Saturday, March 13, 2010

ಧೀಮಂತ ನಾಡು

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is lead forward by thee into ever-widening thought and action-
Into that heaven of freedom, my Father, let my country awake.

ಗುರುದೇವ ರವೀಂದ್ರನಾಥ ಠಾಕೂರರ ‘ಗೀತಾಂಜಲಿ’ ಕವನ ಸಂಕಲನದಲ್ಲಿ ಬರುವ ಗೀತೆಯಿದು. ಈ ಕವನಕ್ಕೆ ಶೀರ್ಷಿಕೆ ಇಲ್ಲ. ಸ್ವಾತಂತ್ರ್ಯಪೂರ್ವದಲ್ಲಿ ಬರೆದ ಈ (ಮೂಲ ಬಂಗಾಲಿ) ಕವನದಲ್ಲಿ ಠಾಕೂರರು ದೇವರಲ್ಲಿ ಪ್ರಾರ್ಥಿಸುತ್ತಿರುವುದು, ಕೇವಲ ತಮ್ಮ ದೇಶದ ರಾಜಕೀಯ ಸ್ವಾತಂತ್ರ್ಯವನ್ನಷ್ಟೇ ಅಲ್ಲ. ತಮ್ಮ ನಾಡಿನ ಜನ ಧೀಮಂತರಾಗಬೇಕು ಎನ್ನುವದು ಅವರ ಅಭೀಪ್ಸೆ. ಆದುದರಿಂದ ನಾವು ಈ ಗೀತೆಗೆ ‘ಧೀಮಂತ ನಾಡು’ ಎನ್ನುವ ಶೀರ್ಷಿಕೆಯನ್ನು ಕೊಡಬಹುದೇನೊ? ಈ ಕವನದ ಭಾವಾನುವಾದ ಇಂತಿದೆ:

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು,
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಅನವರತ ಅರಳುತಿಹ ತಿಳಿವನ್ನು, ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.


‘ಗೀತಾಂಜಲಿ’ ಕ್ರಿ.ಶ. ೧೯೧೩ರ ಸುಮಾರಿಗೆ ಇಂಗ್ಲೀಶಿನಲ್ಲಿ ಪ್ರಕಟವಾಯಿತು. ಅದಕ್ಕೂ ಮೊದಲೇ ಬಂಗಾಲಿಯಲ್ಲಿ ಈ ಗೀತೆಗಳು ತುಂಬ ಜನಪ್ರಿಯವಾಗಿದ್ದವು. ಇಂಗ್ಲಿಶ್ ಆವೃತ್ತಿಗೆ ಇದೀಗ ೯೭ ವರ್ಷಗಳು ತುಂಬಿದವು. ಬಹುಶ: ರವೀಂದ್ರನಾಥ ಠಾಕೂರರು ಈ ಮೇಲಿನ ಗೀತೆಯನ್ನು ರಚಿಸಿ ಈಗ ನೂರು ವರ್ಷಗಳು ಆಗಿರಬಹುದು. ಆದರೆ ‘ಧೀಮಂತ ನಾಡಿ’ನ ಅವರ ಕನಸು ಕನಸಾಗಿಯೇ ಉಳಿದಿದೆ. ದೇವರಲ್ಲಿ ಅವರು ಮಾಡಿದ ಪ್ರಾರ್ಥನೆ ಇನ್ನೂ ಫಲಪ್ರದವಾಗಬೇಕಾಗಿದೆ.

ಈ ಗೀತೆಯ ಮೊದಲ ನುಡಿಯನ್ನು ನೋಡಿರಿ:
ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ,
ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
ಎಲ್ಲಿ ಜ್ಞಾನಸಾಧನೆಗೆ ಇರುತಿಹುದು
ಸಂಕೋಲೆಯಿರದ ಒಲವು;

ಎಲ್ಲಿ ನಿರ್ಭೀತ ಮನಕೆ ನೆಲೆ ಇಹುದೊ, ಎಲ್ಲಿಹುದು ತಲೆ ಎತ್ತಿ ನಿಲುವ ನಿಲುವು;
 ‘ನಿರ್ಭೀತ ಮನ’ ಎಂದರೇನು? ತನಗೆ ಕಂಡ ಸತ್ಯವನ್ನು ಭಯವಿಲ್ಲದೇ ಹೇಳುವ ಮನಸ್ಸು. ಈ ಭಯ ಯಾತಕ್ಕೆ ಬರಬೇಕು? ಸಮಾಜದಲ್ಲಿ oppression ಇದ್ದಾಗ ಭಯವಿರುತ್ತದೆ. ಇದು ಸರಕಾರದ ಭಯವಿರಬಹುದು ಅಥವಾ ಸಮಾಜದ ಭಯವಿರಬಹುದು. ಸದ್ಯಕ್ಕೆ ನಮ್ಮ ದೇಶದಲ್ಲಿ ಒಂದು ಮಣ್ಣು ಹುಳವೂ ಸಹ ಸರಕಾರಕ್ಕೆ ಅಂಜುತ್ತಿಲ್ಲ. ಅಂದ ಮೇಲೆ ಉಳಿದದ್ದು ಸಮಾಜದ ಭಯ.

ಭಾರತ ದೇಶದಲ್ಲಿ ಅನೇಕ ಧರ್ಮಗಳಿವೆ, ಅನೇಕ ಸಮಾಜಗಳಿವೆ. ಇವುಗಳಲ್ಲಿ ಕೆಲವು ಸಮಾಜಗಳು ಮುಕ್ತ ಸಮಾಜಗಳು. ಅಂದರೆ ಇಲ್ಲಿ ಆಂತರಿಕ ಟೀಕೆ, ಟಿಪ್ಪಣಿಗಳಿಗೆ ಅವಕಾಶವಿದೆ. ಕೆಲವು ಸಮಾಜಗಳು ಮುಚ್ಚಿದ ಸಮಾಜಗಳು. ಇಲ್ಲಿ ಟೀಕೆಗಳಿಗೆ, ಸ್ವತಂತ್ರ ಆಲೋಚನೆಗಳಿಗೆ ಅವಕಾಶವಿಲ್ಲ. ಇಂತಹ ಸಮಾಜಗಳು ಸುಧಾರಿಸುವದು ಹೇಗೆ? ನಮ್ಮ ದೇಹದ ಒಂದು ಭಾಗದಲ್ಲಿ ಹುಣ್ಣಾದರೆ, ಅದನ್ನು ತಕ್ಷಣವೇ ಗುಣಪಡಿಸದಿದ್ದರೆ, ಇಡೀ ದೇಹಕ್ಕೇ ಅಪಾಯ. ಅದೇ ರೀತಿಯಲ್ಲಿ, ಒಂದು ಸಮಾಜವು ರೋಗಗ್ರಸ್ತವಾದರೆ, ಇಡೀ ದೇಶವೇ ರೋಗಿಯಾಗುತ್ತದೆ. ಇದನ್ನು ಅರಿತುಕೊಂಡು, ಆ ಸಮಾಜವು ತನ್ನನ್ನು ತಾನು ತಿದ್ದಿಕೊಳ್ಳಬೇಕು. ಅದಾಗದಿದ್ದರೆ, ಸರಕಾರವೇ ಶಸ್ತ್ರಚಿಕಿತ್ಸೆಗೆ ಮುಂದಾಗಬೇಕು. ಅದು ಸದ್ಯದ ‘ಮತಪ್ರಜಾಪ್ರಭುತ್ವ’ದಲ್ಲಿ ಸಾಧ್ಯವೆ?  ಹಾಗಿದ್ದಾಗ, ರವೀಂದ್ರನಾಥ ಠಾಕೂರರ ಈ ಕನಸು ಕನಸಾಗಿಯೇ ಉಳಿಯುವದು.

