Tuesday, December 30, 2008

ಅತಿ-ಗಂಡಸ್ತನ-ಭ್ರಮಾವಿಲಾಸ

’Super-male-fantasy’ ಎನ್ನುವ ಪದಕ್ಕೆ ಶ್ರೀ ಕೇಶವ ಕುಲಕರ್ಣಿಯವರು ’ಅತಿ-ಗಂಡಸ್ತನ-ಭ್ರಮೆ’ ಎನ್ನುವ ಪರ್ಯಾಯ ಕನ್ನಡ ಪದವನ್ನು ನೀಡಿದ್ದಾರೆ.
Fantasy ಎನ್ನುವ ಇಂಗ್ಲಿಶ್ ಪದಕ್ಕೆ ಸರಿಯಾದ ಪದ ಹೊಳೆಯದೆ ಇದ್ದುದರಿಂದ ನಾನು ಆ ಆಂಗ್ಲ ಪದವನ್ನೇ ಬಳಸುತ್ತ ಬಂದಿದ್ದೆ.
ಅವರ ಕೊಡುಗೆಗೆ ಧನ್ಯವಾದಗಳು.
ಆದರೆ, ಭ್ರಮೆ ಎನ್ನುವದು illusion ಪದಕ್ಕೆ ಸರಿಹೋಗುವದು.
Fantasy ಪದಕ್ಕೆ ’ಭ್ರಮಾವಿಲಾಸ’ ಎನ್ನುವ ಪದಪುಂಜ ಸರಿಯಾಗಬಹುದೆಂದು ಈಗ ಹೊಳೆಯುತ್ತಿದೆ.
ಆದುದರಿಂದ ಮುಂದಿನ ಭಾಗದಲ್ಲಿ ನಾನು ‘ಭ್ರಮಾವಿಲಾಸ’ ಎನ್ನುವ ಪದವನ್ನು fantasy ಪದಕ್ಕೆ ಪರ್ಯಾಯವಾಗಿ ಬಳಸುತ್ತೇನೆ.

ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ಈ ‘ಅಗಂಭ್ರವಿ’ ಬಗೆಗೆ ಹಿಂದಿನ ಲೇಖನದಲ್ಲಿ ಬರೆದ ಬಳಿಕ, ಸಹೃದಯ ಸ್ನೇಹಿತರು ಈ ವಿಷಯವನ್ನು ವಿವಿಧ ಕೋನಗಳಲ್ಲಿ ಪರೀಕ್ಷಿಸಿದ್ದಾರೆ.
ವಿಷಯದ ಪರವಾಗಿ ಹಾಗೂ ವಿರೋಧವಾಗಿ ಅನೇಕ ಟಿಪ್ಪಣಿಗಳು ಮೂಡಿವೆ.
ಈ ಟಿಪ್ಪಣಿಗಳನ್ನು ಸಮರ್ಪಕವಾಗಿ ಜೋಡಿಸಿಕೊಂಡು, ಸಮೀಕ್ಷಿಸುವ ಅವಶ್ಯಕತೆ ಕಂಡುಬರುತ್ತಿದೆ.

ಟಿಪ್ಪಣಿಗಳನ್ನು ಈ ರೀತಿಯಲ್ಲಿ ಜೋಡಿಸಿಕೊಳ್ಳಬಹುದು:
(೧) ರತಿಕ್ರಿಯೆಯ ವರ್ಣನೆ ಅನೇಕ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬರುತ್ತದೆ. ಇದು ಕೇವಲ
ಭೈರಪ್ಪನವರ specialty ಅಲ್ಲ.
(೨) ಭೈರಪ್ಪನವರ ಸಾಹಿತ್ಯದಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಕ್ಕೆ ಉಚಿತವಾಗಿರುತ್ತದೆ. ಅದರಲ್ಲಿ ತಪ್ಪಿಲ್ಲ.
(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು.

ಈ ಟಿಪ್ಪಣಿಗಳಿಗೆ ನನ್ನ ಮರುಟಿಪ್ಪಣಿಗಳು ಈ ರೀತಿಯಾಗಿವೆ:
(೧) ರತಿಕ್ರೀಡೆಯ ವರ್ಣನೆ ಭೈರಪ್ಪನವರ ಕಾದಂಬರಿಗಳಲ್ಲಿ explicit ಆಗಿ ಕಂಡುಬರುವಷ್ಟು ಬೇರೆ ಯಾವದಾದರೂ ಕನ್ನಡ ಕಾದಂಬರಿಯಲ್ಲಿ ಕಂಡು ಬರುತ್ತಿದ್ದರೆ, ದಯವಿಟ್ಟು ತಿಳಿಸಬೇಕು. (except in porno literature).
ನನಗೆ ಗೊತ್ತಿರುವ ಮಟ್ಟಿಗೆ ಕುವೆಂಪು ಬರೆದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ರತಿಕ್ರೀಡೆಯ explicit ವರ್ಣನೆ ಇದೆ.
(ಓದಬಯಸುವವರು ಮೋಟುಗೋಡೆಯ ಮರೆಯಲ್ಲಿ ನೋಡಿರಿ.)
ಆದರೆ, ಈ ವರ್ಣನೆ ‘ಅತಿ-ಗಂಡಸ್ತನ-ಭ್ರಮಾವಿಲಾಸ’ದ ವರ್ಣನೆ ಅಲ್ಲ.
On the contrary, ಗಂಡು ಹೆಣ್ಣುಗಳ ಸಮಾನತೆಯನ್ನು, ಸಮಾನ ಆಸಕ್ತಿಯನ್ನು, ಕಾಮದ ಸಹಜತೆಯನ್ನು ತೋರಿಸುವ ವರ್ಣನೆ ಇದಾಗಿದೆ.
ಭೈರಪ್ಪನವರ ರತಿವರ್ಣನೆಗಳಲ್ಲಿ ಕಂಡುಬರುವ ವೈಶಿಷ್ಟ್ಯವೆಂದರೆ ‘ಅಗಂಭ್ರವಿ’.
ಇದರ ಅನೇಕ ಉದಾಹರಣೆಗಳನ್ನು ನಾನು ಹಿಂದಿನ ಲೇಖನದಲ್ಲಿ ಕೊಟ್ಟಿದ್ದೇನೆ.
ಅವರ ಒಂದು ಕಾದಂಬರಿಯಲ್ಲಿ (‘ಅನ್ವೇಷಣೆ’) ಬರುವ ಸಂದರ್ಭವನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬಯಸುತ್ತೇನೆ.

ಕಾದಂಬರಿಯ ನಾಯಕನ ಗುರುವಾದ ಒಬ್ಬ ಸಾಧುಬಾಬಾ, ನಾಯಕನ ಹಾಗೆ ತಾನೂ ರತಿಸುಖವನ್ನು ಸವಿದು, ಜೀವನದಲ್ಲಿ ಅದರ ಮೌಲ್ಯ ಗುರುತಿಸುವ ಬಯಕೆಯೊಂದಿಗೆ, ಮುಂಬಯಿಯಲ್ಲಿ ಸೂಳೆಯೊಬ್ಬಳ ಬಳಿಗೆ ಹೋಗುತ್ತಾನೆ.
ಸರಿ, ಓದುಗನಿಗೆ ಇದರಲ್ಲಿ ಎಂತಹ ತಪ್ಪೂ ಕಾಣುವದಿಲ್ಲ.

ಸಾಮಾನ್ಯ ಗಂಡಸಿನ ತರಹ ಒಂದು ನಿರ್ದಿಷ್ಟ ಅವಧಿಯವರೆಗೆ, ಆ ಸಾಧುಬಾಬಾ ಕ್ರೀಡಿಸಿದ್ದರೆ ಹಾಗೂ ರತಿಸುಖ ಪಡೆಯುವದರಲ್ಲಿ ತಪ್ಪಿಲ್ಲ ಎನ್ನುವ ನಿರ್ಣಯಕ್ಕೆ ಬಂದಿದ್ದರೆ, ಅದಕ್ಕೆ ಏನೂ ಆಕ್ಷೇಪಣೆ ಇರುತ್ತಿರಲಿಲ್ಲ.
ಆದರೆ, ಭೈರಪ್ಪನವರ ವರ್ಣನೆಯ ಮೇರೆಗೆ ಆ ಸಾಧುಬಾಬಾ ೪ ದಿನಗಳವರೆಗೆ ನಿರಂತರವಾಗಿ ಅವಳಲ್ಲಿ ಕ್ರೀಡಿಸಿದ!

ಓದುಗನು ಅದನ್ನೂ ಸಹ ಒಪ್ಪಿಕೊಂಡಾನು.
ಬಹುಶಃ ಭೈರಪ್ಪನವರು Guinnes Record ಸಾಧಿಸುವ ಉದ್ದೇಶದಿಂದ ಹಾಗೆ ಬರೆದಿದ್ದಾರು ಎಂದುಕೊಳ್ಳೋಣ.
ಆದರೆ, ಈ ಮುಂದಿನ ವಾಕ್ಯವನ್ನು ಗಮನಿಸಿ:
ಅವಳು ಬಳಲಿದ್ದಳು. ನಾನು ಏನೂ ಬಳಲಿರಲಿಲ್ಲ.
ಈ ವಾಕ್ಯವು ರತಿಸುಖದ ಮೌಲ್ಯಮಾಪನೆಗೆ ಅವಶ್ಯಕವೆ?
Does it not smack of super-male-fantasy?

ಕನ್ನಡದ ಇತರ ಸಾಹಿತಿಗಳ ಸಾಹಿತ್ಯದಲ್ಲಿ ಕಂಡುಬಂದಿರಬಹುದಾದ ರತಿವರ್ಣನೆಯು ‘ಅಗಂಭ್ರವಿ’ ಅಲ್ಲ. ಅದು ಕೇವಲ ರತಿಕ್ರೀಡೆಯ ಸರಳ ವರ್ಣನೆಯಷ್ಟೇ.

(೨) ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವ ರತಿಕ್ರೀಡಾ ವರ್ಣನೆಯು ಸಂದರ್ಭಜನ್ಯವಾಗಿರುತ್ತದೆ ಎನ್ನುವದು ಮತ್ತೊಂದು ಟಿಪ್ಪಣಿ.
ಅನೇಕ ಕನ್ನಡ ಹಾಗೂ ಹಿಂದಿ ಸಿನೆಮಾಗಳಲ್ಲಿ, ನಾಯಕ ಹಾಗೂ ನಾಯಕಿ ವನದಲ್ಲಿ ಅಥವಾ ಉಪವನದಲ್ಲಿ ತಿರುಗಾಡುತ್ತಿರುವಾಗ ಧಾರಾಕಾರವಾಗಿ ಮಳೆ ಹುಯ್ಯಲು ಪ್ರಾರಂಭವಾಗುತ್ತದೆ. ನಾಯಕ ಹಾಗೂ ನಾಯಕಿ ಸಂದರ್ಭಕ್ಕೆ ಉಚಿತವಾಗಿಯೇ (!) ಮಿಲನಗೊಳ್ಳುತ್ತಾರೆ.
EXACTLY ಇದೇ ರೀತಿಯಲ್ಲಿ, ‘ಗ್ರಹಣ’ ಕಾದಂಬರಿಯ ನಾಯಕರಾದ ಸ್ವಾಮೀಜಿಯವರು ನಾಯಕಿಯೊಡನೆ ಮಿಲನಗೊಂಡರು.
ತಪ್ಪೇನಿಲ್ಲ ಬಿಡಿ; ಸಂದರ್ಭವೇ ಹಾಗಿದೆ ಎಂದು ಒಪ್ಪಿಕೊಳ್ಳೋಣ.
ಆದರೆ ಈ ರತಿಕ್ರೀಡೆಯು ಸ್ವಾಮೀಜಿಯವರ ’ಅತಿಮಾನುಷಪೌರುಷ’ದ ವರ್ಣನೆಯಾಗುವದರ ಔಚಿತ್ಯವೇನು; ಕಾದಂಬರಿಯ ಕಥಾನಕಕ್ಕೆ ಇದು ಯಾವ ರೀತಿಯಲ್ಲಿ ಪೂರಕ ಎನ್ನುವದಷ್ಟೇ ನನ್ನ ಪ್ರಶ್ನೆ.

(೩) ಭೈರಪ್ಪನವರ ಸಮಗ್ರ ಸಾಹಿತ್ಯವನ್ನು ಅಧ್ಯಯನ ಮಾಡದೆ, ಈ ರೀತಿಯ ನಿರ್ಣಯಕ್ಕೆ ಬರುವದು ತಪ್ಪು:

ಭೈರಪ್ಪನವರು ಈವರೆಗೆ ಬರೆದ ೨೦ ಕಾದಂಬರಿಗಳ ಪೈಕಿ ೧೨ ಕಾದಂಬರಿಗಳಿಂದ ಈ ಲೇಖನದಲ್ಲಿ ನಾನು quote ಮಾಡಿದ್ದೇನೆ. ಇವರ ಎಲ್ಲಾ ಕಾದಂಬರಿಗಳಿಂದ ನಾನು quote ಮಾಡಿದ್ದರೆ, ಲೇಖನವು ಅನವಶ್ಯಕವಾಗಿ ದೀರ್ಘವಾಗುತ್ತಿತ್ತು.
ಭೈರಪ್ಪನವರ ಆತ್ಮಚರಿತ್ರೆ ಹಾಗೂ ವಿಮರ್ಶಾಗ್ರಂಥಗಳನ್ನು ನಾನು ಬಿಟ್ಟಿದ್ದಕ್ಕೆ ಆಕ್ಷೇಪಣೆ ಬಂದಿದೆ.
ಅಲ್ರೀ, ಆತ್ಮಚರಿತ್ರೆಯಲ್ಲಿ ಯಾರಾದರೂ ‘ಅಗಂಭ್ರವಿ’ಯನ್ನು ಬರೆಯುತ್ತಾರೆಯೆ?!
………………………………………………………………………………
ಉಳಿದ ಸಾಹಿತಿಗಳಿಗೆ ಹೋಲಿಸಿದಾಗ ಭೈರಪ್ಪನವರು ಎಲ್ಲಿ ನಿಲ್ಲುತ್ತಾರೆ?
ಕನ್ನಡದ ಕೆಲವು ನಾಮಾಂಕಿತ ಕಾದಂಬರಿಕಾರರನ್ನು ತೆಗೆದುಕೊಳ್ಳೋಣ:
ಶಿವರಾಮ ಕಾರಂತರು ಕನ್ನಡದ ಉದ್ದಾಮ ಸಾಹಿತಿಗಳು.
ಅವರ ಅನೇಕ ಕಾದಂಬರಿಗಳನ್ನು ಓದಿದವರಿಗೆ ಒಂದು ವಿಷಯ ಸ್ಪಷ್ಟವಾಗಿ ಗೋಚರವಾಗುತ್ತದೆ:
ಸಾಮಾನ್ಯ ಮಾನವನ ಬಗೆಗಿರುವ ಗೌರವ, ಸಹಕಂಪ ಹಾಗೂ ಮಾನವಪ್ರಯತ್ನದಲ್ಲಿರುವ ವಿಶ್ವಾಸ ಇವು ಕಾರಂತರ ಸಾಹಿತ್ಯದ ಮೂಲ ಆಶಯಗಳಾಗಿವೆ.

ಈಗ ತ್ರಿವೇಣಿಯವರನ್ನು ತೆಗೆದುಕೊಳ್ಳೋಣ.
ಕನ್ನಡದ ಖ್ಯಾತ ವಿಮರ್ಶಕರಾದ (ದಿ.) ಕೀರ್ತಿನಾಥ ಕುರ್ತಕೋಟಿಯವರು ತ್ರಿವೇಣಿಯವರ ಕಾದಂಬರಿಗಳನ್ನು ಅರೆಬೆಂದ ಕನಸುಗಳು ಎಂದು ವಿಮರ್ಶಿಸುವ ಮೂಲಕ ಈ ಲೇಖಕಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ.
ತ್ರಿವೇಣಿಯವರ ಎಲ್ಲಾ ಕಾದಂಬರಿಗಳಲ್ಲಿ ಕಂಡು ಬರುವ ಮೂಲ ಆಶಯವೆಂದರೆ: Woman’s aspirations.
ಹೆಣ್ಣಿಗೂ ಸಹ ಗಂಡಿನಂತೆಯೇ ಆಕಾಂಕ್ಷೆಗಳಿರುತ್ತವೆ, ಅವಳಿಗೂ ಮನಸ್ಸೆಂಬುದು ಒಂದಿದೆ, ಗಂಡು ಹಾಗು ಹೆಣ್ಣು ಪರಸ್ಪರ ಪ್ರೇಮಿಗಳೇ ಹೊರತು ಪ್ರತಿಸ್ಪರ್ಧಿಗಳಲ್ಲ ಎನ್ನುವದು ಅವರ ಸಾಹಿತ್ಯದ ಮೂಲ ಆಶಯ.

ಕನ್ನಡದ ಕಥಾಬ್ರಹ್ಮರೆಂದು ಹೆಸರು ಪಡೆದ ಮಾಸ್ತಿಯವರ ಸಾಹಿತ್ಯದ ಮೂಲ ಆಶಯವೇನು?
ಮಾನವನ ಆದರ್ಶ, ಘನತೆ, ಸ್ತ್ರೀಯರ ಬಗೆಗೆ ಔದಾರ್ಯ ಇವು ಮಾಸ್ತಿಯವರ ಸಾಹಿತ್ಯದ ಮೂಲ ಆಶಯಗಳು.
(ಈ ಎಲ್ಲ ಅಂಶಗಳನ್ನು ಒಳಗೊಂಡ ಅವರ ಅತ್ಯುತ್ತಮ ಕತೆ ಎಂದರೆ ‘ವೆಂಕಟಿಗನ ಹೆಂಡತಿ’.)

ಕಥಾಸಾಹಿತ್ಯದಲ್ಲಿ ಮಾಸ್ತಿಯವರಷ್ಟೇ ಶ್ರೇಷ್ಠರಾದ ಪಿ. ಲಂಕೇಶರ motif ಮಾತ್ರ ಬೇರೆಯಾಗಿತ್ತು.
ಇವರು ಪರಿಸರದ ಅನಿವಾರ್ಯತೆಯಿಂದ ಉಂಟಾದ ಮನುಷ್ಯನ ಕ್ಷುದ್ರತೆಯನ್ನು ತೋರಿಸಿದರು.
ಇದರ ಉದಾಹರಣೆಯಾಗಿ ಕನ್ನಡದ ಶ್ರೇಷ್ಠ ಕವನಗಳಲ್ಲೊಂದಾದ ಅವರ ‘ಅವ್ವ’ ಕವನವನ್ನೇ ನೋಡಬಹುದು.
ಇಲ್ಲಿ ಅವರು ತಮ್ಮ ಅವ್ವನನ್ನು ‘ಬನದ ಕರಡಿ’ ಎಂದು ಬಣ್ಣಿಸುತ್ತಾರೆ.
ತನ್ನ ಗಂಡನ ಲಂಪಟತನ, ಬೇಜವಾಬ್ದಾರಿ ವರ್ತನೆ, ಮಕ್ಕಳನ್ನು ತಾನೇ ಸಾಕಬೇಕಾದ ಹೊಣೆಗಾರಿಕೆ ಇವೇ ಅವಳನ್ನು ಕರಡಿಯನ್ನಾಗಿ ಪರಿವರ್ತಿಸಿದ ಕಾರಣಗಳು.
ಅವರ ‘ಮೈಲಿ ಮುಖದ ಹಜಾಮ’ ಸಹ ಒಬ್ಬ ಮನುಷ್ಯನು ಮತ್ತೊಬ್ಬ ಮನುಷ್ಯನನ್ನು ನಂಬಲಾರದಂತಹ ಮಾನವ ಪರಿಸರವನ್ನು ತೋರಿಸುತ್ತದೆ.

ವಿಶ್ವಸಾಹಿತ್ಯದಲ್ಲಿ ಸ್ಥಾನ ಪಡೆಯುವಂತಹ ಕತೆಗಳನ್ನು ಬರೆದ ದೇವನೂರು ಮಹಾದೇವ ಇವರ ಮೂಲ ಆಶಯಗಳೇನು?
ಶೋಷಣೆಯ ಸ್ಥಿತಿಯು ಯಾವ ರೀತಿಯಲ್ಲಿ ಮನುಷ್ಯನನ್ನು compromise ಮಾಡಿಸುತ್ತದೆ ಎನ್ನುವದು ದೇವನೂರರ motif.

ನಮ್ಮ ಸಮಾಜದಲ್ಲಿ ಹೆಣ್ಣು ಪಡುವ ಯಾತನೆಯನ್ನು, ಅವಳ ಅಸಹಾಯಕತೆಯನ್ನು ಭೈರಪ್ಪನವರಷ್ಟು ಚೆನ್ನಾಗಿ ಯಾರೂ ತೋರಿಸಿಲ್ಲ.
ಇದು ಭೈರಪ್ಪನವರ ಸಾಹಿತ್ಯದ ಮೂಲ ಆಶಯ.
ಆದರೆ ಇದರ ಜೊತೆಗೇ ‘ಅಗಂಭ್ರವಿ’ಯ motif ಸೇರಿಕೊಂಡಿರುವದು ಅವರ ದುರದೃಷ್ಟ.
ಅಥವಾ ಇದು ಕನ್ನಡಿಗರ ದುರದೃಷ್ಟವೆ?
………………………………………………………………………………………
ಸಹೃದಯರಿಗೆಲ್ಲ ಹೊಸ ವರ್ಷದ ಶುಭಾಶಯಗಳು!

Saturday, December 20, 2008

ಭೈರಪ್ಪನವರು ಹಾಗು super-male-fantasy

ಎಸ್.ಎಲ್.ಭೈರಪ್ಪನವರು ಕನ್ನಡದ ಜನಪ್ರಿಯ ಸಾಹಿತಿಗಳು.
ಸಾಧಾರಣವಾಗಿ ಅವರ ಕಾದಂಬರಿಗಳಲ್ಲಿ ಮೂರು ಮುಖ್ಯ ಲಕ್ಷಣಗಳನ್ನು ಗುರುತಿಸಬಹುದು:
(೧) passionate ಬರವಣಿಗೆ.
(೨) ತತ್ವಜಿಜ್ಞಾಸೆ.
(೩) obsession with sex.

ಭೈರಪ್ಪನವರ ಪಾತ್ರಗಳು, ವಿಶೇಷತ: ನಾಯಕರು ಛಲವಾದಿಗಳು, ತೀವ್ರವಾದ ತಳಮಳದಲ್ಲಿ ತೊಳಲಾಡುವಂಥವರು.
ನಾಯಕ ಹಾಗೂ ನಾಯಕಿಯಲ್ಲದೆ, ಇತರ ಪಾತ್ರಗಳೂ ಸಹ ನಿರ್ಣಾಯಕ ಸಮಯದಲ್ಲಿ ಭಯಂಕರ ತತ್ವಜಿಜ್ಞಾಸೆಯಲ್ಲಿ ತೊಡಗಿಕೊಳ್ಳುವಂಥವರು. ಇದು ಬರವಣಿಗೆಯಲ್ಲಿ passion ತುಂಬಲು ಸಹಾಯಕವಾಗಿದೆ.
ಇದೆಲ್ಲದರ ಹಿಂದೆ, ಕೆಲವೊಮ್ಮೆ ಮುಕ್ತವಾಗಿ, ಕೆಲವೊಮ್ಮೆ ಗುಪ್ತವಾಗಿ ಮತ್ತೊಂದು ವಿಶೇಷತೆಯನ್ನು ಕಾಣಬಹುದು.
ಈ ವಿಶೇಷತೆಗೆ ನಾವು super- male- fantasy ಎಂದು ಕರೆಯಬಹುದು.

ಬಹುಶಃ ಎಲ್ಲ ಗಂಡಸರು ತಾವು ಹೆಣ್ಣಿಗಿಂತ ಎಲ್ಲ ವಿಧದಲ್ಲಿಯೂ ಹೆಚ್ಚಿನವರು, ವಿಶೇಷತ: sexually ಹೆಚ್ಚು ಸಾಮರ್ಥ್ಯವುಳ್ಳವರು ಎಂದು ಕಲ್ಪಿಸಿಕೊಳ್ಳುತ್ತಾರೆ.
ಆದರೆ, ನಿಸರ್ಗದ ಯೋಜನೆ ಅಥವಾ ವಿಧಾನ ಹಾಗಿಲ್ಲ.
ಮಾನವಕುಲದಲ್ಲಿ ಗಂಡು ಹಾಗೂ ಹೆಣ್ಣುಗಳ ಪ್ರಮಾಣ ಸುಮಾರಾಗಿ ಸರಿಸಮವಾಗಿದೆ.
ಮಾನವಕುಲದಲ್ಲಿ ಹೆಚ್ಚಿಗೆ ಸಂತಾನವಾಗಬೇಕಾದರೆ, ರತಿಕ್ರಿಯೆಯಲ್ಲಿ ತೊಡಗಿದ ಗಂಡಸಿನ ಕ್ರಿಯೆ ಶೀಘ್ರಮುಕ್ತಾಯ ಕಾಣಬೇಕು ; ಹಾಗೂ ಹೆಣ್ಣಿನಲ್ಲಿ ರತಿಕ್ರಿಯೆ ಬಲಶಾಲಿ ಹಾಗೂ ನಿಧಾನವಾಗಿರಬೇಕು so that she can receive more & more males.
ಇದು ನಿಸರ್ಗದ ಸಂವಿಧಾನ.

ಆದರೆ ಮಾನವಕುಲದ ಅಹಂಕಾರಿ ಗಂಡುಜಾತಿಗೆ ಈ ನಿಸರ್ಗಯೋಜನೆ ಅಪಥ್ಯವಾಗಿದೆ.
ಆದುದರಿಂದ ಆತ ಪ್ರಕೃತಿಯ ಈ ವಿಧಾನವನ್ನು ಮನಸಾ ಒಪ್ಪಿಕೊಳ್ಳಲಾರದೆ ತೊಳಲಾಡುತ್ತಾನೆ.
ರತಿಕ್ರಿಯೆಯನ್ನು ದೀರ್ಘಗೊಳಿಸಲು ಕೃತ್ರಿಮ ವೈದ್ಯಕೀಯ ವಿಧಾನಗಳಿಗೆ ಶರಣಾಗುತ್ತಾನೆ.
ಅದು ಸಾಧ್ಯವಾಗದಾಗ ತನ್ನ ಸಾಮರ್ಥ್ಯವನ್ನು fantasyಯಲ್ಲಿ ಕಾಣಬಯಸುತ್ತಾನೆ.
ಈ fantasyಯು ಕೇವಲ ವೈಯಕ್ತಿಕ ಹಗಲುಗನಸುಗಳಿಗೆ ಸೀಮಿತವಾಗದೆ, ಸಾಹಿತ್ಯದಲ್ಲಿಯೂ ಸಹ ವ್ಯಕ್ತಗೊಳ್ಳುತ್ತಲೇ ಇದೆ.
ಸಾಹಿತ್ಯದಲ್ಲಿ ವ್ಯಕ್ತವಾಗುವ ಇಂತಹ fantasyಯನ್ನು super- male- fantasy ಎಂದು ಕರೆಯಬಹುದು.

ಸಾಮಾನ್ಯವಾಗಿ super- male- fantasy ಯಲ್ಲಿ ಎರಡು categoryಗಳನ್ನು ಮಾಡಬಹುದು:
(೧) ಜಾಗತಿಕವಾಗಿ ಅಥವಾ ಸಾರ್ವತ್ರಿಕವಾಗಿ applicable ಆಗುವಂತಹ super- male- fantasy ಹಾಗೂ
(೨) ಭಾರತೀಯರಿಗೇ ವಿಶಿಷ್ಟವಾಗಿರುವ super- male- fantasy.

ಸಾರ್ವತ್ರಿಕ super- male- fantasy ಯ ಎರಡು ಲಕ್ಷಣಗಳು ಹೀಗಿವೆ:
(೧) ಹೆಣ್ಣು ಗಂಡಿನ ದಾಸಿಯಂತೆ ವರ್ತಿಸುವದು.
(೨) ಹೆಣ್ಣನ್ನು ಗಂಡು ರತಿಕ್ರಿಯೆಯಲ್ಲಿ ಸೋಲಿಸುವದು !

ಭಾರತೀಯರು ಸಾಮಾನ್ಯವಾಗಿ ದೃಢವಾದ ನೈತಿಕ ಬುದ್ಧಿಯುಳ್ಳವರು. ಇವರು ತಮ್ಮ fantasyಯಲ್ಲಿ ಸಹ ನೈತಿಕ ಹಾಗೂ ಧಾರ್ಮಿಕ ಕಟ್ಟಳೆಗಳನ್ನು ಉಲ್ಲಂಘಿಸಲಾರರು.
ಆದುದರಿಂದ ಭಾರತೀಯರಿಗೆ ವಿಶಿಷ್ಟವಾದ super- male- fantasy ಯ ವಿಶೇಷ ಲಕ್ಷಣಗಳನ್ನು ಹೀಗೆ ಗುರುತಿಸಬಹುದು:

(೧) ತಾನು ಹೆಣ್ಣಿಗೆ ಸೋಲದ ನಿಷ್ಠಾವಂತ ಬ್ರಹ್ಮಚಾರಿಯಾಗಿರಬೇಕು.
(೨) ಒಂದು ವೇಳೆ ಅಕಸ್ಮಾತ್ ಹೆಣ್ಣಿಗೆ ಸೋತು ರತಿಕ್ರಿಯೆ ಸಂಭವಿಸಿದರೆ, ಅದು compulsive circumstancesದಲ್ಲಿ ಆಗಿರಬೇಕೇ ಹೊರತು, ಅದರಲ್ಲಿ ಒಳಗೊಂಡವರ ಕಾಮದ ಬಯಕೆಯಿಂದ ಸಂಭವಿಸಿರಕೂಡದು.
ಅಂದರೆ ತಾನು ಹಾಗೂ ಆ ಹೆಣ್ಣು ಅಕ್ರಮ ರತಿಕ್ರಿಯೆಯೆ ನಂತರವೂ innocent ಹಾಗೂ virtuous ಆಗಿಯೇ ಉಳಿದಿರಬೇಕು.

Indian super- male- fantasy ಯ ಕತೆಗಳು ಭಾರತದಲ್ಲಿ ಪುರಾಣಕಾಲದಿಂದಲೂ ಚಾಲ್ತಿಯಲ್ಲಿವೆ.
ಮಹಾಭಾರತದ ಭೀಷ್ಮನು ಅಖಂಡ ಬ್ರಹ್ಮಚಾರಿಯಾಗಿ ಉಳಿದುಕೊಂಡು ಈ super-fantasyಯ super hero ಆಗಿ ಖ್ಯಾತಿ ಪಡೆದ.
ಭೀಷ್ಮನ ಮಲತಾಯಿಯಾದ ಮತ್ಸ್ಯಗಂಧಿಯೊಡನೆ ಪರಾಶರ ಮುನಿಗಳು ಡೋಣಿಯಲ್ಲಿ ಹೋಗುವಾಗ ನದಿಯ ಮಧ್ಯದಲ್ಲಿ ಅವರೀರ್ವರ ಮಿಲನವಾಯಿತು.
ಅವರು ಮುನಿಗಳಾಗಿದ್ದರಿಂದ ಅವರಿಗೆ ನೈತಿಕತೆಯ ಬಂಧನವಿಲ್ಲ.
ಮುನಿಗೆ ಮೈಕೊಟ್ಟಿದ್ದರಿಂದ ಅವಳ ನೈತಿಕತೆಗೂ ಧಕ್ಕೆಯಿಲ್ಲ.
ಅಲ್ಲದೆ ಅವಳಿಗೆ ಮತ್ತೆ ಕನ್ಯತ್ವವನ್ನು ಪ್ರಸಾದಿಸುವ ಮೂಲಕ ಅವಳ virtueಅನ್ನು ಅವರು restore ಮಾಡಿದರು.
ಇಂತಹ ಶಕ್ತಿ ಇದ್ದುದರಿಂದ ಅವರ ವ್ಯಕ್ತಿತ್ವಕ್ಕೆ ಮತ್ತಷ್ಟು ಘನತೆ ದೊರೆಯಿತೇ ಹೊರತು, ಅವರ ನೈತಿಕತೆ ಅಪಮೌಲ್ಯಕ್ಕೊಳಗಾಗಲಿಲ್ಲ.

ಆಧುನಿಕ ಕಾಲದಲ್ಲಿ ಇಂತಹ ಋಷಿ-ಮುನಿಗಳು ಸಿಗುವದು ಸಾಧ್ಯವಿಲ್ಲ.
ಆದುದರಿಂದ ಆಧುನಿಕ ಸಾಹಿತ್ಯದಲ್ಲಿ ಹಾಗೂ ಸಿನೆಮಾಗಳಲ್ಲಿ ನಾಯಕ ಹಾಗು ನಾಯಕಿಯರ ಆತ್ಮನಿಯಂತ್ರಣವನ್ನು ಮುರಿದು ಹಾಕುವಂತಹ ನೈಸರ್ಗಿಕ ಘಟನೆಗಳು ( compulsive circumstances) ಅವಶ್ಯವಾಗುತ್ತವೆ.

ಅನೇಕ ಹಿಂದಿ ಹಾಗೂ ಕನ್ನಡ ಚಿತ್ರಗಳಲ್ಲಿ ನಾಯಕ ಹಾಗೂ ನಾಯಕಿಯರ ಮಿಲನದ ದೃಶ್ಯವು ಹೀಗಿರುತ್ತದೆ:
ಧಾರಾಕಾರವಾಗಿ ಮಳೆ ಬೀಳುತ್ತಿದೆ; ನಾಯಕ ಹಾಗೂ ನಾಯಕಿ ಇಬ್ಬರೂ ಅಡವಿಯ ನಡುವಿನ ಪಾಳು ಗುಡಿಸಿಲಿನಲ್ಲಿ ಸಿಕ್ಕುಬಿದ್ದಿದ್ದಾರೆ.
ನಾಯಕಿಯ ಅಲ್ಪಸ್ವಲ್ಪ ಬಟ್ಟೆ ಸಹ ತೊಯ್ದು ತೊಪ್ಪಡಿಯಾಗಿವೆ.
ಇಂತಹ ಕಠಿಣ(!) ಪರಿಸ್ಥಿತಿಯಲ್ಲಿ ಅವರ ಸಂಯಮದ ಕಟ್ಟೆ ಸಡಿಲಾಗುತ್ತದೆ.
ಆದುದರಿಂದ ಅದು ಕ್ಷಮ್ಯ.
ಅವರ ನೈತಿಕತೆಗೆ ಅದರಿಂದ ಧಕ್ಕೆ ಇಲ್ಲ.
ಇದು Indian movies’ formula.

ಪುರಾಣಗಳ ನಂತರ ಹಾಗೂ Indian ಸಿನೆಮಾಗಳ ನಂತರ, ಈ Indian super- male- fantasyಯನ್ನು ತಮ್ಮ ಕಾದಂಬರಿಗಳ ಮೂಲಕ ಮುಂದುವರೆಸಿಕೊಂಡು ಬಂದಂತಹ ಸಾಹಿತಿಗಳೆಂದರೆ ಶ್ರೀ ಭೈರಪ್ಪನವರು ಎಂದು ಧಾರಾಳವಾಗಿ ಹೇಳಬಹುದು.
ಆದರೆ ಅವರು ತಮ್ಮ ಕಾದಂಬರಿಗಳಲ್ಲಿ compulsive circumstancesದಂತಹ ಕೀಳು formula ಬಳಸಲಾರರು. ಇದು ಅವರಿಗೆ ಶೋಭಿಸುವಂತಹದಲ್ಲ.

ಭೈರಪ್ಪನವರ ಕಾದಂಬರಿಗಳಲ್ಲಿ ಭಾರತದ ಸಾಂಪ್ರದಾಯಕ ಮೌಲ್ಯಗಳಿಗೆ ವಿಶೇಷ ಗೌರವ ಕಂಡುಬರುತ್ತದೆ.
ಸಾಂಪ್ರದಾಯಕ ಹಾಗೂ ಆಧುನಿಕ ಮೌಲ್ಯಗಳ ತಿಕ್ಕಾಟವೇ ಅವರ ೫ನೆಯ ಕಾದಂಬರಿ ‘ವಂಶವೃಕ್ಷ’ದ ಕಥಾವಸ್ತುವಾಗಿದೆ.
ಈ ಕಾದಂಬರಿಯ ಘನತೆವೆತ್ತ ಪಾತ್ರವಾದ ಶ್ರೋತ್ರಿಗಳ ಜೀವನದಲ್ಲಿಯೂ ಸಹ ಒಂದು ಸೂಕ್ಷ್ಮ ಪ್ರಸಂಗ ಬರುತ್ತದೆ.
Indian super- male- fantasyಯ ನಿಷ್ಠಾವಂತ ಬ್ರಹ್ಮಚರ್ಯದ ಆ fantasy ಹೀಗಿದೆ:
ಶ್ರೋತ್ರಿಗಳ ಹೆಂಡತಿಯು ತನ್ನ ಗಂಡನಿಗೆ ಶರೀರಸುಖವನ್ನು ಕೊಡಲು ಅಸಮರ್ಥಳಾಗಿದ್ದಾಳೆ.
ಹೀಗಾಗಿ ತಮ್ಮ ಮನೆಯಲ್ಲಿ ಕೆಲಸ ಮಾಡುವ ಓರ್ವ ಹೆಣ್ಣುಮಗಳನ್ನು ತನ್ನ ಬದಲಿಯಾಗಲು ಒಪ್ಪಿಸುತ್ತಾಳೆ.
ಶ್ರೋತ್ರಿಗಳು ಮೊದಲು ಒಪ್ಪಿಕೊಂಡರೂ ಸಹ, ಮಿಲನದ ರಾತ್ರಿಯಂದು ತಮ್ಮ ಮನಸ್ಸಿನಲ್ಲಿಯೇ ಭಯಂಕರ ತತ್ವಜಿಜ್ಞಾಸೆಯನ್ನು ಮಾಡಿ, ಬಳಿಗೆ ಬಂದ ಹೆಣ್ಣನ್ನು ದೂರೀಕರಿಸುತ್ತಾರೆ.
ಅವರ ಮನ ನಿರಾಳವಾಗುತ್ತದೆ.
ನಿಷ್ಠಾವಂತ ಬ್ರಹ್ಮಚರ್ಯದ Indian super- male- fantasy ಯ ಹೀರೋನಿಗೆ ಜಯ ಲಭಿಸುತ್ತದೆ!

ಈಗ Indian super- male- fantasyಯ ಎರಡನೆಯ ಲಕ್ಷಣವಾದ compulsive circumstances ಅನ್ನು ನೋಡೊಣ:
ನಾಯಕನು ಜಾರುವಂತಹ ಪ್ರಸಂಗವಿದ್ದಾಗ ಏನು ಮಾಡಬೇಕು?
ಸಾಮಾನ್ಯವಾಗಿ ಅನೇಕ ಲೇಖಕರು Compulsive circumstances ಅನ್ನುವ formula ಬಳಸುತ್ತಾರೆ.
ಆದರೆ ಭೈರಪ್ಪನವರು ಇದಕ್ಕಿಂತಲೂ ಹೆಚ್ಚಿನ ಒಂದು super formulaವನ್ನು ಹುಡುಕಿದ್ದಾರೆ.
ಅದು Inborn innocence ಎನ್ನುವ formula.

ಅವರ ೭ನೆಯ ಕಾದಂಬರಿಯಲ್ಲಿ (‘ನಾಯಿ ನೆರಳು’) ಇಂತಹ ಒಂದು ಸಂದರ್ಭವಿದೆ.
ಈ ಕಾದಂಬರಿಯ ನಾಯಕನಿಗೆ ಪೂರ್ವಜನ್ಮದ ಸ್ಮೃತಿ ಬಂದಿದೆ.
ಇವನ ಪೂರ್ವ ಜನ್ಮದ ತಂದೆ, ತಾಯಿ ಹಾಗೂ ಹೆಂಡತಿ ಇವನನ್ನು ಒಪ್ಪಿಕೊಂಡಿದ್ದಾರೆ.
ಪೂರ್ವ ಜನ್ಮದ ಹೆಂಡತಿಯೊಡನೆ ಇವನು ಮಲಗಿಕೊಳ್ಳುತ್ತಿದ್ದಾನೆ.
ಸಹಜವಾಗಿಯೇ ಅವಳು ಇವನ ದುಪ್ಪಟ್ಟು ವಯಸ್ಸಿನವಳು.
ಆದರೇನಾಯಿತು, ತನ್ನ ಗಂಡ ತನಗೆ ಜನ್ಮಾಂತರದಲ್ಲಿಯಾದರೂ ಸಿಕ್ಕಿದ್ದು ತನ್ನ ಪುಣ್ಯವೆಂದು ಆ ಮುತ್ತೈದೆ ಭಾವಿಸಿಕೊಂಡು ತನ್ನನ್ನು ಅವನಿಗೆ ಒಪ್ಪಿಸಿಕೊಳ್ಳುತ್ತಿದ್ದಾಳೆ.
(=formula of devotion and innocence!)

ಈ ನಾಯಕ ಒಮ್ಮೆ ತೋಟದ ಕಡೆಗೆ ನಡೆದಾಗ ಅಲ್ಲಿ ಒಬ್ಬಳು ತರುಣ ಕೆಲಸದಾಕೆಯನ್ನು ನೋಡುತ್ತಾನೆ.
ಇವನ ಮನಸ್ಸಿನಲ್ಲಿ ಅವಳನ್ನು ಕೂಡಬೇಕು ಎನ್ನುವ ಭಾವನೆ ಅತ್ಯಂತ ಸಹಜವಾಗಿ ಹುಟ್ಟುತ್ತದೆ.
ಇದು ಸಾಮಾನ್ಯ ಮಾನವರ ಮನದಲ್ಲಿ ಮೂಡುವ ನೀಚಕಾಮವಲ್ಲ!
ನಿಸರ್ಗದ ಮಕ್ಕಳ ಹಾಗೆ ಅವರು ಅತ್ಯಂತ ಸಹಜವಾಗಿ ಕೂಡುತ್ತಾರೆ.
ಮತ್ತೊಮ್ಮೆ formula of innocenceದ ವಿಜಯವಾಗುತ್ತದೆ!

ಪಾಶ್ಚಾತ್ಯ ಸಂಸ್ಕೃತಿಯಲ್ಲಿ ಗಂಡು ಹೆಣ್ಣು ಬೆರೆಯುವದಕ್ಕೆ ಯಾವುದೇ ನೈತಿಕ ಪ್ರತಿಬಂಧ ಉಳಿದಿಲ್ಲ.
ಹೀಗಾಗಿ ಅಲ್ಲಿಯ ಕಾದಂಬರಿಕಾರರಿಗೆ ಇಂತಹ formulaಗಳ ಅವಶ್ಯಕತೆ ಬರುವದಿಲ್ಲ.

