Tuesday, March 31, 2015

ಭಾಷೆಯ ಕೊಲೆಗಡುಕರು


ನಮ್ಮ ಕನ್ನಡ ಟೀವಿ ಚಾನೆಲ್‍ಗಳಿಗೆ ಏನಾಗಿದೆ? ಅಶುದ್ಧ ಉಚ್ಚಾರ, ಅಶುದ್ಧ ಬರಹ ಹಾಗು ಅಶುದ್ಧ ವ್ಯಾಕರಣಗಳು ಈ ಚಾನೆಲ್‍ಗಳಲ್ಲಿ ಮಾಮೂಲು ಸಂಗತಿಯಾಗಿವೆ. ಈಗೀಗ ಅಶುದ್ಧ ಪದಪ್ರಯೋಗಗಳನ್ನೂ ಈ ಚಾನೆಲ್‍ಗಳು ಧಾರಾಳವಾಗಿ ಮಾಡುತ್ತಿವೆ. ನನ್ನ ಕಣ್ಣಿಗೆ ಬಿದ್ದ ಒಂದು ಉದಾಹರಣೆಯನ್ನು ಇಲ್ಲಿ ಕೊಡುತ್ತಿದ್ದೇನೆ:

ಇತ್ತೀಚೆಗೆ ಅಸ್ವಾಭಾವಿಕವಾಗಿ ನಿಧನರಾದ, ಭಾರತೀಯ ಆಡಳಿತ ಸೇವೆಯ ಶ್ರೀ ರವಿ ಇವರ ಪ್ರಕರಣವನ್ನು ಸಿ.ಬಿ.ಆಯ್.ಗೆ ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ವಿರೋಧಪಕ್ಷದ ಶಾಸಕರು ವಿಧಾನಸಭೆಯಲ್ಲಿ ಮಂಡಿಸಿದಾಗ, ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರು ಈ ಬೇಡಿಕೆಯನ್ನು ಒಪ್ಪಿಕೊಳ್ಳಲಿಲ್ಲ. ಕನ್ನಡದ ಒಂದು ಟೀವಿ ಚಾನೆಲ್ ಈ ಸಮಾಚಾರಕ್ಕೆ ಕೊಟ್ಟ ಅಡಿಬರಹ ಹೀಗಿತ್ತು: ‘ಸಿದ್ದರಾಮಯ್ಯನವರು  ಸಿ.ಬಿ.ಆಯ್  ಬೇಡಿಕೆಯನ್ನು ನಿರಾಕರಿಸಿದರು.’

ವಾಸ್ತವದಲ್ಲಿ, ಮುಖ್ಯ ಮಂತ್ರಿಗಳು ಏನನ್ನೂ ನಿರಾಕರಿಸಿಲ್ಲ. ಅವರು ಸಿ.ಬಿ.ಆಯ್‍ಗೆ ರವಿ-ಪ್ರಕರಣವನ್ನು ಒಪ್ಪಿಸಬೇಕೆನ್ನುವ ಬೇಡಿಕೆಯನ್ನು ತಿರಸ್ಕರಿಸಿದ್ದಾರೆ, ಅಷ್ಟೇ! ಈ ಚಾನೆಲ್‍ಗೆ ನಿರಾಕರಣೆ ಹಾಗು ತಿರಸ್ಕಾರ ಈ ಎರಡು ಪದಗಳ ಅರ್ಥವ್ಯತ್ಯಾಸ ತಿಳಿಯದು. ನಿರಾಕರಿಸುವುದು ಅಂದರೆ denying; ತಿರಸ್ಕರಿಸುವುದು ಎಂದರೆ rejecting. ಇದನ್ನು ಸ್ಪಷ್ಟ ಪಡಿಸಲು ಒಂದು ಕಾಲ್ಪನಿಕ ಉದಾಹರಣೆಯನ್ನು ನೋಡೋಣ:

ನ್ಯಾಯಾಲಯದಲ್ಲಿ ನ್ಯಾಯಾಧೀಶರು ಆರೋಪಿಯನ್ನು ಕೇಳುತ್ತಿದ್ದಾರೆ:
“ನಿಮ್ಮ ಮೇಲಿನ ಕಳ್ಳತನದ ಆರೋಪವನ್ನು ನೀವು ಒಪ್ಪಿಕೊಳ್ಳುತ್ತೀರಾ?”
ಆರೋಪಿತ: “ನಾನು ಕಳ್ಳತನದ ಆರೋಪವನ್ನು ನಿರಾಕರಿಸುತ್ತೇನೆ.” (I deny the charges of theft).
ನ್ಯಾಯಾಧೀಶರು ವಕೀಲರಿಗೆ:  “ I reject your argument.”
(ನಾನು ನಿಮ್ಮ ವಾದವನ್ನು ತಿರಸ್ಕರಿಸುತ್ತೇನೆ.)

ಕನ್ನಡದಲ್ಲೇ ಇಂತಹ ತಪ್ಪುಗಳನ್ನು ಮಾಡುವವರು ಇಂಗ್ಲೀಶಿನಲ್ಲಿ ಮಾಡದಿರುತ್ತಾರೆಯೆ? ಇಂಗ್ಲೀಶಿನ suspect ಹಾಗು doubt ಪದಗಳನ್ನು ಕನ್ನಡಿಗರು ಬೇಕಾಬಿಟ್ಟಿಯಾಗಿ ಬಳಸುವ ಒಂದು ಉದಾಹರಣೆಯನ್ನು ಇಲ್ಲಿ ಕೊಡುವುದು ಅಪ್ರಸ್ತುತವಾಗಲಾರದು.

