Wednesday, August 25, 2010

ಹೇ ರಾಮ್!

‘ದೇಶ ಶ್ರೀಮಂತವಾಗಿರುವಾಗ ಓರ್ವ ವ್ಯಕ್ತಿ ಬಡತನದಲ್ಲಿದ್ದರೆ  ಅವನು ತಪ್ಪುಗಾರ; ದೇಶ ಬಡತನದಲ್ಲಿದ್ದಾಗ ಓರ್ವ ವ್ಯಕ್ತಿ ಸಿರಿವಂತಿಕೆಯಲ್ಲಿದ್ದರೆ ಆ ವ್ಯಕ್ತಿ ಒಬ್ಬ ಪಾಪಿ’ ಎಂದು ಚೀನಾ ದೇಶದ ತತ್ವಜ್ಞಾನಿ ಕನ್‌ಫ್ಯೂಶಿಯಸ್ ಹೇಳಿದ್ದಾನೆ. ಕಾಲ ಹಾಗು ದೇಶದಿಂದ ದೂರದಲ್ಲಿದ್ದ ಆ ತತ್ವಜ್ಞಾನಿಯನ್ನು ಬಿಡೋಣ. ನಾವು ರಾಷ್ಟ್ರಪಿತ ಎಂದು ಸ್ಮರಿಸುವ ಮಹಾತ್ಮಾ ಗಾಂಧಿಯವರು ಅರೆಹೊಟ್ಟೆಯ ಅಡುಗೆ ಹಾಗು ಅರೆಬತ್ತಲೆಯ ಉಡುಗೆಯ ವ್ರತವನ್ನು ಏಕೆ ಆಚರಿಸಿದರು? ತಮ್ಮ ದೇಶವಾಸಿಗಳ ಹೀನಸ್ಥಿತಿಯನ್ನು ನೋಡಿ ಮರುಕಗೊಂಡಿದ್ದಕ್ಕಲ್ಲವೆ? ಮಾನವ ಸಂವೇದನೆಯಿರುವ ಹೃದಯವಂತರು ಮಾಡುವ ಕೆಲಸವಿದು. ಇಂತಹ ಸಂವೇದನೆಯನ್ನು ನಾವು ಚುನಾಯಿಸಿದ ನಮ್ಮ ಶಾಸಕರಲ್ಲಿ ಅಪೇಕ್ಷಿಸುವದು ಹುಚ್ಚುತನವೇ ಸರಿ.

ಇದೀಗ ನಮ್ಮ ಶಾಸಕರು ಅಂದರೆ ಲೋಕಸಭೆಯ ಸದಸ್ಯರು ತಮ್ಮ ಮಾಸಿಕ ವೇತನವನ್ನು ರೂ.೫೦,೦೦೦ಗಳಿಗೆ ಏರಿಸಿಕೊಳ್ಳುವ ಹುನ್ನಾರದಲ್ಲಿದ್ದಾರೆ.. ಅದರ ಜೊತೆಗೆ ರೂ.೪೫,೦೦೦/-ಗಳ ಕ್ಷೇತ್ರಭತ್ತೆ . ಲೋಕಸಭೆ ನಡೆಯುತ್ತಿರುವಾಗ ಪ್ರತಿದಿನ ರೂ.೨೦೦೦/-ಗಳ ಭತ್ತೆ ಬೇರೆ. ಲೋಕಸಭೆಯು ಒಂದು ವರ್ಷದಲ್ಲಿ ಕನಿಷ್ಠ ೧೨೦ ದಿನಗಳವರೆಗೆ ನಡೆಯುವದರಿಂದ ರೂ. ೨,೪೦,೦೦೦ಗಳ ಗಳಿಕೆ ಇಲ್ಲಿಯೇ ಆಗುತ್ತದೆ. ಇದಲ್ಲದೆ ಟೆಲಿಫೋನ್, ವಿಮಾನ ಹಾರಾಟ ಮೊದಲಾದವುಗಳ ಪುಕ್ಕಟೆ ಸೌಲಭ್ಯ.  ಒಟ್ಟಿನಲ್ಲಿ ಓರ್ವ ಸದಸ್ಯನಿಗೆ ವರ್ಷಕ್ಕೆ ಸುಮಾರು ೨೦ ಲಕ್ಷಗಳವರೆಗಿನ ಗಳಿಕೆ. ಇದು ಸಾಮಾನ್ಯ ಭಾರತೀಯನ ವಾರ್ಷಿಕ ಆದಾಯದ ೬೮ ಪಟ್ಟು ಅಧಿಕವಾಗಿದೆ. ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆ ೫೪೩. ಸಂಪುಟ ಸಚಿವರು ಹಾಗು ಉಪಮಂತ್ರಿಗಳಿಗೆ ಹೆಚ್ಚಿನ ಸಂಬಳ. ಅದನ್ನು ಗಣನೆಗೆ ತೆಗೆದುಕೊಳ್ಳದಿದ್ದರೂ ಸಹ, ಲೋಕಸಭೆಯ ವರ್ತಮಾನ ಸದಸ್ಯರಿಗಾಗಿ ಭಾರತೀಯರು ಮಾಡುವ ಖರ್ಚು ವರ್ಷಕ್ಕೆ ರೂ. ೧೦೫ ಕೋಟಿ. ಲೋಕಸಭೆಯ ಸದಸ್ಯರಾಗಿದ್ದವರು, ಮುಂದಿನ ಚುನಾವಣೆಯಲ್ಲಿ ಗೆಲ್ಲದೆ ಹೋದರೆ, ಅವರಿಗೆ ನಿವೃತ್ತಿವೇತನದ ಹೆಸರಿನಲ್ಲಿ ಸಮಾಧಾನಕರ ಬಹುಮಾನ ಲಭ್ಯವಾಗುತ್ತದೆ. (ಇನ್ನು ರಾಜ್ಯಸಭೆಯ ಸದಸ್ಯರ ಸಂಖ್ಯೆ ೨೫೦. ಇವರಿಗೂ ಸಹ ಇಷ್ಟೇ ವೇತನ ಹಾಗು ಇಷ್ಟೇ ಭತ್ತೆ ಇರಬಹುದಲ್ಲವೆ?)

ಇದಲ್ಲದೆ ಲೋಕಸಭೆಯಲ್ಲಿ  ಮತದಾನ ಮಾಡುವಾಗ ಅಡ್ಡಮತ ನೀಡಲು, ವಿಶ್ವಾಸಮತ ನೀಡಲು ಲಂಚ ಸ್ವೀಕರಿಸಿದ ಉದಾಹರಣೆಗಳು ನಮ್ಮ ಎದುರಿಗಿವೆ. ಪ್ರಶ್ನೆ ಕೇಳುವ ಸಲುವಾಗಿ ಕೆಲವು ಸದಸ್ಯರು ಆಸಕ್ತ ಉದ್ದಿಮೆಪತಿಗಳಿಂದ ಲಂಚ ಪಡೆಯುತ್ತಾರೆ ಎನ್ನುವ ಆರೋಪ ಸಹ ಕೇಳಿ ಬಂದಿದೆ. ಒಟ್ಟಿನಲ್ಲಿ ಲೋಕಸಭೆಯ ಸದಸ್ಯನಾಗಿರುವದು ಅತ್ಯಂತ ಲಾಭದಾಯಕ ಧಂಧೆಯಂತೆ ಭಾಸವಾಗುತ್ತದೆ. ಈ ಧಂಧೆಯಲ್ಲಿಯ ಅತ್ಯಂತ ಆಕರ್ಷಕ ಅಂಶವೆಂದರೆ, ಲೋಕಸಭೆಯಲ್ಲಿ ಪಡೆದ ಲಂಚವು ಅಪರಾಧವಲ್ಲ ಎಂದು ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ. (ಸೋರೇನ ಶಿಬು ಮತ್ತು ನರಸಿಂಹರಾವ ಪ್ರಕರಣ.)

ಕಳ್ಳಧಂಧೆ ಮಾಡುವದರಲ್ಲಿ ಹೆಸರು ಮಾಡಿದ ಅನೇಕ ವ್ಯಕ್ತಿಗಳಿದ್ದಾರೆ: ಹಾಜಿ ಮಸ್ತಾನ, ಛೋಟಾ ಶಕೀಲ, ವೀರಪ್ಪನ್ ಇತ್ಯಾದಿ. ಕಾಯದೆಯ ಕೈಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕೆಲವು ಅಪರಾಧಿಗಳು ಭಾರತೀಯ ಅಪರಾಧಿಗಳ ಸ್ವರ್ಗವಾದ ದುಬೈಯಲ್ಲಿ ನೆಲಸಿದ್ದಾರೆ. ಕೆಲವರು ಮುಖಾಮುಖಿಯಲ್ಲಿ ನೆಗೆದು ಹೋಗಿದ್ದಾರೆ. ಲೋಕಸಭೆಯ ಸದಸ್ಯರಿಗೆ ಮಾತ್ರ ಇಂತಹ ಯಾವುದೇ risk ಇಲ್ಲ. ಲೋಕಸಭೆಯಲ್ಲಿ ಘಟಿಸಿದ ಇವರ ಆರ್ಥಿಕ ಅಪರಾಧಗಳು ಭಾರತೀಯ ದಂಡಸಂಹಿತೆಯ ಅಡಿಯಲ್ಲಿ ಗಣನೆಗೆ ಬರುವದಿಲ್ಲ. ಇತರ ಕೆಲವು ಕ್ಷುಲ್ಲಕ ಅಪರಾಧಗಳಿಗಾಗಿ (ಉದಾ: ರೇಪ್, ಕೊಲೆ, ಅಪಹರಣ ಇ.) ಇವರು ಜೇಲಿನಲ್ಲಿ ಇರಬೇಕಾದರೂ ಸಹ, ಅಲ್ಲಿ ಅವರಿಗೆ ಸ್ವರ್ಗಸೌಲಭ್ಯಗಳು ಲಭ್ಯವಿರುತ್ತವೆ. ೨೦೦೪ರ ಲೋಕಸಭೆಯಲ್ಲಿ ೧೨೦ ಸದಸ್ಯರ ಮೇಲೆ ಕ್ರಿಮಿನಲ್ ಪ್ರಕರಣಗಳಿದ್ದವು. ಆದುದರಿಂದ ನಮ್ಮ ಲೋಕಸಭೆಗೆ ‘ಅಪರಾಧಿಸಭಾ’ ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ.

