Friday, January 27, 2012

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರಿಗೆ ಕೃತಜ್ಞತೆಗಳು

ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ಎನ್ನುವ ಧೀರ, ಪ್ರಜ್ಞಾಶೀಲ ಮಹಿಳೆಗೆ ನನ್ನ ಕೃತಜ್ಞತೆಗಳು. ೨೦೧೨ರ ಲಂಡನ್ ಓಲಿಂಪಿಕ್ಸ್ ಸಸ್ಟೇನಿಬಿಲಿಟಿ ಕಮಿಟಿಗೆ ಇವರು ಇದೇ ಜನೇವರಿ ೨೬ರಂದು ರಾಜೀನಾಮೆ ಕೊಟ್ಟಿದ್ದಾರೆ.

ಡಿಶಂಬರ ೧೯೮೪ರಲ್ಲಿ ಭೋಪಾಲದಲ್ಲಿ ಜರುಗಿದ ಘೋರ ದುರಂತಕ್ಕೆ ಕಾರಣವಾದ, ಅಮೇರಿಕಾದ ಯೂನಿಯನ್ ಕಾರ್ಬೈಡ ಕಂಪನಿಯ ಕೀಟನಾಶಕ ಕಾರಖಾನೆಯು ೨೦೦೧ರಲ್ಲಿ ಡೋವ್ ಕೆಮಿಕಲ್ ಕಂಪನಿಗೆ ಹಸ್ತಾಂತರಿತವಾಯಿತು. ಭೋಪಾಲದ ನಿವಾಸಿಗಳಿಗೆ ಸಮುಚಿತವಾದ ಪರಿಹಾರ ಇನ್ನೂ ದೊರೆತಿಲ್ಲ, ಯೂನಿಯನ್ ಕಾರ್ಬೈಡ ಕಂಪನಿಯ ಉಚ್ಚಾಧಿಕಾರಿಗೆ ಶಿಕ್ಷೆಯಾಗಿಲ್ಲ.

೨೦೧೨ರ ಲಂಡನ್ ಓಲಿಂಪಿಕ್ಸಿನ ಪ್ರಾಯೋಜಕರಲ್ಲಿ ಡೋವ್ ಕೆಮಿಕಲ್ ಕಂಪನಿಯೂ ಒಂದು. ಇದನ್ನು ಪ್ರತಿಭಟಿಸಿ ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರರು ಕೊಟ್ಟ ಹೇಳಿಕೆ ಹೀಗಿದೆ:
"I don't want to be party to a defence of Dow Chemicals, the company responsible for one of the worst corporate human rights violations in my generation. It is appalling that 27 years on, the site has still not been cleaned up and thousands upon thousands of people are still suffering. I believe people should be free to enjoy London 2012 without this toxic legacy on their conscience."

ನಮ್ಮ ರಾಜಕಾರಣಿಗಳಲ್ಲಿ ಕಾಣದಿರುವ ನೈತಿಕ ಪ್ರಜ್ಞೆಯನ್ನು ಶ್ರೀಮತಿ ಮೆರೆಡಿಥ್ ಅಲೆಕ್ಝಾಂಡರ ತೋರಿಸಿದ್ದಾರೆ.
May her tribe increase!

Friday, January 20, 2012

ಬೇಂದ್ರೆ-ಕಾವ್ಯ ಶೈಲಿ

ಭಾಷೆ, ಛಂದಸ್ಸು ಹಾಗು ಅಲಂಕಾರ ಇವು ಕಾವ್ಯಶೈಲಿಯ ಮೂರು ಅಂಗಗಳಾಗಿವೆ. ಬೇಂದ್ರೆಯವರ ಕಾವ್ಯಶೈಲಿಯನ್ನು ಅರಿತುಕೊಳ್ಳುವದು ಎಂದರೆ ಸಮುದ್ರವನ್ನು ಅಳೆದಂತೆ. ಅವರ ಕವನಗಳ ಭಾಷಾವೈವಿಧ್ಯವು ಬೆರಗುಗೊಳಿಸುವಂತಹದು. ಅಚ್ಚಗನ್ನಡ, ಸಂಸ್ಕೃತಭೂಯಿಷ್ಠ ಕನ್ನಡ, ಹಳ್ಳಿಯ ಆಡುನುಡಿ, ಮಿಶ್ರಕನ್ನಡ ಇವೆಲ್ಲವೂ ಅವರ ಕವನಗಳಲ್ಲಿ ಬಳಕೆಯಾಗಿವೆ. ಅವರು ಬಳಸಿದ ಭಾಷೆಯು ಯಾವುದೇ ಆಗಿರಲಿ, ಅದು ಕವನದ ಆಶಯಕ್ಕೆ ಸಮರ್ಪಕವಾದ ವಾಹನವಾಗಿರುವದು ಅವರ ಪ್ರತಿಭೆಯ ನಿದರ್ಶನವಾಗಿದೆ. ಅವರ ಕವನಗಳ ಭಾಷಾವೈವಿಧ್ಯದ ಅಂದಾಜು ಮಾಡಲು ಅವರ ಕೆಲವೊಂದು ಕವನಗಳನ್ನು ಇಲ್ಲಿ ಪರಿಶೀಲಿಸೋಣ:

ಮೊದಲನೆಯದಾಗಿ ಆಡುನುಡಿಯನ್ನು ಬಳಸಿರುವ, ಜಾನಪದ ಧಾಟಿಯ ಅವರ ಕವನವೊಂದನ್ನು ನೋಡೋಣ. ‘ಒಲುಮೆಯ ಕಿಚ್ಚು’ ಎನ್ನುವ ಕವನದ ಎರಡನೆಯ ನುಡಿ ಹೀಗಿದೆ:
“ಸುಗ್ಗಿ ನಗಿ ನಕ್ಕಾಗ ಮೊಗ್ಗು ಬಿಚ್ಚಿತ ಒಳಗ
ಹಿಗ್ಗಿ ಪಾಡಾಗಿ ಮಾಗಿಸಿತು ಹರೆಯವು
ಬಗ್ಗದ ಎದೆಯ ಬಾಗಿಸಿತು ”

ಹದಿಹರೆಯದ ಹಳ್ಳಿಯ ಹುಡುಗಿಯೊಬ್ಬಳು ತನ್ನ ಜೀವದ ಗೆಳತಿಯೊಡನೆ ಹಂಚಿಕೊಳ್ಳುತ್ತಿರುವ ಆಪ್ತವಾದ ಮಾತಿದು. ಸುಗ್ಗಿಯ ಕಾಲವೆಂದರೆ ಹೊಲದಲ್ಲಿಯ ಪೈರು ಮಾಗುವ ಕಾಲ. ಈ ಹುಡುಗಿಯೂ ಈಗ ದೈಹಿಕವಾಗಿ ಹಾಗು ಮಾನಸಿಕವಾಗಿ ಮಾಗುತ್ತಿದ್ದಾಳೆ. ಇದನ್ನು ಸೂಚಿಸಲು ಅವಳು ಬಳಸುವ ರೂಪಕಗಳು ಜಾನಪದ ರೂಪಕಗಳಾಗಿವೆ; ಬಳಸುವ ಭಾಷೆ ಜಾನಪದ ಭಾಷೆಯಾಗಿದೆ. ಜಾನಪದ ಭಾಷೆ ಹಾಗು ಗ್ರಾಮೀಣ ಭಾಷೆ ಎರಡೂ ಒಂದೇ ಅಲ್ಲ. ಜಾನಪದ ಭಾಷೆ ಎಂದರೆ ಗ್ರಾಮೀಣ ಸಂಸ್ಕೃತಿಯು ತನ್ನದೇ ಆದ ಸಾಹಿತ್ಯಕ್ಕಾಗಿ ಸೃಷ್ಟಿಸಿಕೊಂಡ ಭಾಷೆ. ಗ್ರಾಮೀಣ ಭಾಷೆ ಎಂದರೆ ಹಳ್ಳಿಗರ ಸದ್ಯದ ಆಡುನುಡಿ. ಗ್ರಾಮೀಣ ಆಡುನುಡಿಯ ಉದಾಹರಣೆ ಎಂದು ಅವರ ‘ಕಗ್ಗ’ ಕವನವನ್ನು ನೋಡಬಹುದು. ಈ ಕವನದ ಎರಡನೆಯ ನುಡಿ ಹೀಗಿದೆ:
“ಹಸು ಕೂಡs ಕಟ್ಟಿದ್ದುಂಟು
ಬಸವಣ್ಣsನೂ ಹುಟ್ಟಿದ್ದುಟು
ಮುಟ್ಟಿದ್ದೆಲ್ಲಾ ‘ಬೂದಿ’ ಮಾಡಿದಾ ಭಸ್ಮಾಸುರಾss
ಅವನ ನೀಗಿಸಿ ಬಿಟ್ಟಿತಣ್ಣಾ ಮೋಹಿನಿ ಅವತಾರಾ.”

