Showing posts with label ಸಮಾಜ/ವಿಜ್ಞಾನ. Show all posts
Showing posts with label ಸಮಾಜ/ವಿಜ್ಞಾನ. Show all posts

Monday, December 1, 2014

ಜೀವಪ್ರಜ್ಞೆ



ಮಹಾಸ್ಫೋಟಕ್ಕಿಂತ ಮೊದಲು ವಿಶ್ವವು ಒಂದೇ ಬಿಂದುವಿನಲ್ಲಿ ಸಂಕುಚಿತಗೊಂಡಿತ್ತು ಎಂದು ಹೇಳುತ್ತಾರೆ. ಮಹಾಸ್ಫೋಟದ ಕ್ಷಣದಿಂದ ವಿಶ್ವವು ಪ್ರಚಂಡವೇಗದಿಂದ ಪ್ರಸರಣಗೊಳ್ಳಲು ಪ್ರಾರಂಭಿಸಿತು. ನಕ್ಷತ್ರರಜಸ್ಸಿನಿಂದ ನಕ್ಷತ್ರಗಳು ರೂಪಗೊಂಡವು. ಕಾಲಕ್ರಮೇಣ ನಮ್ಮ ಸೂರ್ಯನ ಸುತ್ತಲೂ ತಿರುಗುತ್ತಿರುವ ನಮ್ಮ ಭೂಮಿಯ ಮೇಲೆ ಪ್ರಥಮ ಜೀವಿಯ ಉದಯವಾಯಿತು. ತನ್ನ ಹುಟ್ಟಿನ ಸಮಯದಲ್ಲಿ ಈ ಜೀವಿಗೆ `ಜೀವಪ್ರಜ್ಞೆ’ಯ ಹೊರತಾಗಿ, ಬೇರಾವದೇ ಸ್ಪಂದನವಿರಲು ಸಾಧ್ಯವಿರಲಿಲ್ಲವಷ್ಟೇ. ಆದುದರಿಂದ ಅದು ಅಂಧತಮಸ್ಸಿನಲ್ಲಿ ಮುಳುಗಿತ್ತು ಎನ್ನಬಹುದು.

‘ಜೀವಪ್ರಜ್ಞೆ’ ಎಂದರೆ ಏನು? ‘ನಾನು ಇದ್ದೇನೆ’ ಎನ್ನುವ ‘ಇರುವಿನ ಅರಿವೇ’ ಜೀವಪ್ರಜ್ಞೆ. ಇದು ಎಲ್ಲ ಜೀವಿಗಳಲ್ಲಿಯೂ ಇರಲೇಬೇಕಲ್ಲವೆ? ಈ ‘ಅರಿವಿ’ನ ಪರಮ ಅವಸ್ಥೆಯೇ ತನ್ನ ಇರವನ್ನು ಸತತವಾಗಿ ಅನುಭವಿಸುತ್ತಿರುವ ಸಂತೋಷದ ಸ್ಥಿತಿ. ಇದನ್ನೇ ನಮ್ಮ ಯೋಗಿಗಳು ‘ಸಚ್ಚಿದಾನಂದ’  ಎಂದು ಹೇಳಿದ್ದಾರೆ.  {ಸತ್(=ಇರುವು)+ಚಿತ್(=ಅರಿವು)+ಆನಂದ’}.

ಈ ‘ಮೂಲ ಇರುವು’ ವಿಶ್ವದ ಅನಂತ ಜೀವರೂಪಗಳಲ್ಲಿ ವ್ಯಕ್ತವಾಗಿದೆ. ಮೊಟ್ಟಮೊದಲು ಜನಿಸಿದ ಏಕಕೋಶ ಜೀವಿ ಅಮೀಬಾದಿಂದ ಬಹುಕೋಶಜೀವಿಗಳವರೆಗೆ ‘ಮೂಲ ಇರುವು’ ಭಿನ್ನ ಭಿನ್ನ ರೂಪಗಳಲ್ಲಿ ವ್ಯಕ್ತವಾಗುತ್ತಲೇ ಇದೆ. ಮಹರ್ಷಿ ಅರವಿಂದರು ಇದನ್ನೇ ‘To be or to become is the whole endeavour of the Nature’ ಎಂದು ಹೇಳಿದರು. ಆದಿಶಂಕರರು ತಮ್ಮ ಸೌಂದರ್ಯಲಹರಿ ಸ್ತೋತ್ರದಲ್ಲಿ ಈ ಮಾತನ್ನೇ ‘ಪ್ರಕೃತಿಯು ಪರಶಿವನ ಮುಖಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಸ್ತುತಿಸಿದ್ದಾರೆ. (‘ಕರಗ್ರಾಹ್ಯಂ ಶಂಭೋರ್ಮುಖಮುಕುರವ್ರಂತಂ ಗಿರಿಸುತೇ…’). ಲಲಿತಾಸಹಸ್ರನಾಮದಲ್ಲಿ ಇದೇ ಮಾತನ್ನು ಅವ್ಯಕ್ತರೂಪದಲ್ಲಿ ಇರುವ ಮೂಲಪ್ರಕೃತಿಯು ಅನೇಕ ವ್ಯಕ್ತರೂಪಗಳನ್ನು ತಾಳುವುದು ಎಂದು ಹೇಳಿದ್ದಾರೆ. (ಮೂಲಪ್ರಕೃತಿರವ್ಯಕ್ತಾ, ವ್ಯಕ್ತಾವ್ಯಕ್ತಸ್ವರೂಪಿಣೀ).