ಯಾವುದೇ ಸಮಾಜದಲ್ಲಿಯ ದೋಷವನ್ನು ತೋರಿಸುವ ಮುಕ್ತ ಮನಸ್ಸು ಭಾರತೀಯನಿಗೆ ಇರಬೇಕು. ಆದರೆ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ, ನಿಮ್ಮ ಸಮಾಜವನ್ನೇ ನೀವು ಟೀಕಿಸಿದಾಗ ಪಾಖಂಡಿಗಳಾಗುತ್ತೀರಿ. ಬೇರೆ ಸಮಾಜವನ್ನು ಟೀಕಿಸಿದರೆ ಕೋಮುವಾದಿ ಆಗುತ್ತೀರಿ. ಹೀಗಿದ್ದಾಗ, ಗುರುದೇವ ಠಾಕೂರರು ಬಯಸುವ ‘ತಲೆ ಎತ್ತಿ ನಿಲುವ ನಿಲುವು’ ಹೇಗೆ ಸಾಧ್ಯವಾದೀತು? ಅದರ ಬದಲಾಗಿ ತಲೆ ತಪ್ಪಿಸಿ ಬದುಕುವ ಪರಿಸ್ಥಿತಿ ಬಂದಿದೆ, ಸತ್ಯವಂತರಿಗೆ.  ಇಂಥವರ ಅಜ್ಞಾತವಾಸವು ನಿಜಕ್ಕೂ ಮರುಕವನ್ನು ಹುಟ್ಟಿಸುವಂತಹದು.

ಎಲ್ಲಿ ಜ್ಞಾನಸಾಧನೆಗೆ ಇರುತಿಹುದು ಸಂಕೋಲೆಯಿರದ ಒಲವು”:
ಹಿಂದೂ ಸಮಾಜದಲ್ಲಿರುವ ವ್ಯಕ್ತಿಗಳಿಗೆ ಒಂದೇ faith ಎನ್ನುವದಿಲ್ಲ. ಆತ ವೈದಿಕನಿರಬಹುದು, ಅವೈದಿಕನಿರಬಹುದು, pagan ಇರಬಹುದು ಅಥವಾ ನಾಸ್ತಿಕನೂ ಆಗಿರಬಹುದು. ಆತನು Hindu by culture. ಆದರೆ ಕ್ರಿಶ್ಚಿಯನ್ ಮತ್ತು ಮುಸ್ಲಿಮ್ ಸಮಾಜಗಳಲ್ಲಿ ಆ ವ್ಯಕ್ತಿಯು ತನ್ನ ಸಮಾಜದ ಮೂಲತತ್ವಗಳಲ್ಲಿ ಶ್ರದ್ಧೆ ಇಡಬೇಕಾಗುತ್ತದೆ. ಅಂದರೆ ಅವನು ಕ್ರಿಶ್ಚಿಯನ್ ಅಥವಾ ಮುಸ್ಲಿಮ್ ಆಗಿರುವದು by faith.

ಈ ರೀತಿಯ ವ್ಯವಸ್ಥೆಯಿಂದಾಗಿ ಹಿಂದೂ ಸಮಾಜಕ್ಕೆ ಒಳ್ಳೆಯದೂ ಆಗಿದೆ, ಕೆಟ್ಟದ್ದೂ ಆಗಿದೆ. ಒಳ್ಳೆಯದೆಂದರೆ ಆತನಿಗೆ ಸಂಕೋಲೆಯಿಲ್ಲದ ಜ್ಞಾನಸಾಧನೆಗೆ ಅನುಕೂಲವಾಯಿತು. ಈ ಉದಾಹರಣೆ ನೋಡಿರಿ:
ಸೂರ್ಯನ ಸುತ್ತಲೂ ಪೃಥ್ವಿಯು ತಿರುಗುತ್ತಿದೆ ಎಂದು ಗೆಲಿಲಿಯೋ ಹೇಳಿದಾಗ, ಧರ್ಮನಿಂದನೆಯ ಅಪವಾದಕ್ಕೆ ಗುರಿಯಾಗಬೇಕಾಯಿತು. ಯಾಕೆಂದರೆ ಇದು ಕ್ರಿಶ್ಚಿಯನ್ ಶ್ರದ್ದೆಯ ವಿರುದ್ಧವಾದ ಹೇಳಿಕೆ ಎಂದು. ಆದರೆ, ಗೆಲಿಲಿಯೋನಿಗಿಂತ ಸಾವಿರ ವರ್ಷಗಳ ಮೊದಲೇ ಆರ್ಯಭಟನು ಪೃಥ್ವಿ ಹಾಗು ಇತರ ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆ ಎಂದು ಹೇಳಲು ಹೆದರಿಕೆ ಅಥವಾ ಸಂಕೋಚ ಪಡಬೇಕಾಗಿರಲಿಲ್ಲ. ವೇದಗಳಲ್ಲಿ ಏನೇ ಹೇಳಿರಲಿ, ಶಾಸ್ತ್ರಗಳ ಶ್ರದ್ಧೆ ಏನೇ ಇರಲಿ, ಜ್ಞಾನಸಾಧನೆಗೆ ಅದು ಸಂಕೋಲೆಯಾಗಬಾರದು ಎನ್ನುವ ವಿವೇಕ ಇಲ್ಲಿದೆ.

ಇನ್ನು  ಈ ವ್ಯವಸ್ಥೆಯಿಂದ ಆದಂತಹ ಕೆಡಕೆಂದರೆ ಹಿಂದೂ ಸಮಾಜವು ವಿಭಿನ್ನ ತತ್ವಗಳನ್ನು ಪ್ರತಿಪಾದಿಸುವ ಉಪಸಮಾಜಗಳಲ್ಲಿ ಒಡೆದು ಹೋಯಿತು. ಶ್ರದ್ಧೆಯನ್ನು ಪ್ರಶ್ನಿಸುವ ವ್ಯಕ್ತಿಗಳೇ ಇಲ್ಲಿ ಅಧಿಕ ಸಂಖ್ಯೆಯಲ್ಲಿ ಇರುವದರಿಂದ ಹಿಂದೂ ಸಮಾಜದಲ್ಲಿ ಒಕ್ಕಟ್ಟು ಎನ್ನುವದು ಇರದೇ ಹೋಯಿತು. ಇರಲಿ, ಗುರುದೇವ ಠಾಕೂರರು ಇಂತಹ ಜ್ಞಾನಾನ್ವೇಷಣೆಯ ಒಲವನ್ನು ಎಲ್ಲ ಭಾರತೀಯರಲ್ಲೂ ಮೂಡಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ.

