Sunday, September 22, 2013

ಕವನದಿಂದ ಕವನ ಹುಟ್ಟುವ ಪರಿ

“ ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀ ಸಮಾಃ
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್ | ”

ವಾಲ್ಮೀಕಿಋಷಿಗಳು ಪ್ರಾತಃಕಾಲದಲ್ಲಿ ಸ್ನಾನ, ಆಹ್ನಿಕಾದಿಗಳನ್ನು ಮುಗಿಸಿಕೊಂಡು ನದೀತಟದಿಂದ ಮರಳುವಾಗ, ಬೇಡನೋರ್ವನು ಕ್ರೌಂಚಪಕ್ಷಿಗಳ ಜೋಡಿಗೆ ತನ್ನ ಬಾಣದಿಂದ ಹೊಡೆಯುವದನ್ನು ನೋಡುತ್ತಾರೆ. ಆ ಜೋಡಿಯಲ್ಲಿ ಒಂದು ಪಕ್ಷಿಯು ಜೀವ ಕಳೆದುಕೊಂಡು ಕೆಳಗೆ ಬೀಳುತ್ತದೆ. ಇನ್ನೊಂದು ಪಕ್ಷಿಯು ತನ್ನ ಜೊತೆಯ ಪಕ್ಷಿಯ ಸುತ್ತಲೂ ವಿಲಪಿಸುತ್ತ ಸುತ್ತುತ್ತದೆ.

ವಾಲ್ಮೀಕಿ ಋಷಿಗಳು ಈ ಘಟನೆಯಿಂದ ಉದ್ವಿಗ್ನರಾದಾಗ ಅವರ ಮುಖದಿಂದ ಒಂದು ಉದ್ಗಾರ ಹೊರಡುತ್ತದೆ:
“ಬೇಡನೆ, ಕಾಮಮೋಹಿತವಾದ ಈ ಜೋಡಿಯಲ್ಲಿ ಒಂದನ್ನು ಹತ್ಯೆ ಮಾಡಿದ ನಿನಗೆ ಎಂದಿಗೂ ಶಾಂತಿ ಸಿಗಲಾರದು.” ಭಾರತದ ಆದಿಕವಿ ವಾಲ್ಮೀಕಿಯವರಿಂದ ಹೊರಹೊಮ್ಮಿದ ಪ್ರಥಮ ಶ್ಲೋಕವಿದು. ‘ಶೋಕವೇ ಶ್ಲೋಕರೂಪವನ್ನು ಪಡೆಯಿತು’ ಎಂದು ಈ ನುಡಿಯನ್ನು ವರ್ಣಿಸಲಾಗಿದೆ. ಗೋಪಾಲಕೃಷ್ಣ ಅಡಿಗರೂ ಸಹ “ಕ್ರೌಂಚವಧದುದ್ವೇಗದಳಲ ಬತ್ತಲೆ ಸುತ್ತ ರಾಮಾಯಣಶ್ಲೋಕ ರೇಷ್ಮೆದೊಗಲು” ಎಂದು ಭಾರತದ ಮೊದಲ ಮಹಾಕಾವ್ಯ ರಾಮಾಯಣವನ್ನು ಬಣ್ಣಿಸಿದ್ದಾರೆ.

ಅನಂತರ ಅನೇಕ ಕವಿಗಳು ರಾಮಾಯಣವನ್ನು ತಮ್ಮದೇ ಆದ ನೋಟದಲ್ಲಿ  ಹಾಗು ತಮ್ಮದೇ ಅದ ಧಾಟಿಯಲ್ಲಿ ರಚಿಸಿದ್ದಾರೆ. ಕನ್ನಡದಲ್ಲಿ ತೊರವೆ ರಾಮಾಯಣದಿಂದ, ಮೊಯಿಲಿರಾಮಾಯಣದವರೆಗೆ ಈ ಸರಣಿ ಸಾಗಿದೆ. ‘ತಿಣಿಕಿದನು ಫಣಿರಾಯ ರಾಮಾಯಣದ ಭಾರದಲಿ’ ಎಂದು ಸಾರಿದ ಕುಮಾರವ್ಯಾಸನು ತನ್ನ ಪೂರ್ವಕವಿಗಳ ಮಾರ್ಗದಲ್ಲಿಯೇ ‘ಮಹಾಭಾರತ’ವನ್ನು ರಚಿಸಿದ್ದಾನೆ.

ಹಾಗಿದ್ದರೆ, ಈ ಕವಿಗಳು ರಚಿಸಿದ ರಾಮಾಯಣ ಅಥವಾ ಮಹಾಭಾರತ ಕಾವ್ಯಗಳು ಅನುಕರಣೆಗಳೆ? ಖಂಡಿತವಾಗಿಯೂ ಅಲ್ಲ! ಬಂಗಾರದ ತುಂಡಿನಿಂದ ಒಬ್ಬ ಅಕ್ಕಸಾಲಿಗನು ಜೋಡೆಳೆಯ ಸರವನ್ನು ಮಾಡಿದರೆ, ಮತ್ತೊಬ್ಬ ಅಕ್ಕಸಾಲಿಗನು ಅದೇ ಬಂಗಾರದ ತುಂಡಿನಿಂದ ಕಮಲಹಾರವನ್ನು ರಚಿಸಬಹುದು. ಮೊದಲನೆಯ ಅಕ್ಕಸಾಲಿಗನು ಎರಡನೆಯವನಿಗೆ ಪ್ರೇರಣೆಯನ್ನು ನೀಡುತ್ತಾನೆ, ಅಷ್ಟೇ. ಇದುವೇ ಕವನದಿಂದ ಕವನ ಹುಟ್ಟುವ ಪರಿ.

