Showing posts with label ಸಾಹಿತ್ಯ/ಉಮೇಶ ದೇಸಾಯಿ. Show all posts
Showing posts with label ಸಾಹಿತ್ಯ/ಉಮೇಶ ದೇಸಾಯಿ. Show all posts

Monday, May 18, 2020

ಕನ್ನಡ ಸಾಹಿತ್ಯದಲ್ಲಿ ಆಧುನಿಕತೆ ; ಉಮೇಶ ದೇಸಾಯಿಯವರ ‘ಬಿಡುಗಡೆ’.

ಕನ್ನಡ ಸಾಹಿತ್ಯದಲ್ಲಿ ನವೋದಯ ಸಾಹಿತ್ಯ, ನವ್ಯ ಸಾಹಿತ್ಯ, ಬಂಡಾಯ ಸಾಹಿತ್ಯ, ನವ್ಯೋತ್ತರ ಸಾಹಿತ್ಯ, ಅಂತರ್ಜಾಲ ಸಾಹಿತ್ಯ ಮೊದಲಾದ ಘಟ್ಟಗಳನ್ನು ಗುರುತಿಸಬಹುದು. ಈ ಎಲ್ಲ ಸಾಹಿತ್ಯಘಟ್ಟಗಳಲ್ಲಿ ಅನೇಕ ಉತ್ತಮವಾದ ಕೃತಿಗಳನ್ನು ನಮ್ಮ ಸಾಹಿತಿಗಳು ರಚಿಸಿದ್ದಾರೆ. ಇವರ ಬಗೆಗೆ ನಮಗೆ ಅಭಿಮಾನವಿದೆ. ಆದರೆ ಈ ಎಲ್ಲ ಪ್ರಕಾರಗಳಲ್ಲಿ ಆಧುನಿಕ ಎನ್ನುವ ಸಾಹಿತ್ಯವೆಂದು ಪರಿಗಣಿಸಬಹುದಾದ ರಚನೆಗಳು ಬೆರಳೆಣಿಕೆಯಷ್ಟೇ ಇರುವುದು ಕನ್ನಡ ಸಾಹಿತ್ಯದ ದೊಡ್ಡ ಕೊರತೆಯಾಗಿದೆ.

ಈ ಮಾತನ್ನು ಅನೇಕರು ವಿರೋಧಿಸಬಹುದು. ‘ನವೋದಯದವರನ್ನು ಬಿಡಿ, ನವ್ಯ ಸಾಹಿತಿಗಳು ಆಧುನಿಕರಲ್ಲವೆಎನ್ನುವ ತರ್ಕವನ್ನು ಮುಂದೆ ಮಾಡಬಹುದು. ಗೆಳೆಯರೆ, ಕನ್ನಡದ ನವ್ಯ ಸಾಹಿತಿಗಳು (----ಅಡಿಗರ ಹೊರತಾಗಿ; ಅಡಿಗರು ನವ್ಯಕಾವ್ಯದ ಶ್ರೇಷ್ಠ ಕವಿಗಳು--) ಕೇವಲ ಹೊಸದೊಂದು formatದಲ್ಲಿ ಸಾಹಿತ್ಯರಚನೆಯನ್ನು ಮಾಡಿದರೇ ಹೊರತು, ಕನ್ನಡಕ್ಕೆ ಆಧುನಿಕ ಮನೋಭಾವವನ್ನು ತರಲಿಲ್ಲ. ಪಾಶ್ಚಾತ್ಯ ಸಾಹಿತ್ಯದ ಕಾಫ್ಕಾ, ಸಾರ್ತ್ರೆ, ಇಲಿಯಟ್ ಇವರನ್ನು ಅನುಕರಿಸಿದರೆ ಹೊರತು, ಸ್ವತಃ ಆಧುನಿಕರಾಗಲಿಲ್ಲ.

ಆಧುನಿಕ ಮನೋಭಾವ ಎಂದರೆ ಏನು? ಈ ಮಾತನ್ನು ಅರಿಯಲು, ನಮ್ಮ ನೆರೆಯದೇ ಆದ ಮರಾಠೀ ಸಾಹಿತ್ಯವನ್ನು ಓದಿದರೆ ಸಾಕು. ಸುಮಾರು ಐವತ್ತು, ಅರುವತ್ತು ವರ್ಷಗಳಷ್ಟು ಹಿಂದೆಯೇ ನಾನು (ಕನ್ನಡ ಅನುವಾದದಲ್ಲಿ)  ಓದಿದ ಮರಾಠೀ ಸಾಹಿತ್ಯವು  ನಮ್ಮ ಈಗಿನ ಕನ್ನಡ ಸಾಹಿತ್ಯಕ್ಕಿಂತ ಹೆಚ್ಚು ಆಧುನಿಕವಾಗಿದೆ. ಮುಂಬಯಿ ಹಾಗು ಪುಣೆಯಲ್ಲಿ ಬಂದು ನೆಲೆಸಿದ ವಿವಿಧ ಹಾಗು ನಿರ್ವಾಸಿತ ಸಮುದಾಯಗಳ ಭಿನ್ನ ಭಿನ್ನ ಆಚಾರವಿಚಾರಗಳ ಸಂಗಮವೇ ಈ ಆಧುನಿಕತೆಗೆ ಮುಖ್ಯ ಕಾರಣವಾಗಿದೆ. ಈ ಮಹಾನಗರಗಳಲ್ಲಿ ಬಂದು ನೆಲೆಸಿದ ಪಾರ್ಸೀ, ಮಾರವಾಡಿ, ಸಿಂಧಿ, ಪಂಜಾಬಿ, ಆಂಗ್ಲೋ ಇಂಡಿಯನ್ ಇತ್ಯಾದಿ ಸಮುದಾಯಗಳು ಮಧ್ಯಮ ವರ್ಗದ ನಗರವಾಸಿ ಮರಾಠೀ ಜನ  ಸಮುದಾಯವನ್ನು ಆಧುನಿಕತೆಯ ಪ್ರವಾಹದಲ್ಲಿ  ತೇಲಿಸಿ, ಮರಾಠಿ ಲೇಖಕರಲ್ಲಿ ಆಧುನಿಕತೆಯನ್ನು ತಂದರು. ಮುಂಬಯಿಯಲ್ಲಿ ನೆಲೆಸಿದ ಕನ್ನಡ ಸಾಹಿತಿಗಳೂ ಸಹ ಈ ಪ್ರಭಾವಕ್ಕೆ ಒಳಗಾದದ್ದನ್ನು ಗುರುತಿಸಬಹುದು. (ಉದಾಹರಣೆಗೆ ವ್ಯಾಸರಾಯ ಬಲ್ಲಾಳ.) ಇಂತಹ ಒಂದು ಆಧುನಿಕ ಪ್ರಭಾವವು ಬೆಂಗಳೂರು, ಮೈಸೂರು ಅಥವಾ ಧಾರವಾಡದ ಸಾಹಿತಿಗಳ ಮೇಲೆ ಆಗಲಿಲ್ಲ!   

