Tuesday, April 26, 2016

ಮೃಚ್ಛಕಟಿಕಮ್-೬


ವಸಂತಸೇನೆಗೆ ಚಾರುದತ್ತನಲ್ಲಿ ಉತ್ಕಟ ಪ್ರೇಮಭಾವವಿದೆ. ಆದರೆ ಅವಳು ಕುಲವಧುವಂತೂ ಅಲ್ಲ. ಆದುದರಿಂದ ಚಾರುದತ್ತನನ್ನು ಮದುವೆಯಾಗುವದು ಅವಳಿಗೆ ಸಾಧ್ಯವಿಲ್ಲದ ಮಾತು. ಇಂತಹ ಸಂದರ್ಭದಲ್ಲಿ, ಪ್ರಣಯಸಮರ್ಪಣೆಯೊಂದೇ ಅವಳಿಗೆ ಉಳಿದಿರುವ ಹಾದಿ. ಚಾರುದತ್ತನಿಗೆ ಮುತ್ತಿನ ಹಾರವನ್ನು ಮರಳಿಸುವ ನೆವದಲ್ಲಿ ಅವನನ್ನು ಸಂಧಿಸಲು ಅವಳು ಬಯಸುತ್ತಿದ್ದಾಳೆ. ಮೈತ್ರೇಯನ ಮೂಲಕ ಚಾರುದತ್ತನಿಗೆ ಅವಳು ಸಂದೇಶವನ್ನೂ ಸಹ ಕಳುಹಿಸಿದ್ದಾಳೆ.

(ತನ್ನ ಗೆಣೆಯನಿಗಾಗಿ ಹಂಬಲಿಸುತ್ತಿರುವ ಓರ್ವ ಸೂಳೆಯ ಅಳಲನ್ನು ಬೇಂದ್ರೆಯವರು ತಮ್ಮ ಹುಬ್ಬಳ್ಳಿಯಾಂವಾಕವನದಲ್ಲಿ ಚಿತ್ರಿಸಿದ್ದಾರೆ. ಆ ಕವನದಲ್ಲಿ ಎದೀ ಮ್ಯಾಲಿನ ಗೆಳತಿ ಮಾಡಿ ಇಟ್ಟುಕೊಂಡಾಂವಾಅನ್ನುವ ಸಾಲು ಬರುತ್ತದೆ. ಎದೆಯ ಮೇಲಿನ ಕೆಂಪು ಚುಕ್ಕಿಗೆ ಗೆಳತಿಎಂದು ಕರೆಯುತ್ತಾರೆ.  ಚುಕ್ಕಿಯು ಪ್ರೀತಿಪಾತ್ರರ ಸಂಕೇತ. ಈ ಸೂಳೆಯ ಗಿರಾಕಿಯೊಬ್ಬನು ತುಂಬ ಮೋಜಿನ ವ್ಯಕ್ತಿ. ಆತ ಇವಳಿಗೆ ತನ್ನ ಎದೆಯ ಮೇಲಿನ ಗೆಳತಿಯ ಸ್ಥಾನವನ್ನು ಕೊಟ್ಟಿದ್ದಾನೆ. ಆದರೆ ಅದಕ್ಕೂ ಹೆಚ್ಚಿನದಾದ ಮಡದಿಯ ಸ್ಥಾನವು ಇವಳಿಗೆ ಸಿಗುವುದು ಜನ್ಮಜನ್ಮಾಂತರಗಳಲ್ಲಿಯೂ ಸಾಧ್ಯವಿಲ್ಲ. ಈ ನಾಟಕದಲ್ಲಿಯೂ ಸಹ ವಸಂತಸೇನೆಗೆ ಸಿಗುವುದು ಎದಿಯ ಮ್ಯಾಲಿನ ಗೆಳತಿಯಸ್ಥಾನ ಮಾತ್ರ ಎಂದು ಪ್ರೇಕ್ಷಕರಿಗೆ ಭಾಸವಾಗುವುದು ಸಹಜ. ಆದರೆ ಅದಕ್ಕೂ ಹೆಚ್ಚಿನ ಸ್ಥಾನ ಆಕೆಗೆ ಸಿಕ್ಕೀತೆ? ಆ ಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಧಿಕ್ಕರಿಸುವ, ಗಣ್ಯವ್ಯವಸ್ಥೆಯನ್ನು ವಿಡಂಬಿಸುವ ನಮ್ಮ ನಾಟಕಕಾರನ ಒಲವು ಹೇಗಿದೆ ಎನ್ನುವುದನ್ನು ಕೊನೆಯ ಅಂಕದ ಕೊನೆಯಲ್ಲಿ ನೋಡೋಣ.)

ಈ ಅಂಕದಲ್ಲಿ ನಮ್ಮ ನಾಟಕಕಾರನು ಚಾರುದತ್ತ ಹಾಗು ವಸಂತಸೇನೆಯರು ಸಂಧಿಸುವ ದೃಶ್ಯವನ್ನು ಒಂದು ಅವಿಸ್ಮರಣೀಯವಾದ ಘಟನೆಯನ್ನಾಗಿ ಮಾಡಲು ಇಚ್ಛಿಸುತ್ತಾನೆ. ವಸಂತಸೇನೆಯಾದರೊ ಇಲ್ಲಿ ಅಭಿಸಾರಿಕೆ.  ಹಿಂದಿನ ಅಂಕದಲ್ಲಿಯೇ ಅಂದರೆ ಐದನೆಯ ಅಂಕದಲ್ಲಿಯೇ, ವಸಂತಸೇನೆಯ ದಾಸಿಯು ತೀವ್ರವಾಗಿ ಬೀಸುತ್ತಿರುವ ಮಳೆಗಾಳಿಯ ಬಗೆಗೆ ಎಚ್ಚರಿಸಿದ್ದಳು. ಆದರೆ ವಸಂತಸೇನೆಯು ಮಿಲನಕ್ಕಾಗಿ ಉತ್ಕಂಠಿತಳಾಗಿದ್ದಾಳೆ. ಒಬ್ಬ ಗೆಳೆಯ ಹಾಗು ಕೊಡೆ ಹಿಡಿಯುವ ಒಬ್ಬಳು ಸೇವಿಕೆಯ ಜೊತೆಗೆ ವಸಂತಸೇನೆ ಚಾರುದತ್ತನಿಗೆ ಸೂಚಿಸಿದ ಉಪವನದ ಕಡೆಗೆ ಹೊರಟಿದ್ದಾಳೆ. ಈ ಸಮಯದಲ್ಲಿ ಅವಳ ಗೆಳೆಯನು ಅವಳಿಗೆ ಕೆಲವು ಪ್ರಣಯದ ಪಾಠಗಳನ್ನು ಹೇಳುತ್ತಿದ್ದಾನೆ. ಈ ಪಾಠಗಳು ತರುಣ ಪ್ರೇಕ್ಷಕರಿಗೂ ಉಪಯುಕ್ತವಾಗಬಹುದು!

(ವಸಂತಸೇನೆಗೆ ಈ ಪಾಠಗಳನ್ನು ಹೇಳಿಕೊಡುವುದು ಅವಶ್ಯವೆ ಎಂದು ಪ್ರೇಕ್ಷಕರಲ್ಲಿ ಸಂದೇಹ ಬರಬಹುದು. ಆದರೆ ವಸಂತಸೇನೆಗೆ ಇದು ಮೊದಲ ನೈಜಪ್ರೇಮವಾಗಿದೆ ಹಾಗು ಅವಳು ಒಬ್ಬ ಹದಿಹರೆಯದ ಹುಡುಗಿಯಷ್ಟೇ ಉತ್ಸಾಹ ಹಾಗು ಗಲಿಬಿಲಿಯಲ್ಲಿ ಇದ್ದಾಳೆ ಎನ್ನುವುದನ್ನು ಗಮನಿಸಬೇಕು.)

ಧಾರಾಕಾರವಾಗಿ ಬೀಳುತ್ತಿರುವ ಮಳೆ ಹಾಗು ಗುಡುಗು-ಮಿಂಚುಗಳಿಗೆ ಅವಳನ್ನು ಹಿನ್ನಡೆಯಿಸಲು ಸಾಧ್ಯವಾಗುವುದಿಲ್ಲ. ತನ್ನ  ದೃಢ ನಿರ್ಧಾರವನ್ನು ಅವಳು ಪ್ರಕಟಿಸುವುದು ಹೀಗೆ:
ಮೇಘಾ ವರ್ಷಂತು ಗರ್ಜಂತು ಮುಂಚತ್ವ ಶನಿಮೇವ ವಾ|
ಗಣಯಂತಿ ನ ಶೀತೋಷ್ಣಂ ರಮಣಾಭಿಮುಖಾಃ ಸ್ತ್ರಿಯ:
( ಮೋಡಗಳು ಗರ್ಜಿಸಲಿ, ಮಳೆ ಸುರಿಯಲಿ, ಸಿಡಿಲೇ ಬಡೆಯಲಿ; ನಲ್ಲನೆಡೆಗೆ ತೆರಳುತ್ತಿರುವ ನಾರಿಯರು ಇದಾವದನ್ನೂ ಲೆಕ್ಕಿಸುವದಿಲ್ಲ.)

