Monday, March 30, 2009

ಪ್ರಕೃತಿಯ ಯುಗಾದಿ......ದ.ರಾ.ಬೇಂದ್ರೆ

ಯುಗಾದಿಯು ಋತುಚಕ್ರದ ಆದಿಬಿಂದು. ಇದು ವಸಂತ ಋತುವಿನ, ಚೈತ್ರಮಾಸದ ಪ್ರಾರಂಭದ ದಿನವಾಗಿದೆ. ಮನುಜನು ತನ್ನ ಬುದ್ಧಿಶಕ್ತಿಯ ಆಧಾರದಿಂದ, ಪೃಥ್ವಿ ಹಾಗು ಚಂದ್ರರ ಚಲನೆಯನ್ನು ಗುಣಿಸಿ, ಯುಗಾದಿಯ ಆರಂಭವನ್ನು ಕ್ಷಣದವರೆಗೂ ನಿರ್ಧರಿಸುತ್ತಾನೆ.
ಮನುಜನ ಹೊರತಾದ ನಿಸರ್ಗಕ್ಕೆ ಮನುಜನಂತಹ ಬುದ್ಧಿಶಕ್ತಿಗಿಂತ ಬೇರೊಂದು ರೂಪದ ಬುದ್ಧಿಶಕ್ತಿ ಇದೆ. ಮನುಜನ ಬುದ್ಧಿಶಕ್ತಿಗೆ ಪ್ರಜ್ಞಾಪೂರ್ವಕ ಮೇಧಾಶಕ್ತಿ ಎಂದು ಕರೆಯಬಹುದಾದರೆ, ನಿಸರ್ಗದ ಬುದ್ಧಿಶಕ್ತಿಗೆ ಅಪ್ರಜ್ಞಾಪೂರ್ವಕ ಮೇಧಾಶಕ್ತಿ ಎಂದು ಕರೆಯಬಹುದು. ನಿಸರ್ಗದ ಅಪ್ರಜ್ಞಾಪೂರ್ವಕ ಮೇಧಾಶಕ್ತಿ ಎದುರಿಗೆ ಮನುಜನ ಪ್ರಜ್ಞಾಪೂರ್ವಕ ಮೇಧಾಶಕ್ತಿ ನಗಣ್ಯ. ನಿಸರ್ಗವು ಯುಗಾದಿಯನ್ನು ಗುರುತಿಸುವ ಬಗೆಯೇ ಬೇರೆ. ಅದು ಮನುಜನ ಬುದ್ಧಿಗೆ ನಿಲುಕಲಾರದು.
ಅಂಬಿಕಾತನಯದತ್ತರು ತಮ್ಮ ಯುಗಾದಿಕವನದಲ್ಲಿ ಸೃಷ್ಟಿಕ್ರಮವು ಪುನರಾವರ್ತಿಸುವ ಬಗೆಯನ್ನು ಬಣ್ಣಿಸುತ್ತಿದ್ದಾರೆ. ಯುಗಾದಿಯೊಡನೆ ನಿಸರ್ಗವು ಹೊಸ ರೂಪವನ್ನು ತಾಳುವ ರೀತಿಯನ್ನು ವರ್ಣಿಸುತ್ತಾರೆ. ಅವರು ಬಣ್ಣಿಸುವ ಯುಗಾದಿಯು ಪ್ರಕೃತಿಯ ಯುಗಾದಿ, ಇದು ಮನುಜರ ಯುಗಾದಿಯಲ್ಲ.
ಯುಗಾದಿಕವನದ ಪೂರ್ಣಪಾಠ ಹೀಗಿದೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪ ಸೂಸಿ
ಜೀವಕಳೆಯ ತರುತಿದೆ

ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ
ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?
ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಸೂರ್ಯ,ಭೂಮಿ ಹಾಗು ಚಂದ್ರರ ಸೃಷ್ಟಿಯಾದ ನಂತರ ಕೋಟಿ ಕೋಟಿ ಯುಗಗಳು ಕಳೆದು ಹೋಗಿವೆ. ಪ್ರತಿ ವರ್ಷದ ಆದಿಯಲ್ಲಿ ನಾವು ಯುಗಾದಿ ಎಂದು ಕರೆಯುವ ದಿನವು ಪುನರಾವರ್ತನೆಗೊಳ್ಳುತ್ತದೆ. ಪ್ರತಿ ಸಲವೂ ಈ ವರ್ಷಾರಂಭವು ನಿಸರ್ಗದಲ್ಲಿ ಹೊಸ ಹರ್ಷವನ್ನು ತರುತ್ತದೆ. ಅದನ್ನು ಬೇಂದ್ರೆ ಹೀಗೆ ಹೇಳುತ್ತಾರೆ:
ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ.

ವಸಂತ ಋತುವಿನ ಪ್ರಕೃತಿಯನ್ನು ಗಮನಿಸಿರಿ:
ಸಸ್ಯಸಂಕುಲವೆಲ್ಲ ಬಣ್ಣ ಬಣ್ಣದ,ಬಗೆಬಗೆಯ ಸುವಾಸನೆಯ ಹೊಸ ಹೂವುಗಳಿಂದ ಶೋಭಿಸತೊಡಗುತ್ತದೆ. ಪ್ರಕೃತಿಯು ಹೊಸ ಉಲ್ಲಾಸದಿಂದ ತುಂಬುತ್ತದೆ. ನಿಸರ್ಗದಲ್ಲಿ ಹೊಸ ಸಂಭ್ರಮವಿದೆ. ಈ ನವೋಲ್ಲಾಸಕ್ಕೊಂದು ಕಾರಣವಿರಬೇಕಲ್ಲವೆ? ಈ ಕಾರಣವೆಂದರೆ ನಿಸರ್ಗದ ಮೂಲ ಬಯಕೆ ಅರ್ಥಾತ್ ಹೊಸ ಸಂತಾನದ ಉತ್ಪತ್ತಿ.
ಚಿಕ್ಕ ಕೂಸನ್ನು ನೋಡಿದಾಗ ಎಲ್ಲರಿಗೂ ಆ ಕೂಸಿನ ಮೇಲೆ ಪ್ರೀತಿ ಹುಟ್ಟುತ್ತದೆ. ಈ ಕೂಸೇ ಹೊಸ ಹರುಷ’! ನಿಸರ್ಗದಲ್ಲಿಯ ಸಸ್ಯಸಂಕುಲವು ಹೊಸ ಹೂವನ್ನು ಬಿಡುವುದರೊಂದಿಗೆ ಸಂತಾನೋತ್ಪತ್ತಿಯನ್ನು ಪ್ರಾರಂಭಿಸುತ್ತವೆ. ಆದುದರಿಂದ ಇದು ಹೊಸ ಹರುಷ!
ಬೇಂದ್ರೆ ಈ ಮಾತನ್ನು ಮುಂದಿನ ನುಡಿಯಲ್ಲಿ ಹೀಗೆ ಹೇಳಿದ್ದಾರೆ:

ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಲಿ
ಮತ್ತೆ ಕೇಳಬರುತಿದೆ
ಬೇವಿನ ಕಹಿ ಬಾಳಿನಲ್ಲಿ
ಹೂವಿನ ನಸುಗಂಪ ಸೂಸಿ
ಜೀವಕಳೆಯ ತರುತಿದೆ

ಪರಾಗಸ್ಪರ್ಷಕ್ಕಾಗಿ ಭೃಂಗಗಳನ್ನು ಆಹ್ವಾನಿಸಲು ಹೊಂಗೆ ಹೂವು ಗೊಂಚಲು ಗೊಂಚಲಾಗಿ ಹೂವುಗಳನ್ನು ಸುರಿಸುತ್ತದೆ. ದುಂಬಿಗಳ ಗುಂಗುಂಗಾನ ಪ್ರತಿ ವರುಷವೂ ಪುನರಾವರ್ತಿಸುತ್ತಿದೆ. ಇಡೀ ವರುಷವೆಲ್ಲ ಕಹಿಯಾದ ಎಲೆ ಹಾಗೂ ಕಹಿಯಾದ ಕಾಯಿಗಳನ್ನೇ ಇಟ್ಟುಕೊಂಡು, ಕಹಿ ಬದುಕನ್ನೇ ಕಳೆದ ಬೇವಿನ ಮರವು ಯುಗಾದಿಯಂದು ನಸುಕಂಪು ಬೀರುವ ಹೂವನ್ನು ಪಡೆದಿದೆ. ಹೀಗಾಗಿ ಅದಕ್ಕೂ ಸಹ ಒಂದು ಹೊಸ ಜೀವಕಳೆ ಬಂದಿದೆ!
ಈ ಸಂದರ್ಭದಲ್ಲಿ ಮತ್ತೊಂದು ಮಾತನ್ನು ಗಮನಿಸಬೇಕು. ಕವಿ ಎಂದು ಯಾರನ್ನು ಕರೆಯಬೇಕು? ಚೆಲುವನ್ನು ಕಾಣುವವನೇ ಕವಿ. ಆತ ಚರಾಚರ ಸೃಷ್ಟಿಯಲ್ಲಿಯ ಎಂಥಾ ಸಣ್ಣ ಕಣದಲ್ಲಿಯ ಚೆಲುವನ್ನೂ ಗಮನಿಸಿ ಸಂತೋಷಪಡುತ್ತಾನೆ. ಬೇಂದ್ರೆಯವರಿಗೆ ತಮ್ಮ ಹಿತ್ತಲಿನಲ್ಲಿರುವ ಹೊಂಗೆ, ಬೇವು, ಹುಣಸಿಯ ಮರ ಎಲ್ಲವೂ ಸಂತೋಷವನ್ನು ನೀಡುತ್ತವೆ. ಹುಣಸಿಯ ಮರವನ್ನು ನೆವ ಮಾಡಿ ಅವರು ಹೇಳಿದ ಕವನದ ಪ್ರಸಿದ್ಧ ಸಾಲುಗಳು ಹೀಗಿವೆ:  
ಕವಿಗೇನ ಬೇಕs? ಹೂತ ಹುಣಸಿಮರ ಸಾಕs!”

