Thursday, May 28, 2009

ಇವ ನಮ್ಮವ

ಹನ್ನೆರಡನೆಯ ಶತಮಾನದಲ್ಲಿ ನಡೆದ ಶರಣ ಚಳವಳಿಯು ಕರ್ನಾಟಕದ ಇತಿಹಾಸದಲ್ಲಿಯೆ ಅತ್ಯಂತ ಮಹತ್ವದ ಸಾಂಸ್ಕೃತಿಕ ಘಟನೆಯಾಗಿದೆ. ಈ ಘಟನೆಯ ಕೇಂದ್ರವ್ಯಕ್ತಿಗಳಲ್ಲಿ ಬಸವಣ್ಣನವರು ಅಗ್ರಗಣ್ಯರು. ಬಸವಣ್ಣನವರ ವ್ಯಕ್ತಿತ್ವದಿಂದ ಬೆರಗುಗೊಂಡು, ಪ್ರಭಾವಿತರಾಗಿ ಅವರ ಬಗೆಗೆ ಸಾಹಿತ್ಯ ರಚಿಸಿದವರು ಅನೇಕರು. ಅವರ ಜೀವನಚರಿತ್ರೆಯನ್ನು ಕನ್ನಡದಲ್ಲಿ ರಚಿಸಿದವರಲ್ಲಿ ಹರಿಹರನು ಮೊದಲಿಗನು. ಆಧುನಿಕರಲ್ಲಿ, ದ. ರಾ. ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದರೂ ಸಹ ಅದು ಪ್ರಕಾಶನಗೊಳ್ಳಲಿಲ್ಲ. ಆಬಳಿಕ ಅ.ನ.ಕೃಷ್ಣರಾಯರು ‘ಜಗಜ್ಯೋತಿ ಬಸವೇಶ್ವರ’ ನಾಟಕವನ್ನು ರಚಿಸಿದರೆ, ಪುಟ್ಟಸ್ವಾಮಿಗಳು ‘ಕಲ್ಯಾಣ ಕ್ರಾಂತಿ’ ಕಾದಂಬರಿಯನ್ನು ಬರೆದರು. ಶರಣ ಚಳುವಳಿಯನ್ನು ಸಾಮಾಜಿಕ ದೃಷ್ಟಿಕೋನದಿಂದ ಅರ್ಥೈಸಲು ಪ್ರಯತ್ನಿಸಿ ಲಂಕೇಶ ಹಾಗೂ ಶಿವಪ್ರಕಾಶ ಅವರು ‘ಸಂಕ್ರಾಂತಿ’ ಹಾಗು ’ಮಹಾಚೈತ್ರ’ ನಾಟಕಗಳನ್ನು ಬರೆದರು. ಗಿರೀಶ ಕಾರ್ನಾಡರು ತಾವು ರಚಿಸಿದ ನಾಟಕಕ್ಕೆ, ಬೇಂದ್ರೆಯವರ ಅನುಮತಿಯೊಂದಿಗೆ ’ತಲೆದಂಡ’ ಎನ್ನುವ ಹೆಸರನ್ನೇ ಬಳಸಿಕೊಂಡರು.

ಶ್ರೀ ವ್ಯಾಸ ದೇಶಪಾಂಡೆಯವರ “ಇವ ನಮ್ಮವ ” ನಾಟಕವು ಈ ಸರಣಿಯಲ್ಲಿಯೆ ಇತ್ತೀಚಿನ ಆದರೆ ಅತ್ಯಂತ ಭಿನ್ನವಾದ ನಾಟಕ. ೨೦೦೬ನೆಯ ಇಸವಿಯಲ್ಲಿ ರಚಿತವಾದ ಈ ನಾಟಕವು ಈವರೆಗೆ ಅನೇಕ ರಂಗಪ್ರಯೋಗಗಳನ್ನೂ ಕಂಡಿದೆ.

“ಇವ ನಮ್ಮವ ” ನಾಟಕವು ಕನ್ನಮಾರಿ ಎನ್ನುವ ಕಳ್ಳನೊಬ್ಬನು ಬಸವಣ್ಣನ ಮನೆಯಲ್ಲಿ ಕಳ್ಳತನ ಮಾಡಲು ಯತ್ನಿಸಿ, ಸಿಕ್ಕಿಬಿದ್ದು, ಆ ಬಳಿಕ ಪರಿವರ್ತನೆಗೊಂಡು ಶರಣನಾದವನ ಕತೆಯನ್ನು ಆಧರಿಸಿದೆ. ಆದರೆ ಇದಿಷ್ಟೇ ಕತೆಯ ಮೂಲಕ ಲೇಖಕರು ಆ ಕಾಲದ ಸಾಮಾಜಿಕ, ಆರ್ಥಿಕ ಹಾಗು ರಾಜಕೀಯ ವಿಶ್ಲೇಷಣೆಯನ್ನು ಸಮಗ್ರವಾಗಿ ಮಾಡಿದ್ದಾರೆ. ಇದಲ್ಲದೆ ಆ ಕಾಲದ ಜನಸಾಮಾನ್ಯರ, ಶರಣಸಂಕುಲದ, ದುಡ್ಡುಳ್ಳವರ ಹಾಗೂ ಆಡಳಿತವರ್ಗದ ಅರ್ಥಪೂರ್ಣ ವಿಶ್ಲೇಷಣೆಯೂ ಇಲ್ಲಿದೆ. (ಆ ವಿಶ್ಲೇಷಣೆಯು ಇಂದಿಗೂ ಹಾಗೂ ಎಂದೆಂದಿಗೂ ನಮ್ಮೆಲ್ಲ ಸಮಾಜಗಳಿಗೆ ಅನ್ವಯಿಸುವಂತಿದೆ!)

ನಾಟಕದ ಪಾತ್ರಗಳು:
ಕನ್ನಮಾರಿ:
ನಾಟಕವನ್ನು ಮೊದಲಿನಿಂದ ಕೊನೆಯವರೆಗೂ ವ್ಯಾಪಿಸಿಕೊಂಡ ಕನ್ನಮಾರಿಯು ಈ ನಾಟಕದ ಮಹತ್ವದ ಪಾತ್ರ. ಆದರೂ ಆತ ನಾಟಕದ ನಾಯಕನಲ್ಲ. ನಾಟಕದ ಬೆಳವಣಿಗೆಯ ದೃಷ್ಟಿಯಿಂದ ನಾಟಕದ ಪ್ರತಿಯೊಂದು ಚಿಕ್ಕ ಪಾತ್ರವೂ ಇಲ್ಲಿ ಮಹತ್ವದ ಪಾತ್ರವೇ. ಆದರೆ ನಾಟಕದ ನಾಯಕಪಟ್ಟ ಲಭ್ಯವಾಗುವದು ಬಸವಣ್ಣನಿಗೇ.

ಈವರೆಗೆ, ಕನ್ನಮಾರಿಯು ರಚಿಸಿದ ಮೂರು ವಚನಗಳು ಲಭ್ಯವಾಗಿವೆ. ಆತನ ಎರಡು ವಚನಗಳನ್ನು ಲೇಖಕರು ಈ ನಾಟಕದಲ್ಲಿ ಬಳಸಿಕೊಂಡಿದ್ದಾರೆ. ನಾಟಕದ ಆರಂಭದಲ್ಲಿಯೇ ಕನ್ನಮಾರಿಯು ತನ್ನ ಬಂಟರೊಡನೆ ರಂಗಪ್ರವೇಶ ಮಾಡುತ್ತ, ತನ್ನ ಕನ್ನಗಾರಿಕೆಯನ್ನು ಸಮರ್ಥಿಸುವ ತರ್ಕವನ್ನು ಪ್ರೇಕ್ಷಕಕರ ಎದುರಿಗೆ ಸಾರುತ್ತಾನೆ. ಬಸವಣ್ಣನವರು ಒಂದು ಧ್ರುವವಾದರೆ, ಕನ್ನಮಾರಿಯು ವಿರುದ್ಧ ಧ್ರುವ. ಕನ್ನಮಾರಿಯ ವಿಚಾರ ಹಾಗೂ ತರ್ಕಗಳನ್ನು ಎದುರಿಸುವದು ಸರಳವಲ್ಲ. ಕಲ್ಯಾಣರಾಜ್ಯವನ್ನೇ ಕಳ್ಳರ ರಾಜ್ಯವೆಂದು ಕರೆಯುತ್ತಾನೀತ.
ರಾಜ, ಆತನ ಅಧಿಕಾರಿಗಳು, ಸಮಾಜದ ಶ್ರೇಷ್ಠಿಗಳು ಇವರೆಲ್ಲ ಹಗಲುಗಳ್ಳರು, ಬಲುಗಳ್ಳರು ಎನ್ನುವದು ಇವನ ಅಭಿಪ್ರಾಯ. ಇವರೆಲ್ಲರೂ ದುಡಿಯುವ ಬಡವರನ್ನು ಶೋಷಿಸುತ್ತಾರೆ. ತಾನು ಉಳ್ಳವರ ಸಂಪತ್ತನ್ನು ಇಲ್ಲದವರಲ್ಲಿ ಹಂಚುತ್ತೇನೆ ಎನ್ನುವದು ಇವನ ಸಮರ್ಥನೆ!
ಸಮಾಜದ ವಿವಿಧ ಸ್ತರಗಳ ಜನತೆಯೊಡನೆ ಈತ ಮಾಡುವ ಸಂಭಾಷಣೆ ಹಾಗೂ ಮಂಡಿಸುವ ತರ್ಕಗಳ ಮೂಲಕ ಈತನ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅನುಭವ ಮಂಟಪದಲ್ಲಿಯ ಶರಣರಿಗೇ ಎದುರಾಡಬಲ್ಲ ಧಾರ್ಷ್ಟ್ಯ ಈತನದು.
ಕನ್ನಮಾರಿಯ ವ್ಯಕ್ತಿತ್ವಕ್ಕೆ ವಿರುದ್ಧವಾಗಿ ಬಸವಣ್ಣನವರ ವ್ಯಕ್ತಿತ್ವವು ಬೆಳಗಿದೆ. ಕನ್ನಮಾರಿಗೆ ಗೊತ್ತಿರುವ ತರ್ಕ ಹಾಗೂ ವಿಚಾರವೆಲ್ಲ ಬಸವಣ್ಣನವರಿಗೂ ಗೊತ್ತಿದೆ. ಅವರೂ ಸಹ ಕಲ್ಯಾಣಪ್ರಭುತ್ವವನ್ನು ಕಳ್ಳರ ಪ್ರಭುತ್ವವೆಂದೇ ಕರೆಯುತ್ತಾರೆ. ಆದರೆ ಕೇವಲ ತರ್ಕದಿಂದ ಸಮಾಜವನ್ನು ಸುಧಾರಿಸಲು ಸಾಧ್ಯವಿಲ್ಲವೆನ್ನುವದು ಅವರಿಗೆ ಗೊತ್ತಿದೆ.

ನಾಟಕದ ಆರಂಭದಲ್ಲಿ, ಮೊದಲಿಗೆ ಕನ್ನಮಾರಿಯ ಕೈಯಲ್ಲಿ ಸಿಗುವವರು ಭೋಳೇ ಜಂಗಮರು. ಅವರ ಭೋಳೇತನವನ್ನು ಹಂಗಿಸಿ ಈತ ಮಾತನಾಡುತ್ತಾನೆ. ಅವರೋ ಬಸವಣ್ಣನನ್ನು ಪವಾಡಪುರುಷನೆಂದು ಭಾವಿಸಿದವರು. ವಚನಗಳನ್ನು ಸಾರುವದರ ಮೂಲಕ ಕೆಡುಕರನ್ನು ಸುಧಾರಿಸಬಹುದೆನ್ನುವ ನಂಬಿಕೆ ಇಟ್ಟುಕೊಂಡವರು. ಜಂಗಮವೃತ್ತಿಯನ್ನೇ ಹೊಟ್ಟೆಪಾಡಿನ ಕಾಯಕ ಮಾಡಿಕೊಂಡವರು! ಹಾಗೂ ಪ್ರಸಂಗ ಬಂದಾಗ ಪ್ರಭುತ್ವಕ್ಕೆ ದಂಡನಮಸ್ಕಾರವನ್ನೂ ಹಾಕಬಲ್ಲವರು.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು, ಕನ್ನಮಾರಿಯು ಈ ಜಂಗಮರನ್ನೇ ಠಕ್ಕತನದಿಂದ ಕಟ್ಟಿಹಾಕಿ ಅವರೆಲ್ಲರ ವಸ್ತ್ರಭೂಷಣಗಳನ್ನು ಅಪಹರಿಸುವನು. ತಮ್ಮ ಸುರಕ್ಷತೆಯ ಉದ್ದೇಶದಿಂದ ಕನ್ನಮಾರಿ ಹಾಗೂ ಅವನ ಬಂಟರು ಶರಣರ ವೇಷದಲ್ಲಿ ಬಸವಣ್ಣನ ಮಹಾಮನೆಗೆ ತೆರಳುತ್ತಿರುವಾಗ ಅವರಿಗೆ ಭೆಟ್ಟಿಯಾಗುವಳು ಒಬ್ಬ ಹುಲ್ಲು ಹೊರುವ ಹೆಣ್ಣುಮಗಳು. ಸಮಾಜದ ಸಾಂಪ್ರದಾಯಕ ವ್ಯವಸ್ಥೆಯಲ್ಲಿ ತನ್ನ ಕೆಳಸ್ತರವನ್ನು ಒಪ್ಪಿಕೊಂಡು ಬಾಳುತ್ತಿರುವ ಈಕೆ ಬಸವಣ್ಣ ತನ್ನನ್ನು ಮೇಲೆತ್ತಿದ ರೀತಿಯನ್ನು ಕನ್ನಮಾರಿಗೆ ಹೇಳಿದಾಗ, ಆತ ಇವರೆಲ್ಲ ಮರಳು ಜನ ಎಂದು ಅಪಹಾಸ್ಯ ಮಾಡುತ್ತಾನೆ.

ತನ್ನನ್ನು ಹುಡುಕುತ್ತಿರುವ ಸೈನಿಕರಿಂದ ತಪ್ಪಿಸಿಕೊಳ್ಳಲು ಕನ್ನಮಾರಿ ಬಸವಣ್ಣನ ಮಹಾಮನೆಗೇ ಬರುತ್ತಾನೆ. ಅಲ್ಲಿ ಅನುಭವ ಮಂಟಪದಲ್ಲಿ ಶರಣರು ದೈನಂದಿನ ಚರ್ಚೆಯನ್ನು ನಡೆಸಿರುತ್ತಾರೆ. ಕನ್ನಮಾರಿ ತನ್ನ ತಾರ್ಕಿಕ ಅಹಂಭಾವದಲ್ಲಿ, ಅವರಿಗೆ ಉದ್ಧಟ ಪ್ರಶ್ನೆಗಳನ್ನು ಕೇಳುತ್ತಾನೆ.
ಇದಿಷ್ಟು ಕನ್ನಮಾರಿಯ ಮೊದಲ ವ್ಯಕ್ತಿತ್ವ.
ಇಂತಹ ಕನ್ನಮಾರಿ ಶರಣನಾಗಿ ಪರಿವರ್ತಿತನಾಗುವದು ರೋಚಕವಾದ ಘಟನೆ.
ಕನ್ನಮಾರಿಯ ಮಾತುಗಳಲ್ಲಿಯೇ ಹೇಳುವದಾದರೆ :-
“ ಕಳ್ಳರು ಯಾರು, ಕಳ್ಳರ ಕಳ್ಳರು ಯಾರು, ಬಲುಗಳ್ಳರು ಯಾರಂತ ನಾನು ನಿಮ್ಮ ಮುಂದೆ ಒಗಟು ಇಟ್ಟೆ. ಬಸವೇಶ್ವರ, ಇದು ಕಳ್ಳರ ನಗರ. ಕಳ್ಳರ ನಗರದಲ್ಲಿ ನಾನು ಕಳ್ಳರ ಕಳ್ಳನಾಗಿದ್ದೆ. ಕದೀಲಿಕ್ಕೆ ಬಂದ ನನ್ನನ್ನು ನೀವು ನೆಟ್ಟನೇ ನುಂಗಿ ನಿಮ್ಮ ಹೊಟ್ಟೆಯೊಳಗೆ ಅರಗಿಸಿಕೊಂಡು ಬಿಟ್ರಿ. ನೀವೇ ಬಲುಗಳ್ಳರು!..”

