪರಮ ನೆಲೆಗೆ ತಲುಪಿಸುತ್ತದೆ. (--ಇದು ಅರವಿಂದರು ಹೇಳುವ Superhuman Evolution ಆಗಿದೆ.—)ಆದರೆ ಈ ಹಾದಿ ಬಲು ದುರ್ಗಮವಾದ ಪಥವಾಗಿದೆ. ‘ಮರ ಮರಳಿ’ ಎನ್ನುವ ಪದಗಳ ಮೂಲಕ ಬೇಂದ್ರೆಯವರು ಸಾಧಕನು ತನ್ನ ಹಾದಿಯಲ್ಲಿ ಮತ್ತೆ ಮತ್ತೆ ಹಿಂದೆ ಮರಳುತ್ತಿರುತ್ತಾನೆ ಹಾಗು ಮತ್ತೆ ಮುನ್ನಡೆಯುತ್ತಾನೆ ಎನ್ನುವದನ್ನು ಸೂಚಿಸುತ್ತಾರೆ.

‘ಮರಳು’ವದು ಎಂದರೆ ಕುದಿಯುವದು ಎನ್ನುವ ಅರ್ಥವೂ ಇದೆ. ಪರಿಶುದ್ಧ ಮೂಲವಸ್ತುವನ್ನು ಬೇರ್ಪಡಿಸುವ ಉದ್ದೇಶದಿಂದ ರಸಾಯನತಜ್ಞರು ಮಿಶ್ರವಸ್ತುವನ್ನು ಕುದಿಸುತ್ತಾರೆ ಎನ್ನುವದು ತಿಳಿದಿರುವ ಸಂಗತಿ. ಇದರಂತೆಯೇ ಮನೋವಿಕಾರಗಳಿಂದ ಕೂಡಿದ ಚೈತನ್ಯವನ್ನು ಮತ್ತೆ ಮತ್ತೆ ಕುದಿಸಿ, ಕಶ್ಮಲಗಳನ್ನು ಬೇರ್ಪಡಿಸಿ, ಮರುಳಸಿದ್ಧನು ಸಾಧಕನನ್ನು ಪರಿಶುದ್ಧಾತ್ಮನನ್ನಾಗಿ ಮಾರ್ಪಡಿಸುತ್ತಾನೆ. (‘ಬೆಂದರೆ ಅದು ಬೇಂದ್ರೆ’ ಎಂದು ಬೇಂದ್ರೆಯವರೇ ಹೇಳಿದ್ದಾರೆ.) ಇದೀಗ ಸಾಧಕನ ಭಾವವು ಶುದ್ಧವಾಗುತ್ತದೆ ಹಾಗು ಸ್ಫುಟವಾಗುತ್ತದೆ ಅಂದರೆ ಸ್ಫಟಿಕದಂತೆ ನಿಚ್ಚಳವಾಗುತ್ತದೆ.

ಶ್ರುತಿಶುದ್ಧವಾದ ‘ಕಿನ್ನರಿ’ ವಾದ್ಯದಿಂದ ಸತತವಾಗಿ ಒಂದೇ ಸುನಾದ ಹೊರಹೊಮ್ಮುತ್ತದೆ. ಅದರಂತೆ ಕವಿ ಬೇಂದ್ರೆಯವರ ಅಂತಃಕರಣದಿಂದ ಈಗ ಗುರುಗೀತೆ ಮಾತ್ರ ಹೊರಹೊಮ್ಮುತ್ತಿದೆ. ಅವರ ‘ಮಾತು’ ಅಂದರೆ ಈ ಗೀತೆ ಈಗ ಗುರು ಮರುಳಸಿದ್ಧರ ಕೀರ್ತನೆಗೆ ಮಾತ್ರ ಮೀಸಲಾಗಿದೆ. ಈ ಮುಡಿಪಾದ ಭಕ್ತಿಪುಷ್ಪವನ್ನು ಸಾಧಕನು ಮೊದಲು ಅರ್ಪಿಸುವದು ಗುರುವಿನ ಅಡಿಗಳಿಗೆ, ತನ್ನಂತರ ಆತನ ಮುಡಿಗೆ. ಸಾಧಕನ ಈ ನಿವೇದನೆಗೆ ಅಂದರೆ ನೈವೇದ್ಯಕ್ಕೆ ಗುರುವು ಪ್ರಸನ್ನನಾಗಿ ಪ್ರಸಾದವನ್ನು ಅನುಗ್ರಹಿಸುತ್ತಾನೆ. ಬೇಂದ್ರೆಯವರಿಗೆ ದೊರೆತ ಪ್ರಸಾದ ಏನು? ...... ‘ಕೊರಳು ಮತ್ತು ಬೆರಳು’, ಅಂದರೆ ಹಾಡು ಮತ್ತು ಕಾವ್ಯ. ತನ್ನಂತರ ಬೇಂದ್ರೆಯವರು ಹಾಡುವದು ‘ಮರುಳಸಿದ್ಧನ’ ಗೀತೆಯನ್ನು ಹಾಗು ರಚಿಸುವದು ‘ಅವನ’ ಕಾವ್ಯವನ್ನು ಮಾತ್ರ.

`ಕರುಳು’ ಅಂದರೆ ಪ್ರೀತಿ. ಭಗವಂತನನ್ನು ಮಾತ್ರವಲ್ಲದೆ, ಆತನ ಸಕಲ ಸೃಷ್ಟಿಯನ್ನೂ ಸಹ ಬೇಂದ್ರೆಯವರು ಪ್ರೀತಿಸುತ್ತಾರೆ. ಇದು ಅವರ ‘ಕರುಳು’. ‘ಅರಳು’ ಎಂದರೆ ಜ್ಞಾನ. ಪ್ರೀತಿ ಹಾಗು ಜ್ಞಾನ ಇವೆರಡೂ ದೊರೆತಾಗಲೆ, ಸಾಧಕನಿಗೆ ಸಿದ್ಧಿಯಾಗುವದು. ಇವೆರಡೂ ದೊರೆಯುವದು ಭಗವಂತನ ಪ್ರಸಾದದಿಂದಲೇ. ಇಷ್ಟೇ ಏಕೆ? ದೇವರಿಗೆ ಮರುಳಾಗಿರುವ ಸಾಧಕನ ‘ಮರುಳೂ’ ಸಹ ಭಗವಂತನ ಪ್ರಸಾದವೇ ಅಲ್ಲವೆ! ‘ಮರುಳೂನು ತಂ ಪ್ರಸಾದ’ ಎಂದು ಬೇಂದ್ರೆಯವರು ಏಕೋಭಾವದಿಂದ ಆ ಹುಚ್ಚನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ.

ಕರುಳು ಎಂದರೆ ದೇಹವೆಂದೂ ಅರ್ಥವಾಗುತ್ತದೆ. ಅರಳು ಎಂದರೆ ತಾನು ಈ ದೇಹ ಅಲ್ಲ ಎನ್ನುವ ಜ್ಞಾನ. ದೇಹವನ್ನು ಕೊಟ್ಟವನೇ, ‘ಈ ದೇಹ ತಾನಲ್ಲ’ ಎನ್ನುವ ಜ್ಞಾನವನ್ನೂ ಕೊಡುತ್ತಾನೆ. ಆ ಜ್ಞಾನ ಲಭಿಸುವವರೆಗೆ ಜೀವಿಯು ಮರುಳಿನಲ್ಲಿ ಅಂದರೆ ಮಾಯೆಯಲ್ಲಿರುತ್ತಾನೆ. ಆದುದರಿಂದ ದೇಹ, ದೇಹದ ಅಜ್ಞಾನ ಹಾಗು ಸುಜ್ಞಾನ ಇವೆಲ್ಲವೂ ಆ ಜಗದ್ಗುರು ನೀಡುವ ಪ್ರಸಾದವೇ ಆಗಿವೆ!

