Wednesday, July 29, 2015

ತ್ರಿವೇಣಿ



ತ್ರಿವೇಣಿಯವರು (ಜನನ: ೧-೯-೧೯೨೮; ಮರಣ: ೨೯-೭-೧೯೬೩) ನಿಧನರಾಗಿ ಇಂದಿಗೆ ೫೫ ವರ್ಷಗಳಾದವು. ಅವರ ಕಾದಂಬರಿಗಳು ಮಾತ್ರ ಇನ್ನೂ ಪುನರ್ಮುದ್ರಣವಾಗುತ್ತಲೇ ಇವೆ. ಕನ್ನಡ ಕಾದಂಬರಿಕಾರರಲ್ಲಿ ಇವರಷ್ಟು ಜನಪ್ರಿಯತೆ ಪಡೆದವರು ಬಹುಶಃ ಬೇರಾರೂ ಇರಲಿಕ್ಕಿಲ್ಲ.

ತ್ರಿವೇಣಿಯವರ ಕಾದಂಬರಿಗಳಿಗೆ ಕೆಲವು ಪ್ರಧಾನ ಬಾಹ್ಯಲಕ್ಷಣಗಳಿವೆ. ಇವರ ಕಾದಂಬರಿಗಳ ಶೈಲಿ ಸರಳವಾದದ್ದು, ಲಲಿತವಾದದ್ದು. ಕಾದಂಬರಿಯ ಪಾತ್ರಗಳನ್ನು ಎರಡೇ ಆಯಾಮದ ಪಾತ್ರಗಳು ಎನ್ನಬಹುದು, ಅವುಗಳಲ್ಲಿ ಸಂಕೀರ್ಣತೆ ಇಲ್ಲ. ಕಥಾನಕವೂ ಸಹ ಸರಳವಾಗಿಯೇ ಇರುತ್ತದೆ. ರೇಲವೇ ಹಳಿಗಳ ಮೇಲೆ ಸಮಗತಿಯಲ್ಲಿ ಚಲಿಸುವ ಟ್ರೇನಿನಂತೆ, ಕಾದಂಬರಿಯು ಒಂದನೆಯ ಪುಟದಿಂದ ಕೊನೆಯ ಪುಟದವರೆಗೂ ಸರಾಗವಾಗಿ ಸಾಗುತ್ತದೆ. ಇಂತಹ ಶೈಲಿಯ ಒಂದು ಅನುಕೂಲತೆ ಎಂದರೆ ಪಾತ್ರಗಳಲ್ಲಿ ಒಂದಾಗುವುದು ಓದುಗನಿಗೆ ಕಷ್ಟವಾಗುವುದಿಲ್ಲ. ಎಲ್ಲಕ್ಕೂ ಮುಖ್ಯವಾಗಿ ತ್ರಿವೇಣಿಯವರ ಕಾದಂಬರಿಗಳಲ್ಲಿ ನವಿರು ರೋಮಾನ್ಸ್ ತುಂಬಿರುತ್ತದೆ. ವಾತಾವರಣದಲ್ಲಿ ರೋಮಾನ್ಸ್ ಹರಡಿದೆ ಅನ್ನುತ್ತಾರಲ್ಲ, ಆ ರೀತಿಯಲ್ಲಿ! ಅವರ ಕೆಲವೊಂದು ಕಾದಂಬರಿಗಳಲ್ಲಿ ೮-೧೦ ಪುಟಗಳನ್ನು ಓದುವಷ್ಟರಲ್ಲಿಯೇ, ನಾಯಕ-ನಾಯಕಿಯರ ಪುಳಕಿತಗೊಳಿಸುವ ರೋಮ್ಯಾಂಟಿಕ್ ಸಂಭಾಷಣೆಗಳು ಪ್ರಾರಂಭವಾಗಿ ಬಿಡುತ್ತವೆ. ರೋಮ್ಯಾಂಟಿಕ್ ಸಂಭಾಷಣೆಗಳನ್ನು ಬರೆಯುವದರಲ್ಲಿ ತ್ರಿವೇಣಿಯವರು ಅನನ್ಯರು. ಬಹುಶಃ ಇದು ಅವರ ಸ್ವಭಾವಜನ್ಯ ಸಿದ್ಧಿಯಾಗಿರಬಹುದು!

ಇವೆಲ್ಲ ಅವರ ಕಾದಂಬರಿಗಳ ಬಾಹ್ಯಲಕ್ಷಣಗಳು. ತ್ರಿವೇಣಿಯವರ ಕಾದಂಬರಿಗಳ ಜನಪ್ರಿಯತೆಗೆ ಈ ಬಾಹ್ಯಲಕ್ಷಣಗಳ ಕೊಡುಗೆ ಇಲ್ಲವೆಂತಲ್ಲ. ಆದರೆ ಅವರ ಕಾದಂಬರಿಗಳ ಆಂತರ್ಯವೇ ಅವರ ಸಾಹಿತ್ಯದ ಜನಪ್ರಿಯತೆಗೆ ನೈಜ ಕಾರಣವಾಗಿದೆ. ತ್ರಿವೇಣಿಯವರಿಗಿಂತಲೂ ಮೊದಲು ಬರೆದ ಲೇಖಕಿಯರೂ ಸಹ ಮಹಿಳಾಸಮಸ್ಯೆಯನ್ನು ಕುರಿತು ಉತ್ತಮ ಕೃತಿಗಳನ್ನು ರಚಿಸಿದ್ದಾರೆ. ಆದರೆ ತ್ರಿವೇಣಿಯವರು ಕೇವಲ ಸಮಸ್ಯೆಗಳನ್ನಷ್ಟೇ ಬಣ್ಣಿಸಿ ತೃಪ್ತರಾಗಲಿಲ್ಲ. ಸಾಂಪ್ರದಾಯಕ ಸಮಾಜವು ಆಧುನಿಕತೆಯತ್ತ ಮುಖ ಮಾಡಿದಂತಹ ಕಾಲಘಟ್ಟವನ್ನು ಚಿತ್ರಿಸುವ ಸಾಹಿತ್ಯವಿದು. ಇಂತಹ ಅವಧಿಯ ಅವರ ನಾಯಕಿಯರಿಗೆ ಕನಸುಗಳಿವೆ,ಆಶೋತ್ತರಗಳಿವೆ. ಈ ಒಂದು ವಿಷಯದಲ್ಲಿ ತ್ರಿವೇಣಿಯವರು ಉಳಿದೆಲ್ಲ ಸಾಹಿತಿಗಳಿಗಿಂತ ಭಿನ್ನರಾಗಿದ್ದಾರೆ.

ತ್ರಿವೇಣಿಯವರು ಬರೆದ ೨೦ ಕಾದಂಬರಿಗಳಲ್ಲಿ ‘ಕೀಲುಗೊಂಬೆ’ ಹಾಗು ‘ಹೂವು-ಹಣ್ಣು’ ಈ ಎರಡು ಕಾದಂಬರಿಗಳು ಅವರ ಉಳಿದ ಕಾದಂಬರಿಗಳಿಗಿಂತ ಭಿನ್ನವಾಗಿವೆ. ಈ ಕಾದಂಬರಿಗಳ ನಾಯಕಿಯರಿಗೆ ಕನಸು ಕಾಣುವ ಅವಕಾಶವೇ ಇಲ್ಲ. ‘ಕೀಲುಗೊಂಬೆ’ ಕಾದಂಬರಿಯ ನಾಯಕಿ(!)ಯಾದ, ಸೀತಮ್ಮನ ಮದುವೆಯು ಅವಳ ಹದಿನೆರಡನೆಯ ವಯಸ್ಸಿನಲ್ಲಿಯೇ ಅಗುತ್ತದೆ. ಗೊಂಬೆಯಾಟವಾಡುವ ಹುಡುಗಿಗೆ ಎಂತಹ ಕನಸುಗಳು ಇದ್ದಾವು? ಇವಳು ತನ್ನ ಗಂಡನ ನಿರಂತರ ಕಾಮತೃಷೆಗೆ ಬಲಿಯಾದಂತಹ ಹೆಣ್ಣು. ಗಂಡ ಎಷ್ಟೇ ನೀಚನಾಗಿರಲಿ, ಹೆಂಡತಿಗೆ ಅವನೇ ಪರಮದೈವ ಎಂದು ನಂಬಿದ ಸಮಾಜದ ಚಿತ್ರಣ ಇಲ್ಲಿದೆ. ಆದರೆ ಕಾಲ ಬದಲಾಗುತ್ತಿರುವುದನ್ನು ಕಾದಂಬರಿಯ ಕೊನೆಯಲ್ಲಿ ತ್ರಿವೇಣಿ  ಸೂಚಿಸಿದ್ದಾರೆ. ಸೀತಮ್ಮನ ಮಗ ಮಧು ತನ್ನ ತಂದೆಯ ಪಶುವರ್ತನೆಗೆ ಅಸಹ್ಯಪಡುತ್ತಾನೆ, ರೇಗುತ್ತಾನೆ. ಸೀತಮ್ಮ ಆಸ್ಪತ್ರೆಯಲ್ಲಿದ್ದಾಗ, ಅವಳ ಜೊತೆಗಿದ್ದ ವಿವಿಧ ರೋಗಿಗಳು ವಿವಿಧ ಮನೋಧರ್ಮಗಳ ಪ್ರತೀಕಗಳಾಗಿದ್ದಾರೆ. ಕಂದಾಚಾರದ ನಿಯಮಗಳನ್ನು ಮನಸಾ ಒಪ್ಪಿಕೊಳ್ಳುವ ರುಕ್ಮಿಣಮ್ಮ ಅಲ್ಲಿದ್ದರೆ, ಮಧುರವಾಣಿಯಂತಹ ಸುಶಿಕ್ಷಿತ ಆಧುನಿಕ ತರುಣಿಯೂ ಅಲ್ಲಿದ್ದಾಳೆ. ಮಧುರವಾಣಿ ಹಾಗು ಆಕೆಯ ಗಂಡ ಪರಸ್ಪರ ಸಮಾನತೆಯಿಂದ ಹಾಗು ಒಲವಿನಿಂದ ವರ್ತಿಸುವ ರೀತಿಯನ್ನು ತ್ರಿವೇಣಿ ನಮ್ಮ ಸಮಾಜಕ್ಕೆ ಒಂದು ಮಾದರಿಯನ್ನಾಗಿ ತೋರಿಸ ಬಯಸುತ್ತಾರೆ. ಹೆಣ್ಣುಮಕ್ಕಳ ಕನಸುಗಳು ಹಾಗು ಆಶಯಗಳು ಆ ಕಾಲಘಟ್ಟದಲ್ಲಿ ಚಿಗುರು ಬಿಡುತ್ತಿರುವುದನ್ನು ಮಧುರವಾಣಿ ಎನ್ನುವ, ಒಂದು ಪುಟದ ಚಿಕ್ಕ ಪಾತ್ರ ಮೂಲಕ ತ್ರಿವೇಣಿ ತೋರಿಸುತ್ತಾರೆ. ಗಂಡನಿಗೆ ಹೆಂಡತಿಯ ಮೇಲೆ ಬಲಾತ್ಕಾರ ಮಾಡುವ ಹಕ್ಕು ಇಲ್ಲವೆನ್ನುವ ಪ್ರತಿಪಾದನೆಯನ್ನು ತ್ರಿವೇಣಿಯವರು ಈ ಕಾದಂಬರಿಯಲ್ಲಿ ಸುಮಾರು ೫೦ ವರ್ಷಗಳ ಹಿಂದೆಯೇ ಮಾಡಿದ್ದಾರೆ. ಈವರೆಗೂ ಇದು ಶಾಸನವಾಗದೇ ಇರುವುದು ನಮ್ಮ ಶಾಸಕರ ಅಹಂಕಾರ ತುಂಬಿದ ಪುರುಷಾಮೃಗ ಧೋರಣೆಯನ್ನು ತೋರಿಸುತ್ತದೆ. ಇಂತಹ ಒಂದು ದುರಂತಮಯ ಕಾದಂಬರಿಯಲ್ಲಿಯೂ ಸಹ ರೋಮಾನ್ಸ್ ಇಲ್ಲದೇ ಇಲ್ಲ. ಸೀತಮ್ಮನಿಗೆ ಕೆಲಸದಲ್ಲಿ ಸಹಾಯ ಮಾಡಲು ಇಟ್ಟುಕೊಳ್ಳಲಾಗಿದ್ದ ರೋಹಿಣಿ ಎನ್ನುವ ಹುಡುಗಿಯಲ್ಲಿ, ಸೀತಮ್ಮನ ಮಗನಿಗೆ ಆಸ್ಥೆ ಹುಟ್ಟುವುದರ ಮೂಲಕ, ರೋಮಾನ್ಸಿನ ಒಂದು ಸೆಳಕನ್ನು ತ್ರಿವೇಣಿಯವರು ಈ ಕಾದಂಬರಿಯಲ್ಲಿ ಬರೆಯದೆ ಬಿಟ್ಟಿಲ್ಲ.

‘ಹೂವು ಹಣ್ಣು’ ಕಾದಂಬರಿಯಲ್ಲಿ  ಎಳೆವಯಸ್ಸಿನ ವಿಧವೆಯೊಬ್ಬಳು ಸೂಳೆಯಾಗುವಂತಹ ಪರಿಸ್ಥಿತಿಯ ಚಿತ್ರಣವಿದೆ. ಕಾದಂಬರಿಯ ನಾಯಕಿಯು ತನ್ನ ಹೆಣ್ಣು ಮಗುವಿನ ಭವಿಷ್ಯಕ್ಕಾಗಿ ಮಾಡುವ ತ್ಯಾಗದ ಚಿತ್ರಣ ಈ ಕಾದಂಬರಿಯಲ್ಲಿದೆ. ಇಲ್ಲಿಯೂ ಸಹ ನಾಯಕಿಯ ಕನಸುಗಳು ಅಥವಾ ಆಶೋತ್ತರಗಳು ಅವಳ ಮಗುವಿನಲ್ಲಿ ಕೇಂದ್ರೀಕೃತವಾಗಿವೆಯೇ ಹೊರತು ಸ್ವತಃ ತನ್ನಲ್ಲಿ ಅಲ್ಲ. ಈ ಕಾದಂಬರಿಯು ತ್ರಿವೇಣಿಯವರ ಮೊದಲ ಪ್ರಕಟಿತ ಕೃತಿ.

