Sunday, February 28, 2021

ಕನಸಿನ ಕೆನಿ.....................................ದ. ರಾ. ಬೇಂದ್ರೆ

ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:

ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು ಏನಂತ ಹೊಳೀವಲ್ತು.”

ಬೇಂದ್ರೆಯವರ ಕವನಗಳೂ ಹೀಗೆಯೇ ಇವೆ. ಅವುಗಳ ಅರ್ಥ ಓದುಗರಿಗೆ ಸರಳವಾಗಿ ಆಗುತ್ತದೆ. ಆದರೆ ಅವುಗಳ ಅಂತರಾರ್ಥ ಸರಳವಾಗಿ ಆಗುವುದಿಲ್ಲ.

 ತಮ್ಮ ಕವನಗಳು ಹುಟ್ಟುವ ಪರಿಯನ್ನು ಬೇಂದ್ರೆಯವರು ತಮ್ಮ ಕವನಗಳ ಮೂಲಕವೇ ಸೂಚಿಸಿದ್ದಾರೆ. ಉದಾಹರಣೆಗೆ, ‘ಭಾವಗೀತೆಹಾಗೂಗರಿಎನ್ನುವ ಕವನಗಳು.  ‘ಕನಸಿನ ಕೆನಿಎನ್ನುವ ಕವನದಲ್ಲಿ ತಮ್ಮ ಕವನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ಬೇಂದ್ರೆಯವರು ಸೂಚಿಸುತ್ತಿದ್ದಾರೆ. ಕನಸು ಒಳಮನಸ್ಸಿನಲ್ಲಿ ಹುಟ್ಟುತ್ತದೆ. ಈ ಒಳಮನಸ್ಸಿನಲ್ಲಿ ಗೂಡುಗಟ್ಟಿದ ಆದರ್ಶಗಳು ಹಾಗು ಅನುಭವಗಳೇ ಬೇಂದ್ರೆಯವರ ಕನಸುಗಳಾಗಿವೆ. ಹಾಲು ಕಾಯ್ದು, ಕೆನೆಯು ಮೇಲೆ ಬರುವಂತೆ ಬೇಂದ್ರೆಯವರ ಕನಸುಗಳು ತಪಿಸಿ, ತಾಪಿಸಿ, ಕೆನೆಗಟ್ಟಿ ಮೇಲೆ ಬರುತ್ತವೆ. ಆದುದರಿಂದ ಇವುಕನಸಿನ ಕೆನಿಗಳು.

ಬೇಂದ್ರೆಯವರ ಕವನಗಳನ್ನು ನೋಡಿರಿ. ಬಹುತೇಕ ಎಲ್ಲ ಕವನಗಳು ಮತ್ತೊಬ್ಬರೊಡನೆ ಆಪ್ತವಾಗಿ ಹಂಚಿಕೊಂಡಂತಹ ಕವನಗಳೇ ಆಗಿವೆ. ಇಲ್ಲಿ ಬೇಂದ್ರೆಯವರು ತಮ್ಮ ಕವನವನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ತಮ್ಮ ಗೆಳೆಯನಿಗೆ ಹೇಳುತ್ತಿದ್ದಾರೆ. ಬೇಂದ್ರೆಯವರುಗೆಳೆಯಎಂದು ಸಂಬೋಧಿಸದೆ, ‘ಗೆಣೆಯಎಂದು ಕರೆಯುತ್ತಿದ್ದಾರೆ ಎನ್ನುವುದನ್ನು ಗಮನಿಸಿ. ‘ಗೆಣೆಯಎನ್ನುವದು ಆತ್ಮೀಯ ಗೆಳೆಯನಿಗೆ ಸಂಬೋಧಿಸಬಹುದಾದ ಪದ. ಮುಖ್ಯವಾಗಿ ಹೆಣ್ಣು ತನ್ನ ಪ್ರಣಯಿ ಗೆಳೆಯನನ್ನು ಕರೆಯುವಾಗ ಹೇಳಬಹುದಾದ ಪದ. ಬೇಂದ್ರೆಯವರು ಇಲ್ಲಿ ಅರ್ಥವನ್ನು ಬಳಸುತ್ತಿಲ್ಲ. ಈತ ಆಪ್ತ ಸಹೃದಯ ರಸಿಕ ಎನ್ನುವ ಅರ್ಥದಲ್ಲಿಗೆಣೆಯಎಂದು ಬೇಂದ್ರೆಯವರು ಕರೆಯುತ್ತಿದ್ದಾರೆ.