ವಸಂತ ಋತುವಿಗೂ ಕಾಮದೇವನಿಗೂ ಅನನ್ಯ ಸ್ನೇಹಸಂಬಂಧವಿದೆ. ವಸಂತ ಋತುವಿನ ಆದಿಯಲ್ಲಿ ಗಿಡ, ಮರ, ಬಳ್ಳಿಗಳು ಹೂವುಗಳಿಂದ ಕಂಗೊಳಿಸುವ ಕಾರಣವನ್ನು ಕವಿ ಹೀಗೆ ಹೇಳುತ್ತಾರೆ:
ಕಮ್ಮನೆ ಬಾಣಕ್ಕೆ ಸೋತು
ಜುಮ್ಮನೆ ಮಾಮರವು ಹೂತು
ಕಾಮಗಾಗಿ ಕಾದಿದೆ

ಈ ಮೇಲಿನ ಮೂರು ಸಾಲುಗಳು ಕವಿಯ ಅಸಾಮಾನ್ಯ ಕಲ್ಪನೆಯಿಂದಾಗಿ ಹೊರಹೊಮ್ಮಿವೆ. ಕಾಮದೇವನ ಬಿಲ್ಲಿಗೆ ಕಬ್ಬಿನ ದಂಡ ಹಾಗು ದುಂಬಿಗಳ ಹೆದೆ ಇರುತ್ತದೆ. ಅವನು ಉಪಯೋಗಿಸುವದು ಐದು ತರಹದ ಹೂವಿನ ಬಾಣಗಳನ್ನು. ಇಂತಹ ಕಮ್ಮನೆಯ ಅಂದರೆ ಸಿಹಿಯಾದ ಬಾಣಕ್ಕೆ ಸೋಲದ ಜೀವಿ ಉಂಟೆ? ಇಲ್ಲಿ ಕಾಮದೇವನು ನಿಸರ್ಗವನ್ನು ಸೋಲಿಸಿಲ್ಲ ; ನಿಸರ್ಗವು ತಾನಾಗಿಯೆ ಕಾಮದೇವನಿಗೆ ಸೋತಿದೆ ; ಕಾಮದೇವನ ಬಾಣ ತಗುಲಿದೊಡನೆಯೆ, ಮಾವಿನ ಮರವು ಪುಳಕಗೊಂಡಿದೆ ; ಆ ಪುಳಕವು ಹೂವುಗಳಾಗಿ ಹೊರಹೊಮ್ಮಿದೆ. ಈ ಕಲ್ಪನೆಗೆ ಅದ್ಭುತ ಕಲ್ಪನೆ ಎನ್ನಲೇ ಬೇಕು. On the touch of Cupid’s arrow, the captive mango tree thrilled into flowers ಎನ್ನುವ ಸಾಲುಗಳನ್ನು ಜಗತ್ತಿನ ಯಾವ ಕವಿಯೂ ಹೇಳಿರಲಿಕ್ಕಿಲ್ಲ!
ರೀತಿಯಾಗಿ ಬೇಂದ್ರೆಯವರು ಬೇವು ಮಾವುಗಳೆಲ್ಲ (--ಅಹಾ! ಕಹಿ ಹಾಗೂ ಸಿಹಿಯಾದ ಮರಗಳು ಜೊತೆಜೊತೆಯಾಗಿಯೇ!--) ಪುಷ್ಪವತಿಯರಾಗಿ ಕಾಮದೇವನಿಗಾಗಿ ಕಾಯುತ್ತಿರುವದನ್ನು ಹೇಳುತ್ತಾರೆ. 

ಸುಗ್ಗಿ ಸುಗ್ಗಿ ಸುಗ್ಗಿ ಎಂದು
ಹಿಗ್ಗಿ ಗಿಳಿಯ ಸಾಲು ಸಾಲು
ತೋರಣದೊಲು ಕೋದಿದೆ

ಮಾಮರವು ಇನ್ನೂ ಹಣ್ಣು ಬಿಟ್ಟಿಲ್ಲ. ಆದರೆ ಹಣ್ಣಿನ ಸುಗ್ಗಿ ಇನ್ನೇನು ಬಂದೇ ಬಿಟ್ಟಿತು ಎಂದು ಹಿಗ್ಗುತ್ತ ಗಿಳಿಗಳ ಸಾಲುಗಳು ಮಾಮರವನ್ನು ಆಶ್ರಯಿಸಿವೆ. ಗಿಳಿಗಳ ಈ ಸಾಲುಗಳು ಕವಿಗೆ ತೋರಣದಂತೆ ಕಾಣುತ್ತವೆ. ಆದರೆ ಇದು ಕಾಮದೇವನನ್ನು ಸ್ವಾಗತಿಸುವ ತೋರಣ. ಈ ರೀತಿಯಾಗಿ ನಿಸರ್ಗವೆಲ್ಲ (--ಮನುಜನನ್ನು ಹೊರತುಪಡಿಸಿ--) ಹೊಸ ವರ್ಷದೊಡನೆ ಹೊಸ ಜನ್ಮ ತಾಳಿ ಸಂಭ್ರಮಿಸುತ್ತದೆ. ಹಳೆಯ ನೆಲೆಯನ್ನು ಕಳಚಿ ಹಾಕಿ, ಹರ್ಷದ ಹೊಸ ನೆಲೆಯನ್ನು ಪಡೆಯುತ್ತದೆ. ಪ್ರತಿ ವರುಷದಲ್ಲೂ ಪ್ರಕೃತಿಯು ಹೊಸ ಬಾಲ್ಯ ಹಾಗು ಹೊಸ ಯೌವನವನ್ನು ಪಡೆಯುತ್ತದೆ. ನಿಸರ್ಗದ ಈ ಚೆಲುವನ್ನು, ಅದರ ಯೌವನದ ಪುನರಾವರ್ತನೆಯನ್ನು ಕಂಡ ಕವಿ ಸಂತಸಪಡುತ್ತಾನೆ. ಆದರೆ, ಮನುಜನ ಸ್ಥಿತಿ ಹೀಗಿಲ್ಲವಲ್ಲ ಎನ್ನುವುದು ಅವನಿಗೆ ಹೊಳೆದಾಗ, ಕವಿಯು ಅಚ್ಚರಿ ಹಾಗು ವಿಷಾದಭಾವನೆಗಳಿಗೆ ಒಳಗಾಗುತ್ತಾನೆ. 

ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವಜಾತಕೆ!
ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೆ?

ಮನುಜಕುಲಕ್ಕೆ ಮಾತ್ರ ಒಂದು ಜನ್ಮದಲ್ಲಿ ಒಂದೇ ಬಾಲ್ಯ ಹಾಗೂ ಒಂದೇ ಯೌವನ! ನಮಗೂ ಸಹ ನಿದ್ದೆಯಿಂದ ಎದ್ದ ಬಳಿಕ, ನಮ್ಮ ಹಳತನ್ನು ಕಳೆದೊಗೆದು, ಹೊಸ ಜೀವನವನ್ನು ಪಡೆಯುವ ಹಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು!

ನಿದ್ದೆಗೊಮ್ಮೆ ನಿತ್ಯ ಮರಣ
ಎದ್ದ ಸಲ ನವೀನ ಜನನ
ನಮಗೆ ಏಕೆ ಬಾರದೊ?

ನಿಸರ್ಗದ ಈ ಮರುಹುಟ್ಟಿಗೆ ಕಾರಣನಾದ ಸನತ್ಕುಮಾರನನ್ನೇ ಅಂದರೆ ಕಾಮದೇವನನ್ನೇ ಕವಿಯು ಪ್ರಶ್ನಿಸುತ್ತಾನೆ. 

ಎಲೆ ಸನತ್ಕುಮಾರದೇವ!
ಸಲೆ ಸಾಹಸಿ ಚಿರಂಜೀವ!
ನಿನಗೆ ಲೀಲೆ ಸೇರದೋ?

ಕವಿಯು ಪ್ರಕೃತಿಯ ಹಾಗು ಮನುಜರ ನಡುವಿನ ಈ ಕಂದರವನ್ನು ನೆನೆದು ವಿಷಾದಿಸುತ್ತಾನೆ:

ಯುಗಯುಗಾದಿ ಕಳೆದರೂ
ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ
ಹೊಸತು ಹೊಸತು ತರುತಿದೆ
ನಮ್ಮನಷ್ಟೆ ಮರೆತಿದೆ!

ಪೃಕೃತಿಯ ಬದುಕು ಪ್ರತಿ ಯುಗಾದಿಗೊಮ್ಮೆ ಹೊಸತಾಗುತ್ತದೆ. ಮನುಜನ ಬದುಕು ಹಾಗಿಲ್ಲವಲ್ಲ ಎನ್ನುವ ಕವಿಯ ಉದ್ಗಾರದೊಡನೆ ಕವನ ಮುಕ್ತಾಯಗೊಳ್ಳುತ್ತದೆ!

Wednesday, March 18, 2009

ಹಿತ್ತಲಲ್ಲಿಯ ಹೂವು

ಚಾರ್ಲಿ ಚಾಪ್ಲಿನ್ !
ಈತ ಚಿತ್ರಜಗತ್ತು ಕಂಡ ಅದ್ಭುತ ಕಲಾವಿದ! ಅವನು ನನ್ನ ನೆಚ್ಚಿನ ಕಲಾವಿದನೂ ಹೌದು.
The Kid, Modern Times, The Great Dictator ಮೊದಲಾದ ಅಭಿಜಾತ ಚಲನಚಿತ್ರಗಳನ್ನು ನಿರ್ಮಿಸಿದ ಹೆಗ್ಗಳಿಕೆ ಅವನದು. ಅಭಿನಯ ಹಾಗೂ ನಿರ್ದೇಶನ ಇವೆರಡರಲ್ಲೂ ಸರ್ವೋಚ್ಚನಾದ ಸವ್ಯಸಾಚಿ ಈತ.
ಇವನಂತೆಯೇ ಅನೇಕ ಪಾಶ್ಚಾತ್ಯ ಚಿತ್ರನಿರ್ಮಾಪಕರು ಹಾಗೂ ನಟ, ನಟಿಯರೂ ಸಹ ನನ್ನ ನೆಚ್ಚಿನವರಾಗಿದ್ದಾರೆ. Alfred Hitchcock, Ingmar Bergman, Steven Spielberg, Sophia Loren ಇವರೂ ನನ್ನ ಹೃದಯದಲ್ಲಿ ಸ್ಥಾನ ಪಡೆದವರೇ.
ಇತ್ತೀಚೆಗೆ ಶ್ರೀ ಅಮರರು ಕಳಿಸಿಕೊಟ್ಟ ಇರಾಣಿ ಚಿತ್ರಗಳನ್ನು ನೋಡಿದ ಬಳಿಕ ಮಜೀದ ಮಜೀದಿ ನನಗೆ ತುಂಬ ಇಷ್ಟವಾದರು. ಇವರೆಲ್ಲರ ಪ್ರತಿಮೆಗಳು ನನ್ನ ಹೃದಯರಂಗದಲ್ಲಿ ಪ್ರತಿಷ್ಠಾಪಿತವಾಗಿವೆ.