ಹಸುವು ಗರ್ಭ ಧರಿಸುವದಕ್ಕೆ ಹಳ್ಳಿಗರು ‘ಕಟ್ಟುವದು’ ಎನ್ನುತ್ತಾರೆ. ಹಸುವು ಕಟ್ಟಿದ ಮೇಲಷ್ಟೆ ಆದಕ್ಕೆ ಬಸವಣ್ಣ ಅಂದರೆ ಹೋರಿಗರು ಹುಟ್ಟಲು ಸಾಧ್ಯ. ಆದರೆ ಬಸವಣ್ಣನು ‘ಭವಿ’ ಅಲ್ಲ ಅರ್ಥಾತ್ ಅವನು ಭೂಲೋಕದಲ್ಲಿ ಹುಟ್ಟಿದರೂ ಸಹ ಅವನದು ಅವತರಣ ಮಾತ್ರ. ಈ ಕವನದ ಭಾಷೆ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಹಳ್ಳಿಗರು ಬಳಸುತ್ತಿದ್ದ ಆಡುನುಡಿಯಾಗಿದೆ. ನೋಡಲು ಸರಳವೆನಿಸುವ ಈ ನುಡಿಯನ್ನು ತಿಳಿದುಕೊಳ್ಳಲು ಗ್ರಾಮೀಣ ಹಾಗು ಪೌರಾಣಿಕ ಹಿನ್ನೆಲೆಗಳನ್ನು ಅರಿತಾಗ ಮಾತ್ರ ಸಾಧ್ಯ!

ಬೇಂದ್ರೆಯವರ ಸಂಸ್ಕೃತಭೂಯಿಷ್ಠ ಭಾಷೆಯ ಉದಾಹರಣೆಗಾಗಿ ‘ಏಲಾಗೀತೆ’ ಎನ್ನುವ ಕವನವನ್ನು ಗಮನಿಸಬಹುದು. ಈ ಕವನದ ಮೊದಲ ನುಡಿ ಹೀಗಿದೆ:
“ಏಲಾವನ ಲವಲೀವನ ಲವಂಗವನಗಳಲಿ
ನಾಗಲತಾ ಸಂಕುಲ ಬನವಾಸಿಯ ಜನಗಳಲಿ
ಲೀಲಾಂದೋಲಿತ ದೋಲಾ ಲಲನಾ ಮಣಿಗಳಲಿ ”
ಈ ಕವನದಲ್ಲಿ ಲಲಿತ ಹಾಗು ಸಂಸ್ಕೃತಭೂಯಿಷ್ಠ ಭಾಷೆಯ ಬಳಕೆಯಾಗಿದೆ. ಇದು ಸಂಸ್ಕೃತವ್ಯಾಮೋಹದ ಪರಿಣಾಮವಲ್ಲ! ಅನುರಣಿಸುವ ಮೃದುಪದಗಳಿಂದ ಈ ಕವನದಲ್ಲಿ ಅಪೂರ್ವವಾದ ನಾದಬಂಧುರತೆಯನ್ನು ಸಾಧಿಸಲಾಗಿದೆ.

ಬೀದರ ಶಹರದಲ್ಲಿ ವಾರ್ತಾ ಇಲಾಖೆಯವರು ಹಮ್ಮಿಕೊಂಡ ಕವಿಗೋಷ್ಠಿಗಾಗಿ ಬೇಂದ್ರೆಯವರು ರಚಿಸಿದ ಕವನವು ಮಿಶ್ರಭಾಷೆಯ ಬಳಕೆಯ ಉತ್ಕೃಷ್ಟ ಉದಾಹರಣೆಯಾಗಿದೆ. ‘ಕವಿಗಳ ಕಾಣಿಕಿ’ ಎನ್ನುವ ಆ ಕವನದ ಒಂದು ನುಡಿ ಹೀಗಿದೆ:
“ಸಲಾಮ್ ಮಾಡ್ತೇವಿ ಶಾಹೀರಿ ವಾಣೀಗೆ
ಜಗ ಜಾಹೀರ ವಜ್ರದ ಖಾಣೀಗೆ
ಕಾಳಾಬಝಾರ ಹಜಾರ ಇದ್ರೂ
ಬಾಳೋ ಉಸಿರಿಗೆ ಒಂದೇ ಹೆಸರು:
ಅದು ಕವಿ ಕಾಣಿಕೀ
ಅದಕ್ಕ ಬೇಕಿಲ್ಲ ಬ್ಯಾರೆ ಆನಿಕಿ”

ಬೇಂದ್ರೆಯವರು ತಮ್ಮ ಕವನಗಳಲ್ಲಿ ಕನ್ನಡ ಹಾಗು ಸಂಸ್ಕೃತದ ವಿವಿಧ ಛಂದಸ್ಸುಗಳನ್ನು ಬಳಸಿದ್ದಾರೆ. ಕವನದ ಭಾವವನ್ನು ಆತ್ಮವೆಂದು ಕರೆದರೆ, ಛಂದಸ್ಸನ್ನು ದೇಹವೆಂದು ಕರೆಯಬಹುದು. ಬೇಂದ್ರೆಯವರ ಪ್ರತಿ ಕವನದ ಛಂದಸ್ಸು ಆಯಾ ಕವನದ ಭಾವಕ್ಕೆ ಪೂರಕವಾದಂತಹದು. ಉದಾಹರಣೆಗೆಂದು ಅವರ ‘ಪಾತರಗಿತ್ತಿ ಪಕ್ಕಾ’ ಕವನವನ್ನು ನೋಡಬಹುದು. ಪಾತರಗಿತ್ತಿಯ ಅಂದರೆ ಚಿಟ್ಟೆಯ ಹಾರಾಟವು ಎಷ್ಟು ಲಘುಗತಿಯದಾಗಿರುವದೋ, ಈ ಕವನದ ಛಂದಸ್ಸು ಸಹ ಅಷ್ಟೇ ಕ್ಷಿಪ್ರಗತಿಯದಾಗಿದೆ.
‘ಪಾತರಗಿತ್ತಿ ಪಕ್ಕಾ
ನೋಡಿದೇನ ಅಕ್ಕಾ’ ಎಂದು ಹಾಡಿದಾಗ ಚಿಟ್ಟೆಯೇ ನಮ್ಮ ಕಣ್ಣೆದುರು ಚಲಿಸುತ್ತಿರುವಂತೆ ಭಾಸವಾಗುವದು. ಇನ್ನು ಕೆಲವು ಕವನಗಳನ್ನು ಬೇಂದ್ರೆಯವರು ದೀರ್ಘ ಛಂದಸ್ಸಿನಲ್ಲಿ ರಚಿಸಿದ್ದಾರೆ. ಉದಾಹರಣೆಗೆ ಅವರ ‘ಅಷ್ಟು ಪ್ರೀತಿ, ಇಷ್ಟು ಪ್ರೀತಿ’ ಎನ್ನುವ ಕವನವನ್ನು ನೋಡಿರಿ.
‘ಅಷ್ಟು ಪ್ರೀತಿ, ಇಷ್ಟು ಪ್ರೀತಿ ಎಣಿಸಿ ಕಷ್ಟಬಡೆದಿರು, ಒಲೆದು ಒಲಿಸಿ ಸುಖದಿರು;
ಎಷ್ಟೆ ಇರಲಿ ಅಷ್ಟೆ ಮಿಗಿಲು, ತಮ್ಮ ಕಿರಣ ತಮಗೆ ಹಗಲು, ಉಳಿದ ಬೆಳಕು ಕತ್ತಲು;
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು, ಉಳಿದ ಲೋಕ ಹಿತ್ತಲು;’
ದೀರ್ಘವಾದ ಕಲ್ಪನೆಗೆ ತಕ್ಕಂತೆ ದೀರ್ಘವಾದ ಛಂದಸ್ಸಿನಲ್ಲಿಯೇ ಈ ಕವನವನ್ನು ಹೆಣೆಯಲಾಗಿದೆ!

ಬೇಂದ್ರೆಯವರ ಅನುವಾದ ಕವನಗಳ ಛಂದಸ್ಸುಗಳ ಬಗೆಗೂ ಒಂದು ಮಾತನ್ನು ಇಲ್ಲಿ ಹೇಳುವದು ಅವಶ್ಯವಿದೆ. ಸಂಸ್ಕೃತ ಮಂದಾಕ್ರಾಂತ ವೃತ್ತದಲ್ಲಿದ್ದ ಕಾಳಿದಾಸನ ‘ಮೇಘದೂತ’ ಕಾವ್ಯದ ಅನುವಾದಕ್ಕಾಗಿ ಅವರು ಕನ್ನಡ ಮಂದಾಕ್ರಾಂತ ಛಂದಸ್ಸನ್ನು ಸೃಷ್ಟಿಸಿದರು.