ಏನೇ ಇರಲಿ, ಯಾವುದೇ ಜ್ಞಾನೇಂದ್ರಿಯವಿಲ್ಲದ, ಕೇವಲ ಏಕಕೋಶವಷ್ಟೇ ಇರುವ ಪ್ರಾಥಮಿಕ ಜೀವಿಯು ಪರಿಸರಕ್ಕೆ ಸ್ಪಂದಿಸಲು ಹೇಗೆ ಸಾಧ್ಯವಾಯಿತು? ಉದಾಹರಣೆಗೆ ಈ ಜೀವಿಗೆ ‘ದೃಷ್ಟಿ’ ಹೇಗೆ ಬಂದಿತು? ಪ್ರಾಣಿಗಳು ಉತ್ಕ್ರಾಂತಿಯ ತೀರ ಕೆಳಮಟ್ಟದಲ್ಲಿ ಇದ್ದಾಗ, ಅವಕ್ಕೆ ಕಣ್ಣುಗಳೇ ಇರಲಿಲ್ಲವಲ್ಲ! ಬೆಳಕಿನ ಕಿರಣಗಳ ಮೂಲಕ ವಸ್ತುಸ್ವರೂಪವನ್ನು ತಿಳಿಯಬಹುದು ಎನ್ನುವ ಅರಿವೇ ಆ ಕಾಲದ ಜೀವಿಗಳಿಗೆ ಇರಲಿಲ್ಲ. ಕಿರಣಗಳನ್ನು ಒಂದು ಬಿಂದುವಿನಲ್ಲಿ ಸಂಗಮಿಸಬಲ್ಲ ಮಸೂರಗಳು ಇರಲಿಲ್ಲ; ಅಕ್ಷಿಪಟಲ ಇರಲಿಲ್ಲ. ಅಂದ ಮೇಲೆ ಈ ‘ದೃಷ್ಟಿವ್ಯವಸ್ಥೆ’ಯು  ಪ್ರಾಣಿಗಳಲ್ಲಿ ಹೇಗೆ ವಿಕಾಸಗೊಂಡಿತು?  

ಇದು ಹೀಗಿರಬಹುದು:
ಕೆಳಮಟ್ಟದ ಪ್ರಾಣಿಗಳಲ್ಲಿ ವಿಕಾಸಗೊಂಡ ವ್ಯವಸ್ಥೆಯು ಇರದೇ ಇದ್ದರೂ ಸಹ, ಸ್ವರಕ್ಷಣೆಗೆ ಬೇಕಾಗುವಷ್ಟು ವ್ಯವಸ್ಥೆಯು ವಿಕಾಸಗೊಂಡಿರುತ್ತದೆ. ಈ ವ್ಯವಸ್ಥೆ ತೀರ ಕೆಳಮಟ್ಟದ ವ್ಯವಸ್ಥೆ ಆಗಿರಬಹುದು. ಆದರೆ ಇಂತಹ ಒಂದು ವ್ಯವಸ್ಥೆ ಇರದಿದ್ದರೆ, ಆ ಪ್ರಾಣಿವರ್ಗ ಕಾಲಕ್ರಮೇಣ ನಾಶವಾಗುವದರಲ್ಲಿ ಸಂದೇಹವಿಲ್ಲ.

ಇಂತಹ ಜೀವಿಗಳಲ್ಲಿ, ಅತಿ ಉಷ್ಣತೆಯಿಂದ ಜೀವಕೋಶಗಳನ್ನು ಕಾಪಾಡಿಕೊಳ್ಳುವುದು ಸ್ವರಕ್ಷಣೆಯ ಒಂದು ಪ್ರಾಥಮಿಕ ಅಂಶವಾಗಿರಬೇಕಲ್ಲವೆ? ಆದುದರಿಂದ, ಸೂರ್ಯನ ಪ್ರಖರ ಕಿರಣಗಳಿಗೆ ಸಂವೇದಿಸುವ ಕೋಶಗಳ ಉತ್ಪಾದನೆಯು ಈ ಪ್ರಯತ್ನದ ಮೊದಲ ಹೆಜ್ಜೆಯಾಗಿರಬೇಕು. ಈ ಸಂವೇದನಾಕೋಶಗಳು ಉಷ್ಣತೆಯನ್ನು ಗ್ರಹಿಸುವ ಕಾರ್ಯಕ್ಕಷ್ಟೇ ಸೀಮಿತಗೊಳ್ಳದೆ, ಕಾಲಕ್ರಮದಲ್ಲಿ ಉಷ್ಣತೆಯಿಂದ ಮೂಡುವ ಛಾಯೆಯನ್ನು ಗ್ರಹಿಸುವಷ್ಟು ವಿಕಾಸವನ್ನು ಹೊಂದಿರಬೇಕು. ವಿಕಾಸದ ಮುಂದಿನ ಮೆಟ್ಟಲುಗಳಲ್ಲಿ, ಉಷ್ಣತೆಯ ಕಿರಣಗಳಷ್ಟೇ ಅಲ್ಲದೆ, ಬೆಳಕಿನ ಕಿರಣಗಳನ್ನೂ ಗ್ರಹಿಸುವ ಸಂವೇದನೆಯನ್ನು ಈ ಜೀವಕೋಶಗಳು ಬೆಳೆಸಿಕೊಂಡಿರಬಹುದು. ಬೆಳಕಿನ ಕಿರಣಗಳ ಮೂಲಕ ವಸ್ತುಸ್ವರೂಪವನ್ನು ಗ್ರಹಿಸುವ ‘ದೃಷ್ಟಿವ್ಯವಸ್ಥೆ’ಯು ಉತ್ಕ್ರಾಂತಿಯ ಮೇಲ್ಮಟ್ಟದಲ್ಲಿ ಇರುವ ಪ್ರಾಣಿವರ್ಗಗಳಲ್ಲಿ ಈ ರೀತಿಯಾಗಿ ವಿಕಾಸವಾಗಿರಬಹುದು.