ಇಂತಹ ಪ್ರೇರಣೆಯನ್ನು ಪಡೆದ ಕನ್ನಡ ಕವಿಗಳಲ್ಲಿ ವರಕವಿ ಬೇಂದ್ರೆಯವರು ಅಗ್ರಗಣ್ಯರು. ಬೇಂದ್ರೆಯವರದು ಬಹಳ ವಿಸ್ತಾರವಾದ ಹಾಗು ಆಳವಾದ ಅಧ್ಯಯನ. ಈ ಅಧ್ಯಯನದ ಪ್ರಭಾವವನ್ನು ಅವರು ತಮ್ಮ ಅನೇಕ ರಚನೆಗಳಲ್ಲಿ ತೋರಿಸಿದ್ದಾರೆ. ಈ ರೀತಿಯಿಂದ ತಮ್ಮ ಮೇಲೆ ಪ್ರಭಾವ ಬೀರಿದ ಪೂರ್ವಕವಿಗಳನ್ನು ಅಪ್ರತ್ಯಕ್ಷವಾಗಿ ಸ್ಮರಿಸುತ್ತಾರೆ.

ಅವರ ಕವನವೊಂದು ಸರ್ವಜ್ಞನ ಈ ವಚನದಿಂದ ಪ್ರೇರಿತವಾಗಿರುವದನ್ನು ಗಮನಿಸಬಹುದು:
“ನಡೆವುದೊಂದೇ ಭೂಮಿ | ಕುಡಿವುದೊಂದೇ ನೀರು |
ಸುಡುವಗ್ನಿಯೊಂದೆ ಇರುತಿರಲು ಕುಲಗೋತ್ರ |
ನಡುವೆ ಎತ್ತಣದು?  ಸರ್ವಜ್ಞ ||”

ಸರ್ವಜ್ಞನು ಕುಲಭೇದವನ್ನು ಖಂಡಿಸಿ ರಚಿಸಿದ ವಚನವಿದು. ಈಗ ಬೇಂದ್ರೆಯವರ ಕವನವೊಂದನ್ನು (ಬೈರಾಗಿಯ ಹಾಡು) ಗಮನಿಸಿರಿ:
“ಇಕೋ ನೆಲ-ಅಕೋ ಜಲ
ಅದರ ಮೇಲೆ ಮರದ ಫಲ
ಮನದೊಳಿದೆ ಪಡೆವ ಛಲ
ಬೆಳೆವಗೆ ನೆಲವೆಲ್ಲ ಹೊಲ.
ಜಲಧಿವರೆಗು ಒಂದೆ ಕುಲ
ಅನ್ನವೆ ಧರ್ಮದ ಮೂಲ
ಪ್ರೀತಿಯೆ ಮೋಕ್ಷಕ್ಕೆ ಬಲ
ಇದೇ ಶೀಲ ಸರ್ವಕಾಲ || ಇಕೋ ನೆಲ…..”

ಸರ್ವಜ್ಞನ ವಚನವು ತ್ರಿಪದಿಯ ಧಾಟಿಯಲ್ಲಿದೆ, ಬೇಂದ್ರೆಯವರ ಕವನದಲ್ಲಿ ಎಂಟು ಸಾಲುಗಳಿವೆ. ಈ ಕಾರಣದಿಂದಾಗಿ ಬೇಂದ್ರೆಯವರ ಕವನದಲ್ಲಿ ಮೂಲ ತಿರುಳಿನ ವಿಸ್ತಾರವಿದೆ. ಆದರೆ ಎರಡೂ ರಚನೆಗಳಲ್ಲಿ, ಭೂಮಿತಾಯಿ ಹಾಗು ಜೀವಜಲ ಇವು ಎಲ್ಲರಿಗೂ ಸಮಾನ ಎನ್ನುವ ಆಶಯವಿದೆ. ಸರ್ವಜ್ಞನು ಕುಲಭೇದವನ್ನು ಪ್ರತ್ಯಕ್ಷವಾಗಿ ಖಂಡಿಸಿದ್ದಾನೆ. ಬೇಂದ್ರೆಯವರು ಮಾನವರೆಲ್ಲರೂ ಒಂದೇ ಎಂದಿದ್ದಾರೆ. ಸರ್ವಜ್ಞನ ಕಾಣ್ಕೆಯನ್ನು ಹಾಗು ಅವನದೇ ಕೆಲವು ಪದಗಳನ್ನು ಬಳಸಿಕೊಂಡು ಬೇಂದ್ರೆಯವರು ಮಾಡಿದ ಬಂಗಾರದ ಒಡವೆಯಿದು! ಇದು ತಮ್ಮ ಪೂರ್ವಕವಿಗಳನ್ನು ಬೇಂದ್ರೆಯವರು ಸ್ಮರಿಸುವ ರೀತಿಯೂ ಹೌದು.

