Sunday, October 22, 2017

ಬಸವರಾಜ ಕಟ್ಟೀಮನಿ...ಬದುಕು, ಬರಹ...ಭಾಗ ೨

ಬಸವರಾಜ ಕಟ್ಟೀಮನಿಯವರು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗಲೇ ಕವನಗಳನ್ನು ಬರೆಯಲು ಪ್ರಾರಂಭಿಸಿದರು; ಆನಂತರ ಸಣ್ಣ ಕತೆಗಳ ಬರವಣಿಗೆ. ಇವರ ಮೊದಲ ಕಾದಂಬರಿ ಸ್ವಾತಂತ್ರ್ಯದೆಡೆಗೆಪ್ರಕಟವಾದದ್ದು ೧೯೪೬ರಲ್ಲಿ. ಸ್ವಾತಂತ್ರ್ಯ ಚಳುವಳಿಯು ಭಾರತದ ಹಳ್ಳಿ,ಪಟ್ಟಣಗಳಲ್ಲಿ ವ್ಯಾಪಿಸಿದ್ದನ್ನು ಹಾಗು ಶಾಲಾವಿದ್ಯಾರ್ಥಿಗಳೂ ಕೂಡ ಇದರಲ್ಲಿ ಭಾಗವಹಿಸಿದ್ದನ್ನು ಈ ಕಾದಂಬರಿಯಲ್ಲಿ ನಿರೂಪಿಸಲಾಗಿದೆ. ಸ್ವತಃ ಕಟ್ಟೀಮನಿಯವರೆ ಚಳುವಳಿಯಲ್ಲಿ ಪಾಲ್ಗೊಂಡು ಜೈಲು ಸೇರಿದವರು; ಅಲ್ಲಿ ಅನೇಕ ಬಗೆಯ ರಾಜಕೀಯ ವ್ಯಕ್ತಿಗಳನ್ನು ಕಂಡವರು. ಹೀಗಾಗಿ ಇವರ ಬರವಣಿಗೆಯಲ್ಲಿ ಸತ್ಯನಿಷ್ಠುರ ವಾಸ್ತವತೆ ಇದೆ.

ಕಟ್ಟೀಮನಿಯವರ ಎರಡನೆಯ ಕಾದಂಬರಿ ಮಾಡಿ ಮಡಿದವರುಅವರಿಗೆ ಪ್ರಖ್ಯಾತಿಯನ್ನು ತಂದು ಕೊಟ್ಟಿತು. ಅವರು ಬರೆದ ಅತ್ಯುತ್ತಮ ಕಾದಂಬರಿಗಳಲ್ಲಿ ಇದಕ್ಕೆ ಎರಡನೆಯ ಸ್ಥಾನವನ್ನು ಕೊಡಬಹುದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರ ವಿವಿಧ ಮುಖಗಳನ್ನು ಹಾಗು ಪ್ರಾಣಬಲಿದಾನ ಮಾಡಿದವರ ಕಥೆಯನ್ನು ಕಟ್ಟೀಮನಿಯವರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕಟ್ಟೀಮನಿಯವರ ಮೂರನೆಯ ಕಾದಂಬರಿಯಾದ ಜ್ವಾಲಾಮುಖಿಯ ಮೇಲೆಕಾರ್ಮಿಕ ಹೋರಾಟದ ಚಿತ್ರಣವಾಗಿದೆ. ಈ ಕಾದಂಬರಿಯಲ್ಲಿ ಕಟ್ಟೀಮನಿಯವರು ಬಡ ಕಾರ್ಮಿಕರ ನಿಕೃಷ್ಟ ಸ್ಥಿತಿಯನ್ನು ಹಾಗು ಅವರ ಸಂಘಟನೆಯನ್ನು ಒಡೆಯಲು ಮಾಲಕರು ಮಾಡುವ ಹುನ್ನಾರವನ್ನು ಚಿತ್ರಿಸಿದ್ದಾರೆ. 
ಕಟ್ಟೀಮನಿಯವರ ಕಾದಂಬರಿಗಳ ಪ್ರಮುಖ ವೈಶಿಷ್ಟ್ಯವೆಂದರೆ ಇವರ ಕಾದಂಬರಿಗಳ ನಾಯಕರು ಸಾಮಾಜಿಕ ಹೋರಾಟದಲ್ಲಿ ತೀವ್ರವಾಗಿ ತೊಡಗಿಕೊಳ್ಳುತ್ತಾರೆ. ಆದರೆ ಇವರ ಹೋರಾಟವು ಸಹಸಾ ವೈಫಲ್ಯದಲ್ಲಿ ಅಂತವಾಗುತ್ತದೆ. ಹಾಗೆಂದು ಇವು ದುರಂತ ಕಾದಂಬರಿಗಳೆಂದು ಅರ್ಥವಲ್ಲ. ನೆಲ ಕಚ್ಚಿದ ಹೋರಾಟವು ಮತ್ತೆ ಮೇಲೇಳಬಹುದೆನ್ನುವ ಅಪೇಕ್ಷೆಯನ್ನು ಓದುಗರಲ್ಲಿ ಮೂಡಿಸುವಂತಹ ಬರವಣಿಗೆ ಕಟ್ಟೀಮನಿಯವರದು.

ಕಟ್ಟೀಮನಿಯವರು ಜನಪ್ರಿಯರಾಗಿದ್ದು ಹಾಗು ಅನೇಕರ ವೈರವನ್ನು ಕಟ್ಟಿಕೊಂಡಿದ್ದು ಅವರ ಎರಡು ಸಾಮಾಜಿಕ ಕಾದಂಬರಿಗಳಿಂದ:
(೧) ಮೋಹದ ಬಲೆಯಲ್ಲಿ
(೨) ಜರತಾರಿ ಜಗದ್ಗುರು.
ಸಮಾಜದ ಗಣ್ಯ ಸಂಸ್ಥೆಗಳಾದ ಮಠಗಳು ಹಾಗು ಪತ್ರಿಕೆಗಳು ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಹಾಗು ಗಣ್ಯ ವ್ಯಕ್ತಿಗಳು ಹೆಣ್ಣುಮಕ್ಕಳ ಶೋಷಣೆಯನ್ನು ಮಾಡುವದನ್ನುಈ ಕಾದಂಬರಿಗಳಲ್ಲಿ ಚಿತ್ರಿಸಲಾಗಿದೆ. ಇದರಿಂದಾಗಿ ಕಟ್ಟೀಮನಿಯವರ ಕೊಲೆಯನ್ನು ಮಾಡುವ ಒಳಸಂಚು ಕೂಡ ನಡೆಯಿತು. ಅವರ ಮತ್ತೊಂದು ಕಾದಂಬರಿ ಖಾನಾವಳಿಯ ನೀಲಾದಲ್ಲಿ ಸಹ ಪತ್ರಿಕಾವ್ಯವಸಾಯದ ಭ್ರಷ್ಟತೆಯನ್ನು ಚಿತ್ರಿಸಲಾಗಿದೆ. 
ಕಟ್ಟೀಮನಿಯವರ ಕಾದಂಬರಿಗಳಲ್ಲಿ ನನಗೆ ಅತ್ಯಂತ ಮೆಚ್ಚುಗೆಯಾದ ಕಾದಂಬರಿಗಳೆಂದರೆ:
(೧) ನೀ ನನ್ನ ಮುಟ್ಟಬೇಡ
(೨) ಬೆಳಗಿನ ಗಾಳಿ 
ನೀ ನನ್ನ ಮುಟ್ಟಬೇಡಕಾದಂಬರಿಯ ಸಂಕ್ಷಿಪ್ತ ಕಥಾನಕ ಹೀಗಿದೆ:

ಶಿವಗಂಗಿ ಹೊಲೆಯರವಳು. ಅವಳ ಮೇಲೆ ಜಮೀನುದಾರ ಶರಣಪ್ಪನ ಕಣ್ಣು. ಅವಳು ಮದುವೆಯಾಗಿ ಪರವೂರಿಗೆ ಹೋಗುತ್ತಾಳೆ. ಅವಳ ಗಂಡ ದರೋಡೆಯಲ್ಲಿ ಸಿಕ್ಕಿ ಬಿದ್ದು ಜೇಲಿಗೆ ಹೋಗಿ, ಅಲ್ಲಿಯೇ ಸಾಯುತ್ತಾನೆ. ಮಗ ಮಾದೇವನೊಡನೆ ಶಿವಗಂಗಿ ತವರಿಗೆ ಮರಳುತ್ತಾಳೆ. ಅವಳ ಅಪ್ಪನೂ ಸತ್ತು ಹೋಗಿರುತ್ತಾನೆ. ಈಗ ಅವಳು ಹಾಗು ಅವಳ ಪುಟ್ಟ ಮಗ ಇಬ್ಬರೇ. ಇವಳನ್ನು ವಶಪಡಿಸಿಕೊಳ್ಳಲು ಸಾವಕಾರ ಶರಣಪ್ಪನಿಗೆ ಹಾಗು ಊರಗೌಡ ಸಿದ್ದಗೌಡನಿಗೆ ಜಿದ್ದಿನ ಹಣಾಹಣಿ ನಡೆದಿರುತ್ತದೆ. ಶಿವಗಂಗಿ ಮಾತ್ರ ಇವರ ಜಗಳಾಟದಲ್ಲಿ ತನ್ನ ಶೀಲವನ್ನು ಕಾಯ್ದುಕೊಂಡು ಬದುಕಿರುತ್ತಾಳೆ.

ಸಿದ್ದಗೌಡ ಶಿವಗಂಗಿಯ ಮೇಲೆ ಕಳವಿನ ಸುಳ್ಳು ಆರೋಪ ಹೊರಿಸಿ, ಹವಾಲದಾರನನ್ನು ಕರೆಸುತ್ತಾನೆ. ಆ ರಾತ್ರಿ ಹವಾಲದಾರ, ಗೌಡ, ಓಲೆಕಾರರು ಎಲ್ಲರೂ ಶಿವಗಂಗಿಯ ಮೇಲೆ ಅತ್ಯಾಚಾರ ಮಾಡುತ್ತಾರೆ. ಹುಲಿಯ ಪಂಜಾದಲ್ಲಿ ಸಿಲುಕಿದ ಚಿಗರಿಯಂತೆ ಶಿವಗಂಗಿ ಗೌಡನ ವಶಕ್ಕೆ ಬೀಳುತ್ತಾಳೆ. ಮುಂದೊಮ್ಮೆ ಶಿವಗಂಗಿ ಜಡ್ಡಿಗೆ ಬಲಿಯಾಗಿ ತನ್ನ ದುರ್ದೈವಿ ಬದುಕನ್ನು ಕೊನೆಗೊಳಿಸುತ್ತಾಳೆ. ಇಲ್ಲಿಗೆ ಹಳ್ಳಿಯ ನೀಚ ಬದುಕನ್ನು ಚಿತ್ರಿಸುವ ಮೊದಲ ಭಾಗ ಮುಗಿಯುತ್ತದೆ. ಎರಡನೆಯ ಭಾಗದಲ್ಲಿ ಪಟ್ಟಣದ ನೀಚ ಬದುಕಿನ ಚಿತ್ರಣವಿದೆ. ಅದರಂತೆಯೆ, ಈ ವ್ಯವಸ್ಥೆಯ ವಿರುದ್ಧ ಹೋರಾಡುವ ಕೆಚ್ಚನ್ನೂ ಸಹ ಕಟ್ಟೀಮನಿಯವರು ಎರಡನೆಯ ಭಾಗದಲ್ಲಿ ತೋರಿಸಿದ್ದಾರೆ.

ಸಾಂಬಯ್ಯ ಮಾಸ್ತರರ ಹಿತೋಪದೇಶದಿಂದ ಶಿವಗಂಗಿಯ ಮಗ ಮಾದೇವ ಜಾಣನಾಗುತ್ತಾನೆ ಹಾಗು ಆದರ್ಶಗಳನ್ನು ಬೆಳೆಸಿಕೊಂಡಿರುತ್ತಾನೆ. ಸಾಂಬಯ್ಯ ಮಾಸ್ತರರು ಹರಿಜನರಿಗೆ ಸಹಾಯ ಮಾಡುತ್ತಾರೆ ಎನ್ನುವ ಕಾರಣದಿಂದಾಗಿ ಹಳ್ಳಿಯ ಜನರು ಅವರ ಮೇಲೆ ಕೆಂಡ ಕಾರುತ್ತಾರೆ. ಸಾಂಬಯ್ಯ ಮಾಸ್ತರರು ಹಳ್ಳಿಯನ್ನು ಬಿಟ್ಟು ಗೊಬ್ಬೂರಿಗೆ ಹೋಗಿ, ಅಲ್ಲಿ ಒಂದು ಹರಿಜನ ಅನಾಥಾಶ್ರಮದಲ್ಲಿ ಸಹಾಯಕರಾಗಿ ಸೇರಿಕೊಳ್ಳುತ್ತಾರೆ. ಮಾದೇವನು ಮೊಚ್ಚೆಗಳನ್ನು ಹೊಲೆಯುತ್ತ ಉಪಜೀವನ ಸಾಗಿಸುತ್ತ, ಶಿಕ್ಷಣ ಮುಂದುವರೆಸುತ್ತಾನೆ.

ಮಾದೇವನನ್ನು ಕ್ರಿಶ್ಚಿಯನ್ ಧರ್ಮಕ್ಕೆ ತಿರುಗಿಸಲು ಮರಿದಾಸ ಪ್ರಯತ್ನಿಸುತ್ತಾನೆ. ಸಾಧ್ಯವಾಗುವುದಿಲ್ಲ. ಆದರೆ ಕಾಳ ಎನ್ನುವ ಹುಡುಗ ಮತಾಂತರಿತನಾಗುತ್ತಾನೆ.