ಕನ್ನಡಿಗ: ಈತನೇ ಕಳ್ಳತನ ಮಾಡಿದ್ದಾನೆ. ಈತನ ಮೇಲೆ ನನಗೆ full doubt ಇದೆ.
ವಾಸ್ತವದಲ್ಲಿ ನಮ್ಮ ಕನ್ನಡಿಗನಿಗೆ ಇದ್ದದ್ದು suspicionಏ ಹೊರತು doubt ಅಲ್ಲ. ಕನ್ನಡದಲ್ಲಿ suspicion ಹಾಗು doubt ಎರಡಕ್ಕೂ ಸಂಶಯ ಎನ್ನುವ ಪದವನ್ನೇ ಬಳಸುವುದರಿಂದ ನಮ್ಮ ಕನ್ನಡಿಗನು ಇಂತಹ ತಪ್ಪು ಪ್ರಯೋಗಗಳನ್ನು ಮಾಡುತ್ತಾನೆ. ಈತನ ಮಾತನ್ನು ಕೇಳುತ್ತಿರುವ ಇಂಗ್ಲೀಶರವನಿಗೆ ಅನೇಕ doubts ಬರುವುದು ಸಹಜ!

(ಶ್ರೀ ಶಿವಪ್ರಕಾಶರು doubt ಎನ್ನುವ ಪದಕ್ಕೆ ‘ಸಂದೇಹ’ ಎನ್ನುವುದು ಸರಿಯಾದ ಪದ ಎಂದು ಸೂಚಿಸಿದ್ದಾರೆ. ಇದು doubt ಎನ್ನುವ ಪದದ ಮತ್ತೊಂದು ಅರ್ಥವಾಗುತ್ತಿದ್ದು, ಈ ವಿವರಣೆಗಾಗಿ ನಾನು ಶ್ರೀ ಶಿವಪ್ರಕಾಶರಿಗೆ ಕೃತಜ್ಞನಾಗಿದ್ದೇನೆ. Doubt ಪದವನ್ನು ಈ ಅರ್ಥದಲ್ಲಿ ಬಳಸುವ ಸಂದರ್ಭದ ಉದಾಹರಣೆ:
ಅಧ್ಯಾಪಕರು: Any doubts? = ಏನಾದರೂ ಸಂದೇಹಗಳು ಇವೆಯೆ?)

ಇಂಗ್ಲೀಶಿನ ಇನ್ನೂ ಕೆಲವು ಪದಗಳನ್ನು ಕನ್ನಡಿಗರು ಬೇಕಾಬಿಟ್ಟಿಯಾಗಿ ಬಳಸುತ್ತಾರೆ. ಉದಾಹರಣೆಗೆ beside ಮತ್ತು besides. Beside ಎಂದರೆ ಪಕ್ಕದಲ್ಲಿ ಅನ್ನುವ ಅರ್ಥ. ಉದಾಹರಣೆಗೆ There is a tree beside the temple. ಇನ್ನು besides ಎಂದರೆ ‘ಅದೂ ಅಲ್ಲದೆ’ ಎನ್ನುವ ಅರ್ಥವನ್ನು ಕೊಡುತ್ತದೆ. ಉದಾಹರಣೆಗೆ He is a gambler. Besides he is an alcoholic!

Be ಎನ್ನುವುದು ಒಂದು ಪ್ರತ್ಯಯ. Beside ಎಂದರೆ by the side of ಎಂದಾಗುತ್ತದೆ. ಇದರಂತೆಯೆ, behind ಎಂದರೆ by the hind of, before ಎಂದರೆ by the fore of, beneath ಎಂದರೆ by the neath of ಎಂದೆಲ್ಲ ಪದಗಳ ಹೃಸ್ವೀಕರಣವು ಇಂಗ್ಲೀಶಿನಲ್ಲಿ ಆಗಿದೆ.

ಇಂಗ್ಲೀಶಿನ truth ಹಾಗು reality ಪದಗಳನ್ನು ಕನ್ನಡಿಗರು ತಿರುವು ಮುರುವಾಗಿ ಉಪಯೋಗಿಸಿದ ಸಂದರ್ಭಗಳನ್ನು ನಾನು ನೋಡಿದ್ದೇನೆ. Truth ಎಂದರೆ ಸತ್ಯ. Reality ಎಂದರೆ ವಾಸ್ತವತೆ. ಈ ಪದಗಳ ಉದಾಹರಣೆಗಳು ಹೀಗಿವೆ:
God’s existence is truth; we can not see him is reality.

ಅನುಮಾನ ಎನ್ನುವ ಪದದ ಅರ್ಥ ತರ್ಕಸಿದ್ಧ ಎಂದಾಗುತ್ತದೆ. ಉದಾಹರಣೆಗೆ ‘ಹೊಗೆ ಇದ್ದಲ್ಲಿ ಬೆಂಕಿ ಇರುತ್ತದೆ’ ಎನ್ನುವುದು ಅನುಮಾನ ಅರ್ಥಾತ್ ತರ್ಕ. ಆದರೆ ಈ ಪದವನ್ನು ಅನೇಕರು ಋಣಾತ್ಮಕವಾಗಿ, ಸಂಶಯಾತ್ಮಕವಾಗಿ ಬಳಸುತ್ತಾರೆ. ಉದಾಹರಣೆಗೆ, ‘ಆತ ಹೊತ್ತಿಗೆ ಸರಿಯಾಗಿ ಬರುತ್ತಾನೆ ಎನ್ನೋದು ನನಗೇನೋ ಅನುಮಾನ ಕಣಯ್ಯ!’ ಇದು ತಪ್ಪು ಪ್ರಯೋಗ.

