Sunday, July 25, 2010

ವಸಂತಮುಖ..........(ದ.ರಾ.ಬೇಂದ್ರೆ)

ಬೇಂದ್ರೆಯವರು ಬರೆದ ‘ವಸಂತಮುಖ’ ಕವನವನ್ನು ಕವಿಗಳ ಕೈಪಿಡಿ ಎಂದು ಬಣ್ಣಿಸಬಹುದು.

ಕವನ ಇಲ್ಲಿದೆ:
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ

ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ


ಬೇಂದ್ರೆಯವರಿಗೆ ಪ್ರಕೃತಿಯು ಕೇವಲ ದೃಶ್ಯವೈಭವವಲ್ಲ. ಅವರ ಪಾಲಿಗೆ ಅದು ಸಜೀವವಾದ ಚೈತನ್ಯದ ಚಿಲುಮೆ. ಪ್ರಕೃತಿಯ ಚಟುವಟಿಕೆಗಳಿಗೆ ಪ್ರೇರಣೆ ಕೊಡುವ ‘ಬೆಳಗು’ ಆಗಲೀ, ದಣಿದ ಜೀವಿಗಳನ್ನು ಮಡಿಲಲ್ಲಿ ಮಲಗಿಸಿ, ಮುದ್ದಿಸುವ ಬೆಳದಿಂಗಳೇ ಆಗಲಿ ಅಥವಾ ರಾವಣನಂತೆ ಕುಣಿಯುವ ಶ್ರಾವಣವೇ ಆಗಲಿ, ಇವೆಲ್ಲ ಬೇಂದ್ರೆಯವರ ಪಾಲಿಗೆ ನಿಸರ್ಗದ ಸಜೀವ ಚೇತನಗಳು. ಅಷ್ಟೇ ಏಕೆ, ಒಂದು ಹೂತ ಹುಣಿಸೆಯ ಮರವೂ ಸಹ ಬೇಂದ್ರೆಯವರಿಗೆ ಬದುಕಿನ ಸಜೀವ ಭಾಗವೇ ಆಗಿದೆ. ಈ ಮನೋಧರ್ಮದ ಪರಾಕಾಷ್ಠೆಯನ್ನು ನಾವು ‘ವಸಂತಮುಖ’ ಕವನದಲ್ಲಿ ನೋಡಬಹುದು.

ವಸಂತ ಋತುವಿನ ಒಂದು ಉಷಃಕಾಲದಲ್ಲಿ ಕವಿ ಅನುಭವಿಸಿದ ಆನಂದವನ್ನು ‘ವಸಂತಮುಖ’ ಕವನವು ವರ್ಣಿಸುತ್ತದೆ. ಕನ್ನಡ ಕವಿಗಳು ಸೂರ್ಯೋದಯದ ಸಮಯದಲ್ಲಿ ತಾವು ಅನುಭವಿಸಿದ ಆನಂದದ ಬಗೆಗೆ ಅನೇಕ ಕವನಗಳನ್ನು ಬರೆದಿದ್ದಾರೆ. ಸಾಮಾನ್ಯವಾಗಿ ಈ ಕವನಗಳಲ್ಲಿ ಸೂರ್ಯೋದಯ ಸಮಯದ ನಿಸರ್ಗಸೌಂದರ್ಯದ ವರ್ಣನೆಯೇ ಪ್ರಧಾನವಾಗಿದೆ. ಬೇಂದ್ರೆಯವರೇ ಬರೆದ ಕವನ ‘ಬೆಳಗು’ ಅಂತೂ ಅತಿ ಪ್ರಸಿದ್ಧವಾದ ಕವನವೇ ಹೌದು. ಈ ಕವನದಲ್ಲಿಯೂ ಸಹ ಸೂರ್ಯೋದಯ ಸಮಯದ ಪ್ರಕೃತಿಯ ವೈಭವವನ್ನು ವರ್ಣಿಸಿ, ಕವಿಯು ಅದರಿಂದಾಗಿ ಹೇಗೆ ಆನಂದಪರವಶನಾದನು ಎನ್ನುವ ವರ್ಣನೆ ಇದೆ. ಆದರೆ, ‘ವಸಂತಮುಖ’ ಕವನವು ಹಾಗಿಲ್ಲ. ಈ ಕವನದಲ್ಲಿ ಕವಿಯು ಅಖಿಲ ವಿಶ್ವವೇ ಉಷಃಕಾಲದಲ್ಲಿ ಚೇತನಗೊಂಡು, ಆನಂದಪರವಶವಾದುದರ ದರ್ಶನವಿದೆ.  ಕನ್ನಡದಲ್ಲಿ ನಾವು ಕೇಳುವ ಇಂತಹ ಇನ್ನೊಂದೇ ಗೀತೆಯೆಂದರೆ ಪುರಂದರದಾಸರು ಹಾಡಿದ ಕೀರ್ತನೆ.
ಅದರ ಪಲ್ಲ ಹೀಗಿದೆ:
“ರಂಗ ಕೊಳಲನೂದಲಾಗಿ ಮಂಗಳಮಯವಾಯ್ತು ಜ-
ಗಂಗಳು ಚೈತನ್ಯ ಮರೆದು ಅಂಗಪರವಶವಾದವು”

ರಂಗನ ಕೊಳಲಿನ ಸ್ವರದಿಂದ ಅಖಿಲ ಪ್ರಕೃತಿಯೇ ಹೇಗೆ ಸಚೇತನವಾಯ್ತು, ಹೇಗೆ ಆನಂದಪರವಶವಾಯ್ತು ಎಂದು ಪುರಂದರದಾಸರು ಹಾಡಿ, ಕುಣಿದು ಹೇಳುವ ಕೀರ್ತನೆ ಇದು.

ಈಗ ಬೇಂದ್ರೆಯವರ ‘ವಸಂತಮುಖ’ವನ್ನು ನೋಡೋಣ:
(ಮೊದಲ ನುಡಿ:)
ಉದಿತ ದಿನ! ಮುದಿತ ವನ
ವಿಧವಿಧ ವಿಹಗಸ್ವನ
ಇದುವೆ ಜೀವ, ಇದು ಜೀವನ
ಪವನದಂತೆ ಪಾವನ

‘ಉದಿತ ದಿನ’ ಅಂದರೆ, ಇದೀಗ ಬೆಳಕು ಒಡೆದಿದೆ. ಇದು ಉಷ:ಕಾಲ.  ಉಷಃಕಾಲದ ಆನಂದವು ಕೇವಲ ಮನುಷ್ಯನಷ್ಟೇ ಅನುಭವಿಸಬಹುದಾದ ಸುಖವಲ್ಲ.  ಸುತ್ತಲಿರುವ  ವನವೆಲ್ಲ ಸಚೇತನವಾಗಿದೆ, ಉಷಃಕಾಲದಿಂದ ಮುದಗೊಂಡಿದೆ. ವನರಾಜಿಯ ಈ ಆನಂದವು ‘ವನವಾಸಿ’ಗಳಾದ ಹಕ್ಕಿಗಳ ಚಿಲಿಪಿಲಿಯಲ್ಲಿ ಕೇಳಬರುತ್ತಿದೆ. ಇದು ಕಣ್ಣಿಗೆ ಬೀಳುವ ದೃಶ್ಯ ಸೌಂದರ್ಯವಷ್ಟೇ ಅಲ್ಲ, ಕಿವಿಗೆ ಬೀಳುವ ಶ್ರಾವ್ಯ ಸೌಭಾಗ್ಯವೂ ಹೌದು.

ಕೇವಲ ಒಂದು ಹಕ್ಕಿಯ ಸ್ವರ ಇಲ್ಲಿ ಕೇಳಬರುತ್ತಿಲ್ಲ. ಅನೇಕ ವಿಧದ ಹಕ್ಕಿಗಳು ಇಲ್ಲೀಗ ಹಾಡುತ್ತಿವೆ. ಇಲ್ಲಿ ಕೇಳಿಬರುತ್ತಿರುವದು ಈ ಸಾಮುದಾಯಿಕ ಸ್ವರಮೇಳ. ನಿಸರ್ಗದಲ್ಲಿರುವ ಈ ಸಾಮರಸ್ಯವನ್ನು ಕಂಡ ಕವಿ ‘ಇದುವೆ ಜೀವ, ಇದು ಜೀವನ’ ಎಂದು ಉದ್ಗರಿಸುತ್ತಾನೆ. ಅಲ್ಲದೆ ಇಂತಹ ಸಾಮರಸ್ಯದ ಜೀವನವೇ ಪಾವನಗೊಂಡ ಜೀವನ. ಪವನ ಅಂದರೆ ಗಾಳಿ. ಗಾಳಿಯು ಎಲ್ಲೆಡೆಗೆ ಬೀಸುತ್ತ ಸುಗಂಧವನ್ನು ಹರಡುತ್ತದೆ. ಅದರಂತೆ ದುರ್ಗಂಧವನ್ನು ದೂರೀಕರಿಸುತ್ತದೆ. ಉಷಃಕಾಲವೂ ಸಹ ವಾತಾವರಣವನ್ನು ಅದೇ ರೀತಿಯಲ್ಲಿ ಪಾವನಗೊಳಿಸುವದರಿಂದ, ಕವಿಯು, ‘ಪವನದಂತೆ ಪಾವನ’ ಎಂದು ಹೇಳುತ್ತಾನೆ.