ತ್ರಿವೇಣಿಯವರು ಮೊದಲು ಬರೆದ ಕಾದಂಬರಿ ‘ಅಪಸ್ವರ’. ಈ ಕಾದಂಬರಿ ಪ್ರಕಾಶಕರಿಂದ ತಿರಸ್ಕೃತವಾಯಿತು! ಸಾಮಾಜಿಕ ವಾಸ್ತವತೆಗೆ ಬಲಿಯಾದ ಹೆಣ್ಣು ಹೇಗೆ ತನ್ನ ಕನಸುಗಳನ್ನು ಸುಟ್ಟು ಹಾಕಬೇಕಾಗುತ್ತದೆ ಎನ್ನುವುದು ಈ ಕಾದಂಬರಿಯ ತಿರುಳು. ಕಥಾನಾಯಕಿ ಮೀರಾ ತನ್ನ ಕಾಲದ ಸಮಾಜದ ರೂಢಿಗಳ ಕೈಗೊಂಬೆಯಾದವಳು. ವೈದ್ಯಕೀಯ ಶಿಕ್ಷಣ ಪಡೆದು ಡಾ^ಕ್ಟರ್ ಆಗಬೇಕೆನ್ನುವುದು ಅವಳ ಮಹದಾಸೆ. ಆದರೆ ತನ್ನ ಆಸೆಗೆ ವಿರುದ್ಧವಾಗಿ ಅವಳು ತನ್ನ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗುತ್ತದೆ. ಅವಳ ಮದುವೆಯು ಹಳ್ಳಿಯ ಓರ್ವ ಶ್ರೀಮಂತ ಜಮೀನುದಾರ ಯುವಕನ ಜೊತೆಗೆ ಆಗುತ್ತದೆ. ಗಂಡ ಎಷ್ಟೇ ಒಳ್ಳೆಯವನಾದರೂ ಸಹ, ತನಗೆ ಬೇಕಾದಾಗ ಹೆಂಡತಿಯ ಮೇಲೆ ಬಲಾತ್ಕಾರ ಮಾಡಲು ಹಿಂದೆ ಮುಂದೆ ನೋಡುವವನಲ್ಲ. ಗಂಡ ಹಳ್ಳಿಗ. ಹಳ್ಳಿಯಲ್ಲಿಯೆ ಇರಬೇಕು ಎನ್ನುವವ; ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡಿದ ಹೆಂಡತಿಯ ಇಚ್ಛೆಗೆ ಬೆಲೆ ಇಲ್ಲ. ಮೀರಾಳ ಗೆಳತಿಯರು ನಗರವಾಸಿಗಳು. ಮೀರಾಳಿಗಿರುವಂತೆಯೆ ಅವರಿಗೂ ಕನಸುಗಳಿವೆ. ಅವರ ಕನಸುಗಳು ಮದುವೆ ಎನ್ನುವ ಸಾಮಾಜಿಕ-ಕೌಟಂಬಿಕ ವ್ಯವಸ್ಥೆಗೆ ಇನ್ನೂ ಸಿಲುಕಿಲ್ಲ . ಈ ಎಲ್ಲ ಪಾತ್ರಗಳು ಹೆಣ್ಣಿನ ವಿವಿಧ ಆಶಯಗಳ ಪ್ರತೀಕವಾಗಿವೆ. ಈ ಕಾದಂಬರಿಯ ಮುಂದುವರೆದ ಭಾಗವಾದ ‘ಅಪಜಯ’ದಲ್ಲಿ ಮೀರಾ ಗಟ್ಟಿಯಾಗಿದ್ದಾಳೆ. ಹೆಣ್ಣು ಸೆಟೆದು ನಿಂತು, ತನ್ನ ಆಶೋತ್ತರಗಳನ್ನು ಕೈಗೂಡಿಸಿಕೊಳ್ಳಬೇಕೆನ್ನುವುದು ಈ ಕಾದಂಬರಿಯಲ್ಲಿ ವ್ಯಕ್ತವಾಗಿದೆ. ಮೀರಾಳ ಗಂಡ ತುಂಬ ಒಳ್ಳೆಯವನೇ. ಆತ ಸ್ವಾತಂತ್ರ್ಯವನ್ನು ಕೊಟ್ಟಿದ್ದರಿಂದಲೇ ಮೀರಾಳಿಗೆ ತನ್ನ ಕನಸುಗಳನ್ನು ನನಸಾಗಿಸಲು ಸಾಧ್ಯವಾಯಿತು. ತನ್ನ ಗಂಡನನ್ನು ಹಳ್ಳಿಯಲ್ಲಿಯೇ ಬಿಟ್ಟು, ವೈದ್ಯಕೀಯ ಶಿಕ್ಷಣವನ್ನು ಕಲಿಯಲು ನಗರಕ್ಕೆ ಹೋಗುವ ನಿರ್ಧಾರ ಮಾಡಿದ ಮೀರಾ, ತನ್ನ ಗಂಡನಿಗೆ ಹೇಳುವ ಮಾತುಗಳನ್ನು ನೋಡಿರಿ. ಸ್ತ್ರೀಯರಲ್ಲಿ ಆಗಬೇಕಾದ ಬದಲಾವಣೆಯನ್ನು ಈ ಮಾತುಗಳು ತೋರಿಸುತ್ತವೆ ಎನ್ನಬಹುದು:

“ಈಗಂತೂ ಹಾಗೇ ಯೋಚಿಸಿದ್ದೀನಿ. ಮುಂದೇನಾಗುವುದೋ ಹೇಳಲಾರೆ. ಈ ಗಳಿಗೆ ನಮ್ಮದು. ನಾಳೆಯಲ್ಲಿ ನನಗೆ ನಂಬಿಕೆಯಿಲ್ಲ. ಮೆಡಿಕಲ್ ಮುಗಿಯುವವರೆಗೆ ನಾನು ಬದುಕಿದ್ದರೆ ಇಲ್ಲಿಗೇ-ನಿಮ್ಮಲ್ಲಿಗೇ ಬರುತ್ತೇನೆ. ಹೆಂಡತಿಯಂತಲ್ಲ-ಗೆಳತಿಯ ಹಾಗೆ. ಆದರೆ ನಾನು ಯಾವ ಕೆಲಸವೂ ಇಲ್ಲದೆ ನಿಮ್ಮ ಸುಖವೇ ನನ್ನ ಸುಖ ಎಂದು ತಿಳಿದು ಇಲ್ಲಿಯೆ ಇರಲಾರೆ. ಗಂಡನೇ ನನ್ನ ದೇವರು, ಅವನ ಸುಖವೇ ತನ್ನ ಸುಖ ಎಂದು ಭಾವಿಸುವ ಕಾಲ ಹೋಯಿತು. ಹೆಂಗಸು ತನ್ನ ಪತಿಗಿಂತಲೂ ತನ್ನ ವ್ಯಕ್ತಿತ್ವ, ಅಭಿಪ್ರಾಯ, ಆತ್ಮವನ್ನು ಪ್ರೀತಿಸುತ್ತಾಳೆ. ನನ್ನ ಮಹದಾಸೆಯನ್ನು ನೀವು ಗೌರವಿಸುತ್ತಿರುವದಕ್ಕಾಗಿ ನಾನು ಅತ್ಯಂತ ಕೃತಜ್ಞಳು.” (Highlighting ನನ್ನದು.)
ಹೆಣ್ಣನ್ನು ಹತ್ತಿಕ್ಕುವ ಕಂದಾಚಾರದ ವ್ಯವಸ್ಥೆಯಿಂದ ಹೆಣ್ಣು ಹೊರಬರಬೇಕೆನ್ನುವ ಆಶಯವನ್ನು ಹಾಗು ಆ ಸಂಧಿಕಾಲವನ್ನು ತ್ರಿವೇಣಿ ಈ ಮಾತುಗಳ ಮೂಲಕ ಸೂಚಿಸುತ್ತಿದ್ದಾರೆ.

ತ್ರಿವೇಣಿಯವರ ನಾಯಕಿಯರು ರೋಮ್ಯಾಂಟಿಕ್ ಸ್ವಭಾವದವರು. ಕ್ಷಿಪ್ರವಾಗಿ ಗಂಡಿನ ಪ್ರೀತಿಯಲ್ಲಿ ಸಿಲುಕುವವರು. ಇದು ತ್ರಿವೇಣಿ-ಕಾದಂಬರಿಗಳ ಬಹುತೇಕ ನಾಯಕಿಯರ ಒಂದು ವ್ಯಕ್ತಿತ್ವ ವಿಶೇಷ. ಹಾಗೆಂದು ಅವರ ನಾಯಕಿಯರು ಎಲ್ಲಿಯೂ stereo-type ಆಗಿಲ್ಲ. ಅವರ ಕಾದಂಬರಿ ‘ಕಂಕಣ’ ಹಾಗು ಅದರ ಎರಡನೆಯ ಭಾಗವಾದ ‘ಮುಕ್ತಿ’ಯಲ್ಲಿ ೬ ಜನ ನಾಯಕಿಯರಿದ್ದಾರೆ. ಈ ಎಲ್ಲ ನಾಯಕಿಯರು ಕಾ^ಲೇಜಿನ ಸಹಪಾಠಿಗಳು. ಇವರೆಲ್ಲರ ಸಾಮಾಜಿಕ, ಕೌಟಂಬಿಕ ಪರಿಸ್ಥಿತಿಗಳು ಭಿನ್ನವಾಗಿವೆ. ಇವರ ಮನೋಧರ್ಮಗಳೂ ಸಹ ವಿಭಿನ್ನವಾಗಿವೆ. ಆದರೆ ಕಾ^ಲೇಜಿನ ವಿದ್ಯಾಭ್ಯಾಸವನ್ನು ಪೂರೈಸಿ, ಒಂದು ಪದವಿಯನ್ನು ದೊರಕಿಸಿದ ಬಳಿಕ ಈ ಹುಡುಗಿಯರಿಗೆ ಇರುವುದು ಎರಡೇ ಎರಡು destiny:  ಮದುವೆ ಅಥವಾ ಉದ್ಯೋಗ. ಮದುವೆಯೇ ಇವರೆಲ್ಲರ ಪ್ರಥಮ ಆಯ್ಕೆ. ಕೆಲವೊಂದು ಆಧುನಿಕ ಕುಟುಂಬಗಳಲ್ಲಿ ಅಥವಾ ಬಡತನದ ಕುಟುಂಬಗಳಲ್ಲಿ ಮದುವೆಯಾಗದ ಹುಡುಗಿ ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು. ಆದರೆ ಸಾಂಪ್ರದಾಯಕ ಕುಟುಂಬಗಳಲ್ಲಿ ಇಂತಹ ಹೆಣ್ಣು ‘ಕಡತರ ಮುಲ್ಲಿ’ಯಾಗಿ ಮನೆಯಲ್ಲಿ ಮುಸುರೆ ತಿಕ್ಕುತ್ತ ಮೂಲೆಯೊಂದರಲ್ಲಿ ಬದುಕು ಸವೆಸಬೇಕು. ಇದು ಆ ಕಾಲದ (ಹಾಗು ಈ ಕಾಲದ್ದೂ ಸಹ!) ಕಟು  ವಾಸ್ತವತೆ. ಈ ಕಾದಂಬರಿಯಲ್ಲಿಯ ಒಬ್ಬ ನಾಯಕಿಯು ಹೇಳುವ ಮಾತುಗಳು ಈ ವಾಸ್ತವತೆಯ ಪ್ರತಿಬಿಂಬವಾಗಿವೆ:

“… ಮನುಷ್ಯ ಯಾವ ಬಗೆಯ ಆಸೆಗಳನ್ನೂ ಇಟ್ಟುಕೊಳ್ಳದಿದ್ದರೆ, ಅವನಿಗೆ ನಿರಾಸೆಯಾಗುವುದಿಲ್ಲ. ನನ್ನಗಂಡ ಸುರೂಪಿಯಾಗಿರಬೇಕು, ಕುಬೇರನಾಗಿರಬೇಕು, ರಸಿಕನಾಗಿರಬೇಕು ಎಂದು ಕನಸು ಕಟ್ಟಿ ಅನಂತರ ಅದು ಭಗ್ನವಾದರೆ ಸಹಜವಾಗಿ ನಮಗೆ ನಿರಾಸೆಯಾಗುತ್ತದೆ….”

ಹಾಗೆಂದು ಈ ಯುವತಿಯರಿಗೆ  ಕನಸುಗಳು ಇಲ್ಲವೆಂತಲ್ಲ. ಸರ್ವಜ್ಞನ ವಚನವೊಂದನ್ನು ಸ್ವಲ್ಪ ಮಾರ್ಪಡಿಸಿ ಹೇಳುವದಾದರೆ:
“ಬೆಚ್ಚನಾ ಮನೆಯಾಗಿ, ವೆಚ್ಚಕ್ಕೆ ಹೊನ್ನಾಗಿ
ಇಚ್ಛೆಯಾನರಿವ ಪತಿಯೊಬ್ಬ ದೊರೆತರೆ
ಹೆಚ್ಚೇನು ಬೇಕು ಸರ್ವಜ್ಞ” (!)  