ಈಗ ಈ ಗೀತೆಯ ಎರಡನೆಯ ನುಡಿ:
ಎಲ್ಲಿ ಸಂಕುಚಿತ ಗೋಡೆಯಿಂದ
ಒಡೆದಿಲ್ಲ ನಮ್ಮ ಧರೆಯು;
ಎಲ್ಲಿ ನಿಜದ ಒಡಲಾಳದಿಂದ
ಹೊಮ್ಮುವುದು ನಮ್ಮ ನುಡಿಯು;

‘ವಸುಧೈವ ಕುಟುಂಬಕಮ್’, ಇಡೀ ಜಗತ್ತೇ ಒಂದು ಕುಟುಂಬ.
ಈ ಜಗತ್ತು ದೇಶದೇಶಗಳಲ್ಲಿ, ಧರ್ಮಗಳಲ್ಲಿ ಒಡೆದು  ಹೋಗುವದು ಬೇಡವೆನ್ನುವದು ಗುರುದೇವರ ಆಶಯವಾಗಿದೆ. ಆದರೆ ಅವರ ಈ ಆಶಯವೂ ಸಹ ಫಲಿಸಲಿಲ್ಲ. ವಾಸ್ತವದಲ್ಲಿ, ನಮ್ಮ ದೇಶದಲ್ಲಿಯೇ ನೂರಾರು ಹೊಸ ಗೋಡೆಗಳು ಎದ್ದಿವೆ. ಈ ಗೋಡೆಗಳನ್ನು ಸಮರ್ಥಿಸುವವರಿಗೇ ಮನ್ನಣೆ ಸಿಗುತ್ತಿದೆ.
ನಿಜವನ್ನು ಅರಿತವರು, ಕೆಲವೊಮ್ಮೆ ಕಣ್ಣು ಮುಚ್ಚಿಕೊಂಡಿರುತ್ತಾರೆ, ಕೆಲವೊಮ್ಮೆ ಭಯದಿಂದ ಬಾಯಿ ಮುಚ್ಚಿಕೊಂಡಿರುತ್ತಾರೆ.
ನಿಷ್ಠುರವಾದ ಒಡಲಾಳದ ನಿಜವು ಅನಾಥವಾಗಿದೆ.

ಗುರುದೇವರ ಗೀತೆಯ ಮೂರನೆಯ ನುಡಿಯು ಹೀಗಿದೆ:
ಎಲ್ಲಿ ಪೂರ್ಣತೆಯ ಸಾಧಿಸಲು ಶ್ರಮವು
ನಡೆದಿಹುದು ಹಗಲು ಇರುಳು;
ತಿಳಿಯಾದ ತಿಳಿವನ್ನು ತಡೆದಿಲ್ಲ ಎಲ್ಲಿ
ಕುರುಡು ನಂಬಿಕೆಯ ಮರಳು;

ಪೂರ್ಣತೆಯನ್ನು ಸಾಧಿಸಲು ಅನವರತ ಶ್ರಮ ಬೇಕು. ರವೀಂದ್ರನಾಥ ಠಾಕೂರರೇ, ಮತ್ತೊಂದೆಡೆಯಲ್ಲಿ ಹೀಗೆ ಹೇಳಿದ್ದಾರೆ: ‘ಒಂದು ಗುಲಾಬಿ ಹೂವನ್ನು ರೂಪಿಸಲು ದೇವರು ಲಕ್ಷ ವರ್ಷಗಳನ್ನು ತೆಗೆದುಕೊಂಡಿದ್ದಾನೆ.’
ಆದುದರಿಂದ ಈಗಿನ ನಮ್ಮ ಲಘುಸಾಧನೆಯೇ ಪರಮೋಚ್ಚವೆನ್ನುವ ಭ್ರಮೆ ಹೋಗಬೇಕು.
ಆದರೆ ಈ ಸಾಧನೆಗೆ ಜ್ಞಾನವೂ ಬೇಕಲ್ಲವೆ? ನಮ್ಮ ಕುರುಡು ಸಂಪ್ರದಾಯಗಳೆನ್ನುವ ಮರಳುಗಾಡಿನಲ್ಲಿ ತಿಳಿವಿನ ತೊರೆಯು ಬತ್ತಿ ಹೋಗಿ ಬಿಡಬಹುದು. ಆದುದರಿಂದ, ನಮ್ಮ ತಿಳಿವು, ನಮ್ಮ ತರ್ಕ ಇವು ಸಂಪ್ರದಾಯವನ್ನು ಯಾವಾಗಲೂ ಪರೀಕ್ಷಿಸುತ್ತಲೇ ಇರಬೇಕು ಹಾಗೂ ತಪ್ಪು ಸಂಪ್ರದಾಯಗಳನ್ನು ದಾಕ್ಷಿಣ್ಯವಿಲ್ಲದೇ ತ್ಯಜಿಸಬೇಕು.

ನಾಲ್ಕನೆಯ ನುಡಿ:
ಅನವರತ ಅರಳುತಿಹ ತಿಳಿವನ್ನು,ಕ್ರಿಯೆಯನ್ನು
ಎಲ್ಲಿ ನಿನ್ನಯ ಬೆಳಕು ನಡೆಸುತಿಹುದು;
ಆವೊಂದು ಸ್ವಾತಂತ್ರ್ಯ-ಸ್ವರ್ಗದಲಿ, ತಂದೆಯೆ,
ಉದಯವಾಗಲಿ ನನ್ನ ಧೀಮಂತ ನಾಡು.

ತಮ್ಮ ತಿಳಿವು ಕೊನೆಯ ಘಟ್ಟವನ್ನು ಮುಟ್ಟಿಬಿಟ್ಟಿದೆ ಎಂದು ಗುರುದೇವರು ಭಾವಿಸುವದಿಲ್ಲ. ಇದು ಯಾವಾಗಲೂ ಅರಳುತ್ತಿರಲೇ ಇರಬೇಕಾದ ತಿಳಿವು. ಆದುದರಿಂದ ಇದು ದೈವಶ್ರದ್ಧೆಯಿಂದ ಲಭಿಸುವ ತಿಳಿವು. ಈ ತಿಳಿವಿಗೆ ತಕ್ಕಂತೆ ನಮ್ಮ ಕ್ರಿಯೆಯೂ ಸಹ ಉನ್ನತ ಸ್ತರಕ್ಕೆ ಏರುತ್ತಿರಬೇಕು. ಆ ತಿಳಿವಳಿಕೆ ಮೂಡಿದ ನಾಡೇ ನಿಜವಾದ ಸ್ವತಂತ್ರ ನಾಡು. ದೇವರೆ, ನಿನ್ನ ಅನುಗ್ರಹದಿಂದ ನನ್ನ ನಾಡಿಗೆ ಅಂತಹ ಸ್ವಾತಂತ್ರ್ಯ ಲಭಿಸಲಿ ಎಂದು ಗುರುದೇವರು ಪ್ರಾರ್ಥಿಸುತ್ತಾರೆ.

ಗುರುದೇವರ ಬಯಕೆ ಸಫಲವಾಗಲಿ.
Amen!