ಮರುಳಸಿದ್ಧ ಹಾಗು ಕಿನ್ನರಿಗೆ ಒಂದು ಹಿನ್ನೆಲೆಯಿದೆ. ಬೇಂದ್ರೆಯವರ ‘ಮಾಯಾಕಿನ್ನರಿ’ ಎನ್ನುವ ಕವನದಲ್ಲಿ ಆ ಹಿನ್ನೆಲೆ ಲಭ್ಯವಾಗುತ್ತದೆ. ಮರುಳಸಿದ್ಧ ಎನ್ನುವ ಮಹಾತ್ಮರೊಬ್ಬರು ಉತ್ತರಭಾರತದಲ್ಲಿ ತಮ್ಮ ದಿಗ್ವಿಜಯವನ್ನು ಪೂರೈಸಿ, ಕರ್ನಾಟಕದಲ್ಲಿರುವ ಕೊಲ್ಲಾಪುರಕ್ಕೆ (--ಇದೀಗ ಮಹಾರಾಷ್ಟ್ರದಲ್ಲಿದೆ--) ಬರುತ್ತಾರೆ. ಅಲ್ಲಿರುವ ‘ಮಾಯೆ’ ಎನ್ನುವ ಯೋಗಿನಿಯು ಸಾವಿರ ಯೋಗಿಗಳನ್ನು ಸೋಲಿಸಿ, ತನ್ನ ಮಂತ್ರಬಲದಿಂದ ತನ್ನ ಊಳಿಗಕ್ಕೆ ತೊಡಗಿಸಿರುತ್ತಾಳೆ. ಮರುಳಸಿದ್ಧರೊಡನೆ ಅನೇಕ ದಿನಗಳವರೆಗೆ ವಾಗ್ವಾದ ನಡೆದು ಮಾಯೆ ಸೋಲುತ್ತಾಳೆ. ಮಂತ್ರಬಲದಿಂದ ಮರುಳಸಿದ್ಧರನ್ನು ಸೋಲಿಸಲು ಮಾಯೆ ಹವಣಿಸುತ್ತಾಳೆ. ಆದರೆ ಮರುಳಸಿದ್ಧರು ಮಾಯೆಯನ್ನೇ ಒಂದು ಕಿನ್ನರಿಯಾಗಿ ಪರಿವರ್ತಿಸಿ, ತಮ್ಮೊಡನೆ ಒಯ್ಯುತ್ತಾರೆ. ಈ ಕಿನ್ನರಿಯು ಮೊದಮೊದಲು ಹಟ ಮಾಡಿದರೂ, ಕೊನೆಗೆ ಮರುಳಸಿದ್ಧರಿಗೆ ಮರುಳಾಗಿ, ಅವರಿಗೆ ಒಲಿದು ದಿವ್ಯ ಸಂಗೀತವನ್ನು ಹೊರಡಿಸುತ್ತದೆ.

ಈ ಗೀತೆಯಲ್ಲಿ ಬೇಂದ್ರೆಯವರು ಗುರುರೂಪಿ ಭಗವಂತನನ್ನು ಮರುಳಸಿದ್ಧನಿಗೆ ಹಾಗು ಮಾಯೆಯಲ್ಲಿ ಸಿಲುಕಿದ ತಮ್ಮನ್ನು ಕಿನ್ನರಿಗೆ ಹೋಲಿಸುತ್ತಿದ್ದಾರೆ. ಯಾವ ಸಾಧಕರೂ ಸಾಧನಾಪಥದೆಡೆಗೆ ಸರಳವಾಗಿ ಆಕರ್ಷಿತರಾಗುವದಿಲ್ಲ. ಅನೇಕ ಜನ್ಮಗಳ ಆಕರ್ಷಣೆ ಹಾಗು ವಿಕರ್ಷಣೆಗಳ ಬಳಿಕ ಸಾಧಕನಿಗೆ ‘ಮರುಳಸಿದ್ಧ’ ಎಂದರೆ ಆತನ ಗುರು ದೊರೆಯುತ್ತಾನೆ. ಗುರುವಿನ ಜೊತೆಗೆ ಶಿಷ್ಯನ ವಾಗ್ವಾದ ನಡೆದೇ ಇರುತ್ತದೆ. ಒಮ್ಮೆ ಅರಿವು ಮೂಡಿದ ಬಳಿಕ ಶಿಷ್ಯನು ‘ಗುರುವಿನ ಗುಲಾಮ’ನಾಗುತ್ತಾನೆ. (ವಿವೇಕಾನಂದ ಹಾಗು ರಾಮಕೃಷ್ಣ ಪರಮಹಂಸರು ಈ ಮಾತಿಗೆ ಉಜ್ವಲ ನಿದರ್ಶನರಾಗಿದ್ದಾರೆ.)

ಬೇಂದ್ರೆಯವರು ಮೊದಲಿನಿಂದಲೂ ಭಕ್ತಕವಿಗಳು. ಈ ಭಕ್ತಿ ಅವರ ಕವನಗಳಲ್ಲಿ ವಿವಿಧ ಬಗೆಗಳಲ್ಲಿ ವ್ಯಕ್ತವಾಗಿದೆ. ತಾಯಿ, ತಾಯಿನಾಡು, ತಾಯಿನುಡಿ, ಪ್ರಕೃತಿ ಇವೆಲ್ಲವುಗಳ ಮೇಲಿನ ಅವರ ಪ್ರೀತಿ ಭಕ್ತಿಗೆ ಹತ್ತರವಾದದ್ದು. ಅವರ ಅಜ್ಜಿ ಹಾಗು ತಾಯಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿದ್ದ ಸಂತಶ್ರೇಷ್ಠ ಬ್ರಹ್ಮಚೈತನ್ಯ ಮಹಾರಾಜರಿಂದ ಉಪದೇಶ ಪಡೆದವರು.ಸ್ವತಃ ಬೇಂದ್ರೆಯವರಿಗೆ ಚಿಕ್ಕಂದಿನಲ್ಲಿ ಅವರ ದರ್ಶನಲಾಭವಾಗಿತ್ತು. ಗುಳವಣಿ ಮಹಾರಾಜ ಹಾಗು ಟೇಂಬೆ ಮಹಾರಾಜರಂತಹ ಸಂತರನ್ನೂ ಬೇಂದ್ರೆಯವರು ಕಂಡಿದ್ದರು. ಅರವಿಂದರು ಬೇಂದ್ರೆಯವರ ಮಾನಸ ಗುರುಗಳು. ಶರಣ ಸಾಹಿತ್ಯದಿಂದ ಪ್ರಭಾವಿತರಾದ ಬೇಂದ್ರೆಯವರಿಗೆ ಅಲ್ಲಮಪ್ರಭುಗಳಲ್ಲಿ ವಿಶೇಷ ಒಲವು. ಇವೆಲ್ಲ ಬೇಂದ್ರೆಯವರನ್ನು ಸಾಧನಾಪಥಕ್ಕೆ ಎಳೆದ ಅಂಶಗಳು.

