Monday, January 31, 2011

Mr. Prime Minister...


Mr. Prime Minister,
We, Indians have great regard for you. We believe that you are an honest and sincere person. You know that a person who conceals the knowledge of crime becomes an accessory to crime. Your refusal to disclose the names of the criminals who have looted and cheated India and kept the black money in foreign banks makes us lose our faith in you. Common man becomes inclined to think that you have a political interest in this.

Mr. Prime Minister,
This is the historic moment for you to come out with a clean conscience and answer to the questions that your countrymen are asking you. The choice is yours to either make your name shine as a great Indian or let it roll in dust. Of course there are always the advocates of the devil who come with ridiculous excuses like, ‘the AG does not know addition & subtraction or that we have a coalition dharma etc.’

Mr. Prime Minister,
In contrast to this fraudulent behaviour of those who advise you, let me give the example of a great son of India, Chhatrapati Shivaji. Shivaji had appointed his son Sambhaji as the governor of a province of his kingdom. Sambhaji raided the adjacent Mogul fort and captured the daughter-in-law of the Muslim officer there. He brought her to his palace. As soon as Shivaji learnt of this adventure, he had his son Sambhaji arrested and prosecuted. There are always advocates for the devil, Mr. Prime Minister. The advocate for Sambhaji argued that the crime was committed outside the jurisdiction of Shivaji where Shivaji had no authority. Shivaji said the crime was committed by an officer of the king and therefore he had all the authority to try Sambhaji. Sambhaji was punished with imprisonment and the lady was returned to her place with honour.

Mr. Prime Minister,
What is your choice? Are you going to listen to the advocates of the devil and protect the criminals? Or are you going to trade the path of the great Indians like Shivaji and the Mahatma? This is the golden moment for you to stand up in truth and make your name shine. You are answerable to the people of India. If you fail you have lost a historic moment.

Monday, January 24, 2011

ಶುಭ ನುಡಿಯೆ ಶಕುನದ ಹಕ್ಕಿ.........ದ.ರಾ.ಬೇಂದ್ರೆ


`ಶುಭ ನುಡಿಯೆ ಶಕುನದ ಹಕ್ಕಿ ಕವನವು ಬೇಂದ್ರೆಯವರ ನಾದಲೀಲೆ ಕವನಸಂಕಲನದಲ್ಲಿ ಅಡಕವಾಗಿದೆ. ಕಳವಳದಲ್ಲಿ ಮುಳುಗಿದ ಮನಸ್ಸಿನ ಸ್ಥಿತಿಯನ್ನು ಬೇಂದ್ರೆಯವರು ಈ ಕವನದಲ್ಲಿ   ವರ್ಣಿಸಿದ್ದಾರೆ. ಪ್ರತಿಯೊಬ್ಬ ಮನುಷ್ಯನ ಬಾಳಿನಲ್ಲಿಯೂ ಕಷ್ಟದ ಅನೇಕ ಪ್ರಸಂಗಗಳು ಬರುತ್ತವೆ. ಪುರುಷಪ್ರಯತ್ನವೆಲ್ಲವೂ ಸೋತಾಗ, ಮನುಷ್ಯನು ದೈವದ ಮೊರೆ ಹೋಗುತ್ತಾನೆ. ತಾನು ನಂಬಿದ ದೈವ ತನ್ನ ಕೈಹಿಡಿಯುವುದೊ, ಕೈ ಬಿಡುವುದೊ ಎಂದು ಅರಿಯದೆ, ಮನುಷ್ಯನು ತಳಮಳಿಸುತ್ತಾನೆ. ತನ್ನ ದೈವವನ್ನು ಊಹಿಸಲು ಆತನು ದೈವೀ ಸಂಕೇತಗಳಿಗೆ ಅಂದರೆ ಶಕುನಗಳಿಗೆ ಶರಣಾಗುತ್ತಾನೆ. ಆತನ ತಾರ್ಕಿಕ ಬುದ್ಧಿಯು ಸೋತು ಹೋಗಿ, ನಿಗೂಢತೆಗೆ ಅವನ ಮನಸ್ಸು ಒಲಿಯುತ್ತದೆ. ಇದು ಈ ಕವನದಲ್ಲಿಯ ಭಾವ.
ಕವನದ ಪೂರ್ಣಪಾಠ ಹೀಗಿದೆ:
.....................................................................................................
                   ಶುಭ ನುಡಿಯೆ ಶಕುನದ ಹಕ್ಕಿ

                        (ರಾಗ : ಸಾವೇರಿ--ಏಕತಾಳ)

ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ |
                                         ಶುಭ ನುಡಿಯೆ    || ಪಲ್ಲ ||

                        ಮುಂಗಾಳು ಕವಿಯುವಾಗ
                        ಹಸುಗೂಸಿಗೆ ಕಸಿವಿಸಿಯಾಗಿ
                        ಕಕ್ಕಾವಿಕ್ಕಿಬಡುತ ಪಾಪ
                        ಕಿರಿ ಕಿರಿ ಅಳುತಲಿತ್ತ
                                     ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

                        ಇರುಳು ಗಾಳಿ ಬೀಸುವಾಗ
                        ಹಣತಿಸೊಡರು ಹೆದರಿದಂತೆ
                        ತಾನು ತಣ್ಣಗಾದೇನೆಂದು  
                        ಚಿಳಿ ಚಿಳಿ ನಡುಗುತಲಿತ್ತ
                                     ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

                        ನಿದ್ದೆ ಬಳಲಿ ಬಳಿಯಲಿ ಬಂದು
                        ಕೂಡಿದೆವೆಗಳಾಸರೆಯಲ್ಲಿ
                        ಮೆsಲ್ಲಗೆ, ಒರಗುವ ಅದನು
                        ಒಂಟಿ ಸೀನು ಹಾರಿಸುತಿತ್ತ
                                     ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

                        ಕತ್ತಲೆಯ ಕೆಸರಿನ ತಳಕೆ
                        ಮಿನಮಿನಗುವ ಹರಳುಗಳಂತೆ
                        ಚಿಕ್ಕೆ ಕೆಲವು ತೊಳಗುತಲಿರಲು
                        ಗಳಕನೊಂದು ಉಲಿಯುತಲಿತ್ತ
                                    ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಉಸಿರು ತೂಗು-ತೊಟ್ಟಿಲಲ್ಲಿ
                        ಜೀವ ಮೈಯ ಮರೆತಿರಲಾಗಿ
                        ಒಳಗಿನಾವ ಚಿಂತೆಯ ಎಸರೋ
                        ತಂತಾನೆ ಕನವರಿಸುತಿತ್ತ
                                    ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ನಟ್ಟಿರುಳಿನ ನೆರಳಿನಲ್ಲಿ
                        ನೊಂದ ಜೀವ ಮಲಗಿರಲಾಗಿ
                        ಸವಿಗನಸು ಕಾಣುವಾಗ
                        ಗೂಗೆಯೊಂದು ಘೂಕ್ಕೆನುತಿತ್ತ
                                    ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

                        ಎಚ್ಚರಾದ ಪೆಚ್ಚು ಮನವು
                        ಹುಚ್ಚೆದ್ದು ಹರಿಯುತಿರಲು
                        ನಿದ್ದೆಯಿಲ್ಲ ಆಕಳಿಸಿದರೂ
                        ಹಲ್ಲಿಯೊಂದು ಲೊಟಗುಡತಿತ್ತ
                                    ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

                        ಬೆಳಗಿನ ತಂಗಾಳಿ ಬಂದು
                        ನಸುಕು ಮಸುಕು ಮೂಡುತಲಿರಲು
                        ಚಿಲೀ ಪಿಲೀ ಚಿಲಿಪಿಲಿ ಎಂದು
                        ಹಾಲಕ್ಕಿ ಉಲಿಯುತಲಿತ್ತ
                                    ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