ಇದೀಗ ಕನಸಿನ ಕೆನೆಯ ಒಂದೊಂದೇ ನುಡಿಯನ್ನು ವಿಶ್ಲೇಷಿಸೋಣ:

ಕಿವೀs ಚ್ಯಾsಚ ಬ್ಯಾsಡಾ ಗೆಣಿಯಾs

ಒಳ ಒಳ ಒಳ ಹೋಗಬೇಕೋ                      || ಪಲ್ಲ ||

 

ಬಳ್ಳ ಬಳ್ಳ ಸೆಲೀಯೊಳಗs ನೆಳ್ಳ ನೀಡಬ್ಯಾಡಾ ನಿಂತು

ಮುಳುಗು ಹಾಕು ಮೂರು ಒಳಗ ಒಳಗ            ||ಅನುಪಲ್ಲ||

 ಬೇಂದ್ರೆಯವರ ಕವವನ್ನು ಅರ್ಥ ಮಾಡಿಕೊಳ್ಳಲು ಕೇವಲ ಹೊರಗಿನಿಂದ ಕಿವಿ ಚಾಚಿದರೆ ಉಪಯೋಗವಿಲ್ಲ. ಕವನದ ಅಂತರಂಗದೊಳಗೆ ನುಸುಳಬೇಕು. ‘ಒಳ ಒಳ ಹೋಗಬೇಕೋ’!

ಬೇಂದ್ರೆಯವರು ತಮ್ಮ ಕವನವನ್ನು ಒಂದು ನೀರಿನ ಸೆಲೆಗೆ ಹೋಲಿಸುತ್ತಿದ್ದಾರೆ. ಬಳ್ಳ ಅಂದರೆ ಒಂದು ಅಳತೆ, ಕೊಳಗದ ಅರ್ಧಭಾಗ. ಇಲ್ಲಿ ಸೆಲೆಯು ಯಾವಾಗಲೂ ನೀರನ್ನು ಚಿಮ್ಮುತ್ತಿರುವ ಸೆಲೆ ಎನ್ನುವ ಅರ್ಥವನ್ನು ಕೊಡುತ್ತದೆ. ಭೂಮಿಯ ಆಳದಿಂದ ಚಿಮ್ಮುವ ಬುಗ್ಗೆಯು, ನಿಸರ್ಗಸಹಜವಾಗಿರುತ್ತದೆ. ಬೇಂದ್ರೆಯವರ ಕವನಗಳೂ ಸಹ ಈ ಬುಗ್ಗೆಗಳಂತೆ ಸಹಜಸ್ಫೂರ್ತಿಯಿಂದ ಚಿಮ್ಮುವ ಕವನಗಳು; ಬೌದ್ಧಿಕ ಕಸರತ್ತಿನಿಂದ ಬರೆಯುವ ಕವನಗಳಲ್ಲ.  