ಇತ್ತ ಚಾರುದತ್ತನು ಮೈತ್ರೇಯನ ಹಾದಿಯನ್ನು ಕಾಯುತ್ತ, ತನ್ನ ಉಪವನದಲ್ಲಿ  ಕುಳಿತಿದ್ದಾನೆ. ಆತನೂ ಸಹ ಬಿರುಮಳೆಯಿಂದಾಗಿ ವಿಹ್ವಲನಾಗಿದ್ದಾನೆ. ಮೈತ್ರೇಯನು ಉಪವನಕ್ಕೆ ಬಂದು ಚಾರುದತ್ತನನ್ನು ಭೆಟ್ಟಿಯಾದ ತಕ್ಷಣವೇ, ವಸಂತಸೇನೆಯ ಬಗೆಗೆ ದೂರಲು ಪ್ರಾರಂಭಿಸುತ್ತಾನೆ. ವಸಂತಸೇನೆಯು ನಿನ್ನಿಂದ ಹೆಚ್ಚಿನ ಮೌಲ್ಯದ ಆಭರಣಗಳನ್ನು ಕೇಳಲು ಬರುತ್ತಿದ್ದಾಳೆಎನ್ನುವ ತನ್ನ ಅನುಮಾನವನ್ನೂ ಹೇಳುವನು.  ಚಾರುದತ್ತನು ಅವಳು ಸಂತೃಪ್ತಳಾಗಿ ತೆರಳಲಿಎಂದು ಮಾರ್ನುಡಿದನು. ಆದರೆ ಚಾರುದತ್ತನ ಹಿತಾಕಾಂಕ್ಷಿಯಾದ ಮೈತ್ರೇಯನು ಸುಮ್ಮನಿರಲಾರನು:  ಬಿಟ್ಟುಬಿಡು ಓ ಗೆಳೆಯಾ, ಸಾವಿರ ತೊಂದರೆಗಳಿಗೆ ತವರಾದ ಈ ವೇಶ್ಯೆಯರ ಸಹವಾಸ ಸಾಕು. ಸೂಳೆ, ಆನೆ, ಕರಣಿಕ, ಬೌದ್ಧ ಭಿಕ್ಷು, ಗೂಢಚಾರ ಮತ್ತು ಕತ್ತೆ ಇದ್ದಲ್ಲಿ ದುಷ್ಟರೂ ಕೂಡ ಜನಿಸುವುದಿಲ್ಲ.

ಮೈತ್ರೇಯನ ಮಾತಿನಲ್ಲಿಯ ಒಂದು ವಿಡಂಬನೆಯನ್ನು ಓದುಗರು ಗಮನಿಸಬೇಕು. ಕರಣಿಕರನ್ನು (ಅಂದರೆ ದಾಖಲಾತಿಗಳನ್ನು ಇಡುವ ರಾಜ್ಯಾಧಿಕಾರಿಗಳನ್ನು) ಹಾಗು ಬೌದ್ಧ ಭಿಕ್ಷುಗಳನ್ನು ನಾಟಕಕಾರನು ಕತ್ತೆಗೆ ಹೋಲಿಸುತ್ತಿದ್ದಾನೆ. ಆ ಕಾಲದಲ್ಲಿಯೂ ಸಹ ಸಾಮಾನ್ಯ ಜನರು ರಾಜಸ್ವ ಅಧಿಕಾರಿಗಳನ್ನು ನಂಬುತ್ತಿರಲಿಲ್ಲ ಹಾಗು ಬೌದ್ಧ ಭಿಕ್ಷುಗಳಿಗೆ ಸಮಾಜದಲ್ಲಿ ಮನ್ನಣೆ ಇರಲಿಲ್ಲ ಎಂದು ಊಹಿಸಬಹುದಾಗಿದೆ.
                                               
ಉಪವನಕ್ಕೆ ಬಂದ ವಸಂತಸೇನೆಯು ಚಾರುದತ್ತನು ಇರುವ ಸ್ಥಳವನ್ನು ಕೇಳಿ, ತಿಳಿದುಕೊಂಡು, ಒಳಬರುತ್ತಲೇ, ಆತನ ಮೇಲೆ ಹೂವುಗಳನ್ನು ಎಸೆದು, ‘ಸಂತೋಷವಾಯಿತೆ?’ ಎಂದು ಕೇಳುತ್ತಾಳೆ. ವಸಂತಸೇನೆಯು ತನ್ನ ಪ್ರಣಯಭಾವವನ್ನು ಮುಚ್ಚುಮರೆಯಿಲ್ಲದೆ, ಆದರೆ ಶಾಲೀನತೆಯ ಮಿತಿಯಲ್ಲಿಯೇ ವ್ಯಕ್ತಪಡಿಸುವ ರೀತಿಯನ್ನು ಪ್ರೇಕ್ಷಕರು ಗಮನಿಸಬೇಕು. ಈ ಹೂಗಳ ಉಡುಗೊರೆಯ ಬದಲಾಗಿ, ಚಾರುದತ್ತನು ಎರಡು ಸುಂದರವಾದ ಉಡುಪುಗಳನ್ನು ವಸಂತಸೇನೆಗೆ ಕೊಡಲು ಬಯಸಿ, ತನ್ನ ಗೆಳೆಯ ಮೈತ್ರೇಯನಿಗೆ ತರಲು ಹೇಳುತ್ತಾನೆ.

(ಚಾರುದತ್ತನು ಪ್ರತಿಕಾಣಿಕೆಯನ್ನು ಕೊಡಲು ಅಸಮರ್ಥನಿರಬಹುದು ಎನ್ನುವ ಪೂರ್ವಶಂಕೆ ವಸಂತಸೇನೆಗೆ ಇರಬಹುದು. ಆದುದರಿಂದ) ವಸಂತಸೇನೆಯ ದಾಸಿಯೇ ಉಡುಪುಗಳನ್ನು ಪ್ರತಿಕಾಣಿಕೆ ಎಂದು ಸಲ್ಲಿಸಲು ಚಾರುದತ್ತನಿಗೆ ಕೊಡುತ್ತಾಳೆ. ಇಷ್ಟಾದರೂ ಸಹ ಚಾರುದತ್ತನು ವಸಂತಸೇನೆಯೊಡನೆ ನೇರವಾಗಿ ಮಾತನಾಡದೆ, ತನ್ನ ಗೆಳೆಯ ಮೈತ್ರೇಯನಿಗೆ ವಿಚಾರಿಸಲು  ಸೂಚನೆ ಕೊಡುತ್ತಾನೆ. ಅದರಂತೆಯೇ ಮೈತ್ರೇಯನು, ‘ತಿಂಗಳ ಬೆಳಕೂ ಇಲ್ಲದ, ಕತ್ತಲು ಕವಿದ, ಮಳೆ ಸುರಿಯುತ್ತಿರುವ ಈ ಇರುಳಿನಲ್ಲಿ ಇತ್ತ ಬರಲು ಕಾರಣವೇನು?’ ಎಂದು ವಸಂತಸೇನೆಯನ್ನು ಪ್ರಶ್ನಿಸುತ್ತಾನೆ.
                       
ಇದೀಗ ಸಂಭಾಷಣೆ ನಡೆಯುವುದು ಮೈತ್ರೇಯ ಹಾಗು ವಸಂತಸೇನೆಯ ದಾಸಿಯ ನಡುವೆ. ದಾಸಿಯು, ಚಾರುದತ್ತನು ಕಳುಹಿಸಿದ ಮುತ್ತಿನ ಹಾರದ ಮೌಲ್ಯವನ್ನು ಕೇಳುತ್ತಾಳೆ. ವಸಂತಸೇನೆ ಇನ್ನೂ ಹೆಚ್ಚಿನ ಮೌಲ್ಯವನ್ನು ಬಯಸುತ್ತಾಳೆ ಎನ್ನುವ ಅನುಮಾನವನ್ನು ಮೈತ್ರೇಯನು ಚಾರುದತ್ತನಿಗೆ ಸೂಚಿಸುತ್ತಾನೆ.
                                   