ಚಂದ್ರಾ ಎನ್ನುವ ಹೊಲೆಯರ ಹುಡುಗಿಯನ್ನು ದೇವದಾಸಿಯನ್ನಾಗಿ ಮಾಡಲಾಗುತ್ತದೆ. ಹೇಸಿಗೊಂಡ ಮಾದೇವ ಊರು ಬಿಟ್ಟು, ಇದೇ ಅನಾಥಾಶ್ರಮ ಸೇರಿಕೊಳ್ಳುತ್ತಾನೆ. ಅನಾಥಾಶ್ರಮದ ಮಾಲಕರು ಹಾಗು ಮಾಲಕತಿ ಸರಕಾರದಿಂದ ರೊಕ್ಕ ಹೊಡೆಯುತ್ತ, ತಮ್ಮ ಸ್ವಂತ ಮನೆ ಕಟ್ಟಿಕೊಳ್ಳುತ್ತಾರೆ. ಮಾಲಕತಿ ಚಂಪಾವತಿಯು ಹಾಗು ಸಿರಿವಂತ ಪೋಷಕ ಕುಬೇರಪ್ಪನ ನಡುವೆ ಅನೈತಿಕ ಸಂಬಂಧ ಇರುತ್ತದೆ. ಮಾಲಕ ಚೆನ್ನಪ್ಪನು ಸಲಿಂಗಕಾಮಿಯಾಗಿರುತ್ತಾನೆ. ಇವರಿಬ್ಬರೂ ವಿಧಾನಸಭೆಯ ಶಾಸಕರಾಗುತ್ತಾರೆ. ಕಸ್ತೂರಿ ಎನ್ನುವ ಅನಾಥಾಶ್ರಮದ ಚಿಕ್ಕ ಹುಡುಗಿಯೊಬ್ಬಳನ್ನು, ಸಿರಿವಂತ ಪೋಷಕನ ಕಾಮಕ್ಕೆ ಪೂರೈಸಲಾಗುತ್ತದೆ. ಇವೆಲ್ಲದರಿಂದ ಬೇಸತ್ತ ಸಾಂಬಯ್ಯನವರು ಅನಾಥಾಶ್ರಮ ಬಿಟ್ಟು ಹೋಗಿರುತ್ತಾರೆ. ತನ್ನ ತಾಯಿಯ ಅಂತ್ಯಸಂಸ್ಕಾರ ಪೂರೈಸಿ, ಮರಳಿದ ಮಾದೇವನಿಗೆ ಎಲ್ಲ ವಿಷಯಗಳು ಗೊತ್ತಾಗುತ್ತವೆ. ಆತನೂ ಆಶ್ರಮ ಬಿಟ್ಟು ಹೊರನಡೆಯುತ್ತಾನೆ. ಕಸ್ತೂರಿಯು ಅವನೊಡನೆ ಬರಲು ಅಂಗಲಾಚುತ್ತಾಳೆ. ಮಾದೇವ ಮೊದಲು ಹಿಂದೆಮುಂದೆ ನೋಡಿದರೂ ಸಹ, ಕೊನೆಗೆ ಅವಳನ್ನೂ ತನ್ನ ಜೊತೆಗೆ ಕರೆದೊಯ್ಯುತ್ತಾನೆ.

ಆ ಸಮಯದಲ್ಲಿ ಮಹಾದೇವನು ಅನಾಥಾಶ್ರಮದ ಮಾಲಕ ಚೆನ್ನಪ್ಪನಿಗೆ ಹೇಳುವ ಮಾತು ಹೀಗಿದೆ:
ನೀ ನನ್ನ ಮುಟ್ಟಬ್ಯಾಡನಿನ್ನಂಥಾ ಹೊಲೆಯನ್ನ, ನಿನ್ನ ಹೆಂಡತಿಯಂಥಾ ಹೊಲತಿಯನ್ನ ನಾನು ಬ್ಯಾರೆ ಎಲ್ಲಿಯೂ ಕಂಡಿಲ್ಲ…”

ಕಾದಂಬರಿಯ ಸಾರಾಂಶಕಥನದಲ್ಲಿ ಕಾದಂಬರಿಯ ಶೈಲಿಯ ಹಾಗು ಸೊಬಗಿನ ಚಿತ್ರಣ ಮಾಯವಾಗಿದೆ. ದಯವಿಟ್ಟು ಕ್ಷಮಿಸಬೇಕು.

(೨) ಬೆಳಗಿನ ಗಾಳಿ:
ಕಳ್ಳಕೇರಿಯಲ್ಲಿ ನೆಲೆ ನಿಂತು, ಕಳ್ಳವ್ಯಾಪಾರ ಮಾಡುತ್ತ, ಸಿರಿವಂತನಾದ ದುರ್ಗಪ್ಪನ ಮಗನೇ ರಾಜ. ಮಗನು ಕೊಳೆಗೇರಿಯಲ್ಲಿ ಬೆಳೆದು ತನ್ನಂತೆ ಆಗಬಾರದೆನ್ನುವ ಉದ್ದೇಶದಿಂದ, ದುರ್ಗಪ್ಪ ರಾಜನನ್ನು ಪಟ್ಟಣದಲ್ಲಿ ಇಡುತ್ತಾನೆ. ರಾಜ ಅಲ್ಲಿ ಸದ್ಗುಣಿಗಳ ಪ್ರಭಾವದಿಂದ, ಉತ್ತಮ ಹುಡುಗನಾಗುತ್ತಾನೆ. ಗಾಂಧೀಮಾರ್ಗದಲ್ಲಿ ನಡೆದು, ಕಳ್ಳಕೇರಿಯ ಜನರನ್ನು ಸುಧಾರಿಸುವ ಉದ್ದೇಶ ಹೊಂದಿರುತ್ತಾನೆ. ಕಳ್ಳಕೇರಿಯ ನಿವಾಸಿಗಳ ಹೊಲಸು ಬದುಕು, ಅಲ್ಲಿಯ ಹೆಂಗಸರ ಅನಿವಾರ್ಯ ಸೂಳೆಗಾರಿಕೆ, ಗಂಡಸರ ಕಳ್ಳತನ, ಇವರೆಲ್ಲರ ಕುಡಿತ, ಇವರ ಮಕ್ಕಳ ಹಾಳಾಗುವಿಕೆ ಮೊದಲಾದವುಗಳ ವರ್ಣನೆ ಮೊದಲ ಭಾಗದಲ್ಲಿದೆ. ಅಲ್ಲಿಯ ಹುಡುಗರನ್ನು ನಗರದಲ್ಲಿಯ ಆಶ್ರಮಕ್ಕೆ ಕರೆತಂದು, ಉದ್ಯೋಗ ಕೊಡಿಸಿ, ಸುಧಾರಿಸಲು ರಾಜ ಪ್ರಯತ್ನ ಪಡುತ್ತಾನೆ. ಆದರೆ ಡೇವಿಡ್ ಒಬ್ಬನನ್ನು ಬಿಟ್ಟು, ಉಳಿದವರೆಲ್ಲ ಕಳ್ಳರಾಗಿಯೇ ಉಳಿಯುತ್ತಾರೆ.