ಬಿಜ್ಜಳ:
ಬಿಜ್ಜಳನು ಕಲ್ಯಾಣರಾಜ್ಯದ ಪ್ರಭು. ಬಸವಣ್ಣನ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದಾಗಿ ರಾಜ್ಯಾಡಳಿತ ಸುಸೂತ್ರವಾಗಿ ನಡೆಯುತ್ತಿರುವದರಿಂದ ಈತನಿಗೆ ಬಸವಣ್ಣ ಬೇಕು. ಬಸವಣ್ಣ ರಾಜ್ಯದ ಮಂತ್ರಿಯಾಗಿ ಉಳಿಯಲೇ ಬೇಕು. ಅಲ್ಲದೆ ಬಸವಣ್ಣನನ್ನು ಆಡಳಿತದಲ್ಲಿ ಬಲವಂತವಾಗಿ ಇಟ್ಟುಕೊಳ್ಳಲು ಈತನಿಗೆ ಮತ್ತೊಂದು ಕಾರಣವಿದೆ. ಬಸವಣ್ಣನಿಗೇ ಬೇಕಾಗಿರದಿದ್ದರೂ ಸಹ ಆತ ಪ್ರಭುತ್ವಕ್ಕೆ ಹೊರತಾದ ಮತ್ತೊಂದು ಶಕ್ತಿಕೇಂದ್ರವಾಗಿರುವದನ್ನು ಬಿಜ್ಜಳ ಬಲ್ಲ. ಈ ಶಕ್ತಿಕೇಂದ್ರವನ್ನು ಜಾಣತನದಿಂದ ಸಂಭಾಳಿಸುವದು ಪ್ರಭುತ್ವದ ಹಿತದ ದೃಷ್ಟಿಯಿಂದ ಅವಶ್ಯವೆಂದು ಈತ ಅರಿತಿದ್ದಾನೆ.
ಬಸವಣ್ಣನ ಬಗೆಗೆ ಬಿಜ್ಜಳ ಹೇಳುವ ಮಾತುಗಳು ಹೀಗಿವೆ:
“…ಮಾರಾಯಾ ನಿನಗ ಯಾವ ಪದವಿನೂ ಬೇಕಾಗಿಲ್ಲ. ಇದು ನನಗ ಗೊತ್ತೈತಿ. ನಿನಗ ಪದವಿ ಯಾಕ ಬೇಕು? ನೀ ಎಲ್ಲಿ ಹೋಗಿ ನಿಲ್ಲತೀ ಅಲ್ಲಿ ದೀಪ ಬೆಳಗತಾರು; ಎಲ್ಲಿ ಹೋಗಿ ಕುಂದರತೀ ಅಲ್ಲಿ ಕಾಯಿ ಒಡೀತಾರು; ನೀ ಕಾಡು ಹೊಕ್ಕೊಂಡು ಮರದ ಕೆಳಗ ಕುಂತರೂ ಶರಣರ ಸಂತಿ ಅಲ್ಲೇ ನಡೀತೈತಿ….”

ಬಸವಣ್ಣನನ್ನು ಮನಸಾ ಗೌರವಿಸುತ್ತಿದ್ದರೂ ಸಹ ಬಿಜ್ಜಳನು ಪ್ರಭುತ್ವಕ್ಕೆ ಅವಶ್ಯವಾದ ಕೋರೆಹಲ್ಲು ಹಾಗೂ ಹುಲಿಯುಗುರುಗಳನ್ನು ಬೆಳೆಸಿಕೊಂಡವನೇ. ವ್ಯವಸ್ಥೆಯ ರಕ್ಷಣೆಯ ಉದ್ದೇಶ ಹಾಗೂ ಅದಕ್ಕೆ ಬೇಕಾದ ಕ್ರೌರ್ಯ ಇವು ಬಿಜ್ಜಳನ ವ್ಯಕ್ತಿತ್ವದ ಭಾಗಗಳಾಗಿವೆ.
ತನ್ನ ದಂಡನಾಯಕ ಮಂಚಣ್ಣನಾಯಕನಿಗೆ ಬಿಜ್ಜಳನ್ನು ಕೊಡುತ್ತಿರುವ ಆದೇಶವನ್ನು ನೋಡಿರಿ:
“…ಮಧ್ಯರಾತ್ರಿಗೆ ಸರಿಯಾಗಿ ನಾಕೂ ಕಡೆಯಿಂದ ಮಹಾಮನಿಗೆ ಮಿಂಚು ಹೊಡಧಾಂಗ ಮುತ್ತಿಗೆ ಹಾಕಬೇಕು……ಹೊರಗಿನ ಸುತ್ತಿನ್ಯಾಗ ಬ್ಯಾಟಿ ನಾಯಿಗಳನ್ನು ಬಿಡಿರಿ, ಬಿಲ್ಲಿನವರನ್ನು ಮರದ ಮ್ಯಾಲ ಏರಸರಿ. ಎರಡು ಕಾಲು ಓಡ್ತಿರೋದು ಕಂಡ್ರ ಸಾಕು, ಬಾಣ ಹೊಡೆದು ಭೂಮಿಗೆ ಬೀಳಿಸತಕ್ಕದ್ದೆಂದು ಕಟ್ಟಪ್ಪಣೆ ಮಾಡ್ರಿ….”

ಶರಣರು:
ಶರಣರಲ್ಲಿ ಭೋಳೇ ಜನರು ಇದ್ದಂತಯೇ, ಬೌದ್ಧಿಕವಾಗಿ ಹಾಗು ಆಧ್ಯಾತ್ಮಿಕವಾಗಿ ಎತ್ತರದ ಮಟ್ಟವನ್ನು ಏರಿದವರೂ ಇದ್ದರು. ಅನುಭವ ಮಂಟಪದ ನಿರ್ವಾಹಕರೆಂದು ಇವರನ್ನು ಕರೆಯಬಹುದು. ಬಸವಣ್ಣನ ಹೊರತಾಗಿಯೂ, ಶರಣಚಳುವಳಿಯನ್ನು ಸಾರ್ಥಕಗೊಳಿಸಬಲ್ಲ ಸಾಮರ್ಥ್ಯ ಉಳ್ಳವರು. ಶರಣನ ವೇಷದಲ್ಲಿಯ ಕನ್ನಮಾರಿಯ ಉದ್ದಟತನದಿಂದ ಇವರಲ್ಲಿ ಕೆಲವರು ವಿಚಲಿತರಾದರೆ, ಮುಂದಾಳುಗಳು ಮಾತ್ರ ಎಲ್ಲರನ್ನೂ ಶಾಂತ ಮಾಡಬಲ್ಲವರು.

ಬಸವಣ್ಣ:
ಈಗಾಗಲೇ ರಚಿತವಾದ ಸಾಹಿತ್ಯದಲ್ಲಿ ಬಸವಣ್ಣನು ರಾಜ್ಯದ ಉನ್ನತ ಅಧಿಕಾರಿಯಂತೆ ಕಾಣುವ ವ್ಯಕ್ತಿತ್ವಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ನಾಟಕಗಳಲ್ಲಿಯೂ ಸಹ ಆತ ಮಂತ್ರಿಯ ಪೋಷಾಕನ್ನು ಧರಿಸಿ ರಂಗದ ಮೇಲೆ ಬರುವದೇ ಜನಪ್ರಿಯವಾಗಿದೆ. ಆದರೆ ಈ ನಾಟಕದಲ್ಲಿ ಬಸವಣ್ಣನು ಸಾಮಾನ್ಯರೊಡನೆ ಸಮಾನನಾಗಿ ಇರಬಯಸುವ ವ್ಯಕ್ತಿ.

ನಾಟಕದ ಮೊದಲಲ್ಲಿಯೆ ಆತ ಕೆಳ ಸ್ತರದ ಹೆಣ್ಣುಮಗಳೊಬ್ಬಳಿಗೆ ಹುಲ್ಲು ಹೊರಿಸುವದನ್ನು, ಅವಳೊಡನೆ ಆತ್ಮೀಯವಾಗಿ ಸಂಭಾಷಿಸುವದನ್ನು ಹಾಗೂ ಅವಳಿಗೆ ಲಿಂಗಧಾರಣೆ ಮಾಡುವದನ್ನು flashbackನಲ್ಲಿ ತೋರಿಸಲಾಗಿದೆ.

ಆನಂತರ ಬಸವಣ್ಣನ ಉಲ್ಲೇಖವಾಗುವದು ಬಿಜ್ಜಳನ ಮಾತುಗಳಲ್ಲಿ:
“ಆತ ಮೊದಲೇ ಮಹಾ ತಲೆತಿರುಕ. …………..ಅಲ್ಲಾ ಮಂತ್ರಿಪದವಿ ಬ್ಯಾಡಾ ಅನ್ನೋ ತಲೆತಿರುಕ ಮತ್ತೊಬ್ಬನದಾನೇನು ಈ ದೇಶದೊಳಗ?”

ಹುಲ್ಲು ಹೊರುವ ಹೆಣ್ಣುಮಗಳೊಡನೆ ಆತ್ಮೀಯವಾಗಿ ಮಾತನಾಡುವಾಗ, ಕನ್ನಮಾರಿಯ ಪರವಾಗಿ ಶರಣರೊಡನೆ ಮಾತನಾಡುವಾಗ, ಬಿಜ್ಜಳನ ದಂಡನಾಯಕನು ತಂದ ಆದೇಶವನ್ನು ಧಿಕ್ಕರಿಸುವಾಗ, ತನ್ನ ಹೆಂಡತಿಯ ಉಪಾಯಕ್ಕೆ ಅಸಮಾಧಾನ ವ್ಯಕ್ತಪಡಿಸುವಾಗ ಬಸವಣ್ಣನ ವ್ಯಕ್ತಿತ್ವ ಪ್ರೇಕ್ಷಕರೆದುರಿಗೆ ಹೊಳೆಯುತ್ತದೆ.
ಎಲ್ಲಕ್ಕಿಂತಲೂ ಮುಖ್ಯವಾಗಿ, ತನ್ನ ಅಪೂರ್ಣ ವಚನವೊಂದರ ಕೊನೆಯ ಸಾಲನ್ನು ಆತ ತನ್ನ ಹೆಂಡತಿ ಗಂಗಾಂಬಿಕೆಗೆ ಪ್ರೀತಿಯಿಂದ ಪೂರ್ಣಗೊಳಿಸಿ ಹೇಳುವ ಸನ್ನಿವೇಶವು ಬಸವಣ್ಣನ ಆದರ್ಶವನ್ನು ಅತ್ಯಂತ ಸಮರ್ಥ ರೀತಿಯಲ್ಲಿ ತೋರಿಸುತ್ತದೆ ಎನ್ನಬಹುದು.

ನಾಟಕದ ಕಥಾನಕ:
ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ. ಬಸವಣ್ಣನ ರಂಗಪ್ರವೇಶವಾಗುವದು ಸಂಜೆಯಲ್ಲಿ (flash back ಹೊರತುಪಡಿಸಿ), ಅಂದರೆ ನಾಟಕದ ಕೊನೆಯ ಭಾಗದಲ್ಲಿ.
ಅಲ್ಲಿಯವರೆಗೂ ಕನ್ನಮಾರಿ ಹಾಗೂ ಅವನನ್ನು ಹಿಡಿಯಲೆತ್ನಿಸುತ್ತಿರುವ ಬಿಜ್ಜಳನ ಸೈನಿಕರೇ ರಂಗವನ್ನು ವ್ಯಾಪಿಸಿದ್ದಾರೆ.
ರಂಗದ ಮೇಲೆ ಪ್ರಾಸಂಗಿಕವಾಗಿ ಕಾಣಿಸಿಕೊಳ್ಳುವ ಸಾಮಾನ್ಯ ಬಹುಜನರು ಪ್ರಭುತ್ವಕ್ಕೆ ಹೆದರುವ, ಪ್ರಭುತ್ವ ಎಸೆಯುವ ರೊಟ್ಟಿಯ ತುಣುಕುಗಳಿಗೆ ಆಸೆ ಪಡುವ ಜನತೆ. ಇವರು ಅನಾದಿ ಕಾಲದಿಂದಲೂ ಹೀಗೇ ಇದ್ದವರು. ಬಸವಣ್ಣನ ಕಾಲದಲ್ಲೂ ಹಾಗೇ ಇದ್ದರು. ಈಗಲೂ ಹಾಗೇ ಇದ್ದಾರೆ. ಅದರಂತೆಯೇ ರಂಗದ ಮೇಲೆ ಕಾಣಿಸಿಕೊಳ್ಳುವ ಶ್ರೇಷ್ಠಿಗಳು ವ್ಯವಸ್ಥೆಯ ಮುಂದುವರಿಕೆಯಲ್ಲಿಯೇ ಆಸಕ್ತಿ ಉಳ್ಳವರು.

ಕನ್ನಮಾರಿಯು ಅನುಭವ ಮಂಟಪದಲ್ಲಿ ಶರಣರ ಜೊತೆಗೆ ಸೇರಿಕೊಂಡಿರುವದು ಬಿಜ್ಜಳನ ಗುಪ್ತಚಾರರಿಗೆ ಗೊತ್ತಾಗಲು ತಡವಾಗುವದಿಲ್ಲ. ಮಧ್ಯರಾತ್ರಿಯ ಸಮಯದಲ್ಲಿ ಬಸವಣ್ಣನವರ ಮಹಾಮನೆಗೆ ಸೈನಿಕರು ಮುತ್ತಿಗೆ ಹಾಕುತ್ತಾರೆ. ಕನ್ನಮಾರಿ ತಮ್ಮೊಳಗೇ ಇದ್ದದ್ದು ಬಸವಣ್ಣನ ಹೆಂಡತಿ ಗಂಗಾಂಬಿಕೆಯ ಅರಿವಿಗೂ ಬಂದಿರುತ್ತದೆ. ಅವನನ್ನು ಹಿಡಿದು ಹಾಕಲು ಗಂಗಾಂಬಿಕೆ ಉಪಾಯವೊಂದನ್ನು ರೂಪಿಸುತ್ತಾಳೆ. ಬಂಗಾರದ ತನ್ನ ಒಡವೆಗಳನ್ನು ಗುಪ್ತವಾಗಿ ನೆಲವಿನಲ್ಲಿ ಇಟ್ಟಿರುವದಾಗಿ ಕನ್ನಮಾರಿಗೆ ನಂಬಿಕೆ ಬರುವಂತೆ ನಟಿಸುತ್ತಾಳೆ. ಕನ್ನಮಾರಿ ಹಾಗೂ ಅವನ ಬಂಟರು ಕಳ್ಳತನ ಮಾಡುತ್ತಿರುವಾಗ ಶರಣರ ಕೈಯಲ್ಲಿ ಸಿಕ್ಕು ಬೀಳುತ್ತಾರೆ.