                        ನಿನ್ನ ಸೊಲ್ಲ ನಂಬಿ ಎದ್ದೆ
                        ಮೈಯೆಲ್ಲ ನಡುಕವಿದ್ದು
                        ನೀನೆ ಶುಭ ನುಡಿಯುವಾಗ
                        ಏನಿದ್ದೇನು? ಎಲ್ಲಾ ಶುಭವೇ !
                                    ಶುಭ ನುಡಿಯೆ
                        ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
-----------------------------------------------------------------------------------------------
ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ |
                    ಶುಭ ನುಡಿಯೆ    || ಪಲ್ಲ ||

ಕವನದ ಮೊದಲಿಗೆ ಬೇಂದ್ರೆಯವರು `ಶುಭ ನುಡಿಯೆ ಎಂದು ಶಕುನದ ಹಕ್ಕಿಯನ್ನು ಪ್ರಾರ್ಥಿಸುತ್ತಾರೆ. ಹಾಗು ಈ ಪ್ರಾರ್ಥನೆಯನ್ನು ಕವನದ ಪಲ್ಲವನ್ನಾಗಿ ಮಾಡಿದ್ದಾರೆ. ಯಾವುದೇ ಒಂದು ಶಕುನವು ಉದಾಹರಣೆಗೆ ಹಲ್ಲಿ ಲೊಚಗುಟ್ಟುವದು ಕಿವಿಗೆ ಬಿದ್ದಾಗ, ದೇವರನ್ನು ಸ್ಮರಿಸಬೇಕು ಅಥವಾ `ಒಳಿತು ಎಂದು ಅನ್ನಬೇಕು. ಇದು ಹಿರಿಯರು ಹೇಳುವ ಮಾತು. ನಮ್ಮ ದೈವ ನಮಗೆ ಅಮಂಗಳವನ್ನು ತರದಿರಲಿ ಎನ್ನುವದು ಈ ಮಾತಿನ ಅರ್ಥ. ಈ ಪ್ರಾರ್ಥನೆಯೇ ಈ ಕವನದಲ್ಲಿ ಮತ್ತೆ ಮತ್ತೆ ಮರುಕಳಿಸುವ ಆಶಯವಾಗಿದೆ.

ಮೊದಲ ನುಡಿ:
ಮುಂಗಾಳು ಕವಿಯುವಾಗ
ಹಸುಗೂಸಿಗೆ ಕಸಿವಿಸಿಯಾಗಿ
ಕಕ್ಕಾವಿಕ್ಕಿಬಡುತ ಪಾಪ
ಕಿರಿ ಕಿರಿ ಅಳುತಲಿತ್ತ
                ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಕವನದ ಮೊದಲ ನುಡಿಯು ಕತ್ತಲೆ ಕವಿಯುತ್ತಿರುವ ಮುಸ್ಸಂಜೆಯ ಕಾಲವನ್ನು ಸೂಚಿಸುವ ಮೂಲಕ ಪ್ರಾರಂಭವಾಗುತ್ತದೆ. ಆದರೆ ಬೇಂದ್ರೆಯವರು ಈ ಕಾಲವನ್ನು ಮುಸ್ಸಂಜೆ ಎಂದು ಕರೆಯದೆ ಮುಂಗಾಳು ಎಂದು ಕರೆದಿದ್ದಾರೆ. ಕಾಳು ಎಂದರೆ ಕಪ್ಪು ಎಂದೂ ಅರ್ಥವಾಗುತ್ತದೆ, ಕಾಲ ಎಂದೂ ಅರ್ಥವಾಗುತ್ತದೆ. ಒಟ್ಟಿನಲ್ಲಿ ಇದು ಅಶುಭದ ಭಯವನ್ನು ಸೂಚಿಸುವ ಪ್ರಯೋಗವಾಗಿದೆ. ಈ ಭಯಕ್ಕೆ ಕಾರಣವೇನು? ಇದು ಅನಿಶ್ಚಿತತೆಯಿಂದ ಹಾಗು ಅಸಹಾಯಕತೆಯಿಂದ ಹುಟ್ಟಿದ ಭಯ. ಹಸುಗೂಸಿಗೆ ಕಸಿವಿಸಿಯಾದಾಗ ಅದರ ಕಾರಣವನ್ನು ಊಹಿಸುವದು ಯಾರಿಗೂ ಸಾಧ್ಯವಾಗದು. ಕೂಸು ಕಕ್ಕಾವಿಕ್ಕಿಯಾಗಿ, ಭೋರೆಂದು ಅಳುತ್ತದೆ; ಕಿರಿಕಿರಿ ಮಾಡುತ್ತದೆ. ಹಿರಿಯರು ದಿಕ್ಕುಗಾಣದವರಾಗುತ್ತಾರೆ. ಕೊನೆಗೆ ತಾಯಿಯು ಕೂಸಿನ ಮುಖಕ್ಕೆ ದೃಷ್ಟಿ ತೆಗೆಯುತ್ತಾಳೆ. ಎಲ್ಲ ಕೆಟ್ಟ ದೃಷ್ಟಿಗಳು ಹೋಗಲಿ ಎಂದು ದೈವಕ್ಕೆ ಬೇಡಿಕೊಳ್ಳುತ್ತಾಳೆ.

ಇಲ್ಲಿ ಕೂಸು ಅಸಹಾಯಕ ಜೀವಿಯ ಸಂಕೇತವಾದರೆ, ಮುಂಗಾಳು ಕಠಿಣ ಪರಿಸ್ಥಿತಿಯ ಅನಿಶ್ಚಿತ ಪರಿಣಾಮದ ಸಂಕೇತವಾಗಿದೆ. ಈ ಪರಿಸ್ಥಿತಿಯನ್ನು ನಿರ್ವಹಿಸುವದು ಪುರುಷಪ್ರಯತ್ನದ ಮೂಲಕ ಅಸಾಧ್ಯವಾದಾಗ, ವ್ಯಕ್ತಿಯು ದೈವದ ಮೊರೆ ಹೋಗುತ್ತಾನೆ. ದೈವವನ್ನು ಅರಿತುಕೊಳ್ಳಲೆಂದು ದೈವೀ ಸಂಕೇತಗಳಲ್ಲಿ ಅಂದರೆ ಶಕುನಗಳಲ್ಲಿ ನಂಬಿಕೆ ಇರಿಸುತ್ತಾನೆ. ನಿಸರ್ಗಜೀವಿಗಳಾದ ಗೂಗೆ, ಹಾಲಕ್ಕಿ ಹಾಗು ಹಲ್ಲಿಯಂತಹ ಜೀವಿಗಳು ಹೊರಡಿಸುವ ಧ್ವನಿಯನ್ನು ಶಕುನವೆಂದು ಭಾವಿಸಿ ಒಳ್ಳೆಯ ಶಕುನಗಳಿಗಾಗಿ ಪ್ರಾರ್ಥಿಸುತ್ತಾನೆ.
ಆ ಮೂಲಕ ದೈವೀ ಸಹಾಯ ಬರಬಹುದೆಂದು ನಂಬುತ್ತಾನೆ.