ಕನ್ನಡದಲ್ಲಿ ಆಧುನಿಕ ಸಾಹಿತ್ಯವಿದೆಯೆ, ಇದ್ದರೆ ಎಷ್ಟರ ಮಟ್ಟಿಗೆ ಎಂದು ತಿಳಿಯಲು ಪ್ರಯತ್ನಿಸುವ ಮೊದಲು, ಆಧುನಿಕ ಸಾಹಿತ್ಯ ಎಂದರೆ ಏನು ಎನ್ನುವುದನ್ನು ಪರೀಕ್ಷಿಸೋಣ. ತಮ್ಮ ಸುತ್ತಮುತ್ತಲಿನ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆಗೆ ಒಗ್ಗಿಕೊಂಡಂತಹ ಓದುಗರಿಗೆ ಒಂದು ನವೀನ ವಾತಾವರಣವನ್ನು ಹಾಗು ನವೀನ ವಿಚಾರಗಳನ್ನು ಪರಿಚಯಿಸುವ ಸಾಹಿತ್ಯಕ್ಕೆ ಆಧುನಿಕ ಸಾಹಿತ್ಯ ಎಂದು ಕರೆಯಬಹುದು. ತ್ರಿವೇಣಿಯವರ ಕಾದಂಬರಿಗಳಲ್ಲಿ ಹಾಗು ಸಣ್ಣ ಕತೆಗಳಲ್ಲಿ ನಾವು ಆಧುನಿಕ ಯುವ ಜಗತ್ತನ್ನು ಹಾಗು ಆಧುನಿಕ ವಿಚಾರಗಳನ್ನು ನೋಡುತ್ತೇವೆ. She wrote about free romance and an emancipated woman in a tradition-bound society. ಆದುದರಿಂದ ತ್ರಿವೇಣಿಯವರ ಸಾಹಿತ್ಯವನ್ನು ನಾವು ಆಧುನಿಕ ಸಾಹಿತ್ಯ ಎನ್ನಬಹುದು. ಆದರೂ ಸಹ, ಈ ಸಾಹಿತ್ಯವು ಪುಟ್ಟ ಕೌಟಂಬಿಕ ಪರಿಧಿಯಲ್ಲಿದೆ ಎನ್ನುವುದು ತ್ರಿವೇಣಿಯವರ ಸಾಹಿತ್ಯದ ಪರಿಮಿತಿಯಾಗಿದೆ.

ಕನ್ನಡದಲ್ಲಿ ಆಧುನಿಕ ಸಾಹಿತ್ಯದ ಗಾಳಿ ಬೀಸಿದ್ದು ಶಾಂತಿನಾಥ ದೇಸಾಯಿಯವರಿಂದ. ಅವರಮುಕ್ತಿಕಾದಂಬರಿಯಲ್ಲಿ ಇರುವ ಪಾತ್ರಗಳೆಲ್ಲವೂ ಸ್ವತಂತ್ರ ವಿಚಾರ, ಸ್ವತಂತ್ರ ವ್ಯಕ್ತಿತ್ವ ಹಾಗು ಸ್ವತಂತ್ರ ಅನ್ವೇಷಣೆಯ ಕಾ˘ಲೇಜು ವಿದ್ಯಾರ್ಥಿಗಳು. ಈ ಕಾದಂಬರಿಯ ನಾಯಕನಾದರೋ ತೊಳಲಾಟದಲ್ಲಿ ಸಿಲುಕಿದ ಹುಡುಗನೇ. ಧಾರವಾಡವನ್ನು ಬಿಟ್ಟು, ನೌಕರಿಗಾಗಿ ಮುಂಬಯಿಗೆ ಹೋದ ಮೇಲೆ, ಅಲ್ಲಿಯ ಆಧುನಿಕ ವಾತಾವರಣದಲ್ಲಿ ಈತನು ತನ್ನ ತೊಳಲಾಟಗಳಿಂದಮುಕ್ತಿಯನ್ನು ಪಡೆಯುತ್ತಾನೆ. ತನ್ನ ಅನ್ವೇಷಣೆಯ ಗುರಿಯನ್ನು ಅ-ಸಾಂಪ್ರದಾಯಕ ರೀತಿಯಲ್ಲಿ ಮುಟ್ಟುತ್ತಾನೆ!

ಶಾಂತಿನಾಥ ದೇಸಾಯಿಯವರ ಮತ್ತೊಂದು ಕಥೆಯ ನಾಯಕಿ ಮಹಾರಾಷ್ಟ್ರದ ಸಂಪ್ರದಾಯಸ್ಥ ಮಹಿಳೆಯಾಗಿದ್ದಾಳೆ. ಮದುವೆಯ ವಯಸ್ಸು ಮುಗಿಯುವ ಹೊಸ್ತಿಲಲ್ಲಿ ಇವಳಿದ್ದಾಳೆ. ಮರಾಠಿ ಶಾಲೆಯೊಂದರ ಪ್ರಾಧ್ಯಾಪಕಿ ಈಕೆ. ಯಾವುದೋ ಒಂದು ಸರಕಾರೀ ಸ್ಕೀಮಿನಲ್ಲಿ ಇವಳೀಗ ಇಂಗ್ಲಂಡಿಗೆ ಹೊರಟಿದ್ದಾಳೆ. ನಡುವಯಸ್ಸಿನ ಯುರೋಪಿಯನ್ ವ್ಯಕ್ತಿಯೊಬ್ಬನು ಹಡಗಿನ ಪ್ರವಾಸದ ವೇಳೆಗೆ ಇವಳಲ್ಲಿ ಆಸಕ್ತಿಯನ್ನು ತೋರಿಸುತ್ತಾನೆ. ಇವಳು ಆ ಹೊಸ ಸಂಸ್ಕೃತಿಗೆ ಒಗ್ಗಿಕೊಳ್ಳಲಾರಳು. ಆದರೆ ಹೊಸ ಬಗೆಯ ಸ್ವಚ್ಛಂದ ನಾಗರಿಕತೆ  ಇವಳನ್ನು ಸಾವಕಾಶವಾಗಿ ಆಕರ್ಷಿಸುತ್ತದೆ; ಇವಳಲ್ಲಿ ಹೊಸ ವಿಚಾರಗಳನ್ನು ಬಿತ್ತುತ್ತದೆ. ಇಂಗ್ಲಂಡದ ನೆಲದಲ್ಲಿ ಕಾಲಿಡುವ ಹೊತ್ತಿಗೆ, ಇವಳು ಆಧುನಿಕ ಜಗತ್ತನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ಧಳಾಗಿದ್ದಾಳೆ.  (ಈ ಕಥೆಯ ಹೆಸರುಕ್ಷಿತಿಜಎಂದು ಇರಬಹುದು.)