ಇದರಂತೆ ಭೇದ ಹಾಗು ಬೇಧ ಎನ್ನುವ ಪದಗಳ ವ್ಯತ್ಯಾಸವನ್ನು ಪರೀಕ್ಷಿಸೋಣ. ವಾಸ್ತವದಲ್ಲಿ ಬೇಧ ಎನ್ನುವ ಪದವು ಸಂಸ್ಕೃತದಲ್ಲಿ ಇಲ್ಲ; ಭೇದ ಎನ್ನುವ ಪದ ಇದೆ. ಭೇದ ಪದದ ಅರ್ಥವು ಬೇರ್ಪಡಿಸು, ಭಿನ್ನತೆ, penetrate ಎಂದೆಲ್ಲ ಆಗುತ್ತದೆ. ಆದರೆ ಸಂಸ್ಕೃತದಲ್ಲಿ ವೇಧ ಎನ್ನುವ ಪದವಿದ್ದು, ಇದರ ಅರ್ಥವೂ ಸಹ penetrate ಎಂದೇ ಆಗುತ್ತದೆ. ಇದೀಗ ನಾವು ‘ಕರ್ಣಭೇದ ಹಾಗು ಕರ್ಣವೇಧ’ ಎನ್ನುವ ಪದಗಳನ್ನು ಪರೀಕ್ಷಿಸೋಣ. ಪಾಂಡವರು ವಾಸ್ತವದಲ್ಲಿ ಕರ್ಣನ ಸಹೋದರರು ಎನ್ನುವ ಸತ್ಯವನ್ನು ಶ್ರೀಕೃಷ್ಣನು ಕರ್ಣನಿಗೆ ತಿಳಿಸುವ ಮೂಲಕ ಆತನಲ್ಲಿ ಭೇದಭಾವವನ್ನು ಹುಟ್ಟಿಸಲು ಪ್ರಯತ್ನ ಪಡುತ್ತಾನೆ. ಇದು ‘ಕರ್ಣಭೇದ’.

ಕೂಸಿನ ಕಿವಿಯನ್ನು ಅಂದರೆ ಕರ್ಣವನ್ನು ಚುಚ್ಚುವುದಕ್ಕೆ ‘ಕರ್ಣವೇಧ’ ಎನ್ನುತ್ತಾರೆ. ಅದರಂತೆಯೇ ‘ಶಬ್ದವೇಧಿ’ ಎನ್ನುವ ಪದ. ಈ ವೇಧ ಪದವನ್ನು ಕನ್ನಡಿಗರು ‘ಬೇಧ’ ಎಂದು ಬಳಸಿದರೆ ತಪ್ಪಿಲ್ಲ. ಯಾಕೆಂದರೆ ‘ವ’ಕಾರವು ಕನ್ನಡದಲ್ಲಿ ‘ಬ’ಕಾರವಾಗುವ ರೂಢಿ ಇದೆ. ಉದಾಹರಣೆಗೆ ‘ವಾಣಸಿಗ’ ಎನ್ನುವ ಮೂಲ ಪದವು ಕನ್ನಡದಲ್ಲಿ ‘ಬಾಣಸಿಗ’ ಆಗಿದೆ; ವಾಯಿಲ್ ಎನ್ನುವ ಪದವು ಬಾಗಿಲು ಎಂದಾಗಿದೆ. ಆದುದರಿಂದ ‘ಭೇದ’ ಹಾಗು ‘ಬೇಧ’ ಎನ್ನುವ ಎರಡೂ ಪದಗಳನ್ನು penetration ಎನ್ನುವ ಅರ್ಥದಲ್ಲಿ ಬಳಸಿದರೆ ತಪ್ಪಿಲ್ಲ. ಈಗಲೂ ಸಹ loose motion ಎನ್ನುವ ಪದಕ್ಕೆ ಕೆಲವು ಪ್ರದೇಶಗಳಲ್ಲಿ ‘ಬೇಧಿ’ ಎನ್ನುವ ಪದವನ್ನು ಬಳಸುತ್ತಾರೆ. ಬೀchiಯವರು ತಮ್ಮ ಒಂದು ಪುಸ್ತಕದಲ್ಲಿ laxative ಎನ್ನುವ ಪದಕ್ಕೆ ‘ಸುಖಬೇಧಿ’ ಎನ್ನುವ ಕನ್ನಡ ಪದವನ್ನು ಟಂಕಿಸಿ ಬಳಸಿದ್ದಾರೆ.

ಕನ್ನಡಿಗರು ಒಂದು ದಿನದಲ್ಲಿ ಬಳಸುವ ವಿವಿಧ ಪದಗಳ ಸಂಖ್ಯೆ ತುಂಬಾ ಕಮ್ಮಿ ಎಂದು ಅನ್ನಿಸುತ್ತದೆ. ಕೆಲವೊಂದು ವಿಶೇಷ ಸಂದರ್ಭಗಳಲ್ಲಿಯೂ ಸಹ ವಿಭಿನ್ನ ಪದಗಳನ್ನು ಬಳಸದೇ, ಒಂದೇ ಸಾಮಾನ್ಯ ಪದವನ್ನು ಉಪಯೋಗಿಸುವುದು ಕನ್ನಡಿಗರಲ್ಲಿ ರೂಢಿಯಾಗಿದೆ. ಉದಾಹರಣೆಗೆ ‘ಕನ್ಯಾಪರೀಕ್ಷೆಯ (!)’ ಒಂದು ಸಂದರ್ಭವನ್ನು ನೋಡೋಣ:

ತಾಯಿ ಮಗನಿಗೆ: ಹುಡುಗಿ ಹ್ಯಾಂಗಿದ್ದಾಳೊ?
ಮಗ: ಛಲೋ ಇದ್ದಾಳಮ್ಮ.
ತಾಯಿ: ಉಪ್ಪಿಟ್ಟು ಹ್ಯಾಂಗಾಗಿತ್ತೊ?
ಮಗ: ಛಲೋ ಆಗಿತ್ತಮ್ಮ.
ತಾಯಿ: ಹುಡುಗಿ ಹೆಂಗ ಹಾಡಿದಳೊ?
ಮಗ: ಛಲೋ ಹಾಡಿದಳಮ್ಮ.
ಈ ಹುಡುಗನಿಗೆ ಚೆಲುವೆ, ರುಚಿ ಹಾಗು ಇಂಪು ಎನ್ನುವ ಪದಗಳು ಗೊತ್ತಿಲ್ಲವೇನೊ? ಎಲ್ಲದಕ್ಕೂ ಛಲೋ ಎನ್ನುವ ಒಂದೇ ಪದವನ್ನು ಈತ ಬಳಸುತ್ತಾನೆ. ಇನ್ನು ಕನ್ನಡ ಬದಲು ಇಂಗ್ಲೀಶ ಬಳಸುವ ಹುಡುಗನ ಉತ್ತರ ಹೇಗಿರಬಹುದು?

ತಾಯಿ ಮಗನಿಗೆ: ಹುಡುಗಿ ಹ್ಯಾಂಗಿದ್ದಾಳೊ?
ಮಗ: Awesome, mummy!
ತಾಯಿ: ಉಪ್ಪಿಟ್ಟು ಹ್ಯಾಂಗಾಗಿತ್ತೊ?
ಮಗ: Awesome, mummy!
ತಾಯಿ: ಹುಡುಗಿ ಹಾಡು ಹೆಂಗ ಹಾಡಿದಳೊ?
ಮಗ: Awesome, mummy!

ಕನ್ನಡಿಗರೇ ಕನ್ನಡವನ್ನು ಮರೆಯುತ್ತಿರುವ ಹಾಗು ತಪ್ಪಾಗಿ ಬಳಸುವ ಈ ಕಾಲದಲ್ಲಿ, ನಮ್ಮ ಸಮಾಚಾರ ಪತ್ರಿಕೆಗಳು ಕನ್ನಡದ ಕೊಲೆಗೆ ಕೈ ಎತ್ತಿ ನಿಂತಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯ ಅಪದ್ಧ ಪ್ರಯೋಗಗಳನ್ನು ಈಗಾಗಲೇ ಇಲ್ಲಿ ನೋಡಿದ್ದೇವೆ. ಆ ಪತ್ರಿಕೆಯು ಕೆಲ ಕಾಲದ ಹಿಂದೆ ಪ್ರಕಟಿಸಿದ ಒಂದು ತಲೆಬರಹವನ್ನು ಇಲ್ಲಿ ಕೊಡುತ್ತಿದ್ದೇನೆ:
“ಸವಿತಾ ಕೊಂದ ವೈದ್ಯರು”
ಈ ತಲೆಬರಹದ ಅರ್ಥವೇನು? ಸವಿತಾ(ಳು) ಕೆಲವು ವೈದ್ಯರನ್ನು ಕೊಂದಳು ಎಂದೆ, ಅಥವಾ ಸವಿತಾ(ಳನ್ನು) ಕೊಂದಂತಹ ವೈದ್ಯರು ಎಂದೆ? ‘ಳನ್ನು’ ಎನ್ನುವ ವಿಭಕ್ತಿ ಪ್ರತ್ಯಯವನ್ನು ಸೇರಿಸಿದರೆ ಸಂಯುಕ್ತ ಕರ್ನಾಟಕಕ್ಕೆ ಅಪಾರ ನಷ್ಟವಾಗುತ್ತದೆಯೆ?
ಬಹುಶಃ ನಮ್ಮ ಪತ್ರಿಕೆಗಳು ಹಾಗು ಟೀವಿ ಚಾನೆಲ್‍ಗಳು ಭಾಷೆಯ ಕೊಲೆಗಡುಕರಿಂದ ತುಂಬಿಕೊಂಡಿವೆ ಎನಿಸುತ್ತದೆ.

Saturday, March 21, 2015

ನನ್ನ ಕೈಯ ಹಿಡಿದಾಕೆ !............ಬೇಂದ್ರೆ



ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                        ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                        ಹುದುಲಾಗ ಸಿಕ್ಕೇನs

                       
ಜಗದಾಗ ಯಾವಾವ ನೆರಳು ಬೆಳಕಿನಾಗ
                ಹಗಲಿರುಳು ಇದ್ದಾವಾ
ಎದ್ದೇನs ಬಿದ್ದೇನs ಕತ್ತಲು ಬಿಸಲೇನ
               ನಕ್ಕಾವಾ ಗೆದ್ದಾವಾ !

                       
ಹುಸಿ ನಗುತ ಬಂದೇವ ನಸುನಗುತ ಬಾಳೋಣ
                  ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
                  ಯಾಕಾರೆ ಕೆರಳೋಣ !

                       
ಬಡತನ ಒಡೆತನ ಕಡೆತನಕುಳಿದಾವೇನ
              ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
              ಕಡೆಗೋಲು ಹಿಡಿಹುಟ್ಟ !

                       
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                        ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                        ಹುದುಲಾಗ ಸಿಕ್ಕೇನs !

