Sunday, February 4, 2024

ಭಾಷಾ ಅಜ್ಞಾನ

ಬ್ರೆಕ್ (break) ಮತ್ತು ಬ್ರೇಕ್ (brake) ಇವುಗಳ ನಡುವಿನ ವ್ಯತ್ಯಾಸವೇನು, ಗೆಳೆಯರೆ? ನಿಮಗೆಲ್ಲರಿಗೂ ಗೊತ್ತಿರುವಂತೆ ಬ್ರೆಕ್ (break) ಅಂದರೆ ತುಂಡು ಮಾಡುವುದು, ಮುರಿಯುವುದು ಇತ್ಯಾದಿ. ಹೀಗಾಗಿ ಇಂಗ್ಲೀಶರು ‘Dawn is breaking’, `She broke the engagement”, `Breaking news” ಮೊದಲಾದ ವಾಕ್ಯಗಳನ್ನು ಬಳಸುತ್ತಾರೆ. ಎರಡನೆಯದಾಗಿ ಬ್ರೇಕ್ (brake) ಅಂದರೆ ವಾಹನಗಳಿಗೆ ನಿಲ್ಲುತಡೆ ಹಚ್ಚಿ ನಿಲ್ಲಿಸುವುದು. 

 ನಮ್ಮ ಟೀವಿ ವಾಹಿನಿಗಳಿಗೆ ಇಂಗ್ಲಿಶ್ ಸ್ವಲ್ಪ ತುಟ್ಟಿ ಅಂತ ಕಾಣುತ್ತೆ. ( ಕನ್ನಡವು ಅದಕ್ಕೂ ಜಾಸ್ತಿಯೇ ತುಟ್ಟಿ ಇರಬಹುದು!) ಈ ಟೀವಿ ವಾಹಿನಿಗಳು ತಮ್ಮ ತೋರುಪಟದ ಮೇಲೆ ಬ್ರೇಕಿಂಗ್ ನ್ಯೂಜ್ ಎಂದು ಕನ್ನಡ ಅಕ್ಷರಗಳಲ್ಲಿ ಬರೆದಿದ್ದು ನೋಡಿ ಅಚ್ಚರಿ ಹಾಗು ಬೇಸರ ಎರಡೂ ಆಯಿತು. ಮೊದಲನೆಯದಾಗಿ, ಇಂಗ್ಲಿಶ್ ಪದವನ್ನು ಕನ್ನಡ ಅಕ್ಷರದಲ್ಲಿ ಬರೆಯುವುದು ಯಾತಕ್ಕೆ? ತಮ್ಮ ಇಂಗ್ಲಿಶ್ ಪಾಂಡಿತ್ಯವನ್ನು ಅಥವಾ ಆಧುನಿಕತೆಯನ್ನು(?) ಮೆರೆಸುವದಕ್ಕೆ? ನಮ್ಮ ಮುದ್ದಣನು ಹೇಳಿದಂತೆ ಇದು ಮುತ್ತುಮ್ ಮೆಣಸುಮ್ ಕೋದಂತಹ ಅಲಂಕಾರವಷ್ಟೆ! ಎರಡನೆಯದಾಗಿ, ಬ್ರೇಕಿಂಗ್ ನ್ಯೂಜ್ ಎಂದರೆ ಏನರ್ಥ? ನಿಲ್ಲುತಡೆ ಹಾಕಿ ನಿಲ್ಲಿಸಿದ ಸಮಾಚಾರ ಎಂದಲ್ಲವೆ? ಈ ರೀತಿಯಾಗಿ, ನಮ್ಮ ವಾಹಿನಿಗಳು ಎರಡು ಅತ್ಯಾಚಾರಗಳನ್ನು ಮಾಡುತ್ತಿವೆ. ಒಂದು, ಕನ್ನಡ ಹಾಗು ಇಂಗ್ಲಿಶ್ ಭಾಷೆಗಳ ಕೊಲೆ. ಎರಡನೆಯದಾಗಿ, ನೋಡುಗರಲ್ಲಿ, ವಿಶೇಷತ: ಅಮಾಯಕ ಬಾಲಕರಲ್ಲಿ ತಮ್ಮ ಸ್ವಂತ ಅಜ್ಞಾನವನ್ನು ವಿಸ್ತರಿಸುವ ಹೀನ ಕಾರ್ಯ!