ಇದೀಗ ಮತ್ತೊಬ್ಬ ದೇಸಾಯಿಯವರ ಬಗೆಗೆ ಗಮನ ಹರಿಸೋಣ. ಇವರು ಉಮೇಶ ದೇಸಾಯಿ. ನಮ್ಮೆಲ್ಲ ಸಾಹಿತಿಗಳಂತೆ  ಉಮೇಶ ದೇಸಾಯಿಯವರೂ ಸಹ ಬದುಕಿನ ಅನ್ವೇಷಕರೇ. ಆದರೆ ಇವರು ಆಧುನಿಕ ದೃಷ್ಟಿಕೋನದ ಅನ್ವೇಷಕರು. ಹೀಗಾಗಿ ಇವರ ಅನ್ವೇಷಣೆಯ ಅಳತೆಗೋಲುಗಳು ಸಾಂಪ್ರದಾಯಿಕ ಅಳತೆಗೋಲುಗಳಲ್ಲ. ಇವರ ಮೊದಲ ಕಾದಂಬರಿಭಿನ್ನದಲ್ಲಿ ಇಬ್ಬರು ಸಲಿಂಗಕಾಮಿ ಹುಡುಗಿಯರ ವಿಶ್ಲೇಷಣೆಯನ್ನು ಆಧುನಿಕ ಮನೋವಿಜ್ಞಾನದ ಆಧಾರದಲ್ಲಿ  ಮಾಡಿದ್ದಾರೆ. ಎರಡನೆಯ ಕಾದಂಬರಿಅನಂತಯಾನದ ನಾಯಕನು ಹಳೆಯ ತಲೆಮಾರಿನ ವ್ಯಕ್ತಿಯಾಗಿದ್ದರೂ ಸಹ ಆತನ ಪರಿವರ್ತನೆಯನ್ನು ಗಮನಿಸುವ ಕಣ್ಣುಗಳು ಆಧುನಿಕ  ಕಣ್ಣುಗಳೇ.   

ಉಮೇಶ ದೇಸಾಯಿಯವರ ಇತ್ತೀಚಿನ ಕಥೆಬಿಡುಗಡೆಯು ಅಂತರ್ಜಾಲ ಮ್ಯಾಗಝಿನ್ಕೆಂಡಸಂಪಿಗೆಯಲ್ಲಿ ಪ್ರಕಟವಾಗಿದೆ.

ಈ ಕಥೆಯ ನಾಯಕಿ ಓರ್ವ ಚಲನಚಿತ್ರನಾಯಕಿ. ರಾಜಕೀಯದೊಡನೆ ಇವಳಿಗೆ ಸಂಬಂಧ ಬಂದಿದೆ. ಇವಳ ವಿಶ್ವಾಸವನ್ನು ಸಂಪಾದಿಸಿದ ಪತ್ರಕರ್ತೆಯೋರ್ವಳು ಇವಳ ಮಗಳು ಸಲಿಂಗಕಾಮಿಯಾಗಿರುವ ಸಂಗತಿಯನ್ನು ಇವಳಿಂದಲೇ ತಿಳಿದುಕೊಂಡು, ಅದನ್ನೆಲ್ಲ ಟೇಪ್ ರಿಕಾ˘ರ್ಡರಿನಲ್ಲಿ ದಾಖಲಿಸಿಕೊಂಡು, ಭ್ರಷ್ಟ ದುರ್ವ್ಯವಹಾರಕ್ಕೆ ಇಳಿದಿದ್ದಾಳೆ. ನಮ್ಮ ನಾಯಕಿಯ ರಾಜಕೀಯ ಪಕ್ಷವು ಪೇಚಿನಲ್ಲಿ ಸಿಲುಕಿದೆ. ಇದೆಲ್ಲವನ್ನು ಸಾರಾಸಗಟಾಗಿ ನಿರಾಕರಿಸಲು ಇವಳಿಗೆ ಆದೇಶಿಸುತ್ತದೆ. ನಮ್ಮ ನಾಯಕಿಯು ತೆಗೆದುಕೊಳ್ಳುವ ನಿರ್ಣಯವನ್ನು ಹಾಗು ಅವಳು ಅದನ್ನು ಸಾದರಪಡಿಸುವ ರೀತಿಯನ್ನು ನಾನೇ ಇಲ್ಲಿ ಹೇಳಿಬಿಡುವುದು ಸರಿಯಾಗಲಾರದು. ಕತೆಯನ್ನು ಓದಿಯೇ ಅದನ್ನು ತಿಳಿದುಕೊಳ್ಳಬೇಕು. ಆಧುನಿಕ ಮನೋಭಾವದ ಮಹಿಳೆ ಮಾತ್ರ ಇಂತಹ ನಿರ್ಣಯವನ್ನು ತೆಗೆದುಕೊಳ್ಳಬಲ್ಲಳು ಎಂದಷ್ಟೇ ಹೇಳಬಯಸುವೆ.

ಚಲನಚಿತ್ರ ನಾಯಕಿಯರ ಬಗೆಗೆ ಕನ್ನಡದಲ್ಲಿ ಈಗಾಗಲೇ ಎರಡು ಕಾದಂಬರಿಗಳು ಬಂದಿವೆ. ವ್ಹಿ.ಎಮ್. ಇನಾಮದಾರ ಎನ್ನುವ ಲೇಖಕರು ಸುಮಾರು ೬೦ ವರ್ಷಗಳಷ್ಟು ಹಿಂದೆಯೇಮೋಹಿನಿಎನ್ನುವ ಕಾದಂಬರಿಯನ್ನು ಬರೆದಿದ್ದರು. ಮಾವಿನಕೆರೆ ರಂಗನಾಥನ್ ಎನ್ನುವ ಲೇಖಕರಜಲತರಂಗಎನ್ನುವ ಕಾದಂಬರಿಯನ್ನು, ‘ತರಂಗವಾರಪತ್ರಿಕೆಯು ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆಯೇ ಧಾರಾವಾಹಿಯಾಗಿ ಪ್ರಕಟಿಸಿತ್ತು. ಈ ಕಾದಂಬರಿಗಳಿಗೂ, ಉಮೇಶ ದೇಸಾಯಿಯವರಬಿಡುಗಡೆಗೂ ಇರುವ ಭಿನ್ನತೆ ಏನು? ಮೊದಲಿನ ಎರಡೂ ಕಾದಂಬರಿಗಳ ನಿರೂಪಣೆ ಸಾಂಪ್ರದಾಯಿಕ ಶೈಲಿಯಲ್ಲಿದೆ. ಅಂದರೆ, ಕಾದಂಬರಿಗಳಲ್ಲಿ ಬರುವ ಪಾತ್ರಗಳ ಚಿತ್ರಣವೇ ಇವೆರಡರಲ್ಲೂ ಮುಖ್ಯವಾಗಿದೆ.

ಆದರೆಬಿಡುಗಡೆಕಥೆಯಲ್ಲಿ, ಆಧುನಿಕ ವಾತಾವರಣದಲ್ಲಿರುವ ಪಾತ್ರಗಳಿಗೆ ಇರುವ ಆಧುನಿಕ ವಿಚಾರಗಳ ಪ್ರಸ್ತಾವನೆ ಮುಖ್ಯವಾಗಿದೆ, ಅದೂ ಸಹ ಆಧುನಿಕ  ನಿರೂಪಣಾ ಶೈಲಿಯಲ್ಲಿ.