ಭಾರತೀಯ ಕವಿಗಳಷ್ಟೇ ಬೇಂದ್ರೆಯವರಿಗೆ ಈ ರೀತಿಯ ಪ್ರೇರಣೆ ಕೊಟ್ಟಿದ್ದಾರೆ ಎಂದಲ್ಲ. ಆಂಗ್ಲ ನಾಟಕಕಾರ ಶೇಕ್ಸಪಿಯರನ ‘ಕಿಂಗ ಲಿಯರ’ ಎನ್ನುವ ನಾಟಕದಲ್ಲಿ ಪುಟ್ಟದೊಂದು ಹಾಡು ಬರುತ್ತದೆ:
Under the greenwood tree
Who wants to lie with me
Come hither, come hither, come hither.
Here shall he see
No enemy
But winter and rough weather.

ಈಗ ಬೇಂದ್ರೆಯವರ ಕವನವೊಂದನ್ನು ಗಮನಿಸಿರಿ:
“ಮಳೆ ಬರಲಿ, ಚಳಿ ಇರಲಿ, ಬಿಸಿಲು ಕುದಿಸುತಲಿರಲಿ, ಮಂಜು ಸುರಿಯುತಲಿರಲಿ,
ಮುಮ್ಮುಖದ ಋತುಮಾನ ಹೇಗು ಇರಲಿ;  
ನಗುತ ಒಲಿವೆವು ನಾವು, ನಗುತ ಒಲಿಸುವೆವು.”

ಶೇಕ್ಸಪಿಯರನ ಕವನದ ಮನೋಧರ್ಮಕ್ಕೂ, ಬೇಂದ್ರೆಯವರ ಕವನದ ಮನೋಧರ್ಮಕ್ಕೂ ಏನಾದರೂ ಭಿನ್ನತೆ ಇದೆಯೆ?
ಶೇಕ್ಸಪಿಯರನು ತನ್ನ ಕವನದಲ್ಲಿ ಸಾಮರಸ್ಯವನ್ನು ಸೂಚಿಸಲು ನಿಸರ್ಗದ ಪ್ರತೀಕವನ್ನು ಬಳಸಿಕೊಂಡಂತೆ, ಬೇಂದ್ರೆಯವರೂ ತಮ್ಮ ಕವನದಲ್ಲಿ ಋತುಮಾನದ ಪ್ರತೀಕವನ್ನು ಬಳಸಿಕೊಂಡಿದ್ದಾರಲ್ಲವೆ?

ಬೇಂದ್ರೆಯವರು ತಮ್ಮ ಕವನಗಳಲ್ಲಿ ಯಾರದೇ ಅನುಕರಣೆಯನ್ನು ಮಾಡಿಲ್ಲ. ಆದರೆ ಅವರ ಪ್ರತಿಭೆಯು ತಾನು ಕಂಡದ್ದನ್ನು, ಹಾಗು ತಾನು ಉಂಡದ್ದನ್ನು ಅರಗಿಸಿಕೊಂಡು, ಮತ್ತೊಂದು ಪ್ರಸಂಗದಲ್ಲಿ, ತನ್ನದೇ ರೀತಿಯಲ್ಲಿ ಮರುಸೃಷ್ಟಿಸಿ ಕನ್ನಡಿಗರಿಗೆ ನೀಡಿದೆ. ಇದನ್ನೇ ಕವನದಿಂದ ಕವನ ಹುಟ್ಟುವ ಪರಿ ಎಂದು ಹೇಳಬಹುದು.

ಯೇಟ್ಸ ಕವಿಯ “Crazy Jane talks with the Bishop” ಎನ್ನುವ ಕವನಕ್ಕೂ ಬೇಂದ್ರೆಯವರ ಕವನವೊಂದಕ್ಕೂ ಇರುವ ಸಾಮ್ಯ, ವೈಷಮ್ಯಗಳನ್ನು ಗಮನಿಸಿರಿ. ಯೇಟ್ಸನ ಕವನವನ್ನು ಇಲ್ಲಿ ನೋಡಬಹುದು. ಇನ್ನು ಬೇಂದ್ರೆಯವರ ಕವನದ ಮೊದಲ ಸಾಲುಗಳು ಹೀಗಿವೆ:
“ಗುಡಿಯ ಮಡಿಯ ಪೂಜಾರರಣ್ಣ ನರ್ತಕಿಗೆ ನುಡಿದ ನೊಂದು
‘ಎಲೆ ದುಷ್ಟೆ, ನಷ್ಟೆ, ನೀ ಪ್ರಾಯದವರನು ಬೇಟೆಯಾಡುವೆಯೆ’ ಎಂದು.
‘ಹೌದು ದೊರೆಯೆ, ನಾ ಬಿಚ್ಚುಮೊಗ್ಗೆ, ನನಗಿಲ್ಲ ಸೆರಗು ಮುಚ್ಚು,
ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’”