Indian-super-male-fantasyಯ ಉದಾಹರಣೆಗಳನ್ನು ಪುರಾಣಗಳಲ್ಲಿ, ಸಿನೆಮಾಗಳಲ್ಲಿ ಹಾಗೂ ಭೈರಪ್ಪನವರ ಕೆಲವು ಕಾದಂಬರಿಗಳಲ್ಲಿ ನೋಡಿದ್ದಾಯ್ತು.
ಇದೀಗ ಸಾರ್ವತ್ರಿಕ super-male-fantasyಯ ಲಕ್ಷಣಗಳು ಭೈರಪ್ಪನವರ ಕಾದಂಬರಿಗಳಲ್ಲಿ ವ್ಯಕ್ತವಾದ ಬಗೆಯನ್ನು ನೋಡೋಣ:
ಈ fantasyಯ ಮೊದಲ ಗುರುತು ಎಂದರೆ ‘ಹೆಣ್ಣು ಗಂಡಿನ ದಾಸಿ ಅಥವಾ ಆರಾಧಕಿಯಂತೆ’ ವರ್ತಿಸುವದು.
ಭೈರಪ್ಪನವರ ೪ನೆಯ ಕಾದಂಬರಿ ‘ಮತದಾನ’ದ ಪುಟ ೧೬೯ರಲ್ಲಿ ಕಾದಂಬರಿಯ ನಾಯಕಿ ರಂಗಲಕ್ಷ್ಮಿಯು ನಾಯಕನಿಗಾಗಿ ಹಪಾಪಿಸುವದನ್ನು ಓದಿರಿ:
“ ತಾನು ಯಾರ ಬಗ್ಗೆ ಅತ್ಯಂತ ಗೌರವ ತಳೆದು,ಯಾರಿಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಎರಡು ವರ್ಷಗಳ ಹಿಂದೆ ತವಕಪಡುತ್ತಿದ್ದಳೊ ಅವರು ಈ ದಿನ ತನ್ನ ಎದುರು ಕುಳಿತು, ‘ನಾವಿಬ್ಬರು ಒಂದಾಗೋಣ ಬಾ’ ಎಂದು ಕರೆಯುತ್ತಿದ್ದಾರೆ. ಅವರ ಸ್ವಭಾವ, ಉಚ್ಚ ಆದರ್ಶ ಮತ್ತು ಪ್ರಾಮಾಣಿಕ ಜೀವನಗಳು ಅವಳಿಗೆ ತಿಳಿದಿವೆ. ಅವುಗಳಿಗೆ ತನ್ನ ಜೀವನದ ಶಕ್ತಿಯನ್ನು ಬೆರಸಿ ಬೆಳೆಸುವದಕ್ಕಿಂತ ಸಾರ್ಥಕವಾದ ಜೀವನವಿಲ್ಲ.”
ಭೈರಪ್ಪನವರ ನಾಯಕಿಯರ ಅತ್ಯುಚ್ಚ ಸಾಧನೆ ಹಾಗೂ ಆದರ್ಶ ಅಂದರೆ, ನಾಯಕನ ಛಾಯಾನುವರ್ತಿಯಾಗಿ ವರ್ತಿಸುವದು!

‘ದೂರ ಸರಿದರು’ ಇದು ಬೈರಪ್ಪನವರ ಮೂರನೆಯ ಕಾದಂಬರಿ.
ಈ ಕಾದಂಬರಿಯಲ್ಲಿ ಕಾಲೇಜೊಂದರ ವಿದ್ಯಾರ್ಥಿನಿ ಉಮಾ ಎನ್ನುವವಳು ತನ್ನ ಮುಂದಿನ ಕ್ಲಾಸಿನಲ್ಲಿರುವ ವಸಂತ ಎನ್ನುವ ವಿದ್ಯಾರ್ಥಿಯನ್ನು ಪ್ರೀತಿಸುತ್ತಾಳೆ.
ತತ್ವಶಾಸ್ತ್ರದ ವಿದ್ಯಾರ್ಥಿನಿಯಾದ ಇವಳು ತನ್ನಲ್ಲಿ ಪ್ರೀತಿ ಹುಟ್ಟುವವರೆಗೂ ಗಂಡು ಹೆಣ್ಣು ಸಮಾನರು ಎಂದು ತಿಳಿದವಳು.
ಆದರೆ, ತನ್ನ senior ವಿದ್ಯಾರ್ಥಿಯೊಬ್ಬನಲ್ಲಿ ಪ್ರೀತಿ ಹುಟ್ಟಿದ ಬಳಿಕ ಹೆಣ್ಣು ಗಂಡಿನ ಸಮಾನಳಲ್ಲ ಎಂದು ತಿಳಿದುಕೊಂಡು ಬಿಡುತ್ತಾಳೆ !
ಆ ಕಾದಂಬರಿಯ ೮೭ನೆಯ ಪುಟದಲ್ಲಿ ಆಕೆ ತನ್ನಲ್ಲಿ ಮೂಡುವ ಭಾವನೆಗಳನ್ನು ತನ್ನ ಪ್ರಿಯಕರನಿಗೆ ಈ ರೀತಿಯಾಗಿ ಹೀಗೆ ಹೇಳುತ್ತಾಳೆ:
“…ಸಮಾನತೆ ಎನ್ನುವದರಲ್ಲೂ ಹುರುಳು ಕಾಣುತ್ತಿಲ್ಲ. ನಾನು ನಿಮಗಿಂತ ಚಿಕ್ಕವಳು, ವಯಸ್ಸಿನಲ್ಲಿ ಮಾತ್ರವಲ್ಲ-ಬುದ್ಧಿಯಲ್ಲಿ, ಭಾವದಲ್ಲಿ-ಎಲ್ಲದರಲ್ಲಿ ಚಿಕ್ಕವಳು ಅನಿಸುತ್ತಿತ್ತು. ನಿಮ್ಮೆದುರಿಗೆ ನನ್ನ ಸ್ವತಂತ್ರ ವ್ಯಕ್ತಿತ್ವವೆಂದರೆ ಅದು ನನಗೆ ಬೇಡವಾದ ಒಂದು ಶತ್ರು ಅನಿಸುತ್ತಿತ್ತು”

ಇದೇ ಕಾದಂಬರಿಯ ಮತ್ತೊಂದು ಪಾತ್ರವಾದ ವಿನತೆ ಎನ್ನುವವಳ fantasyಯನ್ನು ನೋಡಿರಿ (ಪುಟ೨೨೧):
“…ಅವರ ವೃದ್ಧ ತಾಯಿಗೆ ತಾನು ಸೊಸೆಯಾಗಿ ಅವರ ಸೇವೆ ಮಾಡುತ್ತಿರುವಂತೆ ಅವಳು ಮನಸ್ಸಿನೊಳಗೇ ಚಿತ್ರಿಸಿಕೊಳ್ಳುವಳು. ಮುಂಜಾವಿನಿಂದ ಸಂಜೆಯವರೆಗೂ ಓದಿ ಅವನಿಗೆ ಆಯಾಸವಾದಾಗ, ತಾನು ಅವನ ಮನಸ್ಸನ್ನು ಅರಳಿಸಿ ಉಪಚರಿಸುವ ಕನಸನ್ನೂ ಕಾಣುವಳು. ಅವನು ಓದುವ ಪುಸ್ತಕಗಳ ಟಿಪ್ಪಣಿ ಬರೆದುಕೊಡುವದು, ಅವನ ಬರಹಗಳ ಉತ್ತಮ ಪ್ರತಿ ಮಾಡುವದು, ಅವನ ಬಟ್ಟೆಬರೆಗಳನ್ನು ಒಗೆದು ಮನೆಗೆಲಸ ಮಾಡುವದು, ಮೊದಲಾದವುಗಳಲ್ಲಿ ಕಾಲ ಕಳೆಯುವಂತೆ ಭಾವಿಸುವಳು……”

So, ಭೈರಪ್ಪನವರ ನಾಯಕಿಯರು ಭಾರತೀಯ ಪತಿವ್ರತಾ ನಾರಿಯರ ಅಪರಾವತಾರಗಳು.
ಹೆಣ್ಣು ಗಂಡಸಿನ ದಾಸಿ ಅಥವಾ ಆರಾಧಕಿಯಾಗಿರಬೇಕೆನ್ನುವ ಜಾಗತಿಕ male-fantasyಯನ್ನು ನಾವು ೫೦ ವರ್ಷಗಳ ಹಿಂದಿನ ಇಂಗ್ಲಿಶ ಕಾದಂಬರಿಗಳಲ್ಲೂ ಕಾಣುತ್ತೇವೆ.
ಈ ಧೋರಣೆಯನ್ನು ಕನ್ನಡದಲ್ಲಿ ಭೈರಪ್ಪನವರು emphatically ಮುಂದುವರಿಸಿಕೊಂಡು ಬರುತ್ತಿದ್ದಾರೆ.

‘ಭೀಮಕಾಯ’ ಇದು ಭೈರಪ್ಪನವರ ಮೊದಲನೆಯ ಕಾದಂಬರಿ.
ಈ ಕಾದಂಬರಿಯ ನಾಯಕ ಒಬ್ಬ ತರುಣ ಭೀಮಕಾಯ ಜಟ್ಟಿ.
ಈತ ಅನೇಕ ಮಹಾಜಟ್ಟಿಗಳನ್ನು ಚಿತ್ ಮಾಡಿ ಒಗೆದಿದ್ದಾನೆ.
ಇವನನ್ನು ಓರ್ವ ತರುಣ ವೇಶ್ಯೆಯೇ ಮೋಹಿಸುತ್ತಾಳೆ.
ಭೀಮಕಾಯನೂ ಅವಳನ್ನು ಮೋಹಿಸಿದ ಎಂದು ಬರೆದರೆ, ಅವನ ನೈತಿಕತೆ ಹಾಳಾದಂತಲ್ಲವೆ?
ಆದುದರಿಂದ, ಭೈರಪ್ಪನವರು plot ಒಂದನ್ನು ಹೆಣೆಯುತ್ತಾರೆ.
ತನ್ನ ವಿರೋಧಿಗಳ ಕುತಂತ್ರದಿಂದಾಗಿ, ಈ ಭೀಮಕಾಯ ಆ ತರುಣಿಯ ಬಲೆಯಲ್ಲಿ ಬೀಳುತ್ತಾನೆ.
ಆದರೇನು, ಆ ವೇಶ್ಯೆ ಇವನನ್ನು ಮನಸಾ ಆರಾಧಿಸುತ್ತಾಳೆ.
ಆದುದರಿಂದ ಇವನಿಂದ ದುಡ್ಡು ತೆಗೆದು ಕೊಳ್ಳುವದಿಲ್ಲ ; ಇವನಿಂದ ಮಗುವನ್ನು ಪಡೆಯುತ್ತಾಳೆ.
ಈ ಭೀಮಕಾಯನಿಗೆ ಓರ್ವ ಬಾಲಿಕೆಯೊಡನೆ ಮದುವೆ ನಿಶ್ಚಯವಾದಾಗ ಆ ಹುಡುಗಿಯನ್ನು ಮದುವೆಯಾಗಲು ಅವನಿಗೆ ಬುದ್ಧಿ ಹೇಳುತ್ತಾಳೆ.

ಆ ವೇಷ್ಯೆಗಷ್ಟೆ ಇಂತಹ ಆರಾಧನಾ ಭಾವ ಇತ್ತು ಎಂದಲ್ಲ.
ತಮ್ಮ ಪ್ರಥಮ ರಾತ್ರಿಯಂದು, ಭೀಮಕಾಯನು ತನ್ನ ಬಾಲಿಕಾ ವಧುವಿಗೆ ಎಲ್ಲ ಸಂಗತಿಯನ್ನು ತಿಳಿಸುತ್ತಾನೆ.
ಇಡೀ ರಾತ್ರಿ ತನ್ನ ಗಂಡನ ವೇಷ್ಯಾಪುರಾಣ ಕೇಳಿದ ಅವಳೂ ಸಹ ತನ್ನ ಹೊಸ ಪತಿಯ ಬಗೆಗೆ ಅಷ್ಟೇ ಆರಾಧನಾ ಭಾವನೆಯನ್ನು ತೋರಿಸುತ್ತಾಳೆ.
ತನ್ನ ಗಂಡನ ಮನಸ್ಸನ್ನು ಗೆದ್ದ ಆ ವೇಷ್ಯೆಯ ಮನೆಗೆ ತಕ್ಷಣವೇ ಗಂಡನೊಡನೆ ತೆರಳಿ, ಅವಳ ಆಶೀರ್ವಾದ ಪಡೆಯುತ್ತಾಳೆ, ಚುಮುಚುಮು ನಸುಕಿನಲ್ಲಿ !
Indian-super-male-fantasyಯ “ದಾಸಿ-ಒಡೆಯ-ಆರಾಧನಾ-syndrome”ದ ಉತ್ಕಟ ಉದಾಹರಣೆ ಅಲ್ಲವೆ ಇದು?

Compulsive circumstances formulaಅನ್ನು ಭೈರಪ್ಪನವರು ತಮ್ಮ ‘ಗ್ರಹಣ’ ಕಾದಂಬರಿಯಲ್ಲಿ ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ.
ಇದು ಭೈರಪ್ಪನವರ ೧೧ನೆಯ ಕಾದಂಬರಿ.
ಇಲ್ಲಿ ಆಧುನಿಕ ವಿಚಾರಗಳಿರುವ ಹಾಗೂ ಉಚ್ಚ ಧ್ಯೇಯಗಳಿರುವ ಸ್ವಾಮಿಗಳು ಕಾದಂಬರಿಯ ನಾಯಕರು. ಅಂತಹದೇ ವಿಚಾರಗಳ ಹಾಗೂ ಡಾಕ್ಟರ ವೃತ್ತಿಯ ನಾಯಕಿ ಇವನ ಆರಾಧಕಳು.
ಒಮ್ಮೆ ಭಯಂಕರ ಮಳೆ ಬೀಳುತ್ತದೆ.ನಾಯಕ ಹಾಗೂ ನಾಯಕಿ ತೊಯ್ದು ತೊಪ್ಪಡಿಯಾಗಿದ್ದಾರೆ.
ನಾಯಕ ಹಾಗೂ ನಾಯಕಿ ಅವನ ಗುಡಿಸಲಿಗೆ ಓಡಿ ಬರುತ್ತಾರೆ.
ಗುಡಿಸಲೂ ಸಹ ಸೋರುತ್ತಿದೆ. (ಸೋರುತಿಹದು ಮನೆಯ ಮಾಳಿಗೆ!)
ನಾಯಕನ ಸಂಯಮ ಕುಸಿದು, ಆತ ನಾಯಕಿಯ ಮೇಲೆ ಎರಗುತ್ತಾನೆ.
ನಾಯಕಿ ಆತನನ್ನು ತುಂಬು ಮನಸ್ಸಿನಿಂದ ಸ್ವೀಕರಿಸುತ್ತಾಳೆ!

Compulsive circumstances ಹಾಗೂ ಆರಾಧನಾ ಭಾವ ಅನ್ನುವ ಎರಡು ಲಕ್ಷಣಗಳಲ್ಲದೆ, Indian-super-male-fantasyಯ ಮೂರನೆಯ ಲಕ್ಷಣ ಸಹ ಈ ಕಾದಂಬರಿಯಲ್ಲಿದೆ.
ಅದು ನಾಯಕನ ರತಿಸಾಮರ್ಥ್ಯ!

ಇದೇ (‘ಗ್ರಹಣ’) ಕಾದಂಬರಿಯ ೧೦೫ನೆಯ ಪುಟದದಲ್ಲಿ ನಾಯಕಿ ವರ್ಣಿಸುವ ನಾಯಕನ ರತಿಸಾಮರ್ಥ್ಯದ ವೈಭವವನ್ನಷ್ಟು ಓದಿರಿ:
“……..ಅವರ ಕೈ, ತೋಳು, ಎದೆ, ಕುತ್ತಿಗೆ, ಕಾಲಿನ ಕಂಬ, ಮೀನಖಂಡಗಳೆಲ್ಲವೂ ಇನ್ನೂ ಬಿಗಿಯಾಗಿಯೇ ಇವೆ. ತನ್ನ ತೋಳು ಸೋತು ಮಲಗಿರುವಾಗ ಅವರ ಬಾಹುಗಳು ಮೊದಲಿಗಿಂತ ಗಟ್ಟಿಯಾಗುತ್ತಿವೆ. ಇನ್ನು ಸಾಕೆಂದು ಅವರಿಗೆ ಹೇಗೆ ಹೇಳುವದು?
ತಾನು ವೈದ್ಯಶಾಸ್ತ್ರವನ್ನು ಶ್ರದ್ಧೆಯಿಂದ ಅಭ್ಯಾಸ ಮಾಡಿರುವ ಹೆಂಗಸು. ಪ್ರಥಮ ಘಟನೆ, ಸ್ತ್ರೀಯ ಅನುಭವ, ಉದ್ದೀಪನ, ಪುರುಷನ ಧಾರಣ, ಕಾಲಾವಧಿ, ಸಾಪೇಕ್ಷ ಶಕ್ತಿಗಳ ಬಗೆಗೆ ತಿಳಿದುಕೊಂಡಿದ್ದವಳು. ಆದರೆ ಇದು ತನ್ನ ಕಲ್ಪನೆಯನ್ನೇ ಕುಸಿಸಿ ಮುಳುಗಿಸುತ್ತಿದೆ. ಇವರ ಧಾರಣಶಕ್ತಿ ಪ್ರಚಂಡವಾದದು. ಪ್ರಥಮ ಅನುಭವದಲ್ಲೇ ತನ್ನನ್ನು ರತಿಯ ತಲಾತಲಗಳಿಗೆ ತಲುಪಿಸಿದ್ದಾರೆ. ಪೌರುಷವೇ ಸಾಕ್ಷಾತ್ಕಾರವಾಗಿ ಚಲಿಸುವ ಇವರಿಗೆ ನಾನೊಬ್ಬಳಲ್ಲ, ನನ್ನಂತಹ ಹಲವು ಸ್ತ್ರೀಯರಾದರೂ ಸಾಲದೇನೋ!”

ಇದೇ (‘ಗ್ರಹಣ’) ಕಾದಂಬರಿಯ ೧೩೧ನೆಯ ಪುಟದಲ್ಲಿ, ಸ್ತ್ರೀಯ ಮೇಲೆ ಪುರುಷನ ವಿಜೃಂಭಣೆಯ ಮತ್ತೊಂದು ಪ್ರಕಾರವನ್ನು ಕಾಣಬಹುದು:
“ಸರೋಜ ಮಾತನಾಡದೆ ನಿಂತುಕೊಂಡಳು. ಆದರೆ ದೃಷ್ಟಿಯನ್ನು ಕೆಳಗೆ ಮಾಡದೆ ಕುತ್ತಿಗೆಯನ್ನು ಹಿಂದಕ್ಕೆ ತಿರುಗಿಸಿ, ಮಂಚದ ಮೇಲೆ ಮಲಗಿ ಕೈಕಾಲು ಅದರಿಸುತ್ತಿದ್ದ ರೋಗಿಯನ್ನು ನೋಡುತ್ತಿದ್ದಳು.
ತಮ್ಮ ಎಡಗಾಲನ್ನು ಮೇಲೆ ಎತ್ತಿ ಸ್ವಾಮಿಗಳು, ‘ಹೇಡಿ’ ಎಂದು ಅವಳ ಸೊಂಟಕ್ಕೆ ಒದೆದು ತೋಳನ್ನು ಬಿಟ್ಟರು. ಅವಳು ಉರುಳಿ ಕೆಳಗೆ ಬಿದ್ದಳು.
ಅವರು ಅವಳನ್ನು ತಿರುಗಿ ನೋಡಲಿಲ್ಲ. ಕಲ್ಲುಚಪ್ಪಡಿಯ ಮೆಟ್ಟಲನ್ನು ಇಳಿದರು.”

ಅದೇ (‘ಗ್ರಹಣ’) ಕಾದಂಬರಿಯ ೧೪೨ನೆಯ ಪುಟದಲ್ಲಿ ನಾಯಕಿಗೆ ಮತ್ತೆ ನಾಯಕನ ಪೌರುಷದ ಸ್ಮರಣೆಯಾಗುವ ಬಗೆಯನ್ನು ಓದಿರಿ:
“ಅಂಗಳದ ಭಾಗವನ್ನು ನೋಡುತ್ತಿದ್ದಾಗ, ತಾನು ಇಲ್ಲಿಗೆ ಬಂದಿದ್ದ ಕೊನೆಯ ದಿನದ ಮನಃಸ್ಥಿತಿ ಮತ್ತು ಅನುಭವಗಳ ನೆನಪಾಯಿತು. ಅದೆಂತಹ ಪೌರುಷ ಅವರದು! ಗಟ್ಟಿ ತೋಳಗಳು, ಕಸುವಿನ ಎದೆಕಟ್ಟು, ತಾನು ಸೋತು, ಬಳಲಿ, ನರನರಗಳೂ, ಸ್ನಾಯುಗಳೂ ಸಡಿಲವಾದಂತಾಗಿ ನಿಶ್ಚೇತನಳಾದ, ಮಾದಕತೆಯಿಂದ ಕಣ್ಣುಗತ್ತಲೆ ಬಂದಂತಹ ಅನುಭವ.”

ಭೈರಪ್ಪನವರ ೧೩ನೆಯ ಕಾದಂಬರಿ “ಅನ್ವೇಷಣೆ”ಯಲ್ಲಿ ಬರುವ ಒಬ್ಬ ಸನ್ಯಾಸಿಯು ಮುಂಬಯಿಯ ಸೂಳೆಯೊಬ್ಬಳಲ್ಲಿ ತೋರಿಸುವ ರತಿಸಾಮರ್ಥ್ಯದ ವರ್ಣನೆ ಹೀಗಿದೆ:
“ಅವರು ನಾಲ್ಕು ದಿನ ಆ ಮಹಡಿಯಿಂದ ಕೆಳಗೆ ಇಳಿಯಲಿಲ್ಲ. ತನಗೂ ಅವಳಿಗೂ ಅಲ್ಲಿಗೇ ಊಟ ಬರುತ್ತಿತ್ತು. ಐದನೆಯ ಬೆಳಗ್ಗೆ ಕೆಳಗಿಳಿದು ಬಾಂಬೆ ಸೆಂಟ್ರಲ್ ಸ್ಟೇಶನ್ನಿನ ಅದೇ ಜಾಗಕ್ಕೆ ಹೋಗಿ ಕುಳಿತಾಗ ಅನ್ನಿಸಿತು:
ಒಳ್ಳೆಯ ಹುಡುಗಿ. ಅಖಂಡ ಸುಖ ಕೊಟ್ಟಳು. ನನ್ನಲ್ಲಿ ಇಷ್ಟು ಶಕ್ತಿ ಇದೆ ಅಂತ ನನಗೇ ಗೊತ್ತಿರಲಿಲ್ಲ. ನಾಲ್ಕು ಹಗಲು ನಾಲ್ಕು ರಾತ್ರಿ. ಅವಳು ಎಷ್ಟು ಬಳಲಿದಳೋ! ನನಗೇನೂ ಬಳಲಿಕೆ ಇಲ್ಲ.”


ಭೈರಪ್ಪನವರ ೧೬ನೆಯ ಕಾದಂಬರಿ ‘ಸಾಕ್ಷಿ’ಯಂತೂ Super-male-fantasyಯ ಪರಮೋಚ್ಚ ಉದಾಹರಣೆ ಎನ್ನಬಹುದು.
ಈ ಕಾದಂಬರಿಯ (ಖಳ)ನಾಯಕ ಮಂಜಯ್ಯನೆನ್ನುವನು ಒಬ್ಬ Casanova.
ಈತ ೧೭ ವರ್ಷದವನಿರುವಾಗಲೇ ೩೫ ವರ್ಷದ ಪತಿವ್ರತಾ ಹೆಂಗಸೊಬ್ಬಳನ್ನು ತನ್ನ ಬಲೆಯಲ್ಲಿ ಅತಿ ಸುಲಭವಾಗಿ ಬೀಳಿಸುತ್ತಾನೆ. (ಹೆಣ್ಣಿನಲ್ಲಿರುವ ಆರಾಧನಾ ಗುಣದ ಮೂಲಕ!)
ತನಗೆ ೫೧ ವರ್ಷ ವಯಸ್ಸಾದಾಗ ಅದೇ ಸ್ತ್ರೀಯ ೧೭ ವರ್ಷದ ಹೆಣ್ಣು ಮಗಳನ್ನು ಅದೇ ರೀತಿಯಲ್ಲಿ ಬಲೆಗೆ ಕೆಡವಿಕೊಳ್ಳುತ್ತಾನೆ.
ಆಕೆ ತನ್ನ ಅಪ್ಪನ ವಿರೋಧವಿದ್ದಾಗಲೂ ಈತನನ್ನು ಮದುವೆಯಾಗುತ್ತಾಳೆ.
ಆಬಳಿಕ ಈ ಮಂಜಯ್ಯನು ಆ ಊರಿನ ಕೂಲಿಯೊಬ್ಬನನ್ನು ಕೊಂದು ಹಾಕಿ, ಅವನ ಹೆಂಡತಿಯನ್ನು ಬುಟ್ಟಿಗೆ ಹಾಕಿಕೊಂಡು ಅವಳ ಜೊತೆಗೆ ಅಕ್ರಮ ಸಂಬಂಧ ಸ್ಥಾಪಿಸುತ್ತಾನೆ.
ಆಬಳಿಕ ಅವಳ ಮಗಳನ್ನೂ ಸಹ ಬುಟ್ಟಿಗೆ ಬೀಳಿಸಿಕೊಳ್ಳುತ್ತಾನೆ.
SUPER CASANOVA !
ಈಗ ಈ Casanovaನ ಸಾಮರ್ಥ್ಯವನ್ನಷ್ಟು ನೋಡಿರಿ:
(ತನ್ನ ಗಂಡನ ಕೊಲೆಗಾರನಾದ ಮಂಜಯ್ಯನ ಬಗೆಗೆ ಮೋಹ ತಳೆದ ಲಕ್ಕಿ ಎನ್ನುವ ಹೆಂಗಸಿನ ವಿಚಾರವನ್ನು ಅರಿಯಲು ಈ ‘ಸಾಕ್ಷಿ’ ಕಾದಂಬರಿಯ ೩೫ನೆಯ ಪುಟವನ್ನು ನೋಡಿರಿ:)

“……ತಾನು ಈ ವಯ್ಯನನ್ನು ಕೂಡಿರುವದು ಈಗ ಎರಡನೆಯ ದಫ. ಮೊದಲನೆ ದಫ ಗ್ಯಾಪಿಸಿಕೊಂಡರೆ ಯವ್ವೇ ಎದೆ ಜಲ್ ಅಂತದೆ. ನಂಗೇ ಗೊತ್ತಿಲ್ಲದ್ಹಂಗೆ ಈವಯ್ಯ ಮಂತ್ರ ಹಾಕಿ, ಎಂಗಸೆಂದರೆ ಸೋತ ಎಣ್ಣು ನಾಯಿ ಮಾಡಿಬಿಡ್ತಾನೆ. ಕ್ವಾಟೆ ಬೀದಿ ನಾಗೀನ ಒಂದು ಸಲ ನಾನು ಕೇಳಿದ್ದಕ್ಕೆ ಅದೇನು ಕಂಡು ಆವಯ್ಯಂಗೆ ಗಂಟು ಬಿದ್ದೀದೀಯಮ್ಮಿ? ಅಂತ, ಯಕ್ಕಾ ಒಂದು ದಫಾ ಆವಯ್ಯನನ್ನು ಕೂಡಿಬಿಟ್ಟರೆ ಸಾಕು ಮುಂದೆ ಏಳೇಳು ಜನ್ಮಕ್ಕೂ ಅವನ ಜೀತದ ಆಳಾಗಿಯಾದರೂ ಅವನ ತಾವವೇ ಇರಬೇಕು ಅನ್ನಿಸ್ತದೆ ಅಂದಿದ್ದಳು, ಆಗ ನಂಗೆ ತಿಳಿದಿರಲಿಲ್ಲ ಹಿಂಗಿರ್ತದೆ ಅಂತ………”

ಇವರಿಬ್ಬರ ಮೊದಲ ಸಂಗಮದ ವರ್ಣನೆಯನ್ನಷ್ಟು ನೋಡಿರಿ:
“……..ಅವಳಿಗೆ ಅರ್ಥವಾಗುವ ಮೊದಲೇ, ಅರ್ಥ ಮಾಡಿಕಳುಕ್ಕೆ ಅವಕಾಶವನ್ನೇ ಕೊಡದೆ ತಬ್ಬಿ ಉರುಳಿಸಿಕೊಂಡು ಮೇಲೆ ಬಂದು, ಪ್ರವೇಶಿಸಿ ಕೊಸರಾಡದ ಹಾಗೆ ಪಟ್ಟು ಹಾಕಿ, ‘ಬ್ಯಾಡ ಕಣಯ್ಯಾ ಬ್ಯಾಡ ಕಣಯ್ಯಾ, ಇನ್ನೂ ಸೂತಕ ಕಣಯ್ಯಾ,’ ಅನ್ನುತ್ತಿದ್ದ ಬಾಯಿಗೆ ನನ್ನ ಬಾಯಿ ಕೊಟ್ಟು ಮುಚ್ಚಿಸಿಬಿಟ್ಟೆ ಎಂದುಕೊಂಡಾಗ ಮಂಜಯ್ಯ ಎಡಕ್ಕೆ ತಿರುಗಿ ನೋಡಿದ……ಶುರುವಿನಲ್ಲಿ ಮೆಟ್ಟಿಕೊಂಡು ಕೊಸರಾಟವನ್ನು ಹತೋಟಿಗೆ ತರಬೇಕಾದರೂ ನಿಧಾನವಾಗಿ ಇವಳು ಕೊಸರುವದನ್ನು ಬಿಟ್ಟು ಸಡಿಲಗೊಂಡು ಒಪ್ಪಿಸಿಕೊಂಡು ಕೊನೆಗೆ ಇವಳ ನಾಡಿಗಳನ್ನು ಕಂಡು ಹಿಡಿದು ಮಿಡಿದು ವರಸೆ ವೈಖರಿಗಳನ್ನು ಪ್ರಯೋಗಿಸಿದ ಮೇಲೆ ತಾನೂ ತೆವಲೇರಿ ನರಳುಕ್ಕೆ ಶುರು ಮಾಡಿದಳಲ್ಲ………”

ಈಗ ಈ ಮಂಜಯ್ಯ ಎನ್ನುವ ೫೧ ವಯಸ್ಸಿನ ಪಾತ್ರ, ತನ್ನನ್ನು ಬಿಟ್ಟು ಹೋಗಿ, ತನ್ನಿಂದ ೧೭ವರ್ಷಗಳ ವರೆಗೆ ದೂರವಾಗಿ ಉಳಿದ ತನ್ನ ೩೪ ವಯಸ್ಸಿನ ಹೆಂಡತಿಯ ಮೇಲೆ ಅತ್ಯಾಚಾರ ಎಸಗುವ ವರ್ಣನೆ ಹಿಗಿದೆ:
“…ತಡ ಮಾಡದೆ ಅವನು ಎವೆಯಿಕ್ಕುವದರೊಳಗೆ, ‘ಸಾವಿತ್ರಿ, ನಿನ್ನ ಕೈಲಿ ಮಾತಾಡಬೇಕು. ಇಲ್ಲಿ ಕೇಳು’ ಎನ್ನುತ್ತಾ ಬಾಗಿಲು ಮುಚ್ಚಿ ಅವಳ ಹತ್ತಿರಕ್ಕೆ ಹಾರಿ ಒಂದೇ ಅಪ್ಪಳಿಕೆಗೆ ಅವಳನ್ನು ತಬ್ಬಿ ಹಿಡಿದು ಬಾಯಿಯ ಮೇಲೆ ಕೈಇಟ್ಟು ಕಾಲಿಗೆ ಟಾಂಗು ಕೊಟ್ಟು ಕೆಡವಿಕೊಂಡು ಹೊರಳಾಡಲು ಬಿಡಿಸಿಕೊಳ್ಳಲು ಆಗದಂತೆ ಪಟ್ಟುಹಾಕಿ ಬಾಯಲ್ಲಿ ನನ್ನ ಮಾತು ಕೇಳು ನನ್ನ ಮಾತು ಕೇಳು ಎಂದು ಅನುನಯಿಸುತ್ತಾ ತೆಕ್ಕೆಬಿದ್ದು ಆಕ್ರಮಿಸಿಬಿಟ್ಟ. ಸರೋಜಾಕ್ಷಿಯೊಡನೆ ಮಾಡಿದ ತಪ್ಪು ಮಾಡದೆ ಆಕ್ರಮಣವು ಸಂಪೂರ್ಣವಾದ ನಂತರವೂ ಅವಳಿಗೆ ಕಿರುಚಿಕೊಳ್ಳಲು ಅವಕಾಶ ಕೊಡದಂತೆ ಬಾಯಿ ಮುಚ್ಚಿಸಿ ತನ್ನ ದೇಹದ ಎಲ್ಲ ಲಂಪಟ ಭಾಗಗಳಿಂದಲೂ ಅವಳನ್ನು ಉದ್ದೀಪಿಸತೊಡಗಿದ. ಅವಳು ವಿರೋಧಿಸುತ್ತಿದ್ದಳು. ಹೊರಳಲು, ಕೆಡವಲು, ನುಣುಚಿಕೊಳ್ಳಲು ಹೆಣಗಿದಳು. ದೈಹಿಕವಾಗಿ ಅವಾವುವೂ ಸಾಧ್ಯವಾಗದ ಹಿಡಿತವನ್ನು ಬಿಗಿಮಾಡುತ್ತಲೇ ನಡೆದಂತೆ ಬಿಡಿಸಿಕೊಳ್ಳುವದು ಅಸಾಧ್ಯವೆಂದರಿತ ಅವಳು ಸೋತು ಸುಮ್ಮನಾದಳು……………..”

ಈ ಅತ್ಯಾಚಾರದ ಕೊನೆಯಲ್ಲಿ ಅವಳಲ್ಲಿ ಉಕ್ಕಿದ ಭಾವನೆಗಳು ಹೀಗಿವೆ:
“…………ಅವನು ಮಾಡಿದ ಅತ್ಯಾಚಾರದ ಕೊನೆಕೊನೆಗೆ ನಾನು ಸೋತಿದ್ದೆ. ಭಾಗಿಯಾಗಿದ್ದೆ. ಅದು ಅವನಿಗೆ ಅರ್ಥವಾಗಿದೆ. ನನ್ನ ಸೋಲು,ನನ್ನ ನಾಚಿಕೆಯ ಅಂಶ ಅದು .”

ಇದೆಲ್ಲ super-fantasyಯ ಭಾಗವಾದ ರತಿಸಾಮರ್ಥ್ಯದ ಲಕ್ಷಣವಾಯಿತು. ಈಗ ಇನ್ನೊಂದು ಲಕ್ಷಣವನ್ನು ನೋಡಿರಿ.
ಅಂದರೆ ಹೆಣ್ಣನ್ನು ಆಳಬಯಸುವ ಮನೋಭಾವವನ್ನು ಇಲ್ಲಿ ವ್ಯತ್ಯಸ್ತವಾಗಿ ಹೇಳಲಾಗಿದೆ.
ಅರ್ಥಾತ್, ಹೆಣ್ಣೇ ಗಂಡಸಿನಿಂದ ಆಳಿಕೊಳ್ಳಲು ಬಯಸುತ್ತಾಳೆ ಎಂದು ಹೇಳುವ ಮೂಲಕ ವರ್ಣಿಸಲಾಗಿದೆ.

ಇದೇ (‘ಸಾಕ್ಷಿ’) ಕಾದಂಬರಿಯಲ್ಲಿಯ ಸರೋಜ ಎನ್ನುವ ಪಾತ್ರ ತನ್ನ ಗಂಡನ ಬಗೆಗೆ ಹೇಳುವ ಮಾತುಗಳು ಹೀಗಿವೆ:
“…ಎಂಥ ಗಂಡ ಈತ! ಕೆಟ್ಟವರಲ್ಲ. ಕೇಡಿಗರಲ್ಲ. ಸತ್ವಹೀನ, ಯಾರನ್ನೂ ಏನನ್ನೂ ಆಳಲಾರದವ…..ಇಂಥ ವಿಧೇಯತೆಯನ್ನು ಕಳೆಸಿ ಇವರನ್ನೊಬ್ಬ ಸಮರ್ಥ ಗಂಡಸನ್ನಾಗಿ ಮಾಡಬೇಕೆಂದು ಎಷ್ಟು ವಿಧದಲ್ಲಿ ಪ್ರಯತ್ನಿಸಿದೆ? ಹೆಂಗಸು ಮೆಚ್ಚುವ ಗಂಡಸಿನ ಗುಣಲಕ್ಷಣಗಳನ್ನು ಎಷ್ಟು ಆಪ್ತವಾಗಿ ಬಿಡಿಸಿ ಹೇಳಿದೆ?.........”

‘ಸಾಕ್ಷಿ’ ಕಾದಂಬರಿಯಲ್ಲಿ ಉದ್ದಕ್ಕೂ ಲಂಪಟತನವಿದೆ ; explicit ರತಿವರ್ಣನೆ ಇದೆ.
ಇವೆಲ್ಲವನ್ನೂ ಸಂಭಾವಿತವಾಗಿ cover ಮಾಡುವ ಉದ್ದೇಶದಿಂದ ಪುಟಗಟ್ಟಲೆ ಬರೆದ ಸೋಗಲಾಡಿ ತತ್ವಜಿಜ್ಞಾಸೆ ಇದೆ. ಭೈರಪ್ಪನವರು ತಮ್ಮ ನೈಜ ಉದ್ದೇಶವನ್ನು ಮರೆಮಾಚಲು ಈ ಕಾದಂಬರಿಯಲ್ಲಿ ಬಲು ವಿಚಿತ್ರವಾದ ತಂತ್ರವನ್ನು ಬಳಸಿದ್ದಾರೆ. ಅದು ಹಿಗಿದೆ:

ಯಮಧರ್ಮರಾಯನ ಆಸ್ಥಾನದಲ್ಲಿ ವಿಚಾರಣೆ ನಡೆಯುತ್ತಿದೆ.
ಯಮಧರ್ಮನಿಗೆ ಹಾಗೂ ಚಿತ್ರಗುಪ್ತರಿಗೆ ಸತ್ಯದ ಪೂರ್ಣ ಅರಿವಿದೆ.
ಆದರೂ ಸಹ ಅಲ್ಲಿ ನಿಂತಿರುವ ಆತ್ಮಕ್ಕೆ ತನ್ನ ಸಮರ್ಥನೆಯನ್ನು ಹೇಳಲು ಒಂದು ಅವಕಾಶ ಕೊಟ್ಟಿದ್ದಾರೆ.
ಅಲ್ಲಿಂದ ಕಾದಂಬರಿಯ flashback ಪ್ರಾರಂಭವಾಗುತ್ತದೆ.

ಕೊನೆಯಲ್ಲಿ ಮತ್ತೊಮ್ಮೆ ಯಮಧರ್ಮನ ಆಸ್ಥಾನದ ವರ್ಣನೆ, ಹಾಗೂ ಸತ್ಯದ proclamation ಆಗುತ್ತದೆ !
ಈ ತಂತ್ರಕ್ಕೆ ಹೊಂದುವಂತೆ, ಕಾದಂಬರಿಗೆ ‘ಸಾಕ್ಷಿ’ ಎಂದು ಹೆಸರಿಸಲಾಗಿದೆ.
ಭೈರಪ್ಪನವರು ಸತ್ಯಕ್ಕೆ ನಿಜವಾಗಿಯೂ ಬೆಲೆ ಕೊಡುತ್ತಿದ್ದರೆ, ಈ ಕಾದಂಬರಿಗೆ ‘ಒಬ್ಬ ಕಾಮಪಿಶಾಚಿಯ ಸಾಹಸಗಳು’ ಎನ್ನುವ ಶೀರ್ಷಿಕೆಯನ್ನು ಕೊಟ್ಟಿರುತ್ತಿದ್ದರು.

ಹಾಗಂತ, ಈ ಲೇಖನದಲ್ಲಿ ನಾನು ಭೈರಪ್ಪನವರ ಶೈಲಿಯ ಅಥವಾ ಇತರ ಉತ್ತಮ ಗುಣಗಳ ವಿಮರ್ಶೆಯನ್ನು ಮಾಡುತ್ತಿಲ್ಲ.
ಈ ಲೇಖನದ ಉದ್ದೇಶ ತುಂಬಾ limited ಆಗಿದೆ.
ಬಹಿರಂಗದಲ್ಲಿ ಕಾಣುವ ಕತೆ ಹಾಗೂ ಅಂತರಂಗದ stuff ಹೇಗೆ ಬೇರೆಯಾಗಿರಬಲ್ಲವು ಎಂದು ತೋರಿಸುವದಷ್ಟೇ ಈ ಲೇಖನದ ಸೀಮಿತ ಉದ್ದೇಶ.

ಭೈರಪ್ಪನವರ ಕಾದಂಬರಿಗಳ ಮುಖ್ಯ ಪಾತ್ರಗಳ ಕೆಲವು ಲಕ್ಷಣಗಳನ್ನು ಓದುಗರು ದಯವಿಟ್ಟು ಗಮನಿಸಬೇಕು.
(೧) ಈ ನಾಯಕರಲ್ಲಿ ಒಂದೋ ಬ್ರಹ್ಮಚರ್ಯದ ಬಗೆಗೆ ದೃಢವಾದ ಶ್ರದ್ಧೆ ಇರುತ್ತದೆ ಅಥವಾ ಅಗಾಧವಾದ ಕಾಮುಕ ಶಕ್ತಿ ಇರುತ್ತದೆ.
(೨) ನಾಯಕ ಮತ್ತು ನಾಯಕಿಯರಲ್ಲಿ ಸಾಮಾನ್ಯರಿಗೆ ಸಾಧ್ಯವಾಗದಷ್ಟು ತೀವ್ರವಾದ ತಳಮಳ ಹಾಗೂ ತತ್ವಜಿಜ್ಞಾಸೆ ಇರುತ್ತವೆ.

ಈ ಅಸಾಮಾನ್ಯ ಗುಣಗಳಿಗೆ ನನ್ನದೇನೂ ಆಕ್ಷೇಪಣೆ ಇಲ್ಲ. ಆದರೆ ಈ ಗುಣಗಳು ಅನೇಕ ಸಲ ಕಾದಂಬರಿಯನ್ನು ನಿರ್ದಿಷ್ಟ ದಿಕ್ಕಿನಲ್ಲಿ ಒಯ್ಯುವ ಅನುಕೂಲದ ಸಾಧನೆಗಳಾಗಿ ಹಾಗೂ ಲಂಪಟತನಕ್ಕೆ coverage ಆಗಿ ಬಳಕೆಯಾಗಿವೆಯೇ ಹೊರತು, ಪಾತ್ರಗಳ ಆಂತರಿಕ ಅವಶ್ಯಕತೆಯಿಂದಾಗಿ ಅಲ್ಲ.
ಇದರಿಂದ ದೊರೆಯುವ ಅನುಕೂಲವೆಂದರೆ, ಪಾತ್ರಗಳ ವರ್ತನೆಯನ್ನು ತತ್ವಜಿಜ್ಞಾಸೆಯಲ್ಲಿ ಮುಚ್ಚಿಹಾಕಬಹುದು.

ಇದಕ್ಕೆ ಉದಾಹರಣೆ ಎಂದು ಭೈರಪ್ಪನವರ ‘ಅಂಚು’ ಕಾದಂಬರಿಯನ್ನು ತೆಗೆದುಕೊಳ್ಳಬಹುದು.
ಈ ಕಾದಂಬರಿಯಲ್ಲಿ ಆರ್ಕಿಟೆಕ್ಟ ಆದ ನಾಯಕನಿಗೆ ಒಬ್ಬಳು neurotic ನಾಯಕಿಯೊಡನೆ ಭೆಟ್ಟಿಯಾಗುತ್ತದೆ.
ನಾಯಕನ ಹೆಂಡತಿ ಹಾಗೂ ಮಗ conveniently ನಾಲ್ಕು ವರ್ಷದ ಹಿಂದೆ ಸತ್ತಿದ್ದಾರೆ.
ನಾಯಕಿ, ತನ್ನ ಗಂಡನನ್ನು ಬಿಟ್ಟು, ಇಬ್ಬರು ಚಿಕ್ಕ ಮಕ್ಕಳೊಡನೆ ಮೈಸೂರಿನಲ್ಲಿ, conveniently ಒಬ್ಬಂಟಿಯಾಗಿ ವಾಸಿಸುತ್ತಿದ್ದಾಳೆ.