ಇಲ್ಲಿಯವರೆಗೆ ಬಸವಣ್ಣ ಎಲ್ಲಿದ್ದ? ಗಂಗಾಂಬಿಕೆಯು ತನ್ನ ಉಪಾಯದ ಅಂಗವಾಗಿ ಬಂಗಾರದ ಒಡವೆಗಳನ್ನು ಧರಿಸಿರುತ್ತಾಳೆ. ತನ್ನ ಹೆಂಡತಿ ಬಂಗಾರ ಧರಿಸಿರುವದು ಬಸವಣ್ಣನಿಗೆ ಸಹ್ಯವಾಗುವದಿಲ್ಲ. ಆತ ವ್ಯಥಿತನಾಗಿ, ದಾಸೋಹದಲ್ಲಿರುವದನ್ನು ಬಿಟ್ಟು ತನ್ನ ಅರುಹಿನ ಮನೆಗೆ ಹೋಗಿ ಬಿಟ್ಟಿರುತ್ತಾನೆ. ಇದು ಗಂಗಾಂಬಿಕೆಗೆ ಅರ್ಥವಾಗುವದಿಲ್ಲ. ಬೆಳಿಗ್ಗೆ ಒಂದು ವಚನವನ್ನು ಅರ್ಧ ರಚನೆ ಮಾಡಿದವರು ಎಲ್ಲಿ ಹೋದರು? ‘ನೀರಿಗೆ ನೈದಿಲೆಯೆ ಶೃಂಗಾರ…..’ ಎಂದು ಅರ್ಧ ವಚನ ಹೇಳಿದವರು ಆ ವಚನ ಪೂರ್ತಿಗೊಳಿಸಲು ಹೋದರೆ? ಎಂದುಕೊಳ್ಳುತ್ತಾಳೆ. ಆದರೆ ಬಸವಣ್ಣನನ್ನು ಸೂಕ್ಷ್ಮವಾಗಿ ಗಮನಿಸಿದ್ದ ನಾಗವ್ವೆ ಮಾತ್ರ ‘ಶಟಗೊಂಡವರ ಹಂಗ ದುಡುದುಡು ಹೋದಾ…’ ಎನ್ನುತ್ತಾಳೆ.

ಬಸವಣ್ಣನನ್ನು ಅರುಹಿನ ಮನೆಯಿಂದ ಕರೆದುಕೊಂಡು ಬಂದಾಗ ಕನ್ನಮಾರಿಯನ್ನು ಹಿಡಿದದ್ದಕ್ಕಾಗಿ ಶರಣರೆಲ್ಲ ಸಂತೋಷದಲ್ಲಿ ಮುಳುಗಿದ್ದರು. ಮಹಾಕಳ್ಳ ಕನ್ನಮಾರಿಯನ್ನು ರಾಜನಿಗೆ ಒಪ್ಪಿಸಬೇಕು ಎನ್ನುವದೇ ಎಲ್ಲ ಶರಣರ ಅಭಿಪ್ರಾಯ. ಬಸವಣ್ಣ ಅದಕ್ಕೆ ಒಪ್ಪುವದಿಲ್ಲ.

ಕನ್ನಮಾರಿಯ ತರ್ಕವನ್ನಾಗಲಿ, ಶರಣರ ತರ್ಕವನ್ನಾಗಲಿ , ಪ್ರಭುತ್ವದ ತರ್ಕವನ್ನಾಗಲಿ ಬಸವಣ್ಣನು ಒಪ್ಪುವವನಲ್ಲ. ಅಷ್ಟೇ ಏಕೆ, ಗಂಗಾಂಬಿಕೆಯ ಸ್ತ್ರೀಧನದ ತರ್ಕವನ್ನೂ ಆತ ಕಡೆಗಣಿಸುತ್ತಾನೆ. ಕನ್ನಮಾರಿಗೆ ಆಶ್ರಯ ಕೊಟ್ಟರೆ ಬಸವಣ್ಣನೂ ಅಪರಾಧಿಯೇ ಆಗುತ್ತಾನೆ ಎನ್ನುವ ಮಾತಿಗೂ ಆತ ಬೆಲೆ ಕೊಡುವದಿಲ್ಲ.ಬಿಜ್ಜಳನ ಸೇನಾಪತಿಗೆ ಬಸವಣ್ಣನು ಹೇಳುವ ಮಾತುಗಳಿವು:
"ದೇಶಕ್ಕೊಂದು ಶಾಸನ ಐತಿ ನಿಜ.ಆದರ ಶಾಸನಕ್ಕಂಜಿ ನನ್ನ ಅಂತರಾತ್ಮ ಒಪ್ಪದಿರುವಂಥಾ ಯಾವ ಕೆಲಸವನ್ನೂ ನಾನು ಮಾಡಲಾರೆ."

ಕನ್ನಮಾರಿಯ ಜೀವ ಉಳಿಸಲು ಆತನನ್ನು ತನ್ನ ಅಂದರೆ ಮಂತ್ರಿಯ ಮುತ್ತಿನ ಪಲ್ಲಕ್ಕಿಯಲ್ಲಿ, ಮಂತ್ರಿಯ ಕಿರೀಟ ತೊಡಸಿ, ಗಂಗಾಂಬಿಕೆಯ ಎಲ್ಲ ಒಡವೆಗಳನ್ನೂ ಆತನಿಗೇ ಕೊಟ್ಟು ಆತನನ್ನು ಪಾರು ಮಾಡುತ್ತಾನೆ.
ಆ ಸಮಯದಲ್ಲಿ ಬಸವಣ್ಣನು ಅರ್ಧ ರಚಿಸಿದ ತನ್ನ ವಚನವನ್ನು ಪೂರ್ತಿಗೊಳಿಸಿ ಗಂಗಾಂಬಿಕೆಗೆ ಹೇಳುವ ಭಾಗವು ನಾಟಕದ ಉತ್ತುಂಗಭಾಗವೆನ್ನಬಹುದು.

ಬಸವಣ್ಣನ ತರ್ಕವು ಬುದ್ಧಿಯಿಂದ ಬಂದದ್ದಲ್ಲ, ಅದು ಆತನ ಹೃದಯದಿಂದ ಹೊಮ್ಮಿದ್ದು ಎನ್ನುವದು ಇತರರಿಗೆಲ್ಲ ಆಗ ಅರ್ಥವಾಗುತ್ತದೆ. ಬಸವಣ್ಣ ಬಯಸುವ ಸಮಾಜದ ಆದರ್ಶವೂ ಆ ವಚನದಿಂದಲೇ ಅರಿವಾಗುತ್ತದೆ.

ನಾಟಕದ ಕೊನೆಯ ದೃಶ್ಯದಲ್ಲಿ ಬಿಜ್ಜಳನ ದಂಡನಾಯಕನು ಬಸವಣ್ಣನ ಸೆರೆ ಹಿಡಿಯಲು ಸನ್ನದ್ಧನಾಗಿ ಬರುತ್ತಾನೆ. ಅದೇ ಸಮಯದಲ್ಲಿ ಬಿಜ್ಜಳನು ಕನ್ನಮಾರಿಯೊಂದಿಗೆ ಅಲ್ಲಿಗೆ ಬರುತ್ತಾನೆ. ಯಾಕೆಂದರೆ ಕನ್ನಮಾರಿಯು ತನ್ನ ಜೀವ ಉಳಿಸಿದ ಬಸವಣ್ಣನ ಜೀವವು ಅಪಾಯದಲ್ಲಿರುವದನ್ನು ಅರಿತುಕೊಂಡು, ತಾನೇ ಸ್ವತಃ ಬಿಜ್ಜಳನ ಅರಮನೆಗೆ ತೆರಳಿ, ಅಲ್ಲಿ ತನ್ನನ್ನೇ ಒಪ್ಪಿಸಿಕೊಂಡಿರುತ್ತಾನೆ.

ಕನ್ನಮಾರಿಯ ಬಿಡುಗಡೆಯಾಗುತ್ತದೆ ಹಾಗು ಆತನೂ ಸಹ ಶರಣಜೀವನಕ್ಕೆ ತನ್ನನ್ನು ಸಮರ್ಪಿಸಿಕೊಳ್ಳುತ್ತಾನೆ.
ಇದಿಷ್ಟು ನಾಟಕದ ಕಥಾನಕ.

ನಾಟಕದ ವೈಶಿಷ್ಟ್ಯಗಳು:
ಕೇವಲ ಕಳ್ಳನೊಬ್ಬನು ಶರಣನಾದ ಕತೆಯನ್ನು ಹೇಳುವ ನಾಟಕವಲ್ಲವಿದು. ಕಳ್ಳನನ್ನು ಶರಣನನ್ನಾಗಿ ಪರಿವರ್ತಿಸಿದ ಬಸವಣ್ಣನ ವ್ಯಕ್ತಿತ್ವವನ್ನು ಅರಿತುಕೊಳ್ಳಲು ಮಾಡಿದ ಪ್ರಯತ್ನವು ಇಲ್ಲಿದೆ. ಬಸವಣ್ಣನ ವ್ಯಕ್ತಿತ್ವ ಎಂತಹದು?
ಅಂಗುಲಿಮಾಲಾನನ್ನು ಪರಿವರ್ತಿಸಿದ ಬುದ್ಧನ ವ್ಯಕ್ತಿತ್ವವೆ? ಅಥವಾ ಸಮಾಜಸುಧಾರಕನ ವ್ಯಕ್ತಿತ್ವವೆ?
ಬಸವಣ್ಣನ ಬಗೆಗೆ ಬರೆದ ಲೇಖಕರೆಲ್ಲ ಆತನನ್ನು ಅರಿತುಕೊಳ್ಳಲು ಪ್ರಯತ್ನಿಸಿ ಬರೆದವರೇ.

ವ್ಯಾಸ ದೇಶಪಾಂಡೆಯವರು ಇಲ್ಲಿ ಬಸವಣ್ಣನ ವ್ಯಕ್ತಿತ್ವವನ್ನು ಇತರ ಪಾತ್ರಗಳ ಮೂಲಕ ಅರ್ಥೈಸಲು ಪ್ರಯತ್ನಿಸಿದ್ದಾರೆ.
ಕನ್ನಮಾರಿ vs ಬಸವಣ್ಣ , ಬಿಜ್ಜಳ vs ಬಸವಣ್ಣ , ಶರಣರು vs ಬಸವಣ್ಣ , ಕೊನೆಗೆ ಗಂಗಾಂಬಿಕೆ vs ಬಸವಣ್ಣ.

ಜೊತೆಜೊತೆಗೇ ಆ ಸಮಯದ ಸಮಾಜದ ವ್ಯವಸ್ಥೆ, ದುಡಿವ ವರ್ಗದ ಶೋಷಣೆ, ಪ್ರಭುತ್ವದ ರಾಜಕೀಯ ಇವೆಲ್ಲ ನಾಟಕದಲ್ಲಿ ಪ್ರಾಸಂಗಿಕವಾಗಿ ಬಂದಿವೆ. ಇಂತಹ ವ್ಯವಸ್ಥೆಗೆ ಒಂದು ಪ್ರತಿವ್ಯವಸ್ಥೆ ಇದೆಯೆ?
ಆಧುನಿಕ ಭಾರತದಲ್ಲಿ,ಗಾಂಧೀಜಿ, ವಿನೋಬಾ, ಜಯಪ್ರಕಾಶ ನಾರಾಯಣ ಇವರೆಲ್ಲ ಇದಕ್ಕಾಗಿ ಪ್ರಯತ್ನಿಸಿದವರೆಂದು ನಾವು ಬಲ್ಲೆವು.

ಇಲ್ಲಿ ಬರುವ ಕನ್ನಮಾರಿ ಹಳೆಯ ಕಾಲದ Robin Hood ಹಾಗೂ ಈ ಕಾಲದ ನಕ್ಸಲೀಯರನ್ನು ಸ್ವಲ್ಪ ಮಟ್ಟಿಗೆ ಹೋಲುತ್ತಾನೆ ಎನ್ನಬಹುದಾದರೂ ಲೇಖಕರು ಇಂತಹ ಸುಳಿವುಗಳು ನುಸಳದಂತೆ ಪ್ರಯತ್ನಪೂರ್ವಕವಾಗಿ ನಾಟಕವನ್ನು ರಚಿಸಿದ್ದಾರೆ. ಅದರಂತೆಯೆ ಮಾರ್ಕ್ಸಿಸ್ಟ್ ಗುರುತುಗಳನ್ನೂ ಸಹ ಇಲ್ಲಿ ಸುಳಿಯಗೊಟ್ಟಿಲ್ಲ.
(ಕಮ್ಯುನಿಸ್ಟ ಅರ್ಥವ್ಯವಸ್ಥೆಯ ಪ್ರತಿಪಾದಕನಾದ ಮಾರ್ಕ್ಸನನ್ನು ಬಸವಣ್ಣನಿಗೆ ಹೋಲಿಸುವದು ದೊಡ್ಡ ತಪ್ಪು. ಏಕೆಂದರೆ ಮಾರ್ಕ್ಸನು State Ownershipಅನ್ನು ಹೇಳುತ್ತಿದ್ದ ಹಾಗೂ ಆಧ್ಯಾತ್ಮವನ್ನು ತಿರಸ್ಕರಿಸಿದ್ದ.)
ಬಸವಣ್ಣನವರು ಮಾನವ ಘನತೆಯನ್ನು ಸಾಮಾಜಿಕ ಸಮಾನತೆಯನ್ನು, ಕಾಯಕದ ಮಹತ್ವವನ್ನು ಹಾಗೂ ಆಧ್ಯಾತ್ಮಿಕ ಅವಶ್ಯಕತೆಯನ್ನು ಜೀವಿಸಿ ತೋರಿಸಿದವರು. ಈ ಎಲ್ಲ ಅಂಶಗಳು ೫೩ ಪುಟಗಳ ಈ ಚಿಕ್ಕ ನಾಟಕದಲ್ಲಿ ಸಮರ್ಥವಾಗಿ ಬಂದಿವೆ.

ಎರಡನೆಯದಾಗಿ ಬಸವಣ್ಣನವರ ಈ ಆದರ್ಶಸಮಾಜದ ಅಂಗವ್ಯಕ್ತಿಗಳು ಯಾರು ಅನ್ನುವದನ್ನೂ ಸಹ ನಾಟಕವು ಸ್ಪಷ್ಟಪಡಿಸುತ್ತದೆ. ಶರಣಚಳವಳಿಯು ಕೇವಲ ಕೆಳಸ್ತರದವರ ಚಳವಳಿಯಲ್ಲ ಅಥವಾ ಕೇವಲ ಚಿಂತಕರ ಚಳವಳಿಯೂ ಅಲ್ಲ. ಇದೊಂದು ಸರ್ವಸಮನ್ವಯ ಚಳವಳಿ. ಈ ಆದರ್ಶ ಸಮಾಜಕ್ಕೆ ಯಾರೂ ಹೊರತಲ್ಲ. ಇದರಲ್ಲಿ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ. ಅದಕ್ಕೆಂದೇ ಈ ನಾಟಕದ ಶೀರ್ಷಿಕೆ: “ಇವ ನಮ್ಮವ”.

ಈ ಎಲ್ಲ ಅಂಶಗಳನ್ನು ಗಮನಿಸಿದಾಗ ಇದು ಐತಿಹಾಸಿಕ ನಾಟಕವೂ ಹೌದು ಹಾಗೂ ಸಾಮಾಜಿಕ ನಾಟಕವೂ ಹೌದು ಎನ್ನುವದು ಸ್ಪಷ್ಟವಾಗುತ್ತದೆ. ಆದುದರಿಂದ ಇದನ್ನು ಐತಿಹಾಸಿಕ-ಸಾಮಾಜಿಕ ನಾಟಕವೆಂದು ಕರೆಯಬಹುದೇನೊ?

