Saturday, July 7, 2012

ಅಶ್ವವೃತ್ತಾಂತ


--೧--
ಕಾಡೆದೆಯಲ್ಲಿ ಕುದುರೆಯ ಹೇಂಕಾರ,
ನರನರಗಳಲಿ ಅದರ ಮಾರ್ದನಿ ಸಿಡಿತ,
ಕಾಡುಕುದುರೆಯ ಸೆಣೆಸಿ ಸವಾರಿ ಮಾಡುವ
ಬಯಕೆ ಭೂತಾಕಾರ
ಚಿಮ್ಮಿ ನನ್ನನು ಕುದುರೆಯ ಬೆನ್ನ ಮೇಲೆ,
ದಿಕ್ಕು ದೆಸೆ ನೋಡದೆ ಓಡುತಿರೆ ಅಮಲಿನಲಿ,
ನಾನೆ ವಿಕ್ರಮರಾಯನೆಂಬ ಠೇಂಕಿನಲಿ,
ಎದೆಯನ್ನು ಬೀಗಿಸುತ ಝೀಂಗುಟ್ಟೆ ಗಾಳಿಯಲಿ,
. . . . . . . . . . . . . . . . . . . . . . . . . . .
ಕಣ್ಣು ಕತ್ತಲೆ, ತೊಡೆಯಲ್ಲಿ ನೋವಿನ ಸೆಳಕು,
‘ರಾಮಾ!’ ಎಂದೆನುತ ಕಣ್ಣಗಲಿಸಿರಲಿಲ್ಲ ಇನ್ನೂ
. . .. ಕಾಡೆದೆಯೊಳಗಿಂದ ಕುದುರೆಯ ಹೇಂಕಾರ,
                         ನರನರಗಳಲಿ ಮಾರ್ದನಿ!

--೨
ಏನೆಲ್ಲ ಕಸರತ್ತು ಮಾಡಿದರೂ
ಏಳದೀ ಘೋಡಾ!
ಹಾಗೆಲ್ಲ ತೀರದು ಸವಾರಿಯ ಚಟ,
ಮುದಿ ಕುದುರೆಯನ್ನೇ ಏರುವ ಹಟ,
ಮುಗ್ಗುರಿಸಿ ಬೀಳಲು ಅಕಟಕಟಾ!

ನಗುತಿಹಳು ಬಾಳಸಂಗಾತಿ:
‘ಜೊತೆಜೊತೆಗೆ ನಡೆದರೆ ಸಾಲದೆ? ಸವಾರಿಯೇ ಬೇಕೆ?’

--೩--
ಈಲಿಯಟ್ ಹೇಳಿದ್ದು ಖರೆ:
This is the way the world ends
This is the way the world ends
This is the way the world ends
Not with a bang but a whimper.

-೪-
ಕೊಟ್ಟ ಕುದುರೆಯನೇರಬೇಕು, ಅಲ್ಲಮಪ್ರಭುಗಳಂತೆ.
ಪ್ರಾಯದಲಿ ಅದು ರೇಸ್ ಗೆಲ್ಲುವ ಚದುರೆ,
ಇಳಿವಯಸಿನಲಿ ಜಟಕಾ ಕುದುರೆ!