ಯೇಟ್ಸನ ಕವನದಲ್ಲಿ ವೇಶ್ಯೆಯೋರ್ವಳಿಗೆ ಬಿಶಪ್ ಹೇಳುವ ಮಾತುಗಳು ಹಾಗು ಬೇಂದ್ರೆಯವರ ಕವನದ ಪೂಜಾರಿಯು ನರ್ತಕಿಗೆ ಹೇಳುವ ಮಾತುಗಳು ಒಂದೇ ಆಗಿವೆ. ಯೇಟ್ಸನ ವೇಶ್ಯೆ ಹಾಗು ಬೇಂದ್ರೆಯವರ ನರ್ತಕಿ ಇವರು ಕೊಡುವ ಉತ್ತರಗಳ ತಿರುಳು ಒಂದೇ. ಆದರೆ ಯೇಟ್ಸನ ವೇಶ್ಯೆಯ ಉತ್ತರದಲ್ಲಿ ಆಕ್ರೋಶವಿದೆ. ಬೇಂದ್ರೆಯವರ ನರ್ತಕಿಯ ಉತ್ತರದಲ್ಲಿ resignation ಇದೆ. ಯೇಟ್ಸನ ವೇಶ್ಯೆಯು “.... love has pitched his mansion in the place of excrement” ಎಂದು ಕೊನೆಯಲ್ಲಿ ಹೇಳುವಾಗ ಸ್ಫೋಟಿಸುತ್ತಾಳೆ. ಬೇಂದ್ರೆಯವರ ನರ್ತಕಿಯು “ತೆರೆದ ಪುಸ್ತಕವು ನನ್ನ ಬಾಳು, ನಿಮಗೇನೊ ಬೇರೆ ಹುಚ್ಚು!’” ಎಂದು ಉಸುರುವಾಗ, “ನನ್ನದು ಬಹಿರಂಗವಾದ ಕಾಮವ್ಯಾಪಾರವಾದರೆ, ನಿಮ್ಮದು ಅಂತರಂಗದಲ್ಲಿರುವ ಕಾಮವ್ಯಾಪಾರ” ಎಂದು ಮುಸುಕಿನ ಗುದ್ದು ಕೊಡುತ್ತಾಳೆ!

ಯೇಟ್ಸ ಕವಿಯ ಇದೇ ಕವನದಿಂದ ಪ್ರೇರಣೆ ಪಡೆದು ರಚಿಸಿದ ಒಂದು ಕವನವು ಇಲ್ಲಿದೆ. ಇದನ್ನು ರಚಿಸಿದವರು ಸ್ವರ್ಣಾ. ಅವರ ಕವನ ಇಲ್ಲಿದೆ: http://subbajji.blogspot.in/2013/08/blog-post_29.html

Sunday, September 15, 2013

`ನ ಹನ್ಯತೆ’……….ಮೈತ್ರೇಯಿದೇವಿ



ಪ್ರಸ್ತಾವನೆ:
ಮೈತ್ರೇಯಿದೇವಿಯವರು (೧೯೧೪-೧೯೯೦) ಬಂಗಾಲದ ಸುಪ್ರಸಿದ್ಧ ಲೇಖಕಿ. ಇವರು ಹದಿನೈದು ವರ್ಷದವರಿದ್ದಾಗಲೆ ಇವರ ಮೊದಲ ಕವನಸಂಕಲನ ‘ಉದಿತಾ’ದ ಪ್ರಕಟಣೆಯಾಯಿತು. ಈ ಕವನಸಂಕಲನಕ್ಕೆ ರವೀಂದ್ರನಾಥ ಠಾಕೂರರು ಮುನ್ನುಡಿಯನ್ನು ಬರೆದಿದ್ದಾರೆ. ಇದಲ್ಲದೆ ಚಿತ್ತಛಾಯಾ, ಹಿರಣ್ಮಯೀ ಪಾಖೀ (ಕವನಸಂಕಲನಗಳು), ಅಚೇನಾ ಚೀನ, ಚೀನೆ ಓ ಜಪಾನೆ, ಮಹಾಸೋವಿಯತ್ (ಪ್ರವಾಸಕಥನ), ಮೈತ್ರೇಯಿದೇವೀರ ಗಲ್ಪ (ಕಥಾಸಂಕಲನ) ಇವು ಇವರ ಪ್ರಸಿದ್ಧ ಕೃತಿಗಳು. ರವೀಂದ್ರನಾಥರ ಬಗೆಗೆ ಇವರು ಬರೆದಿರುವ ಕುಟೀರಬಾಸಿ ರವೀಂದ್ರನಾಥ, ಸ್ವರ್ಗೇರ್ ಕಾಚಾಕಾಚಿ, ರವೀಂದ್ರನಾಥ ಗೃಹೆ ಓ ವಿಶ್ವೆ ಇವು ಇವರ ಜನಪ್ರಿಯ ಕೃತಿಗಳು.

ಮೈತ್ರೇಯಿದೇವಿಯವರ ತಂದೆ ಸುರೇಂದ್ರನಾಥ ದಾಸಗುಪ್ತರು (೧೮೮೭-೧೯೫೨) ಕೋಲಕತ್ತಾ ಹಾಗು ಕೇಂಬ್ರಿಜ್ ವಿಶ್ವವಿದ್ಯಾಲಯಗಳಿಂದ ಡಾ*ಕ್ಟರೇಟ್ ಪದವಿಯನ್ನು ಹಾಗು ರೋಮ್ ವಿಶ್ವವಿದ್ಯಾಲಯದಿಂದ ಡಿ.ಲಿಟ್ ಪದವಿಯನ್ನು ಪಡೆದವರು. ಅನೇಕ ಅಂತರರಾಷ್ಟ್ರೀಯ ಧಾರ್ಮಿಕ ಹಾಗು ತತ್ವಶಾಸ್ತದ ಸಮ್ಮೇಳನಗಳಲ್ಲಿ ಭಾಗವಹಿಸಿದವರು. ರವೀಂದ್ರನಾಥ ಠಾಕೂರರಿಗೆ ತುಂಬ ಹತ್ತಿರದವರು ಹಾಗು ರವೀಂದ್ರ-ಸಾಹಿತ್ಯದಲ್ಲಿ ನಿಷ್ಣಾತರು ಎಂದು ಗಣಿಸಲ್ಪಟ್ಟವರು.