ಲೋಕಸಭೆಯ ಸದಸ್ಯರಿಗಾಗಿ ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನವಿರಬೇಕು ಎನ್ನುವದು ಸನ್ಮಾನ್ಯ ಸದಸ್ಯರಾದ ಲಾಲೂ ಪ್ರಸಾದ ಯಾದವರ ಒತ್ತಾಯ. ಯಾಕೆಂದರೆ ಸರಕಾರದ ಕಾರ್ಯದರ್ಶಿಗಳು  ರೂ.೮೦ ಸಾವಿರಕ್ಕಿಂತ ಹೆಚ್ಚಿನ ಮಾಸಿಕ ವೇತನ ಪಡೆಯುತ್ತಾರಂತೆ. ಲೋಕಸಭಾ ಸದಸ್ಯರ ದರ್ಜೆಯು ಸರಕಾರದ ಕಾರ್ಯದರ್ಶಿಗಳ ದರ್ಜೆಗಿಂತ ಹೆಚ್ಚಿನದಾಗಿರುವದರಿಂದ, ಇವರಿಗೆ ಮಾಸಿಕ ರೂ.೮೦ ಸಾವಿರಕ್ಕಿಂತ ಹೆಚ್ಚಿಗೆ ವೇತನ ಬೇಕಂತೆ. ಅಲ್ಲಾ ಸ್ವಾಮಿ, ಸರಕಾರದ ಕಾರ್ಯದರ್ಶಿಗಳು ಭಾರತೀಯ ಆಡಳಿತಾತ್ಮಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾದಂತಹ ಪ್ರತಿಭಾವಂತರಾಗಿರುತ್ತಾರೆ. ದಯವಿಟ್ಟು ನಿಮ್ಮನ್ನು ಅವರ ಜೊತೆಗೆ ಹೋಲಿಸಿಕೊಳ್ಳಬೇಡಿ. ಲೋಕಸಭಾ ಸದಸ್ಯರಿಗೂ ಸಹ ಒಂದು common entrance test ಇಟ್ಟರೆ ನಿಮ್ಮ ಹೂರಣ ಹೊರಬೀಳುತ್ತದೆ. ಈ ಪರೀಕ್ಷೆಯಲ್ಲಿ ಎಷ್ಟು ಅಭ್ಯರ್ಥಿಗಳು ಪ್ರಾಮಾಣಿಕವಾಗಿ ತೇರ್ಗಡೆ ಹೊಂದುತ್ತಾರೆ ಎನ್ನುವದು ಚರ್ಚಾತ್ಮಕ ವಿಷಯ!

ಆಶೆಬುರುಕತನ ತೋರಿಸುವ ಇಂತಹ ಶಾಸಕರಿಗೆ ನಾವು ಮತ ನೀಡಬೇಕೆ? ವೇತನ ಹೆಚ್ಚಿಸಿಕೊಳ್ಳಲು ಮತ ನೀಡಿದ ಯಾವ ಶಾಸಕನಿಗೂ ಮುಂದಿನ ಚುನಾವಣೆಯಲ್ಲಿ ನಾನು ಮತ ನೀಡಲಾರೆ. ಇಂತಹ ‘ಶಾಸಕ-ತಿರಸ್ಕಾರ’ ಚಳುವಳಿಯು ನಮ್ಮ ದೇಶದಲ್ಲಿ ರೂಪಗೊಳ್ಳಬೇಕು. ಶಾಸಕಾಂಗಕ್ಕೆ ಪರಮೋಚ್ಚ ಅಧಿಕಾರವಿದೆ ಎಂದು ಶಾಸಕರು ಹೇಳುತ್ತಾರೆ. ಪರಮೋಚ್ಚ ಅಧಿಕಾರವಿರುವದು ನಾಗರಿಕರಿಗೆ ಎನ್ನುವದನ್ನು ಪ್ರಜ್ಞಾವಂತ ನಾಗರಿಕರು ತೋರಿಸಿ ಕೊಡಬೇಕು.

ಮಹಾತ್ಮಾ ಗಾಂಧೀಜಿಯವರನ್ನು ೩೦ ಜನೆವರಿ ೧೯೪೮ರಂದು ನಾಥೂರಾಮ ಘೋಡಸೆ ಗುಂಡಿಟ್ಟು ಕೊಂದ ಎಂದು ಹೇಳುತ್ತಾರೆ. ಇದು ತಪ್ಪು ಹೇಳಿಕೆ. ನಮ್ಮ ಶಾಸಕರು ರಾಷ್ಟ್ರಪಿತನನ್ನು ಪ್ರತಿದಿನವೂ ಕೊಲ್ಲುತ್ತಿದ್ದಾರೆ.

ಹೇ ರಾಮ್!

Thursday, August 19, 2010

"ಇದು ನಿನ್ನದೇ ಮನೆ !". . . . . ಸುಶೀಲಾ ಬಾಪಟ

ಮದುವೆಯ ನಂತರ ಮೊದಲ ಸಲ, ಅತ್ತೆಯ ಮನೆಗೆ ಹೊರಡಲು ಸಿದ್ಧಳಾದ ಮಗಳನ್ನು ಬೀಳ್ಕೊಡುವಾಗ, ಅವಳ ತಾಯಿಯ ಮನಸ್ಸಿನಲ್ಲಿ ಮೂಡುವ ಭಾವನೆಗಳು ಹೇಗಿರಬಹುದು? ಇಂತಹ ಪ್ರಸಂಗವನ್ನು ವರ್ಣಿಸುವ ಕವನವೊಂದನ್ನು ಮರಾಠಿಯ ಪ್ರಸಿದ್ಧ ಕವಯಿತ್ರಿ ಸುಶೀಲಾ ಬಾಪಟ ಎನ್ನುವವರು ಸುಮಾರು ಐವತ್ತು ವರ್ಷಗಳ ಹಿಂದೆ ರಚಿಸಿದರು.
ಈ ಕವನದ ಒಂದು ಪ್ರತಿ ಇತ್ತೀಚೆಗೆ ನನ್ನ ತಂಗಿ ಶ್ರೀಮತಿ ಅರುಣಾ ಗಲಗಲಿ ಇವಳಿಗೆ ಲಭ್ಯವಾಯಿತು. ಅದರ ಮೊದಲ ಭಾಗದ ಸ್ವಲ್ಪಾಂಶ ನಷ್ಟವಾಗಿತ್ತು. ಕವನದಿಂದ ಪ್ರಭಾವಿತಳಾದ ಅರುಣಾ ಆ ಕವನದ ಪ್ರತಿಯೊಂದನ್ನು ನನಗೆ ಕಳುಹಿಸಿಕೊಟ್ಟಳು. ಈ ಕವನವನ್ನು ಕನ್ನಡಕ್ಕೆ ಅನುವಾದಿಸಿ ಕೊಡಲು ನಾನು ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ಇವರಿಗೆ ಬಿನ್ನವಿಸಿದೆ. ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ಇವರು ಕನ್ನಡ ಹಾಗು ಮರಾಠಿ ಎರಡೂ ಭಾಷೆಗಳಲ್ಲಿ ಪಾಂಡಿತ್ಯವನ್ನು ಸಂಪಾದಿಸಿದವರು. ಮರಾಠಿ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದವರು. ರಾಧಾ ಹಾಗು ಶ್ಯಾಮರಾವ ದಂಪತಿಗಳು ಧಾರವಾಡದ ನಿವಾಸಿಗಳು, ಇಬ್ಬರೂ ಸಾಹಿತ್ಯಪ್ರಿಯರು ಹಾಗು ಲೇಖಕರು. ನನ್ನ ವಿನಂತಿಗೆ ಮನ್ನಣೆ ಕೊಟ್ಟು, ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ ತ್ವರಿತವಾಗಿ ಕವನದ ಭಾವಾನುವಾದವನ್ನು ಮಾಡಿಕೊಟ್ಟರು. ಅವರಿಗೆ ನನ್ನ ಅನೇಕ ಧನ್ಯವಾದಗಳು. ಅದರಂತೆ ಈ ಸುಂದರ ಕವನವನ್ನು ನನಗೆ ಒದಗಿಸಿದ ತಂಗಿ ಅರುಣಾಳಿಗೂ ಅನೇಕ ಧನ್ಯವಾದಗಳು.
‌‌‌‌‌‌‌‌‌‌‌‌‌‌‌‌‍^^^^^^^^^^^^^^^^^^^^^^^^^^^^^^^^^^^^^^^^^
ಈ ಕವನವನ್ನು ಮೊದಲು ಮೂಲ ಮರಾಠಿಯಲ್ಲಿ, ಬಳಿಕ ಕನ್ನಡ ರೂಪದಲ್ಲಿ ಕೆಳಗೆ ಕೊಡಲಾಗಿದೆ.

ಮರಾಠಿ ಮೂಲ: ‘ಹೇ ಘರ ತುಝsಚ ಆಹೆ !’
. . . . . . . . . . . . . . . . . . . . . . . . .
ಛಾಲ್ಯಾವರ ಮೋಠೆ ಪಣ್ಯಾಚ ನಾವ ಘೇವೂನ
ಪಣ ಕಧೀ ಲಹಾನ ವ್ಹಾವೇಸೆ ವಾಟಲೇ ನಾ
ತರ ಯೇ, ಹೇ ಘರ ತುಝsಚ ಆಹೆ!.

ಆಜ ತೂ ವೇಗಳೀಚ ದಿಸತೇ ಆಹೇಸ,
ಡೋಳ್ಯಾ⁰ತ ಸ್ವಪ್ನೇ ತರಳತ ಆಹೇತ,
ಏಕ ನವೀನ ಘರ ಆಪಲೇಸೆ ಕರಣ್ಯಾಚೀ,
ಪತ್ನೀ, ಸೂನ, ನಾತಸೂನ, ವಹಿನೀ……
ನವ್ಯಾ ನಾತ್ಯಾ⁰ಚಾ ನವ್ಯಾ ಭೂಮಿಕಾ,
ತನ್ಮಯತೇನೆ ಸಾಕಾರಣಾರ ಆಹೇಸ.
ಪಣ ಕಧೀ ವಾಟಲೇ ತುಲಾ
ಕೀ ಫಕ್ತ ಏಕ ಲಹಾನ ಮುಲಗೀ ವ್ಹಾವೇ
ತರ ಯೇ, ಹೇ ಘರ ತುಝsಚ ಆಹೆ!.

ಏಕ ನವೇ ವಿಶ್ವ ತುಲಾ ಖುಣಾವತೇ ಆಹೇ
ತಿಥೇ ನವೀ ಆಹ್ವಾನೇ ಆಹೇತ
ಪರಿಶ್ರಮಾನಿ ಫುಲಣಾರ ಸೌಖ್ಯಾಚೇ ಮಳೇ ಆಹೇತ
ಯಾ ನವನವ್ಯಾ ಕ್ಷಿತಿಜಾಕಡೇ ವಾಟಚಾಲ ಕರತಾನಾ
ಕ್ಷಣಭರ ಥಂಬಕೂನ ಆಯೀಚ್ಯಾ ಕುಶೀತ ಶಿರಾವೇಸೆ ವಾಟಲೇ ನಾ
ತರ ಯೇ, ಹೇ ಘರ ತುಝsಚ ಆಹೆ!.