ಈಗ ನೋಡಿರಿ ಗಮ್ಮತ್ತನ್ನು. ಚಾರುದತ್ತನು ವಸಂತಸೇನೆಯ ಆಭರಣಗಳನ್ನು ಜೂಜಿನಲ್ಲಿ ಸ್ವತಃ ಕಳೆದುಕೊಂಡಿದ್ದೆ
ಎಂದು ಹೇಳಿದ್ದನಷ್ಟೆ? ಇದೇ ಮಾತನ್ನು ವಸಂತಸೇನೆಯ ದಾಸಿಯು ಇದೀಗ ತಿರುಗಿಸುತ್ತಾಳೆ. ನನ್ನ ಒಡತಿಯು ಜೂಜಾಟದಲ್ಲಿ ನೀವು ಕೊಟ್ಟ ಮುತ್ತಿನ ಹಾರವನ್ನು ಕಳೆದುಕೊಂಡಿದ್ದಾಳೆ. ಅದರ ಬದಲಾಗಿ ಈ ಬಂಗಾರದ ಕರಂಡಕವನ್ನು ಸ್ವೀಕರಿಸಬೇಕುಎಂದು ಹೇಳುತ್ತಾಳೆ.
                       
ನಮ್ಮ ನಾಟಕಕಾರನು ಸೃಷ್ಟಿಸುವ ಈ ವಿನೋದ ಸಂಭಾಷಣೆಯನ್ನು ಪ್ರೇಕ್ಷಕರು ಖುಶಿಯಿಂದ ಆಸ್ವಾದಿಸುವದರಲ್ಲಿ ಸಂಶಯವಿಲ್ಲ. ಇದೆಲ್ಲ ಸರಿಯಾಯಿತು. ವಸಂತಸೇನೆಯು ಇನ್ನು ಮುಂದುವರೆಯುವ ಬಗೆ ಹೇಗೆ? ಆದುದರಿಂದ, ಚಾರುದತ್ತನ ಜೊತೆಗೆ ಮಾತುಕತೆಯನ್ನು ಹೆಣೆಯುವ ಉದ್ದೇಶದಿಂದ, ‘ನೀವು ಮುತ್ತಿನ ಹಾರವನ್ನು ನನಗೆ ಕಳುಹಿಸಿ ಕೊಟ್ಟದ್ದು ಸರಿಯಲ್ಲಎಂದು ವಸಂತಸೇನೆಯು ನೇರವಾಗಿ ಚಾರುದತ್ತನಿಗೆ ಹೇಳುತ್ತಾಳೆ. ಈ ಮೂಲಕ, ‘ಪ್ರೇಮಿಗಳಲ್ಲಿ ವ್ಯವಹಾರ ಇರಬಾರದುಎನ್ನುವ ಸಂದೇಶವನ್ನೂ ನೀಡುತ್ತಲೇ, ತಾನು ಚಾರುದತ್ತನ ಪ್ರೇಮಿ ಎನ್ನುವ ಭಾವವನ್ನು ಪರೋಕ್ಷವಾಗಿ ವ್ಯಕ್ತ ಪಡಿಸುತ್ತಾಳೆ. ಚಾರುದತ್ತನು ತನ್ನ ಬಡತನವೇ ಇದಕ್ಕೆಲ್ಲ ಕಾರಣ ಎಂದು ತನ್ನನ್ನು  ಅರೆಬರೆಯಾಗಿ ಸಮರ್ಥಿಸಿಕೊಳ್ಳುತ್ತಾನೆ.

ಈ ರೀತಿಯಾಗಿ ಚಾರುದತ್ತ ಹಾಗು ವಸಂತಸೇನೆಯರ ನಡುವೆ, ಪ್ರಣಯಪೀಠಿಕೆ ಸಿದ್ಧವಾಗುತ್ತಿರುವಾಗ, ಹೊರಗೆ ಮಳೆ ಧಾರಾಕಾರವಾಗಿ ಸುರಿಯುತ್ತಿದೆ. ಚಾರುದತ್ತನು ವಸಂತಸೇನೆಗೆ ಈ ರಾತ್ರಿ ಇಲ್ಲಿಯೇ ನಿಲ್ಲುಎಂದು ಬಾಯಿ ಬಿಟ್ಟು ಹೇಳುತ್ತಿಲ್ಲ. ವಸಂತಸೇನೆಯು ಆ ರಾತ್ರಿಯನ್ನು ಅಲ್ಲಿಯೇ ಕಳೆಯಲು ಮೈತ್ರೇಯನಿಗೆ ಮನಸ್ಸಿಲ್ಲ. ಆದುದರಿಂದ ಆತನೇ ನೇರವಾಗಿ ವಸಂತಸೇನೆಯನ್ನು ಪ್ರಶ್ನಿಸುತ್ತಾನೆ ಹಾಗು ಚಾರುದತ್ತನಲ್ಲಿ ವೈರಾಗ್ಯ ಹುಟ್ಟುವಂತೆ ಮಾತನಾಡುತ್ತಾನೆ. ಆದರೆ ಮಳೆಯಿಂದ ಹಾಗು ಈ ಸನ್ನಿವೇಶದಿಂದ ಖುಶಿಯಾದ ಚಾರುದತ್ತನು ಆಕರ್ಷಕವಾಗಿ ಮಳೆಯನ್ನು ವರ್ಣಿಸುತ್ತಾನೆ.

ಈ ರೀತಿಯ ಕಾಲಹರಣವು ವಸಂತಸೇನೆಗೆ ಬೇಕಾಗಿಲ್ಲ. ಚಾರುದತ್ತನು ಮಾಡಿದ ವರ್ಣನೆಯನ್ನು ಕೇಳಿದ ಅವಳು ಇನ್ನು ತಡಮಾಡದೆ, ತಕ್ಷಣವೇ ಚಾರುದತ್ತನನ್ನು ಅಪ್ಪಿಕೊಂಡಳು. ಕುತೂಹಲ ಹಾಗು ವಿನೋದದಲ್ಲಿ ಮುಂದುವರೆಯುತ್ತಿದ್ದ ಈ ಪ್ರಕರಣವು ಶೃಂಗಾರಮಯವಾಗಿ ಕೊನೆಗೊಂಡಾಗ, ಪ್ರೇಕ್ಷಕನಲ್ಲಿ ಸುಖಾನುಭವ ಮೂಡುವದರಲ್ಲಿ ಸಂಶಯವಿಲ್ಲ.
                                               
ಮೈತ್ರೇಯನಿಗೆ ಮಾತ್ರ ಸಂತೋಷವಿಲ್ಲ!  ಆತನು ಮಳೆಯನ್ನು ಅನ್ಯೋಕ್ತಿಯಿಂದ ಬೈಯುತ್ತಾನೆ. ಆದರೆ ಚಾರುದತ್ತನೀಗ ಸಂಕೋಚವರ್ಜಿತನಾಗಿದ್ದಾನೆ.  ಆತ ತನ್ನ ಸಂತೋಷವನ್ನು ಒಂದು ಪುಟ್ಟ ಗೀತೆಯ ಮೂಲಕ ವ್ಯಕ್ತ ಪಡಿಸುತ್ತಾನೆ ಹಾಗು ಆ ಮೂಲಕ ವಸಂತಸೇನೆಯ ಪ್ರೇಮಕ್ಕೆ ಪ್ರತಿಯಾಗಿ ತನ್ನ ಪ್ರೇಮವನ್ನೂ ವ್ಯಕ್ತ ಪಡಿಸುತ್ತಾನೆ:
ಧನ್ಯಾನಿ ತೇಷಾಂ ಖಲು ಜೀವಿತಾನಿ
ಯೇ ಕಾಮಿನೀನಾಂ ಗೃಹಮಾಗತಾಮ್|
ಆರ್ದ್ರಾಣಿ ಮೇಘೋದಕ ಶೀತಲಾನಿ
ಗಾತ್ರಾಣಿ ಗಾತ್ರೇಷು ಪರಿಷ್ವಜಂತಿ
(ಬಯಸಿ ಬಂದಿರುವ ಕಾಮಿನಿಯರ, ಮಳೆಯ ನೀರಿಗೆ ತೊಯ್ದ ತಂಪು ಮೈಯನ್ನು ತಮ್ಮ ಮೈಯೊಳಗೆ  ಅಪ್ಪಿ ಹಿಡಿಯುವವರೇ ಧನ್ಯರು!) ಹಾಗೆಂದು ಚಾರುದತ್ತ ಮತ್ತು ವಸಂತಸೇನೆಯರು ಕಾಮಪೀಡಿತ ಪ್ರಣಯಿಗಳು ಎಂದರ್ಥವಲ್ಲ. ಮಾನಸಿಕವಾಗಿ ಅತಿ ಹತ್ತಿರವಾದ ಓರ್ವ ಗಂಡು ಹಾಗು ಓರ್ವ ಹೆಣ್ಣು ದೈಹಿಕವಾಗಿಯೂ ಅತಿ ಹತ್ತಿರವಾಗುವುದು ಒಂದು ಸಹಜ ಪ್ರಕ್ರಿಯೆ. ಇದನ್ನು ಪ್ರೇಮದ ಕೊನೆಯ ಹಂತ ಎಂದೆನ್ನಬಹುದು.

ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಈ ಕ್ಷಣದವರೆಗೂ ಚಾರುದತ್ತನು ತನ್ನ ಪ್ರೇಮಭಾವವನ್ನು ಬಹಿರಂಗವಾಗಿ ಪ್ರದರ್ಶಿಸಿಲ್ಲ, ವಸಂತಸೇನೆಯೇ ಇದರಲ್ಲಿ ಮುಂದಿದ್ದಾಳೆ ; ಹೀಗೇಕೆ? ಕಾರಣವು ಸ್ಪಷ್ಟವಾಗಿಯೇ ಇದೆ. ಚಾರುದತ್ತನು ಸದ್ಗುಣಸಂಪನ್ನ ಬ್ರಾಹ್ಮಣನು; ತನ್ನ ಹೆಂಡತಿಯಲ್ಲಿ ಪ್ರೀತಿ ಹಾಗು ಗೌರವಗಳನ್ನು ಉಳ್ಳವನು; ಜೀವನದಲ್ಲಿ ಕೆಲವೊಂದು ಮೌಲ್ಯಗಳಿಗೆ ಬೆಲೆ ಕೊಟ್ಟವನು. ವಸಂತಸೇನೆಯ ಸಲುವಾಗಿ ಆತನು ತನ್ನ ಹೆಂಡತಿಯನ್ನು ಕಳೆದುಕೊಳ್ಳಲಾರ. ಒಂದು ವೇಳೆ ಅವನಿಗೆ ವಸಂತಸೇನೆಯಲ್ಲಿ ಅನುರಾಗ ಮೂಡಿದರೂ ಸಹ, ಆತನು ಆ ಭಾವವನ್ನು ವ್ಯಕ್ತ ಮಾಡಲು ಹಿಂಜರಿಯುವಂಥವನು. 

ವಸಂತಸೇನೆಯೂ ಸಹ ಪ್ರೇಮವನ್ನು ವ್ಯಕ್ತ ಪಡಿಸುವುದರಲ್ಲಿ ಸ್ವನಿಯಂತ್ರಣವನ್ನು ತೋರಿಸಿದವಳೇ. ಆದರೆ ಅವಳಿಗೆ ಚಾರುದತ್ತನನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ. ಅವನೇ ಅವಳ ಪ್ರಾಣವಾಗಿದ್ದಾನೆ. ಅವಳಿಗೆ ತನ್ನ ಪ್ರಣಯವನ್ನು ವ್ಯಕ್ತ ಪಡಿಸದಂತೆ ಯಾವುದೇ ಕಟ್ಟುಪಾಡುಗಳಿಲ್ಲ. ಅಲ್ಲದೆ, ಅವಳು ಧೂತಾದೇವಿಗಿಂತ ಕೆಳಗಿನ ಸ್ಥಾನವನ್ನು ಸ್ವತಃ ಒಪ್ಪಿಕೊಂಡಿದ್ದಾಳೆ. ಹೀಗಾಗಿ ವಸಂತಸೇನೆಯು ಪ್ರೇಮಪ್ರದರ್ಶನದಲ್ಲಿ ಚಾರುದತ್ತನಿಗಿಂತ ಒಂದು ಹೆಜ್ಜೆ ಮುಂದಿದ್ದಾಳೆ, ಒಂದೇ ಹೆಜ್ಜೆ ಮಾತ್ರ.

ಎಲ್ಲರೂ ಮನೆಯೊಳಗೆ ಹೋಗುತ್ತಾರೆ. ಇಲ್ಲಿಗೆ ಈ ಅಂಕವು ಕೊನೆಯಾಗುತ್ತದೆ. ಅನೇಕ ಸಂಕಟಗಳಿಂದ ಪಾರಾದ ವಸಂತಸೇನೆಯ ಪ್ರಣಯವು ಅವಳಿಷ್ಟದ ಸತ್ಪಾತ್ರನಲ್ಲಿ ಕೊನೆಗೂ ಅವಲಂಬನೆಯನ್ನು ಪಡೆಯಿತಲ್ಲ ಎಂದು ಪ್ರೇಕ್ಷಕನು ಸಹ ಸಂತೋಷ ಪಡುತ್ತಾನೆ. ಆದರೆ ಇದು ತಾತ್ಕಾಲಿಕ ಸಂತೋಷ ಮಾತ್ರ. ಏಕೆಂದರೆ ಚಾರುದತ್ತ ಹಾಗು ವಸಂತಸೇನೆಯರ ಮಿಲನವೇ ಈ ನಾಟಕದ ಪರಮೋದ್ದೇಶವಲ್ಲ. ಅದಷ್ಟೇ ಆಗಿದ್ದರೆ, ಈ ನಾಟಕಕ್ಕೆ ರಂಜನೆಯ ಹೊರತಾಗಿ ಯಾವ ಮಹತ್ವವೂ ಇರುತ್ತಿರಲಿಲ್ಲ. 

(ನಮ್ಮ ನಾಟಕಕಾರ ಶೂದ್ರಕನಿಗಿಂತ ಮೊದಲೇ ಸಂಸ್ಕೃತದ ನಾಟಕಪಿತಾಮಹನಾದ ಭಾಸನು ಸಹ ‘ಚಾರುದತ್ತ’ ಎನ್ನುವ ನಾಟಕವನ್ನು ಬರೆದಿದ್ದನು. ಶೂದ್ರಕನ ನಾಟಕದ ನಾಲ್ಕನೆಯ ಅಂಕಕ್ಕೆ ಭಾಸನ ನಾಟಕವು ಕೊನೆಗೊಳ್ಳುತ್ತದೆ.)

ಶೂದ್ರಕನ ನಾಟಕವು ಭಾಸನು ಬರೆದ ನಾಟಕಕ್ಕಿಂತ ಹೆಚ್ಚು ಮಹತ್ವಾಕಾಂಕ್ಷಿಯಾದ ನಾಟಕವಾಗಿದೆ. ಈ ನಾಟಕಕ್ಕೆ ‘ಮೃಚ್ಛಕಟಿಕಮ್’ ಎಂದು ಹೆಸರಿಸುವ ಪ್ರಸಂಗವು ಮುಂದಿನ ಅಂಕದಲ್ಲಿ ಬರುತ್ತದೆ. ಸಾಮಾಜಿಕ, ರಾಜಕೀಯ ಹಾಗು ಪ್ರಣಯಸನ್ನಿವೇಶಗಳನ್ನು ರಂಜನೀಯವಾಗಿ ತೋರಿಸುವ ಈ ನಾಟಕವು ಬದುಕಿನ ನೈಜ ಸಂದೇಶವನ್ನು ಮುಂದಿನ ಅಂಕದಲ್ಲಿ ನೀಡುತ್ತದೆ.