ಫಿಲಿಪೀನ ದೇಶದ ಸ್ವಾತಂತ್ರ್ಯಯೋಧರಾದ ಜೋಸ ರಿಝಾಲರು ರಚಿಸಿದ My Last Farewell ಕವನವನ್ನು ಬೇಂದ್ರೆಯವರು ‘ನಮ್ಮ ಕೊನೆಯ ಶರಣು’ ಎನ್ನುವ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ಇದರ ಛಂದಸ್ಸು ಲಾವಣಿಯ ಗತ್ತಿನಲ್ಲಿದ್ದು, ಈ ಕವನವು ಭಾರತೀಯ ಸ್ವಾತಂತ್ರ್ಯಯೋಧರ ಬಗೆಗಿನ ಗೀತೆ ಎನ್ನುವ ಭಾಸವನ್ನು ಹುಟ್ಟಿಸುತ್ತದೆ.

ಬೇಂದ್ರೆಯವರ ಕಲ್ಪನೆಗೆ ಎಲ್ಲೆ ಎನ್ನುವದಿಲ್ಲ. ‘ ಎಲ್ಲೆಕಟ್ಟು ಇಲ್ಲದಾ ಬಾನಬಟ್ಟೆಯಲ್ಲಿದೊ’ ಎನ್ನುವಂತೆ ಅವರ ಕಲ್ಪನೆಯು ದಿಗಂತವ್ಯಾಪಿಯಾಗಿದೆ. ಆದರೆ ಬೇಂದ್ರೆಯವರ ಕಾವ್ಯದಲ್ಲಿ ಎಲ್ಲಿಯೂ ಕಲ್ಪನೆಯು ವಾಸ್ತವತೆಗೆ ವ್ಯತಿರಿಕ್ತವಾಗಿ ಬಳಕೆಯಾಗಿಲ್ಲ. ಕಾವ್ಯ ಎನ್ನುವ ಬಟ್ಟೆಯ ಹಾಸು ಮತ್ತು ಹೊಕ್ಕಿನಂತಿರುವ ಅವು ಸಮಪ್ರಮಾಣದಲ್ಲಿಯೇ ನೇಯ್ಗೆಯಾಗಿವೆ. ಉದಾಹರಣೆಗೆ ‘ಹಕ್ಕಿ ಹಾರುತಿದೆ ನೋಡಿದಿರಾ’ ಎನ್ನುವ ಬೇಂದ್ರೆಯವರ ಕವನವನ್ನು ಪರಿಶೀಲಿಸಬಹುದು. ಕಾಲಪಕ್ಷಿಯ ಅಮಿತ ವೇಗವನ್ನು ಸೂಚಿಸಲು ಬೇಂದ್ರೆಯವರು ‘ಗಾವುದ ಗಾವುದ ಗಾವುದ ದೂರಕೆ, ಎವೆ ತೆರೆದಿಕ್ಕುವ ಹೊತ್ತಿನ ಒಳಗೆ’ ಎಂದು ಹೇಳಿದ್ದಾರೆ. ಭಾರತೀಯ ಕಾಲಗಣನೆಯ ಮೇರೆಗೆ ‘ಎವೆ ತೆರೆದಿಕ್ಕುವ ಹೊತ್ತು’ ಒಂದು ನಿಮಿಷದ ಅವಧಿಯಾಗಿದೆ. ಈ ರೀತಿಯಲ್ಲಿ ಬೇಂದ್ರೆಯವರು ಕಲ್ಪನೆಯನ್ನು ಭೌತಿಕ ವಾಸ್ತವತೆಯೊಡನೆ ತಳಕು ಹಾಕುತ್ತಿದ್ದಾರೆ.

ಬೇಂದ್ರೆಯವರ ಕವನಗಳಲ್ಲಿ ತರ್ಕಪೂರ್ಣ ಕ್ರಮಬದ್ಧತೆಗೆ ಎಂದೂ ಲೋಪವಾಗುವದಿಲ್ಲ. ಇದನ್ನು ಮನಗಾಣಲು ಕೆಳಗಿನ ಸಾಲುಗಳನ್ನು ನೋಡಬಹುದು:
“ಎಲೆಗಳ ಮೇಲೇ, ಹೂಗಳ ಒಳಗೇ
ಅಮೃತsದ ಬಿಂದು
ಕಂಡವು-- ಅಮೃತsದ ಬಿಂದು ”

‘ಬೆಳಗು’ ಕವನದಲ್ಲಿ ಈ ವರ್ಣನೆ ಬರುತ್ತಿದೆ. ಎಲೆಗಳ ಮೇಲಿರುವ ಇಬ್ಬನಿಯ ಹನಿಗಳು ನೋಡುಗನ ಕಣ್ಣಿಗೆ ಮೊದಲು ಕಾಣುತ್ತವೆ. ಹೂಗಳ ಪಕಳೆಗಳಲ್ಲಿರುವ ಹನಿಗಳು ಹತ್ತಿರ ಹೋದ ಬಳಿಕ ಕಾಣುತ್ತವೆ. ಇದೇ ಕ್ರಮವನ್ನು ಕವನದಲ್ಲಿಯೂ ಅನುಸರಿಸಲಾಗಿದೆ.

ಇದೇ ಸಾಲಿನಲ್ಲಿರುವ ‘ಅಮೃತsದಾ ಬಿಂದು’ ಎನ್ನುವ ವಿಶೇಷವನ್ನು ಗಮನಿಸಿರಿ. ‘ಅಮೃತ’ವೆಂದರೆ ನಾಶವಿಲ್ಲದ್ದು. ಇಬ್ಬನಿಯು ಕ್ಷಣಮಾತ್ರದಲ್ಲಿ ಮಾಯವಾಗುವಂತಹದು. ಅಪೂರ್ವವಾದ ವೈರುಧ್ಯತೆಯೊಂದನ್ನು ಒಂದೇ ಪದಪುಂಜದಲ್ಲಿ ಅಡಕಗೊಳಿಸುವ ಬೇಂದ್ರೆಯವರ ಕೌಶಲ್ಯವನ್ನು ಇಲ್ಲಿ ಕಾಣಬಹುದು.

ಇಂತಹದೇ ವಿರುದ್ಧಶ್ಲೇಷೆಯ ಸಾಲು ‘ಸಂಸಾರ’ ಎನ್ನುವ ಕವನದಲ್ಲಿದೆ:
‘ಅಮೃತಂತ ಬಾಯಿ ಚಪ್ಪರಿಸತಾವ
ಕೇಳಿ ಕಣ್ಣು ಮಿಟಕತದ ರಾತ್ರಿ.’

ನಲ್ಲ, ನಲ್ಲೆಯರ ನಡುವೆ ಮುತ್ತುಗಳ ವಿನಿಮಯವಾಗುತ್ತಿರುವಾಗ, ‘ಅಹಾ! ಇದೇ ಅಮೃತ’ ಎಂದು ಅವರು ಖುಶಿ ಪಡುತ್ತಾರೆ.ಇದನ್ನು ಆಲಿಸಿದ ರಾತ್ರಿ ಚೇಷ್ಟೆಯಿಂದ ಕಣ್ಣು ಮಿಟುಕಿಸುತ್ತದೆ. ಇದು ತೋರಿಕೆಯ ಅರ್ಥ. ಕಣ್ಣು ಮಿಟುಕಿಸುವದು ಎಂದರೆ ಒಂದು ನಿಮಿಷದ ಕಾಲ. ಇದು ಅಮೃತದಂತೆ ಚಿರಕಾಲದ ಸುಖವಲ್ಲ, ಆದರೆ ಕ್ಷಣಿಕ ಎನ್ನುವದು ಒಳಗಿನ ಅರ್ಥ! ಒಂದೇ ಸಾಲಿನಲ್ಲಿ ವಿರುದ್ಧಾರ್ಥವನ್ನು ಸೂಚಿಸುವ ಬೇಂದ್ರೆ ಪ್ರತಿಭೆ ಇದು!