ಎರಡನೆಯ ನುಡಿಯಲ್ಲಿ ಬೇಂದ್ರೆಯವರು ಇರುಳು ಗಾಳಿಯ ಹಾಗು ಹಣತಿಯ ಸೊಡರಿನ ಪ್ರತಿಮೆಗಳನ್ನು ಬಳಸುತ್ತಾರೆ.
ಇರುಳು ಗಾಳಿ ಬೀಸುವಾಗ
ಹಣತಿಸೊಡರು ಹೆದರಿದಂತೆ
ತಾನು ತಣ್ಣಗಾದೇನೆಂದು
ಚಿಳಿ ಚಿಳಿ ನಡುಗುತಲಿತ್ತ
                      ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಇರುಳ ಗಾಳಿ ಎಂದರೆ ಹೆಚ್ಚುತ್ತಿರುವ ಸಂಕಟಗಳು. ಪುರುಷಪ್ರಯತ್ನ ವ್ಯರ್ಥವಾದ ಬಳಿಕ ಮನುಷ್ಯನು ದೈವದ ಮೊರೆ ಹೋಗುತ್ತಾನೆ. ಕಷ್ಟದ ತಮಂಧದಲ್ಲಿ ಈ ನಂಬಿಕೆಯು ಪ್ರಣತಿಯ ಬೆಳಕಿನಂತೆ ಅವನನ್ನು ಮುನ್ನಡೆಸಬೇಕು. ಆದರೆ ಪರಿಸ್ಥಿತಿಯ ಕಾಠಿಣ್ಯ ಹೆಚ್ಚಿದರೆ, ಅವನಿಗೆ ದೈವದಲ್ಲಿಯ ನಂಬಿಕೆಯೂ ನಷ್ಟವಾಗಬಹುದು. ಮೊದಲ ನುಡಿಯಲ್ಲಿ ಮುಂಗಾಳು ಎಂದರೆ ಕತ್ತಲೆಯ ಸಂಧಿಕಾಲವನ್ನು ಸೂಚಿಸಿದ ಬೇಂದ್ರೆಯವರು ಎರಡನೆಯ ನುಡಿಯಲ್ಲಿ ಕಗ್ಗತ್ತಲ ರಾತ್ರಿಯಲ್ಲಿ ಬಿರ್ ಎಂದು ಬೀಸುತ್ತಿರುವ ಗಾಳಿಯ ಸಂಕೇತದ ಮೂಲಕ, ಪರಿಸ್ಥಿತಿಯ ಕಾಠಿಣ್ಯ ಹೆಚ್ಚಿರುವದನ್ನು ಸೂಚಿಸುತ್ತಿದ್ದಾರೆ. ಗಾಳಿ ಹೆಚ್ಚಾದರೆ ಹಣತಿಯಲ್ಲಿಯ ಸೊಡರು ತಾನು ತಣ್ಣಗಾದೇನೆಂದು ಅಂದರೆ ಸತ್ತೇ ಹೋಗುವೆನು ಎಂದು ಭಯಪಡುತ್ತದೆ. ಅರ್ಥಾತ್  ನಂಬುಗೆಯೇ ತನ್ನಲ್ಲಿ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ ಎಂದು ಬೇಂದ್ರೆ ಹೇಳುತ್ತಾರೆ.
[ಟಿಪ್ಪಣಿ : ನೋಬೆಲ್ ಪ್ರಶಸ್ತಿ ವಿಜೇತ, ರಶಿಯನ್ ಸಾಹಿತಿ ಅಲೆಗ್ಝಾಂಡರ್ ಸೋಲ್ಝೆನಿತ್ಸಿನ್ ಅವರು ತಮ್ಮ Candle in the wind ಎನ್ನುವ ನಾಟಕದಲ್ಲಿ ಮಾನವ-ವಿಶ್ವಾಸದ ಹೆಗ್ಗಳಿಕೆಯನ್ನು ಬರೆದಿದ್ದಾರೆ. ಬಸವಣ್ಣನವರು ತಮ್ಮ ವಚನದಲ್ಲಿ ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ? ಎಂದು ನುಡಿದಿದ್ದಾರೆ. ಆದರೆ ಗಾಳಿ ಬೀಸಿದರೆ, ಜ್ಯೋತಿಯೂ ನಿಲ್ಲಲಾರದು.]

ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಮನುಷ್ಯನು ಅತಿಯಾಗಿ ಬಳಲಿದಾಗ, ನಿದ್ದೆಗೆ ಜಾರುವದು ಸಹಜ. ಆದರೆ, ನಿದ್ದೆಯೂ ಸಹ ಬರಲಾಗದೇ ಒದ್ದಾಡುತ್ತಿದೆ. ಅದೂ ಸಹ ಬಳಲಿ ಬೆಂಡಾಗಿ ಕೊನೆಗೊಮ್ಮೆ ಆಯಾಸದಿಂದ  ಕಣ್ಣುರೆಪ್ಪೆಗಳು ಮುಚ್ಚಿಕೊಳ್ಳುತ್ತವೆ, ನಿದ್ರೆಯು ಆ ಮುಚ್ಚಿದ ರೆಪ್ಪೆಗಳಲ್ಲಿ ಆಸರೆಯನ್ನು ಪಡೆಯುತ್ತದೆ ಎಂದು ಬೇಂದ್ರೆ ಹೇಳುತ್ತಾರೆ. ಈ ರೀತಿಯಲ್ಲಿ  ಮನುಷ್ಯನು ನಿದ್ರೆಗೆ ಜಾರಬಹುದು. ಆದರೆ ಅಪಶಕುನದ ಹೆದರಿಕೆಯಲ್ಲಿರುವ ಮನುಷ್ಯನ ಮನಸ್ಸು ಹೇಗೆ ವರ್ತಿಸುತ್ತದೆ ಎನ್ನುವದನ್ನು ಬೇಂದ್ರೆಯವರು ಮೂರನೆಯ ನುಡಿಯಲ್ಲಿ ಹೀಗೆ ಬಣ್ಣಿಸಿದ್ದಾರೆ :
ನಿದ್ದೆ ಬಳಲಿ ಬಳಿಯಲಿ ಬಂದು
ಕೂಡಿದೆವೆಗಳಾಸರೆಯಲ್ಲಿ
ಮೆsಲ್ಲಗೆ, ಒರಗುವ ಅದನು
ಒಂಟಿ ಸೀನು ಹಾರಿಸುತಿತ್ತ
                   ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಒಂಟಿ ಸೀನು ಅಪಶಕುನದ ಸಂಕೇತ. ನಿದ್ದೆಗೆ ಜಾರುತ್ತಿರುವ ಮನುಷ್ಯನು ತನ್ನ ಒಂಟಿ ಸೀನಿನಿಂದ ಭಯಗೊಂಡು ತಾನೇ ಎಚ್ಚರಾಗಿ, ಅಪಶಕುನದ ಹೆದರಿಕೆಯಿಂದ ಮತ್ತೆ ಕಳವಳಕ್ಕೀಡಾಗುತ್ತಾನೆ.