ಇಚ್ಛೆಯಾನರಿವ ಈ ಗಂಡ ಹೇಗಿರಬೇಕು ಎನ್ನುವದನ್ನು ಅರಿಯಲು ಈ ಕಾದಂಬರಿಯ ಮತ್ತೊಬ್ಬ ನಾಯಕಿ ಹೇಳುವ ಮಾತುಗಳನ್ನು ನೋಡೋಣ:  “ನಾನು ಮೆಚ್ಚುವ ಗಂಡಸು ಹುಲಿಯಂತೆ ಕ್ರೂರನಾಗಿರಬೇಕು, ತೋಳನಂತೆ ಹಸಿವುಳ್ಳವನಾಗಿರಬೇಕು, ಜಿಂಕೆಯಂತೆ ಸುಂದರನಾಗಿರಬೇಕು, ಮೊಲದಂತೆ ಸಾಧುವಾಗಿರಬೇಕು, ಸಲಗದಂತೆ ಪುಂಡನಾಗಿರಬೇಕು…” ಇದು ಬಹುಶಃ ಆ ಸಂಧಿಕಾಲದ ಅನೇಕ ಯುವತಿಯರ ಕನಸಾಗಿರಬಹುದು!

ತ್ರಿವೇಣಿಯವರ ಕಾದಂಬರಿಗಳ ನಾಯಕಿಯರು ಕನಸು ಕಾಣುತ್ತಾರೆ. ಸಹಜವಾಗಿಯೇ ಈ ಕನಸುಗಳು ಪ್ರೇಮಿಸುವ ಪತಿ, ನೆಮ್ಮದಿಯ ಬದುಕು ಇಂತಹ ವಿಷಯಗಳ ಬಗೆಗೆ ಇವೆ. ಆದರೆ ತ್ರಿವೇಣಿಯವರ ಅತಿ ಮಹತ್ವದ ಪ್ರತಿಪಾದನೆ ಎಂದರೆ ಹೆಣ್ಣಿಗೆ ಇರಬೇಕಾದ ಪ್ರೇಮಸ್ವಾತಂತ್ರ್ಯ. ‘ಹೆಣ್ಣು ಕೇವಲ ಗಂಡಿನ ಕಾಮದ ಬೊಂಬೆ , ಅವಳೊಂದು ಹೆರಿಗೆ ಯಂತ್ರ ಮಾತ್ರ. ಎಲ್ಲ ಜೀವಿಗಳಲ್ಲಿ ಇರುವಂತೆ ಪ್ರೇಮದ ಸಹಜ ಬಯಕೆ ಹಾಗು ಕಾಮಪ್ರವೃತ್ತಿ ಹೆಣ್ಣಿನಲ್ಲಿ ಇರತಕ್ಕದ್ದಲ್ಲ; ಇದು ನಾಚಿಕೆಗೇಡು’ ಎಂದು ಭಾವಿಸಿದ ಕಾಲಘಟ್ಟದಲ್ಲಿ ತ್ರಿವೇಣಿಯವರು ಹೆಣ್ಣಿನ ಪ್ರಣಯಸ್ವಾತಂತ್ರ್ಯವನ್ನು ಎತ್ತಿ ಹಿಡಿದರು. ಇವರ ಕಾದಂಬರಿಗಳ ನಾಯಕಿಯರು ಪ್ರೀತಿಸುವ ನಾಯಕರನ್ನು ನೋಡಿರಿ; ಎಷ್ಟು ವಿವಿಧತೆ ಇದೆ ಅವರಲ್ಲಿ.  ಸಾಂಪ್ರದಾಯಕ ರೂಢಿಯ ಚೌಕಟ್ಟನ್ನು ಮೀರಿ ನಿಂತವರು ಈ ನಾಯಕಿಯರು. ಇಂತಹ ಕೆಲವು ಕಾದಂಬರಿಗಳನ್ನು ನೋಡೋಣ:

‘ಹೃದಯಗೀತೆ’ ಎನ್ನುವ ಕಾದಂಬರಿಯಲ್ಲಿ, ಕಾದಂಬರಿಯ ನಾಯಕಿಯು ತನ್ನ ಕಾ^ಲೇಜಿನ ಸಹಪಾಠಿಯ ತಂದೆಯನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಅವನ ವಯಸ್ಸು ಇವಳ ಪ್ರೇಮದ ಹರಿವಿಗೆ ಅಡ್ಡವಾಗುವುದಿಲ್ಲ!  ತ್ರಿವೇಣಿಯವರ ‘ಮುಕ್ತಿ’ ಕಾದಂಬರಿಯಲ್ಲಿ ಕಥಾನಾಯಕಿಯು ತನ್ನ ಪ್ರೇಮಿಯ ಪ್ರೇಮವನ್ನು ತಿರಸ್ಕರಿಸುತ್ತಾಳೆ. ಆತನಿಗೆ ಈಗಾಗಲೇ ಮದುವೆಯಾಗಿದ್ದು, ಆತನ ಹೆಂಡತಿ ರೋಗಗ್ರಸ್ತೆಯಾಗಿರುತ್ತಾಳೆ. ಅವರೀರ್ವರ ನಡುವೆ ದೈಹಿಕ ಸಂಪರ್ಕವೇ ಇರುವುದಿಲ್ಲ. ರೋಗ ಉಲ್ಬಣಿಸಿ, ಆಕೆ ತೀರಿಕೊಂಡ ಬಳಿಕ ಈತ ಮತ್ತೊಮ್ಮೆ ನಮ್ಮ ನಾಯಕಿಯಲ್ಲಿ ಪ್ರೇಮಯಾಚನೆ ಮಾಡುತ್ತಾನೆ. ಈ ವಿಧುರನನ್ನು ನಮ್ಮ ನಾಯಕಿ ಒಪ್ಪಿಕೊಳ್ಳುತ್ತಾಳೆ!

ತ್ರಿವೇಣಿಯವರ ಮತ್ತೊಂದು ಕಾದಂಬರಿ ‘ತಾವರೆಕೊಳ’ವು ಆ ಕಾಲದ ಒಂದು ಕ್ರಾಂತಿಕಾರಿ ಕಾದಂಬರಿ ಎನ್ನಬಹುದು. ಕ್ರಾಂತಿಕಾರಿ ಎಂದರೆ ಕೇವಲ ವೈಚಾರಿಕವಾಗಿ ಎನ್ನುವುದನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳೋಣ. ಈ ಕಾದಂಬರಿಯ ನಾಯಕಿಯು ಮುಂಬಯಿ ನಗರದ ನಿವಾಸಿ. ಇವಳ ಗಂಡನ ಹಳೆಯ ಗೆಳೆಯನೊಬ್ಬನು ಮೈಸೂರಿನವನು. ಆತನ ತಮ್ಮ ಒಬ್ಬ ಕಾ^ಲೇಜು ವಿದ್ಯಾರ್ಥಿ. ಆತ ಖಿನ್ನತೆಯಲ್ಲಿ ಮುಳುಗಿದ್ದಾನೆ. ಅವನನ್ನು ಸುಧಾರಿಸಲು ಅವನನ್ನು ಮೈಸೂರಿನಿಂದ ಮುಂಬಯಿಗೆ ಕಳುಹಿಸಲಾಗಿದೆ. ಮುಂಬಯಿಯ ನಿವಾಸಿಗಳು ಹೇಳೀ ಕೇಳೀ ಆಧುನಿಕರು. ಈ ಮುಂಬಯಿ ಕುಟುಂಬದ ಪರಿಚಯದ ಒಬ್ಬ ಲೋಕಲ್ ಹುಡುಗಿಯನ್ನು ಈ ಹುಡುಗನಿಗೆ ಜೋಡಿ ಮಾಡುವ ವಿಚಾರಗಳೂ ಆ ಕುಟುಂಬಕ್ಕೆ ಇವೆ. ಆದರೆ ಕಾದಂಬರಿಯ ನಾಯಕಿಯೆ ತನಗಿಂತ ಚಿಕ್ಕವನಾದ ಈ ಹುಡುಗನನ್ನು ಸಾವಕಾಶವಾಗಿ ಪ್ರೀತಿಸಲು ಪ್ರಾರಂಭಿಸುತ್ತಾಳೆ. ತಾವರೆಯ ಕೊಳದಲ್ಲಿ ಇಳಿದವರು ತಾವರೆಯ ಬಳ್ಳಿಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಬಿಡಿಸಿಕೊಂಡು ಹೊರಬರುವುದು ಅವರಿಗೆ ಸಾಧ್ಯವಾಗಲಾರದು. ಪ್ರೇಮದಲ್ಲಿ ಸಿಲುಕಿಕೊಳ್ಳುವರ ಪರಿಸ್ಥಿತಿಯೂ ಅಷ್ಟೇ!

ಸಾವಕಾಶವಾಗಿ ಆ ಹುಡುಗನ ಮನೋಸ್ಥಿತಿಯಲ್ಲಿ ಸುಧಾರಣೆಯಾಗುತ್ತದೆ. ಆತ ತನ್ನ ಊರಿಗೆ ಮರಳುತ್ತಾನೆ. ಆದರೆ ಆತನ ನೆನಪು ನಾಯಕಿಯಲ್ಲಿ ಗಟ್ಟಿಯಾಗಿ ಉಳಿದು ಬಿಡುತ್ತದೆ. ಈ ಇಬ್ಬರಲ್ಲಿ ಯಾವುದೇ ಪ್ರಣಯ ಸಂಭವಿಸುವದಿಲ್ಲ. ಯಾಕೆಂದರೆ ಆ ಕಾಲದಲ್ಲಿ ಅದು ಕಲ್ಪನಾತೀತ ಹಾಗು ಸ್ವತಃ ಲೇಖಕಿಗೆ ಒಪ್ಪಿಗೆಯಾಗದ ಮಾತು.  ಈ ಪ್ರೇಮವ್ಯವಹಾರವು ನಮ್ಮ ನಾಯಕಿಯ ಮನೋರಂಗದಲ್ಲಿ ನಡೆಯುವ ಭಾವಲಹರಿ ಮಾತ್ರ. ಕಾದಂಬರಿಯ ಕೊನೆಯಲ್ಲಿ, ಆ ಹುಡುಗನು ತನ್ನ ಊರಿಗೆ ಮರಳಿ ಹೋದ ದಿನದಂದು,  ನಾಯಕಿಯಲ್ಲಿ ಆ ಹುಡುಗನ ನೆನಪು ಎಷ್ಟು ತೀವ್ರವಾಗಿದೆ ಎಂದರೆ, ಆ ರಾತ್ರಿ ಅವಳು ತನ್ನ ಪತಿಯ ಪ್ರಣಯಯಾಚನೆಗೆ  ಸ್ಪಂದಿಸುವುದಿಲ್ಲ. ಹೆಣ್ಣಿಗೆ ಇರಬೇಕಾದ ಸ್ವಾತಂತ್ರ್ಯದ ಎಲ್ಲ ಮಗ್ಗಲುಗಳನ್ನು ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ತೋರಿಸಿದ್ದಾರೆ ಎನ್ನಲು ಈ ಕಾದಂಬರಿ ಒಂದು ಉತ್ತಮ ಉದಾಹರಣೆ. (ಈ ಕಾದಂಬರಿಗೆ ಸಾಹಿತ್ಯ ಅಕ್ಯಾಡೆಮಿಯ ಪುರಸ್ಕಾರ ಸಿಕ್ಕಿದೆ ಎನ್ನುವುದು ನನ್ನ ನೆನಪು.)

ಹೆಣ್ಣಿನ ಕಾಮದ ಬಯಕೆಯನ್ನು ತ್ರಿವೇಣಿಯವರು ನಿಸ್ಸಂಕೋಚವಾಗಿ ಎತ್ತಿ ಹಿಡಿಯುತ್ತಾರೆ; ಆದರೆ ವಿವಾಹಬಾಹಿರ ಕಾಮವನ್ನು ಅವರು ಎಂದೂ ಪುರಸ್ಕರಿಸಿಲ್ಲ. ಅವರ ‘ಸೋತು ಗೆದ್ದವಳು’ ಕಾದಂಬರಿಯಲ್ಲಿ ನಾಯಕಿಯು ತನ್ನ ಗಂಡನ ದೀರ್ಘಾವಧಿಯ ವಿರಹಕಾಲದಲ್ಲಿ ಮತ್ತೊಬ್ಬ ಗಂಡಿನ ಕಾಮಕ್ಕೆ ಬಲಿಯಾಗುತ್ತಾಳೆ ಎನ್ನುವುದೇನೊ ನಿಜ. ಆದರೆ ಅವಳು ಇದಕ್ಕಾಗಿ ಪರಿತಪಿಸುತ್ತಾಳೆ. ತನ್ನ ಗಂಡ ವಿದೇಶದಿಂದ ಮರಳಿದ ಬಳಿಕ ತನ್ನ ‘ತಪ್ಪನ್ನು’ ಒಪ್ಪಿಕೊಳ್ಳುತ್ತಾಳೆ. ವಿದೇಶದಲ್ಲಿದ್ದಾಗ ಆತನೂ ಸಹ ಕಾಲು ಜಾರಿರುತ್ತಾನೆ. ಹೀಗಿರುವಾಗ ಗಂಡಿಗೆ ಒಂದು ನಿಯಮ, ಹೆಣ್ಣಿಗೆ ಒಂದು ನಿಯಮ ಎನ್ನುವುದು ಸರಿಯಲ್ಲ ಎನ್ನುವ ತಿಳಿವಳಿಕೆಯಿಂದ, ನಾಯಕನು ನಾಯಕಿಯ ‘ತಪ್ಪ’ನ್ನು ಕ್ಷಮಿಸಿ ಬಿಡುತ್ತಾನೆ! ಈ ಕಾದಂಬರಿಯಲ್ಲಿ ವಿವಾಹಬಾಹಿರ ಕಾಮವನ್ನು ತ್ರಿವೇಣಿಯವರು ಪುರಸ್ಕರಿಸಿಲ್ಲ. In fact ಅವರ ಮತ್ತೊಂದು ಕಾದಂಬರಿಯಲ್ಲಿ ವಿವಾಹಪೂರ್ವ ಪ್ರಣಯದಲ್ಲಿ ಸಿಲುಕಿದ ತರುಣಿಯೊಬ್ಬಳು, ಆ ಕಾರಣದಿಂದಾಗಿ ತನ್ನ ಮನೋಸ್ವಾಸ್ಥ್ಯವನ್ನೇ ಕಳೆದುಕೊಂಡಿದ್ದರ ಚಿತ್ರಣವಿದೆ. ಆ ಕಾದಂಬರಿ : ಶರಪಂಜರ! ಪುಟ್ಟಣ್ಣ ಕಣಗಾಲರ ಅದ್ಭುತ ನಿರ್ದೇಶನದಲ್ಲಿ ಇದೊಂದು ಅಪರೂಪದ ಚಲನಚಿತ್ರವಾಯಿತು.

