Saturday, February 27, 2010

“ಎಡಿ ಒಯ್ಯನು ಬಾರೆ ದೇವರಿಗೆ”----ಶರೀಫ ಸಾಹೇಬರು

ಇಂದು ಈದ ಮಿಲಾದ ಹಬ್ಬ. ಇಸ್ಲಾಮ ಧರ್ಮದ ಪ್ರವರ್ತಕರಾದ ಮೊಹಮ್ಮದ ಪೈಗಂಬರರ ಹುಟ್ಟುದಿನ.
ಮುಸ್ಲಿಮ್ ಶಿವಯೋಗಿ ಎಂದು ಕರೆಯಬಹುದಾದ ಶಿಶುನಾಳ ಶರೀಫರು ಹಿಂದು ಹಾಗು ಮುಸ್ಲಿಮ ಧರ್ಮಗಳಲ್ಲಿ ಸಾಧಿಸಿದ ಸಾಮರಸ್ಯವನ್ನು ಅರಿಯಬೇಕಾದರೆ ಅವರು ರಚಿಸಿದ ಈ ಹಾಡನ್ನು ನೋಡಬಹುದು:

ಎಡಿ ಒಯ್ಯನು ಬಾರೆ ದೇವರಿಗೆ
ಎಡಿ ಒಯ್ಯನು ಬಾರೆ ||ಪಲ್ಲ||

ಎಡಿ ಒಯ್ಯನು ಬಾ
ಮಡಿಹುಡಿಯಿಂದಲಿ
ಪೊಡವಿಗಧಿಕ ಎನ್ನ
ಒಡಿಯ ಅಲ್ಲಮನಿಗೆ ||ಅನುಪಲ್ಲ||

ಕರ್ಮದ ಕುರಿ ಕೊಯ್ಸಿ ಅದಕೆ
ಗುರುಮಂತ್ರವ ಜಪಿಸಿ
ಅರುವಿನ ಎಡಿಯನು
ಕರದೊಳು ಪಿಡಿಕೊಂಡು
ಸ್ಥಿರವಾದ ದೇವರು
ಇರುವ ಮಸೀದಿಗೆ ||೧||

ಆದಿ ಅಲ್ಲಮ ಗುರುವು ದೊಡ್ಡ
ಪಾದಗಟ್ಟಿ ಏರು
ದಿಮಿ ದಿಮಿ ಸದ್ಗುರು
ಆದಿ ಶಿಶುನಾಳ
ಸಾಧು ಇರುವ ಬ್ರಹ್ಮ-
ನಾದ ಮಸೀದಿಗೆ  ||೨||

ಶರೀಫರು ಅಲ್ಲಮ ಎಂದು ಹೇಳುವಾಗ ಶಿವಯೋಗಿ ಅಲ್ಲಮನನ್ನು ಸೂಚಿಸುವಂತೆಯೇ, ‘ಅಲ್ಲಾ’ ನನ್ನೂ ಸೂಚಿಸುತ್ತಾರೆ. ಆದಿ ಅಲ್ಲಮ ಗುರು ಎಂದರೆ ಇಡೀ ವಿಶ್ವಕ್ಕೆ ಗುರುವಾದ ದೇವರು. ಅಲ್ಲಮ ಪದವನ್ನು ಶೂನ್ಯಾರ್ಥದಲ್ಲಿ ಗ್ರಹಿಸಿದಾಗ ಈ ಪದವು ನಿರ್ಗುಣ ಬ್ರಹ್ಮನನ್ನೂ ಸೂಚಿಸುತ್ತದೆ.

Friday, February 12, 2010

ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ

‘ವಿಜಯ ಕರ್ನಾಟಕ’ ಪತ್ರಿಕೆಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ಟರು ಜನೆವರಿ ೨೧ರ ಸಂಚಿಕೆಯಲ್ಲಿ, ‘ನೂರೊಂದು ಮಾತು’ ಎನ್ನುವ ತಮ್ಮ ಅಂಕಣಬರಹದಲ್ಲಿ ಒಂದು ಲೇಖನ ಬರೆದಿದ್ದಾರೆ. ‘ಸಮಸ್ಯೆಯನ್ನು ನೋಡುವ ಬಗೆಯಲ್ಲೇ ಇದೆ ಸಮಸ್ಯೆ’ ಎನ್ನುವ ಈ ಲೇಖನವನ್ನು ಇಲ್ಲಿ ಪ್ರಸ್ತಾಪಿಸಲಿಕ್ಕೆ ನನಗೆ ಎರಡು ಕಾರಣಗಳಿವೆ:

(೧) ಶ್ರೀ ಭಟ್ಟರಂತಹ ಮೇಧಾವಿ, ತರ್ಕಚತುರ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿಯೊಬ್ಬರು ‘ಪ್ರಭಾವಿ’ ವ್ಯಕ್ತಿಗಳ ಸಮ್ಮುಖದಲ್ಲಿರುವಾಗ ಎಷ್ಟು ವೇಗವಾಗಿ ತಮ್ಮ ಮೇಧಾವಿತನ, ತರ್ಕಚತುರತೆ ಹಾಗು ವಿಸ್ತಾರ ಅಧ್ಯಯನದ ವ್ಯಕ್ತಿತ್ವವನ್ನು ಕಳೆದುಕೊಂಡು ಬಿಡುತ್ತಾರಲ್ಲ! Glamour ಎದುರಿಗೆ, ಸಮ್ಮೋಹಿನಿಗೆ ಒಳಗಾದವರಂತೆ ಮರುಳಾಗಿ ಬಿಡುತ್ತಾರಲ್ಲ! ಇದು ವಿಸ್ಮಯದ ಮಾತು.

(೨) ಶ್ರೀ ಭಟ್ಟರು ಆ ‘ಪ್ರಭಾವಿ’ ವ್ಯಕ್ತಿಯ ತರ್ಕದಲ್ಲಿದ್ದ ಮಿಥ್ಯೆ(fallacy)ಯನ್ನು ಗುರುತಿಸದೆ ಹೋದರಲ್ಲ ಎನ್ನುವ ವ್ಯಥೆ. ಈ ಮಿಥ್ಯಾತರ್ಕವನ್ನು ತಮ್ಮ ಪತ್ರಿಕೆಯ ಮೂಲಕ ಇನ್ನಷ್ಟು ಪ್ರಚುರಪಡಿಸುತಿದ್ದಾರಲ್ಲ ಎನ್ನುವ ದುಃಖ.

ಎಲ್ಲಕ್ಕೂ ಮೊದಲಿಗೆ ಅವರ ಲೇಖನದಲ್ಲಿ ನಮಗೆ ಸಂಬಂಧಪಡುವಂತಹ ಭಾಗವನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. ದಯವಿಟ್ಟು ಗಮನಿಸಿ:

ಈ ಲೇಖನಾಂಶವನ್ನು ಓದಿದ ಬಳಿಕ ನಮಗೆ ಅನಿಸುವದೇನು?
ವಿಶ್ವೇಶ್ವರ ಭಟ್ಟರು ಒಬ್ಬ ಅತಿ ಗಣ್ಯ ವ್ಯಕ್ತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾರೆ. ಭಟ್ಟರು ವರ್ಣಿಸುವ ಮೇರೆಗೆ ಆ ವ್ಯಕ್ತಿ ಕೋಟ್ಯಾಧಿಪತಿಗಳಿಗೆ ಪಾಠ ಹೇಳುವ ಅಧ್ಯಾಪಕ. ಅಂತಹ ವ್ಯಕ್ತಿ ಇನ್ನೋರ್ವ ಗಣ್ಯ ವ್ಯಕ್ತಿಯೊಡನೆ ಅಂದರೆ ಆ^ಸ್ಟ್ರೇಲಿಯನ್ ಹಡಗಿನ ದಳಪತಿಯೊಡನೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಆ ದಳಪತಿಯ ಅಭಿಪ್ರಾಯದ ಪ್ರಕಾರ ಒಂದು ದೇಶದ ಸಂಪತ್ತೆಂದರೆ ಅಲ್ಲಿಯ ಜನಸಂಖ್ಯೆಯೇ ಹೊರತು ಅಲ್ಲಿಯ ಧನಸಂಪತ್ತಲ್ಲ. ಜನಸಂಖ್ಯೆಯು ನಮ್ಮ ದೇಶದ ಜಟಿಲ ಸಮಸ್ಯೆಯೆಂದು ಭಾವಿಸಿದ ಆ ಅಧ್ಯಾಪಕರು ಹಡಗಿನ ದಳಪತಿಯ ಲೋಕಾಭಿರಾಮ ಹರಟೆಯಿಂದ ಪ್ರಭಾವಿತರಾದರು. ‘ಹೌದಲ್ಲ! ನಾವು ಜನಸಂಖ್ಯಾಸ್ಫೋಟವನ್ನು ಸಮಸ್ಯೆಯೆಂದು ಏಕೆ ಭಾವಿಸಬೇಕು? ಇದೇ ನಮ್ಮ ಬಲವೂ ಆಗಬಹುದು’ ಎಂದು ಈ ಅಧ್ಯಾಪಕರಿಗೆ ಅನಿಸಿತು. ತಮಗೆ ಅನಿಸಿದ್ದನ್ನು ಈ ದೊಡ್ಡ ಅಧ್ಯಾಪಕರು ಭಟ್ಟರಿಗೆ ಹೇಳಿದರು. ಸರಿ, ಭಟ್ಟರಿಗೂ ಹಾಗೆಯೇ ಅನ್ನಿಸತೊಡಗಿತು.