೩೫೦ ಪುಟಗಳ ಈ ಕಾದಂಬರಿಯಲ್ಲಿ ೪೪ನೆಯ ಪುಟದಲ್ಲಿ ನಾಯಕ ಹಾಗೂ ನಾಯಕಿಯರ ಸಂಗಮವಾಗುತ್ತದೆ.
ಆನಂತರ, ಓದುಗರಿಗೆ bore ಆಗುವಷ್ಟು ಸಲ ಸಂಗಮವು repeat ಆಗುತ್ತದೆ.
ನಾಯಕಿ neurotic ಇರುವದರಿಂದ, ರಿವಾಲ್ವರನಿಂದ ಗುಂಡು ಹೊಡೆದುಕೊಂಡು ಸಾಯಲು ಅನೇಕ ಸಲ ಪ್ರಯತ್ನಿಸುತ್ತಾಳೆ; ಚಾಮುಂಡಿ ಬೆಟ್ಟದಿಂದ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲೂ ಸಹ ಅಷ್ಟೇ ಸಲ ಪ್ರಯತ್ನಿಸುತ್ತಾಳೆ.
ಆತ್ಮಹತ್ಯೆಯ ಪ್ರಯತ್ನದ ಮೊದಲು ಪ್ರತಿ ಸಲವೂ ಕನಿಷ್ಠ ಎರಡು ಪುಟದಷ್ಟು ತತ್ವಜಿಜ್ಞಾಸೆ(ಸ್ವಗತದಲ್ಲಿ) ಮಾಡುತ್ತಾಳೆ.
ಓದುಗನಿಗೆ ತಲೆಚಿಟ್ಟು ಹಿಡಿದು ಹೋಗುತ್ತದೆ.
ಯಾವಾಗ ಈ ನಾಯಕಿಯು ಆತ್ಮಹತ್ಯೆಯಲ್ಲಿ ಸಫಲಳಾಗಿ, ತನಗೆ ಮುಕ್ತಿ ಕೊಡುತ್ತಾಳೊ ಎಂದು ಓದುಗ ಕಾಯುತ್ತಾನೆ.
ಆದರೆ, ಅವಳು ಕೊನೆಗೂ ಸಾಯುವದಿಲ್ಲ!
ಭೈರಪ್ಪನವರು ಸುಖಾಂತ ಮಾಡಿ ಮುಗಿಸುತ್ತಾರೆ.
(ಅಂದರೆ, ಮುಗಿದದ್ದೇ ಒಂದು ಸುಖ ಅಂತ!)

ಭೈರಪ್ಪನವರ ಬಹುತೇಕ ಕಾದಂಬರಿಗಳಲ್ಲಿ explicit sex ಇದೆ.
ಈ obsessionದ ಮನೋವೈಜ್ಞಾನಿಕ ಕಾರಣ ಏನು ಅಂತ ಹುಡುಕುವದು ನಮ್ಮ ಕೆಲಸವಲ್ಲ.
ಭೈರಪ್ಪನವರು ತತ್ವಜಿಜ್ಞಾಸೆಯನ್ನು cover ರೂಪದಲ್ಲಿ ಉಪಯೋಗಿಸಿಕೊಳ್ಳದಿದ್ದರೆ, ಈ ಕಾದಂಬರಿಗಳನ್ನು soft porn ಎಂದು ಕರೆಯಬಹುದಾದ ಮಟ್ಟಿಗೆ ಇಲ್ಲಿ sex ಇದೆ.

ಆದರೆ, ತತ್ವಜಿಜ್ಞಾಸೆಯನ್ನು ಓದುವದರಿಂದ ಓದುಗನಿಗೆ ಖುಶಿಯಾಗುತ್ತದೆ.
ತಾನು ಯಾವುದೋ ಒಂದು ಬೌದ್ಧಿಕ ಸಾಹಿತ್ಯವನ್ನು ಓದುತ್ತಿದ್ದೇನೆ ಎನ್ನುವ ಭ್ರಮೆ ಅವನಲ್ಲಿ ಹುಟ್ಟುತ್ತದೆ.
ಅದರ ಜೊತೆಗೆ ಓದುಗನ super-male-fantasyಯು ಸಹ ತೃಪ್ತವಾಗುತ್ತದೆ.
ದುರ್ದೈವದಿಂದ ಭಾರತೀಯ ಸ್ತ್ರೀಯರೂ ಸಹ ಈ super-male-fantasyಗೆ ಒಗ್ಗಿ ಹೋಗಿದ್ದಾರೆ.
(ಇದಕ್ಕೆ ಸಾವಿರಾರು ವರ್ಷಗಳ social conditioning ಕಾರಣವಾಗಿದೆ.)
ಅಲ್ಲದೆ soft pornದ ಖುಶಿ ಸಹ ಸಿಗುತ್ತದೆ.
(ಹಾಗೆಂದು ಈ ಕಾದಂಬರಿಗಳನ್ನು ಮುಚ್ಚಿ ಓದುವ ಕಾರಣವಿಲ್ಲ ; ಇದು ಗಂಭೀರ ಸಾಹಿತ್ಯ!)
ಈ ತಂತ್ರಗಳೇ ಭೈರಪ್ಪನವರ ಕಾದಂಬರಿಗಳ ಜನಪ್ರಿಯತೆಗೆ ಕಾರಣವಾಗಿವೆ ಎನ್ನಬಹುದು.

ಈ ಲೇಖನ ಭೈರಪ್ಪನವರ ಕಾದಂಬರಿಗಳ ವಿಮರ್ಶೆ ಅಲ್ಲ.
ಅವರ ಕಾದಂಬರಿಗಳಲ್ಲಿ ಕಂಡುಬರುವ ಕೆಲವು ಗುಣಲಕ್ಷಣಗಳನ್ನು ತೋರಿಸುವ ಪ್ರಯತ್ನ ಮಾತ್ರ.
ನಿಜ ಹೇಳಬೇಕೆಂದರೆ ಭಾರತೀಯ ಸಮಾಜದಲ್ಲಿಯ ಹೆಣ್ಣುಮಕ್ಕಳ ಬವಣೆಯನ್ನು , ಯಾತನೆಯನ್ನು ಅವರಷ್ಟು ಸಮರ್ಥವಾಗಿ ಹಾಗೂ ವಿಪುಲವಾಗಿ ಬೇರೆ ಯಾವ ಲೇಖಕನೂ ತೋರಿಸಿಲ್ಲ.

‘ಗೃಹಭಂಗ’ ಹಾಗು ‘ಸಾರ್ಥ’ ಇದಕ್ಕೆ ಉತ್ತಮ ಉದಾಹರಣೆಗಳು.
ಅದರಲ್ಲೂ ಸಹ, ‘ಸಾರ್ಥ’ವು ನನ್ನ ನೆಚ್ಚಿನ ಕಾದಂಬರಿ.
‘ಗೃಹಭಂಗ’ ಕಾದಂಬರಿಯಲ್ಲಿ super-male-fantasyಯ ಯಾವ ವರ್ಣನೆಯೂ ಇಲ್ಲ.
ಇಲ್ಲಿಯ ನಾಯಕ ಒಬ್ಬ ಹೇಪ್ಲ್ಯಾ ಹಾಗೂ ಅವಿವೇಕಿ ಗಂಡಸು.
ಅದಾಗ್ಯೂ ಸಹ ನಾಯಕಿಯು ಎಲ್ಲ ಸಂಕಷ್ಟಗಳನ್ನು ಎದುರಿಸುತ್ತಾ ಸಂಸಾರದ ಬಂಡಿಯನ್ನು ತಾನೇ ಎಳೆಯುತ್ತಾಳೆ.
‘ಸಾರ್ಥ’ ಕಾದಂಬರಿಯಲ್ಲಿ super-male-fantasyಯ ಒಂದು ಘಟನೆ ಇದ್ದರೂ ಸಹ, ಒಟ್ಟಾರೆ ಕಾದಂಬರಿಯಲ್ಲಿ ಆ ಘಟನೆ ಗೌಣವಾಗಿ ಬಿಡುತ್ತದೆ.
‘ಗೃಹಭಂಗ’ ಹಾಗು ‘ಸಾರ್ಥ’ ಕಾದಂಬರಿಗಳಲ್ಲಿ ಓದುಗರ ಮನಸ್ಸಿನಲ್ಲಿ ಕೊನೆಗೂ ನಿಲ್ಲುವವರು ಆ ಕಾದಂಬರಿಗಳ ನಾಯಕಿಯರೇ.

Saturday, December 6, 2008

ಗಿರಣಿ ವಿಸ್ತಾರ ನೋಡಮ್ಮ

ಶರೀಫರದು ವಿಮರ್ಶಾತ್ಮಕವಾದ ಹರಿತ ದೃಷ್ಟಿ.
ತಾವು ಹೋದಲ್ಲೆಲ್ಲ ತಮ್ಮ ಕಣ್ಣಿಗೆ ಬಿದ್ದ ವಸ್ತುಗಳ ಮೇಲೆ ಅವರದೊಂದು ವಿಮರ್ಶಾತ್ಮಕ ಗೀತೆ ಹೊರಬರುತ್ತಿತ್ತು.

ಹುಬ್ಬಳ್ಳಿಯಲ್ಲಿ ಆಗ ತಾನೇ ಹತ್ತಿಯನ್ನು ಹಿಂಜುವ ಗಿರಣಿ (ginning mill) ಪ್ರಾರಂಭವಾಗಿತ್ತು.
ಆ ಕಾಲದಲ್ಲಿ ಇಂತಹ ಯಾಂತ್ರಿಕ ಗಿರಣಿ ನಮ್ಮವರಿಗೆ ಸೋಜಿಗದ ವಸ್ತುವಾಗಿತ್ತು.
ಶರೀಫರೂ ಸಹ ಈ ಗಿರಣಿಯನ್ನು ಕಂಡು, ಬೆರಗಾಗಿ ಅದನ್ನು ತಮ್ಮ ಸಖಿಗೆ ವರ್ಣಿಸುತ್ತಿದ್ದಾರೆ.
ಅವರ ಕವನದ ಪೂರ್ತಿಪಾಠ ಹೀಗಿದೆ:
…………………………………………………………..
ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ ||ಪಲ್ಲ||

ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ ||ಅ.ಪ.||

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||೧||

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||೨||

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||೩||

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||೪||
............................................
ಶರೀಫರ ಹಾಡುಗಳ ಪದ್ಧತಿಯನ್ನು ಗಮನಿಸಿರಿ.
ಅವರ ಅನೇಕ ಹಾಡುಗಳು ಪ್ರಾರಂಭವಾಗುವದು ಒಬ್ಬ ಹೆಣ್ಣುಮಗಳು ತನ್ನ ಗೆಳತಿಗೆ ವಿಷಯವೊಂದನ್ನು ಬಣ್ಣಿಸುವ ರೀತಿಯಲ್ಲಿ.

ಶರೀಫರು ಶಿಶುನಾಳಧೀಶನಲ್ಲಿ ಪತ್ನೀಭಾವವನ್ನು ಇಟ್ಟುಕೊಂಡವರು.
ಆದುದರಿಂದ ಜೀವಾತ್ಮರೆಲ್ಲರೂ ಶಿಶುನಾಳಧೀಶನ ಪತ್ನಿಯರೇ.
ಹೀಗಾಗಿ ಅವರು ತಮ್ಮ ಆಪ್ತ ಗೆಳೆಯರನ್ನು ಸಖೀಭಾವದಲ್ಲಿ ನೋಡುವದು ಸಹಜವೇ ಆಗಿದೆ.

ಅದಲ್ಲದೆ, ಗೆಳತಿಯರ ನಡುವೆ ನಡೆಯುವ ಆಪ್ತಸಲ್ಲಾಪದಲ್ಲಿ ಯಾವುದೇ ಭಿಡೆ, ಸಂಕೋಚ, ದೊಡ್ಡಿಸ್ತನ ಇರುವದಿಲ್ಲ.
ಇದು ಒಂದು absolutely free inter-action.
ಇದೇ ಮಾತನ್ನು ಗೆಳೆಯರ ಬಗೆಗೆ ಹೇಳಲು ಆಗುವದಿಲ್ಲ.

ಆದುದರಿಂದ ಈ ಹಾಡಿನ ಮೊದಲಲ್ಲಿ ಶರೀಫರು ತಮ್ಮ ಗೆಳತಿಗೆ ‘ಶರಣಿ’ ಎಂದು ಕರೆಯುತ್ತಾರೆ.
ಅಂದರೆ ಈ ವ್ಯಕ್ತಿಯೂ ಸಹ ದೇವಭಕ್ತಳೇ ಆಗಿರಬೇಕಾಯಿತು.
ಈ ಆಪ್ತನನ್ನು ಶರೀಫರು ತಮ್ಮ ಬದಿಯಲ್ಲಿ ಕರೆದು ಕೂಡಿಸಿಕೊಂಡು, ಹುಬ್ಬಳ್ಳಿಯಲ್ಲಿ ಹೊಸದಾಗಿ ಪ್ರಾರಂಭವಾದ ಗಿರಣಿಯ ಬಗೆಗೆ ಕೌತುಕದಿಂದ ವರ್ಣಿಸಲು ಪ್ರಾರಂಭಿಸುತ್ತಾರೆ:

“ಗಿರಣಿ ವಿಸ್ತಾರ ನೋಡಮ್ಮ
ಶರಣಿ ಕೂಡಮ್ಮ”

ಬ್ರಿಟಿಶರ ಆಳಿಕೆ ಭಾರತದಲ್ಲಿ ಪ್ರಾರಂಭವಾದದ್ದರಿಂದಲೇ ಯಾಂತ್ರಿಕ ಗಿರಣಿಗಳು ಇಲ್ಲಿ ಸ್ಥಾಪನೆಯಾದವು. ಈ ಹಿನ್ನೆಲೆಯನ್ನು ಶರೀಫರು ತಮ್ಮ ಹಾಡಿನ ಪ್ರಾರಂಭದಲ್ಲಿ ಹೇಳುತ್ತಾರೆ:

“ಧರಣಿಪತಿಯು ರಾಣಿ
ಕರುಣಾಕ ರಾಜ್ಯಕೆ
ತರಿಸಿದ ಘನಚೋದ್ಯವೋ ಚೀನಾದ ವಿದ್ಯವೋ”

೧೮೫೭ರಲ್ಲಿ ನಡೆದ ಹೋರಾಟದ ಬಳಿಕ ವ್ಹಿಕ್ಟೋರಿಯಾ ರಾಣಿಯು ಭಾರತದ ಚಕ್ರವರ್ತಿನಿಯೆಂದು ಘೋಷಿಸಿಕೊಂಡಳು.
ಆ ಸಮಯದಲ್ಲಿ ಮರಾಠಾ ಸಾಮ್ರಾಜ್ಯವೆಲ್ಲ ಬ್ರಿಟಿಶರ ಆಡಳಿತಕ್ಕೊಳಪಟ್ಟು ಮುಂಬಯಿ ಪ್ರಾಂತವೆಂದು ಕರೆಯಲ್ಪಡುತ್ತಿತ್ತು.
೧೮೧೭ರಲ್ಲಿ (ಹಳೆ)ಹುಬ್ಬಳ್ಳಿಯನ್ನು ಸಾಂಗ್ಲಿ ಸಂಸ್ಥಾನಿಕರು ಬ್ರಿಟಿಶರಿಗೆ ಮಾರಿದರು.
೧೮೩೦ನೆಯ ಇಸವಿಯಲ್ಲಿ ಮುಂಬಯಿ ಪ್ರಾಂತದ ಭಾಗವಾಗಿ ಧಾರವಾಡ ಜಿಲ್ಲೆ ನಿರ್ಮಾಣವಾಯಿತು.
೧೮೮೮ರಲ್ಲಿ ಧಾರವಾಡದಲ್ಲಿ ರೇಲವೆ ಪ್ರಾರಂಭವಾಯಿತು.
ಆಬಳಿಕ ಅಮೆರಿಕದಿಂದ ಆಮದಾದ ಹತ್ತಿಯ ಬೀಜಗಳಿಂದ ಈ ಭಾಗದಲ್ಲಿ ಹೊಸ ತರದ ಹತ್ತಿಯನ್ನು ಬೆಳೆಯುವದು ಪ್ರಾರಂಭವಾಯಿತು.
ಹತ್ತಿಯನ್ನು ಹಿಂಜುವ ಕಾರಖಾನೆಗಳು ಪ್ರಾರಂಭವಾದವು.
ಸಾರ್ವಜನಿಕ ಶಾಲೆಗಳು ಪ್ರಾರಂಭವಾಗಿ ಸಾರ್ವತ್ರಿಕ ಶಿಕ್ಷಣ ಸುರುವಾಯಿತು.
ಇದರಿಂದ ಎಲ್ಲೆಡೆಯೂ ಹೊಸ ಗಾಳಿ ಬೀಸಲಾರಂಭಿಸಿತು.
ಬ್ರಿಟಿಶರು ತಮ್ಮ ಆರ್ಥಿಕ ಸ್ವಾರ್ಥಕ್ಕಾಗಿಯೇ ಭಾರತದಲ್ಲಿ ಆಧುನಿಕತೆಯನ್ನು ತಂದಿರಬಹುದು.
ಆದರೆ ಜನಸಾಮಾನ್ಯರಿಗೆ ಮಾತ್ರ ಇದು ಹೊಸ ಯುಗದ ಪ್ರಾರಂಭವೆನ್ನುವಂತೆ ತೋರುತ್ತಿತ್ತು.

ಆದುದರಿಂದ ಶರೀಫರು ಧರಣಿಪತಿಯಾದ, ಭೂಮಂಡಲದ ರಾಣಿಯಾದ, ಕರುಣಾಪೂರ್ಣಳಾದ ವ್ಹಿಕ್ಟೋರಿಯಾ ರಾಣಿ ತನ್ನ ಆಧೀನದಲ್ಲಿರುವ ಈ ರಾಜ್ಯಕ್ಕೆ ತರಿಸಿದ ಘನಚೋದ್ಯವಿದು ಎಂದು ಈ ಗಿರಣಿಯನ್ನು ಬಣ್ಣಿಸುತ್ತಾರೆ.
ಇಂತಹ ಒಂದು ಆಧುನಿಕ ಯಾಂತ್ರಿಕ ಸಾಧನವನ್ನು ಇಲ್ಲಿಯ ಸಾಮಾನ್ಯ ಜನತೆ ಈಮೊದಲು ನೋಡಿರಲಿಲ್ಲ. ಅವರಿಗೆ ಇದೊಂದು ಸೋಜಿಗದ ವಸ್ತು.
ಆದುದರಿಂದ ಶರೀಫರು ಇದನ್ನು ಘನಚೋದ್ಯವೆಂದು ಕರೆದಿದ್ದಾರೆ.

ಚೀನಾದಿಂದ ಸಹ ಆ ಕಾಲಕ್ಕೆ ಸಕ್ಕರೆ, ರೇಶಿಮೆ ಮೊದಲಾದ ವಸ್ತುಗಳು ಇಲ್ಲಿ ಆಮದಾಗುತ್ತಿದ್ದವು.
ಚೀನಾದ ಔದ್ಯೋಗಿಕ ಜಾಣ್ಮೆಯ ಬಗೆಗೆ ಭಾರತೀಯರಿಗೆ ಗೌರವವಿತ್ತು.
ಆದುದರಿಂದ ಈ ಗಿರಣಿಯನ್ನು ಚೀನಾದ ವಿದ್ಯೆಯಿರಬಹುದೆ ಎನ್ನುವ ಅನುಮಾನವನ್ನು ಶರೀಫರು ವ್ಯಕ್ತಪಡಿಸುತ್ತಾರೆ.

ಈ ಆಧುನಿಕ ಯಂತ್ರಸಾಧನೆಯು ಯಾವ ರೀತಿಯಲ್ಲಿ ನಡೆಯುತ್ತದೆ ಎನ್ನುವ ವಿಸ್ಮಯವನ್ನು ಶರೀಫರು ಈಗ ತಮ್ಮ ಸಖಿಗೆ ಬಿಚ್ಚಿ ಹೇಳುತ್ತಾರೆ:

ಜಲ ಅಗ್ನಿ ವಾಯು ಒಂದಾಗಿ
ಕಲೆತು ಚಂದಾಗಿ
ಜಲ ಅಗ್ನಿ ವಾಯು ಒಂದಾಗಿ
ನೆಲದಿಂದ ಗಗನಕ್ಕೆ ಮುಟ್ಟಿದಂತೆಸುವುದು
ಚಲುವ ಚನ್ನಿಗವಾದ ಕಂಭವೋ, ಹೊಗಿಯ ಬಿಂಬವೋ ||

ಕಲ್ಲಿದ್ದಲನ್ನು ಕಾಯಿಸಿ, ಬಾಯ್ಲರುಗಳ ಮುಖಾಂತರ ನೀರನ್ನು ಉಗಿಯನ್ನಾಗಿ ಪರಿವರ್ತಿಸಿ, ಚಕ್ರಗಳನ್ನು ತಿರುಗಿಸುವ ಈ ಯಂತ್ರವನ್ನು ಶರೀಫರು ಅರ್ಥ ಮಾಡಿಕೊಂಡಿರಬಹುದು.
ಆದುದರಿಂದಲೇ ಅವರು ಜಲ, ಅಗ್ನಿ, ವಾಯು ಒಂದಾಗಿ ಎಂದು ಬಣ್ಣಿಸುತ್ತಾರೆ.
ಗಿರಣಿಯ ಚಿಮಣಿಗಳಿಂದ ಹೊರಡುವ ಹೊಗೆಯ ಕಂಬವೂ ಸಹ ಅವರ ದೃಷ್ಟಿಗೆ ಚಲುವಾಗಿಯೇ ಕಂಡು ಬೆರಗನ್ನು ಉಂಟು ಮಾಡುತ್ತದೆ.

ಇದೇನೊ ಗಿರಣಿಯನ್ನು ಚಾಲಿಸುವ ಚೈತನ್ಯವಾಯಿತು.
ಗಿರಣಿಯ ಒಳಗಿರುವ ಚಮತ್ಕಾರ ಏನು ಎನ್ನುವದನ್ನು ಶರೀಫರು ಈಗ ತಮ್ಮ ಸಖಿಗೆ ಈ ರೀತಿಯಾಗಿ ಹೇಳುತ್ತಾರೆ:

ಒಳಗೊಂದು ಬೇರೆ ಆಕಾರ
ತಿಳಕೋ ಚಮತ್ಕಾರ
ಒಳಗೊಂದು ಬೇರೆ ಆಕಾರ
ದಳಗಳೊಂಭತ್ತು ಚಕ್ರ ಸುಳಿವ ಸೂತ್ರಾಧಾರ
ಲಾಳಿ ಮೂರು ಕೊಳಿವಿಯೊಳು ಎಳೆ ತುಂಬುತದರೊಳು ||

ಒಳಗಿನ ಚಕ್ರಕ್ಕೆ ಒಂಬತ್ತು ಹಲ್ಲುಗಳಿದ್ದು, ಅದರಲ್ಲಿ ನೂಲಿಗೆ ಆಧಾರವಾಗಿ (=ಸೂತ್ರಾಧಾರ) ಲಾಳಿ ಇದೆ. ಈ ಲಾಳಿಯಲ್ಲಿ ಮೂರು ಕೊಳವಿಗಳು ಇದ್ದು ಅವು ನೂಲಿನ ಎಳೆಯನ್ನು ತುಂಬುತ್ತಾ ಇವೆ.
ಶರೀಫರು ಹೇಳುವಂತೆ ಆ ಗಿರಣಿಯಲ್ಲಿ ಒಂಬತ್ತು ಹಲ್ಲುಗಳ ಚಕ್ರ ಹಾಗೂ ಮೂರು ಕೊಳವಿಗಳ ಲಾಳಿ ಇದ್ದವೊ ಇಲ್ಲವೊ ಎನ್ನುವದು ಈಗ ತಿಳಿಯಲು ಸಾಧ್ಯವಾಗಲಿಕ್ಕಿಲ್ಲ.
ಆದರೆ, ಗಿರಣಿಯ ಪ್ರತೀಕದಲ್ಲಿ ಈ ವರ್ಣನೆಯನ್ನು ಶರೀಫರು ಜೀವಾತ್ಮನಿಗೆ ಹೋಲಿಸಿ ಹೇಳಿರುವದು ಮೇಲ್ನೋಟಕ್ಕೇ ತಿಳಿದು ಬಿಡುತ್ತದೆ.

ಜಲ, ಅಗ್ನಿ ಹಾಗೂ ವಾಯುಗಳು ಒಂದಾಗಿ ನೆಲದಿಂದ (=ಪೃಥ್ವಿ) ಗಗನಕ್ಕೆ ಮುಟ್ಟುತ್ತವೆ ಎಂದರೆ ಪಂಚಮಹಾಭೂತಗಳು (=ಪೃಥ್ವಿ,ಅಪ್,ತೇಜ,ಆಕಾಶ,ವಾಯು) ಒಂದಾಗಿ ಜೀವಿಗೆ ರೂಪ ಕೊಟ್ಟಿವೆ ಎನ್ನುವದು ಶರೀಫರ ಒಡಪಿನ ಮಾತು.
ಈ ಶರೀರದಲ್ಲಿ ಒಂಬತ್ತು ರಂಧ್ರಗಳು ಇರುವದಾಗಿ ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ.
ಶರೀಫರು ಅದನ್ನೇ ಒಂಬತ್ತು ದಳಗಳ ಚಕ್ರ ಅಂದರೆ ಯಂತ್ರಸಾಧನೆ ಎಂದು ಕರೆದಿರಬಹುದು.
ಈ ಯಂತ್ರದಲ್ಲಿ ಮೂರು ಕೊಳವಿಯ ಲಾಳಿಯು ಸೂತ್ರಾಧಾರವಾಗಿ ಅಥವಾ ಸೂತ್ರಧಾರನಾಗಿ ಎಳೆಯನ್ನು ತುಂಬುತ್ತಿದೆ.
ಎಳೆ ಅಂದರೆ ಶ್ವಾಸೋಛ್ವಾಸ.
ಎಳೆಯನ್ನು ತುಂಬುತ್ತದೆ ಅಂದರೆ ಜೀವನದ ಎಲ್ಲ ಕ್ರಿಯೆಗಳನ್ನು ನಿಯಂತ್ರಿಸುತ್ತ ನಡೆಯಿಸುತ್ತಿದೆ.
ತುಂಬಾ ಮಹತ್ವದ ಲಾಳಿಯಾಯಿತು ಇದು!
ಇದರ ಮೂರು ಕೊಳಿವೆಗಳು ಯಾವವು?
ಇಡಾ, ಪಿಂಗಲಾ ಹಾಗೂ ಸುಷುಮ್ನಾ ಎನ್ನುವ ಮೂರು ನಾಡಿಗಳೇ ಈ ಮೂರು ಕೊಳಿವೆಗಳು.
ಈ ಮೂರು ನಾಡಿಗಳಲ್ಲಿ ಶ್ವಾಸವನ್ನು ನಿಯಂತ್ರಿಸುವದರ ಮೂಲಕ ಯೋಗಿಯು ಪ್ರಾಣಾಯಾಮದ ಸಿದ್ಧಿಯನ್ನು ಪಡೆಯುತ್ತಾನೆ.

ಆ ನಾಡಿಗಳಲ್ಲಿ ಸಂಚರಿಸಿದ ಶ್ವಾಸವು ಹಿಂಜಿ ಅಂದರೆ ಶುದ್ಧವಾಗಿ ಹಂಜಿಯಾಗುತ್ತದೆ.
ಹಂಜಿ ಅಂದರೆ ಹಿಂಜಲ್ಪಟ್ಟಂತಹ ಅರಳೆ.

ಅಲ್ಲಿ ಬರದಿಟ್ಟರಳಿ ಹಿಂಜಿ
ಅಲ್ಯಾದವು ಹಂಜಿ
ಅಲ್ಲಿ ಬರದಿಟ್ಟರಳಿ ಹಿಂಜಿ
ಗಾಲಿಯೆರಡರ ಮೇಲೆ ಮೂಲಬ್ರಹ್ಮದ ಶೀಲ
ನಾಡಿ ಸುಷುಮ್ನನು ಕೂಡಿ ಅಲ್ಲಾಯ್ತೋ ಕುಕ್ಕಡಿ ||

ಹಿಂಜಿದ ಅರಳಿಯನ್ನು ದಾರದ ಎಳೆ ಮಾಡಲು ಎರಡು ಗಾಲಿಗಳು ಬೇಕಾಗುತ್ತವೆ.
ಮೂಲಬ್ರಹ್ಮ ಅಂದರೆ ಯಾವುದೇ ಗುಣಸ್ವಭಾವ ಇಲ್ಲದ ನಿರ್ಗುಣ ಬ್ರಹ್ಮ.
ನಿರ್ಗುಣ ಬ್ರಹ್ಮ ಅಂದರೆ ಶುದ್ಧವಾದ, ಹಿಂಜಿದ ಅರಳಿ.
ಇಡಾ ಹಾಗೂ ಪಿಂಗಳಾ ಎನ್ನುವ ಎರಡು ಗಾಲಿಗಳಲ್ಲಿ(= ನಾಡಿಗಳಲ್ಲಿ) ಸಂಚರಿಸಿ ಶುದ್ಧವಾದ ಶ್ವಾಸವು
ಹಿಂಜಿದ ಅರಳಿಯಂತೆ ಅಥವಾ ನಿರ್ಗುಣ ಬ್ರಹ್ಮನಂತೆ ಇರುತ್ತದೆ.
ಇದು ಸುಷುಮ್ನಾ ನಾಡಿಯಲ್ಲಿ ಸಂಚರಿಸಿದಾಗ ದಾರದ ಕುಕ್ಕಡಿ ತಯಾರಾಗುತ್ತದೆ.
ಕುಕ್ಕಡಿ ಅಂದರೆ ನೂಲಿನ ಅಳತೆ.
ಇದು ತಕಲಿ, ಚರಕಾ ಅಥವಾ ಯಂತ್ರದ ಕೊನೆಯಲ್ಲಿ ತಯಾರಾಗುವ ನೂಲಿನ ಗಂಟು.

ಇಲ್ಲಿಯವರೆಗೆ ನೂಲು ತಯಾರಾದಂತಾಯ್ತು.
ಇದರಿಂದ ತಯಾರಾದ ಅರಿವೆ ಎಂತಹದೆಂತೀರಿ?

ಪರಮಾನೆಂಬುವ ಪಟ್ಟೇವೋ ಅಲ್ಲೆ
ಮಾರಾಟಕಿಟ್ಟೇವೋ
ಪರಮಾನೆಂಬುವ ಪಟ್ಟೇವೋ
ಧರೆಯೊಳು ಶಿಶುನಾಳ ದೇವಾಂಗ ಋಷಿಯಿಂದ
ನೇಸಿ ಹಚ್ಚಡ ಹೊಚ್ಚಿತೋ ಲೋಕ ಮೆಚ್ಚಿತೋ ||

ಪಟ್ಟೆ ಅಂದರೆ ರೇಶಿಮೆ ಸೀರೆ.
ಇದು ಪರಮಾನ ಎನ್ನುವ ಪಟ್ಟೆ.
ಪರಮ ಅಂದರೆ ಶ್ರೇಷ್ಠ ಅಥವಾ ದಿವ್ಯ ಎನ್ನುವ ಅರ್ಥದಲ್ಲಿ ಶರೀಫರು ಹೇಳುತ್ತಿದ್ದಾರೆಯೆ?
ಅಲ್ಲದೆ ಫರ್ಮಾನ್ ಎನ್ನುವ ಉರ್ದು ಪದಕ್ಕೆ ರಾಜಾಜ್ಞೆ ಎನ್ನುವ ಅರ್ಥವಿದೆ.
ಈ ದಿವ್ಯವಾದ ರೇಶಿಮೆ ಸೀರೆಯ ಮೇಲೆ ಪರಮಾತ್ಮನ ರಾಜಾಜ್ಞೆಯನ್ನು ನೇಯಿಸಿ ಮಾರಾಟಕ್ಕೆ ಇಡಲಾಗಿದೆ ಎನ್ನುವ ಅರ್ಥ ಇಲ್ಲಿ ಇರಬಹುದು.
ಇಂತಹ ದಿವ್ಯವಾದ ಪಟ್ಟೆಯನ್ನು ಆಸ್ಥೆಯುಳ್ಳವರು ಯಾರಾದರೂ ಅಂದರೆ ಭಕ್ತರು ಕೊಳ್ಳಬಹುದು.

ವಿಶ್ವಕ್ಕೆ ನೇಯ್ಗೆಯನ್ನು ಕಲಿಸಿದವನು ದೇವಾಂಗ ಋಷಿ.
ಆ ದೇವಾಂಗ ಋಷಿಯಿಂದ(=ಪರಮಾತ್ಮನಿಂದ) ಈ ಹಚ್ಚಡ(= ಹೊದಿಕೆ) ನೇಯಲ್ಪಟ್ಟಿತು.
ಆದುದರಿಂದ ಇಡೀ ಲೋಕವೆ ಈ ಹಚ್ಚಡವನ್ನು ಮೆಚ್ಚಿಕೊಂಡಿದೆ.
ಪರಮಾತ್ಮನ ಆಣತಿಗಳನ್ನು ಪಾಲಿಸುವ ಭಕ್ತಜನರು ಅವನ ಕೃಪೆಯೆನ್ನುವ ಈ ಹಚ್ಚಡವನ್ನು ಹೊಚ್ಚಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಬಹುದು ಎನ್ನುವುದು ಶರೀಫರ ಇಂಗಿತ.

ಈ ರೀತಿಯಾಗಿ ಗಿರಣಿಯ ಭೌತಿಕ ವರ್ಣನೆಯಿಂದ ಪ್ರಾರಂಭವಾದ ಈ ರಚನೆ, ಗಿರಣಿಯನ್ನು ಮಾನವನಿಗೆ ಹೋಲಿಸಿ, ಅವನ ಒಳಿತನ್ನು ಅವನಿಗೆ ನೆನಪಿಸುವದರೊಂದಿಗೆ ಮುಕ್ತಾಯವಾಗುತ್ತದೆ.

[ಟಿಪ್ಪಣಿ:
ಇಲ್ಲಿ ಶರೀಫರು ವ್ಹಿಕ್ಟೋರಿಯಾ ರಾಣಿಯನ್ನು ಕರುಣಾಮಯಿಯಾದ ಭೂಮಂಡಲ-ಚಕ್ರವರ್ತಿನಿ ಎಂದು ಕರೆದಿರುವದು ಒಂದು ಅನುಮಾನಕ್ಕೆ ಕಾರಣವಾಗಿದೆ.
ಶರೀಫರು ವಸಾಹತುವಾದಿ ಬ್ರಿಟಿಶ್ ಆಳಿಕೆಯ ಪರವಾಗಿದ್ದರೆ ಎನ್ನುವದೆ ಆ ಅನುಮಾನ.
ಈ ಅನುಮಾನದ ವಿಶ್ಲೇಷಣೆ ಮಾಡಲು ಭಾರತದ ಮೇಲಾದ ಪರಕೀಯ ಆಕ್ರಮಣಗಳನ್ನು ಗಮನಿಸಬೇಕು.
ಪರ್ಶಿಯನ್ನರು, ತುರುಕರು, ಮಂಗೋಲರು, ಮುಗಲರು ಭಾರತದ ಮೇಲೆ ದಾಳಿ ಮಾಡಿ ಇಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು.
ಈ ಆಕ್ರಮಣದ ಬಗೆಗೆ ಭಾರತೀಯರಲ್ಲೆ ಎರಡು ಭಿನ್ನ ಅಭಿಪ್ರಾಯಗಳಿದ್ದವು.
“ಜಾಣ ಹಾಗು practical” ಅಭಿಪ್ರಾಯವೆಂದರೆ, ಪರಕೀಯರ ಜೊತೆಗೆ ಸಂಧಾನ ಮಾಡಿಕೊಂಡು, ರಾಜ್ಯದ ಅಮಾಯಕ ಜನತೆಯನ್ನು ಸಂಕಟಕ್ಕೆ ಒಳಪಡಿಸದಿರುವದು.
ಅಕಬರನ ಜೊತೆಗೆ ರಾಜಿಯಾದ ರಾಜಾ ಮಾನಸಿಂಗನು ಈ ಧೋರಣೆಯ ಅಧ್ವರ್ಯು.
ಪರಕೀಯರ ಪ್ರಭುತ್ವವನ್ನು ಒಪ್ಪಿಕೊಂಡು ಆತ್ಮಗೌರವ ಕಳೆದುಕೊಳ್ಳುವದಕ್ಕಿಂತ, ಹೋರಾಡಿ ಸಾಯುವದು ಮೇಲು ಎನ್ನುವ ಧೋರಣೆಯನ್ನು ವ್ಯಕ್ತಪಡಿಸಿದ ಏಕಾಕಿ ರಾಜನೆಂದರೆ ರಾಣಾ ಪ್ರತಾಪಸಿಂಹ.
ಅಕಬರನ ನಂತರದ ತುರುಕರ ಅತ್ಯಾಚಾರ ಅತಿಯಾದಾಗ, ಶಿವಾಜಿ ಇಲ್ಲಿಯ ನಾಡ ಮಕ್ಕಳಿಗಾಗಿ ಹೋರಾಡಿ, ಮರಾಠಾ ರಾಜ್ಯ ಸ್ಥಾಪನೆ ಮಾಡಿದ.
ಅದಕ್ಕೂ ಮೊದಲೇ ವಿಜಯನಗರ ರಾಜ್ಯ ಸ್ಥಾಪನೆಯಾಗಿತ್ತು.

ಅದಾಗ್ಯೂ ಸಹ ಭಾರತದ ಬಹುಭಾಗದಲ್ಲಿ ವಿದೇಶೀಯರ ಆಡಳಿತವೇ ಜಾರಿಯಲ್ಲಿತ್ತು.
ಭಾರತೀಯನಾಗಿ ಪರಿವರ್ತಿತನಾಗಿದ್ದನು ಎಂದು ಹೊಗಳಲ್ಪಟ್ಟ ಅಕಬರನ ಆಸ್ಥಾನದ ಒಂಬತ್ತು ಮುಖ್ಯರಲ್ಲಿ ಏಳು ಜನ ವಿದೇಶೀಯರೇ(=ಪರ್ಶಿಯನ್ನರು) ಇದ್ದರು ಎನ್ನುವದನ್ನು ಗಮನಿಸಿದರೆ, ಭಾರತದ ಆಡಳಿತವು ಪರಕೀಯರಿಂದ ನಿಯಂತ್ರಿತವಾಗುತ್ತಿತ್ತು ಹಾಗೂ ಭಾರತವು ಪರಕೀಯರ ಆಳಿಕೆಯನ್ನು ಒಪ್ಪಿಕೊಂಡಿತ್ತು ಎನ್ನುವದು ಸ್ಪಷ್ಟವಾಗುತ್ತದೆ.

ಅದರಂತೆಯೇ ಬ್ರಿಟಿಶ್ ಆಳಿಕೆಯನ್ನು ಸಹ ಭಾರತೀಯರು ಒಪ್ಪಿಕೊಂಡರು.
ತುರುಕರ ಆಳಿಕೆಗಿಂತ ಬ್ರಿಟಿಶರ ಆಳಿಕೆಯಲ್ಲಿ ಭಾರತದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಬಂದವು.
ಜನಸಾಮಾನ್ಯರು ಬಹುಶಃ ಇದನ್ನು ಸಂತೋಷದಿಂದ ಸ್ವಾಗತಿಸಿರಬಹುದು.
ಅಷ್ಟೇ ಏಕೆ, ಗೋಪಾಲಕೃಷ್ಣ ಗೋಖಲೆ, ಮೋತಿಲಾಲ ನೆಹರೂ ಮಹಾತ್ಮಾ ಗಾಂಧಿಯವರಂತಹವರೂ ಕೂಡ ಮೊದಲಲ್ಲಿ ಬ್ರಿಟಿಶ್ ಆಳಿಕೆಯನ್ನು ವಿರೋಧಿಸಿರಲಿಲ್ಲ ಎನ್ನುವದನ್ನು ಗಮನಿಸಬೇಕು.
ಬ್ರಿಟಿಶರು ಯಾವ ರೀತಿಯಲ್ಲಿ ಭಾರತದ ಆರ್ಥಿಕ ಶೋಷಣೆಯನ್ನು ಮಾಡಿದರು ಎನ್ನುವದು ಜನಸಾಮಾನ್ಯರಿಗೆ ಹೊಗಲಿ, ಪಂಡಿತರಿಗೇ ಅರ್ಥವಾಗಿರಲಿಲ್ಲ. ಇದರ ಒಂದು ಉದಾಹರಣೆ ಹೀಗಿದೆ:

ಬ್ರಿಟಿಶರು ಭಾರತವನ್ನು ವ್ಯಾಪಾರಕ್ಕೆಂದು ಪ್ರವೇಶಿಸಿದಾಗ, ಒಂದು ಪೌಂಡಿನ ಬೆಲೆ ಒಂದು ರೂಪಾಯಿಯ ಬೆಲೆಗಿಂತ ಕಮ್ಮಿಯಾಗಿತ್ತು. ಬ್ರಿಟಿಶರು ಇಲ್ಲಿ ಪ್ರಭುತ್ವ ಸ್ಥಾಪಿಸಿದ ಬಳಿಕ ತಮ್ಮ ಪಾರ್ಲಿಮೆಂಟಿನಲ್ಲಿ ಒಂದು ಶಾಸನ ಮಾಡಿ, ರೂಪಾಯಿ ಬೆಲೆಯ ಅಪಮೌಲ್ಯ ಮಾಡಿದರು.
ಇದರಿಂದಾಗಿ ಭಾರತದಿಂದ ಬ್ರಿಟನ್ನಿಗೆ ಹೋಗುವ ಸಾಮಗ್ರಿಗಳು ಸೋವಿಯಾದವು.
ಭಾರತಕ್ಕೆ ಬ್ರಿಟನ್ನಿನಿಂದ ಆಮದಾದ ವಸ್ತುಗಳು ದುಬಾರಿಯಾಗಿ ಬ್ರಿಟಿಶರಿಗೆ ಅಪಾರ ಲಾಭವಾಗತೊಡಗಿತು. ಇದನ್ನು ಅರ್ಥ ಮಾಡಿಕೊಂಡ ಏಕಮೇವ ವ್ಯಕ್ತಿಯಂದರೆ ಮೋತಿಲಾಲ ನೆಹರೂ.
ಅವರು ಅನೇಕ ಭಾರತೀಯ ಗಣ್ಯರಿಗೆ ಈ ಅನರ್ಥವನ್ನು ತಿಳಿಸಿ ಪತ್ರ ಬರೆದರು.
ಆದರೆ ಭಾರತೀಯ ಗಣ್ಯರಿಗೆ ಇದು ಅರ್ಥವಾಗಲೇ ಇಲ್ಲ.
(ಆಧಾರ :ಶ್ರೀ ಬಿ. ಆರ್. ನಂದಾರವರು ಬರೆದ ಪುಸ್ತಕ, The Nehrus.)