ಒಂಟಿ ಸೀನಿನ ಅಪಶಕುನದಿಂದಾಗಿ, ಈ ಬಡಪಾಯಿಗೆ ಹತ್ತುತ್ತಿರುವ ನಿದ್ದೆಯೂ ಹಾರಿಹೋಯಿತು. ಕತ್ತೆತ್ತಿ ಮೇಲೆ ನೋಡಿದರೆ ಅಲ್ಲಿ ಕಾಣುವದೇನು? ಕಪ್ಪು ಆಕಾಶವು ಅವನಿಗೆ ಕತ್ತಲೆಯ ಕೆಸರಿನಂತೆ ಕಾಣುತ್ತಿದೆ. ಅಲ್ಲಿರುವ ಚಿಕ್ಕೆಗಳು ಈತನಿಗೆ ಕಾಣುವ ಪರಿಯನ್ನು ನಾಲ್ಕನೆಯ ನುಡಿಯಲ್ಲಿ ನೋಡಬಹುದು:
ಕತ್ತಲೆಯ ಕೆಸರಿನ ತಳಕೆ
ಮಿನಮಿನಗುವ ಹರಳುಗಳಂತೆ
ಚಿಕ್ಕೆ ಕೆಲವು ತೊಳಗುತಲಿರಲು
ಗಳಕನೊಂದು ಉಲಿಯುತಲಿತ್ತ
                   ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಚಿಕ್ಕೆಗಳೆಲ್ಲ ತಮ್ಮ ಪ್ರಕಾಶವನ್ನು ಕಳೆದುಕೊಂಡು ಕೆಸರಿನ ತಳದಲ್ಲಿ ಸಿಲುಕಿದ ಹರಳುಗಳಂತೆ ಮಿಣುಕುತ್ತಿವೆ. ಅಲ್ಲಿಂದ ಹೊರಬರಲು ಕೆಲವು ಚಿಕ್ಕೆಗಳು ತೊಳಲಾಡುತ್ತಿವೆ. ದೈವೀ ಭರವಸೆಯನ್ನು ಬಿಂಬಿಸಬೇಕಾದ ಈ ಚಿಕ್ಕೆಗಳೇ ತೊಳಲುತ್ತಿರುವಾಗ, ಮನುಷ್ಯ  ಯಾರಲ್ಲಿ ನಂಬಿಕೆ ಇಡಬೇಕು? ಅಂತಹದರಲ್ಲಿಯೇ ಒಂದು ಚಿಕ್ಕೆ ಗಳಕ್ಕನೇ ಉಲಿದಂತೆ, ಈ ವ್ಯಕ್ತಿಗೆ ಭಾಸವಾಗುತ್ತದೆ. ಆದರೆ ಅದರ ಉಲಿವು ಶುಭಸೂಚಕ ಉಲಿವೊ, ಅಶುಭಸೂಚಕವೋ ಎನ್ನುವದು ಈತನ ಅರಿವಿಗೆ ಬರುತ್ತಿಲ್ಲ. ಕೆಸರಲ್ಲಿ ಸಿಲುಕಿದ ಚಿಕ್ಕೆಗಳಂತೆಯೇ ಈತನ ಮನಸ್ಸೂ ಸಹ ತೊಳಲಾಟದಲ್ಲಿ ಸಿಲುಕಿದೆ.

ಈ ತೊಳಲಾಟವು ಮನುಷ್ಯನನ್ನು ಒಂದು ಅರೆಪ್ರಜ್ಞಾವಸ್ಥೆಯ ಜೊಂಪಿಗೆ ನೂಕುತ್ತದೆ. ಈ ಸ್ಥಿತಿಯನ್ನು ಬೇಂದ್ರೆ ಐದನೆಯ ನುಡಿಯಲ್ಲಿ ಹೀಗೆ ಬಣ್ಣಿಸುತ್ತಾರೆ:
ಉಸಿರು ತೂಗು-ತೊಟ್ಟಿಲಲ್ಲಿ
ಜೀವ ಮೈಯ ಮರೆತಿರಲಾಗಿ
ಒಳಗಿನಾವ ಚಿಂತೆಯ ಎಸರೋ
ತಂತಾನೆ ಕನವರಿಸುತಿತ್ತ
                    ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಈ ಅರೆಪ್ರಜ್ಞಾವಸ್ಥೆಯಲ್ಲಿ ಮನುಷ್ಯನ ಉಳಿದೆಲ್ಲ ಐಚ್ಛಿಕ ಕ್ರಿಯೆಗಳು ಸ್ತಬ್ಧವಾಗಿ, ಕೇವಲ ಉಸಿರಾಟವಷ್ಟೆ ವ್ಯಕ್ತವಾಗುತ್ತಿರುತ್ತದೆ. ಒಳಉಸಿರು ಹಾಗು ಹೊರ‌ಉಸಿರುಗಳನ್ನು ಬೇಂದ್ರೆ ತೂಗುತೊಟ್ಟಿಲು ಎಂದು ಬಣ್ಣಿಸುತ್ತಾರೆ. ಈ ತೂಗುತೊಟ್ಟಿಲಿನಲ್ಲಿ ಜೀವಿ ಮೈಮರೆತು ಮಲಗಿಕೊಂಡಿರುತ್ತಿದೆ. ಇದು ಗಾಢನಿದ್ದೆಯ ಸ್ಥಿತಿ. ಬಳಲಿಕೆಯನ್ನು ಪರಿಹರಿಸಲು ಇಂತಹ ಗಾಢನಿದ್ರೆಯು ಮನುಷ್ಯನನ್ನು ಆವರಿಸುತ್ತದೆ. ಆದರೆ ಒಳಒಳಗೇ ಕುದಿಯುತ್ತಿರುವ ಚಿಂತೆಯು ಹೊರಗೆ ಉಕ್ಕಿ ಬರಲೇ ಬೇಕಲ್ಲ. ಅದನ್ನು ಬೇಂದ್ರೆಯವರು  ಚಿಂತೆಯ ಎಸರು ಎಂದು ಬಣ್ಣಿಸುತ್ತಾರೆ. ಈ ಎಸರು ಉಕ್ಕಿ ಹೊರಬಂದಾಗ ಮಲಗಿಕೊಂಡಿರುವ ಮನುಷ್ಯನು ಕನವರಿಸುತ್ತಾನೆ. ಈತನ ಕನವರಿಕೆಯ ಆಶಯ ಒಂದೇ: ಶುಭ ನುಡಿಯೆ ಶಕುನದ ಹಕ್ಕಿ, ಶುಭ ನುಡಿಯೆ!

ಆರನೆಯ ನುಡಿ ಹೀಗಿದೆ:
ನಟ್ಟಿರುಳಿನ ನೆರಳಿನಲ್ಲಿ
ನೊಂದ ಜೀವ ಮಲಗಿರಲಾಗಿ
ಸವಿಗನಸು ಕಾಣುವಾಗ
ಗೂಗೆಯೊಂದು ಘೂಕ್ಕೆನುತಿತ್ತ
                   ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಹಗಲು ಮನುಷ್ಯನನ್ನು ಹಿಂಡಬಹುದಾದ ಸಮಯವಾದರೆ, ಇರುಳು ಆತನಿಗೆ ನಿದ್ದೆಯ ನೆಮ್ಮದಿಯನ್ನು ಕೊಡುವ ಸಮಯ. ಅಂತಲೇ ಬೇಂದ್ರೆಯವರು ನಟ್ಟಿರುಳಿನ(=ನಡು ಇರುಳಿನ=ಮಧ್ಯ ರಾತ್ರಿಯ) ಸಮಯವನ್ನು ನೆರಳು ಎಂದು ಬಣ್ಣಿಸುತ್ತಾರೆ. ನೊಂದ ಜೀವವು ಈ ನೆರಳಿನಲ್ಲಿ ನೆಮ್ಮದಿಯನ್ನು ಪಡೆದು ಸವಿಗನಸು ಕಾಣುತ್ತಿರುತ್ತದೆ. ಆದರೆಮಧ್ಯರಾತ್ರಿಯು ಗೂಗೆಗೆ ಜಾಗರಣೆಯ ಸಮಯವಲ್ಲವೇ! ಹಾಗಾಗಿ ಇದೇ ಹೊತ್ತಿನಲ್ಲಿ ಗೂಗೆಯೊಂದರ ಘೂಕ್ ಎನ್ನುವ ಧ್ವನಿ ನೊಂದವನನ್ನು ಎಚ್ಚರಿಸಿ, ಅಪಶಕುನದ ಸೂಚನೆಯಾಗಿ ಮತ್ತೆ ಕಾಡುತ್ತದೆ.