Friday, March 5, 2010

ಸಾರ್ವಜನಿಕ ಪ್ರಮಾಣ, ಸಾಂಸ್ಕೃತಿಕ ಆದರ್ಶ ಹಾಗು ತಸ್ಲೀಮಾ ನಸರೀನ್

ಶಿವಮೊಗ್ಗಿ ಹಾಗು ಹಾಸನಗಳಲ್ಲಿ ತಸ್ಲೀಮಾ ನಸರೀನ್ ಇವರ ವಿರುದ್ಧ ಜರುಗಿದ ಹಿಂಸಾತ್ಮಕ ಪ್ರತಿಭಟನೆಗಳು ಕರ್ನಾಟಕದ ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಘೋರ ಕಳಂಕವನ್ನು ತಂದಿವೆ. ಈ ಹಿಂಸಾತ್ಮಕ ಪ್ರತಿಭಟನೆಗಿಂತ ಘೋರವಾದದ್ದು, ಈ ಘಟನೆಗಳಿಗೆ ವಿಚಾರವಂತರ ಪ್ರತಿಕ್ರಿಯೆ ಅಥವಾ ಪ್ರತಿಕ್ರಿಯೆಯ ಅಭಾವ. ತಸ್ಲೀಮಾ ಅವರ ಮೂಲಲೇಖನದ ಅನುವಾದವೆಂದು ಹೇಳಲಾದ ಲೇಖನವೊಂದು ‘ಕನ್ನಡ ಪ್ರಭಾ’ ಪತ್ರಿಕೆಯಲ್ಲಿ ಪ್ರಕಟವಾಗಿದೆ. ತಾನು ಅಂತಹ ಯಾವುದೇ ಅನುವಾದಕ್ಕೆ ಒಪ್ಪಿಗೆಯನ್ನೇ ನೀಡಿಲ್ಲ ಎನ್ನುವ ಅವರ ಹೇಳಿಕೆಯೂ ಪತ್ರಿಕೆಗಳಲ್ಲಿ ಪ್ರಕಟವಾಗಿದೆ !
ಇಲ್ಲಿ ಮೂಡುವ ಪ್ರಶ್ನೆಗಳು ಇಂತಿವೆ:
(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ ಅಥವಾ ಸ್ವಯಂಸ್ಫೂರ್ತ ಘಟನೆಯೆ?
(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?

(೧) ಈ ಗಲಭೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಘಟನೆಯೆ?:
 ಮಾಧ್ಯಮ ವಿದ್ಯಾರ್ಥಿಯಾದ ರಾಕೇಶ ಮಥಾಯಸರು ಈ ಹಿಂಸಾತ್ಮಕ ಪ್ರತಿಭಟನೆಯು ಪೂರ್ವ ನಿಯೋಜಿತ ಹಾಗು ರಾಜಕೀಯ ಪ್ರೇರಿತ ಸಂಚು ಎಂದು ಹೇಳುತ್ತಾರೆ. ನಮ್ಮ ಮಹಾನ್ ಭಾರತ ದೇಶದ ಪೂರ್ವ ಪ್ರಧಾನಿಯೊಬ್ಬರು ಈ ಸಂಚಿನ ಪ್ರೇರಕರು ಎನ್ನುವದು ಅವರ ಅಭಿಪ್ರಾಯ. ಅವರ ಕನ್ನಡ ಬ್ಲಾ^ಗು  ‘ಕ್ಷಕಿರಣ’ದಲ್ಲಿ ಅವರ ಅಭಿಪ್ರಾಯವನ್ನು ನೋಡಬಹುದು. 

ಇದು ನಿಜವೇ ಆಗಿದ್ದರೆ, ಇದಕ್ಕಿಂತ ಹೀನ ರಾಜಕೀಯ ಮತ್ತೊಂದಿಲ್ಲ. ಕೋಟಿಗಟ್ಟಲೆ ಬೆಲೆ ಬಾಳುವ  ಸಾರ್ವಜನಿಕ ಹಾಗು ಖಾಸಗಿ ಆಸ್ತಿಯ ನಾಶವಂತೂ ಆಯಿತು. ಅದಕ್ಕಿಂತ ಹೆಚ್ಚಾಗಿ ಈ ಲೇಖನದ ಬಗೆಗೆ ಏನೂ ಗೊತ್ತಿರದ ಅಮಾಯಕರ ಜೀವಹಾನಿಯೂ ಆಯಿತು. ಆ ರಾಜಕಾರಣಿಗೆ ಇದರಿಂದ ಏನು ಲಾಭವಾಯಿತೊ ತಿಳಿಯದು!
ಇನ್ನು ಇದು ಸ್ವಯಂಸ್ಫೂರ್ತ ಪ್ರತಿಭಟನೆಯಾಗಿದ್ದರೆ, ಪ್ರತಿಭಟನಾಕಾರರಿಗೆ ಪ್ರಜಾಪ್ರಭುತ್ವದ ವಿಧಾನಗಳಲ್ಲಿ ವಿಶ್ವಾಸವೇ ಇಲ್ಲ ಎಂದು ಹೇಳಬೇಕಾಗುತ್ತದೆ. ಅವರಿಗೆ ತಮ್ಮ ತೋಳ್ಬಲದ ಪ್ರದರ್ಶನ ಮಾಡುವದಷ್ಟೇ ಬೇಕಾಗಿದೆ ! ಅವರು ಕೊಡುವ ಸಂದೇಶವು ಹೀಗಿದೆ: ‘ನೋಡು, ನನ್ನ ಅಭಿಪ್ರಾಯಕ್ಕೆ ವಿರುದ್ಧವಾದದ್ದನ್ನು ನೀನು ಹೇಳಿದರೆ, ನಾನು ನಿನ್ನ ಗಂಟಲನ್ನು ಹಿಸುಕುತ್ತೇನೆ!’

‘ಕನ್ನಡ ಪ್ರಭಾ’ದಲ್ಲಿ ಪ್ರಕಟವಾದ ಲೇಖನದಲ್ಲಿ ಧರ್ಮನಿಂದೆಯ (blasphemy) ಅಥವಾ ಅವಹೇಳನದ (slander) ಅಂಶಗಳಿದ್ದರೆ, ನ್ಯಾಯಲಯಕ್ಕೆ  ಹೋಗಲು ಅವಕಾಶವಿದೆ. ಭಾರತೀಯ ನ್ಯಾಯಾಲಯಗಳು ಸತ್ಯ ಹಾಗು ನ್ಯಾಯವನ್ನು ಎತ್ತಿ ಹಿಡಿಯುವ ಪರಂಪರೆಯನ್ನೇ ಹೊಂದಿವೆ. ಅಲ್ಲಿ ಖಂಡಿತವಾಗಿಯೂ ಪ್ರತಿಭಟನಾಕಾರರಿಗೆ ಜಯವು ದೊರೆಯುತ್ತಿತ್ತು. ಆದರೆ, ಗಲಭೆಕೋರರಿಗೆ ತರ್ಕಜಿಜ್ಞಾಸೆಯಲ್ಲಿ ನಂಬಿಕೆ ಇಲ್ಲ. ಅವರಿಗೆ ಒಂದು ಸಮಾಜದಲ್ಲಿಯ status quoಅನ್ನು ಮುಂದುವರಿಸುವದು ಮಾತ್ರ ಬೇಕಾಗಿದೆ. ಆದುದರಿಂದಲೇ ಅವರು ಹಿಂಸಾತ್ಮಕ ದೊಂಬಿಗೆ ಮುಂದಾಗಿದ್ದಾರೆ. ಎರಡು ಪೂರ್ವನಿದರ್ಶನಗಳನ್ನು ಇಲ್ಲಿ ಗಮನಿಸಬಹುದು. ಒಂದು ಪೂರ್ವನಿದರ್ಶನವು ಸ್ವತಃ ಶ್ರೀಮತಿ ತಸ್ಲೀಮಾ ನಸರೀನ್ ಅವರಿಗೇ ಸಂಬಂಧಿಸಿದ್ದು. ಎರಡನೆಯದು ಕಲಾವಿದ ಶ್ರೀ ಎಮ್.ಎಫ್.ಹುಸೇನರಿಗೆ ಸಂಬಂಧಿಸಿದ್ದು.