ಈ ನಾಟಕ ಪ್ರಾರಂಭವಾಗುವದು ಬೆಳಗಿನ ಸಮಯದಲ್ಲಿ , ಮುಕ್ತಾಯವಾಗುವದು ಮರುದಿನದ ಬೆಳಗಿನಲ್ಲಿ. ಹುಲ್ಲು ಹೊರುವ ಹೆಣ್ಣುಮಗಳು ಬಸವಣ್ಣನ ಜೊತೆಗೆ ಮಾತನಾಡುವ flashback ಹೊರತುಪಡಿಸಿ ನಾಟಕದ ಕಾಲ ಒಂದೇ ದಿನಮಾನದ್ದು.
ಸರಳ ಆಡುನುಡಿಯ ಸಂಭಾಷಣೆ ನಾಟಕದ ಸೊಬಗನ್ನು ಹೆಚ್ಚಿಸಿದೆ.
ನಾಟಕದ ಅಂತರಾಳ ಎಷ್ಟೇ ಗಂಭೀರವಾಗಿದ್ದರೂ ಸಹ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸಹಜ ವಿನೋದವನ್ನು ಹೊಮ್ಮಿಸುತ್ತವೆ. ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎನ್ನುವ ಆಶಾಭಾವವನ್ನು ಹೊಮ್ಮಿಸುವ ಈ ನಾಟಕವು ಬಸವಣ್ಣನವರ ಬಗೆಗೆ ರಚಿಸಲಾದ ಉಳಿದೆಲ್ಲ ದುರಂತ ನಾಟಕಗಳಿಗಿಂತ ಮನಸ್ಸನ್ನು ತಟ್ಟುತ್ತದೆ.

ಈ ನಾಟಕಕ್ಕೆ ಒಂದು ಮಿತಿಯೂ ಇದೆ. ಕಿರಿದರೊಳ್ ಪಿರಿದರ್ಥವಂ ಹೇಳುವಾಗ ಹುಟ್ಟುವ ಮಿತಿ ಅದು. ನಾಟಕದ ವಸ್ತು ಎಷ್ಟೇ ಜಟಿಲವಾಗಿದ್ದರೂ ಸಹ, ರಚನೆ ಸರಳವಾಗಿದೆ. ಇದು ಈ ನಾಟಕದ ಅನಿವಾರ್ಯತೆ ಹಾಗೂ ಮಿತಿ.
ಒಟ್ಟಿನಲ್ಲಿ ಕನ್ನಡದ ಶ್ರೇಷ್ಠ ನಾಟಕಗಳಲ್ಲಿ ಇದು ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು.
……………………………………………………………………………….
ಟಿಪ್ಪಣಿ: ವ್ಯಾಸ ದೇಶಪಾಂಡೆಯವರ ಬಗೆಗೆ ಹೆಚ್ಚಿನ ಮಾಹಿತಿಯನ್ನು
http://kn.wikipedia.org/wiki/%E0%B2%B5%E0%B3%8D%E0%B2%AF%E0%B2%BE%E0%B2%B8_%E0%B2%A6%E0%B3%87%E0%B2%B6%E0%B2%AA%E0%B2%BE%E0%B2%82%E0%B2%A1%E0%B3%86 ದಲ್ಲಿ ಪಡೆಯಬಹುದು.

Wednesday, May 20, 2009

ತುಂಬಿ ಬಂದಿತ್ತು..........ದ.ರಾ.ಬೇಂದ್ರೆ


ಬಸವಣ್ಣನ ಜೀವನದ ಕೊನೆಯ ದಿನಗಳಿಗೆ ಸಂಬಂಧಿಸಿದಂತೆ, ಬೇಂದ್ರೆಯವರು ‘ತಲೆದಂಡ’ ಎನ್ನುವ ನಾಟಕವನ್ನು ರಚಿಸಿದ್ದರು. ಈ ನಾಟಕವು ಪ್ರಕಟಿತವಾಗಲಿಲ್ಲ. ಈ ಹಾಡನ್ನು ಸ್ವತಃ ಬೇಂದ್ರೆಯವರೇ ಏಕತಾರಿಯ ಹಿನ್ನೆಲೆಯಲ್ಲಿ ೧೯೪೭ರಲ್ಲಿ ಹಾಡಿದ್ದರು. ಅದು ‘ಎಚ್.ಎಮ್.ವ್ಹಿ’ ಕಂಪನಿಯಿಂದ ಮುದ್ರಿತವಾಗಿತ್ತು. ಅನೇಕ ವರ್ಷಗಳ ನಂತರ ಗಿರೀಶ ಕಾರ್ನಾಡರು ಬಸವಣ್ಣನ ಬಗೆಗೆ ತಾವೂ ಒಂದು ನಾಟಕವನ್ನು ರಚಿಸಿದರು ಹಾಗು ಬೇಂದ್ರೆಯವರ ಅನುಮತಿಯನ್ನು ಪಡೆದುಕೊಂಡು ತಮ್ಮ ನಾಟಕಕ್ಕೆ ‘ತಲೆದಂಡ’ ಎನ್ನುವ ಹೆಸರನ್ನೇ ಕೊಟ್ಟರು. ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:
 

ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು ||ಪಲ್ಲವಿ||

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್....

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು ||ತುಮ್ ತುಮ್....

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳುಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು || ತುಮ್ ತುಮ್....

ಬೇಂದ್ರೆಯವರ ನಾಟಕದಲ್ಲಿ, ಬಸವಣ್ಣನವರ ಸಮಾಧಿಯ ಕೆಲಸ ನಡೆದಿರುವಾಗ ಅಲ್ಲಿಗೆ ಬಂದ ಮುದುಕ ಜಂಗಮನೊಬ್ಬನು ಈ ಹಾಡನ್ನು ಹೇಳುವನು. ಏಕತಾರಿಯ ನಾದದಲ್ಲಿ ಲೀನವಾಗುವಂತೆ, ಗೀಗೀ ಪದದ ಗತ್ತಿನಲ್ಲಿ ಈ ಹಾಡನ್ನು ಹೆಣೆಯಲಾಗಿದೆ.

ಚೈತನ್ಯಪುರುಷರು ದೇವಲೋಕದಿಂದ ಇಹಲೋಕಕ್ಕೆ ‘ಅವತರಣ’ ಮಾಡುತ್ತಾರೆ ಎನ್ನುವದು ಭಕ್ತರ ನಂಬುಗೆಯಾಗಿದೆ. ಬಸವಣ್ಣನವರು ಶಿವನ ಗಣಗಳಲ್ಲಿ ಒಬ್ಬರಾಗಿದ್ದು ಜನರ ಉದ್ಧಾರಕ್ಕಾಗಿ ಇಹಲೋಕಕ್ಕೆ ಅವತರಣ ಮಾಡಿದರು ಎನ್ನುವುದು ಒಂದು ನಂಬಿಕೆ. ಈ ಹಾಡನ್ನು ಆ ಹಿನ್ನೆಲೆಯಲ್ಲಿಯೂ ಅರ್ಥೈಸಬಹುದು. ಅಲ್ಲದೆ, ಬೇಂದ್ರೆಯವರ ಕವನಗಳಿಗೆ ಅನೇಕ ಆಯಾಮಗಳು ಇರುವುದರಿಂದ ಇನ್ನೂ ಬೇರೆ ರೀತಿಯಿಂದಲೂ ಅರ್ಥೈಸಬಹುದು. ಆ ಎಲ್ಲ ಆಯಾಮಗಳನ್ನು ಸಮಗ್ರಗೊಳಿಸಿದ ಒಂದು ವ್ಯಾಖ್ಯಾನವನ್ನು ಕೊಡಲು ಇಲ್ಲಿ ಪ್ರಯತ್ನಿಸಲಾಗಿದೆ. 

ಈ ಗೀತೆಯ ಮೊದಲ ನುಡಿಯನ್ನು ಗಮನಿಸಿರಿ: ‘ ಬೆಳಕಿಂತ ಬೆಳ್ಳಗೆ ಇತ್ತ, ಗಾಳಿಗಿಂತ ತೆಳ್ಳಗೆ ಇತ್ತ’ ಎನ್ನುವ ವಸ್ತು ಯಾವುದಿರಬಹುದು? ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮನು ವರ್ಣಿಸಿದ ಆತ್ಮವನ್ನು ಇದು ಹೋಲುತ್ತದೆ:
"ನೈನಂ ಛಿಂದಂತಿ ಶಸ್ತ್ರಾಣಿ, ನೈನಂ ದಹತಿ ಪಾವಕಃ
ನಚೈನಂ ಶೋಧಯಂತ್ಯಾಪೋ, ನ ಶೋಷಯತಿ ಮಾರುತ:" 

ಇಂತಹ ಆತ್ಮದ ಅವತರಣದ ಸ್ವರೂಪವನ್ನು ಈ ಹಾಡಿನ ಮೊದಲ ನುಡಿಯಲ್ಲಿ ವರ್ಣಿಸಲಾಗಿದೆ:

ಬೆಳಕಿಗಿಂತ ಬೆಳ್ಳಗೆ ಇತ್ತ
ಗಾಳಿಗಿಂತ ತೆಳ್ಳಗೆ ಇತ್ತ
ಜಡಿಯಿಂದಿಳಿದ ಗಂಗಿ ಹಾಂಗ
ಚಂಗನೆ ನೆಗೆದಿತ್ತ
ಮೈಯೊಳಗಿರುವ ಮೂಲಿಮೂಲಿಗೂ
ಮೂಡಿ ಬಂದಿತ್ತ
ಅಡಿಮುಡಿಗೂಡಿ ನಡುವಂತೆಲ್ಲಾ
ಮುಳುಗಿಸಿ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು.

ಭಗವಚ್ಚೈತನ್ಯದ ಒಂದು ಅಂಶವು ಪೃಥಕ್ಕರಣಗೊಳ್ಳುವಾಗ, ಮೊದಲಿಗೆ ಪಂಚಮಹಾಭೂತಗಳಲ್ಲಿ, ಅಂದರೆ ಪೃಥ್ವಿ, ನೀರು, ತೇಜ, ಆಕಾಶ ಹಾಗು ವಾಯು ರೂಪಗಳಲ್ಲಿ ವಿಘಟನೆ ಹೊಂದುತ್ತದೆ. ಈ ಚೈತನ್ಯವು ನಮ್ಮ ಐಹಿಕ ಪಂಚೇಂದ್ರಿಯಗಳ ಗ್ರಹಣಶಕ್ತಿಯನ್ನು ಮೀರಿದ ಬೆರಗು. ಆದುದರಿಂದಲೇ ಇದು ಬೆಳಕಿಗಿಂತಲೂ ಬೆಳ್ಳಗಿದೆ ಹಾಗು ಗಾಳಿಗಿಂತಲೂ ತೆಳ್ಳಗಿದೆ. ಶಿವನು ತನ್ನ ಜಡೆಯಲ್ಲಿ ಧರಿಸಿದ ಗಂಗಾದೇವಿಯು ಪತಿತೋದ್ಧಾರಕ್ಕಾಗಿ ಭೂಮಿಗೆ ಜಿಗಿದಂತೆ, ಈ ಚೈತನ್ಯವೂ ಭೂಮಿಗೆ ಧಾವಿಸಿದೆ. ಅಲ್ಲಿಂದ ಈ ನಾಡಿನ ಮೂಲೆಮೂಲೆಗೂ ಇದು ತಲುಪಿ ಅಲ್ಲಿಯ ಕಲ್ಮಶವನ್ನು ತೊಳೆದಿದೆ. ಅಡಿಯಿಂದ ಮುಡಿಯವರೆಗೂ ಅಂದರೆ ಸಮಾಜದ ಕೆಳಸ್ತರದಲ್ಲಿ ಇರುವವರಿಂದ ಹಿಡಿದು, ಮೇಲ್ತರಗತಿಯಲ್ಲಿ ಇರುವವರವರೆಗೂ ಈ ಗಂಗಾಪ್ರವಾಹದ ಪರಿಣಾಮವಾಗಿದೆ. ಭಕ್ತರ ಅಡಿ ಅಂದರೆ ನಡೆಯನ್ನು, ಮುಡಿ ಅಂದರೆ ವಿಚಾರವನ್ನು ಹಾಗು ನಡು ಅಂದರೆ ಆಚಾರವನ್ನು ಈ ಚೈತನ್ಯಗಂಗೆಯು ತುಂಬಿ, ತುಳುಕಿ ಅವರನ್ನು ಶುದ್ಧಗೊಳಿಸಿದೆ. ಬೆಳಕು ಅಜ್ಞಾನವನ್ನು, ಗಾಳಿಯು ದುರ್ಗಂಧವನ್ನು ಹಾಗು ನೀರು ಮಾಲಿನ್ಯವನ್ನು ತೆಗೆದು ಹಾಕುವ ಸಾಧನಗಳಾಗಿವೆ. ಕೈಲಾಸದಲ್ಲಿರುವ ಶಿವನ ತುಂಬಿಯು ಈ ಉದ್ದೇಶದಿಂದ ಧರಣಿಗೆ ಅವತರಿಸಿದೆ. ಬಸವಣ್ಣನವರ ಪ್ರಭಾವವು ನಾಡನ್ನೆಲ್ಲ ವ್ಯಾಪಿಸಿ, ಜನರ ಮನಸ್ಸನ್ನು ಶುದ್ಧಗೊಳಿಸಿದ ರೀತಿಯನ್ನು ಈ ಗೀತೆ ಹೀಗೆ ವರ್ಣಿಸಿದೆ ಎನ್ನಬಹುದು.

ಬಸವಣ್ಣನವರ ವ್ಯಕ್ತಿತ್ವವನ್ನು ವರ್ಣಿಸಲೂ ಸಹ ಈ ನುಡಿಯನ್ನು ಬಳಸಬಹುದು. ಬೆಳಕು, ಗಾಳಿ ಹಾಗು ಗಂಗೆ ಅರ್ಥಾತ್ ನೀರು ಇವು ಮಾನವನನ್ನು ಶುದ್ಧಗೊಳಿಸುವ ಸಾಧನಗಳು. ಅಲ್ಲದೆ ಈ ಮೂರು ಮಹಾಭೂತಗಳು (ತೇಜಸ್ಸು, ಪೃಥ್ವಿ ಹಾಗು ವಾಯು) ದೇಶಕಾಲವನ್ನು ಮೀರಿದ ಶಕ್ತಿಗಳು. ಬಸವಣ್ಣನವರ ಒಳಗೆ ಅರಳಿದ ಸೂಕ್ಷ್ಮ ದೈವೀ ಚೈತನ್ಯವನ್ನು ಬಣ್ಣಿಸಲು ನಿಸರ್ಗದ ಚೈತನ್ಯಗಳಾದ ಬೆಳಕು, ಗಾಳಿ ಹಾಗೂ ಗಂಗೆ ಇವುಗಳನ್ನೇ ಪ್ರತೀಕಗಳಾಗಿ ಬಳಸುವದು ಸಹಜ. ಆದುದರಿಂದಲೇ ಇಲ್ಲಿ ಹಾಡುತ್ತಿರುವ ಜಂಗಮನು ಈ ಸೂಕ್ಷ್ಮ ಚೈತನ್ಯವು ಬೆಳಕಿಗಿಂತಲೂ ಬೆಳ್ಳಗೆ ಇತ್ತು ಹಾಗೂ ಗಾಳಿಗಿಂತಲೂ ತೆಳ್ಳಗೆ ಇತ್ತು ಎಂದು ಬಣ್ಣಿಸುತ್ತಿದ್ದಾನೆ. ಬೆಳಕು ಜ್ಞಾನವನ್ನು ಕೊಡುತ್ತದೆ, ಗಾಳಿ ಎಲ್ಲ ಜೀವಿಗಳ ಪ್ರಾಣಕ್ಕೆ ಆಧಾರವಾಗಿದೆ. ಗಂಗೆ ಜೀವಿಗಳ ಕೊಳೆಯನ್ನು ತೊಳೆದು ಅವರನ್ನು ಪಾವನಗೊಳಿಸುವಳು. ಬಸವಣ್ಣನವರ ಲೋಕಕಲ್ಯಾಣಕರ ವ್ಯಕ್ತಿತ್ವವು ಬೆಳಕು, ಗಾಳಿ ಹಾಗೂ ಗಂಗೆಯಂತೆ ಪರಿಶುದ್ಧವಾಗಿದೆ, ಅಲ್ಲದೆ ಸಮಾಜಕ್ಕೆ ಒಳಿತನ್ನು ಮಾಡಿದೆ. ಈ ರೂಪಕವು ಬಸವಣ್ಣನವರ ಆಧ್ಯಾತ್ಮಿಕ ವ್ಯಕ್ತಿತ್ವವನ್ನು ವರ್ಣಿಸುವಂತೆ, ಅವರ ಸಾಮಾಜಿಕ ವ್ಯಕ್ತಿತ್ವವನ್ನೂ ಸಹ ವರ್ಣಿಸುತ್ತದೆ. ಬಸವಣ್ಣನವರೂ ಸಹ ಬೆಳಕು, ಗಾಳಿ ಹಾಗು ಗಂಗೆಯಂತೆ ಸಮಾಜದ ಶುದ್ಧೀಕರಣದಲ್ಲಿ ತೊಡಗಿದ್ದರು. ನಾಡಿನ ಮೂಲೆಮೂಲೆಗಳಿಂದ ಆಕರ್ಷಿತರಾದವರು ಕಲ್ಯಾಣಕ್ಕೆ ಬಂದು ಬಸವಣ್ಣನವರಿಗೆ ಶರಣಾದರು, ಬಸವಣ್ಣನವರ ಶರಣರಾದರು. ಈ ಆಕರ್ಷಣೆಗೆ, ಇಂತಹ ಅದ್ಭುತ ಪರಿಣಾಮಕ್ಕೆ ಕಾರಣವೇನು? ಎರಡನೆಯ ನುಡಿಯಲ್ಲಿ ಇದರ ಕಾರಣವನ್ನು ಈ ರೀತಿಯಾಗಿ ಹೇಳಲಾಗಿದೆ: 