ತ್ರಿವೇಣಿಯವರ ‘ಮೊದಲ ಹೆಜ್ಜೆ’ ಕಾದಂಬರಿ ನನ್ನ ನೆಚ್ಚಿನ ಕಾದಂಬರಿ. ಈ ಕಾದಂಬರಿ ಮೂರು ವಿಭಾಗಗಳಲ್ಲಿದೆ. ಮೊದಲನೆಯ ವಿಭಾಗದಲ್ಲಿ ಕಾದಂಬರಿಯ ನಾಯಕಿ ತನ್ನ ಕಥೆಯನ್ನು ಹೇಳಲು ಪ್ರಾರಂಭಿಸುತ್ತಾಳೆ. ಇವಳು ತನ್ನ ಶಾಲಾಮಾಸ್ತರ ಅಪ್ಪನ ಮೊದಲನೆಯ ಮಗಳು. ಕಪ್ಪು ಹುಡುಗಿ ಎನ್ನುವ ಕಾರಣಕ್ಕಾಗಿ ಇವಳ ತಂದೆ, ತಾಯಿಗೆ ಇವಳಲ್ಲಿ ಅಕರಾಸ್ತೆ ಕಡಿಮೆ. ಇವಳ ತಂಗಿ ಬೆಳ್ಳಗಿನ ಹುಡುಗಿ. ಆದುದರಿಂದ ಅವಳ ಮದುವೆಯೇ ಮೊದಲು ಜರಗುತ್ತದೆ. ಬಾಣಂತಿ ತಂಗಿಗೆ ನೆರವಾಗಲು, ಮದುವೆಯಾಗದ ಅಕ್ಕ ಅವಳ ಜೊತೆಗೆ, ಅವಳ ಮನೆಗೆ ಹೋಗುತ್ತಾಳೆ.

ಎರಡನೆಯ ವಿಭಾಗದಲ್ಲಿ ಕಾ^ಲೇಜಿನ ಹುಡುಗನೊಬ್ಬನ ಸ್ವ-ಕಥನವಿದೆ. ಆತ ಈ ತಂಗಿಯ ಮನೆಯ ಹೊರಕೋಣೆಯಲ್ಲಿ ಬಾಡಿಗೆಗೆ ಇದ್ದವನು. ಸ್ವಲ್ಪ ಶೋಕಿ ಹುಡುಗ. ಮದುವೆಯಾಗದ ಈ ಹುಡುಗಿಯನ್ನು ಆತ ತನ್ನ ಬಲೆಗೆ ಬೀಳಿಸುತ್ತಾನೆ. ಇವಳೂ ಸಹ ಹಸಿದ ಹುಡುಗಿಯೇ. ಆತನ ಬಲೆಗೆ ಸುಲಭವಾಗಿ ಬೀಳುತ್ತಾಳೆ. ‘ಹಿಟ್ಟು ಹಳಸಿತ್ತು; ನಾಯಿ ಹಸಿದಿತ್ತು’ ಎನ್ನುವ ಮಾತಿನ ಮೂಲಕ ಹೆಂಗಸರಲ್ಲೂ ಸಹ ಕಾಮದ ಬಯಕೆ ಗಂಡಿಗಿರುವಷ್ಟೇ ಸಹಜವಾದದ್ದು ಎನ್ನುವುದನ್ನು ತ್ರಿವೇಣಿ ಸ್ಪಷ್ಟ ಪಡಿಸುತ್ತಾರೆ.

ಮೂರನೆಯ ವಿಭಾಗವು ಒಂದು ಜೈಲಿನ ಒಳಭಾಗದಲ್ಲಿ ನಡೆಯುತ್ತದೆ. ನಮ್ಮ ಕಪ್ಪು ಹುಡುಗಿಯೇ ಈ ವಿಭಾಗವನ್ನು ಹೇಳುವ ನಾಯಕಿ! ಕಳ್ಳಬಸಿರಿನ ಫಲವನ್ನು ಕೊಲೆ ಮಾಡಿದ ಆರೋಪದ ಮೇಲೆ ಜೈಲು ಸೇರಿದಾಕೆ! ಪ್ರಣಯದ ವ್ಯವಹಾರದಲ್ಲಿ ಇವಳದು ಅರ್ಧ ಮಾತ್ರ ತಪ್ಪೆಂದು ಹೇಳಬಹುದಾದರೂ ಸಹ, ಇವಳು ಅನುಭವಿಸಿದ ಶಿಕ್ಷೆಯನ್ನು ನೋಡಿದಾಗ, ವಿವಾಹಪೂರ್ವ ಕಾಮವನ್ನು ತ್ರಿವೇಣಿಯವರು ತಿರಸ್ಕರಿಸುತ್ತಾರೆ ಎಂದು ಹೇಳಬಹುದು.

ಅವಿವಾಹಿತ ಕನ್ಯೆಯರ ಪ್ರಣಯಸ್ವಾತಂತ್ರ್ಯಕ್ಕೆ ಮಾತ್ರ ತ್ರಿವೇಣಿಯವರ ಕಾದಂಬರಿಗಳು ಪರಿಮಿತವಾಗಿಲ್ಲ. ‘ಮುಚ್ಚಿದ ಬಾಗಿಲು’ ಹಾಗು ‘ಹಣ್ಣೆಲೆ ಚಿಗುರಿದಾಗ’ ಕಾದಂಬರಿಗಳಲ್ಲಿ ವಿಧವೆಯರಿಗೂ ಸಹ ಪ್ರೇಮದ ಕನಸುಗಳು ಇರುತ್ತವೆ; ಅವರೂ ಸಹ ಮರುಮದುವೆಯಾಗಿ, ಮತ್ತೊಬ್ಬ ಗಂಡಿನೊಡನೆ ದಾಂಪತ್ಯಜೀವನವನ್ನು ಮತ್ತೊಮ್ಮೆ ಅನುಭವಿಸಲು ಬಯಸುತ್ತಾರೆ ಎನ್ನುವದನ್ನು ತ್ರಿವೇಣಿ ನಿರೂಪಿಸಿದ್ದಾರೆ. ‘ಹಣ್ಣೆಲೆ ಚಿಗುರಿದಾಗ’ ಇದು ತೋರಿಕೆಗೆ ವಿನೋದಮಯ ಕಾದಂಬರಿಯಾಗಿದ್ದರೂ, ಆಂತರ್ಯದಲ್ಲಿ ಇದು ಹೆಣ್ಣಿನ ಮನೋರಂಗವನ್ನು ಪ್ರತಿಬಿಂಬಿಸುವ ಕಾದಂಬರಿಯೇ ಆಗಿದೆ. ಈ ಕಾದಂಬರಿಯಲ್ಲಿ ಓರ್ವ ವಿಧವೆಯ ಮದುವೆಯಾಗುವುದು ಮತ್ತೋರ್ವ ವಿಧುರನ ಜೊತೆಗೆ. ಆದರೆ ‘ಮುಚ್ಚಿದ ಬಾಗಿಲು’ ಕಾದಂಬರಿಯಲ್ಲಿ ಓರ್ವ ವಿಧವೆಯ ಮದುವೆಯಾಗುವುದು ಅವಿವಾಹಿತ ತರುಣನ ಜೊತೆಗೆ.

ಪ್ರಣಯದ ಬಯಕೆಯಂತೆಯೇ ಪ್ರಣಯದ ನಿರಾಕರಣೆಯೂ ಸಹ ಹೆಣ್ಣಿನ ಹಕ್ಕಾಗಿದೆ. ‘ಬೆಳ್ಳಿ ಮೋಡ’ ಕಾದಂಬರಿಯಲ್ಲಿ ವ್ಯವಹಾರಸ್ಥ ಗಂಡಸನ್ನು ಕಾದಂಬರಿಯ ನಾಯಕಿಯು ತಿರಸ್ಕರಿಸುತ್ತಾಳೆ! ಕಾಲ ಕಳೆದಂತೆ ದಾಂಪತ್ಯಪ್ರೇಮವು ಮಸುಕಾಗುವದನ್ನು ‘ಬಾನು ಬೆಳಗಿತು’ ಕಾದಂಬರಿಯಲ್ಲಿ ನೋಡಬಹುದು.

After all ಹೆಣ್ಣು ಎಂತಹ ಗಂಡನ್ನು ಬಯಸುತ್ತಾಳೆ? ‘ಮುಚ್ಚಿದ ಬಾಗಿಲು’ ಹಾಗು ‘ಬೆಕ್ಕಿನ ಕಣ್ಣು’ ಕಾದಂಬರಿಗಳಲ್ಲಿ ಇದರ ಸುಳಿವು ಸಿಗುತ್ತದೆ. ಎಂತಹ ಪರಿಸ್ಥಿತಿಯಲ್ಲಿಯೂ ತನಗೆ ಮಾನಸಿಕ ಆಲಂಬನೆಯನ್ನು ಕೊಡುವ ಗಂಡಸನ್ನು ಹೆಣ್ಣು ಬಯಸುತ್ತಾಳೆ ಎನ್ನುವುದನ್ನು ತ್ರಿವೇಣಿಯವರ ಕಾದಂಬರಿಗಳಲ್ಲಿ ನೋಡಬಹುದು. ಹೆಣ್ಣಿನ ಅಂತರಂಗವನ್ನು, ಅವಳ ಕನಸುಗಳನ್ನು, ಅವಳ ಆಶೋತ್ತರಗಳನ್ನು ತ್ರಿವೇಣಿ ತಮ್ಮ ಕಾದಂಬರಿಯಲ್ಲಿ ತೆರೆದಿಟ್ಟಿದ್ದಾರೆ. ಇಂತಹ ಉತ್ತಮ ಲೇಖಕಿಗೆ ಜನಪ್ರಿಯತೆ ಧಾರಾಳವಾಗಿ ದೊರೆಯುವದರಲ್ಲಿ ಆಶ್ಚರ್ಯವಿಲ್ಲ. ಆದರೆ ತ್ರಿವೇಣಿಯವರಿಗೆ ವಿಮರ್ಶಕರಿಂದ ಸರಿಯಾದ ಸನ್ಮಾನ ದೊರೆತಿಲ್ಲ ಎನ್ನುವುದು ಖೇದದ ಸಂಗತಿ. ಕನ್ನಡದ ಶ್ರೇಷ್ಠ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರಂತೂ ತ್ರಿವೇಣಿಯವರ ಕಾದಂಬರಿಗಳನ್ನು ಅಪಕ್ವ ಕನಸುಗಳ ಸಾಹಿತ್ಯ ಎಂದು ಕರೆದಿದ್ದಾರೆ. ಈ ಅನ್ಯಾಯದ ಮಾತಿಗಾಗಿ ಕುರ್ತಕೋಟಿಯವರನ್ನು ನಾನು ಅಪಕ್ವ ವಿಮರ್ಶಕ ಎಂದು ಕರೆಯಲು ಹಿಂಜರಿಯುವದಿಲ್ಲ! ತ್ರಿವೇಣಿಯವರ ನಾಯಕಿಯರ ಅಂತರಂಗವನ್ನು ಕುರ್ತಕೋಟಿಯವರು ಅರಿಯದೇ ಹೋದದ್ದು , ವಿಮರ್ಶೆಯಲ್ಲಿ ಅವರು ಎಡವಿದ್ದನ್ನು ತೋರಿಸುತ್ತದೆ ಎನ್ನಬಹುದು.

ಹೆಣ್ಣು ಕಂದಾಚಾರದ ಪಂಜರದಲ್ಲಿ ಸಿಲುಕಿದ ಕಾಲಘಟ್ಟದಲ್ಲಿ, ಈ ಪಂಜರದ ಪಕ್ಷಿಗೆ ಭಾವನೆಗಳ ಸ್ವಾತಂತ್ರ್ಯವಿದೆ, ಹಾಡುವ ಸ್ವಾತಂತ್ರ್ಯವಿದೆ ಎನ್ನುವುದನ್ನು ತ್ರಿವೇಣಿ ತೋರಿಸಿದರು. ಕನ್ನಡ ಸಾಹಿತ್ಯದಲ್ಲಿ ಅವರನ್ನು ಅಮರಗೊಳಿಸಲು ಇದೊಂದೇ ಕಾರಣವು ಸಾಕು.

Saturday, July 18, 2015

ಪುಣ್ಯಕೋಟಿ ಎನ್ನುವ ಗೋವಿನ ಕತೆ.