ತೂ ಹೋಯೀಲ ಸ್ವಾಮಿನೀ ಕುಣಾಚ್ಯಾ ಹೃದಯಾಚೀ
ಪುರವಶೀಲ ಕೋಡಕೌತುಕ, ಲಾಡ, ಹಟ್ಟ ಅನೇಕಾ⁰ಚೇ
ಪೂರ್ಣ ಕರಶೀಲ ಕರ್ತವ್ಯೇ ಆಣಿ ಕಾಮನಾ ಸಾಜ್ಯಾ⁰ಚಾ
ಪಣ ತುಲಾಚ ಕಧೀ ವಾಟಲೇ ಕೀ ಹಟ್ಟ ಕರಾವಾ ಥೋಡಾಸಾ…
ತರ ಯೇ, ಹೇ ಘರ ತುಝsಚ ಆಹೆ!.

ತೂ ಹಿಂಡಶೀಲ ಕಿತೀತರೀ ದೇಶವಿದೇಶ
ಚಾಖೂನ ಬಧಶೀಲ ನಾನಾ ಪರೀಚ್ಯಾ
ಪಂಚತಾರಾಂಕಿತ ಪಾಕಕೃತೀ
ಪಣ ಕಧೀತರೀ ವಾಟಲೇ ಕೀ ಖಾವಾ
ಕುಣೀತರೀ ಕಾಲವೂನ ದಿಲೇಲಾ ವರಣಭಾತ
ತರ ಯೇ, ಹೇ ಘರ ತುಝsಚ ಆಹೆ!.

ನವ್ಯಾ ಘರಾಚ್ಯಾ ಉಂಬರಠ್ಯಾವರಚೇ
ಮಾಪ ಓಲಾಡತಾನಾ ಆಠವಣ ಠೇವ. . . . .
ಕೀ ಏಕ ಜುನೇ ಘರ ತುಝ್ಯಾ ವಾಟೇಕಡೇ
ನೇಹಮೀಚ ಡೋಳೇ ಲಾವೂನ ಬಸಲೇಲೆ ಆಹೇ!

ಕನ್ನಡ ಅನುವಾದ: ‘ಇದು ನಿನ್ನದೇ ಮನೆ !’

“. . . . . . . . . . . . . . . . .
ನೋಡನೋಡುತ್ತ ದೊಡ್ಡ ಹೆಸರು !
ದೊಡ್ಡವಳಾಗಿದ್ದಿ ಇಂದು !!
ಯಾವತ್ತಾದರೂ ಎನಿಸಿದರೆ ನಿನಗೆ
‘ಮತ್ತೊಮ್ಮೆ ಚಿಕ್ಕ ಹುಡುಗಿಯಾಗಬೇಕು’ ಎಂದು 
ಬಾ ಇಲ್ಲಿ, ಇದು ನಿನ್ನದೇ ಮನೆ!

ಇಂದು ನೀ ಬೇರೆಯೇ ಕಾಣುತ್ತಿರುವಿ,
ತೇಲುತ್ತಿವೆ ಕಣ್ಣಲ್ಲಿ ಕನಸುಗಳು!
ಒಂದು ಹೊಸ ಗೂಡನ್ನು
ತನ್ನದಾಗಿಸುವ ತವಕ. .
ಪತ್ನಿ, ಸೊಸೆ, ಕಿರಿಸೊಸೆ, ವೈನಿ;
ಹೊಸ ಸಂಬಂಧಗಳು,ಹೊಸ ಪಾತ್ರಗಳು
ತನ್ಮಯತೆಯಲ್ಲಿ ಸಾಕಾರಗೊಳಿಸಲಿಹೆ. . .
ಆದರೆ ಅನಿಸಿದರೆ ನಿನಗೆ ಯಾವಾಗಲಾದರೂ
ಚಿಕ್ಕ ಹುಡುಗಿಯಾಗಬೇಕು ಮೊದಲಿನಂತೆ,
ಬಾ ಇಲ್ಲಿ, ಇದು ನಿನ್ನದೇ ಮನೆ !

ಒಂದು ಹೊಸ ವಿಶ್ವ ನಿನಗೆ ಮಾಡುತಿದೆ ಸನ್ನೆ,
ಹೊಸ ಆಹ್ವಾನಗಳಿವೆ ಅಲ್ಲಿ,
ಸಂತಸದಿ, ಪರಿಶ್ರಮದಿ ಅರಳಿದ ಹೂದೋಟಗಳು !!
ಆ ಹೊಸ ಕ್ಷಿತಿಜದತ್ತ ಸಾಗುವಾಗ ದಣಿದು
ವಿರಮಿಸಬೇಕೆನಿಸುತ್ತದೆಯೆ ಒಂದು ಕ್ಷಣ?
ತಾಯ ಮಡಿಲಲ್ಲಿ?
ಬಾ ಇಲ್ಲಿ, ಇದು ನಿನ್ನದೇ ಮನೆ !

ನೀನಿಂದು ಒಡತಿ ಬೇರೊಂದು ಹೃದಯಕೆ,
ಪೂರೈಸುವೆ ಅವರ ಆಶೆ, ಆಕಾಂಕ್ಷೆ, ಹಠ, ಅಪೇಕ್ಷೆಗಳ
ಎಲ್ಲರ ಮನೋಕಾಮನೆಗಳ, ಕರ್ತವ್ಯಗಳ ಪೂರ್ತಿಗೊಳಿಸುತ
ಅನಿಸಬಹುದಲ್ಲವೆ ನಿನಗೂ
ಹಠ ಮಾಡಬೇಕೆಂದು ಸ್ವಲ್ಪ?
ಬಾ ಆಗ, ಇದು ನಿನ್ನದೇ ಮನೆ !

ಹಾಯಾಗಿ ಹಾರಾಡುವಿ ದೇಶ ವಿದೇಶಗಳ,
ಸವಿಯುತ್ತ ಪಂಚತಾರಾ ಹೊಸ ರುಚಿಗಳ.
ಎಂದಾದರೂ ಅನಿಸಿದರೆ ನಿನಗೆ ಉಣಬೇಕೆಂದು
ಯಾರಾದರೂ ಕಲಿಸಿಕೊಟ್ಟ ಕೈಬುತ್ತಿಯನ್ನು
ಬಾ ಇಲ್ಲಿ, ಇದು ನಿನ್ನದೇ ಮನೆ !

ಹೊಸ ಮನೆಯ ಹೊಚ್ಚಲಲಿ ಪಡಿಯನ್ನು ಚಿಮ್ಮುತ್ತ
ಹೆಜ್ಜೆಯನು ಇಡುವಾಗ ಒಳಗೆ,
ನೆನಪಿಟ್ಟುಕೊ, ಇಲ್ಲಿದೆ ಒಂದು ಹಳೆಯ ಮನೆ
ತನ್ನ ಕಣ್ಣುಗಳ ಅನವರತ
ನಿನ್ನದೇ ದಾರಿಯಲಿ ನೆಟ್ಟು!
‌‌‌‌‌‌‌‌‌‌^^^^^^^^^^^^^^^^^^^^^^^^^^^^^^^^^^^
ಮೂಲ ಲೇಖಕಿ: ಶ್ರೀಮತಿ ಸುಶೀಲಾ ಬಾಪಟ
ಭಾವಾನುವಾದ: ಶ್ರೀಮತಿ ರಾಧಾ ಶ್ಯಾಮರಾವ ಫಡನೀಸ
^^^^^^^^^^^^^^^^^^^^^^^^^^^^^^^^^^^^^^

Friday, August 6, 2010

ಜಗನ್ನಾಥ ಪಂಡಿತ…………ಗಂಗಾಲಹರಿ

ಬೇಂದ್ರೆಯವರು ಕಾಶಿ ಕ್ಷೇತ್ರಕ್ಕೆ ಹೋದಾಗ, ಗಂಗಾನದಿಯಲ್ಲಿ ಪುಣ್ಯಸ್ನಾನ ಮಾಡಿದ ಬಳಿಕ ‘ಗಂಗಾಷ್ಟಕ’ ಎನ್ನುವ ಕವನವನ್ನು ರಚಿಸಿದರು. ಆ ಕವನದಲ್ಲಿಯ ಒಂದು ನುಡಿ ಹೀಗಿದೆ:

‘ರಾಜರಮಣಿಯರೆದೆಗೆ ಬೆಳಗಿನಲ್ಲುಳಿದಂಥ ಕಸ್ತೂರಿ ಬಿದ್ದು ಕೆಳಕೆ
ಮೈತೊಳೆದ ನೀರಿನೊಡ ಗಂಗೆಯಲಿ ಕೂಡಿದರೆ ಮುಕ್ತಿ ಕಸ್ತೂರಿ ಮೃಗಕೆ’
 ---ಹೀಗೆ ಹಾಡಿದ ಕವಿಯ ನಂಬಿ ನಿನ್ನಲ್ಲಿ ಮಿಂದೆ; ನಾನವನ ಬಟ್ಟೆಯವನು
ನನ್ನ ತಾಯಿಗೆ ಮುಕ್ತಿ ಮಿಂದಂದೆಯಾಗಿತ್ತು; ನಾನವಳ ಹೊಟ್ಟೆಯವನು.

ಈ ನುಡಿಯ ಮೊದಲೆರಡು ಸಾಲುಗಳು ಕವಿ ಜಗನ್ನಾಥ ಪಂಡಿತನ ‘ಗಂಗಾಲಹರಿ’ ಕಾವ್ಯದಿಂದ ಎತ್ತಿಕೊಂಡದ್ದು. ಸಂಸ್ಕೃತ ಕಾವ್ಯದ ಮೂಲಸಾಲುಗಳು ಹೀಗಿವೆ:

“ಪ್ರಭಾತೇ ಸ್ನಾಂತೀನಾಂ ನೃಪತಿ-ರಮಣೀನಾಂ ಕುಚತಟೀ-
ಗತೋ ಯಾವನ್ ಮಾತರ್ ಮಿಲತಿ ತವ ತೋಯೈರ್ಮೃಗಮದ:
ಮೃಗಾಸ್ತಾವದ್ ವೈಮಾನಿಕ ಶತಸಹಸ್ರೈಃ ಪರಿವೃತಾಃ
ವಿಶಂತಿ ಸ್ವಚ್ಛಂದಂ ವಿಮಲವಪುಷೋ ನಂದನವನಮ್”

ಈ ನುಡಿಯ ಭಾವಾರ್ಥ ಹೀಗಿದೆ:
ರಾಜಸ್ತ್ರೀಯರು ಸುಗಂಧಕ್ಕಾಗಿ ಕಸ್ತೂರಿ ಮೃಗದ ಮದವನ್ನು ಪೂಸಿಕೊಂಡಿರುತ್ತಾರೆ. ಬೆಳಗಿನಲ್ಲಿ ಆ ಸ್ತ್ರೀಯರು ಗಂಗಾಸ್ನಾನವನ್ನು ಮಾಡಿದಾಗ ಈ ಮದವು ಗಂಗಾನದಿಯ ನೀರಿನಲ್ಲಿ ಸೇರಿಕೊಳ್ಳುತ್ತದೆ.ಈ ಮದವನ್ನು ನೀಡಿದ ಕಸ್ತೂರಿ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಗಲು ಇಷ್ಟೇ ಸಾಕು. ಅದು ವಿಮಲದೇಹದೊಂದಿಗೆ ನಂದನವನದಲ್ಲಿ ವಿಹರಿಸುತ್ತದೆ.