ಹೂವಿಗಿರುವ ಕಂಪು ಇತ್ತ
ಹಾಡಿಗಿರುವ ಇಂಪು ಇತ್ತ
ಜೀವದ ಮಾತು ಕಟ್ಟಿಧಾಂಗ
ಎದ್ಯಾಗ ನಟ್ಟಿತ್ತ
ವರ್ಮದ ಮಾತು ಆಡಿಧಾಂಗ
ಮರ್ಮಕ ಮುಟ್ಟಿತ್ತ
ಬೆಳಕಿಗೆ ಮರಳಿ ಕಮಲವರಳಿ
ಜೇನ ಬಿಟ್ಟಿತ್ತ ತಂಗೀ
ತುಂಬಿ ಬಂದಿತ್ತು.

ಬಸವಣ್ಣನವರ ವ್ಯಕ್ತಿತ್ವವು ಸರ್ವರನ್ನು ಆಕರ್ಷಿಸುವ ವ್ಯಕ್ತಿತ್ವ. ಆದುದರಿಂದಲೇ ಬಡವರು, ಶ್ರೀಮಂತರು, ದಲಿತರು, ಸವರ್ಣೀಯರು, ಸೇವಕರು ಹಾಗು ಮಹಾರಾಜರು ಇವರೆಲ್ಲ ಬಸವಣ್ಣನವರನ್ನು ಮುತ್ತಿಕೊಂಡರು. ಆದರೆ ಈ ಆಕರ್ಷಕ ವ್ಯಕ್ತಿತ್ವವು ಪ್ರಯತ್ನಪಟ್ಟು ಬೆಳೆಯಿಸಿಕೊಂಡ ವ್ಯಕ್ತಿತ್ವವಲ್ಲ. ಹೂವಿನಲ್ಲಿರುವ ಕಂಪು ಅದರ ಸಹಜ ಗುಣವಾಗಿದೆ, ಅದು ಕೃತಕ ಸುಗಂಧವಲ್ಲ. ಅದರಂತೆ ನೈಜ ಹಾಡುಗಾರನಲ್ಲಿರುವದು ದೇವದತ್ತವಾದ ಇಂಪಾದ ಧ್ವನಿ. ಬಸವಣ್ಣನವರದು ಈ ಬಗೆಯ ದೇವದತ್ತವಾದ, ನೈಜ ವ್ಯಕ್ತಿತ್ವವಾಗಿತ್ತು. ಅವರು ಜನರಿಗೆ ಹೇಳುವ ಮಾತುಗಳು ಆಡಂಬರದ ಉಪದೇಶವಾಗಿರದೆ, ಅವರ ಜೀವಾಳದಿಂದ ಬಂದ ಮಾತಾಗಿರುತ್ತಿತ್ತು. ಆ ಕಾರಣದಿಂದಲೇ ಕೇಳುಗರ ಎದೆಯಲ್ಲಿ ಅದು ನಾಟುತ್ತಿತ್ತು. ಬೆಳಕು, ಗಾಳಿ ಹಾಗೂ ಗಂಗೆ ಇವು ನಕಾರಾತ್ಮಕ ಗುಣಗಳನ್ನು ನಿವಾರಿಸುತ್ತವೆ. ಅಷ್ಟಾದರೆ ಸಾಕೆ? ಸಕಾರಾತ್ಮಕ ಗುಣಗಳೂ ಸಹ ಬೇಕಲ್ಲವೆ? ಈ ನುಡಿಯಲ್ಲಿ ಬಸವಣ್ಣನವರ ಆಚಾರ-ವಿಚಾರಗಳು ಜನರನ್ನು ಸಕಾರಾತ್ಮಕವಾಗಿ ಪ್ರಭಾವಿಸುವ ರೀತಿಯನ್ನು ಹೇಳಲಾಗಿದೆ. ಹೂವಿನ ಕಂಪಿನಂತೆ, ಹಾಡಿನ ಇಂಪಿನಂತೆ ಅವರ ಆಚಾರ-ವಿಚಾರಗಳು ಜನರನ್ನು ಪ್ರಭಾವಿಸುತ್ತಿದ್ದವು. ಅವರ ವಚನಗಳಲ್ಲಿ ನಾಮಾಮೃತವು ತುಂಬಿದೆ, ಈ ಅಮೃತಪಾನ ಮಾಡುವ ತುಂಬಿ ಅವರು. ಈ ವಚನಗಳ ಕಂಪು ಹಾಗೂ ಇಂಪು ಎಲ್ಲೆಡೆ ಹರಡಿವೆ, ತುಂಬಿಕೊಂಡಿವೆ.

ಬಸವಣ್ಣನವರ ನಡೆ ಹಾಗು ನುಡಿಗಳ ಸರಳತೆ, ಸೌಜನ್ಯ ಹಾಗು ಅವರಲ್ಲಿರುವ ಸತ್ಯ ಇವು ಜನರ ಮನಸ್ಸಿಗೆ ನಾಟುತ್ತಿದ್ದವು. ಇಷ್ಟೇ ಅಲ್ಲ, ಆ ಮಾತಿನಲ್ಲಿಯ ವರ್ಮ ಅಂದರೆ ಧೀರತನ ಅನೇಕ ಸಲ ಸಮಾಜದ ರೂಢಿಗಳಿಗೆ ವಿರುದ್ಧವಾಗಿರುತ್ತಿದ್ದವು. ಆದರೂ ಸಹ ಆಲೋಚಿಸಿದಾಗ ಅದು ಸತ್ಯ ಎನ್ನುವುದರ ಅರಿವು ತಟ್ಟನೆ ಆಗುತ್ತಿತ್ತು. ಕೇಳುಗರ ಮನಸ್ಸನ್ನು ಬೇಧಿಸುತ್ತಿತ್ತು ಅದನ್ನೇ  ‘ವರ್ಮದ ಮಾತು ಆಡಿಧಾಂಗ ಮರ್ಮಕ ಮುಟ್ಟಿತ್ತ’ ಎಂದು ಜಂಗಮನು ಹೇಳುತ್ತಿದ್ದಾನೆ. ಸಾಂದರ್ಭಿಕವಾಗಿ ಇಲ್ಲಿ ನಾವು ಮತ್ತೊಂದು ಮಾತನ್ನು ಅಂದರೆ ಬೇಂದ್ರೆಯವರ ಪದಪ್ರತಿಭೆಯನ್ನೂ ಗಮನಿಸಬೇಕು. ಉತ್ತರ ಕರ್ನಾಟಕದ ರೂಢ ಮಾತಿನಲ್ಲಿ ವರ್ಮ ಅಂದರೆ ವೈರ ಹಾಗು ಮರ್ಮ ಅಂದರೆ  ಅಂತರಂಗದ ಸೂಕ್ಷ್ಮತೆ. ಈ ಪದಗಳನ್ನು ವಿಶೇಷ ಅರ್ಥವನ್ನು ಸೂಚಿಸುವಂತೆ ಬೇಂದ್ರೆ ಇಲ್ಲಿ ಬಳಸಿಕೊಂಡಿರುವುದು ಅವರ ಕಾವ್ಯಪ್ರತಿಭೆಗೆ ಸಾಕ್ಷಿಯಾಗಿದೆ.

ಒಳ್ಳೆಯವರನ್ನು ಹಾಗು ಕೇಡುಗರನ್ನು ಒಳಗೊಂಡ ಸಂಪೂರ್ಣ ಸಮಾಜವೇ ಬಸವಣ್ಣನವರ ಹೃದಯದ ಮಾತುಗಳತ್ತ ಆಕರ್ಷಿತವಾಗಿದೆ. ಇದನ್ನು ಒಂದು ಸುಂದರವಾದ ಉಪಮೆಯ ಮೂಲಕ ವಿವರಿಸಲಾಗಿದೆ. ಕತ್ತಲಲ್ಲಿರುವ ಕಮಲವು ಮುಚ್ಚಿಕೊಂಡಿರುತ್ತದೆ. ಸೂರ್ಯೋದಯವಾದಾಗ, ಅದು ಬೆಳಕಿಗೆ ಮರಳುವದರಿಂದ ಅದು ಅರಳುತ್ತದೆ. ಅದರಲ್ಲಿರುವ ಜೇನನ್ನು ತುಂಬಿಗಳು ಹೀರಿಕೊಳ್ಳುತ್ತವೆ. ಇದರಂತೆಯೇ ಕತ್ತಲಲ್ಲಿದ್ದ ಸಮಾಜವು ವಿಚಾರದ ಬೆಳಕಿಗೆ ಎದುರಾದಾಗ,  ತನ್ನಲ್ಲಿರುವ ಮೂಢ ಆಚಾರವಿಚಾರಗಳನ್ನು ತ್ಯಜಿಸುತ್ತದೆ. ಸಮಾಜವೆನ್ನುವ ಕಮಲಕ್ಕೆ ಬಸವಣ್ಣನವರು ಬೆಳಕು ನೀಡಿದ ರವಿಯಾಗಿದ್ದಾರೆ. ಈ ರವಿಗೂ ಒಂದು ಅಸ್ತಮಾನ ಇರಬೇಕಲ್ಲವೆ? ಬಸವಣ್ಣನವರ ಅವತರಣ ಹಾಗು ಸಾಮಾಜಿಕ ಕಾರ್ಯವನ್ನು ಬಣ್ಣಿಸಿದ ಬಳಿಕ, ಅವರ ಅನೂಹ್ಯ ಹಾಗು ಕ್ಷಿಪ್ರ ಕೊನೆಯನ್ನು ಮೂರನೆಯ ನುಡಿಯಲ್ಲಿ ಬಣ್ಣಿಸಲಾಗಿದೆ. ಮೊದಲನೆಯ ನುಡಿಯಲ್ಲಿ ಬೆಳಕಿಗಿಂತ ಬೆಳ್ಳಗಿತ್ತ ಎನ್ನುವ ವರ್ಣನೆ, ಮೂರನೆಯ ನುಡಿಯಲ್ಲಿ ‘ಕಾಲಧಾಂಗ ಕಪ್ಪಗಿತ್ತ’ ಎಂದಾಗಿದೆ. ಕಾಲ ಎಂದರೆ ಎಲ್ಲವನ್ನೂ ನಾಶಗೊಳಿಸುವ ಕಾಲಪುರುಷ. ಈತ ಜೀವನದ ಎಲ್ಲ ಬಣ್ಣಗಳನ್ನೂ ನುಂಗಿ ಹಾಕುವ ಕಾಳವರ್ಣದವನು.

ಕಾಲದ ಮೂರು ಮುಖಗಳು: ಭೂತ ಹಾಗು ಭವಿಷ್ಯತ್ ಹಾಗು ವರ್ತಮಾನ. ಭೂತ ಹಾಗು ಭವಿಷ್ಯತ್ ಇವು ಯಾವಾಗಲೂ ನಿಗೂಢವೇ ಸರಿ. ಆದುದರಿಂದಲೇ ಇವು ಕಪ್ಪು ಕುಳಿಗಳು! ಜೀವಿಗಳ ಆಪೋಶನವನ್ನು ಸಾವು ಮೌನವಾಗಿ ತೆಗೆದುಕೊಳ್ಳುತ್ತದೆ ಹಾಗು ಜೀವಿಯನ್ನು ನಿಶ್ಚಲಗೊಳಿಸುತ್ತದೆ. ಆದುದರಿಂದ ಕಾಲವು ಕಪ್ಪಾದರೆ, ಸಾವು ತೆಪ್ಪಗೆ ಮಾಡುವ ಕ್ರಿಯೆಯಾಗಿದೆ. ಬಸವಣ್ಣನವರ ಅವತಾರವು ಈ ಕಾಲದಲ್ಲಿ ಈಗ ವಿಲೀನವಾಗುವ ಕಾಲ ಬಂದಿದೆ. ಜಂಗಮನು ಅದನ್ನು ಹಾಡುವ ಬಗೆ ಹೀಗಿದೆ: 

ಕಾಲದ್ಹಾಂಗ ಕಪ್ಪಗಿತ್ತ
ಸಾವಿನ್ಹಾಂಗ ತೆಪ್ಪಗಿತ್ತ
ಹದ್ದು ಬಂದು ಹಾವಿನ ಮ್ಯಾಲೆ
ಎರಗಿದಂತಿತ್ತ
ಇರುಳ ಮಬ್ಬಿನ್ಯಾಗ ಹಗಲಿನ ಬೆಳಕು
ಕರಗಿದಂತಿತ್ತ
ಗುಂಗು ಹಿಡಿದು ತಂಗಿದಾಗ
ತುಂಬಿ ನಿಂತಿತ್ತ ಈಗ
ತುಳುಕಿ ಹೋಗಿತ್ತ
ತಂಗೀ ತುಂಬಿ ಬಂದಿತ್ತು.

ಸಮಾಜಸುಧಾರಣೆಯು ಕಲ್ಯಾಣದಲ್ಲಿ ಈ ರೀತಿ ನಡೆದಿರುವಾಗಲೇ ಒಂದು ಆಘಾತಕಾರಿ ಘಟನೆ ಸಂಭವಿಸುತ್ತದೆ. ಬಸವಣ್ಣನವರು ಕಲ್ಯಾಣವನ್ನು ಬಿಟ್ಟು ಕೂಡಲಸಂಗಮಕ್ಕೆ ಹೋಗುತ್ತಾರೆ. ಅಲ್ಲಿ ಅವರ ಜಲಸಮಾಧಿಯಾಗುತ್ತದೆ. ಇತ್ತ ಕಲ್ಯಾಣದಲ್ಲಿ ಅನೇಕ ಶರಣರ ನರಮೇಧವೂ ನಡೆಯುತ್ತದೆ. ಈ ದುರಂತವನ್ನು ‘ಕಾಲದ್ಹಾಂಗ ಕಪ್ಪಗಿತ್ತ’ ಎಂದು ಬೇಂದ್ರೆ ಬಣ್ಣಿಸುತ್ತಾರೆ. ಕಪ್ಪು ಅಥವಾ ಕತ್ತಲೆಯು ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ. ಕಾಲಗರ್ಭದಲ್ಲಿ ಏನಿದೆ ಎನ್ನುವದನ್ನು ನಾವು ತಿಳಿಯಲಾರೆವು. ಕಲ್ಯಾಣದಲ್ಲಿ ನಡೆದ ವಿನಾಶದ ನಂತರ ಅಲ್ಲಿ ನೆಲೆಸಿದ್ದು ಸ್ಮಶಾನಶಾಂತಿ. ಅದನ್ನು ಬೇಂದ್ರೆಯವರು ಸಾವಿನ್ಹಾಂಗ ತೆಪ್ಪಗಿತ್ತ ಎಂದು ಹೇಳುತ್ತಾರೆ. ಏನಾಗುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲಿಯೇ ಜರುಗಿದ ಈ ವಿಪ್ಲವವನ್ನು ‘ಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತ’ ಎಂದು ಬೇಂದ್ರೆ ವರ್ಣಿಸುತ್ತಾರೆ.