ಕನ್ನಡ ನಾಡಿನಲ್ಲಿ ಸ್ತ್ರೀಸಂವೇದಿಯಾದ ಹಾಗು ಉದಾರ ಮನೋಭಾವದ ಅನೇಕ ಲೇಖಕಿಯರಿದ್ದಾರೆ. (ಉದಾಹರಣೆಗೆ ಶ್ರೀಮತಿ ಸಾರಾ ಅಬೂಬಕ್ಕರ.) ಶ್ರೀಮತಿ ತಸ್ಲೀಮಾ ನಸರೀನ್ ಸಹ ಇವರಂತಹ ಬಂಗ್ಲಾ ದೇಶೀಯ ಲೇಖಕಿ. ಇವರು ರಚಿಸಿದ ಕೆಲವೊಂದು ದಿಟ್ಟ ಬಂಗಾಲಿ ಕವನಗಳನ್ನು ಕನ್ನಡದಲ್ಲಿ ಅನುವಾದಿಸಿ, ಶ್ರೀ ಉದಯ ಇಟಗಿ ಅವರು ತಮ್ಮ ಬ್ಲಾ^ಗ್ ‘ಬಿಸಿಲ ಹನಿ’ಯಲ್ಲಿ ನೀಡಿದ್ದಾರೆ. 


ಬಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರಾದ ಹಿಂದೂ ಧರ್ಮೀಯರ ಮೇಲೆ ನಡೆಯುತ್ತಿರುವ ಅತ್ಯಾಚಾರಗಳನ್ನು ಶ್ರೀಮತಿ ತಸ್ಲೀಮಾ ನಸರೀನ್ ಅವರು ತಮ್ಮ ಕಿರು ಕಾದಂಬರಿ ‘ಲಜ್ಜಾ’ದಲ್ಲಿ ಚಿತ್ರಿಸಿದ್ದಾರೆ. ಇದೆಲ್ಲದರ ಪರಿಣಾಮವಾಗಿ ಮೂಲಭೂತವಾದಿ ಮುಲ್ಲಾಗಳು ಇವರ ಮೇಲೆ ಫತ್ವಾ ಹೊರಡಿಸಿದರು. ಶ್ರೀಮತಿ ತಸ್ಲೀಮಾ ನಸರೀನ್ ಭಾರತಕ್ಕೆ ಓಡಿ ಬಂದರು. ಆದರೆ ಮತಬ್ಯಾಂಕಿನ ಮೇಲೆ ಕಣ್ಣಿಟ್ಟ ಕೇಂದ್ರ ಸರಕಾರವು  ಶ್ರೀಮತಿ ತಸ್ಲೀಮಾ ನಸರೀನ್ ಇವರಿಗೆ ಆಶ್ರಯ ಕೊಡಲು ನಿರಾಕರಿಸಿತು. ಭಾರತದಲ್ಲಿಯೂ ಸಹ ಇವರಿಗೆ ಮೂಲಭೂತವಾದಿಗಳ ಕಾಟ ತಪ್ಪಲಿಲ್ಲ. ಈ ದಿಟ್ಟ ಲೇಖಕಿ ಈಗ ಅಜ್ಞಾತವಾಸದಲ್ಲಿ ಇರಬೇಕಾಗಿದೆ (ಸಲ್ಮಾನ್ ರಶ್ದಿಯ ತರಹ).  ಬಂಗ್ಲಾ ದೇಶದಲ್ಲಿಯ ಅಸಹಾಯಕ ಹಿಂದೂಗಳ ಪರವಾಗಿ ದನಿ ಎತ್ತಿದ ಈ ದಿಟ್ಟ ಮಹಿಳೆಗೆ ಭಾರತದಲ್ಲಿಯ ಮುಸ್ಲಿಮರಿಂದ  ವಿರೋಧ ಬರಲು ಕಾರಣವೇನು? ಇದು ಭಾರತೀಯ ಮುಸ್ಲಿಮರ ಯಾವ ಮನೋಧರ್ಮವನ್ನು ತೋರಿಸುತ್ತದೆ?

ಇನ್ನು ಎರಡನೆಯ ಉದಾಹರಣೆಯನ್ನು ನೋಡಿರಿ. ಶ್ರೀ ಎಮ್.ಎಫ್.ಹುಸೇನರು ಹಿಂದೂ ದೇವತೆಗಳನ್ನು ನಗ್ನವಾಗಿ ಚಿತ್ರಿಸಿದ್ದರಿಂದ ಮನನೊಂದ ಅನೇಕ ಹಿಂದೂ ಸಂಘಟನೆಗಳು ನ್ಯಾಯಾಲಕ್ಕೆ ಹೋಗಿವೆ. ಅಲ್ಲಿ ಇವರ ವಿರುದ್ಧ ಧರ್ಮನಿಂದೆ ಹಾಗು ಅವಹೇಳನದ ಆರೋಪಗಳು ಸಾಬೀತು ಆಗುವ ಸಾಧ್ಯತೆಗಳಿವೆ. ಅರ್ಥಾತ್ ಶ್ರೀ ಹುಸೇನರು ದಂಡ ಮತ್ತು ಸೆರೆಮನೆಯ ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಶ್ರೀ ಹುಸೇನರು ಮುಸ್ಲಿಮ್ ದೇಶವೊಂದಕ್ಕೆ ಪಲಾಯನಗೈದರು. ಸಾರ್ವಜನಿಕವಾಗಿ, ಜೀವಭಯದ ನೆಪವನ್ನು ತೋರಿಸಿದರು.  ಈ ದೇಶದೊಡನೆ ಭಾರತಕ್ಕೆ extradition ಒಪ್ಪಂದವಿಲ್ಲ. ಆದುದರಿಂದಲೇ ಭಾರತದಿಂದ ಓಡಿ ಹೋದ ಅಪರಾಧಿಗಳೆಲ್ಲ ಗಲ್ಫ್ ದೇಶಗಳಲ್ಲಿ ಆಶ್ರಯ ಪಡೆಯುವದು ! ಇದೀಗ ಶ್ರೀ ಹುಸೇನರಿಗೆ ಕತಾರದ ಪೌರತ್ವ ಸಹ ದೊರೆತಿದೆ !
ಈ ಎರಡೂ ಘಟನೆಗಳಲ್ಲಿ ಕಂಡು ಬರುವದೇನು?
ಮುಸ್ಲಿಮೇತರ ಸಮಾಜಗಳು ನ್ಯಾಯಾಲಯದಿಂದ ನ್ಯಾಯ ಪಡೆಯಲು ಪ್ರಯತ್ನಿಸುತ್ತವೆ. ಆದರೆ ಮುಸ್ಲಿಮ್ ಸಮಾಜವು ತನ್ನಲ್ಲಿಯ ಉದಾರವಾದಿಗಳನ್ನು ನಿರ್ದಯವಾಗಿ ಬೇಟೆಯಾಡುತ್ತದೆ !