 ನಮ್ಮ ಟೀವಿ ವಾಹಿನಿಗಳ ಸಂಪಾದಕರು ಕುರುಡರಷ್ಟೇ ಅಲ್ಲ,ಕಿವುಡರೂ ಹೌದು ಎಂದು ತೋರುತ್ತದೆ. ಇತ್ತೀಚೆಗೆ ಲಕ್ಷದ್ವೀಪವು ಸುದ್ದಿಯಲ್ಲಿರುವುದು ಎಲ್ಲರಿಗೂ ಗೊತ್ತಿದೆ. ಲಕ್ಷದ್ವೀಪದ ನಿವಾಸಿಗಳು ತಮ್ಮ ಆಡುಭಾಷೆಯಲ್ಲಿ ಈ ದ್ವೀಪವನ್ನು ‘ಲಖದೀವ್’ ಎಂದು ಕರೆಯುತ್ತಾರೆ. ಅವರು ‘ಖ’ ಎನ್ನುವ ಮಹಾಪ್ರಾಣಾಕ್ಷರವನ್ನು ಬಳಸುತ್ತಿದ್ದಾರೆಯೇ ಹೊರತು ‘ಕ’ ಎನ್ನುವ ಅಲ್ಪಪ್ರಾಣಿಯನ್ನಲ್ಲ ಎನ್ನುವುದನ್ನು ಗಮನಿಸಿರಿ. ಹೀಗಿರುವಾಗ, ನಮ್ಮ ವಾಹಿನಿಯೊಂದರ ತೋರುಪಟದಲ್ಲಿ, ‘ಲಕ್ ದೀವ್’ ಎಂದು ಬರೆಯಲಾಗಿದೆ! ಅಲ್ಲಿಯ ಜನರು ಬಳಸುವ ‘ಖ’ ಎನ್ನುವ ಮಹಾಪ್ರಾಣವನ್ನು ನಮ್ಮ ಕಿವುಡರು ‘ಕ್’ ಎನ್ನುವ ಅಲ್ಪಪ್ರಾಣವಾಗಿ ಬದಲಾಯಿಸಲು ಏನಾದರೂ ಕಾರಣವಿದೆಯೆ? ಯಾವುದೇ ಪದವನ್ನು ಬಳಸಬೇಕಾದರೂ ಅಲ್ಲಿಯ ಮೂಲಭಾಷಿಕರ ಉಚ್ಚಾರವನ್ನೇ ನಾವು ಅನುಸರಿಸಬೇಕೆ ಹೊರತು ನಮ್ಮ ಶೋಕಿ ಪದವನ್ನಲ್ಲ. ‘ಅದು ಹೀಗಲ್ಲ’, ಎಂದು ಕೆಲವು ಜ್ಞಾನಿಗಳು ತಮ್ಮದೇ ಆದ ವಿವರಣೆಯನ್ನು  ನೀಡಬಹುದು. ಅರ್ಥಾತ್ ಕನ್ನಡದ ‘ಜಾಯಮಾನ’ದಲ್ಲಿ ಮಹಾಪ್ರಾಣವಿಲ್ಲ! ಕನ್ನಡಿಗರು ಅಲ್ಪಪ್ರಾಣಿಗಳು ಎನ್ನುವ ತರ್ಕವನ್ನು ಅವರು ನಿಮ್ಮ ಮುಂದೆ ಇಡಬಹುದು! ಆದರೆ ಗೆಳೆಯರೆ, ನಾವು ಪರಭಾಷೆಯ ಹೆಸರುಗಳನ್ನು ಹಾಗು ಪದಗಳನ್ನು ಬಳಸಬೇಕಾದರೆ, ಅಲ್ಲಿಯ ಭಾಷಿಕರ ಉಚ್ಚಾರವನ್ನು ಬಳಸಬೇಕೆ ಹೊರತು ನಮ್ಮ ಭಾಷೆಯ, ‘ತಥಾಕಥಿತ ಜಾಯಮಾನ’ವನ್ನಲ್ಲ! ಈ ಜಾಯಮಾನದ ಬೆನ್ನು ಹತ್ತಿದರೆ, ಆಗುವ ಅನಾಹುತವನ್ನು ನಿಮಗೆ ಹೇಳುವೆ! ಕೆಲವು ಸ್ಥಳಿಕ ಕನ್ನಡಿಗರು ‘ಹಾಸನ’ಕ್ಕೆ ‘ಆಸನ’ ಎಂದೂ, ‘ಅರಸೀಕೆರೆ’ಗೆ ‘ಹರಸೀಕೆರೆ’ ಎಂದೂ ಉಚ್ಚರಿಸುತ್ತಾರೆ. ಇದು ಸ್ಥಳೀಯ ‘ಜಾಯಮಾನ’! ನಾವೂ ಸಹ ಸ್ಥಳೀಯ ಕನ್ನಡದ ಜಾಯಮಾನವನ್ನೇ ಅನುಸರಿಸಬೇಕಾದದ್ದು ಸಭ್ಯತನ. ಈ ಕಾರಣದಿಂದಾಗಿ ನಾವೂ ಸಹ ಆಸನ ಹಾಗು ಹರಸೀಕೆರೆ ಎಂದೇ ಉಚ್ಚರಿಸುವುದು ನಾವು ‘ಜಾಯಮಾನ’ಕ್ಕೆ ಕೊಡುವ ಮರ್ಯಾದೆಯಾಗುತ್ತದೆ. ಇದನ್ನು ಒಪ್ಪುಲಾಗದು ಎಂದು ನಿಮಗೆ ಅನಿಸುತ್ತಿದ್ದರೆ, ‘ಕನ್ನಡದ ಜಾಯಮಾನ’ವನ್ನು ಬಿಟ್ಟುಬಿಟ್ಟು ‘ಲಖದೀವ್’ ಎಂದು ಬರೆಯಿರಿ ಹಾಗು ‘ಲಖದೀವ್’ ಎಂದು ಉಚ್ಚರಿಸಿರಿ. 