(ಎರಡನೆಯ ನುಡಿ:)
ಏನೊ ವಿಧ! ಏನೊ ಹದ
ಗಾಳಿಗೊಡೆದ ಬುದ್ಬುದ
ಬೆಳಕೆ ಬದುಕು ಎಂಬ ಮುದ
ಜೀವ ಹೊಮ್ಮಿ ಚಿಮ್ಮಿದ

ಈ ಚೈತನ್ಯಪೂರ್ಣ, ಉಲ್ಲಾಸಮಯ ವಾತಾವರಣವು ಕವಿಯಲ್ಲಿ ಯಾವ ಭಾವನೆಯನ್ನು ಮೂಡಿಸುತ್ತಿದೆ? ಅದು ಅನಿರ್ವಚನೀಯವಾದ, ಆಧ್ಯಾತ್ಮಿಕತೆಗೆ ಹತ್ತಿರವಾದ ಭಾವನೆಯಾಗಿದೆ. ಬ್ರಹ್ಮಭಾವನೆ, ವಿಶ್ವ-ಏಕಾತ್ಮ ಭಾವನೆ ಎಂದು ಹೇಳಬಹುದೇನೊ? ಅದು ಕವಿಯ ಅನುಭವಕ್ಕೆ ಬರುತ್ತಿದೆಯೇ ಹೊರತು, ಏನೆಂದು ಹೇಳಲು ಬರದಂತಿದೆ. (ಶಂಕರಾಚಾರ್ಯರು ಬ್ರಹ್ಮವನ್ನು ‘ನೇತಿ, ನೇತಿ’ ಎಂದು ಬಣ್ಣಿಸಿದ್ದನ್ನು ನೆನಪಿಸಿಕೊಳ್ಳಬಹುದು.)  ಆದುದರಿಂದ ಕವಿ ಅದನ್ನು ‘ಏನೊ ವಿಧ!’ ಎಂದು ಬಣ್ಣಿಸುತ್ತಾನೆ. (ಆಮೂಲಕ ಅದು ‘ಬ್ರಹ್ಮಾನಂದ’ ಎಂದು ಸೂಚಿಸುತ್ತಾನೆ.) ಆ ಭಾವನೆ ಏನೆಂದು ಹೇಳಲು ಬರದಿದ್ದರೂ,ಅದು ಕವಿಯಲ್ಲಿ ಒಂದು ಭಾವಪಕ್ವತೆಯನ್ನು ಹುಟ್ಟಿಸಿದೆ. ಅದು ಕವಿಯ ಅನುಭವಕ್ಕೆ ಬರುತ್ತಿರುವ ‘ಹದ’! ಇಂತಹ ಹದ ಅಥವಾ ಪಕ್ವತೆ ಬರಲು ಕಾರಣವೆಂದರೆ, ಕವಿಯ ಅಹಂಭಾವವು ಇಲ್ಲಿ ಗಾಳಿಗೊಡೆದ ಬುದ್ಬುದ ಅಂದರೆ ನೀರಗುಳ್ಳೆಯಾಗಿದೆ. ಪ್ರಕೃತಿಚೈತನ್ಯದ ಎದುರಿಗೆ ಮನುಷ್ಯ ತಾನೆಷ್ಟು ಅಲ್ಪ ಎನ್ನುವದನ್ನು ಅರಿಯುತ್ತಾನೆ. ಆ ಕ್ಷಣದಲ್ಲಿ ಅವನಿಗೆ ‘ಯಾವುದು ಮಹತ್?’ ಎನ್ನುವ ಸತ್ಯದ ದರ್ಶನವಾಗುತ್ತದೆ. ಅದೇನೆಂದರೆ, ‘ಬೆಳಕೆ ಬದುಕು!’ ನಿಸರ್ಗದಲ್ಲಿರುವ ಗಿಡ,ಮರಗಳಿಗೆ ಬೆಳಕು ಬೇಕು; ಅಲ್ಲಿರುವ ಪಕ್ಷಿಗಳಿಗೆ ಬೆಳಕು ಬೇಕು. ಬೆಳಕು ಅವುಗಳಿಗೆ ಜೀವನವನ್ನು ಕೊಡುತ್ತದೆ. ಮನುಷ್ಯನಿಗೂ ಸಹ ಬೆಳಕು ಬೇಕು. ಆದರೆ ಇದು ಬರಿ ಹೊರಗಿನ ಬೆಳಕಲ್ಲ. ಮನುಷ್ಯನಿಗೆ ಬೇಕಾಗಿರುವದು ಅಂತರಂಗದ ಬೆಳಕು. ಈ ಸತ್ಯದರ್ಶನವೇ ಕವಿಗೆ ಮುದವನ್ನು ಅಂದರೆ ಸಂತೋಷವನ್ನು ಕೊಡುತ್ತದೆ. ಈ ಸಂತೋಷವು ಸ್ವಯಂಸ್ಫೂರ್ತ ಸಂತೋಷವು. ತನ್ನಿಂದ ತಾನೇ ಹೊರಹೊಮ್ಮಿದ್ದು. ಆದುದರಿಂದ ಕವಿ  ಈ ಸಂತೋಷವನ್ನು ‘ಜೀವ ಹೊಮ್ಮಿ ಚಿಮ್ಮಿದ ಮುದ’ ಎಂದು ಕರೆಯುತ್ತಾನೆ.

 (ಮೂರನೆಯ ನುಡಿ:)
ನೂರು ಮರ! ನೂರು ಸ್ವರ
ಒಂದೊಂದು ಅತಿ ಮಧುರ
ಬಂಧವಿರದೆ ಬಂಧುರ
ಸ್ವಚ್ಛಂದ ಸುಂದರ

ನಾವು ಸಂಸ್ಕೃತಿ ಎಂದು ಕರೆಯುವ ಮಾನವ-ನಾಗರಿಕತೆಗಳಲ್ಲಿ ಎಲ್ಲ ಮಾನವರನ್ನು ಒಂದೇ ಶಿಸ್ತಿನ ಏಕತಾನತೆಗೆ ಒಳಪಡಿಸುವ ವಿಕೃತಿ ಇದೆ. ಆದರೆ ಪ್ರಕೃತಿಯಲ್ಲಿ ಇರುವದು ಸ್ವಚ್ಛಂದತೆ; ಏಕತಾನತೆ ಅಲ್ಲ. ಈ ವನರಾಜಿಯಲ್ಲಿ ನೂರಾರು ತರದ ಮರಗಳಿವೆ. ಅಲ್ಲಿರುವ ಹಕ್ಕಿಗಳು ನೂರಾರು ತರದ ಸ್ವರ ಹೊರಡಿಸುತ್ತಿವೆ. ಇಂತಹದೇ ಸ್ವರ ಹೊರಡಿಸಬೇಕೆನ್ನುವ  ಕಟ್ಟುನಿಟ್ಟು ಅವುಗಳಿಗೂ ಇಲ್ಲ. ಇಂತಹ ಬಂಧನವು ಇರದ ಕಾರಣದಿಂದಲೆ ಇವುಗಳ ಹಾಡು ಬಂಧುರ ಅಂದರೆ ಉಲ್ಲಾಸದಾಯಕವಾಗಿದೆ. ಇವುಗಳ ಹಾಡು ಹಾಗು ಹಾರಾಟ ಸ್ವಚ್ಛಂದ ವಾಗಿರುವದರಿಂದಲೇ ಇವುಗಳ ಬದುಕು ಸುಂದರವಾಗಿದೆ. ಬದುಕಿನಲ್ಲಿ ವಿವಿಧ ಸ್ವರಗಳು ಬೇಕು. ಆದರೆ ಮಧುರವಾದ ಸ್ವರಮೇಳಕ್ಕಾಗಿ ಸಾಮರಸ್ಯವೂ ಬೇಕು. ಇದು ಕವಿಯು ಇಲ್ಲಿ ಅನುಭವಿಸಿದ ದರ್ಶನವಾಗಿದೆ. ಪ್ರಕೃತಿಯಲ್ಲಿ ಒಂದಾಗಿ, ಪ್ರಕೃತಿಯ ಉಲ್ಲಾಸವೇ ತನ್ನ ಉಲ್ಲಾಸವಾಗಿದ್ದನ್ನು ಕವಿ ಅನುಭವಿಸಿದ ಕಾವ್ಯವು ಇದಾಗಿದೆ.
...........................................................................
ಈ ಕವನದ ವೈಶಿಷ್ಟ್ಯ:
ಸೂರ್ಯೋದಯದಿಂದಾಗಿ ಮೂಡುವ ನಿಸರ್ಗವೈಭವವು ಕವಿಗಳಲ್ಲಿ ಉಲ್ಲಾಸವನ್ನು ಮೂಡಿಸುವದು ಸಹಜ ಹಾಗು ಸಾಮಾನ್ಯ. ಇಂತಹ ಕವನಗಳು, ಸ್ವತಃ ಬೇಂದ್ರೆಯವರೇ ಬರೆದಂತಹವು, ಅನೇಕವಿವೆ. ಸಾಮಾನ್ಯವಾಗಿ, ಪ್ರಕೃತಿ ಅನುಭವಿಸುವ ಸಂವೇದನೆಗಳು ಮಾನವನ ಅನುಭವಕ್ಕೆ ಹೊರತಾಗಿವೆ. ಆದರೆ, ಈ ಕವನದಲ್ಲಿ, ಉಷಃಕಾಲವು ನಿಸರ್ಗದಲ್ಲಿ ಮೂಡಿಸಿದ ಉಲ್ಲಾಸದ ಅನುಭವವಿದೆ. ಈ ಅನುಭವವು ಕವಿಯನ್ನು ಮೂಕನನ್ನಾಗಿಸುತ್ತದೆ. (“ಏನೊ ವಿಧ! ಏನೊ ಹದ.”) ಪ್ರಕೃತಿಯ ಅಗಾಧತೆಯ ಎದುರಿಗೆ ತಾನು ಅಲ್ಪ ಎನ್ನುವ ಸತ್ಯವನ್ನು ತಿಳಿಸುತ್ತದೆ. ಬದುಕಿನಲ್ಲಿ ಸ್ವಾತಂತ್ರ್ಯ ಬೇಕು, ಅದರೊಡನೆಯೆ ಸಾಮರಸ್ಯವೂ ಬೇಕು ಎನ್ನುವ ದರ್ಶನವನ್ನು ಕವಿಯಲ್ಲಿ ಹುಟ್ಟಿಸುತ್ತದೆ. ಇಂತಹ ಬೃಹದ್ದರ್ಶನವನ್ನು ಮಾಡಿಸುವ ಈ ಕವನದಲ್ಲಿ ಇರುವದು ಕೇವಲ ಮೂರು ನುಡಿಗಳು ಅಥವಾ ಮೂವತ್ತಾರು ಪದಗಳು! ‘ಕಿರಿದರೊಳ್ ಪಿರಿದರ್ಥವನು’ ಪೇಳುವದು ಎಂದರೆ ಇದೇ ಇರಬೇಕು!