‘ಹದ್ದು ಬಂದು ಹಾವಿನ ಮ್ಯಾಲೆ ಎರಗಿದಂತಿತ್ತ’ ಎನ್ನುವ ಉಪಮೆಯು ಅನೇಕ ಅರ್ಥಗಳನ್ನು ಧ್ವನಿಸುತ್ತದೆ. ಮೊದಲನೆಯದಾಗಿ ಇದರಲ್ಲಿ ಕ್ರೌರ್ಯ ಅಡಗಿದೆ. ಬಸವಣ್ಣನವರ ಕೊನೆಯ ದಿನಗಳಲ್ಲಿ ನಡೆದ ಸಾಮಾಜಿಕ ವಿಪ್ಲವವು ಭಯಂಕರವಾಗಿತ್ತು. ಅನೇಕ ಶರಣರ ಕೊಲೆ ಹಾಗು ನಿರ್ಗಮನದಿಂದಾಗಿ ಕಲ್ಯಾಣವು ಹಾಳು ಬಿದ್ದು ಹೋಯಿತು. ಈ ಉಪಮೆಯು ಆ ಸಮಯದ ಘಟನೆಗಳನ್ನು ನೆನಪಿಗೆ ತರುತ್ತದೆ. ಹದ್ದು ಎರಗುವುದು ಅತ್ಯಂತ ವೇಗವಾಗಿ. ಬಸವಣ್ಣನವರ ದೇಹತ್ಯಾಗವೂ ಅಷ್ಟೇ ಆಕಸ್ಮಿಕವಾಗಿ ಹಾಗು ತ್ವರಿತವಾಗಿ ನಡೆದು ಹೋಯಿತು. ನಾಡನ್ನು ಬೆಳಗಿದ ಬೆಳಕು ಈಗ ಎಲ್ಲೆಡೆಗೂ ಹಬ್ಬಿದ ಮಬ್ಬುಗತ್ತಲೆಯಲ್ಲಿ ಕರಗಿ ಹೋಯಿತು. ಈ ಸಾಲನ್ನು ಓದುವಾಗ ಗಾಂಧೀಜಿಯವರ ಸಾವಿನ ನೆನಪೂ ಆಗದಿರದು. ಬಸವಣ್ಣ ಹಾಗು ಗಾಂಧೀಜಿಯವರ ಸಾವಿನಲ್ಲಿ ಭಿನ್ನತೆ ಇದೆ. ಆದರೆ ಸಮಾಜವನ್ನು ಸತ್ಯ ಹಾಗು ಪ್ರೇಮಗಳಿಂದ ಬೆಳಗಿದ ಈ ಎರಡು ಜ್ಯೋತಿಗಳು ಕತ್ತಲೆಯಲ್ಲಿ ಕರಗಿ ಹೋದದ್ದರಲ್ಲಿ ಸಾಮ್ಯತೆ ಇದೆ. ‘ಮಬ್ಬು’ ಎನ್ನುವ ಪದವನ್ನು ಗಮನಿಸಿರಿ. ಮಬ್ಬು ಎನ್ನುವುದು ಕತ್ತಲೆಯನ್ನು ಹಾಗು ಬುದ್ಧಿಗೇಡಿತನವನ್ನಷ್ಟೇ ಅಲ್ಲ, ಯಾವುದೋ ವಿಚಾರಧಾರೆಯ ಹಿಡಿತವನ್ನೂ ಸೂಚಿಸುತ್ತದೆ. ಸಮಾಜದಲ್ಲಿ ಮತ್ತೆ ಕತ್ತಲೆ ಆವರಿಸಿತು. ಸುಧಾರಣೆಯ ಹಗಲಿನ ಬೆಳಕು ವಿಪ್ಲವದ ಇರುಳಿನ ಮಬ್ಬಿನಲ್ಲಿ ಮತ್ತೆ ಕರಗಿತು! (ಇರುಳು ಶಾಶ್ವತವಲ್ಲ ಎನ್ನುವ ತಿಳಿವಳಿಕೆ ಇಲ್ಲಿ ಮನೋಗತವಾಗಿದೆ.)
 

ಇದೆಲ್ಲ ಸರಿ, ಬಸವಣ್ಣನವರ ನಂತರ ಈ ಸಮಾಜದ ಗತಿ ಏನು? ಹಗಲಿನ ಬೆಳಕು ರಾತ್ರಿಯ ಮಬ್ಬಿನಲ್ಲಿ ಕರಗಿ ಹೋದಂತೆ, ಬಸವಣ್ಣನವರ ಸತ್ಕಾರ್ಯಗಳು ಕರಗಿ ಹೋದವು. ಮಬ್ಬು ಎಂದರೆ ಕತ್ತಲೆ ಎನ್ನುವ ಅರ್ಥವಲ್ಲದೆ ಬುದ್ಧಿಹೀನತೆ, ವಿಚಾರದಾಸ್ಯ ಎನ್ನುವ ಅರ್ಥವೂ ಇರುವದನ್ನು ಗಮನಿಸಬೇಕು. 

ಸಾಮಾಜಿಕ ಹಾಗು ಆಧ್ಯಾತ್ಮಿಕ ಸುಧಾರಣೆಯಲ್ಲಿ ಬಸವಣ್ಣನವರು ಒಂದೇ ಮನಸ್ಸಿನಿಂದ ನಿರತರಾಗಿದ್ದರು. ಈ ಕ್ರಿಯೆಯನ್ನು ‘ಗುಂಗು ಹಿಡಿದು ತಂಗಿದಾಗ’ ಎಂದು ಬಣ್ಣಿಸಲಾಗಿದೆ. ಗುಂಗಿ ಹುಳವು ಅಂದರೆ ಭ್ರಮರವು ಒಂದೇ ಧ್ವನಿಯನ್ನು ಹೊರಡಿಸುತ್ತ ಹಾರುತ್ತಿರುತ್ತದೆ. ಅದು ‘ತಂಗಿದಾಗ’ ಅಂದರೆ ಕಲ್ಯಾಣವನ್ನೇ ಕೇಂದ್ರವನ್ನಾಗಿ ಮಾಡಿಕೊಂಡು ಅಲ್ಲಿ ತಳವೂರಿದಾಗ ಎನ್ನುವ ಅರ್ಥವು ಇಲ್ಲಿ ನಿಹಿತವಾಗಿದೆ. ಬಸವಣ್ಣನವರದೂ ಸಹ ಅದರಂತೆಯೆ ಒಂದೇ ಧ್ವನಿ. ಅದು ಶಿವಾಚಾರದ ಧ್ವನಿ. ಶಿವಾಚಾರವನ್ನು ತುಂಬಿಕೊಂಡ ಅವರ ವ್ಯಕ್ತಿತ್ವವು ತುಂಬಿದ ಕೊಡವಾಗಿತ್ತು. ಆ ತುಂಬಿದ ಚೈತನ್ಯಜಲ ವಿಪ್ಲವ ಸಮಯದಲ್ಲಿ ತುಳುಕಿ ಹೋಯಿತು.

ಕಲ್ಯಾಣದ ವಿಪ್ಲವಕ್ಕೂ ಮೊದಲು ಬಸವಣ್ಣನವರ ಅನುಚರರು ಅವರ ಸುತ್ತಲೂ ‘ಗುಂಗು ಹಿಡಿದವರಂತೆ’ ಕೂಡಿರುತ್ತಿದ್ದರು. ‘ತಂಗುವದು’ ಎಂದರೆ ಅಲ್ಲಿಯೇ ನೆಲೆ ನಿಲ್ಲುವದು. ಕಲ್ಯಾಣದಲ್ಲಿದ್ದ ಶರಣರೆಲ್ಲ, ಈ ವಿಪ್ಲವದ ನಂತರ ತುಳುಕಿ ಹೋದರು. ಈ ಸಾಲುಗಳು ಬಸವಣ್ಣನವರಿಗೂ ಅನ್ವಯಿಸುತ್ತವೆ. ಕಲ್ಯಾಣದಲ್ಲಿ ತಂಗಿದ್ದಾಗ ಅವರು ‘ಗುಂಗು ಹಿಡಿದ’ ತುಂಬಿಯಂತೆ ಇದ್ದರು. ತುಂಬಿಯು ‘ಗುಂ ಗುಂ’ ಎನ್ನುವ ಒಂದೇ ನಾದವನ್ನು ಹೊರಡಿಸುತ್ತದೆ. ಬಸವಣ್ಣನವರಿಗೆ ಹಿಡಿದ ಗುಂಗು ಶಿವಾಚಾರದ ಗುಂಗು, ಸಮಾಜದ ಉದ್ಧಾರದ ಗುಂಗು. ಅವರು ಹೊರಡಿಸುತ್ತಿದ್ದ ಧ್ವನಿಯೂ ಅದೊಂದೇ ಧ್ವನಿ. ತಮ್ಮ ವ್ಯಕ್ತಿತ್ವವನ್ನೆಲ್ಲ , ತಮ್ಮ ತನು, ಮನ, ಧನವನ್ನೆಲ್ಲ ಅದರಲ್ಲಿಯೇ ತೊಡಗಿಸಿ, ಅದರಲ್ಲಿಯೇ ಅವರು ತುಂಬಿಕೊಂಡಿದ್ದರು. ಆದರೆ ಅವರ ಕಾಲವು ತುಂಬಿ ಬಂದಿತ್ತು ಹಾಗು ಬಸವಣ್ಣನವರ ಚೈತನ್ಯವು ಈಗ ತುಳುಕಿ ಹೋಯಿತು ಅಂದರೆ ಇಲ್ಲದಂತಾಯಿತು.

ಇನ್ನು ಈ ಗೀತೆಯ ಪಲ್ಲವಿಯನ್ನು ಗಮನಿಸೋಣ:

ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್ ತುಮ್
ತುಂಬಿ ಬಂದಿತ್ತ ತಂಗೀ
ತುಂಬಿ ಬಂದಿತ್ತು||
 ತುಮ್ ತುಮ್..... ಎನ್ನುವ ಪದವು ಏಕತಾರಿಯ ನಾದಕ್ಕೆ ಸಂವಾದಿಯಾದ ಪದವಾಗಿದೆ. ಬೇಂದ್ರೆಯವರ ‘ತಲೆದಂಡ’ ನಾಟಕದಲ್ಲಿಯ ಜಂಗಮನು ಏಕತಾರಿಯನ್ನು ಬಾರಿಸುತ್ತಲೇ ಈ ಗೀತೆಯನ್ನು ಹಾಡುತ್ತಿರುತ್ತಾನೆ. ಮೊದಲನೆಯ ನುಡಿಯ ಕೊನೆಯಲ್ಲಿ ಆತನು ‘ತುಂಬಿ ಬಂದಿತ್ತ’ ಎಂದು ಹೇಳುವಾಗ, ಬಸವಣ್ಣನವರನ್ನು ಭ್ರಮರಕ್ಕೆ ಹೋಲಿಸಿ ಅವರ ಅವತರಣಕ್ಕೆ ಸಂಕೇತವಾಗಿ ‘ತುಂಬಿ’ ಪದವನ್ನು ಬಳಸಲಾಗಿದೆ. ಬಸವಣ್ಣವರ ವ್ಯಕ್ತಿತ್ವದ ಪರಿಪೂರ್ಣತೆಯನ್ನು ಬಣ್ಣಿಸಲು ಹಾಗು ಕೈಲಾಸದಿಂದ ಭೂಮಿಗೆ ಈ ದೇವ-ತುಂಬಿಯ ಅವತರಣವನ್ನು ಸೂಚಿಸಲು ‘ತುಂಬಿ ಬಂದಿತ್ತ’ ಎಂದು ಹೇಳಲಾಗಿದೆ. ಕೈಲಾಸದಲ್ಲಿರುವ ದುಂಬಿಯು ಈಗ ಭೂಲೋಕಕ್ಕೆ ಬಂದಿದೆ ಎನ್ನುವುದರ ಸೂಚನೆ ಇದು.

ಎರಡನೆಯ ನುಡಿಯಲ್ಲಿ ಸಾಮಾಜಿಕ ಹಾಗು ಆಧ್ಯಾತ್ಮಿಕ ಕಾರ್ಯದಲ್ಲಿ ಬಸವಣ್ಣನವರು ತುಂಬಿಕೊಂಡಿದ್ದನ್ನು ಸೂಚಿಸಲಾಗಿದೆ. ಬಸವಣ್ಣನವರ ಆಚಾರ, ವಿಚಾರಗಳು ಸಮಾಜವನ್ನು ಪೂರ್ಣವಾಗಿ ತುಂಬಿದವು ಅಂದರೆ ಆವರಿಸಿದವು ಹಾಗು ಪ್ರಭಾವಿಸಿದವು ಎನ್ನುವ ಸೂಚನೆಯು ‘ತುಂಬಿ ಬಂದಿತ್ತ’ ಪದದಲ್ಲಿ ಅಡಕವಾಗಿದೆ.
ಮೂರನೆಯ ನುಡಿಯಲ್ಲಿ ಬಸವಣ್ಣನವರ ಕಾಲವು ತುಂಬಿ ಬಂದಿದ್ದನ್ನು ಸೂಚಿಸಲಾಗಿದೆ.ಕನ್ನಡ ನಾಡಿನಲ್ಲಿ ಒಂದು ಯುಗಸಮಾಪ್ತಿಯಾಯಿತು.
ಬಸವಣ್ಣನವರ ಜೀವನದ ಮಂಗಲಗೀತೆಯಂತೆ ಇರುವ ಈ ಕವನದಲ್ಲಿ ‘ತುಂಬಿ’ ಪದವನ್ನು ಬಳಸಲು ಬೇಂದ್ರೆಯವರಿಗೆ ಬಹುಶಃ ಬಸವಣ್ಣನವರ ಒಂದು ವಚನದಿಂದಲೇ ಪ್ರೇರಣೆ ದೊರೆತಿರಬಹುದು. ಭಕ್ತಿಭಂಡಾರಿ ಬಸವಣ್ಣನವರು ಕೂಡಲಸಂಗಮದೇವರಲ್ಲಿ ಇರಿಸಿದ ಭಕ್ತಿ ಆ ವಚನದಲ್ಲಿ ವ್ಯಕ್ತವಾಗಿದೆ. ಆ ವಚನ ಹೀಗಿದೆ:

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ
ಮನದಲ್ಲಿ ನಿಮ್ಮ ನೆನಹು ತುಂಬಿ
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ
ಕೂಡಲಸಂಗಮದೇವಾ
ನಿಮ್ಮ ಚರಣಕಮಲದೊಳಾನು ತುಂಬಿ

ಇದರಂತೆಯೇ ಅಲ್ಲಮಪ್ರಭುಗಳೂ ಸಹ ಒಂದು ವಚನವನ್ನು ರಚಿಸಿದ್ದಾರೆ. ಅದು ಹೀಗಿದೆ:

ಗಿಡದ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು, ತುಂಬಿ ನೋಡಾ!
ಆತುಮ ತುಂಬಿ ತುಂಬಿ ನೋಡಾ!
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರ ಲಿಂಗಕ್ಕೆರಗಿ ನಿಬ್ಬೆರಗಾಯಿತ್ತು ತುಂಬಿ ನೋಡಾ!!