ನಿಜ ಹೇಳಬೇಕೆಂದರೆ, ನಮಗೆ ಅಂದರೆ ಕನ್ನಡಿಗರಿಗೆ ನಮ್ಮ ಭಾಷೆಯ ಎಷ್ಟೋ ಮೂಲಪದಗಳೇ ತಿಳಿದಿಲ್ಲ. ಉದಾಹರಣೆಗೆ: ‘ಕಾರವಾರ’. ಕಾರವಾರದ ಮೂಲ ಹೆಸರು ‘ಕಡೇವಾಡ’. (ಇದು ಕಾರವಾರ ಜಿಲ್ಲೆಯ ಕಟ್ಟಕಡೆಯ ಹಳ್ಳಿಯಾಗಿದ್ದು ಸಮುದ್ರಕ್ಕೆ ಸನಿಹವಾಗಿದೆ.) ಇಲ್ಲಿ ಬಂದಿಳಿದ ಬ್ರಿಟಿಶರಿಗೆ ಕಡೇವಾಡ ಎಂದು ಉಚ್ಚರಿಸಲು ಕಷ್ಟವಾಗುತ್ತಿದ್ದ ಕಾರಣದಿಂದಾಗಿ, ಅವರು ‘ಕಾರವಾರ’ ಎಂದು ಕರೆದರು. ಅವರ ಆಳಿಕೆಯಲ್ಲಿ ಇದ್ದ ನಾವೂ ಸಹ ‘ಕಾರವಾರ’ಎಂದೇ ಹೇಳುತ್ತ ಬಂದೆವು. ಈಗ ನಾವು ಕಡೇವಾಡವೇ ಕಾರವಾರದ ಮೂಲ ಎನ್ನುವುದನ್ನು ಮರೆತೇ ಬಿಟ್ಟಿದ್ದೇವೆ. ಇಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕದಲ್ಲಿ ಇವೆ. ಉದಾಹರಣೆಗೆ, ದಂಡೀಹಳ್ಳಿ>>ದಾಂಡೇಲಿ. ಮರಾಠಿಗರ ಬಾಯಿಯಲ್ಲಿ ಮಿರಜಗಿ ಎನ್ನುವ ಸ್ಥಳವು ಕೇವಲ ಮಿರಜ ಆಯಿತು; ಕಂದಹಾಳವು ಖಂಡಾಲಾ ಆಯಿತು! ಡೊಂಬ ಸಮುದಾಯದ  ಡೊಂಬಿಹಳ್ಳಿಯು ಡೊಂಬಿವಲಿ ಆಯಿತು, ಮಲ್ಲಹಾರವು ಮಲಾರ ಆಯಿತು! ಮರಾಠಿಗರು Bombayಅನ್ನು ಮುಂಬಯಿ ಎಂದು ಮರುನಾಮಕರಣ ಮಾಡಿದರು. ಆದರೆ ಮುಂಬಯಿಯ ಸಮೀಪದಲ್ಲಿದ್ದ ಖಂಡಾಲಾ, ಡೊಂಬಿವಲಿ, ಮಲಾರ ಇವುಗಳನ್ನು ಮೂಲಹೆಸರುಗಳಿಗೆ ಪರಿವರ್ತಿಸಲು ಹೋಗಲಿಲ್ಲ. ಏಕೆಂದರೆ, ಹಾಗೆ ಮಾಡುವದರಿಂದ ಅವು ಎಲ್ಲಿ ಒಂದು ಕಾಲಕ್ಕೆ ಕರ್ನಾಟಕದಲ್ಲಿ ಇದ್ದವು ಎನ್ನುವುದು ಸಿದ್ಧವಾಗುತ್ತದೆಯೊ ಎನ್ನುವ ಹೆದರಿಕೆ ಅವರಿಗೆ!