ಕನ್ನಡೇತರ ಭಾರತೀಯ ಚಿತ್ರರಂಗದಲ್ಲಿ ಸತ್ಯಜಿತ ರಾಯ, ಶ್ಯಾಮ ಬೆನೆಗಲ್, ಕಮಲಹಾಸನ್, ನಾಸಿರುದ್ದೀನ ಶಾ, ಅನುಪಮ ಖೇರ, ಶಬಾನಾ ಆಜ್ಮಿ, ಇವರು ನನಗೆ ಇಷ್ಟರಾದವರು.
ಇವರೆಲ್ಲರ ಪ್ರತಿಮೆಗಳನ್ನು ನಮ್ಮ ಕರಾವಳಿಯ ಕಡಲ ದಂಡೆಯ ಮೇಲೆ ಸ್ಥಾಪಿಸಿದರೆ ನನಗೆ ಖುಶಿಯಾಗುವದರಲ್ಲಿ ಸಂದೇಹವಿಲ್ಲ. ಆದರೆ ಸಂಪೂರ್ಣ ಖುಶಿಯಾದೀತೆ?

ಉತ್ತರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಕನ್ನಡಿಗರಿಗೆ ಪರಮೋಚ್ಚ ಕಲಾವಿದರನ್ನು ಹಾಗೂ ಸಾಹಿತಿಗಳನ್ನು ಕೊಟ್ಟಿವೆ. ದಕ್ಷಿಣ ಕನ್ನಡ ಜಿಲ್ಲೆ ಎಂದ ತಕ್ಷಣ ನೆನಪಾಗುವವರು ಶಿವರಾಮ ಕಾರಂತರು. ಸಾಹಿತ್ಯ, ಯಕ್ಷಗಾನ, ವಿಜ್ಞಾನ ಮೊದಲಾದ ಅನೇಕ ವಿಷಯಗಳಲ್ಲಿ ಶಿವರಾಮ ಕಾರಂತರನ್ನು ಮೀರಿಸುವವರು ಸಿಗುವದು ದುಸ್ಸಾಧ್ಯ. ಕರ್ನಾಟಕಕ್ಕೆ ಶಿವರಾಮ ಕಾರಂತರು ಕೊಟ್ಟ ಕೊಡುಗೆಯನ್ನು ಬಹುಶಃ ಯಾರೂ ಕೊಟ್ಟಿಲ್ಲ.

ತಮ್ಮ ಜಮೀನನ್ನೆಲ್ಲ ರೈತರಿಗೆ ಕೊಟ್ಟುಬಿಟ್ಟ , ಕಾರ್ಮಿಕರಿಗಾಗಿ ಜೀವವನ್ನು ತೇಯ್ದ , ಚುಟುಕುಬ್ರಹ್ಮರೆಂದು ಖ್ಯಾತಿವೆತ್ತ, ಉತ್ತರ ಕನ್ನಡ ಜಿಲ್ಲೆಯ ಶ್ರೀ ದಿನಕರ ದೇಸಾಯಿಯವರ ಕೊಡುಗೆಯ ಬಗೆಗೆ ಏನು ಹೇಳಲಾದೀತು? ಶ್ರೀ ಜವಾಹರಲಾಲ ನೆಹರೂರು “ನನ್ನ ಚಿತಾಭಸ್ಮವನ್ನು ವಿಮಾನದ ಮೂಲಕ ಭಾರತದ ಎಲ್ಲೆಡೆ ಹಾರಿಸಿರಿ” ಎಂದು ತಮ್ಮ ಮೃತ್ಯುಪತ್ರದಲ್ಲಿ ಬರೆದಿದ್ದರು. ಇದಕ್ಕೂ ಅನೇಕ ವರ್ಷ ಮೊದಲೇ ಶ್ರೀ ದಿನಕರ ದೇಸಾಯಿ ತಮ್ಮ ಕವನದಲ್ಲಿ ಹಾಡಿದ್ದರು:
“ನನ್ನ ದೇಹದ ಬೂದಿ ಹಾರಿ ಬಿಡಿ ಗಾಳಿಯಲಿ…”

ಶ್ರೀ ಗೋವಿಂದ ಪೈ, ಶ್ರೀ ಪಂಜೆ ಮಂಗೇಶರಾಯರು ಇಂತಹ ಶ್ರೇಷ್ಠ ಸಾಹಿತಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಕಾಸರಗೋಡು ತಾಲೂಕು ಕೇರಳದಲ್ಲಿಯೇ ಉಳಿದಿದ್ದರೂ ಸಹ ಕಯ್ಯಾರ ಕಿಞ್ಞಿಣ್ಣ ರೈಯವರನ್ನು ಇದೇ ಪಂಕ್ತಿಯಲ್ಲಿ ಸೇರಿಸಬೇಕು.

ಯಕ್ಷಗಾನದ ಶ್ರೇಷ್ಠ ಕಲಾವಿದ ಕೆರೆಮನೆ ಶಂಭು ಹೆಗಡೆ ಯಾವ ಜಿಲ್ಲೆಯವರು?
ಅಖಿಲ ಭಾರತದಲ್ಲಿ ಖ್ಯಾತಿ ಪಡೆದ ರಂಗಕರ್ಮಿ ಬಿ.ವ್ಹಿ.ಕಾರಂತ ಯಾವ ಜಿಲ್ಲೆಯವರು?
ಭಾರತೀಯ ಚಿತ್ರರಂಗದಲ್ಲಿ ಶ್ರೇಷ್ಠರಾದ ಗಿರೀಶ ಕಾರಂತ(=ಕಾಸರವಳ್ಳಿ) ಯಾವ ಜಿಲ್ಲೆಯವರು?
ವಿಶ್ವಸುಂದರಿ, Bollywood ತಾರಾಮಣಿ ಐಶ್ವರ್ಯಾ ರೈ ಹಾಗೂ ಶಿಲ್ಪಾ ಶೆಟ್ಟಿ ಇವರ ತವರುಮನೆ ಎಲ್ಲಿವೆ?
ವಿಶ್ವದ ಅತ್ಯುತ್ತಮ ಚಿತ್ರಕಾರರಲ್ಲಿ ಒಬ್ಬರಾದ ಕೆ.ಕೆ.ಹೆಬ್ಬಾರ ಎಲ್ಲಿಯವರು?
ಹೀಗೇ ಅನೇಕ ರಂಗಗಳಲ್ಲಿ ಖ್ಯಾತರಾದವರು ನಮ್ಮ ಕನ್ನಡ ಜಿಲ್ಲೆಯವರು.

ಈ ಶ್ರೇಷ್ಠರಲ್ಲಿ ಯಾರದಾದರೂ ಪ್ರತಿಮೆ ಕರಾವಳಿಯಲ್ಲಿದೆಯೆ?
ನಮ್ಮದೇ ಹಿತ್ತಲಲ್ಲಿಯ ಹೂವು ಎಷ್ಟೇ ಸುಗಂಧಭರಿತವಾಗಿದ್ದರೂ, ನಾವು ಪಕ್ಕದ ಮನೆಯ ಹೂವನ್ನೇ ಬಯಸುತ್ತೇವೆ, ಏಕೆ?

ಚಾರ್ಲಿ ಚಾಪ್ಲಿನ್ನನ ಪ್ರತಿಮೆಯನ್ನು ಕರಾವಳಿಯಲ್ಲಿ ಸ್ಥಾಪಿಸಬೇಕೊ, ಬೇಡೋ ಎನ್ನುವ ಚರ್ಚೆ ನಡೆಯುತ್ತಿರುವಾಗ, ನನ್ನ ಮನಸ್ಸು ನಮ್ಮ ಮನೆಯ ಹಿತ್ತಲಿನ ಹೂವುಗಳನ್ನು ನೆನಪಿಸಿಕೊಂಡಿತು.
ನಿಮ್ಮ ಖಾಸಗಿ ಜಮೀನಿನಲ್ಲಿ ನೀವು ಯಾರದಾದರೂ ಪ್ರತಿಮೆಯನ್ನು ಸ್ಥಾಪಿಸಿಕೊಳ್ಳಿ. ಸಾರ್ವಜನಿಕ ಭೂಮಿಯಲ್ಲಿ ಪ್ರತಿಮೆ ಸ್ಥಾಪಿಸುವದಾದರೆ, ಆ ನೆಲದ ಶ್ರೇಷ್ಠರಿಗೆ ಆದ್ಯತೆ ಸಿಗಬೇಕು. ಉದಾಹರಣೆಗೆ ಮೈಸೂರಿನಲ್ಲಿ ಶೇಕ್ಸಪಿಯರನ ಪ್ರತಿಮೆ ಸ್ಥಾಪಿಸುವ ಮೊದಲು ಕೈಲಾಸಂ ಪ್ರತಿಮೆಯ ಸ್ಥಾಪನೆಯಾಗಬೇಕು.
ಇದು ತಪ್ಪು ಎನ್ನುವಿರಾ?

ಕೆಲವರು ವಿಶ್ವಮಾನವರಿರುತ್ತಾರೆ. ಅಂಥವರಿಗೆ ಎಲ್ಲಿಯೇ ಆಗಲಿ, ಪ್ರಥಮ ಆದ್ಯತೆ ದೊರೆತರೆ ತಪ್ಪಿಲ್ಲ. ಉದಾಹರಣೆಗೆ ಅಬ್ರಾಹಮ್ ಲಿಂಕನ್. ಲಿಂಕನ್ ಏಕೆ ಅತ್ಯುತ್ತಮ ಮಾನವನೆಂದರೆ ಆತ ಸತ್ಯಕ್ಕಾಗಿ, ಮಾನವತೆಗಾಗಿ ತನ್ನವರ ವಿರುದ್ಧವೇ ಹೋರಾಡಿದವನು.

ಆದರೆ ಚಾರ್ಲಿ ಚಾಪ್ಲಿನ್?
ನಮ್ಮ ಹಿತ್ತಲಿನ ಗಂಧಭರಿತ ಹೂವುಗಳಿಗಿಂತ ಈ ಹೂವು ಹೆಚ್ಚಿನದೆ?