 [ಟಿಪ್ಪಣಿ: ಮಳೆ ಬೀಳುತ್ತಿರುವ ಸಂದರ್ಭದಲ್ಲಿ ಪ್ರೇಮಿಗಳ ಮಿಲನವಾಗುವ ದೃಶ್ಯವನ್ನು ನಾವು ಅನೇಕ ಚಲನಚಿತ್ರಗಳಲ್ಲಿ ನೋಡಿದ್ದೇವೆ. ಬಹುಶಃ ನಮ್ಮ ನಾಟಕಕಾರ ಶೂದ್ರಕನೇ ಈ ಪರಿಪಾಠವನ್ನು ಹಾಕಿರಬಹುದೆ? ಬಹುತೇಕ ಚಲನಚಿತ್ರಗಳಲ್ಲಿ ಇಂತಹ ಸಂದರ್ಭಗಳಲ್ಲಿ ಹೆಣ್ಣು ಗಂಡಿನ ವಶವರ್ತಿಯಾಗುತ್ತಾಳೆ. ಕನ್ನಡ ಕಾದಂಬರಿಕಾರರಾದ ಎಸ್. ಎಲ್. ಭೈರಪ್ಪನವರ ಕಾದಂಬರಿಗಳಲ್ಲಂತೂ ಗಂಡು ಎಂದರೆ ಪುರುಷರ್ಷಭ. ಆದರೆ ಮೃಚ್ಛಕಟಿಕಮ್ ನಾಟಕದಲ್ಲಿ ನಾಯಕನಾದ ಚಾರುದತ್ತನು ಕೊನೆಯಗಳಿಗೆಯವರೆಗೂ ಆತ್ಮನಿಯಂತ್ರಣವನ್ನು ತೋರಿಸಿದ್ದಾನೆ. ವಸಂತಸೇನೆಯೂ ಸಹ ಅನಿವಾರ್ಯವಾಗಿ ಪ್ರಣಯದ ಮೊದಲ ಹೆಜ್ಜೆಯನ್ನು ತಾನೇ ಮುಂದಿಟ್ಟಿದ್ದಾಳೆ.]

Thursday, April 21, 2016

ಮೃಚ್ಛಕಟಿಕಮ್-೫


ಮೃಚ್ಛಕಟಿಕಮ್ ನಾಟಕದ ಮೊದಲಿನ ಮೂರು ಅಂಕಗಳಲ್ಲಿ ಪ್ರೇಕ್ಷಕರನ್ನು ರಂಜಿಸುವ ಸಾಕಷ್ಟು ಅಂಶಗಳೇನೊ ಇವೆ. ವಿಶೇಷವಾಗಿ ಶಕಾರನ ಸಂಭಾಷಣೆಗಳು ಹಾಗು ಗೀತೆಗಳು ನೋಡುಗರಲ್ಲಿ ಹಾಸ್ಯದ ಅಲೆಗಳನ್ನು ಎಬ್ಬಿಸುತ್ತವೆ. ಇಷ್ಟಾದರೂ ಸಹ ಚಾರುದತ್ತನ ಸಂಕಷ್ಟಗಳ ವರ್ಣನೆ, ಶಕಾರನು ವಸಂತಸೇನೆಯನ್ನು ಬೆನ್ನಟ್ಟುವುದು, ವಸಂತಸೇನೆಯ ಒಡವೆಗಳು ಚಾರುದತ್ತನ ಮನೆಯಿಂದ ಕಳುವಾಗುವುದು ಈ ಎಲ್ಲ ಘಟನೆಗಳು ಪ್ರೇಕ್ಷಕನಲ್ಲಿ ಉದ್ವಿಗ್ನ ಭಾವವನ್ನು ಉಂಟು ಮಾಡುವುದು ಸಹಜವಾಗಿದೆ. ಪ್ರೇಕ್ಷಕ ಮಹಾಶಯನನ್ನು ಈ ವಾತಾವರಣದಿಂದ ಹೊರತರುವುದು ಇದೀಗ ಅವಶ್ಯವಾಗಿದೆ. ಇಲ್ಲಿ ನಾವು ನಮ್ಮ ನಾಟಕಕಾರನ ಕೌಶಲ್ಯವನ್ನು ಮತ್ತೊಮ್ಮೆ ನೋಡುತ್ತೇವೆ.
  
ಹತ್ತು ಅಂಕಗಳ ಈ ನಾಟಕದಲ್ಲಿ ನಮ್ಮ ನಾಟಕಕಾರನು ನಡುವಿನ ಅಂಕಗಳನ್ನು ಅಂದರೆ ನಾಲ್ಕನೆಯ ಹಾಗು ಐದನೆಯ ಅಂಕಗಳನ್ನು ಚಮತ್ಕಾರಿಕ ಹಾಗು ಶೃಂಗಾರಮಯ ಅಂಕಗಳನ್ನಾಗಿ ಮಾಡಿದ್ದಾನೆ. ಪ್ರೇಕ್ಷಕರು ಈ ಮಾರ್ಪಾಟಿನಿಂದ ಉಲ್ಲಸಿತರಾಗುವುದು ಸಹಜ. ಚಾರುದತ್ತ ಹಾಗು ವಸಂತಸೇನೆ ಇವರ ನಡುವಿನ ಪ್ರಣಯವು ಸಫಲವಾಗುವುದೊ ಅಥವಾ ವಿಫಲವಾಗುವುದೊ ಎನ್ನುವುದಕ್ಕೂ ಇಲ್ಲಿ ಉತ್ತರವಿದೆ. ಅದೂ ಅಲ್ಲದೆ, ಚಾರುದತ್ತನ ಗೆಳೆಯನಾದ ಮೈತ್ರೇಯನ ವಿನೋದದ ಮಾತುಗಳು ಹಾಗು ವಸಂತಸೇನೆಯ ಬಗೆಗೆ ಅವನಿಗೆ ಇರುವ ಅಗೌರವದ ಭಾವನೆ ಇವೂ ಸಹ ಪ್ರೇಕ್ಷಕರನ್ನು ರಂಜಿಸುತ್ತವೆ.
                       
ಅಂಕದ ಪ್ರಾರಂಭದಲ್ಲಿ ವಸಂತಸೇನೆಯು ತನ್ನ ಮನೆಯ ಹೂದೋಟದಲ್ಲಿ ಚಾರುದತ್ತನ ಚಿತ್ರವನ್ನು ಬಿಡಿಸುತ್ತ ಕುಳಿತಿದ್ದಾಳೆ. ಆ ಸಮಯದಲ್ಲಿ  ಅವಳ ಸೇವಿಕೆ (ಮದನಿಕೆ) ಅಲ್ಲಿಗೆ ಬರುತ್ತಾಳೆ. ಮದನಿಕೆ ಹಾಗು ವಸಂತಸೇನೆ ಇವರ ನಡುವೆ ವಸಂತಸೇನೆಯ ಪ್ರೇಮಭಾವದ ಬಗೆಗೆ ಸರಸ ಸಲ್ಲಾಪ ನಡೆದಿರುತ್ತದೆ. ಆ ಸಮಯದಲ್ಲಿ ವಸಂತಸೇನೆಯ ಮತ್ತೊಬ್ಬ ಸೇವಿಕೆ ಅಲ್ಲಿಗೆ ಬಂದು, ವಸಂತಸೇನೆಯ ತಾಯಿಯ ಸಂದೇಶವನ್ನು ಅವಳಿಗೆ ತಿಳಿಸುತ್ತಾಳೆ. ಮಹಾರಾಜನ ಶ್ಯಾಲಕನಾದ ಶಕಾರನು, ವಸಂತಸೇನೆಯನ್ನು ಕರೆತರಲು, ಒಂದು ಬಂಡಿಯನ್ನು, ಜೊತೆಗೆ ಬಂಗಾರದ ಆಭರಣಗಳನ್ನು ಕಳುಹಿಸಿದ್ದಾನೆ. ಆದುದರಿಂದ ವಸಂತಸೇನೆಯು ತಕ್ಷಣವೇ ಶಕಾರನ ಬಳಿಗೆ ಹೋಗಬೇಕು ಎನ್ನುವುದೇ ಆ ಸಂದೇಶವಾಗಿದೆ.

ವಸಂತಸೇನೆಯೆ ತಾಯಿಯು ವೇಶ್ಯಾವೃತ್ತಿಯ ಆಚರಣೆಗಳನ್ನು ಪಾಲಿಸುತ್ತಲೇ ಬಂದಿರುವಳು. ಉದರಪೋಷಣೆಗೆ ಇದು ಅನಿವಾರ್ಯ.  ಆದರೆ ವಸಂತಸೇನೆಯು  ಚಾರುದತ್ತನಲ್ಲಿ ಅನುರಕ್ತಳಾಗಿದ್ದಾಳೆ. ಇದು ವೇಶ್ಯಾವೃತ್ತಿಗೆ ವಿರೋಧವಾದ ಧರ್ಮ. ಇಷ್ಟಾದರೂ ಸಹ ಅವಳು ತನ್ನ ತಾಯಿಯ ಆಜ್ಞೆಯನ್ನು ಧಿಕ್ಕರಿಸಿ, ‘ಇನ್ನೊಮ್ಮೆ ಇಂತಹ ಸಂದೇಶವನ್ನು ಕಳುಹಿದರೆ, ನನ್ನನ್ನು ಜೀವಸಹಿತವಾಗಿ ನೋಡಲಾರಿರಿಎನ್ನುವ ಮರುಸಂದೇಶವನ್ನು ಕಳುಹಿಸುತ್ತಾಳೆ!  (ಶಕಾರನ ಈ ಪ್ರಕರಣದಿಂದ ವಸಂತಸೇನೆಯು ಮಾನಸಿಕವಾಗಿ ಹೈರಾಣಾಗಿರಬಹುದು. ಬೀಸಣಿಗೆಯ ತಂಗಾಳಿಯು ತನ್ನ ಮನಸ್ಸಿಗೂ ತಂಪೆನ್ನೆರದೀತು  ಎಂದು ಅವಳಿಗೆ ಅನಿಸಿರಬಹುದು;) ಆದುದರಿಂದ ಬೀಸಣಿಗೆಯನ್ನು ತರಲು ಮದನಿಕೆಯನ್ನು ಕಳುಹಿಸಿ, ತಾನು ಹೂದೋಟದ ಅಂಚಿಗೆ ಬರುತ್ತಾಳೆ. ಇದೀಗ ನಮ್ಮ ನಾಟಕಕಾರನು ಸೃಷ್ಟಿಸುವ ಚಮತ್ಕಾರವನ್ನು ಗಮನಿಸಿ:

ಕಳ್ಳ ಶರ್ವಿಲಕನೂ ಸಹ ಅದೇ ಸಮಯದಲ್ಲಿ ವಸಂತಸೇನೆಯ ಮನೆಗೆ ಬರುತ್ತಾನೆ. ಬಂಗಾರದ ಒಡವೆಗಳನ್ನು ವಸಂತಸೇನೆಗೆ ಕೊಟ್ಟು, ತನ್ನ ಪ್ರೇಯಸಿಯಾದ ಮದನಿಕೆಯನ್ನು ದಾಸ್ಯಮುಕ್ತಳನ್ನಾಗಿ ಮಾಡಬೇಕೆನ್ನುವುದು ಆತನ ಹಂಬಲ. ಬೀಸಣಿಗೆಯ ಜೊತೆಗೆ ಮರಳುತ್ತಿರುವ ಮದನಿಕೆಯನ್ನು ಶರ್ವಿಲಕನು ಅಲ್ಲಿ ನೋಡುತ್ತಾನೆ.  ತುಂಬ ಸಂತೋಷದಿಂದ ಆತನು ಮದನಿಕೆಗೆ, ‘ಮದನಿಕೆ ನಿನ್ನ ಒಡತಿಗೆ ಈ ಆಭರಣಗಳನ್ನು ಕೊಟ್ಟರೆ ಅವಳು ನಿನ್ನನ್ನು ದಾಸ್ಯಮುಕ್ತಳನ್ನಾಗಿ ಮಾಡುವಳೆ?’ ಎಂದು ಕೇಳುತ್ತಾನೆ. ವಸಂತಸೇನೆಯ ಉದಾರ ಹಾಗು ಸುಶೀಲ ಸ್ವಭಾವವನ್ನು ಅರಿತ ಮದನಿಕೆಯು, ‘ತನ್ನ ಒಡತಿ ವಸಂತಸೇನೆಯು ದಾಸ್ಯಮುಕ್ತಿಗಾಗಿ ಏನನ್ನೂ ಅಪೇಕ್ಷಿಸುವದಿಲ್ಲಎಂದು ಶರ್ವಿಲಕನಿಗೆ ಹೇಳುತ್ತಾಳೆ.  

ಆ ಆಭರಣಗಳನ್ನು ನೋಡುತ್ತಲೇ, ಮದನಿಕೆಗೆ ಸಂದೇಹ ಹುಟ್ಟುತ್ತದೆ. ನಿಜ ಹೇಳು, ನೀನು ಈ ಆಭರಣಗಳನ್ನು ಎಲ್ಲಿಂದ ತಂದಿರುವೆಎಂದು ಅವಳು ಶರ್ವಿಲಕನನ್ನು ಪ್ರಶ್ನಿಸುತ್ತಾಳೆ. ತಾನು ಆ ಆಭರಣಗಳನ್ನು ಕಳ್ಳತನದಿಂದ ತಂದಿರುವೆ ಹಾಗು ಆ ಮನೆಯು ಚಾರುದತ್ತ ಎನ್ನುವವನ ಮನೆ ಎನ್ನುವುದು ತನಗೆ ಆಬಳಿಕ ತಿಳಿಯಿತುಎಂದು ಶರ್ವಿಲಕನು ಮದನಿಕೆಗೆ ತಿಳಿಸುತ್ತಾನೆ. ಹೂದೋಟದ ಅಂಚಿಗೆ ಬಂದಿರುವ ವಸಂತಸೇನೆಯ ಕಿವಿಗೂ ಈ ಮಾತುಗಳು ಬೀಳುತ್ತವೆ. ಶರ್ವಿಲಕನ ಹೇಳಿಕೆಯನ್ನು ಕೇಳುತ್ತಲೆ ಇತ್ತ ಮದನಿಕೆ ಹಾಗು ಅತ್ತ ವಸಂತಸೇನೆ ಇಬ್ಬರೂ ಮೂರ್ಛಿತರಾಗುತ್ತಾರೆ. ಎಚ್ಚತ್ತ ಮದನಿಕೆಯು, ‘ನೀನು ಆ ಮನೆಯಲ್ಲಿ ಯಾರನ್ನೂ ಹೊಡೆದಿಲ್ಲ ತಾನೆಎಂದು ಕೇಳುತ್ತಾಳೆ.

ಈ ಮಾತಿಗೆ ಶರ್ವಿಲಕನ ಪ್ರತಿಕ್ರಿಯೆಯನ್ನು ಗಮನಿಸಿದ ಪ್ರೇಕ್ಷಕರಿಗೆ ನಮ್ಮ ನಾಟಕಕಾರನು ಮಾನವಸ್ವಭಾವವನ್ನು ಎಷ್ಟು ಚೆನ್ನಾಗಿ ಅಭ್ಯಾಸ ಮಾಡಿದ್ದಾನೆ ಎನ್ನುವುದು ಅರಿವಾಗುವುದು. ಶರ್ವಿಲಕನು ಚತುರ್ವೇದೀ ಬ್ರಾಹ್ಮಣರ ಮಗನಾದರೂ ಸಹ, ವೇಶ್ಯೆಯ ದಾಸಿಯ ಪ್ರೇಮದಲ್ಲಿ ಸಿಲುಕಿದ್ದಾನೆ. ಅವಳನ್ನು ದಾಸ್ಯಮುಕ್ತಳನ್ನಾಗಿ ಮಾಡಲು, ಕಳ್ಳತನಕ್ಕೆ ಇಳಿಯುತ್ತಾನೆ. ಇಂತಹ ಮನುಷ್ಯನು ಶೀಘ್ರವಾಗಿ ಉದ್ರಿಕ್ತನಾಗುವ ಸ್ವಭಾವದನು. ಆದುದರಿಂದ ಮೂರ್ಛಿತಳಾದ ಮದನಿಕೆಯನ್ನು ಕಂಡು ಶರ್ವಿಲಕನಲ್ಲಿ ತಪ್ಪು ಕಲ್ಪನೆ ಹುಟ್ಟುತ್ತದೆ. ಇವಳು ಚಾರುದತ್ತನ ಪ್ರೇಮಿ ಎಂದು ಅವನು ಭಾವಿಸುತ್ತಾನೆ. ದುಡುಕು ಬುದ್ಧಿಯವನಾದ ಶರ್ವಿಲಕನು ಚಾರುದತ್ತನನ್ನು ಮುಗಿಸಿ ಬಿಡುವೆಎಂದು ಹೊರಡುತ್ತಾನೆ. ಆಗ ಮದನಿಕೆಯು ಅವನನ್ನು ತಡೆದು, ಈ ಆಭರಣಗಳು ವಸಂತಸೇನೆಯ ಆಭರಣಗಳು ಎಂದು ಸ್ಪಷ್ಟೀಕರಿಸುತ್ತಾಳೆ.  ಹಾಗು ಆ ಆಭರಣಗಳನ್ನು ಚಾರುದತ್ತನಿಗೆ ಮರಳಿಸಲು ಹೇಳುತ್ತಾಳೆ. ಶರ್ವಿಲಕನು ಪಶ್ಚಾತ್ತಾಪ ಪಡುತ್ತಾನೆ ಆದರೆ ಆಭರಣಗಳನ್ನು ಮರಳಿಸಲು ಚಾರುದತ್ತನ ಬಳಿಗೆ ಹೋಗಲು ಆತನು ಒಪ್ಪುವುದಿಲ್ಲ. (ಹಾಗೆ ಮಾಡಿದರೆ ತನ್ನನ್ನು ಕಳ್ಳನನ್ನಾಗಿ ಗುರುತಿಸಲಾಗುವುದು ಎನ್ನುವುದು ಅವನ ಹೆದರಿಕೆಯಾಗಿರಬಹುದು. ಶೂದ್ರಕನು ಮಾನವಸ್ವಭಾವವನ್ನು ಎಷ್ಟು ಚೆನ್ನಾಗಿ ತಿಳಿದಿದ್ದಾನೆ ಎನ್ನುವುದು ಇದರಿಂದ ಅರಿವಾಗುವುದು.) ಹಾಗಿದ್ದರೆ, ವಸಂತಸೇನೆಯ ಬಳಿಗೆ ಹೋಗು; ಈ ಆಭರಣಗಳನ್ನು ತನ್ನ ಸಂಬಂಧಿಯಾದ ಚಾರುದತ್ತನು ನಿನಗೆ ಮರಳಿಸಲು ನನ್ನನ್ನು ಕಳುಹಿಸಿಕೊಟ್ಟಿದ್ದಾನೆ ಎಂದು ಹೇಳುಎಂದು ಮದನಿಕೆಯು ಶರ್ವಿಲಕನಿಗೆ ಹೇಳುತ್ತಾಳೆ. ಈ ಮಾತುಗಳೆಲ್ಲವೂ ವಸಂತಸೇನೆಗೆ ಕೇಳಿಸಿವೆ. ಶರ್ವಿಲಕನು ವಸಂತಸೇನೆಗೆ ಆಭರಣಗಳನ್ನು ಮರಳಿಸುತ್ತಾನೆ.