ಆ ಸಂದರ್ಭದ ಮನೋಸ್ಥಿತಿಯನ್ನು ಬೇಂದ್ರೆಯವರು ಏಳನೆಯ ನುಡಿಯಲ್ಲಿ ಹೀಗೆ ಬಣ್ಣಿಸಿದ್ದಾರೆ:
ಎಚ್ಚರಾದ ಪೆಚ್ಚು ಮನವು
ಹುಚ್ಚೆದ್ದು ಹರಿಯುತಿರಲು
ನಿದ್ದೆಯಿಲ್ಲ ಆಕಳಿಸಿದರೂ
ಹಲ್ಲಿಯೊಂದು ಲೊಟಗುಡತಿತ್ತ
                 ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |
ಅಪಶಕುನದ ಧ್ವನಿಯಿಂದಾಗಿ ಎಚ್ಚರಾದ ಜೀವಿಯು ಏನು ಮಾಡುವದೆಂದು ತಿಳಿಯದೆ ಪೆಚ್ಚಾಗಿ ಕೂರುತ್ತಾನೆ. ಆತನ ಮನಸ್ಸಿಗೆ ಒಂದು ಗುರಿ ಇಲ್ಲದಂತಾಗಿ, ಅದು ಹುಚ್ಚೆದ್ದು ಎಲ್ಲೆಡೆಗೂ ಹರಿಯುತ್ತದೆ. ಆಕಳಿಕೆಗಳು ಬರುತ್ತಲೇ ಇರುತ್ತವೆ. ಆದರೆ ನಿದ್ದೆ ಮಾತ್ರ ಬಾರದು. ಇದೇ ಹೊತ್ತಿನಲ್ಲಿ ಗೋಡೆಯ ಮೇಲಿನ ಹಲ್ಲಿಯೊಂದು ಲೊಚಗುಡುತ್ತದೆ. ಇದು ಮತ್ತೊಂದು ಅಪಶಕುನ!

ಎಂಟನೆಯ ನುಡಿ ಹೀಗಿದೆ:
ಬೆಳಗಿನ ತಂಗಾಳಿ ಬಂದು
ನಸುಕು ಮಸುಕು ಮೂಡುತಲಿರಲು
ಚಿಲೀ ಪಿಲೀ ಚಿಲಿಪಿಲಿ ಎಂದು
ಹಾಲಕ್ಕಿ ಉಲಿಯುತಲಿತ್ತ
                 ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ಅಂತೂ ಇಂತೂ ಬೆಳಗು ಮೂಡುತ್ತದೆ. ಆದರೆ ನಸುಕು ಇನ್ನೂ ಮಸುಕಾಗಿಯೇ ಇದೆ. ಬೆಳಗಿನ ತಂಗಾಳಿಯು ಸ್ವಲ್ಪ ಮಟ್ಟಿಗಾದರೂ ಉಲ್ಲಾಸವನ್ನು ಮೂಡಿಸಬೇಕು. ಬದುಕಿನ ಸಂಕೇತಗಳಾದ ಹಕ್ಕಿಗಳು ಚಿಲಿಪಿಲಿಗುಟ್ಟುತಿವೆ. ಇವುಗಳ ಜೊತೆಗೇ ಅಪಶಕುನದ ಹಕ್ಕಿಯಂದೇ ಕರೆಯಲಾದ ಹಾಲಕ್ಕಿಯೂ ಸಹ ತನ್ನ ಧ್ವನಿಯನ್ನು ಈ ಚಿಲಿಪಿಲಿಗೆ ಸೇರಿಸಿದೆ! ಅಪಶಕುನಗಳು ಈ ರೀತಿ ಬೆಂಬತ್ತಿರುವಾಗ, ಮನುಷ್ಯನು ದೈವದಲ್ಲಿ ಹೇಗೆ ನಂಬಿಗೆ ಇಟ್ಟಾನು?

ಕೊನೆಯ ನುಡಿಯಲ್ಲಿ ಬೇಂದ್ರೆಯವರು ದೈವಕ್ಕೆ ಶರಣು ಹೋಗದೇ, ಬೇರೆ ಮಾರ್ಗವಿಲ್ಲವೆಂದು ಹೇಳುತ್ತಾರೆ :
ನಿನ್ನ ಸೊಲ್ಲ ನಂಬಿ ಎದ್ದೆ
ಮೈಯೆಲ್ಲ ನಡುಕವಿದ್ದು
ನೀನೆ ಶುಭ ನುಡಿಯುವಾಗ
ಏನಿದ್ದೇನು? ಎಲ್ಲಾ ಶುಭವೇ !
                  ಶುಭ ನುಡಿಯೆ
ಶುಭ ನುಡಿಯೆ ಶಕುನದ ಹಕ್ಕಿ | ಶುಭ ನುಡಿಯೆ |

ದೇವರಲ್ಲಿ ವಿಶ್ವಾಸ ಇಟ್ಟೇ ಮನುಷ್ಯನು ಏಳಬೇಕಾಗುತ್ತದೆ, ಅಂದರೆ ತನ್ನ ಪ್ರಯತ್ನಗಳಿಗೆ ಸಿದ್ಧನಾಗಬೇಕಾಗುತ್ತದೆ. ಆ ಪ್ರಯತ್ನಗಳು ಫಲಿಸಲಿಕ್ಕಿಲ್ಲ ಎನ್ನುವ ಹೆದರಿಕೆಯನ್ನು ಬೇಂದ್ರೆ ಮೈಯೆಲ್ಲ ನಡುಕವಿದ್ದು ಎಂದು ಹೇಳುವ ಮೂಲಕ ಸೂಚಿಸುತ್ತಾರೆ. ಅಪಶಕುನಗಳ ಸರಣಿಯೇ ಈ ಹೆದರಿಕೆಗೆ ಕಾರಣ. ಈ ಹೆದರಿಕೆಯನ್ನು ಮೆಟ್ಟಲು ಆತ ತನಗೆ ತಾನೆ ಅಂದುಕೊಳ್ಳುತ್ತಾನೆ: ದೇವರೆ, ನಾನು ನಿನಗೆ ಶರಣು ಬಂದಿರುವಾಗ, ಶುಭಶಕುನವನ್ನು ನೀನೇ ನುಡಿಯುವಿ. ಆ ಸಮಯದಲ್ಲಿ ಉಳಿದ ಅಪಶಕುನಗಳಿಗೆ ಬೆಲೆ ಎಲ್ಲಿದೆ? 
ದೇವರಲ್ಲಿ ಅಚಲ ನಂಬಿಕೆ ಇದ್ದಾಗೆ ಎಲ್ಲವೂ ಶುಭವೇ.
....................................................................................

ಕಳವಳದ ಕತ್ತಲಲ್ಲಿ ಮುಳುಗಿದ ಮನಸ್ಸು ಬೆಳಕಿನ ಕಿರಣ ಕಂಡೀತೇನೊ ಎಂದು ಹಂಬಲಿಸುತ್ತಿರುತ್ತದೆ. ಶುಭಶಕುನಗಳು ಬೆಳಕು ಬಂದೀತೆನ್ನುವ ಭರವಸೆಯಾಗಿವೆ. ಆದರೆ ಅಪಶಕುನಗಳೇ ಸುತ್ತಲೆಲ್ಲ ಮುತ್ತುತ್ತಿರುವಾಗ ಮನಸ್ಸು ಮತ್ತೆ ಮತ್ತೆ ತಳಮಳದಲ್ಲಿ ಮುಳುಗುತ್ತದೆ. ಶುಭಶಕುನಗಳಿಗಾಗಿ ಹಾತೊರೆಯುತ್ತದೆ. ಇಂತಹ ಮನೋಸ್ಥಿತಿಯ ಚಿತ್ರಣ ಈ ಕವನದಲ್ಲಿದೆ.