Friday, March 13, 2009

ಸಮಾಜ ಹಾಗು ಸಂಸ್ಕೃತಿ

ಈ ಭೂಮಿಯ ಮೇಲೆ ಬದಕುತ್ತಿರುವ ಅನೇಕ ಜೀವಸಂಕುಲಗಳಿಗೆ ಗುಂಪು ಕಟ್ಟಿಕೊಂಡು ಇರುವದು ಒಂದು ಅನಿವಾರ್ಯತೆಯಾಗಿದೆ. ಈ ಗುಂಪುಜೀವನವೇ ಮೊಟ್ಟಮೊದಲ ಸಮಾಜವ್ಯವಸ್ಥೆ. ಇಂತಹ ಸಮಾಜವ್ಯವಸ್ಥೆಯ ಮೂಲ ಉದ್ದೇಶಗಳು ಮೂರು. ಮೊದಲನೆಯದು ಈ ಸಮಾಜದಲ್ಲಿಯ ಜೀವಿಗೆ ಸಮಾಜದ ಹೊರಗಿನ ಪ್ರಾಣಿಗಳಿಂದ ಸಂರಕ್ಷಣೆ ನೀಡುವದು. ಎರಡನೆಯ ಉದ್ದೇಶ ಆಹಾರಪೂರೈಕೆ. ಮೂರನೆಯ ಉದ್ದೇಶ ಈ ಜೀವ ಸಂಕುಲದ ಮುಂದುವರಿಕೆ. ಈ ಎಲ್ಲ ಉದ್ದೇಶಗಳನ್ನು ಆ ಒಂದು ಸಮಾಜ ತನ್ನದೇ ಆದ ರೀತಿಯಲ್ಲಿ ವ್ಯವಸ್ಥಿತಗೊಳಿಸುತ್ತದೆ. ಇಂತಹ ಪ್ರಾಣಿಸಮಾಜಕ್ಕೆ ಪ್ರಾಥಮಿಕ ಸಮಾಜ ಅಥವಾ Primary Society ಎಂದು ಕರೆಯಬಹುದೇನೊ?

ಆದಿಮಾನವನ ಕಾಲದಲ್ಲಿಯ ಮನುಷ್ಯಸಮಾಜವು ಪ್ರಾಣಿಸಮಾಜಕ್ಕಿಂತ ಹೆಚ್ಚಿಗೆ ಭಿನ್ನವಾಗಿರಲಿಕ್ಕಿಲ್ಲ. ಆದಿಮಾನವರ ಈ ಗುಂಪನ್ನು Primary Societyಯ ಮುಂದಿನ ಹೆಜ್ಜೆಯಾದ Primitive Society ಎಂದು ಕರೆಯಬಹುದು. ಸಂರಕ್ಷಣೆ, ಆಹಾರಪೂರೈಕೆ ಹಾಗೂ ಸಂತಾನ ಇವೇ ಮೂರು ಉದ್ದೇಶಗಳು ಆದಿಮಾನವರ ಗುಂಪುಗಳ ಪರಮಾರ್ಥಗಳಾಗಿದ್ದವು. ಗುಂಪುಗಳಲ್ಲಿ ದೈಹಿಕವಾಗಿ ಬಲಿಷ್ಠನಾದವನೇ ಗುಂಪಿನ ನಾಯಕನಾಗುತ್ತಿದ್ದ. ಕಾಲಕ್ರಮೇಣ ಉತ್ಕ್ರಾಂತಿಯ ಪಥದಲ್ಲಿ ನಡೆದ ಮಾನವಸಮಾಜದಲ್ಲಿ ಅನೇಕ ಬದಲಾವಣೆಗಳು ಜರುಗಿದವು. ಬೆಂಕಿ ಹಾಗು ಚಿಕ್ಕಪುಟ್ಟ ಆಯುಧಗಳ ಸಂಶೋಧನೆಗಳಿಂದಾಗಿ ಮಾನವನಿಗೆ ಹೆಚ್ಚಿನ ಸಂರಕ್ಷಣೆ ಹಾಗೂ ಹೆಚ್ಚಿನ ಸೌಲಭ್ಯಗಳು ದೊರಕಲಾರಂಭಿಸಿದವು. Primateಗಳ ಭಿನ್ನಕುಲಗಳಲ್ಲಿ ಮಾನವನಿಗೆ ‘Tool using Primate’ ಎನ್ನುವ ಹೆಗ್ಗಳಿಕೆ ದೊರೆಯಿತು. ಇದರ ಪರಿಣಾಮವು ಒಳ್ಳೆಯದೇ ಆಯಿತು ಎಂದು ಹೇಳಲಾಗುವದಿಲ್ಲ. ಮಾನವರ ಗುಂಪುಗಳಲ್ಲೇ ಅಂತರ್ಯುದ್ಧಗಳು ಜರುಗಲಾರಂಭಿಸಿದವು. ಇದರಿಂದಾಗಿ ಪಾಳೆಯಗಾರಿಕೆ ಪ್ರಾರಂಭವಾಯಿತು. ಈ ರೀತಿಯಾಗಿ ಪಾಳೆಯಗಾರಿಕೆ ಸಮಾಜ (Feudal Society) ಹಾಗೂ ಯಜಮಾನಸಂಸ್ಕೃತಿ (Feudal culture) ಎಲ್ಲೆಡೆ ಪ್ರತಿಷ್ಠಿತವಾದವು.

ಸಮಾಜವು ತನ್ನ ಅಂಗಜೀವಿಯನ್ನು ರಕ್ಷಿಸಬೇಕಾದರೆ, ಮೊದಲು ಆ ಸಮಾಜವೇ ಸುರಕ್ಷಿತವಾಗಿರಬೇಕು ಆದುದರಿದ ಆ ಸಮಾಜದ ಎಲ್ಲ ಅಂಗಜೀವಿಗಳು ಒಟ್ಟಾಗಿ ಆ ಸಮಾಜವನ್ನು ರಕ್ಷಿಸಬೇಕಾಗುತ್ತದೆ. (ಧರ್ಮೋ ರಕ್ಷತಿ ರಕ್ಷಿತಃ). ಈ ಕಾರಣದಿಂದಾಗಿಯೇ ಸಮಾಜವು ತನ್ನ ಅಂಗಜೀವಿಗಳ ಮೇಲೆ ಕಟ್ಟುಪಾಡುಗಳನ್ನು ಹಾಕಬೇಕಾಗುತ್ತದೆ. ತನ್ನ ಅಂಗಜೀವಿಯು ಯಾವ ರೀತಿಯಿಂದ ವರ್ತಿಸಬೇಕು, ಯಾವ ರೀತಿಯ ವರ್ತನೆಯಿಂದ ಅಂಗಜೀವಿಗೆ ಹಾಗೂ ಸಮಾಜಕ್ಕೆ ಒಳಿತಾಗುವದು ಎನ್ನುವದನ್ನು ನಿರ್ಧರಿಸುವ ಕಟ್ಟುಪಾಡುಗಳೇ ಆ ಸಮಾಜದ ಸಂಸ್ಕೃತಿ ಹಾಗೂ ಆದರ್ಶ ಎಂದು ಹೇಳಬಹುದು.

‘ಅಂಗಜೀವಿ ಹುಟ್ಟಿನಿಂದ ಸ್ವತಂತ್ರನು; ಆತ ಯಾರ ಮಾತನ್ನು ಯಾತಕ್ಕೆ ಕೇಳಬೇಕು? ಅತನ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ’ ಇವೆಲ್ಲ ಮಾತುಗಳು ಸಮಾಜದ ಕಟ್ಟುಗಳನ್ನು ಶಿಥಿಲಗೊಳಿಸುವ ಮಾತುಗಳು. ಇದರರ್ಥ ಸಮಾಜದ ಕಟ್ಟುಪಾಡುಗಳು, ಸಮಾಜದ ಅಂತರ್-ವ್ಯವಸ್ಥೆ ಯಾವಾಗಲೂ ಸರಿಯಾಗಿಯೇ ಇರುತ್ತದೆ ಎಂದಲ್ಲ. ‘ಸಮಾಜ ಕೊ ಬದಲ್ ಡಾಲೊ’ ಎನ್ನುವ ಕೂಗು ಅನೇಕ ಸಲ ಸರಿಯಾಗಿಯೂ ಇರಬಹುದು.

ಸಂಸ್ಕೃತಿ ಎನ್ನುವದು ಸಂಸ್ಕರಿಸು ಎನ್ನುವ ಮೂಲಧಾತುವಿನಿಂದ ಬಂದಿದೆ. ಉತ್ತಮವಾದ ಉತ್ಪನ್ನವನ್ನು, ಉಪಯುಕ್ತವಾದ ಉತ್ಪನ್ನವನ್ನು ನೀಡುವದಕ್ಕಾಗಿ ಕಚ್ಚಾ ಪದಾರ್ಥವನ್ನು ಸಂಸ್ಕರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಸಮಾಜದ ಅಂಗಜೀವಿಗಳನ್ನು ಉತ್ತಮರಾದ ಹಾಗೂ ಉಪಯುಕ್ತರಾದ ಮಾನವರನ್ನಾಗಿ ಮಾಡಲು ಸಂಸ್ಕಾರದ ಅವಶ್ಯಕತೆ ಇದೆ. ಈ ಅಂಗಜೀವಿಗಳು ಕೇವಲ ಸಮಾಜಕ್ಕೆ ಉಪಯುಕ್ತರಾದರೆ ಸಾಲದು, ಅವರ ವೈಯಕ್ತಿಕ ಜೀವನವೂ ಸಹ ಸಾರ್ಥಕತೆಯನ್ನು ಪಡೆಯಬೇಕು. ಈ ರೀತಿಯಾಗಿ ವೈಯಕ್ತಿಕವಾಗಿ ಹಾಗೂ ಸಾಮಾಜಿಕವಾಗಿ ಮಂಗಲಕರ ಫಲವನ್ನು ಕೊಡುವದೇ ಉತ್ತಮ ಸಂಸ್ಕೃತಿಯಾಗಿದೆ. ಇದರ counter ideal ಅಂದರೆ regimented society. ಈ regimentation ಅನ್ನು ಪ್ರಭುತ್ವದ ಶಾಸನದ ಮೂಲಕ (ಕಮ್ಯುನಿಸ್ಟ್ ರಾಷ್ಟ್ರಗಳಲ್ಲಿ ಇದ್ದಂತೆ) ಅಥವಾ ಧಾರ್ಮಿಕ ಶಾಸನದ ಮೂಲಕ (ಅರೇಬಿಯನ್ ರಾಷ್ಟ್ರಗಳಲ್ಲಿ ಇದ್ದಂತೆ) ಸಾಧಿಸಬಹುದು.