ವಸಂತಸೇನೆಯೂ ಸಹ ಚತುರಳೇ. ಈ ಆಭರಣಗಳನ್ನು ತಂದೊಪ್ಪಿಸುವವನಿಗೇ ನೀನು ಮದನಿಕೆಯನ್ನು ಒಪ್ಪಿಸಬೇಕು ಎಂದು ಆರ್ಯ ಚಾರುದತ್ತನು ನನಗೆ ಹೇಳಿದ್ದಾನೆ. ಆದುದರಿಂದ ನಿನಗೆ ಮದನಿಕೆಯನ್ನು ನಾನೀಗ ಕೊಡುತ್ತಿದ್ದೇನೆ, ಸ್ವೀಕರಿಸುಎಂದು ಅವಳು ಶರ್ವಿಲಕನಿಗೆ ಹೇಳುತ್ತಾಳೆ. ಈ ರೀತಿಯಲ್ಲಿ ವಸಂತಸೇನೆಯು ತಾನಾಗಿಯೇ ಮದನಿಕೆಯನ್ನು ದಾಸ್ಯಮುಕ್ತಗೊಳಿಸಿ, ಶರ್ವಿಲಕನಿಗೆ ಒಪ್ಪಿಸುತ್ತಾಳೆ. ಇಷ್ಟೇ ಅಲ್ಲ, (ಇನ್ನು ಮೇಲೆ ಪತ್ನಿಯ ಸ್ಥಾನವನ್ನು ಪಡೆಯುವವಳಾದುದರಿಂದ), ಮದನಿಕೆಯು ತನಗಿಂತ ಹೆಚ್ಚಿನವಳು ಎಂದು ಹೇಳಿ, ಅವಳಿಗೆ ಗೌರವ ಸಲ್ಲಿಸಿ, ಒಂದು ಬಂಡಿಯನ್ನು ತರಿಸಿ ಅವರನ್ನು ಬೀಳ್ಕೊಡುತ್ತಾಳೆ.

ಔದಾರ್ಯದಲ್ಲಿ, ಸುಶೀಲತೆಯಲ್ಲಿ ವಸಂತಸೇನೆಯು ಚಾರುದತ್ತನಿಗಿಂತ ಎಳ್ಳಷ್ಟೂ ಕಡಿಮೆಯಲ್ಲ ಎನ್ನುವುದನ್ನು ಈ ಘಟನೆಯು ಬಿಂಬಿಸುತ್ತದೆ. ಚಾರುದತ್ತ ಹಾಗು ವಸಂತಸೇನೆಯರು ತಮ್ಮಲ್ಲಿರುವ ಸುಗುಣಗಳಿಂದ ಪರಸ್ಪರ ಆಕರ್ಷಿತರಾದರೇ ಹೊರತು, ಕೀಳು ಕಾಮನೆಯಿಂದಲ್ಲ ಎನ್ನುವದನ್ನೂ ಸಹ ಈ ಘಟನೆಯು ತೋರಿಸುತ್ತದೆ.
                                                                                   
ಶರ್ವಿಲಕನು ಮದನಿಕೆಯ ಜೊತೆಗೆ ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ, ರಾಜಭಟರು ಹೆದ್ದಾರಿಯಲ್ಲಿ ಡಂಗುರ ಸಾರುತ್ತಿರುವುದು, ಕಿವಿಗೆ ಬೀಳುತ್ತದೆ: ಆರ್ಯಕನೆನ್ನುವ ಗೋವಳರ ಹುಡುಗ ರಾಜನಾಗುತ್ತಾನೆ ಎನ್ನುವ ಕಣಿಯನ್ನು ಕೇಳಿದ ರಾಜನು ಅವನನ್ನು ಬಂಧಿಸಿ ಸೆರೆಯಲ್ಲಿ ಇಟ್ಟಿದ್ದಾನೆ. ಎಲ್ಲರೂ ಎಚ್ಚರದಿಂದ ಇರಬೇಕು.’ಇದು ನಾಟಕಕ್ಕೆ ತಿರುವು ಕೊಡುವ ಒಂದು ಮಹತ್ವದ ಘಟನೆಯಾಗಿದೆ.

ಈ ಡಂಗುರವನ್ನು ಕೇಳಿದ ಶರ್ವಿಲಕನು ತಾನು ಆರ್ಯಕನನ್ನು ಪಾರು ಮಾಡುವ ಸಲುವಾಗಿ  ಆತನ ಜೊತೆಗಾರರನ್ನು ಕೂಡಿಕೊಳ್ಳುವ ನಿರ್ಧಾರವನ್ನು ಮಾಡುತ್ತಾನೆ. ಮದನಿಕೆಯನ್ನು ತನ್ನ ಗೆಳೆಯನಾದ ರೇಭಿಲನ ಮನೆಗೆ ಕಳುಹಿಸಿಕೊಡುತ್ತಾನೆ. (ಈ ಶರ್ವಿಲಕನು ಕೊನೆಯ ಅಂಕದಲ್ಲಿ ಮತ್ತೆ ಬಂದು ಮಹತ್ವದ ಒಂದು ಕಾರ್ಯವನ್ನು ಮಾಡುತ್ತಾನೆ.)

ಇತ್ತ ಆಭರಣಗಳನ್ನು ಕಳೆದುಕೊಂಡ ಚಾರುದತ್ತನು, ತನ್ನ ಹೆಂಡತಿ ಧೂತಾದೇವಿಯ ಮುತ್ತಿನ ಹಾರವನ್ನು ವಸಂತಸೇನೆಗೆ ಕೊಡಲು, ತನ್ನ ಗೆಳೆಯನಾದ ಮೈತ್ರೇಯನನ್ನು ಅವಳ ಮನೆಗೆ ಕಳುಹಿಸುತ್ತಾನೆ. ಆದರೆ, ಆಭರಣಗಳು ಕಳುವಾಗಿವೆ ಎಂದು ಆತನು ಅವಳಿಗೆ ಹೇಳತಕ್ಕದ್ದಲ್ಲ. (ಇದು ಅವಳಲ್ಲಿ ಮರುಕ ಹುಟ್ಟಿಸಬಹುದು. ಅವಳು ಮುತ್ತಿನ ಹಾರವನ್ನು ತೆಗೆದುಕೊಳ್ಳಲಿಕ್ಕಿಲ್ಲ ಎನ್ನುವುದು ಚಾರುದತ್ತನ ಭಾವನೆಯಾಗಿರಬಹುದು.)

ಚಾರುದತ್ತನು ಜೂಜಾಟದಲ್ಲಿ ವಸಂತಸೇನೆಯ ಆಭರಣಗಳನ್ನು ಕಳೆದುಕೊಂಡಿದ್ದಾನೆ. ಅದರ ಬದಲಾಗಿ ಈ ಮುತ್ತಿನ ಹಾರವನ್ನು ಕಳುಹಿಸುತ್ತಿದ್ದಾನೆ ಎಂದು ಮೈತ್ರೇಯನು ವಸಂತಸೇನೆಗೆ ಹೇಳಬೇಕು ಎನ್ನುವುದು ಚಾರುದತ್ತನ ಸಂದೇಶವಾಗಿರುತ್ತದೆ.