‘ಗೋವಿನ ಹಾಡು’ ಕವನದ ಪಠ್ಯ ಈ ರೀತಿಯಾಗಿದೆ:

ಧರಣಿಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ನಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು ||೧||

ಉದಯಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ ||೨||

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದಿಹ ತುರುಗಳನ್ನು
ಬಳಿಗೆ ಕರೆದನು ಹರುಷದಿ ||೩||

ಗಂಗೆ ಬಾರೆ, ಗೌರಿ ಬಾರಿ,
ತುಂಗಭದ್ರೆ ತಾಯಿ ಬಾರೆ
ಕಾಮಧೇನು ಬಾ ಎನುತ್ತ
ಚೆನ್ನ ಗೊಲ್ಲನು ಕರೆವನು ||೪||

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ ||೫||

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಭುತನು ಎಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿರ್ದನು ||೬||

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುದುಕಲೆರಗಿದ ರಭಸಕಂಜಿ
ಚದುರಿ ಹೋದವು ಹಸುಗಳು ||೭||

ಪುಣ್ಯಕೋಟಿ ಎಂಬ ಗೋವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತಾ
ಚೆನ್ನಾಗಿ ತಾ ಬರುತಿರೆ ||೮||

ಇಂದೆನೆಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು ||೯||

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನಿತು ಕೋಪದಿ
ಖೂಳ ವ್ಯಾಘ್ರನು ಕೂಗಲು ||೧೦||

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದೆ ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ ||೧೧||

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು, ನೀನು
ನುಸುಳಿ ಹೋಗುವೆ, ಮತ್ತೆ ಬರುವೆಯಾ
ಹುಸಿಯನಾಡುವೆ ಎಂದಿತು ||೧೨||

ಸತ್ಯವೇ ನಮ್ಮ ತಾಯಿ, ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು ||೧೩||

ಕೊಂದು ತಿನ್ನುವೆನೆಂಬ ಹುಲಿಗೆ
ಚಂದದಿಂದಲಿ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ ||೧೪||

ಅಮ್ಮ ನೀನು ಸಾಯಲೇಕೌ
ನನ್ನ ತಬ್ಬಲಿ ಮಾಡಲೇಕೌ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಿತು ||೧೫||

ಕೊಟ್ಟ ಭಾಷೆಗೆ ತಪ್ಪಲಾರೆ
ಕೆಟ್ಟ ಯೋಚನೆ ಮಾಡಲಾರೆ
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ ||೧೬||

ಆರ ಮೊಲೆಯನು ಕುಡಿಯಲಮ್ಮ,
ಆರ ಸೇರಿ ಬದುಕಲಮ್ಮ,
ಆರ ಬಳಿಯಲಿ ಮಲಗಲಮ್ಮ,
ಆರು ನನಗೆ ಹಿತವರು? ||೧೭||

ಅಮ್ಮಗಳಿರಾ, ಅಕ್ಕಗಳಿರಾ,
ನನ್ನ ತಾಯೊಡಹುಟ್ಟುಗಳಿರಾ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು ||೧೮||

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು  ||೧೯||

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ ||೨೦||

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನಾ ||೨೧||

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿ ನಿಂತು
ತವಕದಲಿ ಹುಲಿಗೆಂದಿತು ||೨೨||

ಖಂಡವಿದಕೋ ಮಾಂಸವಿದಕೋ
ಗುಂಡಿಗೆಯ ಬಿಸಿ ರಕ್ತವಿದಕೋ
ಚಂಡವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು ||೨೩||

ಪುಣ್ಯಕೋಟಿಯ ಮಾತು ಕೇಳಿ
ಕಣ್ಣನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು ||೨೪||

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ನಾನೇನು ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು ||೨೫||

ಪುಣ್ಯಕೋಟಿಯು ನಲಿದು ಕರುವಿಗೆ
ಉಣ್ಣಿಸಿತು ಮೊಲೆಯ ಬೇಗದಿ
ಚೆನ್ನ ಗೊಲ್ಲನ ಕರೆದು ತಾನು
ಮುನ್ನ ತಾನಿಂತೆಂದಿತು ||೨೬||

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ ||೨೭||

ಈವನು ಸೌಭಾಗ್ಯ ಸಂಪದ
ಭಾವಜಾಪಿತ ಕೃಷ್ಣನು ||೨೮||

ಪುಣ್ಯಕೋಟಿಯ ಕತೆಯು ಕನ್ನಡ ನಾಡಿನ ಜನಪ್ರಿಯ ಕಥನಕವನ. ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಈ ಕವನದ ಭಾಗಗಳನ್ನು ನಮ್ಮ ಪಠ್ಯಪುಸ್ತಕದಲ್ಲಿ ಅಳವಡಿಸಿದ್ದರು. ಕವನದ ಕೊನೆಗೆ ಒಂದು ಪ್ರಶ್ನೆ ಇರುತ್ತಿತ್ತು: ಯಾರ ತ್ಯಾಗ ಹೆಚ್ಚಿನದು, ಪುಣ್ಯಕೋಟಿಯದೊ ಅಥವಾ ಹುಲಿಯದೊ?

ನಾವು ವಿದ್ಯಾರ್ಥಿಗಳೆಲ್ಲ ಪುಣ್ಯಕೋಟಿಯ ಪರವಾಗಿ ಇದ್ದರೆ, ನಮ್ಮ ಗುರುಗಳು ಹುಲಿಯ ತ್ಯಾಗ ಹೇಗೆ ಹೆಚ್ಚಿನದು ಎಂದು ವಿವರಿಸುತ್ತಿದ್ದರು. ಗೋವು ಹೇಳೀಕೇಳೀ ಸಾಧು ಪ್ರಾಣಿ. ಸತ್ಯದ ಮಾರ್ಗದಲ್ಲಿ ನಡೆಯುವುದು ಅದಕ್ಕೆ ತಲೆತಲಾಂತರದ ಅಭ್ಯಾಸ. ಹುಲಿಯಾದರೊ ಕ್ರೂರ ಪ್ರಾಣಿ. ತನಗೆ ಹಸಿವಾದಾಗಲೂ ಸಹ ಪುಣ್ಯಕೋಟಿಯನ್ನು ಅದರ ದೊಡ್ಡಿಗೆ ಹೋಗಲು ಬಿಟ್ಟಿದ್ದು ಹುಲಿಯ ಹೆಚ್ಚುಗಾರಿಕೆ. ಪುಣ್ಯಕೋಟಿ ಮರಳಿ ಬಂದು ಹುಲಿಯ ಮನಃಪರಿವರ್ತನೆಯಾದ ಬಳಿಕ, ಅದು ತನ್ನ ಪ್ರಾಣತ್ಯಾಗವನ್ನು ಮಾಡಿದ್ದು ಹುಲಿಯ ತ್ಯಾಗವೇ ಹೆಚ್ಚಿನದು ಎನ್ನುವುದನ್ನು ತೋರಿಸುತ್ತದೆ ಇತ್ಯಾದಿ.

ಇತ್ತೀಚೆಗೆ ಪ್ರಸಿದ್ಧ ನಾಟಕಕಾರ ಹಾಗು ಹಿರಿಯ ಚಿಂತಕರಾದ ವ್ಯಾಸ ದೇಶಪಾಂಡೆಯವರು ಈ ಕವನದ ಮೇಲೆ ಹೆಚ್ಚಿನ ಬೆಳಕನ್ನು ಬೀರಿದರು. ಅವರ ಮುಖ್ಯ ಪ್ರಶ್ನೆ ಎಂದರೆ ಹುಲಿ ತನ್ನನ್ನು ತಾನೆ ಕೊಂದುಕೊಳ್ಳುವ ಕಾರಣವೇನು, ಎನ್ನುವುದು. ನಾನು ಸ್ವಲ್ಪ ವಿಚಾರ ಮಾಡಿ ಹೇಳಿದೆ: ಹುಲಿಯ ಮನಃಪರಿವರ್ತನೆ ಆಗಿದೆ. ಇದರರ್ಥವೆಂದರೆ, ಇನ್ನು ಮೇಲೆ ಈ ಕೊಂದು ತಿನ್ನುವ ಕಾಯಕವನ್ನು ಅದು ಬಿಟ್ಟು ಬಿಡುತ್ತದೆ. ಆದರೆ ಅದು ಶಾಕಾಹಾರಿಯಾಗಿ ಬದುಕಲು ಸಾಧ್ಯವಿಲ್ಲವಲ್ಲ! ಈ ವಿಪರ್ಯಾಸವು ಆ ಹುಲಿಗೆ ಥಟ್ಟನೆ ಹೊಳೆದು, ಅದು ಆತ್ಮಹತ್ಯೆಯೆ ಉತ್ತಮ ಪರ್ಯಾಯವೆಂದು ಭಾವಿಸಿರಬಹುದು!

ವ್ಯಾಸ ದೇಶಪಾಂಡೆ ಹೇಳಿದರು: “ಹುಲಿಯು ಆ ಕ್ಷಣದಲ್ಲಿಯೇ ಪ್ರಾಣತ್ಯಾಗ ಮಾಡುವ ಕಾರಣವೆಂದರೆ, ಆ ಕ್ಷಣದಲ್ಲಿ ಅದಕ್ಕೆ ಸತ್ಯದ ದರ್ಶನವಾಗಿದೆ!

ಪುಣ್ಯಕೋಟಿಯು ಮರಳಿ ಬರಬಹುದೆಂದು ಹುಲಿಯು ಭಾವಿಸಿರಲಿಲ್ಲ. ಹಾಗಿದ್ದರೂ ಅದು ಪುಣ್ಯಕೋಟಿಯನ್ನು ಬಿಡಲು ಕಾರಣವೇನು? ಈ ಜಗತ್ತಿನಲ್ಲಿ ಸತ್ಯ, ಅಹಿಂಸೆಗಳು ಸುಳ್ಳು ಆದರ್ಶಗಳು. ತನ್ನ ಜೀವದ ಸುತ್ತು ಬಂದಾಗ, ಎಲ್ಲ ಆದರ್ಶಗಳೂ ಓಡಿ ಹೋಗುತ್ತವೆ. ಬದುಕಬೇಕಾದರೆ ಕ್ರೂರವಾಗಿ ಬದುಕಬೇಕು ಇದು ಆ ಹುಲಿಯ ನಂಬುಗೆಯಾಗಿತ್ತು. ತನ್ನ ನಂಬಿಕೆಯೇ ಸರಿ, ಪುಣ್ಯಕೋಟಿಯು ಮೋಸಗಾರ್ತಿ ಎನ್ನುವುದನ್ನು ಆ ಹುಲಿಗೆ ತೋರಿಸಬೇಕಾಗಿತ್ತು. ಆದರೆ ಪುಣ್ಯಕೋಟಿ ಮರಳಿ ಬಂದಾಗ, ಹುಲಿಯ ನಂಬಿಕೆಗಳು ಅಲುಗಾಡಿದವು. ತಾನೇ ಸೋತೆ ಎನ್ನುವುದು ಅದಕ್ಕೆಅರಿವಾಯಿತು. ತನ್ನ ಹಳೆಯ ನಂಬಿಕೆಗಳನ್ನು ಹೊತ್ತುಕೊಂಡು, ಹಳೆಯ ರೀತಿಯಲ್ಲಿಯೇ ಇನ್ನು ಬದುಕುವುದು ಸಾಧ್ಯವಿಲ್ಲ ಎಂದು ಆ ಹುಲಿಗೆ ಅನಿಸಿರಬಹುದು. ಆ ಕಾರಣದಿಂದಲೇ ಅದು ಆತ್ಮಹತ್ಯೆಯನ್ನು ಮಾಡಿಕೊಂಡಿರಬಹುದು.

ವಿಶ್ವಾಮಿತ್ರನು ಸತ್ಯ ಹರಿಶ್ಚಂದ್ರನನ್ನು ಸುಳ್ಳುಗಾರ ಎಂದು ತೋರಿಸುವ ಪ್ರಯತ್ನಕ್ಕೆ ಇದನ್ನು ಹೋಲಿಸಬಹುದು. ಭಾರತೀಯ ಶಾಸ್ತ್ರಗಳು, ಪುರಾಣಗಳು ಈ ಮಾತನ್ನೇ ಯಾವಾಗಲೂ ಘೋಷಿಸುತ್ತ ಬಂದಿವೆ: ‘ಸತ್ಯಂ ಶಿವಂ ಸುಂದರಮ್’, ಅಂದರೆ ಸತ್ಯಮಾರ್ಗವೇ ಬಾಳಿಗೆ ಕಲ್ಯಾಣಕರವಾದದ್ದು. ಸುಂದರಂ ಎಂದರೆ ದೈಹಿಕ ಚೆಲುವು ಅಂತಲ್ಲ, ಯಾವುದು ಬಾಳಿಗೆ ಬೆಳಕು ಕೊಡುವುದೊ ಅದೇ ಸುಂದರವಾದದ್ದು.

ಇಲ್ಲಿ ಕವಿಯು ಪುಣ್ಯಕೋಟಿಯನ್ನು ಸಾತ್ವಿಕತೆಯ ಪ್ರತೀಕವಾಗಿ ಹಾಗು ಹುಲಿಯನ್ನು ತಾಮಸ ಶಕ್ತಿಯ ಪ್ರತೀಕವಾಗಿ ತೋರಿಸಬಯಸುತ್ತಿದ್ದಾನೆ. ತಾಮಸ ಶಕ್ತಿಗೆ ತಾತ್ಪೂರ್ತಿಕವಾಗಿ ಮೇಲುಗೈಯಾಗಬಹುದು. ಆದರೆ ಸಾತ್ವಿಕತೆಯು ತನ್ನ ತ್ಯಾಗ, ಬಲಿದಾನಗಳ ಮೂಲಕವೇ ತಾಮಸ ಶಕ್ತಿಯ ಕಣ್ಣು ತೆರೆಯಿಸುತ್ತದೆ. ತಾಮಸ ಶಕ್ತಿಯನ್ನು ಸಾತ್ವಿಕತೆಗೆ ಬದಲಾಯಿಸುತ್ತದೆ.”

