Showing posts with label ಸಾಹಿತ್ಯ/ದಾಸಸಾಹಿತ್ಯ. Show all posts
Showing posts with label ಸಾಹಿತ್ಯ/ದಾಸಸಾಹಿತ್ಯ. Show all posts

Thursday, October 20, 2011

‘ನಾನು ಹೋದರೆ ಹೋಗಬಹುದು’----ಕನಕದಾಸರು


ಶ್ರೀ ವ್ಯಾಸರಾಯರು (೧೪೪೭-೧೫೩೯) ವಿಜಯನಗರದ ರಾಜರಿಗೆ ಗುರುಸ್ಥಾನದಲ್ಲಿ ಇದ್ದವರು. ಭಕ್ತಿಪಂಥದ ದಾಸಕೂಟಕ್ಕೆ ಇವರು ಅಧ್ವರ್ಯರು. ಇಂತಹ ಉಚ್ಚ ತರಗತಿಯ ದಾಸಕೂಟದಲ್ಲಿ ಮೋಕ್ಷ ಪಡೆಯುವ ಯೋಗ್ಯತೆ ಇದ್ದವರು ಕೆಲವರಾದರೂ ಇದ್ದಿರಬಹುದಲ್ಲವೆ? ವ್ಯಾಸರಾಯರು ತಮ್ಮ ಶಿಷ್ಯರೆದುರಿಗೆ ಈ ಪ್ರಶ್ನೆಯನ್ನು ಇರಿಸುತ್ತಾರೆ: ‘ನಮ್ಮಲ್ಲಿ ವೈಕುಂಠಕ್ಕೆ ಯಾರು ಹೋಗಬಹುದು?’ ಉತ್ತರ ಹೇಳುವ ಧೈರ್ಯ ಕನಕದಾಸರನ್ನು ಬಿಟ್ಟರೆ ಯಾರಿಗೂ ಇರುವದಿಲ್ಲ.
ಕನಕದಾಸರು ಉತ್ತರಿಸುತ್ತಾರೆ: ‘ನಾನು ಹೋದರೆ ಹೋಗಬಹುದು!’

ಕನಕದಾಸರ ಉತ್ತರದ ಒಳಾರ್ಥವನ್ನು ತಿಳಿದವರು ಅದನ್ನು ನಮಗೂ ತಿಳಿಸಿದ್ದಾರೆ. ‘ನಾನು’ ಎಂದರೆ ಮನುಷ್ಯನ ಅಹಂಭಾವ. ಅಹಂಭಾವ ನಾಶವಾಗುವದೇ ಮೋಕ್ಷ ಇತ್ಯಾದಿ. ಅಹಂಭಾವಕ್ಕೆ  arrogance ಎನ್ನುವ ಅರ್ಥ ಇದ್ದಂತೆಯೇ self identity ಅಥವಾ ego ಎನ್ನುವ ಅರ್ಥವೂ ಇದೆ. ಕನಕದಾಸರು ‘ನಾನು’ ಎನ್ನುವ ಪದವನ್ನು arrogance ಎನ್ನುವ ಅರ್ಥದಲ್ಲಿ ಬಳಸಿಲ್ಲ. ಅವರು ಅದನ್ನು   self identity ಎನ್ನುವ ಅರ್ಥದಲ್ಲಿ ಬಳಸಿದ್ದಾರೆ. ಈ self identity ಎನ್ನುವ ಆಂಗ್ಲ ಪದಕ್ಕೆ ಕನ್ನಡದಲ್ಲಿ  ‘ಅಹಂಸಂಜ್ಞೆ’, ‘ಅಹಂಪ್ರಜ್ಞೆ’ ಅಥವಾ ‘ಅಹಮಿಕೆ’ ಎನ್ನುವ ಪದವನ್ನು ಬಳಸಬಹುದು. ಅಲ್ಲಮಪ್ರಭುಗಳು self identityಗೆ ‘ಕುರುಹು’ ಎನ್ನುವ ಪದವನ್ನು ಬಳಸಿದ್ದಾರೆ. ‘ಅಸ್ಮಿತೆ’ ಎನ್ನುವ ಪದವೂ ಬಳಕೆಯಲ್ಲಿದೆ. ನವೋದಯ ಕಾಲದ ಮಹಾನ್ ಚಿಂತಕರಾದ ಕುವೆಂಪು ಅವರು ಓ ನನ್ನ ಚೇತನಾ, ಆಗು ನೀ ಅನಿಕೇತನಾ!’ ಎನ್ನುವಾಗ ತಮ್ಮ ಅಪರಿಮಿತ ಚೈತನ್ಯಕ್ಕೆ ಯಾವುದೇ ಪರಿಮಿತ ಅಹಂಸಂಜ್ಞೆ ಬೇಡ ಎಂದೇ ಹೇಳುತ್ತಾರೆ.

`ನಾನು’ ಅಥವಾ ಅಹಂಪ್ರಜ್ಞೆಯು ವಿಕಸಿಸುವ ಬಗೆ ಹೇಗೆ? ಗರ್ಭಸ್ಥ ಭ್ರೂಣ ಹಾಗು  ನವಜಾತ ಶಿಶುವಿನಲ್ಲಿ ಇರುವ ಅಹಂಪ್ರಜ್ಞೆಯು ಜೈವಿಕ ಅಹಂಪ್ರಜ್ಞೆ ಅಥವಾ biological identity. ಹುಟ್ಟಿದ ಶಿಶುವು ಮಾಡುವ ಮೊದಲನೆಯ ಕೆಲಸವೆಂದರೆ ಹೊಟ್ಟೆ ತುಂಬಿಸಿಕೊಳ್ಳುವ ಕೆಲಸ. ಇದು ಅದರ ಜೈವಿಕ ಅವಶ್ಯಕತೆ. ಈ ಜೈವಿಕ ಅಹಂಪ್ರಜ್ಞೆಯು ಎಲ್ಲ ಜೀವಿಗಳಿಗೆ ಒಂದೇ ತೆರನಾಗಿರುತ್ತದೆ. ಕೆಲವೇ ತಿಂಗಳುಗಳಲ್ಲಿ ಆ ಶಿಶುವು ದೈಹಿಕ ಅಹಂಪ್ರಜ್ಞೆ ಅಥವಾ physiological identityಯನ್ನು ಬೆಳೆಯಿಸಿಕೊಳ್ಳುತ್ತದೆ. ತಾನು ದೈಹಿಕವಾಗಿ ಯಾವ ತರಹದ ಪ್ರಾಣಿ ಎನ್ನುವದನ್ನು ಆ ಜೀವಿ ಅರಿಯಲಾರಂಭಿಸುತ್ತದೆ. ಮೂರು ವರ್ಷದ ಬಾಲರಿಗೆ ಲಿಂಗ-ಕುರುಹು ಅಥವಾ gender identity ತಿಳಿದಿರುತ್ತದೆ ಎಂದು ಹೇಳುತ್ತಾರೆ. ತನ್ನ ತಾಯಿಯ ಜೊತೆಗಿರುವ ತನ್ನ ಸಂಬಂಧವನ್ನು ಗುರುತಿಸುವದು ಅದರ ಮೊದಲ ಸಾಮಾಜಿಕ ಅಹಂಸಂಜ್ಞೆ ಅಥವಾ social identity. ಇದೇ ರೀತಿಯಾಗಿ ಮನುಷ್ಯನ(ಳ) ‘ಕುರುಹು’ಗಳು ಬೆಳೆಯುತ್ತ ಹೋಗುತ್ತವೆ.