 ಇಂತಹ ಸೆಲಿಯ ಮ್ಯಾಲ ನೀನು ನಿಂತುಕೊಂಡರೆ ಅದರ ಮೇಲೆ ನಿನ್ನ ವ್ಯಕ್ತಿತ್ವದ ನೆರಳು ಬೀಳುತ್ತದೆ. ನಿನಗೆ ಮೇಲುಮೇಲಿನ ಅರ್ಥವಷ್ಟೇ ಆಗುತ್ತದೆ; ಅದರ ನಿಜವಾದ ಭಾವವನ್ನು ನೀನು ತಿಳಿಯಲಾರೆ. ಸೆಲಿಯೊಳಗ ನೀನು ಆಳವಾಗಿ  ಮುಳುಗು ಹಾಕಬೇಕು ಎಂದು ಬೇಂದ್ರೆಯವರು ಹೇಳುತ್ತಾರೆ. ಅಂದರೆ ನಿನ್ನ ವೈಯಕ್ತಿಕ ಭಾವವನ್ನು ಕವನದ ಮೇಲೆ ಆರೋಪಿಸಬೇಡ; ಕವನದ ಅಂತರಾರ್ಥವನ್ನು ತಿಳಿಯಲು ಅದರಲ್ಲಿ ನೀನು ಸಮರಸನಾಗಬೇಕು. ಇದು ಕವನದ ಅಂತರಂಗವನ್ನು ಅರಿಯುವ ರೀತಿ.

ಮೂರು ಸಲ ಮುಳುಗು ಹಾಕು ಎಂದು ಬೇಂದ್ರೆಯವರು ಏಕೆ ಹೇಳುತ್ತಾರೆ? ಶ್ರದ್ಧಾಳುಗಳು  ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವುದನ್ನು ನೀವು ನೋಡಿರಬಹುದು. ಪ್ರತಿ ಜೀವಿಗೂ ಸ್ಥೂಲದೇಹ, ಸೂಕ್ಷದೇಹ ಹಾಗು ಕಾರಣದೇಹ ಎನ್ನುವ ಮೂರು ದೇಹಗಳು ಇರುತ್ತವೆ. ಮೂರು ದೇಹಗಳ ಶುದ್ಧಿಗಾಗಿ ತೀರ್ಥಗಳಲ್ಲಿ ಮೂರು ಸಲ ಮುಳುಗು ಹಾಕುವ ಪದ್ಧತಿ ಇದೆ. ಓದುಗನೂ ಸಹ ತನ್ನೆಲ್ಲ ಅಂತರಂಗವನ್ನು ಕವನದಲ್ಲಿ ಮುಳುಗಿಸಿಬೇಕು, ತೊಯ್ಯಿಸಬೇಕು. ಮೊದಲನೆಯ ಮುಳುಗಿನಲ್ಲಿ, ಬೇಂದ್ರೆಯವರ ಕವನದ ಮೇಲುನೋಟದ ಅರ್ಥವಾಗುತ್ತದೆ. ಎರಡನೆಯ ಮುಳುಗಿನಲ್ಲಿ, ಇನ್ನಿಷ್ಟು ಒಳಗೆ ಹೋದಾಗ, ಒಳಮನಸ್ಸಿನ ಭಾವ ತಿಳಿಯುತ್ತದೆ. ಮೂರನೆಯ ಮುಳುಗಿನಲ್ಲಿ, ತಳಮಟ್ಟವನ್ನು ಮುಟ್ಟಿದಾಗ ಕವನದ ಅಂತರಾತ್ಮದ ಅರ್ಥವಾಗುತ್ತದೆ