ಬೇಂದ್ರೆಯವರದು ಅಸೀಮ ಕಲ್ಪನಾವಿಲಾಸ ಹಾಗು ಅಪಾರವಾದ ಪದಸಾಮರ್ಥ್ಯ. ಅವರ ‘ಪಾತರಗಿತ್ತಿ ಪಕ್ಕಾ’, ‘ಬೆಳದಿಂಗಳ ನೋಡಾ’  ಮೊದಲಾದ ಕವನಗಳನ್ನು ಓದಿದವರಿಗೆ ಇದರ ಅನುಭವವಿದೆ. ಆದರೆ ‘ವಸಂತಮುಖ’ ಕವನದಲ್ಲಿ, ಬೇಂದ್ರೆಯವರು ನಿಸರ್ಗದ ಆನಂದದಲ್ಲಿ ಎಷ್ಟು ಪರವಶರಾಗಿದ್ದಾರೆಂದರೆ, ಅತಿ ಚಿಕ್ಕದಾದ ಕವನದಲ್ಲಿ ಅತಿ ಮಹತ್ವದ ದರ್ಶನ ಇಲ್ಲಿ ಹೊಮ್ಮಿದೆ. ಇದೇ ಈ ಕವನದ ವೈಶಿಷ್ಟ್ಯವಾಗಿದೆ.
……………………………………………

ಟಿಪ್ಪಣಿ:
(೧) ಪಾಂಡವರು ವನವಾಸದಲ್ಲಿದ್ದಾಗ, ಓರ್ವ ಮುನಿಯನ್ನು ಅವಮಾನಿಸಿದ್ದಕ್ಕಾಗಿ ಅರ್ಜುನನು ಶಪಿತನಾದನು. ಶಾಪಮುಕ್ತಿಗಾಗಿ ಆತನು ತೀರ್ಥಯಾತ್ರೆಯನ್ನು ಮಾಡಬೇಕಾಯಿತು.‘ಬುದ್ಬುದಾ’ ಎನ್ನುವ ಅಪ್ಸರೆಯು ಈ ಪ್ರಸಂಗಕ್ಕೆ ಸಂಬಂಧಿಸಿದ್ದಾಳೆ.  ಬೇಂದ್ರೆಯವರು ಎರಡನೆಯ ಸಾಲಿನಲ್ಲಿ ಬಳಸಿದ ‘ಬುದ್ಬುದ’ ಪದವು ಈ ಕಾರಣದಿಂದಾಗಿ ಬಂಧ ಹಾಗು ಮೋಕ್ಷವನ್ನು ಸೂಚಿಸುತ್ತದೆ.
(೨) ಬೇಂದ್ರೆಯವರ ಅನೇಕ ಶ್ರೇಷ್ಠ ಕವನಗಳು ದೇಸಿ ಶೈಲಿಯಲ್ಲಿವೆ ಎನ್ನುವದು ಕೆಲವು ವಿಮರ್ಶಕರ ಅಭಿಪ್ರಾಯ. ಈ ಕವನವು ಮಾರ್ಗ ಭಾಷೆಯಲ್ಲಿದ್ದೂ ಸಹ ಬೇಂದ್ರೆಯವರ ಕವನಗಳಲ್ಲಿಯೇ ಶಿಖರಸ್ಥಾಯಿಯಾಗಿರುವದನ್ನು ಗಮನಿಸಬೇಕು.

ಹೆಚ್ಚಿನ ಟಿಪ್ಪಣಿ:
(೧) ಒಂದೇ ಸಾಲಿನಲ್ಲಿ ಜೀವನದರ್ಶನವನ್ನು ಮಾಡಿಸುವ ಕವನಗಳು ಕನ್ನಡದಲ್ಲಿ ಇದ್ದೇ ಇವೆ. ಅನೇಕ ವರ್ಷಗಳ ಹಿಂದೆ, ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ‘ಕನ್ನಡ ಕವಿಗಳ ಪ್ರತಿಭೆಯ ಮಿಂಚು’ ಎನ್ನುವ ಶೀರ್ಷಿಕೆಯ ಅಡಿಯಲ್ಲಿ ಕೆಲವು ಕವನಗಳ ಒಂದೊಂದು ಸಾಲನ್ನು ಕೊಡಲಾಗಿತ್ತು. ಸೂರ್ಯೋದಯಕ್ಕೆ ಸಂಬಂಧಿಸಿದಂತೆ ಅಂತಹ ಒಂದು ಸಾಲು ಇಲ್ಲಿದೆ:
ಶಿವ ಬರೆದ ಕತೆಯ ಪುಟವೊಂದು ತೆರೆದು ನನ್ನ ಮನೆ ಮೂಡಲಲಿ ಬೆಳಕಾಯಿತು.”

ಕವಿಯ ದೈವಶ್ರದ್ಧೆಯನ್ನು, ಈ ಶ್ರದ್ಧೆ ಅವನಲ್ಲಿ ಮೂಡಿಸುವ ಸ್ಥೈರ್ಯವನ್ನು, ಶಿವವಾದುದನ್ನು ಅಂದರೆ ಮಂಗಲವನ್ನೇ ಬಯಸುವ ಅವನ ಮನೀಷೆಯನ್ನು ಈ ಸಾಲು ಅದ್ಭುತವಾಗಿ ಬಿಂಬಿಸುತ್ತದೆ. ಈ ಸಾಲಿನ ಕೆಳಗೆ ‘ಮಸಳಿ’ ಎನ್ನುವ ಅಂಕಿತವಿದ್ದುದ್ದಾಗಿ ನನ್ನ ಮಸುಕಾದ ನೆನಪು ಹೇಳುತ್ತಿದೆ. ಆದರೆ ಇದು ಹೀಗೇ ಎಂದು ಹೇಳಲು ಈಗ ಸಾಧ್ಯವಾಗದು.

