Wednesday, December 28, 2022

‘ಯಂಕ್ ಪೋಸ್ಟ್’.....................ಶ್ರೀದೇವಿ ಕಳಸದ

 ಕನ್ನಡದ ಆಧುನಿಕ ಕಥೆಗಳಲ್ಲಿ ಇಲ್ಲಿಯವರೆಗೆ ನಾವು ನಾಲ್ಕು ತಲೆಮಾರುಗಳನ್ನು ಗುರುತಿಸಬಹುದು. ಮೊದಲನೆಯ ತಲೆಮಾರನ್ನು ನಾನು ಮಾಸ್ತಿಯವರ ತಲೆಮಾರು ಎಂದು ಕರೆಯುತ್ತೇನೆ. ಎರಡನೆಯದು ಲಂಕೇಶರ ತಲೆಮಾರು; ಮೂರನೆಯದು ದೇವನೂರು ಮಹಾದೇವರ ತಲೆಮಾರು; ನಾಲ್ಕನೆಯದು ಅಮರೇಶ ನುಗಡೋಣಿಯವರ ತಲೆಮಾರು. ಇದೀಗ ಐದನೆಯ ತಲೆಮಾರೊಂದು ಪ್ರವೇಶಿಸಿದೆ. ಶ್ರೀದೇವಿ ಕಳಸದ ಅವರನ್ನು ನಾನು ಈ ತಲೆಮಾರಿನ ಪ್ರಾತಿನಿಧಿಕ ಕಥೆಗಾರ್ತಿ ಎಂದು ಗುರುತಿಸುತ್ತೇನೆ. 

ಈ ಮೊದಲಿನ ನಾಲ್ಕು ತಲೆಮಾರುಗಳ ಲೇಖಕರು ಅನೇಕ ಶ್ರೇಷ್ಠ ಕಥೆಗಳನ್ನು ಬರೆದಿದ್ದಾರೆ.  ಆದರೆ ಈ ಎಲ್ಲ  ಕಥೆಗಳು ಸರಳರೇಖೆಯ ಕಥೆಗಳು ಮಾತ್ರ ಎನ್ನುವುದನ್ನು ಗಮನಿಸಬೇಕು. ಈ ಕಥೆಗಳು ಎಂತಹ ರಹಸ್ಯಮಯ ಕಥೆಗಳೇ ಆಗಿರಲಿ ಅಥವಾ ಕೊನೆಯಲ್ಲಿ ತಿರುವು ಪಡೆದ ಕಥೆಗಳೇ ಆಗಿರಲಿ, ಅವುಗಳ ನಿರೂಪಣೆಯು ಮಾತ್ರ ಹಂತಾನುಹಂತವಾಗಿ ಸಾಗುತ್ತದೆ, ಹೆದ್ದಾರಿಯಲ್ಲಿ ಸುಲಭವಾಗಿ ಸಾಗುವ ರಥದ ಹಾಗೆ. ಆದರೆ ಶ್ರೀದೇವಿಯವರ ಕಥೆಗಳ ವಿಧಾನವೇ ಬೇರೆ. ಅವರ ಶೈಲಿಯನ್ನು ನಾನು ‘ಚಕ್ರಬಂಧ ಶೈಲಿ’ ಎನ್ನಲು ಇಷ್ಟಪಡುತ್ತೇನೆ. ಶ್ರೀದೇವಿಯವರ ಕಥೆಗಳನ್ನು ಓದುತ್ತಾ ಹೋದಂತೆಲ್ಲ, ಕಥೆಯಲ್ಲಿ ಅಡಕವಾಗಿರುವ ಹೊಸ ಹೊಸ ಒಳನೋಟಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ; ಇದು ಸರಳರೇಖೆಯಲ್ಲ, quizzical type ಬರವಣಿಗೆ! ಇಂತಹ ಬರವಣಿಗೆಗೆ ಪ್ರೇರಕವಾಗಿರುವ ವ್ಯಕ್ತಿತ್ವ ಎಂತಹದು ಎನ್ನುವ ಕುತೂಹಲ ಯಾರಲ್ಲಿಯಾದರೂ ಮೂಡುವುದು ಸಹಜವೇ. ನನಗೆ ತಿಳಿದ ಅಲ್ಪಸ್ವಲ್ಪ ಮಾಹಿತಿಯಂತೆ, ನಾನು ಊಹಿಸಿಕೊಂಡದ್ದು ಹೀಗೆ:

ಶ್ರೀದೇವಿಯವರು ಚಿಕ್ಕಂದಿನಿಂದಲೇ ಸಂಗೀತಕ್ಕೆ ಮರುಳಾದವರು. ಸಂಗೀತಕಛೇರಿಯ ಆಸ್ವಾದನೆಗಾಗಿ ತಮ್ಮ ತಂದೆಯವರ (ಡಾ^ ದೇವದಾಸರ) ಜೊತೆಗೆ ಕೋಲಕತ್ತೆಯವರೆಗೆ ಹೋದವರು. ‘ಆಲಾಪಿನಿ’ ಎನ್ನುವ ಹೆಸರುಳ್ಳ ಇವರ ಬ್ಲಾ^ಗ್ ಇವರ ಸಂಗೀತಪ್ರೇಮವನ್ನು ಸ್ಪಷ್ಟಪಡಿಸುತ್ತದೆ. ಇದು ಅಂತರ್ಮುಖೀ ವ್ಯಕ್ತಿತ್ವವನ್ನು ರೂಪಿಸಿದರೆ, ಇವರ ವ್ಯಕ್ತಿತ್ವದ ಇನ್ನೊಂದು ಮುಖವನ್ನು ಉತ್ಸಾಹ ಚಿಮ್ಮುತ್ತಿರುವ Extravert ಮುಖ ಎಂದು ಕರೆಯಬಹುದು. ಜೊತೆಗೇ ತೀಕ್ಷ್ಣ ಬುದ್ಧಿಯ, ಸಂವೇದನಾಶೀಲವಾದ ಹಾಗು ಸಾಮಾಜಿಕಸ್ಪಂದನೆಯ ಮನಸ್ಸು ಇವರಿಗಿದೆ. ಆದುದರಿಂದ Mass communication and journalismಗಳಲ್ಲಿ M.Sc. ಮಾಡಿದ ಇವರಿಗೆ ಇಂತಹ ಕಥಾರಚನೆ ಸಹಜವೇ ಎನ್ನಬಹುದು. ಇವರ ಕಥಾನಿರೂಪಣೆ ಬಹಳ ಸೂಕ್ಷ್ಮವಾದದ್ದು. ಈ ಕಥೆಗಳಲ್ಲಿ ಬರುವ ಪಾತ್ರಗಳ ಮನಸ್ಸು ಎಷ್ಟು ಸೂಕ್ಷ್ಮವೋ, ಕಥೆಗಳ ನಿರೂಪಣೆಯೂ ಸಹ ಅಷ್ಟೇ ಸೂಕ್ಷ್ಮವಾಗಿದೆ. ಇದಕ್ಕೆ ಉದಾಹರಣೆ ಎಂದರೆ ಕಥಾಸಂಕಲನದ ಮೊದಲ ಕಥೆಯಾದ‘ಉಣಕಲ್ ತಂತ್ರ ಸೀಳಿದ ರಾಕೆಟ್’, ನಂತರ ‘ಶಿರಗುಪ್ಪಿ’, ‘ಬ್ರಾ ಕಳಚಿಟ್ಟ ಒಂದು ದಿನ’, ‘ಶಾಕಾಂಬರಿ ಮಹಾತ್ಮೆ’.... ಅಯ್ಯೋ, ಇದೇನು? ನಾನು ಈ ಕಥಾನಕದಲ್ಲಿರುವ ಹತ್ತೂ ಕಥೆಗಳನ್ನು ಉದಾಹರಿಸುತ್ತಿದ್ದೇನೆಯೆ? ಇದರಲ್ಲಿ ತಪ್ಪೇನೂ ಇಲ್ಲ ಬಿಡಿ! ಇಲ್ಲಿರುವ ಹತ್ತೂ ಕಥೆಗಳು ಹೀಗೇ ಇವೆ!

ಇನ್ನು ಕಥೆಗಳ ಭಾಷೆಯ ಬಗೆಗೆ ಒಂದು ಮಾತನ್ನು ಹೇಳಬೇಕು. ಶ್ರೀದೇವಿಯವರು ಪಾತ್ರಗಳ ಮಾತುಕತೆಗಳಲ್ಲಿ ಆಡುಭಾಷೆಯನ್ನು ಅವಶ್ಯವಿದ್ದಲ್ಲಿ ಬಳಸಿಯೇ ಇದ್ದಾರೆ. ಜೊತೆಗೆ ನಿರೂಪಣೆಯಲ್ಲಿಯೂ ಸಹ ಆಡುಮಾತಿನ ವಿಪುಲತೆಯನ್ನು ಕಾಣಬಹುದು. ಆದರೆ ಈ ಭಾಷೆ, ಈ ಶೈಲಿ ಇವೆಲ್ಲ ಕಥೆಯ ಹೊರಗಿನ ಉಡುಗೆ-ತೊಡುಗೆಗಳು.  ಕಥೆಯ ಅಂತರಾಳವೇ ಮುಖ್ಯವಾದದ್ದು. ಕಥೆಗಳಲ್ಲಿ ಬರುವ ಪಾತ್ರಗಳ ಮನಸ್ಸನ್ನು ಹುಡುಕುವ ಪ್ರಯತ್ನವೇ ಈ ಕಥೆಗಳ ಪ್ರಮುಖ ಅಂಶವಾಗಿದೆ. ಈ ಎಲ್ಲ ಕಥೆಗಳಲ್ಲಿಯ ಪಾತ್ರಗಳೆಲ್ಲವೂ ಮಾನಸಿಕ ತೊಳಲಾಟದಿಂದ ಬಳಲುತ್ತಿರುವ ಪಾತ್ರಗಳೇ.  ಬಹುಶಃ ಶ್ರೀದೇವಿಯವರನ್ನೂ ಸಹ ತಮ್ಮ ಕಥೆಗಳ ಪಾತ್ರಗಳ ಮನಃಸ್ಥಿತಿಯು ಸಾಕಷ್ಟು ಕಾಡಿರಬಹುದು. ಕಥೆಗಳನ್ನು ಬರೆದು ಮುಗಿಸಿದ ನಂತರ, ಶ್ರೀದೇವಿಯವರ ಮನಸ್ಸು ಹಗುರಾಗಿರಬಹುದು, ಮನೋರೋಗಿಯನ್ನು ಗುಣಪಡಿಸಿದ ಮನೋವೈದ್ಯರ ಹಾಗೆ!  

ಇನ್ನೊಂದು ಮಾತನ್ನು ಇಲ್ಲಿ ಹೇಳಿದರೆ ಅಪ್ರಸ್ತುತವಾಗಲಾರದು. ಶ್ರೀದೇವಿಯವರು ಕಥೆಗಾರ್ತಿಯಷ್ಟೇ ಅಲ್ಲ, ಬಹುಮುಖ ಪ್ರತಿಭೆಯ ವ್ಯಕ್ತಿಯಾಗಿದ್ದಾರೆ. ‘tv9’ರ ಸಾಹಿತ್ಯವಿಭಾಗದಲ್ಲಿ ಇವರು ನಿಯತವಾಗಿ ಸಂಪಾದಿಸಿ, ಪ್ರಕಟಿಸುವ ಕಥೆಗಳು, ಭಾಷಾಂತರಗಳು ಹಾಗು ಇತರ ಲೇಖನಗಳು ಮೌಲ್ಯಭರಿತವಾಗಿವೆ. ಇನ್ನು ಓರ್ವ ವ್ಯಕ್ತಿಯ ಸಂದರ್ಶನವನ್ನು ಹೇಗೆ ಮಾಡಬೇಕು ಎಂದು ತಿಳಿಯಬೇಕಾದರೆ ಇವರು ಮಾಡಿದ ರಾಜೀವ ತಾರಾನಾಥರ ಹಾಗು ಯು.ಆರ್. ಅನಂತಮುರ್ತಿಯವರ ಸಂದರ್ಶನಗಳನ್ನು ಓದಬೇಕು.

ಶ್ರೀದೇವಿಯವರ ಮೊಟ್ಟಮೊದಲ ಕಥಾಸಂಕಲನ ‘ಯಂಕ್ ಪೋಸ್ಟ್’ ಹತ್ತು ಕಥೆಗಳುಳ್ಳ ಕಥಾಸಂಕಲನ. ಇದನ್ನು ಧಾರವಾಡದಲ್ಲಿರುವ ಕನ್ನಡದ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಯಾದ ‘ಮನೋಹರ ಗ್ರಂಥಮಾಲಾ’ ಪ್ರಕಟಿಸಿದೆ. ಈ ಎಲ್ಲ ಕಥೆಗಳು ಈಗಾಗಲೇ ಕನ್ನಡದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟವಾದಂತಹ ಕಥೆಗಳೇ. ಶ್ರೀದೇವಿಯವರಿಂದ ಇಂತಹ ಉತ್ತಮ ಕಥೆಗಳು ಇನ್ನಷ್ಟು ಬರಲಿ ಹಾಗು ಓದುಗರನ್ನು ತಣಿಸಲಿ ಎಂದು ಆಶಿಸುತ್ತ, ಈ ಯುವ ಲೇಖಕಿಗೆ ಶುಭ ಹಾರೈಸುತ್ತೇನೆ!


ಹೆಚ್ಚಿನ ಮಾಹಿತಿಗಾಗಿ ಮನೋಹರ ಗ್ರಂಥಮಾಲಾ, ಕೆ.ಸಿ.ಸಿ.ಬ್ಯಾಂಕ ಹತ್ತಿರ, ಧಾರವಾಡ ಇವರನ್ನು ಸಂಪರ್ಕಿಸಬಹುದು.