೧೯೩೦ರಲ್ಲಿ ಮಿರ್ಚಾ ಇಲಿಯೇಡ (೧೯೦೭-೧೯೮೬) ಎನ್ನುವ ರೋಮಾನಿಯದ ತತ್ವಶಾಸ್ತ್ರದ ವಿದ್ಯಾರ್ಥಿ ದಾಸಗುಪ್ತರಲ್ಲಿ ಸಂಸ್ಕೃತ ಹಾಗು ಭಾರತೀಯ ತತ್ವಶಾಸ್ತ್ರದ ಅಧ್ಯಯನ ಮಾಡಲು ಬರುತ್ತಾನೆ. ದಾಸಗುಪ್ತರು ಅವನಿಗೆ ತಮ್ಮ ಮನೆಯಲ್ಲಿ ವಸತಿಯನ್ನು ಕಲ್ಪಿಸಿಕೊಟ್ಟರಲ್ಲದೆ, ತಮ್ಮ ಮನೆಯಲ್ಲಿ ಪೂರ್ಣ ಸ್ವಾತಂತ್ರ್ಯವನ್ನು ಕೊಟ್ಟರು. ೧೬ ವರುಷದ ಮೈತ್ರೇಯಿ ಹಾಗು ೨೩ ವರುಷದ ಮಿರ್ಚಾ ಜೊತೆಗೂಡಿ, ದಾಸಗುಪ್ತರ ವಾಚನಾಲಯದ ಪುಸ್ತಕಗಳ ಗ್ರಂಥಸೂಚಿಯನ್ನು ತಯಾರಿಸುತ್ತಿದ್ದರು. ಯುರೋಪಿಯನ್ ನಾಗರಿಕತೆಯ ಮಿರ್ಚಾನು ಮೈತ್ರೇಯಿಯ ನಿಕಟ ಸಂಪರ್ಕವನ್ನು ಬಯಸಿದ್ದರಲ್ಲಿ ಅಚ್ಚರಿಯಾಗಲಿಕ್ಕಿಲ್ಲ. ಆಗ ತಾನೇ ತರುಣಾವಸ್ಥೆಯಲ್ಲಿ ಕಾಲಿಡುತ್ತಿದ್ದಂತಹ ಮೈತ್ರೇಯಿಗೆ ಮಿರ್ಚಾನ ಮೇಲೆ ದ್ವಂದ್ವಭಾವವು ಮೂಡಿದ್ದರಲ್ಲಿಯೂ ಅಚ್ಚರಿಯಾಗಲಿಕ್ಕಿಲ್ಲ. ಮೈತ್ರೇಯಿ, ಅವಳ ತಂಗಿ ಹಾಗು ಮಿರ್ಚಾ ಒಮ್ಮೆ ಕೆರೆಯ ದಂಡೆಯ ಮೇಲೆ ತಿರುಗಾಡಲು ಹೋದಾಗ, ಮಿರ್ಚಾ ಅವಳನ್ನು ಬರಸೆಳೆದಪ್ಪಿ ಮುದ್ದಿಸಿದ. ಈ ಪ್ರಸಂಗವು ಬಯಲಾದ ಕ್ಷಣವೇ ದಾಸಗುಪ್ತರು ಮಿರ್ಚಾನನ್ನು ಮನೆಯಿಂದ ಹೊರಗೆ ಕಳಿಸಿದರು. ಆದರೆ ಆಕರ್ಷಣೆ ಹಾಗು ವಿಕರ್ಷಣೆಗಳ ನಡುವೆ ಸಿಲುಕಿದ ಬಾಲೆ ಮೈತ್ರೇಯಿದೇವಿ ಮಾತ್ರ ಈ ಘಟನೆಯಿಂದಾಗಿ ನಲುಗಿ ಹೋದಳು.

ನಾಲ್ಕು ವರ್ಷಗಳ ಬಳಿಕ ಮೈತ್ರೇಯಿಯ ಮದುವೆ ಅವಳಿಗಿಂತ ಹದಿನಾಲ್ಕು ವರ್ಷ ದೊಡ್ಡವರಾದ  ಮನಮೋಹನ ಸೇನ ಎನ್ನುವ ವೈದ್ಯರ ಜೊತೆಗೆ ಜರುಗುತ್ತದೆ. ತುಂಬ ತಿಳಿವಳಿಕೆಯುಳ್ಳ, ತುಂಬ ಒಳ್ಳೆಯವರಾದ ಹಾಗು ಮೈತ್ರೇಯಿಯನ್ನು ತುಂಬ ಪ್ರೀತಿಸುತ್ತಿದ್ದ ಗಂಡನ ಜೊತೆಗೆ ಮೈತ್ರೇಯಿಯ ದಾಂಪತ್ಯಜೀವನ ನಿರುದ್ವೇಗದಿಂದ ಸಾಗುತ್ತದೆ. ಮಕ್ಕಳು, ಮೊಮ್ಮಕ್ಕಳು ಅವಳ ಸಂಸಾರವನ್ನು ತುಂಬುತ್ತಾರೆ.