{ಟಿಪ್ಪಣಿ: ಕಳವಳಿಸುತ್ತಿರುವ ಮನಸ್ಸನ್ನು ಚಿತ್ರಿಸುವ ಕವನಗಳು ಕಡಿಮೆ. ಮನಸ್ಸು ನಿರಾಶೆಯಲ್ಲಿ ಸಿಲುಕಿದಾಗ, ಮತ್ತೆ ಮೇಲೆತ್ತುವಂತಹ ಕವನವನ್ನು ಶ್ರೀ ವಿವೇಕಾನಂದರು ಬರೆದಿದ್ದಾರೆ. `Hold on yet a while brave heart, the victory is sure to come ಎನ್ನುವ ಅವರ ಕವನವನ್ನು ಓದುವ ಕೊಂಡಿ ಇಲ್ಲಿದೆ.]

Monday, January 10, 2011

ಎರಡು ಲೇಖನಗಳು : ಒಂದು ಪ್ರಶ್ನೆ

ನಮ್ಮ ಸಮಾಚಾರ ಪತ್ರಿಕೆಗಳಲ್ಲಿ ಎರಡು ಲೇಖನಗಳು ಅಲ್ಪಕಾಲಾಂತರದಲ್ಲಿ ಪ್ರಕಟವಾಗಿರುವದು, ಈ ವಿಷಯಕ್ಕೆ ನಮ್ಮ ‘ವಿಚಾರವಾದಿ’ಗಳು ಕೊಡುತ್ತಿರುವ ಮಹತ್ವವನ್ನು ತೋರಿಸುತ್ತದೆ.  ಮೊದಲನೆಯದು ಜನೆವರಿ ಐದನೆಯ ದಿನಾಂಕದ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಎರಡನೆಯದು ಜನೆವರಿ ಒಂಬತ್ತನೆಯ ದಿನಾಂಕದ ಸಂಯುಕ್ತ ಕರ್ನಾಟಕದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾಗಿದೆ. ಪ್ರಜಾವಾಣಿಯ  ಅಂಕಣದ ಲೇಖಕರು ಶ್ರೀ ಅನಂತಮೂರ್ತಿ. ಸಂಯುಕ್ತ ಕರ್ನಾಟಕದಲ್ಲಿ ಬರೆದವರು ಶ್ರೀ ಕೆ.ಎಸ್. ಶರ್ಮಾ. ಎರಡೂ ಲೇಖನಗಳ ಹೂರಣ ಒಂದೇ: ಇತ್ತೀಚೆಗೆ ಸೆರೆಮನೆಯ ಶಿಕ್ಷೆಗೆ ಒಳಗಾದ ವಿನಾಯಕ ಸೇನರ ಪರವಾದ ವಕಾಲತ್ತು.

ಮೊದಲಿಗೆ ಶ್ರೀ ಶರ್ಮಾ ಅವರ ಲೇಖನವನ್ನು ಓದಿ:





ಶ್ರೀಮಾನ್ ಕೆ.ಎಸ್.ಶರ್ಮಾ ಅವರ ಬಗೆಗೆ ನನಗೆ ತುಂಬ ಗೌರವವಿದೆ. ಅವರು ಕಾನೂನು ಪರಿಣತರು ಹಾಗು ಕರ್ನಾಟಕದ ದಿನಗೂಲಿ ಆಂದೋಲನದ ಪ್ರಮುಖ ನಾಯಕರು. ಆದರೆ ಮೂಲತಃ ಮಾರ್ಕ್ಸವಾದಿಯಾದ ಶರ್ಮಾ ದೇಶದ ಎಲ್ಲ ಸಮಸ್ಯೆಗಳನ್ನು ಹಾಗು ಪರಿಹಾರಗಳನ್ನು ತಮ್ಮ ಮಾರ್ಕ್ಸವಾದದ ದೃಷ್ಟಿಕೋನದಿಂದಲೇ ನೋಡಬಯಸುತ್ತಾರೆ. ಈ ಸಂದರ್ಭದಲ್ಲಿ ನಾವು ರಶಿಯದ ಹಾಗು ಚೀನಾದ ಮಾರ್ಕ್ಸವಾದಿಗಳಿಗೂ ಭಾರತೀಯ ಮಾರ್ಕ್ಸವಾದಿಗಳಿಗೂ ಇರುವ ಅಂತರವನ್ನು ಗಮನಿಸುವದು ಅವಶ್ಯಕ. ರಶಿಯದ ಹಾಗು ಚೀನಾದ ಮಾರ್ಕ್ಸವಾದಿಗಳು ತಮ್ಮ ದೇಶದ ಹಿತಾಸಕ್ತಿಯನ್ನು ತಿಳಿದುಕೊಂಡವರು ಹಾಗು ಕಟ್ಟಾ ದೇಶಾಭಿಮಾನಿಗಳು. ಭಾರತೀಯ ಮಾರ್ಕ್ಸವಾದಿಗಳಿಗೆ ದೇಶದ ಹಿತಕ್ಕಿಂತಲೂ ಮಾರ್ಕ್ಸವಾದದ ಹಿತವೇ ಮುಖ್ಯವಾಗಿದೆ.

ನನ್ನ ಅಭಿಪ್ರಾಯಕ್ಕೆ ಪುಷ್ಟಿ ಕೊಡಲು ನಾನು ಬಂಗಾಲ ಹಾಗು ಕೇರಳ ರಾಜ್ಯಗಳ ಉದಾಹರಣೆಯನ್ನು ಕೊಡಬಯಸುತ್ತೇನೆ. ಬಂಗಾಲದಲ್ಲಿ ಅನೇಕ ವರ್ಷಗಳಿಂದ ಆಳುವ ಕಮ್ಯುನಿಸ್ಟ ಪಕ್ಷದ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾಚಾರ ಹಾಗು ಆ ರಾಜ್ಯದ ಪೋಲೀಸರು ಮುಗ್ಧ ರೈತರ ಮೇಲೆ ಮತ್ತು ಸಾಮಾನ್ಯ ಜನತೆಯ ಮೇಲೆ ಮಾಡುತ್ತಿರುವ ಅತ್ಯಾಚಾರಗಳು ಶರ್ಮಾರವರಿಗೆ ಗೊತ್ತಿಲ್ಲವೆ? ಕೇರಳದಲ್ಲಿ  ಆಳುವ ಪಕ್ಷದ ಕೆಲವು ಧುರೀಣರು ರತಿಹಿಂಸೆಯಲ್ಲಿ ತೊಡಗಿಕೊಂಡಿದ್ದು ಹಾಗು ಅಲ್ಲಿ ಶ್ರೀ ಜೋಸೆಫ್ ಎನ್ನುವ ಉಪನ್ಯಾಸಕರ ಕೈಗಳನ್ನು ಉಗ್ರವಾದಿಗಳು ಕತ್ತರಿಸಿದ್ದದ್ದು ಇವರಿಗೆ ಗೊತ್ತಿಲ್ಲವೆ?  ಈ ಘಟನೆಗಳು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೆ? ಈ ಎಲ್ಲ ಸಂದರ್ಭಗಳಲ್ಲಿ ತುಟಿಗಳನ್ನೂ ಸಹ ಅಲುಗಾಡಿಸದ ಶರ್ಮಾ ಅವರು ವಿನಾಯಕ ಸೇನರಿಗೆ ಭಾರತೀಯ ನ್ಯಾಯಾಲಯವು ಶಿಕ್ಷೆ ನೀಡಿದ್ದಕ್ಕಾಗಿ ಗುಡುಗುತ್ತಿದ್ದಾರೆ.