ಎರಡನೆಯ ಭಾಗದಲ್ಲಿ, ರಾಜನ ಶೈಕ್ಷಣಿಕ ಪ್ರಗತಿ, ಆತನನ್ನು ಪ್ರೀತಿಸುವ ಕಾಮಾಕ್ಷಿ, ಆತನನ್ನು ಲೌಕಿಕ ದಾರಿಗೆ ಎಳೆತಂದು, ಅಳಿಯನನ್ನು ಮಾಡಿಕೊಳ್ಳಲು ಬಯಸುವ ದೇವಪ್ಪನವರು ಇವರ ಚಿತ್ರಣವಿದೆ. ರಾಜ ಈ ಮಾಯೆಗೆ ಒಳಗಾಗದೆ, ಮಗನವಾಡಿಗೆ ಹೋಗಿ, ಗಾಂಧೀ ರೀತಿಯ ಶಿಕ್ಷಣ ಪಡೆದು ತನ್ನೂರಿಗೆ ಮರಳುತ್ತಾನೆ. ಎಂಥೆಲ್ಲ ತೊಂದರೆಗಳ ನಡುವೆಯೂ, ಕಳ್ಳಕೇರಿಯ ಜನರನ್ನು ಸುಧಾರಿಸುವ ಉದ್ದೇಶವನ್ನು ಬಿಡುವುದಿಲ್ಲ. ಬೆಳಗಿನ ಗಾಳಿಬೀಸಿಯೇ ಬೀಸುತ್ತದೆ. ಆಗ ಈ ಜನರು ಸುಧಾರಿಸುತ್ತಾರೆ ಎನ್ನುವ ವಿಶ್ವಾಸ ಅವನಿಗಿದೆ.

ಕಟ್ಟೀಮನಿಯವರ ಅನೇಕ ಕಾದಂಬರಿಗಳು ಗ್ರಾಮೀಣ ಪರಿಸರದ ಅಥವಾ ಕೊಳೆಗೇರಿಯ ಬದುಕನ್ನು ತೋರಿಸುತ್ತವೆ. ಈ ದುರ್ದೈವಿಗಳ ಬದುಕನ್ನು ಬದಲಾಯಿಸುವುದೇ ಕಥಾನಾಯಕನ ಬಯಕೆ. ಆದರೆ ಅದು ಸಾಧ್ಯವಾಗದ ಆಶಯ. ಇಂತಹ ಕೆಲವು ದುರಂತ ಕಾದಂಬರಿಗಳೆಂದರೆ:
(೧) ಬೀದಿಯಲ್ಲಿ ಬಿದ್ದವಳು
(೨) ಜಲತರಂಗ
(೩) ಹರಿಜನಾಯಣ
(೪) ಗ್ರಾಮಸೇವಿಕಾ
(೫) ಮಣ್ಣು ಮತ್ತು ಹೆಣ್ಣು 
ಕಟ್ಟೀಮನಿಯವರು ರಾಜಕೀಯ ಕಾದಂಬರಿಗಳನ್ನೂ ಬರೆದಿದ್ದಾರೆ:
(೧) ಬಲೆಯ ಬೀಸಿದರು
(೨) ಬೆಂಗಳೂರಿಗೊಂದು ಟಿಕೀಟು
(೩) ಚಕ್ರವ್ಯೂಹ
(೪) ಮಾಜಿ ಮಂತ್ರಿ
ಈ ಕಾದಂಬರಿಗಳಲ್ಲಿ ನಮ್ಮ ರಾಜ್ಯದ ಭ್ರಷ್ಟ ರಾಜಕೀಯ ವ್ಯವಸ್ಥೆ, ರಾಜಕಾರಣದಲ್ಲಿ ಹೆಣ್ಣುಗಳ ಬಳಕೆ ಇವು ವಾಸ್ತವವಾಗಿ ಮೂಡಿ ಬಂದಿವೆ. ಒಟ್ಟಿನಲ್ಲಿ ಕಟ್ಟೀಮನಿಯವರ ಕಾದಂಬರಿಗಳ ವೈಶಿಷ್ಟ್ಯಗಳನ್ನು ಹೀಗೆ ಹೇಳಬಹುದು:
(೧) ಇವು ಕನ್ನಡದ ಮೊದಲ thematic ಕಾದಂಬರಿಗಳು.
(೨) ಬರವಣಿಗೆಯ ಶೈಲಿ ಹಾಗು ಭಾಷೆ ಪ್ರಾದೇಶಿಕವಾಗಿವೆ.
(೩) ಕಥಾನಕಗಳು ವಸ್ತುಸ್ಥಿತಿಯನ್ನು ಬಿಂಬಿಸುತ್ತವೆ.
(೪) ಕಾದಂಬರಿಗಳು ಕೆಳ ಮಟ್ಟದ ಜನರ ಹೋರಾಟವನ್ನು ಹಾಗು ಸೋಲನ್ನು ತೋರಿಸುತ್ತವೆ. ಆದರೆ ನಿರಾಶೆಯನ್ನು ಪ್ರತಿಪಾದಿಸುವದಿಲ್ಲ.

ಈ ಎಲ್ಲ ವೈಶಿಷ್ಟ್ಯಗಳ ಜೊತೆಗೆ ಮತ್ತೊಂದು ವೈಶಿಷ್ಟ್ಯವೂ ಕಟ್ಟೀಮನಿಯವರ ಕಾದಂಬರಿಗಳಿಗೆ ಇದೆ. ಆದರೆ ಆ ವಿಶೇಷತೆಯನ್ನು ಮೇಲಿನ ಗುಣಗಳ ಜೊತೆಗೆ ಸೇರಿಸಲಾಗುವುದಿಲ್ಲ. ಅವರ ಮೊದಲಿನ ಮೂರು ಕಾದಂಬರಿಗಳನ್ನು ಬಿಟ್ಟರೆ, ಕಟ್ಟೀಮನಿಯವರ ಉಳಿದೆಲ್ಲ ಕಾದಂಬರಿಗಳು titillating ಆಗಿವೆ. ಇದು ಉದ್ದೇಶಪೂರ್ವಕವೆಂದು ನಾನು ಹೇಳಲಾರೆ. ಆದರೆ ಈ ವೈಶಿಷ್ಟ್ಯವು ಕಾದಂಬರಿಗಳ ಜನಪ್ರಿಯತೆಗೆ ಒಂದು ಕಾರಣವಾಗಬಲ್ಲದು. ಅಲ್ಲದೆ ಕಟ್ಟೀಮನಿಯವರು ಒಂದು ಎಕರೆ ಜಮೀನಿನಲ್ಲಿ ಕೃಷಿಯನ್ನು ಮಾಡುತ್ತ ಬದುಕಿದರು ಎನ್ನುವುದನ್ನು ಗಮನಿಸಿರಿ. ಸಾಹಿತ್ಯರಚನೆಯಿಂದ ಪೂರಕ ಆದಾಯವನ್ನು ಗಳಿಸಬೇಕೆಂದರೆ, ಈ ವೈಶಿಷ್ಟ್ಯವು ಅನಿವಾರ್ಯವಾಗಿರಬಹುದು.

