Wednesday, June 6, 2018

ಮನೋಹರ ಗ್ರಂಥಮಾಲೆಯ ಎರಡು ಕೃತಿಗಳು



‘ಮ್ಯೂಟೇಶನ್’ ಇದು ಮನೋಹರ ಗ್ರಂಥಮಾಲೆಯು ಪ್ರಕಟಿಸಿದ ೨೦೧೭ನೆಯ ಇಸವಿಯ ಎರಡನೆಯ ಗ್ರಂಥ. ಇದರ ಲೇಖಕರು ಎಸ್. ಎಫ್. ಯೋಗಪ್ಪನವರ. ಈ ಕಥಾಸಂಕಲನದಲ್ಲಿ ಆರು ಕಥೆಗಳಿವೆ.  ಇಲ್ಲಿರುವ ಕಥೆಗಳನ್ನು ವಿಮರ್ಶಿಸಲು ನಾನು ಈ ಲೇಖನವನ್ನು ಬರೆಯುತ್ತಿಲ್ಲ. ಆದರೆ ಈ ಸಂಕಲನದ ಕೊನೆಯ ಕಥೆಯಾದ ‘ತಂಗಿಯ ಮನೆ’ಯನ್ನು ಓದಿದಾಗ, ನನಗೆ ನೆನಪಾದ ಮತ್ತೊಂದು ಕಥೆಗೂ, ಈ ಕಥೆಗೂ ಇರುವ ಸಾಮ್ಯವನ್ನು ಕಂಡು ಚಕಿತನಾಗಿ, ಈ ಲೇಖನವನ್ನು ಬರೆಯುತ್ತಿದ್ದೇನೆ.

ಸುಮಾರು ಐವತ್ತು ವರ್ಷಗಳ ಹಿಂದೆ ಇರಬಹುದು. Readers’ Digest ಮಾಸಪತ್ರಿಕೆಯಲ್ಲಿ ಒಂದು ಸತ್ಯಕಥೆ ಪ್ರಕಟವಾಗಿತ್ತು. ಆ ಲೇಖನವು ಪೂರ್ಣವಾಗಿ ನನಗೆ ನೆನಪಿನಲ್ಲಿಲ್ಲ . ಅದರ ತಿರುಳು ನನಗೆ ನೆನಪಿರುವ ಮಟ್ಟಿಗೆ ಹೀಗಿದೆ:

ಯಾವುದೋ ಒಂದು ಹಳ್ಳಿಯಲ್ಲಿರುವ ಕುಟುಂಬದ ಒಬ್ಬ ಹದಿಹರಯದ ಹುಡುಗನು ತನ್ನ ಮನೆಯನ್ನು ಬಿಟ್ಟು ಓಡಿ ಹೋಗಿರುತ್ತಾನೆ. (ಅಥವಾ ಒಂದು ಅಪರಾಧದಲ್ಲಿ ಸಿಲುಕಿ ಸೆರೆಮನೆಗೆ ಹೋಗಿರುತ್ತಾನೆ.) ಆತ ಮರಳಿ ಬರುವಾಗ, ಆತನ ಮನಸ್ಸಿನಲ್ಲಿ ಒಂದು ಚಡಪಡಿಕೆ. ತನ್ನ ಮನೆಯವರು ತನ್ನನ್ನು ಸ್ವಾಗತಿಸುತ್ತರೊ ಇಲ್ಲವೊ ಎನ್ನುವ ಸಂದೇಹ ಅವನಿಗಿರುತ್ತದೆ. ಆತ ತನ್ನ ಮನೆಯವರಿಗೆ ಪತ್ರ ಬರೆದು, ತನ್ನ ಸಂಶಯವನ್ನು ನಿವೇದಿಸುತ್ತಾನೆ. ಅಲ್ಲದೆ ಒಂದು ವಿನಂತಿಯನ್ನು ಅವರೆದುರಿನಲ್ಲಿ ಇಡುತ್ತಾನೆ. ‘ಅವರು ಹಳೆಯದೆಲ್ಲವನ್ನು ಮರೆತು ತನ್ನನ್ನು ಸ್ವಾಗತಿಸುವದಾದರೆ, ತಮ್ಮ ಮನೆಯ ಮೇಲೆ ಹಸಿರು ಬಾವುಟವನ್ನು ಹಚ್ಚಬೇಕು. ಅಂದರೆ ತಾನು ಮನೆಯ ಒಳಗೆ ಬರುತ್ತೇನೆ. ಇಲ್ಲವಾದರೆ ಹಾಗೆಯೇ ಹೊರಟು ಬಿಡುತ್ತೇನೆ’.