ವಿನಾಯಕ ಸೇನರು ಉತ್ತಮ ವೈದ್ಯರಿರಬಹುದು, ಆದಿವಾಸಿಗಳ ಸೇವೆಯನ್ನು ನಿ:ಸ್ಪೃಹರಾಗಿ ಮಾಡಿರಬಹುದು. ಆದರೆ ಈ ದೇಶದ ಕಾನೂನನ್ನು ಅವರು ಭಂಗಿಸಿದ್ದರೆ, ಅವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು. ಸೇನರೇ ಆಗಲಿ, ಶರ್ಮಾರೇ ಆಗಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಅಲ್ಲದೆ ನ್ಯಾಯಾಲಯವು ಕಾನೂನಿನ ಎಲ್ಲ ಮುಖಗಳ ದೀರ್ಘ ಅಧ್ಯಯನದ ನಂತರವೇ ತೀರ್ಪು ನೀಡುತ್ತದೆ. ಈ ತೀರ್ಪನ್ನು ನಾವು ಗೌರವಿಸಬೇಡವೆ? ನಮಗೆ ಬೇಡವಾದ ತೀರ್ಪಿಗಾಗಿ ನ್ಯಾಯಾಲಯವನ್ನು ಟೀಕಿಸುವದು ಸರಿಯೆ? ಈ ತೊಡಕನ್ನು ಬದಿಗೆ ಸರಿಸಲೆಂದೇ ಶರ್ಮಾ ಬೇರೊಂದು ಉಪಾಯ ಹುಡುಕುತ್ತಾರೆ. ಅದೇನೆಂದರೆ : ಭಾರತದ ಕಾನೂನುಗಳೇ ಸರಿಯಾಗಿಲ್ಲ! ನಮ್ಮ ಕಾನೂನುಗಳು ಮಾನವತಾವಿರೋಧಿಯಾಗಿವೆ! ಯಾಕೆ ಸ್ವಾಮಿ? ಈಗಿರುವ ಕಾನೂನುಗಳ ಮೂಲಕ ಎಷ್ಟು ದೇಶದ್ರೋಹಿಗಳನ್ನು ನೀವು ಶಿಕ್ಷೆಗೆ ಒಳಪಡಿಸಿದ್ದೀರಿ? ಅಫಝಲ್ ಗುರು, ಕಸಬರಂತಹ ಭಯೋತ್ಪಾದಕರು  ಸೆರೆಮನೆ ಎನ್ನುವ ಅರಮನೆಗಳಲ್ಲಿ ಆರಾಮಾಗಿ ಕಾಲಕ್ಷೇಪ ಮಾಡುತ್ತಿಲ್ಲವೆ? ಇದಕ್ಕಿಂತ ಮಾನವತಾವಾದಿ ಕಾನೂನು ಯಾವ ದೇಶದಲ್ಲಿ ನಿಮಗೆ ಸಿಕ್ಕೀತು?

ಎರಡನೆಯದಾಗಿ ಸೇನರ ಬೆಂಬಲಕ್ಕೆ ನಿಂತಂತಹ ಮಾನವ ಹಕ್ಕುಗಳ ಸಂಘಟನೆಗಳ ದೊಡ್ಡ ಪಟ್ಟಿಯನ್ನೇ ಶರ್ಮಾ ಕೊಟ್ಟಿದ್ದಾರೆ. ಶರ್ಮಾರಿಗೆ ಹಾಗು ಈ ಸಂಘಟನೆಗಳಿಗೆ ಭಾರತದಲ್ಲಿ ಸಂಚಾರ ನಿಯಂತ್ರಿಸುವ ಪೋಲೀಸನೂ ಸಹ ಮಾನವ ಹಕ್ಕುಗಳನ್ನು ಉಲ್ಲಂಘಿಸುವ ಸರ್ವಾಧಿಕಾರಿಯಂತೆ ಕಾಣುತ್ತಾನೆ. ಇವರಿಗೆ ರಶಿಯಾ ಹಾಗು ಚೀನಾದಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆ ಕಾಣುವದಿಲ್ಲ. ಅಮೇರಿಕಾ ಎಷ್ಟೆಲ್ಲ ದೇಶಗಳ ಅಮಾಯಕ ನಾಗರಿಕರ ಮೇಲೆ ವರ್ಷ ವರ್ಷವೂ ಬಾಂಬು ಸುರಿಸುವದು ಕಾಣುವದಿಲ್ಲ. ಆಸ್ಟ್ರೇಲಿಯಾದಲ್ಲಿ ವರ್ಣೀಯ ಹಿಂಸೆ ನಡೆಯುತ್ತಿರುವದು ಕಾಣುವದಿಲ್ಲ. ನಮ್ಮ ದೇಶದ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾದ ಒಬ್ಬ ಅಪರಾಧಿಯನ್ನು ಸೆರೆಮನೆಗೆ ಕಳುಹಿಸಿದರೆ ಮಾತ್ರ ಅದು ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗುತ್ತದೆ! ಇದಲ್ಲದೆ, ಅನೇಕ  ಮಾನವ ಹಕ್ಕುಗಳ ಸಂಘಟನೆಗಳು ವಿವಿಧ ದೇಶಗಳ ಗುಪ್ತಚಾರ ಸಂಸ್ಥೆಗಳ ಮುಖವಾಡಗಳು ಎನ್ನುವದು ಶರ್ಮಾರಿಗೆ ಗೊತ್ತಿಲ್ಲವೆ? ಭಾರತೀಯ ಸಮಾಜವನ್ನು ಒಡೆಯುವದು ಹಾಗು ಭಾರತದ ಆಡಳಿತವನ್ನು ಬುಡಮೇಲು ಮಾಡುವದೇ ಈ ಸಂಸ್ಥೆಗಳ ಉದ್ದೇಶ ಎನ್ನುವದು  ಶರ್ಮಾರಿಗೆ ಗೊತ್ತಿಲ್ಲವೆ?

ಕೆಳಗಿನ ನ್ಯಾಯಾಲಯವು ಶಿಕ್ಷೆ ವಿಧಿಸಿದಾಗ, ಮೇಲಿನ ನ್ಯಾಯಾಲಯಕ್ಕೆ ಅಪೀಲು ಮಾಡಿಕೊಳ್ಳಲು ಕಾನೂನಿನಲ್ಲಿ ಅವಕಾಶವಿರುತ್ತದೆ. ವಿನಾಯಕ ಸೇನರು ಸಾಧ್ಯವಿದ್ದರೆ ಆ ಅವಕಾಶವನ್ನು ಬಳಸಿಕೊಳ್ಳಬಹುದು. ಅಂತಹ ನೇರಮಾರ್ಗವನ್ನು ಬಿಟ್ಟು ನಮ್ಮ ನ್ಯಾಯವ್ಯವಸ್ಥೆಯನ್ನು ಹಾಗು ನ್ಯಾಯಾಲಯಗಳನ್ನು ದೂಷಿಸುವದು ಶರ್ಮಾರಂತಹ ಕಾನೂನುಪಂಡಿತರಿಗೆ ಭೂಷಣವಲ್ಲ.  ಇಂತಹ ವಿಧಾನವನ್ನು ಅನುಸರಿಸುವದರಿಂದಲೇ ಅರುಂಧತಿ ರಾಯರಂತಹ ವ್ಯಕ್ತಿಗಳಿಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಿಂಚುವದು ಸಾಧ್ಯವಾಗಿದೆ. ಆದರೆ ಈ ಸ್ವಾರ್ಥಿಗಳ ಮಹತ್ವಾಕಾಂಕ್ಷೆಗಾಗಿ ನಮ್ಮ ದೇಶ ಎಂತಹ ಬೆಲೆ ತೆರಬೇಕಾಗುತ್ತದೆ ಎನ್ನುವದು ಶರ್ಮಾರಿಗೆ ಗೊತ್ತಿಲ್ಲವೆ? ಶರ್ಮಾ ಕೀರ್ತಿಕಾಂಕ್ಷಿ ಅಲ್ಲ ಎನ್ನುವದು ನನಗೆ ಗೊತ್ತಿದೆ. ಬದುಕಿನುದ್ದಕ್ಕೂ ಅಪ್ಪಿಕೊಂಡು ಬಂದ ಮಾರ್ಕ್ಸವಾದವನ್ನು ಸಮರ್ಥಿಸುವ ಸಲುವಾಗಿ, ದೇಶದ ಕಾನೂನುಗಳನ್ನು ಹೀಯಾಳಿಸುವ ಕಸರತ್ತನ್ನು ಶರ್ಮಾ ಮಾಡುತ್ತಿದ್ದಾರೆಯೆ?