ಭಟ್ಟರೆ, ನಿಮ್ಮ ಮೇಧಾವಿತನ, ತೀಕ್ಷ್ಣ ತರ್ಕಚಾತುರ್ಯ ಹಾಗು ವಿಸ್ತಾರ ಅಧ್ಯಯನದ ಫಲವಾದ ಪಾಂಡಿತ್ಯ ಇವೆಲ್ಲ ಎಲ್ಲಿ ಮಾಯವಾದವು? ನಿಮ್ಮೆದುರಿಗಿನ ವ್ಯಕ್ತಿ ಎಷ್ಟೇ ‘ಪ್ರಭಾವಶಾಲಿ’ಯಾಗಿರಲಿ, ನೀವು ಇಷ್ಟು ವೇಗವಾಗಿ ಅವರ ಸಮ್ಮೋಹಿನಿಗೆ ಒಳಗಾಗಬಹುದೆ? ಅವರ ಮಾತಿಗೆ ಮರುಳಾಗಬಹುದೆ?

Of course, ಒಪ್ಪಿಕೊಳ್ಳುತ್ತೇನೆ—Consistancy is the virtue of an ass.
ಒಬ್ಬ ವ್ಯಕ್ತಿಯ ಅಭಿಪ್ರಾಯವು ಯಾವಾಗಲೂ ಏಕಪ್ರಕಾರವಾಗಿರಬೇಕಿಲ್ಲ. ಆದರೆ, ಅಭಿಪ್ರಾಯದ ಬದಲಾವಣೆಯು ತರ್ಕಬದ್ಧವಾಗಿರಬೇಕಲ್ಲವೆ? ಆ ಪ್ರಭಾವಿ ಅಧ್ಯಾಪಕರು ‘ಜನಸಂಖ್ಯೆಯೇ ಒಂದು ದೇಶದ ಸಂಪತ್ತು’ ಎಂದು ಹೇಳಿದಾಗ, ಅವರ ಕಣ್ಣಿಗೆ ಬಿದ್ದಿರಲಾರದ ಒಂದು ಸತ್ಯ ನಿಮ್ಮ ಕಣ್ಣಿಗೂ ಬೀಳಲಿಲ್ಲವೆ? ಅದೇನೆಂದರೆ, ನಮ್ಮ ದೇಶದ ಜನಸಂಖ್ಯೆಯ ಬಹುಭಾಗ ಎಂತಹುದು? ಅರ್ಧಕ್ಕೂ ಹೆಚ್ಚು ಭಾರತೀಯರು ನಿರಕ್ಷರಿಗಳು. ಸಾಕ್ಷರ ಭಾರತೀಯರಲ್ಲಿ ಅರ್ಧಕ್ಕೂ ಹೆಚ್ಚಿನವರ ಶಿಕ್ಷಣ ನಿರುಪಯುಕ್ತ ಶಿಕ್ಷಣ. ಮುಕ್ಕಾಲು ಭಾಗ ಭಾರತೀಯರು ಅರೆಕಾಲೀನ ಉದ್ಯೋಗಿಗಳು. ಇಲ್ಲಿ ಉದ್ಯೋಗ ಸಿಗಲಾರದ ಕಾರಣಕ್ಕಾಗಿ, ಕೆಳದರ್ಜೆಯ ಉದ್ಯೋಗ ಮಾಡುವ ಭಾರತೀಯರೂ ಸಹ ದುಬಾಯಿ ಮೊದಲಾದ ಅರಬ ರಾಷ್ಟ್ರಗಳಿಗೆ ಉದ್ಯೋಗವನ್ನರಸಿ ಹೋಗುತ್ತಿದ್ದಾರೆ. ಭಾರತೀಯ ಹೆಂಗಸರೂ ಸಹ ಆ ದೇಶಗಳಲ್ಲಿ ಮನೆಗೆಲಸಕ್ಕೆ ಹೋಗಿ, ಅಲ್ಲಿ ನರಕಯಾತನೆಯನ್ನು ಅನುಭವಿಸುತ್ತಿದ್ದಾರೆ. ಮೂರು ವರ್ಷದ ಹೆಣ್ಣು ಶಿಶುಗಳೂ ಸಹ ಭಾರತದಲ್ಲಿ ವೇಶ್ಯಾವಾಟಿಕೆಗೆ ಬಿಕರಿಯಾಗುತ್ತಿವೆ. ಶಿಕ್ಷಣ ಪಡೆಯಲು ಇಲ್ಲಿಂದ ಹೊರದೇಶಗಳಿಗೆ ತೆರಳಿದ ನಮ್ಮ ವಿದ್ಯಾರ್ಥಿಗಳು, ಅಲ್ಲಿ ಏಟು ತಿನ್ನುತ್ತಿದ್ದಾರೆ.