ಪ್ರಾಣಿವರ್ಗಗಳಲ್ಲಿ ಇದೇನೋ ಸರಿಯಾಯಿತು. ಆದರೆ ಸಸ್ಯಗಳಲ್ಲಿ  ‘ಕಾಣುವ ವ್ಯವಸ್ಥೆ’ ಇದೆಯೆ? ಸಸ್ಯವರ್ಗದಲ್ಲಿ ನರಮಂಡಲವಿಲ್ಲ. ಆದುದರಿಂದ ಸಸ್ಯಗಳು ನೋಡಲಾರವು. ಅದೇ ರೀತಿ ಸಸ್ಯಗಳು ಮೂಸಲಾರವು. ಆದರೆ, ನಮ್ಮ ವಿಜ್ಞಾನವು ನಮಗೆ ಕಲಿಸುವ ಪಾಠ ಏನು ತಿಳಿಸುತ್ತದೆ? ದುಂಬಿಗಳನ್ನು ಆಕರ್ಷಿಸಲೆಂದೇ, ಸಸ್ಯಗಳು ವಿವಿಧ ವರ್ಣದ ಹಾಗು ವಿವಿಧ ಪರಿಮಳದ ಹೂವುಗಳನ್ನು ಸೃಷ್ಟಿಸುತ್ತವೆ! ಸ್ವತಃ ಕಣ್ಣಿಲ್ಲದ, ಮೂಸಲಾರದ ಸಸ್ಯಗಳಿಗೆ ಈ ತಿಳಿವು ಬರಲು ಹೇಗೆ ಸಾಧ್ಯ? ಶಾಸ್ತ್ರೀಯ ಸಂಗೀತವನ್ನು ‘ಕೇಳುವ’ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ ಎಂದು ಕೆಲವು ಸಂಗೀತಕಾರರು ಪ್ರಯೋಗಗಳ ಮೂಲಕ ಸಿದ್ಧಪಡಿಸಿದ್ದಾರೆ! ಕಿವಿ ಇಲ್ಲದ ಸಸ್ಯಗಳಿಗೆ ಇದು ಹೇಗೆ ಸಾಧ್ಯ?
( ಟಿಪ್ಪಣಿ: ಸಸ್ಯಗಳು ಹೊರಸೂಸುವ ಪರಿಮಳದಲ್ಲಿ, ಕಾಮಪ್ರಚೋದಕ ಫೆರೋಹಾರ್ಮೋನುಗಳು ಇರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಈ ಕಾರಣದಿಂದಲೇ ದುಂಬಿಗಳು ಹೂವುಗಳಿಗೆ ಆಕರ್ಷಿತವಾಗುತ್ತವೆ ಎನ್ನಲಾಗುತ್ತಿದೆ. ಫೆರೋಹಾರ್ಮೋನುಗಳ ಜ್ಞಾನವು ಸಸ್ಯಗಳಿಗೆ ಹೇಗೆ ಸಾಧ್ಯವಾಯಿತು?)

ಸಸ್ಯಜೀವಿಗಳೇ ಆಗಲಿ, ಪ್ರಾಣಿಜೀವಿಗಳೇ ಆಗಲಿ, ತಮ್ಮಲ್ಲಿ ಇರುವ ‘ಮೂಲ ಅರಿವಿ’ನಿಂದ, ತಮ್ಮ ಪರಿಸರವನ್ನು ಗ್ರಹಿಸುವ ಸಾಮರ್ಥ್ಯವನ್ನು ಪಡೆದಿವೆ. ಈ ‘ಮೂಲ ಅರಿವಿಗೆ’ ನಾನು ‘ಜೀವಪ್ರಜ್ಞೆ’ ಎನ್ನುತ್ತೇನೆ. ಅವ್ಯಕ್ತರೂಪದಲ್ಲಿರುವ ಈ ಜೀವಪ್ರಜ್ಞೆಯ ಪರಮ ಅವಸ್ಥೆಯೇ ‘ಸಚ್ಚಿದಾನಂದ’ ಭಾವ; ವ್ಯಕ್ತಸ್ಥಿತಿಯಲ್ಲಿ ಇದು ವಿಶ್ವರೂಪವನ್ನು ತಾಳುತ್ತದೆ. (‘ವಿಶ್ವರೂಪಾ ಜಾಗರಣೀ, ಸ್ವಪಂತೀ ತೈಜಸಾತ್ಮಿಕಾ, ಸುಪ್ತಾ ಪ್ರಾಜ್ಞಾತ್ಮಿಕಾ ತುರ್ಯಾ ಸರ್ವಾವಸ್ಥಾ ವಿವರ್ಜಿತಾ..’---ಲಲಿತಾಸಹಸ್ರನಾಮ).