 ಕನ್ನಡಿಗರು ಅಲ್ಪಪ್ರಾಣಿಗಳಾಗಲು ಕಾರಣವೇನು? ಇದಕ್ಕೆ ಹಳೆಮೈಸೂರು ಪ್ರಾಂತದ ಜನರಿಂದ ಥಟ್ಟನೆ ಬರುವ ಉತ್ತರವೇನೆಂದರೆ, ಕನ್ನಡವು ದ್ರಾವಿಡ ಭಾಷೆಯಾಗಿದ್ದು, ಇಲ್ಲಿ ಮಹಾಪ್ರಾಣವಿಲ್ಲ! ಅಯ್ಯೋ ದೇವರೆ, ನಮ್ಮ ಅಲ್ಪಪ್ರಾಣಿತ್ವವು ತಮಿಳಿನ ಕುರುಡು ಅನುಕರಣೆಯಲ್ಲದೆ, ಮತ್ತೇನೂ ಅಲ್ಲ! ನಿಮಗೆಲ್ಲರಿಗೂ ಗೊತ್ತಿರುವಂತೆ, ತಮಿಳು ಬರಹದಲ್ಲಿ, ಮಹಾಪ್ರಾಣದ ಅಕ್ಷರಗಳು ಇಲ್ಲ. ಉದಾಹರಣೆಗೆ, ಕನ್ನಡದಲ್ಲಿ ಕ, ಖ, ಗ, ಘ ಮೊದಲಾದ ಅಕ್ಷರಗಳಿದ್ದರೆ, ತಮಿಳಿನಲ್ಲಿ ಈ ನಾಲ್ಕೂ ಅಕ್ಷರಗಳಿಗೆ   ಕ ಎನ್ನುವ ಒಂದೇ ಅಕ್ಷರವನ್ನು ಬಳಸಲಾಗುತ್ತದೆ. ಇದರಂತೆಯೇ ಚ, ಛ, ಜ, ಝ ಇತ್ಯಾದಿ. ಆದುದರಿಂದ ಅವರಿಗೆ ಮಹಾಪ್ರಾಣವೆಂದರೇ ಗೊತ್ತಿಲ್ಲ. ಈ ಕಾರಣಕ್ಕಾಗಿ, ಅವರನ್ನು alphabetically primitive ಎಂದು ಕರೆದರೆ ತಪ್ಪಾಗಲಿಕ್ಕಿಲ್ಲ! ಇಂತಹ  ಕಾಗುಣಿತ ಅರಿಯದ ಕಾಡುಜನರನ್ನು, ನಾವು ಅಂದರೆ ಕನ್ನಡಿಗರು ಕುರುಡರಂತೆ ಅನುಸರಿಸಬೇಕೆ?  ಇಬ್ಬರು ಗೆಳೆಯರಿದ್ದರಂತೆ. ಅವರಲ್ಲಿ ಒಬ್ಬನು ಕುಂಟ. ಇವನನ್ನು ನೋಡಿದ ಮತ್ತೊಬ್ಬನು, ‘ನಾವು ದ್ರಾವಿಡರು, ಕುಂಟುತನವೇ ನಮ್ಮ ಜಾಯಮಾನ’ ಎಂದು ಭಾವಿಸಿ ತಾನೂ ಕುಂಟುತ್ತಲೇ ನಡೆಯುತ್ತಿದ್ದನಂತೆ. ಆದುದರಿಂದ ಬಂಧುಗಳೇ, ಈ ಅಲ್ಪಪ್ರಾಣಿತ್ವದ ಕುಂಟು ನಡೆ ನಮ್ಮ ಜಾಯಮಾನವಲ್ಲ ಎನ್ನುವುದನ್ನು ತಿಳಿಯಿರಿ! ಎರಡೂ ಕಾಲುಗಳನ್ನು ಬಳಸಿಕೊಂಡು, ಧೀರವಾಗಿ ನಡೆಯಿರಿ! ಮಹಾಪ್ರಾಣ ಉಚ್ಚಾರವನ್ನು ಸಹಜವಾಗಿ ಮಾಡಿರಿ, ಸಂಕೋಚ ಬೇಡ!