ಬ್ರಿಟಿಶರ ಬಹುಮುಖ ಶೋಷಣೆಯ ಮತ್ತೊಂದು ಉದಾಹರಣೆ ಹೀಗಿದೆ:
ಮೈಸೂರಿನಲ್ಲಿ ತಯಾರಾಗುತ್ತಿದ್ದ ಮೈಸೂರು ಸ್ಯಾಂಡಲ್ ಸೋಪ್ ನಿರ್ಮಾಣಕ್ಕೆ ಆಸ್ಟ್ರೇಲಿಯಾದಿಂದ ಕುರಿಗಳ ಕೊಬ್ಬು(=sheep tallow) ಆಮದಾಗುತ್ತಿತ್ತು!
ನಾವು ಸ್ವದೇಶಿ ನಿರ್ಮಿತಿ ಎಂದು ತಿಳಿದ ಸಾಬೂನಿನ ಬೆಲೆಯ ಬಹುಭಾಗವು ಬ್ರಿಟಿಶ್ ಕೊಲೊನಿ ಆಸ್ಟ್ರೇಲಿಯಾದ ಉದ್ಧಾರಕ್ಕಾಗಿ ಹೋಗುತ್ತಿತ್ತು ಎನ್ನುವದನ್ನು ಗಮನಿಸಿದಾಗ ಭಾರತದ ಆರ್ಥಿಕ ಶೋಷಣೆಯ ಕಲ್ಪನೆ ಬಂದೀತು.

ಇವೆಲ್ಲ ವಿಚಾರಗಳು ಆರ್ಥಿಕ ಪಂಡಿತರಿಗೇ ತಿಳಿದಿರಲಿಲ್ಲ.
ಅಲ್ಲದೆ ರಾಜಕಾರಣ ಹಾಗು ಸಮಾಜಸೇವೆಯಲ್ಲಿ ತೊಡಗಿಕೊಂಡಿದ್ದ ಘಟಾನುಘಟಿಗಳೂ ಸಹ ಬ್ರಿಟಿಶ್ ಪ್ರಭುತ್ವವನ್ನು ಒಪ್ಪಿಕೊಂಡಿದ್ದರು.
ಅಂದ ಮೇಲೆ ಶರೀಫರೂ ಸಹ ಅಂತಹದೇ ಅಭಿಪ್ರಾಯ ಹೊಂದಿದ್ದರೆ ಆಶ್ಚರ್ಯವಾಗಬಾರದು.]

Saturday, November 29, 2008

ಬಿದ್ದೀಯಬೆ ಮುದುಕಿ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಬಿದ್ದೀಯಬೆ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ
ಬಿದ್ದೀಯಬೆ ಮುದುಕಿ ||ಪ||

ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ ||೧||

ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ
ಬಿದ್ದೀಯಬೆ ಮುದುಕಿ ||೨||

ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೆ ಮುದುಕಿ ||೩||

ಶರೀಫರು ೧೯ನೆಯ ಶತಮಾನದ ಹಳ್ಳಿಗಾಡಿನಲ್ಲಿ ಬೆಳೆದವರು.
ಅದಾಗಲೇ, ಧಾರವಾಡದ ಸುತ್ತಮುತ್ತಲಿನ ಪ್ರದೇಶವೆಲ್ಲ ಬ್ರಿಟಿಶರ ಆಡಳಿತಕ್ಕೆ ಒಳಪಟ್ಟಿತ್ತು.
ಹತ್ತಿಯ ಗಿರಣಿ, ರೇಲವೇ ಮೊದಲಾದ ಆಧುನಿಕ ಯಾಂತ್ರಿಕ ಸೌಕರ್ಯಗಳು ಆಗತಾನೇ ಪ್ರಾರಂಭವಾಗಿದ್ದವು.

ಶರೀಫರು ಮುಲ್ಕಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಕೆಲಕಾಲ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು.
ಆದರೆ ಇವರ ಮನೋಧೋರಣೆಗೆ ನೌಕರಿಯು ಒಗ್ಗದ ವಿಷಯವಾಗಿತ್ತು.
ಅದನ್ನೂ ಬಿಟ್ಟುಕೊಟ್ಟು,ಹಳ್ಳಿ ಹಳ್ಳಿ ತಿರುಗುತ್ತ, ಪಾರಮಾರ್ಥಿಕ ಚಿಂತನೆಯಲ್ಲಿಯೇ ಕಾಲ ಕಳೆಯತೊಡಗಿದರು.

ನಿಷ್ಠುರ ಸ್ವಭಾವದ ಶರೀಫರು ತಮಗೆ ಸರಿಕಾಣದ ಯಾವುದನ್ನು ಕಂಡರೂ ತಕ್ಷಣವೇ ಟೀಕಿಸುತ್ತಿದ್ದರು.
ತಮ್ಮ ಸಮಕಾಲೀನರಾದ ನವಲಗುಂದದ ಅಜಾತ ನಾಗಲಿಂಗಸ್ವಾಮಿಗಳು ಪಲ್ಲಕ್ಕಿಯಲ್ಲಿ ಕುಳಿತು ಹೋಗುತ್ತಿದ್ದಾಗ,
“ ಒಂದು ಹೆಣಕೆ ಎರಡು ಹೆಣವು ದಣಿವುದ್ಯಾತಕೆ
ನಾಗಲಿಂಗಯೋಗಿ ತಾನು ತಿರುಗುವದ್ಯಾತಕೆ”
ಎಂದು ಛೇಡಿಸಿದ್ದರು.

ಶರೀಫರ ಹಾಡುಗಳೂ ಸಹ ಹಳ್ಳಿಗರ ಹಾಡುಗಳೇ.
ಅದರಲ್ಲಿ ಶಿಷ್ಟಭಾಷೆಯ ಬಳಕೆ ಇಲ್ಲ.
ಸಹಜಸ್ಫೂರ್ತಿಯಿಂದ, ಹೃದಯದಿಂದ ಹೊರಹೊಮ್ಮಿದ ಹಾಡುಗಳು ಇವು.
ಅನೇಕ ವೇಳೆ ತಮ್ಮ ಕಣ್ಣೆದುರಿನಲ್ಲಿ ಕಂಡ ಘಟನೆಯಿಂದ ಈ ಹಾಡುಗಳು ಪ್ರೇರಿತವಾಗಿವೆ.
ಅಂತಹ ಹಾಡುಗಳಲ್ಲಿ ಒಂದು : “ಬಿದ್ದೀಯಬೆ ಮುದುಕಿ”.

ಹುಲಗೂರು ಇದು ಶಿಗ್ಗಾವಿ ತಾಲೂಕಿನಲ್ಲಿರುವ ಒಂದು ಹಳ್ಳಿ.
ಹಜರತ್ ಶಾ ಖಾದರಿ ಎನ್ನುವ ಸಂತರ ಗೋರಿ ಇಲ್ಲಿದ್ದು ಇದು ಮುಸಲ್ಮಾನರಿಗೆ ಯಾತ್ರಾ ಸ್ಥಳವಾಗಿದೆ.
ಪ್ರತಿ ರವಿವಾರ ಈ ಹಳ್ಳಿಯಲ್ಲಿ ಸಂತೆ ನಡೆಯುತ್ತಿತ್ತು.
ಇಂತಹ ಒಂದು ಸಂತೆಯಲ್ಲಿ ಶರೀಫರು ಒಬ್ಬ ಮುದುಕಿಯನ್ನು ನೋಡುತ್ತಾರೆ.
ವಯಸ್ಸಿಗೆ ಸಹಜವಾದ ಪಕ್ವತೆಯನ್ನು ತೋರದ ರೀತಿಯಲ್ಲಿ ಆ ಮುದುಕಿ ವ್ಯವಹರಿಸುವದನ್ನು ಕಂಡು ಶರೀಫರಿಗೆ ಬೇಸರವಾಗಿರಬಹುದು.
ಆಗ ಶರೀಫರು ಮುದುಕಿಗೆ ಎಚ್ಚರ ಕೊಡುವ ಧಾಟಿಯಲ್ಲಿ ಹಾಡುತ್ತಾರೆ:
“ಬಿದ್ದೀಯಬೇ ಮುದುಕಿ
ನೀ ದಿನ ಹೋದಾಕಿ ಬಲು ಜೋಕಿ!”

“ನೀನು ವಯಸ್ಸಾದ ಮುದುಕಿ, ನೀನು ಬಿದ್ದರೆ ಒಳ್ಳೆ ಪೆಟ್ಟು ತಿನ್ನುತ್ತೀ.
ಏಕೆ ಇಂತಹ ಅಸಹಜ ಹಾರಾಟ ನಿನ್ನದು?
ಮನೆಯಲ್ಲಿ ಕೂಡುವದನ್ನು ಬಿಟ್ಟು ಈ ಸಂತೆಗೆ ಏಕೆ ಬಂದೆ?
ಈ ಗದ್ದಲದಲ್ಲಿ ನೀನು ಬಿದ್ದರೆ ನಿನ್ನನ್ನು ಕೇಳುವವರು ಯಾರೂ ಇಲ್ಲ.
ಎಂತಹ ಬುದ್ಧಿಗೇಡಿ ಮುದುಕಿಯಾಗಿರುವೆ ನೀನು” ಎಂದು ಶರೀಫರು ಅವಳನ್ನು ಬೈಯುತ್ತಾರೆ.
“ಸದ್ಯಕಿದು ಹುಲಗೂರ ಸಂತಿ
ಗದ್ದಲದೊಳಗ ಯಾಕ ನಿಂತಿ
ಬಿದ್ದು ಒದ್ದಾಡಿದರ ಎಬ್ಬಿಸುವರಿಲ್ಲಾ
ಬುದ್ಧಿಗೇಡಿ ಮುದುಕಿ ನೀನು
ಬಿದ್ದೀಯಬೆ ಮುದುಕಿ”

ಈ ಮುದುಕಿಯು ಬಲು ಒಯ್ಯಾರದ ಮುದುಕಿ.
ತನ್ನ ಬುಟ್ಟಿಯಲ್ಲಿ ಜರದ ಪಟ್ಟೆಯ ಸೀರೆಯನ್ನು ಇಟ್ಟುಕೊಂಡು ಬಂದಿದ್ದಾಳೆ.
(ಪಟ್ಟಿ ಎಂದರೆ ರೇಶಮೆ ಸೀರೆ ಎನ್ನುವ ಅರ್ಥವೂ ಇದೆ.)
ಸಂತೆಯಲ್ಲಿ ನೆರೆದವರ ಎದುರಿಗೆ ತನ್ನ ಪಟ್ಟೆಯ ಸೀರೆಯನ್ನು ಉಟ್ಟುಗೊಂಡು ಜಂಭ ಪಡಬೇಕೆನ್ನುವದು ಅವಳ ಆಸೆ.
ಆದರೆ ಇವಳು ಸೀರೆಯನ್ನು ತೆಗೆಯುವ ಹೊತ್ತಿನಲ್ಲಿ ಗಂಟಿಚೌಡೇರು (=ಗಂಟುಕಳ್ಳರು) ಇವಳ ಚೀಲವನ್ನೇ ಕತ್ತರಿಸಬಹುದಲ್ಲ!
ಅದಕ್ಕಾಗಿಯೇ ಶರೀಫರು ಎಚ್ಚರಿಕೆ ನೀಡುತ್ತಾರೆ:
“ಬುಟ್ಟಿಯೊಳು ಪಟ್ಟೇವನಿಟ್ಟಿ
ಉಟ್ಟರದನ ಚೀಲ ಜೋಕಿ
ಕೆಟ್ಟ ಗಂಟಿಚೌಡೇರ ಬಂದು
ಕತ್ತರಿಸಿಕೊಂಡು ಹೋದಾರ ಮುದುಕಿ”

ಶರೀಫರು ಸಂತೆಯ ರೂಪಕವನ್ನು ಸಂಸಾರಕ್ಕೆ ಹೋಲಿಸುತ್ತ , ಈ ಸಂಸಾರಕ್ಕೆ ಬಂದ ಎಲ್ಲ ಜೀವಿಗಳಿಗೂ ಎಚ್ಚರಿಕೆ ನೀಡುತ್ತಿದ್ದಾರೆ.
ಸಂತೆಯಲ್ಲಿ ಹೇಗೊ, ಹಾಗೆಯೇ ಸಂಸಾರದಲ್ಲೂ ಸಹ, ಜೀವಿಯು ಎಚ್ಚರದಿಂದ ಇರಬೇಕು.
ಇಲ್ಲಿ ಜಾರಿ ಬಿದ್ದರೆ ಎಬ್ಬಿಸಲು ಯಾರೂ ಸಹಾಯ ಮಾಡುವದಿಲ್ಲ.
ಪೂರ್ವಜನ್ಮದ ಪುಣ್ಯದಿಂದಾಗಿ(= ತಲೆಯ ಮೇಲಿನ ಬುಟ್ಟಿ), ಈ ಜನ್ಮದಲ್ಲಿ ಇವಳಿಗೆ ಒಂದಿಷ್ಟು ಭೋಗ (=ಪಟ್ಟೆ ಸೀರೆ) ದೊರಕಿದೆ.
ಆದರೆ, ಇಳಿವಯಸ್ಸಾದರೂ ಸಹ ಸಂಸಾರದಲ್ಲಿಯೇ ಮಗ್ನರಾಗಿ, ತನ್ನ ದೊಡ್ಡಸ್ತಿಕೆಯನ್ನೇ ಮೆರೆಯುತ್ತ ಹೋದರೆ, ತಮ್ಮಲ್ಲಿರುವ ಈ ಜನ್ಮದ ಯತ್ಕಿಂಚಿತ್ ಪುಣ್ಯಬಲವೂ(=ಕೈಯಲ್ಲಿಯ ಚೀಲ) ಸಹ ಗಂಟುಕಳ್ಳರ(=ಪುಣ್ಯದಿಂದ ದೊರೆಯುವ ಫಲಗಳು) ಮೂಲಕ ಮಾಯವಾಗುವದು.

ಅದಕ್ಕಾಗಿ, ಮನಸ್ಸನ್ನು ದೇವರಲ್ಲಿ ಇಡಬೇಕೆ ಹೊರತು ಸಂಸಾರದ ವಾಸನೆಗಳಲ್ಲಿ ಅಲ್ಲ.
ಇದನ್ನು ತಿಳಿಯದ ಜೀವಿಯು ಪಿಸರುಗಣ್ಣಿನ, ಪಿಚ್ಚುಗಣ್ಣಿನ ಮುದುಕಿ ಇದ್ದಂತೆ.
ಅವಳಿಗೆ ಹಸನಾದ(=clear) ದೃಷ್ಟಿಯು ಇಲ್ಲ.
ಅಲ್ಲದೆ, ಸಾಧನೆಯನ್ನು ಕೈಕೊಳ್ಳುವ ವಯಸ್ಸೂ ಸಹ ಉಳಿದಿಲ್ಲ.
ಆದುದರಿಂದ, ಮನಸ್ಸನ್ನು ದೇವರ ಕಡೆಗೆ ತಿರುಗಿಸಿ ಜನ್ಮ ಸಾರ್ಥಕ ಮಾಡಿಕೊಳ್ಳುವದೇ ಲೇಸು.

“ಶಿಶುನಾಳಧೀಶನ ಮುಂದೆ
ಕೊಸರಿ ಕೊಸರಿ ಹೋಗದಿರು
ಹಸನವಿಲ್ಲ ಹರೆಯವು ಮೀರಿದ
ಪಿಸುರು ಪಿಚ್ಚುಗಣ್ಣಿನ ಮುದುಕಿ
ಬಿದ್ದೀಯಬೇ ಮುದುಕಿ ||”

ಮುದುಕಿಯ ರೂಪಕದಿಂದ ಶರೀಫರು ನಮಗೆಲ್ಲರಿಗೂ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.

Sunday, November 23, 2008

ಎಲ್ಲರಂಥವನಲ್ಲ ನನ ಗಂಡ

ಶರೀಫರ ಹಾಡಿನ ಪೂರ್ತಿಪಾಠ ಹೀಗಿದೆ:

ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ
ಎಲ್ಲರಂಥವನಲ್ಲ ನನ ಗಂಡ ||ಪಲ್ಲ||

ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||ಅ.ಪ.||

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ ||೧||

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ
ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ
ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||೨||

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||೩||

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ
ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||೪||

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||೫||
………………………………………………………………………
ಭಕ್ತಿಮಾರ್ಗದಲ್ಲಿ ಭಕ್ತ ಮತ್ತು ಭಗವಂತನ ನಡುವೆ ಐದು ಬಗೆಯ ಸಂಬಂಧಗಳನ್ನು ಗುರುತಿಸಲಾಗಿದೆ:
೧) ದಾಸ ಭಾವ
೨) ಸಖ್ಯ ಭಾವ
೩) ಮಧುರ ಭಾವ
೪) ವಾತ್ಸಲ್ಯ ಭಾವ
೫) ವಿರೋಧ ಭಾವ

ಭಕ್ತಿಮಾರ್ಗದ ಸಾಧಕರು ಈ ಎಲ್ಲ ಪಥಗಳಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ.
ಶರೀಫರ ಹಾಡುಗಳಲ್ಲಿ ಸಹ ಈ ವಿಭಿನ್ನ ಪ್ರಕಾರಗಳ ವರ್ಣನೆಯನ್ನು ಕಾಣಬಹುದು.

“ಎಲ್ಲರಂಥವನಲ್ಲ ನನ ಗಂಡ” ಎನ್ನುವ ಹಾಡಿನಲ್ಲಿ ಶರೀಫರು ಪರಮಾತ್ಮನನ್ನು ಪತಿಗೆ ಹಾಗೂ ಜೀವಾತ್ಮರಾದ ತಮ್ಮನ್ನು ಸತಿಗೆ ಹೋಲಿಸಿಕೊಂಡು ಹಾಡಿದ್ದಾರೆ.
ಮಧುರ ಭಕ್ತಿಯ ಈ ಸಾಧನಾಮಾರ್ಗದಲ್ಲಿ ತಮಿಳುನಾಡಿನ ಆಂಡಾಳ್, ಕರ್ನಾಟಕದ ಅಕ್ಕ ಮಹಾದೇವಿ ಹಾಗೂ ರಾಜಸ್ಥಾನದ ಮೀರಾಬಾಯಿ ಪ್ರಸಿದ್ಧರಾಗಿದ್ದಾರೆ.
ವೀರಶೈವ ದರ್ಶನದಲ್ಲಿಯೂ ಸಹ “ ಶರಣ ಸತಿ, ಲಿಂಗ ಪತಿ” ಎನ್ನುವದು ಸುಪ್ರಸಿದ್ಧವಾದ ಹೇಳಿಕೆಯೇ ಆಗಿದೆ.
ಆಧುನಿಕ ಕಾಲದಲ್ಲಿ ಮಧುರಚೆನ್ನರೂ ಸಹ ಸಾಧನೆಯ ಪಥದಲ್ಲಿ ಪರಮಾತ್ಮನನ್ನು ತಮ್ಮ “ನಲ್ಲ” ಎಂದು ಗ್ರಹಿಸಿ ಬರೆದ “ನನ್ನ ನಲ್ಲ” ಕಾವ್ಯವು ಕನ್ನಡದ ಅದ್ಭುತ ಕಾವ್ಯಗಳಲ್ಲೊಂದಾಗಿದೆ.

ಶರೀಫರ ಕವನ ಪ್ರಾರಂಭವಾಗುವದು ತಮ್ಮ ಗಂಡನ ಬಗೆಗೆ ಅವರಿಗಿರುವ ಬೆರಗು ಹಾಗು ಮೆಚ್ಚುಗೆಯ ಸಾಲುಗಳಿಂದ:
“ಎಲ್ಲರಂಥವನಲ್ಲ ನನ ಗಂಡ
ಬಲ್ಲಿದನು ಪುಂಡ”

ಈತ ಬಲ್ಲಿದನಾದ ಗಂಡ ಎಂದು ಇವನ ಹೆಂಡತಿಗೆ ಅಭಿಮಾನವಿದೆ.
ಯಾತರಲ್ಲಿ ಬಲ್ಲಿದ?
ತನ್ನ ಹೆಂಡತಿಯನ್ನು ತನಗೆ ಬೇಕಾದಂತೆ ತಿದ್ದುವದರಲ್ಲಿ ಈತ ಬಲ್ಲಿದ, ಅಂದರೆ ಜಾಣ!
ಅಷ್ಟೇ ಅಲ್ಲ. ಅವಳನ್ನು ಪರಿವರ್ತಿಸುವ ಈ ಕಾರ್ಯವನ್ನು ಆತ ‘ಪುಂಡ’ತನದಿಂದ, agressively ಮಾಡುತ್ತಾನೆ.
ಹೆಂಡತಿಗೆ ಈ ವಿಷಯದಲ್ಲಿ ಸ್ವಲ್ಪವೂ ಸ್ವಾತಂತ್ರ್ಯ ಎನ್ನುವದಿಲ್ಲ.
ಆದರೆ ಅವಳಿಗೆ ಅಸಮಾಧಾನವೂ ಇಲ್ಲ.
ಇದರಲ್ಲಿ ತನ್ನ ಹಿತವೇ ಇದೆ ಎಂದು ಅರಿತ ಅವಳು ಗಂಡನ ಇಂತಹ ವರ್ತನೆಯನ್ನು ಮೆಚ್ಚಿಕೊಂಡಿದ್ದಾಳೆ.

ತನ್ನ ಗಂಡನಾದ ಪರಮಾತ್ಮ ಯಾವ ರೀತಿಯಲ್ಲಿ ತನ್ನನ್ನು ತಿದ್ದಿದ ಎಂದು ಶರೀಫರು ಹೀಗೆ ಹೇಳುತ್ತಾರೆ.
ಸೊಲ್ಲು ಸೊಲ್ಲಿಗೆ ಬಯ್ದು ನನ್ನ
ಎಲ್ಲಿಗೋಗದ್ಹಾಂಗ ಮಾಡಿಟ್ಟಾ
ಕಾಲ್ಮುರಿದು ಬಿಟ್ಟಾ ||

ಹೊಸದಾಗಿ ಮದುವೆಯಾದ ಹೆಂಡತಿ (--ಹಳೆಯ ಸಾಂಪ್ರದಾಯಕ ಸಮಾಜದಲ್ಲಿ ಎನ್ನುವದನ್ನು ನೆನಪಿನಲ್ಲಿ ಇಟ್ಟುಕೊಳ್ಳಿರಿ—) ತನ್ನ ಪತಿಯೊಡನೆ ತನ್ನ ಚಿಕ್ಕ ಪುಟ್ಟ ಬಯಕೆಗಳನ್ನು ಹೇಳಿಕೊಳ್ಳಲು ಬಯಸುತ್ತಾಳೆ. ಅವಳಿಗೆ ಬಾಯಿ ತೆರೆಯಲೇ ಅವಕಾಶ ಕೊಡದಂತೆ, ಈ ಪುಣ್ಯಾತ್ಮ ಮಾತು ಮಾತಿಗೆ (=ಸೊಲ್ಲು ಸೊಲ್ಲಿಗೆ) ಇವಳನ್ನು ಬಯ್ಯುತ್ತಾನೆ. ಇವಳು ಮನೆಯ ಬಿಟ್ಟು ಹೊರಗೆ ಕಾಲಿಡಬಾರದೆನ್ನುವ ಉದ್ದೇಶದಿಂದ ಅವಳ ಕಾಲನ್ನೇ ಮುರಿದು ಬಿಟ್ಟಿದ್ದಾನೆ.

ಶರೀಫರು ಹೊಸದಾಗಿ ಪರಮಾತ್ಮನ ಜೊತೆ ಮದುವೆಯಾಗಿದ್ದಾರೆ.
ತನ್ನಂತಹ ನೆರೆಹೊರೆಯವರೊಡನೆ ಮಾತನಾಡುವ ಹಾಗು ತನ್ನ ಸಂಸಾರದ ದೊಡ್ಡಸ್ತನವನ್ನು ಹೆಮ್ಮೆಯಿಂದ ಹೇಳಿಕೊಂಡು, ಬೀಗುವ ಮನಸ್ಸು ಈ ಹೆಂಡತಿಗೆ ಇದೆ.
ಆದರೆ ಮನೆಯ ಯಜಮಾನನಿಗೆ ಇದು ಬಿಲ್ಕುಲ್ ಬೇಕಾಗಿಲ್ಲ.
ಸರಿ, ಆತ ಇವಳ ಕಾಲನ್ನೇ ಮುರಿದು ಬಿಟ್ಟ.
ಆಧ್ಯಾತ್ಮಿಕ ಅರ್ಥದಲ್ಲಿ ಹೇಳುವದಾದರೆ, ತನ್ನ ಸರಿಕರಾದ ಇತರ ಕೆಲವು ಸಂತರಿಗೆ (ಉದಾ: ಅಜಾತ ನಾಗಲಿಂಗ ಸ್ವಾಮಿಗಳಿಗೆ) ಬಂದಂತಹ ದೊಡ್ಡಸ್ತಿಕೆ ಹಾಗು ಪ್ರಸಿದ್ಧಿ ಶರೀಫರಿಗೆ ಬರದಂತೆ, ಆ ಪರಮಾತ್ಮ ನೋಡಿಕೊಂಡ.
ಇದು ಹೆಂಡತಿಗೂ ಒಪ್ಪಿಗೆಯಾದ ಸಂಗತಿಯೇ!

ಇಷ್ಟಾದ ಮೇಲೆ ಇಂತಹ ಸುಗುಣ ಸಂಪನ್ನ ಗಂಡನೊಡನೆ ತನ್ನ ಒಗೆತನ ಹೇಗೆ ಪ್ರಾರಂಭವಾಯಿತೆಂದು ಶರೀಫರು ಹೇಳುತ್ತಾರೆ:

ಮಾತಾಪಿತರ ಮನೆಯೊಳಿರುತಿರಲು
ಮನಸೋತು ಮೂವರು
ಪ್ರೀತಿಗೆಳೆತನ ಮಾತಿನೊಳತಿರಲು
ಮೈನೆರೆತು ಮಾಯದಿ
ಘಾತವಾಯಿತು ಯವ್ವನವು ಬರಲು
ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಶರೀಫರಿಗೆ ಇನ್ನೂ ಆಧ್ಯಾತ್ಮದ ಗಂಧ ಬಡೆದಿರಲಿಲ್ಲ.
ಅವರು ತಮ್ಮ ತಂದೆ ತಾಯಿಯ ಮನೆಯಲ್ಲಿ, ಅಂದರೆ ವಿಷಯ ಭಾವನೆ ತುಂಬಿದ ಸಂಸಾರದಲ್ಲಿಯೇ ಇದ್ದರು.
ಅವರಿಗೆ ಮೂವರು ಪ್ರೀತಿಯ ಗೆಳೆಯರು.
ಈ ಮೂವರೆಂದರೆ, ಪ್ರತಿಯೊಂದು ಜೀವಿಗೆ ಸಂಚಲನೆ ನೀಡುವ ಮೂರು ಗುಣಗಳು:
(೧) ತಮಸ್ (೨) ರಜಸ್ ಹಾಗು (೩) ಸತ್ವ
ಪ್ರತಿ ಜೀವಿಯ ಜನ್ಮಾಂತರಗಳಲ್ಲಿ ತಮೋಗುಣ ಕಡಿಮೆಯಾಗುತ್ತ, ಸತ್ವಗುಣ ಅಧಿಕವಾಗುತ್ತ ಹೋಗಬೇಕು.

ಅದಲ್ಲದೆ ಅವರ ಮೂರು ಪ್ರಕಾರದ ಕರ್ಮಗಳು ಅವರನ್ನು ಬೆಂಬತ್ತಿವೆ:
(೧) ಸಂಚಿತ (೨) ಪ್ರಾರಬ್ಧ ಹಾಗೂ (೩) ಆಗಾಮಿ

(ಟಿಪ್ಪಣಿ:
ಈ ಗುಣಗಳ ಮಿಶ್ರಣಕ್ಕೆ ಸರಿಹೋಗುವಂತೆ ಹಾಗೂ ಕರ್ಮಗಳಿಗೆ ಅನುಸಾರವಾಗಿ ಪ್ರತಿ ಜೀವಿಗೆ ಒಂದು ದೇಹ ದೊರಕುತ್ತದೆ.
‘ಗಣಪತಿ ಅಥರ್ವ ಶೀರ್ಷ’ದಲ್ಲಿ ಬರುವ ಈ ಸಾಲನ್ನು ಗಮನಿಸಿರಿ:
“ತ್ವಂ ಗುಣತ್ರಯಾತೀತಃ, ತ್ವಂ ದೇಹತ್ರಯಾತೀತಃ, ತ್ವಂ ಕಾಲತ್ರಯಾತೀತಃ”
ಗಣಪತಿಯು ಸತ್ವ, ರಜಸ್ ಹಾಗೂ ತಮಸ್ ಎನ್ನುವ ಮೂರೂ ಗುಣಗಳಿಗೆ ಅತೀತನಾಗಿರುವದರಿಂದ ಅವನು ಮೂರೂ ದೇಹಗಳಿಗೆ (=ಸ್ಥೂಲ, ಸೂಕ್ಷ್ಮ ಹಾಗೂ ಕಾರಣದೇಹಗಳಿಗೆ) ಅತೀತನಾಗಿದ್ದಾನೆ.
ದೇಹವಿಲ್ಲದವನಿಗೆ ಕಾಲವೆಲ್ಲಿಯದು?
ಆ ಕಾರಣದಿಂದ ಆತನು ಭೂತ, ವರ್ತಮಾನ ಹಾಗೂ ಭವಿಷ್ಯತ್ ಎನ್ನುವ ಮೂರು ಕಾಲಗಳಿಗೂ ಸಹ ಅತೀತನಾಗಿದ್ದಾನೆ.
ದೇಹ ಹಾಗೂ ಕಾಲಗಳಿಂದ ಬದ್ಧನಾಗದವನಿಗೆ ಕರ್ಮಬಂಧನವೆಲ್ಲಿಯದು?
ಹಾಗಾಗಿ ಪರಮಾತ್ಮನಿಗೆ ಕರ್ಮಬಂಧನವಿಲ್ಲ.)

ಈ ರೀತಿಯಾಗಿ ಶರೀಫರು ತಮ್ಮ ಮೂರು ಗುಣಗಳೊಡನೆ ಪ್ರೀತಿಯಿಂದ ಇರುತ್ತಿರಲು, ಈ ಗುಣಗಳಲ್ಲಿ ಸತ್ವಗುಣವೇ ಅಧಿಕವಾಗಿದ್ದರಿಂದ, ಅವರು ಮೈನೆರೆಯುವ ಸಮಯ ಬಂದಿತು.
ಅರ್ಥಾತ್, ಈ ವಿಷಯ ಸಂಸಾರವನ್ನು ಬಿಟ್ಟು, ಆಧ್ಯಾತ್ಮಿಕ ಸಂಸಾರ ಹೂಡುವ ಅವಸ್ಥೆ ಅವರಿಗೆ ಪ್ರಾಪ್ತವಾಯಿತು.
ಅದೂ ಹೇಗೆ? ಮಾಯದಿಂದ ಅಂದರೆ ಅವರಿಗೇ ಅರಿವಾಗದಂತೆ!
ಆದರೆ ಚಿಕ್ಕ ಹುಡುಗಿಯೊಬ್ಬಳು ಮದುವೆಯಾಗುವಾಗ ಸಂಭ್ರಮದ ಜೊತೆಗೇ ಹೆದರಿಕೆಯನ್ನೂ ಅನುಭವಿಸುತ್ತಾಳೆ.
ಅದಕ್ಕಾಗಿಯೇ ಶರೀಫರು,
“ಘಾತವಾಯಿತು ಯವ್ವನವು ಬರಲು”
ಎಂದು ಹೇಳುತ್ತಾರೆ.

ಶರೀಫರಿಗೇನೊ ಸ್ವಲ್ಪ apprehension ಇರಬಹುದು.
ಆದರೆ ತನಗೆ ತಕ್ಕ ಕನ್ಯೆಯನ್ನು ಶೋಧಿಸುತ್ತಿರುವ ವರಮಹಾಶಯ ಸುಮ್ಮನೇ ಕೂತಾನೆ?
‘ವೆಂಕಟೇಶ ಕಲ್ಯಾಣ’ದಲ್ಲಿ ವೆಂಕಟೇಶನು ಮದುವೆಯ ಪ್ರಸ್ತಾಪಕ್ಕಾಗಿ ತಾನೇ ದೂತೆಯಾಗಿ ಕೊರವಂಜಿಯ ವೇಷದಲ್ಲಿ ಬಂದದ್ದನ್ನು ನೆನಪಿಸಿಕೊಳ್ಳಿರಿ.
ಅದೇ ರೀತಿಯಾಗಿ, ಪರಮಾತ್ಮನೂ ಸಹ ಈ ಕನ್ಯೆಯೊಡನೆ ಮದುವೆಯಾಗಲು ಗುರುರೂಪದಲ್ಲಿ ಬರುತ್ತಾನೆ.
ಆ ಗುರುವೇ ಗೋವಿಂದ ಭಟ್ಟರು.

ಹಿಂಗಾಗುತಿರಲು
ದೂತೆ ಕೇಳ್ನಿಮ್ಮವರು ಶೋಭನ
ರೀತಿಚಾರವನೆಲ್ಲ ತೀರಿಸಿ
ಆತನೊಳು ಮೈಹೊಂದಿಕೆಯ ಮಾಡಿ
ಮಮತೆಯಲಿ ಕೂಡಿ||

ಗುರು ಗೋವಿಂದ ಭಟ್ಟರು ಶರೀಫರ ಮದುವೆಯನ್ನು ಪರಮಾತ್ಮನ ಜೊತೆಗೆ ಮಾಡಿದ್ದಷ್ಟೇ ಅಲ್ಲ, ಶೋಭನ ಶಾಸ್ತ್ರವನ್ನೂ ಸಹ ಮಾಡಿದರು.
ಪರಮಾತ್ಮನೊಡನೆ ಮೈಹೊಂದಿಕೆಯನ್ನು ಮಾಡಿಸಿಕೊಟ್ಟರು.
ಪರಮಾತ್ಮ ಹಾಗೂ ಶರೀಫರು ಪ್ರೀತಿಯಲ್ಲಿ ಒಂದಾದರು.

ಈ ವರ್ಣನೆಯು ಗುರು ಗೋವಿಂದ ಭಟ್ಟರು ಶಕ್ತಿಪಾತದ ಮೂಲಕ ಶರೀಫರಲ್ಲಿ ಕುಂಡಲಿನಿಯನ್ನು ಜಾಗೃತಗೊಳಿಸಿದುದರ ಸೂಚನೆಯಾಗಿದೆ.

ಇದೀಗ ಶರೀಫರ ಹೊಸ ಸಂಸಾರ (ಪರಮಾತ್ಮನೊಡನೆ) ಪ್ರಾರಂಭವಾಯಿತು.
ಸರಿ, ಶರೀಫರ ತವರು ಮನೆಯ ಸುದ್ದಿಯೇನು?
ಹೊಸ ಗಂಡ ಈ ವಿಷಯದಲ್ಲಿ ತುಂಬಾ possessive.
ಶರೀಫರಿಗೆ ಅರಿಷಡ್ವರ್ಗವೆನ್ನುವ ಆರು ಮಂದಿ ಅಕ್ಕ ತಂಗಿಯರಿದ್ದರು.
(ಕಾಮ, ಕ್ರೋಧ, ಮೋಹ, ಲೋಭ, ಮದ ಹಾಗು ಮಾತ್ಸರ್ಯ.)
ಅಲ್ಲದೆ ಅವರಿಗೆ ಐದು ಜನ ಪ್ರಿತಿಯ ಸೋದರರು.
(ಐದು ಕರ್ಮೇಂದ್ರಿಯಗಳು ಹಾಗು ಅವಕ್ಕೆ ಪೂರಕವಾದ ಐದು ಜ್ಞಾನೇಂದ್ರಿಯಗಳು:
ಕಣ್ಣು-ನೋಟ, ಕಿವಿ-ಶ್ರವಣ, ಮೂಗು-ವಾಸನೆ, ನಾಲಗೆ-ರುಚಿ, ಚರ್ಮ-ಸ್ಪರ್ಶ).
ಅವರೆಲ್ಲರನ್ನೂ ಈತ ಅಗಲಿಸಿಯೇ ಬಿಟ್ಟ.
ಅಂದರೆ, ಈ ಸಾಧನಗಳು ಅವರನ್ನು ವಿಷಯ ಸಂಸಾರಕ್ಕೆ ಎಳೆಯಲು ಸಾಧ್ಯವಾಗಲಿಲ್ಲ.

ಅಕ್ಕತಂಗಿಯರಾರು ಮಂದಿಗಳಾ
ಅಗಲಿಸಿದನೈವರ
ಕಕ್ಕುಲಾತಿಯ ಅಣ್ಣತಮ್ಮಗಳಾ

ತನ್ನ ಹೆಂಡತಿ ತನ್ನ ನೆದರನ್ನು(=ನಜರನ್ನು, ನೋಟವನ್ನು) ಎಲ್ಲೂ ಹೊರಳಿಸಕೂಡದು;
ಅವಳು ತನ್ನನ್ನೇ ಸದಾಕಾಲ ನೋಡುತ್ತಿರಬೇಕು ಎನ್ನುವದು ಈ ಗಂಡನ ಅಭಿಲಾಶೆ.
ಹಾಗೆಂದು ಇದರಲ್ಲಿ ಆತನ ಬಲವಂತಿಕೆಯೇನಿಲ್ಲ.
ಅವನ ಆಟಕ್ಕೆ ಇವಳೇ ಮರುಳಾಗಿದ್ದಾಳೆ.

ನೆದರೆತ್ತಿ ಮ್ಯಾಲಕ
ನೋಡಗೊಡದೇ ಹತ್ತು ದಿಕ್ಕುಗಳಾ
ಮಾಡಿದನೆ ಮರುಳಾ||

ಪರಮಾತ್ಮನ ಜೊತೆಗಿನ ಸಂಸಾರದ ಸುಖವನ್ನು ಶರೀಫರು ಹೀಗೆ ಬಣ್ಣಿಸುತ್ತಾರೆ:

ತೆಕ್ಕೆಯೊಳು ಬಿಗಿದಪ್ಪಿ ಸುರತಾ-
ನಂದಸುಖ ತಾಂಬೂಲ ರಸಗುಟ-
ಗಿಕ್ಕಿ ಅಕ್ಕರತಿಯಲಿ ನಗುವನು ತಾ
ಬಹು ಸುಗುಣನೀತಾ ||

ಈ ಸಾಲುಗಳು ಆಧ್ಯಾತ್ಮಿಕ ಅನುಭವವನ್ನು ಸೂಚಿಸುತ್ತಿದ್ದು, ಅವುಗಳ ಅರ್ಥ ಆಧ್ಯಾತ್ಮಸಿದ್ಧಿ ಪಡೆದವನಿಗೆ ಮಾತ್ರ ಗೊತ್ತಾದೀತು.
(ಬಲ್ಲವನೇ ಬಲ್ಲ ಬೆಲ್ಲದ ಸವಿಯ!)
ಪರಮಾತ್ಮನು ತನ್ನ ಸಾಮರಸ್ಯದ ಸುಖವನ್ನು ಕೊಡುವದಲ್ಲದೇ, ತಾನು ಜಗಿದ ತಾಂಬೂಲದ ರಸದ ಗುಟುಕನ್ನು ಶರೀಫರ ಬಾಯಿಯಲ್ಲಿ ಅಕ್ಕರತೆಯಿಂದ ಇಡುತ್ತಿದ್ದಾನೆ.
ಅಂದರೆ ಪರಮಾತ್ಮನು ಪ್ರೇಮವನ್ನಲ್ಲದೆ, ಪೋಷಣೆಯನ್ನೂ(=ಜ್ಞಾನವನ್ನೂ) ಸಹ ನೀಡುವನು.
ಅಕ್ಕರತಿಯಿಂದ ಎನ್ನುವ ವಿಶೇಷಣವನ್ನು ಗಮನಿಸಿರಿ.
ಇದು ಗಂಡ ಹೆಂಡತಿಯ ಪ್ರೇಮಕ್ಕಿಂತ ಹೆಚ್ಚಾಗಿ ಪೋಷಕ-ಪೋಷಿತ ಭಾವವನ್ನು ತೋರಿಸುವದು.
ಆದುದರಿಂದ ಶರೀಫರು ಪರಮಾತ್ಮನಿಗೆ ‘ಬಹು ಸುಗುಣನೀತಾ’ ಎಂದು ಕರೆದಿದ್ದಾರೆ.

ಹೆಂಡತಿಗೆ ಅಚ್ಛಚ್ಛೆ ಮಾಡಿದರೆ ಸಾಕೆ?
ಈ ಚಿಕ್ಕ ಹುಡುಗಿಗೆ ಒಳ್ಳೆಯ ರೀತಿಯಲ್ಲಿ ಬದುಕು ಮಾಡುವದನ್ನು ಕಲಿಸಬೇಡವೆ?
ಪರಮಾತ್ಮನು ಶರೀಫರು ಎನ್ನುವ ತನ್ನ ಹೊಸ ವಧುವಿಗೆ ಯಾವ ರೀತಿಯಲ್ಲಿ ಶಿಕ್ಷಣ ನೀಡಿದನೆನ್ನುವದನ್ನು ನೋಡಿರಿ:

ತುಂಟನಿವ ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟಗಳ್ಳರ ಮನೆಗೆ ಬರಗೊಡದಾ
ಹದಿನೆಂಟು ಮಂದಿ
ಕುಂಟಲಿಯರ ಹಾದಿಯನು ಕಡಿದಾ
ಎನ್ನ ಕರವ ಪಿಡಿದಾ
ಕುಂಟಕುರುಡಾರೆಂಟು ಮಂದಿ
ಗಂಟು ಬಿದ್ದರೆ ಅವರ ಕಾಣುತ
ಗಂಟಲಕೆ ಗಾಣಾದನೇಳಕ್ಕಾ
ತಕ್ಕವನೆ ಸಿಕ್ಕಾ ||

ಪರಮಾತ್ಮನೇನೊ ಈ ಚಿಕ್ಕ ಹೆಂಡತಿಗೆ ಮನೆಯ ಮಾಡಿ ಕೊಟ್ಟ.
ಗಂಡನಿಲ್ಲದ ವೇಳೆ ಈಕೆ ಮನೆಯ ಹೊರಗೆ ಹೋಗಬಹುದಲ್ಲವೆ?
ಸರಿ, ಹೊರಗೆ ಹೋಗದಂತೆ ಅವಳ ಸೊಂಟವನ್ನೆ ಮುರಿದು ಬಿಟ್ಟ.
ಅವಳು ಹೋಗದಿದ್ದರೇನು?
ಅವಳನ್ನು ಭೆಟ್ಟಿಯಾಗಲು, ಸಮಯಸಾಧಕರು ಮನೆಯ ಒಳಗೆ ಬರಬಹುದಲ್ಲವೆ?
ಅದುದರಿಂದ ಈ ಚಿಕ್ಕ ಹುಡುಗಿಯ ಎದುರಿಗೆ ಪಂಟು ಮಾತನ್ನಾಡಿ(=bogus talk) ಇವಳನ್ನು ಹಾದಿ ತಪ್ಪಿಸುವವರು ಬರದಂತೆ ಆತ ವ್ಯವಸ್ಥೆ ಮಾಡಿದ.
(ಅಂದರೆ ಕ್ಷುದ್ರಸಾಧನೆಗಳು ಸಿಗದಂತೆ ಮಾಡಿದ.)
ಅದರಂತೆ ಗಂಟುಗಳ್ಳರು ಮನೆಗೆ ಬರದಂತೆ ಮಾಡಿದ.
ಈ ಚಿಕ್ಕ ಹುಡುಗಿ ತನ್ನ ಸಾಧನೆಯ ಮೂಲಕ ಒಂದಿಷ್ಟು ದುಡ್ಡನ್ನು (=ಸಾಧನಾಫಲವನ್ನು) ಜತನ ಮಾಡಿ ಇಟ್ಟುಕೊಂಡಿದ್ದಾಳೆ.
ಇವಳಿಗೆ ಏನೇನೊ ಕೊಡಿಸುವ ಆಸೆ ಹುಟ್ಟಿಸಿ, ಇವಳು ಕೂಡಿಸಿಟ್ಟುಕೊಂಡ ದುಡ್ಡನ್ನು ಹೊಡೆಯುವ ಗಂಟುಗಳ್ಳರು ದೂರವಿರುವಂತೆ ಆತ ವ್ಯವಸ್ಥೆ ಮಾಡಿದ.
ಈ ಪಂಟು ಮಾತಿನವರು ಹಾಗೂ ಗಂಟುಗಳ್ಳರು ಸಣ್ಣಪುಟ್ಟ ಕಳ್ಳರು.
ಆದರೆ ೧೮ ಜನ ಕುಂಟಲಗಿತ್ತಿಯರು (ಅಂದರೆ ಗಿರಾಕಿಗಳನ್ನು ಹೊಂದಿಸಿಕೊಡುವ pimp ಹೆಂಗಸರು) ಗಂಟು ಬಿದ್ದರೆ ಏನು ಮಾಡುವದು?