ತಮ್ಮ ಹುದುಗಲಾರದ ದುಃಖಕವನದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಗೆ ಸುಖದ ನಟನೆಯನ್ನು ಮಾಡಬೇಡ; ನಿನ್ನ ದುಃಖವನ್ನು ಕಣ್ಣೀರಿನಲ್ಲಿ ಹರಿಯಬಿಡುಎಂದು ಹೇಳುತ್ತಾರೆ. ಆ ಸಂದರ್ಭವು ಒಂದು ದುಃಖದ ಪ್ರಸಂಗವಾಗಿತ್ತು. ಆದುದರಿಂಬೇಂದ್ರೆಯವರು ತಮ್ಮ ಹೆಂಡತಿಗೆ ಆ ರೀತಿ ಹೇಳುವುದು ಉಚಿತವೇ ಆಗಿತ್ತು. ಆದರೆ, ‘ನನ್ನ ಕೈಯ ಹಿಡಿದಾಕೆಎನ್ನುವ ಈ ಕವನದಲ್ಲಿ, ಬೇಂದ್ರೆಯವರು ‘ನಿನ್ನಅಳಲನ್ನು ನುಂಗಿಕೊಂಡು ಒಮ್ಮೆ ಕ್ಕು ಬಿಡುಎನ್ನುವ ಬೇಡಿಕೆಯನ್ನು ತಮ್ಮ ಪತ್ನಿಯ ಮುಂದೆ ಇಡುತ್ತಿದ್ದಾರೆ. ಏಕೆಂದರೆ ಇದು ಬೇಂದ್ರೆಯವರ ಬದುಕಿನ ಹತಾಶೆಯ ಸನ್ನಿವೇಶವಾಗಿದೆ.
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                   ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                   ಹುದುಲಾಗ ಸಿಕ್ಕೇನs
ನನ ಕೈಯ ಹಿಡಿದಾಕೆಎನ್ನುವ ಪದಪುಂಜವು ಸೂಚಿಸುವ ಅನೇಕ ಅರ್ಥಗಳನ್ನು ನಾವು ಇಲ್ಲಿ ಸ್ಮರಿಸಬೇಕು. ಸಾಮಾನ್ಯ ಅರ್ಥವೆಂದರೆ ಪಾಣಿಗ್ರಹಣ’; ಅರ್ಥಾತ್ ಇವಳು ಬೇಂದ್ರೆಯವರ ಧರ್ಮಪತ್ನಿ. ಆದುದರಿಂದ ಇವಳು ತನ್ನ ಗಂಡನನ್ನು ಅಂದರೆ ಬೇಂದ್ರೆಯವರನ್ನು ಅವಲಂಬಿಸಿ, ಅನುಸರಿಸಿ ನಡೆಯಬೇಕಾದವಳು. ಇಲ್ಲಿಯ ಸೂಚ್ಯಾರ್ಥವೇನೆಂದರೆ, ಇವಳು ಬದುಕಿನ ದಾರಿಯಲ್ಲಿ ಬೇಂದ್ರೆಯವರನ್ನೇ ಕೈಹಿಡಿದು ನಡೆಯಿಸುವವಳು. ಈ ಪರಸ್ಪರ ಅವಲಂಬನ, ಪರಸ್ಪರ ಸಹಕಾರ ಇವು ಎಲ್ಲ ದಾಂಪತ್ಯಗಳಲ್ಲೂ ಇರಬೇಕಾದಂತಹ ಗುಣಗಳೇ ಆಗಿವೆ. ಇಂತಹ ಸಹಧರ್ಮಿಣಿಯಿಂದ ಬೇಂದ್ರೆಯವರು ಕೋರುವುದು ಏನನ್ನು? ‘ನಿನ್ನ ದುಃಖ ಅಪಾರವಾಗಿದ್ದರೂ ಸಹ, ಅದೆಲ್ಲವನ್ನೂ ನುಂಗಿಕೊಂಡು, ಒಂದು ಸಲ ನಕ್ಕು ಬಿಡು! ಆಗ ನಾನೂ ಸಹ ನನ್ನ ಹತಾಶೆಯನ್ನು ಮರೆತು, ಸಮಾಧಾನವನ್ನು ಪಡೆದೇನು.’ ಇದು ಸಾಧ್ಯವಾಗದಿದ್ದರೆ? ಬೇಂದ್ರೆಯವರ ಹೆಂಡತಿಗೆ ತನ್ನ ದುಃಖವನ್ನು ಮರೆಮಾಚುವುದು, ಕಣ್ಣೀರನ್ನು ನುಂಗಿಕೊಳ್ಳುವುದು ಸಾಧ್ಯವಾಗದಿದ್ದರೆ? ಅದರ ಘೋರ ಪರಿಣಾಮವನ್ನು ಬೇಂದ್ರೆ ಹೀಗೆ ಉಸುರುತ್ತಾರೆ:
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳಹುದುಲಾಗ ಸಿಕ್ಕೇನs.