 Coming back to break and brake, ಗೆಳೆಯರೆ, ದೇವನಾಗರಿ ಲಿಪಿಯಲ್ಲಿ ಎ ಹಾಗು ಏ ಎನ್ನುವ ಭಿನ್ನ ಉಚ್ಚಾರಗಳಿಲ್ಲ. ಅವರಲ್ಲಿ ಏ ಎನ್ನುವ ಒಂದೇ ಉಚ್ಚಾರವಿದೆ. ಹೀಗಾಗಿ ಅವರು ಪೆನ್(pen) ಎನ್ನಲು ಪೇನ್(pain) ಎನ್ನುತ್ತಾರೆ. ಹೆಡ್ ಎನ್ನಲು ಹೇಡ್ ಎನ್ನುತ್ತಾರೆ! ಇದನ್ನು ತಿಳಿಯದ ನಮ್ಮ ಟೀವಿ ಜ್ಞಾನಿಗಳು ‘ಬ್ರೆಕಿಂಗ್ ನ್ಯೂಜ್’ ಎಂದು ಬರೆಯುವ ಬದಲಾಗಿ ‘ಬ್ರೇಕಿಂಗ್ ನ್ಯೂಜ್’ ಎಂದು ಬರೆಯುತ್ತಾರೆ!

Saturday, January 13, 2024

ಲಕ್ಷದ್ವೀಪ ಹಾಗು ಮಾಲ್ದೀವ್ಸ್

ಲಕ್ಷದ್ವೀಪವು ಇದೀಗ ತುಂಬಾ ಸುದ್ದಿಯಲ್ಲಿದೆ. ಜೊತೆಗೇ ‘ಲಕ್ಷದ್ವೀಪ’ ಪದದ ವ್ಯುತ್ಪತ್ತಿಯ ಬಗೆಗೂ ಖಚಿತ ಅಭಿಪ್ರಾಯವು ಹರಡುತ್ತಿದೆ. ಲಕ್ಷ (ಅಂದರೆ ಅನೇಕ) ದ್ವೀಪಗಳ ಸಮೂಹವೇ ಲಕ್ಷದ್ವೀಪ ಎನ್ನುವುದು, ಈ ಅಭಿಪ್ರಾಯದ ತಿರುಳು. ಈ ಅಭಿಪ್ರಾಯವನ್ನು ಭಾಷಾಶಾಸ್ತ್ರದ ಮೂಲಕ ಸ್ವಲ್ಪ ವಿವೇಚಿಸೋಣ.