ಇಂತಹ ಕಾದಂಬರಿಗಳನ್ನಲ್ಲದೆ, ಕಟ್ಟೀಮನಿಯವರು ತಾವು ಅತಿ ಹತ್ತಿರದಿಂದ ಕಂಡಂತಹ ಪೋಲೀಸ ವ್ಯವಸ್ಥೆಯ ಎರಡು ಕಾದಂಬರಿಗಳನ್ನೂ ಬರೆದಿದ್ದಾರೆ:
(೧) ನಾನು ಪೋಲೀಸನಾಗಿದ್ದೆ
(೨) ಬಂಗಾರದ ಜಿಂಕೆಯ ಹಿಂದೆ
ಈ ಎರಡೂ ಕಾದಂಬರಿಗಳಲ್ಲಿ ಪೋಲೀಸರ ಹೀನಾಯ ಪರಿಸ್ಥಿತಿ, ಅವರ ಭ್ರಷ್ಟಾಚಾರ, ಪೋಲೀಸರಿಂದ ಜನಸಾಮಾನ್ಯರ ಶೋಷಣೆ ಹಾಗು ಅವರಲ್ಲಿಯೂ ಇರುವ ಪ್ರಾಮಾಣಿಕ ಪೋಲೀಸರ ಚಿತ್ರವಿದೆ. ವ್ಯವಸ್ಥೆಯು ಹೇಗೆ ಈ ಪ್ರಾಮಾಣಿಕರನ್ನೂ ಸಹ ಕೆಡಿಸಬಲ್ಲದು ಎನ್ನುವುದೂ ಸಹ ಇಲ್ಲಿದೆ. ಇಲ್ಲಿಯೂ ಸಹ ನಾಯಕನು ಕೊನೆಗೆ ಜೇಲು ಸೇರುವ ಚಿತ್ರವಿದೆ!

ಕಟ್ಟೀಮನಿಯವರ ಕೆಟ್ಟ ಕಾದಂಬರಿಗಳೆಂದರೆ ಅವರು ಬರೆದ ಐತಿಹಾಸಿಕ ಕಾದಂಬರಿಗಳು:
(೧) ನರಗುಂದ ಬಂಡಾಯ
(೨) ಪೌರುಷ ಪರೀಕ್ಷೆ
(೩) ಸಂಗೊಳ್ಳಿ ರಾಯಣ್ಣ
(೪) ಗಿರಿಯ ನವಿಲು

ಕಟ್ಟೀಮನಿಯವರ ಒಟ್ಟು ರಚನೆಗಳ ಯಾದಿ ಇಲ್ಲಿದೆ:
(೧) ಕಾದಂಬರಿಗಳು:
(೧) ಸ್ವಾತಂತ್ರ್ಯದೆಡೆಗೆ(೧೯೪೬)
(೨) ಮಾಡಿ ಮಡಿದವರು (೧೯೫೦)
(೩) ಜ್ವಾಲಾಮುಖಿಯ ಮೇಲೆ (೧೯೫೧)
(೪) ಮೋಹದ ಬಲೆಯಲ್ಲಿ (೧೯೫೨)
(೫) ಬೀದಿಯಲ್ಲಿ ಬಿದ್ದವಳು (೧೯೫೨)
(೬) ಜರತಾರಿ ಜಗದ್ಗುರು (೧೯೫೩)
(೭) ಮಣ್ಣು ಮತ್ತು ಹೆಣ್ಣು (೧೯೫೩)
(೮) ಖಾನಾವಳಿಯ ನೀಲಾ (೧೯೫೩)
(೯) ಬಲೆಯ ಬೀಸಿದರು (೧೯೫೪)
(೧೦) ನಾನು ಪೋಲೀಸನಾಗಿದ್ದೆ (೧೯೫೪)
(೧೧) ನೀ ನನ್ನ ಮುಟ್ಟಬೇಡ (೧೯೫೪)
(೧೨) ಬಂಗಾರದ ಜಿಂಕೆಯ ಹಿಂದೆ (೧೯೫೪)
(೧೩) ಜನಿವಾರ ಮತ್ತು ಶಿವದಾರ (೧೯೫೪)
(೧೪) ಗೋವಾದೇವಿ (೧೯೫೫)
(೧೫) ಬೆಳಗಿನ ಗಾಳಿ (೧೯೫೬)
(೧೬) ಆಶ್ರಮವಾಸಿ (೧೯೫೬)
(೧೭) ಗಿರಿಯ ನವಿಲು (೧೯೫೬)
(೧೮) ನರಗುಂದ ಬಂಡಾಯ (೧೯೫೬)
(೧೯) ಸಾಕ್ಷಾತ್ಕಾರ (೧೯೫೬)
(೨೦) ಪಾತರಗಿತ್ತಿ (೧೯೫೬)
(೨೧) ಜಲತರಂಗ (೧೯೫೭)
(೨೨) ಪೌರುಷ ಪರೀಕ್ಷೆ (೧೯೫೮)
(೨೩) ಕತ್ತರಿ ಪ್ರಯೋಗ (೧೯೫೮)
(೨೪) ಗೆಳೆಯನ ಮಡದಿ (೧೯೫೯)
(೨೫) ದ್ರೋಹಿ (೧೯೬೧)
(೨೬) ಪ್ರಿಯ ಬಾಂಧವಿ (೧೯೬೩)
(೨೭) ಚಕ್ರವ್ಯೂಹ (೧೯೬೪)
(೨೮) ಬೆಂಗಳೂರಿಗೊಂದು ಟಿಕೀಟು (೧೯೬೪)
(೨೯) ಹೆಂಡತಿ (೧೯೬೪)
(೩೦) ಪ್ರಪಾತ (೧೯೬೫)
(೩೧) ಐದನೆಯ ದೇಸಾಯಿಣಿ (೧೯೬೭)
(೩೨) ಗ್ರಾಮಸೇವಿಕಾ (೧೯೬೭)
(೩೩) ಸಂಗೊಳ್ಳಿ ರಾಯಣ್ಣ (೧೯೬೮)
(೩೪) ಮಾಜೀ ಮಂತ್ರಿ (೧೯೭೫)
(೩೫) ಹರಿಜನಾಯಣ (೧೯೭೯)
(೩೬) ತಿರುಗಣಿ (೧೯೭೪)
(೩೭) ಮಗನ ತಾಯಿ (೧೯೮೪)
(೩೮) ಜೊತೆಗಾತಿ (೧೯೮೫)
(೩೯) ಸೈತಾನ (೧೯೮೫)
(೪೦) ಆಧುನಿಕ ಬಸವಣ್ಣ (೧೯೮೬)

(೨) ಕಥಾಸಂಕಲನಗಳು:
(೧) ಕಾರವಾನ್ (೧೯೪೫)
(೨) ಗುಲಾಬಿ ಹೂ ಮತ್ತು ಇತರ ಕಥೆಗಳು (೧೯೪೬)
(೩) ಅಗಸ್ಟ ಒಂಬತ್ತು ಮತ್ತು ಇತರ ಕಥೆಗಳು (೧೯೪೭)
(೪) ಸೆರೆಯಿಂದ ಹೊರಗೆ (೧೯೪೯)
(೫) ಜೋಳದ ಬೆಳೆಯ ನಡುವೆ (೧೯೫೩)
(೬) ಸುಂಟರಗಾಳಿ
(೭) ಹುಲಿಯಣ್ಣನ ಮಗಳು (೧೯೬೪)
(೮) ಸೈನಿಕನ ಹೆಂಡತಿ (೧೯೬೬)
(೯) ಗರಡಿಯಾಳು (೧೯೭೫)
(೧೦) ಕಾಡಿನ ಹಾಡು (ಅನುವಾದ)