ಬಯಲುಸೀಮೆಯ ಹಳ್ಳಗಳಲ್ಲಿ ಪ್ರವಾಹವು ಬೇಸಿಗೆಯ ಕಾಲದಲ್ಲಿ ಇರುವುದಿಲ್ಲ. ಮಳೆಗಾಲದಲ್ಲಿ ಈ ಹಳ್ಳಗಳು ಏಕಾಏಕಿಯಾಗಿ ಉಕ್ಕಿ ಹರಿಯತೊಡಗುತ್ತವೆ. ತಮ್ಮ ದಂಡೆಗಳನ್ನು ಕೊರೆಯುತ್ತ ಮುಂದೆ ಸಾಗುತ್ತವೆ. ಅಕಸ್ಮಾತ್ ಈ ಹಳ್ಳಗಳಲ್ಲಿ ಸಿಕ್ಕ ಜಾನುವಾರುಗಳಾಗಲೀ, ಮನುಷ್ಯರಾಗಲೀ ಅಲ್ಲಿಯ ಹುದಲಿನಲ್ಲಿ ಅಂದರೆ ಕೆಸರಿನಲ್ಲಿ ಸಿಕ್ಕಿಕೊಂಡರೆ,  ಹೊರಗೆ ಬರುವುದು ಅಸಾಧ್ಯ. ಇನ್ನು ‘ಕಳ್ಳಹುದಲು’ ಎನ್ನುವುದು ಮತ್ತೂ ಭೀಕರ. ಇದಕ್ಕೆ ಇಂಗ್ಲೀಶಿನಲ್ಲಿ quicksand ಎಂದು ಹೇಳುತ್ತಾರೆ. ತೋರಿಕೆಗೆ ಅಮಾಯಕವಾಗಿರುವ ಇದರಲ್ಲಿ ಸಿಕ್ಕಿಹಾಕಿಕೊಂಡ ವ್ಯಕ್ತಿ, ಪ್ರಯತ್ನ ಪಟ್ಟಷ್ಟೂ ಕೆಳಗೆ ಹೋಗುತ್ತಾನೆ. ಬೇಂದ್ರೆಯವರ ಪತ್ನಿ ಸಹಸಾ ತನ್ನ ದುಃಖವನ್ನು ಅದುಮಿ ಇಟ್ಟಿರುತ್ತಾರೆ. ಆದರೆ ತನ್ನ ಗಂಡನನ್ನು ನೋಡಿದೊಡನೆ ಅವರ ಕಣ್ಣೀರು ಏಕಾಏಕಿಯಾಗಿ, ಉಕ್ಕುಕ್ಕಿ ಹೊರಬರುತ್ತದೆ. ಆದುದರಿಂದ ಬೇಂದ್ರೆ ಹೇಳುತ್ತಾರೆ: ‘ನಿನ್ನ ಹುಚ್ಚು ಹಳ್ಳದಂತಿರುವ ಕಣ್ಣೀರ ಪ್ರವಾಹದಲ್ಲಿ ನನ್ನನ್ನು ಮುಳುಗಿಸಬೇಡ!’

‘ಸಮಾಧಾನದಿಂದಿರು’ ಎಂದು ತಮ್ಮ ಹೆಂಡತಿಗೆ ಹೇಳಿದರೆ ಆಯಿತೆ? ಅದಕ್ಕೆ ಸಮರ್ಪಕವಾದ ಕಾರಣವನ್ನು ಹೇಳಬೇಡವೆ? ಬೇಂದ್ರೆಯವರು ಈಗ ಒಂದು ವಿಶಾಲವಾದ ತರ್ಕವನ್ನು ತಮ್ಮ ಹೆಂಡತಿಯ ಮುಂದೆ ಇಡುತ್ತಾರೆ:
ಜಗದಾಗ ಯಾವಾವ ನೆರಳು ಬೆಳಕಿನಾಗ
              ಹಗಲಿರುಳು ಇದ್ದಾವಾ
ಎದ್ದೇನs ಬಿದ್ದೇನs ಕತ್ತಲು ಬಿಸಲೇನ
             ನಕ್ಕಾವಾ ಗೆದ್ದಾವಾ !
ನೆರಳು ಅಂದರೆ ಬಿಸಿಲಿನ ತಾಪ ಇಲ್ಲದೆ ಇರುವುದು; ಬೆಳಕು ಎಂದರೆ ತನ್ನನ್ನು ಗೊಂದಲಕ್ಕೆ ಈಡು ಮಾಡುವಂತಹ ಕತ್ತಲೆ ಇಲ್ಲದಿರುವುದು. ಇಂತಹ ಒಂದು ಸುಸ್ಥಿತಿ ಈ ಜಗತ್ತಿನಲ್ಲಿ ಯಾರಿಗಾದರೂ ಎಲ್ಲ ಕಾಲದಲ್ಲಿಯೂ ಸಿಕ್ಕೀತೆ? ನೆರಳಿನ ಬದಲಾಗಿ, ಬಿಸಲೇ ಇರಲಿ; ಬೆಳಕಿನ ಬದಲು ಕತ್ತಲೆಯೇ ಇರಲಿ, ಅಂತಹದರಲ್ಲಿಯೇ ಏಳುತ್ತ, ಬೀಳುತ್ತ ದಾರಿಯನ್ನು ಸವಿಸಬೇಕು. ನಗುನಗುತ್ತಲೆ ಮುನ್ನಡೆಯಬೇಕು. ಏಕೆಂದರೆ, ‘ನಕ್ಕಾವಾ ಗೆದ್ದಾವಾ! ’ ಅಳುವು ಸೋತವರ ಲಕ್ಷಣ; ಎಲ್ಲವನ್ನು ಕಳೆದುಕೊಂಡರೂ ಸಹ ನಗುವುದೇ ಬದುಕನ್ನು ಗೆದ್ದವರ ಲಕ್ಷಣ!