೧೯೭೨ರಲ್ಲಿ, ಅಂದರೆ ಮೈತ್ರೇಯಿದೇವಿಯವರಿಗೆ ೫೮ ವರ್ಷ ತುಂಬಿದ ಸಮಯದಲ್ಲಿ, ಕೋಲಕತ್ತಾದಲ್ಲಿ ಅಕಸ್ಮಾತ್ತಾಗಿ ಒಬ್ಬ ಯುರೋಪಿಯನ್ ವ್ಯಕ್ತಿಯ ಭೆಟ್ಟಿಯಾಗುತ್ತದೆ. “ಮಿರ್ಚಾ ಏಲಿಯೇಡ್ ಬರೆದ ಪುಸ್ತಕದಿಂದಾಗಿ  ನೀವು ಯುರೋಪ ಖಂಡದಲ್ಲೆಲ್ಲ ತುಂಬ ಪ್ರಸಿದ್ಧರಾಗಿದ್ದೀರಿ” ಎಂದು ಆತ ಹೇಳಿದಾಗ, ಮೈತ್ರೇಯಿದೇವಿಯವರಿಗೆ ಆಶ್ಚರ್ಯವಾಗುತ್ತದೆ.
ಮಿರ್ಚಾ ಎಲಿಯೇಡ್ ಬರೆದ ಪುಸ್ತಕದ ಹೆಸರು: ‘ಮೈತ್ರೇಯಿದೇವಿ’. ಇದನ್ನು ‘ಬಂಗಾಲದ ರಾತ್ರಿಗಳು’ ಎಂದೂ ಕರೆಯಲಾಗಿದೆ.

ಕಥೆ:
ದಾಸಗುಪ್ತರಿಂದ ಹೊರದೂಡಿಸಿಕೊಂಡ ಮಿರ್ಚಾ ಕೆಲವು ಕಾಲ ಹಿಮಾಲಯದಲ್ಲಿ ಸನ್ಯಾಸಿಯಂತೆ ತಿರುಗಾಡುತ್ತಾನೆ. ಈ ಸಮಯದಲ್ಲಿ ಅಲ್ಲಿಯ ಆಧ್ಯಾತ್ಮಕ ಸಾಧಕರ ಜೊತೆಗೆ ನಿಕಟ ಸಂಬಂಧವನ್ನು ಪಡೆಯುತ್ತಾನೆ. ಇದರಿಂದಾಗಿ ಯೋಗ ಹಾಗು ಭಾರತೀಯ ಧರ್ಮಕಲ್ಪನೆಯ ಮೇಲೆ ಕೃತಿಗಳನ್ನು ರಚಿಸಲು ಅವನಿಗೆ ಅನುಕೂಲವಾಗುತ್ತದೆ. ಇದೇನೇ ಆದರೂ ಮೈತ್ರೇಯಿದೇವಿಯ ಮೇಲೆ ಮನಸ್ಸಿಟ್ಟಿದ್ದ ಮಿರ್ಚಾ ‘ಮೈತ್ರೇಯಿದೇವಿ’ ಅಥವಾ ‘ಬಂಗಾಲದ ರಾತ್ರಿಗಳು’ ಎನ್ನುವ ತನ್ನ ಆತ್ಮಚರಿತ್ರೆಯ ರೂಪದ ಕಾದಂಬರಿಯನ್ನು ಬರೆಯುತ್ತಾನೆ. ವಾಸ್ತವಕ್ಕೆ ತೀರ ವಿರುದ್ಧವಾದ ಈ ಕಾದಂಬರಿಯಲ್ಲಿ, ಮೈತ್ರೇಯಿದೇವಿಯ ಬಗೆಗೆ ತನಗೆ ನಿಷ್ಕಾಮ ಪ್ರೇಮವಿತ್ತು, ಆದರೆ ಅವಳೇ ತನ್ನನ್ನು ಕಾಮಶಯ್ಯೆಗೆ ಸೆಳೆದಳು; ಅವಳು ಈ ಮೊದಲೂ ಸಹ ಕನ್ಯೆಯಾಗಿರಲಿಕ್ಕಿಲ್ಲ ಎಂದು ಬರೆದಿದ್ದಾನೆ. ಒಬ್ಬ ಯುರೋಪಿಯನ್ ಅಳಿಯನನ್ನು ಬಯಸುತ್ತಿದ್ದ ದಾಸಗುಪ್ತರು, ತನ್ನ ಮಗಳನ್ನು ಉತ್ತೇಜಿಸುತ್ತಿದ್ದರು ಎಂದೂ ಸಹ ಇದರಲ್ಲಿ ಸೂಚಿಸಲಾಗಿದೆ. ಮದುವೆಯನ್ನು ಅನಿವಾರ್ಯ ಮಾಡುವ ಉದ್ದೇಶದಿಂದ, ಬಸಿರಾಗ ಬಯಸಿದ ಮೈತ್ರೇಯಿ ಮತ್ತೊಬ್ಬ ಕೀಳು ಮನುಷ್ಯನೊಡನೆ ಸಂಗವನ್ನು ಮಾಡಿದಳು ಎಂದೂ ಮಿರ್ಚಾ ಆ ಕಾದಂಬರಿಯಲ್ಲಿ ಬರೆದಿದ್ದಾನೆ. ಸ್ಥಳೀಯ ಸಾಹಿತ್ಯಕ್ಕೆ ರಮ್ಯವಿಲಾಸಿ, ರಂಗೀನ ಕಾದಂಬರಿಯನ್ನು (Exotic novel) ಪರಿಚಯಿಸಿದವನೆಂದು ಮಿರ್ಚಾನಿಗೆ ವಿಮರ್ಶಕರ ಮನ್ನಣೆ ಸಿಗುತ್ತದೆ!