(೨) ಸಾರ್ವಜನಿಕ ಹಾಗು ಸಾಂಸ್ಕೃತಿಕ ಜೀವನಕ್ಕೆ ಸಂಬಂಧಿಸಿದಂತೆ ವಿಚಾರವಂತರ ಹೊಣೆಗಾರಿಕೆ ಏನು?
ನಮ್ಮ ನಾಡಿನಲ್ಲಿಯ ಢೋಂಗಿ ವಿಚಾರವಂತರು ಸಾಮಾಜಿಕ ಹಾಗು ಸಾಂಸ್ಕೃತಿಕ ಸ್ವಾಸ್ಥ್ಯಕ್ಕಿಂತ ತಮ್ಮ ಮುಖವಾಡಗಳಿಗೆ, ಹಾಗು ಆ ಮೂಲಕ ಲಭಿಸುವ ಪ್ರಶಸ್ತಿಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಅಭಿಪ್ರಾಯ ಸ್ವಾತಂತ್ರ್ಯದ ಬಗೆಗೆ ವೇದಿಕೆಗಳ ಮೇಲೆ ತಾಸುಗಟ್ಟಲೆ ಮಾತನಾಡುವ ನಮ್ಮ ಜ್ಞಾನಪೀಠಸ್ಥರು ಕೆಲವೊಂದು ಸಂದರ್ಭಗಳಲ್ಲಿ ತತ್ಕಾಲಕ್ಕೆ ತುಟಿ ಹೊಲಿದುಕೊಂಡು ಕೂತಿರುವ ಕಾರಣವನ್ನು ತಿಳಿಯಬಹುದೆ? ನನಗೆ ನೆನಪಿರುವ ಇಂತಹ ಕೆಲವು ಘಟನೆಗಳನ್ನು ಉಲ್ಲೇಖಿಸುತ್ತೇನೆ:

 (೧) ಖ್ಯಾತ ಸಂಶೋಧಕರಾದ ಡಾ^. ಎಮ್. ಎಮ್.  ಕಲಬುರ್ಗಿಯವರು ತಮ್ಮ ಸಂಶೋಧನಾ ಕೃತಿ ‘ಮಾರ್ಗ’ದಲ್ಲಿ ವೀರಶೈವ ಶರಣ ಚೆನ್ನಬಸವಣ್ಣನ ಹುಟ್ಟಿನ ಬಗೆಗೆ ಕೆಲವು ಮಾತು ಹೇಳಿದ್ದರು. ಇದಕ್ಕೆ ತೀವ್ರವಾದ ಪ್ರತಿಭಟನೆ ನಡೆದು, ಕೊನೆಗೆ ಅವರು ಮಠಾಧೀಶರಲ್ಲಿ ಕ್ಷಮೆ ಕೇಳಿಕೊಳ್ಳಬೇಕಾಯಿತು.

(೨) ಬಂಜಗೆರೆ ಜಯಪ್ರಕಾಶರು ಬಸವಣ್ಣನ ಕುಲದ ಬಗೆಗೆ ಬರೆದ “ಆನು ದೇವಾ ಹೊರಗಿವನು” ಸಂಶೋಧನಾತ್ಮಕ ಕೃತಿಗೆ ವಿರೋಧ ವ್ಯಕ್ತವಾಗಿದ್ದರಿಂದ ಸರಕಾರವು ಈ ಕೃತಿಯ ಮೇಲೆ ಪ್ರತಿಷೇಧ ಹೇರಿತು.

(೩) ಡ್ಯಾನ್ ಬ್ರೌನ್ ಅವರ The Da Vinci Code ಕಾದಂಬರಿಯನ್ನು ವಿರೋಧಿಸಿ ಬೆಂಗಳೂರಿನ ಕ್ರಿಶ್ಚಿಯನ್ ಸಮುದಾಯದವರು ಮೆರವಣಿಗೆ ಮಾಡಿದರು. (ಯುರೋಪ್ ಅಥವಾ ಅಮೇರಿಕಾದಲ್ಲಿ ಆಗದ ಪ್ರತಿಭಟನೆ ಭಾರತದಲ್ಲಾಯಿತು!)

(೪) ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರವೊಂದು ಡ್ಯಾನಿಶ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದಕ್ಕಾಗಿ ಭಾರತದಲ್ಲಿ ಗಲಭೆಗಳಾದವು.

(೫) ಕೆಲವು ವರ್ಷಗಳ ಹಿಂದೆ ಮಲೆಯಾಳಿ ಕತೆಯ ಅನುವಾದವೊಂದು ಡೆಕ್ಕನ್ ಹೆರಾಲ್ಡ ಪತ್ರಿಕೆಯಲ್ಲಿ ಪ್ರಕಟವಾದಾಗ, ಅದರ ವಿರುದ್ಧ ಗಲಭೆ ನಡೆದಿತ್ತು. ( ಆ ಕತೆಯ ಪಾತ್ರವೊಂದರ ಹೆಸರು ಮಹಮ್ಮದ ಎಂದಿತ್ತು.)

(೬) ತಸ್ಲೀಮಾ ನಸರೀನ್ ಅವರು ಇತ್ತೀಚೆಗೆ ಕೊಲ್ಕತ್ತಾದಲ್ಲಿ ಹಾಗು ಹೈದರಾಬಾದಿನಲ್ಲಿ ಭಾಗವಹಿಸಿದ್ದ ವೇದಿಕೆಯಲ್ಲಿ ಗಲಾಟೆಯನ್ನು ನಡೆಸಲಾಯಿತು.

ಈ ಎಲ್ಲ ಪ್ರಸಂಗಗಳು ನಡೆದ ಸಂದರ್ಭದಲ್ಲಿ ನಮ್ಮ ಬುದ್ಧಿಜೀವಿಗಳು ಅಭಿಪ್ರಾಯಸ್ವಾತಂತ್ರ್ಯದ ಪರವಾಗಿ ಒಂದು ಮಾತನ್ನೂ ಆಡಲಿಲ್ಲ. ಆ ಬಳಿಕ ವೇದಿಕೆಗಳ ಮೇಲೆ ಅಥವಾ ಪತ್ರಿಕೆಗಳ ಎದುರಿನಲ್ಲಿ ಅಭಿಪ್ರಾಯ ಸ್ವಾತಂತ್ರ್ಯದ ಚಾಂಪಿಯನ್ನರ ತರಹ ಸೋಗು ಹಾಕಿದರು.