(೨) ಇಂಗ್ಲಿಶ್ ಭಾಷೆಯಲ್ಲಿ ಪ್ರಕಟವಾಗುತ್ತಿದ್ದ Reader’s Digest ತರಹದ ಮಾಸಿಕವನ್ನು ಕನ್ನಡದಲ್ಲಿ ತರಲು ಉದ್ದೇಶಿಸಿದ ಲೋಕಶಿಕ್ಷಣ ಸಂಸ್ಥೆಯು ‘ಕಸ್ತೂರಿ’ ಮಾಸಿಕವನ್ನು ಹೊರತಂದಿತು. Reader’s Digestನಲ್ಲಿ ಪ್ರಕಟವಾಗುತ್ತಿದ್ದ ಸ್ಥಿರಶೀರ್ಷಿಕೆ ‘Life’s like that’ ಗೆ ಸಂವಾದಿಯಾಗಿ ಕಸ್ತೂರಿ ಮಾಸಿಕದಲ್ಲಿ ’ಇದುವೇ ಜೀವ ಇದು ಜೀವನ’ ಶೀರ್ಷಿಕೆಯನ್ನು ತರಲಾಯಿತು. ಕನ್ನಡದ ಶೀರ್ಷಿಕೆಯು ‘ವಸಂತಮುಖ’ ಕವನದ ಮೊದಲನೆಯ ನುಡಿಯ ಮೂರನೆಯ ಸಾಲೇ ಆಗಿರುವದನ್ನು ಗಮನಿಸಬಹುದು.

Monday, July 19, 2010

ಶಿಷ್ಟಾಚಾರ vs ದುಷ್ಟಾಚಾರ

ಕನ್ನಡದ ಖ್ಯಾತ ನಾಟಕಕಾರರಾದ ಶ್ರೀ ವ್ಯಾಸ ದೇಶಪಾಂಡೆಯವರು ಶಾಸಕರ ಬಗೆಗಿನ ತಮ್ಮ ಅಭಿಪ್ರಾಯವನ್ನು ಕವನರೂಪದಲ್ಲಿ ಅಭಿವ್ಯಕ್ತಿಸಿದ್ದಾರೆ. ಆಳುವ ಪಕ್ಷದವರೇ ಇರಲಿ, ವಿರೋಧ ಪಕ್ಷದವರೇ ಆಗಲಿ ಶಾಸಕರೆಲ್ಲ ಒಂದೇ. ಅವರು ಅಲ್ಲಿಯೂ ಸಲ್ಲದವರು, ಇಲ್ಲಿಯೂ ಸಲ್ಲದವರು. 

ವ್ಯಾಸ ದೇಶಪಾಂಡೆಯವರ ಕವನವನ್ನು ಓದಿ ಆನಂದಿಸಿರಿ:

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ವಿಧಾನಸಭೆಯ ಒಳಗಡೆ ಮಲಗಿ,
                                    ನಿಧಾನನೀತಿಯ ಜಗ್ಗಿದಿರಿ.
                                    ನಿಧಾನ ನಡೆಯ ಪ್ರಧಾನಕರ್ತರೆ,
                                    ಧರಣಿಯ ಶಯನವ ಮಾಡಿದಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ಮೂರು ಕಾಲಿನ ಓಟವ ಓಡಿ,
                                    ಮೂರಾಬಟ್ಟೆ ಕಲಾಪ ಮಾಡಿ,
                                    ಮೂರೂ ಬಿಟ್ಟು ಬೈದಾಡಿದಿರಿ;
                                    ಘನತೆಯ ಬಿಟ್ಟು ಗುದ್ದಾಡಿದಿರಿ,
                                    ಧರಣಿಯ ಶಯನವ ಮಾಡಿದಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ಗಣಿಗಣಿ ಝಣಝಣ ಹಪಿಹಪಿಸುವಿರಿ,
                                    ನಿಮ್ಮಯ ಪಾಲನು ಎಣಿಸುವಿರಿ;
                                    ಭೀಮ-ಬಕಾಸುರ ನುಂಗುವ ಕುಸ್ತಿ,
                                    ಸದನದ ಬಾವಿಗೆ ಹಾರುವ ಮಸ್ತಿ,
                                    ಧರಣಿಯ ಶಯನವ ಮಾಡಿದಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                    ನೋಟಿನ ಹಾರವ ಕೊರಳಲಿ ಧರಿಸಿ,
                                    ಓಟನು ಕಾಸಿಗೆ ಕೊಳ್ಳುವಿರಿ;
                                    ಜನಹಿತವೆಂಬುದ ಮನದಲಿ ನೆನೆಯದೆ,
                                    ದಿಲ್ಲಿಯ ಬಾಗಿಲಿಗೋಡುವಿರಿ;
                                    ಧರಣಿಯಲ್ಲಿ ಉರಳಾಡುವಿರಿ,
                                    ಧರಣಿಯಲ್ಲಿ ಹೊರಳಾಡುವಿರಿ.

                                    ಶಾಸಕರೆ, ಶಾಸಕರೆ,
                                    ನೀವೇನೂಟವ ಮಾಡಿದಿರಿ?
                                                                             ----ವ್ಯಾಸ ದೇಶಪಾಂಡೆ

 .................................................................................
ಶಾಸಕರಷ್ಟೇ ರಾಜಕಾರಣ ಮಾಡುತ್ತಾರಂತಲ್ಲ. ರಾಜ್ಯಪಾಲರು ಇನ್ನೂ ಹೆಚ್ಚಿನ ರಾಜಕೀಯದಲ್ಲಿ ಮುಳುಗಿದ ನಿದರ್ಶನಗಳಿವೆ. ಕರ್ನಾಟಕದ ಸದ್ಯದ ರಾಜಕೀಯವನ್ನೇ ಗಮನಿಸಿ:

ಕರ್ನಾಟಕದ ರಾಜ್ಯಪಾಲರು ತಮ್ಮ ಸರಕಾರದ ವಿರುದ್ಧವೇ ರಣಕಹಳೆಯನ್ನು ಊದಿದ್ದಾರೆ. ತಮ್ಮ ಹೋರಾಟವು ಭ್ರಷ್ಟಾಚಾರದ ವಿರುದ್ಧವೇ ಹೊರತು, ಬಿಜೆಪಿ ಪಕ್ಷದ ಸರಕಾರದ ವಿರುದ್ಧ ಅಲ್ಲ ಎನ್ನುವ ಸ್ಪಷ್ಟೀಕರಣವನ್ನೂ ಕೊಟ್ಟಿದ್ದಾರೆ. ತಾವು ರಾಜ್ಯಪಾಲರಾಗಿರುವದರಿಂದ ಯಾವುದೇ ಪಕ್ಷಕ್ಕೆ ಸೇರಿದವರು ಅಲ್ಲ; ಆದರೆ ತಮ್ಮ ಅಂತರಂಗದಲ್ಲಿ ತಾವು ನಿಷ್ಠ ಕಾಂಗ್ರೆಸ್ಸಿಗರು ಎಂದು ಬಿಚ್ಚುಮನಸ್ಸಿನಿಂದ ಹೇಳಿದ್ದಾರೆ. ಇವೆಲ್ಲವನ್ನೂ ಪರೀಕ್ಷಿಸುವ ಮೊದಲು ರಾಜ್ಯಪಾಲರ ಸಾಂವಿಧಾನಿಕ ಸ್ಥಿತಿಯನ್ನು ಸ್ವಲ್ಪ ಅವಲೋಕಿಸೋಣ.

ಭಾರತದ ರಾಷ್ಟ್ರಪತಿಗಳನ್ನು ಲೋಕಸಭೆಯ ಸದಸ್ಯರು ಚುನಾಯಿಸುತ್ತಾರೆ. ಹೀಗಾಗಿ ಕೇಂದ್ರದಲ್ಲಿ ಬಹುಮತದಲ್ಲಿದ್ದ ಪಕ್ಷಕ್ಕೆ ಬೇಕಾದ ಅಭ್ಯರ್ಥಿಯೇ ರಾಷ್ಟ್ರಪತಿಯಾಗುವದು ಸಹಜ. ರಾಷ್ಟ್ರಪತಿಯಾದ ಬಳಿಕ ಅವರ ನಿಷ್ಠೆಯು ಸಂವಿಧಾನಕ್ಕೆ ಮಾತ್ರ ಮೀಸಲಾಗಿರಬೇಕು. ಆದರೆ ಇಂದಿರಾ ಗಾಂಧಿಯವರು ಪ್ರಧಾನಿಯಾದ ಬಳಿಕ ರಾಷ್ಟ್ರಪತಿಯವರ ಸಂವಿಧಾನ ನಿಷ್ಠೆಯು ‘ಇಂದಿರಾ-ನಿಷ್ಠೆ’ಯಾಗಿ ಬದಲಾಯಿತು. ಶ್ರೀ ವರಾಹಗಿರಿ ವೆಂಕಟರಮಣ ಗಿರಿಯವರು ಇಂತಹ ಮೊದಲ ‘ಇಂದಿರಾ ನಿಷ್ಠ’ ರಾಷ್ಟ್ರಪತಿಗಳು. ಬಳಿಕ ಬಂದ ಫಕರುದ್ದೀನ ಅಲಿ ಅಹಮದರಂತೂ ತುರ್ತು ಪರಿಸ್ಥಿತಿಯ ಆದೇಶಕ್ಕೆ ಮಧ್ಯರಾತ್ರಿಯಲ್ಲಿ ರುಜು ಹಾಕಿ ‘ರಬ್ಬರ ಸ್ಟ್ಯಾಂಪ ರಾಷ್ಟ್ರಪತಿ’ ಎಂದು ಖ್ಯಾತರಾದರು.