(ಟಿಪ್ಪಣಿ:
ಶ್ರೀಚಕ್ರಕ್ಕೆ ೯ ಆವರಣಗಳಿವೆ. ಮೊದಲನೆಯ ಆವರಣದಲ್ಲಿ ಅಂದರೆ ಭೂಪುರದಲ್ಲಿ ಅಣಿಮಾ, ಲಘಿಮಾ ಮೊದಲಾದ ೧೮ ಸಿದ್ಧಿಗಳು ಇರುತ್ತವೆ. ಈ ಚಕ್ರದಲ್ಲಿ ಸಿದ್ಧಿ ಪಡೆದವನಿಗೆ ಅಣಿಮಾ ಅಂದರೆ ಅತಿ ಸೂಕ್ಷ್ಮವಾಗುವ, ಲಘಿಮಾ ಅಂದರೆ ಭಾರವಿಲ್ಲದಂತಾಗುವ ಮೊದಲಾದ ಸಿದ್ಧಿಗಳು ಸಾಧಿಸುತ್ತವೆ.
ಈ ಸಿದ್ಧಿಗಳಲ್ಲಿಯೇ ಮೋಜು ಅನುಭವಿಸುತ್ತ ಕುಳಿತರೆ, ಮುಂದಿನ ಸಾಧನೆಗೆ ವ್ಯತ್ಯಯವಾಗುವದು.
ಈ ಸಿದ್ಧಿಗಳನ್ನು ಶರೀಫರು ಕುಂಟಲಗಿತ್ತಿಯರು ಎಂದು ಕರೆಯುತ್ತಾರೆ.
ಈ ಸಿದ್ಧಿಗಳು ಸಾಧಕನ ಮನಸ್ಸನ್ನು ಪರಮಾತ್ಮನಿಂದ ಬೇರೆಡೆಗೆ ಸೆಳೆಯುವವು.)

ಆದುದರಿಂದ ಈ ಸಿದ್ಧಿಗಳು ಶರೀಫರಿಗೆ ಲಭಿಸದಂತೆ ಮಾಡಿ, ಪರಮಾತ್ಮನು ತನ್ನ ಚಿಕ್ಕ ಪತ್ನಿಯಾದ ಶರೀಫರನ್ನು ರಕ್ಷಿಸಿದ.
ಅದಕ್ಕಾಗಿಯೇ ಶರೀಫರು “ಎನ್ನ ಕರವ ಪಿಡಿದಾ” ಎಂದು ಪ್ರೀತಿಯಿಂದ ಪರಮಾತ್ಮನನ್ನು ನೆನಸುತ್ತಾರೆ.
ಆತ ಇವಳ ಕರ ಪಿಡಿದದ್ದು ಇವಳಿಗೆ ಅವಲಂಬನ ಕೊಟ್ಟು ಇವಳನ್ನು ಮುನ್ನಡೆಸಲಿಕ್ಕಾಗಿ.

ಈ ಎಲ್ಲ ಸಿದ್ಧಿಗಳು ಸ್ವತಃ ಕುಂಟ ಹಾಗೂ ಕುರುಡರಿದ್ದಂತೆ.
ಅವು ಸಾಧಕನನ್ನು ಸಾಧನೆಯ ಮಾರ್ಗದಲ್ಲಿ ನಡೆಸಲಾರವು.
ಆದುದರಿಂದ ಈ ಸಿದ್ಧಿಗಳಿಗೆ ಆತ ಗಂಟಲಗಾಣನಾದ.
ಅಂದ ಮೇಲೆ, ಶರೀಫರಿಗೆ ತನ್ನ ಗಂಡನ ಮೇಲೆ ಅಭಿಮಾನಪೂರ್ವಕ ಪ್ರೇಮ ಉಕ್ಕದಿದ್ದೀತೆ?
ಆ ಸಂತೋಷ ಭಾವದಲ್ಲಿಯೇ ಶರೀಫರು ಹಾಡುತ್ತಾರೆ:
“ತಕ್ಕವನೆ ಸಿಕ್ಕಾ” !

ತವರು ಮನೆಯನ್ನು ಬಿಡಿಸಿ, ಅತ್ತೆಯ ಮನೆಗೆ ಕರೆತಂದ ಈ ಗಂಡ ಈಗ ಅತ್ತೆಮಾವರ ಮನೆಯನ್ನೂ ಸಹ ಬಿಡಿಸುತ್ತಿದ್ದಾನೆ.

ಅತ್ತೆಮಾವರ ಮನೆಯ ಬಿಡಿಸಿದನೇ
ಮತ್ತೆಲ್ಲಿ ಮೂವರ
ಮಕ್ಕಳೈವರು ಮಮತೆಯ ಕೆಡಿಸಿದನೇ

ತವರುಮನೆಯೆಂದರೆ ವಿಷಯ ಸುಖಗಳ ಮನೆಯಾಯಿತು. ಈ ಅತ್ತೆಮಾವರ ಮನೆ ಯಾವುದು?
ಸತ್ ಹಾಗೂ ಅಸತ್ ಇವು ದೇವರ ಎರಡು ಸೃಷ್ಟಿಗಳು. ಅಸತ್ ಅಂದರೆ unreal. ಸತ್ ಅಂದರೆ real.
ಅಸತ್ ಅಥವಾ unreal ಸೃಷ್ಟಿಯು ಕಾಲಮಿತಿಗೆ ಒಳಪಟ್ಟದ್ದು.

“ನಾನು ಕೆಲ ವರ್ಷಗಳ ಹಿಂದೆ ಚಿಕ್ಕ ಹುಡುಗನಾಗಿದ್ದೆ. ಆದರೆ ಈಗ ನಾನು ಚಿಕ್ಕ ಹುಡುಗನಲ್ಲ.”
ಆದುದರಿಂದ ನಾನು ಹುಡುಗ ಎನ್ನುವದು ಕಾಲಮಿತಿಗೆ ಒಳಪಟ್ಟ reality.ನಾನು ಸತ್ತೂ ಹೋಗುವೆ.
ಆದುದರಿಂದ ಈ ದೇಹವು ಕಾಲಮಿತಿಗೆ ಒಳಪಟ್ಟ reality. ಇದು ಅಸತ್ ಸೃಷ್ಟಿ.

ಆದರೆ ಆತ್ಮ ಎನ್ನುವದು ಯಾವಾಗಲೂ ಇರುವಂತಹದು.
ಆದುದರಿಂದ ಅದು ಸತ್ ಸೃಷ್ಟಿ.
ಆತ್ಮನಿಗೆ ಪುರುಷ ಎನ್ನುತ್ತಾರೆ.
(ಪುರುಷ ಅಂದರೆ ಗಂಡಸು ಅನ್ನುವ ಅರ್ಥ ಇಲ್ಲಿಲ್ಲ. ಪುರುಷ ಅಂದರೆ ಉಪಭೋಕ್ತಾ ಆತ್ಮ.)
ಪ್ರಕೃತಿ ಅಂದರೆ ಬದಲಾಗುತ್ತಿರುವ ಅಸತ್ ಸೃಷ್ಟಿ.
ಅಸತ್ ಸೃಷ್ಟಿಯು ಈ ಜೀವಿ ಇಳಿದು ಬಂದಿರುವ ತವರುಮನೆ.
ಅಲ್ಲಿಂದ ಈ ಜೀವಿ ದೈವಿ ಭಾವವೇ ನಿತ್ಯವಾಗಿರುವ ಸತ್ ಸೃಷ್ಟಿಗೆ ಪ್ರವೇಶಿಸುತ್ತದೆ.
ಈ ಸೃಷ್ಟಿಯು ಸತ್ ಸೃಷ್ಟಿಯೇ ಆಗಿರಲಿ, ನಿತ್ಯ ಸೃಷ್ಟಿಯೇ ಆಗಿರಲಿ, ಆದರೆ ಇದೂ ಸಹ ಆತ್ಮನ ಕೊನೆಯ ನಿಲ್ದಾಣ ಅಲ್ಲ.
ಪರಮಾತ್ಮನೊಳಗೆ ಒಂದಾಗುವದೇ ಜೀವಾತ್ಮನ ಕೊನೆಯ ಗತಿ.
ಆದುದರಿಂದ ಆತ ಜೀವಾತ್ಮನ ಮೂರು ವಾಸನಾಶರೀರಗಳಾದ ಸ್ಥೂಲ, ಸೂಕ್ಷ್ಮ ಹಾಗೂ ಕಾರಣ ಶರೀರಗಳನ್ನು ನಾಶ ಪಡಿಸುತ್ತಾನೆ. ಆ ಶರೀರಗಳ ಸಂಯೋಜಕರಾದ ಐದು ಕೋಶಗಳನ್ನು (ಅನ್ನಮಯ ಕೋಶ, ಪ್ರಾಣಮಯ ಕೋಶ, ಜ್ಞಾನಮಯ ಕೋಶ, ವಿಜ್ಞಾನಮಯ ಕೋಶ, ಆನಂದಮಯ ಕೋಶಗಳನ್ನು) ದೂರಪಡಿಸುತ್ತಾನೆ. ಬಳಿಕ ತನ್ನ ಭಕ್ತನನ್ನು ವಿದೇಹಿಯನ್ನಾಗಿ ಮಾಡಿ ತನ್ನ ಸಾನ್ನಿಧ್ಯಕ್ಕೆ ಕರೆದೊಯ್ಯುತ್ತಾನೆ.
ಅಲ್ಲಿ ದೇಹನಾಶವಾಗಿ ಕೇವಲ ಭಾವ ಮಾತ್ರ ಉಳಿದುಕೊಳ್ಳುತ್ತದೆ.
ಅದನ್ನು ಶರೀಫರು ಹೀಗೆ ವರ್ಣಿಸುತ್ತಾರೆ:

ಎನ್ನನು ತಂದು
ರತ್ನಜ್ಯೋತಿಯ ಪ್ರಭೆಯೊಳಿರಿಸಿದನೇ
ಎನಗೊತ್ತಿನವನು
ಎತ್ತ ಹೋಗದೆ ಚಿತ್ತವಗಲದೆ
ಗೊತ್ತಿನಲಿ ಇಟ್ಟು ಎನ್ನನು
ಮುತ್ತಿನಾ ಮೂಗುತಿಯ ಕೊಟ್ಟಾನೇ
ಅವನೇನು ದಿಟ್ಟನೇ ||

ಶಿವನು ಪ್ರಭೆಯ ಮೂಲ; ಶಕ್ತಿಯೇ ಪ್ರಭೆ.
ಪರಮಾತ್ಮನು ಶರೀಫರನ್ನು ಈಗ ಸತ್ ಲೋಕದಿಂದ ಮೇಲಕ್ಕೆ ಎತ್ತಿ ಪ್ರಭಾಲೋಕದಲ್ಲಿ ಇರಿಸುತ್ತಾನೆ.
ಈ ಲೋಕದಲ್ಲಿ ಪರಮಾತ್ಮನು ಶರೀಫರಿಗೆ ‘ಎನಗೊತ್ತಿನವನು’.
‘ಎನಗೊತ್ತಿನವನು’ ಎನ್ನುವ ಪದ ಅತ್ಯಂತ ಅನ್ಯೋನ್ಯತೆಯನ್ನು ಹಾಗು ವಿಶ್ವಾಸವನ್ನು ಸೂಚಿಸುವ ಪದ.
ಈ ಪದವು ಎನಗೆ ಗೊತ್ತಿನವನು ಹಾಗೂ ಎನಗೆ ಒತ್ತಿನವನು ಎನ್ನುವ ಎರಡೂ ಅರ್ಥಗಳನ್ನು ಸೂಚಿಸುತ್ತದೆ. ಎನಗೆ ಗೊತ್ತಿನವನು ಅಂದರೆ ನಾನು ಅವನನ್ನು ಸಂಪೂರ್ಣವಾಗಿ ಬಲ್ಲೆ ಎಂದು ಹೇಳಿದಂತೆ. ಎನಗೆ ಒತ್ತಿನವನು ಎಂದರೆ ನನಗೆ ಅತ್ಯಂತ ಹತ್ತಿರವಾದವನು ಎಂದು ಹೇಳಿದಂತೆ.

ಈ ಪ್ರಭಾಲೋಕದಲ್ಲಿ ಶರೀಫರ ಮನಸ್ಸು ಬೇರೆಲ್ಲೂ ಹೋಗದು; ಪರಮಾತ್ಮನನ್ನು ಒಂದು ಗಳಿಗೆ ಸಹ ಅಗಲಿ ಇರದು. ಪರಮಾತ್ಮನು ಶರೀಫರನ್ನು ತನ್ನ ಸಾನ್ನಿಧ್ಯದಲ್ಲಿಯೆ (=ಗೊತ್ತಿನಲ್ಲಿಯೆ) ಇಟ್ಟುಕೊಂಡು, ಅವರಿಗೆ ಮುತ್ತಿನ ಮೂಗುತಿಯ ಕೊಟ್ಟನು. ಅಂದರೆ ಶರೀಫರು ಈಗ ಪರಮ ಪತಿವ್ರತೆ ಎಂದು ಹೇಳಿದಂತಾಯಿತು.ತನ್ನನ್ನು ಇಷ್ಟೆಲ್ಲ ತಿದ್ದಿ ಇಂತಹ ಪತಿವ್ರತೆ ಹೆಂಡತಿಯನ್ನಾಗಿ ಮಾಡಿಕೊಂಡ ಪರಮಾತ್ಮನನ್ನು ಶರೀಫರು ‘ಅವನೇನು ದಿಟ್ಟನೇ’ ಎಂದು ಬಣ್ಣಿಸುತ್ತಾರೆ

ಶರೀಫರು ಈ ಪದವಿಯನ್ನು ಪಡೆಯುವ ಯೋಗ್ಯತೆಯುಳ್ಳ ಇತರ ಭಕ್ತರನ್ನು, ತನ್ನ ಸಖಿಯರೆಂದು ಗ್ರಹಿಸಿ ಹೀಗೆ
ಹೇಳುತ್ತಾರೆ:

ಕಾಂತೆ ಕೇಳೆ ಕರುಣ ಗುಣದಿಂದ
ಎನಗಿಂಥ ಪುರುಷನು
ಬಂದು ದೊರಕಿದ ಪುಣ್ಯಫಲದಿಂದಾ
ಎನ್ನಂತರಂಗದ
ಕಾಂತ ಶ್ರೀ ಗುರುನಾಥ ಗೋವಿಂದಾ
ಶಿಶುನಾಳದಿಂದ
ಕಾಂತೆ ಬಾರೆಂತೆಂದು ಕರೆದೇ-
ಕಾಂತ ಮಂದಿರದೊಳಗೆ ಒಯ್ದು
ಭ್ರಾಂತಿ ಭವ ದುರಿತವನು ಪರಿಹರಿಸಿ
ಚಿಂತೆಯನು ಮರಸಿ ||

ತಮ್ಮ ಈ ಸಿದ್ಧಿಗೆ ತಮ್ಮ ಪೂರ್ವಪುಣ್ಯವು ಎಷ್ಟು ಕಾರಣವೋ, ಪರಮಾತ್ಮನ ಕರುಣೆಯೂ ಅಷ್ಟೇ ಕಾರಣವೆಂದು
ಶರೀಫರು ಹೇಳುತ್ತಾರೆ.
ಪರಮಾತ್ಮ ಬೇರೆ ಅಲ್ಲ, ಸದ್ಗುರು ಬೇರೆ ಅಲ್ಲ.
ಆತ ಕಾಲ ಕೂಡಿದಾಗ, ಭಕ್ತನನ್ನು ತಾನಾಗಿಯೇ ಏಕಾಂತ ಮಂದಿರದಲ್ಲಿ ಕರೆದೊಯ್ದು (---ಗುರುವು ಉಪದೇಶವನ್ನು ಏಕಾಂತದಲ್ಲಿ ಕೊಡುತ್ತಾನೆ---) ಸದ್ಗತಿಗೆ ಹಚ್ಚುತ್ತಾನೆ.
ಅದರಿಂದಾಗಿ ಭಕ್ತನ ಭ್ರಾಂತಿ ಹಾಗೂ ಈ ಜಗದ ದುರಿತ ಪರಿಹಾರವಾಗುತ್ತವೆ.
ಸದ್ಗತಿಯನ್ನು ಹೇಗೆ ಪಡೆದೇನು ಎನ್ನುವ ಭಕ್ತನ ಚಿಂತೆ ಮಾಯವಾಗುತ್ತದೆ.
…………………………………………………………………………………
ಕನ್ನಡ ನಾಡಿನಲ್ಲಿ ಓಡಾಡಿ, ಹಳ್ಳಿಯ ಕನ್ನಡದಲ್ಲಿಯೆ ಮಹತ್ತತ್ವ ಸಾರಿದ ಶರೀಫರ ಬೋಧನೆ ನಮ್ಮನ್ನೂ ಸದ್ಗತಿಗೆ ಹಚ್ಚಲಿ.

(ಟಿಪ್ಪಣಿ:
ಖ್ಯಾತ ಓಡಿಸ್ಸಿ ನರ್ತನ ವಿದುಷಿಯಾದ ಸಂಯುಕ್ತಾ ಪಾಣಿಗ್ರಾಹಿಯವರು ಬೆಂಗಳೂರಿನಲ್ಲಿ ಕೇಳಿದ ಒಂದು ಪ್ರಶ್ನೆಯನ್ನು ಇಲ್ಲಿ ಉದ್ಧರಿಸುವದು ಅಪ್ರಸ್ತುತವಾಗಲಾರದು:
“ ಎಲ್ಲಾ ಕಲೆಗಳಲ್ಲಿ ಪರಮಾತ್ಮನನ್ನು ಪತಿಗೆ ಹಾಗೂ ಭಕ್ತನನ್ನು ಸತಿಗೆ ಏಕೆ ಹೋಲಿಸುತ್ತಾರೆ; ಪರಮಾತ್ಮನನ್ನು ಪತ್ನಿಗೆ ಹಾಗೂ ಭಕ್ತನನ್ನು ಪತಿಗೆ ಏಕೆ ಹೋಲಿಸಬಾರದು? ”

ಇದಕ್ಕೆ ಉತ್ತರ ಸ್ಪಷ್ಟವಿದೆ:
ದುರ್ದೈವದಿಂದ ನಮ್ಮದು ಪುರುಷ ಪ್ರಧಾನ ಸಮಾಜ ಹಾಗೂ ಪಿತೃಪ್ರಧಾನ ಕುಟುಂಬ ವ್ಯವಸ್ಥೆ.
ಇಂತಹ ಸಮಾಜವ್ಯವಸ್ಥೆಯಲ್ಲಿ, ಗಂಡಸಿನದು super ordinate ಸ್ಥಾನ ಹಾಗೂ ಹೆಣ್ಣಿನದು
sub ordinate ಸ್ಥಾನ.
ಸಂಸ್ಕೃತದಲ್ಲಿ ಪತ್ನಿಗೆ ‘ಭಾರ್ಯಾ’ ಹಾಗೂ ಪತಿಗೆ ‘ಭರ್ತಾ’ ಎನ್ನುವ ಪದಗಳಿರುವದನ್ನು ಗಮನಿಸಿರಿ.
‘ಭಾರ’ ಅಂದರೆ load, ಒಜ್ಜೆ.
ಭರ್ತಾ ಅಂದರೆ ಒಜ್ಜೆ ಹೊರುವವನು. ಭಾರ್ಯಾ ಅಂದರೆ ಹೊರಬೇಕಾದ ಒಜ್ಜೆ.
ಸುಮಾರು ಎರಡು ಶತಮಾನಗಳ ಹಿಂದಿನ ಇಂತಹ ಒಂದು ಸಾಂಪ್ರದಾಯಕ ಸಮಾಜದಲ್ಲಿ ಬಾಳಿದ ಸಂತರು, ಆ ಸಮಾಜದ ಗುಣ,ಲಕ್ಷಣಗಳನ್ನು ಅಳವಡಿಸಿಕೊಂಡಿರುವ ಕವಿಗಳು, ಭಗವಂತನನ್ನು ಭರ್ತಾ(=ಪಾಲಕ) ಎಂದು ತಿಳಿದವರು, ತಮ್ಮನ್ನು ಭಾರ್ಯಾ ಎಂದೇ ಭಾವಿಸಬೇಕಲ್ಲವೆ?

ಭಾರತದಲ್ಲಿ ಮಾತ್ರ ಇಂತಹ conservative society ಇತ್ತು ಎಂದೇನಲ್ಲ.
ಸುಮಾರು ನೂರು ವರ್ಷಗಳ ಹಿಂದಿನ ಇಂಗ್ಲಿಶ್ ಲೇಖಕಿಯರನ್ನೇ ಗಮನಿಸಿರಿ.
ಅವರೆಲ್ಲರೂ male supremacyಯನ್ನು ಮನಃಪೂರ್ವಕವಾಗಿ ಒಪ್ಪಿಕೊಂಡವರೇ!
ಉದಾಹರಣೆಗೆ ಹೇಳಬೇಕೆಂದರೆ ಸುಪ್ರಸಿದ್ಧ ಇಂಗ್ಲಿಶ್ ಲೇಖಕಿಯಾದ Daphne du Maurier.
ಇವಳು ಬರೆದ Frenchman’s Creek ಕಾದಂಬರಿಯು ಈ ಧೋರಣೆಯ ಜ್ವಲಂತ ಉದಾಹರಣೆಯಾಗಿದೆ.

ಇಂತಹ ಒಂದು ಪರಿಸ್ಥಿತಿಗೆ ಕಾರಣವೇನು?
ಗಂಡಸು ಹೆಂಗಸಿಗೆ ಯಾವತ್ತು ಬಳೆ(=ಬೇಡಿ) ತೊಡಿಸಿದನೊ, ಆ ದಿನದಿಂದ ಹೆಂಗಸರ social conditioning ಪ್ರಾರಂಭವಾಯಿತು.
ಸೆರೆಯಾಳುಗಳು ತಮ್ಮನ್ನು ಸೆರೆ ಹಿಡಿದವರನ್ನೇ ಆರಾಧಿಸುವ Stockholm Complexಗೆ ಹೆಂಗಸರು ಬಲಿಯಾದರು.

ಈ ಲಕ್ಷಣವನ್ನು ಮೈಗೂಡಿಸಿಕೊಂಡಂತಹ ಒಂದು ಕಾದಂಬರಿ: Frenchman’s Creek;
ಈ ಸಾಮಾಜಿಕ ಲಕ್ಷಣವನ್ನು ಪ್ರದರ್ಶಿಸುವಂತಹ ಆಧ್ಯಾತ್ಮಿಕ ಕವನ: ಎಲ್ಲರಂಥವನಲ್ಲ ನನ ಗಂಡ.

Tuesday, November 18, 2008

ತರವಲ್ಲ ತಗಿ ನಿನ್ನ ತಂಬೂರಿ

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||

ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ
ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ ||೧||

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ ||೨||

ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ ||೩||

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ ||೪||

ಕನ್ನಡ ಕವಿಗಳು ಸುಸಂಯೋಜಿತ, ಸಮರಸಪೂರ್ಣ ಬದುಕನ್ನು ವರ್ಣಿಸಲು ತಂಬೂರಿಯ ಪ್ರತಿಮೆಯನ್ನು ಬಳಸುತ್ತಲೇ ಬಂದಿದ್ದಾರೆ.
ಶರೀಫರು ತಂಬೂರಿಯ ಪ್ರತಿಮೆಯನ್ನು ಸಾಧಕನ ಮನಸ್ಸಿಗೆ ಹೋಲಿಸಿ ಹಾಡಿದ್ದಾರೆ.

ತರವಲ್ಲ ತಗಿ ನಿನ್ನ ತಂಬೂರಿ
ಸ್ವರ ಬರದೆ ಬಾರಿಸದಿರು ತಂಬೂರಿ ||ಪಲ್ಲ||
ಸರಸ ಸಂಗೀತದ ಕುರುಹುಗಳನರಿಯದೆ
ಬರದೆ ಬಾರಿಸದಿರು ತಂಬೂರಿ ||ಅ.ಪ.||

ದೇವರನ್ನು ಮನಸ್ಸಿನಲ್ಲಿ ತುಂಬಿಕೊಂಡು, ತನ್ನ ಬಾಳನ್ನು ದೇವರಿಗೆ ಅರ್ಪಿಸಿ ಬದುಕುವದೇ ನಿಜವಾದ ಸಾಧನೆ.
ಈ ರೀತಿಯಾಗಿ ಮಾಡಲು ಅರಿಯದವನು, ದೇವರು ಕೊಟ್ಟ ತಂಬೂರಿಯನ್ನು ಸರಿಯಾಗಿ, ಸುಸ್ವರದಲ್ಲಿ ಬಾರಿಸುತ್ತಿಲ್ಲ; ಆತನಿಗೆ ಸರಸ ಸಂಗೀತದ ಕುರುಹೇ ಗೊತ್ತಿಲ್ಲ! ಅವನು ತನ್ನ ಮನಸ್ಸೆಂಬ ತಂಬೂರಿಯನ್ನು ಅಪಸ್ವರದಲ್ಲಿ ಬಾರಿಸುತ್ತಾನೆ. ಅಂಥವನು ಸಾಧನೆಯಿಂದ ತನ್ನ ಮನಸ್ಸು ಪಕ್ವವಾಗುವ ತನಕ ಕಾಯಬೇಕು.

ಚಾಮರಸ ಕವಿ ಬರೆದ “ಪ್ರಭುಲಿಂಗ ಲೀಲೆ”ಯಿಂದ ತುಂಬಾ ಪ್ರಭಾವಿತರಾದ ಶರೀಫರು ತಮ್ಮ ಕವನಗಳಲ್ಲಿ ಮದ್ದಲೆಯ ಪ್ರತಿಮೆಯನ್ನು ಬಳಸಿದಾಗೆಲ್ಲ, ಆ ಮದ್ದಲೆಯನ್ನು ಬಾರಿಸುವವನು ಸ್ವತಃ ಪ್ರಭುವೇ ಎನ್ನುವ ಭಾವವನ್ನು ತಾಳಿರುತ್ತಾರೆ. ಆ ಕಾರಣದಿಂದಲೇ ಅವರು,
“ಮದ್ದಲಿ ದನಿಯೊಳು ತಂಬೂರಿ ಅದ
ತಿದ್ದಿ ನುಡಿಸಬೇಕು ತಂಬೂರಿ”
ಎಂದು ಹೇಳುವಾಗ, ಸ್ವತಃ ಭಗವಂತನೇ, ಈ ಬಾಳಿನ ಯೋಜನೆಯನ್ನು ರೂಪಿಸಿದವನು;ಆತ ಬಾರಿಸುತ್ತಿರುವ ಮದ್ದಲೆಗೆ ತಕ್ಕಂತೆ ನಾವು ತಂಬೂರಿಯನ್ನು ನುಡಿಸಬೇಕು ಎಂದು ಅಭಿಪ್ರಾಯ ಪಡುತ್ತಾರೆ.
“ಸಿದ್ಧ ಸಾಧಕರ ಸುವಿದ್ಯೆಗೆ ಒದಗುವ
ಬುದ್ಧಿವಂತಗೆ ತಕ್ಕ ತಂಬೂರಿ”
ಈ ರೀತಿಯಾಗಿ ಸಾಧಕನು ತನ್ನ ಮನಸ್ಸಿನ ತಂಬೂರಿಯನ್ನು ದೇವನ ಮದ್ದಲೆಗೆ ಹೊಂದಿಸಿಕೊಂಡರೆ, ಆತ ಸಿದ್ಧ ಸಾಧಕನಾಗುತ್ತಾನೆ, ಬುದ್ಧಿವಂತನಾಗುತ್ತಾನೆ.

ಶರೀಫರು ಶಾಕ್ತ ಪಂಥದ ಸಾಧಕರು. ಈ ಪಂಥದಲ್ಲಿ “ವಿದ್ಯೆ” ಎಂದರೆ ಶಾಕ್ತವಿದ್ಯೆ.
ಈ ವಿದ್ಯೆಯನ್ನು ಸಾಧಿಸಿದವನಿಗೆ ಅನೇಕ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುವವು.
ಇಂತಹ ಸಿದ್ಧಿಗಳು ಶರೀಫರ ಸಮಕಾಲೀನರಾದ ನವಲಗುಂದದ ನಾಗಲಿಂಗ ಸ್ವಾಮಿಗಳಿಗೆ, ಗರಗದ ಮಡಿವಾಳಪ್ಪನವರಿಗೆ ಪ್ರಾಪ್ತವಾಗಿದ್ದವು.
ಶರೀಫರಿಗೆ ಬಹುಶಃ ಇಂತಹ ಸಿದ್ಧಿಗಳು ದೊರೆತಿರಲಿಕ್ಕಿಲ್ಲ. ಅವರ ಕವನ ಒಂದರಲ್ಲಿ ಇದರ ಸೂಚನೆ ದೊರೆಯುತ್ತದೆ:

“ಎಲ್ಲರಂಥವನಲ್ಲ ನನಗಂಡಾ
ಬಲ್ಲಿದನು ಪುಂಡಾ
.........
…………………..
ಸೊಂಟಮುರಿ ಹೊಡೆದಾ
ಒಣ ಪಂಟುಮಾತಿನ
ಗಂಟುಗಳ್ಳರ ಮನೆಗೆ ಬರಗೊಡದಾ”

ಆದುದರಿಂದ ಬುದ್ಧಿವಂತನಾದವನು, ಈ ಸಿದ್ಧಿಗಳನ್ನು ಮೋಜಿಗಾಗಿ ಅಥವಾ ಸ್ವಾರ್ಥಕ್ಕಾಗಿ ಬಳಸದೆ, ಆತ್ಮೋನ್ನತಿಗಾಗಿ ಬಳಸಬೇಕು.

ಬಾಳ ಬಲ್ಲವರಿಗೆ ತಂಬೂರಿ ದೇವ-
ಬಾಳಾಕ್ಷ ರಚಿಸಿದ ತಂಬೂರಿ
ಹೇಳಲಿ ಏನಿದರ ಹಂಚಿಕೆ ಅರಿಯದ
ತಾಳಗೇಡಿಗೆ ಸಲ್ಲ ತಂಬೂರಿ

ಈ ತಂಬೂರಿಯು ಬಾಳಾಕ್ಷದೇವನು ನಿರ್ಮಿಸಿದ ತಂಬೂರಿ. ಶರೀಫರು ಇಲ್ಲಿ pun ಉಪಯೋಗಿಸಿದ್ದಾರೆ. ಬಾಳಾಕ್ಷ ಅಂದರೆ ಭಾಲಾಕ್ಷ, ಅಂದರೆ ಶಿವ. ಇದು ನೇರವಾದ ಅರ್ಥ. ಒಳಗೆ ಹುದುಗಿದ ಅರ್ಥವೆಂದರೆ, ಬಾಳಿಗೆ ಅಕ್ಷನಾದ ಅಂದರೆ ಕಣ್ಣಾದ ದೇವನು. ಇದರ ಹಂಚಿಕೆಯನ್ನು ಅಂದರೆ ರಚನೆಯ ವಿಧಾನವನ್ನು, ಚಾತುರ್ಯವನ್ನು ತಿಳಿಯದೇ ಬಾರಿಸಲು ಹೊರಟವನು ತಾಳಗೇಡಿಯಾಗುತ್ತಾನೆ.

ಈ ಬಾಳು ದೇವನ ದೇಣಿಗೆ ಎನ್ನುವದನ್ನು ಅರಿತುಕೊಂಡು, ದೇವರು ನೀಡಿದ ಬುದ್ಧಿಶಕ್ತಿ, ಶ್ರದ್ಧೆ, ಭಕ್ತಿ ಇವುಗಳನ್ನು ಸಮರಸಗೊಳಿಸಿ, ಯಾವುದಕ್ಕೂ ಆಸೆಪಡದೆ ಬಾಳಿದರೆ, ಅದು ಸಮಂಜಸವಾದ ಬಾಳು.
ಇಂತಹ ಬಾಳಿನಲ್ಲಿ ಮಾತ್ರ ಬಾಳಾಕ್ಷ ಕೊಟ್ಟ ತಂಬೂರಿಯ ಸುನಾದ ಹೊರಡಲು ಸಾಧ್ಯ.

ಇಂತಹ ತಂಬೂರಿಯನ್ನು ಸತ್ಯವಂತರಿಗಲ್ಲದೆ ಬೇರೊಬ್ಬರಿಗೆ ನುಡಿಸಲು ಸಾಧ್ಯವಾದೀತೆ?
ಆದುದರಿಂದ ಉತ್ತಮರಿಗೆ ಮಾತ್ರ ಸರಿಯಾಗಿ ನುಡಿಸಲು ಸಾಧ್ಯವಾಗುವ ತಂಬೂರಿ ಇದು.

“ಸತ್ಯಶರಧಿಯೊಳು ತಂಬೂರಿ
ಉತ್ತಮರಾಡುವ ತಂಬೂರಿ
ಬತ್ತೀಸರಾಗದಿ ಬಗೆಯನರಿಯದಂಥ
ಕತ್ತೀಗಿನ್ಯಾತಕೆ ತಂಬೂರಿ”

ಬತ್ತೀಸ ರಾಗಗಳು ಅಂದರೆ ಶಾಸ್ತ್ರೀಯ ಸಂಗೀತದ ಮೂವತ್ತೆರಡು ಮೂಲರಾಗಗಳು.
ಈ ಎಲ್ಲ ರಾಗಗಳಲ್ಲಿ ಬಾರಿಸಲು ಪ್ರಯತ್ನಿಸಿದರೂ, ರಾಗದ ಬಗೆಯನ್ನು (=ಮನಸ್ಸು, ಲಕ್ಷಣ) ತಿಳಿಯದೆ, ಬಾರಿಸುವವನು ಕತ್ತೆ ಇದ್ದಂತೆ.

ಈ ತಂಬೂರಿಯು ಅಸಮ(=unequalled, matchless) ಸುಮೇಳದಲ್ಲಿ (=orchestra, harmony) ನುಡಿಸಬೇಕಾದ ತಂಬೂರಿ.
ಇದನ್ನು ಕುಶಲರೇ ನುಡಿಸಬಲ್ಲರು.
ಆ ಕೌಶಲ್ಯವನ್ನು ಪಡೆಯುವ ಬಗೆ ಹೇಗೆ?
ಶಿಶುನಾಳಧೀಶನಾದ ದೇವನಲ್ಲಿ ಮನಸ್ಸಿಟ್ಟು, ಅವನನ್ನೇ ಓದಿ, ಅವನನ್ನೇ ಅರಿತು, ಬಾಳನ್ನು ಹಸನಾದ(=clean) ರೀತಿಯಲ್ಲಿ ಬಾಳಿದರೆ, ಈ ತಂಬೂರಿ ಆ ಸಾಧಕನಿಗೆ ಕರಗತವಾಗುವದು.

ಅಸಮ ಸುಮ್ಯಾಳಕ ತಂಬೂರಿ
ಕುಶಲರಿಗೊಪ್ಪುವ ತಂಬೂರಿ
ಶಿಶುನಾಳಾಧೀಶನ ಓದು ಪುರಾಣದಿ
ಹಸನಾಗಿ ಬಾರಿಸೊ ತಂಬೂರಿ

(ಶರೀಫರು ಅಸಮ ಸುಮೇಳ ಎನ್ನುವಾಗ, ಒಂದು apparent ವಿರೋಧಾರ್ಥ ಬಳಸಿದ್ದಾರೆ:
ಅಸಮ ಸುಮೇಳ=Disharmonius orchestra)

ಹುಟ್ಟುತ್ತಲೆ, ಪ್ರತಿ ಜೀವಿಯೂ ಅಪಾರ ಸಾಧನೆ ಮಾಡಬಲ್ಲ ಮನಸ್ಸನ್ನು ದೇವರಿಂದ ಪಡೆಯುತ್ತಾನೆ.
ಅದು ದೇವರು ಆತನಿಗೆ ಕೊಟ್ಟ ತಂಬೂರಿ.
ಅದರಂತೆ ಈ ಬಾಳೂ ಸಹ ತಂಬೂರಿಯೆ.
ಬಾಳಿನ ಪ್ರತಿ ಕರ್ಮವೂ ಈ ತಂಬೂರಿಯನ್ನು ನುಡಿಸಿದಂತೆ.
ಬಾಳಿನಲ್ಲಿ ದೊರೆಯಬಹುದಾದ ಸಾಮರ್ಥ್ಯಗಳು ಹಾಗೂ ಸಿದ್ಧಿಗಳು ಈ ತಂಬೂರಿಯ ಭಾಗಗಳೇ.
ಇವೆಲ್ಲವನ್ನು ಸರಿಯಾಗಿ ಬಳಸಿ, ಪ್ರಭುವಿನ ಮದ್ದಲೆಗೆ ಸರಿಯಾಗಿ ತಂಬೂರಿ ನುಡಿಸಿದರೆ, ಸುಸ್ವರ ಹೊರಡುವದು.
ಈ ಸುಸ್ವರದಿಂದ ಮಹದಾನಂದ ದೊರೆಯುವದು.

ಅದರ ಬದಲಾಗಿ ತನ್ನ ಸಾಮರ್ಥ್ಯವನ್ನು ದುರುಪಯೋಗಿಸಿಕೊಂಡರೆ, ತಂಬೂರಿಯಲ್ಲಿ ಅಪಶ್ರುತಿ ಹೊರಡುವದು.
ಇದೇ ಶರೀಫರ ಸಂದೇಶ.

Saturday, November 8, 2008

ಸಾಚಾರ ಸಮಿತಿಯ ಒಡಕು ತಂಬೂರಿ

ಭಾರತೀಯ ಸಂಗೀತದಲ್ಲಿ ತಂಬೂರಿಗೆ ಮಹತ್ವದ ಸ್ಥಾನವಿದೆ. ಗಾಯಕನಿಗೆ ಸ್ವರ ಹೊಂದಿಸಿಕೊಳ್ಳಲು ತಂಬೂರಿ ಬೇಕೆ ಬೇಕು. ಇಂತಹ ತಂಬೂರಿಯಲ್ಲಿ ನಾಲ್ಕು ತಂತಿಗಳಿರುತ್ತವೆ. ತಂಬೂರಿಯಿಂದ ಸುಸ್ವರದ ಆಲಾಪ ಬರಬೇಕಾದರೆ, ಈ ನಾಲ್ಕೂ ತಂತಿಗಳಿಂದ ಮಧುರವಾದ ಒಂದೇ ಸ್ವರ ಬರಬೇಕು. ಹಾಗಿಲ್ಲದೆ, ಒಂದೊಂದು ತಂತಿಯಿಂದ ಒಂದೊಂದು ಸ್ವರ ಬಂದರೆ ಕರ್ಕಶ ಧ್ವನಿ ಕೇಳಿಸುವದು. ನಮ್ಮ ಭಾರತವೆನ್ನುವ ತಂಬೂರಿಗೆ ನಾಲ್ಕಲ್ಲ, ನೂರಾರು ತಂತಿಗಳಿವೆ. ಪ್ರತಿಯೊಂದು ತಂತಿಯೂ ಝೇಂಕಾರದ ಬದಲು ಠೇಂಕಾರವನ್ನು ಮಾಡುತ್ತಿದೆ. ಇಂತಹ ಅಪಲಾಪವನ್ನು ಬೆಂಬಲಿಸುವ ಬುದ್ಧಿಜೀವಿಗಳು, “ಭಾರತವು ಒಂದು ಬಹುಸಂಸ್ಕೃತಿಯ ರಾಷ್ಟ್ರ” ಎಂದು ಬೊಬ್ಬೆಯಿಡುತ್ತಿದ್ದಾರೆ.

ಭಾರತವು ಬಹುಸಂಸ್ಕೃತಿಯ ರಾಷ್ಟ್ರವಲ್ಲ, ಇದು ವೈವಿಧ್ಯಮಯವಾದ ರಾಷ್ಟ್ರ. ಭಾರತೀಯನೊಬ್ಬನು ಪರದೇಶಕ್ಕೆ ಹೋದರೆ, ಅವನ ಭಾಷೆ, ಧರ್ಮ, ವೇಷಭೂಷಣ ಏನೆ ಇರಲಿ, ಅವನನ್ನು ಭಾರತೀಯನೆಂದೇ ಗುರುತಿಸುತ್ತಾರೆಯೇ ಹೊರತು ಅವನನ್ನು ತಮಿಳಿಗ, ಬಂಗಾಲಿ, ಹಿಂದೂ ಅಥವಾ ಮುಸ್ಲಿಮ್ ಎಂದಲ್ಲ.

[ಟಿಪ್ಪಣಿ:
ಶಾಂತಿಯುತ ಸಹಬಾಳ್ವೆ ನಡೆಸುತ್ತಿದ್ದ ಜನಕುಲಗಳು ಪ್ರಾಚೀನ ಭಾರತದಲ್ಲಿ ಎಲ್ಲೆಡೆಯೂ ನೆಲೆಸಿದ್ದವು.
ಇಂದು ಓಡಿಸಾದಲ್ಲಿ ಜಗಳಾಡುತ್ತಿರುವ ಪಣ ಮತ್ತು ಕಂದ ಆದಿವಾಸಿಗಳು ಒಂದು ಕಾಲದಲ್ಲಿ ಭಾರತದಲ್ಲೆಲ್ಲ ಹರಡಿಕೊಂಡಿದ್ದರು. ಪಣರು ಕರ್ನಾಟಕ ಹಾಗು ಗೋವಾದಲ್ಲಿ ನೆಲೆಯಾಗಿದ್ದರೆನ್ನುವದಕ್ಕೆ ಸಾಕ್ಷಿಯಾಗಿ ‘ಪಣ’ (ಹನ)ಹೆಸರಿನಿಂದ ಪ್ರಾರಂಭವಾಗುವ ಅನೇಕ ಊರುಗಳು ಈ ಭಾಗದಲ್ಲಿವೆ. ಉದಾ: ಪಣಜಿ, ಪಣಂಬೂರು, ಪಣಗುತ್ತಿ, ಹನಸೋಗೆ, ಹಣಜಿ ಇತ್ಯಾದಿ.
ಕಂದರಂತೂ ಅಫಘಾನಿಸ್ತಾನದಿಂದ ಕರ್ನಾಟಕದವರೆಗೆ ಎಲ್ಲೆಡೆಯೂ ಇದ್ದರು. ‘ಕಂದ’ ಪದದಿಂದ ಪ್ರಾರಂಭವಾಗುವ ಊರುಗಳು: ಕಂದಹಾರ (ಅಫಘಾನಿಸ್ತಾನದಲ್ಲಿ), ಕಂದಹಾರ (ಮಹಾರಾಷ್ಟ್ರದಲ್ಲಿ), ಕಂದಕೂರು,ಕಂದಲಿ, ಕಂದಾಪುರ, ಖಂಡಾಲಾ ಇತ್ಯಾದಿ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿರಿ.]