ಪ್ರಾಥಮಿಕ ಜೀವಿಗಳಲ್ಲಿ ಜೀವಪ್ರಜ್ಞೆಯು ಯಾವ ಪ್ರಮಾಣದಲ್ಲಿ ಬಳಕೆಯಾಗುವದೋ, ಆ ಪ್ರಮಾಣದಲ್ಲಿ ವಿಕಾಸಗೊಂಡ ಜೀವಿಗಳಲ್ಲಿ ಆಗುವುದಿಲ್ಲ ಎಂದು ನನ್ನ ಭಾವನೆ. ನನ್ನ ಸಂದೇಹಕ್ಕೆ ಕಾರಣ ಹೀಗಿದೆ: ಕೆಳಮಟ್ಟದ ಪ್ರಾಣಿಗಳು ಹುಟ್ಟಿದ ಸ್ವಲ್ಪ ಕಾಲದಲ್ಲಿಯೇ, ತಮ್ಮ ಪೂರ್ಣ ದೈಹಿಕ ಸಾಮರ್ಥ್ಯವನ್ನು ಹಾಗು ತಿಳಿವಳಿಕೆಯನ್ನು ಪಡೆಯುತ್ತವೆ. ಮಂಗನ ಮರಿ ಹುಟ್ಟಿದ ಕೆಲವೇ ತಿಂಗಳಲ್ಲಿ ಮರದಿಂದ ಮರಕ್ಕೆ ಸಲೀಸಾಗಿ ಜಿಗಿಯಬಲ್ಲವು. ತಾವು ಎಂತಹ ಆಹಾರವನ್ನು ತಿನ್ನಬೇಕು ಎನ್ನುವುದು ಅವಕ್ಕೆ ಹುಟ್ಟಿನಿಂದಲೇ ತಿಳಿದು ಬಿಡುತ್ತದೆ. ಆದರೆ ಮಾನವಶಿಶುವಿಗೆ ಎದ್ದು ನಿಂತುಕೊಳ್ಳಲು ಒಂದು ವರ್ಷವೇ ಬೇಕಾಗುತ್ತದೆ; ತಿನ್ನಬಹುದಾದ ಆಹಾರವನ್ನು ಗುರುತಿಸಲೂ ಸಹ ಮಾನವಶಿಶುವು ದೀರ್ಘಕಾಲವನ್ನು ತೆಗೆದುಕೊಳ್ಳುತ್ತದೆ. ಕೆಳಮಟ್ಟದ ಪ್ರಾಣಿಗಳ ಈ ಜೈವಿಕ ಹಾಗು ಬೌದ್ಧಿಕ ಸಾಮರ್ಥ್ಯದಿಂದ ಚಕಿತನಾದ ನಾನು, ನನಗೆ ಪರಿಚಿತರಾದ ಓರ್ವ ಪ್ರಾಣಿಶಾಸ್ತ್ರಜ್ಞರ ಎದುರಿಗೆ ನನ್ನ ಸಂದೇಹವನ್ನು ಮಂಡಿಸಿದೆ. ಅವರ ಉತ್ತರ ಹೀಗಿತ್ತು. ಕೆಳಮಟ್ಟದ ಪ್ರಾಣಿಗಳ ಬದುಕುವ ಅವಧಿ ಕಡಿಮೆ, ಮನುಷ್ಯನ ಬದುಕುವ ಅವಧಿ ಜಾಸ್ತಿ; ಆದುದರಿಂದ ಮನುಷ್ಯನ ಕಲಿಕೆಯ ಅವಧಿ ಸಹ ಜಾಸ್ತಿ. ಈ ಉತ್ತರದಿಂದ ನನಗೆ ಸಮಾಧಾನವಾಗಲಿಲ್ಲ. ಅವರಿಗೆ ಮತ್ತೆ ಕೇಳಿದೆ: ‘ಆದರೆ ಪ್ರೊಫೆಸರರೆ, ಕಡಲಾಮೆಗಳು ನಾಲ್ಕುನೂರು ವರ್ಷಗಳವರೆಗೆ ಜೀವಿಸುತ್ತವೆ. ಆಮೆಯ ಮರಿಗಳು ಮೊಟ್ಟೆಯಿಂದ ಹೊರಬಂದ ತಕ್ಷಣವೇ, ನಡೆಯುತ್ತ ಸಮುದ್ರಕ್ಕೆ ಹೋಗಿ, ಅಲ್ಲಿಂದ ಈಜುತ್ತ ತಮ್ಮ ಸ್ಥಳಗಳಿಗೆ ತಲುಪತ್ತವೆಯಲ್ಲ? ಇಂತಹ ದೀರ್ಘಜೀವಿಗಳಲ್ಲಿ ಕಲಿಕೆಯು ಏತಕ್ಕೆ ಸಾವಕಾಶವಾಗುವದಿಲ್ಲ? ’ ಈ ಪ್ರಶ್ನೆಗೆ ಅವರಲ್ಲಿ ಉತ್ತರವಿರಲಿಲ್ಲ.

ಆಗ ನನಗೆ ಹೊಳೆದ ಉತ್ತರ ಹೀಗಿದೆ:
ಮನುಷ್ಯನ ವಿಕಾಸಪಥದಲ್ಲಿ ‘ಜೈವಿಕ ತಿಳಿವಿ’ನ ಜೊತೆಗೇ ‘ಭೌತಿಕ ಕಲಿಕೆಯ’ ಪ್ರಮಾಣವೂ ಅಧಿಕವಾಗುತ್ತಲೇ ಸಾಗಿದೆ. ಮಾನವಶಿಶುವಿಗೆ ಕೇವಲ ಎದ್ದು ನಿಲ್ಲಲು ಸಾಧ್ಯವಾದರೆ ಸಾಲದು; ಅದು ಮಾತನಾಡಲು ‘ಕಲಿ’ಯಬೇಕು! ಮನುಷ್ಯಪರಿಸರವು ಹಾಗು ಸಮಾಜವು ಪ್ರಾಣಿಪರಿಸರಕ್ಕಿಂತ ಹಾಗು ಸಮಾಜಕ್ಕಿಂತ ತುಂಬ ಸಂಕೀರ್ಣವಾಗಿದೆ. ಮಾನವನು ಬದುಕಲು ಕೇವಲ ದೈಹಿಕ ಕುಶಲತೆಯನ್ನು ಅವಲಂಬಿಸುವದಿಲ್ಲ, ಆದರೆ ಬೌದ್ಧಿಕ ಕುಶಲತೆಯನ್ನು ಅವಲಂಬಿಸುತ್ತಾನೆ. ಇಂತಹ ಸಂಕೀರ್ಣತೆಯನ್ನು ಗ್ರಹಿಸುವುದನ್ನು ಹಾಗು ಅದಕ್ಕೆ ಸ್ಪಂದಿಸುವುದನ್ನು ಮಾನವಶಿಶು ಕಲಿಯಬೇಕಾಗುತ್ತದೆ.  ಆದುದರಿಂದ ಜೈವಿಕ ವಿಕಾಸ ಹಾಗು ಭೌತಿಕ ಕಲಿಕೆಗಳು ಜೊತೆಜೊತೆಗೇ ಸಾಗಬೇಕಾದಂತಹ ಪರಿಸ್ಥಿತಿಯಲ್ಲಿ ಮಾನವಕೂಸಿನ ಜೈವಿಕ ಗ್ರಹಿಕೆ ಪ್ರಾಣಿಕೂಸುಗಳ ಜೈವಿಕ ಗ್ರಹಿಕೆಗಿಂತ ನಿಧಾನವಾಗುತ್ತದೆ ಹಾಗು ಮಾನವಶಿಶುಗಳಿಗೆ ಜೈವಿಕ ಸಾಮರ್ಥ್ಯವನ್ನು ರೂಢಿಸಿಕೊಳ್ಳಲು ಅಧಿಕ ಸಮಯ ಬೇಕಾಗುತ್ತದೆ.