ಶರ್ಮಾ ಅವರ ದೃಷ್ಟಿಕೋನ ಹೇಗೇ ಇರಲಿ, ಅವರ ಬರಹದಲ್ಲಿ ಸರಳತೆ ಇದೆ, ಸಾಕಷ್ಟು ಮಾಹಿತಿ ಇದೆ ಹಾಗು ತಾವು ನಂಬಿರುವದು ಏನು ಎನ್ನುವದರ ಸ್ಪಷ್ಟತೆ ಇದೆ. ನನ್ನ ನಂಬಿಕೆ ಬೇರೆಯಾಗಿರುವದರಿಂದ ಅವರ ಅಭಿಪ್ರಾಯವನ್ನು ನಾನು ಒಪ್ಪುವದಿಲ್ಲ, ಅಷ್ಟೇ. 
ಈಗ ಶ್ರೀ ಅನಂತಮೂರ್ತಿಯವರ ಲೇಖನವನ್ನು (ಪ್ರಜಾವಾಣಿ, ೫ನೆಯ ಜನೆವರಿ) ನೋಡಿರಿ.


ಅನಂತಮೂರ್ತಿಯವರು ಕ್ಲಿಷ್ಟ ಶೈಲಿಯಲ್ಲಿ ಲೇಖನವನ್ನು ಬರೆಯಲು ಇಷ್ಟ ಪಡುತ್ತಾರೆ. ಹಾಗೆ ಮಾಡುವದರಿಂದ ತಮ್ಮ ಲೇಖನವು ಕೃತಕ ಸಂಕೀರ್ಣತೆಯನ್ನು ಪಡೆದು, ಪಾಂಡಿತ್ಯಪೂರ್ಣವಾಗಿ ಕಂಗೊಳಿಸುವದು ಎನ್ನುವದು ಅವರ ಭ್ರಮೆಯಾಗಿದೆ. ಮಾಹಿತಿಶೂನ್ಯವಾಗಿರುವ ತಮ್ಮ ಲೇಖನದಲ್ಲಿ ಪಾಂಡಿತ್ಯವನ್ನು ಸೃಷ್ಟಿಸುವ ಉದ್ದೇಶದಿಂದ ಅನಂತಮೂರ್ತಿಯವರು ಭೀಷ್ಮ ಹಾಗು ವಿಭೀಷಣರ ರೂಪಕಗಳನ್ನು ಬಳಸಿಕೊಂಡಿದ್ದಾರೆ ಎನ್ನಬಹುದು. ಈ ರೂಪಕಗಳನ್ನು ಒಟ್ಟಾಗಿ ನೋಡಬೇಕೆಂದು ಅವರು ನಮಗೆ ಸೂಚನೆ ಇತ್ತಿದ್ದಾರೆ. ಕೊನೆಗೊಮ್ಮೆ ಸುತ್ತು ಬಳಸಿ ನಕ್ಸಲರು ಕೆಟ್ಟವರೇನಲ್ಲ , ನಮ್ಮ ರಾವಣ ವ್ಯವಸ್ಥೆಯನ್ನು ಬದಲಾಯಿಸಲು (ಶ್ರೀರಾಮಚಂದ್ರನಂತೆ?) ಹೋರಾಡುತ್ತಿರುವವರು ಎಂದು ಶರಾ ಹಾಕುತ್ತಾರೆ. ಈ ನಕ್ಸಲವಾದಿಗಳು ಕರ್ನಾಟಕದಲ್ಲಿ ಮಾಡುತ್ತಿರುವ ಮಹಾಕ್ರಾಂತಿಯಲ್ಲಿ ಈವರೆಗೂ ಪ್ರಾಣ ತೆತ್ತಿರುವವರು ಯಾರು? ಅಮಾಯಕ ಹಳ್ಳಿಗರೊ ಅಥವಾ (ನೀಚ!) ಬಂಡವಾಳಶಾಹಿಗಳೊ? ಸ್ವತಃ ಅನಂತಮೂರ್ತಿಯವರು ಯಾವ ವರ್ಗದಲ್ಲಿ ಸೇರಿದ್ದಾರೆ? ರಾಜಧಾನಿಯ ಡಾಲರ್ ಕಾಲನಿಯಲ್ಲಿ ಮನೆ ಕಟ್ಟಿಕೊಂಡವರನ್ನು, ದುಬಾರಿ ಮದ್ಯಪಾನ ಮಾಡುವ ಶಕ್ತಿಯುಳ್ಳವರನ್ನು  ಯಾವ ವರ್ಗದಲ್ಲಿ ಸೇರಿಸಬಹುದು? ರಾವಣನ ರಾಜ್ಯಭಾರದಲ್ಲಿ ಅವನ ಭಟ್ಟಂಗಿಯಾಗಿ, ಸಕಲ ಸವಲತ್ತುಗಳನ್ನು ಪಡೆದುಕೊಂಡು ವಿಭೀಷಣನ ಹೆಸರು ಹೇಳುವವರನ್ನು ಯಾವ ಗುಂಪಿಗೆ ಸೇರಿಸಬೇಕು? ಹಾಗಿದ್ದರೆ ಅನಂತಮೂರ್ತಿಯವರು ಯಾತಕ್ಕಾಗಿ ವಿನಾಯಕ ಸೇನರ ಪರವಾಗಿ ವಕಾಲತ್ತು ಮಾಡಲು ಬಯಸುತ್ತಾರೆ? ನನಗೆ ತೋರಿದ್ದನ್ನು ಮೊದಲೇ ಹೇಳಿದ್ದೇನೆ. ದೇಶದ್ರೋಹಿಗಳ ಪರವಾಗಿ ನೀವು ಮಾನವತಾವಾದದ ಬುರುಡೆಯನ್ನು ಉರುಳಿಸಿದರೆ, ನೀವು ಅಂತರರಾಷ್ಟ್ರೀಯ ರಂಗದಲ್ಲಿ ಮಿಂಚಬಹುದು. ಈ ಮಾರ್ಗವನ್ನು ಅರುಂಧತಿ ರಾಯ ಚೆನ್ನಾಗಿ ಬಳಸಿಕೊಂಡಿದ್ದಾರೆ. ಅನಂತಮೂರ್ತಿಯವರಿಗೂ ಈ ಮಾರ್ಗ ಹೊಸದೇನಲ್ಲ.