ಭಟ್ಟರೆ, ಇದು ನಮ್ಮ ದೇಶದ ಜನಸಂಪತ್ತು ; ಬೇಕಾದರೆ ಇದನ್ನು ದನಸಂಪತ್ತು ಎಂದು ಕರೆಯಿರಿ. ಅದೂ ತಪ್ಪೇ!
ಭಟ್ಟರೆ, ನಮ್ಮವರಿಗೆ ಒಳ್ಳೆಯ ಶಿಕ್ಷಣ, ಒಳ್ಳೆಯ ಉದ್ಯೋಗ ಹಾಗು ಒಳ್ಳೆಯ ಬದುಕನ್ನು ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ. ಏಕೆಂದರೆ ನಮ್ಮ ಜನಸಂಖ್ಯೆಯು ಈ ಮಿತಿಯನ್ನು ಮೀರಿ ಬೆಳೆದಿದೆ.

ದೊಡ್ಡ ಹಡಗವೊಂದು ಸಮುದ್ರ ಮಧ್ಯದಲ್ಲಿ ತೇಲುತ್ತಿದೆ ಎಂದು ಕಲ್ಪಿಸಿಕೊಳ್ಳಿ. ಒಂದು ಸಾವಿರ ಪ್ರಯಾಣಿಕರನ್ನು ಒಯ್ಯುವ ಸಾಮರ್ಥ್ಯವಿರುವ ಹಡಗು ಇದು ಎಂದು ಇಟ್ಟುಕೊಳ್ಳಿ. ಈ ಹಡಗಿನಲ್ಲಿ ಎರಡು ಸಾವಿರ ಪ್ರಯಾಣಿಕರನ್ನು ತುಂಬಿದರೆ ಏನಾಗುತ್ತದೆ? ಹಡಗು ಮುಳುಗಿ ಹೋಗುತ್ತದೆ. ಇದು ಸಾಮಾನ್ಯ ಜ್ಞಾನದ ಮಾತು.

ಎರಡನೆಯದಾಗಿ, ಭಟ್ಟರು ಸಮಸ್ಯೆಯನ್ನು ಬೇರೊಂದು ದೃಷ್ಟಿಕೋನದಿಂದ ನೋಡಿದರೆ ಅದು ಸಮಸ್ಯೆಯೇ ಅಲ್ಲ ಎನ್ನುವ ಮಿಥ್ಯಾತರ್ಕಕ್ಕೆ ಬಲಿಯಾಗಿದ್ದಾರೆ. ಇಂತಹ ಮಿಥ್ಯಾತರ್ಕದ ಕೆಲವು ಉದಾಹರಣೆಗಳನ್ನು ಇಲ್ಲಿ ನೋಡೋಣ.