ಇಂತಹ ವೈರುಧ್ಯಭಾವವನ್ನು ಸೂಚಿಸುವ ಮತ್ತೊಂದು ಸಾಲು ‘ಬಾರೊ ಸಾಧನಕೇರಿಗೆ’ ಕವನದಲ್ಲಿದೆ;
‘ಮಲೆಯ ಮೊಗವೇ ಹೊರಳಿದೆ
ಕೋಕಿಲಕೆ ಸವಿ ಕೊರಳಿದೆ
ಬೇಲಿಗೂ ಹೂಬೆರಳಿದೆ
ನೆಲಕೆ ಹರೆಯವು ಮರಳಿದೆ’

ಬೇಂದ್ರೆಯವರು ಈ ಕವನವನ್ನು ಬರೆಯುವ ಕಾಲಾವಧಿಯಲ್ಲಿ ಧಾರವಾಡದಲ್ಲಿದ್ದ ಮನೆಗಳಿಗೆ ಈಗಿನಂತೆ ಕಲ್ಲಿನ ಅಥವಾ ಸಿಮೆಂಟಿನ ಪ್ರಾಕಾರ ಇರುತ್ತಿರಲಿಲ್ಲ. ಸಾದಾ ಹೂವುಗಳ ಬೇಲಿ ಇರುತ್ತಿತ್ತು. ಈ ಬೇಲಿಯ ಹೂವುಗಳು ಸಹಸಾ ಕೊಳವೆಯಾಕಾರದಲ್ಲಿ ಇರುತ್ತಿದ್ದವು. ಬೇಂದ್ರೆಯವರು ಈ ಹೂವುಗಳನ್ನು ಬೇಲಿಯ ಬೆರಳುಗಳಿಗೆ ಹೋಲಿಸುತ್ತಿದ್ದಾರೆ. ಬೇಲಿಯ ಕೆಲಸವೆಂದರೆ ಅಪರಿಚಿತರನ್ನು ಹೊರಗಿಡುವದು. ಆದರೆ ಈ ಬೇಲಿಯು ತನ್ನ ಹೂಬೆರಳುಗಳಿಂದ ಎಲ್ಲರಿಗೂ ಸ್ವಾಗತ ನೀಡುವ ಸ್ವಾಗತಕಾರಿಣಿಯಾಗಿದೆ! ಈ ರೀತಿಯಾಗಿ ಬೇಂದ್ರೆಯವರು ವಿರುದ್ಧಾರ್ಥವನ್ನು ಸೂಚಿಸುತ್ತಲೇ, ಆ ಕಾಲದ ವಾಸ್ತವತೆಯ ದಾಖಲಾತಿಯನ್ನು ಸಹ ಮಾಡುತ್ತಿದ್ದಾರೆ.

ಕವನದಲ್ಲಿರುವ ಕ್ರಮಬದ್ಧತೆಯನ್ನು ಪರೀಕ್ಷಿಸುವಾಗ ‘ರಾಧೆಯ ಪಾಡು’ ಎನ್ನುವ ಕವನವನ್ನು ನಿರ್ಲಕ್ಷಿಸುವದು ಸಾಧ್ಯವಿಲ್ಲ. ಭಕ್ತಿಯ ಮೊದಲ ಹಂತವೆಂದರೆ ಆರ್ತ ಪ್ರಾರ್ಥನೆ. ಈ ಕವನದಲ್ಲಿ ರಾಧೆಯು ಕೃಷ್ಣನನ್ನು ‘ಒರೆದನಂಗಲಾಚಿ, ಕರೆದೆ ಜೀವವ ಚಾಚಿ’ ಎಂದು ತನ್ನ ಸಖಿಯೆದುರಿಗೆ ಹೇಳುತ್ತಿದ್ದಾಳೆ. ಆದರೆ ಕೃಷ್ಣ ಅವಳಿಗೆ ಒಲಿಯುತ್ತಿಲ್ಲ. ಮುಂದಿನ ಹಂತದಲ್ಲಿ ಅವಳ ದನಿಯೇ ಬಿದ್ದು ಹೋಗುತ್ತದೆ. ಅವಳ ಅಹಮಿಕೆ ಕರಗತೊಡಗುತ್ತದೆ. ಆ ಹಂತವನ್ನು ‘ಬರದು ಕೂತಿತು ದನಿ, ಕಣ್ಣೆಲ್ಲಾ ಕಂಬನಿ ತಂದೇನೆ, ಕರಗಿ ತಂದೇನೆ’ ಎಂದು ಬಣ್ಣಿಸಲಾಗಿದೆ. ಇದೂ ಸಹ ನಿಷ್ಫಲ. ತನ್ನ ಶೃಂಗಾರದಿಂದ ತಾನು ಕೃಷ್ಣನನ್ನು ಗೆಲ್ಲಲಾರೆ ಎಂದು ತಿಳಿದಾಗ, ‘ಒಗೆದು ಹೂದಂಡಿಗೆ ಯಮುನೆಯ ದಂಡಿಗೆ’ ಎಂದು ತನ್ನ ಅಲಂಕಾರವನ್ನೆಲ್ಲ ಕಿತ್ತೆಸೆಯುತ್ತಾಳೆ. ಅಹಮ್‍ದ ಈ ಎಲ್ಲ ಹಂತಗಳನ್ನು ದಾಟಿ ಕೊನೆಯಲ್ಲಿ ಬರುವ ಹಂತವೆಂದರೆ, ‘ನಾನು’ ಎನ್ನುವದರ ಸಂಪೂರ್ಣ ನಿರಾಕರಣೆ. ‘ಹೊಳೆಯೊಳು ಹೊತ್ತಾರೆ ಧುಮುಕಿ ನಾ ಸತ್ತಾರೆ ಹೊಂದೇನೆ ಅವನ ಹೊಂದೇನೆ’ ಎನ್ನುವ ಮೂಲಕ ಈ ಭಾವನೆಯನ್ನು ವ್ಯಕ್ತಪಡಿಸಲಾಗಿದೆ. ಈ ರೀತಿಯಾಗಿ ಸಾಧನಾಮಾರ್ಗದ ವಿವಿಧ ಹಂತಗಳನ್ನು ಇಲ್ಲಿ ಕ್ರಮಬದ್ಧವಾಗಿ ವರ್ಣಿಸಲಾಗಿದೆ.

ಶ್ಲೇಷಾಲಂಕಾರವಂತೂ ಬೇಂದ್ರೆಯವರ ಕವನಗಳ ವಿಶೇಷ ಲಕ್ಷಣವಾಗಿದೆ. `ಸಾವಿರದ ಮನೆಗಳಲ್ಲಿ ಒಂದು ಮನೆಯ ಮಾಡಿದೆ’ ಎನ್ನುವಾಗ, ‘ಒಂದು ಸಾವಿರ’ ಎನ್ನುವ ಅರ್ಥವಲ್ಲದೆ, ‘ಸಾವು ಇರದ’ ಎನ್ನುವ ಅರ್ಥವೂ ಧ್ವನಿಸುತ್ತದೆ. ‘ಮುತ್ತು, ರತುನ, ಹೊನ್ನು ಎಲ್ಲ ಕಲ್ಲುಮಣ್ಣ ವೈಭವಾ’ ಎನ್ನುವಾಗ, ಈ ಅಮೂಲ್ಯ ವಸ್ತುಗಳಿಗೆ ಬೆಲೆ ಇಲ್ಲ ಎನ್ನುವ ಅರ್ಥದೊಡನೆ, ಇವು ಖನಿಜ ಪದಾರ್ಥಗಳೆನ್ನುವ ಅರ್ಥವೂ ಇದೆ. ಬೇಂದ್ರೆಯವರ ಪ್ರಸಿದ್ಧ ಕವನ ‘ನಾನು ಬಡವಿ..’ಯಲ್ಲಿಯ ‘ತೋಳ ಬಳಸಿ ತೋಳಬಂದಿ, ಕೆನ್ನೆ ಮೇಲೆ ಮುತ್ತು’ ಎನ್ನುವ ಸಾಲಿನಲ್ಲಿ ತೋಳಬಂದಿ ಹಾಗು ಮುತ್ತು ಇವು ಒಡವೆಗಳಾಗಿರುವಂತೆಯೇ, ಪ್ರಣಯದ ಸಂಕೇತಗಳೂ ಆಗಿವೆ. ಈ ಕವನದ ಕೊನೆಯಲ್ಲಿ ಬರುವ ವ್ಯಂಗ್ಯಧ್ವನಿಯಂತೂ ಅಪೂರ್ವವಾದದ್ದು. ‘ಹೊಟ್ಟೆಗಿತ್ತ ಜೀವಫಲವ’ ಎಂದು ನಲ್ಲೆಯು ಹೇಳುವಾಗ, ತಾನು ಗರ್ಭಿಣಿಯಾಗಿರುವದನ್ನು ಸೂಚಿಸುತ್ತಲೇ, ತನ್ನ ನಲ್ಲ ತನಗೆ ಕೊಟ್ಟದ್ದು ಇದಷ್ಟೇ ಎನ್ನುವ ಛೇಡನೆಯೂ ಇದೆ!