‘ನಾನು ಹೋದರೆ ಹೋಗಬಹುದು’ ಎಂದು ಹೇಳುವಾಗ ಕನಕದಾಸರಿಗೆ ಇದ್ದಂತಹ ಅಹಂಸಂಜ್ಞೆಗಳು ಯಾವವು?
ಕನಕದಾಸರು ಶಿಗ್ಗಾವಿ ತಾಲೂಕಿನಲ್ಲಿರುವ ಬಂಕಾಪುರದ ಹತ್ತಿರ ಇರುವ ‘ಬಾಡ’ ಹಳ್ಳಿಯಲ್ಲಿ ಹುಟ್ಟಿದವರು. ಬೀರನಾಯಕ ಎನ್ನುವದು ಇವರ ಮೊದಲಿನ ಹೆಸರು. ಇವರು ಪಾಳೆಯಗಾರಿಕೆಯ ವಂಶದವರು. ದಾಯಾದಿಕಲಹದಲ್ಲಿ ಇವರಿಗೆ ಪಾಳೆಯಗಾರಿಕೆ ದಕ್ಕುವದಿಲ್ಲ. ಆಗ ಇವರು ವಿಜಯನಗರದ ಫೌಜಿನಲ್ಲಿ ದಣಾಯಕರಾಗಿ ಸೇರ್ಪಡೆಯಾಗುತ್ತಾರೆ. ಸೇನೆಯಲ್ಲಿ ಇವರಿಗೆ ಒಳ್ಳೆಯ ಹೆಸರು ಹಾಗು ಅಧಿಕಾರ ದೊರೆತಿದ್ದವು. ಆ ಸಮಯದಲ್ಲಿ ಸಾಕಷ್ಟು ಸಂಪತ್ತನ್ನೂ ಸಂಪಾದಿಸಿದ ಇವರಿಗೆ ‘ಕನಕನಾಯಕ’ ಎನ್ನುವ ಹೆಸರು ಬಂದಿತು. ಈ ರೀತಿಯಾಗಿ ಸಂಪತ್ತಿನ ಹಾಗು ಅಧಿಕಾರದ ದರ್ಪ ಇವರಲ್ಲಿ ಒಂದುಗೂಡಿದವು. ಇದು ಅವರಲ್ಲಿದ್ದ ದೊಡ್ಡ ಅಹಂಸಂಜ್ಞೆ. ತಮ್ಮ ಕೀರ್ತನೆಯೊಂದರಲ್ಲಿ ತಮ್ಮ ಪೂರ್ವಜೀವನದ ಶೌರ್ಯದ ವರ್ಣನೆಯನ್ನು ಹಾಗು ತಮ್ಮ ಬಿಲ್ಲುಗಾರಿಕೆಯ ಪ್ರಶಂಶೆಯನ್ನು ಅವರು ಈ ರೀತಿಯಾಗಿ ಮಾಡಿದ್ದಾರೆ:

(೧) ಕನಕ ದಳದಲಿ ಬಂದು, ಕಲೆತನೆಂದರೆ ಫೌಜು
ಕನಕುಮನಕಾಗುವದು ಹರಿಯೆ.

(೨)ಮೊನೆಗಾರತನವೆಂಬ ಶನಿ ಬಿಡಿಸಿ ತವ ಪಾದ
ವನಜವನು ಸೇರಿಸಿದೆ ಹರಿಯೆ.

ತಮ್ಮ ಅಧಿಕಾರದರ್ಪದ ವರ್ಣನೆಯನ್ನು ಅವರು ಈ ರೀತಿಯಾಗಿ ಹಾಡಿದ್ದಾರೆ:

ಸ್ವಾರಿ ಹೊರಡಲು ಛತ್ರ, ಭೇರಿ, ನಿಸ್ಸಾಳಗಳು
ಭೋರೆಂಬ ಭೋಂಕಾಳೆ ಹರಿಯೆ
ಧೀರ ರಾಹುತರಾಣ್ಮ ಭಾರಿ ಪರಿವಾರದಹಂ-
ಕಾರಭಾರವ ತೊರೆದೆ ಹರಿಯೆ

ಸಂಪತ್ತು ಹಾಗು ಅಧಿಕಾರದ ಜೊತೆಗೆ ಕನಕದಾಸರಿಗೆ ಚೆಲುವಾದ ರೂಪವೂ ಇದ್ದಿರಬಹುದು. ಅವರ ಎರಡು ಕೀರ್ತನೆಗಳಲ್ಲಿ ಇದು ವ್ಯಕ್ತವಾಗುತ್ತದೆ:

(೧) ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನು
ಚೆಲುವ ಕನಕಪ್ಪ ಕುಣಿದಾನ್ ಮ್ಯಾ.

(೨) ಮದರೂಪು ಬಿಡಿಸಿ ಸನ್ಮುದರೂಪು ಧರಿಸೆಂದು
ಹೃದಯದೊಳು ನೀ ನಿಂತೆ ಹರಿಯೆ.

ಇನ್ನು  ಕನಕದಾಸರ ಕೀರ್ತನೆಗಳ ಶೈಲಿಯನ್ನು ಗಮನಿಸೋಣ. ಅವರ ಅನೇಕ ಕೀರ್ತನೆಗಳಲ್ಲಿ ಪಾಂಡಿತ್ಯ ಎದ್ದು ಕಾಣುತ್ತದೆ. ಪುರಂದರದಾಸರ ಕೀರ್ತನೆಗಳಲ್ಲಿ ಕಾಣುವ ಸರಳತೆ ಕನಕದಾಸರ ಕೀರ್ತನೆಗಳಲ್ಲಿ ಇಲ್ಲ. ಮೋಹನತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯಚರಿತ್ರೆ ಇವುಗಳಂತೂ ಪಂಡಿತರಿಗಾಗಿಯೇ ರಚಿತವಾದ ಕೃತಿಗಳಂತಿವೆ. ಅರ್ಥಾತ್ ಕನಕದಾಸರಲ್ಲಿ ಪಾಂಡಿತ್ಯವಿತ್ತು. ಈ ಪಾಂಡಿತ್ಯದ ಅಹಮಿಕೆಯೂ ಅವರಲ್ಲಿ ಮನೆ ಮಾಡಿರಬಹುದು.  

ಸಂಪತ್ತು,ಅಧಿಕಾರ, ರೂಪ, ಪಾಂಡಿತ್ಯ ಹಾಗು ಯೌವನ ಇವೆಲ್ಲ ಒಂದುಗೂಡಿದ ವ್ಯಕ್ತಿಗೆ ಅಹಂಕಾರ ಬಾರದಿದ್ದೀತೆ? ಅಲ್ಲದೆ ಆ ಕಾಲದ ಸರ್ವಾಧಿಕಾರಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ, ಗಂಡಸಾಗಿರುವದೇ ಒಂದು ದೊಡ್ಡ ಅಹಮಿಕೆ.  ಅಹಂಕಾರಕ್ಕೆ ಕಾರಣವಾಗಬಹುದಾದ ಈ ಎಲ್ಲ ಅಂಶಗಳು ಇದ್ದರೂ ಸಹ, ಕನಕನಾಯಕರ ಮನಸ್ಸು ಸಮಾಜದ ಉದ್ಧಾರಕ್ಕಾಗಿ ಮಿಡಿಯುತ್ತಿರಬಹುದು. ಅವರು ದಾಸರಾದ ಬಳಿಕ ರಚಿಸಿದ ಕೀರ್ತನೆಗಳಲ್ಲಿ ಕಾಣುವ ಸಾಮಾಜಿಕ ಕಳಕಳಿಯು ಅವರ ಪೂರ್ವಜೀವನದಲ್ಲಿಯೂ ಇದ್ದಿರಲೇಬೇಕು. ಇವೆಲ್ಲ ಅಂಶಗಳು ಅವರ ಒಟ್ಟು ಅಹಂಸಂಜ್ಞೆಯ ಭಾಗಗಳಾಗಿವೆ. ಇಷ್ಟೆಲ್ಲ ಸಂಕೀರ್ಣ ವ್ಯಕ್ತಿತ್ವವಿದ್ದ ಹಾಗು ಸಮಾಜದಲ್ಲಿ ಸಾಕಷ್ಟು ಬೆಲೆ ಇದ್ದ ಕನಕನಾಯಕರಿಗೆ ಅಹಂಸಂಜ್ಞೆಯ ಜೊತೆಗೆ ಕಿಂಚಿತ್ತಾದರೂ ಅಹಂಕಾರವಿದ್ದರೆ ಆಶ್ಚರ್ಯವಿಲ್ಲ.  