ಕನ್ನಡದಲ್ಲಿ ನನಗೆ ಗೊತ್ತಿರುವ ಆಧುನಿಕ ಕಥಾಲೇಖಕಿಯರಾದ ಸಿಂಧು ರಾವ್, ತೇಜಸ್ವಿನಿ ಹೆಗಡೆ, ಶ್ರೀದೇವಿ ಕಳಸದ, ಜಯಶ್ರೀ ದೇಶಪಾಂಡೆ, ಸ್ವರ್ಣಾ ಎನ್.ಪಿ. ಇವರೂ ಸಹ ಆಧುನಿಕ ಕಥಾನಕಗಳು ಇರುವ ಕಥೆಗಳನ್ನು ಬರೆದಿದ್ದಾರೆ. ಇವರೆಲ್ಲರೂ ಕನ್ನಡದ ಶ್ರೇಷ್ಠ ಲೇಖಕಿಯರೇ. ಆದರೆ ಆಧುನಿಕತೆಯೊಂದೇ ಇವರ ಕಥೆಗಳ ಜೀವಾಳವಲ್ಲ. ವೈಯಕ್ತಿಕ ಮಾನಸಿಕ ಚಿತ್ರಣವೂ ಸಹ ಈ ಲೇಖಕಿಯರಿಗೆ ಮುಖ್ಯವಾಗಿದೆ. ಹೀಗಾಗಿ ಇವರ ಸಾಹಿತ್ಯವು ಕನ್ನಡಸಾಹಿತ್ಯದ ಸುದೀರ್ಘ ಪರಂಪರೆಯ ಮುಂದುವರಿಕೆಯಾಗಿದೆ.

ನಮ್ಮ ಕಥನ ಪರಂಪರೆಗೆ ಹೊರತಾದ ರೀತಿಯಲ್ಲಿರುವುದೇ ಉಮೇಶ ದೇಸಾಯಿಯವರ ಸಮಗ್ರ ಕಥಾಸಾಹಿತ್ಯದ ವೈಶಿಷ್ಟ್ಯವಾಗಿದೆ. ಇವರ ಪಾತ್ರಗಳು ವೈಯಕ್ತಿಕ ಆಧುನಿಕತೆಗಿಂತ ಹೆಚ್ಚಾಗಿ ಸಾಮಾಜಿಕ ಆಧುನಿಕತೆಯನ್ನು ಬಿಂಬಿಸುತ್ತವೆ.

Saturday, April 21, 2018

ಉಮೇಶ ದೇಸಾಯಿಯವರ ಕಾದಂಬರಿ.......‘ಭಿನ್ನ’



ಕಾದಂಬರಿ ಎನ್ನುವ ಸಾಹಿತ್ಯಪ್ರಕಾರವು ಕನ್ನಡದಲ್ಲಿ ಪ್ರಾರಂಭವಾಗಿ ಒಂದು ಶತಮಾನವೇ ದಾಟಿ ಹೋಗಿರಬಹುದು. ಐತಿಹಾಸಿಕ ಹಾಗು ಸಾಮಾಜಿಕ ಕಾದಂಬರಿಗಳ ಅನುವಾದದಿಂದ ಪ್ರಾರಂಭವಾದ ಕನ್ನಡ ಕಾದಂಬರಿ ಸಾಹಿತ್ಯವು, ಆಬಳಿಕ ಕೌಟಂಬಿಕ ಹಾಗು ಸಾಮಾಜಿಕ ಕಾದಂಬರಿಗಳನ್ನು ಸಮೃದ್ಧವಾಗಿ ನೀಡಿತು. ಅನೇಕ ಓದುಗರು ಭಾವಿಸುವಂತೆ, ಕನ್ನಡದ ಮೊದಲ ನವ್ಯ ಕಾದಂಬರಿ ಎಂದು ಶಾಂತಿನಾಥ ದೇಸಾಯಿಯವರು ಬರೆದಮುಕ್ತಿಯನ್ನು ಹೆಸರಿಸಬಹುದು. ಅದರಂತೆ, ತ್ರಿವೇಣಿಯವರ ಕಾದಂಬರಿಗಳನ್ನು ಮೊದಲ ಸ್ತ್ರೀಪ್ರಧಾನ ಹಾಗು ಮನೋವೈಜ್ಞಾನಿಕ ಕಾದಂಬರಿಗಳು ಎಂದೂ ಕರೆಯಬಹುದು. ಮತ್ತೋರ್ವ ಪ್ರಮುಖ ಕಾದಂಬರಿಕಾರರಾದ ಬಸವರಾಜ ಕಟ್ಟೀಮನಿಯವರ ಕಾದಂಬರಿಗಳನ್ನು ಕನ್ನಡದ ಮೊದಲ thematic ಕಾದಂಬರಿಗಳು ಎಂದು ಗುರುತಿಸುವುದು ಅವಶ್ಯವಿದೆ. ಆದರೆ ನಮ್ಮ ವಿಮರ್ಶಕರ ಕಣ್ತಪ್ಪಿನಿಂದಲೋ, ಉದಾಸೀನತೆಯಿಂದಲೋ ಕಟ್ಟೀಮನಿಯವರಿಗೆ ಲ್ಲಬೇಕಾದ ಗೌರವವು ಅವರಿಗೆ ದೊರೆತಿಲ್ಲ.

ಸಲಿಂಗಕಾಮದ ಭೂಮಿಕೆಯನ್ನು ಒಳಗೊಂಡ, ಉಮೇಶ ದೇಸಾಯಿಯವರು ಬರೆದ ಕಿರುಕಾದಂಬರಿಭಿನ್ನವು ಮೇಲಿನ ಎಲ್ಲ ವರ್ಗೀಕರಣಗಳನ್ನು ಒಳಗೊಂಡ ಒಂದು ಅದ್ಭುತ, ಆಧುನಿಕ ಕಾದಂಬರಿಯಾಗಿದೆ. ಹಾಗಿದ್ದರೂ ಸಹ ಕಾದಂಬರಿಯು ಎಲ್ಲ ವರ್ಗಗಳ ಕಾದಂಬರಿಗಳಿಗಿಂತ ಭಿನ್ನವಾಗಿಯೂ ಇದೆ.  ಅದು ಹೀಗೆ:

ಸಲಿಂಗಕಾಮಿಗಳ ಮನೋಸ್ಥಿತಿ, ಮನೋವೇದನೆ ಹಾಗು ಸಾಮಾಜಿಕ ಬವಣೆಗಳನ್ನು ತೋರಿಸುವ ಚಲನಚಿತ್ರ (ಉದಾ: ಅಲೀಘರ), ಹಾಗು ಕಥೆಗಳು (ಉದಾ: ವಸುಧೇಂದ್ರರ ಕಥೆಗಳು) ಬಂದಿವೆ. ಆದರೆ ಉಮೇಶ ದೇಸಾಯಿಯವರಭಿನ್ನಕಾದಂಬರಿಯು ಮೂಲತಃ ಇವೆಲ್ಲವುಗಳಿಗಿಂತ ಮೂಲವಸ್ತುವಿನಲ್ಲಿ ಭಿನ್ನವಾದ ಕೃತಿಯಾಗಿದೆ. 