ಲೌಕಿಕ ದೃಷ್ಟಿಯಲ್ಲಿ ಈ ಸಾಧನಾಪಥವು ಹುಚ್ಚಿನ ಹಾದಿ. ಈ ಸಾಧನೆಯಲ್ಲಿ ಸಿದ್ಧಿ ಪಡೆದವರನ್ನು ಗುರುತಿಸಲಾಗದ ಲೋಕವು, ಅವರನ್ನು ‘ಮರುಳಸಿದ್ಧ’ ಎಂದು ಕರೆದರೆ ಆಶ್ಚರ್ಯವಿಲ್ಲ. ಆದರೆ ಇಂತಹ ಯೋಗಿಗಳ ಮಹತ್ತನ್ನು ಅರಿತವರು, ಇವರನ್ನು ಸದಾಕಾಲವೂ ತಮ್ಮ ಹೃದಯಕಮಲದಲ್ಲಿ ಇಟ್ಟುಕೊಳ್ಳುತ್ತಾರೆ. (‘ನಂಬಿರುವೀ ಎದೆ ಹೂವನೆ ಆಸನ ಮಾಡಿರುವಿರಿ’ ಎಂದು ಬೇಂದ್ರೆಯವರು ಮತ್ತೊಂದು ಕವನದಲ್ಲಿ ಹಾಡಿದ್ದಾರೆ.) ಆದುದರಿಂದಲೇ ಬೇಂದ್ರೆಯವರು ತಮ್ಮ ಗುರುವನ್ನು ‘ನನ್ನೆದೆಯ ಮರುಳಸಿದ್ಧ’ ಎಂದು ಕರೆದಿದ್ದಾರೆ. ಈ ಮರುಳಸಿದ್ಧರು ತೋರಿಸುವ ಹಾದಿಯು ಅಗ್ನಿಪಥವಾಗಿದೆ. ಇದರಲ್ಲಿ ಹಾಯ್ದು ಹೊರಬರಬಂದಾಗ, ಸಾಧಕನ ಅಂತಃಕರಣವು ಸ್ಫಟಿಕದಂತೆ ಶುದ್ಧವಾಗಿರುತ್ತದೆ. ಆನಂತರದ ಆತನ ಕ್ರಿಯೆ ಎಲ್ಲವೂ ಗುರುಸಮರ್ಪಿತವಾದ ನೈವೇದ್ಯ! ಇದು ಬೇಂದ್ರೆಯವರ ಕಾವ್ಯಧರ್ಮ ಹಾಗು ಜೀವನಧರ್ಮ.

46 comments:

  1. ಎಂದಿನಂತೆ ಉತ್ತಮವಾಗಿ ವಿವರಿಸಿದ್ದೀರಿ

    ReplyDelete
  2. ಹರೀಶ,
    ನೀವು ನಿದ್ದೆ ಮಾಡೋದಿಲ್ಲೇನ್ರೀ!

    ReplyDelete
  3. ಸುನಾಥ್ ಸರ್,

    ಬೇಂದ್ರೆಯವರ ಅರಳು ಮರಳು ಬಗ್ಗೆ ವಿವರಣೆ ತುಂಬಾ ಚೆನ್ನಾಗಿದೆ.

    ReplyDelete
  4. ಪ್ರೀತಿಯ ಸುನಾಥ ಕಾಕಾ,

    ಮೊನ್ನೆ ಮೊನ್ನೆ, ಕಿ.ರಂ ಅವರ ವ್ಯಾಖ್ಯಾನದಲ್ಲಿ (ಮತ್ತೆ ಮತ್ತೆ ಬೇಂದ್ರೆ - ಸಂ.ಅಕ್ಷತಾ ಕೆ) ಓದಿದೆ. ಅದೇ ಗುಂಗಲ್ಲಿ ಇದ್ದಾಗ ನೀವು ಇದು ಬರೆದಿದ್ದೀರಿ. ಅದರಲ್ಲಿ ಒಂದ್ಕಡೆ ಈ ಅರಳು-ಮರಳು ಅನ್ನುವುದಕ್ಕೆ ಮನಸ್ಸು ಅರಳಿ (ಪರಿಮಳಿಸಿ, ತೆರೆದುಕೊಂಡು) ಮತ್ತೆ ಮರಳಿ (ಹೊಳ್ಳಿ) ಆ ಪರಿಮಳವನ್ನ ಹೊದ್ದುಕೊಂಡು ಘಮಘಮಿಸುತ್ತಿರುವ ಸ್ಥಿತಿಗೆ ಹೋಲಿಸಿದ್ದಾರೆ. ಎಂತ ಸಾಲು(phrase), ಎಂಥ ವ್ಯಾಖ್ಯಾನ ಅಂತ ಮಂತ್ರಮುಗ್ಧಳಾದೆ ನಾನು.

    ನೀವಂತೂ ಬೇಂದ್ರೆ ಅಜ್ಜನ ಕಾವ್ಯಕ್ಕೆ ನಾವು ಮರುಳಾಗದೆ ಗತಿಯೇ ಇಲ್ಲ ಅನ್ನುವಷ್ಟು ಚಂದ ವಿವರಿಸುತ್ತೀರಿ. ಓದಿ ಓದಿ ಮರುಳಾಗಿದ್ದೇನೆ! ಅರಳು ಇನ್ನೂ ದೂರದ ಹಾದಿ!

    ಮರುಳೂನು ತಂ ಪ್ರಸಾದ’ - ಮರುಳೂನು ತಂಪು ರಸಾ ಅದ ಅಂತ ಈಗ ಮಧ್ಯಾಹ್ನದ ಬಿಸಿಯಲ್ಲಿ ಒಂದು ಹೊಳವು. :)
    ಇದೆಲ್ಲ ನಿಜಕ್ಕೂ ಅಜ್ಜನ ಮತ್ತು ಕಾಕಾನ ಪ್ರಸಾದ.

    ಪ್ರೀತಿಯಿಂದ,
    ಸಿಂಧು

    ReplyDelete
  5. ಸುನಾಥ್ ಸರ್,
    ಬೇಂದ್ರೆಯವರ ವಿನೀತ ಮುಖದ ದರ್ಶನ ನಿಮ್ಮ ಬರಹದಲ್ಲಿದೆ.ಹಾಗೆಯೇ ಇಡೀ ಲೇಖನ ಓದಿ ಮುಗಿಸಿದಾಗ ನಿಮ್ಮ ಇನ್ನೊಂದು ಆಸಕ್ತಿ ಇಲ್ಲಿ ಪ್ರಕಟಗೊಂಡoತಿದೆ.ನಮ್ಮ ಅರಿವಿಗೆ ಬಾರದ ಅನೇಕ ಸಂತರ,ಅವಧೂತರ ಮತ್ತು ಅಲೆಮಾರಿಗಳ ಒಂದು ಸಮೂಹವೇ ನಿಮ್ಮ ಜ್ಞಾನ ಭಂಡಾರದಲ್ಲಿದೆ ಅಂತ ನನ್ನ ಅಂದಾಜು.ಅವರ ಬಗೆಗಿನ ಎಲ್ಲ
    ಆಯಾಮಗಳನ್ನೂ ನೀವು ವಿಶ್ಲೇಷಿಸಿದರೆ ಎಲ್ಲರಿಗೂ ಅನುಕೂಲವಾಗಬಹುದು ಅಂತ ನನ್ನ ಭಾವನೆ.ಧನ್ಯವಾದಗಳು.

    ReplyDelete
  6. ಸುನಾಥ್ ಸರ್,

    ಎಂದಿನಂತೆ ತುಂಬಾ ಉತ್ತಮವಾಗಿ 'ಅರಳು-ಮರಳು' ನ್ನು ಪರಿಚಯಿಸಿದ್ದೀರಿ. ಬೇಂದ್ರೆಯವರ ಕಾವ್ಯ ಶೈಲಿ, ಅಂತರಂಗದಲ್ಲಿರುವ ಅವರ ಭಾವನೆ ನಮ್ಮಲ್ಲಿ, ಕರುಣೆ , ಪ್ರೀತಿ, ಒಲವನ್ನು ಮೂಡಿಸುವಲ್ಲಿ ಸಹಾಯಕ. ಅವರು ಬರೆದ ಪ್ರತಿಯೊಂದು ಕವನ ಸಂಕಲನವೂ, ಕಥೆ-ನಾಟಕಗಳೂ ಸುಗಮ ಜೀವನಕ್ಕೆ ಹೆದ್ದಾರಿಯನ್ನು ತೋರಿಸುತ್ತವೆ.....