ರಾಜ್ಯಪಾಲರ ಆಯ್ಕೆಯ ವಿಧಾನ ಹೀಗಿಲ್ಲ. ರಾಜ್ಯಪಾಲರದು ಚುನಾಯಿತ ಹುದ್ದೆಯಲ್ಲ. ಕೇಂದ್ರಸರಕಾರವು ತನಗೆ ಬೇಕಾದ ಯಾರನ್ನಾದರೂ ರಾಜ್ಯಪಾಲರೆಂದು ಆಯ್ದುಕೊಂಡು ನಿಯುಕ್ತಿಗೊಳಿಸುವದು. ಈ ನಿಯುಕ್ತಿಗೆ ರಾಷ್ಟ್ರಪಾಲರು ರುಜು ಹಾಕಲೇಬೇಕು. ಆದುದರಿಂದ ರಾಜ್ಯಪಾಲರು ರಾಷ್ಟ್ರಪ್ರತಿಗಳ ಪ್ರತಿನಿಧಿಯಲ್ಲ. ತಾತ್ವಿಕವಾಗಿ ಹಾಗು ವಾಸ್ತವದಲ್ಲಿ ಅವರು ಕೇಂದ್ರಸರಕಾರದ ಪ್ರತಿನಿಧಿ. ಭಾರತದಲ್ಲಿ ಬ್ರಿಟಿಶ್ ಆಳಿಕೆಯಲ್ಲಿದ್ದ ಕಾಲದಲ್ಲಿ, ಬ್ರಿಟಿಶರು ಪ್ರತಿಯೊಂದು ಸಂಸ್ಥಾನದಲ್ಲಿ ತಮ್ಮ ಪರವಾಗಿ Resident ಎನ್ನುವ ಒಬ್ಬ ಏಜಂಟನನ್ನು ನಿಯಮಿಸುತ್ತಿದ್ದರು. ರಾಜ್ಯಪಾಲರನ್ನು ಕೇಂದ್ರಸರಕಾರದ Resident ಎಂದು ಕರೆಯಬಹುದು. ರಾಜ್ಯಪಾಲರು ಕೇಂದ್ರಸರಕಾರಕ್ಕೆ ವರದಿಗಳನ್ನು ಸಲ್ಲಿಸುತ್ತಾರೆಯೆ ವಿನ: ರಾಷ್ಟ್ರಪತಿಗಳಿಗಲ್ಲ. ಈ ವರದಿಗಳನ್ನು ಆಧರಿಸಿ ಕೇಂದ್ರಸರಕಾರವು ತನಗೆ ಉಚಿತವೆನಿಸಿದ ಕ್ರಮವನ್ನು ಕೈಗೊಳ್ಳುವದು. ನಮ್ಮದು Unitary ಹಾಗು Fedaral ಇವೆರಡರ ಸಂಯುಕ್ತ ಪದ್ಧತಿಯಾಗಿರುವದರಿಂದ, ಈ ತರಹದ ವಿಧಾನವನ್ನು ಮಾಡಲಾಗಿದೆ. ಹೀಗಿರುವಾಗ, ರಾಜ್ಯಪಾಲರು ಪಕ್ಷಾತೀತರಾಗಿರಬೇಕು ಹಾಗು ಸಂವಿಧಾನಕ್ಕೆ ಮಾತ್ರ ನಿಷ್ಠರಾಗಿರಬೇಕು ಎಂದು ಅಪೇಕ್ಷಿಸುವದು ಸಾಧ್ಯವಾದೀತೆ?

ರಾಜ್ಯಪಾಲರು ಪಕ್ಷಾತೀತರಾದರೆ, ಅವರು ಆನಂತರ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಬಾರದು, ಕೇಂದ್ರದಲ್ಲಿ ಅಥವಾ ರಾಜ್ಯದಲ್ಲಿ ಯಾವುದೇ ಸ್ಥಾನವನ್ನು (ಅಂದರೆ ಮಂತ್ರಿಸ್ಥಾನ ಇತ್ಯಾದಿ) ಹೊಂದಬಾರದು. ಆದರೆ, ವಸ್ತುಸ್ಥಿತಿ ಹಾಗಿಲ್ಲ. ಶ್ರೀ ಎಸ್.ಎಮ್. ಕೃಷ್ಣರು ಕರ್ನಾಟಕದ ಮುಖ್ಯ ಮಂತ್ರಿಗಳಾಗಿದ್ದರು. ಆ ಅವಧಿಯಲ್ಲಿ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ತೀರ ಬೇಕಾದವರಾದರು. ಆದುದರಿಂದ ರಾಜ್ಯರಾಜಕಾರಣದಿಂದ ನಿವೃತ್ತರಾಗಬೇಕಾದ ಸಂದರ್ಭದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಪದವಿಯನ್ನು ಗಿಟ್ಟಿಸಿಕೊಂಡರು.  ಆಬಳಿಕ ಮತ್ತೆ ಕೇಂದ್ರ ಮಂತ್ರಿಗಳಾಗಿ ದಿಲ್ಲಿಗೆ ಹಾರಿದರು. ಇಂತಹ ರಾಜ್ಯಪಾಲರು ಪಕ್ಷಾತೀತರಾಗಿ ಉಳಿಯಬೇಕೆಂದು ಅಪೇಕ್ಷಿಸಲು ಸಾಧ್ಯವೆ? ಇವರ ನಿಷ್ಠೆ ಏನಿದ್ದರೂ ತಮ್ಮನ್ನು ನಿಯಮಿಸಿದ ಯಜಮಾನನಿಗೆ (ಯಜಮಾನಳಿಗೆ) ಮಾತ್ರ.

ಯಜಮಾನ-ನಿಷ್ಠೆಯ (ಇಂದಿರಾ-ನಿಷ್ಠೆಯ) ಪರಮಾವಧಿಯನ್ನು ಪ್ರದರ್ಶಿಸಿದ ರಾಜ್ಯಪಾಲರೆಂದರೆ ೧೯೮೪ರಲ್ಲಿ ಆಂಧ್ರಪ್ರದೇಶದ ರಾಜ್ಯಪಾಲರಾಗಿದ್ದ ರಾಮಲಾಲರು. ಆ ಸಮಯದಲ್ಲಿ ಶ್ರೀ ಎನ್.ಟಿ.ರಾಮರಾವರು ವಿಧಾನಸಭೆಯ ಚುನಾವಣೆಯಲ್ಲಿ ಬಹುಮತ ಪಡೆದಿದ್ದರು. ಆದರೆ  ರಾಜ್ಯಪಾಲರಾದ ರಾಮಲಾಲರು ರಾಮರಾವರ ಸಂಪುಟದಲ್ಲಿ ಹಣಕಾಸು ಮಂತ್ರಿಯಾಗಿದ್ದ ಭಾಸ್ಕರರಾವ ಎನ್ನುವವರ ನೇತೃತ್ವದಲ್ಲಿ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟರು. ರಾಮರಾವರು ತಮ್ಮ ಶಾಸಕರನ್ನು ಕರೆದೊಯ್ದು ರಾಜ್ಯಪಾಲರಿಗೆ ತೋರಿಸಿದರೂ ಸಹ ರಾಮಲಾಲ ಮಣಿಯಲಿಲ್ಲ. ಆಗ ರಾಮರಾವ ಅವರು ತಮ್ಮೆಲ್ಲ ಶಾಸಕರನ್ನು ಕರೆದುಕೊಂಡು ದಿಲ್ಲಿಗೆ ಹೋಗಿ ಅಲ್ಲಿ ತಮ್ಮ ಬಹುಮತದ ಪ್ರದರ್ಶನ ಮಾಡಿದರು. ‘ತಲೆಗಳನ್ನು ಎಣಿಸಲು ಬಾರದ ಗಣಿತಪಂಡಿತ ಎಂದು ರಾಮಲಾಲರನ್ನು ಆಗ ಪತ್ರಿಕೆಗಳು ಗೇಲಿ ಮಾಡಿದವು. ರಾಮರಾವರು ಮತ್ತೆ ಸರಕಾರವನ್ನು ರಚಿಸಿದರು. ರಾಮಲಾಲರು ರಾಜ್ಯಪಾಲ ಹುದ್ದೆಯನ್ನು ಬಿಟ್ಟು ದಿಲ್ಲಿಗೆ ಮರಳಬೇಕಾಯಿತು. ರಾಮರಾವರಿಗೆ ಮಣ್ಣು ಕಾಣಿಸಲು ಹೋದ ರಾಮಲಾಲರು ತಾವೇ ಮಣ್ಣು ಮುಕ್ಕಿದರು. ಅವರ ಸ್ಥಾನದಲ್ಲಿ ಬಂದ ಶಂಕರ ದಯಾಳ ಶರ್ಮಾರ ವರದಿಯನ್ನು ಆಧರಿಸಿ, ಕೇಂದ್ರ ಸರಕಾರವು ಮೂರೇ ತಿಂಗಳುಗಳಲ್ಲಿ ಎನ್.ಟಿ. ರಾಮರಾವ ಸರಕಾರವನ್ನು ವಜಾ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಿತು. ಮತ್ತೆ ಚುನಾವಣೆಯನ್ನು ನಡೆಯಿಸಲಾಯಿತು. ರಾಮರಾವರು ಮತ್ತೆ ಬಹುಮತ ಗಳಿಸಿ ಮತ್ತೊಮ್ಮೆ ಮುಖ್ಯ ಮಂತ್ರಿಯಾದರು !