ಪರಮಾತ್ಮನೆಂದರೆ ಒಂದು ಅನಂತಸಮುದ್ರವಿದ್ದಂತೆ. ಒಂದು ನೀರಗುಳ್ಳೆಯು ಎಷ್ಟು ಉಬ್ಬಿದರೇನು, ಅನಂತಸಮುದ್ರವಾಗಲು ಸಾಧ್ಯವಾದೀತೆ? ಸಮುದ್ರವಾಗಲು ಅರ್ಥಾತ್ ಮೋಕ್ಷ ಪಡೆಯಲು ಈ ನೀರಹನಿಗೆ ಒಂದೇ ಮಾರ್ಗವಿದೆ. ಸೀಮಿತವಾದ ತನ್ನತನವನ್ನು ತ್ಯಜಿಸಿ ಸೀಮೆಯಿಲ್ಲದ ಸಮುದ್ರದಲ್ಲಿ ಕರಗಿ ಹೋಗುವದೇ ಆ ಮಾರ್ಗ. ಅದಕ್ಕೆ ಭಗವಂತನ ಅನುಗ್ರಹವೂ ಅವಶ್ಯ. ಭಗವಂತನ ಅನುಗ್ರಹಕ್ಕೆ ಸ್ವಂತ ಸಾಧನೆಯೂ ಅತ್ಯವಶ್ಯ.ಆದರೆ ಭಗವಂತನ ಅನುಗ್ರಹವೆಂದರೆ ಲೌಕಿಕ ಸುಖದ ಹರಣವೆಂದೇ ಅರ್ಥ. ‘ನನ್ನ ಭಕ್ತರಿಂದ ನಾನು ಎಲ್ಲವನ್ನೂ ಅಪಹರಿಸುವೆ!’ ಎಂದು ಶ್ರೀಕೃಷ್ಣನೇ ಹೇಳಿಲ್ಲವೆ? ಕನಕನಾಯಕರನ್ನೂ ಸಹ ಶ್ರೀಕೃಷ್ಣನು ಅವಮಾನಕ್ಕೆ ಒಳಪಡಿಸಿದನು. ಅವರ ದರ್ಪ ಹಾಗು ಅಹಂಕಾರ ಚೂರು ಚೂರಾಗುವಂತಹ ಸನ್ನಿವೇಶವನ್ನು ತಂದನು. ರಣಶೂರರಾದ ಕನಕನಾಯಕರು ಕಾಳಗವೊಂದರಲ್ಲಿ ಪರಾಜಿತರಾದರು. ಅದರ ವರ್ಣನೆಯನ್ನು ಅವರು ಹೀಗೆ ಮಾಡಿದ್ದಾರೆ:

ಅರಿಗಳೂ ದಂಡೆತ್ತಿ ಬರಲು ನಾನವರೊಡನೆ
ಪರಿಪರೀ ಹೋರಾಡುತಿರೆ ಹರಿಯೆ
ದುರುಳರೆನ್ನ ಜಯಿಸಿ, ಹರಿದಟ್ಟಿ ಬಂದೆನ್ನ
ಧರೆಗುರುಳಿಸಿದರೊ ಹರಿಯೆ.

ಇಷ್ಟೇ ಅಲ್ಲ, ಕನಕನಾಯಕರು ಮೃತ್ಯುಮುಖವನ್ನೇ ಕಂಡರು:

ರಣದೊಳಗೆ ಅಂಗಾಂಗ ಖಂಡತುಂಡಾಗಿ ಪ್ರತಿ-
ರಣವನುತ್ತರಿಸಿ ಮರಣವ ತಾಳಿರೆ
ಪ್ರಣವಗೋಚರ ನೀನು ಗೋಚರಿಸಿ ಬಂದೆನ್ನ
ಹೆಣಕೆ ಪ್ರಾಣವ ಪ್ರಯೋಗಿಸಿದಂತರಾತ್ಮ

 ಈ ಆಘಾತದಿಂದ ಕನಕನಾಯಕರಲ್ಲಿ ಇದ್ದ ಅಹಂಕಾರ, ಅಹಂಸಂಜ್ಞೆ ಎಲ್ಲವೂ ಕರಗಿ ಹೋದವು.
‘ತನು ನಿನ್ನದು, ಜೀವನ ನಿನ್ನದು, ರಂಗಾ’ ಎನ್ನುವದು ಅವರಿಗೆ ಹೊಳೆಯಿತು. ಆ ಅರಿವಿನಿಂದ ಕನಕನಾಯಕರು ಕನಕದಾಸರಾದರು; ಲೌಕಿಕದ ಪ್ರತಿಷ್ಠೆಯನ್ನು ಬಿಟ್ಟು ಅಲೌಕಿಕದ ಸಾಧನೆಗೆ ಹೊರಳಿದರು. (ರಶಿಯನ್ ವರ್ತನಾವಿಜ್ಞಾನಿ ಪಾವ್ಲೋವನ ಸಂಶೋಧನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು.)

ನವ್ಯಕವಿ ಗೋಪಾಲಕೃಷ್ಣ ಅಡಿಗರು ತಮ್ಮ ‘ಭೂಮಿಗೀತೆ’ ಕವನದಲ್ಲಿ ಹೀಗೆ ಹೇಳಿದ್ದಾರೆ:
‘ತೆಗೆದುಕೋ ನೀ ಕೊಟ್ಟ ವಸ್ತ್ರವಿಲಾಸ,
ಈ ಶರಟು, ಈ ಶರಾಯಿ,
ಈ ಭಗ್ನ ಜೋಪಡಿಯೂ ನಿನ್ನದೇ,
ಬತ್ತಲಾಗದೆ ಬಯಲು ಸಿಕ್ಕದಿಲ್ಲಿ!’

ಕನಕನಾಯಕರು ತಮ್ಮ ರೂಪ, ಶೌರ್ಯ, ಸಂಪತ್ತು ಹಾಗು ಅಧಿಕಾರದ ವಸ್ತ್ರವಿಲಾಸವನ್ನು ಅಂದರೆ ಅಹಂಸಂಜ್ಞೆಗಳನ್ನು ಕಳೆದುಕೊಂಡು ದಾಸರಾದರು. ಬತ್ತಲಾದ ಅವರು ಬಯಲಿನಲ್ಲಿ ಅಡಗಿದ ಚೈತನ್ಯರೂಪನ ಹುಡುಕುವಿಕೆಯಲ್ಲಿ ನಿರತರಾದರು. ಆದರೆ ಅವರ ಎಲ್ಲ ಅಹಂಸಂಜ್ಞೆಗಳು ಕರಗಿ ಹೋದವೆ? ಕೆಲವು ಅಹಮಿಕೆಗಳು ತುಂಬ ಸೂಕ್ಷ್ಮವಾಗಿರುತ್ತವೆ. ಅವುಗಳಲ್ಲಿ ಒಂದು ಪಾಂಡಿತ್ಯದ ಅಹಮಿಕೆ.
‘‘ವರಕವಿಗಳ ಮುಂದೆ ನರಕವಿಗಳು ವಿದ್ಯೆ ತೋರಬಾರದು’ ಎನ್ನುವ ಅವರ ರಚನೆಯನ್ನು ಗಮನಿಸಿರಿ. ಇಲ್ಲಿ ‘ವರಕವಿ’ ಎಂದು ಅವರು ತಮ್ಮನ್ನು ತಾವೇ ಕರೆದುಕೊಳ್ಳುತ್ತಿದ್ದಾರೆ.

ಎರಡನೆಯದಾಗಿ ಅವರಿಗೆ ಸಮಾಜಸುಧಾರಕ ಎನ್ನುವ ಅಹಂಪ್ರಜ್ಞೆ  ಉಳಿದುಕೊಂಡಿರಬಹುದು.
ಕನಕದಾಸರು ತಮ್ಮ ಸುತ್ತಲಿನ ಜನರಿಗೆ, ವಿಶೇಷತಃ ಸಾಮಾಜಿಕವಾಗಿ ಕೆಳಸ್ತರದಲ್ಲಿ ಬದುಕುತ್ತಿರುವ ಜನರಿಗೆ ಹತ್ತಿರವಾಗಿ, ಅವರನ್ನು ಮೇಲೆತ್ತಲು, ಅವರಲ್ಲಿ ಘನತೆಯನ್ನು ತುಂಬಲು ಪ್ರಯತ್ನಿಸಿದವರು, ಆ ಜನರ ಆಡುಮಾತಿನಲ್ಲಿಯೇ ಹಾಡಿದವರು. ಇದರ ಉದಾಹರಣೆ ಎಂದು ಒಂದು ಗೀತೆಯನ್ನು ಭಾಗಶಃ (ಅಂದರೆ ಒಂದು ನುಡಿಯನ್ನು ಮಾತ್ರ) ಗಮನಿಸೋಣ:

ದ್ಯಾವಿ ನಮ್ಮ ದ್ಯಾವರು ಬಂದರು ಬನ್ನಿರೆ ||ಪಲ್ಲ||

ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನನ್ನ ಕೊಂದಾನ್ ಮ್ಯಾ
ಗುಂಗಾಡಿ ಸೋಮನ ಕೊಂದು ವೇದವನು
ಬಂಗಾರದೊಡಲನಿಗಿತ್ತಾನ್ ಮ್ಯಾ