ಈ ಸಂದರ್ಭದಲ್ಲಿ ವ್ಯಾಸ ದೇಶಪಾಂಡೆಯವರು ಗಾಂಧೀಜಿಯನ್ನು ನೆನಪಿಸಿದರು. ಗಾಂಧೀಜಿ ಈ ಯುಗದ ಸಾತ್ವಿಕ ಶಕ್ತಿಯ ಪ್ರತೀಕರಾಗಿದ್ದಾರೆ. ದೇಶವಿಭಜನೆಯ ಸಮಯದಲ್ಲಿ ನಡೆದ ಹಿಂಸಾಚಾರವನ್ನು ಹಾಗು ಪ್ರತಿಹಿಂಸಾಚಾರವನ್ನು ನಿಲ್ಲಿಸಲು ಅವರಿಂದ ಸಾಧ್ಯವಾಗಲಿಲ್ಲ. ಆದರೆ ಅವರ ಕೊಲೆಯಾದ ತಕ್ಷಣವೇ ಹಿಂಸಾಚಾರವು ಸ್ತಬ್ಧವಾಯಿತು. ಅವರ ಸಾವು ತಾಮಸ ಶಕ್ತಿಗಳ ಮೇಲೆ ವಿಜಯ ಸಾಧಿಸಿತು! ಈ ಮಾತನ್ನೇ ಬೇಂದ್ರೆಯವರು ತಮ್ಮ ಕವನದಲ್ಲಿ ಹೀಗೆ ಹೇಳಿದ್ದಾರೆ:

ಹಿಂಸೆ ಕೊನೆಗು ಅಹಿಂಸೆಯನ್ನು
ಗುಂಡು ಹಾಕಿ ಕೊಂದಿತೊ,
ತನ್ನ ಕೊಲೆಯ ಕೊನೆಗಾಣಿಸೆ
ಅವಗೆ ಶರಣು ಬಂದಿತೊ,
ಅಯ್ಯೊ ಇವನೆ ಅಮರ
ನಾನೆ ಸತ್ತೆ ಎಂದಿತೊ?”

ಆ ಬಳಿಕ, ಈ ಕವನದ ಇತರ ಅಂಶಗಳ ಬಗೆಗೆ ನಮ್ಮ ನಡುವೆ ಚರ್ಚೆ ನಡೆಯಿತು. ಈ ಕವನದ ಕವಿಯು, ಕವನದ ಮೊದಲಲ್ಲಿ ‘ಧರಣಿ ಮಂಡಲ ಮಧ್ಯದೊಳಗೆ, ಮೆರೆಯುತಿಹ ಕರ್ನಾಟ ದೇಶದಿ’ ಎಂದು ಹಾಡಿದ್ದಾನೆ.  ನಮ್ಮ ಕನ್ನಡ ನಾಡೇ ಈ ಭೂಮಂಡಲದ ಮಧ್ಯದಲ್ಲಿದೆ ಹಾಗು ಮೆರೆಯುತ್ತಿದೆ ಎನ್ನುವ ಹೆಮ್ಮೆ ನಮ್ಮ ಕವಿಗಿದೆ. ಯಾವ ಕಾರಣಗಳಿಗಾಗಿ ಕರ್ನಾಟದೇಶವು ಮೆರೆಯುತ್ತಿರಬಹುದು ಎಂದು ಕೇಳಿದರೆ, ಅದರ ಉತ್ತರ ಈ ಕವನದ ಕಥೆಯಲ್ಲಿದೆ: ತನ್ನ ಸದ್ಗುಣಗಳಿಗಾಗಿ ಕರ್ನಾಟದೇಶವು ಭೂಮಂಡಲದಲ್ಲಿ ಮೆರೆಯುತ್ತಿದೆ. ಇದು ಕರ್ನಾಟಕದ ಪರಂಪರೆ! ಇದು ನಮ್ಮ ಸಂಸ್ಕೃತಿ. ಗೋವಿನ ಹಾಡಿನ ಮೂಲಕ, ಕವಿಯು ಕರ್ನಾಟದೇಶದ ಸಂಸ್ಕೃತಿಯನ್ನು ಹಾಡುತ್ತಿದ್ದಾನೆ. ‘ನಮ್ಮದು ಈ ಕನ್ನಡ ನಾಡು, ಸತ್ಯ ಅಹಿಂಸೆಯ ಬೀಡು!’ ತನ್ನನ್ನು ತಬ್ಬಲಿಯನ್ನಾಗಿ ಮಾಡಬೇಡ ಎಂದು ಬೇಡಿಕೊಳ್ಳುವ ಕರುವಿಗೆ, ಪುಣ್ಯಕೋಟಿ ಹೇಳುವ ಮಾತನ್ನು ನೋಡಿರಿ:

ಕೊಟ್ಟ ಭಾಷೆಗೆ ತಪ್ಪಲಾರೆ
ಕೆಟ್ಟ ಯೋಚನೆ ಮಾಡಲಾರೆ
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ.

ಕರ್ನಾಟಕದಲ್ಲಿ ಒಂದು ಕಾಲದಲ್ಲಿ ಕೃಷಿಸಂಸ್ಕೃತಿ ಇದ್ದಾಗ, ಗೋವಳರಿಗೆ ಹಾಗು ಅವರ ಗೋವುಗಳಿಗೆ ಇರುವ ಸಾಮರಸ್ಯವನ್ನು ಈ ಮುಂದಿನ ನುಡಿಯು ಸೂಚಿಸುತ್ತದೆ:

ಗೊಲ್ಲ ಕರೆದಾ ದನಿಯ ಕೇಳಿ
ಎಲ್ಲ ಹಸುಗಳು ಬಂದು ನಿಂತು
ಚಲ್ಲಿ ಸೂಸಿ ಹಾಲ ಕರೆಯಲು
ಅಲ್ಲಿ ತುಂಬಿತು ಬಿಂದಿಗೆ.

ಈ ಸಂಸ್ಕೃತಿಯು ಈಗ ಉಳಿದಿಲ್ಲ; ಕಾಲಾಯ ತಸ್ಮೈ ನಮಃ!

[ ಎಸ್.ಎಲ್. ಭೈರಪ್ಪನವರು ಬರೆದ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿಯಲ್ಲಿ ಈ ಸಾಮರಸ್ಯವು ಹದಗೆಟ್ಟು ಹೋಗಿರುವದನ್ನು ಚೆನ್ನಾಗಿ ಚಿತ್ರಿಸಿದ್ದಾರೆ. (ಇದು ಇದೇ ಶೀರ್ಷಿಕೆಯ ಚಲನಚಿತ್ರದಲ್ಲಿಯೂ ಸಹ ಬಂದಿದೆ.) ನಾಯಕನು ತನ್ನ ಗೋವುಗಳನ್ನು ಕಟುಕರ ಕೈಯಿಂದ ಪಾರು ಮಾಡಲು ಧಾವಿಸುತ್ತಾನೆ. ಕಟುಕನಿಗೆ ಬೆಲೆ ಕೊಟ್ಟು, ಆ ಗೋವುಗಳನ್ನು ಪುನಃ ಕೊಳ್ಳಲು ಬಯಸುತ್ತಾನೆ. ಅವನಿಗೆ ತನ್ನ ಗೋವುಗಳನ್ನು ಗುರುತಿಸಲು ಸಾಧ್ಯವಾಗುವುದಿಲ್ಲ. ‘ಅವುಗಳನ್ನು ಹೆಸರು ಹಿಡಿದು ಕರೆಯಿರಿ. ಅವು ನಿಮ್ಮಧ್ವನಿಯ ಮೂಲಕ ನಿಮ್ಮನ್ನು ಗುರುತಿಸುತ್ತವೆ’ ಎಂದು ಕಟುಕನು ಹೇಳುತ್ತಾನೆ. ನಾಯಕನು ಕರೆದರೂ ಸಹ ಗೋವುಗಳು ನಾಯಕನನ್ನು ಗುರುತಿಸುವದಿಲ್ಲ. Neither he recognises his cattle, nor his cattle recognise him!]

ಈ ಕವನದಲ್ಲಿ ಕೆಲವು ವ್ಯಂಗ್ಯ ಅಂಶಗಳೂ ಬಂದಿವೆ:
ಪುಣ್ಯಕೋಟಿಯು ತನ್ನ ಸೋದರಿಯರಿಗೆ ಬೇಡಿಕೊಳ್ಳುವ ಮಾತುಗಳನ್ನು ನೋಡಿರಿ:

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು. 

ತನ್ನ ತಾಯಿಯು ಹುಲಿಗೆ ಆಹಾರವಾದ ಬಳಿಕ ಅದರ ಕರು ಮಮತೆಯನ್ನು ಪಡೆಯಲು ಇತರ ಗೋವುಗಳ ಮುಂದೆ ಹೋಗುತ್ತದೆ. ಇತರ ಗೋವುಗಳು ಈ ಕರುವನ್ನು ತಿರಸ್ಕರಿಸಿ ಅದಕ್ಕೆ ಇರಿದರೆ? ಆಗ ಆ ಕರುವು ಇತರ ಗೋವುಗಳ ಹಿಂಭಾಗದಲ್ಲಿ ಹೋಗಿ ನಿಲ್ಲುತ್ತದೆ,ಅಲ್ಲಿಯಾದರೂ ತನಗೆ ಆಶ್ರಯ ಸಿಕ್ಕೀತೆಂದು. ಆದರೆ ಇತರ ಗೋವುಗಳು ಅಲ್ಲಿಂದಲೂ ಈ ಕರುವನ್ನು ಒದೆದು ಕಳುಹಿಸಬಹುದಲ್ಲವೆ? ಈ ಸಾಲುಗಳು ತಾಯಿಯ ತಳಮಳವನ್ನು ಹಾಗು ಸಾಮಾನ್ಯವಾಗಿ ಬಳಗದವರು ಅನಾಥ ಶಿಶುವನ್ನು ನಡೆಯಿಸಿಕೊಳ್ಳುವ ರೀತಿಯನ್ನು ತೋರಿಸುತ್ತವೆ.

ತನ್ನ ಕರುವನ್ನು ಅಗಲುವ ಗಳಿಗೆಯಲ್ಲಿ, ಪುಣ್ಯಕೋಟಿಯ ಮನದಲ್ಲಿ ಏಳುತ್ತಿರುವ ಭಾವನೆ ಏನು? ‘ತಾನಂತೂ ಸಾಯುತ್ತಿದ್ದೇನೆ. ತನ್ನ ಕರುವಾದರೂ ಸುರಕ್ಷಿತವಾಗಿರಲಿ.’  
ಆ ಉದ್ದೇಶದಿಂದ ಅದು ಕರುವಿಗೆ  ಈ ರೀತಿಯಾಗಿ ಸೂಚನೆಯನ್ನು ಕೊಡುತ್ತದೆ:

ಕಟ್ಟ ಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟ ವ್ಯಾಘ್ರನು ಹೊಂಚುತಿರುವನು
ನಟ್ಟ ನಡುವಿರು ಕಂದನೆ.

ಪುಣ್ಯಕೋಟಿಯ ಕಥೆಯು ಕೇವಲ ಒಂದು ಏಕಾಕಿ ಕಥೆಯಲ್ಲ, ಅದು ಒಂದು ಸಾಂಸ್ಕೃತಿಕ ಪರಂಪರೆ ಎಂದು ಹೇಳುವ ಉದ್ದೇಶದಿಂದಲೆ, ಕೊನೆಯ ಎರಡು ನುಡಿಗಳಲ್ಲಿ, ಕಾಳಿಂಗ ಗೊಲ್ಲನ ಹಾಗು ಪುಣ್ಯಕೋಟಿಯ ವಂಶದ ಬಗೆಗೆ ಪ್ರಸ್ತಾಪವಿದೆ.

ಎನ್ನ ವಂಶದ ಗೋವ್ಗಳೊಳಗೆ
ನಿನ್ನ ವಂಶದ ಗೊಲ್ಲರೊಳಗೆ
ಮುನ್ನ ಪ್ರತಿ ಸಂಕ್ರಾಂತಿಯೊಳಗೆ
ಚೆನ್ನ ಕೃಷ್ಣನ ಭಜಿಸಿರಿ.


ಭಾರತೀಯ ಸಾಹಿತ್ಯಪರಂಪರೆಗೆ ಅನುಗುಣವಾಗಿ, ಕವನದ ಅಂತಿಮ ಸಾಲುಗಳು ದೇವರ ಕೃಪೆಯು ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತವೆ:
ಈವನು ಸೌಭಾಗ್ಯ ಸಂಪದ
ಭಾವಜಾಪಿತ ಕೃಷ್ಣನು.

ವ್ಯಾಸ ದೇಶಪಾಂಡೆಯವರದು ಅದ್ಭುತ ಸ್ಮರಣಶಕ್ತಿ. ತಾವು ಮಾಧ್ಯಮಿಕ ಶಾಲೆಯಲ್ಲಿ ಕಲಿಯುತ್ತಿದ್ದಾಗಿನ ಒಂದು ಘಟನೆಯನ್ನು ಅವರು ಹೇಳಿದರು. ಶ್ರೀ ಎನ್.ಪಿ.ಕುಲಕರ್ಣಿ ಎನ್ನುವ ಅವರ ಗುರುಗಳು, ಕನ್ನಡ ಪಠ್ಯದಲ್ಲಿದ್ದ, ಗಂಗಾಧರ ಚಿತ್ತಾಳರ ಒಂದು ಕವನವನ್ನು ಇವರಿಗೆ ವಿವರಿಸುತ್ತಿದ್ದರಂತೆ. ಆ ಕವನವೂ ಸಹ ಗಾಂಧೀಜಿಯ ಕೊಲೆಯ ಬಗೆಗೆ ಇದೆ; ಸಾತ್ವಿಕ ಶಕ್ತಿಯು ತನ್ನ ಬಲಿದಾನದ ಮೂಲಕವೇ ತಾಮಸ ಶಕ್ತಿಯನ್ನು ಗೆಲ್ಲುತ್ತದೆ ಎನ್ನುವುದನ್ನು ಈ ಕವನವು ಹೇಳುತ್ತದೆ. ಆ ಕವನವನ್ನು ವ್ಯಾಸ ದೇಶಪಾಂಡೆಯವರು ತಮಗೆ ನೆನಪಿದ್ದಷ್ಟು ವಾಚಿಸಿದರು:

ನಿನ್ನ ನೆತ್ತರು ನೆಲಕೆ ಚೆಲ್ಲಿದಂದಂದು
ಮಣ್ಣು ನಡುಗಿತು, ಹಗಲು ಹೂಬಾಡಿತು
ನರನು ಕೆರಳುವ ಹುಂಬ, ಬಾಳು ಯೂಪಸ್ತಂಭ
ಉತ್ತಮರ ಬಲಿ ಇಲ್ಲಿ ಎಂದು ಬಾನಾಡಿತು