    ಅತ್ತಾರೆ ಅತ್ತು ಬಿಡು ಹೊನಲು ಬರಲಿ ನಕ್ಯಾಕ ಮರೆಸತಿ ದುಕ್ಕ ?
    ಎಲೆ ಬಡಿಸಿ ಕೆಡವು ಬರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ ........ಎಷ್ಟೊಂದು ಅದ್ಭುತ ಸಾಲುಗಳು......

    ReplyDelete
  7. ಶಿವು,
    ಬೇಂದ್ರೆಯವರ ಅರಳಿಗೆ ಮರುಳಾಗದವರಾರು?!

    ReplyDelete
  8. ಸಿಂಧು,
    ತಂಪು ರಸ ಪ್ರಸಾದ!ವಾಹ್! ನೋಡಿದಿರಾ, ಬೇಂದ್ರೆ ಪ್ರಭಾವ ನಿಮ್ಮ ಮೇಲೆ ಎಷ್ಟಾಗಿದೆ ಎಂದು!

    ReplyDelete
  9. RJ,
    ಸಂತ ಮಹಾತ್ಮರ ಬದುಕಿನ ಯಾವ ಪ್ರತ್ಯಕ್ಷ ಅನುಭವವೂ ನನಗಿಲ್ಲ. ಅಂತಹ ದಿನ ಎಂದಾದರೂ ಬಂದೀತೆಂದು ಹಾರೈಸಬೇಕಷ್ಟೆ!

    ReplyDelete
  10. ಅಶೋಕ,
    ನಿಮ್ಮ ಮಾತು ನಿಜ. ಮೇಣಬತ್ತಿ ತಾನು ಉರಿದು ಇತರರಿಗೆ ಬೆಳಕು ನೀಡುವಂತೆ, ಬೇಂದ್ರೆಯವರ ಬದುಕು ಇತರರಿಗೆ ಬೆಳಕು ನೀಡುತ್ತದೆ.

    ReplyDelete
  11. ನಿದ್ದೆ ಮಾಡ್ತೀನಿ.. ಆದ್ರೆ ನಿಮ್ಮ ಲೇಖನ ಓದೋಕೆ ಶುರು ಮಾಡಿದ ಮೇಲೆ ಮುಗಿಸೋವರೆಗೆ ನಿದ್ದೆ ಬರಲ್ಲ ಕಾಕಾ :)

    ReplyDelete
  12. ಕಾಕಾ,

    ನಾನಂತೂ ಹುಚ್ಚನಲ್ಲ ಆದರೆ, ನೀವು ಬೇಂದ್ರೆಯವರ ಹುಚ್ಚು ಹಿಡಿಸಿದಿರಿ. ಮರಳಿ ಮರಳಿ ಅರಳುತ್ತಿವೆ ನಿಮ್ಮ ಬರಹಗಳು.

    ReplyDelete
  13. ಕಾಕ,
    ಬೇ೦ದ್ರೆಯವರ ಮರುಳನ್ನು ವಿವರಿಸಿ ನಾವು ಅರಳುವ೦ತೆ ಮಾಡಿದ ನಿಮಗೆ ಹೊರಳಿ ಹೊರಳಿ ನಮಸ್ಕಾರ...:))

    ReplyDelete
  14. ಅದ್ಭುತ ವಿವರಣೆ... ಅರುಳು ಮರಳು ಲೇಖನದಿಂದ ನಿಮಗೆ ಮರುಳಾಗಿದ್ದೇವೆ. ಸಾಸ್ಟಾಂಗ ನಮಸ್ಕಾರಗಳು ಕಾಕ. ಬೇಂದ್ರೆಯವರ ಪೂರ್ಣ ಪರಿಚಯದೊಂದಿಗೆ ಅವರ ಕವನ ಸಾಲುಗಳ ಅರ್ಥ, ಮನೋಧರ್ಮ ಎಲ್ಲವನ್ನು ನಮಗೆ ಕಣ್ಣಿಗೆ ಕಟ್ಟಿದಂತೆ ತಿಳಿಸುತ್ತಲೇ ಬಂದಿದ್ದೀರಿ ನಾವು ಧನ್ಯರು..

    ReplyDelete
  15. ಮರುಳಾದೆನಯ್ಯಾ ನಾನು ಮರುಳಾದೆನು.. ಬೇಂದ್ರೆ ಸಾಹಿತ್ಯಕ್ಕೆ ಮತ್ತು ಅದಕ್ಕೆ ಸುನಾಥ್ ಸರ್ ಕೊಡುವ ವಿವರಣೆಗೆ...

    ReplyDelete
  16. ಧನ್ಯವಾದಗಳು,ಹರೀಶ. ಯುವಕರಿಗೆ ನಿದ್ದೆ ಕೆಡೋ ಕಾರಣಗಳು ಏನೇನೋ ಇರ್ತಾವೆ. ನೀವು ಬೇಂದ್ರೆಯವರಿಗಾಗಿ ನಿದ್ದೆ ಕೆಡಸಿಕೊಂಡಿರೋದು ಅಭಿನಂದನೀಯ!

    ReplyDelete
  17. ಪುತ್ತರ್,
    ಇದು ಹುಚ್ಚರ ಸಂತೆ!

    ReplyDelete
  18. ವಿಜಯಶ್ರೀ,
    ಮರುಳಿನಲ್ಲಿಯೇ ಮೋಜಿದೆ!

    ReplyDelete
  19. ಮನಸು,
    ನಿಮ್ಮದು ಮೃದುವಾದ ಮನಸು. ಈ ಮನೋಧರ್ಮವೇ ಎಲ್ಲವನ್ನೂ ಗ್ರಹಿಸುವ ಶಕ್ತಿಯನ್ನು ಪಡೆದಿದೆ.

    ReplyDelete
  20. ಗಿರೀಶರೆ,
    ಬೇಂದ್ರೆಯವರ ಕಾವ್ಯದಲ್ಲಿ ಮರುಳು ಮಾಡುವ ಸಾಮರ್ಥ್ಯವಿದೆ. ಆ ವರಕವಿಯನ್ನು ಪಡೆದ ಕನ್ನಡಿಗರೇ ಪುಣ್ಯವಂತರು!

    ReplyDelete
  21. "ನಿಮ್ಮರುಳಿನಿಂದ ಮರ ಮರಳಿ ಅರಳಿ
    ಸ್ಫುಟವಾಗಿ ಭಾವಶುದ್ಧ—
    ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
    ಸಂತತದ ಏಕನಾದ"
    ಅದ್ಭುತ ಸಾಲುಗಳು. 'ಬೆಂದರೆ ಬೇಂದ್ರೆ' ಎಂಥ ಮಾತು ಸರ್.
    ಎಂದಿನಂತೆ ಉತ್ತಮ ವಿವರಣೆ. ತಿಳಿಸಿಕೊಟ್ಟದ್ದಕ್ಕಾಗಿ ಧನ್ಯವಾದಗಳು .
    ಸ್ವರ್ಣಾ

    ReplyDelete
  22. ಸ್ವರ್ಣಾ ಮೇಡಮ್,
    ಬೇಂದ್ರೆಯವರ ಮರುಳಿನಲ್ಲಿ ಅರಳಿದ ಕಾವ್ಯದ ಸುಗಂಧ ಕನ್ನಡಿಗರಿಗೆ ದೊರೆಯುತ್ತಿದೆ!