‘ಹೃದಯಸಮುದ್ರ’ ಕವನದ ಈ ಸಾಲನ್ನು ಗಮನಿಸಿರಿ:
‘ಅದರೊಳಗೆ ನಾವು, ನಮ್ಮೊಳಗೆ ತಾವು
ಅದು ಇಲ್ಲವಣ್ಣ ದೂರಾ’

ಹೃದಯಸಮುದ್ರದಲ್ಲಿ ನಾವು ಇದ್ದೇವೆ ಹಾಗು ನಮ್ಮೊಳಗೆ ತಾವು ಅಂದರೆ ದೇವರು ಇದ್ದೀರಿ ಎನ್ನುವದು ಮೇಲಿನ ಅರ್ಥ. ‘ನಾವು’ ಎಂದರೆ ದೋಣಿ, ‘ತಾವು’ ಅಂದರೆ ಬಂದರು. ನಮ್ಮ ಹೃದಯಸಮುದ್ರದಲ್ಲಿಯೇ ದೋಣಿ ಇದೆ ಹಾಗು ಅಲ್ಲಿಯೇ ನಾವು ತಲುಪಬೇಕಾದ ಬಂದರು ಇದೆ ಎನ್ನುವದು ಎರಡನೆಯ ಅರ್ಥ.

ಒಂದು ಕವನದ ಒಂದು ಸಂಪೂರ್ಣ ನುಡಿಯೇ ಶ್ಲೇಷೆಯಾಗುವದು ಬೇಂದ್ರೆಯವರ ಕಾವ್ಯದಲ್ಲಿ ಮಾತ್ರ ಸಾಧ್ಯ!
“ಏನೈತಿ ಸುಗ್ಗಿಯಾ ಹುರುಡ—
ಯಾಕ ಉಳಿದೆಲ್ಲ ತಿಂಗಳಾ ಬರಡ
ಬೇಕ್ಯಾಕ ಮಾವಿನಾ ಕಾಡು
ಕೋಗಿಲದ ಹಾಡು
ಅಗಲಿಕೀ ಕೇಕು......
.............ನಿನ ತೆಕ್ಕಿಯೊಳಗ ಸಿಕ್ಕೈತಿ ಸುಗ್ಗಿ
ಸ್ವರ್ಗಕ್ಕ ಸಾಕು ತೋಳೆರಡs……”

ನಲ್ಲೆಯ ಸರಸ ಸಮಾಗಮಕ್ಕೆ ವಸಂತ ಋತು, ಮಾವು ಹಾಗು ಕೋಗಿಲೆಯ ನೆರವು ಬೇಕಾಗಿಲ್ಲ ಎಂದು ನಲ್ಲನೊಬ್ಬನು ಹೇಳುತ್ತಿರುವ ಮಾತಿದು. ವಸಂತ ಋತು, ಮಾವು ಹಾಗು ಕೋಗಿಲೆ ಈ ಮೂರು ವಿಶೇಷಗಳು ಮಾರ್ಗ ಕಾವ್ಯದ ಅವಶ್ಯಕ ಅಂಶಗಳು ಎನ್ನುವದನ್ನು ಗಮನಿಸಬೇಕು. ದೇಸಿ ಪದ್ಧತಿಯಲ್ಲಿ ರಚಿಸಲಾದ ಈ ಕಾವ್ಯವು ‘ ಹೊಸ ಕಾಲದಲ್ಲಿ ಮಾರ್ಗ ಕಾವ್ಯ ಬೇಕಾಗಿಲ್ಲ’ ಎನ್ನುವ ಶ್ಲೇಷೆಯನ್ನು ಹೊಂದಿದೆ!

ಬೇಂದ್ರೆಯವರ ಕವನಗಳಲ್ಲಿ ಉಪಮೆಗಳು ಹಾಗು ರೂಪಕಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ. ‘ಗಮ ಗಮಾ ಗಮಾಡಸ್ತಾವ ಮಲ್ಲಿಗಿ’ ಕವನದಲ್ಲಿ ನಲ್ಲೆಯೊಬ್ಬಳು ತನ್ನ ನಲ್ಲನಿಗೆ ಹೇಳುತ್ತಿರುವ ಸಾಲುಗಳು ಹೀಗಿವೆ:
‘ಚಿಕ್ಕಿ ತೋರಸ್ತಾವ ಚಾಚಿ ಬೆರಳ
ಚಂದ್ರಾಮಾ ಕನ್ನಡಿ ಹರಳ’

ಚಿಕ್ಕೆಗಳ ಮಿನುಗುವಿಕೆ ಈ ಹುಡುಗಿಗೆ ಬೆರಳುಗಳಂತೆ ಕಾಣಿಸುತ್ತಿದೆ. ಚಿಕ್ಕೆಗಳು ಚಂದ್ರನನ್ನು ತೋರಿಸುತ್ತವೆ ಎಂದು ಹೇಳುವ ಮೂಲಕ ಈ ಹುಡುಗಿಯು ತನ್ನ ನಲ್ಲನಿಗೆ ಪ್ರಣಯದ ಕರೆಯನ್ನು ನೀಡುತ್ತಿದ್ದಾಳೆ. ಚಂದ್ರನು ಕನ್ನಡಿಯ ಹರಳು ಎನ್ನುವದು ಸುಂದರವಾದ ಉಪಮೆ. ಈ ಉಪಮೆಯು ಹಳ್ಳಿಗರಿಗೆ ವಿಶಿಷ್ಟವಾದ ಉಪಮೆ ಎನ್ನುವದನ್ನು ಗಮನಿಸಬೇಕು.

‘ನೀ ಹೀಂಗ ನೋಡಬ್ಯಾಡ ನನ್ನ’ ಕವನದ ‘ಹುಣ್ಣಿವಿ ಚಂದಿರನ ಹೆಣಾ ಬಂತೊ ಮುಗಿಲಾಗ ತೇಲುತ ಹಗಲ’ ಎನ್ನುವದು ಒಂದು ಸಂಕೀರ್ಣ ಉಪಮೆಯಾಗಿದೆ. ನಾಯಕನ ಹೆಂಡತಿಯ ರೂಪವು ಹುಣ್ಣಿವೆಯ ಚಂದ್ರನಂತೆ ಶಾಂತ ಹಾಗು ಸುಂದರವಾಗಿರುವದನ್ನು ಹೇಳುತ್ತಲೇ, ಇದೀಗ ಆ ಮುಖದ ಮೇಲೆ ಪ್ರೇತಕಳೆ ಆವರಿಸಿರುವದನ್ನೂ ಸಹ ಇಲ್ಲಿ ಹೇಳಲಾಗಿದೆ.

ಉಪಮೆಗಳಂತೆ ಬೇಂದ್ರೆಯವರ ರೂಪಕಗಳೂ ಸಹ ವಿಶಿಷ್ಟವಾಗಿವೆ. ‘ಹಳ್ಳದ ದಂಡ್ಯಾಗ ಮೊದಲಿಗೆ ಕಂಡಾಗ’ ಎನ್ನುವ ರೂಪಕವನ್ನು ನೋಡಿರಿ. ಹರಿಯುತ್ತಿರುವ ಹಳ್ಳವು ಜೀವನವನ್ನು ಸೂಚಿಸುವ ರೂಪಕವಾದರೆ, ‘ಮೊದಲಿಗೆ’ ಎನ್ನುವದು ತಾರುಣ್ಯದ ಕಾಲದ ಸೂಚನೆಯಾಗಿದೆ.

ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧರಾದ ಮೂವರು ಕವಿಗಳ (ಕಾಲಿದಾಸ, ಭಾರವಿ ಹಾಗು ದಂಡಿನ) ವೈಶಿಷ್ಟ್ಯಗಳನ್ನು ವರ್ಣಿಸುತ್ತ, ಮಾಘ ಎನ್ನುವ ಕವಿಯಲ್ಲಿ ಈ ಮೂರೂ ಲಕ್ಷಣಗಳು ಸಮ್ಮಿಲಿತವಾಗಿವೆ ಎಂದು ಹೇಳುವ ಶ್ಲೋಕವೊಂದು ಹೀಗಿದೆ:
ಉಪಮಾ ಕಾಲಿದಾಸಸ್ಯ
ಭಾರವೇರರ್ಥಗೌರವಮ್
ದಂಡಿನ: ಪದಲಾಲಿತ್ಯಮ್
ಮಾಘೇ ಸಂತಿ ತ್ರಯೋ ಗುಣಾ:
ಕಾಲಿದಾಸನ ಉಪಮಾಸಾಮರ್ಥ್ಯ, ಭಾರವಿಯ ಅರ್ಥಗೌರವ, ದಂಡಿಯ ಪದಲಾಲಿತ್ಯ ಇವು ಬೇಂದ್ರೆಯವರ ಕಾವ್ಯದಲ್ಲಿಯೂ ಸಹ ವ್ಯಕ್ತವಾಗಿವೆ. ಇವರೆಲ್ಲರ ಸರಿಜೋಡಿಯಾದ ಪ್ರತಿಭೆಯೂ ಬೇಂದ್ರೆಕಾವ್ಯದಲ್ಲಿದೆ. ಬೇಂದ್ರೆ ಕಾವ್ಯದಲ್ಲಿಯ ಭಾಷೆ, ಛಂದಸ್ಸು ಹಾಗು ಅಲಂಕಾರಗಳು ಅವರ ಅನನ್ಯ ಪ್ರತಿಭೆಗೆ ಸಾಕ್ಷಿಯಾಗಿವೆ.