 ಹೀಂಗs ಮಾಡಬೇಕೂ ; ಹಾಂಗೂ ಮಾಡಬೇಕೂs

ಹ್ಯಾಂಗಾರ ಮಾಡು ಬೆಳ್ಳಬೆಳಗs

ರಸಾ ತೀರಿದ ಮ್ಯಾಲs | ಗಸಿ ಐತಿ ಕೆಳಗs

ಅದಕ್ಕೂ ಹೋಗಬೇಕು ಕೆಳಗs

ಇದನ್ನೆಲ್ಲಾ ಕೇಳಿದ ಬೇಂದ್ರೆಯವರ ಗೆಳೆಯ ಅವರಿಗೆ  ‘ಹಂಗಾದರ, ನಿನ್ನ ಕವನವನ್ನ ಹ್ಯಾಂಗ ತಿಳಕೊಬೇಕಪಾ?’ ಅಂತ ಕೇಳತಾನ. ಅದಕ್ಕ ಬೇಂದ್ರೆಯವರು ಹೇಳತಾರ: ‘ಹಿಂಗs ಮಾಡಬೇಕು ಅನ್ನೋ ಅಂತಹ ಒಂದು ವಿಧಾನ ಇಲ್ಲಪಾ. ನೀ ಹ್ಯಾಂಗರ ಮಾಡು. ಆದರ ಅರ್ಥ ಹೊಳಿಯೋ ಹಂಗ ಬೆಳ್ಳಗ, ಬೆಳ್ಳಗ ಮಾಡು.’ ಇಲ್ಲಿ ಬೆಳ್ಳಬೆಳಗ ಅನ್ನುವ ಪದಕ್ಕ ಇರುವ ಶ್ಲೇಷಾರ್ಥವನ್ನು ಗಮನಿಸಿರಿ. ಪಾತ್ರೆಯನ್ನು ತಿಕ್ಕುವುದಕ್ಕೆಪಾತ್ರೆಯನ್ನು ಬೆಳಗುಎಂದು ಹೇಳುತ್ತಾರೆ. ಅಲ್ಲದೆ ಬೆಳ್ಳಬೆಳಗು ಎನ್ನುವ ಪದವು ಮುಂಜಾವು ಎನ್ನುವ ಅರ್ಥವನ್ನೂ ಕೊಡುತ್ತದೆ.

ಕವನದ ಪದಾರ್ಥ ತಿಳಿದು, ಅದರ ರಸವನ್ನೆಲ್ಲ ಓದುಗನು ಹೀರಿಕೊಂಡ ಬಳಿಕ, ಮುಗಿಯಿತೆ?

ಜೇನನ್ನು ಹಿಂಡಿ, ಮೇಲಿನ ರಸವನ್ನು ಸಂಗ್ರಹಿಸಿದ ಬಳಿಕ ಸಹ, ಕೆಳಗೆಗಸಿಉಳಿದಿರುತ್ತದೆ. ಬೇಂದ್ರೆಯವರ ಕವನದಲ್ಲಿ ಮೇಲ್ಮೇಲಿನ ರಸಗ್ರಹಣಕ್ಕಿಂತ ಕೆಳಗೆ ಇಳಿಯಬೇಕು. ಅಂದರೆ ಕವನದ ಗೂಢಾರ್ಥ ಹೊಳೆಯುತ್ತದೆ.

ಬೇಂದ್ರೆಯವರ ಕವನ ಇರುವುದೇ ಹೀಗೇ. ತಿಳಿದರೂ ಸಹ ಹೊಳೆದಿರುವುದಿಲ್ಲ; ಹೊಳದರೂ ಸಹ ತಿಳಿದಿರುವುದಿಲ್ಲ. ಅದಕ್ಕಾಗಿ ಓದುಗನು ಒಳಗ, ಒಳಗ, ಕೆಳಗ, ಕೆಳಗ  ಇಳಿದು ಅನುಭವಿಸಬೇಕು.

 ಇನ್ನು ಮೂರನೆಯ ನುಡಿ ಹೀಂಗದ:

ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂ

ನೀ ಗಂಟು ಹಾಕಬ್ಯಾಡ, ನೀ ಹೊರಗs

ಸೆರಗೀಗ ಕಟ್ಟು ಸೆರಗು | ಮಿರಗಕ್ಕ ಎಲ್ಲೀ ಮೆರಗು?