ಈ ವಿಶಾಲವಾದ ತರ್ಕವನ್ನು ಇದೀಗ ಬೇಂದ್ರೆಯವರು ತಮ್ಮ ವೈಯಕ್ತಿಕ ಬದುಕಿನ ಅಳತೆಗಳಿಗೆ ಹೊಂದಿಸಲು ಪ್ರಯತ್ನಿಸುತ್ತಾರೆ.
ಹುಸಿ ನಗುತ ಬಂದೇವ ನಸುನಗುತ ಬಾಳೋಣ
                ತುಸು ನಗುತ ತೆರಳೋಣ
ಬಡ ನೂರು ವರುಷಾನ ಹರುಷಾದಿ ಕಳೆಯೋಣ
                  ಯಾಕಾರೆ ಕೆರಳೋಣ !
ಪುಟ್ಟ ಕೂಸುಗಳನ್ನು ಗಮನಿಸಿರಿ. ಅವು ಯಾವಾಗಲೂ ಕಾರಣವಿಲ್ಲದೇ ನಗುತ್ತಿರುತ್ತವೆ. ಇದು ಬಾಲರ ನಿಷ್ಕಪಟವಾದ ನಗು. ಬೇಂದ್ರೆಯವರು ಈ ನಗುವಿಗೆ ‘ಹುಸಿನಗು’ ಎಂದು ಕರೆದಿದ್ದಾರೆ. ಹುಸಿನಗುವಿಗೆ ಸುಳ್ಳುನಗೆ ಎನ್ನುವ ಶ್ಲೇಷಾರ್ಥವನ್ನೂ ಸಹ ಬೇಂದ್ರೆಯವರು ಇಲ್ಲಿ ಸೂಚಿಸುತ್ತಿದ್ದಾರೆ. 

ನಸುನಗು ಅಂದರೆ ಮಂದಹಾಸ. ಇದು ಅಲ್ಪಸಂತೃಪ್ತಿಯ, ಆತ್ಮಸಂತೋಷದ ನಗು. ಈ ರೀತಿಯಾಗಿ ನಾವು ಬಾಳಬೇಕು. ಹಾಗು, ಈ ಲೋಕವನ್ನು ಬಿಟ್ಟು ಹೋಗಬೇಕಾದಾಗ, ತುಸುನಗುವಿನೊಡನೆ ತೆರಳಬೇಕು. ‘ಯಾಕಪ್ಪಾ, ಈ ‘ತುಸು ನಗು?’ ಎಂದು ಯಾರಾದರೂ ಕೇಳಬಹುದು. ಬಾಳಿನಲ್ಲಿ ದುಃಖ ಇದ್ದೇ ಇರುತ್ತದೆ. ಅದರ ಒಜ್ಜೆಯನ್ನು ಕಡಿಮೆ ಮಾಡಿಕೊಳ್ಳಲು ‘ಹುಸಿ ನಗು’ ಹಾಗು ‘ತುಸು ನಗು’ ಬೇಕೇ ಬೇಕು! ಅದನ್ನೇ ಬೇಂದ್ರೆ ಹೀಗೆ ಹೇಳುತ್ತಾರೆ: ಹುಟ್ಟು ಸಾವಿನ ನಡುವಿನ ಈ ಅವಧಿಯಲ್ಲಿ ನಮಗೆ ಸುಖದ ಸಮೃದ್ಧಿ ಬರುವದಿಲ್ಲ. ಆದರೂ ಅದಕ್ಕಾಗಿ ಕೆರಳುವುದು ಬೇಡ; ಇದ್ದುದರಲ್ಲಿಯೇ ತೃಪ್ತಿ ಪಟ್ಟುಕೊಂಡು, ನಸುನಗುತ್ತ ಹರ್ಷಚಿತ್ತರಾಗಿ ಇರೋಣ!

ಬೇಂದ್ರೆ ದಂಪತಿಗಳ ಸಂಕಷ್ಟಕ್ಕೆ ಸ್ವತಃ ಬೇಂದ್ರೆಯವರೇ ಕಾರಣರು! ಸರಿಯಾದ ಉದ್ಯೋಗವಿಲ್ಲ; ಹೆಂಡತಿ ಮಕ್ಕಳು ಪರಾಶ್ರಯದಲ್ಲಿ! ಆದುದರಿಂದ ಬೇಂದ್ರೆಯವರಿಗೆ ತಮ್ಮ ಹೆಂಡತಿಯೆದುರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಅದಕ್ಕಾಗಿಯೇ ಅವರು ತಮ್ಮ ಹೆಂಡತಿಗೆ ‘ತಿಳಿಸಿ ಹೇಳುತ್ತಾರೆ’ (!): ಈ ಬಡತನ, ಈ ಸಿರಿವಂತಿಕೆ, ಈ ಪರಾಶ್ರಯ ಇವೆಲ್ಲವೂ ಕ್ಷಣಿಕವಾದವುಗಳೇ. ಹಾಗಿದ್ದರೆ, ಸದಾಕಾಲವೂ ಸ್ಥಿರವಾಗಿ ಇರುವಂತಹದು ಯಾವುದು? ಬೇಂದ್ರೆಯವರ ಪ್ರಕಾರ ಅದು ‘ಎದೆಹಿಗ್ಗು’ (ಸ್ವಸಂತೋಷ)! ಈ ಬಾಳೆಂಬ ಸಮುದ್ರದಲ್ಲಿ ನಮ್ಮ ಒಡಕಲು ದೋಣಿಯನ್ನು ನಾವು ಯಶಸ್ವಿಯಾಗಿ ಸಾಗಿಸಬೇಕಾದರೆ, ನಮಗೆ ಬೇಕಾದದ್ದು ಆತ್ಮಸಂತೋಷವೆನ್ನುವ ಹುಟ್ಟುಗಳು. ಆ ಕಡೆಗೋಲನ್ನು (ಹುಟ್ಟುಗಳನ್ನು) ಮುಳುಗಿಸಬೇಡ’, ಇದು ಬೇಂದ್ರೆಯವರು ತಮ್ಮ ಹೆಂಡತಿಗೆ ನೀಡುವ (ಅಸಹಾಯಕ) ಉಪದೇಶ!
ಬಡತನ ಒಡೆತನ ಕಡೆತನಕುಳಿದಾವೇನ
            ಎದೆಹಿಗ್ಗು ಕಡೆಮುಟ್ಟ
ಬಾಳಿನ ಕಡಲಾಗ ಅದನ ಮುಳುಗಿಸಬ್ಯಾಡ
            ಕಡೆಗೋಲು ಹಿಡಿಹುಟ್ಟ !