ಬೇಂದ್ರೆಯವರು ತಾವೂ ಸಹ ಕವಿಯಾದುದರಿಂದ, ಜಗನ್ನಾಥ ಪಂಡಿತನ ಕಾವ್ಯದ ಅಭಿಮಾನಿಯಾದುದರಿಂದ, ಏಕಲವ್ಯನಂತೆ ಅವನ ಮಾನಸಿಕ ಶಿಷ್ಯರಾದದ್ದರಿಂದ, ’ನಾನವನ ಬಟ್ಟೆಯವನು’ ಎಂದು ಹೇಳುತ್ತಾರೆ. ಬಟ್ಟೆ ಎಂದರೆ ಮಾರ್ಗ, ಪಥ ಎಂದರ್ಥ. ಕವಿ ಜಗನ್ನಾಥ ನಡೆದ ಹಾದಿಯಲ್ಲಿ ನಡೆದೇ ಬೇಂದ್ರೆಯವರು ‘ಗಂಗಾವತರಣ’ ರಚಿಸಿದರು.

ಕಸ್ತೂರಿ ಮೃಗದಿಂದ ಹುಟ್ಟಿದ ಮದವು ಗಂಗೆಯಲ್ಲಿ ಸೇರಿದಾಗ, ಆ ಮೃಗಕ್ಕೆ ಸ್ವರ್ಗಪ್ರಾಪ್ತಿಯಾಯಿತು ಎಂದು ಜಗನ್ನಾಥ ಪಂಡಿತ ಕವನಿಸಿದ್ದಾನೆ. ಅದೇ ರೀತಿಯಲ್ಲಿ, ತಾವು ಗಂಗೆಯಲ್ಲಿ ಮಿಂದದ್ದರಿಂದ, ತಮ್ಮ ತಾಯಿಗೂ ಸ್ವರ್ಗಪ್ರಾಪ್ತಿಯಾಗಬೇಕು ಎನ್ನುವದು ಬೇಂದ್ರೆಯವರ ಆಶಯ.

ಬೇಂದ್ರೆಯವರಿಗೆ ಈ ರೀತಿ ಸ್ಫೂರ್ತಿ ನೀಡಿದ ಜಗನ್ನಾಥ ಪಂಡಿತನು ಸಂಸ್ಕೃತದ ಉದ್ದಾಮ ಪಂಡಿತ ಹಾಗು ಕವಿ. ಈತನು ಮೊಗಲ ಬಾದಶಹರಾದ ಜಹಾಂಗೀರ, ಶಹಾಜಹಾನ ಹಾಗು ಔರಂಗಜೇಬ ಇವರ ಕಾಲದಲ್ಲಿ ಜೀವಿಸಿದ್ದನು.

ಜಗನ್ನಾಥನ ಹುಟ್ಟೂರು ಆಂಧ್ರಪ್ರದೇಶದ ವೆಂಗಿನಾಡು. ತಾಯಿ ಲಕ್ಷ್ಮೀ ಹಾಗು ತಂದೆ ಪೇರುಭಟ್ಟ. ತಂದೆಯಿಂದಲೇ ಶಿಕ್ಷಣ ಪಡೆದ ಈತನು ತನ್ನ ಅಪ್ರತಿಮ ಪಾಂಡಿತ್ಯದಿಂದ ಅನೇಕ ವಿದ್ವಾಂಸರನ್ನು ವಾದದಲ್ಲಿ ಜಯಿಸಿದ. ಇವನೊಡನೆ ವಾದಿಸಲು ಯಾರೂ ಮುಂದಾಗದಿರಲು, ‘ನಖಾನಾಂ ಪಾಂಡಿತ್ಯಂ ಪ್ರಕಟಯತು ಕಸ್ಮಿನ್?’ ಎಂದು ಅಬ್ಬರಿಸಿದ. ಸಿಂಹದ ಶೌರ್ಯವಿರುವದು ಅದರ ನಖ(=ಉಗುರು)ಗಳಲ್ಲಿ. ತಾನೂ ಸಹ ಆ ಸಿಂಹದಂತೆ;  ಇತರ ವಿದ್ವಾಂಸರನ್ನು ಸಿಗಿದು ಹಾಕುವ ಈತನ ಪಾಂಡಿತ್ಯಕ್ಕೆ ಈಗ ಬಲಿಯೇ ಸಿಗುತ್ತಿಲ್ಲವಲ್ಲ ಎನ್ನುವದು ಈ ಗರ್ಜನೆಯ ತಾತ್ಪರ್ಯ. ಜಗನ್ನಾಥನು ಅನೇಕ ಪ್ರಾಚೀನ ವಿದ್ವಾಂಸರ ಶಾಸ್ತ್ರೀಯ ಸಿದ್ಧಾಂತಗಳನ್ನು ಖಂಡಿಸಿ ಉದ್ಗ್ರಂಥಗಳನು ರಚಿಸಿದ. `ಸಿದ್ಧಾಂತ ಕೌಮುದೀ’ ಎನ್ನುವ ಗ್ರಂಥಕ್ಕೆ ಭಟ್ಟೋಜಿ ದೀಕ್ಷಿತರು ಬರೆದ ‘ಮನೋರಮಾ’ ಎನ್ನುವ ವ್ಯಾಖ್ಯಾನಗ್ರಂಥಕ್ಕೆ ಪ್ರತಿಯಾಗಿ ‘ಮನೋರಮಾ ಕುಚಮರ್ದಿನೀ’ ಎನ್ನುವ ಗ್ರಂಥರಚನೆಯನ್ನು ಈತ ಮಾಡಿದ್ದನ್ನು ನೋಡಿದರೆ, ಈತನ ಉದ್ಧಟ ಪಾಂಡಿತ್ಯದ ಅರಿವಾಗದಿರದು.

ಏನಾದರೇನು, ಈತನ ದಾರಿದ್ರ್ಯ ಮಾತ್ರ ಹಿಂಗಲಿಲ್ಲ. ಆದುದರಿಂದ ಜಗನ್ನಾಥನು ರಜಪುತಾನಾದಲ್ಲಿರುವ ಜಯಪುರಕ್ಕೆ ಬಂದು, ಅಲ್ಲಿಯ ರಾಜನ ಆಶ್ರಯದಲ್ಲಿ ನೆಲೆ ನಿಂತ. ಜಯಪುರದಲ್ಲಿ ಓರ್ವ ಮುಸಲ್ಮಾನ ಧರ್ಮಗುರು ಅಲ್ಲಿಯ ಹಿಂದೂ ಪಂಡಿತರನ್ನೆಲ್ಲ ವಾದದಲ್ಲಿ ಸೋಲಿಸಿದ್ದ. ಜಗನ್ನಾಥನು ಅರಬ್ಬಿ ಭಾಷೆಯನ್ನು ಅಭ್ಯಾಸ ಮಾಡಿ ಆ ಯವನ ಪಂಡಿತನೊಡನೆ ವಾದಗೈದು, ಆತನನ್ನು ಸೋಲಿಸಿದ ಬಳಿಕ, ಈತನ ಕೀರ್ತಿಯು ದಿಲ್ಲಿಯವರೆಗೂ ಹಬ್ಬಿತು. ಆ ಸಮಯದಲ್ಲಿ ದಿಲ್ಲಿಯ ಬಾದಶಹನಾದ ಜಹಾಂಗೀರನ ಆಮಂತ್ರಣದ ಮೇರೆಗೆ ಜಗನ್ನಾಥನು ದಿಲ್ಲಿಯ ದರಬಾರಿಗೆ ತೆರಳಿ, ಅಲ್ಪ ಸಮಯದಲ್ಲಿಯೇ ಬಾದಶಹನಿಗೆ ಆಪ್ತನಾದ. ಜಹಾಂಗೀರನ ನಿಧನದ ನಂತರ ಬಾದಶಹನಾದ ಶಹಾಜಹಾನನಿಗೂ ಸಹ ಜಗನ್ನಾಥನು  ಆಪ್ತಮಿತ್ರನೇ ಆಗಿದ್ದ. ಜಗನ್ನಾಥನ ಕಾವ್ಯಪಾಂಡಿತ್ಯವನ್ನು ಮೆಚ್ಚಿದ ಶಹಾಜಹಾನನು ಈತನಿಗೆ ‘ಕವೀಶ್ವರ’ ಎನ್ನುವ ಬಿರುದನ್ನು ನೀಡಿದ್ದ.

ಜಗನ್ನಾಥ ಪಂಡಿತ ಹಾಗು ಶಹಾಜಹಾನರು ರಾಜಮಂದಿರದಲ್ಲಿ ಒಮ್ಮೆ ಚದುರಂಗವಾಡುತ್ತ ಕುಳಿತಿದ್ದರು. ಆ ಸಮಯದಲ್ಲಿ ನೀರಡಿಸಿದ ಬಾದಶಹನಿಗೆ, ಓರ್ವ ತರುಣಿ ಚಿನ್ನದ ಹೂಜೆಯಲ್ಲಿ ನೀರು ನೀಡಿದಳು. ಆಟವಾಡುವ ಬದಲು, ಅವಳನ್ನೇ ನೋಡುತ್ತಲಿದ್ದ ಜಗನ್ನಾಥನಿಗೆ ಬಾದಶಹನು ಆ ತರುಣಿಯನ್ನು ವರ್ಣಿಸುವೆಯಾ ಎಂದು ತುಂಟಾಟದಲ್ಲಿ ಕೇಳಿದ. ಜಗನ್ನಾಥನು ಥಟ್ಟನೇ ನುಡಿದ ಆ  ಕವನವು ಹೀಗಿದೆ:

“ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ
ಕುಸುಂಭಾರುಣಂ ಚಾರು ಚೇಲಂ ವಸಾನಾ
ಸಮಸ್ತಸ್ಯ ಲೋಕಸ್ಯ ಚೇತಃಪ್ರವೃತ್ತೀಮ್
ಗೃಹೀತ್ವಾ ಘುಟೇ ವಿನ್ಯಸ್ಯ ಯಾತೀವ ಭಾತಿ”

(ಅರುಣವರ್ಣದ ಬಟ್ಟೆಯನ್ನುಟ್ಟ, ತಲೆಯ ಮೆಲೆ ಕಳಶವನ್ನು ಹೊತ್ತ, ಈ ಪೀನಪಯೋಧರಿಯು ಸಮಸ್ತ ಲೋಕದ ಚೈತನ್ಯವನ್ನೇ ಹೊತ್ತು ತರುತ್ತಿರುವಂತೆ ಹೊಳೆಯುತ್ತಿದ್ದಾಳೆ.)