ಬತ್ತಿದೆದೆಗಳಲಿ ಒಲವ ತೇವು ಮೂಡಿತ್ತು
ಶಾಂತಿಸಮರಕೆ ಇದುವೆ ಮೊದಲೆನಿಸಿತು
ಕಲ್ಲೆದೆಯ ಸೀಮೆಯಲಿ ಹೂಕುಸುರು ಅಹ ಇದುವೆ
ಬರುವ ಭಾಗ್ಯದ ಯುಗದ ತೊದಲೆನಿಸಿತು

ಖ್ಯಾತ ಸಾಹಿತಿ ಯಶವಂತ ಚಿತ್ತಾಳರ ಅಣ್ಣಂದಿರಾದ ಗಂಗಾಧರ ಚಿತ್ತಾಳರು ಕರ್ನಾಟಕ ಹಾಯ್‍ಸ್ಕೂಲಿನ ವಿದ್ಯಾರ್ಥಿ.  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಮುಂಬಯಿ ಪ್ರಾಂತಕ್ಕೆ ಪ್ರಥಮರಾಗಿ ಉತ್ತೀರ್ಣರಾಗಿದ್ದರು. (ಆಗಿನ ಮುಂಬಯಿ ಪ್ರಾಂತದಲ್ಲಿ ಗುಜರಾತ, ಮಹಾರಾಷ್ಟ್ರ ಹಾಗು ಈಗಿನ ಕರ್ನಾಟಕದ ನಾಲ್ಕು ಉತ್ತರದ ಜಿಲ್ಲೆಗಳು ಕೂಡಿಕೊಂಡಿದ್ದವು.) ಅವರು ಕಾ^ಲೇಜಿನಲ್ಲಿ ಕಲಿಯುವಾಗ, ಗಾಂಧೀಜಿಯವರ ಕರೆಯ ಮೇರೆಗೆ, ವಿದ್ಯಾಭ್ಯಾಸವನ್ನು ತ್ಯಜಿಸಿ, ‘ಕ್ವಿಟ್ ಇಂಡಿಯಾ’ ಚಳುವಳಿಯಲ್ಲಿ ಭಾಗವಹಿಸಿದರು. ಪರಿಣಾಮವಾಗಿ ತಮ್ಮ ಒಂದು ವರ್ಷವನ್ನು ಕಳೆದುಕೊಂಡರು. ಶ್ರೀ ಎನ್.ಪಿ.ಕುಲಕರ್ಣಿಯವರು ಈ ಕವನವನ್ನು ವಿದ್ಯಾರ್ಥಿಗಳ ಎದುರಿಗೆ ವಾಚಿಸಿ ಹೇಳಿದರಂತೆ: ‘ಗಂಗಾಧರ ಚಿತ್ತಾಳ ನನ್ನ ಶಿಷ್ಯನಾಗಿದ್ದ. ನೀವು ಕೂತಿರುವಲ್ಲಿಯೇ ಅತನೂ ಕೂತಿರುತ್ತಿದ್ದ. ಆತನ ಕವನವನ್ನೇ ನಾನು ಇದೀಗ ನಿಮಗೆ ಕಲಿಸುತ್ತಿರುವುದು ನನಗೆ ಹೆಮ್ಮೆಯ ಮಾತಾಗಿದೆ.’
ಧನ್ಯ ಗುರು, ಧನ್ಯ ಶಿಷ್ಯ!

‘ಗೋವಿನ ಹಾಡು’ ಜಾನಪದ ಹಾಡಲ್ಲ. ಇದನ್ನು ಬರೆದವನು ಮದ್ದೂರಿನವನು ಅಥವಾ ಮದ್ದೂರು ನರಸಿಂಹದೇವರ ಒಕ್ಕಲು ಎಂದು ಕೆಲವರು ಅನುಮಾನಿಸುತ್ತಾರೆ. ಏನೇ ಇರಲಿ, ಕನ್ನಡದ ಜನಮಾನಸದಲ್ಲಿ ಅಚ್ಚೊತ್ತಿ ನಿಂತಿರುವ ಈ ಗೀತೆಯು ಕನ್ನಡಿಗರ ಸಂಸ್ಕೃತಿಯನ್ನು ತೋರಿಸುತ್ತದೆ. ಆ ಕಾರಣದಿಂದಾಗಿಯೇ, ನಮ್ಮ ಸಾಂಸ್ಕೃತಿಕ ಪ್ರತಿನಿಧಿಗಳಾದ ಲೇಖಕರು ಈ ಗೀತೆಯ ಸಾಲುಗಳನ್ನು ತಮ್ಮ ಕೃತಿಗಳ ಶಿರ್ಷಿಕೆಯಾಗಿ ಬಳಸಿಕೊಂಡಿದ್ದಾರೆ.  ಎಸ್.ಎಲ್.ಭೈರಪ್ಪನವರ ‘ತಬ್ಬಲಿಯು ನೀನಾದೆ ಮಗನೆ’ ಕಾದಂಬರಿ ಹಾಗು ಪಿ.ಲಂಕೇಶರ ‘ಖಂಡವಿದೆ ಕೋ, ಮಾಂಸವಿದೆ ಕೋ’ ಚಲನಚಿತ್ರವು ಈ ಮಾತಿಗೆ ನಿದರ್ಶನಗಳಾಗಿವೆ.

Sunday, July 12, 2015

ನಾಗದೇವತೆಯ ನ್ಯಾಯ



ಅಜ್ಜಿ ಹೇಳುವ ಕತೆಗಳು ಚಿಕ್ಕ ಮಕ್ಕಳಿಗೆ ತುಂಬ ಪ್ರಿಯವಾದ ಕತೆಗಳು. ಈ ಕತೆಗಳಲ್ಲಿ ಬರುವ ಪ್ರಾಣಿ ಹಾಗು ಪಕ್ಷಿಗಳು ಮನುಷ್ಯರಂತೆ ವರ್ತಿಸುತ್ತವೆ, ಮನುಷ್ಯರಂತೆ ಮಾತನಾಡುತ್ತವೆ. ಇಂತಹ ಕತೆಗಳಲ್ಲಿ ಅತಿ ಸುರಮ್ಯವಾದ ಕತೆಯೊಂದು ನಾಗರ ಹಾವಿಗೆ ಸಂಬಂಧಿಸಿದ ಕತೆಯಾಗಿದೆ. ಈ ಕತೆಯನ್ನು ನೀವೆಲ್ಲರೂ ಬಾಲ್ಯದಲ್ಲಿ ಕೇಳಿರಬಹುದು. ಇದೇ ಕತೆಯನ್ನು ಆಧರಿಸಿ ಗಿರೀಶ ಕಾರ್ನಾಡರು ‘ನಾಗಮಂಡಲ’ ಎನ್ನುವ ಚಲನಚಿತ್ರವನ್ನು ನಿರ್ಮಿಸಿದರು. ನನ್ನ ಅಜ್ಜಿಯಿಂದ ನಾನು ಕೇಳಿದ ಕತೆಗೆ ಹಾಗು ಕಾರ್ನಾಡರ ‘ನಾಗಮಂಡಲ’ದ ಕತೆಗೆ ಕೆಲವು ವ್ಯತ್ಯಾಸಗಳಿವೆ. ಆದರೆ ಕತೆಯ ಕೊನೆ ಮಾತ್ರ ಒಂದೇ ಆಗಿದೆ. ಪ್ರಸಿದ್ಧ ನಾಟಕಕಾರ ಹಾಗು ಚಿಂತಕರಾದ ಶ್ರೀ ವ್ಯಾಸ ದೇಶಪಾಂಡೆಯವರು ಕೆಲವು ದಿನಗಳ ಹಿಂದೆ ಈ ಕತೆಯ ಕೊನೆಯಲ್ಲಿ ಅಡಗಿರುವ ನ್ಯಾಯಸೂಕ್ಷ್ಮತೆ ಹಾಗು ಧರ್ಮಸೂಕ್ಷ್ಮತೆಗಳ ಬಗೆಗೆ ಕೆಲವು ಮಾತುಗಳನ್ನು ತಿಳಿಸಿದರು. ಆ ಸೂಕ್ಷ್ಮತೆಗಳನ್ನು ನಿಮ್ಮೊಡನೆ ಹಂಚಿಕೊಳ್ಳುವ ಮೊದಲು ಈ ಕತೆಯ ಸಾರಾಂಶವನ್ನು ಹೇಳುವುದು ಉಚಿತವಾದೀತು.

ಒಂದು ಹಳ್ಳಿ. ಆ ಹಳ್ಳಿಯಲ್ಲಿ ಗಂಡ ಹಾಗು ಹೆಂಡತಿ ಮಾತ್ರ ಇರುವ ಒಂದು ಕುಟುಂಬ. ಗಂಡನಿಗೆ ವಿಪರೀತ ಹೊರಚಾಳಿ. ಹೀಗಾಗಿ ಹೆಂಡತಿಯೊಡನೆ ಆತ ಮಲಗಿಯೇ ಇಲ್ಲ. ಹೆಂಡತಿ ಹಳ್ಳಿಯಲ್ಲಿರುವ ಜಾಣ ಮುದುಕಿಯೊಬ್ಬಳ ಎದುರಿಗೆ ತನ್ನ ಸಂಕಟವನ್ನು ತೋಡಿಕೊಂಡಾಗ, ಆ ಮುದುಕಿಯು ಇವಳಿಗೆ ಒಂದು ವಶೀಕರಣದ ಮದ್ದನ್ನು ತಯಾರಿಸಿ ಕೊಡುತ್ತಾಳೆ. ‘ಈ ಮದ್ದನ್ನು ಹಾಲಿನಲ್ಲಿ ಬೆರಸಿ, ಗಂಡನಿಗೆ ಕುಡಿಸಿದರೆ, ಆತ ಹೆಂಡತಿಯಲ್ಲಿ ಮೋಹಗೊಳ್ಳುತ್ತಾನೆ’ ಎಂದು ಹೇಳುತ್ತಾಳೆ. ಆ ರಾತ್ರಿ ಈ ಹುಡುಗಿ ಹಾಲಿನಲ್ಲಿ ಮದ್ದನ್ನು ಬೆರಸುತ್ತಾಳೆ; ಆದರೆ ತನ್ನ ಗಂಡನಿಗೆ ಕೊಟ್ಟರೆ, ಏನಾದರೂ ಕೆಡುಕಿನ ಪರಿಣಾಮವಾದೀತು ಎನ್ನುವ ಕೊನೆಯ ಗಳಿಗೆಯ ಹೆದರಿಕೆಯಿಂದ, ಆ ಮದ್ದನ್ನು ಹಿತ್ತಲಿನ ಹೊರಗೆ ಹೋಗಿ ಚೆಲ್ಲಿ ಬಿಡುತ್ತಾಳೆ. ಕತ್ತಲಿನಲ್ಲಿ ಅವಳಿಗೆ ತಿಳಿಯದಂತೆ ಆ ಮದ್ದು ಒಂದು ಹುತ್ತದ ಒಳಗೆ ಬೀಳುತ್ತದೆ. ಆ ಹುತ್ತದ ಒಳಗೆ ಒಂದು ನಾಗದೇವತೆ ವಾಸವಾಗಿರುತ್ತದೆ. ಮದ್ದು ಬೆರೆಸಿದ ಆ ಹಾಲು ಅಪ್ರಯತ್ನವಾಗಿ ಆ ನಾಗನ ಬಾಯಿಯಲ್ಲಿ ಬೀಳುತ್ತದೆ.

ಮನುಷ್ಯನಾಗಲಿ, ಹಾವಾಗಲೀ ವಶೀಕರಣದ ಮದ್ದಿನ ಪರಿಣಾಮಕ್ಕೆ ಒಳಗಾಗಲೇ ಬೇಕಲ್ಲ! ಆ ಹೆಣ್ಣಿನಲ್ಲಿ ಮೋಹಗೊಂಡ ಈ ನಾಗದೇವತೆ, ಆ ರಾತ್ರಿ ಅವಳ ಗಂಡನ ರೂಪದಲ್ಲಿ ಅವಳ ಮನೆಗೆ ಹೋಗಿ, ಅವಳ ಜೊತೆಗೆ ಸುಖಿಸುತ್ತದೆ. ಪಾಪ, ಆ ಹುಡುಗಿಗೆ ಈ ವಂಚನೆ ಗೊತ್ತಾಗುವದೇ ಇಲ್ಲ. ತನ್ನ ಗಂಡನ ಸ್ವಭಾವದಲ್ಲಿ ಅಚಾನಕ್ ಆದ ಬದಲಾವಣೆಯಿಂದಾಗಿ, ಅವಳು ಸಂಭ್ರಮ ಪಡುತ್ತಾಳೆ. ಅನೇಕ ರಾತ್ರಿಗಳವರೆಗೆ ಇದು ಹೀಗೆಯೇ ಮುಂದುವರಿಯುತ್ತದೆ. ಕೆಲ ಕಾಲದ ನಂತರ ಈ ಹುಡುಗಿ ಬಸಿರಾಗುತ್ತಾಳೆ.

ಅವಳ ಗಂಡನಿಗೆ ಇದೊಂದು ಆಘಾತಕಾರಿ ಸಮಾಚಾರ. ತನ್ನ ಸಂಪರ್ಕವಿಲ್ಲದೆ ತನ್ನ ಹೆಂಡತಿ ಬಸಿರಾಗಿದ್ದಾಳೆ, ಅರ್ಥಾತ್ ಅವಳು ಹಾದರ ಮಾಡಿದ್ದಾಳೆ ಎಂದು ಅವನು ಸಂಶಯಿಸುತ್ತಾನೆ. ಇವನು ಎಷ್ಟೇ ಸತಾಯಿಸಿದರೂ ಸಹ, ಅವಳು ಕಣ್ಣೀರು ಹಾಕುತ್ತ, ಇದು ನಿಮ್ಮದೇ ಫಲ ಎಂದು ಹೇಳುತ್ತಾಳೆ. ಕೊನೆಗೊಮ್ಮೆ ಆತ ಈ ಜಗಳವನ್ನು ಹಳ್ಳಿಯ ಪಂಚಾಯತಿಗೆ ಒಯ್ಯುತ್ತಾನೆ.