೧೯೮೯ರಲ್ಲಿ ಕರ್ನಾಟಕದಲ್ಲಿ ಜನತಾಪಕ್ಷದ ಸರಕಾರವಿತ್ತು. ಎಸ್. ಆರ್. ಬೊಮ್ಮಾಯಿಯವರು ಮುಖ್ಯ ಮಂತ್ರಿಗಳಾಗಿದ್ದರು. ಸರಕಾರದ ಬಹುಮತ ಕುಸಿದಿದೆ ಎನ್ನುವ ಆಪಾದನೆಯನ್ನು ವಿಧಾನಸಭೆಯಲ್ಲಿ ಪರೀಕ್ಷಿಸದೆ, ಆಗಿನ ರಾಜ್ಯಪಾಲರಾಗಿದ್ದ ಪಿ. ವೆಂಕಟಸುಬ್ಬಯ್ಯನವರು ೨೦-೪-೧೯೮೯ರಂದು ರಾಷ್ಟ್ರಪತಿ ಆರ್.ವೆಂಕಟರಾಮನ್ ಅವರಿಗೆ ವರದಿ ನೀಡಿದರು. ಅದೇ ದಿನ ಬೊಮ್ಮಾಯಿ ಸರಕಾರವನ್ನು ವಜಾ ಮಾಡಿ, ವಿಧಾನಸಭೆಯನ್ನು ವಿಸರ್ಜಿಸಲಾಯಿತು ಹಾಗು ರಾಷ್ಟ್ರಪತಿ ಆಳಿಕೆಯನ್ನು ಕರ್ನಾಟಕದ ಮೇಲೆ ಹೇರಲಾಯಿತು. ಇದೇ ರೀತಿಯಲ್ಲಿ ೧೯೮೮ರಲ್ಲಿ ನಾಗಾಲ್ಯಾಂಡ ಸರಕಾರವನ್ನು, ೧೯೯೧ರಲ್ಲಿ ಮೇಘಾಲಯ ಸರಕಾರವನ್ನು ವಜಾ ಮಾಡಲಾಗಿತ್ತು. ಬಾಬರಿ ಮಸೀದಿ ಪ್ರಕರಣದ ನಂತರ ೧೫-೧೨-೧೯೯೨ರಂದು ಬಿ.ಜೆ.ಪಿ.ಸರಕಾರಗಳನ್ನು ಹೊಂದಿದ ಮೂರು ರಾಜ್ಯಗಳಲ್ಲಿ (ಮಧ್ಯ ಪ್ರದೇಶ,ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ) ರಾಷ್ಟ್ರಪತಿ ಆಡಳಿತವನ್ನು ಹೇರಲಾಯಿತು. ಇವೆಲ್ಲ ಸಂದರ್ಭಗಳಲ್ಲಿ ರಾಜ್ಯಪಾಲರು ಕೇಂದ್ರಸರಕಾರದ ಪ್ರತಿನಿಧಿಯಂತೆ ವರ್ತಿಸದೆ, ಕೇಂದ್ರದಲ್ಲಿಯ ಆಡಳಿತ ಪಕ್ಷದ ಪ್ರತಿನಿಧಿಯಂತೆ ವರ್ತಿಸಿದ್ದು ಸ್ಪಷ್ಟವಿದೆ. ಕರ್ನಾಟಕ, ಮೇಘಾಲಯ ಹಾಗು ನಾಗಾಲ್ಯಾಂಡಗಳ ಮೇಲ್ಮನವಿಗಳನ್ನು ಪರಿಶೀಲಿಸಿದ ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರು ವಿಧಾನಸಭೆಯ ವಿಸರ್ಜನೆಗೆ ವರದಿ ಸಲ್ಲಿಸುವ ಮೊದಲು, ವಿಧಾನಸಭೆಯಲ್ಲಿಯೇ ಪಕ್ಷಗಳ ಬಲಾಬಲವನ್ನು ಪರೀಕ್ಷಿಸಲು, ವಿಧಾನಸಭೆಯ ಸಭಾಪತಿಗಳಿಗೆ ಸೂಚನೆ ನೀಡುವದೇ ಸರಿಯಾದ ಏಕೈಕ ವಿಧಾನ ಎಂದು ನಿರ್ಣಯ ನೀಡಿತು. ಇದು ಕೇಂದ್ರಸರಕಾರಕ್ಕೆ ಆದ ಮುಖಭಂಗ. ಆದರೇನು, ಅದಾಗಲೇ ಕರ್ನಾಟಕದಲ್ಲಿ ಮರುಚುನಾವಣೆಗಳನ್ನು ಜರುಗಿಸಲಾಗಿತ್ತು. ಈ ಸಲವೂ ಸಹ ಜನತಾ ಪಕ್ಷವೇ ಅಧಿಕಾರಕ್ಕೆ ಬಂದಿತು. ಆದರೆ ಬೊಮ್ಮಾಯಿಯವರಿಗೆ ಆದ ಹಾನಿಯನ್ನು ಸರಿಪಡಿಸಲಾಗಲಿಲ್ಲ. ಏಕೆಂದರೆ ಅವರ ಬದಲು, ಈ ಬಾರಿ ದೇವೇಗೌಡರು ಮುಖ್ಯ ಮಂತ್ರಿಗಳಾದರು !

ಈ ರೀತಿಯಾಗಿ ಕೇಂದ್ರ ಸರಕಾರವು ಚುನಾಯಿತ ರಾಜ್ಯಸರಕಾರವನ್ನು ಉರುಳಿಸಲು ರಾಜ್ಯಪಾಲರನ್ನು ಬಳಸಿಕೊಳ್ಳುತ್ತಲೇ ಬಂದಿದೆ. ಸರ್ವೋಚ್ಚ ನ್ಯಾಯಾಲಯವು ರಾಜ್ಯಪಾಲರಿಗೆ ಮೂಗುದಾಣ ಹಾಕಿದ ನಂತರವೇ ಈ ಕುಟಿಲ ತಂತ್ರಕ್ಕೆ ಕಡಿವಾಣ ಬಿದ್ದಿದೆ.

ಕರ್ನಾಟಕದ ಸದ್ಯದ ರಾಜ್ಯಪಾಲ ಭಾರದ್ವಾಜರು ಸಂವಿಧಾನವನ್ನು ಮೀರುವ ಕಾರ್ಯವನ್ನು ಮಾಡಿಲ್ಲ. ತಮ್ಮ ಯಜಮಾನರ ಆದೇಶ ಬಂದರೆ ಮಾಡಲೂ ಸಿದ್ಧ ಎನ್ನುವ ಧೋರಣೆಯನ್ನು ಅವರು ಪ್ರದರ್ಶಿಸಿದ್ದಾರೆ.  ಅಂದರೆ ಅವರು ಒಬ್ಬ ರಾಜಕಾರಣಿಯಂತೆಯೇ ವರ್ತಿಸಿದ್ದಾರೆ.  ರಾಜ್ಯಪಾಲರ ಗೌರವಯುತ ಹುದ್ದೆಯಲ್ಲಿದ್ದ ವ್ಯಕ್ತಿ ಸಾರ್ವಜನಿಕ ಮಾಧ್ಯಮಗಳ ಎದುರಿಗೆ ತಾನು ಒಂದು ಪಕ್ಷಕ್ಕೆ ಸೇರಿದವನು ಎಂದು ಘೋಷಿಸುವದು ಉಚಿತವೆ? ತನ್ನ ಸರಕಾರದ ವಿರುದ್ಧವೇ ಸಾರ್ವಜನಿಕವಾಗಿ ಟೀಕೆ ಮಾಡಬಹುದೆ? ಇದರಲ್ಲಿ ರಾಜಕೀಯ ದುರುದ್ದೇಶ ಇಲ್ಲವೆ? ಇದು ಶಿಷ್ಟಾಚಾರವೊ ಅಥವಾ ದುಷ್ಟಾಚಾರವೊ? ಅಥವಾ ಅವರು ತಮ್ಮ ಪಕ್ಷ ನಿಷ್ಠೆಯನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸುತ್ತಿದ್ದಾರೆಯೆ? ಯಾರಿಗೆ ಗೊತ್ತು, ಇಂತಹ ನಿಷ್ಠೆಯನ್ನು ಪ್ರದರ್ಶಿಸಿದ್ದಕ್ಕಾಗಿ, ಅವರಿಗೆ ಭವಿಷ್ಯದಲ್ಲಿ ಉಪರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಹುದ್ದೆ ದೊರೆಯಲೂ ಬಹುದು!