ಅಕ್ಕಿಯನ್ನು ಸವರ್ಣೀಯರಿಗೆ ಹಾಗು ರಾಗಿಯನ್ನು ಸಾಮಾಜಿಕವಾಗಿ ಕೆಳಸ್ತರದಲ್ಲಿದ್ದವರಿಗೆ ಹೋಲಿಸಿ ಅವರು ಬರೆದ ಗೀತೆಯೂ ಸಹ ತುಂಬ ಪ್ರಸಿದ್ಧವಿದೆ. ‘ರಾಮಧಾನ್ಯ ಚರಿತೆ’ ಎನ್ನುವ ಈ ದೀರ್ಘ ಗೀತೆಯಲ್ಲಿ ಕಪ್ಪು ವರ್ಣದ ರಾಗಿಗೆ ಹಾಗು ಬಿಳಿಯ ವರ್ಣದ ಅಕ್ಕಿಗೆ ಶ್ರೇಷ್ಠತೆಯ ವಿಷಯವಾಗಿ ವಾಗ್ವಾದ ಜರಗುತ್ತದೆ. ಈ ವಾದವನ್ನು ಬಗೆಹರಿಸಲೆಂದು ಭಗವಂತನು ಅಕ್ಕಿ ಹಾಗು ರಾಗಿ ಇವೆರಡನ್ನು ಕೆಲ ಅವಧಿಗೆ ಮುಚ್ಚಿ ಇಟ್ಟಾಗ ಅಕ್ಕಿ ಹಾಳಾಗಿರುತ್ತದೆ, ರಾಗಿ ಸರಿಯಾಗಿಯೇ ಇರುತ್ತದೆ. ಇದು ರಾಗಿಯ ಅಂದರೆ ಕಪ್ಪು ವರ್ಣದ ವಿಜಯದ ಸಂಕೇತ. ಅಲ್ಲದೆ ‘ರಾಗಿ’ ಎನ್ನುವದು ‘ರಾಘವ’ನ (--ಅವನೂ ಶ್ಯಾಮಲಕಾಯನೇ!--) ಮೊಟಕು ಹೆಸರೂ ಹೌದು.

ಸಮಾಜಸುಧಾರಕರಷ್ಟೇ ಅಲ್ಲ, ಕನಕದಾಸರು ಸಾಮಾಜಿಕ ಆಂದೋಲನಕಾರರೂ ಆಗಿದ್ದರು. ೧೨ನೆಯ ಶತಮಾನದಲ್ಲಿ ಜರುಗಿದ ಶರಣಚಳುವಳಿಯು ಆಢ್ಯವ್ಯವಸ್ಥೆಯ ವಿರುದ್ಧ ಹೋರಾಡಿತು. ವಿಜಯನಗರದ ಕಾಲದಲ್ಲಿ ಇದೇ ಶರಣರು ತಾವೇ ಆಢ್ಯತೆಯ ಪೋಷಕರಾದರು. ಈ ಸಮಯದಲ್ಲಿ ಧಾರ್ಮಿಕ ಹಾಗು ಸಾಮಾಜಿಕ ಆಢ್ಯತೆಯ ವಿರುದ್ಧ ಕನಕದಾಸರು ಹೋರಾಟ ನಡೆಸಿದರು. ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ, ಬಲ್ಲಿರಾ? ಎನ್ನುವ ಅವರ ಗೀತೆ ಅವರ ಹೋರಾಟಕ್ಕೆ ಒಂದು ಉತ್ತಮ ನಿದರ್ಶನವಾಗಿದೆ. ಇದಕ್ಕೂ ಪೂರ್ವದಲ್ಲಿ ತಮಿಳುನಾಡಿನಲ್ಲಿ ಶ್ರೀ ರಾಮಾನುಜಾಚಾರ್ಯರೂ ಸಹ ಜಾತಿವ್ಯವಸ್ಥೆಯನ್ನು ಧಿಕ್ಕರಿಸಿದ್ದರು. ಇದರಿಂದಾಗಿ ಅವರು ತಮಿಳುನಾಡಿನಿಂದ ಕರ್ನಾಟಕಕ್ಕೆ ಓಡಿ ಬರಬೇಕಾಯಿತು. ರಾಮಾನುಜಾರ್ಯರ ಪ್ರಭಾವವೂ ಕನಕದಾಸರ ಮೇಲೆ ಆಗಿದೆ.

ಸೋದೆಮಠದ ವಾದಿರಾಜರು ಕನಕದಾಸರ ಗಾಢ ಸ್ನೇಹಿತರಾಗಿದ್ದು, ಕನಕದಾಸರಿಗಾಗಿ ಉಡುಪಿಯ ಶ್ರೀಕೃಷ್ಣಮಂದಿರದ ಹಿಂಭಾಗದಲ್ಲಿ ಒಂದು ಕುಟೀರವನ್ನು ಕಟ್ಟಿಸಿಕೊಟ್ಟಿದ್ದಾಗಿ ಹೇಳಲಾಗುತ್ತದೆ.  ಕನಕದಾಸರು ಅಲ್ಲಿ ಕೃಷ್ಣದರ್ಶನಕ್ಕಾಗಿ ಮಾಡಿದ ಯತ್ನದ ಬಗೆಗೆ ಒಂದು ಮಾತನ್ನು ಹೇಳಬೇಕು. ಖ್ಯಾತ ನಾಟಕಕಾರ ಶ್ರೀ ವ್ಯಾಸ ದೇಶಪಾಂಡೆಯವರ ಅಭಿಮತದ ಮೇರೆಗೆ ಇದು ಕನಕದಾಸರ ವೈಯಕ್ತಿಕ ಯತ್ನ ಮಾತ್ರವಲ್ಲ ;  ಇದು ಅವರ ‘ಮಂದಿರ ಪ್ರವೇಶ’ದ ಸಾಮಾಜಿಕ ಆಂದೋಲನದ ಒಂದು ಭಾಗವಾಗಿತ್ತು. ಶ್ರೀ ವ್ಯಾಸ ದೇಶಪಾಂಡೆಯವರು ಕನಕದಾಸರನ್ನು ಭಕ್ತ ಹಾಗು ಸಮಾಜಸುಧಾರಕ ಎನ್ನುವ ಎರಡೂ ನೋಟಗಳಿಂದ ಪರಿಗಣಿಸಿ ಬಯಲು ಆಲಯ ಎನ್ನುವ ನಾಟಕವನ್ನು ಬರೆದಿದ್ದಾರೆ. [ ಬಯಲು ಎಂದರೆ ಸಾಮಾನ್ಯ ಜನತೆ ಹಾಗು ಆಲಯ ಎಂದರೆ ವ್ಯವಸ್ಥೆ ಎನ್ನುವ ಶ್ಲೇಷೆ ಇಲ್ಲಿದೆ.]

ಕನಕದಾಸರದು ತುಂಬ ಸಂಕೀರ್ಣ ವ್ಯಕ್ತಿತ್ವ. ಅವರ ಬಾಹ್ಯಪ್ರಜ್ಞೆಯಲ್ಲಿ, ಅಂತಃಪ್ರಜ್ಞೆಯಲ್ಲಿ ಹಾಗು ಸುಪ್ತಪ್ರಜ್ಞೆಯಲ್ಲಿ ಅನೇಕ ಸೂಕ್ಷ್ಮ ಅಹಂಸಂಜ್ಞೆಗಳು  ಕೂಡಿಕೊಂಡಿದ್ದವು. ಅವರಲ್ಲಿ ಪಾಂಡಿತ್ಯ ಹಾಗು ಸಮಾಜಸುಧಾರಣೆಯ ಸೂಕ್ಷ್ಮ ಅಹಮಿಕೆ ಉಳಿದುಕೊಂಡಿರಬಹುದು ಭಗವಂತನ ದರ್ಶನ ಲಭಿಸಬೇಕಾದರೆ ಅವರು ಇವುಗಳನ್ನು ದಾಟಿ ಹೋಗುವದು ಅವಶ್ಯವಾಗಿತ್ತು. ಅದನ್ನು ಅವರು ಸಾಧಿಸಿದರು. ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’ ಎಂದು ಕನಕದಾಸರು ಮೊರೆಯಿಟ್ಟಾಗ, ಭಗವಂತನ ಅನುಗ್ರಹವಾಗದೆ ‘ಅಂತರಂಗದ ಬಾಗಿಲು ತೆರೆಯುವದಿಲ್ಲ’, ಅದಕ್ಕಾಗಿ ತಾನು ತನ್ನೆಲ್ಲ ಅಹಂಸಂಜ್ಞೆಗಳನ್ನು ತೊರೆಯಬೇಕು ಎನ್ನುವದು ಕನಕದಾಸರಿಗೆ ಹೊಳೆದಿರಬೇಕು.
ಉಳಿದೆಲ್ಲ ಅಹಂಪ್ರಜ್ಞೆಗಳು ಕರಗಿ ಹೋಗಿ ಕೊನೆಗೊಮ್ಮೆ ಅವರಲ್ಲಿ ದಾಸಪ್ರಜ್ಞೆ ಮಾತ್ರ ಉಳಿದುಕೊಂಡಿತು. ಇಲ್ಲಿಗೆ ಕನಕದಾಸರ ‘ನಾನು’ ಹೋಯಿತು. ಕನಕದಾಸರು ಕೃತಾರ್ಥರಾದರು.