Saturday, November 19, 2022

The Pollen Waits On Tiptoe (Translations of Bendre's poems into English)....Madhav Ajjampur

 The Pollen waits on Tiptoe’  ಇದು ಅಂಬಿಕಾತನಯದತ್ತರ ೨೬ ಕವನಗಳ ಸಂಕಲನ. ಆಶ್ಚರ್ಯವಾಯಿತೆ? ಬೇಂದ್ರೆಯವರು ಇಂಗ್ಲೀಶಿನಲ್ಲಿ ಯಾವಾಗ ಬರೆದರು , ಎಂದು? ಈ ಕವನಗಳು ಬೇಂದ್ರೆಯವರ ೨೬ ಕನ್ನಡ ಕವನಗಳ ಇಂಗ್ಲಿಶ ಭಾಷಾಂತರ. ಮತ್ತಿಷ್ಟು ಆಶ್ಚರ್ಯವಾಯಿತೆ? ಏಕೆಂದರೆ ಅಂಬಿಕಾತನಯದತ್ತರ ಕಾವ್ಯವೆಂದರೆ ಮಹಾಸಾಗರ. ಆ ಮಹಾಸಾಗರದ ಆಳವನ್ನು ಹಾಗು ವಿಸ್ತಾರವನ್ನು ಕಂಡವರಿಲ್ಲ; ಹಾಗಿದ್ದಾಗ, ಈ ಕವನಗಳನ್ನು ಭಾಷಾಂತರ ಮಾಡಿದ ಸಾಹಸಿ ಯಾರು, ಎಂದು? ಅವರು ಶ್ರೀ ಮಾಧವ ಅಜ್ಜಂಪುರ ಎನ್ನುವ ತರುಣ ಬೇಂದ್ರೆಭಕ್ತರು. ವಾಸ್ತವದಲ್ಲಿ, ಮಾಧವ ಅಜ್ಜಂಪುರರು ಕನ್ನಡಕ್ಕೆ ಹತ್ತಿರವಾದದ್ದೇ ಬೇಂದ್ರೆಯವರ ಮುಖಾಂತರ. ಅವರ ಕವನಗಳ ‘ನಾದ’ವು ಅವರನ್ನು ಆಕರ್ಷಿಸಿದ್ದರಿಂದಲೇ, ತಾವು ಬೇಂದ್ರೆಯವರ ಕವನಗಳಿಗೆ ಮರುಳರಾದರು ಎಂದು ಮಾಧವ ಅಜ್ಜಂಪುರರು ಹೇಳಿಕೊಂಡಿದ್ದಾರೆ!

ನಾನು ‘ಅನುವಾದ’ ಎನ್ನುವ ಪದವನ್ನು ಬಳಸದೆ, ಭಾಷಾಂತರ ಎನ್ನುವ ಪದವನ್ನು ಬೇಕೆಂದೇ ಬಳಸಿದ್ದೇನೆ. ಅನುವಾದದಲ್ಲಿ ಕೇವಲ ಅನುಸರಿಸುವ ಛಾಯೆ ಇರುತ್ತದೆ. ಆದರೆ,  ‘ಭಾಷಾಂತರ’ ಪದವು ‘ಅನ್ಯೋ ಭಾಷಾ ಭಾಷಾಂತರಮ್ ಎಂದು ಹೇಳಲ್ಪಟ್ಟಿದೆ. ಅಂದರೆ ಕನ್ನಡದ ಈ ಕವನಗಳ ಭಾಷೆಯಷ್ಟೇ ಇಲ್ಲಿ ಬೇರೆಯಾಗಿದೆ, ಅರ್ಥಾತ್ ಇಂಗ್ಲಿಶ್ ಆಗಿದೆ, ಆದರೆ ಭಾವ, ಧ್ವನಿ, ನಾದ ಇವೆಲ್ಲ ಮೂಲ ಕನ್ನಡಕ್ಕೆ ಅತಿ ಹತ್ತಿರವಾಗಿವೆ. ಈ ಸಾಹಸಕ್ಕೆ ಶ್ರೀ ಮಾಧವ ಅಜ್ಜಂಪುರರು ಅತ್ಯಂತ ಸಮರ್ಥರೇ ಆಗಿದ್ದಾರೆ. ಇಂಗ್ಲಂಡ ಹಾಗು ಅಮೇರಿಕಾದಲ್ಲಿ ಅಧ್ಯಯನವನ್ನು ಮಾಡಿದ ಇವರು ಇಂಗ್ಲಿಶನ್ನು ಕಂಠಗತ ಮಾಡಿಕೂಂಡಿದ್ದಾರೆ, ಹಾಗು ಕನ್ನಡವಂತೂ ಇವರಿಗೆ ರಕ್ತಗತವೇ ಆಗಿದೆ! ಇದಷ್ಟೇ ಆದರೆ ಸಾಕೆ, ಅಂಬಿಕಾತನಯದತ್ತರನ್ನು ಭಾಷಾಂತರಿಸಲಿಕ್ಕೆ? ಮಾಧವ ಅಜ್ಜಂಪುರರಲ್ಲಿ passion ಇದೆ, ಬೇಂದ್ರೆಯವರ ಬಗೆಗೆ ಹಾಗು ಕನ್ನಡದ ಬಗೆಗೆ! 

ಮಾಧವ ಅಜ್ಜಂಪುರರ ಭಾಷಾಂತರದ ವೈಶಿಷ್ಟ್ಯಗಳೆಂದರೆ ಮೂಲ ಕವನದ ಭಾವ, ಗತಿ ಹಾಗು ನಾದಗಳನ್ನು ಸಾಧ್ಯವಾದ ಮಟ್ಟಿಗೂ ತಮ್ಮ ಭಾಷಾಂತರದಲ್ಲಿ ಉಳಿಸಿಕೊಂಡಿದ್ದಾರೆ. ಕೆಲವೊಮ್ಮೆ word to word ಭಾಷಾಂತರ ಮಾಡದೆ, ಭಾವಪ್ರವಾಹವನ್ನು ಬಳಸಿಕೊಂಡಿದ್ದಾರೆ. ಈ ಮಾತನ್ನು ಇವರ ಭಾಷಾಂತರದ ಶೀರ್ಷಿಕೆಗಳಿಗೂ ಅನ್ವಯಿಸಬಹುದು. ಉದಾಹರಣೆಗೆ, ‘ಪರಾಗ’ ಎನ್ನುವ ಕವನವನ್ನು ನೋಡಿರಿ. ಈ ಶೀರ್ಷಿಕೆಯನ್ನು ಮಾಧವ ಅಜ್ಜಂಫುರರು The Pollen Waits On Tiptoe ಎಂದು ಮಾಡಿದ್ದಾರೆ. ಮೂಲಕವನದಲ್ಲಿ ಹೂವು ಭೃಂಗಕ್ಕಾಗಿ ಕಾತುರದಿಂದ ಕಾಯುತ್ತಿರುವ ಹಾಗು ಆಹ್ವಾನಿಸುತ್ತಿರುವ ಭಾವವಿದೆ. ಈ ಕವನದ ಶೀರ್ಷಿಕೆಯನ್ನು ಮೂಲಕವನದ ‘ಪರಾಗ’ಕ್ಕೆ ಸಂವಾದಿಯಾಗಿ, ‘Pollen’ ಎಂದು ಭಾಷಾಂತರಿಸಿದ್ದರೆ, ಆ ಹೂವಿನ ಕಾತುರದ ಕಲ್ಪನೆಯು ನಮ್ಮ ಅನುಭವಕ್ಕೆ ಬಹುಶಃ ಬರುತ್ತಿರಲಿಲ್ಲ. ಇದೀಗ, The Pollen Waits On Tiptoe ಎಂದು ಹೇಳುವ ಮೂಲಕ, ಮೂಲಕವನದಲ್ಲಿರುವ ಕಾತುರವನ್ನು ಮಾಧವ ಅಜ್ಜಂಪುರರು ಸಮರ್ಥವಾಗಿ ತಮ್ಮ ಭಾಷಾಂತರದಲ್ಲಿ ತಂದಿದ್ದಾರೆ. ಆದುದರಿಂದಲೇ, ಮಾಧವ ಅಜ್ಜಂಪುರರು ತಮ್ಮ ಭಾಷಾಂತರಗಳನ್ನು translation ಎಂದು ಕರೆಯದೆ, ‘trans-creation’ ಎಂದು ಕರೆದಿದ್ದಾರೆ.

ಮೂಲ ಕವನಗಳಲ್ಲಿ ಅನೇಕ ಸಾಂಸ್ಕೃತಿಕ ಪದಗಳಿವೆ. ಪ್ರಾದೇಶಿಕ ವೈಶಿಷ್ಟ್ಯದ ಹಾಗು ಜಾನಪದ ವೈಶಿಷ್ಟ್ಯದ ಪದಗಳೂ ಇವೆ. ಕನ್ನಡೇತರ ಓದುಗರಿಗೆ ಇವು ಅರ್ಥವಾಗಲಿಕ್ಕಿಲ್ಲ. ಆದುದರಿಂದ ಮಾಧವರು ಕವನಗಳ ನಂತರದಲ್ಲಿ Glossaryಯನ್ನು ಕೊಟ್ಟು, ಅದರಲ್ಲಿ ಈ ಪದಗಳ ಬಗೆಗೆ ವಿವರಣೆಯನ್ನು ನೀಡಿದ್ದಾರೆ. ಇದು ಎಲ್ಲ ಓದುಗರಿಗೂ ಉಪಯುಕ್ತವಾದ ಟಿಪ್ಪಣಿಯಾಗಿದೆ.

ಇದಾದ ಬಳಿಕ, ಮಾಧವ ಅಜ್ಜಂಪುರರು ಪ್ರತಿಯೊಂದು ಕವನದ ಸಂದರ್ಭ ಹಾಗು ವೈಶಿಷ್ಟ್ಯವನ್ನು ತಮ್ಮ Introduction ಎನ್ನುವ ಲೇಖನಗಳಲ್ಲಿ ವಿವರಿಸಿದ್ದಾರೆ. (ಈ Introduction ಕವನಗಳ ಮೊದಲಲ್ಲಿ ಅಲ್ಲ, ಕೊನೆಯಲ್ಲಿ ಬರುತ್ತದೆ!) ಕವನದ ಒಳಹೊಕ್ಕು ನೊಡಬಯಸುವ ಓದುಗರಿಗೆ ಇದು ಅತಿ ಉಪಯುಕ್ತವಾದ ಟಿಪ್ಪಣಿಯಾಗಿದೆ. ಈ ಸಂದರ್ಭದಲ್ಲಿ ಮಾಧವ ಅಜ್ಜಂಪುರರು ಮತ್ತೊಂದು ಮಹತ್ವದ ಕಾರ್ಯವನ್ನು ಮಾಡಿದ್ದಾರೆ. ಕೇವಲ ಬೇಂದ್ರೆಯವರ ಕಾವ್ಯವನ್ನಷ್ಟೇ ಅಲ್ಲ, ಸ್ವತಃ ಬೇಂದ್ರೆಯವರನ್ನೂ ಸಹ ಮಾಧವ ಅಜ್ಜಂಪುರರು ಒಳಹೊಕ್ಕು ನೋಡಿದ್ದಾರೆ. ಉದಾಹರಣೆಗೆ, Song Essence ಎನ್ನುವ ಕವನಕ್ಕೆ ಬರೆದ ಅವರ Introductionದಲ್ಲಿ ಮಾಧವ ಅಜ್ಜಂಪುರರು ಬೇಂದೆಯವರ ದೃಷ್ಟಿಯಲ್ಲಿ ಕವಿ ಹಾಗು ರಸಿಕ ಇವರ ನಡುವಿನ ಸಹೃದಯ ಸಂಬಂಧವನ್ನು ವಿವರಿಸಿದ್ದಾರೆ. ಕವಿಗೆ ಸಹೃದಯ ರಸಿಕ ಓದುಗನು ಬೇಕೇ ಬೇಕು. ಅಂತಹ ರಸಿಕನಿಗೆ ಬೇಂದ್ರೆಯವರಂತಹ ಕವಿ ಬೇಕು. ಅಂದರೆ ಮಾತ್ರ ಕಾವ್ಯದ ಸೃಷ್ಟಿಯಾಗುತ್ತದೆ. ಇದು ಬೇಂದ್ರೆಯವರ ಮನೋಧರ್ಮ. ಬೇಂದ್ರೆ ಹಾಗು ಅಜ್ಜಂಪುರ ಇವರಲ್ಲಿ ನಾವು ಇಂತಹ ಕವಿ ಹಾಗು ಸಹೃದಯ ರಸಿಕರನ್ನು ನೋಡಬಹುದು. ಆದುದರಿಂದಲೇ ಮಾಧವ ಅಜ್ಜಂಪುರ ಅವರಿಗೆ ಬೇಂದ್ರೆಯವರ ೨೬ ಕವನಗಳ ಅನು-ನಿರ್ಮಾಣ (trans-creation) ಮಾಡಲು ಸಾಧ್ಯವಾಗಿದೆ. (ಇವು ಇನ್ನಷ್ಟು ಹೆಚ್ಚಾಗಲಿ ಎಂದು ಹಾರೈಸುತ್ತೇನೆ.)

ಈ ಕೃತಿಯ ಇನ್ನೊಂದು ಹೆಚ್ಚುಗಾರಿಕೆ ಎಂದರೆ, ಕವನದ ನಾದವನ್ನು ಆಸಕ್ತ ಓದುಗರಿಗೆ ತಲುಪಿಸುವ ಉದ್ದೇಶದಿಂದ ಮಾಧವ ಅಜ್ಜಂಪುರರು ಪ್ರತಿಯೊಂದು ಕನ್ನಡ ಕವನವನ್ನು ಹಾಗು ಇಂಗ್ಲಿಶ್ ಭಾಷಾಂತರವನ್ನು ಸ್ವತಃ ತಾವೇ ಹಾಡಿದ್ದಾರೆ. (ಪ್ರತಿ ಕವನದ ಮೊದಲ ಪುಟದಲ್ಲಿ ಕೊಟ್ಟಿರುವಂತಹ QR codeದ ಮೂಲಕ ಈ ಹಾಡುಗಳನ್ನು ಕೇಳಬಹುದು.) ಇದು ಕನ್ನಡ ಸಾಹಿತ್ಯದಲ್ಲಿ ಹೊಚ್ಚಹೊಸ ಸಾಹಸ, ಮೊಟ್ಟ ಮೊದಲ ಸಾಹಸ! ಅವರ ಹಾಡುಗಾರಿಕೆಯು ಕವನಗಳನ್ನು ಅರ್ಥೈಸಿಕೊಳ್ಳಲು ತುಂಬ ಅನುಕೂಲವಾಗಿದೆ. ಇದು ತಮಗೆಲ್ಲರಿಗೂ ಮೆಚ್ಚುಗೆಯಾಗುವುದೆನ್ನುವ ವಿಶ್ವಾಸ ನನಗಿದೆ.

ಮಾಧವ ಅಜ್ಜಂಪುರರು ಈ ಕೃತಿಯ ಮೊದಲಲ್ಲಿ ಬೇಂದ್ರೆಯವರಿಗೆ ಒಂದು ನುಡಿನಮನವನ್ನು ಅರ್ಪಿಸಿದ್ದಾರೆ. (To Bendre Ajja—In Gratitude) ಹನ್ನೆರಡು ನುಡಿಗಳ ಈ ಇಂಗ್ಲಿಶ್ ಚೌಪದಿಯ ಕೊನೆಯ ಸಾಲು ಓರ್ವ ಕವಿಯ ಹಾಗು ಅವನ ಕಾವ್ಯದ ಸಾರ್ಥಕ್ಯವನ್ನು ಬಿಚ್ಚಿಡುತ್ತದೆ. ಬೇಂದ್ರೆಯವರಿಗೆ ‘ಅಜ್ಜಾ’ ಎಂದು ಸಂಬೋಧಿಸುವ ಈ ಕವನದ ಕೊನೆಯ ಸಾಲು ಹಿಗಿದೆ:

I sat close by and listened---and sang in celebration’.