ಸಲಿಂಗಕಾಮವು ಸಲಿಂಗಕಾಮಿಯಲ್ಲಿ ಸಹಜಭಾವವಾಗಿ ಇರುತ್ತದೆ, ಅಂದರೆ ಓರ್ವ ಗಂಡಸಿನಲ್ಲಿ ಹೆಣ್-ಭಾವವಾಗಿ ಹಾಗು ಓರ್ವ ಹೆಣ್ಣಿನಲ್ಲಿ ಪುರುಷಭಾವವಾಗಿ ಹುಟ್ಟಿನಲ್ಲಿಯೇ ಇರುತ್ತದೆ ಎನ್ನುವ ಅಭಿಪ್ರಾಯವನ್ನು ಈವರೆಗಿನ ಕೃತಿಗಳು ಹೇಳುತ್ತಿವೆ. ಆದರೆ ದೇಸಾಯಿಯವರಭಿನ್ನವು ಅಭಿಪ್ರಾಯಕ್ಕಿಂತ ಭಿನ್ನವಾದ ಮತ್ತೊಂದು ಆಯಾಮವನ್ನು ತೋರಿಸುತ್ತಿದೆ. ಓರ್ವ ವ್ಯಕ್ತಿಯ ಕೌಟಂಬಿಕ ಅಥವಾ ಸಾಮಾಜಿಕ ಪರಿಸರವು ವ್ಯಕ್ತಿಯನ್ನು ಸಲಿಂಗಕಾಮಿಯನ್ನಾಗಿ ಪರಿವರ್ತಿಸಬಲ್ಲದು ಎನ್ನುವ ವಾಸ್ತವತೆಯನ್ನು ಕೃತಿಯಲ್ಲಿ ಪ್ರತಿಪಾದಿಸಲಾಗಿದೆ. ಪರಿಸ್ಥಿತಿಯು ಮೂರು ತರಹದ ಸಂದರ್ಭಗಳನ್ನು ಆಧರಿಸಿರಬಹುದು:
() ಕೌಟಂಬಿಕ
() ಸಾಮಾಜಿಕ
() ಮನೋವೈಜ್ಞಾನಿಕ

ದೇಸಾಯಿಯವರಭಿನ್ನದಲ್ಲಿ ಮೂರೂ ಸ್ಥಿತಿಗಳ ವಿಶ್ಲೇಷಣೆಯಿದೆ. ದೇಸಾಯಿಯವರು ಸಲಿಂಗಕಾಮದ ಬಗೆಗೆ ಒಂದು ಪ್ರಬುದ್ಧ ಪ್ರಬಂಧವನ್ನೇ ಬರೆಯಬಹುದಾಗಿತ್ತು. ಆದರೆ ಅವರು ಕಾದಂಬರಿಯ ಮಾಧ್ಯಮವನ್ನು ಅವಲಂಬಿಸಿದ್ದರಿಂದ ಕನ್ನಡ ಓದುಗರಿಗೆ ಒಂದು ಅತ್ಯುತ್ತಮ ಸಾಹಿತ್ಯಕೃತಿ ದೊರೆತಿದೆ!

ಸಂದರ್ಭಗಳನ್ನು ಚಿತ್ರಿಸಲು ದೇಸಾಯಿಯವರು ಮುಖ್ಯವಾಗಿ ಮೂರು ಪಾತ್ರಗಳನ್ನು ಬಳಸಿದ್ದಾರೆ: ಸುಮತಿ, ರಜನಿ ಹಾಗು ಮೋನಿಕಾ. ಮೂರು ಮುಖ್ಯ ಪಾತ್ರಗಳ ಜೊತೆಗೆ ಮೂರು ಉಪಪಾತ್ರಗಳಿವೆ: ಸುಗಂಧಿ ಚೌಹಾಣ, ಕಿಟ್ಟಾ ಮಾವುಶಿ ಹಾಗು ನ್ಯಾನ್ಸಿ.

ಕೌಟಂಬಿಕ ಸಂದರ್ಭದಲ್ಲಿ, ಅತೃಪ್ತಕಾಮನೆಯ ಹಿರಿಯಳಿಗೆ ಬಲಿಯಾಗುವ ಕಿರಿಯ ಹುಡುಗಿಯ ಚಿತ್ರಣವಿದೆ. ತನ್ನ ತಂದೆಯ ಅತಿ ಕಾಮುಕತೆಯಿಂದಾಗಿ ಆ ಹುಡುಗಿಗೆ ಗಂಡಸರ ಬಗೆಗೆ ಹುಟ್ಟುವ ಅಸಹ್ಯ; ಪುರುಷನಿಗೆ ತೆರೆದುಕೊಳ್ಳಲು ಅವಳಿಗೆ ಸಾಧ್ಯವಾಗದಿರುವುದು; ತನ್ನ ದೇಹಕ್ಕೆ ತಣಿವು ಕೊಡಲು ಅವಳು ಮತ್ತೊಬ್ಬ ಗೆಳತಿಯನ್ನು ಆಶ್ರಯಿಸುವುದು ಇವುಗಳ ವರ್ಣನೆಯಿದೆ. ಇವೆಲ್ಲವುಗಳಿಗೆ ದೇಸಾಯಿಯವರು ಸಮರ್ಪಕವಾದ ಮನೋವೈಜ್ಞಾನಿಕ ಆಧಾರಗಳನ್ನು ಅವಲಂಬಿಸಿದ್ದಾರೆ.

ಸಾಮಾಜಿಕ ಸಂದರ್ಭದಲ್ಲಿಯೂ ಸಹ, ಓರ್ವ ಶಾಲಾಬಾಲಕಿಯು  ಪುಂಡ ಹುಡುಗರಿಂದ ತನ್ನನ್ನು ರಕ್ಷಿಸಿಕೊಳ್ಳಲು ಓರ್ವ ಬಲಿಷ್ಠ, ಧೈರ್ಯಶಾಲಿ ಹುಡುಗಿಯ ನೆರವನ್ನು ಪಡೆದು, ಅವಳ ಸಲಿಂಗಕಾಮಿ ಪ್ರವೃತ್ತಿಗೆ ತಾತ್ಕಾಲಿಕವಾಗಿಯಾದರೂ ಬಲಿಯಾಗುವಂತಹ ಸನ್ನಿವೇಶವಿದೆ. ಇದರಂತೆ ಮತ್ತೋರ್ವ ಹುಡುಗಿಯು ಕನ್ಯಾಶ್ರಮದಲ್ಲಿ ಆಶ್ರಯ ಪಡೆದು, ಅಲ್ಲಿಯ ಕೆಲವು ಸನ್ಯಾಸಿನಿಯರಿಂದ ಸಲಿಂಗರತಿಗೆ ಅನಿವಾರ್ಯವಾಗಿ ಒಳಗಾಗಬೇಕಾಗುವ ಚಿತ್ರವಿದೆ.