    ReplyDelete
  23. ಅತ್ಯುತ್ತಮ ಲೇಖನ
    ಅವರ ಕೆಲವು ಸಾಲುಗಳು ಬೆಂದರೇ ಬೇಂದ್ರೆಯೇ ಸರಿ ಎನಿಸುತ್ತವೆ, ಅವರ ಭಾವದ ಸಾಲುಗಳಿಗೆ ಜೀವ ತುಂಬುವ ಕಂಠವೊಂದಿದ್ದರೆ ಸಾಕು ಕೇಳ್ವರ ಮನಕಲಕಿದಂತಾಗುತ್ತೆ, ಅವರ ಬಗ್ಗೆ ಮತ್ತಷ್ಟು ಆಳದ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು

    ReplyDelete
  24. ಸುನಾಥ್ ಸಾರ್ ,
    ಬೇಂದ್ರೆಯವರ ಅರಳು ಮರಳು ವಿಶ್ಲೇಷಣೆ ತುಂಬಾ ಚೆನ್ನಾಗಿ ಮೂಡಿದೆ.ಅಂಬಿಕಾತನಯದತ್ತರು ಭಕ್ತಕವಿ ಎಂಬುದನ್ನು ತಿಳಿಸಿದ ಪ್ಯಾರ ನನಗೆ ಮೆಚ್ಚುಗೆಯಾಯ್ತು.ನಿಮ್ಮ ಲೇಖನಗಳಿಂದ ಬೇಂದ್ರೆಯವರ ಬಗ್ಗೆ ಬಹಳ ವಿಷಯಗಳನ್ನು ತಿಳಿಯುತ್ತಿರುವುದು ನನಗೆ ಸಂತಸ ತಂದಿದೆ.ಅಭಿನಂದನೆಗಳು.

    ReplyDelete
  25. ವಿಚಲಿತರೆ,
    ಬೇಂದ್ರೆಯವರ ಕಾವ್ಯ ಹಾಗು ಜೀವನ ಎರಡೂ ದೊಡ್ಡವು. ಎರಡೂ ಅಷ್ಟೇ ಸಂಕೀರ್ಣವಾದಂತಹವು.

    ReplyDelete
  26. ಮಂಜುಳಾದೇವಿಯವರೆ,
    ಬೇಂದ್ರೆಯವರು ಲೌಕಿಕ ಕಾವ್ಯವನ್ನು ಬರೆದರೂ ಸಹ ಅದರಲ್ಲಿ ಅಲೌಕಿಕ ತುಂಬಿದೆ. ಕುಮಾರವ್ಯಾಸನ ಹಾಗೆಯೇ ಬೇಂದ್ರೆಯವರೂ ಸಹ ಭಕ್ತ ಕವಿಗಳೇ.

    ReplyDelete
  27. ಪ್ರೀತಿಯ ಸುನಾತ್ ಸಾರ್,

    ಬೇಂದ್ರೆ ಅಜ್ಜನನ್ನು ಮತ್ತೆ ನಿಮ್ಮ ಪುಟದಲ್ಲಿ ಓದಿ ಇನ್ನೂ ಅವರು ನನಗೆ ಹತ್ತಿರವಾದರು.

    ಮೊದಲಿನಿಂದಲೂ ಉತ್ತರ ಕನ್ನಡ ಭಾಷೆ ನನಗೆ ಕಗ್ಗಂಟೇ, ಬೆಳೆಯುತ್ತಾ ಹೋದ ಹಾಗೆ ನನ್ನ ಸುತ್ತ ಮುತ್ತಲಿನ ಸ್ನೇಹಿತ ವಲಯದಲ್ಲಿ ಉತ್ತರ ಕರ್ನಾಟಕದ ಮಂದಿ ಹೆಚ್ಚುತ್ತಾ ಹೋಗಿ ಭಾಷೆಯ ಅರ್ಥವಾಗುವಿಕೆಯೂ ಆರಂಭವಾಯಿತು.

    ಅರಳೌ ಮರಳು ಸಂಕಲನದ ವೈಶಿಷ್ಯ ಓದಿದ ನಂತರ ಬೇಂದ್ರೆಯವರ ಬಗ್ಗೆ ಒಂದು ಮಾತು, ಬಹುಶಃ ಅಂಬಿಕಾತನಯದತ್ತ ದಿನಂಪ್ರತಿ ಒಂದು ರಚನೆ ಮಾಡುತ್ತಿದ್ದರೂ ಎನಿಸುತ್ತದೆ. ಈ ರೀರಿಯ ಬೃಹತ್ ಕಾವ್ಯ ಸಂಪತ್ತನ್ನು ಕೊಟ್ಟ ಅವರ ಅಪಾರ ಬುದ್ಧಿಮತ್ತೆ ನನಗೆ ಯಾವತ್ತೂ ವಿಸ್ಮಯವೇ! ಅದೂ ನೂರಕ್ಕೆ ನೂರು ಕಾಳಾಗಿ!

    ಮರುಳಸಿದ್ಧ ಎನ್ನುವಲ್ಲೇ ಅವರ ಪ್ರಿತಿಭೆಯ ಅನಾವರಣ ಆಗಿಬಿಡುತ್ತದೆ. ಮರ ಮಳಿಯ ಸಿಂಹಾವಲ್ಫ್ಕನ ಮತ್ತು ಹಳತನ್ನು ತಿದ್ದುವೆಡೆಗಿನ ಶಿಸ್ತು ಗೋಚರಿಸುತ್ತದೆ.

    Free version has output file size limit. Please buy premium version to remove this restriction.

    ReplyDelete
  28. nimma ellaa lekhanagaLante idu saha sangraha yogya lekhana.....
    tumbaa khushi aaytu odi....

    thanks alot...

    ReplyDelete
  29. ಬದರಿನಾಥರೆ,
    ಕನ್ನಡದಲ್ಲಿರುವ ಎಲ್ಲ ಪದಗಳನ್ನೂ ಬೇಂದ್ರೆಯವರು ತಮ್ಮ ಕವನಗಳಲ್ಲಿ ಬಳಸಿದ್ದರೇನೋ ಎನ್ನುವ ಅನುಮಾನ ನನಗೆ! ಅವರ ಪದಸಾಮರ್ಥ್ಯ ಅಪಾರವಾದದ್ದು, ಭಾಷಾಚಮತ್ಕಾರ ಅದ್ಭುತವಾದದ್ದು, ಸಾಂದರ್ಭಿಕ ಮಾಹಿತಿ ಕಣ್ಗೆಡಿಸುವಂತಹದು!

    ReplyDelete
  30. ದಿನಕರರೆ,
    ನಿಮಗೂ ಧನ್ಯವಾದಗಳು.

    ReplyDelete
  31. ಹೊಸವರ್ಷಕ್ಕೆ ಬೇಂದ್ರೆ ರಸದೌತಣ ಉಣಬಡಿಸಿದ್ದಕ್ಕೆ ನಿಮಗೆ ಶರಣು ಕಾಕಾ

    ReplyDelete
  32. ದೇಸಾಯರ,
    ಪಾಕರಸಿಕರಿದ್ದಾಗ ಉಣಬಡಿಸಲಿಕ್ಕೆ ಹುರುಪು ಬರತದ.

    ReplyDelete
  33. ಉತ್ತಮ ವಿವರಣೆ..
    ಕಾಕಾ ತು೦ಬಾ ಧನ್ಯವಾದಗಳು.

    ReplyDelete
  34. ಮನಮುಕ್ತಾ,
    ನಿಮಗೂ ಧನ್ಯವಾದಗಳು.

    ReplyDelete
  35. ಮೊಮ್ಮೊದಲು ಮರುಳನ ವಿವರಣೆಯನ್ನು ನೀಡಿದ ತಮಗೆ ಅಭಿನ೦ದಿಸುತ್ತೇನೆ ಸುನಾತ್ ಸರ್. ಭಾವ ಶುದ್ಧಿಯಾದೊಡನೆ ಸ೦ತತದ ಏಕನಾದ ಎನ್ನುವುದು ಮರುಳಾಗುವ ಹ೦ತಗಳು ಎ೦ದೆನಿಸಿತು. ಸನ್ಯಾಸಿಗಳು, ಸಿಧ್ಧರು, ಅವಧೂತರು ಎನ್ನುವ ಹಲವಾರು ಪ್ರಾಕಾರಗಳಿವೆ ಸಾಧಕರ ಹಾದಿಯಲ್ಲಿ ಎ೦ದು ಓದಿದ ನೆನಪು. ಅ೦ತಿಮವಾಗಿ ಎಲ್ಲವೂ ಗುರುಸಮರ್ಪಿತವಾದ ನೈವೇದ್ಯ! ಎನ್ನುವುದು ಸೂಕ್ತವಾದ ಉಕ್ತಿಯಾಗುತ್ತದೆ. ತಮ್ಮ ಸರಳ ವಿವರಣೆ ಹಾಗೂ ನಿರೂಪಣೆಗೆ ಧನ್ಯವಾದಗಳು ಸರ್.