[ಟಿಪ್ಪಣಿ:
(I) ಅಲ್ಲಮಪ್ರಭುಗಳ ವಚನವೊಂದರಲ್ಲಿ ‘ಗುಹೇಶ್ವರ ಸತ್ತು ನಾನು ಉಳಿದೆ’ ಎನ್ನುವ ಸಾಲು ಬರುತ್ತದೆ.
ತುಂಬ ಸ್ವಾರಸ್ಯಕರ ಮಾತಿದು. ದೇವರು ಹಾಗು ಭಕ್ತ ಎನ್ನುವ ಭೇದವು ಇರುವ ತನಕ ಇದು ದ್ವೈತ. ಈ ದ್ವೈತ ಅಳಿಸಿ ಹೋದಾಗ ‘ದೇವರು ಸಾಯುತ್ತಾನೆ’! ಭಕ್ತನಷ್ಟೇ ‘ನಾನು’ ಆಗಿ ಉಳಿದು ಕೊಳ್ಳುತ್ತಾನೆ.
ಇದು ‘ಸತ್-ಚಿತ್-ಆನಂದರೂಪ’ವಾದ ನಾನು!

(II) ಕನಕದಾಸರ ಪ್ರಾರ್ಥನೆಯನ್ನು ಮನ್ನಿಸಿದ ಶ್ರೀಕೃಷ್ಣನು ಗೋಡೆಯಲ್ಲಿ ಬಿರಿದ ಕಿಂಡಿಯೊಂದರ ಮೂಲಕ ಅವರಿಗೆ ದರ್ಶನವಿತ್ತನು ಎಂದು ಹೇಳಲಾಗುತ್ತದೆ. ಈ ಘಟನೆಯ ಬಗೆಗೆ ನಾಲ್ಕು ಸಂಭಾವ್ಯತೆಗಳಿವೆ:
(೧) ಈ ಘಟನೆ ನಡದೇ ಇಲ್ಲ. ಇದು ಕೇವಲ ದಂತಕಥೆ.
(೨) ಈ ಪವಾಡ ನಿಜವಾಗಿಯೂ ನಡೆಯಿತು.
(೩) ಕನಕದಾಸರ ಪರಾಮನೋಶಕ್ತಿಯ ಬಲದಿಂದ ಗೋಡೆಯಲ್ಲಿ ಕಿಂಡಿಯಾಯಿತು ಹಾಗು ಕೃಷ್ಣವಿಗ್ರಹವು ಆ ದಿಕ್ಕಿಗೆ ತಿರುಗಿತು.
(೪) ಕನಕದಾಸರು ಆ ಸಮಯದಲ್ಲಿ, ವ್ಯಾಸರಾಯರಿಂದ ಹಾಗು ವಾದಿರಾಜರಿಂದ ಮನ್ನಣೆ ಪಡೆದ ಗಣ್ಯ ಹರಿದಾಸರಾಗಿದ್ದರು. ಅವರಿಗೆ ಮಂದಿರದಲ್ಲಿ ಪ್ರವೇಶ ಕೊಡಲೂ ಆಗದೆ, ಬಿಡಲೂ ಆಗದೆ, ಮಠದ ಅಧಿಕಾರಿಗಳು ಮಧ್ಯದ ಮಾರ್ಗವೊಂದನ್ನು ಹುಡುಕಿದರು. ಅರ್ಥಾತ್, ಕನಕದಾಸರಿಗೆ ಕಿಂಡಿಯ ಮೂಲಕ ವಿಗ್ರಹದರ್ಶನ ಮಾಡಿಸಿದರು!

(III) ಕನಕದಾಸರ ಬಗೆಗೆ ಉಪಯುಕ್ತ ಮಾಹಿತಿ ನೀಡಿದ ಶ್ರೀ ವ್ಯಾಸ ದೇಶಪಾಂಡೆಯವರಿಗೆ ನಾನು ಕೃತಜ್ಞನಾಗಿದ್ದೇನೆ.]

Monday, September 26, 2011

ಡೊಂಕು ಬಾಲದ ನಾಯಕರೆ...


ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!

ಪುರಂದರದಾಸರ ಜನಪ್ರಿಯ ಗೀತೆಯಿದು. ಈ ಗೀತೆಯಲ್ಲಿ ದಾಸರು ಮನುಷ್ಯನ ಮನಸ್ಸನ್ನು ನಾಯಿಯ ಡೊಂಕು ಬಾಲಕ್ಕೆ ಹೋಲಿಸಿದ್ದಾರೆ. ‘ನಾಯಿಯ ಬಾಲ ಲಳಿಗೆಯಲ್ಲಿ ಹಾಕಿದರೂ ಡೊಂಕೇ’ ಎನ್ನುವ ಗಾದೆ ಮಾತು ಇದೆಯಲ್ಲ! ಅದೇ ತರಹ, ಮನುಷ್ಯನ ಮನಸ್ಸೂ ಸಹ ಮತ್ತೆ ಮತ್ತೆ ವಿಷಯಭೋಗಗಳ ಕಡೆಗೇ ಹರಿಯುತ್ತದೆ. ಕಣಕದ ಅಥವಾ ಹುಗ್ಗಿಯ ವಾಸನೆಯನ್ನು ಹಿಡಿದು ಹೋದ ನಾಯಿಗೆ ಒನಕೆಯ ಅಥವಾ ಸವಟಿನ ಪೆಟ್ಟು ತಪ್ಪಿದ್ದಲ್ಲ. ಅದೇ ರೀತಿ ವಿಷಯವಾಸನೆಯನ್ನು ಹಿಡಿದು ಹೋಗುವ ಮನುಷ್ಯನಿಗೂ ಸಹ ವಿಧಿಯ ಪೆಟ್ಟು ತಪ್ಪಿದ್ದಲ್ಲ. ಈ ಪೆಟ್ಟೇ ಮನುಷ್ಯನಿಗೆ ಸಿಗುವ ಊಟ ಅಥವಾ ಕರ್ಮಫಲ! ಇದು ದಾಸರ ಸಂದೇಶ. ಹಾಗೆಂದ ಮಾತ್ರಕ್ಕೆ ಈ ವಿಷಯದಲ್ಲಿ ಮನುಷ್ಯನನ್ನೇ ಸಂಪೂರ್ಣವಾಗಿ ದೂರುವಂತಿಲ್ಲ. ಮನುಷ್ಯನು ಭಗವಂತನ ಸೂತ್ರದ ಗೊಂಬೆ. ಆದುದರಿಂದ ಪುರಂದರ ವಿಠ್ಠಲನು ತೋರಿದ ಆಟಗಳನ್ನು ಈ ಗೊಂಬೆ ಆಡುತ್ತಿದೆ ಎನ್ನುವದು ದಾಸರು ಕೊಡುವ ಸಮಾಧಾನ.