ನೋಡಿ, ಬೇಂದ್ರೆಯವರ ಕಾವ್ಯವು ರಸಿಕನನ್ನು ಸ್ಫೂರ್ತಿಸುವ ಬಗೆ ಎಂದರೆ ಹೀಗೆ: ರಸಿಕನಲ್ಲೂ ಸಹ ‘ಹಾಡು’ ಹುಟ್ಟಬೇಕು!  ನಿಜ ಹೇಳಬೇಕೆಂದರೆ, ಇದು ಯಾವುದೇ ಕವಿಗೆ ಹಾಗು ಯಾವುದೇ ರಸಿಕನಿಗೆ ಅನ್ವಯಿಸುವಂತಹ ಮಾತು. ಮಾಧವ ಅಜ್ಜಂಪುರರು ಈ ಸಾಲನ್ನು ಬರೆದಿರುವರೆಂದರೆ, ಇದು ಬೇಂದ್ರೆಯವರ ಕಾವ್ಯದ ಸಾರ್ಥಕ್ಯವನ್ನು ಹಾಗು ಮಾಧವ ಅಜ್ಜಂಪುರರಲ್ಲಿ ಬೇಂದ್ರೆಯವರ ಕಾವ್ಯಾನುಭವದ ಸಾರ್ಥಕ್ಯವನ್ನು ಹಾಗು  ಸ್ಫೂರ್ತ ಆನಂದವನ್ನು ತೋರುತ್ತದೆ. ಬೇಂದ್ರೆಯವರಲ್ಲಿ ಕಾವ್ಯ ಹುಟ್ಟಿದಂತೆಯೇ ಮಾಧವ ಅಜ್ಜಂಪುರರಲ್ಲಿಯೂ ಕವನವು ಸ್ಫೂರ್ತಿಸಿದೆ. (To Bendre Ajja—In Gratitude).

ಬೇಂದ್ರೆಯವರ ಕನ್ನಡ ಕವನಗಳನ್ನು ಈಗಾಗಲೇ ಓದಿದವರೂ ಸಹ ಈ ಇಂಗ್ಲಿಶ್ ಭಾಷಾಂತರವನ್ನು ಪ್ರಿತಿಯಿಂದ ಓದಿ ಆನಂದಪಡಬಹುದು. ಹೆಚ್ಚಿನ ವಿವರಗಳಿಗಾಗಿ ಮಾಧವ ಅಜ್ಜಂಪುರರನ್ನು ಈ ಕೊಂಡಿಯಲ್ಲಿ ಸಂಪರ್ಕಿಸಬಹುದು:mk.ajjampur@gmail.com

Monday, October 10, 2022

`ಇಳೆ ಎಂದರೆ ಬರಿ ಮಣ್ಣಲ್ಲ'..........ದ. ರಾ. ಬೇಂದ್ರೆ

      " ಇಳೆ ಎಂದರೆ ಬರಿ ಮಣ್ಣಲ್ಲ

ನಮಗೋ ನೋಡುವ ಕಣ್ಣಿಲ್ಲ

ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.

ಮೈಯೊಳು ಮಲಗಿದ ಆಳೆದ್ದರೆ ಬಾನೇ ಮನೆಯಲ್ಲೇ.

            ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ.

 

ಅಣ್ಣ ತಮ್ಮದಿರು ತಮ್ಮ ತಮ್ಮೊಳಗೆ ಕಾದಾಡಲು ಬೇಕೆ?

ನಲುಮೆಯ ನೀರನು ಕೆನ್ನೀರೆನ್ನುತಾ ಚೆಲ್ಲಾಡುವಿರೇಕೆ?

            ಮಣ್ಣಲಿ ನೀರಲಿ ಸೂರ್ಯನ ಕಿರಣ

            ಚಿತ್ರಿತವಾಗಲಿ ಅಪಾರವರಣ

ಬಾನುಲಿಯಲಿ ಮಾತಾಡುವ ಬನ್ನಿ ಗಾಳಿದೇರನೇರಿ

ರಸ ಮೀರಿ ರಸವೇರಿ ರಸರಸಿಕರು ಸೇರಿ

          ಅಕಾಂಡ ತಾಂಡವವೇತಕ್ಕೆ

            ಲಾಸ್ಯವೆ ಸಾಕು ಈತಕ್ಕೆ

ನಂದಾದೀಪದ ನಡೆಮಾಡಗಳೇ ಸಂಚರಿಸುವ ಹಾಗೆ

ಜೀವಜೀವಗಳ ಕಾರ್ತಿಕೋತ್ಸವವು ಮೊದಲಾಗಲಿ ಮೇಗೆ.

            ಋತುಗಳು  ನಡೆಸಲಿ ರಿಂಗಣಗುಣಿತ

            ಜೀವ ನುಡಿಸುತಿರೆ ವೀಣಾಕ್ವಣಿತ

ಮಾಲೆಯು ಕೊರಳಿಗೆ ಜೋತಿರುವಂತೆ ಹೃದಯಕೆ ಬಂದಾತು

ಸುಗ್ಗಿಯು ನೆಲವನೆ ಸುತ್ತುತ್ತಿರಲಿ ಮಧುಲೀಲೆಗೆ ಸೋತು. "

 ************************************

ಈ ಕವನದ ಅರ್ಥವನ್ನೇ ಬಿಂಬಿಸುವ ಬೇಂದ್ರೆಯವರ ಮತ್ತೊಂದು ಪುಟ್ಟ –ಆದರೆ ಮಹತ್ವಪೂರ್ಣ ಕವನ : ‘ಬೈರಾಗಿಯ ಹಾಡು’ ಅವರ ‘ಸಖೀಗೀತ’ ಸಂಗ್ರಹದಲ್ಲಿದೆ:

 

ಇಕೋ ನೆಲ- ಅಕೋ ಜಲ

ಅದರ ಮೇಲೆ ಮರದ ಫಲ

ಮನದೊಳಿದೆ ಪಡೆವ ಛಲ

ಬೆಳೆದವಗೆ ನೆಲವೆಲ್ಲ ಹೊಲ.

 

ಜಲಧಿವರೆಗು ಒಂದೆ ಕುಲ

ಅನ್ನವೆ ಧರ್ಮದ ಮೂಲ

ಪ್ರೀತಿಯೆ ಮೋಕ್ಷಕ್ಕೆ ಬಲ

ಇದೇ ಶೀಲ ಸರ್ವಕಾಲ    ||ಇಕೋ ನೆಲ....

**************************************************

ಬೇಂದ್ರೆಯವರ ಕವನಗಳು ಓದಲು ಎಷ್ಟು ಸರಳವಾಗಿರುವವೋ, ರಸಗ್ರಹಣಕ್ಕೆ ಅಷ್ಟೇ ಸಂಕೀರ್ಣವಾಗಿರುತ್ತವೆ. `ಇಳೆ ಎಂದರೆ ಬರಿ ಮಣ್ಣಲ್ಲ’ ಎನ್ನುವ ಕವನವೂ ಸಹ ರಸಪೂರ್ಣವಾದ ಹಾಗು ಅರ್ಥಗರ್ಭಿತವಾದ ಕವನವಾಗಿದೆ. ಕವನದ ಮೊದಲಿನ ಎರಡು ಸಾಲುಗಳಲ್ಲಿಯೇ ಬೇಂದ್ರೆಯವರು ಮಾನವನ ದೃಷ್ಟಿದೋಷವನ್ನು ತೋರಿಸುತ್ತಿದ್ದಾರೆ. ನಾವು ಭೂಮಿಗೆ ‘ಭೂತಾಯಿ’ ಎಂದು ಕರೆಯುತ್ತೇವೆ. ಆದರೆ ವ್ಯವಹಾರಕ್ಕೆ ಬಂದಾಗ ನಮ್ಮ ಮಟ್ಟಿಗೆ ಭೂಮಿ ಎಂದರೆ ಬರಿ ಕೊಡಕೊಳ್ಳುವ ಜಮೀನು ಮಾತ್ರ.

“ಇಳೆ ಎಂದರೆ ಬರಿ ಮಣ್ಣಲ್ಲ

ನಮಗೋ ನೋಡುವ ಕಣ್ಣಿಲ್ಲ

ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಈ ದೃಷ್ಟಿದೋಷವನ್ನು ತಿದ್ದುವ ಉದ್ದೇಶದಿಂದ ಬೇಂದ್ರೆಯವರು ‘ನಮಗೋ ನೋಡುವ ಕಣ್ಣಿಲ್ಲ’ ಎಂದು ಹೇಳುತ್ತಿದ್ದಾರೆ. ಈ ಭೂಮಿಯು ಎಲ್ಲರದೂ ಕರ್ಮಭೂಮಿಯಾದಾಗ ಮಾತ್ರ,

“ಏಸು ತಿಂದರೂ ತೀರದಿದೆ.

ಏಸು ತುಂಬಿಯೂ ಮೀರದಿದೆ.

ಹೊನ್ನು, ಹೆಣ್ಣು, ಮಣ್ಣು ಇವು ಪುರುಷನ ಸ್ವಾರ್ಥಮೂಲ ಪ್ರಲೋಭನಗಳು. ನಮಗೆ ಅನ್ನ ಕೊಡುವ ಈ ತಾಯಿಯನ್ನು ನಾವು ಕೇವಲ ಮಣ್ಣು ಎಂದು ಭಾವಿಸಿ, ಅವಳ ಮೇಲಿನ ಅಧಿಪತ್ಯಕ್ಕಾಗಿ ಕಾದಾಡುತ್ತಿದ್ದೇವೆ.

ಇಲ್ಲಿಯವರೆಗೆ ಈ ಮಣ್ಣಿನ ಅಂದರೆ ಭೂಮಿಯ ಮೇಲೆ ನಡೆದ ಹೋರಾಟಗಳೆಲ್ಲವೂ ಮಣ್ಣಿಗಾಗಿ ಅಂದರೆ ಭೂಮಿಯ ಒಡೆತನಕ್ಕಾಗಿ ನಡೆದ ಹೋರಾಟಗಳಾಗಿವೆ. ಭೂಮಿತಾಯಿಯ ಮಕ್ಕಳಾದ ನಾವು ಭೂಮಿಯ ಮೇಲೆ ಆಧಿಪತ್ಯವನ್ನು ಸ್ಥಾಪಿಸಿ, ಭೂಪತಿಗಳಾಗುವದೆಂದರೆ `ತಾಯಿಗ್ಗಂಡರಾದಂತೆ!

(‘ನಾದಲೀಲೆ’ ಕವನಸಂಕಲನದಲ್ಲಿಯ “ಮೊದಲಗಿತ್ತಿ” ಕವನ:

ಪಾತಾಳ ಕಂಡರು ಕೆಲ ತಾಯಿಗ್ಗಂಡರು

ಅವರನ್ನೂ ಮಡಿಲಾಗ ಮಡಗಿಸಿಹೆ.”

‘ಮಡಿಲಾಗ’ ಎನ್ನುವ ಪದದಲ್ಲಿ ಇರುವ ಶ್ಲೇಷೆಯನ್ನು ಗಮನಿಸಿರಿ.)

 

ಈ ಭೂಮಿಯನ್ನು ನಾವು ತಾಯಿಯಂತೆ ತಿಳಿದರೆ, ನಾವೆಲ್ಲರೂ ಅಣ್ಣ-ತಮ್ಮಂದಿರಲ್ಲವೆ? ನಮ್ಮೆಲ್ಲ ಸೋದರರಿಗೂ ನಾವು ಪಾಲು ಕೊಡಲೇ ಬೇಕಲ್ಲವೆ? ಎಲ್ಲರಿಗೂ ಸಮಪಾಲು ಕೊಟ್ಟರೆ, ನಮಗೇನು ಉಳಿಯುತ್ತದೆ ಎಂದು ದಿಗಿಲುಗೊಳ್ಳಬೇಕಾಗಿಲ್ಲ. ಏಕೆಂದರೆ ಭೂಮಿಯ ಒಡಲಲ್ಲಿ, ಏಸು ತಿಂದರೂ ತೀರದಿದೆ. ಏಸು ತುಂಬಿಯೂ ಮೀರದಿದೆ.’

 

ಸರಿ,ಈ ಮಾತಿನ ಅರ್ಥವೇನು? ಎಲ್ಲರಿಗೂ ಸಾಕಾಗುವಷ್ಟು ಅನ್ನ ಭೂಮಿಯಲ್ಲಿದೆ. ಮತ್ತು ಮಾನವಕುಲಕ್ಕೆ ಬೇಕಾದಷ್ಟು ನೀಡಿಯೂ ಸಹ ಭೂತಾಯಿಯ ಒಡಲನ್ನು ಮೀರಿ ಹೊರಚೆಲ್ಲದಷ್ಟು ಅವಳ ಒಡಲು ವಿಶಾಲವಾಗಿದೆ. ಈ ಅನ್ನವನ್ನು ಎಲ್ಲರೂ ಹಂಚಿಕೊಂಡು ಉಣ್ಣಬೇಕಷ್ಟೆ.

 

“ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.

ಮೈಯೊಳು ಮಲಗಿದ ಆ ಆಳೆದ್ದರೆ ಬಾನೇ ಮನೆಯಲ್ಲೇ.

            ಈ ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ ”.

ಭೂತಾಯಿಯ ವೈಭವಕ್ಕೆ ಕೊನೆಯೇ ಇಲ್ಲ, ಕೊರತೆಯೇ ಇಲ್ಲ! ಆದುದರಿಂದ ಬೇಂದ್ರೆ ಹೇಳುತ್ತಾರೆ:

‘ಅಮೃತವೆಂಬುದೂ ಅನಂತವೆಂಬುದು ಕಾಲಲ್ಲೇ ಇಲ್ಲೇ.’ ಅಮೃತ ಹಾಗು ಅನಂತ ಇವು ದೇವರ ಉಪಾಧಿಗಳು. (Immortal Infinite) ಅವು ಮಾನವನ ಕಾಲಿನಲ್ಲಿಯೇ ಇವೆ. ಏನಿದರಿದರರ್ಥ?

 

‘ಕಾಲಲ್ಲೇ ಇಲ್ಲೆ’ ಎನ್ನುವ ಮಾತಿನಲ್ಲಿ ಅಡಗಿದ ವಿವಿಧ ಅರ್ಥಗಳನ್ನು ಗಮನಿಸಿ. ನಮ್ಮ ಕಾಲುಗಳನ್ನು ಭೂಮಿಯಲ್ಲಿ ಒತ್ತಿ ನಾವು ದುಡಿದಾಗಲೇ, ನಮಗೆ ಅಮೃತ ಸಿಗುತ್ತದೆ. ಇಲ್ಲಿ ಕಾಲು ಎನ್ನುವುದು ಕಾರ್ಯಸೂಚಕವಾಯಿತು. ‘ಕಾಲ’ ಎಂದರೆ ಸಮಯ ಎನ್ನುವ ಅರ್ಥವೂ ಇದೆಯಲ್ಲವೆ? ಅನಂತವು ನಮ್ಮ ಕಾಲಲ್ಲೇ ಇದೆ ಎಂದರೆ, ‘ಆನಂತಕಾಲದವರೆಗೆ’ ಎನ್ನುವ ಅರ್ಥವೂ ಬಂದಂತಾಯಿತು.