ಪಂಚರಿಗೆ ಇದೊಂದು ದೊಡ್ಡ ಸಮಸ್ಯೆ. ಗಂಡ ಹಾಗು ಹೆಂಡತಿ ಇಬ್ಬರೂ ಪ್ರಾಮಾಣಿಕ ಪ್ರತಿಜ್ಞೆಯನ್ನೇ ಮಾಡುತ್ತಿದ್ದಾರೆ. ಆದುದರಿಂದ, ಈ ಸಮಸ್ಯೆಯನ್ನು ಅಗ್ನಿದಿವ್ಯದ ಮೂಲಕ ಬಗೆಹರಿಸುವುದು ಸರಿ ಎಂದುಕೊಂಡ ಪಂಚರು, ಆ ಹುಡುಗಿಗೆ ಕೈಯಲ್ಲಿ ಬೆಂಕಿಯನ್ನು ಹಿಡಿದುಕೊಂಡು ಆಣೆ ಮಾಡಿ ಹೇಳು ಎನ್ನುತ್ತಾರೆ. ಅವಳೇನೋ ತಕ್ಷಣವೇ ಸಿದ್ಧಳಾಗುತ್ತಾಳೆ. ಆದರೆ ಆಕೆಯ ಗಂಡನು ‘ಅಗ್ನಿದಿವ್ಯವು ಈ ಹಾದರಗಿತ್ತಿಯ ಕೈಯನ್ನಷ್ಟೇ ಸುಡುತ್ತದೆ; ಅವಳು ಸಾಯಬೇಕಾದರೆ ನಾಗದಿವ್ಯವೇ ಸರಿಯಾದದ್ದು’, ಎನ್ನುತ್ತಾನೆ. ಸರಿ, ಅಲ್ಲಿಯೇ ಇದ್ದಂತಹ ನಾಗರಹಾವಿನ ಹುತ್ತದಿಂದ ನಾಗರ ಹಾವನ್ನು ಹೊರತೆಗೆದು, ತನ್ನ ಕೈಯಲ್ಲಿ ಹಿಡಿದುಕೊಂಡು ಆಣೆ ಮಾಡಲು ಅವಳಿಗೆ ಸೂಚಿಸಲಾಗುತ್ತದೆ. ಹುಡುಗಿ ಪತಿವ್ರತೆಯೇ ಆಗಿದ್ದರೆ, ಆ ನಾಗರಹಾವು ತನ್ನ ಹೆಡೆಯನ್ನು ಅವಳ ತಲೆಯ ಮೇಲೆ ಕಿರೀಟದಂತೆ ಬಿಚ್ಚುತ್ತದೆ; ಹಾಗಿಲ್ಲದೆ ಹೋದರೆ ಇವಳನ್ನು ಕಡಿದು ಸಾಯಿಸುತ್ತದೆ ಎನ್ನುವುದು ಅಲ್ಲಿಯ ಜನರ ನಂಬಿಕೆ.  ತನ್ನ ಪಾತಿವ್ರತ್ಯದ ಬಗೆಗೆ ಪ್ರಾಮಾಣಿಕ ನಂಬಿಕೆ ಇದ್ದ ಆ ಹುಡುಗಿ, ಹಾಗೆಯೇ ಮಾಡುತ್ತಾಳೆ. “ಈ ಹಾವನ್ನು ಬಿಟ್ಟು ನಾನು ಯಾವ ಪರಪುರುಷನನ್ನು ಮುಟ್ಟಿಲ್ಲ. ನನ್ನ ಮಾತು ಸುಳ್ಳಾಗಿದ್ದರೆ, ಈ ಹಾವು ನನ್ನನ್ನು ಕಡಿದು ಸಾಯಿಸಲಿ” ಎಂದು ಅವಳು ಉದ್ಗರೆಯುತ್ತಾಳೆ. ಅವಳು ಹುತ್ತದಿಂದ ಹೊರತೆಗೆದು ಹಿಡಿದುಕೊಂಡ ನಾಗರಹಾವು ಅವಳ ಜೊತೆಗೆ ಸುಖಿಸಿದ ನಾಗದೇವತೆಯೇ ಆಗಿರುತ್ತದೆ. ಅದು ತನ್ನ ಹೆಡೆಯನ್ನು ಅವಳಿಗೆ ಕೊಡೆ ಮಾಡಿ ಹಿಡಿಯುತ್ತದೆ. ನಾಗದಿವ್ಯವನ್ನು ನೋಡಲು ಕೂಡಿದ ಜನರು ಹರ್ಷೋದ್ಗಾರವನ್ನು ಮಾಡುತ್ತಾರೆ. ಇವಳು ದೈವೀ ಪ್ರಭಾವವುಳ್ಳ ಪತಿವ್ರತೆ ಎನ್ನುತ್ತ ಅವಳಿಗೆ ಭಕ್ತಿಯಿಂದ  ನಮಿಸುತ್ತಾರೆ. ಅವಳ ಗಂಡನಿಗೆ ದಿಗ್ಭ್ರಮೆ. ಬಹುಶಃ ಇವಳು ಪುರುಷಸಂಪರ್ಕವಿಲ್ಲದೆ ಬಸಿರಾದ ಮಹಾತ್ಮಳಿರಬಹುದು ಎಂದುಕೊಂಡ ಗಂಡನು ಪಶ್ಚಾತ್ತಾಪ ಪಟ್ಟು, ಅವಳಲ್ಲಿ ಆತ್ಮೀಯತೆಯನ್ನು ತಳೆಯುತ್ತಾನೆ.

ಮರುದಿನ ತನ್ನ ಹುತ್ತದ ಸಮೀಪದಲ್ಲಿ ಆ ನಾಗರಹಾವು ಸತ್ತು ಬಿದ್ದಿರುತ್ತದೆ. ಈ ಹುಡುಗಿ ಸ್ನಾನ ಮಾಡುವಾಗ, ಹರಿದು ಬಂದ ಅವಳ ಕೂದಲೊಂದನ್ನು ತನ್ನ ಕುತ್ತಿಗೆಗೆ ಬಿಗಿದುಕೊಂಡು ಅದು ಆತ್ಮಹತ್ಯೆ ಮಾಡಿಕೊಂಡಿರುತ್ತದೆ. ಕತೆಯು ಮುಗಿದ ಬಳಿಕ ವ್ಯಾಸ ದೇಶಪಾಂಡೆಯವರು ನನಗೊಂದು ಪ್ರಶ್ನೆಯನ್ನು ಹಾಕಿದರು: ‘ನಾಗದೇವತೆ ಆತ್ಮಹತ್ಯೆಯನ್ನು ಏಕೆ ಮಾಡಿಕೊಂಡಿತು?’
ನಾನು ಸ್ವಲ್ಪ ವಿಚಾರ ಮಾಡಿ ಹೇಳಿದೆ: ’ವಶೀಕರಣದ ಫಲವಾಗಿ ಆ ಹಾವು ಅವಳಲ್ಲಿ ಅತಿಯಾದ  ಮೋಹವನ್ನು ಬೆಳೆಯಿಸಿಕೊಂಡಿತ್ತು. ಇನ್ನು ಮೇಲೆ ಅವಳನ್ನು ಕೂಡುವುದು ಸಾಧ್ಯವಿಲ್ಲ ಎನ್ನುವ ಸಂಕಟದಿಂದ ಆ ಹಾವು ಅವಳದೇ ಕೂದಲಿನಿಂದ ಉರುಲು ಹಾಕಿಕೊಂಡು ಅತ್ಮಹತ್ಯೆಯನ್ನು ಮಾಡಿಕೊಂಡಿರಬಹುದು.’

ವ್ಯಾಸ ದೇಶಪಾಂಡೆಯವರು ಹೇಳಿದರು: “ಸರಿ, ಇದು ಒಂದು ಸಂಭಾವ್ಯತೆ. ಇನ್ನೂ ಒಂದು ಸಂಭಾವ್ಯತೆ ಇರಬಹುದಲ್ಲವೆ? ನೋಡಿ, ಈ ಹಾವು ಸಾಧಾರಣ ಹಾವಲ್ಲ. ಇದು ನಾಗದೇವತೆ. ದೇವತೆಯಾದ ಈ ಹಾವು ಮನುಷ್ಯರೊಡನೆ ಪ್ರಣಯವ್ಯವಹಾರವನ್ನು ಮಾಡಬಾರದು. ಇದು ನಾಗದೇವತೆ ಮಾಡಿದ ಮೊದಲನೆಯ ತಪ್ಪು. ಆ ತಪ್ಪಿನ ಫಲವಾಗಿ ಒಂದು ಬಗೆಹರಿಯದ ಸಮಸ್ಯೆ ಅಲ್ಲಿ ಹುಟ್ಟಿಕೊಂಡಿತು. ಆ ಹುಡುಗಿಯದು ತಪ್ಪಿಲ್ಲವೆಂದು ನಾಗದೇವತೆಗೆ ಗೊತ್ತಿದೆ. ಈ ನಾಗರಹಾವಿನ ಹೊರತಾಗಿ ಬೇರೊಬ್ಬ ಪರಪುರುಷನನ್ನು ಮುಟ್ಟಿಲ್ಲವೆಂದು ಅವಳು ಸತ್ಯವನ್ನೇ ನುಡಿದಿದ್ದಾಳೆ. ಆದುದರಿಂದ ಅವಳನ್ನು ಕಚ್ಚುವಂತಿಲ್ಲ.  ಆದರೂ ಅವಳು ತಿಳಿಯದೆಯೇ ಹಾದರ ಮಾಡಿದ್ದು ನಿಜವಲ್ಲವೆ? ಆ ಪಾಪಕ್ಕೆ ಶಿಕ್ಷೆಯನ್ನು ಕೊಡಲೆಂದು ಅವಳನ್ನು ಕಚ್ಚಿದ್ದರೆ, ತಾನು ಮಾಡಿದ ಅಪರಾಧಕ್ಕಾಗಿ ಅವಳಿಗೆ ಶಿಕ್ಷೆ ಕೊಟ್ಟಂತಾಗುತ್ತಿರಲಿಲ್ಲವೆ? ಅಲ್ಲದೆ ವಾಸ್ತವತೆಯನ್ನು ಅವಳ ಗಂಡನಿಂದ ಹಾಗು ಹಳ್ಳಿಯ ಸಮಸ್ತರಿಂದ ಮರೆಮಾಚಿದ್ದು ನಾಗದೇವತೆ ಮಾಡಿದ ಎರಡನೆಯ ಅನಿವಾರ್ಯ ಅಪರಾಧವಲ್ಲವೆ? ‘ತನ್ನ ಪಾಪಕ್ಕೆ ತಕ್ಕ ಶಿಕ್ಷೆಯನ್ನು ತಾನೇ ಅನುಭವಿಸಬೇಕು. ನಾಗದಿವ್ಯದಂತಹ ವಿಧಿಗೆ ತಾನಿನ್ನು ಅಯೋಗ್ಯ’ ಎನ್ನುವ ಮನೋಕ್ಷೋಭೆಯ ಪರಿಣಾಮವಾಗಿ ಅದು ಆತ್ಮಹತ್ಯೆಯನ್ನು ಮಾಡಿಕೊಂಡಿರಬಹುದು!”

ವ್ಯಾಸ ದೇಶಪಾಂಡೆ ಮುಂದುವರೆಸಿ ಹೇಳಿದರು: “ಇಲ್ಲಿ ಮತ್ತೊಂದು ಪ್ರಶ್ನೆಯೂ ಬರುತ್ತದೆ. ನಾಗದೇವತೆಯು ವಶೀಕರಣಕ್ಕೆ ಒಳಗಾಗಿ ತಪ್ಪನ್ನು ಮಾಡಿತು. ಅದೇನೂ ಸ್ವಇಚ್ಛೆಯಿಂದ ಹಾಗೆ ಮಾಡಿರಲಿಲ್ಲವಲ್ಲ ಎಂದು ತರ್ಕಿಸಬಹುದು. ಇದನ್ನೇ ದೈವಜ್ಞರು ವಿಧಿ ಎಂದು ಕರೆಯುತ್ತಾರೆ. ದೇವತೆಗಳನ್ನು, ಮನುಷ್ಯರನ್ನು, ಪ್ರಾಣಿ-ಪಕ್ಷಿಗಳನ್ನು ಆಟವಾಡಿಸುವುದೇ ಅ ವಿಧಿ, ಅದನ್ನು ಮೀರಲು ಯಾರಿಗೂ ಸಾಧ್ಯವಿಲ್ಲ”

‘ನಮ್ಮ ಅಜ್ಜಿಯ ಕತೆಗಳಲ್ಲೂ ಸಹ ಧರ್ಮಸೂಕ್ಷ್ಮತೆ ಹಾಗು ನ್ಯಾಯಸೂಕ್ಷ್ಮತೆಯನ್ನು ಹೇಗೆ ಅಳವಡಿಸಲಾಗಿರುತ್ತದೆ, ನೋಡಿದಿರಾ? ನಮ್ಮ ಅಜ್ಜಿ ಹೇಳುವ ಜಾನಪದ ಕತೆಗಳಿಂದ ನಾವು ನೀತಿಪಾಠವನ್ನು ಕಲಿತೆವು. ಈಗಿನ ಚಿಕ್ಕ ಮಕ್ಕಳು ಗಣಕಯಂತ್ರದ ಕಾರ್ಟೂನುಗಳಲ್ಲಿ ಕೇವಲ ಅನೀತಿ ಹಾಗು ಹಿಂಸಾಪ್ರವೃತ್ತಿಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ,ಅಲ್ಲವೆ?’, ವ್ಯಾಸ ದೇಶಪಾಂಡೆ ಕೇಳಿದರು.
ನನ್ನಲ್ಲಿ ಉತ್ತರವಿರಲಿಲ್ಲ.