ಮೈತ್ರೇಯನು ವಸಂತಸೇನೆಯ ಮನೆಗೆ ಬರುತ್ತಾನೆ. ಅವಳ ಮನೆಗೆ ಎಂಟು ಆವರಣಗಳಿವೆ. ಒಂದೊಂದು ಆವರಣವೂ ದಂಗು ಬಡಿಸುವಂತಹ ವಿವಿಧ ವೈಭೋಗಗಳಿಂದ, ಹೂದೋಟಗಳಿಂದ, ಸಾಕುಪ್ರಾಣಿ ಹಾಗು ಪಕ್ಷಿಗಳಿಂದ
ತುಂಬಿದೆ. ಮೈತ್ರೇಯನು ಒಂದೊಂದೇ ಆವರಣವನ್ನು ಬಣ್ಣಿಸುತ್ತ, ಅಚ್ಚರಿಪಡುತ್ತ ಹೋಗುತ್ತಿರುವಾಗ, ವಸಂತಸೇನೆಯ ಭವನವು ಕುಬೇರನ ಅಲಕಾವತಿಯನ್ನು ಹೋಲುತ್ತಿದೆ ಎಂದು ಪ್ರೇಕ್ಷಕನಿಗೆ ಭಾಸವಾಗುತ್ತದೆ.  ಸ್ವರ್ಗಸದೃಶ ಭವನದ ಈ ವರ್ಣನೆಯನ್ನು ಮಾಡುವುದರಲ್ಲಿ ನಾಟಕಕಾರನಿಗೆ ಏನು ಉದ್ದೇಶವಿರಬಹುದು? ಮೊದಲನೆಯದಾಗಿ, ಇಷ್ಟೆಲ್ಲ ಇದ್ದರೂ ಸಹ ವಸಂತಸೇನೆಯು, ಗುಣಗಳೇ ವೈಭೋಗವಾಗಿರುವ ಚಾರುದತ್ತನಿಗೆ ಮನಸೋಲುತ್ತಾಳೆ ಎಂದು ಹೇಳುವುದು ನಾಟಕಕಾರನ ಉದ್ದೇಶವಾಗಿರಬಹುದು. ಎರಡನೆಯದಾಗಿ, ಉಜ್ಜಯಿನಿಯ ಗಣಿಕೆಯರ ಸಿರಿಯನ್ನು ತೋರಿಸುವ ಉದ್ದೇಶವೂ ನಾಟಕಕಾರನಿಗೆ ಇರಬಹುದು. ಮೂರನೆಯದಾಗಿ ಪ್ರೇಕ್ಷಕನಿಗೆ ವಿಭಿನ್ನ ರಸಗಳನ್ನು ಉಣಬಡಿಸಿ, ರಂಜಿಸುವುದು ನಾಟಕಕಾರನ ಉದ್ದೇಶವಾಗಿರಬಹುದು.

ವಸಂತಸೇನೆಯ ಭವನದಲ್ಲಿ ಕುಳಿತಿರುವ ಅವಳ ಸೋದರನನ್ನು ಹಾಗು ತಾಯಿಯನ್ನು ಮೈತ್ರೇಯನು ತುಂಬ ಹಾಸ್ಯದಿಂದ  ವರ್ಣಿಸಿದ್ದಾನೆ.  ಇದೆಲ್ಲವೂ ಪ್ರೇಕ್ಷಕನನ್ನು ರಂಜಿಸುವುದರಲ್ಲಿ ಸಂದೇಹವಿಲ್ಲ.  ಕೇವಲ ಉದ್ವಿಗ್ನತೆಯಿಂದ ಕೂಡಿದ ನಾಟಕದಲ್ಲಿ ನಡುನಡುವೆ ಹಾಸ್ಯ, ವಿನೋದ ಮೊದಲಾದ ರಂಜನೆಗಳು ಬೇಕು ಎನ್ನುವುದನ್ನು ನಮ್ಮ ನಾಟಕಕಾರ ಅರಿತಿದ್ದಾನೆ.

ಮೈತ್ರೇಯನಿಗೆ ವಸಂತಸೇನೆಯ ಭೆಟ್ಟಿಯು ಅವಳ ಹೂದೋಟದಲ್ಲಿ ಆಗುತ್ತದೆ. ಚಾರುದತ್ತನು ಜೂಜಿನಲ್ಲಿ ವಸಂತಸೇನೆಯ ಒಡವೆಗಳನ್ನು ಕಳೆದುಕೊಂಡಿದ್ದರಿಂದ ಅದರ ಬದಲಾಗಿ ಮುತ್ತಿನ ಹಾರವನ್ನು ಕಳುಹಿಸಿದ್ದಾನೆ ಎಂದು  ಮೈತ್ರೇಯನು ಹೇಳುತ್ತಾನೆ. ವಸಂತಸೇನೆಗಾದರೊ ವಾಸ್ತವದ ಅರಿವಿದೆ. ಚಾರುದತ್ತನನ್ನು ಭೆಟ್ಟಿಯಾಗಲು ಇದೇ ಒಂದು ಸುಸಂಧಿ ಹಾಗು ವಾಸ್ತವವನ್ನು ಚಾರುದತ್ತನಿಗೆ ತಿಳಿಸಿ, ಅವನ ಮುತ್ತಿನ ಹಾರವನ್ನು ಅವನಿಗೆ ಮರಳಿಸಲು ಸಾಧ್ಯವಾದೀತು ಎನ್ನುವ ಉದ್ದೇಶದಿಂದ, ಅವಳು ಚಾರುದತ್ತನನ್ನು ಅವನ ತೋಪಿನ ಮನೆಯಲ್ಲಿ ಸಾಯಂಕಾಲದಲ್ಲಿ ಸಂಧಿಸಲು ಮೈತ್ರೇಯನೊಡನೆ ಸಂದೇಶವನ್ನು ಕಳುಹಿಸುತ್ತಾಳೆ.

ವಸಂತಸೇನೆಯ ದಾಸಿಯು ತೀವ್ರವಾಗಿ ಬೀಸುತ್ತಿರುವ ಬಿರುಗಾಳಿಯ ಕಡೆಗೆ ವಸಂತಸೇನೆಯ ಗಮನವನ್ನು ಸೆಳೆಯುತ್ತಾಳೆ. ವಸಂತಸೇನೆಯು ಅದನ್ನು ನಿರ್ಲಕ್ಷಿಸಿ ಮುತ್ತಿನ ಹಾರವನ್ನು ತೆಗೆದುಕೊಂಡು ಬರಲು ತನ್ನ ದಾಸಿಗೆ ಹೇಳುತ್ತಾಳೆ. (ಮುತ್ತಿನ ಹಾರವನ್ನು ಮರಳಿಸುವದಷ್ಟೇ ವಸಂತಸೇನೆಯ ಉದ್ದೇಶವಾಗಿತ್ತೆ?)

ಇತ್ತ ವಸಂತಸೇನೆಯ ಬಗೆಗೆ ಸಂಶಯಭಾವನೆಯನ್ನೇ ಹೊಂದಿದ ಮೈತ್ರೇಯನಿಗೆ ‘ಇವಳು ಚಾರುದತ್ತನಿಂದ ಇನ್ನೂ ಅಧಿಕ ಮೌಲ್ಯದ ವಸ್ತುಗಳನ್ನು ಅಪೇಕ್ಷಿಸಬಹುದು’ ಎನ್ನುವ ಅನುಮಾನ ಉಂಟಾಗುತ್ತದೆ. ಮುಂದಿನ ಅಂದರೆ ಐದನೆಯ ಅಂಕದಲ್ಲಿ ತನ್ನ ಸಂಶಯವನ್ನು ಅವನು ಚಾರುದತ್ತನೆದುರಿಗೆ ಅತಿ ಸ್ಪಷ್ಟವಾಗಿ ತಿಳಿಸುತ್ತಾನೆ ಹಾಗು ತೋಪಿನ ಮನೆಗೆ ಸಾಯಂಕಾಲದಲ್ಲಿ ಬರಲು ವಸಂತಸೇನೆಯು ನೀಡಿದ ಸಂದೇಶವನ್ನು ಆತನಿಗೆ ತಲುಪಿಸುತ್ತಾನೆ.