ಪರಿಸ್ಥಿತಿ ಹೀಗಿರುವಾಗ, ಭಾರತೀಯರಲ್ಲಿ ಭಿನ್ನತೆ ಕಲ್ಪಿಸುವ ವಿಪರೀತ ಬುದ್ಧಿ ಯಾವಾಗ ಪ್ರಾರಂಭವಾಯಿತು? ಅದರಂತೆ ‘ಅಲ್ಪಸಂಖ್ಯಾತರು’ ಎನ್ನುವ concept ಯಾವಾಗ ಪ್ರಾರಂಭವಾಯಿತು? ಬಹುಶಃ ಬ್ರಿಟಿಶರು ಈ ಪರಿಕಲ್ಪನೆಯನ್ನು ಹುಟ್ಟುಹಾಕಿದರೆ? ಅದೇನೇ ಇದ್ದರೂ, ಅದರ ಲಾಭ(?)ವನ್ನು ಪಡೆದವರು ಹಾಗೂ ಪಡೆಯಲು ಯತ್ನಿಸುತ್ತಿರುವವರು ಮಾತ್ರ ಸ್ವಾರ್ಥಿಗಳಾದ ರಾಜಕಾರಣಿಗಳು ಹಾಗೂ ಈ ರಾಜಕಾರಣಿಗಳ ಎಂಜಲು ತಿಂದಿರುವ, ತಿನ್ನುತ್ತಿರುವ ಅಜ್ಞಾನಪೀಠಸ್ಥರು.

ಅಲ್ಪಸಂಖ್ಯಾತರೆನ್ನುವ pervert ಕಲ್ಪನೆಯ ಪ್ರಥಮ ಫಲಾನುಭವಿ ಎಂದರೆ ಜಿನ್ನಾ. ಭಾರತದಲ್ಲಿ ರಕ್ತದ ಓಕುಳಿ ಹರಿಸಿ, ಭಾರತವನ್ನು ಒಡೆದು, ತಾನೂ ಸಹ ‘ರಾಷ್ಟ್ರಪಿತ’ನಾದ. ಎರಡನೆಯ ಫಲಾನುಭವಿ ಅಂದರೆ ಭಾರತೀಯ ರಾಜಕಾರಣಿ ; ತನಗೆ ವೋಟುಗಳು ಸಿಗಬೇಕಾದರೆ, ತಾನು ಭಾರತವನ್ನು ಛಿದ್ರ ಛಿದ್ರವಾಗಿ ಒಡೆಯಬೇಕೆಂದು ತಿಳಿದುಕೊಂಡವ.

ಪಿ. ವಿ. ನರಸಿಂಹರಾಯರು ಭಾರತದ ಪ್ರಧಾನಿಯಾದಾಗ ವಿವಿಧ ಮಾಧ್ಯಮಗಳಲ್ಲಿ ಒಂದು ಜಾಹೀರಾತು ಪದೇ ಪದೇ ಬರುತ್ತಿತ್ತು. ಅದು ಹೀಗಿದೆ:
ಪಿ.ವಿ.ನರಸಿಂಹರಾಯರ ಚಿತ್ರ; ಅವರ ಪಕ್ಕದಲ್ಲಿ ಒಂದು ಬಸ್ಸು; ಕೆಳಗಡೆ ಒಂದು ಘೋಷಣೆ:
“ಪ್ರಯಾಣಿಕರು ಬಸ್ಸನ್ನು ಹತ್ತಬೇಕಾದರೆ, ಚಾಲಕನು ಪ್ರಯಾಣಿಕರ ಧರ್ಮವನ್ನು ಕೇಳುತ್ತಾನೆಯೆ?”

ಘೋಷಣೆಯೇನೊ ಸರಿಯಾದದ್ದೇ.
ಆದರೆ ಒಂದು ಸತ್ಯವನ್ನು ಇಲ್ಲಿ ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ:
ಬಸ್ಸಿನಲ್ಲಿ ಎಲ್ಲ ಪ್ರಯಾಣಿಕರು ಶಿಸ್ತಿನಿಂದ ಕೂಡಬೇಕು.
ಒಬ್ಬಾತ ನಿಂತುಕೊಂಡಾಗ, ಮತ್ತೊಬ್ಬಾತ ಮಲಗಿಕೊಂಡಿರಕೂಡದು, ಇನ್ನೊಬ್ಬಾತ ಸೀಟಿನ ಮೇಲೆ ಕುಣಿಯುತ್ತಿರಬಾರದು.
ಇತರ ಪ್ರಯಾಣಿಕರೊಂದಿಗೆ ಜಗಳ ತೆಗೆಯಬಾರದು.
ಬಸ್ಸಿಗೆ ಹಾನಿ ಮಾಡಬಾರದು.
ಇವೆಲ್ಲ ಬಸ್ಸಿನ ಪ್ರಯಾಣಿಕರು ಅನುಸರಿಸಬೇಕಾದ ಸಾಮಾನ್ಯ ನಿಯಮಗಳು.

ಆದರೆ ಭಾರತದಲ್ಲಿ ಒಬ್ಬೊಬ್ಬ ಪ್ರಯಾಣಿಕನಿಗೆ ಒಂದೊಂದು ನಿಯಮ.
ಏಕೆಂದರೆ, ಭಾರತವು ಬಹುಸಂಸ್ಕೃತಿಯ ದೇಶ ; ಭಾರತವು ಅಲ್ಪಸಂಖ್ಯಾತರ ದೇಶ !
ಅಲ್ಪಸಂಖ್ಯಾತರೆನ್ನುವ pervert concept ಅನ್ನು ಒಪ್ಪಿಕೊಳ್ಳೋಣ.
ಅಲ್ಪಸಂಖ್ಯಾತರಿಗೆ ಯಾವ ರೀತಿಯ ಸವಲತ್ತುಗಳನ್ನು ಕೊಡಬೇಕೆನ್ನುವದನ್ನು ಮಾತ್ರ ನಮ್ಮ ಸರಕಾರ ಅರ್ಥ ಮಾಡಿಕೊಂಡಿಲ್ಲ.
ಅಥವಾ ಮಾಡಿಕೊಂಡರೂ ಸಹ, ಉದ್ದೇಶಪೂರ್ವಕವಾಗಿ ತಿರುಚುತ್ತಿದೆ. (ಚುನಾವಣೆಯಲ್ಲಿ ಮತಗಳಿಕೆಗಾಗಿ).

ಅಲ್ಪಸಂಖ್ಯಾತರ ಸಂಸ್ಕೃತಿಯ ವೈಶಿಷ್ಟ್ಯಗಳು ಬಹುಸಂಖ್ಯಾತರ ಸಂಸ್ಕೃತಿಯಲ್ಲಿ ಮುಚ್ಚಿ ಹೋಗದಿರಲಿ ಎನ್ನುವದೇ ಅವರಿಗೆ ಕೊಡಬೇಕಾದ ರಕ್ಷಣೆಯ ಮುಖ್ಯ ಉದ್ದೇಶ. ನಮ್ಮಲ್ಲಿ ಅಲ್ಪಸಂಖ್ಯಾತರ ಧರ್ಮಾಚರಣೆಗೆ ಅಥವಾ ಸಂಸ್ಕೃತಿಯ ಪೋಷಣೆಗೆ ಏನಾದರೂ ಬಾಧಕಗಳಿವಿಯೆ?
In fact, contrary is the case.

ಮೊದಲಿನಿಂದಲೂ ನಮ್ಮ ಒಕ್ಕಲಿಗರೆಲ್ಲರೂ ಸೋಮವಾರದ ದಿನ ‘ಬಸವಣ್ಣನ ದಿನ’ ಎಂದು ತಮ್ಮ ಕೆಲಸಗಳಿಗೆ ಬಿಡುವು ಕೊಡುತ್ತಿದ್ದಾರೆ.
ಬ್ರಿಟಿಶರ ಆಡಳಿತಕ್ಕಿಂತ ಮೊದಲು ರವಿವಾರದ ರಜೆ ನಮ್ಮಲ್ಲಿ ಇರಲಿಲ್ಲ.
ಆದರೆ ಈಗ ನಮ್ಮಲ್ಲಿ ಶೇಕಡಾ ೧ಕ್ಕಿಂತ ಕಡಿಮೆ ಇರುವ ಅಲ್ಪಸಂಖ್ಯಾತ ಕ್ರಿಶ್ಚಿಯನ್ನರಿಗಾಗಿ ಒಂದು ವರ್ಷದಲ್ಲಿ ೫೨ ರಜಾದಿನಗಳನ್ನು (ರವಿವಾರದ ಪ್ರಾರ್ಥನೆಗಾಗಿ) ಸರಕಾರವು ನೀಡಿದೆ.
ಮುಸ್ಲಿಮ್ ದೇಶಗಳಲ್ಲಿ ಶುಕ್ರವಾರದಂದು ವಾರದ ರಜೆ ಕೊಡುತ್ತಾರೆ. (ಭಾರತದಲ್ಲಿಯ ಮುಸ್ಲಿಮ್ ವಿದ್ಯಾಸಂಸ್ಥೆಗಳೂ ಸಹ ರವಿವಾರದ ಬದಲಾಗಿ ಶುಕ್ರವಾರವೇ ರಜೆ ಕೊಡುತ್ತಾರೆ.)
ಪರಿಸ್ಥಿತಿ ಹೀಗಿದ್ದಾಗ, ಭಾರತದಲ್ಲಿ ಬಹುಸಂಖ್ಯಾತ ಹಿಂದು ಧರ್ಮೀಯರು ಅಲ್ಪಸಂಖ್ಯಾತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎನ್ನುವದು ಸರಿಯೆ?

[ಭಾರತದ ಸಂವಿಧಾನವು ಹೀಗೆ ಹೇಳುತ್ತದೆ:
Article 14:
The State shall not deny to any person equality before the law or the equal protection of the laws within the territory of India.
Article 15:
Prohibition of discrimination on grounds of religion, race, caste, sex or place of birth.
ಆದುದರಿಂದ ಭಾರತದ ಸಂವಿಧಾನಕ್ಕೆ ಧರ್ಮನಿರಪೇಕ್ಷ ಎನ್ನಬೇಕಾಗುತ್ತದೆ.

ಆದರೆ ಮುಸ್ಲಿಮ್ ರಾಷ್ಟ್ರವೊಂದರಲ್ಲಿ ಇರುವ ಶಾಸನವನ್ನು ಗಮನಿಸಿ:
ಸುಮಾರು ೪೦ ವರ್ಷಗಳ ಹಿಂದೆ The Illustrated Weekly of India ಎನ್ನುವ ವಾರಪತ್ರಿಕೆಯಲ್ಲಿ ಪ್ರಕಟವಾದ ವರದಿ ಹೀಗಿತ್ತು:
ಅರಬ ರಾಷ್ಟ್ರವೊಂದರ factory ಒಂದರಲ್ಲಿ ಕೆಲಸ ಮಾಡುತ್ತಿದ್ದ ಗ್ರೀಸ್ ದೇಶದ ಫೋರ್ಮನ್ನನು factoryಯ ಒಳಗಡೆ ವಾಹನ ಚಲಾಯಿಸುತ್ತಿದ್ದಾಗ, ಅಕಸ್ಮಾತ್ತಾಗಿ ಭಾರತೀಯ ಕಾರ್ಮಿಕನ ಮೇಲೆ ವಾಹನ ಚಲಾಯಿಸಿದ್ದರಿಂದ ಕಾರ್ಮಿಕನು ಸಾವಿಗೀಡಾದನು. ಪರಿಹಾರ ಕೊಡಿಸುವ ನ್ಯಾಯಾಲಯವು ಮೃತ ಕಾರ್ಮಿಕನು ಭಾರತೀಯನಾದದ್ದರಿಂದ ನಿಕೃಷ್ಟ ಪರಿಹಾರವನ್ನು ನಿಗದಿಗೊಳಿಸಿತು. ತೀರ್ಪು ನೀಡಿದ ಬಳಿಕ, ಆ ಭಾರತೀಯನು ಹಿಂದೂ ಧರ್ಮದವನು ಎಂದು ಮತ್ತೆ ತಿಳಿದು ಬಂದದ್ದರಿಂದ, ಈ ಮೊದಲು ನಿಗದಿ ಪಡಿಸಿದ ಪರಿಹಾರವನ್ನು ಎರಡು ಮೂರಾಂಶಕ್ಕೆ ಮರು ನಿಗದಿಪಡಿಸಲಾಯಿತು.

ಅರಬ ರಾಷ್ಟ್ರಗಳಲ್ಲಿ ಭಾರತೀಯರಿಗೆ ಹಾಗೂ ಹಿಂದೂಗಳಿಗೆ ಕೊಡುವ ನ್ಯಾಯ ಇದು!]

ಭಾರತದಲ್ಲಿ ಮಾತ್ರ ಅಲ್ಪಸಂಖ್ಯಾತರರೇ ಬಹುಸಂಖ್ಯಾತರರಿಗಿಂತ ಹೆಚ್ಚು ಸಮಾನರು! ಉದಾಹರಣೆಗಳನ್ನು ಕೊಡುತ್ತೇನೆ:
ಭಾರತ ದೇಶದಲ್ಲಿ ಈಗ ಅತ್ಯಂತ ಬಡತನದ ಸ್ಥಿತಿಯಲ್ಲಿ ಇರುವವನೆಂದರೆ ಒಕ್ಕಲಿಗ.
ಸುಮಾರಾಗಿ ಎಲ್ಲ ಒಕ್ಕಲಿಗರೂ ಹಿಂದುಗಳೇ.
ನೂರಾರು ಜನ ಒಕ್ಕಲಿಗರು ಪ್ರತಿ ವರ್ಷವೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಭಾರತ ಸರಕಾರ ರೈತರ ಸ್ಥಿತಿ ಸುಧಾರಣೆಗೆ ಏನು ಮಾಡಿದೆ? ಅವರಿಗೆ ಯಾವ ಸವಲತ್ತುಗಳನ್ನು ಕೊಟ್ಟಿದೆ?
(ಭಾರತದಲ್ಲಿ ಈಗಾಗಲೇ ೧,೨೫,೦೦೦ ರೈತರು ಕುಲಾಂತರಿ ಬೀಜಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು, ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ಇಲ್ಲಿ ಹೇಳಿದ್ದಾರೆ.
ನಮ್ಮ ಸಹಪ್ರಯಾಣಿಕ ಅಮರ ಅವರ ಕೃಪೆಯಿಂದ ಈ ಮಾಹಿತಿ ಲಭ್ಯವಾಗಿದೆ.)


ಆದರೆ, ಅಲ್ಪಸಂಖ್ಯಾತರು, ವಿಶೇಷತಃ ಮುಸಲ್ಮಾನರು ಬಡತನದಲ್ಲಿ ಬಳಲುತ್ತಿದ್ದಾರೆ ಎಂದು ಭಾಷಣ ಬಿಗಿಯುತ್ತ, ಅವರ ಸ್ಥಿತಿ ಸುಧಾರಣೆಯ ವರದಿಗಾಗಿ, ಭಾರತ ಸರಕಾರವು ‘ಸಾಚಾರ ಸಮಿತಿ’ಯನ್ನು ನಿಯಮಿಸಿತು.
ತನ್ನ ಯಜಮಾನನಿಗೆ ಏನು ಬೇಕೆನ್ನುವದು ಈ ಸಮಿತಿಗೆ ಚೆನ್ನಾಗಿ ಗೊತ್ತು.
ಅಂತೆಯೇ ಸಮಿತಿಯು ಸರಕಾರಕ್ಕೆ ಒಂದು tailor-made ವರದಿಯನ್ನು ಸಮರ್ಪಿಸಿತು.
ಈ ವರದಿಯು ಮುಸಲ್ಮಾನರ ಸ್ಥಿತಿಗತಿಗಳ ಬಗೆಗೆ ಮಾತ್ರ ವರದಿ ನೀಡುವ ಬದಲು, ಅವರು ಹೇಗೆ ಬಹುಸಂಖ್ಯಾತರಿಗಿಂತ ಭಿನ್ನರು ಎಂದು ಹೇಳುವದಕ್ಕೆ ಕಸರತ್ತು ಮಾಡಿದೆ.
ಉದಾಹರಣೆಗಾಗಿ ಆ ವರದಿಯ ಒಂದು ಭಾಗವನ್ನು ಇಲ್ಲಿ ನೋಡಿರಿ:

The three language formula too, has not been implemented properly. Students have to opt for Sanskrit as there is no provision for teaching other languages in many schools, despite the fact that Urdu has been declared a second language in some states. This, in effect, makes Sanskrit a compulsory subject, especially in the Hindi belt. The lack of interest in studying Sanskrit makes Muslim students perform badly thus pulling down their grades. Students are also unable to take their higher secondary examination in Urdu as there is no provision for it and they are forced to take their exams in Hindi.(page 40)

ತ್ರಿಭಾಷಾ ಸೂತ್ರದ ಪ್ರಕಾರ ಮಾತೃಭಾಷೆ ಅಥವಾ ರಾಜ್ಯ ಭಾಷೆಯು ಪ್ರಥಮ ಭಾಷೆಯಾಗಿರುತ್ತದೆ. ಅಂದ ಮೇಲೆ ಉತ್ತರ ಪ್ರದೇಶದಂತಹ ರಾಜ್ಯಗಳಲ್ಲಿ ಹಿಂದಿ ಹಾಗೂ ಉರ್ದು ಎರಡೂ ಪ್ರಥಮ ಭಾಷೆಗಳಾಗುತ್ತವೆ.
ಆದುದರಿಂದ ಸಾಚಾರರ ಮೊದಲನೆಯ ನೆಲೆಗಟ್ಟು ಸುಳ್ಳಿನ ನೆಲೆಗಟ್ಟು ಎಂದಂತಾಯಿತು.
ಈಗ ಸಾಚಾರರ ಮತ್ತೊಂದು ಪೂರ್ವಾಗ್ರಹದ ಹೇಳಿಕೆಯನ್ನು ನೋಡಿರಿ:
The lack of interest in studying Sanskrit makes Muslim students perform badly thus pulling down their grades.
ಮುಸಲ್ಮಾನ ವಿದ್ಯಾರ್ಥಿಗಳಿಗೆ ಸಂಸ್ಕೃತದಲ್ಲಿ ಆಸಕ್ತಿ ಇರಬಾರದು ಎನ್ನುವ ಭಾವನೆ ತಪ್ಪಲ್ಲವೆ?
ನೂರಾರು ವರ್ಷಗಳ ಹಿಂದೆ, ಈ ವಿದ್ಯಾರ್ಥಿಗಳ ಪೂರ್ವಜರು, ಬಲಾತ್ಕಾರದಿಂದಲೊ ಅಥವಾ ಸ್ವಇಚ್ಛೆಯಿಂದಲೊ ಧರ್ಮಾಂತರಿತರಾಗಿರಬಹುದು.
ಆದರೆ ಅವರ ರಕ್ತ, ಅವರ ಸಂಸ್ಕೃತಿ ಹಾಗು ಅವರ ಜನಾಂಗ-ಸ್ಮೃತಿ ಬದಲಾಗಬೇಕೆ?
ನಮ್ಮ ತಾಯಿ ಭಾರತಮಾತೆ ಅಲ್ಲ, ಅವಳು ಅರಬಮಾತೆ ಅಥವಾ ಪರ್ಶಿಯಾಮಾತೆ ಎಂದು ಹೇಳುವದು ಶಕ್ಯವೆ?

ಇಂತಹ ಮಾತನ್ನು ಮುಸಲ್ಮಾನರು ಹೇಳುತ್ತಿಲ್ಲ. ಆದರೆ ಸಾಚಾರರು ಹೇಳುತ್ತಿದ್ದಾರೆ.
ಮುಸಲ್ಮಾನರಿಗೆ ಸಂಸ್ಕೃತ ಭಾಷೆಯಲ್ಲಿ ಆಸಕ್ತಿ ಇರಕೂಡದು ಎನ್ನುವದು ಸಾಚಾರರ ವೈಯಕ್ತಿಕ ನಿರ್ಣಯ.
ಏಕೆಂದರೆ ಸಂಸ್ಕೃತವು ಹಿಂದೂಗಳ ಭಾಷೆ ಹಾಗೂ ಅರೇಬಿಯನ್/ಪರ್ಶಿಯನ್ ಇವು ಮುಸಲ್ಮಾನರ ಭಾಷೆ ಎನ್ನುವದು ಸಾಚಾರರ ಪೂರ್ವಾಗ್ರಹಪೀಡಿತ ಅಭಿಮತ.
ಆದರೆ ನಿಜ ಪರಿಸ್ಥಿತಿ ಹಾಗಿದೆಯೇ?
ಕರ್ನಾಟಕವನ್ನೇ ತೆಗೆದುಕೊಳ್ಳಿರಿ:
ಕರ್ನಾಟಕದಲ್ಲಿ ಸಂಸ್ಕೃತ ಹಾಗೂ ಕನ್ನಡದಲ್ಲಿ ಪರಿಣತಿಯುಳ್ಳ ಎಷ್ಟು ಜನ ಮುಸ್ಲಿಮ್ ಲೇಖಕರಿಲ್ಲ?
ಉರ್ದು ಭಾಷೆಯಲ್ಲಿ ಇಲ್ಲದ ಪರಿಣಿತಿ ಇವರಿಗೆ ಕನ್ನಡ ಹಾಗೂ ಸಂಸ್ಕೃತದಲ್ಲಿದೆ.
ಪದ್ಮಶ್ರೀ ನಿಸಾರ ಅಹ್ಮದ, ನಮ್ಮ ಶ್ರೇಷ್ಠ ಲೇಖಕರಾದ ಕಟ್ಟಪಾಡಿ,ಬೋಳೂರು,ಸಾರಾ ಅಬೂಬಕ್ಕರ,ರಶೀದಾ,ರಹಮತ್ ತರೀಕೆರೆ ಇನ್ನೂ ಅನೇಕರೆಲ್ಲ ಮುಸಲ್ಮಾನರಲ್ಲವೆ?
ಈಗಲೂ ಸಹ ತಮಿಳುನಾಡಿನ ಮುಸಲ್ಮಾನರಿಗೆ ತಮಿಳೇ ಮಾತೃಭಾಷೆಯಾಗಿದೆಯೇ ಹೊರತು, ಉರ್ದು ಅಲ್ಲ.

ಮುಖ್ಯವಾಗಿ ಭಾಷೆ ಬೇಕಾದದ್ದು ಅಂತರ್-ಸಂವಹನೆಗಾಗಿ.
ಕರ್ನಾಟಕದಲ್ಲಿ ಇರುವ ಶೇಕಡಾ ೧೨ರಷ್ಟು ಮುಸಲ್ಮಾನರು ಕೇವಲ ತಮ್ಮ ತಮ್ಮಲ್ಲೇ ವ್ಯವಹರಿಸುತ್ತ ಕೂಡುತ್ತಾರೇನು?
ಉಳಿದ ಶೇಕಡಾ ೮೮ರಷ್ಟು ಜನರೊಡನೆ ಅವರಿಗೆ ವ್ಯವಹಾರ, ಸಂವಹನೆ ಬೇಡವೆ?

ಇದೇ ಮಾತು ಜನಾಂಗ-ಸ್ಮೃತಿಗೂ ಅನ್ವಯಿಸುತ್ತದೆ. ನಮ್ಮ ಪುರಾಣಗಳು ವಾಸ್ತವದಲ್ಲಿ ನಮ್ಮ ಜನಾಂಗದ ಸ್ಮೃತಿಕೋಶಗಳೇ ಆಗಿವೆ.
ಶ್ರೀರಾಮಚಂದ್ರ, ಶ್ರೀಕೃಷ್ಣ ಇವರು ದೇವತಾಪಟ್ಟಕ್ಕೇರಿದ ಐತಿಹಾಸಿಕ ಪುರುಷರು.
ಬೇತಾಳ-ವಿಕ್ರಮ ಕತೆಯಿಂದ ಪ್ರಸಿದ್ಧನಾದ ತ್ರಿವಿಕ್ರಮ ರಾಜನು ಅರಸನೆಂದರೆ ಹೇಗಿರಬೇಕು ಎನ್ನುವದಕ್ಕೆ model ಆದಂತಹ ದಂತಕತೆಯಾದ ರಾಜನು.
ಎಲ್ಲಾ ಭಾರತೀಯರಿಗೂ ಇವರೇ ಮೂಲಪುರುಷರು.
ನಮ್ಮ ಜನಾಂಗಸ್ಮೃತಿ ಇಂತಹ ಮಹಾಪುರುಷರಿಂದ ಆಗಿದೆ.

ಇತ್ತೀಚಿನ ಉದಾಹರಣೆಗಳೆಂದರೆ ತುರುಕರ ಹಾಗೂ ಪರ್ಶಿಯನ್ನರ ವಿರುದ್ಧ ಹೋರಾಡಿದ ಭಾರತೀಯ ರಾಜರು. ರಾಣಾ ಪ್ರತಾಪಸಿಂಹ, ಛತ್ರಪತಿ ಶಿವಾಜಿ, ಗುರು ಗೋವಿಂದಸಿಂಹ ಮೊದಲಾದವರು ಈ ನೆಲದ ಮಕ್ಕಳ ಸಲುವಾಗಿ ವಿದೇಶಿ ಆಕ್ರಮಣಕಾರರ ವಿರುದ್ಧ ಹೋರಾಡಿದ ಭಾರತೀಯರು. ಇವರನ್ನು ಕೃತಜ್ಞತೆಯಿಂದ ನೆನೆಯುವದು ಎಲ್ಲ ಭಾರತೀಯರ (-ಇವರಲ್ಲಿ ಅಲ್ಪಸಂಖ್ಯಾಕರೂ ಸೇರ್ಪಡೆಯಾಗುತ್ತಾರೆ-) ಕರ್ತವ್ಯವಲ್ಲವೆ? ಅದು ಬಿಟ್ಟು ರಾಣಾ ಪ್ರತಾಪಸಿಂಹನನ್ನು ಕೇವಲ ರಜಪೂತರು, ಶಿವಾಜಿಯನ್ನು ಕೇವಲ ಮರಾಠಿಗರು, ಗುರು ಗೋವಿಂದಸಿಂಹನನ್ನು ಕೇವಲ ಸೀಖರು, ವಿಜಯನಗರದ ಅರಸರನ್ನು ಕೇವಲ ಹಿಂದೂಗಳು ಗೌರವಿಸುವದು ಸರಿಯೆ?

ಈಗ ಸಾಚಾರರು ವರದಿಸುವದನ್ನು ನೋಡಿರಿ:
The “communal” content of school textbooks, as well as, the school ethos has been a major cause for concern for Muslims in some states. This is disconcerting for the school going Muslim child who finds a complete absence of any representation of her community in the school text.

ಸಾಚಾರರು ಯಾವುದಕ್ಕೆ communal content ಎಂದು ಕರೆಯುತ್ತಾರೆ?
ಶಿವಾಜಿಯು ಪ್ರಜಾವಿರೋಧಿಯಾದ ಮತಾಂಧ ಔರಂಗಜೇಬನ ವಿರುದ್ಧ ಹೋರಾಡಿದ್ದನ್ನು ಬರೆಯುವದು ಕೋಮುವಾದಿ ಪಠ್ಯವೆ?
ಅಥವಾ ಪುಸ್ತಕದಲ್ಲಿ ರಾಮ. ಕೃಷ್ಣ, ಕಮಲಾ, ವಿಮಲಾ ಎನ್ನುವ ಹೆಸರುಗಳು ಬಂದರೆ ಅದು ಕೋಮುವಾದವೆ? ಮುಸಲ್ಮಾನ ಹುಡುಗರು ಶಾಲೆಗೆ ಬಂದಾಗ (--ಅವರು ಸಾರ್ವಜನಿಕ ಶಾಲೆಗೆ ಬಂದರೆ--), ತಮ್ಮ ಸುತ್ತ ಮುತ್ತಲೂ ರಾಮ, ಕೃಷ್ಣ, ಕಮಲಾ, ವಿಮಲಾ ಇವರುಗಳನ್ನೇ ಕಾಣುತ್ತಾರೆ.
Communal contentಅನ್ನು ತೆಗೆದು ಹಾಕುವದಕ್ಕಾಗಿ ಈ ಹುಡುಗರು ತಮ್ಮ ಹೆಸರನ್ನು ಬದಲಾಯಿಸಿಕೊಳ್ಳಬೇಕೆ?

ನಿಜ ಹೇಳಬೇಕೆಂದರೆ, ಮುಸ್ಲಿಮರು ಕೇವಲ ಅರಬ್ಬಿ ಹೆಸರುಗಳನ್ನಷ್ಟೇ ಇಟ್ಟುಕೊಳ್ಳದೆ, ಭಾರತೀಯ ಹೆಸರುಗಳನ್ನು ಜೋಡಿಸಬಹುದು.
ಇದನ್ನು ಕ್ರಿಶ್ಚಿಯನ್ನರು ಮಾಡುತ್ತಿದ್ದಾರೆ.
ಉದಾಹರಣೆಗೆ ಅನೇಕ ಕ್ರಿಶ್ಚಿಯನ್ ಹೆಸರುಗಳು, ವಿಶೇಷತಃ ಹೆಣ್ಣು ಮಕ್ಕಳ ಹೆಸರುಗಳು ಜೋಡಿಸಿದ ಹೆಸರುಗಳಾಗಿವೆ.
ಉದಾ: ಕಮಲಾ ಮೇರಿ, ಹೇಮಾ ಗ್ರೇಸಿ ಇತ್ಯಾದಿ.
ಮುಸಲ್ಮಾನರೂ ಸಹ ಇದೇ ರೀತಿಯಲ್ಲಿ ತಮ್ಮ ಹೆಸರುಗಳನ್ನು ಫಾತಿಮಾ ಗೌರಿ, ಸಯೀದಾ ಲಕ್ಷ್ಮಿ ಎಂದೆಲ್ಲ ಇಟ್ಟುಕೊಂಡರೆ ಅವರನ್ನು ಬಾಧಿಸುತ್ತಿರುವ ಪರಕೀಯ ಪ್ರಜ್ಞೆ ತಪ್ಪಬಹುದು.


ಸಾಚಾರರ ತಿಪ್ಪರಲಾಗದ ಇನ್ನೊಂದಿಷ್ಟು ಉದಾಹರಣೆ ಇಲ್ಲಿವೆ:
….current research indicates that poverty and financial constraints are the major causes that prevent Muslim girls from accessing ‘modern/secular’ education. (p41)

ಯಾಕೆ? ಕೇವಲ ಮುಸಲ್ಮಾನ ವಿದ್ಯಾರ್ಥಿನಿಯರು ಮಾತ್ರ ಬಡತನದಿಂದಾಗಿ ಶಿಕ್ಷಣ ಪಡೆಯುತ್ತಿಲ್ಲವೆ?
ಹಳ್ಳಿಗಳಲ್ಲಿಯ ನಮ್ಮ ರೈತ ಕೂಲಿಕಾರ ಹೆಣ್ಣು ಮಕ್ಕಳು ಶಾಲೆ ಬಿಟ್ಟು ಹೊಲದಲ್ಲಿ ಕೂಲಿ ಮಾಡಲು ಹೋಗುವದಿಲ್ಲವೆ?
ನಗರಗಳಲ್ಲಿಯೂ ಸಹ ಎಷ್ಟು ಜನ ಮುಸ್ಲಿಮೇತರ ವಿದ್ಯಾರ್ಥಿನಿಯರು ಬಡತನದಿಂದಾಗಿ ಶಾಲೆ ಬಿಟ್ಟಿಲ್ಲ?
ನಗರಗಳಲ್ಲಿ ಕೊಳಚೆ ಹೆಕ್ಕುವ ಕೆಲಸ ಮಾಡುತ್ತಿರುವ rag pickerಗಳಲ್ಲಿ ಒಬ್ಬಳಾದರೂ ಮುಸ್ಲಿಮ್ ಹುಡುಗಿಯನ್ನು ಸಾಚಾರ ತೋರಿಸಲಿ !
ಇವೆಲ್ಲ ಅಂಕಿಸಂಖ್ಯೆಯ ಮಾತಾಯಿತು. ಈಗ ಸಾಚಾರರ ಈ ಹೇಳಿಕೆಯನ್ನು ನೋಡಿರಿ:
Muslim women often face overt discrimination from school authorities while trying to get admission or in availing of scholarships for their children. (p41)

ಇದಂತೂ ಸಾಚಾರರ ಕಲ್ಪನೆಯ ಮಹಾ ಅಪಲಾಪ.
ಏಕೆಂದರೆ, ಇಂತಹ overt discriminationದ ಒಂದಾದರೂ ಉದಾಹರಣೆಗಳನ್ನು ಸಾಚಾರರು ತಮ್ಮ ವರದಿಯಲ್ಲಿ ಉಲ್ಲೇಖಿಸಿಲ್ಲ.

ಇದೇ ರೀತಿಯಲ್ಲಿ ಸಾಚಾರರು ಮುಸಲ್ಮಾನರು ಉದ್ಯೋಗಕ್ಷೇತ್ರದಲ್ಲಿ ಅನುಭವಿಸುತ್ತಿರುವ ಬವಣೆಗಳ ಬಗೆಗೆ ದೀರ್ಘವಾದ ವರದಿ ನೀಡಿದ್ದಾರೆ.
ನಾನೇನೂ ಅವರಿಗೆ ದೀರ್ಘವಾದ ಪ್ರಶ್ನೆ ಹಾಕುವದಿಲ್ಲ. ಒಂದು ಅತಿ ಸಣ್ಣ ಪ್ರಶ್ನೆ.
ಭಾರತದಲ್ಲಿ ಸಾಲದ ಶೂಲಕ್ಕೆ ಸಿಲುಕಿದ ಅನೇಕ ರೈತರು, ತಮ್ಮ ಕುಟುಂಬಕ್ಕೆ ತುತ್ತು ಅನ್ನ ನೀಡಲಾರದ ಅನೇಕ ನಿಸ್ಸಹಾಯಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಗಳು ಪತ್ರಿಕೆಗಳಲ್ಲಿ ಬರುತ್ತಲೇ ಇರುತ್ತಿವೆ.
ಇವರಲ್ಲಿ ಒಬ್ಬನಾದರೂ ಮುಸಲ್ಮಾನನು ಇದ್ದಾನೆಯೆ?
God forbid, ನಾನು ಅದನ್ನು ಬಯಸುತ್ತೇನೆ ಎಂದು ಹೇಳುತ್ತಿಲ್ಲ.
ಆದರೆ, suicide is the unfortunate barometer for judging the community that is really suffering ಎನ್ನುವದು ನನ್ನ ಅಭಿಪ್ರಾಯ.

ವಸ್ತುಸ್ಥಿತಿ ಹೀಗಿದ್ದಾಗ, ಸಾಚಾರರು ಮುಸಲ್ಮಾನರಿಗೆ ವಿಶೇಷವಾಗಿ ಉದ್ಯೋಗ ನೀಡಬೇಕು, ಉದ್ಯೋಗಸಾಲ ನೀಡಬೇಕು; ಯಾಕೆಂದರೆ ಅವರ ವಿರುದ್ಧ ಉದ್ದೇಶಪೂರ್ವಕವಾಗಿ ಅನ್ಯಾಯ ನಡೆದಿದೆ ಎಂದು ನಿರ್ಣಯ ನೀಡುತ್ತಾರೆ.
ಇದು ಕಪೋಲಕಲ್ಪಿತವಲ್ಲವೆ?
ನಿಜ ಹೇಳಬೇಕೆಂದರೆ, ಅನೇಕ ಉದ್ಯೋಗಗಳು ಮುಸಲ್ಮಾನ-ಕೇಂದ್ರಿತವೇ ಆಗಿವೆ.
ಉದಾಹರಣೆಗೆ, ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಬೆಳೆದು, ಸಾಲ ಮಾಡಿ, ಕೈ ಸುಟ್ಟುಕೊಂಡು, ಸಂಕಷ್ಟಕ್ಕೆ ಸಿಲುಕಿದಾಗ ಆತ್ಮಹತ್ಯೆಗೆ ಶರಣಾಗುವ ರೈತರು ಸಹಸಾ ಹಿಂದೂಗಳು.
ಕಾಯಿಪಲ್ಲೆ ಹಾಗೂ ಹಣ್ಣುಗಳನ್ನು ಪೇಟೆಯಲ್ಲಿ ಮಾರಿ, ಎಂತಹದೇ ಪರಿಸ್ಥಿತಿಯಲ್ಲಿಯೂ ಲಾಭ ಮಾಡಿಕೊಳ್ಳುವ ಬಾಗವಾನರು ಸಹಸಾ ಮುಸಲ್ಮಾನರು.

ನಾನು ಇಲ್ಲಿ ಮುಸಲ್ಮಾನರ ವಿರುದ್ಧ ಮಾತನಾಡುತ್ತಿಲ್ಲ.
ನಾನು ಬರೆಯುತ್ತಿರುವದು ಸಾಚಾರ ವರದಿ ಎಂತಹ ಕೆಲಸಕ್ಕೆ ಬಾರದ ಕಂತೆಯಾಗಿದೆ ಎನ್ನುವದರ ಬಗೆಗೆ ; ಅಂಕಿಅಂಶಗಳನ್ನು ಹೇಗೆ ಸಾಚಾರರು ತಿರುಚಿ ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವದರ ಬಗೆಗೆ.

ಸಾಚಾರ ವರದಿಯಲ್ಲಿ ಏನೂ ‘ಸಾಚಾ’ ಇಲ್ಲ ; ಇದು ನಿಜವಾಗಿಯೂ ‘ಅವಿಚಾರ ವರದಿ’.
ಸುಮಾರು ಎರಡು ಶತಕಗಳ ಹಿಂದೆ ಹಾಡಿದ ಶರೀಫರ ಹಾಡು ಸಾಚಾರ ವರದಿಗೆ ಸರಿಯಾಗಿ ಅನ್ವಯಿಸುತ್ತದೆ:

“ತರವಲ್ಲ ತಗಿ ನಿನ್ನ ತಂಬೂರಿ,
ಸ್ವರ ಬರದೆ ಬಾರಿಸದಿರು ತಂಬೂರಿ!”

Monday, November 3, 2008

ಸಂಯುಕ್ತ ಕರ್ನಾಟಕ: ಅಪಶಬ್ದಕೋಶ

‘ಸಂಯುಕ್ತ ಕರ್ನಾಟಕ’ ದಿನಪತ್ರಿಕೆಯ ಸಂಪಾದಕ ಶ್ರೀ ಕೃಷ್ಣಮೂರ್ತಿ ಹೆಗಡೆ ಇವರಿಗೆ ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಶ್ರೀಯುತರಿಗೆ ಅಭಿನಂದನೆಗಳು.
ಸಂಯುಕ್ತ ಕರ್ನಾಟಕ ಪತ್ರಿಕೆಗೆ ೭೫ ವರ್ಷಗಳ ಇತಿಹಾಸವಿದೆ.
ಭಾರತದ ಸ್ವಾತಂತ್ರ್ಯ ಹಾಗೂ ಕರ್ನಾಟಕದ ಏಕೀಕರಣಕ್ಕಾಗಿ ಈ ಪತ್ರಿಕೆ ಸಾಕಷ್ಟು ದುಡಿದಿದೆ.
ಆದರೆ,ಇತ್ತೀಚಿನ ದಿನಗಳಲ್ಲಿ ಈ ಪತ್ರಿಕೆ ಕನ್ನಡ ಭಾಷೆಯನ್ನು ಕುಲಗೆಡಿಸುವದರಲ್ಲಿ ಅಪಾರ ಸಾಧನೆ ಮಾಡುತ್ತಿದೆ.

ಕಾಗುಣಿತದ ತಪ್ಪುಗಳ ಮೂಲಕ ‘ಕನ್ನಡ ಅಪಶಬ್ದ ಕೋಶ’ಕ್ಕೆ ಪ್ರತಿದಿನವೂ ಅಪಾರ ಕೊಡುಗೆಯನ್ನು ನೀಡುತ್ತಿರುವದಕ್ಕಾಗಿಯೇ ‘ಸಂಯುಕ್ತ ಕರ್ನಾಟಕ’ಕ್ಕೆ ಈ ಪ್ರಶಸ್ತಿ ಲಭಿಸಿರಬೇಕೆಂದು ನನ್ನ ಭಾವನೆ.
ನಿಜ ಹೇಳಬೇಕೆಂದರೆ ಕನ್ನಡದಲ್ಲಿ ಕಾಗುಣಿತದ ತಪ್ಪುಗಳನ್ನು ಸಂಶೋಧಿಸಲು ಹೊರಟವರಿಗೆ ‘ಸಂಯುಕ್ತ ಕರ್ನಾಟಕ’ ಅದ್ಭುತ ನಿಧಿಯಂತಾಗಿದೆ.

ಅಭಿನಂದನೆಗಳು, ಸಂಪಾದಕರೆ!
ಕನ್ನಡ ಸರಸ್ವತಿಯನ್ನು ಅಪಶಬ್ದಗಳ ಮೂಲಕ ದಿನವೂ ಚುಚ್ಚಿ ಕೊಲ್ಲುತ್ತಿರುವ ನಿಮ್ಮ ಪಾಂಡಿತ್ಯಕ್ಕೆ ಕನ್ನಡಿಗರು ಮೂಕವಿಸ್ಮಿತರಾಗಿದ್ದಾರೆ.
ಎಷ್ಟೇ ಪಾಂಡಿತ್ಯವಿದ್ದರೂ, ಅಪಶಬ್ದಗಳ ಬಗೆಗೆ ಕೆಲವೊಮ್ಮೆ ನಿಮಗೂ ಸಹ ಸಂಶಯ ಬರುವದುಂಟು.
ಅಂತಹ ಸಂದರ್ಭದಲ್ಲಿ ಅಪಶಬ್ದ ಹಾಗೂ ಸರಿಯಾದ ಶಬ್ದಗಳನ್ನು ಸಮಾನ ಪ್ರಮಾಣದಲ್ಲಿ ಬಳಸುವಂತಹ ಜಾಣತನವನ್ನು ನೀವು ತೋರಿಸುತ್ತಿದ್ದೀರಿ.
ಹೀಗೆ ಮಾಡುವದರಿಂದ, ಶೇಕಡಾ ೫೦ರಷ್ಟಾದರೂ ಅಪಶಬ್ದಗಳನ್ನು ಬಳಸಿದಂತಾಗುವದಿಲ್ಲವೆ?
ಉದಾಹರಣೆಗೆ ನವೆಂಬರ ೨ನೆಯ ದಿನಾಂಕದಂದು ಪ್ರಕಟಿಸಿದ ಸಂಯುಕ್ತ ಕರ್ನಾಟಕದ ೧೦ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ:
’ಶಿಷ್ಟಾಚಾರ ಪಾಲಿಸದ ಜಿಲ್ಲಾಧಿಕಾರಿ’ಎನ್ನುವ ಈ ವರದಿಯಲ್ಲಿ ‘ಶಿಷ್ಟಾಚಾರ’ವನ್ನು ೪ ಬಾರಿ ಹಾಗೂ ‘ಶಿಷ್ಠಾಚರ’ವನ್ನು ೪ ಬಾರಿ ಬಳಸಿದ್ದೀರಿ.
ಎಂತಹ ಜಾಣತನ!
ಸರಿಯಾದ ಪದವು ಗೊತ್ತಿರಲಿ, ಇಲ್ಲದಿರಲಿ, ಅದರ ಬಳಕೆಯನ್ನು ಶೇಕಡಾ ೫೦ಕ್ಕೆ ಮಾತ್ರ ಪರಿಮಿತಗೊಳಿಸಿದಂತಾಗಲಿಲ್ಲವೇ!
ಇನ್ನು ಇದೇ ಪತ್ರಿಕೆಯ ೧೧ನೆಯ ಪುಟದಲ್ಲಿಯ ವರದಿಯನ್ನು ನೋಡಿರಿ.
‘ಗುರುವರ್’ ಪ್ರಶಸ್ತಿಗಾಗಿ ನಾಮಕರಣಗಳ ಪೂರ ಎಂದು ಪ್ರಕಟಿಸಿದ್ದೀರಿ.
ಸ್ವಾಮಿ ‘ವರ್’ ಎನ್ನುವ ಪದ ಕನ್ನಡದಲ್ಲಿ ಇಲ್ಲ.
‘ವರ’ ಎನ್ನುವ ಪದಕ್ಕೆ ಶ್ರೇಷ್ಠ ಎನ್ನುವ ಅರ್ಥವಿದೆ. ಇದು ‘ಗುರುವರ’ ಎಂದಾಗಬೇಕಿತ್ತು.
ಆದರೆ ಅಪಶಬ್ದಕೋಶವನ್ನು ಟಂಕಿಸಲು ಹೊರಟ ನೀವು ‘ಗುರುವರ್’ ಎನ್ನುವ ಪದವನ್ನು ಬಳಸಿದ್ದರಲ್ಲಿ ಅಚ್ಚರಿಯಿಲ್ಲ.