ಭೂತಾಯಿ ನಮಗಾಗಿ ತನ್ನ ಅಮೃತದಂತಹ ಕೊಡುಗೆಯನ್ನು ಅನಂತಕಾಲದವರೆಗೆ ನೀಡಲು ಸಿದ್ಧಳಾಗಿದ್ದಾಳೆ. ಆದರೆ, ಈ ಸಾಧನೆಗಾಗಿ ಮಾನವನು ಮಾಡಬೇಕಾದದ್ದೇನು?

 

‘ಮೈಯೊಳು ಮಲಗಿದ ಆ ಆಳೆದ್ದರೆ ಬಾನೇ ಮನೆಯಲ್ಲೇ.ʼ ಈ ಸಂಕೀರ್ಣ ವಾಕ್ಯವು ವಿವಿಧ ಅರ್ಥಗಳ ವ್ಯಾಪ್ತಿಯುಳ್ಳದ್ದಾಗಿದೆ.  ಇದರ ಸಾಮಾನ್ಯ ಅರ್ಥವೇನೆಂದರೆ, ಮನುಷ್ಯನ ಪ್ರಯತ್ನಕ್ಕೆ ಕೊನೆಯಿಲ್ಲ, ಬಾನೇ ಆತನ ಮನೆ. (Sky is the limit!) ಎರಡನೆಯ ಅರ್ಥವೆಂದರೆ ಮಾನವನು ಇನ್ನೂ ಸುಪ್ತಾವಸ್ಥೆಯಲ್ಲಿಯೇ ಇರುವನೆಂಬುದರ ಸೂಚನೆಯಾಗಿದೆ ಇದೆ. ಈತನು ಎಚ್ಚತ್ತು ವಿವೇಕ ಬುದ್ಧಿಯವನಾದರೆ, ಆಕಾಶವೇ ಈತನ ಮನೆಯಾಗುತ್ತದೆ. ಇನ್ನು ಮೂರನೆಯ ಅರ್ಥವೊಂದನ್ನು ನೋಡೊಣ> ಅದು ಆಧ್ಯಾತ್ಮಿಕ ಅರ್ಥ:

 

ಸಂಸ್ಕೃತ ವೈಯಾಕರಣಿಗಳು ‘ಪುರುಷ’ ಪದವನ್ನು ‘ಪುರೇ ಶೇತಿ’ ಅಂದರೆ ‘ಶರೀರದಲ್ಲಿ ಮಲಗಿಕೊಂಡವನು’ ಎಂದು ಅರ್ಥೈಸುತ್ತಾರೆ. ‘ಮೈಯೊಳಗೆ ಮಲಗಿದವನು’ ಎಂದರೆ ಯಾರು? ಈತನೇ ‘ದೇಹಧಾರಿಯಾದ ಪುರುಷ’ ಅರ್ಥಾತ್ ಆತ್ಮ. ಈತನಿಗೆ ಪಶುಪ್ರಜ್ಞೆಯಷ್ಟೇ ಇದೆ. ಈತನು ಪಶುಜೀವನವನ್ನು ನಡೆಯಿಸುತ್ತಿದ್ದಾನೆ ಎಂದು ಬೇಂದ್ರೆಯವರು ಹೇಳುತ್ತಿದ್ದಾರೆ.  ಈತ ಎಚ್ಚೆತ್ತರೆ, ತನ್ನ ಪಶುಪ್ರಜ್ಞೆಯಿಂದ ಹೊರಬಂದರೆ, ಆತನಿಗೆ ಬಾನೇ ಮನೆ. ಬಾನೇ ಮನೆಯಾದವನು ದೇವಸ್ವರೂಪನು.  ಮಹರ್ಷಿ ಅರವಿಂದರು ಹೇಳುವ, ಮಾನವಚೈತನ್ಯದ ಪರಮಾವಸ್ಥೆಯನ್ನು ಸಹ ಇದು ಸೂಚಿಸುತ್ತದೆ. (Evolution of man to superman). ‘ಆಳು’ ಎಂದರೆ ಕೆಲಸ ಮಾಡುವ ಗಂಡಸು. ‘ಆಳು’ ಎಂದರೆ ‘ಆಳುವವನು’ ಎನ್ನುವ ಗುಪ್ತಾರ್ಥವನ್ನೂ ಬೇಂದ್ರೆಯವರು ಸೂಚಿಸುತ್ತಾರೆ. ಮಲಗಿದ ಆ ಆಳು ಎಚ್ಚೆತ್ತರೆ, ಆತನು ಆಳುವವನೇ ಆಗುತ್ತಾನೆ. ಆಗ, ಆತನಿಗೆ ಬಾನೇ ಮನೆಯಾಗುತ್ತದೆ. ಆತನು ‘ಕೆಳ ಪ್ರಜ್ಞೆ’ಯಿಂದ ಎಚ್ಚೆತ್ತು ‘ಮೇಲಿನ ಪ್ರಜ್ಞೆ’ಗೆ ಬಂದಾಗ, ಆತನು ದೇವರೇ ಆಗುತ್ತಾನೆ!

 

            ‘ಈ ನೆಲಕೆಲ್ಲಾ ನೀರೇ ಮೇರೆ

            ನೀರುಗಾಳಿಗಳ ಹಾದಿಯೆ ಬೇರೆ.’

ಭೂಮಿಯನ್ನು ಸಮುದ್ರವು ಸುತ್ತುವರಿದಿದೆ.  ಆ ನೀರೆ ಭೂಮಿಗಿರುವ ಮೇರೆ. ನೀರು ಉಗಿಯಾಗಿ ಅಂದರೆ ಊರ್ಧ್ವಮುಖಿಯಾಗಿ ಮೇಲಕ್ಕೆ ಚಲಿಸುತ್ತದೆ. ಗಾಳಿಯೂ ಸಹ ಸರ್ವವ್ಯಾಪಿಯಾಗಿದೆ, ಗಾಳಿಯು ಆಕಾಶದವರೆಗೆ ವ್ಯಾಪಿಸಿದೆ. ಗಾಳಿ ಹಾಗು ನೀರು ಇವು ಪ್ರಕೃತಿಯ ಶಕ್ತಿಗಳು, ಪಂಚಮಹಾಭೂತಗಳಲ್ಲಿಯ ಎರಡು ಭೂತಗಳು.

(ಭೂ =ಆಗು ; ಭೂತ=ಆದದ್ದು =ವ್ಯಕ್ತವಾದದ್ದು).

 

ಆದರೆ ಮಾನವನು ಈ ಊರ್ಧ್ವಪಥವನ್ನು ಬಿಟ್ಟು ಅಡ್ಡಹಾದಿಯನ್ನು ಹಿಡಿದಿದ್ದಾನೆ. ಅಮೃತ ಹಾಗು ಅನಂತ ಇವು ದೇವರ ಉಪಾಧಿಗಳು, ದೇವರ ನಾಮಗಳು. ಇದರರ್ಥವೆಂದರೆ, ಮಾನವನು ಸಹ ಸಹ ಊರ್ಧ್ವಮುಖಿಯಾಗಬೇಕೆನ್ನುವುದು ಬೇಂದ್ರೆಯವರ (ಹಾಗು ಮಹರ್ಷಿ ಅರವಿಂದರ) ಆಶಯವಾಗಿದೆ.

 

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಮಾನವರು ಸರಿಯಾದ ಹಾದಿಯಲ್ಲಿ ನಡೆಯಲು, ಮಾಡಬಾರದ ಹಾಗು ಮಾಡಬೇಕಾದ ಕಾರ್ಯವನ್ನು ಸೂಚಿಸುತ್ತಾರೆ.

ಒಂದು ಪದಾರ್ಥಕ್ಕೆ ಇರುವ  ಸರ್ವಸಾಮಾನ್ಯವಾದ ಅರ್ಥವನ್ನು ಬೇಂದ್ರೆಯವರು ವಿಸ್ತರಿಸುವ ಪರಿಯನ್ನು ಇಲ್ಲಿ ನೋಡಿರಿ. ಸಾಮಾನ್ಯವಾಗಿ ನೀರು ಅಂದರೆ ಜಲ. ಆದರೆ ಬೇಂದ್ರೆಯವರು ‘ನಲುಮೆಯ ನೀರು’ ಅಂದರೆ ಪರಸ್ಪರ ಪ್ರೀತಿಯ ಸಂಬಂಧ ಎನ್ನುವ ಅರ್ಥವನ್ನು ಇಲ್ಲಿ ಸೃಷ್ಟಿಸಿದ್ದಾರೆ. ಇದನ್ನು ರಕ್ತವೆನ್ನುತ್ತ ರಕ್ತಪಾತವನ್ನು ಮಾಡುತ್ತಿರುವಿರೇಕೆ, ಮಾನವರೆಲ್ಲರೂ ಅಣ್ಣ ತಮ್ಮಂದಿರಾಗಿರಲು ಪರಸ್ಪರ ಕಾದಾಟವೇಕೆ, ಎಂದು ಬೇಂದ್ರೆಯವರು ಕೇಳುತ್ತಾರೆ. 

 

ಸೂರ್ಯನು ಇಡೀ ಜಗತ್ತಿಗೆ ಪೋಷಣೆಯನ್ನು ನೀಡುತ್ತಾನೆ. ಅವನ ಕಿರಣಗಳು ನಮ್ಮ ಭೂತಾಯಿಯ ಮಣ್ಣಿನ ಮೇಲೆ ಹಾಗು ನೀರಿನಲ್ಲಿ ಮಿಂಚುತ್ತಿವೆ. ಈ ರೀತಿಯಲ್ಲಿ ಸೂರ್ಯನು ಭೂತಾಯಿಗೆ ಹಾಗು ನೀರಿಗೆ ಅಂದರೆ ನೀರಿನಲ್ಲಿ ಇರುವ ಜೀವಿಗಳಿಗೆ ಪೋಷಣೆಯನ್ನು ನೀಡುತ್ತಿದ್ದಾನೆ. ಬೇಂದ್ರೆಯವರು ಹೇಳುವ ಸೂರ್ಯನು ಜ್ಞಾನಸೂರ್ಯನೂ ಆಗಿದ್ದಾನೆ. ಇದು ಮಾನವ ಹಾಗು ದೇವರ ನಡುವೆ ಇರುವ ಸಂಬಂಧ. ಇದನ್ನು ಗ್ರಹಿಸಿದ ಮಾನವನು ತನ್ನ ಪ್ರಜ್ಞೆಯನ್ನು ವಿಸ್ತರಿಸಿ ಅಪಾರವರಣವನ್ನು ಅಂದರೆ, ಮೇರೆಯಿಲ್ಲದ ತಿಳಿವನ್ನು ಹೊಂದಬೇಕು.

 

ಅಂತಹ ಸಮಯದಲ್ಲಿ ಮಾನವರು ಗಾಳಿಯ ತೇರನ್ನು ಏರಿ, ಅಂದರೆ ಅಧೋಮುಖಿಯಾದ ಪ್ರಾಣವನ್ನು ಯೋಗಶಕ್ತಿಯಿಂದ ಸಹಸ್ರಾರಕ್ಕೆ ಏರಿಸಿ ಬಾನುಲಿಯಲ್ಲಿ ಅಂದರೆ ಅತಿಮಾನವ ಸಂಭಾಷಣೆಯಲ್ಲಿ ತೊಡಗಬಹುದು!  ಭೂಮಿಗೆ ಬದ್ಧವಾದ ಪ್ರಾಪಂಚಿಕ  ಮಿತಿಯನ್ನು ಮೀರಿ ದೈವಿಕ ರಸವನ್ನು ತಲುಪಬಹುದು. ಇದನ್ನು ಸಾಧಿಸಲು ಮಾನವನು ತನ್ನ ʻಅಕಾಂಡ ತಾಂಡವʼವನ್ನು ಬಿಡಬೇಕು. ಅಂದರೆ ಹೊತ್ತಲ್ಲದ ಹೊತ್ತಲಲಿ ಮಾಡಬಾರದ್ದನ್ನು ಮಾಡುವದನ್ನು ಬಿಡಬೇಕು. ಹಾಗಿದ್ದರೆ ಆತ ಏನನ್ನು ಮಾಡಬೇಕು? ಆತ ಲಾಸ್ಯ ನರ್ತನವನ್ನು ಮಾಡಬೇಕು. { ತಾಂಡವವು ಶಿವನ ರುದ್ರನರ್ತನವಾದರೆ, ಲಾಸ್ಯವು ಪಾರ್ವತಿಯ ಸೌಮ್ಯ ನರ್ತನವಾಗಿದೆ.} ಇಷ್ಟೇ ಸಾಕು ಮಾನವನ ಉತ್ಕ್ರಾಂತಿಗೆ. ಆವಾಗ ಈ ಭೂಮಿ ಹೇಗೆ ಕಾಣುವುದು: ನಂದಾದೀಪದ ನಡೆಮಾಡಗಳೇ ಸಂಚರಿಸುವ ಹಾಗೆ!

 

ನಂದಾದೀಪ ಎಂದರೆ ದೇವರ ಎದುರಿಗೆ ಹಚ್ಚಿಡುವ ದೀಪ. ನಡೆಮಾಡ ಎಂದರೆ ದೇವರ ರಥ ಅಥವಾ ತೇರು. ಇದೀಗ ಮಾನವರೆಲ್ಲರೂ ದೈವತ್ವವನ್ನು ತಳೆದು, ತೇರು ಎಳೆಯುತ್ತಿರುವಂತಹ ದೃಶ್ಯ ಕಾಣುವುದು! ಕಾರ್ತೀಕ ಮಾಸದ ಗಾಢಾಂಧಕಾರಾದಲ್ಲಿದಲ್ಲಿ ಹೊರಟ ಉತ್ಸವದಂತೆ ಭಾಸವಾಗುವುದು.ಬೇಂದ್ರೆಯವರ ಕನಸು ಎಷ್ಟು ಉಚ್ಚಮಟ್ಟದ್ದಾಗಿದೆ ಎನ್ನುವುದನ್ನು ನೋಡಿದಿರಾ?

 

ಭೂಮಿ ಹಾಗು ಮಾನವ ಅಥವಾ ನಿಸರ್ಗ ಹಾಗು ಮಾನವ ಇವರ ನಡುವಿನ ಸಾಮರಸ್ಯವನ್ನು ಸೂಚಿಸುವದರ ಸಲುವಾಗಿ ಬೇಂದ್ರೆಯವರು ʻ ಋತುಗಳು ನಡೆಸಲಿ ರಿಂಗಣಗುಣಿತ, ಜೀವ ನುಡಿಸುತಿರೆ ವೀಣಾಕ್ವಣಿತʼ ಎಂದು ಹೇಳುತ್ತಾರೆ. ರಿಂಗಣಗುಣಿತ ಅಂದರೆ ವೃತ್ತಾಕಾರದಲ್ಲಿ ಒಂದರ ಹಿಂದೆ ಒಂದು ಕುಣಿಯುವ ನರ್ತನ. ಋತುಗಳೂ ಸಹ ಇದರಂತೆಯೇ ನಿಯಮಬದ್ಧವಾಗಿ ಬದಲಾಗುತ್ತಿರಲಿ ಎನ್ನುವ ಆಶಯ ಇಲ್ಲಿದೆ. ಮಾನವನೂ ಸಹ ನಿಸರ್ಗ ನಿಯಮವನ್ನು ಮೀರದಿದ್ದರೆ, ಆತನ ಬಾಳೂ ಸಹ ವೀಣೆಯ ಸ್ವರಬದ್ಧ ರಾಗದಂತಾಗುವುದು ಎನ್ನುವುದು ಕವಿಯ ಆಶಯ.