    ಅನ೦ತ್

    ReplyDelete
  36. ಅನಂತರಾಜರೆ,
    ಔಚಿತ್ಯಪೂರ್ಣವಾದ ಸ್ಪಂದನೆಗಾಗಿ ಧನ್ಯವಾದಗಳು.

    ReplyDelete
  37. ಸುನಾಥರೆ,
    ತುಂಬಾ ಸೊಗಸಾಗಿದೆ ನಿಮ್ಮ ವಿವರಣೆ. ನಿಮ್ಮನ್ನು ಕೆಂಡಸಂಪಿಗೆ ಯಲ್ಲಿ ಓದಿದ ಮೇಲೆ, google ನಲ್ಲಿ ಹುಡುಕಾಡಿದೆ. ಇಲ್ಲಿ ಬೇಂದ್ರೆ ಭಂಡಾರವೇ ತುಂಬಿದೆ. ನಿದ್ದೆ ಬಿಟ್ಟು ಓದಬೇಕಾದದ್ದು ಇವು. 'ಹಾಲು ಮರಳಲಿಕ್ಕೆ ಹತ್ಯದ' ಅನ್ನುವದ ಕೇಳಿ ಬೆಳದವನು ನಾನು. ಆ ನಿಟ್ಟಿನಿಂದ ಕಲ್ಮಶಗಳನ್ನು ಬೇರ್ಪಡಿಸಿ (bacteria, microbes, fat etc) ಹಾಲು ಹಿರುತ್ತಿದ್ದೆವು ಆಗ. ಆದರೆ ಈಗ ೧೮ ವರುಷದಿಂದ ಅಮೇರಿಕೆಯಲ್ಲಿ ಸಿಗುವ low fat, skim milk, pasteurized milk, Organic milk ಉಪಯೋಗಿಸುತ್ತಿರುವದರಿಂದ (ಪ್ರಾಯಶ ಅಲ್ಲಿಯೂ) ಹೀಗೆಯೂ ಯೋಚಿಸಬಹುದೇ? ಮರಳಿಸುವದನ್ನು ನಮಗಾಗಿ ಬೇರೆ ಯಾರೋ ಮಾಡುತ್ತಿರುವದರಿಂದ, ಕೊನೆ ಪರಿಣಾಮ ಒಳ್ಳೆಯದೇ (consuming better milk) ಆಗಿರುವದರಿಂದ ಸ್ವತಹ ನಾವೇ ಬೇಯದೆಯು, ಬೇಯಿಸದೆಯು ಪರಿಶುದ್ಧರಾಗಬಹುದೇ? ಅಂದರೆ ಮರುಳಸಿದ್ಧ , ಯೋಗಿಯೋ, ಗುರುವೋ , ಕೊನೆಗೆ ದೇವರೂ ಆಗಿರಬೇಕಿಲ್ಲ - ಬರಿ ಜ್ಞಾನ ಒಂದೇ. ಅಂದರೆ ನಾಸ್ತಿಕರು, Scientology ನಂಬುವವರಿಗೂ ಇದು ಒಪ್ಪಿತವಾಗಬಹುದು- ಬರಿ ನನ್ನನ್ಥವರಿಗಲ್ಲ . Basically I am trying to understand why these great poets never got their fair share on a global level. I always feel , someone like Bendre should be known to everyone on earth, at least to the extent of Khalil Gibran (whom Bendre liked) or Tagore - I think the only reason is not writing in English - I really appreciate your thoughts on this.
    -ಅನಿಲ ತಾಳಿಕೋಟಿ

    ReplyDelete
  38. ಅನಿಲರೆ,
    ಸ್ಪಂದನೆಗೆ ಧನ್ಯವಾದಗಳು.
    ನಿಮ್ಮ ಒಳಕುದಿಯನ್ನು ನಾನು ಮೆಚ್ಚಿಕೊಂಡೆ. ಬೇಂದ್ರೆಯವರಂತಹ ಶ್ರೇಷ್ಠ ಕವಿಯನ್ನು ಜಗತ್ತು ತಿಳಿದುಕೊಳ್ಳಬೇಕು. ಅರ್ಥಾತ್ ಅವರ ಕಾವ್ಯವನ್ನು ಜಗದ ಇತರ ಭಾಷೆಗಳಿಗೆ ಅನುವಾದಿಸಬೇಕು. ಆದರೆ ಬೇಂದ್ರೆ ಕಾವ್ಯದ ಅನುವಾದ ಅಸಾಧ್ಯ.ಅವರ ‘ಪಾತರಗಿತ್ತಿ ಪಕ್ಕಾ’ ಕವನದ ಈ ಎರಡು ಸರಳತಮ ಸಾಲುಗಳನ್ನು ನೋಡಿ:
    "ಹೂವಿಗೆ ಹೋಗತಾವ
    ಗಲ್ಲಾ ತಿವೀತಾವ."
    ‘ಗಲ್ಲಾ ತಿವೀತಾವ’ಅನ್ನುವ idiomಗೆ teasing ಅನ್ನುವ ಅರ್ಥವಿದೆಯಲ್ಲವೆ? ಹೂವನ್ನು ಸ್ಪರ್ಶಿಸುವ ಕ್ರಿಯೆಯನ್ನು imply ಮಾಡುತ್ತಲೇ, tease ಮಾಡುವ ಕ್ರಿಯೆಯನ್ನೂ ಹೇಳುವದು ಅನುವಾದದಲ್ಲಿ ಹೇಗೆ ಸಾಧ್ಯ? ಬೇಂದ್ರೆಯವರ ಕಾವ್ಯ ಇಂತಹ ಶ್ಲೇಷೆಗಳಿಂದ ಹಾಗು ಭಾಷಾಚಮತ್ಕಾರದಿಂದ ತುಂಬಿಕೊಂಡಿದೆ.
    ಬೇಂದ್ರೆಯವರ ಕಾವ್ಯದ ಜೇನನ್ನು ನಾವು ಅಂದರೆ ಕನ್ನಡಿಗರು ಹೀರಿಕೊಂಡರೆ ಸಾಕು. ಬೇಂದ್ರೆಯವರೇ ಹೇಳಿಲ್ಲವೆ:"ಕಲ್ಲುಸಕ್ಕರೆಯಂಥ ನಿನ್ನೆದೆಯು ಕರಗಿದರೆ,
    ಆ ಸವಿಯ ಹಣಿಸು ನನಗೆ!"

    ಇನ್ನು ನಿಮ್ಮ ಮೊದಲನೆಯ ತರ್ಕಧಾರೆಗೆ ಅಂದರೆ ಕುದಿಯಿಲ್ಲದ ಜ್ಞಾನಸಂಪಾದನೆಗೆ ಏನು ಹೇಳಬಹುದು? ಬಹುಶಃ ಒಳಕುದಿ ಹಾಗು ಹೊರಕುದಿ ಇವೆರಡೂ ಮನುಜನ ಉತ್ಕ್ರಾಂತಿಗೆ ಅವಶ್ಯವೇನೊ?