ಈ ವರ್ಣನೆಯನ್ನು ಕೇಳಿದ ಶಹಾಜಹಾನನು ಸಂತೋಷಗೊಂಡು ಕವಿಗೆ ಬಹುಮಾನ ಕೊಡಬಯಸಿದ. ಅವರೀರ್ವರ ನಡುವೆ ಆಗ ನಡೆದ ಸಂಭಾಷಣೆ ತುಂಬ ಸ್ವಾರಸ್ಯಕರವಾಗಿದೆ:
ಶಹಾಜಹಾನ:   ಕವೀಶ್ವರ, ನನ್ನ ಅರಮನೆಯ ಆನೆಗಳನ್ನೆಲ್ಲ ನಿನಗೆ ಸಮ್ಮಾನವಾಗಿ ಕೊಡುತ್ತೇನೆ.
ಜಗನ್ನಾಥ:      ‘ನ ಯಾಚೇ ಗಜಾಲೀಂ’ (ನನಗೆ ಆನೆಗಳ ಹಿಂಡು ಬೇಡ.)
ಶಹಾಜಹಾನ:    ನನ್ನ ಎಲ್ಲ ಕುದುರೆಗಳನ್ನು ನಿನಗೆ ಕೊಡುವೆ.
ಜಗನ್ನಾಥ:      ‘ನ ವಾ ವಾಜಿರಾಜೀಂ’ (ಕುದುರೆಗಳೂ ಬೇಡ.)
ಶಹಾಜಹಾನ:    ದಿಲ್ಲೀಶ್ವರನ ಸಕಲ ಸಂಪತ್ತನ್ನೇ ನಿನಗೆ ಕೊಡಲೆ?
ಜಗನ್ನಾಥ:      ‘ನ ವಿತ್ತೇಷು ಚಿತ್ತಂ ಮದೀಯಂ ಕದಾಪಿ’  
                 (ಸಂಪತ್ತನ್ನು ನಾನು ಎಂದೂ ಬಯಸುವದಿಲ್ಲ.)
ಶಹಾಜಹಾನ:    ಹಾಗಾದರೆ ನಿನಗೆ ಬೇಕಾದುದಾದರೂ ಏನು?
ಜಗನ್ನಾಥ:       ‘ಇಯಂ ಸುಸ್ತನೀ ಮಸ್ತಕನ್ಯಸ್ತಕುಂಭಾ’  (ಈ ಚೆಲುವೆ!)
ಶಹಾಜಹಾನ:    ‘ಅವಳು ನನ್ನ ಮಗಳು*, ‘ಲವಂಗಿ’!  (*ದಾಸೀಪುತ್ರಿ)
ಜಗನ್ನಾಥ:       ‘ಲವಂಗೀ ಕುರಂಗೀ ದೃಗಂಗೀಕರೋತು’  (ಈ ಚೆಲುವೆ ಲವಂಗಿ ನನ್ನವಳಾಗಬೇಕು.)

ಶಹಾಜಹನನು ಈ ಮದುವೆಯಿಂದ ಜಗನ್ನಾಥನಿಗೆ ಆಗಬಹುದಾದ ಸಮಸ್ಯೆಗಳ ಕಡೆಗೆ ಅವನ ಗಮನವನ್ನು ಸೆಳೆದ. ಆದರೆ ಜಗನ್ನಾಥನ ಬಯಕೆ ದೃಢವಾಗಿತ್ತು. ಜಗನ್ನಾಥ ಅರಮನೆಯ ಅಳಿಯನಾದ.

‘ಬೆಚ್ಚನಾ ಅರಮನೆಯು, ವೆಚ್ಚಕ್ಕೆ ಬಲು ಹೊನ್ನು
ಇಚ್ಚೆಯಾನರಿವ ಲವಂಗಿ ತಾ ಇರಲು
ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಜಗನ್ನಾಥ!’

ಜಗನ್ನಾಥನ ಆಶ್ರಯದಾತ ಶಹಾಜಹಾನನನ್ನು ಆತನ ಮಗ ಔರಂಗಜೇಬನು ಬಂಧಿಸಿ ಆಗ್ರಾದಲ್ಲಿ ಸೆರೆಯಲ್ಲಿಟ್ಟ ಬಳಿಕ, ಜಗನ್ನಾಥನು ಅರಮನೆಯನ್ನು ತೊರೆದು ಅಲೆಯಬೇಕಾಯಿತು. ಲವಂಗಿಯು ಬೇಕಾದರೆ ರಾಜಕುಟುಂಬದವರ ಜೊತೆಗೇ ಉಳಿಯಬಹುದೆಂದು ಜಗನ್ನಾಥನು ಹೇಳಿದರೂ ಸಹ ಅವಳು ತನ್ನ ಪತಿಯನ್ನೇ ಅನುಸರಿಸಿದಳು. ಜಗನ್ನಾಥನು ಅಲ್ಲಿಂದ ಕಾಮರೂಪಕ್ಕೆ (ಇಂದಿನ ಅಸ್ಸಾಮ) ತೆರಳಿ, ಅಲ್ಲಿಯ ರಾಜನಾದ ಪ್ರಾಣನಾರಾಯಣನ ಆಶ್ರಯ ಪಡೆದ. ಔರಂಗಜೇಬನು ಕಾಮರೂಪವನ್ನೂ ಆಕ್ರಮಿಸಿದ್ದರಿಂದ, ಜಗನ್ನಾಥನದು ಮತ್ತೆ ಅಲೆಮಾರಿ ಜೀವನವಾಯಿತು.

ತನ್ನ ಯೌವನದಲ್ಲಿ ಪಂಡಿತಕುಲವನ್ನೆಲ್ಲ ಚಂಡಾಡಿದ, ಮುಸ್ಲಿಮ್ ದೊರೆಯ ಆಶ್ರಯದಲ್ಲಿದ್ದು ಮುಸ್ಲಿಮ್ ಯುವತಿಯನ್ನು ಮದುವೆಯಾದ ಜಗನ್ನಾಥ ಪಂಡಿತನಿಗೆ ಹಿಂದು ಧರ್ಮೀಯರಿಂದ ಬಹಿಷ್ಕಾರ ಶಿಕ್ಷೆ ಪ್ರಾಪ್ತವಾಯಿತು.

ಜಗನ್ನಾಥನಿಗೆ ಹಾಗು ಲವಂಗಿಗೆ ಈಗ ನಿಲ್ಲಲು ನೆರಳಿಲ್ಲ, ಬಾಯಾರಿಕೆ ತೀರಿಸಲು ಒಂದು ಬೊಗಸೆ ನೀರು ಸಹ ದೊರೆಯಲಿಲ್ಲ. ವ್ಯರ್ಥ ಅಲೆದಾಟದಿಂದ ಬಳಲಿದ ಗಂಡ ಹೆಂಡಿರು ಕಾಶಿಯಲ್ಲಿಯ ಗಂಗಾ ಘಾಟಿಗೆ ಬಂದು ಅಲ್ಲಿಯೇ ಸೋಪಾನದ ಮೇಲೆ ಮಲಗಿಕೊಂಡರು.

ಕಾಶಿಯಲ್ಲಿ ಅರುಣೋದಯದ ಸಮಯ. ಗಂಗಾಸ್ನಾನಕ್ಕಾಗಿ ಜನ ಬರುತ್ತಿದ್ದಾರೆ. ಕಾಶಿಯ ಪಂಡಿತಚಕ್ರವರ್ತಿಗಳಾದ, ಆಧ್ಯಾತ್ಮಗುರುಗಳಾದ ಅಪ್ಪಯ್ಯ ದೀಕ್ಷಿತರು ಸ್ನಾನ ಪೂರೈಸಿ ಬರುತ್ತಿದ್ದಾಗ, ಒಂದು ಸೋಪಾನದ ಮೇಲೆ ಹರಕು ಬಟ್ಟೆಯನ್ನೆ ಹೊದ್ದುಕೊಂಡು ನಿರ್ಲಜ್ಜರಂತೆ ಮಲಗಿದ ದಂಪತಿಯನ್ನು ನೋಡಿದರು. ಆ ಹರಕು ಬಟ್ಟೆಯೊಳಗಿಂದ ಕಂಡ ಬಿಳಿ ಕೂದಲಿನ ಪೊದೆ ಅವರನ್ನು ಮತ್ತಿಷ್ಟು ಕೋಪಗೊಳಿಸಿತು. ಆ ದಂಪತಿಯತ್ತ ತಾತ್ಸಾರದ ದನಿಯಲ್ಲಿ ದೀಕ್ಷಿತರು ಗುಡುಗಿದರು:
‘ಕಿಂ ನಿಃಶಂಕಂ ಶೇಷೇ ಶೇಷೇ ವಯಸಿ ತ್ವಮಾಗತೇ ಮೃತ್ಯೌ’
(ಇದೇನು, ಮರಣ ಸಮೀಪಿಸಿರುವ ಈ ಇಳಿ ವಯಸ್ಸಿನಲ್ಲಿ ನಿರ್ಲಜ್ಜೆಯಿಂದ ಮಲಗಿರುವಿರಲ್ಲ?)  

ಮಲಗಿಕೊಂಡಾತ ಮುಸುಕು ಸರಿಸಿದ. ಅಪ್ಪಯ್ಯ ದೀಕ್ಷಿತರು ತಬ್ಬಿಬ್ಬಾದರು. ತಮ್ಮ ಗ್ರಂಥಗಳನ್ನೆಲ್ಲ ಖಂಡಿಸಿ ಒಗೆದ, ತಮ್ಮ ಪರಮ ವಿರೋಧಿ ಜಗನ್ನಾಥ! ತೊದಲುತ್ತಲೇ ದೀಕ್ಷಿತರು ಮತ್ತೆ ನುಡಿದರು:
‘ಅಥವಾ ಸುಖಂ ಶಯೀಥಾ: ತವ ನಿಕಟೇ ಜಾಗರ್ತಿ ಜಾಹ್ನವೀ ಜನನೀ.’
( ಸರಿ ಸರಿ, ಸುಖವಾಗಿ ಮಲಗಿಕೊಳ್ಳಪ್ಪ; ನಿನ್ನ ಪಕ್ಕದಲ್ಲಿ ತಾಯಿ ಗಂಗಾದೇವಿ ಎಚ್ಚತ್ತೇ ಇದ್ದಾಳೆ.)

ಜಗನ್ನಾಥ ಪಂಡಿತನ ಪಾಲಿಗೆ ಇದು ಎಚ್ಚರಿಕೆಯ ಗಂಟೆಯಾಯಿತು. ತನ್ನ ಬಾಳಿನ ಕಲ್ಮಶಗಳನ್ನು ತೊಳೆಯಲು ಗಂಗಾದೇವಿಯೇ ಸಮರ್ಥಳೆಂದು ಭಾವಿಸಿದ ಜಗನ್ನಾಥ ಲವಂಗಿಯೊಡನೆ ಜಲಸಮಾಧಿಗೆ ಸಿದ್ಧನಾಗಿ, ಸೋಪಾನಗಳನ್ನು ಇಳಿಯತೊಡಗಿದ. ಆದರೆ ಸ್ನಾನಕ್ಕೆ ಬಂದಂತಹ ಅಲ್ಲಿಯ ಧರ್ಮನಿಷ್ಠರು ಈ ಪಾಖಂಡಿಯನ್ನು ಗಂಗಾಸ್ನಾನಕ್ಕೆ ಬರದಂತೆ ಪ್ರತಿಬಂಧಿಸಿದರು.