 

ಬಂಗಾಲದ ಖ್ಯಾತ ಭಾಷಾವಿಜ್ಞಾನಿಗಳಾದ ಸುನೀತಿಕುಮಾರ ಚಟರ್ಜಿಯವರು, ‘ಲಕ್’ ಈ ಪದವು ದ್ರಾವಿಡ ಪದವಾಗಿದ್ದು ಇದರ ಅರ್ಥ ನಡುಗಡ್ಡೆ ಎಂದು ಹೇಳಿದ್ದರು. ಆದುದರಿಂದ, ಲಕ್ ಪದದ ರೂಪಾಂತರವಾದ  ‘ಲಂಕಾ’ ಪದವು ‘ನಡುಗಡ್ಡೆ’ ಎಂದೇ ಆಗುತ್ತದೆ ಎನ್ನುವುದು ಅವರ ಅಭಿಪ್ರಾಯವಾಗಿತ್ತು. ( ದ್ರಾವಿಡ ಎನ್ನುವುದು ಚಟರ್ಜಿಯವರು ಬಳಸಿದ ಪದ. ಅವರಿಗೆ ಕನ್ನಡದ ಬಗೆಗೆ ವಿಶೇಷವಾಗಿ ಗೊತ್ತಿರಲಿಕ್ಕಿಲ್ಲ. ನನ್ನ ಅಭಿಪ್ರಾಯದ ಮೇರೆಗೆ, ‘ಲಕ್’ ಎನ್ನುವುದು ಕನ್ನಡ ಪದ.)

 

ಲಕ್ಷದ್ವೀಪವು ‘ಲಖ್-ದೀವ್’ ಎನ್ನುವ ಕನ್ನಡ (ಅರ್ಥಾತ್ ದ್ರಾವಿಡ) ಪದದ ಸಂಸ್ಕೃತೀಕರಣ. ಇದರಲ್ಲಿಯ ಲಖ್ ಎನ್ನುವುದು ಕನ್ನಡ ಪದವಾದರೆ, ‘ದೀವ್’ ಎನ್ನುವುದು ‘ದ್ವೀಪ’ ಎನ್ನುವ ಸಂಸ್ಕೃತ ಪದದ ಪ್ರಾಕೃತ ರೂಪ. ಅಂದರೆ, ಲಕ್ ಮತ್ತು ದೀವ್ ಎನ್ನುವ ಎರಡು ವಿಭಿನ್ನ ಭಾಷೆಯ ಪದಗಳನ್ನು ಜೋಡಿಸಿ, ‘ಲಖ್-ದೀವ್’ ಎನ್ನುವ ಜೋಡು ಪದದ ನಿರ್ಮಾಣವಾಗಿದೆ. ಇಂತಹ ಜೋಡು ಪದಗಳು ನಮ್ಮಲ್ಲಿ ಸರ್ವೇಸಾಮಾನ್ಯವಾಗಿವೆ ಹಾಗು ಹೇರಳವಾಗಿವೆ. ಉದಾಹರಣೆಗಳು ಹೀಗಿವೆ: ‘ಗೇಟ್ ಬಾಗಿಲು, ಕ್ಯಾಚ್ ಹಿಡಿ, ಆಕಳ ಗೋಮೂತ್ರ ಇತ್ಯಾದಿ.’ ಒಂದು ಕಾಲದಲ್ಲಿ ವಿಭಿನ್ನ ಭಾಷೆಗಳ ಸಮುದಾಯಗಳು ಒತ್ತಟ್ಟಿಗೆ ಬಂದಾಗ ಇಂತಹ ಜೋಡು ಪದಗಳ ನಿರ್ಮಾಣವು ಅನಿವಾರ್ಯವಾಗಿತ್ತು.

 