ಅಲ್ಲಮಪ್ರಭುವಿನ ವಚನವು ಗಿಡವನ್ನು ಪ್ರಪಂಚಕ್ಕೆ ಹಾಗೂ ಗಿಡದ ಮೇಲಿರುವ ತುಂಬಿಯನ್ನು ಆತ್ಮಕ್ಕೆ ಹೋಲಿಸುತ್ತದೆ. ಆತ್ಮದ ವಿಕಸನ ಹಾಗೂ ಪರಮಾತ್ಮದ ಆನಂದವನ್ನು ಅಲ್ಲಮಪ್ರಭುಗಳು ತಮ್ಮ ವಚನದಲ್ಲಿ ಬಣ್ಣಿಸಿದ್ದಾರೆ.
ಈ ಎರಡು ವಚನಗಳಲ್ಲಿಯ ‘ತುಂಬಿ’ ಬೇಂದ್ರೆಯವರ ಕವನಕ್ಕೆ ಪ್ರೇರಣೆಯಾಗಿರಬಹುದು! 
ಈ ಕವನವು ‘ಸಖೀಗೀತ’ ಸಂಕಲನದಲ್ಲಿ ಅಡಕವಾಗಿದೆ.

Wednesday, May 6, 2009

ಅಷ್ಟು ಪ್ರೀತಿ ಇಷ್ಟು ಪ್ರೀತಿ............ದ.ರಾ.ಬೇಂದ್ರೆ

ಸಖೀಗೀತದಲ್ಲಿ ಬೇಂದ್ರೆಯವರು ತಮ್ಮ ಹೆಂಡತಿಯನ್ನು ವಿಧಿ ತಂದ ವಧುಎಂದು ಬಣ್ಣಿಸಿದ್ದಾರೆ. ಅದೇ ರೀತಿಯಲ್ಲಿ ಅವರ ಹೆಂಡತಿ ಲಕ್ಷ್ಮೀಬಾಯಿಯವರಿಗೆ ಬೇಂದ್ರೆ ವಿಧಿ ತಂದ ವರಆಗಿರಲಿಕ್ಕೆ ಸಾಕು. ಮದುವೆಯಾದಾಗ ಬೇಂದ್ರೆಯವರಿಗೆ ೨೩ ವರ್ಷ ವಯಸ್ಸು. ಲಕ್ಷ್ಮೀಬಾಯಿ ಕೇವಲ ಹದಿಮೂರು ವರ್ಷದ ಹುಡುಗಿ.ಇತರ ಹುಡುಗಿಯರಿಗೆ ಇರುವಂತೆ ಈ ಹುಡುಗಿಗೂ ತನ್ನ ಸಂಸಾರದ ಬಗೆಗೆ ಬಣ್ಣ ಬಣ್ಣದ ಕನಸುಗಳು ಇದ್ದಿರಬಹುದು.

ಬೇಂದ್ರೆಯವರು ೧೯೨೬ರಲ್ಲಿ ಸ್ವಧರ್ಮಪತ್ರಿಕೆಯ ಹಾಗೂ ೧೯೨೯ರಲ್ಲಿ ಜಯ ಕರ್ನಾಟಕಪತ್ರಿಕೆಯ ಸಂಪಾದಕರಾಗಿದ್ದರು. ಇವರು ಬರೆದ ನರಬಲಿಕವನಕ್ಕಾಗಿ ಬ್ರಿಟಿಶ್ ಸರಕಾರವು ಇವರನ್ನು ೧೯೩೨ರಲ್ಲಿ ಹಿಂಡಲಗಿಯ ಜೇಲಿಗೆ ಕಳುಹಿಸಿತು. ಕೆಲ ಕಾಲ ಮುಗದ ಎನ್ನುವ ಹಳ್ಳಿಯಲ್ಲಿ ದಿಗ್ಬಂಧನದಲ್ಲಿರಿಸಿತು. ಆರು ವರ್ಷಗಳ ವರೆಗೆ ಇವರಿಗೆ ಯಾರೂ ಯಾವುದೇ ನೌಕರಿಯನ್ನು ಕೊಡಕೂಡದೆಂದು ಸರಕಾರವು ಆಜ್ಞೆ ಹೊರಡಿಸಿತು. ಆರು ವರ್ಷಗಳವರೆಗೆ ಬೇಂದ್ರೆಯವರು ನಿರುದ್ಯೋಗಿಯಾಗಿ ಉಳಿಯಬೇಕಾಯಿತು. ಬಳಿಕ ೧೯೩೮ರಲ್ಲಿ ಮಾಸ್ತಿಯವರು ಬೇಂದ್ರೆಯವರನ್ನುಜೀವನಪತ್ರಿಕೆಯ ಸಂಪಾದಕರನ್ನಾಗಿ ಮಾಡಿದರು.

ಈ ನಡುವಿನ ಅವಧಿಯಲ್ಲಿ ಬೇಂದ್ರೆಯವರು ಪುಣೆಯಲ್ಲಿ ಎಮ್. ಏ. ಪದವಿಯನ್ನು ಪಡೆದರು. ಗರಿ’ ,‘ಮೂರ್ತಿ’, ’ಕಾಮಕಸ್ತೂರಿ’, ‘ಸಖೀಗೀತ’, ‘ನಾದಲೀಲೆಹಾಗೂ ಉಯ್ಯಾಲೆಕವನಸಂಕಲನಗಳನ್ನು ಪ್ರಕಟಿಸಿದರು. ಸಾಹಿತ್ಯಸಮ್ಮೇಳನಗಳಲ್ಲಿ ಭಾಗವಹಿಸಿದರು. ಅವರ ಕೀರ್ತಿಸೂರ್ಯನು ನಡುನೆತ್ತಿಗೇರಿದನು. ಆದರೆ ಸಂಸಾರತಾಪದಲ್ಲಿ ಬೆಂದವರು ಇವರ ಧರ್ಮಪತ್ನಿ.
ಇಂತಹ ಸಹನಾಲಕ್ಷ್ಮಿಯ ಬಗೆಗೂ ಬೇಂದ್ರೆಯವರಿಗೆ ಸಹನೆ ಇರಲಿಲ್ಲ. ಎಲ್ಲ ಹೆಂಡತಿಯರು ಬಯಸುವಂತೆ ಇವಳೂ ಸಹ ಒಡವೆ ಕೊಡಿಸಲು ಬೇಂದ್ರೆಯವರನ್ನು ಯಾವಾಗಲೋ ಕೇಳಿದ್ದಾಳು. ಈ ಕವಿಪುಂಗವರು ಅವಳಿಗೆ ಕೇವಲ ಕವನಗಳ ಒಡವೆಗಳನ್ನಷ್ಟೇ ತೊಡಿಸಿದರು !
"ಆತ ಕೊಟ್ಟ ವಸ್ತು, ಒಡವೆ
ನನಗೆ ಅವಗೆ ಗೊತ್ತು
ತೋಳುಗಳಿಗೆ ತೋಳಬಂದಿ
ಕೆನ್ನೆತುಂಬ ಮುತ್ತು"