ಎಲ್ಲ ಸನ್ನಿವೇಶಗಳ ಚಿತ್ರಣದ ಮೂಲಕ ದೇಸಾಯಿಯವರು ಒಂದು ಮಾತನ್ನು ಸ್ಪಷ್ಟಪಡಿಸುತ್ತಿದ್ದಾರೆ. ಸಲಿಂಗಕಾಮವು ಅನೇಕ ಸಂದರ್ಭಗಳಲ್ಲಿ ಪರಿಸ್ಥಿತಿಯ ಒತ್ತಡದಲ್ಲಿ ರೂಪಿತವಾಗಿರಬಹುದು. ಆದುದರಿಂದ ಸಲಿಂಗಕಾಮಭಾವವು  ಯಾವುದೇ ವ್ಯಕ್ತಿಯಲ್ಲಿ ಸಹಜಭಾವವಾಗಿ ಇರುತ್ತದೆ ಎಂದು ಹೇಳುವದು ಸರಿಯಾಗಲಿಕ್ಕಿಲ್ಲ. ಪ್ರಸಿದ್ಧ ಮನೋವಿಜ್ಞಾನಿ ಫ್ರಾಯ್ಡ್ ಹೇಳುವ ಪ್ರಕಾರ ಚಿಕ್ಕ ಮಕ್ಕಳಲ್ಲಿಅಂಗಸುಖಎನ್ನುವ ಭಾವವೊಂದಿರುತ್ತದೆ. ವಯೋಪ್ರಬುದ್ಧತೆಯಲ್ಲಿ ಅಂಗಸುಖ ಭಾವವು ಪ್ರತಿಲಿಂಗಕಾಮನೆಯಾಗಿ ಸ್ಥಿರವಾಗಿ ನಿಲ್ಲಬೇಕು. ಆದರೆ ಕೌಟಂಬಿಕ, ಸಾಮಾಜಿಕ ಅಥವಾ ಮನೋವೈಜ್ಞಾನಿಕ ಕಾರಣಗಳಿದ್ದಾಗ, ಇದು ಸಲಿಂಗಕಾಮನೆಯಾಗಿ ಬದಲಾಗಬಹುದು.

ವಿದೇಶಗಳಲ್ಲಿ ಸಲಿಂಗಕಾಮನೆಗೆ ವೈಜ್ಞಾನಿಕ ಚಿಕಿತ್ಸೆಯನ್ನು ಕೊಡುವಂತಹ ಚಿಕಿತ್ಸಾಲಯಗಳಿವೆ. ನಮ್ಮಲ್ಲಿ ಅಂತಹ ಅನುಕೂಲತೆಗಳು ಇದ್ದಂತಿಲ್ಲ. ಅದರ ಬದಲಾಗಿ ಭಾವನೆಯನ್ನು ಶಾಸನಬದ್ಧ ಮಾಡುವ ಮೂಲಕ, ಸಲಿಂಗಕಾಮವನ್ನು ಪ್ರೋತ್ಸಾಹಿಸುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ!

ಭಿನ್ನಕಾದಂಬರಿಯ ಪಾತ್ರಗಳ ಸ್ಥೂಲ ರೂಪವನ್ನು ಹೇಳಿದ ಮಾತ್ರಕ್ಕೆ, ಕಾದಂಬರಿಯ ಬಗೆಗೆ ಏನೂ ಹೇಳಿದಂತಾಗುವದಿಲ್ಲ. ಕಾದಂಬರಿಯಭಿನ್ನಎನ್ನುವ ಶೀರ್ಷಿಕೆ ಸಾರ್ಥಕವಾಗಲು ಅನೇಕ ಕಾರಣಗಳಿವೆ. ಮೊದಲನೆಯದಾಗಿ, ಪ್ರಸಕ್ತ ಸಂದರ್ಭದಲ್ಲಿ, ವಿವಾದಾತ್ಮಕವಾಗಿರುವ ಒಂದು ವಸ್ತುವಿನ ಬಗೆಗೆ ದೇಸಾಯಿಯವರು ತಮ್ಮ ಕೃತಿಯನ್ನು ರಚಿಸಿದ್ದಾರೆ. ಎರಡನೆಯದಾಗಿ ಸಲಿಂಗಕಾಮಿಗಳ ಬಗೆಗಿನ ಸರ್ವೇಸಾಮಾನ್ಯ ಅಭಿಪ್ರಾಯವನ್ನು (’--- ದೇಹ ಮಾತ್ರ ಹುಡುಗನದು, ಒಳಗಿರುವುದು ಹುಡುಗಿಯ ಸ್ವಭಾವ—’) ಬದಿಗಿರಿಸಿ, ದೇಸಾಯಿಯವರು ಪರಿಸ್ಥಿತಿಯ ಪ್ರಭಾವವನ್ನು ತೋರಿಸುವ ಕೃತಿಯನ್ನು ರಚಿಸಿದ್ದಾರೆ. ಮೂರನೆಯದಾಗಿ, ಕೃತಿಯು ಒಂದು ಪ್ರಬಂಧವಾಗದೇ, ಒಂದು ಉತ್ತಮ ಕಾದಂಬರಿಯಾಗಿದೆ. ಮೇಲೆ ನೋಡಿದಂತಹ ಎಲ್ಲ ಪಾತ್ರಗಳು, ಭಿನ್ನ ಕಾದಂಬರಿಯ ನೇಯ್ಗೆಯಲ್ಲಿ ಹಾಸುಹೊಕ್ಕಿನಂತೆ ಅನ್ಯೋನ್ಯವಾಗಿ ಕೂಡಿಕೊಂಡಿರುವುದೇ ಇದಕ್ಕೆ ಕಾರಣವಾಗಿದೆ.

ಕಾದಂಬರಿಯು ಪ್ರಾರಂಭವಾಗುವುದು ಸುಮತಿ ಎನ್ನುವ ಮಧ್ಯವಯಸ್ಕಳ ನಿರೂಪಣೆಯೊಂದಿಗೆ.  ತನ್ನಂತರ ರಜನಿಯ ಸ್ವನಿರೂಪಣೆ. ಆಬಳಿಕ ಮೋನಿಕಾಳ ನಿರೂಪಣೆ. ಕೊನೆಯಲ್ಲಿ ಮತ್ತೆ ರಜನಿಯ ನಿರೂಪಣೆ. ಇದು ಕಾದಂಬರಿಯ ತಂತ್ರವಾಗಿದೆ. ತಂತ್ರ ಎಂದ ಮಾತ್ರಕ್ಕೆ ಇದೊಂದು ಕೃತಕ ಉಪಕರಣ ಎಂದು ಭಾವಿಸಬಾರದು. ಕಾದಂಬರಿಯಲ್ಲಿ ಹಾಸುಹೊಕ್ಕುಗಳು ಎಷ್ಟು ಮುಖ್ಯವೋ, ಹೆಣಿಗೆಯೂ ಅಷ್ಟೇ ಮುಖ್ಯವಾಗಿದೆ. ಕಾದಂಬರಿಕಾರನು ತನ್ನ ಭಾವನೆಗಳನ್ನು, ವಿಚಾರಗಳನ್ನು ಸಮರ್ಪಕವಾಗಿ ಮೂಡಿಸಲು, ಕೃತಿಸಹಜವಾದ ಹೆಣಿಗೆಯನ್ನೇ ಅವಲಂಬಿಸಬೇಕಾಗುತ್ತದೆ. ದೇಸಾಯರು ವಿಷಯದಲ್ಲಿ ಸಮರ್ಪಕವಾದ ಹೆಣಿಗೆಯನ್ನು ಆರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೃತಿಯನ್ನು ಸುಸಂಬದ್ಧವಾಗಿ ಹೆಣೆದಿದ್ದಾರೆ ಎಂದೂ ಹೇಳಲೇ ಬೇಕು.