ಭಾರತೀಯ ಸಮಾಜ, ಪಾಶ್ಚಿಮಾತ್ಯ ಸಮಾಜ ಹಾಗೂ ಅರೇಬಿಯನ್ ಸಮಾಜ ಎನ್ನುವ ಮೂರು ಸಮಾಜಗಳು ತಮ್ಮ ಅಂಗಜೀವಿಗಳಿಗೆ ಏನು ಕೊಟ್ಟಿವೆ, ಪ್ರತಿಯಾಗಿ ಈ ಅಂಗಜೀವಿಗಳು ತಮ್ಮ ಸಮಾಜಕ್ಕೆ ಏನನ್ನು ಕೊಟ್ಟಿವೆ ಹಾಗೂ ಈ ಸಮಾಜಗಳ ರಕ್ಷಣೆ ಯಾವ ರೀತಿಯಿಂದ ಆಗುತ್ತಿದೆ ಎನ್ನುವ ಅಧ್ಯಯನ ಕುತೂಹಲಕಾರಿಯಾಗಿದೆ ಹಾಗೂ ಭಾರತೀಯ ಸಮಾಜವು ಬದಲಾಗುತ್ತಿರುವಂತಹ ಈ ಸಮಯದಲ್ಲಿ ಅವಶ್ಯವೂ ಆಗಿದೆ.

ಸ್ಥೂಲವಾಗಿ ಈ ಮೂರು ಸಮಾಜಗಳನ್ನು ಈ ರೀತಿಯಾಗಿ ವರ್ಗೀಕರಿಸಬಹುದು.
(೧) ಪಾಶ್ಚಿಮಾತ್ಯ ಸಮಾಜ: Liberal ಹಾಗು permissive society.
(೨) ಅರೇಬಿಯನ್ ಸಮಾಜ: Repressive society.
(೩) ಭಾರತೀಯ ಸಮಾಜ: Deteriorating society!

ಈ ಮೂರು ಸಮಾಜಗಳಲ್ಲಿ ಭಾರತೀಯ ಸಮಾಜವು ಅತ್ಯಂತ ಹಳೆಯದು. ಕಾಲಕಾಲಕ್ಕೆ ತಕ್ಕಂತೆ ಈ ಸಮಾಜ ಬದಲಾಗುತ್ತಲೇ ನಡೆದಿದೆ ಮತ್ತು ಆಧುನಿಕ ವಿಚಾರಗಳನ್ನು ಮೈಗೂಡಿಸಿಕೊಳ್ಳುವದರಲ್ಲಿ ಇದು ಹಿಂದೆ ಬಿದ್ದಿಲ್ಲ.
ಇಂತಹ ಭಾರತೀಯ ಸಮಾಜದ ವಿವಿಧ ಮಜಲುಗಳ ಅಧ್ಯಯನ ಮಾಡುವದೇ ಒಂದು ಆಸಕ್ತಿಕಾರಕ ವಿಷಯ.

ಸನಾತನ ಭಾರತೀಯ ಸಮಾಜವು ಒಂದು ಸಂಕೀರ್ಣ ಸಮಾಜವಾಗಿತ್ತು. ಈ ಸಮಾಜವು ನಾಲ್ಕು ವರ್ಣಗಳನ್ನು ಆಧರಿಸಿತ್ತು. ಜ್ಞಾನಸಂಪಾದನೆಯು ಬ್ರಾಹ್ಮಣ ವರ್ಣದ ಉದ್ದೇಶವಾದರೆ, ಶತ್ರುಗಳಿಂದ ಸಮಾಜವನ್ನು ರಕ್ಷಿಸುವದು ಕ್ಷತ್ರಿಯವರ್ಣದ ಹೊಣೆಗಾರಿಕೆಯಾಗಿತ್ತು. ಅರ್ಥವ್ಯವಸ್ಥೆಯು ವೈಶ್ಯವರ್ಣದ ಜವಾಬುದಾರಿಯಾಗಿತ್ತು. ಶೂದ್ರವರ್ಣದವರದು ಉತ್ಪಾದನಾ ಕಾರ್ಯ.

ಇಂತಹ ಭೇದಗಳನ್ನು ಅಂದರೆ ಜಾತಿಗಳನ್ನು ಹುಟ್ಟಿನ ಆಧಾರದ ಮೇಲೆ ಮಾಡಬಾರದಾಗಿತ್ತು ಎನ್ನುವದು ಆಧುನಿಕರ ವಾದ. ಈ ವಾದ ಸರಿಯಾದದ್ದೇ. ಇದು ಸಾಮಾಜಿಕ ಅಸಮಾನತೆಯನ್ನು ನಿರ್ಮಿಸಿದ್ದದ್ದು ಸತ್ಯವೇ.
ಆದರೆ, ಈ ವ್ಯವಸ್ಥೆಗೆ ಅನೇಕ ಅನುಕೂಲತೆಗಳೂ ಇದ್ದವು. ಹತ್ತುಸಾವಿರ ವರ್ಷಗಳ ಹಿಂದೆ ಅಕ್ಷರಗಳು ಇನ್ನೂ ಹುಟ್ಟಿರಲಿಲ್ಲ. ಜ್ಞಾನಸಂಪಾದನೆಯ ಹಾದಿ ಅತ್ಯಂತ ಕಠಿಣವಾಗಿತ್ತು. ಜ್ಞಾನಪ್ರಸಾರಕ್ಕಂತೂ ಸೌಲಭ್ಯಗಳು ಇರಲೇ ಇಲ್ಲ. ನಿಷ್ಠುರವಾದ ಶಬ್ದಪಠಣದಿಂದ ಮಾತ್ರ ಜ್ಞಾನದ ಸಂಪಾದನೆ ಹಾಗೂ ಸಂಗ್ರಹ ಸಾಧ್ಯವಾಗುತ್ತಿತ್ತು. ಇದನ್ನು ಸಾಧಿಸಲು ಇದ್ದಂತಹ ಒಂದೇ ಉಪಕರಣವೆಂದರೆ ಆನುವಂಶಿಕ ಜ್ಞಾನದಾನ.
ಕೇವಲ ಗಣಿತಶಾಸ್ತ್ರ, ಖಗೋಲಶಾಸ್ತ್ರದಂತಹ abstract knowledge ಮಾತ್ರವಲ್ಲ, ಶಿಲ್ಪಶಾಸ್ತ್ರ, ಬಡಿಗತನ, ನೇಕಾರಿಕೆ, ಕಮ್ಮಾರಿಕೆ, ಒಕ್ಕಲುತನ ಮೊದಲಾದ ಎಲ್ಲ ತರಹದ professional knowledge ಸಹ ಈ ತರಹದ ಆನುವಂಶಿಕ ಜ್ಞಾನದಾನದಿಂದ ವಂಶಪಾರಂಪರ್ಯವಾಗಿ ಮುಂದಿನ ಪೀಳಿಗೆಗೆ ಸಾಗಿಸಲ್ಪಡುತ್ತಿದ್ದವು.
ಈಗ ಶಾಲೆ, ಕಾ^ಲೇಜು, ವಿಶ್ವವಿದ್ಯಾಲಯಗಳಲ್ಲಿ ಸಾಧ್ಯವಾಗದೇ ಇದ್ದದ್ದು, ಆಗ ಸಾಧ್ಯವಾಗಿದ್ದು ಈ ಕಾರಣಕ್ಕಾಗಿ.

(ಒಂದು ಸ್ವಾರಸ್ಯದ ಸಂಗತಿ: ಪುರಾತನ ಭಾರತದಲ್ಲಿ ಉತ್ಪನ್ನವಾದ ಜ್ಞಾನವು ಆಧುನಿಕ ಭಾರತದಲ್ಲಿ ಉತ್ಪನ್ನವಾದ ಜ್ಞಾನದ ಅನೇಕ ಮಡಿಯಾಗಿದೆ. ಅಷ್ಟೇ ಏಕೆ, ಆಧುನಿಕ ಪ್ರಪಂಚದಲ್ಲಿ ಉತ್ಪನ್ನವಾದ ಜ್ಞಾನಕ್ಕಿಂತಲೂ ಇದರ ಮೌಲ್ಯವು ಅನೇಕ ಪಟ್ಟು ಹೆಚ್ಚಿನದೆಂದು ಹೇಳಬಹುದು.)

ನಮ್ಮ ಮಾಜಿ ರಾಷ್ಟ್ರಪತಿ ಡಾ^. ಕಲಾಮ್ ಅವರು ಭವಿಷ್ಯದ ಭಾರತೀಯ ಸಮಾಜವು ಜ್ಞಾನಾಧಾರಿತ ಸಮಾಜ (Knowledge Society) ಆಗಬೇಕೆಂದು ಹಂಬಲಿಸುತ್ತಾರೆ.
ನಮ್ಮ ಪುರಾತನ ಭಾರತೀಯ ಸಮಾಜವು ಕೇವಲ ಜ್ಞಾನಾಧಾರಿತ ಸಮಾಜವಾಗಲೀ, ಕೇವಲ ಭೌತಿಕ ವೈಭವದ ಸಮಾಜವಾಗಲೀ ಆಗಿರಲಿಲ್ಲ. ತನ್ನ ಅಂಗಜೀವಿಗಳ ಸಂಪೂರ್ಣ ಏಳ್ಗೆ ಯಾವುದರಿಂದ ಸಾಧ್ಯವಾಗುವದು ಎನ್ನುವದರ ಚಿಂತನೆಯನ್ನೂ ಈ ಸಮಾಜ ಮಾಡಿತು. ಅದರ ಫಲವೇ ಭಾರತೀಯ ಸಮಾಜವು ಉಪದೇಶಿಸುವ ನಾಲ್ಕು ಪುರುಷಾರ್ಥಗಳು: ಧರ್ಮ, ಅರ್ಥ, ಕಾಮ, ಮೋಕ್ಷ.

ಈ ಪುರುಷಾರ್ಥಗಳನ್ನು ಸಾಧಿಸಲು ಅವಶ್ಯವಿರುವ ನಾಲ್ಕು ಆಶ್ರಮಗಳನ್ನು ಭಾರತೀಯ ಸಮಾಜವು ತನ್ನ ಅಂಗಜೀವಿಗಳ ಮೇಲೆ ವಿಧಿಸಿತು. ಆ ನಾಲ್ಕು ಆಶ್ರಮಗಳೆಂದರೆ: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.
ಇವೆಲ್ಲವೂ ಭಾರತೀಯ ಸಮಾಜವು ತನ್ನ ಅಂಗಜೀವಿಗಳ ಸರ್ವಾಂಗೀಣ ಉತ್ಕರ್ಷಕ್ಕಾಗಿ ರೂಪಿಸಿದ ಸಂಸ್ಕೃತಿ. ಇದೇ ಪುರಾತನ ಭಾರತೀಯ ಸಮಾಜದ ಆದರ್ಶ.