ವಿಚಾರವಾದಿಗಳ ಬಾಯಿ ಮುಚ್ಚಿಸುವ ಇಂತಹ ಘಟನೆಗಳು ಭಾರತದಲ್ಲಿ ಏಕೆ ನಡೆಯುತ್ತವೆ, ಯುರೋಪ್ ಅಥವಾ ಅಮೇರಿಕಾದಲ್ಲಿ ಏಕೆ ನಡೆಯುವದಿಲ್ಲ?
ಕಾರಣಗಳು ಹೀಗಿರಬಹುದು:
(೧) ಯುರೋಪ್ ಮತ್ತು ಅಮೇರಿಕಾದಲ್ಲಿ ಇರುವಂತಹ ಸಂಶೋಧಕ ಹಾಗು ವೈಚಾರಿಕ ಪ್ರವೃತ್ತಿ ಭಾರತದಲ್ಲಿ ಮಾಯವಾಗಿದೆ. ಇದಕ್ಕೆ ಕಾರಣರಾದವರು ನಮ್ಮ ಮುಖವಾಡದ ಬುದ್ಧಿಜೀವಿಗಳು.
(೨) ನಮ್ಮ ಸರಕಾರಕ್ಕೆ ಇಂತಹ ಹಿಂಸಾತ್ಮಕ ಗಲಭೆಗಳನ್ನು ದಮನಗೊಳಿಸುವ ಧೈರ್ಯವಿಲ್ಲ. (ಮತಬ್ಯಾಂಕಿನ ಕಾರಣದಿಂದಾಗಿ).

(೧) ಮೊದಲನೆಯ ಕಾರಣವನ್ನು ನೋಡಿರಿ. ಅನೇಕ ವರ್ಷಗಳ ಹಿಂದೆ ಭಾರತದಲ್ಲಿ The Illustrated Weekly of India ಎನ್ನುವ ಜನಪ್ರಿಯ ಆಂಗ್ಲ ವಾರಪತ್ರಿಕೆಯು ಹೊರಡುತ್ತಿತ್ತು. ಈ ವಾರಪತ್ರಿಕೆಯಲ್ಲಿ ಯೇಸುವಿನ ಬಗೆಗೆ ಯುರೋಪಿನಲ್ಲಿ ನಡೆದ ಸಂಶೋಧನೆಯನ್ನು ಉಲ್ಲೇಖಿಸಿ ಒಂದು ಲೇಖನ ಪ್ರಕಟವಾಗಿತ್ತು. ಯೇಸುವಿನ ತಂದೆ ಒಬ್ಬ ರೋಮನ್ ನಾವಿಕ ಹಾಗು ತಾಯಿ ಒಬ್ಬ ಯಹೂದಿ ವೇಶ್ಯೆ ಎಂದು ಈ ಲೇಖನದಲ್ಲಿ ಬರೆಯಲಾಗಿತ್ತು. ಆದರೆ ಈ ಸಂಶೋಧನಾತ್ಮಕ ಲೇಖನದ ಬಗೆಗೆ ಆ ಸಮಯದಲ್ಲಿ ಎಲ್ಲಿಯೂ ಯಾವುದೇ ತರಹದ ಗಲಭೆ ನಡೆಯಲಿಲ್ಲ.  ಧಾರ್ಮಿಕ ಭಾವನೆಗಳಿಗಿಂತ ಸತ್ಯವೇ ಹೆಚ್ಚಿನದು ಎನ್ನುವ ಗ್ರಹಿಕೆ ಆ ಕಾಲದ ನೈಜ ವಿಚಾರವಾದಿಗಳಿಗೆ ಇದ್ದುದೇ ಇದಕ್ಕೆ ಕಾರಣವಾಗಿರಬಹುದು. ಈಗಿನ ಸೋಗಿನ ವಿಚಾರವಾದಿಗಳಾದರೋ ತಮ್ಮ ತರ್ಕದ ದೊಂಬರಾಟವನ್ನು ತಮಗೆ ಅನುಕೂಲವಾಗುವಂತೆ ಕುಣಿಸುತ್ತಾರೆ. ನಮ್ಮ ಈರ್ವರು ಜ್ಞಾನಪೀಠಸ್ಥರಾದ ಅನಂತಮೂರ್ತಿ ಹಾಗು ಕಾರ್ನಾಡರ ಉದಾಹರಣೆಗಳನ್ನೇ ನೋಡಬಹುದು.

‘ಟೀಪು ಸುಲ್ತಾನನ ಕನಸುಗಳು’ ಎನ್ನುವ ನಾಟಕವನ್ನು ಕಾರ್ನಾಡರು ಬರೆದಾಗ ಕೆಲವರು ಟೀಪು ಸುಲ್ತಾನನು ಮತಾಂಧನಿರಲಿಲ್ಲವೆ? ಎನ್ನುವ ಪ್ರಶ್ನೆಯನ್ನು ಕಾರ್ನಾಡರ ಎದುರಿಗೆ ಇಟ್ಟರು. ಟೀಪು ಸುಲ್ತಾನನ ಕಾಲದಲ್ಲಿ ಧರ್ಮನಿರಪೇಕ್ಷತೆಯ ಕಲ್ಪನೆಯೆ ಇರಲಿಲ್ಲವೆನ್ನುವ ಜಾಣತನದ ಉತ್ತರ ಕೊಟ್ಟು ಕಾರ್ನಾಡರು ಜಾರಿಕೊಂಡರು. ಟೀಪು ಸುಲ್ತಾನನಿಗೆ ದಕ್ಷಿಣ ಭಾರತವನ್ನೆಲ್ಲ ಇಸ್ಲಾಮೀಕರಿಸಬೇಕೆನ್ನುವ ಹೆಬ್ಬಯಕೆ ಇತ್ತು ಎನ್ನುವದು ಕಾರ್ನಾಡರಿಗೆ ಮತಾಂಧತೆಯಂತೆ ಕಂಡಿರಲಿಕ್ಕಿಲ್ಲ. ಟೀಪು ಸುಲ್ತಾನನಿಗಿಂತಲೂ ನೂರಾರು ವರ್ಷಗಳಷ್ಟು ಮೊದಲೇ ರಾಜ್ಯವಾಳಿದ ಹಿಂದೂ ರಾಜರಲ್ಲಿ ಯಾರೂ ಮುಸ್ಲಿಮ್ ಪ್ರಜೆಗಳನ್ನು ಭೇದಭಾವದಿಂದ ಕಂಡ ಉದಾಹರಣೆಗಳು ಇಲ್ಲ. ವಿಜಯನಗರದ ರಾಜನಾದ ಕೃಷ್ಣದೇವರಾಯನಂತೂ ತನ್ನ ಧರ್ಮನಿರಪೇಕ್ಷ ಆಡಳಿತೆಗೆ ಹೆಸರಾದವನು. ಕಾರ್ನಾಡರಂತಹ ಬುದ್ಧಿವಂತರಿಗೆ ಈ ಇತಿಹಾಸವೇ ಗೊತ್ತಿಲ್ಲ ಎಂದುಕೊಳ್ಳೋಣವೆ?
ಇನ್ನು ಅನಂತಮೂರ್ತಿಯವರ ಬಗೆಗೆ ಏನು ಹೇಳಲಾದೀತು? ಇವರು ಎಷ್ಟು ಎತ್ತರದಲ್ಲಿದ್ದಾರೆಂದರೆ ತಸ್ಲೀಮಾ ನಸರೀನಳು ಇವರ ಕಣ್ಣಿಗೇ ಬೀಳುವದಿಲ್ಲ!
ಒಂದು ವೇಳೆ ತಸ್ಲೀಮಾ ನಸರೀನ್ ರನ್ನು ಹಿಂದೂ ಸಂಘಟನೆಗಳು ವಿರೋಧಿಸಿದ್ದರೆ, ಅನಂತಮೂರ್ತಿ ಹಾಗು ಕಾರ್ನಾಡರಿಗೆ ಅಭಿಪ್ರಾಯ ಸ್ವಾತಂತ್ರ್ಯದ ನೆನಪು ತಕ್ಷಣವೇ ಆಗುತ್ತಿತ್ತೇನೊ?
ಈ ಸೋಗಿನ ಜ್ಞಾನಮೂರ್ತಿಗಳನ್ನು ಬಿಡೋಣ. ನಮ್ಮವರೇ ಆದ, ನಾವು ತುಂಬ ಪ್ರೀತಿಸುವ ಹಾಗು ಬೆಲೆ ಕೊಡುವ ಶ್ರೀ ಅಬ್ದುಲ್ ರಶೀದ ಹಾಗು ಶ್ರೀ ಫಕೀರ ಮುಹಮ್ಮದ ಕಟ್ಪಾಡಿಯವರು ಈ ವಿಷಯಕ್ಕೆ ಏನೆನ್ನುತ್ತಾರೆ?