    ReplyDelete
  39. ಉತ್ತರಕ್ಕಾಗಿ ಧನ್ಯವಾದಗಳು ಸುನಾಥರೆ. ಕವಿತೆಗಳ ಭಾಷಾಂತರ ಕಠಿನತಮ, ಇನ್ನೂ ಬೇಂದ್ರೆಯವರದಂತು ಅಸಾಧ್ಯವೇ ಏನೋ? ನನ್ನ ಕುದಿ ಕನ್ನಡೆತರರಿಗಿಂತ ಕನ್ನಡಿಗರ ಮೇಲು ನಿಜ. ೧೫ ವರುಷದ ಹಿಂದೆ ನನ್ನ ಸ್ವದೇಶಿ ಮಿತ್ರ (ಹುಟ್ಟಿ, ಬೆಳದೆದ್ದು ಬೆಂಗಳೂರಿನಲ್ಲಿ) ನೊಬ್ಬನಿಗೆ ಬೇಂದ್ರೆ ಬಗ್ಗೆ ಹೇಳ ಹೋಗಿ, ಆತ ಕಾಲೇಜ್ ಕೊನೆವರೆಗೂ ನನ್ನನ್ನು, 'ಧರಾ' ಎಂದೇ ರೇಗಿಸುತ್ತಿದ್ದ. ಆತ ನಿಜವಾಗಿಯೂ ಕಾವ್ಯಾಸಕ್ತ , ಕನ್ನಡ ಅಲ್ಪ ಸ್ವಲ್ಪ ಓದಬಲ್ಲ. ಇಗಲೂ ಬೇಂದ್ರೆ google ಮಾಡಿದರೆ ೧೦ ಸೋನಾಲಿಗಳು hit ಆದರೆ, ೨ ದ.ರಾ.ಬೇಂದ್ರೆ ಬರಬಹುದೋ ಏನೋ? ಪಕ್ವಾನ್ನ ಪಕ್ಕಕ್ಕಿರಿಸಿ ಪಿಜ್ಜಾ ಕೇಳುವ ಕನ್ನಡಿಗರಿಗೆ ಹೇಗಾದರೂ ಮಾಡಿ ಬೇಂದ್ರೆ ಹುಚ್ಚು ಹಿಡಿಸಬೇಕು. ನಿಮ್ಮ link ಗಳನ್ನು ಆತನಿಗೆ ಕಳಿಸುತ್ತಿರುವೆ - ಕಲ್ಲುಸಕ್ಕರೆ ಚಪ್ಪರಿಸುತ್ತಾನೋ ಕಾದು ನೋಡುವೆ. ತಮ್ಮ ನಿರೂಪಣೆ ಅನನ್ಯವಾಗಿದೆ.
    ಅನಿಲ ತಾಳಿಕೋಟಿ

    ReplyDelete
  40. ಅನಿಲರೆ,
    ಕನ್ನಡಿಗರನ್ನು ಜಾಗಟೆ ಹೊಡೆದು ಎಚ್ಚರಿಸಲು ಪ್ರಯತ್ನಿಸುತ್ತಿರುವ ನಿಮ್ಮ ಆಸಕ್ತಿಗಾಗಿ ಧನ್ಯವಾದಗಳು.

    ReplyDelete
  41. It is extremely difficult to understand Bendre without Guru.Dear sunnath sir, your explanations are eye opener for most of us.We missing bendre now!!!

    ReplyDelete
  42. ದಯಾನಂದರೆ,
    ಬೇಂದ್ರೆಯವರ ಕವನದಲ್ಲಿ ಅನೇಕ ಅರ್ಥಗಳು ಅಡಗಿರುವದರಿಂದ, ಅವುಗಳ ಅಭ್ಯಾಸಕ್ಕೆ ತಿಳಿದವರೊಬ್ಬರು ಬೇಕಾಗುತ್ತಾರೆ ಎನ್ನುವದು ಸರಿ. ಕೀರ್ತಿನಾಥ ಕುರ್ತಕೋಟಿ, ಜಿ.ಎಸ್.ಆಮೂರ ಇವರ ಕೃತಿಗಳು ಈ ನಿಟ್ಟಿನಲ್ಲಿ ನೆರವು ನೀಡುತ್ತವೆ.