ಈ ಸಾಂಸ್ಕೃತಿಕ ಆದರ್ಶದ ಹಾಗು ಇಂತಹ ಸಮಾಜದ ಸಂರಕ್ಷಣೆಯನ್ನು ಎರಡು ವಿಧಗಳಲ್ಲಿ ಮಾಡಲಾಯಿತು.
(೧) ರಾಜಕೀಯ ಆಡಳಿತೆಯ ಮೂಲಕ
(೨) ನೈತಿಕ/ಧಾರ್ಮಿಕ ಆಡಳಿತೆಯ ಮೂಲಕ

ಯಾವುದೇ ಸಮಾಜದಲ್ಲಿ ಆಗಲಿ, ಪ್ರಭುತ್ವವು ಶಕ್ತವಾಗಿದ್ದರೆ ಮಾತ್ರ ಆ ಸಮಾಜಕ್ಕೆ ಸಂರಕ್ಷಣೆ ದೊರೆಯುತ್ತದೆ. ಪುರಾತನ ಭಾರತದಲ್ಲಿರುವ ಸಶಕ್ತ ರಾಜಪ್ರಭುತ್ವಗಳಿಂದಾಗಿಯೇ, ಈ ಸಮಾಜವು ಸುರಕ್ಷಿತವಾಗಿ ನಿಂತುಕೊಂಡು, ಸರ್ವಾಂಗೀಣ ಏಳ್ಗೆಯನ್ನು ಸಾಧಿಸಿತೆಂದು ಹೇಳಬಹುದು. ಇಂತಹ ಅರಸರಲ್ಲಿ ಶ್ರೀರಾಮಚಂದ್ರನಂತಹ ಮಹಾರಾಜನು ತನ್ನ ಆದರ್ಶದಿಂದಾಗಿ ಅವತಾರಪುರುಷನಾದನು. ಉಜ್ಜಯನಿಯ ವಿಕ್ರಮರಾಜನು ದಂತಕಥೆಯಾದನು. ಈ ರಾಜರುಗಳ ಕತೆ ಕೇಳಿದವರಿಗೆ ಪುರಾಣಕಾಲದಲ್ಲಿ ಶಾಸನವು ಕರುಣೆಯಿಂದ ಕೂಡಿತ್ತು ಎಂದು ಭಾಸವಾಗುತ್ತದೆ. ಆದರೆ ಧಾರ್ಮಿಕ ಕಟ್ಟುಪಾಡುಗಳು ಮಾತ್ರ ಕಠೋರವಾಗಿದ್ದವು.
ಈ ರೀತಿಯ ರಾಜಕೀಯ ಶಾಸನ ಹಾಗೂ ಧಾರ್ಮಿಕ ಕಟ್ಟಳೆಗಳ ಮೂಲಕ ಪುರಾತನ ಭಾರತೀಯ ಸಮಾಜವು ಸಂರಕ್ಷಿಸಲ್ಪಟ್ಟಿತ್ತು.

ಈ ಸಮಾಜದಲ್ಲಿ ದೋಷಗಳು ಇರಲಿಲ್ಲವೆಂದಲ್ಲ. ಹೆಣ್ಣುಮಕ್ಕಳಿಗೆ ಹಾಗೂ ಶೂದ್ರರಿಗೆ ಈ ಸಮಾಜದಲ್ಲಿ ಯಾವ ಅಧಿಕಾರವೂ ಇರಲಿಲ್ಲ. ದಾಸವ್ಯವಸ್ಥೆಯು (=ಗುಲಾಮಗಿರಿಯು) ಈ ಸಮಾಜದಲ್ಲಿ ವ್ಯಾಪಕವಾಗಿತ್ತು.
ಸತ್ಯಹರಿಶ್ಚಂದ್ರನ ಕತೆಯೇ ಇದಕ್ಕೆ ದೊಡ್ಡ ಉದಾಹರಣೆ. ಹರಿಶ್ಚಂದ್ರನು ತನ್ನ ಹೆಂಡತಿ ಹಾಗೂ ಮಗನನ್ನು ದುಡ್ಡಿಗಾಗಿ ಮಾರಿದ್ದು, ತನ್ನನ್ನೂ ಮಾರಿಕೊಂಡಿದ್ದು ದಾಸವ್ಯವಸ್ಥೆಯ ಉದಾಹರಣೆಯಾಗಿದೆ. ಯಾವಾಗಲೂ ಧರ್ಮದ ಜಿಜ್ಞಾಸೆಯಲ್ಲಿಯೇ ಮುಳುಗಿರುತ್ತಿದ್ದ ಧರ್ಮರಾಜನು ದ್ರೌಪದಿಯನ್ನು ಜೂಜಿನಲ್ಲಿ ಪಣವಾಗಿಟ್ಟು ದಾಸಿಯನ್ನಾಗಿ ಮಾಡಿದ ಕತೆಯೂ ಸಹ ದಾಸವ್ಯವಸ್ಥೆಯ ಉದಾಹರಣೆಯೇ ಸೈ.

ಬಲಿಷ್ಠ ರಾಜಪ್ರಭುತ್ವದಿಂದ ಹಾಗೂ ನೈತಿಕ ಕಟ್ಟುಪಾಡುಗಳಿಂದ ಸಂರಕ್ಷಿಸಲ್ಪಟ್ಟ ಈ ಸಮಾಜವು ಕಾಲಾಂತರದಲ್ಲಿ ತನ್ನ ಅಂತರ್ವೈರುಧ್ಯಗಳಿಂದಾಗಿಯೇ ಮುರಿದು ಬೀಳಲಾರಂಭಿಸಿತು. ಭಗವಾನ್ ಬುದ್ಧನ ಚಿಂತನೆಗಳಿಂದಾಗಿ ಸಮಾಜದಲ್ಲಿ ಬದಲಾವಣೆಗಳು ಕಾಣಲಾರಂಭಿಸಿದವು. ಈತನ ತಂದೆಯಾದ, ಕಪಿಲವಸ್ತುವಿನ ರಾಜನಾದ ಶುದ್ಧೋದನ ನೀಡಿದ ರಾಜಾಶ್ರಯದಿಂದಾಗಿ, ಬುದ್ಧಧರ್ಮವು ಮೊದಮೊದಲು ಒಂದು ಚಿಕ್ಕ ಪ್ರದೇಶದಲ್ಲಿ ನೆಲೆಗೊಂಡಿತು. ಬಳಿಕ ಚಕ್ರವರ್ತಿ ಅಶೋಕನ ರಾಜಾಶ್ರಯ ಪಡೆದ ಬುದ್ಧಧರ್ಮವು ಭಾರತದ ಒಳಗಡೆ ಹಾಗೂ ಹೊರಗಡೆ ವ್ಯಾಪಕ ನೆಲೆಯನ್ನು ಹೊಂದಿತು.

ಕರ್ನಾಟಕದಲ್ಲಿಯೂ ಸಹ ವೀರಶೈವ ಶರಣರ ಮೂಲಕ ನಡೆದ ಚಳುವಳಿಯು ಸಮಾಜದಲ್ಲಿ ಬದಲಾವಣೆಗಳನ್ನು ತರುವ ಉದ್ದೇಶದಿಂದ ಮಾಡಿದ ಚಳುವಳಿಯೇ ಸೈ. ಇವೆಲ್ಲ ಆಂದೋಲನಗಳು ಸಮಾಜವ್ಯವಸ್ಥೆಯನ್ನು ಬದಲಿಸಲು ಹೊರಟಂತಹ ಕ್ರಾಂತಿಕಾರಿ ಚಳುವಳಿಗಳೇ ಹೊರತು, ಸಮಾಜವನ್ನು ಮುರಿದೊಗೆಯಲು ಮಾಡಿದ ಆಂದೋಲನಗಳಲ್ಲ.

ಈ ಪುರಾತನ ಭಾರತೀಯ ಸಮಾಜವ್ಯವಸ್ಥೆಗೆ ಅಂತಹ ಬಲವಾದ ಧಕ್ಕೆ ಬಿದ್ದದ್ದು ಪರಕೀಯರ ಆಕ್ರಮಣದಿಂದ. ಪ್ರಪ್ರಥಮವಾಗಿ ಒಬ್ಬ ಅರೇಬಿಯನ್ ರಾಜ, ಆ ಬಳಿಕ ಮಂಗೋಲರು, ಪರ್ಶಿಯನ್ನರು ಹಾಗೂ ತುರುಕರು ಭಾರತದಲ್ಲಿ ತಮ್ಮ ಪ್ರಭುತ್ವವನ್ನು ಸ್ಥಾಪಿಸಿದರು. ಈ ಪ್ರಭುಗಳು ಭಾರತೀಯ ಸಮಾಜದ ಆರ್ಥಿಕ,ಆಡಳಿತಾತ್ಮಕ, ಸಾಮಾಜಿಕ , ಸಾಂಸ್ಕೃತಿಕ ಹಾಗೂ ಧಾರ್ಮಿಕ ವ್ಯವಸ್ಥೆಯನ್ನು ತಮ್ಮ ತವರಿನ ಸಂಕೇತಗಳ ಮೂಲಕ ಬದಲಾಯಿಸಿ ಬಿಟ್ಟರು. ಅವರ ರಾಜಕೀಯ ಮುಂದುವರಿಕೆಗೆ ಇದು ಅವಶ್ಯಕವಾಗಿತ್ತು. ಆದರೆ ಭಾರತೀಯ ಸಮಾಜದ ಮೇಲೆ ಇದರ ದುಷ್ಪರಿಣಾಮವು ಘೋರವಾಗಿತ್ತು.

ಮೊದಲನೆಯದಾಗಿ ಭಾರತದಲ್ಲಿ ಜ್ಞಾನೋತ್ಪಾದನೆಯ ಪ್ರಕ್ರಿಯೆ ಸ್ಥಗಿತವಾಯಿತು.
ಎರಡನೆಯದಾಗಿ ಮತಾಂತರಿತರು ತಾವು ಭಾರತದ ಮಕ್ಕಳೆನ್ನುವ identityಯನ್ನೇ ಮರೆತುಬಿಟ್ಟು ತಮ್ಮ ಮೂಲಸಂಸ್ಕೃತಿಯನ್ನು ತುಚ್ಛೀಕರಿಸಲಾರಂಭಿಸಿದರು.ಭಾರತೀಯ ಸಂಸ್ಕೃತಿಯು ತನಗಿಂತ ಕೆಳದರ್ಜೆಯ ಪರಕೀಯ ಪ್ರಭುತ್ವದ ಸಂಸ್ಕೃತಿಗೆ ಸಲಾಮು ಹೊಡೆಯತೊಡಗಿತು.