ಮಾನವನ ಭೌತಿಕ ಜ್ಞಾನ ಹೆಚ್ಚಿದಂತೆ, ಆತನಿಗೆ ತಾನು ಪರಿಸರವನ್ನು ಜಯಿಸಿದ್ದೇನೆಂಬ ಗರ್ವ ಬಂದಿದೆ. ಆದರೆ ಮಾನವನಿಗಿಂತ ಅಧಿಕ ಜೈವಿಕ ಪ್ರಜ್ಞೆಯನ್ನು ಹೊಂದಿರುವ ತೀರ ಕೆಳಮಟ್ಟದ ಜೀವಿಗಳನ್ನು ಸೋಲಿಸಲು ಅವನಿಂದ ಸಾಧ್ಯವಾಗಿಲ್ಲ ಹಾಗು ಆಗಲಾರದು. ವೈರಾಣುಗಳ ನಾಶಕ್ಕಾಗಿ ನಾವೆಷ್ಟೇ ಜೀವಿರೋಧಿ ಮದ್ದುಗಳನ್ನು ಸಂಶೋಧಿಸಿದರೂ ಸಹ, ವೈರಾಣುಗಳು ತಮ್ಮ ಜೀನುಗಳನ್ನು ಮಾರ್ಪಡಿಸಿಕೊಳ್ಳುತ್ತ ಬದುಕಿವೆ. ಈ ಹೋರಾಟದಲ್ಲಿ ಅವುಗಳದೇ ಕೊನೆಯ ನಗೆ!

ಇದೆಲ್ಲ ‘ಭೂಲೋಕ’ದ ವಿಷಯವಾಯಿತು. ಮಾನವನ ಪ್ರಜ್ಞೆಗಿಂತ ಹೆಚ್ಚಿನ ಪ್ರಜ್ಞೆಯನ್ನು ಹೊಂದಿದ ಅನೇಕ ಲೋಕಗಳಿವೆ. ಅವು ದೇವಲೋಕಗಳು. ಈ ಎಲ್ಲ ಲೋಕಗಳ ಕೊನೆಯಲ್ಲಿ ಇರುವುದೇ ‘ಬಿಂದು’. ಭಾರತೀಯ ಶಾಸ್ತ್ರಗಳ ಮೇರೆಗೆ, ಈ ಬಿಂದುವಿನಲ್ಲಿ ಪರಮಾತ್ಮ ಹಾಗು ಪ್ರಕೃತಿ ಅಭಿನ್ನರಾಗಿ ಇರುತ್ತಾರೆ. ಈ ಬಿಂದುವಿನ ವಿಘಟನೆ ಹಾಗು ಸಂಘಟನೆಗಳು ಸತತವಾಗಿ ನಡದೇ ಇರುತ್ತವೆ. ಇದು ವಿಶ್ವದ ಸೃಷ್ಟಿಯ ಹಾಗು ಸಂಹಾರದ ಗುಟ್ಟು!

Saturday, July 25, 2009

ಗ್ರಹಣರಹಸ್ಯ

“ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ ಹಾಗೂ ಶನಿ ಇವರು ಆಕಾಶದಲ್ಲಿ ಸಂಚರಿಸುವ ದೇವತೆಗಳು ; ರಾಹು ಹಾಗೂ ಕೇತು ಇವರು ರಾಕ್ಷಸರು. ಇವರಲ್ಲಿ ಒಬ್ಬನಿಗೆ ರುಂಡ ಮಾತ್ರ ಇದೆ. ಮತ್ತೊಬ್ಬನಿಗೆ ಮುಂಡ ಮಾತ್ರ ಇದೆ. ಗ್ರಹಣಕಾಲದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ಈ ರಾಕ್ಷಸರಲ್ಲಿ ಒಬ್ಬನು ಹಿಡಿದುಕೊಳ್ಳುತ್ತಾನೆ ಎನ್ನುವ ಪಾರಂಪರಿಕ ನಂಬಿಕೆ ಭಾರತೀಯರಲ್ಲಿ ಇದೆ.”
ಆದುದರಿಂದ ಭಾರತೀಯರು ಮೂಢರು ಎನ್ನುವ ಒಂದು ಗ್ರಹಿಕೆ ಪಾಶ್ಚಾತ್ಯರಲ್ಲಿ ಹಾಗೂ ಅನೇಕ ಭಾರತೀಯರಲ್ಲಿ ಇದೆ. ಆದರೆ ಈ ಗ್ರಹಿಕೆ ಪೂರ್ವಾಗ್ರಹಪೀಡಿತವಾದಂತಹ ಗ್ರಹಿಕೆ.