ಕಿಟ್ಟೆಲ್ ಕೋಶದಲ್ಲಿ ಬರೀ ತಪ್ಪುಗಳೇ ತುಂಬಿವೆ; ಆ ಶಬ್ದಕೋಶವನ್ನು ಸರಿಪಡಿಸುವ ಅಗತ್ಯವಿದೆ ಎಂದು ನೀವು ಭಾವಿಸಿದಂತಿದೆ.
ಅದಕ್ಕಾಗಿಯೇ, ಕಿಟ್ಟೆಲ್ ಕೋಶಕ್ಕೆ ಸಮಾಂತರವಾಗಿ ಒಂದು ಅಪಶಬ್ದಕೋಶವನ್ನು ನೀವು ನಿಮ್ಮ ಪತ್ರಿಕೆಯ ಮೂಲಕ ರೂಪಿಸುತ್ತಿರುವಿರಾ?
ನಿಮ್ಮ ಘನ ಪತ್ರಿಕೆಯಲ್ಲಿ ಪ್ರಸೂತವಾದ ಕೆಲವು ಅಪಶಬ್ದಗಳನ್ನು ಹೆಕ್ಕಿಕೊಂಡಿದ್ದೇನೆ.
ಇತರ ಕನ್ನಡಿಗರ ಕಣ್ಣಿಗೂ ಅವು ಬೀಳಲಿ ಎಂದು ಅವನ್ನು ಇಲ್ಲಿ ಕೊಡುತ್ತಿದ್ದೇನೆ.
(ಕನ್ನಡಿಗರೇ, ಎಚ್ಚರಿಕೆ; ಈ ಅಪಶಬ್ದಗಳನ್ನು ನೋಡಿ ಕಣ್ಣು ಕುರುಡಾದರೆ ನಾವು ಜವಾಬುದಾರರಲ್ಲ!)

ಕೆಳಗಿನ ಪಟ್ಟಿಯಲ್ಲಿ ಮೊದಲನೆಯದು ಅಪಶಬ್ದ, ಮುಂದಿನದು ಸರಿಯಾದ ಪದ.
ಉಚ್ಛ…………........ಉಚ್ಚ
ಸರ್ವೋಚ್ಛ………...... ಸರ್ವೋಚ್ಚ
ನಿಚ್ಛಳ…………....... ನಿಚ್ಚಳ
ಸಮುಚ್ಛಯ……....... ಸಮುಚ್ಚಯ
ದ್ರುವೀಕರಣ………...... ಧ್ರುವೀಕರಣ
ಅನುಗೃಹ………....... ಅನುಗ್ರಹ
ಭೋಗಸ್………....... ಬೋಗಸ್
ಥಳಕು ಹಾಕಿದ……...... ತಳಕು ಹಾಕಿದ
ಸೌಹಾರ್ದ್ರ………....... ಸೌಹಾರ್ದ
ಪ್ರಾಂಥ…………....... ಪ್ರಾಂತ
ಸೋಲ್ಲು………....... ಸೊಲ್ಲು
ಧೃವ……………........ ಧ್ರುವ
ಶೃತಿ……………........ ಶ್ರುತಿ
ಖೂಟ…………........ ಕೂಟ
ಛಾಳಿ……………........ ಚಾಳಿ
ನೈರುತ್ಯ…………....... ನೈಋತ್ಯ
ಜಾರ್ಕಂಡ………....... ಝಾರಖಂಡ
ಅಲ್ ಖೈದಾ……...... ಅಲ್ ಕೈದಾ
ಕೃತಗ್ನ…………........ ಕೃತಜ್ಞ
ಕೃತಗ್ನ…………........ ಕೃತಘ್ನ
ಡಾಬ……………....... ಧಾಬಾ
ಕಳ್ಳ ಬಟ್ಟಿ………....... ಕಳ್ಳ ಭಟ್ಟಿ
(ಬೆಳಗಾವಿಯ) ಕುಂದದಂತಹ….(ಬೆಳಗಾವಿಯ) ಕುಂದಾದಂತಹ
ಅಲ್ಲ……………....... ಅಲ್ಲಾ
ಶಿಲನ್ಯಾಸ………....... ಶಿಲಾನ್ಯಾಸ
ಢಾಕ……………........ ಡಾಕಾ

ಇಂತಹ ನೂರಾರು ಅಪಶಬ್ದಗಳನ್ನು ಅನಾಯಾಸವಾಗಿ ನೋಡಬೇಕೆಂದರೆ, ‘ಸಂಯುಕ್ತ ಕರ್ನಾಟಕ’ವನ್ನು ತಪ್ಪದೇ ಓದಿರಿ.
ಆದರೆ ಚಿಕ್ಕ ಮಕ್ಕಳ ಕೈಗೆ ಸಿಗದಂತೆ ಈ ಪತ್ರಿಕೆಯನ್ನು ಜೋಪಾನವಾಗಿ ತೆಗೆದಿರಿಸಿರಿ.
ಎಚ್ಚರ! (statutory warning:)
ಈ ಅಪಶಬ್ದಗಳನ್ನೇ ಸರಿಯಾದ ಶಬ್ದಗಳೆಂದು ಮಕ್ಕಳು ಭಾವಿಸಬಹುದು.

Friday, October 24, 2008

ಸುಷ್ಮಸಿಂಧುರವರ ಕನಸು

ಕನಸುಗಳಿಗಾಗಿಯೇ ಮೀಸಲಾಗಿಟ್ಟ ಕನ್ನಡ ತಾಣವೆಂದರೆ ಸುಷ್ಮಸಿಂಧುರವರ
ಕಂಡೆನೊಂದು ಕನಸು.
ಹಾಗೆಂದು ಇದು ಹಗಲುಗನಸಿನ ತಾಣವಲ್ಲ. ಅವರ ನೈಜ ಕನಸುಗಳ ತಾಣವಿದು.

ಕನಸುಗಳ ವೈಜ್ಞಾನಿಕ ಸಂಶೋಧನೆ ಖ್ಯಾತ ಮನೋವಿಜ್ಞಾನಿ ಫ್ರಾಯ್ಡ್‌ನಿಂದ ಆರಂಭವಾಯಿತೆನ್ನಬಹುದು. ಮನದ ಆಳದಲ್ಲಿ ಸರಿಸಿದ (repressed) ಅಥವಾ ಹುದುಗಿದ (suppressed) ಭಾವನೆಗಳು ಕನಸುಗಳನ್ನು ಹೇಗೆ ರಚಿಸುತ್ತವೆ ಎನ್ನುವದಕ್ಕೆ ಫ್ರಾಯ್ಡ್ ಅನೇಕ ವಿವರಣೆಗಳನ್ನು ನೀಡಿದರು.

ಸುಷ್ಮಸಿಂಧುರವರ ಕನಸುಗಳು ಸಾಮಾನ್ಯ ಕನಸುಗಳಿಗಿಂತ ಭಿನ್ನವಾಗಿವೆ ಎನ್ನುವದನ್ನು ಅವರ ತಾಣಕ್ಕೆ ಭೆಟ್ಟಿಯಿತ್ತವರೆಲ್ಲ ಕಂಡಿದ್ದಾರೆ.
ಈ ಕನಸುಗಳನ್ನು ಆಧರಿಸಿ, ಸುಷ್ಮಸಿಂಧುರವರು “ಪಯಣ ಸಾಗಿದಂತೆ” ಎನ್ನುವ ಒಂದು ಕಥಾಸಂಕಲನವನ್ನೇ ಬರೆದರು (೨೦೦೫).
ಇಲ್ಲಿಯ ಕತೆಗಳೂ ಸಹ ಸಾಮಾನ್ಯ ಕತೆಗಳಿಗಿಂತ ಭಿನ್ನವಾಗಿಯೇ ಇವೆ.

ಈ ಕತೆಗಳನ್ನು ನಾನು ‘ಅಂತರಂಗದ ತೊಳಲಾಟದ ಕತೆಗಳು’ ಎಂದು ಕರೆಯಲು ಬಯಸುತ್ತೇನೆ.
ಪ್ರತಿವ್ಯಕ್ತಿಯ ಮನಸ್ಸಿನಲ್ಲಿಯೂ ಅನೇಕ ದ್ವಂದ್ವಗಳು ಉದ್ಭವಿಸುತ್ತವೆ.
ಈ ದ್ವಂದ್ವಗಳು ಜೊತೆಜೊತೆಯಾಗಿಯೇ ಸಹವಾಸ ಮಾಡುತ್ತವೆ, ಹೋರಾಡುತ್ತವೆ;
ಕೆಲವೊಮ್ಮೆ ಒಂದು normal ಭಾವನೆಯ ಕೈ ಮೇಲಾಗಬಹುದು, ಕೆಲವೊಮ್ಮೆ ಅಸ್ವಾಭಾವಿಕ ಭಾವನೆಯೇ ಮೇಲೇರಬಹುದು.
ಈ ಭಾವನೆಗಳಿಗೆ ವ್ಯಕ್ತಿರೂಪ ನೀಡಿ ಬರೆದ ಕತೆಗಳು ಈ ಸಂಕಲನದಲ್ಲಿವೆ.

ಈ ಸಂಕಲನದ ಮೊದಲ ಕತೆ “ಅನ್ಯ” ಕಸ್ತೂರಿ ಮಾಸಪತ್ರಿಕೆಯಲ್ಲಿ ಪ್ರಕಟವಾಗಿತ್ತು.
ಶವಾಗಾರದ ರಾತ್ರಿ-ಕಾವಲುಗಾರನೊಬ್ಬನ ಕತೆಯಿದು.
ಈ ಕಾವಲುಗಾರನ inter action ಇರುವದು ಅಲ್ಲಿಯ ಶವಗಳ ಜೊತೆಗೆ ಮಾತ್ರ.
ಆತನಿಗೆ real ವ್ಯಕ್ತಿಗಳ ಜೊತೆಗೆ ಸಂಬಂಧ ಸಾಧ್ಯವಿಲ್ಲ.
ತನ್ನ ಅಂತರಂಗದಲ್ಲಿಯೇ ಬಂದಿಯಾದ ವ್ಯಕ್ತಿಯ ಚಿತ್ರಣ ಇಲ್ಲಿ ಸಮರ್ಥವಾಗಿ ಬಂದಿದೆ.

“ಬೆಳಕನ್ನರಸುತ್ತಾ” ಹಾಗು “ಶೋಧನಾ” ಕತೆಗಳಲ್ಲಿ ಕಾಣುವ ಮನೋಸ್ಥಿತಿ ಬೇರೆ ಬಗೆಯದು.
ಅಂತಿಮ ಸತ್ಯ ಏನು ಎನ್ನುವದನ್ನು ಅರಿತುಕೊಳ್ಳಲು ಸಿದ್ಧಾರ್ಥನು ಮಧ್ಯರಾತ್ರಿಯಲ್ಲಿ ಎದ್ದು ಹೋದನಲ್ಲ----ಆ ಬಗೆಯ ತೊಳಲಾಟದ ಕತೆಗಳಿವು.

ಈ ಕಥಾಸಂಕಲನದ ವಿವಿಧ ಕತೆಗಳಲ್ಲಿ ನಾವು ಕಾಣುವದು ಈ ತೊಳಲಾಟವನ್ನು ;
ಪಂಜರದಲ್ಲಿ ಸಿಲುಕಿದ ಹಕ್ಕಿ ಹೊರಹಾರಲೆಂದು ರೆಕ್ಕೆ ಬಡೆಯುವ ಯತ್ನವನ್ನು.

ಉತ್ತಮ ಲೇಖಕಿಯೂ ಆದ ಸುಷ್ಮಸಿಂಧು ತಮ್ಮ ಕನಸುಗಳಿಂದಾಗಿ ನಮ್ಮೆಲ್ಲರ ಕುತೂಹಲ ಕೆರಳಿಸಿದ್ದಾರೆ.
ಅವರ ಮನೋಪಕ್ಷಿಯ ಪಯಣ ಸಫಲವಾಗಲಿ.

Wednesday, October 15, 2008

ವಸುಧೇಂದ್ರರ ಸಂವೇದನಾ ಲೋಕ

ವಸುಧೇಂದ್ರರು ಈವರೆಗೆ ಮೂರು ಕಥಾಸಂಕಲನಗಳನ್ನು ಪ್ರಕಟಿಸಿದ್ದಾರೆ:
(೧) ಮನೀಷೆ
(೨) ಚೇಳು
(೩) ಯುಗಾದಿ.

ಈ ಮೂರು ಕಥಾಸಂಕಲನಗಳಲ್ಲಿ ಒಟ್ಟು ೩೭ ಕಥೆಗಳಿವೆ.
ಈ ಮೂವತ್ತೇಳೂ ಕತೆಗಳನ್ನು ಓದಿದಾಗ ಅವುಗಳಲ್ಲಿ ಮೂರು ಮೂಲಲಕ್ಷಣಗಳನ್ನು ಗುರುತಿಸಬಹುದು:

(೧) ವಸುಧೇಂದ್ರರ ಕತೆಗಳಲ್ಲಿ ಬರುವ ಸಮಾಜಗಳು ಎರಡು ತರಹದವು . ಒಂದು ಸಾಂಪ್ರದಾಯಕ ಸಮಾಜ; ಮತ್ತೊಂದು ಆಧುನಿಕ ಸಮಾಜ. ಇವೆರಡೂ ಸಮಾಜಗಳಲ್ಲಿ ವಸುಧೇಂದ್ರರು ಗುರುತಿಸುವ ಸಾಮಾನ್ಯ ಅಂಶವೆಂದರೆ ನಿಷ್ಕರುಣಿಯಾದ ಸಮಾಜವ್ಯವಸ್ಥೆ. ಕತೆಯ ಹಿನ್ನೆಲೆ ಸಾಂಪ್ರದಾಯಕ ಸಮಾಜದ್ದೇ ಇರಲಿ ಅಥವಾ ಆಧುನಿಕ ಸಮಾಜದ್ದೇ ಇರಲಿ, ಈ ಸಮಾಜವ್ಯವಸ್ಥೆಯು ಎಷ್ಟು ನಿರ್ದಯದಿಂದ ಅಸಹಾಯಕರನ್ನು ಹೊಸಕಿ ಹಾಕುತ್ತದೆ ಎನ್ನುವದು ಇಲ್ಲಿಯ ಕತೆಗಳ ಒಂದು ಮೂಲ ಲಕ್ಷಣ.

(೨) ಸಾಂಪ್ರದಾಯಕ ಸಮಾಜದ ಇಂತಹ ವ್ಯವಸ್ಥೆಯಲ್ಲಿ ತೊಳಲಾಡುತ್ತಿರುವ ಅಸಹಾಯಕ ಜೀವಿಗಳಲ್ಲಿ ಉಳಿದಿರುವ ಮೌಲ್ಯನಿಷ್ಠೆಯ ಚಿತ್ರಣವು ಇಲ್ಲಿಯ ಕತೆಗಳ ಎರಡನೆಯ ಮೂಲಲಕ್ಷಣ.

(೩) ಮೂರನೆಯದಾಗಿ ಇಂತಹ ವ್ಯವಸ್ಥೆಯ ಯಲ್ಲಿ ಸಿಲುಕಿ ನಲುಗುತ್ತಿರುವ ಅಸಹಾಯಕ ಜೀವಿಗಳ ಬಗೆಗೆ ವಸುಧೇಂದ್ರರಿಗೆ ಇರುವ ಅನುಕಂಪ.

ಅಸಹಾಯಕರ ಕತೆಗಳನ್ನು ಬರೆದಿರುವವರಲ್ಲಿ ವಸುಧೇಂದ್ರರು ಮೊದಲಿಗರೇನೂ ಅಲ್ಲ. ಕನ್ನಡದ ಶ್ರೇಷ್ಠ ಕತೆಗಾರರಾದ ದೇವನೂರು ಮಹಾದೇವ ಸಹ feudal ಸಮಾಜವ್ಯವಸ್ಥೆಯಲ್ಲಿ ಸಿಲುಕಿ ನಲುಗುತ್ತಿರುವ ಪಾತ್ರಗಳನ್ನು ಸೃಷ್ಟಿಸಿದ್ದಾರೆ. ಅವರ “ಮಾರಿಕೊಂಡವರು” ಕತೆ ವಿಶ್ವದ ಅತ್ಯುತ್ತಮ ಕತೆಗಳಲ್ಲಿ ಒಂದು ಎಂದು ಹೇಳಬಹುದು. ಆದರೆ ಈ ಕತೆ ಸಾಮಾಜಿಕ ವ್ಯವಸ್ಥೆ ನಿರ್ಮಿಸಿದ ಶೋಷಣೆಯನ್ನು ನಿರುದ್ವಿಗ್ನವಾಗಿ ಹೇಳುವ ಕತೆ. ಅಮರೇಶ ನುಗಡೋಣಿಯವರ ಕತೆಗಳನ್ನೂ ಸಹ ಇದೇ ವರ್ಗದಲ್ಲಿ ಸೇರಿಸಬಹುದು.
ಇನ್ನು ರಾಘವೇಂದ್ರ ಖಾಸನೀಸರು ಸಹ ತಮ್ಮ ಎಲ್ಲ ಕತೆಗಳಲ್ಲಿಯೂ ಅಸಹಾಯಕ ಜೀವಿಗಳನ್ನೇ ಮುಖ್ಯ ಪಾತ್ರಗಳನ್ನಾಗಿ ಮಾಡಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ವೈಯಕ್ತಿಕ ಅಥವಾ ಕೌಟಂಬಿಕ ಸಮಸ್ಯೆಯೇ ಅಸಹಾಯಕತೆಯ ಕಾರಣವಾಗಿದೆ. ಅವರ ಕತೆಗಳಲ್ಲಿ ಕಾಣುವದು ಕರುಣರಸವೇ ಹೊರತು ಸಹಾನುಭೂತಿಯಲ್ಲ.

ದೇವನೂರ ಮಹಾದೇವ, ಅಮರೇಶ ನುಗಡೋಣಿ ಹಾಗು ರಾಘವೇಂದ್ರ ಖಾಸನೀಸರ ಕತೆಗಳಿಗೂ ಮತ್ತು ವಸುಧೇಂದ್ರರ ಕತೆಗಳಿಗೂ ಇರುವ ಮುಖ್ಯ ವ್ಯತ್ಯಾಸವೆಂದರೆ ಸಮಾಜದ ವ್ಯವಸ್ಥೆಯಲ್ಲಿ ಬಲಿಪಶುಗಳಾದವರಿಗೆ ವಸುಧೇಂದ್ರರ ಹೃದಯದಲ್ಲಿ ಉಕ್ಕುತ್ತಿರುವ ಸಹಾನುಭೂತಿ; ಹೀಗಾಗಿ ಅವರ ಕತೆಗಳಲ್ಲಿ ಅನುಕಂಪವೇ ಪ್ರಧಾನ ರಸವಾಗುತ್ತದೆ.

ಈ ಮೇಲಿನ ಮೂರು ಕಥಾಸಂಕಲನಗಳಲ್ಲಿ, ವಸುಧೇಂದ್ರರು ಮೊದಲು ಒಂದು ಸಾಂಪ್ರದಾಯಕ ಸಮಾಜದ ಕತೆಯನ್ನು, ಆನಂತರ ಒಂದು ಆಧುನಿಕ ಸಮಾಜದ ಕತೆಯನ್ನು ಕೊಡುತ್ತಾ ಹೋಗಿದ್ದಾರೆ. ಈ ರೀತಿಯಾಗಿ ತಮ್ಮ ಸಂಕಲನಗಳಲ್ಲಿ ಒಂದು ರೀತಿಯ ಸಮತೋಲನವನ್ನು ಸಾಧಿಸಲು ಯತ್ನಿಸಿದ್ದಾರೆ. ಆದರೆ ಅವರ ಬಹುತೇಕ ಕತೆಗಳಲ್ಲಿ ಸಂಕಟಪಡುವ ಪಾತ್ರವೆಂದರೆ ಒಬ್ಬ ಅಸಹಾಯಕ ಹೆಣ್ಣು ಮಗಳು.

“ಮನೀಷೆ” ಕಥಾಸಂಕಲನದ ಮೊದಲ ಕಥೆಯಾದ “ನಮ್ಮ ವಾಜೀನ್ನೂ ಆಟಕ್ಕೆ ಸೇರಿಸ್ಕೊಳ್ರೋ” ಕತೆಯನ್ನು ಉದಾಹರಣೆಗೆ ತೆಗೆದುಕೊಳ್ಳಬಹುದು. ಒಂದು ಹಳೆಯ ಕಾಲಘಟ್ಟದ ಬ್ರಾಹ್ಮಣ ಸಮಾಜದ ಚಿತ್ರಣ ಇಲ್ಲಿದೆ.
ಮೈಗೆ ಅಲ್ಲಲ್ಲಿ ಬಿಳುಪು ಹತ್ತುತ್ತಿರುವ ತನ್ನ ಮಗನ ಭವಿಷ್ಯದ ಬಗೆಗೆ ಹೌಹಾರಿದ ವಿಧವೆಯ ಕತೆ ಇದು.
ಮಗನ ರೋಗಶಮನಕ್ಕಾಗಿ ಇವಳಿಗೆ ರಾಘವೇಂದ್ರಸ್ವಾಮಿಗಳ ಹರಕೆಯೇ ದಿವ್ಯೌಷಧ.

ನಡು ವಯಸ್ಸಿನಲ್ಲಿಯೆ ಗಂಡನನ್ನು ಕಳೆದುಕೊಂಡ ಬ್ರಾಹ್ಮಣ ಹೆಣ್ಣುಮಗಳೊಬ್ಬಳು ತನ್ನ ಹಾಗು ತನ್ನ ಚಿಕ್ಕ ಮಗನ ಹೊಟ್ಟೆ ತುಂಬಿಸಲು ಅಡುಗೆ ಕೆಲಸವನ್ನಲ್ಲದೆ ಬೇರಾವ ಕೆಲಸ ಮಾಡಬಲ್ಲಳು? ಇವಳಿಗೆ ಅಣ್ಣನೊಬ್ಬನಿದ್ದಾನೆ. ಆದರೆ ಎಲ್ಲ ಅಣ್ಣಂದಿರಂತೆ ಇವಳ ಅಣ್ಣನೂ ಸಹ ತನ್ನ ಹೆಂಡತಿಯ ಕೈಗೊಂಬೆ. ಅವನಿಗೆ ಇವಳ ಮೇಲೆ, ಇವಳ ಮಗನ ಮೇಲೆ ಕನಿಕರವಿರಬಹುದು. ಆದರೆ ಅದು ಪ್ರಯೋಜನಕ್ಕೆ ಬಾರದ ಕನಿಕರ. ಅಲ್ಲದೆ ಬ್ರಾಹ್ಮಣ ಸಮಾಜದ ಕ್ರೂರ ಕಟ್ಟಳೆಗಳು ಬೇರೆ. ಹೀಗಾಗಿ ಅವನೂ ಅಸಹಾಯಕ.

ಈ ಕತೆಯಲ್ಲಿಯ ಬ್ರಾಹ್ಮಣ ಸಮಾಜ ಕೊಳೆಯುತ್ತಿರುವ ಸಮಾಜವಲ್ಲ ; ಈಗಾಗಲೇ ಕೊಳೆತು ಹೋದ ಸಮಾಜ.
ಬಿಳುಪು ಕಾಣುತ್ತಿರುವ ತನ್ನ ಚಿಕ್ಕ ಮಗನಿಗೆ ಬ್ರಾಹ್ಮಣಸಮಾಜದಲ್ಲಿ acceptance ಕೊಡಿಸಲು ಈ ವಿಧವೆ ಸಂಕಟಪಡುತ್ತಿದ್ದಾಳೆ. ಮಠದ ಸ್ವಾಮಿಗಳ ಸಮಾರಂಭದಲ್ಲಿ, ತಾನು ಅಡುಗೆ ಮಾಡಿ, ತನ್ನ ಮಗನ ಕೈಯಿಂದ ನೀರು ಬಡಿಸಲು ಇವಳು ಶತಪ್ರಯತ್ನ ಮಾಡುತ್ತಾಳೆ. ಆದರೆ, ಕೊನೆಗೂ ಸ್ವಾಮಿಗಳ ಬಾಯಿಂದ ಛೀತ್ಕಾರ:
“ ದೇವರ ಪೂಜೆ ಮಾಡುವ ಈ ಕೈಗಳಿಗೆ, ಈ ತೊನ್ನು ಹತ್ತಿದವನ ಸ್ಪರ್ಷವೇ! ತೊಲಗಿಸಿರಿ ಇವನನ್ನು ಇಲ್ಲಿಂದ!”
ಬಹುಶ: ಈ ಮಾತನ್ನು ಈ ಕತೆಯ climax ಎನ್ನಬಹುದು.
(‘ದಯವೇ ಧರ್ಮದ ಮೂಲವಯ್ಯ’ ಎನ್ನುವ ಬಸವಣ್ಣನವರ ಮಾತು ಅಪ್ರಯತ್ನವಾಗಿ ಓದುಗನ ಮನಸ್ಸಿನಲ್ಲಿ ಆಗ ಸುಳಿಯದಿರದು.)

ಆದರೆ ಕತೆಯ ಹೆಚ್ಚುಗಾರಿಕೆ ಕೇವಲ ಈ climaxನಲ್ಲಿ ಮಾತ್ರವಿಲ್ಲ.
ಈ ಭರ್ತ್ಸನೆಯ ನಂತರವೂ ಆ ವಿಧವೆ ಎದೆಗುಂದುವದಿಲ್ಲ. ತನ್ನ ಮಗನ ಒಳಿತಿಗಾಗಿ ಅವಳ ಹೋರಾಟ ನಿಲ್ಲುವದಿಲ್ಲ.
ಕತೆಯ ಹೆಚ್ಚುಗಾರಿಕೆ ಇರುವದು ಇಂತಹ ಪರಾಭವದಲ್ಲೂ ಆ ವಿಧವೆ ತೋರಿಸುವ ಧೈರ್ಯದಲ್ಲಿದೆ. ಸಾಂಪ್ರದಾಯಕ ಸಮಾಜದ ಮೌಲ್ಯಗಳು ಒಬ್ಬ ಅಸಹಾಯಕ ವಿಧವೆಯಲ್ಲಿ ತುಂಬಬಹುದಾದ ಕೆಚ್ಚನ್ನು ತೋರಿಸುವದರಲ್ಲಿ ಈ ಕತೆಯ ಹೆಚ್ಚುಗಾರಿಕೆ ಇದೆ.

ಸಮಾಜದಿಂದ ಹಾಗೂ ತನ್ನ ಸ್ವಂತ ಗಂಡನಿಂದ ಅನ್ಯಾಯಕ್ಕೊಳಗಾಗಿಯೂ, ಕೆಚ್ಚಿನಿಂದ ಬದುಕು ಸಾಗಿಸಿದ ಹೆಣ್ಣು ಮಗಳ ಚಿತ್ರಣ ಸಿಗುವದು “ಚೇಳು” ಕತೆಯಲ್ಲಿ.
ತನ್ನ ಹೆಂಡತಿಗೆ ಮಕ್ಕಳಾಗಲೆಂದು ಭೈರವ ಬಾಬಾನ ಆಶೀರ್ವಾದ ಪಡೆಯಲು, ಮನಸ್ಸಿಲ್ಲದ ಹೆಂಡತಿಯನ್ನು ಕುರಿಯಂತೆ ನೂಕಿದ ಗಂಡ, ಬಾಬಾನ ಕಾಮಲೀಲೆಯನ್ನು ಕಂಡಾಗ, ಸಾರ್ವಜನಿಕವಾಗಿ ಹೆಂಡತಿಯ ಮಾನ ತೆಗೆಯಲು ಹೇಸುವದಿಲ್ಲ. ಅವಳ ತವರುಮನೆಯವರೂ ಸಹ ಈ ‘ಪತಿತೆ’ಯನ್ನು ತಿರಸ್ಕರಿಸುತ್ತಾರೆ. ಆದರೆ ಬಾಬಾ ತಾನು ಮಾಡಿದ ತಪ್ಪನ್ನು ಅರಿತು, ಈ ಅಸಹಾಯಕ ಹೆಣ್ಣು ಮಗಳಿಗೆ ಚೇಳಿನ ಮಂತ್ರವನ್ನು ಅನುಗ್ರಹಿಸಿ ಹೋಗುತ್ತಾನೆ. ಅವಳ ಬದುಕು ಈ ಚೇಳಿನ ಮಂತ್ರದ ಸಹಾಯದಿಂದ ಹೇಗೋ ಸಾಗುತ್ತಿರುತ್ತದೆ. ಆ ಸಮಯದಲ್ಲಿ ಆಧುನಿಕ ವೈಜ್ಞಾನಿಕ ಅನ್ವೇಷಣೆ ಅವಳ ಬದುಕಿಗೆ ಕುಠಾರವಾಗಿ ಬರುತ್ತದೆ. ಈ ಸಮಸ್ಯೆಗೆ ಅವಳು ಕಂಡುಕೊಳ್ಳುವ ಪರಿಹಾರವು ಅಸಹಾಯಕ ಜೀವಿಗಳು ಮೊರೆ ಹೋಗುವ ಏಕೈಕ ಮಾರ್ಗವಾಗಿದೆ. ಇಂತಹ ದುರಂತ ಕತೆಯನ್ನು ಸಹನೀಯವಾಗಿ ಮಾಡುವದು ವಸುಧೇಂದ್ರರ ವಿನೋದಪೂರ್ಣ ಶೈಲಿ.

ವಸುಧೇಂದ್ರರು ಬರೆದ ಇಂತಹ ಸಾಂಪ್ರದಾಯಿಕ ಸಮಾಜದ ಕತೆಗಳಲ್ಲಿಯೇ ಶ್ರೇಷ್ಠವಾದದ್ದು ‘ಚೇಳು’ ಕಥಾಸಂಕಲನದಲ್ಲಿಯ ಕತೆ: “ ಹೊಟ್ಟೆಯೊಳಗಿನ ಗುಟ್ಟು”.

ವಿಧವೆಯೊಬ್ಬಳು ಬ್ರಾಹ್ಮಣ ಕುಟುಂಬವೊಂದರಲ್ಲಿ ಮನೆಕೆಲಸ ಮಾಡುತ್ತ ಬದುಕು ಸಾಗಿಸುತ್ತಿದ್ದಾಳೆ. ದೀರ್ಘ ಕಾಲದ ನಂತರ ಅವಳ ಯಜಮಾನಿಯೂ ಸಹ ವಿಧವೆಯಾಗಿದ್ದಾಳೆ. ಇದಿಷ್ಟು ಕತೆಯಲ್ಲಿ ಬರೆಯದೆ ಇದ್ದ ಹಿನ್ನೆಲೆ.
ಇದೀಗ, ಯಜಮಾನಿಯ ಶ್ರಾದ್ಧದ ಕೊನೆಯ ವಿಧಿಯಾದ ಕಾಕಪಿಂಡದಿಂದ ಕತೆ ಪ್ರಾರಂಭವಾಗುತ್ತದೆ.

ನಗರದಲ್ಲಿ ವಾಸಿಸುತ್ತಿರುವ ಅವಳ ಮಗ ಶ್ರಾದ್ಧಕರ್ಮಕ್ಕಾಗಿ ಮನೆಗೆ ಬಂದಿದ್ದಾನೆ. ಕಾಕಪಿಂಡ ಆಗುತ್ತಿಲ್ಲ.
ಅಲ್ಲಿರುವ ಸಂಬಂಧಿಕರೆಲ್ಲರೂ ಪ್ರಯತ್ನಿಸುತ್ತಾರೆ. ಆದರೂ ಕಾಕಪಿಂಡ ಆಗುವದಿಲ್ಲ.
ಕೊನೆಗೊಮ್ಮೆ ಈ ಮನೆಕೆಲಸದ ಮುದಿ ವಿಧವೆಯಿಂದ ಕಾಕಪಿಂಡ ಆಗುತ್ತದೆ.
ಅವಳು ತನ್ನ ಯಜಮಾನಿಯ ಪಿಂಡಕ್ಕೆ ಹೇಳಿದ್ದೇನು?
ಅದು ಕತೆಯ ಮುಕ್ತಾಯದಲ್ಲಿಯೂ ಗುಟ್ಟಾಗಿಯೇ ಉಳಿಯುತ್ತದೆ.

ಈ ಕತೆಯಲ್ಲಿ, ಈ ಮನೆಗೆಲಸದ ವಿಧವೆಯ ಸಂಕಷ್ಟಗಳ ಬಗೆಗೆ ಎಲ್ಲಿಯೂ ಪ್ರತ್ಯಕ್ಷವಾಗಿ ಹೇಳಿಲ್ಲ. ಆದರೆ ಓರ್ವ ಅಸಹಾಯಕ ವಿಧವೆಯನ್ನು ಅವಳ ಆಶ್ರಯದಾತರು ಹಾಗೂ ಸಮಾಜ ಯಾವ ರೀತಿಯಲ್ಲಿ ಶೋಷಿಸಿರಬಹುದು, ಅವಳ ತಾಪಗಳಿಗೆ ಅವರು ಎಷ್ಟರ ಮಟ್ಟಿಗೆ insensitive ಆಗಿರಬಹುದು ಎನ್ನುವ ಕಲ್ಪನೆ ಓದುಗನ ಚಿತ್ತದಲ್ಲಿ ಕ್ಷಣಮಾತ್ರಕ್ಕೆ ಮಿಂಚುತ್ತದೆ. ಇಷ್ಟಾಗಿಯೂ ದೈಹಿಕವಾಗಿ ಹಾಗೂ ಆರ್ಥಿಕವಾಗಿ ಶೋಷಿತಳಾದ ಆ ಮುದಿ ವಿಧವೆಯ ಹೃದಯದಲ್ಲಿ ಮಿಣುಕುತ್ತಿರುವ ಸಾಂಪ್ರದಾಯಕ ಮೌಲ್ಯಗಳನ್ನು ತೋರಿಸುವದೇ ವಸುಧೇಂದ್ರರ ಮುಖ್ಯ ಗುರಿಯಾಗಿದೆ.

ಅಸಹಾಯಕತೆಯ ಪರಮಾವಧಿಯನ್ನು ನೋಡಬೇಕಾದರೆ , “ ಹುಲಿಗೆ ಕಾಡೇ ರಕ್ಷೆ, ಕಾಡಿಗೆ ಹುಲಿಯೇ ರಕ್ಷೆ ” ಕತೆಯನ್ನು ಓದಬೇಕು. ಈ ಕತೆಯಲ್ಲಿ ಮನೆಯ ಯಜಮಾನ ಮಾನಸಿಕವಾಗಿ ಅತ್ಯಂತ ಬಲಹೀನ ಮನುಷ್ಯ. ಆತನ ಕುಟುಂಬಕ್ಕೆ ಅವನ ಹೆಂಡತಿಯೇ ಧೈರ್ಯದ ಆಧಾರ. ಆದರೆ, ಸಮಾಜದ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯ ಅವರಲ್ಲಿ ಇಲ್ಲ. ಆದರೆ ಶೋಷಣೆಗೆ ಒಳಗಾಗಿಯೂ, ಗಂಡನಲ್ಲಿ ಹಾಗು ಮಕ್ಕಳಲ್ಲಿ ಧೈರ್ಯವನ್ನು ತುಂಬುವವಳು, ಕುಟುಂಬವನ್ನು ಸಂಬಾಳಿಸಿಕೊಂಡು ಹೋಗುವವಳು ಹೆಂಡತಿಯೇ.

ಸಾಂಪ್ರದಾಯಕ ಸಮಾಜದಲ್ಲಿಯ ಅಸಹಾಯಕ ಹೆಣ್ಣುಮಗಳ ಶ್ರೇಷ್ಠ ಕತೆ ಎಂದರೆ “ಸೀಳು ಲೋಟ”. ಈ ಕತೆ ಇಲ್ಲಿ ತೋರಿಸಿದ ಮೂರು ಸಂಕಲನಗಳಲ್ಲಿ ಇಲ್ಲ. ಇದನ್ನು ಓದಬಯಸುವವರು ದಯವಿಟ್ಟು
ಇಲ್ಲಿನೋಡಿರಿ.
ಈ ಕತೆಯಲ್ಲಿಯೂ ಸಹ ಬಲಹೀನ ಗಂಡ, ಅಸಹಾಯಕ ಅಣ್ಣ ಹಾಗು ನೆರೆಹೊರೆಯವರ ಔದಾರ್ಯದ ಮೇಲೆ ಬದುಕು ಸಾಗಿಸಬೇಕಾದಂತಹ ಹೆಂಗಸಿನ ಕತೆ ಇದು.

ಇಷ್ಟೆಲ್ಲ ಕಾರ್ಪಣ್ಯಗಳ ನಡುವೆಯೂ ಆಕೆ ಸಾಂಪ್ರದಾಯಿಕ ಸಮಾಜ ನೀಡಿದ ಸಂಸ್ಕಾರದ ಮೌಲ್ಯಗಳನ್ನು ಬಿಟ್ಟಿಲ್ಲ. ಕತೆಯ ಕೊನೆಕೊನೆಯಲ್ಲಿ ಅವಳು ತನ್ನ ಮಗನಿಂದ ಆಣೆ ಹಾಕಿಸಿಕೊಳ್ಳುವ ಭಾಗವು ಕತೆಯ ಪರಾಕಾಷ್ಠೆ ಎನ್ನಬಹುದು.
ಫ್ರಾನ್ಸ್ ದೇಶದ ಕತೆಗಾರ ಮೊಪಾಸಾನ ಕತೆಗಳನ್ನು ನೆನಪಿಸುವ ಈ ಕತೆ ಕನ್ನಡದ ಒಂದು ಶ್ರೇಷ್ಠ ಕತೆಯಾಗಿದೆ.

ಈ ಎಲ್ಲ ಕತೆಗಳಲ್ಲಿಬರುವ ಹೆಣ್ಣುಮಕ್ಕಳು ಸಮಾಜದ ನೀತಿಯನ್ನು ಒಪ್ಪಿಕೊಂಡಂತಹ ಸಾಮಾನ್ಯ ಜೀವಿಗಳು. ಸಮಾಜದ ವಿಧಿಗಳನ್ನು ದಾಟದಯೇ, ಕೆಚ್ಚಿನಿಂದ ಬದುಕು ಮಾಡಿದವರು. ಸ್ವತಃ ಶೋಷಣೆಗೆ ಒಳಗಾಗಿದ್ದರೂ, ಮಾನವೀಯತೆಯನ್ನು ಮರೆತವರಲ್ಲ. ಅರ್ಥಾತ್, ಇವಳು ಸಾಮಾನ್ಯ ಭಾರತೀಯ ಹೆಣ್ಣು ಮಗಳು. ತನ್ನ ದುಗುಡ ದುಮ್ಮಾನಗಳು ಏನೇ ಇರಲಿ, ಸಂಪ್ರದಾಯವು ತನಗೆ ಚಿಕ್ಕಂದಿನಿಂದ ಕಲಿಸಿದ ಮೌಲ್ಯಗಳನ್ನು ಬಾಳಿನಲ್ಲಿ ಅರಗಿಸಿಕೊಂಡ ಭಾರತೀಯ ಹೆಣ್ಣುಮಗಳು.

ವಸುಧೇಂದ್ರರು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳನ್ನೂ ಸಹ ಕೊಟ್ಟಿದ್ದಾರೆ. “ ಕ್ಷಿತಿಜ ಹಿಡಿಯ ಹೊರಟವರಾರು, ಹೆಡ್ ಹಂಟರ, ಕಣ್ತೆರದು ನೋಡಲ್ಲಿ ಗೆದ್ದಲು ಮರ ಕೆಡವಲಿದೆ, ಗುಳ್ಳೆ ” ಮುಂತಾದವು ಆಧುನಿಕ ಸಮಾಜದಲ್ಲಿಯ ಅಸಹಾಯಕರ ಕತೆಗಳು. ಆಧುನಿಕ ಸಮಾಜದ ಆರ್ಥಿಕ ಆಸೆಬುರುಕತನ ಈ ಎಲ್ಲ ಕತೆಗಳಿಗೆ ಹಿನ್ನೆಲೆಯಾಗಿದೆ.

ಇವಲ್ಲದೆ, ಮತ್ತೊಂದು ವರ್ಗದ ಅಸಹಾಯಕ ಜೀವಿಗಳ ಕತೆಯೂ ಇಲ್ಲಿವೆ. ಸಮಾಜದ ಚೌಕಟ್ಟಿಗೆ ಸಂಬಂಧವಿರದೆ, ತನ್ನೊಳಗಿನ ವೈಯಕ್ತಿಕ ಅಥವಾ ಆರ್ಥಿಕ ಕಾರಣದಿಂದಾಗಿ ಕಷ್ಟಪಡುತ್ತಿರುವ ಅಸಹಾಯಕ ಜೀವಿಗಳ ಕತೆಗಳಿವು.

“ ಅಪಸ್ವರದಲ್ಲೊಂದು ಆರ್ತನಾದ ” ಕತೆಯಲ್ಲಿ ಮನೆಯ ಪರಿಸ್ಥಿತಿಯಿಂದಾಗಿ, ಮದುವೆಯಾಗದೇ ಇರುವ ಒಬ್ಬಳು ಹುಡುಗಿ ಹಾಗೂ ಅವಳ ವಿಧವೆ ಅಮ್ಮನ ತೊಳಲಾಟಗಳ ಚಿತ್ರಣವಿದೆ.
“ ಅನಘ ” ಕತೆಯಲ್ಲಿ ಹಳ್ಳಿಯಲ್ಲಿರುವ transvestite ಹುಡುಗನೊಬ್ಬನ ಸಮಸ್ಯೆಯ ಚಿತ್ರಣವಿದೆ. ಈ ಕತೆಯಲ್ಲಿ ಹುಡುಗನ ಬಲಹೀನತೆ ಹಾಗು ಅವನ ಅಪ್ಪನ ಪೌರುಷಗಳಿಗೆ ಮುಖಾಮುಖಿಯಾಗಿ ನಿಲ್ಲುವದು ಸೂಳೆಯೊಬ್ಬಳಲ್ಲಿ ಮಿನಗುತ್ತಿರುವ ಮಾನವೀಯತೆ.
“ಯುಗಾದಿ” ಕತೆಯಲ್ಲಿ ಬದಲಾದ ಸಾಮಾಜಿಕ ಮೌಲ್ಯಗಳಿಂದಾಗಿ ಒದ್ದಾಡುತ್ತಿರುವ ಹಿರಿಯ ಜೀವಿಯೊಬ್ಬನ ಅಸಹಾಯಕತೆಯ ಚಿತ್ರಣವಿದೆ. ಇಲ್ಲಿಯೂ ಸಹ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಕೆಳಸ್ತರದಲ್ಲಿರುವ ವ್ಯಕ್ತಿಗಳು ಉಳಿಸಿಕೊಂಡು ಬಂದಿರುವ ಸಾಂಪ್ರದಾಯಕ ಮೌಲ್ಯಗಳೇ ಕತೆಯ ತಿರುಳಾಗಿವೆ.