ಬೆರಗಿನ್ಯಾಗ ಬೆರ್ತುಹೋಗ ತಿರುಗs

ಬೇಂದ್ರೆಯವರ ಕವನಕ್ಕ ಅನೇಕ ಪಾತಳಿಗಳು ಇರ್ತಾವ, ಅನೇಕ ಅರ್ಥಗಳು ಇರ್ತಾವ. ‘ಹೊದರಿನ್ಯಾಗ ಹೊದರೂ | ಪದರಿನ್ಯಾಗ ಪದರೂಅಂತ ಬೇಂದ್ರೆಯವರು ಇದನ್ನs ಹೇಳತಾರ. ಈ ಪಾತಳಿಗಳನ್ನ ಒಂದರೊಳಗೊಂದು ಗಂಟು ಹಾಕಿ, ತಿಳಕೊಳ್ಳಲಿಕ್ಕೆ ಹೋಗಬ್ಯಾಡ; ಹಾಂಗ ಮಾಡಿದರ, ಅರ್ಥ ಹೋಗಿ ಅನರ್ಥ ಆಗತದ. ನೀ ಕವನದ ಪದರುಗಳ ಒಳಗ ಸಿಕ್ಕುಬೀಳಬೇಡ,  ಹೊರಗ ನಿಂತುಕೋ; ಆದರ, ಕವನದ ಅರ್ಥ ಮಾಡಿಕೊಳ್ಳಲಿಕ್ಕೆ ಸೆರಗು ಕಟ್ಟು ಅಂದರ ದೃಢಸಂಕಲ್ಪನಾಗು ಅಂತ ಬೇಂದ್ರೆಯವರು ಹೇಳತಾರ.

ಮಿರುಗುವುದು ಅಂದರೆ ಹೊಳೆಯುವುದು. ‘ಮೆರಗುಅಂದರ polish. ಸ್ವತಃ ಹೊಳೆಯುವ ಕವನಕ್ಕ polish ಬೇಕಾಗುವುದಿಲ್ಲ. ಹಾಗು ಆ ಕೆಲಸಕ್ಕ ಕೈ ಹಾಕಲೂ ಬಾರದು. ಆ ಕವನ ಓದುಗನ ಮನಸ್ಸನ್ನ ತಟ್ಟುವುದೇ ಅದರ ಕಾರ್ಯಸಿದ್ಧಿ. ಅವನಿಗೆ ಬೆರಗಿನ ಅನುಭವವನ್ನು ಕೊಡುವುದೇ ಕವನದ  ಮೇಲ್ಮೆ. ಆ ಕವನ ನೀಡುವ ಬೆರಗಿನೊಳಗ, ಓದುಗ ತಿರುತಿರುಗಿ ಅಂದರ ಪುನಃಪುನಃ ಬೆರತು ಹೋಗಬೇಕು. ಕವನದಲ್ಲಿ ಓದುಗ ಒಂದಾಗಿ ಹೋಗಬೇಕು; ಇದೇ ಕವನದ ಸಾರ್ಥಕತೆ. ಶ್ರೇಷ್ಠ ಕವನವು ಓದುಗನನ್ನು ಬೆರಗುಗೊಳಿಸುತ್ತದೆ. ಹೀಗಾಗಲಿಕ್ಕೆ ಓದುಗನ ಮನಸ್ಸೂ ಸಹ ಪಾಕಗೊಂಡಿರಬೇಕು.

 ಮುಂದಿನ ನುಡಿ ಹಿಂಗದ:

ತಿರಗs ತಿರುಗತಿರು | ತಿರುಗೂಣಿ ತಿರುಗುsಣಿ

ಮಣಿ ಮಣಿ ಪೋಣೀಸಿsದ ಕೊರಗs

ದುರುಗಮ್ಮ ದುರುದೂರು | ಮರುಗಮ್ಮ ಮಳಿನೀರು

ಶಾಕಾ ಪಾಕಾ ಮಣ್ಣಿನ ಕಾವಿನೊಳಗs

 