ವ್ಯಥೆ:
ಈ ಪುಸ್ತಕವು ಪ್ರಕಟವಾದ ಸುಮಾರು ೪೦ ವರ್ಷಗಳ ಬಳಿಕ, ಮೈತ್ರೇಯಿದೇವಿಯವರಿಗೆ ಇದು ಓದಲು ಲಭ್ಯವಾಯಿತು. ಅದನ್ನು ಓದಿದ ಮೈತ್ರೇಯಿದೇವಿಯವರು ತನ್ನ ಚಾರಿತ್ರ್ಯಹನನದಿಂದ ಹಾಗು ಆಮೂಲಕ ತನಗೆ ದೊರೆತ ಅಪಖ್ಯಾತಿಯಿಂದ ಆಘಾತಗೊಂಡರು. ಇದರಿಂದ ತುಂಬ ನೊಂದುಕೊಂಡ ಅವರು ೧೯೭೭ರಲ್ಲಿ (-ಅಂದರೆ ಅವರಿಗೆ ೬೩ ವರ್ಷಗಳಾದಾಗ-) ‘ನ ಹನ್ಯತೆ’ ಎನ್ನುವ ಕಾದಂಬರಿರೂಪದ ಕೃತಿಯನ್ನು ರಚಿಸಿದರು. ಆ ಕೃತಿಯಲ್ಲಿ ತನ್ನ ಹಾಗು ಮಿರ್ಚಾನ ನಡುವಿನ ಸಂಬಂಧವನ್ನು ಅವರು ವಿವರಿಸಿದ್ದಾರೆ. ಮಿರ್ಚಾನ ಮೇಲೆ ತನಗೆ ಹದಿಹರೆಯದ ಆಕರ್ಷಣೆ ಇದ್ದದ್ದು ನಿಜ, ಆದರೆ (ಸಾಂಪ್ರದಾಯಕ ಮನೆಯಲ್ಲಿ ಬೆಳೆದ) ತಾನು ಎಂದೂ ನೀತಿಮಾರ್ಗವನ್ನು ಅತಿಕ್ರಮಿಸಲಿಲ್ಲ, ಈಗಲಾದರೂ ಸಹ ಆತನ ಮೇಲೆ ತನಗೆ ಪ್ರೀತಿ ಇದೆ, ಇದು ಮಾನವಪ್ರೀತಿ ಎಂದು ಅವರು ಹೇಳುತ್ತಾರೆ. ಈ ಕಾದಂಬರಿಯಲ್ಲಿ ಮೈತ್ರೇಯಿದೇವಿಯವರು ತನ್ನ ಮನದ ತೊಳಲಾಟವನ್ನು ಬಗೆಬಗೆಯಲ್ಲಿ ಚಿತ್ರಿಸಿದ್ದಾರೆ. ಈ ಕೃತಿಯಲ್ಲಿ ವ್ಯಕ್ತವಾದ  ಅವರ ಭಾಷಾಪ್ರಭುತ್ವವು ಅಚ್ಚರಿ ಮೂಡಿಸುವಂತಹದಾಗಿದೆ.

‘ನ ಹನ್ಯತೇ’ ಇದು ಕಠೋಪನಿಷತ್ತಿನಲ್ಲಿ ಯಮಧರ್ಮನು ನಚಿಕೇತನಿಗೆ ಆತ್ಮದ ಬಗೆಗೆ ಹೇಳುವ ವರ್ಣನೆ:
ಅಜೋ ನಿತ್ಯಃ ಶಾಶ್ವತೋಯಂ ಪುರಾಣೋ,
ನ ಹನ್ಯತೇ ಹನ್ಯಮಾನೇ ಶರೀರೇ.
ಶರೀರವು ನಾಶವಾದರೂ ಸಹ ಆತ್ಮವು ನಾಶವಾಗುವುದಿಲ್ಲ.
ಮೈತ್ರೇಯಿದೇವಿಯವರು ‘ಯಾವ ಘಟನೆಯೂ, ಯಾವ ಪ್ರೀತಿಯೂ ನಾಶವಾಗುವುದಿಲ್ಲ; ಅದು ನೆನಪಿನಲ್ಲಿ ಚಿರಸ್ಥಾಯಿ’ ಎನ್ನುವ ಅರ್ಥದಲ್ಲಿ, ಇಲ್ಲಿ ಇದನ್ನು ಶೀರ್ಷಿಕೆಯನ್ನಾಗಿ ಬಳಸಿಕೊಂಡಿದ್ದಾರೆ.