(೧) ಪೋಲೀಸ ಸ್ಟೇಶನ್ನಿಗೆ ಹೋದ ಓರ್ವ ವ್ಯಕ್ತಿ, ಪೋಲೀಸ ಅಧಿಕಾರಿಗೆ: “ಸಾಹೇಬರ, ನನ್ನ ಹೇಣತಿ ಮನಿ ಬಿಟ್ಟು ಓಡಿ ಹೋಗ್ಯಾಳರೀ!”
ಪೋಲೀಸ ಅಧಿಕಾರಿ: “ಛಲೋ ಆತಲ್ಲಪಾ! ಆಕೀ ಹೊಟ್ಟಿಗೆ ಹಾಕೋ ತ್ರಾಸು ತಪ್ಪಿತು ನಿನಗ.
ಅರಾಮ ಇರು, ಹೋಗು!”

(೨) ಅಪ್ಪ ಮಗನಿಗೆ: “ಮಗನs, ಈ ಸಲಾನೂ SSLC ಒಳಗ ಢುಮ್ಕಿ ಹೊಡದೇನು?”
ಮಗ: “ ಅಪ್ಪಾ, ನಿಮಗ ಈ ಸಲಾ tution fees ಉಳಿತಾಯ ಮಾಡೇನಿ ಅಂತ ಯಾಕ ತಿಳ್ಕೋಬಾರ್ದು ನೀವು?”

ಇಂತಹ ಮಿಥ್ಯಾತರ್ಕದಲ್ಲಿ ನಮ್ಮ ರಾಜಕಾರಣಿಗಳು ಬಹು ಚತುರರು. ತಮ್ಮ ತಂದೆ ಇನ್ನೂ ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ, ಶ್ರೀಮತಿ ಇಂದಿರಾ ಗಾಂಧಿಯವರು ಒಮ್ಮೆ ಓಡಿಸಾ ರಾಜ್ಯಕ್ಕೆ ಭೆಟ್ಟಿ ಕೊಟ್ಟಿದ್ದರು. ಓಡಿಸಾದಲ್ಲಿ ಆಗ ಭೀಕರ ಬರಗಾಲವಿತ್ತು. ಅಕ್ಕಿಯಂತೂ ಕಾಳಸಂತೆಯಲ್ಲಿ ಮಾತ್ರ ಲಭ್ಯವಿತ್ತು. ಆಗ ಶ್ರೀಮತಿ ಇಂದಿರಾ ಗಾಂಧಿಯವರು ಜನತೆಗೆ ಕೊಟ್ಟ ಸಲಹೆ: “ ಅಕ್ಕಿ ಸಿಗದೇ ಹೋದರೆ, ಬಟಾಟೆ ತಿನ್ನಿರಿ!”
ಇತ್ತೀಚೆಗೆ, ಕೇಂದ್ರಸಚಿವರಾದ ನಮ್ಮ ಕನ್ನಡಿಗರೊಬ್ಬರು , ‘ವಾರದಲ್ಲಿ ಒಂದು ದಿನ ಉಪವಾಸ ಮಾಡಿರಿ’ ಎಂದು ಹೇಳಲಿಲ್ಲವೆ? ವಾಸ್ತವ ಸ್ಥಿತಿ ಏನಿದೆಯೆಂದರೆ, ಕರ್ನಾಟಕದಲ್ಲಿ ಅನೇಕ ನೆರೆ ಸಂತ್ರಸ್ತರು ವಾರದಲ್ಲಿ ಒಂದೇ ದಿನ ಊಟ ಮಾಡುತ್ತಿದ್ದಾರೆ!

ಇದು ನಮ್ಮ ದೇಶದ ಜನಸಂಪತ್ತು. ಇದು ಇಮ್ಮಡಿ, ಮುಮ್ಮಡಿಯಾಗಲಿ ಎಂದು ವಿಶ್ವೇಶ್ವರ ಭಟ್ಟರು ಬಯಸುತ್ತಿದ್ದಾರೆಯೆ? ಭಟ್ಟರೆ, ಹಾಗಿದ್ದರೆ ಒಂದು ಕಿವಿಮಾತನ್ನು ನಿಮಗೆ ಹೇಳಬಯಸುತ್ತೇನೆ:
‘ದೇಶದ ಪ್ರಗತಿಯನ್ನು ನಿಮ್ಮ ಮನೆಯಿಂದಲೇ ಪ್ರಾರಂಭಿಸಬೇಕು!