ತನ್ನ  ಕವನದ ತಿರುಗುಣಿಯೊಳಗ ಮತ್ತೆ ಮತ್ತೆ  ಗಿರ್ಕಿ ಹೊಡೆಯುತ್ತ ಇರು ಎಂದು ಬೇಂದ್ರೆಯವರು ಓದುಗನಿಗೆ ಹೇಳ್ತಾರ. ಒಂದs ಓದಿಗೆ ತನ್ನ ಒಳಗನ್ನ ಬಿಟ್ಟು ಕೊಡೋ ಕವನ ಅಲ್ಲ ಇದು.  ಅಂದರ ಕವನ ಎಂಥಾದದ? ಇದುಮಣಿ ಮಣಿ ಪೋಣೀಸಿs ಕೊರಗು!’  ಸುಬದ್ಧವಾಗಿ ಪೋಣಿಸಿದ ಮಣಿಹಾರ ಎಷ್ಟು ಛಂದ ಕಾಣಸ್ತದನೋ, ಅಷ್ಟs ಛಂದ ಅದ ಬೇಂದ್ರೆಕವನ. ಆದರ ಮಣಿಗಳು ಕೊರಗಿನ ಮಣಿಗಳು. ಮಣಿಗಳ ಒಳಗ ವಿಷಾದ ತುಂಬೇದ.

 ದುರಗಮ್ಮ ಹಾಗು ಮರಗಮ್ಮ ಎನ್ನುವ ಎರಡು ಪ್ರತಿಮೆಗಳನ್ನು ಬಳಸಿ, ಬೇಂದ್ರೆಯವರು ತಮ್ಮ ಬದುಕಿನ ಸುಖದುಃಖಗಳನ್ನು ಹೇಳ್ತಾರ. ದುರಗಮ್ಮ ಎನ್ನುವ ದೇವತೆ ದುರುದುರು ಉರಿಯುತ್ತಿರುತ್ತಾಳೆ. ಮರಗಮ್ಮ ಯಾವಾಗಲೂ ಮರಗುತ್ತಲೇ ಇರುತ್ತಾಳೆ. ಇವಳ ಕಣ್ಣಿರೇ ಮಳಿಯಾಗುತ್ತದೆ. ಆದರೆ ದುರಗಮ್ಮ ಹಾಗು ಮರಗಮ್ಮ ಇಬ್ಬರೂ ದೇವತೆಗಳು. ಅವರು ಕೊಡುವ ಸಂಕಷ್ಟಗಳಿಂದಲೇ, ಬದುಕು ಚಿಗುರುತ್ತದೆ; ಬಾಳಿನಲ್ಲಿ ಸಾರ್ಥಕತೆ ಸಿಗುತ್ತದೆ.

 ದುರಗಮ್ಮ ಸೂರ್ಯನಂತಿದ್ದರೆ, ಮರಗಮ್ಮ ಮಳೆದೇವರಂತಿದ್ದಾಳೆ. ಬೇಸಿಗೆಯ ಉರಿ ಹಾಗು ಮಳೆಗಾಲದ ಮಳೆನೀರು ಭೂಮಿಯ ಮೇಲೆ ಬಿದ್ದು, ಒಳಗ ಇಳಿದಾಗ, ಏನಾಗತದ? ಮಣ್ಣು ಅಂದರೆ ನಮ್ಮ ಬದುಕು ತನ್ನ ಕಾವಿನಿಂದ ಅಂದರೆ ಅನುಭವಗಳಿಂದ ಶಾಕವನ್ನು (ಸಸಿಯನ್ನು) ಹುಟ್ಟಿಸತದ. ಶಾಕವೇ ಮುಂದೆ ಪಾಕವಾಗುತ್ತದೆ. ಪಾಕವೇ ಬೇಂದ್ರೆಕವನ. ಇಂತಹ ಕವನವನ್ನು ತಿಳಿದುಕೊಳ್ಳಲು, ಓದುಗನು ಬೇಂದ್ರೆಯವರ ಭಾವದೊಳಗ ಇಳಿಯಬೇಕಾಗ್ತದ.