(೩) ಆತ್ಮಕಥೆ
(೧) ಕಾದಂಬರಿಕಾರನ ಕಥೆ (೧೯೮೧)

(೪) ಇತರ ಸಾಹಿತ್ಯ
(೧) ಕ್ರಾಂತಿವೀರ ಚೆನ್ನಪ್ಪ ವಾಲಿ (೧೯೫೦)
(೨) ನವಿಲೂರ ಮನೆಯಿಂದ (ಸಂಪಾದನೆ) (೧೯೫೨)
(೨) ಪಟ್ಟಣದ ಹುಡುಗಿ (ನಾಟಕ) (೧೯೫೫)
(೩) ನಾನು ಕಂಡ ರಶಿಯಾ (ಪ್ರವಾಸ ಸಾಹಿತ್ಯ) (೧೯೭೦)
(೪) ಲೆನಿನ್ (ಲೇಖನ ಸಂಗ್ರಹ) (೧೯೭೦)
(೫) ಸಂಗೊಳ್ಳಿ ರಾಯಣ್ಣ (ಮಕ್ಕಳ ಕಥೆ) (೧೯೭೩)
(೬) ಪ್ರಿಯದರ್ಶಿನಿ: ಮಾರ್ಗದರ್ಶಿನಿ ಇಂದಿರಾ ಗಾಂಧಿ (೧೯೭೫)
(೭) ಕಂಪೋಜಿಟರ (ಕವನ) (೧೯೭೭)
(೮) ಸ್ವತಂತ್ರವ್ವ-೩೦ (ಕವನ) (೧೯೭೭)
(೯) ಗೋಕಾಕ ತಾಲೂಕಿನಲ್ಲಿಯ ಸ್ವಾತಂತ್ರ್ಯದ ಸಮರ (೧೯೮೦)
(೧೦) ಹಾಲ ತೊರೆಗೆ ಬೆಲ್ಲದ ಕೆಸರು (ವಚನಸಂಕಲನ) (೧೯೮೩)
(೧೧) ಗೀತಾ ಪ್ರವಚನ (ಅನುವಾದ) (೧೯೩೨?)
ಬಸವರಾಜ ಕಟ್ಟೀಮನಿಯವರ ಜನನ: ೫-೧೦-೧೯೧೯; ನಿಧನ: ೨೩-೧೦-೧೯೮೯

Wednesday, October 4, 2017

ಬಸವರಾಜ ಕಟ್ಟೀಮನಿ...ಬದುಕು, ಬರಹ...ಭಾಗ ೧



ಕನ್ನಡ ಕಾದಂಬರಿಸಾಹಿತ್ಯದ ನವೋದಯ ಕಾಲದಲ್ಲಿ ಅನಕೃ, ತರಾಸು, ನಿರಂಜನ, ಶಿವರಾಮ ಕಾರಂತ, ಬಸವರಾಜ ಕಟ್ಟೀಮನಿ ಮೊದಲಾದವರು ಪ್ರಮುಖ ಲೇಖಕರಾಗಿದ್ದರು. ಲೇಖಕರಲ್ಲಿ ಅನಕೃ ಹಾಗು ಅವರ ಶಿಷ್ಯರಾದ ತರಾಸು ಇವರು ಸರಳ ಶೈಲಿಯ ವ್ಯಕ್ತಿಕೇಂದ್ರಿತ, melodramatic ಕಥೆಗಳನ್ನು ಕಾದಂಬರಿಯ ರೂಪದಲ್ಲಿ ಬರೆದರೆ, ಆನಂತರದ ಅನೇಕ ಲೇಖಕರು (ಉದಾಹರಣೆಗೆ ತ್ರಿವೇಣಿ, ಎಮ್,ಕೆ. ಇಂದಿರಾ, ಆರ್ಯಾಂಬ ಪಟ್ಟಾಭಿ ಮೊದಲಾದವರು) ಇದೇ ಸಿದ್ಧಶೈಲಿಯಲ್ಲಿ ತಮ್ಮ ಕಾದಂಬರಿಗಳನ್ನು ರಚಿಸಿದರು. ಶಿವರಾಮ ಕಾರಂತರು ಮಾತ್ರ ಯಾವುದೇ ಅಲಂಕಾರವನ್ನು ಬಯಸದ ಭವ್ಯ ಗೊಮ್ಮಟೇಶ್ವರನಂತಹ ಶೈಲಿಯಲ್ಲಿ ಅನೇಕ ಕಾದಂಬರಿಗಳನ್ನು ರಚಿಸಿದರು. ಕಾರಂತರ ಕಾದಂಬರಿಗಳು ಮಾನವಪ್ರಯತ್ನ ಹಾಗು ಮಾನವೀಯತೆಯನ್ನು ಆದರ್ಶಗಳನ್ನಾಗಿ ಬಿಂಬಿಸಿದರೂ ಸಹ ಇವೂ ಸಹ ವ್ಯಕ್ತಿಕೇಂದ್ರಿತ ಕಾದಂಬರಿಗಳೇ. (ಒಬ್ಬ ವ್ಯಕ್ತಿಯ ಕಥೆಯನ್ನು ಕಾದಂಬರಿಯಾಗಿ ರೂಪಿಸಿ ಬರೆದರೂ ಸಹ, ಅದು ವ್ಯಕ್ತಿಕೇಂದ್ರಿತವಾಗಿರದೆ, ಮಾನವಪ್ರತೀಕವಾಗಿರುವ ಕಾದಂಬರಿಯ ಉದಾಹರಣೆಯಾಗಿ ಅರ್ನೆಸ್ಟ ಹೆಮಿಂಗ್ವೇಯ ‘The Oldman and the Sea’ಯನ್ನು ನೋಡಬಹುದು.)

ಇಂತಹ ವಾತಾವರಣದಲ್ಲಿ ಬಸವರಾಜ ಕಟ್ಟೀಮನಿಯವರು ಮಾತ್ರ ಕನ್ನಡದಲ್ಲಿ ಮೊಟ್ಟಮೊದಲಿಗರಾಗಿ thematic ಕಾದಂಬರಿಗಳನ್ನು ಬರೆದಿದ್ದಾರೆ. ಕಟ್ಟೀಮನಿಯವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯ, ಗೋಕಾವಿ ತಾಲೂಕಿನ ಮಲಾಮರಡಿ ಎನ್ನುವ ಹಳ್ಳಿಯಲ್ಲಿ. ಈ ಹಳ್ಳಿಯು ಇವರ ತಾಯಿಯ ತವರೂರು. ಇವರ ಕಾದಂಬರಿಗಳೂ ಸಹ ಇದೇ ಪ್ರದೇಶದಲ್ಲಿ, ಇದೇ ಜವಾರಿ ಭಾಷೆಯಲ್ಲಿ ರೂಪುಗೊಂಡಿವೆ. ಅಲ್ಲದೆ, ಸಮಾಜದ ಭ್ರಷ್ಟತೆಯನ್ನು ಇವರಷ್ಟು ವಾಸ್ತವವಾಗಿ ನಿರೂಪಿಸಿದ ಕಾದಂಬರಿಕಾರರು ಕನ್ನಡದಲ್ಲಿ ಮತ್ತೊಬ್ಬರಿಲ್ಲ. ಕಾರಣಗಳಿಂದ ಕನ್ನಡದಲ್ಲಿ ಇವರ ಕಾದಂಬರಿಗಳಿಗೆ ವಿಶಿಷ್ಟವಾದ, ಅನನ್ಯವಾದ ಸ್ಥಾನವಿದೆ.