ಈ ಎಲ್ಲ ತತ್ವಜ್ಞಾನ, ಈ ಎಲ್ಲ ಉಪದೇಶ ನಿಜವಾಗಿಯೂ ನಿರರ್ಥಕ ಎನ್ನುವುದು ಬೇಂದ್ರೆಯವರಿಗೂ ಗೊತ್ತು. ಆದುದರಿಂದ ಅವರು ಮತ್ತೊಮ್ಮೆ ವಾಸ್ತವತೆಗೆ ಮರಳುತ್ತಾರೆ:
ನನ ಕೈಯ ಹಿಡಿದಾಕೆ ಅಳು ನುಂಗಿ ನಗು ಒಮ್ಮೆ
                   ನಾನೂನು ನಕ್ಕೇನs
ಇಲದಿರಕ ನಿನ ಅಳುವ ಹುಚ್ಚು ಹಳ್ಳದ ಕಳ್ಳ-
                   ಹುದುಲಾಗ ಸಿಕ್ಕೇನs !
ಇದು ಮೊದಲ ನುಡಿಯ ಪುನರಾವರ್ತನೆಯೇ ಆದರೂ ಸಹ, ಈ ಸಲ ಕೊನೆಯ ಸಾಲಿನ ಕೊನೆಗೆ ಉದ್ಗಾರವಾಚಕ ಚಿಹ್ನೆ ಇರುವುದನ್ನು ಗಮನಿಸಬೇಕು. ಬೇಂದ್ರೆಯವರ ನಿಸ್ಸಹಾಯಕತೆಯನ್ನು ಈ ಚಿಹ್ನೆ ಸ್ಪಷ್ಟಪಡಿಸುತ್ತದೆ.
……………………………………………………………………..
ಟಿಪ್ಪಣಿ:
ತಮ್ಮ ಹೆಂಡತಿಯ ಅಸೆಯನ್ನು ಪೂರೈಸಲು ತಮ್ಮಿಂದ ಸಾಧ್ಯವಾಗದಾಗ ಅಥವಾ ಅವಳು ದುಃಖದಲ್ಲಿದ್ದಾಗ, ತತ್ವಜ್ಞಾನವನ್ನು ಹೇಳಿ, ಅವಳಿಗೆ (ಕವನದ ಮೂಲಕ) ಸಮಾಧಾನಿಸುವುದು ಬೇಂದ್ರೆಯವರಿಗೆ ಒಂದು ಪರಿಪಾಠವೇ ಆದಂತೆ ಕಾಣುತ್ತದೆ. ಹೆಂಡತಿಗೆ ಮುತ್ತಿನ ಏಕಾವಳಿ ಸರವನ್ನು ಕೊಡಿಸಲು ಅಗದ ಬೇಂದ್ರೆ ಅವಳಿಗೆ ‘ಅಷ್ಟು ಪ್ರೀತಿ ಇಷ್ಟು ಪ್ರೀತಿ’ ಎನ್ನುವ ಕವನದ ಸರವನ್ನು ತೊಡಿಸಿದರು. ಈ ಕವನಕ್ಕೆ ಪ್ರತಿಯಾಗಿ, ತಮ್ಮ ಹೆಂಡತಿ ತಮಗೆ, ‘ನಾನು ಕೊಡುವೆ ನಿಮಗೆ ದವನ, ನೀವು ಕೊಡುವಿರೆನಗೆ ಕವನ’ ಎಂದು ಹಂಗಿಸುತ್ತಿರುವಂತಹ ಒಂದು ಕವನವನ್ನೂ ಬರೆದಿದ್ದಾರೆ!

ಬೇಂದ್ರೆಯವರ ಹತ್ತಿರ ಐದುಸಾವಿರಕ್ಕೂ ಹೆಚ್ಚಿಗೆ ಅಮೂಲ್ಯವಾದ ಪುಸ್ತಕಗಳು ಇದ್ದವಂತೆ. ಅವೇನು ನಾಲ್ಕಾಣೆಯ ಪತ್ತೇದಾರಿ ಕಾದಂಬರಿಗಳಲ್ಲ! ಈಗಿನ ಲೆಕ್ಕದಲ್ಲಿ ಒಂದೊಂದಕ್ಕೂ ೫೦೦ ರೂಪಾಯಿಗಳಷ್ಟು ಬೆಲೆ ಎಂದುಕೊಂಡರೂ ಸಹ ಈ ಎಲ್ಲ ಗ್ರಂಥಗಳ ಒಟ್ಟು ಬೆಲೆ ಈಗಿನ ಲೆಕ್ಕದಲ್ಲಿ ೨೫ ಲಕ್ಷದಷ್ಟಾಗಬಹುದು! ತಮ್ಮ ಹೆಂಡತಿಗೆ ಒಂದು ಮುತ್ತಿನ ಸರವನ್ನು ಕೊಡಿಸಲು ಜೀನತನ ತೋರಿಸುತ್ತಿದ್ದ ಈ ಮಹಾನುಭಾವನ ಹೆಂಡತಿಯ ದಾಂಪತ್ಯದ ಔದಾರ್ಯವನ್ನು ನಾವು ಮೆಚ್ಚಬೇಕು. ವರಕವಿಯ ಬಾಳಬಂಡಿಯನ್ನು ಸಹನೆಯಿಂದ ಎಳೆದ ಆ ಸಾಧ್ವಿಗೆ ನನ್ನ ಸಾವಿರ ನಮಸ್ಕಾರಗಳು.