ಹಾಗಾದರೆ, ವಸುಧೇಂದ್ರರ ಕತೆಗಳು ಕೇವಲ ಅಸಹಾಯಕರ ಕತೆಗಳೇ ಎನ್ನುವ ಸಂದೇಹ ಬರಬಹುದು.
ನಿಜ ಹೇಳಬೇಕೆಂದರೆ, ವಸುಧೇಂದ್ರರ ಕತೆಗಳು ಮೌಲ್ಯವನ್ನು ಹುಡುಕುತ್ತಿರುವ ಕತೆಗಳು.
ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಹೀನರಾದವರಲ್ಲಿಯೇ ಅಂದರೆ ಶೋಷಣೆಗೆ ಒಳಗಾದವರಲ್ಲಿಯೇ ಈ ಮೌಲ್ಯಗಳು ಉಳಿದುಕೊಂಡಿರುವದು ಈ ಕತೆಗಳಲ್ಲಿಯ ವೈಶಿಷ್ಟ್ಯ.

ವಸುಧೇಂದ್ರರು ಮೌಲ್ಯಗಳನ್ನು ಹುಡುಕಲು ಬಲಹೀನರನ್ನೇ ಆರಿಸಿಕೊಳ್ಳುತ್ತಾರೆಯೇ ಎನ್ನುವ ಪ್ರಶ್ನೆಯೂ ಬರಬಹುದು. ಆದರೆ ಇದು ಕೇವಲ ಸಾಂದರ್ಭಿಕ. ವಸುಧೇಂದ್ರರರದು ಸೂಕ್ಷ್ಮ ಸಂವೇದನಾ ಮನಸ್ಸು. ಎಲ್ಲೇ ಸಂತಾಪ ಕಾಣಲಿ, ಅವರ ಮನ ಮಿಡಿಯುತ್ತದೆ. ಅದರ ಫಲವೇ ಈ ಕತೆಗಳು.

ವಸುಧೇಂದ್ರರ ಕತೆಗಳು ಅವರ ಆಪ್ತ ಪರಿಸರದಿಂದ ಹೊಮ್ಮಿವೆ. ಸಾಂಪ್ರದಾಯಕ ಸಮಾಜದ ಕತೆಗಳೆಲ್ಲ ಸಂಡೂರಿನ ಸುತ್ತಮುತ್ತಲಿನ ಕತೆಗಳು. ಇಲ್ಲಿಯ ಪರಿಸರವನ್ನು ವಿನೋದಪೂರ್ಣವಾಗಿ ಕಟ್ಟಿಕೊಡುವದರಲ್ಲಿ ವಸುಧೇಂದ್ರರು ಯಶಸ್ವಿಯಾಗಿದ್ದಾರೆ. ಈ ಕತೆಗಳು ಸಾಂಪ್ರದಾಯಕ ಸಮಾಜದ ಕೊಳಕನ್ನು ತೋರಿಸುವಂತೆಯೇ, ಆ ಸಮಾಜವು ನೀಡಿದ ಮೌಲ್ಯಗಳನ್ನೂ ತೋರಿಸುತ್ತವೆ.
ಆಧುನಿಕ ಸಮಾಜದ ಕತೆಗಳೆಲ್ಲ ಬೆಂಗಳೂರು ನಗರದ ಕತೆಗಳು. ದುಡ್ಡೇ ದೊಡ್ಡಪ್ಪ ಎನ್ನುವದೇ ಇಲ್ಲಿಯ ಮೌಲ್ಯ.
ತೆಳುವಿನೋದದ ತಿಳಿಲೇಪನವಿರುವದರಿಂದ ವಸುಧೇಂದ್ರರ ಕತೆಗಳಲ್ಲಿಯ ಸಂಕಟವು ಸಹನೀಯವಾಗಿದೆ.

Tuesday, October 7, 2008

ಕೋಡಗನ್ನ ಕೋಳಿ ನುಂಗಿತ

‘ಕೋಡಗನ್ನ ಕೋಳಿ ನುಂಗಿತ’ ಇದು ಶರೀಫರ ಒಡಪಿನ ಅಥವಾ ಬೆಡಗಿನ ಹಾಡು.
ಇಂತಹ ಹಾಡುಗಳನ್ನು ಶರೀಫರಲ್ಲದೆ, ಕನಕದಾಸರು ಹಾಗೂ ಪುರಂದರದಾಸರೂ ಸಹ ರಚಿಸಿದ್ದಾರೆ.
‘ಬಯಲು ಆಲಯದೊಳಗೊ ಆಲಯವು ಬಯಲೊಳಗೊ
ಬಯಲು ಆಲಯವೆರಡು ನಿನ್ನ ಒಳಗೊ’ ಎನ್ನುವ ಕನಕದಾಸರ ಹಾಡನ್ನು ಉದಾಹರಣೆಗೆ ನೋಡಬಹುದು.

ಅದರಂತೆ ಪುರಂದರದಾಸರ ಈ ರಚನೆ ಸಹ ಪ್ರಸಿದ್ಧವಿದೆ:
“ಸುಳ್ಳು ನಮ್ಮಲ್ಲಿಲ್ಲವಯ್ಯಾ
ಸುಳ್ಳೆ ನಮ್ಮನಿ ದೇವರು”.
………………………………………………………….
‘ಕೋಡಗನ್ನ ಕೋಳಿ ನುಂಗಿತ’ ಎನ್ನುವ ಪದದಲ್ಲಿ ಶರಿಫರು ಮನಸ್ಸನ್ನು ಮರ್ಕಟಕ್ಕೆ ಹಾಗು ಜ್ಞಾನೋದಯವನ್ನು ಕೋಳಿಗೆ ಹೋಲಿಸಿ ಹಾಡಿದ್ದಾರೆ. ಸಂಸಾರವೆಂಬ ವೃಕ್ಷಕ್ಕೆ ವಿಷಯಗಳು ಟೊಂಗೆಗಳಿದ್ದಂತೆ. ಮನಸ್ಸೆಂಬ ಮಂಗವು ಸಂಸಾರದಲ್ಲಿ ವಿಷಯದಿಂದ ವಿಷಯಕ್ಕೆ ಹಾರುತ್ತ ಸುಖಪಡುತ್ತದೆ.
ಕೋಳಿಯ ಕೂಗು ಬೆಳಗಿನ ಸೂಚನೆ. ಶರೀಫರ ಹಾಡಿನಲ್ಲಿ ಇದು ಆಧ್ಯಾತ್ಮಿಕ ಬೆಳಗನ್ನು ಸೂಚಿಸುವ ಕೋಳಿ. ಆಧ್ಯಾತ್ಮಿಕ ಜ್ಞಾನೋದಯವು ಕೋಡಗದಂತಿರುವ ಮನಸ್ಸನ್ನು ನುಂಗಿ ಹಾಕುತ್ತದೆ ಎಂದು ಶರೀಫರು ಹೇಳುತ್ತಾರೆ.

ಪುರಂದರದಾಸರೂ ಸಹ ತಮ್ಮ ಒಂದು ರಚನೆಯಲ್ಲಿ ಮರ್ಕಟದಂತಿರುವ ಮನಸ್ಸನ್ನು ಡೊಂಕು ಬಾಲದ ನಾಯಿಗೆ ಹೋಲಿಸಿದ್ದಾರೆ. ತಿದ್ದಲು ಎಷ್ಟೇ ಪ್ರಯತ್ನಿಸಿದರೂ ಸಹ ಈ ಮನಸ್ಸು ನಾಯಿಯ ಬಾಲದಂತೆ ಡೊಂಕಾಗಿಯೇ ಉಳಿಯುತ್ತದೆ. ಅರ್ಥಾತ್ ಈ ಮನಸ್ಸಿಗೆ ಜ್ಞಾನೋದಯವಿನ್ನೂ ಆಗಿಲ್ಲ. ಪುರಂದರದಾಸರ ಈ ಹಾಡಿನಲ್ಲಿ ಒಂದು ವಿಶೇಷತೆ ಇದೆ. ಹಾಡಿನ ಪಲ್ಲವನ್ನು ನೋಡೋಣ:

“ಡೊಂಕು ಬಾಲದ ನಾಯಕರೆ,
ನೀವೇನೂಟವ ಮಾಡಿದಿರಿ?” ||ಪಲ್ಲ||

ಡೊಂಕು ಬಾಲದ ನಾಯಕರು ಎಂದರೆ ‘ನಾಯಿ’ ಎನ್ನುವದು ತಿಳಿದ ವಿಷಯವೇ.
ಆದರೆ ‘ನಾಯಕರು’ ಎನ್ನುವಲ್ಲಿ ಒಂದು ಹೆಚ್ಚಿನ ಅರ್ಥವಿದೆ.
ಪುರಂದರದಾಸರ ಪೂರ್ವಾಶ್ರಮದ ಹೆಸರು: ಶ್ರೀನಿವಾಸ ನಾಯಕ.
ದಾಸರು “ಡೊಂಕು ಬಾಲದ ನಾಯಕರೆ” ಎನ್ನುವಾಗ ತಮ್ಮನ್ನೇ ಸಂಬೋಧಿಸಿಕೊಳ್ಳುತ್ತಿದ್ದಾರೆ !
. . .. .. . . . . . . .. . . . . . . . . . .. . . . . . . .

ಶರೀಫರ ರಚನೆಯ ಪೂರ್ತಿ ಪಾಠ ಹೀಗಿದೆ:

ಕೋಡಗನ್ನ ಕೋಳಿ ನುಂಗಿತ
ನೋಡವ್ವ ತಂಗಿ ||ಪಲ್ಲ||

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ ||೩||

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ ||೪||

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ ||೫||
. . .. . . . . .. . . . . . . .. . . . . . . . .. . .

ಶರೀಫರು ಆಧುನಿಕ ಕಾಲದ ಕವಿಗಳಂತೆ, ಮುಚ್ಚಿದ ಕೋಣೆಯಲ್ಲಿ ಕುಳಿತು, ಪೆನ್ನು ಅಥವಾ ಪೆನ್ಸಿಲಿನಿಂದ ಕವನ ಬರೆಯುವ ಕವಿ ಅಲ್ಲ. ತಮ್ಮ ಸುತ್ತ ನೆರೆದಿರುವ ಜನಸಮುದಾಯದ ಎದುರಿಗೆ ಸ್ಫೂರ್ತಿಯುತವಾಗಿ ಕವನ ಹಾಡುವದು ಅವರ ಪದ್ಧತಿ. ಜನಸಮುದಾಯಕ್ಕೆ ಜ್ಞಾನದ ಬೆಳಕು ಸಿಗಲಿ ಎನ್ನುವದು ಅದರ ಉದ್ದೇಶ.
ಹೀಗಾಗಿ ಇವರ ಕವನಗಳ ರಚನೆಯನ್ನು ಗಮನಿಸಿದಾಗ, ಕೆಲವೊಂದು ಕವನದ ಸಾಲುಗಳಲ್ಲಿ repetitiveness ಕಾಣುವದು ಸಹಜ.

‘ಕೋಡಗನ್ನ ಕೋಳಿ ನುಂಗಿತ’ ಕವನದ ಎಲ್ಲಾ ನುಡಿಗಳಲ್ಲಿ ಕಂಡು ಬರುವದು ಒಂದೇ ಅರ್ಥ.
ಮೊದಲ ನುಡಿಯ ನಂತರ, ಕವನ ಮುಂದೆ ಸಾಗಿದಂತೆ ಅರ್ಥದ ಬೆಳವಣಿಗೆ ಸಾಗುವದಿಲ್ಲ.
ಆದರೆ ಆ ಕಾರಣಕ್ಕಾಗಿ ಕವನದ ಸೌಂದರ್ಯವೇನೂ ಕಡಿಮೆಯಾಗಿಲ್ಲ.

ಕವನದ ಪಲ್ಲದಲ್ಲಿ ಕವಿಯು ‘ಕೋಳಿ ಅಂದರೆ ಆಧ್ಯಾತ್ಮಿಕ ಜ್ಞಾನೋದಯವು ಕೋಡಗವನ್ನು ಅಂದರೆ ಮಂಗನಂತಿರುವ ಮನಸ್ಸನ್ನು ತಿಂದು ಹಾಕಿದೆ’ ಎಂದು ಹೇಳುತ್ತಾರೆ. ಇದೇ ಮಾತನ್ನು ಮುಂದಿನ ನುಡಿಯಲ್ಲಿ, ವಿಭಿನ್ನ ರೂಪಕಗಳ ಮೂಲಕ ಮತ್ತೆ ಮತ್ತೆ ಸ್ಪಷ್ಟ ಪಡಿಸುತ್ತಾರೆ:

ಆಡು ಆನೆಯ ನುಂಗಿ
ಗೋಡೆ ಸುಣ್ಣವ ನುಂಗಿ
ಆಡಲು ಬಂದ ಪಾತರದವಳ ಮದ್ಲಿ ನುಂಗಿತ ||೧||

ಆಡು ಅಂದರೆ ಜ್ಞಾನ. ಇದು ಸಣ್ಣದು . ಸಂಸಾರದ ಆಸೆಗಳಿಗೋ ಆನೆಯ ಬಲ.
ಇಂತಹ ಆನೆಯನ್ನು ಆಡಿನಂತಿರುವ ಜ್ಞಾನ ತಿಂದು ಹಾಕಿಬಿಡುತ್ತದೆ ಎಂದು ಶರೀಫರು ಹಾಡುತ್ತಾರೆ.

(ಈ ಸಂದರ್ಭದಲ್ಲಿ ಬಸವಣ್ಣನವರ ವಚನವೊಂದನ್ನು ನೆನಪಿಸಿಕೊಳ್ಳಬಹುದು:
“ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?” )

ಗೋಡೆ ಎಂದರೆ ಮನಸ್ಸಿನ ಭಿತ್ತಿ. ಜ್ಞಾನೋದಯದ ನಂತರ, ಈ ಗೋಡೆಯ ಮೇಲೆ, ಎಷ್ಟೇ ಸುಣ್ಣ ಹಚ್ಚಲಿ, ಯಾವುದೇ ಬಣ್ಣ ಹಚ್ಚಲಿ, ಅದನ್ನು ಗೋಡೆಯೇ ತಿಂದು ಹಾಕಿ ಬಿಡುತ್ತದೆ. ಗೋಡೆಯ surface ಮತ್ತೂ ನಿರ್ವರ್ಣವಾಗಿ, ಶುಭ್ರವಾಗಿಯೇ ಉಳಿಯುತ್ತದೆ.

ಆಡಲು ಬಂದ ಪಾತರದವಳು ಅಂದರೆ ಕುಣಿಯಲು ಬಂದ ನರ್ತಕಿ, ಅರ್ಥಾತ್ ಸಂಸಾರದಲ್ಲಿ ಆಡಲು ಬಂದ ಜೀವಾತ್ಮ. ಮದ್ದಲೆ ಅಂದರೆ ಪರಮಾತ್ಮ ಬಾರಿಸುತ್ತಿರುವ ಜ್ಞಾನದ ಮದ್ದಲೆ.

ಈ ರೂಪಕಕ್ಕೆ ಒಂದು ವಿಶಿಷ್ಟ ಹಿನ್ನೆಲೆ ಇದೆ. ಚಾಮರಸ ಬರೆದ ‘ಪ್ರಭುಲಿಂಗ ಲೀಲೆ’ ಕಾವ್ಯದಲ್ಲಿ ಅಲ್ಲಮನಿಗೂ, ಮಾಯಾದೇವಿಗೂ ಸ್ಪರ್ಧೆ ಏರ್ಪಡುತ್ತದೆ. ಅಲ್ಲಮ ಮದ್ದಲೆ ಬಾರಿಸುತ್ತಿದ್ದಂತೆ, ಅದರ ತಾಳಕ್ಕೆ ತಕ್ಕಂತೆ ಕುಣಿಯಲು ಮಾಯಾದೇವಿಗೆ ಸಾಧ್ಯವಾಗುವದಿಲ್ಲ. ಅವಳು ಸೋಲೊಪ್ಪಿಕೊಳ್ಳುತ್ತಾಳೆ.

‘ಪ್ರಭುಲಿಂಗ ಲೀಲೆ’ ಶರೀಫರಿಗೆ ಪ್ರಿಯವಾದ ಕಾವ್ಯ.
ತಾವೇ ಮಾಡಿಕೊಂಡ ಇದರ ಹಸ್ತಪ್ರತಿಯೊಂದನ್ನು ಅವರು ಯಾವಾಗಲೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳುತ್ತಿದ್ದರಂತೆ.

ಎರಡನೆಯ ನುಡಿಯಲ್ಲಿ ಶರೀಫರು ಸಂಸಾರದಲ್ಲಿರುವ ಸಾಧಕನ ಪ್ರಗತಿಯ ರೀತಿಯನ್ನು ವರ್ಣಿಸಿದ್ದಾರೆ:

ಒಳ್ಳು ಒನಕಿಯ ನುಂಗಿ
ಬೀಸುಕಲ್ಲು ಗೂಟವ ನುಂಗಿ
ಕುಟ್ಟಲಿಕೆ ಬಂದ ಮುದುಕಿಯ ನೊಣವು ನುಂಗಿತ ||೨||

ಒಳ್ಳು ಹಾಗೂ ಬೀಸುವ ಕಲ್ಲುಗಳನ್ನು ಶರೀಫರು ಸಂಸಾರಕ್ಕೂ, ಒನಕೆ ಹಾಗೂ ಬೀಸುವ ಕಲ್ಲಿನ ಗೂಟವನ್ನು ಸಾಧಕನ ಕರ್ಮಗಳಿಗೂ ಹೋಲಿಸಿದ್ದಾರೆ. ಕುಟ್ಟಲಿಕೆ ಬಂದ ಮುದುಕಿ ಅಂದರೆ ಈ ಸಂಸಾರದಲ್ಲಿ ಬಂದು, ಕರ್ಮಗಳಿಂದ ಪಕ್ವವಾದ ಜೀವಾತ್ಮ.
ಈ ಜೀವಾತ್ಮ is hammered on the anvil of life.
ಆದರೆ ಆತ ಪಕ್ವವಾದಾಗ, ಆತನ ಕರ್ಮಗಳು ಕರಗಿ ಹೋಗುತ್ತವೆ.
ಇಂತಹ ಜೀವಾತ್ಮನನ್ನು ನೊಣದಷ್ಟು ಸಣ್ಣಗಿನ ಜ್ಞಾನ ತಿಂದು ಹಾಕುತ್ತದೆ.

ಮೂರನೆಯ ನುಡಿಯಲ್ಲಿ ಶರೀಫರು ಸಂಸಾರ ಹಾಗೂ ಕರ್ಮಗಳನ್ನು ಬೇರೊಂದು ರೀತಿಯಲ್ಲಿ ವರ್ಣಿಸುತ್ತಾರೆ:

ಹಗ್ಗ ಮಗ್ಗವ ನುಂಗಿ
ಮಗ್ಗವ ಲಾಳಿ ನುಂಗಿ
ಮಗ್ಗದಾಗಿರುವ ಅಣ್ಣನ ಕುಣಿಯು ನುಂಗಿತ

ಮಗ್ಗವೆಂದರೆ ಸಂಸಾರ. ಮಗ್ಗವನ್ನು ಕಟ್ಟಿರುವ ಹಗ್ಗವೆಂದರೆ ಸಂಸಾರಕ್ಕೆ ಜೋತು ಬೀಳುವ ಮನಸ್ಸು.
ಮಗ್ಗದಲ್ಲಿ ಒಮ್ಮೆ ಅತ್ತ(=ಒಳ್ಳೆಯದರತ್ತ) ಒಮ್ಮೆ ಇತ್ತ(=ಕೆಡುಕಿನತ್ತ) ಸರಿಯುವ ಲಾಳಿ ಎಂದರೆ ಜೀವಾತ್ಮನೆಸಗುವ ಕರ್ಮಗಳು.
ಜ್ಞಾನವನ್ನು ಬಯಸುವ ಸಾಧಕನು ಈ ಸಂಸಾರದಲ್ಲಿ ಸಿಲುಕಲಾರ.
ಆತನ ಮನಸ್ಸು ಈ ಸಂಸಾರವನ್ನು ತಿಂದು ಹಾಕುತ್ತದೆ ಅಂದರೆ ನಾಶ ಮಾಡುತ್ತದೆ ಎಂದು ಶರೀಫರು ಹೇಳುತ್ತಾರೆ.
ಇದಾದ ಮೇಲೆ ಸಂಸಾರವೆನ್ನುವ ಮಗ್ಗದಲ್ಲಿ ನೇಯಲು ಕುಳಿತ ಅಣ್ಣನನ್ನು ಅಂದರೆ ಜೀವಾತ್ಮನನ್ನು ಮಗ್ಗದ ಕೆಳಗಿರುವ ಕುಣಿ (=space excavated below the loom for footwork) ನುಂಗಿ ಹಾಕುತ್ತದೆ.
ಅಂದರೆ ಆತನಿಗೆ ಜ್ಞಾನೋದಯವಾಗುತ್ತದೆ !

ನಾಲ್ಕನೆಯ ನುಡಿಯಲ್ಲಿಯೂ ಸಹ ಇದೇ ವಿಷಯವನ್ನು ಶರೀಫರು ಬೇರೆ ರೂಪಕಗಳ ಮೂಲಕ ವಿವರಿಸುತ್ತಾರೆ:

ಎತ್ತು ಜತ್ತಗಿ ನುಂಗಿ
ಬತ್ತ ಬಾನವ ನುಂಗಿ
ಮುಕ್ಕಟ ತಿರುವೊ ಅಣ್ಣನ ಮೇಳಿ ನುಂಗಿತ

ಹೊಲವನ್ನು ಊಳಲು ಎತ್ತಿನ ಕೊರಳಿಗೆ ಜತ್ತಗಿ (=ನೊಗಕ್ಕೆ ಹಾಗು ಎತ್ತಿನ ಕೊರಳಿಗೆ ಕಟ್ಟುವ ಪಟ್ಟಿ) ಕಟ್ಟಿರುತ್ತಾರೆ.
ಸಂಸಾರವೆಂಬ ಹೊಲವನ್ನು ಊಳಲು ಬಂದ ಎತ್ತು ಇದು.
ಇದು ತನ್ನನ್ನು ನೊಗಕ್ಕೆ ಅಂದರೆ ಕರ್ಮಗಳಿಗೆ ಬಂಧಿಸಿದ ಜತ್ತಗಿ ಅಂದರೆ ಕರ್ಮಪಾಶವನ್ನೆ ತಿಂದು ಹಾಕಿದೆ. (ಸಾಧನೆಯ ಸಹಾಯದಿಂದ).

ಬಾನ ಅಂದರೆ ದೇವರೆದುರಿಗೆ ಇಟ್ಟ ಎಡಿ, ನೈವೇದ್ಯ.
ಹೊಲದಲ್ಲಿ ದೇವರ ಎದುರಿಗೆ ಇಡಲಾದ ಈ ನೈವೇದ್ಯದ ಅನ್ನವನ್ನು ಬತ್ತವೇ ತಿಂದು ಹಾಕಿದೆ.
ಅರ್ಥಾತ್ ಈ ಸಾಧಕನ ಕರ್ಮಪಾಕಗಳು ಶಿಥಿಲವಾಗುತ್ತಿವೆ.
ಈ ಸಾಧಕನು ಮುಕ್ಕಟೆಯಾಗಿ (ಬೇಗ ಬೇಗನೇ), ಹೊಲವನ್ನು ಊಳುತ್ತಿದ್ದಾನೆ. ಅವನನ್ನು ಮೇಳಿ (=?) ನುಂಗಿ ಹಾಕಿದೆ. ಮೇಳಿ ಅಂದರೆ ಒಕ್ಕಲುತನದ ಸಾಧನವಿರಬಹುದು.

ಐದನೆಯ ನುಡಿಯಲ್ಲಿ ಶರೀಫರು ಸಾಧಕನು ಆಧ್ಯಾತ್ಮದ ಕೊನೆ ಮುಟ್ಟಿದ್ದನ್ನು ವಿವರಿಸಿದ್ದಾರೆ:

ಗುಡ್ಡ ಗಂವ್ಹರ ನುಂಗಿ
ಗಂವ್ಹರ ಇರಿವೆ ನುಂಗಿ
ಗುರುಗೋವಿಂದನ ಪಾದ ಆತ್ಮ ನುಂಗಿತ

ಬಹುಶ: ಗುಡ್ಡ ಎಂದರೆ ಅನಾದಿ-ಅನಂತನಾದ ಚಿತ್ ಸ್ವರೂಪನಾದ ಪರಮಾತ್ಮ.
ಈ ಪರಮಾತ್ಮನು ಗುಡ್ಡದಲ್ಲಿಯೆ ಇರುವ ಗಂವ್ಹರವನ್ನು (=ಗವಿಯನ್ನು) ಅಂದರೆ ಅನಾದಿ-ಅನಂತವಾದ ಸಂಸಾರವನ್ನು ನುಂಗಿದ್ದಾನೆ.
ಈ ಸಂಸಾರವು ತನ್ನಲ್ಲಿರುವ ಇರಿವೆಯನ್ನು ಅಂದರೆ ಕಾಲ ದೇಶದಿಂದ ಬಂಧಿತನಾದ ಅಸ್ತಿತ್ವವನ್ನು ಅಂದರೆ ಜೀವಾತ್ಮನನ್ನು ನುಂಗಿ ಹಾಕಿದೆ.
ಇದರರ್ಥವೆಂದರೆ ಪರಮಾತ್ಮನಲ್ಲಿ ಜೀವಾತ್ಮ ಲೀನವಾಗಿದೆ.
ಇದೇ ಮಾತನ್ನು ಶರೀಫರು ಹೀಗೂ ಹೇಳಿದ್ದಾರೆ:
‘ಗುರುಗೋವಿಂದನ ಪಾದ ಆತ್ಮ ನುಂಗಿತ ’.

ಶರೀಫರ ಈ ಒಡಪಿನ ಗೀತೆಯಲ್ಲಿರುವ ಒಂದು ರಚನಾವೈಶಿಷ್ಟ್ಯವನ್ನು ಗಮನಿಸಬೇಕು.
ಪ್ರತಿಯೊಂದು ನುಡಿಯಲ್ಲಿ ಮೊದಲ ಎರಡು ಸಾಲುಗಳು ನಿರ್ಜೀವ ಉಪಕರಣಗಳನ್ನು ಬಣ್ಣಿಸುತ್ತವೆ.
ಉದಾ: ಒಳ್ಳು, ಒನಕೆ, ಬಿಸುವ ಕಲ್ಲು. ಗೋಡೆ, ಹಗ್ಗ, ಮಗ್ಗ ಇತ್ಯಾದಿ.
ಪ್ರತಿ ನುಡಿಯ ಕೊನೆಯ ಸಾಲಿನಲ್ಲಿ ಜೀವಾತ್ಮನ ವರ್ಣನೆ ಇದೆ;
ಉದಾ: ಪಾತರದವಳು, ಮುದಕಿ, ಅಣ್ಣ ಹಾಗು ಆತ್ಮ .

ಈ ರೀತಿಯಾಗಿ, ಸಂಸಾರದಲ್ಲಿಳಿದ ಸಾಧಕನ ಜ್ಞಾನೋದಯವಾಗುತ್ತಿರುವ ಘಟ್ಟದಿಂದ ಪ್ರಾರಂಭಿಸಿ, ಆತ ಪರಮಾತ್ಮನಲ್ಲಿ ಲೀನವಾಗುವ ಘಟ್ಟದವರೆಗಿನ ವರ್ಣನೆ ಇಲ್ಲಿದೆ.
ಆದರೆ, ಕವನದಲ್ಲಿ ಸಾಧಕನ ಹಂತಹಂತದ ಬೆಳವಣಿಗೆಯನ್ನು ತೋರಿಸಿಲ್ಲ.
ವಿಭಿನ್ನ ರೂಪಕಗಳನ್ನು ಉಪಯೋಗಿಸುತ್ತ, ಅದೇ ಸಾರವನ್ನು ಶರೀಫರು ಮತ್ತೆ ಮತ್ತೆ ಹೇಳಿದ್ದಾರೆ.
ಇದರಲ್ಲಿ ತಪ್ಪೇನೂ ಇಲ್ಲ.
ಏಕೆಂದರೆ ಇದು ಕೋಣೆಯಲ್ಲಿ ಕುಳಿತು ರಚಿಸಿದ ಕವನವಲ್ಲ .
ತಮ್ಮ ಎದುರಿಗೆ ನೆರೆದು ನಿಂತಿರುವ ಸಾಮಾನ್ಯ ಹಳ್ಳಿಗರನ್ನು ಉದ್ದೇಶಿಸಿ, ಸ್ಫೂರ್ತಿ ಉಕ್ಕಿದಾಗ ಹಾಡಿದ ಹಾಡಿದು.
ಹಾಡು ಕೇಳುತ್ತಿರುವ ಸಾಮಾನ್ಯ ಹಳ್ಳಿಗನಿಗಾಗಿ ಅವನ ಹೃದಯಕ್ಕೆ ಅರ್ಥವಾಗುವಂತಹ ಭಾಷೆಯಲ್ಲಿ ಹಾಡಿದ ಹಾಡಿದು.
………………………………………………………..
( ಈ ಲೇಖನ ಬರೆಯುವಾಗ ಸಹಾಯ ಮಾಡಿದ ನನ್ನ ಶ್ರೀಮತಿ ವನಮಾಲಾಳಿಗೆ ಋಣಿಯಾಗಿದ್ದೇನೆ.)

Friday, October 3, 2008

ಅಳಬೇಡ ತಂಗಿ ಅಳಬೇಡ

ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , “ಅಳಬೇಡ ತಂಗಿ ಅಳಬೇಡ” ಮೊದಲಾದವು ಪ್ರಸಿದ್ಧವಾದ ಹಾಡುಗಳಾಗಿವೆ.

ಶರೀಫರು ಒಮ್ಮೆ ತಮ್ಮ ಊರಿನಲ್ಲಿ ನಡೆದು ಹೋಗುತ್ತಿದ್ದಾಗ, ಅದೇ ಮದುವೆಯಾದ ಹುಡುಗಿಯನ್ನು ಗಂಡನ ಮನೆಗೆ ಕಳಸಿ ಕೊಡುತ್ತಿರುವ ನೋಟವನ್ನು ನೋಡಿದರು. ಶರೀಫರ ಕಾಲದಲ್ಲಿ ಬಾಲ್ಯವಿವಾಹಗಳೇ ನಡೆಯುತ್ತಿದ್ದವು. ಹೀಗಾಗಿ, ಗಂಡನ ಮನೆಗೆ ಹೋಗುತ್ತಿರುವ ಹುಡುಗಿ ಅಳುವದು ಸಾಮಾನ್ಯ ದೃಶ್ಯವಾಗಿತ್ತು.

ಆಗ ಶರೀಫರ ಬಾಯಿಂದ ಹೊರಹೊಮ್ಮಿದ ಹಾಡು: ಅಳಬೇಡ ತಂಗಿ ಅಳಬೇಡ.
ಆ ಹಾಡು ಹೀಗಿದೆ:

ಅಳಬೇಡ ತಂಗಿ ಅಳಬೇಡ ನಿನ್ನ
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ ||ಪಲ್ಲ||

ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ
ಮಿಡಕ್ಯಾಡಿ ಮದಿವ್ಯಾದಿ ಮೋಜು ಕಾಣವ್ವ ಮುಂದ
ಹುಡುಕ್ಯಾಡಿ ಮಾಯದ ಮರವೇರಿದೆವ್ವಾ ||೧||

ಮಿಂಡೇರ ಬಳಗವು ಬೆನ್ನ್ಹತ್ತಿ ಬಂದು ನಿನ್ನ
ರಂಡೇರೈವರು ಕೂಡಿ ನಗುತಲಿ ನಿಂದು
ಕಂಡವರ ಕಾಲ್ಬಿದ್ದು ಕೈಮುಗಿದು ನಿಂತರ
ಗಂಡನ ಮನಿ ನಿನಗ ಬಿಡದವ್ವ ತಂಗಿ ||೨||

ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ಮತ್ತs
ಹಂಗನೂಲಿನ ಪರವಿ ಮರತೆವ್ವ ನಾರಿ
ಮಂಗಳ ಮೂರುತಿ ಶಿಶುನಾಳಧೀಶನ
ಅಂಗಳಕ ನೀ ಹೊರತಾದೆವ್ವ ಗೌರಿ ||೩||
..................................

ಹಾಡು ಪ್ರಾರಂಭವಾಗುವದು ಸಮಾಧಾನಪಡಿಸುವ ಮಾತುಗಳಿಂದ:
“ತಂಗೆವ್ವಾ, ನೀ ಎಷ್ಟs ಅತ್ತರೂ, ಅದರಿಂದ ಏನೂ ಪ್ರಯೋಜನ ಇಲ್ಲ.
ಇಲ್ಲಿ ಕೂಡಿದವರು ನಿನ್ನನ್ನು ಕಳಸುವವರೇ ಹೊರತು, ಉಳಿಸಿಕೊಳ್ಳೋರಲ್ಲಾ”.
ಈ ಮಾತುಗಳಲ್ಲಿಯ ವ್ಯಂಗ್ಯವನ್ನು ಗಮನಿಸಬೇಕು. ತೊಂದರೆ ಕೊಟ್ಟವನನ್ನು ಅಥವಾ ಅಪಕಾರ ಮಾಡಿದವನನ್ನು ಬೈಯಲು ಉಪಯೋಗಿಸುವ ಪದಪುಂಜವಿದು : “ ಏನಪಾ, ನಮ್ಮನ್ನೇನ ಕಳಸಬೇಕಂತ ಮಾಡಿಯೇನ?”

ಆದರೆ, ಇಲ್ಲಿ ಕಳಿಸುತ್ತಿರುವದು ಗಂಡನ ಮನೆಗೆ, ಅಂದರೆ ಸಂಸಾರವೆಂಬ ಮಾಯಾಲೋಕಕ್ಕೆ. ಇಂತಹ ಮಾಯಾಪ್ರಪಂಚಕ್ಕೆ ಈ ಹುಡುಗಿಯನ್ನು ನೂಕುತ್ತಿರುವವರ ಸಡಗರ ನೋಡಿರಿ:
“ಖಡೀಕೀಲೆ ಉಡಿಯಕ್ಕಿ ಹಾಕಿದರವ್ವಾ ಒಳ್ಳೆ
ದುಡಕೀಲೆ ಮುಂದಕ ನೂಕಿದರವ್ವಾ”.

ಗಂಡನ ಮನೆಗೆ ಕಳಿಸುವಾಗ ಮಗಳ ಉಡಿಯಲ್ಲಿ ಅಕ್ಕಿ ತುಂಬಿ ಕಳಿಸುವ ಸಂಪ್ರದಾಯವಿದೆಯಲ್ಲವೆ?
ಹಾಗಾಗಿ, ಈ ಹುಡುಗಿಯ ಉಡಿಯಲ್ಲಿ ಖಡಕ್ಕಾಗಿ (=full) ಅಕ್ಕಿ ತುಂಬಿ, ಬಳಿಕ ದುಡುಕುತ್ತ(=ಜೋರಿನಿಂದ) ಅವಳನ್ನು ಮುಂದೆ ನೂಕಿದರಂತೆ!
ಇದೆಲ್ಲ ಹುಡುಗಿಗೂ ಬೇಕಾದದ್ದೆ! ಅವಳು ಮಿಡುಕಿ, ಮಿಡುಕಿ ಅಂದರೆ ಹಂಬಲಿಸಿ ಮದುವೆಯಾದವಳು.
ಈ ಮಾಯೆಯ ಸಂಸಾರವನ್ನು ತಾನೇ ಹುಡುಕಿ ಹೊಕ್ಕವಳು.
ಒಮ್ಮೆ ಹೊಕ್ಕ ಮೇಲೆ ಮುಗಿಯಿತು.
ಇನ್ನು ಅವಳಿಗೆ ಮರಳುವ ಮಾರ್ಗವಿಲ್ಲ. This is path of no return.
ಈಗಾಗಲೇ ಅವಳಿಗೆ ಮಿಂಡರು ಗಂಟು ಬಿದ್ದಿದ್ದಾರೆ.
ಮಿಂಡರು ಅಂದರೆ ಮನಸ್ಸನ್ನು ಹಾದಿಗೆಡಿಸುವ ಪ್ರಲೋಭನೆಗಳು.

ತನ್ನಲ್ಲಿ ಸಂಪತ್ತು ಕೂಡಬೇಕು, ತನ್ನ ಅಂತಸ್ತು ಇತರರಿಗಿಂತ ಹೆಚ್ಚಾಗಬೇಕು, ತಾನು ಸರೀಕರೆದುರಿಗೆ ಮೆರೆಯಬೇಕು, ಇಂತಹ ಸಾಮಾನ್ಯ ಅಪೇಕ್ಷೆಗಳು ಮನಸ್ಸನ್ನು ಸನ್ಮಾರ್ಗದಿಂದ ದೂರ ಸರಿಸುವದರಿಂದ ಇವೆಲ್ಲ ಮಿಂಡರಿದ್ದ ಹಾಗೆ.
ದೇವರ ಆಲೋಚನೆ ಅಂದರೆ ಪಾತಿವ್ರತ್ಯ ; ಇತರ ಆಲೋಚನೆಗಳು ಹಾದರ.
ಇಷ್ಟೇ ಅಲ್ಲದೆ, ಇವಕ್ಕೆಲ್ಲ ಪ್ರೋತ್ಸಾಹ ಕೊಡುವ ‘ಐವರು ರಂಡೆಯರು’ ಅಂದರೆ ನಮ್ಮ ಪಂಚ ಇಂದ್ರಿಯಗಳು : ಕಣ್ಣು, ಕಿವಿ, ಮೂಗು,ನಾಲಗೆ ಹಾಗು ಚರ್ಮ.
ಈ ಐದು ಇಂದ್ರಿಯಗಳೂ ಸಹ ಸುಖಾಪೇಕ್ಷೆ ಮಾಡುತ್ತವೆ, ಅಲ್ಲವೆ?

“ಇಷ್ಟೆಲ್ಲ ಬಂಧನಗಳು ಇದ್ದಾಗ, ಇಲ್ಲಿ ಬಂದಿರುವ ಬಂಧುಗಳ ಕಾಲಿಗೆ ಬಿದ್ದರೆ, ನಿನಗೆ ಸದ್ಗತಿ ಹೇಗೆ ಸಿಕ್ಕೀತು, ತಂಗೆವ್ವಾ? ಇನ್ನು ನಿನಗೆ ಮಾಯಾಸಂಸಾರ ತಪ್ಪದು. ಮೋಜು ಬಯಸಿ ಮದಿವ್ಯಾದಿ, ಈಗ ಮೋಜನ್ನು ಅನುಭವಿಸು”, ಎಂದು ಶರೀಫರು ಹೇಳುತ್ತಾರೆ.

ಶರೀಫರು ಆ ಹುಡುಗಿಗೆ ಈ ಮಾಯಾಸಂಸಾರದಲ್ಲಿದ್ದ ಉತ್ಸಾಹವನ್ನು , ಆಸಕ್ತಿಯನ್ನು ಗಮನಿಸಿ ಈ ರೀತಿ ಹೇಳುತ್ತಾರೆ:
“ರಂಗೀಲಿ ಉಟ್ಟೀದಿ ರೇಶ್ಮಿದಡಿಶೀರಿ ”
ದಡಿ ಅಂದರೆ ಅಂಚು. ರಂಗೀಲಿ(=ರಂಗಿನಲ್ಲಿ) ಅಂದರೆ ಉತ್ಸಾಹದಿಂದ ರೇಶಿಮೆ ಸೀರೆ ಉಟ್ಟಿದ್ದಾಳೆ.
ಆದರೆ, ಈ ಹುಡುಗಿ ಹಂಗನೂಲಿನ ಪರವಿಯನ್ನು ಮರೆತು ಬಿಟ್ಟಿದ್ದಾಳೆ.
ಹಂಗನೂಲು ಅಂದರೆ, ಕೈಯಿಂದ ತಯಾರಿಸಿದ ಹತ್ತಿಯ ನೂಲು. ಅದರ ಪರವಿಯನ್ನು ಈ ಹುಡುಗಿ ಮರೆತಿದ್ದಾಳೆ. ಪರವಿ ಅಂದರೆ ಪರವಾಹ್ ಅನ್ನುವ ಉರ್ದು ಪದ ಅಂದರೆ ಕಾಳಜಿ, ಚಿಂತೆ, care, bother.
ಹೇಗೆ ಕೈಮಗ್ಗದ ಹತ್ತಿಯ ಬಟ್ಟೆ ನಿಸರ್ಗಸಹಜವಾಗಿದೆಯೊ ಹಾಗೆಯೇ ದೇವರ ನೆನಪು ನಮ್ಮ ಮನಸ್ಸಿಗೆ ಹತ್ತಿರವಾದದ್ದು. ಕೃತಕ ಹಾಗು ಆಡಂಬರದ ರೇಶಿಮೆ ಸೀರೆ ಎಂದರೆ ಸಂಸಾರದ ವೈಭವ. ಈ ವೈಭವಕ್ಕೆ ನೀನು ಮನಸೋತರೆ, ನೀನು ಮಂಗಳಮೂರುತಿ ದೇವರ ಸಾನ್ನಿಧ್ಯಕ್ಕೆ ಹೊರತಾಗುತ್ತೀ ಎಂದು ಶರೀಫರು ಎಚ್ಚರಿಸುತ್ತಾರೆ.
ಶರೀಫರು ‘ಮಂಗಳಮೂರುತಿ’ ಎನ್ನುವ ಪದವನ್ನು ಉದ್ದೇಶಪೂರ್ವಕವಾಗಿ ಬಳಸಿದ್ದಾರೆ. ಏಕೆಂದರೆ, ultimately ನಮಗೆ ಮಂಗಳವಾಗುವದು ಪಾರಮಾರ್ಥಿಕ ಚಿಂತನೆಯಿಂದಲೇ ಹೊರತು, ಸಾಂಸಾರಿಕ ಆಡಂಬರದಿಂದಲ್ಲ.

ಲೌಕಿಕ ಪ್ರತಿಮೆಗಳಿಗೆ ಆಧ್ಯಾತ್ಮಿಕ ಅರ್ಥವನ್ನು ನೀಡುವದು ಶರೀಫರ ವೈಶಿಷ್ಟ್ಯವಾಗಿದೆ. ಮಿಂಡೇರ ಬಳಗ, ರೇಶಿಮೆ ಸೀರಿ ಮೊದಲಾದ ಪ್ರತಿಮೆಗಳು ಅಚ್ಚ ದೇಸಿ ಪ್ರತಿಮೆಗಳು. ಇದರ ಜೊತೆಗೇ ಮಾಯದ ಮರದಂತಹ ಅಚ್ಚರಿಯ ಪ್ರತಿಮೆಗಳನ್ನೂ ಅವರು ಸಂಯೋಜಿಸುತ್ತಾರೆ. ಈ ರೀತಿಯಲ್ಲಿ ಶರೀಫರು ಲೌಕಿಕವಾಗಿ ಪ್ರಾರಂಭಿಸಿದ ಹಾಡನ್ನು ಆಧ್ಯಾತ್ಮಿಕ ಚಿಂತನೆಗೆ ಅತ್ಯಂತ ಸಹಜವಾಗಿ ತಿರುಗಿಸುತ್ತಾರೆ.