ಇದೀಗ ಕೊನೆಯ ನುಡಿ. ಇಲ್ಲಿಯವರೆಗೆ ತಮ್ಮ ಕವನಗಳನ್ನು ಅರ್ಥ ಮಾಡಿಕೊಳ್ಳುವ ಬಗೆಗೆ ಹೇಳಿದ ಬೇಂದ್ರೆಯವರು, ಇದೀಗ ಓದುಗನಿಗೆ ಒಂದು ಸಿಹಿಯಾದ ಆದರೆ ಸುಲಭವಲ್ಲದ ಆಹ್ವಾನವನ್ನು ನೀಡುತ್ತಾರೆ.

ತೂ | ತೂತೂ | ತೂತೂ | ಹೂ ಹುತೂತುತೂ

| ಬಾ | ಅತ್ತs | ಅತ್ತs | ಅತ್ತsತ್ತs |

ಸಾರೀಗಮ್ಮತ್ತs | ಇದ್ದs ಹಿಮ್ಮತ್ತs

ಹಿಕಮತ್ತು ಮತ್ ಮತ್ ಮತ್ತs.

 

`ತೂ, ತೂ, ಹುತೂತೂ…’ ಎನ್ನುವುದುಹುಡತೂತು’ (=ಕಬಡ್ಡಿ) ಆಟದಲ್ಲಿ ಹೇಳುವ ಉಲಿ. ‘ಕಬಡ್ಡಿ, ಕಬಡ್ಡಿ….’ ಎನ್ನುವ ಬದಲಾಗಿಹುತೂತೂ….’ ಎಂದು ಹೇಳುತ್ತಾರೆ. ಬೇಂದ್ರೆಯವರು ಹೇಳುವ ಆಟದಲ್ಲಿ ಒಂದು ಭಾಗದಲ್ಲಿ ಕವಿ ನಿಂತಿದ್ದಾನೆ. ಮತ್ತೊಂದು ಭಾಗದಲ್ಲಿ ಓದುಗ ನಿಂತಿದ್ದಾನೆಬೇಂದ್ರೆಯವರು ರಸಿಕ ಓದುಗನಿಗೆ ಆಹ್ವಾನ ನೀಡುತ್ತಿದ್ದಾರೆ : ‘ಬಾ ಇನ್ನೂ ಹತ್ತರ ಬಾ. ನನ್ನ ಕವನದಾಗ ನಿನ್ನ ಹಿಡದ ಹಾಕತೇನಿ, ಬಾ! ಇದು ಸಾರಿಗಮನಿಸ ಎನ್ನುವ ಸಂಗೀತದ ಮೇಳ.  ಸಾರೀ(=ಇದೆಲ್ಲಾ) ಗಮ್ಮತ್ತ(=ಮೋಜು). ನಿನಗ ಧೈರ್ಯ (=ಹಿಮ್ಮತ್) ಇದ್ದರ, ಹಿಕಮತ್ತ (=ಕಾರ್ಯಯತ್ನ) ಇದ್ದರ, ಮತ್ತೇ ಮತ್ತೇ ಪ್ರಯತ್ನಿಸು. ಕವಿಯೊಡನೆ ಕಬಡ್ಡೀ ಆಡುಇಲ್ಲಿಮತ್ಎಂದರೆಬೇಡಎನ್ನುವ ಅರ್ಥವೂ ಸೂಚಿತವಾಗಿದೆ!

 ವರಕವಿಗಳು ತಮ್ಮ ಕವನಗಳ ಮೂಲಕ ಓದುಗನೊಡನೆ ನಿರಂತರವಾಗಿ ಕಬಡ್ಡಿಯಾಡಲು ಬಯಸುತ್ತಾರೆ. ಅವರ ಕವನಗಳ ತೆಕ್ಕೆಯಲ್ಲಿ ಹಿಡಿಬಿದ್ದು ಸೋಲುವುದು, ಗೆಲ್ಲುವುದು ಓದುಗನಿಗೆ ಇಷ್ಟವಾದ ಸಂಗತಿಯೇ ಆಗಿದೆ.