Thursday, July 15, 2010

ಶಾಸಕರ ವರ್ತನೆಯ ಮಾನದಂಡ ಹಾಗು ಸಾರ್ವಜನಿಕ ಕಣ್ಗಾವಲು

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಶಾಸಕರು ವಿಧಾನಸಭೆಯಲ್ಲಿ ಧರಣಿ ಕೂತಿದ್ದಾರೆ. ಧರಣಿ ಕೂಡುವ ಹಕ್ಕು ಶಾಸಕರಿಗೆ ಇದೆ. ಈ ಧರಣಿಯ ಮೂಲಕ ಈ ಶಾಸಕರು ಏನನ್ನು ಸಾಧಿಸಬಯಸುತ್ತಾರೆ ಎನ್ನುವದರ ಮಂಥನ ನನ್ನ ಗುರಿಯಲ್ಲ. ನನ್ನನ್ನು ತೀವ್ರ ಚಿಂತನೆಗೆ ಹಾಗು ಚಿಂತೆಗೆ ಒಡ್ಡಿರುವದು ಧರಣಿಯ ಸ್ವರೂಪ.

ಮಹಾತ್ಮಾ ಗಾಂಧಿಯವರು ಮೊದಲ ಸಲ ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ‘Asiatic Registration Act’ದ ವಿರುದ್ಧ ನಡೆದ ಈ ಸತ್ಯಾಗ್ರಹದಲ್ಲಿ ಆಫ್ರಿಕಾದಲ್ಲಿದ್ದ ಅನೇಕ ಭಾರತೀಯರು (೨೦೩೭ ಜನ ಗಂಡಸರು, ೧೨೭ ಜನ ಹೆಂಗಸರು ಹಾಗು ೫೭ ಜನ ಬಾಲರು) ಚಾರ್ಲ್ಸ್‌ಟೌನಿನಿಂದ ಟ್ರಾನ್ಸವಾಲದ ರಾಜಧಾನಿ ಪ್ರಿಟೋರಿಯಾ ತಲುಪಲು ಸುಮಾರು ನೂರು ಕಿಲೊಮೀಟರಗಳನ್ನು  ಕಾಲ್ನಡಿಗೆಯಲ್ಲಿ ನಡೆದರು. ಮಾರ್ಗದುದ್ದಕ್ಕೂ ಭಜನೆಗಳು ನಡೆಯುತ್ತಿದ್ದವು. ರಾತ್ರಿಯ ಹೊತ್ತು  ಬಯಲಿನಲ್ಲಿ ಬೀಡು ಬಿಟ್ಟು, ಬೆಳಗಿನಲ್ಲಿ ಮತ್ತೆ ಮುನ್ನಡೆಯಬೇಕಾಗುತ್ತಿತ್ತು. ಮಾರ್ಗಮಧ್ಯದಲ್ಲಿ ಸಣ್ಣಪುಟ್ಟ ತೊರೆಗಳನ್ನು,  ದಾಟಬೇಕಾಗುತ್ತಿತ್ತು. ಆ ಸಮಯದಲ್ಲಿ ಎರಡು ಶಿಶುಗಳು ಮರಣ ಹೊಂದಿದವು. ಈ ಸತ್ಯಾಗ್ರಹಿಗಳ ಒಂದು ಪೂರ್ಣದಿನದ ಆಹಾರವೆಂದರೆ ಒಂದೂವರೆ ಪೌಂಡ್ ಬ್ರೆಡ್ ಹಾಗು ಒಂದು ಔನ್ಸ್ ಸಕ್ಕರೆ.

ಮಹಾತ್ಮಾ ಗಾಂಧಿಯವರ ಈ ಸತ್ಯಾಗ್ರಹವನ್ನು ಈಗ ನಮ್ಮ ಶಾಸಕರು ನಡೆಸುತ್ತಿರುವ ಸತ್ಯಾ(?)ಗ್ರಹದೊಂದಿಗೆ ಹೋಲಿಸಿ ನೋಡಿರಿ. ಧರಣಿ ಕೂತ ನಮ್ಮ ಶಾಸಕರಿಗೆ ದಿನಕ್ಕೊಂದು ಬಗೆಯ ತಿನಿಸುಗಳ ಏರ್ಪಾಡಾಗುತ್ತಿವೆ. ಬೇಕಾದವರಿಗೆ ಬಾಡೂಟ ಸಹ ಲಭ್ಯ. ಇದರಲ್ಲಿ ತಪ್ಪೇನಿಲ್ಲ. ಯಾವುದೇ ನಿಷೇಧಿತ ಪದಾರ್ಥವನ್ನು ಅವರು ಸೇವಿಸಿಲ್ಲ. ಬಹುಶಃ ಗೋಮಾಂಸವನ್ನು ತಿಂದರೂ ತಪ್ಪಾಗಲಿಕ್ಕಿಲ್ಲ. ಶಾಸಕ ಶ್ರೀ ನಾಣಯ್ಯನವರಂತೂ ಗೋಹತ್ಯಾನಿಷೇಧ ಶಾಸನದ ವಿರೋಧಿಗಳೇ ಆಗಿದ್ದಾರೆ. ಈ ತರ್ಕವನ್ನು ಮುಂದುವರಿಸಿದರೆ, ‘ಪಾನಸೇವನೆ’ಯಲ್ಲಿಯೂ ತಪ್ಪಿಲ್ಲ. ಯಾಕೆಂದರೆ ಗುಜರಾತ ರಾಜ್ಯದಲ್ಲಿ ಇರುವಂತೆ ನಮ್ಮಲ್ಲಿ ಪಾನಪ್ರತಿಬಂಧವಿಲ್ಲ. ಕರ್ನಾಟಕವನ್ನು ಗುಜರಾತ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವೆ ಎಂದು ಹೇಳುವ ಮು.ಮಂ. ಯಡ್ಯೂರಪ್ಪನವರಿಗೂ ಸಹ ಪಾನಪ್ರತಿಬಂಧ ಬೇಕಾಗಿಲ್ಲ. ಹಾಗಿರುವದರಿಂದ ಈ ಧರಣಿಯಲ್ಲಿ ಮಾಂಸಸೇವನೆ ಹಾಗು ಮದ್ಯಪಾನಕ್ಕೆ ಅವಕಾಶವಿದ್ದರೆ ತಪ್ಪೇನಿಲ್ಲ. ಕ್ಯಾಬರೆ ನೃತ್ಯವೂ ಸಹ ಮಧ್ಯರಾತ್ರಿಯವರೆಗೆ ಶಾಸನಬದ್ಧವೇ ಆಗಿರುವದರಿಂದ ಅವಕ್ಕೂ ಸಹ ವಿಧಾನಸೌಧದಲ್ಲಿ ಆಸ್ಪದವೀಯಬಹುದು! (ಸಭಾಧ್ಯಕ್ಷರು ರೂಲಿಂಗ್ ಕೊಡಬಹುದು!)

ಇದಲ್ಲದೆ ಶಾಸಕರು ವಿಧಾನಸೌಧದಲ್ಲಿ / ಲೋಕಸಭಾಭವನದಲ್ಲಿ ಏನು ಮಾಡಿದರೂ ಸಹ ಅದನ್ನು ಪ್ರಶ್ನಿಸುವಂತಿಲ್ಲ ಎಂದು ನಮ್ಮ ಸರ್ವೋಚ್ಚ ನ್ಯಾಯಾಲಯವೇ ತೀರ್ಪು ಕೊಟ್ಟುಬಿಟ್ಟಿದೆ(----ಶಿಬು ಸೋರೆನ್ ಲಂಚ ಪ್ರಕರಣದಲ್ಲಿ). ಲಂಚವೇ ಆಗಲಿ, ಮಂಚವೇ ಆಗಲಿ ವಿಧಾನಸೌಧದ ಹೊರಗೆ ಜರುಗಿದರಷ್ಟೇ ಅಪರಾಧ(ಉದಾ: ಹರತಾಳ ಹಾಲಪ್ಪನವರ ಪ್ರಕರಣ.) ವಿಧಾನಸೌಧದ ಒಳಗೆ ಜರುಗಿದಾಗ ಇದು ಶಾಸಕರ privilegesನಲ್ಲಿ ಬರುವದರಿಂದ ಇದನ್ನು ಪ್ರಶ್ನಿಸುವಂತಿಲ್ಲ. 