 

ಕೊನೆಯಲ್ಲಿ ಕವಿ ತಮ್ಮ ಕಾಣ್ಕೆಯನ್ನು ಹೀಗೆ ಹೇಳುತ್ತಾರೆ:

ಮಾಲೆಯು ಕೊರಳಿಗೆ ಜೋತಿರುವಂತೆ  ಹೃದಯಕೆ ಬಂದಾತು

 ಸುಗ್ಗಿಯು ನೆಲವನೆ ಸುತ್ತುತ್ತಿರಲಿ ಮಧುಲೀಲೆಗೆ ಸೋತು.

ಹೂವಿನ ಮಾಲೆ ಕೊರಳಿಗೆ ಜೋತು ಬಿದ್ದರೆ ಸಾಕು, ಅದು ಹೃದಯಕ್ಕೆ ಹತ್ತಿರವಾದಂತೆ. ನಮ್ಮ ಸಂಕಲ್ಪವೂ ಸಹ ಇದೇ ರೀತಿಯಾದರೆ ನಮ್ಮ ಬಾಳೂ ಸಹ ಹಸನಾಗುವುದು. ಇದು ಮಾನವರ ಸಹಜೀವನದ ಮಧುಲೀಲೆ. ಈ ಮಧುಲೀಲೆಗೆ ನಿಸರ್ಗವೂ ಸಹ ಮರುಳಾಗಿ ಸುಗ್ಗಿ ಎನ್ನುವುದು ತಪ್ಪದಂತೆ ನಮ್ಮನ್ನು ಸುತ್ತುತ್ತಲೇ ಇರುವುದು.

Tuesday, August 30, 2022

ಹಲವು ನಾಡು ಹೆಜ್ಜೆ ಹಾಡು..ಜಯಶ್ರೀ ದೇಶಪಾಂಡೆ-----ಭಾಗ ೨

 ಪ್ರಜ್ಞಾವಂತ ನಾಗರಿಕನಿಗೆ ಸಾಹಿತ್ಯದಿಂದ ಸಿಗುವಷ್ಟು ಸುಖವು ಮತ್ತೆ ಯಾವ ಕಲೆಯಿಂದಲೂ ಸಿಗಲಾರದು. ಸಾಹಿತ್ಯಸುಖದಲ್ಲಿ ಎರಡು ಅಂಶಗಳಿವೆ. ಒಂದು ಸಾಹಿತ್ಯಕೃತಿಯ ಅಂತರಂಗ; ಎರಡನೆಯದು ಬಹಿರಂಗ. ಈ ಬಹಿರಂಗಕ್ಕೇ ಶೈಲಿ ಎಂದೂ ಕರೆಯಬಹುದು. ನಮ್ಮ ಪ್ರಾಚೀನ ಸಾಹಿತ್ಯದ ದಿಗ್ಗಜರಾದ ಕಾಲೀದಾಸ, ಭಾರವಿ, ದಂಡಿ ಹಾಗು ಮಾಘ ಇವರ ಶೈಲಿಯ ವೈಶಿಷ್ಟ್ಯದ ಬಗೆಗೆ ಹೀಗೊಂದು ಶ್ಲೋಕವಿದೆ:

‘ಉಪಮಾ ಕಾಲಿದಾಸಸ್ಯ, ಭಾರವೇರರ್ಥಗೌರಮಮ್;

ದಂಡಿನ: ಪದಲಾಲಿತ್ಯಮ್, ಮಾಘೇ ಸಂತಿ ತ್ರಯೋ ಗುಣಾ:’

ಈ ಗುಣಗಳಿಂದಲೇ ಇವರು ಶ್ರೇಷ್ಠರಾದರು ಎಂದರ್ಥವಲ್ಲ ; ಅದರೆ ಈ ಗುಣಗಳು ಅವರ ಸಾಹಿತ್ಯಕ್ಕೆ ಮೆರಗು ಕೊಟ್ಟಿವೆ.

 

ಜಯಶ್ರೀ ದೇಶಪಾಂಡೆಯವರು ರಚಿಸಿದ ‘ಹಲವು ನಾಡು, ಹೆಜ್ಜೆ ಹಾಡು’ ಕೃತಿಯನ್ನು ಓದುವಾಗ, ಈ ಶ್ಲೋಕ ನನ್ನ ಮನದಲ್ಲಿ ಸುಳಿದಾಡಿತು. ಜಯಶ್ರೀ ದೇಶಪಾಂಡೆಯವರ ಕೃತಿಗೆ ಮೆರಗು ಕೊಟ್ಟಂತಹ ಅನೇಕ ಗುಣಗಳು ಇಲ್ಲಿವೆ. ಅವರ ಕೃತಿಯ ಅಂತರಂಗದ ಬಗೆಗೆ ಈಗಾಗಲೇ ನಾನು ನನ್ನ ‘ಸಲ್ಲಾಪ’ದಲ್ಲಿ ಬರೆದಿದ್ದೇನೆ. (https://sallaap.blogspot.com/2022/07/blog-post.html) ಈಗ ಅವರ ಕೃತಿಯ ಬಹಿರಂಗಗುಣಗಳ ಬಗೆಗೆ ಅಂದರೆ ಶೈಲಿಯ ಬಗೆಗೂ ಒಂದಿಷ್ಟು ಮಾತನ್ನು ಹೇಳದಿದ್ದರೆ, ನನಗೆ ಸಮಾಧಾನವಿರದು!

 

ಜಯಶ್ರೀ ದೇಶಪಾಂಡೆಯವರ ತಾಯಿನುಡಿ ಕನ್ನಡ, ಮನೆಯಲ್ಲಿ ಸಂಸ್ಕೃತದ ದಟ್ಟ ಛಾಯೆ. ವ್ಯಾವಹಾರಿಕ ಪರಿಸರ ಹಾಗು ಮರಾಠಿ ಸಂಗೀತವು ಇವರ ಮೇಲೆ ಆಳವಾದ ಪ್ರಭಾವ ಬೀರಿದೆ. ಇಂಗ್ಲಿಶ್ ಭಾಷೆ ಇವರ ಪ್ರೌಢ ಶಿಕ್ಷಣದ ಮಾಧ್ಯಮ. ಹಿಂದೀ ಭಾಷೆಯು ಮಾಧ್ಯಮಿಕ ಶಾಲೆಯ ಉಪಭಾಷೆ ಹಾಗು ಚಲನಚಿತ್ರಗಳ ಕೊಡುಗೆ! ಈ ರೀತಿಯಾಗಿ ಪಂಚಭಾಷಾ ಪ್ರವೀಣರಾದ ಜಯಶ್ರೀಯವರ ಶೈಲಿಯು ಅವರ ಕೃತಿಗಳಿಗೆ ವಿಶಿಷ್ಟವಾದ ಮೆರಗನ್ನು ನೀಡಿದೆ.

 

ಮಾರ್ದವತೆ ಜಯಶ್ರೀ ದೇಶಪಾಂಡೆಯವರ ಸಾಹಿತ್ಯದ ಪ್ರಧಾನ ಗುಣವಾಗಿದೆ. ಇವರ ಶೈಲಿಯು ದಟ್ಟ ಕಾನನದಲ್ಲಿ ಜುಳುಜುಳು ಎಂದು ಹರಿಯುವ ತೊರೆಯಂತಿದೆ, ಅರ್ಭಟದ ಪ್ರವಾಹದಂತಲ್ಲ. ಇಂತಹ ತೊರೆಯಲ್ಲಿ ಚಾರಣಿಗನು ಸುಖದಿಂದ ತೊರೆಯ ತಂಪನ್ನು ಅನುಭವಿಸಬಹುದು. ಅವನಿಗೆ ತೊರೆಯ ಜೊತೆಗೆ ಲಭಿಸುವ ಆತ್ಮೀಯತೆಯು ಅರ್ಭಟದ ಪ್ರವಾಹದ ಜೊತೆಗೆ ಸಿಗಲಾರದು. ಇಂತಹ ಶೈಲಿಯು ಜಯಶ್ರೀ ದೇಶಪಾಂಡೆಯವರಿಗೆ ಸಹಜವಾದ ಭಾಷಾಪ್ರೌಢಿಮೆಯಿಂದ ಸಾಧ್ಯವಾಗಿದೆ. ಮಾದರಿಗೆಂದು ಅವರ ಕೃತಿಯಿಂದ ಕೆಲವು ಸಾಲುಗಳನ್ನು ಎತ್ತಿಕೊಂಡು ಇಲ್ಲಿ ಸಾದರಪಡಿಸುತ್ತೇನೆ:

 

(೧) ಸರೋವರದ ಎರಡೂ ದಂಡೆಗುಂಟ ಸ್ವಪ್ನ ಸದೃಶ ಕಿರುಚಿತ್ರಗಳ ಹಾಗೆ ಅಂಟಿಕೊಂಡ ಬಣ್ಣದ ಹೆಂಚಿನ                         ಮನೆಗಳ ರಾಶಿ ಪೇರಿಸಿಕೊಂಡ ಊರುಗಳು ಕೈಬೀಸಿ ಬೀಳ್ಕೊಟ್ಟವು.

(೨) ಪಕ್ಕನೆ ನೆನಪಿನ ನೆರಳಿನಿಂದ ಎದ್ದು ಬಂದಳಾಕೆ, ಹಿಮದ ಹುಡುಗಿ!

(೩) ಭಾವ ನಿರ್ಭಾವದ ನಡುವಿನ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು

(೪) ಬೆರಗಿಗೆ ಹೊಸ ಅರ್ಥ ಕಂಡಂತಾಯಿತು. 

(೫) ಸ್ವಚ್ಛ ಶುಭ್ರ ಬಿಸಿಲಿನ ಆಕಾಶ ಕೆಲವೇ ಮೋಡಗಳಿಗೆ ಹಾದು ಹೋಗಲು ಅನುಮತಿ ನೀಡಿ ಉಳಿದೆಲ್ಲ ವಿಸ್ತಾರಕ್ಕೂ ನೀಲಿಯನ್ನು ಹಾಸಿತ್ತು.

 (೬) ಸ್ವಾಗತ ಪ್ರಾಂಗಣದಲ್ಲಿ ಎಡಬಲಕ್ಕೂ ಚಾಚಿದ ಗೋಡೆಗುಂಟ ಅಸಂಖ್ಯಾತ ಕಿರುಗೂಡುಗಳ ಒಡಲುಗಳಲ್ಲಿ ನಾನಾ ಧ್ಯಾನಸ್ಥ ವಿನ್ಯಾಸಮುದ್ರೆಯಲ್ಲಿರುವ ಬುದ್ಧ ಪ್ರತಿಮೆಗಳ ಪ್ರತಿಫಲಿತ ಮಿರುಗು............

 (೭) ಸೃಷ್ಟಿ ಸ್ಥಿತಿಗಳ ಸಮೀಕರಣದ ಯೋಗಭಾಗವನ್ನು ತನ್ನ ಪ್ರಖರತೆಯ  ಉನ್ಮೀಲನದಲ್ಲಿ ತುಂಬಿ ಚೆಲ್ಲುತ್ತಿದ್ದ ಸವಿತೃವಿನ ಆ ಕ್ಷಣದ ಅಸ್ತಿತ್ವ ನಮ್ಮ ಚಿತ್ತದಲ್ಲಿ ನೆಲೆಗೊಳ್ಳ ತೊಡಗಿತು.....

(೮) ಇನ್ನುಳಿದಂತೆ ದಂಡೆಸಾಲು ಹಿಡಿದು ಉದ್ದುದ್ದಕ್ಕೆ ಸಾಲುಗಟ್ಟಿದ ಹಸಿರುಡುಗೆಯ ಮರಗಳು ಚೆಲ್ಲುವ ನೆರಳಿನ ಚಿತ್ತಾರದ ವಿನ್ಯಾಸ

(೯) ನಿರಂತರ ಗುಂಗೀಹುಳವಾಗಿ ಕಾಡಿದ್ದು ಮರೆಯಲಸದಳ

(೧೦) ....ಅವರ ಈ ಗಂಗೆ ನೂರಾ ಎಪ್ಪತ್ತೈದು ಅಡಿಗಳೆತ್ತರದ ಹಿಂಭಾಗದಲ್ಲಿ  ಸಮಪಾತಳಿಯಲ್ಲಿ ಅಗಲವಾಗಿ ಹರಡಿ ಹಾಸಿ ಪ್ರಶಾಂತವಾದ ಜುಳು ಜುಳು ಗಾನಕ್ಕೆ ತನ್ನನ್ನೇ ತಂತಿಯಾಗಿಸಿಕೊಳ್ಳುತ್ತ ಸಲಿಲಗಾನ ಗುನುಗುತ್ತ ಬಂದವಳು ತೇಲು ತೇಲುತ್ತ ತಟಾರನೆ ಬುಡ ಕಡಿದ ಬಾಳೆಯಾಗಿ ಗರ್ಜಿಸುತ್ತ ಅಂಚಿನಿಂದ ಉರುಳುವಾಗ ಅಲ್ಲಿ ಜಗತ್ತೇ ಬೆರಗಾಗಿ ಕಣ್ಣರಸುವ ಅಚ್ಚರಿಯನ್ನು ಹೆರುತ್ತಾಳೆ............