ನವೋದಯ ಕಾಲದ ಕನ್ನಡ ಲೇಖಕರಲ್ಲಿ ಅತ್ಯಂತ ಹೋರಾಟದ ಬದುಕು ಎಂದರೆ ಬಸವರಾಜ ಕಟ್ಟೀಮನಿಯವರದು. ಇವರ ತಂದೆ ಬೆಳಗಾವಿ ಜಿಲ್ಲೆಯ ಸಶಸ್ತ್ರ ಪೋಲೀಸಪಡೆಯಲ್ಲಿ ಪೇದೆಯಾಗಿದ್ದರು. ಪ್ರಾಮಾಣಿಕತೆಯ ಫಲವಾಗಿ ಇವರಿಗೆ ಮೇಲಿಂದಮೇಲೆ, ಊರಿಂದ ಊರಿಗೆ ವರ್ಗವಾಗುತ್ತಿತ್ತು. ಹೀಗಾಗಿ ಕಟ್ಟೀಮನಿಯವರು ಬಡತನದಲ್ಲಿಯೇ ಬೆಳೆದರು. ಇವರ ಶಿಕ್ಷಣವೂ ಸಕ್ರಮವಾಗಿ ನಡೆಯಲಿಲ್ಲ. ಅಲ್ಲದೆ ಚಿಕ್ಕಂದಿನಿಂದಲೂ ಇವುರಿಗೆ ಅರೆಕಿವುಡತನ ಗಂಟು ಬಿದ್ದಿತ್ತು. ಇಷ್ಟಾದರೂ ಸಹ ಕಟ್ಟೀಮನಿಯವರು ವಿದ್ಯಾಭ್ಯಾಸದಲ್ಲಿ ಹಿಂದೆ ಬಿದ್ದಿರಲಿಲ್ಲ. ಶಾಲೆಯಲ್ಲಿದ್ದಾಗಲೇ ಕವನಗಳನ್ನು ರಚಿಸಿ, ಶಿಕ್ಷಕರಿಂದ ಮೆಚ್ಚುಗೆಯನ್ನು ಪಡೆದಿದ್ದರು.  

೧೫ನೆಯ ವರ್ಷದಲ್ಲಿಯೇ ಕಥೆಯನ್ನು ಬರೆಯಲು ಪ್ರಾರಂಭಿಸಿದ ಕಟ್ಟೀಮನಿಯವರು ತಮಗೆ ಹದಿನೆಂಟನೆಯ ವರ್ಷವಾದಾಗ, ಬಡತನದಿಂದಾಗಿ ಹೈಸ್ಕೂಲ ಶಿಕ್ಷಣವನ್ನು ತ್ಯಜಿಸಿ,  ೧೯೩೭ರಲ್ಲಿ ಬೆಳಗಾವಿಯಿಂದ ಪ್ರಕಟವಾಗುತ್ತಿದ್ದ ಸಂಯುಕ್ತ ಕರ್ನಾಟಕದಲ್ಲಿ ಕೆಲಸಕ್ಕೆ ಸೇರಿಕೊಂಡರು. ಮರುವರ್ಷವೇ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದತರುಣ ಕರ್ನಾಟಕದಲ್ಲಿ ಉಪಸಂಪಾದಕರಾಗಿ ಸೇರಿಕೊಂಡರು. ಅದರಾಚೆಯ ವರ್ಷ ಅಂದರೆ ೧೯೩೯ರಲ್ಲಿ ಗದುಗಿನಕರ್ನಾಟಕ ಬಂಧುಪತ್ರಿಕೆಯಲ್ಲಿ ಇವರ ಉದ್ಯೋಗಪರ್ವ ಪ್ರಾರಂಭವಾಯಿತು.

ಮಧ್ಯೆ ಸ್ವಾತಂತ್ರ್ಯಚಳುವಳಿಯಲ್ಲಿ ಭಾಗವಹಿಸಿ, ಜೇಲುವಾಸವನ್ನು ಅನುಭವಿಸಿದರು. ೧೯೪೨ರಲ್ಲಿ ಸೆರೆಮನೆಯಿಂದ ಬಿಡುಗಡೆಯಾದ ಬಳಿಕ, ಅಂದರೆ ತಮ್ಮ ೨೩ನೆಯ ವಯಸ್ಸಿನಲ್ಲಿ ಬಸವರಾಜ ಕಟ್ಟೀಮನಿಯವರು ಬೆಂಗಳೂರಿನಲ್ಲಿ, ‘ಉಷಾಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಹಸದಲ್ಲಿ ಮೋಸ ಹೋದ ನಂತರ, ೧೯೪೬ರಲ್ಲಿಸ್ವತಂತ್ರಎನ್ನುವ ಪತ್ರಿಕೆಯನ್ನು ಪ್ರಾರಂಭಿಸಿದರು. ಸಾಕಷ್ಟು ಜನಪ್ರಿಯತೆಯನ್ನು ಪಡೆದರೂ ಸಹ ಹಣಕಾಸಿನ ಅಭಾವದಿಂದಾಗಿಸ್ವತಂತ್ರವನ್ನು ಮುಚ್ಚಬೇಕಾಯಿತು.  ೧೯೪೮ರಲ್ಲಿ ದಾವಣಗೆರೆಯ ಉದ್ಯೋಗಪತಿಗಳು ಪತ್ರಿಕೆಯ ಹೆಸರನ್ನು ಬಂಡವಳನ್ನಾಗಿ ಮಾಡಿಕೊಳ್ಳುವ ಉದ್ದೇಶದಿಂದ, ‘ಸ್ವತಂತ್ರ ಲಿಮಿಟೆಡ್ಎನ್ನುವ ಕಂಪನಿಯನ್ನು ಸ್ಥಾಪಿಸಿ, ಕಟ್ಟೀಮನಿಯವರ ಸಂಪಾದಕತ್ವದಲ್ಲಿ  ಸ್ವತಂತ್ರಪತ್ರಿಕೆಯನ್ನು ಪ್ರಾರಂಭಿಸಿದರು. ಅಲ್ಲಿಯೂ ಸಹ ತಮ್ಮ ರಾಜಕೀಯ ನಿಲುವಿನಿಂದಾಗಿ, ಮಾಲಕರೊಂದಿಗೆ ಹೊಂದಾಣಿಕೆಯಾಗದ್ದರಿಂದ, ಉದ್ಯೋಗವನ್ನು ಬಿಡಬೇಕಾಯಿತು. 