೧೯೮೮ರಲ್ಲಿ ಎಲಿಯೇಡನ ಕಾದಂಬರಿಯನ್ನು ‘Bengali Nights’ ಎನ್ನುವ ಚಲನಚಿತ್ರವನ್ನಾಗಿ ಮಾಡಲಾಯಿತು. ಹ್ಯೂ ಗ್ರ್ಯಾಂಟ ಈ ಚಲನಚಿತ್ರದ ನಾಯಕ ಹಾಗು ಸುಪ್ರಿಯಾ ಪಾಠಕ ನಾಯಕಿ. ಇದೊಂದು ಅಶ್ಲೀಲ ಚಲನಚಿತ್ರವೆಂದು ಪ್ರತಿಭಟನೆಗಳಾದಾಗ, ಭಾರತದಲ್ಲಿ ಇದನ್ನು ನಿಷೇಧಿಸಲಾಯಿತು.

ಕೊನೆಯ ಕಣ್ಣೀರು:
ಮೈತ್ರೇಯಿದೇವಿಯವರು ತಮ್ಮ ಸಾಹಿತ್ಯ ಹಾಗು ಪಾಂಡಿತ್ಯದ ಕಾರಣದಿಂದಾಗಿ ದೇಶವಿದೇಶಗಳ ಮನ್ನಣೆ ಹಾಗು ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ನ ಹನ್ಯತೆ’ ಕಾದಂಬರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿದೆ.

೧೯೭೧ರಲ್ಲಿ ಬಂಗ್ಲಾ ಯುದ್ಧದ ನಿರಾಶ್ರಿತ ಬಾಲಕರಿಗಾಗಿ ಇವರು ‘ಖೇಲಾಘರ’ ಸ್ಥಾಪಿಸಿದರು. ಅಲ್ಲದೆ ‘ಕ್ವೇಕರ್ಸ ಸೊಸಾಯಿಟಿ ಆ*ಫ್ ಫ್ರೆಂಡ್ಸ’ ಹಾಗು ‘ಗಾಂಧಿ ಶಾಂತಿ ಪ್ರತಿಷ್ಠಾನ’ದ ಜೊತೆಗೂ ಇವರು ದುಡಿದಿದ್ದಾರೆ. ೧೯೭೭ರಲ್ಲಿ ಭಾರತ ಸರಕಾರವು ಇವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಪ್ರದಾನಿಸಿತು.

ಇತ್ತ ಮಿರ್ಚಾ ಏಲಿಯೇಡ ಸಹ ಯುರೋಪ ಖಂಡದಲ್ಲಿ ತನ್ನ ತಾತ್ವಿಕ ಹಾಗು ಸಾಹಿತ್ಯಕ ಕೃತಿಗಳಿಗಾಗಿ ಮನ್ನಣೆಯನ್ನು ಪಡೆದ. ಎರಡು ಸಲ ಮದುವೆಯನ್ನೂ ಆದ.

ವಾಸ್ತವದಲ್ಲಿ ಸಾಧ್ಯವಾಗದ ಬಯಕೆಗಳನ್ನು ವ್ಯಕ್ತಿಯು ಕನಸಿನಲ್ಲಿ ತೀರಿಸಿಕೊಳ್ಳುತ್ತಾನೆ ಎಂದು ಮನೋಶಾಸ್ತ್ರಜ್ಞ  ಫ್ರಾ*ಯ್ಡ ಹೇಳುತ್ತಾನೆ. ಏಲಿಯಡ್‍ ತನ್ನ ಕನಸುಗಳಲ್ಲಿ ಏನಾದರೂ ಮಾಡಿಕೊಳ್ಳಲಿ, ಆದರೆ ಮೈತ್ರೇಯಿದೇವಿಯ ಜೊತೆಗೆ ಶರೀರಸಂಪರ್ಕ ಸಾಧ್ಯವಾಗಲಿಲ್ಲ ಎನ್ನುವ ರೊಚ್ಚಿನಿಂದ ಅವಳ ಮೇಲೆ ಮಾನಸಿಕ  ಅತ್ಯಾಚಾರವನ್ನು ಹಾಗು ಸಾಹಿತ್ಯಕ ಅಪಪ್ರಚಾರವನ್ನು ಮಾಡಿದ್ದು ಅನ್ಯಾಯದ ಸಂಗತಿ. ಓರ್ವ ಅಮಾಯಕ ಸ್ತ್ರೀಯ ಚಾರಿತ್ರ್ಯಹನನವನ್ನು ಮಾಡಿದ ಮಿರ್ಚಾ ಏಲಿಯಡ್‌ನಿಗೆ ಧಿಕ್ಕಾರವಿರಲಿ!

ಟಿಪ್ಪಣಿ:
‘ನ ಹನ್ಯತೆ’ ಕೃತಿಯನ್ನು ಪ್ರಾಧ್ಯಾಪಕಿ ಗೀತಾ ವಿಜಯಕುಮಾರ ಇವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಸಾಹಿತ್ಯ ಅಕಾಡೆಮಿ, ನವದೆಹಲಿಯಿಂದ ೨೦೦೮ರಲ್ಲಿ ಪ್ರಕಟವಾಗಿದೆ.