 

 

ಜಯಶ್ರೀ ದೇಶಪಾಂಡೆಯವರು ಅನೇಕ ಪದಗಳನ್ನು ಸಹಜವಾಗಿ, ಅನಾಯಾಸವಾಗಿ ಸೃಷ್ಟಿಸುತ್ತಾರೆ. ಅಂತಹ ಕೆಲವು ಪದಗಳು ಇಲ್ಲಿವೆ: 

ಕಿರುಗರ್ವ

ನಿಸರ್ಗಪರ್ವ

ಹೆಗಲೆಣೆ

ಭಾಸ್ಕರನ ಉರಿಚೆಂಡಿನ ಉಪಸ್ಥಿತಿ

ಕಾಡುಮನೆ

ಚಾಚುಹಲಗೆ

ಸಪ್ತಮಾತೃಕೆಯರು (ಏಳು ಗೊಂಬೆಗಳು)

ಸಮಯಸೂಚಿಯ ಬೊಂಬೆಯಾಟ

ಸುಣ್ಣಗಲ್ಲಿನ ಶಿಲ್ಪಗಳು

ಇರಸರಿಕೆ

ಆಕಾಶಕಿಂಡಿ

ಉರುಳುಬಂಡಿ

ಬೆಂಕಿಗೂಡು

ಹಂದಿಗೂಡು

ಕಿರುಗೂಡು

ಸ್ವಾಗತ ಪ್ರಾಂಗಣ

ದೇಗುಲಸೂಚೀ ಹೂವು

ವಧುವಿನ ಮುಸುಕು

ಜಲಧೂಮ

ಜಲಪಾತ ಗೀತೆ

ಸ್ಮಶಾನ ಪ್ರವಾಸ

ಕಂದರಾಗ್ರೇಸರ

ಮೃತಾವಾಸ

 

ಕನ್ನಡದ ವಿವಿಧ ಲೇಖಕರು ಹಾಗು ವಿವಿಧ ಭಾಷೆಯ ಲೋಕನುಡಿಗಳನ್ನೂ ಸಹ ಸಹ ಜಯಶ್ರೀ ದೇಶಪಾಂಡೆಯವರು ಈ ಕೃತಿಯಲ್ಲಿ ಸಮಯೋಚಿತವಾಗಿ ಉದ್ಧರಿಸಿದ್ದಾರೆ. ಬಂಗಾರಕ್ಕೆ ಕುಂದಣವನ್ನಿಟ್ಟಂತೆ ಈ ವಿಶೇಷಣಗಳು ಓದುಗನನ್ನು ರಂಜಿಸುತ್ತವೆ. ಪ್ರವಾಸಕಥನದಲ್ಲಿ ಇಂತಹ ಉದ್ಧರಣೆಗಳು ಅನಿರೀಕ್ಷಿತವಾಗಿ, ಮೋದಕರವಾಗಿವೆ. ಅಂತಹ ಕೆಲವು ಉದ್ಧರಣೆಗಳು ಹೀಗಿವೆ:

(೧) ‘ಈ ಬಾನು.... ಈ ಹೂವು... ಈ ಹಕ್ಕಿ.... ಈ ಚುಕ್ಕಿ ತೇಲಿ ಸಾಗುವ ಈ ಮುಗಿಲು’... (ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರ ಕವನ).

 

(೨) ಮರಣದಿಂ ಮುಂದೇನು? ಪ್ರೇತವೋ? ಭೂತವೋ? ಪರಲೋಕವೋ? ಪುನರ್ಜನ್ಮವೋ? ಅದೇನೋ!

ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ! ಧರೆಯ ಬಾಳ್ಗದರಿನೇಂ? ಮಂಕುತಿಮ್ಮ!

 

(೩) ಆಕಾಶಕ್ಕೆ ನೀಲಿ ಬಳಿದವನಾರೋ

 

(೪) ಜಿಸ್ಕೀ ಲಾಠೀ ಉಸ್ಕೀ ಭೈಂಸ್

 

(೫) ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ

 

()  ಅಗರ್ಫಿರ್ದೌಸ್ ಬರೂ--ಜಮೀನ್ ಅಸ್ತ, ಹಮೀನಸ್ತ, ಹಮೀನಸ್ತ,ಹಮೀನಸ್ತ.

 

 

ಯಾವುದೇ ಲೇಖಕನ ಒಂದು ಕೃತಿ ಓದುಗನಿಗೆ ಮೆಚ್ಚುಗೆಯಾಗಲು ಎರಡು ಕಾರಣಗಳಿವೆ: (೧) ಕೃತಿಯ ಅಂತರಂಗ (೨) ಕೃತಿಯ ಬಹಿರಂಗ.

 

ಜಯಶ್ರೀ ದೇಶಪಾಂಡೆಯವರ ‘ಹಲವು ನಾಡು ಹೆಜ್ಜೆ ಹಾಡು’  ಕೃತಿಯು ಅವರು ಸಂದರ್ಶಿಸಿದ ದೇಶಗಳ ನಿಸರ್ಗ, ಸಂಸ್ಕೃತಿ, ಸಾಹಿತ್ಯ ಹಾಗು ಜನಜೀವನಗಳ ಪರಿಚಯವನ್ನು ಮಾಡಿಕೊಟ್ಟಿದೆ. ಇಲ್ಲಿ ಬಳಸಲಾದ ಸರಸ ಶೈಲಿಯು ಈ ಕೃತಿಯನ್ನು ಸುರಸ ಕೃತಿಯನ್ನಾಗಿ ರೂಪಿಸಿದೆ.  (https://sallaap.blogspot.com/2022/07/blog-post.html)

 

ಭಾಷೆಯನ್ನು ವಿವಿಧ ರೂಪಗಳಲ್ಲಿ ಸಲೀಲವಾಗಿ ಬಳಸುವ ಜಯಶ್ರೀ ದೇಶಪಾಂಡೆಯವರ ಈ ಸಾಮರ್ಥ್ಯ ಓದುಗನಿಗೆ ಸಾಹಿತ್ಯದ ಸುಖವನ್ನು  ಕೊಡುವುದರಲ್ಲಿ ಆಶ್ಚರ್ಯವೇನಿದೆ?

Friday, July 8, 2022

ಹಲವು ನಾಡು ಹೆಜ್ಜೆ ಹಾಡು---ಜಯಶ್ರೀ ದೇಶಪಾಂಡೆ....ಭಾಗ ೧

 ‘ಹಲವು ನಾಡು ಹೆಜ್ಜೆ ಹಾಡು’ ಇದು ಜಯಶ್ರೀ ದೇಶಪಾಂಡೆಯವರು ರಚಿಸಿದ ಪ್ರವಾಸಕಥನ. ಈ ಕೃತಿಯನ್ನು ಸರಸ ಸಾಹಿತ್ಯ ಹಾಗು ಸುರಸ ಸಾಹಿತ್ಯ ಎಂದು ಕರೆಯಲು ನಾನು ಇಷ್ಟಪಡುತ್ತೇನೆ. ಏಕೆಂದರೆ ಇದು ಶುಷ್ಕ ಪ್ರವಾಸವರ್ಣನೆಯಾಗಿರದೆ, ಆ ಎಲ್ಲ ನಾಡಿಗರ ಜೊತೆಗೆ ಜಯಶ್ರೀಯವರು ಸಾಧಿಸಿದ ಆಪ್ತಸಂವಹನೆ, ಆ ದೇಶಗಳ ವಿವಿಧ ವೈಶಿಷ್ಟಗಳು ಹಾಗು ಅದರಿಂದ  ತಮ್ಮ ಮನಸ್ಸು ವಿಸ್ತಾರವಾದ ಪರಿಯನ್ನು ಹಾಗು ಮುದಗೊಂಡ ಪರಿಯನ್ನು, ಜಯಶ್ರೀಯವರು ಪರಿಪರಿಯಾಗಿ ವರ್ಣಿಸಿದ್ದಾರೆ. ಈ ಪರದೇಶಗಳ ಭೌತಿಕ ಹಾಗು ಸಾಂಸ್ಕೃತಿಕ ವೈಭವವನ್ನು ಗ್ರಹಿಸಲು ತೆರೆದ ಕಣ್ಣುಗಳು, ತೆರೆದ ಮನಸ್ಸು ಹಾಗು ಸಹೃದಯ ರಸಿಕತೆ ಬೇಕು. ಅದು ಈ ಲೇಖಕಿಯಲ್ಲಿ ಇದೆ ಎನ್ನುವುದು ನಿಸ್ಸಂದೇಹವಾಗಿದೆ. ಅದರ ಜೊತೆಗೇ ಭಾರತೀಯ ಮನಸ್ಸೂ ಜ್ವಲಂತವಾಗಿದೆ. ಆದುದರಿಂದಲೇ, ಈ ಕೃತಿಯನ್ನು ಓದುತ್ತಿರುವಾಗ ನಮಗೆ ನಮ್ಮವನೇ ಆದ ಆದಿಕವಿ ಪಂಪನು ‘ಆರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ’ ಎಂದು ಉದ್ಗರಿಸಿದ್ದು ನೆನಪಿಗೆ ಬರುತ್ತದೆ. ಇಲ್ಲಿ ಬನವಾಸಿಯ ಬದಲಾಗಿ ಹಲವು ಪಾಶ್ಚಿಮಾತ್ಯ ದೇಶಗಳಿವೆ! ಇಷ್ಟಲ್ಲದೆ, ಈ ದೇಶಗಳ ಸಾಂಸ್ಕೃತಿಕ, ರಾಜಕೀಯ ಹಾಗು ಐತಿಹಾಸಿಕ ಹಿನ್ನೆಲೆಗಳನ್ನೂ ಸಹ ಜಯಶ್ರೀ ದೇಶಪಾಂಡೆಯವರು ನೀಡಿರುವದರಿಂದ ಈ ಕೃತಿಯನ್ನು ೩೬೦ ಡಿಗ್ರೀಗಳ ಸಂಪೂರ್ಣ ಕಥನವೆನ್ನಬೇಕು.

 ‘ಹಲವು ನಾಡು ಹೆಜ್ಜೆ ಹಾಡು’ ಕೃತಿಯನ್ನು ನಾವು ಎರಡು ದೃಷ್ಟಿಕೋನಗಳಿಂದ ವಿಶ್ಲೇಷಿಸುವುದು ಅವಶ್ಯಕವಾಗಿದೆ. ಮೊದಲನೆಯದು ಕಥನಕೌಶಲ; ಎರಡನೆಯದು ಭಾಷಾಪ್ರತಿಭೆ. ಜಯಶ್ರೀ ದೇಶಪಾಂಡೆಯವರ ಕಥೆಗಳನ್ನು ಹಾಗು ಕಾದಂಬರಿಗಳನ್ನು ಓದಿದವರಿಗೆ ಅವರ ಕಥನಕೌಶಲದ ಬಗೆಗೆ ಹೇಳಬೇಕಾಗಿಲ್ಲ. ಅದೇ ಕುಶಲತೆಯು ಈ ಪ್ರವಾಸ ಕಥನದಲ್ಲೂ ವ್ಯಕ್ತವಾಗಿದೆ. ತಮ್ಮ ಆಪ್ತರೊಂದಿಗೆ ಆರಾಮವಾಗಿ ಕುಳಿತುಕೊಂಡು ಹರಟೆ ಹೊಡೆಯುತ್ತಿರುವಂತೆ ಬರೆಯುತ್ತಾರೆ ಜಯಶ್ರೀಯವರು. ಹೀಗಾಗಿ ಅವರ ಮಾತು ನೇರವಾಗಿ ಓದುಗರ ಹೃದಯವನ್ನು ತಲುಪುತ್ತದೆ.

 ಫಿನ್ ಲ್ಯಾಂಡಿನ ಬಗೆಗೆ ಅವರು ಬರೆದ ಲೇಖನದ ಒಂದು ತುಣುಕನ್ನು ಇಲ್ಲಿ ಉದಾಹರಣೆಗೆಂದು ಎತ್ತಿಕೊಳ್ಳುತ್ತೇನೆ:

" ಮುಂಜಾವಿನ ಸೂರ್ಯ ಈರ್ಯಾಳೊಂದಿಗೆ ನಮ್ಮನ್ನು ನಗುತ್ತ ಸ್ವಾಗತಿಸಿದ್ದ. ಆಹ್ಲಾದಕರ ಗಾಳಿ, ಎಲ್ಲೆಲ್ಲೂ ಹಸರು ಮತ್ತು ಗಿಣಿಹಸುರಿನ ಆಚ್ಛಾದನೆ...... ಸರೋವರದ ತುಂಬ ನೀಲಿ ನೀಲಿಯಾಗಿ ಚಲಪಲ ಅನ್ನುವ ನೀರು ಅದನ್ನೇ ಎವೆಯಿಕ್ಕದೆ ನೋಡುವಂತೆ ಮಾಡಿತ್ತು. ಬೆಳಗಿನ ಕಾಫಿಯೊಂದಿಗೆ ಅವಳೇ ತಯಾರಿಸಿದ ಹಣ್ಣುಗಳ ಕೇಕ್ ತುಂಬಾ ರುಚಿ ಎನಿಸಿತ್ತು. ನಮ್ಮೊಂದಿಗೆ ಒಯ್ದಿದ್ದ ರವೆ ಉಂಡಿಗಳನ್ನು ಅವಳೂ ಬಹಳ ಪ್ರೀತಿಯಿಂದ ಅಸ್ವಾದಿಸಿದಳು.....................". ಈ ಕಥನದಲ್ಲಿ ಬರುವ ಸೂರ್ಯ, ಗಾಳಿ, ನಿಸರ್ಗದ ಬಣ್ಣಗಳು, ನೀರಿನ ಚಲಪಲ , ಈರ್ಯಾ ಹಾಗು ಅವಳು ತಯಾರಿಸಿದ ಬೆಳಗಿನ ಕಾಫೀ ಮತ್ತೂ ಕೇಕ್, ಜೊತೆಗೆ ಜಯಶ್ರೀಯವ ರವೆ ಉಂಡಿಗಳು ಎಂತಹ ಉಲ್ಲಾಸಭರಿತ ಆತ್ಮೀಯತೆಯನ್ನು ಸೃಷ್ಟಿಸುತ್ತವೆಯಲ್ಲವೆ?

ಫಿನ್ ಲ್ಯಾಂಡಿನ ವರ್ಣನೆಯನ್ನು ಜಯಶ್ರೀಯವರು ಪ್ರಾರಂಭಿಸುವುದು ಒಂದು ಅಪೂರ್ವ ಘಟನೆಯಾದ ಮಧ್ಯರಾತ್ರಿಯ ಸೂರ್ಯನೊಂದಿಗೆ. ಫಿನ್ ಲ್ಯಾಂಡಿನ ಈ ಸೂರ್ಯನನ್ನು ನೋಡಿದಾಗ ಜಯಶ್ರೀಯವರಿಗೆ ನೆನಪಾಗುವುದು ವಸಂತರಾವ ದೇಶಪಾಂಡೆ ಎನ್ನುವ ಪ್ರಸಿದ್ಧ ಮರಾಠೀ ಗಾಯಕರೊಬ್ಬರು ಹಾಡಿದ  ಸೂರ್ಯಸ್ತುತಿ ಗಾಯನ:

" ತೇಜೋನಿಧಿ ಲೋಹಗೋಳ.....ಭಾಸ್ಕರ ಹೇ ಗಗನರಾಜ...

ದಿವ್ಯ ತುಝಾ ತೇಜಾನೇ ಝಗಮಗಲೇ ಗಗನ ಆಜ.......".

 ಜಯಶ್ರೀಯವರ ನೋಟ ಫಿನ್ ಲ್ಯಾಂಡಿನ ಸೂರ್ಯನಲ್ಲಿ; ಅವರ ಭಾವೋದ್ದೀಪನೆ ಭಾರತೀಯ ಸಂಗೀತದಲ್ಲಿ!