Tuesday, January 3, 2012

ಬೇಂದ್ರೆಯವರ ‘ಅರಳು ಮರಳು’

ಮರುಳಲ್ಲ ನಾನು, ಮರುಳಾದೆನಯ್ಯ
ನನ್ನೆದೆಯ ಮರುಳಸಿದ್ಧ
ನಿಮ್ಮರುಳಿನಿಂದ ಮರ ಮರಳಿ ಅರಳಿ
ಸ್ಫುಟವಾಗಿ ಭಾವಶುದ್ಧ—
ನಿಮ್ಮಡಿಗೊ ಮುಡಿಗೊ ಮುಡಿಪಾಯ್ತು ಮಾತು
ಸಂತತದ ಏಕನಾದ
ಈ ಕೊರಳು-ಬೆರಳು, ಆ ಕರುಳು-ಅರಳು
ಮರುಳೂನು ತಂಪ್ರಸಾದ

ಬೇಂದ್ರೆಯವರ ಮೊದಲ ಕಾವ್ಯರಚನೆಯಾದ ‘ಕೃಷ್ಣಾಕುಮಾರಿ’ಯು ೧೯೨೨ರಲ್ಲಿ ಪ್ರಕಟವಾಯಿತು. ಅವರ ‘ಗಂಗಾವತರಣ’ ಕವನಸಂಕಲನವು ೧೯೫೧ರಲ್ಲಿ ಪ್ರಕಟವಾಯಿತು. ಈ ನಡುವಿನ ೨೯ ವರ್ಷಗಳಲ್ಲಿ ಗರಿ,ಮೂರ್ತಿ, ಕಾಮಕಸ್ತೂರಿ, ಸಖೀಗೀತ, ನಾದಲೀಲೆ, ಉಯ್ಯಾಲೆ, ಮೇಘದೂತ (ಅನುವಾದ), ಹಾಗು ಹಾಡು-ಪಾಡು ಎನ್ನುವ ಕವನಸಂಕಲನಗಳು ಮತ್ತು ‘ನಿರಾಭರಣ ಸುಂದರಿ’ (ಕಥಾಸಂಕಲನ) ಹಾಗು ‘ಸಾಹಿತ್ಯ ಮತ್ತು ಸಂಶೋಧನೆ’ ಎನ್ನುವ ಕೃತಿಗಳು ಪ್ರಕಟವಾದವು. ಆನಂತರದ ಐದು ವರ್ಷಗಳಲ್ಲಿ ಸೂರ್ಯಪಾನ, ಹೃದಯಸಮುದ್ರ, ಮುಕ್ತಕಂಠ, ಚೈತ್ಯಾಲಯ ಹಾಗು ಜೀವಲಹರಿ ಎನ್ನುವ ಐದು ಕವನಸಂಕಲನಗಳು ಹೊರಬಂದವು. ೧೯೫೬ರಲ್ಲಿ ಬೇಂದ್ರೆಯವರು ೬೦ ವರ್ಷಗಳನ್ನು ಪೂರೈಸಿದ ನೆನಪಿಗಾಗಿ, ಕೊನೆಯ ಐದು ಸಂಕಲನಗಳನ್ನು ಸಂಗ್ರಹಿಸಿ ‘ಅರಳು ಮರಳು’ ಸಂಕಲನವನ್ನು ಪ್ರಕಟಿಸಲಾಯಿತು. ಈ ಸಂಗ್ರಹಕ್ಕಾಗಿ ಬೇಂದ್ರೆಯವರು ಬರೆದ ಆತ್ಮನಿವೇದನೆಯ ಕೊನೆಯಲ್ಲಿ ಮೇಲಿನ ಕವನವಿದೆ.

‘ಅರವತ್ತು ವರ್ಷಕ್ಕೆ ಅರಳು ಮರಳು’ ಎನ್ನುವ ಮಾತು ಕನ್ನಡದಲ್ಲಿದೆ. ಬೇಂದ್ರೆಯವರ ಪ್ರತಿಭೆಗೆ ಅರಳುಮರಳು ಎಂದೂ ಮುಸುಕಲಿಲ್ಲ. ಈ ಪ್ರತಿಭೆ ಇದೀಗ ಹೆಚ್ಚು ಅಂತರ್ಮುಖವಾಯಿತಷ್ಟೆ. ಇದೇ ಮಾತನ್ನು ಬೇಂದ್ರೆಯವರು ‘ಮರುಳಲ್ಲ ನಾನು, ಮರುಳಾದೆನಯ್ಯ’ ಎನ್ನುವದರ ಮೂಲಕ ಹೇಳುತ್ತಾರೆ. ‘ನಾನು ಹುಚ್ಚನಲ್ಲ, ಆದರೆ ನನಗೆ ನೀನು ಹುಚ್ಚು ಹಿಡಿಸಿರುವೆ’ ಎನ್ನುವ ಅವರ ಮಾತನ್ನು ಮೀರಾದೇವಿಯ ‘ಹರಿ ಕೀ ಮೈ ತೊ ಪ್ರೇಮದಿವಾನಿ’ ಎನ್ನುವ ಗೀತೆಗೆ ಹೋಲಿಸಬಹುದು. ಕನ್ನಡದ ಅಕ್ಕಮಹಾದೇವಿಯೂ ಸಹ ಚೆನ್ನಮಲ್ಲಿಕಾರ್ಜುನಗೆ ಮರುಳಾದವಳೇ!

ಬೇಂದ್ರೆಯವರು ತಮ್ಮ ಹೃದಯದಲ್ಲಿರುವ ಗುರುವನ್ನು ‘ಮರುಳಸಿದ್ಧ’ ಎಂದು ಕರೆಯುತ್ತಾರೆ. ಸಾಧನೆಯ ಕೊನೆಯ ಹಂತವನ್ನು ಮುಟ್ಟಿದ ಯೋಗಿಗಳು ಲೋಕದ ಕಣ್ಣಿಗೆ ‘ಮರುಳ’ರಂತೆಯೇ ಕಾಣುತ್ತಿರುತ್ತಾರೆ. (ಉದಾಹರಣೆಗೆ ರಾಮಕೃಷ್ಣ ಪರಮಹಂಸರು.) ಕೆಲವು ಯೋಗಿಗಳು ಉದ್ದೇಶಪೂರ್ವಕವಾಗಿ ಮರುಳರಂತೆ ನಟಿಸುತ್ತಿರುತ್ತಾರೆ. ಉದಾಹರಣೆಗೆ ಬ್ರಹ್ಮಚೈತನ್ಯ ಮಹಾರಾಜರ ಗುರುಗಳಾದ ತುಕಾಮಾಯಿಯವರು. ಏನೆ ಇರಲಿ, ಇವರೆಲ್ಲ ದೇವರಿಗೆ ಮರುಳಾದಂತಹ ಸಿದ್ಧಪುರುಷರು ಎನ್ನುವದಂತೂ ನಿಜ. ಈ ಗುರುಗಳು ತಮ್ಮ ಶಿಷ್ಯರಿಗೂ ಅಲೌಕಿಕದ ಮರುಳು ಹಿಡಿಸಿದಂಥವರು.

ಮರುಳಸಿದ್ಧನು ಅರಳಿದವನು ಅಂದರೆ ಪೂರ್ಣತೆಯನ್ನು ಮುಟ್ಟಿದವನು. ಅರುವು ಅಂದರೆ ಜ್ಞಾನ. (‘ಓ ಗುರುವೆ, ಅರುವೆ, ಶರಣಾಗಿ ಬರುವೆ..’ ಎನ್ನುವ ಬೇಂದ್ರೆಯವರ ಕವನವನ್ನು ಗಮನಿಸಿರಿ.) ಮರುಳಸಿದ್ಧನ ಅರಳುವಿಕೆ ಆತನ ಸಾಧಕರನ್ನೂ ಸಹ ಅರಳಿಸುತ್ತದೆ ಅಂದರೆ ಉತ್ಕ್ರಾಂತಿಯ ಪರಮ ನೆಲೆಗೆ ತಲುಪಿಸುತ್ತದೆ. (--ಇದು ಅರವಿಂದರು ಹೇಳುವ Superhuman Evolution ಆಗಿದೆ.—)ಆದರೆ ಈ ಹಾದಿ ಬಲು ದುರ್ಗಮವಾದ ಪಥವಾಗಿದೆ. ‘ಮರ ಮರಳಿ’ ಎನ್ನುವ ಪದಗಳ ಮೂಲಕ ಬೇಂದ್ರೆಯವರು ಸಾಧಕನು ತನ್ನ ಹಾದಿಯಲ್ಲಿ ಮತ್ತೆ ಮತ್ತೆ ಹಿಂದೆ ಮರಳುತ್ತಿರುತ್ತಾನೆ ಹಾಗು ಮತ್ತೆ ಮುನ್ನಡೆಯುತ್ತಾನೆ ಎನ್ನುವದನ್ನು ಸೂಚಿಸುತ್ತಾರೆ.