ಭಾರತೀಯರ ಈ ನಂಬಿಕೆಯನ್ನು ಸ್ವಲ್ಪ ಲಕ್ಷ್ಯಗೊಟ್ಟು ಪರೀಕ್ಷಿಸಿರಿ. ಗ್ರಹಣಸಮಯದಲ್ಲಿ ಸೂರ್ಯನನ್ನು ಅಥವಾ ಚಂದ್ರನನ್ನು ರಾಹು ಅಥವಾ ಕೇತು ಎನ್ನುವ ರಾಕ್ಷಸನು ಹಿಡಿಯುತ್ತಾನೆ ಎನ್ನುವದು ಇಲ್ಲಿರುವ ನಂಬಿಕೆ. ಭಾರತೀಯರಲ್ಲಿ ಮೂಢನಂಬಿಕೆಯೆ ಇದ್ದರೆ, ಒಬ್ಬನೇ ರಾಕ್ಷಸನು ಇವರನ್ನು ಬೆನ್ನಟ್ಟಬಹುದಿತ್ತಲ್ಲ? ಇಬ್ಬರು ಯಾಕೆ ಬೇಕು ಎನ್ನುವ ಪ್ರಶ್ನೆ ಬರುತ್ತದೆ. ಅಲ್ಲದೆ, ಯಾವ ಗ್ರಹಣದಲ್ಲಿ ಯಾವ ರಾಕ್ಷಸನು ಈ ಬೆನ್ನಟ್ಟುವ ಕಾರ್ಯ ಮಾಡುತ್ತಾನೆ, ಅವನು ರಾಹುವೊ ಅಥವಾ ಕೇತುವೊ ಎನ್ನುವದನ್ನು ಭಾರತೀಯ ಪಂಚಾಂಗಗಳಲ್ಲಿ ನಿಖರವಾದ ಕಾಲಮಾನದೊಡನೆ ಹೇಳಲಾಗುತ್ತದೆ. ಅರ್ಥಾತ್ ಭಾರತೀಯರಿಗೆ ಈ ರಾಕ್ಷಸರು ಯಾರು ಅನ್ನುವ ಕಲ್ಪನೆ ಸ್ಪಷ್ಟವಾಗಿತ್ತು.

ಖಗೋಲಶಾಸ್ತ್ರವು ಸಾವಿರಾರು ವರ್ಷಗಳಷ್ಟು ಹಳೆಯದು. ಭೂಮಿ ಹಾಗೂ ಇತರ ಗ್ರಹಗಳು ಸೂರ್ಯನ ಸುತ್ತಲೂ ಪರಿಭ್ರಮಿಸುತ್ತವೆ ಎನ್ನುವ ಮಾತನ್ನು ಮೊದಲು ದಾಖಲಿಸಿದವನು ಮೊದಲನೆಯ ಆರ್ಯಭಟನು (ಕ್ರಿ.ಶ. ೪೭೬-೫೫೦). ಭೂಮಿಯ ಸುತ್ತಳತೆ ಹಾಗೂ ಸೂರ್ಯನಿಂದ ಭೂಮಿಯ ದೂರವನ್ನು ಆರ್ಯಭಟನು ಅತ್ಯಂತ ನಿಖರವಾಗಿ ತಿಳಿಸಿದ್ದಾನೆ.
ಆರ್ಯಭಟನ ನಂತರ ಒಂದು ಸಾವಿರ ವರ್ಷಗಳ ಬಳಿಕ ಕೋಪರ್ನಿಕಸ್(ಕ್ರಿ.ಶ. ೧೪೭೩- ಕ್ರಿ.ಶ. ೧೫೪೩) ಎನ್ನುವ ಪೋಲ್ಯಾಂಡಿನ ಶಾಸ್ತ್ರಜ್ಞನು ಭೂಮಿಯ ಪರಿಭ್ರಮಣವನ್ನು ಯುರೋಪಿನಲ್ಲಿ ಸಾರಿದನು.

ಖಗೋಲಶಾಸ್ತ್ರದ ವಿದ್ಯಾರ್ಥಿಗಳಿಗೆಲ್ಲ ಗೊತ್ತಿರುವಂತೆ, ಚಂದ್ರನು ಭೂಮಿಯ ಸುತ್ತಲೂ ತಿರುಗುವ ಕಕ್ಷೆಯು, ಭೂಮಿಯು ಸೂರ್ಯನ ಸುತ್ತಲೂ ತಿರುಗುವ ಕಕ್ಷೆಯನ್ನು, ಎರಡು ಬಿಂದುಗಳಲ್ಲಿ ಛೇದಿಸುತ್ತದೆ. ಇವೆರಡೂ ಕಾಲ್ಪನಿಕ ಬಿಂದುಗಳು. ಪರಿಭ್ರಮಣೆ ಮುಂದುವರೆದಂತೆಲ್ಲ, ಈ ಬಿಂದುಗಳೂ ಸಹ ಸರಿಯುತ್ತಲೆ ಹೋಗುತ್ತವೆ. ಭೂಮಿಯು ಸೂರ್ಯನ ಸುತ್ತಲೂ ತಿರುಗುವ ದಿಕ್ಕಿಗೆ ವಿರುದ್ಧವಾದ ದಿಕ್ಕಿನಲ್ಲಿ ಈ ಬಿಂದುಗಳು ಸರಿಯುತ್ತವೆ.