ಆ ಹುಡುಗ ಅನುಮಾನಿಸುತ್ತಲೇ ತನ್ನ ಹಳ್ಳಿಗೆ ಕಾಲಿಟ್ಟಾಗ, ಆತನಿಗೆ ಕಾಣುವದೇನು? ಇಡೀ ಹಳ್ಳಿಯ ಎಲ್ಲ ಮನೆಗಳ ಮೇಲೂ ಹಸಿರು ಬಾವುಟಗಳು ಹಾರಾಡುತ್ತಿರುತ್ತವೆ!

ಇದು ಸತ್ಯಕಥೆ. ಆದುದರಿಂದ ಕೇವಲ ಎರಡು-ಮೂರು ಪುಟಗಳಲ್ಲಿ ಮುಗಿದಿರಬಹುದಾದ ಒಂದು ಚಿಕ್ಕ ಕಥೆ. ಇನ್ನು ಯೋಗಪ್ಪನವರು ಬರೆದ ಕಥೆಗೂ, ಈ ಕಥೆಗೂ ಸಾಮ್ಯತೆ ಎಲ್ಲಿದೆ ಎನ್ನುವುದನ್ನು ಹೇಳಬಯಸುತ್ತೇನೆ. ಯೋಗಪ್ಪನವರು ಬರೆದ ಕಥೆ ಇಪ್ಪತ್ತುನಾಲ್ಕು ಪುಟಗಳ ಕಥೆ. ಕಥೆಯನ್ನು ಹೇಳುತ್ತಿರುವವನ ತಂಗಿಯು ಒಬ್ಬ ಸದ್ಗೃಹಿಣಿ; ತನ್ನ ಉಪಕಾರಿ ಸ್ವಭಾವದಿಂದ ಊರಿನವರಿಗೆಲ್ಲ ಬೇಕಾದವಳು. ಅವಳೀಗ ಮರಣಿಸಿದ್ದಾಳೆ. ಅವಳ ಅಪರಕರ್ಮಗಳ ವಿವರಣೆಯಿಂದ ಕಥೆ ಪ್ರಾರಂಭವಾಗುತ್ತದೆ. ಆ ಬಳಿಕ flash backನಲ್ಲಿ ತಂಗಿಯ ಬಾಲ್ಯದ ವಿವರಗಳು, ಆಕೆಯ ಉಪಕಾರಬುದ್ಧಿ, ಅಣ್ಣನಿಗೂ ತಂಗಿಗೂ ಇರುವ ನಿಕಟ ಬಾಂಧವ್ಯ ಮೊದಲಾದವುಗಳ ಸವಿಸ್ತಾರ ವರ್ಣನೆಯಿದೆ. ಯೋಗಪ್ಪನವರು ಒಳ್ಳೆಯ ಲೇಖಕರು. ಹೀಗಾಗಿ ಈ ವರ್ಣನೆಯು ಓದುಗನನ್ನು ಸೆರೆ ಹಿಡಿಯುತ್ತದೆ. ಕ್ರಿಯಾಕರ್ಮ ಮಾಡಿಸಿದ ಆಚಾರ್ಯರು ಮೃತಳ ಆತ್ಮದ ಪರಲೋಕಪ್ರಯಾಣದ ಬಗೆಗೆ ವಿವರಿಸುತ್ತಾರೆ. ಆದರೆ ಅವಳ ಅಣ್ಣನಿಗೆ ಅವಳು ತಮ್ಮನ್ನು ಬಿಟ್ಟು ಪರಲೋಕಕ್ಕೆ ಹೋಗಿಲ್ಲ ಎಂದು ಭಾಸವಾಗುತ್ತದೆ.  ಆತ ಮನೆಯ ಎಲ್ಲ ಲೈಟುಗಳನ್ನು ಹಚ್ಚಿ, ಮನೆಯ ಬಾಗಿಲಿಗೆ, ‘ತಂಗಿಯ ಮನೆ—ಸ್ವಾಗತ’ ಎಂದು ಬರೆಯುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಬಂದ ಹಿರಿಯ ಮುದುಕಿಯೊಬ್ಬಳು, ಒಂದು ದೀಪವನ್ನು ಹೊಚ್ಚಲಲ್ಲಿಟ್ಟು ಹೋಗುತ್ತಾಳೆ. ಆಚಾರ್ಯರನ್ನು ಭೆಟ್ಟಿಯಾಗಬಯಸಿದ ಅಣ್ಣನು ತಮ್ಮ ಮನೆಯಿಂದ ಹೊರಬರುತ್ತಾನೆ. ಅವನಿಗೆ ಕಾಣುವದೇನು?..............ಹಳ್ಳಿಯ ಎಲ್ಲ ಮನೆಗಳಲ್ಲಿಯೂ ದೀಪಗಳು ಉರಿಯುತ್ತಿವೆ. ‘ತಂಗಿಯ ಮನೆ—ಸ್ವಾಗತ’ ಎಂದು ಎಲ್ಲ ಮನೆಗಳ ಮೇಲೂ ಬರೆದಿದೆ.