‘ಮರಳು’ವದು ಎಂದರೆ ಕುದಿಯುವದು ಎನ್ನುವ ಅರ್ಥವೂ ಇದೆ. ಪರಿಶುದ್ಧ ಮೂಲವಸ್ತುವನ್ನು ಬೇರ್ಪಡಿಸುವ ಉದ್ದೇಶದಿಂದ ರಸಾಯನತಜ್ಞರು ಮಿಶ್ರವಸ್ತುವನ್ನು ಕುದಿಸುತ್ತಾರೆ ಎನ್ನುವದು ತಿಳಿದಿರುವ ಸಂಗತಿ. ಇದರಂತೆಯೇ ಮನೋವಿಕಾರಗಳಿಂದ ಕೂಡಿದ ಚೈತನ್ಯವನ್ನು ಮತ್ತೆ ಮತ್ತೆ ಕುದಿಸಿ, ಕಶ್ಮಲಗಳನ್ನು ಬೇರ್ಪಡಿಸಿ, ಮರುಳಸಿದ್ಧನು ಸಾಧಕನನ್ನು ಪರಿಶುದ್ಧಾತ್ಮನನ್ನಾಗಿ ಮಾರ್ಪಡಿಸುತ್ತಾನೆ. (‘ಬೆಂದರೆ ಅದು ಬೇಂದ್ರೆ’ ಎಂದು ಬೇಂದ್ರೆಯವರೇ ಹೇಳಿದ್ದಾರೆ.) ಇದೀಗ ಸಾಧಕನ ಭಾವವು ಶುದ್ಧವಾಗುತ್ತದೆ ಹಾಗು ಸ್ಫುಟವಾಗುತ್ತದೆ ಅಂದರೆ ಸ್ಫಟಿಕದಂತೆ ನಿಚ್ಚಳವಾಗುತ್ತದೆ.

ಶ್ರುತಿಶುದ್ಧವಾದ ‘ಕಿನ್ನರಿ’ ವಾದ್ಯದಿಂದ ಸತತವಾಗಿ ಒಂದೇ ಸುನಾದ ಹೊರಹೊಮ್ಮುತ್ತದೆ. ಅದರಂತೆ ಕವಿ ಬೇಂದ್ರೆಯವರ ಅಂತಃಕರಣದಿಂದ ಈಗ ಗುರುಗೀತೆ ಮಾತ್ರ ಹೊರಹೊಮ್ಮುತ್ತಿದೆ. ಅವರ ‘ಮಾತು’ ಅಂದರೆ ಈ ಗೀತೆ ಈಗ ಗುರು ಮರುಳಸಿದ್ಧರ ಕೀರ್ತನೆಗೆ ಮಾತ್ರ ಮೀಸಲಾಗಿದೆ. ಈ ಮುಡಿಪಾದ ಭಕ್ತಿಪುಷ್ಪವನ್ನು ಸಾಧಕನು ಮೊದಲು ಅರ್ಪಿಸುವದು ಗುರುವಿನ ಅಡಿಗಳಿಗೆ, ತನ್ನಂತರ ಆತನ ಮುಡಿಗೆ. ಸಾಧಕನ ಈ ನಿವೇದನೆಗೆ ಅಂದರೆ ನೈವೇದ್ಯಕ್ಕೆ ಗುರುವು ಪ್ರಸನ್ನನಾಗಿ ಪ್ರಸಾದವನ್ನು ಅನುಗ್ರಹಿಸುತ್ತಾನೆ. ಬೇಂದ್ರೆಯವರಿಗೆ ದೊರೆತ ಪ್ರಸಾದ ಏನು? ...... ‘ಕೊರಳು ಮತ್ತು ಬೆರಳು’, ಅಂದರೆ ಹಾಡು ಮತ್ತು ಕಾವ್ಯ. ತನ್ನಂತರ ಬೇಂದ್ರೆಯವರು ಹಾಡುವದು ‘ಮರುಳಸಿದ್ಧನ’ ಗೀತೆಯನ್ನು ಹಾಗು ರಚಿಸುವದು ‘ಅವನ’ ಕಾವ್ಯವನ್ನು ಮಾತ್ರ.

`ಕರುಳು’ ಅಂದರೆ ಪ್ರೀತಿ. ಭಗವಂತನನ್ನು ಮಾತ್ರವಲ್ಲದೆ, ಆತನ ಸಕಲ ಸೃಷ್ಟಿಯನ್ನೂ ಸಹ ಬೇಂದ್ರೆಯವರು ಪ್ರೀತಿಸುತ್ತಾರೆ. ಇದು ಅವರ ‘ಕರುಳು’. ‘ಅರಳು’ ಎಂದರೆ ಜ್ಞಾನ. ಪ್ರೀತಿ ಹಾಗು ಜ್ಞಾನ ಇವೆರಡೂ ದೊರೆತಾಗಲೆ, ಸಾಧಕನಿಗೆ ಸಿದ್ಧಿಯಾಗುವದು. ಇವೆರಡೂ ದೊರೆಯುವದು ಭಗವಂತನ ಪ್ರಸಾದದಿಂದಲೇ. ಇಷ್ಟೇ ಏಕೆ? ದೇವರಿಗೆ ಮರುಳಾಗಿರುವ ಸಾಧಕನ ‘ಮರುಳೂ’ ಸಹ ಭಗವಂತನ ಪ್ರಸಾದವೇ ಅಲ್ಲವೆ! ‘ಮರುಳೂನು ತಂ ಪ್ರಸಾದ’ ಎಂದು ಬೇಂದ್ರೆಯವರು ಏಕೋಭಾವದಿಂದ ಆ ಹುಚ್ಚನ್ನು ಒಪ್ಪಿಕೊಂಡಿದ್ದಾರೆ, ಅಪ್ಪಿಕೊಂಡಿದ್ದಾರೆ.

ಕರುಳು ಎಂದರೆ ದೇಹವೆಂದೂ ಅರ್ಥವಾಗುತ್ತದೆ. ಅರಳು ಎಂದರೆ ತಾನು ಈ ದೇಹ ಅಲ್ಲ ಎನ್ನುವ ಜ್ಞಾನ. ದೇಹವನ್ನು ಕೊಟ್ಟವನೇ, ‘ಈ ದೇಹ ತಾನಲ್ಲ’ ಎನ್ನುವ ಜ್ಞಾನವನ್ನೂ ಕೊಡುತ್ತಾನೆ. ಆ ಜ್ಞಾನ ಲಭಿಸುವವರೆಗೆ ಜೀವಿಯು ಮರುಳಿನಲ್ಲಿ ಅಂದರೆ ಮಾಯೆಯಲ್ಲಿರುತ್ತಾನೆ. ಆದುದರಿಂದ ದೇಹ, ದೇಹದ ಅಜ್ಞಾನ ಹಾಗು ಸುಜ್ಞಾನ ಇವೆಲ್ಲವೂ ಆ ಜಗದ್ಗುರು ನೀಡುವ ಪ್ರಸಾದವೇ ಆಗಿವೆ!