ಈಗ ಈ ಬಿಂದುಗಳಲ್ಲಿ ಮೊದಲನೆಯ ಬಿಂದುವಿಗೆ ನಮ್ಮ ಶಾಸ್ತ್ರಜ್ಞರು ಕೊಟ್ಟ ಹೆಸರು ರಾಹು ; ಎರಡನೆಯ ಬಿಂದುವಿನ ಹೆಸರು ಕೇತು. ‘ಈ ಬಿಂದುಗಳು ರಾಕ್ಷಸರು ಏಕೆ?’ ಎನ್ನುವ ಪ್ರಶ್ನೆಗೆ ಅನೇಕ ಉತ್ತರಗಳಿವೆ. ಉತ್ತರವನ್ನು ಹುಡುಕುವ ಮೊದಲು ನಾವು ಇನ್ನಿಷ್ಟು ಮಾಹಿತಿಗಳನ್ನು ಗಮನಿಸೋಣ.

ಮೊದಲನೆಯದಾಗಿ ಈ ಬಿಂದುಗಳ ಹೆಸರುಗಳನ್ನು ಪರೀಕ್ಷಿಸೋಣ. ಮೊದಲನೆಯ ಬಿಂದುವಿಗೆ ರಾಹು ಎಂದು ಕರೆದಿದ್ದಾರೆ. ರಾಹು ಈ ಪದದ ಅರ್ಥ Lock. ಗ್ರಹಣಸಮಯದಲ್ಲಿ ಈ ಬಿಂದುವಿನಲ್ಲಿ ಸೂರ್ಯ ಅಥವಾ ಚಂದ್ರರ ಚೈತನ್ಯಕ್ಕೆ ತಡೆ ಬೀಳುವದರಿಂದ ಈ ಬಿಂದುವಿನ ಹೆಸರು Lock ಅಥವಾ ರಾಹು.
ಎರಡನೆಯ ಬಿಂದುವಿನ ಹೆಸರು ಕೇತು. ಕೇತು ಅಂದರೆ Flag. ಮೊದಲನೆಯ ಬಿಂದುವಿಗೆ Flag ಎಂದು ಕರೆಯದೆ ಎರಡನೆಯ ಬಿಂದುವಿಗೆ Flag ಎಂದು ಕರೆಯುವ ಕಾರಣವೇನು? ಯಾಕೆಂದರೆ, ಈ ಬಿಂದುಗಳು ವಿರುದ್ಧ ದಿಕ್ಕಿನಲ್ಲಿ ಚಲಿಸುವದರಿಂದ, ಮೊದಲನೆಯ ಬಿಂದು ಹಿಂದಿನಿಂದ ಚಲಿಸುತ್ತದೆ ಹಾಗೂ ಎರಡನೆಯ ಬಿಂದು ಮುಂದಿನಿಂದ ಚಲಿಸುತ್ತದೆ. ಎರಡನೆಯ ಬಿಂದುವೇ ಇಲ್ಲಿ Flag bearer. ಆದುದರಿಂದ ಇದರ ಹೆಸರು ಕೇತು ಅರ್ಥಾತ್ Flag!
ಮತ್ತೊಂದು ವಿಷಯವೆಂದರೆ ರಾಹುವಿಗೆ ರುಂಡವಿಲ್ಲ ಹಾಗೂ ಕೇತುವಿಗೆ ಮುಂಡವಿಲ್ಲ. ಈ ಎರಡೂ ಬಿಂದುಗಳು ಒಂದರ್ಥದಲ್ಲಿ Supplementary ಬಿಂದುಗಳು. ಆದುದರಿಂದಲೇ ಇವು ಅರ್ಧದೇಹಿಗಳು.

ಪಾಶ್ಚಾತ್ಯರಿಗಿಂತ ಸಾವಿರ ವರ್ಷಕ್ಕೂ ಮೊದಲೇ ಭಾರತೀಯ ಖಗೋಲವಿಜ್ಞಾನಿಗಳು ತಿಳಿದ ವಿಷಯ ಇದು. ಆದರೆ, ಯುರೋಪ ಖಂಡವು ಏಶಿಯಾ ಖಂಡವನ್ನು ತನ್ನ ಆಳ್ವಿಕೆಗೆ ಒಳಪಡಿಸಿದ್ದರಿಂದ, ಭಾರತೀಯ ಖಗೋಲಶಾಸ್ತ್ರಜ್ಞರ ಜ್ಞಾನಕ್ಕೆ ಮನ್ನಣೆ ಸಿಗದೆ, ಈ ದೇಶವನ್ನು ಗೆದ್ದವರೇ ಪಂಡಿತರಾಗಿ ಮನ್ನಣೆ ಪಡೆದದ್ದು ಅನಿವಾರ್ಯವಾಯಿತು.

ಈ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನವನ್ನು ನೀಡಿದ ವಿಷಯ ಯಾವದು ಎಂದು ಕೇಳಿದರೆ ಪಾಶ್ಚಾತ್ಯರು ಒಕ್ಕೊರಲಿನಿಂದ ಐನ್‌ಸ್ಟೈನನ ಸಾಪೇಕ್ಷವಾದವೆಂದು ಘೋಷಿಸುತ್ತಾರೆ. ಆದರೆ ಅಂಕಗಣಿತದಲ್ಲಿಯ Place value position ಹಾಗೂ ಶೂನ್ಯಸಂಕೇತ ಇವೇ ಅತ್ಯಂತ ಮಹತ್ವದ ಜ್ಞಾನಗಳು. ಇದರ ಸಂಶೋಧಕರು ಭಾರತೀಯರು. ಆದರೆ ಜಗತ್ತಿಗೆ ಅತ್ಯಂತ ಮಹತ್ವದ ಜ್ಞಾನ ನೀಡಿದ ಸಂಶೋಧನೆ ಎಂದು ಇವಕ್ಕೆ ಯಾರೂ ಕರೆಯುವದಿಲ್ಲ. ಒಂದು ವೇಳೆ ಭಾರತೀಯ ಗಣಿತಜ್ಞರು ಶೂನ್ಯಸಂಶೋಧನೆಯನ್ನು ಮಾಡಿರದಿದ್ದರೆ, ವಿಜ್ಞಾನದ ಪ್ರಗತಿಯು ಸಾಧ್ಯವಿರಲಿಲ್ಲ.