೧೯೪೯ರಲ್ಲಿ ದಾವಣಗೆರೆಯನ್ನು ತ್ಯಜಿಸಿದ ಕಟ್ಟೀಮನಿಯವರು  ಧಾರವಾಡಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಸ್ವಾತಂತ್ರ್ಯ ಹೋರಾಟಗಾರ ಘಾಣೇಕರ ಅವರು ಹೊರಡಿಸುತ್ತಿದ್ದಸಮಾಜಮಾಸಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದರು. ಪತ್ರಿಕೆ ನಿಂತುಹೋಗಿದ್ದರಿಂದ ಕಟ್ಟೀಮನಿಯವರ ಕೈಯಲ್ಲಿ ಯಾವ ಉದ್ಯೋಗವೂ ಉಳಿಯಲಿಲ್ಲ. ಕಟ್ಟೀಮನಿಯವರು ಸಾಹಿತ್ಯಕೃಷಿಯಿಂದಲೇ ಹೊಟ್ಟೆ ಹೊರೆಯುವ ನಿರ್ಧಾರ ಮಾಡಿದರು. ೧೯೫೦ರಲ್ಲಿ ಅಂದರೆ ತಮ್ಮ ೩೧ನೆಯ ವಯಸ್ಸಿನಲ್ಲಿ ಬಸವರಾಜ ಕಟ್ಟೀಮನಿಯವರು ತಾವು ಹುಟ್ಟಿದ ಹಳ್ಳಿಗೆ ಅಂದರೆ ಮಲಾಮರಡಿಗೆ ಮರಳಿದರು, ಹೆಂಡತಿ ಹಾಗು ಎರಡನೆಯ ಚಿಕ್ಕ ಮಗುವಿನೊಡನೆ.

ಮಲಾಮರಡಿಯಲ್ಲಿ ಅವರಿಗೆ ವಸತಿಯಾಗಿ ಇದ್ದದ್ದು ತಮ್ಮ ತಾಯಿಯ ಒಂದು ಮುರುಕು ಮನೆ. ಇದೇ ಮುರುಕು ಮನೆಯಲ್ಲಿಯೇ ಅವರಿಗೆ ಖ್ಯಾತಿಯನ್ನು ತಂದುಕೊಟ್ಟ ಅವರ ಎರಡನೆಯ ಕಾದಂಬರಿಯಾದಮಾಡಿ ಮಡಿದವರುರಚನೆಯಾಯಿತು. ಮಲಾಮರಡಿಯಲ್ಲಿಯೇ ಒಂದು ಎಕರೆ ಭೂಮಿಯನ್ನು ಖರೀದಿ ಮಾಡಿದ ಕಟ್ಟೀಮನಿಯವರು, ತಮ್ಮ ಜಮೀನಿನಲ್ಲಿ ಸ್ವತಃ ರೈತರಂತೆಯೇ ಬೇಸಾಯ ಮಾಡಿದರು. ಅದರೊಂದಿಗೇ ಸಾಹಿತ್ಯಕೃಷಿಯೂ ಸತತವಾಗಿ ನಡೆದಿತ್ತು.

೧೯೫೦ರಿಂದ ೧೯೬೬ರವರೆಗಿನ ಹದಿನಾರು ವರ್ಷಗಳ ಅವಧಿಯಲ್ಲಿ ಅಂದರೆ ೧೯೬೬ರಲ್ಲಿ ಧಾರವಾಡದಲ್ಲಿ ವಸತಿ ಹೂಡುವವರೆಗೆ ಕಟ್ಟೀಮನಿಯವರು ಇದೇ ಹಳ್ಳಿಯ ಇದೇ ಮುರುಕು ಮನೆಯಲ್ಲಿ ೨೯ ಕಾದಂಬರಿಗಳನ್ನು ರಚಿಸಿದರು. ಭ್ರಷ್ಟ ಸಮಾಜಕ್ಕೆ ಆಘಾತ ನೀಡಿದ ಮೋಹದ ಬಲೆಯಲ್ಲಿ’, ‘ಜರತಾರಿ ಜಗದ್ಗುರುಸಹ ಇದೇ ಅವಧಿಯಲ್ಲಿ ರಚಿತವಾದ ಮೊದಲ ಕಾದಂಬರಿಗಳು. ೧೯೫೨ರಲ್ಲಿ ತಾವಿರುವ ಹಳ್ಳಿಯ ಸುಧಾರಣೆಗಾಗಿ ಜನರನ್ನು ಒಗ್ಗೂಡಿಸಿ, ಕಟ್ಟೀಮನಿಯವರು ಗ್ರಾಮಸುಧಾರಣಾ ಕಾರ್ಯಗಳನ್ನು ಕೈಕೊಂಡರು.

೧೯೬೮ರಲ್ಲಿ ತಮ್ಮ ೪೯ನೆಯ ವರ್ಷದಲ್ಲಿ ವಿಧಾನಪರಿಷತ್ತಿಗೆ ಕಟ್ಟೀಮನಿಯವರ ನಾಮಕರಣವಾಯಿತು. ೧೯೫೧ರಲ್ಲಿ ಅವರ ಮೂರನೆಯ ಕಾದಂಬರಿಯಾಗಿ ಪ್ರಕಟವಾದಜ್ವಾಲಾಮುಖಿಯ ಮೇಲೆಕಾದಂಬರಿಗೆ, ೧೯೬೮ರಲ್ಲಿ ಸೋವಿಯೆಟ್  ರಶಿಯಾದ ನೆಹರೂ ಪ್ರಶಸ್ತಿ ದೊರಕಿತು. ೧೯೬೯ರಲ್ಲಿ ಕಟ್ಟೀಮನಿಯವರು ರಶಿಯಾಯಾತ್ರೆಯನ್ನು ಮಾಡಿ ಬಂದರು. ೧೯೬೯ರಿಂದ ೧೯೭೨ರವರೆಗೆ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ೧೯೮೦ರಲ್ಲಿ ಬೆಳಗಾವಿಯಲ್ಲಿ ಜರುಗಿದ ಅಖಿಲಭಾರತ ೫೨ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಪಟ್ಟ ಇವರಿಗೆ ಒಲಿದು ಬಂದಿತು.

೧೯೧೯ ಅಕ್ಟೋಬರ ೫ರಂದು ಮಲಾಮರಡಿಯಲ್ಲಿ ಜನಿಸಿದ ಬಸವರಾಜ ಕಟ್ಟೀಮನಿಯವರು ೧೯೮೯ ಅಕ್ಟೋಬರ ೨೩ರಂದು ಧಾರವಾಡದಲ್ಲಿ ನಿಧನರಾದರು. ಅವರ ಕೃಷಿಕ್ಷೇತ್ರ ಹಾಗು  ಸಾಹಿತ್ಯಕ್ಷೇತ್ರವಾದ ಮಲಾಮರಡಿಯಲ್ಲಿ ಅವರ ಸಮಾಧಿಯನ್ನು ಮಾಡಲಾಯಿತು.
(ವಿಷಯ ಹಾಗು ಚಿತ್ರಕ್ಕಾಗಿ ‘ಬಸವರಾಜ ಕಟ್ಟೀಮನಿ ಪ್ರತಿಷ್ಠಾನ, ಬೆಳಗಾವಿ ಇವರಿಗೆ ಕೃತಜ್ಞನಾಗಿದ್ದೇನೆ.)