ಹತಾಶನಾದ ಜಗನ್ನಾಥ ನಿಂತಲ್ಲಿಯೇ ನಿಂತುಕೊಂಡು ಗಂಗಾದೇವಿಯ ಪ್ರಾರ್ಥನೆ ಮಾಡತೊಡಗಿದ. ಅದೇ ಜಗನ್ನಾಥನ ಪ್ರಸಿದ್ಧ ಕಾವ್ಯ:‘ಗಂಗಾಲಹರಿ’. ಇಲ್ಲಿಯವರೆಗೂ ಪಾಂಡಿತ್ಯದ ಕಾವ್ಯವನ್ನು ಸೃಷ್ಟಿಸಿದ್ದ ಜಗನ್ನಾಥ ಪಂಡಿತ, ಇದೀಗ ತನ್ನೆಲ್ಲ ಹಮ್ಮನ್ನು ತೊರೆದು, ಆರ್ತನಾಗಿ ಗಂಗಾದೇವಿಯನ್ನು ಭಕ್ತಿಯಿಂದ ಕೂಗಿ ಕರೆದ. ಇವನ ಒಂದೊಂದು ಶ್ಲೋಕಕ್ಕೂ ಒಂದೊಂದು ಮೆಟ್ಟಿಲೇರಿದ ಗಂಗೆ ಕೊನೆಯ ಅಂದರೆ ಐವತ್ತೆರಡನೆಯ ಶ್ಲೋಕಕ್ಕೆ ಇವನನ್ನು ಹಾಗು ಲವಂಗಿಯನ್ನು ತನ್ನಲ್ಲಿ ಸೆಳೆದುಕೊಂಡೊಯ್ದಳು. ಇದು ದಂತಕಥೆ ಇರಬಹುದು. ವಾಸ್ತವದಲ್ಲಿ ಗಂಗಾಪ್ರಾರ್ಥನೆಯ  ನಂತರ ಜಗನ್ನಾಥನು ಲವಂಗಿಯೊಡನೆ ಗಂಗೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದು. ಒಟ್ಟಿನಲ್ಲಿ  ಹೀಗಿದೆ ಒಬ್ಬ ಉದ್ದಾಮ ಕವೀಶ್ವರ ಹಾಗು ಉದ್ಧಟ ಪಂಡಿತರಾಜನ ಜೀವನಕಥೆ!

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯನ್ನು ಕನ್ನಡಕ್ಕೆ ತಂದವರು ಉಭಯಭಾಷಾ ವಿದ್ವಾಂಸರೂ, ಲೇಖಕರೂ ಆದ  ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರು.
ಮೂಲದ ಸಂಸ್ಕೃತ ಸೊಬಗನ್ನು ಕನ್ನಡಕ್ಕೆ ತರುವದರಲ್ಲಿ ಆಚಾರ್ಯರು ಯಶಸ್ವಿಯಾಗಿದ್ದಾರೆ. ಇದೇ ಪುಸ್ತಕದಲ್ಲಿ ಜಗನ್ನಾಥನ ಜೀವನಗಾಥೆಯನ್ನೂ ಸಹ ಅವರು ಬರೆದಿದ್ದಾರೆ. ಅದರ ಸಂಕ್ಷಿಪ್ತ ಅವತರಣಿಕೆಯನ್ನೇ ನಾನು ಮೇಲೆ ಕೊಟ್ಟಿದ್ದೇನೆ.

ಜಗನ್ನಾಥ ಪಂಡಿತನ ಸಂಸ್ಕೃತ ಗಂಗಾಲಹರಿಯ ಮೊದಲ ನುಡಿಯನ್ನು ಹಾಗು ಶ್ರೀ ಪಂಢರಿನಾಥಾಚಾರ್ಯ ಗಲಗಲಿಯವರ ಅನುವಾದವನ್ನು ಓದುಗರ ಅವಗಾಹನೆಗಾಗಿ ಕೆಳಗೆ ಕೊಡುತ್ತಿದ್ದೇನೆ:

ಮೂಲ:
ಸಮೃದ್ಧಂ ಸೌಭಾಗ್ಯಂ ಸಕಲ ವಸುಧಾಯಾ: ಕಿಮಪಿ ತನ್
ಮಹೈಶ್ವರ್ಯಂ ಲೀಲಾಜನಿತ ಜಗತಃ ಖಂಡಪರಶೋ:
ಶ್ರುತೀನಾಂ ಸರ್ವಸ್ವಂ ಸುಕೃತಮಥ ಮೂರ್ತಂ ಸುಮನಸಾಂ
ಸುಧಾಸೌಂದರ್ಯಂ ತೇ ಸಲಿಲಮಶಿವಂ ನಃ ಶಮಯತು.

ಅನುವಾದ:
ಜಗದ ಭಾಗ್ಯ, ಜನಕೆಲ್ಲ ಭೋಗ್ಯ, ಸೌಭಾಗ್ಯಪೂರ್ಣ ಸಿರಿಯು
ಲೀಲೆಯಿಂದ ಜಗಜನಿಪ ಶಿವನ ಐಸಿರಿಯು ದಿವ್ಯ ತೊರೆಯು
ವೇದಸಾರ ಸರ್ವಸ್ವ ದೇವಕುಲ ಪುಣ್ಯ ಮೂರ್ತಿಮಂತ
ಅಮೃತಕಾಂತಿ ಸವಿ ಸಲಿಲ ಸವೆಸಲಿದು ಅಶುಭಗಳನನಂತ.

‘ಗಂಗಾಲಹರಿ’ ಕಾವ್ಯವು ಗಂಗಾನದಿಯ ಪ್ರವಾಹದಂತೆಯೇ ಭೋರ್ಗರೆದಿದೆ. ಗಂಗಾಮಾತೆಯೇ ಕಾವ್ಯರೂಪ ತಾಳಿ ಗಂಗಾಲಹರಿಯಾಗಿದ್ದಾಳೆ ಎಂದರೆ ತಪ್ಪಾಗಲಿಕ್ಕಿಲ್ಲ. ಆದುದರಿಂದ ಗಂಗೆಯಲ್ಲಿ ಮಿಂದ ಅನುಭವವೇ ಗಂಗಾಲಹರಿಯನ್ನು ಓದಿದಾಗ ಸಹ ಆಗುವದು.

ಜಗನ್ನಾಥ ಪಂಡಿತನನ್ನು ಪಾವನಗೊಳಿಸಿದ ತಾಯಿ ಗಂಗೆ, ಗಂಗಾಲಹರಿಯ ಮೂಲಕ ನಮ್ಮನ್ನೂ ಅನುಗ್ರಹಿಸಲಿ.

Monday, August 2, 2010

ಕರಿಯ ಸಾಹೇಬರು

೧೮೩೫ರಲ್ಲಿ ಬ್ರಿಟನ್ನಿನ ಮೆಕಾಲೆ ಸಾಹೇಬರು ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಕಂಡ ಕನಸುಹೀಗಿದೆ:

It is impossible for us, with our limited means, to attempt to educate the body of the people. We must at present do our best to form a class who may be interpreters between us and the millions whom we govern; a class of persons, Indian in blood and colour, but English in taste, in opinions, in morals, and in intellect. To that class we may leave it to refine the vernacular dialects of the country, to enrich those dialects with terms of science borrowed from the Western nomenclature, and to render them by degrees fit vehicles for conveying knowledge to the great mass of the population.
(-Minute on Indian Education)

ಹಿಂದುಸ್ತಾನವೆನ್ನುವ ತಮ್ಮ ವಸಾಹತುವಿನ ಬಗೆಗೆ ಬ್ರಿಟಿಶರಿಗೆ ಕೀಳು ಅಭಿಪ್ರಾಯವಿರುವದು ಸಹಜವೇ ಆಗಿದೆ. ಹೀಗಾಗಿ ಮೆಕಾಲೆ ಸಾಹೇಬರು ಹಿಂದುಸ್ತಾನದಲ್ಲಿ ‘ಕರಿಯ ಸಾಹೇಬ’ರನ್ನು ಹುಟ್ಟುಹಾಕಿ, ಈ ವಸಾಹತುವಿನ ಉದ್ಧಾರ ಮಾಡಬೇಕೆಂದು ಚಿಂತಿಸಿದ್ದರೆ, ಅದರಲ್ಲಿ ತಪ್ಪೇನೂ ಇರಲಿಕ್ಕಿಲ್ಲ. ಬ್ರಿಟಿಶ್ ಆಳಿಕೆಯಿದ್ದ ಅವಧಿಯಲ್ಲಿ, ಅನೇಕ ಹಿಂದುಸ್ತಾನಿಗಳೂ ಇದೇ ಅಭಿಪ್ರಾಯದವರು ಇದ್ದಿದ್ದಾರು.

ಕಾಲಾಂತರದಲ್ಲಿ ಬ್ರಿಟಿಶರಿಗೆ ತಮ್ಮ ತಪ್ಪು ಕಲ್ಪನೆಯ ಅರಿವಾಗಿರಬಹುದು. ಭಾರತೀಯ ಸಂಸ್ಕೃತಿಯ ಉದಾತ್ತ ಪ್ರತೀಕರಾದ ಸ್ವಾಮಿ ವಿವೇಕಾನಂದ, ಭಾರತೀಯ ಭಾಷೆ ಹಾಗು ಸಾಹಿತ್ಯದ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿದ ಕವಿ ರವೀಂದ್ರನಾಥ ಠಾಕೂರ, ಶ್ರೇಷ್ಠ ವಿಜ್ಞಾನಿ ಜಗದೀಶಚಂದ್ರ ಬೋಸ ಇವರನ್ನಲ್ಲದೆ ಭಾರತಕ್ಕಾಗಿ ಜೀವ ಹಾಗು ಜೀವನವನ್ನೇ ಮುಡುಪಿಟ್ಟ ಚಂದ್ರಶೇಖರ ಆಜಾದ, ಭಗತ್ ಸಿಂಗ, ಲೋಕಮಾನ್ಯ ತಿಲಕ, ಸುಭಾಷಚಂದ್ರ ಬೋಸ, ಮಹಾತ್ಮಾ ಗಾಂಧಿ ಇವರನ್ನೆಲ್ಲ ಕಂಡ ಬ್ರಿಟಿಶರಿಗೆ ಮೆಕಾಲೆಯ ಮೂರ್ಖ ಅಹಂಕಾರದ ಅರಿವಾಗಿರಬಹುದು.