    ReplyDelete
  43. ಸುನಾಥರೇ, ಇಹದ ಒಂದು ವೈಚಿತ್ರ್ಯ ನೋಡಿ, ಕಾವಿ ಹಾಕಿದವರೆಲ್ಲಾ ಸನ್ಯಾಸಿಗಳ ಹಾಗೇ ಕಾಣಿಸುತ್ತಾರೆ, ಹಾಗೆಯೇ ಪರದ ಚಿಂತನೆಯಲ್ಲಿ ಆಳವಾಗಿ ತೊಡಗಿಕೊಂಡವರೆಲ್ಲಾ ಮನೋರೋಗಿಗಳ ಥರಾ ಇಲ್ಲಿನ ಜನರಿಗೆ ಕಾಣಿಸುತ್ತಾರೆ. ರಾಮಕೃಷ್ಣ ಪರಮಹಂಸರು ಸಾದಾ ಮಾತಿನಲ್ಲಿ ಹೇಳುತ್ತಾರೆ-- " ತಂದೆ,ತಾಯಿ, ಹೆಂಡತಿ, ಮಕ್ಕಳ ಮೇಲಿನ ಪ್ರೀತಿ ಎಂದರೆ ಅದು ಮೋಹ ಸಮಾಜದ ಎಲ್ಲರಮೇಲಿನ ಪ್ರೀತಿ ಎಂದರೆ ಅದು ದಯೆ" ಎಂಬುದಾಗಿ. ಇಹದ ಬಂಧನವನ್ನು ಬಿಡಿಸಿಕೊಳ್ಳುವುದು ಸಸಾರವಲ್ಲ, ಅದಕ್ಕೇ ಅದು ಸಂ-ಸಾರ! ಅಲ್ಲವೇ? ಸೊನ್ನೆಗೆ ಮಹತ್ವ ಇರದಿರಬಹುದು ಆದರೆ ಆ ಸೊನ್ನೆ ಯವುದರ ಮಧ್ಯೆಯೋ ಅಂತ್ಯೆಯೋ ಕುಳಿತು ಬರಸೆಳೆವಾಗ ಅದರ ಮೌಲ್ಯ ನಮಗೆ ತಿಳಿಯುತ್ತದೆ. ಏನೂ ಅಲ್ಲದ ಸೊನ್ನೆ ಏನೆಲ್ಲಾ ಆಟವಾಡುತ್ತದೆ ಅನಿಸುತ್ತದೆ! ಸಗಣಿ ಗಂಜಲದಲ್ಲಿ ಹುಳುವಾಗಿ ಬಿದ್ದಿದ್ದ ಮಿತ್ರನನ್ನು ದೈವತ್ವಕ್ಕೇರಿದ ಮಿತ್ರನೊಬ್ಬ ಬಂದು ಕೂಗಿ ನಿಂತು ಕರೆದುನಂತೆ, ಹುಳು ಮೇಲಕ್ಕೆ ಬಂತು ನೋಡಿ ಒಳಕ್ಕೆ ಹೋಯ್ತು! " ಬಾರಯ್ಯಾ ಎಂಥಾ ಹೊಲಸಿನಲ್ಲಿ ಇದ್ದೀಯ ಹೊರಗೆ ಬಾ ಹೊಸಲೋಕವೊಂದನ್ನು ತೋರುತ್ತೇನೆ" ಎಂದರೆ " ಬೇಡ ನನಗೆ ಇದೇ ಚೆನ್ನಾಗಿದೆ " ಎಂದಿತಂತೆ ಆ ಹುಳು! ಮಿತ್ರನೆಂಬ ಪ್ರೀತಿಯಿಂದ ಮೂಗು ಮುಚ್ಚಿಕೊಂಡು ಇನ್ನೊಂದು ಕೈಯ್ಯಿಂದ ವಾಸನೆಯ ಗಂಜಲದಲ್ಲಿ ಮುಳುಗಿರುವ ಹುಳುವನ್ನು ಎತ್ತಹೋದರೆ ೧೫೦ ಬಾರಿಯೂ ವಿಫಲವಾಗುತ್ತಾನೆ ದೈವತ್ವ ಪಡೆದ ಮಿತ್ರ ! ಆ ಹುಳಕ್ಕೆ ಸಗಣಿ ಗಂಜಲದ ಸುಖ ಗೊತ್ತೇ ವಿನಃ ದೈವತ್ವದ ಪಟ್ಟ ತಿಳಿಯದು! ಕವಿಗಳೆಂಬ ಕವಿಗಳನೇಕರು ಬರೆದಿದ್ದು ಕೆಲಸಕ್ಕೆ ಬಹುಕಾಲ ಬರದಿರಬಹುದು, ಆದರೆ ಬೇಂದ್ರೆಯವರ ಕವನಗಳು ಹಾಗಲ್ಲ. ಆಧ್ಯಾತ್ಮದ ಹಾದಿಯಲ್ಲಿ ಕನ್ನಡದ ಈ ಕವಿ ಸಾಗಿದ ದೂರವನ್ನು ಯಾವ ಕವಿ-ಸಾಹಿತಿಯೂ ಸಾಗಲಿಲ್ಲ ಎಂಬುದನ್ನು ಕರಾರುವಾಕ್ಕಾಗಿ ಹೇಳುತ್ತೇನೆ. ಹಿಂದೇಯೇ ಹೇಳಿದ್ದೆ-ಬೇಂದ್ರೆ ಕಾವ್ಯಗಳು ವೇದಾಂತದ ರೂಪಗಳು ಎನ್ನುತ್ತಾರೆ ಎಂದು. ಬಹುಶಃ ಮನುಷ್ಯನಿಗೆ ಇಹದಲ್ಲಿ ಕಷ್ಟ-ಕೋಟಲೆಗಳು ಜಾಸ್ತಿ ಒದಗಿದರೇ ಆತ ಪರದ ಹಾದಿಯನ್ನು ಹುಡುಕಲು ಮುಂದಾಗಬಹುದೇನೋ ಅನಿಸುತ್ತದೆ. ಜೀವನದಲ್ಲಿ ಬಹುವಾಗಿ ನೊಂದ ಬೇಂದ್ರೆ ಕಾವ್ಯದಲ್ಲೇ ಪರಮಾತ್ಮನನ್ನು ಕಂಡಿದ್ದಾರೆ, ಪರಾತತ್ವವನ್ನು ಉಂಡಿದ್ದಾರೆ. ಅದಕ್ಕೇ ನಾಕುತಂತಿ ಎಲ್ಲರಿಗೂ ಅರ್ಥವಾಗುವುದಿಲ್ಲ-ಅದರ ಗಹನವಾದ ಅರ್ಥ ಅರಿಯಲು ಆಧ್ಯಾತ್ಮದ ಅನುಸಂಧಾನ ಬೇಕು ಎಂಬುದು ನಿಮ್ಮಂತಹ ಬಲ್ಲವರ ಅಭಿಮತವಾಗಿದೆ. ಬ್ರಹ್ಮಚೈತನ್ಯರ ಬಗ್ಗೆ ಅಲ್ಲಲ್ಲಿ ಕೆಲವು ನಿರೂಪಗಳು ಸಿಗುತ್ತವೆ. ಮಹಾರಾಷ್ಟ್ರದಲ್ಲಿ ಸಮರ್ಥರ ಪರಂಪರೆಯಲ್ಲಿ ಬಹಳ ಸನ್ಯಾನಿಗಳು ಆಗಿಹೋಗಿದ್ದಾರೆ, ಅವರ ಮುಂದಿನ ಹಂತದಲ್ಲಿ ಕರ್ನಾಟಕದಲ್ಲಿ ಸಮರ್ಥರ ಗಾಳಿ ಹರಿದಿದ್ದು ನಮ್ಮ ಶ್ರೀಧರ ಭಗವಾನರಿಂದ. ಲೇಖನ ಖುಷಿಕೊಟ್ಟಿತು, ಇವತ್ತಿನ ಊಟ ಸಾರ್ಥಕವಾಯ್ತು ಎನಿಸುತ್ತಿದೆ, ಧನ್ಯವಾದಗಳು.

    ReplyDelete
  44. ಭಟ್ಟರೆ,
    ನಿಮ್ಮ ಸ್ಪಂದನೆಯೇ ವಿಚಾರಕ್ಕೆ ಹಚ್ಚುತ್ತದೆ. ಇಂತಹ ಪ್ರತಿಕ್ರಿಯೆಯನ್ನು ಓದುವದೇ ಒಂದು ಸುಖ. ಬೇಂದ್ರೆಯವರ ಕಾವ್ಯ ಸಾಧನಾಪಥದ ಕಾವ್ಯ ಎನ್ನುವದು ಸತ್ಯ. ಹೀಗಾಗಿಯೇ ಈ ಕಾವ್ಯವನ್ನು ತಿಳಿದುಕೊಳ್ಳುವದೂ ಸಹ ಸ್ವಲ್ಪ ಕಠಿಣವೇ ಆಗುತ್ತದೆ!

    ReplyDelete
  45. ಮೊಗೆದಷ್ಟು ಹರವು ವಿಸ್ತರಿಸುವದು ಬೇಂದ್ರೆ ಕಾವ್ಯ. ನಾನು ಬೇಂದ್ರೆಯವರ ಕಾವ್ಯ ಓದಿ ಅದರ ಭಾಷಾ ಸೊಗಡಿಗೆ ಮಾರುಹೋಗಿ ಪದೇ ಪದೇ ಓದಿ ಅವರ ಅಭಿಮಾನಿಯಾಗಿದ್ದೆ... ಕೀರ್ತಿನಾಥರ ಮತ್ತು ಅಮೂರರ ಟಿಪ್ಪಣೆಯಿಂದ ಸ್ವಲ್ಪ ಅರ್ಥ ಮಾಡಿಕೊಂಡೆ. ಆದರೆ ಹಲವು ಟಿಪ್ಪಣಗಳೇ ಕಾವ್ಯಕ್ಕಿಂತಾ ಕಬ್ಬಿಣ ಕಡಲೆಯಾಗಿದ್ದವು. ವಾಮನ ಬೇಂದ್ರೆಯವರ ಟಿಪ್ಪಣೆಯಿಂದ ಕವನದ ಮಗ್ಗಲುಗಳು ತಿಳಿಯಾಗಿ ಅರಿವಿಗೆ ಬಂದವು.
    ತಮ್ಮ ಟಿಪ್ಪಣೆಗಳಿ೦ದ ಅದರ ಆಳ-ಅಗಲ ಹರವು-ಸುಳಿ ಎಲ್ಲ ಸರಳವಾಗಿ ವೇದ್ಯವಾಗುತ್ತಿವೆ...
    ನಾನು ಓದಿದ ಬೇಂದ್ರೆಯವರ ವಿಮರ್ಶಕರಲ್ಲಿ ತಾವು ಸಾಮಾನ್ಯ ಓದುಗರ ದೃಷ್ಟಿಯಲ್ಲಿ ಅಗ್ರಮಾನ್ಯರು ಎಂದು ಮಾತ್ರ ಹೇಳಬಲ್ಲೆ...
    ಅರಳು ಮರಳು ನಿಜಕ್ಕೂ ಬೇಂದ್ರೆ ವೀನತ ಪಕ್ವಭಾವಕ್ಕೆ ಒಂದು ಕನ್ನಡಿ.

    ReplyDelete
  46. ಸೀತಾರಾಮರೆ,
    ನಿಮ್ಮ ಸ್ಪಂದನೆಗೆ ಧನ್ಯವಾದಗಳು.

    ReplyDelete