ನಮ್ಮ ಜನಪ್ರಿಯ online ಪತ್ರಿಕೆ ‘ಕೆಂಡಸಂಪಿಗೆ’ಯಲ್ಲಿ ಅದರ ಸಂಪಾದಕ ಅಬ್ದುಲ್ ರಶೀದರು ತಸ್ಲೀಮಾ ಇಂತಹ ಲೇಖನ ಬರೆದದ್ದರಿಂದಲೇ ಅಮಾಯಕರ ಜೀವಹಾನಿಯಾಯಿತು ಎನ್ನುವ ತರ್ಕವನ್ನು ಮುಂದಿಟ್ಟಿದ್ದಾರೆ. (ಇಲ್ಲಿ ನೋಡಿ.) 
ತಸ್ಲೀಮಾ ಅವರು ಧರ್ಮನಿಂದೆಯನ್ನು ಅಥವಾ ಅವಹೇಳನವನ್ನು ಮಾಡಿದ್ದರೆ, ಆ ಅಂಶಗಳನ್ನು ಸ್ಪಷ್ಟೀಕರಿಸಬೇಕು. ಆದರೆ ಅವರ ಅಭಿಪ್ರಾಯ ಸ್ವಾತಂತ್ರ್ಯವನ್ನೇ ನಿರಾಕರಿಸುವದು ಸರಿಯಲ್ಲ. ಎರಡನೆಯದಾಗಿ, ಅವಳಿಂದಲೇ ಜೀವಹಾನಿಯಾಯಿತು ಎನ್ನುವದು, ಗಲಭೆಕೋರರ The Right to Riotಅನ್ನು ಎತ್ತಿ ಹಿಡಿದಂತಾಗುವದಿಲ್ಲವೆ? ಇದು ಸರಿಯೆ? ದೊಂಬಿಕೋರರು ಕಾಯದೆಯನ್ನು ಕೈಗೆತ್ತಿಕೊಂಡರೆ, ವಿಚಾರವಾದಿಗಳು ಅದನ್ನೇ ಸರಿ ಎನ್ನಬೇಕೆ?
ಕೆಂಡಸಂಪಿಗೆಯಲ್ಲಿಯೇ ಮತ್ತೊಂದು ಲೇಖನ ಬಂದಿದೆ. ಅದನ್ನು ಬರೆದ ಕನ್ನಡದ ಖ್ಯಾತ ಲೇಖಕ ಕಟ್ಪಾಡಿಯವರಂತೂ ತಸ್ಲೀಮಾ ಬರೆದ ಲೇಖನ ಕೆಟ್ಟ ಲೇಖನ ಎಂದಿದ್ದಾರೆಯೇ ಹೊರತು ಅದರಲ್ಲಿರುವ ಕೆಟ್ಟತನವು ಏನು ಎನ್ನುವದನ್ನು ತಿಳಿಸಿಲ್ಲ. 

ಅನಂತಮೂರ್ತಿ, ಗಿರೀಶ ಕಾರ್ನಾಡ, ಅಬ್ದುಲ್ ರಶೀದ ಮತ್ತು ಫಕೀರ ಮಹಮ್ಮದ ಕಟಪಾಡಿ ಇವರೆಲ್ಲರೂ  ನಮ್ಮ ಸಾರ್ವಜನಿಕ ಪ್ರಮಾಣವನ್ನು ರೂಪಿಸಬಲ್ಲ ಸಾಮರ್ಥ್ಯವಿರುವವರು.  ಸಾಂಸ್ಕೃತಿಕ ಆದರ್ಶಗಳ ರೂವಾರಿಗಳಾಗಬಲ್ಲವರು. ಇಂತಹ ವಿಚಾರವಾದಿಗಳೇ ಅಭಿಪ್ರಾಯ ಸ್ವಾತಂತ್ರ್ಯವನ್ನು ಹಾಗು ಸ್ತ್ರೀಸ್ವಾತಂತ್ರ್ಯವನ್ನು ಧಿಕ್ಕರಿಸುವದು ಸರಿಯೆ? ಇದರಿಂದ ನಮ್ಮ ಸಮಾಜದಲ್ಲಿ ಸುಧಾರಣೆಯಾಗಲು ಶಕ್ಯವಿದೆಯೆ? (ನಮ್ಮ ಸಮಾಜವೆಂದು ಹೇಳುವಾಗ, ನಾನು ಹಿಂದೂ ಹಾಗು ಮುಸ್ಲಿಮ್ ಸಮಾಜಗಳಲ್ಲಿ ಭೇದವೆಣಿಸುವದಿಲ್ಲ.)

ನಮ್ಮ ಎಲ್ಲಾ ರಾಜಕಾರಣಿಗಳೂ ಸ್ವಾರ್ಥಿಗಳೇ ಆಗಿದ್ದಾರೆ, ಸಮಯಸಾಧಕರೇ ಆಗಿದ್ದಾರೆ ಎಂದುಕೊಳ್ಳೋಣ. ಆದುದರಿಂದಲೇ ನಮ್ಮ ಸಾರ್ವಜನಿಕ ಹಾಗು ಸಾಂಸ್ಕೃತಿಕ ಆದರ್ಶವನ್ನು ಕಾಯ್ದುಕೊಳ್ಳುವದು ಈಗ ನಮ್ಮ ವೈಚಾರಿಕರ ಹೊಣೆಗಾರಿಕೆಯಾಗಿದೆ.