ಹಾಗಿದ್ದರೆ ಶಾಸಕರು ಪ್ರಶ್ನಾತೀತರೆ? ಅವರ ನಡತೆಗೆ ಯಾವುದೇ ಮಾನದಂಡವಿಲ್ಲವೆ? ನಮ್ಮಲ್ಲಿ ಜಾರಿಯಲ್ಲಿರುವ ‘ಭಾರತದ ಸಂವಿಧಾನ’ದ ಪ್ರಕಾರ ವಿಧಾನಸೌಧದಲ್ಲಿ( ಅದರಂತೆ ಲೋಕಸಭಾ ಭವನದಲ್ಲಿ) ಅವರು ಪ್ರಶ್ನಾತೀತರು. ಆದರೆ ‘ನೈತಿಕ ಸಂವಿಧಾನ’ ಎನ್ನುವದು ಒಂದು ಇರುತ್ತದೆಯಲ್ಲವೆ? ನಮ್ಮ ಶಾಸಕರ ಧರಣಿ ಸತ್ಯಾಗ್ರಹವನ್ನು ಗಮನಿಸುತ್ತಿರುವ ಸಾರ್ವಜನಿಕರಿಗೆ ಇವರದು ಲಘು ವರ್ತನೆ ಮತ್ತು ಅಸಹ್ಯವರ್ತನೆ—obnoxious-- ಎನ್ನಿಸಲಿಕ್ಕಿಲ್ಲವೆ?

ಸಾರ್ವಜನಿಕ ಅಭಿಪ್ರಾಯಕ್ಕೆ ಹೆದರುವ ಶಾಸಕರಾದರೆ ತಮ್ಮ ವರ್ತನೆಗೆ ಒಂದು ಲಕ್ಷ್ಮಣರೇಖೆಯನ್ನು ಎಳೆದುಕೊಂಡಿರುತ್ತಾರೆ.  ‘ಸಾರ್ವಜನಿಕ ಕಣ್ಗಾವಲು’—public watch--- ಎನ್ನುವ ಮಾನದಂಡಕ್ಕೆ ಮರ್ಯಾದೆಯನ್ನು ಕೊಡುತ್ತಾರೆ. ಅಂಥವರು ಈಗೆಲ್ಲಿ ಸಿಗುತ್ತಾರೆ, ಹೇಳಿ.
ಮಹಾತ್ಮಾ ಗಾಂಧಿಯ ಕಾಲ ಈಗ ಮುಗಿದು ಹೋಗಿದೆ. ಇದೀಗ ‘ಮಜಾತ್ಮಾ ಗಾಂಧಿ’ಗಳ ಕಾಲ!

ಶಾಸಕರಿಗಾಗಿ ಒಂದು ನಗೆಹನಿ(?):
ಕೊಲ್ಲಾಪುರವು ಮರಾಠಾ ರಾಜ್ಯದ ರಾಜಧಾನಿಯಾಗಿತ್ತು. ಅಲ್ಲಿ ಶಿವಾಜಿ ಮಹಾರಾಜರ ಹಾಗು ಶಾಹೂ ಮಹಾರಾಜರ ಅನೇಕ ಪ್ರತಿಮೆಗಳಿವೆ. ಅವೆಲ್ಲ ಆಶ್ವಾರೂಢರಾಗಿ ಕೈಯಲ್ಲಿ ಖಡ್ಗ ಹಿಡಿದ ಪ್ರತಿಮೆಗಳು. ಗಾಂಧೀಜಿಯವರ ಪ್ರತಿಮೆ ಸಹ ಅಲ್ಲಿಯ ಒಂದು ಉದ್ಯಾನದಲ್ಲಿದೆ.

ಒಂದು ರಾತ್ರಿ, ಓರ್ವ ನಿರುದ್ಯೋಗಿ ತರುಣ ಆ ಉದ್ಯಾನವನದಲ್ಲಿ ಗಾಂಧೀಜಿಯ ಪ್ರತಿಮೆಯ ಕೆಳಗೆ ಚಿಂತಾಮಗ್ನನಾಗಿ ಕುಳಿತುಕೊಂಡಿದ್ದ. ಸರಿಯಾಗಿ ಮಧ್ಯರಾತ್ರಿಯ ಸಮಯದಲ್ಲಿ ಆ ತರುಣನ ತಲೆಯ ಮೇಲೆ ಟಪ್, ಟಪ್ ಎಂದು ಎರಡು ಹನಿಗಳು ಉದುರಿದವು. ಈ ಬೇಸಿಗೆಯಲ್ಲಿ ಎಂತಹ ಮಳೆ ಎಂದು ಆತ ಮುಖವೆತ್ತಿ ನೋಡಿದ. ಆಶ್ಚರ್ಯ ! ಗಾಂಧೀಜಿಯ ಕಣ್ಣುಗಳಿಂದ ಹನಿಗಳು ಉದುರುತ್ತಿವೆ ! ಆಘಾತಗೊಂಡ ಆತ ಕೇಳಿದ:
“ಬಾಪೂ, ಏಕೆ ಅಳುತ್ತಿದ್ದೀರಿ?”

ಪ್ರತಿಮೆ ನುಡಿಯಿತು: “ಮಗೂ, ಕೊಲ್ಲಾಪುರದಲ್ಲಿರುವ ಮರಾಠಾ ರಾಜರ ಪ್ರತಿಮೆಗಳನ್ನು ನೋಡು. ಎಲ್ಲರೂ ಕುದುರೆಯ ಮೇಲೆ ಕುಳಿತುಕೊಂಡಿದ್ದಾರೆ. ಇಷ್ಟು ವರುಷಗಳವರೆಗೆ ನಿಂತುಕೊಂಡಿದ್ದರಿಂದ ನನ್ನ ಕಾಲು ನೋಯತೊಡಗಿವೆ.  ನನಗೂ ಒಂದು ಕುದುರೆ ಇದ್ದರೆ, ನಾನೂ ಸಹ ಆರಾಮಾಗಿ ಕುಳಿತುಕೊಳ್ಳಬಹುದಾಗಿತ್ತು!”

ನಮ್ಮ ನಿರುದ್ಯೋಗಿ ತರುಣನ ಮನಸ್ಸು ಮಿಡಿಯಿತು. ತತ್‌ಕ್ಷಣವೇ ಹೇಳಿದ: “ಚಿಂತಿಸಬೇಡಿ, ಬಾಪೂ! ನಾಳೆಯೇ ನಿಮಗಾಗಿ ಒಂದು ಕುದುರೆಯ ವ್ಯವಸ್ಥೆ ಮಾಡುತ್ತೇನೆ.”

ಇಷ್ಟು ಹೇಳಿದ ಆ ತರುಣ ಮರುದಿನ ಬೆಳಿಗ್ಗೆ ಕೊಲ್ಲಾಪುರದ ಶಾಸಕರ ಮನೆಗೆ ಹೋಗಿ, ರಾತ್ರಿ ಜರುಗಿದ ಘಟನೆಯನ್ನು ಅವರಿಗೆ ವಿವರಿಸಿ, ಬಾಪೂಜಿಗೂ ಸಹ ಒಂದು ಕುದುರೆಯನ್ನು ಮಾಡಿಕೊಡಲು ವಿನಂತಿಸಿದ.
ಇಂತಹದನ್ನೆಲ್ಲ ನಂಬಲು ಶಾಸಕರೇನು ಹುಚ್ಚರೆ? ಆದರೆ ಈತ ತನ್ನ ಪಟ್ಟು ಬಿಡಲು ತಯಾರಿಲ್ಲ. “ನೀವೇ ಬೇಕಾದರೆ ಬಂದು ನೋಡಿರಿ”, ಎಂದು ಶಾಸಕರಿಗೆ ಒತ್ತಾಯ ಮಾಡಿದ. ಶಾಸಕರು ಸಹ ತಯಾರಾದರು.

ಆ ರಾತ್ರಿ ನಿರುದ್ಯೋಗಿ ತರುಣ ಹಾಗು ಶಾಸಕರು ಜೊತೆಯಾಗಿ ಉದ್ಯಾನವನಕ್ಕೆ ಹೋದರು. ಪ್ರತಿಮೆಯ ಬಳಿಗೆ ಬಂದ ತರುಣನು, “ಬಾಪೂಜಿ, ಶಾಸಕ ಮಹಾಶಯರನ್ನು ಕರೆದುಕೊಂಡು ಬಂದಿದ್ದೇನೆ” ಎಂದು ನುಡಿಯುತ್ತಿದ್ದಂತೆಯೇ, ಬಾಪೂಜಿಯ ಮೂರ್ತಿಯು ತನ್ನ ಕೈಯಲ್ಲಿದ್ದ ಕೋಲನ್ನು ಎತ್ತಿ ಆ ತರುಣನ ಮೇಲೆ ಬೀಸಿ ಉದ್ಗರಿಸಿತು:
“ಮೂರ್ಖಾ, ಕುದುರೆಯನ್ನು ತೆಗೆದುಕೊಂಡು ಬಾ ಎಂದು ನಿನಗೆ ಹೇಳಿದ್ದೆ ; ನೀನು ಕತ್ತೆಯನ್ನು ಕರೆದುಕೊಂಡು ಬಂದಿದ್ದೀಯಲ್ಲ!”