ಎರಡನೆಯದಾಗಿ ಪುರಾತನ ಭಾರತೀಯ ಸಂಸ್ಕೃತಿಗೆ ರಾಜಕೀಯ ಆಶ್ರಯ ತಪ್ಪಿಹೋಯಿತು. ಪುರಾತನ ಭಾರತೀಯ ಸಂಸ್ಕೃತಿ ಶಿಥಿಲವಾದಂತಹ ಈ ಸಮಯದಲ್ಲಿಯೇ ಭಾರತದಲ್ಲಿ ಬ್ರಿಟಿಶರ ಪ್ರಭುತ್ವ ಸ್ಥಾಪನೆಯಾಯಿತು.
ಬ್ರಿಟಿಶ್ ಆಡಳಿತೆಯು ಭಾರತದ ಸಾಂಸ್ಕೃತಿಕ ಸ್ವರೂಪವನ್ನು ಸಂಪೂರ್ಣವಾಗಿ ಬದಲಾಯಿಸಿತು. ಭಾರತೀಯ ಸಂಸ್ಕೃತಿಯ ಅನೇಕ ದುಷ್ಟ ಪದ್ಧತಿಗಳು ಬದಲಾದದ್ದೇನೊ ನಿಜ. ಉದಾಹರಣೆಗೆ ಸತಿ ಪದ್ಧತಿಯನ್ನು ಬ್ರಿಟಿಶರೇ ತೆಗೆದು ಹಾಕಿದರು. ಬಳಿಕ ಭಾರತೀಯರೇ ಶಾಸನದ ಮೂಲಕ ಬಹುಪತ್ನಿತ್ವವನ್ನು, ಬಾಲ್ಯವಿವಾಹವನ್ನು ತೆಗೆದುಹಾಕಿದರು. ಆಧುನಿಕ ಸೌಲಭ್ಯಗಳು ದೊರೆತಿದ್ದರಿಂದ, ಸಾರ್ವಜನಿಕ ಶಿಕ್ಷಣ ಲಭ್ಯವಾಯಿತು. ಹೀಗಾಗಿ ಜ್ಞಾನಸಂಪಾದನೆಯು ಸಾರ್ವತ್ರಿಕವಾಯಿತು. ಹೆಣ್ಣುಮಕ್ಕಳಲ್ಲಿ ಪ್ರಗತಿಯಾಗತೊಡಗಿತು. ಅವರಿಗೆ ಶಿಕ್ಷಣ ದೊರೆಯತೊಡಗಿತು ಹಾಗೂ ಹೆಣ್ಣುಮಕ್ಕಳ ಆರ್ಥಿಕ ಸ್ವಾವಲಂಬನ ಸಾಧ್ಯವಾಯಿತು.
ಇದೆಲ್ಲ ನಿಜ; ಆದರೆ ಭಾರತದಲ್ಲಿ ಆದ ಈ ಎಲ್ಲ ಬದಲಾವಣೆಗಳಿಂದ ಸಾಂಸ್ಕೃತಿಕ ಉನ್ನತಿಯಾಗಿದೆಯೋ ಅಥವಾ ಅವನತಿಯಾಗಿದೆಯೊ?

ಇಂದಿನ ಭಾರತೀಯ ಸಮಾಜದಲ್ಲಿ ಆದಂತಹ ಒಳ್ಳೆಯ ಸಂಗತಿಗಳೆಂದರೆ ಇವು:
ಜಾತ್ಯಾಧಾರಿತ ಸಾಮಾಜಿಕ ಅಸಮಾನತೆ ಕಡಿಮೆಯಾಗತೊಡಗಿದೆ. ಶಿಕ್ಷಣ ಹಾಗೂ ಉದ್ಯೋಗ ರಂಗಗಳಲ್ಲಿ ಎಲ್ಲರಿಗೂ ಮುಕ್ತ ಅವಕಾಶ ಲಭ್ಯವಿದೆ. ಸ್ತ್ರೀಯರ ಮೇಲೆ ಹೇರಲಾದ ಕಠೋರ ಧಾರ್ಮಿಕ, ಸಾಮಾಜಿಕ ನಿಷೇಧಗಳು ಕಡಿಮೆಯಾಗಿವೆ. ಸ್ತ್ರೀ ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಸ್ವಾವಲಂಬಿಯಾಗಿದ್ದಾಳೆ.

ಇನ್ನು ಭಾರತೀಯ ಸಮಾಜದಲ್ಲಿ ಆದಂತಹ ಕೆಡುಕಿನ ಸಂಗತಿಗಳೇನು?
ಮುಖ್ಯವಾಗಿ ಭಾರತೀಯ ಸಮಾಜವು Insensitive Society ಆಗಿ ಪರಿವರ್ತನೆಗೊಂಡಿದೆ.
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ಭಾರತದಲ್ಲಿ ತಮ್ಮ ಸಾಮಾಜಿಕ ಜೀವನವನ್ನು ಪ್ರಾರಂಭಿಸುವ ಮೊದಲು, ತಮ್ಮ ಗುರುವಾದ ಗೋಖಲೆಯವರ ಸಲಹೆಯ ಮೇರೆಗೆ ಭಾರತದಲ್ಲಿ ಪ್ರಯಾಣ ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಅವರು ಒಂದು ಗುಡಿಸಿಲಿಗೆ ಭೆಟ್ಟಿ ಕೊಟ್ಟರು. ಗುಡಿಸಿಲಿನಲ್ಲಿರುವ ಹೆಣ್ಣುಮಗಳು ತನ್ನಲ್ಲಿದ್ದ ಒಂದೇ ಸೀರೆಯನ್ನು ಒಗೆದು ಗುಡಿಸಿಲಿನ ಬಾಗಿಲಿಗೆ ಒಣಗು ಹಾಕಿ, ತಾನು ಒಳಗೆ ಬತ್ತಲೆಯಾಗಿ ಕುಳಿತಿದ್ದಳು. ಹೀಗಾಗಿ ಅವಳು ಹೊರಗೆ ಬರಲಿಲ್ಲ. ತನ್ನವರೆಲ್ಲರೂ ಅರೆಬತ್ತಲೆ ಇರುವಾಗ ತಾನು ಒಳ್ಳೆಯ ವಸ್ತ್ರಗಳನ್ನು ಧರಿಸಿಕೊಳ್ಳಬಹುದೆ ಎಂದು ಗಾಂಧೀಜಿಯವರ ಅಂತರಂಗ ಶೋಕಿಸಿತು. ಅವರು ಮುಂಡುಧೋತರ ಹಾಗೂ ಅಂಗವಸ್ತ್ರವನ್ನು ಮಾತ್ರ ಧರಿಸಲು ಈ ಘಟನೆ ಪ್ರೇರಣೆ ನೀಡಿತು.
ಇದು ಮಹಾತ್ಮರ sensitivity.

ಹೋ ಚಿ ಮಿನ್ಹರು ಉತ್ತರ ವ್ಹಿಯೆಟ್ ನಾಮ್‍ದ ಅಧ್ಯಕ್ಷರಾದ ಮೇಲೂ ಸಹ ಗುಡಿಸಿಲಿನಲ್ಲಿಯೇ ವಾಸಿಸುತ್ತಿದ್ದರೆಂದು ಕೇಳಿದ್ದೇನೆ.ಅದರಂತೆ, ಪುರಾತನ ಚೀನಾದ ಮಹಾ ತತ್ವಜ್ಞಾನಿಯಾದ ಕಾಂ^ಗ್ ಫೂಜಿ (Confucius)ನುಡಿದ ಒಂದು ಮಾತು ನಮಗೆ ಅತ್ಯಂತ ಸಂಗತವಾಗಿದೆ: It is a shame to be poor when the country is rich ; it is a shame to be rich when the country is poor.

ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮ ರಾಜಕಾರಣಿಗಳು ಸಾಮಾಜಿಕ sensitivityಯನ್ನು ಕಸ ಗೂಡಿಸುವಂತೆ ಗುಡಿಸಿ ಬಿಸಾಕಿದರು.
Power corrupts and absolute power corrupts absolutely ಎಂದು ಹೇಳುತ್ತಾರೆ.
ನಮ್ಮ ರಾಜಕಾರಣಿಗಳು corrupt ಆಗಲು ಅರ್ಧ ನಿಮಿಷ ಕೂಡ ಬೇಕಾಗಲಿಲ್ಲ!
ಇದು ಭಾರತೀಯ ಸಮಾಜದ ಅವನತಿಯ ಕಥೆಯ ಪ್ರಾರಂಭ.
ಇದಕ್ಕೆ ಕಾರಣವೇನು?

ಬ್ರಿಟಿಶ್ ಆಡಳಿತದಿಂದಾಗಿ ಭಾರತೀಯರು ತಮ್ಮ ಸನಾತನ ಧರ್ಮದಲ್ಲಿದ್ದ ಅನೇಕ ಅರ್ಥಹೀನ ಕಟ್ಟಳೆಗಳನ್ನು ಗಮನಿಸಲಾರಂಭಿಸಿದರು. ಅವುಗಳನ್ನು ಕಿತ್ತೆಸೆಯುವ ಕಾರ್ಯವನ್ನೂ ಮಾಡಿದರು. ಇದು ಒಳ್ಳೆಯದೇ ಆಯಿತು. ಆದರೆ ಧಾರ್ಮಿಕ ಕಟ್ಟುಪಾಡುಗಳು ರೂಪಿಸುವ ನೈತಿಕ ಪ್ರಜ್ಞೆಯೂ ಇದರೊಡನೆಯೇ ಹೊರಟು ಹೋಯಿತು. ತರ್ಕದ ಆಧಾರದ ಮೇಲೆ ಧರ್ಮವನ್ನು ವಿರೋಧಿಸಿದವರು, ಧರ್ಮವು ಕೊಡುವ ನೈತಿಕ ಪ್ರಜ್ಞೆಯನ್ನು ಎಲ್ಲಿಂದ ತರಬೇಕೆನ್ನುವದನ್ನು ವಿಚಾರಿಸಲಿಲ್ಲ.