ಪುರಂದರದಾಸರ ಗೀತೆಗಳೆಲ್ಲವೂ ಸರಳ ಗೀತೆಗಳು. ಅವುಗಳಲ್ಲಿಯ ಸಂದೇಶ ಅಥವಾ ನೀತಿಬೋಧೆ ಸರಳವಾಗಿಯೇ ಇರುತ್ತದೆ. ಆದರೆ ‘ಡೊಂಕು ಬಾಲದ ನಾಯಕರೆ’ ಎನ್ನುವ ಈ  ಗೀತೆಯಲ್ಲಿ ಒಂದು ಸ್ವಾರಸ್ಯಕರವಾದ ಶ್ಲೇಷೆ ಇದೆ. ಅದೇ ಈ ಗೀತೆಗೆ ವಿಶೇಷ ಅರ್ಥವನ್ನು ಕೊಡಲು ಕಾರಣವಾಗಿದೆ. ಪುರಂದರದಾಸರ ಮೊದಲ ಹೆಸರು ಶ್ರೀನಿವಾಸ ನಾಯಕ ಎನ್ನುವದು ಎಲ್ಲರಿಗೂ ತಿಳಿದ ಸಂಗತಿ. ಈ ಹಾಡಿನ ಪಲ್ಲವಿಯಲ್ಲಿ ‘ಡೊಂಕು ಬಾಲದ ನಾಯಕರೆ’ ಎನ್ನುವ ಪದಪುಂಜವನ್ನು ಗಮನಿಸಿ. ಈ ಸಂಬೋಧನೆಯು ನಾಯಿಯನ್ನು ಉದ್ದೇಶಿಸಿರುವದು ಎನ್ನುವದು ಸಾಮಾನ್ಯ ಅರ್ಥ. ಅದರ ಜೊತೆಗೇ ದಾಸರು ‘ನಾಯಕರೆ’ ಎಂದು ಶ್ರೀನಿವಾಸ ನಾಯಕರನ್ನು ಅಂದರೆ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿರುವದು ಇಲ್ಲಿಯ ವಿಶೇಷಾರ್ಥ. ಬಹುಶಃ ದಾಸರು ತಮಗೆ ತಾವೇ ಹೀಗೆ ಹೇಳಿಕೊಳ್ಳುತ್ತಿರಬಹುದು:

ನಾಯಕಾ, ನೀನು ವೈರಾಗ್ಯವೃತ್ತಿಯನ್ನು ತಾಳಿ ದಾಸನಾದೆ ಎಂದು ಹೇಳಿಕೊಳ್ಳುತ್ತೀಯಾ. ಆದರೆ ನಿನ್ನ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಇದೆ. ಮತ್ತೆ ಮತ್ತೆ ನಿನ್ನ ಮನಸ್ಸು ಸಂಸಾರದ ಸುಖಗಳ ಕಡೆಗೆ ಹರಿಯುತ್ತದೆ. ಇದನ್ನು ನಿಯಂತ್ರಿಸದಿದ್ದರೆ, ನೀನು ಮತ್ತೆ ಮತ್ತೆ ಪೆಟ್ಟು ತಿನ್ನುತ್ತೀಯಾ!
ಭಗವಂತಾ, ವಿಠ್ಠಲಾ! ನನ್ನ ಮನಸ್ಸಿನ ಆಟಗಳೆಲ್ಲಕ್ಕೂ ನೀನೆ ಹೊಣೆ. ನೀನು ಆಡಿಸಿದಂತೆ ನಾನು ಆಡುತ್ತಿದ್ದೇನೆ.

ಆದುದರಿಂದ ‘ನಾಯಕರೆ’ ಎಂದು ಹೇಳುವ ಮೂಲಕ, ದಾಸರು ಈ ಹಾಡನ್ನು  ಕೇವಲ ಪರರಿಗೆ ನೀತಿಬೋಧೆಯನ್ನು ಮಾಡಲು ಹಾಡಿಲ್ಲ, ತಮಗೆ ತಾವೇ ಆತ್ಮಬೋಧೆಗಾಗಿ ಹಾಡಿದ್ದಾರೆ ಎಂದೆನಿಸುವದು.

ಪುರಂದರದಾಸರ ಪರಿವರ್ತನೆಯ ಬಗೆಗಿರುವ ಜನಜನಿತ ಕತೆಯಿಂದಾಗಿ ಅವರ ವ್ಯಕ್ತಿತ್ವದ ಅನೇಕ ಆಯಾಮಗಳು ಮಸುಕಾಗಿ ಹೋಗಿವೆ. ಶ್ರೀನಿವಾಸ ನಾಯಕರು ಪುರಂದರದಾಸರಾಗಿ ಬದಲಾಗುವದಕ್ಕಿಂತ ಮೊದಲಿನಿಂದಲೂ ಸಂಗೀತವಿದ್ವಾಂಸರು, ಅಧ್ಯಯನಶೀಲರು, ಬಹುಶ್ರುತರು ಹಾಗು ದೇವಭಕ್ತರು ಆಗಿರಬೇಕು. ಅವರ ಕೀರ್ತನೆಗಳಲ್ಲಿ ಬರುವ ಕೆಲವು ಸಾಲುಗಳನ್ನು ಗಮನಿಸಿರಿ. ‘ಕೆರೆಯ ನೀರನು ಕೆರೆಗೆ ಚೆಲ್ಲಿ’, ‘ಹೂವ ತರುವರ ಮನೆಗೆ ಹುಲ್ಲ ತರುವ’, ‘ಉದರವೈರಾಗ್ಯವಿದು’,‘ದಾರಿ ಯಾವುದಯ್ಯಾ ವೈಕುಂಠಕೆ’, ‘ಅಲ್ಲಿರುವದು ನಮ್ಮ ಮನೆ, ಇಲ್ಲಿರುವದು ಸುಮ್ಮನೆ’ ಇಂತಹ ಅನೇಕ ಸಾಲುಗಳಲ್ಲಿ, ಗೀತೆಗಳಲ್ಲಿ ದಾಸರ ಸಾಹಿತ್ಯಪ್ರತಿಭೆ ವ್ಯಕ್ತವಾಗುತ್ತದೆ.  

ಪುರಂದರದಾಸರನ್ನು ‘ಕರ್ನಾಟಕ ಸಂಗೀತ ಪಿತಾಮಹ’ ಎಂದು ಕರೆಯಲಾಗುತ್ತಿದೆ. ದಾಸರಾಗುವ ಮೊದಲೂ ಸಹ ಅವರಿಗೆ ಸಾಹಿತ್ಯದಲ್ಲಿ ಹಾಗು ಸಂಗೀತದಲ್ಲಿ ಪರಿಣತಿ ಇರಲೇ ಬೇಕಲ್ಲವೆ? ಇಲ್ಲದೆ ಹೋದರೆ, ಅವರು ತಮ್ಮ ನೂರಾರು ಕೀರ್ತನೆಗಳನ್ನು ರಾಗಬದ್ಧವಾಗಿ ರಚಿಸಲು ಸಾಧ್ಯವಾಗುತ್ತಿರಲಿಲ್ಲ. ದಾಸರಾಗುವ ಪೂರ್ವದಲ್ಲಿ ಶ್ರೀನಿವಾಸ ನಾಯಕರ ಐಹಿಕ ಆಸೆಗಳು ಏನೇ ಇರಲಿ, ಈ ಲೌಕಿಕಕ್ಕೆ ಅವರ ಮನಸ್ಸು ಎಷ್ಟೇ ಕಟ್ಟು ಬಿದ್ದಿರಲಿ, ತಮ್ಮ ಮನೆಯಲ್ಲಿ, ತಮ್ಮ ಮನದಲ್ಲಿ ಅವರು ದೇವರನ್ನು ಶ್ರದ್ಧಾಪೂರ್ವಕವಾಗಿ ಪೂಜಿಸುತ್ತಿರಬಹುದು. ಆ ಸಮಯದಲ್ಲಿ ಸಂಗೀತದ ಮೂಲಕ ದೇವರನ್ನು ಭಜಿಸುತ್ತಿರಬಹುದು. ಅವರ ಕೀರ್ತನೆಯೊಂದನ್ನು ಗಮನಿಸಿದರೆ ಅವರಿಗಿರುವ ಅಪಾರ ಸಂಗೀತಜ್ಞಾನದ ಕಲ್ಪನೆಯಾಗುತ್ತದೆ:

ಅಂಗನೆಯರೆಲ್ಲ ನೆರೆದು ಚಪ್ಪಾಳಿಕ್ಕುತ ದಿವ್ಯ
ಮಂಗಳ ನಾಮವ ಪಾಡಿ ರಂಗನ ಕುಣಿಸುವರು
ಪಾಡಿ ಮಲ್ಹಾರಿ ಭೈರವಿ ಸಾರಂಗಿ ದೇಸಿ
ಗುಂಡಕ್ರಿಯೆ ಗುರ್ಜರಿ ಕಲ್ಯಾಣಿ ರಾಗದಿ
ತಂಡ ತಂಡದಲಿ ನೆರೆದು ರಂಗನ ಉಡಿಯ ಘಂಟೆ
ಘಣ ಘಣ್ ಘಣಿರೆಂದು ಹಿಡಿದು ಕುಣಿಸುವರು

ಅವರು ಲೌಕಿಕರಿದ್ದಾಗ ದೇವರ ಪೂಜೆಯನ್ನು ಬಲು ಆಡಂಬರದಿಂದ ನೆರವೇರಿಸುತ್ತಿರಬಹುದು. ಜ್ಞಾನೋದಯವಾದ ಬಳಿಕ ಈ ಆಡಂಬರದ ವ್ಯರ್ಥತೆಯನ್ನು ಅರಿತ ಅವರು ‘ಉದರವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ಹಾಡಿರಬಹುದು. ಅಷ್ಟೇ ಏಕೆ, ತಾವೇ ಮೊದಲು ಮಾಡುತ್ತಿರಬಹುದಾದ ‘ಮಡಿ ಆಚರಣೆ’ ವ್ಯರ್ಥವೆಂದು ಅರಿತುಕೊಂಡೇ ಅವರು ‘ಮಡಿ ಮಡಿ ಎಂದು ಅಡಿಗಡಿಗೆ ಹಾರುವಿ’ ಎಂದು ‘ಮಡಿವಂತ’ರನ್ನು ಹೀಯಾಳಿಸಿರಬಹುದು.