ಇವತ್ತು ಯಾವುದೇ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗೆ, “ನೂರು-ಐವತ್ತು” ಎಂದು ಕೇಳಿದರೆ (೧೦೦-೫೦) ಎಂದು ಬರೆದುಕೊಂಡು ೫೦ ಎನ್ನುವ ಉತ್ತರವನ್ನು ಥಟ್ಟನೆ ನೀಡುತ್ತಾನೆ. ಆದರೆ ಭಾರತೀಯ ಗಣಿತವು ಯುರೋಪಿಗೆ ತಲುಪುವ ಮೊದಲು “ನೂರು-ಐವತ್ತು” ಇದನ್ನು ಅಲ್ಲಿಯ ಗಣಿತ ಪಂಡಿತರು “C-L” ಎಂದು ಬರೆದುಕೊಳ್ಳುತ್ತಿದ್ದರು. ಆ ಬಳಿಕ ಒಂದುನೂರು ಗುಂಡುಗಳನ್ನು ಎಣಿಸಿ ತೆಗೆದುಕೊಂಡು, ಅದರಲ್ಲಿ ಐವತ್ತು ಗುಂಡುಗಳನ್ನು ಎಣಿಸಿ ಪಕ್ಕಕ್ಕಿಡುತ್ತಿದ್ದರು. ಬಳಿಕ ಉಳಿದ ಗುಂಡುಗಳನ್ನು ಎಣಿಸಿ, ಐವತ್ತು ಎನ್ನುವ ಉತ್ತರವನ್ನು ಕೊಡುತ್ತಿದ್ದರು.

ವಿಜ್ಞಾನದಲ್ಲಿ ಇಷ್ಟೆಲ್ಲ ಮುಂದುವರಿದಿದ್ದ ಭಾರತೀಯರು ರಾಹು ಹಾಗೂ ಕೇತು ಎನ್ನುವ ಬಿಂದುಗಳನ್ನು ರಾಕ್ಷಸರು ಎಂದು ಕರೆದಿದ್ದೇಕೆ? ಇದಕ್ಕೆ ಉತ್ತರ ಬಹುಶಃ ಹೀಗಿರಬಹುದು. ನಮ್ಮ ವಿಜ್ಞಾನಿಗಳು ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸಿದ್ದರು. ಈ ದೇವತೆಗಳನ್ನು ಮರೆಮಾಡುವಂತಹ ವಸ್ತು ಯಾವುದೇ ಇದ್ದರೂ ಅದು ರಾಕ್ಷಸಸಮಾನ. ಆದುದರಿಂದ ಈ ಬಿಂದುಗಳು ರಾಕ್ಷಸರು.

ಆಕಾಶಕಾಯಗಳನ್ನು ದೇವತೆಗಳು ಎಂದು ಭಾವಿಸುವದು ತಪ್ಪೆನ್ನುತ್ತೀರಾ? ಭೌತಿಕ ಅರ್ಥದಲ್ಲಿ ಅದು ತಪ್ಪಾಗಿರಬಹುದು. ಆದರೆ ಪುರಾತನ ಭಾರತೀಯರು ಅತ್ಯಂತ ಧಾರ್ಮಿಕ ಮನೋಭಾವದವರಾಗಿದ್ದರು. ಈ ಸೃಷ್ಟಿಯಲ್ಲಿಯ ಪ್ರತಿಯೊಂದು ವಸ್ತುವೂ ಭಗವಂತನ ರೂಪವೇ (form) ಆಗಿದೆ. ಇತರರಿಗೆ ಒಳ್ಳೆಯದನ್ನು ಮಾಡುತ್ತಿದ್ದರೆ ಅದೊಂದು ದೇವತೆ ; ದೇವತೆಗೆ ವಿರೋಧವಾಗಿರುವದು ರಾಕ್ಷಸ. ಇದು ನಮ್ಮ ಪುರಾತನರ ಭಾವನೆ.

ಆದುದರಿಂದಲೇ ಅವರು ಸೂರ್ಯ ಹಾಗು ಚಂದ್ರರನ್ನು ದೇವತೆಗಳೆಂದು ಭಾವಿಸಿದರು ; ರಾಹು ಹಾಗು ಕೇತು ಎನ್ನುವ ಕಾಲ್ಪನಿಕ ಖಗೋಲ ಬಿಂದುಗಳನ್ನು ರಾಕ್ಷಸರೆಂದು ಕರೆದರು. ತಮ್ಮ ಖಗೋಲ ಜ್ಞಾನದ ಮೂಲಕ ಗ್ರಹಣದ ಸಮಯ ಹಾಗೂ ಅವಧಿಯನ್ನು ಕಂಡು ಹಿಡಿಯುತ್ತದ್ದಿಂತೆಯೇ, ಆ ಅವಧಿಯಲ್ಲಿ ನದಿಯಲ್ಲಿ ಮುಳುಗು ಹಾಕಿ ದೇವರ ಧ್ಯಾನವನ್ನು ಮಾಡುತ್ತಿದ್ದರು! ಇದು ಅವರ ಪ್ರಾಮಾಣಿಕ ಮನೋಧರ್ಮ. ಇದರಲ್ಲಿ ಯಾವುದೇ ವಿರೋಧಾಭಾಸ ಇಲ್ಲ!