ಮರುಳಸಿದ್ಧ ಹಾಗು ಕಿನ್ನರಿಗೆ ಒಂದು ಹಿನ್ನೆಲೆಯಿದೆ. ಬೇಂದ್ರೆಯವರ ‘ಮಾಯಾಕಿನ್ನರಿ’ ಎನ್ನುವ ಕವನದಲ್ಲಿ ಆ ಹಿನ್ನೆಲೆ ಲಭ್ಯವಾಗುತ್ತದೆ. ಮರುಳಸಿದ್ಧ ಎನ್ನುವ ಮಹಾತ್ಮರೊಬ್ಬರು ಉತ್ತರಭಾರತದಲ್ಲಿ ತಮ್ಮ ದಿಗ್ವಿಜಯವನ್ನು ಪೂರೈಸಿ, ಕರ್ನಾಟಕದಲ್ಲಿರುವ ಕೊಲ್ಲಾಪುರಕ್ಕೆ (--ಇದೀಗ ಮಹಾರಾಷ್ಟ್ರದಲ್ಲಿದೆ--) ಬರುತ್ತಾರೆ. ಅಲ್ಲಿರುವ ‘ಮಾಯೆ’ ಎನ್ನುವ ಯೋಗಿನಿಯು ಸಾವಿರ ಯೋಗಿಗಳನ್ನು ಸೋಲಿಸಿ, ತನ್ನ ಮಂತ್ರಬಲದಿಂದ ತನ್ನ ಊಳಿಗಕ್ಕೆ ತೊಡಗಿಸಿರುತ್ತಾಳೆ. ಮರುಳಸಿದ್ಧರೊಡನೆ ಅನೇಕ ದಿನಗಳವರೆಗೆ ವಾಗ್ವಾದ ನಡೆದು ಮಾಯೆ ಸೋಲುತ್ತಾಳೆ. ಮಂತ್ರಬಲದಿಂದ ಮರುಳಸಿದ್ಧರನ್ನು ಸೋಲಿಸಲು ಮಾಯೆ ಹವಣಿಸುತ್ತಾಳೆ. ಆದರೆ ಮರುಳಸಿದ್ಧರು ಮಾಯೆಯನ್ನೇ ಒಂದು ಕಿನ್ನರಿಯಾಗಿ ಪರಿವರ್ತಿಸಿ, ತಮ್ಮೊಡನೆ ಒಯ್ಯುತ್ತಾರೆ. ಈ ಕಿನ್ನರಿಯು ಮೊದಮೊದಲು ಹಟ ಮಾಡಿದರೂ, ಕೊನೆಗೆ ಮರುಳಸಿದ್ಧರಿಗೆ ಮರುಳಾಗಿ, ಅವರಿಗೆ ಒಲಿದು ದಿವ್ಯ ಸಂಗೀತವನ್ನು ಹೊರಡಿಸುತ್ತದೆ.

ಈ ಗೀತೆಯಲ್ಲಿ ಬೇಂದ್ರೆಯವರು ಗುರುರೂಪಿ ಭಗವಂತನನ್ನು ಮರುಳಸಿದ್ಧನಿಗೆ ಹಾಗು ಮಾಯೆಯಲ್ಲಿ ಸಿಲುಕಿದ ತಮ್ಮನ್ನು ಕಿನ್ನರಿಗೆ ಹೋಲಿಸುತ್ತಿದ್ದಾರೆ. ಯಾವ ಸಾಧಕರೂ ಸಾಧನಾಪಥದೆಡೆಗೆ ಸರಳವಾಗಿ ಆಕರ್ಷಿತರಾಗುವದಿಲ್ಲ. ಅನೇಕ ಜನ್ಮಗಳ ಆಕರ್ಷಣೆ ಹಾಗು ವಿಕರ್ಷಣೆಗಳ ಬಳಿಕ ಸಾಧಕನಿಗೆ ‘ಮರುಳಸಿದ್ಧ’ ಎಂದರೆ ಆತನ ಗುರು ದೊರೆಯುತ್ತಾನೆ. ಗುರುವಿನ ಜೊತೆಗೆ ಶಿಷ್ಯನ ವಾಗ್ವಾದ ನಡೆದೇ ಇರುತ್ತದೆ. ಒಮ್ಮೆ ಅರಿವು ಮೂಡಿದ ಬಳಿಕ ಶಿಷ್ಯನು ‘ಗುರುವಿನ ಗುಲಾಮ’ನಾಗುತ್ತಾನೆ. (ವಿವೇಕಾನಂದ ಹಾಗು ರಾಮಕೃಷ್ಣ ಪರಮಹಂಸರು ಈ ಮಾತಿಗೆ ಉಜ್ವಲ ನಿದರ್ಶನರಾಗಿದ್ದಾರೆ.)

ಬೇಂದ್ರೆಯವರು ಮೊದಲಿನಿಂದಲೂ ಭಕ್ತಕವಿಗಳು. ಈ ಭಕ್ತಿ ಅವರ ಕವನಗಳಲ್ಲಿ ವಿವಿಧ ಬಗೆಗಳಲ್ಲಿ ವ್ಯಕ್ತವಾಗಿದೆ. ತಾಯಿ, ತಾಯಿನಾಡು, ತಾಯಿನುಡಿ, ಪ್ರಕೃತಿ ಇವೆಲ್ಲವುಗಳ ಮೇಲಿನ ಅವರ ಪ್ರೀತಿ ಭಕ್ತಿಗೆ ಹತ್ತರವಾದದ್ದು. ಅವರ ಅಜ್ಜಿ ಹಾಗು ತಾಯಿ ಆ ಕಾಲದಲ್ಲಿ ಮಹಾರಾಷ್ಟ್ರದಲ್ಲಿದ್ದ ಸಂತಶ್ರೇಷ್ಠ ಬ್ರಹ್ಮಚೈತನ್ಯ ಮಹಾರಾಜರಿಂದ ಉಪದೇಶ ಪಡೆದವರು.ಸ್ವತಃ ಬೇಂದ್ರೆಯವರಿಗೆ ಚಿಕ್ಕಂದಿನಲ್ಲಿ ಅವರ ದರ್ಶನಲಾಭವಾಗಿತ್ತು. ಗುಳವಣಿ ಮಹಾರಾಜ ಹಾಗು ಟೇಂಬೆ ಮಹಾರಾಜರಂತಹ ಸಂತರನ್ನೂ ಬೇಂದ್ರೆಯವರು ಕಂಡಿದ್ದರು. ಅರವಿಂದರು ಬೇಂದ್ರೆಯವರ ಮಾನಸ ಗುರುಗಳು. ಶರಣ ಸಾಹಿತ್ಯದಿಂದ ಪ್ರಭಾವಿತರಾದ ಬೇಂದ್ರೆಯವರಿಗೆ ಅಲ್ಲಮಪ್ರಭುಗಳಲ್ಲಿ ವಿಶೇಷ ಒಲವು. ಇವೆಲ್ಲ ಬೇಂದ್ರೆಯವರನ್ನು ಸಾಧನಾಪಥಕ್ಕೆ ಎಳೆದ ಅಂಶಗಳು.

ಲೌಕಿಕ ದೃಷ್ಟಿಯಲ್ಲಿ ಈ ಸಾಧನಾಪಥವು ಹುಚ್ಚಿನ ಹಾದಿ. ಈ ಸಾಧನೆಯಲ್ಲಿ ಸಿದ್ಧಿ ಪಡೆದವರನ್ನು ಗುರುತಿಸಲಾಗದ ಲೋಕವು, ಅವರನ್ನು ‘ಮರುಳಸಿದ್ಧ’ ಎಂದು ಕರೆದರೆ ಆಶ್ಚರ್ಯವಿಲ್ಲ. ಆದರೆ ಇಂತಹ ಯೋಗಿಗಳ ಮಹತ್ತನ್ನು ಅರಿತವರು, ಇವರನ್ನು ಸದಾಕಾಲವೂ ತಮ್ಮ ಹೃದಯಕಮಲದಲ್ಲಿ ಇಟ್ಟುಕೊಳ್ಳುತ್ತಾರೆ. (‘ನಂಬಿರುವೀ ಎದೆ ಹೂವನೆ ಆಸನ ಮಾಡಿರುವಿರಿ’ ಎಂದು ಬೇಂದ್ರೆಯವರು ಮತ್ತೊಂದು ಕವನದಲ್ಲಿ ಹಾಡಿದ್ದಾರೆ.) ಆದುದರಿಂದಲೇ ಬೇಂದ್ರೆಯವರು ತಮ್ಮ ಗುರುವನ್ನು ‘ನನ್ನೆದೆಯ ಮರುಳಸಿದ್ಧ’ ಎಂದು ಕರೆದಿದ್ದಾರೆ. ಈ ಮರುಳಸಿದ್ಧರು ತೋರಿಸುವ ಹಾದಿಯು ಅಗ್ನಿಪಥವಾಗಿದೆ. ಇದರಲ್ಲಿ ಹಾಯ್ದು ಹೊರಬರಬಂದಾಗ, ಸಾಧಕನ ಅಂತಃಕರಣವು ಸ್ಫಟಿಕದಂತೆ ಶುದ್ಧವಾಗಿರುತ್ತದೆ. ಆನಂತರದ ಆತನ ಕ್ರಿಯೆ ಎಲ್ಲವೂ ಗುರುಸಮರ್ಪಿತವಾದ ನೈವೇದ್ಯ! ಇದು ಬೇಂದ್ರೆಯವರ ಕಾವ್ಯಧರ್ಮ ಹಾಗು ಜೀವನಧರ್ಮ.