 ರಾತ್ರಿ ಒಂದೂವರೆ ಗಂಟೆಗೆ ಜಯಶ್ರೀ ದೇಶಪಾಂಡೆ ಹಾಗು ಇತರರು ಮನೆಗೆ ಮರಳುತ್ತಾರೆ. ಆದರೆ ಫಿನ್ ಲ್ಯಾಂಡಿನ ಸೂರ್ಯನಿಗೆ ಎಲ್ಲಿದೆ ವಿಶ್ರಾಂತಿ? ಜಯಶ್ರೀಯವರು ಹೇಳುತ್ತಾರೆ:

‘ಬಾನು ನಸುಬೆಳ್ಳಗೆ ಬೆಳಗಿಕೊಂಡೇ ಇತ್ತು! ಸೂರ್ಯ ಆಕಾಶದಲ್ಲಿ ನಗುತ್ತಲೇ ಇದ್ದ!’

 ಜಯಶ್ರೀಯವರು ಕುತೂಹಲಿಗಳು ಅರ್ಥಾತ್ ಜ್ಞಾನಪಿಪಾಸುಗಳು. ಅವರು ಅಲ್ಲಿಯ ಜನರೊಡನೆ ನಡೆಸಿದ ಸಂಭಾಷಣೆಗಳು ಪರಸ್ಪರ ಮೈತ್ರಿಯನ್ನು ಹೆಚ್ಚಿಸುವದಷ್ಟೇ ಅಲ್ಲ, ಆ ನಾಡುಗಳ ಬಗೆಗಿನ ನಮ್ಮ ಜ್ಞಾನವನ್ನೂ ಸಹ ಹೆಚ್ಚಿಸುತ್ತವೆ. 

 ಫಿನ್ ಲ್ಯಾಂಡಿನಲ್ಲೆಲ್ಲ ಹಬ್ಬಿಕೊಂಡ ಕಾಡು  ಅಲ್ಲಿಯ ಪ್ರಜೆಗಳ ವೈಯಕ್ತಿಕ ಆಸ್ತಿಯಾಗಿದೆ. ಹೀಗಾಗಿ ಇಲ್ಲಿಯ ಜನರು ಜೂನ್, ಜುಲಾಯ್ ಹಾಗು ಅಗಸ್ಟು ತಿಂಗಳುಗಳಲ್ಲಿ ತಮ್ಮ ತಮ್ಮ ವೈಯಕ್ತಿಕ ಕಾಡುಗಳಲ್ಲಿ ಇರುವ ಕಾಡುಮನೆಗಳಿಗೆ ಧಾವಿಸುತ್ತಾರೆ. ಅಲ್ಲಿ ಬೋಟಿಂಗ್, ಶಿಬಿರಾಗ್ನಿ, ಮೊದಲಾದ ಮೋಜಿನ ಹಾಗು ಸಾಹಸದ ಆಟಗಳನ್ನು ಆಡುತ್ತಾರೆ. ಜಯಶ್ರೀ ದೇಶಪಾಂಡೆಯವರು ಸಹ ಇವೆಲ್ಲವುಗಳಲ್ಲಿ ಭಾಗವಹಿಸಿ ಸಹೃದಯ ಸಂಗಾತಿಗಳ ಜೊತೆಗೆ ಖುಶಿ ಪಟ್ಟಿದ್ದಾರೆ. ಅದರಲ್ಲಿಯೂ ಸೌನಾ ಸ್ನಾನದ ಸಂಭ್ರಮವಂತೂ ಶರೀರ ಹಾಗು ಮನಸ್ಸುಗಳೆರಡನ್ನೂ ತಣಿಸುವಂತಹ ಆಹ್ಲಾದಕರ ಸಂಗತಿಯಾಗಿದೆ!

 ಫಿನ್ ಲ್ಯಾಂಡಿನ ನಿಸರ್ಗವನ್ನು ಸವಿದ ಬಳಿಕ, ಅಲ್ಲಿಯ ಜನಜೀವನವನ್ನು ವರ್ಣಿಸದಿದ್ದರೆ, ಪ್ರವಾಸಕಥನವು ಪೂರ್ಣವಾದೀತೆ? ಜಯಶ್ರೀಯವರು ಈ ಕಥನದ ಭಾಗವಾಗಿ ಫಿನ್ನಿಶ್ ಜನರ ಬಗೆಗೆ ಹೇಳುವ ಒಳನೋಟದ ಮಾತುಗಳ ಒಂದು ಭಾಗ ಇಲ್ಲಿದೆ:

 " ಇಲ್ಲಿನ ಸ್ತ್ರೀ, ಪುರುಷರು ಒಬ್ಬಂಟಿಗರಾಗಿ ಬದುಕುವದು ಅಪರೂಪದ ಸಂಗತಿಯೇ ಅಲ್ಲ, ಹಾಗೆ ಇರಲು ಅಗತ್ಯವಿರುವ ದೈಹಿಕ, ಮಾನಸಿಕ, ಸಾಮಾಜಿಕ ಅನುಕೂಲಗಳನ್ನು ಅವರು ಗಳಿಸಿಕೊಂಡಿರುತ್ತಾರೆ. ಸಿಂಗಲ್ ಮದರ್, ಸಿಂಗಲ್ ಫಾದರ್ ಇವೆರಡೂ ಸರ್ವೇ ಸಾಮಾನ್ಯ. ಮಕ್ಕಳಾಗಲು ಮದುವೆಯಾಗಲೇಬೇಕು ಎನ್ನುವ ಕಡ್ಡಾಯವಿಲ್ಲ..... ಕೊನೆಯವರೆಗೂ ಜೊತೆ ಇರಲಿ, ಇಲ್ಲದಿರಲಿ ತಾವು ತಾವಾಗಿಯೇ ಜೀವನವನ್ನು ಆರೋಗ್ಯಪೂರ್ಣವಾಗಿ ಬದುಕಿ ದಾಟಿಬಿಡುವ ಇವರ ಜೀವನಶೈಲಿಯ ಹಿಂದಿರುವುದು ಇವರ ದೈಹಿಕ/ ಮಾನಸಿಕ ಗಟ್ಟಿಮುಟ್ಟುತನ ಅಂದರೆ ಖಂಡಿತ ಉತ್ಪ್ರೇಕ್ಷೆ ಅಲ್ಲ......"

 (ಫಿನ್ ಲ್ಯಾಂಡಿನ ಸಮಾಜದ ರೀತಿ,ನೀತಿಗಳನ್ನು ಟೀಕಿಸದೆ, ಅವುಗಳನ್ನು ಒಪ್ಪಿಕೊಳ್ಳುವಂತಹ ಸರ್ವಗುಣಗ್ರಾಹಿ ಮನೋಭಾವವನ್ನು ಇಲ್ಲಿ ನಾವು ನೋಡಬಹುದು. ಇದು ಯಾವುದೇ ಲೇಖಕನಲ್ಲಿ ಇರಲೇಬೇಕಾದ ಗುಣ.)

 ಇನ್ನು ಫಿನ್ ಲ್ಯಾಂಡಿನ ಇತಿಹಾಸ ಹಾಗು ರಾಜಕಾರಣದ ಬಗೆಗೆ ಒಂದು ಮಾತು ಬೇಡವೆ? ಈ ಅನುಭವ ಅವರಿಗೆ ದೊರೆಯುವುದು ಪ್ರವಾಸೀ ಬಸ್ ಒಂದರಲ್ಲಿ. ಫಿನ್ ಲ್ಯಾಂಡಿನಿಂದ ರಶಿಯಾದ ಸೇಂಟ್ ಪೀಟರ್ಸ್ ಬರ್ಗ ನಗರಕ್ಕೆ ಬಸ್ ಒಂದರಲ್ಲಿ ಜಯಶ್ರೀಯವರು ಹೊರಟುಬಿಡುತ್ತಾರೆ. ಸುದೈವದಿಂದ ಮೈಯಾ ವೆಕೇವಾ ಎನ್ನುವ ಹೆಣ್ಣು ಮಗಳೊಬ್ಬಳು ಜಯಶ್ರೀಯವರಿಗೆ ಆಕಸ್ಮಿಕ ಜೊತೆಗಾತಿಯಾಗಿ ದೊರೆತಳು. ಒಂಬತ್ತು ಭಾಷೆಗಳನ್ನು ತಿಳಿದ ಹಾಗು ಪೋಲೀಸ್ ಇಲಾಖೆಯಲ್ಲಿ ತರ್ಜುಮೆಕಾರಳಾಗಿ ಕೆಲಸ ಮಾಡುತ್ತಿದ್ದ ಅವಳು ತಿಳಿಸಿದ ಸಂಗತಿಯೆಂದರೆ ರಶಿಯಾ ಹಾಗು ಸ್ವೀಡನ್ ದೇಶಗಳ ನಡುವೆ ಸಿಲುಕಿದ ಫಿನ್ ಲ್ಯಾಂಡ್ ಈ ದೇಶಗಳ ದಬ್ಬಾಳಿಕೆಯಿಂದಾಗಿ ನಲುಗಿ ಹೋಗಿತ್ತು. ಕಷ್ಟಪಟ್ಟು ಮೇಲೆದ್ದುಕೊಂಡು ನಿಂತಿದ್ದು ಈ ಪುಟ್ಟ ದೇಶದ ದೊಡ್ಡ ಸಾಧನೆ. ಮೈಯಾಳ ಜೊತೆ ಆತ್ಮೀಯತೆಯನ್ನು ಬೆಳೆಸಿಕೊಂಡ ಜಯಶ್ರೀಯವರು, ಫಿನ್ ಲ್ಯಾಂಡಿನ ಸಂಕಟಗಳನ್ನು ಹಾಗು ಸಾಹಸಮಯ ಪುನರುತ್ಥಾನವನ್ನು ಅರಿತುಕೊಂಡು ಓದುಗರಿಗೆ ಸರಳವಾಗಿ ತಿಳಿಸಿದ್ದಾರೆ.

 ಫಿನ್ ಲ್ಯಾಂಡಿನ ನಂತರ ಜಯಶ್ರೀಯವರು, ನಮ್ಮನ್ನು ರಶಿಯಾಕ್ಕೆ ಕರೆದುಕೊಂಡು ಹೋಗುತ್ತಾರೆ. ರಶಿಯಾದ ಅವರ ಪ್ರವಾಸ ಒಂದೇ ದಿನದ್ದು. ಆದರೆ ಅಲ್ಲಿ ಅವರು ಪಡೆದ ಅನುಭವ ಮನ ತಣಿಸುವಂತಹದು. ಸೇಂಟ್ ಪೀಟರ್ಸಬರ್ಗ ಇದು ರಶಿಯಾದಲ್ಲಿ ಪ್ರಸಿದ್ಧವಾದ ಪ್ರವಾಸಿತಾಣ. ಇಲ್ಲಿರುವ ಕೆಥೆಡ್ರಾಲ್ ತನ್ನ ವಾಸ್ತುಶಿಲ್ಪ ಹಾಗು ವರ್ಣಚಿತ್ರಗಳಿಂದಾಗಿ ಆಕರ್ಷಕವಾಗಿದೆ.

 ಹೆರಿಟೇಜ್ ಎನ್ನುವ ವಸ್ತುಸಂಗ್ರಹಾಲಯವೂ ಸಹ ದಿಙ್ಭ್ರಮೆಗೊಳಿಸುವಂತಹದು. ಇಲ್ಲಿ ಭಾರತೀಯ ಮೂಲದ ಪ್ರತಿಮೆಗಳೂ ಇವೆ. ಈ ವಸ್ತುಸಂಗ್ರಹಾಲಯವನ್ನು ಇಷ್ಟು ಶ್ರೀಮಂತಗೊಳಿಸಿದವಳು ಎಲಿಸಬೆಥ್ ಎನ್ನುವ ರಶಿಯಾದ ರಾಣಿ. ಇವಳ ಬಗೆಗಿನ ಒಂದು ಪಕ್ಷಿನೋಟವನ್ನು ಜಯಶ್ರೀಯವರು ಪುಸ್ತಕದ ಕೊನೆಯಲ್ಲಿ ಕೊಟ್ಟಿದ್ದಾರೆ. ಇದನ್ನೆಲ್ಲ ಕಣ್ಣಾರೆ ನೋಡಿದ ಹಾಗು ಮುಕ್ತಮನಸ್ಸಿನಿಂದ ಅನುಭವಿಸಿದ ಜಯಶ್ರೀಯವರು ಪ್ರತಿಯೊಂದು ದೇಶವು ತನ್ನ ಇತಿಹಾಸದಿಂದ ಹಾಗು ಪರಂಪರೆಯಿಂದ ಸಮೃದ್ಧವಾಗಿರುತ್ತದೆ ಎಂದು ಉದ್ಗರಿಸುತ್ತಾರೆ.

 ಜಯಶ್ರೀಯವರು ತಮ್ಮ ಕಣ್ಣುಗಳನ್ನು ಯಾವಾಗಲೂ ತೆರೆದುಕೊಂಡೇ ಇರುವವರು. ಹೀಗಾಗಿ ರಶಿಯಾದ ಶ್ರೀಮಂತ ಮ್ಯೂಜಿಯಮ್ ಬಳಿಯ ರಸ್ತೆಗಳಲ್ಲಿ ಬಡ ಮುದುಕಿಯರು ತಮ್ಮ ಹತ್ತಿರವಿರುವ ಆಟದ ವಸ್ತುಗಳನ್ನು ಹಾಗು ಬೊಂಬೆಗಳನ್ನು ಮಾರಾಟ ಮಾಡಲು ಎಷ್ಟು ಪರದಾಡುತ್ತಾರೆ ಎನ್ನುವುದನ್ನು ನವಿರಾಗಿ ವಿವರಿಸುತ್ತಾರೆ. ಈ ಮುದುಕಿಯರು ಮಾರುತ್ತಿರುವ ‘ಆಟದ ಗಾಡಿ’ಯನ್ನು ನೋಡಿದಾಗ ಜಯಶ್ರೀಯವರಿಗೆ ನಮ್ಮ ‘ಮೃಚ್ಛಕಟಿಕ’ದ ನೆನಪಾಗುತ್ತದೆ! (ಇದನ್ನೇ ನೋಡಿ, ಭಾರತೀಯತೆ ಎನ್ನುವುದು!)