ಆದರೆ ಸ್ವತಂತ್ರ ಭಾರತದಲ್ಲಿಯೇ ಹುಟ್ಟಿದಂತಹ ಅನೇಕ ಭಾರತೀಯರು ಈಗಲೂ ಮೆಕಾಲೆಯ ವಂಶಸ್ಥರಂತೆ ವರ್ತಿಸುತ್ತಿರುವದು ಆಶ್ಚರ್ಯಕರವಾಗಿದೆ. ಈ ಆಂಗ್ಲವ್ಯಾಮೋಹಿಗಳನ್ನು ಕರಿಯ ಸಾಹೇಬರು ಎಂದು ಕರೆಯಬಹುದೆ? ಯಾಕೆಂದರೆ, ಇವರಿಗೆ ಪರದೇಶಿ ಜೀವನಶೈಲಿ, ಪರದೇಶಿ ಭಾಷೆ ಅಂದರೆ ಪ್ರಾಣಪ್ರಿಯ. ತಮ್ಮ ಮಟ್ಟಿಗೆ ಈ ವ್ಯಾಮೋಹ ಸೀಮಿತವಾಗಿದ್ದರೆ, ಇವರನ್ನು ಉದಾಸೀನ ಮಾಡಬಹುದಾಗಿತ್ತು. ಆದರೆ ಇವರು ಪ್ರತಿಭಾವಂತ ವ್ಯಕ್ತಿಗಳು, ಜನರನ್ನು ಪ್ರಭಾವಿಸಬಲ್ಲ ಉದ್ಯಮಗಳಲ್ಲಿ ಅಂದರೆ ಪತ್ರಿಕೋದ್ಯಮದಲ್ಲಿ ಹಾಗು ಇತರ ಸಾರ್ವಜನಿಕ ಮಾಧ್ಯಮ‌ದ ಉದ್ಯಮಗಳ ಉಚ್ಚಸ್ಥಾನಗಳಲ್ಲಿ ಇರುವಂಥವರು.
ಇದು ಭಾರತದ ದುರ್ದೈವವೆನ್ನಬಹುದು.

ಕನ್ನಡದಲ್ಲಿ ಅತಿ ಹೆಚ್ಚಿನ ಪ್ರಸಾರವುಳ್ಳದ್ದೆಂದು ಹೇಳಲಾದ ಸಮಾಚಾರ ಪತ್ರಿಕೆಯೊಂದರ ಸಂಪಾದಕರು ತಮ್ಮ ಪತ್ರಿಕೆಯಲ್ಲಿ ಇತ್ತೀಚೆಗೆ ಲೇಖನವೊಂದನ್ನು ಬರೆದಿದ್ದರು. ವಿದೇಶಗಳಲ್ಲಿ ಪಾಯಖಾನೆಗಳು ಎಷ್ಟು ಸ್ವಚ್ಛ ಹಾಗು ಕಲಾತ್ಮಕವಾಗಿರುತ್ತವೆ; ಅಲ್ಲಿ ಒಳಹೊಕ್ಕರೆ ಹೊರಗೆ ಬರುವ ಮನಸ್ಸೇ ಆಗುವದಿಲ್ಲ ಇತ್ಯಾದಿಯಾಗಿ ವಿದೇಶಿ ಪಾಯಖಾನೆಗಳನ್ನು ವರ್ಣಿಸಿದ್ದರು. ಅಲ್ಲದೆ, ವಿದೇಶೀಯರು ಎಷ್ಟು ಸುಸಂಸ್ಕೃತರಾಗಿದ್ದಾರೆಂದರೆ ಅವರು ತಮ್ಮ ಪಾಯಖಾನೆಗಳಿಗೆ ‘ವಿಶ್ರಾಂತಿಸ್ಥಳ’ ಎಂದು ಕರೆಯುತ್ತಾರೆ ಎಂದು ಅವರನ್ನು ಹೊಗಳಿ ಹೊಗಳಿ ಹೊನ್ನಶೂಲಕ್ಕೆ ಏರಿಸಿದ್ದರು.

ಇಲ್ಲಿ ಮೂರು ಅಂಶಗಳನ್ನು ಗಮನಿಸಬೇಕು:
(೧) ಓರ್ವ ವ್ಯಕ್ತಿಯ ಸುಸಂಸ್ಕೃತ ನಾಗರಿಕತೆ ಕೇವಲ ಅವನ ಪದಸಂಪತ್ತಿನ ಮೇಲೆ ಅವಲಂಬಿತವಾಗುವದಿಲ್ಲ. ಯಹೂದಿಗಳ ಮಾರಣಹೋಮ ಮಾಡಿದ ಹಿಟ್ಲರನ ಪದಕೋಶವೇನು ಕಡಿಮೆಯದಾಗಿತ್ತೆ? ಬಾಂಗ್ಲಾದಲ್ಲಿ ಘೋರ ಅತ್ಯಾಚಾರಕ್ಕೆ ಕಾರಣನಾದ ಝುಲ್ಫಿಕರ ಅಲಿ ಭುಟ್ಟೋನ ಪದಸಂಪತ್ತು ಕಳಪೆಯಾಗಿತ್ತೆ? ಇವರೂ ಸಹ ‘ವಿಶ್ರಾಂತಿಸ್ಥಳ’ಗಳನ್ನು ಬಳಸುವ ದೊಡ್ಡ ನಾಗರಿಕರೇ ಆಗಿದ್ದರು. ಪಾಯಖಾನೆ ಪದವನ್ನು ಬಳಸಿದ ಮಾತ್ರಕ್ಕೆ ಓರ್ವ ವ್ಯಕ್ತಿ ಅಸಂಸ್ಕೃತನಾಗುವದಿಲ್ಲ. ಹಾಗೆ ನೋಡಿದರೆ ಹಿಂದುಸ್ತಾನದ ಅನೇಕ ಬಾದಶಾಹರು ಪಾಯಖಾನೆಗಳನ್ನೇ ಬಳಸುತ್ತಿದ್ದರು. (‘ಪಾಯ’ ಅಂದರೆ ಕಾಲು; ‘ಖಾನಾ’ ಎಂದರೆ ಕೋಣೆ. ಪಾಯಖಾನಾ ಅಂದರೆ ಕಾಲೂರುವ ಸ್ಥಳ!)

(೨) ಈ ನಮ್ಮ ‘ಬಡೇ ಲೋಗ’ ಸಂಪಾದಕರು ಮಾರು ಹೋದಂತಹ ಪಾಯಖಾನೆಗೆ (-- ಯಾವುದೇ ಹೆಸರಿನಿಂದ ಕರೆದರೂ ಸಹ, ಈ ಸ್ಥಳವು ಬಳಸಿದ ವ್ಯಕ್ತಿಯ ವಾಸನೆಯನ್ನೇ ಹೊರಹಾಕುತ್ತದೆ!--) ಸಂಗಮರವರಿ ಕಲ್ಲಿನ ಹಾಸು ಇರಬಹುದು. ಮೂಲೆಗಳಲ್ಲಿ ಹೂದಾನಿ ಇರಬಹುದು. ಒಂದು ಸಲ ಬಳಸಿದ ಮೇಲೆ ಎರಡು ಬಕೆಟ್ ಶುದ್ಧ ನೀರನ್ನು ತೊಳೆಯಲು ಬೇಡಬಹುದು. ಆದರೆ, ಇದೆಲ್ಲಕ್ಕಾಗಿ ಮಾಡಬೇಕಾಗುವ ಖರ್ಚು ಎಷ್ಟು ಸ್ವಾಮಿ? ಭಾರತದ ಒಬ್ಬ ದಿನಗೂಲಿಯ ದಿನದ ದುಡಿಮೆಗಿಂತ ಇದು ಎಷ್ಟು ಪಟ್ಟು ಹೆಚ್ಚು ಹೇಳಿ? ಈ ಎಲ್ಲ ಅಂಶಗಳನ್ನು ಲೆಕ್ಕಿಸದೆ, ನೀವು ಭಾರತದ ಪಾಯಖಾನೆಗಳು ನರಕಸದೃಶವಾಗಿರುತ್ತವೆ, ಸ್ವರ್ಗಸದೃಶ ವಿದೇಶಿ ‘ವಿಶ್ರಾಂತಿಸ್ಥಳ’ಗಳ ಗಮ್ಮತ್ತೇ ಗಮ್ಮತ್ತು ಎಂದು ಹಾಡಿದರೆ ನಿಮಗೆ ಕರಿಯ ಸಾಹೇಬರೆಂದು ಕರೆಯುವದೇ ಸರಿಯಲ್ಲವೆ?

ಭಾರತದಲ್ಲಿ ಇದೀಗ ಅನೇಕರು ಕೋಟ್ಯಾಧೀಶ್ವರರಾಗುತ್ತಿದ್ದಾರೆ. ಇವರೆಲ್ಲರ ಹೆಗ್ಗಳಿಕೆ ಏನೆಂದರೆ ಭಾರತದ ಆಂತರಿಕ ಸಂಪತ್ತಿನ ಹೆಚ್ಚಳಕ್ಕೆ ತಮ್ಮದು ದೊಡ್ಡ ಕೊಡುಗೆ  ಎಂದು.
ನಾನು ಕೇಳುತ್ತೇನೆ: “ಸ್ವಾಮಿ, ಭಾರತದ ಆಂತರಿಕ ದಾರಿದ್ರ್ಯದ ಹೆಚ್ಚಳಕ್ಕೆ ನಿಮ್ಮ ಕೊಡುಗೆ ಎಷ್ಟು?”
ನೋಡ ಬನ್ನಿ, ಈ ಕೋಟ್ಯಾಧೀಶ್ವರ ಉದ್ಯೋಗಪತಿಗಳು  ಸ್ಥಾಪಿಸಿದ ಕಾರಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ರೇಲವೆ ಹಳಿಗಳ ಪಕ್ಕದಲ್ಲಿಯೇ ಮಲವಿಸರ್ಜನೆ ಮಾಡಿ, ಅಲ್ಲಿಯೇ ತಮ್ಮ ಗುಡಿಸಲುಗಳಲ್ಲಿ ರೊಟ್ಟಿ ಬೇಯಿಸಿಕೊಳ್ಳುತ್ತಾರೆ. ಈ ದರಿದ್ರರ ಎದುರಿಗೆ ಶ್ರೀಮಂತರ ಪಾಯಖಾನೆಯ ವರ್ಣನೆಯನ್ನು ಕವಿತೆ ಮಾಡಿ ಹಾಡುವ ಹೊಗಳು-ಭಟ್ಟರೇ  ಇಂದು ಪತ್ರಿಕಾಮಾಧ್ಯಮದ ಪ್ರತಿಭಾವಂತ ಸಂಪಾದಕರಾಗಿದ್ದಾರೆ !