ಇತ್ತೀಚೆಗಂತೂ ಅಮೇರಿಕನ್ ವಾಣಿಜ್ಯ ಸಂಸ್ಕೃತಿ ಹಾಗೂ ಅದರಿಂದ ಪ್ರೇರಿತರಾದ ಭಾರತೀಯರು ನಮ್ಮ ಸಂಸ್ಕೃತಿಯನ್ನು commercialise ಮಾಡಿದರು. Maximum Exploitation ಅನ್ನುವದೇ ನಮ್ಮ ಧ್ಯೇಯವಾಕ್ಯವಾಯಿತು. Exploitation ಮಾಡಲು ಏನಿಲ್ಲ ನಮ್ಮಲ್ಲಿ? ಬೇಕಾದಷ್ಟು ಭೂಗತ ಸಂಪತ್ತು, ಬೇಕಾದಷ್ಟು ನಿಸರ್ಗ ಸಂಪತ್ತು ನಮ್ಮಲ್ಲಿದೆ. ಅವನ್ನು ರಫ್ತು ಮಾಡಬಹುದು. ಮನೆಕೆಲಸ ಮಾಡಲು ನಮ್ಮ ತರುಣಿಯರನ್ನು ಹಾಗೂ ಇಟ್ಟಿಗೆ ಹೊರಲು ನಮ್ಮ ತರುಣರನ್ನು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡಬಹುದು.
ಬುದ್ಧಿವಂತರನ್ನು I.T. ಕೆಲಸ ಮಾಡಲು ಅಮೇರಿಕೆಗೆ ರಫ್ತು ಮಾಡಬಹುದು.

ಇಲ್ಲಿ ಒಂದು ಪ್ರಶ್ನೆ ಉದ್ಭವಿಸುತ್ತದೆ: ಅಮೇರಿಕೆಯಲ್ಲಿಯೂ ಸಹ Commercial Culture ಇದೆ. ಆದರೆ ಈ ಸಂಸ್ಕೃತಿಯ ದುರಂತಗಳು ನಮ್ಮನ್ನು ಬಾಧಿಸಿದಂತೆ ಅವರನ್ನೇಕೆ ಬಾಧಿಸುತ್ತಿಲ್ಲ?
ಅದಕ್ಕೆ ಉತ್ತರ ಹೀಗಿದೆ: ಅಮೇರಿಕದಲ್ಲಿ ಶಾಸನದ ಆಡಳಿತ ತುಂಬಾ ಶಕ್ತಿಶಾಲಿಯಾಗಿದೆ. ಭಾರತದಲ್ಲಿ ಶಾಸನದ ಆಡಳಿತಕ್ಕೆ ಬಲವೇ ಇಲ್ಲ.
ನಾವು ಮೊದಲೇ ಚರ್ಚಿಸಿದಂತೆ, ಸಮಾಜದ ಅಂಗಜೀವಿಗಳು ಸಮಾಜ ವಿಧಿಸಿದ ಚೌಕಟ್ಟಿನೊಳಗೇ ಜೀವಿಸಬೇಕಾದರೆ ಶಾಸನದ ಆಡಳಿತ ಅಥವಾ/ಮತ್ತು ಧಾರ್ಮಿಕ ಆಡಳಿತ ಶಕ್ತಿಶಾಲಿಯಾಗಿರಬೇಕು. ಅಮೇರಿಕದಲ್ಲಿ ಕ್ರಿಶ್ಚಿಯನ್ ಚರ್ಚ ಎಷ್ಟರ ಮಟ್ಟಿಗೆ ಶಕ್ತಿಶಾಲಿಯಾಗಿದೆಯೋ ಗೊತ್ತಿಲ್ಲ; ಆದರೆ ಶಾಸನದ ಆಡಳಿತ ಮಾತ್ರ ಸರ್ವಶಕ್ತವಾಗಿದೆ. ಹೀಗಾಗಿ ಎಷ್ಟೇ ವೈಯಕ್ತಿಕ ಸ್ವಾತಂತ್ರ್ಯವಿದ್ದರೂ ಸಹ ಅಮೆರಿಕದ ಸಮಾಜವು ಶಾಸನದ ಚೌಕಟ್ಟಿನ ಒಳಗೆ ಸುರಕ್ಷಿತವಾಗಿ ಉಳಿದಿದೆ.

ಆದರೆ ಭಾರತದಲ್ಲಿ ಒಳ್ಳೆಯ ಶಾಸನಗಳನ್ನು ಮಾಡಲು, ಆ ಶಾಸನಗಳನ್ನು ಭಾರತೀಯರೆಲ್ಲರಿಗೂ ಅನ್ವಯಿಸಲು ನಮ್ಮ ಪ್ರಭುಗಳು ಹೆದರುತ್ತಾರೆ. ಬಲಶಾಲಿಯಾದ ಪ್ರಜಾಭಾಗಗಳಿಗೆ ಈ ದೇಶದಲ್ಲಿ ಯಾವ ಕಾನೂನನ್ನೂ ಮಾಡುವಂತಿಲ್ಲ ; ಮಾಡಿದರೂ ಅದು ಅನ್ವಯಿಸುವದಿಲ್ಲ!

ಭಾರತೀಯ ಶಾಸನವು ನಿರ್ಬಲವಾಗಲು ಕಾರಣವೇನು?
ಅನೇಕ ವರ್ಷಗಳ ಹಿಂದೆ ಮಾನವಶಾಸ್ತ್ರಜ್ಞರು ಮಂಗಗಳ ಮೇಲೆ ಹಾಗೂ ಇಲಿಗಳ ಮೇಲೆ ಕೆಲವು ಪ್ರಯೋಗಗಳನ್ನು ಮಾಡಿದರು. ದಟ್ಟ ಅರಣ್ಯಪ್ರದೇಶದಲ್ಲಿರುವ, ಒಂದೇ ಬಲಶಾಲಿ ನಾಯಕನಿರುವ ಮಂಗಗಳ ಗುಂಪು , ಅರೆಬರೆ ಅರಣ್ಯಪ್ರದೇಶದಲ್ಲಿರುವ ಸಮಾನ ಬಲಶಾಲಿಗಳಾದ ಮಂಗಗಳ ಗುಂಪು ಹಾಗೂ ಆಹಾರದ ಕೊರತೆಯಿರುವ ನಿರ್ಬಲ ನಾಯಕತ್ವದ ಮಂಗಗಳ ಗುಂಪು ಹೀಗೆ ಮೂರು ಗುಂಪುಗಳನ್ನು ಆರಿಸಿ ಅವುಗಳ ಅಭ್ಯಾಸ ಮಾಡಲಾಯಿತು. (ಎರಡನೆಯ ಗುಂಪಿಗಾಗಿ ಧಾರವಾಡದ ಬಳಿಯ ಅರಣ್ಯಪ್ರದೇಶವನ್ನು ಆರಿಸಲಾಗಿತ್ತು!)
ಬಲಶಾಲಿ ನಾಯಕತ್ವ ಹಾಗೂ ದಟ್ಟ ಅರಣ್ಯದಲ್ಲಿರುವ ಮಂಗಗಳ ಗುಂಪು ಈ ಎಲ್ಲ ಗುಂಪುಗಳಲ್ಲಿಯ ಶ್ರೇಷ್ಠ ಗುಂಪಾಗಿ ಹೊರಹೊಮ್ಮಿತು ಮತ್ತು ಮೂರನೆಯ ಗುಂಪು ಕನಿಷ್ಠ ಗುಂಪಾಗಿ ಹೊರಹೊಮ್ಮಿತು ಎಂದು ಹೇಳಬೇಕಾಗಿಲ್ಲ.

ಇದೇ ತರ್ಕವನ್ನು ನಮ್ಮ ಭಾರತಕ್ಕೆ ಅನ್ವಯಿಸಿ ನೋಡೋಣ:
ಭಾರತದಲ್ಲಿ ಮಿತಿಮೀರಿದ ಜನಸಂಖ್ಯೆ ಇದೆ. ಇದು ಆಹಾರದ ಕೊರತೆ ಇರುವ ಅರಣ್ಯಪ್ರದೇಶವನ್ನು ಹೋಲುತ್ತದೆ.
ಬಲಶಾಲಿಯಾದ ನಾಯಕತ್ವ ನಮ್ಮಲ್ಲಿ ಇಲ್ಲ. ನಾಯಕರಾಗಲು ಬಯಸುವವರು ತಮ್ಮ ಸ್ಥಾನಬಲದ ಮೂಲಕ ದೇಶವನ್ನು ಲೂಟಿ ಮಾಡಲು ಬಯಸುತ್ತಾರೆ. ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುವ ಒಂದೇ ಉದ್ದೇಶದಿಂದ ಜಾತಿಜಾತಿಗಳಲ್ಲಿ ವೈಷಮ್ಯ ಬೆಳೆಸುತ್ತಾರೆ. ಇವರಿಂದ ಶಾಸನದ ಅಥವಾ ನೈತಿಕತೆಯ ಪ್ರಭುತ್ವವನ್ನು ಅಪೇಕ್ಷಿಸುವದು ಸಾಧ್ಯವಿಲ್ಲ. ಮಿತಿಮೀರಿದ ಜನಸಂಖ್ಯೆ ಹಾಗೂ ನಿರ್ಬಲ, ಅನೈತಿಕ ನಾಯಕತ್ವ ಹೊಂದಿದ ಪ್ರಜಾಪ್ರಭುತ್ವವುಳ್ಳ ಎಲ್ಲಾ ದೇಶಗಳದೂ ಇದೇ ಹಣೆಬರಹ. ಉದಾಹರಣೆಗೆ ಪಾಕಿಸ್ತಾನ, ಬಂಗ್ಲಾದೇಶ ಹಾಗೂ ಶ್ರೀಲಂಕಾ.

ಆದರೆ ಅಮೇರಿಕದಲ್ಲಿ ಶಕ್ತಿಶಾಲಿ (ಪ್ರಜಾ)ಪ್ರಭುತ್ವವಿರುವದರಿಂದ ಹಾಗೂ ಮಧ್ಯಪ್ರಾಚ್ಯ ದೇಶಗಳಲ್ಲಿ ಧಾರ್ಮಿಕ ಕಟ್ಟಲೆಗಳ ನಿರಂಕುಶಾಧಿಕಾರವಿರುವದರಿಂದ, ಅಲ್ಲಿಯ ಸಮಾಜಗಳು ಸ್ಥಿರವಾಗಿ ನಿಂತಿವೆ ಎಂದು ಹೇಳಬಹುದು. ಅಮೇರಿಕದ ಸಮಾಜವು ವೈಯಕ್ತಿಕ ಮಹದಾಧಿಕಾರದ ನಾಡಾದರೆ, ಮಧ್ಯಪ್ರಾಚ್ಯದ ಸಮಾಜವು ಧಾರ್ಮಿಕ ಮಹದಾಧಿಕಾರದ ನಾಡು. ಆದರೆ ಈ ಎರಡೂ ನಾಡುಗಳಲ್ಲಿ ಇರುವ ಸ್ಥಿರತೆ ಭಾರತದಲ್ಲಿ ಉಳಿದಿಲ್ಲ ಎನ್ನುವದು ಖೇದದ ಸಂಗತಿ.