ಇನ್ನು ‘ಮಾಲ್ದೀವ್ಸ’ ಪದಕ್ಕೆ ಬರೊಣ. ನಮ್ಮ ಸಂಸ್ಕೃತ ಪಂಡಿತರು, ‘ಮಾಲ್ದೀವ್ಸ್’ ಇದು ‘ಮಾಲಾದ್ವೀಪ’ ಎನ್ನುವ ಸಂಸ್ಕೃತ ಪದದ ಅಪಭ್ರಂಶ ಎನ್ನುವ ನಿರ್ಣಯಕ್ಕೆ ತಟ್ಟನೆ ಜಿಗಿದು ಬಿಡುತ್ತಾರೆ! ಒಂದು ಕಾಲದಲ್ಲಿ ‘ಮಲ್ಲ’ ಎನ್ನುವ ಸಮುದಾಯವು ಭಾರತದ ತುಂಬೆಲ್ಲ ಹರಡಿತ್ತು. ‘ಮಲ್ಲ’ರು ನೇಪಾಳದಲ್ಲಿ ಅರಸರಾಗಿ ಆಳಿದ್ದರು ಹಾಗು ಕುರುಕ್ಷೇತ್ರದ ಯುದ್ಧದಲ್ಲಿ ಭಾಗವಹಿಸಿದ್ದರು ಎನ್ನುವ ಆಖ್ಯಾಯಿಕೆಯನ್ನು ಮಹಾಭಾರತದಲ್ಲಿ ಓದಬಹುದು. ಹೆಸರಾಂತ ದರೋಡೆಖೋರಳಾದ ಫೂಲನ್ ದೇವಿಯು ಮಲ್ಲ ಸಮುದಾಯದವಳು. ಈ ಮಲ್ಲರು ನೀರಿನಲ್ಲಿ ಬೆಳೆಯುವ ನಾರಿನಿಂದ ‘ನಾರುಮಡಿ’ಯನ್ನು ತಯಾರಿಸುತ್ತಿದ್ದರು. ಬಹುಶಃ, ಶ್ರೀರಾಮಚಂದ್ರ, ಲಕ್ಷ್ಮಣ ಹಾಗು ಸೀತಾದೇವಿಯವರಿಗೆ, ವನವಾಸಗಮನ ಸಂದರ್ಭದಲ್ಲಿ ಮಲ್ಲರೇ ನಾರುಮಡಿಯನ್ನು ಕೊಟ್ಟಿರಬಹುದೇನೊ! ಕೇರಳ ರಾಜ್ಯದ ಒಂದು ಜಿಲ್ಲೆಗೆ ಮಲಪ್ಪೂರ ಎನ್ನುವ ಹೆಸರೇ ಇದೆಯಲ್ಲ! ಕರ್ನಾಟಕದಲ್ಲಿಯೇ ‘ಮಲ್ಲ’ ಪದದಿಂದ ಪ್ರಾರಂಭವಾಗುವ ೩೮೫ ಸ್ಥಳಗಳಿವೆ. ಮಹಾರಾಷ್ಟ್ರದಲ್ಲಿ ಮುಂಬಯಿಯ ಹತ್ತಿರ ಇರುವ ‘ಮಲಾಡ’ವು, ಕನ್ನಡದ ‘ಮಲ್ಲಹಾಡಿ’ಯೇ ಹೌದು!. ಅಷ್ಟೇ ಏಕೆ, ನನ್ನ ಅಜ್ಜಿಯು ನಾನು ಚಿಕ್ಕವನಿದ್ದಾಗ, ನನಗೆ ‘ಮಲಪೂರಿ’ ಎನ್ನುವ ಯಕ್ಷಿಣಿಯೊಬ್ಬಳ ಕಥೆಯನ್ನು ಹೇಳುತ್ತಿದ್ದಳು. ಈ ಮಲ್ಲರೇ, ‘ಮಾಲ್ದೀವ್ಸ್’ದ ಮೂಲನಿವಾಸಿಗಳು. ಇವರಿಂದಲೇ ‘ಮಲ್ಲದ್ವೀಪ’ವು ಬಂದಿದ್ದು, ಅದನ್ನು ಸಂಸ್ಕೃತ-ಉತ್ಸಾಹಿಗಳು ‘ಮಾಲಾದ್ವೀಪ’ ಎಂದು ಘೋಷಿಸಿದ್ದಾರೆ. ಆದುದರಿಂದ, ವಿವೇಚನಾಶೀಲರಾದ ನನ್ನ ಕನ್ನಡ ಬಾಂಧವರೇ, ಸಂಸ್ಕೃತದ ಈ ಬಲೆಯಲ್ಲಿ ಕಣ್ಣು ತೆರೆದುಕೊಂಡೇ ಬೀಳದಿರಿ! ಲಕ್ಷದ್ವೀಪವು ‘ಲಕ್-ದೀವ್’ ಹಾಗು ಮಾಲ್ದೀವ್ಸ್ ಇದು ಮಲ್ಲದ್ವೀಪ ಎನ್ನುವುದನ್ನು ಅರಿಯಿರಿ!