ಓದುಗರೆ, ಸಾಮ್ಯವನ್ನು ನೋಡಿದಿರಷ್ಟೆ? Readers’ Digestದಲ್ಲಿಯ ಹುಡುಗನ ತಪ್ಪುಗಳನ್ನು ಊರವರು ಕ್ಷಮಿಸಿ, ಆತನನ್ನು ಮರಳಿ ಸ್ವಾಗತಿಸುತ್ತಿದ್ದಾರೆ.  ಯೋಗಪ್ಪನವರ ಕಥೆಯಲ್ಲಿ ತಂಗಿಯು ಮರಣ ಹೊಂದಿರುವದರಿಂದ ಹಾಗೆ ಮಾಡಲು ಸಾಧ್ಯವಿಲ್ಲ. ಇನ್ನು ಊರವರೆಲ್ಲ ಅವರ ತಂಗಿಯನ್ನು ಮೆಚ್ಚಬೇಕಾದರೆ, ಊರವರಿಗೆಲ್ಲ ಅವಳು ಬೇಕಾಗಿರುವ ಸದ್ಗೃಹಿಣಿಯಾಗಿರಬೇಕಾದರೆ (-ಇದು ಕಥೆಗೆ ಅನಿವಾರ್ಯ-), ಅವರ ತಂಗಿಯು ಪರೋಪಕಾರ ಬುದ್ಧಿಯನ್ನು ಹೊಂದಿರಲೇ ಬೇಕು. ಇನ್ನು ಅವಳನ್ನು ಊರವರು ಮರುಸ್ವಾಗತಿಸಬೇಕಾದರೆ, ಅವಳು ಮೊದಲು ಸಾಯುವುದೂ ಅನಿವಾರ್ಯವೇ. ಇಷ್ಟೆಲ್ಲ ಅನಿವಾರ್ಯತೆಗಳು ಇರುವ ಕಥೆಯನ್ನು ವಾಸ್ತವ ಶೈಲಿಯಲ್ಲಿ ಬರೆಯಲು ಸಾಧ್ಯವಿಲ್ಲ. ಆದುದರಿಂದ ಕಥೆಯು fable ಶೈಲಿಯಲ್ಲಿದೆ. ಇದು ಮತ್ತೊಂದು ಅನಿವಾರ್ಯತೆ!