ಈ ಆಡಂಬರ, ಈ ಮಡಿ ‘ಈ ಆನೆ, ಕುದುರೆ, ಒಂಟೆ ಎಲ್ಲಾ’ ಲೊಳಲೊಟ್ಟೆ ಎಂದು ಶ್ರೀನಿವಾಸ ನಾಯಕರಿಗೆ ಅರಿವಾದದ್ದು ಹೇಗೆ?  ಜನಪ್ರಿಯ ಕತೆಯು ಹೇಳುವಂತೆ ಶ್ರೀನಿವಾಸ ನಾಯಕರು ಜಿಪುಣಾಗ್ರೇಸರರು. ತಮ್ಮ ಹೆಂಡತಿಯು ತನ್ನ ಮೂಗುತಿಯನ್ನು ದಾನವಾಗಿ ಕೊಟ್ಟಿರಬಹುದು ಎನ್ನುವ ಸಂದೇಹದಿಂದ ಅವಳನ್ನು ಪರೀಕ್ಷಿಸುತ್ತಾರೆ. ವಿಷ ತೆಗೆದುಕೊಳ್ಳಲು ಹೋದ ಅವಳಿಗೆ ವಿಷದ ಬಟ್ಟಲಿನಲ್ಲಿ ಮೂಗುತಿ ದೊರೆತುದರಿಂದ, ಆ ವಿಷಮ ಸನ್ನಿವೇಷದಿಂದ ಅವಳು ಪಾರಾಗುತ್ತಾಳೆ. ಇದು ನಾಯಕರ ಮನಃಪರಿವರ್ತನೆಗೆ ಕಾರಣವಾಗುತ್ತದೆ. ಈ ಪವಾಡವು ನಿಜವೆ? ನಿಜವಾಗಿಯೂ ಏನಾಯಿತು ಎನ್ನುವದನ್ನು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ. ಆದರೆ ಇದರ ಸಂಭಾವ್ಯತೆಗಳನ್ನು ಹೀಗೆ ಊಹಿಸಬಹುದು:

(೧) ಇದು ನಿಜವಾಗಿಯೂ ಆದಂತಹ ಪವಾಡ.
(೨) ಮನೋಚಲನ ಶಕ್ತಿ ಎನ್ನುವದು ಒಂದು ಇದೆ ಎನ್ನುವದನ್ನು ಪರಾಮನೋವಿಜ್ಞಾನಿಗಳು ಒಪ್ಪಿಕೊಳ್ಳುತ್ತಾರೆ. ಮೂಗುತಿಯು ಬಟ್ಟಲಿನಲ್ಲಿ ಬಂದಿದ್ದು ಹಾಗು ಮರಳಿ ನಾಯಕರ ತಿಜೋರಿಗೆ ಹೋಗಿದ್ದು ಅವರ ಸಾಧ್ವಿ ಹೆಂಡತಿಯ ಮನೋಚಲನ ಶಕ್ತಿಯಿಂದ ಆಗಿರಬಹುದು.
(೩) ವಿಷಪ್ರಾಶನ ಮಾಡಲು ಉದ್ಯುಕ್ತಳಾದ ಅಥವಾ ಮಾಡಿದಂತಹ ಹೆಂಡತಿಯನ್ನು ಕಂಡು, ನಾಯಕರ ಮನಸ್ಸಿನ ಮೇಲೆ ವಿಪರೀತ ಪರಿಣಾಮವಾಗಿ ಅವರು ಬದಲಾಗಿರಬಹುದು.

ಏನೇ ಆಗಿರಲಿ, ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ಸಂಭವಿಸಿದೆ. ಈ ಘಟನೆಯ ಪರಿಣಾಮವಾಗಿ ಅವರ ಮೊದಲಿನ ವ್ಯಾವಹಾರಿಕ ನಂಬಿಕೆಗಳು ಅಳಿದು, ಅವರಲ್ಲಿ ಆಧ್ಯಾತ್ಮಿಕ ನಂಬಿಕೆಗಳು ಮೂಡಿವೆ. ಈ ತರಹದ ಪರಿವರ್ತನೆಯನ್ನು ರಶಿಯದ ಖ್ಯಾತ ವರ್ತನಾವಿಜ್ಞಾನಿ ಪಾವ್ಲೋವ್(೧೮೪೯-೧೯೩೬) ಗಮನಿಸಿದ್ದಾನೆ. ಆತನ ಪ್ರಯೋಗಶಾಲೆಗೆ ಒಮ್ಮೆ ಪ್ರವಾಹದ ನೀರು ನುಗ್ಗಿದಾಗ, ಅಲ್ಲಿದ್ದ ನಾಯಿಗಳಲ್ಲಿ ಕೆಲವು ಸತ್ತೇ ಹೋದವು. ಬದುಕುಳಿದ ನಾಯಿಗಳಲ್ಲಿದ್ದ ‘ಸಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ(=strong  conditioned reflexes) ನಶಿಸಿ, ದುರ್ಬಲ ರೂಢಿಸಿದ ಸ್ವಯಂಪ್ರತಿಕ್ರಿಯೆ (= weak conditioned reflexes) ಮೇಲೆದ್ದವು’ ಎಂದು ಪಾವ್ಲೋವ್ ದಾಖಲಿಸಿದ್ದಾನೆ.

ಒಟ್ಟಿನಲ್ಲಿ ಶ್ರೀನಿವಾಸ ನಾಯಕರ ಬಾಳಿನಲ್ಲಿ ಒಂದು ಆಘಾತಕಾರಿ ಘಟನೆ ನಡೆಯಿತು. ಆಧ್ಯಾತ್ಮವನ್ನು ನಂಬದವರು ಈ ಘಟನೆಯು ಅವರ ಮೊದಲಿನ ನಂಬುಗೆಗಳನ್ನು ಅಂದರೆ ವ್ಯಾವಹಾರಿಕ ಮನೋಭಾವನೆಯನ್ನು ಬದಲಾಯಿಸಿತು ಎಂದು ಹೇಳಬಹುದು. ಆಧ್ಯಾತ್ಮಜೀವನದಲ್ಲಿ ನಂಬುಗೆ ಇದ್ದವರು ಈ ಘಟನೆಯಿಂದಾಗಿ ನಾಯಕರ ಕಣ್ಣು ತೆರೆಯಿತು ಎಂದು ಹೇಳಬಹುದು. ಏನೇ ಆಗಲಿ, ಈ ಆಘಾತಕಾರಿ ಘಟನೆಯಿಂದಾಗಿ ಕನ್ನಡಿಗರಿಗೆ ಓರ್ವ ಶ್ರೇಷ್ಠ ದಾರ್ಶನಿಕ ಮಾರ್ಗದರ್ಶಕರು ದೊರೆತರು, ಕರ್ನಾಟಕ ಸಂಗೀತ ಪಿತಾಮಹ ದೊರೆತರು. ಇದಕ್ಕೆಲ್ಲ ಕಾರಣಳಾದವರು ನಾಯಕರ ಹೆಂಡತಿ.
‘ಹೆಂಡತಿ ಸಂತತಿ ಸಾವಿರವಾಗಲಿ,
ದಂಡಿಗೆ ಬೆತ್ತ ಹಿಡಿಸಿದಳಯ್ಯ’ ಎಂದು ದಾಸರೇ ತಮ್ಮ ಹೆಂಡತಿಯ ಉಪಕಾರವನ್ನು ಸ್ಮರಿಸಿದ್ದಾರೆ.
ಆ ಸಾಧ್ವಿಗೆ ಕನ್ನಡಿಗರು ಚಿರಕೃತಜ್ಞರು.