ಚಾಣಾಕ್ಷ ಮೋಸಗಾರಿಕೆ ಹಾಗು ಕಳ್ಳತನದ ಬಗೆಯೂ ಇಲ್ಲಿ ಕೆಲವು ಅನುಭವದ ಮಾತುಗಳಿವೆ. (ರಶಿಯಾದ ಅರ್ಥವ್ಯವಸ್ಥೆಯ ಬಗೆಗೆ ಇದು ಒಂದು ಪಾರ್ಶ್ವನೋಟವೆಂದು ಹೇಳಬಹುದು.)  ಹಾಗೆಂದು ಅಲ್ಲಿಯ ಆಟದ ಬೊಂಬೆಗಳ ಹೆಚ್ಚುಗಾರಿಕೆಯನ್ನು ಕಂಡು ಆನಂದಿಸಲು ಹಾಗು ಕೊಂಡಾಡಲು ಜಯಶ್ರೀಯವರು ಹಿಂದೆ ಬೀಳುವುದಿಲ್ಲ. ನಿಷ್ಪಕ್ಷಪಾತವಾದ ಸತ್ಯದರ್ಶನಕ್ಕೆ ಇದು ಉದಾಹರಣೆಯಾಗಿದೆ. ಈ ಬೊಂಬೆಗಳನ್ನು ಜಯಶ್ರೀಯವರು ನೋಡಿ ಸುಮ್ಮನೆ ಹೋಗದೆ ಆ ಬೊಂಬೆಗಳ ಹಿನ್ನೆಲೆಯನ್ನು ಅರಿತುಕೊಂಡು, ನಮಗೂ ತಿಳಿಸುತ್ತಾರೆ. ಅದು ಹೀಗಿದೆ:

“ ಮಾತ್ರೋಷ್ಕಾ ಬೊಂಬೆ  ರಷ್ಯಾದ ಜಾನಪದ ಕಲೆಯ ಹೆಗ್ಗಳಿಕೆ, ಹೆಗ್ಗುರುತು. ಮರಗೆಲಸದ ಕಲಾಕುಸುರಿಯ ದ್ಯೋತಕ.......ಕಣ್ಣಿಗೆ ರಾಚದೇ ತಂಪೇ ಉಣಿಸುವ ಚೆಲುವು....... ಭಾವ, ನಿರ್ಭಾವದ ನಡುವಣ ಸಮಭಾವ ಅಚ್ಚೊತ್ತಿದ ಮುಖಗಳಲ್ಲಿ ಕಂಡೂ ಕಾಣದ ಕಿರುನಗು..... ಬಾರ್ಬಿಯಂಥ ಕೃತಕತೆಯ ಸುಳಿವಿಲ್ಲದ ಮಾರ್ದವ.......”.

 ರಶಿಯಾದ ಕ್ಷಿಪ್ರದರ್ಶನದ ನಂತರ ಜಯಶ್ರೀಯವರು ನಮ್ಮನ್ನು ಸ್ವೀಡನ್ನಿನಲ್ಲಿರುವ ಸ್ಟಾಕ್ ಹೋಮಿಗೆ ಕರೆದೊಯ್ದು, ಅಲ್ಲಿಯ ನೋಬೆಲ್ ಪ್ರಶಸ್ತಿಯ ಸಭಾಂಗಣದ ದರ್ಶನ ಮಾಡಿಸುತ್ತಾರೆ. ಅಲ್ಲಿಂದ ಎಸ್ತೋನಿಯಾ ಎನ್ನುವ ಪುಟ್ಟ ದೇಶದ ದರ್ಶನ. ಈ ದೇಶದ ರಾಜಧಾನಿ ತಾಲೀನ್. ತಾಂತ್ರಿಕತೆ-ಆಧುನಿಕತೆಯೊಂದಿಗೆ ಮಧ್ಯಯುಗೀನ ಇತಿಹಾಸವನ್ನೂ ಸಮೃದ್ಧವಾಗಿ ಈ ನಗರವು ಉಳಿಸಿ, ಬೆಳೆಸಿಕೊಂಡು ಬಂದಿದೆ ಎನ್ನುವುದು ಲೇಖಕಿಯ ಟಿಪ್ಪಣಿ.

 ಝೆಕ್ ರಿಪಬ್ಲಿಕ್ಕಿನ ಪ್ರಾಗ್ ನಗರದ ಖಗೋಳಗಡಿಯಾರವು ತುಂಬ ಖ್ಯಾತವಾದ ಪ್ರವಾಸೀ ಆಕರ್ಷಣೆ. ಈ ಗಡಿಯಾರದ ಎಲ್ಲ ವಿವರಗಳನ್ನು ನೀಡುವುದರ ಜೊತೆಗೇ, ಜಯಶ್ರೀಯವರು ಆ ನಗರದ ಇತಿಹಾಸ ಹಾಗು ಕಟ್ಟಡಗಳ  ವಾಸ್ತುಶಿಲ್ಪದ ವೈಶಿಷ್ಟ್ಯಗಳನ್ನೂ ನಮ್ಮೆದುರಿಗೆ ಇಡುತ್ತಾರೆ.

 ಹಂಗೆರಿಯ ಬುಡಾಪೆಸ್ಟಿನಲ್ಲಿರುವ ಬೆಸಿಲಿಕಾದ ಬಗೆಗೆ ಜಯಶ್ರೀಯವರು ಬರೆಯುವುದು ಹೀಗಿದೆ:

“ತನ್ನ ಊರು, ದೇಶ, ಮಠ, ಪರಂಪರೆ, ಆಗಿ ಹೋದ ಸಂತರು, ಗೈದ ಸಾಧನೆಗಳು, ನಡೆಸಿದ ಸೇವೆಗಳು...ಮುಂದಾಗಲಿರುವ ಬೆಳವಣಿಗೆ ಇವೆಲ್ಲವನ್ನೂ ಸಚಿತ್ರವಾಗಿ, ಮೂರ್ತಿಸಹಿತವಾಗಿ, ಕಣ್ಣು ಕೋರೈಸುವ ವರ್ಣವೈಭವ, ಗಾಜಿನ ಮೇಲಿನ ವರ್ಣಚಿತ್ತಾರಗಳು, ಚಿತ್ರಗಳು ಇದೆಲ್ಲದರ ಇತಿಹಾಸವನ್ನು ಇಂದಿನ ವರ್ತಮಾನಕ್ಕೆ ತಂದಿಳಿಸುವ ಅವರ ಪರಿಗೆ ಬೆರಗಾಗುತ್ತಲೇ ಒಳಗೆ ಹೋದ ನನಗೆ ಇನ್ನೊಂದು ಅಲಭ್ಯ ಲಾಭ ದೊರೆಯಿತು.....”

 ‘ಕಬ್ಬಿಣದ ಶೂಗಳ ಸ್ಮಾರಕ’ ಮಾತ್ರ ಅತ್ಯಂತ ಭಯಾನಕವಾದ ಸ್ಮಾರಕವಾಗಿದೆ. ಜ್ಯೂ ಕೈದಿಗಳನ್ನು ನೇಣಿಗೇರಿಸುವ ಮೊದಲು, ಅವರ ತಲೆ ಬೋಳಿಸಿ, ಶೂಗಳನ್ನು ಕಳಿಚಿ ಇಡಲು ಹೇಳಲಾಗುತ್ತಿತ್ತು. ಶಿಲ್ಪಿ ಗ್ಯೂಲಾ ಫೊವರ್ ಮತ್ತು ಸಿನಿಮಾ ನಿರ್ಮಾಪಕ ಕೈನ ಟೊಗೇ ಅವರಿಗೆ ಇಂತಹ ದುರ್ಮರಣಗಳಿಗೆ ಒಂದು ಸ್ಮಾರಕ ಬೇಕೆನಿಸಿತು. ಹಂಗೆರಿಯ ಪಾರ್ಲಿಮೆಂಟಿನ ಎದುರಿನಲ್ಲಿ, ಡಾನ್ಯೂಬ್ ನದಿಯ ಪಕ್ಕದಲ್ಲಿ ಅವರು ಒಂದು ಸ್ಮಾರಕವನ್ನು ನಿರ್ಮಿಸಿದರು. ಆದರೆ ಇಲ್ಲಿ ನಿಜವಾದ ಶೂಗಳ ಬದಲು, ಕಬ್ಬಿಣದ ಶೂಗಳನ್ನು ಇಡಲಾಗಿದೆ.

 ‘ಎಂಬತ್ತು ದಿನಗಳಲ್ಲಿ ಧರಣಿಮಂಡಲದ ಸುತ್ತ’ ಎನ್ನುವ ಫ್ರೆಂಚ್ ಲೇಖಕ ಜೂಲ್ಸ್ ವರ್ನನ ಕಾದಂಬರಿಯನ್ನು ನೀವು ಓದಿರಬಹುದು. ಜಯಶ್ರೀ ದೇಶಪಾಂಡೆಯವರು ಎಷ್ಟು ದಿನಗಳಲ್ಲಿ ತಮ್ಮ  ಪ್ರಯಾಣವನ್ನು ಮಾಡಿದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಧರಣಿಮಂಡಲದ ಅನೇಕ ದೇಶಗಳನ್ನು ಇವರು ಸುತ್ತಿ ಹಾಕಿದ್ದಾರೆ. ಇವರು ಪಯಣಿಸಿದ ಹಾಗು ಈ ಕೃತಿಯಲ್ಲಿ ನಮ್ಮನ್ನು ಕರೆದೊಯ್ದ ಇತರ ದೇಶಗಳೆಂದರೆ, ಆಸ್ಟ್ರಿಯಾ, ಜರ್ಮನಿ, ಸ್ವಿಝರ್ ಲ್ಯಾಂಡ, ಫ್ರಾನ್ಸ್, ಪೋಲ್ಯಾಂಡ್, ಸಿಂಗಪುರ ಹಾಗು ಅಮೆರಿಕಾ. ಇವುಗಳಲ್ಲಿ ಆಸ್ಟ್ರಿಯಾ ಹಾಗು ಜರ್ಮನಿಗಳಲ್ಲಿ ಜ್ಯೂ ಜನರ ಹತ್ಯಾಕಾಂಡದ ಸಂಗ್ರಹಾಲಯಗಳಿವೆ.

 ಇನ್ನು ಸ್ವಿಝರ್-ಲ್ಯಾಂಡಿನಲ್ಲಿ ನಿಸರ್ಗದಚೆಲುವು ಮೈತುಂಬಿಕೊಂಡು ನಿಂತಿದೆ. ಅದನ್ನು ಸವಿದ ಲೇಖಕಿಯು ಅದನ್ನು ವರ್ಣಿಸುವುದು ಫಿರ್ದೌಸನ ಶೇರ್ ಒಂದರ ಮೂಲಕ:

“ಅಗರ್ ಫಿರ್ದೌಸ್ ಬರೂ-ಎ-ಜಮೀನ್ ಅಸ್ತ,

ಹಮೀನಸ್ತ, ಹಮೀನಸ್ತ,ಹಮೀನಸ್ತ.

(ಈ ಭೂಮಿಯ ಮೇಲೆ ಸ್ವರ್ಗವೆಂಬುದು ಇರುವದಾದರೆ, ಅದು ಇಲ್ಲಿದೆ, ಅದು ಇಲ್ಲಿದೆ, ಅದು ಇಲ್ಲಿದೆ.”

ಸ್ವತಃ ಜಯಶ್ರೀಯವರೇ ಸ್ವಿಝರ್-ಲ್ಯಾಂಡಿನ ಚೆಲುವನ್ನು ಕಂಡು, ಬೆರಗಾಗಿ ಹೀಗೇ ಹೇಳುತ್ತಾರೆ:

“ಖುದಾ ಜಬ್ ದೇತಾ ಹೈ ತೊ ಛಪ್ಪಡ್ ಫಾಡ್ ಕೇ ದೇತಾ ಹೈ”.

 ಜಗತ್ತಿನ ಅತಿ ಶ್ರೀಮಂತ ದೇಶವಾದ ಅಮೆರಿಕಾದ ಪ್ರವಾಸ ಹೇಗಿದ್ದೀತು? ಸುದೈವದಿಂದ ಈ ದೇಶದಲ್ಲಿ ಪ್ರಾಕೃತಿಕ ಚೆಲವು ಹರಡಿಕೊಂಡಷ್ಟೇ ಧಾರಾಳವಾಗಿ, ಡಾಲರ್ ಮೂಲಕ ಸೂರೆ ಮಾಡಬಹುದಾದ ಸೌಕರ್ಯಗಳೂ ಸಾಕಷ್ಟಿವೆ! ಇವೆಲ್ಲವುಗಳ ವಿವರವಾದ ವರ್ಣನೆಯನ್ನು ಲೇಖಕಿ ಕೊಟ್ಟಿದ್ದಾರೆ.

 ಇವೆಲ್ಲ ಪಾಶ್ಚಿಮಾತ್ಯ ದೇಶಗಳಾದವು. ಪೌರ್ವಾತ್ಯ ದೇಶಗಳ ಪ್ರವಾಸ ಬೇಡವೆ? ನಿಮಗೆ ಹಾಗೆ ಎನಿಸಿದರೆ ಜಯಶ್ರೀ ದೇಶಪಾಂಡೆಯವರು ನಿಮ್ಮನ್ನು ಸಿಂಗಪುರಕ್ಕೆ ಕರೆದೊಯ್ಯುತ್ತಾರೆ. ಜಯಶ್ರೀಯವರು ಸಿಂಗಪುರದಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದು, ಬುದ್ಧನ ದಂತಾವಶೇಷ ಮಂದಿರ. ಈ ದಂತಾವಶೇಷವನ್ನು ಶೀ ಫಝಾವ್ ಎನ್ನುವ ಓರ್ವ ಚೀನೀ ಸಂತನು ಮ್ಯಾನ್ಮಾರದ ಬುದ್ಧಮಠದಿಂದ ಬೇಡಿಕೊಂಡು ತಂದು ಸಿಂಗಪುರದಲ್ಲಿ ಪ್ರತಿಷ್ಠಾಪಿಸುತ್ತಾನೆ. ಇಲ್ಲಿರುವ ಪ್ರಾರ್ಥನಾಚಕ್ರವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಾರ್ಥನಾ ಚಕ್ರವಂತೆ.  ಮಕ್ಕಳಿಗೆ ಬುದ್ಧನ ಸಹಸ್ರ ನಾಮಾವಳಿಯನ್ನು ಹೇಳಿಕೊಡುತ್ತಿರುವ ಅನೇಕ ಕುಟುಂಬಗಳನ್ನು ಜಯಶ್ರೀಯವರು ಇಲ್ಲಿ ಕಂಡರು. ಹೊರಬರುವಾಗ ಅವರ ಮನಸ್ಸಿನ ತುಂಬ ನಮ್ಮ ಸಿದ್ಧಾರ್ಥ ಗೌತಮ ಬುದ್ಧನೇ ತುಂಬಿಹೋಗಿದ್ದ.

                                                                                                             ಇದೆಲ್ಲವು ಜಯಶ್ರೀ ದೇಶಪಾಂಡೆಯವರು ನೋಡಿದ ಹಾಗು ನಮಗೆ ತೋರಿಸಿದ ದೇಶಗಳ ಪ್ರವಾಸವರ್ಣನೆಯಾಯಿತು. ಅವರ ಕಥನಕೌಶಲವು ನಮ್ಮನ್ನು ನಿರಾಯಾಸವಾಗಿ ಎಲ್ಲೆಡೆ ಅಲೆದಾಡಿಸುತ್ತದೆ. ಈ ಕೌಶಲದ ಒಂದು ಭಾಗವಾದ ಅವರ ಭಾಷಾಪ್ರತಿಭೆಯನ್ನು ನಾವು ಈ ಲೇಖನದ ಮುಂದಿನ ಭಾಗದಲ್ಲಿ ನೋಡೋಣ.

  ಉತ್ತಮ ಸಾಹಿತ್ಯಕೃತಿಯನ್ನು ಹಾಗು ಪ್ರವಾಸವರ್ಣಮೆಯನ್ನು ನೀಡಿದ ಜಯಶ್ರೀ ದೇಶಪಾಂಡೆಯವರಿಗೆ ವಂದನೆಗಳು.