ಬೇಂದ್ರೆಯವರಿಗೆ ತನ್ನ ಕಾವ್ಯಾಲಂಕಾರದ ಮಿತಿ ಗೊತ್ತಿರಲಿಲ್ಲ ಎಂದಲ್ಲ.
ಅವರೇ ತಮ್ಮ ಮತ್ತೊಂದು ಕವನದಲ್ಲಿ,
"ನೀನು ಕೊಡುವೆ ನನಗೆ ದವನ
ನಾನು ಕೊಡುವೆ ನಿನಗೆ ಕವನ....." ಎಂದೆಲ್ಲ ಹೇಳುತ್ತ ತಮ್ಮ ಕವನಕ್ಕೆ "ಬರಿಯ ಮಾತಿನ ಪೋಣಿಕೆ" ಎಂದು ಬಣ್ಣಿಸಿದ್ದಾರೆ.
ಬಹುಶ:ಒಂದು ಮುತ್ತಿನ ಸರವನ್ನಾದರೂ ಕೊಡಿಸಿಎಂದು ಹೆಂಡತಿ ಆಗ್ರಹಪಡಿಸಿದಾಗ, ಈ ಕವಿ ಒಂದು ಉದ್ದವಾದ ಕವನವನ್ನೇ ಹೊಸೆದು ಹೆಂಡತಿಗೆ ಕೊಟ್ಟರು. ಸುಮಾರು ೫೦೦೦ ಅಮೂಲ್ಯ ಪುಸ್ತಕಗಳನ್ನು ಸಂಗ್ರಹಿಸಿದ ಹಾಗು ಅನೇಕ ಅವಧಿಗಳಲ್ಲಿ ನಿರುದ್ಯೋಗಿಯಾಗಿದ್ದ ಬೇಂದ್ರೆಯವರಿಗೆ ಸಂಸಾರಕ್ಕಾಗಿ ದುಡ್ಡಿನ ಅಭಾವವಾಗುವುದು ಸಹಜವಾದ ಸಂಗತಿಯೇ ಆಗಿದೆ. ಆದರೆ ಕಲ್ಪನೆಯ ಅಭಾವ ಅವರನ್ನು ಎಂದೂ ಕಾಡಿಸಲಿಲ್ಲ. ಅನಂತ ಕಲ್ಪನಾಸಾಮ್ರಾಜ್ಯದ ಸಾರ್ವಭೌಮರವರು. ಪ್ರೀತಿಯನ್ನು (ಒಡವೆಗಳಿಂದ) ಅಳೆಯಬೇಡಎಂದು ತಮ್ಮ ಧರ್ಮಪತ್ನಿಗೆ ಹೇಳುವ ಬೇಂದ್ರೆಯವರ ಕವನದ ಪೂರ್ಣಪಾಠ ಹೀಗಿದೆ:
ಅಷ್ಟು ಪ್ರೀತಿ ಇಷ್ಟು ಪ್ರೀತಿ--
           ಎಣಿಸಿ ಕಷ್ಟಬಡದಿರು
                     ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು....
ತಮ್ಮ ಕಿರಣ ತಮಗೆ ಹಗಲು;
                                   ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                                    ಉಳಿದ ಲೋಕ ಹಿತ್ತಲು.
ಮುತ್ತಿನೆಕ್ಕಸರವನಿಕ್ಕೆ
                                   ಮುದ್ದಿಗೆ ಕಳೆ ಕಟ್ಟಿತೆ
ತೊಯ್ದ ಎವೆಗೆ ಮುದ್ದನಿಡಲು
                                   ಮುದ್ದಿಗೆ ಅದು ತಟ್ಟಿತೆ?
ಕುದಿದು ಬಂದ ಕಂಬನಿಯೊಲು
                                   ಕಂಪು ಬರದೆ ಬಿಟ್ಟಿತೆ?
ಮುತ್ತು ರತುನ ಹೊನ್ನು ಎಲ್ಲ
                                    ಕಲ್ಲು ಮಣ್ಣ ವೈಭವಾ
                                    ಎಲವೊ ಹುಚ್ಚ ಮಾನವಾ
ಒಂದು ಷೋಕು-----ಬರಿಯ ಝೋಕು
                                    ಬದುಕಿನೊಂದು ಜಂಬವು
                                    ಒಲವೆ ಮೂಲ ಬಿಂಬವು.
ಸಪ್ತ ನಾಕ   ಸಪ್ತ ನರಕ
                                   ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
                                   ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
                                   ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
                                   ಅದರೊಳೇನು ಹೆಚ್ಚಿದೆ ?
ಎದೆಯ ಕಣ್ಣ ಮುಚ್ಚಿಕೊಂಡು
                                   ಏಕೊ ಎನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
                                   ಅಲ್ಲೆ ಒಲವು ಮೆರೆಯದೇ
                                   ನಲಿವು ಮೇರೆವರಿಯದೇ?
ಬೇಂದ್ರೆಯವರ ಹೆಂಡತಿ ಒಂದು ಪ್ರಾಪಂಚಿಕ ವಸ್ತುವನ್ನು ಆಸೆಪಟ್ಟು ಕೇಳಿದಾಗ, ಬೇಂದ್ರೆಯವರು ಅದಕ್ಕೊಂದು ತಾತ್ವಿಕ ಸಮಾಧಾನವನ್ನು ನೀಡುತ್ತಿದ್ದಾರೆ. ಮೊದಲನೆಯ ನುಡಿಯನ್ನು ನೋಡಿರಿ:
ಅಷ್ಟು ಪ್ರೀತಿ ಇಷ್ಟು ಪ್ರೀತಿ--
           ಎಣಿಸಿ ಕಷ್ಟಬಡದಿರು
                     ಒಲೆದು ಒಲಿಸಿ ಸುಖವಿರು
ಎಷ್ಟೆಯಿರಲಿ ಅಷ್ಟೆ ಮಿಗಿಲು....ತಮ್ಮ ಕಿರಣ ತಮಗೆ ಹಗಲು;
                                                ಉಳಿದ ಬೆಳಕು ಕತ್ತಲು.
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                                                 ಉಳಿದ ಲೋಕ ಹಿತ್ತಲು.
ಪ್ರೀತಿಯ ಮಡದಿಯೆ, ನನಗೆ ನಿನ್ನಲ್ಲಿರುವ ಪ್ರೀತಿಯನ್ನು ಇಷ್ಟು , ಇಷ್ಟೇ ಎಂದು ಎಣಿಸಿ ಕಷ್ಟಪಡಬೇಡ. ಇಲ್ಲಿ ಎಣಿಸು ಎನ್ನುವದಕ್ಕೆ ಎರಡು ಅರ್ಥಗಳಿವೆ. ಎಣಿಸು=counting ಎನ್ನುವದು ಒಂದು ಅರ್ಥವಾದರೆ , ಭಾವಿಸು ಎನ್ನುವುದು ಎರಡನೆಯ ಅರ್ಥ. ನನಗೆ ಒಲೆದು ಎಂದರೆ ನನ್ನಲ್ಲಿ ಅನುರಕ್ತಳಾಗು ; ಒಲಿಸಿ ಎಂದರೆ ನನ್ನನ್ನು ಒಲಿಸಿಕೊಳ್ಳು ಅರ್ಥಾತ್ ನನ್ನ ಒಲವನ್ನು (ಕಷ್ಟಪಟ್ಟು) ಸಂಪಾದಿಸಿಕೊ ಹಾಗೂ ಸುಖದಿಂದಿರು!
ಕವಿಯು ಪ್ರೀತಿಯ ಈ ವ್ಯಾಪಾರದ ಎಲ್ಲಾ ಭಾರವನ್ನು ಹೆಂಡತಿಯ ಮೇಲೆ ಹಾಕುತ್ತಿದ್ದಾನೆ. ನೀನು ಒಡವೆಯನ್ನು ಕೇಳದೇ, ನನ್ನ ಪ್ರೀತಿಯನ್ನು ಪಡೆಯಲು ನೀನೇ ಪ್ರಯತ್ನ ಮಾಡು(!) ಎನ್ನುವುದು ಈ ಕವಿಯ ಸಂದೇಶ. ಇಂತಹ ಸಂದೇಶಕ್ಕೆ ಕವಿ ಕೊಡುವ ತಾತ್ವಿಕ ಆಧಾರ ಈ ರೀತಿಯಾಗಿದೆ:
ಎಷ್ಟೆಯಿರಲಿ ಅಷ್ಟೆ ಮಿಗಿಲು....
                           ತಮ್ಮ ಕಿರಣ ತಮಗೆ ಹಗಲು;
                            ಉಳಿದ ಬೆಳಕು ಕತ್ತಲು.
ಪಾಲಿಗೆ ಬಂದದ್ದು ಪಂಚಾಮೃತ. ನಮ್ಮ ಹಣೆಯಲ್ಲಿ ಎಷ್ಟೇ ಸ್ವಲ್ಪವಿದ್ದರೂ ಅದನ್ನೇ ಬಹಳ ಎಂದು ತಿಳಿಯಬೇಕು. ಯಾಕೆಂದರೆ, “ತಮ್ಮ ಕಿರಣ ತಮಗೆ ಹಗಲು ;ಉಳಿದ ಬೆಳಕು ಕತ್ತಲು. ನಮ್ಮ ಮನೆಯ ಕಿಡಕಿಯಿಂದ ಒಳಗೆ ತೂರಿದ ಸೂರ್ಯನ ಒಂದೇ ಕಿರಣವು ನಮ್ಮ ಕತ್ತಲೆ ಕೋಣೆಗೆ ಬೆಳಕು ನೀಡುವದೇ ಹೊರತು, ಇತರ ನಕ್ಷತ್ರಗಳ ಕಿರಣಗಳಿಂದ ನಮ್ಮ ಮನೆಗೆ ಹಗಲು ಸಿಗಲಾರದು. ಆ ಬೆಳಕು ನಮ್ಮ ಮಟ್ಟಿಗೆ ಕತ್ತಲೆಯೇ ಸೈ! ನಿನ್ನ ಜೀವನದಲ್ಲಿ ಪ್ರೀತಿಯ ಬೆಳಕನ್ನು ಕಾಣಬೇಕಾಗಿದ್ದರೆ ಹುಚ್ಚು ಹಂಬಲಗಳನ್ನು ಬಿಟ್ಟುಬಿಟ್ಟು, ನಿನ್ನ ಕವೀಶ್ವರ ಪತಿ ಕೊಡುವ ಪ್ರೀತಿಯನ್ನಷ್ಟೇ ನೆಚ್ಚಿಕೊ! ವರಕವಿಗಳು ತಮ್ಮ ಕಲ್ಪನಾಶಕ್ತಿಯ ಬಲದಿಂದ ಇನ್ನಿಷ್ಟು ಉದಾಹರಣೆಗಳನ್ನು ಸೃಷ್ಟಿಸುತ್ತಾರೆ:
ಬಿಟ್ಟಲ್ಲಿಯೆ ಬೀಡು ಮತ್ತೆ ಆಡಿದಲ್ಲಿ ಅಂಗಳು
                           ಉಳಿದ ಲೋಕ ಹಿತ್ತಲು.
ಬೇರೆಯವರ ಅನುಕರಣೆ, ಅನುಸರಣೆ ಬೇಡ ; ನಾವು ಎಲ್ಲಿ ನಿಲ್ಲುತ್ತೇವೆಯೊ ಅದೇ ನಮ್ಮ ಬೀಡು , ಅದೇ ನಮ್ಮ ನೆಲೆ. ನಾವು ಎಲ್ಲಿ ಆಡುತ್ತೇವೊ ಅದೇ ನಮ್ಮ ಮನೆಯ ಅಂಗಳು.
ಅಲ್ಲಾ, ಉಳಿದವರು ಎಷ್ಟು ಚೆನ್ನಾಗಿರೊ ಬೀಡಿನಲ್ಲಿ ಇದ್ದಾರಲ್ಲಾಎಂದು ಅವರ ಹೆಂಡತಿ ಏನಾದರೂ ಅನುಮಾನ ವ್ಯಕ್ತ ಪಡಿಸಿದರೆ, ವರಕವಿಗಳ ಉತ್ತರ ಅದಕ್ಕೂ ಸಿದ್ಧವಾಗಿದೆ : ಉಳಿದ ಲೋಕ ಹಿತ್ತಲು. (=ಅದೆಲ್ಲಾ ನಮ್ಮ ಹಿಂದೆ ಇರೋದು, ನಾವು ಅದನ್ನೆಲ್ಲ ನೋಡೋದು ಬೇಡ !)
ರೀತಿಯಾಗಿ ಹೆಂಡತಿಗೆ ತತ್ವಜ್ಞಾನದ ಪಾಠವನ್ನು ಹೇಳಿ ಮುಗಿಸಿದ ಕವಿ, ತನ್ನ ಮಾತುಗಳಿಂದ ತಾನೇ ಕಸಿವಿಸಿಗೊಳ್ಳುತ್ತಾನೆ. ಆತನಿಗೆ ಗೊತ್ತು: ತನ್ನ ಹೆಂಡತಿಯ ಒಂದೇ ಒಂದು ಸಣ್ಣ ಅಪೇಕ್ಷೆಯನ್ನು ತಾನು ಪೂರೈಸುತ್ತಿಲ್ಲ ಎಂದು. ತನ್ನ ಮೇಲೆ ತನಗೇ ಬರುತ್ತಿರುವ ಕೋಪವನ್ನು ಈಗ ಆತ ಅವಳ ಮೆಲೆ ತಿರುಗಿಸುತ್ತಾನೆ. ಹತಾಶನಾದ ಗಂಡ ಹೆಂಡತಿಯ ಮೇಲೆ ಹರಿಹಾಯುವದು ಒಂದು ಸಾಮಾನ್ಯ ಸಂಗತಿ. ಒಂದು ಮುತ್ತಿನ ಸರವನ್ನು ಪಡೆದು, ನೀನು ಏನು ಮಹಾ ಸಾಧಿಸಿಕೊಂಡಂತಾಯ್ತುಎಂದು ಆತ ಅವಳ ಮೇಲೆ ಹಾರಾಡುತ್ತಾನೆ :
ಮುತ್ತಿನೆಕ್ಕಸರವನಿಕ್ಕೆ
                                   ಮುದ್ದಿಗೆ ಕಳೆ ಕಟ್ಟಿತೆ
ತೊಯ್ದ ಎವೆಗೆ ಮುದ್ದನಿಡಲು
                                   ಮುದ್ದಿಗೆ ಅದು ತಟ್ಟಿತೆ?
ಕುದಿದು ಬಂದ ಕಂಬನಿಯೊಲು
                                   ಕಂಪು ಬರದೆ ಬಿಟ್ಟಿತೆ?
ಮುತ್ತಿನ ಸರ ತೊಡಿಸುವದರಿಂದ ಮಾತ್ರ ಪ್ರೀತಿಗೆ ಕಳೆ ಬರುವದೆ? ನಿನ್ನ ಕಣ್ಣೀರಿನಿಂದ ತೊಯ್ದ ರೆಪ್ಪೆಗಳಿಗೆ ನಾನು ಮುತ್ತು ಕೊಟ್ಟರೆ, ಅದು ನಿನ್ನ ಪ್ರೀತಿಗೆ ತಟ್ಟಲಾರದೆ? ನಿನ್ನ ಕುದಿಯುತ್ತಿರುವ ಮನಸ್ಸು ಹೊರಚೆಲ್ಲಿದ ಕಂಬನಿಗಳಲ್ಲಿ ಸಹ ಒಲವಿನ ಕಂಪು ಇಲ್ಲವೆ? ಗಂಡ ಹೆಂಡಿರಲ್ಲಿ ಪರಸ್ಪರ ಒಲವಿನ ಭಾವನೆಗಳೇ ಮುಖ್ಯವಲ್ಲವೆ? ಇದು ಕವಿಯು ದಾಂಪತ್ಯದ ನೆಲೆಗಟ್ಟಿನಲ್ಲಿ ಮಾಡುತ್ತಿರುವ ತರ್ಕವಾದ. ಆದರೆ ಹೆಂಡತಿಯು ಮುಖವನ್ನು ಬೇರೆಡೆಗೆ ಹೊರಳಿಸಿ ಬಿಟ್ಟಿದ್ದಾಳೆ. ಮಾನವ ಕುಲದ ಮೂರ್ಖತನಕ್ಕೆ ಬೇಸತ್ತು ಹೋದ ಕವಿ , ವ್ಯಥೆಪಟ್ಟು ಉದ್ಗರಿಸುತ್ತಾನೆ:
ಮುತ್ತು ರತುನ ಹೊನ್ನು ಎಲ್ಲ
                                    ಕಲ್ಲು ಮಣ್ಣ ವೈಭವಾ
                                    ಎಲವೊ ಹುಚ್ಚ ಮಾನವಾ
ಒಂದು ಷೋಕು-----ಬರಿಯ ಝೋಕು
                                    ಬದುಕಿನೊಂದು ಜಂಬವು
                                    ಒಲವೆ ಮೂಲ ಬಿಂಬವು.
precious stonesಗಳೆಲ್ಲ earthly glory ಮಾತ್ರ. ಅವು ಸತ್ಯವಲ್ಲ.
(ಟಿಪ್ಪಣಿ: ರತ್ನಗಳು ಭೂಗರ್ಭದಲ್ಲಿ ಸಿಗುವುದರಿಂದ ಅವುಗಳಿಗೆ ಕಲ್ಲು ಮಣ್ಣ ವೈಭವಾ ಎಂದು ಕರೆಯುವುದು ಒಂದು ವ್ಯಂಗ್ಯೋಕ್ತಿ).
ಇದೆಲ್ಲ ಬರಿಯ ಶೋಕಿ, ಬರಿಯ ಡೌಲು, ಬದುಕಿನ ಒಣ ಜಂಬ ಅಷ್ಟೆ! ಪ್ರೀತಿಯೇ ಸತ್ಯ, ಬೇರೆ ಎಲ್ಲ ಮಿಥ್ಯ!
ಕವಿ ಮುಂದುವರಿದು ಸಂಪತ್ತಿನ ಸಂಭ್ರಮವನ್ನಷ್ಟೇ ಅಲ್ಲ, ಅಧಿಕಾರದ ವೈಭವವನ್ನೂ ಸಹ ತುಚ್ಛೀಕರಿಸುತ್ತಾನೆ. ಕೇವಲ ಭೂಮಿಯ ಒಡೆತನವಲ್ಲ, ಸಪ್ತಸ್ವರ್ಗ ಹಾಗೂ ಸಪ್ತನರಕಗಳನ್ನು ಒಳಗೊಂಡ ಇಂದ್ರಾಧಿಕಾರದ ವೈಭೋಗಕ್ಕೂ ಸಹ ಏನು ಬೆಲೆ ಇದೆ?

ಸಪ್ತ ನಾಕ   ಸಪ್ತ ನರಕ
                                   ಅದರ ಬೆಳಕು ಕತ್ತಲು
ಮನ್ವಂತರ ತನ್ವಂತರ
                                   ಅದರ ಕೋಟೆ ಕತ್ತಲು
ಸಿಂಹಾಸನವನೇರಿ ಕುಳಿತೆ;
                                   ತೊಡೆಗೆ ತೊಡೆಯ ಹಚ್ಚಿದೆ
ಸರಿಯೆ, ಒಲಿದ ತೋಳಿಗಿಂತ
                                   ಅದರೊಳೇನು ಹೆಚ್ಚಿದೆ ?

ಕವಿ ತಮ್ಮ ಹೆಂಡತಿಗೆ ಆಹ್ವಾನ ನೀಡುತ್ತಿದ್ದಾರೆ. ಇಂತಹ ಲೋಕಾಧಿಪತಿಯ ಹೆಂಡತಿಯಾಗಿ ನೀನೂ ಸಹ ಸಿಂಹಾಸನವನ್ನೇರಬಹುದು. ಸಾಮ್ರಾಟನ ತೊಡೆಗೆ ತೊಡೆ ಹಚ್ಚಿ ಕುಳಿತುಕೊಳ್ಳಬಹುದು. ಅವನ ಅಧಿಕಾರ ಮತ್ತು ವೈಭೋಗದಲ್ಲಿ ನೀನೂ ಭಾಗಿಯಾಗಬಹುದು. ಇದೆಲ್ಲ ಸರಿ; ಒಲಿದಂತಹ ನಲ್ಲನ ತೋಳುಗಳ ಅಪ್ಪುಗೆಗಿಂತ ಇದೆಲ್ಲ ಹೆಚ್ಚಿನದೆ?

ಕವಿ ತನ್ನೆಲ್ಲ ತರ್ಕವಾದಗಳನ್ನು ತನ್ನ ಅರ್ಧಾಂಗಿಗೆ ಹೇಳಿದ್ದಾನೆ. ಮುತ್ತಿನ ಹಾರಕ್ಕಿಂತ ಪತಿಯ ಪ್ರೇಮವೇ ಹೆಚ್ಚಿನದು ಎಂದು ಅವಳಿಗೆ ತಿಳಿಸಿದ್ದಾನೆ. ತನ್ನ ಹತಾಶೆ, ತನ್ನ ಅಸಹಾಯಕತೆಯನ್ನೆಲ್ಲ ಹೊರಕಕ್ಕಿ, ಆತನೀಗ ನಿರುಮ್ಮಳನಾಗಿದ್ದಾನೆ. ಇಂತಹ ಸಮಾಧಾನದ ಸ್ಥಿತಿಯಲ್ಲಿ ಆತ ಅಂತರ್ಮುಖಿಯಾಗಿ ಏನನ್ನೊ ಧ್ಯಾನಿಸುತ್ತಾನೆ :
ಎದೆಯ ಕಣ್ಣ ಮುಚ್ಚಿಕೊಂಡು
                                   ಏಕೊ ಎನೊ ಮೆಚ್ಚಿದೆ
ಮರದ ಅಡಿಗೆ ಗುಡಿಸಲಿರಲಿ
                                   ಅಲ್ಲೆ ಒಲವು ಮೆರೆಯದೇ
                                   ನಲಿವು ಮೇರೆವರಿಯದೇ?
ನಿಜ, ಒಲವಿನ ವೈಭವಕ್ಕೆ ಲೌಕಿಕ ಸಂಪತ್ತು ಬೇಕಾಗಿಲ್ಲ. ಪುಟ್ಟ ಗುಡಿಸಲಿನಲ್ಲಿಯೂ ಸಹ ಒಲವು ಹಾಗೂ ನಲಿವು ಮಹಾಪೂರದಂತೆ ಹರಿಯಬಲ್ಲವು ! ಈ ರೀತಿಯಾಗಿ ವರಕವಿಗಳು ತಮ್ಮ ಅರ್ಧಾಂಗಿಯನ್ನು ಸಮಾಧಾನಿಸುತ್ತಾರೆ. ಅವರೂ ಸಹ ’ಕವನದ ಹಾರ’ದಿಂದಲೇ ತೃಪ್ತಿ ಪಟ್ಟಿರವಹುದು!

ಟಿಪ್ಪಣಿ: ಬೇಂದ್ರೆಯವರು ೧೯೪೩ರಲ್ಲಿ ಕಾಳಿದಾಸನ ಮೇಘದೂತ ವನ್ನು ಕನ್ನಡಕ್ಕೆ ಅನುವಾದಿಸಿದರು. ಆ ಅನುವಾದದ ಗೌರವಧನದಿಂದ ತಮ್ಮ ಹೆಂಡತಿಗೆ ಮುತ್ತಿನ ಏಕಾಕ್ಷಿ ಸರವನ್ನು ಕೊಡಿಸಿ ಅವಳ ಹಂಬಲವನ್ನು ಪೂರೈಸಿದರು.
ಈ ಕವನದಲ್ಲಿ ಕವಿಯ ಲಂಬಿತ ಉದಾಸ ಭಾವಕ್ಕೆ ತಕ್ಕಂತೆ ಹಾಗೂ ಅವನ ಲಂಬಿತ ವಾದ ಗಳಿಗೆ ಹೊಂದುವಂತೆ, ಕವನವು ಲಂಬಿತ ಛಂದಸ್ಸಿನಲ್ಲಿ ಇರುವದನ್ನು ಗಮನಿಸಬಹುದು.