ಭಾರತದಲ್ಲಿರುವ ರೈತಕಾರ್ಮಿಕರಲ್ಲಿ ಹಾಗು ಕಾರಖಾನೆಗಳ ಕಾರ್ಮಿಕರಲ್ಲಿ ಅನೇಕರು ನಿರಕ್ಷರಿಗಳೇ ಆಗಿದ್ದಾರೆ. ಸಾಕ್ಷರರಿದ್ದರೂ ಸಹ ಅವರಿಗೆ ಪತ್ರಿಕೆ ಎನ್ನುವದು ಒಂದು ಐಷಾರಾಮಿ ವಸ್ತುವೇ ಆಗಿರುತ್ತದೆ.  ಆದುದರಿಂದ ಪತ್ರಿಕೆಯ ಪ್ರಸಾರವನ್ನು ಹೆಚ್ಚಿಸಲು ಇಂಥವರು ನಿರುಪಯೋಗಿಗಳು. ಪತ್ರಿಕೆಯನ್ನು ಓದುವ ಶ್ರೀಮಂತವರ್ಗಕ್ಕೆ ಶ್ರೀಮಂತಜೀವನಶೈಲಿಯ ಪತ್ರಿಕೆಗಳು ಬೇಕು. ಓದುಗರು ಮಧ್ಯಮವರ್ಗದವರಾಗಿದ್ದರೆ, ಅಂಥವರಿಗೆ ಶ್ರೀಮಂತಜೀವನಶೈಲಿಯ ಭ್ರಮೆಗಳನ್ನು ಉಣ್ಣಿಸುವಂತಹ ಪತ್ರಿಕೆಗಳು ಬೇಕು. ಆದುದರಿಂದಲೇ ಈ ಮನೋಧರ್ಮದ ದುರ್ಬಳಕೆ ಮಾಡುವ ಉದ್ದೇಶದಿಂದ ನಮ್ಮಲ್ಲಿ ಶ್ರೀಮಂತಜೀವನಶೈಲಿಯನ್ನು ಪ್ರದರ್ಶಿಸುವ ಪತ್ರಿಕೆಗಳು ವೃದ್ಧಿಸುತ್ತಿವೆ. ನುಣುಪಾದ ಪುಟಗಳು, ಅರೆನಗ್ನ ಹೆಣ್ಣುಗಳ ಚಿತ್ರಗಳು, ಕೊಳ್ಳುಬಾಕ ಸಂಸ್ಕೃತಿಯ ಜಾಹೀರಾತುಗಳು ಇಷ್ಟಿದ್ದರೆ ಸಾಕು, ಆ ಪತ್ರಿಕೆಯ ಪ್ರಸಾರ ಪುಟಿದೇಳುತ್ತದೆ.

(೩) ಇಷ್ಟೇ ಆಗಿದ್ದರೆ, ಇಂತಹ ಪತ್ರಿಕೆಗಳನ್ನು ಓದದೆ ನಮ್ಮಷ್ಟಕ್ಕೆ ನಾವು ಸುಮ್ಮನಿರಬಹುದಿತ್ತು. ಆದರೆ, ಈ ಪತ್ರಿಕೋದ್ಯಮಿಗಳ ಆಂಗ್ಲಮೋಹದಿಂದಾಗಿ ಕನ್ನಡಕ್ಕೆ ಅಪಚಾರವಾಗುತ್ತಿದೆಯಲ್ಲ ಎಂದು ತಳಮಳವಾಗುತ್ತದೆ. ಮೆಕಾಲೆ ಸಾಹೇಬನಿಗೆ ಭಾರತೀಯ ಭಾಷೆಗಳ ಶ್ರೀಮಂತಿಕೆ ಗೊತ್ತಿರಲಿಲ್ಲ. ಅದಕ್ಕಾಗಿಯೇ ಆ ಅಜ್ಞಾನಿ ಮನುಷ್ಯ ಹೀಗೆ ಹೇಳಿದ:

…To that class we may leave it to refine the vernacular dialects of the country, to enrich those dialects with terms of science borrowed from the Western nomenclature, and to render them by degrees fit vehicles for conveying knowledge to the great mass of the population.

ಈ ನಮ್ಮ ಆಂಗ್ಲವ್ಯಾಮೋಹಿ ಸಂಪಾದಕರು ಮೆಕಾಲೆಯ ಮಾತುಗಳನ್ನು ಶಿರಸಾವಹಿಸಿ ಪಾಲಿಸುತ್ತಿರಬಹುದು. ಏಕೆಂದರೆ ಮೆಕಾಲೆಯ ಈ ಚೇಲಾಗಳು ಭಾರತದ ದೇಶಭಾಷೆಗಳಲ್ಲಿ ಇಂಗ್ಲಿಶ್ ಪದಗಳನ್ನು ನೇರವಾಗಿ ತುಂಬುತ್ತಿದ್ದಾರೆ. ಇದರಿಂದಾಗಿ ಮೆಕಾಲೇನ ಆತ್ಮಕ್ಕೆ ಸಂತೃಪ್ತಿ ಸಿಕ್ಕಿರಬಹುದು. ಆದರೆ, ಕನ್ನಡಕ್ಕೆ  ಪತ್ರಿಕಾಪದಗಳನ್ನು ಹಾಗು ಪತ್ರಿಕಾಭಾಷೆಯನ್ನು ನೀಡಿದಂತಹ ಕನ್ನಡ ಪತ್ರಿಕೆಗಳ ಪ್ರಾರಂಭದ ದಿನಗಳ ಸಂಪಾದಕರ ಆತ್ಮಗಳು ಸಂತಪ್ತವಾಗಿವೆ ಎನ್ನುವದರಲ್ಲಿ ಸಂಶಯವೇ ಇಲ್ಲ. ಅದೇನೋ ಹೇಳುತ್ತಾರಲ್ಲ: ‘ಕುಂಬಾರನಿಗೆ ಒಂದು ವರುಷ; ಡೊಣ್ಣೆಗೆ ಒಂದು ನಿಮಿಷ !” ಈ ಆಂಗ್ಲವ್ಯಾಮೋಹಿ ಪತ್ರಿಕೋದ್ಯಮಿಗಳಿಂದಾಗಿ ನಮ್ಮ ಪತ್ರಿಕಾಪೂರ್ವಜರ ಭಾಷಾಪರಿಶ್ರಮವೆಲ್ಲ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತೆ ವ್ಯರ್ಥವಾಗಿ ಹೋಗಿದೆ.

ಶ್ರೀಮಂತಜೀವನಶೈಲಿಯ ಈ ಸಂಪಾದಕರುಗಳಿಗೆ ಭಾರತದ ಸಮಸ್ಯೆಗಳು ಗೊತ್ತಿವೆಯೆ? ಭಾರತದ ಬಡ ರೈತನಿಗೆ ಬೇಕಾಗಿರುವದು ಒಂದು ತಗಡಿನ ಚಪ್ಪರವೆ ಹೋರತು ಸುಸಜ್ಜಿತ ‘ವಿಶ್ರಾಂತಿಸ್ಥಳ’ವಲ್ಲ. ಬಡರೈತನು ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಕ್ಕರೆ ಸಾಕು, ಆತ ನೇಣಿಗೆ ಶರಣಾಗುವದಿಲ್ಲ. ಎಲ್ಲೆಲ್ಲಿಯೊ ಸಾಲ ಮಾಡಿ ಆತ ತನ್ನ ಜಮೀನಿನಲ್ಲಿ ಬೆಳೆ ತೆಗೆಯುತ್ತಾನೆ. ಬೆಳೆ ಚೆನ್ನಾಗಿ ಬಂದಾಗ ಧಾರಣಿ ಕುಸಿಯುತ್ತದೆ. ಧಾರಣಿ ಚೆನ್ನಾಗಿದ್ದಾಗ ಬೆಳೆ ಇರುವದಿಲ್ಲ. ಈ ಎರಡೂ ಸಂದರ್ಭಗಳಲ್ಲಿ ಫಾಯದೆ ಮಾಡಿಕೊಳ್ಳುವವನು ಮಧ್ಯಸ್ಥನಾದ ವ್ಯಾಪಾರಸ್ಥ. ಲಂಚ ಕೊಡಲಾಗದ ನಮ್ಮ ರೈತನಿಗೆ ನೇರವಾಗಿ ಸಬ್ಸಿಡಿ ಕೊಡಲು ನಮ್ಮ ಮಂತ್ರಿಗಳಿಗೆ ಮನಸ್ಸಿಲ್ಲ. ಒಂದು ವೇಳೆ ನಮ್ಮ ಸರಕಾರ ಕೊಡಬಯಸಿದರೂ ಅದಕ್ಕೆ ಜಾಗತಿಕ ಬ್ಯಾಂಕು ಅಡ್ಡಿ ಮಾಡುತ್ತಿದೆ. ಇವೆಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಎರಡು ಲಕ್ಷಕ್ಕೆ ಹತ್ತಿರವಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬೇಸಾಯದಿಂದ ಹೊಟ್ಟೆ ತುಂಬಿಸಲಾರದ ಈ ಪರಿಸ್ಥಿತಿಯಲ್ಲಿಯೇ, ಉದ್ದಿಮೆಗಳು ಸಹ ಬೆಳೆಯಲಾರದಂತಹ ಸ್ಥಿತಿ ಭಾರತದಲ್ಲಿದೆ. ಒಂದು ಉದ್ದಿಮೆಗೆ ಬೇಕಾಗುವ ಮೂಲಭೂತ ಸೌಕರ್ಯಗಳು ನಮ್ಮಲ್ಲಿಲ್ಲ. ಅರ್ಥಾತ್ ನಮ್ಮಲ್ಲಿ ನಿರುದ್ಯೋಗ ನಿವಾರಣೆಗೆ ಯಾವುದೇ ಉಪಾಯವಿಲ್ಲ. ಇದರ ಮೇಲೆ ಹೆಚ್ಚುತ್ತಿರುವ ಜನಸಂಖ್ಯೆ. ಇದು ಯಾವದೂ ತನಗೆ ಸಂಬಂಧಿಸಿದ ಸಮಸ್ಯೆಯೇ ಅಲ್ಲ ಎಂದು ಕಣ್ಣು ಮುಚ್ಚಿ ಕುಳಿತಿರುವ ಸರಕಾರಗಳು !

ಇಂತಹ ಸಮಸ್ಯೆಗಳೆಲ್ಲ ನಮ್ಮನ್ನು ಕಾಡುತ್ತಿರುವಾಗ ನಮ್ಮ ‘ಹೈ-ಫೈ’ ಸಂಪಾದಕರಿಗೆ ಇರುವ ಏಕಮೇವ ಚಡಪಡಿಕೆ ಎಂದರೆ ಭಾರತದಲ್ಲಿ ಇವರು ಸಂಚರಿಸುವ ಸ್ಥಳಗಳಲ್ಲಿ ಸುಸಜ್ಜಿತ ಪಾಯಖಾನೆಗಳಿಲ್ಲ ಎನ್ನುವದು !