ಪ್ರತಿಯೊಬ್ಬ ಮಹಾನುಭಾವನ ಹಿಂದೆ ಒಬ್ಬ ಮಹಾನ್ ಸ್ತ್ರೀ ಇರುತ್ತಾಳೆ ಎನ್ನುವ ಮಾತಿಗೆ ಈ ಘಟನೆ ನಿದರ್ಶನವಾದೀತು. ಕೆಲವು ನಗೆಗಾರರು `ದಾರ್ಶನಿಕರಾಗಲು ಮದುವೆಯಾಗಬೇಕು ಎಂದು ಸಾಕ್ರೆಟೀಸನ ಉದಾಹರಣೆ ಕೊಟ್ಟು ಹಾಸ್ಯ ಮಾಡಲೂ ಬಹುದು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲನ್ನು ಓದಿದಾಗ ನನಗೆ ನೆನಪಾಗುವದು ಇಂಗ್ಲೀಶ ಕವನವೊಂದರ ಸಾಲು:
Abou Ben Adhem
(may his tribe increase)
ಲೀ ಹಂಟ್ ಎನ್ನುವ ಇಂಗ್ಲಿಶ್ ಕವಿ ಈ ಕವನವನ್ನು  ಕ್ರಿ. ಶ. ೧೮೩೪ರಲ್ಲಿ ಬರೆದನು. ದಾಸರು ಕ್ರಿ.ಶ. ೧೪೮೪-೧೫೬೪ರಲ್ಲಿ ಬಾಳಿದವರು. ಇಬ್ಬರೂ ಬೇರೆ ಬೇರೆ ದೇಶ ಹಾಗು ಬೇರೆ ಬೇರೆ ಸಂಸ್ಕೃತಿಗಳಲ್ಲಿ ಬೆಳೆದವರು. ಆದರೆ ‘ಹೆಂಡತಿ ಸಂತತಿ ಸಾವಿರವಾಗಲಿ’ ಎನ್ನುವ ಸಾಲಿಗೂ ‘may his tribe increase ಎನ್ನುವ ಸಾಲಿಗೂ ಎಂಥಾ ಸಾಮ್ಯತೆ ಇದೆಯಲ್ಲವೆ! ಕಾವ್ಯಕ್ಕೆ ಕಾಲ, ದೇಶ ಹಾಗು ಸಂಸ್ಕೃತಿಯ ಭೇದ ಇದ್ದೀತೆ?

ವೈರಾಗ್ಯವನ್ನು ತಾಳಿ, ಸನ್ಯಾಸವನ್ನು ಸ್ವೀಕರಿಸಿದವರು ಅನೇಕರಿದ್ದಾರೆ. ಇವರೆಲ್ಲ ತಮ್ಮ ಸಂಪತ್ತನ್ನು ತಮ್ಮ ಹೆಂಡತಿ, ಮಕ್ಕಳಿಗೆ ಬಿಟ್ಟು ಸನ್ಯಾಸಿಯಾದವರು. ಆದರೆ ಪುರಂದರದಾಸರು ತಾವಷ್ಟೇ ದಾಸರಾಗಲಿಲ್ಲ. ಅವರ ಜೊತೆಗೆ ಅವರ ಹೆಂಡತಿ ಹಾಗು ಮಕ್ಕಳೂ ಸಹ ಗೋಪಾಳಬುಟ್ಟಿಯನ್ನು ಹಿಡಿದರು. ತಾವು ಕಂಡ ಸತ್ಯದ ದಾರಿಯನ್ನು ತಮ್ಮವರೂ ತುಳಿಯಬೇಕು ಎನ್ನುವದು ಸತ್ಯಪ್ರಜ್ಞರ ತಿಳಿವು. ದಾಸರ ಬಳಿಕ ಐದು ಶತಮಾನಗಳ ನಂತರ ಮತ್ತೊಬ್ಬ ಸಂತ ಇಂತಹ ಸತ್ಯನಿಷ್ಠೆಯನ್ನು ತೋರಿಸಿದ. ಆತ ಮೋಹನದಾಸ ಗಾಂಧೀ.

ಪುರಂದರದಾಸರ ಒಂದು ಕೀರ್ತನೆ  ತುಂಬ ಜನಪ್ರಿಯವಾಗಿದೆ. ಪ್ರತಿ ಶುಕ್ರವಾರವೂ ಅನೇಕರು ಈ ಭಜನೆಯನ್ನು ಹಾಡುತ್ತಾರೆ:
ಭಾಗ್ಯದಾ ಲಕ್ಷ್ಮೀ ಬಾರಮ್ಮಾ, ನಮ್ಮಮ್ಮಾ ನೀ ಸೌ-
ಭಾಗ್ಯದಾ ಲಕ್ಷ್ಮೀ ಬಾರಮ್ಮಾ.

ಲೌಕಿಕ ಸಂಪತ್ತೆನ್ನೆಲ್ಲ ಬಿಸುಟು ಹೋದ ದಾಸರು ಯಾವ ಭಾಗ್ಯಲಕ್ಷ್ಮಿಯನ್ನು ಕರೆಯುತ್ತಿರಬಹುದು?
ಕನಕವೃಷ್ಟಿಯ ಕರೆಯುತ ಬಾರೆ
ಮನಕಾಮನೆಯ ಸಿದ್ಧಿಯ ತೋರೆ
ದಿನಕರಕೋಟಿ ತೇಜದಿ ಹೊಳೆಯುವ
ಜನಕರಾಯನ ಕುಮಾರಿ ಬೇಗ
ಈ ನುಡಿಯನ್ನು ನೋಡಿದಾಗ ದಾಸರು ಲೌಕಿಕ ಸಂಪತ್ತಿನ ಲಕ್ಷ್ಮಿಯನ್ನು ಕರೆಯುತ್ತಿರಬಹುದೆ ಎನ್ನುವ ಅನುಮಾನ ಬಾರದಿರದು. ಆದರೆ,
ಸತ್ಯವ ತೋರುವ ಸಾಧು ಸಜ್ಜನರ
ಚಿತ್ತದಿ ಹೊಳೆಯುವ ಪುತ್ಥಳಿ ಗೊಂಬೆ”
ಎನ್ನುವ ಸಾಲುಗಳನ್ನು ನೋಡಿದಾಗ, ದಾಸರು ಕರೆಯುತ್ತಿರುವದು ವೈರಾಗ್ಯಲಕ್ಷ್ಮಿಯನ್ನು ಎಂದು ಭಾಸವಾಗುತ್ತದೆ.
‘ಲಂಗೋಟಿ ಬಲು ದೊಡ್ಡದಣ್ಣ’ ಎಂದು ಹಾಡಿದ ದಾಸರು, ತಾವು ತ್ಯಜಿಸಿದ ಸಿರಿ ಸಂಪತ್ತನ್ನು ವಿಜೃಂಭಿಸಿ ಕೀರ್ತಿಸುವದು ಸಾಧ್ಯವಿಲ್ಲ. ಏನೇ ಆಗಲಿ, ಅವರವರ ಭಾವಕ್ಕೆ ತಕ್ಕಂತಹ ಫಲ ಅವರವರಿಗೆ ಲಭಿಸುತ್ತದೆ. ಆದುದರಿಂದ ಲೌಕಿಕ ಸಂಪತ್ತನ್ನು ಬಯಸುವವರು ದಾಸರ ಗೀತೆಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುವದು ಶ್ರೇಯಸ್ಕರ:

ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?

ಕಣಕವ ಕುಟ್ಟುವ ಅಲ್ಲಿಗೆ ಹೋಗಿ,
ಹಣಿಕೀ ಹಣಿಕೀ ನೋಡುವಿರಿ;
ಕಣಕವ ಕುಟ್ಟುವ ಒನಕೆಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹುಗ್ಗಿಯ ಮಾಡುವ ಅಲ್ಲಿಗೆ ಹೋಗಿ
ತಗ್ಗೀ ಬಗ್ಗೀ ನೋಡುವಿರಿ;
ಹುಗ್ಗಿಯ ಮಾಡುವ ಸವಟಲಿ ಹೊಡೆದರೆ
ಕಂಯ್ ಕುಂಯ್ ರಾಗವ ಮಾಡುವಿರಿ!

ಹಿರಿ ಬೀದಿಯಲಿ ಓಡುವಿರಿ,
ಕರಿ ಬೂದಿಯಲಿ ಹೊರಳುವಿರಿ;
ಪುರಂದರ ವಿಠ್ಠಲರಾಯನು ಹೇಳಿದ
ಪರಿಪರಿ ಆಟದಿ ಚರಿಸುವಿರಿ!