ಭಿನ್ನಕಾದಂಬರಿಯು ಕೇವಲ ಸಲಿಂಗಕಾಮದ ಕೃತಿಯಾಗಿ ಉಳಿದಿಲ್ಲ. ಪ್ರಾಸಂಗಿಕವಾಗಿ ಇಲ್ಲಿ ಅತ್ತೆ-ಸೊಸೆಯ ಸಂಬಂಧ, ಕೆಲವು ಗಂಡಂದಿರ ಅತಿಕಾಮುಕತನ, ಸರ್ವಾಧಿಕಾರಿಕೆ, ಹೆಂಡಂದಿರ ಅಸಹಾಯಕತೆ, ವೈವಾಹಿಕ ಅತ್ಯಾಚಾರ, ಹೆಣ್ಣು ಅನುಭವಿಸುವ ಅವಮಾನ ಇವೆಲ್ಲವೂ ಕೃತಿಯಲ್ಲಿ ಬಂದಿವೆ. ಒಂದು ಕಾಲದ ಹೆಣ್ಣುಮಕ್ಕಳ ಬವಣೆಯನ್ನು ಕಿಟ್ಟಾ ಮಾವುಶಿ ಎನ್ನುವ ಪಾತ್ರವು ಕಠೋರ ಪದಗಳಲ್ಲಿ ಬಣ್ಣಿಸುವುದು ಹೀಗೆ: “ಹಿಂಗನ, ಇದು ಹೆಂಗಸಿನ ಜನ್ಮಗಂಡ ಹೇಳಿದ ಅಡಗಿ ಮಾಡಬೇಕು, ಅವಾ ಹೇಳಿಧಂಗ ಕೇಳಬೇಕು, ಅವಗ ಬೇಕಾತು ಅಂದ್ರ ಅವನ ಮುಂದ ಬತ್ತಲಾಗಿ ಕಾಲು ಕಿಸಿದು ತಯಾರಾಗಬೇಕುಪ್ರತಿ ಹೆಂಗಸಿನ ಕರ್ಮ ಇದ ನೋಡು..ಗಂಡಸಿನ ಮುಂದ ಕಾಲು ಕಿಸಿದು ಅವ ಮಾಡಿದ್ದನ್ನು ಮಾಡಿಸಿಗೊಳ್ಳೋದು_“

ದೇಸಾಯರು ತಮ್ಮ ಹೃದಯಕ್ಕೆ ಹತ್ತಿರವಾದ, ತಾವು ಆಳವಾಗಿ ಬಲ್ಲಂತಹ ಪರಿಸರದಲ್ಲಿಯೇ ಕೃತಿಸೃಷ್ಟಿಯನ್ನು ಮಾಡುತ್ತಾರೆ. ಹೀಗಾಗಿ ಕೃತಿಯ ಬಹುಭಾಗವು ಹುಬ್ಬಳ್ಳಿ, ಧಾರವಾಡ, ಹಾಗು ಮುಂಬಯಿ ಪಟ್ಟಣಗಳಲ್ಲಿ ಜರಗುತ್ತದೆ. ಇಲ್ಲಿಯ ಪಾತ್ರಗಳು ಮಾತನಾಡುವ ಭಾಷೆ ಹಾಗು ಲೇಖಕರು ನಿರೂಪಣೆಗೆ ಬಳಸುವ ಭಾಷೆ ಅಚ್ಚ ಪ್ರಾದೇಶಿಕ ಭಾಷೆ. ಅಲ್ಲದೆ ಇದು ಒಂದು ಕಾಲಘಟ್ಟವನ್ನು ಹಾಗು ಒಂದು ಸಮುದಾಯವನ್ನು ನೆನಪಿಸುವ ಭಾಷೆ.  

ಉದಾಹರಣೆಗೆ, ಈ ಪರಿಚ್ಛೇದವನ್ನು ನೋಡಬಹುದು:
ಅವರು ಹೋದ ಮೇಲೆ ಅವ್ವ ವೆಂಕಪ್ಪನಿಗೆ ದೀಪ ಹಚ್ಚಿ ಬರುವುದಾಗಿ ಹೋದಳು. ಅಪ್ಪ ಮುಂದಿನ ಎರಡು ತಿಂಗಳಿನಲ್ಲಿ ಮದುವೆಯ ಮುಹೂರ್ತ ಯಾವವು ಅಂತ ತಿಳಿದು ಬರಲು ಜೋಶಿಯವರ ಮನೆಗೆ ಹೋದ.’
ಕೆಲವೊಂದು ಹಳೆಯ ಪದಗಳು ಈ ತಲೆಮಾರಿನವರಿಗೆ ತಿಳಿಯದಿದ್ದರೂ ಸಹ, ಅರ್ಥ ಆಗಲು ಯಾವುದೇ ತೊಂದರೆಯಾಗುವುದಿಲ್ಲ. ಉದಾ: ದಾಡಿ ಮಾಡಿಕೊಳ್ಳುವುದು (=ಶೇವ್ ಮಾಡಿಕೊಳ್ಳುವುದು).
ಆದುದರಿಂದ ಭಾಷೆಯು ಎಲ್ಲ ಓದುಗರಿಗೂ ತಿಳಿಯುವಂತಹ ಸರಳ ಭಾಷೆಯೇ ಆಗಿದೆ. ಸರಳವಾದರೂ ರಂಜಕವಾದ ಭಾಷೆಯು ದೇಸಾಯಿಯವರ ವೈಶಿಷ್ಟ್ಯವಾಗಿದೆ.

ಹದಿಹರೆಯದ ಹುಡುಗಿಯರು ಬಳಸುವ ಭಾಷೆಯು ಕಚಗುಳಿಯನ್ನು ಇಡುವ ರೀತಿಯನ್ನು ನೋಡಿರಿ:
ನೀ ಬಹಳ ಹಲ್ಕಟ್ ಇದ್ದೀ ನೋಡು, ಎಲ್ಲಿ ಏನು ಅಂತ ನೋಡದ ಮಾಡಿದಿ.”
ಕ್ಯಾ ಯಾರ ನಾಕು ದಿನಾ ಆಗಿತ್ತುನೀ ನೋಡಿದ್ರ ನಖರಾ ಮಾಡತಿ.”
ನೀ ಬರಾಂಗಿಲ್ಲ ಅಂತ ಗೊತ್ತಾತು, ನಂಗೂ ಬ್ಯಾಸರ ಆತು, ಅದಕ ಬಂದೆ.”

ಇಲ್ಲಿ ಸ್ವಗತವೂ ಸಹ ಓದುಗನನ್ನು ಸೆರೆ ಹಿಡಿಯುವ ಭಾಷೆಯಾಗಿಯೇ ಬರುತ್ತದೆ.
ಉದಾಹರಣೆಗೆ ರಜನಿಯ ಸ್ವಗತವನ್ನು ನೋಡಬಹುದು: ‘ನನ್ನ ತರಹದವರು ಪುಸ್ತಕದ ಮುಚ್ಚಿಟ್ಟ ಪುಟಗಳಾಗಿಯೇ ಉಳಿದು ಬಿಡುತ್ತೇವೆಯೆ?’