Readers’ Digestದಲ್ಲಿ ಊರ ಜನ ಬಾವುಟ ಹಾರಿಸಿ ಹುಡುಗನನ್ನು ಸ್ವಾಗತಿಸಿದರೆ,  ಯೋಗಪ್ಪನವರ ಕಥೆಯಲ್ಲಿ ಊರಿನ ಪ್ರತಿ ಮನೆಯಲ್ಲಿ, ದೀಪ ಹಚ್ಚಿ, ‘ತಂಗಿಯ ಮನೆ—ಸ್ವಾಗತ’ ಎಂದು ಬರೆಯುವ ಮೂಲಕ, ತಂಗಿಯನ್ನು ಮರಳಿ ಸ್ವಾಗತಿಸಲಾಗುತ್ತಿದೆ. ಯೋಗಪ್ಪನವರು Readers’ Digestನಲ್ಲಿಯ ಕಥೆಯನ್ನು ಓದಿದ್ದರು; ಅದರಿಂದ ಪ್ರಭಾವಿತರಾಗಿ ಈ ಕಥೆಯನ್ನು ಬರೆದಿದ್ದಾರೆ ಎಂದು ನಾನು ಹೇಳುವುದು  ತಪ್ಪಾಗುತ್ತದೆ. ಅಲ್ಲದೆ, ಈ ಎರಡೂ ಕಥೆಗಳಲ್ಲಿ ವ್ಯತ್ಯಾಸಗಳೂ ಇವೆ. ಮೊದಲಿನದು ಸತ್ಯಕಥೆಯಾಗಿದ್ದರಿಂದ, ಕೇವಲ ೨-೩ ಪುಟಗಳಲ್ಲಿ ಮುಗಿದಿದೆ, ಇದು ಕಾಲ್ಪನಿಕ ಕಥೆಯಾದುದರಿಂದ ಇಪ್ಪತ್ತುನಾಲ್ಕು ಪುಟಗಳಷ್ಟಿದೆ. ಮೊದಲಿನ ಕಥೆಯ ಹುಡುಗನು ಜೀವಂತ ವ್ಯಕ್ತಿ. ಆದುದರಿಂದ ಆ ಕಥೆಗೆ ಬಣ್ಣ ಹಚ್ಚುವ ಅವಶ್ಯಕತೆ ಇಲ್ಲ. ಅದರೆ ಯೋಗಪ್ಪನವರ ಕಥೆಯಾದರೊ ಒಂದು ಕಾಲ್ಪನಿಕ ಕಥೆ. Fable ಶೈಲಿಯ ಕಥೆ. ಇಲ್ಲಿ ಬಣ್ಣ ಹಚ್ಚುವುದು ಅನಿವಾರ್ಯ!

ಸಾಹಿತ್ಯಾಸಕ್ತರಿಗೆ ಈ ಎರಡೂ ಕಥೆಗಳ ಸಾಮ್ಯ, ವೈಷಮ್ಯಗಳು ಕುತೂಹಲ ಹುಟ್ಟಿಸುವದರಲ್ಲಿ ಸಂಶಯವಿಲ್ಲ.