ಭಿನ್ನಕೃತಿಯಲ್ಲಿ ಸಲಿಂಗರತಿಯ ವಿವರಗಳೂ ಬಂದಿವೆ. ಹಾಗೆಂದು ಇದು ಪೋರ್ನೋ ಅಲ್ಲ, ಆಗಿಲ್ಲ. ಓರ್ವ ಹುಡುಗಿಯು ಸಲಿಂಗರತಿಗೆ ಒಳಗಾಗುವ ಹಾಗು ಮರಳಾಗುವ ಸಂದರ್ಭಗಳನ್ನು ನಿರೂಪಿಸಲು ವರ್ಣನೆಗಳು ಅವಶ್ಯವಾಗಿವೆ. ಆದುದರಿಂದ ವರ್ಣನೆಗಳನ್ನು ಕಥಾನಕದ ಸಾವಯವ ಅಂಗಗಳು ಎಂದು ಕರೆಯಬಹುದು.

ಮನೋವಿಜ್ಞಾನದ ಮೇಲೆ ಆಧಾರಿತವಾದ ‘ಭಿನ್ನ’ ಕಾದಂಬರಿಯ ಪಾತ್ರಗಳಿಗೆ ದೇಸಾಯಿಯವರು ಪ್ರಾರಂಭದಿಂದ ಕೊನೆಯವರೆಗೂ ಅವರವರ ಸ್ವಭಾವಕ್ಕೆ ಸಹಜವಾದ ಘಟನೆಗಳನ್ನೇ ತೋರಿಸಿದ್ದಾರೆ. ಉದಾಹರಣೆಗೆ ಈ ಕೃತಿಯ ಒಂದು ಪಾತ್ರವು ಪುಕ್ಕಲು ಪಾತ್ರ. ತಾನು ಏನು ಮಾಡಬೇಕು ಎನ್ನುವ ತೊಳಲಾಟದಲ್ಲಿಯೇ ಬಳಲುವ ಹಾಗು ಯಾವುದೇ ನಿರ್ಣಯವನ್ನು ಸ್ವಂತವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲದ ಒಂದು ಪಾತ್ರವು ಕೊನೆಗೂ ಒಂದು ಉತ್ತಮ ಅವಕಾಶವನ್ನು ಕಳೆದುಕೊಳ್ಳುವ ಪಾತ್ರವಾಗಿಯೇ ಉಳಿಯುತ್ತಾಳೆ. ಬಾಲ್ಯದಲ್ಲಿಯೇ ಪರಿಸ್ಥಿತಿಯ ಕೈಗೊಂಬೆಯಾಗಿ ಬೆಳೆದ ಹಾಗು ಆದುದರಿಂದ ಈ ಸ್ವಭಾವಕ್ಕೆ ವಿರುದ್ಧ ಸ್ವಭಾವನ್ನು ರೂಢಿಸಿಕೊಂಡಿರುವ ಮತ್ತೊಂದು ಪಾತ್ರವು ಆ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಾಳೆ. ಸಂಕಷ್ಟದಲ್ಲಿರುವವರು ಬದುಕಬೇಕಾದ ಕಠೋರ ಸತ್ಯವನ್ನು ಈ ಪಾತ್ರದ ಮೂಲಕ ದೇಸಾಯಿಯವರು ಸಮರ್ಪಕವಾಗಿ ನಿರೂಪಿಸಿದ್ದಾರೆ.

ಉಮೇಶ ದೇಸಾಯಿಯವರ ಕಾದಂಬರಿ ‘ಭಿನ್ನ’ವನ್ನು ಸುಮಾರು ೫೦ ವರ್ಷಗಳ ಹಿಂದೆ ಬಂದ ಮತ್ತೊಬ್ಬ ದೇಸಾಯರ (ಶಾಂತಿನಾಥ ದೇಸಾಯಿ) ಪ್ರಖ್ಯಾತ ಕಾದಂಬರಿ ‘ಮುಕ್ತಿ’ಯ ಜೊತೆಗೆ ಹೋಲಿಸುವುದು ಅಗತ್ಯವಾಗಿದೆ. ‘ಮುಕ್ತಿ’ಯು ಆ ಕಾಲದಲ್ಲಿ ಆಧುನಿಕ ಕಥಾನಕವನ್ನು ಹೊಂದಿತ್ತು. ‘ಭಿನ್ನ’ವು ಈ ಕಾಲದ ವಿವಾದಾತ್ಮಕ ವಿಷಯವನ್ನು ವಿಶ್ಲೇಷಿಸುತ್ತಿದೆ. ‘ಮುಕ್ತಿ’ಯಲ್ಲಿ ಬರುವ ಮುಖ್ಯ ಪಾತ್ರಗಳು ಕೇವಲ ಮೂರು. ‘ಭಿನ್ನ’ ಕಾದಂಬರಿಗಳಲ್ಲಿ ಬರುವ ಮುಖ್ಯ ಪಾತ್ರಗಳೂ ಸಹ ಕೇವಲ ಮೂರು. ಶಾಂತಿನಾಥ ದೇಸಾಯಿಯವರ ಭಾಷೆಯೂ ಸಹ ಧಾರವಾಡದ ಪ್ರಾದೇಶಿಕ ಭಾಷೆ. ಉಮೇಶರ ಭಾಷೆಯೂ ಸಹ ಧಾರವಾಡ-ಹುಬ್ಬಳ್ಳಿಯ ಭಾಷೆ. ಶಾಂತಿನಾಥರ ಪರಿಸರ ಧಾರವಾಡ ಹಾಗು ಮುಂಬಯಿ. ಉಮೇಶರ ಪರಿಸರವೂ ಸಹ ಹುಬ್ಬಳ್ಳಿ,ಧಾರವಾಡ ಹಾಗು ಮುಂಬಯಿ.  ಆದರೆ ‘ಮುಕ್ತಿ’ಯಲ್ಲಿ ನಾಯಕನು ತನ್ನ ತೊಳಲಾಟದಿಂದ ಮುಕ್ತಿಯನ್ನು ಪಡೆಯುತ್ತಾನೆ. ‘ಭಿನ್ನ’ದಲ್ಲಿ ಪ್ರಮುಖ ಪಾತ್ರಕ್ಕೆ ಮುಕ್ತಿ ದೊರೆಯುವದಿಲ್ಲ!

ಇತ್ತೀಚಿನ ಪ್ರಮುಖ ಲೇಖಕರ ಕಥಾನಕಗಳು ಕ್ಲೀಶೆಗಳಾಗುತ್ತಿರುವ ಸಂದರ್ಭದಲ್ಲಿ, ಉಮೇಶ ದೇಸಾಯಿಯವರ ‘ಭಿನ್ನ’ವು ತನ್ನ ಭಿನ್ನತೆಯಿಂದಾಗಿ, ಕನ್ನಡ ಸಾಹಿತ್ಯದ ಮಹತ್ವದ ಕೃತಿಯಾಗಿದೆ.