ಮನೋಹರ ಗ್ರಂಥಮಾಲೆಯು ಪ್ರಕಟಿಸಿದ ಮತ್ತೊಂದು (ಹಳೆಯ) ಪ್ರಬಂಧಸಂಕಲನದ ಲೇಖಕರು ಗಿರಡ್ಡಿ ಗೋವಿಂದರಾಜರು. ಗಿರಡ್ಡಿಯವರು ಕನ್ನಡದ ಖ್ಯಾತ ವಿಮರ್ಶಕರು. ಇವರ ಪ್ರಬಂಧಸಂಕಲನದಲ್ಲಿಯ ಒಂದು ಲೇಖನ ಓದಿದಾಗ ನನಗೆ ಇದನ್ನು ಈ ಮೊದಲು ಎಲ್ಲಿಯೋ ಓದಿದ್ದೇನಲ್ಲ ಎಂದು ಭಾಸವಾಯಿತು.

‘ಕಸ್ತೂರಿ’ ಮಾಸಪತ್ರಿಕೆಯು ೧೯೫೬ರಲ್ಲಿ ಪ್ರಾರಂಭವಾಯಿತು. ೧೯೫೬-೫೮ರ ಅವಧಿಯಲ್ಲಿ ಅದರಲ್ಲಿ ಒಂದು ತಿಳಿಹಾಸ್ಯದ ಲೇಖನ ಪ್ರಕಟವಾಗಿತ್ತು. (ಆಗ ನಾನು ಸುಮಾರು ಹತ್ತು ವರ್ಷದವನಿರಬಹುದು.) ಕಲಕತ್ತಾ ನಗರದಲ್ಲಿಯ ಜೇಬುಗಳ್ಳರ ಬಗೆಗಿನ ವಿನೋದ ಲೇಖನವಿದು. ಗಿರಡ್ಡಿಯವರ ಲೇಖನಕ್ಕೂ ಇದಕ್ಕೂ ಸಾಕಷ್ಟು ಸಾಮ್ಯಗಳಿದ್ದವು. (ಕಲಕತ್ತಾ ನಗರವೊಂದನ್ನು ಬಿಟ್ಟು). ಅಯ್ಯಪ್ಪಾ, ಇದೇನು, ಗಿರಡ್ಡಿಯವರ ಲೇಖನವು ಆ ಲೇಖನದ ‘ಜುಡವಾ’ ಇದ್ದಂತೆ ಇದೆಯಲ್ಲ ಎಂದು ನನಗನಿಸಿದ್ದು ಸುಳ್ಳಲ್ಲ. ಗಿರಡ್ಡಿಯವರ ಮೇಲೆ ಕೃತಿಚೌರ್ಯದ ಆರೋಪ ಹೊರಸುವಷ್ಟು ನಾನು ದೊಡ್ಡವನಲ್ಲ, ತಿಳಿದವನೂ ಅಲ್ಲ. ಆದರೆ ಕಸ್ತೂರಿಯಲ್ಲಿಯ ಹಳೆಯ ಲೇಖನದ ಪ್ರಭಾವವು ಅವರ ಕೃತಿಯ ಮೇಲೆ ಆಗಿರುವ ಸಾಧ್ಯತೆಗಳಿವೆ. ಕಸ್ತೂರಿಯಲ್ಲಿಯ ಲೇಖನ ಪ್ರಕಟವಾದಾಗ ಗಿರಡ್ಡಿಯವರು ಬಹುಶಃ ೧೮-೧೯ ವರ್ಷದವರು ಇದ್ದಿರಬಹುದು. ಇದು ಪ್ರಭಾವಕ್ಕೆ ಒಳಗಾಗುವ ವಯಸ್ಸೇ ಅಲ್ಲವೆ?

ಮನುಷ್ಯ ಜಾತಿಯಲ್ಲಿಯೇ ಒಬ್ಬ ವ್ಯಕ್ತಿಯ ತದ್ರೂಪಿಯಂತೆ ಮತ್ತೊಬ್ಬ ವ್ಯಕ್ತಿ ಕಾಣುವ ಸಂಭಾವ್ಯತೆ ಲಕ್ಷದಲ್ಲಿ ಒಂದು ಇದೆಯಂತೆ. ಇನ್ನು ಲೇಖನಗಳಲ್ಲಿ ಕೇಳಬೇಕೆ?